Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ವೀರಪ್ಪನ್ ಅಟ್ಟಹಾಸ ಮತ್ತು ಎಎಂಆರ್ ರಮೇಶ್

-ಬಸವರಾಜು

ವೀರಪ್ಪನ್… ಹೆಸರೇ ವಿಚಿತ್ರ. ವ್ಯಕ್ತಿಯೂ ವಿಚಿತ್ರ. ನಾವು ನಾಡಿನಲ್ಲಿರಲು ಬಯಸಿದರೆ, Veerappanಈತ ಕಾಡಿನಲ್ಲಿ ಕಣ್ಮರೆಯಾಗಲು ಕಾತರಿಸುತ್ತಿದ್ದ. ಕರ್ನಾಟಕ, ತಮಿಳುನಾಡು, ಕೇರಳದ ದಟ್ಟ ಕಾಡುಗಳನ್ನೇ ತನ್ನ ಕಾರಾಸ್ಥಾನವನ್ನಾಗಿಸಿಕೊಂಡಿದ್ದ. ಕೋಟ್ಯಂತರ ರೂಪಾಯಿಗಳ ಕಾಡಿನ ಸಂಪತ್ತನ್ನು ಲೂಟಿ ಮಾಡುತ್ತಿದ್ದ. ತನ್ನ ದಾರಿಗೆ ಅಡ್ಡ ಬಂದ 184ಕ್ಕೂ ಹೆಚ್ಚು ಜನರನ್ನು ಕ್ರೂರವಾಗಿ ಕೊಂದಿದ್ದ. ಕಾಯ್ದೆ, ಕಾನೂನು, ಕಟ್ಟುಪಾಡುಗಳು ನನಗಲ್ಲ ಎನ್ನುತ್ತಿದ್ದ. ತಲೆಗೆ ಐದು ಕೋಟಿ ಬಹುಮಾನ ಘೋಷಿಸುವಷ್ಟು ಭಯಂಕರ ವ್ಯಕ್ತಿಯಾಗಿ ಬೆಳೆದಿದ್ದ. ಕಾಡಿನ ಅಂಚಿನಲ್ಲಿ ವಾಸಿಸುವ ಜನಗಳಿಗೆ ರಾಬಿನ್ ವುಡ್ ಥರ ಕಾಣುತ್ತಿದ್ದ. ತಮಿಳು ಭಾಷೆ ಬಲ್ಲವನಾಗಿದ್ದರಿಂದ ತಮಿಳರಿಗೆ ಹೀರೋ, ಕನ್ನಡಿಗರಿಗೆ ವಿಲನ್ ಆಗಿದ್ದ. ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿ, 109 ದಿನ ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದ. ಹಿಡಿಯಲು ಹೋದ ಪೊಲೀಸಿನವರ ಪಾಲಿಗೆ ದುಃಸ್ವಪ್ನವಾಗಿದ್ದ. 20 ವರ್ಷಗಳ ಕಾಲ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ತಲೆನೋವಾಗಿದ್ದ. ನಕ್ಕಿರನ್ ಗೋಪಾಲನ್, ನೆಡುಮಾರನ್ ಗಳಿಗೆ ಮಿತ್ರನಾಗಿದ್ದ. ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಅನುಕೂಲಕ್ಕೊದಗುವ ಆಪ್ತನಾಗಿದ್ದ. ಪತ್ರಕರ್ತರ ಸ್ಟೋರಿಗೆ ಸಾಲಿಡ್ ಸ್ಪಫ್ ಆಗಿದ್ದ. 52 ವರ್ಷ ಬದುಕಿದ್ದು, ಅಕ್ಟೋಬರ್ 18, 2004ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಇಂತಹ ವೀರಪ್ಪನ್‍ನನ್ನು ಖುದ್ದಾಗಿ ಕಂಡವರು ಎಷ್ಟು ಜನ?

ಈ ಕಾರಣಕ್ಕಾಗಿಯೇ ವೀರಪ್ಪನ್ ಎಂದರೆ ಕುತೂಹಲದ ಕಡಲು. ಇದನ್ನು ಅರಿತಿರುವ ನಿರ್ದೇಶಕ ಎಎಂಆರ್ ರಮೇಶ್, attahasa-rameshವೀರಪ್ಪನ್‌ನನ್ನು ಮುಖ್ಯ ಭೂಮಿಕೆಯಲ್ಲಿಟ್ಟು `ಅಟ್ಟಹಾಸ’ ಎಂಬ ಚಿತ್ರ ನಿರ್ಮಿಸಿದ್ದಾರೆ. ಸುಮಾರು ಹನ್ನೆರಡು ವರ್ಷಗಳ ಕಾಲ, ಇನ್ನೂರೈವತ್ತಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿ ವೀರಪ್ಪನ್ ಬಗೆಗಿನ ಮಾಹಿತಿಯನ್ನು ಕಲೆಹಾಕಿದ್ದಾರೆ. ವೀರಪ್ಪನ್ ಜೊತೆಗಿದ್ದವರನ್ನೇ ಚಿತ್ರಕ್ಕೆ ದುಡಿಸಿಕೊಂಡು ಅಥೆಂಟಿಸಿಟಿ ತಂದಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಕೆಂಪಯ್ಯ ಮತ್ತು ಗೋಪಾಲ್ ಹೊಸೂರ್ ಅವರ ಬಳಿಯಿದ್ದ ಮಹತ್ವಪೂರ್ಣ ಮಾಹಿತಿಯನ್ನು ಪಡೆದು ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ವೀರಪ್ಪನ್ ಓಡಾಡಿದ ಜಾಗಗಳಲ್ಲೇ ಚಿತ್ರೀಕರಿಸಿ, ಚಿತ್ರಕ್ಕೆ ಜೀವ ತುಂಬಿದ್ದಾರೆ. ವೀರಪ್ಪನ್ ಪಾತ್ರಕ್ಕೆ ಕನ್ನಡದ ಕಿಶೋರ್‌ರನ್ನು ಆಯ್ಕೆ ಮಾಡಿದ್ದಾರೆ. ಒಂಟಿಗಣ್ಣಿನ ಹಂತಕ ಶಿವರಾಸನ್ ಕುರಿತ `ಸೈನೈಡ್’ ಚಿತ್ರದ ನಂತರ ನರಹಂತಕ ವೀರಪ್ಪನ್ ಕುರಿತ `ಅಟ್ಟಹಾಸ’ ಚಿತ್ರಕ್ಕೆ ಬರೋಬ್ಬರಿ ಏಳು ವರ್ಷಗಳನ್ನು ತೆಗೆದುಕೊಂಡಿದ್ದಾರೆ.

ವೀರಪ್ಪನ್ ಎಂದಮೇಲೆ ವಿವಾದಗಳಿಲ್ಲದಿದ್ದರೆ ಹೇಗೆ?

“ನನ್ನ ಪತಿಯನ್ನು ವಿಲನ್ ಮಾಡಿ, ರಾಜಕುಮಾರ್ ಅವರನ್ನು ಹೀರೋ ಮಾಡಲಾಗಿದೆ, ನನ್ನ ಮತ್ತು attahasa-veerappan-4ನನ್ನ ಮಕ್ಕಳ ಭವಿಷ್ಯದ ಬದುಕಿಗೆ ಈ ಚಿತ್ರ ತೊಂದರೆ ಕೊಡುತ್ತದೆ” ಎಂದು ತಗಾದೆ ತೆಗೆದಿದ್ದರು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ. “ವೀರಪ್ಪನ್‌ಗಿದ್ದ ಒಬ್ಬನೇ ಒಬ್ಬ ನಂಬಿಕಸ್ಥ ಸ್ನೇಹಿತ ನಾನು, ಚಿತ್ರದಲ್ಲಿ ನನ್ನ ಪಾತ್ರವೇನು?” ಎಂದಿದ್ದರು ನಕ್ಕಿರನ್ ಗೋಪಾಲನ್. “ನನ್ನ ಕತೆ ಕದ್ದು ಚಿತ್ರ ಮಾಡಲಾಗಿದೆ” ಎಂದಿದ್ದರು ಮೈಸೂರಿನ ಪತ್ರಕರ್ತ ಗುರುರಾಜ್. “ಅಪ್ಪಾಜಿಯನ್ನು ಚಿತ್ರದಲ್ಲಿ ಹೇಗೆ ಬಳಸಿಕೊಂಡಿದ್ದೀರಿ” ಎಂದಿತ್ತು ಡಾ. ರಾಜ್ ಕುಟುಂಬ.

30 ವರ್ಷಗಳಿಂದ ಡಾ. ರಾಜ್ ಅಭಿಮಾನಿ ಸಂಘದಲ್ಲಿರುವ, ಗೋಕಾಕ್ ಚಳುವಳಿಯಲ್ಲಿ ಗುರುತಿಸಿಕೊಂಡಿರುವ, ಮದ್ರಾಸ್ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಿಂದ ಚಿನ್ನದ ಪದಕ ಪಡೆದಿರುವ, `ಸೈನೈಡ್’, `ಪೊಲೀಸ್ ಕ್ವಾರ್ಟರ್ಸ್’ಗಳಂತಹ ಭಿನ್ನ ಆಯಾಮದ ಚಿತ್ರಗಳನ್ನು ಮಾಡಿ ಹೆಸರು ಮಾಡಿರುವ, ಪ್ರತಿಭಾವಂತ ನಿರ್ದೇಶಕ ಎಎಂಆರ್ ರಮೇಶ್, ಈ ಎಲ್ಲ ಪ್ರಶ್ನೆಗಳಿಗೆ, ಗೊಂದಲಗಳಿಗೆ, ವಿವಾದಗಳಿಗೆ ನೇರವಾಗಿ ಉತ್ತರಿಸಿದ್ದಾರೆ, ಓದಿ.

“ನನ್ನ `ಅಟ್ಟಹಾಸ’ ವೀರಪ್ಪನ್ ಬದುಕನ್ನು ಕುರಿತ ಚಿತ್ರ. ಇದು ರೆಗ್ಯುಲರ್ ಫಾರ್ಮ್ಯಾಟ್ ಚಿತ್ರವಲ್ಲ. attahasa-veerappan-2ಲವ್, ಸಾಂಗ್, ಡಾನ್ಸು, ರೊಮಾನ್ಸ್, ಸೆಂಟಿಮೆಂಟ್ಸ್, ಕಾಮಿಡಿ ಖಂಡಿತ ಇಲ್ಲಿಲ್ಲ.

“ವೀರಪ್ಪನ್‌ನನ್ನು ನಟೋರಿಯಸ್ ಅಂತಾರೆ, ಆದರೆ ಆತನಿಂದ ಡೈರೆಕ್ಟಾಗಿ ಯಾರಿಗೂ ತೊಂದರೆಯಾಗಿಲ್ಲ. ಪೊಲೀಸಿನವರಿಗೆ ತೊಂದರೆಯಾಗಿದೆ, ನಿಜ. ಆದರೆ ವನ್ನಿಯಾರ್ ಜನರ ಪಾಲಿಗೆ ಆತ ದೇವರ ಸಮ. ಆ ಊರಿಗೆ ಕುಡಿಯುವ ನೀರು ಬಂದಿದ್ದೆ ವೀರಪ್ಪನ್‌ನಿಂದ. ಆ ಜನಗಳಲ್ಲಿ, ಕಾಡಿನ ಸ್ವತ್ತನ್ನು ಲೂಟಿ ಮಾಡುತ್ತಿದ್ದಾನೆ, ನಮ್ಮದಲ್ಲವಲ್ಲ ಎಂಬ ಭಾವನೆ ಇದೆ. ಕಾಡು ಯಾರ ಸ್ವತ್ತು, ಅದನ್ನು ಕಾಪಾಡುವ ಜವಾಬ್ದಾರಿ ಯಾರದು? ನನ್ನ ಚಿತ್ರದಲ್ಲಿ ಇದೂ ಇದೆ.

“ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅಪಹರಣವಾದಾಗಲೇ ನಮಗೆ ಈತ ಡೇಂಜರಸ್ ಅನ್ನಿಸಿದ್ದು. ಅಲ್ಲಿಯವರೆಗೆ ಎಷ್ಟು ಪೊಲೀಸ್ ಅಧಿಕಾರಿಗಳನ್ನ, ಎಂಥೆಂಥವರನ್ನ ಕೊಂದಿದ್ದ? ರಾಜ್ ಅಪಹರಣವಾದಾಗ ಫಸ್ಟ್ ಟೈಮ್ ಕಾಡಿಗೆ ಹೋದವನೆ ನಾನು. ನೆಡುಮಾರನ್, ಕೊಳತ್ತೂರು ಮಣಿಯನ್ನು ಮೊದಲಿಗೆ ಭೇಟಿ ಮಾಡಿದವನೂ ನಾನೆ. ಅಲ್ಲಿಂದಲೇ ನನಗೆ ವೀರಪ್ಪನ್ ಬಗೆಗೆ ಆಸಕ್ತಿ ಬೆಳೆಯುತ್ತಾ ಹೋಯಿತು. ಅವನ ವಿವರಗಳ ಹುಡುಕಾಟಕ್ಕಾಗಿ 12 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವನನ್ನು ಬಲ್ಲ 200 ಜನರನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. attahasa-veerappan-1ರಾಜ್ ಅಪಹರಣ ಕಾರ್ಯದಲ್ಲಿ ಭಾಗಿಯಾಗಿದ್ದ ವೀರಪ್ಪನ್ ಬಂಟರಾದ ಮುಗಿಲನ್, ಪೆರುಮಾಳ್, ಸೆಲ್ವಂ ಹಾಗೂ ಕಾಡಿನಿಂದ ತಪ್ಪಿಸಿಕೊಂಡು ಬಂದು ಭಯಾತಂಕ ಸೃಷ್ಟಿಸಿದ್ದ ನಾಗಪ್ಪ ಮಾರಡಗಿ ಅವರನ್ನೇ ಚಿತ್ರದೊಳಗೆ ಪಾತ್ರಧಾರಿಗಳನ್ನಾಗಿ ಬಳಸಿಕೊಂಡಿದ್ದೇನೆ. ರಾಜ್ ಅಪಹರಣದ ಭಾಗ ನನಗಿಷ್ಟವಾದ್ದು. ಸುರೇಶ್ ಓಬೇರಾಯ್ ಅಣ್ಣಾವ್ರ ಪಾತ್ರಕ್ಕೆ ಜೀವ ತುಂಬಿದ್ದಾರೆ.

“ವೀರಪ್ಪನ್ ಚಿತ್ರ ಮೂರು ಭಾಷೆಗಳಲ್ಲಿ- ಕನ್ನಡ, ತಮಿಳು ಮತ್ತು ತೆಲುಗುಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮತ್ತು ತಮಿಳು ಭಾಷೆಗಾಗಿ ಬೇರೆ ಬೇರೆಯಾಗಿ ಚಿತ್ರೀಕರಿಸಲಾಗಿದೆ. ತಮಿಳಿನ ಚಿತ್ರವನ್ನು ತೆಲುಗಿಗೆ ಡಬ್ ಮಾಡಲಾಗಿದೆ. ಹಾಗೆಯೇ ತಮಿಳು-ತೆಲುಗು ಭಾಷೆಗಳ ಚಿತ್ರಗಳಲ್ಲಿ ಹಣ ಹೂಡಿರುವ ಹಂಚಿಕೆದಾರರಿಗಾಗಿ ಫಾಸ್ಟ್ ಟ್ರಾಕ್ ನಲ್ಲಿ, ಕಮರ್ಷಿಯಲ್ಲಾಗಿ ಯೋಚಿಸಿ, ಚಿತ್ರದ ಅವಧಿಯನ್ನು 2 ಗಂಟೆ 5 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಆದರೆ ಕನ್ನಡದ `ಅಟ್ಟಹಾಸ’ ಚಿತ್ರ ಪೂರ್ತಿ ನನ್ನದು. 2 ಗಂಟೆ 45 ನಿಮಿಷದ ಚಿತ್ರ ಖಂಡಿತ ನಿಮಗಿಷ್ಟವಾಗುತ್ತದೆ, ಆ ಬಗ್ಗೆ ನನಗೆ ವಿಶ್ವಾಸವಿದೆ.

“ನನಗೆ ಚಿತ್ರವನ್ನು ಕಾಂಟ್ರೋವರ್ಸಿ ಮಾಡ್ಲಿಕ್ಕೆ ಇಷ್ಟವಿಲ್ಲ. ಹಾಗೆ ಕಾಂಟ್ರೋವರ್ಸಿ ಮಾಡೋರು ಟಿವಿ ಸ್ಟುಡಿಯೋಗಳಲ್ಲಿ ಕುಳಿತಿರುತ್ತಾರೆ, attahasa-veerappan-4ಪ್ರಚಾರದ ಮೂಲಕ ಚಿತ್ರವನ್ನು ಗೆಲ್ಲಿಸಲು ಹವಣಿಸುತ್ತಿರುತ್ತಾರೆ. ನಾನು ಆ ಥರದ ವ್ಯಕ್ತಿಯಲ್ಲ, ನಾನೇ ಬೇರೆ ನನ್ನ ಸ್ಟೈಲೇ ಬೇರೆ. ನನ್ನ ಈ ಹಿಂದಿನ ಚಿತ್ರಗಳನ್ನು ನೋಡಿದರೆ ಅದು ನಿಮಗರ್ಥವಾಗಬಹುದು. ನನ್ನ ಚಿತ್ರಕ್ಕೆ ಅಂತಹ ಯಾವ ಪ್ರಚಾರವೂ ಬೇಕಿಲ್ಲ. ಚಿತ್ರ, ಅದರ ತಾಖತ್ತಿನ ಮೇಲೇ ನಿಲ್ಲಬೇಕು, ನಿಲ್ಲುತ್ತೆ.

