Monthly Archives: September 2015

ಅಕ್ಕನ ಮದುವೆ ಮಾಡಲು ಜೀತಕ್ಕೆ ಸೇರಿದ ಅಪ್ಪ 5 ರೂ.ಗಾಗಿ ತಡಕಾಡಿದಾಗ…!

                                                                                                                              – ಸೂರಿ

1995ರಲ್ಲಿ ನನ್ನಕ್ಕನ ಮದುವೆ ನಿಶ್ಚಯವಾಯಿತು. ಇದು ಎಲ್ಲರಂತೆ ನಮಗೆ ಸಂಭ್ರಮದ ವಿಷಯ ಆಗಿರಲಿಲ್ಲ. ಏಕೆಂದರೆ ಕೂಲಿಯನ್ನೇ ನಂಬಿ ಇಡೀ ಕುಟುಂಬಕ್ಕೆ ಅಕ್ಕನ ಮದುವೆ ಒಂದು ರೀತಿಯ ಭಾರವಾಗಿತ್ತು.

ಮದುವೆಗೆ ಬೇಕಿದ್ದ ಹಣ ಹೊಂದಿಸುವುದು ನನ್ನಪ್ಪನಿಗೆ ಬಲು ಕಷ್ಟದ ಕೆಲಸವಾಗಿತ್ತು. ಬಂಜರು ಭೂಮಿಯಂತಿರುವ ತುಂಡು ಭೂಮಿಯಲ್ಲಿ ಬೆಳೆ ತೆಗೆಯುವುದು ಸಾಧ್ಯವಿಲ್ಲದ ಮಾತಾಗಿತ್ತು. ಹಾಗಾಗಿ ಜೀವನಕ್ಕೆ ಕೂಲಿಯೇ ಆಧಾರವಾಗಿತ್ತು. ಅಪ್ಪ ಒಂದು ಮನೆಗೆ ಕೆಲಸಕ್ಕೆ ಹೋದರೆ, ಅವ್ವ ಮತ್ತು ಅಕ್ಕ ಇನ್ನೊಂದು ಮನೆ ಕೆಲಸಕ್ಕೆ ಹೋಗುತ್ತಿದ್ದರು.

ನಮ್ಮ ಕಷ್ಟ ಏನೇ ಇರಲಿ, ಮಗಳ ಮದುವೆ ನಿಶ್ಚಯವಾಯಿತು ಎಂದು ಅವ್ವ-ಅಪ್ಪ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. 26 ವರ್ಷ ಕಳೆದರೂ ಮದುವೆ ನಿಶ್ಚಯವಾಗಿರಲಿಲ್ಲ. ಮುದಿ ಮೋರೆ ಬಿದ್ದಿದೆ, ಇವಳನ್ನು ಯಾರು ಮದುವೆಯಾಗುತ್ತಾರೆ? ಎಂಬ ಚುಚ್ಚು ಮಾತು ಅವ್ವ ಮತ್ತು ಅಕ್ಕನ ಕಣ್ಣಲ್ಲಿ ಆಗಾಗ ನೀರು ತರಿಸುತ್ತಿದ್ದವು. ಹೆದರಬೇMigrant workers travel atop a truck in Mumbaiಡ ನಾನಿದ್ದೇನೆ ಎಂದು ಅಕ್ಕನಿಗೆ ಸಮಾಧಾನ ಮಾಡಿದ್ದೆ. ಸದ್ಯ ಅದಾದ ಕೆಲವೇ ದಿನಗಳಲ್ಲಿ ಅಕ್ಕನ ಮದುವೆ ದಿನಾಂಕವೂ ನಿಗದಿಯಾಯಿತು.

ಹಳೆಯದಾದ ಹುಲ್ಲು ಮನೆಯಲ್ಲಿ ಜೀವನ ಪಯಣ ಮುಂದುವರಿದಿತ್ತು. ಮದುವೆ ಖರ್ಚಿಗೆ ನಯಾ ಪೈಸೆಯೂ ಇರಲಿಲ್ಲ. ಶಾಲೆ ಮೆಟ್ಟಿಲೇರದ ಅಕ್ಕ, ಚಿಕ್ಕ ವಯಸ್ಸಿನಿಂದಲೇ ದುಡಿಮೆಗೆ ಇಳಿದಿದ್ದಳು. ಸರ್ಕಾರಿ ಶಾಲೆ-ಕಾಲೇಜಿನಲ್ಲಿ ಓದುತ್ತಿದ್ದ ನಾನು ಮತ್ತು ತಮ್ಮ ರಜೆ ದಿನದಲ್ಲಿ ಕೂಲಿಗೆ ಹೋಗಿ ಬಂದ ಪುಡಿಗಾಸನ್ನೂ ಕೂಡಿ ಹಾಕಿಕೊಂಡು ಓದು ಮುಂದುವರೆಸಿದ್ದೆವು.

ಈ ಸ್ಥಿತಿಯಲ್ಲಿರುವ ಕುಟುಂಬಕ್ಕೆ ಅಕ್ಕನ ಮದುವೆಗೆ ಹಣ ಹೊಂದಿಸುವುದು ಸಾಧಿವಿಲ್ಲದ ಮಾತಾಗಿತ್ತು. ಮದುವೆ ಖಚರ್ಿನ ಜೊತೆಗೆ 6 ಸಾವಿರ ರೂ. ವರದಕ್ಷಿಣೆ ಕೂಡ ಕೊಡಬೇಕಿತ್ತು. ಅಕ್ಕನ ಮದುವೆ ಮಾಡಲು ಊರಿನ ಅನೇಕರ ಬಳಿ ಅಪ್ಪ ಸಾಲ ಕೇಳಿದರು. ಆದರೆ ದೊಡ್ಡ ಮೊತ್ತದ ಹಣ ಯಾರಿಂದಲೂ ಸಿಗಲಿಲ್ಲ. ಪರಿಚಯಸ್ಧರೊಬ್ಬರ ಮೂಲಕ ನನ್ನೂರಿಂದ ಸುಮಾರು 18 ಕಿಲೋ ಮೀಟರ್ ದೂರ ಇರುವ ಗ್ರಾಮದ ಮೇಲ್ಜಾತಿಯೊಬ್ಬರ ಮನೆಯಲ್ಲಿ 15 ಸಾವಿರ ರೂ. ಸಾಲ ತಂದರು.
ಸಾಲ ತೀರಿಸಲು ಕುಟುಂಬದಲ್ಲಿ ಯಾರಾದರೊಬ್ಬರು 2 ವರ್ಷ ಜೀತ ಮಾಡಬೇಕಿತ್ತು. 2 ವರ್ಷಕ್ಕೆ 15 ಸಾವಿರ ಸಾಲ ಹಣ ತೀರಿ ಹೋಗುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜೀತಕ್ಕೆ ಸೇರಲು ಸಿದ್ದವಾಗಿದ್ದ ಅಪ್ಪ 15 ಸಾವಿರ ಹಣ ತಂದು, ಅಕ್ಕನ ಮದುವೆ ಮಾಡಿ ಮುಗಿಸಿದರು.

ಮನೆಯ ಸ್ಥಿತಿ ಗೊತ್ತಿದ್ದರಿಂದ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಹಿಡಿಯಬೇಕು ಎಂಬ ಛಲ ಮನದೊಳಗೆ ಮನೆ ಮಾಡಿತ್ತು. ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾಗಿದ್ದ ಕಾರಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಗೆ ಸುಲಭವಾಗಿ ಸೀಟು ಸಿಕ್ಕಿತ್ತು.

ಆದರೆ ಕಾಲೇಜಿಗೆ ಹೋಗುವ ಬದಲು ಅಕ್ಕನ ಮದುವೆ ಮಾಡಿ ಜೀತಕ್ಕೆ ಸೇರಿರುವ ಅಪ್ಪನನ್ನು ಆ ಸೆರೆಯಿಂದ ಬಿಡಿಸಿಕೊಂಡು ಬರಬೇಕು ಎಂಬ ಆಲೋಚನೆ ಮೂಡಿತು. ಕಾಲೇಜಿಗೆ ಹೋಗದೆ ಅಪ್ಪನ ಬದಲು ಜೀತಕ್ಕೆ ಸೇರಿಕೊಳ್ಳುವ ಕೈಗೊಂಡಿದ್ದ ತೀರ್ಮಾನವನ್ನು ಅವ್ವನ ಬಳಿ ಹೇಳಿಕೊಂಡೆ. ಅದಕ್ಕೊಪ್ಪದ ಅವ್ವ ನಾವು ಅನುಭವಿಸಿರುವ ಕಷ್ಟವೇ ಸಾಕು ಮಗನೇ, ಓದೊ ಮಗನ್ನ ಜೀತಕ್ಕೆ ಸೇರಿಸೋಕೆ ಒಪ್ಪಲಾರೆ ಎಂದು ಕಣ್ಣೀರಿಟ್ಟಳು.

ಅವ್ವನ ಆಸೆಯಂತೆ ಮೈಸೂರಿನಲ್ಲಿ ಪ್ರಥಮ ವರ್ಷದ ಬಿಎಗೆ ಸೇರಿಕೊಂಡು ಹಾಸ್ಟೆಲ್ನಲ್ಲಿ ಜೀವನ ಮುಂದುವರಿಯಿತು. ಅಲ್ಲಿ ಹೊಟ್ಟೆ ತುಂಬ ಊಟ ತಿಂದರೂ ಅಪ್ಪ ಜೀತದಾಳಾಗಿ ದುಡಿಯುತ್ತಿರುವುದನ್ನು ನೆನೆದು ಸುರಿದ ಕಣ್ಣೀರಿಗೆ ಅಳತೆ ಇರಲಿಲ್ಲ. ದಸರಾ ರಜೆ ಸಿಕ್ಕಿ ಊರಿನ ಹಾದಿ ಹಿಡಿದ ನಾನು, ಮರು ದಿನವೇ ಅಪ್ಪ ಜೀತ ಮಾಡುತ್ತಿದ್ದ ಮನೆ ಮುಂದೆ ಹೋಗಿ ನಿಂತೆ. ಅಪ್ಪನ ಕಷ್ಟದಲ್ಲಿ ನನಗೂ ಪಾಲು ಪಡೆಯಬೇಕು ಎಂಬ ಕಾರಣಕ್ಕೆ ರಜೆ ಮುಗಿಯುವ ತನಕ ಜೀತದಾಳಾಗಿ ನಾನೇ ದುಡಿಯುವ ಇಚ್ಛೆ ಪ್ರಕಟಿಸಿದೆ.

ಮೊದಲು ಒಪ್ಪದ ಅಪ್ಪನ ಮನವೊಲಿಸುವಲ್ಲಿ ಯಶಸ್ವಿಯಾಗಿ ಜೀತದಾಳಾಗಿ ಸೇರಿಕೊಂಡೆ. ಕೊಟ್ಟಿಯಲ್ಲಿ ಅಪ್ಪ ಇಟ್ಟುಕೊಂಡಿದ್ದ ಚಾಪೆ, ದಿಂಬಿನೊಂದಿಗೆ ಹೊಸ ಜೀವನ ಆರಂಭವಾಯಿತು. ರಾತ್ರಿ ಎಷ್ಟೊತ್ತಿಗೆ ಮಲಗಿದರೂ ಮುಂಜಾನೆ 4ಕ್ಕೆ ದುಡಿಮೆ ಆರಂಭಿಸಬೇಕಿತ್ತು. ರಾತ್ರಿ ಮೂರ್ನಾಲ್ಕು ಗಂಟೆ ನಿದ್ರೆ ಹೊರತುಪಡಿಸಿದರೆ ಬಿಡುವೇ ಇಲ್ಲದ ದುಡಿಮೆಗೆ ಒಗ್ಗಿಕೊಳ್ಳುವುದು ಕಷ್ಟವಾಯಿತು. ಆದರೂ ಅಪ್ಪನ ಕಷ್ಟಕ್ಕೆ ಸ್ವಲ್ಪ ದಿನವಾದರೂ ಹೆಗಲು ಕೊಡಬೇಕೆಂಬ ನಿರ್ಧಾರ ಕೈಗೊಂಡಿದ್ದ ಕಾರಣ ಕೆಲಸದ ಹೊರೆ ಸಹಿಸಿಕೊಂಡೆ.

ರಾತ್ರಿ ವೇಳೆ ಸತ್ತಂತೆ ನಿದ್ರೆ ಬರುತ್ತಿದ್ದವು, ಬೆಳಕಾಗುವುದೇ ಗೊತ್ತಾಗುತ್ತಿರಲಿಲ್ಲ. ಹೊಟ್ಟೆ ತುಂಬ ಊಟ ಸಿಗುತ್ತಿರುವ ತೃಪ್ತಿ ಒಂದೆಡೆಯಾದರೆ ನಿದ್ರೆ ವಿಷಯದಲ್ಲಿ ಮಾತ್ರ ಅತೃಪ್ತಿ. ಬೆಳಗ್ಗೆ 4ಕ್ಕೆ ಎದ್ದು ದನ-ಕರುಗಳನ್ನು ಆಚೆಗೆ ಕಟ್ಟಿ ಸಗಣಿ ಬಾಚುವುದರಿಂದ ಕೆಲಸ ಆರಂಭವಾದರೆ, ಅವುಗಳ ಮೈ ತೊಳೆಯುವ ಹೊತ್ತಿಗೆ 6 ಗಂಟೆ ದಾಟುತ್ತಿತ್ತು.

ಮುಖ, ಕೈಕಾಳು ಕಾಲು ತೊಳೆದುಕೊಂBBBB-2ಡು ನಮಗೆ ಖಾಯಂ ಆಗಿ ನೀಡಿದ್ದ ಲೋಟ-ತಟ್ಟೆ ತೊಳೆದುಕೊಂಡು ಬಾಗಿಲಿಂದ ಆಚೆ ಕುಳಿತು ಊಟ ಮಾಡಿ ಗದ್ದೆಗೆ ಇಳಿದರೆ ಸಂಜೆ ತನಕ ಮೈ ಮುರಿಯುವಷ್ಟು ಕೆಲಸ. ಗದ್ದೆ ಉಳುಮೆ ಮಾಡಿ ಎತ್ತುಗಳು ಸುಸ್ತಾದರೆ ಅವುಗಳಿಗೆ ವಿಶ್ರಾಂತಿ ನೀಡುವುದು. ಆ ಸಂದರ್ಭದಲ್ಲಿ ಬದು ಹಾಕುವುದು, ತೆಂಗಿನ ಕಾಯಿ ಕೀತ್ತು ಚೀಲಕಟ್ಟಿ ಗಾಡಿಗೆ ಲೋಡ್ ಮಾಡುವುದು. ಕಬ್ಬಿ ಗದ್ದೆಗೆ ನೀರು ಹಾಯಿಸೋದು ಹೀಗೆ ಒಂದರ ಮೇಲೋಂದು ಬಿಡುವಿಲ್ಲದೆ ಕೆಲಸ.

ಯುವಕನಾಗಿದ್ದ ನಾನೇ ಈ ಕೆಲಸ ಮಾಡಲು ತಿಣಕಾಡಬೇಕಿದ್ದೆ. ಆಗಲೇ 60 ದಾಟಿರುವ ಅಪ್ಪನ ಕಷ್ಟ ನೆನದು ಎಷ್ಟೋ ರಾತ್ರಿಗಳು ನಿದ್ರೆಗೂ ಅವಕಾಶ ನೀಡದೆ ಕಣ್ಣೀರು ಸುರಿದಿವೆ. ಒಂದು ತಿಂಗಳು ಮುಗಿದೇ ಹೋಯಿತು. ಜೀತದಿಂದ ಮುಕ್ತಿ ನೀಡಲು ಬಂದ ಅಪ್ಪನೊಂದಿಗೆ ಕೊಟ್ಟಿಗೆಯಲ್ಲೇ ಮಲಗಿ ಇಡೀ ರಾತ್ರಿ ಅತ್ತೆವು. ಅಳೋದು ಬಿಟ್ಟು ಬೇರೇನೂ ಮಾಡಲಾಗದ ಅಸಹಾಯಕ ಸ್ಥಿತಿಯೊಳಗೆ ಜೀವನ ಸಿಲುಕಿಕೊಂಡಿತ್ತು.

ಬೆಳಗ್ಗೆ ಕೊಟ್ಟಿಗೆ ಕಸ ಬಾಚಿದ ನಂತರ ಮನೆಯೊಡತಿ ಟೀ ಕೊಟ್ಟಳು. ನಮಗೆ ಮೀಸಲಿಟ್ಟಿದ್ದ ಲೋಟ ಒಂದೇ ಆಗಿದ್ದರಿಂದ ಅಪ್ಪ ಕುಡಿದ ನಂತರ ನಾನು ಕುಡಿದು ತೊಳೆದಿಟ್ಟೆ.

ಬಸ್ ನಿಲ್ದಾಣದ ತನಕ ಕಳಿಸಿಕೊಡಲು ಬಂದ ಅಪ್ಪ ನನ್ನ ಖರ್ಚಿಗೆ ಕೊಡಲು 5 ರೂ. ನೋಟು ತಂದಿದ್ದರು. ಬಸ್ ನಿಲ್ದಾಣದ ಬಳಿ ಆ ಹಣ ಕೊಡಲು ಚೆಡ್ಡಿ ಜೀಬಿಗೆ ಕೈ ಹಾಕಿದರೆ 5 ರೂ. ನೋಟು ಇರಲೇ ಇಲ್ಲ. ಬಂದ ದಾರಿಯಿಂದ ಹಿಡಿದು ಬಸ್ ನಿಲ್ದಾಣದ ಅಕ್ಕ-ಪಕ್ಕ ಇದ್ದ ಗಿಡಗಂಟೆಗಳ ನಡುವೆ ಬಿದ್ದು ಒದ್ದಾಡಿದವರಂತೆ ಅಪ್ಪ ಆ ಹಣಕ್ಕಾಗಿ ಹುಡುಕಾಡಿದ. ಅಲ್ಲಿದ್ದ ಧೂಳೆಲ್ಲೆ ಮೈ ತುಂಬಾ ಆವರಿಸಿಕೊಂಡರೂ ಬಿಡದೆ ತಡಕಾಡಿದ. ಕೊನೆಗೂ 5 ರೂ.ನ ನೋಟು ಸಿಗಲಿಲ್ಲ.

ಮಗನಿಗೆ ಕೊಡಲು ತಂದಿದ್ದ ಹBBBB-3ಣ ಕಳೆದುಕೊಂಡ ಅಪ್ಪ, ಧಾರಾಕಾರವಾಗಿ ಕಣ್ಣೀರು ಸುರಿಸಿದ. ಉಮ್ಮಳಿಸಿ ಬಂದ ದುಃಖ ತಡೆದುಕೊಂಡ ನಾನು ‘ಬಸ್ ಚಾರ್ಜಗೆ ಹಣ ಇದೆ ಬಿಡಪ್ಪ’ ಎಂದು ಸಮಾಧಾನ ಮಾಡಿದೆ. ಬಸ್ ಹತ್ತಿದರೂ ಮರೆಯಾಗುವ ತನಕ ಅಪ್ಪನನ್ನೇ ನೋಡಿ ಅಳುತ್ತಲೆ ಮನೆಗೆ ಬಂದೆ. 5 ರೂಪಾಯಿ ಎಂದರೆ ಪುಡಿಗಾಸು ಎನ್ನುವ ಕಾಲದಲ್ಲಿ 5 ರೂ.ಗಾಗಿ ಅಪ್ಪು ಹುಡುಕಾಡಿದ ಪರಿ ಅದರ ಮಹತ್ವ ಎಷ್ಟು ಎಂಬುದಕ್ಕೆ ಸಾಕ್ಷಿಯಾಗಿದೆ. ಈಗ 100, 1000 ರೂ. ಅಷ್ಟೇ ಏಕೆ ಲಕ್ಷ ಲಕ್ಷ ಹಣವೂ ಲೆಕ್ಕಕ್ಕಿಲ್ಲ ಎನ್ನುವವರಿದ್ದಾರೆ. ಆದರೆ ಮೈಮೇಲೆ ಧೂಳೆರಚಿಕೊಂಡು 5 ರೂಪಾಯಿ ಹುಡುಕಿದ ಆ ಸಂದರ್ಭವನ್ನು ನಾನೆಂದೂ ಮರೆಯಲಾರೆ.

ಚಿತ್ರಗಳು: ಸಾಂದರ್ಭಿಕ

ಕಲ್ಬುರ್ಗಿಯವರಿಗೆ ಬಿದ್ದ ಗುಂಡು ಮತ್ತು ನಮ್ಮವರ ಜಾಣ ಮೌನ

                                                                                                        – ಸದಾನಂದ ಲಕ್ಷ್ಮೀಪುರ

ಎಂ.ಎಂ. ಕಲ್ಬುರ್ಗಿಯವರ ಹಣೆಗೆ ಗುಂಡು ಬಿದ್ದ ನಂತರ ಚಿಮ್ಮಿದ ರಕ್ತ ತಣ್ಣಗಾಗುವ ಮೊದಲೇ, ಅವರ ಸಾವು ರಾಜ್ಯದ ಜನತೆಯ ಪ್ರಜ್ಞೆಯಲ್ಲಿ ತಣ್ಣಗಾಗಿದೆ. ಡಿ.ಕೆ. ರವಿ ಎಂಬ ಅಧಿಕಾರಿ ಮೃತ ದೇಹ ಪತ್ತೆಯಾದಾಗ ಬೀದಿಗಿಳಿದು, ರಸ್ತೆ ತಡೆ ಮಾಡಿ, ಪ್ರತಿಕೃತಿ ದಹಿಸಿ ಕೂಗಾಡುತ್ತಿದ್ದ ಜನ ಈಗ ಬೆಚ್ಚಗೆ ಮಲಗಿದ್ದಾರೆ. ಆಗ ರವಿಯ ಸಾವು Kalburgiಆತ್ಮಹತ್ಯೆಯಲ್ಲ, ಕೊಲೆ ಎಂದು ಅನುಮಾನ ಪಟ್ಟು, ಅಲ್ಲ ತೀರ್ಮಾನಿಸಿ, ಸರಕಾರವನ್ನು ಆರೋಪಿ ಸ್ಥಾನದಲ್ಲಿರಿಸಿ ಹೋರಾಟಕ್ಕೆ ಬಂದವರಿಗೆ ಈಗ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಗುಂಡಿಗೆ ಬಲಿಯಾದ ಕಲ್ಬುರ್ಗಿಯವರ ಸಾವು ಭೀಕರವಾಗಿ ಕಾಣುತ್ತಿಲ್ಲ. ಬೆಳಗ್ಗೆ, ಸಂಜೆ ರವಿಯ ಸಾವಿನ ಬಗ್ಗೆ ಹತ್ತಾರು ಪುಕಾರು ಹಬ್ಬಿಸಿ ಪ್ರಕರಣಕ್ಕೆ ಬಣ್ಣ ಕಟ್ಟಿ ‘ನ್ಯಾಯ’ ಕೇಳುತ್ತಿದ್ದವರಿಗೆ ಈಗ ನ್ಯಾಯ ಬೇಕಿಲ್ಲ!

ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ, ತನ್ನ ಜೀವಿತಾವಧಿಯ ಬಹುಭಾಗವನ್ನು ಈ ನೆಲದಲ್ಲಿ ಬಂದು ಹೋದ ಕವಿ, ದಾರ್ಶನಿಕರ ಜೀವನಗಾಥೆಯನ್ನು ಸಂಶೋಧನೆಯ ಮೂಲಕ ಕಟ್ಟಲು ಮೀಸಲಿಟ್ಟ ಕಲ್ಬುರ್ಗಿಯವರ ಸಾವು ಈಗಾಗಲೇ ಮಾಧ್ಯಮಗಳಿಂದ ಮರೆಯಾಗುತ್ತಿದೆ. ಡಿ.ಕೆ.ರವಿ ಪ್ರಕರಣದಲ್ಲಿ ತನಿಖೆಯನ್ನು ತಾನೇ ವಹಿಸಿಕೊಂಡವರಂತೆ ಅಬ್ಬರಿಸುತ್ತಿದ್ದ ಅರ್ನಾಬ್ ಗೋಸ್ವಾಮಿ ಶೀನಾ ಬೋರಾ ಪ್ರಕರಣದ ‘ತನಿಖೆಯಲ್ಲಿ’ ಫುಲ್ ಬ್ಯುಸಿ. ಕೆಲ ಪ್ರಗತಿಪರ ಸಂಘಟನೆಗಳು ರಸ್ತೆಗೆ ಬಂದು ಘಟನೆಯನ್ನು ಖಂಡಿಸಿ, ಸೂಕ್ತ ತನಿಖೆಗೆ ಒತ್ತಾಯಿಸಿದ್ದು ಬಿಟ್ಟರೆ ಯಾರೂ ಬೀದಿಗಿಳಿಯಲಿಲ್ಲ. (ಟೌನ್ ಹಾಲ್ ಮುಂದೆ ಪ್ರತಿಭಟನೆ ಮಾಡಿದ ಪ್ರಗತಿಪರರು ಕೆಲವು ಕುಹುಕಿಗಳ ಪಾಲಿಗೆ ಕೆಲಸವಿಲ್ಲದವರು.) ಅಧಿಕಾರಿಯ ಪ್ರಕರಣದಲ್ಲಿ ಸರಕಾರವನ್ನು ಮುಜುಗರಕ್ಕೆ ಈಡುಮಾಡಲು ಹೋರಾಡಿದ ಬಿಜೆಪಿ, ಜೆಡಿಎಸ್ ಹಾಗೂ ಎಎಪಿ ಪಕ್ಷಗಳು ಈಗ ಬೀದಿಗಿಳಿಯಲಿಲ್ಲ. ಐಎಎಸ್ ಅಧಿಕಾರಿಯ ಪ್ರಕರಣದಲ್ಲಿ ಒಂದು ಜಾತಿ ಸಂಘಟನೆ ಬೀದಿಗಿಳಿಯಿತು. ಆದರೆ ಇಲ್ಲಿ ಅದೂ ಸಾಧ್ಯವಿರಲಿಲ್ಲ, ಏಕೆಂದರೆ ಕಲ್ಬುರ್ಗಿಯವರ ಸಂಶೋಧನೆ ಅವರ ಜಾತಿಯ ಬಹುತೇಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇನ್ನು ಕೆಲವು ಪ್ರಜ್ಞಾವಂತರಂತೂ.. “ಇದರ ಹಿಂದೆ ಅವರದೇನೋ ವೈಯಕ್ತಿಕ ಕಾರಣ ಇರಬೇಕು” ಎಂದು ಮೌನಕ್ಕೆ ಶರಣಾದರು. ವೈಯಕ್ತಿಕ ಕಾರಣಗಳಿಗೆ, ಹೀಗೆ ಗುಂಡು ಹೊಡೆದು ಸಾಯಿಸುವುದು ಈ ದೇಶದಲ್ಲಿ ಸಮ್ಮತವೇ? ಒಂದು ಖಂಡನೆಗೂ ಅರ್ಹವಾಗುಷ್ಟು ಭೀಕರವಾಗಿರಲಿಲ್ಲವೇ ಈ ಸಾವು? ಈ ಘಟನೆ ರಾಜ್ಯದ ಪೊಲೀಸ್ ವ್ಯವಸ್ಥೆಗೆ, ರಾಜ್ಯದ ನೇತಾರರಿಗೆ ಆದ ಅವಮಾನ ಅಲ್ಲವೆ? ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯ ರಾಜೀನಾಮೆ ಕೇಳುವುದು ಸೂಕ್ತ ಎನಿಸುತ್ತಿಲ್ಲವೆ?

ಶ್ರದ್ಧಾಂಜಲಿ ಸಲ್ಲಿಸಲು ಧಾರವಾಡಕ್ಕೆ ಧಾKalburgi-2ವಿಸಿದ ಮುಖ್ಯಮಂತ್ರಿ ಮಾಧ್ಯಮದವರ ಎದುರು ಮಾತನಾಡುತ್ತ, “ಕಲ್ಬುರ್ಗಿಯವರ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಅವರು ಉತ್ತಮ ಸಂಶೋಧಕರು, ಲೇಖಕರು…” ಎಂದು ತಮ್ಮ ಸಂದೇಶ ಆರಂಭಿಸುತ್ತಾರೆ. ಕೊನೆಯಲ್ಲಿ, ಇವರ ಸಾವಿಗೆ ಕಾರಣರಾದವರನ್ನು ಸರಕಾರ ಖಂಡಿತ ಹಿಡಿಯುತ್ತದೆ. ಪ್ರಕರಣವನ್ನು ಸಿಬಿಐಗೆ ವಹಿಸುತ್ತೇವೆ ಎಂದು ಹೇಳುತ್ತಾರೆ. ನಿಜ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬಾರದು. ಆದರೆ ಜನರ ಭಾವನೆಗಳಿಗೂ ಸ್ಪಂದಿಸುವುದಿಲ್ಲ ಎಂದರೆ ಏನರ್ಥ..?

ಅದು ಟಿಪಿಕಲ್ ರಾಜಕಾರಣಿಯ ಮಾತು ಬಿಡಿ. ಕೆಲ ಸೋಕಾಲ್ಡ್ ಪ್ರಗತಿಪರ ಲೇಖಕರು ಇದಕ್ಕಿಂತ ಭಿನ್ನವಾಗೇನೂ ಇಲ್ಲ. ವಯೋ ಸಹಜ ಕಾರಣಗಳಿಂದ ಸಾವನ್ನಪ್ಪಿದರೆ ವ್ಯಕ್ತಪಡಿಸಬಹುದಾದ ಮಾತು-ವಿವರಗಳಿಂದಲೇ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಘಟನೆ ಸೃಷ್ಟಿಸಿರುವ ಆತಂಕ, ಆಘಾತ ಅವರ ಬರಹಗಳಲ್ಲಿ ಕಾಣುತ್ತಿಲ್ಲ. ಅವರು ದೊಡ್ಡ ವಿದ್ವಾಂಸರು, ಸಂಶೋಧಕರು, ತಮಗಿಂತ ಕಿರಿಯರನ್ನು ಪ್ರೋತ್ಸಾಹಿಸಿದರು. ಕಿರಿಯರು ಟೀಕೆ ಮಾಡಿದರೆ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು ಹಾಗೂ ಎದುರಿಗೆ ಸಿಕ್ಕಾಗ ಸಹಜವಾಗಿಯೇ ಮಾತನಾಡಿಸುತ್ತಿದ್ದರು ಎಂದೆಲ್ಲಾ ಬರೆದರು. ಅವರ ಸಾವಿನ ಬಗ್ಗೆ ಬರೆಯುವಾಗ, ಅದನ್ನು ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ ಬಿಡಿ ಎನ್ನುವ ಧಾಟಿ ಅವರ ಮಾತಿನಲ್ಲಿತ್ತು. ಸಂವೇದನೆಗೆ ಗರ ಬಡಿದಿದೆಯೆ? ಎನ್ ಡಿಟಿವಿ ಯ ಶ್ರೀನಿವಾಸ್ ಜೈನ್ ಮಾತ್ರ ಧಾರವಾಡಕ್ಕೆಬಂದು ಹತ್ಯೆಯ ಹಿಂದೆ ಇರಬಹುದಾದ ಉದ್ದೇಶಗಳ ಬಗ್ಗೆ ಸುದ್ದಿ ಮಾಡಿದರು. ಆ ಕಾರಣಕ್ಕೆ ಈ ಸುದ್ದಿ ಅಲ್ಪ-ಸ್ವಲ್ಪ ಗಮನ ರಾಷ್ಟ್ರಮಟ್ಟದಲ್ಲಿ ಸೆಳೆಯಲು ಸಾಧ್ಯವಾಯಿತು. ಡಿ.ಕೆ.ರವಿ ಸಾವಿನ ನಂತರದ ಒಂದು ವಾರಗಳ ಕಾಲ ನಡೆದ ಪ್ರತಿಭಟನೆ, ರಾಷ್ರ್ರೀಯ ಸುದ್ದಿ ವಾಹಿನಿಗಳ ವರ್ತನೆಯನ್ನು ನೆನಪಿಸಿimageಕೊಂಡರೆ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ.

