Category Archives: ಸಿನೆಮಾ

ಸಿನೆಮಾ-ಕಿರುತೆರೆಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಮೊದಮೊದಲು ಭೂಮಿಗೆ 1 ಬಿಲಿಯನ್ ಅಂದರೆ 100 ಕೋಟಿ ವರ್ಷಗಳು ಅಂದರು.

ಆಮೇಲೆ 3 ಬಿಲಿಯನ್ ಅಂದರೆ 300 ಕೋಟಿ ವರ್ಷಗಳು ಅಂದರು.

ಕಡೆಗೆ 456 ಕೋಟಿಗಳು ಎಂಬ ತೀರ್ಮಾನಕ್ಕೆ ಬಂದರು. ಇದನ್ನೇ ಭೂಮಿ  ಹುಟ್ಟಿದ ಕಾಲವೆಂದು,  ಈ ಧೀರ್ಘ ಅವಧಿಯನ್ನು ಡೀಪ್ ಟೈಮ್ ಎಂದು ವಿಜ್ಞಾನಿಗಳು ಕರೆದಿದ್ದಾರೆ.

ಇಲ್ಲಿಗೆ ಭೂಮಿಯ ವಯಸ್ಸು ಎಷ್ಟು ಎಂಬ ವಿಚಾರ ಗೊತ್ತಾಯಿತು. ಆದರೆ ಈ 456 ಕೋಟಿ ವರ್ಷಗಳ ಪಯಣ ಹೇಗಿತ್ತು ಅನ್ನೋದನ್ನು ತಿಳಿಯುವ ಅಗತ್ಯವಿತ್ತು. ವಿಜ್ಞಾನಿಗಳು ಶಿಲೆಗಳನ್ನು, ಸಂಶೋಧನೆಗಳನ್ನು ಕ್ರಮವಾಗಿ ಜೋಡಿಸಿ ಭೂಮಿಯ ವಿಕಾಸದ ಹಾದಿಯನ್ನು ಅದರ ತಿರುವುಗಳನ್ನು ತಿಳಿಯಲು ಮುಂದಾದರು.

ಭೂಮಿ ಬಾಲ್ಯಾವಸ್ಥೆಯಲ್ಲಿದ್ದಾಗ ಉಲ್ಕೆಗಳು ಅಪ್ಪಳಿಸುತ್ತಿದ್ದವು. ಅದಾಗಲೇ ಲಾವಾರಸದಿಂದ ತುಂಬಿದ್ದ ಭೂಮಿ ನಿಧಾನವಾಗಿ ತಣಿಯಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಬಿದ್ದ ಉಲ್ಕೆಗಳು ಶಿಲೆಗಳ ರೂಪ ಪಡೆದವು ಎನ್ನುತ್ತಾರೆ ವಿಜ್ಞಾನಿಗಳು.

ವಾಸ್ತವವಾಗಿ ವಿಜ್ಞಾನಿಗಳಿಗೆ ಕೋಟ್ಯಂತರ ವರ್ಷಗಳಷ್ಟು ಪುರಾತನವಾದ ಶಿಲೆಗಳು ಸಿಕ್ಕಿದ್ದು ಕಡಿಮೆ. ಆದರೆ ಅಷ್ಟೇ ಪುರಾತನವಾದ ಯುರೇನಿಯಂನಿಂದ ಕೂಡಿದ ಜರ್ಕಾನ್ ಹರಳುಗಳು ದೊರೆತವು.

ಕೋಟ್ಯಾನುಕೋಟಿ ವರ್ಷಗಳಷ್ಟು ಹಿಂದೆ ಇದ್ದ ವಾತಾವರಣದ ಸ್ವರೂಪವನ್ನು ಕಟ್ಟಿಕೊಟ್ಟ ಹರಳುಗಳಿವು. ಆ ಕಾಲದಲ್ಲಿದ್ದ ನೀರಿನ ಕಣದ ಗುರುತುಗಳೂ ಈ ಹರಳುಗಳಿಂದಲೇ ಸಿಕ್ಕವು.

ನೀರು ಎಲ್ಲಿಂದ ಬಂತು?

ಇಷ್ಟಾಗಿಯೂ ನೀರು ಎಲ್ಲಿಂದ ಬಂತು ಎಂಬ ಬಗ್ಗೆ ನಿರ್ದಿಷ್ಟ ನಿಖರ ಮಾಹಿತಿ ಇಲ್ಲ.

ನೀರಿನ ಮೂಲ ಭೂಮಿಯಲ್ಲ ಎಂದು ಒಂದಿಷ್ಟು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಆಕಾಶವೇ ನೀರಿನ ಮೂಲ. ಉಲ್ಕೆಗಳೂ, ಧೂಮಕೇತುಗಳೂ, ನೀರಿನ ಕಣಗಳನ್ನು ಭೂಮಿಗೆ ತಂದವು ಎನ್ನುತ್ತಾರೆ.

ಇದಕ್ಕೆ ವಿರುದ್ಧವಾದ ವಾದವೂ  ಇದೆ. ಭೂಮಿ ತಣ್ಣಗಾಗುವ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಆವಿ, ಇಂಗಾಲದ ಡೈಆಕ್ಸೈಡ್ ಜೊತೆ ಬೆರೆತು ದಟ್ಟ ಮೋಡಗಳು ಆದವು. ಭೂಮಿ ಸುತ್ತ ಹರಡಿಕೊಂಡವು. ಆ ಮೋಡಗಳೇ ಭೂಮಿಗೆ ನೀರು ಹರಿಸಿದವು ಎನ್ನುವುದು ಆ ಇನ್ನೊಂದು ವಾದ.

ನೀರಿನ ಕುರಿತ ಈ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ನೀರು ಹೇಗೆ ಭೂಮಿಗೆ ಬಂತೋ ಏನೋ ಬಹುದೊಡ್ಡ ಬದಲಾವಣೇಯನ್ನೇ ತಂತು…

ಮಳೆ ಮಳೆ ಮಳೆ..

ಆಗ ಭೂಮಿಗೆ 400 ಕೋಟಿ ವರ್ಷಗಳು. ಭೂಮಿ ಸುತ್ತ ಹರಡಿಕೊಂಡಿದ್ದ ಮೋಡಗಳ ಮೇಲೆ ಗುಡುಗು ಮಿಂಚುಗಳು ಅಪ್ಪಳಿಸಿ ಮಳೆ ಸುರಿಯಲಾರಂಭಿಸಿತು.

ಒಂದಲ್ಲ, ಎರಡಲ್ಲ, ನೂರಲ್ಲ, ಇನ್ನೂರಲ್ಲ. ಲಕ್ಷಾಂತರ ವರ್ಷಗಳ ಕಾಲ ಮಳೆ ಸುರಿದೇ ಸುರಿಯಿತು. ಭೂಮಿ ಒಂದು ಜಲವಿಶ್ವವಾಗಿ ಪರಿವರ್ತನೆಗೊಂಡಿತು. ಭೂಮಿಯ 90 ಭಾಗ ನೀರು ತುಂಬಿಕೊಂಡು ಅಗಾಧ ಸಾಗರವಾಗಿ ಹೋಯಿತು.

ಇಷ್ಟಾಗಿಯೂ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿದ್ದವು. ಈ ಅಗಾಧ ಸಾಗರದಲ್ಲಿ ಅಲ್ಲಲ್ಲಿ ಇದ್ದ ದ್ವೀಪಗಳಿಂದ ಲಾವಾರಸ ಉಕ್ಕುವುದು ನಿಂತಿರಲಿಲ್ಲ. ಈ ಲಾವಾರಸ ಸಾಗರ ಸೇರಿ ಕಬ್ಬಿಣಾಂಶ ಹೆಚ್ಚಿ ನೀರು ಹಸಿರು ಬಣ್ಣಕ್ಕೆ ತಿರುಗಿತು. ಮತ್ತೊಂದೆಡೆ ಇಂಗಾಲದ ಡೈಆಕ್ಸೈಡ್ ಆಕಾಶವನ್ನು ದಟ್ಟವಾಗಿ ಆವರಿಸಿಕೊಂಡಿದ್ದರಿಂದ ಕೆಂಪಾಗಿ ಕಾಣುತ್ತಿತ್ತು.

ಭೂಮಿಯ ವಾತಾವರಣದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿತ್ತು. 100 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶವಿತ್ತು. ಲಾವಾರಸ ಬೆರೆತು ಭೂಮಿಯನ್ನು ಆವರಿಸಿದ ನೀರು ಆಸಿಡ್‌ನಷ್ಟು ತೀಕ್ಷ್ಣವಾಗಿತ್ತು. ಸುಮಾರು50 ಕೋಟಿ ವರ್ಷಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.

ಈ ವಿಷಮ ವಾತಾವರಣ ಮುಂದಿನ ಬೆಳವಣಿಗೆಗೆ ವೇದಿಕೆ ರೂಪಿಸುತ್ತಿದ್ದವು ಎನ್ನಬಹುದೇನೊ. ಇನ್ನೂ ಕ್ರಿಯಾಶೀಲವಾಗಿದ್ದ ಜ್ವಾಲಾಮುಖಿಗಳು ಹೊಸರೀತಿಯ ಶಿಲಾಪದರವನ್ನು ರೂಪಿಸುತ್ತ, ಭೂಖಂಡಗಳ ಸೃಷ್ಟಿಕಾರ್ಯದಲ್ಲಿ ನಿರತವಾಗಿದ್ದವು. ಭೂಮಿ ಅಗಾಧವಾದ, ಅನನ್ಯವಾದ ಗ್ರಹ ಆಗುವ ಕಾಲ ಹತ್ತಿರವಾಗುತ್ತಿತ್ತು.

ಭೂಮಿ ಹುಟ್ಟಿ 100 ಕೋಟಿ ವರ್ಷಗಳಾಗುವ ಹೊತ್ತಿಗೆ ಎಲ್ಲಿ ನೋಡಿದರೂ ನೀರೆ ತುಂಬಿಕೊಂಡಿತ್ತು. ಜೊತೆಗೆ ಜ್ವಾಲಾಮುಖಿಗಳು ಲಾವಾರಸವನ್ನು ಚಿಮ್ಮುತ್ತಲೇ ಇದ್ದವು ಕೂಡ. ಈ ಪ್ರಕ್ರಿಯೆಯಲ್ಲಿ ಒಂದು ವಿಧದ ಶಿಲೆ ಸೃಷ್ಟಿಯಾಯಿತು. ಅದೇ ಗ್ರಾನೈಟ್ ಶಿಲೆ. ಇದೇ ಭೂಮಿಯ ಪದರವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತು.

ಭೂಮಿ ಜಲಾವೃತವಾಗಿ, ಸಾಗರದೊಳಗೆ ಜ್ವಾಲಾಮುಖಿಗಳು ಸಿಡಿಯುತ್ತಿದ್ದಾಗ ಶಿಲೆಯೊಂದು ರಚನೆಯಾಗಲಾರಂಭಿಸಿತು. ಕುದಿವ ನೀರು, ಲಾವಾರಸದ ಮಿಶ್ರಣದಿಂದ ಅತ್ಯಂತ ಕಠಿಣವಾದ ಭಾರದ ಶಿಲೆ ರಚನೆಯಾಯಿತು. ಅದೇ ಗ್ರಾನೈಟ್.

ದಕ್ಷಿಣ ಆಫ್ರಿಕಾದ ಸ್ಥಳವೊಂದರಲ್ಲಿ ಪತ್ತೆಯಾದ ಬಂಡೆಗಳು ಗ್ರಾನೈಟ್ ಶಿಲೆಯ ರಹಸ್ಯ ಬಿಚ್ಚಿಟ್ಟವು. ಈ ಬಂಡೆಗಳ ಅಧ್ಯಯನದಿಂದ ಗ್ರಾನೈಟ್ ಭೂಮಿಯ ತೊಗಟೆಯಾಗಿ ವಿಸ್ತರಿಸಿಕೊಂಡಿದ್ದು ವಿಜ್ಞಾನಿಗಳಿಗೆ ತಿಳಿದುಬಂತು.