“ಇನ್ನು ಮುತ್ತುಲಕ್ಷ್ಮಿ… ವೀರಪ್ಪನ್ ಆಕೆಗೆ ಪತಿ ಇರಬಹುದು. ಆದರೆ ವೀರಪ್ಪನ್ ಯಾರ ಸ್ವತ್ತೂ ಅಲ್ಲ. ಕೋರ್ಟಿಗೆ ಹೋಗಿದ್ದರು, ಬೇರೆಯವರ ಕಡೆಯಿಂದ ದುಡ್ಡಿಗೆ ಡಿಮ್ಯಾಂಡ್ ಇಟ್ಟಿದ್ದರು. ಈಗ ಅದೆಲ್ಲ ಕ್ಲಿಯರ್ ಆಗಿದೆ. ಅದೇ ರೀತಿ ನಕ್ಕಿರನ್ ಗೋಪಾಲನ್ ಕೂಡ ಕೋರ್ಟಿಗೆ ಹೋಗಿದ್ದರು. ಚಿತ್ರ ನೋಡಿದ ಮೇಲೆ, ನನ್ನ ಬೆನ್ನು ತಟ್ಟಿ ಕಳಿಸಿದರು. ಅಣ್ಣಾವ್ರ ಮನೆಯವರದಂತೂ ವಿರೋಧವಿಲ್ಲ ಬಿಡಿ.

“ಕತೆ ನನ್ನದು ಅಂತ ಹೇಳೋರಿಗೆ ನನ್ನ ಪ್ರಶ್ನೆ ಏನಂದರೆ, ಬರೆಯುವವರಿಗೆ ಒಂದು ನ್ಯಾಯ, ಸಿನಿಮಾ ಮಾಡುವವರಿಗೇ ಒಂದು ನ್ಯಾಯಾನಾ? ವೀರಪ್ಪನ್ ಬಗ್ಗೆ ಸಾವಿರಾರು ಪತ್ರಕರ್ತರು ಬರೆದಿದ್ದಾರೆ. ಅವರೆಲ್ಲ ವೀರಪ್ಪನ್‌ನಿಂದ ಪರ್ಮಿಷನ್ ಪಡೆದಿದ್ದರಾ? ಅವರಿಗೆ ಕಂಡಂತೆ ಅವರು ಬರೆದಿದ್ದಾರೆ. ಹಾಗೆಯೇ ನನ್ನ ಚಿತ್ರದಲ್ಲಿ ನಾನು ಕಂಡ ವೀರಪ್ಪನ್‌ನನ್ನು ಚಿತ್ರಿಸಿದ್ದೇನೆ.

“ಚಿತ್ರದ ಪೂರ್ತಿ ಡಿಜಿ ವಿಜಯಕುಮಾರ್ ಇದಾರೆ. ಈ ಪಾತ್ರವನ್ನು ಅರ್ಜುನ್ ಸರ್ಜಾ ನಿರ್ವಹಿಸಿದ್ದಾರೆ. ವೀರಪ್ಪನ್ ಕಥಾನಕದಲ್ಲಿ ವಿಜಯಕುಮಾರ್ ಪಾತ್ರ ಎಷ್ಟಿತ್ತು ಎನ್ನುವುದು ಗೊತ್ತಿದೆಯಾ? ಸೇತುಕುಳಿ ಗೋವಿಂದನ್ ವೀರಪ್ಪನ್ ಬಂಟ- ಇದು ಎಲ್ಲರಿಗೂ ಗೊತ್ತು. ಈತ ಬರುವುದಕ್ಕೆ ಮುಂಚೆ ಯಾರಿದ್ರು ಗೊತ್ತಾ? ಗುರುನಾಥನ್, ವೀರಪ್ಪನ್ ರೈಟ್ ಹ್ಯಾಂಡ್ ಆಗಿದ್ದ. ಇದು ಎಷ್ಟು ಜನಕ್ಕೆ ಗೊತ್ತಿದೆ ಹೇಳಿ? ಈತನ ಪಾತ್ರವನ್ನು ನಾನೇ ಮಾಡಿದ್ದೇನೆ. ನನ್ನ ಚಿತ್ರದಲ್ಲಿ ಯಾವುದೂ ರೀಲ್ ಇಲ್ಲ, ಎಲ್ಲ ರಿಯಲ್. ವ್ಯಕ್ತಿಗಳು, ಜಾಗಗಳು, ಘಟನೆಗಳು ಎಲ್ಲವೂ.

“ಸಿನಿಮಾಕ್ಕಾಗಿ ಭೇಟಿ ಮಾಡಿದವರು, ಬಳಸಿಕೊಂಡವರು, ಸಣ್ಣಪುಟ್ಟ ಸಹಾಯ ಮಾಡಿದವರು ಎಲ್ಲರಿಗೂ ಚಿತ್ರ ತೋರಿಸುತ್ತೇನೆ. ಅವರಿಂದೆಲ್ಲ ಓಕೆ ಅನ್ನಿಸಿಕೊಂಡೇ ಚಿತ್ರ ಬಿಡುಗಡೆ ಮಾಡ್ತಿದೀನಿ. ಯಾಕೆ ಗೊತ್ತಾ? 99% ನನಗೆ ಕನ್ವಿನ್ಸ್ ಆದಮೇಲೆಯೇ ಚಿತ್ರ ಮಾಡ್ಲಿಕ್ಕೆ ಕೈ ಹಾಕಿರೋದು.

“ಕಿಶೋರ್… ವೀರಪ್ಪನ್ ಮುಖ ಮರೆತುಹೋಗಿ ಅಲ್ಲಿ ಕಿಶೋರ್ ನೆಲೆ ನಿಲ್ತಾರೆ, ನೋಡ್ತಿರಿ. attahasa-veerappan-5ಅಷ್ಟರಮಟ್ಟಿಗೆ ಪಾತ್ರದಲ್ಲಿ ಕರಗಿಹೋಗಿದ್ದಾರೆ. ನಾನು ವೀರಪ್ಪನ್‌ಗಾಗಿ 12 ವರ್ಷದಿಂದ ಮಾಹಿತಿ ಕಲೆ ಹಾಕ್ತಿದ್ರೆ, ಕಿಶೋರ್ 6 ವರ್ಷಗಳಿಂದ ನನ್ನ ಜೊತೆ ಕಾಡಿನಲ್ಲಿ ಅಲೆದಾಡ್ತಿದ್ರು. ವೀರಪ್ಪನ್‌ನ ವಿಕ್ಷಿಪ್ತತೆ, ಅವನ ಕಲ್ಲುಗುಂಡಿಗೆ, ತಣ್ಣನೆಯ ಕ್ರೌರ್ಯ, ಜಿಗುಟುತನ, ಜಿಪುಣತನ- ಎಲ್ಲವನ್ನು ತುಂಬ ಹತ್ತಿರದಿಂದ ನೋಡಿದವರೊಡನೆ ಒಡನಾಡಿ, ಕೇಳಿ ತಿಳಿದುಕೊಂಡರು. ವೀರಪ್ಪನ್‌ನನ್ನು ಆವಾಹಿಸಿಕೊಂಡು ಹತ್ತಾರು ಶೇಡ್‌ಗಳನ್ನು ಅಭಿವ್ಯಕ್ತಿಗೊಳಿಸಿದರು. ಒಂದು ಪಾತ್ರಕ್ಕೆ, ಒಂದು ಚಿತ್ರಕ್ಕೆ, ಯಾವ ಹೀರೋ ಈ ರೀತಿ ಮಾಡ್ತರೆ ಹೇಳಿ?

“ಎಲ್ಲಕ್ಕಿಂತ ಹೆಚ್ಚಾಗಿ, ವೀರಪ್ಪನ್ ಸಾವಿನ ಗುಟ್ಟು ಎಷ್ಟು ಜನಕ್ಕೆ ಗೊತ್ತು? ಇದನ್ನ ನಾನು ರಿಲೀವ್ ಮಾಡಿದ್ದೇನೆ. ನಾನು ಕಂಡಿರೋ ಸತ್ಯವನ್ನು ಬಿಚ್ಚಿಟ್ಟಿದ್ದೇನೆ. ಚಿತ್ರದ ಕ್ಲೈಮ್ಯಾಕ್ಸ್ ನನ್ನದು. ಅಲ್ಲಿ ನನ್ನ ಕ್ರಿಯೇಟಿವಿಟಿ ಕಾಣುತ್ತದೆ. ನಾನೇ ನನ್ನ ಚಿತ್ರದ ಬಗ್ಗೆ ಹೇಳಿಕೊಳ್ಳೋದು ತಪ್ಪಾಗಬಹುದು, ಇರಲಿ. ಥಿಯೇಟರ್ ಗೆ ಬರೋರು, ಕಾಸು ಕೊಡೋರು, ಸಮಯ ಕೊಡೋರು ಪ್ರೇಕ್ಷಕರು. ಅವರು ಪ್ರಭುಗಳು. ಅವರ ತೀರ್ಮಾನವೆ ಅಂತಿಮ. ಚಿತ್ರ ನೋಡಿ ಅವರು ಹೇಳಲಿ.”

ಆ ದ್ಯಾವರು ತಂದ ಆಸ್ತಿ

– ಬಿ.ಶ್ರೀಪಾದ ಭಟ್

“ಬೊಮ್ಮಿರೆಡ್ಡಿ ನಾಗಿರೆಡ್ಡಿ” ಎನ್ನುವ ಹೆಸರಿನ ವಿವರುಗಳು ಸಿನಿಮಾದ ಹುಚ್ಚು ಹಿಡಿಸಿಕೊಂಡವರ ಹೊರತಾಗಿ ಇತರರಿಗೆ ಬೇಗನೆ ಫ್ಲಾಶ್ ಆಗುವ ಸಾಧ್ಯತೆಗಳಿಲ್ಲ. ಜೊತೆಗೆ “ಆಲೂರು ಚಕ್ರಪಾಣಿ” ಮತ್ತು “ಕೆ.ವಿ.ರೆಡ್ಡಿ” ಹೆಸರುಗಳನ್ನು ತೇಲಿ ಬಿಟ್ಟಾಗಲೂ ಅಷ್ಟೇ. ಆದರೆ ಈ ಮೂವರು ಸ್ನೇಹಿತರು ಮತ್ತು ಪಾಲುದಾರರು ಒಟ್ಟಾಗಿ ಜೊತೆಗೂಡಿ 40 ರ ದಶಕದಲ್ಲಿ ಆಗಿನ ಮದ್ರಾಸ್‌ನಲ್ಲಿ “ವಿಜಯಾ ವಾಹಿನಿ” ಸ್ಟುಡಿಯೋ ಸ್ಥಾಪಿಸಿದರು ಎಂದಾಕ್ಷಣ ಅನೇಕರ ಕಣ್ಣು ಮಿನುಗುವ ಸಾಧ್ಯತೆಗಳು ಇವೆ.

ಪರಿಚಯಾತ್ಮಕವಾಗಿ ಒಂದೇ ವಾಕ್ಯದಲ್ಲಿ ಹೇಳಿ ಎಂದಾಗ “ವಿಜಯಾ ವಾಹಿನಿ” ಸ್ಟುಡಿಯೋದ ಮೂಲಕ ಈ ಮೂವರು ದಿಗ್ಗಜರು ತೆಲುಗು ಭಾಷೆಯಲ್ಲಿ 50 ಮತ್ತು 60 ರ ದಶಕದಲ್ಲಿ ಕೆಲವು ಅತ್ಯುತ್ತಮ ಚಿತ್ರಗಳನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದರು. ಆ ಮೂಲಕ ತೆಲಗು ಚಿತ್ರರಂಗವನ್ನು ಕಟ್ಟಿ ಬೆಳೆಸಿದರು. ಆ ಕಾಲಘಟ್ಟದಲ್ಲಿ ಇವರಿಲ್ಲದಿದ್ದರೆ ಇಂದು ತೆಲುಗು ಚಿತ್ರರಂಗವನ್ನು ಈ ಮಟ್ಟದಲ್ಲಿ ನೆನಸಿಕೊಳ್ಳಲೂ ಸಾಧ್ಯವಿಲ್ಲ. ಇವರ ಚಿತ್ರಗಳು ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ಎಸ್.ವಿ.ರಂಗರಾವ್ ಎನ್ನುವ ತ್ರಿಮೂರ್ತಿ ನಟರ, ಸಾವಿತ್ರಿ, ಜಮುನ ಎನ್ನುವ ನಟಿಯರ ಸಿನಿಮಾ ಭವಿಷ್ಯವನ್ನೇ ರೂಪಿಸಿತು. 1947 ರಲ್ಲಿ “ಚಂದಮಾಮ” ಮಾಸ ಪತ್ರಿಕೆಯನ್ನು ಶುರುಮಾಡಿ ಅದನ್ನು ದಕ್ಷಿಣ ಭಾರತದ ಜನಪ್ರಿಯ ಮಕ್ಕಳ ಮಾಸ ಪತ್ರಿಕೆಯನ್ನಾಗಿ ರೂಪಿಸಿದರು ಎಂದೆಲ್ಲಾ ವಿವರಿಸುವಾಗ ನಮ್ಮ ಎದೆಯೂ ತುಂಬಿ ಬರುತ್ತದೆ ಹಾಗೂ ಓದುಗರ ಮನಸ್ಸೂ ಸಹ.

ಇನ್ನು ವಿಜಯಾ ವಾಹಿನಿ ಸ್ಟುಡಿಯೋ ಬ್ಯಾನರ್‌ನ ಮೂಲಕ ಇವರು ಬರೆದು, ನಿರ್ಮಿಸಿ, ನಿರ್ದೇಶಿಸಿದ ಚಿತ್ರಗಳನ್ನು ಹೆಸರಿಸಬೇಕೆಂದರೆ, ಓಹ್!! ರೋಮಾಂಚನವಾಗುತ್ತದೆ. “ಯೋಗಿ ವೇಮನ್ನ”ದ ಮೂಲಕ ಪ್ರಾರಂಭಗೊಂಡ ಚಿತ್ರಗಳ ಸರಣಿ ಕೆಲವು ಹೀಗಿವೆ: Mayabazarಪಾತಾಳ ಭೈರವಿ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್), ಪೆಳ್ಳಿ ಚೇಸಿ ಚೂಡು(ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಸಾವಿತ್ರಿ, ಜಮುನ, ಜಗ್ಗಯ್ಯ), ಚಂದ್ರಹಾರಂ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಸಾವಿತ್ರಿ), ಮಿಸ್ಸಮ್ಮ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ, ಜಮುನ), ಗುಣಸುಂದರಿ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್), ಮಾಯಾ ಬಜಾರ್ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ), ಜಗದೇಕ ವೀರುನಿ ಕಥ (ಎನ್.ಟಿ.ರಾಮರಾವ್), ಗುಂಡಮ್ಮ ಕಥ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ, ಜಮುನ), ಕನ್ನಡದಲ್ಲಿ Dr-Rajkumar-in-Satya-Harischandra- ಸತ್ಯ ಹರಿಶ್ಚಂದ್ರ ( ರಾಜ್‌ಕುಮಾರ್, ಫಂಡರೀಬಾಯಿ), ಹಿಂದಿಯಲ್ಲಿ ರಾಮ್ ಔರ್ ಶ್ಯಾಮ್ (ದಿಲೀಪ್ ಕುಮಾರ್, ವಹೀದ ರೆಹಮಾನ್)…

