Monthly Archives: August 2012

ಹಸಿವು ಮತ್ತು ಸಾವಿಗೆ ಧರ್ಮದ ಹಂಗಿಲ್ಲ


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದ ಬುದ್ಧಿವಂತರ ನಾಡೆಂದು ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಅಮಾನುಷವಾದ ಘಟನೆಗಳು ನಾಗರೀಕ ಜಗತ್ತು ತಲೆತಗ್ಗಿಸುವಂತೆ ಮಾಡಿವೆ. ಸಮಾಜ ಘಾತುಕ ಶಕ್ತಿಗಳು ಧರ್ಮದ ಮತ್ತು ಕನ್ನಡ ನಾಡು ನುಡಿ ರಕ್ಷಣೆಯ ಹೆಸರಿನಲ್ಲಿ ಮುಖವಾಡ ಧರಿಸಿಕೊಂಡು ವಿಜೃಂಭಿಸುತ್ತಿರುವದನ್ನ ಗಮನಿಸಿದರೆ, ಕರ್ನಾಟಕದಲ್ಲಿ ಮನುಷ್ಯರೆನಿಸಿಕೊಂಡವರು ಸರ್ಕಾರ ನಡೆಸುತ್ತಿಲ್ಲ, ಬದಲಾಗಿ ಇದೊಂದು “ಜಂಗಲ್ ರಾಜ್” ಎಂದು ನಿಸ್ಸಂಕೋಚವಾಗಿ ಹೇಳಬಹುದು.

ಈ ನೆಲದ ಮೇಲಿನ ಒಂದು ಜೀವ ಅದು ಗಂಡಾಗಿರಲಿ, ಹೆಣ್ಣಾಗಿರಲಿ, ಘನತೆಯಿಂದ ಬದುಕುವುದಕ್ಕೆ ಧರ್ಮದ ಅಥವಾ ಜಾತಿಯ ಹಂಗುಗಳು ಬೇಕಾಗಿಲ್ಲ ಎಂಬ ಸುಪ್ತ ಪ್ರಜ್ಞೆಯೊಂದು ಗುಪ್ತಗಾಮಿನಿಯಂತೆ ಈ ನೆಲದ ಸಂಸ್ಕೃತಿಯಲ್ಲಿ ಹರಿದು ಬಂದಿದೆ. ಇಂತಹ ಪ್ರಜ್ಙೆ ಮತ್ತು ನಂಬಿಕೆಗಳನ್ನು ಸೂಫಿ ಸಂತರು ಸೇರಿದಂತೆ, ಅಂಬೇಡ್ಕರ್, ಲೋಹಿಯಾ, ಕುವೆಂಪು ಮುಂತಾವರು ತಮ್ಮ ಬದುಕು ಮತ್ತು ಚಿಂತನೆಗಳ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ, ಜೊತೆಗೆ ವಿಸ್ತರಿಸಿದ್ದಾರೆ.

ಮಂಗಳೂರು ಘಟನೆಯ ಹಿನ್ನೆಲೆಯಲ್ಲಿ ಏಳು ವರ್ಷ ಹಿಂದೆ ತಮಿಳುನಾಡಿನ ಧಾರ್ಮಿಕ ಶ್ರದ್ಧಾ ಕೇಂದ್ರವಾದ ದರ್ಗಾ ಮತ್ತು ಅಲ್ಲಿನ ಮುಸ್ಲಿಮ್ ಸಮುದಾಯ ಸುನಾಮಿ ಸಂತ್ರಸ್ತರ ಬಗ್ಗೆ ನಡೆದುಕೊಂಡ ಮಾನವೀಯ ನಡುವಳಿಕೆ ಪದೇ ಪದೇ ನೆನಪಾಗುತ್ತಿದೆ.

ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಗೆ ಸೇರಿದ ಕಾರೈಕಲ್ ಜಿಲ್ಲಾ ಕೇಂದ್ರ ಮತ್ತು ತಮಿಳುನಾಡಿನ ಜಿಲ್ಲಾ ಕೇಂದ್ರವಾದ ನಾಗಪಟ್ಟಣಂ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಕಡಲ ತೀರಕ್ಕೆ ಹೊಂದಿಕೊಂಡಂತೆ ನಾಗೂರು ಎಂಬ ಊರಿದೆ. ಇಪ್ಪತ್ತು ಸಾವಿರ ಜನಸಂಖ್ಯೆ ಇರುವ ಈ ಊರಿನಲ್ಲಿ ಶೇಕಡ 90 ಮಂದಿ ಮುಸ್ಲಿಂ ಬಾಂಧವರು ನೆಲೆಸಿದ್ದಾರೆ. ಇವರ ಮಾತೃಭಾಷೆ ತಮಿಳು. ಇದೇ ಊರಿನಲ್ಲಿ ಸಾಹುಲ್ ಹಮೀದ್ (1490-1573) ಎಂಬ ಪ್ರಸಿದ್ಧ ಸೂಫಿ ಸಂತನ ದರ್ಗಾ ಇದ್ದು, ಪ್ರತಿದಿನ ದಕ್ಷಿಣ ಭಾರತದ ರಾಜ್ಯಗಳಿಂದ ಸಾವಿರಾರು ಹಿಂದು ಮತ್ತು ಮುಸ್ಲಿಂ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಕ್ಷೇತ್ರ ಇವತ್ತಿಗೂ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಮುದಾಯದ ಪುಣ್ಯಕ್ಷೇತ್ರಗಳಲ್ಲಿ ಒಂದು. ಈ ದರ್ಗಾಕ್ಕೆ ಒಂದು ಐತಿಹಾಸಿಕ ಮಹತ್ವವಿದೆ.

16ನೇ ಶತಮಾನದಲ್ಲಿ ತಮಿಳುನಾಡನ್ನು ಆಳುತಿದ್ದ ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಒಬ್ಬನಾಗಿದ್ದ ಅಚ್ಯುತಪ್ಪ ನಾಯಕ ಎಂಬ ದೊರೆ ಗುಣವಾಗದ ಕಾಯಿಲೆಯಿಂದ ಬಳಲುತಿದ್ದಾಗ ಈ ಪ್ರದೇಶಕ್ಕೆ ಬಂದ ಸೂಫಿ ಸಂತ ಪಾರಿವಾಳದ ರಕ್ತದ ಮೂಲಕ ಅರಸನ ಕಾಯಿಲೆಯನ್ನು ವಾಸಿಮಾಡಿದನಂತೆ. ಇದರಿಂದ ಸಂತೃಪ್ತನಾದ ದೊರೆ ಆ ಸಂತನಿಗೆ ಇನ್ನೂರು ಎಕರೆ ಭೂಮಿ ಧಾನ ಮಾಡಿದ. ಇದೇ ಭೂಮಿಯಲ್ಲಿ ತನ್ನ ಶಿಷ್ಯರೊಂದಿಗೆ ನೆಲೆ ನಿಂತು, ಜನಸಾಮಾನ್ಯರ ದೈಹಿಕ ಮತ್ತು ಮಾನಸಿಕ ರೋಗಗಳನ್ನು ಗುಣಪಡಿಸುತ್ತಾ ಜೀವಿಸಿದ್ದ ಸಂತ ಸಾಹುಲ್ ಹಮೀದ್ 1573ರಲ್ಲಿ ನಾಗೂರಿನಲ್ಲಿ ಅಸು ನೀಗಿದಾಗ ಅವನ ಶಿಷ್ಯಂದಿರು ಗುರುವಿಗೆ ಸಮಾಧಿ ನಿರ್ಮಾಣ ಮಾಡಿ ಅಂದಿನಿಂದ ಇಂದಿನವರೆಗೂ ಅದನ್ನು ಪೂಜಿಸುತ್ತಾ ಶ್ರದ್ಧೆಯಿಂದ ನಡೆದುಕೊಂಡು ಬಂದಿದ್ದಾರೆ. ತಮಿಳುನಾಡಿನ ಈ ಕರಾವಳಿ ಪ್ರದೇಶಗಳನ್ನು ಆಳಿದ ಟಿಪ್ಪು ಸುಲ್ತಾನ್, ಮರಾಠರು ಮತ್ತು ಬ್ರಿಟೀಷರು ಕೂಡ ಈ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ನೆರವಾದ ಬಗ್ಗೆ ದಾಖಲೆಗಳಿವೆ.

ಸಂತನ ವಂಶಸ್ತರ ಮೇಲ್ವಿಚಾರಣೆಯಲ್ಲಿ ಟ್ರಸ್ಟ್ ಕೂಡ ರಚನೆಯಾಗಿದೆ. ಗುಣವಾಗದ ಕಾಯಿಲೆಗಳಿಗೆ ಈಗಲೂ ಅಲ್ಲಿ ದೇಸಿ ಪದ್ಧತಿಯ ಔಷಧೋಪಚಾರ ನಡೆಯುತ್ತಿದೆ. ವಿಶೇಷವಾಗಿ ಮಾನಸಿಕ ಅಸ್ವಸ್ಥರನ್ನು ಗುಣಪಡಿಸುವ ಧಾರ್ಮಿಕ ಮತ್ತು ಔಷಧೋಪಚಾರ ಕ್ರಿಯೆಗಳು ಸಹ ಅಲ್ಲಿ ಜರಗುತ್ತವೆ.

ಅಧಿಕ ಸಂಖ್ಯೆಯಲ್ಲಿ ಹಿಂದೂ ಭಕ್ತರೂ ಸಹ ಆಗಮಿಸಿ, ದರ್ಗಾ ಹಿಂದಿರುವ ಬೃಹತ್ ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಸಂತನ ಸಮಾಧಿಗೆ ಪೂಜೆ ಸಲ್ಲಿಸುವ ವಾಡಿಕೆ ಚಾಲ್ತಿಯಲ್ಲಿದೆ.

2004ರ ಡಿಸೆಂಬರ್ 26ರಂದು ಇಂಡೋನೆಷ್ಯಾದ ಸಮುದ್ರದ ತಳದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಉಂಟಾದ ಸುನಾಮಿ ಅಲೆಗಳಿಗೆ ಭಾರತದ ಪೂರ್ವ ಭಾಗದ ಕಡಲತೀರದ ಪ್ರದೇಶಗಳು ತುತ್ತಾದದ್ದು ಎಲ್ಲರೂ ಬಲ್ಲ ಸಂಗತಿ. ತಮಿಳುನಾಡಿನ ಕಡಲತೀರಗಳು ಈ ಸಂದರ್ಭದಲ್ಲಿ ಅಪಾರ ಹಾನಿಗೆ ಒಳಗಾದವು. ಐವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡರು. ಬ್ರಿಟೀಷರಿಗೂ ಮುನ್ನ ಡಚ್ಚರಿಂದ ಮತ್ತು ಪೋರ್ಚುಗೀಸರಿಂದ ಆಳಿಸಿಕೊಂಡಿದ್ದ ನಾಗಪಟ್ಟಣ, 5ನೇ ಶತಮಾನದಿಂದಲೂ ಬಂದರು ಪಟ್ಟಣವಾಗಿ ಪ್ರಸಿದ್ಧಿ ಪಡೆದಿತ್ತು. ಸುನಾಮಿ ಪಕೃತಿ ವಿಕೋಪಕ್ಕೆ ಇಡೀ ನಾಗಪಟ್ಟಣ ಜಿಲ್ಲೆ ತುತ್ತಾಗಿ 35 ಸಾವಿರ ಜನ ಪ್ರಾಣ ತೆತ್ತು, ಲಕ್ಷಾಂತರ ಮಂದಿ ತಮ್ಮ ಆಸ್ತಿಗಳನ್ನು ಕಳೆದುಕೊಂಡು ಅಕ್ಷರಶಃ ಅನಾಥರಾದರು. ಈ ಸಂದರ್ಭದಲ್ಲಿ ಭಾರತ ಸರ್ಕಾರ ವಿದೇಶಗಳ ನೆರವನ್ನು ನಿರಾಕರಿಸಿ, ಸಂತ್ರಸ್ತರ ಪರಿಹಾರಕ್ಕೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಕೈಗೆತ್ತಿಗೊಂಡಿತು.

ನಾಗಪಟ್ಟಣಂ ಜಿಲ್ಲೆಯಲ್ಲಿ ರಸ್ತೆ, ದೊರವಾಣಿ ಸಂಪರ್ಕ, ವಿದ್ಯತ್ ಸಂಪರ್ಕ ಎಲ್ಲವೂ ಅಸ್ತವ್ಯಸ್ತಗೊಂಡಿದ್ದವು. ಎಲ್ಲಡೆ ಕೊಳೆತ ಪ್ರಾಣಿಗಳ, ಮನುಷ್ಯರ ಮೃತ ದೇಹಗಳು ಗೋಚರಿಸುತಿದ್ದವು. ಸಾಂಕ್ರಾಮಿಕ ರೋಗ ಹರಡಲು ಪ್ರಾರಂಭಿಸಿತು. ಒಂದೆಡೆ ಮೃತ ದೇಹಗಳಿಗೆ ಮುಕ್ತಿ ಕಲ್ಪಿಸಿಕೊಡಬೇಕಾದ ಸವಾಲು, ಇನ್ನೊಂದೆಡೆ ಬದುಕುಳಿದವರಿಗೆ ಸೂರು, ಅನ್ನ ನೀರು, ಆರೋಗ್ಯ ಸೌಲಭ್ಯ ಒದಗಿಸುವ ಸವಾಲು. ಇವೆಲ್ಲವುಗಳನ್ನು ಆ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ 36 ವರ್ಷ ವಯಸ್ಸಿನ ಐ.ಎ.ಎಸ್. ಅಧಿಕಾರಿ ರಾಧಾಕೃಷ್ಣನ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದ ರೀತಿ ಆಶ್ಚರ್ಯಪಡುವಂತಹದ್ದು.

ನಾಗಪಟ್ಟಣಂ ಹೊರವಲಯದಲ್ಲಿ 75 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಜಿಲ್ಲಾದಿಕಾರಿಯ ಕಛೇರಿ ಆವರಣದಲ್ಲಿ ತೆಂಗಿನ ಗರಿಗಳಿಂದ ಬೃಹತ್ ಶೆಡ್ಡುಗಳನ್ನು ನಿರ್ಮಾಣ ಮಾಡಿ, ಬದುಕುಳಿದವರಿಗೆ ಆಶ್ರಯ ಕಲ್ಪಿಸಲಾಯಿತು. ಕೇಂದ್ರದಿಂದ ಮತ್ತು ದೇಶದ ವಿವಿಧ ರಾಜ್ಯಗಳಿಂದ ಬಂದ ಪಡೆಗಳನ್ನು ಮತ್ತು ಸ್ವಯಂಸೇವಕರನ್ನು ಮೃತದೇಹಗಳಿಗೆ ಅಂತ್ಯ ಸಂಸ್ಕಾರ ಮಾಡುವ ಕೆಲಸಕ್ಕೆ ನಿಯೋಜಿಸಲಾಯಿತು. ಇಂತಹ ಕೆಲಸ ಕೇವಲ ಸರ್ಕಾರ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಇವುಗಳು ಮಾಡಿದರೆ ಸಾಲದು, ಸ್ಥಳೀಯರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ನಾಗೂರು ದರ್ಗಾ ಮುಸ್ಲಿಂ ಬಾಂಧವರಿಗೆ ಕರೆ ನೀಡಿತು.

ನಾಗೂರು ದರ್ಗಾದ ಈ ಕರೆಗೆ ಓಗೊಟ್ಟ ಕಾರೈಕಲ್, ಕುಂಭಕೋಣಂ, ಮಯಿಲಾಡುತೊರೈ, ತಿರುವರೂರು ಮತ್ತು ತಂಜಾವೂರು ಪ್ರದೇಶಗಳೀಂದ ಬಂದ ಮುಸ್ಲಿಂಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಕೊಳೆಯುತಿದ್ದ ಮೃತ ದೇಹಗಳಿಗೆ ಜಾತಿ, ಧರ್ಮ ನೋಡದೆ, ಅಂತ್ಯಕ್ರಿಯೆ ನಡೆಸಿದರು. ನಾಗೂರು ದರ್ಗಾ ಆವರಣದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ, ಬದುಕುಳಿದಿದ್ದ ಎಂಟು ಸಾವಿರ ಮಂದಿಗೆ 40 ದಿನಗಳ ಆಶ್ರಯ ಒದಗಿಸಿದರು. ಬೆಳಿಗ್ಗೆ ಎಂಟು ಗಂಟೆಗೆ ಚಹಾ, 11 ಗಂಟೆಗೆ ಊಟ, ನಾಲ್ಕು ಗಂಟೆಗೆ ಚಹಾ ಬ್ರೆಡ್, ಸಂಜೆ ಏಳುಗಂಟೆಗೆ ಊಟ. ಹೀಗೆ ನಿರಂತರ ನಲವತ್ತು ದಿನಗಳ ಕಾಲ, ಜಾತಿ ಅಥವಾ ಧರ್ಮದ ನೆಲೆ ನೋಡದೇ ಎಂಟು ಸಾವಿರ ಮಂದಿಗೆ ಆಶ್ರಯ ನೀಡಿ ಕಾಪಾಡಿದ ಗೌರವ ಈ ದರ್ಗಾಕ್ಕೆ ಸೇರಿತು. ಈ ಮಹತ್ಕಾರ್ಯಕ್ಕಾಗಿ ಮುಸ್ಲಿಂ ವರ್ತಕರು, ರೈತರು, ಪ್ರತಿದಿನ ಕ್ವಿಂಟಾಲ್‌ಗಟ್ಟಲೆ ಅಕ್ಕಿ, ತರಕಾರಿ, ಎಣ್ಣೆ ಬೇಳೆ, ಸಾಂಬಾರ್ ಪುಡಿ, ಸಕ್ಕರೆ, ಹಾಲು, ಚಹಾ ಪುಡಿಯನ್ನು ದರ್ಗಾದ ಆವರಣಕ್ಕೆ ತಂದು ಸುರಿದು ತಮ್ಮ ಹೆಸರು ಕೂಡ ತಿಳಿಸದೆ ಹೋಗುತಿದ್ದ ರೀತಿಗೆ ಸ್ವತಃ ಸಾಕ್ಷಿಯಾದ ನಾನು ಬೆರಗಾಗಿದ್ದೀನಿ. ಅವರ ನಡುವಳಿಕೆಯಲ್ಲಿ “ನೀಡುವವನಿಗೆ ಅಹಂ, ಪಡೆದವನಿಗೆ ಕೀಳರಿಮೆ ಇರಬಾರದು” ಎಂಬ ಮನುಷ್ಯತ್ವದ ಮಹಾನ್ ಪ್ರಜ್ಞೆಯೊಂದು ಎದ್ದು ಕಾಣುತಿತ್ತು.

ಬದುಕಿದ್ದಾಗ ಜಾತಿಯನ್ನ, ಧರ್ಮವನ್ನು ಅಪ್ಪಿಕೊಂಡು ಬಡಿದಾಡುವ ಈ ನರಜನ್ಮಕ್ಕೆ ಸುನಾಮಿಯ  ಹೊಡೆತಕ್ಕೆ ಸಿಲುಕಿ ಕಡಲತೀರದಲ್ಲಿ ಕೊಳೆಯುತ್ತಿರುವಾಗ, ಯಾವುದೋ ಇನ್ನೊಂದು ಬದುಕುಳಿದ ಜೀವ ಬೃಹತ್ ಕಂದಕ ತೋಡಿ, ಸಾಮೂಹಿಕವಾಗಿ ಹೂಳುವಾಗ, ಅಲ್ಲಿ ಧರ್ಮದ ಅಥವಾ ಜಾತಿಯ ಸೋಂಕು ಕಾಣಲಿಲ್ಲ. ಬದುಕಿದ್ದ ಜೀವಕ್ಕೆ ಮೃತಪಟ್ಟವರೆಲ್ಲರೂ ಮನುಷ್ಯರು ಎಂಬ ಪ್ರಜ್ಞೆ ಮಾತ್ರ ಇತ್ತು. ಹಸಿದ ಜೀವವೊಂದು ಅನ್ನಕ್ಕೆ ಕೈಯೊಡ್ಡಿದಾಗ ಅಲ್ಲಿ ತಾನು ಈವರೆಗೆ ಅಪ್ಪಿಕೊಂಡಿದ್ದ ಜಾತಿ ಅಥವಾ ಧರ್ಮದ ನೆನಪೇ ಆ ಕ್ಷಣದಲ್ಲಿ ಬರಲಿಲ್ಲ. ಏಕೆಂದರೆ, ಪಕೃತಿಯ ವಿಕೋಪದಲ್ಲಿ ಬದುಕುಳಿದ ಜೀವಕ್ಕೆ ಜಾತಿ-ಧರ್ಮಕ್ಕಿಂತ ಹೊಟ್ಟೆ ತುಂಬುವ ಅನ್ನ ಮುಖ್ಯವಾಗಿತ್ತು. ಇಂತಹ ಕಟು ವಾಸ್ತವ ಸತ್ಯಗಳನ್ನು ಧರ್ಮದ ಹೆಸರಿನಲ್ಲಿ ಕತ್ತಿ ಹಿಡಿದು ಬೀದಿಯಲ್ಲಿ ಹಾರಾಡುವ ಹಲಾಲುಕೋರರಿಗೆ ತಲುಪಿಸುವ ಬಗೆ ಹೇಗೆ? ನೀವೇನಾದರೂ ಬಲ್ಲಿರಾ?

[ಕಳೆದ ಶನಿವಾರ (28/7/12) ಈ ದರ್ಗಾಕ್ಕೆ ಭೇಟಿ ನೀಡಿ, ಪೋಟೊ ತೆಗೆದು, ಅಲ್ಲಿನ ಮುಖ್ಯಸ್ಥರೊಂದಿಗೆ ಚಹಾ ಕುಡಿದು, ಮಾತನಾಡುವಾಗ ಹಳೆಯ ಘಟನೆಗಳು ನೆನಪಾದವು.]

ಮೂರ್ಖರ ಪೆಟ್ಟಿಗೆ ಹಾಗೂ ಜನಪ್ರಿಯ ಸಂಸ್ಕೃತಿಯ ಭರಾಟೆ


-ಡಾ.ಎಸ್.ಬಿ. ಜೋಗುರ


ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗ ಸದ್ದೇ ಇಲ್ಲದೆ  ಸಾಗಿಬರುವ ಪರಂಪರೆಯೊಂದು ಈಗ ಮಾಧ್ಯಮಗಳ ಗದ್ದಲಗಳಲ್ಲಿ ಕಳೆದು ಹೋಗಿದೆ. ಈ ಜನಪ್ರಿಯ ಮಾಧ್ಯಮಗಳು ಜನಸಾಮಾನ್ಯನನ್ನು ಪ್ರಭಾವಿಸುತ್ತಲೇ ತನ್ನ ತೆಕ್ಕೆಗೆ ಅಪಾರ ಪ್ರಮಾಣದ ಜನಸಮೂಹವನ್ನು ತೆಗೆದುಕೊಂಡು ಪ್ರವಾಹದೋಪಾದಿಯಲ್ಲಿ ಸಾಗುತ್ತಿದೆ.  ಮಧ್ಯಮವರ್ಗದ ಮನೆಯೊಳಗಿನ ಬಹುತೇಕ ಪರಿಕರಗಳು ಟಿ.ವಿ. ಜಾಹೀರಾತುಗಳ ಪ್ರಭಾವದಿಂದ ಎಂಟ್ರಿ ಪಡೆದವುಗಳಾಗಿವೆ.  ಅತ್ಯಂತ ಪ್ರಭಾವಿ ಮಾಧ್ಯಮವಾದ ಟಿ.ವಿ.ಯು ವೀಕ್ಷಕರ ಮನ:ಸ್ಥಿತಿ ಮತ್ತು ಅವರು ಮೂರ್ಖರ ಪೆಟ್ಟಿಗೆಯ ಮುಂದೆ ಕುಳಿತುಕೊಳ್ಳುವ ಮೂಲಕ ಪಡೆಯುವ ಮತ್ತು ಹಿಂತಿರುಗಿ ಕೊಡುವ ಸಂಗತಿಗಳಾದರೂ ಯಾವುವು?

