Category Archives: ಶ್ರೀಪಾದ್ ಭಟ್

ವರ್ತಮಾನ.ಕಾಮ್‌ನ 2013 ಭೂತಕಾಲ


– ರವಿ ಕೃಷ್ಣಾರೆಡ್ಡಿ


 

2012 ಆರಂಭವಾದಾಗ ನಮ್ಮ ಆಶಾವಾದಗಳು ಆಕಾಶದಲ್ಲಿ ಹಾರುತ್ತಿದ್ದವು. ಆ ವರ್ಷದ ಆರಂಭದಲ್ಲಿ ನಾನು ಬರೆದ “2012 – ಪಲ್ಲಟಗಳ ವರ್ಷದಲ್ಲಿ ವರ್ತಮಾನ” ಎಂಬ ಲೇಖನದಲ್ಲಿ ಅದಕ್ಕೆ ಕಾರಣಗಳನ್ನು ನೀವು ಗುರುತಿಸಬಹುದು. ಹಾಗೆ ನೋಡಿದರೆ 2012 ರಲ್ಲಿ ಅಂತಹ ದೊಡ್ಡ ಬದಲಾವಣೆಗಳಾಗಲಿಲ್ಲ. ಆದರೆ ಮುಂದಿನ ವರ್ಷ, ಅಂದರೆ 2013 ರಲ್ಲಿ, ಈ ದೇಶ ಪಡೆದುಕೊಂಡ ತಿರುವುಗಳ ಬೀಜಗಳೆಲ್ಲ 2012 ರಲ್ಲಿ ಬಿತ್ತಲ್ಪಟ್ಟವು ಎನ್ನುವುದನ್ನು ನಾವು ಮರೆಯಬಾರದು.

2013 ಈ ದೇಶವಾಸಿಗಳಲ್ಲಿ ಹೊಸ ಹುಮ್ಮಸ್ಸನ್ನು, ಕನಸನ್ನು, ಧೈರ್ಯವನ್ನು, ನಗುವನ್ನು, (ಬಹುಶಃ ಒಂದಷ್ಟು ಭ್ರಮೆಗಳನ್ನೂ) ತುಂಬಿದೆ. ಆದರೆ ಕರ್ನಾಟಕದ ರಾಜಕೀಯದ ವಿಚಾರಕ್ಕೆ ಹೇಳುವುದಾದರೆ, ramya-siddaramaiahಭ್ರಷ್ಟ ಬಿಜೆಪಿ ವಿರುದ್ಧ ಭ್ರಷ್ಟ ಕಾಂಗ್ರೆಸ್ ಬಂದು ಕುಳಿತಿದೆ. ಒಂದೇ ಸಮಾಧಾನ ಎಂದರೆ ಸಿದ್ಧರಾಮಯ್ಯನವರು ಯಡ್ಡಯೂರಪ್ಪನವರಲ್ಲ ಎನ್ನುವುದು. ಆದರೆ ಸರ್ಕಾರ ಕೇವಲ ಸಿದ್ಧರಾಮಯ್ಯ ಅಲ್ಲ ಎನ್ನುವುದನ್ನು ನಾವು ನೆನಪಿಡಬೇಕು. 2014 ರ ಮೊದಲನೆಯ ದಿನವೇ ಈ ಸರ್ಕಾರ ಕಳಂಕಿತರನ್ನು, ಭ್ರಷ್ಟರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳ ಹೊರಟಿದೆ. ಭ್ರಷ್ಟ ಯಡ್ಡಯೂರಪ್ಪ ಭ್ರಷ್ಟ ಬಿಜೆಪಿಗೆ ಮರಳಲಿದ್ದಾರೆ. ಜೆಡಿಎಸ್ ಒಡೆಯಲು ಕಾಲ ದೂರವಿಲ್ಲ. (ಇಂತಹುದನ್ನೆಲ ಊಹಿಸಿಯೇ ನಾನು 2013 ರ ಬಗ್ಗೆ ವರ್ಷದ ಹಿಂದೆ “2013 – ಕರ್ನಾಟಕದಲ್ಲಿ ಮೌಲ್ಯಗಳು ಪಾತಾಳದ ತಳ ಕಾಣಲಿರುವ ವರ್ಷ…” ಲೇಖನ ಬರೆದದ್ದು.)

ದೆಹಲಿಯ ಜನತೆ ತಿಂಗಳ ಹಿಂದೆ ಮಾಡಿದ ಪವಾಡಸದೃಶ ಮಾದರಿಯ ಕಾರ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ, ಅಂತಹುದೇ ಪರ್ಯಾಯವೊಂದನ್ನು 2013 ರ ಮೊದಲಾರ್ಧದಲ್ಲಿ ಇಲ್ಲಿ ಕಟ್ಟಿಕೊಳ್ಳಲು ಸೋತ ಕರ್ನಾಟಕ 2014 ರ ನಂತರವಾದರೂ ಆ ನಿಟ್ಟಿನಲ್ಲಿ ನಡೆಯಲಿದೆಯೇ ಎನ್ನುವುದನ್ನು ನಾವು ನೋಡಬೇಕಿದೆ. ನೋಡುವುದಕ್ಕಿಂತ ಹೆಚ್ಚಾಗಿ ನಾವೇ ಸಾಧ್ಯ ಮಾಡಿಕೊಳ್ಳಬೇಕಿದೆ.

ಇಲ್ಲಿ ಒಂದು ವಿಷಯ ಹೇಳಿ ವರ್ತಮಾನ.ಕಾಮ್‌ನ ವಿಷಯಕ್ಕೆ ಬರುತ್ತೇನೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಹಿಂದೆ ಅನೇಕ ಅಂಶಗಳು ಮತ್ತು ದೀರ್ಘಕಾಲದ ಹೋರಾಟಗಳಿವೆ. manishsisodia-yogendrayadav-arvindkejriwal-prashantbhushan“ಭ್ರಷ್ಟಾಚಾರದ ವಿರುದ್ಧ ಭಾರತ” ಹೋರಾಟದ ಹಿನ್ನೆಲೆ ಅದರ ನಾಯಕರಿಗಿತ್ತು. ಅರವಿಂದ್ ಕೇಜ್ರಿವಾಲ್ ಹತ್ತು ವರ್ಷಕ್ಕೂ ಮಿಗಿಲಾಗಿ “ಪರಿವರ್ತನ್” ಸಂಸ್ಥೆಯನ್ನು ನಡೆಸುತ್ತ, ಆಂದೋಳನಗಳನ್ನು ರೂಪಿಸುತ್ತ, ಭ್ರಷ್ಟಾಚಾರದ ವಿರುದ್ದ ಹೋರಾಡುತ್ತ ಬಂದವರು. ಪ್ರಶಾಂತ್ ಭೂಷಣ್ ಸುಪ್ರೀಮ್‌ಕೋರ್ಟ್‌ನ ಹೆಸರಾಂತ ನ್ಯಾಯವಾದಿ ಮತ್ತು ಜನಪರ ಹೋರಾಟಗಾರ. ನಮ್ಮ ರಾಜ್ಯದ ಹಿರೇಮಠರು ನಡೆಸುತ್ತಿರುವ ಅನೇಕ ಮೊಕದ್ದಮೆಗಳನ್ನು ಇವರು ಉಚಿತವಾಗಿ ವಾದಿಸಿ ನಡೆಸಿಕೊಡುತ್ತಿದ್ದಾರೆ. ಯೋಗೇಂದ್ರ ಯಾದವ್ ದೇಶದ ಪ್ರಜ್ಞಾವಂತರ ನಂಬಿಕೆ ಉಳಿಸಿಕೊಂಡಿರುವ ಬದ್ಧತೆಯುಳ್ಳ ಚಿಂತಕ. ಮನೀಷ್ ಸಿಸೋಡಿಯ ಮತ್ತು ಶಜಿಯಾ ಇಲ್ಮಿ ಪತ್ರಕರ್ತರಾಗಿ ಹೆಸರಾದವರು. ಕುಮಾರ್ ವಿಶ್ವಾಸ್ ಹಿಂದಿಯ ಯುವತಲೆಮಾರಿನ ಹೆಸರಾಂತ ಕವಿ. ಇವರೆಲ್ಲರ ಜೊತೆಗೆ ಲಕ್ಷಾಂತರ ಜನರ ನಿಸ್ವಾರ್ಥ ಶ್ರಮ, ಮತ್ತು ದೇಶವಿದೇಶಗಳಲ್ಲಿಯ ಲಕ್ಷಾಂತರ ಜನರ ಧನಸಹಾಯ ದೆಹಲಿಯಲ್ಲಿ ಆ ಪಕ್ಷವನ್ನು ಎರಡನೆ ಅತಿದೊಡ್ಡ ಪಕ್ಷವಾಗಿಸಿತು. ಕರ್ನಾಟಕದಲ್ಲಿ ಆ ತರಹದ ವಾತಾವರಣವಿದೆಯೆ? ಸಂಗಯ್ಯ ಹಿರೇಮಠರು ಖಂಡಿತವಾಗಿ ಕೇಜ್ರಿವಾಲರಿಗಿಂತ ಹಿರಿಯರು ಮತ್ತು ಇತಿಹಾಸ ಹೊಂದಿರುವವರು. sr-hiremathಅವರನ್ನು ಬಿಟ್ಟರೆ ಮೇಲಿನ ಜನಕ್ಕೆ ಹೋಲಿಸಲು ಕರ್ನಾಟಕದಲ್ಲಿ ಯಾರಿದ್ದಾರೆ? ನಮ್ಮ ರಾಜ್ಯದ ಯಾವ ನ್ಯಾಯವಾದಿಯನ್ನು ನಾವು ಪ್ರಶಾಂತ್ ಭೂಷಣರಿಗೆ ಹೋಲಿಸೋಣ? ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಅನ್ನು ಯೋಗೇಂದ್ರ ಯಾದವರಿಗೆ ಹೋಲಿಸೋಣ? ಯಾವ ಪತ್ರಕರ್ತರನ್ನು ಸಿಸೋಡಿಯ ಮತ್ತು ಇಲ್ಮಿಗೆ ಹೋಲಿಸೋಣ? ಯಾವ ಕವಿ-ಸಾಹಿತಿಯಲ್ಲಿ ಕುಮಾರ್ ವಿಶ್ವಾಸನನ್ನು ಕಾಣೋಣ? ಅಂತಹ ವ್ಯಕ್ತಿಗಳು ಇರಬಹುದು ಮತ್ತು ಇದ್ದಾರೆ. ಆದರೆ ಅವರ್‍ಯಾರಿಗೂ ಈ ಹೋರಾಟಗಳು ಬೇಕಿಲ್ಲ. ಜನರೇನೋ ಸಿದ್ಧವಿದ್ದಾರೆ. ಆದರೆ ಜನರ ಮುಂದೆ ಅಗತ್ಯ ವಿಚಾರಗಳನ್ನು ಪ್ರತಿಪಾದಿಸಬಲ್ಲ, ನೆಲದ ಮೇಲೆ ಮಲಗಲು, ದೈಹಿಕ ಶ್ರಮ ಹಾಕಲು, ಹಗಲು-ರಾತ್ರಿ ಹೋರಾಡಲು, ಪೋಲಿಸರಿಂದ ಬಂಧನಕ್ಕೊಳಗಾಗಲು, ಗೆಲುವಿಗಿಂತ ಮೊದಲು ಸೋಲಲು, ಗೌರವ ಪಡೆಯುವುದಕ್ಕಿಂತ ಮೊದಲು ವಿನಾಕಾರಣ ಅವಮಾನಕ್ಕೊಳಗಾಗಲು ಸಿದ್ಧವಿರುವವರು ಕರ್ನಾಟಕದಲ್ಲಿ ಎಲ್ಲಿದ್ದಾರೆ, ಎಷ್ಟಿದ್ದಾರೆ? ಕರ್ನಾಟಕ ಅಂತಹವರನ್ನು ಕಂಡುಕೊಂಡ ದಿನ ಇಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗುತ್ತದೆ. (ಆದರೆ ಅದಕ್ಕಿಂತ ಮೊದಲೇ ಅಧಿಕಾರದ ಹಪಾಹಪಿಯ, ಹಸುವಿನ ವೇಷದಲ್ಲಿರುವ ಹುಲಿಗಳು, ಜನಪರ ಕಾಳಜಿಗಳಿಲ್ಲದಿದ್ದರೂ ಸಹ ಒಳ್ಳೆಯವರು, ಯೋಗ್ಯರು ಎಂದು ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳಬಲ್ಲ ತಾಕತ್ತಿರುವ ಸ್ವಕೇಂದ್ರಿತ ವ್ಯಕ್ತಿಗಳು ಈಗಾಗಲೆ ಮುನ್ನೆಲೆಗೆ ಬರಲು ಸಿದ್ಧವಾಗುತ್ತಿರುವ ಮಾಹಿತಿ ಇದೆ. ಇದೇನಾದರೂ ಆದರೆ ಕರ್ನಾಟಕ ಆ ಅವಕಾಶವನ್ನೂ ಕಳೆದುಕೊಳ್ಳುತ್ತದೆ.)

ವರ್ತಮಾನ.ಕಾಮ್‌ಗೂ 2013 ಪ್ರಮುಖ ವರ್ಷವೇ. ನಾನು ಚುನಾವಣೆಗೆ ಸ್ಪರ್ಧಿಸಿದ ಕಾರಣವಾಗಿ ಇದು ಒಂದೆರಡು ತಿಂಗಳು ಸೊರಗಿದ್ದು ನಿಜ. ಆದರೆ ನಮ್ಮ ಬಳಗದ ಪ್ರಯತ್ನ ಅದನ್ನು ನಿಲ್ಲಲು ಬಿಡಲಿಲ್ಲ. courtesy-announcementಸಾಮುದಾಯಿಕ ಪ್ರಯತ್ನ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಮೊದಲಿನಿಂದ ನಮ್ಮ ಜೊತೆಗಿದ್ದ ಕೆಲವು ಲೇಖಕರು ಈ ವರ್ಷ ಬರೆಯುವುದನ್ನು ನಿಲ್ಲಿಸಿದರು ಇಲ್ಲವೇ ಕಡಿಮೆ ಮಾಡಿದರು. ಹಲವರಿಗೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾದದ್ದು ಮುಖ್ಯ ಕಾರಣ. ಇನ್ನು ಕೆಲವರು ಯಾಕೆ ನಿಲ್ಲಿಸಿದರು ಎಂದು ಅವರು ಹೇಳಲಿಲ್ಲ, ನಾನು ಕೇಳಲಿಲ್ಲ. ಆದರೆ, ಅಷ್ಟೇ ಸಂಖ್ಯೆಯಲ್ಲಿ ಹೊಸಬರು ಬಂದರು. ಇನ್ನೂ ಹೆಚ್ಚಿನ ಬದ್ದತೆಯಿಂದ ಕೆಲವರು ಬರವಣಿಗೆಯನ್ನು ಹೆಚ್ಚು ಮಾಡಿದರು. ಕಳೆದ ವರ್ಷದ ಕೊನೆಯ ಮೂರು ತಿಂಗಳಿನಲ್ಲಿ ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ವರ್ತಮಾನ.ಕಾಮ್ ಪಡೆದುಕೊಂಡಿತು. ಇದರಲ್ಲಿ ನಮ್ಮಲ್ಲಿ ಇಲ್ಲಿಯವರೆಗೆ ಒಂದೇ ಒಂದು ಲೇಖನವನ್ನು ಬರೆದವರಿಂದ ಹಿಡಿದು, ಓದುಗರು, ಪ್ರತಿಕ್ರಿಯಿಸಿದವರು, ಫೇಸ್‌ಬುಕ್‌ನಲ್ಲಿ ಲೈಕ್/ಷೇರ್ ಮಾಡಿದವರು, ಹೀಗೆ ಎಲ್ಲರ ಪಾಲೂ ಇದೆ.

