Monthly Archives: March 2013

ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕ

– ಆನಂದ ಪ್ರಸಾದ್

ಬಿಜೆಪಿ ಅಂತರಿಕ ಪ್ರಜಾಪ್ರಭುತ್ವವಿರುವ ಪಕ್ಷ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿಲ್ಲ. ಅದು ತಾನು ಬೇರೆ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಉಳಿದ ಪಕ್ಷಗಳಿಗಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕವಾಗಿದೆ. BJP-RSS-Gadkariಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದವರು ಆಡಳಿತ ನಡೆಸಬೇಕಾದುದು ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ಬಿಜೆಪಿಯಲ್ಲಿ ಜನರಿಂದ ಚುನಾಯಿತರಾದವರ ಮೇಲೆ ಅಧಿಕಾರ ಚಲಾಯಿಸುವ ಜನರಿಂದ ಚುನಾಯಿತವಾಗಿರದ ಸಂಘದ ಮುಖಂಡರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಸಂವಿಧಾನಬಾಹಿರ ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಅಧ್ಯಕ್ಷರನ್ನು ಪಕ್ಷದ ಸದಸ್ಯರು ಚುನಾವಣೆಯ ಮೂಲಕ ಆರಿಸಬೇಕಾದುದು ಸರಿಯಾದ ಕ್ರಮ. ಆದರೆ ಬಿಜೆಪಿಯಲ್ಲಿ ಸಂಘದ ಮುಖಂಡರು ಅಧ್ಯಕ್ಷರನ್ನು ಹೇರುವುದನ್ನು ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವೇ? ತಮಗೆ ನಿಷ್ಠರಾಗಿರುವವರನ್ನು, ತಮ್ಮ ಆಜ್ಞೆ ಪಾಲಿಸುವವರನ್ನು ಸಂಘದ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬರುವಂತೆ ಮಾಡಿ ರಾಜ್ಯದ ಆಡಳಿತದ ಮೇಲೆ ತಮ್ಮ ಪ್ರಭಾವ ಬೀರುವುದನ್ನು ನಮ್ಮ ರಾಜ್ಯದಲ್ಲಿ ಕಾಣುತ್ತಿದ್ದೇವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಪಾಳೇಗಾರಿಕೆ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಇದನ್ನು ಪ್ರಜೆಗಳು ಮತದಾನ ಮಾಡುವಾಗ ಗಂಭೀರವಾಗಿ ಯೋಚಿಸಬೇಕಾಗಿದೆ. ಬಿಜೆಪಿಯ ಈ ನಡವಳಿಕೆಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರವಾದ ಅಪಾಯ ಉಂಟಾಗುವ ಸಂಭವ ಇದೆ. ಎಲ್ಲಿ ಸಂಘ ಪರಿವಾರದ ಪ್ರಭಾವ ಹೆಚ್ಚಾಗಿದೆಯೋ ಅಲ್ಲೆಲ್ಲ ಸರಕಾರಿ ಯಂತ್ರ ಸಂಘದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಂಡುಬರುತ್ತದೆ. ಯಾರು ಸಂಘದ ನಿಲುವುಗಳನ್ನು ವಿರೋಧಿಸುತ್ತಾರೆಯೋ ಅವರ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುವ ಪ್ರವೃತ್ತಿ ಕಂಡುಬರುತ್ತಾ ಇದೆ. ಇದು ಬಿಜೆಪಿ ಹಾಗೂ ಸಂಘ ಪರಿವಾರ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದೇಶ ಯಾವ ರೀತಿ ಸರ್ವಾಧಿಕಾರಕ್ಕೆ ಒಳಗಾಗಬೇಕಾಗಿ ಬರಬಹುದು ಎಂಬುದರ ಸ್ಪಷ್ಟ ಮುನ್ಸೂಚನೆಯಾಗಿದೆ.

ನಿಜ, ದೇಶದಲ್ಲಿರುವ ಪ್ರಧಾನ ಪಕ್ಷವಾದ ಕಾಂಗ್ರೆಸ್ ಪಕ್ಷದಲ್ಲಾಗಲೀ, ಇತರ ಇತರ ಪ್ರಾದೇಶಿಕ ಪಕ್ಷಗಳಲ್ಲಾಗಲೀ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಅವುಗಳು ಬಿಜೆಪಿಯಷ್ಟು ದಬ್ಬಾಳಿಕೆಯ ವಾತಾವರಣವನ್ನು ದೇಶದಲ್ಲಿ ಇದುವರೆಗೆ ಉಂಟುಮಾಡಿಲ್ಲ. ಬಿಜೆಪಿಯ ಹಲವು ನಾಯಕರಿಗೆ ಸೌಮ್ಯವಾಗಿ ಮಾತಾಡುವುದೇ ಗೊತ್ತಿಲ್ಲ. ಇತರರ ಮೇಲೆ ಹಾರಿ ಆಕ್ರಮಣ ಮಾಡುವ ರೀತಿಯಲ್ಲಿ ಉಗ್ರ ಸ್ವರದಲ್ಲಿ ಮಾತಾಡುವುದನ್ನು ನಾವು ಕಾಣಬಹುದು. ಇದು ಪ್ರಜಾಪ್ರಭುತ್ವಕ್ಕೆ ಯೋಗ್ಯವಾದ ನಡವಳಿಕೆಯಲ್ಲ. ಬಿಜೆಪಿಯ ಒಂದು ರಾಜ್ಯದ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಆ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ಒಡ್ಡೋಲಗದ ರೀತಿಯಲ್ಲಿ ನೆರೆಯುವುದನ್ನು ನೋಡಿದರೆ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪಕ್ವವಾದ ನಡವಳಿಕೆಯನ್ನು ರೂಢಿಸಿಕೊಂಡಿಲ್ಲ ಎಂಬುದು ಕಂಡುಬರುತ್ತದೆ. ಕಾಂಗ್ರೆಸ್ ಪಕ್ಷವಾಗಲಿ ಬೇರಾವುದೇ ಪಕ್ಷವಾಗಲೀ ಈ ರೀತಿ ರಾಜಪ್ರಭುತ್ವದ ಶೈಲಿಯನ್ನು ಅಳವಡಿಸಿಕೊಂಡಿಲ್ಲ.