ಹೀಗೆ ಗ್ರಾನೈಟ್ ಭೂಮಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿತು. ಕಾಲಾನಂತರದಲ್ಲಿ ಅಲ್ಲಲ್ಲಿ ಬಿರುಕುಬಿಟ್ಟು ಸಾಗರದ ನೀರು ಭೂಗರ್ಭ ಸೇರಲಾರಂಭಿಸಿತು.

250 ಕೋಟಿ ವರ್ಷಗಳು

ಈ ಹೊತ್ತಿಗೆ ಸಾಗರಗಳ ಪಾರುಪತ್ಯೆ ಕಡಿಮೆ ಆಯಿತು. ಭೂಮಿಯ ಬಹುಪಾಲು ಮೇಲ್ಮೈ ಘನರಚನೆಗಳಿಂದ ಕೂಡಿತ್ತು. ಭೂಖಂಡಗಳ ಉಗಮವಾಗಿತ್ತು. ಇದೇ ವೇಳೆ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಕೂಡ ಕಾಣಿಸಿಕೊಂಡಿತು. ಭೂಮಿಯಲ್ಲಿ ನೀರು ಕಾಣಿಸಿಕೊಂಡ ಕೋಟ್ಯಾಂತರ ವರ್ಷಗಳಲ್ಲಿ ಏಕಕೋಶ ಜೀವಿಗಳು ಕಾಣಿಸಿಕೊಂಡವು. ಅವುಗಳಿಂದ ಆಮ್ಲಜನಕ ಉತ್ಪತ್ತಿಯಾಯಿತು ಎಂದು ವಿಜ್ಞಾನಿಗಳು ಹೇಳಿದರು.

ಅಂತಹ ಜೀವಿಗಳು ಇದ್ದವೆ ಎಂಬ ಸಾಧ್ಯತೆ ಹೊಳೆದದ್ದೆ ಸ್ಟ್ರೊಮೆಟೊಲೈಟ್‌ಗಳನ್ನು ನೋಡಿದ ಮೇಲೆ.

1 ಅಡಿ ಅಗಲ, 2 ಅಡಿ ಎತ್ತರದ ಕಲ್ಲಿನಂತೆ ಕಾಣುವ  ರಚನೆಗಳೇ ಸ್ಟ್ರೊಮೆಟೊಲೈಟ್‌ಗಳು. ಬ್ಯಾಕ್ಟೀರಿಯಲ್ ಆಲ್ಗೇಗಳಿಂದ ಆದ ಇವು ಭೂಮಿಗೆ ಉಸಿರುಕೊಟ್ಟ ಜೀವಿಗಳು.

ಫಿಲಿಫ್ ಫ್ಲೈಫರ್ಡ್ ಎಂಬ ವಿಜ್ಞಾನಿ ಇವುಗಳನ್ನು ಪತ್ತೆ ಮಾಡಿದ್ದು. ನಂತರ ವಿಜ್ಞಾನಿಗಳು ಸ್ಟ್ರೊಮೆಟೊಲೈಟ್‌ಗಳ ಪಳೆಯುಳಿಕೆಗಳನ್ನು ಗುರುತಿಸಿದರು. ಏಕಕೋಶ ಜೀವಿಗಳ ಹಲವು ಪದರಗಳಿಂದಾದ ಈ ಸ್ಟ್ರೊಮೆಟೊಲೈಟ್‍ಗಳು ಭೂಮಿಯ ಬಹುಭಾಗಗಳಲ್ಲಿ ಹರಡಿಕೊಂಡಿದ್ದು ಕಂಡು ಬಂತು.

ದ್ಯುತಿಸಂಶ್ಲೇಷಣೆಯಿಂದ ವಾತಾವರಣಕ್ಕೆ ಆಮ್ಲಜನಕ ಪೂರೈಸಿದ ಮೊದಲ ಜೀವಿಗಳಿವು. ಬರೋಬ್ಬರಿ  200 ಕೋಟಿ ವರ್ಷಗಳು ನಿರಂತರವಾಗಿ ಈ ಪ್ರಕ್ರಿಯೆ ನಡೆಯಿತೆಂದು ವಿಜ್ಞಾನಿಗಳು ಹೇಳುತ್ತಾರೆ.

ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಬೇ ಬೀಚಿನಲ್ಲಿ ಇವತ್ತಿಗೂ ಸ್ಟ್ರೊಮೆಟೊಲೈಟ್‌ಗಳು ನೋಡಲು ಸಿಗುತ್ತವೆ.

220  ಕೋಟಿ ವರ್ಷಗಳಿಂದ 170 ಕೋಟಿ ವರ್ಷಗಳ ವರೆಗೆ ಸಾಗರದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕ ತುಂಬಿತು.

200 ಕೋಟಿ ವರ್ಷಗಳ ಆಮ್ಲಜನಕೀಕರಣದಿಂದ ಭೂಮಿ ನೀಲಿ ಬಣ್ಣಕ್ಕೆ ತಿರುಗಿತು.

ನೀಲಿ ಆಕಾಶ, ನೀಲಿ ಸಾಗರ….

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ : ಭಾಗ – 2

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


456 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಭೂಮಿ ಬೆಂಕಿ ಉಂಡೆಯಾಗಿ, ಹಿಮದ ಉಂಡೆಯಾಗಿ, ಹಾಗೇ ವಿಷಮ ವಾತಾವರಣವನ್ನು, ಉಕ್ಕುವ ಕಡಲನ್ನು ತುಂಬಿಕೊಂಡು ವಿಶಿಷ್ಟ ಗ್ರಹವಾಗಿ ರೂಪಾಂತರವಾಯಿತು.

ಸೂರ್ಯನನ್ನು ಸುತ್ತುತ್ತಿರುವ ಎಂಟು ಗ್ರಹಗಳಲ್ಲಿ ಭೂಮಿ ದೂರದ ದೃಷ್ಟಿಯಿಂದ ಮೂರನೆಯದು. ಸುಮಾರು 150 ದಶಲಕ್ಷ ಕಿ.ಮೀ. ದೂರದಲ್ಲಿ ತನ್ನ ಪಥದಲ್ಲಿ ಸುತ್ತುತ್ತಾ ಇರುವ ಈ ಗ್ರಹ ಜೀವಿಗಳಿಗೆ ನೆಲೆನೀಡಿರುವ ಸೌರಮಂಡಲದ ಏಕೈಕ ಸದಸ್ಯ.

ಕೋಟ್ಯಂತರ ವರ್ಷಗಳ ಹಿಂದೆ ನಿಹಾರಿಕೆಯಿಂದ ಸಿಡಿದ ಕಣಗಳು ಕಾಲಾನಂತರ ಧೂಳು, ಶಿಲೆ, ಅನಿಲಗಳಿಂದ ಕೂಡಿ ಆದ ಗ್ರಹಗಳಲ್ಲಿ ಭೂಮಿಯೂ ಒಂದು. ಇದು ಭೂಮಿಯ ಭ್ರೂಣಾವಸ್ಥೆಯಷ್ಟೆ.

ಇಷ್ಟನ್ನು ತಿಳಿಯುವುದಕ್ಕೂ ವಿಜ್ಞಾನಿಗಳಿಗೆ ಸಾಕಷ್ಟು ಸಮಯವೇ ಬೇಕಾಯಿತು. ಇಷ್ಟಕ್ಕೂ ಭೂಮಿ ಕುರಿತ ಅಧ್ಯಯನ ಸಂಶೋಧನೆಗಳ ಆರಂಭವಾಗಿದ್ದು ಕೇವಲ 2000 ವರ್ಷಗಳ ಹಿಂದೆ. ಈ  ಹುಡುಕಾಟಕ್ಕೆ ಸರಿಯಾದ ದಾರಿ ಸಿಕ್ಕಿದ್ದು ಸ್ಕಾಟ್‍ಲ್ಯಾಂಡಿನಲ್ಲಿ…

ಗುಟ್ಟು ಬಿಟ್ಟು ಕೊಟ್ಟ ಬಂಡೆ

1778 ರಲ್ಲಿ ಸ್ಕಾಟ್ಲೆಂಡ್ ದೇಶದ ಎಡಿನ್‍ಬರೊ ಕರಾವಳಿ ಪ್ರದೇಶದಲ್ಲಿ ಒಂದು ಬಂಡೆ ಪತ್ತೆಯಾಯಿತು. ಇದು ಭೂಮಿಯ ಜನ್ಮರಹಸ್ಯದ ಹುಡುಕಾಟಕೆ ಹೊಸತಿರುವು ನೀಡಿತು.

ಶಿಲೆಗಳು ಹೇಗಾದವು ಎಂದು ಅಧ್ಯಯನ ನಡೆಸುತ್ತಿದ್ದ ಜೇಮ್ಸ್ ಹಟ್ಟನ್ ಈ ಬಂಡೆಯನ್ನು ಪತ್ತೆ ಮಾಡಿದರು. ಆಧುನಿಕ ಭೂಗರ್ಭ ಶಾಸ್ತ್ರದ ಪಿತಾಮಹ ಎನಿಸಿಕೊಂಡ ಜೇಮ್ಸ್ ಕಲ್ಲುಗಳ ಅಧ್ಯಯನ ಮಾಡುತ್ತ ಎಡಿನ್‍ಬರೊ ಕರಾವಳಿ ಪ್ರದೇಶಕ್ಕೆ ಬಂದಾಗ ಈ ಬಂಡೆ ಅವರಲ್ಲಿ ಬೆರಗು ಹುಟ್ಟಿಸಿತು.

ಕೆಲವು ಪದರಗಳಲ್ಲಿದ್ದ ಈ ಶಿಲೆಯನ್ನು ನೋಡಿದ ಅವರು ಇದರ ರಚನೆಗೆ ಧೀರ್ಘಕಾಲ ತೆಗೆದುಕೊಂಡಿದೆ ಎಂದು ಊಹಿಸಿದರು. ತೀವ್ರ ಪರಿಶೀಲನೆ, ಅಧ್ಯಯನದ ಬಳಿಕ, ’ಶಿಲಾರಚನೆ ಅತಿ ನಿಧಾನ ಕ್ರಿಯೆ. ಈ ಬಂಡೆ ರಚನೆಗೆ ಸಾವಿರಾರು ವರ್ಷಗಳೇ ಆಗಿರಬಹುದು’ ಎಂದು ಅಂದಾಜು ಮಾಡಿದರು. ಹಾಗಾದರೆ ಈ ಭೂಮಿ ಕೂಡ ಕೆಲವೇ ವರ್ಷಗಳಲ್ಲಿ ಆಗಿಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಈ ವಿಚಾರ ಅಲ್ಲಿಯವರೆಗೆ ಚರ್ಚ್‌ಗಳು ಹೇಳುತ್ತಿದ್ದ ನಂಬಿಕೆಗೆ ವಿರುದ್ಧವಾಗಿತ್ತು.

ಬೆಂಕಿಯುಂಡೆಯಾಗಿದ್ದ ಭೂಮಿ

ಜೇಮ್ಸ್ ಹಟ್ಟನ್

ಹಲವು ಶತಮಾನಗಳ ಕಾಲ ಕ್ರೈಸ್ತ ಧರ್ಮೀಯರ ಗ್ರಂಥ ಬುಕ್ ಆಫ್ ಜೆನೆಸಿಸ್ ಜನರಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಭೂಮಿಗಳ ಬಗ್ಗೆ, ಮನುಷ್ಯನ ಹುಟ್ಟಿನ ಬಗ್ಗೆ, ಹಲವು ಅವೈಜ್ಞಾನಿಕ ವಿಚಾರಗಳನ್ನು ಬಿತ್ತಿತ್ತು. ಆ ಗ್ರಂಥದ ಪ್ರಕಾರ ಭೂಮಿಯು ಆರು ಸಾವಿರ ವರ್ಷಗಳ ಹಿಂದೆ ಹುಟ್ಟಿತ್ತು. ಕ್ರೈಸ್ತ ಗುರುಗಳು ಇದನ್ನೇ ಪ್ರಚಾರ ಮಾಡುತ್ತಿದ್ದರು. ಜೇಮ್ಸ್ ಹಟ್ಟನ್‍ನ ಸಂಶೋಧನೆ ಎತ್ತಿದ ಪ್ರಶ್ನೆ ಆ ನಂಬಿಕೆಯ ಬುಡವನ್ನೆ ಅಲ್ಲಾಡಿಸಿತು.

