ಭೋಪಾಲ್ ದುರಂತಕ್ಕೆ ಕಾರಣವಾದ ಭಾರತ ಸರ್ಕಾರದ ಏಳು ನಿರ್ಧಾರಗಳು

ಮೂಲ: ರವಿ ಕಿರಣ್ ಮತ್ತು ಸಮಂತ್ ಜಿಲ್ಲಾ
ಕನ್ನಡಕ್ಕೆ: ಜೆ.ವಿ.ಕಾರ್ಲೊ

ಇಂದಿಗೆ ಮುವ್ವತ್ತು ವರ್ಷಗಳ ಹಿಂದೆ ಭೋಪಾಲಿನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ರವರ ಮಿಥಾಯಿಲ್ ಐಸೋಸಯನೈಟ್ (MIC) ರಸಾಯನಿಕದ ತೊಟ್ಟಿಯೊಳಗೆ ಆಕಸ್ಮಿಕವಾಗಿ ನೀರು ನುಗ್ಗಿತು. ಆ ಹೊತ್ತಿಗೆ ಅದರಲ್ಲಿ 42 ಟನ್ನುಗಳಷ್ಟು MIC ದಾಸ್ತಾನಿತ್ತು. MIC ರಸಾಯನಿಕವು ಅತ್ಯಂತ ವಿಷಕಾರಿಯಾಗಿದ್ದು ಕನಿಷ್ಠ ಕುದಿಯುವ ಬಿಂದು ಹೊಂದಿರುವಂತಾಗಿರುತ್ತದೆ. ಇದನ್ನು ಸ್ಟೇನ್‌ಲೆಸ್ ಸ್ಟೀಲ್ ಅಥವಾ ಗಾಜಿನ ತೊಟ್ಟಿಗಳಲ್ಲಿ ಮಾತ್ರ ಶೇಖರಿಸಿಡಬಹುದಾಗಿದ್ದು ನೀರಿನ ಸಂಪರ್ಕ ಹೊಂದುತ್ತಿದ್ದಂತೆ MIC ಉಗ್ರವಾಗಿ ಪ್ರತಿಕ್ರಿಯಿಸಿ Bhopal-Gas-Tragedy-TIMEವಿಷಕಾರಕ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಅಂದು ಇದೇ ವಿದ್ಯಮಾನ ಭೋಪಾಲಿನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಜರುಗಿ 2500 ಕ್ಕಿಂತ ಹೆಚ್ಚು ಜನರು ಸತ್ತು  ಅದು ಜಗತ್ತಿನ ಅತ್ಯಂತ ಭೀಕರ ರಸಾಯನಿಕ ದುರಂತವೆನಿಸಿಕೊಂಡಿತು.

“ಮೊದಲು ಸುರಕ್ಷತೆ” ಎಂಬ ಧ್ಯೇಯ ಘೋಷಣೆ ಹೊತ್ತ ಅಮೆರಿಕಾದ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ಇಷ್ಟೊಂದು ಬೇಜವಬ್ದಾರಿಯಾಗಿರಲು ಏನು ಕಾರಣವಿದ್ದೀತು? ಇಂತದೊಂದು ದುರ್ಘಟನೆ ಈವರೆಗೆ ಅದರ ವರ್ಜೀನಿಯಾದ (ಅಮೆರಿಕ) ಘಟಕದಲ್ಲಿ ಯಾಕೆ ಜರುಗಿರಲಿಲ್ಲ? ಭೋಪಾಲ್ ಕಾರ್ಖಾನೆಯ ಪಡಿಯಚ್ಚಿನಂತಿರುವ ಅಮೆರಿಕಾದ ಘಟಕಕ್ಕೆ ತರಬೇತಿಗೆಂದು ಹೋಗಿದ್ದ ಭಾರತೀಯ ಇಂಜಿನಿಯರ್ ಕಮಲ್ ಪಾರಿಖ್ ಅಲ್ಲಿಯ ಸಿಬ್ಬಂದಿಯ ಶ್ರದ್ಧೆ, ಸುರಕ್ಷತೆಯ ಬಗ್ಗೆ ಅವರ ಗೀಳು ಅನಿಸುವಷ್ಟು ಅತೀವ ಕಾಳಜಿ ಕಂಡು ವಿಸ್ಮಯಪಡುತ್ತಾರೆ. ಅವರು ಹೇಳುತ್ತಾರೆ:
“ಅಮೆರಿಕನರೊಟ್ಟಿಗೆ ಕೆಲಸ ಮಾಡುವುದೇ ಒಂದು ಹಿತಕರವಾದ ಅನುಭವ. ಅವರು ಎಷ್ಟೊಂದು ವೃತ್ತಿಪರರು ಮತ್ತು ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳಿಗೂ ಎಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆಂದರೆ ನಾವು ಭಾರತೀಯರು ‘ಚಲ್ತಾ ಹೈ’ ಎನ್ನುವ ಮನೋಭಾವದವರು. ಅವರಿಗೆ ತೃಪ್ತಿಯಾಗಲಿಲ್ಲವೆಂದರೆ ಮುಂದಿನ ಹಂತಕ್ಕೆ ಹೋಗಲು ಬಿಡುವುದೇ ಇಲ್ಲ. ನಾವು ಎಷ್ಟೋ ವಾರಗಳು ಕ್ಷುಲ್ಲಕವೆಂದು ತೋರುವ ಸಂಗತಿಗಳ ಪರಿಣಾಮಗಳನ್ನು ವಿವಿಧ ಕೋನಗಳಲ್ಲಿ ಅಭ್ಯಸಿಸುತ್ತಿದ್ದೆವು.” (ದೊಮಿನಿಕ್ ಲೆಪಿಯೆರೆ ಮತ್ತು ಜಾವಿಯೆರ್ ಮೊರೊ ಇವರ “ಫೈವ್ ಪಾಸ್ಟ್ ಮಿಡ್‌ನೈಟ್ ಇನ್ ಭೋಪಾಲ್” ನಿಂದ)

ಇಂಥಾದೊಂದು ದುರ್ಘಟನೆ ನಡೆಯಲು ಕಾರಣವಾದ ಯೂನಿಯನ್ ಕಾರ್ಬೈಡ್ ಮೇಲೆ ಎಲ್ಲರ ಆಕ್ರೋಶ ತಿರುಗಿದ್ದು ಸಹಜವಾಗಿತ್ತಾದರೂ ನಮ್ಮ ಕೇಂದ್ರ ಸರ್ಕಾರದ ಪಾತ್ರ, ದಶಕಗಳಿಂದ ಅದು ಪಾಲಿಸಿಕೊಂಡು ಬಂದಿದ್ದ ಸೈದ್ಧಾಂತಿಕ ನೀತಿಗಳು ಯಾರ ಪರಾಮರ್ಶೆಗೆ ಒಳಪಡದಿದ್ದದ್ದು ದುರ್ದೈವವೆನ್ನಬೇಕು.