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪುರೋಹಿತಶಾಹಿ ಕಂದಾಚಾರಗಳನ್ನು ಸರ್ಕಾರೀ ಮಟ್ಟದಲ್ಲಿ ಹೆಚ್ಚು ಹೆಚ್ಚು ಜಾರಿಗೆ ತರಲಾಗುತ್ತಿರುವುದು ಕೂಡ ಉತ್ತಮ ಬೆಳವಣಿಗೆಯಲ್ಲ. ಮಂತ್ರಿಗಳು, ಮುಖ್ಯಮಂತ್ರಿಗಳು ತಮ್ಮ ಅಧಿಕಾರ ವಹಿಸಿಕೊಳ್ಳುವಾಗ ಪೂಜೆ, ಹೋಮ ಹವನಗಳನ್ನು ಮಾಡಿಸುವುದು, ವಾಸ್ತುವಿನ ಹೆಸರಿನಲ್ಲಿ ಸರ್ಕಾರಿ ನಿವಾಸಗಳನ್ನು, ಕಟ್ಟಡಗಳನ್ನು ಬೇಕಾಬಿಟ್ಟಿಯಾಗಿ ಜನತೆಯ ತೆರಿಗೆಯ ಹಣದಲ್ಲಿ ನಿರ್ಲಜ್ಜವಾಗಿ ಬದಲಾಯಿಸುವುದು ಇವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಯೋಗ್ಯರಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಇಂದು ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಪ್ರಬಲವಾದ ರಾಷ್ಟ್ರೀಯ ಪಕ್ಷವೊಂದರ ಅವಶ್ಯಕತೆ ಇರುವುದು 750px-BJP-flag.svg[1]ನಿಜವಾದರೂ ಆ ಸ್ಥಾನವನ್ನು ತುಂಬಲು ಬಿಜೆಪಿ ಯೋಗ್ಯವಾದ ಪಕ್ಷವಾಗಿ ಕಂಡುಬರುತ್ತಿಲ್ಲ. ಏಕೆಂದರೆ ಬಿಜೆಪಿ ಜನಪರ ಹೋರಾಟಗಳ ಮೂಲಕ ದೇಶವ್ಯಾಪಿ ಬೆಳೆದ ಪಕ್ಷವಲ್ಲ. ಬಿಜೆಪಿ ಜನತೆಯ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸುಲಭವಾಗಿ ಬೆಳೆದಿರುವ ಕಾರಣ ಆ ಪಕ್ಷದವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಶ್ಯಕತೆಗಳು ಏನು ಎಂಬುದೇ ತಿಳಿದಿಲ್ಲ. ಬಿಜೆಪಿ ಈ ರೀತಿ ಅಸಹಜವಾಗಿ ಬೆಳೆದ ಕಾರಣ ಬೇರೆ ರಾಷ್ಟ್ರೀಯ ಪಕ್ಷವೊಂದರ ಬೆಳವಣಿಗೆ ಆಗುವುದು ಕಷ್ಟ. ಏಕೆಂದರೆ ಈಗಾಗಲೇ ಎರಡು ಬಲಿಷ್ಠ ಪಕ್ಷಗಳು ಇರುವಲ್ಲಿ ಮೂರನೆಯ ಪಕ್ಷವೊಂದನ್ನು ಬೆಳೆಸುವುದು ನಮ್ಮ ದೇಶದಲ್ಲಿ ಬಹಳ ಕಷ್ಟವಿದೆ. ಜನರಲ್ಲಿ ಹೊಸ ಚಿಂತನೆಗಳಾಗಲೀ, ಯೋಚಿಸಿ ಮತ ನೀಡುವ ಪ್ರಭುದ್ಧತೆಯಾಗಲೀ ಬೆಳೆದಿರದ ಕಾರಣ ಹೀಗಾಗುತ್ತದೆ. ಜನರಲ್ಲಿ ಹೊಸ ಚಿಂತನೆಗಳಿಗೆ ಸ್ಪಂದಿಸುವ ವಿಚಾರಶೀಲತೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅಸ್ತಿತ್ವದಲ್ಲಿ ಇರುವ ಪಕ್ಷಗಳು ಯೋಗ್ಯವಾಗಿಲ್ಲ ಎಂದು ಕಂಡುಬಂದರೆ ಹೊಸ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಅದನ್ನು ನಮ್ಮ ಜನ ಉಪಯೋಗಿಸಿಕೊಂಡು ಪ್ರಭುದ್ಧರಾಗಿ ಒಗ್ಗಟ್ಟಿನಿಂದ ಮತದಾನವನ್ನು ಹೊಸ ವ್ಯವಸ್ಥೆಯ ಪರವಾಗಿ ಮಾಡಿದರೆ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸಬಹುದು. ಹೊಸ ಪ್ರಯೋಗಗಳಿಗೆ ನಾವು ಸ್ಪಂದಿಸುತ್ತಾ ಬಂದರೆ ಕಾಲಾನುಕ್ರಮದಲ್ಲಿ ವ್ಯವಸ್ಥೆ ಬದಲಾಗಿಯೇ ಆಗುತ್ತದೆ ಅದಕ್ಕಾಗಿ ನಾವು ಎಚ್ಚತ್ತುಕೊಂಡು ಪ್ರಜಾಪ್ರಭುತ್ವಕ್ಕೆ ಮಾರಕವಾದ ಪಕ್ಷಗಳನ್ನು ತಿರಸ್ಕರಿಸಿ ಹೊಸ ಪಕ್ಷಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಬೇಕಾದ ಅಗತ್ಯ ಇದೆ.

ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಗೆ ಜಾಮೀನು

– ರವಿ ಕೃಷ್ಣಾರೆಡ್ಡಿ

ಅಂತೂ ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಯವರಿಗೆ ನೆನ್ನೆ ಜಾಮೀನು ಸಿಕ್ಕಿತು. ಕ್ಷುಲ್ಲಕ ಒತ್ತಡಗಳಿಗೆ ತಲೆಬಾಗದ ನ್ಯಾಯಪ್ರಜ್ಞೆಯ ಮುಖ್ಯಮಂತ್ರಿ ಇದ್ದಿದ್ದರೆ ಈ ಇಡೀ ಪ್ರಸಂಗವೇ ಅನಗತ್ಯವಾಗಿತ್ತು. ಕೊನೆಗೂ ಹೋ‌ಮ್‌ಸ್ಟೇಯಲ್ಲಿ ದಾಳಿಗೊಳಗಾದ ವ್ಯಕ್ತಿಯೇ ಬಂದು ಹೈಕೋರ್ಟ್‌ನಲ್ಲಿ ನವೀನ್ ಪರವಾಗಿ ಮಾತನಾಡಿದ ಕಾರಣಕ್ಕಾಗಿ ಜಾಮೀನು ಸಿಕ್ಕಿತು. ನವೀನ್ ವಿರುದ್ದದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇದು ಎಂದಾದರೂ ಕೋರ್ಟ್‌ನ ಛೀಮಾರಿಗೆ ಒಳಗಾಗಿ ಬಿದ್ದು ಹೋಗುವ ಕೇಸೇ ಆಗಿತ್ತು. ಆದರೂ ಕೆಲವು ದುಷ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಮತಾಂಧ ನೀಚರ ಕುತಂತ್ರದ ಫಲವಾಗಿ, ಪೋಲಿಸರ ಕಾರ್ಯದಲ್ಲಿ ಅನಗತ್ಯ ಹಸ್ತಕ್ಷೇಪ ಮತ್ತು ಪ್ರಭಾವದಿಂದಾಗಿ ಒಬ್ಬ ನಿರಪರಾಧಿ ಜೈಲಿನಲ್ಲಿರುವಂತಾಗಿದ್ದು ಪ್ರಜ್ಞಾವಂತರಿಗೆಲ್ಲ ಗೊತ್ತಿರುವುದೆ. ಅದು ಈ ನಾಡಿನ ಮುಖ್ಯಮಂತ್ರಿಗೂ ತಿಳಿದಿದೆ. ಅಷ್ಟಾದರೂ, ಸಂಪುಟವೇ ತೀರ್ಮಾನ ತೆಗೆದುಕೊಂಡಿದ್ದರೂ, ಅದಕ್ಕೆ ನಾಮಕಾವಸ್ಥೆ ಸಹಿ ಮಾಡದೆ ಕುಳಿತು, ಅಮಾಯಕರು ಮತ್ತು ನಿರಪರಾಧಿಗಳು ಹೈಕೋರ್ಟ್‌ನ ಮೆಟ್ಟಿಲು ಹತ್ತುವಂತೆ ಮಾಡಿದ ಈ ಮುಖ್ಯಮಂತ್ರಿಯ ಬಗ್ಗೆ ಯಾವ ರೀತಿಯ ಗೌರವ ತೋರುವುದೋ ನನಗಂತೂ ತಿಳಿಯುತ್ತಿಲ್ಲ. ಇಡೀ ಪ್ರಸಂಗವೇ ನಮ್ಮಲ್ಲಿನ ಅನೇಕರಿಗೆ ಅಸಹಾಯಕತೆ, ಆಕ್ರೋಶ, ತಿರಸ್ಕಾರ ಹುಟ್ಟಿಸಿದ ಪ್ರಸಂಗ.

