– ರವಿ ಕೃಷ್ಣಾರೆಡ್ಡಿ
ಅಕ್ಟೋಬರ್ 18, 2011 ರಂದು ವರ್ತಮಾನ.ಕಾಮ್ನಲ್ಲಿ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…” ವರದಿ ದಾಖಲೆಗಳ ಸಮೇತ ಪ್ರಕಟವಾಗಿತ್ತು. ಆಗ ಈ ಕೇಸು ಲೋಕಾಯುಕ್ತ ನ್ಯಾಯಾಲಯದಲ್ಲಿತ್ತು ಮತ್ತು ಲೋಕಾಯುಕ್ತ ಪೋಲಿಸರು ತನಿಖೆ ನಡೆಸುತ್ತಿದ್ದರು. ಎಷ್ಟೋ ತಿಂಗಳಗಳ ನಂತರ, ಬಹುಶಃ ವರ್ಷದ ನಂತರ, ನಮ್ಮ ಘನ, ದಕ್ಷ ಲೋಕಾಯುಕ್ತ ಪೋಲಿಸರು ಈ ಕೇಸಿನಲ್ಲಿ ಸತ್ಯಾಂಶ ಇಲ್ಲ ಎಂದು ನವೆಂಬರ್ 13, 2012 ರಂದು ನ್ಯಾಯಾಲಯಕ್ಕೆ ’ಬಿ’ ರಿಪೋರ್ಟ್ ಸಲ್ಲಿಸಿದರು. ನ್ಯಾಯಾಲಯ ಅದನ್ನು ತಿರಸ್ಕರಿಸಿ ಮತ್ತೊಮ್ಮೆ ತನಿಖೆಗೆ ಆದೇಶಿಸಿತು.
ಮತ್ತೆ ತಿಂಗಳುಗಳಾದ ಮೇಲೆ, ನೆನ್ನೆ, ನಮ್ಮ ದಕ್ಷ ಮತ್ತು ನಿಷ್ಪಕ್ಷಪಾತಿ ಲೋಕಾಯುಕ್ತ ಪೋಲಿಸರು ಲೊಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎರಡನೆ ವರದಿ ಸಲ್ಲಿಸಿದ್ದಾರೆ. ಈ ಬಾರಿ ಯಡಿಯೂರಪ್ಪ ಮತು ಸಚಿವ ಮುರುಗೇಶ್ ನಿರಾಣಿಯ ವಿರುದ್ಧದ ಆರೋಪದಲ್ಲಿ ನಿಜಾಂಶ ಇದೆ ಎಂದಿದ್ದಾರೆ. ನ್ಯಾಯಾಲಯದ ಅಭಿಪ್ರಾಯ ಇನ್ನೂ ಪ್ರಕಟವಾಗಿಲ್ಲ.
ಲೋಕಾಯುಕ್ತ ಪೋಲಿಸರಿಗೆ ಈಗ ಯಾವ ಹೊಸ ವಿವರಗಳು ಸಿಕ್ಕವು ಗೊತ್ತಿಲ್ಲ. ಆದರೆ, ಲೋಕಾಯುಕ್ತ ಪೋಲಿಸರು ಹಾಕುತ್ತಿದ್ದ ಮತ್ತು ಹಾಕುತ್ತಿರುವ ’ಬಿ’ ರಿಪೋರ್ಟ್ಗಳು ಎಷ್ಟು ಅಸಂಬದ್ಧ ಎಂದು ಇದರಿಂದ ಗೊತ್ತಾಗುತ್ತದೆ. ರಾಜಕೀಯ ಹಸ್ತಕ್ಷೇಪದಿಂದ ಲೋಕಾಯುಕ್ತ ಸಂಸ್ಥೆಯನ್ನು ಮುಕ್ತಗೊಳಿಸಿ ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡದಿದ್ದರೆ ಆ ಸಂಸ್ಥೆ ಪೋಲಿಸ್ ಇಲಾಖೆಯ ಹೆಚ್ಚುವರಿ ಅಂಗ ಮಾತ್ರವಾಗಿರುತ್ತದೆ.
ಇನ್ನು ಫ್ರಾಡ್ಗಳೆಲ್ಲ ಈ ರಾಜ್ಯದಲ್ಲಿ ಮಂತ್ರಿಗಳಾಗಿ ಮುಂದುವರೆಯುತ್ತಲೇ ಇದ್ದಾರೆ. ಲೊಕಾಯುಕ್ತ ಪೋಲಿಸರು ಸರಿಯಾಗಿ ತನಿಖೆ ನಡೆಸಿ ಶೀಘ್ರಗತಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುವು ಮಾಡಿಕೊಟ್ಟರೆ ನಮ್ಮ ಅನೇಕ ಭ್ರಷ್ಟ ರಾಜಕಾರಣಿಗಳು ಜೈಲಿನಲ್ಲಿದ್ದು ನಮ್ಮ ರಾಜಕೀಯ ಕ್ಷೇತ್ರ ಅಷ್ಟು ಮಾತ್ರಕ್ಕಾದರೂ ಶುದ್ದವಾಗಿರುತ್ತಿತ್ತು. ಆದರೆ, ಕೊತ್ವಾಲನೂ ಕಳ್ಳರೊಂದಿಗೆ ಶಾಮೀಲಾಗಿರುವಾಗ ಅಥವ ಮಂತ್ರಿಯೇ ಕಳ್ಳನಾಗಿರುವಾಗ ಅವನ ಕೆಳಗಿರುವ ಕೊತ್ವಾಲ ತಾನೆ ಏನು ಮಾಡುತ್ತಾನೆ? ಲೊಕಾಯುಕ್ತ ಸಂಸ್ಥೆಯ ಸ್ವಾಯತ್ತತೆಗಾಗಿ ನಮ್ಮ ರಾಜಕೀಯ ಪಕ್ಷಗಳನ್ನು ಜನರು ಒತ್ತಾಯಿಸಬೇಕಿದೆ.
ವಿಜಯ ಕರ್ನಾಟಕ:
The Hindu: