Monthly Archives: July 2013

ಫಲಭರಿತ ಮರವ ಕಡಿದವರು ಯಾರು..: ಒಂದು ಪ್ರತಿಕ್ರಿಯೆ


– ರವಿ ಕೃಷ್ಣಾರೆಡ್ದಿ


 

ಎರಡು ದಿನದ ಹಿಂದೆ ಪ್ರಜಾವಾಣಿ ಓದುವಾಗ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ವಸು ಮಳಲಿಯವರ “ಕಡೆಗೋಲು” ಅಂಕಣ ಓದುವುದು ಮಿಸ್ ಆಗಿತ್ತು. ಆದರೆ ಅದೇ ದಿನ ಇಬ್ಬರು ಗೆಳೆಯರು (ಪ್ರಗತಿಪರ ಹೋರಾಟದ ಹಿನ್ನೆಲೆ ಇರುವವರು) ಡಾ. ವಸುರವರ ಲೇಖನದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿ ವಿಮರ್ಶಿಸಿದಾಗ, ತಪ್ಪಿ ಹೋಗಿದ್ದನ್ನು ಹುಡುಕಿ ಓದಿದೆ.

ಫಲಭರಿತ ಮರವ ಕಡಿದವರು ಯಾರು…” ಎಂಬ ತಮ್ಮ ಲೇಖನದಲ್ಲಿ ಡಾ. ವಸುರವರು ಎಚ್‌ಎಂ‌ಟಿ ಕಾರ್ಖಾನೆಯ ಕುರಿತು ಬರೆಯುತ್ತ ಅದರ ಅವಸಾನಕ್ಕೆ ಜಾಗತೀಕರಣ ಮತ್ತು ಖಾಸಗೀಕರಣವೇ ಕಾರಣ ಎಂದು ಹೇಳುತ್ತಾರೆ. ಖಾಸಗೀಕರಣವನ್ನು ವಿರೋಧಿಸುವ ಭರದಲ್ಲಿ vasu-maLaliಲೇಖಕಿ ಹಲವಾರು ವಿಷಯಗಳನ್ನು ಪರಿಗಣಿಸದೆ, ಎಚ್‌ಎಂ‌ಟಿ ಕಾರ್ಖಾನೆ ಮತ್ತು ಅಂತಹ ಸಾರ್ವಜನಿಕ ಉದ್ದಿಮೆಗಳನ್ನು ಆದರ್ಶದ ಪರಮಾವಧಿ ಎಂಬ ರೀತಿಯಲ್ಲಿ ಕಟ್ಟಿಕೊಡುತ್ತಾರೆ. ಆದರೆ, ಇದು ನಿಜವೇ?

ಎಚ್‌ಎಂಟಿಯೊಂದೇ ಅಲ್ಲ, ದೇಶದ ಅನೇಕ ಪ್ರಮುಖ ಸಾರ್ವಜನಿಕ ಉದ್ದಿಮೆಗಳು, ಅದರಲ್ಲೂ ವಿಶೇಷವಾಗಿ ಕಾರ್ಖಾನೆಗಳು ಮುಚ್ಚಿಹೋಗಲು ಕಾರಣವಾಗಿದ್ದು ಅವುಗಳು ವರ್ಷದಿಂದ ವರ್ಷಕ್ಕೆ ನಷ್ಟಕ್ಕೀಡಾಗುತ್ತ ಹೋಗಿದ್ದೇ ಪ್ರಮುಖ ಕಾರಣ. ಲಾಭದಲ್ಲಿ ನಡೆಯುತ್ತಿದ್ದ ಹಲವು ಕಾರ್ಖಾನೆಗಳು ಈಗಲೂ ಬದುಕಿವೆ. ಆದರೆ ಎಚ್‌ಎಂ‌ಟಿಯಂತಹ ಕಾರ್ಖಾನೆಗಳು ಬಾಗಿಲು ಹಾಕುವಂತೆ ಆಗಿದ್ದು ಹೇಗೆ?

ಎಚ್‌ಎಂ‌ಟಿ, ಬೆಮೆಲ್, ಬಿಇಎಲ್, ಬಿಎಚ್‌ಇಎಲ್, ಮುಂತಾದ ಹಲವಾರು ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಸ್ಪಾಪಿಸಿದಾಗ ನಮ್ಮ ದೇಶದ ಆರ್ಥಿಕ ನೀತಿಗಳಲ್ಲಿ ಕಟ್ಟುಪಾಡುಗಳಿದ್ದವು. ಖಾಸಗಿಯವರಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರವೇಶಿಸುವುದಕ್ಕೆ ಕಷ್ಟವಿತ್ತು. ಮತ್ತು ಅಷ್ಟೇ ಮುಖ್ಯವಾಗಿ ಖಾಸಗಿಯವರಿಗೆ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಬೃಹತ್ ಮೊತ್ತದ ಹಣ ಮತ್ತು ಅದನ್ನು ಷೇರು ಮಾರುಕಟ್ಟೆಯಿಂದ ಸಂಗ್ರಹಿಸಬಹುದಾದ ಸಾಧ್ಯತೆಗಳೂ ಕಡಿಮೆ ಇದ್ದವು. watches-hmtಆದರೆ ದೇಶ ಕಟ್ಟುವುದಕ್ಕೆ ಈ ಬೃಹತ್ ಕಾರ್ಖಾನೆಗಳು ಬೇಕು ಎಂದಾದಾಗ ಸ್ವತಃ ಸರ್ಕಾರ ಇವುಗಳನ್ನು ಸ್ಥಾಪಿಸಲು ಮುಂದಾಯಿತು.

ಸರ್ಕಾರದ ನೇರ ಉಸ್ತುವಾರಿಯಲ್ಲಿ ಸ್ಥಾಪನೆಗೊಂಡ ಹಲವಾರು ಕಾರ್ಖಾನೆಗಳು ಆರಂಭದಲ್ಲಿ ಲಾಭವನ್ನೇ ಮಾಡಿದವು. ಹೂಡಿದ ಬಂಡವಾಳವನ್ನು ವಾಪಸು ಗಳಿಸಬೇಕೆಂಬ ಉಮೇದಿರಲಿಲ್ಲ. ಆಪರೇಷನಲ್ ಖರ್ಚುವೆಚ್ಚಗಳು ತೂಗಿ ಒಂದಿಷ್ಟು ಲಾಭ ಬಂದರೆ ಸಾಕಾಗಿತ್ತು. ಅದಕ್ಕೆ ಪೂರಕವಾದ ವಾತಾವರಣವೂ ಇತ್ತು. ಈ ಉದ್ದಿಮೆಗಳಿಗೆ ಸ್ಪರ್ಧಿಗಳೇ ಇರಲಿಲ್ಲ. ಇವರು ಎಂತಹ ಕಳಪೆ ಸಾಮಾನು ತಯಾರಿಸಿದರೂ ಅದಕ್ಕೆ ಮಾರುಕಟ್ಟೆ ಇತ್ತು. ಸಾಮಾನು ಕೊಂಡುಕೊಂಡ ನಂತರ ಎಂತಹ ಕಳಪೆ ಗ್ರಾಹಕ ಸೇವೆ ಕೊಟ್ಟರೂ ನಡೆಯುತ್ತಿತ್ತು. ಒಟ್ಟಿನಲ್ಲಿ ಮೊನಾಪಲಿ ಇತ್ತು. ಇದೇ ಕಾರಣಕ್ಕಾಗಿ ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವನೆ ಬೆಳೆಯಿತು. ಹೊಸ ಉತ್ಪನ್ನಗಳ ಅನ್ವೇಷಣೆ ತೃಪ್ತಿಕರವಾಗಿರಲಿಲ್ಲ. ದಕ್ಷತೆ ಕಮ್ಮಿಯಾಯಿತು. ಆಧುನಿಕರಣಗೊಳ್ಳಲಿಲ್ಲ. ಖರ್ಚುಗಳು ಹೆಚ್ಚಾದವು. ಭ್ರಷ್ಟಾಚಾರವೂ ಬೆಳೆಯಿತು. ಯಾರೂ ಯಾವುದೇ ಭ್ರಷ್ಟಾಚಾರ, ನಿರ್ಲಕ್ಷ್ಯ, ಮತ್ತು ಅದಕ್ಷತೆಯ ಕಾರಣಕ್ಕಾಗಿ ಶಿಕ್ಷೆಗೊಳಗಾಗ ಅನಾರೋಗ್ಯಕರ ರಕ್ಷಣಾ ನೀತಿಗಳೂ ರೂಪುಗೊಂಡವು.

ಆದರೆ, ಇದೇ ಸಮಯದಲ್ಲಿ ದೇಶದ ಆರ್ಥಿಕತೆ ಇನ್ನೊಂದು ದಿಕ್ಕಿನಲ್ಲಿ ಸಾಗುತ್ತಿತ್ತು. ಉದಾರಿಕರಣ ಮತ್ತು ಖಾಸಗೀಕರಣದ ಕಾರಣದಿಂದಾಗಿ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಿಗೆ ಮೊದಲ ಬಾರಿಗೆ ಪೈಪೋಟಿ ಎದುರಾಯಿತು. ಖಾಸಗಿಯವರು ಎಚ್‍ಎಂಟಿ, ಬೆಮೆಲ್, ಬಿಎಚ್‍ಇಲ್, ಎನ್‌ಜಿಇಎಫ್‌ಗಳಿಗಿಂತ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅವರಿಗಿಂತ ಕಡಿಮೆ ದರಕ್ಕೆ ಮಾರಲು ಆರಂಭಿಸಿದವು. ಮಾರುಕಟ್ಟೆಯಲ್ಲಿ ಉಳಿಯಬೇಕು bhel-meterಎನ್ನುವ ಉಮೇದಿನಲ್ಲಿ ಅವರ ಗ್ರಾಹಕ ಸೇವೆಯೂ ಚೆನ್ನಾಗಿತ್ತು. ಮೊನಾಪಲಿ ಕಳೆದುಕೊಂಡ ಸಾರ್ವಜನಿಕ ಉದ್ದಿಮೆಗಳು ಮೊದಲ ಬಾರಿಗೆ ನಷ್ಟ ಅನುಭವಿಸಲು ಆರಂಭಿಸಿದವು. ಅವುಗಳ ಭಾರದ ಮೇಲೆ ಅವೇ ಕುಸಿಯಲು ಆರಂಭಿಸಿದವು. ಹೆಚ್ಚು ಜನ ಕಮ್ಮಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದ ಕಾರಣಕ್ಕೆ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಗಳು ಘೋಷಣೆಯಾದವು. ಆದರೂ ಕೆಲವು ಬಿಳಿಯಾನೆಗಳನ್ನು ಸಂಪೂರ್ಣವಾಗಿ ಮುಚ್ಚದೆ ಸರ್ಕಾರಕ್ಕೆ ವಿಧಿಯಿರಲಿಲ್ಲ. ಅನಗತ್ಯವಾಗಿ ಪೋಲಾಗುತ್ತಿದ್ದ ದೇಶವಾಸಿಗಳ ಸಂಪತ್ತನ್ನು ಸರ್ಕಾರ ಅಷ್ಟು ಮಾತ್ರಕ್ಕೆ ತಡೆಹಿಡಿಯಿತು. (ಆದರೆ ಇದೇ ಸಮಯದಲ್ಲಿ ಕೆಲವು ಕಾರ್ಖಾನೆಗಳನ್ನು ಮುಚ್ಚಲು ಕೆಲವು ಖಾಸಗಿ ಕಂಪನಿಗಳು ರಾಜಕಾರಣಿಗಳನ್ನು ಮತ್ತು ಅಧಿಕಾರಶಾಹಿಯನ್ನು ದುರ್ಬಳಕೆ ಮಾಡಿಕೊಂಡಿರಬಹುದಾದ, ಆ ಪ್ರಕ್ರಿಯೆಯನ್ನು ವೇಗವಾಗಿಸಿರಬಹುದಾದ ಸಾಧ್ಯತೆಗಳಿರಬಹುದು. ಆದರೆ ಅದು ಬಹುಪಾಲು ನಷ್ಟ ಅನುಭವಿಸುತ್ತಿದ್ದ ಕಂಪನಿಗಳಿಗೇ ಅನ್ವಯಿಸುತ್ತದೆ. ಲಾಭದಲ್ಲಿದ್ದ ಕಂಪನಿಗಳು-ಅವುಗಳಲ್ಲಿ ಸರ್ಕಾರದ ಪಾಲು ಕಮ್ಮಿ ಆಗಿದ್ದರೂ-ಈಗಲೂ ನಡೆಯುತ್ತಿವೆ.)

ಈಗ ಒಂದೆರಡು ಖಾಸಗಿ ಕಂಪನಿಗಳ ವಿಚಾರಕ್ಕೆ ಬರೋಣ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ದೇಶದ ಜನರ ಕೈಯ್ಯಲ್ಲಿ ಓಡಾಡುತ್ತಿದ್ದ ಹೈಟೆಕ್ ಸಾಧನ ಎಂದರೆ motorola-pagerಅದು ಪೇಜರ್. ಅದನ್ನು ತಯಾರಿಸುತ್ತಿದ್ದ ಒಂದೇ ಕಂಪನಿ ಮೊಟೊರೊಲ, ಅಮೇರಿಕದ್ದು. ಅದಾದ ನಂತರ ನಿಧಾನಕ್ಕೆ ಸೆಲ್‌ಪೋನ್‌ಗಳು ಬಂದವು. ಆವಾಗಲೂ ಮುಂಚೂಣಿಯಲ್ಲಿದ್ದದ್ದು ಮೊಟೊರೊಲವೆ. ಇಡೀ ವಿಶ್ವದಲ್ಲಿ ಎಲ್ಲಿಂದ ಬೇಕಾದರೂ ಸೆಟಲೈಟ್ ಫೋನಿನಲ್ಲಿ ಮಾತನಾಡಬಹುದಾದಂತಹ ಒಂದು ಸಂಪರ್ಕ ವ್ಯವಸ್ಥೆಯನ್ನು (ಸುಮಾರು ಆರು ಬಿಲಿಯನ್ ಡಾಲರ್ ವೆಚ್ಚದಲ್ಲಿ) ಅದು ಅನುಷ್ಟಾನಗೊಳಿಸುತ್ತಿತ್ತು. ಆ ಸಂದರ್ಭದಲ್ಲಿ ಮೊಟೊರೊಲಕ್ಕಿಂತ ಚೆನ್ನಾಗಿ ಮೊಬೈಲ್ ಫೋನ್‌ ವ್ಯವಸ್ಥೆಯನ್ನು ಮತ್ತು ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡ ಯೂರೋಪಿನ ನೋಕಿಯಾ ಕಂಪನಿ ಮೊಟೊರೋಲಕ್ಕಿಂತ ಉತ್ತಮ ಮತ್ತು ಅಗ್ಗದ ಮೊಬೈಲ್‌ಗಳನ್ನು ತಯಾರಿಸಲು ಆರಂಭಿಸಿತು. ಮೊಟೊರೊಲ ಎರಡನೇ ಸ್ಥಾನಕ್ಕೆ ಹೋಯಿತು. ಕಾಲಕ್ರಮೇಣ ಮೂರಕ್ಕೆ, ನಾಲಕ್ಕೆ ಇಳಿಯುತ್ತಾ, ತೀವ್ರ ನಷ್ಟಕ್ಕೆ ಈಡಾಗುತ್ತ ಹೋಯಿತು. ಆ ಕಂಪನಿಗಳ ಹಲವು ವಿಭಾಗಗಳನ್ನು ಒಡೆದು ಪ್ರತ್ಯೇಕ ಕಂಪನಿಗಳನ್ನಾಗಿ ಮಾಡಿ ಹೂಡಿಕೆದಾರರ ಹಿತರಕ್ಷಣೆ ಮಾಡಿದರು, ಒಂದೆರಡು ವರ್ಷದ ಹಿಂದೆ ಮೊಟೊರೊಲದ ಮೊಬೈಲ್ ಘಟಕವನ್ನು ಸಾಫ್ಟ್‌ವೇರ ಕಂಪನಿಯಾದ ಗೂಗಲ್ ಕೊಂಡುಕೊಂಡಿತು. ಮೊಬೈಲ್ ಫೋನ್ ಉದ್ದಿಮೆಯಲ್ಲಿ ಇಲ್ಲದೇ ಇದ್ದ ಆಪಲ್ ಆ ರಂಗಕ್ಕೆ ಐಫೋನ್ ಎಂಬ ಸ್ಮಾರ್ಟ್‌ಫೋನ್ ಮೂಲಕ ಇಳಿದ ನಂತರ ಆ ವಲಯದಲ್ಲಿ ಕ್ರಾಂತಿಯಾಗಿ ಮೊದಲ ಸ್ಥಾನದಲ್ಲಿದ್ದ ನೋಕಿಯಾ ಅದಕ್ಕೆ ಪರಿಣಾಮಕಾರಿಯಾಗಿ ಸ್ಪಂದಿಸಲಾಗದ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ತೀವ್ರ ನಷ್ಟದಲ್ಲಿ ನಡೆಯುತ್ತಿದೆ. ಆ ಕಂಪನಿಯ ಭವಿಷ್ಯವೂ ಬಹಳ ದಿನ ಇದ್ದಂತಿಲ್ಲ. ಇಂದು ಕೇವಲ ದಿನವೊಂದಕ್ಕೆ ಹತ್ತು-ಹದಿನೈದು ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿದೆ ನೋಕಿಯಾ ಕಂಪನಿ. ಒಂದು ಕಾಲದಲ್ಲಿ ತಂತ್ರಜ್ಞಾನ ವಲಯದಲ್ಲಿ ದೈತ್ಯ ಕಂಪನಿಗಳಾಗಿದ್ದ ಐಬಿಎಮ್, ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳ ಲಾಭಾಂಶ ಇಂದು ಕಡಿಮೆಯಾಗಿ ಷೇರು ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಕಳೆದ ದಶಕದಿಂದೀಚೆಗೆ ಯಾವುದೇ ರೀತಿಯಲ್ಲಿ ಉತ್ತಮಗೊಂಡಿಲ್ಲ. ಪರ್ಸನಲ್ ಕಂಪ್ಯೂಟರ್‌ಗಳನ್ನು ಉತ್ಪಾದಿಸುತ್ತಿದ್ದ ಡೆಲ್, ಎಚ್‌ಪಿ, ಲೆನೊವೊ ಅಂತವುಗಳೆಲ್ಲ ಇಂದು iPhone_5_Samsung_Galaxy_S3ಸ್ಮಾರ್ಟ್‌ಪೋನ್ ಮತ್ತು ಟ್ಯಾಬ್ಲೆಟ್ ಉತ್ಪಾದನೆಯಿಂದೇನಾದರೂ ತಾವು ಬದುಕಿಕೊಳ್ಳುತ್ತೇವೆಯೇ ಎನ್ನುವ ಹಂತಕ್ಕೆ ಬಂದು ತಲುಪಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದವರು ಹಿಂದಕ್ಕೆ ಸರಿದೇ ಸರಿಯುತ್ತಾರೆ; ಎಲ್ಲಾ ವಲಯಗಳಲ್ಲೂ.

ನಮ್ಮ ಸಾರ್ವಜನಿಕ ಉದ್ದಿಮೆಗಳ ರೀತಿಯಲ್ಲಿಯೇ ಸ್ಪರ್ಧೆ ಮತ್ತು ಅನ್ವೇಷಣೆ ವಿಚಾರದಲ್ಲಿ ಮೈಮರೆತ ಅಮೆರಿಕದ ಮೂರು ಆಟೊಮೊಬೈಲ್ ದೈತ್ಯ ಕಂಪನಿಗಳು ನಾಲ್ಕು ವರ್ಷದ ಹಿಂದೆ ಇನ್ನೇನು ಬಾಗಿಲು ಮುಚ್ಚುವ ದಿವಾಳಿ ಹಂತ ತಲುಪಿದ್ದವು. ಜಪಾನಿನ ಟೊಯೊಟ ಮತ್ತು ಹೊಂಡ ಕಂಪನಿಗಳ ಉತ್ತಮ ಮತ್ತು ಕಡಿಮೆ ದರದ ಕಾರುಗಳಿಂದಾಗಿ ಜಿಎಮ್, ಫೋರ್ಡ್, ಮತ್ತು ಡೈಮ್ಲರ್-ಕ್ರೈಸ್ಲರ್ ಕಂಪನಿಗಳು ಅಮೆರಿಕ ಸರ್ಕಾರದ ಬೇಲ್‌ಔಟ್ ಮತ್ತು ಇತರೆ ಕೆಲವು ಸಂರಕ್ಷಣೆಯ ಪಾಲಿಸಿಗಳಿಲ್ಲದಿದ್ದಿದ್ದರೆ ಇಷ್ಟೊತ್ತಿಗೆ ಅವುಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡು, ಅದರ ಪರಿಣಾಮಗಳು ಆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲಾಗುತ್ತಿತ್ತು. ಆದರೆ, ಕೇವಲ ಅಮೆರಿಕ ಸರ್ಕಾರ ಆ ಕಂಪನಿಗಳಿಗೆ ಬೇಲ್‌ಔಟ್ ರೂಪದಲ್ಲಿ ಸಾಲ ಕೊಟ್ಟಿದ್ದರಿಂದೇನೂ ಆ ಕಂಪನಿಗಳು ಮತ್ತೆ ಸರಿ ದಾರಿಗೆ ಬರಲಿಲ್ಲ. ಆ ಕಂಪನಿಗಳ ಬದಲಾದ ಮ್ಯಾನೇಜ್‌ಮೆಂಟ್‌ನಿಂದಾಗಿ ಮತ್ತು ಅವರು ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ಇಂದು ಅವೂ ಬದುಕಿದವು, ಲಕ್ಷಾಂತರ ಜನ ನೌಕರಿ ಉಖಿಸಿಕೊಂಡರು, ಮತ್ತು ಅವುಗಳಲ್ಲಿ ಹಣ ಹೂಡಿದ್ದ ಲಕ್ಷಾಂತರ ಜನರ ಹಿತವೂ ರಕ್ಷಣೆಯಾಯಿತು. ಭಾರತದ ಅನೇಕ ಸಾರ್ವಜನಿಕ ಉದ್ದಿಮೆಗಳಿಗೆ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣದ ಅನುಭವ ಇಲ್ಲದ ಅನೇಕರನ್ನು, ಆ ಹುದ್ದೆಗಳಿಗೆ ಅರ್ಹವಲ್ಲದ, ಉದ್ಯಮ-ಸ್ಪರ್ಧಾತ್ಮಕತೆಯ ಪರಿಚಯ ಇಲ್ಲದ ಐಎಎಸ್ ಅಧಿಕಾರಿ ವರ್ಗದವರನ್ನೇ ಹೆಚ್ಚಿಗೆ ನೇಮಿಸಿ ನಮ್ಮ ಸರ್ಕಾರವೇ ಅವುಗಳ ಅವನತಿಗೆ ಮೂಲ ಕಾರಣವಾಯಿತು.

ಇನ್ಫೋಸಿಸ್ ಅನೇಕ ಕಾರಣಗಳಿಗೆ ದೇಶದಲ್ಲಿ ಹೊಸ ಶಕೆ ಆರಂಭಿಸಿದ ಸಂಸ್ಥೆ. ಇಲ್ಲಿಯವರೆಗಿನ ಅದರ ಯಾವೊಬ್ಬ ಸಿಇಓನೂ ಹೊರಗಿನಿಂದ ಬಂದವರಲ್ಲ. ಆ ಸಂಸ್ಥೆಯ ಟಾಪ್ ಮ್ಯಾನೇಜ್‌ಮೆಂಟ್‌ನಲ್ಲಿ ಮೇಲ್ಮುಖ ಚಲನೆ ಇತ್ತು. ತಮಗಿನ್ನೂ ವಯಸ್ಸು ಮತ್ತು ಸಾಮರ್ಥ್ಯ ಇದ್ದರೂ, ಕಂಪನಿ ಊಹೆಗೂ ನಿಲುಕದಷ್ಟು ಲಾಭ ಮತ್ತು ಸಾಮರ್ಥ್ಯ ತೊರಿಸುತ್ತಿದ್ದರೂ ನಾರಾಯಣಮೂರ್ತಿಯವರು ನಂದನ್ ನಿಲೇಕಣಿಯವರನ್ನು ಸಿಇಓ ಮಾಡಿ ತಾವು ಚೇರ್ಮನ್ ಆದರು. ಆ ಕಂಪನಿಯಲ್ಲಿ ಖಾಸಗಿ ಕಂಪನಿಗಳಲ್ಲಿ ಕಾಣದಂತಹ ನಿವೃತ್ತಿ ವಯಸ್ಸಿನ ಮಿತಿ ಇತ್ತು. ಆ ಕಂಪನಿಯ ಕಾರ್ಯನಿರ್ವಹಣಾಧಿಕಾರಿಗಳಾದವರೆಲ್ಲರೂ ಸಾಮಾನ್ಯ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು. infosys-murthyಶ್ರೀಮಂತಿಕೆ ಮತ್ತು ಕೌಟುಂಬಿಕ ಹಿನ್ನೆಲೆ ಇರುವವರು ಮಾತ್ರ ಈ ದೇಶದಲ್ಲಿ ಬೃಹತ್ ಉದ್ಯಮವನ್ನು ಸ್ಥಾಪಿಸಬಲ್ಲರು ಮತ್ತು ನಡೆಸಬಲ್ಲರು ಎನ್ನುವ ನಂಬಿಕೆಯನ್ನು ತೊಡೆದ ಸಂಸ್ಥೆ ಅದು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಅದಕ್ಕೆ ಹಿನ್ನಡೆ ಆಗುತ್ತಿದೆ. ವಹಿವಾಟಿನ ವಿಚಾರದಲ್ಲಿ ಅದೀಗ ದೇಶದ ಐಟಿ ವಲಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ಫೋಸಿಸ್ ಹುಟ್ಟಿದ ಹಲವಾರು ವರ್ಷಗಳ ನಂತರ ಬಂದ ಕಾಗ್ನಿಜಂಟ್ ಇಂದು ಎರಡನೇ ಸ್ಥಾನದಲ್ಲಿದೆ. ತಾವೇ ಹಾಕಿಕೊಂಡಿದ್ದ ಆದರ್ಶ ಮತ್ತು ನಿಯಮಗಳನ್ನು ಮುರಿದು ಇನ್ಫೋಸಿಸ್ ಅನ್ನು ಉಳಿಸಿ-ಬೆಳೆಸುವ ಕೆಲಸಕ್ಕಾಗಿ ನಾರಾಯಣಮೂರ್ತಿಯವರು ಇನ್ಫೊಸಿಸ್‌ನ ದೈನಂದಿನ ಉಸ್ತುವಾರಿ ಹೊತ್ತುಕೊಂಡು ವಾಪಸಾಗಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇನ್ಫೋಸಿಸ್ ಮತ್ತೆ ತನ್ನ ಹಳೆಯ ಸ್ಥಾನವನ್ನು ಪಡೆದುಕೊಳ್ಳುವುದು ಕಷ್ಟವಿದೆ. ಬದಲಾದ ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ತ ಸಮಯದಲ್ಲಿ ಸರಿಯಾಗಿ ಗ್ರಹಿಸಿ ಆಂತರಿಕ ಬದಲಾವಣೆಯನ್ನು ಮಾಡಿಕೊಳ್ಳದೇ ಹೋದ ಕಾರಣಕ್ಕಾಗಿ ಇನ್ಫೋಸಿಸ್ ಹಿನ್ನಡೆ ಅನುಭವಿಸುತ್ತಿದೆ.