ಹೈಕೋರ್ಟ್‌ನ ಜಾಮೀನು ವಿಚಾರದಲ್ಲಿ ಪ್ರಮುಖವಾಗಿ ಇಬ್ಬರು ಅಭಿನಂದನಾರ್ಹರು: ವಕೀಲ ನಿತಿನ್ ಮತ್ತು ಮಂಗಳೂರಿನ ವಿಜಯ್‌ಕುಮಾರ್. ಇನ್ನೂ ಅನೇಕ ಜನ ಈ ಇಡೀ ಪ್ರಕ್ರಿಯೆಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಸಾಂಘಿಕ ಪ್ರಯತ್ನ ಇಲ್ಲದಿದ್ದರೆ ಬಹುಶಃ ಈ ಸರ್ಕಾರ ವಜಾಗೊಳ್ಳುವ ತನಕ ಇಷ್ಟು ಮಾತ್ರದ ಬೆಳವಣಿಗೆಗೆ ಕಾಯಬೇಕಿತ್ತೇನೊ.

ಅಂದ ಹಾಗೆ, ಬಹುಶಃ ನಾಳೆ ಅಥವ ನಾಡಿದ್ದು ನವೀನ್ ಜೈಲಿನಿಂದ ಹೊರಬರಬಹುದು. ಹೈಕೋರ್ಟ್‌ನ ಆದೇಶದ ಪ್ರತಿ ಇಂದು ದೊರೆತರೆ ಮತ್ತು ಬಾಂಡ್ ನಾಳೆಗೆ ಸಿದ್ದವಾದರೆ, ನವೀನ್ ನಾಳೆ ಬಿಡುಗಡೆ ಆಗಬಹುದು. ಸಣ್ಣಪುಟ್ಟ ವಿಳಂಬವಾದರೂ ಈಗ ಮೊದಲಿನಂತೆ ಅನಿಶ್ಛಿತತೆ ಇಲ್ಲ. ನವೀನ್ ಈ ವಾರದಲ್ಲಿ ಜೈಲಿನಿಂದ ಹೊರಬರುವುದು ನಿಶ್ಚಿತ. ಮತ್ತು ಇಂದಲ್ಲ ನಾಳೆ ಸಂಪುಟದ ನಿರ್ಧಾರಕ್ಕೆ ಸಹಿಯೂ ಬಿದ್ದು ಆರೋಪ ಪಟ್ಟಿಯಿಂದ ನವೀನ್ ಹೆಸರು ಕೈಬಿಡುವುದೂ ನಿಶ್ಚಿತ. ಆದರೆ, ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವುದು ಹೇಗೆ ಎನ್ನುವುದೆ ಮುಂದಿನ ದಿನಗಳಲ್ಲಿಯ ಸವಾಲಿನ ಪ್ರಶ್ನೆ.

ಇವು ನವೀನ್ ಸೂರಿಂಜೆ ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು:

The Hindu:
Hindu_1_19_03_13
Hindu_2_19_03_13

ವಿಜಯ ಕರ್ನಾಟಕ:
VijayKarnataka_19_03_13

ಪ್ರಜಾವಾಣಿ:
prajavani_19_03_13

ಉದಯವಾಣಿ:
udayavani_19_03_13

ಕನ್ನಡ ಪ್ರಭ:
kannadaprabha_19_03_13

ಶಾಪವಿಮೋಚನೆಯತ್ತ ಕರ್ನಾಟಕ

– ಆನಂದ ಪ್ರಸಾದ್

ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ಧಾರ್ಮಿಕ ಮೂಲಭೂತವಾದಿ ಬಿಜೆಪಿ ಹಾಗೂ ಸಂಘ ಪರಿವಾರದ ರೂಪದಲ್ಲಿ ವಕ್ಕರಿಸಿದ್ದ ಶಾಪ ವಿಮೋಚನೆಯಾಗುವ ದಿನಗಳು ಹತ್ತಿರುವಾಗುತ್ತಿವೆಯೇ ಎಂದು ಇತ್ತೀಚೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನೋಡಿದಾಗ ಅನಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಇಂಥ ದಿನಗಳಿಗಾಗಿ ಕರ್ನಾಟಕದ ಪ್ರಜ್ಞಾವಂತರು ಹಾಗೂ ಪ್ರಗತಿಪರ ನಿಲುವಿನ ಜನ ಕಾಯುತ್ತಿದ್ದಾರೆ. ಏನೆಲ್ಲಾ ಕಸರತ್ತು, ಅಧಿಕಾರದ ದುರುಪಯೋಗ, election_countingಧಾರ್ಮಿಕ ವೇಷ ತೊಟ್ಟು ಕುಣಿದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಎರಡನೇ ಸ್ಥಾನಕ್ಕೆ ಬಿಜೆಪಿ ತಳ್ಳಲ್ಪಟ್ಟಿದೆ. ಇದು ಸಂಘ ಪರಿವಾರದ ಕಪಿಮುಷ್ಟಿಯಿಂದ ರಾಜ್ಯ ಮುಕ್ತಿಪಡೆಯುವ ಆಶಾಭಾವನೆಯನ್ನು ಮೂಡಿಸಿದೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಹಸ್ತಕ್ಷೇಪ ಆಡಳಿತದ ಎಲ್ಲಾ ಹಂತಗಳಲ್ಲೂ ಆವರಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಮಂಕಾಗಿತ್ತು. ಇದರಿಂದ ಈ ಭಾಗ ಬಿಡುಗಡೆಯಾಗುವ ಲಕ್ಷಣಗಳು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಕಂಡುಬಂದಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಧಾರ್ಮಿಕ ಮೂಲಭೂತವಾದದ ಪ್ರಯೋಗಶಾಲೆಯಾಗಿ ಈ ಎರಡು ಜಿಲ್ಲೆಗಳಲ್ಲಿ ಪ್ರಜ್ಞಾವಂತರಿಗೆ ಸಂಘ ಪರಿವಾರ ಹಾಗೂ ಬಿಜೆಪಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುತ್ತಿದ್ದದ್ದು ಇಲ್ಲಿ ಮುಕ್ತ ಚಿಂತನೆಗೆ ಅವಕಾಶವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಆಡಳಿತದಲ್ಲೂ ಹಸ್ತಕ್ಷೇಪ ನಡೆಸಲಾರಂಭಿಸಿದ ಸಂಘದ ಮುಖಂಡರು ಚುನಾವಣೆಗೆ ನಿಂತು ಗೆಲ್ಲದೆಯೇ ತಮ್ಮ ಸರ್ವಾಧಿಕಾರ ಮನೋಭಾವನೆಯನ್ನು ಆಡಳಿತದಲ್ಲಿ ತೋರಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಸಮರ್ಪಕ ಪರ್ಯಾಯ ರಾಜಕೀಯ ಇಲ್ಲದೆ ಹೋದುದೇ ಇಂಥ ಒಂದು ಅಪಾಯಕಾರೀ ಬೆಳವಣಿಗೆಗೆ ಕಾರಣವಾಗಿದೆ. ಧಾರ್ಮಿಕವಾಗಿ ಹೆಚ್ಚು ನಂಬಿಕೆ ಉಳ್ಳ ಕರ್ನಾಟಕದ ಜನ ಧಾರ್ಮಿಕತೆಯ ವೇಷ ತೊಟ್ಟ ಬಿಜೆಪಿ ಹಾಗೂ ಸಂಘ ಪರಿವಾರದ ಆಡಳಿತ ಬಂದರೆ ಹೆಚ್ಚು ಉತ್ತಮ ಆಡಳಿತ ನೀಡಬಹುದೇನೋ ಎಂಬ ಭ್ರಮೆಗೆ ಸಿಲುಕಿ ಇಡೀ ರಾಜ್ಯವೇ ಐದು ವರ್ಷಗಳ ಕಾಲ ಮೇರೆ ಇಲ್ಲದ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆಯ ಹಗಲುದರೋಡೆಗೆ ಒಳಗಾಗಿ ನರಳುವಂತೆ ಆಯಿತು.srhiremath ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರ ಪ್ರಯತ್ನ ಇಲ್ಲದೆ ಇದ್ದಿದ್ದರೆ ಗಣಿಧಣಿಗಳು ಜೈಲಿಗೆ ಹೋಗದೆ ಈಗಲೂ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರು. ಸದ್ಯ ಅವರು ಜೈಲಿನಲ್ಲಿರುವ ಕಾರಣ ರಾಜ್ಯದ ರಾಜಕೀಯ ಸ್ವಲ್ಪವಾದರೂ ಸುಧಾರಿಸಿದೆ. ರೆಡ್ಡಿಯ ಅಕ್ರಮ ಗಣಿಗಾರಿಕೆಯ ಹಣದ ಬಲದಲ್ಲಿ ಕಟ್ಟಿದ ಬಿ.ಎಸ್. ಆರ್. ಕಾಂಗ್ರೆಸ್ ಪಕ್ಷದ ಗೋಮುಖವ್ಯಾಘ್ರತನವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳ್ಳಾರಿಯ ಜನ ಹಿಮ್ಮೆಟ್ಟಿಸಿರುವುದು ಇಡೀ ರಾಜ್ಯವೇ ನಿಟ್ಟುಸಿರುಬಿಡುವ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಪಕ್ಷವು ಚುನಾವಣೆಗಳಲ್ಲಿ ಬಿಜೆಪಿಯ ಸಮಬಲಕ್ಕೆ ಬರುವಷ್ಟು ಸ್ಥಾನಗಳನ್ನು ಗಳಿಸಿರುವುದು ರಾಜ್ಯದ ಮಟ್ಟಿಗೆ ಇನ್ನೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಮುಂಬರುವ ದಿನಗಳಲ್ಲಿ ಬಿಜೆಪಿಯಂಥ ಧಾರ್ಮಿಕ ಮೂಲಭೂತವಾದಿ ಪಕ್ಷದ ಜೊತೆ ಕೈ ಜೋಡಿಸದೆ ಅವಕಾಶವಾದಿ ರಾಜಕಾರಣದಿಂದ ದೂರ ಉಳಿದರೆ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬೆಳೆಯುವ ಸಂಭವ ಇದೆ. ಒಂದು ವೇಳೆ ಅಧಿಕಾರದ ಆಸೆಗೆ ಧಾರ್ಮಿಕ ಮೂಲಭೂತವಾದಿ ಪಕ್ಷವಾದ ಬಿಜೆಪಿ ಜೊತೆ ಕೈ ಜೋಡಿಸಿದರೆ ಅದರ ಬೆಳವಣಿಗೆ ಸ್ಥಗಿತವಾಗಲಿದೆ.

