Monthly Archives: November 2014

ಬಲಿಷ್ಠ ಯಜಮಾನ್ಯ ವ್ಯವಸ್ಥೆ : ಪ್ರತಿರೋಧದ ಮಾಡೆಲ್ ಗಳಾವುವು?


– ಬಿ. ಶ್ರೀಪಾದ ಭಟ್


ಅದು ಎಂಬತ್ತರ ದಶಕದ ಆರಂಭದ ವರ್ಷಗಳು. ಕರ್ನಾಟಕದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತದಿಂದ rape-illustrationಚುನಾವಣೆಯಲ್ಲಿ ಸೋಲನ್ನನುಭವಿಸಿ ರಾಮಕ್ರಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷವೆನ್ನುವ ಜನಪ್ರಿಯ ಸರ್ಕಾರವು ಆಡಳಿತದಲ್ಲಿತ್ತು. ಆಗ ರಾಯಚೂರು ಜಿಲ್ಲೆಯಲ್ಲಿನ ಕುದುರೆಮೋತಿ ಸ್ವಾಮಿ ಎನ್ನುವ ಲಿಂಗಾಯಿತ ಮಠಾದೀಶರೊಬ್ಬರು ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಈ ದುಷೃತ್ಯವು ಬಹಿರಂಗಗೊಂಡು ರಾಜ್ಯಾದ್ಯಾಂತ ಪ್ರತಿಭಟನೆಗಳು ನಡೆದವು. ಹೋರಾಟಗಾರರ ಒತ್ತಾಯಕ್ಕೆ ಮಣಿದ ಆಗಿನ ಹೆಗಡೆ ಸರ್ಕಾರ ತನಿಖೆಗಾಗಿ ಒಂದು ಸದನ ಸಮಿತಿಯನ್ನು ನೇಮಿಸಿತ್ತು. ಆದರೆ ಎಂತಹ ವೈರುಧ್ಯವೆಂದರೆ ಆರು ಮಂದಿ ಶಾಸಕರ ಸಮಿತಿಯಲ್ಲಿ ಐವರು ಸದಸ್ಯರು ಲಿಂಗಾಯಿತ ಜಾತಿಗೆ ಸೇರಿದವರಾಗಿದ್ದರು. ಅಲ್ಲಿಗೆ ಆ ಸದನ ಸಮಿತಿಯ ಹಣೆಬರಹವೇ ಹೆಚ್ಚೂ ಕಡಿಮೆ ನಿರ್ಧಾರವಾದಂತಾಯ್ತು. ಇನ್ನು ಅದರ ವರದಿಯ ಕುರಿತಾಗಿ ಪ್ರಜ್ಞಾವಂತರಲ್ಲಿ ಆಸಕ್ತಿಯೇ ಉಳಿಯಲಿಲ್ಲ. ಜಾತಿ ಎನ್ನುವುದು ಹೇಗೆ ಬಹಿರಂಗವಾಗಿ ಪ್ರಭಾವಿಸುತ್ತದೆ ಮತ್ತು ಅದೇ ಸಂದರ್ಭದಲ್ಲಿ ಅಂತರ್ಗತವಾಗಿಯೂ ಪ್ರವಹಿಸುತ್ತಿರುತ್ತದೆ ಎಂದು ಆಗ ವಿದ್ಯಾರ್ಥಿಗಳಾಗಿದ್ದ ನಮಗೆಲ್ಲಾ ಗೊತ್ತಾಗಿತ್ತು.

ಅನೇಕ ಮಠಾಧೀಶರ ಮೇಲೆ ಈ ಬಗೆಯ ಲೈಂಗಿಕ ದೌರ್ಜನ್ಯಗಳ ಆರೋಪಗಳು ಹೊಸದಲ್ಲವೆನ್ನುವಂತೆಯೇnithyananda_2 ಎಲ್ಲಾ ಬಲಿಷ್ಠ ಜಾತಿಗಳ ಭಕ್ತರು ತಮ್ಮ ತಮ್ಮ ಜಾತಿ ಮಠಗಳ ಸ್ವಾಮಿಗಳ ಕುರಿತಾಗಿ ಬೇಕೆಂತಲೇ ಮುಗ್ಧರಾಗಿ ವರ್ತಿಸುತ್ತಿರುತ್ತಾರೆ. ಸ್ನೇಹಿತರೊಬ್ಬರು ಹೇಳುತ್ತಿದ್ದರು “ಪ್ರತಿಯೊಂದು ಮಠದಲ್ಲಿನ ಖಾಸಗಿ ಕೋಣೆಯಲ್ಲಿ ಒಂದು ತೊಟ್ಟಿಲಿರುತ್ತದೆ. ಎಲ್ಲವನ್ನೂ ಪರಿತ್ಯಜಿಸಿದ್ದೇವೆ ಎಂದೇ ಬೊಗಳೆ ಬಿಡುವ ಹಲವಾರು ಸ್ವಾಮಿಗಳು ಖಾಸಗಿಯಾಗಿ ಮತ್ತು ಗುಟ್ಟಾಗಿ ಸಂಸಾರಗಳನ್ನು ನಡೆಸುತ್ತಿರುವ ವಿಚಾರಗಳೂ ಆಯಾ ಭಕ್ತರಿಗೂ ಗೊತ್ತಿರುತ್ತದೆ. ಮತ್ತು ಆ ಮಠದ ಸುತ್ತಮುತ್ತಲಿನ ಸಮಾಜಕ್ಕೂ ಗೊತ್ತಿರುತ್ತದೆ. ಅನೇಕ ಸ್ವಾಮಿಗಳ ಲೈಂಗಿಕ ಅತ್ಯಾಚಾರಗಳೂ ಈ ಭಕ್ತರಿಗೆ, ಸಮಾಜಕ್ಕೆ ಗೊತ್ತಿರುತ್ತದೆ. ಆದರೆ ಆ ಸ್ವಾಮಿಯು ಬದುಕಿರುವುವರೆಗೂ ಯಾರೂ ಇದರ ಕುರಿತಾಗಿ ಬಾಯ್ಬಿಡುವುದಿಲ್ಲ. ನಿಗೂಢವಾಗಿ ಜಾಣ ಕಿವುಡು, ಜಾಣ ಕುರುಡರಂತೆ ವರ್ತಿಸುತ್ತಿರುತ್ತಾರೆ. ಸತ್ತ ನಂತರ ನೋಡಿದಿರಾ ದೇವರು ಇಂತಹವರನ್ನು ಕ್ಷಮಿಸುವುದಿಲ್ಲ ಎಂದು ಆಡಿಕೊಳ್ಳುತ್ತಾರೆ!! ಕಡೆಗೂ ಈ ಭಕ್ತರು ಮತ್ತು ಸಮಾಜ ಸ್ವಾಮಿಯನ್ನು ದೂಷಿಸುವುದಿಲ್ಲ ಬದಲಾಗಿ ದೇವರ ಮಹಿಮೆಯನ್ನು ಕೊಂಡಾಡುತ್ತಾರೆ”.

ಇಡೀ ಭಕ್ತ ಸಮೂಹವನ್ನೇ ಧಾರ್ಮಿಕತೆಯ, ಜಾತಿಯ ಹೆಸರಿನಲ್ಲಿ ಮಾನಸಿಕವಾಗಿ ತಮ್ಮ ಅಡಿಯಾಳಾಗಿಸಿಕೊಳ್ಳುವ ಅನೇಕ ಮಠಾಧೀಶರು ಇದೇ ಜಾತಿ ಮತ್ತು ಹಣದ ಬಲದಿಂದ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತಮ್ಮ ಹಂಗಿನಲ್ಲಿರಿಸಿಕೊಂಡಿರುತ್ತಾರೆ. ಜಾತಿ, ಧರ್ಮ, ಹಣದ ಈ ಚಕ್ರವ್ಯೂಹವು ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಆದರೆ ಅದರ ಒಳಸುಳಿಗಳು ಅರ್ಥವಾಗಿರುವುದಿಲ್ಲ. ಇತ್ತೀಚಿನ ಈ ಹವ್ಯಕ ಮಠದ ಸ್ವಾಮಿ ರಾಘವೇಶ್ವರ ವಿರುದ್ಧ ಇರುವ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಅದರ ಒಟ್ಟಾರೆ ಇತಿಹಾಸ ಮತ್ತು ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ವಿದ್ಯಾಮಾನಗಳು ಮೇಲಿನ ಸಂಗತಿಗಳಿಗೆ ಸಾಕ್ಷಿಯಾಗಿವೆ.