ಬ್ರಿಟಿಷ್ ಫಿಲ್ಮ್ ಸಂಸ್ಥೆ ಈ ಬಗ್ಗೆ ಒಂದು ನಿಖರವಾದ ಅಧ್ಯಯನವನ್ನು ಮಾಡಿದೆ. ಈ  ಬಗ್ಗೆ  ‘An introduction to studying popular culture’ ಎನ್ನುವ ಕೃತಿಯಲ್ಲಿ ಡೊಮೆನಿಕ್ ಸ್ಟ್ರಿನಟಿ ಎನ್ನುವ ಲೇಖಕರು ಚರ್ಚಿಸಿದ್ದಾರೆ. ಯುರೋಪದ ಪ್ರಮುಖ ರಾಷ್ಟ್ರಗಳಲ್ಲಿ ಹಗಲು ಹೊತ್ತಿನಲ್ಲಿ ಹೆಚ್ಚು ದೂರದರ್ಶನವನ್ನು ವೀಕ್ಷಣೆ ಮಾಡುವವರಿಗೆ ಒಂದು ಬಗೆಯ ತಪ್ಪಿತಸ್ಥ ಪ್ರಜ್ಞೆ ಕಾಡುವ ಬಗ್ಗೆ ಅಧ್ಯಯನದಲ್ಲಿ ತಿಳಿದುಬಂದಿದೆ. ಜೊತೆಗೆ ಹೆಚ್ಚೆಚ್ಚು ದೂರದರ್ಶನವನ್ನು ವೀಕ್ಷಿಸುವುದು ಆರೋಗ್ಯಕರವೂ ಅಲ್ಲ ಎನ್ನುವ ಬಗ್ಗೆ ಆ ಅಧ್ಯಯನ ತೋರಿಸಿಕೊಟ್ಟಿದೆ. ಸದ್ಯದ ಸಂದರ್ಭದಲ್ಲಿ ಬದುಕು ಅನೇಕ ಬಗೆಯ ಬವಣೆಗಳಿಂದ ಸುತ್ತುವರೆದಿದೆ. ಪ್ರಾಥಮಿಕ ಶಾಲೆಯಲ್ಲಿ ಓದುವ ವಿದ್ಯಾರ್ಥಿಯಿಂದ ಹಿಡಿದು ಮಸಣ ಮಾರ್ಗದಿ ದಿನಗಳೆಣೆಸುವವರ ತನಕ ಎಲ್ಲರೂ ಉದ್ವೇಗದ ವಾತಾವರಣದಲ್ಲಿ ದಿನದೂಡುವ ನಡುವೆ ಕೊಂಚ ರಿಲ್ಯಾಕ್ಸ್ ಆಗಲು ಕಂಡುಕೊಂಡ ರೆಡಿಮೇಡ್ ಮಾರ್ಗ ಈ ಟಿ.ವಿ. ವೀಕ್ಷಣೆ. ಆ ಸಂಶೋಧನೆಯಲ್ಲಿ ಕಂಡುಬಂದ ಇನ್ನೊಂದು ಸಂಗತಿಯೆಂದರೆ ಪುರುಷರು ಹೆಚ್ಚಾಗಿ ಸಾಹಸದ ಸನ್ನಿವೇಶಗಳು, ವಾಸ್ತವಿಕ ಘಟನೆಗಳು, ಕ್ರೀಡೆಯನ್ನು ಹೆಚ್ಚಾಗಿ ವೀಕ್ಷಣೆ ಮಾಡಿದರೆ, ಮಹಿಳೆಯರು ರಿಯಾಲಿಟಿ ಶೋ, ನಾಟಕ ಮುಂತಾದವುಗಳನ್ನು ನೋಡುವ ಬಗ್ಗೆ ತಿಳಿದುಬಂದಿದೆ. ರಿಮೋಟ್ ಕಂಟ್ರೊಲ್ ಮೇಲಿನ ಅಧಿಪತ್ಯದಲ್ಲಿ 46 ಪ್ರತಿಶತ ಪುರುಷರದಾಗಿದ್ದರೆ, 22 ಪ್ರತಿಶತ ಮಹಿಳೆಯರದಾಗಿದೆ. ಯುವಕರು ಮಾತ್ರ ಹೆಚ್ಚಾಗಿ ಗ್ಲಾಮರಸ್ ಇಲ್ಲವೇ ಹಿಂಸಾತ್ಮಕವಾದ ಕಾರ್ಯಕ್ರಮಗಳನ್ನು ನೋಡುವುದಿದೆ.

ದೂರದರ್ಶನದ ಕೆಲ ಹಿಂಸಾತ್ಮಕ ಕಾರ್ಯಕ್ರಮಗಳ ವೀಕ್ಷಣೆ ಯುವಜನಾಂಗದ ಅಶಾಂತಿಗೆ ಪರೋಕ್ಷವಾಗಿ ಕಾರಣವಾಗುವ ಬಗ್ಗೆ ಮತ್ತೊಂದು ಸಮೀಕ್ಷಾ ಅಧ್ಯಯನವು ತಿಳಿಸಿರುವುದಿದೆ. ಆ ಕುರಿತು ಮಾರ್ಚ್ 19-1999 ರಲ್ಲಿ ಗಾರ್ಡಿಯನ್ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಬ್ರಿಟಿಷ ಯುವಕರು ಅದರಲ್ಲೂ 17 ವರ್ಷ ವಯೋಮಿತಿಯ ಒಳಗಿನವರು ಪುಸ್ತಕಗಳನ್ನು ಓದುವ ಬಗ್ಗೆ ರೇಜಿಗೆ ಬೆಳೆಸಿಕೊಂಡಿದ್ದಾರೆ. ಬಹುತೇಕ ಮಕ್ಕಳು ತಮ್ಮ ಬೆಡ್ ರೂಮಲ್ಲಿ ಒಂದು ಟಿ.ವಿ.ಯನ್ನು ಹೊಂದಿರುವರು. ಅವರು ಬೆಳೆಯುತ್ತಿರುವುದೇ ಈ ಬೆಡ್ ರೂಮ್ ಸಂಸ್ಕೃತಿಯಲ್ಲಿ ದಿನಕ್ಕೆ 5-6 ಘಂಟೆ ತಮ್ಮ ಅಮೂಲ್ಯವಾದ ಸಮಯವನ್ನು ಟಿ.ವಿ.ಮುಂದೆ ಕಳೆಯುವುದಿದೆ. ಎಂದು ಅದು ವರದಿ ಮಾಡಿತ್ತು. ಈ ಮಾತು ನಮ್ಮ ಯುವಕರಿಗೂ ಅನ್ವಯಿಸುತ್ತದೆ. ಆದರೆ ಯುರೋಪದ ರಾಷ್ಟ್ರಗಳಿಗಿಂತಲೂ ನಮ್ಮ ಸಂಸ್ಕೃತಿ, ಸಾಮಾಜಿಕ ಪರಿಸರ ವಿಭಿನ್ನ. ಅಜ್ಜಿ ಹೇಳುವ ಕಥೆಗಳಲ್ಲಿಯೆ ಸುಖ ಕಾಣುವ ಜಮಾನಾ ಒಂದಿತ್ತು. ಮಕ್ಕಳಾಡುವ ತೊದಲು ನುಡಿಯೆ ಮನರಂಜನೆಯಾಗಿದ್ದ ದಿನಗಳೂ ಹೋದವು.. ಭಜನೆ..ಕೀರ್ತನೆ..ಗಳೂ ಇಂದಿನ ಯುವಜನತೆಗೆ ಮನರಂಜನೆಯನ್ನು ನೀಡುವ ತಾಕತ್ತನ್ನು ಕಳೆದುಕೊಂಡವು.

ಈಗ ಒಂದೇ ಒಂದು ಬಟನ್ ಒತ್ತುವ ಮೂಲಕ ನೂರಾರು ಗ್ಲಾಮರಸ್ ಚಾನೆಲ್‌ಗಳು ನಮ್ಮ ಯುವಕರ ಎದುರು ಬಿಚ್ಚಿಕೊಳ್ಳುತ್ತವೆ. ಸರಿ-ತಪ್ಪುಗಳ ಎಗ್ಗಿಲ್ಲದೇ ಇಷ್ಟವಾಗುವ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸುವ ಮೂಲಕ ಟಿ.ವಿ. ಮತ್ತು ಅಲ್ಲಿಯ ಜಾಹೀರಾತುಗಳು ಸೃಷ್ಟಿಸಲು ಬಯಸಿರುವ ವೀಕ್ಷಕರಾಗಿ ಮಾರ್ಪಾಡು ಹೊಂದುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ಯುವಕರಂತೂ ಈ ಗ್ಲಾಮರ್ ಲೋಕದ ಪರಿಧಿಗೆ ಬಂದ ಮಿಂಚುಹುಳದಂತಾಗುತ್ತಾರೆ. ಇತ್ತೀಚಿಗೆ ಒಂದು ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಆಮೇಲೆ ವಿಕ್ಷಿಪ್ತನಾಗಿ ಆಸ್ಪತ್ರೆ ಸೇರಿರುವ ಬಳ್ಳೆಹಾಡಿಯ ಹುಡುಗ ರಾಜೇಶನೂ ಒಂದು ಉದಾಹರಣೆ. ಯುರೋಪದಂತಹ ರಾಷ್ಟಗಳಲ್ಲಿ ಈಗೀಗ ಜನತೆ ದೂರದರ್ಶನದ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ಒಂದು ಬಗೆಯ ಮಾರಲ್ ಗಿಲ್ಟ್ ಅಂದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಆ ಬಗೆಯ ಮನ:ಸ್ಥಿತಿ ಇನ್ನೂ ಒಡಮೂಡಿಲ್ಲ. ಹಾಗಾಗಿಯೆ ವೀಕ್ಷಕನ ಆಯುಷ್ಯದಷ್ಟೇ ದೀರ್ಘವಾದ ಧಾರವಾಹಿಗಳು ನಮ್ಮಲ್ಲಿ ತಯಾರಾಗುತ್ತವೆ. ನಮ್ಮಲ್ಲಿಯ ಟಿ.ವಿ.ವೀಕ್ಷಕರಿಗೆ ಇಂದಿಗೂ ಯಾವ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಂಡು ನೋಡಬೇಕು ಎನ್ನುವ ಬಗ್ಗೆ ಸ್ಪಷ್ಟವಾದ ಸೂತ್ರಗಳಿಲ್ಲ. ದಿನದ 24 ಘಂಟೆಯೂ ಮನೆಯಲ್ಲಿ ವಕ್ಕರಿಸಿರುವ ಟಿ.ವಿ. ತರ್ಕಸಮ್ಮತವಾತ ಕಾರ್ಯಕ್ರಮಗಳ ಆಯ್ಕೆಗೆ ನಮ್ಮ ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿರುವದಿದೆಯೆ.? ಎನ್ನುವುದು ಇನ್ನೊಂದು ಪ್ರಶ್ನೆ. ಟಿ.ವಿ.ಯಲ್ಲಿ ಬರುವ ಖಾಸಗಿ ಚಾನೆಲ್‌ಗಳ ಗುರಿ ಮಾತ್ರ ಕೈಗೂಡಿದಂತಾಗಿದೆ. ಜನಪ್ರಿಯ ಸಂಸ್ಕೃತಿಯ ಹೆಸರಲ್ಲಿ ಬೃಹತ್ ಪ್ರಮಾಣದ ವೀಕ್ಷಕರನ್ನು ಗ್ಲಾಮರಸ್ ಆಗಿರುವ ಜಾಹೀರಾತುಗಳ ಮೂಲಕ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಸಿಲುಕಿಸಿರುವುದಂತೂ ಹೌದು. ಭಾರತದಂತಹ ರಾಷ್ಟ್ರದಲ್ಲಿ ಭಾವುಕ ಪ್ರೇಕ್ಷಕರ ಸಂಖ್ಯೆ ಅಪಾರ. ಅಲ್ಲಿಯ ಕಾರ್ಯಕ್ರಮಗಳು ಇವರನ್ನು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸುವುದಿದೆ. ಹಾಗಾಗಿಯೆ ಇಂದಿನ ಕೌಟುಂಬಿಕ ಪರಿಸರದಲ್ಲಿ ಧಾರವಾಹಿಯ ಅನೇಕ ಪಾತ್ರಗಳು ಸುತ್ತಿ ಸುಳಿಯುತ್ತವೆ.

ಸಿನೇಮಾ ದಿನಾಲು ಕೈಗೆಟಕುವದಿಲ್ಲ. ಎಟಕಿದರೂ ದಿನಾಲು ಸಿನೇಮಾ ನೋಡುವವರನ್ನು ಈ ಸಮಾಜ ಸಾಮಾನ್ಯವಾಗಿ ಸಹಿಸುವುದಿಲ್ಲ. ಟಿ.ವಿ.ಹಾಗಲ್ಲ ದಿನದ 24 ಘಂಟೆ ತೀರಾ ಸುಲಭವಾಗಿ ಎಟಕಬಹುದಾದ ಸಾಧನ. ಪರಿಣಾಮವಾಗಿ ಆ ಕುಟುಂಬದಲ್ಲಿರುವ ಎಲ್ಲ ವಯೋಮಾನದವರು ಅವರವರಿಗೆ ಬೇಕಾದ ಕಾರ್ಯಕ್ರಮಗಳನ್ನು ನೋಡಿ ಹಗುರಾಗುತ್ತಾರೆ. ಅಲ್ಲಿ ಬರುವ ಜಾಹೀರಾತುಗಳು ಮಾತ್ರ ಆ ಮನೆಯ ಯಜಮಾನನ ಪಾಲಿಗೆ ಪರೋಕ್ಷವಾಗಿ ಭಾರವಾಗುತ್ತವೆ. ಲೆವಿಸ್ ಎನ್ನುವ ಚಿಂತಕರು ಈ ಟಿ.ವಿ ವೀಕ್ಷಕರ ಮೇಲೆ ಬೀರಬಹುದಾದ ಪ್ರಭಾವವನ್ನು ಹೀಗೆ ಚರ್ಚಿಸಿರುವರು. ಅವರು ಹೇಳುವಂತೆ:

  • ಟಿ.ವಿ. ವೀಕ್ಷಕರ ಆಲೋಚನೆಗಳ ಮೆಲೆ ಪ್ರಭಾವ ಬೀರಬಹುದೇ ಹೊರತು ಅವರ ವರ್ತನೆಗಳ ಮೇಲಲ್ಲ.
  •  ಅದು ಬೀರುವ ಪ್ರಭಾವ ಅತ್ಯಂತ ಸಂಕೀರ್ಣವಾದುದು. ಅದು ಹೀಗೆ ಎಂದು ಖಚಿತವಾಗಿ ಹೇಳಲಾಗದು.
  •  ವೀಕ್ಷಕರು ವಿಭಿನ್ನವಾಗಿರುತ್ತಾರೆ ಹಾಗೆಯೆ ಪ್ರಭಾವವೂ ಭಿನ್ನವೇ.
  •  ವೀಕ್ಷಕರನ್ನು ಖಾಲಿ ಪಾತ್ರೆಗಳೆಂದು ತಿಳಿಯುವುದೇ ಹೆಚ್ಚೆಚ್ಚು ಮಾರಕ ಪರಿಣಾಮಗಳಾಗಲು ಕಾರಣ.
  •  ವೀಕ್ಷಕರ ಸಾಮಾಜಿಕ ಸಂದರ್ಭವನ್ನು ನಿರ್ಲಕ್ಷಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.

ವೀಕ್ಷಕರಲ್ಲಿ ಎಲ್ಲ ರೀತಿಯ ಮನೋಭಾವ, ಸ್ತರ, ಶಿಕ್ಷಣ, ವರ್ಗದವರಿದ್ದಾರೆ. ಅವರ ನಿರೀಕ್ಷೆಗಳ ಅಧ್ಯಯನದ ಮೂಲಕ ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಜೊತೆಗೆ ವಸ್ತುನಿಷ್ಟವಾಗಿ ಟಿ.ವಿ. ಪ್ರೇಕ್ಷಕರ ಮೇಲೆ ಬೀರಬಹುದಾದ ಪ್ರಭಾವವನ್ನು ಅಧ್ಯಯನ ಮಾಡದೇ ಭಾವನೆಗಳನ್ನು ಕೆರಳಿಸಬಹುದಾದ, ಹಿಂಸಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬಾರದು. ಅತಿ ಮುಖ್ಯವಾಗಿ ವೀಕ್ಷಕರು ಯಾವಾಗಲೂ ಸಿನಿಕರಾಗಿರುತ್ತಾರೆ, ಕಾರ್ಯಕ್ರಮಗಳಲ್ಲಿ ತೋರಿಸುವ ಪ್ರತಿಯೊಂದು ಸಂಗತಿಯನ್ನು ಅವರು ಪ್ಯಾಸ್ಸಿವ್ ಆಗಿ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಬಾರದು. ಮೂರ್ಖರ ಪೆಟ್ಟಿಗೆಯ ಮುಂದಿರುವವರೆಲ್ಲಾ ಮೂರ್ಖರಲ್ಲ.

Anna_Hazare

ಅಣ್ಣಾ, ನಿಮ್ಮ ಮನಸ್ಸು ಮಲಿನವಾಯಿತೇಕೆ?


-ಚಿದಂಬರ ಬೈಕಂಪಾಡಿ


ಒಬ್ಬ ವ್ಯಕ್ತಿಗಿರಬಹುದಾದ ವ್ಯಾಮೋಹಗಳಲ್ಲಿ ಮಹತ್ವಾಕಾಂಕ್ಷೆಯೂ ಒಂದು. ಹಣ, ಕೀರ್ತಿ, ಆಸ್ತಿಗಳ ವ್ಯಾಮೋಹದಂತೆಯೇ ಮಹತ್ವಾಕಾಂಕ್ಷೆಯೂ ಹೊರತಲ್ಲ. ಸನ್ಯಾಸಿಯೆಂದರೆ ಸರ್ವಸಂಗ ಪರಿತ್ಯಾಗಿ. ಅವನಿಗೆ ಅಧಿಕಾರ ಬೇಡ, ಹಣ, ಕೀರ್ತಿ, ಪ್ರಚಾರ, ಲೌಕಿಕವಾದ ಯಾವುದೇ ಸುಖಭೋಗಗಳೂ ಬೇಡ. ಪಾರಮಾರ್ಥಿಕದ ಸುಖಕ್ಕಾಗಿ ಹಂಬಲಿಸುವುದು, ಅದರಲ್ಲೇ ಸಂತೃಪ್ತನಾಗುವುದು. ಆದರೆ ಈಗ ಇದು ಸಾಧ್ಯವಾಗುತ್ತಿಲ್ಲ. ಸನ್ಯಾಸಿಗಳಿಗೂ ತಮ್ಮದೇ ಆದ ಮಠ, ಪೀಠಗಳು ಬೇಕು. ಕೋಶ ತುಂಬಿರಬೇಕು. ಆಸ್ತಿ ಅಪಾರವಿರಬೇಕು. ಇವೆಲ್ಲವೂ ಸಮಾಜಕ್ಕಾಗಿ ಮಾಡುವ ಸೇವೆಗಾಗಿ, ಭಕ್ತರ ಅಭೀಷ್ಠೆ ಈಡೇರಿಸುವುದಕ್ಕಾಗಿ. ಸರ್ಕಾರಗಳು ಮಾಡಬೇಕಾದ ಕೆಲಸವನ್ನು ಕೆಲವು ಮಠ ಮಾನ್ಯಗಳು ಮಾಡುತ್ತಿವೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’  ಎನ್ನುವಂತೆ ಭಕ್ತರಿಂದ ಸಂಗ್ರಹಿಸಿದ ಸಂಪತ್ತನ್ನು ಭಕ್ತರ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿವೆ.

ಖರ್ಚು ಮಾಡಿದರೂ ಭಂಡಾರ ಭರ್ತಿಯಾಗಿಯೇ ಇರುವಂತೆ ಸದಾ ನೋಡಿಕೊಳ್ಳುತ್ತಿರಬೇಕು. ಇದು ಅವರ ಕಾಳಜಿಯೂ ಹೌದು. ಆದರೇ ಈ ನಾಡಿನ ಎಲ್ಲಾ ಮಠ ಮಾನ್ಯಗಳೂ ಮಾಡುತ್ತಿಲ್ಲ. ಎಲ್ಲಾ ಮಠಗಳೂ ಈ ಕಾಯಕಕ್ಕೆ ಮುಂದಾದರೆ ಸರ್ಕಾರಕ್ಕೇನು ಕೆಲಸ ಉಳಿದೀತು? ಎನ್ನುವ ಕಾರಣಕ್ಕೆ ಅಂದುಕೊಳ್ಳಬೇಕಾಗಿಲ್ಲ. ಅದು ಅವರವರ ಇಚ್ಛೆಗೆ ಬಿಟ್ಟ ವಿಚಾರ. ಮಠಗಳು ರಾಜಕೀಯ ಮಾಡಬಾರದು, ರಾಜಕೀಯ ಸೇರಬಾರದು. ಈಗ ಬಹುತೇಕ ಮಠಾಧೀಶರು ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವಿ ವಲಯವನ್ನು ನಿರ್ಮಿಸಿಕೊಂಡಿದ್ದಾರೆ, ರಾಜಕೀಯದಿಂದ ದೂರ ಇರುವವರೂ ಇದ್ದಾರೆ. ಧರ್ಮದ ಹೆಸರಲ್ಲಿ ಅಥವಾ ಧರ್ಮ ಉಳಿಸುವವರ ಹೆಸರಲ್ಲಿ ಕೆಲಸ ಮಾಡುವ ಸಂಘಟನೆ, ಪಕ್ಷಗಳಿಗೆ ರಾಜಗುರುಗಳಾಗಿ ಕೆಲಸ ಮಾಡುತ್ತಿದ್ದಾರೆ. ರಾಜನಿಗೆ ರಾಜಧರ್ಮದ ನೀತಿಯನ್ನು ಹಿಂದೆ ಹೇಳುತ್ತಿರಲಿಲ್ಲವೇ ಹಾಗೆ ಎಂದು ಈಗ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ.