ಮತ್ತು, ಇದೇ ಸಮಯದಲ್ಲಿ ನಾಲ್ಕೈದು ವರ್ಷಗಳ ಹಿಂದೆ ಭಾರತದಲ್ಲಿ ಹೆಸರೇ ಕೇಳಿರದಿದ್ದ ಮೈಕ್ರೋಮ್ಯಾಕ್ಸ್, ಕಾರ್ಬನ್, ಇತ್ಯಾದಿ ಭಾರತೀಯ ಮೊಬೈಲ್ ಕಂಪನಿಗಳು ಸ್ಯಾಮ್ಸಂಗ್, ನೋಕಿಯಾಗಳಿಗೆ ಪೈಪೋಟಿ ನೀಡಿ ಬೆಳೆಯುತ್ತಿವೆ.

ಹೀಗೆ ಒಂದು ಉದ್ದಿಮೆ ಏಳಲು ಮತ್ತು ಬೀಳಲು ಅನೇಕ ಕಾರಣಗಳಿರುತ್ತವೆ ಮತ್ತು ನಾವು ಅವುಗಳ ಬಗ್ಗೆ ಹೆಚ್ಚುಹೆಚ್ಚು ಭಾವತೀವ್ರತೆಯಿಂದ ಯೋಚಿಸಿದಷ್ಟೂ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುತ್ತೇವೆ. ಅರೆನಿಜ ಮತ್ತು ಭಾವಾವೇಶದಿಂದ ಜನಾಭಿಪ್ರಾಯ ರೂಪಿಸುವುದು ಮತ್ತು ಸಮಾಜವನ್ನು ಕಟ್ಟಲು ಪ್ರಯತ್ನಿಸುವುದು ಒಳ್ಳೆಯ ಮಾದರಿಯಲ್ಲ.

ತಮ್ಮ ಜನಪರ ಕಾಳಜಿ ಮತ್ತು ಬದ್ಧತೆಯ ಕಾರಣಕ್ಕಾಗಿ ಡಾ. ವಸು ಮಳಲಿಯವರನ್ನು ಇಷ್ಟಪಡುವವರಲ್ಲಿ ನಾನೂ ಒಬ್ಬ. ಆದರೆ ಅವರು ತಮ್ಮ ಅಂಕಣ ಲೇಖನದಲ್ಲಿ ಎತ್ತಿರುವ ವಿಚಾರಗಳು ಮತ್ತು ಮಂಡಿಸಿರುವ ವಿಧಾನಕ್ಕೆ ನನ್ನ ತಕರಾರಿದೆ. ಮೌಲ್ಯ, ಆದರ್ಶ, ಪ್ರಾಮಾಣಿಕತೆ, ವೃತ್ತಿಪರತೆಯ ಕೊರತೆ ಇರುವ ಭಾರತದ ಇಂದಿನ ಸಾರ್ವಜನಿಕ ಜೀವನದಲ್ಲಿ, ಯಾವುದೇ ಕ್ಷೇತ್ರದಲ್ಲಾಗಲಿ ಹಸ್ತಕ್ಷೇಪ ಮಾಡಿ ಸ್ವಾರ್ಥಸಾಧನೆ ಮಾಡಿಕೊಳ್ಳುವ ಪ್ರಸಕ್ತ ರಾಜಕೀಯ ಸಂದರ್ಭದಲ್ಲಿ, ತನಗೆ ಇಂದಿನ ವರ್ತಮಾನದಲ್ಲಿ ಯೋಗ್ಯವಲ್ಲದ ಮತ್ತು ನ್ಯಾಯಯುತವಾಗಿ ನಡೆಸಲು ಸಾಧ್ಯವಾಗದಂತಹ ಉದ್ದಿಮೆಗಳಿಂದ ಹೊರನಡೆದು ಸರ್ಕಾರ ಸರಿಯಾದುದನ್ನೇ ಮಾಡಿದೆ. ಸಾರ್ವಜನಿಕ ಉದ್ದಿಮೆಗಳ ನಷ್ಟ ತುಂಬಲು ಭರಿಸುತ್ತಿದ್ದ ದುಡ್ದನ್ನು ಅದು ಇಂದು nregaನರೇಗ, ಆಹಾರ-ಭದ್ರತೆ, ಆರೋಗ್ಯ, ಶಿಕ್ಷಣ ಮುಂತಾದ ಜನಪರ ಯೋಜನೆಗಳತ್ತ ಹರಿಸುತ್ತಿದೆ.

ಮತ್ತು, ಖಾಸಗೀಕರಣದ ಮುಂಚೂಣಿಯಲ್ಲಿರುವವರು ಲಾಭದಾಸೆಯಿಂದ ಸಮಾಜದಲ್ಲಿ ಅಸಮಾನತೆಯಂತಹ ತೀವ್ರ ದುಷ್ಪರಿಣಾಮಗಳನ್ನು ಉಂಟು ಮಾಡುವ ಸಮಯದಲ್ಲಿ ಅಂತಹ ಸಂಸ್ಥೆಗಳನ್ನು ಕಟ್ಟಿಹಾಕುವ ಅಧಿಕಾರ ದೇಶದ ಪಾರ್ಲಿಮೆಂಟ್‌ಗೆ ಇದ್ದೇ ಇದೆ. ಅದಕ್ಕಾಗಿ ಯೋಗ್ಯರಾದವರು ನಮ್ಮ ಜನಪ್ರತಿನಿಧಿಗಳನ್ನಾಗಿ ಮಾಡಿಕೊಳ್ಳುವತ್ತ ನಮ್ಮ ಚಟುವಟಿಕೆಗಳು ಕೇಂದ್ರೀಕೃತವಾಗಬೇಕು. ಉತ್ತಮ ಮತ್ತು ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಮಾತ್ರ ಕೆಲವರ ಹಿತಕ್ಕಿಂತ ಬಹುಜನರ ಹಿತ ಕಾಪಾಡುವ ವಾತಾವರಣ ನಿರ್ಮಾಣವಾಗುತ್ತದೆ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಕಳೆದ ವರ್ಷದಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2013ಈ ಕಥಾ ಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ: 2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ನಾನು. ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ನನಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಕಳೆದ ವರ್ಷ ವರ್ತಮಾನದ ಅಡಿಯಲ್ಲಿ ಅದನ್ನು ಮತ್ತೆ ಆರಂಭಿಸಲಾಯಿತು. (ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 ರ ಬಹುಮಾನಿತ ಕತೆಗಳ ವಿವರ ಇಲ್ಲಿದೆ.) ಈ ವರ್ಷದ ಕಥಾ ಸ್ಪರ್ಧೆಗೆ ಕತೆಗಳನ್ನು ಆಹ್ವಾನಿಸುವ ಸಮಯ ಇದು.

ಅಂದ ಹಾಗೆ ಈ ಸ್ಪರ್ಧೆಗೆ ಕಳೆದ ಬಾರಿ ಕೆಲವರು ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಕತೆಗಳನ್ನು ಕಳುಹಿಸಿದ್ದರು. ಇದು ಗಾಂಧಿಯ ಕುರಿತಾದ ಕತೆಗಳ ಕಥಾ ಸ್ಪರ್ಧೆಯಲ್ಲ. ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

– ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು.
– ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:
– ಮೊದಲ ಬಹುಮಾನ: ರೂ. 6000
– ಎರಡನೆ ಬಹುಮಾನ: ರೂ. 4000
– ಮೂರನೆಯ ಬಹುಮಾನ: ರೂ. 3000
– ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2013

ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

 

ಆತಂಕದಲ್ಲಿ ತಲ್ಲಣಿಸುತ್ತಿದೆ ಹೆಣ್ಣುಜೀವ

– ರೂಪ ಹಾಸನ

ಹಳ್ಳಿಯ ಬಡಕುಟುಂಬವೊಂದರ 11 ವರ್ಷಗಳ ಎಳೆಬಾಲೆ ಅವಳು. ಋತುಮತಿಯಾಗಿ ಆರು ತಿಂಗಳೂ ಕಳೆದಿಲ್ಲ. ಲೈಂಗಿಕತೆ ಎಂದರೇನೆಂದು ಇರಲಿ, ಪ್ರೀತಿ-ಪ್ರೇಮವೆಂದರೆ ಏನೆಂದೂ ಅರಿಯದ ಮುಗ್ಧಳು. ಶಾಲೆಗೆ ಬಿಡಲು ಕರೆದುಕೊಂಡು ಹೋದ ಸಂಬಂಧಿಯಿಂದಲೇ ಕಳೆದ ವಾರವಷ್ಟೇ ಅವಳ ಅತ್ಯಾಚಾರವಾಗಿದೆ. ಮೈಮನಸುಗಳೆರಡೂ ಜರ್ಜರಿತವಾಗಿ ನಡುಗುತ್ತಿರುವ ಆ ಕಂದಮ್ಮ ಇದನ್ನು, ಅವನು ಕೊಟ್ಟ ಶಿಕ್ಷೆ ಎಂದೇ ಭಾವಿಸಿದ್ದಾಳೆ. rape-illustration‘ನಾನೇನೂ ತಪ್ಪು ಮಾಡಿಲ್ಲದಿದ್ದರೂ, ಮಾಮ ನನಗೆ ಈ ಶಿಕ್ಷೆ ಯಾಕೆ ಕೊಟ್ಟರು?’ ಎಂಬ ಪ್ರಶ್ನೆಗೆ ಏನು ಉತ್ತರಿಸುವುದೆಂಬ ಅರಿವಿಲ್ಲದೇ ಕಂಗಳು ತುಂಬುತ್ತವೆ. ಆ ವ್ಯಕ್ತಿಗೆ ರಾಜಕೀಯ ಪ್ರಮುಖರ ನಿಕಟ ಸಂಪರ್ಕವಿರುವುದರಿಂದ ಕೇಸು ದಾಖಲು ಮಾಡಿಕೊಳ್ಳಲೇ ಪೊಲೀಸರು ಹಿಂದೆಗೆದಿರುವುದರಿಂದ ಮಗುವನ್ನು ಒಳಗೊಂಡು ಕುಟುಂಬದವರು ಇನ್ನೂ ಆತಂಕದಿಂದ ತಲ್ಲಣಿಸುತ್ತಿದ್ದಾರೆ. ಈಗ ಆ ಮಗು ಅನುಭವಿಸಿದ ವಿನಾ ಕಾರಣದ ಮಾನಭಂಗದ ಶಿಕ್ಷೆಗೆ ನ್ಯಾಯ ಯಾರು ಕೊಡುತ್ತಾರೆ?

ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ವೈದ್ಯರೊಬ್ಬರು ಬರೆದುಕೊಂಡ ಸ್ವಾನುಭವದಂತೆ, 12 ವರ್ಷದ ಹೆಣ್ಣು ಮಗುವೊಂದು ಆಕಸ್ಮಿಕವಾಗಿ, ಅಕ್ರಮ ಮಾರಾಟದ ದಂಧೆಗೆ ಸಿಕ್ಕು ನಾಲ್ಕು ವರ್ಷ ಕಳೆಯುವುದರೊಳಗೆ ಅನೇಕ ಮಾರಕ ಲೈಂಗಿಕ ರೋಗಗಳಿಗೆ ತುತ್ತಾಗಿ ನಿತ್ರಾಣಳಾಗಿ, ವೈದ್ಯರೊಂದಿಗೆ, ಆ ‘ಭಾಗವನ್ನೇ’ ದೇಹದಿಂದ ತೆಗೆದು ಹಾಕಿ ಬಿಡಿ ಡಾಕ್ಟರ್, ಅದಿದ್ದರೆ ತಾನೇ ಏನೆಲ್ಲ ಹಿಂಸೆ ಅನುಭವಿಸಬೇಕು ಎಂದುದನ್ನು ಕೇಳಿದ ನಂತರವೂ, ಹೆಣ್ಣು ತನ್ನದೇ ದೇಹದ ಬಗೆಗೆ ಹೇಸುವಂತೆ ಮಾಡಿರುವ ಈ ವ್ಯವಸ್ಥೆಯನ್ನು ಹೇಗೆ ಕ್ಷಮಿಸುವುದು?