ಯೂನಿಯನ್ ಕಾರ್ಬೈಡ್ 1934 ರಿಂದಲೇ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಮೊದಮೊದಲು ಅದು ಟಾರ್ಚುಗಳ ಬ್ಯಾಟರಿಗಳನ್ನು ಅಮದು ಮಾಡಿ ಭಾರತದಲ್ಲಿ ಮಾರುತ್ತಿತ್ತು. ಕ್ರಮೇಣ ಇಲ್ಲೇ ಬ್ಯಾಟರಿಗಳನ್ನು ತಯಾರಿಸಿ “ಎವರೆಡಿ” ಬ್ರ್ಯಾಂಡಿನಡಿ ಮನೆಮಾತಾಗಿತ್ತು. ಇಂತ ಯೂನಿಯನ್ ಕಾರ್ಬೈಡ್ ತನ್ನ ಕ್ಷೇತ್ರವಲ್ಲದ ವಿಷಕಾರಕ ರಸಾಯನಿಗಳನ್ನು ತಯಾರಿಸುವ ಉಸಾಬರಿಗೇಕೆ ಕೈ ಹಚ್ಚಿತು? ಇದಕ್ಕೆ ವಿವಿಧ ಹಂತಗಳಲ್ಲಿ ಕೆಟ್ಟ ಔಧ್ಯಮಿಕ ನಿರ್ಧಾರಗಳಲ್ಲದೆ, ಸರ್ಕಾರದ ಸರಣಿ ನೀತಿಗಳಿಂದಾಗಿ, ನಷ್ಟದ ಬಾಬತ್ತಿನ, ಕೊನೆಗೆ ಅತ್ಯಂತ ಜನ ಸಾಂಧ್ರತೆಯುಳ್ಳ ನಗರ ಪ್ರದೇಶದಲ್ಲಿ ಜನರ ಮಾರಣಹೋಮಕ್ಕೆ ಕಾರಣವಾಯ್ತು.

1. ಸರ್ಕಾರದ ಔಧ್ಯಮಿಕ ನೀತಿ

1947 ರಲ್ಲಿ ಭಾರತದ ಸ್ವಾತಂತ್ರದೊಂದಿಗೆ ಔಧ್ಯಮಿಕ ಮತ್ತು ವಾಣಿಜ್ಯ ಪರಿಸರವೂ ಬದಲಾಯಿತು. ಪ್ರಧಾನ ಮಂತ್ರಿಗಳೂ ಮತ್ತು ಯೋಜನಾ ಆಯೋಗದ ಅಧ್ಯಕರೂBhopal-Gas-Tragedy-3 ಆದ ಜವಹರಲಾಲ್ ನೆಹರುರವರು ಮಂಡಿಸಿದ 1948 ಮತ್ತು 1956ರ ಕೈಗಾರಿಕಾ ನೀತಿ ಸಮಾಜವಾದಿ ಸ್ವರೂಪದ್ದಾಗಿತ್ತು. ಖಾಸಗಿರಂಗದ ಜತೆ ಜತೆಯಲ್ಲೇ ಸಾರ್ವಜನಿಕರಂಗವನ್ನು ಉತ್ತೇಜಿಸುವ ಮಧ್ಯಮ ಮಾರ್ಗದ ನೀತಿ. ಖಾಸಗಿ ಕ್ಷೇತ್ರದಲ್ಲಿ ಸರ್ಕಾರದ ಯಜಮಾನಿಕೆ.

ಇದರ ಜೊತೆಗೆ ಕಾಂಗ್ರೆಸ್ ಸರ್ಕಾರ ಗಾಂಧೀಜಿಯವರ ಸ್ವದೇಶಿ ಸಿದ್ಧಾಂತದಿಂದ ಪ್ರೇರಣೆಗೊಂಡು ವಿದೇಶಿ ಬಂಡವಾಳ ಹೂಡಿಕೆಯನ್ನು ದಮನಿಸಿ ದೇಶೀ ಜ್ಞಾನವು ಪಕ್ವವಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸದೆಯೇ ಉನ್ನತ ಮಟ್ಟದ ‘ತಂತ್ರಜ್ಞಾನ ವರ್ಗಾವಣೆ’ (Technology Transfer) ಕ್ಕೆ ಒತ್ತು ಕೊಟ್ಟಿತು.

ತಂತ್ರಜ್ಞಾನವು ಸ್ಥಳೀಯವಾಗಿ ಲಭ್ಯವಿದ್ದಲ್ಲಿ, (ಗುಣಮಟ್ಟದಲ್ಲಿ ರಾಜಿಯಾದರೂ ಕೂಡ) ಅದನ್ನೇ ಉಪಯೋಗಿಸಬೇಕು. ಒಮ್ಮೆ ಅಮದಾದ ತಂತ್ರಜ್ಞಾನ ಅದು ಭಾರತದೇ ತಂತ್ರಜ್ಞಾನ. ಐದು ವರ್ಷಗಳ ನಂತರ ಅದಕ್ಕೆ ಪಾವತಿಸಬೇಕಾದ ಅಗತ್ಯವಿಲ್ಲ.- ಇದು 1948 ರ ಕೈಗಾರಿಕಾ ನೀತಿಯಾಗಿತ್ತು.

1956 ರ ಕೈಗಾರಿಕಾ ನೀತಿಯನ್ವಯ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ತನ್ನ ಪಾಲಿನ ಶೇಕಡ 40 ಪಾಲನ್ನು ಮಾರಬೇಕಾಯಿತು. ಇದನ್ನು ಭಾರತ ಸರ್ಕಾರವೇ ತನ್ನ ಉದ್ದಿಮೆಗಳು ಮತ್ತು ಬ್ಯಾಂಕುಗಳ ಮುಖಾಂತರ ಕೊಂಡುಕೊಂಡಿತು. ಅಲ್ಲಿಂದ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (UCIL) ಆಯಿತು.

2. ಆಹಾರ ಧಾನ್ಯಗಳ ಕೊರತೆ

1957 ರಲ್ಲಿ ಸತತ ಮೂರು ವರ್ಷಗಳ ಸಂಶೋಧನೆಯಿಂದ ಯೂನಿಯನ್ ಕಾರ್ಬೈಡ್ (ಅಮೆರಿಕ) SEVIN (ಕಾರ್ಬಾರಿಲ್ ಎಂಬ ಬ್ರ್ಯಾಂಡ್ ಹೆಸರಿನ) ಕೀಟನಾಶಕವನ್ನು ಕಂಡು ಹಿಡಿಯಿತು. ಅಲ್ಲಿವರೆಗೆ ಸಾರ್ವತ್ರಿಕವಾಗಿ ಪ್ರಚಲಿತವಿದ್ದ ಡಿ.ಡಿ.ಟಿ., ಎಂಬ ಕೀಟನಾಶಕವು ಮನುಷ್ಯರಿಗೆ ಮಾರಕವೆಂದು ಪರಿಗಣಿಸಲ್ಪಟ್ಟಿತ್ತು. SEVIN ಅತ್ಯಂತ ನಿರಪಾಯಕಾರಿ Bhopal-Gas-Tragedy-2ಎಂದು ತೋರಿಸಲು ಯೂನಿಯನ್ ಕಾರ್ಬೈಡ್ ವಿಜ್ಞಾನಿಗಳು ಅದರ ಹರಳುಗಳನ್ನು ತಿನ್ನುವ ಚಿತ್ರಗಳು ಎಲ್ಲೆಡೆ ಪ್ರಕಟವಾದವು.

MIC ಯು SEVIN ತಯಾರಿಕೆಯ ಒಂದು ಪ್ರಮುಖ ಘಟಕ. ಅಂಥಾ ಪ್ರಬಲ ವಿಷಕಾರಕ ವಸ್ತುವಿನಿಂದ ನಿರಪಾಯಕಾರಿಯಾದ ವಸ್ತುವನ್ನು ತಯಾರಿಸಲು ಶಕ್ತನಾದ ಮಾನವ ಬುದ್ಧಿಮತ್ತೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಎನ್ನಬೇಕು. 1961 ರಲ್ಲಿ ಇಜಿಪ್ಟಿನ ಹತ್ತಿ ಬೆಳೆಯನ್ನು ಸಂರಕ್ಷಿಸಿ ಮಹಾನ್ ಆರ್ಥಿಕ ದುರಂತವನ್ನು ತಪ್ಪಿಸಿದ SEVIN ಒಮ್ಮೆಲೆ ಜಗದ್ವಿಖ್ಯಾತವಾಯಿತು.

60 ರ ದಶಕದಲ್ಲಿ ಭಾರತವು ಎಷ್ಟೊಂದು ಭೀಕರವಾಗಿ ಆಹಾರ ಧಾನ್ಯಗಳ ಕೊರತೆಯನ್ನು ಅನುಭವಿಸಿತೆಂದರೆ, ಆಗಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಜನರಿಗೆ ವಾರಕ್ಕೊಮ್ಮೆ ಉಪವಾಸಮಾಡಲು ಕರೆ ಕೊಡಬೇಕಾಯ್ತು. ಅಮೆರಿಕವು, ರೆಡ್‌ಕ್ರಾಸ್ ಸಂಸ್ಥೆಯ ಮುಖಾಂತರ PL 480 ರ ಅಡಿಯಲ್ಲಿ, ಹಸಿರು ಕ್ರಾಂತಿಯಯಿಂದ ಸ್ವಾವಲಂಬನೆ ಸಾಧಿಸಲು ಭಾರತಕ್ಕೆ 870 ಮೆಟ್ರಿಕ್ ಟನ್ನ್ ಗಳಷ್ಟು SEVIN ಕೀಟನಾಶಕವನ್ನು ಕಳುಹಿಸಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು UCIL ಕೃಶಿ ಕ್ಷೇತ್ರಕ್ಕೆ ಕಾಲಿಟ್ಟಿತು. ಇದಕ್ಕೆ ಬೇಕಾದ ಪರವಾನಿಗೆಗಳನ್ನು ಪಡೆದುಕೊಂಡು ಮೊದಮೊದಲು ಕಚ್ಛಾ SEVIN ನನ್ನು ಅಮದು ಮಾಡಿ ಅದಕ್ಕೆ ಸ್ಥಳೀಯವಾಗಿ ಲಭ್ಯವಿದ್ದ ಜಡ ಮಾಧ್ಯಮಗಳನ್ನು ಬೆರೆಸಿ ಸಂಸ್ಕರಿಸಿ ಮಾರತೊಡಗಿತು.

3. ವಿದೇಶಿ ವಿನಿಮಯದ ಬಿಕ್ಕಟ್ಟು

SEVIN ನ್ನು ಅಮದು ಮಾಡಿಕೊಳ್ಳಲು UCIL ಮಾತೃ ಸಂಸ್ಥೆಗೆ ಡಾಲರುಗಳಲ್ಲಿ ಹಣ ಸಂದಾಯ ಮಾಡಬೇಕಾಗಿತ್ತು. ಆ ಸಮಯದಲ್ಲಿ ಭಾರತ ವಿದೇಶಿ ವಿನಿಮಯದ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಅಲ್ಲದೆ, ಭಾರತದ ರಕ್ಷಣಾತ್ಮಕ ಕೈಗಾರಿಕ ನೀತಿಗೆ ವ್ಯತಿರಿಕ್ತವಾಗಿ UCIL, SEVIN ನನ್ನು ಅಮದು ಮಾಡಿಕೊಳ್ಳುತ್ತಿರುವುದು ಸರ್ಕಾರದ ಕಣ್ಣು ಕೆಂಪಗೆ ಮಾಡಿತ್ತು. ಅದನ್ನು ಸ್ಥಳೀಯವಾಗಿಯೇ ತಯಾರಿಸಲು ಸರ್ಕಾರ UCIL ಮೇಲೆ ಒತ್ತಡ ಹೇರತೊಡಗಿತು.

ಭಾರತಕ್ಕೆ ಡಾಲರುಗಳ ಕೊರತೆ ಹೊಸ ವಿದ್ಯಮಾನವಾಗಲಿ, ವಿವರಿಸಲು ಅಸಾಧ್ಯವಾದುದಾಗಲೀ ಆಗಿರಲಿಲ್ಲ. ಇದು ಭಾರತ ಸರ್ಕಾರವು ಸ್ವಾತಂತ್ರ ಸಿಕ್ಕ ದಿನಗಳಿಂದಲೇ Bhopal-Gas-Tragedy-1ಪಾಲಿಸಿಕೊಂಡು ಬಂದಿದ್ದ ದೋಷಪೂರಿತ ಆರ್ಥಿಕ ನೀತಿಯ ಪರಿಣಾಮವಾಗಿತ್ತು. ಬೆಲೆ ನಿಗದಿಗಳಂತ ವಿಚಾರ ಸರ್ಕಾರದ ವಿವೇಚನೆಗೆ ಒಳಪಟ್ಟ ವಿಚಾರವೆಂದು ಅದು ಭಾವಿಸಿತ್ತು. ಹಾಗೆಯೇ ಡಾಲರಿಗೆ ಎದುರಾಗಿ ರುಪಾಯಿ ಮೌಲ್ಯವನ್ನು ಕೃತಕವಾಗಿ ಏರಿಸಿ ವಿದೇಶಿ ವಿನಿಮಯದ ಕೊರತೆಯನ್ನು ಸೃಷ್ಟಿಸಿತ್ತು.

ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ಇತೆರ 38 ದೇಶಗಳಲ್ಲಿ ವ್ಯವಹರಿಸುತ್ತಿದ್ದರೂ ಅಮೆರಿಕಾದ ಹೊರಗೆ ಭೋಪಾಲಿನಲ್ಲಿ ಮಾತ್ರ ಅದು SEVIN ನನ್ನು ಉತ್ಪಾದಿಸುತ್ತಿತ್ತು. ಭಾರತದ ಕೈಗಾರಿಕಾ ನೀತಿ, ಮತ್ತು ವಿವೇಚನಾ ಕೊರತೆಯಿಂದಲ್ಲದೆ ಇಂತ ವಿಷಕಾರಕ ಘಟಕವನ್ನು ಇಲ್ಲಿ ಸ್ಥಾಪಿಸುವ ಅಗತ್ಯಗಳೇ ಇರಲಿಲ್ಲ. ಯಾವ ಬುದ್ಧಿವಂತ ದೇಶ ಕೂಡ ಇಂತ ಕೈಗಾರಿಕೆಗಳನ್ನು ತನ್ನ ನೆಲದಲ್ಲಿ ಸ್ಥಾಪಿಸಲು ಇಚ್ಛಿಸಲಾರದು.

4. ಉತ್ಪಾದನೆಯಲ್ಲಿ ಸರ್ಕಾರಿ ನಿಯಂತ್ರಣ

ಯೋಜನಾ ಆಯೋಗವು ಸಿದ್ಧಪಡಿಸಿದ ಬೇಡಿಕೆಯ ಅಂದಾಜಿನಂತೆ UCIL 500 ಮೆಟ್ರಿಕ್ ಟನ್ನ್ SEVIN ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿತು.

ಸರ್ಕಾರವು ಪರವಾನಿಗೆಯ ಜೊತೆಗೆ ಅನೇಕ ಶರತ್ತುಗಳನ್ನೂ ವಿಧಿಸಿತು. SEVIN ಉತ್ಪಾದಿಸಲು ?-ನಾಫ್ತಾಲ್ ಜೊತೆಗೆ MIC ಯೂ ಅಗತ್ಯವಿದ್ದು, ಇವೆರಡು ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಬೇಕಾಗಿತ್ತು.

ಯೂನಿಯನ್ ಕಾರ್ಬೈಡ್‌ಗೆ ಭಾರತದಲ್ಲಿ α-ನಾಫ್ತಾಲ್ ಘಟಕ ಸ್ಥಾಪಿಸುವ ಇಚ್ಛೆ ಇರಲಿಲ್ಲ. ಇದು SEVIN ಉತ್ಪಾದನೆಯಲ್ಲಿ ಬಿಟ್ಟರೆ ಬೇರಾವುದರಲ್ಲೂ ಉಪಯೋಗವಿರಲಿಲ್ಲ. SEVIN ಈಗಾಗಲೇ ಹನ್ನೆರಡು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದು ಕೀಟಗಳು ಪ್ರತಿರೋಧವನ್ನು ಬೆಳೆಸಿಕೊಂಡಿದ್ದವು. ಯೂನಿಯನ್ ಕಾರ್ಬೈಡ್ ಮತ್ತೊಂದು ಕೀಟನಾಶಕದ ತಯಾರಿಯಲ್ಲಿತ್ತು. ಅವರಿಗೆ ನಾಫ್ತಾಲಿನ ಅಗತ್ಯವಿರಲಿಲ್ಲ. UCIL ಗೆ ಅಗ್ಗವಾಗಿ α-ನಾಫ್ತಾಲ್ ಅಮದು ಮಾಡಿಕೊಳ್ಳುತ್ತಿರಬೇಕಾದರೆ ಅದನ್ನು ಉತ್ಪಾದಿಸುವ ಅಗತ್ಯ ಕಾಣುತ್ತಿರಲಿಲ್ಲ.

ಆದರೆ ಭಾರತ ಸರ್ಕಾರದ ಪ್ರಭುಗಳ, ಸರ್ಕಾರಿ ಬಾಬುಗಳ ತೀರ್ಮಾನ ಇಂತ ಲೆಕ್ಕಾಚಾರಗಳಿಗೆ ಹೊರತಾಗಿತ್ತು.

5. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಮತ್ತು ಭಾರತೀಕರಣ

ಕೈಗಾರಿಕರಂಗದಲ್ಲಿ ಭಾರತೀಕರಣವನ್ನು ಹೆಚ್ಚೆಚ್ಚು ಉತ್ತೇಜಿಸಲು ಶ್ರೀಮತಿ ಇಂದಿರಾ ಗಾಂಧಿಯವರು 1974 ರಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (FERA) ನ್ನು ತಂದರು. Bhopal-Gas-Tragedy-6ಇದರ ಪರಿಣಾಮ ಭಾರತದಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿ ತಂತ್ರಜ್ಞರ ಮೇಲೂ ಬೀರಿತು. ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳವನ್ನು 60% ರಿಂದ 50.9 % ಇಳಿಸಬೇಕಾಯಿತು. ಬಹಳಷ್ಟು ವಿದೇಶಿ ಕಂಪೆನಿಗಳು ಭಾರತದಿಂದ ಕಾಲ್ತೆಗೆದವು. 40% ಕಂಪೆನಿಗಳು 1973-1980 ರ ಮಧ್ಯೆ ಭಾರತವನ್ನು ತೊರೆದವು. ಇವುಗಳಲ್ಲಿ IBM ಮತ್ತು ಕೋಕಾಕೋಲ ಪ್ರಮುಖವಾದವು. ಇವುಗಳ ಮೇಲೆ ತಮ್ಮ ಉತ್ಪಾದನಾ ಗುಟ್ಟನ್ನೂ ಹಂಚಿಕೊಳ್ಳುವಂತೆ ಒತ್ತಡವನ್ನು ಹೇರಲಾಗಿತ್ತು. ಈಗ ಕಾಲ ಬದಲಾಗಿದೆ. ವಿದೇಶಿ ಹೂಡಿಕೆಯನ್ನು ಅರಸುತ್ತಾ ನಮ್ಮ ಹೊಸ ಪ್ರಧಾನಿಗಳು ದೇಶ ದೇಶಗಳನ್ನು ಸುತ್ತುತ್ತಿದ್ದಾರೆ!

UCIL ಗೆ ಹೊಸ ಕಾರ್ಖಾನೆಯ ವಿನ್ಯಾಸವನ್ನು UCC ಯಿಂದ ಅಮದು ಮಾಡಿಕೊಳ್ಳಲು ಅನುಮತಿಯನ್ನು ಕೊಟ್ಟರೂ ಅದನ್ನು ಸ್ಥಳೀಯವಾಗಿ ನಿರ್ಮಿಸುವಂತೆ ನೋಡಿಕೊಳ್ಳಲಾಯಿತು. UCC ಯನ್ನು ಆದಷ್ಟು ದೂರಕ್ಕೇ ನಿಲ್ಲಿಸಲಾಯಿತು. ಈ ಕಾರಣಕ್ಕಾಗಿ UCC ತನ್ನ ವಿನ್ಯಾಸ ವರ್ಗಾವಣೆ ಒಪ್ಪಂದದಲ್ಲಿ, ಯಾವುದೇ ದುರ್ಘಟನೆಗಳಿಗೆ ತಾನು ಹೊಣೆಯಲ್ಲ ಎಂಬ ಕಲಮನ್ನು ಸೇರಿಸಿ ಕಾನೂನಾತ್ಮಕ ಜವಬ್ದಾರಿಯಿಂದ ಕಳಚಿಕೊಂಡಿತು. ಒಂದು ವೇಳೆ ಭೋಪಾಲ್ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗೆ ಒಡಂಬಡಿಕೆ ಜರುಗದಿದ್ದ ಪಕ್ಷದಲ್ಲಿ ಖಂಡಿತವಾಗಿಯೂ UCC ಒಂದು ನಯಾಪೈಸೆ ಪರಿಹಾರವನ್ನು ಕೊಡದೇ ಪಾರಾಗುತ್ತಿತ್ತು.

6. ಆಟದ ನಿಯಮಗಳಲ್ಲಿ ಹಟಾತ್ತ್ ಬದಲಾವಣೆ

70 ರ ದಶಕದಲ್ಲಿ ಭಾರತ ಸರ್ಕಾರವು ಎರಡನೇ ದರ್ಜೆಯ ಕೀಟ ನಾಶಕಗಳನ್ನು ತಯಾರಿಸುವ ಉತ್ಪಾದಕರನ್ನು ಉತ್ತೇಜಿಸಿ ಪ್ರೋತ್ಸಾಹಿಸತೊಡಗಿತು. ಇವು SEVIN ನ ಅರ್ಧ ಬೆಲೆಗೆ ಮಾರಾಟವಾಗುತ್ತಿದ್ದವಷ್ಟೇ ಅಲ್ಲದೆ ಸರ್ಕಾರದ ಸಬ್ಸಿಡಿಯನ್ನೂ ಪಡೆಯುತ್ತಿದ್ದವು. ಇದರಿಂದಾಗಿ SEVIN ನ ಉತ್ಪಾದನೆ 1000 ಮೆ.ಟ., ಗೆ ಕುಸಿಯಿತು. ಯೋಜನಾ ಆಯೋಗದBhopal-Gas-Tragedy-5 ಅಂದಾಜಿನಂತೆ ಅದರ ಬೇಡಿಕೆ ಅದರ 5 ರಷ್ಟಾಗಬೇಕಿತ್ತು!

7. ರಾಜಕೀಯ ಕಾರಣಗಳು

SEVIN ಉತ್ಪಾದನಾ ಘಟಕಕ್ಕೆ ಅನುಮತಿಯನ್ನಿತ್ತಾಗ ಅದರ ಸುತ್ತಮುತ್ತ ಯಾವುದೇ ವಸತಿ ಪ್ರದೇಶಗಳಿರಲಿಲ್ಲ. ನಗರ ಬೆಳೆದಂತೆ ಕಾರ್ಖಾನೆಯ ಸುತ್ತ ವಸತಿ ಪ್ರದೇಶವೂ ಹಬ್ಬಿತು. UCIL ನ ವಿರೋಧದ ನಡುವೆಯೂ ಸ್ಥಳೀಯ ಆಡಳಿತ ಪಕ್ಷಗಳು ವೋಟಿಗಾಗಿ ಸ್ಲಂ ನಿವಾಸಿಗಳಿಗೆ ಖಾತೆಗಳನ್ನು ಮಾಡಿಕೊಟ್ಟವು.