ಅವರ ಸಮರ್ಥನೆಯನ್ನು ಚರ್ಚೆ ಮಾಡುವುದು ಅನಗತ್ಯ. ರಾಜಕಾರಣಿಗಳಿಗೆ ಗುರುಗಳು ಆಶೀರ್ವಾದ ಮಾಡುವುದು ತಪ್ಪಲ್ಲ, ತಿದ್ದಿಬುದ್ಧಿ ಹೇಳುವುದೂ ಅಪರಾಧವಲ್ಲ. ಆದರೆ ಅವರ ಕಾವಿಯೊಳಗಿರುವ ರಾಜಕೀಯದ ತುಡಿತ, ಮನಸ್ಸು, ಮಾತು ಒಬ್ಬ ವೃತ್ತಿಪರ ರಾಜಕಾರಣಿಗಿಂತಲೂ ಪರಿಪಕ್ವವಾಗಿರುವ ಉದಾಹರಣೆಗಳೂ ಇವೆ. ಕಾವಿಯ ಮರೆಯಲ್ಲಿರುವ ವ್ಯಾಮೋಹ ದೇಹವನ್ನು ಮಾತ್ರವಲ್ಲಾ ಮನಸನ್ನೂ ಆವರಿಸಿಕೊಂಡುಬಿಟ್ಟರೇ?. ನೇರವಾಗಿ ರಾಜಕೀಯ ಪಕ್ಷದ ಮೂಲಕ ಜನರ ಮುಂದೆ ದೇಹ ನಿಂತಿರದಿದ್ದರೂ ಮನಸ್ಸು ನಿಂತಿರುತ್ತದೆ. ಕಣದಲ್ಲಿ ನಿಂತವನಲ್ಲೇ ಲೀನವಾಗಿ ಅವನೇ ತಾನಾಗಿ ಕಾಣಿಸಿಕೊಳ್ಳುವ ವ್ಯಾಮೋಹವನ್ನು ನಿರಾಕರಿಸಲು ಸಾಧ್ಯವೇ? ಈ ವ್ಯಾಮೋಹಕ್ಕಿರುವ ಶಕ್ತಿಯೇ ಅಂಥದ್ದು ಅಂದುಕೊಂಡು ಸುಮ್ಮನಿರಬಹುದಿತ್ತು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಹಾಗೆ ಮಾಡುವುದು ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ ಎನ್ನುವುದಕ್ಕೆ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಉದಾಹರಣೆಯಾಗುತ್ತಾರೆ.

ಅಣ್ಣಾ ಈ ದೇಶಕಂಡ ಅಪ್ಪಟ ಗಾಂಧಿವಾದಿ. ಗಾಂಧೀಜಿಯವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾರ್ಯಕರ್ತರಾಗಿ ಜನಸೇವೆ ಮಾಡುತ್ತಾ ಬಂದ ಅವರ ಕಾಳಜಿ ಶ್ಲಾಘನೀಯ. ಕಳೆದು ಹೋಗುತ್ತಿರುವ ಗಾಂಧಿವಾದಿಗಳ ನಡುವೆ ಕೊಂಡಿಯಾಗಿರುವ ಅಣ್ಣಾ ಪ್ರಚಾರದ ಬೆಳಕಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದ್ದಾರೆ. ಜಡತ್ವದ ಹೊದಿಕೆಯೊಳಗೆ ಸುಖನಿದ್ದೆಯಲ್ಲಿದ್ದ ನಿರ್ಲಿಪ್ತ ಮನಸ್ಸುಗಳನ್ನು ಎಚ್ಚರಗೊಳಿಸಿದ್ದಾರೆ. ಎಲ್ಲವನ್ನೂ ಸಹಿಸಿಕೊಳ್ಳುವುದೇ ಬದುಕು, ಅದೇ ನೀತಿ, ಧರ್ಮ ಎನ್ನುವಂತೆ ಪ್ರಶ್ನೆ ಮಾಡುವುದನ್ನೇ ಮರೆತು ಬಿಟ್ಟವರಿಗೆ ಪ್ರಶ್ನೆ ಮಾಡಬೇಕು ಎನ್ನುವ ಅರಿವು ಮೂಡಿಸಿದ್ದಾರೆ. ಸಮಾಜಕ್ಕೆ ಎಲ್ಲರೂ ಬದ್ಧರು ಎನ್ನುವುದರ ಜೊತೆಗೇ ಅಧಿಕಾರ ಶಾಹಿ ಮತ್ತು ಪ್ರಭುತ್ವದ ಕೋಟೆಯೊಳಗೆ ಲಗ್ಗೆ ಹಾಕುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಣ್ಣಾ ತಾನು ತೊಡುವ ಬಿಳಿ ವಸ್ತ್ರದಷ್ಟೇ ಮಡಿಯಾಗಿ ಮನಸ್ಸನ್ನು ಇಟ್ಟುಕೊಂಡಿದ್ದರು ಅಂದ ಮೇಲೆ ಕೈಬಾಯಿ ಶುದ್ಧವೆಂದು ಹೇಳಬೇಕಾಗಿಲ್ಲ.

ಅವರ ಸಾಮಾಜಿಕ ಹೋರಾಟಗಳು ಗಾಂಧಿಗಿರಿಯಷ್ಟೇ ಮೊನಚಾಗಿದ್ದವು, ಜನಾಕರ್ಷಣೆಗೊಳಪಡುತ್ತಿದ್ದವು. ಆದರೆ ಪ್ರಚಾರದ ಪ್ರಖರತೆಯ ಬೆಳಕು ಅಣ್ಣಾ ಅವರನ್ನು ಆವರಿಸಿಕೊಂಡ ಮೇಲೆ ಅಣ್ಣಾ ಕೋಟೆ ನಿರ್ಮಾಣವಾಯಿತು. ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಅಣ್ಣಾ ದೇಶದ ಶಕ್ತಿಕೇಂದ್ರದಲ್ಲಿ ಕಾಣಿಸಿಕೊಂಡರು. ಈಗ ಅಣ್ಣಾ ಇಲ್ಲದ ಹೋರಾಟವನ್ನು ಊಹಿಸಿಕೊಳ್ಳುವುದೇ ಕಷ್ಟ ಎನ್ನುವಷ್ಟರಮಟ್ಟಿಗೆ ಬೆಳೆದುನಿಂತಿದ್ದಾರೆ. ಅಣ್ಣಾ ಹಳ್ಳಿಗಾಡಿನಿಂದ ಬಂದು ಹೈಪ್ರೊಫೈಲ್‌ಗಳನ್ನು ಕಾಡುತ್ತಿದ್ದ ನಾಯಕತ್ವದ ಕೊರತೆಯನ್ನು ನೀಗಿಸಿದ್ದಾರೆ. ಸಾಮಾಜಿಕವಾಗಿ ಉನ್ನತ ಸ್ಥಾನಮಾನ, ಹಣ, ಅಂತಸ್ತು ಇದ್ದವರ ಕಾಲಬುಡದಲ್ಲಿ ರಾಜಕಾರಣ ಮಂಡಿಯೂರುತ್ತದೆ ಅನಿವಾರ್ಯವಾದಾಗ ಮಾತ್ರ. ಸಾಮಾನ್ಯ ವರ್ಗ ಸದಾ ಅಧಿಕಾರ ಮತ್ತು ರಾಜಕಾರಣದ ಸುತ್ತಲೂ ಗಿರಕಿಹೊಡೆಯುತ್ತಿರುತ್ತದೆ.

ಆದ್ದರಿಂದ ಸಾಮಾನ್ಯವರ್ಗದ ಮುಂದೆ ರಾಜಕಾರಣ ಮಂಡಿಯೂರಿದಂತೆ ಕಾಣಿಸಿದರೂ ಅದು ನಿಜವಲ್ಲ, ನಿಜದಂತೆ ಕಾಣುವುದು ಸಾಮಾನ್ಯವರ್ಗದ ಮನಸ್ಸಿನ ಭ್ರಮೆ. ಇದನ್ನು ಚೆನ್ನಾಗಿ ಅರಿತಿರುವ ಹೈಪ್ರೊಫೈಲ್ ವರ್ಗ ರಾಜಕಾರಣಿಗಳನ್ನು ನಾಯಕರೆಂದು ಒಪ್ಪಿಕೊಳ್ಳಲು ಬಯಸುವುದಿಲ್ಲ. ಅಂಥವರ್ಗದ ಕಣ್ಣಿಗೆ ನಾಯಕರಾಗಿ ಕಾಣಿಸಿಕೊಂಡಿರುವವರು ಅಣ್ಣಾ. ಆದರಿಂದಲೇ ನೀವು-ನಾವೂ ಊಹಿಸಲು ಸಾಧ್ಯವಿಲ್ಲದವರು ಅಣ್ಣಾ ಅವರ ಬೆನ್ನಿಗೆ ನಿಲ್ಲುವುದನ್ನು ಕಾಣಬಹುದು. ನಿಜವಾದ ಕಾಳಜಿಯ ಸಾಮಾನ್ಯವರ್ಗ ಅಣ್ಣಾ ಅವರಲ್ಲಿ ಗಾಂಧಿಯನ್ನು ಕಾಣುತ್ತಿದ್ದಾರೆ. ಗಾಂಧೀಜಿಯವರನ್ನು ನೋಡಿರದಿದ್ದವರೇ ಈಗ ಈ ದೇಶದ ನಿರ್ಣಾಯಕ ಶಕ್ತಿಯಾಗಿರುವುದರಿಂದ ಸಹಜವಾಗಿಯೇ ಆಕರ್ಷಿತರಾಗಿದ್ದಾರೆ. ಇದನ್ನು ಚೆನ್ನಾಗಿ ಗುರುತಿಸಿದವರು ಕೆಲವೇ ಕೆಲವು ಜನರು. ಅಣ್ಣಾ ಅವರ ಮೂಲಕ ವೇದಿಕೆ ನಿರ್ಮಿಸಿಕೊಂಡು ತಾವೇ ಚೌಕಟ್ಟು ಹಾಕಿ ಕೊಂಡರು. ಅಣ್ಣಾತಂಡ ಅಸ್ತಿತ್ವಕ್ಕೆ ಬಂತು. ಆಗ ಅಣ್ಣಾ ಮಾತ್ರ ಏಕಸೂತ್ರಧಾರಿಯಾಗಿದ್ದರು. ತಂಡ ಬಂದಮೇಲೆ ಅಣ್ಣಾ ನಿಧಾನವಾಗಿ ಸೂತ್ರವನ್ನು ಕಳೆದುಕೊಂಡು ಕೇವಲ ಪಾತ್ರಧಾರಿಯಾಗಿಬಿಟ್ಟರು ಅನ್ನಿಸಿದರೆ ತಪ್ಪಲ್ಲ.

ಸ್ವಾತಂತ್ಯ್ರ ಹೋರಾಟಕ್ಕೆ ಗಾಂಧೀಜಿ ನಾಯಕತ್ವ ಕೊಟ್ಟರು. ಗಾಂಧಿಗಿರಿಯೇ ನಡೆಯುತ್ತಿದ್ದರೂ ಈ ಹೋರಾಟಕ್ಕೆಂದೇ ವೇದಿಕೆ ರೂಪಿಸಿದರು. ಅದರ ಹೆಸರೇ ಕಾಂಗ್ರೆಸ್. ಈ ಹೆಸರಿನಡಿಯಲ್ಲಿಯೇ ಸ್ವಾತಂತ್ರ್ಯ ಹೋರಾಟ ನಡೆದವು. ಸ್ವಾತಂತ್ರ್ಯ ಸಿಕ್ಕಿದ ಮೇಲೆ ಗಾಂಧಿ ಕಾಂಗ್ರೆಸ್ ವಿಸರ್ಜನೆ ಮಾಡಲು ಸಲಹೆ ಮಾಡಿದ್ದರು. ಈ ವೇದಿಕೆಯ ಅವಶ್ಯಕತೆ ಇನ್ನಿಲ್ಲ ಎನ್ನುವುದು ಅವರು ಆಗ ಕೊಟ್ಟ ಕಾರಣ. ಆದರೆ ಗಾಂಧೀಜಿಯವರ ಸಲಹೆ ಅನುಷ್ಠಾನವಾಗಲಿಲ್ಲ. ಆ ಕಾರಣಕ್ಕೆ ಈಗಲೂ ಕಾಂಗ್ರೆಸ್ ಉಳಿದುಕೊಂಡಿದೆ. ಅವರವರ ಅನುಕೂಲ, ಆಸಕ್ತಿಗೆ ಪೂರಕವಾಗುವ ಪಕ್ಷಗಳನ್ನು ನಾಯಕರುಗಳು ಕಟ್ಟಿಕೊಂಡರು. ಈಗ ನಮ್ಮ ಸುತ್ತಲೂ ಇರುವ ಪಕ್ಷಗಳು ಅವುಗಳ ಮುಂದುವರಿಕೆ. ಆದರೆ ಹಳೆತಲೆಮಾರಿನ ಆದರ್ಶಗಳು ಮಾತ್ರ ಉಳಿದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಉತ್ಸಾಹವನ್ನು ಅಣ್ಣಾ ಈ ಇಳಿವಯಸ್ಸಿನಲ್ಲೂ ಉಳಿಸಿಕೊಂಡಿರುವುದೇ ಸೋಜಿಗ. ದಿಲ್ಲಿಯಲ್ಲಿ ಉಪವಾಸ ಹೂಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಎತ್ತಿದ ಕೂಗು ದೇಶದ ಸಾಮಾನ್ಯ ಜನರ ಕೂಗಾಯಿತು. ಅಣ್ಣಾ ಹೋರಾಟಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬಂದರು. ಹೈಪ್ರೊಫೈಲ್ ವ್ಯಕ್ತಿಗಳು ಉಪವಾಸ ಸ್ಥಳದಲ್ಲಿ ಕಾಣಿಸಿಕೊಂಡಾಗ ಸಹಜವಾಗಿಯೇ ಅಣ್ಣಾ ಪುಳಕಗೊಂಡರು. ಅಣ್ಣಾ ಹಮ್ಮಿಕೊಂಡ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಹೋರಾಟವೆಂದು ಮಾಧ್ಯಮಗಳು ಬಣ್ಣಿಸಿದ್ದು ವಾಸ್ತವ ಕೂಡಾ. ಪ್ರಚಾರ ಎನ್ನುವುದು ಅತ್ಯಂತ ಅಪಾಯಕಾರಿ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ. ಪ್ರಾಮಾಣಿಕನನ್ನು ಬಹುಬೇಗ ಅಪ್ರಾಮಾಣಿಕನನ್ನಾಗಿಸುವ ಶಕ್ತಿ ಪ್ರಚಾರಕ್ಕಿದೆ. ಹಾಗೆಂದು ಭಯಪಡಬೇಕಾಗಿಲ್ಲ. ಸ್ವಯಂನಿಯಂತ್ರಣವಿದ್ದರೆ ಯಾವ ಪ್ರಚಾರವೂ ಹಾನಿಮಾಡಲು ಸಾಧ್ಯವಿಲ್ಲ. ಆದರೆ ಇಂಥ ಪ್ರಚಾರಗಳ ಸುಳಿಗೆ ಸಿಲುಕಿದರೆ ಆಗಬಹುದಾದ ಅನಾಹುತವೇನು ಎನ್ನುವುದಕ್ಕೆ ಅಣ್ಣಾ ತಂಡದೊಳಗಿರುವ ಭಿನ್ನಾಭಿಪ್ರಾಯ ಉದಾಹರಣೆಯಾಗಬಲ್ಲುದು. ಒಂದೇ ಮಾತಿನಲ್ಲಿ ಹೇಳಬೇಕಾದರೆ ಈಗ ಅಣ್ಣಾತಂಡ ಏಕಸ್ವರವಾಗಿಲ್ಲ.

ಪ್ರಬಲ ಲೋಕಪಾಲ್ ಜಾರಿಗೆ ಬರಬೇಕು ಎನ್ನುವುದು ಅಣ್ಣಾ ತಂಡದ ಪೇಟೆಂಟ್ ಎಂಬರ್ಥದಲ್ಲಿ ನೋಡಲಾಗುತ್ತಿದೆ. ವಾಸ್ತವವಾಗಿ ಇದು ಈ ದೇಶದ ಶೋಷಿತರ, ದಲಿತರ, ಅನಕ್ಷರಸ್ಥರ ಮತ್ತು ಬಲಿಷ್ಠ ಭಾರತದ ಕನಸು ಕಾಣುವ ಎಲ್ಲರ ಕನಸು. ಅವರಿಗೆ ಹೇಳಲು ಅಸಾಧ್ಯವಾಗಿತ್ತು, ಅಣ್ಣಾ ತಂಡ ಹೇಳಲು ಶಕ್ತವಾಯಿತು. ಅಂಥ ಶಕ್ತಿ ಕೊಟ್ಟವರು ಮೇಲೆ ಹೇಳಿದ ಜನಶಕ್ತಿ. ಆದರೆ ಪ್ರಬಲ ಲೋಕಪಾಲ್ ಜಾರಿ ಸುಲಭವಾಗಿ ಬರುವುದಿಲ್ಲ. ಯಾಕೆಂದರೆ ಅದನ್ನು ಜಾರಿಗೆ ತರಬೇಕಾದವರು ಜನಶಕ್ತಿಯ ಪ್ರತಿನಿಧಿಗಳು. ಅದು ಜಾರಿಗೆ ಬಂದರೆ ಅವರು ಮತ್ತೆ ಪ್ರತಿನಿಧಿಗಳಾಗಿ ಆರಿಸಿಬರಲು ಕಷ್ಟವಾಗಬಹುದು. ಆ ಕಷ್ಟದ ಅಂಶವನ್ನು ನಿವಾರಿಸಿಕೊಂಡು ಜಾರಿಗೆ ತರಲು ಅವರದೂ ಅಭ್ಯಂತರವಿರಲ್ಲಿಲ್ಲ. ಅಣ್ಣಾ ಹೇಳುವಂಥ ಲೋಕಪಾಲ್ ಜಾರಿಗೆ ಬಂದರೆ ಶಕ್ತಿಕೇಂದ್ರದೊಳಗೆ ಈಗ ಇರುವ ಬಹುತೇಕ ಮಂದಿಗೆ ಎಂಟ್ರಿ ಸಾಧ್ಯವಿಲ್ಲ. ದೇಶದ ಮೊದಲ ಆದ್ಯತೆ ವಸತಿ ಕಲ್ಪಿಸುವುದಲ್ಲ, ಜೈಲು ನಿರ್ಮಿಸುವುದು ಎನ್ನುವುದು ಅವರಿಗೂ ಗೊತ್ತು.

ಈ ಎಲ್ಲವೂ ಅಣ್ಣಾ ಅವರಿಗೂ ಗೊತ್ತು. ಒಂದು ವ್ಯವಸ್ಥೆಗೆ ವಿರುದ್ಧವಾದ ಪರ್ಯಾಯ ವ್ಯವಸ್ಥೆಯನ್ನು ಸುಲಭವಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಪ್ರತಿರೋಧಗಳಿರುತ್ತವೆ. ಸ್ವಾತಂತ್ರ್ಯ ಗಾಂಧೀಜಿಯವರ ಒಂದೇ ಬೈಠಕ್ ಹೋರಾಟಕ್ಕೆ ಸಿಗಲಿಲ್ಲ. ಅನೇಕ ವರ್ಷಗಳ ನಿರಂತರ ಹೋರಾಟದ ಫಲ. ಪ್ರಬಲ ಲೋಕಪಾಲ್ ಜಾರಿಗೂ ಗಾಂಧೀಜಿ ಅವರ ಹೋರಾಟ ಮಾದರಿಯಾಗಬೇಕಿತ್ತು. ಸ್ವಯಂ ಜನರೇ ಹೋರಾಟಕ್ಕಿಳಿಯಬೇಕಲ್ಲದೇ ಹೋರಾಟಕ್ಕಿಳಿಯಲು ಒತ್ತಾಯಮಾಡುವಂತಾಗಬಾರದು. ಅಣ್ಣಾ ಹಮ್ಮಿಕೊಂಡ ಹೋರಾಟಕ್ಕೆ ಸಹಜವಾದ ಕಾರಣವಿತ್ತು, ಅನಿವಾರ್ಯವೂ ಆಗಿತ್ತು. ಆದರೆ ಹೋರಾಟಕ್ಕೆ ಕಾವುಬಂದಿರಲಿಲ್ಲ. ಈ ಕಾರಣದಿಂದಾಗಿಯೇ ಉಪವಾಸ ಸತ್ಯಾಗ್ರಹ ಪ್ರಹಸನದ ರೂಪತಳೆಯಿತು. ಇದು ಹೋರಾಟಕ್ಕೆ ಆದ ಹಿನ್ನಡೆ ಹೊರತು ಹೊಸ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕಲು ನಿಜವಾದ ಪ್ರೇರಣೆ ಅಲ್ಲ. ಆದರೆ ಅಣ್ಣಾ ಯಾಕೆ ಹಾಗೆ ಭಾವಿಸಿದರು ಎನ್ನುವುದು ಅಚ್ಚರಿಯಂತೂ ಅಲ್ಲ. ಅಣ್ಣಾ ಅದೆಷ್ಟೇ ಪ್ರಾಮಾಣಿಕತೆಯನ್ನು ತಮ್ಮ ತಂಡದ ಬಗ್ಗೆ ವ್ಯಕ್ತಪಡಿಸಿದರೂ ಸಂಶಯದ ಬೇರುಗಳು ಮಾತ್ರ ಚಿಗುರುತ್ತಲೇ ಇರುತ್ತವೆ. ಅಂಥ ಸಂಶಯಗಳಲ್ಲಿ ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟುಹಾಕುವ ಯೋಚನೆ ಬಂದದ್ದು. ಈ ಯೋಚನೆಯ ಹೊಣೆಯನ್ನು ಅಣ್ಣಾ ಅವರ ತಲೆಗೆ ಕಟ್ಟಲು ಸಾಧ್ಯವಿಲ್ಲ. ಅಣ್ಣಾ ಮನಸ್ಸು ಮಾಡಿದ್ದರೆ ಬಹಳ ಹಿಂದೆಯೇ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸುತ್ತಿದ್ದರು. ಅಂಥವರು ಲೋಕಸಭೆ ಪ್ರವೇಶಿಸಲು ಉತ್ಸುಕರಾಗಿದ್ದಾರೆ ಅಂದುಕೊಳ್ಳುವುದು ಮೂರ್ಖತನವಾಗುತ್ತದೆ.

ಅಣ್ಣಾರಂತೆ ಅವರ ತಂಡದಲ್ಲಿದ್ದವರೆಲ್ಲರೂ ವ್ಯಾಮೋಹ ಮುಕ್ತರೆಂದು ಭಾವಿಸಬೇಕಾಗಿಲ್ಲ. ವ್ಯಾಮೋಹ ಅನೇಕರಲ್ಲಿ ಅನೇಕ ಕಾರಣಗಳಿಗಾಗಿ ಇರಬಹುದು, ಇಲ್ಲದಿರಬಹುದು. ಈ ವ್ಯಾಮೋಹ ಅಣ್ಣಾ ಅವರನ್ನು ಆವರಿಸಿಕೊಳ್ಳುವಂತೆ ಮಾಡುವ ಪ್ರಯತ್ನದ ಮೊದಲ ಹಂತ ಈಗಿನದ್ದು. ಈ ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಹುಟ್ಟು ಅನಿವಾರ್ಯ. ಅಂಥ ಶಕ್ತಿಯನ್ನು ಹುಟ್ಟು ಹಾಕಲು ಅಣ್ಣಾ ಸಮರ್ಥರು. ಆದರೆ ಅಧಿಕಾರದ ಚುಕ್ಕಾಣಿ ಹಿಡಿಯಬಲ್ಲಷ್ಟು ಸಮರ್ಥವಾದ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವುದು ಸುಲಭವಲ್ಲ ಎನ್ನುವುದನ್ನು ಇತಿಹಾಸದಿಂದ ಕಲಿಯಬೇಕಾಗುತ್ತದೆ. ಅಣ್ಣಾ ಅವರ ಹೊಸ ಸಾಹಸವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದಾಗ ತಟ್ಟನೆ ನೆನಪಾದವರು ಮಹೇಂದ್ರ್ ಸಿಂಗ್ ಟಿಕಾಯತ್. ಅಷ್ಟು ದೊಡ್ಡ ರೈತಶಕ್ತಿಯಾಗಿದ್ದ ಟಿಕಾಯತ್ ಈಗ ಇತಿಹಾಸ.