ಮೇಲಿನವು ಕೆಲವು ಉದಾಹರಣೆಗಳು ಮಾತ್ರ. ಇವಲ್ಲದೇ ಇನ್ನೂ ಇಪ್ಪತ್ತಕ್ಕೂ ಮೇಲ್ಪಟ್ಟು ಚಿತ್ರಗಳನ್ನು ನಿರ್ಮಿಸಿ, ನಿದೇಶಿಸಿದ್ದಾರೆ. ಮೇಲಿನ ಎಲ್ಲಾ ಚಿತ್ರಗಳು ಮನರಂಜನಾತ್ಮಕವಾದ, ಮುಗ್ಧತೆಯನ್ನು ಜೀವಾಳವಾಗಿರಿಸಿಕೊಂಡ, ಬಲು ಎತ್ತರದ ಸ್ತರದಲ್ಲಿ ಫ್ರೊಫೆಶನಲ್ ಅನ್ನು ಮೈಗೂಡಿಸಿಕೊಂಡ, ಕಮರ್ಶಿಯಲ್ ಆಗಿ ಸೂಪರ್ ಹಿಟ್ ಮತ್ತು ಟ್ರೆಂಡ್ ಸೆಟ್ಟರ್ ಆದ, ಸಾಮಾಜಿಕ,ಪೌರಾಣಿಕ, ಜಾನಪದ ಸಿನಿಮಾಗಳೆಂದೇ ಪ್ರಖ್ಯಾತಗೊಂಡಿವೆ. ಇಲ್ಲಿ ನಾಗಿರೆಡ್ಡಿ ಚಿತ್ರಗಳನ್ನು ನಿರ್ಮಿಸುತ್ತಿದ್ದರೆ, ಆಲೂರು ಚಕ್ರಪಾಣಿ ಕಥೆ, ಚಿತ್ರಕಥೆ ಬರೆಯುತ್ತಿದ್ದರು, ಕೆ.ವಿ.ರೆಡ್ಡಿ ನಿರ್ದೇಶಕರು. ಇವರಲ್ಲದೆ ಎಲ್.ವಿ.ಪ್ರಸಾದ್ ಮತ್ತು ಕಮಲಾಕರ ಕಮಲೇಶ್ವರ್ ರಾವ್ ಸಹ ಮೇಲಿನ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಮತ್ತೊಂದು ವಿಶೇಷವೆಂದರೆ 50 ರ ಮತ್ತು 60 ರ ದಶಕದಲ್ಲಿ ಎನ್.ಟಿ.ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರರಾವ್ ತೆಲುಗು ಸಿನಿಮಾರಂಗದ ಸೂಪರ್ ಸ್ಟಾರ್ ನಟರಾಗಿದ್ದರೂ ಸಹ ಇವರಿಬ್ಬರೂ ಯಾವುದೇ ಬಿಗುಮಾನ, ಅಹಂಕಾರ, ದರ್ಪವಿಲ್ಲದೆ, ತನ್ನ ಪಾತ್ರವೇ ಮೇಲುಗೈ ಸಾಧಿಸಬೇಕೆನ್ನುವ ಹಠವಿಲ್ಲದೆ ವಿಜಯಾ ವಾಹಿನಿ ಸ್ಟುಡಿಯೋದ ಬ್ಯಾನರ್ ಅಡಿಯಲ್ಲಿ ಮೂರು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇಲ್ಲಿನ ಉದಾಹರಣೆಯನ್ನು ಹೊರತುಪಡಿಸಿ ಇಂಡಿಯಾದ ಬೇರಾವ ಭಾಷೆಯಲ್ಲಿಯೂ ಸೂಪರ್ ಸ್ಟಾರ್‌ಗಳು ಒಂದಕ್ಕಿಂತಲೂ ಮೇಲ್ಪಟ್ಟು ಒಟ್ಟಾಗಿ ನಟಿಸಿದ್ದಕ್ಕೆ ಉದಾಹರಣೆಗಳಿಲ್ಲ. ಇದು ಇವರಿಬ್ಬರ ಸರಳತೆ ಮತ್ತು ಬದ್ಧತೆಯನ್ನು ತೋರುವುದರ ಜೊತೆಗೆ ನಾಗಿರೆಡ್ಡಿ, ಕೆ.ವಿ.ರೆಡ್ಡಿಯವರ ಸಾಮರ್ಥ್ಯವನ್ನು ನಮಗೆ ಪರಿಚಯಿಸಿಕೊಡುತ್ತದೆ. ಈ ಮಹಾನುಭಾವರು ಅಂದು ಬುನಾದಿ ರೂಪದಲ್ಲಿ ಕಟ್ಟಿದ ಅಪಾರ ವಿನಯವಂತಿಕೆಯ ಈ ಫ್ರೊಫೆಶನಲ್ ಶೈಲಿ ಮತ್ತು ನಡತೆ ಇಂದಿಗೂ ತೆಲುಗು ಚಿತ್ರರಂಗವನ್ನು ಪೊರೆಯುತ್ತಿದೆ. ಇಂದಿಗೂ ಯಾವುದೇ ನಖರಾಗಳಿಲ್ಲದ, ರಾಜಕೀಯವಿಲ್ಲದ, ಒಳ ಪಿತೂರಿಗಳಿಲ್ಲದ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ ಮಾತ್ರ. ಇದರ ಸಂಪೂರ್ಣ ಶ್ರೇಯಸ್ಸು ಮೇಲಿನ ದೊಡ್ಡವರಿಗೆ ಸಲ್ಲುತ್ತದೆ.

ವಿಜಯಾ ವಾಹಿನಿಯ ತಂಡ ತಮ್ಮ ಸರಳ ಮತ್ತು ನೇರ ಚಿತ್ರಗಳ ಮೂಲಕ ಕಟ್ಟಿಕೊಟ್ಟ ಅಪಾರವಾದ, ಉಕ್ಕುವ ಜೀವನಪ್ರೇಮ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಯಾವುದನ್ನೂ ಸಂಕೀರ್ಣಗೊಳಿಸದೆ ನಟ, ನಟಿಯರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಈ ದೊಡ್ಡವರು ಸಿನಿಮಾ ಭಾಷೆಗೆ ಬರೆದ ನುಡಿಕಟ್ಟುಗಳು ಇಂದಿಗೂ ನವನವೀನ ಮತ್ತು ಅನನ್ಯವಾದದ್ದು. ಪಾತಾಳ ಭೈರವಿ, ಮಾಯಾ ಬಜಾರ್‍, ಸತ್ಯ ಹರಿಶ್ಚಂದ್ರ ಚಿತ್ರಗಳ ಜನಪದ ಲೋಕ ಒಂದಲ್ಲ, ಎರಡಲ್ಲ, ಐದು ತಲೆಮಾರುಗಳನ್ನು ರೂಪಿಸಿದೆ. ಮಿಸ್ಸಮ್ಮ, ಗುಂಡಮ್ಮ ಕಥ ಚಿತ್ರಗಳ ಅಪ್ಪಟ ಸಾಮಾಜಿಕ ಲೋಕ ಲಕ್ಷಾಂತರ ಸದಭಿರುಚಿಯ ಪ್ರೇಕ್ಷಕರನ್ನು ಸೃಷ್ಟಿಸಿದವು. ಇವರಿಗೆ ಸಿನಿಮಾ ನೋಡುವ ಬಗೆಯನ್ನೇ ಪರಿಚಯಿಸಿದವು.

ಮತ್ತೆ ಇವರೆಲ್ಲ ಕೀರ್ತಿಶನಿಯನ್ನು ಸಂಪೂರ್ಣವಾಗಿ ದೂರವಿಟ್ಟರು. ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರೂ ಕ್ಯಾಕಸ್ ಅನ್ನು ಬೆಳೆಸಲೇ ಇಲ್ಲ. ಈ ದೊಡ್ಡವರು ಕ್ರಿಯಾಶೀಲವಾಗಿ ಬದುಕಿ, ಆ ಕ್ರಿಯಾಶೀಲತೆಯನ್ನೇ ನೆಚ್ಚಿ ಪ್ರಾಮಾಣಿಕತೆ ಮತ್ತು ದಿಟ್ಟತನವನ್ನು ತೆಲುಗು ಚಿತ್ರರಂಗಕ್ಕೆ ತಂದೊಕೊಟ್ಟಿದ್ದು ಕಡಿಮೆ ಸಾಧನೆಯಂತೂ ಅಲ್ಲವೇ ಅಲ್ಲ.

ಇವರು “ಚಂದಮಾಮ” ಮಾಸ ಪತ್ರಿಕೆಗೆ ಜನ್ಮ ನೀಡಿ, ಮುತುವರ್ಜಿಯಿಂದ ಬೆಳೆಸಿದ್ದನ್ನು ಕುರಿತು ಹೊಸದಾಗಿ ಹೇಳುವುದೇನಿದೆ? ಇದರ ಕುರಿತಾಗಿ ಬರೆದಷ್ಟು ನಮ್ನ ಅಕ್ಷರದ ಅಹಂಕಾರವಾಗುತ್ತದೆ. ಅಷ್ಟೇ.

ಇದೆಲ್ಲ ನೆನಪಾದದ್ದು 2012 ರ ವರ್ಷ ನಾಗಿರೆಡ್ಡಿ ಮತ್ತು ಕೆ.ವಿ.ರೆಡ್ಡಿಯವರ ಜನ್ಮ ಶತಮಾನೋತ್ಸವಗಳ ವರ್ಷವಾಗಿತ್ತೆಂದು ನೆನಪಾದಾಗ. ಕೆ.ವಿ.ರೆಡ್ಡಿ ಜುಲೈ 1912 ರಲ್ಲಿ ಹುಟ್ಟಿದರೆ, ನಾಗಿರೆಡ್ಡಿ ಡಿಸೆಂಬರ್ 1912 ರಲ್ಲಿ ಜನಿಸಿದರು. ತೆಲುಗು ಚಿತ್ರರಂಗ ಮತ್ತು ಅಲ್ಲಿನ ಪ್ರೇಕ್ಷಕರು ಇವರನ್ನು ನೆನೆಸಿಕೊಂಡಿತೇ? ಗೊತ್ತಿಲ್ಲ. ಮಗಧೀರರ, ಫ್ಯಾಕ್ಷನಿಷ್ಟರ ಈ ಕಾಲಘಟ್ಟದಲ್ಲಿ ನಳನಳಿಸುವ, ಅಪಾರ ಕಾಂತಿಯ ಈ ಗುಲಾಬಿ ಹೂಗಳು ನಲುಗಿ ಹೋಗಿರಲಿಕ್ಕೂ ಸಾಕು. ಹಾಗಿದ್ದರೆ ಬಲು ಬೇಸರವಾಗುತ್ತದೆ. ಮನಸ್ಸಿಗೆ ವ್ಯಥೆಯಾಗುತ್ತದೆ.

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಕಡೆಯ ಕಂತು

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಆಲ್ಫ್ಸ್ ಪರ್ವತ… ಕೊಲರ್ಯಾಡೊ ನದಿ..

ಈ ಬೆಳವಣಿಗೆಗಳ ನಡುವೆಯೂ ಖಂಡಗಳ ಅಲೆತ-ಘರ್ಷಣೆ ನಿಂತಿರಲಿಲ್ಲ. ಈ ಅಲೆತದ ಜೊತೆಗೆ ಸವಕಳಿ ಭೂಮಿಯ ಮೇಲೆ ವಿಚಿತ್ರವೂ, ವಿಶಿಷ್ಟವೂ ಆದ ಭೂರಚನೆಗೆ ಕಾರಣವಾಯಿತು.

ಸ್ವಿಟ್ಜರ್ಲ್ಯಾಂಡಿನ ಆಲ್ಫ್ಸ್ ಪರ್ವತ ಶ್ರೇಣಿ ರಚನೆಯಾದ ರೀತು ಅಚ್ಚರಿಯಾಗುತ್ತದೆ. ನಾವು ಇಲ್ಲಿಯವರೆಗೆ ನೋಡುತ್ತಾ ಬಂದಂತೆ ಈ ಪರ್ವತ ಜ್ವಾಲಾಮುಖಿ ಪರ್ವತವಲ್ಲ. ಸಮುದ್ರ ಮಟ್ಟದಿಂದ ಸುಮಾರು 3 ಮೈಲಿ ಎತ್ತರಕ್ಕಿದೆ. ಇಷ್ಟು ಎತ್ತರದ ಈ ಪರ್ವತದ ರಚನೆ ಹೇಗಾಯಿತು ಎನ್ನುವುದು ಅಚ್ಚರಿ…

ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಈ ಎತ್ತರಕ್ಕೆ ಖಂಡಗಳೆರಡರ ಘರ್ಷಣೆಯೇ ಕಾರಣ. ಆಪ್ರಿಕಾ ಮತ್ತು ಯೂರೋಪ್ ಖಂಡಗಳೆರಡು ಡಿಕ್ಕಿ ಹೊಡೆದು ಈ ಪರ್ವತ ರಚನೆ ಆಯಿತು ಎನ್ನುತ್ತಾರೆ ವಿಜ್ಞಾನಿಗಳು.

ಈ ಪ್ರತಿಪಾದನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಈ ಪರ್ವತ ಶ್ರೇಣಿಯ ಮ್ಯಾಟ್ ಹಾರ್ನ್ ಪರ್ವತವೇ ಸಾಕು. ಎರಡು ಖಂಡಗಳಿಂದಾದ ಪರ್ವತ ಇದು. ಪರ್ವತದ ತಳಭಾಗವು ಯೂರೋಪಿನದ್ದಾಗಿದ್ದರೆ, ತುದಿ ಆಫ್ರಿಕಾಕ್ಕೆ ಸೇರಿದ್ದು. ಹೇಗೆ?

ಆಫ್ರಿಕಾ ಮತ್ತು ಯೂರೋಪ್ ಖಂಡಗಳು ಚಲಿಸುತ್ತಾ ಒಂದಕ್ಕೊಂದು ಸಮೀಪಿಸಿ ನಂತರ ಒಂದರಮೇಲೊಂದು ಸೇರಿಕೊಂಡವು. ಈ ಚಲನೆ ನಿಲ್ಲುವ ಹೊತ್ತಿಗೆ ಪರ್ವತಾಕಾರ ಪಡೆದಿತ್ತು, ಎನ್ನುವುದು ವಿಜ್ಞಾನಿಗಳ ಮಾತು.

ಹೀಗೆ ಖಂಡಗಳ ಅಲೆತ ಮತ್ತು ಘರ್ಷಣೆ 45 ದಶಲಕ್ಷ ವರ್ಷಗಳ ಕಾಲ ನಡೆಯುತ್ತಲೇ ಇತ್ತು. ಈ ಚಟುವಟಿಕೆಗಳಿಂದ ಪರ್ವತ ಮತ್ತು ಪರ್ವತಶ್ರೇಣಿಗಳು ರಚನೆಯಾಗುತ್ತಲೇ ಇದ್ದವು. ಆದರೆ ಸವಕಳಿ ಈ ಪರ್ವತಗಳು ಎತ್ತರಕ್ಕೆ ಬೆಳೆಯದಂತೆ ತಡೆಯಿತು.

ಮಂಜು, ಗಾಳಿ, ನೀರಿನಿಂದ ಪರ್ವತಗಳ ಸವಕಳಿ ಪ್ರಕ್ರಿಯೆ ನಡೆದೇ ಇತ್ತು. ವರ್ಷಕ್ಕೆ 50 ದಶಲಕ್ಷ ಟನ್‌ನಷ್ಟು ಮಣ್ಣು ಸವೆಯುತ್ತಿತ್ತು. ಖಂಡಗಳ ಚಲನೆಯಿಂದ ಪರ್ವತ ನಿರ್ಮಾಣವಾಗುತ್ತಿದ್ದರೆ ಸವಕಳಿ ಅದರ ಎತ್ತರವನ್ನು ನಿರ್ಧರಿಸುತ್ತಿತ್ತು.

ಖಂಡಗಳ ಚಲನೆ ಕೇವಲ ಪರ್ವತಗಳನ್ನು ಮಾತ್ರ ನಿರ್ಮಿಸಲಿಲ್ಲ ಎನ್ನುವುದು ಗಮನಿಸಬೇಕಾದ ಮತ್ತೊಂದು ಅಂಶ. ಕೆಲವು ಸಂದರ್ಭಗಳಲ್ಲಿ ಈ ಚಟುವಟಿಕೆಗಳು ಗ್ರ್ಯಾಂಡ್ ಕ್ಯಾನ್ಯನ್ಯ್‌ನಂತಹ ರುದ್ರರಮಣೀಯ ಪರಿಸರವನ್ನೂ ಸೃಷ್ಟಿಸಿದವು.

1 ಮೈಲಿ ಆಳ, 10 ಮೈಲಿ ಅಗಲದ ಕ್ಯಾನ್ಯನ್ ಕೊಲರ‍್ಯಾಡೊ ನದಿಯ ಹರಿಯುವಿಕೆ ಮತ್ತು ಭೂಖಂಡದ ಚಲನೆಯಿಂದಾಗಿ ರೂಪುಗೊಂಡಿದ್ದು. ಸಮುದ್ರ ಮಟ್ಟದಿಂದ 8000 ಅಡಿ ಎತ್ತರದಲ್ಲಿ ಹರಿಯುವ ಕೊಲರ‍್ಯಾಡೊ ನದಿ ಸಣ್ಣದಾಗಿ ಹರಿಯುತ್ತಿದ್ದರೂ ಅದರ ವೇಗ ಹೆಚ್ಚು. ಹಾಗಾಗಿ ಖಂಡಗಳ ಚಲನೆಗೆ ಕೈಜೋಡಿಸಿದಂತೆ ಕೊಲರ‍್ಯಾಡೊ ಭೂಮಿಯನ್ನು ಬೇರ್ಪಡಿಸಿ ಕಣಿವೆಯನ್ನೇ ಸೃಷ್ಟಿಸಿದೆ.

20 ಲಕ್ಷ ವರ್ಷಗಳು. ಮನುಷ್ಯನ ಪೂರ್ವಜರು ಆಫ್ರಿಕಾದಿಂದ ಭೂಮಿಯ ವಿವಿಧ ಭಾಗಗಳತ್ತ ಹೆಜ್ಜೆ ಹಾಕಿದರು. ಈ ಹೊತ್ತಿಗೆ ಭೂಮಿಯನ್ನು ಹಿಮ ಆವರಿಸಿಕೊಳ್ಳಲಾರಂಭಿಸಿತ್ತು. ಅಂದರೆ ಐಸ್‍ಏಜ್ ಆರಂಭವಾಗಿತ್ತು. ಭೂಮಿ ಮತ್ತೆ ಹಿಮಗೋಳವಾಗಿತ್ತು.

