Monthly Archives: August 2013

ಮಾಧ್ಯಮ ಲೋಕದಲ್ಲಿ ದಲಿತರ ಹಾಡು-ಪಾಡು

– ಎನ್. ರವಿಕುಮಾರ್, ಶಿವಮೊಗ್ಗ

ಮಾಧ್ಯಮಲೋಕದಲ್ಲಿನ ಜಾತಿ ತಾರತಮ್ಯ ಬಗ್ಗೆ ಸಂಶೋಧನೆ ನಡೆಸಿದ ಮಾಧ್ಯಮಗಳ ಕುರಿತಾದ ವೆಬ್‌ಸೈಟ್ “The Hoot” ಹೊಸ ಸಂಗತಿಗಳನ್ನು ಬಯಲು ಮಾಡಿತು ಎನ್ನುವುದಕ್ಕಿಂತ ಶಿಕ್ಷಣದ ತಳಹದಿಯ ಮೇಲೆ ಬೆಳವಣಿಗೆಯಾಗಿದೆ ಎನ್ನಬಹುದಾದ ವೈಚಾರಿಕತೆ ಸಮಾನತೆ ಎಂಬುದು ಜಾತಿ ವೈಷಮ್ಯದ ರಾಡಿಯಲ್ಲಿ ಇನ್ನಷ್ಟು ಹುದುಗಿ ಹೋಗಿದೆ ಎಂಬ ವಾಸ್ತವಿಕ ಸಂಗತಿಗೆ ಕನ್ನಡಿ ಹಿಡಿದಂತಿದೆ.

ಭಾರತ ದೇಶದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿನ ಜಾತಿ ಆಧಾರಿತ ತಾರತಮ್ಯ ಅಕ್ಷರ ಲೋಕದ ಪ್ರಜ್ಞಾಪೂರ್ವಕ ಕ್ರೀಯೆಯಲ್ಲದೆ ಇನ್ನೇನು ಎಂದು ಕೇಳಬಹುದು. ಚಿಂತಕ,ಸಾಮಾಜಿಕ ಸಂಶೋಧಕ ಏಜಾಜ್ ಅಶ್ರಫ್ ಅವರು ತಮ್ಮ ಸಂಶೋಧನೆಯಲ್ಲಿtv-media ಕಂಡುಕೊಂಡಂತೆ ಮಾಧ್ಯಮ ಲೋಕದಲ್ಲಿನ ದಲಿತರ ಸ್ಥಾನಮಾನಗಳು ಶ್ರೇಣಿ ವ್ಯೆವಸ್ಥೆಯ ಕೆಳಗಿನ ಸ್ಥಾನಗಳೆ ಆಗಿವೆ. ಕಾರಣ ಇಲ್ಲಿ ಪ್ರತಿಭೆ, ಸಾಮರ್ಥ್ಯ, ಬದ್ಧತೆಗಿಂತ ಜಾತಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಇಂದು ಮಾಧ್ಯಮ ಸಂಸ್ಥೆಗಳು ನೇಮಕಾತಿ ಸಂದರ್ಭದಲ್ಲಿ ಜಾತಿ ಸೂಚಕ ಹೆಸರುಗಳ ಆಧಾರದ ಮೇಲೆ ಮಣೆ ಹಾಕುವುದಿಲ್ಲ ಎನ್ನಲು ಸಾಧ್ಯವೇ? ಭಾಷಾ ಮಾಧ್ಯಮಗಳಲ್ಲಿ ಅತಿ ಹೆಚ್ಚು ದಟ್ಟೈಹಿಸಿರುವ ಜಾತಿಯತೆ ದಲಿತರನ್ನು ನೆಲೆ ನಿಲ್ಲದಂತಹ ಸನ್ನಿವೇಶವನ್ನು ಸೃಷ್ಟಿಸುತ್ತಲೆ ಇದೆ.

ದಲಿತ ಸಮುದಾಯ ಶಿಕ್ಷಣಕ್ಕೆ ಮೈವೊಡ್ಡಿಕೊಳ್ಳುತಿದ್ದಂತೆ ಸ್ವಾಭಿಮಾನ ಗಟ್ಟಿಯಾಗುತ್ತಿದೆ. ಬಂಡಾಯದ ಧ್ವನಿ, ಹಕ್ಕುಗಳ ಕೇಳುವಿಕೆ ದೊಡ್ಡ ಸದ್ದು ಮಾಡುತ್ತಿದೆ. ಇದರ ಪರಿಣಾಮವೆ ಒಂದು ಕಾಲದಲ್ಲಿ ದಲಿತರ ದೈಹಿಕ ಜೀತ , ಗುಲಾಮಗಿರಿತನ ಇಂದು ಬಹುಪಾಲು ಕಡಿಮೆಯಾಗಿದೆ ಎನ್ನಬಹುದು. ಆದರೆ ಇಂದು ಶೋಷಣೆಯ , ದೌರ್ಜನ್ಯದ ಸ್ವರೂಪಗಳು ಬದಲಾಗಿವೆ. ದೈಹಿಕ ದೌರ್ಜನ್ಯಕ್ಕೆ ಬದಲಾಗಿ ದಲಿತರನ್ನು ಬೌದ್ಧಿಕ ಜೀತಕ್ಕೆ ತಳ್ಳಲಾಗುತ್ತಿದೆ. ದರ್ಪ,ಬಲ ಪ್ರಯೋಗದ ಬದಲಾಗಿ ನಯ-ನಾಜೂಕಿನಿಂದಲೆ ದಲಿತರನ್ನು ಮುಖ್ಯವಾಹಿನಿಯಿಂದ ದೂರವಿಡುವ ಸಂಚು ನಡೆದಿದೆ. ಅದು ಮಾಧ್ಯಮ ಕ್ಷೇತ್ರದಲ್ಲೂ ನಡೆಯುತ್ತಿದೆ. ಬೌದ್ಧಿಕ ದಾಹದ ತವಕದಲ್ಲಿರುವ ದಲಿತರಿಂದ ಮಾಧ್ಯಮಲೋಕದಲ್ಲಿನ ಜಾತಿಯ ಕ್ಷುದ್ರ ಮನಸ್ಸುಗಳು ಬೌದ್ಧಿಕ ಗುಲಾಮಗಿರಿತನವನ್ನೆ ನಿರೀಕ್ಷಿಸುತ್ತದಲ್ಲದೆ ಶ್ರೇಣಿ ವ್ಯವಸ್ಥೆಯ ಮೂಂಚೂಣಿ ಸ್ಥಾನ – ಮಾನಕ್ಕೇರದಂತೆ ನೋಡಿಕೊಳ್ಳಲಾಗುತ್ತಿದೆ. ನಿರ್ಧಾರ ಕೈಗೊಳ್ಳಬೇಕಾದ ಸ್ಥಾನದಲ್ಲಿ (Decision maker) ಮೇಲ್ಜಾತಿಯವರೆ ಇರುವುದು ದಲಿತರು ಅಷ್ಟು ಸುಲಭವಾಗಿ ಮೇಲೆಳಲು ಬಿಡುವುದಿಲ್ಲ ಎಂಬುದು ಬಹಿರಂಗ ರಹಸ್ಯವೆ.

ಇದರ ಹಿಂದೆ ಜಾತಿಯ ಪೂರ್ವಾಗ್ರಹ ಪೀಡಿತ ಮನೋಸ್ಥಿತಿಃ ಕೆಲಸ ಮಾಡುತ್ತಿರುತ್ತದೆ ಎನ್ನುವುದನ್ನು ಅಲ್ಲೆಗೆಳೆಯುವಂತಿಲ್ಲ ಅಲ್ಲವೇ? ಇದು ದಲಿತ ಪತ್ರಕರ್ತರ ಅಂತಃಸ್ಥೈರ್ಯವನ್ನೆ ಕುಂದಿಸಿಬಿಡುತ್ತಿದೆ. ಜಾತಿಯ ಪ್ರಭಾವಳಿ ಯ ಮುಂದೆ ದಲಿತ ಪತ್ರಕರ್ತನ ಪ್ರತಿಭೆಯನ್ನು ಮಂದಗೊಳಿಸಲಾಗುತ್ತದೆ. (ದಿ ಹೂಟ್ ಸಂಶೋಧನೆಯಲ್ಲಿ ಕಂಡು ಬಂದಂತೆ ದಲಿತ ನಾಯಕರ ಚರ್ಚೆಗಳು ಬಂದಾಗ ಆ ದಲಿತ ನಾಯಕರ ವೈಫಲ್ಯಗಳನ್ನು ಜಾತಿಯೊಂದಿಗೆ ಜೋಡಿಸಿ ಆಡಿಕೊಳ್ಳುವುದು.)  prajavaniಸಾಮಾಜಿಕ ಸಂಘರ್ಷದ ಫಲವಾಗಿ ನಡೆಯುವ ಕ್ರೈಂ ಗಳು, ದಲಿತ ಪರ ಸಂವಾದ, ಚರ್ಚೆ, ಹೋರಾಟಗಳು ದಲಿತ ಪತ್ರಕರ್ತನನ್ನು ಉದ್ದೀಪನಗೊಳಿಸುವುದರಲ್ಲಿ ಆಶ್ಚರ್ಯಪಡುವಂತದ್ದೇನಿಲ್ಲ. ಅದು ಯಾವುದೇ ಮಾಧ್ಯಮಕ್ಕೆ ಸುದ್ಧಿಯ ಸರಕು ಆಗಲಿದೆ. ಆದರೆ ಅದನ್ನು ನಿರ್ಧರಿಸುವವ ಮಾಧ್ಯಮಗಳು ಮೇಲ್ಜಾತಿಯವರ ಕೈಯಲ್ಲೆ ಇರುವುದು ದಲಿತ ಪತ್ರಕರ್ತನ ಶ್ರಮ ಮತ್ತು ಪ್ರತಿಭೆಯ ಸಾವಿಗೆ ಕಾರಣವಾಗುತ್ತದೆ.

ಇನ್ನು ಮಾಧ್ಯಮಕ್ಕೆ ಬೇಕಾಗಿರುವ ಭಾಷಾ ಕೌಶಲ್ಯದಲ್ಲಿ ದಲಿತರು ಹಿಂದುಳಿಯಲು ತಳವಿಲ್ಲದ ಶಿಕ್ಷಣದ ಕಳಪೆ ಗುಣಮಟ್ಟವೆ ಕಾರಣ ಎಂಬ ಅಭಿಪ್ರಾಯಗಳು ಸಂಶೋಧನೆಯಲ್ಲಿ ಕೇಳಿ ಬಂದಿವೆ. ನಿಜ ಎನ್ನಬಹುದಾದರೂ ಅದಕ್ಕೆ ಕಾರಣ ಜಾತಿ ತಾರತಮ್ಯವೇ ಆಗಿದೆ. ಜಾತಿ ಶ್ರೇಣಿಕರಣದ ಜೊತೆಗೆ ಅಕ್ಷರ ಶ್ರೇಣಿಕರಣ ಕೂಡ ಆಗಿದೆ ಎಂಬುದನ್ನು ಮರೆ ಮಾಚುವಂತಿಲ್ಲ. ಸಂವಿಧಾನದ ಫಲದಿಂದ ದಲಿತರು ಶಾಲೆಗಳಿಗೆ ಹೋಗುವಂತಹ ಆಡಳಿತಾತ್ಮಕ ಕ್ರಾಂತಿಕಾರಿ ಬದಲಾವಣೆಯಾಯಿತು. ದಲಿತರಿಗೆ ಶಾಲೆಗಳಿಗೆ ಪ್ರವೇಶ ಸಿಕ್ಕಿತೆ ವಿನಃ, ಮೇಸ್ಟ್ರುಗಳ ತಲೆಗೆ ಪ್ರವೇಶ ಸಿಗಲಿಲ್ಲ. ಅಲ್ಲದೆ ಮನು ಶಿಕ್ಷಣ ಹಾಗೂ ಕಾನ್ವೆಂಟ್ ಶಿಕ್ಷಣದಿಂದ ಗಜಮಾರು ದೂರದ ಸರ್ಕಾರಿ ಕೊಟ್ಟಿಗೆ ಶಾಲೆಗಳ ಶಿಕ್ಷಣ ಯಾರ ನಡುವೆ ಹಂಚಿಕೆಯಾಗಿದೆ ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ.

