Monthly Archives: August 2015

ಆರ್. ಎಲ್. ಜಾಲಪ್ಪಗೆ ‘ಅರಸು ಪ್ರಶಸ್ತಿ’ ಎಂಬ ವ್ಯಂಗ್ಯ

                                                                                                       ಬೆಳಚಿಕ್ಕನಹಳ್ಳಿ ಶ್ರೀನಾಥ್

ಆರ್.ಎಲ್.ಜಾಲಪ್ಪ… ರಾಜಕಾರಣದಲ್ಲಿರುವವರು ಹಾಗೂ ರಾಜ್ಯದ ಜನ ಈ ಹೆಸರನ್ನು ಬಹುತೇಕ ಮರೆತೇಹೋಗಿದ್ದಾರೆ. ಈಗ ಕರ್ನಾಟಕ ಸರ್ಕಾರ 2015ನೇ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಜಾಲಪ್ಪನವರಿಗೆ ನೀಡಿದೆ. ಜಾಲಪ್ಪ ಅವರ ರಾಜಕೀಯ ಶೈಲಿ ಹಾಗೂ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಇವರು ಮೂಡಿಸಿದ ಹೆಜ್ಜೆ ಗುರುತುಗಳೇನು ಎನ್ನುವ ಬಗ್ಗೆ ಇದು ಹೊಸ ಚರ್ಚೆಗೆ ಕಾರಣವಾಗಿದೆ.

ಆರ್.ಎಲ್.ಜಾಲಪ್ಪ ಮೂಲತಃ ಬೆಂಗಳೂರಿಗೆ ಅಂಟಿಕೊಂಡಂತಿರುವ ದೊಡ್ಡಬಳ್ಳಾಪುರ ತಾಲ್ಲೂಕಿನವರು; ಕ್ರಾಂತಿರಂಗದ ಮೂಲಕ ರಾಜಕಾರಣ ಆರಂಭಿಸಿದರೂ ಅಲ್ಪಕಾಲದಲ್ಲಿಯೇ ಜನತಾ ಪಕ್ಷಕ್ಕೆ ನೆಗೆದರು. ನಂತರ ಜನತಾ ದಳದ ಜೊತೆ ಗುರುತಿಸಿಕೊಂಡರು. ಅಲ್ಲಿಯೂ ನಿಲ್ಲದೇ ಕಾಂಗ್ರೆಸ್ ಸೇರಿದರು. ಈ ಎಲ್ಲ ಪಕ್ಷಗಳಿಂದಲೂ ಶಾಸಕರಾಗಿ, ಮಂತ್ರಿಯಾRLJಗಿ ಅಧಿಕಾರ ಅನುಭವಿಸಿದರು. ಸತತ ನಾಲ್ಕು ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ರಾಜ್ಯದಲ್ಲಿ ಸಹಕಾರ, ಕಂದಾಯ ಹಾಗೂ ಗೃಹ ಸಚಿವರಾಗಿ; ಕೇಂದ್ರದಲ್ಲಿ ದೇವೇಗೌಡ ಹಾಗೂ ಗುಜ್ರಾಲ್ ಸಂಪುಟಗಳಲ್ಲಿ ಜವಳಿ ಸಚಿವರಾಗಿ ಕೆಲಸ ಮಾಡಿದವರು ಜಾಲಪ್ಪ.

ಒಂದು ಕಾಲದಲ್ಲಿ ರಾಜ್ಯ ರಾಜಕಾರಣದ ‘ಶಕ್ತಿ ಮೂಲ’ ಆಗಿದ್ದದ್ದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು. ಈ ಟ್ರೆಂಡ್ ಅನ್ನು ಅತ್ಯಂತ ಕ್ಷಿಪ್ರವಾಗಿ ಗ್ರಹಿಸಿದ ಜಾಲಪ್ಪ ರಾಜ್ಯದ ಪ್ರಮುಖ ಕ್ಯಾಪಿಟೇಷನ್ ಕುಳವಾದರು; ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿದರು. ದಶಕಗಳ ಕಾಲ ಅವಿಭಜಿತ ಕೋಲಾರ ಜಿಲ್ಲೆಯನ್ನು ಆಳಿದರು. ಇದೆಲ್ಲದರಿಂದ ಜಾಲಪ್ಪನವರ ಸ್ವಂತದ ಅಭಿವೃದ್ಧಿಯೇನೋ ಚೆನ್ನಾಗಿಯೇ ಆಗಿದೆ. ಕೋಲಾರ, ದೊಡ್ಡಬಳ್ಳಾಪುರ ಮುಂತಾದೆಡೆ ಇವರ ಒಡೆತನದ ವೃತ್ತಿಪರ ಕಾಲೇಜುಗಳು ತಲೆಯೆತ್ತಿವೆ. ಅಲೀಪುರ ಸೇರಿದಂತೆ ಹಲವು ಕಡೆ ಇವರ ಮಾಲೀಕತ್ವದ ಎಸ್ಟೇಟ್ಗಳಿವೆ. ಆದರೆ, ಇವರು ಪ್ರತಿನಿಧಿಸುತ್ತಿದ್ದ ಚಿಕ್ಕಬಳ್ಳಾಪುರ ಕ್ಷೇತ್ರ ಮಾತ್ರ ಇವತ್ತು ಪಾತಾಳಕ್ಕೆ ಕುಸಿದಿದೆ. ಒಂದು ಕಾಲದಲ್ಲಿ ಮಲೆನಾಡಿನಂತೆ ಹಸಿರು ಚಿಮ್ಮುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರದಂಥ ತಾಲ್ಲೂಕುಗಳು ಕೂಡ ಇವತ್ತು ಬೆಂಗಾಡಿನಂತಾಗಿಬಿಟ್ಟಿವೆ. ನೀರಾವರಿ ವ್ಯವಸ್ಥೆ ಸರ್ವನಾಶವಾಗಿದೆ. ಅಂತರ್ಜಲ ಪಾತಾಳ ಮುಟ್ಟಿದೆ. ಜಿಲ್ಲೆಯ ನೂರಾರು ಹಳ್ಳಿಗಳಿಗೆ ಟ್ಯಾಂಕರ್ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಹೈನುಗಾರಿಕೆ, ರೇಷ್ಮೆ ಕೃಷಿ ಮಾಡುವವರು ದಿಕ್ಕೆಟ್ಟಿದ್ದಾರೆ. ಜಿಲ್ಲೆಯ ರೈತರಿಗೆ ಆಸರೆಯಾಗಿದ್ದ ಗೌರಿಬಿದನೂರಿನ ಸಿರಿಗುಪ್ಪ ಸಕ್ಕರೆ ಕಾರ್ಖಾನೆಯಂಥ ಹಲವು ಉದ್ದಿಮೆಗಳು ಬಂದ್ ಆಗಿವೆ. ಅವುಗಳಿಂದ ಬರಬೇಕಿದ್ದ ಬಾಕಿಗಾಗಿ ದಶಕಗಳಿಂದಲೂ ಹೋರಾಡಿ ಹೋರಾಡಿ ರೈತರು ಹೈರಾಣಾಗಿಹೋಗಿದ್ದಾರೆ. ದೊಡ್ಡಬಳ್ಳಾಪುರದ ಕೈಮಗ್ಗ ನೇಕಾರರು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಇವೆಲ್ಲವುಗಳಲ್ಲಿ ಜಾಲಪ್ಪನವರ ದಶಕಗಳ ಅಧಿಕಾರದ ಕೊಡುಗೆಯೂ ದೊಡ್ಡದಾಗಿದೆ.

