ಸಾಹಿತ್ಯಕ ರಾಜಕಾರಣ ಮತ್ತು ಋಣಸಂದಾಯದ ಸಮಾಧಾನ


– ಡಾ.ಎಸ್.ಬಿ. ಜೋಗುರ


 

ಹಿಂದೊಮ್ಮೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜಕೀಯ ನಾಯಕರೊಬ್ಬರು ಸಾಹಿತ್ಯಕ ವಲಯದಲ್ಲಿಯ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಮಾತನಾಡುತ್ತಾ ರಾಜಕೀಯದಲ್ಲಿದ್ದುಕೊಂಡು ನಾವು ಮಾಡುವ ರಾಜಕಾರಣ ನಿಮ್ಮ ಮುಂದೆ ಏನೂ ಅಲ್ಲ, ನಿಜವಾದ ರಾಜಕಾರಣಿಗಳನ್ನು ಮೀರಿಸುವಂಥಾ ರಾಜಕಾರಣಿಗಳು ನೀವು ಎಂದು ನೇರವಾಗಿ ಮುಖಕ್ಕೆ ರಾಚುವಂತೆ ಹೇಳಿದ್ದರು. ಆ ತುಂಬಿದ ಸಭೆಯಲ್ಲಿದ್ದವರೆಲಾ ಬಹುತೇಕವಾಗಿ ಸಾಹಿತಿಗಳೇ..

ಆ ರಾಜಕಾರಣಿ ಹೇಳಿದ್ದರಲ್ಲಿ ಒಂದರ್ಥವಿದೆ. ನಮ್ಮ ಸಾಹಿತಿಗಳು ಆಡುವ ಆಟಗಳು, ಮಾಡುವ ಮಾಟಗಳು, ಮಾತನಾಡುವ ರೀತಿ, ಬದುಕುವ ಕ್ರಮ, ತೋರುವ ಗತ್ತು ಇವೆಲ್ಲವುಗಳನ್ನು ನೋಡಿದಾಗ ಖಂಡಿತ ಇವರು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ಇನ್ನು ಕೆಲವು ಸಾಹಿತಿಗಳು ಬದುಕಿನಿಂದ ವಿಮುಖವಾಗಿ Enaradaಬರವಣಿಗೆಯನ್ನು ಮಾಡುವವರು. ಹೇಗೆ ಬದುಕಿದರೇನು..? ಬರವಣಿಗೆ ಮಾತ್ರ ಚೆಂದಾಗಿದೆಯಲ್ಲ? ಎನ್ನುವ ವೇಷಧಾರಿಗಳಿವರು. ಎಲ್ಲಾದರೂ ಒಂದು ಸಮ್ಮೇಳನ ನಡೆಯುತ್ತದೆ ಎಂದರೆ ಸಾಕು ಇವರ ನಿಜವಾದ ರಾಜಕಾರಣ ಬೆತ್ತಲಾಗಿ ಬೆಕ್ಕಸ ಬೆರಗಾಗುವಂಗೆ ಮಾಡಿ ಬಿಡುತ್ತದೆ. ನನಗೆ ಗೊತ್ತಿರುವ ಕವಿತೆ ಗೀಚುವ ಖಯಾಲಿಯಿರುವ ಕೆಲ ಪುಡಿ ಸಾಹಿತಿಗಳು, ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧ್ಯಕ್ಷರ ಬಾಲ ಬಡಿದು ಗೋಷ್ಟಿಯಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಂಡು ನಂತರ ಅತ್ಯಂತ ಬಿಗುಮಾನದಿಂದ ನನಗೂ ದಸರಾ ಕವಿಗೋಷ್ಟಿಗೆ ಬುಲಾವ್ ಬಂದಿದೆ, ಸಮ್ಮೇಳನಕ್ಕೆ ಕರೆ ಬಂದಿದೆ ಎಂದು ಬೀಗುವದನ್ನು ಕೇಳಿ ಹೇಸಿಕೆಯೆನಿಸುತ್ತಿತ್ತು. ನಿಜವಾಗಿಯೂ ಕಾವ್ಯ ಕ್ಷೇತ್ರದ ಹಿರಿಮೆಯಾಗಿರುವ ಒಬ್ಬಾತನ ಹಕ್ಕನ್ನು ಈತ ಲಾಬಿ ಮಾಡಿ ಕಸಿದು ಕೊಂಡಿರುವ ಬಗ್ಗೆ ಅಸಹ್ಯ ಎನಿಸುತ್ತಿತ್ತು. ಇಂಥವರು ಹೇಗಾದರೂ ಮಾಡಿ ಬೆಳೆಯಬೇಕು, ಬಲಿಯಬೇಕು ಎಂದು ಸದಾ ಚಡಪಡಿಸುತ್ತಿರುತ್ತಾರೆ. ಇಂಥವರು ಒಂದು ಸಾರಿ ಬೆಳೆದರೆ ತೀರಿತು, ಆಲದ ಗಿಡದಂತೆ ಇವರ ನೆರಳಲ್ಲಿ ಹುಲ್ಲು ಕಡ್ದಿಯೂ ಬೆಳೆಯುವಂತಿಲ್ಲ. ಪ್ರತಿಯೊಂದರಲ್ಲಿಯೂ ದೇಶಾವರಿ ರಾಜಕಾರಣ ಮಾಡುವ ಇವರು ಸಾಹಿತ್ಯಕ ವಲಯಕ್ಕೆ ಒಂದು ದೊಡ್ಡ ಶಾಪ. ಇವರು ಕತೆ, ಕವಿತೆ, ಕಾದಂಬರಿ, ವಿಮರ್ಶೆ, ನಾಟಕ ಎಲ್ಲವನ್ನೂ ಬರೆಯಬಲ್ಲರು ಆದ್ಸರೆ ಯಾವುದನ್ನೂ ಬರೆಯಲಾರರು. ಇವರ ಪ್ರಮಾಣ ಈಗೀಗ ಸಾಹಿತ್ಯಕ ವಲಯದಲ್ಲಿ ಹೆಚ್ಚಾಗುತ್ತಿದೆ. ಇಂಥವರ ಮಾತುಗಳು ಮಾತ್ರ ಭರವಸೆ ಮೂಡಿಸುತ್ತವಾದರೂ ಆ ಮಾತಿಗೆ ವ್ಯತಿರಿಕ್ತವಾಗಿ ಇವರು ಸಾಹಿತ್ಯ ರಚಿಸುತ್ತಾರೆ ಎನ್ನುವುದೇ ಭಯಂಕರವಾದ ಸತ್ಯ. ಅಷ್ಟಕ್ಕೂ ಬರೆದಂಗೆ ಬದುಕಬೇಕು ಅನ್ನೋ ಸಿದ್ಧಾಂತ ಎಲ್ಲಿದೆರಿ..? ಅನ್ನೋ ಇವರು ಅದ್ಯಾವ ನಮೂನೆಯ ವ್ಯಕ್ತಿತ್ವವೋ ನಾನರಿಯೆ.