ಶಿಲೆಗಳನ್ನು ಅಧ್ಯಯನ ಮಾಡುತ್ತ ಭೂಮಿಯು ಆರು ಸಾವಿರ ವರ್ಷಗಳಿಗಿಂತ ಪುರಾತನವೆಂದು ಅನುಮಾನಿಸುತ್ತಿದ್ದ ಹಟ್ಟನ್‌ಗೆ ಪುರಾವೆಯಾಗಿ ಸಿಕ್ಕ ಈ ಬಂಡೆ ಭೂಮಿಯ ರಚನೆ ಹೇಗಾಗಿರಬಹುದು ಎಂಬ ಸುಳಿವನ್ನು ಬಿಟ್ಟುಕೊಟ್ಟಿತು.

ಎರಡು ಪದರಗಳಲ್ಲಿ ರಚನೆಯಾಗಿದ್ದ ಈ ಬಂಡೆ ಲಂಬವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇದು ಭೂಮಿಗೆ ಸಮಾನಾಂತರವಾಗಿಯೇ ಇದ್ದು, ಭೂಚಲನೆಯ ಪರಿಣಾಮ ಲಂಬವಾಗಿ ನಿಂತಿದ್ದವು.

ಸಾವಿರಾರು ವರ್ಷಗಳ ಅವಧಿಯಲ್ಲಿ ಇಂತಹ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದ ಈ ಬಂಡೆಯ ಅಧ್ಯಯನದ ಬಳಿಕ ಭೂಮಿಯ ಇತಿಹಾಸ ಲಕ್ಷಾಂತರ ವರ್ಷಗಳದ್ದಿರಬಹುದು ಇಲ್ಲವೇ ಅದರಾಚೆಗೂ ಇರಬಹುದು ಎಂಬ ನಿಲುವಿಗೆ ಬಂದರು ಹಟ್ಟನ್. ಇದು ಭೂಮಿಯ ಜನ್ಮರಹಸ್ಯ ಅರಿಯುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆಯಾಯಿತು. ಇಲ್ಲಿಂದ ಮುಂದೆ ಭೂಮಿಯ ಇತಿಹಾಸ ಅರಿಯಲು ಕಲ್ಲುಗಳತ್ತ ಮುಖ ಮಾಡಿದರು.

ಹಟ್ಟನ್ ಸಂಶೋಧನೆಯ ನಂತರದ 200 ವರ್ಷಗಳಲ್ಲಿ ಶಿಲಾರಚನೆ ಹಾಗೂ ವಿವಿಧ ರೀತಿಯ ಬಂಡೆಗಳ ಬಗ್ಗೆ ಅಧ್ಯಯನ ನಡೆದವು. ಈ ಮೂಲಕ ಭೂಮಿಯ ಹುಟ್ಟು ಅದರ ರಚನೆ ಕುರಿತ ಹಲವು ಅಚ್ಚರಿಯ ಅಂಶಗಳು ಹೊರಬಂದವು.

ಭಯಾನಕವಾಗಿತ್ತು ಭೂಮಿ!

ಅಕ್ಷರಶಃ ಕಲ್ಪನೆಗೂ ಮೀರಿದ ವಿದ್ಯಮಾನಗಳು ಭೂಮಿಯ ಆರಂಭಿಕ ದಿನಗಳಲ್ಲಿ ನಡೆದವು. ಇಂದು ಸುಂದರ ನೀಲಿಗ್ರಹ ಎಂದು ಕರೆಸಿಕೊಳ್ಳುವ ಈ ಭೂಮಿ ಒಂದು ಕಾಲದಲ್ಲಿ ಬೆಂಕಿಯುಂಡೆಯಾಗಿತ್ತು.

ಭೂಗ್ರಹದ ಮೇಲ್ಮೈ ಲಾವಾರಸದಿಂದ ತುಂಬಿ ತುಳುಕುತ್ತಿತ್ತು. ಮೈಲುಗಟ್ಟಲೆ ಆಳದವರೆಗೆ, ಸಾವಿರಾರು ಮೈಲು ವಿಸ್ತಾರವಾಗಿ, ವ್ಯಾಪಿಸಿಕೊಂಡಿತ್ತು. 4500 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಭೂಮಿ ಬೆಂಕಿಯ ಚೆಂಡಾಗಿತ್ತು. ಅಂತರಿಕ್ಷದಿಂದ ಅಪ್ಪಳಿಸುತ್ತಿದ್ದ ಉಲ್ಕೆಗಳ ಮಳೆ ಈ ಬೆಂಕಿಯನ್ನು ಹೆಚ್ಚಿಸುತ್ತಲೇ ಇದ್ದವು.

ಭೂಮಿ ಇಂತಹ ಸ್ಥಿತಿಯಲ್ಲಿತ್ತು ಅನ್ನೋ ಸಿದ್ಧಾಂತವನ್ನು ನಮ್ಮ ಮುಂದೆ ಇಟ್ಟಿದ್ದು ಇಂಗ್ಲೆಂಡಿನ ವಿಜ್ಞಾನಿ ಲಾರ್ಡ್ ಕೆಲ್ವಿನ್.

ಹೀಗೆ ಬೆಂಕಿಯ ಉಂಡೆಯಂತೆ ಇದ್ದ ಭೂಮಿ ನಿಧಾನವಾಗಿ ತಣ್ಣಗಾಗುತ್ತ ಬಂತು. 2 ಕೋಟಿ ವರ್ಷಗಳಲ್ಲಿ ಭೂಮಿ ತಣ್ಣಗಾಯಿತು ಎಂಬ ಲೆಕ್ಕಾಚಾರವನ್ನು ಕೆಲ್ವಿನ್ ಮುಂದಿಟ್ಟರು.

ಲಾರ್ಡ್ ಕೆಲ್ವಿನ್

ಕೆಲ್ವಿನ್ ಪ್ರತಿಪಾದಿಸಿದ ವಿಚಾರಗಳಲ್ಲಿ ಎಲ್ಲವೂ ಸರಿ ಇರಲಿಲ್ಲ. ಅವರು ಹೇಳಿದಂತೆ ಭೂಮಿ ಲಾವಾರಸದಿಂದ ತುಂಬಿ ಬೆಂಕಿ ಚೆಂಡಾಗಿತ್ತು, ನಿಜ. ಆದರೆ ಅದು ತಣ್ಣಗಾಗಲು ತೆಗೆದುಕೊಂಡ ಅವಧಿ 2 ಕೋಟಿ ವರ್ಷಗಳಷ್ಟೇ ಆಗಿರಲಿಲ್ಲ.

ಕೆಲ್ವಿನ್ ಭೂಮಿಯ ಒಡಲೊಳಗೆ ಹುಟ್ಟಿದ್ದ ಶಾಖದ ಮೂಲವನ್ನು ತಿಳಿಯುವಲ್ಲಿ ಸೋತಿದ್ದರು. ಇದೇ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿತ್ತು. ಭೂಮಿಯೊಳಗಿದ್ದ ಯುರೇನಿಯಂ, ಥೋರಿಯಂ, ರಾಸಾಯನಿಕಗಳಿಂದ ಹೊರಬೀಳುತ್ತಿದ್ದ ವಿಕಿರಣ ಭೂಮಿ ತಣ್ಣಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದವು. ಹಾಗಾಗಿ ಭೂಮಿಯ ಗರ್ಭ ಬಹುಕಾಲ ಬೆಂಕಿ ಕುಂಡದಂತೇ ಇತ್ತು.

ಭೂಮಿ ಕಾವು ಹೆಚ್ಚಿಸುತ್ತಲೇ ಇದ್ದ ಯುರೇನಿಯಂ 20ನೇ ಶತಮಾನದ ಯುದ್ಧದಲ್ಲಿ ದೊಡ್ಡ ಅಸ್ತ್ರವಾಗಿ ನಮ್ಮೆಲ್ಲರಿಗೂ ಗೊತ್ತು. ಅದು ವಿಜ್ಞಾನಿಗಳ ಭೂಮಿಯ ಇತಿಹಾಸ ಪತ್ತೆಗೆ ಸಾಧನವೂ ಆಯಿತು.

1911 ರಲ್ಲಿ 21 ವರ್ಷದ ವಿಜ್ಞಾನಿ ಆರ್ಥರ್ ಹೋಮ್ಸ್ ವಿಕಿರಣ ಬಳಸಿ ಭೂಮಿಯ ಅಧ್ಯಯನ ಮಾಡಿದರು. ಈ ಅಧ್ಯಯನದ ಬಳಿಕ ಭೂಮಿಯ ಇತಿಹಾಸವನ್ನು ಸಾವಿರ, ಲಕ್ಷ ವರ್ಷಗಳ ಲೆಕ್ಕ ಬಿಟ್ಟು ಕೋಟಿಗಳಲ್ಲಿ ಮಾತನಾಡಲಾರಂಭಿಸಿದರು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ? : ಭಾಗ -1

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಭೂಮಿಗೆ 450 ಕೋಟಿ ವರ್ಷಗಳ ಇತಿಹಾಸವಿದೆ. ಅನಂತವಾದ ವಿಶ್ವದಲ್ಲಿ ಭೂಮಿಯ ಹೊರತಾಗಿ ಮತ್ತೊಂದು  ಹಸಿರು, ಉಸಿರು, ನೀರು ಕಾಣುವ ಮತ್ತು ಜೀವಿಗಳು ವಾಸಿಸುತ್ತಿರುವ ನೆಲ ಕಾಣಿಸುವುದಿಲ್ಲ. ಆದರೆ ಹಲವು ಗೆಲಾಕ್ಸಿಗಳು, ಅಸಂಖ್ಯ ನಕ್ಷತ್ರಗಳು, ಕೋಟ್ಯಂತರ ಆಕಾಶ ಕಾಯಗಳಿವೆ. ಇಂಥ ವಿಶ್ವದಲ್ಲಿ ಭೂಮಿ ಸಣ್ಣ ಕಣವಷ್ಟೆ. ಆದರೆ ಅದರ ವೈಶಿಷ್ಟ್ಯಗಳಿಂದಾಗಿ ಭೂಮಿ ಅಸಾಮಾನ್ಯ ಗ್ರಹವಾಗಿ ನಿಲ್ಲುತ್ತದೆ. ವಿಶ್ವದಲ್ಲಿ ಹೋಲಿಕೆಗೆ ಮತ್ತೊಂದು ಗ್ರಹ ಇದುವರೆಗೂ ಸಿಕ್ಕಿಲ್ಲ. ಇಂಥ ಅನನ್ಯವಾದ ಗ್ರಹದ ಹುಟ್ಟಿನ ಮೂಲವನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನವಿದು.

ಭೂಮಿ ಇಡೀ ವಿಶ್ವದಲ್ಲಿ ಒಂದು ಸಣ್ಣ ಕಣವಷ್ಟೆ. ಭೂಮಿಯಂತೆ ವಿಶಿಷ್ಟವಾಗಿಲ್ಲದಿದ್ದರೂ, ಅಸಂಖ್ಯವೂ, ಅಗಾಧವೂ ಆದ ಕಾಯಗಳನ್ನು ವಿಶ್ವವು ಹೊಂದಿದೆ. ಒಂದು ಕಾಲಕ್ಕೆ ಈ ವಿಶ್ವ ಎನ್ನುವುದೇ ಇರಲಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ನಿಮಗೆ ಅಚ್ಚರಿಯಾಗಬಹುದು. ಸೌರವ್ಯೂಹ, ಕ್ಷೀರಪಥದಂತಹ ಗೆಲಾಕ್ಸಿಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು, ಕ್ಷುದ್ರಗ್ರಹಗಳು, ಕಪ್ಪು ಕುಳಿಗಳು, ಧೂಮಕೇತುಗಳು.. ಹೀಗೆ ಏನನ್ನೋ ಒಳಗೊಂಡಿರುವ ವಿಶ್ವ ಕೂಡ ಇರಲೇ ಇಲ್ಲ ಎನ್ನುತ್ತಾರೆ.. ಭೂಮಿ ಹುಟ್ಟುವ ಮುನ್ನ ಭೂಮಿಯ ತಾಯಿಯಂತೆ ಇರುವ ವಿಶ್ವ ಹೇಗೆ ಹುಟ್ಟಿತು?