ಇನ್ನು ಸಾಮಾಜಿಕ ನ್ಯಾಯಕ್ಕೆ ಇವರು ಸಲ್ಲಿಸಿದ ಕೊಡುಗೆಯೇನು ಎನ್ನುವುದನ್ನು ನೋಡೋಣ. ಜಾಲಪ್ಪ ಹಿಂದುಳಿದ ವರ್ಗದಿಂದ ಬಂದವರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗರು ಹಾಗೂ ಬಲಿಜರು ನಿರ್ಣಾಯಕ ಮತಶಕ್ತಿ. ಆದರೆ, ಮತದಾರರು ಜಾತಿಗೀತಿ ಯಾವುದನ್ನೂ ನೋಡದೇ ಜಾಲಪ್ಪ ಅವರನ್ನು ನಿರಂತರವಾಗಿ ಗೆಲ್ಲಿಸುತ್ತಾ ಹೋದರು. ಒಕ್ಕಲಿArasu-awardಗ ಸಮುದಾಯದ ಸಿ.ಭೈರೇಗೌಡರು ಜಾಲಪ್ಪನವರ ವಿರುದ್ಧ ಸ್ಪರ್ಧಿಸಿದಾಗಲೂ ಜನ ಜಾಲಪ್ಪನವರನ್ನೇ ಗೆಲ್ಲಿಸಿ ತಮ್ಮ ಜಾತ್ಯತೀತ ಮನೋಭಾವ ತೋರಿದ್ದರು. ಹೀಗೆ ಸಾಮಾನ್ಯ ಮತದಾರರು ತೋರಿದ ಪ್ರಬುದ್ಧತೆಯನ್ನಾಗಲಿ, ಸಾಮಾಜಿಕ ನ್ಯಾಯದ ಮನೋಭಾವವನ್ನಾಗಲಿ ಜಾಲಪ್ಪ ತೋರಲಿಲ್ಲ. ಜಿಲ್ಲೆಯಲ್ಲಿ ಸಾದಗೌಡರು, ಜೈನರು, ಬಲಿಜರು, ಮುಸ್ಲಿಮರು ಹೀಗೆ ಅನೇಕ ಅವಕಾಶವಂಚಿತ ಜಾತಿಗಳಿವೆ. ಈ ಯಾವ ಜಾತಿಯ ಯಾವೊಬ್ಬ ನಾಯಕನನ್ನೂ ಜಾಲಪ್ಪನವರು ಬೆಳೆಯಗೊಡಲಿಲ್ಲ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜಾಲಪ್ಪನವರು ಬೆಳೆಸಿದ ಒಬ್ಬನೇ ಒಬ್ಬ ಹಿಂದುಳಿದ ವರ್ಗದ ಶಾಸಕ ಅಥವಾ ಸಂಸದ ಇವತ್ತು ಕಾಣಸಿಗುವುದಿಲ್ಲ.
ಇನ್ನು ತಾವು ಕಾಂಗ್ರೆಸ್ನಲ್ಲಿದ್ದುಕೊಂಡು, ತಮ್ಮ ಮಗ ನರಸಿಂಹಸ್ವಾಮಿಯನ್ನು ಬಿಜೆಪಿಗೆ ಕಳಿಸಿ ಬೃಹನ್ನಾಟಕವನ್ನು ಆಡಿದವರು ಜಾಲಪ್ಪ. ಇವರು ಹಾಗೂ ಇವರ ಮಕ್ಕಳ ಪಾಳೇಗಾರಿಕೆಯ ಕಥೆಗಳಂತೂ ಜನರ ನಡುವೆ ದಂತಕಥೆಗಳಂತೆ ಚಾಲ್ತಿಯಲ್ಲಿವೆ. ತಮ್ಮ ಸಾಮಾಜಿಕ ಜವಾಬ್ದಾರಿ ಮರೆತು ವೈಯಕ್ತಿಕ ಅಭಿವೃದ್ಧಿಯ ನಾಗಾಲೋಟದಲ್ಲಿ ತೊಡಗಿದ್ದ ಜಾಲಪ್ಪ, ವಕೀಲ ರಶೀದ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅದರಿಂದ ಗೃಹಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿ ಬಂದದ್ದು ಕರ್ನಾಟಕ ರಾಜಕಾರಣದ ಒಂದು ಪ್ರಮುಖ ವಿದ್ಯಮಾನ.
ಈ ಯಾವುದನ್ನು ಬೇಕಾದರೂ ಕರ್ನಾಟಕದ ಜನ ಕ್ಷಮಿಸಬಲ್ಲರೇನೋ. ಆದರೆ, ದೇಶದಲ್ಲೇ ಮಾದರಿ ವ್ಯವಸ್ಥೆ ಎನಿಸಿದ್ದ ರಾಜ್ಯದ ಸಿಇಟಿ ವ್ಯವಸ್ಥೆಯನ್ನು ನಾಶ ಮಾಡಿದ್ದನ್ನು ಮಾತ್ರ ನಾಡಿನ ಜನ ಕ್ಷಮಿಸಲಾರರು. ರಾಜ್ಯದ ಬಡವರು, ಹಳ್ಳಿಗಾಡಿನ ಜನರ ಪೈಕಿ ಕೆಲವರಾದರೂ ಇಂಜಿನಿಯರ್ಗಳು, ವೈದ್ಯರು ಆಗುವುದಕ್ಕೆ ಸಾಧ್ಯವಾಗಿದ್ದು ಆಗಿನ ಸಿಐಟಿ ವ್ಯವಸ್ಥೆಯಿಂದ. ಅಂಥದ್ದರಲ್ಲಿ ಸುಪ್ರೀಂ ಕೋರ್ಟಿನ ನೆಪ ಹಿಡಿದುಕೊಂಡು ತಮ್ಮದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಿಇಟಿಗೆ ಸೆಡ್ಡು ಹೊಡೆದವರು ಜಾಲಪ್ಪ. ಅಷ್ಟೇ ಅಲ್ಲ, ಇವರ ಅಧ್ಯಕ್ಷತೆಯಲ್ಲೇ ಕಾಮೆಡ್ ಕೆ ರೂಪು ಪಡೆಯಿತು. ಮುಂದೆ ಇಡೀ ಸಿಇಟಿ ವ್ಯವಸ್ಥೆಯೇ ದಿಕ್ಕುತಪ್ಪಿತು; ಗೊಂದಲದ ಗೂಡಾಗಿ rljಪರಿವರ್ತನೆಯಾಯಿತು . ಕೊನೆಗೆ ಸಿಇಟಿಗೆ ಪರ್ಯಾಯವಾಗಿ ಕಾಮೆಡ್ ಕೆ ಕೂಡ ಪ್ರತ್ಯೇಕ ಪ್ರವೇಶ ಪ್ರಕ್ರಿಯೆಯನ್ನೇ ನಡೆಸತೊಡಗಿತು. ಅದರ ಫಲವಾಗಿ ಇವತ್ತು ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಸೀಟುಗಳಿಗೂ ಕೂಡ ವಿದ್ಯಾರ್ಥಿಗಳು ಲಕ್ಷ ಲಕ್ಷ ವ್ಯಯಿಸಬೇಕಾಗಿ ಬಂದಿದೆ. ಇನ್ನು ಸಿಇಟಿ ಸೀಟು ಸಿಕ್ಕರೂ ಮೆಡಿಕಲ್ ಓದುವುದು ಬಡವರ ಪಾಲಿಗೆ ಕನಸಿನ ಮಾತಾಗಿದೆ. ತಮ್ಮ ಸ್ವಾರ್ಥಕ್ಕಾಗಿ, ಕ್ಯಾಪಿಟೇಷನ್ ಹಣಕ್ಕಾಗಿ ಬಡವರ ಪರವಾಗಿದ್ದ ಒಂದು ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳು ಮಾಡಿದವರು ‘ಸಾಮಾಜಿಕ ನ್ಯಾಯದ ಹರಿಕಾರ’ರಾದ ಸನ್ಮಾನ್ಯ ಜಾಲಪ್ಪ.