ಹಾಗೆಯೇ ವರ್ತಮಾನ.ಕಾಮ್ ಬಳಗ “ದಲಿತರು ಮತ್ತು ಉದ್ಯಮಶೀಲತೆ” ವಿಚಾರವಾಗಿ dalit-entrepreneurship-16ಹಾಸನದಲ್ಲಿ ಮತ್ತು ತುಮಕೂರಿನಲ್ಲಿ ಎರಡು ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ಈ ಕಾರ್ಯಕ್ರಮಗಳು ಅನೇಕ ಕಡೆ ಹೇಗೆ ಸಕಾರಾತ್ಮಕವಾಗಿ ಪ್ರತಿಫಲಿಸುತ್ತಿವೆ ಮತ್ತು ಕೆಲವರನ್ನು ಹೇಗೆ ಕ್ರಿಯಾಶೀಲಗೊಳಿಸುತ್ತಿದೆ ಎಂದು ನನಗೆ ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರ ಅರಿವಿಗೆ ಬಂದಿದೆ ಮತ್ತು ಅದು ನಮಗೆ ತೃಪ್ತಿಯನ್ನೂ ಕೊಟ್ಟಿದೆ. ಇದರ ಜೊತೆಗೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಮತ್ತು ಮಂಗಳೂರಿನಲ್ಲಿ ನಡೆದ “ಜನ-ನುಡಿ” ಕಾರ್ಯಕ್ರಮಗಳನ್ನೂ ವರ್ತಮಾನ.ಕಾಮ್ ಬೆಂಬಲಿಸಿತ್ತು.

ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ಗೆ ಬೀಳುವ ನನ್ನ ಶ್ರಮದ ಬಗ್ಗೆಯೂ ಒಂದು ಮಾತು. ಈಗ್ಗೆ ಸುಮಾರು ಒಂದು ವರ್ಷದಿಂದ-ಚುನಾವಣೆಯ ಸಂದರ್ಭ ಹೊರತುಪಡಿಸಿ- ನಮ್ಮಲ್ಲಿ ಬರುವ ಎಲ್ಲಾ ಲೇಖನಗಳನ್ನು ಯೂನಿಕೋಡ್‌ಗೆ ಪರಿವರ್ತಿಸಿ, ವ್ಯಾಕರಣ ಮತ್ತು ಕಾಗುಣಿತಗಳನ್ನು ಪರಿಷ್ಕರಿಸಿ, ಸೂಕ್ತ ಫೋಟೋಗಳನ್ನು ಆಯ್ದು, ಪುಟವಿನ್ಯಾಸ ಮಾಡಿ, ಪೋಸ್ಟ್ ಮಾಡುವ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ನನ್ನ ಎಚ್ಚರದ ಸ್ಥಿತಿಯ ಸರಾಸರಿ vartamaana-2-years-smallಶೇ.10-15 ಭಾಗ ವರ್ತಮಾನ.ಕಾಮ್‌ಗೇ ಪ್ರತಿದಿನ ವಿನಿಯೋಗವಾಗುತ್ತಿದೆ. ಇದನ್ನೇ ನಾನು ಪ್ರತಿದಿನವೂ ಮಾಡಲಾಗುವುದಿಲ್ಲ. ಈ ಮೊದಲು ಇದೇ ಕೆಲಸಕ್ಕೆ ಒಬ್ಬರನ್ನು ನೇಮಿಸಿಕೊಂಡಿದ್ದೆ. ವರ್ಷದಿಂದ ಆ ಸಹಾಯವೂ ಇಲ್ಲ. ನಮ್ಮ ಬಳಗದ ಇಬ್ಬರು-ಮೂವರು ಮೊದಲ ವರ್ಷ ಈ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದರು. ಅದರಲ್ಲಿ ಕೆಲವರಿಗೆ ಈ ಒಂದು ವರ್ಷದಿಂದ ಕೆಲವು ಗಂಭೀರ ವೈಯಕ್ತಿಕ-ತಾಂತ್ರಿಕ-ನೌಕರಿ ಸಂಬಂಧಿತ ಸಮಸ್ಯೆಗಳಿಂದಾಗಿ ಈ ಕೆಲಸವನ್ನು ಹಂಚಿಕೊಳ್ಳಲಾಗುತ್ತಿಲ್ಲ. ನನಗೂ ಸಹ ಮುಂದಿನ ದಿನಗಳಲ್ಲಿ ಇಷ್ಟೆಲ್ಲ ಸಮಯವನ್ನು ವಿನಿಯೋಗಿಸಲು ಆಗುವುದಿಲ್ಲ. ಹಾಗೆಂದು ವರ್ತಮಾನ.ಕಾಮ್‌ ಯಾವುದೇ ರೀತಿಯಲ್ಲಿ ನಿಧಾನಗೊಳ್ಳುವ ಪ್ರಮೇಯವೇ ಇಲ್ಲ. ಇಲ್ಲಾ ಸಹಾಯಕ್ಕೆ ಯಾರನ್ನಾದರೂ ನೇಮಿಸಿಕೊಳ್ಳಲಾಗುವುದು, ಇಲ್ಲದಿದ್ದರೆ ಬಳಗವನ್ನು ವಿಸ್ತರಿಸಲಾಗುವುದು. ಬರಹ/ನುಡಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಗೊತ್ತಿರುವ ಮತ್ತು ಒಂದು ಬ್ಲಾಗ್ ಪೋಸ್ಟ್ ಮಾಡುವುದು ಹೇಗೆಂದು ಗೊತ್ತಿರುವ ಯಾರಾದರೂ ಈ ಕೆಲಸ ಹಂಚಿಕೊಳ್ಳಲು ಅರ್ಹರು. ವಾರಕ್ಕೆ ಒಂದೆರಡು ದಿನ, ಕನಿಷ್ಟ ಒಂದು ಗಂಟೆ ವರ್ತಮಾನ.ಕಾಮ್‌ಗೆ ಕೊಡಬಲ್ಲವರು ಮುಂದೆ ಬಂದರೆ ಸಹಾಯವಾದೀತು. ಸಂಪರ್ಕಿಸುವುದು ಹೇಗೆಂದು ನಿಮಗೆ ಗೊತ್ತು.

ಕೊನೆಯದಾಗಿ, ನಾನು ಎರಡು ವರ್ಷದ ಹಿಂದೆ, 2002 ರ ಆರಂಭದ ಲೇಖನದಲ್ಲಿ ಬರೆದಿದ್ದ ಈ ಕೊನೆಯ ಪ್ಯಾರಾ ಇವತ್ತಿಗೂ ಸೂಕ್ತವಾಗಿದೆ ಎಂದು ಭಾವಿಸಿ ಅದರೊಂದಿಗೆ ಕೊನೆ ಮಾಡುತ್ತೇನೆ.

“ನಾನು ಇತ್ತೀಚೆಗೆ ಸ್ನೇಹಿತರ ಜೊತೆ ಮಾತನಾಡುತ್ತಿದ್ದಾಗ ಒಂದು ಮಾತು ಹೇಳಿದ್ದೆ: ‘ಚೆನ್ನಾಗಿರುವ ಒಂದು ಉತ್ತಮ ಎನ್ನಬಹುದಾದ ವ್ಯವಸ್ಥೆಯಲ್ಲಿ ನನಗೆ ಪಾತ್ರವಿಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಕೆಟ್ಟದರ ಭಾಗವಾಗಿ ಮಾತ್ರ ಇರಲಾರೆ.’ ಬಹುಶಃ ನಮ್ಮ ಅನೇಕ ಸಮಾನಮನಸ್ಕರ ಯೋಚನೆಯೂ ಹೀಗೇ ಇರಬಹುದು. ನಾವು ಕೆಟ್ಟ ಸಂದರ್ಭವೊಂದರಲ್ಲಿ ಅಥವ ಸ್ಥಿತ್ಯಂತರದ ಸಂದರ್ಭದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತುಡಿತಗಳು, ಆಕ್ರೋಶಗಳು, ಚಟುವಟಿಕೆಗಳು ಕೆಟ್ಟದರ ವಿರುದ್ದ, ಮತ್ತು ಹಾಗೆ ಇರುವುದನ್ನು ಸರಿಪಡಿಸಿಕೊಳ್ಳುವ ಸುತ್ತಲೂ ಇವೆ. ಆದರೆ ಅದು ಮಾತಿನಲ್ಲಿ ಮುಗಿಯದೆ ಕೃತಿಗೆ ಇಳಿಯಬೇಕು. ಆ ನಿಟ್ಟಿನಲ್ಲಿ ಈ ವರ್ಷ ವರ್ತಮಾನ.ಕಾಮ್ ಮೂಲಕ ಅಥವ ನಮ್ಮ ಇತರೆ ಪ್ರಯತ್ನಗಳ ಮೂಲಕ ನಾವೆಲ್ಲಾ ಯತ್ನಿಸೋಣ. ನಮ್ಮ ಪ್ರಯತ್ನಕ್ಕೆ ಬೆಂಬಲ ಸೂಚಿಸಿರುವ, ಒಲವಿರುವ ಎಲ್ಲಾ ಮಿತ್ರರಲ್ಲಿ ಒಂದು ಮನವಿ: ಬೇಲಿಯ ಮೇಲೆ ಕುಳಿತಿರುವ ಮತ್ತು ಬೇಲಿಯ ಹೊರಗಿನಿಂದಲೇ ನಿಂತು ನೋಡುತ್ತಿರುವ ಸ್ನೇಹಿತರೇ, ದಯವಿಟ್ಟು ಒಳಬನ್ನಿ; ಪಾಲ್ಗೊಳ್ಳಿ. ಈ ಮೂಲಕ ನಮ್ಮ ಚಿಂತನೆಗಳನ್ನು, ಕ್ರಿಯೆಗಳನ್ನು, ಬದ್ಧತೆಗಳನ್ನು ಪಕ್ವಗೊಳಿಸಿಕೊಳ್ಳುತ್ತ, ಗಟ್ಟಿಗೊಳಿಸಿಕೊಳ್ಳುತ್ತ ಹೋಗೋಣ. ಹೋಗಲೇ ಬೇಕಾದಾಗ ಹೊರಹೋಗುವುದು ಇದ್ದೇ ಇರುತ್ತದೆ. ಈ ವರ್ಷ ಬಹಳ ಮುಖ್ಯವಾದ ವರ್ಷವಾಗುವ ಎಲ್ಲಾ ಸೂಚನೆಗಳೂ ಇವೆ. ಇಂತಹ ಸಂದರ್ಭದಲ್ಲಿ ದೇಶ ಮತ್ತು ಕಾಲ ನಮ್ಮ ಮಾತು ಮತ್ತು ಕೃತಿ ಎರಡನ್ನೂ ಕೇಳುತ್ತದೆ. ಅಲ್ಲವೇ?”

ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

[ವರ್ತಮಾನ.ಕಾಮ್‌ನ ಪ್ರಿಯ ಓದುಗರೇ,
ನಮ್ಮ ಬಳಗದಿಂದ “ವರ್ತಮಾನ.ಕಾಮ್‌ನ 2013 ವರ್ಷದ ವ್ಯಕ್ತಿ”ಯಾಗಿ ರಾಜ್ಯದ ನೈತಿಕ ಸಾಕ್ಷಿಪ್ರಜ್ಞೆಯಾಗಿ ಗುರುತಾಗಿರುವ ಮತ್ತು ಈ ನಾಡಿನಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ನೆಲೆಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿರುವ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠರನ್ನು ಆಯ್ಕೆ ಮಾಡಿದ್ದೇವೆ. ಇದು ಈ ವರ್ಷದ ಕೊನೆಯ ಲೇಖನ. ಇಂತಹ ಒಂದು ಧನ್ಯವಾದಪೂರ್ವಕ ಲೇಖನದಿಂದ ಈ ವರ್ಷಕ್ಕೆ ವಿದಾಯ ಹೇಳುತ್ತ, ಮತ್ತಷ್ಟು ಆಶಾವಾದ ಮತ್ತು ಕ್ರಿಯಾಶೀಲತೆಯಿಂದ ಹೊಸ ವರ್ಷವನ್ನು ಎದುರುಗೊಳ್ಳೋಣ. ಹಿರೇಮಠರಂತಹವರ ಕೆಲಸ ನಮ್ಮೆಲ್ಲರಲ್ಲೂ ಅಂತಹ ಸ್ಫೂರ್ತಿ ಮತ್ತು ಧೃಢನಿಶ್ಚಯ ಮೂಡಿಸಲಿ ಎಂದು ಆಶಿಸುತ್ತಾ…
ನಮಸ್ಕಾರ,
ರವಿ ಕೃಷ್ಣಾರೆಡ್ಡಿ]


ಎಸ್.ಆರ್.ಹಿರೇಮಠ್ : ವರ್ತಮಾನ.ಕಾಮ್‌ನ ವರ್ಷದ ವ್ಯಕ್ತಿ

– ಬಿ.ಶ್ರೀಪಾದ ಭಟ್

“Because I am involved in mankind,
And therefore never send to know for whom the bell tolls;
It tolls for thee” ಎಂದು ಹೇಳಿದ ಕವಿ ಜಾನ್ ಡನ್‌ನ “for whom the bell tolls” ಸಾಲುಗಳನ್ನು ಉದಾಹರಿಸುತ್ತ ‘ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತದೆ? ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತದೆ?’ ಎಂದು “ಇಲ್ಲಿ ಯಾವನೂ ದ್ವೀಪವಲ್ಲ” ಎನ್ನುವ ತಮ್ಮ ಅದ್ಭುತ ಟಿಪ್ಪಣಿಯಲ್ಲಿ ಲಂಕೇಶ್ ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಅಂದು ಕಾಂಗ್ರೆಸ್ ಪಕ್ಷದ ಗುಂಡೂರಾವ್ ಅವರ ದುಷ್ಟ ಆಡಳಿತ ಕೊನೆಗೊಂಡು ಹೆಗಡೆಯ ಸರ್ಕಾರ ಅಧಿಕಾರದಲ್ಲಿತ್ತು. ಆದರೆ 1985 ರ ವೇಳೆಗೆ ಹೆಗಡೆ ಸರ್ಕಾರ ಸಹ ಹಾದಿ ತಪ್ಪತೊಡಗಿತ್ತು. ಆಗ ಕರ್ನಾಟಕದಲ್ಲಿ ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ಲಂಕೇಶ್ ಮೇಲಿನಂತೆ ಪ್ರಶ್ನಿಸಿದ್ದರು. ಮುಂದುವರೆದು ಲಂಕೇಶ್ “ಆತ್ಮವಿಲ್ಲದ ಆಡಳಿತ ನೀಡಬೇಡಿ” ಎಂದು ಹೇಳಿದ್ದರು. ಇಂದಿಗೂ ಈ ಟೀಕೆ ಟಿಪ್ಪಣಿ ಪ್ರಸ್ತುತ.

ಇಂದು ಬಿಜೆಪಿಯ ದುಷ್ಟ ಆಡಳಿತ ಕೊನೆಗೊಂಡು ಸಿದ್ಧರಾಮಯ್ಯನವರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅಂದಿನ ಹೆಗಡೆ ಸರ್ಕಾರದಂತೆಯೇ ಇಂದಿನ ಸಿದ್ಧರಾಮಯ್ಯನವರ ಸರ್ಕಾರ ಹಳಿ ತಪ್ಪತೊಡಗಿದೆ. ನಾವೇನು ಮಾಡಬೇಕು?? ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಮ್ಮೆಲ್ಲರ ಪ್ರಕಾರ ಇದು ಶಾಂತಿಯ ಕಾಲ. ಕ್ರಾಂತಿ ಮುಗಿದಿದೆ. ಕಾಂಬುಜಿಗಳಿಗೆ (ಕಾಂಗ್ರೆಸ್ ಬುದ್ಧಿಜೀವಿಗಳು -ಚಂಪಾ ಹೇಳಿದ್ದು), ಮತ್ತು ಕಾಂಬುಜಿಗಳಾಗಲು ಬಾಗಿಲಲಿ ನಿಂತಿರುವ ಬಂಡಾಯದ ಅಂದಕಾಲತ್ತಿಲ್ ಸಾಹಿತಿಗಳಿಗೆ ಈ ಓಲಗದ ಸದ್ದು ಈಗ ಕೇಳಿಸುತ್ತಿಲ್ಲ !!

ನಮಗೂ ಕೇಳಿಸುತ್ತಿಲ್ಲ!! ಸಬ್ ಆರಾಮ್ ಹೈ!!