ಅಕ್ಷರ ಶ್ರೇಣಿಕರಣದಲ್ಲಿ ಭೂಮಿ, ಬಂಡವಾಳ, ಅಧಿಕಾರ ಯಾವಾಗಲೂ ಮುಂದಿನ ಬೆಂಚುಗಳಲ್ಲಿರುತ್ತದೆ. ಮೇಸ್ಟ್ರುಗಳು ಮೊದಲ ವರ್ಗದವರೆ ಆಗಿದ್ದರಿಂದ ಕೊನೆ ಬೆಂಚಿನ ದಲಿತರನ್ನು ಕೈಹಿಡಿದು ತಿದ್ದುವವರು ಯಾರು? ಈಗಿರುವಾಗ ಗುಣಮಟ್ಟದ ಶಿಕ್ಷಣ ಸಿಗುವುದಾದರೂ ಎಲ್ಲಿಂದ? ಇಂದು ಮೇಲ್ಜಾತಿಯ ಮೂರು ತಲೆಮಾರುಗಳು ಐಎಎಸ್, ಐಪಿಎಸ್, ಐಎ‌ಫ್ಎಸ್ ನಂತಹ ಹುದ್ದೆಗಳನ್ನು ಅನುಭವಿಸಿ ನಿವೃತ್ತಿ ಹೊಂದುತ್ತಿರುವಾಗ ದಲಿತ ಸಮುದಾಯದ ಮೊದಲನೆ ತಲೆಮಾರು ಶಿಕ್ಷಣದ ಅಂಗಳದಲ್ಲಿ ಈಗಿನ್ನೂ ತೆವಳುತ್ತಿದೆ. ಮಹಾರಾಷ್ಟ್ರದ ಸಾಹು ಮಹಾರಾಜರು, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ದಲಿತರಿಗೆ ಶಿಕ್ಷಣ ಮತ್ತು ಭೂಮಿ ನೀಡಿದ್ದರ ಫಲ ದಲಿತರಲ್ಲಿ ಸಂವಿಧಾನಕ್ಕೆ ಮುಂಚೆ ಶಿಕ್ಷಣದ ಶಕೆ ಆರಂಭವಾಯಿತು. ಆದರೆ ಆರಂಭದ ಕಾಲ ಘಟ್ಟದಲ್ಲಿಯೇ ದಲಿತರಿಗೆ ಶಿಕ್ಷಣ ಮತ್ತು ಭೂಮಿ ಕೈಗೆ ಸಿಕ್ಕಿದ್ದರೆ ಇಂದಿನ ಅಸಮಾನತೆಯ ಸೋಂಕಿಗೆ ಎಂದೊ ಚಿಕಿತ್ಸೆ ಸಿಕ್ಕಿರುತ್ತಿತ್ತು. ಭಾಷಾ ಕೌಶಲ್ಯಕ್ಕೆ ಗುಣಮಟ್ಟದ ಶಿಕ್ಷಣದ ಭದ್ರ ತಳಹದಿ ಇರಬೇಕೆ ಹೊರತು ಶಿಕ್ಷಣದ ಪಾರಂಪರಿಕ ಇತಿಹಾಸವಲ್ಲ ಎಂಬುದನ್ನು ಇಂದು ಅಕ್ಷರ ಲೋಕದಲ್ಲಿರುವ devanurದೇವನೊರು ಮಹಾದೇವ, ಸಿದ್ದಲಿಂಗಯ್ಯ. ಮೊಗಳ್ಳಿಗಣೇಶ ಸೇರಿದಂತೆ ಅನೇಕರು ಸಾಕ್ಷಿಯಾಗಿದ್ದಾರೆ. ತಳವಿಲ್ಲದ ಶಿಕ್ಷಣದ ಕೊರತೆ ದಲಿತ ಪತ್ರಕರ್ತರಲ್ಲಿನ ದೋಷಕ್ಕೆ ಕಾರಣ ಎಂಬ ವಿಶ್ಲೇಷಣೆಗಳ ಹಿಂದೆ ದಲಿತರಲ್ಲೆ ಹೋರಾಟ ಮನೋಭಾವದ ಕುಸಿತ ಎನ್ನಬಹುದು.

ಇಂದು ದಲಿತರು ಮಾಧ್ಯಮಲೋಕದತ್ತ ಆಕರ್ಷಿತರಾಗುತ್ತಿರುವುದರ ಹಿಂದೆ ಒಂದು ವೈಚಾರಿಕ ತುಮುಲವಿದೆ. ಸಾಮಾಜಿಕ ಅಸಮಾನತೆ ವಿರುದ್ಧ ದ ಸೈದ್ಧಾಂತಿಕ ಹೋರಾಟ ಮತ್ತು ಮಾನವೀಯ ಹಕ್ಕುಗಳ ಪ್ರತಿಪಾದನೆಗೆ ಮಾಧ್ಯಮಗಳು ಕಣವಾಗಲಿವೆ ಎಂಬ ಭರವಸೆ ಹೆಪ್ಪಗಟ್ಟಿರುತ್ತದೆ.(Many Dalits enter the media because they believe it can empower their community. But discrimination against them is rampant in the Hindi and language Media.) ಅಸಮಾನತೆ ಈ ಉತ್ಸಾಹವನ್ನು ಆಪೋಶನ ಮಾಡಲು ಹೆಚ್ಚು ದಿನ ಬೇಕಾಗುವುದಿಲ್ಲ. ಪತ್ರಕರ್ತರಾದ ವಡ್ಡರ್ಸೆ ರಘುರಾಮಶೆಟ್ಟರು ತಮ್ಮ ಮುಂಗಾರು ಪತ್ರಿಕೆಗೆ ದಲಿತರು , ಹಿಂದುಳಿದವರ್ಗದವರನ್ನೆ ಅಡಿಗಲ್ಲಾಗಿಸಿದ್ದರು. ಮಾಧ್ಯಮಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆಯೆ ಆಗಿತ್ತು. ಲಂಕೇಶ್ ಸಹ ಇದೇ ಹಾದಿಯಲ್ಲಿ ದಲಿತ ಬರಹಗಾರರಿಗೆ ವೇದಿಕೆ ಕಲ್ಪಿಸಿದ್ದರು.

ಮಾಧ್ಯಮ ಕ್ಷೇತ್ರ ಇಂದು ಉದ್ಯಮವಾಗಿ ಬೆಳೆಯುತ್ತಿರುವ ಸನ್ನಿವೇಶದಲ್ಲಿ ಬಂಡವಾಳ-ಆದಾಯದ ಲೆಕ್ಕಾಚಾರಗಳು ಮುಖ್ಯವಾಗುವುದರ ಜೊತೆಗೆ ಜಾತಿ ಆಧಾರಿತ ಲಾಭವನ್ನು ಗುಣಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ವೇತನ ಆಧಾರಿತ ನೌಕರಿ ನಡೆಸುವ ದಲಿತ ಪತ್ರಕರ್ತರ ಸ್ಥಿತಿ-ಗತಿಗಳು ಒಂದೆಡೆಯಾದರೆ, ಭಾಷಾ ಮಾಧ್ಯಮದಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕವಾಗಿ ಪತ್ರಿಕೆಗಳನ್ನು ನಡೆಸುವ ದಲಿತರು ಮತ್ತು ಹಿಂದುಳಿದ ವರ್ಗಗಳು (ಸಂಪಾದಕರು ಅಥವಾ ಪ್ರಕಾಶಕರು) ಮೂಲಭೂತವಾಗಿ ಓದುಗ ವಲಯದಲ್ಲಿಯೆ ಜಾತಿತಾರತಮ್ಯವನ್ನು ಎದುರಿಸುತ್ತಿದೆ. dalitsinmediaಇವುಗಳ ನಡುವೆ ಜಾತಿ ಲಾಭಿಯಿಲ್ಲದೆ ತಮ್ಮ ಪ್ರತಿಭೆ, ಶೈಕ್ಷಣಿಕ ಸಾಮರ್ಥ್ಯದಿಂದಲೆ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಓಬಿಸಿಗಳು ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ದಲಿತ ಪತ್ರಕರ್ತರ ಕೌಟುಂಬಿಕ, ಆರ್ಥಿಕ ಸ್ಥಿತಿಗತಿಗಳು ಆತನನ್ನೆ ಅವಲಂಬಿಸಿರುವಾಗ ತನ್ನ ಕಾರ್ಯಕ್ಷೇತ್ರದಲ್ಲಿನ ಜಾತಿ ತಾರತಮ್ಯ ಆತನನ್ನು ಘಾಸಿಗೊಳಿಸಿದೆ. ಇಂತಹ ಸಂಕಷ್ಟಗಳಲ್ಲೂ ದಲಿತರ ಪ್ರತಿಭೆ ಮೇಲ್ವರ್ಗದವರಿಗೆ ಸವಾಲುಗಳನ್ನು ಒಡ್ಡುತ್ತಿವೆ. ಪಾರಂಪರಿಕ ಶತೃತ್ವದ (Vendetta) ಹಗೆಯಲ್ಲಿ ಕುದಿಯುತ್ತಿರುವ ಮೇಲ್ವರ್ಗದ ಹಿತಾಸಕ್ತಿಗಳು ಹೋಗು ಎನ್ನಲಾಗದೆ ಹೊಗೆ ಇಟ್ಟರು ಎಂಬಂತೆ ಮಾಧ್ಯಮ ಕ್ಷೇತ್ರದಲ್ಲಿ ದಲಿತರನ್ನು ಹೊರದೂಡುವ ಸನ್ನಿವೇಶವನ್ನು ಸೃಷ್ಟಿಸುತ್ತಲೆ ಇವೆ. ಈ ಕಾರಣಗಳೆ ದಲಿತರು ಮಾಧ್ಯಮ ಕ್ಷೇತ್ರದಲ್ಲಿ ಮುಂದುವರೆಯ ಬೇಕೆ, ಬೇಡವೇ ಎಂಬ ಚಿಂತನೆಗೀಡು ಮಾಡಿವೆ.

ಸಮಾನ ಸಮಾಜದ ಸಾಂಘಿಕ ಹಿತ ಬಯಸುವ ಮಾಧ್ಯಮ ಕ್ಷೇತ್ರ ತನ್ನ ಒಡಲಲ್ಲಿ ಜಾತಿಯ ವಿಷ ವೃಕ್ಷಕ್ಕೆ ನೀರುಣಿಸತೊಡಗಿದೆ. ‘ದಿ ಹೂಟ್’ಗಾಗಿ ಚಿಂತಕ, ಲೇಖಕ ಏಜಾಜ್ ಅಶ್ರಫ್ ಅವರು ನಡೆಸಿದ ಸಂಶೋಧನೆ ಇದನ್ನೆ ಒತ್ತಿ ಹೇಳಿದೆ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 : ಹತ್ತೇ ದಿನಗಳು ಬಾಕಿ…

ಸ್ನೇಹಿತರೇ,

ಕಳೆದ ವರ್ಷದಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2013ಈ ಕಥಾ ಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ: 2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ನಾನು. ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ನನಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಕಳೆದ ವರ್ಷ ವರ್ತಮಾನದ ಅಡಿಯಲ್ಲಿ ಅದನ್ನು ಮತ್ತೆ ಆರಂಭಿಸಲಾಯಿತು. (ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 ರ ಬಹುಮಾನಿತ ಕತೆಗಳ ವಿವರ ಇಲ್ಲಿದೆ.) ಈ ವರ್ಷದ ಕಥಾ ಸ್ಪರ್ಧೆಗೆ ಕತೆಗಳನ್ನು ಆಹ್ವಾನಿಸುವ ಸಮಯ ಇದು.