ಹೌದು.. ಕೆಲವರು ಜಾಲಪ್ಪನವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎನ್ನುವಂತೆ ಮಾತಾಡುವುದನ್ನು ನಾನು ಕೇಳಿದ್ದೇನೆ. ಅದನ್ನು ಸಮರ್ಥಿಸುವಂತೆ ಸಿದ್ದರಾಮಯ್ಯನವರ ಸರ್ಕಾರ ಜಾಲಪ್ಪನವರಿಗೆ ಈಗ ದೇವರಾಜ ಅರಸು ಪ್ರಶ ಸ್ತಿಯನ್ನು ಘೋಷಿಸಿದೆ. ದಿವಂಗತ ದೇವರಾಜ ಅರಸು ಅವರನ್ನು ಅವರ ಸಾಮಾಜಿಕ ನ್ಯಾಯದ ಕೆಲಸಗಳಿಗಾಗಿ ನೆನಪಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ತನ್ನ ಜೀವಿತ ಕಾಲದಲ್ಲಿಯೇ ಜನರಿಂದ ವಿಸ್ಮೃತಿಗೆ ಗುರಿಯಾಗಿರುವ ರಾಜಕಾರಣಿಯೊಬ್ಬರಿಗೆ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ದೊಡ್ಡ ವ್ಯಂಗ್ಯವೇ ಸರಿ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015 : ಕತೆ ಕಳುಹಿಸಲು ಕೇವಲ ಎರಡು ವಾರ ಬಾಕಿ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2015(ಹಿಂದಿನ ವರ್ಷವೊಂದರ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧೆ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:

ಆಗಸ್ಟ್ 31, 2015.

ಸೆಪ್ಟೆಂಬರ್ katha spardhe inside logo 2015 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:

editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ಸ್ವಾತಂತ್ರ್ಯೋತ್ಸವಕ್ಕೆಂದು ಬಂದು ದಾಸ್ಯ ಮೆರೆದವರು

– ಸದಾನಂದ ಲಕ್ಷ್ಮೀಪುರ

“ಇಂದು ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಿರುವ ಪರಿಹಾರ ಒಂದೇ. ನಮ್ಮ ಎಲ್ಲಾ ಹಿಂದು ಯುವಕರು ಮನಸ್ಸು ಮಾಡಬೇಕು. ಕನಿಷ್ಟ ಮೂರು ಮಕ್ಕಳನ್ನು ಪಡೆಯಬೇಕು. ಎಲ್ಲಿ ಕೈ ಎತ್ತಿ..ನಿಮ್ಮಲ್ಲಿ ಎಷ್ಟು ಜನ ನನ್ನ ಮಾತಿನಂತೆ ನಡೆದುಕೊಳ್ಳುತ್ತೀರಿ..” ಎಂದು ಕಲ್ಲಡ್ಕ ಪ್ರಭಾಕರ ಭಟ್ ಕೇಳುತ್ತಿದ್ದರೆ, ಧರ್ಮದ ಅಮಲಿನದ್ದ ಅನೇಕರು ಹಾಗೂ ಧರ್ಮದ ಜೊತೆಗೆ ಮದ್ಯದ ಮತ್ತಿನೊಂದಿಗೆ ಅಲ್ಲಿ ಹಾಜರಿದ್ದ ಕೆಲವರು ಕೈ ಎತ್ತಿ, ಓ… ಎಂದು ಕೂಗಿ ಸಮ್ಮತಿ ಸೂಚಿಸಿದರು.

ಆ ಕಾರ್ಯಕ್ರಮ ನಡೆದದ್ದು ಸ್ವಾತಂತ್ರೋತ್ಸವ ಹಿಂದಿನ ದಿನ ಮಧ್ಯರಾತ್ರಿ. ಆ ಕಾರ್ಯಕ್ರಮದಲ್ಲಿ ಹಾಜರಿದ್ದವರೆಲ್ಲರೂ ಯುವಕರೇ. RSSಕೋಮುವಾದಿ ವ್ಯಕ್ತಿಯೊಬ್ಬನ ಮಾತಿಗೆ ಮಾರುಹೋಗಿ ಕೈ ಎತ್ತುವ ಮುನ್ನ, ಇಂತಹದೊಂದು ಸಂಗತಿಗೆ ತನ್ನ ಸಂಗಾತಿಯ ಸಮ್ಮತಿಯೂ ಅಗತ್ಯ ಎಂಬ ಕನಿಷ್ಟ ಪ್ರಜ್ಞೆ ಇದ್ದಿದ್ದರೆ, ಅಲ್ಲಿ ಕೈ ಎತ್ತಿ ಠೇಂಕರಿಸುತ್ತಿರಲಿಲ್ಲ. Of course, ಆ ಭಾಷಣಕಾರ ಪ್ರತಿನಿಧಿಸುವ ಸಂಸ್ಥೆಗಾಗಲಿ, ಈ ಹುಡುಗರ ತಲೆತುಂಬಿಕೊಂಡಿರುವ ಆಲೋಚನೆಗಳಲ್ಲಾಗಲಿ ಮಹಿಳೆಗೆ ಸ್ವತಂತ್ರ ಆಲೋಚನೆಗಳಿರುತ್ತವೆ, ಕೇಳಿಸಿಕೊಳ್ಳಬೇಕು, ಗೌರವಿಸಬೇಕು ಎಂಬ ತಿಳವಳಿಕೆ ಇದ್ದರೆ ತಾನೆ?

ಬರೋಬ್ಬರಿ ಒಂದು ಗಂಟೆ ಮೇಲೆ ಎಂಟು ನಿಮಿಷ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ತನ್ನ ಭಾಷಣದುದ್ದಕ್ಕೂ ಕೆಂಡಕಾರಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಹಾಗೂ ಮುಸಲ್ಮಾನರ ವಿರುದ್ಧ. ಕಾರ್ಯಕ್ರಮದ ಹೆಸರ ಅಖಂಡ ಭಾರತ ಸಂಕಲ್ಪ ದಿನ. ಆದರೆ ಮಾತನಾಡಿದ್ದು ಮಾತ್ರ ಜನರನ್ನು ಧರ್ಮ, ಮತದ ಆಧಾರದ ಮೇಲೆ ಒಡೆಯುವ ಬಗ್ಗೆ. ಅದನ್ನು ವಿಪರ್ಯಾಸ ಅನ್ನಬೇಕೋ, ಮಾತನಾಡುವವರನ್ನು ಹುಚ್ಚರೆನ್ನಬೇಕೋ..ಗೊತ್ತಾಗುತ್ತಿಲ್ಲ. “ಜಗತ್ತಿನಲ್ಲಿ ಧರ್ಮ ಅಂತ ಇರೋದು ಹಿಂದು ಮಾತ್ರ. ಉಳಿದವೆಲ್ಲಾ ಮತಗಳು. ಜಗತ್ತಿನ ಎಲ್ಲರನ್ನೂ ಒಪ್ಪಿಕೊಳ್ಳುವ ಧರ್ಮ ಹಿಂದೂ ಮಾತ್ರ” ಎಂದು ಮಾತನಾಡುತ್ತಲೇ, ಮುಸ್ಲಿಂರ ವಿರುದ್ಧ, ಕ್ರಿಶ್ಚಿಯನ್ನರ ವಿರುದ್ಧ ಕಿಡಿಕಾರುತ್ತಾರೆ. ಇಡೀ ಭೂಮಿಯೇ ಒಂದು ಕುಟುಂಬ ಎಂದು ಹೇಳುವುದಾದರೆ, ಎದುರುಮನೆ ಹುಡುಗ, ಪಕ್ಕದ ಮನೆಯ ಹುಡುಗಿ ಜೊತೆ ಬಸ್ ನಲ್ಲಿ ಪ್ರಯಾಣಿಸಿದರೆ, ಹಿಡಿದು ನಿಲ್ಲಿಸಿ ಹೊಡೆಯುತ್ತಾರೆ. population-explosionಇಂತಹ ಮಹಾನ್ ನಾಯಕರು ಅಂತಹ ನಡವಳಿಕೆಗಳನ್ನು ಸಭೆಯಲ್ಲಿ ನಿಂತು ಸಮರ್ಥಿಸಿಕೊಳ್ಳುತ್ತಾರೆ. ಆದರೂ ಮಾತನಾಡುವಾಗ ವಸುದೈವ ಕುಟುಂಬಕಂ! ಕೇಕೆ ಹಾಕುವರಿಗೆ ಇಂತಹ ಸಣ್ಣಪುಟ್ಟ ವೈರುಧ್ಯಗಳು ಅರ್ಥವಾಗುವುದಿಲ್ಲವೆ?

ಈ ಭಟ್ ಮಹಾಶಯ ಹೇಳಿದ ಇನ್ನೊಂದು ಮಾತು – ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಹೆಣ್ಣು ಮಕ್ಕಳನ್ನು ಒಲಿಸಿಕೊಂಡು ಮದುವೆಯಾಗಿ ಡಜನ್ ಗಟ್ಟಲೆ ಮಕ್ಕಳು ಮಾಡುವುದೇ ಅವರ ಉದ್ದೇಶ. ಈ ಮಾತನ್ನು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆದರೂ ಹೇಳುವುದನ್ನು ಬಿಡೋಲ್ಲ. ಅಷ್ಟೇ ಅಲ್ಲ, ಒಂದು ಮಾತು ಮುಂದೆ ಹೋಗಿ, ‘ನೀವು ಹಾಗೆ ಮಾಡುವುದು ಯಾವಾಗ..?’ ಎಂದು ಹಿಂದೂ ಯುವಕರಿಗೆ ಪ್ರಚೋದನೆ ನೀಡುತ್ತಾರೆ.

ಮಹಾತ್ಮ ಗಾಂಧಿ ದೇಶ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕೆಂದು ಬಯಸಿದ್ದರಂತೆ. ಅದು ಆಗಲಿಲ್ಲ. ರಾಮರಾಜ್ಯದ ಬದಲು, ಸಂವಿಧಾನ ಬದ್ಧ ಪ್ರಜಾರಾಜ್ಯ ಬಂದದ್ದು ಇಡೀ ದೇಶದ ಅಭಿವೃದ್ಧಿಗೆ ತೊಡಕಂತೆ. ಇಂತಹ ಜನವಿರೋಧಿ ಮಾತುಗಳಿಗೂ ಚಪ್ಪಾಳೆ ಹಾಕುವವರಿದ್ದಾರಲ್ಲ ಎಂಬುದೇ ಆಘಾತಕಾರಿ. ಯಾವುದೇ ರಾಜ ಆಗಲಿ, ಅಲ್ಲಿ ಅಧಿಕಾರ ತಂದೆಯಿಂದ ಮಕ್ಕಳಿಗೆ ರವಾನೆಯಾಗುತ್ತದೆ. india-flagರಾಮ ಆದರೂ ಅಷ್ಟೆ, ಕೃಷ್ಣ ಆದರೂ ಅಷ್ಟೆ. ಬಡವನಿಗೆ, ನಿರ್ಗತಿಕನಿಗೆ ತನ್ನ ಆಳುವವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲು ಸಾಧ್ಯವೇ? ಹೀಗೆ ಸ್ವಾತಂತ್ರ್ಯದ ಮೂಲ ತತ್ತ್ವಕ್ಕೆ ವಿರುದ್ಧವಾಗಿ ಮಾತನಾಡುವವರಿಗೆ ಚಪ್ಪಾಳೆ ಹಾಕುವುದೆಂದರೆ, ನಮ್ಮ ಅಸ್ಥಿತ್ವವನ್ನು ಕಡೆಗಣಿಸಿದಂತೆ.

ಸ್ವತಂತ್ರ ಆಲೋಚನೆಯಿಂದ ತಪ್ಪು-ಸರಿಗಳ ವ್ಯತ್ಯಾಸ ಅರಿಯಲು ಶಿಕ್ಷಣ ಅಗತ್ಯ. ಆದರೆ ಸೋಕಾಲ್ಡ್ ‘ಶಿಕ್ಷಿತ’ ರೇ ಚಪ್ಪಾಳೆ ಹೊಡೆವರಲ್ಲಿ, ಮೂರು ಮಕ್ಕಳನ್ನು ಮಾಡಿಕೊಳ್ಳಲು ಸಮ್ಮತಿ ಸೂಚಿಸಿದವರಲ್ಲಿ ಅನೇಕರಿದ್ದರು.

ನ್ಯಾಯಾಂಗದಲ್ಲಿ ದಲಿತ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಪ್ರಶ್ನೆ


– ಶ್ರೀಧರ್ ಪ್ರಭು


 

“ಶುದ್ಧೀಕರಣ”

ಗಂಗೆ ಯಮುನೆ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳು ಸಂಗಮಿಸುವ ಪರಮ ಪವಿತ್ರ ಪ್ರಯಾಗದಲ್ಲಿ ಬಹು ದೊಡ್ಡದೊಂದು ಅನಾಹುತ ನಡೆದುಹೋಗಿತ್ತು. ಮೇ ೧೯೯೮ರ ವರೆಗೆ ಅಲಹಾಬಾದ್ ಅಪರ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಭರ್ತ್ರಹರಿ ಪ್ರಸಾದ್ ಒಬ್ಬ ದಲಿತರಾಗಿದ್ದರು ಎಂದು ಗೊತ್ತಾಗಿಬಿಟ್ಟಿತ್ತು!! ಒಬ್ಬ ದಲಿತ ನ್ಯಾಯಸ್ಥಾನದಲ್ಲಿ ಕುಳಿತರೆ ಅದಕ್ಕಿಂತ ಕೆಟ್ಟ ಅನಾಹುತ ಇನ್ನೊಂದಿದೆಯೇ? 11-courtಈ ದಲಿತ ನ್ಯಾಯಾಧೀಶರು ಕುಳಿತು ಇಡೀ ನ್ಯಾಯಂಗಣವನ್ನೇ ‘ಅಪವಿತ್ರ’ಗೊಳಿಸಿ ಹೋಗಿದ್ದರು!! ಪುಣ್ಯವಶಾತ್ ಅವರ ನಂತರದಲ್ಲಿ (ಜೂನ್ ೧೯೯೮ ರಲ್ಲಿ ) ಅಧಿಕಾರವಹಿಸಿ ಕೊಂಡ ಜಸ್ಟಿಸ್ ಶ್ರೀವಾಸ್ತವ ಅಲಹಾಬಾದ ಜಿಲ್ಲಾ ಅಪರ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಂಡ ಮರುಕ್ಷಣದಲ್ಲೇ ಒಂದು ಮಹಾನ್ ಪುಣ್ಯದ ಕೆಲಸ ಮಾಡಿದರು. ಒಂದು ಟ್ಯಾಂಕರ್ ತುಂಬಾ ‘ಶುದ್ಧ’ ಗಂಗಾ ಜಲ ತರಿಸಿ ತಮ್ಮ ಕೊಠಡಿಯನ್ನು ಸಂಪೂರ್ಣವಾಗಿ ‘ಶುದ್ಧಿ’ ಗೊಳಿಸಿದರು. ನ್ಯಾಯದಾನ ಮಾಡಬೇಕಾದರೆ ಪರಿಶುದ್ಧ ಪರಿಸರ ಮುಖ್ಯ ನೋಡಿ!

ಇದರ ಸುಳಿವು ಸಿಕ್ಕ ಒಬ್ಬ ‘ಪಾಖಂಡಿ’ ಪತ್ರಕರ್ತರೊಬ್ಬರು ಈ ಘಟನೆಯನ್ನು ಎಲ್ಲ ಪ್ರಮುಖ ಹಿಂದಿ ಪತ್ರಿಕೆಗಳಿಗೆ ವಿವರ ವರದಿ ಮಾಡಿ ಕಳಿಸಿಕೊಟ್ಟರು. ಆಮೇಲೆ? ಆ ತಕ್ಷಣವೇ ಅಲಹಾಬಾದ್ ಜಿಲ್ಲಾ ಮುಖ್ಯ ಸೆಷನ್ಸ್ ನ್ಯಾಯಮೂರ್ತಿಗಳು ಒಂದು “ಕಾರಣ ಕೇಳಿ ನೋಟೀಸ್” ಜಾರಿ ಮಾಡಿದರು. ಯಾರ ಮೇಲೆ? ಜಸ್ಟಿಸ್ ಶ್ರೀವಾಸ್ತವರ ಮೇಲೆ ಅಂತೀರಾ? ಛೇ! ಅಲ್ಲ. ಭರ್ತ್ರಹರಿ ಪ್ರಸಾದ್ ರ ಮೇಲೆ. ನ್ಯಾಯಾಂಗದ ಒಳಗಿನ ಈ ವಿಚಾರ ಹೊರಗೆ ಹಾಕಿದ್ದಾದರೂ ಯಾರು ಎಂದು.