ಇಂತಹದೊಂದು ಕಾಲಘಟ್ಟವನ್ನು ಭೂಮಿ ಕಂಡಿತ್ತು ಎಂದು ಗೊತ್ತಾಗಿದ್ದು ಸ್ವಿಟ್ಜರ್‌ಲೆಂಡಿನ ವಿಜ್ಞಾನಿ ಲೂಯಿ ಅಗಸಿಸ್‍ರಿಂದ.

ಆಲ್ಫ್ಸ್ ಪರ್ವತಗಳಲ್ಲಿ ಭಿನ್ನರೀತಿಯ ಶಿಲೆಗಳನ್ನು ನೋಡಿದ್ದ ಅಗಸಿಸ್ ಅಂತಹ ಶಿಲೆಗಳ ರಚನೆಗೆ ಕಾರಣ ಹುಡುಕಾಡಿದರು. ಹಿಮದ ಶೇಖರಣೆ, ಸರಿದಾಟ, ಇಂತಹ ಶಿಲೆಗಳನ್ನು ರಚಿಸಿದ್ದು ಎಂಬ ಅಂಶ ತಿಳಿದುಬಂತು. ಇದು ಭೂಮಿಯ ಐಸ್‍ಏಜ್ ಕುರಿತ ಸಿದ್ಧಾಂತಕ್ಕೆ ಕಾರಣವಾಯಿತು.

ಐಸ್‍ಏಜ್ ಅನ್ನೋದು ಕಟ್ಟುಕತೆ ಎಂದು ಹಲವರು ಜರೆದರು. ಆದರೆ ಐಸ್‍ಏಜ್ ಸಿದ್ಧಾಂತಕ್ಕೆ ಪೂರಕವಾಗಿ ಜಗತ್ತಿನ ಹಲವೆಡೆ ಪುರಾವೆ ಸಿಕ್ಕವು. ನ್ಯೂಯಾರ್ಕಿನ ಸೆಂಟ್ರಲ್ ಪಾರ್ಕ್‍ನಲ್ಲಿರುವ ಬಂಡೆ ಅಂತಹ ಪುರಾವೆಗಳಲ್ಲಿ ಒಂದು. ಹಿಮಯುಗದ (ಐಸ್‍ಏಜ್‍ನ) ಸಮಯದಲ್ಲಿ ಅಮೆರಿಕದ ಈಗಿನ ಅತಿ ಎತ್ತರದ ಕಟ್ಟಡ ಎಂಪೈರ್ ಸ್ಟೇಟ್‍ನ ಎರಡು ಪಟ್ಟು ಎತ್ತರಕ್ಕೆ ಹಿಮ ಈ ನಗರವನ್ನು ಆವರಿಸಿಕೊಂಡಿತ್ತೆಂದು ವಿಜ್ಞಾನಿಗಳು ಪ್ರತಿಪಾದಿಸಿದರು.

ವಾತಾವರಣದಲ್ಲಿ ಆದ ಭಾರೀ ಬದಲಾವಣೆಗಳಿಂದ ಕಾಲಾನಂತರದಲ್ಲಿ ಹಿಮ ಕರಗಿ ಸರೋವರಗಳಾದವು. ಭೂಮಿ ತನ್ನ ವಿಕಾಸದ ಹೆಜ್ಜೆಗಳನ್ನು ಮುಂದುವರೆಸಿತು.

ಮಾನವ ಹೆಜ್ಜೆಗಳು

10000 ವರ್ಷಗಳು. ಇಲ್ಲಿಂದ ಮನುಷ್ಯನ ಇತಿಹಾಸ ಆರಂಭ. ಈ ಅವಧಿಯಲ್ಲಿ ಮನುಷ್ಯನ ವಿಕಾಸದ ಹಾದಿ ಅತಿವೇಗದಲ್ಲಿ ಸಾಗಿ ಅವನು ಬೇರೆಲ್ಲ ಜೀವಿಗಳಿಗಿಂತ ಹೆಚ್ಚು ಪ್ರಾಬಲ್ಯವನ್ನು ಸಾಧಿಸಿದ್ದಾನೆ. ತಾನೇ ಕಂಡುಕೊಂಡ ತಂತ್ರಜ್ಞಾನ ಭೂಮಿಯನ್ನಷ್ಟೇ ಅಲ ಭಾನಿಗೂ ಚಾಚಿಕೊಂಡಿದೆ.

ಆದರೆ ಭೂಮಿಯ 4.5 ಶತಕೋಟಿ ವರ್ಷಗಳ ಅಸಾಧಾರಣ ಪಯಣವನ್ನು ನೋಡಿದರೆ ವಿಜ್ಞಾನಿಗಳು 15000 ವರ್ಷಗಳಲ್ಲಿ ಮತ್ತೊಂದು ಐಸ್‍ಏಜ್ ಬರಬಹುದು. ಮತ್ತೆ ಖಂಡಗಳು ಚಲಿಸಿ ಮುಂದೊಂದು ದಿನ ಈಗ ಇರುವ ಭೂಖಂಡಗಳೇ ಇಲ್ಲವಾಗಬಹುದು. ಇನ್ನು 3 ಶತಕೋಟಿ ವರ್ಷಗಳ ಹೊತ್ತಿಗೆ ಭೂಮಿ ಮಂಗಳನಂತೆ ಬಂಜರಾಗಬಹುದು ಎಂದು ಲೆಕ್ಕ ಹಾಕುತ್ತಾರೆ.

4.5 ಶತಕೋಟಿ ವರ್ಷಗಳಲ್ಲಿ ಆಗಿರುವ ಬದಲಾವಣೆಗಳನ್ನು ನೋಡುತ್ತಾ ಇದ್ದರೆ ವಿಜ್ಞಾನಿಗಳ ಈ ಲೆಕ್ಕಾಚಾರ ತಪ್ಪಾಗಬಹುದು ಎನ್ನಿಸೋದಿಲ್ಲ. ಆದರೆ ಮನುಷ್ಯನಲ್ಲಿರುವ ತಂತ್ರಜ್ಞಾನ ಮತ್ತೊಂದು ಭೂಮಿ ಹುಡುಕಬಹುದು. ಅಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು. ಆದರೆ ಇದೆಲ್ಲ ನಡೆಯುವ ಸಹಸ್ರಸಹಸ್ರ ವರ್ಷಗಳ ಕಾಲಕ್ಕೆ ನಾವಿರ್ತೀವಾ?

(ಮುಗಿಯಿತು)


ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ನಾಟಕ, ಸಿನೆಮಾ, ರಾಜಕೀಯ, ಡಬ್ಬಿಂಗ್ ಬಗ್ಗೆ ಆನಂತ ನಾಗ್

[ಕನ್ನಡ ಚಿತ್ರರಂಗದಲ್ಲಿ ಅನಂತ ನಾಗ್‌ರಿಗೆ ವಿಶೇಷವಾದ ಸ್ಥಾನವಿದೆ. ಉಂಡೂ ಹೋದ ಕೊಂಡೂ ಹೋದ, ಗೋಲ್‌ಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಗೌರಿ ಗಣೇಶ; ಹೀಗೆ ಕಮರ್ಷಿಯಲ್ ವಿಭಾಗದ ವಿವಿಧ ಚಿತ್ರಗಳಲ್ಲಿ ಅಭಿನಯಿಸಿ ಮಿನಿಮಮ್ ಗ್ಯಾರಂಟಿ ನಟ ಎನ್ನುವ ಖ್ಯಾತಿಯ ಜೊತೆಗೆ ಅದಕ್ಕೂ ಮೊದಲು ಎಂ.ಎಸ್.ಸತ್ಯುರ ’ಬರ’, ಸೋದರ ಶಂಕರ್ ನಾಗ್ ಜೊತೆ ಹಲವು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಂಗಭೂಮಿ, ಚಿತ್ರರಂಗ, ರಾಜಕಾರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಅನಂತ ನಾಗ್‌ರನ್ನು ಅವರ ಜನ್ಮ ದಿನದ ಸಂದರ್ಭದಲ್ಲಿ ಜನಶ್ರೀ ವಾಹಿನಿಯ ನ್ಯೂಸ್ ಚೀಫ್ ಅನಂತ ಚಿನಿವಾರ್  ಸಂದರ್ಶಿಸಿದ್ದರು. ಆ ಸಂದರ್ಶನದ ಕೆಲವು ಭಾಗಗಳನ್ನು ಬರಹದ ರೂಪದಲ್ಲಿ ಇಲ್ಲಿ ಕೊಡುತ್ತಿದ್ದೇವೆ. ಬರಹಕ್ಕಿಳಿಸಿದವರು ಜಿ. ಮಹಾಂತೇಶ್.]