ವಿಶ್ವದ ಉಗಮ:

ಮೊದಲಿಗೆ ಏನೂ, ಏನೇನೂ ಇರಲಿಲ್ಲ. ಒಂದು ರೀತಿಯಲ್ಲಿ ಏಕಮೇವ ಶೂನ್ಯತೆ. ಆ ಏಕಶೂನ್ಯದ ಸುತ್ತಲೂ ಏನೂ ಇರಲಿಲ್ಲ. ಅಲ್ಲಿ ಅಂತರಿಕ್ಷವಾಗಲಿ, ಖಾಲಿ ಜಾಗವಾಗಲಿ… ಕೊನೆಗೆ ಕತ್ತಲಾಗಲಿ, ಏನೂ ಇರಲಿಲ್ಲ. ಅದು ಅಂತಹ ಸ್ಥಿತಿಯಲ್ಲಿ ಹೇಗೆ ಎಷ್ಟು ದಿನ ಇತ್ತು ಅಂತಲೂ ಗೊತ್ತಿಲ್ಲ. ಏಕೆಂದರೆ ಆಗ ಕಾಲವೂ ಇರಲಿಲ್ಲ. ಹಾಗಾಗಿ ಅದಕ್ಕೆ ಭೂತಕಾಲವಾಗಲಿ, ಇತಿಹಾಸವಾಗಲಿ ಇರಲಿಲ್ಲ…

ಇಂಥ ಏನೂ ಇಲ್ಲದ ಸ್ಥಿತಿಯಲ್ಲಿ ನಮ್ಮ ಈ ಬ್ರಹ್ಮಾಂಡ ಉದಯಿಸಿತು. ಯಾವಾಗ ಎಂದು ಕೇಳಬಹುದು.  ಬ್ರಹ್ಮಾಂಡ ವಿಜ್ಞಾನಿಗಳು (ಖಗೋಳ ವಿಜ್ಞಾನಿಗಳು) ಹೇಳುವ ಪ್ರಕಾರ ಸುಮಾರು 1370 ಕೋಟಿ ವರ್ಷಗಳ ಹಿಂದೆ..

ಅದು ಆಗಿದ್ದಾದರೂ ಹೇಗೆ? ಅಂತಹ ಒಂದು ಏಕಶೂನ್ಯತೆಯಿಂದ, ಪದಗಳಲ್ಲಿ ವರ್ಣಿಸಲಾಗದ ಅಗಾಧತೆಯಲ್ಲಿ, ಅನಂತ ಆಯಾಮಗಳಲ್ಲಿ, ಕಲ್ಪಿಸಿಕೊಳ್ಳಲಾಗದಷ್ಟು ವಿಸ್ತಾರ ವ್ಯೋಮಾಕಾಶದಲ್ಲಿ ಈ ಬ್ರಹ್ಮಾಂಡ ಕ್ಷಣಾರ್ಧದಲ್ಲಿ ಅಸ್ತಿತ್ವಕ್ಕೆ ಬಂದುಬಿಟ್ಟಿತು.

ಆ ಮೊದಲ ಸೆಕೆಂಡಿನಲ್ಲಿ ಗುರುತ್ವಾಕರ್ಷಣೆ ಮತ್ತು ಇತರ ಭೌತಶಾಸ್ತ್ರದ ಪ್ರಮುಖ ಬಲಗಳು ಉದಯಿಸಿದವು. ಒಂದು ನಿಮಿಷಕ್ಕಿಂತ ಕಮ್ಮಿ ಅವಧಿಯಲ್ಲಿ ಈ ಬ್ರಹ್ಮಾಂಡ ಲಕ್ಷಾಂತರ ಕೋಟಿ ಮೈಲುಗಳ ಅಗಲದಲ್ಲಿ ಬೆಳೆದು, ವಿಸ್ತಾರವಾಗಿ ಚಾಚಿಕೊಂಡಿತು. ಅದರ ಜೊತೆಗೆ ಸಹಸ್ರ ಕೋಟಿ ಡಿಗ್ರಿಗಳ ಶಾಖವೂ ಇತ್ತು. ಅದು ಪರಮಾಣು ಪ್ರಕ್ರಿಯೆಗಳನ್ನು ಸಾಧ್ಯವಾಗಿಸುವ ಶಾಖ. ಆ ಸಮಯದ ಪರಮಾಣು ಪ್ರಕ್ರಿಯೆಗಳು ಹಗುರ ಮೂಲಧಾತುಗಳಾದ ಜಲಜನಕ ಮತ್ತು ಹೀಲಿಯಂ ಅನ್ನು ಸೃಷ್ಟಿಸಿದವು. ಹೀಗೆ ಸಾಗುವ ಸೃಷ್ಟಿಕ್ರಿಯೆ ಮುಂದಕ್ಕೆ ವಿಶ್ವದಲ್ಲಿ ಇದ್ದಿರಬಹುದಾದ ಎಲ್ಲಾ ಭೌತವಸ್ತುಗಳಲ್ಲಿ ಶೇ. 98ನ್ನು ಕೇವಲ ಮೂರೇ ನಿಮಿಷಗಳಲ್ಲಿ ಉತ್ಪನ್ನ ಮಾಡಿತು.

ಕೇವಲ ಎರಡು-ಮೂರು ನಿಮಿಷಗಳಲ್ಲಿ ಏನೂ ಇಲ್ಲದ ಸ್ಥಿತಿಯಿಂದ ಅಗಾಧ, ಅನಂತ, ಸುಂದರ, ಅಪರಿಮಿತ ಸಾಧ್ಯತೆಗಳ ಬ್ರಹ್ಮಾಂಡ ಆಸ್ತಿತ್ವಕ್ಕೆ ಬಂದಿದ್ದು. ಇದನ್ನೆ (ಖಗೋಳ) ಬ್ರಹ್ಮಾಂಡವಿಜ್ಞಾನದ ವಿಜ್ಞಾನಿಗಳು ಬಿಗ್-ಬ್ಯಾಂಗ್, ಮಹಾ ಸ್ಫೋಟ ಎಂದು ಕರೆಯುವುದು. ಅದು ಸ್ಫೋಟಕ್ಕಿಂತ ಹೆಚ್ಚಾಗಿ ಇದ್ದಕ್ಕಿದ್ದಂತೆ ಬೃಹತ್ ಪ್ರಮಾಣದಲ್ಲಿ ಘಟಿಸಿದ ಮಹಾವಿಸ್ತರಣೆ.

ಭೂಮಿ ಎಂಬ ಬೆರಗು

ಹೀಗೆ ಉದ್ಭವವಾದ ಅಗಾಧ ವಿಶ್ವದಲ್ಲಿ ಭೂಮಿಯೇನು ಏಕಾಏಕಿ ಪ್ರತ್ಯಕ್ಷವಾಗಲಿಲ್ಲ. ವಿಶ್ವವು ಕೋಟಿ ವರ್ಷಗಳ ಕಾಲ ವಿಸ್ತರಿಸಿಕೊಳ್ಳುತ್ತಾ ಇರುವಾಗಲೇ ಭೂಮಿ ನಿಧಾನವಾಗಿ ತನ್ನನ್ನು ರೂಪಿಸಿಕೊಳ್ಳುತ್ತಿತ್ತು.. ಕಲ್ಪನಾತೀತವಾದ ವಿಸ್ತಾರವಾದ ವಿಶ್ವದಲ್ಲಿ ಭೂಮಿ ಹುಟ್ಟಿದ್ದು ಒಂದು ಬೆರಗೇ…

1370 ಕೋಟಿ ವರ್ಷಗಳಷ್ಟು ಹಳೆಯದಾದ ಬ್ರಹ್ಮಾಂಡದಲ್ಲಿ ಸುಮಾರು 460 ಕೋಟಿ ವರ್ಷಗಳ ಹಿಂದೆ ನಮ್ಮ ಸೌರಮಂಡಲ ರೂಪಗೊಂಡಿತು. ಸುಮಾರು 2400 ಕೋಟಿ ಕಿಲೋಮೀಟರ್ ಗಳ ಉದ್ದಗಲದ ಅಂತರಿಕ್ಷದಲ್ಲಿ ಅನಿಲ ಮತ್ತು ಧೂಳು ಗುಂಪಾಗುತ್ತ ಬಂದು ಒಂದಾಗಿ ಸೇರಲು ಆರಂಭವಾಯಿತು.

ಅದರಲ್ಲಿ ಬಹುಪಾಲು ಎಲ್ಲವೂ ಅಂದರೆ ಶೇ. 99.9 ರಷ್ಟು ಸೂರ್ಯನ ಸೃಷ್ಟಿಗೇ ಬಳಕೆಯಾಯಿತು. ಇನ್ನೂ ತೇಲುತ್ತಿದ್ದ ಅಳಿದುಳಿದ ವಸ್ತುಗಳಲ್ಲಿ ಒಂದು ಕಣ ತನ್ನ ಹತ್ತಿರ ತೇಲುತ್ತಿದ್ದ ಇನ್ನೊಂದು ಕಣದೊಂದಿಗೆ ಎಲೆಕ್ಟ್ರೊಸ್ಟಾಟಿಕ್ ಬಲದಿಂದಾಗಿ ಕೂಡಿಕೊಳ್ಳಲು ಆರಂಭಿಸಿದವು. ಹಾಗೆ ಕೂಡಿಕೊಳ್ಳುತ್ತ ಅವೇ ಗ್ರಹಗಳಾಗಿ, ಉಪಗ್ರಹಗಳಾಗಿ ಆಕಾಶಕಾಯಗಳಾಗಿ ಬದಲಾಗುತ್ತ ಹೋದವು.

ಸೌರಮಂಡಲದ ಉದ್ದಗಲಕ್ಕೂ ಈ ವಿದ್ಯಮಾನ ದೀರ್ಘ ಕಾಲ ನಡೆಯಿತು. ಒಂದಕ್ಕೊಂದು ಡಿಕ್ಕಿಹೊಡೆದ ಧೂಳಿನ ಕಣಗಳು ಕ್ರಮೇಣ ಇನ್ನೊಂದಕ್ಕೆ ಡಿಕ್ಕಿ ಹೊಡೆದು, ಒಂದಕ್ಕೊಂದು ಅಂಟಿಕೊಳ್ಳುತ್ತ ದೊಡ್ಡವಾಗುತ್ತ ಹೋದವು. ಅವೇ ಕ್ರಮೇಣ ತಟ್ಟೆಯಾಕಾರದಲ್ಲಿ ಹರಡಿ ಕೊಂಡ ಗ್ರಹಾರಿಕೆ ಅಥವಾ ಪ್ಲಾನೆಟೆಸಿಮಲ್ಸ್ ಎಂದು ಕರೆಯಲ್ಪಡಬಲ್ಲಷ್ಟು ದೊಡ್ಡದಾದ ಧೂಳಿನ ಕಾಯಗಳಾದವು. ಇದು ಅದೇ ಗತಿಯಲ್ಲಿ ಅನಿಶ್ಚಿತ ಕ್ರಮದಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಬಹಳ ಡಿಕ್ಕಿಗಳನ್ನು ಕಂಡ ಆಕಾಶಕಾಯಗಳು ಕ್ರಮೇಣ ಎಷ್ಟು ದೊಡ್ಡವಾದವೆಂದರೆ ತಾವು ಚಲಿಸುತ್ತಿದ್ದ ಕಕ್ಷೆಯೊಳಗೆ ಕ್ರಮೇಣ ಅವೇ ಮೇಲುಗೈ ಸಾಧಿಸಿದವು.

