Daily Archives: November 4, 2014

“ಹುಲಿಯ ನೆರಳಿನೊಳಗೆ – ಅಂಬೇಡ್ಕರವಾದಿಯ ಆತ್ಮಕಥೆ” ಒಂದು ಟಿಪ್ಪಣಿ


-ಮಹಾದೇವ ಸಾಲಾಪೂರ


ಉಚಲ್ಯಾ, ಅಕ್ರಮಸಂತಾನ, ಗಬಾಳ, ಬಹಿಷ್ಕೃತ, ವಾಲ್ಮೀಕಿ, ಬಲುತ, ನೋವು ತುಂಬಿದ ಬದುಕು ಹೀಗೆ ಮರಾಠಿಯಿಂದ ಅನುವಾದಗೊಂಡ ಹಾಗೂ ಕನ್ನಡದಲ್ಲಿ ಪ್ರಕಟವಾದ ದಲಿತ ಆತ್ಮಕತೆಗಳ ಬಾಲ್ಯ ಮತ್ತು ಬದುಕಿನ ಚಿತ್ರಣಗಳು ವಿಭಿನ್ನ ಅನುಭವ ಜಗತ್ತನ್ನು ನಿರ್ಮಿಸಿಕೊಟ್ಟಿವೆ. ಪ್ರತಿಯೊಬ್ಬರ ಬಾಲ್ಯವೂ ಅಸಮಾನ ಭಾರತದ ಚರಿತ್ರೆಯನ್ನು ಹೇಳುತ್ತದೆ. Huliya Neralu-2ಕುಲಮೂಲದ ಕಸುಬುಗಳು, ಕಸುಬಿನ ದಾರುಣ ಚಿತ್ರಣ, ಹುಟ್ಟಿನಿಂದ ಗುರುತಿಸಲ್ಪಡುವ ಜಾತಿಯೂ, ಆಯಾ ಪರಿಸರಕ್ಕೆ ಸಂಬಂಧಪಟ್ಟ ಆಚರಣೆಗಳು, ಬಂಧು-ಬಾಂಧವರ ಸಂಬಂಧಗಳು, ಬಡತನ, ಹಸಿವು, ಶೋಷಣೆ, ಕಲಿಕೆಗಾಗಿ ಪರಿತಪಿಸುವ ರೀತಿಯೂ, ಆಧುನಿಕ ಶಿಕ್ಷಣವ್ಯವಸ್ಥೆಯಲ್ಲಿನ ಶಾಲಾ ಆವರಣದಲ್ಲಿ ಆಚರಿಸಲ್ಪಡುವ ಅಸ್ಪೃಶ್ಯತೆಯೂ ಹೀಗೆ ಭೀಕರವಾದ ತಾರತಮ್ಯದ ಜಗತ್ತನ್ನು ದಲಿತ ಆತ್ಮಕತೆಗಳಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಎಲ್ಲ ಆತ್ಮಕತೆಗಳ ಬಾಲ್ಯವು ಒಂದೆ ಪಡಿಯಚ್ಚಿನಲ್ಲಿ ಎರಕಹೊಯ್ದಂತೆ ಭಾಸವಾದರೂ ಕಟ್ಟಿಕೊಡುವ ಪರಿಸರದ ನಿವೇದನೆ ಅಸ್ಪೃಶ್ಯ ಭಾರತದ ಒಂದೊಂದು ಮಗ್ಗಲುಗಳನ್ನು ಶೋಧಿಸುತ್ತವೆ. ಸಾಂಪ್ರದಾಯಿಕ ಪ್ರಜಾಪ್ರಭುತ್ವವು ಹಳ್ಳಿಗಳಲ್ಲಿತ್ತು. ಅದೇ ಆಶಯದಲ್ಲಿ ಸಂವಿಧಾನವೂ ರಚನೆಯಾಗಬೇಕಿತ್ತು ಎಂದು ಹಂಬಲಿಸುವವರು ದಲಿತ ಅಸ್ಮಿತೆಯ ಈ ಬಾಲ್ಯದ ಕುರುಹುಗಳನ್ನು ಕೊಂಚ ಗಮನಿಸಬೇಕು.

ಈ ದೇಶದಲ್ಲಿ ಪವಿತ್ರವಾದದ್ದು ಒಂದೇ, ಅದು ಸಂವಿಧಾನ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಳ್ಳುತ್ತಾನೆ ಎಂದಾದರೆ ಅವನಿಗೆ ಅಂಬೇಡ್ಕರ್ ಅವರು ಯಾವದೋ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಆಧುನಿಕ  ಭಾರತದ ನಿರ್ಮಾತೃ, ಅಪ್ರತಿಮ ದೇಶಪ್ರೇಮಿ, ಪಾರಂಪರಿಕವಾಗಿ ಅಸ್ತಿತ್ವದಲ್ಲಿದ್ದ ಸಂವಿಧಾನವನ್ನು ಭಂಜಿಸಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಮೂಲಕ ಹೊಸಗುರುತನ್ನು ನೀಡಿದ ಮಹಾತ್ಮ ಎಂಬುದನ್ನು ಮಣಗಾನುತ್ತಾನೆ. (ಆಗ ಮನೆಯೊಳಗೆ ತೂಗುಹಾಕಿರುವ ಅಂಬೇಡ್ಕರ್ ಅವರ ಫೋಟೋ ನೋಡಿ ನೀವು ಅವರಾ..? ಎನ್ನುವ ಹೊಸ ಐಡೆಂಟಿಟಿಯ ವಿಧಾನ ಇಲ್ಲವಾಗಬಹುದು.) ಆ ಹುಲಿಯ ಹೆಜ್ಜೆಗುರುತುಗಳನ್ನು ಇವತ್ತಿನ ಈ ಜಾತಿಸಂಘಟಣೆಯ ಜಂಝಾವಾತಗಳ ನಡುವೆ ಮತ್ತೆಮತ್ತೆ  ಕೆದಕಬೇಕಿದೆ, ಅವರ ಆಲೋಚನೆಗಳನ್ನು ಈ ಹೊತ್ತಿಗೆ ತಕ್ಕಂತೆ ವಿಮರ್ಶಿಸಿ, ಆ ಅಧ್ಯಯನದ ಶಿಸ್ತನ್ನು, ಆ ನ್ಯಾಯನಿಷ್ಠುರ ವ್ಯಕ್ತಿತ್ವವನ್ನು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ಈ ಅರಿವಿನಲ್ಲಿ ಭಾರತದ ಹೊಸ ಚಲನೆಯ ಆರಂಭವಾಗಿರುವುದರಿಂದ ಅಂಬೇಡ್ಕರ್ ಅವರ ಬದುಕು ಬರಹ ಭಾಷಣಗಳನ್ನು ನಾವು ಮತ್ತೆಮತ್ತೆ ಓದಿಕೊಳ್ಳುತ್ತಲೇ ಇರಬೇಕಾಗುತ್ತದೆ.

ಕೃಷಿವಿಜ್ಞಾನಿಯಾದ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ ಅಂಬೇಡ್ಕರವಾದಿಯ ಆತ್ಮಕಥೆ’ಯನ್ನು ಕನ್ನಡಕ್ಕೆ ಬಿ. ಶ್ರೀಪಾದರವರ  ಭಾವಾನುವಾದ ಮಾಡಿದ್ದಾರೆ.  ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಭಾರತದ ಕ್ರಾಂತಿಸೂರ್ಯರ ಬದುಕು ಮತ್ತು ಹೋರಾಟದ ಕುರಿತಾದ ಟಿಪ್ಪಣಿಗಳಿರುವುದರಿಂದ ಈ ಹೊತ್ತುಗೆ ಉಳಿದೆಲ್ಲ ಆತ್ಮಕತೆಗಳಿಗಿಂತ ಭಿನ್ನವಾಗಿದೆ.

ಅಂಬೇಡ್ಕರರ ನಂತರ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದ ಎರಡನೇ  ದಲಿತವ್ಯಕ್ತಿ ಎಂದೇ ಹೆಸರಾಗಿರುವ ಇವರ ಬದುಕಿನಲ್ಲೂ ಅಸ್ಪೃಶ್ಯ ಭಾರತದ ಅನುಭವಗಳೇ ತುಂಬಿದ್ದಾವೆ. ಆ ಎಲ್ಲ ಅಪಮಾನ, ನಿಂದೆ, ಬಡತನ, ಅಸಹಾಯಕತೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಛಲದ ಹುಲಿಯ ಹೆಜ್ಜೆಜಾಡಿನಲ್ಲಿ ನಡೆಯುವ ನಿಮ್ಗಾಡೆಯವರ ಬದುಕು ಮತ್ತು ಹೋರಾಟದ  ಭಾವಜಗತ್ತು ಸ್ವವಿಮರ್ಶಾ ಧಾಟಿಯಲ್ಲಿರುವುದರಿಂದ ತುಂಬ ಆಪ್ತವಾಗುತ್ತದೆ.

ಆತ್ಮಕತೆಯ ಮೊದಲ ಅಧ್ಯಾಯದ ಕೊನೆಯಭಾಗದಲ್ಲಿ ಅವರ ತಂದೆ ಹೇಳಿಬರೆಯಿಸಿದ ಭಾಷಣದಲ್ಲಿ ಭೀಮರಾವ ಅಂಬೇಡ್ಕರ್ ಅವರ ಹೆಸರನ್ನು ಕೇಳಿ ಪುಳಕಿತರಾಗುವ Young_Ambedkarನಿಮ್ಗಾಡೆಯವರ ಆತ್ಮಕತೆಯುದ್ದಕ್ಕೂ ಬಾಬಾಸಾಹೇಬರ ಛಲದ, ಆತ್ಮವಿಶ್ವಾಸದ, ಅಧ್ಯಯನ ಶಿಸ್ತಿನ, ಹೋರಾಟ ರೂಪಿಸಿದ ರೀತಿಗಳೆಲ್ಲವೂ ಪ್ರಭಾವೀಕರಿಸಿರುವುದನ್ನ ಚಿತ್ರಿಸಿದ್ದಾರೆ. ತೀರ ಖಾಸಗಿಯಾಗಿ ಅವರೊಂದಿಗೆ ಒಡನಾಡಿದ ಕ್ಷಣಗಳಂತೂ ನಾಮದೇವ ನಿಮ್ಗಾಡೆಯವರನ್ನು ರೂಪಿಸಿದ್ದಾವೆ. ನೆಹರೂ ಅವರನ್ನು ತರುಬಿ ಕೇಳುವ ಪ್ರಶ್ನೆ, ಗಾಂಧೀಜಿಯವರ ಅಸ್ಪೃಶ್ಯತೆ ನಿವಾರಣೆ ನಡೆಯ ನಡುವಿನ ಭಿನ್ನತೆಯನ್ನ ವಿವರಿಸುವ ಬಗೆ, ಹಾಗೂ ಮಾರ್ಟಿನ್ ಲೂಥರ ಕಿಂಗ್ ಅವರೊಂದಿಗಿನ ಸಂವಾದದಲ್ಲಿ ಭಾರತದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ವಾಸ್ತವವನ್ನೂ ಆವೇಶಭರಿತರಾಗಿ ನಿರರ್ಗಳ ಮಾತಾಡುವ ಉಮೇದು…. ಈ ಎಲ್ಲದರ ಹಿಂದೆ ಆಳವಾದ ಸುಪ್ತಪ್ರಜ್ಞೆಯಲ್ಲಿ ತುಂಬಿಕೊಂಡಿದ್ದ ಬಾಬಾಸಾಹೇಬರ ಚಿಂತನೆಗಳೇ ಪ್ರೇರಣಶಕ್ತಿಯಾಗಿದ್ದವು.

ತನ್ನ ಸಹಪಾಠಿ ಓದುತ್ತಿದ್ದ ಪುಸ್ತಕ ಯಾವುದೆಂದು ಕೇಳಲು ಹೋಗಿ ಅವಮಾನಿತರಾದ ಲೇಖಕರು ಮುಂದೊಂದು ದಿನ ತುಳಸೀರಾಮಾಯಣ ಓದಿ ‘ಈ ಅವಮಾನಗಳು, ಬಯ್ಗಳುಗಳು, ತಲೆಯೆತ್ತಿ  ಬದುಕಲು ನನಗೆ ಮತ್ತಷ್ಟು ದೃಢತೆಯನ್ನು, ಆತ್ಮವಿಶ್ವಾಸವನ್ನು ತಂದುಕೊಟ್ಟವು.  ಈ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಲು ಅಂದೇ ದೃಢಸಂಕಲ್ಪ ಮಾಡಿದೆ. ಈ ನಿಸ್ಸಹಾಯಕತೆಯನ್ನು ಮೀರಲು ನನಗಿರುವ ಒಂದೇ ಗುರಿ ಶಿಕ್ಷಣವೆಂದು ಅಂದು ನನಗೆ ಮನದಟ್ಟಾಯಿತು’ ಎಂದು ಹೇಳುತ್ತಾರೆ. ಇನ್ನೊಂದೆಡೆ ದೇವಸ್ಥಾನದ ಅತಿಕ್ರಮ ಪ್ರವೇಶ ಮತ್ತು ದೇವರ ವಿಗ್ರಹಗಳನ್ನು ನಾಶಪಡಿಸದ್ದಾರೆಂಬ ಸುಳ್ಳು ಆರೋಪ ಮಾಡಿದ ಸವರ್ಣಿಯರು ಕೊಟ್ಟ ಫಿರ್ಯಾದಿಯನ್ನ ಅನುಸರಿಸಿ ಪೋಲಿಸರು ಬಂಧಿಸಲು ಬಂದಾಗ  ತಂದೆ ಹೇಳುವ ಧೈರ್ಯದ ಮಾತುಗಳು ಹೀಗೆ ನಾಮದೇವ ನಿಮ್ಗಾಡೆಯವರನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹೋರಾಟದ ಬದುಕಿಗೆ ಸಜ್ಜುಗೊಳಿಸುವ ಘಟಣೆಗಳು – ವ್ಯಷ್ಠಿಯಿಂದ ಸಮಷ್ಠಿಗೆ ತುಡಿಯುವ ಜೀವವೊಂದನ್ನು ತಯಾರು ಮಾಡಿದ ಹಾಗಿವೆ.

ವಿಧಾನಸಭೆಯ ಸದಸ್ಯರಾಗುವ ಅವಕಾಶವೊಂದು ಒದಗಿಬಂದಾಗ ಬಾಬಾಸಾಹೆಬರು ಹೇಳುವ ಮಾರ್ಮಿಕವಾದ ಮಾತುಗಳು ಬಹಳ ಉಪಯುಕ್ತವಾದವು ಎನಿಸುತ್ತವೆ. ಮಗನಿಗೆ ಭೀಮರಾವ್ ಎಂದು ಹೆಸರಿಟ್ಟಾಗ, ಶಿಕ್ಷಣಕ್ಕೆ ಒಂದು ಕಡೆ ನಿಲುಗಡೆಯಿಡಬೆಕಲ್ಲ ಎಂದು ಹೇಳಿದಾಗ, ಸಂಸತ್ತಿನಲ್ಲಿ ಅವರ ಕಾಲಿಗೆರಗಿದಾಗ ಹೀಗೆ ನಿಮ್ಗಾಡೆಯವರಿಗೆ ಅಂಬೇಡ್ಕರರು ಪ್ರತಿಕ್ರಿಯಿಸಿರುವ ರೀತಿಗಳಂತೂ ಅದ್ಭುತ ಗಳಿಗೆಗಳೇ ಆಗಿವೆ. ಇದು ನಾಮದೇವ ನಿಮ್ಗಾಡೆಯವರ ಆತ್ಮಕಥನ ಹೇಗೋ ಹಾಗೆ ಭೀಮರಾವ್ ಅಂಬೇಡ್ಕರರ ಜೀವನಚರಿತ್ರೆಯೂ ಆಗಿದೆ ಎಂಬರ್ಥದಲ್ಲಿ ಹೇಳಿರುವ ಡಾ. ಅಪ್ಪಗೆರೆ ಸೋಮಶೇಖರ್ ಅವರ ಮಾತು ಅಕ್ಷರಶಃ ಸತ್ಯ.