ರಾಮಚಂದ್ರಾಪುರ ಮಠದ ಸ್ವಾಮಿ ರಾಘವೇಶ್ವರರು ಗೋಸ್ವಾಮಿಗಳೆಂದೇ ಪ್ರಸಿದ್ಧಿ ಹೊಂದಿದ್ದಾರೆ. ಈ ಸ್ವಾಮಿಯ ಗೋರಕ್ಷಣೆಯ ಹೆಸರಿನ ಅನ್ಯ ಧರ್ಮದ ವಿರುದ್ಧದ ಪ್ರಚೋದನಾತ್ಮಕ ಕಾರ್ಯಕ್ರಮಗಳು ಸ್ವಜಾತಿ ಭಕ್ತರ ಸುಪ್ತಪ್ರಜ್ಞೆಯೊಳಗೆ ಆಳವಾಗಿ ಬೇರೂರಿರುವ Raghweshwara_Bharathi_gurujiಧಾರ್ಮಿಕತೆಯ ಅಮಾನವೀಯ ನಂಬಿಕೆಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾದವು. ಈ ಬಗೆಯ ಧಾರ್ಮಿಕ ಪ್ರಲೋಭನೆಯ ಮೂಲಕವೇ ರಾಘವೇಶ್ವರ ಸ್ವಾಮಿ ಕ್ಷಿಪ್ರಗತಿಯಲ್ಲಿ ಬ್ರಾಹ್ಮಣ ಭಕ್ತರ ನಡುವೆ ಜನಪ್ರಿಯನಾಗಿಬಿಟ್ಟರು. ಈ ಜನಪ್ರಿಯತೆಯನ್ನು ನಂಬಿ ರಾಘವೇಶ್ವರ ಸ್ವಾಮಿ ಯಡಿಯೂರಪ್ಪವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗೋಕರ್ಣೇಶ್ವರ ಮಠವನ್ನು ವಶಪಡಿಸಿಕೊಳ್ಳುವ ವಿಫಲ ಪ್ರಯತ್ನಕ್ಕೆ ಕೈ ಹಾಕಿದ್ದರು. ಸ್ವತ ಬ್ರಾಹ್ಮಣ ಸಮಾಜದ ಇತರೇ ಮಠಾಧೀಶರು ಅಸೂಯೆ ಪಡುವಷ್ಟು ರಾಘವೇಶ್ವರ ಸ್ವಾಮಿ ತನ್ನ ಬುಡವನ್ನು ಭದ್ರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಮತ್ತು ಆ ಇಡೀ ಪ್ರಕ್ರಿಯೆಯು ಕಾನೂನಿನ ಆಶಯಕ್ಕೆ ಅನುಗುಣವಾಗಿ ತನಿಖೆಗೆ ಅರ್ಹವಾಗಿದೆ. ಸದರಿ ಸ್ವಾಮಿಯು ಇತರೇ ಬಹುತೇಕ ಬ್ರಾಹ್ಮಣ ಮಠಗಳ ಸ್ವಾಮಿಗಳಂತೆಯೇ ಸಂಘ ಪರಿವಾರದೊಂದಿಗೆ ನಿಕಟ ಭಾಂದವ್ಯವನ್ನು ಹೊಂದಿದ್ದರೆ. ತಾವೆಲ್ಲಾ ಹಿಂದೂ ಧರ್ಮೋಧ್ಧಾರಕರು ಎಂದೇ ನಂಬಿರುವ, ಸನಾತನ ಪರಂಪರೆ, ಬ್ರಾಹ್ಮಣ್ಯದ ಯಜಮಾನ್ಯ ಮತ್ತು ಶ್ರೇಣಿಕೃತ ವರ್ಣಾಶ್ರಮದ ಸಮಾಜವನ್ನು ಭವ್ಯ ಭಾರತದಲ್ಲಿ ಮರಳಿ ಪ್ರತಿಷ್ಠಾಪಿಸಲು ಕಂಕಣಬದ್ಧರಾಗಿರುವ, ಜೀವ ವಿರೋಧಿ ಲೋಕದೃಷ್ಟಿಯನ್ನು ಹೊಂದಿರುವ ವಿವಿಧ ಮಠಗಳ ಬಹುಪಾಲು ಬ್ರಾಹ್ಮಣ ಸ್ವಾಮಿಗಳು ಇದಕ್ಕಾಗಿ ಸಂಘ ಪರಿವಾರವನ್ನು ಸಂಪೂರ್ಣವಾಗಿ ಆಶ್ರಯಿಸಿದ್ದಾರೆ. ನೇರವಾಗಿಯೇ ಬಲಪಂಥೀಯ ರಾಜಕಾರಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಅನೇಕ ಭಾರತೀಯರಿಗಿಂತಲೂ ಸದರಿ ಸ್ವಾಮಿಗಳಿಗೆ ಬಲಪಂಥೀಯ ರಾಜಕೀಯದ ಸಿದ್ಧಾಂತಗಳು ಚೆನ್ನಾಗಿ ಗೊತ್ತಿದೆ. ಇಡೀ ಬಿಜೆಪಿಯನ್ನು ಸನಾತನವಾದಿ ಧಾರ್ಮಿಕತೆಗೆ ಗಂಟು ಹಾಕುವಲ್ಲಿ ದೇಶಾದ್ಯಾಂತ ಹರಡಿರುವ ಅನೇಕ ಬ್ರಾಹ್ಮಣ ಸ್ವಾಮಿಗಳ ಪಾಲು ಸಾಕಷ್ಟಿದೆ. ಆದರೆ ದುರಂತವೆಂದರೆ ನ್ಯಾಯ, ನೀತಿಯ ಕುರಿತಾಗಿ ನಿರರ್ಗಳವಾಗಿ ಮಾತನಾಡುವ ಬಿಜೆಪಿಯ ಅಭಿಮಾನಿ ವಿದ್ಯಾವಂತರು ಮೇಲಿನ ಸಂವಿಧಾನ ವಿರೋಧಿ ಸ್ವರೂಪಗಳ ಕುರಿತು ಕಿಂಚಿತ್ತೂ ಬಾಯ್ಬಿಡುವುದಿಲ್ಲ. ಮತ್ತು ಇತರೇ ಪಕ್ಷಗಳ ರಾಜಕಾರಣಿಗಳು ಸಹ ಜಾತಿ ಮತ್ತು ಹಣದ ಕಾರಣಕ್ಕಾಗಿ ಈ ಸ್ವಾಮಿಗಳೊಂದಿನೆ ನೇರವಾಗಿ ಅಥವಾ ಪರೋಕ್ಷವಾಗಿ ಪಕ್ಷಾತೀತರಾಗಿ ಗುರುತಿಸಿಕೊಂಡಿರುತ್ತಾರೆ.

ಧರ್ಮ ಮತ್ತು ಜಾತಿ ಅಂತಿಮವಾಗಿ ಸಮಾಜ ಮತ್ತು ರಾಜಕೀಯವನ್ನು ನಿಯಂತ್ರಿಸಬೇಕು ಎನ್ನುವ ಉದ್ದೇಶವನ್ನು ಹೊಂದಿರುವ ಬಹುಪಾಲು ಬ್ರಾಹ್ಮಣ ಮಠಾಧೀಶರು ಬ್ರಾಹ್ಮಣದ ವೈದಿಕತೆಯ ಶ್ರೇಷ್ಠತೆಯ ಗರ್ವ ಆ ಮೂಲಕ ಅಸಮಾನತೆ, ತಾರತಮ್ಯ, ಪ್ರತ್ಯೇಕತೆ ಮತ್ತು ಜಾತಿ ಕ್ರೌರ್ಯವನ್ನು ಸದಾ ಹಿಂದೂ ಧರ್ಮದ ಮುಂಚೂಣಿಯಲ್ಲಿ ಪ್ರತಿಷ್ಠಾಪಿಸಬೇಕೆಂದು ಅನೇಕ ಬ್ರಾಹ್ಮಣ ಮಠಾದೀಶರು ಬಹಿರಂಗವಾಗಿಯೇ ಪ್ರಚಾರ ಮಾಡುತ್ತಾ ತಮ್ಮ ಜಾತಿ, ಉಪಪಂಗಡಗಳೊಳಗೆ ಪ್ರಭಾವಶಾಲಿಗಳಾಗಿ ಬೆಳೆಯುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಹ ಬಹಿರಂಗವಾಗಿ ಈ ಸ್ವಾಮಿಗಳೊಂದಿಗೆ ಗುರುತಿಸಿಕೊಂಡಿರುವುದು ಇಡೀ ವ್ಯವಸ್ಥೆಯಲ್ಲಿ ಎಲ್ಲಾ ಬಗೆಯ ಕಾನೂನು, ಕಟ್ಟಳೆ, ನಿಯಮಗಳಿಗೆ ಅತೀತರಾದ ಅತ್ಯಂತ ಬಲಿಷ್ಠವಾದ ಯಜಮಾನ್ಯದ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ಕಾರಣವಾಗಿದೆ. ಇಲ್ಲಿ ಕೇವಲ ಬ್ರಾಹ್ಮಣದ ಮಠಾಧೀಶರು ಮಾತ್ರವಲ್ಲ, ಈ ರಾಜ್ಯದ ಎಲ್ಲಾ ಬಲಿಷ್ಠ ಜಾತಿಯ ಮಠಾದೀಶರೂ ಸಹ ಈ ಸಂವಿಧಾನ ವಿರೋಧಿ ಯಜಮಾನ್ಯದ ಭಾಗವಾಗಿಯೇ ನೆಲೆಗೊಂಡಿದ್ದಾರೆ. ಈ ಯಜಮಾನ್ಯವನ್ನು ಸಂವಿಧಾನಬದ್ಧವಾಗಿ ವಿರೋಧಿಸಿ ಈ ನೆಲದ ಕಾನೂನಿಗೆ ನೀವೆಲ್ಲರೂ ಒಳಪಡುತ್ತೀರಿ ಎಂದು ಪ್ರಜ್ಞಾವಂತರು ಪ್ರತಿರೋಧ ತೋರಿಸಿದರೆ ಅಲ್ಲಿಗೆ ಆ ಪ್ರಜ್ಞಾವಂತರಿಗೆ ಕೇಡುಗತಿ ಬಂದಿದೆಯೆಂದೇ ಅರ್ಥ.

ತೀರಾ ಇತ್ತೀಚೆಗೆ ಬೆಂಗಳೂರಿನ ಆರ್ಕಿಡ್ ಶಾಲೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಡಿ ಅಲ್ಲಿನ ಶಿಕ್ಷಕ ಗುಂಡಪ್ಪ ಎನ್ನುವವರನ್ನು ಬಂಧಿಸಲಾಯಿತು. ಕೆಲವು ತಿಂಗಳ ಹಿಂದೆ ಮತ್ತೊಂದು ಶಾಲೆಯಲ್ಲಿ ಇದೇ ಲೈಂಗಿಕ ದೌರ್ಜನ್ಯದ ಆರೋಪದ ಅಡಿಯಲ್ಲಿ ಜೈಶಂಕರ್ ಎನ್ನುವ ಶಿಕ್ಷಕನನ್ನು ಬಂಧಿಸಲಾಯಿತು. ಆದರೆ ದುದುಷ್ಟವಶಾತ್ ಮೇಲಿನ ಬಲಿಷ್ಠraghava_swamiji ಯಜಮಾನ್ಯದ ವ್ಯವಸ್ಥೆಯ ಕುರಿತಾಗಿ ಅರಿವಿಲ್ಲದಯೇ ರಾಮಚಂದ್ರಾಪುರ ಮಠದ ಭಕ್ತರು ಮತ್ತು ಆ ಮಠದ ರಾಮಕಥಾ ತಂಡದ ಗಾಯಕಿಯೂ ಆಗಿದ್ದ ಪ್ರೇಮಲತಾ ಎನ್ನುವವರು ರಾಘವೇಶ್ವರ ಸ್ವಾಮಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪೋಲಿಸರಿಗೆ ದೂರು ಕೊಟ್ಟಾಗ ಪೋಲೀಸರು ಬಂಧಿಸಿದ್ದು ಆರೋಪಕ್ಕೆ ಗುರಿಯಾದ ರಾಘವೇಶ್ವರ ಸ್ವಾಮಿಯಲ್ಲ. ಬದಲಾಗಿ ದೌರ್ಜನ್ಯಕ್ಕೆ ಒಳಗಾದ ಪ್ರೇಮಲತಾ ಅವರನ್ನು. ಇದಕ್ಕೆ ಕಾರಣ ಸದರಿ ಸ್ವಾಮಿ ಪ್ರೇಮಲತಾ ಮತ್ತು ದಿವಾಕರ್ ಶಾಸ್ತ್ರಿ ದಂಪತಿಗಳ ಮೇಲೆ ಕೊಟ್ಟ ಬೋಗಸ್ ದೂರನ್ನು ಆಧರಿಸಿ ಪ್ರೇಮಲತ ಅವರನ್ನು ಬಂಧಿಸುತ್ತಾರೆ. ಆರೋಪಿಗಳಾಗಿರುವ ಗುಂಡಪ್ಪ ಮತ್ತು ಜೈಶಂಕರ್ ನನ್ನು ಈ ನೆಲದ ಕಾನೂನಿನಂತೆ ಬಂಧಿಸುವ ಪೋಲೀಸ್ ವ್ಯವಸ್ಥೆ ಅತ್ಯಾಚಾರದ ಆರೋಪಿ ರಾಘವೇಶ್ವರ ಸ್ವಾಮಿಯ ವಿಚಾರದಲ್ಲಿ ಹಿಂಜರಿಯುತ್ತಿರುವುದು ಬಲಿಷ್ಠ ಯಜಮಾನ್ಯದ ವ್ಯವಸ್ಥೆಯ ಪ್ರಭಾವವನ್ನು ಸೂಚಿಸುತ್ತದಷ್ಟೆ. ದಿವಾಕರ ಶಾಸ್ತ್ರಿಯವರ ತಮ್ಮ ಶಾಮ ಶಾಸ್ತ್ರಿ ಮಠದ ಪರವಾಗಿ ನಿಲ್ಲಬೇಕೆಂಬ ಬೆದರಿಕೆಯ ಕರೆಗಳಿಗೆ ಭಯಗೊಂಡು ಆತ್ಮಹತ್ಯೆ ಸಹ ಮಾಡಿಕೊಳ್ಳುತ್ತಾರೆ. ಮಠದ ಕಡೆಯಿಂದ ಪ್ರೇಮಲತ ಅವರು ನೀಡಿದ ದೂರನ್ನು ಸ್ವೀಕರಿಸಬೇಡಿ ಎನ್ನುವ ಒತ್ತಡವೂ ಪೋಲೀಸರ ಮೇಲೆ ಇತ್ತಂತೆ. ಮಾಧ್ಯಗಳಿಗೆ ಈ ಅತ್ಯಾಚಾರದ ಕುರಿತಾಗಿ ವರದಿ ಮಾಡಬೇಡಿ ಎನ್ನುವ ತಾಕೀತನ್ನು ಮಾಡಲಾಯಿತು. ಚಾತುರ್ಮಾಸ್ಯವೆನ್ನುವ ಧಾರ್ಮಿಕ ವಿಧಿಯನ್ನು ಮುಂದೊಡ್ಡಿ ಸ್ವಾಮಿಯ ಬಂಧನವನ್ನು ತಡೆಹಿಡಿದಿದ್ದು ನ್ಯಾಯಾಂಗ ನಿಂದನೆಯಾಗುತ್ತದೆ. ಆದರೆ ಇದೂ ಸಹ ಅರಣ್ಯರೋಧನವಾಗಿಬಿಡುವುದು ಈ ಬಲಿಷ್ಠ ಯಜಮಾನ್ಯ ವ್ಯವಸ್ಥೆಯ ಪ್ರಭಾವವನ್ನು ಸೂಚಿಸುತ್ತದೆ.