ಅಂದ ಹಾಗೆ ಈ ಸ್ಪರ್ಧೆಗೆ ಕಳೆದ ಬಾರಿ ಕೆಲವರು ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಕತೆಗಳನ್ನು ಕಳುಹಿಸಿದ್ದರು. ಇದು ಗಾಂಧಿಯ ಕುರಿತಾದ ಕತೆಗಳ ಕಥಾ ಸ್ಪರ್ಧೆಯಲ್ಲ. ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

– ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು.
– ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:
– ಮೊದಲ ಬಹುಮಾನ: ರೂ. 6000
– ಎರಡನೆ ಬಹುಮಾನ: ರೂ. 4000
– ಮೂರನೆಯ ಬಹುಮಾನ: ರೂ. 3000
– ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2013

ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

 

ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್ : ಗಂಗೆ, ಗೌರಿ,.. ಭಾಗ–6

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್

ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್

ಹಸುವಿನ ಬಗೆಗೆ ಮಾತಾಡುವುದು ಸುಲಭ, ಆದರೆ ಸಾಕುವುದು ಖಂಡಿತಾ ಸುಲಭದ ಕೆಲಸವಲ್ಲ. ಕಂಡವರ ಬೈಗುಳ ತಿನ್ನದೆ, ಆದಾಯ ಮತ್ತು ಬಂಡವಾಳಕ್ಕೆ ಖೋತಾ ಬಾರದಹಾಗೆ ನಿಭಾಯಿಸಿಕೊಂಡುಹೋಗುವಲ್ಲಿ ಸಾಕಷ್ಟು ಕಸರತ್ತು ನಡಸಬೇಕಾಗುತ್ತೆ. ಅಮತಹ ಕಸರತ್ತುಗಳಲ್ಲಿ ಕೋಣ/ಎತ್ತುಗಳ ಬೀಜ ಒಡೆಯುವುದೂ ಒಂದು. ಕೊಬ್ಬಿದ ಕೋಣ,ಎತ್ತುಗಳನ್ನು ಸಕಾಲದಲ್ಲಿ ಬೀಜ ಒಡೆಯದೆ ಹೋದರೆ ಅಪಾಯದ ಜತೆಗೆ ಅವು ನಿರುಪಯುಕ್ತವೂ ಆಗುತ್ತವೆ. ಶೀಲ ಮಾಡುವುದು ಅಥವಾ ಬೀಜ ಒಡೆಯುವುದೆಂದರೆ ಒಂದು ಹೆರಿಗೆ ಮಾಡಿಸಿ ಬಾಣಂತಿ ಸಾಕಿದಷ್ಟು ಸಂಕಟದ ಕೆಲಸ. bulls-castrationಕೈಕಾಲುಕಟ್ಟಿ ಕೆಡೆದು ಇಕ್ಕುಳಗೋಲಿಗೆ ಅವುಗಳ ಕಾಳಿ/ಬೀಜ ಸಿಕ್ಕಿಸಿಕೊಂಡು ನಯವಾದ ಮತ್ತೊಂದು ಕೋಲಿನಿಂದ ನಯವಾಗಿಯೇ ಹೊಡೆದು ಹುಡಿಮಾಡುವ ಮೂಲಕ ನಡೆಸುವ ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ಅವುಗಳ ಒದ್ದಾಟ ಕೇಳಬಾರದು. ಈ ಸಂದರ್ಭದಲ್ಲಿ ತರಡಿ(ವೃಷಣ)ನಲ್ಲಿ ಆಗುವ ಗಾಯ,ಆ ಗಾಯದ ಮೇಲೆ ಕೂರುವ ನೊಣ ಮತ್ತು ತಾಗುವ ಸಗಣಿಯಿಂದಾಗಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಹುಳ-ನೆತ್ತರು-ಕಾಗೆಯಕಾಟ-ಕೋಣದ ಸಂಕಟ ಇವುಗಳಿಂದ ಸಾಕಿದವರ ಪಜೀತಿ ಹೇಳತೀರದು. ಹಾಗೆಯೇ ಬೀಜ ಒಡೆಯುವಾಗಲೇ ಅವುಗಳ ಕೊಬ್ಬು ಕರಗಿಸುವ ಸಲುವಾಗಿ ಕಾದ ಕಬ್ಬಿಣದ ಸಲಾಕೆಯಿಂದ ಹಿಂಬಾಗಕ್ಕೆ ಎಳೆಯುವ ಬರೆ/ಚಾಟು ಯಿಂದಲೂ ಅವು ನರಕಯಾತನೆ ಅನುಭವಿಸುತ್ತವೆ. ಹಟ್ಟಿಯಲ್ಲಿ ಕುಳಿತು ಕಾಗೆ ಬಾರದ ಹಾಗೆ ಸ್ವಲ್ಪ ಜಾಗ್ರತೆ ಮಾಡದೇ ಹೋದರೆ ಶೀಲ ಮಾಡಿಸಿದವರು ಶೀಲವಾಗುವ ಸಾಧ್ಯತೆಗಳು ಇರುತ್ತವೆ. ಇಷ್ಟೆಲ್ಲಾ ಸರ್ಕಸ್ಸುಗಳನ್ನು ಮಾಡದೇ ಹೋದರೆ ನೇಗಿಲನ್ನು ಮದರ್ ಇಂಡಿಯಾ ಸಿನೆಮಾದಂತೆ ಅಪ್ಪ-ಅಮ್ಮನ ಹೆಗಲಿಗೋ,ಮಕ್ಕಳ ಹೆಗಲಿಗೋ ಇಡಬೇಕಾಗುತ್ತದೆ.

ಹಸುಗಳನ್ನು ಸಾರ್ವತ್ರಿಕವಾಗಿ ಒಪ್ಪಿಕೊಂಡಂತೆ ಅವು ಸಾಧು ಪ್ರಾಣಿಗಳು. ಈ ಸಾಧು ಎಂಬ ಪದಕ್ಕೆ ಅಂತಹ ಅರ್ಥ ಸಾಧ್ಯತೆಯ ಶಕ್ತಿಯಿದೆಯೋ ಎನೋ ಗೊತ್ತಿಲ್ಲ? ಸಾಕುವವರ ಪಾಲಿಗೆ ಎಲ್ಲಾ ಹಸುಗಳಿಗೂ ಈ ಏಕರೂಪಿಯಾದ ಸಾಧು ಎನ್ನುವ ಮುಗ್ದ,ನಿರುಪದ್ರವಿ ಎಂಬಿತ್ಯಾದಿ ಅರ್ಥ ಬರುವ ಪದ ಸಾರಾಸಗಟಾಗಿ ಅನ್ವಯಿಸುವುದು ಕಷ್ಟ. ಒಂದುವೇಳೆ ಅನ್ವಯವಾಗುತ್ತದೆ ಎಂದು ಅವರು ಬಾಯಲ್ಲಿ ಹೇಳಿದರೂ ಕಾರ್ಯರೂಪದಲ್ಲಿ ಹಾಗಿಲ್ಲವೆಂಬುದು ಸತ್ಯ. ಅದಲ್ಲವಾದರೆ ಅವುಗಳ ಮೇಲೆ ಬಯಲಿನಲ್ಲಿಯೇ ಬಂದೀಖಾನೆಯಲ್ಲಿಟ್ಟಂತೆ ಆಡ್ಬಳ್ಳಿ, ಕುಂಟೆ, ಕಾಲು-ಕುತ್ತಿಗೆಗೆ ಬಳ್ಳಿ ಇತ್ಯಾದಿ ನಿರ್ಬಂಧದ ಪ್ರಯೋಗಗಳನ್ನು ಮಾಡುತ್ತಿರಲಿಲ್ಲ. ವಿಶೇಷವೆಂದರೆ ಈ ಬಹುಮಟ್ಟಿನ ನಿರ್ಬಂಧಗಳು ಹೆಣ್ಣು ಜಾತಿಯ ಹಸುಗಳಿಗೇ ಲಗಾವಾಗುತ್ತಿರುವುದು. ‘ಕಟ್ಬಳ್ಳಿಕುಟ್ದೊಣ್ಣಿ’ ಎಂಬ ನುಡಿಕಟ್ಟೊಂದು ನಮ್ಮಲ್ಲಿ ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವುದು. ಎತ್ತಲೂ ಹೋಗದ ಹಾಗೆ ಹಗ್ಗಹಾಕಿ ಮೇವಿಗೆ ಕಟ್ಟುವ ಇಲ್ಲವೇ ಕಟ್ಟಿದಲ್ಲಿಯೇ ಹಿಡಿಹುಲ್ಲು ಹಾಕಿ ಅಲ್ಲಿಯೇ ನಿರ್ಬಂಧಕ್ಕೊಳಪಡಿಸುವ ಕ್ರಮವಿದೆ. ಇದು ಸರಳವಾದ ಶಿಕ್ಷೆ. ಆದರೆ ಇದಕ್ಕಿಂತ ಉಗ್ರವಾದದು ಕೊರಳಿಗೆ ಕುಂಟೆಕಟ್ಟುವುದು (ನಮ್ಮ ನಡುವೆ ಬಹಳ ಉಡಾಫೆ ಮಾಡುವವನಿಗೆ ಮದುವೆ ಮಾಡುವುದನ್ನು ಹೀಗೆ ಕರೆಯುತ್ತಾರೆ). ಹಸುವಿನ ಉಡಾಫೆಯ ತೀವ್ರತೆಯನ್ನು ಆಧರಿಸಿ, tied-cowಅದರ ಸ್ವಭಾವಾನುಸಾರ ಹೀಗೆ ಕಟ್ಟಲಾಗುವ ಕೊರಡಿನ ಗಾತ್ರದಲ್ಲಿ ವೈವಿಧ್ಯವಿರುತ್ತದೆ. ಈ ಕುಂಟೆ ಕಟ್ಟಿದ ಮೇಲೆಯೂ ಹಾರಾಡುವ ಹಸುಗಳು ಕಾಲಿಗೆ ಏಟು ಮಾಡಿಕೊಳ್ಳುವ, ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸ್ಥಿತಿಯೂ ಉಂಟು. ಸಾಮಾನ್ಯವಾಗಿ ಕುಂಟೆ ಕಟ್ಟಲಾಗುವ ಹಸು ಸಾಧುವಾಗಿರುವುದಿಲ್ಲ. ಈ ಹರಾಮಿಗಳು ಯಾರ್‍ಯಾರದೋ ಗದ್ದೆಗೆ ನುಗ್ಗಲು ಬೇಲಿ ತೂರಿಕೊಂಡು ಹೋಗುವಾಗ, ದರೆ ಹಾರುವಾಗಲೆಲ್ಲಾ ಈ ಕುಂಟೆಯಿಂದಾಗಿಯೇ ಅವಗಡಕ್ಕೆ ತುತ್ತಾದುದೂ ಇದೆ. ಯಾಕೆಂದರೆ ಬೆಳೆಗೆ ನುಗ್ಗಿದ ಹಸುವನ್ನು ಪಿಶಾಚಿಯನ್ನು ಅಟ್ಟಿಸಿಕೊಂಡು ಬಂದಂತೆ ಬರುವವರೇ ಹೆಚ್ಚು ವಿನಹಾ, ಯಾರೊಬ್ಬರೂ ‘ಅಮ್ಮಾ ತಾಯಿ ಗೋಮಾತೆ ನಮ್ಮನ್ನು ಕಾಪಾಡು’ ಎಂದು ಕೈ ಮುಗಿದು ಸತ್ಕರಿಸಿ ಕಳುಹಿಸಿದ ಉದಾಹರಣೆಯಿಲ್ಲ. ಹೊಟ್ಟೆಗೆ ಬೀಳುವ ಪೆಟ್ಟಿಗೆ ಮನೆಯ ಹಸುವನ್ನೇ ದಂಡಿಸುವವರು, ಮಿಕ್ಕವರ ಹಸುವನ್ನು ಬಿಟ್ಟಾರೆ.? ಪಶುವೇನ ಬಲ್ಲುದು ಹಸುರೆಂದಳಸುವುದು ಎಂದು ಬಸವಣ್ಣನೇ ಹೇಳಿ ಮುಗಿಸಿದ್ದಾರೆ. ಎಳಸುವ ಹಸುವನ್ನು ಅಯ್ಯೊ ಪಾಪ ಆಸೆಪಟ್ಟಿತು, ಮೂಕಪ್ರಾಣಿಯೆಂಬ ಕರುಣೆಯೊಂದಿಗೆ ಕಾಣಬೇಕೆಂಬ ಬೋಧನೆಯನ್ನೇನೋ ಕೊಡಬಹುದು. ಆದರೆ ಅದು ಪ್ರಾಯೋಗಿಕವೇ? ಹಸುವೆಂದ ತಕ್ಷಣ ಸಾಕುವವರ ಪಾಲಿಗೆ ನಮ್ಮ ಮನೆಯಹಸು ತಾವುಬೆಳೆದಬೆಳೆ ಎಂಬ ಸಹಜ ಭಾವವಿದೆಯೇ ವಿನಹಾ ಸಾರ್ವತ್ರಿಕವಾದ ಒಂದು ಪಡಿಯಚ್ಚು ಇಲ. ಬೆಳೆದ ಬೆಳೆ, ಸಾಕುವ ಹಸುವೆಲ್ಲ ದೇವೆರೆನ್ನಲು ಸಾಧ್ಯವಾಗುವುದು ಬೆಲೆಬೆಳೆಯದ ಮತ್ತು ಒಂದೂ ಹಸುಸಾಕದವರಿಗಿರಬಹುದೋ ಏನೋ?