ಅವಳು 14 ವರ್ಷದ ಬಡ ಅಂಧ ಬಾಲೆ. ವಸತಿಯುತ ಶಾಲೆಯಲ್ಲಿ ಓದುತ್ತಿರುವ ಆ ಮಗುವಿನ ಮೇಲೆ ಮತ್ತೆ ಮತ್ತೆ ನಡೆದ ಬಲಾತ್ಕಾರದಿಂದಾಗಿ, ಎರಡು ಬಾರಿ ಗರ್ಭಪಾತಮಾಡಿಸಿದಾಗ, ವೈದ್ಯ ಮಹಾಶಯ ‘ಗರ್ಭಕೋಶವನ್ನೇ ತೆಗೆಸಿಬಿಡಿ, ಹೇಗೋ ಉಪಯೋಗ ಆಗ್ತಾಳೆ. ಇವೆಲ್ಲ ಮಾಮೂಲು. ಸುಮ್ಮನೆ ಪದೇ ಪದೇ ರಗಳೆ ಯಾಕೆ ಅನುಭವಿಸ್ತೀರಾ?’ ಎಂದರೆ, ರೋಗಿಯನ್ನು ರಕ್ಷಿಸುವ ದಯಾಳುವಾಗಿರಬೇಕೆಂದು ನಾವು ಭಾವಿಸುವ ವೈದ್ಯನೂ, ಅಸಹಾಯಕ ಹೆಣ್ಣುಮಕ್ಕಳ ಅತ್ಯಾಚಾರವನ್ನು ಜನಸಾಮಾನ್ಯರು ಇಂದು ‘ಮಾಮೂಲು’ ಎಂದು ತಿಳಿದುಬಿಟ್ಟಿರುವಂತೆ ಇವರೂ ಭಾವಿಸುವುದಾದರೆ, ನಂಬಿಕೆ ಎಂಬ ಪದಕ್ಕೆ ಅರ್ಥವುಳಿದೀತೆ?

ಜಾಗತೀಕರಣದೊಂದಿಗೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಮಾರುಕಟ್ಟೆಯು, ಹೆಣ್ಣಿನ ದೇಹವನ್ನೇ ‘ಸರಕ’ನ್ನಾಗಿ ವಿಜೃಂಭಿಸಲು ನಮ್ಮ ಮಾಧ್ಯಮಗಳನ್ನು ಯಶಸ್ವಿಯಾಗಿ ಅನುವು ಗೊಳಿಸಿದೆ. ಅದರ ಪ್ರಭಾವದಿಂದಾಗಿ, ಹೆಣ್ಣಿನ ದೇಹದ ಮೇಲೆ ‘ಪ್ರಭುತ್ವ’ ಸ್ಥಾಪಿಸಲು, ಅದನ್ನು ‘ಉಪಯೋಗಿಸಿಕೊಳ್ಳಲು’ ಅನೇಕ ಅನೈತಿಕ ಮಾರ್ಗಗಳನ್ನು ನಮ್ಮ ಪುರುಷ ಪ್ರಧಾನ ವ್ಯವಸ್ಥೆ, ತನ್ನ ಮೂಗಿನ ನೇರಕ್ಕೆ ರೂಪಿಸಿಕೊಳ್ಳುತ್ತಿದೆ. sowjanya-rape-murderಹೆಣ್ಣಿನ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಬಲಾತ್ಕಾರದ ಜೊತೆಗೆ ಕಣ್ಮರೆ, ಮಾರಾಟದ ಪ್ರಮಾಣದ ಸೂಚಿ ದಿನದಿಂದ ದಿನಕ್ಕೆ ಏರುತ್ತಿರುವುದೇ ಇದಕ್ಕೆ ಸಾಕ್ಷಿ. ‘ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ ಅಧ್ಯಯನ ವರದಿ ಸುಳ್ಳಾಗಲಿ’ ಎಂದು ನಾವೆಷ್ಟು ಬೇಡಿಕೊಂಡರೂ, ಇನ್ನೂ ದಾಖಲಾಗದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ. ಭಾರತ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೊನೆಯಿಂದ ಎರಡನೆಯ ಸ್ಥಾನವನ್ನು ಪಡೆದಿರುವ, ವಿಶ್ವ ಮಟ್ಟದಲ್ಲಿ 80 ದೇಶಗಳಲ್ಲಿ ನಡೆದ ಅಧ್ಯಯನ ವರದಿಯನ್ನಂತೂ ನಾವು ಸುಳ್ಳೆನ್ನುವುದು ಸಾಧ್ಯವಿಲ್ಲವಲ್ಲ!

ವಿಶ್ವವಿದ್ಯಾಲಯವೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ‘ಸಾರ್ವಜನಿಕ ಗಣ್ಯ’ರೋರ್ವರು, ‘ಪತ್ನಿಯಾದವಳು ಯಾವ ಸಮಾನತೆ, ಸ್ವಾತಂತ್ರ್ಯವನ್ನಾದರೂ ಪಡೆಯಲಿ ಆದರೆ ಗಂಡ ಬಯಸಿದಾಗ ಅವನ ಬಯಕೆ ಪೂರೈಸಬೇಕು’ ಎನ್ನುತ್ತಾರೆ! ಪತ್ನಿಗೆ ಇಷ್ಟವಿಲ್ಲದಿದ್ದಾಗ ಕಾಮ ತೃಪ್ತಿಗಾಗಿ ಪೀಡಿಸುವುದನ್ನೂ ಅತ್ಯಾಚಾರವೆನ್ನುತ್ತದೆ ನಮ್ಮ ಕಾನೂನು. ಹೆಣ್ಣಿಗೂ ಒಂದು ಮನಸ್ಸಿದೆ. ಅದಕ್ಕೂ ತನ್ನದೇ ಇಷ್ಟಾನಿಷ್ಟಗಳಿವೆ ಎಂದು ಗೌರವಿಸದ ಯಾವನೇ ಮಹಾನ್ ಪುರುಷನಾದರೂ ಅವನು ಹೆಣ್ಣಿನ ಕಣ್ಣಲ್ಲಿ ಅನಾಗರಿಕನೇ! ವಿವಾಹ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ಇಂಥಹ ಅಸಂಖ್ಯ ಅತ್ಯಾಚಾರಗಳನ್ನು ಇಂದಿಗೂ ಯಾವ ಹೆಣ್ಣುಮಗಳೂ ಕೇಸು ದಾಖಲಿಸಿ ಪ್ರಶ್ನಿಸಿಲ್ಲ. ಇದಕ್ಕೆ ವಿರುದ್ಧವಾಗಿ ಸರಸ್ವತಿಯಿಂದ ಸಮ್ಮಾನಿತರೆಂದು ಬಿರುದು ಪಡೆದ ನಮ್ಮ ಮಹಾನ್ ಸಾಹಿತಿಗಳೊಬ್ಬರು ಮಾತ್ರ, ಭಾರತದ ಯಾವ ಮೂಲೆಯಲ್ಲೂ ಇಂತಹ ದಾಖಲೀಕರಣ ನಡೆದಿರದಿದ್ದರೂ, ಅಸಲಿಗೆ ಇಂತಹದೊಂದು ಕಾನೂನಿದೆ ಎಂದೂ 99% ಹೆಣ್ಣುಮಕ್ಕಳಿಗೆ ತಿಳಿದಿಲ್ಲದಿರುವಾಗ, ತಮ್ಮ ಕಾದಂಬರಿಯಲ್ಲಿ ಹೆಂಡತಿಯು ಗಂಡ ತನ್ನ ಕಾಮತೃಷೆ ತೀರಿಸಲಿಲ್ಲವೆಂದು ಅವನ ವಿರುದ್ಧವಾಗಿ ನ್ಯಾಯಾಲಯದ ಮೊರೆ ಹೋದ ಘಟನೆಯನ್ನು ವಿಜೃಂಭಿಸಿ ಚಿತ್ರಿಸುವಂತಾ ವಿಕೃತಿಯನ್ನು ಹೊಂದಿದ್ದಾರೆಂದರೆ ಅವರಿಗೆ ಯಾವ ಸನ್ಮಾನ ಮಾಡಿ ಗೌರವಿಸಬೇಕೋ ಅರ್ಥವಾಗುತ್ತಿಲ್ಲ!

ಯೂನಿಸೆಫ್‌ನ ಸ್ಟೇಟ್ ಆಫ್ ದಿ ವರ್ಲ್ಡ್ ಚಿರ್ಲ್ಡನ್-2009 ರ ವರದಿ, ‘47% ಭಾರತೀಯ ಹೆಣ್ಣುಮಕ್ಕಳ ವಿವಾಹ, ಕಾನೂನಿಗೆ ವಿರುದ್ಧವಾಗಿ 18 ವರ್ಷದೊಳಗೇ ನಡೆಯುತ್ತಿದೆ. ಇದರಲ್ಲಿ 56% ರಷ್ಟು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಮತ್ತು ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ’ ಎಂದು ಹೇಳುತ್ತದೆ. ಬಾಲ್ಯ ವಿವಾಹ ಕಾನೂನಿನ ಕಣ್ಣಿನಲ್ಲಿ ಅಪರಾಧ. IndiaRapeಏಕೆಂದರೆ ಹೆಣ್ಣಿನ ದೇಹ ಆ ವಯಸ್ಸಿಗೆ ಲೈಂಗಿಕ ಕ್ರಿಯೆಗಾಗಲಿ, ಬಸಿರು, ತಾಯ್ತನದ ಬಲವಂತದ ಹೊರೆಗಳನ್ನು ಹೊರಲು ಸಮರ್ಥವಾಗಿರುವುದಿಲ್ಲ. ಹೀಗಿದ್ದೂ ನಮ್ಮ ದೇಶದಲ್ಲಿ ಈ ಪ್ರಮಾಣದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರೆ ಈ ಪ್ರಮಾಣದ ‘ಸಾಮಾಜಿಕ ಅತ್ಯಾಚಾರ’ಗಳು ನಮ್ಮ ದೇಶದಲ್ಲಿ ಅತ್ಯಂತ ಸಹಜವಾಗಿ ನಡೆಯುತ್ತಿವೆ! ಈ ಅಪರಾಧ ಕಾನೂನಿನಡಿ ದಾಖಲಾಗಿರುವುದೇ ವಿರಳಾತಿ ವಿರಳ! ಹಾಗಿದ್ದ ಮೇಲೆ ನಾವು ನಮ್ಮ ಹೆಣ್ಣುಮಗುವಿನ ದೇಹವನ್ನು ಏನೆಂದು ಭಾವಿಸಿದ್ದೇವೆ ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ?

ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿದಂತೆ ಇದುವರೆಗೆ ಧಾರ್ಮಿಕ ಕಟ್ಟು ಪಾಡುಗಳ ಸಂಕೋಲೆಯೊಳಗೆ ನಿಕೃಷ್ಟವಾಗಿ ನರಳುತ್ತಿದ್ದ ಹೆಣ್ಣು ದೇಹ, ಇಂದು ಶೋಷಣೆಯ ಅನೇಕ ಹೊಸ ರೂಪಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಹೊರಟಿರುವುದಕ್ಕಿಂಥಾ ಘೋರ ದುರಂತ ಮತ್ತಿನ್ನೇನಿದೆ? ಇಂದು ದೇವದಾಸಿ ಪದ್ಧತಿ, ಬಸವಿ, ಬೆತ್ತಲೆ ಸೇವೆ, ಜೋಗತಿಯಂಥಾ ಅನಿಷ್ಟ ಪದ್ಧತಿಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ ಎನ್ನುತ್ತಿರುವಾಗಲೇ, ಅದರ ಅವಳಿ ರೂಪವಾಗಿ ವೇಶ್ಯಾವಾಟಿಕೆಯ ಜಾಲ ವಿಸ್ತೃತವಾಗಿ ನಗರ-ಪಟ್ಟಣವೆನ್ನದೇ ವ್ಯಾಪಕವಾಗಿ ಹಬ್ಬುತ್ತಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ವಿವರಣೆಯಂತೆ ಸಧ್ಯಕ್ಕೆ ದೇಶದಲ್ಲಿ 6.8 ಲಕ್ಷ ‘ದಾಖಲಾದ’ ಲೈಂಗಿಕ ಕಾರ್ಯಕರ್ತೆಯರಿದ್ದಾರೆಂದು ಭಾರತ ಸರ್ಕಾರ ವಿವರಣೆ ನೀಡಿದೆ. ಇದರಲ್ಲಿ ಶೇಕಡ 40 ರಷ್ಟು ಅಪ್ರಾಪ್ತ ಹೆಣ್ಣುಮಕ್ಕಳು! ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ ಇದರ ಮೂರರಷ್ಟಿದೆ ಎಂಬ ಅಂದಾಜಿದೆ. ಇದರಲ್ಲಿ ಕಾಲ್‌ಗರ್ಲ್‌ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘ಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ.

ಎಳೆಯ ಬಾಲೆಯರನ್ನು, ಹದಿಹರೆಯದವರನ್ನು, ಮಹಿಳೆಯರನ್ನು ಅಪಹರಿಸಿ ಅವರನ್ನು ಅವರ ದೇಹ ಸಂಬಂಧಿ ವ್ಯಾಪಾರಗಳಲ್ಲಿ ತೊಡಗಿಸುವ ದಂಧೆ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಈ ದಂಧೆಗೆ ಇಂತಹುದೇ ಎಂದು ನಿರ್ದಿಷ್ಟ ಹೆಸರಿಲ್ಲ. ಇದಕ್ಕೆ ಸೇವೆ, ಮನೆಗೆಲಸ, ಪಬ್, ಬಾರ್, ಡಾನ್ಸ್‌ಬಾರ್, ಮಸಾಜ್‌ಪಾರ್ಲರ್, ಪ್ರವಾಸೋದ್ಯಮ ಇತ್ಯಾದಿಗಳ ಮುಖವಾಡವಿದ್ದರೂ ಕೊನೆಗಿದು ವೇಶ್ಯಾವಾಟಿಕೆಯ ದಂಧೆ! ಬೇರೆ ಬೇರೆ ಹೆಸರಿದ್ದರೂ ಸೇವೆಯ ಸ್ವರೂಪ ಮಾತ್ರ ಲೈಂಗಿಕ ಸೇವೆ! ಭಾರತದ ಆರು ಮಹಾನಗರಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಬಾಲೆಯರು ವೇಶ್ಯಾವಾಟಿಕೆಯಲ್ಲಿ ತೊಡಗಬೇಕಾಗಿ ಬಂದಿರುವುದು ನಮ್ಮ ಕಾನೂನು, ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ವಿಶ್ವದಲ್ಲಿ ಮೂರನೆ ಅತಿ ಹೆಚ್ಚು ವ್ಯಾಪಾರಿ ವಹಿವಾಟನ್ನು ಹೊಂದಿರುವ ದಂಧೆ ಎಂದರೆ ಸೆಕ್ಸ್ ದಂಧೆ! [ಮೊದಲನೆಯದು ಮಾರಕಾಸ್ತ್ರ, ಎರಡನೆಯದು ಮಾದಕದ್ರವ್ಯ.] ಈ ಆದ್ಯತೆಗಳೇ ಮನುಷ್ಯ ಸಂಕುಲ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಾಗಿದೆ. ನಾವು ‘ಮಾನವ ಹಕ್ಕುಗಳ ರಕ್ಷಣೆ’ಯ ಬಗ್ಗೆ ಹೆಣ್ಣನ್ನು ಪಕ್ಕಕ್ಕಿಟ್ಟು, ಗಂಟಲು ಹರಿಯುವಂತೆ ಭಾಷಣ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳ ದೇಹ ಸದ್ದಿಲ್ಲದೇ ಬಿಕರಿಗೆ ಬಿದ್ದಿದೆ!

ಒಂದೆಡೆ ವೇಶ್ಯಾವಾಟಿಕೆ ಕಾನೂನುಬಾಹಿರವಾದರೂ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೇ ನಡೆಯುತ್ತಿರುವ ಅಡ್ಡಾಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಮಿತಿಮೀರಿ ಏರುತ್ತಿದೆ. ವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಕಾಂಡೊಂಗಳ ವಿತರಣೆ, ಹೆಚ್‌ಐವಿ, ಏಡ್ಸ್, ಇತರ ಲೈಂಗಿಕ ಗುಪ್ತ ರೋಗಗಳ ಕುರಿತು ತಿಳಿವಳಿಕೆ ನೀಡಿ ಸಮಾಜಕ್ಕೆ ಈ ಸೋಂಕು ಹರಡದಂತೆ ‘ಸುರಕ್ಷಿತ ಲೈಂಗಿಕತೆ’ಯ ಪಾಠ ಕಲಿಸಲು ಜಿಲ್ಲಾ ಆರೋಗ್ಯ ಇಲಾಖೆಯಡಿ ದಾಖಲಿಸಿಕೊಳ್ಳಲಾಗುತ್ತಿದೆ. ಸರ್ಕಾರದ ದಾಖಲಿಸುವ ಈ ಕ್ರಮವೇ ಪ್ರಶ್ನಾರ್ಹವಾದುದು! ಅಸಹಾಯಕತೆಗೆ, ಅನಿವಾರ್ಯತೆಗೆ, ಆಕಸ್ಮಿಕಕ್ಕೆ, ವಂಚನೆಯ ಜಾಲಕ್ಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಬಡ-ಗ್ರಾಮೀಣ ಪ್ರದೇಶದ ಮಹಿಳೆಯರು ಬೇರೆ ದಾರಿಯಿಲ್ಲದೇ ವೇಶ್ಯಾವಾಟಿಕೆಗೆ ಇಳಿಯಬೇಕಾಗಿ ಬಂದಿರುವುದು, ನಮ್ಮ ರೋಗಿಷ್ಟ ಸಮಾಜದ ದ್ಯೋತಕವಲ್ಲದೇ ಮತ್ತಿನ್ನೇನು? ಮೋಜಿಗಾಗಿ ಸ್ವಇಚ್ಛೆಯಿಂದ ಈ ದಂಧೆಗೆ ಇಳಿಯುತ್ತಿರುವವರದು ಬೇರೆಯದೇ ಕಥೆ.

ಲೈಂಗಿಕ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ದುಡಿಯುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೆಲವು ಎನ್‌ಜಿಒಗಳು prostitution-indiaವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸುತ್ತಿವೆ. ‘ನನ್ನ ದೇಹ ನನ್ನ ಹಕ್ಕು’ ಎಂಬ ಕಲ್ಪನೆಯನ್ನು ಬಿತ್ತುತ್ತಿವೆ. ಈಗಾಗಲೇ ಹೆಣ್ಣುಮಕ್ಕಳ ಅಕ್ರಮ ಮಾರಾಟದ ದಂಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು, ವ್ಯಾಪಕವಾಗಿರುವ ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಎತ್ತಿ ತೋರುತ್ತಿವೆ. ಅದರಲ್ಲೂ ತನ್ನ ದೇಹವನ್ನು ಗೌರವಿಸಿಕೊಳ್ಳುವ ಯಾವ ಹೆಣ್ಣು, ಅದು ಮಾರಾಟದ ಸರಕಾಗಬೇಕು ಎಂದು ಬಯಸುತ್ತಾಳೆ? ಬಯಸುವುದೇ ಆದರೆ ಅದಕ್ಕೆ ಕಾರಣ ಅವಳನ್ನು ಹಾಗೆ ರೂಪಿಸಿದ ವ್ಯವಸ್ಥೆಯದೇ ಹೊರತು ಹೆಣ್ಣಿನದಲ್ಲ ಅಲ್ಲವೇ? ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸಾಧ್ಯತೆಗಳ ಕುರಿತು ಉನ್ನತ ಆರೋಗ್ಯ ಅಧಿಕಾರಿಯೊಡನೆ ಚರ್ಚಿಸುತ್ತಿದ್ದಾಗ, ‘ಎಲ್ಲಿಯವರೆಗೆ ಡಿಮ್ಯಾಂಡ್ ಇರುತ್ತದೋ ಅಲ್ಲಿಯವರೆಗೆ ಸಪ್ಲೈ ಇರಲೇಬೇಕು’ ಎನ್ನುತ್ತಾ ಪುನರ್ವಸತಿ ಎಂಬ ಪರಿಕಲ್ಪನೆಯನ್ನೇ ಅಲ್ಲಗಳೆದುಬಿಟ್ಟರು! ಇದು ನಮ್ಮ ವ್ಯವಸ್ಥೆಯ ರಕ್ಷಣೆಯ ನೀತಿಗೊಂದು ಉದಾಹರಣೆ!

ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳನ್ನು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೆಣ್ಣುಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು ‘ಹದ್ದುಬಸ್ತಿನಲ್ಲಿಡುವುದು’ ಮಾತ್ರ ಅವರ ಮೇಲಿನ ಎಲ್ಲ ರೀತಿಯ ದೌರ್ಜನ್ಯ ತಡೆಗೆ ಪರಿಹಾರ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟರು! ‘ಗಂಡ ಹೆಂಡತಿಗೆ ಎರಡೇಟು ಕೊಡುವುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ, ಅದು ದೌರ್ಜನ್ಯವಲ್ಲ’ ಎಂದು ನಮ್ಮ ಕಾರವಾರದ ತ್ವರಿತ ನ್ಯಾಯಾಲಯವೊಂದು ಮೊನ್ನೆಯಷ್ಟೇ ಆದೇಶದಲ್ಲಿ ಉಲ್ಲೇಖಿಸಿದೆ! ‘ಭೂಗತ ಜಗತ್ತಿನ ಮುಖಂಡರೂ ಮಹಿಳೆಯರನ್ನು ಗೌರವದಿಂದ ಕಾಣಲು ಬಯಸುತ್ತಾರೆ. ಗೌರವಯುತ ಮಹಿಳೆ ಮೇಲೆ ಅತ್ಯಾಚಾರ ನಡೆಯುವುದಿಲ್ಲ’ ಇದು ದೆಹಲಿ ಸಾಮೂಹಿಕ ಅತ್ಯಾಚಾರದ ಪಾತಕಿಗಳ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಮನೋಹರಲಾಲ್ ಶರ್ಮಾ ಅವರ ಹೇಳಿಕೆ. ಇಂತಹ ಅಸೂಕ್ಷ್ಮ ಹೇಳಿಕೆಗಳು, ಯಾರ್‍ಯಾರಿಂದಲೋ! ಅದಿನ್ನೆಷ್ಟೋ! ಖಾಪ್ ಪಂಚಾಯಿತಿ, ಮತೀಯವಾದಿ ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರ ಹೇಳಿಕೆಗಳಿಗೂ, ಇವುಗಳಿಗೂ ಹೆಚ್ಚು ವ್ಯತ್ಯಾಸವೇನಾದರೂ ಇದೆಯೇ? ಅವರಂತೂ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧರಾಗಿಲ್ಲದವರು, ವಸ್ತುಸ್ಥಿತಿಯನ್ನು ವೈಚಾರಿಕವಾಗಿ ವಿವೇಚಿಸಲರಿಯದ ಮೂರ್ಖರು ಎಂದು ನಿರ್ಲಕ್ಷಿಸಿ ಪಕ್ಕಕ್ಕಿಟ್ಟುಬಿಡಬಹುದು. ಆದರೆ……..

ಇಂದು ಕಾನೂನು, ಪೊಲೀಸ್, ಆರೋಗ್ಯ……ಹೀಗೆ ರಕ್ಷಣೆ ನೀಡಬೇಕಾದ ಎಲ್ಲ ವ್ಯವಸ್ಥೆಗಳೂ ಯಥಾಸ್ಥಿತಿಯನ್ನು ನಾಜೂಕಾಗಿ ಕಾಯ್ದುಕೊಳ್ಳುತ್ತಾ, police-atrocity-womenಒಂದೆಡೆ ಹೆಣ್ಣನ್ನು ಸರಕೆಂಬಂತೆ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತಾ, ಇನ್ನೊಂದೆಡೆ ಅವಳಿಗೆ ನೈತಿಕತೆಯ ಬೋಧೆ ನೀಡುತ್ತಾ, ಮತ್ತೊಂದೆಡೆ ಅವಳನ್ನು ಉದ್ಧರಿಸುವ, ರಕ್ಷಿಸುವ ನಾಟಕವಾಡುತ್ತಿರುವಾಗ, ಈ ವ್ಯವಸ್ಥೆಯ ಕಣ್ಣು ತೆರೆಸುವುದು ಹೇಗೆ? ‘ಮಹಿಳಾ ಸ್ನೇಹಿ’ ಹಾಗೂ ‘ಲಿಂಗ ಸೂಕ್ಷ್ಮತೆ’ಯ ಎಚ್ಚರವನ್ನು ಸಮಾಜ ಕಲಿತುಕೊಳ್ಳುವ ಮೂಲಕ ಮಾತ್ರ ಮಹಿಳಾ ಸಮಾನತೆಯ ಕನಸಿನೆಡೆಗೆ ಮೊದಲ ಹೆಜ್ಜೆಯನ್ನು ಇಡಲು ಸಾಧ್ಯ ಎಂದು ನಂಬಿರುವ ಎಚ್ಚೆತ್ತ ಹೆಣ್ಣುಮಕ್ಕಳಿಂದು, ಮೊದಲಿಗೇ ಸಂವಿಧಾನಬದ್ಧವಾದ ಆಶಯಗಳಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ನಮ್ಮ ನ್ಯಾಯಾಂಗಕ್ಕೆ, ಮಾಧ್ಯಮಕ್ಕೆ, ಸರ್ಕಾರಿ ಆಡಳಿತ ಯಂತ್ರಕ್ಕೆ ಈ ಪಾಠವನ್ನು ಹೇಳಿಕೊಡಬೇಕಾಗಿ ಬಂದಿರುವುದನ್ನು ಯಾವ ಕರ್ಮವೆನ್ನೋಣ? ನಾವು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಪಡೆದಿರುವ ಪ್ರಜಾಪ್ರಭುತ್ವವಾದಿ ದೇಶದಲ್ಲಿರುವ ಪ್ರಜೆಗಳೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ! ಇಂತಹುದ್ದೊಂದು ವ್ಯವಸ್ಥೆಯ ಬಗ್ಗೆ ಹೆಣ್ಣುಮಕ್ಕಳು ಸಂಪೂರ್ಣವಾಗಿ ‘ನಂಬಿಕೆ’ ಕಳೆದುಕೊಳ್ಳುವ ಮೊದಲು ಸಮಾಜ ಎಚ್ಚೆತ್ತುಕೊಳ್ಳುವುದೇ?

ಗರ್ಭಕ್ಕೇ ದಾಳಿಯಿಟ್ಟ ವೈದ್ಯಕೀಯ ಕ್ರೌರ್ಯ!