ಇನ್ನು ಸಮಾಜದ ಪ್ರತಿಕ್ರಿಯೆ ನೋಡಿ. ಬ್ರಾಹ್ಮಣ ಸಮಾಜದ ಅನೇಕ ಮಹಿಳಾ ಭಕ್ತರು ಎರಡೂ ಕಡೆ ತಪ್ಪಿದೆಯಲ್ಲ ಎಂದು ರಾಗ ಎಳೆಯುತ್ತಿದ್ದಾರಂತೆ!! ಪ್ರೇಮಲತ ಅವರ ನೈತಿಕತೆಯನ್ನು ಆಡಿಕೊಳ್ಳುತಿದ್ದಾರಂತೆ!! ಆದರೆ ಈ ವಿದ್ಯಾವಂತರಿಗೆ ಸ್ವಾಮಿಯ ಅನೈತಿಕತೆ ಇವರಲ್ಲಿ ಹೇಸಿಗೆ ಹುಟ್ಟಿಸಿಲ್ಲ. ಇವರಿಗೆ ಸರ್ವಸಂಗ ಪರಿತ್ಯಾಗಿಯೆಂದು ಘೋಷಿಸಿಕೊಳ್ಳುವ ಸ್ವಾಮಿ ಈ ರೀತಿ ಅತ್ಯಾಚಾರದ ಆರೋಪಕ್ಕೆ ಸಿಲುಕಿರುವುದು ಅಘಾತಕಾರಿಯಾಗಬೇಕಿತ್ತು. ಆದರೆ ಭಕ್ತರು ಅನುಮಾನ ಪಡುತ್ತಿರುವುದು ಪ್ರೇಮಲತ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದು ಈಗ ದೂರು ಕೊಡುತ್ತಿರುವುದರ ವಿಷಯದಲ್ಲಿ. ಇದು ಪ್ರತಿಬಾರಿಯೂ ವಿಚಾರಣೆಗೆ ಹಾಜರಾಗಲು ಅನೇಕ ತಗಾದೆಗಳನ್ನು ತಗೆಯುತ್ತಿರುವ ಈ ಸ್ವಾಮಿಗೆ ಮಾನಹಾನಿ ಮಾಡಲು ಪಿತೂರಿ ನಡೆಯುತ್ತಿದೆ ಎಂದು ಈ ಸ್ವಜಾತಿ ಭಕ್ತಗಣವು ಆರೋಪಿಸುತ್ತಿರುವುದು ಮತ್ತು ಈ ಸ್ವಾಮಿಯ ಅನೈತಿಕತೆಯನ್ನು ಬೆಂಬಲಿಸುತ್ತಿರುವ ಈ ಬ್ರಾಹ್ಮಣ ಸಮಾಜದ ವಿದ್ಯಾವಂತರ ನೈತಿಕ ಅದಪತನವನ್ನು ತೋರಿಸುತ್ತದೆ ಅಷ್ಟೇ. ಡಬಲ್ ಡಿಗ್ರಿಗಳನ್ನು ಪಡೆದ ಬ್ರಾಹ್ಮಣ ವಿದ್ಯಾವಂತರಿಗೆ ತಮ್ಮ ಪ್ರಜ್ಞೆಯೊಳಗೆ ಬೇರುಬಿಟ್ಟಿರುವ ಜಾತಿವಾದವನ್ನು ಮೀರಲು ಸಾಧ್ಯವಾಗುತ್ತಿಲ್ಲ ಎನ್ನುವದಕ್ಕಿಂತಲೂ ಎಲ್ಲವನ್ನೂ ಜೀರ್ಣಿಸಿಕೊಳ್ಳಲು ಹವಣಿಸುವ ವೈದಿಕತೆ ಮತ್ತೆ ಚಲಾವಣೆಗೆ ಬರಲು ಸಹಕರಿಸಲು ಇವರೆಲ್ಲ ಉತ್ಸುಕರಾಗಿದ್ದಾರೆ ಎಂದೇ ವಿಶ್ಲೇಷಿಸಬೇಕಾಗುತ್ತದೆ. ಭಯೋತ್ಪಾದನೆ ಧಾಳಿ ನಡೆದಾಗ ಯಾಕೆ ನೀವು ಖಂಡಿಸುತ್ತಿಲ್ಲ ಎಂದು ಮುಸ್ಲಿಂ ಸಮುದಾಯದ ಕಡೆಗೆ ಗೋಣು ತಿರುಗಿಸುವ ಈ ಸೋ ಕಾಲ್ಡ್ ವಿದ್ಯಾವಂತರು ಇಂದು ಅತ್ಯಾಚಾರದ ಆರೋಪಕ್ಕೆ ಗುರಿಯಾದ ತಮ್ಮ ಜಾತಿಯ ಸ್ವಾಮಿಯ ಕೃತ್ಯವನ್ನು ಖಂಡಿಸುವುದಿರಲಿ ಒಂದು ಪಾಪ ಪ್ರಜ್ಞೆಯ ಸಣ್ಣ ಅಂಶವೂ ಇವರಲ್ಲಿ ಕಾಣುತ್ತಿಲ್ಲ.

ಜಾತಿ ಸಮಾಜ ಮತ್ತು ಜಾತಿ ಮಠಗಳ ಸನಾತನವಾದದ ಮೂಲಭೂತವಾದಿ ಹಸಿವಿಗೆ ಮೈಯೆಲ್ಲಾ ಬಾಯಿ. ಬುದ್ಧನನ್ನು ವಿಷ್ಣುವಿನ ಹತ್ತನೇ ಅವತಾರವೆಂದು ಬಿಂಬಿಸಿ ಬೌದ್ಧ ಧರ್ಮವನ್ನು ಆಪೋಶನ ತೆಗೆದುಕೊಳ್ಳಲು ವಿಫಲ ಯತ್ನ ನಡೆಸಿದ ಈ ವೈದಿಕಶಾಹಿ ವಚನ ಚಳುವಳಿಯನ್ನು, ಗಾಂಧಿಯನ್ನು, ಅಂಬೇಡ್ಕರ್ ಅವರನ್ನೂ ಬಿಟ್ಟಿಲ್ಲ. ಹಿಂದುತ್ವದ ಚರ್ಚೆಯನ್ನು ಸನಾತನವಾದಕ್ಕೆ ಗಂಟು ಹಾಕುವ ಈ ಪುರೋಹಿತಶಾಹಿಯನ್ನು ಮೌನವಾಗಿ ಬೆಂಬಲಿಸುವ ಇಲ್ಲಿನ ವಿದ್ಯಾವಂತರು ಕ್ರಿಯಾಶೀಲ ಜಾತಿವಾದಿಗಳು. ಅಮೇರಿಕಾ, ಯುರೋಪಿಯನ್ ರಾಷ್ಟ್ರಗಳಿಗೆ ಹಾರಲು ತವಕದಲ್ಲಿರುವ ಈ ವಿದ್ಯಾವಂತರು ಆರೆಸಸ್ ಮಾದರಿಯ ರಾಷ್ಟ್ರೀಯವಾದದ ಪ್ರತಿಪಾದಕರು. ಜೊತೆಗೆ ನವಬ್ರಾಹ್ಮಣ್ಯವಾದದ ವಕ್ತಾರರೂ ಹೌದು. ಅನಿವಾಸಿ ಭಾರತೀಯರಾಗಿ ಇವರು ಈ ರಾಘವೇಶ್ವರ, ಕಂಚಿ ಕಾಮಕೋಟಿ, ಪೇಜಾವರ, ಶೃಂಗೇರಿ, ರವಿಶಂಕರ ಇನ್ನೂ ಮುಂತಾದ ಸ್ವಾಮಿಗಳನ್ನು ಒಳಗೊಳ್ಳುವಂತಹ ವೈದಿಕಶಾಹಿ ರಾಷ್ಟ್ರೀಯತೆಯನ್ನು ವಿದೇಶಗಳಲ್ಲಿ ಪ್ರತಿಪಾದಿಸುತ್ತಾರೆ. ಬ್ರಾಹ್ಮಣ್ಯವಾದದ ವೈದಿಕಶಾಹಿಯನ್ನು ಪ್ರತಿಪಾದಿಸುವ ಭರಾಟೆಯಲ್ಲಿರುವ ಈ ವಿದ್ಯಾವಂತರಿಗೆ ಸಂತ ಕಬೀರನ ಪರಂಪರೆ, ಉದಾರವಾದಿ ನೆಲೆಯ ಅನೇಕ ಭಕ್ತಿಪಂಥದ, ಅವಧೂತ ಪರಂಪರೆಯ ಜನಪರ ಮಾದರಿಗಳ ಪರಿಚಯವೂ ಇಲ್ಲ ಅಥವಾ ಗೊತ್ತಿದ್ದರೂ ಚಾಣಾಕ್ಷತೆಯಿಂದ ಮರೆಮಾಚುತ್ತಾರೆ.