ಇದೆಲ್ಲವೂ ಆಗಲು ಯುಗಗಳೇನೂ ಹಿಡಿಯಲಿಲ್ಲ. ವಿಜ್ಞಾನಿಗಳ ಪ್ರಕಾರ, ಸಣ್ಣ ಕಣಗಳ ಗುಂಪೊಂದು ನೂರಾರು ಮೈಲು ಅಗಲದ ಪುಟ್ಟದೊಂದು ಗ್ರಹವಾಗಿ ಬದಲಾಗಲು ಹಿಡಿದ ಅವಧಿ ಕೇವಲ ಹತ್ತಾರು ಸಾವಿರ ವರ್ಷಗಳು ಮಾತ್ರ. ನಮ್ಮ ಭೂಮಿ ಹೀಗೆ ಸುಮಾರು 20 ಕೋಟಿ ವರ್ಷಗಳಲ್ಲಿ ನಿರ್ಮಾಣವಾಯಿತು.

ಆಗಲೂ ಅದು ಬೆಂಕಿಯ ಲಾವಾರಸದಿಂದ ತುಂಬಿ ತುಳುಕುತ್ತಿತ್ತು ಮತ್ತು ಇನ್ನೂ ಸೌರಮಂಡಲದ ಅಂತರಿಕ್ಷದಲ್ಲಿ ತೇಲುತ್ತಿದ್ದ ಧೂಳು ಮತ್ತಿತರ ಆಕಾಶಕಾಯಗಳು ಅದಕ್ಕೆ ಬಂದು ಡಿಕ್ಕಿ ಹೊಡೆಯುತ್ತಲೇ ಇದ್ದವು. ಈ ಅವಧಿಯಲ್ಲಿಯೇ, ಅಂದರೆ ಸುಮಾರು 440 ಕೋಟಿ ವರ್ಷಗಳ ಹಿಂದೆ, ಈಗಿನ ಮಂಗಳ ಗ್ರಹದಷ್ಟು ದೊಡ್ಡದಾಗಿದ್ದ ಆಕಾಶಕಾಯವೊಂದು ಭೂಮಿಗೆ ಬಂದು ಡಿಕ್ಕಿ ಹೊಡೆಯಿತು. ಆ ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ ಭೂಭಾಗದ ಮೇಲ್ಪದರ ಸಾಕಷ್ಟು ಛಿದ್ರವಾಗಿ ಅಂತರಿಕ್ಷಕ್ಕೆ ಚೆಲ್ಲಿತು.

ಅದಾದ ಕೆಲವೇ ವಾರಗಳ ಅವಧಿಯಲ್ಲಿ ಭೂಮಿಯಿಂದ ಚಿಮ್ಮಿ ಹೋದ ಭಾಗಗಳೆಲ್ಲ ಆಕಾಶದಲ್ಲಿ ಒಂದಾಗಿ ಕೂಡಿಕೊಂಡವು. ಮತ್ತು ಭೂಮಿಯ ಗುರುತ್ವಾಕರ್ಷಣಾ ಬಲದಿಂದಾಗಿ ಅದು ಭೂಮಿಯನ್ನು ಸುತ್ತುಹಾಕಲು ಆರಂಭಿಸಿತು.

ಒಂದೇ ವರ್ಷದ ಅವಧಿಯಲ್ಲಿ ಅದು ಗೋಳದ ರೂಪ ಪಡೆದುಕೊಂಡಿತು. ಆ ಗೋಳವೇ ಇವತ್ತಿಗೂ ಭೂಮಿಯನ್ನು ಸುತ್ತುತ್ತ ನಮ್ಮ ಜೊತೆಗಿರುವ ಚಂದ್ರ.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ವರ್ಷ ತುಂಬಿದ ಸಂದರ್ಭದಲ್ಲಿ ವರ್ತಮಾನದ ಪ್ರಸ್ತುತತೆ….


ಸ್ನೇಹಿತರೆ,

ಕಳೆದ ವರ್ಷದ ಆಗಸ್ಟ್ 10 ರಂದು ಪೀಠಿಕೆ ಲೇಖನದ ಮೂಲಕ ವರ್ತಮಾನ.ಕಾಮ್ ಆರಂಭಗೊಂಡಿದ್ದು ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಇತ್ತೀಚಿನ ದಿನಗಳಲ್ಲಿ ವರ್ತಮಾನ.ಕಾಮ್ ಪರಿಚಯವಾಗಿರುವ ಮತ್ತು ಆ ಲೇಖನ ಓದಿಲ್ಲದ ಓದುಗರು ದಯವಿಟ್ಟು ಆ ಲೇಖನವನ್ನು ಒಮ್ಮೆ ಓದಲು ವಿನಂತಿಸುತ್ತೇನೆ. ವರ್ತಮಾನ ಆರಂಭಿಸಲು ನಮಗಿದ್ದ ಪ್ರೇರಣೆ ಮತ್ತು ಆಶಯ ನಿಮಗೆ ಗೊತ್ತಾಗಬಹುದು ಎಂದು ಭಾವಿಸುತ್ತೇನೆ.

ಈಗ ಒಂದು ವರ್ಷ ಪೂರ್ತಿಯಾಗಿದೆ. ಹಿಂದಿರುಗಿ ನೋಡಿದರೆ, ವೈಯಕ್ತಿಕವಾಗಿ ಒಂದಷ್ಟು ಸಂತಸ ಮತ್ತು ಒಂದಷ್ಟು ಭ್ರಮನಿರಸನ ಆಗುತ್ತಿದೆ. ಸಂತಸದ ವಿಚಾರಕ್ಕೆ ನಂತರ ಬರುತ್ತೇನೆ. ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದಿತ್ತೇನೊ ಎನ್ನುವ ವಿಚಾರಕ್ಕೆ ಅಸಂತೃಪ್ತಿ ಇದೆ. ಜೊತೆಗಿರುತ್ತೇವೆ ಎಂದ ಹಲವರು ಯಾಕೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಮಾಡಬಹುದಾಗಿದ್ದ ಅನೇಕವನ್ನು ನನ್ನ ನಿರುತ್ಸಾಹ ಅಥವ ಅಸ್ಪಷ್ಟತೆಯ ಕಾರಣ ಮಾಡಲಾಗದೆ ಹೋಯಿತೇನೊ ಎಂದೂ ಅನ್ನಿಸುತ್ತದೆ. ಜೊತೆಗೆ ಸಮಾನಮನಸ್ಕರನ್ನು ಒಳಗೊಳ್ಳುವಂತೆ ಮಾಡುವ ಪ್ರಯತ್ನವನ್ನು ಇನ್ನೂ ಹೆಚ್ಚು ಮಾಡಲಾಗದೆ ಹೋದದ್ದಕ್ಕೆ ಖೇದವಿದೆ. ಕನ್ನಡದಂತೆಯೇ ಕರ್ನಾಟಕದ ಇಂಗ್ಲಿಷ್ ಬರಹಗಾರರನ್ನೂ ಒಳಗೊಳ್ಳಲಾಗದೇ ಹೋದದ್ದಕ್ಕೆ ವಿಷಾದವಿದೆ. ಒಟ್ಟಿನಲ್ಲಿ ಅಸಂತೃಪ್ತಿಯ ಪಾಲೇ ಹೆಚ್ಚು.

ಆದರೆ, ವೈಯಕ್ತಿಕ ನೆಲೆಯಿಂದ ಹೊರಗೆ ನಿಂತು ನೋಡಿದಾಗ, ವರ್ತಮಾನ.ಕಾಮ್ ಕಳೆದ ಒಂದು ವರ್ಷದಲ್ಲಿ ಪ್ರಸ್ತುತವಾದ ಬಗೆಯನ್ನು ನೋಡಿ ಖುಷಿಯಾಗುತ್ತದೆ. ಕರ್ನಾಟಕದ ಯಾವೊಂದು ಮಾಧ್ಯಮ ಸಂಸ್ಥೆಯೂ ಎತ್ತದೇ ಹೋದಂತಹ ಹಲವು ಗಂಭೀರ ವಿಚಾರಗಳನ್ನು ವರ್ತಮಾನ ಮಾತ್ರ ಎತ್ತಿದೆ (ನ್ಯಾಯಾಧೀಶ ಬನ್ನೂರಮಠರ ಕುರಿತ ಲೇಖನ, ಕೋರ್ಟ್ ಆವರಣದಲ್ಲಿ ನಡೆದ ಗಲಭೆಯ ಬಹುಮುಖಗಳನ್ನು ಲೇಖನಗಳ ಮೂಲಕ ಅನಾವರಣಗೊಳಿಸಿದ್ದು. ಪ್ರಜಾವಾಣಿಯ ಮಾಲೀಕರಿಗೆ ಸಂಬಂಧಿಸಿದ ಡಿನೋಟಿಫಿಕೇಶನ್ ಲೇಖನ, ಇತ್ಯಾದಿ). ತನ್ಮೂಲಕ ಅದು ರಾಜ್ಯದ ಹಲವು ಕಡೆಗಳಲ್ಲಿ ಪ್ರಸ್ತುತವಾಗುವಂತೆ ಮಾಡಿದೆ. ಇಂಟರ್‌ನೆಟ್‌ಗೆ ತೆರೆದುಕೊಂಡಿರುವ ಕನ್ನಡ ಪತ್ರಕರ್ತರ ಮತ್ತು ಬರಹಗಾರರ ವಲಯದಲ್ಲಿ ವರ್ತಮಾನ್.ಕಾಮ್ ಸಾಕಷ್ಟು ಪ್ರಸ್ತುತತೆ ಪಡೆದುಕೊಂಡಿದೆ. ಮಾಧ್ಯಮಗಳ ವಿಚಾರಕ್ಕಂತೂ, ಅದರ ಬಗೆಗಿನ ವಿಮರ್ಶೆ ಮತ್ತು ಭ್ರಷ್ಟತೆಯ ಬಗ್ಗೆ ವರ್ತಮಾನ.ಕಾಮ್ ಹಲವು ಸಲ ಸಾಕ್ಷ್ಯಾಧಾರಗಳ ಸಮೇತ ಮಾತನಾಡಿದೆ. ನಮ್ಮ ಹಲವು ಲೇಖಕರು ನಿರ್ದಾಕ್ಷಿಣ್ಯವಾಗಿ ತಮ್ಮದೇ ವೃತ್ತಿಯ ಕೊಳಕುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಮತ್ತು ಅದು ಸರಿಹೋಗಬೇಕಾದ ತುರ್ತಿನ ಬಗ್ಗೆ ದ್ವನಿಯೆತ್ತಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ತುಂಬ ಸ್ಪಷ್ಟವಾಗಿ ಈ ವೇದಿಕೆಯಲ್ಲಿ ವಿಚಾರಗಳು ಮಂಡನೆಯಾಗಿವೆ. ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ನಾವು ಮಾತನಾಡುತ್ತ ಬಂದಿದ್ದೇವೆ. ದಾಖಲೆಗಳ ಸಮೇತ ಬರೆದಿದ್ದೇವೆ. ಇದೆಲ್ಲದರ ಜೊತೆಗೆ ಸಾಮಾಜಿಕ ಬದ್ಧತೆಯ ಹಿನ್ನೆಲೆಯಲ್ಲಿ ಕೆಲವು ಸಮಾನಮನಸ್ಕರ ಪ್ರೇರಣೆಯಿಂದ ಕೆಜಿಎಫ್‍ನ ಮಲಹೊರುವವರ ಕುಟುಂಬಗಳಿಗೆ ವರ್ತಮಾನ ವೇದಿಕೆಯ ಮೂಲಕ ಸಾಧ್ಯವಾದಷ್ಟು ಹಣಸಂಗ್ರಹಿಸಿ ತಲುಪಿಸುವಂತಹ ಕಾರ್ಯವೂ ಆಗಿದೆ.