ಆದರೆ ಅಂದು ಬಳ್ಳಾರಿ ರಿಪಬ್ಲಿಕ್‌ನ ಸರ್ವಾಧಿಕಾರಕ್ಕೆ ಅಂತ್ಯ ಹಾಡಿ ಬಿಜೆಪಿ ಪಕ್ಷದ sr-hiremathಬೆನ್ನೆಲೆಬು ಮುರಿದು ಹಾಕಿದ ಎಸ್.ಆರ್. ಹಿರೇಮಠ್ ಅವರು ಈಗಲೂ ಸುಮ್ಮನೆ ಕುಳಿತಿಲ್ಲ. ಎಂಬತ್ತರ ದಶಕದ ಲಂಕೇಶ್ ಪತ್ರಿಕೆಯಂತೆ ಇಂದು ಸಹ ಅಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸೋಗಲಾಡಿ ಬುದ್ದಿಜೀವಿ ರಾಜಕಾರಣಿ ರಮೇಶ್ ಕುಮಾರ್‌ರಂತವರ ಬಣ್ಣ ಬಯಲು ಮಾಡುತ್ತಿದ್ದಾರೆ.

ಇಂದು ನಮ್ಮೆಲ್ಲರ ಸಾಕ್ಷೀಪ್ರಜ್ಞೆಯಂತಿರುವ “ಎಸ್.ಆರ್. ಹಿರೇಮಠ್” ನಿಜಕ್ಕೂ ಈ ರಾಜ್ಯದ ವರ್ಷದ ವ್ಯಕ್ತಿ.


ಕೊನೆಗೆ, ದಕ್ಷಿಣ ಕನ್ನಡದಲ್ಲಿ ಎಲ್ಲಾ ಬಗೆಯ ಮೂಲಭೂತವಾದಿಗಳ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಮ್ರೇಡ್ ಮುನೀರ್ ಕಾಟಿಪಳ್ಳ ಮತ್ತವರ ಗೆಳೆಯರಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕು. ಇವರ ಹೋರಾಟ ಒಂಟಿಧ್ವನಿಯಾಗಲು ಬಿಡಬಾರದು.  ಏಕೆಂದರೆ, ಲಂಕೇಶ್ ಹೇಳಿದಂತೆ, “No man is an island ಎನ್ನುವುದರ ಮೂಲಕ ಜಗತ್ತಿನ ಎಲ್ಲರ ಬದುಕು ತಳುಕು ಹಾಕಿಕೊಂಡಿರುವುದನ್ನು, ಪರಸ್ಪರ ಸಂಬಂಧ ಹೊಂದಿರುವುದನ್ನು ಕವಿ ಸೂಚಿಸುತ್ತಾನೆ.”

ನಮಗೂ ಆ ಓಲಗದ ಸದ್ದು ಕೇಳಿಸುವಂತೆ ನಮ್ಮ ಪಂಚೇಂದ್ರಿಯಗಳು ಸದಾ ಕಾರ್ಯನಿರ್ವಹಿಸುತ್ತಿರಲಿ…

ಫರೂಕ್ ಶೇಖ್ – ತೀರಿಕೊಂಡ ಪಕ್ಕದಮನೆ ಹುಡುಗ

–  ಬಿ.ಶ್ರೀಪಾದ ಭಟ್

ಹಿಂದಿ ಚಿತ್ರ ನಟ ಫರೂಕ್ ಶೇಖ್ ಹೃಧಯಾಘಾತದಿಂದ ದುಬೈನಲ್ಲಿ ತೀರಿಕೊಂಡಿದ್ದಾನೆ. ಮೊನ್ನೆ ತಾನೆ ಕೋಮು ಸಾಮರಸ್ಯದ ಅಗತ್ಯತೆಯ ಕುರಿತಾಗಿ ಅತ್ಯಂತ ಕಳಕಳಿಯಿಂದ ಮಾತನಾಡಿದ ಫರೂಕ್ ಶೇಖ್ ಎಲ್ಲಾ ಧರ್ಮಗಳ ಮೂಲಭೂತವಾದವನ್ನು ಖಂಡಿಸಿದ್ದ. ಸೋ ಕಾಲ್ಡ್ ಬಾಲಿವುಡ್‌ನ ಮೆಗಾಸ್ಟಾರ್‌ಗಳು, ಬಿಗ್‌ಬಿಗಳು ಎಲ್ಲ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಸಾರ್ವಜನಿಕವಾಗಿ ಖಂಡಿಸಲು ಹಿಂಜರಿಯುತ್ತಿದ್ದರೆ, ಸೋಗಲಾಡಿತನದಿಂದ ತಲೆತಪ್ಪಿಸಿಕೊಳ್ಳುತ್ತಿದ್ದರೆ, ಫರೂಕ್ ಶೇಖ್ ನೇರವಾಗಿ ಮುಸ್ಲಿಂ ಮೂಲಭೂತವಾದಿಗಳ ಧರ್ಮಾಂದತೆಯನ್ನು ಖಂಡಿಸಿದ್ದ. 2002ರ ಗುಜರಾತ್‌ನ ಹತ್ಯಾಕಾಂಡವನ್ನು ವಿರೋಧಿಸಿ ಫ್ಯಾಸಿಸಂನ ಅಪಾಯಗಳ ಕುರಿತು ಮಾರ್ಮಿಕವಾಗಿ ಮಾತನಾಡಿದ್ದ. farooq-sheikh“ಸರ್ಕಾರಗಳು ಉಪವಾಸ ಮುಷ್ಕರಗಳನ್ನು ನಡೆಸುತ್ತ ಸಾಯುವವರೆಗೂ ಹೋರಾಡುತ್ತೇವೆ ಅಥವಾ ಬಂದೂಕು ಹಿಡಿದು ಹಿಂಸಾತ್ಮಕ ಹೋರಾಟದ ಮೂಲಕ ಬದಲಾವಣೆ ತರುತ್ತೇವೆ ಎನ್ನುವ ವಿಭಿನ್ನ ದೃವಗಳ ಗುಂಪಿಗೆ ತಲೆಬಾಗುತ್ತದೆ ಆದರೆ moderate ಜನರಿಗೆ ಜಾಗವೆಲ್ಲಿ?” ಎಂದು ನೋವಿನಿಂದ ಪ್ರಶ್ನಿಸಿದ್ದ ಫರೂಕ್ ಶೇಖ್ ನಟನಾಗಿಯೂ ಇದೇ ರೀತಿ. ಎಪ್ಪತ್ತರ ಮತ್ತು ಎಂಬತ್ತರ ದಶಕಗಳಲ್ಲಿ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್‌ಗಳು, ಆಂಗ್ರಿ ಯಂಗ್ ಮ್ಯಾನ್‌ಗಳು ದೇಶಾದ್ಯಾಂತ ಸೂಪರ್ ಮ್ಯಾನ್‌ಗಳಾಗಿ, ಕೈಗೆಟುಕದ ತಾರೆಗಳಾಗಿ ಅಬ್ಬರಿಸುತ್ತಿದ್ದರೆ ನಮ್ಮ ಫರೂಕ್ ಶೇಖ್ ಆ ದೇಶದೊಳಗಿನ ಸಾಮಾನ್ಯ ಜನರ ಪಾತ್ರವಾಗಿ ಈ ನೆಲದೊಳಗೆ ಬೇರು ಬಿಟ್ಟು ತಣ್ಣಗೆ ನಟಿಸುತ್ತಿದ್ದ. ಅಮೊಲ್ ಪಾಲೇಕರ್‌ನೊಂದಿಗೆ ಸೇರಿ ಜನಸಾಮಾನ್ಯರಿಗೆ ಐಡೆಂಟಿಟಿ ತಂದುಕೊಟ್ಟಿದ್ದ. ಆತನ Underplay ಶೈಲಿಯ ನಟನೆ ಜನಸಾಮಾನ್ಯ ಪ್ರೇಕ್ಷಕರನ್ನು ಗೆದ್ದಿತ್ತು. ಪ್ರೇಮವನ್ನು ನಿವೇದಿಸಲು ಮರ ಸುತ್ತಬೇಕಾಗಿಲ್ಲ, ಕುಣಿಯಬೇಕಿಲ್ಲ, ವ್ಯವಸ್ತೆಯೊಂದಿಗೆ ಹೋರಾಡಬೇಕಿಲ್ಲ, ಸುಂದರಾಂಗನಾಗಬೇಕಿಲ್ಲ, ಬದಲಾಗಿ ನನ್ನ ಹಾಗೆ ಖುಜುತ್ವದಿಂದ Underplay ಗುಣದಿಂದ, ತೊದಲು ನುಡಿಯಿಂದ ಗೆಳತಿಯ ಅಪ್ತ ಮತ್ತು ಮನದಾಳದ ಪ್ರೇಮಿಯಾಗಬಹುದು ಎಂದು ತೋರಿಸಿಕೊಟ್ಟಿದ್ದು ಫರೂಕ್ ಶೇಖ್. ರಾಜೇಶ್ ಖನ್ನಾನಿಗೆ ರಕ್ತದಲ್ಲಿ ಪ್ರೇಮ ಪತ್ರವನ್ನು ಬರೆಯುವಂತ ಹುಡುಗಿಯರ ಆರಾಧ್ಯ ದೈವವಾಗಿರಲಿಲ್ಲ ಫರೂಕ್ ಶೇಖ್. ಆದರೆ ನನಗೂ ಇಂತಹ ಜೊತೆಗಾರ ಸಿಕ್ಕರೆ ಎಷ್ಟು ಚೆನ್ನ ಎಂದು ಯುವತಿಯರು ಮನದಲ್ಲಿ ಹುಡುಕಾಟ ನಡೆಸುವಂತಹ ಅಪ್ತತೆಯನ್ನು ತಂದು ಕೊಟ್ಟದ್ದು ಫರೂಕ್ ಶೇಖ್‌ನ ಯಶಸ್ಸು.

“ಗರಂ ಹವಾ” ಚಿತ್ರದಲ್ಲಿ ಬಲರಾಜ್ ಸಾಹ್ನಿಯ ಮಗನಾಗಿ ಸಿಕಂದರ್ ಮಿರ್ಜಾ ಪಾತ್ರದಲ್ಲಿ ಮನಸೆಳೆಯುವಂತೆ ನಟಿಸಿದ್ದ ಫರೂಕ್ ಶೇಖ್ ಮುಸ್ಲಿಂರ ತಲ್ಲಣಗಳನ್ನು ಮನೋಜ್ಞವಾಗಿ ವ್ಯಕ್ತಪಡಿಸಿ ಮನದಲ್ಲಿ ನೋವು ಮೂಡಿಸಿದ್ದ. “ಗಮನ್” ಚಿತ್ರದಲ್ಲಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಕ್ಕೆ ಗುಳೇ ಬರುವ ಯುವಕನ ಪಾತ್ರದಲ್ಲಿ ಆತನ Underplay ಶೈಲಿಯ ನಟನೆಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ನಗರದ ದೌರ್ಜ್ಯನ್ಯಕ್ಕೆ,ಕ್ರೂರತೆಗೆ ಗೋಳಾಡಿ,ನರಳಾಡಿ ನಟಿಸುವ ಅವಶ್ಯಕತೆ ಇಲ್ಲ, ನನ್ನಂತೆ ಪಾತ್ರದೊಳಗೆ ಸೇರಿಕೊಂಡು Underplay ಶೈಲಿಯ ನಟನೆ ಎಲ್ಲವನ್ನೂ ಹೇಳಿಬಿಡುತ್ತದೆ ಎಂದು ಹೇಳುವಂತೆ ನಟಿಸಿದ್ದ ಫರೂಕ್ ಶೇಖ್. ಅಲ್ಲಿ ಅವನು ನಮ್ಮಲ್ಲಿ ಮೂಡಿಸಿದ್ದು ವಿಷಾದದ ಛಾಯೆ. ಇದು ಸ್ಮಿತಾ ಪಾಟೀಲ್ ಶೈಲಿ. ಸತ್ಯಜಿತ್ ರಾಯ್ ಅವರ “ಶತರಂಜ್‌ಕೆ ಖಿಲಾಡಿ”ಯಲ್ಲಿ ಅಕೀಲ್ ನ ಪಾತ್ರದಲ್ಲಿ ನಟಿಸಿದ್ದ.

“ನೂರಿ” ಚಿತ್ರದಲ್ಲಿ ಪೂನಂ ಧಿಲ್ಲೋನ್‌ಳೊಂದಿಗೆ ಯುವ ಪ್ರೇಮಿಯಾಗಿ ನಟಿಸಿದ್ದ ಫರೂಕ್ ಶೇಖ್ ಆ ಸಿನಿಮಾದ ಯಶಸ್ಸಿನಿಂದ ಬಾಲಿವುಡ್‌ನ ಗಲಭೆಯಲ್ಲಿ ಕಳೆದು ಹೋಗುವ ಅಪಾಯದಿಂದ ಸ್ವತಃ ತನ್ನ ವಿವೇಚನೆಯಿಂದ, ಕಾಮನ್‌ಸೆನ್ಸ್‌ನಿಂದ ಪಾರಾಗಿದ್ದ. ಆಗ ಈತನಿಗೆ ಸಾಥ್ ನೀಡಿದ್ದು ನಟಿ ದೀಪ್ತಿ ನಾವೆಲ್. ಇವರಿಬ್ಬರು ನಟಿಸಿದ “ಚಸ್ಮೆ ಬದ್ದೂರ್”,”ಸಾಥ್ ಸಾಥ್”,ಕಥಾ”,”ರಂಗ್ ಬಿರಂಗಿ”,”ಬಾಜಾರ್” ನಂತಹ ಸಿನಿಮಾಗಳು ಹೊಸ ಬಗೆಯ ಅಹ್ಲಾದವನ್ನು, ಹಾಯ್ ಎನ್ನಿಸುವಂತಹ ಸಮಾಧಾನವನ್ನು, ಅರೇ ಅಲ್ಲಿರುವವರು ನಾವಲ್ಲವೇ ಎನ್ನುವಂತಹ ಐಡೆಂಟಿಟಿಯನ್ನು ತಂದುಕೊಟ್ಟವು. ಫರೂಕ್ ಶೇಖ್ ಇದನ್ನೆಲ್ಲಾ ಸಾಧಿಸಿದ್ದು ಮುಗ್ಧತೆಯಿಂದ,ನೆಲದೊಳಗೆ ಬೇರು ಬಿಟ್ಟು ಆಕಾಶದ ನಕ್ಷತ್ರಕ್ಕೆ ಕೈಚಾಚದೆ ಹಾಗೆ ಸುಮ್ಮನೆ ಎನ್ನುವ ಗುಣದಿಂದ.

ಲಾ ಅನ್ನು ಓದಿಕೊಂಡಿದ್ದ ಫರೂಕ್ ಶೇಖ್ ನಾಟಕದೆಡೆಗೆ ಆಕರ್ಷಿತನಾಗಿ ತಾರುಣ್ಯದಲ್ಲಿ ಇಪ್ಟಾ ತಂಡದೊಂದಿಗೆ ಗುರುತಿಸಿಕೊಂಡಿದ್ದ. ಗರಂ ಹವಾ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ. ನಾಟಕದ ದಿನಗಳ ಸಹನಟಿ ರೂಪ ಅವರನ್ನು ಪ್ರೇಮಿಸಿ ಮದುವೆ ಆದ. 2010 ರಲ್ಲಿ “ಲಾಹೋರ್” ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅವಾರ್ಡ ಪಡೆದಿದ್ದ.