ಹೊರಗಿನ ಅತ್ಯಾಚಾರ ಕಣ್ಣಿಗೆ ಕಾಣುವಂತದ್ದು. ಆದರೆ ಆಧುನಿಕ ವೈದ್ಯಕೀಯ ಆವಿಷ್ಕಾರಗಳು ಹೆಣ್ಣಿನ ಗರ್ಭಕ್ಕೇ ನೇರವಾಗಿ ದಾಳಿಯಿಟ್ಟು ಹೆಣ್ಣು ಸಂತತಿಯನ್ನು ಬೇರು ಸಹಿತ ನಾಶ ಮಾಡುವ ಅಮಾನುಷ ಅತ್ಯಾಚಾರದಲ್ಲಿ ನಿರತವಾಗಿರುವ ವೈದ್ಯಕೀಯ ಅಪರಾಧದಲ್ಲಿ ತೊಡಗಿರುವವರು ಮುಗ್ಧರೋ, ಮೂಢರೋ ಅಲ್ಲ. ನಾವು ದೇವರ ಸಮಾನವೆಂದು ನಂಬಿರುವ ಸಾಕ್ಷಾತ್ ವೈದ್ಯರು! ಈ ಕೃತ್ಯದ ನೇರ ಹೊಣೆಗಾರರು ಅವರೇ. ಜೀವ ರಕ್ಷಕನೇ, ಹೆಣ್ಣನ್ನು ಭ್ರೂಣದಲ್ಲೇ ಹೊಸಕಿ ಕೊಲೆ ಮಾಡಲು ನಿಂತರೆ ಅಸಹಾಯಕ ಹೆಣ್ಣು ಜೀವವನ್ನು ಇನ್ನಾರು ರಕ್ಷಿಸಬೇಕು?

ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳಲು ಗಂಡು ಸಂತತಿಗಿಂತ ಹೆಣ್ಣು ಸಂತತಿಯ ಪ್ರಮಾಣವನ್ನು ಹೆಚ್ಚಾಗಿ ಸೃಷ್ಟಿಸಿರುತ್ತದೆ. ಏಕೆಂದರೆ ವಂಶಾಭಿವೃದ್ಧಿ ಮಾಡುವ ಜವಾಬ್ದಾರಿ ಹೆಣ್ಣು ಜೀವದ ಮೇಲಿರುತ್ತದೆ. ಇದು ಎಲ್ಲ ಪ್ರಾಣಿ ಸಂತತಿಗೂ ಅನ್ವಯವಾಗುತ್ತದೆ. ಮನುಷ್ಯ ಶಿಕ್ಷಿತನೂ ನಾಗರಿಕನೂ ಆದಷ್ಟೂ ತನ್ನ ಸಹಜೀವಿಯೊಂದಿಗಿನ ಸಹೃದಯತೆ ಹೆಚ್ಚಾಗಬೇಕು. ಪ್ರಕೃತಿಯ ಈ ಆಶಯವನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಆಗುತ್ತಿರುವುದೇನು? ‘ಹೆಣ್ಣು ಸಂಗಾತಿಯಾಗಿ ಬೇಕು. ಆದರೆ ಮಗಳಾಗಿ ಬೇಡ.’ ಎಂಬ ಮನೋಭಾವ ಸಮಾಜದಲ್ಲಿ ಹೆಚ್ಚುತ್ತಾ ಸಾಗಿದಂತೆ ವರ್ಷದಿಂದ ವರ್ಷಕ್ಕೆ ಹೆಣ್ಣುಮಕ್ಕಳ ಸಂತತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಅದರಲ್ಲೂ 0-6 ವರ್ಷದ ಹೆಣ್ಣುಮಕ್ಕಳು 2011 ರಲ್ಲಿ ದೇಶದಲ್ಲಿ ಪ್ರತಿ 1000 ಪುರುಷರಿಗೆ 914 ಕ್ಕೆ ಇಳಿದಿದ್ದು, foeticideಕರ್ನಾಟಕದಲ್ಲಿ 943 ಕ್ಕೆ ಇಳಿದಿದ್ದಾರೆ. ಅಂದರೆ ಒಂದು ವರ್ಷದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಭೂಮಿಗೇ ಬರದೇ ಕಣ್ಮರೆಯಾಗುತ್ತವೆ. ಒಂದು ಅಂದಾಜಿನಂತೆ ಪ್ರತಿ ವರ್ಷ 6 ಲಕ್ಷ ಹೆಣ್ಣು ಜೀವಗಳು ಭ್ರೂಣದಲ್ಲೇ ಹತವಾಗುತ್ತಿವೆ. ಈ ಅಗಾಧ ಪ್ರಮಾಣದ ಗಂಡು ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ, ಈಗಾಗಲೇ ರಾಜಸ್ಥಾನ, ಹರಿಯಾಣ ಮುಂತಾದ ರಾಜ್ಯಗಳು ಹೆಣ್ಣು ವಧುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಒಂದೇ ಹೆಣ್ಣು ಹಲವು ಪುರುಷರ ಕಾಮನೆಗಳನ್ನು ತಣಿಸುವ ‘ವಸ್ತು’ವಾಗಿ ಬಳಸುವಂತಾ ಸ್ಥಿತಿ ನಿರ್ಮಾಣವಾಗುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಹೆಣ್ಣಿನ ಹೊರ ದೇಹದ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಈಗ ಗರ್ಭಕ್ಕೇ ಇಳಿದು, ಅನೈಸರ್ಗಿಕವಾಗಿ ಅವಳ ಸಂತತಿಯನ್ನು ಹೊಸಕಿ ಸಾಯಿಸುತ್ತಿದೆ!

ಗರ್ಭಧಾರಣೆ ಮತ್ತು ಪ್ರಸವ ಪೂರ್ವ ರೋಗ ನಿದಾನ ತಂತ್ರಗಳ [ಲಿಂಗ ಆಯ್ಕೆ ನಿಷೇಧ] ಅಧಿನಿಯಮ 1994 ಕಾಯ್ದೆ ಇದ್ದರೂ, ಅದರ ಪರಿಣಾಮಕಾರಿ ಜಾರಿಯಾಗದೇ, ಅಕ್ರಮ ಹೆಣ್ಣು ಭ್ರೂಣ ಹತ್ಯೆಗೆ ತಡೆ ಒಡ್ಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಇಂದು ರಾಜ್ಯಾದ್ಯಂತ ಸುಮಾರು 4000 ಅಲ್ಟ್ರಾಸೌಂಡ್ ಸ್ಕ್ಯಾಂನಿಗ್ ಮೆಷಿನ್‌ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರೊಂದರಲ್ಲೇ ಈಗ 1200 ಇಂತಹ ಮೆಷಿನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಕಳೆದ 2-3 ದಶಕಗಳಿಂದ ಅವ್ಯಾಹತವಾಗಿ ಸಾಗಿರುವ ಈ ಭ್ರೂಣಹತ್ಯೆಯ ‘ಸಾಂಸ್ಕೃತಿಕ ಅತ್ಯಾಚಾರ’ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸಂಪೂರ್ಣ ವಿಫಲವಾಗಿವೆ. ಈಗ ಅವಳನ್ನು ಇನ್ಯಾರು ರಕ್ಷಿಸುವವರು?

ಬಹುಶಃ ಹೆಣ್ಣುಮಕ್ಕಳೇ ಎಚ್ಚೆತ್ತು ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ದೃಢ ಸಂಕಲ್ಪ ಮಾಡದಿದ್ದರೆ, ‘ಅವಳ’ನ್ನು ಉಳಿಸಲು ಯಾವ ದೇವರಿಗೂ ಸಾಧ್ಯವಿಲ್ಲವೇನೋ!

ಲೈಂಗಿಕ ಶಿಕ್ಷಣ ಮತ್ತು ಸೂಕ್ತ ಪಠ್ಯಕ್ರಮ


– ಡಾ.ಎಸ್.ಬಿ. ಜೋಗುರ


 

ಈಗೀಗ ಪ್ರೌಢ ಶಿಕ್ಷಣದ ಹಂತದಲ್ಲಿ ಲೈಂಗಿಕ ಜ್ಞಾನದ ವಿಷವನ್ನಾಧರಿಸಿ ಶಿಕ್ಷಣ ನೀಡುವ ಪಠ್ಯಕ್ರಮ ರೂಪಗೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬರ್ಟಂಡ್ ರಸಲ್ ರಂಥಾ ಚಿಂತಕರು ‘ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಸರಿಯಾದ ಮಾಹಿತಿ ದೊರೆಯದಿದ್ದರೆ ಅಸಂಬದ್ದವಾದ ಮಾಹಿತಿಯನ್ನೇ ಸರಿಯಾದುದು ಎಂದು ತಿಳಿಯುತ್ತಾರೆ’ ಎಂದಿರುವದನ್ನು ನೋಡಿದರೆ, ಲೈಂಗಿಕ ಶಿಕ್ಷಣದ ಮಹತ್ವದ ಅರಿವಾಗುತ್ತದೆ. ಸಿಗ್ಮಂಡ್ ಫ಼್ರಾಯಿಡ್ ಎನ್ನುವ ಮನೋವಿಜ್ಞಾನಿ ‘ಲೈಂಗಿಕತೆ ಎನ್ನುವದು ಸಣ್ಣ ಮಗುವಿನಲ್ಲಿಯೂ ಸ್ವಾಭಾವಿಕವಾಗಿ ಅಂತರಜನ್ಯವಾಗಿರುತ್ತದೆ.’ ಎನ್ನುವಾಗ ಅದನ್ನೊಂದು ಸಹಜಪ್ರವೃತ್ತಿಯ ನೆಲೆಯಲ್ಲಿ ಗುರುತಿಸಿರುವದು ಕಂಡು ಬರುತ್ತದೆ. ಇಂಥಾ ಸಹಜಪ್ರವೃತ್ತಿಯ ಈಡೇರಿಕೆ ಪ್ರತಿಯೊಂದು ಸಮಾಜದಲ್ಲಿಯ ಕಟ್ಟಳೆಗಳನ್ನು ಅವಲಂಬಿಸಿದೆ. ಆ ದಿಶೆಯಲ್ಲಿಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕು. sex-edಸಾಮಾನ್ಯವಾಗಿ ಲೈಂಗಿಕತೆಯ ಬಗ್ಗೆ ಮಕ್ಕಳು ಮನೆಯಲ್ಲಿ ಏನಾದರೂ ಪ್ರಶ್ನೆಗಳನ್ನು ಎತ್ತಿದರೆ ಪಾಲಕರು ಆ ಬಗೆಯ ಪ್ರಶ್ನೆಗಳನ್ನು ಮರೆಮಾಚಲು ನೋಡುವದೇ ಹೆಚ್ಚು. ಆ ಪ್ರಶ್ನೆಯ ಬದಲಾಗಿ ಅದೆಲ್ಲಾ ಈಗೇಕೆ..? ಎನ್ನುವ ಮರುಪ್ರಶ್ನೆಯನ್ನು ಮಕ್ಕಳೆದುರು ಇವರೇ ಇಡುವ ಮೂಲಕ, ಆ ವಿಷಯದಲ್ಲಿ ತನಗೂ ವೈಜ್ಞಾನಿಕವಾಗಿ ಏನೂ ತಿಳಿದಿಲ್ಲ ಎಂದು ಪರೋಕಷವಾಗಿ ಒಪ್ಪಿಕೊಳುತ್ತಾರೆ. ಶಾಲೆಯಲ್ಲಿ ಶಿಕ್ಷಕರಿಂದಲೂ ಮಕ್ಕಳ ಆ ಕುತೂಹಲದ ಪ್ರಶ್ನೆಗೆ ಉತ್ತರಗಳಿಲ್ಲ. ನಂತರ ಆ ಮಗು ತನ್ನ ಸಹಪಾಠಿಗಳಿಂದ ತನ್ನ ಕೌತುಕಕ್ಕೆ ಉತ್ತರವನ್ನು ಕಂಡು ಕೊಳ್ಳುತ್ತದೆ. ಆದರೆ ಆ ಉತ್ತರ ಅತ್ಯಂತ ಅವೈಜ್ಞಾನಿಕವಾಗಿರುತ್ತದೆ. ಆ ಅಸಂಬದ್ಧ ತಿಳುವಳಿಕೆ ಬದುಕಿನುದ್ದಕ್ಕೂ ಹಾಗೇ ಉಳಿಯುವ ಸಾಧ್ಯತೆಯೂ ಇದೆ.

ಕೆಲ ರಾಷ್ಟ್ರಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಲೈಂಗಿಕ ಶಿಕ್ಷಣವನ್ನು ನೀಡಲಾಗುತ್ತದೆ. ಅದು ತುಸು ಬೇಗ ಆದಂತಾಯಿತು. ಹಾಗೆಯೇ ಕಾಲೇಜು ಹಂತದಲ್ಲಿ ಅದನ್ನು ಅಳವಡಿಸುವದು ಸ್ವಲ್ಪ ತಡ ಆದಂತಾಗುವದು. ಇವರೆಡರ ಮಧ್ಯೆ ಇರುವ ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಇದನ್ನು ಪರಿಚಯಿಸಬೇಕು. ಇಲ್ಲಿಯೇ ಮಕ್ಕಳ ಜೈವಿಕ ಸಂಗತಿಗಳಲ್ಲಿ ವೈಪರೀತ್ಯಗಳು ಉಂಟಾಗಿ, ಶಾರೀರಿಕ ರಚನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳತೊಡಗುತ್ತವೆ. ತನ್ನದೇ ಶರೀರದಲ್ಲಿ ಉಂಟಾಗುವ ಬದಲಾವಣೆಯ ಕಾರಣಗಳು.. ಹಿನ್ನೆಲೆಗಳು ಆ ಮಗುವಿಗೆ ತಿಳಿದಿರುವದಿಲ್ಲ. ತಿಳಿದುಕೊಳ್ಳುವ ಯತ್ನದಲ್ಲಿ ತಪ್ಪು ಮಾಹಿತಿಗಳೇ ಹೇರಳವಾಗಿ ದಕ್ಕಿರುತ್ತವೆ. ಆ ಕಾರಣದಿಂದಾಗಿ ಆ ಮಗುವಿನಲ್ಲಿ ಲೈಂಗಿಕ ವಿಷಯಗಳ ಬಗೆಗೆ ಒಂದು ಅಜ್ಞಾನದ ಭಾಗ ಮೆದುಳಲ್ಲಿ ಹಾಗೇ ಉಳಿದು ಬಿಡುತ್ತದೆ.

