– ಶಿವರಾಜ್
ನರೇಂದ್ರ ಮೋದಿ ಹಾವಳಿಯಿಂದ ತತ್ತರಿಸಿದವರ ಹಿರಿಯ ನಾಯಕರ ಪಟ್ಟಿಯಲ್ಲಿ ಕರ್ನಾಟಕದವರೂ ಇದ್ದಾರೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಮೈಸೂರಿನಲ್ಲಿ ಸ್ಪರ್ಧಿಸುವ ಅವಕಾಶ ಸಿ.ಎಚ್.ವಿಜಯಶಂಕರ್ ಅವರಿಗೆ ಸಿಗಲಿಲ್ಲ. ಕಳೆದ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಂದ ಕೇವಲ 7,600 ಮತಗಳ ಅಂತರದಿಂದ ಸೋತಿದ್ದರು. ಲೋಕಸಭಾ ಚುನಾವಣೆಯಲ್ಲಿ ಅದು ಅಲ್ಪ ಮತದ ಅಂತರ ಎಂದೇ ಪರಿಗಣಿಸಿ ರೂಢಿ. ಆದರೆ ಪ್ರತಾಪ್ ಸಿಂಹ ಎಂಬ ಪತ್ರಕರ್ತನಿಗೆ ಅವಕಾಶ ಮಾಡಿಕೊಡಲು ವಿಜಯಶಂಕರ್ ಅವರನ್ನು ಹಾಸನಕ್ಕೆ ಕಳುಹಿಸಿದರು. ಅವರು ಪಾಪ ಒಲ್ಲದ ಮನಸ್ಸಿನಿಂದ ಹಾಸನಕ್ಕೆ ಹೋಗಿ ಪ್ರಚಾರಕ್ಕೆ ನಿಂತಿದ್ದಾರೆ. ಹಾಸನ ಮೂಲದ ಪ್ರತಾಪ ಸಿಂಹನಿಗೆ ಇಲ್ಲಿ ಅವಕಾಶ ಕೊಟ್ಟು, ತನ್ನನೇಕೆ ಹಾಸನಕ್ಕೆ ಕಳುಹಿಸಿದರು ಎಂಬ ಪ್ರಶ್ನೆಗೆ ಅವರಿಗಿನ್ನೂ ಸಮಾಧಾನದ ಉತ್ತರ ಸಿಕ್ಕಿಲ್ಲ.
ಹಾಸನ ಮೂಲದವನಾಗಿದ್ದರೂ ಮೈಸೂರಿಗೆ ಬಂದ ಮಹಾಶಯ ‘ಸಿಂಹಕ್ಕೆ ಪ್ರಬಲ ಪೈಪೋಟಿಯ ಕ್ಷೇತ್ರವೇ ಬೇಕಿತ್ತು. ಹಾಗಾಗಿ ಮೈಸೂರು ಆಯ್ಕೆ ಮಾಡಿಕೊಂಡೆ..’ ಎಂದು ಅಲ್ಲಲ್ಲಿ ಹೇಳಿಕೊಳ್ಳುತ್ತಿರುವ ಸಂಗತಿಯಂತೂ ವಿಜಯಶಂಕರ್ ಅವರನ್ನು ಇನ್ನಿಲ್ಲದ ಸಂಕಟದಿಂದ ಬಳಲುವಂತೆ ಮಾಡಿರಬಹುದು. ಸಿಂಹಕ್ಕೆ ಜಿದ್ದಾಜಿದ್ದಿನ ಕ್ಷೇತ್ರ ಬೇಕಿದ್ದರೆ ಹಾಸನವೇ ಇತ್ತಲ್ಲ! ಅಲ್ಲಿ ಸ್ಪಧರ್ಿಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದರೆ…ಪಕ್ಷವೇನು ಬೇಡ ಎನ್ನುತ್ತಿತ್ತೆ?
ಇತ್ತೀಚೆಗೆ ಅನೇಕ ಪತ್ರಕರ್ತರು ವಿವಿಧ ರಾಜಕೀಯ ಪಕ್ಷಗಳನ್ನು ಸೇರಿ ಚುನಾವಣೆಗೆ ನಿಂತಿದ್ದಾರೆ. ಸರಕಾರದಲ್ಲಿ ಅಧಿಕಾರಿಗಳಾಗಿದ್ದು ಅಥವಾ ಪತ್ರಕರ್ತರಾಗಿದ್ದು ಚುನಾವಣಾ ರಾಜಕೀಯಕ್ಕೆ ಪ್ರವೇಶಿದರೆ, ಅಂತಹವರು ತಮ್ಮ ಹಿಂದಿನ ಕ್ಷೇತ್ರದಲ್ಲಿ ನಡೆದುಕೊಂಡಿದ್ದ ಬಗೆ ಏನು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಎಸ್. ಎಂ. ಕೃಷ್ಣ ಅವರ ಕಾಲದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದವರು ನಿವೃತ್ತಿ ನಂತರ ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಗೆ ನಿಂತು ಸೋತರು. ಹಾಗಾದರೆ, ಅವರು ತಮ್ಮ ವೃತ್ತಿ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವ ಹಾಗೆ ಕೆಲಸ ಮಾಡಿದ್ದರೆ ಎಂಬ ಸಂಶಯ ಸಹಜ. ಅದೇ ಪ್ರಶ್ನೆ ಪತ್ರಕರ್ತರನ್ನು ಕೇಳಬೇಕಾಗುತ್ತದೆ.
ಪ್ರತಾಪ ಸಿಂಹರ ಸಂದರ್ಭದಲ್ಲಂತೂ ಈ ಅಂಶ ಸ್ಪಷ್ಟ. ಅವರು ಬರೆದಿದ್ದು ಅಂಕಣಗಳೇ ಇರಬಹುದು. ಆದರೆ ಅವುಗಳಲ್ಲಿ ಬಹುತೇಕ ಬರಹಗಳು ಬಿಜೆಪಿ ಪಕ್ಷದ ಕರಪತ್ರಗಳೇ. ಪ್ರಮುಖ ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡಿದ್ದು ನರೇಂದ್ರ ಮೋದಿ: ಯಾರೂ ತುಳಿಯದ ಹಾದಿ ಎಂಬ ಹೆಸರಿನ ಕೇವಲ ಬಹುಪರಾಕುಗಳನ್ನು ಉಳ್ಳ ಪುಸ್ತಕ ಬರೆಯುವ ಉದ್ದೇಶವಾದರೂ ಏನು? ಆ ಕೃತಿಯನ್ನು ಮೋದಿಯ ಮೊದಲ ‘ಬಯೋಗ್ರಫಿ’ ಎಂದು ಹಲವರು ಬಣ್ಣಿಸುತ್ತಾರೆ. ಒಂದು ವ್ಯಕ್ತಿತ್ವದ ವಿಮರ್ಶಾತ್ಮಕ ಅಧ್ಯಯನ ಇಲ್ಲದೇ ಹೋದರೆ ಅದು ಗಂಭೀರ ಕೃತಿಯಾಗುವುದೇ ಇಲ್ಲ. ಅದು ಗಂಭೀರ ಆದರೆಷ್ಟು ಬಿಟ್ಟರೆಷ್ಟು ನರೇಂದ್ರ ಮೋದಿ ಕೃಪೆಯಿಂದ ಮೈಸೂರಿನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಆ ಕೃತಿ ಲಾಭದಾಯಕವಾಗಿದ್ದಂತೂ ಸತ್ಯ.
ಹೀಗೆ ಒಂದು ಪಕ್ಷದ ಪರ, ಒಬ್ಬ ವ್ಯಕ್ತಿಯ ಪರ ಕರಪತ್ರಗಳನ್ನು ಬರೆದುಕೊಂಡಿದ್ದವರನ್ನು ಪತ್ರಕರ್ತ ಎಂದು ಕರೆಯುತ್ತಿರುವುದು ಸರಿಯೆ? ಪ್ರಚೋದನಕಾರಿ ಸುಳ್ಳುಗಳನ್ನು ಬರೆದುಕೊಂಡು ಟಿಕೆಟ್ ಗಿಟ್ಟಿಸಿದ್ದಲ್ಲದೆ, ಪ್ರಚಾರದ ಸಂದರ್ಭದಲ್ಲೂ ಅಂತಹದೇ ಮಾತುಗಳನ್ನಾಡುತ್ತಿದ್ದಾರೆ. ಪಾಕಿಸ್ತಾನ ಎರಡು ತಲೆ ಕಡಿದರೆ, ಇಂಡಿಯಾ ನಾಲ್ಕು ತಲೆ ಕಡಿಯಬೇಕಿತ್ತಂತೆ. ಜಾಗತಿಕವಾಗಿ ಪಾಕಿಸ್ತಾನದ ಸ್ಥಾನ, ಘನತೆ ಏನು, ಇಂಡಿಯಾದ ಮಾನ, ಘನತೆಗಳೇನು ಎನ್ನುವ ಅರಿವು ಇದ್ದರೆ ಹೀಗೆ ಮಾತನಾಡುತ್ತಿದ್ದರೆ? ಅನೇಕರಿಗೆ ನೆನಪಿರಬಹುದು ಈ ಪತ್ರಕರ್ತ (ಹಾಗಂತ ಕರೆಯಲ್ಪಡುತ್ತಿರುವ) ವಿಜಯ ಕರ್ನಾಟಕದಲ್ಲಿ ವಿ.ಪಿ. ಸಿಂಗ್ ಸತ್ತಾಗ ಅಂಕಣ ಬರೆದಿದ್ದರು. ಮೈಸೂರಿನ ಜನತೆ ಇಂತಹವರಿಗೆ ಮಣೆ ಹಾಕುವ ಮುನ್ನ ಒಮ್ಮೆ ಆ ಬರಹವನ್ನು ಜ್ಞಾಪಿಸಿಕೊಳ್ಳಬೇಕು (ಪ್ರಕಟವಾದದ್ದು ನವೆಂಬರ್ 2008 ರಲ್ಲಿ).
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರತಿಪಾದಿಸುವ ಮಂಡಲ್ ವರದಿಯನ್ನು ಜಾರಿಗೆ ತಂದದ್ದು, ಈ ಪತ್ರಕರ್ತನ ಪ್ರಕಾರ ‘ದೇಶಕ್ಕೆ ತುಂಬಲಾರದ ನಷ್ಟ’! ವಿ.ಪಿ ಸಿಂಗ್ ಅವರ ಕೊಡುಗೆಯನ್ನು ಹಿಯಾಳಿಸುವ ವ್ಯಕ್ತಿ ಲೋಕಸಭೆಗೆ ಹೋಗಿ ಯಾವ ಹಿಂದುಳಿದವರ ಪರ, ದಲಿತರ ಪರ ಮಾತನಾಡಬಲ್ಲ. ಬಹುಶಃ ಆತನ ಮಾತುಗಳೇನಿದ್ದರೂ ತಲೆ ಕಡಿಯುವುದಕ್ಕೆ ಮಾತ್ರ ಸೀಮಿತ. ಪಾಕಿಸ್ತಾನ ಸೈನಿಕರ ತಲೆ ಕಡಿಯುವುದರಿಂದ ಮೈಸೂರು ಕ್ಷೇತ್ರ ಜನತೆಗೆ ಕುಡಿವ ನೀರೇನು ಸಿಗೋಲ್ಲ. ರಸ್ತೆ ಗುಂಡಿಗಳು ಮುಚ್ಚಲ್ಲ. ಕಾವೇರಿ ನದಿ ಹರಿದು ನೆಲ ಹಸಿರಾಗುವುದಿಲ್ಲ.
ಹುಟ್ಟು, ಹುಟ್ಟುವ ಮನೆ, ಲಿಂಗ, ಜಾತಿ, ಕುಲ, ಧರ್ಮ ಯಾವುದೂ ಯಾರ ಆಯ್ಕೆಗಳಲ್ಲ. ಹಾಗಾಗಿ ಯಾವುದರ ಆಯ್ಕೆಗೆ ಅವಕಾಶ ಇಲ್ಲವೋ ಅದರ ಆಧಾರದ ಮೇಲೆ ಭಿನ್ನತೆ ಮಾಡುವುದು ಅಥವಾ ತುಚ್ಚವಾಗಿ ಕಾಣುವುದು ಅಕ್ಷಮ್ಯ. ಪ್ರತಾಪ ಸಿಂಹನಂತಹ (ಅಂತಹ ಅನೇಕರು ಇದ್ದಾರೆ) ವ್ಯಕ್ತಿಗಳು ಅರ್ಥಮಾಡಿಕೊಳ್ಳಬೇಕಾದ್ದೇ ಇದನ್ನು. ಒಂದು ಜನಸಮೂಹವನ್ನು ಕೋಮಿನ ಆಧಾರದ ಮೇಲೆ ದೂಷಿಸುತ್ತಾ, ಟೀಕಿಸುತ್ತಾ, ಹೀಯಾಳಿಸುತ್ತ ಹೋದರೆ ಅಂತ್ಯ ಎಲ್ಲಿದೆ? ಇಂದು ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣುವ ಜನರಿಗೆ, ನಾಳೆ ಅನ್ಯ ಜಾತಿಯವರು ಹಾಗೇ ಕಾಣುತ್ತಾರೆ. ದಲಿತರನ್ನು ಇನ್ನೂ ಮನೆಯ ಅಂಗಳಕ್ಕೇ ಸೇರಿಸಿಲ್ಲ. ಇಂತಹ ಧಮರ್ಾಂಧ ಮನಸುಗಳಿಗೆ ನಾಳೆ ಶತ್ರುಗಳಾಗಿ ಕಾಣುವವರು ಅವರೇ. ಏಕೆಂದರೆ ಶತ್ರು ಒಬ್ಬನನ್ನು ಸೃಷ್ಟಿಸಿ ಗಲಭೆ ಎಬ್ಬಿಸಿ ಲಾಭ ಪಡೆಯುವುದಷ್ಟೆ ಕೆಲವು ಸಿದ್ಧಾಂತಗಳ ತಿರುಳು ಆಗಿರುವಾಗ ಬೇರೇನನ್ನು ನಿರೀಕ್ಷಿಸಲು ಸಾಧ್ಯ.