ಈಗೀಗ ಕೆಲ ಯುವ ಸಾಹಿತಿಗಳಲ್ಲಿ ಗುಂಪುಗಾರಿಕೆಯ ರೋಗ ಶುರುವಾಗಿದೆ. ಅದರಲ್ಲಿ ಅತಿ ಮುಖ್ಯವಾಗಿ ಜಾತಿ ಪ್ರಾಧಾನ್ಯತೆಯ ಗುಂಪು. ಇದು ಒಂದು ನಿರ್ದಿಷ್ಟ ಜಾತಿ-ಉಪಜಾತಿಯವರಿಂದಲೇ ಸುತ್ತುವರೆದಿರುವ ಗುಂಪು ಇಲ್ಲಿ ಬರೆಯಲು ಬಾರದವನೂ ಸ್ವಜಾತಿ ಬಂಧುಗಳ ಅನುಕಂಪ ಗಿಟ್ಟಿಸಿ ರಾತ್ರೋರಾತ್ರಿ ಕವಿಯಾಗಬಲ್ಲ. ಇದೊಂಥರಾ ಋಣ ಸಂದಾಯದ ಸ್ಕೀಮಿನ ಹಾಗೆ ಆರಂಭವಾಗುವ ಸಾಹಿತ್ಯಕ ಚಟುವಟಿಕೆ. ಒಮ್ಮೆ ನೀನು ಇನ್ನೊಮ್ಮೆ ನಾನು ಮತ್ತೊಮ್ಮೆ ಅವನು ಇಲ್ಲಿ ಅವರ್ನ್ ಬಿಟ್ಟು ಇವರನ್ ಬಿಟ್ಟು ಇವರಾರು..? ಎಂದು ಕೇಳುವ ಪ್ರಶ್ನೆಯೇ ಇರುವದಿಲ್ಲ. ಮತ್ತೆ ಮತ್ತೆ ಅದೇ ಹೆಸರು..ಅದೇ ಮುಖ. ಕೊನೆಗೂ ಋಣಸಂದಾಯವಷ್ಟೇ ಇಲ್ಲಿ ಮುಖ್ಯ. ಇನ್ನೊಂದು ಪ್ರಾದೇಶಿಕತೆಯನ್ನು ಆಧರಿಸಿದ್ದು, ಇವರು ಮೂಲ ಇಲ್ಲಿಯವರು ಹೊರಗಿನವರು ಎನ್ನುವದರ ಆಧಾರದ ಮೆಲೆ ಆಯ್ಕೆ, ತಿರಸ್ಕಾರದ ಕ್ರಿಯೆಗಳು, ಆ ಆಯ್ಕೆಯ ನಡುವೆ ಅನೇಕ ಬಾರಿ ಒಳಗಿನರು ಹೊರಗಾಗಿ, ಹೊರಗಿನವರು ಒಳಗಾಗಿ ದಿಗಿಲಾಗುವುದೂ ಇದೆ. ಮತ್ತೊಂದು ಎಡ ಬಲಮನ:ಸ್ಥಿತಿಯವರು. ಈಗ ಇಲ್ಲೂ ಯಾವುದು ಎಡ ಯಾವುದು ಬಲ ಎನ್ನುವುದು ತಿಳಿಯದಂತಾಗಿದೆ. ಬೆಳಿಗ್ಗೆ ಎಡಸಮೂಹದ ಕವಿಗೊಷ್ಟಿಯಲ್ಲಿ ಹಾಜರ್, ಸಾಯಂಕಾಲ ಬಲದವರ ಸಂವಾದಗೋಷ್ಟಿಯಲ್ಲಿ. ಕೊನೆಗೂ ಇವರು ಎಡಬಲ ಸಮೂಹವಾಗಿಯೇ ಹೊರಮ್ಮುವುದಿದೆ. ಇಂಥವರು ಮಾತ್ರ ಎಲ್ಲರಿಗೂ ಬೇಕಾಗಿ ಬೆಳೆಯಬಲ್ಲವರು. ಯಾಕೆಂದರೆ ಇವರು ಅಲ್ಲೂ ಬುಳುಬುಳು..ಇಲ್ಲೂ ಬುಳುಬುಳು.. ಇವರದೇ ಒಂದು ಜಾತಿ. ಹೀಗೆಲ್ಲಾ ಕಂಡಾಪಟ್ಟೆ ಕಟಿಬಿಟಿ ಮಾಡಿ ಹೆಚ್ಚೆಂದರೆ ಜುಬ್ಬಾ ಧರಿಸಿ, ದಾಡಿ ಬೆಳೆಸಬಹುದೇ ಹೊರತು ಒಂದು ಉತ್ತಮ ಕೃತಿಯನ್ನಂತೂ ರಚಿಸಲಾಗದು.