ರಸ್ತೆ ಸಾರಿಗೆ ಸುರಕ್ಷಾ ಕಾನೂನು ಎಂಬ ಗರುಡ ಪುರಾಣದ ಕ್ರಿಮಿ ಭೋಜನ


– ಶ್ರೀಧರ್ ಪ್ರಭು


 

Come and see the blood in the streets.
Come and see
The blood in the streets.
Come and see the blood
In the streets.

– Pablo Neruda

ಕೃತಿ ಚೌರ್ಯ ಮಾಡಿದರೆ ಏನು ಶಿಕ್ಷೆ?
ಜೈಲು, ದಂಡ, ಇಲ್ಲ ಕನಿಷ್ಠ ಛೀಮಾರಿ? ಇಲ್ಲ. ಇದೆಲ್ಲ ಏನೂ ಇಲ್ಲ. ಕೇವಲ ‘ಕ್ರಿಮಿ ಭೋಜನ’ ಶಿಕ್ಷೆ.

ಹೌದು. ಗರುಡ ಪುರಾಣದ ಪ್ರಕಾರ ಇನ್ನೊಬ್ಬರಿಗೆ ಸೇರಿದ್ದನ್ನು ಎಗರಿಸಿದರೆ ಶಿಕ್ಷೆ ಮೈಮೇಲೆಲ್ಲ ಕ್ರಿಮಿಗಳನ್ನು ಹರಿಬಿಡುವುದು. ಇದೇ “ಕ್ರಿಮಿ ಭೋಜನ”.

‘ಕೆಂಟುಕಿ ಟ್ರಾಫಿಕ್ ಅಧಿನಿಯಮ’ ಎಂಬ ಅಮೇರಿಕೆಯ ಕಾನೂನನ್ನು, ಇಂಗ್ಲೆಂಡ್‌ನ ‘ರಸ್ತೆ ಸಂಚಾರ ಕಾನೂನಿನ’ ಜತೆ ಬೆರೆಸಿ traffic-cops-westಕಲಬೆರೆಕೆ ಗಿರಮಿಟ್ಟು ಮಾಡಿದರೆ ತಯಾರಾಗುವ ಕಾನೂನು ಕೇಂದ್ರ ಸರಕಾರ ತರಲು ಹೊರಟಿರುವ “ರಸ್ತೆ ಸಾರಿಗೆ ಮತ್ತು ಸುರಕ್ಷಾ ಕಾಯಿದೆ, ೨೦೧೪”. ಅಲ್ಲಿ ಡಾಲರ್-ಪೌಂಡ್ ಲೆಕ್ಕದಲ್ಲಿ ವಿಧಿಸುವ ದಂಡವನ್ನು ರೂಪಾಯಿ ಲೆಕ್ಕದಲ್ಲಿ ಪರಿವರ್ತಿಸಿ, ಚಿಲ್ಲರೆ ಉಲ್ಲಂಘನೆಗಳಿಗೆ ವರ್ಷಾನುಗಟ್ಟಲೆ ಜೈಲು ಶಿಕ್ಷೆ ಮಾಡಲು ಹೊರಟವರಿಗೆ ಏನು ಶಿಕ್ಷೆ? ಇದನ್ನು ಓದಿದ ನಂತರದಲ್ಲಿ ನೀವೇ ತೀರ್ಮಾನಿಸಿ.

ಹೌದು. ಈ ಕಾಯಿದೆ ಜಾರಿಗೊಂಡರೆ, ಕಡಿಮೆ ಎಂದರೆ, ಒಂದು ಸಾವಿರದಿಂದ ಶುರುವಾಗಿ ಐದು ಲಕ್ಷದವರೆಗೂ ದಂಡ, ಇಲ್ಲ ಏಳು ವರ್ಷ ಜೈಲು, ಇಲ್ಲ ಎರಡೂ ವಿಧಿಸಬಹುದು.

ಇದು ಬಿಡಿ, ರಸ್ತೆಯಲ್ಲಿ ಬದಿಯಲ್ಲಿನ ಚಿಕ್ಕ ಪುಟ್ಟ ಬೀದಿ ವ್ಯಾಪಾರ ಮಾಡುವವರನ್ನೂ, ರಸ್ತೆ ಸಂಚಾರಕ್ಕೆ ಅಡ್ಡಿ ಮಡಿದ ಘನಘೋರ ಅಪರಾಧಕ್ಕಾಗಿ ಗಂಟೆಗೆ ಒಂದು ಸಾವಿರದ ದಂಡ ವಿಧಿಸಬಹುದು. ಇನ್ನು ಮದುವೆ ದಿಬ್ಬಣದವರಿಗೂ ಮದುವೆ ಗ್ಯಾರಂಟೀ ಏನೋ. ಸತ್ಯಾಗ್ರಹ, ಮೆರವಣಿಗೆ, ರಸ್ತೆ ತಡೆ, ಧರಣ, ಚಳುವಳಿ ಇತ್ಯಾದಿ ಮರೆತು ಬಿಡಿ. ಯಾಕೆಂದರೆ ಗಂಟೆಗೆ ಒಂದು ಸಾವಿರ ರೂಪಾಯಿ ಲೆಕ್ಕದಲ್ಲಿ ದಂಡ ವಸೂಲಿ ಮಾಡುತ್ತಾರೆ. ಕಡೆಗೆ ಸೈಕಲ್ ಓಡಿಸುವ ಬಡಪಾಯಿಗಳನ್ನೂ ಬಿಡದ ಕಾನೂನು ಇದು. ಕಂಕುಳಲ್ಲಿ ಕೂಡುವ ಕೂಸಿಗೂ ಹೆಲ್ಮೆಟ್ ಕಡ್ಡಾಯ, ವಾಹನ ಮತ್ತು ಸುರಕ್ಷತೆಯ ಖಾಸಗೀಕರಣ, ಕಡೆಗೆ ರಸ್ತೆಯ ನಟ್ಟ ನಡುವೆ ಸಂಚಾರಿ ಪಥಗಣನ್ನು ನಿರ್ಮಿಸಿ (BRTS) traffic-violation-2ಗುಜರಾತ್ ಮಾದರಿಯಲ್ಲಿ ರಸ್ತೆಗಳನ್ನೇ ಖಾಸಗೀಕರಣಗೊಳಿಸುವವುದರ ದಟ್ಟ ಘಾಟು ಹೊಂದಿದೆ ಈ ಕಾನೂನು. ಸೈಕಲ್ ಸವಾರರಿಂದ ಹಿಡಿದು, ದ್ವಿಚಕ್ರ ವಾಹನ, ಅಟೋ, ಕಾರು, ಸೇರಿಕೊಂಡು ಸರಕು ಸಾಗಣೆವಾಹನಗಳೆಲ್ಲವೂ ಈ ಕಾನೂನಿನ ಬೋನಿಗೆ ಸೇರ್ಪಡೆ.

ಸಹಾಯಕಾರಿ ಅಂಶಗಳು ಏನೂ ಇಲ್ಲವೇ? ಇವೆ. ಜೀವನದಲ್ಲಿ ಒಮ್ಮೆ ಕೂಡ ಜೈಲು ನೋಡಿಯೇ ಇಲ್ಲ ಎಂದು ವ್ಯಥೆ ಪಡುವವರಿಗೆ ಇದು ತುಂಬಾ ಸಹಾಯಕಾರಿ.

ಈ ಕಾನೂನು ಮೂಲದಲ್ಲೇ ತಪ್ಪು ಮತ್ತು ಅಸಂವಿಧಾನಾತ್ಮಕ. ಸಂವಿಧಾನದ ಅಡಿ ಕೇಂದ್ರ ಸರಕಾರಕ್ಕೆ “ಮೊಟರು ಚಾಲಿತ ವಾಹನ” ಗಳ ಬಗ್ಗೆ ಕಾನೂನು ಮಾಡಲು ಅಧಿಕಾರ ಇದೆಯೆ ವಿನಃ ರಸ್ತೆ ಮತ್ತು ಸಾರಿಗೆ ವಿಷಯದಲ್ಲಿ ಅಲ್ಲ. ಇನ್ನು ಪೋಲೀಸರ ಅಧಿಕಾರ ವ್ಯಾಪ್ತಿ, ಪ್ರಾದೇಶಿಕ ಸಾರಿಗೆ, ರಾಜ್ಯ ಹೆದ್ದಾರಿಗಳು, ಪುರಸಭೆ, ನಗರಪಾಲಿಕೆ, ಪಂಚಾಯತಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ರಸ್ತೆ ಮತ್ತು ಸಾರಿಗೆ ಮತ್ತದರ ನಿರ್ವಹಣೆ ಸಂಪೂರ್ಣ ರಾಜ್ಯ ಸರಕಾರಗಳಿಗೆ ಸೇರಿದ್ದು.

ಇದು ಇನ್ನೂ ಜಾರಿಯಾಗಿಲ್ಲ. ಜಾರಿಯಾದರೆ ಇದರ ಔಚಿತ್ಯ, ಸಂವಿಧಾನಾತ್ಮಕತೆ ಇತ್ಯಾದಿ ಪ್ರಶ್ನೆ ಮಾಡಲು ಸಾಧ್ಯತೆಗಳಿವೆ. ಇನ್ನು ಅನೇಕ ರಾಜ್ಯಗಳು ಕೂಡ ಈ ಕಾನೂನನ್ನು ವಿರೋಧಿಸಿವೆ. ಸಂವಿಧಾನದತ್ತವಾಗಿ ತಮಗೆ ಇರುವ ಅಧಿಕಾರವನ್ನು ಕೇಂದ್ರ ಕಸಿಯುತ್ತಿದೆ ಎಂದಿವೆ. ಆ ಕಥೆ, ಈ ಕಥೆ, traffic-violation-1ಸಂವಿಧಾನಾತ್ಮಕತೆ ಎಲ್ಲವೂ ಕಾನೂನು ವಿಶಾರದರಿಗೆ ಬಿಡೋಣ. ಕಾನೂನು ಕಟ್ಟಳೆಗಳಿಗೆಲ್ಲ ಒಂದು ಸಾಮಾಜಿಕ ಆಯಾಮ ಇರುತ್ತದೆ. ಅದನ್ನು ಗಮನಿಸೋಣ.