ಯಡಿಯೂರಪ್ಪ ಯಡಿಯೂರಪ್ಪ ನೇತೃತ್ವದ ಕೆಜೆಪಿಯೂ ಮಹತ್ವದ ಸಾಧನೆ ತೋರಿಸುವಲ್ಲಿ ವಿಫಲವಾಗಿದೆ. ಯಾವುದೇ ತತ್ವ, ಸಿದ್ಧಾಂತ ಇಲ್ಲದ ಭ್ರಷ್ಟತೆಯ ಗರ್ಭದಿಂದ ಮೂಡಿಬಂದ ಕೆಜೆಪಿಯೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆ ತೋರಿಸುವ ಸಂಭವ ಇಲ್ಲ. ಇದು ಕೊನೆಗೆ ಬಿಜೆಪಿಯಲ್ಲಿ ವಿಲೀನವಾಗುವ ಸಂಭವವೇ ಹೆಚ್ಚು. ಪಕ್ಷೇತರರು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿಸಿ ಬಂದಿರುವುದು ಪ್ರಮುಖ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆ ಕಳೆದುಕೊಂಡಿರುವುದರ ದ್ಯೋತಕವಾಗಿ ಕಾಣುತ್ತದೆ. ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಭವ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತೋರಿಸುತ್ತಿವೆ. ಇದು ನಿಜವಾಗುವ ಸಂಭವವೇ ಹೆಚ್ಚು ಏಕೆಂದರೆ ಸದ್ಯಕ್ಕೆ ಬೇರೆ ಪರ್ಯಾಯ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪರ್ಯಾಯ ಶಕ್ತಿಯಾಗುವಷ್ಟು ಬೆಳೆದಿಲ್ಲ. ಸಮೀಕ್ಷೆಗಳು ಜೆಡಿಎಸ್ ವಿಧಾನಸಭಾ ಚುನಾವಣೆಗಳಲ್ಲಿ ಮೊದಲು ಇದ್ದಷ್ಟೇ ಸ್ಥಾನಗಳನ್ನು ಗಳಿಸಬಹುದು ಎಂದು ಹೇಳುತ್ತವೆಯಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಬಿಜೆಪಿಗೆ ಸಮನಾಗಿ ಸಾಧನೆ ಮಾಡಿರುವುದು ನೋಡಿದರೆ ಅದು ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಮೂಲಭೂತವಾದಿ ಬಿಜೆಪಿ ಜೊತೆಗೂಡದೆ ಸಮರ್ಥ voteಪ್ರತಿಪಕ್ಷವಾಗಿ ಕೆಲಸ ಮಾಡಿದರೆ ಐದು ವರ್ಷಗಳ ನಂತರ ಜೆಡಿಎಸ್ ಅಧಿಕಾರಕ್ಕೆ ಬರುವಷ್ಟು ಬೆಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿಗೆ ಒಂದು ಅವಕಾಶ ಕೊಟ್ಟು ನೋಡಿರುವ ಜನ ಅದರ ಭ್ರಷ್ಟತೆ, ಅಧಿಕಾರದಾಹ, ಸರ್ವಾಧಿಕಾರಿ ಮನೋಭಾವ, ಅದರ ಸಂಘ ಪರಿವಾರಕ್ಕೆ ಸಂವಿಧಾನಬಾಹಿರವಾಗಿ ಗುಲಾಮನಂತೆ ನಡೆದುಕೊಳ್ಳುವ ರೀತಿಯಿಂದ ರೋಸಿಹೊಗಿರುವುದು ಸ್ಪಷ್ಟ. ಹೀಗಾಗಿ ಇದು ಮೊದಲಿನಂತೆ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಂಭವ ಅಧಿಕವಾಗಿದೆ ಮತ್ತು ಹಾಗಾದರೆ ಕನ್ನಡನಾಡಿಗೆ ಒಳಿತಾಗಲಿದೆ. ಕನ್ನಡನಾಡು ಮೊದಲಿನಿಂದಲೂ ಮೂಲಭೂತವಾದಿಗಳ ತವರು ಆಗಿರಲಿಲ್ಲ. ಇಲ್ಲಿ ಸಾಕಷ್ಟು ಪ್ರಗತಿಪರ ನಿಲುವಿನ ಶಕ್ತಿಗಳು ಹಾಗೂ ಮಾಧ್ಯಮಗಳು ಇವೆ. ಜನ ಧಾರ್ಮಿಕತೆಯ ವೇಷ ಹಾಕಿದ ಕಪಟಿಗಳ ಬಗ್ಗೆ ಎಚ್ಚತ್ತುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಹಾಗೂ ಇದು ಅಗತ್ಯವಾಗಿ ಆಗಬೇಕಾಗಿರುವ ಬೆಳವಣಿಗೆಯೂ ಹೌದು.