ಖುಷ್‌ವಂತ್ ಸಿಂಗ್ ಹಿಂದೊಮ್ಮೆ ಪತ್ರಿಕಾವಲಯದಲ್ಲಿರುವ ರಾಜಕಾರಣವನ್ನು ನೆನೆದು ಸಿಡಿಮಿಡಿಗೊಂಡಿಗೊಂಡು ಬರೆದಿರುವದಿತ್ತು. Khushwant Singhರಾಜಕಾರಣಿಗಳು ಎಲ್ಲ ಸಂದರ್ಭದಲ್ಲಿಯೂ ಪತ್ರಿಕೆಯವರನ್ನು ತಮ್ಮ ಬಲಬದಿಗೆ ಇಡಲು ಯತ್ನಿಸುತ್ತಾರೆ. ಅಷ್ಟು ಮಾತ್ರವಲ್ಲ, ಅವರ ಕೈಗೆ ಏನಾದರೂ ಉಡುಗೊರೆ ನೀಡುವ ಮೂಲಕ ಅವರ ಪ್ರೀತಿ ಪಾತ್ರರಾಗುತ್ತಾರೆ. ಈ ಬಗೆಯ ಬಲಬದಿ ಉಳಿಯುವ ಗುಣ ತಮಗೆ ಬರಲೇ ಇಲ್ಲ. ತಮ್ಮ ಕೆಲವು ಬರಹಗಳನ್ನು ಮೆಚ್ಚಿ ಓದುಗರೇ ಒಂದೆರಡು ಬಾರಿ ಸ್ಕಾಚ್ ವಿಸ್ಕಿ ಬಾಟಲ್ ಕೊಟ್ಟಿರುವದಿದೆ. ಅದನ್ನು ನಾನು ಖುಷಿಯಿಂದ ಸ್ವೀಕರಿಸಿರುವೆ. ಆದರೆ ಹೀಗೆ ರಾಜಕಾರಣಿಗಳ ಸಹವಾಸದ ಮೂಲಕ ಅಲ್ಲ, ಎಂದಿದ್ದರು ಖುಷ್‌ವಂತ್ ಸಿಂಗ್.

ಬೆಂಗಾಲದ ಜನ ಯಾವಾಗಲೂ ಓದುವುದರಲ್ಲಿ ಮಿಕ್ಕವರಿಗಿಂತಲೂ ತುಸು ಮುಂದೆ. ಹಾಗಾಗಿಯೇ ಅಲ್ಲಿ ಗಲ್ಲಿಗೊಂದು ಪುಸ್ತಕದ ಅಂಗಡಿಗಳಿವೆ. ಒಂದು ಊರಿನ ಬಗ್ಗೆ ಅರಿಯಬೇಕಿದ್ದರೆ ಅಲ್ಲಿ ಪುಸ್ತಕದ ಅಂಗಡಿಗಳು, ಸಿನೇಮಾ ಥೇಟರಗಳು, ರೆಸ್ಟಾರೆಂಟಗಳು ಎಷ್ಟಿವೆ ಎನ್ನುವದನ್ನು ನೋಡಿದರೆ ಸಾಕು ಗೊತ್ತಾಗುತ್ತದೆ. ಬೆಂಗಾಲದ ಮೂಲದವರಾದ ಚಟರ್ಜಿ ಎನ್ನುವವರು ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಅವರು ಒಂದು ಬಾರಿ ಗಂಗಾ ನದಿಯಲ್ಲಿ ಈಜುವಾಗ ಕಾಲು ಜಾರಿ ನದಿಯಲ್ಲಿ ಬಿದ್ದು ಬಿಡುತ್ತಾರೆ. ದುರ್ದೈವಕ್ಕೆ ಅವರಿಗೆ ಈಜು ಬರುತ್ತಿರುವದಿಲ್ಲ, ಆಗ ಅವರು ಮುಳುಗುವದರಲ್ಲಿರುತ್ತಾರೆ ಅಲ್ಲಿಯೇ ಇದ್ದ ಯುವಕನೊಬ್ಬ ಅ ನದಿಗೆ ಜಿಗಿದು ಅವರನ್ನು ರಕ್ಷಿಸುತ್ತಾನೆ. ಆಗ ಆ ಪತ್ರಿಕೆಯ ಸಂಪಾದಕರು ತುಂಬಾ ಕೃತಜ್ಞತೆಯಿಂದ ಆ ಯುವಕನನ್ನು ಕೊಂಡಾಡಿ ಅವನಿಗೆ ತಮ್ಮ ವಿಜಿಟಿಂಗ್ ಕಾರ್ಡ್ ನೀಡಿ ಬಿಡುವು ಸಿಕ್ಕಾಗ ಬೆಂಗಾಲಗೆ ಬಂದಾಗ ಕಚೇರಿಗೆ ಬರಲು ತಿಳಿಸುತ್ತಾರೆ. ಮುಂದೊಂದು ದಿನ ಆ ಯುವಕ ಅವರ ಪತ್ರಿಕಾ ಕಾರ್ಯಾಲಯಕ್ಕೆ ತೆರಳುತ್ತಾನೆ ಇವನನ್ನು ಕಂಡದ್ದೇ ಆ ಸಂಪಾದಕರು ಖುಷಿಯಿಂದ ಬೀಗುತ್ತಾರೆ. ಒಳಗೆ ಕರೆದು ಹೇಳು ನನ್ನಿಂದ ಏನಾಗಬೇಕು ಎಂದು ಕೇಳುತ್ತಾರೆ. ಆ ಯುವಕ ತನ್ನ ಕೈಯಲ್ಲಿದ್ದ ಲೇಖನವೊಂದನ್ನು ನೀಡಿ ಇದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ಕೋರುತ್ತಾನೆ. ಸಂಪಾದಕರು ಅದನ್ನು ಪೂರ್ಣವಾಗಿ ಓದಿ ನೀನು ಬೇಕಾದರೆ ನನ್ನನ್ನು ಪುನ: ಗಂಗಾನದಿಯಲ್ಲಿ ಎತ್ತಿ ಬೀಸಾಡಿದರೂ ತೊಂದರೆಯಿಲ್ಲ ಈ ಲೇಖನವನ್ನು ಪ್ರಕಟಿಸಲಾಗದು ಎನ್ನುತ್ತಾರೆ. ಈ ಬಗೆಯ ನಿಸ್ಪಕ್ಷಪಾತ ಸಾಹಿತ್ಯಕ ವಲಯದಲ್ಲಿ ಈಗಂತೂ ತುಂಬಾ ಜರೂರತ್ತಿದೆ.