ಒಂದು ದೇಶದ ಸಾಮಾಜಿಕ ಮತ್ತು ಅರ್ಥಿಕ ಪರಿಸ್ಹಿತಿಗೆ ತಕ್ಕನಾಗಿಯೇ ಒಂದು ಕಾನೂನು ಇರಬೇಕಾಗುತ್ತದೆ. ಇಂಗ್ಲೆಂಡ್, ಅಮೆರಿಕೆಗಳಲ್ಲಿ ಶತಮಾನಗಳ ಹಿಂದೆ ಅತ್ಯಂತ ಸುವ್ಯವಸ್ಥಿತ, ಅಗಲೀಕೃತ ರಸ್ತೆಗಳ ಜಾಲ ಹಬ್ಬಿದೆ. ಈ ದನ, ಎಮ್ಮೆಗಳು ಅಡ್ಡ ಬರುವ ಪ್ರಸಂಗ, ಹಳ್ಳ-ದಿಣ್ಣೆ ಬಂದರೆ ಕುಣಿಕುಣಿದು ಓಡಿಸುವ ಸೌಭಾಗ್ಯವೆಲ್ಲ ಗೊತ್ತೇ ಇಲ್ಲ. ಅಮೇರಿಕೆ, ಕೆನಡ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಹಲವು ಬಾರಿ ನೂರಾರು ಮೈಲಿ ಸಂಚರಿಸಿದರೂ ಒಂದು ನರಪಿಳ್ಳೆ ಗೋಚರಿಸುವುದಿಲ್ಲ. ಇನ್ನು ಅವರಲ್ಲಿನ ಸಾಮಾನ್ಯ ಪೌರ ಕಾರ್ಮಿಕ ಗಳಿಸುವಷ್ಟನ್ನು ದುಡ್ಡನ್ನು ನಮ್ಮಲ್ಲಿನ ಒಬ್ಬ ಸಣ್ಣ ಉದ್ದಿಮೆದಾರ ಕೂಡ ಗಳಿಸಲಾರ. ಅಲ್ಲಿರುವ ಸಾಮಾಜಿಕ ಸುರಕ್ಷತೆ, ಅರೋಗ್ಯ ಮತ್ತು ವಸತಿಯಂಥಹ ಪ್ರಾಥಮಿಕ ಅಗತ್ಯಗಳು ನಮ್ಮಲ್ಲಿ ಪೂರ್ತಿಯಾಗಿವೆಯೇ? ದಿನಕ್ಕೆ ಹೆಚ್ಚೆಂದರೆ ೪೦೦-೫೦೦ ಗಳಿಸುವ ಒಬ್ಬ ಆಟೋ ಚಾಲಕ ಯಾವ ಬ್ಯಾಂಕ್ ದರೋಡೆ ಮಾಡಿ ಈ ಸಾವಿರ-ಲಕ್ಷದ ಲೆಕ್ಕದಲ್ಲಿ ದಂಡ ಕಟ್ಟಬೇಕು? ವಿದೇಶದಿಂದ ಕಾನೂನು ಮಾತ್ರ ಕಾಪಿ ಹೊಡೆದು ಬಿಟ್ಟರೆ ಸಾಕೆ?

ಹಸಿವು, ಬಡತನವಿದ್ದ ಕಡೆ ಈ ಸರಕಾರ ಸಾವಿರ-ಲಕ್ಷದ ಲೆಕ್ಕದಲ್ಲಿ ದಂಡ ವಸೂಲಿಗೆ ಇಳಿಯಿತು ಎಂದು ಕೊಳ್ಳಿ, ಈ ಚಿಲ್ಲರೆ ‘ಉಲ್ಲಂಘನೆಗೆ’ ಸಾವಿರಗಟ್ಟಲೆ ದಂಡ ಹೊಂದಿಸುವ ಸಲುವಾಗಿ ಬಡವ ಗಂಭೀರ ಅಪರಾಧ ಮಾಡಲು ಇಳಿಯುತ್ತಾನೆ. ಸರಕಾರೀ ಅಂಕಿ ಸಂಖ್ಯೆ ಗಳ ಪ್ರಕಾರವೇ, ಭಾರತೀಯನೊಬ್ಬನ ಸರಾಸರಿ ಮಾಸಿಕ ಐದುವರೆ ಸಾವಿರ. ಎಂದಾದ ಮೇಲೆ ಲಕ್ಷಗಟ್ಟಲೆ ದಂಡ ಕಟ್ಟುವುದು ಹೇಗೆ? ಇಪ್ಪತ್ತು ಸಾವಿರಕ್ಕೂ ಜಾಸ್ತಿ ಇದು ಸರಕಾರಕ್ಕೆ ಗೊತ್ತಿಲ್ಲವೇ?

‘ಕೆಟ್ಟು’ ಪಟ್ಟಣ ಸೇರುವವರಲ್ಲಿ ಮೊಟ್ಟ ಮೊದಲು ತಲೆಗೆ ತೋಚುವುದೇ ಈ ಡ್ರೈವರ್ ಉದ್ಯೋಗ. ದಿನಗೂಲಿ ಲೆಕ್ಕದಲ್ಲಿ ಆಟೋ, ಕಾರು traffic-violation-3ಇತ್ಯಾದಿ ಓಡಿಸಿ ಹೊಟ್ಟೆ ಹೊರೆದು ಕೊಳ್ಳುವ ಗುಳೆ ಬಂದ ಬಡ ವರ್ಗ ಈ ಮಟ್ಟದ ದಂಡ ಕಟ್ಟಲು ಸಾಧ್ಯವೇ? ಬಡವರಷ್ಟೇ ಅಲ್ಲ, ಮೇಲು ಮಧ್ಯಮ, ಇನ್ನು ಶ್ರೀಮಂತ ವರ್ಗವೇ ತತ್ತರಿಸಿ ಹೋದೀತು. ಸರಕಾರ ಪಿಳ್ಳೆ ನೆಪ ಇಟ್ಟುಕೊಂಡು ಜೈಲಿಗೆ ಅಟ್ಟುವ ಸರ್ವಾಧಿಕಾರಿಯಂತಾದರೆ, ಸಮಾಜದ ಸ್ವಾಸ್ಥ್ಯ ಖಂಡಿತ ಕೆಟ್ಟು ಹೋಗುವುದು. ಅಲ್ಫೆರಿ ಎಂಬ ಚಿಂತಕ ಹೇಳುತ್ತಾನೆ ‘ಒಂದು ಅಪರಾಧವನ್ನು ಸೃಷ್ಟಿಸುವುದು ಸಮಾಜ – ಅಪರಾಧಿ ಅದನ್ನು ಜಾರಿ ಮಾತ್ರ ಮಾಡುತ್ತಾನೆ.’

ಮೊದಲು ಟೋಲ್ ಹೆಸರಿನಲ್ಲಿ ರಸ್ತೆಗಳನ್ನು ಖಾಸಗೀಕರಣಗೊಳಿಸಿ, ಜನರ ಮೂಲಭೂತ ಹಕ್ಕು ಕಸಿಯಲಾಯಿತು. ಸೀತಾರಾಂ ಯೆಚೂರಿ ನೇತೃತ್ವದ ಸಂಸತ್ ಸಮಿತಿ ಹೇಳುವ ಹಾಗೆ ಟೋಲ್ ಮಾಡಿರುವುದಕ್ಕೆ ಸಮರ್ಥನೆ ಪೆಟ್ರೋಲ್-ಡೀಸೆಲ್ ಉಳಿತಾಯ ಎಂದಾದರೆ, ಟೋಲ್ ದ್ವಾರ ತೆರೆಯಲು ಕಾಯುವ ವಾಹನಗಳು ಸುಡುವ ತೈಲ ಉಳಿತಾಯದ ಮೂರರಷ್ಟು. ಟೋಲ್ ಎಂಬ ಅಸಮರ್ಥನೀಯ ಅವೈಜ್ಞಾನಿಕ ಪದ್ಧತಿ ಬಂದದ್ದು ದೇಶದ ಬೆರಳೆಣಿಕೆಯ ಜನರನ್ನು ಖುಷಿ ಪಡಿಸಲು. ಹಾಗಾಗಿ ಟೋಲ್ ಇಲ್ಲವೇ ಜೈಲು ಎಂಬಂತಾಗಿದೆ. ಈಗ ವಾಹನ ರಸ್ತೆಗಿಳಿದರೆ ಜೈಲು ಖಾತ್ರಿ.

ಇನ್ನು ಈ ಕಾನೂನಿನ ಸಮರ್ಥಕರು ಹೇಳುವದು ನೋಡಿ: ಹತ್ತು ಲಕ್ಷ ಉದ್ಯೋಗ ಕಲ್ಪಿಸಿ, ಎರಡು ಲಕ್ಷ ಜನರ ಜೀವನ ಉಳಿಸಬಹುದಂತೆ. ಇದ್ದ ಬಿದ್ದವರನ್ನೆಲ್ಲ ಜೈಲಿಗೆ ಹಾಕಿದರೆ ಹಸಿವು ನಿರುದ್ಯೋಗ ಸಮಸ್ಯೆ ಬಗೆಹರಿಯುದೇ ಇದ್ದೀತೆ? ಇನ್ನು ಉದ್ಯೋಗ ಸೃಷ್ಟಿಯಾಗುವುದು ಯಾರಿಗೆ ಎಂದು ಬೇರೆ ವಿವರಿಸಿ ಹೇಳಬೇಕಿಲ್ಲ. traffic-cops-west-2ಜಾಗತಿಕ ಅರ್ಥಿಕ ಬಿಕ್ಕಟಿನ ಭಾಗವಾಗಿ ಕುಸಿತದ ೨೦೦೮-೧೦ ಅವಧಿಯಲ್ಲಿ ಅಮೇರಿಕಾದ ವಾಹನ ಉದ್ಯಮ ನೆಲ ಕಚ್ಚಿತು. ವಿದೇಶಿ ವಾಹನ ತಯಾರಿಕಾ ಕಂಪನಿಗಳ ಉದ್ಧಾರಕ್ಕಾಗಿ ಮಾಡಲಾದ ಅನೇಕ ‘ಕಲ್ಯಾಣ ಕ್ರಮ’ಗಳ ಪೈಕಿ ಈ ಕಾನೂನು ಕೂಡ ಒಂದು. ನಿಜಕ್ಕೂ ನೋಡಿದರೆ, ವಾಹನ ಮಾರಾಟವಾದ ಮೇಲೆಯೇ ವಾಹನ ತಯಾರಕರಿಗೆ ಬಿಡಿ ಭಾಗ, ಸರ್ವೀಸ್ ಎಂದೆಲ್ಲ ಹೆಚ್ಚು ಲಾಭ. ಈ ಲಾಭವನ್ನು ತಹಬಂದಿಗೆ ತಂದು ಕೈಗೆಟಕುವ ಬೆಲೆಯಲ್ಲಿ ಬಿಡಿ ಭಾಗಗಳು ದೊರೆಯುವ ಜವಾಬ್ದಾರಿ ಹೊರುವ ಬದಲು, ಸರಕಾರ ವಾಹನ ಚಾಲಕರನ್ನು ಶೋಷಿಸಲು ಮುಕ್ತ ಅವಕಾಶ ಮಾಡಿ ಕೊಡುತ್ತಿದೆ.

