ಆಮ್ ಆದ್ಮಿ ಪಾರ್ಟಿ – ಭಾರತದ ಟೀ ಪಾರ್ಟಿ ಮೂವ್‌ಮೆಂಟ್

– ಮೂಲ : ಶೃತಿ ಕಪಿಲ
– ಅನುವಾದ: ಬಿ.ಶ್ರೀಪಾದ ಭಟ್

ಆಮ್ ಆದ್ಮಿ ಪಾರ್ಟಿಯಲ್ಲಿ ಅಮ್ (ಸಾಮಾನ್ಯ) ಅನ್ನುವಂತಹದ್ದೇನು ಕಾಣಿಸುತ್ತಿಲ್ಲ. ಆದರೆ ಈ ಪಕ್ಷವು ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ದೇಶದ ರಾಜಧಾನಿಯನ್ನು ಅಭೂತಪೂರ್ವವಾಗಿ ಗೆದ್ದು ಭಾರತದ ಪ್ರಜಾಪ್ರಭುತ್ವದ ನಕ್ಷೆಯಲ್ಲಿ ಪ್ರವೇಶಿಸಿರುವುದನ್ನು ಒಪ್ಪಿಕೊಳ್ಳಲೇಬೇಕು. ಇಂಡಿಯಾದ ರಾಜಕೀಯ ವಾತಾವರಣಕ್ಕೆ arvind-kejriwal-delhi-electionsಈ ಬಗೆಯ ಗೆಲುವು ಮಹತ್ವದ್ದಾಗಿದ್ದರೂ ಸಮಕಾಲೀನ ರಾಜಕೀಯ ಸಂದರ್ಭದಲ್ಲಿ ಮಾತ್ರ ಈ ರೀತಿಯ ರಾಜಕೀಯ ಪ್ರವೇಶ ಸಾಮಾನ್ಯವಾದದ್ದು. ಕಳೆದ ದಶಕದಿಂದ ತಹ್ರೀರ್ ಚೌಕದಿಂದ ತಾಸ್ಕಿಮ್ ಚೌಕದವರೆಗಿನ ಜಾಗತಿಕ ಮಟ್ಟದ ರಾಜಕೀಯ ಮತ್ತು ಸಾಮಾಜಿಕ ವಿದ್ಯಾಮಾನಗಳನ್ನು ಅವಲೋಕಿಸಿದಾಗ ನೇಪಥ್ಯದಲ್ಲಿದ್ದ ಸಾಮಾನ್ಯ ಮನುಷ್ಯನು ದಿಢೀರನೆ ಈ ಬಗೆಯ ಸಾರ್ವಜನಿಕವಾದ ಅತ್ಯಂತ ಮಹತ್ವದ ವೇದಿಕೆಗೆ ಬಂದು ನಿಲ್ಲವುದನ್ನು ನಾವು ಕಾಣಬಹುದು. ಆದರೆ ಇದು ಜಾಗತಿಕವಾಗಿ ವಿವಿಧ ದೇಶಗಳಲ್ಲಿ ಒಂದೇ ಬಗೆಯ pattern ನಲ್ಲಿ ಸಂಭವಿಸುತ್ತದೆ ಎನ್ನುವ ಚಿಂತನೆ ಮೋಸಗೊಳಿಸುವಂತಹದ್ದು. ಕಡಿವಾಣದ ಮನಸ್ಥಿತಿ ಇಲ್ಲದಿದ್ದರೂ ದೆಹಲಿಯ ಚಲ್ತಾ ಹೈ ಚಿಂತನೆಯ ಸಮಾಜವು ಮತ್ತು ನಿರ್ಣಾಯಕ ರಾಜಕೀಯ ಶಕ್ತಿಗಳು ಸ್ವಘೋಷಿತ ಆಮ್ ಆದ್ಮಿ ಅರ್ಥಾತ್ ಸಾಮಾನ್ಯ ಮನುಷ್ಯನ ಹೆಸರಿನಲ್ಲಿ ಒಂದು ಬಗೆಯ ಬದಲಾವಣೆಗಾಗಿ ಒಗ್ಗಟ್ಟಾಗಿ ಗುಂಪುಗೂಡುತ್ತಿದ್ದದು ಕಳೆದೆರಡು ವರ್ಷಗಳಲ್ಲಿ ಕಂಡುಬರುವ ಸಾಮಾನ್ಯ ನೋಟವಾಗಿತ್ತು.

ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವು ಈ ದಿನಕ್ಕೆ,ಈ ಕ್ಷಣಕ್ಕೆ ತುರ್ತಾಗಿ ಇದು ಆಗಲೇಬೇಕೆಂಬ rhetoric ರಾಜಕೀಯ ವಾತಾವರಣವನ್ನು ನಿರ್ಮಿಸಿತ್ತು. ಪ್ರಭುತ್ವ ಮತ್ತು ಪ್ರಜೆಗಳ ನಡುವಿನ ಸಂಬಂಧದ ಇತಿಹಾಸವನ್ನು ಅವಲೋಕಿಸಿದರೆ kejriwal_aap_pti_rallyನಾವು ಇದರ ವಿರೋಧಿ, ನಾವು ಅದರ ವಿರೋಧಿ ಎನ್ನುವಂತಹ rhetoric ರಾಜಕೀಯ ಭಾಷೆ ಇಂದಿನ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕೇಂದ್ರದಲ್ಲಿ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧದ ಕಾಂಗ್ರೆಸ್ ವಿರೋಧಿ rhetoric ರಾಜಕೀಯ ಭಾಷೆಯು ಈ ಆಮ್ ಆದ್ಮಿ ಪಕ್ಷಕ್ಕೆ ಗಟ್ಟಿಯಾದ ನೆಲೆಗಟ್ಟನ್ನು ತಂದುಕೊಟ್ಟಿತು.

ಐವತ್ತರ ದಶಕದ, ನೆಹರೂ ಅವರ ಆಡಳಿತಾವಧಿಯ ಕಾಲಘಟ್ಟದಲ್ಲಿ, ಇಡೀ ದೇಶವೇ ಪ್ರಧಾನಿ ನೆಹರೂ ಅವರನ್ನು ಅಭಿಮಾನದಿಂದ ಪೂಜಿಸುತ್ತಿದ್ದಂತಹ ಅಂದಿನ ದಿನಗಳಲ್ಲಿ ಸಮಾಜವಾದಿ ನಾಯಕ ರಾಮಮನೋಹರ ಲೋಹಿಯ ಅವರು ವಂಶಾಡಳಿತದ ವಿರುದ್ಧ, ಏಕಮಾದ್ವೇತೀಯವಾದ ರಾಜಕೀಯ ಅಧಿಕಾರದ ವಿರುದ್ಧ “ಕಾಂಗ್ರೆಸ್ ವಿರೋಧಿ” ಆಂದೋಲನವನ್ನು ಕಟ್ಟುತ್ತಿದ್ದರು. 60 ರ ದಶಕದಲ್ಲಿ ಲೋಹಿಯಾ ನೇತೃತ್ವದ ಈ ಕಾಂಗ್ರೆಸ್ ವಿರೋಧಿ ಆಂದೋಲವು ಭಾರತದ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಇತರೇ ವಿರೋಧಿ ಪಕ್ಷಗಳು ಅಧಿಕಾರಕ್ಕೆ ಬರುವಂತಹ ವಾತಾವರಣ ನಿರ್ಮಿಸಿತ್ತು. ಇಂದಿನ ಪರಿಸ್ಥಿತಿಯನ್ನು ಅಂದಿನ 60 ರ ದಶಕದ ರಾಜಕೀಯ ವಾತಾವರಣಕ್ಕೆ ಹೋಲಿಸಿದಾಗ ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ಆಗ ಭೂಮಿ ಹಂಚಿಕೆಯಲ್ಲಿನ ತಾರತಮ್ಯ ಮತ್ತು ವ್ಯವಸಾಯ ಉತ್ಪನ್ನಗಳ ಇಳಿಮುಖವು ತಾರಕಕ್ಕೇರಿತು. ಇಂದಿನ ಪರಿಸ್ಥಿತಿಯೂ ಅಂದಿನದಕ್ಕಿಂತ ಭಿನ್ನವಾಗೇನಿಲ್ಲ. Lohialಆಗಲೂ ಹಿಂಸಾತ್ಮಕ ನಕ್ಸಲೈಟ್ ಮೂವ್‌ಮೆಂಟ್ ಶುರುವಾಗಿದ್ದರೆ ಇಂದಿನ ದಿನಗಳಲ್ಲಿಯೂ ಹಿಂಸಾತ್ಮಕ ಮಾವೋವಾದಿ ಚಳುವಳಿಯು ದೇಶದ ಅನೇಕ ಕಡೆಗಳಲ್ಲಿ ಕ್ರಿಯಾಶೀಲವಾಗಿದೆ.