ಮತೀಯ ಶಕ್ತಿಗಳು ಈ ಘಟನೆಯ ಹಿಂದೆ ಇದೆ ಎಂದು ಯಾರೇ ಮಾತನಾಡಿದರು, ಅನೇಕ ಮಂದಿ “ನಿಮಗೆ ಹೇಗೆ ಗೊತ್ತು? ಪೊಲೀಸರು ತನಿಖೆ ನಡೆಸುವ ತನಕ ಸುಮ್ಮನಿರಿ” ಎಂದು ಉಪದೇಶ ನೀಡುತ್ತಾರೆ. ಹೌದು ಸ್ವಾಮಿ, ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ್ ಪನ್ಸಾರೆಯವರನ್ನು ಕೊಂದವರನ್ನು ಈಗಾಗಲೇ ಪೊಲೀಸರು ಬಂಧಿಸಿ ತನಿಖೆ ಮುಗಿಸಿದ್ದರೆ, ಸುಮ್ಮನಿದ್ದು ಬಿಡಬಹುದಿತ್ತು. ಆದರೆ, ಹಾಗೆ ಆಗಲಿಲ್ಲವಲ್ಲ. ವಿಚಿತ್ರ ಎಂದರೆ, ಹತ್ಯೆಯ ತನಿಖೆ ಮಾಡಲಾಗದ ದುರ್ಬಲ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸುತ್ತಂತೆ. ಹಾಗಾದರೆ, ಸರಕಾರ ತನ್ನ ಪೊಲೀಸರನ್ನು ಅವಮಾನಿಸುತ್ತಿಲ್ಲವೆ? ಯಾರೂ ಕೇಳದೇ ಇರುವಾಗ ಸಿಬಿಐಗೆ ವಹಿಸುವಂತಹ ಅವಸರ ಏಕೆ..? ಸಿಬಿಐಗೆ ಇದುವರೆಗೆ ವಹಿಸಿದ ಪ್ರಕರಣಗಳ ಪ್ರಗತಿ ಏನಾಗಿದೆ? ಸೌಜನ್ಯ ಪ್ರಕರಣದ ಆರೋಪಿಗಳನ್ನು ಹಿಡಿದರೆ? ಡಿ.ಕೆ.ರವಿ ಪ್ರಕರಣ ಭೇದಿಸಿದರೆ? ವಿಶೇಷ ಎಂದರೆ, ಸಿಬಿಐ ಗೆ ವಹಿಸಿದ ನಂತರ ಸೌಜನ್ಯ ಹಾಗೂ ಡಿ.ಕೆ.ರವಿ ಪ್ರಕರಣಗಳು ಮರೆಯಾದವು. ಕಲ್ಬುರ್ಗಿ ಪ್ರಕರಣಕ್ಕೂ ಅಂತಹದೇ ಪರಿಸ್ಥಿತಿಗೆ ಬರುತ್ತದೆ.

ರಾಜ್ಯದ ಬೆನ್ನ ಮೇಲೆ ಬರೆ ಎಳೆದ ಮಳೆರಾಯ..!


– ಡಾ.ಎಸ್.ಬಿ. ಜೋಗುರ


ನಮ್ಮ ರೈತರಲ್ಲಿ ಕೊನೆಗೂ ಮುಗಿಲು ನೋಡುವ ಭರವಸೆ ಹೊರಟುಹೋಯಿತು. ಮೋಡ ಗರಿಗರಿಯಾಗಿ ಕರಿಗಟ್ಟುವದನ್ನು ನೋಡನೋಡುತ್ತಲೇ ಮಳೆಗಾಲ ಮುಗಿದು ಹೋದಂತಾಯಿತು. ಎಲ್ಲೆಲ್ಲೂ ಬೇಸಿಗೆ ಮಳೆಗಾಲವನ್ನು ಅತಿಕ್ರಮಿಸಿರುವ ಅನುಭವವಾಗುತ್ತಿದೆ. ಆರಂಭದಲ್ಲಿ ಮೋಡ ಹೆಪ್ಪುಗಟ್ಟುವ ವಾತಾವರಣವಾದರೂ ಇತ್ತು ಈಗೀಗ ಎಲ್ಲವೂ ತೊಳೆದು ಶುಭ್ರವಾದಂತಿದೆ. ಮಳೆ ಬರುವ ಭರವಸೆಯೇ ಮಂಗ ಮಾಯವಾಗಿದೆ. ಮಳೆಗಾಲದ ಅನುಭವವನ್ನು ತಂದು ಕೊಡದ ರೀತಿಯಲ್ಲಿ ಈ ಬಾರಿಯ ಮಳೆಗಾಲ ಮೆಲ್ಲಗೆ ಸರಿಯುತ್ತಿದೆ. ಮುಂಗಾರಿನ ಪೀಕು ಕೈಗೆ ಬರುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅದಾಗಲೇ ಉತ್ತರ ಕರ್ನಾಟಕದ ಜನ ಈ ಬರದ ಬವಣೆಗೆ ಹೆದರಿ ಗುಳೆ ಹೋಗುತ್ತಿದ್ದಾರೆ. ದುಡಿಯಲಾಗದ ಮತ್ತು ತೀರಾ ವಯಸ್ಸಾದವರನ್ನು rural-karnataka-2ಊರಲ್ಲಿಯೇ ಬಿಟ್ಟು ಕೂಸು, ಕುನ್ನಿಗಳನ್ನು ಕಟ್ಟಿಕೊಂಡು ಊರು ತೊರೆಯುತ್ತಿದ್ದಾರೆ. ಜಾನುವಾರಗಳನ್ನು ಕೇಳುವವರಿಲ್ಲದೇ ಬಂದ ದುಡ್ಡಿಗೆ ಮಾರಿ ನಡೆದಿದ್ದಾರೆ. ಸಾಲ ಮಾಡಿ ತಂದು ಭೂಮಿಯ ಬಾಯಿಗೆ ಸುರಿದ ಬೀಜವೂ ಮರಳಿ ದಕ್ಕದ ಸ್ಥಿತಿಯಲ್ಲಿ ರೈತರಿದ್ದಾರೆ.

ರಾಜ್ಯದ ದಕ್ಷಿಣ ಭಾಗಕ್ಕಿಂತಲೂ ಕಡಿಮೆ ಪ್ರಮಾಣದ ಮಳೆ ಉತ್ತರ ಕರ್ನಾಟಕದಲ್ಲಾಗಿದೆ. ಈಗಾಗಲೇ ರಾಜ್ಯದ 126 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿಯಾಗಿದೆ. ಮಿಕ್ಕ ಐವತ್ತು ತಾಲೂಕುಗಳ ಸ್ಥಿತಿಯೂ ಅಷ್ಟೇನು ಸುಖಕರವಿಲ್ಲ. ಆಹಾರಧಾನ್ಯಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. ತೀರಾ ಅವಶ್ಯಕ ತರಕಾರಿಯಾಗಿರುವ ಈರುಳ್ಳಿಯ ದರವಂತೂ ನೂರರ ಆಸು ಪಾಸು ಹರಿದಾಡುತ್ತಿದೆ. ಅದರ ಬದಲಾಗಿ ಈರುಳ್ಳಿಯ ಪೇಸ್ಟ್ ಬಳಸಿ ಎಂದು ಸಲಹೆ ಕೊಡುವವರ ಪ್ರಮಾಣವೂ ಹೆಚ್ಚುತ್ತಿದೆ. ಹಿಂದೊಮ್ಮೆ ಹೀಗೆಯೇ ಈರುಳ್ಳಿಯ ದರ ಗಗನಕ್ಕೆ ತಲುಪಿದಾಗ ಆಗ ಕೇಂದ್ರ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು ಈರುಳ್ಳಿಯ ಬದಲಾಗಿ ಸೇಬು ಹಣ್ಣನ್ನು ಸೇವಿಸಲು ಕರೆನೀಡಿರುವದಿತ್ತು. ಆಗ ಸೇಬು ಹಣ್ಣಿನ ದರ ಈರುಳ್ಳಿಗಿಂತಲೂ ಕಡಿಮೆಯಿತ್ತು. rural-indiaನೀರಿಗಿಂತಲೂ ಬೀಯರ್ ದರ ಕಡಿಮೆ ಇದೆ ಎಂದಾಗ ಅದನ್ನು ನೀರಿಗೆ ಪರ್ಯಾಯವಾಗಿ ಕುಡಿದು ಇರಲು ಸಾಧ್ಯವಿದೆಯೇ..? ಈರುಳ್ಳಿಯ ಸ್ಥಾನವನ್ನು ಅದು ಮಾತ್ರ ತುಂಬಬಲ್ಲದೇ ಹೊರತು ಅದೇ ಜಾತಿಗೆ ಸೇರುವ ಬಳ್ಳೊಳ್ಳಿಯಿಂದಲೂ ಅದು ಸಾಧ್ಯವಿಲ್ಲ. ಕೇವಲ ಈರುಳ್ಳಿ ಮಾತ್ರವಲ್ಲ, ಇನ್ನೊಂದು ತಿಂಗಳಲ್ಲಿ ಬಹುತೇಕವಾಗಿ ಎಲ್ಲ ಆಹಾರ ಪದಾರ್ಥಗಳ ಬೆಲೆ ನಿಲುಕದ ಎತ್ತರ ತಲುಪುವದಂತೂ ಗ್ಯಾರಂಟಿ. ಇಲ್ಲಿ ಯಾವುದೇ ಕೃಷಿ ಪದಾರ್ಥಗಳ ದರ ಎಷ್ಟೇ ಹೆಚ್ಚಳವಾದರೂ ಅದರ ಲಾಭ ರೈತನನ್ನು ತಲುಪುವದಂತೂ ಸಾಧ್ಯವಿಲ್ಲ. ಕೊನೆಗೂ ಮಧ್ಯವರ್ತಿಗಳು ಮತ್ತು ಸಗಟು ಮಾರಾಟದಾರರೇ ಉದ್ದಾರವಾಗುವವರು.

ಮಳೆಯ ಪ್ರಮಾಣ ಈ ಬಾರಿ ತೀರಾ ಕಡಿಮೆಯಾಗಿದೆ. ಕರಾವಳಿ ತೀರದ ಜಿಲ್ಲೆಗಳಲ್ಲಿಯೂ ಈ ಬಾರಿ ಬರಗಾಲದ ಛಾಯೆ ತೋರುತ್ತಿದೆ. ಅಲ್ಲಿಯೂ ಕೆಲ ತಾಲೂಕುಗಳಲ್ಲಿ ಈಗಾಗಲೇ ಮಳೆಯ ಪ್ರಮಾಣ ವರ್ಷಕ್ಕಿಂತಲೂ ಕಡಿಮೆಯಾಗಿದೆ. ಉತ್ತರ ಕರ್ನಾಟಕದಲ್ಲಂತೂ ಬಹುತೇಕ ಕಡೆಗಳಲ್ಲಿ ಅದರಲ್ಲೂ ಕೃಷಿಯನ್ನೇ ಪ್ರಧಾನವಾಗಿಸಿಕೊಂಡ ತಾಲೂಕುಗಳು ಅದಾಗಲೇ ಬರದ ಬವಣೆಗೆ ಸಿಲುಕಿವೆ. ಮಳೆಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಶುರುವಾಗಿ ತಿಂಗಳೇ ಕಳೆಯಲು ಬಂತು. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟ, ಕಲಬುರಗಿ, ಯಾದಗಿರ, ಗದಗ, ಬಳ್ಳಾರಿ, ಕೊಪ್ಪಳ, ಬೆಳಗಾವಿ, ಹಾವೇರಿ, ಧಾರವಾಡ, ರಾಯಚೂರ ಮುಂತಾದವುಗಳು ಅದಾಗಲೇ ಬರದ ಬವಣೆಗೆ ಸಿಲುಕಿರುವದಿದೆ. byahatti-nargund-kalasa-banduriಇನ್ನೊಂದೆಡೆ ಮಹದಾಯಿ ನದಿ ನೀರಿನ ವಿಷಯವಾಗಿ ಹೋರಾಟವೂ ನಡೆದಿದೆ. ಇಡೀ ಉತ್ತರ ಕರ್ನಾಟಕ ಒಂದೆಡೆ ಬರಗಾಲ ಇನ್ನೊಂದೆಡೆ ಕಳಸಾ ಬಂಡೂರಿ ನದಿ ಜೋಡಣೆಯ ವಿಷಯವಾಗಿ ಪ್ರತಿನಿತ್ಯ ಬಂದ್ ಮತ್ತು ಹರತಾಳದ ಸ್ಥಿತಿಯನ್ನು ಅನುಭವಿಸುತ್ತಿದೆ. ರಾಜ್ಯದಿಂದ ಮುಖ್ಯಮಂತ್ರಿಗಳು ಕೇಂದ್ರಕ್ಕೆ ನಿಯೋಗವನ್ನು ಕೊಂಡೊಯ್ದಿದ್ದರೂ ಪ್ರಧಾನಿಯವರೊಂದಿಗಿನ ಮಾತುಕತೆಗಳು ಅಷ್ಟೊಂದು ಫಲಪ್ರದವಾದಂತಿಲ್ಲ ಪರಿಣಾಮವಾಗಿ ಹೋರಾಟದ ಕಾವು ಇನ್ನಷ್ಟು ತೀವ್ರವಾಗಿದೆ.

ಒಂದೆಡೆ ಬರದ ಬಿಸಿ, ಇನ್ನೊಂದೆಡೆ ನದಿ ನೀರಿನ ಹೋರಾಟದ ತೀವ್ರತೆ ಇವೆರಡರ ನಡುವೆ ಉತ್ತರ ಕರ್ನಾಟಕ ಕೊತಕೊತ ಕುದಿಯುವಂಥ ಸ್ಥಿತಿಯಲ್ಲಿದೆ.ಈ ಬಗೆಯ ವಾತಾವರಣದ ನಡುವೆ ನಮ್ಮ ರಾಜಕಾರಣಿಗಳು ತಮ್ಮ ತಮ್ಮ ಸಣ್ಣ ಪುಟ್ಟ ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು, ಪಕ್ಷಭೇದವನ್ನು ಮರೆತು ಸಮೈಕ್ಯರಾಗಿ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವ ಅಗತ್ಯವಿದೆ. ನೆರೆಯ ಗೋವಾ ಸರಕಾರ ಮಹದಾಯಿ ನದಿ ನೀರಿನ ವಿಷಯವಾಗಿ ತನ್ನ ಅದೇ ಹಳೆಯ ರಾಗವನ್ನೇ ಹಾಡುತ್ತಿದೆ. ಎಲ್ಲ ರೀತಿಯಿಂದಲೂ ಸದ್ಯದ ಆಡಳಿತರೂಢ ಸರಕಾರಕ್ಕೆ ಈ ಬಾರಿಯ ಬರಗಾಲ ಮತ್ತು ಈ ನದಿ ನೀರಿನ ಹೋರಾಟಗಳೆರಡೂ ನುಂಗಲಾರದ ತುತ್ತಾಗಿವೆ. ಬರಗಾಲ ನಿರ್ವಹಣೆ ಮತ್ತು ಈಗಾಗಲೇ ತೀವ್ರವಾಗಿ ನಡೆಯುತ್ತಿರುವ ಮಹದಾಯಿ ನದಿ ನೀರಿನ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುವವಲ್ಲಿಯೇ ಆಡಳಿತರೂಢ ಸರಕಾರದ ಯಶಸ್ಸು ಅಡಗಿದೆ.

ರಾಜ್ಯದಲ್ಲಿಯ ಬರಗಾಲದ ಸ್ಥಿತಿಯನ್ನು ಈಗಾಗಲೇ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ವಿವರಿಸಿದ್ದಾರೆ. ಸುಮಾರು 10 ಸಾವಿರ ಕೋಟಿ ರೂಪಾಯಿಯ ಅಂದಾಜು ನಷ್ಟದ ಮೊತ್ತವನ್ನು ನೀಡಿರುವದಿದೆ. ಕೇಂದ್ರ ಸರಕಾರ ಕೇಳಿದಷ್ಟು ಪರಿಹಾರವಂತೂ ನೀಡಲು ಸಾಧ್ಯವಿಲ್ಲ. ಕೇಂದ್ರದ ಬರ ಅಧ್ಯಯನ ತಂಡಗಳ ಸಮೀಕ್ಷೆಯ ಮೇಲೆ ಕೊಡಮಾಡುವ ಮೊತ್ತದ ಪ್ರಮಾಣ ನಿಂತಿದೆ. ಈಗಾಗಲೇ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಕೆಲೆವೆಡೆ ವಿಧ್ಯುತ್ ಉತ್ಪಾದನೆಗೂ ತೊಂದರೆಯಾಗಲಿದೆ ಅದನ್ನು ಗಮನದಲ್ಲಿರಿಸಿಕೊಂಡೇ ಈಗಾಗಲೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. kalasa-banduriಸುಮಾರು 60 ಪ್ರತಿಶತದಷ್ಟು ಸಣ್ಣ ಪ್ರಮಾಣದ ನೀರಿನ ಮೂಲಗಳು ಬತ್ತತೊಡಗಿವೆ. ಪರಿಣಾಮವಾಗಿ ಕುಡಿಯುವ ನೀರಿಗಾಗಿಯೂ ಹಾಹಾಕಾರ ಆರಂಭವಾಗುವ ದಿನಗಳು ದೂರಿಲ್ಲ. ಬಿತ್ತನೆ ಮಾಡಿರುವ ಒಟ್ಟು ಪ್ರದೇಶದಲ್ಲಿ ಅರ್ಧದಷ್ಟು ಅದಾಗಲೇ ಬಿಲ್ಕುಲ್ ಏನೂ ಬೆಳೆ ಬರುವದಿಲ್ಲ ಎನ್ನುವ ಸ್ಥಿತಿ ತಲುಪಿ ಆಗಿದೆ. ಇನ್ನೊಂದರ್ಧ ಜೀವ ಹಿಡಿದು ಹನಿ ಹನಿ ನೀರಿಗಾಗಿಯೂ ಪರಿತಪಿಸಿ ಒಣಗಿ ಹೋಗುವ ಸ್ಥಿತಿಯಲ್ಲಿದೆ. ಒಣ ಬೇಸಾಯವನ್ನು ಅವಲಂಬಿಸಿ, ಮಳೆಯನ್ನೇ ನೆಚ್ಚಿಕೊಂಡಿರುವ ರೈತರಂತೂ ಕಂಗಾಲಾಗಿದ್ದಾರೆ. ಈಗಾಗಲೇ ಸರಣಿ ರೂಪದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳಿಗೆ ಈ ಬರಗಾಲ ಇನ್ನಷ್ಟು ಚಾಲನೆ ಕೊಡದಿರಲಿ. ಅವರ ಬದುಕಿನಲ್ಲಿ ಭರವಸೆ ಮೂಡುವಂಥಾ ಹತ್ತಾರು ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಒಟ್ಟಂದವನ್ನು ಮಸಿ ನುಂಗಿತು ಎನ್ನುವ ಮಾತಿನಂತೆ ಸರಕಾರದ ಇಲ್ಲಿಯವರೆಗಿನ ಸಾಧನೆಗಳನ್ನು ಈ ಬರಗಾಲ ಮಸಿಯಾಗಿ ಮರೆಸಿಬಿಡುವಂತಾಗಬಾರದು ಎನ್ನುವದಾದರೆ ಈಗಿನಿಂದಲೇ ಸರಕಾರ ಜಾಗೃತವಾಗಿ ಬರ ಪರಿಹಾರ ಕಾಮಗಾರಿಯ ಕಾರ್ಯಕ್ರಮಗಳನ್ನು ಆದಷ್ಟು ಬೇಗನೇ ಚಾಲನೆಗೊಳಿಸಬೇಕು. ಇದೊಂದು ಆಹ್ವಾನವಾಗಿ ಸ್ವೀಕರಿಸಿ ಸರಕಾರ ಮತ್ತು ಜನತೆ ಕೈಗೂಡಿಸಿ ಬರಗಾಲದ ಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಬೇಕು.