ಕುಂಟೆ ಕಟ್ಟುವುದರಿಂದಲೂ ನಿಯಂತ್ರಿಸಲಾರದಷ್ಟು ಹರಾಮಿಗಳಾದ ಹಸುಗಳಿಗೆ (ಹೆಚ್ಚಾಗಿ ಎಮ್ಮೆಗಳಿಗೆ) ಮುಂದಿನ ಕಾಲು ಕುತ್ತಿಗೆಗೆ ಸೇರಿಸಿ ಹಗ್ಗ ಕಟ್ಟಿ ತಲೆಎತ್ತಿ ನಡೆಯುವುದಿರಲಿ, ಮೂರೆ ಕಾಲಿನ ನಡಿಗೆಯ ಸರ್ಕಸ್ ಆಗುವಂತೆ ಮಾಡುವ ವಿಶೇಷಶಿಕ್ಷಾ ಕ್ರಮವೊಂದಿದೆ. ಹೀಗೆ ಬಳ್ಳಿ ಹಾಕಿದಾಗಲೂ ಬಿಟ್ಟು ಮೇಯಿಸುವ ವೇಳೆ ಕುಂಟಿಕೊಳ್ಳುತ್ತಲೇ ಬೆಳೆಗೆ ಬಾಯಿಟ್ಟು ಬೆನ್ನಿಗೆ ಬೀಳುವ ಏಟು ತಿಂದುಕೊಂಡು ಅವುಗಳು ಕುಂಟುತ್ತಾ ಓಡುವಾಗ ಅನುಭವಿಸುವ ಸಂಕಟವನ್ನು ನೋಡಬೇಕು. ಇದು ನೋಡುಗರಿಗೆ, ಸಾಕದವರಿಗೆ ಹಿಂಸೆಯೆನಿಸುತ್ತದೆ. ಆದರೆ ಈ ಹಿಂಸೆಯಿಲ್ಲದೆ ಅವುಗಳನ್ನು ಸಾಕುವುದೇ ದುಸ್ತರವೆಂಬುವುದೂ ಅಷ್ಟೇ ನಿಜ. ಮೂಗುದಾರ ಮತ್ತು ಅದಕ್ಕೆ ಹಾಕುವ ಹಗ್ಗ ಸಾಮಾನ್ಯವಾಗಿ ಕಾಣುವ ಶಿಕ್ಷೆ. ಇನ್ನು ಪಕ್ಕದ ಗದ್ದೆಯಲ್ಲಿ ಬೆಳೆಯಿದ್ದು ಉಳುಮೆ ಮಾಡಬೇಕಾದ ಸಂದರ್ಭದಲ್ಲಿ ಮತ್ತು ಬೆಳೆಗದ್ದೆಯ ಅಂಚನ್ನು ಹಾದು ಉಳುವ ಜಾನುವಾರುಗಳನ್ನು ಕೊಂಡೊಯ್ಯಬೇಕಾದ ಸಂದರ್ಭದಲ್ಲಿ ಅವುಗಳು ಬೆಳೆಗೆ ಬಾಯಿ ಹಾಕದಂತೆ ಕುಕ್ಕೆ ಕಟ್ಟುವ ಅಥವಾ ಬಾಯಿತೆರೆಯದಂತೆ ಹಗ್ಗ ಕಟ್ಟುವ ಪದ್ಧತಿಯಿದೆ. ಸಾದುಪ್ರಾಣಿಗೆ ಈ ಮಾದರಿಯ ಶಿಕ್ಷೆಗಳ ಅಗತ್ಯವಿದೆಯೇ?

ಕಲ್ಲಿನದೇವರೂ ಬೇಡುವ ಹಾಲು ‘ಅಮೃತಸದೃಶ’! ಅಂತಹ ಹಾಲನ್ನು ಕೊಡುವ ಹಸು ದೇವಲೋಕದ ಕಾಮಧೇನು ಎಂದೆಲ್ಲಾ ಅಂಬೋಣಗಳಿವೆಯಾದರೂ ಯಾವ ಹಸುವೂ ನನಗೆ ತಿಳಿದ ಮಟ್ಟಿಗೆ ತಂಬಿಗೆ ತೆಗೆದುಕೊಂಡು ಹೋದ ತಕ್ಷಣ ಜರ್ರನೆ ಹಾಲು ಸುರಿಸಿಬಿಡುವುದಿಲ್ಲ. ಹುತ್ತಕ್ಕೆ ಹಾಲೆರೆದಂತೆ ಹಸುವಿಗೆ ಲಗತ್ತುಗೊಂಡ ಜನಪದ ಐತಿಹ್ಯಗಳು ಹೇರಳವಾಗಿ ಸಿಗುತ್ತವೆಯಾದರೂ ಅದು ಹಾಲು ಸೂಸುವ ಸಹಜ ಪ್ರವೃತ್ತಿ ತೋರುವುದು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಎಳೆಯ ಕರುವಿಗೆ ಮಾತ್ರ. ಹಟ್ಟಿಗೆ ಕರೆಯಲು ಹೋಗುವ ಮುನ್ನ ಅದರ ಎದುರಿಗಿಷ್ಟು ಹಸಿಹುಲ್ಲು ಹರವಿಕೊಂಡು, ಕೆಚ್ಚಲು ತೊಳೆದು, ಬೆನ್ನು ಚಪ್ಪರಿಸಿ ಒಂದಿಷ್ಟು ಹೊತ್ತು ಎಳೆದ ಮೇಲೆಯೇ ಅದು ಹಾಲಿಳಿಸುವುದು.ಅದೂ ಸೀದ ಸಾದಾ ಹಸುವಾದರೆ ಮತ್ತು ಅದರ ಮನಸ್ಸಿಗೆ ನೆಮ್ಮದಿಯೆನಿಸಿದರೆ. ಅದರ ಮನಸ್ಸಿಗೆ ನೆಮ್ಮದಿ ಎನಿಸದಿದ್ದರೆ ಎಷ್ಟೇ ಎಳೆದರೂ ಹಾಲಿಳಿಸದೇ ಹೋಗಬಹುದು. brahma-cow-indiaಇಂತಹ ವಿಫಲಯತ್ನವನ್ನು ಬೆನ್ನು ಬೆನ್ನಿಗೆ ಮಾಡಿ ಸೋತಮೇಲೆ ಹಾಲುಕೊಡದ ತಪ್ಪಿಗೆ ಅದರ ಬೆನ್ನಿಗೆ ಎರ್ರಾಬಿರ್ರಿ ಹೊಡೆದು ಭಯಕ್ಕೊಳಪಡಿಸಿ ಹಾಲು ಕಸಿದು ತರುತ್ತಿದ್ದುದನ್ನು ನಾನೇ ಕಂಡಿದ್ದೇನೆ. ಮಾತ್ರವಲ್ಲ ಹಾಲು ಕೊಡದ ಹಸುವಿನ ಎದುರು ದೊಣ್ಣೆಹಿಡಿದು ಕುಳಿತು ಹೆದರಿಸಿ ಹಾಲು ಕರೆಯಲು ಸಹಕರಿಸಿದ್ದೇನೆ. ಕರುಸತ್ತ ದಿನವೂ ಸತ್ತ ಕರುವನ್ನು ಹಸುವಿನ ಎದುರಿಗಿಟ್ಟು ತೋರಿಸಿ ಅಂತಿಮ ದರ್ಶನಕ್ಕೆ ದಾರಿಮಾಡಿಕೊಟ್ಟು ಹಾಡಿಗೆ ಎಳೆದುಹಾಕಿ ಬಂದ ಬೆನ್ನಿಗೆ, ಅದರ ಕೆಚ್ಚಲು ತೂಕ ಇಳಿಸುವುದನ್ನು ಮರೆಯುವುದಿಲ್ಲ. “ಕರುಸತ್ತ ಬೇಗೆಯಲಿ ನಾ ಬೇಯುತ್ತಿದ್ದರೆ, ಮರುಕವಿಲ್ಲದೆ ಸತ್ತ ಕರುವ ತಂದು, ತಿರುತಿರುಗಿ ಮುಂದಿಟ್ಟು ಹಾಲು ಕರೆವೆ ನೀನು-ನೀನಾರಿಗಾದೆಯೋ?” ಎಂದು ಹಾಡಿದ ಡಿ.ಎಲ್.ಎನ್. ಅವರ ಕಾವ್ಯದ ಸಾಲುಗಳನ್ನು ವಾಸ್ತವವೆನ್ನದೆ ಬೇರೆ ದಾರಿಯಿದೆಯೇ? ಹಾಗಾಗಿ ಹಸು ಕಾಳಿಂಗನ ಸಿಪಾಯಿಶಿಸ್ತಿನ ಹಸುಗಳ ಹಾಗೆ ಕರೆದಾಕ್ಷಣ ಬಂದು ಬಿಂದಿಗೆ ತುಂಬುವಂತೆ ಹಾಲು ಸೂಸುವುದಲ್ಲ. ಬದಲಾಗಿ ಬಿಳಿಯ ದ್ರವವಾಗಿ ಪರಿವರ್ತಿತವಾದ ಅದರ ಕರುವಿಗಾಗಿರುವ ತ್ಯಾಜ್ಯವನ್ನು ನಾವು ಕಸಿಯುವುದು. ಬಹುಶ: ಈ ಕಸಿಯುವಿಕೆ ಬದುಕಿಗೆ ಅನಿವಾರ್‍ಯವೂ ಹೌದೇನೋ? ಈ ಅನಿವಾರ್‍ಯದ ಕಸಿಯುವಿಕೆ ಹಸಿವಿನ ಕೆಚ್ಚಲ ಮೇಲೆ ಪೂರ್ಣ ಸ್ವಾಮ್ಯವನ್ನು ಸ್ಥಾಪಿಸಿ ಅದರ ಕರುವಿನ ಆಹಾರದ ಹಕ್ಕು, ಹಸುವಿನಿಂದ ಅದು ನಿರೀಕ್ಷಿಸುವ ಪ್ರೀತಿಯನ್ನೂ ಕಸಿಯುತ್ತದೆ.

ನಮ್ಮ ಸ್ವತ್ತನ್ನು ಇನ್ನೊಬ್ಬರು ಅಪಹರಿಸುವುದು ಕಳವು. ಆದರೆ ಕಳವಿನ ಕುರಿತಾದ ನಿರ್ವಚನ ಇಷ್ಟನ್ನೇ ಹೇಳುವುದಿಲ್ಲ. ಕಳವು ಎನ್ನುವುದಕ್ಕೆ ಒಂದೊಂದು ಕಾಲದೇಶ ಪರಿಸರದಲ್ಲಿ ಒಂದೊಂದು ಅರ್ಥವಿರುತ್ತದೆ. ಕೆಲವೊಮ್ಮೆ ನಮ್ಮದನ್ನೇ ನಮಗೆ ಬೇಕಾದವರಿಗೆ ನಾವೇ ಕೊಡುವುದು ಕಳವಿನ ಅಪರಾಧಕ್ಕೆ ಸಮನಾಗುತ್ತದೆ. ಹಸುವು ತನ್ನ ಕರುವಿಗೆ ತನ್ನ ಕೆಚ್ಚಲಹಾಲನ್ನೇ ನಮ್ಮ ಅನುಮತಿ ವಿನಹಾ ಕುಡಿಯಗೊಟ್ಟು ಮುಕ್ತಸ್ವಾತಂತ್ರ್ಯವನ್ನನುಭವಿಸುವುದೂ ಕಳವುಅಪರಾಧವಾಗುವುದು ಈ ನಿರ್ವಚನದ ಮೇರೆಗೇ ಇರಬೇಕು!? ನ್ಯಾಯ,ನೀತಿ, ಅಪರಾಧ ಇವೆಲ್ಲವೂ ಯಜಮಾನಿಕೆಯ ಭಾಷಾರೂಪಗಳೇ ಅಲ್ಲವೇ? ಹಾಗಾಗಿ ಹಸುವಿನ ಚಟುವಟಿಕೆಯೂ ಮಾನವಲೋಕದ ನಿಯಮದ ಮೆರೆಗೆ ಕಳ್ಳತನದ ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದಾಯಿತು. ಯಾವಾಗ ಹಸು ತನ್ನಿಂದ ಕಸಿಯುವ ಹಾಲನ್ನು ಪೂರ್ತಿಯಾಗಿ ಸಾಕಿದವರಿಗೆ ದಕ್ಕಲು ಬಿಡದೆ, ಒಂದಿಷ್ಟು ಕೆಚ್ಚಲಲ್ಲಿಯೇ ಉಳಿಸಿಕೊಂಡು ತಮ್ಮ ಮುದ್ದುಕರುಗಳಿಗೆ ಕದ್ದು ಕುಡಿಸುತ್ತದೆಯೋ ಆಗ ಅದು ಕಳ್ಳದನವಾಗುತ್ತದೆ. ಅದರ ವರ್ತನೆ ನಿಯಮಬಾಹಿರವೆನಿಸುತ್ತದೆ. ಇದನ್ನು ತಡೆಯುವ ಸಲುವಾಗಿಯೇ ಕೆಲವು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಹೀಗೆ ಕಳ್ಳಟವಾಡುವ ಹಸುವಿನ ಕೈಗೆ ಕರುಗಳು ಸಿಕ್ಕದ ಹಾಗೆ ತಮ್ಮ ಸುಪರ್ದಿಯಲ್ಲಿಯೇ ಕರುಗಳನ್ನು ಕಣ್ಗಾವಲಿನಲ್ಲಿಯಿಟ್ಟುಕೊಳ್ಳುವುದು ಸಾಮಾನ್ಯ ಕ್ರಮ. ಸ್ವಲ್ಪ ಬೆಳೆದು ದೊಡ್ಡದಾದ ಕರುಗಳನ್ನು ಹುಲ್ಲು ತಿನ್ನಲು ಹೊರಗೆ ಬಿಡಬೇಕಾಗಿ ಬಂದಾಗ ಅಲ್ಲಿ ತಾಯಿಯೊಂದಿಗೆ ‘ಕಳ್ಳಸಂಬಂಧ’?ಹೊಂದದ ಹಾಗೆ ಅದರ ಮೂತಿಗೆ ಚುಳ್ಳಿ ಕಟ್ಟುವ ಕ್ರಮವೊಂದಿದೆ. ಚೂಪಾದ ತುದಿಗಳುಳ್ಳ ಕೋಲನ್ನು ತ್ರಿಕೋನಾಕಾರದಲ್ಲಿ ಸೇರುವಂತೆ ಕಟ್ಟಿ ಅದನ್ನು ಕರುವಿನ ಮೂಗಿನ ನೇರಕ್ಕೆ ಹೊರಸೂಸುವಂತೆ ಕಟ್ಟುವ ಮೂಲಕ ಕೆಚ್ಚಲಿಗೆ ಬಾಯಿಕ್ಕುವ ಮೊದಲೇ ಚುಳ್ಳಿಯಿಂದ ಕೆಚ್ಚಲು ಚುಚ್ಚುವಂತಾಗಿ ಕುಡಿಸಲು ಬಂದ ಹಸುವೇ ಜಾಡಿಸುವಂತೆ ಮಾಡುವ ವಿಶಿಷ್ಠ ಪ್ರಯೋಗವಿದು.ತನ್ನ ಹಕ್ಕನ್ನು ಪಡೆಯಲು ಬರುವ ಕರುವಿಗೆ ಕೊಡಲೆಂದು ನಿಂತ ಹಸುವೇ ಕೊಡಲಾಗದ ಸಂಕಟವನ್ನು ಅನುಭವಿಸುವಂತೆ ಮಾಡುವ ವಿಶಿಷ್ಟಶಿಕ್ಷಾಕ್ರಮವಿದು!