ತಮ್ಮಂತೆ ಎಲ್ಲರೂ ಜಾತಿರೋಗಿಗಳಾಗಬೇಕೆಂದು ಬಯಸುವ ಜಾತಿ ಸಂಘಗಳು

– ರವಿ ಕೃಷ್ಣಾರೆಡ್ಡಿ

ಫೆಬ್ರವರಿ.24, 2013 ರಂದು ಹಾಸನದಲ್ಲಿ ಅಲ್ಲಿಯ ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿದ್ದದ್ದು, ಅಲ್ಲಿ ಮಾಂಸಾಹಾರದ ತಿನಿಸುಗಳ ಮಾರಾಟಕ್ಕಿಟ್ಟದ್ದು, ಮತ್ತು ತದನಂತರದ ಕೆಲವು ವಾದವಿವಾದಗಳು ನಮ್ಮ ಓದುಗರಿಗೆ “ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!” ಲೇಖನದ ಮೂಲಕ ಗೊತ್ತಿರುವಂತಹುದೆ. ಒಂದು ಕೀಳುಮಟ್ಟದ ಅಪ್ರಪ್ರಚಾರ ಮತ್ತು ಅನೈತಿಕ ಪತ್ರಿಕೋದ್ಯಮಕ್ಕೆ ಮಾದರಿ ಈ ಘಟನೆಗಳು.

ಹಾಗೆಯೇ, ತಮಗೆ ಸಂಬಂಧಪಟ್ಟಿಲ್ಲದ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಜಾತ್ಯತೀತ ಲೇಖಕಿ “ತಮ್ಮ ಜಾತಿ-ಮತದವಳು” ಎಂಬ ಒಂದೇ ಕಾರಣಕ್ಕೆ ಅವರ ಮೇಲೆ ಹಕ್ಕುಸ್ವಾಮ್ಯ ಮಾಡಹೊರಟ ಅಲ್ಲಿಯ ಜೈನ ಸಂಘದ ವರ್ತನೆ ಅಪ್ರಬುಧ್ಹತೆಯುಳ್ಳದ್ದು ಮತ್ತದು ಖಂಡನೀಯ. ಮಾಂಸಾಹಾರದ ಬಗ್ಗೆ ತಮ್ಮ ತಕರಾರುಗಳಿದ್ದರೆ ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಈ ಜೈನ ಸಂಘ ತನ್ನ ಅಭಿಪ್ರಾಯ ಪ್ರಕಟಿಸಬೇಕಿತ್ತೇ ಹೊರತು ಕೇವಲ ರೂಪ ಹಾಸನರ ಹೇಳಿಕೆಯನ್ನು ಖಂಡಿಸಿದ್ದು, ಆದಕ್ಕಾಗಿ ಖಂಡನಾ ನಿರ್ಣಯಗಳನ್ನು ಕೈಗೊಳ್ಳುವುದು, ಕ್ಷಮೆ ಕೇಳಿ, ವಿಷಾದ ವ್ಯಕ್ತಪಡಿಸಿ ಎನ್ನುವುದು ಆ ಸಂಘದಲ್ಲಿರುವ ಮತಾಂಧರ ಮನಸ್ಥಿತಿಯನ್ನು ತೋರಿಸುತ್ತದೆ.

ರೂಪ ಹಾಸನರು ಜೈನ ಸಂಘದ ಪದಾಧಿಕಾರಿಗಳೇ ಅಥವ ಜೈನ ಮತದ ಪ್ರತಿನಿಧಿಯೇ? ಅಲ್ಲವೇ ಅಲ್ಲ. ಹಾಗಾಗಿ, ಕೇವಲ ರೂಪ ಹಾಸನರ ಹೇಳಿಕೆ ಖಂಡಿಸಿ ನಿರ್ಣಯ ತೆಗೆದುಕೊಂಡ ಈ ಸಂಘ ತನ್ನ ವ್ಯಾಪ್ತಿಯನ್ನು ಮೀರಿದೆ ಮತ್ತು ಪಾಳೇಗಾರಿಕೆ ಮನೋಭಾವದಿಂದ, ಸಂಕುಚಿತ ಜಾತಿಪ್ರಜ್ಞೆಯಿಂದ ನರಳುತ್ತಿದೆ. ಹಾಗೆಯೇ, ತಾನೆಷ್ಟು ಪ್ರತಿಗಾಮಿ ಮತ್ತು ತಮ್ಮ ಪದಾಧಿಕಾರಿಗಳು ಎಷ್ಟು ದಡ್ಡರು, ಅವಿವೇಕಿಗಳು, ಎಂದು ಜಾಹೀರು ಪಡಿಸಿಕೊಂಡಿದೆ. ಈ ಜಾತಿ ಸಂಘಟನೆಗಳಲ್ಲಿ ಒಂದಿಷ್ಟಾದರೂ ಕಾಮನ್ ಸೆನ್ಸ್ ಇರುವವರು ಇರುವುದಿಲ್ಲವೇ? ಯಾರಾದರೂ ಇಂತಹ ನಿರ್ಣಯಗಳ ವಿರುದ್ಧ ಕೋರ್ಟಿಗೆ ಹೋಗಿ ಇವರ ಅಧಿಕಾರದ ಅಥವ ಅಜ್ಞಾನದ ಮಿತಿಯನ್ನು ತಿಳಿಯಪಡಿಸಬೇಕು.

ಹೀಗೆ ಜಾತ್ಯತೀತರ ಮೇಲೆಲ್ಲ ಅವರು ನಮ್ಮನಮ್ಮ ಜಾತಿಗೆ ಸೇರಿದವರು ಎಂದು ಭಾವಿಸಿಕೊಂಡು ಈ ಲೇಖಕರು-ಚಿಂತಕರು ನಮ್ಮಂತೆ ಕೀಳು ಜಾತಿಮನೋಭಾವನೆಯ ಕಾಯಿಲೆಗೆ ಒಳಗಾಗಿಲ್ಲ, ಅವರೂ ಈ ಕಾಯಿಲೆ ಹತ್ತಿಸಿಕೊಂಡು ಓಡಾಡಾಬೇಕು ಎಂದು ಜಾತಿ ಸಂಘಟನೆಗಳೆಲ್ಲ ಹೇಳಿಕೆ ಕೊಡುತ್ತ ಹೊರಟರೆ, ಅವರು ನಗೆಪಾಟಲಿಗೀಡಾಗುತ್ತಾರಷ್ಟೇ ಅಲ್ಲ, ಅವರೆಲ್ಲರ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ.

ಜೈನ ಸಂಘದ ಹೇಳಿಕೆಗೆ ರೂಪ ಹಾಸನರು ಪ್ರತಿಕ್ರಿಯಿಸಿ “ಜನಮಿತ್ರ”ಕ್ಕೆ ಪತ್ರ ಬರೆದಿದ್ದಾರೆ ಮತ್ತು ಅದು ಆ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜೈನ ಸಂಘದ ನಿರ್ಣಯ, ಮತ್ತು “ಜನಮಿತ್ರ”ದಲ್ಲಿ ಪ್ರಕಟಗೊಂಡ ಪತ್ರಗಳು ಇಲ್ಲಿವೆ. ಪತ್ರಿಕೆಗಳ ಮತ್ತು ಸಂಘಟನೆಗಳ ಪ್ರತಿನಿಧಿಗಳು ಜವಾಬ್ದಾರಿಯಿಂದ ಮತ್ತು ಪ್ರಗತಿಪರ ಮನೋಭಾವದಿಂದ ಕಾರ್ಯನಿರ್ವಹಿಸಲಿ ಎಂದು ಆಶಿಸೋಣ.

jain-sangh-rupa-hassan
rupa-hassan-janamitra

ಲೇಖಕಿ ರೂಪಾ ಹಾಸನ ಅವರು ಜೈನ ಸಮಾಜದ ಕ್ಷಮೆ ಕೇಳಬೇಕಂತೆ!