“ಕಾಂಗ್ರೆಸ್ ವಿರೋಧಿ, ಇಂಗ್ಲೀಷ್ ವಿರೋಧಿ, ಜಾತಿ ವಿರೋಧಿ” ಚಳುವಳಿಗಳು ಮತ್ತು ಸಿದ್ಧಾಂತಗಳು ರಾಮಮನೋಹರ ಲೋಹಿಯಾರವರ ರಾಜಕೀಯ ಮಾನಿಫೆಸ್ಟೋಗಳಾಗಿದ್ದವು. ಪರಿಣಾಮದ ಮಟ್ಟದಲ್ಲಿ ಗಾಂಧಿ, ಮಾರ್ಕ್ಸರವರ ಸಿದ್ಧಾಂತ, ಚಳುವಳಿಗಿಂತ ಲೋಹಿಯಾರ ಈ ಸಿದ್ಧಾಂತಗಳು ಮತ್ತು ಚಳುವಳಿಗಳು ತುಂಬಾ ಕಡಿಮೆಯಿದ್ದರೂ ಸಮಾಜವನ್ನು, ವ್ಯವಸ್ಥೆಯನ್ನು ಮುಟ್ಟುವ ಮಟ್ಟದಲ್ಲಿ ಪ್ರಭಾವಶಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಮನೋಹರ ಲೋಹಿಯಾ ಅವರು ದೇಶದ ಬುದ್ಧಿಜೀವಿ ರಾಜಕಾರಣಿಯಾಗಿ ತೀವ್ರವಾದ ಬದಲಾವಣೆಗಳ ಹರಿಕಾರರಾಗಿದ್ದರು. ಸೋಷಿಯಲಿಸ್ಟ್ ಚಿಂತಕರಾಗಿದ್ದ ಲೋಹಿಯಾರವರು ಸಿದ್ಧ ಮಾದರಿಯ ರಾಜಕೀಯ ವ್ಯವಸ್ಥೆಯ ವಿರುದ್ಧ ಸೆಡ್ಡು ಹೊಡೆದು ಅದನ್ನು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಸಾಮಾಜಿಕ ಆಶಯಗಳೇ ಪ್ರಧಾನವಾಗಿದ್ದ ರಾಜಕೀಯ ಚಿಂತನೆಗಳನ್ನು ಜಾರಿಗೆ ತಂದರು. ಸಾರ್ವಜನಿಕ ಖರ್ಚುವೆಚ್ಚಗಳಿಂದ ಹಿಡಿದು ಮಾನವ ಹಕ್ಕುಗಳವರೆಗೂ, ಹಿಂಸಾತ್ಮಕ ಸಾಮಾಜಿಕ ವಾತಾವರಣದ ವಿರುದ್ಧದಿಂದ ಹಿಡಿದು ವಿದೇಶಾಂಗ ನೀತಿಗಳವರೆಗೂ ತಮ್ಮ ಸಿದ್ಧಾಂತಗಳನ್ನು ರೂಪಿಸಿದರು. ಇದಕ್ಕಾಗಿ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಜೀವ ಪ್ರಜೆಗಳನ್ನು ಒಳಗೊಳ್ಳುವಂತಹ ರಾಜಕೀಯ ವಾತಾವರಣಕ್ಕಾಗಿ ಶ್ರಮಿಸಿದರು.

ಆದರೆ ರಾಮಮನೋಹರ ಲೋಹಿಯಾ ಅವರನ್ನು ಇತರೇ ಹಿಂದುಳಿದ ಜಾತಿಗಳ ಸಾಮಾಜಿಕ ಮತ್ತು ರಾಜಕಾರಣವು ಪ್ರವರ್ಧಮಾನಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದರ ಅದ್ಯಪ್ರವರ್ತಕರಾಗಿದ್ದರು ಎಂದೇ ವಿಶ್ಲೇಷಿಸಲಾಗುತ್ತದೆ. ಹಿಂದುಳಿದ ಜಾತಿಗಳು ಮತ್ತು “ಸಾಮಾಜಿಕ” ಐಡೆಂಟಿಟಿಯನ್ನು ಮುಖ್ಯ ಧಾರೆಯಲ್ಲಿ ಚರ್ಚೆಗೆ ಬರುವಂತೆ ಈ ಓಬಿಸಿ ರಾಜಕಾರಣವನ್ನು ರೂಪಿಸಲಾಗಿತ್ತು. ಆಗಾಗ ರಾಮಮನೋಹರ ಲೋಹಿಯಾ ಅವರು “ಆಮ್ ಆದ್ಮಿ” ಪದವನ್ನು, ಅದರ ಅಗತ್ಯತೆಯನ್ನು ಪ್ರಯೋಗಿಸುತ್ತಿದ್ದರೂ ಅದು ಈ “ಓಬಿಸಿ” ರಾಜಕಾರಣದ ಮುಂದೆ ಆ ನುಡಿಕಟ್ಟು ಮತ್ತು ಐಡೆಂಟಿಟಿ ಪ್ರಾಮುಖ್ಯತೆ ಪಡೆದುಕೊಳ್ಳಲಿಲ್ಲ. ಅಂದರೆ ಅಂದಿನ ಕಾಲಘಟ್ಟದಲ್ಲಿ, ಅಂದಿನ ಸಂದರ್ಭಕ್ಕೆ ಈ “ಆಮ್ ಆದ್ಮಿ” ನುಡಿಕಟ್ಟು ಪ್ರಸ್ತುತವಾಗಿರಲಿಲ್ಲವೇ? ಸಾಮಾಜಿಕ ನ್ಯಾಯದ ಚಿಂತನೆಗಳಲ್ಲಿ ಸ್ಥಾನ ಪಡೆದುಕೊಳ್ಳದೆ ಕೇವಲ ಜನಪ್ರಿಯ ಪದಪುಂಜವಾಗಿತ್ತೇ??