ಇಷ್ಟೆಲ್ಲಾ ಶಿಕ್ಷೆ ಕೊಡುವವರನ್ನು ಕಟುಕರೆನ್ನಬೇಕೆ? ಅವರಿಗೆ ತಾವು ಸಾಕುವ ಗೋವಿನ ಬಗೆಗೆ ಭಾವನೆಗಳೇ ಇಲ್ಲವೇ? ಖಂಡಿತಾ ಇಲ್ಲ. ಆದರೆ ಕರುವಿನ ಬಾಲ್ಯದ ಆಹಾರವನ್ನೇ ನಿಸರ್ಗಕ್ಕೆ ವಿರುದ್ಧವಾಗಿ ಕಸಿಯುವ ಅಪರಾಧವನ್ನು ಮಾಡಿ ಅರಿವಿರುವ ರೈತರು ಎಂದೂ ಗೋವಿನ ಬಗೆಗೆ ಉಪನ್ಯಾಸ ನೀಡುವುದಿಲ್ಲ. ಅವರ ಬಾವನೆಗಳು ವ್ಯಾವಹಾರಿಕ ಸತ್ಯವನ್ನೂ ಅರಗಿಸಿಕೊಂಡಿವೆ ಅಷ್ಟೆ. ಹಾಗಾಗಿಯೇ ಉಪಯೋಗದ ಚಕ್ರಕ್ಕಿಂತ ಆಚೆಗಿರುವ ಹಸು ಕರುವನ್ನು ವಿಕ್ರಯಿಸುವುದಾಗಲೀ, ಒಂದು ಹಸುವಿನ ಬದಲಿಗೆ ಮತ್ತೊಂದು ಹಸುವನ್ನು ತರುವುದಾಗಲೀ ಅವರಿಗೆ ವ್ಯಾವಹಾರಿಕ ಸತ್ಯ. ಅಲ್ಲಿ ಭಾವನೆಯೇ ಇಲ್ಲವೆಂದೇನೊ ಅಲ್ಲ. ಖಂಡಿತವಾಗಿಯೂ ಅವರೊಂದಿಗೆ ಭಾವನೆಯ ಬಹುದೊಡ್ಡ ಕೋಶವೇ ಇರುತ್ತದೆ. ಅನೇಕಬಾರಿ ಕರೆಯುವ ಇಲ್ಲವೇ ಉಳುವ ಹಸುವನ್ನು ಕೊಟ್ಟು ಊಟವನ್ನೇ ಮಾಡಲಾಗದ ಸಂಕಟವನ್ನು ಅನುಭವಿಸುವುದಿದೆ. ಹಟ್ಟಿಯಲ್ಲಿ ಖಾಲಿಯಾದ ಹಸು-ಕೋಣಗಳು ಮನೆಯನ್ನೂ ಖಾಲಿಯೆನ್ನುವ ಶೂನ್ಯಭಾವಕ್ಕೆ ತಳ್ಳುವುದುಂಟು. Cows-pastureಅಲ್ಲಿ ಮೆಚ್ಚಿನ ಪ್ರತೀಹಸುವನ್ನೂ ಮನೆಮಕ್ಕಳಂತೆ ಸಾಕಿ ಹಗ್ಗಹಾಕಿ ಕೊಡುವ ವೇಳೆ ಅತ್ತು ಮೈಸವರುವ ಭಾವನೆಯ ಒತ್ತಡವಿರುತ್ತದೆ. ಈ ಭಾವನಾತ್ಮಕ ಸಂಬಂಧ ಬರಿಯ ಹಸುಗಳ ಮೇಲಷ್ಟೇ ಅಲ್ಲ. ಜೀವಗಳನ್ನು ಪ್ರೀತಿಸುತ್ತಾ, ಜೀವಗಳನ್ನೇ ನಂಬಿಕೊಂಡ ಗೆಯ್ಮೆಯ ಬದುಕಿಗೆ ಸಾಕುವ ನಾಯಿ,ಬೆಕ್ಕುಗಳ ಮೇಲೆಯೂ ಅಷ್ಟೇ ಪ್ರಮಾಣದ ಭಾವನಾತ್ಮಕ ಸಂಬಂಧವಿರುತ್ತದೆ. ಉದಾಹರಣೆಗೆ ಕೋಳಿಅಂಕಕ್ಕಾಗಿ ಕೋಳಿಸಾಕುವವರು ಎಷ್ಟೋ ಮಂದಿ ತಾವು ಸಾಕಿದ ಕೋಳಿಯನ್ನು ಕೊಂದು ತಿನ್ನುವುದಿಲ್ಲ. ಅದೇ ಮಂದಿ ಕೋಳಿ ಅಂಕವಾಡುತ್ತಾರೆ. ಕೋಳಿಅಂಕದ ಕೋಳಿಯ ರುಚಿಯ ಬಗೆಗೆ ಉಪನ್ಯಾಸವನ್ನೇ ನೀಡಬಲ್ಲಷ್ಟು ರುಚಿಸಂಸ್ಕಾರವುಳ್ಳವರಾಗಿರುತ್ತಾರೆ. ಆದರೆ ಅವರು ಸಾಕಿದ ಕೋಳಿ ಅವರಿಗೆ ತಿನಿಸಾಗಿ ಕಾಣಿಸುವುದಿಲ್ಲ. ಆದರೆ ಈ ನಿಯಮವನ್ನು ಅವರು ಎಲ್ಲಾ ಕೋಳಿಗಳ ಮೇಲಾಗಲೀ, ಎಲ್ಲಾ ಮನುಷ್ಯರ ಮೇಲಾಗಲೀ ಹೇರಲಾರರು ಮತ್ತು ಹೇರಲಾಗದು. ಹಾಗಾಗಿ ಭಾವನೆಯ ಜತೆಗೆ ಅಲ್ಲಿ ಬದುಕಿನ ಸವಾಲು ಇದೆ. ‘ಹಾಲೂ….’ ಎಂದು ಹಸಿದು ಕೂಗುವ ಮಕ್ಕಳ ಕೂಗು ಇದೆ. ಕೆಚ್ಚಲ ಹಾಲೆಲ್ಲವನ್ನೂ ಹಸುವು ತನ್ನ ಕರುವಿಗೆ ಕುಡಿಸುವುದಾದರೆ ಸಾಕಬೇಕಾದರೂ ಯಾಕೆ? ಅದೇನು ಧರ್ಮಛತ್ರವೇ? ಹಸುವನ್ನು ಸಾಕುವುದೇ ಹಾಲಿಗೆ ಮತ್ತು ನೇಲಿಗೆ(ನೇಗಿಲಿಗೆ) ಎಂಬುದನ್ನು ಎಷ್ಟು ಅಲ್ಲಗಳೆದರೂ ವಾಸ್ತವ ಅಲ್ಲವೇ?

ಪ್ಯಾಕೇಟ್ ಹಾಲು ಕುಡಿದು, ಮೈತುಂಬಾ ಬಟ್ಟೆಹೊದ್ದು, ದೂಳು ಕಾಣದೆ ಬದುಕುವ ಜನ ಯೋಚಿಸುವ ಹಾಗೆ ಯೊಚಿಸಿದರೆ ಈ ಶಿಕ್ಷೆ, ನಿರ್ಬಂದ ಇವೆಲ್ಲದರಲ್ಲಿ ಅನಾಗರಿಕ/ಅಮಾನವೀಯವಾದ ಜಗತ್ತೊಂದು ಕಾಣಿಸಬಹುದು. ಆದರೆ ಈ ಅನಾಗರಿಕರಿಗೆ ಪ್ರಕೃತಿ-ಬದುಕು-ಸಂಘರ್ಷ-ಸಂಕಟಗಳ ಅರಿವಿದೆ.ಅವರೆಂದೂ ಅನುತ್ಪಾದಕವಾದುದನ್ನು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆಂದಾಗಲೀ, ಹೊತ್ತುಕೊಳ್ಳಿ ಎಂದಾಗಲೀ ಹೇಳಲಾರರು. ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಪೌಷ್ಟಿಕವಾದ ಆಹಾರ ಒದಗಿಸಲಾರದ ಈ ಜನ ಹಸುಕರುಗಳ ಮೂಲಕ ಬದುಕಿನ ಏಣಿಯನ್ನು ಕಾಣಬಲ್ಲ್ಲರೇ ವಿನಹಾ ಗರ್ಭಗುಡಿಯ ದೇವರನ್ನೊಂದೇ ಅಲ್ಲ. ಹಾಗಾಗಿ ಅವರಿಗೆ ಮೇವಿಕ್ಕುತ್ತಾ ಕೋಳಿಯ ಕಾಲಿಗೆ ಕೈಹಾಕಿ ಸಾರಿನ ಸರಕು ಮಾಡುವುದು ರೂಢಿಯಿದೆ. ಹಾಲು ಕೊಡದ ಹಸುವಿನ ಬೆನ್ನಿಗೆ ಬಾರಿಸಿ ಹಾಲು ಕಸಿಯಲೂ ಗೊತ್ತಿದೆ. ಅದೇ ಸಂದರ್ಭದಲ್ಲಿ ಅವರಲ್ಲಿ ಈ ವಾಸ್ತವಗಳ ಅರಿವಿನ ಜೊತೆಗೆ ಪ್ರೀತಿಯಿಂದ ಅವುಗಳ ಮೈದಡವಿ ಬದುಕಿನ ಸಮೃದ್ಧಿಯನ್ನು ಕಾಣುವ ಗುಣವೂ ಇದೆ. ಇಂದಿಗೂ ಮನೆಗೆ ಹೋದಾಗಲೆಲ್ಲಾ ಹಾಲಿನ ಯಂತ್ರವೇ ಆಗಿದ್ದರೂ ಆ ಮೂಕಪ್ರಾಣಿಗಳ ಮೈಸವರಿದಾಗ ಒಂದು ಸಂತೋಷವಿದೆ. ಅವುಗಳ ಮೂತಿಯ ಎದುರು ಹುಲ್ಲು ಹಿಡಿದು ತಿನ್ನಲು ಕೊಡುವಾಗ ಆಗುವ ಮಾತಿಗೆ ನಿಲುಕಲಾರದ ಸಂತೃಪ್ತಿಯಿದೆ. ಕೃಷಿಜೀವನವಂತೂ ತನ್ನ ದೈವವನ್ನು ಕಟ್ಟಿಕೊಳ್ಳುವುದೇ ಆಹ್ವಾನ-ವಿಸರ್ಜನದ ಈ ದಾರಿಯಲ್ಲಿ. ಬೇಕಾದಾಗ ದೇವರಾಗಿಸಿಕೊಂಡು ಪೂಜಿಸಿ ಮರುಕ್ಷಣದಲ್ಲಿ ಲೋಕಸತ್ಯದ ಅಗತ್ಯಾನುಸಾರವಾಗಿ ವ್ಯವಹರಿಸಲು ಏನುಮಾಡಬೇಕೋ ಅದನ್ನು ಮಾಡಲು ಅನುವು ಮಾಡಿಕೊಳ್ಳುವ ದಾರಿಯದು. ಬದುಕಿನ ಹೋರಾಟದಲ್ಲದು ಅವರಿಗೆ ಅನಿವಾರ್‍ಯವೂ ಹೌದು.