ವರ್ತಮಾನ ಬಳಗದ ಪುಟ್ಟ ಸಮಾಗಮ, ಎಸ್.ಆರ್.ಹಿರೇಮಠ್ ಮತ್ತು ಕಥಾಸ್ಪರ್ಧೆಯ ವಿಜೇತರೊಂದಿಗೆ…

ಆತ್ಮೀಯರೇ,

ಮೊನ್ನೆ ನಮ್ಮ ವರ್ತಮಾನ ಬಳಗವರು ಮತ್ತು ಕೆಲವು ಸ್ನೇಹಿತರು ಈ ಬಾರಿಯ (೨೦೧೪) ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕತೆಗಳನ್ನು ಬರೆದಿರುವ ಕೆಲವು ಕತೆಗಾರರೊಂದಿಗೆ ಊಟಕ್ಕೆಂದು ಸೇರಿದ್ದೆವು. ಕಥಾಸ್ಪರ್ಧೆಯ ಮೊದಲ ಮೂರು ಬಹುಮಾನಿತ ಕತೆಗಳನ್ನು ಬರೆದಿರುವ ಕತೆಗಾರರು ಮತ್ತು ಈ ಬಾರಿಯ ತೀರ್ಪುಗಾರರು ಅಂದು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣಕ್ಕೆ ಈ ಪುಟ್ಟ ಸಮಾಗಮ. ಹಾಗೆಯೇ, ನಮ್ಮ ರಾಜ್ಯದ ವರ್ಷದ ವ್ಯಕ್ತಿಯಾಗಿ ನಮ್ಮ ವರ್ತಮಾನ ಬಳಗ ಆಯ್ಕೆ ಮಾಡಿದ್ದ ಎಸ್.ಆರ್.ಹಿರೇಮಠರೂ ನೆನ್ನೆ ಬೆಂಗಳೂರಿನಲ್ಲಿ ಇದ್ದರು. ಸಾಧ್ಯವಾದರೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನಮ್ಮ ಕತೆಗಾರರಿಗೆ ಅವರಿಂದಲೇ ಬಹುಮಾನ ವಿತರಣೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಸಿಗುತ್ತದೆ. ಅಲ್ಲಿ ಸೇರಿದ್ದೆವು. katha-sprade-2014-223x300ನಮ್ಮ ವರ್ತಮಾನ.ಕಾಮ್‌ನೊಂದಿಗೆ ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿರುವ ನಾಲ್ಕೈದು ಜನ ಬೆಂಗಳೂರಿನ ಹೊರಗೆಯೇ ಇರುವುದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ ಮತ್ತು ನಗರದಲ್ಲಿಯೇ ಇರುವ ಇನ್ನೂ ಕೆಲವರು ಕಾರ್ಯಬಾಹುಳ್ಯದಿಂದಾಗಿ ಬರಲಾಗಲಿಲ್ಲ. ಬರಬೇಕಾಗಿದ್ದ ಈ ಬಾರಿಯ ತೀರ್ಪುಗಾರರಾಗಿದ್ದ ಎಸ್.ಗಂಗಾಧರಯ್ಯನವರೂ ಬರಲಾಗಿರಲಿಲ್ಲ. ಅವರನ್ನು ಬಿಟ್ಟರೆ ಒಟ್ಟಾರೆಯಾಗಿ ನಮ್ಮ ಬಳಗದ ಬಹುತೇಕರು ಹಾಜರಿದ್ದರು.