ಅಣ್ಣಾ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾಗ, ಉಪವಾಸಕ್ಕೆ ಕುಳಿತುಕೊಳ್ಳುತ್ತಿದ್ದಾಗ ಆಗುತ್ತಿದ್ದ ರೋಮಾಂಚನ ಅವರು ತಂಡಕಟ್ಟಿಕೊಂಡ ಮೇಲೆ ಆಗುತ್ತಿರಲಿಲ್ಲ. ಆ ತಂಡದವರು, ಅವರ ಮಾತುಗಳನ್ನು ಕೇಳಿಸಿಕೊಂಡಾಗಲೆಲ್ಲಾ ಕೆಲವು ರಾಜಕಾರಣಿಗಳು ಕಣ್ಣಮುಂದೆ ಬಂದಂತಾಗುತ್ತಿತ್ತು. ಸದಾ ಪ್ರಚಾರ ಬಯಸುವ ರಾಜಕಾರಣಿಗಳಿಗಿಂತೇನು ಕಡಿಮೆಯಿಲ್ಲ, ಅಂಥ ಸುದ್ದಿಮೂಲಗಳು ಅನ್ನಿಸತೊಡಗಿತು. ಅಣ್ಣಾ ಜಂತರ್ ಮಂತರ್‌ನಲ್ಲಿ ಉಪವಾಸಕ್ಕೆ ಕುಳಿತದ್ದು ಮತ್ತು ಅವರು ಉಪವಾಸ ಕೈಬಿಟ್ಟು ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಘೋಷಣೆ ಮಾಡಿದ್ದಂತೂ ಅಚ್ಚರಿಮೂಡಿಸಲಿಲ್ಲ. ಆದರೆ ಆತುರವಾಯಿತು ಅನ್ನಿಸಿತು ಮತ್ತು ಇದು ನಿಮ್ಮ ಅಖಾಡ ಅಲ್ಲ ಅಣ್ಣಾ ಅನ್ನಬೇಕೆನಿಸಿತು. ನಿರ್ಮಲವಾಗಿದ್ದ ಅಣ್ಣಾ ಮನಸ್ಸು ರಾಜಕೀಯ ಶಕ್ತಿಯ ಕನಸಿನೊಂದಿಗೆ ಮಲಿನವಾಯಿತು ಅನ್ನಬೇಕೇ? ಇನ್ನಷ್ಟು ದಿನ ಹೀಗೆಯೇ ತಂಡ ಉಳಿದರೆ ಅಣ್ಣಾ ನಿಮ್ಮ ಮೈಕೈಯನ್ನೂ ಮಲಿನ ಮಾಡಿಬಿಡುತ್ತಾರಲ್ಲ ಎನ್ನುವ ಆತಂಕವಾಗುತ್ತಿದೆ.

ಒಕ್ಕಲಿಗರು ಬೌದ್ಧರೇ?

– ಪ್ರೊ. ಕೆ. ಎಸ್. ಭಗವಾನ್

[1982ರಿಂದ ಇಲ್ಲಿಯವರೆಗೆ 15 ಮುದ್ರಣಗಳನ್ನು ಕಂಡಿರುವ “ಶಂಕರಾಚಾರ್ಯ ಮತ್ತು ಪ್ರತಿಗಾಮಿತನ” ಪುಸ್ತಕದ ಲೇಖಕರಾದ ಪ್ರೊ. ಕೆ.ಎಸ್. ಭಗವಾನ್‌ರವರು, ಆ ಪುಸ್ತಕದ ಮತ್ತು ಲೇಖನ-ಗ್ರಂಥಗಳ ಮೂಲಕದ ಕಳೆದ ಮೂರು ದಶಕಗಳಲ್ಲಿ ಕನ್ನಡದ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ ಪ್ರಯತ್ನಪಟ್ಟವರು. ತಮ್ಮ ಬರವಣಿಗೆಗೆಳಲ್ಲಿ ಜಾತ್ಯತೀತತೆಯನ್ನು ಎತ್ತಿಹಿಡಿದವರು. ಸ್ವಾಮಿ ವಿವೇಕಾನಂದ ಮತ್ತು ಕುವೆಂಪುರವರನ್ನು ಆಳವಾಗಿ ಅಧ್ಯಯನ ಮಾಡಿದವರು. ಹಿಂದೂ ಸಮಾಜದಲ್ಲಿನ ಜಾತೀಯತೆ. ಶ್ರೇಣೀಕೃತ ವ್ಯವಸ್ಥೆ, ಶೋಷಣೆಗಳ ವಿರುದ್ಧ, ವೇದಗಳ ಸಂಕುಚಿತತೆ ಮತ್ತು ಉಪನಿಷದ್‌ಗಳ ಆದರ್ಶಗಳ ಬಗ್ಗೆ ಸಾಧಾರಸಮೇತ ಬರೆದವರು.]

ಒಕ್ಕಲಿಗರ ಬೃಹತ್ ಸಮಾವೇಶ ’ಗುರುವಂದನೆ’ಯ ರೂಪದಲ್ಲಿ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ (03-06-2012) ಜರುಗಿತು. ಇದನ್ನು ಆಯೋಜಿಸಿದ್ದು ’ಒಕ್ಕಲಿಗರ ಸಂಘ’ ಬೆಂಗಳೂರು. ಅದು ಜನಾಂಗಿಕ ಒಗ್ಗಟ್ಟನ್ನು ತೋರಿಸಿದರೂ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಅಭಿವೃದ್ಧಿಯ ಮುನ್ನೋಟವನ್ನು ನೀಡಲಿಲ್ಲ. ಮುಂಗಾಣ್ಕೆ ಇಲ್ಲದ ಜನಾಂಗ ಮಂದಗಾಮಿ ಆಗುವುದು ಸಹಜ. ಹಳ್ಳಿಗಾಡಿನ ಒಕ್ಕಲಿಗರು ಬೇಸಾಯಗಾರರು; ಬಹುತೇಕ ಬಡವರು; ಕೆಲವರು ಕಡುಬಡವರು. ರೈತರು ಬೆಳೆಯುವ ಉತ್ಪನ್ನಗಳಿಗೆ ಅವರ ಖರ್ಚು ಮತ್ತು ಶ್ರಮಗಳಿಗೆ ತಕ್ಕಂತೆ ವೈಜ್ಞಾನಿಕ ಬೆಲೆಗಳನ್ನು ಸರ್ಕಾರ ನಿರ್ಧರಿಸದೆ ಇರುವುದರಿಂದ ಅವರು ಸದಾ ಬಡವರಾಗಿಯೇ ಇದ್ದಾರೆ. ಕಾರ್ಖಾನೆಗಳಲ್ಲಿ ತಯಾರಾಗುವ ವಸ್ತುಗಳ ಧಾರಣೆಗಳನ್ನು ನಿಗದಿಪಡಿಸುವವರು ಕೈಗಾರಿಕೋದ್ಯಮಿಗಳು. ಹಳ್ಳಿಯಿಂದ ಬರುವ ಪದಾರ್ಥಗಳೆಲ್ಲ ಅಗ್ಗ; ಪಟ್ಟಣದಿಂದ ಹಳ್ಳಿಗೆ ಹೋಗುವ ಸರಕುಗಳೆಲ್ಲ ತಗ್ಗು. ಗ್ರಾಮಗಳನ್ನು ನಗರಗಳು ಹೆಬ್ಬಾವಿನಂತೆ ನುಂಗುತ್ತಿವೆ. ಆದುದರಿಂದ ಅವರ ಆರ್ಥಿಕ ಸಬಲತೆಯ ಬಗ್ಗೆ ಸಮಾವೇಶ ಚಿಂತಿಸದೇ ಹೋದದ್ದು ದೊಡ್ಡ ಕೊರತೆ. ಜನರ ಗರೀಬತನವನ್ನು ಅಳಿಸದೆ ಅವರ ಮುಗ್ಧತೆಯನ್ನು ಬಳಸಿಕೊಳ್ಳುವುದು ಅನುಚಿತವಾಗುತ್ತದೆ. ಬಡವರನ್ನು ಪ್ರೌಢರನ್ನಾಗಿ ಮಾಡದೆ ಮೂಢರನ್ನಾಗಿ ಇಡುವುದು ನಡತೆಯಲ್ಲ್ಲ. ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪದ್ಮಭೂಷಣ ಡಾ| ಬಾಲಗಂಗಾಧರನಾಥ ಸ್ವಾಮೀಜಿ ಅವರು ಈ ಜನಾಂಗದವರ ಐಕ್ಯತೆಯನ್ನು ಸಾಧಿಸುವಲ್ಲಿ ಬಹುಪಾಲು ಸಫಲರಾಗಿದ್ದಾರೆ. ನಾನಾ ಬಣಗಳು, ಒಳಪಂಗಡಗಳು, ವಿವಿಧ ರಾಜಕೀಯ ಪಕ್ಷದವರು, ಎಲ್ಲರನ್ನೂ ಒಂದೆಡೆ ಸೇರಿಸಿದ್ದು ನಿಜಕ್ಕೂ ವಿಸ್ಮಯಕರ ಸಾಧನೆಯೆ! ಇದರಿಂದ ರಾಜ್ಯದಲ್ಲಿನ ಎರಡನೆಯ ಮಹಾಸಂಖ್ಯಾ ಬಲದ ಕೋಮಿನ ಏಕತೆಯ ಸಂಕೇತವಾಗಿದ್ದಾರೆ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು. ಇವರ ಕಾಲದಲ್ಲಿ ಆಗಿರುವಷ್ಟು ಶೈಕ್ಷಣಿಕ ಸಾಧನೆಗಳು, ವಿದ್ಯಾಸಂಸ್ಥೆಗಳ ಸ್ಥಾಪನೆ, ಹಿಂದೆಂದೂ ಆಗಿರಲಿಲ್ಲ. ಶ್ರೀಕ್ಷೇತ್ರದಲ್ಲಿ ಅವರು ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನ ಐತಿಹಾಸಿಕ ಸುಪ್ರಸಿದ್ಧ ದೇವಾಲಯಗಳ ಸಾಲಿಗೆ ಸೇರುತ್ತದೆ. ಅದನ್ನು ನೋಡಿದರೆ ಬೇಲೂರು, ಹಳೇಬೀಡು, ತಲಕಾಡು ಇತ್ಯಾದಿ ಸ್ಥಳಗಳ ನಿರ್ಮಾಣಗಳು ನೆನಪಾದರೆ ಅದು ಯಥೋಚಿತವಲ್ಲದೆ ಸೋಜಿಗ ಎನ್ನಿಸುವುದಿಲ್ಲ. ಹೊಯ್ಸಳರು, ಗಂಗರು, ಮುಂತಾದ ರಾಜಮಹಾರಾಜರುಗಳ ಶ್ರೇಣಿಯಲ್ಲಿ ಬಾಲಗಂಗಾಧರನಾಥರು ವಿರಾಜಿಸುತ್ತಾರೆ.

ಆ ಬೃಹತ್ ಸಮ್ಮೇಳನವನ್ನು ರಾಜ್ಯದ ಮುಖ್ಯಮಂತ್ರಿ ಶ್ರೀ ಡಿ. ವಿ. ಸದಾನಂದಗೌಡರು ಉದ್ಘಾಟಿಸಿದರು. ಮಾನ್ಯ ಗೌಡರು ಮುಖ್ಯಮಂತ್ರಿ ಪದವಿಗ್ರಹಣ ಮಾಡಿದ ನಂತರ ಶ್ರೀಗಳನ್ನು ಕಾಣಲು ಹೋಗಿ ಆಶೀರ್ವಾದ ಪಡೆದಾಗ, “ಸದಾನಂದ ಅವರೇ, ನೀವು ಆರುವರೆ ಕೋಟಿ ಪ್ರಜೆಗಳ ಏಳಿಗೆಯನ್ನು ಮಾಡಬೇಕು. ಅವರು ಕೊಂಡಾಡುವಂತೆ ನೀವು ಆಡಳಿತ ನಡೆಸಿ” ಎಂದು ಹೇಳಿದ್ದನ್ನು ನೆನಪಿಸಿಕೊಂಡರು. ಆ ಮಾತುಗಳು ಸ್ವಾಮೀಜಿ ಅವರ ಉದಾತ್ತ ಹೃದಯ ಮತ್ತು ವಿಶಾಲ ಮನೋಭಾವನೆಗಳನ್ನು ಸೂಚಿಸುತ್ತವೆ ಎನ್ನಬಹುದು. ಭಾರತದ ವಿದೇಶಾಂಗ ಸಚಿವರಾದ ಸಂಯಮ ಮೂರ್ತಿ ಎಸ್. ಎಂ. ಕೃಷ್ಣರವರು, ದವಸಧಾನ್ಯಗಳನ್ನು ಬೆಳೆಯುವ “ಒಕ್ಕಲಿಗರು ಯಾವಾಗಲೂ ನೀಡಿದವರು, ಪಡೆದವರಲ್ಲ” ಎಂದರು. ನಿಜ. ಆದರೆ ರೈತರ ಕೆಲಸಕ್ಕೆ ಬೇಕಾದ ನೇಗಿಲು ನೊಗ ಕುಂಟೆ ಹಲುಬೆ ಮಾಡುವವರು, ಹಾರೆ ಗುದ್ದಲಿ ಪಿಕಾಸಿ ಕುಡುಗೋಲು ಕೊಡಲಿ ಎರೆಗತ್ತಿ ಕಡಕತ್ತಿ ಮುಂತಾದ ಹತಾರಗಳನ್ನೆಲ್ಲ ತೋಳಿಸಿ ಕೊಡುವವರು ಕಮ್ಮಾರರು; ಅವರಿಗೆ ಗಾಡಿಗಳನ್ನು ಹೂಡಿ ಕೊಡುವವರು ಬಡಗಿಗಳು; ಅವರು ಒಪ್ಪ ಓರಣವಾಗಿ ಷೋಕಿಯಾಗಿ ಕಾಣುವಂತೆ ಕೇಶ ಶೃಂಗಾರ ಮಾಡುವವರು ನಾಯಿಂದರು; ಅವರು ಬಯಸುವ ಸೈಕಲ್ ಸ್ಕೂಟರ್ ಮೋಟಾರ್ ಬೈಕ್; ಅವರು ಪ್ರಯಾಣಿಸುವ ಬಸ್ ರೈಲು ಇತ್ಯಾದಿಗಳನ್ನು ಅವರೇ ತಯಾರಿಸುವುದಿಲ್ಲ; ಅಷ್ಟೇ ಅಲ್ಲ; ಅವರು ಉಡುವ ಬಟ್ಟೆಬರೆಗಳು ಮತ್ತು ತೊಡುವ ಸೀರೆ ಕುಪ್ಪಸಗಳಿಗಾಗಿ ಬೇರೆಯವರನ್ನು ಅವಲಂಬಿಸಬೇಕು; ಕುಲಾಲರು ಮಡಿಕೆ ಕುಡಿಕೆ ಮಾಡಿ ಕೊಡದೆ ಇದ್ದರೆ ಅಥವಾ ಕಂಚುಗಾರರು ಪಾತ್ರೆ ಮಾಡದೆ ಹೋದರೆ ಅವರು ಅಡಿಗೆ ಮಾಡಿಕೊಂಡು ಉಣ್ಣಲು ಆಗಲಾರದು. ಪ್ರತಿಯೊಂದು ಜನಾಂಗವೂ ಇನ್ನೊಂದು ಜನಾಂಗದವರ ಕಸುಬಿನ ನೆರವು ಅಥವಾ ಸೇವೆ ಅಥವಾ ಕೊಡುಗೆಯ ಮೇಲೆ ಅವಲಂಬಿತವಾಗಿದೆ. ಪರಸ್ಪರ ಅಂತರವಲಂಬನೆ ಸಾಮಾಜಿಕ ನಿಯಮ ಮತ್ತು ಕರ್ತವ್ಯ. ಒಂದು ವೃತ್ತಿಯವರು ಇನ್ನೊಂದು ಕಸುಬಿನವರು ಉತ್ಪಾದಿಸಿದ ಅಗತ್ಯ ವಸ್ತುಗಳನ್ನು ಪಡೆಯದೆ ಬದುಕು ಸಾಗಿಸುವುದು ಸಾಧ್ಯವಿಲ್ಲ. ಹಳ್ಳಿಯಲ್ಲಿ ದಲಿತರು ಓಲಗ ಕೊಂಬು ಊದದೆ ಹೋದರೆ ’ದೇವರು ಬರು’ವುದಿಲ್ಲ, ತೇರು ಹರಿಯುವುದಿಲ್ಲ. ತೀರ ಕ್ವಚಿತ್ತಾಗಿ ಜಾತಿ ಜಗಳಗಳಾದರೂ, ವರ್ಗ ಕಲಹಗಳು ಭಾರತದಲ್ಲಿ ಆಗದಿರುವುದಕ್ಕೆ ಪರಸ್ಪರ ಪೂರಕ ಮತ್ತು ತಾರಕ, ಹಾಗೂ ಕೆಲವೇಳೆ ಮಾರಕ, ಆಶ್ರಯವೇ ಪ್ರಮುಖ ಕಾರಣ ಎನಿಸುತ್ತದೆ. ಇದು ಬರಿ ಆರ್ಥಿಕ ವ್ಯವಹಾರವಾಗಿರದೆ, ಮದುವೆ ಹಬ್ಬಹರಿದಿನಗಳಲ್ಲಿ ಭಾಗವಹಿಸಿ ಊಟೋಪಚಾರ ನಡೆಯುವುದರಿಂದ ಆತ್ಮೀಯ ಮಾನವ ಸಂಬಂಧವಾಗಿದೆ. ಹೀಗೆಂದರೆ ಇದು ಜಾತಿವ್ಯವಸ್ಥೆಯ ಬೆಂಬಲ ಎಂದು ಖಂಡಿತ ತಿಳಿಯಬಾರದು. ಹೆಣ್ಣು ಕೊಡುವುದೂ ತರುವುದೂ ನಡೆದರೆ ಕಾಲಾಂತರದಲ್ಲಿ ಜಾತಿಪದ್ಧತಿ ನಿರ್ನಾಮವಾಗುವುದರಲ್ಲಿ ಅನುಮಾನವಿಲ್ಲ.

ಶ್ರೀ ಆದಿಚುಂಚನಗಿರಿ ಮಠ ಬಿಟ್ಟರೆ ಒಕ್ಕಲಿಗರಿಗೆ ಬೇರಾವ ಧಾರ್ಮಿಕ ಸಂಸ್ಥೆ ಇಲ್ಲ. ಶ್ರೀ ಚಂದ್ರಶೇಖರನಾಥ ಸ್ವಾಮೀಜಿಗಳ ವಿಶ್ವ ಒಕ್ಕಲಿಗರ ಮಠ ಕೆಂಗೇರಿಯಲ್ಲಿ ಇದ್ದರೂ ಅದು ಚುಂಚನಗಿರಿಗೆ ಸೇರಿದಂತೆಯೇ ಇದೆ, ಇತ್ತೀಚೆಗೆ. ಒಕ್ಕಲಿಗರಿಗೆ ತಮ್ಮದೇ ಆದ ಸಿದ್ಧಾಂತ, ಮತ ಅಥವಾ ಆಧ್ಯಾತ್ಮಿಕ ಆದಿಪುರುಷ ಇಲ್ಲ. ಯಾದವರಿಗೆ ಶ್ರೀಕೃಷ್ಣ, ಜೈನರಿಗೆ ಮಹಾವೀರ, ಬೌದ್ಧರಿಗೆ ಬುದ್ಧದೇವ, ಪಾರಸೀಕರಿಗೆ ಜ಼ರತುಷ್ಟ್ರ, ಯಹೂದಿಗಳಿಗೆ ಮೋಸೆಸ್, ಕ್ರೈಸ್ತರಿಗೆ ಯೇಸು, ಮುಸ್ಲಿಮರಿಗೆ ಮಹಮ್ಮದ್ ಪೈಗಂಬರ್, ಲಿಂಗಾಯಿತರು ಅಥವಾ ವೀರಶೈವರಿಗೆ ಬಸವಣ್ಣ, ಸಿಕ್ಕರಿಗೆ ಗುರು ನಾನಕ್, ಹಾಲುಮತದವರಿಗೆ ಕನಕದಾಸರು, ದಲಿತರಿಗೆ ಭಾರತರತ್ನ ಅಂಬೇಡ್ಕರ್ ಇನ್ನೊಂದು ಸಮುದಾಯಕ್ಕೆ ರವಿದಾಸರು ಇಲ್ಲವೆ ಬಾಬುಜಗಜೀವನರಾಮ್, ಬ್ರಾಹ್ಮಣರಲ್ಲಿ ಸ್ಮಾರ್ತರಿಗೆ ಶಂಕರಾಚಾರ್ಯ, ಶ್ರೀವೈಷ್ಣವರು ಅಥವಾ ಐಯ್ಯಂಗಾರರಿಗೆ ರಾಮಾನುಜಾಚಾರ್ಯ, ದ್ವೈತಿಗಳಿಗೆ ಮಧ್ವಾಚಾರ್ಯ, ಬೇಡ ನಾಯಕರಿಗೆ ಮಹರ್ಷಿ ವಾಲ್ಮೀಕಿ, ಗಂಗಾಮತಸ್ಥರಿಗೆ ವ್ಯಾಸ ಋಷಿ, ಉಪ್ಪಾರರಿಗೆ ಭಗೀರಥ ಚಕ್ರವರ್ತಿ ಇದ್ದಾರೆ. ಹೀಗೆ ಒಂದೊಂದು ಸಮುದಾಯಕ್ಕೆ ಅವರವರು ನಂಬಿರುವಂತೆ ಒಬ್ಬೊಬ್ಬ ಮಹಾಪುರುಷ, ಅತಿಮಾನವ, ಅವತಾರಿ, ಮತಸ್ಥಾಪಕ ಇದ್ದಾನೆ.

ಈ ದೃಷ್ಟಿಯಿಂದ ನೋಡಿದಾಗ ಒಕ್ಕಲಿಗರಿಗೆ ಅವರದೇ ಆದ ಆಧ್ಯಾತ್ಮ ನಾಯಕ, ಧರ್ಮಗುರು, ಅಧಿನಾಯಕ ಅಥವಾ ಆದಿಪುರುಷ ಇಲ್ಲ. ಇದರಿಂದ ಅವರಿಗೆ ಅನುಕೂಲವೂ ಇದೆ; ಅನಾನುಕೂಲವೂ ಇದೆ. ಅನುಕೂಲ ಎಂದರೆ ಅವರು ಸಂಕುಚಿತ ಮನಸ್ಸಿನವರಾಗದೆ ಅಥವಾ ಅಷ್ಟೊಂದು ಜಾತ್ಯಾಂಧರಾಗದಂತೆ ಮಾಡಿದೆ. ಅಲ್ಲದೆ ಅವರನ್ನು ಇದು ಅನೈಕ್ಯತೆವುಳ್ಳ ಅಸಂಘಟಿತ ಜನಾಂಗವನ್ನಾಗಿ ರೂಪಿಸಿರುವುದು ಗಮನೀಯ ಸಂಗತಿ. ಅವರು ಆಗೊಮ್ಮೆ, ಈಗೊಮ್ಮೆ ಸಂಘಟಿತರಾಗಬಹುದು ಇಲ್ಲವೆ ಸಂಘಟಿತರೆಂಬಂತೆ ತೋರಿಸಬಹುದು, ಮೊನ್ನೆ (03-06-2012) ಆದಂತೆ. ಒಂದು ಪಕ್ಷ ಅವರು ಸಮುದಾಯದ ಪರ ಒಟ್ಟಿಗೆ ನಿಂತರೆ ಅದು ಅವರ ಭಾವುಕತೆಯಿಂದಲೇ ಹೊರತು ಸೈದ್ಧಾಂತಿಕ ಮನವರಿಕೆಯಿಂದಾಗಲಿ ಇಲ್ಲವೆ ಬೌದ್ಧಿಕ ನಿಲುವಿನಿಂದಾಗಲಿ ಅಲ್ಲ. ಸಂಕುಚಿತ ಸಿದ್ಧಾಂತದಿಂದ ಆಗುವಷ್ಟು ಅನಾಹುತ ಭಾವುಕತೆಯಿಂದ ಆಗಲಾರದು. ಏಕೆಂದರೆ ಭಾವುಕತೆ ತಾತ್ಕಾಲಿಕ, ಮನವರಿಕೆಯಾದರೋ ದೀರ್ಘಕಾಲಿಕ ಆದರೆ ಅದು ಮಾನವಕಲ್ಯಾಣಕಾರಿ ಅಲ್ಲದಿದ್ದರೆ ಅನರ್ಥಕಾರಿ. ಒಕ್ಕಲಿಗರಿಗೆ ಮೂಲಪುರುಷ ಇಲ್ಲದಿರುವುದರಿಂದ ಅವರಲ್ಲಿ ಜಾತ್ಯಾಂಧತೆ, ಮತಾಂಧತೆ ಇಲ್ಲವಾಗಿದೆ. ಆದರೆ ಈಚೆಗೆ ಸ್ವಲ್ಪ ಮಠಾಂಧತೆ ಕಂಡುಬರಬಹುದು. ಪರಂತು ಅದು ಇತರ ಮಠಗಳಂತೆ ಮೂಲಭೂತವಾದಿ ಧೋರಣೆಯನ್ನು ಇನ್ನೂ ಅಷ್ಟಾಗಿ ತಾಳಿಲ್ಲ. ಮತಾಂಧತೆ ಮರಣಾನಂದವೇ ಸರಿ.

ಒಕ್ಕಲಿಗರ ಸಂಘದ ಕರಪತ್ರ ಹಾಗೂ ಆಹ್ವಾನ ಪತ್ರಿಕೆ ಮುಖ ಪುಟದಲ್ಲಿ ರಾಷ್ಟ್ರಕವಿ ಕುವೆಂಪು ಭಾವಚಿತ್ರ ಮುದ್ರಿಸಿದ್ದಾರೆ. ಕುವೆಂಪು ನಮ್ಮವರೆಂದುಕೊಂಡರೆ ಪ್ರಯೋಜನವಿಲ್ಲ. ಕುವೆಂಪು ಜಾತಿಮತಗಳನ್ನು ಮೀರಿದ್ದರು. ಅಂಧಾಭಿಮಾನ ಅಪಾಯಕಾರಿಯಾದುದು. ಕುರುಡು ಹೆಮ್ಮೆಗೆ ಹುರುಡು ಕಮ್ಮಿ. ಆದ್ದರಿಂದ ಭಾವಚಿತ್ರ ಹಾಕಿರುವುದಕ್ಕೆ ಬೆರಳೆಣಿಕೆ ಜನರು (’ಪ್ರಜಾವಾಣಿ’ 05-06-2012 ರಂದು ಇಬ್ಬರು ಮತ್ತು 06-06-2012 ರಂದು ನಾಲ್ವರು) ತೀಕ್ಷ್ಣವಾಗಿ ವಿರೋಧಿಸಿದ್ದಾರೆ. ಅವರ ಆತಂಕ ಮತ್ತು ಆಕ್ಷೇಪ ತೀರ ಕೊಂಚಮಟ್ಟಿಗೆ ಸರಿ ಎನಿಸಬಹುದು. ಆದರೆ ವಿಶಾಲ ದೃಷ್ಟಿಯಿಂದ ನೋಡಿದಾಗ ಅದು ನಿಲ್ಲಲಾರದು. ಕುವೆಂಪು ಸಾಹಿತ್ಯವನ್ನು ಒಕ್ಕಲಿಗರಲ್ಲಿ ಶೇಕಡ ಎರಡು ಮಂದಿಯೂ ಓದಿಲ್ಲ ಎನ್ನಿಸುತ್ತದೆ. ಏಕೆಂದರೆ ಪದವೀಧರರೇ ಸರಿಯಾಗಿ ಕುವೆಂಪು ಅವರನ್ನು ಓದಿ ಅರ್ಥೈಸಿಕೊಂಡಿಲ್ಲ. ರಾಜಕಾರಣಿಗಳಂತೂ ಅವರನ್ನು ಓದಿಯೇ ಇಲ್ಲ ಎನ್ನಬೇಕು. ನನಗೆ ತಿಳಿದಂತೆ ಕೆಂಗಲ್ ಹನುಮಂತಯ್ಯ, ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದ ಹೆಚ್. ಹೊಂಬೇಗೌಡ, ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ, ವೈ. ಕೆ. ರಾಮಯ್ಯ ಓದಿದ್ದರು. ಹಾಲಿ ಸಂಸದರಾದ ಡಿ. ಬಿ. ಚಂದ್ರೇಗೌಡರು, ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ. ಎಲ್. ಶಂಕರ್, ಕುವೆಂಪು ಸಾಹಿತ್ಯವನ್ನು ಓದಿದ್ದಾರೆ. ಅಂಥದ್ದರಲ್ಲಿ ಯಾವ ಯಾವ ಉದ್ದೇಶಕ್ಕೋ ಬೃಹತ್ ಸಮ್ಮೇಳನವನ್ನು ಏರ್ಪಡಿಸುವ ಸಂಘದ ಎಷ್ಟು ಮಂದಿ ಓದಿದ್ದಾರೆ? ಎಂದು ವಿಚಾರಿಸಬೇಕು. ಈ ಮೊದಲೇ ಹೇಳಿದಂತೆ, ಒಕ್ಕಲಿಗರಿಗೆ ’ಧರ್ಮಗುರು’ ಇಲ್ಲದಿರುವುದರಿಂದ ತಮಗೊಬ್ಬ ಬೇಕು ಎಂದು ಅವರಿಗೆ ಅನ್ನಿಸಿರಬಹುದೇನೋ! ಅದನ್ನು ಅವರು ತಾತ್ವಿಕವಾಗಿ ತೆಗೆದುಕೊಂಡಿದ್ದಾರೋ? ಇಲ್ಲವೋ? ಎಂದು ಪರಿಶೀಲಿಸುವುದು ಎಲ್ಲರ ಕರ್ತವ್ಯ. ಅವರು ಕುವೆಂಪು ಫೋಟೊ ಹಾಕಿಕೊಂಡು ಅವರ ತತ್ವಗಳನ್ನು ಅನುಷ್ಠಾನ ಮಾಡದಿದ್ದರೆ ಆಗ ಅವರನ್ನು ಟೀಸಿಸುವುದು ನ್ಯಾಯವಾದೀತು. ಕುವೆಂಪು ಫೋಟೊ ಹಾಕಿಕೊಳ್ಳಲು ನಿಮಗೆ ನೈತಿಕತೆ ಇಲ್ಲ, ಹಕ್ಕಿಲ್ಲ ಎಂದು ಅವರ ಮೇಲೆ ಖಂಡನೆಯ ಕೆಂಡದ ಮಳೆ ಸುರಿಸಬಹುದು. ಇದು ಜನತೆಯನ್ನು ಶಿಸ್ತಿಗೆ ಒಳಪಡಿಸಿ ಬೆಳೆಸುವ ವಿಧಾನ. ಮೊದಲೇ ನಿಂದಿಸುವುದು, ಬೆಳಕು ಕಾಣಬಯಸುವವರಿಗೆ ಅದು ಸಿಗದಂತೆ ಮಾಡಿದಂತಾಗುತ್ತದೆ. ಕೊಳಕಿನಲ್ಲಿ ಇರುವವರಿಗೆ ಬೆಳಕು ತಿಳಿಯುವುದಿಲ್ಲ.

ಕುವೆಂಪು ಭಾವಚಿತ್ರ ಹಾಕಿಕೊಂಡದ್ದಕ್ಕಾಗಿ ಒಕ್ಕಲಿಗರ ಸಂಘವನ್ನು ದೂಷಿಸುವುದು, ನನ್ನ ದೃಷ್ಟಿಯಲ್ಲಿ ತರವಲ್ಲ. ಏಕೆಂದರೆ ಒಂದು ವರ್ಗದ ಕೆಲವು ಲೇಖಕರು ವಿಮರ್ಶೆಯ ಹೆಸರಿನಲ್ಲಿ ಕುವೆಂಪು ಸಾಹಿತ್ಯವನ್ನು ಉದ್ದಕ್ಕೂ ಟೀಕಿಸುತ್ತಾ ಬಂದರು. ಪುರೋಹಿತಶಾಹಿ ವಿರುದ್ಧದ ಕುವೆಂಪು ವಿಚಾರಗಳು ಹರಡಿದರೆ ಹಿಂದುಳಿದ ವರ್ಗದವರು ದಲಿತರು ಒಟ್ಟಾರೆ ಎಲ್ಲ ಅಬ್ರಾಹ್ಮಣ ವರ್ಗದವರು ಕುವೆಂಪು ಕಡೆ ವಾಲಬಹುದೆಂದು ಅದನ್ನು ತಡೆಗಟ್ಟುವುದು ಅವರ ಹಿಕಮತ್ತಾಗಿತ್ತು. ಈ ಕಾರಣದಿಂದ ನವ್ಯ ಸಾಹಿತ್ಯ ಎಂಬ ಹುಸಿ ಚಳವಳಿಯನ್ನು ಪ್ರಾರಂಭಿಸಿದರು. ನವ್ಯವು ಬ್ರಾಹ್ಮಣವಾದ ಮತ್ತು ಪುರೋಹಿತಶಾಹಿಯ ಪುನರುತ್ಥಾನವಾಗಿದೆ. ಕುವೆಂಪು ಎಂಥ ದೊಡ್ಡ ಕ್ರಾಂತಿಕಾರಿ ಸಾಹಿತಿ ಎಂಬುದನ್ನು ನನ್ನ ಬರಹಗಳಲ್ಲಿ (ಬದಲಾವಣೆ – 1982; ಕುವೆಂಪು ಯುಗ – 1990) ವಿಶ್ಲೇಷಿಸಿದ ನಂತರ ಅವರು ಮೌನಿಗಳಾದರು. ಈ ಪಕ್ಷಪಾತಿ ವಿಮರ್ಶಕರು ಎತ್ತಿಹಿಡಿಯುವ ಲೇಖಕರಿಗಿಂತ ಕುವೆಂಪು ಬಹಳ ದೊಡ್ಡ ಸೃಜನಶೀಲ ಸಾಹಿತಿ ಎಂದು ತೌಲನ ವಿಮರ್ಶೆಯಲ್ಲಿ ನಾನು ಸಾಧಾರವಾಗಿ ಪ್ರತಿಪಾದಿಸಿದಮೇಲೆ ಅವರು ನಿರುತ್ತರರಾದರು. ತಮ್ಮ ಎಡವಟ್ಟನ್ನು ತಿದ್ದಿಕೊಳ್ಳುವ ಸಲುವಾಗಿ ಕುವೆಂಪು ಸಾಹಿತ್ಯವನ್ನು ಮೆಚ್ಚಿ ಬರೆಯತೊಡಗಿದರು. ಕವಿಯನ್ನು ಕುವೆಂಪು ’ಅಗ್ನಿಮುಖಿ ಪ್ರಲಯ ಶಿಖಿ’ (ಸಮಗ್ರ ಕಾವ್ಯ, ಸಂ.1, ಪುಟ 141) ಎಂದು ವರ್ಣಿಸಿ ತಾನು ಏನೆಂದು ಪರೋಕ್ಷವಾಗಿ ನಿರ್ದೇಶಿಸಿದ್ದಾರೆ. ಅವರ ಪ್ರತಿಭೆ ಅಗ್ನಿಯಾಗಿ ಎಲ್ಲ ಮತಮೌಢ್ಯಗಳನ್ನು ಭಸ್ಮಮಾಡಿದೆ; ಜಾತಿ ವ್ಯವಸ್ಥೆಯ ಅಸಮಾನತೆಗಳನ್ನು ಅಮಾನುಷ ಭೇದಭಾವನೆಗಳನ್ನು ವಿನಾಶಗೊಳಿಸಿದೆ. ಆದ್ದರಿಂದ ಕತ್ತಲೆಯಲ್ಲಿರುವ ಜನರಿಗೆ ಬೆಳಕಿನ ಆವಶ್ಯಕತೆ ಇದೆ. ಕುವೆಂಪು ಸಾಹಿತ್ಯದಲ್ಲಿ ಅಪಾರ ಬೆಳಕುಂಟು. ಅವರ ಫೋಟೋ ಹಾಕಿಕೊಂಡಿರುವ ಒಕ್ಕಲಿಗರ ಸಂಘ ಅವರ ತತ್ವಗಳನ್ನು ಒಪ್ಪಿಕೊಂಡು ಪ್ರಚಾರ ಮಾಡುವಂತೆ ಒತ್ತಾಯ ಹಾಕಬೇಕು. ಅವರು ಜೀವನದಲ್ಲಿ ಪರಿಪಾಲಿಸಬೇಕಾದ ಜಾತ್ಯತೀತತೆ, ಅಂತರ್‌ಜಾತಿ ವಿವಾಹ, ಜಾತಿ ವಿನಾಶ, ಮೂಢನಂಬಿಕೆಯ ನಿರ್ಮೂಲನೆ, ಅಸಮಾನತೆಯ ತೆರವು, ಯಜ್ಞಯಾಗಗಳ ಉಚ್ಛಾಟನೆ ವೈಜ್ಞಾನಿಕ ಮನೋಭಾವ, ವೈಚಾರಿಕ ಬುದ್ಧಿ, ಪ್ರಗತಿಪರ ಜೀವನ ವಿಧಾನ, ನಿರಂಕುಶಮತಿ, ಮಂತ್ರಮಾಂಗಲ್ಯ, ಪುರೋಹಿತಶಾಹಿಯ ಮೂಲೋತ್ಪಾಟನೆ – ಮುಂತಾದ ಕುವೆಂಪು ಆದರ್ಶಗಳನ್ನು ಅಳವಡಿಸಿಕೊಂಡರೆ ಮಾತ್ರ ಒಕ್ಕಲಿಗರಿಗೆ ಮತ್ತು ಅವರ ಸಂಘಕ್ಕೆ ನೈತಿಕ ಹಕ್ಕು ಮತ್ತು ಶಕ್ತಿ ಬರಲು ಸಾಧ್ಯ. ಇಲ್ಲವಾದರೆ ಈಗಿನಂತೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅವರು ರಿಕ್ತರಾಗಿರಬೇಕಾಗುತ್ತದೆ. ಕೇವಲ ಪ್ರಾಪಂಚಿಕ ಮತ್ತು ರಾಜಕೀಯ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಸಾಮಾಜಿಕ ಲಾಭಕೋರತನಗಳಿಗಾಗಿ ಆಗೊಮ್ಮೆ ಈಗೊಮ್ಮೆ ಸಮಾವೇಶ ಏರ್ಪಡಿಸುವುದು ಆಂತರಿಕವಾಗಿ ಹೆಚ್ಚು ಪ್ರಯೋಜನಕಾರಿಯಾಗಲಾರದು. ಏಕೆಂದರೆ ಬಹಿರಂಗದಲ್ಲಿ ಬಲಿಷ್ಠರಂತೆ ಕಂಡುಬಂದರೂ ಆಂತರಂಗಿಕವಾಗಿ ದುರ್ಬಲವಾಗುತ್ತಾರೆ, ಸಾಹಿತ್ಯ, ಸಂಸ್ಕೃತಿ ಜ್ಞಾನ ವಿಜ್ಞಾನಗಳ ಬೆಳವಣಿಗೆ ಇಲ್ಲದೆ. ಮನುಷ್ಯನ ವ್ಯಕ್ತಿತ್ವಕ್ಕೆ ದೊಡ್ಡತನ ಬರುವುದು ಸಂಸ್ಕೃತಿಯ ಸತ್ವದಿಂದಲೇ ಹೊರತು ರಾಜಕೀಯ ಅಧಿಕಾರದಿಂದಲ್ಲ. ಅಪರಾಧ ಮಾಡಿದ ವ್ಯಕ್ತಿಗೆ ಅಳುಕು ಇರುತ್ತದೆ. ತಪ್ಪು ಮಾಡದವನಿಗೆ ಎಂಥ ಸಮಯದಲ್ಲೂ ಭೀತಿ ಇರುವುದಿಲ್ಲ. ಇದು ಅಸಂಸ್ಕೃತಿ ಮತ್ತು ಸಂಸ್ಕೃತಿಗೆ ಇರುವ ವ್ಯತ್ಯಾಸ.

ಈ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಇರುವುದನ್ನು ನೋಡಿ ಕೆಲವರು ನನಗೆ ಫೋನು ಮಾಡಿದರು. “ಜಾತಿ ವ್ಯವಸ್ಥೆ ವಿರುದ್ಧ ಇರುವ ಮತ್ತು ಬರೆಯುವ ನೀನು ಹೇಗೆ ಅಲ್ಲಿಗೆ ಹೋಗುತ್ತೀ?” ಎಂದು ಅವರ ಪ್ರಶ್ನೆ. ಇನ್ನು ಕೆಲಮಿತ್ರರು, “ನೀನು ಹೋಗುವುದು ಸೂಕ್ತ. ನೀನು ಹೇಳಬೇಕಾದುದನ್ನು ಹೇಳು. ಏಕೆಂದರೆ ಬಹುಪಾಲು ಮಂದಿಗೆ ವಿಚಾರನೇ ಗೊತ್ತಿಲ್ಲ” ಎಂದು ಸೂಚನೆ ಇತ್ತರು. ಅದಕ್ಕೆ ನಾನು, “ನನಗೆ ಇನ್ನೂ ಆಹ್ವಾನ ಪತ್ರಿಕೆ ಬಂದಿಲ್ಲ. ಅದರಲ್ಲಿ ನನ್ನ ಹೆಸರು ಹಾಕಿರುವುದು ನನಗೆ ತಿಳಿಯದು. ಈ ಬಗ್ಗೆ ಒಕ್ಕಲಿಗರ ಸಂಘ ನನಗೆ ಏನೂ ತಿಳಿಸಿಲ್ಲ” ಎಂದೆ. ವಿಚಾರವಂತ ಪ್ರೊ. ಎಂ. ಕೆ. ಹರಿಚರಣ ತಿಲಕ ಮತ್ತು ಕವಿ ಎಲ್. ಎನ್. ಮುಕುಂದರಾಜ, “ನೀವು ಸಮಾರಂಭಕ್ಕೆ ಹೋಗುವುದು ಒಳ್ಳೆಯದು. ನಿಮ್ಮ ವಿಚಾರವನ್ನು ಅಲ್ಲಿ ಮಂಡಿಸಿ” ಎಂದು ಸಲಹೆ ನೀಡಿದರು. ಅದಾಗದುದಕ್ಕೆ ಈ ಲೇಖನ.
’ಒಕ್ಕಲಿಗರ ಬೃಹತ್ ಸಮಾವೇಶ’ದ ಕರಪತ್ರ ಈ ಮಾತುಗಳಿಂದ ಪ್ರಾರಂಭವಾಗುತ್ತದೆ:

“ಪ್ರಪಂಚದ ಎಲ್ಲ ನಾಗರಿಕತೆ ಪ್ರಾರಂಭವಾದದ್ದೇ ಒಕ್ಕಲುತನದಿಂದ… ಒಕ್ಕಲಿಗರು ಪ್ರಪಂಚದ ಮೊದಲ ಜನಾಂಗವಾಗಿ ರೂಪುಗೊಂಡರು. ಪ್ರಪಂಚದ ಎಲ್ಲ ದೇಶಗಳಲ್ಲಿ ಒಕ್ಕಲಿಗರು ಪ್ರಧಾನವಾಗಿ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿದ್ದಾರೆ. ನಮ್ಮ ದೇಶದಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಇವರನ್ನು ’ಒಕ್ಕಲಿಗರು’, ’ಗೌಡರು’ ಎಂದು ಕರೆದರೆ, ತಮಿಳುನಾಡಿನಲ್ಲಿ ಇವರನ್ನು ’ವೆಲ್ಲಾಳರು’, ’ಗೌಂಡರ್’ಗಳೆಂದೂ, ಕೇರಳದಲ್ಲಿ ’ನಾಯರ್’, ’ಪಿಳ್ಳೈ’ಗಳೆಂದೂ, ಆಂಧ್ರದಲ್ಲಿ ’ರೆಡ್ಡಿ’, ’ಕಾಪು’ಗಳೆಂದೂ ಕರೆಯುತ್ತಾರೆ. ಉತ್ತರಭಾರತದಲ್ಲಿ ಅದರಲ್ಲೂ ಹರಿಯಾಣ, ಉತ್ತರಪ್ರದೇಶದಲ್ಲಿ ’ಜಾಟ್’ಗಳೆಂದೂ, ಬಿಹಾರ, ಉತ್ತರಪ್ರದೇಶಗಳಲ್ಲಿ ’ಠಾಕೂರ್’ಗಳೆಂದೂ, ಬಂಗಾಳ ಮತ್ತು ಒಡಿಸ್ಸಾದಲ್ಲಿ ’ಸೇನ್’ರೆಂದೂ, ರಾಜಸ್ಥಾನ್, ಮಧ್ಯಪ್ರದೇಶದಲ್ಲಿ ’ರಜಪೂತ್’ರೆಂದೂ, ಗುಜರಾತ್, ಮಹಾರಾಷ್ಟ್ರಗಳಲ್ಲಿ ’ಪಟೇಲ್’ರೆಂದೂ, ಮಹಾರಾಷ್ಟ್ರ, ಗೋವಾಗಳಲ್ಲಿ ’ಮರಾಠ’, ’ಕುರ್ಮಿ’ಗಳೆಂದೂ ಕರೆಯುತ್ತಾರೆ. ಒಟ್ಟಾರೆ ನಮ್ಮ ಇಡೀ ದೇಶದಲ್ಲಿ ’ಒಕ್ಕಲಿಗರು’ ಸುಮಾರು 200 ಉಪಪಂಗಡಗಳಾಗಿ ವಿಭಜನೆ ಹೊಂದಿ ಆಯಾ ಪ್ರದೇಶದ ಪರಿಸರಕ್ಕೆ ಅನುಗುಣವಾಗಿ ಸಂಸ್ಕೃತಿ-ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರು ಸುಮಾರು ಶೇ. 20 ರಷ್ಟಿದ್ದಾರೆ. ಅವರು ಇಡೀ ರಾಜ್ಯದ ಜನಸಂಖ್ಯೆಯಲ್ಲಿ ಎರಡನೆಯ ಸ್ಥಾನವನ್ನು ಅಲಂಕರಿಸಿದ್ದಾರೆ.”

