Monthly Archives: February 2014

ವಾಣೀಜ್ಯೀಕೃತ ಮನರಂಜನೆ ಮತ್ತು ಅದರ ಸಾಮಾಜಿಕ ಪರಿಣಾಮ


– ಡಾ.ಎಸ್.ಬಿ. ಜೋಗುರ


 

ಎಲ್ಲ ರಾಷ್ಟ್ರಗಳಲ್ಲಿ ಎಲ್ಲ ಕಾಲಗಳಲ್ಲಿ ಸಾಮ್ರಾಜ್ಯಶಾಹಿ ಧೋರಣೆಯನ್ನು ಆಯಾ ಕಾಲಮಾನವೇ ಸಂಪೋಷಿಸಿಕೊಂಡು ಬಂದಿರುವುದಿದೆ. ಪ್ರತಿಯೊಬ್ಬ ಆಳರಸನೂ ಅದೇ ಬಗೆಯ ಪರಿಸರವನ್ನು ಬೇರೆ ಬೇರೆ ರೀತಿಯಿಂದ, ಮೂಲಗಳಿಂದ ಬಯಸುವದಿತ್ತು. ೧೮ ಮತ್ತು ೧೯ ನೇ ಶತಮಾನದ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ಪ್ರಭುತ್ವದ ಸ್ಥಾಪನೆಯಲ್ಲಿ ಅನುಸರಿಸಿದ ಮಾರ್ಗ ಈಗ ಹಳತು. ಆ ದಿಸೆಯಲ್ಲಿ ಅವರು ಮೊದಲು ನೌಕಾದಳ, ನಂತರ ಭೂದಳ ಅವರೆಡರ ಬೆನ್ನಲ್ಲಿ ನೌಕರಶಾಹಿ ಪಡೆಯನ್ನು ಸಾಮ್ರಾಜ್ಯದ ಸ್ಥಾಪನೆಗಾಗಿ ಅಟ್ಟುವದಿತ್ತು. ಅವುಗಳ ನಂತರ ಅಂತಿಮವಾಗಿ ಅವರ ಶೈಕ್ಷಣಿಕ ಕ್ರಮವನ್ನು ಪರಿಚಯಿಸುವ ಮೂಲಕ ಜಂಡಾ ಊರುವದಿತ್ತು.  ಆದರೆ ಈಗ ಅಮೇರಿಕೆಯಂಥಾ ರಾಷ್ಟ್ರಗಳು ತುಸು ವಿಭಿನ್ನವಾದ ರೀತಿಯಲ್ಲಿ ಆ ಕೆಲಸವನ್ನು ಬಹುತೇಕರ ಗಮನಕ್ಕೆ ಬಾರದ ಹಾಗೆ ವಾಣೀಜ್ಯೀಕೃತ ದೂರದರ್ಶನದ ಕಾರ್ಯಕ್ರಮಗಳನ್ನೇ ಸಾಧನವನ್ನಾಗಿಟ್ಟುಕೊಂಡು ಅಂದು ಬ್ರಿಟಿಷರು ಮಾಡಿದ ಕೆಲಸವನ್ನು ಇಂದು ಅಮೇರಿಕೆ ವಿಭಿನ್ನ ನೆಲೆಯಲ್ಲಿ ಮಾಡುತ್ತಿದೆ. ವ್ಯತ್ಯಾಸ ಏನೆಂದರೆ ಅಂದು ಬ್ರಿಟಿಷರ ಸಾಮ್ರಾಜ್ಯಶಾಹಿ ನೀತಿ ಅದಕ್ಕೆ ಒಳಪಡುವ ಜನಸಮುದಾಯಗಳಲ್ಲಿ, ನೆಲೆಗಳಲ್ಲಿ ಒಂದು ಬಗೆಯ ಭಯ, ತಾತ್ಸಾರ ಮತ್ತು ಆಕ್ರೋಶಕ್ಕೆ ಕಾರಣವಾಗುತ್ತಿತ್ತು. ಆದರೆ ಈ ಅಮೇರಿಕೆ ತನ್ನ ವಾಣೀಜ್ಯೀಕೃತ ಮನರಂಜನೆಯ ಮೂಲಕ ಮಾಡುವ ಸಾಮ್ರಾಜ್ಯಶಾಹಿ ವಿಸ್ತರಣೆಯ ಧೋರಣೆಯಲ್ಲಿ ಯಾವುದೇ ಬಗೆಯ ಭಯ, ತಾತ್ಸಾರ, ಆಕ್ರಮಣವಿಲ್ಲ. ಇದೊಂಥರಾ ಸಾವಿನಲ್ಲೂ ಸುಖತೋರುವ ತಂತ್ರಗಾರಿಕೆ. ಇಲ್ಲಿ ಯುದ್ಧ ಮತ್ತು ಆಕ್ರಮಣಗಳು ಮಾಡಬಹುದಾದ ಅನುಹುತಗಳಿಗಿಂತಲೂ ಬಹುಪಾಲು ಆತಂಕಕಾರಿ ಪರಿಣಾಮಗಳನ್ನು ಅದು ಬೇರಿ ರೀತಿಯಲ್ಲಿ ಉಂಟು ಮಾಡಿದರೂ ಯುದ್ಧದ ಸಂದರ್ಭದ ತೀವ್ರತೆಯ ಕಾವು ಇಲ್ಲಿರುವುದಿಲ್ಲ. ತಣ್ಣಗೆ ಆವರಿಸುತ್ತಲೇ ಸಾಗುವ ಈ ಪರಿಕ್ರಮಣ ಅತ್ಯಂತ ಅಪಾಯಕಾರಿಯಾದುದು. ಯಾವುದೇ ಬಗೆಯ ಪ್ರತಿರೋಧಗಳಿಲ್ಲದೇ ಪ್ರಭುತ್ವವನ್ನು ಈ ಮುಖೇನ ಸ್ಥಾಪಿಸುವ ಹುನ್ನಾರ ಅಮೆರಿಕೆಯಂಥಾ ರಾಷ್ಟ್ರಗಳದ್ದು. tv-mediaಸೂರ್ಯ ಮುಳುಗದ ಸಾಮ್ರಾಜ್ಯಗಳನ್ನು ನಾವು ಉಲ್ಲೇಖಿಸುವುದಿದೆ. ದೂರದರ್ಶನದ ವಾಣಿಜ್ಯೀಕೃತ ಮನರಂಜನಾ  ಕಾರ್ಯಕ್ರಮಗಳಿಗೆ ಸಂಬಂಧಿಸಿಯೂ ಈ ಮಾತನ್ನು ವಿಸ್ತರಿಸಬಹುದಾಗಿದೆ. ರಷ್ಯಾದಂತಹ ರಾಷ್ಟ್ರಗಳಿಗೆ ಯುದ್ಧದ ತಾಂತ್ರಿಕ ಸಂಗತಿಗಳೇ ಇವತ್ತಿಗೂ ಸಾಮ್ರಾಜ್ಯದ ವಿಸ್ತರಣೆಗೆ ಮತ್ತು ಪ್ರಭುತ್ವದ ಅಧಿಪತ್ಯಕ್ಕೆ ಬಹುಮುಖ್ಯ ಕಾರಣ ಎನ್ನುವ ನಂಬುಗೆ ಬಲವಾಗಿದೆ. ಇನ್ನು ನಮ್ಮಂಥಾ ರಾಷ್ಟ್ರಗಳಂತೂ ಈ ವಾಣಿಜ್ಯೀಕೃತ ಮನರಂಜನೆಯ ಅಪಾಯವನ್ನು ಲೆಕ್ಕಿಸಲಿಕ್ಕೂ ಸಾಧ್ಯವಿಲ್ಲ. ಕೇವಲ ನಾವು ಮಾತ್ರವಲ, ತೃತೀಯ ಜಗತ್ತಿನ ಬಹುತೇಕ ರಾಷ್ಟ್ರಗಳು ಈ ದೂರದರ್ಶನದ ಮಸಾಲಾ ಕಾರ್ಯಕ್ರಮಗಳು ಭವಿಷ್ಯದಲ್ಲಿ ತಂದೊಡ್ದಬಹುದಾದ ಆತಂಕಗಳನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. ಅದೇನಿದ್ದರೂ ಆ ಬಗೆಯ ಬೀಜಗಳನ್ನು ಬಿತ್ತುವ ಯತ್ನದಲ್ಲಿರುವ ಅಮೇರಿಕೆಯಂಥಾ ರಾಷ್ಟ್ರಗಳಿಗೆ ಮಾತ್ರ ಆ ಗ್ರಹಿಕೆ ಸಾಧ್ಯ. ಯುರೋಪಿನ ಕೆಲವು ರಾಷ್ಟ್ರಗಳಿಗೆ ಅಮೇರಿಕೆ ಈ ದೂರದರ್ಶನದ ಕ್ಕಾರ್ಯಕ್ರಮಗಳನ್ನು ಸಾಧನವಾಗಿಟ್ಟುಕೊಂಡು ತನ್ನ ಸಾಮ್ರಾಜ್ಯಶಾಹಿ ಧೋರಣೆಯನ್ನು ವಿಸ್ತರಿಸುವತ್ತ ನಡೆಸುತ್ತಿರುವ ತಂತ್ರಗಾರಿಕೆಗಳು ತಿಳಿದಿವೆ. ಹಾಗೆಂದು ಅದನ್ನು ಪ್ರತಿಭಟಿಸುವಂತೆಯೂ ಇಲ್ಲ. ಯಾಕೆಂದರೆ ಜನರಿಗೆ ಮನರಂಜನೆ ಕೊಡುವ ನೆಪದಲ್ಲಿ ಈ ಬಗೆಯ ಷಡ್ಯಂತ್ರ ನಡೆಸಲಾಗುತ್ತಿದೆ.

ಅಮೆರಿಕೆಯಂಥಾ ರಾಷ್ಟ್ರಗಳು ದೂರದರ್ಶನದ ಮುಖಾಂತರ ಅವರ ಕಾರ್ಯಕ್ರಮಗಳನ್ನು ಮಾತ್ರ ರವಾನೆ ಮಾಡದೇ ಪರೋಕ್ಷವಾಗಿ ಆ ಕಾರ್ಯಕ್ರಮದ ಜೊತೆಯಲ್ಲಿ ಅವರ ಆಲೋಚನಾ ಕ್ರಮವನ್ನೂ ರವಾನೆ ಮಾಡುತ್ತವೆ. ಇದು ಬಹುತೇಕ ರಾಷ್ಟ್ರಗಳ ಜನಸಾಮಾನ್ಯನ ಗ್ರಹಿಕೆಗೆ ಸಿಗದ ವಿಷಯ. ವಿಶ್ವದ ಎಲ್ಲ ಭಾಗಗಳಲ್ಲೂ ಬಂಡವಾಳಶಾಹಿ ವ್ಯವಸ್ಥೆ ತೀವ್ರತರವಾದ ತಾಂತ್ರಿಕ ಪ್ರಗತಿಗೆ ಕಾರಣವಾಗಿರುವಂತೆ ಆಯಾ ರಾಷ್ಟ್ರಗ ಸಾಂಸ್ಕೃತಿಕ ಅಧ:ಪತನಕ್ಕೂ ಕಾರಣವಾಗಿರುವುದು ಹೌದು.

19 ನೇ ಶತಮಾನದ ಆರಂಭದಲ್ಲಿಯೇ ಅಮೇರಿಕೆಯಲ್ಲಿಯ ಸಾಂಸ್ಥಿಕ ಮೂಲಗಳನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಿದ ಅಲೆಕ್ಸಿ.ಡಿ. ಟಾಕೆವೆಲ್ಲಿ ಗುರುತಿಸಿದಂತೆ “ಅಮೇರಿಕನ್ನರು ತೀವ್ರವಾದ ಬದಲಾವಣೆಯ ನಡುವೆಯೂ ಹೊಂದಿಕೊಂಡು ಬದುಕುಳಿಯುತ್ತಾರೆ.” ಹೊಸ ಬಗೆಯ ತಂತ್ರಜ್ಞಾನವನ್ನು ಶೋಷಣೆ ಮಾಡಿ ಬೆಳೆಯುವ, ಬದುಕುವ ಗತ್ತುಗಾರಿಕೆಗಳೂ ಅಮೇರಿಕೆಯ ಬಂಡವಾಳಶಾಹಿಗಳಿಗೆ ಹೊಸದಂತೂ ಅಲ್ಲ. ಈ ಬಗೆಯ ತಾಂತ್ರಿಕ ಭರಾಟೆಯ ನಡುವೆಯ ಸಂಸ್ಕೃತಿ ಎನ್ನುವುದು ಬಿಕ್ಕಟ್ಟಿನಲ್ಲಿ ಬಸವಳಿಯಬೇಕಾಗುತ್ತದೆ. ಈಗ ಸದ್ಯ ಅಮೇರಿಕೆಯಲ್ಲಿ ಈ ಮಾತು ಸಾಬೀತಾಗುತ್ತಿದೆ. ಕೇವಲ ಅಮೇರಿಕೆ ಮಾತ್ರವಲ್ಲ, ವಿಶ್ವದ ಬಹುತೇಕ ರಾಷ್ಟ್ರಗಳು ತಾಂತ್ರಿಕತೆಯನ್ನೇ ಬದಲಾವಣೆ ಮತ್ತು ಪ್ರಗತಿ ಎಂದು ಹಾತೊರೆಯುವ ನಡುವೆ, ದಿವಾಳಿಯಾಗುತ್ತಿರುವ ಸಾಂಸ್ಕೃತಿಕ ಪರಿಸರದ ಪ್ರಜ್ಞೆಯೂ ಇಲ್ಲ. ಶ್ರೇಷ್ಟ ಸಮಾಜಶಾಸ್ತ್ರಜ್ಞ ಆಗ್ಬರ್ನ ಮತ್ತು ನಿಮಕಾಫ಼್ ಎನ್ನುವವರು ಈ ಬಗೆಯ ಸ್ಥಿತಿಯನ್ನು ಸಾಂಸ್ಕೃತಿಕ ಹಿಂಬೀಳುವಿಕೆ ಎಂದು ಕರೆದಿರುವುದಿದೆ. ವಸ್ತು ರೂಪದ ಭೌತ ಸಂಸ್ಕೃತಿ ತೀವ್ರವಾಗಿ ಬದಲಾವಣೆ ಹೊಂದುವ ಜೊತೆಗೆ ಮುಂದೆ ಸಾಗುವ ಗುಣವನ್ನು ಹೊಂದಿದೆ. ವಿಷಯರೂಪದ ಅಭೌತ ಸಂಸ್ಕೃತಿ ನಿಧಾನವಾಗಿ ಸಾಗುತ್ತದೆ. ಪರಿಣಾಮವಾಗಿ ಅಲ್ಲಿ ಭೌತ ಮತ್ತು ಅಭೌತ ಸಂಸ್ಕೃತಿಯ ನಡುವೆ ಒಂದು ಬಗೆಯ ಅಂತರ ನಿರ್ಮಾಣವಾಗುತ್ತದೆ. ಇದನ್ನೇ ಸಾಂಸ್ಕೃತಿಕ ಹಿಂಬೀಳುವಿಕೆ ಎಂದು ಕರೆಯಲಾಗುವುದು. tv-mediaಇಂದು ಈ ದೂರದರ್ಶನ ಬಿತ್ತರಿಸುವ ವಾಣೀಜ್ಯೀಕೃತ ಮನರಂಜನೆ ಇಡೀ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಅದರಲ್ಲೂ ಔದ್ಯೋಗಿಕರಣದ ಪ್ರಕ್ರಿಯೆಗೆ ಸಿಲುಕಿರುವ ರಾಷ್ಟ್ರಗಳ ಸಾಂಸ್ಕೃತಿಕ ಬೇರುಗಳನ್ನು ಸಡಿಲುಗೊಳಿಸುವಲ್ಲಿ ಭರಾಟೆಯಿಂದ ತೊಡಗಿಸಿಕೊಂಡಿದೆ. ಹಿಂದೆ ಕಾರ್ಲ್ ಮಾರ್ಕ್ಸ್ ಯುರೋಪನ್ನು ಉಲ್ಲೇಖಿಸಿ ಅದು ಭೂತವನ್ನು ಬೇಟೆಯಾಡುವ ನೆಲೆ ಎಂದು ಕರೆದಿದ್ದ.  ಸದ್ಯದ ಸಂದರ್ಭದಲ್ಲಿ ಆತ ಬದುಕಿದ್ದರೆ ಈ ವಾಣೀಜ್ಯೀಕೃತ ಮನರಂಜನೆಯನ್ನೇ ದೊಡ್ದ ಭೂತ ಎಂದು ಕರೆಯುತ್ತಿದ್ದನೇನೋ..? ಈ ಬಗೆಯ ವಾಣಿಜ್ಯೀಕೃತ ಮನರಂಜನೆಗಳು ಪಶ್ಚಿಮದ ನೆಲೆಗಳಲ್ಲಿಯ ಸಂಸ್ಕೃತಿಯನ್ನು ನಿಗಟಿ ಈಗ ಪೂರ್ವದಕಡೆಗೆ ತನ್ನ ನಾಲಿಗೆಯನ್ನು ಚಾಚುತ್ತಿರುವದಂತೂ ಹೌದು. ಅದರ ಕೆನ್ನಾಲಿಗೆಯ ವಿಸ್ತೃತ ರೂಪವನ್ನು ಬಹುತ್ವದ ಸಾಂಸ್ಕೃತಿಕ ಬಾಹುಳ್ಯವನ್ನು ಹೊಂದಿರುವ ಭಾರತದಂತಹ ನೆಲೆಗಳು ತುರ್ತಾಗಿ ಗುರುತಿಸಿ, ಎಚ್ಚರಗೊಳ್ಳಬೇಕಾಗಿದೆ.