ಅಗಷ್ಟ ತಿಂಗಳು ಕಳೆಯಲು ಬಂದರೂ ಯಾವ ಜಿಲ್ಲೆಗಳಲ್ಲೂ ಸಾಕಷ್ಟು ಮಳೆಯಾಗಿಲ್ಲ. ರಾಜ್ಯದ ಯಾವ ನದಿಗಳೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. droughtಕೃಷಿ ಕಾರ್ಯಗಳು ದೂರ, ಕುಡಿಯಲು ನೀರು ಸಿಕ್ಕರೂ ಸಾಕು ಎನ್ನುವಂತಹ ಸ್ಥಿತಿ ಬರ ಪೀಡಿತ ತಾಲೂಕುಗಳಲ್ಲಿದೆ. ನೀರಿಗಾಗಿ ದಿನವಿಡೀ ಟ್ಯಾಂಕರ್‌ಗಳಿಗಾಗಿ ಕಾದು ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ನಿಸರ್ಗ ಮುನಿಸಿಕೊಂಡರೆ ಎಷ್ಟೆಲ್ಲಾ ವೈಪರೀತ್ಯಗಳು ಮತ್ತು ಮಾರಕ ಪರಿಣಾಮಗಳು ಸಾಧ್ಯ ಎನ್ನುವುದನ್ನು ಅನೇಕ ಬಾರಿ ಹೀಗೆ ಮತ್ತೆ ಮತ್ತೆ ಅನಾವೃಷ್ಟಿಯ ಮೂಲಕ ತೋರಿಸಿಕೊಟ್ಟರೂ ನಾವು ಪಾಠ ಕಲಿತಿಲ್ಲ. ಬರಗಾಲದ ವಿಷಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಟ್ಟರೆ ಅರ್ಧ ಸಮಸ್ಯೆಗಳನ್ನು ನಿಯಂತ್ರಿಸಿದಂತೆ. ಆ ದಿಸೆಯಲ್ಲಿ ಸರಕಾರ ಮತ್ತು ನಾವೆಲ್ಲರೂ ಸನ್ನದ್ಧರಾಗಬೇಕಿದೆ.

ಜಾಲದಲ್ಲಿ ಸಮಾನತೆ: ಅಂತರ್ಜಾಲ ದತ್ತಾಂಶದ ಹರಿಹೊಳೆಯಲ್ಲಿ ದೈತ್ಯ ಕಂಪನಿಗಳ ಲಾಭಕೋರತನ

– ಜೈಕುಮಾರ್
[Free Software Movement Karnataka]

‘ಜಾಲದಲ್ಲಿ ಸಮಾನತೆ’ಗಾಗಿ ನಡೆಸುವ ಹೋರಾಟವು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಯುದ್ದಗಳಲ್ಲೇ ಪ್ರಮುಖವಾದದ್ದು.
– ಮಾಧ್ಯಮ ಚಿಂತಕ ರಾಬರ್ಟ್ ಮ್ಯಾಚೆಸ್ನಿ

ಜಾಲದಲ್ಲಿ ಸಮಾನತೆ ಕುರಿತು ಚರ್ಚಿಸುವ ಮುನ್ನ ಒಂದೆರಡು ಸರಳ ಉದಾಹರಣೆಗಳ ಮೂಲಕ ಅದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.

ದೀರ್ಘ ಪ್ರಯಾಣ ನಡೆಸುವ ವೇಳೆ ಬಹುತೇಕ ಎಲ್ಲ ಬಸ್ಸುಗಳು ಈಗಾಗಲೇ ನಿಗಧಿಮಾಡಿಕೊಂಡಿರುವ ಹೋಟೆಲ್‌ಗಳ ಬಳಿಯೇ ನಿಲ್ಲಿಸುತ್ತವೆ. ಅವುಗಳ ನಡುವೆ ಮೊದಲೇ ಕೊಡುಕೊಳ್ಳುವಿಕೆಯ ಒಪ್ಪಂದವಾಗಿರುತ್ತದೆ. ಆ ಹೋಟೆಲ್‌ಗಳು ಪ್ರಯಾಣಿಕರಿಗೆ ಇಷ್ಟವಿದೆಯೋ ಇಲ್ಲವೋ, ಅವುಗಳ ಗುಣಮಟ್ಟ ಚೆನ್ನಾಗಿದೆಯೋ ಇಲ್ಲವೋ ಅದು ಮುಖ್ಯವಾಗುವುದಿಲ್ಲ. ಸರ್ಕಾರವೇ ಗುಣಮಟ್ಟವಿರುವ ಎಲ್ಲ ಹೋಟೆಲ್‍ಗಳನ್ನು ಅಂತಿಮಗೊಳಿಸಿ ಇಂತಿಂಥ ಬಸ್ಸುಗಳು ಇಂತಿಂಥ ಹೋಟೆಲ್‌ಗಳ ಬಳಿ ನಿಲುಗಡೆಯಾಗಬೇಕೆಂದು ನಿರ್ಧರಿಸಿದರೆ ಎಲ್ಲಾ ಹೋಟೆಲ್‌ಗಳೂ ಮತ್ತು ಪ್ರಯಾಣಿಕರಿಗೂ ಸಮಾನ ನೆಲೆ ಒದಗಿಸಿದಂತಾಗುತ್ತದೆಯಲ್ಲವೇ?…

ಹಲವಾರು ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಮಾತ್ರವಲ್ಲದೇ ಸಮವಸ್ತ್ರ, ಪ್ರತ್ಯೇಕ ಟ್ಯೂಷನ್, ಕ್ರೀಡಾ ತರಬೇತಿ, ಇತ್ಯಾದಿ ಗಳಿಗೆಲ್ಲ ಪ್ರತ್ಯೇಕ ಶುಲ್ಕಗಳಿವೆ. ಆ ಶುಲ್ಕವನ್ನು ಕಟ್ಟಲು ಒಪ್ಪುವವರಿಗೆ ಮಾತ್ರವೇ ಪ್ರವೇಶ ನೀಡುತ್ತವೆ. ಇಲ್ಲದಿದ್ದಲ್ಲಿ, ಪ್ರವೇಶ ನಿರಾಕರಿಸುವುದು ಸರ್ವೇ ಸಾಮಾನ್ಯವಾಗಿದೆ.

ಇಂಥಹ ಪರಿಸ್ಥಿತಿ, ಜಾಲದಲ್ಲಿ ಸಮಾನತೆ ಇಲ್ಲವಾದಾಗ ನೆಟ್ ಬಳಕೆದಾರರಿಗೂ ಬರುವ ದಿನಗಳು ದೂರವಿಲ್ಲ.net-neutrality2

‘ಏರ್‌ಟೆಲ್ ಝೀರೋ’ ಎಂಬ ಯೋಜನೆಯಡಿ ಬಳಕೆದಾರರಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಒದಗಿಸುವುದಾಗಿ ಮತ್ತು ದತ್ತಾಂಶ ವರ್ಗಾವಣೆಗಾಗಿ ವೆಚ್ಚವನ್ನು ಇಂಟರ್ನೆಟ್ ಕಂಪನಿಗಳಿಂದ ಪಡೆಯುವುದಾಗಿ ಇತ್ತೀಚೆಗೆ ಏರ್‌ಟೆಲ್ ಕಂಪನಿಯು ಹೆಜ್ಜೆ ಹಾಕಿತ್ತು! ಈ ಯೋಜನೆಯಲ್ಲಿ ಭಾಗೀದಾರನಾಗಿ ‘ಪ್ಲಿಪ್‍ಕಾರ್ಟ್’ ಎಂಬ ಆನ್‍ಲೈನ್ ಕಂಪನಿಯು ಕೈಜೋಡಿಸಿತು. ಇದು ಮೇಲ್ನೋಟಕ್ಕೆ ಉಚಿತ ಸೇವೆಯಂತೆ ಕಾಣುವುದರಲ್ಲಿ ಸಂದೇಹವೇನು ಇಲ್ಲ. ಆದರೆ, ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು ದೈತ್ಯ ಇಂಟರ್ನೆಟ್ ಕಂಪನಿಗಳ ಜೊತೆ ಸೇರಿ ಲಾಭಕ್ಕಾಗಿ ಇಂಟರ್ನೆಟ್ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳುವುದರ ವಿರುದ್ದ ಲಕ್ಷಾಂತರ ಇಂಟರ್ನೆಟ್ ಬಳಕೆದಾರರು ಮತ್ತು ಸ್ವಾತಂತ್ರ್ಯ ಪ್ರೇಮಿಗಳು ಇದನ್ನು ಪ್ರತಿಭಟಿಸಿದರು. ಇದು ಇಂಟರ್‌ನೆಟ್‌ ಬಳಕೆದಾರರ ಹಕ್ಕಿನ ಉಲ್ಲಂಘನೆ ಎಂದೂ, ‘ಜಾಲದ ಅಲಿಪ್ತತೆ’ / ‘ಜಾಲದಲ್ಲಿ ತಾಟಸ್ಥ್ಯ ಅಥವಾ ಜಾಲದಲ್ಲಿ ಸಮಾನತೆ’ ಅಥವಾ ‘Net Neutrality’ ಯನ್ನು ಬುಡಮೇಲು ಮಾಡುವುದೆಂದೂ ಜಾಲತಾಣಗಳಲ್ಲಿ ಚರ್ಚೆಗಳು ನಡೆಯತೊಡಗಿದವು. ಇದರಿಂದ ಮುಖಭಂಗ ಅನುಭವಿಸಿದ ‘ಪ್ಲಿಪ್‍ಕಾರ್ಟ್’ ಕಂಪನಿಯು ಮೊದಲಿಗೆ ಈ ಯೋಜನೆಯಿಂದ ಆಚೆಗೆ ಬಂದಿತು. ನಂತರ ಏರ್‌ಟೆಲ್ ಕಂಪನಿಯು ನಿಧಾನವಾಗಿ ಹಿಂದೆ ಸರಿದಂತೆ ಮಾಡಿತು.

‘ಜಾಲದಲ್ಲಿ ಸಮಾನತೆ’ ಅಥವಾ ‘Net Neutrality’ ಸಮಸ್ಯೆಯು ಬಹಳ ಸಂಕೀರ್ಣ ವಿಷಯದಂತೆಯೂ, ಕೇವಲ ನೆಟ್ ಬಳಕೆದಾರರಿಗೆ ಮಾತ್ರವೇ ಸಂಬಂಧಿಸಿರುವಂತೆಯೂ ಮೇಲ್ನೋಟಕ್ಕೆ ಕಾಣುತ್ತಿದೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ವಿಷಯವೇನೆಂದರೆ, ಇಂಟರ್‌ನೆಟ್‌ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಕಾಳಗದ ರಣಭೂಮಿಯೇ ‘ಜಾಲದಲ್ಲಿ ಸಮಾನತೆ’ ಎಂಬ ಪರಿಕಲ್ಪನೆ. ಅಂದರೆ, ಭೌತಿಕ ನೆಟ್‍ವರ್ಕ್‍ಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ನೆಟ್‍ವರ್ಕ್‍ಗಳ ಮೇಲೆ ಹರಿಯುವ ಇಂಟರ್‌ನೆಟ್‌ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು. ಇದು ತಾರತಮ್ಯ-ರಹಿತ ತತ್ವವಾಗಿದ್ದು, ತಂತಿಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಟೆಲಿಕಾಂ ಕಂಪನಿಗಳು ಅಥವಾ ತರಂಗಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಮೊಬೈಲ್ ಕಂಪನಿಗಳು ಬಳಕೆದಾರರದಿಂದ ಅಗಾಧ ಪ್ರಮಾಣದ ಶುಲ್ಕ ವಿಧಿಸುವುದನ್ನು ತಡೆಯುತ್ತದೆ.

ಇಂಟರ್‌ನೆಟ್‌ ಎಂದರೆ ಪರಸ್ಪರ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ಜಾಲದ ಮುಖೇನಾ ಹರಿವ ದತ್ತಾಂಶ ಸಂವಹನ ವ್ಯವಸ್ಥೆ. ಕಂಪ್ಯೂಟರುಗಳ ನಡುವಿನ ಜಾಲವನ್ನು ಆಪ್ಟಿಕಲ್ ಫೈಬರ್‌ನಿಂದ ಸಂಪರ್ಕ ಕಲ್ಪಿಸಲಾಗುತ್ತದೆ. ತಂತುರಹಿತ ವ್ಯವಸ್ಥೆಯಲ್ಲಿ ತರಂಗಗಳ ಮೂಲಕ ಸಾಧ್ಯವಾಗುತ್ತದೆ. ಜಾಲ ವ್ಯವಸ್ಥೆಯ ಮೂಲಸೌಲಭ್ಯವನ್ನು ಬಿಎಸ್‍ಎನ್‍ಎಲ್, ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು ನಿರ್ವಹಿಸಿದರೆ, ಈ ಜಾಲದಲ್ಲಿ ಹರಿದಾಡುವ ದತ್ತಾಂಶವನ್ನು ಸೃಷ್ಟಿಸಿ ನಿರ್ವಹಿಸುವವರು ಗೂಗಲ್, ಫೇಸ್‍ಬುಕ್‍ನಂಥ ದೈತ್ಯ ಕಂಪನಿಗಳು. ದತ್ತಾಂಶ ಸೃಷ್ಟಿಯಲ್ಲಿ ಜಾಲತಾಣಗಳ ಮೂಲಕ net-neutralityಜನ ಸಾಮಾನ್ಯರೂ ದೊಡ್ಡ ಪ್ರಮಾಣದಲ್ಲಿ ತೊಡಗಿದ್ದಾರೆ. ಜಾಲ ಸಮಾನತೆ ಪರಿಕಲ್ಪನೆಯಂತೆ ಜಾಲ ವ್ಯವಸ್ಥೆ ಮತ್ತು ಅದರಲ್ಲಿ ಚಲಿಸುವ ದತ್ತಾಂಶಗಳೆರಡೂ ಸ್ವತಂತ್ರವಾಗಿರಬೇಕು.

ಜಾಲದಲ್ಲಿ ಸಮಾನತೆ ಎಂದರೇನು?