ನ್ಯಾಯಮೂರ್ತಿ ಭರ್ತ್ರಹರಿ ಪ್ರಸಾದ್ ಉತ್ತರ ರವಾನಿಸಿದರು. ‘ಗಂಗಾ ಜಲದ ವಿಚಾರ ಸತ್ಯ. ಆದರೆ, ಈ ವಿಚಾರ ಪತ್ರಿಕೆಗಳಿಗೆ ಹೇಗೆ ಹೋಯಿತು ಎಂದು ಗೊತ್ತಿಲ್ಲ’ ಎಂದು. ಆ ನಂತರ ನ್ಯಾಯಮೂರ್ತಿ ಶ್ರೀವಾಸ್ತವರ ಹೇಳಿಕೆ ಕೂಡ ಪಡೆಯಲಾಯಿತು. ಈ ಘನವೆತ್ತ ನ್ಯಾಯಮೂರ್ತಿಗಳು ಶುದ್ಧಿಯ ವಿಚಾರ ಅಲ್ಲಗಳೆಯಲಿಲ್ಲ. ಆದರೆ ಅವರಿಗೆ ಅಸ್ತಮಾ ಇದ್ದ ಕಾರಣ ಅವರು ಶುದ್ಧಿ ಮಾಡಿಸಬೇಕೆಂದು ವೈದ್ಯರು ಹೇಳಿದ್ದರಂತೆ. Court-Indianಇನ್ನು ಶುದ್ದಿ ಮಾಡಿದ ಸಿಬ್ಬಂದಿಯ ಹೇಳಿಕೆಗಳು ಪಡೆಯಲಾಯಿತೆ? ಇಲ್ಲ.

ಈ ದಲಿತ ನ್ಯಾಯಾಧೀಶರನ್ನು ಸೀದಾ ಮನೆಗೆ ಕಳಿಸಲಾಯಿತು! ಕೊನೆಗೂ ‘ಧರ್ಮ’ವೇ ಗೆದ್ದದ್ದು. ಹಾಗಾಗಿಯೇ, ನಮ್ಮ ಘೋಷವಾಕ್ಯ – ಸತ್ಯಮೇವ ಜಯತೇ!

ಬೆರಳೆಣಿಕೆಯ ದಲಿತ ಪ್ರಾತಿನಿಧ್ಯ

ಈ ರೀತಿ ನಮ್ಮ ನ್ಯಾಯಾಂಗಣಗಳನ್ನು ‘ಅಪವಿತ್ರ’ಗೊಳಿಸುವ ಪ್ರಮೇಯ ಬರಲೇಬಾರದೆಂದು ನಮ್ಮ ಉನ್ನತ ನ್ಯಾಯಾಂಗದಲ್ಲಿ ದಲಿತರೇ ಕಾಣಸಿಗುವುದಿಲ್ಲ. ವರ್ಷ ೨೦೦೦ ರಲ್ಲಿ ಕರಿಯಾ ಮುಂಡಾ ನೇತೃತ್ವದ ಸಂಸತ್ತಿನ ಎರಡೂ ಸದನಗಳ ಮೂವತ್ತೊಂದು ಸದಸ್ಯರ ಸಮಿತಿಯ “ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ವರದಿ” ಯ ಪ್ರಕಾರ ೧೯೯೮ರಲ್ಲಿದ್ದ ೪೮೧ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಕೇವಲ ೧೫ ಜನ ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ಕೇವಲ ೫ ಜನ ಪರಿಶಿಷ್ಟ ಪಂಗಡದವರು. ಅಂದು ಇದ್ದ ೧೮ ಉಚ್ಚ ನ್ಯಾಯಾಲಯಗಳ ಪೈಕಿ ಸುಮಾರು ೧೫ ನ್ಯಾಯಾಲಯಗಳಲ್ಲಿ ಒಬ್ಬರೇ ಒಬ್ಬ ದಲಿತ ನ್ಯಾಯಾಧೀಶರಿರಲಿಲ್ಲ. ೨೦೧೧ ರಲ್ಲಿ ಪರಿಶಿಷ್ಟ ಜಾತಿಗಳ ಆಯೋಗ ಪ್ರಕಟಿಸಿದ ವರದಿಯ ಪ್ರಕಾರ ಅಂದಿನ ದಿನಾಂಕಕ್ಕೆ ಇದ್ದ ೮೫೦ ನ್ಯಾಯಾಧೀಶರಲ್ಲಿ ಪರಿಶಿಷ್ಥ ಜಾತಿ ಮತ್ತು ಪಂಗಡ ಗಳವರು ಕೇವಲ ೨೪ ಜನರು. ಎಷ್ಟೊಂದು ಗಂಗಾಜಲ ಉಳಿಯಿತು ನೋಡಿ!

ಉನ್ನತ ನ್ಯಾಯಾಂಗ (Higher Judiciary)

೧೯೫೦ ರಿಂದ ಇಂದಿನವರೆಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ನೇಮಕವಾದ ದಲಿತರ ಸಂಖ್ಯೆ ಕೇವಲ ನಾಲ್ಕು – ಎ. ವರದರಾಜನ್, ಬಿ. ಸಿ. ರಾಯ್, ಕೆ. ರಾಮಸ್ವಾಮಿ ಮತ್ತು ಕೆ. ಜಿ. ಬಾಲಕೃಷ್ಣನ್. ಕಳೆದ ಅರವೈತ್ತೈದು ವರ್ಷಗಳಲ್ಲಿ ಈ ದೇಶದ ದಲಿತರಲ್ಲಿ ನಾಲ್ಕು ಜನ ಮಾತ್ರ ಸುಪ್ರೀಂ ಕೋರ್ಟ್ ಲ್ಲಿ ಕೂರಲು ಲಾಯಕ್ಕದವರೇ? ಹಾಗೆಯೆ, ಒಂದು ಅಂದಾಜಿನ ಪ್ರಕಾರ ಸುಪ್ರೀಂ ಕೋರ್ಟ್ ನ ಸುಮಾರು ೫೬% ರಷ್ಟು ನ್ಯಾಯಾಧೀಶರು ಬ್ರಾಹ್ಮಣರು. Supreme Courtಒಟ್ಟು ಹೈ ಕೋರ್ಟ್ ನ್ಯಾಯಾಧೀಶರಲ್ಲಿ ಕೂಡ ಬ್ರಾಹ್ಮಣರ ಅನುಪಾತ ೫೦% ನಷ್ಟು.

೨೦೦೯ ರ ಸುಮಾರಿಗೆ ಕೇಂದ್ರ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಗೆ ಒಂದು ಮನವಿ ಸಲ್ಲಿಸಿ ನ್ಯಾಯಾಂಗದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು ಕೋರಿತು. ಆದರೆ ಈವರೆಗೂ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾವುದೇ ಉಚ್ಚ ನ್ಯಾಯಾಲಯವೂ ಯಾವ ಸೂತ್ರ ಯಾ ನಿರ್ದೇಶನಗಳನ್ನೂ ಜಾರಿ ಮಾಡಲಿಲ್ಲ.