ಈ ಹೊತ್ತಿನ ಯುವ ಲೇಖಕರಿಗೆ ಲಾಬಿ ಮಾಡುವ ಮೂಲಕವೇ ಬೆಳೆಯಲು ಸಾಧ್ಯ ಎನ್ನುವಂಥಹ ಬಲವಾದ ನಂಬುಗೆ ಮೂಡುವ ಮುನ್ನವೇ ವಾತಾವರಣ ತಿಳಿಗೊಳ್ಳಬೇಕಿದೆ. ಜಾತಿ, ಧರ್ಮ, ಶಿಫ಼ಾರಸು ಬೇಡ ಎಂದು ವೇದಿಕೆಯಲ್ಲಿ ಭಯಂಕರವಾಗಿ ಮಾತನಾಡುವ ಪ್ರಖರ ಪಂಡಿತ ಸಾಹಿತಿಯೇ ಜಾತಿವಾಸನೆಯಿಂದ ಕೊಳೆತು ನಾರುತ್ತಿರುತ್ತಾನೆ. ಹಾಗಿರುವಾಗ ಈ ಸಾಮಾಜಕ್ಕೆ ಸಾಹಿತಿ ಮತ್ತು ಅವನಿಂದ ಸೃಷ್ಟಿಯಾಗುವ ಸಾಹಿತ್ಯ ನೀಡಬಹುದಾದ ಕೊಡುಗೆ ಎಂಥದು ಎನ್ನುವುದನ್ನು ನೋಡಿದಾಗ ಬೇಸರವೆನಿಸುತ್ತದೆ. ಉದ್ದೇಶಪೂರ್ವಕವಾಗಿಯೇ ಸಾಮರ್ಥ್ಯವಿಲ್ಲದಿದ್ದರೂ ಒಬ್ಬನನ್ನು ಬೆಳೆಸುವ, ಸಾಮರ್ಥ್ಯವಿರುವ ಇನ್ನೊಬ್ಬನನ್ನು ತುಳಿಯುವ, ದುಷ್ಟತನದ ಸಹವಾಸದಲ್ಲಿ ಎಂದೂ ಗಟ್ಟಿ ಸಾಹಿತ್ಯ ಸೃಜಿಸುವದಿಲ್ಲ. ಅದೇನಿದ್ದರೂ ಬಣ್ಣದ ತಗಡಿನ ತುತ್ತೂರಿ ಮಾತ್ರ. ಪುಸಲಾಯಿಸುವುದು, ಲಾಬಿ ಮಾಡುವುದು, ಜೀ ಹುಜೂರ್ ಅನ್ನುವುದರ ಮೂಲಕವೇ ಬೆಳೆಯಬಹುದು ಎಂತಿದ್ದರೆ ಕತೆ-ಕವನ ಬರೆಯುವದಾದರೂ ಏತಕ್ಕೆ..? ನಿಮ್ಮ ಬಹುಪರಾಕ್ ತಂತ್ರಗಾರಿಕೆಯೇ ಸಾಕು ಎನಿಸುತ್ತದೆ. ಸತ್ಯವನ್ನು ಸತ್ಯ ಸುಳ್ಳನ್ನು ಸುಳ್ಳು, ಸರಿ ಇದ್ದದ್ದು ಸರಿ ತಪ್ಪನ್ನು ತಪ್ಪು ಎಂದು ಹೇಳದ ಸಾಹಿತಿ ಬರೆದರೇಷ್ಟು.. ಬಿಟ್ಟರೆಷ್ಟು, ಏನೂ ಫ಼ರಕ್ ಆಗುವದಿಲ್ಲ.

Leave a Reply

Your email address will not be published. Required fields are marked *