ಟೆಲಿಕಾಂ ಆಪರೇಟರ್‍ಗಳು ಮತ್ತು ಇಂಟರ್‌ನೆಟ್ ಸೇವಾ ಪೂರೈಕೆದಾರ ಕಂಪನಿಗಳು ನಿಮಗೆ ಇಂಟರ್‌ನೆಟ್‌‌ ಪ್ರವೇಶಾವಕಾಶ ಒದಗಿಸುತ್ತವೆ. ಹಾಗೆಯೇ ಎಷ್ಟರಮಟ್ಟಿಗೆ ನಿಮಗೆ ಪ್ರವೇಶಾವಕಾಶ ನೀಡಬಹುದು, ನೀವು ಎಷ್ಟು ವೇಗವಾಗಿ ಪ್ರವೇಶಾವಕಾಶ ಪಡೆಯಬಹುದು ಮತ್ತು ಅಂತರ್ಜಾಲದ ವಿಷಯ ಮತ್ತು ಸೇವೆಗಳಿಗೆ ಪ್ರವೇಶಾವಕಾಶ ಪಡೆಯಲು ನೀವೆಷ್ಟು ಪಾವತಿಸಬೇಕು ಎಂಬುದನ್ನು ಈ ಕಂಪನಿಗಳು ನಿಯಂತ್ರಿಸುತ್ತವೆ. ಜ್ಞಾನ ಎಲ್ಲೆಡೆ ಪಸರಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಖಾತರಿಪಡಿಸಲು ಇಂಟರ್‌ನೆಟ್‌ ಸೇವೆಯು ಸಮಾನತೆ ಹೊಂದಿರಬೇಕಾಗಿರುತ್ತದೆ. ಇದಕ್ಕಾಗಿ:
– ಎಲ್ಲಾ ಜಾಲ ತಾಣ ಬಳಸುವುದಕ್ಕೂ ಸಮಾನ ಅವಕಾಶವಿರಬೇಕು.
– ಎಲ್ಲಾ ಜಾಲ ತಾಣ ಪ್ರವೇಶಾವಕಾಶಕ್ಕೂ ಟೆಲಿಕಾಂ/ಇಂಟರ್‌ನೆಟ್‌ ಪೂರೈಕೆದಾರರ ಮಟ್ಟದಲ್ಲಿ ಒಂದೇ ತೆರನಾದ ವೇಗ ಇರಬೇಕು.
– ಎಲ್ಲಾ ಜಾಲ ತಾಣ ಬಳಸುವುದಕ್ಕೂ ಒಂದೇ ದತ್ತಾಂಶ ವೆಚ್ಚ ಇರಬೇಕು.

ಜಾಲದಲ್ಲಿ ಸಮಾನತೆ ಎಂದರೆ, ಟೆಲಿಕಾಂ ಕಂಪನಿಗಳಿಗೆ ವೆಬ್ ಸೈಟ್ ಹೊಂದಿರುವ ಕಂಪನಿಗಳು ಹಣ ನೀಡಲಿ ಅಥವಾ ನೀಡದಿರಲಿ, ಎಲ್ಲ ವೆಬ್ ಸೈಟ್ ಡೌನ್ ಲೋಡ್ ವೇಗ ಒಂದೇ ಇರಬೇಕು.

ಪರಸ್ಪರ ಸಂಪರ್ಕಿಸಲು, ಜ್ಞಾನವನ್ನು ಪಡೆಯಲು, ಸರಕುಗಳನ್ನು ಖರೀದಿ ಮತ್ತು ಮಾರಾಟ ಮಾಡಲು ನಮ್ಮ ಸಂವಹನ ವ್ಯವಸ್ಥೆಯಲ್ಲಿ ಇಂಟರ್‌ನೆಟ್‌ ಪ್ರಮುಖ ಸಾಧನವಾಗಿ ಮೂಡಿಬಂದಿದೆ. ಇದೊಂದು ನವ ಮಾಧ್ಯಮವಾಗಿದ್ದು, ಕೇವಲ ಸಾಮಾಜಿಕ ಮಾಧ್ಯಮವಷ್ಟೇ ಅಲ್ಲ, ಸಾಂಪ್ರದಾಯಿಕ ಮಾಧ್ಯಮವೂ ಆಗುತ್ತಿದೆ; ಮುದ್ರಣ ಮಾಧ್ಯಮ ಮತ್ತು ಟೆಲಿವಿಷನ್‍ಗಳು ಇಂಟರ್‌ನೆಟ್‌‍ಗೆ ವಲಸೆ ಹೋಗುತ್ತಿವೆ.

ಜಾಲದಲ್ಲಿ ಸಮಾನತೆಯನ್ನು ಕಳಕೊಂಡರೆ, ನಮ್ಮ ಇಂಟರ್‌ನೆಟ್‌ ಪ್ರವೇಶಾವಕಾಶವನ್ನು ನಿಯಂತ್ರಿಸುತ್ತಿರುವ ಟೆಲಿಕಾಂ ಕಂಪನಿಗಳು ನಾವು ಏನನ್ನು, ಎಷ್ಟನ್ನು ನೋಡಬೇಕು ಎಂದು ನಿರ್ಧರಿಸುತ್ತವೆ. ಸಣ್ಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿಪರ ಮಾಧ್ಯಮಗಳು ತಮ್ಮ ಜಾಲತಾಣಗಳು ಎಲ್ಲೆಡೆ ಕಾಣಸಿಗುವಂತಾಗಲೆಂದು ವಿಶ್ವದ ಪ್ರತಿಯೊಂದು ಟೆಲಿಕಾಂ ಕಂಪನಿಗಳಿಗೆ ಹಣ ನೀಡಲಾರದೆ ಸಾಯುತ್ತವೆ.

ಭಾರತ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ತನ್ನ ಇತ್ತೀಚಿನ ಸಮಾಲೋಚನಾ ಟಿಪ್ಪಣಿಯಲ್ಲಿ ಟೆಲಿಕಾಂ ನೆಟ್‍ವರ್ಕ್ net-neutrality-1ಮೇಲೆ ಒದಗಿಸಲಾಗುವ ಎಲ್ಲಾ ಸೇವೆಗಳನ್ನು ಒವರ್-ದ-ಟಾಪ್ ಸೇವೆಗಳೆಂದು ವ್ಯಾಖ್ಯಾನಿಸಿದೆ. ಇದರಿಂದ ಇಂಟರ್‌ನೆಟ್‌ ಕೂಡ ಹೆಚ್ಚುವರಿ (ಒವರ್-ದ-ಟಾಪ್) ಸೇವೆಯಾಗಿದೆ. ಇದು ಜಾಲದಲ್ಲಿ ಸಮಾನತೆ ತತ್ವಕ್ಕೆ ವಿರುದ್ದವಾಗಿದೆ.

ಒಂದೆಡೆ, ಟೆಲಿಕಾಂ ಕಂಪನಿಗಳು ‘ಜಾಲದಲ್ಲಿ ಸಮಾನತೆ’ ವ್ಯವಸ್ಥೆಯನ್ನು ತೊಡೆದುಹಾಕಲು ನಿಂತಿದ್ದರೆ, ಮತ್ತೊಂದೆಡೆ, ಅತಿ ದೊಡ್ಡ ಇಂಟರ್‌ನೆಟ್‌ ಕಂಪನಿಗಳಾದ ಗೂಗಲ್, ಫೇಸ್‍ಬುಕ್, ಇತ್ಯಾದಿಗಳು ಅವುಗಳಿಗೆ ಹೆಗಲುಕೊಟ್ಟು ನಿಂತಿವೆ. ಇದರ ಜೊತೆಗೆ ‘ಜಾಲದಲ್ಲಿ ಸಮಾನತೆ’ಯನ್ನು ದುರ್ಬಲಗೊಳಿಸಲು ಏರ್‍ಟೆಲ್ ಕಂಪನಿಯು ಏರ್‍ಟೆಲ್ ಝೀರೋ ಯೋಜನೆ ಜಾರಿಗೆ ತರಲು ಯತ್ನಿಸುತ್ತಿದ್ದರೆ, ಫೇಸ್‍ಬುಕ್ ಕಂಪನಿಯು ರಿಲಯನ್ಸ್ ಕಂಪನಿಯ ಜೊತೆ ಸೇರಿ ಕಡಿಮೆ ಬೆಲೆಗೆ ಸೀಮಿತ ಇಂಟರ್‌ನೆಟ್‌ (ಇಂಟರ್‌ನೆಟ್‌.ಆರ್ಗ್) ಯೋಜನೆ ತರುತ್ತಿದೆ.

ವಿಕೇಂದ್ರೀಕೃತ, ವಾಣಿಜ್ಯ-ರಹಿತ ಜಾಲದಿಂದ ಕೇಂದ್ರೀಕೃತ ಏಕಸ್ವಾಮ್ಯದೆಡೆಗೆ :

ಇಂಟರ್‌ನೆಟ್‌ ಜನ್ಮತಾಳಿದ್ದು ಅಮೇರಿಕಾ ಸರ್ಕಾರವು ಸ್ಥಾಪಿಸಿದ್ದ ರಕ್ಷಣಾ ಜಾಲಬಂಧ DARPANET ನಿಂದ. ಅಮೇರಿಕಾ ಸರ್ಕಾರವು ಶೈಶಾವಸ್ಥೆಯಲ್ಲಿದ್ದ ಇಂಟರ್‌ನೆಟ್‌‍ನ್ನು ಎಟಿ&ಟಿ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದು, ಅದರಲ್ಲಿ ವ್ಯಾಪಾರಿ ಮೌಲ್ಯ ಇಲ್ಲದ್ದರಿಂದ ಕಂಪನಿಯು ಅದನ್ನು ಕೊಳ್ಳಲು ನಿರಾಕರಿಸಿತ್ತು! ನಂತರದಲ್ಲಿ ಅಮೇರಿಕಾದ ವಿವಿಧ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಜಾಲಬಂಧ ಸಂಪರ್ಕವೇರ್ಪಟ್ಟು ಇತರೆ ದೇಶಗಳಲ್ಲಿಯೂ ಬೆಳೆಯತೊಡಗಿತು. ಈ ಹಂತದಲ್ಲಿ ಇಂಟರ್‌ನೆಟ್‌ ಸಂಪೂರ್ಣ ವಾಣಿಜ್ಯ-ರಹಿತ ಬಳಕೆಯಲ್ಲಿತ್ತು.

ಪ್ರಾರಂಭದಲ್ಲಿ ಸಂಶೋಧಕರ ನಡುವೆ ಸಂವಹನ ಸಾಧನವಾಗಿ, ನಂತರ ಮಾಹಿತಿಯ ಆಕರವಾಗಿ ಇಂಟರ್‌ನೆಟ್‌ ಬಳಕೆಯಲ್ಲಿತ್ತು. ಸಂವಹನ ಜಾಲವಾಗಿ ಅದರ ಯಶಸ್ಸಿನಿಂದ ಜಾಗೃತಗೊಂಡ ಅಮೇರಿಕಾ ಸರ್ಕಾರ ಮತ್ತು ದೊಡ್ಡ ಕಂಪನಿಗಳು ಅದರ ವಾಣಿಜ್ಯ ಸಾಮಥ್ರ್ಯವನ್ನು ಮನಗಂಡವು. 1995ರ ಹೊತ್ತಿಗೆ, ಇಂಟರ್‌ನೆಟ್‌ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿತು ಮತ್ತು ದೊಡ್ಡ ಕಂಪನಿಗಳು ಬಂಡವಾಳದ ವಿಸ್ತರಣೆಗೆ ಅದನ್ನು ಸಾಧನವಾಗಿ ಬಳಸತೊಡಗಿದವು.

ಇಂಟರ್‌ನೆಟ್‌ ಸಂಪೂರ್ಣ ವಾಣಿಜ್ಯೀಕರಣಗೊಂಡಿದ್ದರೂ, ಅದರ ಬೆಳವಣಿಗೆಯ ವಂಶವಾಹಿನಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯಿರಲಿಲ್ಲ,netneutrality ಯಾರಾದರೂ ಸಂಪರ್ಕ ಪಡೆದುಕೊಳ್ಳಬಹುದಿತ್ತು, ಇಚ್ಛೆಪಟ್ಟ ಯಾವುದೇ ಮಾಹಿತಿಯನ್ನು ಕಳುಹಿಸುವ ಅಥವಾ ಸ್ವೀಕರಿಸಬಹುದಾಗಿತ್ತು. ಇಂಟರ್‌ನೆಟ್‌‍ನ ಜಾಲಬಂಧದ ರಚನೆ ಮತ್ತು ಸಂವಹನ ವಿಧಿಯಲ್ಲಿ ಇವುಗಳನ್ನು ಅಳವಡಿಸಲಾಯಿತು. ಇದನ್ನೇ ಕೆಲವರು ‘ಜನತೆಯ ಸರ್ವಸ್ವತಂತ್ರ ಜಾಗ’ ಎಂದು ಉತ್ಪ್ರೇಕ್ಷೆಯಿಂದ ಹೇಳತೊಡಗಿದರು.

ಆದರೆ, ಪ್ರಾರಂಭದಿಂದಲೂ ಜಾಗತಿಕ ಇಂಟರ್‌ನೆಟ್‌ ಮೇಲೆ ಅಮೇರಿಕಾ ತನ್ನ ಕಾನೂನು ನಿಯಂತ್ರಣವನ್ನು ಹೇರತೊಡಗಿತ್ತು. ವಿವಿಧ ದೇಶಗಳ ಕಾನೂನಿನಡಿ ಇರುವ ದೂರಸಂವಹನ ಜಾಲಗಳನ್ನು ಇಂಟರ್‌ನೆಟ್‌ ಬಳಸಿಕೊಳ್ಳುವುದರಿಂದ ಸಹಜವಾಗಿ ಇಂಟರ್‌ನೆಟ್‌ ಮೂಲಕ ಯಾವ ಮಾಹಿತಿಯನ್ನು ನೋಡಬಹುದು ಅಥವಾ ಕಳುಹಿಸಬಹುದು ಎಂಬುದನ್ನು ತೀರ್ಮಾನಿಸಲು ಎಲ್ಲ ರಾಷ್ಟ್ರಗಳು ಕಾನೂನು ಹಕ್ಕನ್ನು ಹೊಂದಿವೆ. ವಿಕೇಂದ್ರೀಕೃತ ಮಾದರಿಯಲ್ಲಿ ಯಾರ ನಿಯಂತ್ರಣವೂ ಇಲ್ಲದೇ ಇಂಟರ್‌ನೆಟ್‌ ಜನರ ನೈಜ ಸಂವಹನ ಮಾಧ್ಯಮವಾಗುತ್ತದೆಂಬ ಭರವಸೆಗೆ ನಂತರದ ದಿನಗಳಲ್ಲಿ ಹೊಡೆತ ಬೀಳಲಾರಂಭಿಸಿತು.

ಇಂಟರ್‌ನೆಟ್‌ ಶಕ್ತಿ:

ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ ಸೌಲಭ್ಯ ಹೊಂದಿರುವ ಯಾರೇ ಆಗಲಿ ಕೇವಲ ಗ್ರಾಹಕರಾಗದೇ, ಸುದ್ದಿ ಮತ್ತು ಅನಿಸಿಕೆಗಳನ್ನು ಉತ್ಪಾದಿಸಲು ಇಂಟರ್‌ನೆಟ್‌ ಅವಕಾಶ ಕಲ್ಪಿಸುತ್ತದೆ. ಯೂಟ್ಯೂಬ್ ಮತ್ತು ವೀಡಿಯೋ ಕ್ಯಾಮೆರಾವನ್ನು ಬಳಸಿಕೊಂಡು ಒಂದು ಟೆಲಿವಿಷನ್ ಸ್ಟೇಷನ್ ಶುರು ಮಾಡಬಹುದು! ಇಂಟರ್‌ನೆಟ್‌‍ನಲ್ಲಿ ಸುಮಾರು 100 ಕೋಟಿ ಜಾಲತಾಣಗಳಿದ್ದು, ಅದರಲ್ಲಿ 8.50 ಲಕ್ಷ ಕ್ರಿಯಾಶೀಲತೆಯಿಂದಿವೆ. ಆದರೂ ಇಂಟರ್‌ನೆಟ್‌ ಕಂಪನಿಗಳು ದೈತ್ಯಾಕಾರವಾಗಿ ಬೆಳೆದಿವೆ. ಅಮೇರಿಕಾದಲ್ಲಿ 2010ರ ಹೊತ್ತಿಗೆ, ಒಟ್ಟಾರೆ ವೀಕ್ಷಣೆಯಾದ ಜಾಲಪುಟಗಳ ಪೈಕಿ ಶೇ. 75ರಷ್ಟು ಜಾಲಪುಟಗಳು ಟಾಪ್ 10 ಇಂಟರ್‌ನೆಟ್‌ ಕಂಪನಿಗಳಿಗೆ ಸೇರಿದ್ದವು. ಚೀನಾ ಹೊರತುಪಡಿಸಿ, ಇಡೀ ಜಾಗತಿಕ ಇಂಟರ್‌ನೆಟ್‌ ನಲ್ಲಿ ಅಮೇರಿಕಾದ ಕಂಪನಿಗಳೂ ಯಜಮಾನಿಕೆ ಹೊಂದಿವೆ. ಚೀನಾದಲ್ಲಿ ಕೆಲವು ಸಂರಕ್ಷಣ ನೀತಿಗಳನ್ನು ಅಳವಡಿಸಿಕೊಂಡಿರುವ ಜೊತೆಗೆ ಚೀನೀ ಭಾಷೆಯ ಸಂಕೀರ್ಣತೆಯಿಂದಾಗಿ ಅಲ್ಲಿ ಅಮೇರಿಕಾದ ಕಂಪನಿಗಳು ಪ್ರಾಬಲ್ಯ ಸಾಧಿಸಲಾಗಿಲ್ಲ. ಹೆಚ್ಚಿನ ಸಂಖ್ಯೆಯ ವೆಬ್‍ಸೈಟ್‍ಗಳಿದ್ದರೂ ಸಹ ದೊಡ್ಡ ಪ್ರಮಾಣದ ನೆಟ್ ಬಳಕೆದಾರರು ಕೆಲವೇ ವೆಬ್‍ಸೈಟ್‍ಗಳನ್ನು ವೀಕ್ಷಿಸುತ್ತಾರೆ.

