Monthly Archives: March 2014

ಪ್ರತಾಪ ಸಿಂಹ: ಯಾರೂ ‘ತುಳಿಯಬಾರದ’ ಹಾದಿ!

– ಶಿವರಾಜ್

ನರೇಂದ್ರ ಮೋದಿ ಹಾವಳಿಯಿಂದ ತತ್ತರಿಸಿದವರ ಹಿರಿಯ ನಾಯಕರ ಪಟ್ಟಿಯಲ್ಲಿ ಕರ್ನಾಟಕದವರೂ ಇದ್ದಾರೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಮೈಸೂರಿನಲ್ಲಿ ಸ್ಪರ್ಧಿಸುವ ಅವಕಾಶ ಸಿ.ಎಚ್.ವಿಜಯಶಂಕರ್ ಅವರಿಗೆ ಸಿಗಲಿಲ್ಲ. ಕಳೆದ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಂದ ಕೇವಲ 7,600 ಮತಗಳ ಅಂತರದಿಂದ ಸೋತಿದ್ದರು. ಲೋಕಸಭಾ ಚುನಾವಣೆಯಲ್ಲಿ ಅದು ಅಲ್ಪ ಮತದ ಅಂತರ ಎಂದೇ ಪರಿಗಣಿಸಿ ರೂಢಿ. ಆದರೆ ಪ್ರತಾಪ್ ಸಿಂಹ ಎಂಬ ಪತ್ರಕರ್ತನಿಗೆ ಅವಕಾಶ ಮಾಡಿಕೊಡಲು ವಿಜಯಶಂಕರ್ ಅವರನ್ನು ಹಾಸನಕ್ಕೆ ಕಳುಹಿಸಿದರು. ಅವರು ಪಾಪ ಒಲ್ಲದ ಮನಸ್ಸಿನಿಂದ ಹಾಸನಕ್ಕೆ ಹೋಗಿ ಪ್ರಚಾರಕ್ಕೆ ನಿಂತಿದ್ದಾರೆ. ಹಾಸನ ಮೂಲದ ಪ್ರತಾಪ ಸಿಂಹನಿಗೆ ಇಲ್ಲಿ ಅವಕಾಶ ಕೊಟ್ಟು, ತನ್ನನೇಕೆ ಹಾಸನಕ್ಕೆ ಕಳುಹಿಸಿದರು ಎಂಬ ಪ್ರಶ್ನೆಗೆ ಅವರಿಗಿನ್ನೂ ಸಮಾಧಾನದ ಉತ್ತರ ಸಿಕ್ಕಿಲ್ಲ.

ಹಾಸನ ಮೂಲದವನಾಗಿದ್ದರೂ ಮೈಸೂರಿಗೆ ಬಂದ ಮಹಾಶಯ ‘ಸಿಂಹಕ್ಕೆ ಪ್ರಬಲ ಪೈಪೋಟಿಯ ಕ್ಷೇತ್ರವೇ ಬೇಕಿತ್ತು. ಹಾಗಾಗಿ ಮೈಸೂರು ಆಯ್ಕೆ ಮಾಡಿಕೊಂಡೆ..’ ಎಂದು ಅಲ್ಲಲ್ಲಿ ಹೇಳಿಕೊಳ್ಳುತ್ತಿರುವ ಸಂಗತಿಯಂತೂ ವಿಜಯಶಂಕರ್ ಅವರನ್ನು ಇನ್ನಿಲ್ಲದ ಸಂಕಟದಿಂದ ಬಳಲುವಂತೆ ಮಾಡಿರಬಹುದು. ಸಿಂಹಕ್ಕೆ ಜಿದ್ದಾಜಿದ್ದಿನ ಕ್ಷೇತ್ರ ಬೇಕಿದ್ದರೆ ಹಾಸನವೇ ಇತ್ತಲ್ಲ! ಅಲ್ಲಿ ಸ್ಪಧರ್ಿಸಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದರೆ…ಪಕ್ಷವೇನು ಬೇಡ ಎನ್ನುತ್ತಿತ್ತೆ?

photo-pratap

ಇತ್ತೀಚೆಗೆ ಅನೇಕ ಪತ್ರಕರ್ತರು ವಿವಿಧ ರಾಜಕೀಯ ಪಕ್ಷಗಳನ್ನು ಸೇರಿ ಚುನಾವಣೆಗೆ ನಿಂತಿದ್ದಾರೆ. ಸರಕಾರದಲ್ಲಿ ಅಧಿಕಾರಿಗಳಾಗಿದ್ದು ಅಥವಾ ಪತ್ರಕರ್ತರಾಗಿದ್ದು ಚುನಾವಣಾ ರಾಜಕೀಯಕ್ಕೆ ಪ್ರವೇಶಿದರೆ, ಅಂತಹವರು ತಮ್ಮ ಹಿಂದಿನ ಕ್ಷೇತ್ರದಲ್ಲಿ ನಡೆದುಕೊಂಡಿದ್ದ ಬಗೆ ಏನು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಎಸ್. ಎಂ. ಕೃಷ್ಣ ಅವರ ಕಾಲದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದವರು ನಿವೃತ್ತಿ ನಂತರ ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಗೆ ನಿಂತು ಸೋತರು. ಹಾಗಾದರೆ, ಅವರು ತಮ್ಮ ವೃತ್ತಿ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವ ಹಾಗೆ ಕೆಲಸ ಮಾಡಿದ್ದರೆ ಎಂಬ ಸಂಶಯ ಸಹಜ. ಅದೇ ಪ್ರಶ್ನೆ ಪತ್ರಕರ್ತರನ್ನು ಕೇಳಬೇಕಾಗುತ್ತದೆ.

ಪ್ರತಾಪ ಸಿಂಹರ ಸಂದರ್ಭದಲ್ಲಂತೂ ಈ ಅಂಶ ಸ್ಪಷ್ಟ. ಅವರು ಬರೆದಿದ್ದು ಅಂಕಣಗಳೇ ಇರಬಹುದು. ಆದರೆ ಅವುಗಳಲ್ಲಿ ಬಹುತೇಕ ಬರಹಗಳು ಬಿಜೆಪಿ ಪಕ್ಷದ ಕರಪತ್ರಗಳೇ. ಪ್ರಮುಖ ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡಿದ್ದು ನರೇಂದ್ರ ಮೋದಿ: ಯಾರೂ ತುಳಿಯದ ಹಾದಿ ಎಂಬ ಹೆಸರಿನ ಕೇವಲ ಬಹುಪರಾಕುಗಳನ್ನು ಉಳ್ಳ ಪುಸ್ತಕ ಬರೆಯುವ ಉದ್ದೇಶವಾದರೂ ಏನು? ಆ ಕೃತಿಯನ್ನು ಮೋದಿಯ ಮೊದಲ ‘ಬಯೋಗ್ರಫಿ’ ಎಂದು ಹಲವರು ಬಣ್ಣಿಸುತ್ತಾರೆ. ಒಂದು ವ್ಯಕ್ತಿತ್ವದ ವಿಮರ್ಶಾತ್ಮಕ ಅಧ್ಯಯನ ಇಲ್ಲದೇ ಹೋದರೆ ಅದು ಗಂಭೀರ ಕೃತಿಯಾಗುವುದೇ ಇಲ್ಲ. ಅದು ಗಂಭೀರ ಆದರೆಷ್ಟು ಬಿಟ್ಟರೆಷ್ಟು ನರೇಂದ್ರ ಮೋದಿ ಕೃಪೆಯಿಂದ ಮೈಸೂರಿನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಆ ಕೃತಿ ಲಾಭದಾಯಕವಾಗಿದ್ದಂತೂ ಸತ್ಯ.

ಹೀಗೆ ಒಂದು ಪಕ್ಷದ ಪರ, ಒಬ್ಬ ವ್ಯಕ್ತಿಯ ಪರ ಕರಪತ್ರಗಳನ್ನು ಬರೆದುಕೊಂಡಿದ್ದವರನ್ನು ಪತ್ರಕರ್ತ ಎಂದು ಕರೆಯುತ್ತಿರುವುದು ಸರಿಯೆ? ಪ್ರಚೋದನಕಾರಿ ಸುಳ್ಳುಗಳನ್ನು ಬರೆದುಕೊಂಡು ಟಿಕೆಟ್ ಗಿಟ್ಟಿಸಿದ್ದಲ್ಲದೆ, ಪ್ರಚಾರದ ಸಂದರ್ಭದಲ್ಲೂ ಅಂತಹದೇ ಮಾತುಗಳನ್ನಾಡುತ್ತಿದ್ದಾರೆ. ಪಾಕಿಸ್ತಾನ ಎರಡು ತಲೆ ಕಡಿದರೆ, ಇಂಡಿಯಾ ನಾಲ್ಕು ತಲೆ ಕಡಿಯಬೇಕಿತ್ತಂತೆ. ಜಾಗತಿಕವಾಗಿ ಪಾಕಿಸ್ತಾನದ ಸ್ಥಾನ, ಘನತೆ ಏನು, ಇಂಡಿಯಾದ ಮಾನ, ಘನತೆಗಳೇನು ಎನ್ನುವ ಅರಿವು ಇದ್ದರೆ ಹೀಗೆ ಮಾತನಾಡುತ್ತಿದ್ದರೆ? ಅನೇಕರಿಗೆ ನೆನಪಿರಬಹುದು ಈ ಪತ್ರಕರ್ತ (ಹಾಗಂತ ಕರೆಯಲ್ಪಡುತ್ತಿರುವ) ವಿಜಯ ಕರ್ನಾಟಕದಲ್ಲಿ ವಿ.ಪಿ. ಸಿಂಗ್ ಸತ್ತಾಗ ಅಂಕಣ ಬರೆದಿದ್ದರು. ಮೈಸೂರಿನ ಜನತೆ ಇಂತಹವರಿಗೆ ಮಣೆ ಹಾಕುವ ಮುನ್ನ ಒಮ್ಮೆ ಆ ಬರಹವನ್ನು ಜ್ಞಾಪಿಸಿಕೊಳ್ಳಬೇಕು (ಪ್ರಕಟವಾದದ್ದು ನವೆಂಬರ್ 2008 ರಲ್ಲಿ).

ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರತಿಪಾದಿಸುವ ಮಂಡಲ್ ವರದಿಯನ್ನು ಜಾರಿಗೆ ತಂದದ್ದು, ಈ ಪತ್ರಕರ್ತನ ಪ್ರಕಾರ ‘ದೇಶಕ್ಕೆ ತುಂಬಲಾರದ ನಷ್ಟ’! ವಿ.ಪಿ ಸಿಂಗ್ ಅವರ ಕೊಡುಗೆಯನ್ನು ಹಿಯಾಳಿಸುವ ವ್ಯಕ್ತಿ ಲೋಕಸಭೆಗೆ ಹೋಗಿ ಯಾವ ಹಿಂದುಳಿದವರ ಪರ, ದಲಿತರ ಪರ ಮಾತನಾಡಬಲ್ಲ. ಬಹುಶಃ ಆತನ ಮಾತುಗಳೇನಿದ್ದರೂ ತಲೆ ಕಡಿಯುವುದಕ್ಕೆ ಮಾತ್ರ ಸೀಮಿತ. ಪಾಕಿಸ್ತಾನ ಸೈನಿಕರ ತಲೆ ಕಡಿಯುವುದರಿಂದ ಮೈಸೂರು ಕ್ಷೇತ್ರ ಜನತೆಗೆ ಕುಡಿವ ನೀರೇನು ಸಿಗೋಲ್ಲ. ರಸ್ತೆ ಗುಂಡಿಗಳು ಮುಚ್ಚಲ್ಲ. ಕಾವೇರಿ ನದಿ ಹರಿದು ನೆಲ ಹಸಿರಾಗುವುದಿಲ್ಲ.

ಹುಟ್ಟು, ಹುಟ್ಟುವ ಮನೆ, ಲಿಂಗ, ಜಾತಿ, ಕುಲ, ಧರ್ಮ ಯಾವುದೂ ಯಾರ ಆಯ್ಕೆಗಳಲ್ಲ. ಹಾಗಾಗಿ ಯಾವುದರ ಆಯ್ಕೆಗೆ ಅವಕಾಶ ಇಲ್ಲವೋ ಅದರ ಆಧಾರದ ಮೇಲೆ ಭಿನ್ನತೆ ಮಾಡುವುದು ಅಥವಾ ತುಚ್ಚವಾಗಿ ಕಾಣುವುದು ಅಕ್ಷಮ್ಯ.photo-pratap-2 ಪ್ರತಾಪ ಸಿಂಹನಂತಹ (ಅಂತಹ ಅನೇಕರು ಇದ್ದಾರೆ) ವ್ಯಕ್ತಿಗಳು ಅರ್ಥಮಾಡಿಕೊಳ್ಳಬೇಕಾದ್ದೇ ಇದನ್ನು. ಒಂದು ಜನಸಮೂಹವನ್ನು ಕೋಮಿನ ಆಧಾರದ ಮೇಲೆ ದೂಷಿಸುತ್ತಾ, ಟೀಕಿಸುತ್ತಾ, ಹೀಯಾಳಿಸುತ್ತ ಹೋದರೆ ಅಂತ್ಯ ಎಲ್ಲಿದೆ? ಇಂದು ಅನ್ಯ ಧರ್ಮೀಯರನ್ನು ಶತ್ರುಗಳಂತೆ ಕಾಣುವ ಜನರಿಗೆ, ನಾಳೆ ಅನ್ಯ ಜಾತಿಯವರು ಹಾಗೇ ಕಾಣುತ್ತಾರೆ. ದಲಿತರನ್ನು ಇನ್ನೂ ಮನೆಯ ಅಂಗಳಕ್ಕೇ ಸೇರಿಸಿಲ್ಲ. ಇಂತಹ ಧಮರ್ಾಂಧ ಮನಸುಗಳಿಗೆ ನಾಳೆ ಶತ್ರುಗಳಾಗಿ ಕಾಣುವವರು ಅವರೇ. ಏಕೆಂದರೆ ಶತ್ರು ಒಬ್ಬನನ್ನು ಸೃಷ್ಟಿಸಿ ಗಲಭೆ ಎಬ್ಬಿಸಿ ಲಾಭ ಪಡೆಯುವುದಷ್ಟೆ ಕೆಲವು ಸಿದ್ಧಾಂತಗಳ ತಿರುಳು ಆಗಿರುವಾಗ ಬೇರೇನನ್ನು ನಿರೀಕ್ಷಿಸಲು ಸಾಧ್ಯ.

‘ಇಲ್ಲಿ ಯಾರೂ ನೆಟ್ಟಗಿಲ್ಲ’ ಎಂಬ ಸಿನಿಕತನ ಮತ್ತು ಮತದಾನ


– ಡಾ.ಎಸ್.ಬಿ. ಜೋಗುರ


 

‘ಈ ಪ್ರಜಾರಾಜ್ಯದಲಿ ತರತರದ ಆಟ
ನೂರು ಸಲ ಹೋದರೂ ಸಿಗಲಿಲ್ಲ ಕೋಟಾ
ಆಮೇಲೆ ಒಂದು ದಿನ ನೀಡಿದರು ಕಾಳು.
ಮನೆಗೊಯ್ದು ನೋಡಿದರೆ ಸಂಪೂರ್ಣ ಹಾಳು’
– ದಿನಕರ ದೇಸಾಯಿ

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿ ಕಂಡುಬರುವ ಅನೇಕ ಬಗೆಯ ರಾಜಕೀಯ ಸ್ಥಿತ್ಯಂತರಗಳು ನೈತಿಕವಾಗಿ ಹದಗೆಡುತ್ತಾ ಬಂದ ರಾಜಕೀಯ ಸನ್ನಿವೇಶವನ್ನು ಅನಾವರಣಗೊಳಿಸುವ ಜೊತೆಜೊತೆಗೆ ಮೌಲ್ಯಾಧಾರಿತ ರಾಜಕೀಯ ಎನ್ನುವುದು ಹೇಗೆ ಕುಸಿದು ಅಪಮೌಲೀಕರಣದ ಸಹವಾಸದಲ್ಲಿಯೇ ಸುಖ ಅನುಭವಿಸುವ ಖಯಾಲಿಯಾಗಿ ಪರಿಣಮಿಸಿದೆ ಎನ್ನುವ ಒಂದು ಸ್ಥೂಲ ನೋಟವೊಂದನ್ನು ನಮಗೆ ಪರಿಚಯಿಸುತ್ತವೆ. ಅದನ್ನೇ ಈ ಕಾಲಮಾನದ ವಿಪ್ಲವ ಮತ್ತು ವಾಸ್ತವ ಎಂಬಂತೆ ಬಿಂಬಿಸಲಾಗುತ್ತಿದೆ. ಎಂಬತ್ತರ ದಶಕದ ಮುಂಚಿನ ಅರ್ಧದಷ್ಟಾದರೂ ರಾಜಕೀಯ ಪ್ರಭೃತಿಗಳು ತಕ್ಕ ಮಟ್ಟಿಗಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಎಂಬತ್ತರ ದಶಕದ ನಂತರ ರಾಜಕಾರಣವೆನ್ನುವುದು ಮೌಲ್ಯ ಮತ್ತು ನೈತಿಕತೆಯ ಸಹವಾಸದಿಂದ ಗಾವುದ ಗಾವುದ ದೂರ ಎನ್ನುವ ಹಾಗೆ ಮಾರ್ಪಟ್ಟಿದ್ದು ದೊಡ್ಡ ವಿಷಾದ. ಆನಂತರದ ದಿನಗಳಲ್ಲಿ ‘ನೈತಿಕ ಅಧ:ಪತನದ ಮಾರ್ಗದಲ್ಲಿ ನಡೆದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಣಕಿಸುವ ಹಾಗೆ ರಾಜಕಾರಣ ಮಾಡುವವರು ಮಾತ್ರ ಇಲ್ಲಿ ಸಲ್ಲುತ್ತಾರೆ’ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಪರಿಸರ ಕಲುಷಿತಗೊಂಡದ್ದು ಈ ದೇಶದ ಬಹುದೊಡ್ಡ ದುರಂತ. ಸ್ವಾತಂತ್ರ್ಯ ಹೋರಾಟದ ಯಾವ ಗಂಧ-ಗಾಳಿಯ ಸೋಂಕಿಲ್ಲದ ವರ್ತಮಾನದ ಕೆಲ ರಾಜಕಾರಣಿಗಳು ಬ್ರಹ್ಮಾಂಡ ಭ್ರಷ್ಟ ವ್ಯವಸ್ಥೆಯನ್ನು ರೂಪಿಸುವ ಮೂಲಕ ‘ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೇ ತಪ್ಪಾಯಿತಲ್ಲ’ ಎನ್ನುವ ಹತಾಶೆಯ ಭಾವನೆ ಶ್ರೀಸಾಮಾನ್ಯರಲ್ಲಿ ಮೂಡುವಂತೆ ಮಾಡಿದ್ದಾರೆ.

ರಾಜಕಾರಣ ಎನ್ನುವುದು ಒಂದು ಮೌಲಿಕವಾದ ಕೆಲಸ ಎನ್ನುವ ಭಾವನೆ, ಅಭಿಪ್ರಾಯಗಳನ್ನು ದಾಟಿ ನಾವು ಹಿಂದೆ ಹೊರಳಿ ನೋಡಲಾಗದಷ್ಟು ದೂರವನ್ನು ಕ್ರಮಿಸಿದ್ದೇವೆ. ಗಂಭೀರವಾದ ತಾತ್ವಿಕವಾದ, ಬದ್ಧತೆಯನ್ನಿಟ್ಟುಕೊಂಡು ಮಾಡಬಹುದಾದ ರಾಜಕಾರಣ ಮತ್ತು ರಾಜಕಾರಣಿಗಳನ್ನು ನೋಡುವುದೇ ತೀರಾ ಅಪರೂಪ ಮತ್ತು ದುಸ್ತರ ಎನ್ನುವ ಸಂದರ್ಭದಲ್ಲಿ ಇವತ್ತು ನಾವಿದ್ದೇವೆ. ಮತದಾರ ಇಂದು ಸರಿ ತಪ್ಪುಗಳ, ಯುಕ್ತಾಯುಕ್ತತೆಯ ತೀರ್ಮಾನಗಳ ಬಗ್ಗೆಯೇ ಗೊಂದಲದಲ್ಲಿದ್ದಾನೆ. ಒಳ್ಳೆಯವರಿಗೆ ಇದು ಕಾಲವಲ್ಲ ಎಂದು ಹೇಳುತ್ತಲೇ ಮತದಾನ ಮಾಡಬೇಕಾದ ಸಂದಿಗ್ದತೆಯ ನಡುವೆ, ಎಂಥವನನ್ನು ನಮ್ಮ ಜನನಾಯಕನನ್ನಾಗಿ ಆಯ್ಕೆ ಮಾಡಬೇಕು ಎನ್ನುವುದೇ ಬಹುದೊಡ್ಡ ಸಮಸ್ಯೆಯಾಗಿದೆ.