ವಾಹನಗಳ ಪರವಾನಿಗೆ ಪರ್ಮಿಟ್ ದರ ನಿರ್ಧರಣೆ ಹಕ್ಕು ಕೂಡ ಕೇಂದ್ರ ಸರಕಾರವೇ ಅಪಹರಿಸಿ ಬಿಟ್ಟಿದೆ. ಆಯಾ ರಾಜ್ಯದ ಅರ್ಥಿಕ ಸಾಮಾಜಿಕ ಸತ್ಯಗಳನ್ನು ಆಧರಿಸಿ ತೆಗೆದುಕೊಳ್ಳಬೇಕಾದ ಕಡೆ ದೇಶದಾದ್ಯಂತ ಒಂದೇ ದರ ನಿಗದಿ ಮಾಡಿದರೆ ತಪ್ಪಲ್ಲವೆ? ಇದೆಲ್ಲಕ್ಕಿಂತ ಮುಖ್ಯ, ಸಂವಿಧಾನದಲ್ಲಿ ಕೇಂದ್ರಕ್ಕೆ ಈ ಅಧಿಕಾರವೇ ಇಲ್ಲ. ಹೀಗಾಗಿ ಅನೇಕ ರಾಜ್ಯಗಳು ಅಪಸ್ವರ ಎತ್ತಿವೆ.

ರಾಜಕಾರಣಿ-ಖಾಸಗಿ ಗುತ್ತಿಗೆದಾರ-ಅಧಿಕಾರಿಗಳ ಒಳಗಿನ ನಂಟು-ಗಂಟುಗಳ ಪರಿಣಾಮ ಮೃತ್ಯು ಕೂಪದಂತಹ ರಸ್ತೆಗಳು ಹುಟ್ಟುತ್ತವೆ. ಈ ಕಡು ಭ್ರಷ್ಟತೆ, ಅವೈಜ್ಯಾನಿಕ ರಸ್ತೆ ಕಾಮಗಾರಿ ನಿರ್ಬಂಧ, ರಸ್ತೆ ನಿರ್ಮಾಣದಿಂದಾಗಿ ಜಮೀನು ಕಳೆದುಕೊಂಡವರಿಗೆ ಪರಿಹಾರ, ಅಪಘಾತ ತಡೆ, ಸಾರ್ವತ್ರಿಕ ಅಪಘಾತ ವಿಮೆ ಇತ್ಯಾದಿ ಸರಕಾರದ ಆದ್ಯತೆಗಳಾಗಬೇಕು. ಇದು ಬಿಟ್ಟು, ಯಾವುದೋ ವಿದೇಶಿ ಕಾನೂನುಗಳ ಗಿರ್ಮಿಟ್ ಬೆರೆಸಿ, ಡಾಲರ್-ಪೌಂಡ್ ಲೆಕ್ಕದ ದಂಡ ವಿಧಿಸಿ, ಜತೆಗೆ ಸಾಮಾನ್ಯರನ್ನು ಜೈಲಿಗೆ ಹಾಕುವ ಪೋಲಿಸ್ ರಾಜ್ಯದ ಕಡೆ ದೂಡುವ ಹುನ್ನಾರ ನಡೆದಿದೆ.

ದೇಶದ ರಸ್ತೆಗಳ ಉದ್ದಕ್ಕೂ ರಕ್ತ ಚೆಲ್ಲಿದೆ. ಈ ರಕ್ತವನ್ನು ತೊಳೆಯಲು ಕೇಂದ್ರ ಸರಕಾರ ಇನ್ನಷ್ಟು ರಕ್ತ ಚೆಲ್ಲಲು ಹೊರಟಿದೆ.

“ಹುಲಿಯ ನೆರಳಿನೊಳಗೆ – ಅಂಬೇಡ್ಕರವಾದಿಯ ಆತ್ಮಕಥೆ” ಒಂದು ಟಿಪ್ಪಣಿ


-ಮಹಾದೇವ ಸಾಲಾಪೂರ


ಉಚಲ್ಯಾ, ಅಕ್ರಮಸಂತಾನ, ಗಬಾಳ, ಬಹಿಷ್ಕೃತ, ವಾಲ್ಮೀಕಿ, ಬಲುತ, ನೋವು ತುಂಬಿದ ಬದುಕು ಹೀಗೆ ಮರಾಠಿಯಿಂದ ಅನುವಾದಗೊಂಡ ಹಾಗೂ ಕನ್ನಡದಲ್ಲಿ ಪ್ರಕಟವಾದ ದಲಿತ ಆತ್ಮಕತೆಗಳ ಬಾಲ್ಯ ಮತ್ತು ಬದುಕಿನ ಚಿತ್ರಣಗಳು ವಿಭಿನ್ನ ಅನುಭವ ಜಗತ್ತನ್ನು ನಿರ್ಮಿಸಿಕೊಟ್ಟಿವೆ. ಪ್ರತಿಯೊಬ್ಬರ ಬಾಲ್ಯವೂ ಅಸಮಾನ ಭಾರತದ ಚರಿತ್ರೆಯನ್ನು ಹೇಳುತ್ತದೆ. Huliya Neralu-2ಕುಲಮೂಲದ ಕಸುಬುಗಳು, ಕಸುಬಿನ ದಾರುಣ ಚಿತ್ರಣ, ಹುಟ್ಟಿನಿಂದ ಗುರುತಿಸಲ್ಪಡುವ ಜಾತಿಯೂ, ಆಯಾ ಪರಿಸರಕ್ಕೆ ಸಂಬಂಧಪಟ್ಟ ಆಚರಣೆಗಳು, ಬಂಧು-ಬಾಂಧವರ ಸಂಬಂಧಗಳು, ಬಡತನ, ಹಸಿವು, ಶೋಷಣೆ, ಕಲಿಕೆಗಾಗಿ ಪರಿತಪಿಸುವ ರೀತಿಯೂ, ಆಧುನಿಕ ಶಿಕ್ಷಣವ್ಯವಸ್ಥೆಯಲ್ಲಿನ ಶಾಲಾ ಆವರಣದಲ್ಲಿ ಆಚರಿಸಲ್ಪಡುವ ಅಸ್ಪೃಶ್ಯತೆಯೂ ಹೀಗೆ ಭೀಕರವಾದ ತಾರತಮ್ಯದ ಜಗತ್ತನ್ನು ದಲಿತ ಆತ್ಮಕತೆಗಳಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಎಲ್ಲ ಆತ್ಮಕತೆಗಳ ಬಾಲ್ಯವು ಒಂದೆ ಪಡಿಯಚ್ಚಿನಲ್ಲಿ ಎರಕಹೊಯ್ದಂತೆ ಭಾಸವಾದರೂ ಕಟ್ಟಿಕೊಡುವ ಪರಿಸರದ ನಿವೇದನೆ ಅಸ್ಪೃಶ್ಯ ಭಾರತದ ಒಂದೊಂದು ಮಗ್ಗಲುಗಳನ್ನು ಶೋಧಿಸುತ್ತವೆ. ಸಾಂಪ್ರದಾಯಿಕ ಪ್ರಜಾಪ್ರಭುತ್ವವು ಹಳ್ಳಿಗಳಲ್ಲಿತ್ತು. ಅದೇ ಆಶಯದಲ್ಲಿ ಸಂವಿಧಾನವೂ ರಚನೆಯಾಗಬೇಕಿತ್ತು ಎಂದು ಹಂಬಲಿಸುವವರು ದಲಿತ ಅಸ್ಮಿತೆಯ ಈ ಬಾಲ್ಯದ ಕುರುಹುಗಳನ್ನು ಕೊಂಚ ಗಮನಿಸಬೇಕು.

ಈ ದೇಶದಲ್ಲಿ ಪವಿತ್ರವಾದದ್ದು ಒಂದೇ, ಅದು ಸಂವಿಧಾನ ಎಂಬುದನ್ನು ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಳ್ಳುತ್ತಾನೆ ಎಂದಾದರೆ ಅವನಿಗೆ ಅಂಬೇಡ್ಕರ್ ಅವರು ಯಾವದೋ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಆಧುನಿಕ  ಭಾರತದ ನಿರ್ಮಾತೃ, ಅಪ್ರತಿಮ ದೇಶಪ್ರೇಮಿ, ಪಾರಂಪರಿಕವಾಗಿ ಅಸ್ತಿತ್ವದಲ್ಲಿದ್ದ ಸಂವಿಧಾನವನ್ನು ಭಂಜಿಸಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನದ ಮೂಲಕ ಹೊಸಗುರುತನ್ನು ನೀಡಿದ ಮಹಾತ್ಮ ಎಂಬುದನ್ನು ಮಣಗಾನುತ್ತಾನೆ. (ಆಗ ಮನೆಯೊಳಗೆ ತೂಗುಹಾಕಿರುವ ಅಂಬೇಡ್ಕರ್ ಅವರ ಫೋಟೋ ನೋಡಿ ನೀವು ಅವರಾ..? ಎನ್ನುವ ಹೊಸ ಐಡೆಂಟಿಟಿಯ ವಿಧಾನ ಇಲ್ಲವಾಗಬಹುದು.) ಆ ಹುಲಿಯ ಹೆಜ್ಜೆಗುರುತುಗಳನ್ನು ಇವತ್ತಿನ ಈ ಜಾತಿಸಂಘಟಣೆಯ ಜಂಝಾವಾತಗಳ ನಡುವೆ ಮತ್ತೆಮತ್ತೆ  ಕೆದಕಬೇಕಿದೆ, ಅವರ ಆಲೋಚನೆಗಳನ್ನು ಈ ಹೊತ್ತಿಗೆ ತಕ್ಕಂತೆ ವಿಮರ್ಶಿಸಿ, ಆ ಅಧ್ಯಯನದ ಶಿಸ್ತನ್ನು, ಆ ನ್ಯಾಯನಿಷ್ಠುರ ವ್ಯಕ್ತಿತ್ವವನ್ನು ಹೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ಈ ಅರಿವಿನಲ್ಲಿ ಭಾರತದ ಹೊಸ ಚಲನೆಯ ಆರಂಭವಾಗಿರುವುದರಿಂದ ಅಂಬೇಡ್ಕರ್ ಅವರ ಬದುಕು ಬರಹ ಭಾಷಣಗಳನ್ನು ನಾವು ಮತ್ತೆಮತ್ತೆ ಓದಿಕೊಳ್ಳುತ್ತಲೇ ಇರಬೇಕಾಗುತ್ತದೆ.