ಅನಂತ ಚಿನಿವಾರ್ : ಇಷ್ಟು ವರ್ಷಗಳ ನಂತರ ಹಿಂದಕ್ಕೆ ತಿರುಗಿ ನೋಡಿದರೇ…

ಅನಂತ ನಾಗ್ : ಅಂದುಕೊಂಡದ್ದಕಿಂತ ಅಂದುಕೊಳ್ಳದಿರುವುದೇ ನನಗೆ ಜಾಸ್ತಿ ಸಿಕ್ಕಿದೆ. ಈ ಸಿನಿಮಾ, ರಾಜಕೀಯ ಪ್ಲಾನ್ ಮಾಡಿರಲಿಲ್ಲ. ಚಿಕ್ಕಂದಿನಿಂದಲೂ ತಂದೆ ತಾಯಿ ಅವರ ಮನಸ್ಥಿತಿ, ಆಶ್ರಮ. ಅಂದ್ರೇ ನನ್ನ ತಾಯಿಯವರು ದಕ್ಷಿಣ ಕನ್ನಡ, ತಂದೆ ಉತ್ತರ ಕನ್ನಡ. ತಾಯಿಯ ಊರಿನಲ್ಲೇ ಬೆಳೆದೆ. ತಾಯಿಯನ್ನೇ ತಂದೆ ನೋಡಿ ಮೆಚ್ಚಿದ್ದೂ ದಕ್ಷಿಣ ಕನ್ನಡದಲ್ಲೇ. ಆಶ್ರಮದ ವಾತಾವರಣದಲ್ಲೇ ನಾನು ಬೆಳೆದೆ. ಅನಂತ ನಾಗರಕಟ್ಟೆ ನನ್ನ ಮೂಲ ಹೆಸರು. ಆನಂದಾಶ್ರಮ ಗುರುಗಳು ನನ್ನ ತಂದೆಯನ್ನ ಆಶ್ರಮದ ಸೆಕ್ರೇಟರಿ ಮ್ಯಾನೇಜರ್ ಮಾಡಿದರು. ಹೀಗಾಗಿ ಬಾಲ್ಯದಲ್ಲೇ ಆಶ್ರಮ, ಮಠದ ವಾತಾವರಣದಲ್ಲಿ ಬೆಳೆದೆ. ಅಲ್ಲಿಯೇ ನನಗೆ ಸಂಸ್ಕಾರ ಸಿಕ್ಕಿದ್ದು. ಶಾಲೆಯಲ್ಲಿ ಚೆನ್ನಾಗಿ ಓದ್ತಾ ಇದ್ದೆ. ಹೊನ್ನಾವರ, ಸಿದ್ದಾಪುರದಲ್ಲಿ ಓದಿದ್ದೇನೆ. ಶಾಲೆಯಲ್ಲಿ ಡಿಬೇಟ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ನಾಟಕ, ಪ್ರಹಸನಗಳಲ್ಲಿ ಭಾಗವಹಿಸುತ್ತಿದ್ದೆ. ಎಲ್ಲರೊಂದಿಗೆ ನಾನು ಚೆನ್ನಾಗಿ ಬೆರೆಯುತ್ತಿದ್ದೆ. ನನ್ನ ತಂದೆ ಸ್ನೇಹಿತರು ಮುಂಬೈನಿಂದ ಬಂದು, ನನ್ನ ಪ್ರಗತಿ ನೋಡಿ ಮುಂಬೈಗೆ ಕರೆಸಿಕೊಂಡರು. ಪಟ್ಟಣ ನೋಡಿದ್ದೇ ನಾನು ಹೊನ್ನಾವರ, ಕುಮುಟಾ, ಕಾರವಾರ, ಮಂಗಳೂರೇ. ಇದನ್ನ ಬಿಟ್ಟರೇ ನಾನು ಬೇರೆ ಪಟ್ಟಣಗಳನ್ನ ನೋಡಿಯೇ ಇರಲಿಲ್ಲ. ಕನ್ನಡ ಮಾಧ್ಯಮದಲ್ಲಿ ಓದ್ತಿದ್ದ ನನಗೆ ಇಂಗ್ಲೀಷ್ ಕಂಟಕವಾಯ್ತು. ಇಂಗ್ಲೀಷ್‌ನಿಂದಾಗಿ ನನ್ನ ವ್ಯಕ್ತಿತ್ವ ಕ್ಷೀಣಿಸ್ತಾ ಹೋಯಿತು. ಕಲ್ಚರಲ್ ಶಾಕ್ ಆಯಿತು. ಹೆಚ್ಚು ಅರ್ಥ ಆಗ್ತಿರಲಿಲ್ಲ. ಮೊದಲ ಸ್ಥಾನದಲ್ಲಿ ಬರುತ್ತಿದ್ದ ನಾನು, ಕಡೆಯ ಸ್ಥಾನಕ್ಕೆ ತಳ್ಳಲ್ಪಟ್ಟೆ. ಮಠದಲ್ಲಿ ಬೆಳೆದಿದ್ದರಿಂದ ಸಂಸ್ಕೃತ ಕಷ್ಟ ಅಗ್ತಿರಲಿಲ್ಲ. ಇಂಗ್ಲೀಷ್, ಮರಾಠಿ, ಹೀಗೆ ಬೇರೆ ಬೇರೆ ಭಾಷೆಗಳನ್ನ ಕಲಿತೆ. ವಿಜ್ಞಾನ, ಭೂಗೋಳ, ಇತಿಹಾಸ ಅರ್ಥ ಆಗ್ತಿರಲಿಲ್ಲ.  9ನೇ ತರಗತಿಯಲ್ಲಿ ಫೈಲ್ ಆದೆ. ಹೊರಗಿನಿಂದ ಬಂದಿದ್ದೇನೆ ಅನ್ನುವ ಕಾರಣದಿಂದ 10ನೇ ತರಗತಿಗೆ ಕಳಿಸಿದರು. 10ನೇ ತರಗತಿಯಲ್ಲಿ ಇನ್ನೂ ಕಷ್ಟ ಆಗ್ಹೋಯ್ತು. ಇಲ್ಲಿ ನನಗೆ ಏನಾಯ್ತು… ಊರಿನಲ್ಲಿ ಚೆನ್ನಾಗಿ ಇದ್ದೆ. ಮಾನಸಿಕವಾಗಿ ಕುಗ್ಗಿ ಹೋದೆ. ಜೊತೆಗಾರರೊಂದಿಗೆ ಬೆರೆಯಲು ಕಷ್ಟ ಆಗ್ತಿತ್ತು. ಒಂಥರಾ ಶಾಕ್ ಆಯ್ತು. ಮೊದಲ 6 ತಿಂಗಳು ಮೌನವಾಗಿದ್ದೆ. ನಂತ್ರ ಸ್ಕೂಲು ಬಂಕ್ ಮಾಡ್ತಿದ್ದೆ. ಹೊರಗೆ ಹೋಗ್ತಿದ್ದೆ. ಮೆಟ್ರೋ ಥೇಟರ್ನಲ್ಲಿ ನನ್ನ ಚಿಕ್ಕಪ್ಪ ಅಕೌಂಟೆಂಟ್ ಆಗಿದ್ದ್ರು. ಅವ್ರನ್ನ ನೋಡ್ಲಿಕ್ಕೆ ಹೋಗ್ತಿದ್ದೆ. ಪ್ರತಿ ದಿನವೂ ಸಿನಿಮಾ ನೋಡ್ಲಿಕ್ಕೆ ಶುರು ಮಾಡಿದ್ದೇ ಆವಾಗ. ಇಂಗ್ಲೀಷ್ ಸಿನಿಮಾ ನೋಡಿದ್ದೇ ಹೆಚ್ಚು. 6 ತಿಂಗಳು ಹಾಗೇ ನಡೀತು. ಆ ಮೇಲೆ ಸಿಕ್ಕಾಕ್ಕೊಂಡೆ. ಇಂಗ್ಲೀಷ್‌ನಲ್ಲಿ ಬರೀಲಿಕ್ಕೆ ಬರಲ್ಲ…ನಾನು ಫೇಲ್  ಅಗಿದೆ. ಕ್ಲಾಸ್‌ನಲ್ಲಿ ಕೂರಲಿಕ್ಕೆ ನನಗೆ ನಾಚಿಕೆ ಆಗಿದೆ ಅಂತ ಹೇಳಿದೆ. ಮತ್ತೆ 10ನೇ ಕ್ಲಾಸನ್ನು ಹಾಗೂ ಹೀಗೂ ಪಾಸ್ ಮಾಡಿದೆ. ನಂತರ ಆರ್ಟ್ಸ್, ಕಾಮರ್ಸ್ ಬಿಟ್ಟು ಸೈನ್ಸ್‌ಗೆ ಹೋದೆ. ಆ ಸಮಯದಲ್ಲಿ ನನಗೆ ನಿಗೂಡ್ ಅನ್ನೋರ ಪರಿಚಯ ಆಯ್ತು. ನಾಟಕದಲ್ಲಿ ಹೆಸರು ಮಾಡಿದವರು ಅವರು. ಕೊಂಕಣಿ ಭಾಷೆಯಲ್ಲಿ ನಾಟಕ, ಚೈತನ್ಯ ಮಹಾಪ್ರಭುವಿನ ಜೀವನ ಕುರಿತ ನಾಟಕವದು. ನಾಟಕ ಮಾಡ್ತಾ ಮಾಡ್ತಾ ನನ್ನಲ್ಲಿ ಉಡುಗಿ ಹೋಗಿದ್ದ ಚೈತನ್ಯ ಬರಲಿಕ್ಕೆ ಶುರು ಆಯ್ತು. ಜನರ ಮೆಚ್ಚುಗೆ ಸಿಕ್ತು. ಕನ್ನಡ ಕೊಂಕಣಿ ನಾಟಕಗಳಲ್ಲಿ ಪಾತ್ರ ಮಾಡ್ತಾ ಹೋದೆ. ಸ್ಟೇಜ್‌ನಲ್ಲಿ ನಿಂತು ನಾಟಕ ಆಡೋದು ಇದ್ಯಲ್ಲ, ಅದು ಒಂಥರಾ ಸವಾಲು. ರಿಹರ್ಸಲ್‌ನಲ್ಲಿ ಸರಿ ಬರ್ತಿತ್ತು. ಸ್ಟೇಜ್‌ನಲ್ಲಿ ಒಂದೊಂದ್ಸಲ ಕಷ್ಟ ಆಗ್ತಿತ್ತು. ನಟ ಆಗ್ತಿನಿ ಅಂತ ನಾನು ಯಾವ ಕಾಲ್ದಲ್ಲೂ ಅಂದ್ಕೊಂಡಿರಲಿಲ್ಲ. ಕನ್ನಡಿಯಲ್ಲಿ ಮುಖ ನೋಡ್ಕೊಂಡಿದ್ಯೋ ಹ್ಯಂಗೇ, ನಾಟಕ ಗೀಟಕಾ ಸರಿ ಊಟಕ್ಕೇನು ಅಂತ ಕೆಲವರು ಕೇಳ್ಲಿಕ್ಕೆ ಶುರು ಮಾಡಿದರು. ಕೊಂಕಣಿ, ಕನ್ನಡ ನಾಟಕಗಳ ಮೂಲಕ ಬಂದೋನು. ಅಮೋಲ್ ಪಾಲೇಕರ್ ಪರಿಚಯ ಆಯಿತು. ಪಾಲೇಕರ್ ಸತ್ಯದೇವ್ ದುಬೆ ಅವರನ್ನ ಪರಿಚಿಯಿಸಿದರು. ಭೋಪಾಲ್‌ನಿಂದ  ಬಂದೋರು ಅವರು. ಸಂಪ್ರದಾಯಸ್ಥ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ ನಾನು, ಆಧುನಿಕ ನಾಟಕಗಳಲ್ಲೂ ಪಾತ್ರ ಮಾಡ್ಲಿಕ್ಕೆ ಶುರು ಮಾಡಿದರು. ಆಗ ಸಹಾಯಕ್ಕೆ ಬಂದಿದ್ದು ಸತ್ಯದೇವ್ ದುಬೆ. ಬಾಡಿ ಲಾಂಗ್ವೇಜ್ ಕಲಿಸಿದ್ದೇ ಅವರು. ರಿಹರ್ಸಲ್‌ನಲ್ಲಿ ಸಹಾಯ ಮಾಡಿದರು. ಸ್ಮಾರ್ಟ್ ನಡಿಗೆ ಕಲಿಸಿದ್ದೂ ದುಬೆ ಅವರು. ಕೊಂಕಣಿ, ಕನ್ನಡ ನಾಟಕಗಳಲ್ಲಿ ಪಾತ್ರ ಮಾಡ್ತಿದ್ದ ನಾನು, ಮರಾಠಿ, ಹಿಂದಿ ಭಾಷೆಯ ರಂಗ ಪ್ರಯೋಗಗಳಲ್ಲೂ ಕಾಣಿಸಿಕೊಂಡೆ. ಅಷ್ಟರಲ್ಲಿ ಸೈನ್ಸ್ ಮರೆತು ಹೋಗಿತ್ತು. ಇದೇ ನಾಟಕಗಳಲ್ಲಿ ಮೆಚ್ಚುಗೆ ಸಿಕ್ತಿತ್ತು. ನನ್ನನ್ನ ನೋಡಿ, ಯೂನಿಯನ್ ಬ್ಯಾಂಕ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ನನಗೆ ಕೆಲ್ಸ ಕೊಡಿಸಿದರು. ನನ್ನ ತಂದೆ ಮೇಲಿನ ನನ್ನ ಭಾರ ಕಡಿಮೆ ಆಗಿದ್ದೇ ಆಗ. ಅಷ್ಟೊತ್ತಿಗೆ ನನ್ನ ತಮ್ಮ ಶಂಕರ ಕೂಡ ನನ್ನ ಜೊತೆ ಸೇರಿಕೊಂಡೆ. ನಾಟಕಗಳಿಂದ ನನಗೆ ನೆರವು ಸಿಕ್ತಿತ್ತು. ಸತ್ಯದೇವ್ ದುಬೆ ಜತೆ ಕೆಲ್ಸ ಮಾಡ್ತಿದ್ದಾಗ ವೆಂಕಟರಾವ್ ಅನ್ನೋರು ಒಂದು ಪಾತ್ರಕ್ಕಾಗಿ ಹುಡುಕ್ತಾ ಇದ್ದ್ರು. ಕನ್ನಡದಲ್ಲಿ. ವಂಶವೃಕ್ಷಕ್ಕೆ. ನನ್ನನ್ನೂ ಕರೆಸಿದರು. ವೈ.ಎನ್.ಕೃಷ್ಣಮೂರ್ತಿ, ಜಿ.ವಿ.ಅಯ್ಯರ್, ಗಿರೀಶ್ ಕಾರ್ನಾಡ್ ಅವರ ಮೂಲಕ ಮೊದಲ ಚಿತ್ರ ಸಂಕಲ್ಪದಲ್ಲಿ ಪಾತ್ರ ಮಾಡಿದೆ. ನಂತ್ರ ಮುಂಬೈಗೆ ಹೋದೆ. ಸತ್ಯದೇವ್ ದುಬೆ ಅವರ ಎಲ್ಲಾ ನಾಟಕಗಳಲ್ಲಿ ರಿಹರ್ಸಲ್ ಮಾಡ್ತಿದ್ದೆ. ಒಟ್ಟು 5 ನಾಟಕಗಳ ರಿಹರ್ಸಲ್‌ನಲ್ಲಿ ಭಾಗವಹಿಸಿದ್ದೆ. ನಾಟಕಗಳಲ್ಲಿ ನೆಲೆ ನಿಲ್ಲಬೇಕು ಅಂದ್ಕೊಂಡಾಗಲೇ ಸಿನಿಮಾ ಕಡೆ ವಾಲಿದೆ. ಇದ್ರ ಬಗ್ಗೆ ದುಬೆ ಅವರಿಗೆ ನನ್ನ ಮೇಲೆ ಸ್ವಲ್ಪ ಸಿಟ್ಟಿತ್ತು. ಪುನಃ ಸಿನಿಮಾ, ನಂತ್ರ ನಾಟಕ, ಹೀಗೆ ನಡೀತಾ ಇತ್ತು. ನಂತರ ಸೈನ್ಸ್ ಬದಲಿಸಿ ಕಾಮರ್ಸ್‌ಗೆ ಸೇರಿಕೊಂಡೆ. ಕಾಮರ್ಸ್ ಪೂರೈಸಿದರೆ ಬ್ಯಾಂಕ್ ಕೆಲ್ಸಕ್ಕೆ ಅನ್ಕೂಲ ಆಗುತ್ತೆ ಅಂತ. ಸಂಜೆ ಪುನಃ ನಾಟಕಗಳಲ್ಲಿ ಪಾತ್ರ. ಇದು ದಿನನಿತ್ಯದ ದಿನಚರಿಯಾಯ್ತು. ಶಂಕರ ಆಗ ಸ್ಕೂಲ್ಗೆ ಹೋಗ್ತಿದ್ದ. ನನಗೂ ನಿನಗೂ ಯೋಗಾಯೋಗ, ಋಣ ಇಲ್ಲವೇನೋ, ನಾನು ಮಾಡ್ತಿರೋ ನಾಟಕಗಳಲ್ಲಿ ನೀನು ಪಾತ್ರ ಮಾಡ್ಲಿಕ್ಕೆ ಆಗ್ತಿಲ್ಲ, ನೋಡು ಶಾಂತರಾಂ ಫಿಲ್ಮ್ ಮಾಡ್ತಿದಾರೆ, ನೋಡು ಅಲ್ಲಿಗೆ ಹೋಗು ಅಂತ ದುಬೆ ಅಂದ್ರು. ಆಗಿನ್ನೂ ಸಂಕಲ್ಪ ಚಿತ್ರ ರಿಲೀಸ್ ಆಗಿರಲಿಲ್ಲ. ಇಲ್ಲಿ ಬಂದಾಗ ಶಾಂತರಾಂ ಜತೆ ಕೆಲ್ಸ ಮಾಡಿದೆ. ಹೀಗೆ ನಾನು ಯಾವ್ದನ್ನೂ ಅಂದ್ಕೊಂಡಂಗೆ ಆಗಿಲ್ಲ ಅನ್ನೋದಿಕ್ಕೆ ಇವೇ ಸಾಕು. ಹಳ್ಳಿಯಲ್ಲಿ ಎಷ್ಟು ಅಸಹಾಯಕನಾಗಿದ್ದೆ. ಕೆಳ ಮಧ್ಯಮ ವರ್ಗದಿಂದ ಬಂದಿದ್ದರೂ ಊಟಕ್ಕೇನೂ ತೊಂದರೆ ಇರಲಿಲ್ಲ. ಹಿಂದಿ, ಮರಾಠಿ, ಕನ್ನಡ, ಇಂಗ್ಲೀಷ್ ನಾಟಕಗಳಲ್ಲಿ ಪಾತ್ರ ಮಾಡ್ದೆ. ನನ್ನ ವೈಯಕ್ತಿಕವಾಗಿ ಕ್ರೈಸಿಸ್‌ನಲ್ಲಿ ಬೆಳೆದು ಬಂದೋನು.

ಅನಂತ ಚಿನಿವಾರ್ : ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮ ವಿಚಾರದ ಬಗ್ಗೆ, ಮಾಧ್ಯಮ ತೊಡಕಾಗಲ್ವೇ? ಇವತ್ತಿನ ದಿನದಲ್ಲಿ ಕನ್ನಡ ಓದ್ಕೊಂಡೇ ಇಂಗ್ಲೀಷ್ ಕಲಿಯುವುದಕ್ಕಾಗಲ್ವಾ?

ಅನಂತ ನಾಗ್ : ಇದರ ಬಗ್ಗೆ ಇವತ್ತಿಗೂ ಚರ್ಚೆ ನಡೀತಾ ಇದೆ. ನನಗೆ ಅನೇಕರು ಕೇಳ್ತಾರೆ. ಕನ್ನಡ ಕಲಿತ್ಕೊಂಡು ಹಿಂದಿಯಲ್ಲಿ ಪಾತ್ರ ಮಾಡಿರೋ ಬಗ್ಗೆ. ಚಿಕ್ಕಂದಿನ ವಯಸ್ಸಿನಲ್ಲಿ ಮಕ್ಕಳು ಎಲ್ಲ ಬಹು ಭಾಷೆಗಳನ್ನೂ ಕಲಿಯುವ ಸಾಮರ್ಥ್ಯ ಇರುತ್ತೆ. ನನಗೇನೇ ಮರಾಠಿ, ಹಿಂದಿ, ಗುಜರಾತಿ, ಇಂಗ್ಲೀಷ್ ಕಲೀಲಿಕ್ಕೆ ಆಯ್ತು. ದುಬೆ ಅವರು ಇದಕ್ಕೆಲ್ಲ ನನಗೆ ಸಹಾಯ ಮಾಡಿದರು. ಹಳೆಯ ಪುಸ್ತಕಗಳನ್ನ ಕೊಟ್ಟು ಸಹಾಯ ಮಾಡಿದರು. ಭಾಷೆ ಕಲೀಲಿಕ್ಕೆ ಪರಿಶ್ರಮ ಹಾಕಿದೀನಿ. ಕನ್ನಡ ಕಲಿಯೋ ಜತೇಲೇ ಇಂಗ್ಲೀಷ್ ಕಲಿಸಬೇಕು. ಇಂಗ್ಲೀಷ್ ಅಂತರ್ರಾರಾಷ್ಟ್ರೀಯ ಭಾಷೆ, ನನ್ನ ಮಗಳನ್ನ ಕಾನ್ವೆಂಟ್ಗೆ ಕಳಿಸಿದೀನಿ. ಆದರೂ ಕನ್ನಡವನ್ನ ತುಂಬಾ ಚೆನ್ನಾಗಿ ಮಾತಾಡ್ತಾಳೆ. ಕನ್ನಡವೂ ಇದ್ದೇ ಇರುತ್ತೆ, ಇಂಗ್ಲೀಷ್ ಬೇಕು. ನನ್ನ ಹೆಂಡತಿ ಕನ್ನಡದವಳಲ್ಲ. ಆದರೂ ಕನ್ನಡದಲ್ಲೂ ಚೆನ್ನಾಗಿ ಮಾತಾಡ್ತಾಳೆ. ನನ್ನ ಮಗಳಂತೂ ತುಂಬಾ ಬೇಗ ಕನ್ನಡ ಮತ್ತು ಇಂಗ್ಲೀಷ್ ಕಲಿತಳು. ನಾನು ಇಂಗ್ಲೀಷ್‌ನಲ್ಲಿ ಟೈಪಿಂಗ್ ಕಲಿತಿದ್ದೆ, ಅದೀಗ ಕಂಪ್ಯೂಟರ್ ಕನ್ನಡಕ್ಕೂ ಸಹಾಯ ಆಗಿದೆ. ಇದು ಹೆಚ್ಚುವರಿ ಜ್ಞಾನ. ಇಂಗ್ಲೀಷ್ ಕಲಿತ ಕೂಡಲೇ ಕನ್ನಡ ಅಭಿಮಾನ ಇಲ್ಲ ಅಂತ ಹೇಳೋದಿಕ್ಕೆ ಬರೋದಿಲ್ಲ. ಎಲ್ಲಾ ದಿನಪತ್ರಿಕೆಗಳಲ್ಲಿ ಕನ್ನಡವೇ ನಂಬರ್ ಒನ್ ಆಗಿತ್ತು. ಈಗ ಇಂಗ್ಲೀಷ್ ಪೇಪರ್‌ಗಳೂ ಆ ನಿಟ್ಟಿನಲ್ಲಿ ಸಾಗ್ತಿದೆ.

ಅನಂತ ಚಿನಿವಾರ್ : ನಟ ಆಗಿದ್ದೀರಿ. ಬಹಳ ದಿನದಿಂದ ಕೇಳ್ಬೇಕು ಅಂದ್ಕೊಂಡಿದ್ದೆ, ವೈವಿಧ್ಯಮಯ ನಟನೆಯಲ್ಲಿ ಎಷ್ಟನ್ನ ಒಪ್ಪಿಕೊಂಡಿದ್ದೀರಿ? ಸಂತೋಷದಿಂದ ಒಪ್ಪಿಕೊಂಡಿದ್ದೀರಾ? ಸಂಖ್ಯೆ ದೃಷ್ಟಿಯಿಂದಲ್ಲ.

ಅನಂತ ನಾಗ್ : ಮೈನಾರಿಟಿ ಆಫ್ ರೋಲ್ಗಳು ನನ್ನ ಸಂತೋಷದಿಂದ ಕೂಡಿದಾವೆ. ನಾಟಕ ಮಾಡ್ದೇ ಇದ್ದ್ರೂ ರಿಹರ್ಸಲ್‌ನಲ್ಲಿ ಭಾಗವಹಿಸಿದ್ದೀನಿ. ಈ ಟೈಪ್ ರೋಲ್ ಇರಬೇಕು, ಅಂಥಾ ಪಾತ್ರ ಮಾಡ್ಬೇಕು ಅನ್ನೋ ಥರ ನಾನು ಬಯಸೋ ಥರ ಪಾತ್ರ ಸಿಕ್ಕೋದಿಲ್ಲ. ಆ ಮೇಲೆ 8-10 ಕಲಾತ್ಮಕ ಚಿತ್ರಗಳಲ್ಲೇ ಅಭಿನಯಿಸಿದ್ದೆ.  ಕಲಾತ್ಮಕ ಚಿತ್ರಗಳಿಂದಲೇ ನಾನು ಬಂದೋನು. ಹೀರೋ ಆಗ್ಬಿಟ್ಟೆ. ಆಕ್ಟರ್ ಆಗ್ಬಿಟ್ಟೆ ಭಾವನೆಯಿಂದ ಕೆಲ್ಸವನ್ನೂ ಬಿಟ್ಟೆ. ಯೂನಿಯನ್ ಬ್ಯಾಂಕ್ನೋರು ಹೇಳಿದ್ದೇನಂದ್ರೇ, ಅಲ್ಲಿ ಸರಿಯಾಗ್ಲಿಲ್ಲ, ಫೇಲ್ ಆದ್ದ್ರೇ ವಾಪಸ್ ಬ್ಯಾಂಕ್‌ಗೆ ಬಾ ಅಂತ ಅಂದ್ರು. ಆದ್ರೂ ರಾಜೀನಾಮೆ ಕೊಟ್ಟೆ.  ನಾನು ಕೆಲ್ಸ ಬಿಟ್ಮೇಲೆ ಕಲಾತ್ಮಕ ಚಿತ್ರಗಳಲ್ಲಿ ದುಡ್ಡು ಆಗ್ಲಿಲ್ಲ. ಹೀಗಾಗಿ ಕಮರ್ಷಿಯಲ್ ಚಿತ್ರಗಳಿಗೆ ಹೋದೆ. ವೃತ್ತಿ ಕರೆದ್ಮೇಲೆ ಲಕ್ಷ, 2 ಲಕ್ಷ ಅದರೂ ಬರಬೇಕು.