ದೀಪ್ತಿ ನಾವೆಲ್, ಫರೂಕ್ ಶೇಖ್, ಸ್ಮಿತಾ ಪಟೇಲ್, ಶಬನಾ ಅಜ್ಮಿ, ನಾಸಿರುದ್ದೀನ್ ಶಾ, ಓಂಪುರಿ ಇವರ ಕಾಲ ನಿಜಕ್ಕೂ ಹಿಂದಿ ಚಿತ್ರರಂಗದ ಗೋಲ್ಡನ್ ಯುಗ. ಏಕೆಂದರೆ ಇವರು ತಮ್ಮದೇ ರೀತಿಯಲ್ಲಿ ಒಂದು ತಲೆಮಾರನ್ನು ರೂಪಿಸಿದರು. ಅದು ನಮ್ಮ ತಲೆಮಾರು. ಏನಾದರೂ ಆಗದಿದ್ದರೂ ಪರವಾಗಿಲ್ಲ, ಸ್ವಂತಿಕೆಯನ್ನು ಬಿಟ್ಟುಕೊಟ್ಟು ಕಳೆದು ಹೋಗಬೇಡ ಎಂದು ಹೇಳಿಕೊಟ್ಟ ಇವರಿಗೆ ನಾವೆಲ್ಲ  “ಥ್ಯಾಂಕ್ಸ್ ಸರ್,ಥ್ಯಾಂಕ್ಸ್ ಮೇಡಂ” ಎಂದು ಹೇಳುತ್ತೇವೆ.

ಜನ ನುಡಿ, ನುಡಿಸಿರಿ, ವರ್ತಮಾನ.ಕಾಮ್


– ರವಿ ಕೃಷ್ಣಾರೆಡ್ಡಿ


 

ಕಳೆದ ವಾರ ಮಂಗಳೂರಿನಲ್ಲಿ ನಡೆದ “ಜನ ನುಡಿ” ಕಾರ್ಯಕ್ರಮಕ್ಕೆ ಮೊದಲೇ ಒಂದು ವಿಸ್ತೃತವಾದ ಲೇಖನವನ್ನು, ಮುಖ್ಯವಾಗಿ ಪ್ರಗತಿಪರ ಎಂದು ಭಾವಿಸುವ ಯುವಮಿತ್ರರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕೆಂದು ತೀರ್ಮಾನಿಸಿದ್ದೆ. ಆದರೆ, ದೆಹಲಿ ಚುನಾವಣೆಯ ಫಲಿತಾಂಶದ ನಂತರ ನನಗೆ ಸ್ವಲ್ಪ ಬಿಡುವಿಲ್ಲದೆ ಹೋಯಿತು. ಅದೇ ಸಮಯದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಕೆಪಿಎಸ್‌ಸಿಯ ಕರ್ಮಕಾಂಡದ ಬಗ್ಗೆ ಸಿಐಡಿ ವರದಿ ಕೈಗೆ ಸಿಕ್ಕ ಪರಿಣಾಮವಾಗಿ ಅದರ ಕುರಿತೂ ಒಂದಷ್ಟು ಕೆಲಸಗಳಾದವು. western-ghats-as-seen-from-BLR-Karwar-trainಮತ್ತೆ ಸಕಲೇಶಪುರದಿಂದ ಮಂಗಳೂರಿಗೆ ಪಶ್ಚಿಮಘಟ್ಟಗಳ ಮಧ್ಯೆ ಹಾದು ಹೋಗುವ ರೈಲಿನಲ್ಲಿ ಹೋಗುವ ಕಾರಣಕ್ಕಾಗಿ ನಾನು ಮತ್ತು ನಮ್ಮ ಬಳಗದ ಶ್ರೀಪಾದ ಭಟ್ಟರು ಒಂದು ದಿನ ಮೊದಲೇ ಬೆಂಗಳೂರು ಬಿಟ್ಟಿದ್ದೆವು. ಮೂರು ದಿನದ ನಂತರ ಬೆಂಗಳೂರಿಗೆ ಬಂದಂದಿನಿಂದ ಲೋಕಸತ್ತಾ ಪಕ್ಷದ ಮೂಲಕ ಕೆಪಿಎಸ್‌ಸಿ ಹಗರಣದ ಬಗ್ಗೆ ಹಮ್ಮಿಕೊಂಡ ಚಟುವಟಿಕೆಗಳ ಕಾರಣವಾಗಿ ಏನನ್ನೂ ಬರೆಯಲು ಬಿಡುವಿಲ್ಲದೆ ಹೋಗಿತ್ತು. ಇದೇ ಕಾರಣವಾಗಿ ನೆನ್ನೆ ನಡೆದ ಪ್ರತಿಭಟನೆಯಲ್ಲಿ ಮೊದಲಬಾರಿಗೆ ಬಂಧನಕ್ಕೊಳಪಟ್ಟು ಸಂಜೆ ಆರರ ತನಕ ಆಡುಗೋಡಿಯ ಪೋಲಿಸ್ ಗ್ರೌಂಡ್ಸ್‌ನ ಶೆಡ್‌ನಲ್ಲಿ ಇರಬೇಕಾಯಿತು. ಇದೆಲ್ಲದರ ಮಧ್ಯೆ ಮುಂದಕ್ಕೆ ಹಾಕಲಾಗದ ವೈಯಕ್ತಿಕ ಕಾರ್ಯಕ್ರಮವೊಂದು ಇಂದು.

ಕಳೆದ ಎರಡು-ಮೂರು ದಿನಗಳಿಂದ ಮೂಡಬಿದ್ರೆಯಲ್ಲಿ “ಆಳ್ವಾಸ್ ನುಡಿಸಿರಿ” ಮತ್ತು “ಆಳ್ವಾಸ್ ವಿರಾಸತ್” ವಿಜೃಂಭಣೆಯಿಂದ ನಡೆಯುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಇರಬಹುದಾದ ಸಂಶಯಗಳು ಮತ್ತು ಆರೋಪಗಳು ಮೊದಲ ಬಾರಿಗೆ ರಾಜ್ಯದ ಜನರ ಗಮನಕ್ಕೆ ವಿಸ್ತೃತವಾಗಿ ಬಂದದ್ದು ಕಳೆದ ವರ್ಷ ನವೀನ್ ಸೂರಿಂಜೆ ನಮ್ಮ ವರ್ತಮಾನ.ಕಾಮ್‌ನಲ್ಲಿ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನ ಬರೆದಾಗ. ಆ ಸಮಯದಲ್ಲಿ ಈ ವೇದಿಕೆಯಲ್ಲಿ nudisiri-ananthamurthyಅದು ಬಹಳ ಗಂಭೀರ ಚರ್ಚೆಗೆ ಒಳಪಟ್ಟಿತು ಮತ್ತು ಅದಕ್ಕೆ ತಾತ್ವಿಕ ಮಟ್ಟದಲ್ಲಿ ವಿರೋಧ ಮತ್ತು ವಿಮರ್ಶೆ ಆರಂಭವಾಯಿತು. ಧನಂಜಯ ಕುಂಬ್ಳೆ ಎನ್ನುವವರು ಸೂರಿಂಜೆಯವರ ಲೇಖನವನ್ನು ವಿಮರ್ಶಿಸಿ “ಆಳ್ವಾಸ್, ನುಡಿಸಿರಿ, ಅನಂತಮೂರ್ತಿ ಲೇಖನ : ಋಣಾತ್ಮಕ ಮತ್ತು ಪೂರ್ವಾಗ್ರಹಪೀಡಿತ” ಲೇಖನ ಬರೆದರು. ಅದಕ್ಕೆ ಉತ್ತರಿಸಿ ಸೂರಿಂಜೆ “ಆಳ್ವ ಮತ್ತು ನುಡಿಸಿರಿ ಸಮರ್ಥಕರ ಲೇಖನ ಪಕ್ಷಪಾತಪೀಡಿತ ಮತ್ತು ಅಸಾಂದರ್ಭಿಕ ಸುಳ್ಳುಗಳ ಕಂತೆ…” ಎಂಬ ಇನ್ನೊಂದು ಲೇಖನ ಬರೆದರು. ತೇಜ ಸಚಿನ್ ಪೂಜಾರಿ ಎಂಬ ಮಂಗಳೂರಿನ ಯುವಕ ಇದೇ ವಿಷಯದ ಮೇಲೆ ಅದ್ಭುತವೆನ್ನಿಸುವಂತಹ “ಅನಂತಮೂರ್ತಿ, ಆಳ್ವಾಸ್, ಹಾಗೂ ಅಸೋಸಿಯೇಶನ್” ಲೇಖನ ಬರೆದ. (ಅದಾದ ಮೇಲೆ ನಾಲ್ಕೈದು ಲೇಖನಗಳನ್ನು ಬರೆದ ತೇಜ ಸಚಿನ್ ಪೂಜಾರಿ, ಕೆಲಸವೊಂದು ಸಿಕ್ಕಿ ಬೆಂಗಳೂರಿಗೆ ಬಂದ ತಕ್ಷಣ ನಾಪತ್ತೆಯಾಗಿದ್ದಾರೆ. ಸಾಧ್ಯವಾದರೆ ಯಾರಾದರೂ ಹುಡುಕಿಕೊಡಬೇಕಾಗಿ ಮನವಿ!!)

ಮೂಡಬಿದ್ರೆಯ “ನುಡಿಸಿರಿ” ಎನ್ನುವುದನ್ನು ಅದರ ಆರಂಭದ ದಿನಗಳಲ್ಲಿ ಕೆಲವು ಮಂಗಳೂರಿನ ಲೇಖಕರು ಮತ್ತು ಪತ್ರಕರ್ತರು “ಕುಡಿಸಿರಿ” ಎಂದು ತಮಾಷೆ ಮಾಡುತ್ತಿದ್ದರು ಎಂದು ಹೊರಗಿನ ಜನರಿಗೆ ಗೊತ್ತಾಗಿದ್ದೇ ವರ್ಷದ ಹಿಂದೆ ಅದು ವರ್ತಮಾನ.ಕಾಮ್‌ನಲ್ಲಿ ಚರ್ಚೆಗೊಳಗಾದಾಗ.

ಅಂದಹಾಗೆ, ನುಡಿಸಿರಿಯ ಬೆಂಬಲಿಗರ ಹೇಳಿಕೊಳ್ಳುವ ಹಾಗೆ “ಆಳ್ವಾಸ್ ನುಡಿಸಿರಿ” ಹುಟ್ಟಿದ್ದೇ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ.alvas-nudisiri-2 ಆಳ್ವಾಸ್‌ನ ಮೋಹನ ಆಳ್ವರು ದಶಕದ ಹಿಂದೆ ಮೂಡಬಿದ್ರೆಯಲ್ಲಿ ನಡೆದ “ಕನ್ನಡ ಸಾಹಿತ್ಯ ಸಮ್ಮೇಳನ”ದ ಸ್ಥಳೀಯ ಉಸ್ತುವಾರಿ ಹೊತ್ತಿದ್ದರು. ಅವರ ಪ್ರಕಾರ ಬಹಳ ಅದ್ಭುತವಾಗಿ ಅದನ್ನು ನಡೆಸಿಕೊಟ್ಟರು. ಆದರೆ ಆ ಅನುಭವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿರುವ ಅಶಿಸ್ತು ಅವರಿಗೆ ಬೇಸರ ಮೂಡಿಸಿತು. ಹಾಗಾಗಿ ಅಂತಹ ಒಂದು ಕಾರ್ಯಕ್ರಮವನ್ನು ಹೇಗೆ “ಅಚ್ಚುಕಟ್ಟಾಗಿ” ಮಾಡುವುದು ಎನ್ನುವುದನ್ನು ತೋರಿಸುವುದಕ್ಕಾಗಿಯೇ “ಆಳ್ವಾಸ್ ನುಡಿಸಿರಿ”ಯನ್ನು ಸಾಹಿತ್ಯ ಪರಿಷತ್ತಿನ ಜನರ “ಸಾಹಿತ್ಯ ಸಮ್ಮೇಳನ”ಕ್ಕೆ ಪರ್ಯಾಯವಾಗಿ ಆರಂಭಿಸಲಾಯಿತು. ಈ ವಿಚಾರವನ್ನು “ಜನ ನುಡಿ” ಕಾರ್ಯಕ್ರಮ “ನುಡಿ ಸಿರಿ”ಗೆ ಪರ್ಯಾಯ ಎಂಬ ಮಾತು ಬಂದಾಕ್ಷಣ “ಜನ ನುಡಿ”ಯನ್ನು ವಿರೋಧಿಸಲು ಆರಂಭಿಸಿದವರು ಗಮನಿಸಬೇಕು. ತನ್ನೆಲ್ಲಾ ಸಮಯಪ್ರಜ್ಞೆಯ ಅಭಾವ, ಗೊಂದಲ, ಇತ್ಯಾದಿಗಳ ನಡುವೆ ಸಾಹಿತ್ಯ ಪರಿಷತ್ತಿನ “ಕನ್ನಡ ಸಾಹಿತ್ಯ ಸಮ್ಮೇಳನ” ಜನರದ್ದು. ನಾಡಿನ ಎಲ್ಲರಿಗೂ ಸೇರಿದ್ದು. kannada-sahithya-sammelanaಯಾವೊಬ್ಬ ವ್ಯಕ್ತಿಯ ಮೇಲೂ ಅವಲಂಬಿತವಲ್ಲ. ಏಳೆಂಟು ದಶಕಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತನ್ನೆಲ್ಲಾ ಇತಿಮಿತಿಗಳ ನಡುವೆಯೂ ಅದು ನಾಡಿನ ಪ್ರಜಾಸತ್ತಾತ್ಮಕ ಆಶಯಗಳನ್ನು ಎತ್ತಿಹಿಡಿಯುತ್ತ ಬರುತ್ತಿದೆ.

ಆದರೆ, “ಆಳ್ವಾಸ್ ನುಡಿಸಿರಿ” ಎನ್ನುವುದು ಸಂಪೂರ್ಣವಾಗಿ “one man show”. ಮೋಹನ ಆಳ್ವರ ಅನೇಕ ಹಿಂಬಾಲಕರು ಅವರ ನಾಯಕತ್ವದಲ್ಲಿ ಅದನ್ನು ನಡೆಸಿಕೊಡುತ್ತಾರೆ. ಬಹುಶಃ ಆ ಕಾರ್ಯಕ್ರಮದಲ್ಲಿ “ಮುಂಡಾಸು” ಧರಿಸುವುದು, ಅಧ್ಯಕ್ಷರನ್ನು ಹುಡುಗರ ಹೆಗಲ ಮೇಲೆ “ಅಡ್ಡ ಪಲ್ಲಕ್ಕಿ” ಹೊರೆಸಿ ಮೆರವಣಿಗೆ ಮಾಡುವುದು, ಇತ್ಯಾದಿ ಕೆಲವು ವಿಚಾರಗಳು ಹೇಗೆ “ಪ್ರಜಾಪ್ರಭುತ್ವ ವಿರೋಧಿ ಆಶಯ”ಗಳನ್ನು ಹೊಂದಿದೆ ಎನ್ನುವುದು ಅನೇಕರಿಗೆ ಬಹಳ ಬೇಗ ಹೊಳೆಯುವುದಿಲ್ಲ. ಸ್ಥಳೀಯ ಮೇಲ್ಜಾತಿಗಳ ಕೆಲವು ಪಾಳೇಗಾರಿಕೆ ಮತ್ತು ಪುರೋಹಿತಶಾಹಿ ಅಂಶಗಳು ಇಲ್ಲಿ ಸ್ವಲ್ಪವೂ ಹಿಂಜರಿಕೆಯಿಲ್ಲದೆ ಹೇಗೆ ಅಲ್ಲಿಯ ಎಲ್ಲರಿಗೂ ಒಪ್ಪಿತವೆಂಬಂತೆ ಮುನ್ನೆಲೆಗೆ ಬರುತ್ತವೆ ಎನ್ನುವುದನ್ನು ಸ್ಥಳೀಯ ಸೂಕ್ಷ್ಮಜ್ಞರು ಮಾತ್ರವೇ ಹೇಳಬಲ್ಲರು. ಯಾವುದಾದರೂ ಊರಿನಲ್ಲಿಯ ಸ್ಥಳೀಯ ಜನತೆ ಅಲ್ಲಿ ಒಂದು ಸುಂದರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಾತಾವರಣ ರೂಪಿಸಿಕೊಳ್ಳುವುದರ ಬಗ್ಗೆ ನಾವೆಲ್ಲ ಸಂತಸ ಪಡಬೇಕು ಮತ್ತು ಅದು ಇತರ ಕಡೆಗೂ ಹರಡುವಂತೆ ಆಶಿಸಬೇಕು. ಆದರೆ, alva-veerendra-heggadeಮೂಡಬಿದ್ರೆಯಲ್ಲಿ ಆಗುತ್ತಿರುವ ಕಾರ್ಯಕ್ರಮ ಇನ್ನೊಂದು ಕಡೆ ನಕಲು ಅಥವ ಪುನರಾವರ್ತನೆ ಆಗಲು ಸಾಧ್ಯವಾಗದಂತಹ ಕಾರ್ಯಕ್ರಮ. ಇದು ಒಬ್ಬ ಮನುಷ್ಯನ ದುಡ್ಡು ಮತ್ತು ನಿಲುವು-ಒಲವುಗಳ ಮೇಲೆ ಆಗುವ ಕಾರ್ಯಕ್ರಮವೇ ಹೊರತು ಹಲವಾರು ಜನರ ಅಭೀಪ್ಸೆ ಮತ್ತು ಸಾಮೂಹಿಕ-ಸಾಮುದಾಯಿಕ ಪಾಳ್ಗೊಳ್ಳುವಿಕೆಯಿಂದ ಅಲ್ಲ.