ಕೃಷಿವಿಜ್ಞಾನಿಯಾದ ನಾಮದೇವ ನಿಮ್ಗಾಡೆಯವರ ‘ಹುಲಿಯ ನೆರಳಿನೊಳಗೆ ಅಂಬೇಡ್ಕರವಾದಿಯ ಆತ್ಮಕಥೆ’ಯನ್ನು ಕನ್ನಡಕ್ಕೆ ಬಿ. ಶ್ರೀಪಾದರವರ  ಭಾವಾನುವಾದ ಮಾಡಿದ್ದಾರೆ.  ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಭಾರತದ ಕ್ರಾಂತಿಸೂರ್ಯರ ಬದುಕು ಮತ್ತು ಹೋರಾಟದ ಕುರಿತಾದ ಟಿಪ್ಪಣಿಗಳಿರುವುದರಿಂದ ಈ ಹೊತ್ತುಗೆ ಉಳಿದೆಲ್ಲ ಆತ್ಮಕತೆಗಳಿಗಿಂತ ಭಿನ್ನವಾಗಿದೆ.

ಅಂಬೇಡ್ಕರರ ನಂತರ ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದ ಎರಡನೇ  ದಲಿತವ್ಯಕ್ತಿ ಎಂದೇ ಹೆಸರಾಗಿರುವ ಇವರ ಬದುಕಿನಲ್ಲೂ ಅಸ್ಪೃಶ್ಯ ಭಾರತದ ಅನುಭವಗಳೇ ತುಂಬಿದ್ದಾವೆ. ಆ ಎಲ್ಲ ಅಪಮಾನ, ನಿಂದೆ, ಬಡತನ, ಅಸಹಾಯಕತೆಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಛಲದ ಹುಲಿಯ ಹೆಜ್ಜೆಜಾಡಿನಲ್ಲಿ ನಡೆಯುವ ನಿಮ್ಗಾಡೆಯವರ ಬದುಕು ಮತ್ತು ಹೋರಾಟದ  ಭಾವಜಗತ್ತು ಸ್ವವಿಮರ್ಶಾ ಧಾಟಿಯಲ್ಲಿರುವುದರಿಂದ ತುಂಬ ಆಪ್ತವಾಗುತ್ತದೆ.

ಆತ್ಮಕತೆಯ ಮೊದಲ ಅಧ್ಯಾಯದ ಕೊನೆಯಭಾಗದಲ್ಲಿ ಅವರ ತಂದೆ ಹೇಳಿಬರೆಯಿಸಿದ ಭಾಷಣದಲ್ಲಿ ಭೀಮರಾವ ಅಂಬೇಡ್ಕರ್ ಅವರ ಹೆಸರನ್ನು ಕೇಳಿ ಪುಳಕಿತರಾಗುವ Young_Ambedkarನಿಮ್ಗಾಡೆಯವರ ಆತ್ಮಕತೆಯುದ್ದಕ್ಕೂ ಬಾಬಾಸಾಹೇಬರ ಛಲದ, ಆತ್ಮವಿಶ್ವಾಸದ, ಅಧ್ಯಯನ ಶಿಸ್ತಿನ, ಹೋರಾಟ ರೂಪಿಸಿದ ರೀತಿಗಳೆಲ್ಲವೂ ಪ್ರಭಾವೀಕರಿಸಿರುವುದನ್ನ ಚಿತ್ರಿಸಿದ್ದಾರೆ. ತೀರ ಖಾಸಗಿಯಾಗಿ ಅವರೊಂದಿಗೆ ಒಡನಾಡಿದ ಕ್ಷಣಗಳಂತೂ ನಾಮದೇವ ನಿಮ್ಗಾಡೆಯವರನ್ನು ರೂಪಿಸಿದ್ದಾವೆ. ನೆಹರೂ ಅವರನ್ನು ತರುಬಿ ಕೇಳುವ ಪ್ರಶ್ನೆ, ಗಾಂಧೀಜಿಯವರ ಅಸ್ಪೃಶ್ಯತೆ ನಿವಾರಣೆ ನಡೆಯ ನಡುವಿನ ಭಿನ್ನತೆಯನ್ನ ವಿವರಿಸುವ ಬಗೆ, ಹಾಗೂ ಮಾರ್ಟಿನ್ ಲೂಥರ ಕಿಂಗ್ ಅವರೊಂದಿಗಿನ ಸಂವಾದದಲ್ಲಿ ಭಾರತದಲ್ಲಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ವಾಸ್ತವವನ್ನೂ ಆವೇಶಭರಿತರಾಗಿ ನಿರರ್ಗಳ ಮಾತಾಡುವ ಉಮೇದು…. ಈ ಎಲ್ಲದರ ಹಿಂದೆ ಆಳವಾದ ಸುಪ್ತಪ್ರಜ್ಞೆಯಲ್ಲಿ ತುಂಬಿಕೊಂಡಿದ್ದ ಬಾಬಾಸಾಹೇಬರ ಚಿಂತನೆಗಳೇ ಪ್ರೇರಣಶಕ್ತಿಯಾಗಿದ್ದವು.

ತನ್ನ ಸಹಪಾಠಿ ಓದುತ್ತಿದ್ದ ಪುಸ್ತಕ ಯಾವುದೆಂದು ಕೇಳಲು ಹೋಗಿ ಅವಮಾನಿತರಾದ ಲೇಖಕರು ಮುಂದೊಂದು ದಿನ ತುಳಸೀರಾಮಾಯಣ ಓದಿ ‘ಈ ಅವಮಾನಗಳು, ಬಯ್ಗಳುಗಳು, ತಲೆಯೆತ್ತಿ  ಬದುಕಲು ನನಗೆ ಮತ್ತಷ್ಟು ದೃಢತೆಯನ್ನು, ಆತ್ಮವಿಶ್ವಾಸವನ್ನು ತಂದುಕೊಟ್ಟವು.  ಈ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ಹೋರಾಡಲು ಅಂದೇ ದೃಢಸಂಕಲ್ಪ ಮಾಡಿದೆ. ಈ ನಿಸ್ಸಹಾಯಕತೆಯನ್ನು ಮೀರಲು ನನಗಿರುವ ಒಂದೇ ಗುರಿ ಶಿಕ್ಷಣವೆಂದು ಅಂದು ನನಗೆ ಮನದಟ್ಟಾಯಿತು’ ಎಂದು ಹೇಳುತ್ತಾರೆ. ಇನ್ನೊಂದೆಡೆ ದೇವಸ್ಥಾನದ ಅತಿಕ್ರಮ ಪ್ರವೇಶ ಮತ್ತು ದೇವರ ವಿಗ್ರಹಗಳನ್ನು ನಾಶಪಡಿಸದ್ದಾರೆಂಬ ಸುಳ್ಳು ಆರೋಪ ಮಾಡಿದ ಸವರ್ಣಿಯರು ಕೊಟ್ಟ ಫಿರ್ಯಾದಿಯನ್ನ ಅನುಸರಿಸಿ ಪೋಲಿಸರು ಬಂಧಿಸಲು ಬಂದಾಗ  ತಂದೆ ಹೇಳುವ ಧೈರ್ಯದ ಮಾತುಗಳು ಹೀಗೆ ನಾಮದೇವ ನಿಮ್ಗಾಡೆಯವರನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹೋರಾಟದ ಬದುಕಿಗೆ ಸಜ್ಜುಗೊಳಿಸುವ ಘಟಣೆಗಳು – ವ್ಯಷ್ಠಿಯಿಂದ ಸಮಷ್ಠಿಗೆ ತುಡಿಯುವ ಜೀವವೊಂದನ್ನು ತಯಾರು ಮಾಡಿದ ಹಾಗಿವೆ.

ವಿಧಾನಸಭೆಯ ಸದಸ್ಯರಾಗುವ ಅವಕಾಶವೊಂದು ಒದಗಿಬಂದಾಗ ಬಾಬಾಸಾಹೆಬರು ಹೇಳುವ ಮಾರ್ಮಿಕವಾದ ಮಾತುಗಳು ಬಹಳ ಉಪಯುಕ್ತವಾದವು ಎನಿಸುತ್ತವೆ. ಮಗನಿಗೆ ಭೀಮರಾವ್ ಎಂದು ಹೆಸರಿಟ್ಟಾಗ, ಶಿಕ್ಷಣಕ್ಕೆ ಒಂದು ಕಡೆ ನಿಲುಗಡೆಯಿಡಬೆಕಲ್ಲ ಎಂದು ಹೇಳಿದಾಗ, ಸಂಸತ್ತಿನಲ್ಲಿ ಅವರ ಕಾಲಿಗೆರಗಿದಾಗ ಹೀಗೆ ನಿಮ್ಗಾಡೆಯವರಿಗೆ ಅಂಬೇಡ್ಕರರು ಪ್ರತಿಕ್ರಿಯಿಸಿರುವ ರೀತಿಗಳಂತೂ ಅದ್ಭುತ ಗಳಿಗೆಗಳೇ ಆಗಿವೆ. ಇದು ನಾಮದೇವ ನಿಮ್ಗಾಡೆಯವರ ಆತ್ಮಕಥನ ಹೇಗೋ ಹಾಗೆ ಭೀಮರಾವ್ ಅಂಬೇಡ್ಕರರ ಜೀವನಚರಿತ್ರೆಯೂ ಆಗಿದೆ ಎಂಬರ್ಥದಲ್ಲಿ ಹೇಳಿರುವ ಡಾ. ಅಪ್ಪಗೆರೆ ಸೋಮಶೇಖರ್ ಅವರ ಮಾತು ಅಕ್ಷರಶಃ ಸತ್ಯ.