ಇದಕ್ಕಿನ್ನ ನಾಚಿಕೆಗೆಟ್ಟ ವಿಷಯವೆಂದರೆ 1985 ರ ಭೋಪಾಲ್ ಅನಿಲ ಸೋರಿಕೆ ದುರಂತ ಕಾಯ್ದೆಯ ರಚನೆ ಮತ್ತು UCIL ನಲ್ಲಿ 25% ಬಂಡವಾಳ ಹೊಂದಿದ್ದು ಅದರ ಆಡಳಿತ ಮಂಡಳಿಯಲ್ಲಿದ್ದ ಸರ್ಕಾರಕ್ಕೇ UCC ಮೇಲೆ ಸಂತ್ರಸ್ತರ ಪರವಾಗಿ ದಾವೆ ಹೂಡುವ ಅಧಿಕಾರ ವಹಿಸಿಕೊಟ್ಟಿದ್ದು! ನ್ಯಾಯಲಯದ ಹೊರಗಿನ ಒಪ್ಪಂದದಂತೆ UCC ಸಂತ್ರಸ್ತರಿಗೆ 750 ಕೋಟಿ ರುಪಾಯಿಗಳನ್ನು ಕೊಡಲು ಒಪ್ಪಿಕೊಂಡಿತಾದರೂ ಸರ್ಕಾರ ಯಾವುದೇ ನೈತಿಕ, ಆರ್ಥಿಕ ಜವಬ್ದಾರಿಗಳಿಂದ ನುಣುಚಿಕೊಂಡಿತು.

ಕೇಂದ್ರಿಕೃತ ಯೋಜನೆಗಳ ವೈಫಲ್ಯಕ್ಕೆ ಭೋಪಾಲ್ ಕಾರ್ಖಾನೆ ಒಂದು ಜ್ವಲಂತ ಉಧಾಹರಣೆಯಾಗಿದೆ. ಇಂತ ವ್ಯವಸ್ಥೆಗಳಲ್ಲಿ ಸರ್ಕಾರಗಳಿಗೆ ಯಾವುದೇ ಜವಾಬ್ದಾರಿಗಳಿರುವುದಿಲ್ಲ. ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರುಕಟ್ಟೆ ಶಿಸ್ತಿನ ನಿಯಂತ್ರಣವಿರುವುದಿಲ್ಲ.

ಭೋಪಾಲ್ ರಸಾಯನಿಕ ಘಟಕವು ಯಾವತ್ತಿಗೂ ಲಾಭಕರವಾಗಿರಲಿಲ್ಲ. 1948 ರಲ್ಲೇ 4 ಮಿಲಿಯನ್ ಡಾಲರುಗಳಷ್ಟು ನಷ್ಟವನ್ನು ಹೊಂದಿ ಅದರ ಬಹಳಷ್ಟು ನಿಪುಣ ಕೆಲಸಗಾರರು ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗಿದ್ದರು. UCIL ಮತ್ತು UCC ಮಧ್ಯೆ ಕೊಂಡಿಯಾಗಿದ್ದವನೆಂದರೆ ವಾರೆನ್ ವೂಮರ್. ಇವನು ಒಬ್ಬ ದಕ್ಷ ಇಂಜಿನಿಯರನಾಗಿದ್ದು ಬಹಳಷ್ಟು ಭಾರತದ ಇಂಜಿನಿಯರುಗಳಿಗೆ UCC ಯ ವರ್ಜೀನಿಯ ಕಾರ್ಖಾನೆಯಲ್ಲಿ ತರಬೇತಿ ನೀಡಿದ್ದ. ಇವನು ಭೋಪಾಲ್ ಘಟಕ ಪ್ರಾರಂಭವಾದ 1980 ನೇ ವರ್ಷದಿಂದ 1982 ರ ವರೆಗೆ UCIL ನಲ್ಲಿ ನಿರ್ವಾಹಕನಾಗಿದ್ದ. 1982 ರಲ್ಲಿ ವಿದೇಶಿ ವಿನಿಮಯ ಕಾಯ್ದೆಯ ಭಾರತೀಕರಣ ನೀತಿಯಂತೆ ವಾರೆನ್ ವೂಮರ್ ಅಮೆರಿಕಾಕ್ಕೆ ವಾಪಸ್ಸು ಹೋಗಬೇಕಾಯಿತು. ಇದರ ಬಳಿಕ ಈ ಘಟಕವನ್ನು ನಡೆಸಲು UCIL ಉತ್ಸಾಹ ಕಳೆದುಕೊಂಡಿತು. ಅದನ್ನು ಮುಚ್ಚಲು ಅದು ಯೋಚಿಸಿತ್ತು.

ವರ್ಜೀನಿಯ ಕಾರ್ಖಾನೆಯ ಮೂಲ ನಕ್ಷೆಯನ್ನು ಯಥಾವತ್ತಾಗಿ ಪಾಲಿಸದೆ ಹೆಚ್ಚುವರಿ ಉಧ್ಯೋಗಗಳನ್ನು ಸೃಷ್ಟಿಸಲು ಹೋಗಿ ಆನೇಕ ಸ್ವಯಂಚಾಲಿತ ವಿಧಾನಗಳನ್ನು ಕೈಬಿಟ್ಟು ಮಾನವ ಪ್ರಮಾದಗಳನ್ನು ಹೆಚ್ಚಿಸುವಂತ ವಿನ್ಯಾಸಗಳಿಗೆ ಅನುವು ಮಾಡಿಕೊಡಲಾಯಿತು. ಅಲ್ಲದೆ ಆದಷ್ಟು ಬೇಗ UCC ಸಹಯೋಗವನ್ನು ಕಡಿತಗೊಳಿಸಲು ಸ್ಥಳೀಯ ಘಟಕಕ್ಕೆ ಒತ್ತಡ ಹೇರಲಾಯಿತು. ಕೊನೆಗೆ ಇದನ್ನು ಜನವರಿ 1985 ರ ವರೆಗೆ ವಿಸ್ತರಿಸಲಾಯಿತು. 1984 ರ ಡಿಸೆಂಬರಿನಲ್ಲಿ ದುರಂತ ಜರುಗಿತು.