ಒಂದೆಡೆ ಮನರಂಜನೆ ಕಾರ್ಯಕ್ರಮಗಳು, ಅವುಗಳ ನಡುವೆ ಪೈಪೋಟಿಗೆ ನಿಂತಂತೆ ಕಾರ್ಯಕ್ರಮದ ನಡುವೆ ದಿಢೀರನೇ ತೂರಿ ಬರುವ ಜಾಹಿರಾತುಗಳು ನಮ್ಮ ಸಾಂಸ್ಕೃತಿಕ ಪರಿಸರದ ಮೇಲೆ ನಿರಂತರವಾಗಿ ದೊಡ್ದದಾದ ಒಂದು ಗಧಾಪ್ರಹಾರವನ್ನೇ ಮಾಡುತ್ತಿವೆ. ಇನ್ನೂ ಉರುಭಂಗವಾಗಿಲ್ಲದಿರುವುದರಿಂದ ನಮಗೆ ಅದರ ನೋವುಗಳು ಬಾಧಿಸುತ್ತಿಲ್ಲ. ಈ ಜಾಹಿರಾತುಗಳ ಮೂಲಕ ಕೋಟ್ಯಾನುಗಟ್ಟಲೇ ವ್ಯವಹಾರ ಮಾಡುವ ಈ ವಾಣೀಜ್ಯೀಕೃತ ಚಾನೆಲ್ ಗಳು ವೀಕ್ಷಕರನ್ನು ಹಪಾಹಪಿ ಗ್ರಾಹಕರನ್ನಾಗಿ ಪರಿವರ್ತಿಸುತ್ತ ತಮ್ಮನ್ನು ತೊಡಗಿಸಿಕೊಂಡಿವೆ. ಡೆನ್ಮಾರ್ಕಲ್ಲಿ ಈ ಬಗೆಯ ವಾಣೀಜ್ಯೀಕೃತ ಮನರಂಜನೆಯನ್ನು ಸಾತತ್ಯವಾಗಿ ವಿರೋಧಿಸುತ್ತಾ ಬರುವ ಜೊತೆಗೆ ಜಾಹಿರಾತುಗಳನ್ನು ರಾಷ್ಟ್ರೀಯ ಚಾನೆಲ್ ಲ್ಲಿ ಮಾತ್ರ ಪ್ರಸಾರ ಮಾಡುವ ಹಾಗೆ ಒತ್ತಡ ತರಲಾಯಿತು. ಹಾಗೆಯೇ ಆಷ್ಟ್ರಿಯಾದಲ್ಲಿ ಔಷಧಿಯ ಬಗ್ಗೆ, ಬ್ಯಾಂಕುಗಳ ಬಗ್ಗೆ, ರಾಜಕೀಯದ ಬಗ್ಗೆ, ಧಾರ್ಮಿಕ ಸಂಘಟನೆಗಳ ಬಗ್ಗೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವಂತಿಲ್ಲ ಎಂದು ನಿಷೇಧವನ್ನು ಹೇರಿರುವುದಿದೆ. ಅಮೇರಿಕೆಯಂಥಾ ರಾಷ್ಟ್ರಗಳು ಈ ರಾಷ್ಟ್ರಗಳಿಗೆ ನೀವು ಹೀಗೆ ಮಾಡುವದರಿಂದ ಅಪಾರ ಪ್ರಮಾಣದ ಆದಾಯವನ್ನು ಕಳೆದುಕೊಳ್ಳುತ್ತೀರಿ ಎಂದು ತನ್ನ ವಾಣಿಜ್ಯ ನೀತಿಯನ್ನು ಪ್ರತಿಪಾದಿಸಬಹುದೇನೋ..? ಇಂದು ಎಲ್ಲ ವಾಣೀಜ್ಯೀಕೃತ ಮನರಂಜನೆಯನ್ನು ನಿಯಂತ್ರಿಸುವವರು ಜಾಹಿರಾತುದಾರರು. ಅವರು ಮನರಂಜನೆಯನ್ನು ಒಂದು ಸಾಧನವನ್ನಾಗಿ ಮಾಡಿಕೊಂಡು ಅಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ನಡುವೆ ಬೇಕಾಬಿಟ್ಟಿಯಾಗಿ ನುಸುಳುವ, ತಮಗೆ ಬೇಕಾಗಿರುವ ಪ್ರಮಾಣದ ಗ್ರಾಹಕರನ್ನು ಕ್ಯಾಚ್ ಮಾಡಿಕೊಳ್ಳುವಲ್ಲಿ ಅವು ಯಶಸ್ವಿಯಾಗುತ್ತಿವೆ. ಮುಂದುವರೆದ ರಾಷ್ಟ್ರಗಳಲ್ಲಿಯ ವಾಣಿಜ್ಯೀಕೃತ ಮನರಂಜನೆ ಜನಪರ ಕಾರ್ಯಕ್ರಮಗಳಿಗಿಂತಲೂ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆಯೇ ಹೆಚ್ಚಿನ ಆಸ್ಥೆಯನ್ನು ತೋರುತ್ತಿವೆ. ಇಂದು ಅಸ್ಥಿತ್ವದಲ್ಲಿರುವ ವಾಣಿಜ್ಯೀಕೃತ ಮನರಂಜನೆಯ ಚಾನೆಲ್ ಗಳು ಜನರ ಸಮಯವನ್ನು ಸ್ಪರ್ಧಾತ್ಮಕವಾಗಿ ಲೂಟಿ ಮಾಡುವತ್ತ ತೊಡಗಿಕೊಂಡಿವೆ. ನಾ ಮುಂದು ತಾ ಮುಂದು ಎಂದು ಗ್ರಾಹಕರನ್ನು ಗಾಳ ಹಾಕುವಲ್ಲಿ ಕಸರತ್ತು ಮಾಡುತ್ತಿವೆ. ಪರಿಣಾಮವಾಗಿ ಹೆಚ್ಚೆಚ್ಚು ಜನಪ್ರಿಯ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುವ ಭರಾಟೆಯ ನಡುವೆ ಅರ್ಥಪೂರ್ಣ ಮತ್ತು ಗಂಭೀರವಾದ ವಿಷಯಗಳನ್ನಾಧರಿಸಿದ ಕಾರ್ಯಕ್ರಮಗಳೇ ವಿರಳವಾಗುತ್ತವೆ. ಜೊತೆಗೆ ವೀಕ್ಷಕರ ಮನ:ಸ್ಥಿತಿಯ ಮೇಲೂ ಕಾರಣ -ಪರಿಣಾಮಗಳ ಸಂಬಂಧ ಸ್ಥಾಪನೆಯಾಗತೊಡಗುತ್ತದೆ. ಈ ಬಗೆಯ ವಾಣೀಕ್ಯೀಕೃತ ಮನರಂಜನೆಯನ್ನೇ ಮಾರುವ ಚಾನೆಲ್ ಗಳ ನಡುವೆ ಸರಕಾರದ ಅಡಿಯಲ್ಲಿ ನಡೆಯುವ ರಾಜ್ಯ ಮಟ್ಟದ ದೂರದರ್ಶನದ ಚಾನೆಲ್ ಗಳು ಕೂಡಾ ಇವರ ಜೊತೆಗೆ ಸ್ಪರ್ಧೆಗಿಳಿದು ಕ್ರಮೇಣವಾಗಿ ಅವೂ ಕೂಡಾ ಅದೇ ಮಾರ್ಗದಲ್ಲಿ ಸಾಗುವ ಸಾಧ್ಯತೆಗಳಿವೆ. ಸದ್ಯ ಬಿ.ಬಿ.ಸಿ. ಅದೇ ಬಗೆಯ ಸ್ಥಿತಿಯನ್ನು ಅನುಭವಿಸುತ್ತಿದೆ. ಹಾಗೆಯೇ ಕೆಲವೊಮ್ಮೆ ನಮ್ಮ ರಾಷ್ಟ್ರೀಯ ಚಾನೆಲ್ ಗಳು ಕೂಡಾ ಅನಿಸುವುದಿದೆ. ಜನ ಈ ಬಗೆಯ ವಾಣಿಜ್ಯೀಕೃತ ಮನರಂಜನೆಯನ್ನು ನೋಡಿ ನೋಡಿ ಅದಕ್ಕಿಂತಲೂ ತೀವ್ರತರವಾದ  ಪರಿಣಾಮವನ್ನು  ಉಂಟು ಮಾಡಬಹುದಾದ ಕಾರ್ಯಕ್ರಮಗಳನ್ನೇ ನಿರೀಕ್ಷಿಸುತ್ತಾರೆ. ಹಾಗಾಗಿಯೇ ಹಲ್ಲೆ, ಅತ್ಯಾಚಾರದ ಪ್ರಕರಣಗಳನ್ನು ಮತ್ತೆ ಮತ್ತೆ ವಾರಾನುಗಟ್ಟಲೆ ತೋರಿಸುವುದಿದೆ. ಅಂತಿಮವಾಗಿ ವೀಕ್ಷಕರ ನಿಜವಾದ ಅಭಿರುಚಿಯನ್ನು ಹಾಳುಗೆಡವಿ, ತಾನು ಬಡಿಸಿದ್ದನ್ನು ಉಣ್ನುವ ಸ್ಥಿತಿಗೆ ಅವರನ್ನು ನೂಕುವಲ್ಲಿ ಈ ವಾಣಿಜ್ಯೀಕೃತ ಮನರಂಜನೆಯ ಚಾನೆಲ್ ಗಳು ಯಶಸ್ವ್ವಿಯಾಗಿವೆ. ಇಲ್ಲಿಯ ಜಾಹೀರಾತುಗಳ ಹಾವಳಿಗೆ ತತ್ತರಿಸಿದ ಕೆಲವು ಪತ್ರಿಕೆಗಳು ಈ ಜನಪ್ರಿಯ ಮಾರ್ಗವನ್ನೇ ತಮ್ಮ ಪ್ರಸಾರ ಮತ್ತು ಜಾಹೀರಾತುಗಳ ಹೆಚ್ಚಳದಲ್ಲಿ ಅನುಸರಿಸುವುದು ಇನ್ನೊಂದು ವಿಷಾದದ ಸಂಗತಿ. ಅವು ಕೂಡಾ ಮಸಾಲಾ ಸುದ್ದಿ, ಚಿತ್ರಗಳ ಬೆನ್ನಿಗೆ ಬೀಳುವಂತಾಯಿತು. ಈ ವಾಣಿಜ್ಯೀಕೃತ ಮನರಂಜನೆಯ ಚಾನೆಲ್ ಗಳ ಎದುರಲ್ಲಿ ಕೂರುವವರಿಗೆ ಗಾಳ ಹಾಕಿ ಓದುವಂತೆ ಮಾಡುವದು ಸಾಮಾನ್ಯ ಕೆಲಸವಂತೂ ಅಲ್ಲ. ಹಾಗೆಯೇ ಸಾಹಿತ್ಯಕ ಕೃತಿಗಳನ್ನು, ಇತರೆ ಕೃತಿಗಳನ್ನು ಓದುವವರ ಪ್ರಮಾಣವೂ ಇಂದು ಕಡಿಮೆ. ಮಾರುಕಟ್ಟೆಗೆ ಬರುತ್ತಿರುವ ಗ್ರಂಥಗಳ ಪ್ರಮಾಣ ಕಡಿಮೆಯಿಲ್ಲ, ಈಗೀಗ ಕೆಲವು ಪ್ರಕಾಶಕರು ಈ ಕಾಲಮಾನದ ಅಗತ್ಯ ಎನ್ನುವಂತೆ ತಮ್ಮ ಪುಸ್ತಕಗಳಿಗೆ ಜಾಕೆಟ್. ಕೋಟು ತೊಡಿಸುವ ಪರಿಪಾಠವನ್ನು ಅನುಸರಿಸುತ್ತಿದ್ದಾರೆ. ಇದರಿಂದ ತೀರಾ ಅಪರೂಪದ ಸಮೂಹ ಎನ್ನುವಂತೆ ಉಳಿದಿರುವ ಓದುಗರ ಮೇಲೆ ಅದರ ದರದ ಹೊರೆ ಬೀಳುತ್ತದೆ. ಅಷ್ಟಕ್ಕೂ ಪುಸ್ತಕ ಜಾಕೇಟೇ ಅದರ ಮೌಲ್ಯ ಮತ್ತು ಪ್ರಮಾಣವಂತೂ ಅಲ್ಲ. ನಿರಕ್ಷರಿಗಳು ಬಿಡಿ, ಸಾಕ್ಷರರಲ್ಲೂ ಓದುಗರ ಪ್ರಮಾಣ ಕಡಿಮೆಯಾಗುತ್ತದೆ. ಬಹುತೇಕ ಸಮಯವನ್ನು ಈ ವಾಣಿಜ್ಯೀಕೃತ ಮನರಂಜನೆಗಳೇ ಲೂಟಿ ಮಾಡುತ್ತಿವೆ. ರಾಜಕೀಯ ಸುದ್ದಿಗಳಿಗೆ ಹೆಚ್ಚು ಅವಕಾಶ ಕೊಡದಂತೆ, ಅವರ ಜಾಹೀರಾತುಗಳನ್ನು ಒಟ್ಟಾರೆ ನಿಷೇಧಿಸುವಂಥ ಕ್ರಮದ ಅಗತ್ಯವಿದೆ. ಹೆಚ್ಚೆಚ್ಚು ಜಾಹೀರಾತು ನೀಡುವ ರಾಜಕೀಯ ಪಕ್ಷಗಳೇ ಗೆಲ್ಲುವ ಸ್ಥಿತಿಯನ್ನು ಈ ಬಗೆಯ ಚಾನೆಲ್ ಗಳು ನಿರ್ಮಾಣ ಮಾಡುವ ಸಾಧ್ಯತೆಯಿದೆ.

ತೀರಾ ಮುಂದುವರೆದ ರಾಷ್ಟ್ರ, ಅಲ್ಲಿ ಜನರಿಗೆ ಸಮಯವೇ ಸಿಗುವುದಿಲ್ಲ, ರಸ್ತೆಯ ಮೇಲೆ ಜನರೇ ಕಾಣಸಿಗುವುದಿಲ್ಲ ಎನ್ನುವ ಅಮೇರಿಕೆಯಂಥಾ ರಾಷ್ಟ್ರಗಳಲ್ಲಿಯೇ ಒಬ್ಬ ವೀಕ್ಷಕ ಸರಾಸರಿ ದಿನಕ್ಕೆ ಎಂಟು ಘಂಟೆಗಳ ಕಾಲ ಈ ಟಿ.ವಿ.ಮುಂದೆ ಕುಳಿತುಕೊಳ್ಳ್ಲುವುದರಿಂದ ಸಮಯವನ್ನು ಕಳೆಯುವುದಿದೆ. ನಮ್ಮಲ್ಲಿ ಆ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು. ಕಾರ್ಯಕ್ರಮಕ್ಕೆ ಜನವೇ ಬರುವುದಿಲ್ಲ ಎನ್ನುವ ಮಾತು ಕೇವಲ ನಮ್ಮಲ್ಲಿ ಮಾತ್ರವಲ್ಲ, ಅಲ್ಲಿಯೂ ಇದೆ. ಬಹುತೇಕರು ಟಿ.ವಿ.ಮುಂದೆ ಕುಕ್ಕರು ಬಡಿಯುವದರಿಂದ ಪಾರ್ಕುಗಳು, ಸಂಗೀತ ಕಚೇರಿಗಳು, ಸಭೆ ಸಮಾರಂಭಗಳು, ರಸ್ತೆಗಳು ಬಿಕೋ ಅನ್ನುವುದು ಸಹಜ. ಮಕ್ಕಳ ಆಟಗಳ ಪರಂಪರೆಯನ್ನೇ ಈ ವಾಣಿಜ್ಯೀಕೃತ ಮನರಂಜನೆ ಮತ್ತು ವಿಡಿಯೋ ಗೇಮ್ ಕೊಂದು ಹಾಕಿವೆ. ಇಲ್ಲಿ ಮಕ್ಕಳು ಈ ಬಗೆಯ ಚಾನೆಲ್ ಗಳಿಗೆ ತೀರಾ ಪ್ರಮುಖವಾದ ಗ್ರಾಹಕರು ಮತ್ತು ವಾರಸುದಾರರು. ಸಾವಿರಾರು ಘಂಟೆಗಳನ್ನು ಅವರು ಟಿ.ವಿ.ಮುಂದೆ ಕಳೆಯುವದರಿಂದಾಗಿ ಅವರ ಬಾಲ್ಯಾವಸ್ಥೆಯನ್ನೇ ಅವರು ಮರೆತು ನೇರವಾಗಿ ಕೊಳ್ಳುಬಾಕ ಸಂಸ್ಕೃತಿಯ ಭಾಗವಾಗಿಬಿಡುತ್ತಾರೆ. ಈ ಬಗೆಯ ಭರಾಟೆ ಕುಟುಂಬ ಮತ್ತು ನೆರೆಹೊರೆಯಂಥಾ ಸಮೂಹ ಜೀವನವನ್ನು ಬಾಧಿಸಿಲ್ಲ ಎಂದು ಭಾವಿಸುವ ಅವಶ್ಯಕತೆಯಿಲ್ಲ. ಈ ವಾಣಿಜ್ಯೀಕೃತ ಮನರಂಜನೆಯ ಹಾವಳಿಗೆ ತುತ್ತಾದ ಅತ್ಯಂತ ಪ್ರಧಾನ ಸಾಮಾಜಿಕ ಸಮೂಹ ಕುಟುಂಬ. ಈ ಬಗೆಯ ಕಾರ್ಯಕ್ರಮಗಳಿಂದಾಗಿ ಅಲ್ಲಿ  ಸದಸ್ಯರ ನಡುವೆ ಮುಂಚೆ ಏರ್ಪಡುತ್ತಿದ್ದ ಸಾಮಾಜಿಕ ಅಂತರಕ್ರಿಯೆ ಈಗ ಸಾಧ್ಯವಾಗುತ್ತಿಲ್ಲ. ಪಾಲಕರ ಮತ್ತು ಮಕ್ಕಳ ನಡುವಿನ ಮಾತುಕತೆ ಕಡಿಮೆಯಾಗಿದೆ. ಇಬ್ಬರೂ ಕಾರ್ಯಕ್ರಮವನ್ನು ಹೆಚ್ಚೆಚ್ಚು ನೋಡುವಲ್ಲಿ ಬ್ಯುಸಿ. ಮನೆ ಎನ್ನುವುದು ಈಗ ಕೇವಲ ತಿಂದುಂಡು ಮಲಗುವ ಲಾಜಿಂಗ್ ಆಗಿ ಪರಿವರ್ತಿತವಾಗುತ್ತಿದೆ. ಫ಼ಾಸ್ಟ್ ಫ಼ುಡ್ ಸಂಸ್ಕೃತಿ ತೀವ್ರವಾಗಿ ಬೆಳೆಯುತ್ತಿರುವುದರಿಂದ ಆ ನಿಗದಿತ ಕಾರ್ಯಕ್ರಮದ ಅವಧಿಯೊಳಗಾಗಿ ಅಡುಗೆ ಮಾಡಿ ಮುಗಿಸುವ, ಇಲ್ಲವೇ ಹೊಟೆಲಿಂದ ತಂದು ತಿನ್ನುವ ಪರಿಪಾಠ ಆರಂಭವಾಗಿವೆ. ಗಂಡ-ಹೆಂಡತಿ ಮತ್ತು ಕುಟುಂಬದೊಳಗಿನ ಸಂಬಂಧಗಳನ್ನು ಅಲ್ಲಿ ಬರುವ ಯಾವುದೋ ಒಂದು ಸುದೀರ್ಘವಾದ ಧಾರವಾಹಿ ನಿರ್ಧರಿಸುತ್ತದೆ. ಈ ನಡುವೆ ಕುಟುಂಬದಲ್ಲಿರುವ ಹಿರಿಯರ ಗೋಳು ಇನ್ನೊಂದು ಬಗೆಯದು. ಹೆಚ್ಚು ಹೊತ್ತು ನಿವಾಂತವಾಗಿ ಮನರಂಜನೆಯನ್ನು ನೋಡಬೇಕೆನ್ನುವವರಿಗೆ ಈ ಹಿರಿಯರು ಹೊರೆಯಾಗತೊಡಗಿದ್ದಾರೆ. ಯುವಕರಂತೂ ಗ್ಲಾಮರಸ್ ಲೋಕವೇ ನಿಜ, ಮಿಕ್ಕ ಯಾವುದರಲ್ಲಿಯೂ ಮಜವಿಲ್ಲ ಎನ್ನುವಂತೆ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ. ಸೀದಾ ಸಾದಾ ಓಡಿಸಬೇಕಾದ ಬೈಕನ್ನೇ ಅವರು ಹಾವಿನ ಹೊರಳಾಟವಾಗಿಸುತ್ತಾರೆ. ಅವರೂ ಕೂಡಾ ತಮ್ಮ ಎಲ್ಲ ಸಮಸ್ಯೆಗಳು ಈ ಚಾನೆಲ್ ಗಳಲ್ಲಿ ತೋರಿಸುವ ಜಾಹೀರಾತುಗಳಷ್ಟೇ ವೇಗವಾಗಿ ದಿಢೀರನೇ ಮಂಗಮಾಯವಾಗಬೇಕು ಎಂದು ಬಯಸುತ್ತಾರೆ. ನಿಜವಾದ ಬದುಕಿನ ಕಲ್ಪನೆಯೇ ಅವರಿಗೆ ಸಾಧ್ಯವಾಗಲು ಬಿಡುತ್ತಿಲ್ಲ.