ಅನಂತ ಚಿನಿವಾರ್ : ಏನಾಯ್ತು ಅಂದ್ರೇ, ನಿಮ್ಮ ಕೆರೀಯರ್ ಪೀಕ್‌ನಲ್ಲಿದ್ದಾಗ ಚಂದನದ ಗೊಂಬೆ, ಬೆಂಕಿಯ ಬಲೆ, ಹೀಗೆ….

ಅನಂತ ನಾಗ್ : ಚಂದನದಗೊಂಬೆ, ಬೆಂಕಿಯ ಬಲೆಯಲ್ಲಿ ಗ್ರೇಟ್ ವ್ಯಾಲ್ಯು ಇತ್ತು. ಆ ಕಾಲ ಹಾಗಿತ್ತು.

ಅನಂತ ಚಿನಿವಾರ್ : ಕರೆಕ್ಟ್, ಕರೆಕ್ಟ್‌. ಒಬ್ಬ ಆರ್ಟಿಸ್ಟ್ ಆಗಿ?

ಅನಂತ ನಾಗ್ : ವಿಶೇಷವಾಗಿ ದೊರೆ ಭಗವಾನ್. ಭಗವಾನ್ ಅವ್ರು ವೆಂಕಟರಾವ್, ಸತ್ಯದೇವ್ ದುಬೆ ಥರ. ನನ್ನನ್ನೂ ಗೈಡ್ ಮಾಡಿದ್ರು. ಓಲ್ಡ್ ಮಾಡಲ್ ಥರ ಆಲ್ಲ. ಮಾಡ್ರನ್ ರೋಲ್. ಡಿಫರೆಂಟ್ ಪಾತ್ರಗಳನ್ನ ಕೊಟ್ಟರು. ಮಾರ್ಗದರ್ಶನ ಮಾಡಿದರು. ಅಟ್ ದ ಸೇಮ್ ಟೈಮ್, ಬೇರೆ ನಿರ್ದೇಶಕರು, ನಿರ್ಮಾಪಕರು, ಜನರು ನಿಮ್ಮನ್ನು ಈ ರೀತಿ ಇಷ್ಟ ಪಡ್ತಾರೆ ಅಂತ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದೆ. ನನಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾಯ್ತು.

ಅನಂತ ಚಿನಿವಾರ್ : ಎಕ್ಸಾಂಪಲ್‌ಗಳು ಹೇಳ್ಬೋದಾ? ನೀವು ಇಷ್ಟಪಡೋ ಪಾತ್ರಗಳು, ಮೇರಾ ನಾಮ್ ಜೋಕರ್ ಥರ ಪಾತ್ರವನ್ನ ಇಷ್ಟು ವರ್ಷಗಳಾದ್ರೂ ಇವತ್ತಿಗೂ ಒಪ್ಕೋಬೋದಲ್ಲಾ…

ಅನಂತ ನಾಗ್ : ಓಹೋ ಅಮೇಜಿಂಗ್. ಹಂಸಗೀತೆ, ಅನುರೂಪ, ಕನ್ನೇಶ್ವರರಾಮ, ಸಂಕಲ್ಪ, ಶ್ಯಾಮ್ ಬೆನೆಗಲ್  ಜೊತೆ ಅಂಕುರಾ, ಕಲಿಯುಗ್, ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ ಆಯ್ತು.

ಅನಂತ ಚಿನಿವಾರ್ : ಡ್ಯಾನ್ಸ್‌ಗೆ ನೀವು ಅನ್‌ಕಂಫರ್ಟಬಲ್…

ಅನಂತ ನಾಗ್ : ನಾನು ಹಳ್ಳಿಯಿಂದ ಬಂದೋನು. ಡ್ಯಾನ್ಸ್ ಅಷ್ಟಿರಲಿಲ್ಲ. ಬಹುತೇಕ ಡಾನ್ಸ್‌ಗಳಲ್ಲಿ ಸಾಹಿತ್ಯ ಸಂಗೀತ ಚೆನ್ನಾಗಿತ್ತು. ಟೀವಿಯಲ್ಲಿ ನನ್ನದೇ ಹಾಡುಗಳು ಪ್ರಸಾರ ಅಗ್ತಾ ಇರೋದನ್ನ ನೋಡಿದ್ರೇ ನನ್ನನ್ನ ಜನ ಹ್ಯಂಗೇ ಅಕ್ಸೆಪ್ಟ್ ಮಾಡಿದ್ರು ಅಂತ ಅನ್ನಿಸಿದ್ದೂ ಇದೆ.

ಅನಂತ ಚಿನಿವಾರ್ : 1960, 70, 80ರಲ್ಲಿ ಪ್ರಯೋಗಶೀಲ ಸಿನಿಮಾಗಳು ಬಂದಿದಾವೆ. ನಂತರ ಶಂಕರ್ ನಾಗ್ ಸೇರಿದರು. ಕಲಾತ್ಮಕ ಚಿತ್ರಗಳು ಬರ್ತಾ ಬರ್ತಾ ಕಮರ್ಷಿಯಲ್ ಚಿತ್ರಗಳ ಮಧ್ಯೆ ಅಂತರ ಹೆಚ್ಚಾಗ್ತಾ ಹೋಯ್ತು. ಈ ಸಂದರ್ಭದಲ್ಲಿ ಶಂಕರರನ್ನ ಹೇಗೆ ನೆನಪು ಮಾಡ್ಕೋತೀರಾ?

ಅನಂತ ನಾಗ್ : ಹೌದು, ಮಿಸ್ ಮಾಡ್ಕೊಳ್ತಿದೀನಿ. ಮಿಸ್ಸಿಂಗ್ ಮೋರ್ ಆಸ್ ಎ ಬ್ರದರ್. 6 ವರ್ಷಗಳ ಕಾಲ ನಾನು ಜತೇಲಿ ಇದ್ದೆ. ಬೆಳೆದಿದ್ದು ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್, ಸತ್ಯು… ಇನ್ ಫ್ಯಾಕ್ಟ್ ಸತ್ಯು ಜತೆ ಬರ ಮಾಡ್ದೆ. ಆ ಮೇಲೆ ಬರ ಬರ್ತಾ ಆರ್ಟ್ ಫಿಲ್ಮ್ ಕಡ್ಮೆ ಆಯ್ತು. ಶಂಕರನ ಒಂದಾನೊಂದು ಕಾಲದಲ್ಲಿ, ಬಾಕಿ ಕಮರ್ಷಿಯಲ್ ಆಯ್ತು. ಆಗ್ಲೂ ಕಮರ್ಷಿಯಲ್ ಫಿಲ್ಮ್ ಮಾಡಿದ್ವಿ. ಮಿಂಚಿನ ಓಟ, ಆಕ್ಸಿಡೆಂಟ್. ಸ್ಕ್ರಿಪ್ಟ್ ಚೆನ್ನಾಗೇ ಇತ್ತು. ಆಮೇಲೆ ಲಾಸ್ ಆಯ್ತು, ಶಂಕರ್ ಡೈರೆಕ್ಟ್ ಮಾಡಿ, ನಾನು ಆಕ್ಟ್ ಮಾಡಿದ್ರೂ. ಆ ಸಂದರ್ಭದಲ್ಲಿ ಮಾಲ್ಗುಡಿ ಡೇಸ್ ಸ್ಕ್ರಿಪ್ಟ್ ಬಂತು. ಶಂಕರ್ ವಾಸ್ ಹೆಸಿಟಂಟ್. ದಿಸ್ ಈಸ್ ಯುವರ್ ಮೀಡಿಯಂ, ಬಿಕಾಸ್ ನಾವು ಆರ್ಟ್ ಫಿಲ್ಮ್ ಕಡೆಯಿಂದ ಬಂದೋರು. ಮೆಂಟಲೀ ಒಪ್ಪಿತವಾಗಿರೋದು ಇದು. ಜನ ಏನನ್ನ ಬಯಸ್ತಾರೋ ಅದನ್ನ ಅವ್ರು ಮಾಡ್ತಾರೆ. ನಾವೇ ಹೇಳಿದ್ದು ಓಡಬೇಕು ಅನ್ನೋದು ನಿಜ ಆದ್ರೂ ನಾವು ಮಾಡಿದ್ದೂ ಓಡ್ಲಿಲ್ವಾ. ಶಂಕರ್ ವಾಸ್ ಎ ಯಂಗರ್ ಜನರೇಷನ್. ನಾವೇನಿದ್ದ್ರೂ ಓಲ್ಡ್ ಜನರೇಷನ್. ಶ್ಯಾಮ್ ಬೆನೆಗಲ್, ಸತ್ಯು, ದುಬೇ….

ಅನಂತ ಚಿನಿವಾರ್ : ಕಲಾತ್ಮಕ ಚಿತ್ರಗಳ ಬಗ್ಗೆ ಯಾಕೆ ಮಾತಾಡ್ತೀದಿನಿ ಅಂದ್ರೇ, ಬುದ್ದಿಜೀವಿ ಅನ್ನೋ ಪದಕ್ಕೆ ಇನ್ನೂ ವ್ಯಾಪಕ ಅರ್ಥ ಬಂದಿರಲಿಲ್ಲ. ಬುದ್ದಿಜೀವಿ ನಟ….

ಅನಂತ ನಾಗ್ : ದಟ್ ಇಸ್ ಥ್ಯಾಂಕ್ಸ್ ಟು ಲಂಕೇಶ್.

ಅನಂತ ಚಿನಿವಾರ್ : ನಾಸಿರುದ್ದೀನ್ ಶಾ ಥರದೋರು ಥೇಟರ್ ಕಡೆ ವಾಲ್ತಿದಾರೆ. ಆ ಥರ ಥೇಟರ್ ಕಡೆ ನೀವು ವಾಪಸ್?

ಅನಂತ ನಾಗ್ : ನಾಸಿರುದ್ದೀನ್ ಶಾ ಎನ್ಎಸ್‍ಡಿಯಲ್ಲಿ ಕಲಿತೋನು. ನಟನಾಗ್ಬೇಕು ಅಂತ ಹಂಬಲದಿಂದ ಬಂದೋನು ಅವ್ನು. ನಾನು ನಟನಾಗಬೇಕು ಅಂತ ಬಂದಿಲ್ಲ. ಅದ್ರೂ ನಾಟಕದಿಂದ ಬಂದೋನಾದ್ರೂ ಶ್ರೀನಿವಾಸಪ್ರಭು, ಶಂಕರ್ ಜತೆ ಒಂದಷ್ಟು ನಾಟಕಗಳನ್ನ ಆಡಿದ್ದೀನಿ. ಜೆ.ಪಿ. ಆಂದೋಲನ ಮೂಲಕ ರಾಜಕೀಯಕ್ಕೆ ಬಂದೆ. 1967ನೇ ಇಸವಿ. ಅಲ್ಲಿ ಬೇರೆ ನನಗೆ ಡೈಮನ್ಷನ್ ಆಫ್ ಲೈಫೇ ಬೇರೆ ಇತ್ತು. ಸಿನಿಮಾ ವೈಡೇಸ್ಟ್ ಮೀಡಿಯಾ. ಕ್ಯಾಂಪೇನ್ಗೆ ಹೋದಾಗ ಸಾವಿರ, ಲಕ್ಷ, ಹೀಗೆ ಜನ ಸೇರ್ತಾ ಇದ್ರು. ಇದೆಲ್ಲಾ ನಟ ಆಗಿದ್ದ್ರಿಂದ.

ಅನಂತ ಚಿನಿವಾರ್ : ಥೇಟರ್ ಆಫ್ ಪೊಲಿಟಿಕ್ಸ್, ನಿಮ್ಮನ್ನ ಸೆಳ್ಕೊಂಡು ಬಂತು.

ಅನಂತ ನಾಗ್ : ಈ ಪೊಲಿಟಿಕಲ್ ಥೇಟರ್ ಇದ್ಯಲ್ಲಾ, ರಿಯಲ್ ಲೈಫ್ ಪೊಲಿಟಿಕಲ್ ಥೇಟರ್, ಅನೇಕರು ಹೇಳ್ತಾರೆ, ಹಂಸಗೀತೆ ಎಷ್ಟು ಚೆನ್ನಾಗಿತ್ತು ಅಂತಾರೆ. ಟೈಮ್ ಈಸ್ ಫಾಸ್ಟ್. ಸಿಮಿಲರ್ಲಿ, ಯಂಗರ್ ಜನರೇಷನ್ ಕೇಳೋದೇ ಬೇರೆ. ನಸೀರುದ್ದೀನ್ ಶಾ ಈಸ್ ಫೈನ್. ಸಿನಿಮಾ ಆಕ್ಟರ್ ಆಗಿ ಇನ್ನೂ ನಟಿಸಬೇಕು ಅನ್ನೋ ಒಂದು ಫೈಯರ್ ಇನ್ ದಿ… ಹೊಟ್ಟೇಲಿ ಈಗ ಬೆಂಕಿಯೇ ಇಲ್ಲ.

ಅನಂತ ಚಿನಿವಾರ್ : ಆಸಕ್ತಿ ಕಳ್ಕೊಂಡಿದೀರಾ… ರಾಜಕೀಯದಲ್ಲೂ ಆಸಕ್ತಿ ಕಳ್ಕೊಂಡೀದೀರಾ?

ಅನಂತ ನಾಗ್ : ಅದೇ ಎಗೇನ್, ಸಿನಿಮಾ ನಟನಾಗಿ ಬರಬೇಕು ಅಂತ ಹ್ಯಾಗ್ ಅಂದ್ಕೊಂಡಿಲ್ವೋ, ಹಾಗೇನೇ ಪೊಲಿಟಿಕಲೀ ಕೂಡ. ಜೆಪಿ ಮೂವ್‌ಮೆಂಟ್, ಕಾಂಗ್ರೆಸ್ ವಿರೋಧಿ ಅಲೆ ಇತ್ತು. ಆವಾಗ ಜನತಾ ಪಾರ್ಟಿ, ಲಂಕೇಶ್, ಖಾದ್ರಿ ಶಾಮಣ್ಣ, ಪಟೇಲ್ ಜತೇಲಿ, ಅಲ್ಲಿಂದ ಚೇಂಜ್ ಮಾಡ್ಲಿಲ್ಲ. ನಾನು, ಶಂಕರ್ ಜತೆ ಸೇರ್ಕೋಂಡು 84-85ರಲ್ಲಿ ಕ್ಯಾಂಪೇನ್ ಮಾಡಿದ್ವಿ. ಆಗ ಏನಾದ್ರೂ ಕೇಳಿ ಅಂದ್ರು ಜೀವರಾಜ್ ಆಳ್ವಾ ಅವ್ರು. ಆದ್ರೆ ನಮ್ಗೇ ಯಾವ ಆಸೆನೂ ಇರಲಿಲ್ಲ. ಎಮ್ಮೆಲ್ಸಿ ಕೊಡೋದಾದ್ರೇ ತಗೋತೀನಿ ಅಂದೆ. ಅದು ಆಗ. ಆದ್ರೆ ನಮ್ ತಂದೆಗೆ ಹುಷಾರಿರಲಿಲ್ಲ. ಆಗ ಶಂಕರ್‌ಗೆ ಕೇಳಿದೆ. ಅವ್ನು ಒಪ್ಪಲಿಲ್ಲ. ನಾವು 89ರಲ್ಲಿ ಅಧಿಕಾರ ಕಳ್ಕೊಂಡ್ವಿ. ಆವಾಗ ನಾನು ಎಮ್‌ಎಲ್‌ಸಿ. 94ರಲ್ಲಿ ಎಲೆಕ್ಷನ್ಗೆ ಹೋದಾಗ ನನಗೆ ಭಾಷಣ ಕೊಟ್ಟರು. ಆಗ ನಾನು ವೀರಾವೇಶದಿಂದ ಭಾಷಣ ಮಾಡ್ದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ, ದೇಶದಲ್ಲಿ ಅನ್ಯಾಯ ನಡೀತಿದೆ, ಅಂತ. ನಂತ್ರ ಪಟೇಲ್ರು ಜತೆ ಕಾರಿನಲ್ಲಿ ಹೋಗೋವಾಗ ಪಟೇಲ್ರು ಕೇಳಿದ್ರು, ನಡೀತಿರೋದೇ ರಾಜಕಾರಣ ಅಧಿಕಾರಕ್ಕಾಗಿ, ಕೆಟ್ಟ ಹೆಸ್ರು ಬರುತ್ತೆ ಅಂತ ಅಧಿಕಾರ ಬೇಡ ಅಂತಲ್ಲ, ಅಧಿಕಾರಕ್ಕಾಗಿ ಬೇಡ ಅನ್ನೋದಾದ್ರೇ ರಾಜಕಾರಣ ಯಾಕ್ ಮಾಡ್ತೀರಿ ಅಂತ ಅಂದ್ರು. ಈ ಮಧ್ಯಮ ವರ್ಗದೋರು ಹೀಗೇ, ಹಿಪೋಕ್ರಸಿ, ಅಂತ ಹೇಳಿದರು. ಪಟೇಲ್ರು ಮುಖ್ಯಮಂತ್ರಿ ಆದ್ಮೇಲೆ ನನಗೆ ಮಂತ್ರಿ ಪಟ್ಟಾನೂ ಸಿಕ್ತು. ಮಿನಿಸ್ಟರ್  ಅಗ್ಬೇಕು, ಎಮ್ಮೆಲ್ಲೆ ಆಗ್ಬೇಕು ಅಂತ ಬಂದಿಲ್ಲ, ಆದ್ರೂ ನಗರಾಭಿವೃದ್ಧಿ ಖಾತೆಯ ದೊಡ್ಡ ಜವಾಬ್ದಾರಿ ಕೊಟ್ಟ್ರು. ಆದ್ರೆ ನಾನ್ ಕೇಳಿದ್ದೇನಂದ್ರೇ, ಈ ಖಾತೆ ಮುಖ್ಯಮಂತ್ರಿ ಖಾತೆಗೆ ಹೊಂದ್ಕೊಂಡಿರಬೇಕು ಅಂತ ಕೇಳ್ದೆ. ಅದಕ್ಕವರು ನಕ್ಕರು.