ಇದಾದ ನಂತರ ದೇಶದಲ್ಲಿ ಕೈಗಾರಿಕಾ ಸುರಕ್ಷತೆ ಮಾನದಂಡಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಆದರೆ ಥಾಮಸ್ ಸೊವೆಲ್ಲ್ ಕೇಳುವಂತೆ ಮೂಲಭೂತ ಪ್ರಶ್ನೆ ‘ಯಾವುದು ಅತ್ಯಂತ ಸುರಕ್ಷತಾ ವಿಧಾನ’ವೆಂಬುದಲ್ಲ, ಆದರೆ ಅದನ್ನು ನಿರ್ಧರಿಸುವವರು ಯಾರೆಂಬುದು. ಅದು ತಾಂತ್ರಿಕವಾಗಿ ಅನಕ್ಷರಸ್ತರಾದ ಬ್ಯೂರಾಕ್ರಟ್‌ಗಳು ಮತ್ತು ರಾಜಕಾರಣಿಗಳು ನಡೆಸುವ ಸರ್ಕಾರಗಳೇ? ಈ ಸರ್ಕಾರಗಳು ಕೆಟ್ಟದಾಗಿ ನಿರ್ಮಿಸಿ, ಅದಕ್ಕಿನ್ನ ಕೆಟ್ಟದಾಗಿ ನಿರ್ವಹಿಸುತ್ತಿರುವ ರಸ್ತೆಗಳಿಂದ ದಿನನಿತ್ಯ ನೂರಾರು ಜನರನ್ನು ಕೊಲ್ಲುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ನಿಯಂತ್ರಿತ ಅರ್ಥ ವ್ಯವಸ್ಥೆಯನ್ನು ನಡೆಸುತ್ತಿರುವ ನಮ್ಮ ಸರ್ಕಾರಕ್ಕೆ ಯಾವುದು ಸುರಕ್ಷಿತವೆಂಬ ಜ್ಞಾನವೇ ಇಲ್ಲ. ಆದರೂ ಜನರನ್ನು ಕತ್ತಲೆಯಲ್ಲಿಟ್ಟು ಈ ರಾಜಕಾರಣಿಗಳು ಮತ್ತು ಬ್ಯೂರಾಕ್ರಟ್‌ಗಳು ಕೈಗಾರಿಕೋಧ್ಯಮದ ಪ್ರತಿ ಹಂತವನ್ನೂ ನಿಯಂತ್ರಿಸುತ್ತಿದ್ದಾರೆ. ದಿನೇ ದಿನೇ ಬದಲಾಗುತ್ತಿರುವ ಔಧ್ಯಮಿಕ ವಾತಾವರಣದಲ್ಲಿ ಮಾರುಕಟ್ಟೆಯನ್ನು ಕದಡುತ್ತಿರುವ ತನ್ನ ನೀತಿಗಳ ಪರಿಣಾಮಗಳನ್ನು ಸರ್ಕಾರವೆಂಬುದು ಖಂಡಿತವಾಗಿಯೂ ಊಹಿಸಲಾರದು.

ಅನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುರಕ್ಷತೆಯು ಉಧ್ಯಮದ ಜವಾಬ್ದಾರಿಯಾಗಿರುತ್ತದೆ. ಇದಕ್ಕೆಂದೇ ಪರಿಣಿತವಾದ ಒಂದು ಮೂರನೇ ವ್ಯವಸ್ಥೆ ಸುರಕ್ಷತೆಯನ್ನು Bhopal-Gas-Tragedy-4ಪರೀಕ್ಷಿಸಿ, ಮಾನದಂಡಗಳನ್ನು ನಿರ್ಧರಿಸಿ ಉಧ್ಯಮಕ್ಕೆ ಸರ್ಟಿಫಿಕೆಟ್ ಕೊಡುತ್ತದೆ. ಈ ವ್ಯವಸ್ಥೆ ಕೂಡ ಈಗಿನ ಸರ್ಕಾರಿ ವ್ಯವಸ್ಥೆಯಂತೆ ಭ್ರಷ್ಟಗೊಳ್ಳುವ ಸಾಧ್ಯತೆಯಿದ್ದರೂ, ಹೆಚ್ಚು ಕಾಲ ಉಳಿಯುವುದಿಲ್ಲ. ಮಾರುಕಟ್ಟೆ ಅದನ್ನು ಹೊರದೂಡುತ್ತದೆ. ರಾಜಕಾರಣಿಗೆ ಲಂಚ ಕೊಟ್ಟರೆ ಅವನ ಜವಬ್ದಾರಿ ತನ್ನನ್ನು ಆರಿಸಿದ ಜನರಿಗೆ ಮಾತ್ರ ಸೀಮಿತವಾಗಿರುತ್ತದೆ. ಅವನು ಅದೇ ಲಂಚದಿಂದ ಮತ್ತೆ ಆರಿಸಿ ಬರುತ್ತಾನೆ.

ಅಸುರಕ್ಷಿತ ಉಧ್ಯಮಗಳು ಯಾವತ್ತೂ ಲಾಭಕರವಲ್ಲ. ಉಸಿರು ಗಟ್ಟಿಸುವ ಭೋಪಾಲ್ ಘಟಕದ ವಾತಾವರಣವನ್ನು ತೊರೆದು ಹೋದ ಆನೇಕ ತಾಂತ್ರಿಕ ಸಿಬ್ಬಂಧಿಯಂತೆ ಅಸುರಕ್ಷಿತ ಉಧ್ಯಮಗಳು ತಮ್ಮ ನಿಷ್ಣಾತ ಸಿಬ್ಬಂದಿಗಳನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗುವುದಿಲ್ಲ. ಕಾನೂನು ಸಮರಗಳು, ಪರಿಹಾರ ಪ್ಯಾಕೇಜುಗಳು ಉಧ್ಯಮದ ಧೃತಿಗೆಡಿಸಬಲ್ಲವು. ಅಸುರಕ್ಷಿತ ಉಧ್ಯಮಗಳು ಯಾವತ್ತಿಗೂ ಸುರಕ್ಷಿತವಾಗಲಾರವು.