ಸಾಯಂಕಾಲದ ಮನರಂಜನೆಯ ಸಮಯವನ್ನು ಈ ಬಗೆಯ ವಾಣೀಜ್ಯೀಕೃತ ಮನರಂಜನೆಗಳೇ ಗುತ್ತಿಗೆ ಹಿಡಿದು ಬಿಡುತ್ತವೆ. ಜೊತೆಗೆ ಜಾಹೀರಾತುಗಳ ಕಿರಕಿರಿ ಬೇರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ  ಗುಣಮಟ್ಟದ ಸೇವೆ [Standards of Quality of Service (Duration of Advertisements in Television Channels) (Amendment) Regulations, 2013.]ಎನ್ನುವ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಯಾವುದೇ ಒಂದು ದೂರದರ್ಶನದ ಕಾರ್ಯಕ್ರಮದ ನಡುವೆ ಅಂದರೆ ಒಂದು ಘಂಟೆಯ ಅವಧಿಯಲ್ಲಿ ಕೇವಲ 12 ನಿಮಿಷ ಮಾತ್ರ ಜಾಹೀರಾತುಗಳನ್ನು ಪ್ರಸರಣ ಮಾಡಬೇಕೆಂಬ ನಿಯಮವಿದೆ. ಅದರಲ್ಲೂ ಕಾರ್ಯಕ್ರಮದ ನಡುವೆ ಅವುಗಳನ್ನು ತೂರಬಾರದು. ವೀಕ್ಷಕರಿಗೆ ಗುಣಮಟ್ಟದ ಮನರಂಜನೆಯನ್ನು ನೀಡಬೇಕು ಎನ್ನುವ ಷರತ್ತೂ ಇದೆ. ಈ ಬಗೆಯ ಕಟ್ಟಳೆಗಳ ಬಗ್ಗೆ ವಾಣಿಜ್ಯೀಕೃತ ಮನರಂಜನೆಯ ಮಂದಿಗೆ ಸಮಾಧಾನವಾಗದೇ ಮತ್ತೆ ಖ್ಯಾತೆ ತೆಗೆದಿರುವುದಿದೆ. ಇಡೀ ಹೊತ್ತು ಹಣವನ್ನು ಕೊಳ್ಳೆ ಹೊಡೆಯಲು ಅವಕಾಶ ಕೊಡಬೇಕು ಎನ್ನುವಂತೆ ಅವರು ಬಯಸುವದಿದೆ. ಹೀಗೆ ಈ ವಾಣಿಜ್ಯೀಕೃತ ಮನರಂಜನೆ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಬಾಧಿಸುತ್ತಿರುವ ಈ ಶತಮಾನದ ಬಹುದೊಡ್ಡ ಶಾಪವಾಗಿ ಪರಿಣಮಿಸುತ್ತಿದೆ. ಆ ಬಗ್ಗೆ ಚರ್ಚೆ, ಚಿಂತನೆಗಳು ಕೂಡಾ ನಮ್ಮಲ್ಲಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವದು ತೀರಾ ವಿಪರ್ಯಾಸ ಮತ್ತು ವಿಷಾದನೀಯ.

ನಾಗಬಂಧದ ಬಂಧನ: ನಂಬಿಕೆ ಮತ್ತು ಕೇಳಿಕೊಳ್ಳಬೇಕಾದ ಪ್ರಶ್ನೆಗಳು

– ಜಯಪ್ರಕಾಶ್ ಶೆಟ್ಟಿ ಹೆಚ್

ಇತ್ತೀಚೆಗೆ ಕರ್ನಾಟಕ ಸರ್ಕಾರ ಆಹ್ವಾನಿಸಿದ ಮೂಢನಂಬಿಕೆ ನಿಷೇಧದ ಕರಡಿನ ಕುರಿತು ಕೆಲವು ಕನ್ನಡ ಪತ್ರಿಕೆಗಳು ಮತ್ತು ಸಾಂಪ್ರದಾಯಿಕ ಮನಸ್ಸುಗಳು ಮಿತಿಮೀರಿ ಬೆಂಕಿಯುಗುಳಿದುವು. ಹಾಗೆಯೇ ಕಳೆದ ಕೆಲವು ವರ್ಷಗಳಿಂದ ಸುದ್ದಿಯಾಗುತ್ತಿರುವ ಎಂಜಲ ಎಲೆಯ ಮೇಲಿನ ಹೊರಳಾಟವನ್ನು ಈ ಮನಸ್ಸುಗಳು ಮತ್ತೆ ನಂಬಿಕೆಯ ಹೆಸರಿನಲ್ಲಿ ವೈಜ್ಞಾನಿಕ ಸತ್ಯವೆಂಬಂತೆಯೂ ವಿಶೇಷವಾಗಿ ಮೈಮೇಲೆ ಎಳೆದುಕೊಂಡು ಸಮರ್ಥಿಸಿಕೊಂಡವು. ಈ ಎರಡೂ ಸಂಗತಿಗಳು ಬೇರೆ ಬೇರೆಯಾದ ಬಿಡಿಸಂಗತಿಗಳಲ್ಲ. ಹೀಗೆ ಬೆಚ್ಚಿಬಿದ್ದಂತೆ ಪ್ರತಿಕ್ರಿಯಿಸಿದ ಮನಸ್ಸುಗಳೆದುರು ಕರಾವಳಿಯ ಅತಿಪ್ರಾಚೀನ ಆರಾಧನಾ ಮಾದರಿಯ ಕಿರುಪರಿಚಯದೊಂದಿಗೆ, ಆ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಪ್ರಶ್ನೆಗಳನ್ನಿಡಬಯಸುತ್ತೇನೆ.

ಕರಾವಳಿಯ ಯಾವುದೇ ಹಳ್ಳಿ ಮೂಲೆಗೆ ಹೋದರೂ ನಿಮಗೆ ಒಂದಾದರು ನಾಗಬನ ಸಿಗದ ಹಳ್ಳಿಗಳು ಇರಲಾರವೇನೋ. nagabanaಅವಿಭಕ್ತ ಕುಟುಂಬದ ಮನೆಗೊಂದರಂತೆ ಸಿಕ್ಕೇ ಸಿಗುವ ಈ ನಾಗಬನಗಳು ಮೂಲತಃ ದೇವರಕಾಡುಗಳು. ಇವುಗಳನ್ನು ಕರೆಯುತ್ತಿದ್ದುದೇ ನಾಗಬನ ಇಲ್ಲವೇ ನಾಗಬಲ್ಲೆಗಳೆಂದೇ. ದೇವರ ಹೆಸರನ್ನು ಸ್ಥಳವಾಚಕಗಳ ಮೂಲಕ ಇಲ್ಲವೇ ದಿಗ್ವಾಚಕಗಳ ಮೂಲಕ ಸೂಚಿಸುವ ಪರಿಪಾಠವಿದೆ. ಅದರಂತೆ ಧರ್ಮಸ್ಥಳವನ್ನು ನಮ್ಮೂರುಗಳಲ್ಲಿ ಮುಗ್ದವಾಗಿ ’ತೆಂಕಲಾಯ್’ ಎಂದೇ ಕರೆದಂತೆ, ನಾಗನನ್ನು ಕರೆಯುತ್ತಿದ್ದುದೇ ’ಬನದದೇವ್ರು’ ಎಂದು. ಕಾರಣಿಕ ಮತ್ತು ಸತ್ವವನ್ನಾಧರಸಿ ಅದನ್ನು ಸತ್ಯದೇವತೆ ಎಂದೂ ಕರೆಯುವ ರೂಢಿ ನಮ್ಮೂರ ಕಡೆಯಿದೆ. ಗಂಡನ ಹೆಸರೊ, ಗಂಡನ ಅಣ್ಣನ ಹೆಸರೋ ನಾಗನಿಂದ ಆರಂಭವಾಗುವಂತಿದ್ದರೆ ಅದನ್ನು ಹೇಳಬಾರದ ಸಾಮಾಜಿಕ ನಿಷೇಧಕ್ಕಾಗಿ ಪರ್‍ಯಾಯ ಕಂಡುಕೊಳ್ಳುವ ದಾರಿಯಲ್ಲಿ ನಮ್ಮೂರ ಹೆಂಗಸರು ಆ ಹೆಸರಿರುವ ಜಾಗದಲ್ಲಿ ಬನದದೇವ್ರು ಹೆಸರು ಎಂದು ಸೇರಿಸಿ ಉಪನಾಮವನ್ನು ಕೂಡಿಸುತ್ತಾರೆ. ಈ ರೂಢಿ ನಮ್ಮೂರುಗಳಲ್ಲಿ ಇಂದಿಗೂ ಇದೆ. ಹೀಗೆ ಬಲ್ಲೆಗಳೆಂದು ಕರೆಯಲ್ಪಡುತ್ತಿದ್ದ ಜಾಗಗಳಲ್ಲಿ ಹುತ್ತದ ಜೊತೆಗೆ ಬಾಗಾಳು ಇಲ್ಲವೆ ಬನ್ನೇರಳೆ ಇತ್ಯಾದಿ ಮರಗಳು ಸರ್ವೇಸಾಮಾನ್ಯ. ಅಮೂಲ್ಯವಾದ ಅನೇಕ ಗಿಡಮೂಲಿಕೆಗಳೂ ಈ ಬನಗಳಲ್ಲಿ ಲಭ್ಯವಿರುತ್ತಿದ್ದುವು. ಈ ಮರಗಳಿಗಾಗಲೀ ಆಚ್ಛಾದಿಸಿಕೊಂಡ ಬನದ ಯಾವುದೇ ಭಾಗಕ್ಕಾಗಲೀ ಕುಡುಗೋಲನ್ನೆ ಹಾಕದೇ ಆ ಬನಗಳನ್ನು ಸ್ವಚ್ಚಂಧವಾಗಿ ಬೆಳೆಯಲು ಬಿಡುತ್ತಿದ್ದರು. ಸ್ಥಳೀಯವಾಗಿ ಸಿಗುವ ಕಪ್ಪು ಬಣ್ಣದ ಶಿಲೆಯಲ್ಲಿಯೋ ಅಥವಾ ಮೆದುಜಾತಿಯ ಜಾಜಿಕಲ್ಲಿನಲ್ಲಿಯೋ ಕೆತ್ತಿದ ನಾಲ್ಕಾರು ನಾಗಮಿಥುನದ ಶಿಲ್ಪಗಳು ಹುತ್ತಕ್ಕೋ, ಪೀಠದಂತಿರುವ ನಿಸರ್ಗಸಹಜ ಕಲ್ಲಿನ ದಿಬ್ಬಕ್ಕೋ ಆತುಕೊಂಡಂತೆ ಬನದ ನೆರಳಿನಲ್ಲಿ ಮಳೆ, ಬಿಸಿಲು, ಗಾಳಿಗಳಿಗೆ ತೆರೆದೇ ಇರುತ್ತಿದ್ದುವು. ಈ ಸಹಜತೆಯನ್ನು ಸೂಚಿಸುವಂತೆ, “ನಾಗನಕಲ್ಲಿಗೆ ನಾಯಿ ಉಚ್ಚಿಹೊಯ್ಯುವುದು ಇಪ್ದೆ (ಇರುವುದೇ)” ಎಂಬ ವಾಗ್ರೂಢಿಯನ್ನು ಮಾತಿಗೊಮ್ಮೆ ಬಳಸುವುದುಂಟು.

ಮನೆಯ ಸಮೀಪವೇ ಇರುವ ಈ ಜಾಗಗಳಿಗೆ ನಾವು ಸಾಕಿದ ಕೋಳಿ, ಗಂಟಿ(ಹಸು)ಗಳು ಯಾವುದೇ ಭಿಡೆಯಿಲ್ಲದೆ ಹೋಗಿ ಮೆಂದು ಬರುತ್ತಿದ್ದುವು. ಕೋಳಿಗಳಂತೂ ಅಷ್ಟೇ ನಿರ್ಭಿಡೆಯಿಂದ ನಾಗನ ಕಲ್ಲಿನ ತಳಬುಡವನ್ನೆಲ್ಲ ಕೆದರಾಡಿ ಹುಳ ಹುಪ್ಪಡಿ ತಿಂದು ಬರುತ್ತಿದ್ದವು. nagarakalluಇದು ನಿನ್ನೆ ಮೊನ್ನೆಯವರೆಗೆ ಅನೇಕಕಡೆ ನಡೆದುಕಡೆ ಬಂದ ರೂಢಿ. ಇವುಗಳನ್ನು ಪೂಜಿಸುವ ಸರಳ ಮಾದರಿಗಳಾದ ತನುಹಾಕುವ(ಬಾಳೆಗೊನೆ ಒಪ್ಪಿಸುವ), ತಂಪು ಹಾಕುವ(ಒಂದಿಷ್ಟು ಹಾಲು, ಬಿಳಿಅಕ್ಕಿ ಅರ್ಪಿಸುವ) ಕೆಲಸಗಳಿಗೆ ವರ್ಷದ ಯಾವುದೋ ಒಂದೆರಡು ದಿನಗಳಲ್ಲಿ ಪುರೋಹಿತರು ಬರುತ್ತಿದ್ದರು. ತನುಹಾಕಿದ ಬಾಳೆಗೊನೆಯ ಬುಡದ ಚಿಪ್ಪು, ತಂಪು ಹಾಕಿದ ಅಚ್ಚೇರು ಅಕ್ಕಿಯನ್ನು ಪೂಜೆಯ ಕೂಲಿ ಎಂಬಂತೆ ಒಯ್ಯುತ್ತಿದ್ದರು. ಮನೆಗೊಂದರಂತೆ ಸಿಗುವ ಈ ನಾಗಬನಗಳಿಗೆಲ್ಲಾ ಕುಕ್ಕೆ ಸುಬ್ರಮ್ಮಣ್ಯವನ್ನೇ ಮೂಲಬನವಾಗಿ ಎಂದಿನಿಂದಲೋ ಏನೋ ನಂಬಿಕೊಂಡು ಬರಲಾಗಿದೆ. ಹಾಗಾಗಿ ಅದನ್ನು ಮೂಲಿ ಸ್ಥಳವೆಂತಲೇ ನಂಬಿಕೊಂಡು ಕರೆಯಲಾಗುತ್ತದೆ. ಅದಲ್ಲದೆ ನಾಗನಕಲ್ಲಿನ ಬುಡವನ್ನೂ ಮೂಲ ಎಂತಲೇ ಕರೆಯುವುದರಿಂದ “ಮೂಲಿ” ಎನ್ನುವುದು ಭೂಸೂಚಕವಾದ ಪದವೂ ಹೌದು. ನಾಗ ದರ್ಶನಗಳು ನಡೆದಾಗ ಮೂಲಿ ಪ್ರಸಾದ ಎಂದು ಮಣ್ಣನ್ನೆ ಕೊಡಲಾಗುತ್ತದೆ. ಈ ದರ್ಶನಗಳು ಹಲವುಕಾಲದಿಂದ ಪುರೋಹಿತ ವರ್ಗಕ್ಕೆ ಸೇರಿದವರ ಮೂಲಕವೇ ನಡೆದು ಬರುತ್ತಿದೆ. ಆದರೆ ದಲಿತರು ಆರಾಧಿಸಿಕೊಂಡು ಬರುತ್ತಿರುವ ನಾಗಾರಾಧನೆಯ ಮಾದರಿಯಾದ ಕಾಡ್ಯನಾಗನಿಗೆ ತಂಬಿಲ ಇಡುವ ಮತ್ತು ಆರಾಧಿಸುವ ಎಲ್ಲ ಕೆಲಸಗಳನ್ನು ಇಂದಿಗೂ ಅನೇಕ ಕಡೆ ದಲಿತರೇ ನಡೆಸಿಕೊಂಡು ಹೋಗುತ್ತಿದ್ದಾರೆ.