ಅನಂತ ಚಿನಿವಾರ್ : ನೀವಿದ್ದ ಪೋರ್ಟೋಫೊಲೀಯೋ ಬಗ್ಗೆ ಹೇಳೋದಾದ್ರೇ ಇವತ್ತು ನಾವು ಹೇಳ್ತಿರೋ ಡಿನೋಟಿಫಿಕೇಷನ್, ಆಗ್ಲೂ ನೋಟಿಫಿಕೇಷನ್, ಡಿನೋಟಿಫಿಕೇಷನ್, ಆಗ್ಲೂ ಆಗ್ತಿತ್ತಾ? ಈಗ ಯಾಕೇ ದೊಡ್ಡ ಸುದ್ದಿ ಆಗ್ತಿದೆ?

ಅನಂತ ನಾಗ್ : ನೋಡಿ, ಇದು ಸೂಕ್ಷ್ಮ ವಿಚಾರ. ನಾನು ಹೆಚ್ಚು ತಿಳ್ಕೊಂಡವನಲ್ಲಾ. ನಾನು ಹೇಳ್ತೀನಿ, ನನ್ನ ದಷ್ಟಿಕೋನದಲ್ಲಿ. ನಿಮ್ಮತ್ರ 50 ಎಕರೆ ಪಿತ್ರಾರ್ಜಿತವಾಗಿ ಬಂದಿದೆ. ಅದು ನೆಲಮಂಗಲ ಆಚೆ. ಆವಾಗ ಗ್ರೀನ್ ಬೆಲ್ಟ್ ಅಂತಾನೋ, ಇಂಡಸ್ಟ್ರೀಯಲ್ ಪರ್ಪಸ್ ಅಂತಾನೋ ಸರ್ಕಾರ ನೋಟಿಫೈ ಮಾಡುತ್ತೆ. ಆವಾಗ ನಿಮಗೆ ಶಾಕ್ ಆಗುತ್ತೆ. ಪಿತ್ರಾರ್ಜಿತವಾಗಿ ಬಂದಿದ್ದು ನೋಟಿಫೈ ಆಯ್ತಲ್ಲಾ ಅಂತ. ನೋಟಿಫೈ ಮಾಡೋದು ಯಾಕ್ ಬರುತ್ತೆ ಅಂತಲ್ಲ. ನೋಟಿಫೈ ಆಯ್ತು ಅಂತಾನೇ ಕೋರ್ಟ್ಗೆ ಹೋಗ್ತಾರೆ. ಆಗ ಡಿನೋಟಿಫಿಕೇಷನ್ ಆಯ್ತು. ಅನೇಕ ಸಲ ನೋಟಿಫಿಕೇಷನ್ಗಳು….ಅಲ್ಲೇ ಡಿನೋಟಿಫಿಕೇಷನ್ಗಳೂ ಭ್ರಷ್ಟಾಚಾರಕ್ಕೆ ತಿರುಗಿಕೊಂಡಿದಾವೆ. ನೋಟಿಫಿಕೇಷನ್ಗಳು ಯಾಕ್ ಮಾಡ್ಬೇಕು. ಸೆಟ್ ಆಫ್ ಪೀಪಲ್, ಗ್ರೀನ್ ಬೆಲ್ಟ್ ಅಬ್ಜೆಕ್ಷನ್ಸ್ಗಳನ್ನ ಹಾಕ್ಬೇಕು….

ಅನಂತ ಚಿನಿವಾರ್ : ಡಿನೋಟಿಫಿಕೇಷನ್ ಬಗ್ಗೆ ಯಾಕೆ ಕೇಳಿದೆ ಅಂದ್ರೆ…

ಅನಂತ ನಾಗ್ : ಡಿನೋಟಿಫಿಕೇಷನ್ ಸವಾಲು ಯಾಕ್ ಬರುತ್ತೆ ಅಂದ್ರೆ, ಬಿ ಕಾಸ್ ಆಫ್ ನೋಟಿಫಿಕೇಷನ್. ಅದನ್ನ ಮಾಡೋವಾಗ್ಲೇ ಯೋಚನೆ ಮಾಡಿ, ಪಬ್ಲಿಕ್ಗೂ ಹೇಳಿ ಅಹವಾಲು ಕೇಳ್ಕೋಬೇಕು. ಡಿನೋಟಿಫಿಕೇಷನ್ ಅಂದ್ಕೂಡ್ಲೇ ಭ್ರಷ್ಟಾಚಾರ ಥರ ಆಗ್ಹೋಗಿದೆ.

ಅನಂತ ಚಿನಿವಾರ್ : ಸಿನಿ ಜಗತ್ತಿನ ಯಾವ್ದೇ ಕಾರ್ಯಕ್ರಮದಲ್ಲೂ ಭಾಗವಹಿಸ್ತಿಲ್ಲ.

ಅನಂತ ನಾಗ್ : ಆ ಸದ್ದುಗದ್ದಲ ನಂಗ್ಯಾಕೋ ಇಷ್ಟ ಇಲ್ಲ. ಸಿನಿಮಾ ಲೈಫೇ ಒಂದು ಶೋ ಬ್ಯುಸಿನೆಸ್. ಒಂಥರಾ ಆರ್ಟಿಫಿಷಿಯಲ್ ಜಗತ್ತು. ಇವತ್ತಿಗೂ ಹಾಗೇ ಇದೆ. ಪ್ರೆಸೆಂಟ್ ಆಗಿ ಬದಕೋಕೋ ಆಗ್ತಿಲ್ಲ, ಮುಂದೆ ಹೋಗೋಕೂ ಆಗ್ತಿಲ್ಲ.

ಅನಂತ ಚಿನಿವಾರ್ : ಮತ್ತೆ ನಿಮ್ಮ ಸಿನೆಮಾ ಬಗ್ಗೆ. ನಿಮ್ಮ ಕಮರ್ಷಿಯಲ್ ಸಿನೆಮಾಗಳಲ್ಲಿ ಖುಷಿ ಪಟ್ಟ ಸಿನೆಮಾ ಬಗ್ಗೆ.

ಅನಂತ ನಾಗ್ : ಒಂದು ಬಹಳ ತೃಪ್ತಿ ಕೊಟ್ಟಂತಹ ಶ್ಯಾಮ್ ಬೆನಗಲ್ ಚಿತ್ರ, ಮರಾಠಿಯಲ್ಲಿ, ಉಂಡೂರಾ ಕಾದಂಬರಿ ಆಧರಿಸಿದ ಚಿತ್ರ. ತೆಲುಗು ಮತ್ತು ಮರಾಠಿಯಲ್ಲಿ. ಆ ಪಾತ್ರವೇ ಮೂರು ಸ್ತರದಲ್ಲಿ ಬಂದಿದೆ. ಹಂಸಗೀತೆಯಲ್ಲಿನ ಪಾತ್ರ, ಚಂದನದ ಬೊಂಬೆ, ಬೆಳದಿಂಗಳ ಬಾಲೆ, ಬೆಂಕಿಯ ಬಲೆ, ಹಾಗೇನೇ ಸತ್ಯು ಅವರ ಬರ ಚಿತ್ರ. ಇನ್ನೂ ಬೇರೆ ಬೇರೆ ಇದಾವೆ.

ಅನಂತ ಚಿನಿವಾರ್ : ಕನ್ನಡ ಚಿತ್ರರಂಗದ ಇವತ್ತಿನ ಸ್ಥಿತಿ ಬಗ್ಗೆ…

ಅನಂತ ನಾಗ್ : ಯಂಗರ್ ಜನರೇಷನ್ ಮಾಡ್ತಿದೆ. ಇಂಡಸ್ಟ್ರೀ ಉಳೀಬೇಕು. ಸಿನೆಮಾದಲ್ಲಿ ಸೃಜನಶೀಲತೆ ಇರಲೇಬೇಕು. ಬೇರೇ ಬೇರೆ ಡೋಸಸ್ ಇರಬೇಕು. ಶಿಕ್ಷಣ, ಎಂಟರ್ಟೈ‌ನ್ಮೆಂಟ್,  ಈಗ ಮಾಡ್ತಾ ಇದಾರೆ, ಆದ್ರೆ ಜನ ಬರ್ತಿಲ್ಲ.

ಅನಂತ ಚಿನಿವಾರ್ : ಡಬ್ಬಿಂಗ್ ಬಗ್ಗೆ?

ಅನಂತ ನಾಗ್ : ಸಂಕುಚಿತ ಅನ್ನಿಸಿದರೂ ಇಲ್ಲಿನ ಪರಿಸ್ಥಿತಿನೇ ಬೇರೆ ಇದೆ. ತಮಿಳುನಾಡು, ಕೇರಳ, ಉತ್ತರ ಭಾರತ, ಆಂಧ್ರ, ಹೋಲಿಸಿದರೇ ಇಲ್ಲಿ ಎಲ್ಲಾ ಭಾಷೆಗಳ ಚಿತ್ರಗಳೂ ಬರುತ್ತೆ. ಆದ್ರೆ ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು ಹೋಗೋದೇ ಇಲ್ಲ. ಈ ನಿಟ್ಟಿನಲ್ಲಿ ಡಬ್ಬಿಂಗ್ ಬೇಡ ಅನ್ನೋದು ನನ್ನ ಭಾವನೆ. ಮದ್ರಾಸಿನಿಂದ ನಮ್ಮ ಇಂಡಸ್ಟ್ರಿಯನ್ನ ಇಲ್ಲಿಗೆ ತರಬೇಕಾದರೇ ಹರ ಸಾಹಸ ಮಾಡ್ಬೇಕಾಯ್ತು. ಮೊನ್ನೆ ಶಿವರಾಜ್ ಕುಮಾರ್ ಮಾತಾಡಿದ್ರು. ನಂಗೆ ಖುಷಿ ಆಯ್ತು. ಪರ ಭಾಷೆಗಳ ಚಿತ್ರಗಳನ್ನ ನೋಡೋದಿಕ್ಕೆ ತಕರಾರು ಇಲ್ಲ. ಆ ಭಾಷೆಯವರು ತಮ್ಮ ಚಿತ್ರಗಳನ್ನ ನೋಡ್ಲಿ, ಆದ್ರೆ ಕನ್ನಡಕ್ಕೆ ಡಬ್ ಮಾಡೋದು ಸರಿಯಲ್ಲ.

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ-5

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


40ಕೋಟಿ ವರ್ಷಗಳು. ಇಲ್ಲಿಂದ ಮುಂದಿನ 10 ಕೋಟಿ ವರ್ಷಗಳ ಅವಧಿಯಲ್ಲಿ ಬಂಡೆಗಳು ಒಂದೆಡೆ ಸರಿಯಲು ಆರಂಭಿಸಿದವು. ಇದೇ ಸಂದರ್ಭದಲ್ಲಿ ಸಾಗರಜೀವಿಗಳು ಭೂಮಿಯ ಮೇಲೆ ಕಾಲಿಟ್ಟವು. ಓಜೋನ್ ಪದರ ಭೂಮಿಯನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತಿದ್ದರಿಂದಾಗಿ ಜೀವಿಗಳು ಸಾಗರ ತೊರೆದು ಭೂಮಿಯತ್ತ ಹೆಜ್ಜೆ ಇಟ್ಟವು.

30 ಕೋಟಿ ವರ್ಷಗಳ ಹೊತ್ತಿಗೆ ಭೂಮಿ ಜೌಗು ಪ್ರದೇಶಗಳಿಂದ ಕೂಡಿತ್ತು. 16 ದಶಲಕ್ಷ ವರ್ಷಗಳ ಕಾಲ ಇದೇ ಸ್ಥಿತಿ ಇತ್ತು. ಈ ಪರಿಸರದಿಂದಾಗಿ ಕೊಳೆತ ಸಸ್ಯಕಾಶಿ ಕಲ್ಲಿದ್ದಿಲಾಗಿ, ಸತ್ತ ಸಾಗರ ಜೀವಿಗಳು ತೈಲವಾಗಿ ಪರಿವರ್ತನೆಗೊಂಡವು.

ಈ ಹೊತ್ತಿಗೆ ಭೂಮಿಯ ಮೇಲೆ ಸಹಸ್ರಪದಿ, ಏರೋಪ್ಲೇನ್ ಚಿಟ್ಟೆ, ಸರೀಸೃಪಗಳು ಕಾಣಿಸಿಕೊಂಡಿದ್ದವು. ಜೀವಗೋಳ ರೂಪುಗೊಂಡಿತು ಎನ್ನುವ ಹೊತ್ತಿಗೆ ದೊಡ್ಡದೊಂದು ಸವಾಲು ಎದುರಾಗಿತ್ತು.

ಭೂಮಿ ತನ್ನ ಒಡಲಲ್ಲಿ ಅದೆಷ್ಟು ಬೆಂಕಿಯನ್ನಿಟ್ಟುಕೊಂಡಿತ್ತೊ ಅದು ತನ್ನ ಹುಟ್ಟಿನಿಂದಲೂ ಜ್ವಾಲಾಮುಖಿಗಳನ್ನು ಸಿಡಿಸುತ್ತಲೇ ಬಂದಿತ್ತು. ಭೂಮಿಯ ಮೇಲೆ ಇನ್ನೇನು ಜೀವವಿಕಾಸವಾಗುತ್ತಿದೆ ಎಂಬ ಕಾಲಕ್ಕೆ ಬೆಂಕಿಯುಗುಳಿ ಭೂಮಿಯನ್ನು ಅಲ್ಲೋಲಕಲ್ಲೋಲ ಮಾಡಿಬಿಟ್ಟಿತು. ಇದು ಕೂಡ ವಿಕಾಸದ ಒಂದು ಹಂತವೇ ಆಗಿತ್ತು.

10 ಕೋಟಿ ವರ್ಷಗಳ ಕಾಲ ನಿರಾತಂಕವಾಗಿ ಜ್ವಾಲಾಮುಖಿಗಳಿಂದ ಲಾವಾರಸ ಹೊರಬೀಳುತ್ತಲೇ ಇತ್ತು. ಒಂದೆಡೆ ಶಾಖ ಮತ್ತೊಂದೆಡೆ ವಿಷಾನಿಲ ಹರಡಿ ಭೂಮಿಯ ಮೇಲಿದ್ದ ಶೇ.95ರಷ್ಟು ಜೀವಿಗಳು ನಾಶವಾದವು. ಭೂಮಿಯ ಅಲ್ಲಿಯವರೆಗಿನ ಇತಿಹಾಸದಲ್ಲಿ ಇಂಥ ವಿದ್ಯಮಾನ ಜರುಗೇ ಇರಲಿಲ್ಲ.

ಈ ವಿಚಿತ್ರ ಬೆಳವಣಿಗೆ ನಂತರ ಒಂದು ಮಹಾಖಂಡ ಸೃಷ್ಟಿ ಆಯಿತು. ಅದೇ ಪೆನ್‍ಜಿಯಾ.

24 ಕೋಟಿ ವರ್ಷಗಳು. ಭೂಮಿಯ ವಾತಾವರಣದಲ್ಲಿ ಹಲವು ಮಹತ್ವದ ಬದಲಾವಣೆ ಆಗಲಾರಂಭಿಸಿದ್ದವು. ಆಮ್ಲಜನಕ ಮತ್ತುಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಿತು. ಇತ್ತ ಲಾವಾರಸ, ವಿಷಾನಿಲದ ಪರಿಸರದಲ್ಲೂ ಬದುಕುಳಿದ ಕೆಲ ಜೀವಿಗಳು ಭಯಾನಕವಾಗಿ ಬೆಳೆದು ನಿಂತಿದ್ದವು.