ಶರೀರ ರಚನೆ, ಸಂಭೋಗ ಕ್ರಿಯೆ, ಗರ್ಭಧಾರಣೆ, ಸುರಕ್ಷಿತ ಲೈಂಗಿಕ ಕ್ರಿಯೆ, ಜನನ ನಿಯಂತ್ರಣ ವಿಧಾನಗಳು, ಸಾಂಕ್ರಾಮಿಕ ಲೈಂಗಿಕ ರೋಗಗಳು ಮುಂತಾದವುಗಳ ಬಗ್ಗೆ ಅವಶ್ಯಕವಿರುವ ಕ್ರಮದಲ್ಲಿ ಶಿಕ್ಷಣವನ್ನು ನೀಡುವದನ್ನು ಲೈಂಗಿಕ ಶಿಕ್ಷಣ ಎಂದು ಕರೆಯಲಾಗುತ್ತದೆ. ಇಂದು ಇಡೀ ವಿಶ್ವದಲ್ಲಿ ಲೈಂಗಿಕ ಶಿಕ್ಷಣ ಬೇಕೋ..ಬೇಡೊ.. ಎನ್ನುವ ವಾಗ್ವಾದಗಳ ಮಧ್ಯೆಯೇ ಅದರ ಕೊರತೆ ಎಂಥಾ ಅನಾಹುತಗಳನ್ನು ಸೃಷ್ಟಿಸಬಲ್ಲದು ಎನ್ನುವದರ ಬಗ್ಗೆ ಮನವರಿಕೆಗಳಾಗುತ್ತಿವೆ. ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾಧ್ಯಮಿಕ ಶಾಲಾ ಹಂತದಲ್ಲಿಯೇ ಹುಡುಗಿಯರು ಗರ್ಭಿಣಿಯರಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಭಾರತದಂತಹ ಸಾಂಪ್ರದಾಯಿಕ ಹಿನ್ನೆಲೆಯಿರುವ ರಾಷ್ಟಗಳಲ್ಲಿ ಈ ಬಗೆಯ ವಿಷಯವನ್ನಾಧರಿಸಿ ಸೆಮಿನಾರಗಳು ನಡೆದಿರುವದೂ ತೀರಾ ಕಡಿಮೆಯೇ. ಇನ್ನು ಅಳವಡಿಕೆಯ ಮಾತು ದೂರವೇ ಉಳಿಯಿತು. 2003 ರ ಸಂದರ್ಭದಲ್ಲಿ ದೆಹಲಿಯ ವಿದ್ಯಾಸಾಗರ ಸಂಸ್ಥೆಯವರು ಸಮೀಕ್ಷೆ ಮಾಡಿದಾಗ ಅನೇಕ ಶಾಲೆಗಳು ಈ ವಿಷಯವನ್ನು ಬಾಗಿಲು ತೆರೆದು ಸ್ವಾಗತ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವ ವರದಿಯನ್ನು ಅದು ಹೊರಹಾಕಿತ್ತು. ನಂತರ ಆರೇಳು ವರ್ಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾವಣೆಯಾಗಿದೆ ಎಂದರ್ಥವಲ್ಲ.

ಎಲ್ಲ ರಾಷ್ಟ್ರಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಒಂದೇ ತೆರನಾಗಿಲ್ಲ. ಭಾರತದಂತಹ ರಾಷ್ಟ್ರಗಳು ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣದ ಅಳವಡಿಕೆಯ ವಿಷಯವಾಗಿ ಇನ್ನೂ ಹಿಂದೇಟು ಹಾಕುತ್ತಿವೆ. ಅದಕ್ಕೆ ಈ ಕೆಳಗಿನ ಕೆಲವು ಪ್ರಮುಖ ಕಾರಣಗಳನ್ನು ನಾವು ಕೊಡಬಹುದು

  • ಈ ಬಗೆಯ ಶಿಕ್ಷಣದಿಂದಾಗಿ ತಮ್ಮ ಮಕ್ಕಳು ಇನ್ನಷ್ಟು ಹೆಚ್ಚೆಚ್ಚು ಲೈಂಗಿಕ ವಿಷಯವಾಗಿ ಅಪವರ್ತಿಗಳಾಗುವ ಅಪಾಯಗಳಿವೆ ಎನ್ನುವದು ಪಾಲಕರ ಹೆದರಿಕೆ.
  • ಆಡಳಿತ ಮಂಡಳಿಗೆ ಇದರಿಂದಾಗಿ ಕೆಲವು ರಾಜಕೀಯ ಅಡ್ಡಪರಿಣಾಮಗಳು, ಕಿರಕಿರಿಗಳು ಉಂಟಾಗಬಹುದು ಎನ್ನುವ ಹೆದರಿಕೆ.
  • ಸ್ಕೂಲ್ ಕ್ಯಾಂಪಸ್ ಗಳಲ್ಲಿ ಅಶ್ಲೀಲ ಎನ್ನಬಹುದಾದ ಸಂಗತಿಗಳು ಘಟಿಸುವ ಅಪಾಯವನ್ನು ನೆನೆದು ಅದರ ಅಳವಡಿಕೆಯಲ್ಲಿ ಶಾಲಾ ಕಮೀಟಿಗಳು ಹಿಂದೇಟು ಹಾಕುತ್ತವೆ.
  • ಅದನ್ನು ಯಾರು ಕಲಿಸಬೇಕು..? ಕಲಿಸುವವರು ಮುಕ್ತವಾಗಿ ಅದನ್ನು ಕಲಿಸಬಲ್ಲರೇ..? ಎನ್ನುವದೂ ಒಂದು ತೊಡಕು.

ಈ ವಿಷಯವಾಗಿ ಹದಿ ಹರೆಯದ ಹುಡುಗ- ಹುಡುಗಿಯರಲ್ಲಿ ಅನೇಕ ಬಗೆಯ ಮನೋತುಮುಲಗಳಿರುತ್ತವೆ. ಒಬ್ಬರನ್ನೊಬ್ಬರು ಕೆಕ್ಕರಿಸಿ ತಿನ್ನುವಂತೆ ನೋಡುವ ನೋಟ, ಅಧ್ಯಯನದಲ್ಲಿ ಏಕಾಗ್ರತೆ ಹಾಳಾಗುವದು, ಹಿಂದಿಂದೆ ಅಲೆಯುವದು, ಅವೈಜ್ಞಾನಿಕವಾಗಿ ಬರೆದ ಅಸ್ಲೀಲ ಸಾಹಿತ್ಯ ಓದಿ ಹಾಳಾಗುವದು ಇಂಥಾ ಇನ್ನೂ ಅನೇಕ ಸಂಗತಿಗಳಿಗೆ ಕಡಿವಾಣ ಬೀಳುತ್ತದೆ. sex-education-bill-clintonಅಮೇರಿಕೆಯಂಥಾ ರಾಷ್ಟ್ರಗಳಲ್ಲಿ ಆಗಾಗ್ಗೆ ಲೈಂಗಿಕ ತಿಳುವಳಿಕಾ ಶಿಬಿರಗಳನ್ನು ಸಂಘಟಿಸಿ ಅದರಿಂದ ಉಂಟಾದ ಪ್ರಯೋಜನಗಳನ್ನು ಅಧ್ಯಯನ ಮಾಡಲಾಗಿದೆ. ಲೈಂಗಿಕ ಸಂಯಮ, ಜನನ ನಿಯಂತ್ರಣ ವಿಧಾನಗಳ ಬಳಕೆ, ಏಡ್ಸ್ ರೋಗದ ಬಗೆಗೆ ತಿಳುವಳಿಕೆ ಮುಂತಾದ ಅಂಶಗಳ ಬಗ್ಗೆ ಆ ಬಗೆಯ ಶಿಬಿರಗಳಲ್ಲಿ ಪಾಲ್ಗೊಂಡ ಯುವಕರಿಗೆ ಮನದಟ್ಟಾಗಿತ್ತು. ಅಮೇರಿಕಾ ಹಾಗೂ ಭಾರತದ ಸಾಮಾಜಿಕ ಪರಿಸರದ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಇಲ್ಲಿಯ ಸಂಸ್ಕೃತಿಗೆ ತಕ್ಕುದಾದ ರೀತಿಯಲ್ಲಿಯೇ ಅದರ ಪಠ್ಯಕ್ರಮವನ್ನು ರೂಪಿಸಬೇಕು.

ಮಾಧ್ಯಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು. ಲೈಂಗಿಕ ವಿಷಯವಾಗಿ ಪಾಲಕರಿಂದ ಸಿಕ್ಕ ಮೇಲ್ ಮೆಲಿನ ವಿವರಣೆಗಳಿಗೆ ಸಮಾಧಾನವಾಗದ ಮಕ್ಕಳು ಶಿಕ್ಷಕರನ್ನು ಆ ವಿಷಯವಾಗಿ ಪ್ರಶ್ನಿಸುವ ಸಾಧ್ಯತೆಯಿದೆ. ಆಗ ಶಿಕ್ಷಕರು ಪ್ರಾಂಜಲವಾಗಿ, ಸಮರ್ಪಕವಾಗಿ ಉತ್ತರಿಸುವವರಾಗಿರಬೇಕು. ವೀರ್ಯ ಸ್ಖಲನ, ಮುಷ್ಟಿ ಮೈಥುನದಂತಹ ಅನೇಕ ವಿಷಯಗಳ ಬಗೆಗೆ ಸಾಮಾನ್ಯವಾಗಿ ಮಕ್ಕಳಲ್ಲಿ ತಪ್ಪು ಗ್ರಹಿಕೆಗಳಿರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಈ ಬಗೆಯ ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಲು ಹದಿ ಹರೆಯ ಅತ್ಯಂತ ಸೂಕ್ತ ಕಾಲ. ಸಾಧ್ಯವಾದರೆ ಆರಮ್ಭದ ಹಂತದಲ್ಲಿ ಹುಡುಗರಿಗೆ ಪುರುಷ ಶಿಕ್ಷಕರು, ಹುಡುಗಿಯರಿಗೆ ಮಹಿಳಾ ಶಿಕ್ಷಕಿಯರಿಂದ ಈ ವಿಷಯವಾಗಿ ತಿಳುವಳಿಕೆ ನೀಡಬೇಕು:

  • ಲೈಂಗಿಕತೆಯ ಬಗೆಗಿನ ವಸ್ತುನಿಷ್ಟ ದೃಷ್ಟಿಕೋನ ಅವರಲ್ಲಿ ಬೆಳೆಸಲು ನೆರವಾಗಬೇಕು
  • ಲೈಂಗಿಕತೆ ಮತ್ತು ಮಾದಕ ದ್ರವ್ಯಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯಬಾರದು.
  • ಆ ವಿಷಯದ ಬಗ್ಗೆ ಮಾತನಾಡುವಾಗ ಬೋಧಿಸುವವರು ಸಾಕಷ್ಟು ಮನೋನಿಗ್ರಹವನ್ನು ಹೊಂದಿರಬೇಕು. ತಪ್ಪಿಯೂ ಅಸಂಬದ್ಧವಾಗಿ, ವಿಚಲಿತರಾಗಿ ಬೋಧಿಸಕೂಡದು. 
  • ಮಕ್ಕಳು ತಮ್ಮ ಪಾಲಕರಿಗಿಂತಲೂ ಶಿಕ್ಷಕರನ್ನು ಅತಿಯಾಗಿ ನಂಬುತ್ತಾರೆ ಹಾಗಾಗಿ ನೀವು ನೀಡುವ ಮಾಹಿತಿ ವಸ್ತುನಿಷ್ಟವಾಗಿರಲಿ.