ಹಿಂದೊಮ್ಮೆ ಫಿಲಿಪೈನ್ಸ್ ದೇಶದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಅನೇಕರು ಕಣದಲ್ಲಿದ್ದರೂ ಮುಖ್ಯವಾಗಿ ಸ್ಪರ್ಧೆ ಇದ್ದದ್ದು ಚಿತ್ರನಟ ಜೊಶೆಫ್ ಎಷ್ಟ್ರಾಡಾ ಮತ್ತು ರೇ ಬ್ಯಾಗೆತ್ ಸಿಂಗ್ ನಡುವೆ. ಬ್ಯಾಗೆತ್ ಸಿಂಗ್ ಚುನಾವಣಾ ಭಾಷಣವೊಂದರಲ್ಲಿ ಜೊಶೆಫ್ ಎಷ್ಟ್ರಾಡಾ ಅವರ ಪೆದ್ದುತನ, ಮೊಂಡುತನ ಮತ್ತು ಇತರೆ ದೌರ್ಬಲ್ಯಗಳನ್ನು ಕುರಿತಂತೆ ತುಂಬಿದ ಸಭೆಯಲ್ಲಿ ಭಾಷಣ ಮಾಡುತ್ತಾ ಹೀಗೆ ಕೇಳಿದನಂತೆ

‘ಅತ್ಯಂತ ದೊಡ್ದ ವ್ಯಭಿಚಾರಿ ಯಾರು..? ಜನರು ಜೋರಾಗಿ
‘ಜೊಶೆಫ್ ಎಷ್ಟ್ರಾಡಾ’
‘ಮಹಾ ಜೂಜುಕೋರ ಯಾರು..? ಎಂದು ಕೇಳಿದ್ದಕ್ಕೆ  ಜನ ಇನ್ನೂ ಜೋರಾಗಿ
‘ಜೊಶೆಫ್ ಎಷ್ಟ್ರಾಡಾ’ ಎಂದರಂತೆ
‘ದೊಡ್ಡ ಪೆದ್ದ ಯಾರು..?’
‘ಜೊಶೆಫ್ ಎಷ್ಟ್ರಾಡಾ’
‘ಹಾಗಾದರೆ ನೀವು ಮತ ಹಾಕುವುದು ಯಾರಿಗೆ..?’ ಎಂದಾಗ ಜನ ಅಷ್ಟೇ ಜೋರಾಗಿ
‘ಜೊಶೆಫ್ ಎಷ್ಟ್ರಾಡಾ’ ಎಂದರಂತೆ

ನಮ್ಮ ಜನರ ಪರಿಸ್ಥಿತಿಯೂ ಹೀಗೇ ಆಗಿದೆ. ಅಭ್ಯರ್ಥಿಯ ಪೂರ್ವಾಪರಗಳ ಬಗ್ಗೆ ಪೂರ್ಣ ಅರಿವಿದ್ದರೂ ಚುನಾವಣೆಯ ಸಂದರ್ಭದಲ್ಲಿ ಅವರು ಸಮೂಹ ಸನ್ನಿಗೆ ಒಳಗಾಗುತ್ತಿದ್ದಾರೆ. ತೀರಾ ಸಾತ್ವಿಕನಾದವನು, ಶುದ್ಧ ಹಸ್ತನು ರಾಜಕೀಯ ಅಖಾಡದಲ್ಲಿ ಇರುವದನ್ನು ಸದ್ಯದ ರಾಜಕೀಯ ಪರಿಸರವೇ ಸಹಿಸುವದಿಲ್ಲ ಎನ್ನುವ ವಾಸ್ತವವನ್ನು ನಾವು ಮರೆಯುವದಾದರೂ ಹೇಗೆ? ಒಂದು 1ಅವಧಿಗೆ ಎಂ.ಎಲ್.ಎ. ಆದರೂ ಸಾಕು ಕೋಟಿಗಟ್ಟಲೆ ಹಣ ಕಮಾಯಿಸುವ ಇವರ ದುಡಿಮೆಯಾದರೂ ಎಂಥದ್ದು? ಎನ್ನುವ ಪ್ರಶ್ನೆ ನಮ್ಮ ಜನಸಾಮಾನ್ಯನ ಒತ್ತಡದ ಬದುಕಿನ ನಡುವೆ ಉದ್ಭವವಾಗುವುದೇ ಇಲ್ಲ. ಇದೇ ಪರಮಭ್ರಷ್ಟ ರಾಜಕಾರಣಿಗಳಿಗೆ ವರವಾಗುತ್ತಿದೆ. ಇಂದು ಬಹುತೇಕ ರಾಜಕಾರಣಿಗಳು ನಮ್ಮ ಜನಸಮುದಾಯವನ್ನು ದುಡಿಮೆಯಿಂದ ವಂಚಿಸುವ ಜೊತೆಗೆ ಅವರನ್ನು ಆಲಸಿಗಳನ್ನಾಗಿಸುವ, ಪರಾವಲಂಬಿ ಪ್ರಜೆಗಳನ್ನಾಗಿಸುವ ಸಕಲ ಷಂಡ್ಯಂತ್ರಗಳನ್ನೂ ಹೊಸೆಯುತ್ತಿದ್ದಾರೆ. ಆ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ದಿವಾಳಿ ಎಬ್ಬಿಸುವ ದಿವಾಳಿಕೋರತನದ ನೀತಿ ಇಂದಿನ ರಾಜಕಾರಣಿಗಳ ತಲೆ ಹೊಕ್ಕಂತಿದೆ.ಇಂದು ನಾವು ಯಾರಿಗೆ ಮತ ನೀಡಬೇಕು ಎನ್ನುವುದೇ ಅತ್ಯಂತ ಜಟಿಲವಾದ ಪ್ರಶ್ನೆ. ಎರಡು ದಶಕಗಳ ಹಿಂದೆ ನಮ್ಮ ಎದುರಲ್ಲಿ ಕೊನೆಯ ಪಕ್ಷ ಆಯ್ಕೆಗಳಾದರೂ ಇದ್ದವು. ಈಗ ಹಾಗಿಲ್ಲ. ನೀವು ಎಷ್ಟೇ  ವಿವೇಚಿಸಿ ಮತದಾನ ಮಾಡಿದರೂ ನಿಮ್ಮ ಜನನಾಯಕ ಬ್ರಹ್ಮಾಂಡ ಭ್ರಷ್ಟ ಎನ್ನುವುದು ಆಯ್ಕೆಯಾದ ಕೆಲವೇ ತಿಂಗಳಲ್ಲಿ ಬಟಾಬಯಲಾಗಿ ನಾವೇ ಪಶ್ಚಾತ್ತಾಪ ಪಡುವ ಸ್ಥಿತಿ ಎದುರಾಗುತ್ತದೆ.

ಪ್ಲೇಟೊ ಮೊದಲಾದ ದಾರ್ಶನಿಕರು ಆದರ್ಶ ರಾಜ್ಯದ ನಿರ್ಮಾಣದ ಬಗ್ಗೆ ಮಾತನಾಡುವಾಗ ರಾಜಕೀಯ ನಾಯಕರಾಗುವವರು ತತ್ವಜ್ಞಾನಿಗಳಾಗಿರಬೇಕು ಇಲ್ಲವೇ ತತ್ವಜ್ಞಾನಿಗಳಾದವರು ರಾಜರಾಗಬೇಕು ಎಂದಿದ್ದರು. ಇಂಥಾ ಯಾವುದೇ ಮಾನದಂಡಗಳು ನಮ್ಮಲ್ಲಿಲ್ಲ. ಅವನು ಶತಪಟಿಂಗ, ಶತದಡ್ಡ ಇಂಥಾ ನೂರಾರು ಶತ ಅನಿಷ್ಟಗಳ ನಡುವೆಯೂ ಆತ ಆಯ್ಕೆಯಾಗುವ ಸಾಧ್ಯತೆಗಳಿವೆ. ನಮ್ಮಲ್ಲಿ ರಾಜಕಾರಣಿಯಾಗಲು ಕನಿಷ್ಟ ವಿದ್ಯಾರ್ಹತೆ ಇಲ್ಲ, ನಿವೃತ್ತಿಯ ವಯಸ್ಸಿಲ್ಲ. ಅವನಿಗೆ ನಡೆದಾಡಲಾಗದಿದ್ದರೂ ಅವನು ನಮ್ಮ ಜನನಾಯಕ. ಕೋಟಿ ಕೋಟಿ ಕಮಾಯಿಸಿದರೂ ಯಾರೂ ಕಿಮಿಕ್ ಅನ್ನುವಂತಿಲ್ಲ. ಇಂಥಾ ಪರಿಸರದ ನಡುವೆ ರಾಜಕಾರಣಿಯಾಗುವುದು ಯಾರಿಗೆ ಬೇಡ? ಜಾಗತೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಸೂತ್ರಕ್ಕೆ ಅಳವಡಿಕೆಯಾದಂತೆ ಇಂದಿನ ರಾಜಕಾರಣದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸುವಂತಾಗಿದೆ. ಎಲ್ಲಾ ವಲಯಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಆತನ ಅನುಭವವನ್ನು ಪರಿಶೀಲಿಸಲಾಗುತ್ತದೆ. ಇಲ್ಲಿ ಅಂಥಾ ಯಾವ ಅನುಭವವೂ ಬೇಕಿಲ್ಲ. ತಂದೆ ಇಲ್ಲವೇ ತಾಯಿ ಈಗಾಗಲೇ ರಾಜಕಾರಣಿಯಾಗಿ ಅಪಾರ ಪ್ರಮಾಣದ ಆಸ್ತಿಯನ್ನು ಸಂಪಾದಿಸಿರುವದೇ ಅವರ ಮಕ್ಕಳ ರಾಜಕೀಯ ಪ್ರವೇಶಕ್ಕಿರುವ ವಿಶೇಷ ಅರ್ಹತೆ. ಜಾತಿ, ಧರ್ಮ, ಹಣ, ಹೆಂಡ ಮುಂತಾದವುಗಳನ್ನೇ ಆಧರಿಸಿ ರಾಜಕೀಯ ಅಖಾಡಕ್ಕೆ ಧುಮುಕುವವರಿಂದ ಮತದಾರ ನಿರೀಕ್ಷಿಸುವುದಾದರೂ ಏನನ್ನು? ಸದ್ಯದಲ್ಲೇ ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವವರ ಪೈಕಿ ಅದೆಷ್ಟು ಜನರ ಮೇಲೆ ಅಪರಾಧದ ಪ್ರಕರಣಗಳಿವೆಯೋ ಅವರೇ ಮುಟ್ಟಿ ನೋಡಿಕೊಳ್ಳಬೇಕು.

ಇಂದು ರಾಜಕೀಯ ವಿದ್ಯಮಾನಗಳ ಬಗ್ಗೆ ತೀರಾ ಗಹನವಾದ ತಿಳುವಳಿಕೆಯಿದ್ದು ರಾಜಕೀಯ ಪ್ರವೇಶ ಮಾಡುವವರು ಅಪರೂಪವಾಗುತ್ತಿದ್ದಾರೆ. ರಾಜಕೀಯ ಸತ್ತೆಯ ಭಾಗವಾಗಿ ಗೂಟದ ಕಾರಲ್ಲಿ ಮೆರೆಯುವ ಖಯಾಲಿ, ಮಕ್ಕಳು ಮೊಮ್ಮಕ್ಕಳು ಅನಾಮತ್ತಾಗಿ ದುಡಿಯದೇ ಬದುಕುವ ಹಾಗೆ ಹಣ ಕೂಡಿ ಹಾಕುವ ಹಪಾಪಿತನ, ಕುರ್ಚಿಗಾಗಿ ಕಿತ್ತಾಟ, ಹುಚ್ಚಾಟ ಮತ್ತೆಲ್ಲಾ ಆಟಗಳನ್ನು ಆಡುವದೇ ರಾಜಕಾರಣ ಎಂದು ಬಗೆದಿರುವ ತೀರಾ ಹಗುರಾಗಿರುವ ರಾಜಕೀಯ ನಾಯಕರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಸಂಸತ್ ಭವನದಲ್ಲಿ ಪೆಪ್ಪರ್ ಸ್ಫ್ರೇ ಮಾಡುವಷ್ಟು ಕನಿಷ್ಟ ಮಟ್ಟಕ್ಕೂ ಇಳಿಯುವವರೂ ನಮ್ಮ ನಾಯಕರೇ! ಅನೇಕ ಬಗೆಯ ಕ್ರಿಮಿನಲ್ ಆರೋಪಗಳನ್ನು ಹೊತ್ತವರು ಕೂಡಾ ತಮಗೊಂದು ಅವಕಾಶ ಕೊಡಿ ಎಂದು ಮತ ಕೇಳುವುದು ಬಹುಷ: ಈ ದೇಶದಲ್ಲಿ ಮಾತ್ರವೇ ಸಾಧ್ಯ. ಇಂಥವರೇ ಹೆಚ್ಚಾಗಿರುವ ಸದ್ಯದ ರಾಜಕೀಯ ಸಂದರ್ಭದಲ್ಲಿ ಜನ ಸಾಮಾನ್ಯನಿಗೆ ಎಂಥವನಿಗೆ ಮತ ಚಲಾಯಿಸಬೇಕು ಎನ್ನುವುದು ಬಹುದೊಡ್ಡ ತೊಡಕಾಗಿದೆ.

ಇಂತಹ ವಿಷಮ ಸ್ಥಿತಿಯಲ್ಲಿ ಯಾವುದೋ ಒಬ್ಬ ರಾಜಕಾರಣಿ ಕೊಡುವ ಒಂದಷ್ಟು ಚಿಲ್ಲರೆ ಹಣ, Vote1ಒಂದು ಮದ್ಯದ ಬಾಟಲ್ ಗೆ ನಮ್ಮ ಮತವನ್ನು, ನಮ್ಮತನವನ್ನು ಒತ್ತೆಯಿಟ್ಟು ರಾಜ್ಯವನ್ನು ಲೂಟಿಕೋರರ ಕೈಗೆ ಕೊಡುವುದು ಬೇಡ. ಸಾರಾಸಾರ ವಿವೇಚಿಸಿ ಮತ ಚಲಾಯಿಸೋಣ. ನಾವು ತೆಗೆದುಕೊಳ್ಳುವ ತೀರ್ಮಾನದಲ್ಲಿಯೇ ಈ ದೇಶದ ಭವಿಷ್ಯ ಅಡಗಿದೆ. ಭ್ರಷ್ಟರಿಗೆ, ಭಂಡರಿಗೆ, ಹುಸಿ ಭರವಸೆ ನೀಡುವವರಿಗೆ, ಆರಿಸಿ ಬಂದದ್ದೇ ತಮ್ಮ ಕಾರ್ಯಕ್ಷೇತ್ರವನ್ನು ಮರೆತು ರಾಜಧಾನಿಯಲ್ಲಿಯೇ ಠಿಕಾಣಿ ಹೂಡುವವರಿಗೆ, ತನ್ನ ಸಂಬಂಧಿಗಳ, ಜಾತಿಯ ಜನರ ಉದ್ದಾರಕ್ಕಾಗಿಯೇ ತಾನು ಆಯ್ಕೆಯಾಗಿರುವೆ ಎನ್ನುವ ಹಾಗೆ ಈಗಾಗಲೇ ಒಂದು ಅವಧಿಗೆ ಅಧಿಕಾರ ಮೆರೆದವರಿಗೆ ಮತ ಬೇಡ. ಒಂದು ಮತವೂ ನಿರ್ಣಯಕವಾಗಲಿದೆ. ‘ಎಲ್ಲರೂ ಅವರೇ ಇಲ್ಲಿ ಯಾರೂ ನೆಟ್ಟಗಿಲ್ಲ’ ಎಂದು ಮತ ಚಲಾಯಿಸದೇ ಇರುವವರಿಗಿಂತಲೂ ತಮಗೆ ಸೂಕ್ತ ಎನಿಸಿದವರಿಗೆ ಮತ ನೀಡುವಲ್ಲಿಯೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಚಲನಶೀಲತೆ ಅಡಕವಾಗಿದೆ.

ಹೊಡಿ ಚಕ್ಕಡಿ : ಬೇವಿನಗಿಡದ ಅವರ ಜೀವಪರ ಕತೆಗಳು


– ಡಾ.ಎಸ್.ಬಿ. ಜೋಗುರ


 

ಬಸು ಬೇವಿನಗಿಡದ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ದುಡಿದಿರುವರಾದರೂ ಕತೆ ಅವರಿಗೆ ಹೃದ್ಯವಾದ ಭಾಗವಾಗಿದೆ. ಇಲ್ಲಿಯವರೆಗೆ ನಾಲ್ಕು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಅವರು ಸಂಕಲನದಿಂದ ಸಂಕಲನಕ್ಕೆ ಮಾಗುತ್ತ ಬಂದ ರೀತಿಯನ್ನು ಅವರ ಕತೆಗಳೇ ಮನದಟ್ಟು ಮಾಡಿಕೊಡುತ್ತವೆ. ಎಷ್ಟೇ  ಖ್ಯಾತನಾಮರಾದವರ ಎಲ್ಲ ಕತೆಗಳು ಕೂಡಾ ಒಂದೇ ಎತ್ತರವನ್ನು ತಲುಪಿರುವುದಿಲ್ಲ. ಈ ಮಾತಿಗೆ ಟಾಲಸ್ಟಾಯ್ ಕೂಡಾ ಹೊರತಾಗಿಲ್ಲ ಎನ್ನುವ ಕಟುವಾಸ್ತವದೊಂದಿಗೆ ’ಹೊಡಿ ಚಕ್ಕಡಿ’ ಎನ್ನುವ ಈಚೆಗಿನ ಅವರ ಕಥಾ ಸಂಕಲನವನ್ನು ಪ್ರವೇಶಿಸುವದು ಒಳಿತು. ಓದುವ ಮುನ್ನವೇ ಶರಾ ಎಳೆದು ಬಿಡುವ ಭಯಂಕರ ವಿಮರ್ಶಾ ಪಂಡಿತರ ದೊಡ್ದ ಸಮೂಹದಲ್ಲಂತೂ ನಾನು ಬರುವದಿಲ್ಲ ಎನ್ನುವ ಸಣ್ಣ ಸಮಾಧಾನವಿದೆ.

’ಹೊಡಿ ಚಕ್ಕಡಿ’ ಎನ್ನುವ ಈ ಸಂಕಲನದಲ್ಲಿ ಒಟ್ಟು 12 ಕತೆಗಳಿವೆ. ಇವುಗಳಲ್ಲಿ ಮುಕ್ಕಾಲು ಭಾಗ ಕತೆಗಳು ಗ್ರಾಮೀಣ ಪರಿಸರದ ಸಾಂಸ್ಕೃತಿಕ ಆಯಾಮಗಳನ್ನು ಅನಾವರಣಗೊಳಿಸುವ ಯತ್ನ ಮಾಡುತ್ತವೆ. ಯಾವ ಕತೆಯೂ ಸೆಟೆ ಹಿಡಿದು ಕುಳಿತು ಬರೆದಂತಿಲ್ಲ. ಹಾಗೆಯೇ ಎಲ್ಲೂ ಕತೆಗಾರ ಮುಂದೆ ಹೋಗಿ ಮತ್ತೆ ಹಿಂದೆ ಬರುವ, ಗೊಂದಲಕ್ಕೆ ಬೀಳುವ ಪ್ರಮೆಯವನ್ನು ಸೃಷ್ಟಿಸಿಕೊಂಡಿಲ್ಲ. ಅಷ್ಟಕ್ಕೂ ಬೇವಿನಗಿಡದ ನೆನ್ನೆ ಮೊನ್ನೆ ಕತೆ ಬರೆಯಲು ಆರಂಭಿಸಿದವರಲ್ಲ. ಆ ಮಾರ್ಗದಲ್ಲಿಯ ಅವರ ಅನುಭವವೇ ಅವರ ಬರವಣಿಗೆಯಲ್ಲಿ ಅಂಥಾ ಶಕ್ತಿಯನ್ನು ತಂದು ಕೊಟ್ಟಿದೆ. ಗ್ರಾಮೀಣ ಪರಿಸರವೇ ಹಾಗೆ. ಇಲ್ಲಿಂದ ನೀವು ಎಷ್ಟೇ ಆಕೃತಿಗಳನ್ನು ಕತೆಗೆ ಎತ್ತಿಕೊಂಡರೂ ಅದು ಹಳತೆನಿಸುವದಿಲ್ಲ. ಆದರೆ ಕತೆಗಾರನ ಕತೆ ಕಟ್ಟುವ ಏಕಾಗ್ರತೆ, ತಾಳ್ಮೆ, ಶೈಲಿಯ ಮೆಲೆ ಅದರ ಅಪ್ಯಾಯಮಾನತೆ ಅಡಕವಾಗಿರುತ್ತದೆ. ಈ ’ಹೊಡಿ ಚಕ್ಕಡಿ’ ಎನ್ನುವ ಕತೆಯನ್ನೇ ತೆಗೆದುಕೊಳ್ಳಿ. ಚಕ್ಕಡಿ ಎನ್ನುವುದೇ ಒಂದು ನಿರಂತರತೆಯ ಸಂಕೇತ ಆಗಿರುವಂತೆಯೇ ಪರಿವರ್ತನೆಯ ಪ್ರತೀಕವೂ ಹೌದು. ಚಕ್ಕಡಿಯಿಂದ ಟ್ರ್ಯಾಕ್ಟರಿಗೆ ಶಿಪ್ಟ್ ಆಗುವ ಕ್ರಮದಲ್ಲಿಯೇ ಒಂದು ಬಗೆಯ ಸ್ಥಿತ್ಯಂತರವಿದೆ. ಇಲ್ಲಿ ಜಗದೀಶ ರುಮಾಲು ಸುತ್ತುವಲ್ಲಿ ತೋರುವ ಹಂಬಲವೂ ಅಷ್ಟೇ. ಹೇಗೆ ಈ ಚಕ್ಕಡಿಯ ಗಾಲಿ ಕಾಲನ ಪ್ರತಿಮೆಯಾಗಿ ಉರುಳುತ್ತಲೇ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎನ್ನುವುದು ಒಂದು ಕಡೆಯಾದರೆ ಕೊನೆಗೂ ಉಳಿವುದು ಕಳೆದುಕೊಂಡ ಹಳಹಳಿಕೆ ಮಾತ್ರ ಎನ್ನುವ ಧ್ವನಿಯೂ ಅಷ್ಟೇ  ಮುಖ್ಯ. ಶೀರ್ಷಿಕೆಯ  ಕತೆ ’ಹೊಡಿ ಚಕ್ಕಡಿ’ ಈ ಕಾಲದ ಎಲ್ಲ ಗ್ರಾಮಾಂತರಗಳಿಗೆ ಪ್ರಾತಿನಿಧಿಕ ಎನ್ನುವಂತಿದೆ.

’ಅಮೃತವ ಕಡೆವಲ್ಲಿ’ ಎನ್ನುವ ಕತೆಯಲ್ಲಿ ಮಧ್ಯಮ ಕುಟುಂಬವೊಂದರಲ್ಲಿ ಬಹುತೇಕವಾಗಿ ಇರಬಹುದಾದ ರೋಗಗ್ರಸ್ಥ ಅಪ್ಪ, ಮತ್ತವನ ಹಠಮಾರಿತನ, ಶಠಮಾರಿತನದ ಗುಣಗಳು ಪಕ್ಕಾ ಗಂಗಾಧರನ ಅಪ್ಪನಂತೆಯೇ ಇರುತ್ತವೆ. ಮತ್ತೆ ಮತ್ತೆ ಕಾಳಜಿ ತೋರಿಸುವವರ ಮೇಲೆಯೇ ಸಿಟ್ಟು ತೋರಿಸುವ ಆ ಮುದುಕನ ಮನಸು ಮಗುವಿನದೂ ಹೌದು. ಆದರೆ ಮಾತು ಮಾತ್ರ ಹಾಗಲ್ಲ. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಅವನ ಬಾಯಿಂದ ಬರೋ ಈ ಮಾತುಗಳು ನಮ್ಮ hodi-chakkadiಮನೆಯ ಮುದುಕನ ಮಾತುಗಳೂ ಹೌದು ಎನಿಸುವುದೇ ಒಳ್ಳೆಯ ಕತೆಯ ಲಕ್ಷಣ. ’ದೊಡ್ಡ ದವಾಖಾನ್ಯಾಗ ನನ್ನ ಸರಿ ತೋರಿಸೋದು ಬಿಟ್ಟು ಇಲ್ಲಿ ಸಾಯ್ಲಿ ಅಂತ ಹಾಕ್ಯಾರು’ ಅನ್ನೋ ಮಾತು ನಮಗೆ ಹೊಸತೆ..? ’ಹಸಿವೆಯೇ ನಿಲ್ಲು ನಿಲ್ಲು’ ಕತೆ ಯಲ್ಲಿಯೂ ಕತೆಗಾರ ಜೀವಪರವಾಗಬೇಕಾದ ಬದುಕಿನ ವಾಸ್ತವ ಆಕಸ್ಮಿಕವಾಗಿ ಬೆನ್ನು ತೊರುವ ಬಗೆಯನ್ನು  ಧಾರವಾಡದ ಶ್ರೀನಗರದಲ್ಲಿರುವ ಹಾಸ್ಟೇಲ್ ಒಂದು ರಾತ್ರೋರಾತ್ರಿ ಅಧ್ಯಾತ್ಮಿಕ ಕೇಂದ್ರವಾಗಿ ಪರಿವರ್ತಿತವಾಗಿ ಆಲೂರನ ಮನ:ಸ್ಥಿತಿಯನ್ನು ಅನಾವರಣ ಮಾಡುತ್ತದೆ. ’ಬಾಡಿಗೆ ಲೇಖಕ’ ಸಮಕಾಲೀನ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯಗಳಲ್ಲಿರುವ ಅಕಾಡೆಮಿಕ್ ಮಟ್ಟವನ್ನು ಒಳಗಿಳಿದು ಅಣುಕಿಸುವಂತಿದೆ. ಹಾಗೆಯೇ ’ಸುಣ್ಣದ ನೀರು’ ಎನ್ನುವ ಕತೆ ಕೂಡಾ ತೀರಾ ಚಿಲ್ರೆ ಕಾರಣಗಳಿಗಾಗಿ  ಕೌಟುಂಬಿಕ ವಿಘಟನೆಗಳು ತಲೆ ಎತ್ತುವ ರೀತಿಯನ್ನು ಚಿತ್ರಿಸುತ್ತದೆ. ಈ ಕತೆಯಲ್ಲಿ ಬರುವ ಗಂಡ-ಹೆಂಡತಿ ಪ್ರಚಲಿತ ಸಾಮಾಜಿಕ ಬದುಕಿನ ನಿದರ್ಶನವೇ ಆಗಿದ್ದಾರೆ. ಈ ಸಂಕಲನದ ಇನ್ನೊಂದು ಉತ್ತಮ ಕತೆ ’ಹಳೆಯ ಟ್ರಂಕು’. ಈ ಟ್ರಂಕು ಬರೀ ಬಸವಣ್ಣೆವ್ವನ ಹೊಲದ ಕಾಗದ ಪತ್ರಗಳಿಗೆ ಸಂಬಂಧಿಸಿದ್ದಲ್ಲ. ನಮ್ಮ ಗ್ರಾಮೀಣ ಪರಂಪರೆಯ ಪಳಯುಳಿಕೆಯೂ ಹೌದು. ’ಹಳೆಯ ಟ್ರಂಕು’ ಎನ್ನುವ ಪದವೇ ನಮ್ಮನ್ನು ಒಂದು ಕಾಲದಲ್ಲಿ ಮನೆಯ ಮೂಲೆಯಲ್ಲಿದ್ದು ಎಲ್ಲವನ್ನೂ ಅಡಗಿಸಿಟ್ಟ ಗೊಡೌನ್ ಥರಾ ಕೆಲಸ ಮಾಡಿದ್ದನ್ನು ನೆನಪಿಸುತ್ತದೆ. ಈ ಟ್ರಂಕನ್ನು ಹೇಗೆ ಅವಳು ಜೀವನಕ್ಕಿಂತಾ ಜತನ ಮಾಡಿದ್ದಳು ಎನ್ನುವುದನ್ನು  ಕತೆಗಾರ ಚೆನ್ನಾಗಿ ನಿರೂಪಿಸಿದ್ದಾರೆ. ಮನಸಿಲ್ಲದ ಮನಸಿನಿಂದ ಮಗನ ಸಾಲ ಹರಿಯುವಲ್ಲಿ ಇದು ನೆರವಾಗುತ್ತದೆ ಎನ್ನುವುದೇ ಬಸವಣ್ಣೆವ್ವಗೆ ಬಾಗ್ಯವಿಧಾತ ಆಗಿ ಪರಿಣಮಿಸುವ ಆ ಟ್ರಂಕು ಒಂದು ಸುಂದರವಾದ ಪ್ರತಿಮೆ.

ಈ ಸಂಕಲನದ ಇನ್ನೊಂದು ವಿಶೇಷ ಇಲ್ಲಿರುವ ಬಹುತೇಕ ಕತೆಗಳು ಡ್ರೈ ಆಗಿಲ್ಲದಿರುವುದೇ ಸಮಾಧಾನ. ಬಹುತೇಕರ ಬದುಕಿನ ಭಾಗವೇ ಆಗಿರುವ ಹತ್ತಾರು ಆಕೃತಿಗಳು ಇಲ್ಲಿ ಕತೆಯಾಗಿ ಮೈತಳೆದಿವೆ. ಹೀಗಾಗಿ ಕತೆಗಾರ ಯಾವುದೋ ಒಂದು ಆದರ್ಶ ಲೋಕದಲ್ಲಿ ವಿಹರಿಸುವವನಂತೆ ಪ್ರತಿಮೆಗಳನ್ನು ಬಳಸುವದಾಗಲೀ ಓದುಗನಿಗೆ ಅಪರಿಚಿತವಾದ ಅಸಂಗತವಾದ ಲೋಕವೊಂದನ್ನು ಬಿಚ್ಚಿಡುವದಾಗಲೀ ಮಾಡದೇ ಯತಾರ್ಥವಾಗಿ ಕತೆ ಹೇಳುತ್ತಾ ಹೋಗುತ್ತಾನೆ. ನಾವು ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಕೇಳುತ್ತಿದ್ದ ’ಹೀಂಗ ಒಂದೂರಲ್ಲಿ.. ’ ಎನ್ನುವ ಕ್ರಮದಲ್ಲಿಯೇ ಕತೆ ಕೇಳಿದ ಅನುಭವ ಆಗುವ ರೀತಿಯೇ ಈ ಸಂಕಲನದ  ಹೆಚ್ಚುಗಾರಿಕೆ. ಕಥನ ಕ್ರಮವನ್ನು ಉದ್ದೇಶಪೂರ್ವಕವಾಗಿ ಜಟಿಲಗೊಳಿಸುವದನ್ನೇ ತಂತ್ರಗಾರಿಕೆ ಎಂದು ಬಗೆದು, ಕತೆ ಬರೆಯುವವನಿಗೆ ಮಾತ್ರ ಅರ್ಥವಾಗುವ ಹಾಗೆ ಬರೆಯುವ ಕೆಲ  ವಿಖ್ಯಾತ ಕತೆಗಾರರು ನಮ್ಮ ನಡುವೆ ಇದ್ದಾರೆ. ಅವರಿಗಿಂತಲೂ ಬೇವಿನಗಿಡದ ಅವರ ಕತೆಗಳು ಎಷ್ಟೋ ಪಾಲು ಉತ್ತಮವಾದವುಗಳು. ’ಹೊಡಿ ಚಕ್ಕಡಿ’ ಎನ್ನುವ ಈ ಸಂಕಲನ ಬಸು ಬೇವಿನಗಿಡದ ಗ್ರಾಮೀಣ ಸಾಂಸ್ಕೃತಿಕ ಲೋಕದ ಹಾಡು-ಪಾಡುಗಳನ್ನು ಬಳಸಿಕೊಂಡು ಸಶಕ್ತವಾಗಿ ಮತ್ತು ಸಾತ್ವಿಕವಾಗಿ ಕತೆ ಕಟ್ಟಬಲ್ಲರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ

ವರ್ತಮಾನ.ಕಾಮ್‌ನ ಓದುಗರೇ ಮತ್ತು ಸ್ನೇಹಿತರೇ,

ಆಮ್ ಆದ್ಮಿ ಪಕ್ಷವು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು AAP-BLR-Rural-MP-candidateತಮಗೆಲ್ಲಾ ತಿಳಿದಿರಬಹುದು. ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ನ ಕೆಲವು ಚಟುವಟಿಕೆಗಳು ಕುಂಠಿತವಾಗಬಹುದು ಎಂಬ ಸಂಶಯಗಳಿದ್ದವು. ಆದರೆ, ಹಲವು ಸ್ನೇಹಿತರು ಈ ಸಂದರ್ಭದಲ್ಲಿ ಇದರ ಕೆಲಸಗಳನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಹಾಗಾಗಿ, ಎಂದಿನಂತೆ ನಮಗೆ ಲೇಖನಗಳು ಬಂದ 1-3 ದಿನಗಳಲ್ಲಿಯೇ ಅವನ್ನು ಪ್ರಕಟಿಸುವ ಕೆಲಸಗಳು ನಡೆಯುತ್ತವೆ.

ಇನ್ನು ಈ ಚುನಾವಣೆಗಳ ಬಗ್ಗೆ ಹೇಳುವುದಾದರೆ, ನನ್ನ ವೈಯಕ್ತಿಕ ಜವಾಬ್ದಾರಿ ಈಗ ಹಲವು ಪಟ್ಟು ಹೆಚ್ಚಿದೆ. ಸಾದ್ಯವಾದಲ್ಲಿ ನಿಮ್ಮೆಲ್ಲರ ಸಲಹೆ-ಸಹಕಾರ-ಬೆಂಬಲವೂ ಬೇಕಿದೆ. ಏನೇ ಆಗಲಿ, ಈ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಗಂಭೀರವಾದ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ. ಯಾವುದನ್ನು ಈವತ್ತಿನ ಸಂದರ್ಭದಲ್ಲಿ ಅವಾಸ್ತವ ಎನ್ನುತ್ತಿದ್ದರೊ ಅದನ್ನು ಈ ಬಾರಿ ಆಮ್ ಜನತೆ ನಿಜ ಮಾಡಲಿದ್ದಾರೆ ಎನ್ನುವ ವಿಶ್ವಾಸ ನನ್ನದು. ಕಳೆದ ಹಲವಾರು ದಶಕಗಳಿಂದ ಭ್ರಷ್ಟಾಚಾರ, ಅಕ್ರಮ, ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ವಂಶಪಾರಂಪರ್ಯ ರಾಜಕಾರಣದಿಂದ ನಲುಗಿದ್ದ ನಮ್ಮ ಈ ನಾಡು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬದಲಾಗಲಿದೆ. ಆ ನಿಟ್ಟಿನಲ್ಲಿ ಆಶಾವಾದಿಗಳಾಗಿರುವ ಬಹುತೇಕ ಜನ ಕ್ರಿಯಾಶೀಲರಾಗಿ ದುಡಿಯುತ್ತಿರುವುದನ್ನು ನಾನು ಪ್ರತಿದಿನ ನೋಡುತ್ತಿದ್ದೇನೆ ಮತ್ತು ಅನುಭವಿಸುತ್ತಿದ್ದೇನೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಹುಶಃ ರಾಜ್ಯದಲ್ಲಿಯೇ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ, ದೊಡ್ಡ ಕ್ಷೇತ್ರ. Bangalore-Rural-MP-Constituencyರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಮತ್ತು ಕುಣಿಗಲ್ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಮತು ಆನೇಕಲ್ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬಂದರೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮತ್ತು ಮಾಗಡಿ ಕ್ಷೇತ್ರಗಳು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತವೆ; ಕುಣಿಗಲ್ ಕ್ಷೇತ್ರ ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ನಿಮ್ಮಲ್ಲಿ ಯಾರಾದರೂ ಈ ಕ್ಷೇತ್ರಗಳ ಮತದಾರರಾಗಿದ್ದಲ್ಲಿ ಅಥವ ತಿಳಿದವರು ಗೊತ್ತಿದ್ದಲ್ಲಿ ದಯವಿಟ್ಟು ಅಂತಹವರು ನಮ್ಮ ಚುನಾವಣಾ ಪ್ರಚಾರಕ್ಕೆ ನೆರವಾದರೆ ಬಹಳ ಅನುಕೂಲವಾಗುತ್ತದೆ. ಈಗಾಗಲೆ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು, ಕೆಲವರು ತಮ್ಮ ನೌಕರಿಗಳಿಗೆ ರಾಜೀನಾಮೆ ನೀಡಿ, ಮತ್ತೆ ಕೆಲವರು ರಜೆ ತೆಗೆದುಕೊಂಡು, ಪ್ರಚಾರ ಕಾರ್ಯದಲ್ಲಿ, ಈ ಚಳವಳಿಯಲ್ಲಿ ಭಾಗಿಯಾಗಿದ್ದಾರೆ. ಈ ಚಳವಳಿ ಮತ್ತು ರಕ್ತರಹಿತ ಕ್ರಾಂತಿಯಲ್ಲಿ ಭಾಗೀದಾರನಾಗಿರುವುದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ, ಹೆಮ್ಮೆಯಾಗುತ್ತಿದೆ. ನಮ್ಮ ಮುಂದಿನ ದಿನಗಳ ಬಗ್ಗೆ ಆಶಾವಾದ ಹೆಚ್ಚುತ್ತಿರುವ ಸಮಯ ಇದು.

ಅಂದ ಹಾಗೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಇತಿಹಾಸ ಮತ್ತು ವರ್ತಮಾನ ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ.

ಈ ಸಂದರ್ಭದಲ್ಲಿ ನಿಮ್ಮ ಕ್ರಿಯಾಶೀಲತೆ, ಬೆಂಬಲ, ನೆರವನ್ನು ಆಶಿಸುತ್ತಾ,.. ಈ ಹೋರಾಟದಲ್ಲಿ ನಿಮ್ಮ ಸಾಹಚರ್ಯವನ್ನು ಬಯಸುತ್ತೇನೆ.

ನಮಸ್ಕಾರ,
ರವಿ…

ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿವೆಯೇ?

– ತೇಜ ಸಚಿನ್ ಪೂಜಾರಿ

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ teja-sachin-poojaryಭಾಗವಹಿಸಿದ ಹಿನ್ನೆಲೆಯಲ್ಲಿ ನವೀನ್ ಸೂರಿಂಜೆ ಹಾಗೂ ಇರ್ಷಾದ್ ಅವರು ಸಹಜವಾದ ಹಲವು ಪ್ರಶ್ನೆಗಳನ್ನು ವರ್ತಮಾನದ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಸಾಕಷ್ಟೂ ಪ್ರತಿಕಿಯೆಗಳೂ ವ್ಯಕ್ತವಾಗಿವೆ. ಚರ್ಚೆಯೂ ನಡೆಯುತ್ತಿದೆ. (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ.) ಆದರೆ “ಜಾಸ್ತಿ ಎಳೆದರೆ ಮೂಲ ಉದ್ದೇಶವೇ ಮರೆಯಾಗುವ ಸಾಧ್ಯತೆ ಇರುತ್ತದೆ” ಎಂಬ ಆತಂಕ ವ್ಯಕ್ತಪಡಿಸುತ್ತಲೇ ಅಕ್ಷತಾ ಹುಂಚದಕಟ್ಟೆ ಬರೆದ ಲೇಖನ ಮುಂದಕ್ಕೆ ಎಳೆಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಮಟ್ಟು ಅವರು ಪ್ರಸ್ತುತ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರ ಕುರಿತು ನವೀನ್ ವ್ಯಕ್ತಪಡಿಸಿದ್ದ ಆತಂಕಗಳನ್ನು ಅವರ ವೈಯಕ್ತಿಕ ಅಸಮಧಾನವೆಂಬಂತೆ ಅಕ್ಷತಾ ಹುಂಚದಕಟ್ಟೆ ಗ್ರಹಿಸಿದ್ದಾರೆ. ಅದು ತಪ್ಪು. ನವೀನ್ ಅಥವಾ ಇರ್ಷಾದ್ ಅಭಿವ್ಯಕ್ತಿಸಿದ ವಿಚಾರಗಳು ಕೇವಲ ಅವರದ್ದಷ್ಟೇ ಅಲ್ಲ; ಕೋಮುವಾದ ಹಾಗೂ ಮೂಲಭೂತವಾದದಂತಹ ಸಮಸ್ಯಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿರುವ ಕರಾವಳಿಯ ಹಲವು ಯುವ ಸಾಮಾಜಿಕ ಕಾರ್‍ಯಕರ್ತರ ಅಭಿಪ್ರಾಯವೂ ಆಗಿದೆ. ಸಮೂಹದ ಯೋಚನೆಗೆ ನವೀನ್ ಧ್ವನಿಯಾಗಿದ್ದಾರೆ ಆಷ್ಟೇ. ಹಾಗಿದ್ದೂ ನವೀನ್ ಒಬ್ಬರನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಬೌದ್ಧಿಕ ಅಪರಾಧ.

ಅಕ್ಷತಾ ಹುಂಚದಕಟ್ಟೆ ಅವರು ಮುಂದುವರಿದು, “ಒಬ್ರಿಗೆ ಸಾಕು ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ ಅನಿಸಿದರೆnaveen-shetty ಅದಕ್ಕೂ ಅವಕಾಶವಿರಬೇಕು ಮತ್ತು ಇನ್ನೊಬ್ರಿಗೆ ನಾನು ಹೇಳುವುದೇನೋ ಉಳಿದಿದೆ ಅನ್ನಿಸಿದರೆ ಅದಕ್ಕೂ ಅವಕಾಶವಿರಬೇಕು” ಅಂದಿದ್ದಾರೆ. ಹೇಳುವ ಹಾಗೂ ಹೇಳದಿರುವ ಸ್ವಾತಂತ್ರ್ಯ ಖಂಡಿತಾ ಎಲ್ಲರಿಗೂ ಅದೆ. ಆದರೆ ಅಕ್ಷತಾ ಹುಂಚದಕಟ್ಟೆ ಅವರ ವಿಚಾರ, ಮಾತು ಅಥವಾ ಮೌನದ ಅಭಿವ್ಯಕ್ತಿಗಳಿಗೆ ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನೇ ಪ್ರಶ್ನಿಸುವಂತಿದೆ. ನುಡಿದಾತ ಅಥವಾ ನುಡಿಯಲಿರುವಾತ ಬಯಸುತ್ತಾನೋ ಇಲ್ಲವೋ (ಅಥವಾ ಭಾಗಿಯಾಗುತ್ತಾನೋ ಇಲ್ಲವೋ) ಆತನ ಮಾತುಗಳು ಮುಂದಿನ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತವೆ. ಅದು ಅನಿವಾರ್ಯ ಕೂಡಾ. ಇಲ್ಲದೆ ಹೋದಲಿ, ಕೃತಿಯೊಂದನ್ನು ರಚಿಸಿ “ನಾನು ಹೇಳಿದ್ದೆಲ್ಲಾ ಹೇಳಿಯಾಗಿದೆ”’ ಎಂಬಂತೆ ಸಮ್ಮನಿದ್ದು ಬಿಡುವ ಭೈರಪ್ಪ ಅವರನ್ನೇ ಮತ್ತೆ ಮತ್ತೆ ಎಳೆತಂದು ಅವರು ಎಂದೋ ’ಹೇಳಿಯಾದ’, (ಕವಲೋ ಅವರಣವೋ) ಮಾತುಗಳನ್ನೇ ಮತ್ತೆ ಮತ್ತೆ ಕೆದಕಿ ಚರ್ಚಿಸುವುದಾದರೂ ಯಾತಕ್ಕೆ? ಸಮೂಹದಲ್ಲಿ ನುಡಿ ಹಾಗೂ ನಡೆ ಇವೆರಡೂ ಕ್ರಿಯೆಗಳು ತಮಗೆ ಎದುರಾಗುವ ಅಷ್ಟೂ ಪ್ರತಿಕ್ರಿಯೆಗಳಿಗೆ ಗೌರವ ಸಲ್ಲಿಸುವುದು ಅ ಸಮೂಹದ ಆರೋಗ್ಯ ಹಾಗೂ ಜೀವಂತಿಕೆಗೆ ಅತ್ಯಂತ ಮೂಲಭೂತವಾಗಿರುತ್ತದೆ. ಚರ್ಚೆಯಲ್ಲಿ ಮಟ್ಟು ಅವರು ಭಾಗವಹಿಸುತ್ತಾರೋ ಇಲ್ಲವೋ ಇಲ್ಲಿ ಅದು ಅಪ್ರಸ್ತುತ. ಚರ್ಚೆ ಮಟ್ಟು ಸರ್ ಹಾಗೂ ನವೀನ್ ಇಬ್ಬರನ್ನೂ ಮೀರಿ ಬೆಳೆಯಬೇಕು. ಬೆಳೆಯುತ್ತದೆ ಕೂಡಾ.Mohammad Irshad

ನವೀನ್ ಪ್ರಸ್ತಾಪಿಸಿದ ವಿಚಾರ ಮಟ್ಟು ಅವರು ಮುಸ್ಲೀಮ್ ಲೇಖಕರ ಸಂಘದ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯೋ ತಪ್ಪೋ ಎಂಬ ತಕ್ಕಡಿ ನಿರ್ಣಯಕ್ಕೆ ಸೀಮಿತವಾದದ್ದಲ್ಲ. ಅದು ಕೋಮುವಾದ ಹಾಗೂ ಮೂಲಭೂತವಾದದಂತಹ ವಿಚಾರಗಳಲ್ಲಿ ಬೌದ್ಧಿಕ ವರ್ಗ ತೋರುತ್ತಿರುವ ನಡವಳಿಕೆಗೆ ಸಂಬಂದಿಸಿದ್ದಾಗಿದೆ. ಅಲ್ಲಿ ಕಂಡುಬರುತ್ತಿರುವ ತರತಮ ಪ್ರಜ್ಞೆಯ ಕುರಿತಾದದ್ದಾಗಿದೆ.

ಮೂಲಭೂತವಾದ ಹಾಗೂ ಕೋಮುವಾದ ಇಂದಿನ ಬಹುದೊಡ್ಡ ಸವಾಲು. ಧರ್ಮಗಳನ್ನಾಶ್ರಯಿಸಿ ಬೆಳೆಯುತ್ತಿರುವ ಮೂಲಭೂತವಾದ ಒಂದೆಡೆ ಅನ್ಯ ಕೋಮಿನ ಜೊತೆಗೆ ಹಿಂಸಾರೂಪದ ಬೀದಿ ಸಂಘರ್ಷಗಳಿಗೆ, ಇನ್ನೊಂದೆಡೆ ಆಂತರಿಕ ನೆಲೆಯಲ್ಲಿ ಧರ್ಮದೊಳಗೇ ಇರುವಂತಹ ದುರ್ಬಲರ ಪೀಡನೆಗೆ ಕಾರಣವಾಗಿದೆ. ಹಿಂದೂ ಹಾಗೂ ಮುಸ್ಲಿಮ್ ಇವೆರಡೂ ಧಾರ್ಮಿಕ ಗುಂಪುಗಳಲ್ಲಿ ಇಂತಹ ಮೂಲಭೂತವಾದಿ ಪ್ರವೃತ್ತಿಗಳು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಕರಾವಳಿ ತೀರದಲ್ಲಂತೂ ಅದರ ವಿರಾಟ್ ರೂಪದ ಪ್ರದರ್ಶನ ಗಳಿಗೆಲೆಕ್ಕದಲ್ಲಿ ನಡೆಯುತ್ತಿದೆ. ಆಯಾ ಧರ್ಮಗಳಲ್ಲಿರುವ ನಿರ್ದಿಷ್ಟ ಗುಂಪುಗಳು ತಮ್ಮ ತಮ್ಮ ಮತಗಳಲ್ಲಿ ಮೂಲಭೂತವಾದಿ ಚಳವಳಿಗಳನ್ನು ಮುನ್ನಡೆಸುತ್ತಿರುವ ವಿಚಾರ ತೀರಾ ದುರ್ಬೀನು ಹಾಕಿಯೇ ನೋಡಬೇಕಾದ ಸತ್ಯವಲ್ಲ. ಅವುಗಳ ರಹಸ್ಯ ಕಾರ್ಯಸೂಚಿಗಳೂ ಕೂಡಾ ಅಷ್ಟೇ ಸ್ಪಷ್ಟ.

ಆದಾಗ್ಯೂ ಅಂತಹ ಮೂಲಭೂತವಾದೀ ಚಳವಳಿಯನ್ನು ಎದುರಿಸುವ, ಅದನ್ನು ಪ್ರಸರಿಸುತ್ತಿರುವ ಗುಂಪುಗಳನ್ನುdinesh-amin-mattu-2 ವಿರೋಧಿಸುವ ಕ್ರಮದಲ್ಲಿ ಮಾತ್ರವೇ ಬಹಳ ಸಮಸ್ಯೆಗಳಿವೆ. ಹಿಂದೂ ಮೂಲಭೂತವಾದದ ಜೊತೆಗೆ ನಿಂತು ಮುಸ್ಲಿಮ್ ಮೂಲಭೂತವಾದವನ್ನು ಖಂಡಿಸುವುದು ಎಷ್ಟರಮಟ್ಟಿಗೆ ಅಸಂಗತವೋ ಮುಸ್ಲಿಮ್ ಮೂಲಭೂತವಾದೀ ವೇದಿಕೆಯಲ್ಲಿ ಆಸೀನರಾಗಿ ಹಿಂದೂ ಕೋಮುವಾದವನ್ನು ಟೀಕಿಸುವುದು ಕೂಡಾ ಅಷ್ಟೇ ಅಸಹಜ. ಒಂದರ ಜೊತೆಗಿನ ಸಾಹಚರ್ಯ ಇನ್ನೊಂದರ ಕಡೆಗಿನ ಟೀಕೆಯನ್ನು ಅಪಮೌಲ್ಯಗೊಳಿಸುತ್ತದೆ. ಆದರೆ ದುರಾದೃಷ್ಟವಶಾತ್ ಇಂತಹ ಬೇಜವಾಬ್ದಾರಿ ನಡವಳಿಕೆಗಳು ನಮ್ಮ ಪ್ರಗತಿಪರ ವರ್ಗದಲ್ಲಿ ಥರೇವಾರಿ ಕಾಣಿಸಿಕೊಳ್ಳುತ್ತಿವೆ. ನವೀನ್ ಅಥವಾ ಇರ್ಷಾದ್ ಪ್ರತಿನಿಧಿಸುವ ಆತಂಕ ಇದೇ ಆಗಿದೆ.

ಹಿಂದೂ ಮೂಲಭೂತವಾದವನ್ನು ತಿರಸ್ಕರಿಸಲು ಬೌದ್ಧಿಕ ವಲಯ ಸ್ಪಷ್ಟವಾದ ಒಂದು ವೇದಿಕೆಯನ್ನು ಈಗಾಗಲೇ ಸಿದ್ಧಗೊಳಿಸಿದೆ. ಅದರ ಅಷ್ಟೂ ಆಯಾಮಗಳನ್ನು ಗುರುತಿಸಿ ಅದಕ್ಕೆ ಸೈದ್ಧಾಂತಿಕ ವಿರೋಧದ ನೆಲೆಗಳನ್ನು ಗಟ್ಟಿಗೊಳಿಸಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಆಚರಣೆ ಹೀಗೇ ಎಲ್ಲೆಲ್ಲಿ ಮೂಲಭೂತವಾದದ ಸುಳಿವು ಕಾಣಿಸಿಕೊಳ್ಳುತ್ತಿದೆಯೋ ಅಲ್ಲೆಲ್ಲಾ ಅದನ್ನು ಖಂಡಿಸುವ ಕ್ರಿಯೆಗಳು akshatha-hunchadakatteಅಟೋಮ್ಯಾಟಿಕ್ ಅನ್ನಿಸುವಂತೆ ನಡೆಯುತ್ತಿವೆ. ’ಸಂಘ ಪರಿವಾರ’ ಪರಿಕಲ್ಪನೆಯ ಅಡಿಯಲ್ಲಿ ಹಿಂದೂ ಮೂಲಭೂತವಾದವನ್ನು ಸಮಗ್ರವಾಗಿ ಹಿಡಿದಿಡುವ, ಅದಕ್ಕೆ ಪ್ರತಿಕ್ರಿಯಿಸುವ ನೆಲೆಯನ್ನು ಬುದ್ಧಿಜೀವಿ ವರ್ಗ ಸಾಧಿಸಿದೆ. ಇದು ತುರ್ತು ಅನಿವಾರ್ಯವಾಗಿದ್ದ ಬೆಳವಣಿಗೆ. ಅದರಲ್ಲಿ ನಮ್ಮ ಪ್ರಗತಿಪರ ಗುಂಪುಗಳು ಯಶಸ್ಸು ಕಂಡಿವೆ.

ಆದರೆ ಇಂತಹದ್ದೇ ವಿರೋಧದ ನೆಲೆಗಳು ಮುಸ್ಲಿಮ್ ಮೂಲಭೂತವಾದಕ್ಕೆ ಪ್ರತಿಯಾಗಿ ನಿರ್ಮಾಣಗೊಂಡಿದೆಯೇ? ಸಮಸ್ಯೆ ಇರುವುದು ಇಲ್ಲೇ. ನಮ್ಮ ಬೌದ್ಧಿಕ ವರ್ಗ ಮುಸ್ಲಿಮ್ ಸಮುದಾಯದಲ್ಲಿ ಮೂಲಭೂತದದ ಬೀಜಗಳನ್ನು ಬಿತ್ತುತ್ತಿರುವ ಗುಂಪುಗಳು ಅಥವಾ ಸಂಘಟನೆಗಳ ಬಗ್ಗೆ ಸ್ಪಷ್ಟತೆಯನ್ನು ಇನ್ನೂ ಹೊಂದಿಲ್ಲ. ಅದು ಮುಸ್ಲಿಮ್ ಮೂಲಭೂತವಾದವನ್ನು ಪರಸ್ಪರ ತಿಳಿಯದ ಯಾರೋ ವ್ಯಕ್ತಿಗಳು ಅಥವಾ ಅದೆಲ್ಲಿಂದಲೋ ಬಂದ ಅಲೆಯೊಂದು ಸೃಷ್ಟಿಸಿದ ವಿದ್ಯಮಾನವೆಂಬಂತೆ ಗ್ರಹಿಸುತ್ತಿದೆ. ಹೀಗಾಗಿ ಮೂಲಭೂತವಾದದ ಪ್ರಸರಣಕ್ಕೆ ಸಂಘಟನೆಗಳ ಮಟ್ಟದಲ್ಲಿ ನಡೆಯುತ್ತಿರುವ ವ್ಯವಸ್ಥಿತವಾದ ಪಿತೂರಿಗಳನ್ನು ಒಪ್ಪುವ ಮನಸ್ಥಿತಿಯಲ್ಲಿ ಅದು ಇಲ್ಲ.

ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ವರೂಪದ ಸಮಾಜಗಳಲ್ಲಿ ಅಲ್ಪಸಂಖ್ಯಾತ ಗುಂಪುಗಳ ಮೂಲಭೂತ ಆಚರಣೆಗಳಿಗೆಯೇ ಹಲವು ಅಡ್ಡಿಗಳಿರುತ್ತವೆ. ಇನ್ನೊಂದು ಸಾಂಸ್ಕೃತಿಕ ಅಸ್ಮಿತೆಯ ಬಗೆಗಿನ ಅರಿವಿನ ಕೊರತೆ ಅಥವಾ ಪುರೋಗಾಮಿ ಆಧುನಿಕ ವಿಚಾರಧಾರೆಗಳ ಪ್ರಸರಣದ ಕೊರತೆ ಅಂತಹ ಅಡ್ಡಿಗಳನ್ನು ಸೃಷ್ಟಿಸುತ್ತವೆ. ಇಂತಹ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಸಾಧನೆಯ ನಿಟ್ಟಿನಲ್ಲಿ ಆಯಾ ಸಮಾಜದ ಪ್ರಗತಿಪರ ವರ್ಗಗಳು ಅಲ್ಪಸಂಖ್ಯಾತ ಸಮುದಾಯಗಳೊಳಗಿನ ಗುಂಪುಗಳ ಜೊತೆಗೆ ನಿಲ್ಲುವುದು ಅವಶ್ಯವಾಗಿರುತ್ತದೆ. ಹಾಗೇ ಬೆಂಬಲ ಪಡೆದುಕೊಳ್ಳುವ ಗುಂಪುಗಳು ಬಹುಮಟ್ಟಿಗೆ ಸಂಪ್ರದಾಯ ಶರಣ ವರ್ಗಗಳೇ ಆಗಿರುತ್ತವೆ. jamate-mangaloreಬೌದ್ಧಿಕ ವರ್ಗದ ನೆಲೆಯಲ್ಲಿ ಇದು ಆರಂಭಿಕ ಸ್ವರೂಪದ ಕ್ರಿಯಾಶೀಲತೆಯಾಗಿರುತ್ತದೆ. ಹಾಗೆಯೇ ತರುವಾಯದ ಹಂತದಲ್ಲಿ ಸಮಾಜದ ಬುದ್ಧಿಜೀವಿ ವಲಯ ಅಲ್ಪಸಂಖ್ಯಾತ ಸಮುದಾಯಗಳ ಪ್ರಗತಿಪರ ಗುಂಪುಗಳ ಜೊತೆಗೆ ಗುರುತಿಸಿಕೊಳ್ಳುವುದು ಅದರ ಆರಂಭಿಕ ಸ್ವರೂಪದ ಕ್ರಿಯಾಶೀಲತೆಯ ತಾತ್ವಿಕ ಮುಂದುವರಿಕೆಯಾಗಿರುತ್ತದೆ. ಇಲ್ಲದೆ ಹೋದಲ್ಲಿ ಆರಂಭದಲ್ಲಿ ಬೆಂಬಲ ಪಡೆದುಕೊಳ್ಳುವ ಸಂಪ್ರದಾಯ ಶರಣ ಗುಂಪುಗಳು ಕ್ರಮೇಣ ಒಳಗೂ ಹೊರಗೂ ಘಾತಕವಾಗಿ ಬೆಳೆಯುತ್ತವೆ.

ಆದರೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂದಿಸಿದಂತೆ ಅಂತಹ ಎರಡನೆಯ ಹಂತದ ಕ್ರಿಯಾಶೀಲತೆಯು ನಮ್ಮ ಬೌದ್ಧಿಕ ವಲಯದಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತಿದೆಯೇ? ಇಲ್ಲ ಅನ್ನುವುದೇ ನಮ್ಮ ಸಾಮಾಜಿಕ ಸಂದರ್ಭದ ದೊಡ್ಡ ದುರ್ದೈವ. ಹೀಗಾಗಿ ಮುಸ್ಲಿಮ್ ಮೂಲಭೂತವಾದೀ ಗುಂಪುಗಳ ಜೊತೆಗೆ ಅದು ಮತ್ತೆ ಮತ್ತೆ ಅಸೋಸಿಯೇಟ್ ಆಗುತ್ತಿದೆ. ಒಂದು ಗುಂಪಿನ ಮೂಲಭೂತವಾದವನ್ನು ಅಪ್ಪಿಕೊಂಡು ಇನ್ನೊಂದು ಗುಂಪಿನ ಮೂಲಭೂತವಾದವನ್ನು ರಿಜೆಕ್ಟ್ ಮಾಡುವ ಅತಿರೇಕದ ನಡೆಗಳನ್ನು ಅದು ಅನುಸರಿಸುತ್ತಿದೆ.

ಇಂತಹ ದ್ವಂಧ್ವ ನಿಲುವುಗಳು ತಳಮಟ್ಟದಲ್ಲಿ ಕ್ರಿಯಾಶೀಲವಾಗಿರುವ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಬಹುಸಂಖ್ಯಾತ ಸಮಾಜದ ಮೂಲಭೂತವಾದವನ್ನು ಶ್ರೀಸಾಮಾನ್ಯರ ಮಟ್ಟದಲ್ಲಿ ಎದುರಿಸಲು ಪ್ರಯತ್ನಿಸುವ ಅವರು ಜನರ ನಡುವೆ ವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಹೀಗೆ, ವಿಚಾರವಾದಿ, ಪ್ರಗತಿಪರ, ಸೆಕ್ಯುಲರಿಸ್ಟ್ ಅಥವಾ ಬುದ್ಧಿಜೀವಿ ಮೊದಲಾದ ಐಡೆಂಟಿಟಿಗಳು ಗೌರವ ಕಳೆದುಕೊಳ್ಳುವಲ್ಲಿ, ಮುಲಭೂತವಾದದ ಸ್ಥಾನದಲ್ಲಿ ಅವುಗಳೇ ಟೀಕೆಗಳಿಗೆ ಗುರಿಯಾಗುತ್ತಿರುವುದರಲ್ಲಿ ಇತರೆ ಅಂಶಗಳ ಜೊತೆಗೆ ನಮ್ಮ ಬೌದ್ಧಿಕ ವಲಯದ ಪಾತ್ರವೂ ಇದೆ.

ನವೀನ್ ಹಾಗೂ ಅವರ ಸಂಗಾತಿಗಳು ಪ್ರಸ್ತಾಪಿಸುತ್ತಿರುವ ವಿಚಾರ, ಎದುರಿಸುತ್ತಿರುವ ಸಮಸ್ಯೆ ಇದೇ ಆಗಿದೆ. ಮೂಲಭೂತವಾದದಲ್ಲಿ ಒಳ್ಳೆಯ ಅಥವಾ ಕೆಟ್ಟ ಮೂಲಭೂತವಾದಗಳು, ಅಪಾಯಕಾರಿ ಅಥವಾ ನಿರುಪದ್ರವಿ, ಜಸ್ಟಿಫೈಡ್ ಅಥವಾ ಅನ್ ಜಸ್ಟಿಫೈಡ್ ಮೂಲಭೂತವಾದಗಳು ಹೀಗೆ ವಿಂಗಡನೆ ಮಾಡುವಂತದ್ದು ನಿಜಕ್ಕೂ ಅಘಾತಕಾರಿ ಬೆಳವಣಿಗೆ. ಅಷ್ಟೂ ಮೂಲಭೂತವಾದಿ ಚಳುವಳಿಗಳನ್ನು ಏಕಪ್ರಕಾರದ ಅಸ್ಖಲಿತ ತತ್ವ ನಿಷ್ಠೆಯಿಂದ ಎದುರಿಸಬೇಕಾಗಿದೆ. ಇದು ಸದ್ಯದ ಅನಿವಾರ್ಯತೆ ಕೂಡಾ.