ಮತ್ತೊಂದು, ತಾನು ಎಂಬತ್ತು ಕೋಟಿ ಸಾಲದಲ್ಲಿದ್ದೇನೆ ಎಂದು ಮೋಹನ ಆಳ್ವರು ಅಲವತ್ತುಕೊಂಡಿರುವುದು ಇಂದೂ ಸಹ ಕೆಲವು ಪತ್ರಿಕೆಗಳಲ್ಲಿ ಬಂದಿದೆ. ಅವರು “ನುಡಿಸಿರಿ” ಕಾರ್ಯಕ್ರಮ ಮಾಡಿ ಈ ಸಾಲ ಹೊತ್ತುಕೊಂಡಿದ್ಡಾರೊ ಅಥವ ತಮ್ಮ ಶಿಕ್ಷಣ ಸಂಸ್ಥೆಯ ಕಾರಣಕ್ಕಾಗಿಯೊ ಗೊತ್ತಾಗಿಲ್ಲ. ಮತ್ತು ಈ ಪರಿ ಸಾಲದಲ್ಲಿರುವಾಗಲೂ ಹತ್ತಿಪ್ಪತ್ತು ಕೋಟಿಗಳ ವೆಚ್ಚದಲ್ಲಿ ನುಡಿಸಿರಿ ನಡೆಸುವುದಾದರೂ ಏಕೆ? ಸಾಲವನ್ನು ಮುಂದಿನ ದಿನಗಳಲ್ಲಿ ಹೇಗೆ ಭರಿಸಲಿದ್ದಾರೆ? ಅವರು ಈ ಸಾಲದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರುವುದರಿಂದ ಒಂದು ಪ್ರಶ್ನೆಯನ್ನು ಸಾರ್ವಜನಿಕರೂ ಅವರಿಗೆ ಕೇಳಬಹುದು ಮತ್ತು ಪ್ರಾಮಾಣಿಕವಾದ ಉತ್ತರವನ್ನು ನಿರೀಕ್ಷಿಸಬಹುದು: “ಈ ವರ್ಷದ ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮಕ್ಕೆ ಆಗುವ ಖರ್ಚೆಷ್ಟು, ಯಾವ ಬಾಬತ್ತಿಗೆ ಎಷ್ಟೆಷ್ಟು, ಇದಕ್ಕಾಗಿ ಸಂಗ್ರಹಿಸಿದ ಹಣವೆಷ್ಟು, vijaykarnataka-mohan-alva-22122013ಮತ್ತು ಆ ಹಣದ ಮೂಲ ಯಾವುದು?” ತಮ್ಮ ಊರುಗಳಲ್ಲಿಯೂ ಇಂತಹ ಕಾರ್ಯಕ್ರಮ ಮಾಡಬೇಕೆಂದು ಬಯಸುವವರಿಗೂ ಈ ಮಾಹಿತಿ ಸ್ವಲ್ಪ ಸಹಾಯ ಮಾಡುತ್ತದೆ.

ಈ ಸಾಲಿನ ಅಧ್ಯಕ್ಷರು ಕರಾವಳಿಯವರೇ ಆದ ವಿವೇಕ ರೈ. ಸಜ್ಜನ ಎಂದು ಹೆಸರು ಗಳಿಸಿದ ವಿದ್ವಾಂಸರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಅಲ್ಲಿಯ ರಾಜಕೀಯ ಮತ್ತು ಭ್ರಷ್ಟತೆಗೆ ರೋಸಿಹೋಗಿ (!?) ದೂರದ ಜರ್ಮನಿಗೆ ವರ್ಷಕ್ಕೆ ಹತ್ತಿಪ್ಪತ್ತು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಂತಹ ಯಾವುದೇ ಅಧಿಕಾರ ಮತ್ತು ಠೇಂಕಾರಗಳಿಲ್ಲದ ಕೆಲಸಕ್ಕೆ ಹೊರಟವರು. ಇಂತಹ ಗುಣದ ವಿವೇಕ ರೈರವರು ಕಳೆದ ವರ್ಷ ನವೀನ್ ಸೂರಿಂಜೆ ಬರೆದ “ಆಳ್ವಾಸ್ ನುಡಿಸಿರಿಗೆ ಅನಂತಮೂರ್ತಿ ಹೋಗುವುದು ಯುಕ್ತವೇ?” ಲೇಖನವನ್ನು ಬಹುವಾಗಿ ಮೆಚ್ಚಿಕೊಂಡು ಸ್ವತಃ ಜರ್ಮನಿಯಿಂದಲೇ ಸೂರಿಂಜೆಯವರಿಗೆ ಕರೆಮಾಡಿ ಅಭಿನಂದಿಸಿದವರು. ಅಷ್ಟೇ ಸಾಲದೆಂಬಂತೆ ಸೂರಿಂಜೆಯವರ ಫೇಸ್‌ಬುಕ್ ಖಾತೆಗೆ ದೀರ್ಘ ಪತ್ರವನ್ನೂ ಬರೆದಿದ್ದವರು. ಈ ವರ್ಷ ಯಾವೊಂದೂ ಹಿಂಜರಿಕೆ ಇಲ್ಲದೆ ಮತ್ತು ತಾವು ಹಿಂದೆ ಹೊಂದಿದ್ದ ನಿಲುವಿಗೆ ಸ್ಪಷ್ಟೀಕರಣ ನೀಡದೆ “ಆಳ್ವಾಸ್ ನುಡಿಸಿರಿ”ಗೆ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಕನ್ನಡ ಅಂತರ್ಜಾಲದಲ್ಲಿ ರೈರವರು ಸಕ್ರಿಯರೂ ಆಗಿದ್ದಾರೆ. ಅವರಿಗೆ ಬಹುಶಃ ವರ್ತಮಾನ.ಕಾಮ್ ಬಗ್ಗೆಯೂ ತಿಳಿದಿರಬಹುದು. ಹ್ಮೂ, ತಿಳಿದಿರದೇ ಏನು? ಇಲ್ಲಿ ಪ್ರಕಟವಾದ ಸೂರಿಂಜೆಯವರ ಲೇಖನಕ್ಕೇ ಅಲ್ಲವೇ ಅವರು ಆ ಲೇಖಕರೊಂದಿಗೆ ಪ್ರತಿಕ್ರಿಯೆ ಹಂಚಿಕೊಂಡಿದ್ದು. ಹಾಗಾಗಿ ತಾವು ಹಿಂದೆ ಹೇಳಿದ್ದೇನು ಮತ್ತು ತಮ್ಮ ಇಂದಿನ ನಿಲುವೇನು ಎನ್ನುವುದರ ಬಗ್ಗೆ ಅವರು ವರ್ತಮಾನ.ಕಾಮ್‌ಗೆ ಅಥವ ನವೀನ್ ಸೂರಿಂಜೆಯವರಿಗೆ ಒಂದು ಸ್ಪಷ್ಟೀಕರಣ ನೀಡಬೇಕೆಂದು ಬಯಸುವುದು ಅಸೌಜನ್ಯವಲ್ಲ ಎಂದು ನಾನು ಭಾವಿಸುತ್ತೇನೆ.

ಇನ್ನು “ಆಳ್ವಾಸ್ ನುಡಿಸಿರಿ”ಯ ಮೊದಲ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪನವರು alva-nudisiri-baraguru-mohan-alva-veerendra-heggade-vivek-raiಈ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಗ್ಗೆ ಖಾರದ (ತುಸು ಹೆಚ್ಚೇ ಖಾರದ) “ಬರಗೂರು ಸನ್ಮಾನದ ಶಾಲಿನಲ್ಲಿ ಮೆತ್ತಿಕೊಂಡಿದ್ದ ರಕ್ತದ ಕಲೆಗಳು” ಲೇಖನವನ್ನು ಮಂಗಳೂರಿನ ಜೀವನ್ ಎನ್ನುವವರು ಬರೆದಿದ್ದಾರೆ. ಬರಗೂರರು ಈ ವರ್ಷದ ಸಮ್ಮೇಳನದಲ್ಲಿ ಅರ್ಧಕ್ಕೇ ಹಿಂದಿರುಗಿರುವುದೂ ಅದರಲ್ಲಿದೆ.

ಕಳೆದ ಶನಿವಾರ (14-12-13) ಮಂಗಳೂರಿನಲ್ಲಿ “ಜನ ನುಡಿ” ಆರಂಭವಾದ ದಿನದಂದೆ ಪ್ರಜಾವಾಣಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಅಂಕಣ ಪ್ರಕಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂಕಣ ಲೇಖನಗಳನ್ನು ಹುಮ್ಮಸ್ಸಿನಿಂದ ಓದದ ನಾನೂ ತಪ್ಪದೇ ಕಣ್ಣಾಡಿಸುವ ಕೆಲವೇ ಅಂಕಣಗಳಲ್ಲಿ ನಾಗತಿಹಳ್ಳಿಯವರದೂ ಒಂದು. ಅದನ್ನು ಈ ಬಾರಿ ಅವರು ಆಳ್ವರ ನುಡಿಸಿರಿ ಬಗ್ಗೆ ಮೀಸಲಿಟ್ಟಿದ್ದು ಮತ್ತು ಹಿಂದೆ ಅವರು ಅಲ್ಲಿ ಮಾಡಿದ್ದ ಭಾಷಣವನ್ನು ಅಚ್ಚುಹಾಕಿದ್ದು ನಿಜಕ್ಕೂ ಚೆನ್ನಾಗಿರಲಿಲ್ಲ. ಅದು ಅವರದಾಗಲಿ, ಅವರ ಅಂಕಣದ್ದಾಗಲಿ, ಘನತೆ ಹೆಚ್ಚಿಸುವ ಲೇಖನವಾಗಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದೇ ಅಥವ ಅದಕ್ಕಿಂತ ತೀಕ್ಷ್ಣವಾದ ಅಭಿಪ್ರಾಯ ಹಲವು ಗೆಳೆಯರು ಹಂಚಿಕೊಂಡರು.

ನಮ್ಮ ಬಹುತೇಕ ಸಾಹಿತಿಗಳಿಗೆ ವೇದಿಕೆ-ಭಾಷಣ ಎಂದರೆ ಪ್ರಿಯವೇ. ಅದರಲ್ಲೂ ಕೆಲವರಿಗೆ ಸನ್ಮಾನ ಎಂದರೆ ಇನ್ನೂ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಫ್ಲೈಟ್‌ನಲ್ಲಿ, ಟ್ರೈನ್‌ನಲ್ಲಿ, ಕಾರಿನಲ್ಲಿ ಕರೆಸಿಕೊಳ್ಳುತ್ತಾರೆ ಎಂದರೆ ಇನ್ನೂ ಪ್ರೀತಿ. ಅಲ್ಲಿ ಎಣ್ಣೆ ಸಿಗುತ್ತದೆ ಎಂದರೆ ಕೇಳಲೇ ಬೇಡಿ. (ಆಳ್ವಾಸ್‌ನ ಕಾರ್ಯಕ್ರಮಕ್ಕೆ ಹೋಗಿದ್ದ ಅತಿಥಿಯೊಬ್ಬರ ಕೊಠಡಿಗೆ ಆಯೋಜಕ ಸಮಿತಿಯಲ್ಲೊಬ್ಬರು ಮದ್ಯದ ಬಾಟಲಿ ಕೊಂಡೊಯ್ದು ಕೊಟ್ಟಿದ್ದರು ಮತ್ತು ಆ ಬಗ್ಗೆ ಅತಿಥಿಗಳು ಬಹಳ ಪ್ರೀತಿಯಿಂದ ತಮ್ಮ ಲೇಖನವೊಂದರಲ್ಲಿ ಸ್ಮರಿಸಿದ್ದರು ಎಂದು ಯಾರೋ ಒಬ್ಬರು ಹೇಳುತ್ತಿದ್ದರು.) ಪಾಪ ಮೋಹನ ಆಳ್ವರು ಸಾಲಸೋಲ ಮಾಡಿ ಈ ಪರಿಯ ಆತಿಥ್ಯ ಕೊಡುವಾಗ ತೆಗೆದುಕೊಳ್ಳುವವರು ಯೋಚಿಸಿ ತೆಗೆದುಕೊಳ್ಳಬೇಕು. ಆದರೆ, ಸನ್ಮಾನ ಮತ್ತು ಬಿರುದಿನ ಪ್ರಶ್ನೆ ಬಂದಾಗ ನಮ್ಮ ಸಾಹಿತಿಗಳಿಗೆ ದೇಶ-ಕಾಲದ ಪರಿವೆ ಇಲ್ಲದಂತಾಗಿಬಿಡುವುದು ಅವರ ತಪ್ಪಲ್ಲ. ಬಹಳಷ್ಟು ಸಲ ಅದು ವಯೋಮಾನದ ತಪ್ಪು. ನವೀನ್ ಸೂರಿಂಜೆಯವರ ಲೇಖನದಲ್ಲಿ ಪ್ರಸ್ತಾಪವಾದಂತೆ “ಜಮೀನ್ದಾರರ ಮನೆಯ ಜಿಲೇಬಿ ಎಂದರೆ ಎಲ್ಲರಿಗೂ ಇಷ್ಟ”. ಸ್ವಹಿತಾಸಕ್ತ ಸಾಹಿತಿಗಳಿಗಂತೂ ತುಸು ಹೆಚ್ಚೇ ಇಷ್ಟ.

ಗಂಭೀರವಾಗಿ ಹೇಳಬಹುದಾದರೆ, ಒಬ್ಬರು ತಮ್ಮ ವೈಯಕ್ತಿಕ ಹಣ ಮತ್ತು ಅಂತಸ್ತಿನಿಂದ ಇಂತಹ ಕಾರ್ಯಕ್ರಮ ಮಾಡಿದರೆ ಅದರಲ್ಲಿ ಭಾಗವಹಿಸುವುದರ ಬಗ್ಗೆ ಎಲ್ಲರೂ ಸ್ವಲ್ಪ ಗಂಭೀರವಾಗಿ ಯೋಚಿಸಬೇಕು. (ಯಾಕೆ ಎಂದು ವಿವರಿಸಬೇಕು ಎಂದು ಇಲ್ಲಿ ಯಾರಾದರೂ ಓದುಗರು ಬಯಸಿದರೆ ಬಹುಶಃ ಅವರಿಗೆ ವಿವರಿಸಿದರೂ ಅರ್ಥವಾಗದು. ಅದಕ್ಕಾಗಿ ಅದನ್ನು ಅಲ್ಲಿಗೇ ಬಿಡುತ್ತೇನೆ.)

ಈಗ “ಜನ ನುಡಿ” ಕಾರ್ಯಕ್ರಮಕ್ಕೆ ಬರುತ್ತೇನೆ. “ಆಳ್ವಾಸ್ ನುಡಿಸಿರಿ”ಯನ್ನು ಆಳ್ವರ ಆಳದಲ್ಲಿರುವ ಮತೀಯ ತಾತ್ವಿಕತೆ ಮತ್ತು ತುಷ್ಟೀಕರಣವನ್ನು ಹಾಗೂ ಅದನ್ನು ತಮ್ಮ ಶಿಕ್ಷಣ ಸಂಸ್ಥೆಯ ಮಾರ್ಕೆಟಿಂಗ್ ತಂತ್ರವಾಗಿಯೂ ಬಳಸುತ್ತಾರೆ abhimata-page1ಎಂದು ಪ್ರಾಮಾಣಿಕವಾಗಿ ನಂಬಿರುವ ಮಂಗಳೂರಿನ ಅನೇಕ ಯುವಮಿತ್ರರು ಕಳೆದ ಒಂದು ವರ್ಷದಲ್ಲಿ ಆದ ಚರ್ಚೆಗಳ ಮೂಲಕ ಗಟ್ಟಿಯಾಗಿ ರೂಪುಗೊಂಡ ಅಭಿಪ್ರಾಯದ ಹಿನ್ನೆಲೆಯಲ್ಲಿ “ಅಭಿಮತ ಮಂಗಳೂರು” ವೇದಿಕೆಯ ಮೂಲಕ “ಜನ ನುಡಿ” ಕಾರ್ಯಕ್ರಮ ಆಯೋಜಿಸಿದ್ದರು. ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಹೊನ್ನಾವರದ ಡಾ.ಎಚ್.ಎಸ್.ಅನುಪಮ ಸೇರಿದಂತೆ ಅನೇಕರ ಶ್ರಮ ಮತ್ತು ಕಾಳಜಿ ಈ ಕಾರ್ಯಕ್ರಮದ ಆಯೋಜನೆಯಲ್ಲಿತ್ತು. ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಸುಮಾರು 400-500 ಜನ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅನೇಕರ ನೈತಿಕ ಬೆಂಬಲ ಮಾತ್ರವಲ್ಲದೆ ಬಹುಶಃ ನೂರಕ್ಕೂ ಹೆಚ್ಚು ಜನ ಸ್ವಯಂಇಚ್ಛೆಯಿಂದ ಕಾರ್ಯಕ್ರಮದ ಖರ್ಚುವೆಚ್ಚಗಳನ್ನು ನೋಡಿಕೊಂಡರು. ಯಾರು ಯಾರಿಗಾಗಿಯೂ ಸಾಲ ಮಾಡಿಕೊಳ್ಳಲಿಲ್ಲ. ಪ್ರತಿಷ್ಟೆ ಮೆರೆಸಲಿಲ್ಲ. ಯಾವುದೇ ರೀತಿಯ ಶುಲ್ಕವಿಲ್ಲದ ಮತ್ತು ಮೊದಲೇ ನೊಂದಾಯಿಸಬೇಕಾದ ಜರೂರತ್ತಿಲ್ಲದ ಈ ಕಾರ್ಯಕ್ರಮಕ್ಕೆ ಹೊರ ಊರುಗಳಿಂದ ಬಂದಿದ್ದವರಿಗೆ ಉಚಿತವಾಗಿ ಯಾವೊಂದೂ ತೊಂದರೆ ಇಲ್ಲದಂತೆ ಉಚಿತವಾಗಿ ಊಟ ಮತ್ತು ವಸತಿ ಸೌಕರ್ಯವನ್ನು ಕಾಟಿಪಳ್ಳ ಮತ್ತು ಗೆಳೆಯರು ಕಲ್ಪಿಸಿದ್ದರು. ಅಲ್ಲಿ ಬಂದು ಮಾತನಾಡಿದ ಬಹುತೇಕರು ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಪ್ರೀತಿಯಿಂದ ಭಾಷಣ ಮಾಡಿ, ಬೆರೆತು, ಮಾತನಾಡಿ ಹೋದರು. ಅಲ್ಲಿ abhimatha-mangalooru-jananudi-2ಭಯ-ಭಕ್ತಿ ಇರಲಿಲ್ಲ. ಹಾಗೆಯೇ ಪಂಕ್ತಿಭೇದಕ್ಕೆ ಹೆಸರಾದ ಅವಿಭಜಿತ ಮಂಗಳೂರು ಜಿಲ್ಲೆಯಲ್ಲಿಯೇ ಇದು ನಡೆದರೂ, ಕೇವಲ ಸಸ್ಯಾಹಾರ ಮಾತ್ರವಲ್ಲದೆ ಮೀನು ಮತ್ತು ಕೋಳಿ ಮಾಂಸದ ಪದಾರ್ಥಗಳಿದ್ದರೂ ಅಲ್ಲಿ ಯಾವುದೇ ಪಂಕ್ತಿಭೇದವಿರಲಿಲ್ಲ. ಯಾರೊಬ್ಬರೂ ಇನ್ನೊಬ್ಬರ ಊಟಾಹಾರದ ವಿಚಾರದ ಬಗ್ಗೆ ಅಸಹ್ಯ ಪಡಲಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸ, ಪ್ರಾಮಾಣಿಕ ವಿಮರ್ಶೆಗಳು ಅಲ್ಲಿದ್ದವು. ಕಾಳಜಿ ಇತ್ತು. ಆಶಾವಾದವಿತ್ತು. ಉತ್ಸಾಹವಿತ್ತು. ನೈತಿಕತೆ ಇತ್ತು. ಒಬ್ಬರನ್ನೊಬ್ಬರು ಬೌದ್ಧಿಕವಾಗಿ ಬೆಳೆಸುವ ವಾತಾವರಣವಿತ್ತು. ಏನಿಲ್ಲದಿದ್ದರೂ “ಜನ ನುಡಿ”ಯಲ್ಲಿ ಪ್ರಜಾಸತ್ತಾತ್ಮಕ ಆಶಯವಿದೆ ಮತ್ತು ಅದರ ಆಯೋಜಕರಿಗೆ ಯಾರೊಬ್ಬರನ್ನೂ ಮೆರೆಸುವ ಅಥವ ಬಳಸಿಕೊಳ್ಳುವ ಉಮೇದಿದ್ದಂತಿಲ್ಲ. ಈಗ ಸಂಘಟಕರ ಮುಂದಿರುವ ದೊಡ್ಡ ಸವಾಲು ಅದನ್ನು ಮುಂದಿನ ವರ್ಷಗಳಲ್ಲಿ ಮುಂದುವರೆಸುವುದು ಮತ್ತು ಇನ್ನೂ ಚೆನ್ನಾಗಿ ಮಾಡುವುದು.

ಹಾಗೆಂದು ಇಲ್ಲಿ ಕುಂದುಕೊರತೆಗಳೇ ಇರಲಿಲ್ಲ ಎಂತಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲವೇ ಇಲ್ಲ ಎನ್ನುವ ರೀತಿ ಇದ್ದವು. ಗೋಷ್ಟಿಗಳಲ್ಲಿಯ ಬಹುತೇಕ ಎಲ್ಲಾ ಭಾಷಣಗಳೂ ಏಕಮುಖಿಯಾಗಿದ್ದವು. ಪ್ರತಿಕ್ರಿಯೆ ನೀಡುವುದು ಎನ್ನುವುದು ನಾಮಕಾಸ್ತೆಯಾಗಿ ಎಲ್ಲರೂ ವಿಷಯಮಂಡಕರಾಗುವ ವಾತಾವರಣ ಸೃಷ್ಟಿಸಲಾಗಿತ್ತು. abhimatha-mangalooru-jananudiಒಂದೊಂದು ಗೋಷ್ಟಿಯಲ್ಲಿ ಎಂಟೊಂಭ‌ತ್ತು ಭಾಷಣಕಾರರು. (ಮತ್ತು ಕೆಲವು ಭಾಷಣಕಾರರ ಅಗತ್ಯ ಇದ್ದಂತಿರಲಿಲ್ಲ.) ಸಭಿಕರು ಭಾಷಣ ಮಾಡಿದವರೊಂದಿಗೆ ವೇದಿಕೆಯಲ್ಲಿ ಸಂವಾದದಲ್ಲಿ ಪಾಳ್ಗೊಳ್ಳುವ ಅವಕಾಶವೇ ಇರಲಿಲ್ಲ. ಮಾತನಾಡಿದವರು ಬಹುತೇಕ ಒಂದೇ ತರಹದ ಜನ. ಅಂದರೆ, ಬಹುತೇಕರು ಲೇಖಕರು, ಅಧ್ಯಾಪಕರು, ಮತ್ತು ಪತ್ರಕರ್ತರು. ಒಂದೆರಡು ಗೋಷ್ಟಿಗಳಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡವರಿದ್ದರು. ಸಾಹಿತಿ-ಪತ್ರಕರ್ತರನ್ನು ಹೊರತುಪಡಿಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಕೆಲವೇ ಕೆಲವು ಮಂದಿ ಹಾಗೂ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಇಪ್ಟಾ ಜೊತೆ ಸ್ಥಳೀಯ ಹಾಡುಗಾರರು (ಸೌಜನ್ಯಾ ಘಟನೆ ಕುರಿತು ಹಾಡಿದವರು) ಇದ್ದರು. ಬರಹ – ಪತ್ರಕರ್ತ ಹಾಗೂ ಕೆಲ ಹೋರಾಟಗಾರರಲ್ಲದೆ ಬೇರೆ ಯಾರೂ ಇರಲಿಲ್ಲ ಎನ್ನುವುದು ಸತ್ಯ. ಆದರೆ ನನ್ನ ಪ್ರಶ್ನೆ ಈ ವೇದಿಕೆಗೆ ಸೂಕ್ತವಾಗಬಲ್ಲ – ಸಂವೇದನಾಶೀಲ ನಟ-ನಟಿಯರು, ಧಾರಾವಾಹಿ-ಸಿನೆಮಾ ನಿರ್ದೇಶಕರು, ಮುಖ್ಯವಾಹಿನಿಯ ಟಿ.ವಿ. ಪತ್ರಕರ್ತರು ಇದ್ದಾರಾ? ಬರವಣಿಗೆ ಒಂದೇ ಅಭಿವ್ಯಕ್ತಿಯ ಮಾದರಿ ಅಲ್ಲ ಮತ್ತು ಅದರ ಆಚೆಗೂ ವಿಶಾಲ ಜನಸಮೂಹವನ್ನು ಪ್ರಭಾವಿಸುವ ಮತ್ತು ಪ್ರಚೋದಿಸುವ ಪ್ರಬಲ ಮಾಧ್ಯಮ ವಿಭಾಗಗಳಿವೆ ಎನ್ನುವುದನ್ನು ಆಯೋಜಕರು ಮರೆಯಬಾರದು. ಅಲ್ಲಿಗೆ ಬಂದಿರುವವರು ಇಂತಹ ಬೇರೆಬೇರೆ ಮಾಧ್ಯಮಗಳೊಂದಿಗೆ ಅನುಸಂಧಾನ ಮಾಡುವುದಾಗಲಿ, ಅಲ್ಲಿಗೆ ಹೋಗುವುದರ ಬಗ್ಗೆ ಆಗಲಿ ಕೆಲವು ಮಾತುಕತೆ ಚರ್ಚೆ ಯೋಜನೆಗಳು ಆಗಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮೂರು-ನಾಲ್ಕು ಗಂಟೆಗಳ ಕಾಲದ ಮುಕ್ತ ಚರ್ಚೆ ಇರಬೇಕಿತ್ತು. ಅಲ್ಲಿ ಮುಂದಿನ ನಡಾವಳಿ ಮತ್ತು ಯೋಜನೆಗಳ ಬಗ್ಗೆ ಅಭಿಪ್ರಾಯಕ್ಕೆ ಬರಬೇಕಿತ್ತು. ಪ್ರತಿಕ್ರಿಯಾತ್ಮಕವಾಗಿಯಷ್ಟೇ ಅಲ್ಲದ ಸೃಜನಶೀಲವಾಗಿ ಕಾರ್ಯಪ್ರವೃತ್ತರಾಗುವ ಮತ್ತು ಒಟ್ಟಾಗಿ ಕೆಲಸ ಮಾಡುವ ಬಗೆಗಳ ಹುಡುಕಾಟ ಇರಬೇಕಿತ್ತು. ಇದು ಮುಂದಿನ ವರ್ಷದಲ್ಲಾದರೂ ಆಗಬೇಕು.

ಇಂತಹ ಸಭೆಗಳಲ್ಲಿ ಮಾತನಾಡುವವರಿಗೆ ಸಲಹೆ ಅಥವ ಕೋರಿಕೆ ಅಂದರೂ ಆದೀತು. ಎಡಪಂಥೀಯ–ಅದರಲ್ಲೂ ಕಮ್ಯುನಿಸ್ಟ್ ವಿಚಾರಧಾರೆಯ ಚಿಂತನೆಗಳ–ಚಿಂತಕ ಮಹಾಶಯರು “ಕೋಮುವಾದ” ಮತ್ತು “ಬಂಡವಾಳಶಾಹಿ” ಎಂಬ ಎರಡು ಪದಗಳ ಬಳಕೆಯನ್ನು ಕಮ್ಮಿ ಮಾಡಿ ವಿಷಯ ಮಂಡಿಸಲು ಪ್ರಯತ್ನಿಸಬೇಕು. ರೇಜಿಗೆ ಹುಟ್ಟಿಸುವಷ್ಟು ಸಲ ಅದನ್ನು ಬಳಸುತ್ತಾರೆ. ಹಾಗೆಯೇ ಮಹಾತ್ಮ ಗಾಂಧಿಯ ನಾಡಿನ ಇತ್ತೀಚಿನ ರಾಜಕೀಯ ವ್ಯಕ್ತಿಯೊಬ್ಬರ ಹೆಸರನ್ನೂ ಸಹ ತಮ್ಮ ಭಾಷಣಗಳಲ್ಲಿ ಅನಗತ್ಯವಾಗಿ ಮತ್ತು ವಿಪರೀತವಾಗಿ ಉಲ್ಲೇಖಿಸದ ಹಾಗೆ ಸ್ವಯಂನಿಯಂತ್ರಣ ಹೇರಿಕೊಳ್ಳಬೇಕು. ವಿಷಯ ಮತ್ತು ಹೆಸರುಗಳ ಪುನರಾವರ್ತನೆ ಎರಡು ದಿನಗಳ ಕಾರ್ಯಕ್ರಮದಲ್ಲಿ ಆಗುವುದು ಅಸಹನೀಯ. ನಮ್ಮ ಪರಂಪರೆಯಲ್ಲಿ ಇದ್ದಿರಬಹುದಾದ ಉನ್ನತ ವ್ಯಕ್ತಿ ಮತ್ತು ವಿಚಾರಗಳನ್ನು ಪ್ರಸ್ತಾಪಿಸುತ್ತ ಸಮಕಾಲೀನ ಸಂದರ್ಭದ ಕೆಟ್ಟದ್ದರ ಬಗ್ಗೆ ಮಾತನಾಡುವುದು ಹೇಗೆ ಎನ್ನುವುದನ್ನು ಸಮಾಜದ ಬಗ್ಗೆ ಕಾಳಜಿಯುಳ್ಳ ಜನ ಕಲಿಯಬೇಕಿದೆ. ಇಲ್ಲದಿದ್ದರೆ ನಮ್ಮ ಭಾಷಣಗಳು ಕೇವಲ ವೈಯಕ್ತಿಕ ರಾಗ-ದ್ವೇಷಗಳ ಅಭಿವ್ಯಕ್ತಿಯಾಗುತ್ತದೆ.

“ಜನ ನುಡಿ”ಗೆ ಮತ್ತು ತಿಂಗಳ ಹಿಂದೆ ಹಾಸನದಲ್ಲಿ ನಡೆದ “ನಾವು-ನಮ್ಮಲ್ಲಿ” ಕಾರ್ಯಕ್ರಮಕ್ಕೆ ಹೋಗಿಬಂದ ನಂತರ ವರ್ತಮಾನ.ಕಾಮ್‌ನ ಪ್ರಸ್ತುತತೆ ಮತ್ತು ಅಗತ್ಯದ ಬಗ್ಗೆ ನನಗೆ ಯಾವ ಸಂಶಯಗಳೂ ಇಲ್ಲ. New-Logo1-01-022.jpgವರ್ತಮಾನ.ಕಾಮ್ ಯಾವುದೇ ಒಬ್ಬ ವ್ಯಕ್ತಿಯದ್ದಲ್ಲ. ನಮ್ಮಲ್ಲಿ ಬರೆದಿರುವ ನೂರಾರು ಜನ ಲೇಖಕರು ಸೇರಿ ಕಟ್ಟಿರುವ ವೇದಿಕೆ ಇದು. ಒಬ್ಬಿಬ್ಬರದೇ ಆಗಿದ್ದರೆ ಒಂದು ಬ್ಲಾಗ್ ಸಾಕಿತ್ತು. ಆದರೆ ಇದು ಒಂದು ರೀತಿಯಲ್ಲಿ ಸಾಮೂಹಿಕ ಜವಾಬ್ದಾರಿಯ, ಸಾಮೂಹಿಕ ಪ್ರಯತ್ನದ ಫಲ. ನಾವು ಹಾಕಿಕೊಂಡಿರುವ ಆಶಯಗಳಿಗೆ ತಕ್ಕನಾಗಿ ನಡೆಯುವ ತನಕ ಇದು ಮುಂದುವರೆಯುತ್ತದೆ. ಅದಾಗದ ದಿನ ನಿಲ್ಲುತ್ತದೆ.

ಅಂದಹಾಗೆ, ಇತ್ತೀಚಿನ ದಿನಗಳಲ್ಲಿಯ ನನ್ನ ಕಾರ್ಯದೊತ್ತಡದ ಕಾರಣಕ್ಕಾಗಿ ಇಲ್ಲಿ ಕೆಲವೊಂದು ನಿಯಮಗಳು ನಮಗೆ ಗೊತ್ತಿಲ್ಲದೆ ಮುರಿದಿವೆ. ಬೇರೆ ಕಡೆ, ಅದರಲ್ಲೂ ಬೇರೆ ವೆಬ್‌ಸೈಟ್-ಬ್ಲಾಗುಗಳಲ್ಲಿ ಈಗಾಗಲೆ ಪ್ರಕಟವಾಗಿರುವ ಲೇಖನಗಳನ್ನು courtesy-announcementಇಲ್ಲಿ ಪ್ರಕಟಿಸುವುದಿಲ್ಲ ಎನ್ನುವುದು. ಕೆಲವು ಉತ್ಸಾಹಿ ಲೇಖಕರು ಇತರೆ ಕಡೆಗಳಿಗೂ ಕಳುಹಿಸಿ ನಮಗೂ ಕಳುಹಿಸಿರುವಂತಹ ಸಂದರ್ಭದಲ್ಲಿ ಸರಿಯಾಗಿ ಪರಿಶೀಲಿಸದೆ ಇಲ್ಲಿ ಪ್ರಕಟಿಸಿಬಿಟ್ಟಿದ್ದೇವೆ. ವರ್ತಮಾನ.ಕಾಮ್‌ಗೆ ತನ್ನದೇ ಆದ ಐಡೆಂಟಿಟಿ ಇದೆ. ನಮ್ಮಲ್ಲಿ ಪ್ರಕಟವಾಗುವ ಲೇಖನಗಳನ್ನು ಇಲ್ಲಿ ಓದುವುದಕ್ಕಿಂತ ಹೆಚ್ಚಾಗಿ ರಾಜ್ಯದ ಅನೇಕ ಕಡೆ ಮರುಮುದ್ರಿಸುವ ಸ್ಥಳೀಯ ಪತ್ರಿಕೆಗಳಲ್ಲಿ ಜನ ಓದುತ್ತಾರೆ. ಹಾಗಾಗಿ ನಮ್ಮಲ್ಲಿ ಪ್ರಕಟವಾಗುವ ಲೇಖನಗಳಿಗೆ ಒಂದು ಶಿಸ್ತಿಲ್ಲದೆ ಹೋದರೆ ಕಷ್ಟ. ಲೇಖಕರು ಇದನ್ನು ಗಮನಿಸಿ ಸಹಕರಿಸಬೇಕೆಂದು ಕೋರುತ್ತೇನೆ.

ಹಾಗೆಯೇ, ನಮ್ಮಲ್ಲಿ ಪ್ರಕಟವಾದ ಲೇಖನಗಳನ್ನು ಕನ್ನಡದ ಇತರೆ ಕೆಲವು ವೆಬ್‌ಸೈಟ್ ಮತ್ತು ಬ್ಲಾಗುಗಳವರು ಮರುಪ್ರಕಟಿಸುತ್ತಾರೆ. ನಾವು ಈಗಾಗಲೆ ಹೇಳಿರುವ ಹಾಗೆ ಲೇಖನದ ಹಕ್ಕುಗಳು ಲೇಖಕರದು. ಇತರೆ ಕಡೆ ಪ್ರಕಟಿಸುವವರಲ್ಲಿ ಕೆಲವರು ಕೃಪೆ ವರ್ತಮಾನ.ಕಾಮ್ ಎಂದೋ, ಅಥವ ನೇರವಾಗಿ ಇಲ್ಲಿಯ ಲಿಂಕ್ ಅನ್ನೋ ಕೊಡುತ್ತಾರೆ. ಹಾಗೆ ಮಾಡದವರು ದಯವಿಟ್ಟು ಕೃಪೆ ಎಂದು ಇನ್ನು ಮುಂದಾದರೂ ಸೂಚಿಸಿ ಸ್ಪಷ್ಟವಾಗಿ ಇಂಗ್ಲಿಷಿನಲ್ಲಿ www.vartamaana.com ಎಂದು ಕೊಟ್ಟರೆ ಉತ್ತಮ. ಹೀಗಾದಲ್ಲಿ ಮಾತ್ರ ವರ್ತಮಾನ.ಕಾಮ್‌ನ ಓದುಗರೂ ಹೆಚ್ಚುತ್ತಾರೆ, ಹೆಚ್ಚುಹೆಚ್ಚು ಲೇಖಕರೂ ಬರೆಯುತ್ತಾರೆ, ನಮ್ಮ ಸಮಕಾಲೀನ ಸಂದರ್ಭದ ವಿಷಯಗಳೂ ಸಶಕ್ತವಾಗಿ ಚರ್ಚೆಗೊಳಪಡುತ್ತವೆ, ಮತ್ತು ಅದು ಕ್ರಿಯಾಶೀಲತೆಯೆಡೆಗೆ ನಮ್ಮ ಲೇಖಕರನ್ನು ಮತ್ತು ಓದುಗರನ್ನು ಒಯ್ಯುತ್ತದೆ. ಹಾಗಾಗಿ ದಯವಿಟ್ಟು ಎಲ್ಲರೂ ಸಹಕರಿಸಬೇಕೆಂದು ಮತ್ತೊಮ್ಮೆ ಕೋರುತ್ತೇನೆ.

ಆಮ್ ಆದ್ಮಿ ಪಾರ್ಟಿ – ಭಾರತದ ಟೀ ಪಾರ್ಟಿ ಮೂವ್‌ಮೆಂಟ್

– ಮೂಲ : ಶೃತಿ ಕಪಿಲ
– ಅನುವಾದ: ಬಿ.ಶ್ರೀಪಾದ ಭಟ್

ಆಮ್ ಆದ್ಮಿ ಪಾರ್ಟಿಯಲ್ಲಿ ಅಮ್ (ಸಾಮಾನ್ಯ) ಅನ್ನುವಂತಹದ್ದೇನು ಕಾಣಿಸುತ್ತಿಲ್ಲ. ಆದರೆ ಈ ಪಕ್ಷವು ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ದೇಶದ ರಾಜಧಾನಿಯನ್ನು ಅಭೂತಪೂರ್ವವಾಗಿ ಗೆದ್ದು ಭಾರತದ ಪ್ರಜಾಪ್ರಭುತ್ವದ ನಕ್ಷೆಯಲ್ಲಿ ಪ್ರವೇಶಿಸಿರುವುದನ್ನು ಒಪ್ಪಿಕೊಳ್ಳಲೇಬೇಕು. ಇಂಡಿಯಾದ ರಾಜಕೀಯ ವಾತಾವರಣಕ್ಕೆ arvind-kejriwal-delhi-electionsಈ ಬಗೆಯ ಗೆಲುವು ಮಹತ್ವದ್ದಾಗಿದ್ದರೂ ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಮಾತ್ರ ಈ ರೀತಿಯ ರಾಜಕೀಯ ಪ್ರವೇಶ ಸಾಮಾನ್ಯವಾದದ್ದು. ಕಳೆದ ದಶಕದಿಂದ ತಹ್ರೀರ್ ಚೌಕದಿಂದ ತಾಸ್ಕಿಮ್ ಚೌಕದವರೆಗಿನ ಜಾಗತಿಕ ಮಟ್ಟದ ರಾಜಕೀಯ ಮತ್ತು ಸಾಮಾಜಿಕ ವಿದ್ಯಾಮಾನಗಳನ್ನು ಅವಲೋಕಿಸಿದಾಗ ನೇಪಥ್ಯದಲ್ಲಿದ್ದ ಸಾಮಾನ್ಯ ಮನುಷ್ಯನು ದಿಢೀರನೆ ಈ ಬಗೆಯ ಸಾರ್ವಜನಿಕವಾದ ಅತ್ಯಂತ ಮಹತ್ವದ ವೇದಿಕೆಗೆ ಬಂದು ನಿಲ್ಲವುದನ್ನು ನಾವು ಕಾಣಬಹುದು. ಆದರೆ ಇದು ಜಾಗತಿಕವಾಗಿ ವಿವಿಧ ದೇಶಗಳಲ್ಲಿ ಒಂದೇ ಬಗೆಯ pattern ನಲ್ಲಿ ಸಂಭವಿಸುತ್ತದೆ ಎನ್ನುವ ಚಿಂತನೆ ಮೋಸಗೊಳಿಸುವಂತಹದ್ದು. ಕಡಿವಾಣದ ಮನಸ್ಥಿತಿ ಇಲ್ಲದಿದ್ದರೂ ದೆಹಲಿಯ ಚಲ್ತಾ ಹೈ ಚಿಂತನೆಯ ಸಮಾಜವು ಮತ್ತು ನಿರ್ಣಾಯಕ ರಾಜಕೀಯ ಶಕ್ತಿಗಳು ಸ್ವಘೋಷಿತ ಆಮ್ ಆದ್ಮಿ ಅರ್ಥಾತ್ ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ಒಂದು ಬಗೆಯ ಬದಲಾವಣೆಗಾಗಿ ಒಗ್ಗಟ್ಟಾಗಿ ಗುಂಪುಗೂಡುತ್ತಿದ್ದದು ಕಳೆದೆರಡು ವರ್ಷಗಳಲ್ಲಿ ಕಂಡುಬರುವ ಸಾಮಾನ್ಯ ನೋಟವಾಗಿತ್ತು.

ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಈ ದಿನಕ್ಕೆ,ಈ ಕ್ಷಣಕ್ಕೆ ತುರ್ತಾಗಿ ಇದು ಆಗಲೇಬೇಕೆಂಬ rhetoric ರಾಜಕೀಯ ವಾತಾವರಣವನ್ನು ನಿರ್ಮಿಸಿತ್ತು. ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಬಂಧದ ಇತಿಹಾಸವನ್ನು ಅವಲೋಕಿಸಿದರೆ kejriwal_aap_pti_rallyನಾವು ಇದರ ವಿರೋಧಿ, ನಾವು ಅದರ ವಿರೋಧಿ ಎನ್ನುವಂತಹ rhetoric ರಾಜಕೀಯ ಭಾಷೆ ಇಂದಿನ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕೇಂದ್ರದಲ್ಲಿ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧದ ಕಾಂಗ್ರೆಸ್ ವಿರೋಧಿ rhetoric ರಾಜಕೀಯ ಭಾಷೆಯು ಈ ಆಮ್ ಆದ್ಮಿ ಪಕ್ಷಕ್ಕೆ ಗಟ್ಟಿಯಾದ ನೆಲೆಗಟ್ಟನ್ನು ತಂದುಕೊಟ್ಟಿತು.

ಐವತ್ತರ ದಶಕದ, ನೆಹರೂ ಅವರ ಆಡಳಿತಾವಧಿಯ ಕಾಲಘಟ್ಟದಲ್ಲಿ, ಇಡೀ ದೇಶವೇ ಪ್ರಧಾನಿ ನೆಹರೂ ಅವರನ್ನು ಅಭಿಮಾನದಿಂದ ಪೂಜಿಸುತ್ತಿದ್ದಂತಹ ಅಂದಿನ ದಿನಗಳಲ್ಲಿ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯ ಅವರು ವಂಶಾಡಳಿತದ ವಿರುದ್ಧ, ಏಕಮಾದ್ವೇತೀಯವಾದ ರಾಜಕೀಯ ಅಧಿಕಾರದ ವಿರುದ್ಧ “ಕಾಂಗ್ರೆಸ್ ವಿರೋಧಿ” ಆಂದೋಲನವನ್ನು ಕಟ್ಟುತ್ತಿದ್ದರು. 60 ರ ದಶಕದಲ್ಲಿ ಲೋಹಿಯಾ ನೇತೃತ್ವದ ಈ ಕಾಂಗ್ರೆಸ್ ವಿರೋಧಿ ಆಂದೋಲವು ಭಾರತದ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಇತರೇ ವಿರೋಧಿ ಪಕ್ಷಗಳು ಅಧಿಕಾರಕ್ಕೆ ಬರುವಂತಹ ವಾತಾವರಣ ನಿರ್ಮಿಸಿತ್ತು. ಇಂದಿನ ಪರಿಸ್ಥಿತಿಯನ್ನು ಅಂದಿನ 60 ರ ದಶಕದ ರಾಜಕೀಯ ವಾತಾವರಣಕ್ಕೆ ಹೋಲಿಸಿದಾಗ ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ಆಗ ಭೂಮಿ ಹಂಚಿಕೆಯಲ್ಲಿನ ತಾರತಮ್ಯ ಮತ್ತು ವ್ಯವಸಾಯ ಉತ್ಪನ್ನಗಳ ಇಳಿಮುಖವು ತಾರಕಕ್ಕೇರಿತು. ಇಂದಿನ ಪರಿಸ್ಥಿತಿಯೂ ಅಂದಿನದಕ್ಕಿಂತ ಭಿನ್ನವಾಗೇನಿಲ್ಲ. Lohialಆಗಲೂ ಹಿಂಸಾತ್ಮಕ ನಕ್ಸಲೈಟ್ ಮೂವ್‌ಮೆಂಟ್ ಶುರುವಾಗಿದ್ದರೆ ಇಂದಿನ ದಿನಗಳಲ್ಲಿಯೂ ಹಿಂಸಾತ್ಮಕ ಮಾವೋವಾದಿ ಚಳುವಳಿಯು ದೇಶದ ಅನೇಕ ಕಡೆಗಳಲ್ಲಿ ಕ್ರಿಯಾಶೀಲವಾಗಿದೆ.

“ಕಾಂಗ್ರೆಸ್ ವಿರೋಧಿ, ಇಂಗ್ಲೀಷ್ ವಿರೋಧಿ, ಜಾತಿ ವಿರೋಧಿ” ಚಳುವಳಿಗಳು ಮತ್ತು ಸಿದ್ಧಾಂತಗಳು ರಾಮಮನೋಹರ ಲೋಹಿಯಾರವರ ರಾಜಕೀಯ ಮಾನಿಫೆಸ್ಟೋಗಳಾಗಿದ್ದವು. ಪರಿಣಾಮದ ಮಟ್ಟದಲ್ಲಿ ಗಾಂಧಿ, ಮಾರ್ಕ್ಸರವರ ಸಿದ್ಧಾಂತ, ಚಳುವಳಿಗಿಂತ ಲೋಹಿಯಾರ ಈ ಸಿದ್ಧಾಂತಗಳು ಮತ್ತು ಚಳುವಳಿಗಳು ತುಂಬಾ ಕಡಿಮೆಯಿದ್ದರೂ ಸಮಾಜವನ್ನು, ವ್ಯವಸ್ಥೆಯನ್ನು ಮುಟ್ಟುವ ಮಟ್ಟದಲ್ಲಿ ಪ್ರಭಾವಶಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಮನೋಹರ ಲೋಹಿಯಾ ಅವರು ದೇಶದ ಬುದ್ಧಿಜೀವಿ ರಾಜಕಾರಣಿಯಾಗಿ ತೀವ್ರವಾದ ಬದಲಾವಣೆಗಳ ಹರಿಕಾರರಾಗಿದ್ದರು. ಸೋಷಿಯಲಿಸ್ಟ್ ಚಿಂತಕರಾಗಿದ್ದ ಲೋಹಿಯಾರವರು ಸಿದ್ಧ ಮಾದರಿಯ ರಾಜಕೀಯ ವ್ಯವಸ್ಥೆಯ ವಿರುದ್ಧ ಸೆಡ್ಡು ಹೊಡೆದು ಅದನ್ನು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಸಾಮಾಜಿಕ ಆಶಯಗಳೇ ಪ್ರಧಾನವಾಗಿದ್ದ ರಾಜಕೀಯ ಚಿಂತನೆಗಳನ್ನು ಜಾರಿಗೆ ತಂದರು. ಸಾರ್ವಜನಿಕ ಖರ್ಚುವೆಚ್ಚಗಳಿಂದ ಹಿಡಿದು ಮಾನವ ಹಕ್ಕುಗಳವರೆಗೂ, ಹಿಂಸಾತ್ಮಕ ಸಾಮಾಜಿಕ ವಾತಾವರಣದ ವಿರುದ್ಧದಿಂದ ಹಿಡಿದು ವಿದೇಶಾಂಗ ನೀತಿಗಳವರೆಗೂ ತಮ್ಮ ಸಿದ್ಧಾಂತಗಳನ್ನು ರೂಪಿಸಿದರು. ಇದಕ್ಕಾಗಿ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಜೀವ ಪ್ರಜೆಗಳನ್ನು ಒಳಗೊಳ್ಳುವಂತಹ ರಾಜಕೀಯ ವಾತಾವರಣಕ್ಕಾಗಿ ಶ್ರಮಿಸಿದರು.

ಆದರೆ ರಾಮಮನೋಹರ ಲೋಹಿಯಾ ಅವರನ್ನು ಇತರೇ ಹಿಂದುಳಿದ ಜಾತಿಗಳ ಸಾಮಾಜಿಕ ಮತ್ತು ರಾಜಕಾರಣವು ಪ್ರವರ್ಧಮಾನಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದರ ಅದ್ಯಪ್ರವರ್ತಕರಾಗಿದ್ದರು ಎಂದೇ ವಿಶ್ಲೇಷಿಸಲಾಗುತ್ತದೆ. ಹಿಂದುಳಿದ ಜಾತಿಗಳು ಮತ್ತು “ಸಾಮಾಜಿಕ” ಐಡೆಂಟಿಟಿಯನ್ನು ಮುಖ್ಯ ಧಾರೆಯಲ್ಲಿ ಚರ್ಚೆಗೆ ಬರುವಂತೆ ಈ ಓಬಿಸಿ ರಾಜಕಾರಣವನ್ನು ರೂಪಿಸಲಾಗಿತ್ತು. ಆಗಾಗ ರಾಮಮನೋಹರ ಲೋಹಿಯಾ ಅವರು “ಆಮ್ ಆದ್ಮಿ” ಪದವನ್ನು, ಅದರ ಅಗತ್ಯತೆಯನ್ನು ಪ್ರಯೋಗಿಸುತ್ತಿದ್ದರೂ ಅದು ಈ “ಓಬಿಸಿ” ರಾಜಕಾರಣದ ಮುಂದೆ ಆ ನುಡಿಕಟ್ಟು ಮತ್ತು ಐಡೆಂಟಿಟಿ ಪ್ರಾಮುಖ್ಯತೆ ಪಡೆದುಕೊಳ್ಳಲಿಲ್ಲ. ಅಂದರೆ ಅಂದಿನ ಕಾಲಘಟ್ಟದಲ್ಲಿ, ಅಂದಿನ ಸಂದರ್ಭಕ್ಕೆ ಈ “ಆಮ್ ಆದ್ಮಿ” ನುಡಿಕಟ್ಟು ಪ್ರಸ್ತುತವಾಗಿರಲಿಲ್ಲವೇ? ಸಾಮಾಜಿಕ ನ್ಯಾಯದ ಚಿಂತನೆಗಳಲ್ಲಿ ಸ್ಥಾನ ಪಡೆದುಕೊಳ್ಳದೆ ಕೇವಲ ಜನಪ್ರಿಯ ಪದಪುಂಜವಾಗಿತ್ತೇ??

ಮುಂದಿನ ದಶಕಗಳಲ್ಲಿ ರಾಮಮನೋಹರ ಲೋಹಿಯಾ ಅವರು ಬಳಕೆಗೆ ತಂದ, ಪ್ರತಿಪಾದಿಸಿದ “ಸಂಯುಕ್ತ ಸರ್ಕಾರ”ದ ಕಲ್ಪನೆಗಳು, ಆಶಯಗಳು ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿತು. ಇದರಲ್ಲಿ “ಓಬಿಸಿ” ಮೆಜಾರಿಟಿಯಲ್ಲಿತ್ತು. Advani-Rath-Yatraತೊಂಬತ್ತರ ದಶಕದ ವೇಳೆಗೆ ಅಡ್ವಾನಿಯವರ ರಥಯಾತ್ರೆ ತೀವ್ರವಾಗಿದ್ದಂತಹ ಸಂದರ್ಭದಲ್ಲಿ ಪರ್ಯಾಯವಾಗಿ “ಓಬಿಸಿ” ರಾಜಕಾರಣ ತನ್ನ ಪ್ರಭಾವನ್ನು ಹೆಚ್ಚಿಸಕೊಳ್ಳತೊಡಗಿತು. ಈ “ಕಮಂಡಲ”ಕ್ಕೆ ಪರ್ಯಾಯವಾಗಿ “ಮಂಡಲ್” ರಾಜಕಾರಣ ಪ್ರವರ್ಧಮಾನಕ್ಕೆ ಬರತೊಡಗಿತು. ಕಾಲಕಳೆದಂತೆ ಇದು ಮತ್ತಷ್ಟು ಸಂಕೀರ್ಣವಾಗತೊಡಗಿತು. ಇಂದಿನ ಆಮ್ ಆದ್ಮಿ ಪಕ್ಷದಂತೆಯೇ ಅಂದಿನ ದಿನಗಳಲ್ಲಿ ಈ ಜನಪ್ರಿಯ rhetoric ಬಳಸಿಕೊಂಡು ಎನ್.ಟಿ.ರಾಮರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಅಧಿಕಾರಕ್ಕೆ ಬಂದಿತು.ಇದೇ ಬಗೆಯಲ್ಲಿಯೇ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸಹ ಉದಾಹರಿಸಬಹುದು.

ದೆಹಲಿ ರಾಜ್ಯದ ಎರಡು ವಿಭಿನ್ನ ಮಾದರಿಯ ಧ್ರುವಗಳ ನಡುವೆ ಹುಟ್ಟಿಕೊಂಡ “ಆಮ್ ಆದ್ಮಿ ಪಕ್ಷ”ವು ಜನತೆಯ ಸಿಟ್ಟು ಮತ್ತು ಅಸಹಾಯಕತೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಆರಂಭದಲ್ಲಿ underdog ಪ್ರಾದೇಶಿಕ ಪಕ್ಷವಾಗಿಯೇ ಗುರುತಿಸಿಕೊಂಡಿದ್ದ “ಆಮ್ ಆದ್ಮಿ” ಪಕ್ಷಕ್ಕೆ ಇಂದಿನ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಧಿಢೀರನೆ ಮಾಧ್ಯಮಗಳ ಪ್ರಚಾರ ದೊರಕಿಬಿಟ್ಟಿತು. ವಿವಿಧ ಬೇಡಿಕೆಗಳು ಮತ್ತು ವಿವಿಧ ವಿಚಾರಗಳ ನಡುವೆ ಒಂದು ಸಮಾನ ಕೊಂಡಿಯನ್ನು ನಿರ್ಮಿಸಿದ್ದು ಈ “ಆಮ್ ಆದ್ಮಿ ಪಕ್ಷ”. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಬೆಲೆಯೇರಿಕೆ, ತುಟ್ಟಿಯಾದ ವಿದ್ಯುತ್ ಬಿಲ್ಲುಗಳು, AAP-manifesto-PTIಅತ್ಯಾಚಾರ ಮತ್ತು ಸೆಕ್ಸ್ ಎಲ್ಲವನ್ನೂ ಪೋಣಿಸಿ ಒಂದೇ ನೆಲೆಯಲ್ಲಿ ಚರ್ಚೆಗೆ ತರುವಲ್ಲಿ ಆಮ್ ಆದ್ಮಿ ಪಕ್ಷವು ಯಶಸ್ವಿಯಾಯಿತು

ಜನಪ್ರಿಯ ಸಿದ್ಧಾಂತವನ್ನು ಒಳಗೊಳ್ಳುತ್ತಲೇ ಮಧ್ಯಮವರ್ಗಗಳ ಸೆಂಟಿಮೆಂಟಲ್ ನೆಲೆಯಲ್ಲಿ ಇತರೇ ಬಲಾಢ್ಯ ಪಕ್ಷಗಳ ಓಲೈಸುವಿಕೆ ರಾಜಕಾರಣವನ್ನು ಟೀಕಿಸುತ್ತಾ ತನ್ನ ಪ್ರಸ್ತುತತೆಯನ್ನು ಗಟ್ಟಿಗಳಿಸಿಕೊಂಡಿದ್ದು ಆಮ್ ಆದ್ಮಿ ಪಕ್ಷದ ಗೆಲುವಿಗೆ ಮೂಲಭೂತ ಕಾರಣ. ಅಲ್ಲದೆ ಅಧಿಕಾರದಲ್ಲಿರುವ ಪಕ್ಷಗಳನ್ನು ಶತೃಗಳನ್ನಾಗಿ ಬಿಂಬಿಸುವಲ್ಲಿ ಮತ್ತು ಅದನ್ನು ಮಧ್ಯಮವರ್ಗಗಳಿಗೆ ನಂಬಿಸುವಲ್ಲಿಯೂ ಆಮ್ ಆದ್ಮಿ ಪಕ್ಷ ಯಶಸ್ವಿಯಾಯಿತು.

ಅದರೆ ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ ಸಾಮಾಜಿಕ ನ್ಯಾಯ ಮತ್ತು ಸಮತಾವಾದದೊಂದಿಗೆ ಇಂದಿನ ಜನಪ್ರಿಯ ನಂಬಿಕೆಯಾದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಮುಖಾಮುಖಿಯಾಗಿಸುವುದರಲ್ಲಿ ಯಶಸ್ವಿಯಾಗಿರುವ ಮಧ್ಯಮವರ್ಗಗಳಿಗೆ ರಾಜಕೀಯವಾಗಿ ಅಂಬೆಗಾಲಿಡುತ್ತಿರುವ ಆಮ್ ಆದ್ಮಿ ಪಕ್ಷವು ಹೊಸ ಬೆಳಕಾಗಿದ್ದು ಸುಳ್ಳಲ್ಲ. ಆದರೆ ಹಿಂದುತ್ವದ ರಾಜಕಾರಣ ತಲೆಯೆತ್ತುತ್ತಿರುವಂತಹ ಇಂದಿನ ದಿನಗಳಲ್ಲಿ, ಕೋಮುವಾದದ ಗಲಭೆಗಳು ಮರುಕಳುಸಿತ್ತಿರುವಂತಹ ಇಂದಿನ ದಿನಗಳಲ್ಲಿ ಈ ಆಮ್ ಆದ್ಮಿ ಪಕ್ಷವು ಐಡೆಂಟಿಟಿ ರಾಜಕಾರಣಕ್ಕೆ ಅಂತ್ಯ ಹಾಡಿದೆ ಎಂಬಂತಹ ಚಿಂತನೆಗಳು ಇಂದು ಚರ್ಚಾರ್ಹವಾಗಿವೆ.

ಆದರೆ ರಾಜಕೀಯ ಅಧಿಕಾರವೇ ಈ ಆಮ್ ಆದ್ಮಿ ಪಕ್ಷಕ್ಕೆ ಐಡೆಂಟಿಟಿ ಕ್ರೈಸಿಸ್ ತಂದೊಡ್ಡಲಿದೆ. ತನ್ನ ಮ್ಯಾನಿಫೆಸ್ಟೋದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುವಲ್ಲಿ ಈ ಪಕ್ಷವು ಪಟ್ಟಭಧ್ರ ಹಿತಾಸಕ್ತಿಗಳನ್ನು, ಅಧಿಕಾರದ ಲಾಬಿಗಳನ್ನು ಹೇಗೆ ಪಳಗಿಸುತ್ತದೆ ಎಂಬುದಕ್ಕೆ ಇಲ್ಲಿ ಉತ್ತರವಿಲ್ಲ.

ಆದರೆ ಪ್ರಜಾಪ್ರಭುತ್ವದ ದೇಶವೊಂದರ ಪ್ರಜೆಗಳು ಯಾವುದೇ ಜಾತಿಗೆ ಸೇರಿದವರಲ್ಲ ಅಥವಾ ಯಾವುದೇ ವರ್ಗಗಳಲ್ಲ, arvind-kejriwal-campaigningಬದಲಾಗಿ ತಳಮಳಗಳನ್ನು, ಸಿಟ್ಟನ್ನು ವ್ಯಕ್ತಪಡಿಸುವ ಸಾಮಾನ್ಯ ನಾಗರಿಕರು ಎನ್ನುವ ಸಿದ್ಧಾಂತವನ್ನು ಹೊಂದಿರುವ ಈ ಆಮ್ ಆದ್ಮಿ ಪಕ್ಷವನ್ನು ನಾವು ಅಮೇರಿಕಾ ದೇಶದ “ಟೀ ಪಾರ್ಟಿ”ಗೆ ಹೋಲಿಸಬಹುದು. ಅಷ್ಟೇಕೆ ಈ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಹಲವಾರು ಬಾರಿ ಅಮೇರಿಕ ಮಾದರಿಯ ಡೆಮಾಕ್ರಸಿಯನ್ನು ಓಲೈಸಿರುವುದರಿಂದ ಸಾಮಾನ್ಯ ಜನರ ಕುಂದು ಕೊರತೆಗಳಿಗಾಗಿಯೇ ಹೋರಾಡಲು ಹುಟ್ಟಿಕೊಂಡಿರುವ ಅಲ್ಲಿನ ಟೀ ಪಾರ್ಟಿಯೊಂದಿಗೆ ಈ ಆಮ್ ಆದ್ಮಿ ಪಕ್ಷಕ್ಕೆ ಹಲವಾರು ಸಾಮ್ಯತೆಗಳಿವೆ. ಈ ಈ ಆಮ್ ಆದ್ಮಿ ಪಕ್ಷವು ಈ ಹೋರಾಟಕ್ಕಾಗಿ ಗಾಂಧಿ ಟೋಪಿಯನ್ನು ಸಾಂಕೇತಿಕವಾಗಿ ಬಳಸಿದಂತೆಯೇ ಅಲ್ಲಿನ ಟೀ ಪಾರ್ಟಿಯು ಕಲೋನಿಯಲ್ ವಿರೋಧಿ ಸಂಕೇತವನ್ನು ಬಳಸಿಕೊಂಡಿತ್ತು.

ಕಡೆಗೆ ವಿಭಿನ್ನ ಧ್ರುವಗಳಲ್ಲಿರುವ ರಾಜಕೀಯ ವ್ಯವಸ್ಥೆಯನ್ನು ಒಂದೇ ಪಾತಳಿಯಲ್ಲಿ ಪೋಣಿಸುವುದು ಈ ಆಮ್ ಆದ್ಮಿ ಪಕ್ಷದ ಸಾಧನೆ ಅಲ್ಲವೇ ಅಲ್ಲ. ತನ್ನ ಪಕ್ಷದ ಹೆಸರನ್ನು ರಾಜಕೀಯಕ್ಕಾಗಿ ಬಳಸಿಕೊಂಡಿರುವುದರಲ್ಲಿ ಮಾತ್ರ ಇದರ ಸಾಧನೆ ಇರುವುದು. ಆದರೆ ಸಧ್ಯಕ್ಕಂತೂ ಇದು ಯಾವುದೇ ಹೂರಣವಿಲ್ಲದ ಹೆಸರಾಗಿ ಉಳಿದಿದೆ

( ಕೃಪೆ: ಎಕನಾಮಿಕ್ಸ್ ಟೈಮ್ಸ್, 18 ಡಿಸೆಂಬರ್, 2013)