ಅಣ್ಣಾ ಹೋರಾಟದ ಅಡ್ಡ ಪರಿಣಾಮಗಳು!!

– ಭೂಮಿ ಬಾನು

ಅಣ್ಣಾ ಹಜಾರೆಯ ಉಪವಾಸ-ಚಳವಳಿ ದುಷ್ಟರಿಣಾಮಗಳು ಇಷ್ಟು ಬೇಗ ಗೋಚರಿಸುತ್ತವೆ ಯಾರೂ ಊಹಿಸಿರಲಿಲ್ಲವೇನೋ? ಗುಜರಾತ್ ನರಮೇಧದಲ್ಲಿ ಮೈತುಂಬಾ ರಕ್ತ ಅಂಟಿಸಿಕೊಂಡ ನರೇಂದ್ರ ಮೋದಿ ಸದ್ಭಾವನೆಗಾಗಿ ಉಪವಾಸ ಕೂತರು. ಮೋದಿಯ ಉಪವಾಸ ವಿರುದ್ಧವಾಗಿ ಶಂಕರ್ ಸಿಂಘ್ ವಾಗೇಲ ತಾನೂ ಊಟ ಮಾಡೋಲ್ಲ ಅಂದರು. ಅಷ್ಟೇ ಅಲ್ಲ, ಇಲ್ಲಿ ಕರ್ನಾಟಕದಲ್ಲಿ ಕಬ್ಬಿಣದ ಅದಿರನ್ನು ಅಗೆದು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಶ್ರೀರಾಮುಲು ಸ್ಪಾಂಜ್ ಕಬ್ಬಿಣ ಕಾರ್ಖಾನೆಯವರ ಪರವಾಗಿ ಉಪವಾಸ ಕೂತರು.

ಅಣ್ನಾ ಹಜಾರೆಯ ಉಪವಾಸ ಅಡ್ಡ ಪರಿಣಾಮಗಳೇ ಇವೆಲ್ಲ. ಕೊಲೆ ಆರೋಪಿಗಳು, ಕಳ್ಳ, ಸುಳ್ಳರೆಲ್ಲಾ ಉಪವಾಸ ಕುಂತು ತಮ್ಮ ಬೇಡಿಕೆ ಇಡುವಂತಾದರು. ಹಣ್ಣಿನ ರಸ ಕುಡಿದು ಉಪವಾಸ ಅಂತ್ಯ ಮಾಡುವ ದೃಶ್ಯಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಮಾಮೂಲಿಯಾಗಿಬಿಟ್ಟಿವೆ. ಅಣ್ಣಾ ಹೋರಾಟವನ್ನು ಮೊದಲಿನಿಂದಲೂ ಒಂದು ಶಂಕೆಗಣ್ಣಿನಿಂದಲೇ ನೋಡುತ್ತಾ ಬಂದವರಿಗೆ ಈ ಅಡ್ಡ ಪರಿಣಾಮಗಳು ನಿರೀಕ್ಷಿತ. ತಾತ್ವಿಕ ಸ್ಪಷ್ಟತೆ ಇಲ್ಲದ ಹೋರಾಟಗಳು ಟಿಆರ್ಪಿ ಹಿಂದೆ ಬಿದ್ದಿರುವ ಮಾಧ್ಯಮಗಳ ಕಾರಣ ಅನಿರೀಕ್ಷಿತ ಪ್ರಚಾರ ಗಿಟ್ಟಿಸಿದ ಕಾರಣ ಇಂತಹ ಅವಘಡಗಳು ಸಹಜ. ನೋಡ ನೋಡುತ್ತಲೇ ಕೆಲವೇ ದಿನಗಳ ಅಂತರದಲ್ಲಿ ಉಪವಾಸ ಪರಿಣಾಮಕಾರಿ ಪಿಆರ್ ಟೂಲ್ ಆಗಿ ರೂಪ ಪಡೆಯಿತು.

ಸಮಾಜದಲ್ಲಿ ಸದ್ಭಾವನೆ ಮೂಡಿಸಲು ಕೋಮು ಸೌಹಾರ್ದ ಆಡಳಿತದಿಂದ ಮಾತ್ರ ಎಂದು ತಿಳಿಯಬೇಕಿದ್ದ ಮುಖ್ಯಮಂತ್ರಿಗೆ ಅಣ್ಣಾ ಹಜಾರೆ ಉಪವಾಸ ಮಾಡಿದರೆ ಸಾಕು ಎನ್ನುವ ಪಾಠ ಹೇಳಿಕೊಟ್ಟರು. ಮೋದಿಯನ್ನು ಎದುರಿಸಲು ಜನರ ಮಧ್ಯೆ ಹೋಗಿ ಪಾರ್ಟಿ ಕಟ್ಟಬೇಕು ಎಂಬುದನ್ನು ಮರೆತು ಕಾಂಗ್ರೆಸ್ ನವರೂ ಅದೇ ತಂತ್ರ ಅನುಸರಿಸಿದರು.

ಇವರೆಲ್ಲರ ಹೊರತಾಗಿ ಅಣ್ಣಾ ಹೋರಾಟದ ಸಂಪೂರ್ಣ ಲಾಭ ಪಡೆಯಲು ಹೊರಟವರು ಎಲ್.ಕೆ. ಅಡ್ವಾಣಿ. ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ನಡೆಸಲಿದ್ದಾರೆ. ಆ ಮೂಲಕ ಪ್ರಧಾನಿಯಾಗುವ ತಮ್ಮ ಕನಸನ್ನು refresh ಮಾಡಿದ್ದಾರೆ ಎನ್ನುವುದು ಅನೇಕರ ಲೆಕ್ಕಾಚಾರ. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ರಥಯಾತ್ರೆ ಹೊರಟಿದ್ದವರು ಒಂದು ಸಾಮಾಜಿಕ ಪಿಡುಗಿನ ವಿರುದ್ಧ ಯಾತ್ರೆ ಹೊರಡುವ ಮಾತನಾಡಿದ್ದಾರಲ್ಲಾ ಎನ್ನುವುದಷ್ಟೇ ಸಮಾಧಾನದ ಸಂಗತಿ.

Leave a Reply

Your email address will not be published. Required fields are marked *