ಕೆಲ ಕರ್ಮಠರು ಲೈಂಗಿಕ ಶಿಕ್ಷಣ ಎನ್ನುವ ಪದ ಕಿವಿಗೆ ಬಿದ್ದದ್ದೇ ಅದರ ಪೂರ್ವಾಪರಗಳ ಪರಿವೆಯೇ ಇಲ್ಲದೇ ಅದು ಬೇಡವೇ ಬೇಡ ಎಂದು ಜಿದ್ದು ಹಿಡಿಯುತ್ತಾರೆ. ಇಂದಿಗೂ ನಮ್ಮಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆಯಾಗದಿರಲು ಈ ಬಗೆಯ ಪೂರ್ವಾಗ್ರಹ ಪೀಡಿತರ ಮನೋಭಾವವೇ ಕಾರಣ ಇವರು ಲೈಂಗಿಕ ಶಿಕ್ಷಣವನ್ನು ವಿರೋಧಿಸುವಲ್ಲಿ ಇರುವ ಕೆಲ ಕಾರಣಗಳು:

  • ಮತ್ತಷ್ಟು ಲೈಂಗಿಕ ಅವಘಡಗಳು ಹೆಚ್ಚಾಗುತ್ತವೆ.
  • ಎಲ್ಲ ಬಗೆಯ ತಿಳುವಳಿಕೆಯನ್ನು ನೀಡಿದರೆ ಅವರು ಇನ್ನಷ್ಟು ಆ ವಿಷಯವಾಗಿ ಸ್ವೇಚ್ಛೆಯಾಗಿ ವರ್ತಿಸುತ್ತಾರೆ
  • ಅದು ಪರಿಣಾಮಕಾರಿಯಾಗಲಾರದು
  • ಟೀನೇಜ್ ಹೆರಿಗೆಗಳು ಇನ್ನಷ್ಟು ಹೆಚ್ಚಾಗುತ್ತವೆ.
  • ಮೌಲ್ಯಗಳು ಕುಸಿಯುತ್ತವೆ.
  • ಮುಕ್ತ ಲೈಂಗಿಕ ವಾತಾವರಣ ಆರಂಭವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ

ಲೈಂಗಿಕ ಶಿಕ್ಷಣವನ್ನು ಮಾಧ್ಯಮಿಕ ಶಾಲಾ ಹಂತದಲ್ಲಿ ಅಳವಡಿಸಬೇಕು. ಅದರ ಅವಶ್ಯಕತೆ ಈಗ ಹಿಂದೆಂದಿಗಿಂತಲೂ ಹೆಚ್ಚಿಗಿದೆ. sex-educationಯಾವದೋ ರಾಷ್ಟ್ರದ ಪಠ್ಯಕ್ರಮವನ್ನು ಆಧರಿಸಿ ಅದು ನಿರ್ಧಾರವಾಗುವಂತಿಲ್ಲ. ಇಲ್ಲಿಯ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಅದು ರೂಪಗೊಳ್ಳಬೇಕು. ರಾಜ್ಯ, ರಾಷ್ಟ್ರ, ಸಮಾಜ ಹಿತಕರ ಎನ್ನುವಷ್ಟನ್ನು ಮಾತ್ರ ಅಳವಡಿಸಬೇಕು. ಅದು ಬೇಡವೇ ಬೇಡ ಎನ್ನುವ ವಿತಂಡವಾದಕ್ಕಿಂತಲೂ ಇದು ಒಳ್ಳೆಯದು.

ಅದ್ಧೂರಿ ಮದುವೆಗೂ ಮುನ್ನ ಚಿಂತಿಸಿ

– ಬಿ.ಜಿ. ಗೋಪಾಲ ಕೃಷ್ಣ

ಒಂದು ಕ್ಷಣ ಏಕಾಂತದಲ್ಲಿ ಕುಳಿತು ಕಣ್ಣು ಮುಚ್ಚಿ ಯೋಚಿಸಿ ನೋಡಿ, ಮಾಸಿದ ಹರಕಲು ಬಟ್ಟೆ, ಕೆದರಿದ ಕೂದಲು, ಸ್ನಾನ ಕಂಡು ಅದೆಷ್ಟೋ ದಿನಗಳಾದ ದೇಹ, ಪಿಳಿಪಿಳಿ ಕಣ್ಣುಗಳು, ಮುಗ್ಧ ಮನಸ್ಸಿನ ಪುಟ್ಟ ಪುಟ್ಟ ಕೈ ಚಿಂದಿಯನ್ನು ಅರಸುತ್ತಾ ನಗರಸಭೆಯ ತೊಟ್ಟಿ ಸ್ಥಳಕ್ಕೆ ಬಂದಾಗ, ಅಲ್ಲಿ ನಾವು ಬಿಸಾಡಿದ ಅನ್ನ ಸಿಕ್ಕಾಗ, ಆ ಮುಗ್ಧ ಮನಸ್ಸಿನ ಸಂತೋಷಕ್ಕೆ ಆಕಾಶವೇ ಮೂರು ಗೇಣು! ಇಂತಹ ಸಮಾಜದಲ್ಲಿ ನಮಗೆ ಅದ್ಧೂರಿ ಮದುವೆ ಬೇಕೆ !?

ಅತಿವೃಷ್ಠಿ, ಅನಾವೃಷ್ಠಿಯಿಂದ ಬಳಲಿ ಬೆಂಡಾದ ರೈತಾಪಿವರ್ಗ, ಗುಳೆ ಹೋಗುತ್ತಿರುವ ಕೂಲಿ ಕಾರ್ಮಿಕ ಬಂಧುಗಳು, ಓದು ಬರಹ ಕಲಿತು ಸ್ವಉದ್ಯೋಗಕ್ಕಾಗಿ ಬಂಡವಾಳವಿಲ್ಲದೆ ಆಕಾಶ ನೋಡುತ್ತ ಕುಳಿತ ಯುವಕರು, ಬೆಳೆದು ನಿಂತ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿರುವ ಬಡ ತಂದೆ ತಾಯಂದಿರು ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ಭಾರತ ಮಾತೆಯ ಮಡಿಲಲ್ಲಿ, ನಿಮಗೆ ಅದ್ಧೂರಿ ಮದುವೆ ಬೇಕೆಂದೆನಿಸಿದರೆ, ಇದು ನಿಮ್ಮ ತಪ್ಪಲ್ಲ. ನಿಮ್ಮ ಅಂತಸ್ತಿನದು.

ಸಾಲದಲ್ಲಿ ಅದ್ಧೂರಿ ಮದುವೆಯಾಗಿ, ನಂತರ ಸಾಲ ತೀರಿಸಲು ಮಾನಸಿಕ, ಭೌತಿಕವಾಗಿ ಪಡಬಾರದ ಕಷ್ಟಪಡುತ್ತಾ ದಾಂಪತ್ಯದ ಮಧುರ ಕ್ಷಣಗಳನ್ನು ಕಳೆದು ಕೋಂಡವರು ನಮ್ಮೊಂದಿಗಿದ್ದಾರೆ. ಅಕ್ಕ ಅಥವಾ ತಂಗಿಯ ಮದುವೆಯ ಸಾಲ ತೀರಿಸಲು ತಮ್ಮ ಅಥವಾ ಅಣ್ಣನ ವಿದ್ಯಾಭ್ಯಾಸ ಮೊಟಕುಗೊಳಿಸಿರುವವರನ್ನು ನಾವು ನೋಡಿದ್ದೇವೆ.

ಒಂದು ಅಂದಾಜಿನ ಪ್ರಕಾರ ಮಧ್ಯಮ ವರ್ಗದವರ ಮದುವೆಗೆ 5 ರಿಂದ 15 ಲಕ್ಷ ರೂ ಬೇಕಾಗುತ್ತದೆ. expensive-wedding-banquetsಮಧ್ಯಮ ವರ್ಗದಿಂದ ಕೆಳಗಿರುವವರ ಮದುವೆ ಖರ್ಚು 1 ರಿಂದ 3 ಲಕ್ಷ ರೂ. ಅತಿ ಶ್ರೀಮಂತರ ಮದುವೆಯಲ್ಲಿ ಊಹೆಗೂ ನಿಲುಕದ ಆಡಂಬರದ ಅದ್ಧೂರಿತನ. ಕೋಟಿ ಕೋಟಿ ಹಣದ ಮಾರಣ ಹೋಮ. ಭಾರತ ಮೂಲದ ಉಕ್ಕಿನ ಉದ್ಯಮಿ ಮಿತ್ತಲ್ ತನ್ನ ಮಗಳ ಮದುವೆಗೆ ಮಾಡಿದ ಖರ್ಚು 600 ಲಕ್ಷ ಡಾಲರ್‌ಗಳು (ಆಗ ಸುಮಾರು 240 ಕೋಟಿ ರೂಪಾಯಿಗಳು). ಅದೂ ಕೇವಲ 1000 ( ಒಂದು ಸಾವಿರ) ಆಮಂತ್ರಿತರಿದ್ದ ವಿವಾಹ, 6 ದಿನಗಳ ಮದುವೆ. ಆಮಂತ್ರಣ ಪತ್ರಿಕೆ ಇದ್ದದು ಬೆಳ್ಳಿಯ ಡಬ್ಬಿಯಲ್ಲಿ. ಜೊತೆಯಲ್ಲಿ ವಿಮಾನದ ಟಿಕೇಟ್, ಸ್ಟಾರ್ ಹೋಟಲ್ ಒಂದರಲ್ಲಿ ವಾಸ್ತವ್ಯದ ಮುಂಗಡ ಟಿಕೇಟ್.

ನಮ್ಮ ದೇಶದ 15% ತರಕಾರಿ, ದವಸ ಧಾನ್ಯಗಳು ಮದುವೆ ಮುಂಜಿಗಳಿಗಾಗಿ ವಿನಿಯೋಗವಾಗುತ್ತಿದೆ. ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಕೋಟಿ ಯುವಕ ಯುವತಿಯರ ಮದುವೆಗಳು ನೆಡೆಯುತ್ತವೆ. ಆ ಮದುವೆಗೆ ಖರ್ಚಾಗುವ ಮೊತ್ತ 2 ಲಕ್ಷ ಕೋಟಿ ರೂ ನಿಂದ 6 ಲಕ್ಷ ಕೋಟಿ ರೂಪಾಯಿಗಳು.

ವಿವಾಹಗಳಿಂದ ಬದುಕು ನೆಡೆಸುತ್ತಿರುವ ಕಂಪನಿಗಳು, ಕೇಟರರ್‌ಗಳು ಹೀಗೆ ಹಲವಾರು ಕುಟುಂಬಗಳು ಇದ್ದಾರೆ ನಿಜ. ಆದರೆ ಒಂದು ವರ್ಗದ ಸಮಾಜ ಮಾತ್ರ ಇದರಿಂದ ಬದುಕು ನಡೆಸಲು ಸಾಧ್ಯ. ಬಡವರ, ಹಸಿದವರ, ಜಮೀನಿದ್ದೂ ವ್ಯವಸಾಯ ಮಾಡಲಾಗದ ರೈತಾಪಿ ವರ್ಗದವರ ಕಣ್ಣೀರು ನಮಗ್ಯಾರಿಗೂ ಕಾಣಿಸುತ್ತಿಲ್ಲ.

ಹಸಿದ ಜನರಿರುವ 118 ರಾಷ್ಟ್ರ್ಟಗಳ ಸಾಲಿನಲ್ಲಿ 94 ನೇ ಸ್ಥಾನ ದಲ್ಲಿ ನಾವಿದ್ದೇವೆ. ಮದುವೆ, ಮುಂಜಿ, ಸಮಾರಂಭಗಳಲ್ಲಿ ಆಹಾರವನ್ನು ಅಪವ್ಯಯ ಮಾಡುವುದು ಶಿಕ್ಷಾರ್ಹ ಅಪರಾದ ಎಂದು ಆಹಾರ ಮಂತ್ರಿ ಕೆ.ವಿ. ಥಾಮಸ್ ಹೇಳಿದ್ದು ಸಮಂಜಸವಾಗೇ ಇದೆ.

‘ನನ್ನಲ್ಲಿ ಸಾಕಷ್ಟು ಹಣವಿದೆ, ಮದುವೆಯಾಗುವುದು ಒಂದೇ ಸಲ. ಆದುದರಿಂದ ಆಡಂಬರದ ಅದ್ಧೂರಿ ಮದುವೆಯಾಗಲು ಬಯಸುತ್ತೇನೆ’ ಎನ್ನುವುದಾದರೆ ಮತ್ತೊಮ್ಮೆ ಯೋಚಿಸಿ. ಮನಸ್ಸು ಬದಲಾಯಿಸಿ ಸರಳ ವಿವಾಹವಾಗಿ. ಉಳಿದ ಹಣವನ್ನು ನಿಮ್ಮದೇ ಉತ್ತಮ ಭವಿಷ್ಯಕ್ಕಾಗಿ ಕೂಡಿಡಿ ಅಥವಾ ನಿಮ್ಮದೇ ಹೆಸರಿನಲ್ಲಿ ಸಮಾಜದ ಸೇವೆಗಾಗಿ ಸದ್ವಿನಿಯೋಗ ಮಾಡಿ. ಬಡವರ, ದೀನ ದಲಿತರ ಕಣ್ಣೀರನ್ನು ಒರೆಸಲು ಸಹಾಯ ಮಾಡಿ. ಸರಳ ವಿವಾಹ ಮಾಡಲು ಇಷ್ಟವಿದ್ದರೂ, ಸಮಾಜಕ್ಕೆ ಅಂಜಿ ಸಾಧಿಸಲಾಗದವರಿಗೆ ನೀವು ಪ್ರೇರಕರಾಗಿ.

ಮದುವೆಯಾಗುವುದು ವಧು ಮತ್ತು ವರನ ಒಪ್ಪಿಗೆಯ ಮೇರೆಗಾದರೂ ಮದುವೆ ಎಲ್ಲಿ, ಯಾವಾಗ, ಹೇಗೆ ನೆಡೆಯಬೇಕು ಎಂಬುವುದು ಹಿರಿಯರು ನಿರ್ಧರಿಸುತ್ತಾರೆ. ಸಮಾಜ ಬದಲಾಗಿದೆ, ವಸ್ತುಸ್ಥಿತಿ ಬದಲಾಗಿದೆ. ಸಂದರ್ಭಕ್ಕನುಸಾರವಾಗಿ ನಿರ್ಧರಿಸುವ ಸಾಮರ್ಥ್ಯ ಮಕ್ಕಳನ್ನು ಹೆತ್ತವರಿಗಿರುವುದಿಲ್ಲವೆ? ಸ್ವಲ್ಪ ನಮ್ಮ ಕುರುಡು ಸಮಾಜದ ಅಂತಸ್ತನ್ನು ಕಡೆಗಣಿಸಿ ಯೋಚಿಸಿದರಾಯಿತು.