ಭಾರತೀಯ ಸಂಸ್ಕೃತಿ ಮೂಲತಃ ಬೇಸಾಯ ಸಂಸ್ಕೃತಿ. ಹಾಗೆಯೇ ಪ್ರಪಂಚದ ಎಲ್ಲ ನಾಗರಿಕತೆಗಳು ಸಹ ಆಗಿರುವುದರಿಂದ ರಾಷ್ಟ್ರದ ಸರ್ವ ಕೃಷಿಕರ ಜೊತೆ ಒಕ್ಕಲಿಗರ ಸಂಘ ಗುರುತಿಸಿಕೊಂಡಿರುವುದು ಸಂತೋಷದ ಸಂಗತಿ. ಆದರೆ ಅಷ್ಟೇ ಆದರೆ ಸಾಲದು. ಇದು ಹೆಮ್ಮೆಪಡುವ ವಿಷಯ ಆಗಬೇಕಾದರೆ ಅವರು ಮೇಲೆ ಹೆಸರಿಸಿದ ಎಲ್ಲಾ ರಾಜ್ಯಗಳ ಬೇಸಾಯಗಾರರ ಜೊತೆ ಮದುವೆ ಸಂಬಂಧ ರೂಢಿಸಿಕೊಳ್ಳುವುದು ಅಗತ್ಯವಾಗಿದೆ; ಇದು ಅತ್ಯಂತ ವಿಹಿತವಾದುದು. ನೆಂಟೇ ನಿಜವಾದ ಅಂಟು. ಮಾನವತನವನ್ನು ಸ್ಥಾಪಿಸುವ ಮತ್ತು ವೃದ್ಧಿಸುವ ಪ್ರಥಮ ಮತ್ತು ಪರಮೋಚ್ಚ ಸಾಧನ ನೆಂಟಸ್ತನ. ಅಂತರ್ಜಾತಿ ಮತ್ತು ಮತಗಳ ವಿವಾಹ ಸಂಬಂಧಗಳಿಂದ ದೇಶದ ಐಕ್ಯತೆ ಮತ್ತು ಅಖಂಡತೆಗೆ ಭದ್ರ ಬುನಾದಿ ಏರ್ಪಡುತ್ತದೆ. ಈ ಭಾವಬಂಧನದಿಂದ ರಾಷ್ಟ್ರ ಬಲಿಷ್ಠವೂ ಸಮೃದ್ಧವೂ ಆಗುವುದು. ನಮ್ಮ ರಾಷ್ಟ್ರದ ಯಾವುದೇ ರಾಜ್ಯದ ಯಾವುದೇ ಕೃಷಿಕ ಪಂಗಡಕ್ಕೆ ಮೂಲ ಧಾರ್ಮಿಕ ವ್ಯಕ್ತಿ, ಗುರು, ಸಿದ್ಧಾಂತ, ಮತ ಇಲ್ಲದೇ ಇರುವುದರಿಂದ ಇವರೆಲ್ಲರೂ ಒಬ್ಬ ಸಮಾನ ಗುರುವನ್ನು ಸರ್ವ ಸಮ್ಮತವಾಗಿ ಸ್ವೀಕರಿಸಬೇಕಾದ ಅನಿವಾರ್ಯತೆಯನ್ನು ಕಂಡುಕೊಳ್ಳಬೇಕು. ಆದರ್ಶಗಳಿಲ್ಲದ ಜನಾಂಗ ಅಭಿವೃದ್ಧಿ ಆಗುವುದಿಲ್ಲ. ಆದರ್ಶಗಳು ಆತ್ಮಪೋಷಕ ಅನ್ನಾಂಗಗಳು.

ಈ ವಿಷಯವಾಗಿ ನನ್ನ ಅಧ್ಯಯನದ ಮಿತಿಯಲ್ಲಿ ನನಗೆ ಕಂಡು ಬರುವ ಒಬ್ಬನೇ ಒಬ್ಬ ಮಹಾಪುರುಷ ಬುದ್ಧ ಎನ್ನಿಸಿದೆ. ಏಕೆಂದರೆ ಬುದ್ಧ ಒಬ್ಬ ರೈತನ ಮಗ! ಎಂದರೆ ಬಹಳ ಮಂದಿ ನಕ್ಕಾರು, ಸೋಜಿಗಪಟ್ಟಾರು! ಆದರೆ ಇದು ನಿಜ. ಆತನ ತಂದೆ ಶುದ್ಧೋದನ ರೈತ, ದೊಡ್ಡ ಜಮೀನುದಾರ. ತನಗಿದ್ದ ಭೂಮಿಯನ್ನು ಉಳುಮೆ ಮಾಡಲು ಅವನು ಒಂದು ಸಾವಿರ ಆರುಗಳನ್ನು ಕಟ್ಟುತ್ತಿದ್ದ. ಶಾಕ್ಯರು ದೊಡ್ಡ ಹಬ್ಬ ಮಾಡುತ್ತಿದ್ದರು. ಅದರ ಹೆಸರು ’ವಪ್ರಮಂಗಳ’ (ವಪ್ರ – ಮಣ್ಣಿನ ಗುಡ್ಡೆ; ಹೊಲ, ಗದ್ದೆ, ಮೊದಲಾದ ಕೃಷಿಭೂಮಿ. ಮಂಗಲ – ಅಭಿವೃದ್ಧಿ ಕಾರ್ಯ). ’ವಪ್ರಮಂಗಳ’ ಎಂದರೆ ’ಭೂಮಿ ಪೂಜೆ’ ಎನ್ನಬಹುದು. ಇದು ಅಲ್ಲಿನ ರೈತರು ಬೀಜ ಬಿತ್ತುವ ದಿವಸ ಮಾಡುತ್ತಿದ್ದ ಉತ್ಸವ. ಈ ದಿವಸ ಪ್ರತಿಯೊಬ್ಬ ಶಾಕ್ಯ ಗಂಡಸೂ ನೇಗಿಲ ಮೇಣಿ ಹಿಡಿದು ಹೊಲ ಉಳಬೇಕೆಂದು ಅವರಲ್ಲಿ ಕಡ್ಡಾಯದ ಕಟ್ಟುಪಾಡಿತ್ತು. ಶ್ರೀಮಂತ ಅಥವಾ ರಾಜನ ಮಗನಾಗಿದ್ದ ಸಿದ್ಧಾರ್ಥನೂ ಇದಕ್ಕೆ ಹೊರತಾಗಿರಲಿಲ್ಲ. ಅವನು ಈ ನಿಯಮವನ್ನು ಯಾವಾಗಲೂ ಪಾಲಿಸಿದ. ವಿದ್ಯಾವಂತನಾದ ಸಿದ್ಧಾರ್ಥ ದೈಹಿಕ ಶ್ರಮವನ್ನು ಎಂದೂ ನಿರಾಕರಿಸಲಿಲ್ಲ (ಡಾ. ಬಾಬಾಸಾಹೇಬ ಅಂಬೇಡ್ಕರ್ : ’ದ ಬುದ್ಧ ಅಂಡ್ ಹಿಸ್ ಧಮ್ಮ’ ಪು. 10; 1992). ಸಿದ್ಧಾರ್ಥ ಸ್ವತಃ ಉಳುಮೆ ಮಾಡಿದ್ದರ ಫಲವಾಗಿ ಮುಂದೆ ಅವನು ಬುದ್ಧನಾಗಿ ನೀಡಿದ ಉಪದೇಶಗಳಲ್ಲಿ ವ್ಯವಸಾಯಕ್ಕೆ ಸಂಬಂಧಪಟ್ಟ ಹೋಲಿಕೆಗಳು ಅಥವಾ ರೂಪಕಗಳು ಬಂದಿರುವುದನ್ನು ಕಾಣಬಹುದು. ರೈತರದು ಹಂಚುಣ್ಣುವ ಸಂಸ್ಕೃತಿ. ಆದುದರಿಂದ ಬುದ್ಧ ತನ್ನ ಅಪೂರ್ವ ಜ್ಞಾನವನ್ನು ಎಲ್ಲರಿಗೂ ನೀಡಿದ. ಜ್ಞಾನದಾನ ಅತ್ಯಂತ ಶ್ರೇಷ್ಠ ದಾನ.

ಸಿದ್ಧಾರ್ಥ ರೈತನಾಗಿ ಗೇಯುತ್ತಿದ್ದ ಎಂದು ಓದಿ, ರಾಜ ಮಹಾರಾಜರು ಮತ್ತು ರಾಜಕುಮಾರರು ನೇಗಿಲ ಮೇಣಿ ಹಿಡಿದು ಉಳುತ್ತಿದ್ದರೆ? ಎಂದು ಸಂದೇಹ ಪಡುವುದು ಸಹಜ. ಕೈಗಾರಿಕೆಗಳಿಲ್ಲದಿದ್ದ ಪ್ರಾಚೀನ ಕಾಲದಲ್ಲಿ ಆರಂಭವೇ ಆದಾಯದ ಉದ್ಯಮವಾಗಿತ್ತು. ಹಾಗೆಯೇ ಗೋಸಂಪತ್ತು ಸಹ. ಜನಕ ಮಹಾರಾಜ ಸ್ವತಃ ಹೊಲ ಉಳುತ್ತಿದ್ದನೆಂದು ಆದಿಕವಿ ವಾಲ್ಮೀಕಿ ವರ್ಣಿಸಿದ್ದಾನೆ. ಈ ಉಲ್ಲೇಖ ಬುದ್ಧನ ಬಗೆಗೆ ಸಮಾನಾಂಶವುಳ್ಳ ಪ್ರಾಚೀನ ಪುರಾವೆಯಾಗಿದೆ:

ಅಥ ಮೇ ಕೃಷತಃ ಕ್ಷೇತ್ರಂ ಲಾಂಗಲಾತ್ ಉತ್ಥಿತಾ ಮಮ.
ಕ್ಷೇತ್ರಂ ಶೋಧಯತಾ ಲಬ್ಧಾ ನಾಮ್ನಾ ಸೀತೇತಿ ವಿಶ್ರುತಾ
ಭೂತಲಾತ್ ಉತ್ಥಿತಾ ಸಾ ತು ವ್ಯವರ್ಧತ ಮಮಾತ್ಮಜಾ.

ಶ್ರೀಮದ್ ವಾಲ್ಮೀಕಿ ರಾಮಾಯಣ, ಬಾಲಕಾಂಡ, ಸರ್ಗ 66, ಶ್ಲೋಕ 13-14

“ನಾನು ಭೂಮಿಯನ್ನು ಉಳುತ್ತಿದ್ದೆನು. ಉಕ್ಕೆ ಸೀಳಿನಲ್ಲಿ ಒಂದು ಹೆಣ್ಣು ಮಗು ಸಿಕ್ಕಿತು. ಅದಕ್ಕೆ ಸೀತೆ (ಉಕ್ಕೆತೆರೆ) ಎಂದು ಹೆಸರಿಟ್ಟೆ. ಭೂಮಿಯಲ್ಲಿ ಲಭಿಸಿದ ಈ ಕುಮಾರಿ ನನ್ನ ಮಗಳಾಗಿ ಬೆಳೆದಳು” ಎಂದು ಜನಕ ಮಹಾರಾಜನು ಬ್ರಹ್ಮರ್ಷಿ ವಿಶ್ವಾಮಿತ್ರನಿಗೆ ಹೇಳುತ್ತಾನೆ. ಈ ಜನಕ ಮಹಾರಾಜ ವೈದಿಕ ಕರ್ಮಕಾಂಡದ ವಿರುದ್ಧ ನಡೆದ ಉಪನಿಷತ್ ಚಳವಳಿಯ ನೇತಾರನಾಗಿದ್ದನು. ಹಾಗಾಗಿ ಕುವೆಂಪು ಕೃತ ಕರ್ನಾಟಕ ನಾಡಗೀತೆಯಲ್ಲಿ “ಜನಕನ ಹೋಲುವ ದೊರೆಗಳ ಧಾಮ” ಎಂದು ಜನಕನ ನಾಮಸ್ಮರಣೆ ಬಂದಿದೆ.

ಆಗ ಕಪಿಲವಸ್ತು ಪ್ರಾಂತ್ಯದಲ್ಲಿ ರಾಜ ಪದವಿ ಪಾಳಿ ಆಧಾರದ ಮೇಲೆ ನಡೆಯುತ್ತಿತ್ತು. ಆ ಪದ್ಧತಿಗೆ ಅನುಸಾರವಾಗಿ ಶುದ್ಧೋದನ ರಾಜನಾಗಿದ್ದನು. ಸಿದ್ಧಾರ್ಥ ಹುಟ್ಟಿದ್ದು ಅಂಥ ದಿನಗಳಲ್ಲಿ. ಬುದ್ಧನ ಸಂಸಾರ ತ್ಯಾಗ ಮತ್ತು ರಾಜ್ಯ ಪರಿತ್ಯಾಗಗಳನ್ನು ದೊಡ್ಡದು ಮಾಡಲು ಚರಿತ್ರಕಾರರು ಅವನನ್ನು ಚಕ್ರವರ್ತಿಯ ಪುತ್ರನೆಂದು ಚಿತ್ರಿಸಿದ್ದಾರೆ ಎನ್ನಿಸಬಹುದು. ಆದರೆ ಯಾವ ದೃಷ್ಟಿಯಿಂದ ನೋಡಿದರೂ ಬುದ್ಧನದು ಮಹಾತ್ಯಾಗ ಎನ್ನುವುದರಲ್ಲಿ ಅನುಮಾನವಿಲ್ಲ.

ಶ್ರೀಮಂತರು ಬಡವರು, ರಾಜರು ಪ್ರಜೆಗಳು, ಅಧಮರು ಉತ್ತಮರು, ಅಕ್ಷರಸ್ಥರು ಅನಕ್ಷರಿಗಳು, ವೇಶ್ಯೆಯರು ಸುಶೀಲೆಯರು, ಪಾಪಿಗಳು ಪುಣ್ಯಾತ್ಮರು – ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ತನ್ನ ಅಸದೃಶ ಜ್ಞಾನಭಂಡಾರವನ್ನು ನೀಡಿದ ಬುದ್ಧ ಅಪ್ರತಿಮ ಮಹಾತ್ಮ. ಬುದ್ಧ ತಾನು ದೇವರ ಅವತಾರ ಎಂದು ಹೇಳಿಕೊಳ್ಳಲಿಲ್ಲ. ಆದರೆ ಬುದ್ಧನ ಪ್ರಭಾವ ತಪ್ಪಿಸಲು ಅಥವಾ ಅವನನ್ನು ಮುಗಿಸಲು ಸಾಧ್ಯವಾಗದೇ ಹೋದಾಗ ಅಥವಾ ಅವನನ್ನು ಒಳಗೆ ಸೆಳೆದುಕೊಳ್ಳಲು ಅವನು ವಿಷ್ಣುವಿನ ಒಂಬತ್ತನೆಯ ಅವತಾರ ಎಂದು ಹೇಳಿ ಆರಾಧಿಸತೊಡಗಿದರು. ಏಸುಕ್ರಿಸ್ತ ತಾನು ದೇವಪುತ್ರ ಎಂದು ತನ್ನ ಅನುಯಾಯಿಗಳನ್ನು ನಂಬಿಸಿದ್ದಾನೆ. ಮಹಮ್ಮದ್ ಪೈಗಂಬರ್ ತಾನು ಅಲ್ಲಾನ ಪ್ರವಾದಿ ಎಂದು ಹೇಳಿರುವನು. ಶ್ರೀಕೃಷ್ಣ ತಾನು ದೇವರ ಅವತಾರ ಎಂದೇ ಪ್ರಬಲವಾಗಿ ದೃಢಪಡಿಸಿ ಪ್ರತಿಪಾದಿಸಿದ್ದಾನೆ. ಹೀಗೆ ಪ್ರತಿಯೊಂದು ಮತದ ವಕ್ತಾರ, ಆಚಾರ್‍ಯ ಅಥವಾ ಸ್ಥಾಪಕ ತಾನು ದೇವರ ಅಂಶ ಎಂದು ನಂಬಿಸಲು ಯಾವುದೇ ಸಂಕೋಚಪಟ್ಟಿಲ್ಲ. ದೇವರ ವಿಷಯದಲ್ಲಿ ಹೆದರಿಸದೆ ಇದ್ದರೆ ಜನ ನಂಬುವುದಿಲ್ಲ ಎಂದು ಏನೇನೋ ಹೇಳುವರು. ಇದಕ್ಕೆ ಅತ್ಯುತ್ತಮ ಉದಾಹರಣೆ ’ಭಗವದ್‌ಗೀತೆ’ಯ ೧೧ನೇ ಅಧ್ಯಾಯದಲ್ಲಿ ಬರುವ ’ವಿಶ್ವರೂಪ ದರ್ಶನ’. ಗುಮ್ಮ ಬರುತ್ತದೆ ಎಂದು ಹೇಳಿ ಮಕ್ಕಳನ್ನು ಹೆದರಿಸುವಂತೆ, ವಿಶ್ವರೂಪ ತೋರಿಸಿ ಅರ್ಜುನನಿಗೆ ಶ್ರೀಕೃಷ್ಣ ಭಯ ಹುಟ್ಟಿಸುತ್ತಾನೆ (ಗೀತೆ 11. 45.; 49-50). ನಂಬುವವರು ಇರುವವರೆಗೆ ನಂಬಿಸುವವರು ಇದ್ದೇ ಇರುತ್ತಾರೆ. ಆದರೆ ಈ ಯಾವುದನ್ನೂ ಹೇಳದವನು ಬುದ್ಧ ಮಾತ್ರ. “ನಿಮ್ಮ ಹಾಗೆ ನಾನೂ ಒಬ್ಬ ಮನುಷ್ಯ. ನಾನು ಈ ದಾರಿಯಲ್ಲಿ ಹೋಗಿ ಈ ಸತ್ಯಗಳನ್ನು ಕಂಡುಕೊಂಡಿದ್ದೇನೆ. ಈ ಮಾರ್ಗದಲ್ಲಿ ನೀವೂ ಹೋಗಿ ನೋಡಿ. ನನ್ನ ತತ್ವಗಳು ನಿಜ ಎಂದು ಕಂಡುಬಂದರೆ ಒಪ್ಪಿಕೊಳ್ಳಿ, ಇಲ್ಲದಿದ್ದರೆ ತಿರಸ್ಕರಿಸಿ”. ಇದು ವಿನಯದ ತುತ್ತ ತುದಿ. ಹೀಗೆ ತನ್ನ ಅನುಯಾಯಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿರುವವನು ಬುದ್ಧ ಒಬ್ಬನೇ, ಇನ್ನಾರೂ ಇಲ್ಲ. ಇಂಥ ಅಪರೂಪದ ಸ್ವಾತಂತ್ರ್ಯ ಕೊಟ್ಟ ಬುದ್ಧ ಜನರನ್ನು ದೇವರ ಹೆಸರಿನಲ್ಲಿ ಸಂಕೋಲೆಯಲ್ಲಿಡಲು ಹಾಗೂ ಪುರೋಹಿತರ ಪ್ರಾಬಲ್ಯಕ್ಕೆ ಒಪ್ಪಿಸಲು ಹೋಗದುದು ಮಾನವರ ಮೇಲೆ ಅವನಿಗೆ ಇದ್ದ ಅಪಾರ ಪ್ರೇಮ ಮತ್ತು ಜೀವಕಾರುಣ್ಯವನ್ನು ತೋರಿಸುತ್ತದೆ. ಏಕೆಂದರೆ ಎಲ್ಲ ದಬ್ಬಾಳಿಕೆಗಿಂತ ಧಾರ್ಮಿಕ ದಬ್ಬಾಳಿಕೆ ಘೋರವಾದುದು. ಸೇನೆ ಅಥವಾ ರಾಜಕೀಯ ನಿರಂಕುಶ ಆಡಳಿತ ಪ್ರಜೆಗಳ ದೈಹಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದರೆ ಪುರೋಹಿತ ದಬ್ಬಾಳಿಕೆ ಜನರ ಅಂತಶ್ಚೇತವನ್ನು ಹಾಗೂ ಬೆಳಣಿಗೆಯನ್ನು ಧ್ವಂಸಮಾಡುತ್ತದೆ. ಈ ಕಾರಣಕ್ಕಾಗಿಯೇ ಪುರೋಹಿತ ವರ್ಗದವರು ಅವನನ್ನು ದೂರೀಕರಿಸಿದ್ದಾರೆ.

ಬುದ್ಧನಿಗೆ ಮೊದಲು ಮತ್ತು ನಂತರ ಅನೇಕ ಜನ ಧರ್ಮ ಪ್ರವರ್ತಕರು ಹಾಗೂ ಪ್ರಸಾರಕರು ಬಂದು ಹೋಗಿರುವುದನ್ನು ಲೋಕ ಬಲ್ಲದು. ಇವರೆಲ್ಲಾ ದೇವರು ಸ್ವರ್ಗ ನರಕ ಮುಕ್ತಿ ಎಂದೆಲ್ಲ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿದ್ದಾರೆ. ಅವರಿಗೆ ಮಂಕುಬೂದಿ ಎರೆಚಿರುವರು. ಇಡೀ ಇತಿಹಾಸದಲ್ಲಿ ಜೀವನ ಮತ್ತು ಜಗತ್ತಿನ ಬಗ್ಗೆ ಸತ್ಯ ಹೇಳಿರುವವನು ಬುದ್ಧ ಮಾತ್ರ. ಇರುವುದು ಇದೊಂದೇ ಲೋಕ, ಇಲ್ಲಿ ನಾವೆಲ್ಲರೂ ಸೌಹಾರ್ದತೆಯಿಂದ ಸುಖವಾಗಿ ಶಾಂತಿಯಿಂದ ಬದುಕಬೇಕು ಎಂದನು. ಕಾಣದ ದೇವರು ನಾಕ ನರಕ ಕುರಿತು ಅವನು ಮೌನಿಯಾದ. ಕಾರಣ ವಾದ ವಿವಾದಗಳಿಗೆ ವಿರಾಮವಿಲ್ಲ. ವಿಜ್ಞಾನಕ್ಕೆ ಇವಿನ್ನೂ ಕಾಣಿಸಿಲ್ಲ. ದೇವರು ಸ್ವರ್ಗ ಪಾತಾಳ ಮುಂತಾದವುಗಳ ಇರುವಿಕೆಯಿಂದ ಅಥವಾ ಇಲ್ಲದಿರುವಿಕೆಯಿಂದ ಮಾನವನ ಬಾಳು ಸಂತೋಷಕರವಾಗಲಿ ಇಲ್ಲವೇ ದುಃಖಮಯವಾಗಲೀ ಆಗುವುದಿಲ್ಲ. ಶೋಷಣೆ ರಹಿತ ಒಳ್ಳೆಯ ಜೀವನ ನಡೆಸುವುದರಿಂದ ಮಾತ್ರ ಮನುಷ್ಯ ನೆಮ್ಮದಿಯಿಂದ ಇರಲು ಸಾಧ್ಯ. ನನ್ನ ಉಪದೇಶವನ್ನು ವಿಮರ್ಶಿಸಿ, ಅದು ಸತ್ಯವಲ್ಲದಿದ್ದರೆ ತಿರಸ್ಕರಿಸಿ ಎಂದಿರುವುದಂತೂ ಬುದ್ಧನನ್ನು ಅಸಾಧಾರಣ ವಿಶ್ವಗುರುವನ್ನಾಗಿ ಮಾಡಿದೆ. ಆತನ ಬೋಧನೆ ವಿಶ್ವಧರ್ಮವಾಗಿರುವುದು. ಸ್ವಂತ ಚಿಂತನೆ ಮತ್ತು ಅನುಭಾವಕ್ಕೆ ಬುದ್ಧ ಪ್ರಾಮುಖ್ಯತೆ ನೀಡಿದ್ದಾನೆ. ಈ ಕಾರಣಕ್ಕಾಗಿಯೇ ಬುದ್ಧಿ ಜ್ಞಾನ ಅನುಕಂಪ ಪರಿಶುದ್ಧಿ ಪಾವಿತ್ರ್ಯದಲ್ಲಿ ಬುದ್ಧನಿಗೆ ಸರಿಸಾಟಿ ಆಗುವ ಇನ್ನೊಬ್ಬ ಧರ್ಮಗುರು ಸಿಗಲಾರನು ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಏಕೆಂದರೆ ಇದುವರೆಗಿನ ಇತಿಹಾಸದಲ್ಲಿ ಆತನನ್ನು ಸರ್ವ ರೀತಿಯಲ್ಲೂ ಮೀರಿಸುವ ಇನ್ನೊಬ್ಬ ಉದಯಿಸಿಲ್ಲದಿರುವುದೇ ಆಗಿದೆ. ಬುದ್ಧ ಅತ್ಯಂತ ಸ್ವೋಪಜ್ಞ ಚಿಂತಕ.