ವಿವಿಧ ವಲಯಗಳಲ್ಲಿ ಕಂಪನಿಗಳ ಪ್ರಾಬಲ್ಯವನ್ನು ಅರಿಯುವುದಾದರೆ, – ಸರ್ಚ್ ಇಂಜೀನ್, ವೀಡಿಯೋ, ಇ-ರೀಟೈಲ್, ಇತ್ಯಾದಿ – ಗೂಗಲ್ ಕಂಪನಿಯು ವೆಬ್ ಸರ್ಚ್‍ಗಳಲ್ಲಿ ಶೇ. 90ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಬಲ್ಯ ಹೊಂದಿವೆ. ಇಂಟರ್‌ನೆಟ್‌‍ನಲ್ಲಿ ಪ್ರಮುಖ ವೀಡಿಯೋ ಛಾನೆಲ್ ಎಂದರೆ ಗೂಗಲ್ ಕಂಪನಿಯ ಯೂಟ್ಯೂಬ್.

ಇಂಟರ್‌ನೆಟ್‌‍ನ ಪ್ರಜಾಸತ್ತಾತ್ಮಕ ಸಾಮಥ್ರ್ಯವನ್ನು ಜನತೆ ಪೂರ್ಣಪ್ರಮಾಣದಲ್ಲಿ ಪಡಕೊಳ್ಳಲು ಸಾಧ್ಯವಾಗಿಲ್ಲ ನಿಜ. ಆದರೆ, ಮುಖ್ಯವಾಹಿನಿಯ ಮಾಧ್ಯಮಗಳು ತಮಗೆ ‘ಇಚ್ಛಿಸದ ಸುದ್ದಿ’ಗಳನ್ನು ಬುಟ್ಟಿಗೆ ಎಸೆಯಲು ಸಾಧ್ಯವಾಗದ ಸ್ಥಿತಿಯಂತೂ ನಿರ್ಮಾಣವಾಗಿದೆ. ಈ ಕಾರಣದಿಂದಾಗಿಯೇ ಸುದ್ದಿ ಮತ್ತು ಅನಿಸಿಕೆಗಳನ್ನು ನೇರವಾಗಿ ಸೆನ್ಸಾರ್‍ಶಿಪ್ ಮಾಡುವ ಬದಲಿಗೆ ‘ಒಮ್ಮತದ ಉತ್ಪಾದನೆ’ (Manufacturing Consent) ಮಾಡುವುದು ಬಂಡವಾಳದ ಪ್ರಾಥಮಿಕ ಸಾಧನವಾಗಿದೆ.

ಇಂಟರ್‌ನೆಟ್‌‍ನ ವಿನ್ಯಾಸ ರಚನೆ ಕೂಡ ಬದಲಾವಣೆಗೊಂಡಿದೆ. ಈ ಮುಂಚಿನ ಕೇಂದ್ರೀಕೃತ ಸರ್ವರ್‍ಗಳು ಮತ್ತು ನೋಡ್‍ಗಳಿಲ್ಲದ, ಪ್ರತಿಯೊಬ್ಬರೂ ಪರಸ್ಪರ ನೇರವಾಗಿ ಕಂಪ್ಯೂಟರಿಗೆ ಸಂಪರ್ಕ ಮಾಡಿಕೊಳ್ಳುವ ವಿನ್ಯಾಸ ರಚನೆಯ ಸ್ಥಳದಲ್ಲಿ ಇಂದು ಬಳಕೆದಾರರು ಇಂಟರ್‌ನೆಟ್‌ ದೈತ್ಯ ಕಂಪನಿಗಳ ಕೇಂದ್ರೀಕೃತ ಸರ್ವರ್‍ಗಳಿಗೆ ಎಡತಾಕುತ್ತಾರೆ. ಇದನ್ನೇ ಕ್ಲೌಡ್ ಕಂಪ್ಯೂಟಿಂಗ್ ಎಂದು ಕರೆಯುವುದು. ಇಂಟರ್‌ನೆಟ್‌‍ನ ಸ್ವರೂಪದಲ್ಲಾಗಿರುವ ಈ ಮೂಲಭೂತ ಬದಲಾವಣೆಯು ಜಾಗತಿಕ ಇಂಟರ್‌ನೆಟ್‌ ಕಂಪನಿಗಳ ಏಳಿಗೆಯೊಂದಿಗೆ ನಡೆದಿದೆ.

ಆದರೂ, ಇಷ್ಟೆಲ್ಲ ಬೆಳವಣಿಗೆಯ ನಡುವೆ ಇಂಟರ್‌ನೆಟ್‌‍ನ ಎರಡು ಪ್ರಮುಖ ಗುಣಲಕ್ಷಣಗಳು ಅದರ ಪ್ರಾರಂಭದ ವಿನ್ಯಾಸ ರಚನೆಯಂತೆಯೇ ಉಳಿದುಕೊಂಡಿವೆ. ಟೆಲಿಕಾಂ ಟ್ರಾಫಿಕ್‍ನಲ್ಲಿ ಧ್ವನಿ ಕರೆಗಳ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ಧ್ವನಿ ಜಾಲಗಳಲ್ಲಿ ಅಳವಡಿಸಲಾಗಿದ್ದು, ಬಿಲ್ಲಿಂಗ್ ಮಾಡುವುದು ಸುಲಭ. ಆದರೆ ಇಂಟರ್‌ನೆಟ್‌‍ನಲ್ಲಿ ದತ್ತಾಂಶ ಪೊಟ್ಟಣಗಳನ್ನು (Data Packets) ಪ್ರಸರಣ ಮಾಡುವಾಗ ಕಳುಹಿಸುವವರು ಮತ್ತು ಸ್ವೀಕರಿಸುವವರ ನಡುವೆ ಬಿಲ್ಲಿಂಗ್ ಮಾಡುವುದು ಬಹಳ ಕಷ್ಟ. ಏಕೆಂದರೆ ಆರಂಭದ ವಿನ್ಯಾಸ ರಚನೆಯಲ್ಲಿ ಇದನ್ನು ವಾಣಿಜ್ಯೋದ್ದೇಶಕ್ಕಾಗಿ ನಿರ್ಮಿಸಿರದ ಕಾರಣ ಪ್ರಸರಣ ಪ್ರೋಟೋಕಾಲ್‍ಗಳಲ್ಲಿ ಬಿಲ್ಲಿಂಗ್ ವ್ಯವಸ್ಥೆಯನ್ನು ಅಳವಡಿಸಿರುವುದಿಲ್ಲ. ಎರಡನೆಯದು, ದತ್ತಾಂಶ ಪೊಟ್ಟಣಗಳನ್ನು ಇಂಟರ್‌ನೆಟ್‌ ಮೂಲಕ ಕಳುಹಿಸುವಾಗ ಗೌಪ್ಯತೆಯ ಕೊರತೆಯಿಂದಾಗಿ, ಸರ್ಕಾರಗಳು ಅದರಲ್ಲೂ ಅಮೇರಿಕಾ ಸರ್ಕಾರ ಇಂಟರ್‌ನೆಟ್‌ ಟ್ರಾಫಿಕ್ ಮೇಲೆ ಬೇಹುಗಾರಿಕೆ ನಡೆಸುವುದು ಬಹಳ ಸುಲಭವಾಗಿದೆ.

‘ಜಾಲದಲ್ಲಿ ಸಮಾನತೆಗಾಗಿ’ ಯುದ್ದಗಳು

ಇಂಟರ್‌ನೆಟ್‌ ಕಂಪನಿಗಳು ಹಸುಳೆಗಳಾಗಿದ್ದಾಗ ಟೆಲಿಕಾಂ ಕಂಪನಿಗಳು ದೈತ್ಯ ಉರಗಗಳಾಗಿದ್ದವು. ಟೆಲಿಕಾಂ ಕಂಪನಿಗಳ ಮೂಲಸೌಲಭ್ಯದ ಮೂಲಕವೇ ಇಂಟರ್‌ನೆಟ್‌ ಕಂಪನಿಗಳು ಮತ್ತು ಬಳಕೆದಾರರು ಸಂಪರ್ಕ ಸಾಧಿಸಬೇಕಿತ್ತು! ಯಾರಾದರೂ ದತ್ತಾಂಶವನ್ನು ಜಾಲತಾಣದಲ್ಲಿ net-neutrality3ಅಪ್‍ಲೋಡ್ ಮಾಡಲಿ ಅಥವಾ ಸರ್ವರ್‍ನಲ್ಲಿ ಸಂಗ್ರಹಿಸಿಡಲಿ ಅಥವಾ ಇನ್ನಾರೊಬ್ಬರು ಅದನ್ನು ವೀಕ್ಷಿಸಲಿ, ಅವೆಲ್ಲವೂ ಟೆಲಿಕಾಂ ಜಾಲಗಳ ಮೂಲಕವೇ ಸಾಗಿ ಹೋಗಬೇಕು. ಇಂಥಹ ಸಂದರ್ಭದಲ್ಲಿ, ಟೆಲಿಕಾಂ ಕಂಪನಿಗಳು ಗೇಟ್ ಕೀಪರ್ ಕೆಲಸ ಮಾಡುವುದರಿಂದ ಇಂಟರ್‌ನೆಟ್‌ ಕಂಪನಿಗಳಿಂದ ಅಥವಾ ಗ್ರಾಹಕರಿಂದ ಪ್ರವೇಶ ತೆರಿಗೆಯನ್ನು ಅವು ವಿಧಿಸುತ್ತವೆ.

‘ಜಾಲದಲ್ಲಿ ಸಮಾನತೆ’ ಎಂಬ ಪದವನ್ನು ಬಳಕೆಗೆ ತಂದದ್ದು ಕೊಲಂಬಿಯಾ ಕಾನೂನು ವಿಶ್ವವಿದ್ಯಾಲಯದ ಪ್ರೊ. ಟಿಮ್ ವೂ. ಅವರು ಹೇಳುವಂತೆ “ಇಂಟರ್‌ನೆಟ್‌‍ನ ಅಸಲಿ ವಿನ್ಯಾಸದ ಪ್ರಮುಖ ಅಂಶವೆಂದರೆ ಹಲವು ಬೆಲೆಗಳನ್ನು ಪುಕ್ಕಟೆ ನೀಡುವುದು-ಅಂದರೆ ಶೂನ್ಯ-ಬೆಲೆಯ ನಿಯಮಗಳು. ಉಚಿತವಾಗಿ ಜಾಲಕ್ಕೆ ಸೇರ್ಪಡೆಯಾಗುವುದು. ಬಳಕೆದಾರರು ಮತ್ತು ಜಾಲತಾಣಗಳು ಪರಸ್ಪರರಿಗೆ ನೀಡುವ ಬೆಲೆ ಶೂನ್ಯ. ಬ್ಲಾಗರ್ ಒಬ್ಬ ಕಾಮ್‍ಕ್ಯಾಸ್ಟ್‍ನ ಗ್ರಾಹಕರನ್ನು ತಲುಪಲು ನೀಡುವ ಬೆಲೆ ಶೂನ್ಯ. ಬ್ರ್ಯಾಡ್‍ಬ್ಯಾಂಡ್ ಆಪರೇಟರ್‍ಗಳು ತಮ್ಮ ಮಾಹಿತಿಯನ್ನು ಸಾಗಿಸಲು ದೊಡ್ಡ ಜಾಲ ತಾಣಗಳು ವಿಧಿಸುವ ಶುಲ್ಕ ಶೂನ್ಯ.“ ಇದರಿಂದಾಗಿ ಇಂಟರ್‌ನೆಟ್‌ ತಾರತಮ್ಯ-ರಹಿತ ತತ್ವದ ಆಧಾರದಲ್ಲಿದ್ದು, ಶ್ರೀಮಂತ ಕಂಪನಿಗಳು ಮಾಡುವಂತೆಯೇ ಅತ್ಯಂತ ಕಡಿಮೆ ಸಂಪನ್ಮೂಲ ಹೊಂದಿರುವ ಯಾವುದೇ ಗುಂಪು ಅಥವಾ ವ್ಯಕ್ತಿಯು ಸಹ ಜಾಲತಾಣಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಸೃಜಿಸಬಹುದು.

ಅಮೇರಿಕಾದಲ್ಲಿ ಆರಂಭವಾದ ‘ಜಾಲದಲ್ಲಿ ಸಮಾನತೆಯ’ ಯುದ್ದ:

ಅಮೇರಿಕಾದ 1996ರ ಸಂವಹನ ಕಾಯಿದೆಯಲ್ಲಿ ಕೆಲವು ವೈಚಿತ್ರ್ಯಗಳಿವೆ. ಈ ಕಾಯಿದೆಯಡಿ ಎರಡು ಗುಂಪಿನ ಸೇವೆಗಳನ್ನು ವ್ಯಾಖ್ಯಾನಿಸಲಾಗಿದೆ. ಮೊದಲನೇ ಗುಂಪಿನಲ್ಲಿ ಮಾಹಿತಿ ಸೇವೆಗಳನ್ನು ಸೇರಿಸಲಾಗಿದ್ದು, ಇವು ಕಡಿಮೆ ನಿಯಂತ್ರಣ ಹೊಂದಿವೆ. ಎರಡನೇ ಗುಂಪಿನಲ್ಲಿ ದೂರಸಂಪರ್ಕ ಸಂವಹನ ಸೇವೆಗಳನ್ನು ಸೇರಿಸಲಾಗಿದ್ದು, ಇವು ಕಟ್ಟುನಿಟ್ಟಿನ ನಿಯಂತ್ರಣಕ್ಕೊಳಪಟ್ಟಿವೆ. ಆರಂಭದಲ್ಲಿ ಹಾಲಿಯಿರುವ ದೂರವಾಣಿ ಲೈನುಗಳ ಮೂಲಕ ಟೆಲಿಕಾಂ ಕಂಪನಿಗಳು ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳನ್ನು ದೂರಸಂಪರ್ಕ ಸಂವಹನ ಸೇವೆಗಳೆಂದು ಎರಡನೇ ಗುಂಪಿಗೆ ಸೇರಿಸಲಾಗಿತ್ತು. ನಂತರದಲ್ಲಿ ಕೇಬಲ್ ಟಿವಿ ಕಂಪನಿಗಳೂ ಕೂಡ ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಒದಗಿಸತೊಡಗಿ ತಮ್ಮ ಸೇವೆಗಳನ್ನು ಮಾಹಿತಿ ಸೇವೆಗಳೆಂದು ಮೊದಲನೇ ಗುಂಪಿಗೆ ಸೇರಿಸಬೇಕೆಂದು ಕೇಳಿಕೊಂಡವು. 2003ರಲ್ಲಿ, ಅಮೇರಿಕಾದ ಸಂವಹನ ಮತ್ತು ಟೆಲಿಕಾಂ ನಿಯಂತ್ರಣ ಸಂಸ್ಥೆಯಾದ ಫೆಡರಲ್ ಸಂವಹನ ಆಯೋಗವು ಇದಕ್ಕೆ ಒಪ್ಪಿಗೆ ನೀಡಿ ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಮಾಹಿತಿ ಸೇವೆಗಳೆಂದು ವರ್ಗೀಕರಿಸಿತು. 2005ರಲ್ಲಿ, ಈ ಆಯೋಗವು ತಂತು ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಸಹ ಮಾಹಿತಿ ಸೇವೆಗಳೆಂದು ವರ್ಗೀಕರಿಸಿತು. ಇವೆರಡು ನಿರ್ಧಾರಗಳಿಂದ ಜಾಲದಲ್ಲಿ ಸಮಾನತೆಗಾಗಿ ಕಾದಾಡುವ ಪರಿಸ್ಥಿತಿಯುಂಟಾಯಿತು.