ಕೇಶವಾನಂದ ಭಾರತಿ ಪ್ರಕರಣದಿಂದ ಮೊದಲ್ಗೊಂಡು ಅನೇಕ ತೀರ್ಮಾನಗಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ ನ್ಯಾಯಾಂಗವೆಂದರೆ “ಪ್ರಭುತ್ವ” (State). ಪ್ರಭುತ್ವದ ಇನ್ನೆರಡು ಅಂಗಗಳಲ್ಲಿ ಮೀಸಲಾತಿ ಇರುವುದು ನಿಜವಾದರೆ ನ್ಯಾಯಾಂಗ ಇದಕ್ಕೆ ಹೊರತಾಗಿರಬೇಕೇ? ಇನ್ನು ನ್ಯಾಯಾಲಯಗಳ ಸಿಬ್ಬಂದಿಗಳ ನೇಮಕದಲ್ಲಿ ಮೀಸಲಾತಿ ಇದೆ. ಆದರೆ ನ್ಯಾಯಮೂರ್ತಿಗಳ ನೇಮಕದಲ್ಲಿ ಏಕಿಲ್ಲ?

ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆಯೋಗ ರಚನೆಯಾದರೆ ಎಲ್ಲಿ ಮೀಸಲಾತಿ ಜಾರಿಮಾಡುವ ಪ್ರಮೇಯ ಬಂದೀತೋ ಎಂದು ಈವರೆಗೆ ಯಾವ ಸರಕಾರವೂ ನ್ಯಾಯಾಂಗ ಸೇವೆಗಳ ಆಯೋಗ ರಚನೆ ಮಾಡುವ ಸಾಹಸ ಮಾಡಿಲ್ಲ. ಕೊಲಿಜಿಯಂ ಪದ್ಧತಿ ರದ್ದಾಗಿ ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್ ನ ಮುಂದಿದೆ. ಈ ಕೊಲಿಜಿಯಂ ಪದ್ಧತಿಯಡಿ ದಲಿತರಿಗೆ ಸೇರಿದಂತೆ ಅನೇಕ ಜನಪರ ಕಾಳಜಿಯ ನ್ಯಾಯಾಧೀಶರಿಗೆ ಹಿನ್ನಡೆಯಾಗಿದೆಯೆಂದು ಬಹುತೇಕ ಎಲ್ಲ ವಕೀಲರೂ ವಾದಿಸಿದ್ದಾರೆ.

ಇತ್ತೀಚಿಗೆ ತಮ್ಮ ಎಡ ಮತ್ತು ಪ್ರಜಾಸತ್ತಾತ್ಮಕ ನಿಲುಮೆಯಿಂದ ಪಟ್ಟ ಪಾಡನ್ನು ಉಲ್ಲಾಳ ಲಕ್ಷ್ಮೀನಾರಾಯಣ ಭಟ್ಟರು ತಮ್ಮ “ಸ್ಟೋರಿ ಆಫ್ ಎ ಚೀಫ್ ಜಸ್ಟಿಸ್ ” ಪುಸ್ತಕದಲ್ಲಿ ಬಿಡಿಸಿಟ್ಟಿದ್ದಾರೆ. ಈ ಕೊಲಿಜಿಯಂ ವ್ಯವಸ್ಥೆಯಲ್ಲಿ ಒಬ್ಬ (ಜಾತ್ಯತೀತ ನಿಲುಮೆಯ) ಬ್ರಾಹ್ಮಣ ನ್ಯಾಯಾಧೀಶರಿಗೇ ಇಷ್ಟೊಂದು ಅನ್ಯಾಯವಾಗಿರುವುದಾದರೆ ಇನ್ನು ದಲಿತರ ಪಾಡೇನು?

ಸರಕಾರಿ ವಕೀಲರು

ಇನ್ನು ಯಾವುದೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್, Karnataka High Courtಅಡ್ವೋಕೇಟ್ ಜನರಲ್ ಹೋಗಲಿ ಸಾಮಾನ್ಯ ಸರಕಾರೀ ವಕೀಲರ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಪಾಲಿಸಿಲ್ಲ. ಸರಕಾರದ ಯಾವ ಬ್ಯಾಂಕ್, ನಿಗಮ, ಮಂಡಳಿಗಳು ಕೂಡ ತಮ್ಮ ಪ್ಯಾನೆಲ್ ಗಳಲ್ಲಿ ಮೀಸಲಾತಿ ಹೋಗಲಿ ದಲಿತರ ಬಗ್ಗೆ ಕನಿಷ್ಠ ಪ್ರಾತಿನಿಧ್ಯದ ಬಗ್ಗೆ ಕೂಡ ಗಮನ ಹರಿಸಿಲ್ಲ.

ವಕೀಲರೇ ದಲಿತರ ಮಧ್ಯದ ಅತಿ ದೊಡ್ಡ ಅಸಂಘಟಿತ ವಲಯ

ಇಂಥ ನೇಮಕಾತಿಗಳಲ್ಲಿ ಮೀಸಲಾತಿ ಬಗ್ಗೆ ಯಾವುದೇ ಕಾನೂನು ಅಥವಾ ನಿಯಮಗಳು ಹೋಗಲಿ ಕನಿಷ್ಠ ನಿರ್ದೇಶನ ಸೂತ್ರಗಳು ಕೂಡ ಇಲ್ಲ. ಎಲ್ಲಾ ಸರಕಾರಗಳು ದಲಿತರ ಪರ ಮೊಸಳೆ ಕಣ್ಣೀರು ಹಾಕುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈವರೆಗೆ ದಲಿತರ ಪರವಾಗಿ ದಲಿತ ವಕೀಲರೇ ಧ್ವನಿ ಎತ್ತಿಲ್ಲ ಎಂದರೆ ಎಂಥ ಬೇಸರದ ವಿಷಯ.

ವಕೀಲರ ಸಾರ್ವತ್ರಿಕ ಪ್ರಾತಿನಿಧ್ಯದ ಸಂಸ್ಥೆ ವಕೀಲರ ಪರಿಷತ್ತು (ಬಾರ್ ಕೌನ್ಸಿಲ್) ನಲ್ಲಿ ಕೂಡ ಯಾವ ಪ್ರಾತಿನಿಧ್ಯವಿಲ್ಲ. ಇಂದು ವಕೀಲರಾಗಿ ನೊಂದಣಿ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆ ಕಡ್ಡಾಯ. ಆದರೆ ಈ ಪರೀಕ್ಷೆ ಗಳಲ್ಲಿ ಕೂಡ ಮೀಸಲಾತಿಯಿಲ್ಲ. ದಲಿತ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗ ಹೋಗಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೂಡ ಕನಿಷ್ಠ ಶುಲ್ಕ ವಿನಾಯತಿ ಕೊಡುವ ಔದಾರ್ಯವನ್ನೂ ವಕೀಲರ ಪರಿಷತ್ತು ತೋರಿಲ್ಲ. ತನ್ನ ವೆಬ್ಸೈಟ್ ನಲ್ಲಿ ನಮೂದಿಸಿರುವ ಪ್ರಶ್ನಾವಳಿ (FAQ) ಗಳಲ್ಲಿ ವಕೀಲರ ಪರಿಷತ್ತು “ನಮ್ಮ ಪರೀಕ್ಷೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ” ಎಂದು ಘೋಷಿಸಿ ಕೊಂಡಿದೆ. ವಿಪರ್ಯಾಸವೆಂದರೆ ವಕೀಲರ ಪರಿಷತ್ತಿನ ವೆಬ್ಸೈಟ್ ನಲ್ಲಿ ದೊಡ್ಡದೊಂದು Young_Ambedkarಅಂಬೇಡ್ಕರ್ ಪಟವಿದೆ!

ದುರಂತವೆಂದರೆ ಇಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದಲಿತ ವಕೀಲರನ್ನು ಪ್ರತಿನಿಧಿಸುವ ಯಾವುದೇ ಸಂಘ ಸಂಸ್ಥೆಗಳಿಲ್ಲ. ಸಣ್ಣ ಪುಟ್ಟ ಕಾರ್ಖಾನೆಗಳಲ್ಲಿಯೂ ದಲಿತ ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಳ್ಳುವ ದಲಿತರು ಇಂದಿನವರೆಗೂ ವಕೀಲರ ಮಧ್ಯೆ ಸಂಘಟನೆ ಕಟ್ಟಿಲ್ಲ. ಸಂಘಟಿತರಾಗದವರೆಗೂ ದಲಿತರಿಗೆ ಮುಕ್ತಿಯಿಲ್ಲ ಎಂಬುದಕ್ಕೆ ಈ ಕ್ರೂರ ವಾಸ್ತವಗಳಿಗಿಂತಲೂ ಹೆಚ್ಚಿನ ಸಾಕ್ಷಿಗಳು ದಲಿತರಿಗೆ, ಅದರಲ್ಲೂ ಮುಖ್ಯವಾಗಿ ವಕೀಲರಿಗೆ ಬೇಕಿಲ್ಲ ಎಂದು ಕೊಳ್ಳೋಣ.