– ತ್ರಿಲೋಕನಾಥ್ ಹೊಸಗದ್ದೆ

ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದ ಆವರಣದಲ್ಲಿ ದಿನಾಂಕ ಫೆ.24 ರಂದು ಜಾನಪದ ಪರಿಷತ್ತು “ಜಾನಪದ ಆಹಾರ ಮೇಳ” ಏರ್ಪಡಿಸಿತ್ತು. ಮೇಳದ ಪ್ರಯುಕ್ತ ಜೋಳದ ರೊಟ್ಟಿ, ಹೋಳಿಗೆ, ವಿವಿಧ ಕಾಳಿನ ಸಾರು, ಚಿಕನ್, ಮಟನ್, ಹಂದಿ ಮಾಂಸದ ವಿವಿಧ ಖಾದ್ಯಗಳು ಪ್ರದರ್ಶನದಲ್ಲಿದ್ದವು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಇಚ್ಚೆಗನುಗುಣವಾಗಿ ಆಹಾರ ಪದಾರ್ಥ ಸೇವಿಸಿದರು, ಕೊಂಡು ಹೋದರು.

ಸದ್ಯ ಆಹಾರ ಮೇಳದ ಹಿನ್ನೆಲೆಯಲ್ಲಿ ಹಾಸನದಲ್ಲಿ ವಿವಾದ ಎದ್ದಿದೆ. ಕವಿ, ಲೇಖಕಿ ಹಾಗೂ ಸಮಾನ ಶಿಕ್ಷಣಕ್ಕಾಗಿ, ಶೋಷಣೆ ಮುಕ್ತ ಸಮಾಜಕ್ಕಾಗಿ ನಡೆಯುವ ಹೋರಾಟಗಳಲ್ಲಿ ಭಾಗಿಯಾಗಿರುವ ರೂಪಾ ಹಾಸನ ಅವರು ಜೈನ ಸಮಾಜದ ಮುಖಂಡರಿಂದ ವಿರೋಧ, ಕ್ಷಮಾಪಣೆಗೆ ಆಗ್ರಹಗಳನ್ನು ಎದುರಿಸಬೇಕಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಗೆ ಒಂದಿಷ್ಟು ಹಿನ್ನೆಲೆ ಇಲ್ಲಿದೆ. ಆಹಾರ ಮೇಳದ ಕಾರ್ಯಕ್ರಮದ ದಿನವೇ ಹಾಸನದ ಪತ್ರಿಕೆ ‘ಜನಮಿತ್ರ’ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಪದಾರ್ಥಗಳ ವ್ಯವಸ್ಥೆ ಮಾಡುವ ಕ್ರಮವನ್ನು ಪ್ರಶ್ನಿಸಿ ಒಂದು ಸುದ್ದಿಯನ್ನು ಪ್ರಮುಖವಾಗಿ ಪ್ರಕಟಿಸಿತ್ತು. ಸುದ್ದಿ ಬರೆದ ಪತ್ರಿಕೆಯ ಮುಖ್ಯ ಸಂಪಾದಕ ಕೆ.ಪಿ.ಎಸ್. ಪ್ರಮೋದ್, ಪರಿಷತ್ತಿನ ಆವರಣದಲ್ಲಿ ಹಂದಿಮಾಂಸ ಸೇವನೆ, ಮಾರಾಟವನ್ನು ಟೀಕಿಸಿದ್ದರು. ನಂತರ ಅನೇಕರು ಪತ್ರಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಾದದ ಸರಣಿಯಲ್ಲಿ ಕೆಲ ಪ್ರಜ್ಞಾವಂತರು ಜಾನಪದ ಆಹಾರ ಮೇಲ್ವರ್ಗದವರ ಖಾದ್ಯಗಳಿಗಷ್ಟೇ ಸೀಮಿತವಾದದ್ದು ಸರಿಯಲ್ಲ ಎಂದರು. ಜಾನಪದ ಪರಿಷತ್ತು ದನದ ಮಾಂಸವನ್ನು ‘ಆಹಾರ’ ಎಂದು ಏಕೆ ಗ್ರಹಿಸಲಿಲ್ಲ ಎಂದು ಸರಿಯಾಗಿಯೇ ಪ್ರಶ್ನೆ ಮಾಡಿದ್ದರು.

ಜಿಲ್ಲಾ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡರು ಇನ್ನೊಂದು ಪ್ರಮುಖ ದಿನಪತ್ರಿಕೆ ‘ಜನತಾ ಮಾಧ್ಯಮ’ದಲ್ಲಿ ಲೇಖನವೊಂದನ್ನು ಬರೆದು ಆಹಾರ ಮೇಳದಲ್ಲಿ ಮಾಂಸಾಹಾರದ ಪ್ರಸ್ತುತತೆಯನ್ನು ಪ್ರಶ್ನಿಸಿದವರನ್ನು ಖಾರವಾಗಿಯೇ ಟೀಕಿಸಿದರು. ‘ಮಾಂಸಾಹಾರದ ವ್ಯವಸ್ಥೆ ಮಾಡಿದ್ದು ತಪ್ಪಲ್ಲ, ಸಾಹಿತ್ಯ ಪರಿಷತ್ತೇನು ಶಂಕರ ಮಠ ಅಲ್ಲ’ ಎಂದು ಉತ್ತರಿಸಿದರು. ಮುಂದಿನ ಆಹಾರ ಮೇಳಗಳಲ್ಲಿ ದನದ ಮಾಂಸವನ್ನೂ ಸೇರಿಸುವ ಮಾತುಗಳನ್ನಾಡಿದರು.

ವಿಜಯವಾಣಿ ದಿನಪತ್ರಿಕೆಯ ಹಾಸನ ವರದಿಗಾರರು ತಮ್ಮ ವಾರದ ಅಂಕಣ ‘ಲೌಡ್ ಸ್ಪೀಕರ್’ ಗೆ ಚರ್ಚಾ ವಿಶೇಷವಾಗಿ ಇದೇ ವಿವಾದವನ್ನು ಆಯ್ದುಕೊಂಡು ದಿನಾಂಕ ಮಾ.5 ರಂದು ಕೆಲವರ ಅಭಿಪ್ರಾಯ ಪ್ರಕಟಿಸಿದರು. ಹೀಗೆ ಪತ್ರಿಕೆಯ ಕೋರಿಕೆ ಮೇರೆಗೆ ಪ್ರತಿಕ್ರಿಯಿಸಿದವರಲ್ಲಿ ರೂಪಾ ಹಾಸನ ಕೂಡಾ ಒಬ್ಬರು. ಅವರ ಅಭಿಪ್ರಾಯ ಹೀಗಿತ್ತು -“ಆಹಾರದಲ್ಲಿ ಅದು ಪವಿತ್ರ, ಇದು ಅಪವಿತ್ರ ಎನ್ನುವ ಭಾವನೆ ಸರಿಯಲ್ಲ. ಆಹಾರಕ್ಕೆ ಯಾವ ದೋಷವೂ ಇಲ್ಲ. ಸಾಹಿತ್ಯ ಪರಿಷತ್ ಭವನದಲ್ಲಿ ಮಾಂಸಾಹಾರ reactionಮಾರಾಟ ಮಾಡಿದ್ದರಲ್ಲಿ ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ.” ಅಭಿಪ್ರಾಯದ ಕೊನೆಯಲ್ಲಿ ರೂಪಾ ಹಾಸನ ಅವರನ್ನು ‘ಲೇಖಕಿ’ ಎಂದು ಗುರುತಿಸಲಾಗಿತ್ತು.