ಅವೇ ಡೈನೊಸಾರ್‌ಗಳು.

ಇಂತಹ ಜೀವಿಗಳು ಭೂಮಿಯ ಮೇಲಿದ್ದವು ಎಂಬುದು ತಿಳಿದು ಬಂದಿದ್ದು ಇಂಗ್ಲೆಂಡಿನಲ್ಲಿ ಪತ್ತೆಯಾದ ಪಳೆಯುಳಿಕೆಯಿಂದ. 1822 ರಲ್ಲಿ ಮೇರಿ ಮತ್ತು ಮ್ಯಾಂಟಲ್ ಎಂಬುವವರಿಗೆ ಮೂಳೆಯೊಂದು ಸಿಕ್ಕಿತ್ತು. ಮೊದಮೊದಲು ಅದೇನು? ಯಾವ ಪ್ರಾಣಿಯ ಮೂಳೆ ಎಂಬುದು ಸ್ಪಷ್ಟವಾಗಿರಲಿಲ್ಲ. ಅಧ್ಯಯನ ಮಾಡುತ್ತ ಹೋದಂತೆ ಅದು ದೈತ್ಯ ಹಲ್ಲಿಯ ಹಲ್ಲು ಎಂದು ಕಂಡುಕೊಂಡರು.

ನಂತರದ ದಿನಗಳಲ್ಲಿ ಯೂರೋಪ್ ಮತ್ತು ಅಮೆರಿಕಾಗಳಲ್ಲಿ ದೈತ್ಯಜೀವಿಗಳ ಪಳೆಯುಳಿಕೆಗಳು ಪತ್ತೆಯಾದವು. ನಮ್ಮ ಕಾಲದ ಹಲ್ಲಿಗಳಿಗೆ ಹೋಲಿಸಿ ಇವುಗಳಿಗೆ ಡೈನೊಸಾರ್, ಅಂದರೆ ದೈತ್ಯ ಹಲ್ಲಿಗಳೆಂದು ಕರೆದರು.

18 ಕೋಟಿ ವರ್ಷಗಳಿಂದ – 10 ಕೋಟಿ ವರ್ಷಗಳ ಅವಧಿಯಲ್ಲಿ ಜ್ವಾಲಾಮುಖಿಗಳ ಚಟುವಟಿಕೆಯಿಂದ ಪೆನ್‍ಜಿಯಾ ಮಹಾಖಂಡ ಒಡೆದು ಏಳು ಖಂಡಗಳಾಗಿ ಬೇರ್ಪಟ್ಟು ಭೂಮಿಯ ಬೇರೆಬೇರೆ ಭಾಗಗಳತ್ತ ಚಲಿಸಿದವು. ಪ್ರತಿಖಂಡದಲ್ಲೂ ಡೈನೊಸಾರ್‌ಗಳು ಹಂಚಿಹೋದವು. ಜ್ವಾಲಾಮುಖಿಗಳು ಇನ್ನೂ ಕ್ರಿಯಾಶೀಲವಾಗಿದ್ದವು. ಜಾಗತಿಕ ತಾಪಮಾನ ಹೆಚ್ಚಿತು. ಇಂಗಾಲದ ಪ್ರಮಾಣ ಶೇ.500 ರಷ್ಟು ಹೆಚ್ಚಾಗಿ ಹಸಿರುಮನೆ ಪರಿಣಾಮ ಉಂಟಾಯಿತು.ಡೈನೊಸಾರ್‌ಗಳು ಅಷ್ಟು ದೈತ್ಯಾಕಾರವಾಗಿ ಬೆಳೆಯಲು ಕಾರಣ ಅವು ಈಗಿನ ಹಲ್ಲಿಗಳಂತೆ ತಂಪು ರಕ್ತದ ಜೀವಿಗಳಾಗಿರಲಿಲ್ಲ. ಬಿಸಿರಕ್ತದ ಪ್ರಾಣಿಗಳಾಗಿದ್ದವು. ಜೊತೆಗೆ ಯಥೇಚ್ಚವಾಗಿದ್ದ ಆಹಾರ, ಆಮ್ಲಜನಕದಿಂದ ಕೂಡಿದ ವಾತಾವರಣ ಡೈನೊಸಾರ್‌ಗಳು ಗಾತ್ರದಲ್ಲಿ ಅಗಾಧವಾಗಿ ಬೆಳೆಯುವಂತೆ ಮಾಡಿದವು ಎಂಬುದು ಜೀವವಿಜ್ಞಾನಿಗಳ ಅಭಿಪ್ರಾಯ.

ಇದರ ಫಲವಾಗಿ ಎಲ್ಲ ಭೂಖಂಡಗಳಲ್ಲಿ ಕಾಡು ಬೆಳೆದು ನಿಂತಿತು. ಈ ಹಸಿರಿನ ಪೋಷಣೆಯಲ್ಲಿ ಡೈನೊಸಾರ್‌ಗಳ ದೇಹ ಮತ್ತಷ್ಟು ಹಿಗ್ಗಿತು. ಆದರೆ ಈ ಸುಖದ ದಿನಗಳು ಡೈನೊಸಾರ್‌ಗಳ ಪಾಲಿಗೆ ತುಂಬಾ ದಿನಗಳ ಕಾಲ ಇರಲಿಲ್ಲ. ಅಂಥದ್ದೊಂದು ದುರಂತವೊಂದನ್ನು ಡೈನೊಸಾರ್‌ಗಳು ಎದುರಿಸಬೇಕಾಗುವ ಕಾಲ ಸನ್ನಿಹಿತವಾಗಿತ್ತು.

ಜ್ವಾಲಾಮುಖಿ ಕೊಟ್ಟ ಸಂಪತ್ತು

10ಕೋಟಿ ವರ್ಷಗಳಾದಾಗಲೂ ಭೂಮಿಯ ಬಹುತೇಕ ಎಲ್ಲಾ ಬದಲಾವಣೆಗಳಿಗೆ ಪ್ರಮುಖ ಕಾರಣವಾದ ಜ್ವಾಲಾಮುಖಿಗಳು ತಮ್ಮ ಕಾವು ಕಳೆದುಕೊಳ್ಳದೆ ಇನ್ನೂ ಜೀವಂತವಾಗಿದ್ದವು. ಶಿಲೆಗಳ ರಚನೆಗೆ, ಖಂಡಗಳ ರಚನೆಗೆ ಮತ್ತು ಅವುಗಳ ಅಲೆತಕ್ಕೆ ಕಾರಣವಾದ ಈ ಜ್ವಾಲಾಮುಖಿಗಳೇ ಅಮೂಲ್ಯವಾದ ಖನಿಜಗಳನ್ನು ಭೂಮಿಗೆ ನೀಡಿದವು. ಆ ಪೈಕಿ ಅತ್ಯಮೂಲ್ಯ ಹರಳು ವಜ್ರವೂ ಒಂದು.

ಮನುಷ್ಯ ಬಹಳ ವರ್ಷಗಳ ಕಾಲ ನದಿತಟಗಳಲ್ಲಿ ಸಿಗುತ್ತಿದ್ದ ಬೆಲೆಬಾಳುವ ಕಲ್ಲುಗಳನ್ನು ಸಂಗ್ರಹಿಸಿ ಬಳಸಿಕೊಂಡ. ಆದರೆ ಈ ಕಲ್ಲುಗಳ ಮೂಲವೆಲ್ಲಿ ಎಂಬುದು ತಿಳಿದಿರಲಿಲ್ಲ. 1869ರಲ್ಲಿ ದಕ್ಷಿಣ ಆಫ್ರಿಕಾ ಕಿಂಬರ್ಲಿಯಲ್ಲಿ ಬೃಹತ್ ಗಾತ್ರದ ವಜ್ರದ ಕಲ್ಲು ಸಿಕ್ಕಿತು. ಉದ್ದುದ್ದವಾಗಿದ್ದು ಹಳದಿ ಬಣ್ಣದಿಂದ ಕೂಡಿದ್ದ ಈ ಕಲ್ಲನ್ನು ಹೆನ್ರಿ ಕಾರ್ವಿಲ್ ಲೀವಿಸ್ ಅಧ್ಯಯನ ಮಾಡಿದರು. ಈ ವಿಶಿಷ್ಟ ಬೆಲೆಬಾಳುವ ಕಲ್ಲು ಜ್ವಾಲಾಮುಖಿಯ ಕೊಡುಗೆ ಎಂಬುದು ಆ ಅಧ್ಯಯನದಿಂದ ಸ್ಪಷ್ಟವಾಯಿತು. ಈಗ ವಜ್ರದ ಗಣಿಗಳು ಎಂದು ಕರೆಸಿಕೊಳ್ಳುತ್ತಿರುವ ಜಾಗಗಳು ಕೋಟಿ ವರ್ಷಗಳ ಹಿಂದಿದ್ದ ಪರ್ವತಗಳು ಎಂಬುದು ತಿಳಿಯಿತು.

ಆದರೆ ಇವು ಸಾಮಾನ್ಯ ಜ್ವಾಲಾಮುಖಿಗಳಾಗಿರಲಿಲ್ಲ. 100 ಮೈಲು ಆಳದ ವಿಶಿಷ್ಟ ಪರ್ವತಗಳು. ಇಲ್ಲಿ ಲಾವಾರಸ ಗಂಟೆಗೆ 3000 ಮೈಲಿ ವೇಗದಲ್ಲಿ ಹೊರಚಿಮ್ಮುತ್ತಿತ್ತು. ಅತಿಯಾದ ಶಾಖ, ವೇಗ, ಒತ್ತಡದಲ್ಲಿ ಲಾವ ವಜ್ರವಾಗಿ ರೂಪಾಂತರವಾಗಿತ್ತು. ಡೈನೊಸಾರ್‌ಗಳ ಕಾಲದಲ್ಲಿ ಸೃಷ್ಟಿಯಾದ ಈ ವಜ್ರಗಳು ಇಂದಿಗೂ ನಮ್ಮೊಂದಿಗೆ ಇವೆ. ಆದರೆ ಡೈನೊಸಾರ್‌ಗಳಿಗೆ ಅಷ್ಟು ಅದೃಷ್ಟವಿರಲಿಲ್ಲ.

65 ದಶಲಕ್ಷ ವರ್ಷಗಳು. ಹಸಿರು ಹೆಚ್ಚಿದ ಕಾಲ, ಜೀವಿಗಳು ಹಿಂದೆಂದಿಗಿಂತ ಹೆಚ್ಚು ವಿಕಾಸ ಕಂಡ ಕಾಲ. ಆದರೆ ಡೈನೊಸಾರ್‌ಗಳ ಪಾಲಿಗೆ ಕೆಟ್ಟಕಾಲ. ಕೇವಲ ಈ ದೈತ್ಯಜೀವಿಗಳಿಗಷ್ಟೇ ಅಲ್ಲ ಭೂಮಿಯ ಮೇಲಿದ್ದ ಶೇ. 70 ರಷ್ಟು ಜೀವಿಗಳೆಲ್ಲ ಕಣ್ಮರೆಯಾದಂಥ ಕಾಲ. ಇದು ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ ಬಹಳ ಕಾಲ ನಿಗೂಢವಾಗಿಯೇ ಇತ್ತು.

ಭೂಮಿ ಎಷ್ಟೊಂದು ವೈಪರೀತ್ಯಗಳ ನಡುವೆ ಒಂದು ಚೆಂದದ ಗ್ರಹವಾಗುತ್ತಿದ್ದ ಕಾಲದಲ್ಲಿ ಭಾರೀ ಅನಾಹುತವೊಂದು ಸಂಭವಿಸಿತು. ಅದೇ ಭೂಮಿಯ ಮೇಲಿದ್ದ ಅಸಂಖ್ಯ ಜೀವರಾಶಿಯನ್ನು ನಾಶಮಾಡಿಬಿಟ್ಟಿತು. ಆದರೆ ಆಪತ್ತು ಹೇಗೆ ಬಂತು? ಎಲ್ಲಿಂದ ಬಂತು? ವಾಸ್ತವವಾಗಿ ಅದು ಏನಾಗಿತ್ತು?

ಬಂದೆರಗಿದ ಆಪತ್ತು

ಈ ಪ್ರಶ್ನೆ ಹಲವಾರು ವರ್ಷಗಳ ಕಾಲ ವಿಜ್ಞಾನಿಗಳನ್ನು ಕಾಡಿತ್ತು. ಆದರೆ ಉತ್ತರ ಅಮೆರಿಕದ ಕೊಲರ‍್ಯಾಡೋದಲ್ಲಿ ಪತ್ತೆಯಾಯಿತು. ಲೂಯಿಸ್ ಮತ್ತು ವಾಲ್ಟರ್ ಅಲ್ವಾರೆಜ್ ಎಂಬ ತಂದೆ ಮಗನ ಜೋಡಿ 1980ರಲ್ಲಿ ಒಂದು ವಸ್ತುವನ್ನು ಪತ್ತೆ ಮಾಡಿದರು. ಅದರ ಹೆಸರು ಇರಿಡಿಯಂ. ಈ ಅಪೂರ್ವ ವಸ್ತು ಸಾಮಾನ್ಯವಾಗಿ ಕಂಡುಬರುವುದು ಉಲ್ಕೆಗಳಲ್ಲಿ. ಲೂಯಿಸ್ ವಾಲ್ಟರ್ ಅವರ ಅಧ್ಯಯನ ಆಧರಿಸಿ ಡೈನೊಸಾರ್‌ಗಳಿಂದ ತುಂಬಿದ್ದ ಈ ಗ್ರಹಕ್ಕೆ ಸಾವಾಗಿ ಬಂದಿದ್ದು ಉಲ್ಕೆಗಳು ಎಂದು ಪ್ರತಿಪಾದಿಸಿದರು.

ಒಂದು ಸೆಕೆಂಡಿಗೆ ಸುಮಾರು 30 ಮೈಲಿ ವೇಗದಲ್ಲಿ ಬಂದಪ್ಪಳಿಸಿದ ಉಲ್ಕೆಗಳು ಭೂಮಿಯನ್ನು ದೊಡ್ಡದೊಡ್ಡ ಕುಳಿಗಳಿಂದ ಅಗಾಧ ಧೂಳಿನಿಂದ ತುಂಬಿದವು ಎಂದು ಹೇಳಿದರು.

ಹತ್ತು ವರ್ಷಗಳ ಕಾಲ ಈ ಬಗ್ಗೆ ವಾದವಿವಾದಗಳು ನಡೆದವು. 1990ರಲ್ಲಿ 100 ಮೈಲಿ ವಿಶಾಲವಾದ ಕ್ರೇಟರ್ ಪತ್ತೆಯಾಗಿ ಲೂಯಿಸ್-ವಾಲ್ಟರ್ ಸಿದ್ಧಾಂತಕ್ಕೆ ಬಲ ಸಿಕ್ಕಿತು.

ಒಟ್ಟಾರೆ ಉಲ್ಕೆಗಳು, ಜೊತೆಜೊತೆಗೆ ಲಾವಾರಸ ಹಲವು ಸಾವಿರ ಜೀವಿಗಳನ್ನು ಕೊಂದವು.

ಲಾವಾರಸ ಮತ್ತು ಧೂಳಿನ ರಾಶಿಯಿಂದ ಶಿಲಾಪದರಗಳ ರಚನೆಯೂ ಆಯಿತು. ಭಾರತದ ಅಜಂತಾ ಎಲ್ಲೋರ ಸೇರಿದಂತೆ ಇನ್ನು ಕೆಲ ದೇವಸ್ಥಾನಗಳು ಇಂಥ ಶಿಲಾಪದರುಗಳಿರುವಲ್ಲೇ ನಿರ್ಮಾಣವಾಗಿವೆ.

ಹೀಗೆ ಭೂಮಿಯ ಮೇಲಿನ ಲಾವಾರಸ, ಮೇಲಿಂದ ಬಿದ್ದ ಉಲ್ಕೆಗಳು ದೈತ್ಯಜೀವಿಗಳನ್ನು, ಸೂಕ್ಷ್ಮಜೀವಿಗಳನ್ನು ಇಲ್ಲವಾಗಿಸಿದವು. ಆದರೆ ಹೊಸಜಗತ್ತು ಹುಟ್ಟಿಕೊಳ್ಳುತ್ತಿತ್ತು. ಅದೇ ಸಸ್ತನಿಗಳ ಮನುಷ್ಯನ ಜಗತ್ತು…

50 ದಶಲಕ್ಷ ವರ್ಷಗಳು. ಭೂಮಿ ಭಾರೀ ದುರಂತದಿಂದ ಚೇತರಿಸಿಕೊಳ್ಳುತ್ತಿತ್ತು. 4.4 ಶತಕೋಟಿ ವರ್ಷಗಳ ಬಳಿಕ ಸಸ್ತನಿಗಳು, ಮನುಷ್ಯನ ಪೂರ್ವಜರು ವಿಕಾಸ ಹೊಂದುತ್ತಿದ್ದರು.

(ಮುಂದುರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ: