Monthly Archives: August 2012

ಪುಸ್ತಕ ಪರಿಚಯ – ಬುಕ್ ಆಫ್ ಟೀ

– ರಮೇಶ್ ಕುಣಿಗಲ್

ಹಲವರಿಗೆ ಟೀ ಚಟ. ಈಗಷ್ಟೆ ಕುಡಿದು ಕಪ್ ಕೆಳಗಿಡುವ ಮೊದಲೇ ಇನ್ನೊಂದು ಕಪ್ ಟೀಗೆ ಆರ್ಡರ್ ಮಾಡುವ ಮಹಾನುಭಾವರಿದ್ದಾರೆ. ಕೆಲವೊಮ್ಮೆ ಹೊಟೇಲ್ ಮಾಣಿಗಳಿಗೆ ಅಚ್ಚರಿಯಾಗಿ ‘ನಮ್ಮ ಹೋಟೆಲ್ ಟೀ ಇಷ್ಟು ಚೆನ್ನಾಗಿದೆಯಾ’ ಎಂದು ಹುಬ್ಬೇರಿಸಿದ್ದೂ ಇದೆ. ಆದರೆ ಈ ಚಟದವರಿಗೆ ಟೀ ಟೇಸ್ಟ್ ಗಿಂತ ಟೀ ಕುಡಿಯುವದಷ್ಟೇ ಮುಖ್ಯವಾಗಿರುತ್ತೆ. ಹೆಚ್ಚು ಕಡಿಮೆ ಇಂಥದೇ ಚಾಳಿ ಬೆಳಸಿಕೊಂಡಿರುವ ಕುಮಾರ್ ಎಸ್. ತನ್ನ ಟೀ ಗೀಳನ್ನು ಶೋಧಿಸುತ್ತಾ ಶೋಧಿಸುತ್ತಾ ಒಂದು ಪುಸ್ತಕಕ್ಕೆ ಆಗುವಷ್ಟು ಸಾಮಗ್ರಿ ಸಂಗ್ರಹಿಸಿದ್ದರು. ನಂತರ ಅದನ್ನು ಒಪ್ಪವಾಗಿ ಜೋಡಿಸಿ ಇದೇ ನನ್ನ ‘ಬುಕ್ ಆಫ್ ಟೀ’ ಎಂದು ಹೊರತಂದಿದ್ದಾರೆ. ಇದರ ಹಿಂದೆ ಇನ್ನು ಮುಂದೆ ‘ಯಾಕೆ ಇಷ್ಟು ಟೀ ಕುಡಿತೀಯ?’ ಎಂದು ಯಾರೂ ಕೇಳಬಾರದು ಎಂಬ ಉದ್ದೇಶವೂ ಇದ್ದಂತಿದೆ.

ಇದು ಆಕಾರದಲ್ಲಿ ಮತ್ತು ಹೂರಣದಲ್ಲಿ ಭಿನ್ನ ಪುಸ್ತಕ. ಟೀ ಬಗ್ಗೆ ಇರುವ ನಂಬಿಕೆಗಳು, ಇತಿಹಾಸ ಜೊತೆ ಜೊತೆಗೆ ಸೃಜನಶೀಲ ಲೇಖಕರು ಟೀಯನ್ನು ಕಂಡ ಬಗೆಯೂ ಈ ಪುಸ್ತಕದಲ್ಲಿವೆ. ಓದುತ್ತಾ ಹೋದಂತೆ ಟೀ ಬಗ್ಗೆ ಮೋಹ ಹೆಚ್ಚಾಗಬಹುದು, ಹೆಚ್ಚೆಚ್ಚು ಟೀ ಕುಡಿಯಲು ಪ್ರೇರಣೆಯಾಗಬಹುದು. (ಆ ಮೂಲಕ ನಿಮ್ಮ ಇನ್ನಿತರೆ ಹಾಟ್ ಡ್ರಿಂಕ್ ಗಳಿಂದ ದೂರ ಇರಲು ಸಹಾಯವೂ ಆಗಬಹುದು!). ಟೀ, ಟೀ ಜೊತೆಗೆ ಬೆರೆತ ಕತೆ, ಕವಿತೆ, ಝೆನ್ ಕತೆ, ಹೈಕು ಎಲ್ಲಾ ಇಲ್ಲಿದೆ. ಪಲ್ಲವ ಪ್ರಕಾಶನದ ವೆಂಕಟೇಶ್ ವಿಶೇಷ ಆಸಕ್ತಿ ವಹಿಸಿ ಈ ಪುಸ್ತಕ ಹೊರತಂದಿದ್ದಾರೆ. ಮೊದಲ ನೋಟಕ್ಕೇ ಸೆಳೆಯುವ ಮುಖಪುಟವನ್ನು ಸ್ವತಃ ಲೇಖಕ ಕುಮಾರ್ ಸಿದ್ಧ ಮಾಡಿದ್ದಾರೆ. ಪುಸ್ತಕದ ಒಟ್ಟು ಅಂದಕ್ಕೆ ಒಪ್ಪವಾಗುವಂತಹ ಹಲವು ಚಿತ್ರಗಳಿವೆ.

ಇದರಾಚೆಗೆ ಟೀ ಒಂದು ಉದ್ಯಮ. ಅಲ್ಲಿ ಶ್ರೀಮಂತ ಎಸ್ಟೇಟು ಮಾಲೀಕರಿದ್ದಾರೆ, ಹಾಗೆಯೇ ಬಡ ಕೂಲಿಯವರಿದ್ದಾರೆ. ಟೀ ಉದ್ಯಮವನ್ನು ವಿಶ್ಲೀಷಿಸುವಂತಹ ಬರಹಗಳು ಇಲ್ಲ. ಜೊತೆಗೆ ಕಾರ್ಮಿಕರ ನೋವು ನಲಿವಿನ ಚಿತ್ರಣಗಳಿಲ್ಲ. ಈ ಪುಸ್ತಕವೇನು ಟೀ ಸುತ್ತಲಿನ ಬದುಕಿನ ಸಮಾಜೋ-ಆರ್ಥಿಕ ಅಧ್ಯಯನ ಅಲ್ಲದಿರುವುದರಿಂದ ಅದೆಲ್ಲ ಇಲ್ಲದಿರುವುದಕ್ಕೆ ಲೇಖಕರಲ್ಲಿ ದೋಷ ಹುಡುಕುವ ಅಗತ್ಯವೇನಿಲ್ಲ. ಮುಂದೊಂದು ದಿನ ಈ ಲೇಖಕರು ಆ ಬಗ್ಗೆ ಆಸಕ್ತಿ ಬೆಳಸಿಕೊಂಡು ಒಂದು ಪರಿಪೂರ್ಣ ಅಧ್ಯಯನ ಆಧಾರಿತ ಪುಸ್ತಕ ಹೊರತಂದರೆ ಮತ್ತಷ್ಟು ಖುಷಿ ಪಡೋಣ.

ಈ ಪುಸ್ತಕವನ್ನೊಮ್ಮೆ ಕೈಗೆತ್ತಿಕೊಂಡು ಓದಿ ನೋಡಿ. ಡೋಂಟ್ ವರಿ, ಓದಿ ಮುಗಿಸಲು ಹೆಚ್ಚು ಸಮಯವೇನು ಬೇಕಿಲ್ಲ.

ಬುಕ್ ಆಫ್ ಟೀ
ಲೇಖಕ: ಕುಮಾರ್ ಎಸ್.
ಪುಟ: 106
ಬೆಲೆ: ರೂ 100
ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ (ವಯಾ ಎಮ್ಮಿಗನೂರು),
ಬಳ್ಳಾರಿ – 583 113 ದೂ: 94803 53507

ಮತ್ತೆ ವಿರೋಧಪಕ್ಷದ ನಾಯಕರಾಗಿ ಯಡಿಯೂರಪ್ಪ

– ಮಹೇಂದ್ರ ಕುಮಾರ್

ಯಡಿಯೂರಪ್ಪ ಬಾಯಿ ತೆರೆದರೆಂದರೆ ವಿರೋಧ ಪಕ್ಷಗಳಿಗೆಲ್ಲ ಹಿಗ್ಗು. ಬಿಜೆಪಿಯೊಳಗೆ ಸಣ್ಣಗೆ ನಡುಕ. ಇದೀಗ ಸುಮಾರು 15 ದಿನಗಳ ಬಳಿಕ, ಯಡಿಯೂರಪ್ಪ ಬಾಯಿ ತೆರೆದಿದ್ದಾರೆ. ಬಿಜೆಪಿ ಸರಕಾರ ಮುಖ ಮುಚ್ಚಿಕೊಂಡಿದೆ. ತನ್ನದೇ ಸರಕಾರದ ವಿರುದ್ಧ ಅವರು ಕೆಂಡ ಕಾರಿದ್ದಾರೆ. ತನ್ನ ಸರಕಾರದ ವಿರುದ್ಧ ಅವರು ಆಕ್ರೋಶವ್ಯಕ್ತಪಡಿಸುತ್ತಿರುವುದು ಇದೇನೂ ಮೊದಲಲ್ಲ. ಯಾವಾಗ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೋ ಅಲ್ಲಿಂದ ಪದೇ ಪದೇ ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಸದನದಲ್ಲಿ ಕುಳಿತು ತನ್ನದೇ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿರುವುದು ಮಾತ್ರ, ರಾಜ್ಯದ ಇತಿಹಾಸದಲ್ಲಿ ಒಂದು ದಾಖಲೆಯೇ ಸರಿ. ಯಡಿಯೂರಪ್ಪ ರಾಜ್ಯ ಸರಕಾರದ ವೈಫಲ್ಯದ ಕುರಿತಂತೆ ಹರಿಹಾಯ್ದರೆ ಅದನ್ನು ವಿರೋಧ ಪಕ್ಷಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.ಸರಕಾರವನ್ನು ಪಕ್ಷಾತೀತವಾಗಿ ವಿಮರ್ಶಿಸುವುದು, ಟೀಕಿಸುವುದು ರಾಜ್ಯದ ಹಿತದೃಷ್ಟಿಯಿಂದ ಸರಿಯಾದ ಕ್ರಮವೇ ಆಗಿದೆ. ಕೆಟ್ಟ ಹಾದಿಯನ್ನು ಹಿಡಿದರೆ ತನ್ನದೇ ಸರಕಾರವನ್ನೂ ಬಿಡದೆ ಟೀಕಿಸುವಾತ ನಿಜವಾದ ನಾಯಕ.

ಈ ನಿಟ್ಟಿನಲ್ಲಿ ಯಡಿಯೂರಪ್ಪ ಅಭಿನಂದನಾರ್ಹರು ನಿಜ. ಆದರೆ ಒಂದು ಸತ್ಯವಿದೆ. ಬರ ತಾಂಡವವಾಡುತ್ತಿರುವಾಗ ಸರಕಾರ ನಿಷ್ಕ್ರಿಯವಾಗಲು ಸದಾನಂದ ಗೌಡರ ಬಳಗ ಎಷ್ಟರಮಟ್ಟಿಗೆ ಕಾರಣವೋ, ಯಡಿಯೂರಪ್ಪ ಬಣವೂ ಅಷ್ಟೇ ಮಟ್ಟಿಗೆ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ 3 ವರ್ಷದ ಅವಧಿಯನ್ನು ಆಳಿದ್ದು ಯಡಿಯೂರಪ್ಪ.

ಆದರೆ ಈ ಅವಧಿಯಲ್ಲೂ ಅವರಿಗೆ ಆಳುವುದಕ್ಕೆ ಅವಕಾಶ ನೀಡುವ ಬದಲು ಅಳುವುದಕ್ಕೇ ಹೆಚ್ಚು ಅವಕಾಶ ಸಿಕ್ಕಿತು. ಒಂದು ದಿನವೂ ಅವರನ್ನು ನೆಮ್ಮದಿಯಿಂದ ಆಳಲು ಗಣಿ ರೆಡ್ಡಿಗಳು ಮತ್ತು ಕೇಂದ್ರದ ವರಿಷ್ಠರು ಅವಕಾಶ ನೀಡಲಿಲ್ಲ. ತಾನು ಅಧಿಕಾರದಿಂದ ಕೆಳಗಿಳಿದದ್ದೇ, ಅವರೂ ಅದೇ ತಂತ್ರವನ್ನು ಅನುಸರಿಸತೊಡಗಿದರು. ಉಳಿದವರನ್ನೂ ಆಳುವುದಕ್ಕೆ ಬಿಡೆ ಎಂದು ಯಡಿಯೂರಪ್ಪ ಹಟ ತೊಟ್ಟರು. ಪರಿಣಾಮವಾಗಿ ಒಂದು ವರ್ಷದ ಒಳಗೆ ಸದಾನಂದ ಗೌಡರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಈ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರಕಾರ ಕನಿಷ್ಠ ಒಂದು ವಾರ ಸರಿಯಾಗಿ ಆಡಳಿತ ನಡೆಸಿದರೆ ಅದೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಬರ, ರೈತರ ಸಮಸ್ಯೆ ಇತ್ಯರ್ಥವಾಗುವುದಾದರೂ ಹೇಗೆ? ಒಂದು ರೀತಿಯಲ್ಲಿ ಕನ್ನಡಿಯನ್ನು ನೋಡಿ ಉಗುಳಿದಂತಾಗಿದೆ ಯಡಿಯೂರಪ್ಪರು ಸದನದಲ್ಲಿ ತೋರಿಸಿದ ಆಕ್ರೋಶ. ಉಗಿದದ್ದು ಈಶ್ವರಪ್ಪ ಬಳಗಕ್ಕಾದರೂ, ಅದರ ಹನಿಗಳು ಯಡಿಯೂರಪ್ಪರ ಮುಖವನ್ನೂ ಅಪ್ಪಳಿಸಿದೆ. ನಿಜಕ್ಕೂ ಯಡಿಯೂರಪ್ಪ ಬರದ ಕುರಿತಂತೆ, ರೈತರ ಕುರಿತಂತೆ ಕಾಳಜಿಯನ್ನು ಹೊಂದಿದ್ದರೆ ತನ್ನ ಬಣ ರಾಜಕೀಯವನ್ನು ಪಕ್ಕಕ್ಕಿಟ್ಟು ಬರಗಾಲ ಪ್ರದೇಶದಲ್ಲಿ ತಿರುಗಾಡುತ್ತಿದ್ದರು. ಸದಾನಂದ ಗೌಡರಿಗೆ ಆಳ್ವಿಕೆ ನಡೆಸಲು ಅವಕಾಶವನ್ನು ನೀಡುತ್ತಿದ್ದರು.

ಸರಕಾರ ಇಂದು ವಿಫಲವಾಗಿ ನಿಂತಿದ್ದರೆ ಅದಕ್ಕೆ ಬಿಜೆಪಿಯ ಎಲ್ಲ ನಾಯಕರೂ ಕಾರಣರು. ಯಡಿಯೂರಪ್ಪರ ವೈಫಲ್ಯಕ್ಕೆ ಈಶ್ವರಪ್ಪ ಗುಂಪು ಹೇಗೆ ಕಾರಣವೋ, ಹಾಗೆಯೇ ಇಂದು ಸದಾನಂದಗೌಡರ ವೈಫಲ್ಯಕ್ಕೆ ಯಡಿಯೂರಪ್ಪ ಗುಂಪು ಕಾರಣ. ಆದುದರಿಂದ ಯಡಿಯೂರಪ್ಪರು ಆಕ್ರೋಶದಿಂದ ಆಡಿದ ಮಾತುಗಳಲ್ಲಿ ಸತ್ಯವಿದೆ. ಅವರು ತೆರೆದಿಟ್ಟ ನಾಡಿನ ಸ್ಥಿತಿಗೆ ಅವರೂ ಕೂಡ ಕಾರಣರು ಎನ್ನುವುದು ಇನ್ನೊಂದು ಸತ್ಯ.

ಯಡಿಯೂರಪ್ಪ ಅವರು ಸದನದಲ್ಲಿ ಘರ್ಜಿಸಿರುವ ರೀತಿ ನೋಡಿದರೆ ಇನ್ನೂ ಅವರ ಆಕ್ರೋಶ ತಣಿದಿಲ್ಲ. ಶೆಟ್ಟರ್ ಕುರಿತಂತೆಯೂ ಅವರು ಅಸಹನೆಯನ್ನು ಹೊಂದಿದ್ದಾರೆ ಎನ್ನುವ ಅಂಶ ಎದ್ದು ಕಾಣುತ್ತದೆ. ಸರಕಾರವನ್ನು ಅದೆಷ್ಟು ಹೀನಾಯವಾಗಿ ನಿಂದಿಸಿದ್ದಾರೆಂದರೆ, ವಿರೋಧ ಪಕ್ಷವೂ ಇಷ್ಟು ಆಕ್ರೋಶವನ್ನು ಈವರೆಗೆ ವ್ಯಕ್ತಪಡಿಸಿಲ್ಲ. ಯಡಿಯೂರಪ್ಪ ಈ ಪರಿ ವ್ಯಗ್ರರಾಗುವುದಕ್ಕೆ ರೈತರ ಮೇಲೆ ಹುಟ್ಟಿದ ಅನಿರೀಕ್ಷಿತ ಪ್ರೀತಿ ಎನ್ನುವುದನ್ನು ನಂಬುವಷ್ಟು ಮುಗ್ಧರಲ್ಲ ನಾಡಿನ ಜನತೆ. ವರಿಷ್ಠರ ವಿರುದ್ಧ ಮತ್ತೊಂದು ಯುದ್ಧ ಹೂಡುವುದಕ್ಕೆ ಯಡಿಯೂರಪ್ಪ ಸಿದ್ಧರಾಗುತ್ತಿರುವ ಸೂಚನೆಯಿದು.

ಈಗಾಗಲೇ ಯಡಿಯೂರಪ್ಪರ ಟೀಕೆಯನ್ನು ಸದಾನಂದ ಗೌಡ ಖಂಡಿಸಿದ್ದಾರೆ ಮಾತ್ರವಲ್ಲ, ಬಿಜೆಪಿಯಲ್ಲಿ ಮತ್ತೆ ಗೊಂದಲ ಹುಟ್ಟಿಸುವ ಪ್ರಯತ್ನದಲ್ಲಿದ್ದಾರೆ ಎಂದೂ ಆರೋಪಿಸಿದ್ದಾರೆ. ಇದರಲ್ಲಿ ಒಂದಿಷ್ಟು ಸತ್ಯವಿದೆ. ನಾಳೆ ಜಗದೀಶ್ ಶೆಟ್ಟರ್ ವರಿಷ್ಠರ ಪರವಾಗಿ ನಿಂತು ಬಿಟ್ಟರೆ ಯಡಿಯೂರಪ್ಪ ಮತ್ತೆ ದಂಗೆಯೇಳುವ ಸಾಧ್ಯತೆಯಿದೆ. ಪಕ್ಷಾಧ್ಯಕ್ಷ ಸ್ಥಾನ ಯಾರಿಗೆ ಸೇರಬೇಕು ಎನ್ನುವುದು ಎಲ್ಲಿಯವರೆಗೆ ಇತ್ಯರ್ಥವಾಗುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿ ಸರಕಾರ ಕೆಂಡದ ಮೇಲೆ ನಿಂತಿರಬೇಕಾಗುತ್ತದೆ. ಅದೇನೇ ಇರಲಿ.

ಬರ ಮತ್ತು ರೈತರ ಕುರಿತಂತೆ ಸರಕಾರ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವ ಅಗತ್ಯವಂತೂ ಇದೆ. ಕಾರಣ ಏನೇ ಇರಲಿ, ಯಡಿಯೂರಪ್ಪರ ಆಕ್ರೋಶದಿಂದ ಸರಕಾರದ ಮೇಲೆ ಭಾರೀ ಒತ್ತಡ ಬಿದ್ದಂತಾಗಿದೆ. ವಿರೋಧ ಪಕ್ಷಕ್ಕೂ ಆನೆ ಬಲಬಂದಿದೆ. ಈ ಹಿನ್ನೆಲೆಯಲ್ಲಾದರೂ ರಾಜ್ಯ ಸರಕಾರ ಮುಂದಿನ ದಿನಗಳನ್ನು ನಾಡಿಗಾಗಿ ಮೀಸಲಿಟ್ಟರೆ ಅದು ನಾಡಿನ ಜನತೆಯ ಅದೃಷ್ಟ.

(ಚಿತ್ರಕೃಪೆ: ದ ಹಿಂದು ಮತ್ತು ಇತರೆ ಅಂತರ್ಜಾಲ ತಾಣಗಳು)

ಅಣ್ಣಾ, ನಿಮ್ಮ ಅಖಾಡ ಅದಾಗಿರಲಿಲ್ಲ!


-ಚಿದಂಬರ ಬೈಕಂಪಾಡಿ


ಥಿಯರಿಯಲ್ಲಿ ಅತ್ಯುತ್ತಮ ಅಂಕ ಪಡೆಯುವ ವಿದ್ಯಾರ್ಥಿ ಪ್ರಾಕ್ಟಿಕಲ್‌ನಲ್ಲೂ ಅದಕ್ಕೆ ಸರಿಸಮನಾದ ಅಂಕ ಪಡೆಯಬೇಕು, ಅದು ನಿರೀಕ್ಷೆ. ಆದರೆ ಅದೆಷ್ಟೋ ಸಂದರ್ಭದಲ್ಲಿ ಹಾಗೆ ಆಗುವುದಿಲ್ಲ. ಥಿಯರಿಯಲ್ಲಿ ಕನಿಷ್ಠ ಅಂಕ ಪಡೆದವ ಪ್ರಾಕ್ಟಿಕಲ್‌ನಲ್ಲಿ ಗರಿಷ್ಠ ಅಂಕ ಪಡೆಯುವ ಸಾಧ್ಯತೆಗಳಿರುತ್ತವೆ. ಒಬ್ಬನೇ ವಿದ್ಯಾರ್ಥಿಯಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್‌ನಲ್ಲಿ ಯಾಕೆ ಇಂಥ ವ್ಯತ್ಯಾಸಗಳಾಗುತ್ತವೆ? ಥಿಯರಿ ಪುಸ್ತಕದಿಂದ ಪಡೆಯುವ ಅನುಭವ. ಬರೆದಿಟ್ಟ ಅನುಭವವನ್ನು ಓದಿಕೊಂಡು ಹಾಗೆಯೇ ಬರೆದುಬಿಡುತ್ತಾನೆ. ಅದರಲ್ಲಿ ಅವನ ಹೂಡಿಕೆ ಬೌದ್ಧಿಕ ಬಂಡವಾಳ ಮಾತ್ರ. ಪ್ರಾಕ್ಟಿಕಲ್ ಅಂದರೆ ಬೌದ್ಧಿಕ ಬಂಡವಾಳದ ಜೊತೆಗೆ ತನ್ನ ಗೆಯ್ಮೆಯನ್ನೂ ಹೂಡಬೇಕಾಗುತ್ತದೆ.

ಒಂದು ಶಿಲ್ಪವನ್ನು ಕಡೆಯುವ ಕುರಿತು ಥಿಯರಿ ಓದಿ ಬರೆದು ಬಿಡಬಹುದು. ಆದರೆ ಅದೇ ಶಿಲ್ಪವನ್ನು ಅವನಿಗೆ ಕೆತ್ತಲು ಕೊಟ್ಟರೆ ಖಂಡಿತಕ್ಕೂ ಕೆತ್ತಲಾರ. ಮನಸ್ಸಿನಲ್ಲಿ ಅವನು ಮೂಲಶಿಲ್ಪಕ್ಕಿಂತಲೂ ಸುಂದರವಾದ ಶಿಲ್ಪವನ್ನು ಕೆತ್ತಿನಿಲ್ಲಿಸಿಬಿಡುತ್ತಾನೆ. ಆದರೆ ಅದು ಅವನ ಒಳಗಣ್ಣಿಗೆ ಮಾತ್ರ ಕಾಣುತ್ತದೆ, ಹೊರಗಿನವರ ಕಣ್ಣಿಗೆ ಕಾಣಲು ಹೇಗೆ ತಾನೇ ಸಾಧ್ಯ? ಥಿಯರಿ ಮತ್ತು ಪ್ರಾಕ್ಟಿಕಲ್ ಎರಡರಲ್ಲೂ ಏಕರೂಪದ ಸಾಧನೆ ಸಾಧ್ಯವಿಲ್ಲದ ವಿದ್ಯಾರ್ಥಿಯ ಸ್ಥಿತಿ ಅಣ್ಣಾ ಮತ್ತವರ ತಂಡದ್ದು. ಅಣ್ಣಾ ಮತ್ತು ಅವರ ತಂಡ ಥಿಯರಿ ಹೇಳುತ್ತಲೇ ಹದಿನೆಂಟು ತಿಂಗಳು ದೇಶದ ಜನಮಾನಸದಲ್ಲಿ ನೆಲೆಯೂರಿದರು.

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದು ಸಹಜವಾಗಿತ್ತು ಮತ್ತು ಅದು ಅಣ್ಣಾ ತಂಡದ ಥಿಯರಿ ಮಾತ್ರವಲ್ಲಾ ದೇಶದ ಶೇ.90ರಷ್ಟು ಜನರ ನಿಜವಾದ ಅನುಭವ ಕೂಡಾ. ಆದರೆ ಥಿಯರಿಯನ್ನು ಪ್ರಾಕ್ಟಿಕಲ್ ಹಂತಕ್ಕೆ ತರುವುದು ಅದೆಷ್ಟು ಕಠಿಣ ಎನ್ನುವುದಕ್ಕೆ ಛಿದ್ರವಾದ ಅಣ್ಣಾ ತಂಡವೇ ಸಾಕ್ಷಿ. ಪ್ರಬಲ ಲೋಕಪಾಲ್ ಜಾರಿಯಾಗಬೇಕು ಎನ್ನುವುದು ಥಿಯರಿ. ಜಾರಿಗೆ ಮಾಡುವುದು ಪ್ರಾಕ್ಟಿಕಲ್. ಥಿಯರಿಯಲ್ಲಿ ಅಣ್ಣಾ ತಂಡ ಅತ್ಯುತ್ತಮ ಸಾಧನೆ ಮಾಡಿತು, ಆದರೆ ಪ್ರಾಕ್ಟಿಕಲ್‌ನಲ್ಲಿ ಪರಾಭವಗೊಂಡಿತು. ಜಾರಿ ಮಾಡಬೇಕಾಗಿದ್ದವರು ಪ್ರಾಕ್ಟಿಕಲ್‌ನಲ್ಲಿ ಗೆದ್ದರು.

ಹಾಗೆ ನೋಡಿದರೆ ಅಣ್ಣಾ ಭ್ರಷ್ಟಾಚಾರದ ವಿರುದ್ಧ ಎತ್ತಿದ ಧ್ವನಿ ಈಗಲೂ ಸಮಂಜಸ, ಅವರ ಆರಂಭದ ಹೆಜ್ಜೆಯೂ ಸಮರ್ಪಕ. ಆದರೆ ಅವರು ಎಡವಿದ್ದು ಎಲ್ಲಿ ಎನ್ನುವುದು ಈಗಿನ ಸ್ಥಿತಿಯಲ್ಲಿ ಚರ್ಚೆಗೆ ಯೋಗ್ಯ. ತುತ್ತು ಕೂಳು ತಿನ್ನಲು ಅನುವಾಗುವಂತೆ ಕೂಲಿಗಾಗಿ ಕಾಳು ಯೋಜನೆಯಿಂದ ಹಿಡಿದು ದೇಶವನ್ನು ರಕ್ಷಿಸಲು ಖರೀದಿಸುವ ರಕ್ಷಣಾ ಸಲಕರಣೆಗಳ ಖರೀದಿ ತನಕ ಭ್ರಷ್ಟಾಚಾರದ ಕಮಟುವಾಸನೆ ಮೂಗಿಗೆ ಬಡಿಯುತ್ತದೆ. ಸತ್ತ ಹೆಣದ ಶವಪರೀಕ್ಷೆಯಿಂದ ಹಿಡಿದು ಉಸಿರಾಡಿಸುವ ಜೀವರಕ್ಷಕ ಔಷಧಿಯ ತನಕ ಭ್ರಷ್ಟಾಚಾರವಿದೆ ಅಂದ ಮೇಲೆ ಇದರ ಬೇರುಗಳ ಆಳ ಅದೆಷ್ಟು ಎನ್ನುವುದು ಗೋಚರವಾಗುತ್ತದೆ. ಇಂಥ ಬೇರುಗಳನ್ನು ಕೀಳಬೇಕಾದರೆ ಅದಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳ ಬೇಕಾಗಿತ್ತು. ಪಾರ್ಥೇನಿಯಮ್ ಗಿಡದಂತೆ ಬೆಳೆದು ನಿಂತಿರುವ ಭ್ರಷ್ಟಾಚಾರವನ್ನು ಬುಡಸಹಿತ ಕಿತ್ತು ಹಾಕಬೇಕೆನ್ನುವ ಸಂಕಲ್ಪ ಅಣ್ಣಾ ಅವರ ಮಾನಸಿಕ ಥಿಯರಿ ಹೊರತು ಅದು ಪುಸ್ತಕ ಥಿಯರಿ ಆಗಿರಲಿಲ್ಲ.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಮಹಾನ್ ಕ್ರಾಂತಿಗೆ ನಾಂದಿ ಹಾಡಿದರು. ಶೋಷಣೆ, ಸಾಮಾಜಿಕ ಅಸಮಾನತೆಯ ವಿರುದ್ಧ ಸೆಟೆದು ನಿಲ್ಲುವ ಮುನ್ನ ಅವುಗಳ ಕ್ರೌರ್ಯವನ್ನು ತುಂಬಾ ಹತ್ತಿರದಿಂದ ನೋಡಿದ್ದರು. ರಾಜನ ಆಡಳಿತದ ಭಾಗವಾಗಿದ್ದ ಬಸವಣ್ಣ ಅದರ ವಿರುದ್ಧವೇ ಹೋರಾಟಕ್ಕಿಳಿದು ಯಶಸ್ಸು ಕಂಡರು. ಒಬ್ಬ ಕಳ್ಳನ ಕೈಚಳಕವನ್ನು ಮತ್ತೊಬ್ಬ ಕಳ್ಳ ಗ್ರಹಿಸುವಷ್ಟು ಸುಲಭವಾಗಿ ಕಳ್ಳನಲ್ಲದಿದ್ದವನು ಗ್ರಹಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರಿ ಮತ್ತು ಭ್ರಷ್ಟಾಚಾರದ ಅರಿವಿರದ ವ್ಯಕ್ತಿಗಳ ನಡುವಿನ ವ್ಯತ್ಯಾಸವೂ ಇದೇ ಆಗಿದೆ.

ಅಣ್ಣಾ ಭ್ರಷ್ಟಾಚಾರ ಮಾಡಿದವರಲ್ಲ. ಆದರೆ ಭ್ರಷ್ಟಾಚಾರದ ಬಗ್ಗೆ ಒಳನೋಟವಿದೆ. ಅಣ್ಣಾ ತಂಡದಲ್ಲಿದ್ದವರು ಭ್ರಷ್ಟ ವ್ಯವಸ್ಥೆಯ ಅರಿವಿದ್ದವರು. ಆಡಳಿತ ಯಂತ್ರದ ಒಳಗಿದ್ದು ಹೊರಬಂದವರು. ಆದ್ದರಿಂದಲೇ ಅವರಿಗೆ ಭ್ರಷ್ಟಾಚಾರದ ಬೇರುಗಳ ಸ್ಪಷ್ಟ ಕಲ್ಪನೆಯಿತ್ತು. ಈ ಕಾರಣಕ್ಕಾಗಿ ಅಣ್ಣಾ ಮತ್ತವರ ತಂಡ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮತೋಲನದ ತಂಡವಾಗಿ ಜನರಿಗೆ ಗೋಚರವಾಗಿತ್ತು. ಈ ತಂಡದಲ್ಲಿ ಬೌದ್ಧಿಕವಾದ ಅನುಭವ ಧಾರಾಳವಾಗಿತ್ತು, ಜೊತೆಗೆ ಯಾರ ಬೌದ್ಧಿಕತೆ ಹೆಚ್ಚು ಎನ್ನುವ ಆಂತರಿಕ ಮೇಲಾಟವೂ ಇತ್ತು. ತಮ್ಮದೇ ಆಂತರಿಕ ತುಡಿತ ಅಣ್ಣಾತಂಡದ ಧ್ವನಿಯಾಗಬೇಕು ಎನ್ನುವ ಹಂಬಲವೂ ಇಣುಕತೊಡಗಿತು. ಇಂಥ ಒಳತುಡಿತದ ತಾಕಲಾಟಗಳು ಮಾಧ್ಯಮಗಳ ಮೂಲಕ ಅಣ್ಣಾತಂಡದ ಒಡೆದ ಸ್ವರಗಳಾಗಿ ಕೇಳಿಸತೊಡಗಿದ್ದವು. ಇವೆಲ್ಲವನ್ನೂ ಅಣ್ಣಾ ಗ್ರಹಿಸಲಾಗದಷ್ಟು ದಡ್ಡರೆಂದು ಆ ತಂಡದಲ್ಲಿದ್ದ ಕೆಲವರು ಸ್ವಯಂ ನಿರ್ಧಾರಕ್ಕೆ ಬಂದದ್ದು ದುರ್ದೈವ.

ಅಣ್ಣಾತಂಡದ ಸಾಮೂಹಿಕ ನಿರ್ಧಾರ ತಂಡದ ವೇದಿಕೆಯಲ್ಲಿ ಆಗುವ ಬದಲು ಅವರವರ ಮನೆಗಳಲ್ಲಾಗತೊಡಗಿತು. ತಂಡದ ಬುದ್ಧಿವಂತರು ಹೇಳುವ ಮಾತು ಅಣ್ಣಾ ಅವರ ಬಾಯಿಯಿಂದ ಬರುವಂತಾಯಿತು. ಅಣ್ಣಾ ಅವರಿಗೆ ಆಂಗ್ಲಭಾಷೆಯ ಅರಿವಿಲ್ಲದ ಕಾರಣ ಅತ್ಯಂತ ಗಂಭೀರ ವಿಚಾರಗಳು ಮತ್ತು ಅಣ್ಣಾ ಅವರಿಗೆ ಗೊತ್ತಿಲ್ಲದ ಅಂಶಗಳು ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬಂದು ಎಡವಟ್ಟು ಉಂಟುಮಾಡಿದವು. ಇದನ್ನೂ ಅಣ್ಣಾ ಸಹಿಸಿಕೊಂಡರು. ಇಡೀ ಹೋರಾಟದ ದಿಕ್ಕು ಕವಲು ದಾರಿಹಿಡಿದದ್ದು ಬಾಬಾ ರಾಮ್‌ದೇವ್ ಅಖಾಡಕ್ಕಿಳಿದಾಗ ಎನ್ನುವುದನ್ನು ಮರೆಯುವಂತಿಲ್ಲ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹೋರಾಟದ ದಾರಿ ಹಿಡಿದು ಜನರ ಚಳವಳಿಯನ್ನಾಗಿ ರೂಪಿಸುತ್ತಿದ್ದರೆ ಅದೇ ಹೊತ್ತಿಗೆ ಬಾಬಾ ರಾಮ್‌ದೇವ್ ಕಪ್ಪು ಹಣವನ್ನು ಭಾರತಕ್ಕೆ ತರುವ ಹೋರಾಟಕ್ಕಿಳಿದರು. ಈ ಮೂಲಕ ಜಂತರ್ ಮಂತರ್, ರಾಮಲೀಲಾ ಮೈದಾನದಲ್ಲಿ ಸೇರುತ್ತಿದ್ದ ಜನರು ಇಬ್ಬರು ಹೋರಾಟಗಾರರ, ಎರಡು ಭಿನ್ನಮುಖಗಳನ್ನು ಕಾಣತೊಡಗಿದರು. ಇದು ಒಂದು ನೆಲೆಯ ಗುರಿ ಹಿಡಿದು ಸಾಗುತ್ತಿದ್ದ ಚಳವಳಿ ಕವಲು ದಾರಿಯಲ್ಲಿ ಸಾಗಲು ಕಾರಣವಾಯಿತು.

ಅಣ್ಣಾ ಅವರನ್ನು ಜನರು ನೋಡುತ್ತಿದ್ದ ವಿಧಾನ, ಜನರು ಅಣ್ಣಾ ಅವರನ್ನು ಗ್ರಹಿಸುತ್ತಿದ್ದ ರೀತಿಗೂ ರಾಮ್‌ದೇವ್ ಅವರು ಜನರನ್ನು ನೋಡುತ್ತಿದ್ದ ವಿಧಾನ, ಜನರು ಅವರನ್ನು ಗ್ರಹಿಸುತ್ತಿದ್ದ ರೀತಿ ಭಿನ್ನವಾಗಿತ್ತು. ಅಣ್ಣಾ ಸಾಮಾಜಿಕ ಹೋರಾಟಗಾರರಾಗಿ ಕಾಣಿಸಿದರೆ ರಾಮ್‌ದೇವ್ ಅವರ ಕಾವಿಯೊಳಗೆ ಸುಪ್ತವಾಗಿದ್ದ ನಾಯಕತ್ವದ ಹಂಬಲ ವ್ಯಕ್ತವಾಗುತ್ತಿತ್ತು. ಏಕಕಾಲದಲ್ಲಿ ಧುತ್ತನೆ ಬಿದ್ದ ಎರಡು ಚಳವಳಿಗಳನ್ನು ಆಯ್ಕೆ ಮಾಡುವ ಸಂದಿಗ್ಧತೆ ಜನರಿಗಾಯಿತು. ಇದನ್ನೂ ಜನರು ಸಮಚಿತ್ತದಿಂದಲೇ ನೋಡಿದರು.

ಈ ಎರಡೂ ಹೋರಾಟಗಳ ಟಾರ್ಗೆಟ್ ದೇಶದ ಶಕ್ತಿಕೇಂದ್ರ ಸಂಸತ್ ಎನ್ನುವುದು ಅತ್ಯಂತ ಮುಖ್ಯ. ದೇಶ, ಭಾಷೆ, ಸಂಸ್ಕೃತಿ, ಹಕ್ಕು, ಕರ್ತವ್ಯ ಹೀಗೆ ನಮ್ಮನ್ನು ಆಳುವ ಅಧಿಕಾರ ಸ್ಥಾನ. ಮತ್ತೊಂದು ರೀತಿಯಲ್ಲಿ ಈ ಕೇಂದ್ರ ನಮ್ಮ ಪ್ರತಿಬಿಂಬ. ನಮ್ಮೆಲ್ಲರ ಪರವಾಗಿ ಅವರಿದ್ದಾರೆ. ನಮ್ಮಿಂದಾಗಿ ಅವರು ಅಲ್ಲಿದ್ದಾರೆ. ಅವರಿಗೆ ಅವರದ್ದೇ ಆದ ಸ್ಥಾನಮಾನ, ಪರಮಾಧಿಕಾರವನ್ನು ಸಂವಿಧಾನ ಕೊಟ್ಟಿದೆ. ಆ ಶಕ್ತಿ ಕೇಂದ್ರದೊಳಗೆ ನಮಗೆ ಬೇಕಾದ ಕಾನೂನನ್ನು ಅವರು ಮಾಡಬೇಕು. ನಾವು ಹೊರಗಿನಿಂದ ಹೇಳುವುದು ಕಾನೂನಾಗುವುದಿಲ್ಲ. ಇದು ವ್ಯತ್ಯಾಸ ನಮಗೆ ಮತ್ತು ಅದರೊಳಗಿರುವವರಿಗೆ. ನಮ್ಮ ಪರವಾಗಿ ಕಾನೂನು ಮಾಡದವರನ್ನು ಮತ್ತೆ ಆ ಕೇಂದ್ರದೊಳಗೆ ಕಾಲಿಡದಂತೆ ಮಾಡುವ ಪರಮಾಧಿಕಾರ ನಮಗಿದೆ ಹೊರತು ಅವರ ಪರಮಾಧಿಕಾರದೊಳಗೆ ಹಸ್ತಕ್ಷೇಪಮಾಡುವ ಅಧಿಕಾರ ನಮಗಿಲ್ಲ. ಇದು ಓರ್ವ ಸಾಮಾನ್ಯವಾಗಿ ನಾನು ಗ್ರಹಿಸಿದ ವಿಧಾನ, ಇದಕ್ಕಿಂತಲೂ ಭಿನ್ನವಾಗಿ ಹಕ್ಕು, ಕರ್ತವ್ಯಗಳನ್ನು ವ್ಯಾಖ್ಯಾನಿಸುವುದೂ ಸಾಧ್ಯವಿದೆ.

ಇಂಥ ವಾಸ್ತವ ಸ್ಥಿತಿಯಲ್ಲಿ ಸಂಸತ್ತನ್ನು ಹೈಜಾಕ್ ಮಾಡುವಂಥ ಅಥವಾ ಶಕ್ತಿಕೇಂದ್ರದ ಅವಗಣನೆಯನ್ನು ಯಾವುದೇ ಚಳವಳಿ ಮಾಡಬಾರದು. ಅಣ್ಣಾ ತಂಡ ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಬದಲು ಆ ಶಕ್ತಿಕೇಂದ್ರದೊಳಗಿರುವವರಿಗೆ ಹೊರಗಿದ್ದೇ ಪರ್ಯಾಯವೆನ್ನುವಂತೆ ವರ್ತಿಸಿದ್ದು ಅತಿಯಾಯಿತು ಎನ್ನುವ ಅನಿಸಿಕೆ ಶಕ್ತಿಕೇಂದ್ರದೊಳಗಿನವರನ್ನು ವಿರೋಧಿಸುವವರಲ್ಲೂ ಮೂಡುವಂತಾದದ್ದು ದುರಾದೃಷ್ಟ. ಇದು ಚಳವಳಿಗಾದ ಮೊದಲ ಹಿನ್ನಡೆ.

ಅಣ್ಣಾ ಅವರು ಒಬ್ಬ ವ್ಯಕ್ತಿಯಾಗಿ ಚಳವಳಿಯ ಹಾದಿ ಹಿಡಿದಾಗ, ಉಪವಾಸ ಕುಳಿತಾಗ ಶಕ್ತಿಕೇಂದ್ರದೊಳಗೆ ತಲ್ಲಣ ಉಂಟಾಗಿತ್ತು. ಅಂಥ ಶಕ್ತಿ ಅಣ್ಣಾ ಅವರ ಮೊದಲ ಹೆಜ್ಜೆಯಲ್ಲಿತ್ತು. ಆದರೆ ಅಣ್ಣಾ ತಂಡವಾಗಿ ಕಾಣಿಸಿಕೊಂಡಮೇಲೆ, ಅದರಲ್ಲೂ ಒಡಕುಗಳು ಬೆಳಕಿಗೆ ಬಂದ ಮೇಲೆ ಶಕ್ತಿಕೇಂದ್ರ ಇಳಿವಯಸ್ಸಿನ ಅಣ್ಣಾ ಉಪವಾಸಕ್ಕೆ ಕುಳಿತಾಗ ನಿರ್ಲಿಪ್ತವಾಗಿಬಿಡುತ್ತದೆ. ಅಂದರೆ ಉಪವಾಸ ಎನ್ನುವುದು ಅಹಿಂಸಾತ್ಮಕ ಚಳವಳಿಯ ಕೊನೆಯ ಅಸ್ತ್ರ ಮತ್ತು ಅದು ಅತ್ಯಂತ ನಿರ್ಣಾಯಕವಾದ ಅಸ್ತ್ರವೂ ಹೌದು.

ಗಾಂಧೀಜಿಯವರು ಬ್ರಿಟಿಷ್ ಸಾಮ್ರಾಜ್ಯವನ್ನೇ ಹಿಮ್ಮೆಟ್ಟಿಸಿದ್ದು ಕೂಡಾ ಇಂಥ ಅಹಿಂಸಾ ಚಳವಳಿಯ ಮೂಲಕವೇ. ಅಂಥದ್ದೇ ಚಳವಳಿಯನ್ನು ಹೂಡಿದ ಅಣ್ಣಾ ಯಾವುದೇ ಫಲವಿಲ್ಲದೆ ತಾವಾಗಿಯೇ ಶಸ್ತ್ರತ್ಯಾಗಮಾಡಿದಂತೆ ಉಪವಾಸ ನಿಲ್ಲಿಸಿದ್ದೂ ಕೂಡಾ ಚಳವಳಿಯಲ್ಲಿ ಶಕ್ತಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿ. ಪ್ರತಿಕ್ರಿಯೆ ಎನ್ನುವುದು ಕ್ರಿಯೆಯನ್ನು ಅವಲಂಬಿಸಿರುತ್ತದೆ. ನಿರಂತರವಾದ ಕ್ರಿಯೆಗೆ ನಿರಂತರವಾದ ಪ್ರತಿಕ್ರಿಯೆ ನಿರೀಕ್ಷಿಸಬಹುದು, ಆದರೆ ಅದು ಬರಲೇಬೇಕೆಂದಿಲ್ಲ. ಅಣ್ಣಾ ಉಪವಾಸದಲ್ಲೂ ಇದೇ ಆಗಿದ್ದು. ಉಪವಾಸ ಅಣ್ಣಾ ಅವರ ನಿರಂತರ ಅಸ್ತ್ರ ಎನ್ನುವಂತಾಯಿತು. ಒಂದು ರೀತಿಯಲ್ಲಿ ಅಣ್ಣಾ ಅವರ ಉಪವಾಸವನ್ನು ಶಕ್ತಿಕೇಂದ್ರ ನಿರ್ಲಕ್ಷ್ಯಕ್ಕೆ ಯೋಗ್ಯ ಎನ್ನುವಂತೆ ಗ್ರಹಿಸಿತು ಮಾತ್ರವಲ್ಲ ಹಾಗೆಯೇ ನಡೆದುಕೊಂಡಿತು.

ಈ ಘಟನೆವರೆಗೂ ಅತ್ಯಂತ ಸಹನೆಯಿಂದಲೇ ಇದ್ದ ಅಣ್ಣಾ ತಂಡದ ಕೆಲವರಲ್ಲಿ ವ್ಯಕ್ತವಾಗುತ್ತಿದ್ದ ಶಕ್ತಿಕೇಂದ್ರ ಪ್ರವೇಶಮಾಡುವ ಮಾನಸಿಕ ತುಡಿತವನ್ನು ಗ್ರಹಿಸಿ ಜರ್ಝರಿತರಾದರು. ತಾವೇ ಶಕ್ತಿಕೇಂದ್ರ ಪ್ರವೇಶ ಮಾಡಬೇಕೆನ್ನುವ ತುಡಿತ ಜನರಲ್ಲಿ ಹುಟ್ಟುವ ಮುನ್ನವೇ ತಾವೇ ಪ್ರವೇಶಿಸಬೇಕೆನ್ನುವ ತುಡಿತವನ್ನು ಅದುಮಿಟ್ಟುಕೊಳ್ಳಲಾಗದ ಮತ್ತು ಅದೇ ಮೂಲ ಉದ್ದೇಶವಾಗಿದ್ದ ತನ್ನವರ ಆಶಯವನ್ನು ಗ್ರಹಿಸಿದರು ಅಣ್ಣಾ. ಆದರೆ ಆ ತುಡಿತಕ್ಕೆ ಅವರು ಭಾವೋದ್ವೇಗಗೊಂಡದ್ದು ಮಾತ್ರ ಅಚ್ಚರಿಯೆನಿಸಿತು. ಪರ್ಯಾಯ ಶಕ್ತಿ ರೂಪಿಸುವ ಅಣ್ಣಾ ಆಶಯ ತಂಡದ ಕೆಲವರಲ್ಲಿ ಪರ್ಯಾಯ ರಾಜಕೀಯ ಪಕ್ಷವಾಗಿ ಅಂಕುರಿಸಿತು. ಈ ಹಂತದಲ್ಲಿ ನಿಜಕ್ಕೂ ಅಣ್ಣಾ ಎಚ್ಚೆತ್ತುಕೊಂಡರು. ಅಣ್ಣಾ ತಂಡವನ್ನು ವಿಸರ್ಜಿಸಿ ನಿರುಮ್ಮಳರಾದರು. ಇದು ಅವರು ಇಟ್ಟ ಸರಿಯಾದ ಹೆಜ್ಜೆ. ತಂಡವಾಗಿ ಅಣ್ಣಾ ಮತ್ತಷ್ಟು ದಿನ ಮುಂದುವರಿದಿದ್ದರೆ ಅವರಿಗೆ ಗೊತ್ತಿಲ್ಲದಂತೆಯೇ ಮತ್ತೊಂದು ತಪ್ಪಿಗೆ ನಾಂದಿಯಾಗುತ್ತಿದ್ದರು. ಪಕ್ಷ ರಾಜಕಾರಣ, ಅಣ್ಣಾ, ನಿಮ್ಮ ಅಖಾಡವಲ್ಲ. ಹೆಸರಿಲ್ಲದ ಪಕ್ಷಕ್ಕೆ ನೀವೇ ನಾಯಕ. ಪಕ್ಷದ ನಾಯಕಗೆ ಕಾಲಮಿತಿಯಿದೆ. ಜನರ ನಾಯಕ ತಾನೇ ಕಾಲ ನಿರ್ಧರಿಸುತ್ತಾನೆ. ನಿಮ್ಮ ಹಿಂದೆ ಜನರಿರಬೇಕು. ಶಕ್ತಿಕೇಂದ್ರದ ಮುಂದೆ ಉಪವಾಸ ಮಾಡಿ ದೇಹದಂಡಿಸುವುದು ಮುಖ್ಯವಲ್ಲ. ಶಕ್ತಿಕೇಂದ್ರವೇ ಜನರ ಮುಂದೆ ಮಂಡಿಯೂರುವಂತೆ ಮಾಡುವುದು ನಿಮ್ಮ ಗುರಿಯಾಗಬೇಕು ಎಂದು ಅನ್ನಿಸುವುದಿಲ್ಲವೇ?

ಓ ನನ್ನ ಚೇತನ


-ಬಿ. ಶ್ರೀಪಾದ್ ಭಟ್


ಸಂಗೀತವು ಕೇವಲ ಶಬ್ದಗಳು ಮತ್ತು ಬೀಟ್ಸ್ ಮಾತ್ರವಲ್ಲ, ಬದಲಾಗಿ ಸಂಗೀತವೆಂದರೆ ಮತ್ತೊಬ್ಬರ ಭಾವನಾತ್ಮಕ್ಕೆ ವಶವಾಗುವುದು. ಭಾವನೆಗಳನ್ನು ಶಬ್ದಗಳಾಗಿ ಪೋಣಿಸಿದಾಗ ಇಲ್ಲಿ ಆ ಶಬ್ದಗಳೇ ಸಂಗೀತವಾಗುತ್ತದೆ. ಇಲ್ಲಿ ಕೇವಲ 7 ಸ್ವರಗಳು ಮಾತ್ರವಿಲ್ಲ, ಬದಲಾಗಿ ನೂರಾರು ಸಣ್ಣದಾದ ಸ್ವರ ಕಣಗಳು ಸಂಗೀತದ ಆತ್ಮವನ್ನು ಜೀವಂತವಾಗಿರಿಸುತ್ತವೆ. ನನಗೆ ಹಾಡುವುದೆಂದರೆ ನನ್ನ ಆತ್ಮದೊಂದಿಗೆ ಮಾತನಾಡಿದಂತೆ. ಅಂದರೆ ನನ್ನೊಳಿಗಿನೊಂದಿಗೆ ಸಂಪರ್ಕ ಸಾಧಿಸುವುದು. ಶಬ್ದಗಳು ಮತ್ತು ಭಾವನೆಗಳು ಒಂದಕ್ಕೊಂದು ಪೂರಕವಾಗಿ ರಂಜಿಸುವುದರ ವಿರುದ್ಧ ಪ್ರತಿಯೊಬ್ಬ ಸಂಗೀತಗಾರನೂ ಎಚ್ಚರದಿಂದ ಇರಬೇಕು – ಕಿಶೋರಿ ಅಮೋನ್ಕರ್

ಖ್ಯಾತ ಹಿಂದುಸ್ತಾನಿ ಹಾಡುಗಾರ್ತಿ ‘ಕಿಶೋರಿ ಅಮೋನ್ಕರ್’ ಅವರಿಗೆ 80 ವರ್ಷ ತುಂಬಿದೆ. ಕಳೆದ ವರ್ಷ ಕಿಶೋರಿ ತಾಯಿಯವರು 80ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಪುಣೆಯಲ್ಲಿ ಮೂರು ದಿನಗಳ ಸಂಕಿರಣಗಳು ಹಾಗೂ ವಿವಿಧ ಕಲಾವಿದರಿಂದ ಹಿಂದೂಸ್ತಾನಿ ಸಂಗೀತವಿತ್ತು. ಅಲ್ಲದೆ ‘ಕಿಶೋರಿ ಅಮೋನ್ಕರ್’ ಅವರು ತಮ್ಮ 80ನೇ ವಯಸ್ಸಿನಲ್ಲಿ ಹಾಡುವ ಕಾರ್ಯಕ್ರಮವಿತ್ತು. ಇದಕ್ಕೆ ಹೋಗಲಾಗದಿದ್ದಕ್ಕೆ ಬಹಳ ಪರಿತಪಿಸುತ್ತಿದ್ದೆ. ಅಲ್ಲಿಂದ ನನ್ನ ಸ್ನೇಹಿತ ಸುರೇಶ ಇದರ ಲೈವ್ ಕಾಮೆಂಟ್ರಿ ಕೊಡುತ್ತ ನನ್ನೊಳಗೆ ಕಿಚ್ಚನ್ನು ಹತ್ತಿಸುತ್ತಿದ್ದ!!
ನನ್ನಂತಹವರ ಪಾಲಿಗೆ ‘ಕಿಶೋರಿ ಅಮೋನ್ಕರ್’ರವರು ನಿಜದ ನೈಟಿಂಗೇಲ್. ಇವರ ಧ್ವನಿಯಲ್ಲಿ ಭೂಪ್, ಸಂಪೂರ್ಣ ಮಾಲಕೌಂಸ್, ಜಾನ್ಪುರಿ, ಗುರ್ಜರಿ ತೋಡಿ, ಲಲಿತ್, ದೇಷ್ಕರ್, ಭೀಮ್‌ಪಲಾಸ್‌ಗಳಂತಹ ಅಪೂರ್ವ ರಾಗಗಳನ್ನು ಕೇಳಿದಾಗ ಅದು ಕೇವಲ ಕಲಾಪ್ರಜ್ಞೆಯುಳ್ಳ ಅನುಭೂತಿ ಮಾತ್ರವಲ್ಲ, ಜೊತೆಗೆ ಮಹಾನ್ ಸಂತೋಷ, ಆಳವಾದ ನೋವು ಮತ್ತು ಹತಾಶೆಗಳಂತಹ ಸಣ್ಣ ಸಣ್ಣ ವಿವರಗಳು ನಮ್ಮೊಳಗೆ ಆಳವಾಗಿ ಇಳಿದಂತಹ ಅನುಭವ. ಕಿಶೋರಿತಾಯಿಯವರ ಸಂಗೀತದಲ್ಲಿ ಅಧ್ಯಾತ್ಮವು ಅದ್ಭುತ ರೀತಿಯಲ್ಲಿ ಮಿಳಿತಗೊಂಡು ಭಾವೋದ್ರೇಕದ ಆತ್ಯಾನಂದವನ್ನೂ ಮೀರಿ ಮತ್ತೊಂದು ಮಜಲನ್ನು ತಲಪುತ್ತದೆ. ಬಾಗೇಶ್ರೀ ರಾಗವನ್ನು ಹಾಡುವಾಗ ಪಂಚಮವನ್ನು ವಿಸ್ತರಿಸುವುದು ಕಿಶೋರಿತಾಯಿಯವರಿಗೆ ಅದು ಸ್ವರ್ಗದೆಡಗಿನ ಪಯಣದಂತೆ, ಕೇಳುಗರಾದ ನಾವೆಲ್ಲ ಮೋಕ್ಷವನ್ನು ಅರಸಿದಂತೆ! ಕಿಶೋರಿತಾಯಿಯವರ ಜೊತೆಜೊತೆಗೆ ನಾವೂ ಸಹ ಆ ಪಯಣದಲ್ಲಿ ಆಳವಾಗಿ ಭಾಗವಹಿಸಿದಾಗಲೇ ನಮಗೂ ಅದರ ಅನುಭೂತಿ ದೊರಕುತ್ತದೆ.

ಜೈಪುರ ಘರಾಣ ಶೈಲಿಯಲ್ಲಿ ಹಾಡುತ್ತಿದ್ದ ತಮ್ಮ ತಾಯಿ ‘ಮೋಗುಬಾಯಿ ಕುರ್ಡೀಕರ್’ ಅವರ ಬಳಿ ಸಂಗೀತವನ್ನು ಅಭ್ಯಾಸ ಮಾಡಿದ ಕಿಶೋರಿತಾಯಿ ತದನಂತರ ತಮ್ಮ ತಾಯಿಯ ಜೈಪುರ ಘರಾಣದ ಪ್ರಭಾವವನ್ನೂ ಮೀರಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡ ರೀತಿ ಹೃದಯಂಗಮವಾದದ್ದು. ಪು.ಲ.ದೇಶಪಾಂಡೆಯವರು ತಮ್ಮ ಸಮಕಾಲೀನ ಸಂಗೀತಗಾರ್ತಿಯರಾದ ಠುಮ್ರಿಯಲ್ಲಿ ಪರಿಣಿತಿ ಸಾಧಿಸಿದ ಗಿರಿಜಾದೇವಿ, ಶೋಭಾ ಗುರು ರವರಂತೆ ಭಜನ್‌ನಲ್ಲಿ ಪರಿಣಿತಿ ಸಾಧಿಸಿದ ಹಿರಾಬಾಯಿ ಬರೋಡೆಕರ್, ಗಂಗೂಬಾಯಿ ಹಾನಗಲ್‌ರಂತೆ  ಕಿಶೋರಿ ಅಮೋನ್ಕರ್ ಅವರು ಭಿನ್ನವಾಗಿ ನಿಲ್ಲವುದು ಅವರು ಅಪ್ಪಟ ಭಕ್ತಳಂತೆ ರಾಗಗಳನ್ನು ತನ್ನೊಳಗೆ ಅವಾಹಿಸಿಕೊಳ್ಳುವುದರ ಮೂಲಕ. ಇಲ್ಲಿ ವಾಸ್ತವತೆ ಮತ್ತು ಆಧ್ಯಾತ್ಮ ಸಂಯೋಜಗೊಳ್ಳುವ ರೀತಿ ಅವರನ್ನು ತಮ್ಮ ಸಮಕಾಲೀನ ಗಾಯಕಿರೊಂದಿಗೆ ಭಿನ್ನವಾಗಿ ನಿಲ್ಲಿಸುತ್ತದೆ ಎಂದು ಹೇಳುತ್ತಾರೆ. ಇದರಲ್ಲಿ ಅತಿಶಯೋಕ್ತಿಯಿಲ್ಲ. ಕಿಶೋರಿತಾಯಿಯವರು ಖಯ್ಯಾಲ್ ಗಾಯನದಲ್ಲಿ ವಿಳಂಬಿತ್ ತಾಲ್ ಹಾಗೂ ಧೃತ್ ತಾಲ್‌ಗಳನ್ನು ಬಳಸಿಕೊಳ್ಳುವ ರೀತಿಯನ್ನು ಅನುಭವಿಸಿದಾಗ, ಕಡೆಗೆ ಛೋಟೆ ಖಯ್ಯಾಲ್ ಅನ್ನು ಸಂಯೋಜಿಸಿ ಹಾಡುವ ಶೈಲಿಯನ್ನು ಕೇಳಿದಾಗ ಅವರ ಹಿರಿಮೆ ಅರ್ಥವಾಗುತ್ತದೆ.

ಕ್ಲಾಸಿಕ್ ಸಂಗೀತವನ್ನು ಮನರಂಜನೆಯನ್ನಾಗಿ ನೋಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ‘ಕಿಶೋರಿ ಅಮೋನ್ಕರ್’ ಸಹಜವಾಗಿಯೇ ತಮ್ಮ ತೆಳ್ಳಗಿನ ದೇಹ ಹಾಗೂ ಕೋಲು ಮುಖದಿಂದಾಗಿ ಎಂದೂ ಜನಪ್ರಿಯವಾದ ಪ್ರದರ್ಶನದ ಸ್ಟಾರ್ ಆಗಿ ರೂಪಿತಗೊಳ್ಳಲೇ ಇಲ್ಲ. ಇದಕ್ಕೆ ಅವರೊಳಗಿನ ಅಂತರ್ಮುಖೀ ವ್ಯಕ್ತಿತ್ವವೂ ಕಾರಣ. ಹಿಂದೂಸ್ತಾನಿ ಸಂಗೀತವನ್ನು ವಿವರಿಸುವಂತೆ ಕೇಳಿದಾಗ ಕಿಶೋರಿ ತಾಯಿ ನಿರಾಕರಿಸುತ್ತ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದರೆ ನಿನಗೆ ಅದು ಕಣ್ಣಿಗೆ ಸಹ ಕಾಣದು, ಬದಲಾಗಿ ನೀನು ಅದನ್ನು ಆ ಪ್ರೀತಿಯ ತರಂಗಗಳ ಮೂಲಕ ಅನುಭವಿಸಬೇಕಷ್ಟೇ. ಹಿಂದುಸ್ತಾನಿ ಸಂಗೀತವೂ ಸಹ ಅಷ್ಟೇ ಎಂದು ಖಚಿತವಾಗಿ ಹೇಳುತ್ತಿದ್ದರು. ರಸಿಕ ಕೇಳುಗರೆನ್ನುವ ಪದವನ್ನು ತಿರಸ್ಕರಿಸುತ್ತಿದ್ದರು. ವಿಭಾ ಪುರಂದರೆ ಅವರು ಹೇಳಿದಂತೆ, she can say “Yes. I contradict myself. I contain many.”

ಮುಂದುವರೆದು ವಿಭಾ ಪುರಂದರೆ ಅವರು ಹೇಳುತ್ತಾರೆ ಕಿಶೋರಿತಾಯಿಯವರು ತಮ್ಮೊಳಗೆ ಮಗುವನ್ನು, ಮಿಸ್ಟಿಕ್ ಅನ್ನು, ಕಲಾವಿದೆಯನ್ನು ಕೂಡಿಟ್ಟುಕೊಂಡಿದ್ದರು. ಆಕೆ ತನಗೆ ಪರಿಚಿತ ಜಗತ್ತನ್ನು ಪ್ರೀತಿಸುವುದಕ್ಕಿಂತ ತನಗೆ ಅಪರಿಚಿತ ಜಗತ್ತಿನೊಂದಿಗಿನ ಗ್ರಹಿಕೆ ನಿಜಕ್ಕೂ ಮಂತ್ರಮುಗ್ಧಗೊಳಿಸುತ್ತದೆ. ಕಿಶೋರಿತಾಯಿಯವರು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೆ ಈ ಸ್ವರಗಳು ಎಷ್ಟರಮಟ್ಟಿಗೆ ನನಗೆ ಪರಿಚಿತ? ಈ ಸ್ವರಗಳು ತಮ್ಮೊಳಗೆ ವರ್ತಿಸುವ ಬಗೆ ನಾನು ಹೇಗೆ ತಿಳಿದುಕೊಳ್ಳುವುದು? ಒಂದು ಇದನ್ನು ನಾನು ನೋಡುವಂತಾಗಿದ್ದರೆ ಬಹಶ ನಾನು ಈ ಸ್ವರಗಳೊಂದಿಗೆ ಮಾತನಾಡಬಹುದಿತ್ತು. ಸೌಂದರ್ಯದ ಹುಡುಕಾಟ ಕಿಶೋರಿತಾಯಿಯವರನ್ನು ಪಲಾಯನವಾದಿಗಳನ್ನಾಗಿ ಮಾಡಲಿಲ್ಲ. ಅವರ ಪ್ರಕಾರ ಜೀವನದ ಕ್ರೌರ್ಯಗಳಾದ ನೋವುಗಳು, ಹಿಂಸೆ ಮತ್ತು ಕತ್ತಲನ್ನು ಈ ಸಂಗೀತದ ಕಲೆಯು ಸ್ಪರ್ಶಿಸಿದಾಗ ಆ ಕ್ರೌರ್ಯಗಳು ಅಳಸಿಹೋಗುವುದಿಲ್ಲ, ಬದಲಾಗಿ ಆ ಕ್ರೌರ್ಯದಿಂದ ಹೊರಬರುವ ಶಕ್ತಿಯನ್ನು, ಬಲವನ್ನು, ಬೆಳಕನ್ನು ನೀಡುತ್ತದೆ.

