-ರವಿ ಕೃಷ್ಣಾರೆಡ್ಡಿ
ನಮ್ಮಲ್ಲಿ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಸ್ವಾತಂತ್ರ್ಯವಿದೆ. ಆದರೆ ಅವು ಸ್ವತಂತ್ರವಾಗಿಲ್ಲ.
ನಾನು ಕಳೆದ ವಾರ ಬರೆದ ಪತ್ರಕ್ಕೆ ಉತ್ತರವಾಗಿ ಸಂಪಾದಕೀಯ ಬಳಗ ಒಂದು ಪತ್ರ ಬರೆದಿತ್ತು. ಅದರಲ್ಲಿ “ಹೊಸ ದಿಗಂತ” ಪತ್ರಿಕೆಯ ಕುರಿತು ಹೀಗೆ ಬರೆಯಲಾಗಿತ್ತು:
“ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?”
ಇಂದು ಯಡ್ಡ್ಯೂರಪ್ಪನವರಿಗೆ ಜಾಮೀನು ಸಿಕ್ಕರೂ ಸಿಗಬಹುದು. ನಾಳೆ ಯಾವಯಾವ ಪತ್ರಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೊ? ಇಂದು ಕನ್ನಡ ಪತ್ರಿಕೆಗಳನ್ನು ಸುದ್ದಿಗಾಗಿ ಓದುವುದಕ್ಕಿಂತ ಅವುಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ಪ್ರಾಮಾಣಿಕತೆ/ಅಪ್ರಾಮಾಣಿಕತೆಯನ್ನು ಅಳೆಯಲು ಅವುಗಳ ಪತ್ರಿಕೆಗಳ ಪುಟ ತಿರುವಬೇಕಿದೆ.
ತೆಹಲ್ಕಾದಲ್ಲಿ ಬಂದಿರುವ ಲೇಖನವೊಂದರ ಬಗ್ಗೆ ನಮ್ಮಲ್ಲಿ ನೆನ್ನೆ ಒಂದು ಸಣ್ಣ “ದುರಾಡಳಿತದ ಲಾಭ ಪಡೆದವರು” ಲೇಖನ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿ ನಮಗೆ ಕೆಲವು ದಾಖಲೆಗಳು ಲಭ್ಯವಾಗಿದ್ದು ಅವನ್ನು ಇಲ್ಲಿ ಕೊಡಲಾಗುತ್ತಿದೆ.
ಆದರೆ, ಇಷ್ಟಕ್ಕೂ ಇದರಿಂದ ಏನಾಗುತ್ತದೆ? ಸರ್ಕಾರದ ಭ್ರಷ್ಟತೆಯನ್ನು ಮತ್ತು ಅನೀತಿಯನ್ನು ಹುಡುಕಿ, ವಿಚಾರಣೆಗೆ ಕೋರ್ಟಿಗೆಳೆಯುವ ಒಂದು ಸರ್ಕಾರಿ ಸಂಸ್ಥೆ ನಮ್ಮಲ್ಲಿ ಇಲ್ಲ. ಲೋಕಾಯುಕ್ತವೂ ಸಹ ದೂರು ಕೊಟ್ಟರೆ ವಿಚಾರಣೆ ಎಂಬ ಹಂತದಲ್ಲಿದೆ. ಸ್ವತಂತ್ರ ಆಂತರಿಕ ವಿಚಾರಣಾ ಸಂಸ್ಠೆಯೊಂದು ಇಂದು ತೀರಾ ಅಗತ್ಯವಿದೆ. ಇಲ್ಲದಿದ್ದರೆ, ಇಂತಹ ಕರ್ಮಕಾಂಡಗಳು ಜನರಿಗೆ ಗೊತ್ತಾಗುತ್ತದೆ. ಆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಫಲಾನುಭವಿಗಳು ವಿಚಾರಣೆಗೊಳಪಡುವುದಿಲ್ಲ. ಸುಳ್ಳು ದಾಖಲೆ ಕೊಟ್ಟ ತಪ್ಪಿತಸ್ಥರಿಗೆ, ಅದರ ಮೇಲೆ ತೀರ್ಮಾನ ಕೈಗೊಳುವ ಸ್ವಜನಪಕ್ಷಪಾತಿಗಳಿಗೆ ಶಿಕ್ಷೆಯಾಗುವುದಿಲ್ಲ. ಎಂದು ನಾವು ಇದನ್ನು ಮೀರುವುದು?
ಆದರೂ…