ವಿಶ್ವದ ಇತಿಹಾಸದಲ್ಲೇ ಅತ್ಯಂತ ಮಹಿಮಾವಂತರಾದ ಬುದ್ಧ ಮತ್ತು ಸಾಮ್ರಾಟ್ ಅಶೋಕ – ಈ ಇಬ್ಬರನ್ನು ಭಾರತದ ಇತಿಹಾಸದಿಂದಲೇ ಸುಮಾರು ಒಂದು ಸಾವಿರ ವರ್ಷಗಳ ಕಾಲ ಹಿಂದೂವಾದಿ ವಿದ್ವಾಂಸರು ತೆಗೆದುಹಾಕಿದ್ದರು. ಅಂಥ ಬುದ್ಧನನ್ನು ಕುರಿತು ಮೊದಲಿಗೆ ಮಾತನಾಡಿದವರು ತೇಜಃಪುಂಜರಾದ ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ 26-09-1893 ರಂದು. “ನೀವು ಕೇಳಿರುವಂತೆ ನಾನು ಬೌದ್ಧನಲ್ಲ, ಆದರೆ ನಾನೊಬ್ಬ ಬೌದ್ಧ” (’ದ ಕಂಪ್ಲೀಟ್ ವರ್ಕ್ಸ್’ , ಸಂ. 1, ಪು. 21; 1970) ಎಂದು ಹೇಳಿದ್ದಾರೆ ಹೆಮ್ಮೆಯಿಂದ. ಹಿಂದೆ ಭಾರತದ ಜನಸಂಖ್ಯೆಯಲ್ಲಿ ಮೂರನೇ ಎರಡು ಭಾಗ ಬೌದ್ಧರಾಗಿದ್ದರು ಎಂದು ವಿವೇಕಾನಂದರು ಹೇಳುತ್ತಾರೆ (’ಸಂ. 3, ಪು. 166, 511; 1964). ಇದಕ್ಕೆ ಪೂರಕ ಆಧಾರ ಮತ್ತು ಸಮರ್ಥನೆಯಾಗಿ ಪ್ರತಿ ಹಳ್ಳಿಯಲ್ಲಿ ಅರಳಿಮರ ಇರುವುದನ್ನು ಕಾಣಬಹುದು. ನಮ್ಮ ಹುಣಸೂರು ತಾಲ್ಲೂಕಿನ ಹಳ್ಳಿಗಳಲ್ಲಿ ’ಹುಟ್ಟಿದ ನಿರ್ವಾಣ’ ಎಂಬ ನುಡಿಗಟ್ಟು ಬಳಕೆಯಲ್ಲಿದೆ. ನಮ್ಮ ಊರಿನ ಪಕ್ಕದ ಗ್ರಾಮ ಚಿಟಿಕ್ಯಾತನಹಳ್ಳಿಯಲ್ಲಿ ಒಬ್ಬ ರೈತನಿಗೆ ನಿರ್ವಾಣಿಗೌಡ ಎಂಬ ಹೆಸರಿತ್ತು. ಬುದ್ಧ ದಮ್ಮದ ಸಾರಸರ್ವಸ್ವ ಮತ್ತು ತುಟ್ಟ ತುದಿಯಾದ ’ನಿರ್ವಾಣ’ ಎಂಬ ಅತ್ಯಂತ ಮುಖ್ಯ ಪದ ಹಳ್ಳಿಗಳಲ್ಲಿ ಪ್ರಚಲಿತವಾಗಿರಬೇಕಾದರೆ ಬುದ್ಧ ಧಮ್ಮ ಇಲ್ಲೆಲ್ಲ ಹಬ್ಬಿರಬೇಕೆಂದು ಅನ್ನಿಸುತ್ತದೆ. “ಭಾರತದ ಜನಸಾಮಾನ್ಯರಲ್ಲೆಲ್ಲ ಬುದ್ಧ ಧಮ್ಮ ಹರಡಿತ್ತು” ಎಂದು ಸ್ವಾಮಿ ವಿವೇಕಾನಂದರು (ಸಂ. 7, ಪು. 39; 1964) ಹೇಳುತ್ತಾರೆ. ಕಾಲಾಂತರದಲ್ಲಿ ಬೆಂಬಲವಿಲ್ಲದೆ ನಾನಾ ಆಘಾತಗಳಿಂದ (ವಿವರಣೆಗೆ ನನ್ನ ಕೃತಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ, 15ನೇ ಮುದ್ರಣ, 2011 ನೋಡಿದರೆ) ಬುದ್ಧ ಧಮ್ಮ ಮರೆಯಾಗಿರಲಿಕ್ಕೆ ಕಾರಣಗಳು ತಿಳಿಯುವುವು. ಬುದ್ಧ ತಪಸ್ಸಿಗೆ ಅರಳಿ ಮರದ ಅಡಿಯಲ್ಲಿ ಕುಳಿತಾಗ ಜ್ಞಾನೋದಯ ಪಡೆದುದರಿಂದ ಅದು ಬೋಧಿ ವೃಕ್ಷ ಎಂದು ಪ್ರಖ್ಯಾತವಾಯಿತು. ಇದರಿಂದ ಪ್ರೇರಿತರಾದ ಸಂಸ್ಕೃತ ಸಾಹಿತಿಗಳು ಅದನ್ನು ಅಶ್ವತ್ಥ ವೃಕ್ಷ ಎಂದರು. ಬುದ್ಧ ಆದಮೇಲೆ ಬಂದ ಭಗವದ್‌ಗೀತೆ (ಸು. ಕ್ರಿ. ಶ. 1 ಶತ)ಯಲ್ಲಿ ಕೃಷ್ಣ “ಅಶ್ವತ್ಥಃ ಸರ್ವ ವೃಕ್ಷಾಣಾಂ – ಮರಗಳಲ್ಲೆಲ್ಲ ನಾನು ಅರಳಿಮರ” (ಗೀತೆ 10. 26.) ಎಂದು ಅದರ ಪಾರಮ್ಯವನ್ನು ಘೋಷಿಸಿದ್ದಾನೆ. ಇದನ್ನು “ಊರ್ಧ್ವ ಮೂಲಂ ಅಧಃ ಶಾಖಂ ಅಶ್ವತ್ಥಂ ಪ್ರಾಹುಃ ಅವ್ಯಯಂ – ಮೇಲೆ ಬುಡ ಕೆಳಗೆ ಶಾಖೆಗಳುಳ್ಳ ಅಶ್ವತ್ಥವೃಕ್ಷ ಅಮರ” (15. 1.) ಎಂದು ಗೀತೆ ಕೊಂಡಾಡುತ್ತದೆ. ಶಿಶು ಶ್ರೀಕೃಷ್ಣ ಅರಳಿ ಎಲೆಯ ಮೇಲೆ ಮಲಗಿರುವುದನ್ನು ವರ್ಣಶಿಲ್ಪಿಗಳು ಚಿತ್ರಿಸಿದ್ದಾರೆ.

ಆದ್ದರಿಂದ ಒಕ್ಕಲಿಗರು ವಿವೇಕಶಾಲಿಗಳಾಗಿ ತಮ್ಮ ಮೂಲ ಪುರುಷ ಬುದ್ಧನನ್ನು ಸ್ವೀಕರಿಸಿದರೆ ಅವರು ಅಖಿಲ ಭಾರತ ಜನಾಂಗವಾಗುತ್ತಾರೆ. ಅಷ್ಟೇ ಅಲ್ಲದೆ ಅವರು ಅಂತಾರಾಷ್ಟ್ರೀಯ ಜನಾಂಗವಾಗುತ್ತಾರೆ. ಅವರು ನಿಜಕ್ಕೂ ವಿಶ್ವಮಾನವರಾಗಲು ಹಾದಿ ಸುಗಮವಾಗುತ್ತದೆ. ಈ ಕುರಿತು ಒಕ್ಕಲಿಗ ಸಂಘ ತಾತ್ವಿಕ ಚಿಂತನೆ ಹಾಗೂ ಚರ್ಚೆಗಳನ್ನು ವ್ಯಾಪಕವಾಗಿ ನಡೆಸುವುದು ಯೋಗ್ಯ ಮತ್ತು ಅಗತ್ಯ.

ಇದೆಲ್ಲವನ್ನು ಓದುವುದರಿಂದ ಅಥವಾ ಕೇಳುವುದರಿಂದ ಕೃಷಿಕರು ಗಾಬರಿಗೆ ಒಳಗಾಗುವುದು ಸಹಜ. ಕಾರಣ: ಸಾವಿರಾರು ವರ್ಷಗಳಿಂದ ತಮ್ಮದಲ್ಲದ ಧರ್ಮವನ್ನು ತಮ್ಮದೆಂದು ಅವರು ನಂಬಿಕೊಂಡು ಬಂದಿದ್ದಾರೆ. ತಮ್ಮ ದನ ಎಮ್ಮೆ ಆಡು ಕುರಿ ಕೋಳಿ ನಾಯಿ, ಹೊಲ ಗದ್ದೆ ತೋಟ, ಗಿಡ ಮರ ಅಡಿಕೆ ತೆಂಗು ವೀಳ್ಯದ ಹಂಬು, ಕೆರೆ ಕಟ್ಟೆ ಹೊಳೆ ಬೆಟ್ಟ ಗುಡ್ಡಗಳ ಜೊತೆ ಅವರ ಬಾಂಧವ್ಯ ಬೆಳೆದುಕೊಂಡಿರುತ್ತದೆ. ಇವೆಲ್ಲವನ್ನೂ ತಮ್ಮಂತೆ, ತಮ್ಮ ಜೀವದ ಭಾಗ ಎಂಬಂತೆ, ತಮ್ಮ ಜೀವದ ಜೀವವಾಗಿ ಅವರು ಕಾಣುವರು. ಇವುಗಳ ಜೊತೆ ಅವರ ಭಾವತಂತು ಬಲವಾಗಿ ಬಿಗಿದುಕೊಂಡಿರುತ್ತದೆ. ಒಕ್ಕಲಿಗರು ಗಾಢವಾಗಿ ಪ್ರೀತಿಸುವ ಜನರು. ಮಹಾ ಸ್ವಾಭಿಮಾನಿಗಳು. ಹಠ ಮತ್ತು ದ್ವೇಷದಲ್ಲಿ ಅವರದು ಕೌರವ ಸ್ವಭಾವ. ಒಕ್ಕಲಿಗರ ಸಿದ್ಧಾಂತ ಸ್ವಭಾವವಾದ, ಸಹಜವಾದ ಅಥವಾ ಪ್ರಕೃತಿವಾದ ಎನ್ನಬಹುದು. ಒಕ್ಕಲಿಗರಿಗೆ ಹುಟ್ಟಿನಿಂದ ಸಾಯುವವರೆಗೆ ಯಾವುದೇ ಮತೀಯ ಸಂಸ್ಕಾರಗಳು ಮತ್ತು ಸಂಪ್ರದಾಯಗಳು ಇಲ್ಲ. ಇವರು ಇಂಥ ಜಾತಿ ಮತದವರೆಂದು ಗುರುತಿಸುವಂತ ಲಾಂಛನಗಳಾಗಲೀ, ಗುರುತುಗಳಾಗಲಿ ಅವರಲ್ಲಿ ಕಾಣದು. ಒಕ್ಕಲಿಗರದು ಪ್ರಕೃತಿ ಸಹಜ ಬದುಕು, ಪ್ರಕೃತಿ ಜೊತೆ ಒಡನಾಟ. ಹಾಗೆಯೆ ಬುದ್ಧನದು ಪ್ರಕೃತಿವಾದ. ಅವರು ತಮ್ಮನ್ನು ತುಳಿಯುವ ಧರ್ಮ ಮತ್ತು ದೇವರುಗಳನ್ನು ಗೊತ್ತಿಲ್ಲದೆ ಅನುಸರಿಸಿಕೊಂಡು ಬದುಕುತ್ತಿದ್ದಾರೆ. ಚಾತುರ್ವರ್ಣದ ಕಟ್ಟಳೆಗಳೆಲ್ಲ ವಿಕೃತವಾದವುಗಳು. ಇವೆಲ್ಲದರಿಂದ ಪಾರಾಗಲು ಇರುವ ಅತ್ಯಂತ ಒಳ್ಳೆಯ ಮಾರ್ಗ ರೈತನ ಮಗನಾಗಿ ನೇಗಿಲು ಹಿಡಿದು ಉಳುಮೆ ಮಾಡಿದ್ದ ಬುದ್ಧನನ್ನು ಒಪ್ಪಿಕೊಳ್ಳುವುದರಲ್ಲಿ ಇದೆ.

ಕುವೆಂಪು ಅವರ ಆಧ್ಯಾತ್ಮ ಎಲ್ಲವನ್ನೂ ಎಲ್ಲರನ್ನೂ ಒಳಗೊಂಡ ಆದ್ಯಾತ್ಮ. ಅದರಲ್ಲಿ ಪ್ರತ್ಯೇಕತೆ ಇಲ್ಲ. ವಾಸ್ತವವಾಗಿ ಅದು ಪ್ರತ್ಯೇಕತೆಯ ವಿರೋಧಿ. ಪ್ರತ್ಯೇಕತೆ ಇರುವಂತೆ ಭ್ರಮೆಯಲ್ಲಿ ಕಂಡರೆ, ಅದು ವೈದ್ಯ ಕಾಣುವ ಕಾಯಿಲೆಯಂತೆ, ವಾಸಿಯಾಗದ ರೋಗಿಷ್ಠ ಭಾಗವನ್ನು ಶಸ್ತ್ರಚಿಕಿತ್ಸೆಯಿಂದ ಕತ್ತರಿಸಿ ತೆಗೆದುಹಾಕುವ ಹಾಗೆ ಎಂದು ತಿಳಿಯಬೇಕು. ಇದು ಆರೋಗ್ಯವನ್ನು ಪುನರ್ ಸ್ಥಾಪಿಸುವ ಪ್ರಕ್ರಿಯೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುವ ಶಂಬೂಕ ವಧೆ ಪ್ರಸಂಗವನ್ನು ’ಶೂದ್ರತಪಸ್ವಿ’ ನಾಟಕದಲ್ಲಿ ಕಸಿ ಮಾಡಿರುವ ಕ್ರಮದಲ್ಲಿ ಅದನ್ನು ಕಾಣಬಹುದು. ಮೂಲದಲ್ಲಿ ಶಂಬೂಕನನ್ನು ಕೊಲ್ಲಿಸಲಾಗಿದೆ. ಕುವೆಂಪು ಇಲ್ಲಿ ಯಾರನ್ನೂ ಅಳಿಸದೆ ಎಲ್ಲರನ್ನೂ ಉಳಿಸಿದ್ದಾರೆ. ಅವರು ಹೊಸಕಿಹಾಕಿರುವುದು ಅವಿವೇಕತನವನ್ನು, ಅಮಾನುಷತೆಯನ್ನು. ಸ್ಥಾಪಿಸಿರುವುದು – ಮನುಷ್ಯರೆಲ್ಲ ಸಮಾನರು, ಭೇದಭಾವ ಸಲ್ಲದು: “ಆರಾದರೇನ್ ಆರಾಧ್ಯರ್ ತಪೋಧನರ್” ಎಂಬ ದರ್ಶನವನ್ನು ತಿಳಿವಳಿಕೆಯ ಮೂಲಕ ಬೆಳೆಸುವುದಾಗಿದೆ. ಅವರ ’ವಿಶ್ವಮಾನವ’ ತತ್ವಕ್ಕೆ ಅವರ ಸಾಹಿತ್ಯದಲ್ಲಿ ಎಲ್ಲೂ ಊನ ಬಂದಿಲ್ಲ.

ಇನ್ನು ಬುದ್ಧನಿಗೂ ಕುವೆಂಪುವಿಗೂ ಏನು ಸಂಬಂಧ? ಎಂದು ಕೇಳಬಹುದು. ಇದು ಕುವೆಂಪು ಸಾಹಿತ್ಯವನ್ನು ಓದಿದವರು ಹಾಕುವ ಪ್ರಶ್ನೆಯಾಗುವುದಿಲ್ಲ. ಅವರ ಮಹಾಕಾದಂಬರಿ ’ಕಾನೂರು ಹೆಗ್ಗಡತಿ’ ನಾಯಕ ಹೂವಯ್ಯ ಭೇದಭಾವನೆ ಮಾಡುವ ಆರ್ಯಧರ್ಮ, ಹಿಂದೂಮತ ಅಥವಾ ಬ್ರಾಹ್ಮಣ ಧರ್ಮವನ್ನು ತ್ಯಜಿಸಿ ಆನುಭಾವಿಕ ಸಮಾನತೆಯ ಬುದ್ಧನನ್ನು ಸ್ವೀಕರಿಸುತ್ತಾನೆ. ಕೊನೆಯಲ್ಲಿ ಕ್ರಾಂತಿಗಾನ ನಡೆಯುತ್ತದೆ. (’ಕಾನೂರು ಹೆಗ್ಗಡಿತಿ’ 1936. ಬಾಬಾಸಾಹೇಬ ಅಂಬೇಡ್ಕರ್ 1956 ರಲ್ಲಿ ಬುದ್ಧಧಮ್ಮವನ್ನು ಅಪ್ಪಿಕೊಂಡರು). ಸಿದ್ಧಾರ್ಥನ ಮಹಾತ್ಯಾಗವನ್ನು ’ಮಹಾರಾತ್ರಿ’ ನಾಟಕದಲ್ಲಿ ಸ್ಫೂರ್ತಿಯುತವಾಗಿ ಚಿತ್ರಿಸಿದ್ದಾರೆ ಕುವೆಂಪು. ’ಬುದ್ಧದೇವ’ ಎಂಬ ಸುನೀತದಲ್ಲಿ ಎಲ್ಲವನ್ನೂ ದಾಟಿ ಹೋಗುವ ಸನ್ಮತಿ ಶಕ್ತಿಯ ಜಗನ್ಮೂರ್ತಿಯಾಗಿ ಬುದ್ಧನನ್ನು ಅವರು ದರ್ಶಿಸಿದ್ದಾರೆ:

… ಮತದ ಮತಿಹೀನತೆಯು
ಸಾಕೆಮಗೆ; ಬೇಕು ಸನ್ಮತಿಯ ನಾಗರಿಕತೆಯು:
ನರನ ಸನ್ಮತಿಗಿಂತ ಬೇರೆಯ ಜಗದ್ಗುರುವೆ.

ಕುವೆಂಪು : ಸಮಗ್ರ ಕಾವ್ಯ, ಸಂ. 1, ಪು. 513.

ಸನ್ಮತಿ – ಇದು ಕುವೆಂಪು ಸಾಹಿತ್ಯದ ಸಾರ ಸಂದೇಶ ಎನ್ನಬಹುದು. ಸನ್ಮತಿಯೇ ಜಗದ್ಗುರು. ಆದರೆ ಜಗದ್ಗುರು ಎಂದುಕೊಂಡವರು ಅಥವಾ ಅನ್ನಿಸಿಕೊಂಡವರು ಸನ್ಮತಿಯನ್ನು ಗಳಿಸಿದ್ದಾರೆಯೇ? ಎಂದು ಜನತೆ ಕೇಳಿಕೊಳ್ಳಬೇಕು. ಸನ್ಮತಿಯು ಸದ್ಭಾವನೆ, ಸದಾಚಾರ, ನಿಸ್ವಾರ್ಥತೆ, ಜಾತಿ ಮತ ಮೀರಿದ ಲೋಕಹಿತದಲ್ಲಿ ಇರುವಂಥದ್ದು.

ಮಹಾಕಾವ್ಯ ’ಶ್ರೀ ರಾಮಾಯಣ ದರ್ಶನಂ’ ಪ್ರಾರಂಭದಲ್ಲಿ “ಬುಧರೊಲಿದ ಸಮದರ್ಶನವನೊಪ್ಪಿ” ಎಂಬ ನುಡಿಯಿಂದ ಕುವೆಂಪು ತಮ್ಮ ಸಾಹಿತ್ಯ ರಚನೆಯ ಉದ್ದೇಶವನ್ನು ಪ್ರಕಾಶಪಡಿಸಿರುವರು. ’ಬುಧ’ ಎಂದರೆ ಜ್ಞಾನಿ. ಪ್ರಪಂಚದಲ್ಲಿ ಮೊಟ್ಟಮೊದಲು ಸಮಾನತಾಧರ್ಮವನ್ನು ಹರಡಿದವನು ಬುದ್ಧ. ಬೋಧಿಜ್ಞಾನದ ಪ್ರಭಾವ ಕುವೆಂಪು ಸಾಹಿತ್ಯದ ಮೇಲೆ ವ್ಯಾಪಕವಾಗಿ ಗಾಢವಾಗಿದೆ.

ಬುದ್ಧನನ್ನು ಕುವೆಂಪು ಆಧ್ಯಾತ್ಮಿಕ ಶಕ್ತಿಯನ್ನಾಗಿ ದರ್ಶಿಸಿದ್ದಾರೆ. ಇದರ ಜೊತೆಗೆ ಬುದ್ಧನನ್ನು ಮಾನವಶಾಸ್ತ್ರೀಯವಾಗಿ, ಸಮಾಜಶಾಸ್ತ್ರೀಯವಾಗಿ, ಅರ್ಥಶಾಸ್ತ್ರೀಯವಾಗಿ ತಾತ್ವಿಕವಾಗಿ ಶಾಶ್ವತ ಪ್ರಭಾವಕಾರಿ ಸತ್‌ಶಕ್ತಿಯಾಗಿ ಕಾಣುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಸಿದ್ಧಾರ್ಥ ಸಿಂಹಾಸನ ಕಿರೀಟ ತ್ಯಾಗಮಾಡಿ ಜ್ಞಾನಾರ್ಥಿಯಾಗಿ ಹೊರನಡೆದ. ಅವನು ಜ್ಞಾನೋದಯ ಹೊಂದಿ ಪ್ರಪಂಚದ ನಿಜವಾದ ಜ್ಞಾನಚಕ್ರರ್ತಿಯಾಗಿದ್ದಾನೆ. ಇದನ್ನು ಅರಿಯದ ಜಗದ್ಗುರುಗಳು ಕಿರೀಟ ಧಾರಣೆ ಮಾಡುವುದರಿಂದ ಅಥವಾ ಮಾಡಿಸಿಕೊಳ್ಳುವುದರಿಂದ ತಾವು ಜಗದ್ಗುರುಗಳೆಂದು ಬೀಗುತ್ತಿದ್ದಾರೆ. ಕಿರೀಟ ಅರಿವಿನ ಕೊರತೆಯನ್ನು ಮರೆಸುವ ಮತ್ತು ಅಹಂಕಾರವನ್ನು ಮೆರೆಸುವ ಮೆರಗು; ಅದರಿಂದ ಅವರ ಭಕ್ತರಿಗೆ ಬೆರಗು; ಅಂಧಕಾರವನ್ನೇ ಆಧ್ಯಾತ್ಮ, ಅಜ್ಞಾನವನ್ನೇ ಜ್ಞಾನ ಎಂದು ಭಾವಿಸಿದ್ದಾರಲ್ಲಾ ಎಂದು ವಿಚಾರವಾದಕ್ಕೆ ಕೊರಗು. ಕಿರೀಟ ತೊಟ್ಟ ಇವರ್‍ಯಾರೂ ಖಂಡಿತ ಜಗದ್ಗುರುಗಳಲ್ಲ. ಇವರು ಹೆಚ್ಚು ಅಂದರೆ ತಮ್ಮ ತಮ್ಮ ಜಾತಿಯ ಜಗದ್ಗುರುಗಳು, ಮಹಾಸ್ವಾಮಿಗಳು! ಆದರೆ ವಿಶ್ವವಿಜಯಿಯಾದ ಸ್ವಾಮಿ ವಿವೇಕಾನಂದರು ಕೇವಲ ಸ್ವಾಮಿ, ಮಹಾಸ್ವಾಮಿ ಅಲ್ಲ. ಜಗದ್ಗುರು ಎಂದು ಕರೆಸಿಕೊಂಡವರು ತಮ್ಮ ಜಾತಿಯಾಚೆಗೆ ಪ್ರಭಾವ ಬೀರಲು ಆಗಿಲ್ಲ. ಏಕೆಂದರೆ ಇವರಲ್ಲಿ ಜ್ಞಾನರವಿ ಉದಯಿಸಿಲ್ಲ. ಬುದ್ಧ ಮತ್ತು ವಿವೇಕಾನಂದರಿಗೆ ಉದಯಿಸಿದಂತೆ.