(ಮುಂದುವರೆಯುವುದು…)

ವರ್ತಮಾನದ ಕನ್ನಡಿಯಲ್ಲಿ ನಿಚ್ಛಳ ಬಿಂಬ..


– ಡಾ.ಎಸ್.ಬಿ. ಜೋಗುರ


 

“ವರ್ತಮಾನದ ಕನ್ನಡಿಯಲ್ಲಿ” ಇದು ಕಳೆದ ನಾಲ್ಕು ದಶಕಗಳಿಂದಲೂ ತಮ್ಮದೇಯಾದ ವಿಭಿನ್ನ ಶೈಲಿಯ ಮೂಲಕ ಚೂಪಾಗಿ ತಿವಿಯುತ್ತಲೇ, ನವಿರಾಗಿ ಕಚಿಗುಳಿ ಇಡುವಂತೆ ಬರೆಯುತ್ತ ಬಂದ ಲೇಖಕ ಎಚ್.ಎಲ್.ಕೇಶವಮೂರ್ತಿಯವರ ಬದುಕು-ಬರಹದ ಸುತ್ತ ಮೈದಳೆದ ಕೃತಿ. ಜಿ.ಪಿ. ಬಸವರಾಜು ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ಈ ಕೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಅಸ್ಮಿತೆಯಿಂದ ಹಿಡಿದು ವಿನೋದದವರೆಗೆ ಎಚ್.ಎಲ್.ಕೆ. ಯವರ ಪ್ರಸ್ತಾಪ ಮತ್ತು ಪ್ರಸ್ತುತತೆ ಬಿಂಬಿತವಾದರೆ, ನಂತರದ ಚಿಂತನೆ ಮತ್ತು ಚಳುವಳಿಗಳ ಭಾಗಗಳಲ್ಲಿ ಅಲ್ಲಿಯ ಬರಹಗಳನ್ನು ಓದುತ್ತಾ ಹೋದರೆ ಎಚ್ಚೆಲ್ಕೆ ಪೂರ್ಣಪ್ರಮಾಣದಲ್ಲಿ ಹೊರಗುಳಿದಂತೆ ಭಾಸವಾಗುತ್ತದೆ. ಚಿಂತನೆ ಜಾಗತೀಕರಣ ಮತ್ತು ಚಳುವಳಿಗಳು ಯಾವುದೇ ಸಾಮಾನ್ಯ ಕೃತಿಗೂ ಸೆಟ್ ಆಗಬಹುದಾದ ರೀತಿಯಲ್ಲಿ ಮೂಡಿ ಬಂದ ಬರಹಗಳು. ಎಚ್ಚೆಲ್ಕೆ ಅವರ ನೆನಪಿನಲ್ಲಿ ಮೂಡಿ ಬಂದ ಈ ಕೃತಿ ಮತ್ತು ಚಿಂತನೆಯಲ್ಲಿ ಪ್ರೊ ಕೇಶವಮೂರ್ತಿಯವರು ಇಷ್ಟಪಡಬಹುದಾದ ರೀತಿಯಲ್ಲಿಯೇ ಇಲ್ಲಿಯ ಬರಹಗಳು ಮೂಡಿ ಬಂದಿವೆ. ಮಹನೀಯರೊಬ್ಬರ ಸ್ಮರಣೆಯಲ್ಲಿ ಮೂಡಿ ಬರುವ ಕೃತಿಗಳು ಬಹುತೇಕವಾಗಿ ಬಣ್ಣದ ತಗಡಿನ ತುತ್ತೂರಿಗಳಾಗುವದೇ ಹೆಚ್ಚು. ಆದರೆ ಈ ಕೃತಿ ಅದಕ್ಕೆ ಅಪವಾದ. ಈ ಹೊಗಳಿಕೆ.. ವೇದಿಕೆ, ಸಭೆ ಸಮಾರಂಭ, ಹಾರ ತುರಾಯಿಗಳನ್ನು ಇಷ್ಟ ಪಡದ ಎಚ್ಚೆಲ್ಕೆ ಕಳೆದ ಮೂರ್ನಾಲ್ಕು ದಶಕಗಳಿಂದಲೂ ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಿತ್ಯಂತರಗಳನ್ನು ಸ್ತಿತಪ್ರಜ್ಞರಾಗಿ ನೋಡಿ, ಗ್ರಹಿಸಿ ತಮ್ಮದೇಯಾದ ರೀತಿಯಲ್ಲಿ ಪ್ರತಿಕ್ರಿಯಿಸಿದವರು.

ಬಿ.ಚಂದ್ರೇಗೌಡರು ಹೇಳುವಂತೆ ‘ಎಚ್ಚೆಲ್ಕೆ ಯವರನ್ನ ಮತ್ತೊಮ್ಮೆ ಓದಬೇಕಾದ ಅಗತ್ಯವಿದೆ. ಅವರು ಹಾಸ್ಯ ಮಾಡಿಲ್ಲ, ಪ್ರಕರಣಕ್ಕೆ ಪ್ರತಿಕ್ರಿಯೆಯನ್ನಷ್ಟೇ ನೀಡಿದ್ದಾರೆ. ‘ಎಚ್ಚೆಲ್ಕೆ ಯವರು ತಮ್ಮ ಸುತ್ತಮುತ್ತಲಿನ ಬದುಕನ್ನು ತಮ್ಮದೇಯಾದ ಒಂದು ಬಗೆಯ ವಿಡಂಬನಾತ್ಮಕ ನಿಲುವಿನಿಂದ ನೋಡಿದವರು. ಮೂಲಭೂತವಾದದ ಬಗ್ಗೆ, ಜಾತಿವಾದಿಗಳ ಬಗ್ಗೆ, ಕರ್ಮಠರ ಬಗ್ಗೆ ಕುದಿವ ಮನಸ್ಸುಳ್ಳವರು. ಒಟ್ಟು ವ್ಯವಸ್ಥೆಯ ಬಗ್ಗೆ ಒಂದು ರೀತಿಯ ಅಸಮಾಧಾನ ಭಾವವಿರುವ ಮೂರ್ತಿಯವರು ಚಳುವಳಿಗಳ ಬಗೆಗೆ, ಈ ದೇಶದ ಯುವಕರ ಬಗೆಗೆ, ರಾಜಕಾರಣದ ಬಗೆಗೆ, ಪ್ರಶಸ್ತಿ ಪುರಸ್ಕಾರಗಳ ಬಗೆಗೆ, ಮಾಧ್ಯಮಗಳ ಬಗೆಗೆ ಮಹತ್ತರವಾದ ಅಭಿಲಾಷೆಯನ್ನಂತೂ ಇಟ್ಟುಕೊಂಡವರಲ್ಲ. ಅವರೇ ಹೇಳುವಂತೆ ‘ಇಡೀ ರಾಜ್ಯದಲ್ಲಿ ಚಳುವಳಿಗಳು ದಿಕ್ಕು ತಪ್ಪೋದಿಕ್ಕೆ ಕಾರಣ ಅಂದ್ರೆ ರಾಜಕೀಯದ ಆಮಿಷ. ಹಲವರು ಇದನ್ನು ಒಪ್ಪದೇ ಇರಬಹುದು, ಅದು ನನ್ನ ಅಭಿಪ್ರಾಯ.’ ಇಂದು ಸಾಹಿತ್ಯಕ ವಲಯದಲ್ಲಿ ಪ್ರಶಸ್ತಿಗಾಗಿ ಲಾಭಿ ಮಾಡುವ ಅದನ್ನು ಹೇಗಾದರೂ ಮಾಡಿ ಪಡೆದೇ ತೀರುವ ಗುಣದವರ ಬಗ್ಗೆ hlkeshavamurthyಕೇಶವಮೂರ್ತಿಯವರು ಪ್ರಶಸ್ತಿಗಳಿಗೆ ಇವತ್ತು ಯಾವುದೇ ಗೌರವವಿಲ್ಲ. ಅದರಲ್ಲೂ ಸರ್ಕಾರ ನೀಡೊ ಪ್ರಶಸ್ತಿಗಳ ಗೌರವವಂತೂ ಸಂಪೂರ್ಣ ನಾಶವಾಗಿದೆ… ಸಾಹಿತಿಗಳು ಪ್ರಶಸ್ತಿಗಳ ಆಸೆಗಾಗಿ ಸರ್ಕಾರದ ಚೇಲಾಗಳಾಗಿದಾರೆ ಅನ್ನೋದು ನಿಜ. ಅದರಲ್ಲಿ ಸುಳ್ಳೇನೂ ಇಲ್ಲ. ಹೀಗೆ ಸತ್ಯವನ್ನು ಪಾಲಿಶ್ ಮಾಡದೇ ಮಾತನಾಡುವ ಕೆಲವೇ ಕೆಲವರ ಸಾಲಲ್ಲಿ ಎಚ್ಚೆಲ್ಕೆ ನಿಲ್ಲುತ್ತಾರೆ. ದಿನೇಶ ಅಮಿನ ಮಟ್ಟು ’ಇವರೇ ನಿಜವಾದ ಮಂಡ್ಯದ ಗಂಡು’ ಅಂದದ್ದು ಕೂಡಾ ಸಾರ್ಥಕವೇ..

ಮೊದಲಿನಿಂದಲೂ ವೈಚಾರಿಕತೆಗಾಗಿ ಹಂಬಲಿಸುತ್ತಲೇ ಬೆಳೆದವರು. ಮಂಡ್ಯಕ್ಕೆ ಕೋವೂರರು ಬಂದಾಗ ಅವರು ಮಾಡಿದ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುವ ಹೊಣೆ ಅವರದಾಗಿತ್ತು. ಯುವಕರು ಮೊದಲು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎನ್ನುವ ಹಂಬಲವಿರುವ ಎಚ್ಚೆಲ್ಕೆ ಅವರು ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿದ್ದರೂ ಬಿ.ಜಿ.ಎಲ್. ಸ್ವಾಮಿ ಹಾಗೂ ತೇಜಸ್ವಿಯವರಂತೆ ಅನನ್ಯವಾದ ಬರವಣಿಗೆಯನ್ನು ಮಾಡುವ ಮೂಲಕ ಇಡೀ ರಾಜ್ಯದಾದ್ಯಂತ ಗುರುತಿಸಿಕೊಂಡವರು. ಲಂಕೇಶ ಪತ್ರಿಕೆಯ ಆರಂಭದಿಂದ ಪತ್ರಿಕೆಯ ಜೊತೆಗೆ ಕೆಲಸ ಮಾಡುತ್ತ ಬಂದ ಎಚ್ಚೆಲ್ಕೆ ಜನಸಮುದಾಯದ ಒಳಗೆ ನಿಂತು ಜೀವನ ಸಂದಿಗ್ಧಗಳನ್ನು ಗ್ರಹಿಸಿ ಮೊನಚಾಗಿ ಬರೆದರು. ಹೋರಾಟವೇ ಬದುಕಿನ ಭಾಗವಾಗಿಸಿಕೊಂಡಂತೆ ಬದುಕಿದ ಕೇಶವಮೂರ್ತಿಯವರು ಅನೇಕ ಬಗೆಯ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ರಾಜ್ಯದ ಕೆಲವೇ ಕೆಲವು ಅಪರೂಪದ ಚಿಂತಕರಾಗಿದ್ದ ಕೆ.ರಾಮದಾಸ್. ಲಂಕೇಶ ರಂಥವರ ಒಡನಾಟವಿದ್ದ ಕೇಶವಮೂರ್ತಿಯವರು ಯಾವತ್ತೂ ಅವರ ಒಡನಾಟಕ್ಕೆ ಚ್ಯುತಿ ಬರದ ಹಾಗೆ ಬರೆದವರು, ಬದುಕಿದವರು. ಹೊಸ ತಲೆಮಾರಿನ ಮುಂದೆ ರಾಶಿ ರಾಶಿಯಾದ ಸಾಂಸ್ಕೃತಿಕ ಸಂಘರ್ಷಗಳನ್ನು ಗುಡ್ದೆ ಹಾಕುತ್ತಾ, ಬರಹ ಬದುಕಿಗೆ ಮುಖಾಮುಖಿಯಾಗದೇ ಬೆನ್ನು ತೋರಿಸುತ್ತಲೇ ಬರೆದು ಖ್ಯಾತರಾಗಿ, ಪ್ರಶ್ಸಸ್ತಿ ಪಡೆದ ಕೆಲ ಹಿರಿಯ ಸಾಹಿತಿಗಳೂ ಇದ್ದಾರೆ. ಆದರೆ ಕೆಶವಮೂರ್ತಿ ಹಾಗಲ್ಲ. ಬರೆದಂತೆ ಬದುಕಿರುವ ಕೆಲವೇ ಕೆಲವರಲ್ಲಿ ಒಬ್ಬರು. ಹೀಗಾಗಿಯೇ ಅವರು ಈ ಬಗೆಯ ಗೌರವಕ್ಕೆ ಭಾಜನರು.