ಗುಲಾಬಿಯೊಂದಿಗೆ ಅದರ ಮುಳ್ಳನ್ನು ಮುಟ್ಟಿದಾಗ ಆಗುವ ನೋವು ಶಾಂತಿಯ ಸ್ವರೂಪದ್ದಾಗಿರುತ್ತದೆ ಅದೇ ರೀತಿ ಕಲೆಯೂ ಸಹ. ಮೊನ್ನೆ ಮಂಗಳೂರಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆದ ಅಮಾನುಷ ಹಲ್ಲೆಯನ್ನು ನೋಡಿ ಮನಸ್ಸು ಮುರಿದು ಹೋಗಿತ್ತು. ಗೂಂಡಾಗಳ ಈ ಹಲ್ಲೆಯನ್ನು ಸಾರ್ವಜನಿಕವಾಗಿ ಪ್ರತಿಭಟಿಸಿದರೂ ಮನಸ್ಸಿಗೆ ಸಮಾಧಾನವಿರಲಿಲ್ಲ. ಒಂದು ರೀತಿಯ ಅಪರಾಧ ಮನೋಭಾವ ಕಾಡುತ್ತಲೇ ಇತ್ತು. ಆಗ ನನ್ನ ಚೇತನ ಕಿಶೋರಿತಾಯಿಯ ಧ್ವನಿಯನ್ನು ಆಲಿಸತೊಡಗಿದಾಗ ಆ ಕ್ರೌರ್ಯದಿಂದ ಹೊರಬರುವ ಶಕ್ತಿ, ಮತ್ತು ಬೆಳಕು ಗೋಚರಿಸತೊಡಗಿತು.

ಕಿಶೋರಿ ಅಮೊನ್ಕರ್, ನಿನಗೆ ಸಾವಿರದ ಶರಣು.

ಆರ್.ಎಸ್.ಎಸ್. ಹಿಂದುತ್ವದಲ್ಲಿ ದಲಿತರ ಜೊತೆಗಿನ ವೈವಾಹಿಕ ಸಂಬಂಧಗಳು


-ನವೀನ್ ಸೂರಿಂಜೆ


[ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗರು ಮದುವೆಯಾದರೆ ಅದು ಲವ್ ಜೆಹಾದ್ ಎಂದು ಸಂಘಪರಿವಾರಿಗಳು ಬೊಬ್ಬೆ ಹೊಡೆಯುತ್ತಾರೆ. ಹಿಂದೂ ಮೇಲ್ಜಾತಿಯ ಹುಡುಗಿಯರನ್ನು ದಲಿತರು ಮತ್ತು ಕೆಳ ಜಾತಿಯ ಹುಡುಗರು ಮದುವೆಯಾದರೆ ಸಂಘ ಪರಿವಾರಿಗಳ ನಿಲುವೇನು? ಜಾತಿಗಳನ್ನು ಮರೆತು ಹಿಂದೂಗಳಾದ ನಾವೆಲ್ಲಾ ಒಂದಾಗೋಣ ಎಂದು ಹಿಂದೂ ಸಮಾವೇಶದಲ್ಲಿ ಕರೆ ಕೊಡುವ ಸಂಘಪರಿವಾರ ಜಾತಿ ವ್ಯವಸ್ಥೆಯನ್ನು ಮರೆತು ಅವರಿಗೆ ಬೇಕಾದಾಗ ನೆನಪಿಸಿಕೊಳ್ಳುತ್ತದೆಯೇ ವಿನಹ ಅಂಬೇಡ್ಕರ್ ಹೇಳಿದಂತೆ ಜಾತಿ ವಿನಾಶಕ್ಕೆ ಯತ್ನ ನಡೆಸುವುದಿಲ್ಲ. ಅದಿರಲಿ. ಬೇರೆ ಬೇರೆ ಜಾತಿ, ಧರ್ಮದ ಪ್ರೇಮಿಗಳು ಮನೆ ಮಂದಿ ಅಥವಾ ಸಮಾಜ, ಸಂಘಟನೆಗೆ ಹೆದರಿ ನಮ್ಮಲ್ಲಿಗೆ ಬಂದಾಗ ನಾವು ಗೆಳೆಯರು ಒಟ್ಟಾಗಿ, ಇಲಾಖೆಗಳ ಸಹಕಾರದೊಂದಿಗೆ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇವೆ. ಇಂತಹ ಒಂಬತ್ತು ಮದುವೆ ಮಾಡಿದ ಖುಷಿ ನಮ್ಮಲ್ಲಿದೆ. ಅದರ ಒಂದು ಕಥೆ ಇಲ್ಲಿದೆ. (ಯುವಕ, ಯುವತಿ ಮತ್ತು ಅವರ ತಂದೆ ತಾಯಿಯ ಹೆಸರು ಬದಲಿಸಲಾಗಿದೆ.)]

ಅವಳು ಪೂರ್ತಿ ಥರಗುಟ್ಟುತ್ತಿದ್ದಳು. “ಸಾರ್ ಹೇಗಾದರೂ ಬದುಕಿಸಿ ಸರ್. ಅವರು ತುಂಬಾ ಜನ ಇದ್ದಾರೆ ಸರ್. ಭಜರಂಗದಳದವರು ಸರ್. ಅವರು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ಅವರ ಬಗ್ಗೆ ನಿಮಗೆ ಗೊತ್ತಿಲ್ಲ ಸರ್” ಎಂದು ಅವಳು ಒಂದೇ ಉಸಿರಿಗೆ ಬಡಬಡಾಯಿಸುತ್ತಿದ್ದಳು. ಅವಳ ಆವೇಶದಷ್ಟೇ ಶಾಂತನಾಗಿದ್ದ ನಾನು “ನನಗೆ ಬಜರಂಗದಳದವರು ಚೆನ್ನಾಗಿ ಗೊತ್ತು. ಅವರ ಯಾವ ಲೀಡರ್ ಅಥ್ವಾ ಕಾರ್ಯಕರ್ತ ಬರುವುದಾದರೆ ಬಂದು ನನ್ ಹತ್ರ ಮಾತನಾಡಲಿ. ನೀನು ತಲೆಬಿಸಿ ಮಾಡಬೇಡ. ನಿನ್ನಂತ ಹುಡುಗಿಯರನ್ನು ಹೆದರಿಸುವುದಕ್ಕಷ್ಟೇ ಅವರ ಪರಾಕ್ರಮ. ಆರಾಮ ಇರು,” ಎಂದು ಅವಳನ್ನು ಸಂತೈಸುತ್ತಿದ್ದೆ.

ಈ ಭಜರಂಗಿಗಳಿಂದ ಬೆದರಿಕೆಗೊಳಗಾದವರ ಮನಸ್ಥಿತಿಯೇ ಅಂತದ್ದು. ಒಂದೋ ಬಜರಂಗಿಗಳ ಜೊತೆ ರಾಜಿ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಬೇರೆ ದಾರಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಒಂದು ಕಾಲದಲ್ಲಿ ಕೋಮುವಾದ, ಜಾತಿ ವ್ಯವಸ್ಥೆಯ ವಿರುದ್ದ ಉಗ್ರವಾಗಿ ಭಾಷಣ ಮಾಡುತ್ತಿದ್ದ ಮಂಗಳೂರು ಯೂನಿವರ್ಸಿಟಿ ಫ್ರೋಫೆಸರ್‌ಗಳು ಈಗ ಬಾಯಿ ಮುಚ್ಚಿ ಕುಳಿತಿರುವುದು ಇದೇ ಕಾರಣಕ್ಕೆ. ಭಾಷಣ ಬಿಡಿ. ರಾಜ್ಯದ ಸೃಜನಶೀಲ ಲೇಖಕಿ ನಾಗವೇಣಿ ಬರೆದಿರುವ “ಗಾಂಧಿ ಬಂದ” ಪುಸ್ತಕ ಮಂಗಳೂರು ಯೂನಿವರ್ಸಿಟಿಯ ಪಾಠ ಪುಸ್ತಕವಾಗಿದ್ದು, ಅದನ್ನು ಪಾಠ ಮಾಡಲು ಪ್ರಾಧ್ಯಾಪಕರು ಸಿದ್ದರಿಲ್ಲ. ಕೆಲವು ಪ್ರಾಧ್ಯಾಪಕರು ವೈಯುಕ್ತಿಕವಾಗಿ ಪ್ರಗತಿಪರರಾಗಿದ್ದರೂ ಗಾಂಧಿ ಬಂದ ಪುಸ್ತಕದಲ್ಲಿನ ಜಾತಿಯ ವ್ಯವಸ್ಥೆಯ ಬಗ್ಗೆ ತರಗತಿಯಲ್ಲಿ ಪಾಠ ಮಾಡಿದರೆ ಎಬಿವಿಪಿ ವಿದ್ಯಾರ್ಥಿಗಳ ಮೂಲಕ ಸಂಘಪರಿವಾರ ತನ್ನ ವಿರುದ್ಧ ಎಲ್ಲಿ ಮುಗಿ ಬೀಳುತ್ತೋ ಎಂಬ ಆತಂಕ ಅವರದ್ದು. ಅದಕ್ಕೆ ಗಾಂಧಿ ಬಂದ ಪುಸ್ತಕದ ಉಸಾಬರಿನೇ ಬೇಡ ಎಂದು ಪುಸ್ತಕವನ್ನೆ ಕೆಲವರು ವಿರೋಧಿಸುತ್ತಿದ್ದಾರೆ. ವಿರೋಧ ಮಾಡಲು ಮನಸ್ಸು ಒಪ್ಪದವರು ನಾಗವೇಣಿಯ ಬೆಂಬಲಕ್ಕಂತೂ ನಿಲ್ಲುವುದಿಲ್ಲ. ಅದೆಲ್ಲಾ ಇರಲಿ. ಸಮಾಜದ ಬಲಿಷ್ಠ ವರ್ಗದ ಸ್ಥಿತಿನೇ ಹೀಗಿರಬೇಕಾದರೆ ಬಿ.ಎ. ಓದಿ ಸಿಟಿ ಸೆಂಟರ್ ಮಾಲ್‌ನ ಅಂಗಡಿಯೊಂದರಲ್ಲಿ ಬಿಲ್ಲು ಬರೆಯೋ ಹುಡುಗಿ ಜೀವ ಇನ್ನೆಷ್ಟು ಥರಗುಟ್ಟಿರಬಹುದು ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಲೇ ಅವಳಿಗೆ ಸಮಾಧಾನ ಹೇಳುತ್ತಿದ್ದೆ.

ಅವಳು ಮಂಗಳೂರಿನ ನಂತೂರು ನಿವಾಸಿ ಚಂದ್ರಶೇಖರ ಮತ್ತು ಶಾಂಭವಿಯವರ ಎರಡನೇ ಪುತ್ರಿ. ಹೆಸರು ಚೈತನ್ಯ. ಜಾತಿ ಕೊಟ್ಟಾರಿ. ಕೊಟ್ಟಾರಿ ಸಮುದಾಯ ಎನ್ನುವಂತದ್ದು ತೀರಾ ಅನ್ನುವಷ್ಟಲ್ಲದಿದ್ದರೂ ಹಿಂದುಳಿದಿರುವ ಸಮುದಾಯ. ಹೆಚ್ಚು ಜನಸಂಖ್ಯೆಯನ್ನು ಹೊಂದಿರದ ಒಂದು ಸೂಕ್ಷ್ಮ ಸಂವೇದನೆ ಉಳ್ಳ ಜಾತಿ. ಇವರನ್ನು ಕಂಚಿಗಾರರು ಎಂದೂ ಕರೆಯುತ್ತಾರೆ. ಕಂಚಿನ ಪಾತ್ರೆ, ಮೂರ್ತಿ ಇನ್ನಿತರ ವಸ್ತುಗಳನ್ನು ತಯಾರಿಸುವುದರಿಂದ ವ್ಯವಹಾರಿಕ ಕಲಾಚತುರತೆಯನ್ನು ಹೊಂದಿರುವವರು. ಈ ಸಮುದಾಯಕ್ಕೆ ಅದೇನು ವ್ಯವಹಾರಗಳು ಗೊತ್ತಿದ್ದರೂ ಕೂಡಾ ಇವರೊಂದು ಅಸಂಘಟಿತ ಹಿಂದುಳಿದ ಜಾತಿ ಎನ್ನುವುದರಲ್ಲಿ ಅನುಮಾನ ಇಲ್ಲ. ಈ ಅಸಂಘಟಿತರಾಗಿರುವ ಹಿಂದುಳಿದ ಜಾತಿಗಳನ್ನು ಮೇಲ್ವರ್ಗಗಳು ಬಳಕೆ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಸಮುದಾಯದ ಇಂತಹ ದೌರ್ಬಲ್ಯಗಳನ್ನು ಬಳಸಿಕೊಂಡೇ ಕೊಟ್ಟಾರಿಗಳನ್ನು ಬ್ರಾಹ್ಮಣರು ದೇವಸ್ಥಾನದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಕರಾವಳಿಯ ದೇವಸ್ಥಾನಗಳಲ್ಲಿ ಹಿಂದೆಲ್ಲಾ ಕಂಚಿನ ಮೂರ್ತಿಯನ್ನು ಪ್ರತಿಷ್ಟಾಪಿಸುವುದೆಂದರೆ ಅದೊಂದು ಪ್ರತಿಷ್ಠೆಯ ವಿಷಯ. ಬ್ರಾಹ್ಮಣರಲ್ಲಿ ಮತ್ತು ಮೇಲ್ವರ್ಗಗಳಲ್ಲಿ ಅಂತಹ ಪ್ರತಿಷ್ಠೆ ಮೇಳೈಸಿದಾಗೆಲ್ಲಾ ಕಂಚಿಗಾರರು ಬಳಸಲ್ಪಡುತ್ತಿದ್ದರು. ಈಗೆಲ್ಲಾ ದೇವಸ್ಥಾನದಲ್ಲಿ ಚಿನ್ನ ಬೆಳ್ಳಿಯದ್ದೇ ಮೂರ್ತಿಗಳಾಗಿದ್ದರಿಂದ ಕೊಟ್ಟಾರಿಗಳು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಹಿಂದುಳಿದ ಸಮುದಾಯವಾದ ಕೊಟ್ಟಾರಿಗಳನ್ನು ಬಳಸಿಕೊಳ್ಳುವ ಕೆಲಸವನ್ನು ಸಂಘಪರಿವಾರ ಮುಂದುವರಿಸುತ್ತಿದೆ. ಈ ಕಾರಣಕ್ಕಾಗಿಯೇ ಕೊಟ್ಠಾರಿ ಸಮುದಾಯದ ಹೆಚ್ಚಿನ ಯುವಕರು ಭಜರಂಗದಳ, ವಿಶ್ವಹಿಂದೂ  ಪರಿಷತ್‌ನಂತಹ ಆರ್.ಎಸ್.ಎಸ್.ನ ಘಟಕಗಳಲ್ಲಿ ಕಾರ್ಯಕರ್ತರಾಗಿ ಇದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ನಾಯಕರಾಗಿಯೂ ಬೆಳೆದಿದ್ದಾರೆ. ಆದರೆ ಇವರೆಲ್ಲರನ್ನೂ ನಿಯಂತ್ರಿಸುವುದು ಆರ್.ಎಸ್.ಎಸ್‌ನ ಭಟ್ಟರು. ಎಂತಹ ಕೆಳವರ್ಗದ ಮಂದಿ ನಾಯಕರಾದರೂ ಭಟ್ಟರ ಪಾಲಿಗೆ ಅವರೆಲ್ಲಾ ಕಾರ್ಯಕರ್ತರೇ !