ಇದೀಗ ಟೆಲಿಕಾಂ ಕಂಪನಿಗಳು ಮತ್ತು ಕೇಬಲ್ ಕಂಪನಿಗಳು ನಿಯಂತ್ರಣದಿಂದ ಜಾರಿಕೊಂಡು ತಾವು ಇಂಟರ್‌ನೆಟ್‌ ಸೌಲಭ್ಯ ಒದಗಿಸುವಾಗ ತಾರತಮ್ಯ-ರಹಿತವಾಗಿ ಇರಬೇಕಿಲ್ಲ ಎಂದು ವಾದಿಸಿದವು. ಈ ಕಾಯಿದೆಗೆ ಟೆಲಿಕಾಂ ದೈತ್ಯ ಕಂಪನಿಗಳಾದ ಎಟಿ&ಟಿ, ವೆರಿಜಾನ್ ಮತ್ತು ಕಾಮ್ ಕ್ಯಾಸ್ಟ್ ಗಳು ಬೆಂಬಲ ನೀಡಿದ ಪರಿಣಾಮವಾಗಿ ಇಂಟರ್‌ನೆಟ್‌ ಹೆದ್ದಾರಿಯಲ್ಲಿ ಹಲವು ಆನ್ ಲೈನ್ ಸೇವೆಗಳಿಗೆ ಬೆಲೆ ನಿಗಧಿಪಡಿಸಿ ಲಾಭಗಳಿಸಲಾರಂಭಿಸಿದವು. ಅದರ ಆಧಾರದ ಮೇಲೆ ಯಾವುದಕ್ಕೆ ಎಷ್ಟು ಆದ್ಯತೆ ನೀಡಬೇಕೆಂದು ತೀರ್ಮಾನಿಸುವ ಗೇಟ್ ಕೀಪರ್ ಕೆಲಸ ಶುರು ಮಾಡಿದವು.

ನಾನಾ ಮೂಲೆಗಳಿಂದ ನೆಟ್ ಬಳಕೆದಾರರು ಒತ್ತಡ ತರಲಾರಂಭಿಸಿದ್ದರಿಂದ, 2015ರ ಫೆಬ್ರುವರಿಯಲ್ಲಿ ಅಮೇರಿಕಾದ ಅಧ್ಯಕ್ಷ ಒಬಾಮ ಮಧ್ಯಪ್ರವೇಶಿಸಬೇಕಾಯಿತು. ಕೊನೆಗೆ ಫೆಡರಲ್ ಸಂವಹನ ಆಯೋಗವು ಬ್ರ್ಯಾಡ್‍ಬ್ಯಾಂಡ್ ಸೇವೆಗಳನ್ನು ಮತ್ತೆ ಟೆಲಿಕಾಂ ಸೇವೆಗಳೆಂದು ಪುನರ್-ವರ್ಗೀಕರಿಸಿ ಜಾಲದಲ್ಲಿ ಸಮಾನತೆಯನ್ನು ಗಟ್ಟಿಗೊಳಿಸಿತು.

ಇಂಟರ್‌ನೆಟ್‌ – ಟೆಲಿಕಾಂ ಕಂಪನಿಗಳ ಐಕ್ಯಕೂಟ:

ಜಾಲದಲ್ಲಿ ಸಮಾನತೆಯನ್ನು ತೆಗೆದುಹಾಕಲು ಟೆಲಿಕಾಂ ಕಂಪನಿಗಳು ಇನ್ನೂ ಯತ್ನಿಸುತ್ತಿವೆ. ಪ್ರತಿ ದೇಶದಲ್ಲೂ ಪ್ರತಿ ವಲಯದಲ್ಲೂ ಅವು ಜಾಲದಲ್ಲಿನ ಸಮಾನತೆಯನ್ನು ಕಿತ್ತೊಗೆಯಲು ಹಣಾಹಣಿ ನಡೆಸಿವೆ. ಟೆಲಿಕಾಂ ಕಂಪನಿಗಳು ಆಯೋಗದ ತೀರ್ಮಾನವನ್ನು ಬುಡಮೇಲು ಮಾಡಲು ಅಮೇರಿಕಾದ ಸಂಸತ್ತಿನಲ್ಲಿ ಲಾಬಿ ನಡೆಸಿವೆ.

ಜಾಲದಲ್ಲಿ ಸಮಾನತೆಯ ಯುದ್ದದ ಮೊದಲ ಹಂತದಲ್ಲಿ ಟೆಲಿಕಾಂ ಕಂಪನಿಗಳು ಸಣ್ಣ ಇಂಟರ್‌ನೆಟ್‌ ಕಂಪನಿಗಳು ಮತ್ತು ನೆಟ್ ಬಳಕೆದಾರರ ವಿರುದ್ದ ನಿಂತಿದ್ದವು. ಇಂದು ಜಾಗತಿಕ ಇಂಟರ್‌ನೆಟ್‌ ಕಂಪನಿಗಳು ಮಾರುಕಟ್ಟೆ ಮೌಲ್ಯದಲ್ಲಿ ಹೇಳುವುದಾದರೆ ಟೆಲಿಕಾಂ ಕಂಪನಿಗಳಿಗಿಂತ ದೊಡ್ಡದಾಗಿವೆ. ಟಾಪ್ 5 ಇಂಟರ್‌ನೆಟ್‌ ಕಂಪನಿಗಳ (ಗೂಗಲ್, ಫೇಸ್ ಬುಕ್, ಅಮೆಜಾನ್, ಟೆನ್ಸೆಂಟ್, ಬೈಡು) ಮಾರುಕಟ್ಟೆ ಮೌಲ್ಯ 2014ರಲ್ಲಿ ಸುಮಾರು ರೂ. 58,69,500 ಕೋಟಿ ಗಳಿದ್ದರೆ, ಟಾಪ್ 5 ಟೆಲಿಕಾಂ ಕಂಪನಿಗಳ (ಚೈನಾ ಮೊಬೈಲ್, ವೆರಿಜಾನ್, ಎಟಿ&ಟಿ, ವೊಡಾಫೋನ್ & ಸಾಫ್ಟ್ ಬ್ಯಾಂಕ್) ಮಾರುಕಟ್ಟೆ ಮೌಲ್ಯ ರೂ. 53,43,000 ಕೋಟಿ ಗಳಷ್ಟಿದೆ. ಇದರಿಂದ ಇಂಟರ್‌ನೆಟ್‌ ಕಂಪನಿಗಳು ಇಂದು ಟೆಲಿಕಾಂ ಕಂಪನಿಗಳ ಮರ್ಜಿಯಲ್ಲೇನೂ ಇಲ್ಲವೆಂಬುದು ತಿಳಿಯುತ್ತದೆ.

ಟಾಪ್ 5 ಇಂಟರ್‌ನೆಟ್‌ ಕಂಪನಿಗಳು ಮತ್ತು ಟೆಲಿಕಾಂ ಕಂಪನಿಗಳ ನಡುವಣ ಹೋಲಿಕೆ:
net-neutrality-statistics

ಲಾಭಕ್ಕಾಗಿ ಪೈಪೋಟಿ:

ಇಂಟರ್‌ನೆಟ್‌ ಕಂಪನಿಗಳು ತಮ್ಮ ಆರಂಭಿಕ ಷೇರುಗಳ ವಿಕ್ರಯದಿಂದ (ಐಪಿಒ) ದೊಡ್ಡ ಮೊತ್ತದ ಹಣವನ್ನು ಮಾರುಕಟ್ಟೆಯಲ್ಲಿ ಸಂಗ್ರಹಿಸುತ್ತಿವೆ. ಇಂಟರ್‌ನೆಟ್‌ ಕಂಪನಿಗಳ ಈ ಅಚಾನಕ್ ಬೆಳವಣಿಗೆಯನ್ನು ಕಂಡು ಪೈಪೋಟಿಗೆ ಬಿದ್ದಂತೆ ಟೆಲಿಕಾಂ ಕಂಪನಿಗಳು ಕೂಡ ಲಾಭಕ್ಕಾಗಿ ಯಾವ ಸೇವೆಯನ್ನು ಮತ್ತಷ್ಟು ಸರಕನ್ನಾಗಿಸಬಹುದೆಂದು ಹವಣಿಸುತ್ತಿವೆ.

ಅಮೇರಿಕದಲ್ಲಿಯಾಗಲೀ, ಅಥವಾ ಭಾರತದಲ್ಲಿಯಾಗಲೀ ಟೆಲಿಕಾಂ ಕಂಪನಿಗಳು ಕಷ್ಟವನ್ನೇನು ಅನುಭವಿಸುತ್ತಿಲ್ಲ. ಅವುಗಳು ಆರೋಗ್ಯಕರ ಬೆಳವಣಿಗೆಯನ್ನು ಕಾಣುತ್ತಾ ಬಂದಿವೆ. ಮೂಲಸೌಲಭ್ಯ ಈಗಾಗಲೇ ವೃದ್ದಿಯಾಗಿರುವ ಅಮೇರಿಕಾದಲ್ಲಿ ಅವುಗಳ ಲಾಭ ಶೇ. 90 ರಷ್ಟಿದ್ದರೆ, ಇದೀಗಷ್ಟೇ ಬೆಳವಣಿಗೆಯಾಗುತ್ತಿರುವ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ತಮ್ಮ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳ ಮೂಲಕ ಶೇ. 100 ರಷ್ಟು ಲಾಭ ಗಳಿಸುತ್ತಿವೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ದೊಡ್ಡ ಇಂಟರ್‌ನೆಟ್‌ ಕಂಪನಿಗಳ ಏಳಿಗೆಯಿಂದಾಗಿ ಟೆಲಿಕಾಂ ಕಂಪನಿಗಳು ಮತ್ತು ನೆಟ್ ಕಂಪನಿಗಳ ನಡುವೆ ಐಕ್ಯಕೂಟ (ಕಾರ್ಟೆಲ್) ಏರ್ಪಡುವ ಸ್ಥಿತಿಯುಂಟಾಗಿದೆ. ಇದರಿಂದಾಗಿ ಸಣ್ಣ ನೆಟ್ ಕಂಪನಿಗಳು ಮಾರುಕಟ್ಟೆಯಿಂದ ಹೊರದಬ್ಬಲ್ಪಟ್ಟು, ಗ್ರಾಹಕರು ದೊಡ್ಡ ನೆಟ್ ಕಂಪನಿಗಳು ಒದಗಿಸುವ ಕೆಲವೇ ಕೆಲವು ನೆಟ್ ಸೇವೆಗಳೊಂದಿಗೆ ಲಾಕ್ ಆಗಬೇಕಾಗುತ್ತದೆ. ದೊಡ್ಡ ಇಂಟರ್‌ನೆಟ್‌ ಕಂಪನಿಗಳ ಜೊತೆ ಕೈಜೋಡಿಸಿದರೆ ಟೆಲಿಕಾಂ ಕಂಪನಿಗಳಿಗೆ ಎರಡು ರೀತಿಯ ಲಾಭವಿದೆ. ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರ ನೆಲೆಯನ್ನು ನೆಟ್ ಕಂಪನಿಗಳಿಗೆ ನೀಡಬಹುದು, ಅದೇ ವೇಳೆ, ನೆಟ್ ಕಂಪನಿಗಳು ತಮ್ಮ ಬಳಕೆದಾರರನ್ನು ಜಾಹೀರಾತುದಾರರಿಗೆ ನೀಡಬಹುದು. ಅಲ್ಲದೆ ಟೆಲಿಕಾಂ ಕಂಪನಿಗಳು ಒಂದೇ ಹೊಡೆತಕ್ಕೆ ಜಾಲದಲ್ಲಿ ಸಮಾನತೆಯನ್ನು ಹೊಡೆದುರುಳಿಸಬಹುದು. ಆಗ ಪ್ರತಿಯೊಂದು ಇಂಟರ್‌ನೆಟ್‌ ಸೇವೆಗಳಿಗೆ ಟಾಲ್ ಗೇಟ್ ಹಾಕಿ ಹಣ ಸಂಗ್ರಹಿಸಲು ಸುಲಭಸಾಧ್ಯವಾಗುತ್ತದೆ. ಏಕೆಂದರೆ ಟೆಲಿಕಾಂ ಕಂಪನಿಗಳಿಗೆ ಹಣ ನೀಡುವ ವೆಬ್ ಸೈಟ್‍ಗಳು ಮಾತ್ರ ಬಳಕೆದಾರರಿಗೆ ಲಭ್ಯವಾಗುತ್ತವೆ; ಹಣ ನೀಡದೇ ಇದ್ದಲ್ಲಿ ಅವುಗಳು ಬಹಳ ನಿಧಾನವಾಗಿ ಲೋಡ್ ಆಗುತ್ತವೆ, ಹಾಗೆಯೇ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಎದುರಿಸಲಾರದೇ ಅಳಿಯುತ್ತವೆ. ಇದರಿಂದ ಇಂಟರ್‌ನೆಟ್‌ ನ ಪ್ರಜಾಸತ್ತಾತ್ಮಕ ಸಾಮಥ್ರ್ಯದ ಕೊನೆಯ ಬಳಕೆಯೂ ಅಂತ್ಯಗೊಳ್ಳುತ್ತದೆ.

ಜಾಲದಲ್ಲಿ ಸಮಾನತೆಯ ಯುದ್ದದ ಸ್ವರೂಪವೂ ಬದಲಾಗುತ್ತಿದೆ. ಉದಾಹರಣೆಗೆ, ಟೆಲಿಕಾಂ ಕಂಪನಿಗಳು ತಮ್ಮ ಜಾಲದ ಮೂಲಕ ನೀಡುತ್ತಿರುವ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳನ್ನು ಇಂಟರ್‌ನೆಟ್‌ ಕಂಪನಿಗಳೂ ಕೂಡ ಇಂಟರ್‌ನೆಟ್‌ ಮೂಲಕ ನೀಡಬಹುದು. ನೇರವಾಗಿ ಕರೆಮಾಡಿ ಮಾತನಾಡುವುದಕ್ಕೆ ತೆರಬೇಕಾದ ಬೆಲೆಗಿಂತ ಸ್ಕೈಪ್ ನಂಥಹ ಇಂಟರ್‌ನೆಟ್‌ ಸೇವೆಯ ಮೂಲಕ ಕರೆ ಮಾಡುವುದಕ್ಕೆ ತೆರಬೇಕಾದ ಬೆಲೆ ಬಹಳ ಕಡಿಮೆ. ಇದು ಮತ್ತೊಂದು ರೀತಿಯ ಸಮಾನತೆಯ ಯುದ್ದಕ್ಕೆ ಕಾರಣವಾಗಿದೆ.

ಭಾರತದಲ್ಲಿ ಜಾಲದಲ್ಲಿ ಸಮಾನತೆ ಕುರಿತ ಪರಿಸ್ಥಿತಿ:

ಸ್ಪರ್ಧಾತ್ಮಕ ವ್ಯವಹಾರ ಆಯೋಗವು ಜಾಲದಲ್ಲಿ ಸಮಾನತೆಯನ್ನು ಭಾರತೀಯ ಟೆಲಿಕಾಂ ಆಪರೇಟರ್ ಗಳು ಉಲ್ಲಂಘಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿತ್ತು. ಅದೇ ಸಮಯದಲ್ಲಿ ದುರದೃಷ್ಟವಶಾತ್, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ “ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್‌ನೆಟ್‌ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಟ್ರಾಯ್ ಸಂಸ್ಥೆಯ ವಾದವನ್ನೇನಾದರೂ ಒಪ್ಪಿಕೊಂಡಲ್ಲಿ ಇಂಟರ್‌ನೆಟ್‌ ಬಳಸಿಕೊಂಡು ನಡೆಯುತ್ತಿರುವ ಯಾವುದೇ ವ್ಯಾಪಾರ – ಇ-ರಿಟೈಲ್, ಮಾಧ್ಯಮ ಅಥವಾ ಆರೋಗ್ಯ ರಕ್ಷಣೆ – ಗಳನ್ನು ಅದೊಂದು ಹೆಚ್ಚುವರಿ ಸೇವೆಗಳು (ಒಟಿಟಿ) ಎಂದು ಟ್ರಾಯ್ ನಿಯಂತ್ರಿಸತೊಡಗಬೇಕಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಸಾಧಿಸುವ ಹೆಜ್ಜೆಯಾಗಿದೆ. ಒಟಿಟಿ ಸೇವೆಗಳಿಗೆ ಉದಾಹರಣೆ: ವಾಟ್ಸ್ ಆಪ್, ವೈಬರ್, ಸ್ಕೈಪ್, ಒಲಾ, ಇತ್ಯಾದಿ..