ತಲೆ ಸರಿಯಿರುವ, ಸಮಚಿತ್ತದಿಂದ ಎಲ್ಲಾ ತೆರನ ಅಭಿಪ್ರಾಯಗಳನ್ನು ಸ್ವೀಕರಿಸುವ ಮನಸ್ಥಿತಿಯಿರುವ ಯಾರಿಗೇ ಆಗಲಿ, ರೂಪಾ ಹಾಸನ ಅವರ ಮಾತುಗಳಲ್ಲಿ ಯಾವ ತಪ್ಪೂ ಕಾಣುವುದಿಲ್ಲ, ವಿವಾದವನ್ನಾಗಿ ಲಂಬಿಸಬಲ್ಲ ಯಾವ ಅಂಶವೂ ಸಿಗುವುದಿಲ್ಲ. ಆದರೆ ‘ಜನಮಿತ್ರ’ ಪತ್ರಿಕೆಗೆ ಅವರ ಹೇಳಿಕೆ ‘ಜೈನ ಧರ್ಮದ ಅವಹೇಳನವಾಗಿ’ ಕಂಡಿತ್ತು.

ರೂಪಾ ಹಾಸನ ಅವರ ಪರಿಚಯ ಇರುವ ಅನೇಕರಿಗೆ ಅವರು ಜೈನ ಧರ್ಮದಲ್ಲಿ ಹುಟ್ಟಿದವರು ಎಂದು ಗೊತ್ತಿರಲಿಕ್ಕಿಲ್ಲ. ವಿಜಯವಾಣಿ ಪತ್ರಿಕೆ ಸಿಬ್ಬಂದಿ ಕೂಡಾ ಅವರನ್ನು ಜೈನ ಧರ್ಮದವರು ಎಂಬ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಕೇಳಿಲ್ಲ. ಅವರು ಲೇಖಕಿ ಎಂಬ ಕಾರಣಕ್ಕೆ ಅಭಿಪ್ರಾಯ ಕೇಳಿದ್ದಾರೆ.

“ಜನಮಿತ್ರ” ಪತ್ರಿಕೆ ತನ್ನ ಮಾ.6 ರ ಸಂಚಿಕೆಯಲ್ಲಿ ‘ಜೈನಧರ್ಮ ಮಾಂಸಾಹಾರವನ್ನು ಪ್ರಚೋದಿಸುತ್ತದೆಯೇ?’ ಎಂಬ ತಲೆಬರಹದಡಿಯಲ್ಲಿ ರೂಪಾ ಹಾಸನ ಅವರು ಮತ್ತೊಂದು ಪತ್ರಿಕೆಗೆ ನೀಡಿದ ಅಭಿಪ್ರಾಯವನ್ನು ಟೀಕಿಸುವ ಲೇಖನವನ್ನು ಪ್ರಕಟಿಸಿತು. ಅದನ್ನು ಬರೆದವರೂ ಪತ್ರಿಕೆಯ ಮುಖ್ಯ ಸಂಪಾದಕ ಪ್ರಮೋದ್ ಅವರೆ.

ಲೇಖನದ ಕೆಲ ವಾಕ್ಯಗಳಂತೂ ಅದರ ಹಿಂದೆ ಯಾವುದೋ ದುರುದ್ದೇಶ ಇದೆ ಎಂಬುದನ್ನು ಒತ್ತಿ ಹೇಳುತ್ತಿದ್ದವು. ಅಹಿಂಸೆ ತತ್ವವನ್ನು ತಲತಲಾಂತರದಿಂದ ಪ್ರತಿಪಾದಿಸಿಕೊಂಡು ಬಂದಂತಹ ಜೈನ ಸಮುದಾಯ ಮಾಂಸಾಹಾರವನ್ನು ಪ್ರಚೋದಿಸುತ್ತಾರೆಯೇ ಎಂದು ಪ್ರಶ್ನಿಸಿದರೆ ಖಂಡಿತ ಇಲ್ಲ ಎಂದು ಹೇಳಿಬಿಡಬಹುದು. ಆದರೆ ಅದೇ ಜೈನ ಸಮುದಾಯಕ್ಕೆ ಸೇರಿದ ಲೇಖಕಿ ಪ್ರಖ್ಯಾತ ಸಾಹಿತಿ ರೂಪಾ ಹಾಸನ ಮಾತ್ರ ಮಾಂಸಾಹಾರ ಸೇವನೆಯೇ ಸರಿ ಎಂದು ಪ್ರತಿಪಾದಿಸಲು ಹೊರಟಿದ್ದಾರೆ… – ಹೀಗೆ ಆರಂಭವಾಗುತ್ತದೆ ಪತ್ರಿಕೆಯ ಬರಹ.

ಜೈನ ಧರ್ಮದಲ್ಲಿ ಹುಟ್ಟಿರುವ ಕಾರಣಕ್ಕೆ, ಆ ಧರ್ಮದ ಎಲ್ಲರಿಗೂ ಮಾಂಸಾಹಾರ ಅಪವಿತ್ರವಾಗಿ ಕಾಣಬೇಕು ಎಂಬ ದನಿ ಈ ಲೇಖನದಲ್ಲಿದೆ. ಹಾಗಾದರೆ ಪತ್ರಿಕೆಯ ಎಲ್ಲಾ ಸಂಪಾದಕೀಯ ಬರಹಗಳನ್ನು, ಸುದ್ದಿ ವಿಶ್ಲೇಷಣೆಗಳನು ಆ ಮಾಲೀಕರ ಜಾತಿ, ಧರ್ಮಕ್ಕೆ ಸೀಮಿತವಾಗಿ ಗ್ರಹಿಸಲು ಸಾಧ್ಯವೇ?

ಲೇಖಕಿಯವರ ಎರಡು ಸಾಲಿನ ಅಭಿಪ್ರಾಯಕ್ಕೆ (ಅದೂ ಮತ್ತೊಂದು ಪತ್ರಿಕೆಯಲ್ಲಿ ಪ್ರಕಟವಾದದ್ದಕ್ಕೆ) ಧರ್ಮದ ಲೇಪ ಹಚ್ಚಿ ಟೀಕೆ ಮಾಡುವುದು ಅದ್ಯಾವ ಪತ್ರಿಕಾ ಧರ್ಮ? ರೂಪ ಅವರು ಜೈನಧರ್ಮೀಯರಾಗಿ ಪ್ರತಿಕ್ರಿಯೆ ನೀಡಿದ್ದಾರೆಯೆ? ಅಷ್ಟನ್ನೂ ಗ್ರಹಿಸಲಾಗದವರು ಒಂದು ಸುದೀರ್ಘ ಇತಿಹಾಸ ಇರುವ ಘನ ಪತ್ರಿಕೆಯ ಮುಖ್ಯ ಸಂಪಾದಕರಾಗಿಬಿಟ್ಟರೆ?
ಈ ಅಪ್ರತಿಮ ಪತ್ರಕರ್ತರ ಬುದ್ಧಿವಂತಿಕೆ ಅಲ್ಲಿಗೆ ನಿಲ್ಲುವುದಿಲ್ಲ.