೨೦೧೧ ರಲ್ಲಿ ಸಂವಿಧಾನ ತಿದ್ದುಪಡಿ ತಂದು ಸಹಕಾರ ಸಂಘಗಳ ಕಾನೂನಿಗೆ ಸಮಗ್ರ ಸರ್ಜರಿ ಮಾಡಲಾಯಿತು. ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಮೂಲಭೂತ ಕರ್ತವ್ಯವೆಂದು ಸಾರಲಾಯಿತು. ಜೊತೆಗೆ, ಸಹಕಾರ ಸಂಘಗಳಲ್ಲಿ ಸಾಮಾಜಿಕ ಮತ್ತು ಮಹಿಳಾ ಮೀಸಲಾತಿ ಜಾರಿಗೊಳಿಸಲಾಯಿತು. ಆದರೆ ವಕೀಲರ ಸಂಘಗಳಲ್ಲಿ ಈ ಮೀಸಲಾತಿ ಜಾರಿಯಾಗಿಲ್ಲ. ವಕೀಲರ ಸಂಘಗಳಿಗೆ ಸರಕಾರಗಳು ಸಾಕಷ್ಟು ಸಹಾಯ ಧನ ನೀಡಿವೆ. ಏಷ್ಯಾದಲ್ಲಿಯೇ ಅತೀ ದೊಡ್ಡದು ಎನ್ನಿಸಿಕೊಳ್ಳುವ ಬೆಂಗಳೂರು ವಕೀಲರ ಸಂಘದ ಬೈ ಲಾ ಗಳನ್ನು ಅನುಮೋದಿಸಿದ್ದು ಸ್ವತಃ ಸಹಕಾರ ಸಂಘಗಳ ಪ್ರಬಂಧಕರು. ಆದರೆ ಇಲ್ಲಿ ಮಹಿಳಾ, OBC ಮತ್ತು ದಲಿತ ಮೀಸಲಾತಿಯ ಪ್ರಶ್ನೆಯೇ ಇಲ್ಲ. ಈವರೆಗೆ ಯಾವ ದಲಿತರೂ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾಗಿಲ್ಲ. ಈವರೆಗೆ ಯಾವ ದಲಿತರೂ ಹಿಂದುಳಿದವರು ಮತ್ತು ಮಹಿಳೆಯರು ಈ ಬಗ್ಗೆ ಪ್ರಶ್ನೆ ಮಾಡಿಲ್ಲ.

ದಲಿತ, ಮಹಿಳಾ ಮತ್ತು ಹಿಂದುಳಿದ ವರ್ಗಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಪ್ರನಿಧಿಸುತ್ತಿಲ್ಲ ಎಂಬುದು ಕೇವಲ ಈ ವರ್ಗ ವಿಭಾಗಗಳ ಪ್ರಶ್ನೆಯಲ್ಲ. ಇದು ನಮ್ಮ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಾಡಬೇಕಿರುವ ಪ್ರಶ್ನೆ. ‘ದಲಿತರು ಎಲ್ಲರಿಗೂ ಸಮನಾಗಿ ಬದುಕುತ್ತಿದ್ದಾರೆ’, ‘ಜಾತಿ ವ್ಯವಸ್ಥೆ ಸತ್ತು ಹೋಗಿದೆ’ ಅಥವಾ ‘ಬರೀ ವರ್ಗವೊಂದೇ ಸತ್ಯ ಜಾತಿ ಮಿಥ್ಯ’ ಎಂದು ವಾದಿಸುವ ಸಿದ್ಧಾಂತಿಗಳು ನ್ಯಾಯಾಂಗದಲ್ಲಿ ಏಕೆ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಯೋಚಿಸುವರೆ?

ಇದೆಲ್ಲ ಹಾಗಿರಲಿ, ರಾಜ್ಯ ಸರಕಾರದ ಕಛೇರಿಗಳಲ್ಲಿ ಅಂಬೇಡ್ಕರ್ ಪಟವನ್ನು ಹಾಕಲು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿತ್ತು. ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಯಾವ ಕೊಠಡಿಯಲ್ಲೂ ಅಂಬೇಡ್ಕರ್ ಪಟವಿಲ್ಲ. ಹಾಗೆಯೇ ಅನೇಕ ಅಧೀನ ನ್ಯಾಯಾಲಯಗಳಲ್ಲೂ ಇದೇ ಸ್ಥಿತಿಯಿದೆ. ಒಂದು ಪಟವಾಗಿ ಕೂಡ ನಮ್ಮನ್ನು ತಲುಪದ ಅಂಬೇಡ್ಕರ್ ನ್ಯಾಯಾಂಗದ ಭಾವಕೊಶವನ್ನು ತುಂಬಲು ಸಾಧ್ಯವೇ?

ಅಂಬೇಡ್ಕರ್ ಸಂವಿಧಾನ ರಚಿಸಿದರು; ಆ ಸಂವಿಧಾನವೇ ನಮ್ಮನ್ನು ಕಾಪಾಡುತ್ತದೆ ಎಂದುಕೊಂಡಿದ್ದರೆ ನಮ್ಮಷ್ಟು ಮೂರ್ಖರೇ ಇನ್ನೊಬ್ಬರಿಲ್ಲ. ನಾವು ಸಂವಿಧಾನವನ್ನು ಕಾಪಾಡಿದರೆ ತಾನೇ ಅದು ನಮ್ಮನ್ನು ಕಾಪಾಡುವುದು?

ವರ್ತಮಾನ.ಕಾಮ್‌ಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ…

ಮೊನ್ನೆ ಆಗಸ್ಟ್ 10, 2015 ಕ್ಕೆ ವರ್ತಮಾನ.ಕಾಮ್‌ಗೆ ನಾಲ್ಕು ತುಂಬಿತು. ಆದರೆ ಅದರ ಬಗ್ಗೆ ಇಲ್ಲಿಯವರೆಗೆ ಏನೊಂದೂ ಬರೆದಿರಲಿಲ್ಲ. ಕಾರಣ, ಗೊತ್ತಾಗದೇ ಹೋದದ್ದು. ಅಂದರೆ ಇದರ ಕೆಲವೊಂದು ಜವಾಬ್ದಾರಿಗಳನ್ನು ಹೊತ್ತಿರುವ ನಾನು ಅದನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಈಗಾಗಲೆ ವಿಫಲವಾಗಿದ್ದೇನೆ ಎನ್ನುವುದು ಸಾಬೀತು. ಇತ್ತೀಚೆಗೆ ತಾನೆ ನಮ್ಮ ಬಳಗದ ಕೆಲವರು ಸೇರಿದ್ದಾಗ ನಾನು ಅಪ್ರಾಸ್ತವಿಕವಾಗಿ ನನ್ನ ಈಗಿನ ’ಸಂಪಾದಕ’ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದರೆ ಹೇಗೆ ಎಂದು ಪ್ರಸ್ತಾಪಿಸಿದ್ದೆ. ಈಗ ಅದನ್ನು ಗಂಭೀರವಾಗಿ ಯೋಚಿಸಿ Vartamana 4ತೀರ್ಮಾನಿಸಬೇಕಿದೆ.