ಈ ಸದರ್ಭದಲ್ಲಿ ನಮ್ಮ ಜೊತೆ ನಿಂತ ಹಲವರನ್ನು ನೆನೆಯಲೇಬೇಕು. ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪರವರು ನಮಗೆ ದೊಡ್ಡ ರೀತಿಯ ಬೆಂಬಲ ಕೊಡುತ್ತಿದ್ದಾರೆ. ಅವರು ಬರೆದ ಮೂರೂ ಸರಣಿ ಲೇಖನಗಳು ವರ್ತಮಾನ.ಕಾಮ್ continuity ಕಾಪಾಡಿಕೊಳ್ಳಲು ಸಹಾಯ ಮಾಡಿದವು. ಘಟನೆಯೊಂದಕ್ಕೆ ತತ್‌ಕ್ಷಣ ಸ್ಪಂದಿಸಿ ಅವರು ಬರೆದ ಹಲವು ಲೇಖನಗಳು ವರ್ತಮಾನದ ವಲಯವನ್ನು ವಿಸ್ತರಿಸಿದವು. ಮಂಗಳೂರಿನ ಚಿದಂಬರ ಬೈಕಂಪಾಡಿಯವರೂ ಅದೇ ರೀತಿಯ ಬೆಂಬಲ ಕೊಡುತ್ತ ಬಂದಿದ್ದಾರೆ. ಹೊಸಪೇಟೇಯ ಪರಶುರಾಮ್ ಕಲಾಲ್‌ರು ಸಾಧ್ಯವಾದಾಗಲೆಲ್ಲ ಬರೆದು ಬೆಂಬಲಿಸಿದ್ದಾರೆ. ಮಂಗಳೂರಿನ ಯುವ ಪತ್ರಕರ್ತ ನವೀನ್ ಸೂರಿಂಜೆ, ದಕ್ಷಿಣ ಕನ್ನಡದ ವಾಸ್ತವವನ್ನು ನಮಗೆಲ್ಲ ಪರಿಚಯಿಸುತ್ತಿದ್ದಾರೆ. ಬೆಂಗಳೂರಿನ ಶ್ರೀಪಾದ್ ಭಟ್ ಲೇಖನಗಳನ್ನು ಬರೆಯುವುದಷ್ಟೇ ಅಲ್ಲದೆ ಬೇರೆಬೇರೆ ಕಡೆಯಲ್ಲೂ ವರ್ತಮಾನ.ಕಾಮ್ ಅನ್ನು ಪರಿಚಯಿಸುತ್ತಿದ್ದಾರೆ. ಇನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿರುವವರ ಹಿಂಡೇ ಇದೆ. ಹಲವು ಕಾರಣಗಳಿಂದಾಗಿ ಅವರ ಹೆಸರು ತೆಗೆದುಕೊಳ್ಳಲಾಗದ ಅನಿವಾರ್ಯತೆ ಇದೆ. ಈ ಎಲ್ಲರಿಗೂ ಧನ್ಯವಾದ ಮತ್ತು ಕೃತಜ್ಞತೆಗಳು.

ಈ ಹಿನ್ನೆಲೆಯಲ್ಲಿ ನಾವು ಈ ವೆಬ್‌ಸೈಟ್ ನಿರ್ವಹಣೆಗೆ ವ್ಯಯಿಸಿರುವ ಹಣಕ್ಕೆ ಹೋಲಿಸಿದರೆ ಅದು ಗಳಿಸಿರುವ credibility ಹೆಚ್ಚು ಎನ್ನಿಸುತ್ತದೆ. ಅದಕ್ಕೆ ಮೂಲಕಾರಣ, ಬೆಂಬಲಿಸುತ್ತಿರುವ ಜನರ ಪ್ರೀತಿ, ಬದ್ಧತೆ, ಮತ್ತು ಸ್ಪಷ್ಟತೆ; ಮತ್ತು ಒಟ್ಟಾರೆಯಾಗಿ ನಾವೆಲ್ಲ ವ್ಯಯಿಸಿರುವ ನಮ್ಮ ಒಟ್ಟು ಶ್ರಮ. ಅದು ಬರೆಯುವುದಕ್ಕಾಗಿರಬಹುದು, ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುವಂತಹ ಹಿನ್ನೆಲೆ ಕಾರ್ಯ ಆಗಿರಬಹುದು, ಮತ್ತು ಅದನ್ನು ಸಾಮಾಜಿಕ ತಾಣಗಳಲ್ಲಿ ಮತ್ತು ಇಮೇಲ್‌ಗಳಲ್ಲಿ ಹಂಚಿಕೊಂಡಿರುವ ಸಮಯ ಮತ್ತು ಶ್ರಮದ್ದಾಗಿರಬಹುದು. ಕಣ್ಣಿಗೆ ಕಾಣದ, ಆದರೆ ಪರಿಣಾಮಕಾರಿಯಾದ ಸಹಸ್ರಾರು ಗಂಟೆಗಳ ಸಾಮೂಹಿಕ ಶ್ರಮವನ್ನು ಈ ಒಂದು ವರ್ಷದಲ್ಲಿ ಈ ಪ್ರಯತ್ನ ಪಡೆದುಕೊಂಡಿದೆ. ಯಾವ ರೀತಿಯಿಂದಲೂ ಈ ಸಮಯ ಮತ್ತು ಶ್ರಮ ಕಮ್ಮಿಯಾದದ್ದಲ್ಲ. ಮತ್ತು ತಮ್ಮ ಸಮಯವನ್ನು ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ ಮತ್ತು ಕೃತಜ್ಞತೆ ಅರ್ಪಿಸುವ ಕರ್ತವ್ಯ ನನ್ನದು.

ಅಂದ ಹಾಗೆ, ಈ ವೆಬ್‌ಸೈಟ್ ನಿರ್ವಹಣೆಗೆ ಈ ಒಂದು ವರ್ಷದಲ್ಲಿ ವ್ಯಯಿಸಿರುವ ಹಣದ ಬಗ್ಗೆ ಒಂದು ಮಾತು. ರಿಜಿಸ್ಟ್ರೇಷನ್ ಮತ್ತು ಹೋಸ್ಟಿಂಗ್‌ಗೆಂದು ಸುಮಾರು ಐದು ಸಾವಿರ ವೆಚ್ಚವಾಗಿದೆ. ಮತ್ತು ನಮ್ಮಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿರುವ ನಮ್ಮ ಸಹೋದ್ಯೋಗಿಯೊಬ್ಬರಿಗೆ ಇಲ್ಲಿಯವರೆಗೆ ಕೊಟ್ಟಿರುವುದನ್ನು ಲೆಕ್ಕ ಹಾಕಿದರೆ ಬಹುಶಃ ಈ ಒಂದು ವರ್ಷದಲ್ಲಿ ಸುಮಾರು ಐವತ್ತು ಸಾವಿರ ಖರ್ಚಾಗಿದೆ. ಇನ್ನೂ ಹೆಚ್ಚು ಮಾಡಬೇಕಾಗಿತ್ತೊ ಅಥವ ಕಮ್ಮಿ ಮಾಡಬಹುದಿತ್ತೊ ಎನ್ನುವ ಬಗ್ಗೆ ಸಂದೇಹಗಳಿವೆ. ಆದರೆ ನಮಗೆ ಸರಿಯಾದ ಸಂದರ್ಭದಲ್ಲಿ ನಮ್ಮ ಜೊತೆ ಕೈಜೋಡಿಸುವ ಇಚ್ಚೆಯುಳ್ಳ, ದಿನಕ್ಕೆ ಒಂದೆರಡು ಗಂಟೆಗಳನ್ನು ಕಡ್ಡಾಯವಾಗಿ ವರ್ತಮಾನ.ಕಾಮ್‌ಗೆ ನೀಡುವ ಕಾರ್ಯಕರ್ತರ ರೀತಿಯ ಸ್ನೇಹಿತರು ಸಿಕ್ಕಿದ್ದರೆ, ಖಂಡಿತ ಹತ್ತು-ಹದಿನೈದು ಸಾವಿರದ ಒಳಗೆ ನಮ್ಮ ಖರ್ಚುಗಳು ಮುಗಿದುಹೋಗುತ್ತಿದ್ದವು. ಉಳಿಕೆ ದುಡ್ಡನ್ನು ನಾವು ಬೇರೆಯೇ ಕಾರ್ಯಕ್ಕೆ ವಿನಿಯೋಗಿಸಬಹುದಿತ್ತು. ಅಂತಹ ಸ್ನೇಹಿತರ ತಲಾಷೆ ನಡೆಯುತ್ತಲೇ ಇದೆ.

ವರ್ತಮಾನ.ಕಾಮ್‌ಗೆ ತನ್ನದೇ ಆದ ಯಾವೊಂದು ಆದಾಯ ಮೂಲವೂ ಇಲ್ಲದ, ಸದ್ಯದ ಸಂದರ್ಭದಲ್ಲಿ ಹಾಗೆ ಸಾಧ್ಯವೂ ಆಗದ ಸ್ಥಿತಿಯಲ್ಲಿ, ಕೇವಲ ನನ್ನ ವೈಯಕ್ತಿಕ ಹಣದಲ್ಲಿ ಖರ್ಚುಗಳನ್ನು ನಿಭಾಯಿಸುವುದು ವೆಬ್‌ಸೈಟ್‌ನ ದೀರ್ಘಕಾಲೀನ ದೃಷ್ಟಿಯಿಂದ ಒಳ್ಳೆಯದಲ್ಲ. ಅದನ್ನು ಸಾವಯಿಕವಾಗಿ ಬೆಳೆಸಬೇಕು, ಮತ್ತು ಅದೇ ರೀತಿ ಅದು ತನ್ನ ಕಾಲ ಮೇಲೆ ತಾನು ನಿಲ್ಲುವಂತಹ ಒಂದು ಫೈನಾನ್ಷಿಯಲ್ ಮಾಡೆಲ್ ಒಂದನ್ನು ನಿರ್ಮಿಸಿಕೊಳ್ಳಬೇಕು. ಆದರೆ, ಈ ಒಂದು ವರ್ಷ ಅದರ ಕಡೆ ಹೆಚ್ಚು ಗಮನ ಕೊಡದೆ ವರ್ತಮಾನ.ಕಾಮ್‌ ಅನ್ನು ಇನ್ನೂ ಹೆಚ್ಚಿಗೆ ಪ್ರಸ್ತುತ ಮಾಡುವ ಮತ್ತು ಅದರ ವಲಯವನ್ನು ವಿಸ್ತಾರ ಮಾಡುವ ಕಡೆಗಷ್ಟೇ ಗಮನ ಕೊಡೋಣ ಎಂದುಕೊಳ್ಳುತ್ತಿದ್ದೇನೆ.