ನಾನು ಕಂಡಂತೆ ಹಣ್ಣು-ಹಾಲಿನ ಸರಳ ಮತ್ತು ಮಾಮೂಲಿ ಸೇವೆ ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು. ಅದಲ್ಲದೆ ನನ್ನ ಬಾಲ್ಯದದಿನಗಳಲ್ಲಿ ಕಂಡಂತೆ ವಿರಳವಾಗಿ ನಾಗದರ್ಶನವೋ, ಅತಿವಿರಳವಾಗಿ ನಾಗಮಂಡಲವೋ ನಡೆಯುತ್ತಿದ್ದುದುಂಟು. ಅದೇ ಸಂದರ್ಭದಲ್ಲಿ ಗದ್ದೆ ಬಯಲುಗಳಲ್ಲಿ ಏನಾದರೂ ಸತ್ತು ಬಿದ್ದ ಸರ್ಪ ಸಿಕ್ಕರೆ ಅವರ ಪಾಲಿಗೊಂದು ಗಂಟು(ನಿಧಿ)? ಸಿಕ್ಕಂತಯೇ ಎಂದು ಭಯ ಬೀಳುತ್ತಿದ್ದುದನ್ನೂ ಕಂಡಿದ್ದೇನೆ. ಯಾಕೆಂದರೆ ಈ ಹಾವುಗಳು ಹೇಗೇ ಸತ್ತಿರಲಿ ಅವುಗಳ ಬೊಜ್ಜ(ಸಂಸ್ಕಾರ) ಮಾಡಬೇಕಾದ ಹೊಣೆ ಹಾಗೆ ಕಂಡವರ ಮೇಲೆ ಬರುವಂತಹ ಭಯ ಅಂದೂ ಇದ್ದುದನ್ನು ನಾನು ಕಂಡವನಿದ್ದೇನೆ. ಸತ್ತು ಕೊಳೆತುಹೋದ ಹಾವಿದ್ದರೂ ಅದು ಸರ್ಪವಾಗಿದ್ದರೆ ಅದನ್ನು ಪುರೋಹಿತರ ಮೂಲಕ ಹಲಸಿನ ಕಟ್ಟಿಗೆಯಲ್ಲಿಟ್ಟು ಸುಡುವುದಲ್ಲದೆ, ಅದರ ಶ್ರಾದ್ಧವಿಧಿಯನ್ನು ಪುರೋಹಿತರ ಸಂತರ್ಪಣೆಯ ಮೂಲಕ ನಡೆಸಬೇಕಿತ್ತು. ಹೋಮ ಹವನದ ಜೊತೆಗೆ ನಿಗಧಿತ ಸಂಖ್ಯೆಯ ಬ್ರಾಹ್ಮಣರಿಗೆ ಊಟ ಹಾಕಲೇಬೇಕೆಂಬ ನಿಯಮವೂ ಚಾಲ್ತಿಯಲ್ಲಿತ್ತು. ಮನುಷ್ಯರು ಸತ್ತುಬಿದ್ದರೆ ಸಿಕ್ಕದ ಪ್ರಾಮುಖ್ಯತೆ ಸತ್ತ ಹಾವುಗಳಿಗೆ ದಕ್ಕುತ್ತಿದ್ದುದಲ್ಲದೆ, ಆ ಪ್ರಾಮುಖ್ಯತೆಯ ಲಾಭಗಳು ನಿಶ್ಚಿತವಾಗಿ ಒಂದು ಸಮುದಾಯಕ್ಕೇ ದಕ್ಕುತ್ತಿತ್ತು. ದುಬಾರಿಯೆನಿಯೂ ಇದು ಒಂದು ಮಿತಿಯಲ್ಲಿ ನಡೆದುಕೊಂಡು ಬರುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾಗಬನಗಳು ಬನಗಳಾಗಿಯೇ ಇದ್ದುವು. ಈ ಬನಗಳ ಸ್ವರೂಪಕ್ಕೆ ಇಂದಿನಂತೆ ಅಂದು ಈ ಅಕ್ರಮಕೂಟ ಕೈಯಿಕ್ಕಿರಲಿಲ್ಲ.

ಆದರೆ ಇತ್ತೀಚೆಗಿನ ದಿನಗಳಲ್ಲಿಯ ಈ ಸ್ಥಿತಿ ಆತಂಕಕಾರಿಯಾಗಿ ಬೆಳೆಯುತ್ತಿದೆ. ನಂಬುಗೆ ಅನ್ನುವುದಕ್ಕಿಂತ ಮುಖ್ಯವಾಗಿ ಈ ಭಯವನ್ನೆ ಬಂಡವಾಳ ಮಾಡಿಕೊಂಡು ನಾಗನ ಹೆಸರಿನಲ್ಲಿ ಅನಾರೋಗ್ಯಕರವಾದ ದಂದೆಯೊಂದು ಅವ್ಯಾಹತವಾಗಿ ಊರ್ಜಿತವಾಗುತ್ತಿದೆ. ನಾಗದರ್ಶನಗಳು ನಡೆದಲ್ಲಿ nagaradhane-1ಮೂಲಿ ಸ್ಥಳದಿಂದ ಮಣ್ಣಿನ ಪ್ರಸಾದ ತೆಗೆದಷ್ಟೇ ಸುಲಭವಾಗಿ ಹೊಸ ಹರಕೆಗಳನ್ನು ಕಾಲಗರ್ಭದಿಂದ ಅಗೆದು ತೆಗೆದು ಹುಟ್ಗತಿ(ಮರೆಯಾದುದನ್ನು ನೆನಕೆ ಮಾಡುವುದು) ಕೊಡಲಾಗುತ್ತಿದೆ. ನಾಗಬನಗಳ ಜಾಗದಲ್ಲಿ ಕಾಂಕ್ರೀಟುಗೋಪುರ ನಿರ್ಮಾಣದ ಆಜ್ಞೆ ನೀಡಲಾಗುತ್ತಿದೆ. ಈ ಗೋಪುರಗಳಲ್ಲಿ ಹೊಸದಾಗಿ ಪ್ರತಿಷ್ಠಾಪನಕಾರ್‍ಯದ ನಂತರ ವರ್ಷಕ್ಕೊಂದರಂತೆ ಶುದ್ಧಕಳಶದಂತಹ ರಿನೀವಲ್ ಕಾರ್‍ಯಕ್ರಮಗಳ ಸರಣಿ ಹುಕುಂಗಳನ್ನು ಈ ಪಾತ್ರಿ ಮತ್ತು ಪುರೋಹಿತರ ಜಂಟಿಪಡೆ ಜಾರಿಗೊಳಿಸುತ್ತಿದೆ. ಆಶ್ಲೇಷಬಲಿ, ನಾಗಮಂಡಲಗಳು ನಿತ್ಯದ ಮಾತಾಗುವಷ್ಟು ಅತಿಸಂಖ್ಯೆ ಮತ್ತು ದುಬಾರಿಯಲ್ಲಿ ನಡೆಯುತ್ತಲೇ ಇವೆ. ಮುಖ್ಯವಾಗಿ ಇವು ಕುಟುಂಬಕ್ಕೆ ಸೇರಿದ ಬನಗಳಾಗಿಯೇ ಇರುವುದರಿಂದ ಮೂಲ ಅವಿಭಕ್ತ ಕುಟುಂಬದ ಉಳ್ಳವರು, ಇಲ್ಲದವರು ಎಂಬ ಭೇದವಿರದೆ ಎಲ್ಲರೂ ವಂತಿಗೆ(ವರಾಡ)ಕೊಟ್ಟು ಪಾಲ್ಗೊಳ್ಳಬೇಕಾಗುವ ಒತ್ತಡವೂ ನಿರ್ಮಾಣಗೊಳ್ಳುತ್ತಿದೆ. ಇದರಿಂದಾಗಿ ಹೀಗೆ ವರಾಡಕೊಟ್ಟು ಪಾಲ್ಗೊಳ್ಳುವ ಒತ್ತಡಕ್ಕೆ ಬಿದ್ದ ಅನೇಕ ಬಡಕುಟುಂಬಗಳು ಬಲಿಷ್ಠರ ನಡುವೆ ನಲುಗಿ ಹೋಗುವ ಪರಿಸ್ಥಿತಿ ಉಂಟಾಗುತ್ತಿದೆ. ಯಾವ ಯಾವುದೋ ಅಡ್ಡದಾರಿಯಲ್ಲಿ ಹಣಮಾಡಿದ ದಿಡೀರ್‌ಧನಿಕರು ತಮ್ಮ ಸಂಪಾದನೆಯ ಗಣಿತವನ್ನು ಈ ಮೂಲಕ ಲೋಕಕ್ಕೆ ಪ್ರದರ್ಶಿಸಲು ಅವಕಾಶವಾಗುತ್ತಿದೆ. ಈ ನೈತಿಕದಿವಾಳಿಶೂರರು ಧರ್ಮದುರಂಧರರಾಗಿ ನಾಗಮನ್ನಣೆ ಪಡೆದು, ಅನೈತಿಕವೆನ್ನುವುದು ಶುಚೀಕರಿಸಲ್ಪಟ್ಟ ನೈತಿಕನಾಣ್ಯವಾಗಿ ಚಲಾವಣೆಗೆ ಬರುತ್ತಿದೆ. ನಾಗನನ್ನು ನಂಬಿದ ನಿರ್ಗತಿಕರಿಗೆ ಸಂಕಟೋತ್ಪಾದಕರ ನುಡಿಯೆಂಜಲಿನಲ್ಲಿ ಹೊರಳುತ್ತಾ ಬದುಕಬೇಕಾದ ವಿಷಚಕ್ರ ಬಲಿಯುತ್ತಿದೆ. ವ್ಯಕ್ತಿಗೌರವ ಮರೆತು ಎಂಜಲಲ್ಲಿ ಹೊರಳಿದಷ್ಟೇ ಕನಿಷ್ಠವಾಗಿ, ತಮ್ಮ ಮಕ್ಕಳನ್ನು ಯಾರದೋ ಹೋಟೆಲು-ಮನೆಗಳಲ್ಲಿ ಒತ್ತೆಯಿಟ್ಟು ಪಡೆದ ಹಣವನ್ನು ದೈನೇಸಿಯಾಗಿ ಈ ಲೂಟಿಕೋರರ ಕೈಗಿತ್ತು, ಮತ್ತವರದೇ ಕಾಲಿಗೆ ಬೀಳಬೇಕಾದ ಸ್ಥಿತಿ ಮಡೆಸ್ನಾಕ್ಕಿಂತಲೂ ದಯನೀಯವಾಗುತ್ತಿದೆ.

ನಾಗಾರಾಧನೆ ಸಂಪ್ರದಾಯ ಮೂಲತಃ ಅವೈದಿಕನೆಲೆಯದು. ಪ್ರಾಚೀನವಾಗಿ ಅಲ್ಲಿ ಆರಾಧನೆಯ ಮುಖ್ಯಸಂಗತಿಯಾಗಿ ಬಳಕೆಯಾಗುತ್ತಿದ್ದುದು ಮಣ್ಣಿನಕಳಶಗಳು. ಶುದ್ಧನಿಸರ್ಗಾರಾಧನೆಯ ಈ ತಾಣವನ್ನು ಗುದ್ದಲಿ ಮತ್ತು ಕುಡುಗೋಲುಮುಕ್ತವಲಯವಾಗಿ ಘೋಷಿಸಿಕೊಂಡಿದ್ದರು. ನಾಗನ ಬನವನ್ನು ಸ್ವಯಂ ಕಡಿಯುವುದನ್ನು ನಿಷೇಧಿಸಿಕೊಂಡಿರುವ ಜೊತೆಗೆ ಹಾಗೊಂದು ವೇಳೆ ಇನ್ನಾರೋ ಅದನ್ನು ಕಡಿಯುತ್ತಿದ್ದರೆ ಸ್ವಯಂನಾಶವನ್ನು ಆಹ್ವಾನಿಸುವ ಆ ಮೂರ್ಖರನ್ನು ಪ್ರಶ್ನಿಸಬಾರದು ಎಂಬ ವಾಡಿಕೆಯೂ ಇದೆ. ಹಾಗೆ ಪ್ರಶ್ನಿಸಿದವನ ಮೇಲೆಯೇ ನಾಗನ ಮುನಿಸು ಬೀಳುತ್ತದೆ ಎಂಬಂತಿರುವ ಈ ನಂಬಿಕೆಯ ಆಳದಲ್ಲಿ ನಾಗಬನದ ರಕ್ಷಣೆಯ ಕುರಿತಾದ ತಿಳುವಳಿಕೆಯ ವ್ಯಾಪಕತೆಯಿದೆ. ಹೀಗೆ ಈ ಬನದ ಇರುವಿಕೆಗೆ ಯಾವುದೇ ಧಕ್ಕೆ ಒದಗದಂತೆ ನಮ್ಮ ಪೂರ್ವಿಕರು ಕಾಪಿಟ್ಟುಕೊಂಡಿದ್ದರು. ಸಹಜವಾಗಿ ಅಪೂರ್ವವಾದ ಜೇನು, ಗಿಡಮೂಲಿಕೆಗಳು ಇಲ್ಲ್ಲಿ ಲಭ್ಯವಿರುತ್ತಿದ್ದವು. ಕುಡುಗೋಲು ಹಾಕುವುದಕ್ಕೇ ನಮ್ಮ ಪೂರ್ವಿಕರು ಹಾಕಿಕೊಂಡಿದ್ದ ಸ್ವಯಂ ನಿಷೇಧದಿಂದಾಗಿ ಸಂದಣಿಸಿಕೊಂಡಿದ್ದ ನೀರಪೂರಣದ ಹುತ್ತಗಳ ಜೊತೆಗೆ ದಟ್ಟವಾದ ಬೀಳು, ಬಲ್ಲೆಗಳಿಂದ ಕೂಡಿಕೊಂಡ ಸಸ್ಯಾವಳಿಯ ಸಾಂದ್ರತೆ ಇರುತ್ತಿತ್ತು. ಯಾರೂ ಮುಟ್ಟದ ಮತ್ತು ಮುಟ್ಟದಂತೆ ಯಾರೊಬ್ಬರ ಎಚ್ಚರಿಕೆಯ ಅಗತ್ಯವೂ ಇಲ್ಲದೆ ಉಳಿದುಬಂದಿದ್ದ ಈ ಪಾರಂಪರಿಕ ರಕ್ಷಿತ ನಿಸರ್ಗತಾಣಗಳು ಇವತ್ತು ಪುನರುತ್ಥಾನದ ಹೆಸರಿನಲ್ಲಿ ಜೆಸಿಬಿ ಯಂತ್ರಗಳ ದೈತ್ಯಾಕ್ರಮಣಕ್ಕೆ ಸಿಕ್ಕಿ ಬೋಳಾಗುತ್ತಿವೆ. ಹೀಗೆ ಸಪಾಟುಗೊಂಡ ಜಾಗಗಳಲ್ಲಿ ಕಾಂಕ್ರೀಟು ಬನಗಳ ನವನಿರ್ಮಾಣಗಳು ಏಳುತ್ತಿವೆ.

ಹುತ್ತವನ್ನೇ ದೇವರೆಂದು ನಂಬಿ ಅದನ್ನೆ ನಾಗರಾಧನೆಯ ಬಹಳಮುಖ್ಯ ಸಂಕೇತವೆಂದು ಅರಾಧಿಸುತ್ತಿದ್ದ ಅದೇ ಜಾಗದಲ್ಲಿ ಹುತ್ತಗಳ ಮೂಲೋತ್ಪಾಟನೆಮಾಡಿ, ಇದರಿಂದಾದ ಹಾನಿ(ನಾಗನ ಮರಿ-ಮೊಟ್ಟೆಗಳ ನಾಶದ)ಯ ಪರಿಹಾರಕ್ಕಾಗಿ ಮತ್ತದೇ ಸರ್ಪಸಂಸ್ಕಾರವೆಂಬ ಪುರೋಹಿತಲೂಟಿಯ ಅವಕಾಶಗಳನ್ನು ನಿರ್ಮಿಸಲಾಗುತ್ತಿದೆ. ಗುದ್ದಲಿ, ಕುಡುಗೋಲುಗಳಲ್ಲದೆ ಬೆಂಕಿಯ ಪ್ರವೇಶಕ್ಕೂ ಸೀಮಿತ ಅವಕಾಶವಷ್ಟೇ ಇದ್ದ, ಜೇನುವಾಸದ ತಾಣಗಳೂ ಆಗಿದ್ದ ಈ ಬನಗಳೊಳಗೆ ಈಗ ನಿರಾಯಾಸವಾಗಿ ಹೋಮ ಹವನಾದಿ ಅಗ್ನಿಕೊಂಡದ ಜ್ವಾಲೆ ಬೆಳಗುತ್ತಿದೆ! ಜಲಪರಂಪರೆಗೆ ಸೇರಿದ ಈ ನಾಗಪರಂಪರೆ ಸಂಪೂರ್ಣವಾಗಿ ಅಗ್ನಿಪರಂಪರೆಯವರ ಹಿಡಿತಕ್ಕೆ ಸಂದು ಹೋಗಿದೆ. ಜೊತೆಗೆ ನಾಗನ ಹೆಸರಿನ ಏನೇ ಕೆಲಸ ಇದ್ದರೂ ಅಲ್ಲೊಂದು ಅನ್ನ ಸಂತರ್ಪಣೆ ಆಗಲೇಬೇಕಾದ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಅನ್ನ ಹಂಚುವ ಈ ಕಾರ್‍ಯಕ್ರಮದಲ್ಲಿಯೂ ಅಡುಗೆಯನ್ನು ನಿರ್ದಿಷ್ಟ ಸಮುದಾಯದವರೇ ಮಾಡಬೇಕೆಂಬ ನಿಯಮವಿದೆ. ಅದು ಬರಿಯ ಅನ್ನಸಂತರ್ಪಣೆಯಷ್ಟೇ ಅಲ್ಲ, ಮಡಿಯೂಟವಾಗಬೇಕೆಂಬವಾಗಬೇಕೆಂಬ ಷರತ್ತಿಗೊಳಪಟ್ಟದ್ದೂ ಹೌದು. ನಾಗನಿಂದಾಗಿ ಹೀಗೆ ಉಣ್ಣಲೇಬೇಕಾದವರು ಮತ್ತು nagaradhaneಅಡುಗೆ ಮಾಡಬೇಕಾದವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದಷ್ಟೇ ಅಲ್ಲದೆ, ಅನ್ನ ಸಂತರ್ಪಣೆ ಮಾಡಿ ಹಸಿವಿರದವರ ಹಸಿವನ್ನು ತಣಿಸಿ! ಅವರ ಕಾಲಿಗೇ ಬೀಳಬೇಕಾದ ದುಸ್ತರ ಸ್ಥಿತಿಯಿದು. ಯಾಕೆಂದರೆ ನಾಗಪಾತ್ರ್ರಿಯ ಬಾಯಿಂದ ತಪ್ಪದೇ ಬರುವುದು “ಬ್ರಹ್ಮಕುಟುಂಬವನ್ನು ತೃಪ್ತಿಪಡಿಸುವ” ಆಜ್ಞೆಯ ನುಡಿ!. ಪುರೋಹಿತ, ಪಾತ್ರಿಯೊಂದಿಗೆ ಉಣ್ಣುವ ಮತ್ತು ಅಡಿಗೆಮಾಡುವ ಫಲಾನುಭವಿಗಳೆಲ್ಲಾ ಹೀಗೆ ಒಂದೇ ಸಮುದಾಯಕ್ಕೆ ಸೇರಿದವರಾಗಿ, ಇದೊಂದು ಧಾರ್ಮಿಕ ದಂದೆಯಾಗಿ ಮಾರ್ಪಟ್ಟಿರುವುದರ ಕುರಿತು ಕೊಡುವವರು ಗೊಣಗಿಕೊಂಡೇ ಕೊಡುತ್ತಿದ್ದಾರೆ. ಪಡೆಯುವವರು ಅಧಿಕಾಧಿಕ ಕಸಿಯುತ್ತಿದ್ದಾರೆ. ಇಲ್ಲಿ ಮೂಲಿಸ್ಥಾನದ ಮೂಲದ ನಂಬಿಕೆಗಳನ್ನು ಸಮೂಲವಾಗಿ ಕಿತ್ತು ಬಿಸಾಡಲಾಗಿದೆ.