ಈ ರಾಜಕೀಯಗಳೆಲ್ಲಾ ಕೊಟ್ಟಾರಿ ಸಮುದಾಯದ ನಾಯಕರಿಗೇ ಅರ್ಥ ಆಗುವುದಿಲ್ಲ. ಇನ್ನು ಚೈತನ್ಯಳಿಗೆಲ್ಲಿ ಅರ್ಥ ಆಗಬೇಕು. ಅವಳಿಗೆ ಹೆಚ್ಚೆಂದರೆ 23 ವರ್ಷ ವಯಸ್ಸು. ಬಲ್ಮಠದ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಆಕೆ ಕೆಲಸಕ್ಕೆ ಸೇರಿದ್ದು ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ವಸ್ತ್ರದ ಅಂಗಡಿಯಲ್ಲಿ. ಸಿಟಿ ಸೆಂಟರ್ ಮಾಲ್‌ನ ಆಕರ್ಷಣೆಯೇ ಅಂತದ್ದು. ಆ ಮಾಲ್ ಕಟ್ಟುತ್ತಾ ಇರಬೇಕಾದರೆ ಸಿನೇಮಾದಲ್ಲಿ ಬರುವ ಭೂತ ಬಂಗಲೆಯಂತೆ ಮಾಲ್ ಗೋಚರಿಸುತ್ತಿತ್ತು. ಪೂರ್ಣ ಸಿದ್ದಗೊಂಡ ನಂತರ ಅದೊಂದು ಹೊಸ ಲೋಕ ತೆರೆದುಕೊಂಡಂತೆ ಬಾಸವಾಗೋ ರೀತಿ ಎದ್ದು ನಿಂತಿತು. ಅಲ್ಲಿ ಹೋದವರೆಲ್ಲಾ ಹೊಸತೊಂದು ಭ್ರಮಾಲೋಕದಲ್ಲಿ ವಿಹರಿಸುತ್ತಾರೆ. ಇದೇ ಕಾರಣಕ್ಕೋ ಏನೋ ಈ ಸಿಟಿ ಸೆಂಟರ್ ಮಾಲ್‌ನ ಯಾವ ಅಂಗಡಿಗೆ ಅಧಿಕಾರಿಗಳು ರೈಡ್ ಮಾಡಿದರೂ ಅಂಗಡಿ ಮುಚ್ಚುವುದಿಲ್ಲ. ಅಷ್ಟೊಂದು “ವ್ಯವಹಾರಗಳು” ಈ ಮಾ‍ಲ್‌ನಲ್ಲಿ ನಡೆಯುತ್ತದೆ. ಈ ಮಾಲ್‌ಗೆ ಆಕ್ಯೂಪೆನ್ಸಿ ಸರ್ಟಿಫಿಕೇಟ್ ಆಗ್ಲೀ, ಫೈರ್ ಎನ್ಒಸಿ ಆಗ್ಲಿ ಇಲ್ಲದೇ ಇದ್ದರೂ ಈ ಕಟ್ಟಡವನ್ನು ಯಾವ ಇಲಾಖೆಯ ಜೆಸಿಬಿಗಳೂ ಮುಟ್ಟುವುದಿಲ್ಲ. ಅರ್ಧ ರಸ್ತೆಯನ್ನು ಆಕ್ರಮಿಸಿ ನಿಯಮ ಮೀರಿ ಹೆಚ್ಚುವರಿ ಫ್ಲೋರ್‌ಗಳನ್ನು ಹೊಂದಿರುವ ಕಟ್ಟಡವನ್ನು ಯಾವ ಜಿಲ್ಲಾಧಿಕಾರಿಯೂ ಕನಿಷ್ಠ ಪ್ರಶ್ನೆ ಮಾಡುವುದಿಲ್ಲ. ಇಂತಿಪ್ಪ ಪ್ರಭಾವಿ ಮಾಲ್‌ನಲ್ಲಿ ದಿನವಿಡೀ ರಂಗು ರಂಗಿನ ಕಳೆ ಏರಿಸೋದು ಇಲ್ಲಿಗೆ ಬರೋ ಜೋಡಿಗಳು. ಅದೆಂಥಾ ಜೋಡಿಗಳು ಅಂತೀರಾ? ಕಾರವಾರದ ಓಂ ಬೀಚ್‌ಗೆ ಪೈಪೋಟಿ ಕೊಡೋ ರೀತಿಯ ಡ್ರೆಸ್ ತೊಟ್ಟುಕೊಂಡ ಜೋಡಿಗಳು ಇಲ್ಲಿಗೆ ಬರುತ್ತದೆ. ಆಶ್ಲೀಲವಾಗಿ ಡ್ರೆಸ್ ತೊಟ್ಟುಕೊಂಡು ಕುಡಿಯುತ್ತಿದ್ದರು ಎಂದು ಆರೋಪಿಸಿ ಪಬ್‌ಗೆ ದಾಳಿ ಮಾಡಿದ್ದ ಹಿಂದೂ ಸಂಘಟನೆಗಳು ಸಿಟಿ ಸೆಂಟರ್ ಮಾಲ್ ವಿಷಯದಲ್ಲಿ ಮಾತ್ರ ತೆಪ್ಪಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸಿಟಿ ಸೆಂಟರ್ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಇರುವುದೇ ಭಜರಂಗದಳದ ಮುಖಂಡನಿಗೆ. ಮಾಲ್‌ನಲ್ಲಿ ಸಣ್ಣ ಗಲಾಟೆ ಆದರೂ ಸೆಕ್ಯೂರಿಟಿ ಕಾಂಟ್ರಾಕ್ಟ್ ಕ್ಯಾನ್ಸಲ್ ಆಗುತ್ತದೆ. ಹಾಗಾಗಿ ಮಾಲ್‌ನಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕ ಆರಾಮಾವಾಗಿ ವಿಹರಿಸಬಹುದು. ಈ ಭಜರಂಗಿ ಸರ್ಪಗಾವಲಿನಲ್ಲಿರೋ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚೈತನ್ಯಳಿಗೆ ಪ್ರದೀಪ್ ಎಂಬ ಯುವಕ ಪರಿಚಿತನಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರೇಮಕ್ಕೆ ಪರಿವರ್ತನೆಯಾಗಿತ್ತು. ಸಮಸ್ಯೆ ಸೃಷ್ಠಿಯಾಗಿರುವುದೇ ಇಲ್ಲಿ. ಪ್ರದೀಪ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದು, ದೈವಕ್ಕೆ ಕೋಲ ಕಟ್ಟುವ ಪರವ ಜಾತಿಯವನು.

ತೆಳು ಕಪ್ಪಗಿದ್ದರೂ ಸ್ಪುರದ್ರೂಪಿಯಾಗಿದ್ದ ಪ್ರದೀಪ ತನ್ನ ಮನೆ ಹಿರಿಯರಂತೆ ಕೋಲ ಕಟ್ಟುವ ವೃತ್ತಿಗೆ ಹೋಗಿರಲಿಲ್ಲ. ಕಾಲೇಜು ಶಿಕ್ಷಣ ಮುಗಿಸಿದ ನಂತರ ಸಂಗೀತದತ್ತ ಒಲವು ತೋರಿಸಿದ್ದ. ಸಂಗೀತವನ್ನು ಅರಗಿಸಿಕೊಂಡ ಈತ ಉದಯೋನ್ಮುಖ ಕಲಾವಿದನಾಗಿ ಬೆಳೆದ. 28 ವಯಸ್ಸಿಗೆಲ್ಲಾ ಸಂಗೀತವನ್ನೇ ವೃತ್ತಿಯನ್ನಾಗಿಸೋ ಮಟ್ಟಕ್ಕೆ ಬೆಳೆದ. ಮದುವೆ ಸಮಾರಂಭ, ಮನೊರಂಜನಾ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ. ಇವನ ಪ್ರತಿಭೆ, ಅಂದ, ಚೆಂದ, ಮೈಕಟ್ಟು, ಬುದ್ಧಿಮತ್ತೆಗೆ ಕ್ಲೀನ್ ಬೌಲ್ಡ್ ಆಗಿದ್ದ ಚೈತನ್ಯ ಪ್ರದೀಪನ ಜೊತೆ ಕರಗಿ ಹೋಗಿದ್ದಳು. ಪ್ರೀತಿ ಸಮಸ್ಯೆಯಾಗಿ ಕಂಡಿದ್ದೇ ಅವಳಿಗೆ ಮನೆಯವರು ಗಂಡು ಹುಡುಕಲು ಪ್ರಾರಂಭ ಮಾಡಿದಾಗ. ಬಂದ ಎಲ್ಲಾ ಪ್ರಪೋಸಲ್‌ಗಳನ್ನು ನಿರಾಕರಿಸಿದ ಚೈತನ್ಯಳಿಗೆ ತಾನು ಪ್ರೇಮಿಸುತ್ತಿರುವ ವಿಚಾರ ಹೇಳಲು ಅಳಕು. ಹಾಗಂತ ತಂದೆ ತಾಯಿ ನೋಡಿದ ಸಂಬಂಧ ಒಪ್ಪುವಂತೆಯೂ ಇಲ್ಲ. ಕೊನೆಗೊಂದು ದಿವಸ ಹೇಳಿ ಬಿಟ್ಟಳು. ತಾನು ಪ್ರದೀಪನನ್ನು ಪ್ರೀತಿಸುವುದಾಗಿಯೂ ಆತ ಪರವ ಜಾತಿಗೆ ಸೇರಿದವನಾಗಿಯೂ ತಂದೆ ತಾಯಿಗೆ ಹೇಳಿದಳು. ಮನೆಯಲ್ಲೊಂದು ದೊಡ್ಡ ರಂಪಾಟವೇ ನಡೆಯಿತು. ಪ್ರದೀಪನ ಜೊತೆ ಪ್ರೀತಿ ಮುಂದುವರಿಸಿದ್ದೇ ಆದಲ್ಲಿ ಒಂದೋ ನೀನು ಬದುಕಬೇಕು. ಇಲ್ಲವಾದಲ್ಲಿ ನಾವು ಬದುಕಬೇಕು ಎಂಬಲ್ಲಿಯವರೆಗೆ ತಂದೆ ಮಾತನಾಡಿ ಬಿಟ್ಟಿದ್ದರು. ಇದೆಲ್ಲಾ ನಡೆದ ಮರುದಿನ ಚೈತನ್ಯ ಸಿಟಿ ಸೆಂಟರ್‌ನ ಅಂಗಡಿಗೆ ಕೆಲಸಕ್ಕೆ ಹೋದವಳು ಮನೆಗೆ ಹೋಗಲಿಲ್ಲ. ನೇರವಾಗಿ ತನ್ನ ಗೆಳತಿ ಇರೋ ಪಿಜಿಯಲ್ಲಿ ಉಳಿದುಕೊಂಡಳು.

ಮನೆಗೆ ಬಾರದ ಚೈತನ್ಯಳನ್ನು ಆ ದಿನ ಸಂಜೆಯಿಂದಲೇ ಹುಡುಕಲು ಶುರುವಿಟ್ಟುಕೊಂಡರು. ಪೊಲೀಸರಿಗೆ ದೂರು ನೀಡುವಂತಿಲ್ಲ. ಮನೆಯ ಮರ್ಯಾದೆಯ ಪ್ರಶ್ನೆ. ಪೊಲೀಸರು ಹುಡುಕಿ ತಂದು ಕೊಟ್ಟರೂ ಮತ್ತೆ ಯಾರೂ ಆಕೆಯನ್ನು ನಮ್ಮ ಜಾತಿಯಲ್ಲಿ ಮದುವೆಯಾಗಲು ಮುಂದೆ ಬರುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ದೂರು ನೀಡಿದ ತಕ್ಷಣ ಮರುದಿನ ಯಾವುದಾದರೊಂದು ಪತ್ರಿಕೆಯ ಅಪರಾಧ ಪೇಜ್‌ನಲ್ಲಿ ಸುದ್ಧಿ ಪ್ರಕಟವಾಗಿರುತ್ತದೆ. ಅದರ ಉಸಾಬರಿಯೇ ಬೇಡವೆಂದು ಮನೆ ಮಂದಿಯೇ ಚೈತನ್ಯಳನ್ನು ಹುಡುಕಲು ಶುರು ಮಾಡಿದ್ದರು. ಮನೆ ಮಂದಿ ಮಾತ್ರ ಅಲ್ಲ ಒಂದಿಡೀ ಭಜರಂಗಿ ಸೇನೆಯೇ ಈಕೆಯ ಬೆನ್ನು ಬಿದ್ದಿತ್ತು. ಭಜರಂಗದಳದ ಮುಖಂಡನೆ  ಹೆಂಡತಿಯ ಕಡೆಯಿಂದ ಚೈತನ್ಯ ಸಂಬಂಧಿಯಾಗಬೇಕು. ಆ ನಿಟ್ಟಿನಲ್ಲಿ ಹುಡುಕಾಟ ಪ್ರಾರಂಭವಾಗಿತ್ತು. ಚೈತನ್ಯ ಮತ್ತು ಪ್ರದೀಪ ನೇರವಾಗಿ ಮಹಿಳಾ ವಕೀಲರೊಬ್ಬರಲ್ಲಿಗೆ ಬಂದು ಅಹವಾಲು ಹೇಳಿಕೊಂಡು ಮದುವೆಗೆ ಸಹಕರಿಸುವಂತೆ ಕೇಳಿದ್ದಾಳೆ. ಮದುವೆಯಾಗಬೇಕಾದರೆ ಕನಿಷ್ಠ ವಿಳಾಸದ ದಾಖಲೆಗಳು ಮತ್ತು ವಯಸ್ಸಿನ ದೃಡೀಕರಣದ ದಾಖಲೆಗಳು ಬೇಕಾಗುತ್ತದೆ. ಚೈತನ್ಯಳ ಎಲ್ಲಾ ದಾಖಲೆಗಳ ಮೂಲ ಪ್ರತಿ ಮನೆಯಲ್ಲಿದೆ. ನಕಲು ಪ್ರತಿ ಸಿಟಿ ಸೆಂಟರ್ ಮಾಲ್‌ನಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿದೆ. ಆ ಅಂಗಡಿಗೆ ಹೋಗಿ ದಾಖಲೆಗಳನ್ನು ತರುವಂತೆ ಇಲ್ಲ. ಯಾಕೆಂದರೆ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಭಜರಂಗದಳದ್ದಾಗಿತ್ತು. ಕೈಯ್ಯಲ್ಲಿ ವಾಕಿಟಾಕಿ ಹಿಡಿದುಕೊಂಡಿದ್ದ ಸೆಕ್ಯೂರಿಟಿ ಹುಡುಗರಲ್ಲಿ ಈಗ ಚೈತನ್ಯಳ ಫೋಟೋ ಕೂಡಾ ಇದೆ. ಸಾಲದ್ದಕ್ಕೆ ಅಂಗಡಿಯ ಬೇರೆ ಸಿಬ್ಬಂದಿಯಲ್ಲಿ ಚೈತನ್ಯಳ ಬಗ್ಗೆ ಮಾಹಿತಿ ಸಿಕ್ಕರೆ ನೀಡುವಂತೆ ಬೆದರಿಸಲಾಗಿತ್ತು.

ಚೈತನ್ಯ ಭೇಟಿ ಮಾಡಿದ ಮಹಿಳಾ ವಕೀಲರ ಪತಿ ನರೇಂದ್ರ ನಾಯಕ್ ಪ್ರಸಿದ್ಧ ವಿಚಾರವಾದಿ ಸಂಘದ ಮುಖಂಡರು. ವಿಚಾರವಾದಿಯಾಗಿದ್ದರಿಂದ ಕೆಲವೊಂದು ಎಡ ಯುವ ಸಂಘಟನೆಗಳ ಜೊತೆ ಅವರು ಸಂಪರ್ಕ ಇರಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಎಡ ಯುವ ಸಂಘಟನೆಯೊಂದರ ಜಿಲ್ಲಾ ಅಧ್ಯಕ್ಷ ಮುನೀರ್‌ಗೆ ಈ ಪ್ರಕರಣ ವಿವರಿಸಿದ್ದರು. ಮುನೀರ್ ನನಗೆ ಕರೆ ಮಾಡಿ ಈ ಪ್ರಕರಣದ ಬಗ್ಗೆ ಚರ್ಚಿಸಿದ್ದ. ಮುನೀರ್ ಎಡ ಯುವ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದು, ಆತನಿಗೆ ಒಂದಷ್ಟು ಹುಡುಗರನ್ನು ಕರೆದುಕೊಂಡು ಅಂಗಡಿಗೆ ಹೋಗಿ ದಾಖಲೆ ವಶಪಡಿಸಿಕೊಂಡು ಮದುವೆ ಮಾಡ್ಸೋದು ಅಥವಾ ಪೊಲೀಸರಿಗೆ ಅಧಿಕೃತವಾಗಿ ದೂರು ಕೊಟ್ಟೂ ಮದುವೆ ಮಾಡ್ಸೋದು ದೊಡ್ಡ ವಿಚಾರವಲ್ಲ. ಆದರೆ ಈ ರೀತಿ ಮಾಡಿದಾಗ ಎಡವಟ್ಟುಗಳಾಗುವುದೇ ಜಾಸ್ತಿ. ಹುಡುಗಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಸಂಘಟನೆಯ ಯುವಕರನ್ನು ಕಳುಹಿಸಿ ದಾಖಲೆ ವಶಪಡಿಸಿಕೊಂಡರೆ ಜಗಳ ಆಗೋ ಸಾಧ್ಯತೆ ಇರುತ್ತದೆ. ಆಗ ಬಿಟ್ಟಿ ಪ್ರಚಾರ ದೊರೆತು ಸುದ್ಧಿಯಾಗುತ್ತದೆ ಮತ್ತು ದೂರು ದಾಖಲಾಗುತ್ತದೆಯೋ ಹೊರತು ಮದುವೆ ಆಗುವುದಿಲ್ಲ. ಇನ್ನು ಪೊಲೀಸರಿಗೆ ಅಧಿಕೃತ ದೂರು ನೀಡಿ ರಿಜಿಸ್ಟರ್ ಮಾಡ್ಸೋಣ ಅಂದರೆ ಪೊಲೀಸರು ಎರಡೂ ಕಡೆಯ ಮನೆಯವರನ್ನು ಕರೆಸುತ್ತಾರೆ. ಪೊಲೀಸರ ಎದುರು ಮನೆಯವರು ಮದುವೆಗೆ ಒಪ್ಪಿದಂತೆ ನಾಟಕವಾಡಿ “ಒಂದು ಐದು ತಿಂಗಳ ಕಾಲಾವಕಾಶ ಕೊಡಿ. ನಾವು ಮಗಳನ್ನು ಚಿಕ್ಕಂದಿನಿಂದ ಕಷ್ಟಪಟ್ಟು ಬೆಳೆಸಿದ್ದೇವೆ. ನಮ್ಮ ಮನೆಯ ಮರ್ಯಾದೆಯೂ ಮುಖ್ಯ ಅಲ್ವ. ಅವಳು ಪ್ರೀತಿಸಿದ ಹುಡುಗನಿಗೇ ಮದುವೆ ಮಾಡಿಕೊಡುತ್ತೇವೆ. ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಿ ವ್ಯವಸ್ಥಿತವಾಗಿ ಅರೇಂಜ್ಡ್ ಮ್ಯಾರೇಜ್ ಮಾಡುತ್ತೇವೆ. ಒಂದು ಐದು ತಿಂಗಳು ಕಾಯೋಕೆ ಆಗಲ್ವ. ನಾನು ಆಕೆಯನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಪೊಷಿಸಿದ್ದೇನೆ. ಐದು ತಿಂಗಳು ಟೈಮ್ ಕೊಡಿ ಪ್ಲೀಸ್,” ಎಂದು ಅಳುತ್ತಾರೆ. ಆ ಕ್ಷಣಕ್ಕೆ ಹುಡುಗಿಯ ತಾಯಿ ಹೇಳುವುದು ಸರಿ ಅನ್ನಿಸುತ್ತದೆ. ಮನೆಯವರೇ ಮದುವೆ ಮಾಡಿಕೊಡುತ್ತೇನೆ ಎಂದ ಮೇಲೆ ಯಾರು ಏನೂ ಮಾತಾಡೋಕೆ ಇರುವುದಿಲ್ಲ. ಹುಡುಗಿಯನ್ನು ಅವರ ಜೊತೆಯೇ ಪೊಲೀಸರು ಕಳುಹಿಸುತ್ತಾರೆ. ಮನೆಗೆ ಕಳುಹಿಸಿದ ಹತ್ತೇ ದಿನದಲ್ಲಿ ದೂರದ ಜಿಲ್ಲೆಯ ಹುಡುಗನನ್ನು ಹುಡುಕಿ ಹುಡುಗಿಗೆ ಬಲವಂತದ ಮದುವೆ ಮಾಡುತ್ತಾರೆ. ಇಂತಹ ಹಲವಾರು ಪ್ರಕರಣಗಳು ನಮ್ಮ ಮುಂದೆ ಇದ್ದಿದ್ದರಿಂದ ಮತ್ತೆ ಅಂತಹ ತಪ್ಪುಗಳನ್ನು ಮಾಡಬಾರದು ಎಂದು ಕೊಂಡೆವು. ಅದಕ್ಕಿಂತಲೂ ಮುಖ್ಯವಾಗಿ ಮುನೀರ್ ಒಬ್ಬ ಜಾತಿ, ಧರ್ಮವನ್ನು ಮೀರಿ ಬೆಳೆದ ಪಕ್ಕಾ ಕಮ್ಯೂನಿಷ್ಟ್ ಯುವಕನಾಗಿದ್ದರೂ “ಹಿಂದೂಗಳ ಮದುವೆಯ ಉಸಾಬರಿ ಆ ಬ್ಯಾರಿಗೆ ಯಾಕಂತೆ?” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನ ಮೂದಲಿಸದೆ ಇರುವಷ್ಟು ಪ್ರಜ್ಞಾವಂತರಲ್ಲ. ಆದುದರಿಂದಲೇ ಆತ ಮದುವೆಯ ಉಸ್ತುವಾರಿಯನ್ನು ನನ್ನ ಹೆಗಲಿಗೆ ಹಾಕಿದ.

ದಲಿತ ಯುವಕ ಮತ್ತು ಕೊಟ್ಟಾರಿ ಯುವತಿಯ ಮದುವೆ ಮಾಡುವುದು ಎಂದರೆ ಅದೊಂದು ಸಣ್ಣ ರೀತಿಯ ಸಾಮಾಜಿಕ ಕ್ರಾಂತಿ ಎಂದೆಣಿಸಿತು. ಬಹುತೇಕ ಕ್ರಾಂತಿ ವಿವಾದಾಸ್ಪದವಾಗಿರುತ್ತದೆ ಎಂಬಂತೆ ಇದೊಂದು ವಿವಾದಾಸ್ಪದ ವಿಷಯ ಕೂಡಾ. ಅದಕ್ಕಾಗಿ ಯಾವುದಕ್ಕೂ ಮೊದಲು ಯುವತಿ ಜೊತೆ ಮಾತನಾಡೋಣ ಎಂದುಕೊಂಡು ನಾನು ವಿಚಾರವಾದಿಗಳ ಸಂಘದ ಮುಖಂಡ ನರೇಂದ್ರ ನಾಯಕ್ರಿಗೆ ಫೋನಾಯಿಸಿದೆ. ಎರಡೇ ರಿಂಗ್‌ನಲ್ಲಿ ಫೋನ್ ರಿಸೀವ್ ಮಾಡಿದ ಅವರು “ಎಂತದ್ದು ಮಾರಾಯ. ಎಲ್ಲಿದ್ದಿ. ಒಂದು ಉಪಕಾರ ಆಗಬೇಕಿತ್ತು. ಒಂದು ಹುಡುಗಿಯ ಸರ್ಟಿಫಿಕೇಟ್ ಅವಳ ಅಂಗಡಿಯಲ್ಲಿ ಇದೆ. ಅದನ್ನು ತೆಗೆಸಿಕೊಡಬೇಕು. ನೀವು ಟೀವಿಯವರಲ್ವಾ. ನೀವು ಹೋದರೆ ತಕ್ಷಣ ಕೊಡ್ತಾರೆ,” ಅಂದರು. “ಸರಿ ಸರ್. ಆ ಹುಡುಗೀನ ಕಳುಹಿಸಿ. ನಾನು ಸಿಟಿ ಸೆಂಟರ್ ಪಕ್ಕ ನಿಂತಿರುತ್ತೇನೆ,” ಎಂದೆ. ಒಂದು ಹತ್ತು ನಿಮಿಷದಲ್ಲಿ ರಿಕ್ಷದಿಂದ ಇಳಿದ ಹುಡುಗಿ ನನ್ನ ಮೊಬೈಲ್‌ಗೆ ಕರೆ ಮಾಡಿದಳು. ನನ್ನೆದುರೇ ಅವಳ ರಿಕ್ಷಾ ನಿಂತಿದ್ದರೂ ನನಗೆ ಅವಳ ಮುಖ ಪರಿಚಯ ಇಲ್ಲದೇ ಇದ್ದುದರಿಂದ ಅವಳ ಮೊಬೈಲ್ ಕರೆ ಅವಳ ಗುರುತು ಹಿಡಿಯಲು ಸಹಕರಿಸಿತ್ತು. ಬಂದವಳೇ “ನಾಯಕರು ನಿಮ್ಮಲ್ಲಿಗೆ ಕಳುಹಿಸಿದ್ದು. ಹೆಸರು ಚೈತನ್ಯ,” ಎಂದು ಪರಿಚಯಿಸಿಕೊಂಡಳು. ನಂತರ ತನ್ನ ಪ್ರೇಮ ಪುರಾಣವನ್ನು ಒಂದೇ ಉಸಿರಲ್ಲಿ ಹೇಳಿ ಮುಗಿಸಿದವಳೇ ಮತ್ತೆ ಅಲ್ಲಿಂದ ಹೊರಡಲು ಅವಸರಿಸಿದಳು. “ನಿಮಗೆ ಗೊತ್ತಿಲ್ಲ. ಅವರು ಬಜರಂಗದಳದವರು. ಅವರಲ್ಲಿ ತುಂಬಾ ಜನ ಇದ್ದಾರೆ. ನನ್ನನ್ನು ರಸ್ತೆ ಬದಿ ನೋಡಿದರೆ ಕಿಡ್ನ್ಯಾಪ್ ಮಾಡುತ್ತಾರೆ. ಪೊಲೀಸರೂ ಅವರ ಪರವೇ ಇದ್ದಾರೆ. ಪ್ಲೀಸ್ ಇಲ್ಲಿಂದ ಬೇರೆ ಕಡೆ ಹೋಗೋಣಾ. ಅಲ್ಲಿ ಮಾತಾಡೋಣಾ ಸರ್,” ಎಂದು ಚಟಪಡಿಸಲು ಶುರುವಿಟ್ಟುಕೊಂಡಳು. “ನೋಡು ನಾನು ಪತ್ರಕರ್ತ. ಎಲ್ಲಾ ಧರ್ಮದ ಸಂಘಟನೆಗಳ ಎಲ್ಲರ ಪರಿಚಯ ನನಗಿದೆ. ಸುಮ್ಮನೆ ನಿಂತುಕೊ. ಮಾಲ್‌ನ ಅಂಗಡಿಯಿಂದ ತರಬೇಕಾದ ಸರ್ಟಿಫಿಕೇಟ್‌ಗಳ ಬಗ್ಗೆ ಏನು ಮಾಡಬೇಕು ಎಂದು ಯೋಚಿಸುವ,” ಎಂದೆ. ನನಗೆ ಸರ್ಟಿಫಿಕೇಟ್ ತರಲು ಏನು ಮಾಡಬೇಕು ಎಂದು ಒಂದು ಕ್ಷಣ ಹೊಳೆಯಲೇ ಇಲ್ಲ. ನಾನು ಪತ್ರಕರ್ತ, ನನಗೆ ಯಾರೂ ಏನೂ ಮಾಡುವುದಿಲ್ಲ ಎಂದು ಅವಳಲ್ಲಿ ಜಂಭ ಕೊಚ್ಚಿಕೊಂಡಿದ್ದರೂ ಒಬ್ಬನೇ ಅಂಗಡಿಗೆ ಹೋಗಿ ಮಾತನಾಡುವುದು ಪ್ರ್ಯಾಕ್ಟಿಕಲ್ ಆಗಿ ಕಷ್ಟಸಾಧ್ಯ ಅನ್ನಿಸಿತು ಆ ಸಂಧರ್ಭ. ಬೇರೆ ಟಿವಿ ಚಾನಲ್‌ನ ವರದಿಗಾರರನ್ನು ಕರೆಯೋಣ ಎಂದರೆ ಅವರು ಈ ಪ್ರಕರಣವನ್ನು ಸುದ್ದಿಯಾಗಿ ನೋಡಿ ಟಿ.ಆರ್.ಪಿ ಕುತಂತ್ರ ಹಾಕಿದರೆ ಹುಡುಗಿಯ ಬದುಕಿನ ಗತಿಯೇನು ಎಂಬ ಹೆದರಿಕೆ. ಕೊನೆಗೆ ಸರಿಯಾಗಿ ಪರಿಚಯ ಇಲ್ಲದ ಹುಡುಗಿ ಜೊತೆ ನಾನೊಬ್ನೆ ಇರುವುದು ಬೇಡ ಎಂದು ಇಂಗ್ಲೀಷ್ ಪತ್ರಿಕೆಯ ವರದಿಗಾರ್ತಿಯಾಗಿದ್ದ ಅನಿಷಾ ಶೇಟ್‌ಗೆ ಕಥೆ ಹೇಳಿ ಅವಳನ್ನು ಕರೆಸಿಕೊಂಡೆ. ಅವಳು ಅವಳಪ್ಪನ ಕಾರಿನಲ್ಲಿ ನೇರವಾಗಿ ನಾವಿದ್ದ ಕೆ ಎಸ್ ರಾವ್ ರೋಡ್‌ಗೆ ಬಂದಳು. “ಅಬ್ಬಾ” ಅನ್ನಿಸಿತು. ಅವಳ ಕಾರಿನಲ್ಲೇ ಇಬ್ಬರೂ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು. ಅನಿಷಾಳಿಗೆ ಕತೆ ಅರ್ಥ ಆಗುವುದು ಸ್ವಲ್ಪ ತಡ. ಅದಕ್ಕಾಗಿ ಅನಿಷಾ ಕತೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದಳು. ಮಧ್ಯೆ ಮಧ್ಯೆ ಪ್ರಶ್ನೆ ಕೇಳುತ್ತಿದ್ದಳು. “ಅಯ್ಯೋ… ಇವಳಿಗೆ ಅರ್ಥನೇ ಆಗ್ತಿಲ್ವಲ್ಲಪ್ಪೋ… ಎಷ್ಟು ಪ್ರಶ್ನೆ ಕೇಳ್ತಾಳೆ” ಅಂತ ನನಗೆ ತಲೆಬಿಸಿಯಾದರೂ ಅವಳ ಪ್ರಶ್ನೆಗಳಿಂದಾಗಿ ನನಗೆ ಇನ್ನಷ್ಟೂ ತಿಳಿಯಲು ಅವಕಾಶ ಆಗುತ್ತಿತ್ತು ಎಂಬುದು ಬೇರೆ ವಿಚಾರ. ಅಂದ ಹಾಗೆ ಅನಿಷಾ “ದ ಹಿಂದೂ” ಪತ್ರಿಕೆಯಲ್ಲಿ ವರದಿಗಾರಳಾಗಿದ್ದಳು. ಜನಪರ, ಜೀವಪರ, ಪರಿಸರ ಪರ, ಮಾನವ ಹಕ್ಕುಗಳ ಪರವಾದ ಎಂತಹ ರಿಸ್ಕ್‌ ವಿಷಯವಿದ್ದರೂ ಆಕೆ ಸವಾಲು ಎದುರಿಸಲು ಸಿದ್ದವಿರುತ್ತಿದ್ದಳು. ಅದಕ್ಕೆ ನನಗೆ ಆಕೆ ಇಷ್ಟವಾಗುತ್ತಿದ್ದುದು. ನನಗೆ ಮಾತ್ರವಲ್ಲ ಎಲ್ಲಾ ಆ್ಯಕ್ಟಿವ್ ಜರ್ನಲಿಸ್ಟ್‌ಗಳಿಗೆ ಅನಿಷಾ ಇಷ್ಟವಾಗುತ್ತಿದ್ದುದು ಇದೇ ಕಾರಣಕ್ಕೆ. ಅದೆಲ್ಲಾ ಇರಲಿ. ಒಟ್ಟು ನಾವು ಕಾರಿನೊಳಗೆ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು.