ಹಾಗೆಂದು, ಯಾರಾದರೂ ವರ್ತಮಾನ.ಕಾಮ್‌ನ ಒಂದಷ್ಟು ಖರ್ಚುಗಳನ್ನು ನಿಭಾಯಿಸಲು ಮುಂದೆ ಬಂದರೆ ಅದಕ್ಕೆ ಕೃತಜ್ಞತಾಪೂರ್ವಕವಾದ ಸ್ವಾಗತವಿದೆ. ಅಷ್ಟೇ ಅಲ್ಲ, ಯಾವುದಾದರೂ ಅಧ್ಯಯನ/ಕಾರ್ಯಕ್ಷೇತ್ರ/ಅಸೈನ್‌ಮೆಂಟ್ ರೀತಿಯ ಯೋಜನೆಗಳಿಗೆ ಹಣಸಹಾಯ ಅಥವ ಪ್ರಾಯೋಜಕತ್ವದ ಮೂಲಕ ವರ್ತಮಾನದ ಜೊತೆಗೆ ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದು ಬಯಸಿದರೆ ಅಂತಹದೂ ಸಾಧ್ಯವಿದೆ. ಇದನ್ನು ನಾವು ಉತ್ತೇಜಿಸುತ್ತೇವೆ ಸಹ. ಒಂದಿಬ್ಬರು ಸ್ನೇಹಿತರು ಈ ಮೊದಲೆ ಈ ಬಗ್ಗೆ ಪ್ರಸ್ತಾಪಿಸಿದ್ದರು. ಬಹುಶಃ ಈ ವರ್ಷ ಅಂತಹುದೊಂದು ಸಾಧ್ಯವಾಗಬಹುದೇನೊ. ವರ್ತಮಾನದ ಓದುಗರಲ್ಲಿರಬಹುದಾದ ಆಸಕ್ತ ಜನ ಅಥವ ಸಂಸ್ಥೆಗಳು ಆ ನಿಟ್ಟಿನಲ್ಲಿ ಯೋಚಿಸಲು ವಿನಂತಿಸುತ್ತೇನೆ. ಅಂದ ಹಾಗೆ, ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ವರ್ತಮಾನ.ಕಾಮ್‌ನ ಮೂಲಕ ಆಯೋಜಿಸಿರುವುದನ್ನು ನೀವು ಗಮನಿಸಿರಬಹುದು. ಅಂತಹುದೇ ಯಾವುದಾದರೂ ಕತೆ-ಕವಿತೆ-ಲೇಖನ ಸ್ಪರ್ಧೆಗಳಿಗೆ (ವರ್ತಮಾನ.ಕಾಮ್‌ನ ಆಶಯಗಳಿಗೆ ಪೂರಕವಾಗಿರುವಂತಹ ವಿಷಯಗಳ ಮೇಲೆ) ಪ್ರಾಯೋಜಕರಾಗಲು ಮುಂದೆ ಬಂದರೆ ನಾವೆಲ್ಲ ಖುಷಿ ಪಡುತ್ತೇವೆ. ಅದು ಈ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡಿರುವ ಎಲರಿಗೂ ಸ್ಫೂರ್ತಿ ಮತ್ತು ಖುಷಿ ಕೊಡುತ್ತದೆ.

ಇನ್ನು ಬರಲಿರುವ ದಿನಗಳಲ್ಲಿ ವರ್ತಮಾನ.ಕಾಮ್ ತನ್ನ ದಿಕ್ಕುದೆಸೆಗಳನ್ನು ಹೇಗೆ ವಿಸ್ತರಿಸಿಕೊಳ್ಳಬೇಕು ಎಂದು ಚರ್ಚೆಗಳಾಗುತ್ತಿವೆ. ಈ ವರ್ಷವೂ ಸಹ ಹಲವು ಕಡೆ ಇದೇ ವಿಷಯಕ್ಕಾಗಿ ಪ್ರವಾಸಗಳನ್ನೂ ಮಾಡಿ, ಹಲವರನ್ನು ಭೇಟಿ ಮಾಡುವ ಕೆಲಸವೂ ನಡೆಯಲಿದೆ. ವಿಡಿಯೊ ಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇದೆ. ಇಲ್ಲಿ ಪ್ರಸ್ತಾಪಿಸುವುದಕ್ಕಿಂತ ಆ ಯೋಚನೆಗಳು ಕಾರ್ಯರೂಪಕ್ಕೆ ಬಂದು ಪ್ರತ್ಯಕ್ಷವಾದರೇನೆ ಚೆನ್ನ. ಮೇಲೆ ಹೇಳಿದ ರೀತಿಗಳಲ್ಲಿ ಅಥವ ಇನ್ಯಾವುದೇ ರೀತಿಯಲ್ಲಿ ನಿಮ್ಮ ಸಹಾಯ ಮತ್ತು ಸಹಕಾರ ಹೆಚ್ಚೆಚ್ಚು ದೊರೆಯುತ್ತ ಹೋದರೆ ನಮ್ಮ ಆಶಯಗಳಲ್ಲಿ ಒಂದಾದ ಸಕಾರಣಗಳಿಗಾಗಿ ಪರ್ಯಾಯ ಮಾಧ್ಯಮವೊಂದನ್ನು ಕರ್ನಾಟಕದಲ್ಲಿ ಕಟ್ಟಿಕೊಳ್ಳುವ ಹಂಬಲ ಕಾರ್ಯಸಾಧ್ಯವಾಗುತ್ತದೆ. ಆ ನಂಬಿಕೆಯಲ್ಲಿ ಎರಡನೇ ವರ್ಷಕ್ಕೆ ಅಡಿಯಿಡುತ್ತಿದ್ದೇವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಮೂರ್ಖರ ಪೆಟ್ಟಿಗೆ ಹಾಗೂ ಜನಪ್ರಿಯ ಸಂಸ್ಕೃತಿಯ ಭರಾಟೆ


-ಡಾ.ಎಸ್.ಬಿ. ಜೋಗುರ


ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗ ಸದ್ದೇ ಇಲ್ಲದೆ  ಸಾಗಿಬರುವ ಪರಂಪರೆಯೊಂದು ಈಗ ಮಾಧ್ಯಮಗಳ ಗದ್ದಲಗಳಲ್ಲಿ ಕಳೆದು ಹೋಗಿದೆ. ಈ ಜನಪ್ರಿಯ ಮಾಧ್ಯಮಗಳು ಜನಸಾಮಾನ್ಯನನ್ನು ಪ್ರಭಾವಿಸುತ್ತಲೇ ತನ್ನ ತೆಕ್ಕೆಗೆ ಅಪಾರ ಪ್ರಮಾಣದ ಜನಸಮೂಹವನ್ನು ತೆಗೆದುಕೊಂಡು ಪ್ರವಾಹದೋಪಾದಿಯಲ್ಲಿ ಸಾಗುತ್ತಿದೆ.  ಮಧ್ಯಮವರ್ಗದ ಮನೆಯೊಳಗಿನ ಬಹುತೇಕ ಪರಿಕರಗಳು ಟಿ.ವಿ. ಜಾಹೀರಾತುಗಳ ಪ್ರಭಾವದಿಂದ ಎಂಟ್ರಿ ಪಡೆದವುಗಳಾಗಿವೆ.  ಅತ್ಯಂತ ಪ್ರಭಾವಿ ಮಾಧ್ಯಮವಾದ ಟಿ.ವಿ.ಯು ವೀಕ್ಷಕರ ಮನ:ಸ್ಥಿತಿ ಮತ್ತು ಅವರು ಮೂರ್ಖರ ಪೆಟ್ಟಿಗೆಯ ಮುಂದೆ ಕುಳಿತುಕೊಳ್ಳುವ ಮೂಲಕ ಪಡೆಯುವ ಮತ್ತು ಹಿಂತಿರುಗಿ ಕೊಡುವ ಸಂಗತಿಗಳಾದರೂ ಯಾವುವು?

ಬ್ರಿಟಿಷ್ ಫಿಲ್ಮ್ ಸಂಸ್ಥೆ ಈ ಬಗ್ಗೆ ಒಂದು ನಿಖರವಾದ ಅಧ್ಯಯನವನ್ನು ಮಾಡಿದೆ. ಈ  ಬಗ್ಗೆ  ‘An introduction to studying popular culture’ ಎನ್ನುವ ಕೃತಿಯಲ್ಲಿ ಡೊಮೆನಿಕ್ ಸ್ಟ್ರಿನಟಿ ಎನ್ನುವ ಲೇಖಕರು ಚರ್ಚಿಸಿದ್ದಾರೆ. ಯುರೋಪದ ಪ್ರಮುಖ ರಾಷ್ಟ್ರಗಳಲ್ಲಿ ಹಗಲು ಹೊತ್ತಿನಲ್ಲಿ ಹೆಚ್ಚು ದೂರದರ್ಶನವನ್ನು ವೀಕ್ಷಣೆ ಮಾಡುವವರಿಗೆ ಒಂದು ಬಗೆಯ ತಪ್ಪಿತಸ್ಥ ಪ್ರಜ್ಞೆ ಕಾಡುವ ಬಗ್ಗೆ ಅಧ್ಯಯನದಲ್ಲಿ ತಿಳಿದುಬಂದಿದೆ. ಜೊತೆಗೆ ಹೆಚ್ಚೆಚ್ಚು ದೂರದರ್ಶನವನ್ನು ವೀಕ್ಷಿಸುವುದು ಆರೋಗ್ಯಕರವೂ ಅಲ್ಲ ಎನ್ನುವ ಬಗ್ಗೆ ಆ ಅಧ್ಯಯನ ತೋರಿಸಿಕೊಟ್ಟಿದೆ. ಸದ್ಯದ ಸಂದರ್ಭದಲ್ಲಿ ಬದುಕು ಅನೇಕ ಬಗೆಯ ಬವಣೆಗಳಿಂದ ಸುತ್ತುವರೆದಿದೆ. ಪ್ರಾಥಮಿಕ ಶಾಲೆಯಲ್ಲಿ ಓದುವ ವಿದ್ಯಾರ್ಥಿಯಿಂದ ಹಿಡಿದು ಮಸಣ ಮಾರ್ಗದಿ ದಿನಗಳೆಣೆಸುವವರ ತನಕ ಎಲ್ಲರೂ ಉದ್ವೇಗದ ವಾತಾವರಣದಲ್ಲಿ ದಿನದೂಡುವ ನಡುವೆ ಕೊಂಚ ರಿಲ್ಯಾಕ್ಸ್ ಆಗಲು ಕಂಡುಕೊಂಡ ರೆಡಿಮೇಡ್ ಮಾರ್ಗ ಈ ಟಿ.ವಿ. ವೀಕ್ಷಣೆ. ಆ ಸಂಶೋಧನೆಯಲ್ಲಿ ಕಂಡುಬಂದ ಇನ್ನೊಂದು ಸಂಗತಿಯೆಂದರೆ ಪುರುಷರು ಹೆಚ್ಚಾಗಿ ಸಾಹಸದ ಸನ್ನಿವೇಶಗಳು, ವಾಸ್ತವಿಕ ಘಟನೆಗಳು, ಕ್ರೀಡೆಯನ್ನು ಹೆಚ್ಚಾಗಿ ವೀಕ್ಷಣೆ ಮಾಡಿದರೆ, ಮಹಿಳೆಯರು ರಿಯಾಲಿಟಿ ಶೋ, ನಾಟಕ ಮುಂತಾದವುಗಳನ್ನು ನೋಡುವ ಬಗ್ಗೆ ತಿಳಿದುಬಂದಿದೆ. ರಿಮೋಟ್ ಕಂಟ್ರೊಲ್ ಮೇಲಿನ ಅಧಿಪತ್ಯದಲ್ಲಿ 46 ಪ್ರತಿಶತ ಪುರುಷರದಾಗಿದ್ದರೆ, 22 ಪ್ರತಿಶತ ಮಹಿಳೆಯರದಾಗಿದೆ. ಯುವಕರು ಮಾತ್ರ ಹೆಚ್ಚಾಗಿ ಗ್ಲಾಮರಸ್ ಇಲ್ಲವೇ ಹಿಂಸಾತ್ಮಕವಾದ ಕಾರ್ಯಕ್ರಮಗಳನ್ನು ನೋಡುವುದಿದೆ.