ನಂಬಿಕೆಯನ್ನು ಪ್ರಶ್ನಿಸುವಂತಿಲ್ಲ ಎಂದು ಉರಿದೆದ್ದುಬೀಳುವ “ಸಂಸ್ಕೃತಿ” ಮತ್ತು “ನಂಬಿಗೆ”ಯ ಕಾವಲುಗಾರರು ಗಟ್ಟಿಗೊಂಡು ಸಂಘಟಿತವಾಗುತ್ತಿರುವ ಈ ಕಾಲದಲ್ಲಿ, ಮಡೆಸ್ನಾನವನ್ನು ನಂಬಿಗೆಯ ಪ್ರಶ್ನೆಯೆತ್ತಿ ಬಾಯಿಮುಚ್ಚಿಸಲು ಯತ್ನಿಸಲಾಗುತ್ತಿದೆ. ಹೊರಳಬೇಡಿ ಅಂದರೆ ತಲೆಯಮೇಲೆಯೇ ಹೊತ್ತು ತಿರುಗುತ್ತೇವೆ ಎಂದು ಹೇಳಿಸುವುದಷ್ಟೇ ಅಲ್ಲ, ಮಾಡಿಸಲಾಗುತ್ತಿದೆ. ದುರಂತವೆಂದರೆ ಆಳುವವರ ಗುಣಗಾನ ಮಾಡಬಲ್ಲಷ್ಟು ಪ್ರಮಾಣದಲ್ಲಿ ಸಾಂಸ್ಕೃತಿಕ ವಸಾಹತುಶಾಹಿ ತನ್ನ ಅಂತಿಮ ದಿಗ್ವಿಜಯವನ್ನು ಸಾಧಿಸಿಬಿಟ್ಟಿದೆ. ಇಂತಹ ಯಶಸ್ಸಿನಲ್ಲಿ ಬೀಗುತ್ತಿರುವವರ ಎದುರಿಗೆ ಒಂದಿಷ್ಟು ಪ್ರಶ್ನೆಗಳನ್ನಾದರೂ ಇಟ್ಟು ಅಲ್ಲಿಯೂ ಇದ್ದಿರಬಹುದಾದ ಆತ್ಮ, ಪಾಪ-ಪುಣ್ಯಗಳನ್ನು ಕೆದಕಿ ಅಲ್ಲಿನ ಸೋಗಲಾಡಿತನವನ್ನು ಬೆಳಕಿಗೆ ತರಬೇಕಿದೆ. ಯಾಕೆಂದರೆ ಎಂಜಲ ಮೇಲೆ ಉರುಳುವವರ ಆಳದಲ್ಲಿ ನೆಟ್ಟು ಬೆಳೆಯಿಸಿದ ಮತ್ತು ಅವರನ್ನು ಅಲ್ಲಿಂದ ಪಾರಾಗದಂತೆ ಬಂಧಿಸಿಟ್ಟಿರುವ ದಯನೀಯ ಸ್ಥಿತಿಯ ಚರಿತ್ರೆಯೇ ಈ ಉರುಳಾಟದ ಹಿಂದಿದೆ ಎಂಬುದನ್ನು ಗಮನಿಸಬೇಕು. ಅದಲ್ಲದೆ ನಂಬಿಕೆಗಳೆಂದರೆ ಗೊಂಚಲಿದ್ದ ಹಾಗೆ. ಒಂದಕ್ಕೆ ಹೇಳಿದ ಮಾತು ಇನ್ನೊಂದಕ್ಕೂ ಅನ್ವಯಿಸುತ್ತದೆ. ಈ ನಂಬಿಗೆಗಳು ಯಾವ ತೆರನಾದ ಇರುವಿಕೆ ಮತ್ತು ವಿಕಾಸವನ್ನು ತೋರಿವೆ? ಹತ್ತಿಪ್ಪತ್ತು ವರ್ಷಗಳ ಹಿಂದಿದ್ದ ನಂಬಿಗೆ ಮತ್ತು ಆಚರಣೆಯ ಆವರಣಗಳು ಇಂದು ಯಾವ ಮಾರ್ಪಾಡಿಗೆ ಒಳಗಾಗಿವೆ? ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಈ ನಂಬುಗೆ ಮತ್ತು ಆಚರಣೆಗಳು ಬೀರುತ್ತಿರುವ ವಿಕೃತ ಪರಿಣಾಮಗಳೇನು? ಈ ಪ್ರಶ್ನೆ ಕರಾವಳಿಯ ಸಾಕಷ್ಟು ಜನರಲ್ಲಿ ಸಹಜವಾಗಿಯೇ ಅನುರಣಿಸುತ್ತಿದೆ. ನಿರ್ವಾತದಲ್ಲಿರುವ ಈ ಪಿಸುಮಾತುಗಳನ್ನು ಗಟ್ಟಿಯಾದ ಕೂಗಾಗಿ ಪರಿವರ್ತಿಸಬೇಕಿದೆ.

ಮುಖ್ಯವಾಗಿ ನಾಗರಾಧನೆಯನ್ನು ಸಮರ್ಥಿಸುವ ವೇಳೆ ಅದನ್ನೊಂದು ವೈಜ್ಞಾನಿಕ ತಳಹದಿಯುಳ್ಳ, ನೈಸರ್ಗಿಕ ಸಮತೋಲವನ್ನು ಕಾಪಾಡಿಕೊಳ್ಳುವ ಆಲೋಚನೆಯನ್ನು ಒಳಗೊಂಡ ನಿಸರ್ಗಾರಾಧನೆಯ ಮಾದರಿ ಎಂದೇ ಪರಿಭಾವಿಸಲಾಗುತ್ತದೆ. ಕುಡುಗೋಲ ಪ್ರವೇಶಕ್ಕೇ ಸ್ವಯಂನಿಷೇಧ ಹೇರಿಕೊಂಡ ದೇವರಕಾಡುಗಳನ್ನು ನಮ್ಮ ಪ್ರಾಚೀನರು ಕಾಯ್ದಿಟ್ಟುಕೊಂಡು ಬಂದ ಅಂತರ್ಜಲದ ಮರುಪೂರಣದ ತಂತ್ರಗಾರಿಕೆ ಮತ್ತು ಔಷದೀಯ ಗಿಡಮೂಲಕೆಗಳ ಸಂರಕ್ಷಣೆಯ ನಮ್ಮ ಪಾರಂಪರಿಕ ಹೆಮ್ಮೆಯೆಂದೂ ಗುರುತಿಸಿಕೊಳ್ಳಲಾಗಿದೆ. ಸತ್ತ ಹಾವಿನ ದೇಹಭಾಗದಲ್ಲಿಯೂ ಉಳಿದುಕೊಳ್ಳಬಹುದಾದ ವಿಷ ಅದರ ದೇಹ ಕೊಳೆತ ಜಾಗದಲ್ಲಿ ಬೆಳೆಯುವ ಹುಲ್ಲು ತಿನ್ನುವ ದನಕರುಗಳಿಗೆ ವರ್ಗಾವಣೆಗೊಳ್ಳದಿರಲಿ ಎಂಬ ಕಾರಣಕ್ಕಾಗಿ ಹಾವನ್ನೂ ಸುಟ್ಟುಹಾಕುವ ರೂಢಿಯನ್ನು ಬೆಳೆಸಲಾಯಿತು ಎಂದೇ ವೈಜ್ಞಾನಿಕ ಕಾರಣವನ್ನು ಹೇಳಲಾಗಿದೆ. ಇದರ ಜೊತೆಗೆ ಪಂಥಿಕವಾಗಿ ನಾಗಕುಲಕ್ಕೆ ಸೇರಿದವರಾದ ನಮ್ಮ ಪಾಲಿಗೆ ನಾಗನ ಹೆಣನೆಂದರೆ ನಮ್ಮ ಹಿರೀಕನ ಹೆಣವೆಂಬ ಗೌರವವೂ ಇರಲಾಗಿ, ಅಲ್ಲಿ ಸಂಸ್ಕಾರ ವಿಧಿಯ ಪಾಲನೆಯಿದೆ.

ಆದರೆ ವೈಜ್ಞಾನಿಕತೆಯ ಜೊತೆಗೆ ಇವೇ ನಂಬಿಕೆ, ಶೃದ್ಧೆಯ ಕಾರಣದಿಂದ ಶತಮಾನ ಹೋಗಲಿ ದಶಮಾನದ ಹಿಂದಿನವರೆಗೆ ಕಣ್ಣೆದುರೇ ಉಳಿದುಕೊಂಡಿದ್ದ ನಿಸರ್ಗರಚನೆಗಳು ಹೀಗೆ ದಂದೆಕೋರರ ಕೈಗೆ ಸಿಕ್ಕಿ ನೆಲೆಕಳೆದುಕೊಳ್ಳುವಾಗ, ನಂಬುಗೆಯ ವಕಾಲತ್ತಿನ ಮನಸ್ಸುಗಳು ಎಚ್ಚರಾದಂತೆ ಕಂಡಿಲ್ಲ! ಈಗ ಕಟ್ಟಲಾಗುತ್ತಿರುವ ಇಸ್ಲಾಮಿಕ್‌ಶೈಲಿಗೆ ಹತ್ತಿರದ ನಾಗಗೋಪುರಗಳೆಂಬ ಕಾಂಕ್ರೀಟ್ ವಾಸ್ತುರಚನೆಯಲ್ಲಿ ನಾಗ ನೆಲೆಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಅವು ಕೇಳಿಕೊಳ್ಳುತ್ತಿಲ್ಲ. ಇದಕ್ಕೆಲ್ಲಾ ಬಳಕೆಯಾಗುತ್ತ್ತಿರುವ ಹಣದ ಮೂಲದ ಕುರಿತಾದ ಪಾವಿತ್ರ್ಯದ ಪ್ರಶ್ನೆಯೂ ಅಲ್ಲಿಲ್ಲ! ಅಡ್ಡದಾರಿಯ ಸಂಪಾದನೆ ಮಾಡಿದ ಕಳ್ಳ-ಸುಳ್ಳರ ಜೊತೆಗೆ ನಿಷ್ಪಾಪಿ ಬಡವರೂ ಈ ಹೊಸ ರೂಪಾಂತರಕ್ಕೆ ತೆರಿಗೆ ಕಟ್ಟಿ ಸೋಲುತ್ತಿರುವುದನ್ನು ಈ ನಂಬುಗೆಯ ವಕೀಲರುಗಳು ಮೌನವಾಗಿಯೇ ಸಮರ್ಥಿಸುತ್ತಾರೆ! ಯಾಕೆಂದರೆ ನಾಗನ ಸಂಸ್ಕಾರಕ್ಕೆಂದು ವಂತಿಗೆ ಕೊಡಲಾಗದವರು ಊರೆಲ್ಲ ಜೋಳಿಗೆಹಿಡಿದು ಭಿಕ್ಷೆ ಬೇಡಿದ್ದನ್ನು ನಾನು ಕಂಡಿದ್ದೇನೆ. ಈ ಭಿಕ್ಷೆಯನ್ನೂ ನಿರ್ದಯವಾಗಿ ಕಸಿಯುವುದನ್ನು ನಂಬುಗೆ ಎಂದು ಹೇಗೆ ಸಮರ್ಥಿಸಲು ಸಾಧ್ಯ? ಹೇಗಾದರೂ ಮಾಡು ನನ್ನ ಸೇವೆ ಬಾಕಿ ಇರಿಸಿಕೊಳ್ಳಬಾರದು ಎಂದು ಹುಕುಂ ಕೊಡುವ ನಾಗಪಾತ್ರಿಗಳ “ನುಡಿ” ಅನೈತಿಕತೆಯನ್ನೂ ಉತ್ತೇಜಿಸುತ್ತದೆಯಲ್ಲವೆ? ಸಂಸ್ಕೃತಿ, ನಂಬುಗೆ ಇವುಗಳ ಕಾರ್‍ಯರೂಪದ ಅನುಷ್ಠಾನಕ್ಕಿರುವಷ್ಟೇ ಪ್ರಾಮುಖ್ಯತೆ, ಅವುಗಳ ನಿಷ್ಕಳಂಕ/ಪಾರದರ್ಶಕ ಮುಂದುವರಿಕೆಗೂ ಇರಬೇಲ್ಲವೆ?

ಬೀದಿಯಲ್ಲಿ ಬಿದ್ದ ಮನುಷ್ಯರ ಹೆಣವನ್ನು ನೋಡಿಯೂ ಮುಂಬರಿದರೆ ಸೋಂಕದ ಪಾಪ, ಸತ್ತ ಸರ್ಪನ ಹೆಣಕ್ಕಷ್ಟೇ ಸೀಮಿತ ಮಾಡಿಕೊಂಡಿರುವುದರಿಂದ, ಕರಾವಳಿಯ ಸಹಕಾರಿ ಬ್ಯಾಂಕುಗಳಲ್ಲಿಯ ಸಾಲದ ದಪ್ತರುಗಳು ಎಷ್ಟು ಬೆಳೆದಿವೆ ಎಂಬುದನ್ನು ಇವರುಗಳೇನಾದರೂ ಗಮನಿಸಿದ್ದಿದೆಯೇ? ಓದುಬಿಡಿಸಿದ ಮಕ್ಕಳನ್ನು ಹೋಟೆಲು, ಅಂಗಡಿಗಳಲ್ಲಿ ಒತ್ತೆಯಿಟ್ಟು ದುಡಿಸಿದ ತಾಯ್ತಂದೆಗಳ ಗೋಳಿನ ಚೀಲದಿಂದಲೂ, ಈ ನಾಗ ಮತ್ತು ಸತ್ತನಾಗಗಳ ನೆವದ ಮೂಲಕ ಮಾಡುತ್ತಿರುವ ಲೂಟಿಯನ್ನು ನಂಬಿಕೆಯಂದಷ್ಟೇ ಭಾವಿಸಿ ತಣ್ಣಗೆ ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ? ದರ್ಶನದ ಸಾಮಾನ್ಯ ನಿಯಮದಂತೆ ದಿನವೊಂದಕ್ಕೆ ಒಂದು ದರ್ಶನ ಮುಗಿಸಿದ ಪಾತ್ರಿಯ ಮೇಲೆ ಮತ್ತೊಂದು ಆಕರ್ಷಣೆ ಆಗಬೇಕೆಂದರೆ ಮುಂದಿನ ದಿನಕ್ಕಾಗಿ ಕಾಯಬೇಕು. ಅದಕ್ಕಾಗಿ Nagapatriಆತ ಮತ್ತೊಂದು ದಿನದ ವೃತಾಚರಣೆ ಮಾಡಬೇಕು. ಇದು ದೇವರು ಬರಿಸಿಕೊಳ್ಳುವುದನ್ನು ನಂಬಿಕೊಂಡುಬಂದ ಭೂತಾರಾಧನಾ ಪರಂಪರೆಯ ನಂಬಿಕೆ. ಆದರೆ ವಾದ್ಯದ ಹಿಮ್ಮೇಳವನ್ನೂ ತಯಾರಿಸಿಕೊಂಡು ಆಧುನಿಕ ವಾಹನಸೌಲಭ್ಯದ ನೆರವಿನಿಂದ ಜಗತ್ತನ್ನು ೨೧ ಬಾರಿ ಸುತ್ತ್ತಿಬಂದವನೆಂದು ಹೇಳಲಾಗುವ ಆ ಕೊಡಲಿರಾಮನನ್ನು ನೆನಪಿಸುವಂತೆ, ಬೆಳಗಿನಿಂದ ಸಂಜೆಯತನಕ ದರ್ಶನಕ್ಕೊಂದರಂತೆ ತಲಾ 3-5 ಸಾವಿರವನ್ನು ಪೀಕುತ್ತಾ, ಉಟ್ಟ ಪಟ್ಟೆಯಲ್ಲಿಯೇ ಹತ್ತಾರು ದರ್ಶನಗಳನ್ನು ಮಾಡಬಲ್ಲ ನಾಗಪಾತ್ರಿಗಳು ಹಾಕುತ್ತಿರುವ ದುಡಿಮೆಯ ಸ್ಕೆಚ್ಚು ಈ ನಂಬುಗೆಯ ಕಾವಲುಗಾರರಿಗೆ ಯಾಕೆ ದಂದೆ ಎಂದು ಅರ್ಥವಾಗುವುದಿಲ್ಲ? ಈ ನಡುವೆ ಭಾರತದಾದ್ಯಂತ ದೇಶ ಮತ್ತು ಸಂಸ್ಕೃತಿಯನ್ನು ಅತಿಯಾಗಿ ಪ್ರೀತಿಸುವವರ ಬಾಯಲ್ಲಿ ಈಗ ಕಪ್ಪು ಹಣ-ಭೃಷ್ಟಾಚಾರದ್ದೇ ಸುದ್ದಿ. ಅದಕ್ಕೆ ಅವರೆಲ್ಲರೂ ಸ್ವಿಸ್‌ಬ್ಯಾಂಕ್ ಎನ್ನುವ ಅಗೋಚರ ಸಂಸ್ಥೆಯನ್ನೇ ತೋರುತ್ತಾರೆ. ಆದರೆ ಈ ಧಾರ್ಮಿಕತೆ ಹೆಸರಿನ ಲೂಟಿ ಆ ಭೃಷ್ಟಚಾರದ ಚಿಂತನೆಯೊಳಗೆ ಬರುವುದೇ ಇಲ್ಲ! ಕಣ್ಣೆದುರೇ ನಡೆಯುವ ತೆರಿಗೆ ಕಟ್ಟದ ಹಣದ ಸೇರಿಕೆಯನ್ನು ಯಾವ ಬಣ್ಣದ ಹಣವೆನ್ನಬೇಕೋ ತಿಳಿಯದು? ತಿಂಗಳೊಂದರ ಕನಿಷ್ಟ ಲಕ್ಷವನ್ನೂ ಮೀರಿ ದುಡಿಯುತ್ತಿರುವ ನಾಗಪಾತ್ರಿಯಾದವನ ಆದಾಯಕ್ಕೂ, ಮಾಮೂಲಿ ದೈವಪಾತ್ರಿಯ ಆದಾಯಕ್ಕೆ ಇರುವ ಅಗಾಧವಾದ ಅಂತರವನ್ನು ತುಲನೆ ಮಾಡಿದಲ್ಲಿ ಇದು ತಿಳಿದೀತು. 20-30 ವರ್ಷಗಳ ಹಿಂದೆ ನಾಗಪಾತ್ರಿಗಳಾದವರು ಹೀಗೆಯೇ ಸಿರಿವಂತರಾಗಿದ್ದರೇ? ಇದು ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಲೂಟಿಯಲ್ಲವೆ? ಅದರೊಂದಿಗೆ ಅವೇ ನಂಬಿಕೆಗಳ ಮೂಲೋತ್ಪಾಟನೆಯೂ ಹೌದಲ್ಲವೇ?

ನಂಬುಗೆಯ ಹೆಸರಿನಲ್ಲಿ ಮರೆಮಾಚಿ ನಡೆಸುತ್ತಿರುವ ಲೂಟಿ ಹಾಗೂ ಹಳೆಯದು ಹಾಗೆಯೇ ಉಳಿಯಬೇಕೆಂದು made-snanaಮಡೆಸ್ನಾನದಂತಹ ಆಯ್ದಕೆಲವನ್ನು ಉಳಿಸಿಕೊಳ್ಳಬೇಕೆಂದು ಒದ್ದಾಡುವುದೂ ಎರಡೂ ಪರಸ್ಪರ ಪೂರಕವಾದ ಕಸರತ್ತುಗಳೇ. ಉಂಡ ಎಂಜಲಲ್ಲಿ ದೇಹವನ್ನೂ, ಹುಟ್ಟುಗತಿಯ ಹೆಸರಿನ ನುಡಿಯೆಂಜಲಿನಲ್ಲಿ ಆರ್ಥಿಕವಾದ ಉರುಳಾಟವನ್ನೂ ಉತ್ಪಾದನೆ ಮಾಡಿಕೊಂಡು ಬರುವುದು ಬೇರೆ ಬೇರೆಯಾದವುಗಳಲ್ಲ. ಆ ಕಾರಣಕ್ಕಾಗಿಯೇ ನಂಬುಗೆಗಳು ಪ್ರಶ್ನಿಸಲ್ಪಟ್ಟರೆ ಸಂಸ್ಕೃತಿಯೆಂಬ ಹೆಸರಿನ ಆಕರ್ಷಕಬಟ್ಟೆಯಲ್ಲಿ ಅವಿತಿರಿಸಿಕೊಂಡ ನಾಜೂಕಾದ ಆಯುಧಗಳು ಮತ್ತು ನಿರಾತಂಕವಾಗಿ ನಡೆಸಿಕೊಂಡು ಬರಲಾಗುತ್ತಿರುವ ತಳವರ್ಗದ ಮೇಲಿನ ದಾಳಿಯ ಯೋಜನೆಗಳು ನಗ್ನವಾಗಿ ಎಲ್ಲರಿಗೂ ಕಾಣಿಸಬಹುದೆಂಬ ಭಯದಿಂದಾಗಿಯೇ ಆ ವಿವರಗಳು ಮುನ್ನೆಲೆಗೆ ಬಂದಾಗಲೆಲ್ಲಾ ಮುಗಿಬಿದ್ದು ಸಮರ್ಥನೆಗಿಳಿಯುವುದನ್ನು ಕಾಣುತ್ತಿದ್ದೇವೆ. ನಂಬುಗೆ ಮತ್ತು ಸ್ಸಂಸ್ಕೃತಿಯ ಬಗೆಗೆ ಮಾತನಾಡುವವರಿಗೆ ಇಂತಹ ಪ್ರಶ್ನೆಗಳನ್ನು ಎದುರಾಗಿ ಉತ್ತರಿಸಿಕೊಳ್ಳುವ ಅಥವಾ ಹಾಗೆ ಆಗುತ್ತಿರುವ ನಂಬುಗೆಯ ಹೆಸರಿನ ಅನಾಚಾರವನ್ನು ತಡೆಯುವ ಹೊಣೆಗಾರಿಕೆಯೂ ಇರಬೇಕು. ಶತಮಾನದ ನಂಬಿಕೆಯನ್ನು ಗೌರವಿಸಬೇಕು ಎನ್ನುವವರಿಗೆ ಹತ್ತಾರು ವರ್ಷಗಳ ಹಿಂದಿನ ಕನಿಷ್ಠ ಆರೋಗ್ಯಕರ ಸ್ಥಿತಿಯಾದರೂ ಉಳಿಯಬೇಕೆಂಬ ಎಚ್ಚರ ಇರಬೇಕು. ಆದರೆ ಹೀಗೆ ಇರಬೇಕಾದುದನ್ನು ನಿರೀಕ್ಷಿಸುವ ನಾವುಗಳಿಗೆ ಜನರ ವಿವೇಚನೆಯ ಉಸಿರನ್ನೇ ಹಿಸುಕಬಲ್ಲವರಿಂದ ಹಸಿರುಳಿಸುವ, ಜನರ ಬೆವರಿಗೆ ಬೆಲೆಕೊಡುವ ಕರ್ತವ್ಯದ ನಿರೀಕ್ಷೆ ಮಾಡುವ ನಮ್ಮ ಬೋಳೇತನದ ಕುರಿತಾದ ಎಚ್ಚರವೂ ಇರಬೇಕು ಎಂಬುದನ್ನೂ ಮರೆಯಬಾರದು.

(ಈ ಲೇಖನ ಫೆಬ್ರವರಿ ತಿಂಗಳ ಹೊಸತು ಸಂಚಿಕೆಯಲ್ಲಿ ಈ ಮುನ್ನ ಪ್ರಕಟಗೊಂಡಿರುತ್ತದೆ)

ಆಮ್ ಆದ್ಮಿ ಪಕ್ಷ ಭಿನ್ನಾಭಿಪ್ರಾಯ ಹತ್ತಿಕ್ಕದಿರಲಿ

– ಆನಂದ ಪ್ರಸಾದ್

ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳ. ಭಿನ್ನ ಅಭಿಪ್ರಾಯಗಳನ್ನು ದಮನಿಸುವುದು ಸರ್ವಾಧಿಕಾರಿ ಧೋರಣೆಯನ್ನು ಉತ್ತೇಜಿಸಿದಂತೆ ಆಗುತ್ತದೆ. ಹೀಗಾಗಿ ದೇಶದಲ್ಲಿ ಬಹಳಷ್ಟು ಕುತೂಹಲ ಉಂಟುಮಾಡಿರುವ ಆಮ್ ಆದ್ಮಿ ಪಕ್ಷದ ನಡವಳಿಕೆಯ ಬಗ್ಗೆ ದೇಶಾದ್ಯಂತ ಜನ ಗಮನಿಸುತ್ತಿದ್ದಾರೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮಧು ಭಾದುರಿ ಪಕ್ಷದ ಬಗ್ಗೆ ಭ್ರಮನಿರಸನ ಹೊಂದಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರ ಬಗ್ಗೆ ಆಮ್ ಆದ್ಮಿ ಪಕ್ಷದ ನಾಯಕರು ಮರುಚಿಂತನೆ ನಡೆಸಬೇಕಾದುದು ಅಗತ್ಯ. ಮಧು ಭಾದುರಿ ಅವರು ಯಾವುದೇ ಅಧಿಕಾರ ಸ್ಥಾನಕ್ಕಾಗಿ ಆಗ್ರಹಿಸಿ ಅದು ದೊರಕದೆ ಹತಾಶರಾಗಿ ಪಕ್ಷದಿಂದ ಹೊರನಡೆದದ್ದು ಅಲ್ಲ. ಹೀಗಾಗಿ ಇದರ ಬಗ್ಗೆ ಪಕ್ಷದ ನಾಯಕರು ಅವರಿಗೆ AAP-Madhu-Bhaduriನಿಜವಾಗಿಯೂ ಪ್ರಜಾಪ್ರಭುತ್ವ ಹಾಗೂ ಮೌಲ್ಯಗಳ ಬಗ್ಗೆ ಕಾಳಜಿ ಇರುವುದು ನಿಜವಾದರೆ ಪುನಃ ಯೋಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದು. ಇಲ್ಲದೆ ಹೋದರೆ ದೇಶಾದ್ಯಂತ ಪಕ್ಷದ ಬಗ್ಗೆ ತಪ್ಪು ಕಲ್ಪನೆಗಳು ಹಾಗೂ ಅಭಿಪ್ರಾಯಗಳು ಬೆಳೆಯಲು ಕಾರಣವಾದೀತು. ಮಧು ಭಾದುರಿ ಇತ್ತೀಚೆಗೆ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಂದು ನಿರ್ಣಯ ಮಂಡಿಸುವ ಕುರಿತು ಮೊದಲೇ ಪಕ್ಷಕ್ಕೆ ಸೂಚನೆ ಸಲ್ಲಿಸಿದ್ದರು ಎಂದೂ ಆದರೆ ಪಕ್ಷದ ಕಾರ್ಯಕಾರಿಣಿಯಲ್ಲಿ ಅದಕ್ಕೆ ಅವಕಾಶ ನೀಡದೆ ತಮ್ಮನ್ನು ಹತ್ತಿಕ್ಕಲಾಯಿತೆಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅವರು ಸಭೆಯಲ್ಲಿ ಮಂಡಿಸಲು ಬಯಸಿದ ಗೊತ್ತುವಳಿ ಇತ್ತೀಚೆಗೆ ದೆಹಲಿ ಸರ್ಕಾರದ ಕಾನೂನು ಸಚಿವ ಸೋಮನಾಥ್ ಭಾರತಿ ವಿದೇಶಿ ಮಹಿಳೆಯರ ಮೇಲೆ ತನ್ನ ಬೆಂಬಲಿಗರೊಡಗೂಡಿ ಕಾನೂನನ್ನು ಕೈಗೆತ್ತಿಕೊಂಡು ಕಾನೂನುಬಾಹಿರವಾಗಿ ನಡೆದುಕೊಂಡ ಬಗ್ಗೆ ಖಂಡಿಸಿ ಹಾಗೂ ಇದರ ಬಗ್ಗೆ ಪಕ್ಷವು ಜನತೆಯ ಕ್ಷಮೆ ಯಾಚಿಸಬೇಕೆಂಬ ಬೇಡಿಕೆ ಹೊಂದಿತ್ತು. ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ನಡೆದುಕೊಂಡಿದ್ದರೆ ಅದು ತಪ್ಪು ನಡವಳಿಕೆಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಾರದರ್ಶಕತೆಗೆ ಒತ್ತು ಕೊಡುವ ಹಾಗೂ ಇತರ ಪಕ್ಷಗಳಿಗಿಂಥ ಭಿನ್ನ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷ ಇದನ್ನು ಹತ್ತಿಕ್ಕಬೇಕಾಗಿರಲಿಲ್ಲ. ಪಕ್ಷದ ವತಿಯಿಂದ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳುವುದರಿಂದ ಹಾಗೂ ವಿನೀತವಾಗಿ ಕ್ಷಮೆ ಯಾಚಿಸುವುದರಿಂದ ಪಕ್ಷದ ವರ್ಚಸ್ಸು ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗಲಾರದು.

ಮಧು ಭಾದುರಿ ಅವರು ಮಹಿಳೆಯರ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಭ್ರಮನಿರಸನಗೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದು ಕೂಡ ಆಮ್ ಆದ್ಮಿ ಪಕ್ಷ ಚಿಂತಿಸಬೇಕಾದ ಗಂಭೀರ ವಿಚಾರವೇ ಆಗಿದೆ. AAP-Somnath-Bhartiಮಹಿಳೆಯರ ಬಗ್ಗೆ ಸಮಾಜದಲ್ಲಿ ಇರುವ ರೂಢಿಗತ ವಿಚಾರಗಳ ಪರವಾಗಿ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಅದರ ಪ್ರಯೋಜನ ಪಡೆಯುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ಉದಾಹರಣೆಗೆ ಹರ್ಯಾಣದಲ್ಲಿ ಖಾಪ್ ಪಂಚಾಯತಿಗಳ ಬೆಂಬಲವನ್ನು ಆಮ್ ಆದ್ಮಿ ಪಕ್ಷ ಕೇಳಿದೆ. ಮಹಿಳೆಯರು ಮೊಬೈಲ್ ಹೊಂದುವುದನ್ನು ನಿಷೇಧಿಸುವ ಹಾಗೂ ಅಂತರ್ಜಾತಿ ಪ್ರೇಮ ವಿವಾಹಗಳಲ್ಲಿ ಪ್ರೇಮಿಗಳಿಗೆ ಮರಣದಂಡನೆ ವಿಧಿಸುವ ಖಾಪ್ ಪಂಚಾಯತಿಗಳ ಬೆಂಬಲ ಪಡೆಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದು ಅವರ ಪ್ರಶ್ನೆಯಾಗಿದೆ. ಅವರು ಪಕ್ಷದ ಬಗ್ಗೆ ಭ್ರಮನಿರಸನಗೊಳ್ಳಲು ಕಾರಣವಾದ ಇನ್ನೊಂದು ಅಂಶ ದೆಹಲಿಯಲ್ಲಿ ನಿರಾಶ್ರಿತರಿಗೆ ಚಳಿಯಿಂದ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿ ನೂರಕ್ಕೂ ಅಧಿಕ ಜನ ಸತ್ತದ್ದು ಮತ್ತು ಇದರ ಬಗ್ಗೆ ಸರ್ಕಾರ ಅವರು ನೀಡಿದ ಸಲಹೆಯನ್ನು ಪರಿಗಣಿಸಲಿಲ್ಲ ಎಂಬುದು. ಅವರು ನಿರಾಶ್ರಿತರಿಗೆ ಚಳಿಯಿಂದ ರಕ್ಷಣೆ ನೀಡಲು ಸೂಕ್ತ ಆಶ್ರಯ ತಾಣ ನಿರ್ಮಿಸುವವರೆಗೆ ಅವರಿಗೆ ರಾತ್ರಿಯ ವೇಳೆ ಶಾಲೆಗಳಲ್ಲಿ ಆಶ್ರಯ ನೀಡುವ ಸಲಹೆಯನ್ನು ಅವರು ಪಕ್ಷಕ್ಕೆ ನೀಡಿದ್ದರು, ಅದನ್ನು ಪಕ್ಷ ಪರಿಗಣಿಸಲಿಲ್ಲ ಎಂದೂ ಇದರ ಪರಿಣಾಮವಾಗಿ ನೂರಕ್ಕೂ ಅಧಿಕ ನಿರಾಶ್ರಿತರು ಸತ್ತರು ಎಂಬುದು ಅವರ ಬೇಸರಕ್ಕೆ ಕಾರಣ. ಒಬ್ಬ ಒಳ್ಳೆಯ ನಾಯಕ ಎಲ್ಲರಿಂದಲೂ ಸಲಹೆಗಳನ್ನು ತೆಗೆದುಕೊಳ್ಳುತ್ತಾನೆ ಮತ್ತು ತೆಗೆದುಕೊಳ್ಳಬೇಕು ಕೂಡ. ಹೀಗಾಗಿ ಮಧು ಭಾದುರಿಯಂಥ ಹಿರಿಯರು ಸಲಹೆ ನೀಡಿದರೆ ಅದನ್ನು ಕಡೆಗಣಿಸುವುದು ಸೂಕ್ತ ಎನಿಸುವುದಿಲ್ಲ. ಪಕ್ಷ ಈ ಬಗ್ಗೆ ಚಿಂತನೆ ನಡೆಸಲಿ. ಮಹಾತ್ಮಾ ಗಾಂಧಿಯವರು ಎಲ್ಲರಿಂದಲೂ ಅದರಲ್ಲೂ ಮುಖ್ಯವಾಗಿ ಜನಸಾಮಾನ್ಯರಲ್ಲಿ ಸಾಮಾನ್ಯರಿಂದಲೂ ಸಲಹೆಗಳನ್ನು ಪಡೆಯುತ್ತಿದ್ದರು ಮತ್ತು ಅದರ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಹೀಗಾಗಿಯೇ ಅವರು ಇಡೀ ದೇಶ ಮೆಚ್ಚುವ (ಕೆಲವು ಪ್ರತಿಗಾಮಿ ಕರ್ಮಠ ಜನರನ್ನು ಹೊರತುಪಡಿಸಿ) ಹಾಗೂ ಬಹಳ ದೊಡ್ಡ ಜನಸಮುದಾಯವನ್ನು ಪ್ರಭಾವಿಸುವ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು. ಮಾಧ್ಯಮಗಳಲ್ಲಿ ಪಕ್ಷದ ನಾಯಕರ ಬಗ್ಗೆ ಹಾಗೂ ಪಕ್ಷದ ನಿಲುವುಗಳ ಬಗ್ಗೆ ಬರುವ ಟೀಕೆ ಟಿಪ್ಪಣಿಗಳನ್ನು ಗಂಭೀರವಾಗಿ ಅವಲೋಕಿಸುತ್ತಾ ತಾವು ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಆಮ್ ಆದ್ಮಿ ಪಕ್ಷ ಮನಗಾಣಬೇಕು ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿರಬೇಕು. ಜನರ ಬೆಂಬಲ ಪಡೆಯಬೇಕಾದರೆ ಆಮ್ ಆದ್ಮಿ ಪಕ್ಷವು ಇತರ ಸಾಂಪ್ರದಾಯಿಕ ಪಕ್ಷಗಳಿಗಿಂಥ ಭಿನ್ನವಾಗಿ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳುವುದು ಅತ್ಯಗತ್ಯ. ಅರವಿಂದ ಕೇಜ್ರಿವಾಲ್ ಹಾಗೂ ಸಂಗಡಿಗರು ತಮ್ಮ ಉನ್ನತ ಹುದ್ಧೆಗಳನ್ನು ಬಿಟ್ಟು ವ್ಯವಸ್ಥೆ ಪರಿವರ್ತನೆ ಮಾಡಲು ರಾಜಕೀಯಕ್ಕೆ ಬಂದದ್ದು, ಅಧಿಕಾರಕ್ಕಾಗಿ ಅಲ್ಲ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಹಾಗೂ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು. ಇದು ಅಧಿಕಾರದ ಅಮಲಿನಿಂದ ದಾರಿ ತಪ್ಪುವುದನ್ನು ತಡೆಯಬಲ್ಲದು.

ಇತ್ತೀಚೆಗಿನ ಆಮ್ ಆದ್ಮಿ ಪಕ್ಷದ ನಡವಳಿಕೆಗಳು ಪಕ್ಷವು ಸರಿಯಾದ ದಾರಿಯಲ್ಲಿ ಸಾಗುತ್ತಾ ಇಲ್ಲ ಎಂಬ ಭಾವನೆಯನ್ನು ದೇಶದಲ್ಲಿ ಉಂಟು ಮಾಡಿವೆ. ಪಕ್ಷದ ಉನ್ನತ ನಾಯಕತ್ವ ಈ ಬಗ್ಗೆ ಗಮನ ಹರಿಸಿ ತಿದ್ದಿಕೊಳ್ಳದೆ ಹೋದರೆ ಪಕ್ಷದ ಬೆಳವಣಿಗೆಯ ಮೇಲೆ ಗಂಭೀರ ಋಣಾತ್ಮಕ ಪರಿಣಾಮಗಳು ಆಗಬಹುದು. ಸೋಮನಾಥ್ ಭಾರತಿ ಅವರ ವಿಷಯದಲ್ಲಿ ಪಕ್ಷವು ನಡೆದುಕೊಂಡ ಅಸಮರ್ಪಕ ನೀತಿಯ ನಂತರ ಹಾಗೂ ದೆಹಲಿಯಲ್ಲಿ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಯೇ ಕಾನೂನು ಉಲ್ಲಂಘಿಸಿ ಧರಣಿ ಕುಳಿತ ನಂತರ ಪಕ್ಷಕ್ಕೆ ಬರುತ್ತಿದ್ದ ಜನತೆಯ ದೇಣಿಗೆಯ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಮಾಧ್ಯಮಗಳಲ್ಲಿ ಬರುತ್ತಿರುವ ಹೆಚ್ಚಿನ ಜನತೆಯ ಪ್ರತಿಕ್ರಿಯೆಗಳು ಕೂಡ ಪಕ್ಷದ ನಡವಳಿಕೆಯನ್ನು ಟೀಕಿಸಿಯೇ ಬರುತ್ತಿವೆ. ಇದು ಪಕ್ಷವು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂಬುದರ ಸೂಚನೆಯೇ ಆಗಿದೆ. ವಿವೇಕದಿಂದ ಯೋಚಿಸಿದರೆ ಇದು ಪಕ್ಷದ ನಾಯಕರಿಗೆ ಅರ್ಥವಾದೀತು. ಆಮ್ ಆದ್ಮಿ ಪಕ್ಷವು ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಬೇಕಾಗಿದೆ. ಇಲ್ಲದೆ ಹೋದರೆ ಉಳಿದ ಪಕ್ಷಗಳಿಗೂ ಅದಕ್ಕೂ ಏನು ವ್ಯತ್ಯಾಸ ಎಂದು ಜನ ಕೇಳುವಂತಾಗುತ್ತದೆ. ಪಕ್ಷದೊಳಗೆ ಬಹುಮತದ ಆಧಾರದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣ. ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಾಯಕರನ್ನು ಕಡೆಗಣಿಸುವುದು, ಮೂಲೆಗುಂಪು ಮಾಡುವುದು ಸಲ್ಲದು. ಇಂಥ ನಡವಳಿಕೆಗಳು ಸರ್ವಾಧಿಕಾರಿ ಪ್ರಭುತ್ವ, ರಾಜಪ್ರಭುತ್ವ, ಕುಟುಂಬ ರಾಜಕಾರಣದ ಪ್ರಭುತ್ವಗಳಲ್ಲಿ ಸಾಮಾನ್ಯ. ಇತರರಿಗಿಂತ ಭಿನ್ನ ಎಂದು ಹೇಳಿಕೊಳ್ಳುವ ಪಕ್ಷಗಳಲ್ಲಿ ಇಂಥ ನಡವಳಿಕೆಗಳು ಕಂಡುಬಂದರೆ ಪಕ್ಷದ ಬೆಳವಣಿಗೆಗೆ ತೊಂದರೆಯಾಗಲಿರುವುದು ಖಚಿತ.

ಕ್ಯಾಮರಾ ಕಣ್ಣಲ್ಲಿ ರಾಜ್ ಮತ್ತು ಜಯ : ಎರಡು ನಿರೂಪಣೆಗಳು

– ಸಂಕಲ್ಪ

ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಸಿನಿಮಾಗಳ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹೀಗೆ ಮಾತನಾಡಿದ್ದ ನೆನಪು. “ಚಿತ್ರರಂಗ ಲಕ್ಷಾಂತರ ಜನರಿಗೆ ಅನ್ನ, ಆಶ್ರಯ ನೀಡಿದೆ. ಇಂತಹದೊಂದು ಕ್ಷೇತ್ರ ಇಲ್ಲದೆ ಹೋಗಿದ್ದರೆ ನಿರುದ್ಯೋಗ ಸಮಸ್ಯೆ ಇನ್ನೂ ತೀವ್ರವಾಗಿರುತ್ತಿತ್ತು”. ಹೀಗೆ ಲಕ್ಷಾಂತರ ಕೈಗಳಿಗೆ ಕೆಲಸ ಕೊಟ್ಟ ಉದ್ಯಮ ಪರಿಶ್ರಮದ ಹಾಗೂ ಸೃಜನಶೀಲತೆಯನ್ನು ಬೇಡುತ್ತದೆ. ಸಾವಿರಾರು ನಟ, ನಟಿಯರು, ತಂತ್ರಜ್ಞರು, shashidhar-lakshminarayanಕಲಾವಿದರು ಕನ್ನಡ ಚಿತ್ರರಂಗದಲ್ಲಿ ದುಡಿದು ಹೋಗಿದ್ದಾರೆ. ಆದರೆ ಕೆಲವರ ಸಾಧನೆ, ಕೊಡುಗೆಗಳು ಮಾತ್ರ ದಾಖಲಾಗುತ್ತವೆ. ಉಳಿದವರು ತೆರೆಮರೆಯಲ್ಲಿಯೇ ಉಳಿದು ಬಿಡುತ್ತಾರೆ.

ತಮ್ಮ ಕೊಡುಗೆಗಳ ಮೂಲಕ ಮರೆಯಲ್ಲಿಯೇ ಉಳಿದಿದ್ದ ಎರಡು ವ್ಯಕ್ತಿತ್ವಗಳನ್ನು ಪರಿಚಯಿಸುವ ಪುಸ್ತಕಗಳನ್ನು ಪತ್ರಕರ್ತ ಶಶಿಧರ ಚಿತ್ರದುರ್ಗ ಹೊರತಂದಿದ್ದಾರೆ. ಒಬ್ಬರು ಛಾಯಾಗ್ರಾಹಕ ಲಕ್ಷ್ಮೀನಾರಾಯಣ, ಮತ್ತೊಬ್ಬರು ಲಂಗಮ್ಮ ಎಂದೇ ಇತ್ತೀಚೆಗೆ ಪ್ರಸಿದ್ಧರಾಗಿರುವ ಹಿರಿಯ ಕಲಾವಿದೆ ಜಯಾ. ಎರಡು ಪುಸ್ತಕಗಳು ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಬಿಡುಗಡೆಯಾದವು.

ಕ್ಯಾಮರಾ ಕಣ್ಣಲ್ಲಿ ರಾಜ್: ಇದು ಒದುವ ಕಂ ನೋಡುವ ಪುಸ್ತಕ. ಅಪರೂಪದ ಫೋಟೋಗಳು ಈ ಪುಸ್ತಕದ ವಿಶೇಷ ಆಕರ್ಷಣೆ. ರಾಜಕುಮಾರ್ ಅವರ ವಿವಿಧ ಭಂಗಿಗಳು ಇಲ್ಲಿವೆ. ಫೋಟೋಗಳ ಜೊತೆ ಜೊತೆಗೆ ರಾಜ್ ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾ ಕೆರಿಯರ್ ಪರಿಚಯವಾಗುತ್ತದೆ. ಅಪರೂಪದ ಫೋಟೋಗಳನ್ನ ಕ್ಲಿಕ್ಕಿಸಿದ ಸಂದರ್ಭಗಳನ್ನು ಲಕ್ಷ್ಮೀನಾರಾಯಣ್ ಹಂಚಿಕೊಂಡಿದ್ದಾರೆ. ಶಶಿ ನಿರೂಪಿಸಿದ್ದಾರೆ. ರಾಜ್ ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗದ ಪ್ರೇಕ್ಷಕ ಸಮುದಾಯಕ್ಕೆ ಈ ಫೋಟೋ-ಕೃತಿ ಇಷ್ಟವಾಗುತ್ತದೆ.

ಜಯ: ಇದು ನಟಿ ಬಿ.ಜಯ ಅವರ ಬದುಕು-ಅಭಿನಯ ವೃತ್ತಿ ಕುರಿತ ಪುಸ್ತಕ. ಜಯಾ ತಮ್ಮ ವೃತ್ತಿ ಜೀವನದ ಅಮೂಲ್ಯ actress-jayaಕ್ಷಣಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಓದುಗರನ್ನು ಒಂದು ಕಾಲು ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ದು ಅಂದಿನ ಚಿತ್ರರಂಗವನ್ನು ಈ ಪುಸ್ತಕ ನಿರೂಪಿಸುತ್ತದೆ. ಮುಖ್ಯವಾಗಿ ಜಯರಂತಹ ಅಪರೂಪದ ಕಲಾವಿದರ ಪರಿಚಯವಾಗುತ್ತದೆ. ಈ ಪುಸ್ತಕದ ವಿಶೇಷ ಆಕರ್ಷಣೆ ಮತ್ತೊಬ್ಬ ಹಿರಿಯ ನಟಿ ಲೀಲಾವತಿಯವರು ಬರೆದಿರುವ ಬೆನ್ನುಡಿ.

ಇನ್ನು ಶಶಿಯ ಬಗ್ಗೆ ನಾಕು ಮಾತು:
ಅವರ ಹೆಸರೇ ಹೇಳುವಂತೆ ಶಶಿ, ಚಿತ್ರದುರ್ಗದ ಹುಡುಗ. ಸಿನಿಮಾ ಬಗ್ಗೆ ಆಸಕ್ತಿ. ಅದರಲ್ಲೂ ಕನ್ನಡ ಸಿನಿಮಾ ಬಗ್ಗೆ ವಿಶೇಷ ಪ್ರೀತಿ. ಚಿಕ್ಕಂದಿನಿಂದಲೂ ಬಹಳ ಸಿನಿಮಾ ನೋಡುತ್ತಿದ್ದರು. ತಾನು ನೋಡಿ ಬಂದ ಮೇಲೆ, ಇತರರಿಗೂ ತೋರಿಸುವ ಅಭ್ಯಾಸ. ತೀರಾ ಸಾಮಾನ್ಯವಾಗಿರುವ ಚಿತ್ರವನ್ನು ಅತ್ಯದ್ಭುತ ಎಂದು ಸ್ನೇಹಿತರಿಗೆ ಬಣ್ಣಿಸಿ, ಅವರನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿ ಟೀಕೆಗಳನ್ನು ಎದುರಿಸಿದ ಎಷ್ಟೋ ಉದಾಹರಣೆಗಳಿವೆ.

ಅಷ್ಟೇ ಅಲ್ಲ… ಪೂರ್ಣಚಂದ್ರ ತೇಜಸ್ವಿಯವರು ಮೂಡಿಗೆರೆಯಲ್ಲಿ ಕುಳಿತು ಫೋಟೋಗ್ರಫಿಯಲ್ಲಿ ನಾನಾ ಸಾಹಸ ಮಾಡುತ್ತಿದ್ದಾಗ, shashidhar-kamal-hassanಅವರಿಗೊಂದು ಪತ್ರ ಬರೆದು ಉತ್ತರ ಪಡೆದಿದ್ದ. ತೇಜಸ್ವಿಯವರು ಫೋಟೋಗ್ರಫಿ ಕಲಿಯೋಕೆ ಬೇಕಾದರೆ ಮೂಡಿಗೆರೆಗೆ ಬಾ ಎಂದು ಕರೆದಿದ್ದರು. ತೇಜಸ್ವಿಯವರಿಂದ ಅಂತಹದೊಂದು ಆಹ್ವಾನ ಪಡೆದ ಈ ರಾಜ್ಯದ ಕೆಲವೇ ಕೆಲವರಲ್ಲಿ ಶಶಿ ಕೂಡ ಒಬ್ಬ. ಇಂತಹ ವಿಶಿಷ್ಟ ಆಸಕ್ತಿಗಳು ಇರುವ ಕಾರಣ ಭವಾನಿ ಲಕ್ಷ್ಮೀನಾರಾಯಣರಂತಹ, ಜಯಾ ಅಂತಹವರ ಬದುಕು-ಕಲೆಯನ್ನು ಅಕ್ಷರಗಳಲ್ಲಿ ದಾಖಲಿಸಲು ಸಾಧ್ಯವಾಯಿತು.


ಕ್ಯಾಮರಾ ಕಣ್ಣಲ್ಲಿ ರಾಜ್
– ಭವಾನಿ ಲಕ್ಷ್ಮೀನಾರಾಯಣ
– ನಿರೂಪಣೆ: ಶಶಿಧರ ಚಿತ್ರದುರ್ಗ.
ಪ್ರಕಾಶಕರು: ಪಲ್ಲವ ಪ್ರಕಾಶನ
ಪುಟಗಳು: 128, ಬೆಲೆ: ರೂ. 160
ಪ್ರತಿಗಳಿಗಾಗಿ ಸಂಪರ್ಕಿಸಿ: 94803-53507

ಜಯ
ಕಲಾವಿದೆ ಬಿ.ಜಯ ಅವರ ರಂಗಭೂಮಿ, ಸಿನಿಮಾ, ಕಿರುತೆರೆ, ಸಾಧನೆ
ಲೇಖಕ:ಶಶಿಧರ ಚಿತ್ರದುರ್ಗ
ಪ್ರಕಾಶನ: ಅವಿರತ ಪ್ರಕಾಶನ
ಪುಟಗಳು 92; ಬೆಲೆ: ರೂ.100
ಪ್ರತಿಗಳಿಗಾಗಿ: 94499-35103

ಸಾಹಿತ್ಯಕ ರಾಜಕಾರಣ ಮತ್ತು ಋಣಸಂದಾಯದ ಸಮಾಧಾನ


– ಡಾ.ಎಸ್.ಬಿ. ಜೋಗುರ


 

ಹಿಂದೊಮ್ಮೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜಕೀಯ ನಾಯಕರೊಬ್ಬರು ಸಾಹಿತ್ಯಕ ವಲಯದಲ್ಲಿಯ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಮಾತನಾಡುತ್ತಾ ರಾಜಕೀಯದಲ್ಲಿದ್ದುಕೊಂಡು ನಾವು ಮಾಡುವ ರಾಜಕಾರಣ ನಿಮ್ಮ ಮುಂದೆ ಏನೂ ಅಲ್ಲ, ನಿಜವಾದ ರಾಜಕಾರಣಿಗಳನ್ನು ಮೀರಿಸುವಂಥಾ ರಾಜಕಾರಣಿಗಳು ನೀವು ಎಂದು ನೇರವಾಗಿ ಮುಖಕ್ಕೆ ರಾಚುವಂತೆ ಹೇಳಿದ್ದರು. ಆ ತುಂಬಿದ ಸಭೆಯಲ್ಲಿದ್ದವರೆಲಾ ಬಹುತೇಕವಾಗಿ ಸಾಹಿತಿಗಳೇ..

ಆ ರಾಜಕಾರಣಿ ಹೇಳಿದ್ದರಲ್ಲಿ ಒಂದರ್ಥವಿದೆ. ನಮ್ಮ ಸಾಹಿತಿಗಳು ಆಡುವ ಆಟಗಳು, ಮಾಡುವ ಮಾಟಗಳು, ಮಾತನಾಡುವ ರೀತಿ, ಬದುಕುವ ಕ್ರಮ, ತೋರುವ ಗತ್ತು ಇವೆಲ್ಲವುಗಳನ್ನು ನೋಡಿದಾಗ ಖಂಡಿತ ಇವರು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ಇನ್ನು ಕೆಲವು ಸಾಹಿತಿಗಳು ಬದುಕಿನಿಂದ ವಿಮುಖವಾಗಿ Enaradaಬರವಣಿಗೆಯನ್ನು ಮಾಡುವವರು. ಹೇಗೆ ಬದುಕಿದರೇನು..? ಬರವಣಿಗೆ ಮಾತ್ರ ಚೆಂದಾಗಿದೆಯಲ್ಲ? ಎನ್ನುವ ವೇಷಧಾರಿಗಳಿವರು. ಎಲ್ಲಾದರೂ ಒಂದು ಸಮ್ಮೇಳನ ನಡೆಯುತ್ತದೆ ಎಂದರೆ ಸಾಕು ಇವರ ನಿಜವಾದ ರಾಜಕಾರಣ ಬೆತ್ತಲಾಗಿ ಬೆಕ್ಕಸ ಬೆರಗಾಗುವಂಗೆ ಮಾಡಿ ಬಿಡುತ್ತದೆ. ನನಗೆ ಗೊತ್ತಿರುವ ಕವಿತೆ ಗೀಚುವ ಖಯಾಲಿಯಿರುವ ಕೆಲ ಪುಡಿ ಸಾಹಿತಿಗಳು, ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧ್ಯಕ್ಷರ ಬಾಲ ಬಡಿದು ಗೋಷ್ಟಿಯಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಂಡು ನಂತರ ಅತ್ಯಂತ ಬಿಗುಮಾನದಿಂದ ನನಗೂ ದಸರಾ ಕವಿಗೋಷ್ಟಿಗೆ ಬುಲಾವ್ ಬಂದಿದೆ, ಸಮ್ಮೇಳನಕ್ಕೆ ಕರೆ ಬಂದಿದೆ ಎಂದು ಬೀಗುವದನ್ನು ಕೇಳಿ ಹೇಸಿಕೆಯೆನಿಸುತ್ತಿತ್ತು. ನಿಜವಾಗಿಯೂ ಕಾವ್ಯ ಕ್ಷೇತ್ರದ ಹಿರಿಮೆಯಾಗಿರುವ ಒಬ್ಬಾತನ ಹಕ್ಕನ್ನು ಈತ ಲಾಬಿ ಮಾಡಿ ಕಸಿದು ಕೊಂಡಿರುವ ಬಗ್ಗೆ ಅಸಹ್ಯ ಎನಿಸುತ್ತಿತ್ತು. ಇಂಥವರು ಹೇಗಾದರೂ ಮಾಡಿ ಬೆಳೆಯಬೇಕು, ಬಲಿಯಬೇಕು ಎಂದು ಸದಾ ಚಡಪಡಿಸುತ್ತಿರುತ್ತಾರೆ. ಇಂಥವರು ಒಂದು ಸಾರಿ ಬೆಳೆದರೆ ತೀರಿತು, ಆಲದ ಗಿಡದಂತೆ ಇವರ ನೆರಳಲ್ಲಿ ಹುಲ್ಲು ಕಡ್ದಿಯೂ ಬೆಳೆಯುವಂತಿಲ್ಲ. ಪ್ರತಿಯೊಂದರಲ್ಲಿಯೂ ದೇಶಾವರಿ ರಾಜಕಾರಣ ಮಾಡುವ ಇವರು ಸಾಹಿತ್ಯಕ ವಲಯಕ್ಕೆ ಒಂದು ದೊಡ್ಡ ಶಾಪ. ಇವರು ಕತೆ, ಕವಿತೆ, ಕಾದಂಬರಿ, ವಿಮರ್ಶೆ, ನಾಟಕ ಎಲ್ಲವನ್ನೂ ಬರೆಯಬಲ್ಲರು ಆದ್ಸರೆ ಯಾವುದನ್ನೂ ಬರೆಯಲಾರರು. ಇವರ ಪ್ರಮಾಣ ಈಗೀಗ ಸಾಹಿತ್ಯಕ ವಲಯದಲ್ಲಿ ಹೆಚ್ಚಾಗುತ್ತಿದೆ. ಇಂಥವರ ಮಾತುಗಳು ಮಾತ್ರ ಭರವಸೆ ಮೂಡಿಸುತ್ತವಾದರೂ ಆ ಮಾತಿಗೆ ವ್ಯತಿರಿಕ್ತವಾಗಿ ಇವರು ಸಾಹಿತ್ಯ ರಚಿಸುತ್ತಾರೆ ಎನ್ನುವುದೇ ಭಯಂಕರವಾದ ಸತ್ಯ. ಅಷ್ಟಕ್ಕೂ ಬರೆದಂಗೆ ಬದುಕಬೇಕು ಅನ್ನೋ ಸಿದ್ಧಾಂತ ಎಲ್ಲಿದೆರಿ..? ಅನ್ನೋ ಇವರು ಅದ್ಯಾವ ನಮೂನೆಯ ವ್ಯಕ್ತಿತ್ವವೋ ನಾನರಿಯೆ.

ಈಗೀಗ ಕೆಲ ಯುವ ಸಾಹಿತಿಗಳಲ್ಲಿ ಗುಂಪುಗಾರಿಕೆಯ ರೋಗ ಶುರುವಾಗಿದೆ. ಅದರಲ್ಲಿ ಅತಿ ಮುಖ್ಯವಾಗಿ ಜಾತಿ ಪ್ರಾಧಾನ್ಯತೆಯ ಗುಂಪು. ಇದು ಒಂದು ನಿರ್ದಿಷ್ಟ ಜಾತಿ-ಉಪಜಾತಿಯವರಿಂದಲೇ ಸುತ್ತುವರೆದಿರುವ ಗುಂಪು ಇಲ್ಲಿ ಬರೆಯಲು ಬಾರದವನೂ ಸ್ವಜಾತಿ ಬಂಧುಗಳ ಅನುಕಂಪ ಗಿಟ್ಟಿಸಿ ರಾತ್ರೋರಾತ್ರಿ ಕವಿಯಾಗಬಲ್ಲ. ಇದೊಂಥರಾ ಋಣ ಸಂದಾಯದ ಸ್ಕೀಮಿನ ಹಾಗೆ ಆರಂಭವಾಗುವ ಸಾಹಿತ್ಯಕ ಚಟುವಟಿಕೆ. ಒಮ್ಮೆ ನೀನು ಇನ್ನೊಮ್ಮೆ ನಾನು ಮತ್ತೊಮ್ಮೆ ಅವನು ಇಲ್ಲಿ ಅವರ್ನ್ ಬಿಟ್ಟು ಇವರನ್ ಬಿಟ್ಟು ಇವರಾರು..? ಎಂದು ಕೇಳುವ ಪ್ರಶ್ನೆಯೇ ಇರುವದಿಲ್ಲ. ಮತ್ತೆ ಮತ್ತೆ ಅದೇ ಹೆಸರು..ಅದೇ ಮುಖ. ಕೊನೆಗೂ ಋಣಸಂದಾಯವಷ್ಟೇ ಇಲ್ಲಿ ಮುಖ್ಯ. ಇನ್ನೊಂದು ಪ್ರಾದೇಶಿಕತೆಯನ್ನು ಆಧರಿಸಿದ್ದು, ಇವರು ಮೂಲ ಇಲ್ಲಿಯವರು ಹೊರಗಿನವರು ಎನ್ನುವದರ ಆಧಾರದ ಮೆಲೆ ಆಯ್ಕೆ, ತಿರಸ್ಕಾರದ ಕ್ರಿಯೆಗಳು, ಆ ಆಯ್ಕೆಯ ನಡುವೆ ಅನೇಕ ಬಾರಿ ಒಳಗಿನರು ಹೊರಗಾಗಿ, ಹೊರಗಿನವರು ಒಳಗಾಗಿ ದಿಗಿಲಾಗುವುದೂ ಇದೆ. ಮತ್ತೊಂದು ಎಡ ಬಲಮನ:ಸ್ಥಿತಿಯವರು. ಈಗ ಇಲ್ಲೂ ಯಾವುದು ಎಡ ಯಾವುದು ಬಲ ಎನ್ನುವುದು ತಿಳಿಯದಂತಾಗಿದೆ. ಬೆಳಿಗ್ಗೆ ಎಡಸಮೂಹದ ಕವಿಗೊಷ್ಟಿಯಲ್ಲಿ ಹಾಜರ್, ಸಾಯಂಕಾಲ ಬಲದವರ ಸಂವಾದಗೋಷ್ಟಿಯಲ್ಲಿ. ಕೊನೆಗೂ ಇವರು ಎಡಬಲ ಸಮೂಹವಾಗಿಯೇ ಹೊರಮ್ಮುವುದಿದೆ. ಇಂಥವರು ಮಾತ್ರ ಎಲ್ಲರಿಗೂ ಬೇಕಾಗಿ ಬೆಳೆಯಬಲ್ಲವರು. ಯಾಕೆಂದರೆ ಇವರು ಅಲ್ಲೂ ಬುಳುಬುಳು..ಇಲ್ಲೂ ಬುಳುಬುಳು.. ಇವರದೇ ಒಂದು ಜಾತಿ. ಹೀಗೆಲ್ಲಾ ಕಂಡಾಪಟ್ಟೆ ಕಟಿಬಿಟಿ ಮಾಡಿ ಹೆಚ್ಚೆಂದರೆ ಜುಬ್ಬಾ ಧರಿಸಿ, ದಾಡಿ ಬೆಳೆಸಬಹುದೇ ಹೊರತು ಒಂದು ಉತ್ತಮ ಕೃತಿಯನ್ನಂತೂ ರಚಿಸಲಾಗದು.

ಖುಷ್‌ವಂತ್ ಸಿಂಗ್ ಹಿಂದೊಮ್ಮೆ ಪತ್ರಿಕಾವಲಯದಲ್ಲಿರುವ ರಾಜಕಾರಣವನ್ನು ನೆನೆದು ಸಿಡಿಮಿಡಿಗೊಂಡಿಗೊಂಡು ಬರೆದಿರುವದಿತ್ತು. Khushwant Singhರಾಜಕಾರಣಿಗಳು ಎಲ್ಲ ಸಂದರ್ಭದಲ್ಲಿಯೂ ಪತ್ರಿಕೆಯವರನ್ನು ತಮ್ಮ ಬಲಬದಿಗೆ ಇಡಲು ಯತ್ನಿಸುತ್ತಾರೆ. ಅಷ್ಟು ಮಾತ್ರವಲ್ಲ, ಅವರ ಕೈಗೆ ಏನಾದರೂ ಉಡುಗೊರೆ ನೀಡುವ ಮೂಲಕ ಅವರ ಪ್ರೀತಿ ಪಾತ್ರರಾಗುತ್ತಾರೆ. ಈ ಬಗೆಯ ಬಲಬದಿ ಉಳಿಯುವ ಗುಣ ತಮಗೆ ಬರಲೇ ಇಲ್ಲ. ತಮ್ಮ ಕೆಲವು ಬರಹಗಳನ್ನು ಮೆಚ್ಚಿ ಓದುಗರೇ ಒಂದೆರಡು ಬಾರಿ ಸ್ಕಾಚ್ ವಿಸ್ಕಿ ಬಾಟಲ್ ಕೊಟ್ಟಿರುವದಿದೆ. ಅದನ್ನು ನಾನು ಖುಷಿಯಿಂದ ಸ್ವೀಕರಿಸಿರುವೆ. ಆದರೆ ಹೀಗೆ ರಾಜಕಾರಣಿಗಳ ಸಹವಾಸದ ಮೂಲಕ ಅಲ್ಲ, ಎಂದಿದ್ದರು ಖುಷ್‌ವಂತ್ ಸಿಂಗ್.

ಬೆಂಗಾಲದ ಜನ ಯಾವಾಗಲೂ ಓದುವುದರಲ್ಲಿ ಮಿಕ್ಕವರಿಗಿಂತಲೂ ತುಸು ಮುಂದೆ. ಹಾಗಾಗಿಯೇ ಅಲ್ಲಿ ಗಲ್ಲಿಗೊಂದು ಪುಸ್ತಕದ ಅಂಗಡಿಗಳಿವೆ. ಒಂದು ಊರಿನ ಬಗ್ಗೆ ಅರಿಯಬೇಕಿದ್ದರೆ ಅಲ್ಲಿ ಪುಸ್ತಕದ ಅಂಗಡಿಗಳು, ಸಿನೇಮಾ ಥೇಟರಗಳು, ರೆಸ್ಟಾರೆಂಟಗಳು ಎಷ್ಟಿವೆ ಎನ್ನುವದನ್ನು ನೋಡಿದರೆ ಸಾಕು ಗೊತ್ತಾಗುತ್ತದೆ. ಬೆಂಗಾಲದ ಮೂಲದವರಾದ ಚಟರ್ಜಿ ಎನ್ನುವವರು ಪತ್ರಿಕೆಯೊಂದರ ಸಂಪಾದಕರಾಗಿದ್ದರು. ಅವರು ಒಂದು ಬಾರಿ ಗಂಗಾ ನದಿಯಲ್ಲಿ ಈಜುವಾಗ ಕಾಲು ಜಾರಿ ನದಿಯಲ್ಲಿ ಬಿದ್ದು ಬಿಡುತ್ತಾರೆ. ದುರ್ದೈವಕ್ಕೆ ಅವರಿಗೆ ಈಜು ಬರುತ್ತಿರುವದಿಲ್ಲ, ಆಗ ಅವರು ಮುಳುಗುವದರಲ್ಲಿರುತ್ತಾರೆ ಅಲ್ಲಿಯೇ ಇದ್ದ ಯುವಕನೊಬ್ಬ ಅ ನದಿಗೆ ಜಿಗಿದು ಅವರನ್ನು ರಕ್ಷಿಸುತ್ತಾನೆ. ಆಗ ಆ ಪತ್ರಿಕೆಯ ಸಂಪಾದಕರು ತುಂಬಾ ಕೃತಜ್ಞತೆಯಿಂದ ಆ ಯುವಕನನ್ನು ಕೊಂಡಾಡಿ ಅವನಿಗೆ ತಮ್ಮ ವಿಜಿಟಿಂಗ್ ಕಾರ್ಡ್ ನೀಡಿ ಬಿಡುವು ಸಿಕ್ಕಾಗ ಬೆಂಗಾಲಗೆ ಬಂದಾಗ ಕಚೇರಿಗೆ ಬರಲು ತಿಳಿಸುತ್ತಾರೆ. ಮುಂದೊಂದು ದಿನ ಆ ಯುವಕ ಅವರ ಪತ್ರಿಕಾ ಕಾರ್ಯಾಲಯಕ್ಕೆ ತೆರಳುತ್ತಾನೆ ಇವನನ್ನು ಕಂಡದ್ದೇ ಆ ಸಂಪಾದಕರು ಖುಷಿಯಿಂದ ಬೀಗುತ್ತಾರೆ. ಒಳಗೆ ಕರೆದು ಹೇಳು ನನ್ನಿಂದ ಏನಾಗಬೇಕು ಎಂದು ಕೇಳುತ್ತಾರೆ. ಆ ಯುವಕ ತನ್ನ ಕೈಯಲ್ಲಿದ್ದ ಲೇಖನವೊಂದನ್ನು ನೀಡಿ ಇದನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ಕೋರುತ್ತಾನೆ. ಸಂಪಾದಕರು ಅದನ್ನು ಪೂರ್ಣವಾಗಿ ಓದಿ ನೀನು ಬೇಕಾದರೆ ನನ್ನನ್ನು ಪುನ: ಗಂಗಾನದಿಯಲ್ಲಿ ಎತ್ತಿ ಬೀಸಾಡಿದರೂ ತೊಂದರೆಯಿಲ್ಲ ಈ ಲೇಖನವನ್ನು ಪ್ರಕಟಿಸಲಾಗದು ಎನ್ನುತ್ತಾರೆ. ಈ ಬಗೆಯ ನಿಸ್ಪಕ್ಷಪಾತ ಸಾಹಿತ್ಯಕ ವಲಯದಲ್ಲಿ ಈಗಂತೂ ತುಂಬಾ ಜರೂರತ್ತಿದೆ.

ಈ ಹೊತ್ತಿನ ಯುವ ಲೇಖಕರಿಗೆ ಲಾಬಿ ಮಾಡುವ ಮೂಲಕವೇ ಬೆಳೆಯಲು ಸಾಧ್ಯ ಎನ್ನುವಂಥಹ ಬಲವಾದ ನಂಬುಗೆ ಮೂಡುವ ಮುನ್ನವೇ ವಾತಾವರಣ ತಿಳಿಗೊಳ್ಳಬೇಕಿದೆ. ಜಾತಿ, ಧರ್ಮ, ಶಿಫ಼ಾರಸು ಬೇಡ ಎಂದು ವೇದಿಕೆಯಲ್ಲಿ ಭಯಂಕರವಾಗಿ ಮಾತನಾಡುವ ಪ್ರಖರ ಪಂಡಿತ ಸಾಹಿತಿಯೇ ಜಾತಿವಾಸನೆಯಿಂದ ಕೊಳೆತು ನಾರುತ್ತಿರುತ್ತಾನೆ. ಹಾಗಿರುವಾಗ ಈ ಸಾಮಾಜಕ್ಕೆ ಸಾಹಿತಿ ಮತ್ತು ಅವನಿಂದ ಸೃಷ್ಟಿಯಾಗುವ ಸಾಹಿತ್ಯ ನೀಡಬಹುದಾದ ಕೊಡುಗೆ ಎಂಥದು ಎನ್ನುವುದನ್ನು ನೋಡಿದಾಗ ಬೇಸರವೆನಿಸುತ್ತದೆ. ಉದ್ದೇಶಪೂರ್ವಕವಾಗಿಯೇ ಸಾಮರ್ಥ್ಯವಿಲ್ಲದಿದ್ದರೂ ಒಬ್ಬನನ್ನು ಬೆಳೆಸುವ, ಸಾಮರ್ಥ್ಯವಿರುವ ಇನ್ನೊಬ್ಬನನ್ನು ತುಳಿಯುವ, ದುಷ್ಟತನದ ಸಹವಾಸದಲ್ಲಿ ಎಂದೂ ಗಟ್ಟಿ ಸಾಹಿತ್ಯ ಸೃಜಿಸುವದಿಲ್ಲ. ಅದೇನಿದ್ದರೂ ಬಣ್ಣದ ತಗಡಿನ ತುತ್ತೂರಿ ಮಾತ್ರ. ಪುಸಲಾಯಿಸುವುದು, ಲಾಬಿ ಮಾಡುವುದು, ಜೀ ಹುಜೂರ್ ಅನ್ನುವುದರ ಮೂಲಕವೇ ಬೆಳೆಯಬಹುದು ಎಂತಿದ್ದರೆ ಕತೆ-ಕವನ ಬರೆಯುವದಾದರೂ ಏತಕ್ಕೆ..? ನಿಮ್ಮ ಬಹುಪರಾಕ್ ತಂತ್ರಗಾರಿಕೆಯೇ ಸಾಕು ಎನಿಸುತ್ತದೆ. ಸತ್ಯವನ್ನು ಸತ್ಯ ಸುಳ್ಳನ್ನು ಸುಳ್ಳು, ಸರಿ ಇದ್ದದ್ದು ಸರಿ ತಪ್ಪನ್ನು ತಪ್ಪು ಎಂದು ಹೇಳದ ಸಾಹಿತಿ ಬರೆದರೇಷ್ಟು.. ಬಿಟ್ಟರೆಷ್ಟು, ಏನೂ ಫ಼ರಕ್ ಆಗುವದಿಲ್ಲ.