ಇಂಟರ್‌ನೆಟ್‌ ಸೇವಾ ಪೂರೈಕೆದಾರರು (ಐಎಸ್‍ಪಿ) ದತ್ತಾಂಶ ಸೇವೆಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಪರವಾನಗಿ ಹೊಂದಿರುತ್ತಾರೆ. ಈ ಸಂಸ್ಥೆಗಳು ಬಳಕೆದಾರರ ಕಂಪ್ಯೂಟರುಗಳಿಂದ ಉತ್ಪತ್ತಿಯಾಗುವ ದತ್ತಾಂಶ ಪೊಟ್ಟಣಗಳನ್ನು ಸಾಗಿಸುತ್ತವೆ. ಈ ಪೊಟ್ಟಣಗಳಲ್ಲಿರುವುದನ್ನೇ ಕಂಟೆಂಟ್ ಎಂದು ಪರಿಗಣಿಸಲಾಗುತ್ತದೆ – ವೀಡಿಯೋ, ಆಡಿಯೋ, ಅಕ್ಷರ, ಅಥವಾ ಬರೀ ದತ್ತಾಂಶ – ಹಾಗೂ ಇವುಗಳು ಟೆಲಿಕಾಂ ನಿಯಂತ್ರಣಕ್ಕೊಳಪಡುವುದಿಲ್ಲ. ಅದರಿಂದಾಗಿಯೇ ನಾವು ವೆಬ್ ಸೈಟ್ ಸೃಷ್ಟಿಸಲು, ಇಂಟರ್‌ನೆಟ್‌ ಮೇಲೆ ಸೇವೆ ಒದಗಿಸಲು, ಅಥವಾ ಟ್ಯಾಬ್ಲೆಟ್, ಮೊಬೈಲ್ ಪೋನ್ ಅಥವಾ ಕಂಪ್ಯೂಟರಿನ ಮೇಲೆ ಅಪ್ಲಿಕೇಷನ್ ಬಳಸಲು ಪರವಾನಗಿ ಪಡೆಯುವುದಿಲ್ಲ. ಏಕೆಂದರೆ ಇವೆಲ್ಲ ಟೆಲಿಕಾಂ ಸೇವೆಗಳಾಗಿರದೇ, ಕೇವಲ ಕಂಟೆಂಟ್ (ದತ್ತಾಂಶ ಮಾಹಿತಿ) ಆಗಿರುತ್ತವೆ. ಈ ಪರಿಸ್ಥಿತಿಯು ಒಟಿಟಿ ಸೇವೆಗಳ ಕುರಿತು ಟ್ರಾಯ್ ಸಂಸ್ಥೆಯು ಮಾಡಿರುವ ವ್ಯಾಖ್ಯಾನವನ್ನು ಒಪ್ಪಿಕೊಂಡರೆ ಪೂರ್ಣ ಬದಲಾಗುತ್ತದೆ. ಇಂಟರ್‌ನೆಟ್‌ ಬಳಸುವ ಯಾವುದೇ ಒಂದು ಅಪ್ಲಿಕೇಷನ್ ಅಥವಾ ಸೇವೆಯನ್ನು ಒಟಿಟಿ ಎಂದು ವ್ಯಾಖ್ಯಾನಿಸಿದಾಗ ಅದು ಟ್ರಾಯ್ ನಿಯಂತ್ರಣಕ್ಕೊಳಪಡುತ್ತದೆ.

ಹೀಗೆ, ಟ್ರಾಯ್ ಸಂಸ್ಥೆಯು ಟೆಲಿಕಾಂ ಸೇವೆಗಳಾದ ಮೂಲ ಸೇವೆಗಳು (ಧ್ವನಿ ಮತ್ತು ಎಸ್.ಎಂ.ಎಸ್) ಮತ್ತು ಮೌಲ್ಯ ವರ್ಧಿತ ಸೇವೆಗಳು (ದತ್ತಾಂಶ ಅಥವಾ ಇಂಟರ್‌ನೆಟ್‌) – ಇವುಗಳನ್ನು ನಿಯಂತ್ರಿಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸದೇ, ದತ್ತಾಂಶ ಅಥವಾ ಇಂಟರ್‌ನೆಟ್‌ ನ ವ್ಯಾಖ್ಯಾನವನ್ನು ಹೆಚ್ಚುವರಿ (ಒಟಿಟಿ) ಸೇವೆಗಳೆಂದು ಮಾರ್ಪಾಟು ಮಾಡುವ ಮೂಲಕ ಎಲ್ಲ ಇಂಟರ್‌ನೆಟ್‌ ಆಧಾರಿತ ಸೇವೆಗಳನ್ನು ತನ್ನ ವ್ಯಾಪ್ತಿಗೆ ತಂದು ನಿಯಂತ್ರಿಸಲು ಹವಣಿಸುತ್ತಿದೆ. ಪ್ರತಿಯೊಂದು ನೆಟ್ ಸೇವೆಯನ್ನು ಹೆಚ್ಚುವರಿ (ಒಟಿಟಿ) ಸೇವೆಗಳೆಂದು ದರ ನಿಗಧಿ ಮಾಡುವ ಪ್ರಯತ್ನಗಳು ನಡೆದಿವೆ.

ನಿಯಂತ್ರಣ ಪಡಿಸುವ ಉದ್ದೇಶದಿಂದ ಇಂಟರ್‌ನೆಟ್‌ ಮೇಲೆ ಒದಗಿಸಲಾಗುವ ವಿವಿಧ ಅಪ್ಲಿಕೇಷನ್‍ಗಳು ಮತ್ತು ಸೇವೆಗಳ ನಡುವೆ ವ್ಯತ್ಯಾಸ ಗುರುತಿಸಲು ಆರಂಭಿಸಿದಲ್ಲಿ ಸಮಸ್ಯೆಗಳ ಪೆಟ್ಟಿಗೆಯನ್ನೇ ತೆರೆದಂತೆಯೇ. ಇದರಿಂದ ಟ್ರಾಯ್ ಸಂಸ್ಥೆಯು ಕೆಲವೇ ಕೆಲವು ಸೇವೆಗಳಿಗೆ ಪರವಾನಗಿ ನೀಡಬಹುದು. ಉದಾಹರಣೆಗೆ, ಮುಂದೊಮ್ಮೆ ಟ್ರಾಯ್ ಸಂಸ್ಥೆಯು ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ತಮ್ಮ ಆನ್ ಲೈನ್ ಸೇವೆಗಳಿಗೆ ತನ್ನಿಂದ ಪರವಾನಗಿ ಪಡೆಯಬೇಕು ಎಂದು ನಿಲುವು ತಳೆಯಬಹುದು. ಪ್ರಸ್ತುತ ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ಉಚಿತವಾಗಿ ಧ್ವನಿ ಮತ್ತು ಎಸ್.ಎಂ.ಎಸ್ ಸೌಲಭ್ಯವನ್ನು ಒದಗಿಸುತ್ತಿದ್ದು, ಟೆಲಿಕಾಂ ಕಂಪನಿಗಳು ಈ ಸೌಲಭ್ಯಕ್ಕೆ ಅಧಿಕ ದರ ವಿಧಿಸುತ್ತಿವೆ.

ಅಂತರ್ಜಾಲವನ್ನು ಹಲವು ಸೇವೆಗಳ ಗೊಂಚಲು (ಒಟಿಟಿ) ಎಂದು ವ್ಯಾಖ್ಯಾನಿಸಿ ಅವುಗಳಿಗೆ ಪರವಾನಗಿ ಪಡೆಯಬೇಕು ಎಂದು ನಿರ್ಧರಿಸುವುದರಿಂದ ಅಂತರ್ಜಾಲವು ತನ್ನ ಈಗಿರುವ ತೆರೆದ ಸ್ವರೂಪದಿಂದ ಮುಚ್ಚಿದ ಸ್ವರೂಪಕ್ಕೆ ಬರುತ್ತದೆ. ಇಂಟರ್‌ನೆಟ್‌ ಬೆಳೆದಿರುವುದೇ ತನ್ನ ತೆರೆದ ಗುಣದಿಂದಾಗಿ, ಪರವಾನಗಿಯಿಲ್ಲದ ಆವಿಷ್ಕಾರದಿಂದಾಗಿ.

ವಿಶ್ವದಾದ್ಯಂತ ಇಂಟರ್‌ನೆಟ್‌ ಕಂಪನಿಗಳು ದಿಢೀರ್ ಲಾಭಗಳಿಸಿ ದೈತ್ಯರೂಪದಲ್ಲಿ ಬೆಳೆಯುತ್ತಿರುವುದನ್ನು ಟೆಲಿಕಾಂ ಕಂಪನಿಗಳು ತಮ್ಮ ಕಾಮಾಲೆ ಕಣ್ಣುಗಳಿಂದ ನೋಡುತ್ತಿವೆ. ದೂರಸಂಪರ್ಕ ಸೌಲಭ್ಯ ಒದಗಿಸಲು ತಾವು ಮೂಲಸೌಲಭ್ಯವನ್ನು ನಿರ್ಮಿಸಿರುವುದರಿಂದ ತಮಗೂ ಇಂಟರ್‌ನೆಟ್‌ ಸೇವೆಗಳಲ್ಲಿ ಪಾಲು ಬೇಕೆಂದು, ಇಲ್ಲದಿದ್ದಲ್ಲಿ ತಾವು ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಕಷ್ಟವೆಂದು ವಾದಿಸುತ್ತಿವೆ. ಆದರೆ ಇದೇ ಟೆಲಿಕಾಂ ಕಂಪನಿಗಳು ಅವು ಪ್ರಸ್ತುತ ಒದಗಿಸುತ್ತಿರುವ ಧ್ವನಿ ಮತ್ತು ಎಸ್.ಎಂ.ಎಸ್ ಸೇವೆಗಳಲ್ಲಿ ನಷ್ಟವಾಗುತ್ತಿರುವುದರಿಂದ ಇನ್ನಷ್ಟು ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ, ಪ್ರಸ್ತುತ ಸೇವೆಗಳಿಂದಲೇ ಅವು ಸಿಕ್ಕಾ ಪಟ್ಟೆ ಲಾಭಗಳಿಸುತ್ತಿವೆ, ಆದರೆ ಇನ್ನಷ್ಟು ಲಾಭಕ್ಕಾಗಿ ಹವಣಿಸುತ್ತಿವೆ.

ಜಾಲದಲ್ಲಿ ಸಮಾನತೆ ಕುಸಿದುಬಿದ್ದರೆ, ಟೆಲಿಕಾಂ ಕಂಪನಿಗಳು ತಮ್ಮ ಮೂಲಸೌಲಭ್ಯ ಮತ್ತು ಬ್ಯಾಂಡ್ ವಿಡ್ತ್ ಗಳನ್ನು ವಿಸ್ತರಿಸುವ ಗೋಜಿಗೆ ಹೋಗುವುದಿಲ್ಲ. ಬ್ಯಾಂಡ್ ವಿಡ್ತ್ ವಿಸ್ತರಣೆಯಾಗದೇ ಹೋದರೆ, ದತ್ತಾಂಶಗಳ ಹರಿವಿಗೆ ಅಡೆತಡೆಯಾಗುತ್ತದೆ, ದೊಡ್ಡ ಇಂಟರ್‌ನೆಟ್‌ ಕಂಪನಿಗಳು ತಮ್ಮ ದತ್ತಾಂಶ ಪೊಟ್ಟಣಗಳನ್ನು ವೇಗವಾಗಿ ರವಾನಿಸಲು ಟೆಲಿಕಾಂ ಕಂಪನಿಗಳಿಗೆ ಹೆಚ್ಚುವರಿ ಹಣ ನೀಡುತ್ತವೆ. ಹಾಗಾಗಿ, ಜಾಲದಲ್ಲಿ ಸಮಾನತೆಯು ಟೆಲಿಕಾಂ ಕಂಪನಿಗಳು ಮೂಲಸೌಲಭ್ಯ ವಿಸ್ತರಿಸಲು ಪ್ರೋತ್ಸಾಹ ನೀಡುತ್ತದೆ, ದತ್ತಾಂಶ ಟ್ರಾಫಿಕ್ ಸುಲಭವಾಗಿ ಹರಿಯಲು ದಾರಿ ಮಾಡುತ್ತದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್‌ನೆಟ್‌ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್‌ನೆಟ್‌ ಸೇವೆಗಳು ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.

******

ಪ್ರಶ್ನೋತ್ತರಗಳು:

1. ನೆಟ್ ನ್ಯೂಟ್ರಾಲಿಟಿ ಅಥವಾ ಜಾಲದಲ್ಲಿ ಸಮಾನತೆ ಎಂದರೇನು?
ಜಾಲದಲ್ಲಿ ಹರಿವ ದತ್ತಾಂಶದ ಮೂಲ, ಮಾಲೀಕತ್ವ, ಅಥವಾ ವಿಷಯಗಳ ಆಧಾರದ ಮೇಲೆ ವಿವಿಧ ವೆಬ್ ಸೈಟ್ ಗಳ ನಡುವೆ ತಾರತಮ್ಯ ಮಾಡಬಾರದು, ಎಲ್ಲ ವೆಬ್ ಸೈಟ್ ಗಳು ಒಂದೇ ವೇಗದಲ್ಲಿ ಡೌನ್ ಲೋಡ್ ಆಗಬೇಕು, ಎಲ್ಲ ಜಾಲತಾಣಗಳನ್ನು ಬಳಸಲು ಸಮಾನ ಅವಕಾಶ ಇರಬೇಕು & ಒಂದೇ ದತ್ತಾಂಶ ವೆಚ್ಚ ವಿಧಿಸಬೇಕು ಙಎಂಬುದೇ ‘ಜಾಲದಲ್ಲಿ ಸಮಾನತೆ’ ಯ ಪರಿಕಲ್ಪನೆ. ಅಂದರೆ, ಭೌತಿಕ ನೆಟ್‍ವರ್ಕ್‍ಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ನೆಟ್‍ವರ್ಕ್‍ಗಳ ಮೇಲೆ ಹರಿಯುವ ಇಂಟರ್‌ನೆಟ್‌ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು.

2. ಜಾಲದಲ್ಲಿ ಸಮಾನತೆ ಇದೀಗ ಸುದ್ದಿಯಲ್ಲಿರುವುದು ಏಕೆ?
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ “ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್‌ನೆಟ್‌ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಇದು ಸಾಕಷ್ಟು ವಿವಾದ ಸೃಷ್ಟಿಸಿದ್ದು ಚರ್ಚೆ ಹುಟ್ಟುಹಾಕಿದೆ.

3. ಹೆಚ್ಚುವರಿ ಸೇವೆಗಳು (ಒಟಿಟಿ) ಎಂದರೇನು?
ಟ್ರಾಯ್ ಸಂಸ್ಥೆಯ ವಾದವನ್ನೇನಾದರೂ ಒಪ್ಪಿಕೊಂಡಲ್ಲಿ ಇಂಟರ್‌ನೆಟ್‌ ಬಳಸಿಕೊಂಡು ನಡೆಯುತ್ತಿರುವ ಯಾವುದೇ ವ್ಯಾಪಾರ – ಇ-ರಿಟೈಲ್, ಮಾಧ್ಯಮ ಅಥವಾ ಆರೋಗ್ಯ ರಕ್ಷಣೆ – ಗಳನ್ನು ಅದೊಂದು ಹೆಚ್ಚುವರಿ ಸೇವೆಗಳು (ಒಟಿಟಿ) ಎಂದು ಟ್ರಾಯ್ ನಿಯಂತ್ರಿಸತೊಡಗಬೇಕಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಸಾಧಿಸಿ, ಇಂಟರ್‌ನೆಟ್‌ ನ್ನು ವ್ಯಾಪಾರೀಕರಣ ಮಾಡುವ ಹೆಜ್ಜೆಯಾಗಿದೆ. ಒಟಿಟಿ ಸೇವೆಗಳಿಗೆ ಉದಾಹರಣೆ: ವಾಟ್ಸ್ ಆಪ್, ಮೆಸ್ಸೆಂಜರ್, ವೈಬರ್, ಸ್ಕೈಪ್, ಒಲಾ, ಇತ್ಯಾದಿ..

4. ಜಾಲದಲ್ಲಿ ಸಮಾನತೆಯಿಂದ ಯಾರಿಗೆ ಲಾಭ?
ಜಾಲದಲ್ಲಿ ಸಮಾನತೆಯಿಂದ ಸರ್ವರಿಗೂ ಇಂಟರ್‌ನೆಟ್‌ ನ ಸೇವೆ ಯಾವುದೇ ದರದ ತಾರತಮ್ಯಗಳಿಲ್ಲದೇ ಲಭ್ಯವಾಗುತ್ತದೆ. ಇದು ಜನಸಾಮಾನ್ಯರಿಗೂ ನೆಟ್ ಬಳಕೆದಾರರಿಗೂ ಸಣ್ಣ ಮತ್ತು ಮಧ್ಯಮ ನೆಟ್ ಕಂಪನಿಗಳಿಗೂ ಅನುಕೂಲಕರ. ಜಾಲದಲ್ಲಿ ಸಮಾನತೆ ಇಲ್ಲದಿದ್ದಲ್ಲಿ, ಹೆಚ್ಚು ಲಾಭ ಮಾಡಲು ಅತಿದೊಡ್ಡ ಇಂಟರ್‌ನೆಟ್‌ ಮತ್ತು ಟೆಲಿಕಾಂ ಕಂಪನಿಗಳಿಗೆ ಅನುಕೂಲಕರ.

5. ಜಾಲದಲ್ಲಿ ಸಮಾನತೆಯ ಖಾತರಿಗಾಗಿ ನಾವೇನು ಮಾಡಬೇಕು?
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್‌ನೆಟ್‌ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್‌ನೆಟ್‌ ಸೇವೆಗಳು ಲಾಭಕೋರ ಕಂಪನಿಗಳ ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.