ಬುದ್ಧ ಧಮ್ಮ ಸಂಪೂರ್ಣ ಪ್ರಜಾಪ್ರಭುತ್ವ, ಪರಿಪೂರ್ಣ ಮಾನವತಾವಾದ, ವಿಚಾರ ಮತ್ತು ವಿಜ್ಞಾನಗಳಿಗೆ ಸದಾ ಮುಕ್ತವಾಗಿದೆ. ಮಧ್ಯವರ್ತಿಗಳಿಗೆ ಇಲ್ಲಿ ಜಾಗವಿಲ್ಲ. ಪ್ರತಿ ವ್ಯಕ್ತಿ ಸ್ವತಃ ಅನುಷ್ಠಾನ ಮಾಡಿ ಸಾಕ್ಷಾತ್ಕಾರ – ನಿಬ್ಬಾಣವನ್ನು – ಪಡೆದುಕೊಳ್ಳುವ ಪಥ ಇದು. ಇಲ್ಲಿ ರಹಸ್ಯವಿಲ್ಲ.

“ಬುದ್ಧ ನನ್ನ ಇಷ್ಟದೇವತೆ” (ಸಂ. 6, ಪು.227; 1964); “ಪ್ರಪಂಚದಲ್ಲಿ ಬಂದ ಅತ್ಯಂತ ಮಹತ್ವದ ವ್ಯಕ್ತಿ ಬುದ್ಧ ಎಂದು ಮಾನವ ಇತಿಹಾಸ ತೋರಿಸುತ್ತದೆ” (ಸಂ. 1, ಪು. 117 ; 1970); “ಬುದ್ಧ ಪೂರ್ವಕ್ಕೆ ಸಂದೇಶ ಕೊಟ್ಟಂತೆ, ನಾನು ಪಶ್ಚಿಮಕ್ಕೆ ಸಂದೇಶ ಕೊಡಲು ಬಂದಿದ್ದೇನೆ” (ಸಂ. 5, ಪು 314 ; 1964) – ಈ ಮಾತುಗಳಲ್ಲಿ ವಿವೇಕಾನಂದರ ಉಜ್ವಲ ಬುದ್ಧಪ್ರೇಮ ಗೊತ್ತಾಗುತ್ತದೆ. ವಿವೇಕಾನಂದರು ಬುದ್ಧನನ್ನು ಪ್ರೀತಿಸಿ ಆರಾಧಿಸಿ ಪ್ರಚಾರ ಮಾಡಿರುವಷ್ಟು ಬೇರೆ ಯಾರನ್ನೂ ಮಾಡಿಲ್ಲ. ಇಂಥ ವಿವೇಕಾನಂದರಿಂದ ಸ್ಫೂರ್ತರಾದವರು ಕುವೆಂಪು. ಬುದ್ಧನನ್ನು ಒಪ್ಪಿಕೊಳ್ಳುವುದರಿಂದ ವಿವೇಕಾನಂದ, ಇವರ ಗುರು ಶ್ರೀ ರಾಮಕೃಷ್ಣ ಪರಮಹಂಸರು, ವಿವೇಕಾನಂದರಿಂದ ಪ್ರಭಾವಿತರಾದ ಶ್ರೀಅರವಿಂದರು – ಮುಂತಾದ ಮಹಾನ್ ದಾರ್ಶನಿಕರಿಂದ ಜನರ ಅಂತಃಶಕ್ತಿ ಹೆಚ್ಚಿ, ಅವರ ಭಾವ ಮತ್ತು ಬೌದ್ಧಿಕ ಬದುಕು ತುಂಬಾ ಸಮೃದ್ಧವಾಗುತ್ತದೆ. ಆರ್ಥಿಕ ಶ್ರೀಮಂತಿಕೆಗಿಂತ ಬೌದ್ಧಿಕ ಮತ್ತು ಹೃದಯ ಶ್ರೀಮಂತಿಕೆ ಶ್ರೇಷ್ಠ ಮತ್ತು ಶಾಶ್ವತವಾದುದು.

ಇದನ್ನು ಸಂಘ ಮತ್ತು ಮುಖಂಡರು ಚಿಂತಿಸಿ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆಂದು ಆಸಿಸುತ್ತೇನೆ. ಹೊಸ ವಿಚಾರಗಳು ಬಂದಾಗ ವಿರೋಧಿಸುವುದು, ಬೇಗ ಒಪ್ಪಿಕೊಳ್ಳದಿರುವುದು ಸಾಮಾನ್ಯ. ಆಮೇಲೆ ಅವೇ ಆದರಣೀಯವಾಗಿ ಅಗ್ರಮಾನ್ಯ ಆಗುತ್ತವೆ.

ಆರೋಗ್ಯಕರವಾಗಿ ಬೆಳೆಯಲು ವಿಚಾರ ವಿಮರ್ಶೆ ಅನಿವಾರ್ಯ ಮತ್ತು ಅಮೂಲ್ಯ.

(08-06-2012)

 [ಈ ಲೇಖನ ಬರೆದ ನಂತರ ಇನ್ನೂ ಕೆಲವು ಮಾಹಿತಿಗಳು ನಿರ್ವಾಣ ಶಬ್ದಕ್ಕೆ ಸಂಬಂಧಿಸಿದಂತೆ ಲಭಿಸಿವೆ. ಚಿಕ್ಕಮಂಗಳೂರು ತಾಲ್ಲೂಕು ಮತ್ತು ಜಿಲ್ಲೆಯ ಸಕ್ಕರೆ ಪಟ್ಟಣದ ಹತ್ತಿರ ನಿರ್ವಾಣೇಶ್ವರ ದೇವಸ್ಥಾನವಿದೆ. ಕನಕಪುರ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ನಿರ್ವಾಣ ಸ್ವಾಮಿ ಮಠ ಇದೆ. ಮಾಜಿ ಪ್ರಧಾನಿ ದೇವೇಗೌಡರ ಹತ್ತಿರದ ಸಂಬಂಧಿಯ ಹೆಸರು ನಿರ್ವಾಣೇಗೌಡ, ನಿವೃತ್ತ ಇಂಜಿನಿಯರ್. ಇವರು ಹಾಸನ ತಾಲ್ಲೂಕು ಮತ್ತು ಜಿಲ್ಲೆ, ಕಟ್ಟಾಯ ಹೋಬಳಿ ಅಸನಹಳ್ಳಿಯವರು. ಹಾಸನದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಿರ್ವಾಣೇಗೌಡ ಎಂಬುವವರು ಸಹಪ್ರಾಧ್ಯಾಪಕರಾಗಿದ್ದಾರೆ.

ಮಾಹಿತಿಗಳನ್ನು ಒದಗಿಸಿದವರು ಮೈಸೂರು ಮಹಾರಾಣಿ ಕಾಲೇಜಿನ ಸ್ನಾಗಕೋತ್ತರ ವಿಭಾಗದ ಡಾ. ಅಣ್ಣೇಗೌಡ, ಮತ್ತು ನಿವೃತ್ತ ಇಂಜಿನಿಯರ್ ನಿರ್ವಾಣೇಗೌಡರು.]

ಉಪವಾಸ ಸತ್ಯಾಗ್ರಹ – ಭ್ರಮನಿರಸನಗೊಂಡ ಜನತೆ

– ಆನಂದ ಪ್ರಸಾದ್

ಅಣ್ಣಾ ಹಜಾರೆ ತಂಡದ ಉಪವಾಸ ಸತ್ಯಾಗ್ರಹಕ್ಕೆ ದೇಶದ ಜನರಿಂದ ಈ ಬಾರಿ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವಂತೆ ಕಂಡು ಬರುತ್ತಿಲ್ಲ.  ಟಿವಿ ವಾಹಿನಿಗಳಲ್ಲಿ ಹಾಗೂ ಪತ್ರಿಕೆಗಳಲ್ಲಿಯೂ ಈ ಬಾರಿ ಹೆಚ್ಚಿನ ಪ್ರಚಾರ ಕಂಡುಬರುತ್ತಿಲ್ಲ.  ಹೆಚ್ಚಿನ ಜನಬೆಂಬಲ ವ್ಯಕ್ತವಾಗದ ಕಾರಣ ಮಾಧ್ಯಮಗಳೂ ಇದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಹೋಗುತ್ತಿಲ್ಲ.  ಅಣ್ಣಾ ತಂಡವು ಹಿಂದಿನ ಬಾರಿ ಒಂದು ಪಕ್ಷದ ವಿರುದ್ಧ ಚುನಾವಣೆಗಳಲ್ಲಿ ಪ್ರಚಾರ ಮಾಡಲು ಹೋಗಿ ತಮ್ಮ ಜನಪ್ರಿಯತೆಯನ್ನು ಇನ್ನೊಂದು ಪಕ್ಷಕ್ಕೆ ರಾಜಕೀಯ ಲಾಭ ಮಾಡಿಕೊಡಲು ಬಳಸಿದುದು ಇದಕ್ಕೆ ಪ್ರಧಾನ ಕಾರಣ.  ಅವರು ಪರೋಕ್ಷವಾಗಿ ರಾಜಕೀಯ ಲಾಭ ಮಾಡಿಕೊಡಲು ಪ್ರಯತ್ನಿಸಿದ ಪಕ್ಷವೂ ಭ್ರಷ್ಟಾಚಾರ, ಕೋಮುವಾದಗಳಲ್ಲೇ ಮುಳುಗಿರುವುದರಿಂದ ಅಣ್ಣಾ ಅವರ ಮೇಲೆ ಜನರ ವಿಶ್ವಾಸ ಕಡಿಮೆಯಾಗಿದೆ.  ಒಮ್ಮೆ ಜನತೆಯ ವಿಶ್ವಾಸ ಕಳೆದುಕೊಂಡರೆ ಅದನ್ನು ಮತ್ತೆ ಗಳಿಸುವುದು ಬಹಳ ಕಷ್ಟ. ಹೀಗಾಗಿಯೇ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಗಂಭೀರ ಚಿಂತನೆ ಮಾಡಿಯೇ ಇಡಬೇಕು.

ಅಣ್ಣಾ ಅವರಿಗೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು ಇರುವಂತೆ ಕಾಣುವುದಿಲ್ಲ.  ಸ್ಪಷ್ಟವಾದ ಪ್ರಗತಿಪರ ನಿಲುವು ಅಣ್ಣಾ ಅವರಲ್ಲಿ ಕಾಣುವುದಿಲ್ಲ.  ಓರ್ವ ರಾಷ್ಟ್ರ ನಾಯಕನಿಗೆ ಸ್ಪಷ್ಟವಾದ ಪ್ರಗತಿಪರ ನಿಲುವು ಇರಬೇಕು.  ತನ್ನ ನಿಲುವನ್ನು ಆಗಾಗ ಬದಲಿಸುತ್ತಾ ಹೋದರೆ ಜನರ ವಿಶ್ವಾಸ ಉಳಿಯಲಾರದು.  ಹೀಗಾಗಿ ಬಹುತೇಕ ಪ್ರಗತಿಶೀಲ ಜನರ ವಿಶ್ವಾಸವನ್ನು ಗೆಲ್ಲಲು ಅಣ್ಣಾ ಅವರಿಗೆ ಸಾಧ್ಯವಾಗಲಿಲ್ಲ.  ಬಂಡವಾಳಶಾಹಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಲ್ಲ.  ಕಾರ್ಪೋರೆಟ್ ಭ್ರಷ್ಟಾಚಾರದ ಬಗ್ಗೆ ಅಣ್ಣಾ ತಂಡ ಯಾವುದೇ ನಿಲುವನ್ನು ತೆಗೆದುಕೊಳ್ಳಲಿಲ್ಲ.  ಬಹಳ ದೊಡ್ಡ ಭ್ರಷ್ಟಾಚಾರ ನಡೆಯುತ್ತಿರುವುದು ಕಾರ್ಪೋರೆಟ್ ವಲಯದಲ್ಲೇ ಆದುದರಿಂದ ಇದನ್ನು ನಿಯಂತ್ರಿಸಲು ಲೋಕಪಾಲ್ ಮಸೂದೆಯಲ್ಲಿ ಪ್ರಧಾನ ಆದ್ಯತೆ ಕೊಡಬೇಕಾಗಿತ್ತು.  ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಅಣ್ಣಾ ತಂಡ.  ಅಣ್ಣಾ ಅವರ ಹೋರಾಟವನ್ನು ಪ್ರಾಯೋಜಿಸಿರುವುದು ಕಾರ್ಪೋರೆಟ್ ವಲಯವೇ ಆದುದರಿಂದ ಈ ಬಗ್ಗೆ ಧ್ವನಿ ಎತ್ತುವ ಸಾಹಸವನ್ನು ಅಣ್ಣಾ ತಂಡ ಮಾಡಲಿಲ್ಲ.   ಒಮ್ಮೆ ತೀವ್ರವಾದ ಜನ ಬೆಂಬಲವನ್ನು ಮುರಿಯಲು ಸರ್ಕಾರ ಏನೋ ಆಶ್ವಾಸನೆ ಕೊಟ್ಟು ನಂತರ ನುಣುಚಿಕೊಂಡಿತು.  ಪದೇ ಪದೇ ತಮ್ಮ ದೈನಂದಿನ ಕೆಲಸ ಬಿಟ್ಟು ಹೋರಾಟಕ್ಕೆ ಹೋಗುವುದು ಜನತೆಗೂ ಸಾಧ್ಯವಾಗುವುದಿಲ್ಲವಾದ ಕಾರಣ ಹೋರಾಟ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ.   ಮೂರ್ನಾಲ್ಕು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇಂದು ದೇಶದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ.  ಹೀಗಾಗಿ ಜನರಿಗೆ ಜೀವಿಸಲು ಅಸಾಧ್ಯ ಎಂಬ ಸ್ಥಿತಿ ದೇಶದಲ್ಲಿ ಇಲ್ಲ.  ಹೇಗೋ ಲಂಚವೋ ಮತ್ತೊಂದೋ ಕೊಟ್ಟು ಜೀವನ ಸಾಗಿಸುವ ಸ್ಥಿತಿ ದೇಶದಲ್ಲಿ ಇದೆ.  ಹೀಗಾಗಿ ಹೋರಾಟಕ್ಕೆ ಹೋಗುವ ಮನೋಸ್ಥಿತಿ ಜನರಲ್ಲಿಯೂ ಕಂಡುಬರುವುದಿಲ್ಲ.  ಸ್ವಾತಂತ್ರ್ಯ ಪೂರ್ವದಲ್ಲಾದರೆ ಪರಕೀಯರು ನಮ್ಮನ್ನು ಆಳುತ್ತಿದ್ದಾರೆ, ನಮ್ಮನ್ನು ನಾವೇ ಆಳಿಕೊಳ್ಳಬೇಕು ಎಂಬ ತುಡಿತ ಜನರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತ್ತು.  ಇಂದು ನಾವೇ ಆರಿಸಿದ ಸರಕಾರ ಇದೆ.  ಹೀಗಾಗಿ ಹೋರಾಟಕ್ಕೆ ಹೋಗುವ ತೀವ್ರ ತುಡಿತ ಜನಮಾನಸದಲ್ಲಿ ಕಂಡುಬರುತ್ತಿಲ್ಲ.

ಇಂದು ಎಲ್ಲ ರಾಜಕೀಯ ಪಕ್ಷಗಳೂ ಭ್ರಷ್ಟವೂ, ಸ್ವಜನಪಕ್ಷಪಾತಿಗಳೂ ಆಗಿರುವಾಗ ಉತ್ತಮ ಲೋಕಪಾಲ್ ಮಸೂದೆ ಲೋಕಸಭೆಯಲ್ಲಿ ಪಾಸಾಗಿ ಬರುವ ಸಂಭವ ಇಲ್ಲ.  ಏನೋ ಒಂದು ಕಣ್ಣೊರೆಸುವ ಮಸೂದೆ ಬಂದರೂ ಬರಬಹುದು.  ಅದರಿಂದ ಹೆಚ್ಚಿನ ಪ್ರಯೋಜನ ಆಗಲಾರದು.  ದೇಶದಲ್ಲಿ ತೀವ್ರ ಜನಬೆಂಬಲ ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವನ್ನು ಸರ್ಕಾರ ಬಲಾತ್ಕಾರವಾಗಿ ನಿಲ್ಲಿಸುವ ಸಂಭವವಿದೆ ಅಥವಾ ತತ್ಕಾಲಕ್ಕೆ ಏನೋ ಒಂದು ಕಣ್ಣೊರೆಸುವ ಆಶ್ವಾಸನೆ ನೀಡಿ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಮಾಡಬಹುದು.  ಉತ್ತಮವಾದ ಲೋಕಪಾಲ ಮಸೂದೆ ಬರಬೇಕಾದರೆ ದೇಶದಲ್ಲಿ ಹೊಸ ರಾಜಕೀಯವ್ಯವಸ್ಥೆ ಬರದೆ ಸಾಧ್ಯವಿಲ್ಲ.  ಅಂಥ ವ್ಯವಸ್ಥೆ ರೂಪಿಸಬೇಕಾದರೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಅದು ಚುನಾವಣೆಗಳಲ್ಲಿ ಗೆದ್ದು ಮಸೂದೆ ಪಾಸು ಮಾಡುವ ಬಹುಮತ ಪಡೆದರೆ ಮಾತ್ರ ಸಾಧ್ಯ.  ಅಂಥ ಹೊಸ ರಾಜಕೀಯ ವ್ಯವಸ್ಥೆ ಸ್ಥಾಪಿಸುವ ಯಾವುದೇ ಆಲೋಚನೆ ಅಣ್ಣಾ ತಂಡಕ್ಕೆ ಇದೆ ಎನಿಸುವುದಿಲ್ಲ.  ಅಂಥ ವ್ಯವಸ್ಥೆ ಸ್ಥಾಪಿಸಿ ಬೆಳೆಸಬೇಕಾದರೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು ಇರಬೇಕಾಗುತ್ತದೆ ಹಾಗೂ ದೇಶಕ್ಕಾಗಿ ದುಡಿಯುವ ನಿಸ್ವಾರ್ಥಿ ಜನರ ಪಡೆಯನ್ನೇ ಬೆಳೆಸಬೇಕಾಗುತ್ತದೆ.  ಇದು ಬಹಳ ವರ್ಷಗಳನ್ನು ತೆಗೆದುಕೊಳ್ಳುವ ಕ್ರಿಯೆ.  ನಿಸ್ವಾರ್ಥಿ ಜನರ ಪಡೆಯನ್ನು ದೇಶದಲ್ಲಿ ಮೊದಲು ಬೆಳೆಸಿ ನಂತರ ಅದು ರಾಜಕೀಯ ಪಕ್ಷವಾಗಿ ಮಾರ್ಪಾಡುಗೊಂಡು ಚುನಾವಣೆಗಳಲ್ಲಿ ಸ್ಪರ್ಧಿಸಿ ಹಂತ ಹಂತವಾಗಿ ಗೆಲುವನ್ನು ಸಾಧಿಸಿ ಬದಲಾವಣೆಗಳನ್ನು ತರಬೇಕಾಗುತ್ತದೆ.  ಇಂಥ ಚಿಂತನೆಯಾಗಲಿ, ಮುನ್ನೋಟವಾಗಲೀ ಅಣ್ಣಾ ಅವರ ತಂಡದಲ್ಲಿ ಕಾಣುವುದಿಲ್ಲವಾದ ಕಾರಣ ಉಪವಾಸ ಸತ್ಯಾಗ್ರಹಗಳಿಂದ ಹೆಚ್ಚಿನ ಪ್ರಯೋಜನ ಆಗುವ ಸಂಭವ ಕಾಣುವುದಿಲ್ಲ.  ಅಣ್ಣಾ ತಂಡದ ಪರೋಕ್ಷ ರಾಜಕೀಯ ನಿಲುವು ಕೂಡ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಒಂದು ಪ್ರತಿಗಾಮಿ, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರುವ ಅಜೆಂಡಾ ಹೊಂದಿದೆಯೇನೋ ಎಂಬ ರೀತಿಯಲ್ಲಿ ಅವರ ನಡವಳಿಕೆಗಳು ಕಾಣುತ್ತವೆ.  ಹೀಗೆ ಮಾಡಿದರೆ ಜನಬೆಂಬಲ ಸಿಗುವುದಾದರೂ ಹೇಗೆ?  ಬಾಬಾ ರಾಮದೇವ ಎಂಬ ಯೋಗ ಗುರುವಿನ ಉದ್ಧೇಶವೂ ಇದೇ ಆಗಿರುವಂತೆ ಕಾಣುತ್ತದೆ.  ವಿದೇಶಗಳಲ್ಲಿ ಇರುವ ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಹೋರಾಟ ರಾಮಮಂದಿರದಂತೆ ಪ್ರತಿಗಾಮಿಗಳನ್ನು  ಅಧಿಕಾರಕ್ಕೆ ಏರಿಸಲು ಬಳಸಿ ನಂತರ ಬಿಸಾಡುವ ಏಣಿಯಂತೆ ಕಾಣುತ್ತದೆ.   ಇಂಥ ನಿಲುವುಗಳಿಂದ ಉಪವಾಸ ಸತ್ಯಾಗ್ರಹ ತನ್ನ ಅರ್ಥವನ್ನು ಕಳೆದುಕೊಂಡು ಜನರನ್ನು ಸಿನಿಕರಾಗುವಂತೆ ಮಾಡುತ್ತದೆ.  ಪರ್ಯಾಯ ರಾಜಕೀಯ ವ್ಯವಸ್ಥೆಗಳನ್ನು ರೂಪಿಸುವ ದೀರ್ಘಕಾಲೀನ ಹೋರಾಟ ರೂಪಿಸದೆ ದೇಶದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯವಾಗುವ ಸಂಭವ ಕಾಣಿಸುವುದಿಲ್ಲ.