ರೂಪ ಅವರ ಅಭಿಪ್ರಾಯ ಸ್ಪಷ್ಟ ಕನ್ನಡದಲ್ಲಿದೆ. ಕನ್ನಡ ಓದಬಲ್ಲ ಯಾರೇ ಆಗಲಿ, ಅದರಲ್ಲಿ ಅವರು ಎಲ್ಲಿಯಾದರೂ ಪರಿಷತ್ತು ಭವನ ಮಾಂಸಾಹಾರಕ್ಕೆ ಸೂಕ್ತ ಎಂದು ಹೇಳಿದ್ದಾರೆಯೆ? ಅಥವಾ ಅವರು ತಾನು ಜೈನ ಧರ್ಮೀಯಳಾಗಿ ಹೀಗೆ ಅಭಿಪ್ರಾಯ ಪಟ್ಟಿದ್ದೇನೆ ಎಂದು ಹೇಳಿದ್ದಾರೆಯೆ? ಅವರ ಮಾತು ಜೈನ ಧರ್ಮದ ಅಭಿಪ್ರಾಯವಾಗಲು ರೂಪಾ ಹಾಸನರೇನು ಜೈನ ಧರ್ಮದ ಪೀಠಾಧ್ಯಕ್ಷರೇನು? ಇಡೀ ಜೈನ ಸಮುದಾಯವನ್ನು ಅವಮಾನಗೊಳಿಸುವ ಸಂಗತಿ ಅದರಲ್ಲೇನಿದೆ? ಕಿಡಿ ಹತ್ತಿಸಿ ತಮಾಷೆ ನೋಡುವ ಅಥವಾ ಬೆಂಕಿ ಕಾಯಿಸಿಕೊಳ್ಳುವ ಕುತ್ಸಿತ ಮನಸ್ಸು ಈ ಮುಖ್ಯ ಸಂಪಾದಕರಿಗೇಕೆ?

ಇವರು ಕಿಡಿ ಹಚ್ಚಿದ್ದುದರ ಪರಿಣಾಮ ಹಾಸನದ ಜೈನ ಸಂಘದ ಸದಸ್ಯರು ದಿನಾಂಕ 6 ರಂದು ಸಭೆ ಸೇರಿ, ಪತ್ರಿಕೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯದಂತೆಯೇ, ಲೇಖಕಿಯ ಹೇಳಿಕೆಯನ್ನು ಖಂಡಿಸಿದ್ದಾರೆ. ರೂಪಾ ಹಾಸನ ಅವರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಅಂತಹ ಹೇಳಿಕೆ ನೀಡಿದಕ್ಕಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಈ ಬೆಳವಣಿಗೆಯ ನಂತರ ಜನಮಿತ್ರದ ಪತ್ರಕರ್ತ ಶಿರೋಮಣಿಗಳು ‘ಜನಮಿತ್ರ ಫಲಶೃತಿ’ ಎಂದು ಲೇಬಲ್ ಹಾಕಿಕೊಂಡು ಆ ಸುದ್ದಿಯನ್ನೂ ಪ್ರಕಟಿಸಿ ಕಾಲರ್ ಹಾರಿಸಿದರೂ ಅಚ್ಚರಿ ಪಡಬೇಕಿಲ್ಲ.

ಸಮಾಜದ ಮುಖಂಡರಿಗೇನು ಕನ್ನಡ ಅರ್ಥವಾಗುವುದಿಲ್ಲವೇ? ಅವರ ಹೇಳಿಕೆಯಲ್ಲಿ ಧರ್ಮದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ ಎಂದು ಎಲ್ಲಿಯಾದರೂ ಮತನಾಡಿದ್ದಾರ ಎನ್ನುವುದನ್ನು ತೆರೆದ ಮನಸ್ಸಿನಿಂದ ಗ್ರಹಿಸುವಷ್ಟೂ ಪ್ರೌಢಿಮೆ ಅವರಿಗಿಲ್ಲವೆ?

ಹಾಸನದ ಗಲ್ಲಿಗಳಲ್ಲಿ ಸದ್ಯ ಹಬ್ಬಿರುವ ಗುಲ್ಲೆಂದರೆ ಇಡೀ ಪ್ರಕರಣದ ಹಿಂದೆ ಕೀಳು ಮಟ್ಟದ ರಾಜಕೀಯ ಇದೆ. ಈ ಲೇಖನಗಳನ್ನು ಬರೆದವರು ಮುಖ್ಯ ಸಂಪಾದಕರಲ್ಲ. ಅವರಿಗೆ ಹೀಗೆಲ್ಲಾ ಬರೆದು ಅಭ್ಯಾಸವಿಲ್ಲ. ಕನ್ನಡದ ಅನೇಕ ಸಂಪಾದಕರಂತೆ ಅವರು ‘ಬರೆಯುವ ಸಂಪಾದಕರಲ್ಲ’. ಆದರೆ ಅದೇ ಪತ್ರಿಕೆಯಲ್ಲಿ ಸಂಪಾದಕ ಹುದ್ದೆಯಲ್ಲಿರುವ ಎಚ್. ಬಿ. ಮದನ್ ಗೌಡ ಅವರ ದುರುದ್ದೇಶ ಪೂರಿತ ಪ್ರಲಾಪಗಳಿವು.

ಈ ಹಿಂದಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಇದೇ ಮದನ್ ಗೌಡ. ಅವರ ಕಾಲಾನುಕ್ರಮದಲ್ಲಿ ಪರಿಷತ್‍ನ ಕಾರ್ಯಚಟುವಟಿಕೆಗಳನ್ನು ನಡೆಸುವಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಲಿಲ್ಲ ಮತ್ತು ಮೇಲಾಗಿ ಅವರ ಕಾಲಾವಧಿ ಮೂರು ವರ್ಷ ಮುಗಿದಿದ್ದ ಕಾರಣ, ಹಂಪನಹಳ್ಳಿ ತಿಮ್ಮೇಗೌಡರನ್ನು ಪರಿಷತ್‍ನ ರಾಜ್ಯ ಘಟಕ ನೇಮಿಸಿದೆ. ಆದರೆ ಹೀಗೆ ನೇಮಕ ಮಾಡುವಾಗ ಮದನ್ ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆ ಕಾರಣಕ್ಕಾಗಿಯೇ ಆಹಾರ ಮೇಳದ ಬಗ್ಗೆ ವಿವಾದ ಹುಟ್ಟು ಹಾಕಿದರು. ಅದನ್ನು ಮುಂದುವರಿಸುತ್ತಾ ರೂಪಾ ಹಾಸನ ಅವರ ಅಭಿಪ್ರಾಯವನ್ನು ವಿವಾದವನ್ನಾಗಿ ಪರಿವರ್ತಿಸಿ ಜೈನ ಸಮಾಜವನ್ನು ಎತ್ತಿಕಟ್ಟಿ ತಮಾಷೆ ನೋಡುವ ವಿಕೃತ ಮನಸ್ಸು ಇಲ್ಲಿ ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾದಿನ (ಗುರುವಾರ) ಒಬ್ಬ ಕವಿ, ಲೇಖಕಿಗೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿ roopa-hassanಒಂದು ಧರ್ಮದವರು ಕ್ಷಮಾಪಣೆಗೆ ಆಗ್ರಹಿಸಿದ್ದಾರೆ. ಇದೆಲ್ಲದರ ಹಿಂದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಿರುವ ಪತ್ರಿಕಾ ಮಾಧ್ಯಮದ ಕೆಲ ಕೊಳಕು ಮನಸುಗಳು ಕಾರಣವಾಗಿರುವುದು ವಿಪರ್ಯಾಸ. ಇಂದು ಮಹಿಳಾ ದಿನ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸದಾ ದನಿ ಎತ್ತುವ ರೂಪಾ ಹಾಸನ ಅವರ ಬೆಂಬಲಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ಎಲ್ಲಾ ಪ್ರಜ್ಞಾವಂತ ಮನಸುಗಳು ಅವರೊಂದಿಗೆ ನಿಲ್ಲಬೇಕಿದೆ.