ವರ್ತಮಾನ.ಕಾಮ್‌ನಂತಹ ಯಾವುದೇ ಒಂದು ವೆಬ್‌ಸೈಟ್ ಪ್ರತಿದಿನವೂ ಒಂದಲ್ಲ ಒಂದು ಲೇಖನಗಳನ್ನು ಪ್ರಕಟಿಸದಿದ್ದರೆ ತನ್ನ ಪ್ರಸ್ತುತೆಯನ್ನು ಮತ್ತು ಓದುಗರನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಮೊದಲಿನಿಂದಲೂ ನಾವು ನಮ್ಮ ಲೇಖನ ಪ್ರಕಟವಾದ ಕೂಡಲೆ ವರ್ತಮಾನದ ಫೇಸ್‌ಬುಕ್ ಗೋಡೆಯಲ್ಲಿ ಹಂಚಿಕೊಳ್ಳುವುದರಿಂದ ಅದಕ್ಕೆ ಸ್ನೇಹಿತರಾಗಿರುವ ಒಂದಷ್ಟು ಖಾಯಂ ಓದುಗರಿಗೆ ನಮ್ಮ ಹೊಸದಾಗಿ ಪ್ರಕಟಿತ ಲೇಖನದ ಮಾಹಿತಿ ತಲುಪತ್ತದೆ. ಆ ದೃಷ್ಟಿಯಿಂದ ಯಾವುದಾದರೂ ಹೊಸ ಲೇಖನ ಪ್ರಕಟವಾಗಿದೆಯೇ ಇಲ್ಲವೋ ಎಂದು ನೋಡಲು ನಮ್ಮ ಬಹುತೇಕ ಓದುಗರು ವೆಬ್‌ಸೈಟಿಗೇ ನೇರ ಭೇಟಿ ಕೊಡುವ ಅಗತ್ಯ ಇರುವುದಿಲ್ಲ. ಆದರೆ ನೇರ ವೆಬ್‌ಸೈಟಿಗೆ ಭೇಟಿ ಕೊಟ್ಟು ಗಮನಿಸುವ ನಮ್ಮ ಖಾಯಂ ಓದುಗರಿಗೆ ಇಲ್ಲಿ ಮೂರ್ನಾಲ್ಕು ದಿನಗಳ ಕಾಲವಾದರೂ ಹೊಸ ಲೇಖನ ಪ್ರಕಟವಾಗದೇ ಇದ್ದರೆ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾರೆ.

ಇಷ್ಟಾದರೂ, ಈಗಾಗಲೆ ಹಲವು ಬಾರಿ ಪ್ರಸ್ತಾಪಿಸಿರುವಂತೆ ನಮ್ಮ ಲೇಖನಗಳ ಓದುಗರು ಕೇವಲ ಅಂತರ್ಜಾಲದಲ್ಲಿ ಓದುವವರಷ್ಟೇ ಅಲ್ಲ. ಇಡೀ ರಾಜ್ಯದಾದ್ಯಂತ ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳು ಇಲ್ಲಿಯ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬರುತ್ತಿದ್ದಾರೆ. ಆ ದೃಷ್ಟಿಯಿಂದ ನಮ್ಮ ಬಹುತೇಕ ಲೇಖನಗಳಿಗೆ ಸಾವಿರಾರು ಇಲ್ಲವೆ ಲಕ್ಷಾಂತರ ಲೆಕ್ಕದಲ್ಲಿ ಓದುಗರಿದ್ದಾರೆ. ಆ ಮಟ್ಟಿಗೆ ನಮ್ಮ ಪ್ರಸ್ತುತತೆ ಮತ್ತು ಪ್ರಭಾವ ವ್ಯಾಪಿಸಿದೆ.

ಆದರೆ, ಮುಂದಕ್ಕೆ ಇದನ್ನು ಹೇಗೆ ತೆಗೆದುಕೊಂಡು ಹೋಗುವುದು ಎನ್ನುವ ಪ್ರಶ್ನೆ ಬೆಳೆಯುತ್ತಲೇ ಬರುತ್ತಿದೆ. ಉತ್ತರ ಕಂಡುಕೊಳ್ಳುವ ಜವಾಬ್ದಾರಿ ಎಲ್ಲರಿಗಿಂತ ನನ್ನ ಮೇಲೆಯೇ ಹೆಚ್ಚಿದೆ ಮತ್ತು ನಾನು ಸೋಲುತ್ತಿದ್ದೇನೆ. ಅಯೋಗ್ಯತೆಯೂ ಒಂದು ರೀತಿಯಲ್ಲಿ ಅನೈತಿಕತೆ ಮತ್ತು ಭ್ರಷ್ಟಾಚಾರ ಎಂದುಕೊಂಡವನು ನಾನು. ಭ್ರಷ್ಟನಾಗುವ ಅಗತ್ಯ ಅಥವ ಅನಿವಾರ್ಯತೆ ನನಗಿಲ್ಲ. ವರ್ತಮಾನ.ಕಾಮ್ ನಿರೀಕ್ಷಿತ ಮಟ್ಟದಲ್ಲಿ ತನ್ನ ಪ್ರಭಾವ ವಲಯವನ್ನು 4th-anniversaryವಿಸ್ತರಿಸಿಕೊಳ್ಳುತ್ತಿಲ್ಲ ಮತ್ತು ಅನಿಯಮಿತವಾಗುತ್ತಿದೆ ಎನ್ನುವುದು ಬಿಟ್ಟರೆ, ಮತ್ತು ಅದು ತನ್ನ ಪಾಡಿಗೆ ಸಾವಯವವಾಗಿ ಬೆಳೆಯಲಿ ಎನ್ನುವುದೂ ಒಂದು ಉದ್ದೇಶವಾಗಿರುವ ಕಾರಣದಿಂದ, ಮತ್ತು ಅದು ಯಾರಿಗೂ ಕೇಡು ಉಂಟು ಮಾಡುತ್ತಿಲ್ಲದ ಕಾರಣದಿಂದಾಗಿ, ಅನವಶ್ಯಕವಾಗಿ ಯಾರ ಮೇಲೂ ಆರ್ಥಿಕ ದುಷ್ಪರಿಣಾಮ ಅಥವ ಹೊರೆ ಆಗದೇ ಇರುವುದರಿಂದ ಅದು ಹೇಗಿದ್ದರೂ ನಡೆದೀತು ಎನ್ನುವ ಕಾರಣಕ್ಕೇ ನಾನೂ ಅಷ್ಟು ತೀಕ್ಷ್ಣವಾಗಬಾರದು ಎಂದೆನಿಸುತ್ತದೆ. ಆದರೆ ಆಗಾಗಲಾದರೂ ನಮಗೆ ನಾವೇ ಕಠೋರವಾಗದಿದ್ದರೆ ಕ್ರಮೇಣ ಅದು ಆತ್ಮವಂಚನೆಯೂ ಆಗುತ್ತದೆ.

ನಾಲ್ಕನೇ ವರ್ಷ ತುಂಬಿದ ಈ ಸಂದರ್ಭದಲ್ಲಿ ಹಿಂದಿನ ವರ್ಷಗಳಲ್ಲಿ ಹೇಳಿಕೊಂಡ ಹಾಗೆ, ’ಹಾಗೆ ಆಗಬಹುದು, ಹೀಗೆ ಆಗಬಹುದು’ ಎನ್ನುವುದೇನನ್ನೂ ಹೇಳದೆ, ಏನಾಗುತ್ತದೆಯೋ ಅದನ್ನು ಮಾಡೋಣ ಮತ್ತು ವರ್ತಮಾನ.ಕಾಮ್ ತನಗೆ ಬರುವ ಅದರ ಮೂಲಆಶಯಕ್ಕೆ ಬದ್ಧತೆ ಇರುವ ಲೇಖಕರ ಲೇಖನಗಳನ್ನು ಅವು ಬಂದಾಗಲೆಲ್ಲೆ ಪ್ರಕಟಿಸುತ್ತ ಹೋಗುತ್ತದೆ, ಒಂದೆರಡು ದಿನಗಳ ಅವಧಿಯೊಳಗೆ ಎಂದಷ್ಟೇ ಹೇಳಬಯಸುತ್ತೇನೆ.

ನಮಸ್ಕಾರ,
ರವಿ
ವರ್ತಮಾನ.ಕಾಮ್