’ವರ್ತಮಾನದ ಕನ್ನಡಿಯಲ್ಲಿ’ ನಮ್ಮ ಯುವ ಬರಹಗಾರರು ತಮ್ಮ ಪ್ರತಿಬಿಂಬವನ್ನು ನೋಡಿಕೊಳ್ಳಬಹುದು. ಇಲ್ಲಿ ಇನ್ನಷ್ಟು ಕೇಶವಮೂರ್ತಿಯವರ ಬರಹಗಳ ಬಗ್ಗೆ ಚರ್ಚೆಯ ಅಗತ್ಯವಿತ್ತು ಎನಿಸುತ್ತದೆ. ಅವರ ಕೆಲ ನಿರ್ದಿಷ್ಟ ಬರವಣಿಗೆಗಳನ್ನು ಕುರಿತಾದ ಬರಹಗಳಿರಬೇಕಿತ್ತು. 5 ಹಾಗೂ 6 ನೇ ಭಾಗಗಳಲ್ಲಿಯ ಚರ್ಚೆ ಮತ್ತು ಚಿಂತನೆ ಈ ಕೃತಿಯಲ್ಲಿ ಸೇರ್ಪಡೆಯಾಗದೇ ಒಂದು ಪ್ರತ್ಯೇಖವಾದ ಗ್ರಂಥವಾಗಿಯೇ ಹೊರಬರಬೇಕಿತ್ತು. ಡಾ ಪುಟ್ಟಸ್ವಾಮಿಯವರು ಹೇಳುವಂತೆ ’ಪ್ರೊ ಎಚ್.ಎಲ್.ಕೇಶವಮೂರ್ತಿಯವರ ಬರಹಗಳು ಬೇರೆಲ್ಲ ವಿನೋದ ಸಾಹಿತ್ಯದ ಬರಹಗಾರಿರಿಗಿಂತ ಭಿನ್ನವಾಗುವುದು ಅವರಿಗಿರುವ ಪ್ರಖರವಾದ ಸಾಮಾಜಿಕ ಕಳಕಳಿಯಿಂದ. 1970 ರ ದಶಕದಿಂದ ಈವರೆವಿಗೂ ಒಂದೇ ಗುಣಮಟ್ಟವನ್ನು ಕಾಯ್ದುಕೊಂಡು ರಚನೆಗೊಂಡ ಅವರ ಸಾಹಿತ್ಯ ಸರಿಯಾದ ಮೌಲ್ಯಮಾಪನವಾಗದಿರುವುದು ನಮ್ಮ ಕಾಲದ ನಿಜವಾದ ಸೋಜಿಗಗಳಲ್ಲೊಂದು.’ ವರ್ತಮಾನದ ಕನ್ನಡಿಯಲ್ಲಿ ಪ್ರೊ ಕೇಶವಮೂರ್ತಿಯವರು ನಿಚ್ಛಳವಾಗಿಯೇ ಕಾಣುತ್ತಾರೆ.


ಪುಸ್ತಕ:  ವರ್ತಮಾನದ ಕನ್ನಡಿಯಲ್ಲಿ – ಎಚ್ಚೆಲ್ಕೆ ಬದುಕು-ಬರಹ ಮತ್ತು ಚಿಂತನೆಯ ಸುತ್ತ
ಸಂ- ಜಿ.ಪಿ.ಬಸವರಾಜು
ಪ್ರಕಾಶಕರು:  ವಿವೇಕ ವಿಚಾರ ವೇದಿಕೆ,  ಮಂಡ್ಯ
ಪುಟಗಳು-196,  ಬೆಲೆ-100

ಉಪಚುನಾವಣೆಯ ಸಂದರ್ಭದಲ್ಲಿ ಬದಲಾಗದ ಕ್ಷುಲ್ಲಕ ರಾಜಕೀಯ ಸಂಸ್ಕೃತಿ…


– ರವಿ ಕೃಷ್ಣಾರೆಡ್ದಿ


 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಧಿ ಪೂರ್ಣವಾಗುವುದಕ್ಕಿಂತ ಮೊದಲೆ ಪ್ರತಿನಿಧಿ ಸ್ಥಾನ ತೆರವಾಗುವುದನ್ನು ತಡೆಯಲು ಆಗುವುದಿಲ್ಲ ಮತ್ತು ಉಳಿದ ಅವಧಿಗೆ ಆ ಸ್ಥಾನ ತುಂಬಲೇಬೇಕಾಗಿರುವುದು ಅನಿವಾರ್ಯ ಸಹ. ಆದರೆ, ಉಪಚುನಾವಣೆ ಎಷ್ಟು ಅನಿವಾರ್ಯ ಎನ್ನುವುದರ ಬಗ್ಗೆ ನಮ್ಮ ಚುನಾವಣಾ ಸುಧಾರಣೆಗಳ ಹಿನ್ನೆಲೆಯಲ್ಲಿ ಗಂಭೀರವಾದ ಚರ್ಚೆ ಆರಂಭವಾಗಬೇಕಿದೆ.

ನಮ್ಮ ದೇಶದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿಟ್ಟುಕೊಂಡ ಇಂಗ್ಲೆಂಡ್‌ನಲ್ಲಿ ಹೇಗೆ ಉಪಚುನಾವಣೆ ನಡೆಯುತ್ತದೆ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ ನಮ್ಮಲ್ಲಿ ಉಪಚುನಾವಣೆಗೆ ಸ್ಪರ್ಧಿಸುವ ಮಾಜಿ ಪ್ರತಿನಿಧಿಯ ಪತಿ-ಪತ್ನಿ-ಸೋದರ-ಸೋದರಿ-ಮಗ-ಮಗಳು, obama-bidenಇಂತಹ ನೀತಿಗೆಟ್ಟ ಕುಟುಂಬ ರಾಜಕಾರಣವನ್ನು ಅಲ್ಲಿ ಸಹಿಸಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನನಗೆ ಸಂದೇಹಗಳಿವೆ. ಇನ್ನು ಅಮೇರಿಕದಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲ ಮಂಗಳವಾರ ಚುನಾವಣೆಯ ದಿನ ಮತ್ತು ಅಲ್ಲಿ ಉಪಚುನಾವಣೆಗಳಿಗೆ ಆಸ್ಪದವೇ ಇಲ್ಲ. ಆ ರಾಜ್ಯದ ಸೆನೆಟ್ ಅಥವ ಕಾಂಗ್ರೆಸ್‍ಮನ್‌ನ ಸ್ಥಾನ ಕಾರಣಾಂತರಗಳಿಗೆ ತೆರವಾದರೆ ಅದನ್ನು ಆ ರಾಜ್ಯದ ರಾಜ್ಯಪಾಲನೇ ಉಳಿದ ಅವಧಿಗೆ ತನಗೆ ಸರಿತೋಚಿದವರನ್ನು ನಾಮಕರಣ ಮಾಡುತ್ತಾನೆ. ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ಸೆನೆಟ್ ಸದಸ್ಯತ್ವ ಇನ್ನೂ ಎರಡು ವರ್ಷ ಇತ್ತು. ಅವರ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡೆನ್ ಅದೇ ಚುನಾವಣೆಯ ಸಂದರ್ಭದಲ್ಲಿ ನಡೆದ ಸೆನೆಟ್ ಚುನಾವಣೆಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದರು. ತದನಂತರದಲ್ಲಿ ಖಾಲಿಯಾದ ಆ ಎರಡೂ ಸೆನೆಟ್ ಸ್ಥಾನಗಳಿಗೆ ಅಲ್ಲಿಯ ಗವರ್ನರ್‌ಗಳು ತಮಗೆ ಬೇಕಾದವರನ್ನು ನಾಮಕರಣ ಮಾಡಿದರು.

ಇಲ್ಲಿಯೂ ಸಮಸ್ಯೆ ಇಲ್ಲವೇ ಎಂದರೆ, ಅದಕ್ಕೆ ಬಹುದೊಡ್ಡ ಉದಾಹರಣೆ ಖಾಲಿಯಾದ ಬರಾಕ್ ಒಬಾಮರ ಸೆನೆಟ್ ಸ್ಥಾನ. ಖಾಲಿಯಾದ ಆ ಸ್ಥಾನವನ್ನು ತುಂಬಲು ಇಲಿನಾಯ್ ರಾಜ್ಯದ ಗವರ್ನರ್ ಪರಮೋಚ್ಚ ಅಧಿಕಾರ ಹೊಂದಿದ್ದ. ಆದರೆ ಆತ, ರಾಡ್ ಬ್ಲಾಗೋಜೆವಿಚ್, ಆ ಸ್ಥಾನವನ್ನು ವ್ಯಾಪಾರಕ್ಕೇ ಇಟ್ಟುಬಿಟ್ಟ. rod_blagojevichಅಮೆರಿಕದಲ್ಲಿ ಅಪರೂಪಕ್ಕೆಂಬಂತೆ ಈತ ಆ ಸ್ಥಾನಕ್ಕೆ ಯಾರು ಹೆಚ್ಚು ದುಡ್ಡು ಕೊಡುತ್ತಾರೊ (to the highest bidder) ಅವರಿಗೆ ಕೊಡುವುದಾಗಿ ಗುಪ್ತವಾಗಿ ವ್ಯವಹಾರ ಆರಂಭಿಸಿದ. ಸುಮಾರು ಹದಿನೈದು ಲಕ್ಷ ಡಾಲರ್‌ಗಳಿಗೆ ಮಾರುವುದು ಅವನ ಉದ್ದೇಶವಾಗಿತ್ತು. ಇದು ಸುದ್ಧಿಯಾಗಿ, FBI ನವರು ಗುಪ್ತವಾಗಿ ಟೇಪ್ ಮಾಡಿಕೊಳ್ಳುವಾಗ (“I’ve got this thing, and it’s fucking golden. I’m just not giving it up for fucking nothing.”) ಸಿಕ್ಕಿಹಾಕಿಕೊಂಡ. ಗವರ್ನರ್ ಹುದ್ದೆ ಹೋಯಿತು. ಆರೋಪ ಸಾಬೀತಾಗಿ ಷಿಕಾಗೊ ನಗರದ ನ್ಯಾಯಾಲಯ ಆತನಿಗೆ 14 ವರ್ಷಗಳ ಜೈಲುವಾಸ ವಿಧಿಸಿತು. ಈಗ ಜೈಲಿನಲ್ಲಿದ್ದಾನೆ. (ಆತನನ್ನು ಅಲ್ಲಿಯ ಶಾಸನಸಭೆ ರಾಜ್ಯಪಾಲ ಹುದ್ದೆಯಿಂದ ವಜಾ ಮಾಡುವುದಕ್ಕೆ ಮೊದಲು ಬರಾಕ್ ಒಬಾಮರ ಸೆನೆಟ್ ಸ್ಥಾನಕ್ಕೆ ಇನ್ನೊಬ್ಬ ಆಫ್ರಿಕನ್ ಅಮೆರಿಕನ್‌ನನ್ನು ನಾಮಕರಣ ಮಾಡಿದ್ದ. ಆ ಸದಸ್ಯನ ಬಗ್ಗೆ ಒಬಾಮರೂ ಸೇರಿದಂತೆ ಎಲ್ಲರೂ ಸಹಮತ ಸೂಚಿಸಿದ್ದರು.)

ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಎರಡು ಲೋಕಸಭಾ ಚುನಾವಣೆಗಳನ್ನು ನೋಡಿ. ಖಾಲಿಯಾದ ಸಂಸತ್ ಸದಸ್ಯರ ಸ್ಥಾನ ತುಂಬಬೇಕು. ಆದರೆ, ಅದಕ್ಕೆ ಉಪ-ಚುನಾವಣೆಯೇ ಆಗಬೇಕೆ? ಸಾಮಾನ್ಯ ಚುನಾವಣೆಯ ತನಕ ಬೇರೊಬ್ಬರನ್ನು ರಾಜ್ಯಪಾಲರು ಅಥವ ರಾಷ್ಟ್ರಪತಿ ನಾಮಕರಣ ಮಾಡಿದರೆ ಆಗದೆ? ಈಗ ಗೆಲ್ಲಲಿರುವ ಅಭ್ಯರ್ಥಿಗಳ ಅವಧಿ ಬಹುಶ: ಏಳೆಂಟು ತಿಂಗಳು ಇದ್ದರೆ ಅದೇ ದೊಡ್ಡದು. ಇಂತಹ ಕ್ಷುಲ್ಲಕ ಚುನಾವಣೆಗೆ ಇಡೀ ರಾಜ್ಯ ಸರ್ಕಾರದ ಎಲ್ಲಾ ಸಚಿವರೂ ಕಳೆದ ಹದಿನೈದು ದಿನಗಳಿಂದ ತಮ್ಮ ಸಚಿವ ಹುದ್ದೆಯ ಕೆಲಸಗಳನ್ನು ಬಿಟ್ಟು ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿರುವುದಕ್ಕೆ ಯಾವ ರೀತಿಯ ಸಮರ್ಥನೆ ಇದೆ? ಇನ್ನು ಚುನಾವಣಾ ನೀತಿ-ಸಂಹಿತೆಯ ಕಾರಣಕ್ಕಾಗಿ ರಾಜ್ಯ ಸರ್ಕಾರ ಯಾವುದೇ ಯೋಜನೆಗಳನ್ನು ಪ್ರಕಟಿಸಲಾಗದ, ಹಮ್ಮಿಕೊಳ್ಳಲಾಗದ ಪರಿಸ್ಥಿತಿ. (ನೀತಿ-ಸಂಹಿತೆ ಇಲ್ಲದಿದ್ದರೆ ಅದು ಅಂತಹುದನ್ನು ಮಾಡಿಬಿಡುತ್ತಿತ್ತಾ ಎನ್ನುವುದು ಬೇರೆ ವಿಷಯ.)

