Monthly Archives: March 2014

ಗಂಗೂರಿನ ಭಾಗ್ಯಮ್ಮ ಮತ್ತು ಸಮಾನತೆ…

– ಮುನೀರ್ ಕಾಟಿಪಳ್ಳ

ಇತ್ತೀಚೆಗೆ ಡಿವೈಎಫ್ಐ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನ ಜಿಲ್ಲೆಗೆ ಹೋಗಿದ್ದೆ. ಸಮ್ಮೇಳನದ ಉದ್ಘಾಟನೆಗೆ ಭಾಗ್ಯಮ್ಮ ಎಂಬ ಯುವದಲಿತ ಮಹಿಳೆಯನ್ನು ಅಲ್ಲಿನ ಸಂಗಾತಿಗಳು ಆಹ್ವಾನಿಸಿದ್ದರು. ನನಗೆ ಸ್ವಲ್ಪ ಆಶ್ಚರ್ಯವಾಯಿತು. ಯಾರೀಕೆ ಭಾಗ್ಯಮ್ಮ, ಹೆಸರೇ ಕೇಳಿರದ ಸಾಮಾನ್ಯ ಮಹಿಳೆಯನ್ನು ಉದ್ಘಾಟಕರಾಗಿ ಯಾಕೆ ಕರೆದಿದ್ದಾರೆ. ಸಾಹಿತಿಗಳೋ, ಬುದ್ಧಿಜೀವಿಗಳೋ, ಹಿರಿಯ ನಾಯಕರೋ ಮಾಡಬೇಕಿದ್ದ ಉದ್ಘಾಟನೆಗೆ ಈಕೆಯನ್ನೇ ಯಾಕೆ ಆಹ್ವಾನಿಸಿದ್ದಾರೆ? ಎಂಬ ಕುತೂಹಲ ನನ್ನೊಳಗೆ ಮೂಡಿತು. ಅಲ್ಲಿನ ಸ್ಥಳೀಯ ಸಂಗಾತಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಭಾಗ್ಯಮ್ಮ ಬಗ್ಗೆ ನನಗೆ ಹೆಮ್ಮೆ ಅನಿಸಿತು, ಆಕೆಯ ಭಾಷಣದ ನಾಲ್ಕೇ ನಾಲ್ಕು ಮಾತು ಆಕೆಯ ಬಗ್ಗೆ ಅಪಾರ ಗೌರವವನ್ನು ನನ್ನೊಳಗೆ ಮೂಡಿಸಿತು. ಹಾಗೆಯೇ ಹಾಸನ ಸಹಿತ ನಮ್ಮ ಕನ್ನಡ ನಾಡಿನಲ್ಲಿ ಹಸಿಹಸಿಯಾಗಿ ಜೀವಂತವಾಗಿರುವ ಫ್ಯೂಡಲ್ ವ್ಯವಸ್ಥೆ, ಜಾತಿ ತಾರತಮ್ಯ, ಅಸ್ಪೃಶ್ಯತೆಯ ಕರಾಳ ಮುಖವನ್ನು ಅನಾವರಣಗೊಳಿಸಿತು. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಗಂಗೂರು ಪ್ರಕರಣ ಮತ್ತು ಭಾಗ್ಯಮ್ಮ ಕುಟುಂಬದ ನೋವಿನ ಕಥೆಯನ್ನು ಇಲ್ಲಿನ ಮಾಧ್ಯಮಗಳು ಸೇರಿದಂತೆ ಒಟ್ಟು ವ್ಯವಸ್ಥೆ ಹೇಗೆ ಮುಚ್ಚಿ ಹಾಕಿತು. ದಿಕ್ಕು ತಪ್ಪಿಸಿತು, ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯದಿಂದ ಹೋರಾಟ ಮಾಡಿದವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೇಗೆ ಊರು ಬಿಡಿಸಿತು ಎಂಬ ಕಥೆಯನ್ನು ತೆರೆದಿಟ್ಟಿತು.

ಗಂಗೂರು ಹಾಸನ ಜಿಲ್ಲೆಯ ಹಳೆಬೀಡು ಸಮೀಪದ ಒಂದು ಗ್ರಾಮ. ಏಳೆಂಟು ನೂರು ಮನೆಗಳಲ್ಲಿ ನಲ್ವತ್ತರಷ್ಟು ಮನೆಗಳು ದಲಿತರಿಗೆ ಸೇರಿದ್ದು. ಇಲ್ಲಿನ ದಲಿತರು ತೀರಾ ಬಡತನದಲ್ಲಿರುವ ಭೂಹೀನರೇನಲ್ಲ. ಒಂದಿಷ್ಟು ಜಮೀನು ಹೊಂದಿರುವ ಇವರು ತಮ್ಮ ಜಮೀನಿನ ಕೆಲಸಗಳು ಮುಗಿದ ಮೇಲೆ ಊರಿನ ಮೇಲ್ಜಾತಿಗಳ ಮನೆ, ಜಮೀನಿನಲ್ಲಿ ದುಡಿಯುತ್ತಾರೆ. ಆರ್ಥಿಕವಾಗಿ ಇವರು ಮೇಲ್ಜಾತಿಗಳಿಗೆ ತೀರಾ ಅವಲಂಭಿತರಾಗಿಲ್ಲದಿದ್ದರೂ ತಮ್ಮ ಕೀಳು ಜಾತಿಯ ಕಾರಣಕ್ಕಾಗಿ ಮೇಲ್ಜಾತಿಗಳು ಹೇರಿದ ಎಲ್ಲಾ ಕಟ್ಟುಪಾಡುಗಳಿಗೆ ಒಳಗಾದವರು. ಹೊಟೇಲ್‌ಗಳಲ್ಲಿ ಎರಡು ಲೋಟ ಪದ್ಧತಿ, Gangoor-1ಊರಿನ ಕ್ಷೌರಿಕನ ಅಂಗಡಿಯಲ್ಲಿ ಕೂದಲು ಕಟ್ಟಿಂಗ್ ಮಾಡಿಸಲು ಅವಕಾಶ ಇಲ್ಲದಿರುವುದು, ಮೇಲ್ಜಾತಿಗಳ ಮನೆಗಳಲ್ಲಿ ಕೆಲಸಕ್ಕೆ ಹೋದಾಗ ತಾವೇ ತಟ್ಟೆ ಹಿಡಿದುಕೊಂಡು ಹೋಗಬೇಕು, ಮೇಲ್ಜಾತಿಗಳ ಮನೆಯಲ್ಲಿ ಮದುವೆ ಮುಂಜಿಗಳು ನಡೆದಾಗ ಕೇರಿಯ ಬಾಗಿಲಲ್ಲಿ ನಿಂತು ತಮಟೆ ಬಾರಿಸುವವ ನೀಡುವ ಆಹ್ವಾನವನ್ನೇ ಸ್ವೀಕರಿಸಿ ಶುಭಕಾರ್ಯಗಳಿಗೆ ಹೋಗಬೇಕು, ಪ್ರತ್ಯೇಕ ಕೂತು ಊಟ ಮಾಡಬೇಕು, ದಲಿತ ಹುಡುಗರು, ಯುವತಿಯರು ಒಳ್ಳೆಯ ಬಟ್ಟೆ ಧರಿಸಿ ಮೇಲ್ಜಾತಿಕೇರಿಗಳಲ್ಲಿ ಅಡ್ಡಾಡಬಾರದು. ಹೀಗೆ ಶತಮಾನಗಳ ಹಿಂದಿನ ಎಲ್ಲಾ ಪಾಳೇಗಾರಿ ಆಚರಣೆಗಳು ಗಂಗೂರಿನಲ್ಲಿ ಈಗಲೂ ಹಸಿಹಸಿಯಾಗಿ ಜೀವಂತವಾಗಿದೆ. ಇದೆಲ್ಲವನ್ನೂ ಯಾವುದೇ ತಕರಾರಿಲ್ಲದೆ ಒಪ್ಪಿ ಪಾಲಿಸಿಕೊಂಡು ಬಂದದ್ದಕ್ಕೆ ಗಂಗೂರಿನ ದಲಿತರು ಇಷ್ಟರವರೆಗೆ ಊರಿನಲ್ಲಿ ‘ನೆಮ್ಮದಿ’ಯಾಗಿ ಬದುಕಿದ್ದರು. ಅವರಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಹಾಸನದ ಆಲೂರು ತಾಲೂಕು ಕೇಂದ್ರದಲ್ಲಿ ಹುಟ್ಟಿ ಅಲ್ಲೇ ಎಸ್.ಎಸ್.ಎಲ್.ಸಿ.ವರೆಗೆ ಓದಿರುವ ಭಾಗ್ಯಮ್ಮ ಎಂಬ ದಲಿತ ಯುವತಿ ಯಾವಾಗ ಗಂಗೂರಿನ ಹುಡುಗನನ್ನು ಮದುವೆಯಾಗಿ ದಲಿತಕೇರಿಗೆ ಕಾಲಿಟ್ಟಳೋ ಆಕೆಗೆ ಇದೆಲ್ಲವನ್ನು ಸಹಿಸಲಾಗಲಿಲ್ಲ. ಅಂಬೇಡ್ಕರ್, ಸಂವಿಧಾನ, ಹೋರಾಟ, ಚಳುವಳಿ, ಸಮಾನತೆ, ದೇವಸ್ಥಾನ ಪ್ರವೇಶ ಹೀಗೆ ಒಂದಿಷ್ಟು ತಿಳಿದುಕೊಂಡಿದ್ದ ಭಾಗ್ಯಮ್ಮ ಈ ರೀತಿಯ ಶೋಷಣೆಯನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಭಾಗ್ಯಮ್ಮ ಇದನ್ನೆಲ್ಲ ಪ್ರಶ್ನಿಸಬೇಕು ಎಂದುಕೊಳ್ಳುತ್ತಿದ್ದರೂ ಊರಿನ ಇತರ ದಲಿತರು ಬೆಂಬಲ ಕೊಡಬೇಕಲ್ಲ. ನಾವು ಇರಬೇಕಾದದ್ದೇ ಹೀಗೆ ಎಂಬ ಗುಲಾಮಿ ಮನೋಭಾವಕ್ಕೆ ಅನಿವಾರ್ಯವಾಗಿ ಒಗ್ಗಿಹೋಗಿದ್ದ ಗಂಗೂರಿನ ದಲಿತರು ಭಾಗ್ಯಮ್ಮಳ ಜೊತೆ ಕೈಜೋಡಿಸಲು ತಯಾರಿರಲಿಲ್ಲ. Gangoor-2ಈ ನಡುವೆ ಊರಿನ ರಂಗನಾಥ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ನಡೆಯಿತು. ಒಂದೊಂದು ಕುಟುಂಬಕ್ಕೂ (ಕುಟುಂಬ ಅಂದರೆ ಗಂಡ-ಹೆಂಡತಿ) ತಲಾ ಐದೈದು ಸಾವಿರ ವಂತಿಗೆ ನಿಗದಿ ಮಾಡಲಾಯಿತು. ದೇವಸ್ಥಾನಕ್ಕೆ ಪ್ರವೇಶ ನಿಷಿದ್ಧವಾಗಿದ್ದರೂ ವಂತಿಗೆಯಿಂದೇನೋ ದಲಿತರಿಗೆ ವಿನಾಯಿತಿ ಸಿಗಲಿಲ್ಲ. ಪ್ರತಿಯೊಂದು ದಲಿತ ಕುಟುಂಬವೂ ತಮಗೆ ನಿಗದಿಪಡಿಸಿದ ವಂತಿಗೆಯನ್ನು ತಕರಾರಿಲ್ಲದೆ ಪಾವತಿಸಿತು. ಭಾಗ್ಯಮ್ಮ ಮನೆಯಲ್ಲಿ ಆಕೆಯ ಇಬ್ಬರು ಮೈದುನರದ್ದೂ ಸೇರಿಸಿದರೆ ಒಟ್ಟು ಮೂರು ಕುಟುಂಬ ಆಗುತ್ತದೆ. ಮೈದುನರದ್ದೂ ಸೇರಿಸಿ ಒಟ್ಟು ಹದಿನೈದು ಸಾವಿರ ರೂಪಾಯಿಗಳನ್ನು ಭಾಗ್ಯಮ್ಮ ಅವರ ಒಂದು ಮನೆಯಿಂದಲೇ ದೇವಸ್ಥಾನಕ್ಕೆ ಚಂದಾ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ದೇವಸ್ಥಾನ, ಗರ್ಭಗುಡಿಯ ಬಾಗಿಲುಗಳ ನಿರ್ಮಾಣಕ್ಕೆ ಭಾಗ್ಯಮ್ಮಳ ದಲಿತ ಕುಟುಂಬವೇ ಉತ್ತಮ ತಳಿಯ ಮರಮಟ್ಟು ನೀಡಿದೆ. ಇಷ್ಟೆಲ್ಲಾ ಕೊಡುಗೆಗಳನ್ನು ಮೇಲ್ಜಾತಿ ಕುಟುಂಬಗಳಿಗೆ ಕಡಿಮೆ ಇಲ್ಲದಂತೆ ಊರ ದೇವಸ್ಥಾನಕ್ಕೆ ನೀಡಿದ್ದರೂ, ದಲಿತರಿಗೆ ಮಾತ್ರ ದೇವಸ್ಥಾನದ ಬಾಗಿಲು ತೆರೆಯಲೇ ಇಲ್ಲ. ಅವರು ಏನಿದ್ದರೂ ಹೊರಗಡೆ ದೂರದಲ್ಲಿ ನಿಂತು ಕೈ ಮುಗಿಯಬೇಕು. ಯಾವ ಸ್ವಾಭಿಮಾನಿ ತಾನೇ ಇದನ್ನೆಲ್ಲ ಸಹಿಸಲು ಸಾಧ್ಯ? ಸಹಜವಾಗಿ ಭಾಗ್ಯಮ್ಮ ಸಿಡಿದು ನಿಂತಿದ್ದಾಳೆ. ಊರಿನಲ್ಲಿ ಸ್ಥಾಪನೆಗೊಂಡಿದ್ದ ಅಂಬೇಡ್ಕರ್ ಸಂಘದ ಯುವಕರನ್ನು ಜೊತೆ ಸೇರಿಸಿದ್ದಾಳೆ. ಊರ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾಳೆ. ಭಾಗ್ಯಮ್ಮಳ ನಿರಂತರ ಪ್ರಯತ್ನದಿಂದ ಒಂದಿಷ್ಟು ಜನ ದಲಿತರು ತಮ್ಮ ಹಕ್ಕುಗಳಿಗಾಗಿ ಎದ್ದು ನಿಲ್ಲಲು ತಯಾರಾಗಿದ್ದಾರೆ. ಹೀಗೆ ಗಂಗೂರಿನಲ್ಲಿ ನಿಧಾನಕ್ಕೆ ಬಂಡಾಯಕ್ಕೆ ವೇದಿಕೆ ಸಜ್ಜಾಗಿದೆ.

ಭಾಗ್ಯಮ್ಮ ಮತ್ತು ಆಕೆಯ ಸಂಗಾತಿಗಳಿಗೆ ಹಾಸನದ ಕೆಲ ದಲಿತ ಚಳುವಳಿಯ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಹೀಗೆ ಅಸಮಾನತೆಯ ವಿರುದ್ಧ ಸಮರ ಸಾರಲು ನಿರಂತರ ಪ್ರಯತ್ನಿಸಿ ಸಮಯ ಕಾಯುತ್ತಿದ್ದ ಭಾಗ್ಯಮ್ಮ ಒಂದು ದಿನ ಒಂದಿಷ್ಟು ಮಹಿಳೆಯರ ಸಹಿತ ಧೈರ್ಯದಿಂದ ದೇವಸ್ಥಾನ ಪ್ರವೇಶಿಸಿದ್ದಾಳೆ. ಇದು ಗಂಗೂರಿನ ಮಟ್ಟಿಗೆ ಅನಿರೀಕ್ಷಿತ, ಅಲ್ಲಿನ ಮೇಲ್ಜಾತಿ ಮನಸ್ಸುಗಳು ಕ್ರೋಧಗೊಂಡಿದೆ. ದಲಿತರ ‘ಅಹಂಕಾರ’ ಕಂಡು ಕೆರಳಿ ನಿಂತಿವೆ. ಪ್ರಕರಣ ಇಡೀ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಹಾಸನದಂತ ಫ್ಯೂಡಲ್ ಮನಸ್ಥಿತಿಯ ನಾಡಿನಲ್ಲಿ ಇದು ಆ ವ್ಯವಸ್ಥೆಗೆ ಬಿದ್ದ ಕೊಡಲಿ ಪೆಟ್ಟಿನಂತಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದ ಭಾಗ್ಯಮ್ಮ ಮತ್ತವರ ಸಂಗಾತಿಗಳನ್ನು ಮಟ್ಟ ಹಾಕಲೇ ಬೇಕು ಎಂದು ಜಿಲ್ಲೆಯ ಒಟ್ಟು ಆಳುವ ವ್ಯವಸ್ಥೆಯೇ ಟೊಂಕ ಕಟ್ಟಿ ನಿಂತಿದೆ. ಮೀಸಲಾತಿ ನೀತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದ ಕಮಲಾ ಎಂಬ ದಲಿತ ಮಹಿಳೆಯನ್ನು ಒಂದು ಬಾರಿಯೂ ಕುರ್ಚಿಯಲ್ಲಿ ಕೂರಿಸದೆ ಕೇವಲ ಕಡತಗಳಿಗೆ ಸಹಿ ಹಾಕಲಷ್ಟೇ ಬಳಸಿದ್ದ ಗಂಗೂರಿನಂತಹ ಊರು ಭಾಗ್ಯಮ್ಮಳನ್ನು ಸಹಿಸಲು ಸಾಧ್ಯವೇ? ಹೀಗೆ ಉದ್ವಿಗ್ನಗೊಂಡ ಊರು ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದೆ. ಅಪವಿತ್ರಗೊಂಡ ರಂಗನಾಥ ಸ್ವಾಮಿ ದೇವಸ್ಥಾನ ಕೆಡವಿ ಪುನರ್ ನಿರ್ಮಿಸಬೇಕು ಎಂದು ತೀರ್ಮಾನಿಸಿದೆ. ಹೀಗೆ ಸೇಡಿಗಾಗಿ ಅವಕಾಶ ಕಾಯುತ್ತಿದ್ದ ಊರಿನ ಫ್ಯೂಡಲ್ ಮನಸ್ಸುಗಳಿಗೆ ಒಂದು ಅವಕಾಶ ಒದಗಿಬಂದಿದೆ. Gangoor-3ಬೆಂಗಳೂರಿನ ಕ್ಷೌರಿಕ ಸಮಾಜದ ಮುಖಂಡರೊಬ್ಬರು ಅಸ್ಪೃಶ್ಯತೆಗಾಗಿ ಸುದ್ಧಿ ಮಾಡಿದ ಗಂಗೂರಿಗೆ ಬಂದಿಳಿದಿದ್ದಾರೆ. ನೇರ ಊರಿನ ಶಾಲೆಗೆ ತೆರಳಿ ಎಲ್ಲಾ ಜಾತಿಯ ಮಕ್ಕಳಿಗೆ ಒಟ್ಟಾಗಿ ಕೂದಲು ಕಟ್ಟಿಂಗ್ ಮಾಡಿದ್ದಾರೆ. ಇಷ್ಟಕ್ಕೇ ನೆಪಕ್ಕಾಗಿ ಕಾಯುತ್ತಿದ್ದ ಮೇಲ್ಜಾತಿಗಳು ಉರಿದು ಬಿದ್ದಿದ್ದಾರೆ. ತಮ್ಮ ಅನುಮತಿ ಇಲ್ಲದೆ ನಮ್ಮ ಮಕ್ಕಳಿಗೆ ಹೇಗೆ ಕಟ್ಟಿಂಗ್ ಮಾಡಿಸಿದ್ರಿ ಎಂದು ಗಲಾಟೆ ಶುರು ಮಾಡಿದ್ದಾರೆ. ಇದನ್ನು ಮಾಡಿಸಿದ್ದು ಭಾಗ್ಯಮ್ಮಳೇ ಎಂದು ರೇಗಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೇಲ್ಜಾತಿಗಳ ಆಕ್ರೋಶಕ್ಕೆ ಬೆದರಿ ಭಾಗ್ಯಮ್ಮ ಸೇರಿದಂತೆ ಅವರು ದೂರು ಕೊಟ್ಟವರ ಮೇಲೆ ಕಠಿಣ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಬಿಸಿಬಿಸಿಯಾಗಿ ಇರುವಾಗಲೇ ಮರುದಿವಸ ಊರಿನಲ್ಲಿ ಜಿಲ್ಲಾಡಳಿತ ಶಾಂತಿಸಭೆ ಕರೆದಿದೆ. ಹಿಂದಿನಿಂದಲೂ ಮೇಲ್ಜಾತಿಗಳು ವಿಧಿಸಿದ ಕಟ್ಟುಪಾಡುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದಿದ್ದ ಊರಿನ ದಲಿತರು ಭಯಗೊಂಡಿದ್ದಾರೆ. ಬೆರಳೆಣಿಕೆಯ ದಲಿತ ಕುಟುಂಬಗಳನ್ನು ಬಿಟ್ಟರೆ ಉಳಿದ ಕುಟುಂಬಗಳು ಹಿಂದಿನಂತೆಯೇ ಪದ್ಧತಿಗಳು ಮುಂದುವರಿಯಲಿ ಎಂದು ಮೇಲ್ಜಾತಿಗಳಿಗೆ ಶರಣಾಗಿವೆ. ಮರುದಿವಸ ಶಾಂತಿ ಸಭೆಯಲ್ಲಿ ಇದು ನಿಚ್ಚಳವಾಗಿ ವ್ಯಕ್ತವಾಗಿದೆ. ಶಾಂತಿ ಸಭೆಯಲ್ಲಿ ಐನೂರಕ್ಕೂ ಹೆಚ್ಚು ಜನ ಮೇಲ್ಜಾತಿಯವರು ಸೇರಿದ್ದರು. ಹೆಚ್ಚಿನ ದಲಿತರು ಭಯದಿಂದ ಮೇಲ್ಜಾತಿಗಳ ಜೊತೆ ನಿಂತರು. ತಮ್ಮ ಸಂಕಷ್ಟಗಳಿಗೆ ಭಾಗ್ಯಮ್ಮ ಕಾರಣ ಎಂದು ಹೇಳತೊಡಗಿದರು. ಶಾಂತಿ ಸಭೆಯಲ್ಲಿ ಸಾರ್ವಜನಿಕವಾಗಿ ಭಾಗ್ಯಮ್ಮ ಮೇಲೆ ಮೇಲ್ಜಾತಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದವು, ಭಯಗೊಂಡಿದ್ದ ಕೆಳ ದಲಿತರನ್ನು ಬಲವಂತವಾಗಿ ಹಲ್ಲೆಯಲ್ಲಿ ಭಾಗವಹಿಸುವಂತೆ ಮಾಡಿದವು. ಬಹಿರಂಗವಾಗಿ ಪೊಲೀಸ್, ಜಿಲ್ಲಾಡಳಿತ ಅಧಿಕಾರಿಗಳು, ಮಾಧ್ಯಮದ ಜನರೆದುರು ಹಲ್ಲೊಗೊಳಗಾಗ ಭಾಗ್ಯಮ್ಮ ಮತ್ತು ಇನ್ನೂ ಒಂದಿಬ್ಬರು ಮಹಿಳೆಯರು ಗಾಯಗೊಂಡು ಆಸ್ಪತ್ರೆ ಸೇರಿದರು.

ಈಗ ಗಂಗೂರು ಶಾಂತ. ಊರಿನಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ. ಗಂಗೂರಿನಲ್ಲಿ ಗಲಾಟೆ ಮಾಡಿಸಿದ್ದು ಹೊರಗಿನಿಂದ ಬಂದವರು ಮೇಲ್ಜಾತಿಗಳ ತಪ್ಪಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಬೆರಳೆಣಿಕೆಯ ಕೆಲ ಮನೆಗಳನ್ನು ಬಿಟ್ಟರೆ ಮಿಕ್ಕೆಲ್ಲ ದಲಿತರು ನಾವು ಹಿಂದಿನಂತೆ ಮೇಲ್ಜಾತಿಗಳ ಜೊತೆಗೆ ಅನೋನ್ಯತೆಯಿಂದ ಬಾಳುತ್ತೇವೆ. ದೇವಸ್ಥಾನ ಪ್ರವೇಶವೂ ಬೇಡ, Gangoor-5ಒಂದೇ ಲೋಟವೂ ಬೇಡ, ಊರಿನ ಸೆಲೂನಿನಲ್ಲಿ ಕೂದಲು ಕಟ್ಟಿಂಗೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸಮಾನತೆ ಕೇಳಿದ್ದಕ್ಕೆ ಕೆಲ ದಲಿತರು ಜೈಲಿಗೆ ಹೋಗಿದ್ದಾರೆ. ಭಾಗ್ಯಮ್ಮ ಆಸ್ಪತ್ರೆಯಿಂದ ಚೇತರಿಸಿ, ಜಾಮೀನು ಪಡೆದು ತನ್ನ ತವರೂರು ಆಲೂರು ಸೇರಿಕೊಂಡಿದ್ದಾಳೆ. ಘಟನೆ ನಡೆದು ತಿಂಗಳು ತುಂಬುತ್ತಿದ್ದರೂ ಈಕೆಗೆ ಗಂಗೂರಿಗೆ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಅಲ್ಲಿ ಹೋದರೆ ಭಾಗ್ಯಮ್ಮಳಿಗೆ ಅಪಾಯ ತಪ್ಪಿದ್ದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಜಿಲ್ಲಾಡಳಿತ, ಪೊಲೀಸರು, ಬಂಡವಾಳ ಶಾಹಿ ಪಕ್ಷಗಳನ್ನು ನಿಯಂತ್ರಿಸುವ ಮೇಲ್ಜಾತಿ ರಾಜಕಾರಣಿಗಳು, ಮಾಧ್ಯಮದ ಮೇಲ್ಜಾತಿ ಮನಸ್ಸುಗಳು ಒಟ್ಟು ಸೇರಿ ಭಾಗ್ಯಮ್ಮ ಮತ್ತು ಸಂಗಾತಿಗಳದ್ದೇ ತಪ್ಪು ಎಂಬಂತೆ ಬಿಂಬಿಸಿಬಿಟ್ಟಿವೆ. ಒಂದು ಮಹತ್ವದ ಹೋರಾಟವನ್ನು ಮುರಿದು ಹಾಕಿದೆ. ರಾಷ್ಟ್ರಮಟ್ಟದ ಸುದ್ಧಿಯಾಗಬೇಕಿದ್ದ ಘಟನೆಯನ್ನು ಅಲ್ಲಿಗೆ ತಣ್ಣಗಾಗಿಸಲಾಗಿದೆ. ಊರಿನಿಂದ ಬಲವಂತವಾಗಿ ಹೊರಗಾಕಿಸಿಕೊಂಡ ಬಹಿಷ್ಕೃತೆ ಭಾಗ್ಯಮ್ಮ ದೊಡ್ಡ ಸುದ್ಧಿಯಾಗುವುದು ಯಾರಿಗೂ ಬೇಕಿಲ್ಲ.

ಅಂತಹ ಭಾಗ್ಯಮ್ಮಳನ್ನು ಡಿವೈಎಫ್ಐ ವೇದಿಕೆಯಲ್ಲಿ ನೋಡುವಾಗ ನನಗಂತೂ ಹೆಮ್ಮೆಯಾಯಿತು. ಇಂದು ಹಾಸನ ಸೇರಿದಂತೆ ರಾಜ್ಯದ ಎಲ್ಲ ಪ್ರಜಾಸತ್ತಾತ್ಮಕ ಚಳುವಳಿಗಳು ಭಾಗ್ಯಮ್ಮ ಜೊತೆಗೆ ನಿಲ್ಲಬೇಕಿದೆ. ಭಾಗ್ಯಮ್ಮ ನಿಜಕ್ಕೂ ಅಸಮಾನತೆಯ ವಿರುದ್ಧದ ಹೋರಾಟದ ಸಂಕೇತ, ತಳಮಟ್ಟದಲ್ಲಿ ಹುಟ್ಟಿ ಬಂದ ನಿಜ ನಾಯಕಿ. ಆಕೆ ಆಙಈ ಸಮ್ಮೇಳನದಲ್ಲಿ ಆಡಿದ ಒಂದು ಮಾತು ಇವತ್ತಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ದೇವಸ್ಥಾನ ನಾವು ವಂತಿಗೆ ಕೊಟ್ಟಾಗ, ಗರ್ಭಗುಡಿಯ ಕಲ್ಲು ಕಟ್ಟಿದಾಗ, ದೇವಸ್ಥಾನದ ಒಳಾಂಗಣಕ್ಕೆ ಸುಣ್ಣ ಹೊಡೆದಾಗ ದೇವರು ಯಾಕೆ ಮಲಿನಗೊಳ್ಳಲಿಲ್ಲ, ಆಗ ಯಾಕೆ ದೇವಸ್ಥಾನವನ್ನು ಇವರು ಕೆಡವಿ ಹೊಸದಾಗಿ ಕಟ್ಟಲಿಲ್ಲ. ಗಂಗೂರಿನ ಮೇಲ್ಜಾತಿಗಳ ಮನೆಯಲ್ಲಿ ನಾವು ಹೋಗಿ ಕರೆದು ಕೊಟ್ಟ ಹಾಲನ್ನು ಅವರು ಸೇವಿಸುತ್ತಾರೆ. ನಾವು ಅವರ ಜಮೀನಿನಲ್ಲಿ ಬಿತ್ತಿದ ಕಾಳಿನಿಂದ ಬೆಳೆದ ಅಕ್ಕಿ, ರಾಗಿಯನ್ನು ಮೇಲ್ಜಾತಿಗಳು ಉಣ್ಣುತ್ತಾರೆ. ಆಗ ಯಾಕೆ ಅವರ ಹೊಟ್ಟೆ, ಕರುಳು ಅಶುದ್ಧ ಆಗಲಿಲ್ಲ. ಅಶುದ್ಧಗೊಂಡ ತಮ್ಮ ಕರುಳನ್ನು ಬಗೆದು ಯಾಕೆ ಅವರು ಕಿತ್ತು ಹಾಕಲಿಲ್ಲ. ಇದು ಭಾಗ್ಯಮ್ಮಳ ಪ್ರಶ್ನೆ ಮಾತ್ರವಲ್ಲ ನಾಡಿನ ಎಲ್ಲಾ ಅಸ್ಪೃಶ್ಯತೆಗೆ ಒಳಗಾದ ಕೆಳ ಜಾತಿಗಳದ್ದು. ಈ ಪ್ರಶ್ನೆಗಳಿಗೆ ಉತ್ತರ ಸಿಗಲೇ ಬೇಕಿದೆ. ಉತ್ತರಿಸಬೇಕಾದವರು ಊರು ಬಿಡಿಸಿದ್ದಾರೆ, ಅಧಿಕಾರದ ಕುರ್ಚಿಯಲ್ಲಿ ಕೂತಿದ್ದಾರೆ.

ಸುದ್ದಿ ಪವಿತ್ರವಾದುದು… : ದಿನೇಶ್ ಅಮಿನ್ ಮಟ್ಟು

”ಟೀಕೆಗೆ ಸ್ವಾತಂತ್ರ್ಯ ಇದೆ, ಸುದ್ದಿ ಮಾತ್ರ ಪವಿತ್ರವಾದುದು.” ಇದು ಪತ್ರಕರ್ತರು ಮೊದಲು ಕಲಿತುಕೊಳ್ಳಬೇಕಾದ ಪಾಠ. ಸಾಮಾನ್ಯವಾಗಿ ನನಗಿಂತ ಕಿರಿಯ ಪತ್ರಕರ್ತರಿಗೆ ಹೇಳುತ್ತಿರುವ ಈ ಮಾತನ್ನೇ ಗೆಳೆಯ ನವೀನ್ ಸೂರಿಂಜೆ ಅವರಿಗೂ ಹೇಳುತ್ತಿದ್ದೇನೆ. naveen-shettyಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡ ಹಿನ್ನೆಲೆಯಲ್ಲಿ ಬರೆದಿರುವ ಎರಡೂ ಬರವಣಿಗೆಗಳಲ್ಲಿ ಸುದ್ದಿಯನ್ನು ತಿರುಚುವ ತುಂಟತನವನ್ನು ನವೀನ್ ಮಾಡಿದ್ದಾರೆ. ತಮ್ಮ ಮೊದಲ ಪತ್ರಕ್ಕೆ ”ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ….” ಎಂಬ ತಲೆಬರಹವನ್ನು ಅವರು ಕೊಟ್ಟಿದ್ದಾರೆ. ಆ ಪತ್ರದುದ್ದಕ್ಕೂ ಮುಸ್ಲಿಮ್ ಲೇಖಕರ ಸಂಘದ ಬಗ್ಗೆ ಹೆಚ್ಚೇನೂ ಬರೆಯದೆ, ಉದ್ದಕ್ಕೂ ಜಮಾತೆ ಇಸ್ಲಾಂ ಹಿಂದ್ ಮತ್ತು ಶಾಂತಿ ಪ್ರಕಾಶನದ ವಿರುದ್ಧ ದಾಳಿ ನಡೆಸಿದ್ದಾರೆ.

ನನ್ನ ಪ್ರತಿಕ್ರಿಯೆಯಲ್ಲಿ ”ಮುಸ್ಲಿಮ್ ಲೇಖಕರ ಸಂಘವನ್ನು ಸ್ಥಾಪಿಸಿರುವುದು ಜಮಾತೆ ಇಸ್ಲಾಮ್ ಗೆ ಸೇರಿರದ ಸಿ.ಕೆ.ಹುಸೇನ್ ಎಂಬ ಪತ್ರಕರ್ತ” ಎನ್ನುವುದನ್ನು ಉಲ್ಲೇಖಿಸಿದ್ದೆ. ಕಳೆದ 28 ವರ್ಷಗಳಿಂದ ಅಸ್ತಿತ್ವದಲ್ಲಿರುವ ಮುಸ್ಲಿಮ್ ಲೇಖಕರ ಸಂಘದಲ್ಲಿ ಸುಮಾರು 20 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿರುವ ಉಮರ್ ಅವರೂ ಜಮಾತೆ ಇಸ್ಲಾಮ್ ಸಂಘಟನೆಗೆ ಸೇರಿದವರಲ್ಲ ಎನ್ನುವುದೂ ನವೀನ್‌ಗೆ ಗೊತ್ತು. ಈ ಸತ್ಯವನ್ನು ನಿರಾಕರಿಸಲು ಹೋಗದ ನವೀನ್, ತನ್ನ ಎರಡನೇ ಪ್ರತಿಕ್ರಿಯೆಯಲ್ಲಿಯೂ ಅದೇ ”ತುಂಟತನ”ವನ್ನು ಮುಂದುವರಿಸಿದ್ದಾರೆ. ”ಜಮಾತೆ ಇಸ್ಲಾಂ ಸ್ಥಾಪಿತ ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ… ” ಎಂದೇ ಅವರು ತಮ್ಮ ಲೇಖನವನ್ನು ಪ್ರಾರಂಭಿಸುತ್ತಾರೆ. ಅವರ ಎರಡು ಲೇಖನಗಳನ್ನು ಓದಿದವರಿಗೆ ನಾನು ಜಮಾತೆ ಇಸ್ಲಾಂ ಇಲ್ಲವೇ ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಭಾಗವಹಿಸಿರಬಹುದೆಂಬ ಸಂಶಯ ಮೂಡಿದರೆ ಆಶ್ಚರ್ಯ ಇಲ್ಲ. ಸುದ್ದಿಯನ್ನು ಅಪವಿತ್ರಗೊಳಿಸಬಾರದು.

ನಾನು ಭಾಗವಹಿಸಿರುವುದು ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ. dinesh-amin-mattu”ಜಮಾತೆ ಇಸ್ಲಾಂಗೆ ಸೇರಿರುವ ಹಿದಾಯತ್ ಸೆಂಟರ್ ಕಟ್ಟಡದಲ್ಲಿ ಸಂಘದ ಕಚೇರಿ ಇರುವುದೊಂದೇ ಆ ಸಂಘಟನೆಯ ಜತೆಗೆ ಮುಸ್ಲಿಮ್ ಲೇಖಕರ ಸಂಘದ ಸಂಬಂಧ ಇರುವುದಕ್ಕೆ ನಮಗೆ ಮೇಲ್ನೋಟಕ್ಕೆ ಸಿಗುವ ಪುರಾವೆ” ಎಂದು ನನ್ನ ಪ್ರತಿಕ್ರಿಯೆಯಲ್ಲಿ ಬರೆದಿದ್ದೆ. ನವೀನ್ ತನ್ನ ಎರಡೂ ಬರವಣಿಗೆಗಳಲ್ಲಿಯೂ ಈ “ಅಪವಿತ್ರ ಸಂಬಂಧದ” ಬಗ್ಗೆ ಹೆಚ್ಚುವರಿ ಪುರಾವೆಗಳನ್ನು ಕೊಟ್ಟಿಲ್ಲ. ಹೀಗಿದ್ದರೂ ಈ ಮೂರೂ ಸಂಘಟನೆಗಳು ಒಂದೇ ಎನ್ನುವ ತೀರ್ಮಾನಕ್ಕೆ ಅಂಟಿಕೊಂಡೇ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಮುಸ್ಲಿಮ್ ಲೇಖಕರ ಸಂಘ ಒಂದು ಮೂಲಭೂತವಾದಿ ಸಂಘಟನೆ ಎನ್ನುವುದನ್ನು ನವೀನ್ ಸೂರಿಂಜೆ ಅವರು ಸಾಬೀತುಪಡಿಸಿದ್ದಲ್ಲಿ ಚರ್ಚೆಯನ್ನು ಮುಂದುವರಿಸುವೆ. ಅಲ್ಲಿಯ ವರೆಗೆ ವಿರಾಮ.

– ದಿನೇಶ್ ಅಮಿನ್ ಮಟ್ಟು

ಯಾರ ಜೊತೆ ಸಿದ್ದಾಂತದ ಮಡಿವಂತಿಕೆ ಬಿಡಬೇಕು? : ನವೀನ್ ಸೂರಿಂಜೆ

ಜಮಾತೆ ಇಸ್ಲಾಮೀ ಹಿಂದ್ ಸ್ಥಾಪಿತ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟುರವರು ಭಾಗವಹಿಸುವ ಸಂದರ್ಭದಲ್ಲಿ ಪತ್ರವೊಂದನ್ನು ಬರೆದಿದ್ದೆ. ಪತ್ರದಲ್ಲಿ ಜಮಾತೆ ಇಸ್ಲಾಮೀ ಹಿಂದ್, ಶಾಂತಿ ಪ್ರಕಾಶನ, ಮುಸ್ಲಿಂ ಲೇಖಕರ ಸಂಘದ ಉದ್ದೇಶಗಳು ಮತ್ತು ಹಿಡನ್ ಅಜೆಂಡಾಗಳ ಬಗ್ಗೆ ದಿನೇಶ್ ಅಮೀನ್ ಮಟ್ಟುರವರಿಗೆ ವಿವರಿಸಿದ್ದೆ. naveen-shettyಅವರು ಈಮೇಲ್ ಪತ್ರವನ್ನು ನೋಡದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪತ್ರ ಓದಿದ್ದರೂ ಕೂಡಾ ಭಾಗವಹಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಅವರು ಭಾಗವಹಿಸಬಾರದು ಎಂದು ಅವರ ಅಭಿಮಾನಿಯಾದ ನಾನೆಲ್ಲೂ ಒತ್ತಾಯಿಸಿಲ್ಲ. ಕೆಲವೊಂದು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದೇನೆ ಎಂದಷ್ಟೇ ಹೇಳಿದ್ದೇನೆ. ಇರಲಿ… ದಿನೇಶ್ ಅಮೀನ್ ಮಟ್ಟುರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಪತ್ರಕ್ಕೆ “ಸಿದ್ಧಾಂತದ ಮಡಿವಂತಿಕೆಗಿಂತ ಸಾರ್ವಜನಿಕ ಹಿತ ನನಗೆ ಮುಖ್ಯ” ಎಂದು ಉತ್ತರವನ್ನು ಬರೆದಿದ್ದಾರೆ. ಕೋಮುವಾದ ಮತ್ತು ಮೂಲಭೂತವಾದ ಅತಿರೇಕಕ್ಕೇರಿರುವ ಇಂದಿನ ಸಂಧರ್ಭದಲ್ಲಿ ದಿನೇಶ್ ಅಮೀನ್ ಮಟ್ಟರಂತಹ ಹಿರಿಯ ಪತ್ರಕರ್ತ, ಚಿಂತಕರ ಪತ್ರ ಚರ್ಚೆಯಾಗುವುದು ಅತೀ ಅಗತ್ಯವಾಗಿದೆ.

ಯಾರ ಜೊತೆ ಸಿದ್ದಾಂತದ ಮಡಿವಂತಿಕೆ ಬಿಡಬೇಕು? ಯಾಕೆ ?

ದಿನೇಶ್ ಅಮೀನ್ ಮಟ್ಟುರವರು ಹೇಳಿದಂತೆ ಸಾರ್ವಜನಿಕ ಹಿತದ ಸಂಧರ್ಭದಲ್ಲಿ ಸಿದ್ದಾಂತದ ಮಡಿವಂತಿಕೆ ಬಿಡಬೇಕು. ಜಾಗತೀಕರಣ, ಕೋಮುವಾದ, ಬಂಡವಾಳವಾದದ ಈ ಸಂಧರ್ಭದಲ್ಲಿ ಸಾಮಾಜಿಕ ಹಿತಕ್ಕಾಗಿ ಸಿದ್ದಾಂತದ ಮಡಿವಂತಿಕೆ ಬಿಟ್ಟು ವಿಶಾಲವಾಗಿ ನೋಡಬೇಕು ಎಂಬುದು ಅಕ್ಷರಶಃ ಸತ್ಯ. ಆದರೆ ಯಾರ ಜೊತೆ ಮಡಿವಂತಿಕೆಯನ್ನು ಬಿಟ್ಟು ವಿಶಾಲ ದೃಷ್ಠಿಕೋನದಲ್ಲಿ ಯೋಚಿಸಿ ಬೆರೆಯಬೇಕು ಎಂಬುದು ಅತೀ ಮುಖ್ಯ.

ನಾವೆಲ್ಲಾ ಪ್ರಗತಿಪರರ ಹಲವಾರು ಗುಂಪುಗಳ ಮಧ್ಯೆ ಒಂದೇ ಉದ್ದೇಶದ ಈಡೇರಿಕೆಗಾಗಿ ಸಿದ್ದಾಂತದ ಮಡಿವಂತಿಕೆ ಬಿಟ್ಟು ಒಟ್ಟು ಸೇರುವವರು ಎಂಬುದು ನನ್ನ ಭಾವನೆ. ನಮ್ಮಲ್ಲಿ ಪ್ರಗತಿಪರರು, ಜನಪರರು ಎನ್ನುವ ಹಲವಾರು ಗುಂಪುಗಳಿದ್ದರೂ ಕೂಡಾ ಕೋಮುವಾದದ ವಿರುದ್ಧ, ಮೂಲಭೂತವಾದದ ವಿರುದ್ಧ ನಾವೆಲ್ಲಾ ಲೋಹಿಯಾವಾದ, ಮಾಕ್ಸ್ ವಾದ, ಅಂಬೇಡ್ಕರ್ ವಾದ, ಗಾಂಧೀವಾದ, ಸಮಾಜವಾದ, ಜಾತ್ಯಾತೀತವಾದ, ವಿಶಾಲ ಜಾತ್ಯಾತೀತವಾದ ಗಳ ಜೊತೆ ಸಿದ್ದಾಂತದ ಮಡಿವಂತಿಕೆ ಬಿಟ್ಟು ಒಟ್ಟು ಸೇರಿದ್ದೇವೆ. ಕೋಮುವಾದದ ವಿರುದ್ಧ ಕೋಮುವಾದಿಗಳ dinesh-amin-mattuಜೊತೆ, ಮೂಲಭೂತವಾದಿಗಳ ವಿರುದ್ಧ ಮೂಲಭೂತವಾದದ ಜೊತೆ ಸಿದ್ದಾಂತದ ಮಡಿವಂತಿಕೆ ಬಿಟ್ಟು ಸೇರಿಕೊಳ್ಳುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಸಿದ್ದಾಂತದ ಮಡಿವಂತಿಕೆಯನ್ನು ಬಿಟ್ಟು ಪಕ್ಕಾ ಇಸ್ಲಾಮಿಸ್ಟ್ ಗಳು, ಮೂಲಭೂತವಾದಿಗಳ ಜೊತೆ ಬೆರೆಯುವುದು ಹೇಗೆ ಸಾಧ್ಯ ? ಮತ್ತು ಅದರಿಂದ ಸಾಧಿಸುವುದಾದರೂ ಏನನ್ನು ?

ಮುಸ್ಲಿಂ ಲೇಖಕರು ಮತ್ತು ಪ್ರಕಾಶನ ಸಂಸ್ಥೆಗಳು

”ನಮ್ಮ ಪ್ರಕಾಶನ ಸಂಸ್ಥೆಗಳು ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಪ್ರಕಟಿಸಿವೆ? ಮಾಧ್ಯಮ ಕ್ಷೇತ್ರದಲ್ಲಿ ಎಷ್ಟು ಮುಸ್ಲಿಮ್ ಪತ್ರಕರ್ತರಿಗೆ ವೃತ್ತಿಯ ಅವಕಾಶವನ್ನು ಕಲ್ಪಿಸಿವೆ? ಎಷ್ಟು ಮುಸ್ಲಿಮ್ ಲೇಖಕರ ಕತೆ-ಕವನ, ಕಾದಂಬರಿ, ಲೇಖನಗಳನ್ನು ಪ್ರಕಟಿಸುತ್ತಿವೆ? ಹಿಂದೂ ಮೂಲಭೂತವಾದದ ನಂಜು ಕಾರುವ ಪುಸ್ತಕಗಳನ್ನು ಸಾಲುಸಾಲು ಜೋಡಿಸಿಡುವ ಪುಸ್ತಕದಂಗಡಿಗಳಲ್ಲಿ ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಮಾರಾಟಕ್ಕಿಟ್ಟಿವೆ? ಎಂಬ ಪ್ರಶ್ನೆಗಳಿಗೂ ಉತ್ತರ ನೀಡಬೇಕಾಗುತ್ತದೆ” ಎಂದು ದಿನೇಶ್ ಅಮೀನ್ ಮಟ್ಟು ಕೇಳಿದ್ದಾರೆ.
ಇದು ಪಕ್ಕಾ ಜಮಾತೆಯ ಕಾರ್ಯಕರ್ತನ ಪ್ರಶ್ನೆ. ಇದೇ ಪ್ರಶ್ನೆಯನ್ನು ಗೆಳೆಯ ಜಮಾತೆಯ ಕಾರ್ಯಕರ್ತನೊಬ್ಬ ನನಗೂ ಕೇಳಿದ್ದ.

ಬೊಳುವಾರು ಮಹಮ್ಮದ್ ಕುಂಞ, ಫಕೀರ್ ಮಹಮ್ಮದ್ ಕಟ್ಪಾಡಿ, ಸಾರಾ ಅಬೂಬಕ್ಕರ್, ಬಿ ಎಂ ರಶೀದ್, ಬಿ ಎಂ ಬಶೀರ್, ಅಬ್ದುಲ್ ರಶೀದ್ ಪುಸ್ತಕಗಳನ್ನು ಯಾವುದೇ ಮೂಲಭೂತವಾದಿ ಪ್ರಕಾಶಕ ಸಂಸ್ಥೆಗಳು ಪ್ರಕಟಿಸಿದ್ದಲ್ಲ. ಇವರೆಲ್ಲಾ ಪ್ರಗತಿಪರ ಸಾಹಿತಿಗಳು ಎಂದು ಲೆಕ್ಕ ಹಾಕಿದರೂ ಮಹಮ್ಮದ್ ಕುಳಾಯಿಯವರ ಬರಹಗಳು ಉದಯವಾಣಿಯಂತಹ ಪತ್ರಿಕೆಯೂ ಪ್ರಕಟ ಮಾಡುತ್ತದೆ ಮತ್ತು ಮಹಮ್ಮದ್ ಕುಳಾಯಿಯವರೆಗೆ ದೊಡ್ಡದಾದೊಂದು ಓದುಗರ ಸಮೂಹವನ್ನು ಸೃಷ್ಠಿ ಮಾಡುತ್ತದೆ. ಇದಲ್ಲದೆ rahamath-tarikereರಹಮತ್ ತರೀಕೆರೆ, ನಯೀಮ್ ಸುರಕೋಡು, ಆರೀಫ್ ರಾಜಾರಂತಹ ಬರಹಗಾರರ ಲೇಖನಕ್ಕಾಗಿ ರಾಜ್ಯದ ಪ್ರಮುಖ ದಿನ ಪತ್ರಿಕೆಗಳು ಜಾತಕ ಪಕ್ಷಿಯಂತೆ ಕಾದು ಕುಳಿತು ಸ್ಪರ್ಧೆಯ ಭರಾಟೆಯಲ್ಲಿ ಪ್ರಕಟ ಮಾಡುತ್ತದೆ. ಪ್ರಕಾಶನ ಸಂಸ್ಥೆಗಳಂತೂ ಇವರೆಲ್ಲರ ಪುಸ್ತಕ ಪ್ರಕಟನೆಗಾಗಿ ಪರಸ್ಪರ ಸ್ಪರ್ಧೆಯನ್ನೇ ಮಾಡುತ್ತಾರೆ..

ಹಿಂದೂ ದೇವರ ಪುಸ್ತಕಗಳನ್ನು ಪ್ರಕಟ ಮಾಡುವ ಪ್ರಕಾಶನ ಸಂಸ್ಥೆಗಳು ಇದ್ದಾವೆ ಎಂಬ ಕಾರಣಕ್ಕಾಗಿ ಶಾಂತಿ ಪ್ರಕಾಶನ ಇದೆ ಎಂದರೆ ಅಭ್ಯಂತರ ಇಲ್ಲ. ಆದರೆ ಅವರಿಗೆ ನಮ್ಮವರು ರಾಯಭಾರಿಗಳಾದರೆ ನಮಗೆ ನೋವಾಗುತ್ತದೆ. ಅಹರ್ನಿಶಿ ಪ್ರಕಾಶನ, ಚಿಂತನ ಪ್ರಕಾಶನ, ಲಡಾಯಿ ಪ್ರಕಾಶನ, ನವಕರ್ನಾಟಕ ಪ್ರಕಾಶನ, ಕ್ರಿಯಾ ಪ್ರಕಾಶನದಂತಹ ಹತ್ತಾರು ಪ್ರಕಾಶನ ಸಂಸ್ಥೆಗಳು ಪ್ರಗತಿಪರ ಸಾಹಿತಿಗಳ ಸಾಹಿತ್ಯವನ್ನು ಪ್ರಕಟ ಮಾಡುತ್ತದೆ. ಇಂತಹ ಪ್ರಕಾಶನ ಸಂಸ್ಥೆಗಳೆಲ್ಲಾ ಮುಸ್ಲೀಮರ ಪುಸ್ತಕಗಳನ್ನು ಪ್ರಕಟ ಮಾಡಬೇಕು ಎಂಬ ಭರದಲ್ಲಿ ದೇವರ ಜೀತ ಮಾಡಿ ಸ್ವರ್ಗಕ್ಕೆ ಕರೆದೊಯ್ಯವ ಪುಸ್ತಕಗಳನ್ನು ಪ್ರಕಟ ಮಾಡಬೇಕೇ? ದಿನೇಶ್ ಅಮೀನ್ ಮಟ್ಟುರವರ ಈ ಪ್ರಶ್ನೆಯೇ ಅಪ್ರಸ್ತುತ.

”ಮುಸ್ಲಿಂ ಲೇಖಕರ ಸಂಘವನ್ನು ಸ್ಥಾಪಿಸಿದವರು ಜಮಾತೆ ಇಸ್ಲಾಮ್ ಹಿಂದ್ ಅಲ್ಲ. ಇದರ ಸ್ಥಾಪಕ ಅಧ್ಯಕ್ಷ ಸಿ.ಕೆ.ಹುಸೇನ್ ಎನ್ನುವ ಪತ್ರಕರ್ತ ಜಮಾತೆ ಇಸ್ಲಾಮ್ ಸಂಘಟನೆಯವರಲ್ಲ ಎನ್ನುವುದು ಗೊತ್ತಿತ್ತು. ಈಗ ಈ ಸಂಘದ ಸದಸ್ಯರಾಗಿರುವವರೆಲ್ಲರೂ ಜಮಾತೆ ಇಸ್ಲಾಮ್‌ಗೆ ಸೇರಿದವರಲ್ಲ, ಉಳಿದವರ ಜತೆಯಲ್ಲಿ ಅವರೂ ಸದಸ್ಯರಾಗಿರಬಹುದು. ಜಮಾತೆ ಇಸ್ಲಾಮ್ ಗೆ ಸೇರಿರುವ ‘ಹಿದಾಯತ್ ಸೆಂಟರ್’ ಕಟ್ಟಡದಲ್ಲಿ ಸಂಘದ ಕಚೇರಿ ಇರುವುದೊಂದೇ ಆ ಸಂಘಟನೆಯ ಜತೆಗೆ ಮುಸ್ಲಿಮ್ ಲೇಖಕರ ಸಂಘದ ಸಂಬಂಧ ಇರುವುದಕ್ಕೆ ನಮಗೆ ಮೇಲ್ನೋಟಕ್ಕೆ ಸಿಗುವ ಪುರಾವೆ” ಎನ್ನುತ್ತಾರೆ ದಿನೇಶ್ ಅಮೀನ್ ಮಟ್ಟರವರು.

ಮುಸ್ಲಿಂ ಲೇಖಕರ ಸಂಘವು ಕಟ್ಟರ್ ಇಸ್ಲಾಮಿಕ್ ವಾದಿ ಜಮಾತೆ ಇಸ್ಲಾಮೀ ಹಿಂದ್‌ನ ಘಟಕ ಎಂಬುದಕ್ಕೆ ಅಧಿಕೃತ ಪುರಾವೆ ಇಲ್ಲ. ದಿನೇಶ್ ಅಮೀನ್ ಮಟ್ಟುರವರು ಈ ಹಿಂದೆ ಹೇಳಿರುವ ಮಾತುಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕಾಗುತ್ತದೆ. ”ಕೋಮುವಾದ ಮತ್ತು ಮೂಲಭೂತವಾದ, ಪುರೋಹಿತಶಾಹಿ ಮನಸ್ಸುಗಳು ವಿವಿದ ರಂಗಗಳಲ್ಲಿ ಹಲವಾರು ವೇಷಗಳಲ್ಲಿ ಹೊಕ್ಕಿವೆ. ಆದುದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಆರ್.ಎಸ್.ಎಸ್ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಹಾಲಕ್ಷ್ಮಿ ಪೂಜೆಯ ಹೆಸರಿನಲ್ಲಿ, ಆದಿವಾಸದಿ ಮಂಚ್ ನ ಹೆಸರಿನಲ್ಲಿ, ಶಿಶುಮಂದಿರದ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಎಲ್ಲಾ ಕೋಮುವಾದಿಗಳು, ಮೂಲಭೂತವಾದಿಗಳೂ ಇದನ್ನೇ ಮಾಡುತ್ತಿದ್ದಾರೆ. ಇವೆಲ್ಲವನ್ನೂ jamate-mangaloreನಾವು ಜಾಗರೂಕತೆಯಿಂದ ಅನುಮಾನದ ದೃಷ್ಠಿಯಲ್ಲಿ ನೋಡಬೇಕು”…. ಇದು ನನ್ನ ಮಾತಲ್ಲ. ದಿನೇಶ್ ಅಮೀನ್ ಮಟ್ಟುರವೇ ಹೇಳಿದ್ದು. ಈ ಮಾತಿನಲ್ಲಿ ನಂಬಿಕೆ ಇಟ್ಟುಕೊಂಡೇ ನಾವು ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮವನ್ನು ನೋಡಬೇಕಾಗುತ್ತದೆ. ದಿನೇಶ್ ಅಮೀನ್ ಮಟ್ಟು ಬಾಗವಹಿಸಿದ ಕಾರ್ಯಕ್ರಮದಲ್ಲಿ ಜಮಾತೆ ಸದಸ್ಯರೇ ಅತ್ಯಧಿಕ ಸಂಖ್ಯೆಯಲ್ಲಿದ್ದರು ಎಂದು ಮಟ್ಟುರವರೇ ಒಪ್ಪಿಕೊಳ್ಳುತ್ತಾರೆ. ಇನ್ನೊಂದು ವಿಚಾರ ಅವರಿಗೆ ಗೊತ್ತಿಲ್ಲ. ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಣಗಣದ ಸುತ್ತ ನೀಟಾಗಿ ನಿಂತು ಸಭೀಕರನ್ನು ಮ್ಯಾನೇಜ್ ಮಾಡುತ್ತಿದ್ದ ಸ್ವಯಂ ಸೇವಕರೆಲ್ಲರೂ ಜಮಾತೆ ಸದಸ್ಯರು. ಅದೂ ಇರಲಿ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗಳನ್ನು ಪತ್ರಕರ್ತರಿಗೆ ನೀಡಿದ್ದು, ಕಾರ್ಯಕ್ರಮದ ದಿನ ಪತ್ರಕರ್ತರಿಗೆ ಫೋನಾಯಿಸಿದ್ದು, ಪತ್ರಕರ್ತರು ಕಾರ್ಯಕ್ರಮಕ್ಕೆ ಬಂದ ನಂತರ ಅವರಿಗೆ ಆಸನ, ನೀರು, ಉಪಚಾರದ ವ್ಯವಸ್ಥೆ ಮಾಡಿದ್ದು ಯಾವ ಲೇಖಕ, ಬರಹಗಾರನೂ ಅಲ್ಲ. ಅವರೆಲ್ಲಾ ಜಮಾತೆಯ ಕಾರ್ಯಕರ್ತರು. ಅಷ್ಟೇ ಅಲ್ಲ. ಕಾರ್ಯಕ್ರಮವನ್ನು ನಿರೂಪನೆ ಮಾಡಿದ್ದೂ ಜಮಾತೆಯ ಕಾರ್ಯಕರ್ತ. ಇನ್ನೂ ದಾಖಲೆಗಳ ಪುರಾವೆಗಳು ಬೇಕು ಎಂದಾರೆ ನಾವು ರಾಷ್ಟ್ರೋತ್ಥಾನ ಪರಿಷತ್, ಹೊಸದಿಗಂತ, ಶಿಶುಮಂದಿರಗಳಿಗೆ ಆರ್‌ಎಸ್‌ಎಸ್ ನಂಟು ಇರುವ ಬಗ್ಗೆ ಅಧಿಕೃತ ಪುರಾವೆಯನ್ನು ಹುಡುಕಿದಂತಾಗುತ್ತದೆ ಮತ್ತು ದಿನೇಶ್ ಅಮೀನ್ ಮಟ್ಟು ಈ ಹಿಂದೆ ಹೇಳಿದ ಮಾತಿಗೆ ಅವಮಾನವಾಗುತ್ತದೆ.

”ಯು.ಆರ್.ಅನಂತಮೂರ್ತಿ, ಅಬ್ದುಲ್ ರಷೀದ್, ಬಿ.ಎ.ಸನದಿ, ಅಕ್ಬರ್ ಅಲಿ, ರಮ್ಜಾನ್ ದರ್ಗಾ, ಪ್ರೊ.ಶೇಖ್ ಅಲಿ, ಪ್ರೊ.ಗಜೇಂದ್ರಗಢ, ಕವಿ ನಿಸಾರ್ ಅಹ್ಮದ್ ಮೊದಲಾದವರು ಮುಸ್ಲಿಂ ಲೇಖಕರ ಸಂಘದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಾಹಿತಿಗಳಾದ ದೇವನೂರು ಮಹಾದೇವ, ಜವರೇಗೌಡ ಹಾಗೂ ನಿಡುಮಾಮಿಡಿ ಸ್ವಾಮಿಗಳು, ತರಳಬಾಳು ಸ್ವಾಮಿಗಳು ಸಂಘದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. devanurಇದೇ ಸಂಘ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕವಿ ನಿಸಾರ್ ಅಹ್ಮದ್. ಅದರಲ್ಲಿ ಬಾನು ಮುಷ್ತಾಕ್ ಸೇರಿದಂತೆ ಅನೇಕ ಮುಸ್ಲಿಮ್ ಲೇಖಕ-ಲೇಖಕಿಯರು ಪಾಲ್ಗೊಂಡಿದ್ದರು. ಸಂಘದ ಸಮಾರಂಭಗಳಲ್ಲಿ ನಮ್ಮ ನಡುವಿನ ಪ್ರಗತಿಪರ ಚಿಂತಕರಾದ ಶಿವಸುಂದರ್, ಫಣಿರಾಜ್, ಜಿ.ರಾಜಶೇಖರ್ ಅವರಲ್ಲದೆ ಪತ್ರಕರ್ತರಾದ ಈಶ್ವರಯ್ಯ, ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಎನ್.ಎ.ಎಂ.ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು. ನಾನು ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿನ್ನೆಲೆ ಮೊದಲ ಕಾರಣ” ಎಂದು ದಿನೇಶ್ ಅಮೀನ್ ಮಟ್ಟು ತಮ್ಮ ಭಾಗವಹಿಸುವಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದಿನೇಶ್ ಅಮೀನ್ ಮಟ್ಟು ಭಾಗವಹಿಸಬಾರದು ಎಂದು ನಾನು ಎಲ್ಲೂ ಒತ್ತಾಯಿಸಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿನೇಶ್ ಅಮೀನ್ ಮಟ್ಟು ಒಬ್ಬ ಸಮಯ ಸಾಧಕ ಎಂದು ಕಮೆಂಟಿಗನ ಮಾತನ್ನು ಯಾವ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲ. ದಿನೇಶ್ ಅಮಿನ್ ಮಟ್ಟುರವರ ಬರಹಗಳು, ಚಿಂತನೆಗಳು ಸದಾ ನಮಗೆ ಮಾರ್ಗದರ್ಶಿ.

ಇರಲಿ… ದಿನೇಶ್ ಅಮೀನ್ ಮಟ್ಟು ಮೇಲೆ ಉಲ್ಲೇಖಿಸಿದ ಹೆಸರುಗಳು ಮುಸ್ಲಿಂ ಲೇಖಕರ ಸಂಘದಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕೆ ಅವರ ನಿಲುವುಗಳನ್ನು ಒಪ್ಪಲಾಗುವುದಿಲ್ಲ. ಜಮಾತೆಯ ಕಾರ್ಯಕ್ರಮಕ್ಕೆ ಮುಸ್ಲೀಮರ ಕಟ್ಟಾ ವಿರೋಧಿ ವಜ್ರದೇಹಿ ಸ್ವಾಮಿಜಿ, KPN photoಪೇಜಾವರ ಸ್ವಾಮೀಜಿಯನ್ನೂ ಕರೆದಿದ್ದಾರೆ. ಶಾಂತಿ ಪ್ರಕಾಶನದ ಕಾರ್ಯಕ್ರಮ ಸ್ವಾಗತ ಸಮಿತಿಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡರನ್ನು ಎಲ್ಲಾ ಜಿಲ್ಲೆಗಳಲ್ಲಿ ಪದಾಧಿಕಾರಿಯನ್ನಾಗಿ ಮಾಡಿದ್ದಾರೆ. ಪ್ರಗತಿಪರರನ್ನೂ ಕರೆಯುತ್ತಾರೆ. ಇದೆಲ್ಲಾ ತಮ್ಮ ಧರ್ಮ ವಿಸ್ತರಣೆಯ ತಂತ್ರಗಾರಿಕೆಗಳು ಎಂಬುದನ್ನು ದಿನೇಶ್ ಸರ್‌ಗೆ ನಾನು ಹೇಳಬೇಕಿಲ್ಲ.

ಮತ್ತು ದಿನೇಶ್ ಅಮೀನ್ ಮಟ್ಟುರವರು ಉಲ್ಲೇಖಿಸಿದ ಹಲವಾರು ಚಿಂತಕರು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಗುರುತಿಸಿಕೊಂಡವರು. ಆದರೂ ದಿನೇಶ್ ಅಮೀನ್ ಮಟ್ಟು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾವನ್ನು ಯಾಕೆ ವಿರೋಧಿಸುತ್ತಾರೆ. ವಿರೋಧಿಸಲೇ ಬೇಕು. ಅವರೆಲ್ಲಾ ಬಂದಿದ್ದಾರೆ ಎಂಬುದನ್ನು ಇಟ್ಟುಕೊಂಡೇ ದೇವರ ಮತ್ತು ಮೂಲಭೂತವಾದಿ ಸಿದ್ದಾಂತದ ಮಾರ್ಕೆಟ್ ಮಾಡಲಾಗುತ್ತದೆ. ಈ ಬಾರಿಯ ರಾಯಭಾರಿ ನೀವಾಗಿದ್ದೀರಿ. ಮುಂದಿನ ವರ್ಷ ಮತ್ತೊಬ್ಬ ಪ್ರಗತಿಪರ ಚಿಂತಕನನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಯುವಾಗ…….. ”ಕಳೆದ ವರ್ಷ ದಿನೇಶ್ ಅಮೀನ್ ಮಟ್ಟು ಬಂದಿದ್ದರು. ಈ ವರ್ಷ ನೀವು ಬರಬೇಕು” ಎನ್ನುತ್ತಾರೆ. ಹೀಗೇ.. ಮುಂದುವರೆಯುತ್ತದೆ…

ದಿನೇಶ್ ಅಮೀನ್ ಮಟ್ಟು ಮುಂದುವರೆದು ಸಮರ್ಥನೆ ನೀಡುತ್ತಾ ಸಂಘಟಕರು ಮತ್ತು ಅಮೀನ್ ಮಟ್ಟು ಮಧ್ಯೆ ನಡೆದ ಮಾತುಕತೆಯನ್ನು ವಿವರಿಸುತ್ತಾರೆ. ಅದು ಹೀಗಿದೆ…

“‘ಈ ಬಾರಿ ಬೊಳುವಾರು ಅವರನ್ನು ಸನ್ಮಾನಿಸಲು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರವಾಗಿತ್ತು. ಆದರೆ ಅವರು ಅಮೆರಿಕದಲ್ಲಿರುವುದರಿಂದ ಸಾಧ್ಯವಾಗಲಿಲ್ಲ. ಸಾರಾ ಅಬೂಬಕರ್ ಒಪ್ಪಿಕೊಂಡರೆ ನಾವು ಖಂಡಿತ ಅವರನ್ನು ಕರೆಸಿ ಗೌರವಿಸುತ್ತೇವೆ’ ಎಂದು Sara-Abubakarಸಂಘದ ಕಾರ್ಯದರ್ಶಿ ಉಮರ್ ನನಗೆ ತಿಳಿಸಿದರು. ಅದೇ ರೀತಿ ಪ್ರಗತಿಪರರೆನಿಸಿಕೊಂಡ ಲೇಖಕರ ಕೃತಿಗಳಿಗೆ ಯಾಕೆ ಪ್ರಶಸ್ತಿ ನೀಡಿಲ್ಲ ಎಂದೂ ಅವರನ್ನು ಕೇಳಿದ್ದೆ. ‘ಪ್ರಶಸ್ತಿಗೆ ಅರ್ಜಿ ಹಾಕಲು ಪತ್ರಿಕಾ ಪ್ರಕಟಣೆ ನೀಡುತ್ತೇವೆ, ಆ ಅರ್ಜಿಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅವರು ಪ್ರಶಸ್ತಿಗೆ ಆಯ್ಕೆಯಾಗದಿರಲು ಅರ್ಜಿ ಹಾಕದಿರುವುದು ಕಾರಣ ಇರಬಹುದು’ ಎಂದು ಉಮರ್ ಹೇಳಿದರು. ಪ್ರಶಸ್ತಿಯ ಆಯ್ಕೆಗಾಗಿ ಅವರು ರೂಪಿಸಿರುವ ವ್ಯವಸ್ಥೆ ತಪ್ಪಿರಬಹುದು, ಆದರೆ ಪೂರ್ವಗ್ರಹದಿಂದ ಇಂತಹದ್ದೊಂದು ವ್ಯವಸ್ಥೆ ರೂಪಿಸಿದ್ದಾರೆಂದು ನನಗೆ ಅನಿಸುತ್ತಿಲ್ಲ” ಎಂದಿದ್ದಾರೆ…

ಈ ಮಾತುಕತೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ”ಸಾರಾ ಅಬೂಬಕ್ಕರ್ ಒಪ್ಪಿಕೊಂಡರೆ ನಾವು ಖಂಡಿತ ಕರೆಸಿ ಗೌರವಿಸುತ್ತೇವೆ” ಎಂಬ ಮಾತನ್ನು ವಿಮರ್ಶೆಗೆ ಒಳಪಡಿಸಬೇಕು. ಜಮಾತೆಯವರು ಒಪ್ಪಿಕೊಂಡರೆ ಸಾರಾ ಅಬೂಬಕ್ಕರ್ ಮಾತ್ರವಲ್ಲ ಕಟ್ಟಾ ಹಿಂದೂ ಕೋಮುವಾದಿಯನ್ನೂ ಕಾರ್ಯಕ್ರಮಕ್ಕೆ ಕರೆಸುತ್ತಾರೆ. ಸಾಹಿತಿ ಏರ್ಯಾ ಲಕ್ಷ್ಮಿನಾರಾಯಣರನ್ನು ಕರೆಸಿಕೊಂಡಿಲ್ವೆ. ಆದರೆ ಸಾರಾ ಅಬೂಬಕ್ಕರ್ ಯಾಕೆ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ ಎಂದು ನನಗಿಂತ ಚೆನ್ನಾಗಿ ದಿನೇಶ್ ಅಮೀನ್ ಮಟ್ಟುರವರಿಗೆ ಗೊತ್ತು. ”ಅವರು ಮೂಲಭೂತವಾದಿಗಳು. ಅವರ ಜೊತೆ ನಾನ್ಯಾವತ್ತೂ ಗುರುತಿಸಿಕೊಳ್ಳುವುದಿಲ್ಲ” ಎಂಬುದು ಸಾರಾ ಅಬೂಬಕ್ಕರ್ ನಿಲುವು. ಅದಕ್ಕೆ ಮುಸ್ಲಿಂ ಲೇಖಕರ ಸಂಘ ಬಿಕ್ಕಳಿಸಿ ಹೇಳುತ್ತಿದೆ… “ಒಪ್ಪಿದರೆ ಸನ್ಮಾನಿಸುತ್ತೇವೆ”

ಮುಸ್ಲಿಂ ಲೇಖಕರ ಸಂಘದ ಸಂವಿದಾನ, ಅಲ್ಲಿ ಎರಡು ಭಾಗವಾಗಿ ಮಾಡಿದ್ದ ಸಭಾಂಗಣದಲ್ಲಿ ಒಂಡೆದೆ ಮಹಿಳೆಯರು ಮತ್ತು ಮತ್ತೊಂದೆಡೆ ಪುರುಷರು. ಅವರಿಬ್ಬರೂ ಒಟ್ಟಿಗೆ ಕುಳಿತುಕೊಳ್ಳದಂತೆ ಸಂಭಾಳಿಸೋ ಶಿಸ್ತುಬದ್ಧ ಜಮಾತೆ ಕಾರ್ಯಕರ್ತರು. ಇದೆಲ್ಲದರ ಮಧ್ಯೆ ಮುಸ್ಲಿಂ ಮಹಿಳೆಯರನ್ನು ಕಂಡು ಉಂಟಾದ ಆಶಾವಾದದ ಬಗ್ಗೆ ನಾನೇನೂ ಹೇಳುವುದಿಲ್ಲ. ಅವೆಲ್ಲಾ ಬಾಲಿಶ ಮಾತುಗಳು ಸರ್. ನೀವು ಆರ್‌ಎಸ್‌ಎಸ್ ಅಂಗ ಸಂಸ್ಥೆಗಳಾಗಿರುವ ಸಾಹಿತ್ಯಿಕ ಸಾಮಾಜಿಕ ಸಂಘಟನೆಗಳ ಸಂವಿಧಾನವನ್ನೇನಾದರೂ ತೆರೆದು ನೋಡಿದರೆ ನೀವು ದೇಶ ಸೇವೆಗಾಗಿ PFI-mangaloreನಾಳೆಯೇ ಆ ಸಂಘಟನೆ ಸೇರಬೇಕು ಎಂಬ ನಿಲುವಿಗೆ ಬರಬೇಕಾಗುತ್ತದೆ ಸರ್. ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಸಂವಿಧಾನ ನೋಡಬೇಕು ಸರ್. ಇದೆಲ್ಲಾ ಸಂಘಟನೆಗಳು ಭಾರತದ ಸಂವಿಧಾನವನ್ನು ಮೀರಿಸುವ ರೀತಿಯಲ್ಲಿ ಸಂವಿಧಾನ ರಚಿಸುವ ಮೂರ್ಖತನವನ್ನು ಮಾಡಲ್ಲ. ಇವರು ಹಿಡನ್ ಅಜೆಂಡಾಗಳನ್ನು ಇಟ್ಟುಕೊಂಡು ಸಾಗುತ್ತಾರೆ. ನೀವೇ ಹೇಳಿದಂತೆ ಇವೆರೆಲ್ಲರನ್ನೂ ತೀರಾ ಜಾಗರೂಕತೆಯಿಂದ ಅನುಮಾನದ ದೃಷ್ಠಿಯಲ್ಲಿ ನೋಡಬೇಕಾಗುತ್ತದೆ.

ಕೋಮುವಾದ ಮೂಲಭೂತವಾದ ನಿವಾರಣೆಗಾಗಿ ಸಿದ್ದಾಂತದ ಮಡಿವಂತಿಕೆ ಬಿಟ್ಟು ಪತ್ರಕರ್ತರು, ಆಕ್ಟಿವಿಸ್ಟ್‌ಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಮತ್ತೊಬ್ಬ ಮೂಲಭೂತವಾದಿ ಜೊತೆ ನಮ್ಮ ಸಿದ್ದಾಂತದ ಮಡಿವಂತಿಕೆ ಇಟ್ಟುಕೊಳ್ಳೋಣ ಎಂಬ ಆಶಯದೊಂದಿಗೆ ಇಷ್ಟೆಲ್ಲಾ ಚರ್ಚೆ ಮಾಡಿದ್ದೇನೆ..

ನಿಮ್ಮ ಎದುರು ನಿಂತು ಮಾತನಾಡಲೂ ಅರ್ಹನಲ್ಲದಷ್ಟು ಕಿರಿಯವನಾದ ಮತ್ತು ನಿಮ್ಮ ಬರಹಗಳನ್ನು ಓದಿಕೊಂಡೇ ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಈ ಕಿರಿಯನಿಂದ ದೊಡ್ಡ ಮಾತುಗಳು ಬಂದಿದ್ದರೆ ಕ್ಷಮೆ ಇರಲೆಂದು ಕೇಳಿಕೊಳ್ಳುತ್ತಾ…..

– ನವೀನ್ ಸೂರಿಂಜೆ

ದಿನೇಶ್ ಅಮಿನ್‌ಮಟ್ಟು ಪ್ರತಿಕ್ರಿಯೆ : ಸಿದ್ಧಾಂತದ ಮಡಿವಂತಿಕೆಗಿಂತ ಸಾರ್ವಜನಿಕ ಹಿತ ನನಗೆ ಮುಖ್ಯ

– ದಿನೇಶ್ ಅಮಿನ್‌ಮಟ್ಟು

ತನಗೆ ತಪ್ಪೆಂದು ಕಂಡ ನನ್ನ ನಡವಳಿಕೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದ ನನ್ನ ಮೆಚ್ಚಿನ ಕಿರಿಯ ಗೆಳೆಯ ನವೀನ್ ಸೂರಿಂಜೆ ಅವರಿಗೆ ಅಭಿನಂದನೆಗಳು. ಆದರೆ ಸದಾ ಶಿಷ್ಯಾವಸ್ಥೆಯಲ್ಲಿಯೇ ಉಳಿದುಬಿಡಬೇಕೆಂದು ನಾನು ನಿರ್ಧರಿಸಿರುವುದರಿಂದ ನವೀನ್ ನೀಡಿರುವ ‘ಗುರು’ವಿನ ಪಟ್ಟವನ್ನು ವಿನಮ್ರತೆಯಿಂದ ನಿರಾಕರಿಸುತ್ತಿದ್ದೇನೆ.

ನವೀನ್ ನನಗೆ ಮೇಲ್ ಮಾಡಿದ್ದ ಪತ್ರವನ್ನು ಓದದೆ ಇದ್ದದ್ದು ನನ್ನ ಮೊದಲ ತಪ್ಪು. naveen-shettyಇಂತಹ ಸಂದರ್ಭದಲ್ಲಿ ಪೋನ್ ಮಾಡುವ ನವೀನ್ ಅದನ್ನು ಮಾಡದೆ ಇದ್ದದ್ದು ಅವರದ್ದೂ ತಪ್ಪು. ಆ ಪತ್ರವನ್ನು ಓದಿದ್ದರೂ “ಮುಸ್ಲಿಮ್ ಲೇಖಕರ ಸಂಘ”ದ ಸಮಾರಂಭಕ್ಕೆ ಹೋಗುತ್ತಿದ್ದೆ. ಆದರೆ ನವೀನ್ ಕೇಳಿರುವ ಪ್ರಶ್ನೆಗಳನ್ನು ಖಂಡಿತ ಭಾಷಣದಲ್ಲಿ ಎತ್ತುತ್ತಿದ್ದೆ. ಬೇರೆ ಯಾರೋ ಗೆಳೆಯರು ‘ಲೇಖಕರು ಕೂಡಾ ಜಾತಿ-ಧರ್ಮದ ಹೆಸರಲ್ಲಿ ಸಂಘಟನೆಯನ್ನು ಕಟ್ಟಿಕೊಳ್ಳುವುದು ಎಷ್ಟು ಸರಿ?’ ಎನ್ನುವ ಇನ್ನೂ ಒಂದು ಪ್ರಶ್ನೆಯನ್ನೂ ಎತ್ತಿದ್ದರು. ಯೋಚಿಸಬೇಕಾದ ಪ್ರಶ್ನೆ. ಆದರೆ ಈ ಪ್ರಶ್ನೆಗಳನ್ನು ಕೇಳುವವರು, ನಮ್ಮ ಪ್ರಕಾಶನ ಸಂಸ್ಥೆಗಳು ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಪ್ರಕಟಿಸಿವೆ? ಮಾಧ್ಯಮ ಕ್ಷೇತ್ರದಲ್ಲಿ ಎಷ್ಟು ಮುಸ್ಲಿಮ್ ಪತ್ರಕರ್ತರಿಗೆ ವೃತ್ತಿಯ ಅವಕಾಶವನ್ನು ಕಲ್ಪಿಸಿವೆ? ಎಷ್ಟು ಮುಸ್ಲಿಮ್ ಲೇಖಕರ ಕತೆ-ಕವನ, ಕಾದಂಬರಿ, ಲೇಖನಗಳನ್ನು ಪ್ರಕಟಿಸುತ್ತಿವೆ? ಹಿಂದೂ ಮೂಲಭೂತವಾದದ ನಂಜು ಕಾರುವ ಪುಸ್ತಕಗಳನ್ನು ಸಾಲುಸಾಲು ಜೋಡಿಸಿಡುವ ಪುಸ್ತಕದಂಗಡಿಗಳಲ್ಲಿ ಮುಸ್ಲಿಮ್ ಲೇಖಕರ ಎಷ್ಟು ಪುಸ್ತಕಗಳನ್ನು ಮಾರಾಟಕ್ಕಿಟ್ಟಿವೆ? ಎಂಬ ಪ್ರಶ್ನೆಗಳಿಗೂ ಉತ್ತರ ನೀಡಬೇಕಾಗುತ್ತದೆ.

ಮುಸ್ಲಿಮ್ ಲೇಖಕರ ಸಂಘ ನನಗೆ ಅಪರಿಚಿತವಾದುದೇನಲ್ಲ, ಅದರ ಚಟುವಟಿಕೆಗಳ ಬಗ್ಗೆ ಒಂದಷ್ಟು ಮಾಹಿತಿ ನನಗಿತ್ತು. ಮೊದಲನೆಯದಾಗಿ ಇದನ್ನು ಸ್ಥಾಪಿಸಿದವರು ಜಮಾತೆ ಇಸ್ಲಾಮ್ ಹಿಂದ್ ಅಲ್ಲ. ಇದರ ಸ್ಥಾಪಕ ಅಧ್ಯಕ್ಷ ಸಿ.ಕೆ.ಹುಸೇನ್ ಎನ್ನುವ ಪತ್ರಕರ್ತ ಜಮಾತೆ ಇಸ್ಲಾಮ್ ಸಂಘಟನೆಯವರಲ್ಲ ಎನ್ನುವುದು ಗೊತ್ತಿತ್ತು. ಈಗ ಈ ಸಂಘದ ಸದಸ್ಯರಾಗಿರುವವರೆಲ್ಲರೂ ಜಮಾತೆ ಇಸ್ಲಾಮ್‌ಗೆ ಸೇರಿದವರಲ್ಲ, ಉಳಿದವರ ಜತೆಯಲ್ಲಿ ಅವರೂ ಸದಸ್ಯರಾಗಿರಬಹುದು. ಜಮಾತೆ ಇಸ್ಲಾಮ್ ಗೆ ಸೇರಿರುವ ‘ಹಿದಾಯತ್ ಸೆಂಟರ್’ ಕಟ್ಟಡದಲ್ಲಿ ಸಂಘದ ಕಚೇರಿ ಇರುವುದೊಂದೇ ಆ ಸಂಘಟನೆಯ ಜತೆಗೆ ಮುಸ್ಲಿಮ್ ಲೇಖಕರ ಸಂಘದ ಸಂಬಂಧ ಇರುವುದಕ್ಕೆ ನಮಗೆ ಮೇಲ್ನೋಟಕ್ಕೆ ಸಿಗುವ ಪುರಾವೆ.

ಮುಸ್ಲಿಮ್ ಲೇಖಕರ ಸಂಘ ಮುಸ್ಲಿಮ್ ಲೇಖಕರಿಗೆ ನೀಡಿದ್ದ ಮೊದಲ ಪ್ರಶಸ್ತಿಯನ್ನು ಪ್ರದಾನ ಮಾಡಿದವರು nudisiri-ananthamurthyಹಿರಿಯ ಸಾಹಿತಿಗಳಾಗಿರುವ ಯು.ಆರ್.ಅನಂತಮೂರ್ತಿ, ಆ ವರ್ಷ ಪ್ರಶಸ್ತಿ ಸ್ವೀಕರಿಸಿದವರು ಇನ್ನೊಬ್ಬ ಪ್ರಖ್ಯಾತ ಮುಸ್ಲಿಮ್ ಲೇಖಕ ಅಬ್ದುಲ್ ರಷೀದ್, ನಂತರದ ದಿನಗಳಲ್ಲಿ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಬಿ.ಎ.ಸನದಿ, ಅಕ್ಬರ್ ಅಲಿ, ರಮ್ಜಾನ್ ದರ್ಗಾ, ಪ್ರೊ.ಶೇಖ್ ಅಲಿ, ಪ್ರೊ.ಗಜೇಂದ್ರಗಢ, ಕವಿ ನಿಸಾರ್ ಅಹ್ಮದ್ ಮೊದಲಾದವರು ಸೇರಿದ್ದಾರೆ. ಸಾಹಿತಿಗಳಾದ ದೇವನೂರು ಮಹಾದೇವ, ಜವರೇಗೌಡ ಹಾಗೂ ನಿಡುಮಾಮಿಡಿ ಸ್ವಾಮಿಗಳು, ತರಳಬಾಳು ಸ್ವಾಮಿಗಳು ಸಂಘದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂಘ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕವಿ ನಿಸಾರ್ ಅಹ್ಮದ್. ಅದರಲ್ಲಿ ಬಾನು ಮುಷ್ತಾಕ್ ಸೇರಿದಂತೆ ಅನೇಕ ಮುಸ್ಲಿಮ್ ಲೇಖಕ-ಲೇಖಕಿಯರು ಪಾಲ್ಗೊಂಡಿದ್ದರು. ಸಂಘದ ಸಮಾರಂಭಗಳಲ್ಲಿ ನಮ್ಮ ನಡುವಿನ ಪ್ರಗತಿಪರ ಚಿಂತಕರಾದ ಶಿವಸುಂದರ್, ಫಣಿರಾಜ್, ಜಿ.ರಾಜಶೇಖರ್ ಅವರಲ್ಲದೆ ಪತ್ರಕರ್ತರಾದ ಈಶ್ವರಯ್ಯ, ಮನೋಹರ ಪ್ರಸಾದ್, ಚಿದಂಬರ ಬೈಕಂಪಾಡಿ, ಎನ್.ಎ.ಎಂ.ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು. ನಾನು ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿನ್ನೆಲೆ ಮೊದಲ ಕಾರಣ. ನಾನು ಉಲ್ಲೇಖಿಸಿರುವ ಸಾಹಿತಿಗಳು, ಚಿಂತಕರು, ಪತ್ರಕರ್ತರೆಲ್ಲರೂ “ಸಮಯ ಸಾಧಕರು’ ಎನ್ನುವುದಾದರೆ (ನವೀನ್ ಪತ್ರಕ್ಕೆ ಪ್ರತಿಕ್ರಿಯಿಸಿದವರೊಬ್ಬರು ಈ ಆರೋಪ ಮಾಡಿದ್ದರು) ‘ಸಮಯಸಾಧಕ’ ನೆಂಬ ಕೀರ್ತಿಕಿರೀಟ ನನ್ನ ತಲೆಯ ಮೇಲೂ ಇರಲಿ.

ಸಾರಾ ಅಬೂಬಕರ್, ಬೊಳುವಾರು, ಕಟ್ಪಾಡಿ ಮೊದಲಾದವರನ್ನು ಯಾಕೆ ಗುರುತಿಸಿ ನೀವು ಗೌರವಿಸಿಲ್ಲ ಎಂದು ನಾನೂ ಸಂಘಟಕರನ್ನು Sara-Abubakarಪ್ರಶ್ನಿಸಿದ್ದೆ. ‘ಈ ಬಾರಿ ಬೊಳುವಾರು ಅವರನ್ನು ಸನ್ಮಾನಿಸಲು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರವಾಗಿತ್ತು. ಆದರೆ ಅವರು ಅಮೆರಿಕದಲ್ಲಿರುವುದರಿಂದ ಸಾಧ್ಯವಾಗಲಿಲ್ಲ. ಸಾರಾ ಅಬೂಬಕರ್ ಒಪ್ಪಿಕೊಂಡರೆ ನಾವು ಖಂಡಿತ ಅವರನ್ನು ಕರೆಸಿ ಗೌರವಿಸುತ್ತೇವೆ’ ಎಂದು ಸಂಘದ ಕಾರ್ಯದರ್ಶಿ ಉಮರ್ ನನಗೆ ತಿಳಿಸಿದರು. ಅದೇ ರೀತಿ ಪ್ರಗತಿಪರರೆನಿಸಿಕೊಂಡ ಲೇಖಕರ ಕೃತಿಗಳಿಗೆ ಯಾಕೆ ಪ್ರಶಸ್ತಿ ನೀಡಿಲ್ಲ ಎಂದೂ ಅವರನ್ನು ಕೇಳಿದ್ದೆ. ‘ಪ್ರಶಸ್ತಿಗೆ ಅರ್ಜಿ ಹಾಕಲು ಪತ್ರಿಕಾ ಪ್ರಕಟಣೆ ನೀಡುತ್ತೇವೆ, ಆ ಅರ್ಜಿಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅವರು ಪ್ರಶಸ್ತಿಗೆ ಆಯ್ಕೆಯಾಗದಿರಲು ಅರ್ಜಿ ಹಾಕದಿರುವುದು ಕಾರಣ ಇರಬಹುದು’ ಎಂದು ಉಮರ್ ಹೇಳಿದರು. ಪ್ರಶಸ್ತಿಯ ಆಯ್ಕೆಗಾಗಿ ಅವರು ರೂಪಿಸಿರುವ ವ್ಯವಸ್ಥೆ ತಪ್ಪಿರಬಹುದು, ಆದರೆ ಪೂರ್ವಗ್ರಹದಿಂದ ಇಂತಹದ್ದೊಂದು ವ್ಯವಸ್ಥೆ ರೂಪಿಸಿದ್ದಾರೆಂದು ನನಗೆ ಅನಿಸುತ್ತಿಲ್ಲ.

ಇಷ್ಟಕ್ಕೆ ಸುಮ್ಮನಾಗದ ನಾನು ‘ಮುಸ್ಲಿಮ್ ಲೇಖಕರ ಸಂಘ’ದ ಸಂವಿಧಾನವನ್ನು ತರಿಸಿ ಓದಿದೆ. ಅದರಲ್ಲಿರುವ ಸಂಘದ ಉದ್ದೇಶದ ಮುಖ್ಯಾಂಶಗಳು ಹೀಗಿವೆ:

  1. ಮುಸ್ಲಿಮ್ ಸಮುದಾಯದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವುದು
  2. ಮುಸ್ಲಿಮ್ ಸಮುದಾಯದಲ್ಲಿ ಧರ್ಮದ ನೈಜ ತಿಳುವಳಿಕೆಯನ್ನು ಮೂಡಿಸುವುದು ಮತ್ತು ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಪ್ರಯತ್ನಿಸುವುದು
  3. ದೇಶಬಾಂಧವರಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸುವುದು ಮತ್ತು ಅವರಲ್ಲಿರಬಹುದಾದ ತಪ್ಪು ಕಲ್ಪನೆಯನ್ನು ದೂರೀಕರಿಸಲು ಪ್ರಯತ್ನಿಸುವುದು.
  4. ಮಾಧ್ಯಮಗಳಲ್ಲಿ ಪ್ರಕಟವಾಗುವ ಧಾರ್ಮಿಕ ವಿಧಿನಿಯಮಗಳ ಬಗೆಗಿನ ಅಪಪ್ರಚಾರಕ್ಕೆ ಸೂಕ್ತ ಉತ್ತರ ನೀಡುವುದು
  5. ಒಳಿತಿನ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳೊಂದಿಗೆ ಸಹಕರಿಸುವುದು
  6. ಮುಸ್ಲಿಮ್ ಸಂಘ ಸಂಸ್ಥೆಗಳ ನಡುವ ಐಕ್ಯ ಸಾಮರಸ್ಯ ಮೂಡಿಸಲು ಪ್ರಯತ್ನಿಸುವುದು
  7. ದೇಶಬಾಂಧವರ ಮಧ್ಯೆ ಕೋಮು ಸಾಮರಸ್ಯವನ್ನು ಬಲಪಡಿಸಲು ಪ್ರಯತ್ನಿಸುವುದು….

ಈ ಸಂವಿಧಾನದ ಆಧಾರದಲ್ಲಿ ಮುಸ್ಲಿಮ್ ಲೇಖಕರ ಸಂಘ ‘ಕೋಮುವಾದಿ ಸಂಘಟನೆ’ ಎಂಬ ತೀರ್ಮಾನಕ್ಕೆ ಬರಲು ನನಗೆ ಸಾಧ್ಯವಾಗಲಿಲ್ಲ. ಇನ್ನು ನವೀನ್ ಸೂರಿಂಜೆ ಅವರು ಉಲ್ಲೇಖಿಸಿರುವುದು ‘ಶಾಂತಿ ಪ್ರಕಾಶನ’ದ ಪುಸ್ತಕಗಳನ್ನು. ಇದೇ ಚರ್ಚೆಗೆ ಹೆಚ್ಚು ಗ್ರಾಸ ಒದಗಿಸಿರುವುದು. ಈ ಪ್ರಕಾಶನ ಸಂಸ್ಥೆಗೂ ಮುಸ್ಲಿಮ್ ಲೇಖಕರ ಸಂಘಕ್ಕೂ ಸಂಬಂಧ ಇರುವುದಕ್ಕೆ ನನಗೆ ಪುರಾವೆಗಳು ಸಿಕ್ಕಿಲ್ಲ. shantiprakashanaಸಂಘದ ಪದಾಧಿಕಾರಿಗಳು ಕೂಡಾ ಈ ಸಂಬಂಧವನ್ನು ನಿರಾಕರಿಸುತ್ತಾರೆ. ನಾನು ಭಾಗವಹಿಸಿದ್ದ ಸಮಾರಂಭದ ವೇದಿಕೆಯಲ್ಲಿ ಜಮಾತೆ ಇಸ್ಲಾಮ್ ಹಿಂದ್ ಇಲ್ಲವೇ ಶಾಂತಿ ಪ್ರಕಾಶನದ ಯಾವ ಬ್ಯಾನರ್, ಭಿತ್ತಿಪತ್ರಗಳಿರಲಿಲ್ಲ. ಸಮಾರಂಭದ ಸಂಘಟಕರಲ್ಲಿ ಯಾರೂ ತಪ್ಪಿಯೂ ಈ ಸಂಸ್ಥೆಗಳ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ತುಂಬಿತುಳುಕಾಡುತ್ತಿದ್ದ ಪುರಭವನದಲ್ಲಿ ಸೇರಿದವರಲ್ಲಿ ಬಹುಸಂಖ್ಯೆಯಲ್ಲಿ ಜಮಾತೆ ಇಸ್ಲಾಮ್ ಸದಸ್ಯರಿದ್ದರು ಎಂಬ ಸ್ನೇಹಿತರ ಸಂಶಯವನ್ನು ಸಂಘಟಕರೂ ನಿರಾಕರಿಸಿಲ್ಲ.

ಕೊನೆಯದಾಗಿ ನಾನು ಮುಸ್ಲಿಮ್ ಲೇಖಕರ ಸಂಘದ ಸಮಾರಂಭದಲ್ಲಿ ಭಾಗವಹಿಸಲು ಇನ್ನೂ ಒಂದು ಕಾರಣ ಇದೆ. ಸಿದ್ದಾಂತಗಳ ಬಗ್ಗೆ ನನಗೆ ಮಡಿವಂತಿಕೆ ಇಲ್ಲ. ಸಾರ್ವಜನಿಕ ಹಿತ ಮತ್ತು ಸಿದ್ದಾಂತಗಳ ನಡುವೆ ಆಯ್ಕೆ ಎದುರಾದಾಗ ನಾನು ಸಾರ್ವಜನಿಕ ಹಿತವನ್ನೇ ಆಯ್ಕೆ ಮಾಡುತ್ತೇನೆ. ಯಾಕೆಂದರೆ ಕಾಲಾಂತರದಲ್ಲಿ ಸಿದ್ಧಾಂತಗಳು ಬದಲಾಗುತ್ತವೆ. ‘ಜಾತಿಯೇ ಇಲ್ಲ, ವರ್ಗವೇ ಎಲ್ಲ’ ಎನ್ನುತ್ತಿದ್ದ ಕಮ್ಯುನಿಸ್ಟ್ ಗೆಳೆಯರು ಈಗ ಜಾತಿ ಆಧಾರದಲ್ಲಿಯೇ ಚುನಾವಣೆಯಲ್ಲಿ ಟಿಕೆಟ್ ಹಂಚುವ ಸಿದ್ದಾಂತವನ್ನು ಒಪ್ಪಿಕೊಂಡ ನಂತರ ಅದನ್ನು ಜಾತಿವಾದಿ ಪಕ್ಷ ಎಂದು ಹೀಗಳೆಯಬಹುದೇ? ಅದೇ ರೀತಿ ಬ್ರಾಹ್ಮಣ-ಬನಿಯಾ ಪಕ್ಷ ಎಂಬ ಆರೋಪಕ್ಕೆ ಬಲಿಯಾಗಿದ್ದ ಭಾರತೀಯ ಜನತಾ ಪಕ್ಷ ಶೂದ್ರವರ್ಗಕ್ಕೆ ಸೇರಿರುವ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಎಂದು ಘೋಷಿಸುವ ಮೂಲಕ ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಕಾರಣಕ್ಕೆ ಅದನ್ನು ಜಾತ್ಯತೀತ ಪಕ್ಷ ಎಂದು ಸ್ವೀಕರಿಸಬಹುದೇ?

ಕ್ಷಿಪ್ರಗತಿಯಲ್ಲಿ ಬದಲಾಗುತ್ತಲೇ ಇರುವ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳು ಒಮ್ಮೊಮ್ಮೆ ನಮ್ಮನ್ನು ತಕ್ಷಣಕ್ಕೆ ನಿರ್ಧಾರಕ್ಕೆ ಬರಲಾಗದಷ್ಟು ಸಂಕೀರ್ಣತೆಯ ಕಗ್ಗಂಟಿನಲ್ಲಿ ಕಟ್ಟಿಹಾಕುತ್ತವೆ. ಕಾಲವೊಂದೇ ನಮ್ಮ ಸರಿ-ತಪ್ಪುಗಳ ನಿಜವಾದ ತೀರ್ಪುಗಾರ. ಮುಸ್ಲಿಮ್ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನ್ನ ನಿರ್ದಾರದ ಸರಿ-ತಪ್ಪುಗಳನ್ನು ಈ ಕಾಲವೇ ನಿರ್ಧರಿಸಬಹುದು.

ಆದರೆ ಮೊನ್ನೆಯ ಸಮಾರಂಭದಲ್ಲಿ ಪುರುಷರಷ್ಟೆ ಸಮಸಂಖ್ಯೆಯಲ್ಲಿ ಸೇರಿರುವ ಬುರ್ಖಾಧಾರಿ ಸೋದರಿಯರನ್ನು ಕಂಡಾಗ ನನ್ನಲ್ಲೊಂದು ಆಶಾವಾದ ಹುಟ್ಟಿಕೊಂಡದ್ದನ್ನು ನಾನು ಹೇಳದಿರಲಾರೆ. ಸಂಘದ ಕಾರ್ಯಕ್ರಮಕ್ಕೆ ಪ್ರಾರಂಭದ ದಿನಗಳಲ್ಲಿ ಮುಸ್ಲಿಮ್ ಮಹಿಳೆಯರೇ ಬರುತ್ತಿರಲಿಲ್ಲವಂತೆ. ನಂತರದ ದಿನಗಳಲ್ಲಿ ಬಂದರೂ ಅವರು ಕೆಳಗೆ ಗಂಡಸರ ಜತೆ ಕೂರದೆ ಮೇಲಿನ ಮಹಡಿಯಲ್ಲಿ ಪ್ರತ್ಯೇಕವಾಗಿ ಕೂರುತ್ತಿದ್ದರಂತೆ, ಅದರ ನಂತರ ಅವರನ್ನು ಕೆಳಗೆ ಕೂರಿಸಿ ಅವರೆದುರು ಪರದೆಯೊಂದನ್ನು ನೇತುಹಾಕುತ್ತಿದ್ದರಂತೆ, ಕಳೆದ ವರ್ಷ ಹಿಂದಿನ ಸಾಲಿನಲ್ಲಿ ಬಂದು ಕೂತಿದ್ದರಂತೆ. ಈ ಬಾರಿ ಪುರುಷರಷ್ಟೇ ಸಂಖ್ಯೆಯಲ್ಲಿ ಮುಸ್ಲಿಮ್ ಮಹಿಳೆಯರೂ ಭಾಗವಹಿಸಿದ್ದರು. ವೇದಿಕೆಯಲ್ಲಿ ಇಬ್ಬರು ಮುಸ್ಲಿಮ್ ಮಹಿಳೆಯರು ನಮ್ಮೊಡನಿದ್ದರು. dinesh-amin-mattu-2ಅವರಲ್ಲೊಬ್ಬರಿಗೆ ನನ್ನ ಕೈಯಿಂದಲೇ ಪ್ರಶಸ್ತಿಯನ್ನು ಕೊಟ್ಟೆ. ಇನ್ನೊಬ ಕವಯಿತ್ರಿ ಎರಡು ಕವನಗಳನ್ನು ಓದಿದರು. ಮೊದಲ ಪುಟ್ಟ ಕವನ ‘ಪರಪುರುಷ’ನಾದ ನನ್ನ ಹೆಸರನ್ನು ಪೂರ್ಣವಾಗಿ ಉಲ್ಲೇಖಿಸಿ ನನ್ನ ಬರವಣಿಗೆಯ ಕುರಿತು ಬರೆದುದಾಗಿತ್ತು. ಯಾರಿಗೂ ಕಾಣದ ರೀತಿಯಲ್ಲಿ ಪರದೆಯಾಚೆ ಕೂತಿದ್ದ ಮುಸ್ಲಿಮ್ ಮಹಿಳೆಯರು ಕಣ್ಣುಕುಕ್ಕುವ ಫ್ಲಡ್ ಲೈಟ್ ಮುಂದೆ ವೇದಿಕೆಯಲ್ಲಿ ಅನ್ಯಧರ್ಮದ ಪುರುಷರ ಜತೆ ಕೂರುವ ಮತ್ತು ಕವನ ಓದುವ ವರೆಗೆ ಸಾಗಿಬಂದಿರುವ ಮಂಗಳೂರಿನ ಮುಸ್ಲಿಮ್ ಸೋದರಿಯರ ಬಾಳಪಯಣದ ಬಗ್ಗೆ ಆಶಾವಾದ ಇಟ್ಟುಕೊಳ್ಳದೆ ಇರಲು ಸಾಧ್ಯವೇ? ಮಹಿಳಾ ದಿನಾಚರಣೆಯನ್ನು ಇನ್ನಷ್ಟು ಭರವಸೆಯಿಂದ ಆಚರಿಸಲು ಬೇರೆ ಕಾರಣಗಳು ಯಾಕೆ ಬೇಕು?

ಸಣ್ಣ ಪತ್ರಿಕೆಗಳ ಉಳಿವು ಮತ್ತು ಸರ್ಕಾರದ ಇಚ್ಚಾಶಕ್ತಿ

 -ಎನ್. ರವಿಕುಮಾರ್, ಶಿವಮೊಗ್ಗ

ಭಾರತದ ಮಾಧ್ಯಮ ಲೋಕ (Electronic & Print Media) ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ತಂತ್ರಜ್ಞಾನ ಆಧುನೀಕರಣ ದ ನಾಗಾಲೋಟಕ್ಕೆ ತನ್ನನ್ನು ತಾನು ಸಮರ್ಥವಾಗಿ ಒಡ್ಡಿಕೊಳ್ಳುವತ್ತ ದಾಪುಗಾಲು ಹಾಕತೊಡಗಿದೆ. ಭಾರತದ ಮಾಧ್ಯಮಕ್ಷೇತ್ರಕ್ಕೆ ವಿದೇಶಿ ಬಂಡವಾಳ ಹೂಡಿಕೆಯಿಂದ ಪ್ರಸ್ತಾಪಗಳು ನಡೆಯುತ್ತಿರುವ ಸಂದರ್ಭದ ಜೊತೆಗೆ ದೇಶದ ಬಂಡವಾಳ ಶಾಹಿಗಳು, ರಾಜಕೀಯ ಅಧಿಕಾರಸ್ಥರು ಮಾಧ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಲಾಭದ ವೃತ್ತಿಪರ ಕ್ಷೇತ್ರವನ್ನಾಗಿಸಿಕೊಳ್ಳತೊಡಗಿದ್ದಾರೆ. ಮಾಧ್ಯಮ ಕ್ಷೇತ್ರ ಇಂದು tv-mediaಉದ್ದಿಮೆಯಾಗಿ ಬೆಳಯತೊಡಗಿದೆ. ಒಂದು ಕಾಲದಲ್ಲಿ ಸೇವಾಕ್ಷೇತ್ರವಾಗಿ ಗುರುತಿಸಲ್ಪಡುತ್ತಿದ್ದ ಮಾಧ್ಯಮ ಕ್ಷೇತ್ರ ಇಂದು ಕೋಟ್ಯಾಂತರ ರೂ.ಗಳ ಬಂಡವಾಳ ಹೂಡಿಕೆಯ, ಲಾಭ ತೆಗೆಯುವ ಕೈಗಾರಿಕೆ ಮತ್ತು ವಾಣಿಜ್ಯ ವಲಯವಾಗಿ ಎದ್ದು ನಿಲ್ಲತೊಡಗಿದೆ.

ಭಾರತದ ಪತ್ರಿಕೋದ್ಯಮ ದೇಶದ ಸ್ವಾತಂತ್ರ್ಯದ ಮಹಾಆಶಯಗಳ ನೆಲೆಯಲ್ಲಿ ಸೈದ್ದಾಂತಿಕ ಪ್ರಜ್ಞೆಯಿಂದ ಹುಟ್ಟಿದ್ದು ಇತಿಹಾಸ. ಸ್ವತಂತ್ರ ಭಾರತದ ಪತ್ರಿಕೋದ್ಯಮ ತನ್ನದೆ ಆದ ವಿಶಿಷ್ಟ ರೂಪದಲ್ಲಿ ಬೆಳೆದು ನಿಂತಿದೆ. ದೇಶದಲ್ಲಿ ಈಗ 94067 ಪತ್ರಿಕೆಗಳು ಭಾರತೀಯ ವೃತ್ತ ಪತ್ರಿಕೆ ನೋಂದಣಿ ಇಲಾಖೆಯಲ್ಲಿ (Registrar of Newspapers for India) ನೋಂದಣಿಯಾಗಿವೆ. ಇತರೆ ಕ್ಷೇತ್ರಗಳಲ್ಲಿರುವಂತೆ ಮಾಧ್ಯಮ ಕ್ಷೇತ್ರದಲ್ಲೂ ಪೈಪೋಟಿಯ ಯುಗ ಆರಂಭಗೊಂಡಿದೆ. ಇಂತಹ ಕಾಲ ಘಟ್ಟದಲ್ಲಿ ಕನ್ನಡ ಭಾಷಾ ಪತ್ರಿಕೋದ್ಯಮಕ್ಕೆ ಗಟ್ಟಿ ನೆಲೆಯನ್ನು ಕೊಟ್ಟಿರುವ ಸಣ್ಣ (ಜಿಲ್ಲಾ ಮಟ್ಟ) ಮತ್ತು ಮಧ್ಯಮ ಪತ್ರಿಕೆಗಳ (ಪ್ರಾದೇಶಿಕ) ಬೇರುಗಳು ಸಡಿಲಗೊಳ್ಳತೊಡಗಿವೆ. ಅಧುನೀಕರಣದ ನಾಗಾಲೋಟ, ಸಣ್ಣ ಪತ್ರಿಕೆಗಳ ಅಸ್ತಿತ್ವವನ್ನೆ ಅಲುಗಾಡಿಸತೊಡಗಿದ್ದರೆ, ಇಂದಿನ ಸ್ಪರ್ಧಾತ್ಮಕ ಯುಗ ಸಣ್ಣ ಪತ್ರಿಕಗಳಿಗೆ ಬಹುದೊಡ್ಡ ಸವಾಲುಗಳನ್ನೆ ಮುಂದಿಟ್ಟಿದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ತಂತ್ರಜ್ಞಾನ. ಇಂದಿನ ವಾಣಿಜ್ಯೀಕರಣದ ಮನೋಧರ್ಮದ ಇಕ್ಕಟ್ಟಿನಲ್ಲಿ ಸಿಲುಕಿರುವ ಸಣ್ಣ ಪತ್ರಿಕೆಗಳು ಅವಸಾನದ ಆತಂಕವನ್ನೆ ಎದುರಿಸುವಂತಾಗಿದೆ.

ಆತ್ಮ ವಂಚನೆಯಿಲ್ಲದೆ ನಾವುಗಳು ನಮ್ಮನ್ನು ವಿಮರ್ಶೆಗೊಳಪಡಿಸಿಕೊಳ್ಳಬೇಕಿದೆ. ಟಿಆರ್‌ಪಿ ಹಿಂದೆ ಬಿದ್ದಿರುವ ವಾಹಿನಿಗಳು, ಜಾಹೀರಾತು ಕಂಪನಿಗಳ ಮರ್ಜಿಯನ್ನೆ ಅವಲಂಬಿಸಿಕೊಂಡರುವ ಪತ್ರಿಕೆಗಳು ಸಮಾಜ ಮುಖಿಯಾದ ನೈಜ ಆಶಯಗಳನ್ನು, ಸಧೃಢ ಜನಾಭಿಪ್ರಾಯವನ್ನು ಜನರ ಮನಸ್ಸಿನಲ್ಲಿ ಬಿತ್ತುವಲ್ಲಿ ವಿಮುಖರಾಗುತ್ತಿವೆ ಎಂಬುದನ್ನು ನೋವಿನಿಂದ ಅರಗಿಸಿಕೊಳ್ಳುತ್ತಲೆ ಇವುಗಳ ಮಧ್ಯೆಯೆ ಈಜುತ್ತಿರುವ ಸಣ್ಣ ಮತ್ತು tv-mediaಮಧ್ಯಮ ಪತ್ರಿಕೆಗಳ ಪಾಡು ಹೇಳತೀರದಂತಾಗಿದೆ. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಅಸ್ತಿತ್ವಕ್ಕೆ ಕನ್ನಡ ಸಾಹಿತ್ಯದಷ್ಟೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಭಾಷಾ ಪತ್ರಿಕೋದ್ಯಮದ ಕೊಡುಗೆ ಇದೆ. ಕೇವಲ ಒಂದು ಸೀಮಿತ ಪ್ರದೇಶ, ಜಿಲ್ಲಾ ಅಥವಾ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿರುವ ಸಣ್ಣ ಪತ್ರಿಕೆಗಳು ದಿನೆ ದಿನೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳತೊಡಗಿವೆ. ತಂತ್ರಜ್ಞಾನದ ವೇಗಕ್ಕೆ ತಕ್ಷಣವೆ ತನ್ನನ್ನು ತಾನು ತುರ್ತಾಗಿ ಒಗ್ಗಿಸಿಕೊಳ್ಳಲಾಗದ, ಮತ್ತೊಂದೆಡೆ ಬಂಡವಾಳಶಾಹಿಗಳ ಕಂಪನಿ ಶೇರ್‌ಗಳಲ್ಲಿ ನಡೆಯುವ ರಾಜ್ಯ ಮಟ್ಟದ ಪತ್ರಿಕೆಗಳ ದಾಳಿಯಿಂದಾಗಿ ಸಣ್ಣ ಪತ್ರಿಕೆಗಳು ನೆಲೆ ಕಳೆದುಕೊಳ್ಳತ್ತಿವೆ. ಬೇಕು-ಬೇಡಗಳ ಆಯ್ಕೆಗೆ ಅವಕಾಶವಿಲ್ಲದಂತೆ ಅಮರಿಕೊಳ್ಳತ್ತಿರುವ ತಂತ್ರಜ್ಞಾನ ಬೆಳೆದಷ್ಟೆ ದುಬಾರಿಕೂಡ. ಸಣ್ಣ ಪತ್ರಿಕೆಗಳು ಮೂಲತಃ ಬಂಡವಾಳದ ಕೊರತೆಯನ್ನು ಎದುರಿಸುತ್ತಲೆ ಉಸಿರಾಡುತ್ತಿರುತ್ತವೆ. ಮಾರುಕಟ್ಟೆಯ ಸೀಮಿತ ವಿಸ್ತರಣೆಯ ಮಿತಿಯನ್ನು ಅವಲಂಬಿಸಿಕೊಂಡು ತಂತ್ರಜ್ಞಾನದ ವೇಗಕ್ಕೆ ಒಡ್ಡಿಕೊಳ್ಳುವುದು ಕಷ್ಟಕರ. ಇತ್ತ ಬದುಕಲೂ ಆಗದೆ, ಸಾಯಲೂ ಆಗದೆ ವಿಲವಿಲ ಒದ್ದಾಡುವ ಸ್ಥಿತಿ ಸಣ್ಣ ಪತ್ರಿಕೆಗಳದ್ದಾಗಿದೆ. ಆಯಾ ಕಾಲಕ್ಕೆ ಮಾಧ್ಯಮ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಸಣ್ಣ ಪತ್ರಿಕೆಗಳು ಮೈಗೊಡಿಸಿಕೊಂಡು ಎದ್ದು ನಿಲ್ಲಬೇಕಾದರೆ ಇಂದು ಸರ್ಕಾರದ ನೆರವು ಬೇಕೆ ಬೇಕು.

ಸಣ್ಣ ಪತ್ರಿಕೆಗಳ ಸ್ವರೂಪವಾದರೂ ಹೇಗಿದೆ ಗೊತ್ತಾ? ಬಹಳಷ್ಟು ಸಣ್ಣ ಪತ್ರಿಕೆಗಳು ಒನ್ ಮ್ಯಾನ್ ಆರ್ಮಿಯಂತೆ ಓದುಗನ ಅಕ್ಷರ ದಾಹವನ್ನು ತೀರಿಸುತ್ತಿವೆ. ಇಲ್ಲಿ ಪತ್ರಿಕೆಯ ಮಾಲೀಕ, ಪ್ರಕಾಶಕ, ಸಂಪಾದಕ ಹುದ್ದೆಯಿಂದ ಹಿಡಿದು ಪತ್ರಿಕಾಲಯದ ಕಸ ಹೊಡೆಯುವ ಕೆಲಸವನ್ನು ಒಬ್ಬನೆ ನಿರ್ವಹಿಸುವ ಸ್ಥಿತಿ ಇದ್ದೆ ಇದೆ. ಅಥವಾ ಒಂದು ಕುಟುಂಬವೆ ದಿನವಿಡಿ ದುಡಿದು ಧಣಿಯುವ ಸನ್ನಿವೇಶಗಳು ಕಾಣಸಿಗುತ್ತವೆ. ಸಣ್ನ ಪತ್ರಿಕೆಗಳು ದೊಡ್ಡ ದೊಡ್ಡ ಪತ್ರಿಕೆಗಳಿಗೆ, ಚಾನಲ್‌ಗಳಿಗೆ ಗುಣ ಮಟ್ಟದ ವರದಿಗಾರರನ್ನು ಅಣಿಗೊಳಿಸಿಕೊಡುವ ಕಾರ್ಖಾನೆಗಳಂತಾಗಿವೆ. ಪತ್ರಿಕೋದ್ಯಮ ಪದವಿ ಮುಗಿಸಿಕೊಂಡು ಪ್ರಥಮವಾಗಿ ಸಣ್ಣ ಪತ್ರಿಕೆಗಳನ್ನು ಎಡತಾಕುವವರನ್ನು ತಿದ್ದಿ ತೀಡಿ ನಿಪುಣಗೊಳಿಸುತ್ತಿದ್ದಂತೆ ಭರ್ಜರಿ ಸಂಬಳ, ಸವಲತ್ತುಗಳ ರಾಜ್ಯ ಮಟ್ಟದ ಪತ್ರಿಕೆ, ವಾಹಿನಿಗಳಿಗೆ ವಲಸೆ ಹೋಗುತ್ತಿದ್ದಾರೆ. ಸಣ್ಣ ಪತ್ರಿಕೆಗಳಲ್ಲಿನ ಅಲ್ಪ ಭವಿಷ್ಯದೊಂದಿಗೆ ಯಾರು ತಾನೆ ಕೆಲಸ ಮಾಡಲು ಇಷ್ಟ ಪಡುತ್ತಾರೆ? ಅದೆಲ್ಲಕ್ಕಿಂತ ಆರ್ಥಿಕ ಸಂಪನ್ಮೂಲದ ಕೊರತೆ ಸಣ್ಣ ಪತ್ರಿಕೆಗಳನ್ನು ಹೈರಾಣಗೊಳಿಸಿದೆ.

ರಾಜ್ಯ ಮಟ್ಟದ ಪತ್ರಿಕೆಗಳಿಗಿರುವಂತೆ ಸಣ್ಣ ಪತ್ರಿಕೆಗಳಿಗೆ ಜಾಹೀರಾತಿನ ದೊಡ್ಡ ಹರಿವು ಇರುವುದಿಲ್ಲ. ಸ್ಥಳೀಯ ಸಂಸ್ಥೆಗಳು, kannada-news-channelsಉದ್ದಿಮೆದಾರರನ್ನು (ಜಾಹೀರಾತಿಗಾಗಿ) ಅವಲಂಬಿಸಿದರೂ ಪ್ರಾದೇಶಿಕ ಮಿತಿಯ ಕಾರಣ ನಿರೀಕ್ಷಿತ ಆದಾಯ ಬರುವುದು ಸಾಧ್ಯವಿಲ್ಲ. ಅಲ್ಲದೆ ರಾಜ್ಯ ಮಟ್ಟದ ಪತ್ರಿಕೆಗಳ ಜಿಲ್ಲಾ ಅವೃತ್ತಿಗಳು ಜಾಹೀರಾತುದಾರರನ್ನು ಆಕರ್ಷಿಸುತ್ತಾ ತಮ್ಮಡೆಗೆ ಸೆಳೆದುಕೊಳ್ಳತೊಡಗಿವೆ. ಇನ್ನೂ ಉಳಿದಿರುವುದು ಸಣ್ಣ ಪತ್ರಿಕೆಗಳ ಪಾಲಿಗೆ ಚಂದಾದಾರರು ಮಾತ್ರ. ಆದರೆ ಇಂದಿನ ತಂತ್ರಜ್ಞಾನ- ಆಧುನೀಕರಣದ ಬಿರುಗಾಳಿ ನಮ್ಮ ಓದುಗ ಸಮೂಹವನ್ನೆ ಸಮ್ಮೋಹನಗೊಳಿಸಿ ಬಿಟ್ಟಿದೆ. ಟಿ.ವಿ, ಮೊಬೈಲ್ , ಐಪ್ಯಾಡ್, ಪೋರ್ಟಲ್‌ಗಳಲ್ಲಿ ಇಂದಿನ ಪೀಳಿಗೆ ಮೈಮರೆತು ಹೋಗಿದೆ. ಅತ್ಯಂತ ಅಪಾಯಕಾರಿ ಎಂದರೆ ಓದುಗ ಸಂಸ್ಕೃತಿಯನ್ನೆ ಇಂದಿನ ತಂತ್ರಜ್ಞಾನ ನಾಶ ಮಾಡತೊಡಗಿದೆ. “ನೋಡುವ” ಮತ್ತು “ಕೇಳುವ” ಸಂವಹನವನ್ನಷ್ಟೆ ಮೈಗೂಡಿಸಿಕೊಳ್ಳುತ್ತಿರುವ ಇಂದಿನ ಯುವ ಸಮುದಾಯ ಓದುವ ಮತ್ತು ಬರೆಯು ಕ್ರೀಯಶೀಲತೆಯನ್ನು ಮರೆಯ‍ತೊಡಗಿದೆ. ದಿನಪತ್ರಿಕೆಗಳಿಗೆ ದಿನಬೆಳಗ್ಗೆ ಕಾಯುವ ಕಾಲ ಮುಗಿದು ಹೋಗಿದೆ. ಓದುಗ ವಲಯ ಜಾಗತೀಕರಣದ ಆಧುನಿಕ ಸಂವಹನ ಸಾಧನಗಳನ್ನು ಅವಲಂಬಿಸಿ ಕೊಂಡು ತನ್ನ ಸ್ವರೂಪವನ್ನು ಬದಲಿಸಿಕೊಂಡು ಸಣ್ಣ ಪತ್ರಿಕೆಗಳಿಂದ ದೂರವೆ ಉಳಿದಿದೆ. ಇಂದು ಸಣ್ಣ ಪತ್ರಿಕೆಗಳು ಉಚಿತವಾಗಿ ಹಂಚಿ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್‍ಯತೆಗೆ ಬಿದ್ದಿವೆ. ಹೀಗಿರುವಾಗ ಸಣ್ಣ ಪತ್ರಿಕೆಗಳ ಉಳಿವಾದರೂ ಹೇಗೆ?

ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಮಾಧ್ಯಮ. ಆರೋಗ್ಯ ಪೂರ್ಣ ಪ್ರಜಾಪ್ರಭುತ್ವಕ್ಕೆ ಇದಲ್ಲದೆ ಮತ್ತೊಂದು ಕಾವಲು ನಾಯಿ ಇರಲು ಸಾಧ್ಯವಿಲ್ಲ. ಆದರೆ ಇದರ ಹಿತ ಕಾಪಾಡ ಬೇಕಾದ ಸರ್ಕಾರ (ಶಾಸಕಾಂಗ) ಅನುಸರಿಸುತ್ತಿರುವ ನೀತಿ ಸಣ್ಣ ಪತ್ರಿಕೆಗಳ ಪಾಲಿಗೆ ಮಾರಕವಾಗುತ್ತಿರುವುದು ದುರದೃಷ್ಟಕರ. ಕರ್ನಾಟಕದ ರಾಜ್ಯ ಸರ್ಕಾರ ಕಳೆದ ವರ್ಷ “ಜಾಹೀರಾತು ನೀತಿ-2013” ವೊಂದನ್ನು ಜಾರಿಗೊಳಿಸಲು ಮುಂದಾಯಿತು. ಹೌದು ಯಾವುದೇ ಸರ್ಕಾರಕ್ಕೆ ಯಾವುದೇ ವಲಯದ ಬಗ್ಗೆ ಒಂದು ನಿರ್ಧಿಷ್ಟ ನೀತಿ-ನಿರೂಪಣೆಗಳು ಇರಬೇಕು. ಆದರೆ ನೀತಿ -ನಿರೂಪಣೆಗಳು ಸಾಮಾಜಿಕ ಜವಾಬ್ದಾರಿಗಳನ್ನು ಫ್ರತಿಫಲಾಪೇಕ್ಷೆ ಇಲ್ಲದೆ ನಿರ್ವಹಿಸುತ್ತಿರುವ ವಲಯದ ಹಿತವನ್ನು ಮತ್ತು ಅವುಗಳ ಬಲವರ್ಧನೆಯ ಕಲ್ಯಾಣವನ್ನು ಒಳಗೊಳ್ಳುವಿಕೆಯಾಗಿರಬೇಕು. ಜಾಹೀರಾತು ನೀತಿ-2013 ಬಹುತೇಕ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಕತ್ತು ಹಿಸುಕುವ ಹಿಡನ್ ಅಜೆಂಡಾವೆ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. (ಜಾಹೀರಾತು ನೀತಿ ವಿರೋಧಿಸಿ ಕರ್ನಾಟಕ ರಾಜ್ಯ ಕಾರ್‍ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಪತ್ರಿಕಾ ಸಂಘಟನೆಗಳ ಪ್ರತಿಭಟನೆಯ ಫಲವಾಗಿ ಸರ್ಕಾರ ಪರಿಷ್ಕರಿಸಲು ಮುಂದಾಗಿದೆ.) ಪತ್ರಿಕೆಗಳಿಗೆ ಜಾಹೀರಾತು ಮತ್ತಿತರ ಸವಲತ್ತುಗಳನ್ನು ನೀಡಲು ಸರ್ಕಾರ ಜಾರಿಗೆ ತಂದ ಜಾಹಿರಾತು ನೀತಿ ವಿಶೇಷವಾಗಿ ಸಣ್ಣ ಅದರಲ್ಲೂ ಭಾಷಾ ಪತ್ರಿಕೋದ್ಯಮಕ್ಕೆ ದುಬಾರಿಯೆ ಆಗಿತ್ತು. ಯಾವುದೇ ಸರ್ಕಾರ ಕೇವಲ ಆರ್ಥಿಕ ಹೊರೆ ತಗ್ಗಿಸುವ ಕಾರಣ ಮುಂದಿಟ್ಟುಕೊಂಡು ಪತ್ರಿಕೆಗಳಿಗೆ ನೀತಿಯ ಹೆಸರಿನಲ್ಲಿ ಕಡಿವಾಣ ಹಾಕಲು ಹೊರಟ್ಟಿದ್ದು ಮಾತ್ರ ಕ್ಷುಲ್ಲಕ ವೆನಿಸಿತ್ತು.

ಸರ್ಕಾರದ ಜನಪರ ಕೆಲಸಗಳನ್ನು, ಜನರಿಗೆ ಮತ್ತು ಸರ್ಕಾರದ ಬಗ್ಗೆ ಜನರಿಗಿರಬಹುದಾದ ಜನಾಭಿಪ್ರಾಯಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುವ ಪತ್ರಿಕೆಗಳ ಹಿತ ಕಾಯುವುದು ಸರ್ಕಾರದ ಕರ್ತವ್ಯ ಕೂಡ, ಸರ್ಕಾರದ ಸಾಧನೆಗಳನ್ನು ಜನರಿಗೆ ಜಾಹೀರಾತು ಮೂಲಕ ತಲುಪಿಸುವಾಗ ಪತ್ರಿಕೆಗಳಿಗೆ ಆರ್ಥಿಕ ಸಹಾಯ ದಕ್ಕುವುದಲ್ಲದೆ ಅಧಿಕಾರದಲ್ಲಿರುವ ಪಕ್ಷಗಳಿಗೆ ರಾಜಕೀಯ ಲಾಭವೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮುಂದಿನ ದಿನಗಳು ಉಳ್ಳವರ ಪಾಲಿಗೆ ಮಾತ್ರ ಇರುತ್ತವೆ. ಯಾವೂಬ್ಬ ಬಂಡವಾಳಗಾರ ಮಾತ್ರ ಜಿಲ್ಲಾ ಮಟ್ಟದ ಯಾ ಪ್ರಾದೇಶಿಕ ಮಟ್ಟದ ಪತ್ರಿಕೆಗಳ ಸ್ಥಾಪನೆಗೆ ಮುಂದಾಗುತ್ತಾನೆ. ಅದೂ ಉದ್ಯಮವಾಗಿ ಲಾಭತರುವ ಷರತ್ತಿನ ಮೇಲೆಯೆ. ಇದಲ್ಲದೆ ಸಣ್ಣ ಪತ್ರಿಕೆಗಳನ್ನು ನಡೆಸಲು ಯಾರೂ ಮುಂದೆ ಬರುವುದಿಲ್ಲ ,

ನಿಜ, ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಪತ್ರಿಕಾ ಕ್ಷೇತ್ರದಲ್ಲೂ “ಕಪ್ಪು ಕುರಿಗಳು” ಇದ್ದೆ ಇವೆ. ಅವುಗಳ ನಿಯಂತ್ರಣಕ್ಕೆ ಮೇಟಿ ಬೇಕೆ ಬೇಕು. ಇಂದು ಪತ್ರಿಕೋದ್ಯಮದ ಗಂಧ-ಗಾಳಿ ಗೊತ್ತಿಲ್ಲದವರೆಲ್ಲಾ ಪತ್ರಿಕೆ ಶುರುವಿಟ್ಟುಕೊಂಡು ಏನೆಲ್ಲಾ ಮಾಡುತ್ತಿರುವುದನ್ನು ಮರೆ ಮಾಚಿದರೆ ಅದು ಆತ್ಮ ವಂಚನೆಯಾದೀತು. ಪೀತ ಪತ್ರಿಕ್ಯೋದ್ಯಮ ನೈಜ ಪತ್ರಿಕೋದ್ಯಮವನ್ನೂ ಅನುಮಾನಿಸುವಂತಹ ಸನ್ನಿವೇಶವನ್ನು ತಂದಿಟ್ಟಿದೆ. ಭ್ರಷ್ಟ ರಾಜಕಾರಣಿಗಳಂತೆ, ಅಧಿಕಾರಶಾಹಿಗಳಂತೆ ಭ್ರಷ್ಟ ಪತ್ರಕರ್ತರು ಇಲ್ಲಿದ್ದಾರೆ. ಇಲ್ಲಿ ಕಾನೂನಿಗೆ ಯಾರೂ ಅತೀತರಲ್ಲ. ಅಂತಹವರನ್ನು ಹತ್ತಿಕ್ಕದಿದ್ದರೆ ಪತ್ರಿಕಾ ಕ್ಷೇತ್ರ ಕೂಡ ಇನ್ನಷ್ಟು ಕಲುಷಿತ ಗೊಳ್ಳುತ್ತವೆ. ಪತ್ರಿಕಾ ಕ್ಷೇತ್ರದ ಘನತೆ-ಗೌರವ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ದತೆ ತೋರಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ಜಾಹೀರಾತು ನೀತಿ ಹೆಸರಿನಲ್ಲಿ ಸಣ್ಣ ಪತ್ರಿಕೆಗಳನ್ನು ಹತ್ತಿಕ್ಕುವ ಧೋರಣೆ ಸಲ್ಲದು. ಸಣ್ಣ ಮೀನುಗಳನ್ನು ಕೊಂದು ದೊಡ್ಡ ಮೀನುಗಳಿಗೆ ಉಣ ಬಡಿಸುವುದರ ಹಿಂದೆ ಹಿತಾಸಕ್ತಿ ಇಲ್ಲವೆನ್ನಲಾಗದು.

ಇನ್ನು ಪ್ರಸರಣದ ವಿಷಯಕ್ಕೆ ಬಂದಾಗ ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಪ್ರಕಟಗೊಳ್ಳುವ ಸಣ್ಣ ಪತ್ರಿಕೆಗಳು ಪ್ರಸಾರ ಸಂಖ್ಯೆಯೊಂದೆ ಅದಕ್ಕೆ ಮಾನದಂಡವಾಗಬಾರದು. ಭೌದ್ದಿಕ ವಿಸ್ತರಣೆ ಕೇವಲ ಪತ್ರಿಕಗಳ ಭೌತಿಕ ವಿತರಣೆಯಿಂದ ಅಳೆಯಲು ಸಾಧ್ಯವಿಲ್ಲ. ಕೇವಲ ಐದು ಅಂಕೆಗಳನ್ನು ದಾಟದ ಇಂಗ್ಲೀಸ್ ಭಾಷೆಯ ನಿಯತಕಾಲಿಕೆಗಳು ಇಂದು ಬಹುದೊಡ್ಡ ಪತ್ರಿಕೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದನ್ನು ನೋಡುತ್ತಿದ್ದೇವೆ. ಎಬಿಸಿ ವರದಿಗಳನ್ನೆ ಪತ್ರಿಕೆಯ ದೊಡ್ಡ ಸಾಧನೆಯೆಂದು ಬಿಂಬಿಸಿಕೊಂಡು ಸ್ವಕುಚಮರ್ಧನ ಮಾಡಿಕೊಳ್ಳುತ್ತಿರುವ ದೊಡ್ಡ ಪತ್ರಿಕೆಗಳ ಲಾಭಕೋರತನಗಳು ಕಣ್ಣ ಮುಂದೆ ಇದೆ.

ಕರ್ನಾಟಕದ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ.75.36 ರಷ್ಟಿದೆ. ಇನ್ನೂ ಜಿಲ್ಲೆಗಳಲ್ಲಿನ ಸಾಕ್ಷರತೆ ಸರಾಸರಿ ಶೇ.60. ಹೀಗಿರುವಾಗ ಪತ್ರಿಕೆ ಕೊಂಡು ಓದುವ ವಲಯದ ಪ್ರಮಾಣ ಅತ್ಯಂತ ತಳದಲ್ಲಿದೆ. ಪಕ್ಕದ ತಮಿಳುನಾಡು ಶೇ.80.09, ಕೇರಳ ಶೇ.94 ರಷ್ಟು ಸಾಕ್ಷರತೆ ಹೊಂದಿದ್ದು ಓದುಗ ಸಂಸ್ಕೃತಿ ಶ್ರೀಮಂತವಾಗಿದೆ. ಈ ಕಾರಣದಿಂದಲೆ ಆ ರಾಜ್ಯಗಳ ಸಣ್ಣ ಪತ್ರಿಕೆಗಳು ಸರ್ಕಾರಕ್ಕಿಂತ ಓದುಗರನ್ನು (ಚಂದಾದಾರರನ್ನು ) ಅವಲಂಬಿಸಿಯೆ ಬೆಳೆಯತೊಡಗಿವೆ. ಆದರೂ ಆಯಾ ರಾಜ್ಯ ಸರ್ಕಾರಗಳು ಸಣ್ಣ ಅಂದರೆ ಭಾಷಾ ಪತ್ರಿಕೋದ್ಯಮ ವನ್ನು ಅಸ್ಥೆಯಿಂದ ಸಾಕತೊಡಗಿವೆ. ನೆರೆ ರಾಜ್ಯಗಳಲ್ಲಿ ಸರ್ಕಾರಗಳು ಸಣ್ಣ ಪತ್ರಿಕೆಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಸಣ್ಣ ಪತ್ರಿಕೆಗಳ ಪಾಲಿಗೆ ಏನೇನೂ ಇಲ್ಲ ಎನ್ನಬಹುದು. ಹಿರಿಯ ಪತ್ರಕರ್ತ ಪಿ.ರಾಮಯ್ಯ ನೇತೃತ್ವದ ಸಮಿತಿ (2002) ಸಣ್ಣ ಪತ್ರಿಕೆಗಳ ಹಿತಕ್ಕಾಗಿ ಸರ್ಕಾರ ನೀಡಬಹುದಾದ ನೆರವುಗಳನ್ನು ಶಿಫಾರಸ್ಸು ಮಾಡಿದ್ದರೂ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಸಣ್ಣ ಪತ್ರಿಕೆಗಳು ತಮ್ಮ ವ್ಯಾಪ್ತಿಯಲ್ಲಿಯೆ ಜನರ ಸಂಕಷ್ಟಗಳಿಗೆ ಧ್ವನಿಯಾಗುವ , ಸ್ಥಳಿಯ ಜನಪ್ರತಿನಿಧಿಗಳನ್ನು ಸದಾ ಜನಪರಗೊಳಿಸುವ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ವಿವರಿಸುವ ಕೆಲಸ ವನ್ನು ನಿಷ್ಠೆಯಿಂದಲೆ ಮಾಡುತ್ತಿವೆ. ಸರ್ಕಾರ, ಆಳುವ ಜನ ಸಣ್ಣ ಪತ್ರಿಕೆಗಳ ಬಗ್ಗೆ ತಮಗಿರುವ ತಾತ್ಸಾರ ಮನೋಭಾವದಿಂದ ಹೊರಬರಬೇಕಿದೆ. ರಾಜ್ಯದ ಹಿರಿಯ ಅನುಭವಿ ಪತ್ರಕರ್ತರು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅನುಭವಿ ಸಂಪಾದಕ/ಮಾಲೀಕರನ್ನೊಳಗೊಂಡ ಸಮಿತಿಯನ್ನು ನೇಮಿಸಿ ವಾಸ್ತವಿಕ ನೆಲಗಟ್ಟಿನಲ್ಲಿ ಪರಿಪೂರ್ಣ ವರದಿಯೊಂದನ್ನು ಪಡೆದು ಸಣ್ಣ ಪತ್ರಿಕೆಗಳ ಉಳಿವನ್ನೂಳಗೊಂಡಂತೆ ಮಾಧ್ಯಮಕ್ಷೇತ್ರದ ಸಮಗ್ರ ಹಿತಕ್ಕಾಗಿ ಮಾಧ್ಯಮ ನೀತಿಯೊಂದನ್ನು ರೂಪಿಸುವ ತುರ್ತು ಇದೆ. ಈ ದಿಕ್ಕಿನಲ್ಲಿ ಸರ್ಕಾರ ಇಚ್ಚಾಶಕ್ತಿಯನ್ನು ತೋರಬೇಕಿದೆ.

ಭಾಷಾ ಪತ್ರಿಕೋದ್ಯಮದ ದೊಡ್ಡ ಜೀವ ಜಲದಂತಿರುವ ಸಣ್ಣ ಪತ್ರಿಕೆಗಳ ಉಳಿವಿಗೆ ಸರ್ಕಾರ ಉದಾತ್ತ ಧೋರಣೆಯಿಂದಲೆ ಸ್ಪಂದಿಸಬೇಕಾಗಿದೆ.