ದೂರದರ್ಶನದ ಕೆಲ ಹಿಂಸಾತ್ಮಕ ಕಾರ್ಯಕ್ರಮಗಳ ವೀಕ್ಷಣೆ ಯುವಜನಾಂಗದ ಅಶಾಂತಿಗೆ ಪರೋಕ್ಷವಾಗಿ ಕಾರಣವಾಗುವ ಬಗ್ಗೆ ಮತ್ತೊಂದು ಸಮೀಕ್ಷಾ ಅಧ್ಯಯನವು ತಿಳಿಸಿರುವುದಿದೆ. ಆ ಕುರಿತು ಮಾರ್ಚ್ 19-1999 ರಲ್ಲಿ ಗಾರ್ಡಿಯನ್ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಬ್ರಿಟಿಷ ಯುವಕರು ಅದರಲ್ಲೂ 17 ವರ್ಷ ವಯೋಮಿತಿಯ ಒಳಗಿನವರು ಪುಸ್ತಕಗಳನ್ನು ಓದುವ ಬಗ್ಗೆ ರೇಜಿಗೆ ಬೆಳೆಸಿಕೊಂಡಿದ್ದಾರೆ. ಬಹುತೇಕ ಮಕ್ಕಳು ತಮ್ಮ ಬೆಡ್ ರೂಮಲ್ಲಿ ಒಂದು ಟಿ.ವಿ.ಯನ್ನು ಹೊಂದಿರುವರು. ಅವರು ಬೆಳೆಯುತ್ತಿರುವುದೇ ಈ ಬೆಡ್ ರೂಮ್ ಸಂಸ್ಕೃತಿಯಲ್ಲಿ ದಿನಕ್ಕೆ 5-6 ಘಂಟೆ ತಮ್ಮ ಅಮೂಲ್ಯವಾದ ಸಮಯವನ್ನು ಟಿ.ವಿ.ಮುಂದೆ ಕಳೆಯುವುದಿದೆ. ಎಂದು ಅದು ವರದಿ ಮಾಡಿತ್ತು. ಈ ಮಾತು ನಮ್ಮ ಯುವಕರಿಗೂ ಅನ್ವಯಿಸುತ್ತದೆ. ಆದರೆ ಯುರೋಪದ ರಾಷ್ಟ್ರಗಳಿಗಿಂತಲೂ ನಮ್ಮ ಸಂಸ್ಕೃತಿ, ಸಾಮಾಜಿಕ ಪರಿಸರ ವಿಭಿನ್ನ. ಅಜ್ಜಿ ಹೇಳುವ ಕಥೆಗಳಲ್ಲಿಯೆ ಸುಖ ಕಾಣುವ ಜಮಾನಾ ಒಂದಿತ್ತು. ಮಕ್ಕಳಾಡುವ ತೊದಲು ನುಡಿಯೆ ಮನರಂಜನೆಯಾಗಿದ್ದ ದಿನಗಳೂ ಹೋದವು.. ಭಜನೆ..ಕೀರ್ತನೆ..ಗಳೂ ಇಂದಿನ ಯುವಜನತೆಗೆ ಮನರಂಜನೆಯನ್ನು ನೀಡುವ ತಾಕತ್ತನ್ನು ಕಳೆದುಕೊಂಡವು.

ಈಗ ಒಂದೇ ಒಂದು ಬಟನ್ ಒತ್ತುವ ಮೂಲಕ ನೂರಾರು ಗ್ಲಾಮರಸ್ ಚಾನೆಲ್‌ಗಳು ನಮ್ಮ ಯುವಕರ ಎದುರು ಬಿಚ್ಚಿಕೊಳ್ಳುತ್ತವೆ. ಸರಿ-ತಪ್ಪುಗಳ ಎಗ್ಗಿಲ್ಲದೇ ಇಷ್ಟವಾಗುವ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸುವ ಮೂಲಕ ಟಿ.ವಿ. ಮತ್ತು ಅಲ್ಲಿಯ ಜಾಹೀರಾತುಗಳು ಸೃಷ್ಟಿಸಲು ಬಯಸಿರುವ ವೀಕ್ಷಕರಾಗಿ ಮಾರ್ಪಾಡು ಹೊಂದುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ಯುವಕರಂತೂ ಈ ಗ್ಲಾಮರ್ ಲೋಕದ ಪರಿಧಿಗೆ ಬಂದ ಮಿಂಚುಹುಳದಂತಾಗುತ್ತಾರೆ. ಇತ್ತೀಚಿಗೆ ಒಂದು ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಆಮೇಲೆ ವಿಕ್ಷಿಪ್ತನಾಗಿ ಆಸ್ಪತ್ರೆ ಸೇರಿರುವ ಬಳ್ಳೆಹಾಡಿಯ ಹುಡುಗ ರಾಜೇಶನೂ ಒಂದು ಉದಾಹರಣೆ. ಯುರೋಪದಂತಹ ರಾಷ್ಟಗಳಲ್ಲಿ ಈಗೀಗ ಜನತೆ ದೂರದರ್ಶನದ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ಒಂದು ಬಗೆಯ ಮಾರಲ್ ಗಿಲ್ಟ್ ಅಂದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಆ ಬಗೆಯ ಮನ:ಸ್ಥಿತಿ ಇನ್ನೂ ಒಡಮೂಡಿಲ್ಲ. ಹಾಗಾಗಿಯೆ ವೀಕ್ಷಕನ ಆಯುಷ್ಯದಷ್ಟೇ ದೀರ್ಘವಾದ ಧಾರವಾಹಿಗಳು ನಮ್ಮಲ್ಲಿ ತಯಾರಾಗುತ್ತವೆ. ನಮ್ಮಲ್ಲಿಯ ಟಿ.ವಿ.ವೀಕ್ಷಕರಿಗೆ ಇಂದಿಗೂ ಯಾವ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಂಡು ನೋಡಬೇಕು ಎನ್ನುವ ಬಗ್ಗೆ ಸ್ಪಷ್ಟವಾದ ಸೂತ್ರಗಳಿಲ್ಲ. ದಿನದ 24 ಘಂಟೆಯೂ ಮನೆಯಲ್ಲಿ ವಕ್ಕರಿಸಿರುವ ಟಿ.ವಿ. ತರ್ಕಸಮ್ಮತವಾತ ಕಾರ್ಯಕ್ರಮಗಳ ಆಯ್ಕೆಗೆ ನಮ್ಮ ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿರುವದಿದೆಯೆ.? ಎನ್ನುವುದು ಇನ್ನೊಂದು ಪ್ರಶ್ನೆ. ಟಿ.ವಿ.ಯಲ್ಲಿ ಬರುವ ಖಾಸಗಿ ಚಾನೆಲ್‌ಗಳ ಗುರಿ ಮಾತ್ರ ಕೈಗೂಡಿದಂತಾಗಿದೆ. ಜನಪ್ರಿಯ ಸಂಸ್ಕೃತಿಯ ಹೆಸರಲ್ಲಿ ಬೃಹತ್ ಪ್ರಮಾಣದ ವೀಕ್ಷಕರನ್ನು ಗ್ಲಾಮರಸ್ ಆಗಿರುವ ಜಾಹೀರಾತುಗಳ ಮೂಲಕ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಸಿಲುಕಿಸಿರುವುದಂತೂ ಹೌದು. ಭಾರತದಂತಹ ರಾಷ್ಟ್ರದಲ್ಲಿ ಭಾವುಕ ಪ್ರೇಕ್ಷಕರ ಸಂಖ್ಯೆ ಅಪಾರ. ಅಲ್ಲಿಯ ಕಾರ್ಯಕ್ರಮಗಳು ಇವರನ್ನು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುವುದಿದೆ. ಹಾಗಾಗಿಯೆ ಇಂದಿನ ಕೌಟುಂಬಿಕ ಪರಿಸರದಲ್ಲಿ ಧಾರವಾಹಿಯ ಅನೇಕ ಪಾತ್ರಗಳು ಸುತ್ತಿ ಸುಳಿಯುತ್ತವೆ.

ಸಿನೇಮಾ ದಿನಾಲು ಕೈಗೆಟಕುವದಿಲ್ಲ. ಎಟಕಿದರೂ ದಿನಾಲು ಸಿನೇಮಾ ನೋಡುವವರನ್ನು ಈ ಸಮಾಜ ಸಾಮಾನ್ಯವಾಗಿ ಸಹಿಸುವುದಿಲ್ಲ. ಟಿ.ವಿ.ಹಾಗಲ್ಲ ದಿನದ 24 ಘಂಟೆ ತೀರಾ ಸುಲಭವಾಗಿ ಎಟಕಬಹುದಾದ ಸಾಧನ. ಪರಿಣಾಮವಾಗಿ ಆ ಕುಟುಂಬದಲ್ಲಿರುವ ಎಲ್ಲ ವಯೋಮಾನದವರು ಅವರವರಿಗೆ ಬೇಕಾದ ಕಾರ್ಯಕ್ರಮಗಳನ್ನು ನೋಡಿ ಹಗುರಾಗುತ್ತಾರೆ. ಅಲ್ಲಿ ಬರುವ ಜಾಹೀರಾತುಗಳು ಮಾತ್ರ ಆ ಮನೆಯ ಯಜಮಾನನ ಪಾಲಿಗೆ ಪರೋಕ್ಷವಾಗಿ ಭಾರವಾಗುತ್ತವೆ. ಲೆವಿಸ್ ಎನ್ನುವ ಚಿಂತಕರು ಈ ಟಿ.ವಿ ವೀಕ್ಷಕರ ಮೇಲೆ ಬೀರಬಹುದಾದ ಪ್ರಭಾವವನ್ನು ಹೀಗೆ ಚರ್ಚಿಸಿರುವರು. ಅವರು ಹೇಳುವಂತೆ:

  • ಟಿ.ವಿ. ವೀಕ್ಷಕರ ಆಲೋಚನೆಗಳ ಮೆಲೆ ಪ್ರಭಾವ ಬೀರಬಹುದೇ ಹೊರತು ಅವರ ವರ್ತನೆಗಳ ಮೇಲಲ್ಲ.
  •  ಅದು ಬೀರುವ ಪ್ರಭಾವ ಅತ್ಯಂತ ಸಂಕೀರ್ಣವಾದುದು. ಅದು ಹೀಗೆ ಎಂದು ಖಚಿತವಾಗಿ ಹೇಳಲಾಗದು.
  •  ವೀಕ್ಷಕರು ವಿಭಿನ್ನವಾಗಿರುತ್ತಾರೆ ಹಾಗೆಯೆ ಪ್ರಭಾವವೂ ಭಿನ್ನವೇ.
  •  ವೀಕ್ಷಕರನ್ನು ಖಾಲಿ ಪಾತ್ರೆಗಳೆಂದು ತಿಳಿಯುವುದೇ ಹೆಚ್ಚೆಚ್ಚು ಮಾರಕ ಪರಿಣಾಮಗಳಾಗಲು ಕಾರಣ.
  •  ವೀಕ್ಷಕರ ಸಾಮಾಜಿಕ ಸಂದರ್ಭವನ್ನು ನಿರ್ಲಕ್ಷಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

ವೀಕ್ಷಕರಲ್ಲಿ ಎಲ್ಲ ರೀತಿಯ ಮನೋಭಾವ, ಸ್ತರ, ಶಿಕ್ಷಣ, ವರ್ಗದವರಿದ್ದಾರೆ. ಅವರ ನಿರೀಕ್ಷೆಗಳ ಅಧ್ಯಯನದ ಮೂಲಕ ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಜೊತೆಗೆ ವಸ್ತುನಿಷ್ಟವಾಗಿ ಟಿ.ವಿ. ಪ್ರೇಕ್ಷಕರ ಮೇಲೆ ಬೀರಬಹುದಾದ ಪ್ರಭಾವವನ್ನು ಅಧ್ಯಯನ ಮಾಡದೇ ಭಾವನೆಗಳನ್ನು ಕೆರಳಿಸಬಹುದಾದ, ಹಿಂಸಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬಾರದು. ಅತಿ ಮುಖ್ಯವಾಗಿ ವೀಕ್ಷಕರು ಯಾವಾಗಲೂ ಸಿನಿಕರಾಗಿರುತ್ತಾರೆ, ಕಾರ್ಯಕ್ರಮಗಳಲ್ಲಿ ತೋರಿಸುವ ಪ್ರತಿಯೊಂದು ಸಂಗತಿಯನ್ನು ಅವರು ಪ್ಯಾಸ್ಸಿವ್ ಆಗಿ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಬಾರದು. ಮೂರ್ಖರ ಪೆಟ್ಟಿಗೆಯ ಮುಂದಿರುವವರೆಲ್ಲಾ ಮೂರ್ಖರಲ್ಲ.