ಮುಂದಿನ ದಶಕಗಳಲ್ಲಿ ರಾಮಮನೋಹರ ಲೋಹಿಯಾ ಅವರು ಬಳಕೆಗೆ ತಂದ, ಪ್ರತಿಪಾದಿಸಿದ “ಸಂಯುಕ್ತ ಸರ್ಕಾರ”ದ ಕಲ್ಪನೆಗಳು, ಆಶಯಗಳು ಪ್ರಾಮುಖ್ಯತೆ ಪಡೆದುಕೊಳ್ಳತೊಡಗಿತು. ಇದರಲ್ಲಿ “ಓಬಿಸಿ” ಮೆಜಾರಿಟಿಯಲ್ಲಿತ್ತು. Advani-Rath-Yatraತೊಂಬತ್ತರ ದಶಕದ ವೇಳೆಗೆ ಅಡ್ವಾನಿಯವರ ರಥಯಾತ್ರೆ ತೀವ್ರವಾಗಿದ್ದಂತಹ ಸಂದರ್ಭದಲ್ಲಿ ಪರ್ಯಾಯವಾಗಿ “ಓಬಿಸಿ” ರಾಜಕಾರಣ ತನ್ನ ಪ್ರಭಾವನ್ನು ಹೆಚ್ಚಿಸಕೊಳ್ಳತೊಡಗಿತು. ಈ “ಕಮಂಡಲ”ಕ್ಕೆ ಪರ್ಯಾಯವಾಗಿ “ಮಂಡಲ್” ರಾಜಕಾರಣ ಪ್ರವರ್ಧಮಾನಕ್ಕೆ ಬರತೊಡಗಿತು. ಕಾಲಕಳೆದಂತೆ ಇದು ಮತ್ತಷ್ಟು ಸಂಕೀರ್ಣವಾಗತೊಡಗಿತು. ಇಂದಿನ ಆಮ್ ಆದ್ಮಿ ಪಕ್ಷದಂತೆಯೇ ಅಂದಿನ ದಿನಗಳಲ್ಲಿ ಈ ಜನಪ್ರಿಯ rhetoric ಬಳಸಿಕೊಂಡು ಎನ್.ಟಿ.ರಾಮರಾವ್ ನೇತೃತ್ವದ ತೆಲುಗುದೇಶಂ ಪಕ್ಷ ಅಧಿಕಾರಕ್ಕೆ ಬಂದಿತು.ಇದೇ ಬಗೆಯಲ್ಲಿಯೇ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸಹ ಉದಾಹರಿಸಬಹುದು.

ದೆಹಲಿ ರಾಜ್ಯದ ಎರಡು ವಿಭಿನ್ನ ಮಾದರಿಯ ಧ್ರುವಗಳ ನಡುವೆ ಹುಟ್ಟಿಕೊಂಡ “ಆಮ್ ಆದ್ಮಿ ಪಕ್ಷ”ವು ಜನತೆಯ ಸಿಟ್ಟು ಮತ್ತು ಅಸಹಾಯಕತೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಆರಂಭದಲ್ಲಿ underdog ಪ್ರಾದೇಶಿಕ ಪಕ್ಷವಾಗಿಯೇ ಗುರುತಿಸಿಕೊಂಡಿದ್ದ “ಆಮ್ ಆದ್ಮಿ” ಪಕ್ಷಕ್ಕೆ ಇಂದಿನ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಧಿಢೀರನೆ ಮಾಧ್ಯಮಗಳ ಪ್ರಚಾರ ದೊರಕಿಬಿಟ್ಟಿತು. ವಿವಿಧ ಬೇಡಿಕೆಗಳು ಮತ್ತು ವಿವಿಧ ವಿಚಾರಗಳ ನಡುವೆ ಒಂದು ಸಮಾನ ಕೊಂಡಿಯನ್ನು ನಿರ್ಮಿಸಿದ್ದು ಈ “ಆಮ್ ಆದ್ಮಿ ಪಕ್ಷ”. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಬೆಲೆಯೇರಿಕೆ, ತುಟ್ಟಿಯಾದ ವಿದ್ಯುತ್ ಬಿಲ್ಲುಗಳು, AAP-manifesto-PTIಅತ್ಯಾಚಾರ ಮತ್ತು ಸೆಕ್ಸ್ ಎಲ್ಲವನ್ನೂ ಪೋಣಿಸಿ ಒಂದೇ ನೆಲೆಯಲ್ಲಿ ಚರ್ಚೆಗೆ ತರುವಲ್ಲಿ ಆಮ್ ಆದ್ಮಿ ಪಕ್ಷವು ಯಶಸ್ವಿಯಾಯಿತು

ಜನಪ್ರಿಯ ಸಿದ್ಧಾಂತವನ್ನು ಒಳಗೊಳ್ಳುತ್ತಲೇ ಮಧ್ಯಮವರ್ಗಗಳ ಸೆಂಟಿಮೆಂಟಲ್ ನೆಲೆಯಲ್ಲಿ ಇತರೇ ಬಲಾಢ್ಯ ಪಕ್ಷಗಳ ಓಲೈಸುವಿಕೆ ರಾಜಕಾರಣವನ್ನು ಟೀಕಿಸುತ್ತಾ ತನ್ನ ಪ್ರಸ್ತುತತೆಯನ್ನು ಗಟ್ಟಿಗಳಿಸಿಕೊಂಡಿದ್ದು ಆಮ್ ಆದ್ಮಿ ಪಕ್ಷದ ಗೆಲುವಿಗೆ ಮೂಲಭೂತ ಕಾರಣ. ಅಲ್ಲದೆ ಅಧಿಕಾರದಲ್ಲಿರುವ ಪಕ್ಷಗಳನ್ನು ಶತೃಗಳನ್ನಾಗಿ ಬಿಂಬಿಸುವಲ್ಲಿ ಮತ್ತು ಅದನ್ನು ಮಧ್ಯಮವರ್ಗಗಳಿಗೆ ನಂಬಿಸುವಲ್ಲಿಯೂ ಆಮ್ ಆದ್ಮಿ ಪಕ್ಷ ಯಶಸ್ವಿಯಾಯಿತು.

ಅದರೆ ಕೆಲವು ರಾಜಕೀಯ ವಿಶ್ಲೇಷಕರ ಪ್ರಕಾರ ಸಾಮಾಜಿಕ ನ್ಯಾಯ ಮತ್ತು ಸಮತಾವಾದದೊಂದಿಗೆ ಇಂದಿನ ಜನಪ್ರಿಯ ನಂಬಿಕೆಯಾದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಮುಖಾಮುಖಿಯಾಗಿಸುವುದರಲ್ಲಿ ಯಶಸ್ವಿಯಾಗಿರುವ ಮಧ್ಯಮವರ್ಗಗಳಿಗೆ ರಾಜಕೀಯವಾಗಿ ಅಂಬೆಗಾಲಿಡುತ್ತಿರುವ ಆಮ್ ಆದ್ಮಿ ಪಕ್ಷವು ಹೊಸ ಬೆಳಕಾಗಿದ್ದು ಸುಳ್ಳಲ್ಲ. ಆದರೆ ಹಿಂದುತ್ವದ ರಾಜಕಾರಣ ತಲೆಯೆತ್ತುತ್ತಿರುವಂತಹ ಇಂದಿನ ದಿನಗಳಲ್ಲಿ, ಕೋಮುವಾದದ ಗಲಭೆಗಳು ಮರುಕಳುಸಿತ್ತಿರುವಂತಹ ಇಂದಿನ ದಿನಗಳಲ್ಲಿ ಈ ಆಮ್ ಆದ್ಮಿ ಪಕ್ಷವು ಐಡೆಂಟಿಟಿ ರಾಜಕಾರಣಕ್ಕೆ ಅಂತ್ಯ ಹಾಡಿದೆ ಎಂಬಂತಹ ಚಿಂತನೆಗಳು ಇಂದು ಚರ್ಚಾರ್ಹವಾಗಿವೆ.

ಆದರೆ ರಾಜಕೀಯ ಅಧಿಕಾರವೇ ಈ ಆಮ್ ಆದ್ಮಿ ಪಕ್ಷಕ್ಕೆ ಐಡೆಂಟಿಟಿ ಕ್ರೈಸಿಸ್ ತಂದೊಡ್ಡಲಿದೆ. ತನ್ನ ಮ್ಯಾನಿಫೆಸ್ಟೋದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುವಲ್ಲಿ ಈ ಪಕ್ಷವು ಪಟ್ಟಭಧ್ರ ಹಿತಾಸಕ್ತಿಗಳನ್ನು, ಅಧಿಕಾರದ ಲಾಬಿಗಳನ್ನು ಹೇಗೆ ಪಳಗಿಸುತ್ತದೆ ಎಂಬುದಕ್ಕೆ ಇಲ್ಲಿ ಉತ್ತರವಿಲ್ಲ.

ಆದರೆ ಪ್ರಜಾಪ್ರಭುತ್ವದ ದೇಶವೊಂದರ ಪ್ರಜೆಗಳು ಯಾವುದೇ ಜಾತಿಗೆ ಸೇರಿದವರಲ್ಲ ಅಥವಾ ಯಾವುದೇ ವರ್ಗಗಳಲ್ಲ, arvind-kejriwal-campaigningಬದಲಾಗಿ ತಳಮಳಗಳನ್ನು, ಸಿಟ್ಟನ್ನು ವ್ಯಕ್ತಪಡಿಸುವ ಸಾಮಾನ್ಯ ನಾಗರಿಕರು ಎನ್ನುವ ಸಿದ್ಧಾಂತವನ್ನು ಹೊಂದಿರುವ ಈ ಆಮ್ ಆದ್ಮಿ ಪಕ್ಷವನ್ನು ನಾವು ಅಮೇರಿಕಾ ದೇಶದ “ಟೀ ಪಾರ್ಟಿ”ಗೆ ಹೋಲಿಸಬಹುದು. ಅಷ್ಟೇಕೆ ಈ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಹಲವಾರು ಬಾರಿ ಅಮೇರಿಕ ಮಾದರಿಯ ಡೆಮಾಕ್ರಸಿಯನ್ನು ಓಲೈಸಿರುವುದರಿಂದ ಸಾಮಾನ್ಯ ಜನರ ಕುಂದು ಕೊರತೆಗಳಿಗಾಗಿಯೇ ಹೋರಾಡಲು ಹುಟ್ಟಿಕೊಂಡಿರುವ ಅಲ್ಲಿನ ಟೀ ಪಾರ್ಟಿಯೊಂದಿಗೆ ಈ ಆಮ್ ಆದ್ಮಿ ಪಕ್ಷಕ್ಕೆ ಹಲವಾರು ಸಾಮ್ಯತೆಗಳಿವೆ. ಈ ಈ ಆಮ್ ಆದ್ಮಿ ಪಕ್ಷವು ಈ ಹೋರಾಟಕ್ಕಾಗಿ ಗಾಂಧಿ ಟೋಪಿಯನ್ನು ಸಾಂಕೇತಿಕವಾಗಿ ಬಳಸಿದಂತೆಯೇ ಅಲ್ಲಿನ ಟೀ ಪಾರ್ಟಿಯು ಕಲೋನಿಯಲ್ ವಿರೋಧಿ ಸಂಕೇತವನ್ನು ಬಳಸಿಕೊಂಡಿತ್ತು.

ಕಡೆಗೆ ವಿಭಿನ್ನ ಧ್ರುವಗಳಲ್ಲಿರುವ ರಾಜಕೀಯ ವ್ಯವಸ್ಥೆಯನ್ನು ಒಂದೇ ಪಾತಳಿಯಲ್ಲಿ ಪೋಣಿಸುವುದು ಈ ಆಮ್ ಆದ್ಮಿ ಪಕ್ಷದ ಸಾಧನೆ ಅಲ್ಲವೇ ಅಲ್ಲ. ತನ್ನ ಪಕ್ಷದ ಹೆಸರನ್ನು ರಾಜಕೀಯಕ್ಕಾಗಿ ಬಳಸಿಕೊಂಡಿರುವುದರಲ್ಲಿ ಮಾತ್ರ ಇದರ ಸಾಧನೆ ಇರುವುದು. ಆದರೆ ಸಧ್ಯಕ್ಕಂತೂ ಇದು ಯಾವುದೇ ಹೂರಣವಿಲ್ಲದ ಹೆಸರಾಗಿ ಉಳಿದಿದೆ

( ಕೃಪೆ: ಎಕನಾಮಿಕ್ಸ್ ಟೈಮ್ಸ್, 18 ಡಿಸೆಂಬರ್, 2013)

2 thoughts on “ಆಮ್ ಆದ್ಮಿ ಪಾರ್ಟಿ – ಭಾರತದ ಟೀ ಪಾರ್ಟಿ ಮೂವ್‌ಮೆಂಟ್

  1. Ananda Prasad

    ಆಂಧ್ರದಲ್ಲಿ ಎನ್ಟಿಆರ್ ನೇತೃತ್ವದ ತೆಲುಗು ದೇಶಂ ತೆಲುಗರ ಆತ್ಮಾಭಿಮಾನವನ್ನು ಎತ್ತಿ ಹಿಡಿಯುವ ಘೋಷಣೆ ಹೊಂದಿತ್ತು ಮಾತ್ರವಲ್ಲದೆ ಎನ್ಟಿಆರ್ ಪೌರಾಣಿಕ ಹಾಗೂ ಸಾಮಾಜಿಕ ಸಿನೆಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು. ಅಲ್ಲದೆ ಆಂಧ್ರದಲ್ಲಿ ಆಗ ಕಾಂಗ್ರೆಸ್ ಬಿಟ್ಟರೆ ಬಲವಾದ ಪ್ರತಿಪಕ್ಷಗಳು ಇರಲಿಲ್ಲ. ಇದು ತೆಲುಗುದೇಶಂ ಪಕ್ಷವು ಅಭೂತಪೂರ್ವ ಗೆಲುವು ಮೊದಲ ಪ್ರಯತ್ನದಲ್ಲೇ ಸಾಧಿಸಲು ನೆರವು ನೀಡಿತು. ದೆಹಲಿಯಲ್ಲಿ ಹಾಗಾಗಿಲ್ಲ, ಅಲ್ಲಿ ಎರಡು ಬಲಿಷ್ಠ ರಾಷ್ಟ್ರೀಯ ಪಕ್ಷಗಳು ಮೊದಲೇ ಇದ್ದವು. ಯಾವುದೇ ಸಿನೆಮಾ ನಟನ ಜನಪ್ರಿಯತೆಯ ಇಮೇಜ್ ಇಲ್ಲದೆ ಕೇಜ್ರಿವಾಲ್ ನೇತೃತ್ವದ ಪಕ್ಷ ಯಶಸ್ಸು ಸಾಧಿಸಿದ್ದು ಮಹತ್ತರ ಬೆಳವಣಿಗೆಯೇ. ಪ್ರಾದೇಶಿಕ ಪಕ್ಷಗಳು ಜಾತಿ ಆಧಾರ ಹಾಗೂ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಸಮೀಕರಿಸಿ ಎರಡು ಬಲಿಷ್ಠ ಪಕ್ಷಗಳು ಈಗಾಗಲೇ ಇರುವಲ್ಲಿ ಗೆದ್ದದ್ದು ಇದೆ. ಉದಾಹರಣೆಗೆ ಮಾಯಾವತಿ ಅವರ ಬಿಎಸ್ಪಿ, ಮುಲಾಯಂ ಅವರ ಸಮಾಜವಾದಿ ಪಕ್ಷ ಇತ್ಯಾದಿ. ಆಮ್ ಆದ್ಮಿ ಪಕ್ಷ ಅಂಥ ಪ್ರಜಾಪ್ರಭುತ್ವಕ್ಕೆ ಕೊಡಲಿಯೇಟು ಹಾಕುವ ಜಾತಿ ಸಮೀಕರಣ, ಅಲ್ಪಸಂಖ್ಯಾತ ವೋಟ್ ಬ್ಯಾಂಕ್ ರಾಜಕಾರಣ ಮಾಡದೆಯೂ ಗೆದ್ದಿದೆ ಎಂಬುದು ಇಡೀ ಭಾರತಕ್ಕೆ ಹೊಸ ಸಂದೇಶ ನೀಡಬೇಕು.

    Reply
  2. Ananda Prasad

    ದೆಹಲಿ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧವಾಗಿ ಪಟ್ಟಭದ್ರ ಹಿತಾಸಕ್ತ ಬಲಿಷ್ಠ ಪಕ್ಷಗಳು ದೈತ್ಯ ಟಿವಿ ಮಾಧ್ಯಮಗಳ ಮೂಲಕ ಭಾರೀ ಅಪಪ್ರಚಾರ ಮಾಡಿದ್ದವು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಚುನಾವಣಾ ರ್ಯಾಲಿಗಳನ್ನುಹಿಂದಿ ಟಿವಿ ಮಾಧ್ಯಮಗಳು ನೇರ ಪ್ರಸಾರ ಮಾಡುತ್ತಿದ್ದವು ಆದರೆ ಆಮ್ ಆದ್ಮಿ ಪಕ್ಷದ ಒಂದೇ ಒಂದು ರ್ಯಾಲಿಯ ನ್ನು ನೇರಪ್ರಸಾರ ಮಾಡಿದ್ದು ಕಂಡುಬರಲಿಲ್ಲ. ಮಾಧ್ಯಮಗಳ ಇಂಥ ಮಲತಾಯಿ ಧೋರಣೆಯನ್ನು ಎದುರಿಸಿಯೂ ಆಮ್ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಿದೆ ಎಂಬುದು ಮೆಚ್ಚತಕ್ಕ ಅಂಶ. ಒಂದು ವೇಳೆ ಮಾಧ್ಯಮಗಳು ಮಲತಾಯಿ ಧೋರಣೆ ತೋರದೆ ಸಮಾನ ನ್ಯಾಯ ಒದಗಿಸಿದ್ದಿದ್ದರೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತಿತ್ತು. ಚುನಾವಣೆಯ ಹತ್ತಿರವಿರುವ ಕೊನೆಯ ದಿನಗಳಲ್ಲಿ ಅಣ್ಣಾ ಹಜಾರೆಯವರನ್ನು ಕೇಜ್ರಿವಾಲ್ ವಿರುದ್ಧ ಎತ್ತಿಕಟ್ಟಿ ಅಪಪ್ರಚಾರ ಮಾಡುವಲ್ಲಿಯೂ ಹಾಗೂ ನಕಲಿ ಕುಟುಕು ಕಾರ್ಯಾಚರಣೆಯಾ ವಿಡಿಯೋಗಳನ್ನು ದೈತ್ಯ ಟಿವಿ ಮಾಧ್ಯಮಗಳಲ್ಲಿ ತೋರಿಸಿ ಜನರನ್ನು ಗೊಂದಲಕ್ಕೆ ಕೆಡವುದರಲ್ಲಿಯೂ ಟಿವಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಿದವು. ದೆಹಲಿಯಲ್ಲಿ ಅತಂತ್ರ ವಿಧಾನಸಭೆ ರೂಪುಗೊಳ್ಳುವುದರಲ್ಲಿ ಮಾಧ್ಯಮಗಳ ಈ ಋಣಾತ್ಮಕ ಪ್ರಚಾರವೂ ಕೆಲಸ ಮಾಡಿದೆ. ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ಇಂಥ ಅಪಪ್ರಚಾರ ಮಾಡಿದ್ದರಿಂದ ಸತ್ಯ ಸಂಗತಿಯನ್ನು ಜನರಿಗೆ ತಿಳಿಸಿಕೊಡುವಲ್ಲಿ ಸೂಕ್ತ ಕಾಲಾವಕಾಶದ ಕೊರತೆಯೂ ಆಮ್ ಆದ್ಮಿ ಪಕ್ಷಕ್ಕೆ ಎದುರಾಯಿತು. ಆಮ್ ಆದ್ಮಿ ಪಕ್ಷ ಜನರಿಂದ ಸಂಗ್ರಹಿಸಿದ ೨೦ ಕೋಟಿ ರೂಪಾಯಿಗಳಲ್ಲಿ ಚುನಾವಣೆ ನಿರ್ವಹಿಸಿದೆ. ಅದೇ ವೇಳೆ ಎದುರಾಳಿ ಕಾಂಗ್ರೆಸ್ ಹಾಗೂ ಬಿಜೆಪಿ ಅಪಾರ ಪ್ರಮಾಣದ ಹಣ ವ್ಯಯಿಸಿವೆ. ಬಿಜೆಪಿ ಒಂದೊಂದು ಮೋದಿ ಚುನಾವಣಾ ರ್ಯಾಲಿಗೂ ಹತ್ತಿಪ್ಪತ್ತು ಕೋಟಿ ಹಣ ಚೆಲ್ಲುತ್ತಿತ್ತು. ಇಂಥ ಹಣಬಲ ದ ಅಹಂಕಾರದ ನಡುವೆಯೂ ಆಮ್ ಆದ್ಮಿ ಪಕ್ಷ ೨೮ ಸ್ಥಾನ ಗೆದ್ದದ್ದು ಮಹತ್ವದ ಸಾಧನೆಯೇ ಸರಿ.

    Reply

Leave a Reply

Your email address will not be published. Required fields are marked *