ಬಿಜೆಪಿಯ ಭ್ರಷ್ಟ, ಕನಿಷ್ಟ, ನೀತಿಗೆಟ್ಟ ಸರ್ಕಾರ ಹೋಗಿ ಬೇರೆಯ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ನಿಟ್ಟುಸಿರು ಬಿಟ್ಟ ಅನೇಕರಲ್ಲಿ ನಾನೂ ಒಬ್ಬ. ಈ ಸರ್ಕಾರದ ಬಗ್ಗೆಗೂ ನನಗೆ ಅಂತಹ ದೊಡ್ಡ ಆಶಾಭಾವನೆಗಳೇನೂ ಇರಲಿಲ್ಲ. ಆದರೆ ಬಿಜೆಪಿಯವರಷ್ಟು ತೀರಾ ಕೆಡುವುದಿಲ್ಲ, ರಾಜಕೀಯ ವಾತಾವರಣವನ್ನು ಅಷ್ಟು ಕೆಡಿಸುವುದಿಲ್ಲ ಎಂಬ ಸಣ್ಣ ವಿಶ್ವಾಸ ಇತ್ತು. ಆದರೆ ಈ ಉಪಚುನಾವಣೆಯ ಸಂದರ್ಭದಲ್ಲಿ ಅದು ನಶಿಸಿ ಹೋಗಿದೆ. dk-sureshಕಾಂಗ್ರೆಸ್ ಪಕ್ಷ ಎರಡೂ ಲೋಕಸಭಾ ಸ್ಥಾನಗಳಿಗೆ ಆಯ್ಕೆ ಮಾಡಿರುವ ವ್ಯಕ್ತಿಗಳನ್ನು ನೋಡಿದರೆ ಇಷ್ಟು ಬೇಗ ಆ ಪಕ್ಷದ ನಾಯಕರು ಇಂತಹ ಕೆಳಮಟ್ಟಕ್ಕೆ ಇಳಿದರೇ ಎನ್ನುವ ಭಾವನೆ ಬರುತ್ತದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಾನೂ ಒಬ್ಬ ಮತದಾರ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಕೇಳಿದರೆ ನನ್ನಲ್ಲಿ ಸಣ್ಣಗೆ ನಡುಕ ಹುಟ್ಟುತ್ತದೆ. (ನಾಲ್ಕೈದು ವರ್ಷಗಳ ಹಿಂದೆ ಅಮೆರಿಕದಿಂದ ಮರಳಿದ ನನ್ನ ಸ್ನೇಹಿತರೊಬ್ಬರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯಿಂದ ಧಮಕಿ ಹಾಕಿಸಿಕೊಂಡ ವಿಚಾರ ಹೇಳಿದಾಗಿನಿಂದ, ಮತ್ತು ಆ ಸ್ಣೇಹಿತರ ಭಯಭೀತ ಮನಸ್ಥಿತಿಯನ್ನು ಗಮನಿಸಿದಾಗಿನಿಂದಲೂ ಈ ನಡುಕ ಇದೆ.) ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೋಲಿಸಿದರೆ ಜನತಾ ದಳದ ಅನಿತಾ ಕುಮಾರಸ್ವಾಮಿಯವರು ವಿದ್ಯಾವಂತರು, ಇಂಜಿನಿಯರಿಂಗ್ ಪದವೀಧರೆ. ನೇರವಾಗಿ ರೌಡಿಸಮ್‌ ಮಾಡಲಾರದವರು. ಆದರೆ ಅವರ ಮೇಲೆಯೂ ಭ್ರಷ್ಟಾಚಾರದ ಆರೋಪಗಳಿವೆ. ಶಾಸಕರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿಲ್ಲ. ಶಾಸನಸಭೆಯಲ್ಲಿ ಗಮನ ಸೆಳೆಯುವಂತೆ ಮಾತನಾಡಿದ್ದನ್ನು ನೋಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಕಂಟಕವಾಗಿ ಪರಿಣಮಿಸುತ್ತಿರುವ, ಯೋಗ್ಯರಾದವರು ಯಾವುದೇ ಪ್ರಮುಖ ಪಕ್ಷಗಳಲ್ಲಿ ನಾಯಕತ್ವ ವಹಿಸಲಾಗದಂತೆ ಮಾಡುತ್ತಿರುವ ಕುಟುಂಬ ರಾಜಕಾರಣವೆಂಬ ಅನಿಷ್ಟಕ್ಕೆ ರಾಜ್ಯದಲ್ಲಿಯ ಬಹುದೊಡ್ಡ ಉದಾಹರಣೆಗಳಲ್ಲಿ ಅನಿತಾ ಕುಮಾರಸ್ವಾಮಿಯವರು ಒಬ್ಬರು. ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಇಬ್ಬರೂ ಅಭ್ಯರ್ಥಿಗಳನ್ನು ಇಲ್ಲಿಯ ಮತದಾರರು ನಿರಾಕರಿಸಬೇಕಿದೆ. (ಇದು ಆಶಯ, ವಾಸ್ತವದಲ್ಲಿ ಹೇಗೆ ಆರೇಳು ವರ್ಷಗಳ ಹಿಂದಿನ ಉಪಚುನಾವಣೆಯಲ್ಲಿ ಇಡೀ ರಾಜ್ಯಸರ್ಕಾರವೇ ಪ್ರಚಾರ ಮಾಡಿದರೂ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಗೆದ್ದರೋ ಹಾಗೆ ಇಲ್ಲಿ ಅನಿತಾರವರು ಗೆಲ್ಲುವ ಸಾಧ್ಯತೆಗಳು ಹೆಚ್ಚು ಇವೆ.) ಕಾಂಗ್ರೆಸ್ ಮತ್ತು ಜೆಡಿಎಸ್ ಹೊರತುಪಡಿಸಿ ಬೇರೆಯವರಿಗೆ ಮತ ಹಾಕುವ ಮೂಲಕ ಹಣ-ದೌರ್ಜನ್ಯ-ಕುಟುಂಬ ರಾಜಕಾರಣ, ಈ ಮೂರನ್ನೂ ಧಿಕ್ಕರಿಸಿ ತಮ್ಮ ಓಟಿನ ಹೆಚ್ಚುಗಾರಿಕೆಯನ್ನು ಇಲ್ಲಿಯ ಮತದಾರರು ಉಳಿಸಿಕೊಳ್ಳಬೇಕು.

ಇನ್ನು ಮಂಡ್ಯದ ವಿಚಾರವಂತೂ ಹೇಳುವುದೇ ಬೇಡ. ಚಿತ್ರನಟಿ ರಮ್ಯಾ ಉತ್ತಮ ರಾಜಕಾರಣಿ ಆಗುತ್ತಾರೆ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ. ಜೆಡಿಎಸ್‌ನ  ಸಿ.ಎಸ್. ಪುಟ್ಟರಾಜುರವರೂ ನಾವು ಹೆಮ್ಮೆ ಪಟ್ಟುಕೊಳ್ಳುವಂತಹ ಕೆಲಸವನ್ನು ಅವರು ಶಾಸಕರಾಗಿದ್ದಾಗ ಮಾಡಿದ ಉದಾಹರಣೆಗಳಿಲ್ಲ. ramya-siddaramaiahಪರೋಕ್ಷ ರೀತಿಯ ಕುಟುಂಬ ರಾಜಕಾರಣ ಮತ್ತು ಜಾತಿವಾದವೇ ಇಲ್ಲಿ ನಡೆಯುತ್ತಿದೆ. ಅಲ್ಲಿಯ ಮತದಾರರಿಗೂ ಇವರಿಬ್ಬರೂ ಯೋಗ್ಯ ಪ್ರತಿನಿಧಿಗಳಲ್ಲ.

ಈ ಉಪಚುನಾವಣೆಯ ಸಂದರ್ಭದಲ್ಲಿ ನಾವೆಲ್ಲ ನಾಚಿಕೆಪಟ್ಟುಕೊಳ್ಳುವಂತಹ ಘಟನೆಗಳು ಹೇರಳವಾಗಿ ನಡೆಯುತ್ತಿವೆ. ರಮ್ಯರ ವಿಚಾರಕ್ಕಂತೂ ಅದು ಊಹಿಸಬಹುದಾದದ್ದೆ. ಆದರೆ ಈ ಸಂದರ್ಭದಲ್ಲಿ ನಮ್ಮ ರಾಜಕೀಯ ಸಂಸ್ಕೃತಿಯನ್ನು ಸಹ್ಯ ಮತ್ತು ಉತ್ತಮ ಎನ್ನಬಹುದಾದ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ನಾಡಿನ ಮುಖ್ಯಮಂತ್ರಿ ಗಂಭೀರವಾಗಿ ವಿಫಲರಾಗಿದ್ದಾರೆ. ಜೆಡಿಎಸ್‌ನವರ ಮಾತು ಮತ್ತು ನಡವಳಿಕೆ ಊಹಿಸಬಹುದಾದದ್ದೆ. ಆದರೆ, ಜೆಡಿಎಸ್ ನಾಯಕರಿಗೆ ಪ್ರತ್ಯುತ್ತರ ಕೊಡುವ ರೀತಿಯಲ್ಲಿ ಸಿದ್ಧರಾಮಯ್ಯನವರು ಮಾತನಾಡುತ್ತಿರುವುದು ಉಚಿತವಲ್ಲ. ಉಡಾಫೆಯಿಂದ, ಸೇಡಿನಿಂದ, ತಿರಸ್ಕಾರದಿಂದ ಸಿದ್ಧರಾಮಯ್ಯನವರು ಈಗ ಮಾತನಾಡಬಾರದು. ಶಾಸನಸಭೆಯಲ್ಲೂ ಅವರು ಅದನ್ನು ಮಾಡಿದರು; ಪ್ರಚಾರದ ಸಮಯದಲ್ಲೂ ಮಾಡುತ್ತಿದ್ದಾರೆ. ಎಲ್ಲಾ ಸಮುದಾಯಗಳನ್ನು ಬೆಸೆಯಲು ಆಗದಿದ್ದರೂ, ಜಾತಿವಾದಿಗಳಲ್ಲದವರನ್ನೂ ಜಾತಿವಾದಿಗಳನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ನಮ್ಮ ಪಾಲಿರಬಾರದು. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಮಾತುಗಳಿಂದ ಪ್ರಚೋದಿತರಾಗಿ ಸಿದ್ಧರಾಮಯ್ಯನವರು ಮಾತನಾಡುವುದು ಅವರ ಸಂಯಮ ಮತ್ತು ಪ್ರಬುದ್ಧತೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ. ಸಿದ್ಧರಾಮಯ್ಯನವರನ್ನು ಪ್ರಚೋದಿಸುವುದರಿಂದ ದೇವೇಗೌಡರಿಗೆ ಮತ್ತು ಕುಮಾರಸ್ವಾಮಿಯವರಿಗೆ ರಾಜಕೀಯ ಲಾಭಗಳಿವೆ. ತಾವೂ ಹಾಗೆ ಮಾಡದೇ ಇರುವುದರಲ್ಲಿ ಮತ್ತು ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಉತ್ತರಿಸದೇ ಇರುವುದರಲ್ಲಿ ಸಿದ್ಧರಾಮಯ್ಯನವರ ಘನತೆ ಇದೆ; ಉತ್ತಮ ರಾಜಕೀಯ ಸಂಸ್ಕೃತಿಯನ್ನು ಉದ್ಧೀಪಿಸುವ ಅವಕಾಶ ಇದೆ. ಸಿದ್ಧರಾಮಯ್ಯನವರು ಇಂತಹ ನಡವಳಿಕೆಗಳನ್ನು ಮೀರಿ ನಡೆಯಬೇಕು.