ದಶಕಗಳಿಂದ ಭಾರತೀಕರಣ, ಕೈಗಾರಿಕಾ ರಕ್ಷಣೆಯಿಂದಾಗಿ ಕಳಪೆ ವಸ್ತುಗಳಿಂದ ಗ್ರಾಹಕರಿಗೆ ವಂಚಿಸಿ ಕಳಪೆ ಉದ್ದಿಮೆದಾರರನ್ನು ಪೋಷಿಸಿಕೊಂಡು ಬರಲಾಗಿದೆ. ನಿಪುಣ ಸ್ಥಳೀಯ ಕೆಲಸಗಾರರು ಲಭ್ಯವಿದ್ದರೆ ವಿದೇಶಿ ಹೂಡಿಕೆದಾರರಿಗೆ ಲಾಭಕರ. ಅಂತ ನೈಪುಣ್ಯತೆ ಇಲ್ಲಿಯವರಿಗೆ ಇರದಿದ್ದರೂ ಅವರಿಗೆ ತರಬೇತಿ ನೀಡಿ ತಯಾರುಮಾಡುವುದು ಕೂಡ ಅವರ ಹಿತಾಸಕ್ತಿಗನುಗುಣವಾಗಿರುತ್ತದೆ. ಇದಕ್ಕೆ ನಿರ್ಬಂಧಗಳನ್ನು ಹೇರುವುದು ದೂರದೃಷ್ಟಿಯಲ್ಲ. ಶಿಕ್ಷಣದಂತೆ ಉಧ್ಯಮದಲ್ಲೂ ಕೂಡ ಉತ್ಕೃಷ್ಟತೆ ಸ್ಪರ್ಧೆಯಿಂದ ಮಾತ್ರ ಸಾಧ್ಯ.

ವಿಚಾರಗಳಿಗೆ ಜೀವ ಕೊಟ್ಟಾಗ ಅವು ವಿಶೇಷ ಘಟನೆಗಳಾಗುತ್ತವೆ. ಅವು ತಮ್ಮಷ್ಟಕ್ಕೇ ಜೀವತಳೆಯುವುದಿಲ್ಲ. ಸಾಮಾನ್ಯವಾಗಿ ನಾವು ಕಾಣುವುದು ನಾವು ನೋಡಿದ, ಕೇಳಿದ ವಿಚಾರಗಳಿಗಷ್ಟೇ ಸೀಮಿತವಾಗಿರುತ್ತದೆ. ಘಟನೆಗಳ ಹಿಂದಿರುವ ವಿಚಾರಗಳನ್ನು ಕೆದಕಲು ನಾವು ಹೋಗುವುದಿಲ್ಲ. ಒಂದು ಅಮೂರ್ತ ವಿಚಾರ ಮನುಷ್ಯನಿಗೊಂದು ರೋಬೋಟನ್ನು ನಿರ್ಮಿಸಲು ಪ್ರೇರೇಪಿಸಿ ಅದನ್ನು ಧೂಮಕೇತುವಿನ ಮೇಲೆ ಇಳಿಸಲೂ ಅಥವಾ ದುರಂತಕ್ಕೆ ಕಾರಣವಾಗಲೂ ಶಕ್ತವಾಗಿರುತ್ತದೆ

ಇಂತಾದೊಂದು ವಿಚಾರ ಇಲ್ಲಿದೆ.
‘.. ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಿದಾಗ ನಮ್ಮ ದೇಶದಲ್ಲೇ ತಯಾರಾದ ಎರಡನೇ ದರ್ಜೆ ವಸ್ತು, ಅಮದು ಮಾಡಿಕೊಳ್ಳುವ ಮೊದಲನೇ ದರ್ಜೆಯ ವಸ್ತುವಿಗಿಂತ ಮಿಗಿಲು.’ ಜವಹರ್‌ಲಾಲ್ ನೆಹರು (1950 ರ ಒಂದು ಭಾಷಣದಿಂದ)

ಇಂತ ಸಿದ್ಧಾಂತದ ಕುರುಡು ಪಾಲನೆ ಭೋಪಾಲ್ ದುರಂತದ ಬಹುಪಾಲು ಜವಬ್ದಾರಿಯನ್ನು ಹೊರಬೇಕಾಗುತ್ತದೆ.

[“Moneylife” news magazine ಇವರ online news letter ನಿಂದ. (3/12/14) ‘7 ways the government played a role in the Bhopal disaster’ ಇದರ ಅನುವಾದ. ಮೂಲ ಲೇಖಕರು: Ravi Kiran / Shamanth Jilla.]

One thought on “ಭೋಪಾಲ್ ದುರಂತಕ್ಕೆ ಕಾರಣವಾದ ಭಾರತ ಸರ್ಕಾರದ ಏಳು ನಿರ್ಧಾರಗಳು

  1. Nagshetty Shetkar

    ಇದೊಂದು ಉತ್ತಮ ವಿಚಾರಪ್ರದವಾದ ಲೇಖನ. ಉದ್ಯಮಗಳು ಉಂಟು ಮಾಡುವ ಅಪಾಯಗಳ ಬಗ್ಗೆ ಕನ್ನಡಿ ಹಿಡಿದಿದೆ. ಆಶ್ಚರ್ಯವೇನೆಂದರೆ ಈ ಲೇಖನಕ್ಕೆ ವರ್ತಮಾನದ ರೆಗ್ಯೂಲರ್ ಓದುಗರಿಂದ ಕಾಮೆಂಟುಗಳೇ ಬಂದಿಲ್ಲ! ಇಂದು ಮಧ್ಯಮವರ್ಗದವರಲ್ಲಿ ಉದ್ಯಮಗಳು ಅನಿವಾರ್ಯ ಎಂಬ ಭಾವನೆ ಇದೆ. ಹಾಗೂ ಉದ್ಯಮಗಳಿಂದ ಆಗುವ ಅಪಾಯಗಳನ್ನು ಮೌನವಾಗಿ ಸಹಿಸಬೇಕು ಎಂಬ ರಾಜಿ ಧೋರಣೆ ಇದೆ. ಇದು ಖೇದನೀಯ.

    Reply

Leave a Reply

Your email address will not be published. Required fields are marked *