ಕೆ ಎಸ್ ರಾವ್ ರೋಡ್ ಮಂಗಳೂರಿನ ಜನನಿಭಿಡ ರಸ್ತೆ. ಡಿವೈಡರ್ ಹಾಕಿದ ಡಬ್ಬಲ್ ರೋಡ್ ಇದ್ದರೂ ಸಿಟಿ ಸೆಂಟರ್ ಮಾಲ್ ಸೇರಿ ಹಲವು ಕಟ್ಟಡಗಳು ಈ ರಸ್ತೆಯ ಬಹುಭಾಗವನ್ನು ನುಂಗಿ ಕಿಷ್ಕಿಂದೆ ಮಾಡಿ ಬಿಟ್ಟಿದೆ. ಕಿಷ್ಕಿಂದೆಯನ್ನು ಇನ್ನಷ್ಟೂ ಹಾಳು ಮಾಡಲು ಅನಿಷಾ ಕಾರನ್ನು ರಸ್ತೆ ಬದಿಯೇ ನಿಲ್ಲಿಸಿದ್ದಳು. ಡ್ರೈವರ್ ಸೀಟಲ್ಲಿ ಅನಿಷಾ ಇದ್ದರೆ, ಅವಳ ಪಕ್ಕದ ಮುಂದಿನ ಸೀಟಿನಲ್ಲಿ ನಾನಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತು ಚೈತನ್ಯ ಅವಳ ಆತಂಕದ ಕತೆಯನ್ನು ಕಣ್ಣಾಲಿಗಳನ್ನು ತುಂಬಿಕೊಂಡು ಹೇಳುತ್ತಿದ್ದಳು. ನಾವು ಹಿಂದೆ ತಿರುಗಿ ಕೇಳುತ್ತಿದ್ದೆವು. ಒಂದು ಕ್ಷಣ ಕಾರಿನ ಗಾಜುಗಳ ಮೂಲಕ ಹೊರ ನೋಡುತ್ತೇನೆ, ಹತ್ತಾರು ಮಂದಿ ಕಾರಿನೊಳಗೆ ಇಣುಕುತ್ತಿದ್ದಾರೆ. ಅವರೆಲ್ಲರೂ ಚೈತನ್ಯಳನ್ನು ಹುಡುಕುತ್ತಿದ್ದ ಭಜರಂಗಿಗಳು. ಒಳಗಿರುವುದು ಚೈತನ್ಯ ಹೌದೋ ಅಲ್ಲವೋ ಎಂದು ಅವರಿಗಿನ್ನೂ ಖಾತ್ರಿಯಾದಂತಿಲ್ಲ. ಖಾತ್ರಿ ಆಗುವುದಕ್ಕೂ ಮುಂಚೆ ನಾವು ಜಾಗ ಖಾಲಿ ಮಾಡಿಕೊಳ್ಳಬೇಕು ಎಂದು ಯೋಚಿಸಿದ ನಾನು ಕಾರನ್ನು ನೇರ ಪೊಲೀಸ್ ಕಮಿಷನರ್ ಆಫೀಸಿಗೆ ಕೊಂಡೊಯ್ಯವಂತೆ ಹೇಳಿದೆ. ಕಾರ್ ಸ್ಟಾರ್ಟ್ ಮಾಡಿ ಹೊರಡಿದ ರೀತಿಯಿಂದಲೇ ಅದರೊಳಗಿರುವುದು ಚೈತನ್ಯ ಎಂದು ಅರಿತುಕೊಂಡ ಭಜರಂಗಿಗಳು ಬೈಕೇರಿ ಕಾರನ್ನು ಹಿಂಬಾಲಿಸತೊಡಗಿದರು. ಒಂದು ಮೂರು ನಿಮಿಷವಷ್ಟೆ. ಕಾರು ಪೊಲೀಸ್ ಆಯುಕ್ತರ ಕಚೇರಿಯ ಎದುರಿತ್ತು.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ರ ಕಚೇರಿಯೊಳಗೆ ಹೋಗುತ್ತಿದ್ದಂತೆ ಕಚೇರಿಯಲ್ಲಿ ಆಯುಕ್ತರಿಲ್ಲ. ಊಟಕ್ಕೆ ಮನೆಗೆ ಹೋಗಿದ್ದಾರೆ ಎಂದು ತಿಳಿಯಿತು. ಸೀಮಂತ್ ಕುಮಾರ್ ಸಿಂಗ್‌ಗೆ ಫೋನಾಯಿಸಿ ಎಲ್ಲಾ ಕತೆಗಳನ್ನು ಶುರುವಿಂದ ಹೇಳಿದೆ. ಸಾಲದಕ್ಕೆ “ಈ ಪ್ರಕರಣವನ್ನು ಸುಮ್ಮನೆ ಬಿಟ್ಟರೆ ಮರ್ಯಾದಾ ಹತ್ಯೆಯಂತಹ ಘಟನೆಗಳು ಮಂಗಳೂರಿನಲ್ಲಿ ಆಗಬಹುದು. ಅದಕ್ಕೆ ಆಸ್ಪದ ಕೊಟ್ಟರೆ ಕಷ್ಟ ಆಗುತ್ತೆ.” ಎಂದು ಸಲಹೆ ಕೊಟ್ಟೆ. ತಕ್ಷಣ ಸೀಮಂತ್ ಕುಮಾರ್ ಸಿಂಗ್ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣರನ್ನು ಕಮಿಷನರ್ ಆಫೀಸ್‌ಗೆ ತೆರಳಿ ಯುವತಿ ಕೈಯಿಂದ ದೂರು ಸ್ವೀಕರಿಸಿ ಮದುವೆಯವರೆಗೂ ರಕ್ಷಣೆ ಕೊಡುವಂತೆ ಆದೇಶಿಸಿದರು. ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಬಂದವರೇ ನನ್ನ ಜೊತೆ ಮಾತನಾಡಿ ಎಲ್ಲಾ ವಿವರ ಕಲೆ ಹಾಕಿದರು. ಅಷ್ಟರಲ್ಲಾಗಲೇ ಚೈತನ್ಯಳ ಮನೆಯವರಿಗೆ ಸುದ್ದಿ ತಿಳಿದು ಕಮಿಷನರ್ ಕಚೇರಿ ಮುಂದೆ ಜಮಾಯಿಸಿದ್ದರು. ಭಜರಂಗದಳದ ಒಂದಷ್ಟು ಕಾರ್ಯಕರ್ತರೂ ಬಂದರು. ಅದರಲ್ಲೊಬ್ಬ ಕಾರ್ಯಕರ್ತ ನನ್ನ ಬಳಿ ಬಂದವನೆ “ನೀವು ಎಂತ ಮಾರಾಯ್ರೆ. ಚೈತನ್ಯಳಿಗೆ ಮಂಡೆ ಸಮ ಇಲ್ಲ. ಅವನು ದಲಿತ. ಕೋಲ ಕಟ್ಟುವ ಜಾತಿಯವ. ಹೇಗೆ ಮದುವೆ ಮಾಡಿ ಕೊಡುವುದು. ಅವಳಿಗೆ ಮಂಡೆ ಸರಿ ಇಲ್ಲ ಅಂತ ನಿಮಗೂ ಮಂಡೆ ಸರಿ ಇಲ್ವ ಮಾರಾಯ?” ಎಂದ. ಅವನ್ನಲ್ಲೇನು ಮಾತು ಎಂದು ನಾನೂ ಸುಮ್ಮನಿದ್ದೆ. ಕೊನೆಗೆ ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಹುಡುಗಿ ಕಡೆಯ ಪ್ರಮುಖರನ್ನು, ಭಜರಂಗದಳದ ಪ್ರಮುಖರನ್ನು ಕರೆಸಿಕೊಂಡರು. ಚೈತನ್ಯಳಿಗೆ ಮನೆಯವರು ಸಾಕು ಬೇಕಾಗುವಷ್ಟು ಬುದ್ದಿ ಹೇಳಿದರು. ಚೈತನ್ಯಳದ್ದು ಒಂದೇ ಹಠ. ಮದುವೆಯಾಗುವುದಾದರೆ ಪ್ರದೀಪ್ನನ್ನು ಮಾತ್ರ. “ನೀನು ಕೋಲ ಕಟ್ಟುವವನ್ನು ಮದುವೆಯಾಗುದಾದರೆ ನೀನು ಸತ್ತಿದ್ದಿ ಎಂದು ಭಾವಿಸುತ್ತೇವೆ. ನಮಗೂ ನಿಮಗೂ ಯಾವುದೇ ಸಂಬಂಧ ಇಲ್ಲ” ಎಂದು ಚೈತನ್ಯಳ ಸಂಬಂಧಿ ಭಜರಂಗದಳದ ಮುಖಂಡ ಗುಡುಗಿದ. ಅಲ್ಲಿಯವರೆಗೂ ಸುಮ್ಮನಿದ್ದ ನನಗೆ ಆಗ ಸುಮ್ಮನಿರಲಾಗಲಿಲ್ಲ. “ಅಲ್ರಿ, ದಲಿತರೂ ಹಿಂದೂಗಳು. ಅವರ್ಯಾರೂ ಕ್ರಿಶ್ಚಿಯನ್ ಅಥವಾ ಬೌಧ್ಧ ಧರ್ಮಕ್ಕೆ ಮತಾಂತರ ಆಗಬಾರದು ಎಂದು ಹೇಳುವ ಸಂಘಟನೆ ನಿಮ್ಮದೆ ಅಲ್ವ. ಮತ್ತೆ ನಿಮ್ಮ ಜಾತಿಯ ಹುಡುಗಿ ದಲಿತನನ್ನು ಮದುವೆಯಾದರೆ ಏನು ಕಷ್ಟ?” ಎಂದು ಕೇಳಿದೆ. ಇಂತಹ ಪ್ರಶ್ನೆಗಳು ಅರ್.ಎಸ್.ಎಸ್‌.ಗರಿಗೆ ಹಲವಾರು ಬಾರಿ ಬಂದಿರಬಹುದು. ಆದರೆ ಅವರದ್ದೇ ಮನೆಯ ಹುಡುಗಿಯ ಜೀವಂತ ಉದಾಹರಣೆ  ಮುಂದಿಟ್ಟುಕೊಂಡು ಮಾತನಾಡುವಾಗ ಕಪಾಳಕ್ಕೆ ಚಪ್ಪಲಿಯಲ್ಲಿ ಬಡಿದಂತಾಗಿತ್ತು. ಆದರೂ ಸಾವರಿಸಿಕೊಂಡ ಭಜರಂಗದಳದ ಮುಖಂಡ “ಇಲ್ಲ ನಮ್ಮದೇನೂ ಅಭ್ಯಂತರ ಇಲ್ಲ. ಏನು ಬೇಕಾದರೂ ಮಾಡಿಕೊಂಡು ಸಾಯ್ಲಿ ಅವಳು,” ಎಂದು ನನ್ನ ಕಡೆ ಕೆಕ್ಕರಿಸಿ ನೋಡಲು ಧೈರ್ಯವಿಲ್ಲದೆ ಅವಳತ್ತಾ ಕೆಕ್ಕರಿಸಿ ನೋಡಿ ಅವಳ ತಂದೆ ತಾಯಿಯನ್ನೂ ಚೇರಿನಿಂದ ಎಬ್ಬಿಸಿ ಕರೆದೊಯ್ದ.

“ಸಂಜೆ ಮದುವೆ ಇದೆ. ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆ. ದಯವಿಟ್ಟು ಬನ್ನಿ.” ಎಂದು ಹುಡುಗಿಯ ಬಾಯಿಯಿಂದಲೇ ಅವಳ ತಂದೆ ತಾಯಿ ಮತ್ತು ಭಜರಂಗಿಗಳಿಗೆ ಆಯುಕ್ತರ ಕಚೇರಿಯಲ್ಲೇ ಮದುವೆಯ ಆಹ್ವಾನ ನೀಡಲಾಯಿತು. ಉಂ ಅಥವಾ ಊಂ ಊಂ ಎಂಬ ಉತ್ತರವೂ ಬರಲಿಲ್ಲ. ಕನಿಷ್ಠ ತಲೆಯೂ ಅಲ್ಲಾಡಲಿಲ್ಲ. ಸಂಜೆ ಐದು ಗಂಟೆಗೆ ಡೊಂಗರಕೇರಿಯಲ್ಲಿರುವ ಕಾಶೀ ಸಧನದಲ್ಲಿ ಮದುವೆ ಮಾಡುವುದು ಎಂದು ನಿರ್ಧರಿಸಿ ಅಲ್ಲಿನ ಅರ್ಚಕರನ್ನು ಬುಕ್ ಮಾಡಿದೆವು. ಅದರ ಎಲ್ಲಾ ಜವಾಬ್ದಾರಿಯನ್ನು ವಿಚಾರವಾದಿ ಸಂಘದ ಮುಖಂಡ ನರೇಂದ್ರ ನಾಯಕರು ವಹಿಸಿದ್ದರು. ನಂತರ ಪೊಲೀಸರ ಸಹಾಯ ಪಡೆದು ಚೈತನ್ಯಳ ಜೊತೆ ಸಿಟಿ ಸೆಂಟರ್ ಮಾಲ್‌ನ ಅಂಗಡಿಗೆ ಹೋಗಿ ಅವಳ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬಂದೆವು. ಸಂಜೆ ಐದು ಗಂಟೆಗೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಯಿತು. ಮರುದಿನ ರಿಜಿಸ್ಟ್ರಾರ್ ಆಫೀಸಿಗೆ ತೆರಳಿ ಮದುವೆಯನ್ನು ಕಾನೂನು ಬದ್ಧವಾಗಿ ನೊಂದಣಿ ಮಾಡಿಸಿದೆವು.

ಇದಾದ ಕೆಲವೇ ವಾರಗಳ ನಂತರ ಉಪ್ಪಿನಂಗಡಿಯಲ್ಲಿ ಹಿಂದೂ ಸಮಾವೇಶ ನಡೆಯಿತು.. ನಾನು ವರದಿ ಮಾಡಲು ಅಲ್ಲಿಗೆ ತೆರಳಿದ್ದೆ. ಆರ್.ಎಸ್.ಎಸ್. ಮುಖಂಡ ಭಟ್ಟರು ಭಾಷಣ ಮಾಡುತ್ತಿದ್ದರು: “ದಲಿತರನ್ನು ಮತ್ತು ಹಿಂದೂ ಧರ್ಮದ ಇತರ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಕ್ರಿಶ್ಚಿಯನ್ನರು ಇದರ ಲಾಭ ಪಡೆದುಕೊಂಡು ದಲಿತರನ್ನು ಮತಾಂತರ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಯಾವುದೇ ಅಸ್ಪ್ರಶ್ಯತೆ ಇಲ್ಲ. ದಲಿತರು ಮತಾಂತರ ಆಗಕೂಡದು. ಹಿಂದೂ ನಾವೆಲ್ಲ ಒಂದು….”