ಊಟದ ನಂತರ ಎಸ್.ಆರ್.ಹಿರೇಮಠರು ಹಾಜರಿದ್ದ ಕರೆಗಾರರಾದ ಟಿ.ಎಸ್.ವಿವೇಕಾನಂದ, ಟಿ.ಕೆ.ದಯಾನಂದ್, ಮತ್ತು ಎಚ್.ಎಸ್.ಅನುಪಮರಿಗೆ ಬಹುಮಾನಗಳನ್ನು ಕೊಟ್ಟರು. ಕಳೆದ ಬಾರಿಯ ತೀರ್ಪುಗಾರರಾಗಿದ್ದ ರಾಮಲಿಂಗಪ್ಪ ಟಿ.ಬೇಗೂರುರವರು ಈ ಸಂದರ್ಭದಲ್ಲಿ ಹಾಜರಿದ್ದು, ಬಹಳ ಆಪ್ತ ವಾತಾವರಣದಲ್ಲಿ, ಒಂದು ರೀತಿಯಲ್ಲಿ ಖಾಸಗಿಯಾಗಿ ಇದು ಮುಗಿಯಿತು.

ಈ ಪುಟ್ಟ ಸಮಾಗಮಕ್ಕೆ ಆಗಮಿಸಿದ್ದ ಎಸ್.ಆರ್.ಹಿರೇಮಠ್, ಡಾ.ರಾಮಲಿಂಗಪ್ಪ ಟಿ.ಬೇಗೂರು, ಟಿ.ಎಸ್.ವಿವೇಕಾನಂದ ಮತ್ತು ಕುಟುಂಬದವರು, ಟಿ.ಕೆ.ದಯಾನಂದ್, ಡಾ.ಎಚ್.ಎಸ್.ಅನುಪಮ, ಬಿ.ಶ್ರೀಪಾದ ಭಟ್, ಜಯಶಂಕರ ಹಲಗೂರು, ಆನಂದ ಯಾದವಾಡ ಮತ್ತು ಕುಟುಂಬದವರು, ರವಿ ಮತ್ತು ಕುಟುಂಬದವರು, ಈಶ್ವರ್ ಮತ್ತು ಕುಟುಂಬದವರು, ಫ್ರಭಾ ಎನ್. ಬೆಳವಂಗಲ, ನವೀನ್ ಸೂರಿಂಜೆ, ತೇಜ ಸಚಿನ್ ಪೂಜಾರಿ, ಡಾ. ಅಶೋಕ್ ಕೆ,ಆರ್., ಅನಂತ ನಾಯ್ಕ, ಶಾಂತಲಾ ದಾಮ್ಲೆ, ಪ್ರಶಾಂತ್ ಹುಲ್ಕೋಡು, ಚಂದ್ರಶೇಖರ ಬೆಳಗೆರೆ, ಬಸವರಾಜು, ಶ್ರೀಧರ್ ಪ್ರಭು, ನಿತಿನ್, ಬಸೂ ಸೂಳಿಬಾವಿ ಮತ್ತವರ ಸ್ನೇಹಿತರು- ಎಲ್ಲರಿಗೂ ವರ್ತಮಾನ ಬಳಗದಿಂದ ಧನ್ಯವಾದ ಮತ್ತು ಕೃತಜ್ಞತೆಗಳು.

ಮತ್ತೊಮ್ಮೆ ಬಂದ ಎಲ್ಲಾ ಸ್ನೇಹಿತರಿಗೂ ಬಳಗದ ಪರವಾಗಿ ಧನ್ಯವಾದಗಳು.

ನಮಸ್ಕಾರ,
ರವಿ
ವರ್ತಮಾನ ಬಳಗದ ಪರವಾಗಿ.

vartamana_spardhe_1

 

vartamana_spardhe_2