ವರ್ತಮಾನ ಬಳಗದ ಪುಟ್ಟ ಸಮಾಗಮ, ಎಸ್.ಆರ್.ಹಿರೇಮಠ್ ಮತ್ತು ಕಥಾಸ್ಪರ್ಧೆಯ ವಿಜೇತರೊಂದಿಗೆ…

ಆತ್ಮೀಯರೇ,

ಮೊನ್ನೆ ನಮ್ಮ ವರ್ತಮಾನ ಬಳಗವರು ಮತ್ತು ಕೆಲವು ಸ್ನೇಹಿತರು ಈ ಬಾರಿಯ (೨೦೧೪) ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕತೆಗಳನ್ನು ಬರೆದಿರುವ ಕೆಲವು ಕತೆಗಾರರೊಂದಿಗೆ ಊಟಕ್ಕೆಂದು ಸೇರಿದ್ದೆವು. ಕಥಾಸ್ಪರ್ಧೆಯ ಮೊದಲ ಮೂರು ಬಹುಮಾನಿತ ಕತೆಗಳನ್ನು ಬರೆದಿರುವ ಕತೆಗಾರರು ಮತ್ತು ಈ ಬಾರಿಯ ತೀರ್ಪುಗಾರರು ಅಂದು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣಕ್ಕೆ ಈ ಪುಟ್ಟ ಸಮಾಗಮ. ಹಾಗೆಯೇ, ನಮ್ಮ ರಾಜ್ಯದ ವರ್ಷದ ವ್ಯಕ್ತಿಯಾಗಿ ನಮ್ಮ ವರ್ತಮಾನ ಬಳಗ ಆಯ್ಕೆ ಮಾಡಿದ್ದ ಎಸ್.ಆರ್.ಹಿರೇಮಠರೂ ನೆನ್ನೆ ಬೆಂಗಳೂರಿನಲ್ಲಿ ಇದ್ದರು. ಸಾಧ್ಯವಾದರೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನಮ್ಮ ಕತೆಗಾರರಿಗೆ ಅವರಿಂದಲೇ ಬಹುಮಾನ ವಿತರಣೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಸಿಗುತ್ತದೆ. ಅಲ್ಲಿ ಸೇರಿದ್ದೆವು. katha-sprade-2014-223x300ನಮ್ಮ ವರ್ತಮಾನ.ಕಾಮ್‌ನೊಂದಿಗೆ ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿರುವ ನಾಲ್ಕೈದು ಜನ ಬೆಂಗಳೂರಿನ ಹೊರಗೆಯೇ ಇರುವುದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ ಮತ್ತು ನಗರದಲ್ಲಿಯೇ ಇರುವ ಇನ್ನೂ ಕೆಲವರು ಕಾರ್ಯಬಾಹುಳ್ಯದಿಂದಾಗಿ ಬರಲಾಗಲಿಲ್ಲ. ಬರಬೇಕಾಗಿದ್ದ ಈ ಬಾರಿಯ ತೀರ್ಪುಗಾರರಾಗಿದ್ದ ಎಸ್.ಗಂಗಾಧರಯ್ಯನವರೂ ಬರಲಾಗಿರಲಿಲ್ಲ. ಅವರನ್ನು ಬಿಟ್ಟರೆ ಒಟ್ಟಾರೆಯಾಗಿ ನಮ್ಮ ಬಳಗದ ಬಹುತೇಕರು ಹಾಜರಿದ್ದರು.

ಊಟದ ನಂತರ ಎಸ್.ಆರ್.ಹಿರೇಮಠರು ಹಾಜರಿದ್ದ ಕರೆಗಾರರಾದ ಟಿ.ಎಸ್.ವಿವೇಕಾನಂದ, ಟಿ.ಕೆ.ದಯಾನಂದ್, ಮತ್ತು ಎಚ್.ಎಸ್.ಅನುಪಮರಿಗೆ ಬಹುಮಾನಗಳನ್ನು ಕೊಟ್ಟರು. ಕಳೆದ ಬಾರಿಯ ತೀರ್ಪುಗಾರರಾಗಿದ್ದ ರಾಮಲಿಂಗಪ್ಪ ಟಿ.ಬೇಗೂರುರವರು ಈ ಸಂದರ್ಭದಲ್ಲಿ ಹಾಜರಿದ್ದು, ಬಹಳ ಆಪ್ತ ವಾತಾವರಣದಲ್ಲಿ, ಒಂದು ರೀತಿಯಲ್ಲಿ ಖಾಸಗಿಯಾಗಿ ಇದು ಮುಗಿಯಿತು.

ಈ ಪುಟ್ಟ ಸಮಾಗಮಕ್ಕೆ ಆಗಮಿಸಿದ್ದ ಎಸ್.ಆರ್.ಹಿರೇಮಠ್, ಡಾ.ರಾಮಲಿಂಗಪ್ಪ ಟಿ.ಬೇಗೂರು, ಟಿ.ಎಸ್.ವಿವೇಕಾನಂದ ಮತ್ತು ಕುಟುಂಬದವರು, ಟಿ.ಕೆ.ದಯಾನಂದ್, ಡಾ.ಎಚ್.ಎಸ್.ಅನುಪಮ, ಬಿ.ಶ್ರೀಪಾದ ಭಟ್, ಜಯಶಂಕರ ಹಲಗೂರು, ಆನಂದ ಯಾದವಾಡ ಮತ್ತು ಕುಟುಂಬದವರು, ರವಿ ಮತ್ತು ಕುಟುಂಬದವರು, ಈಶ್ವರ್ ಮತ್ತು ಕುಟುಂಬದವರು, ಫ್ರಭಾ ಎನ್. ಬೆಳವಂಗಲ, ನವೀನ್ ಸೂರಿಂಜೆ, ತೇಜ ಸಚಿನ್ ಪೂಜಾರಿ, ಡಾ. ಅಶೋಕ್ ಕೆ,ಆರ್., ಅನಂತ ನಾಯ್ಕ, ಶಾಂತಲಾ ದಾಮ್ಲೆ, ಪ್ರಶಾಂತ್ ಹುಲ್ಕೋಡು, ಚಂದ್ರಶೇಖರ ಬೆಳಗೆರೆ, ಬಸವರಾಜು, ಶ್ರೀಧರ್ ಪ್ರಭು, ನಿತಿನ್, ಬಸೂ ಸೂಳಿಬಾವಿ ಮತ್ತವರ ಸ್ನೇಹಿತರು- ಎಲ್ಲರಿಗೂ ವರ್ತಮಾನ ಬಳಗದಿಂದ ಧನ್ಯವಾದ ಮತ್ತು ಕೃತಜ್ಞತೆಗಳು.

ಮತ್ತೊಮ್ಮೆ ಬಂದ ಎಲ್ಲಾ ಸ್ನೇಹಿತರಿಗೂ ಬಳಗದ ಪರವಾಗಿ ಧನ್ಯವಾದಗಳು.

ನಮಸ್ಕಾರ,
ರವಿ
ವರ್ತಮಾನ ಬಳಗದ ಪರವಾಗಿ.

vartamana_spardhe_1

 

vartamana_spardhe_2

ಭಾವಿಸಿದ ಕನ್ನಡ ಮತ್ತು ಸಹನೆ, ಅಸಹನೆಯ ಸಾಂಸ್ಕೃತಿಕ ತರಬೇತಿ


-ಎಚ್.ಜಯಪ್ರಕಾಶ್ ಶೆಟ್ಟಿ


ಈಗ ತಿಳಿದಿರುವ ಮಟ್ಟಿಗೆ ಕನ್ನಡವೆಂಬ ಮೂರಕ್ಷರದ ನುಣುಪುನುಡಿ ದೇಶ, ನಾಡು, ಭಾಷೆ ಎಂಬರ್ಥದಲ್ಲಿ ಮೊದಲು ಬಳಕೆಗೊಂಡುದು ಕವಿರಾಜಮಾರ್ಗದಲ್ಲಿ. Karnatakamapಭೌತಿಕಮೇರೆಯುಳ್ಳ ಭಾವಿತ ಆವರಣದ ಕನ್ನಡಜನಪದದ ಮೊದಲ ರೇಖಾಚಿತ್ರ ಇಲ್ಲಿದೆ. ಭಾಷೆ ನೆಲ ಸಮೂಹವೆಂಬ ಬಹುಸ್ತರಗಳಲ್ಲಿ ಕಲ್ಪಿತವಾದ ಈ ‘ಕನ್ನಡ’ದಲ್ಲಿ ವಿಲೀನತೆ-ವಿಭೇದತೆಯ ದ್ವಂದ್ವಗಳ ಅತಿವಿಶಿಷ್ಟವಾದ ಬೆರೆಯುವಿಕೆ ಇದೆ. ಈ ಭಿನ್ನತೆ-ಸಾಮ್ಯತೆಗಳ ಬೆರಕೆಯನ್ನು ಕವಿರಾಜಮಾರ್ಗವೇ ನಿರ್ದೇಶಿಸಿದೆ ಎಂದಲ್ಲ. ಕನ್ನಡಮನಸ್ಸಿನ ನಿಡುಗಾಲದ ಹರಿವಿನ ಯಾವುದೋ ಸಂಧಿಯಲ್ಲಿ ಸಂಭವಿಸಿದ ಈ ಕೃತಿ ಅದರ ಜಾಯಮಾನವಾದ ಸಹನೆ, ಸಹತ್ವವನ್ನು ತನ್ನೊಳಗಿನ ಬನಿಯಾಗಿಸಿಕೊಂಡಿದೆಯಷ್ಟೆ. ಆದರೆ ಕನ್ನಡವೆಂಬ ಜನಪದ ಭೂಗೋಳವು ಈ ಅರಿವಿಗೆ ನಿಲುಕದ ಅನಾದಿಯಿಂದ ಸಾಕಷ್ಟು ದೂರ ಹರಿದುಬಂದಿದೆ. ಈ ಹರಿವಿನಲ್ಲಿ ‘ಕನ್ನಡ’ವೆನ್ನುವ ವಿಶೇಷಣವೂ ಪ್ರತಿನಿಧೀಕರಣ ರಾಜಕಾರಣದ ಹೊರಳಿಕೆಗೂ ಒಳಗಾಗಿದೆ. ಒಳಗೊಳ್ಳುವ-ಹೊರಗಿಡುವ ಮಾಪಕವೂ ಆಗಿದೆ. ಹೀಗೆ ಬಹುರೂಪಗಳಲ್ಲಿ ಪ್ರಕಟಗೊಳ್ಳುತ್ತಾ ಬಂದ ಕನ್ನಡವಿಂದು ಕರ್ನಾಟಕವಾಗಿ ನಮ್ಮೆದುರಿಗಿದೆ. ಭಾಷಾರಾಜ್ಯಗಳ ಉಗಮದಿಂದೀಚೆ ಕನ್ನಡವನ್ನು ಗುರುತಾಗಿಸಿಕೊಂಡ ಮಾದರಿಗಳು ಮುನ್ನೆಲೆಗೆ ಬಂದು ದಾಖಲಿಸಿಕೊಳ್ಳುತ್ತಿರುವ ಕ್ರಿಯಾಶೀಲತೆಯಿಂದಾಗಿ ನವೆಂಬರ್ ತಿಂಗಳಂತೂ ಕನ್ನಡಮಾಸವೆನಿಸಿದೆ.

ಕನ್ನಡದ ಪ್ರಶ್ನೆಯ ವಿವರಣೆಯಲ್ಲಿ ಕನ್ನಡದ ಬಿಕ್ಕಟ್ಟಿನ ಕುರಿತ ಚಿಂತನೆಯ ಕಾಲವಾಗಿ ಮೈದೋರಿಕೊಳ್ಳುತ್ತಿದೆ. ಆದರೆ ಭಾಷೆ, ನಾಡು ಕೇವಲ ಭಾವನಾತ್ಮಕ ಸಂಗತಿಯಾಗಬೇಕಿಲ್ಲ. ಅದಕ್ಕಿಂತ ಭಿನ್ನವಾಗಿ ಕನ್ನಡ, ಕರ್ನಾಟಕಗಳ ಕುರಿತ ನಿರೂಪಣೆಗಳನ್ನೂ, ಕನ್ನಡವೆನ್ನುವ ‘ಸ್ವ’ಕ್ಕೆ ಎದುರಾಳಿಯಾಗಿ ಕಟ್ಟಿಕೊಡುತ್ತಾ ಬಂದ ‘ಅನ್ಯ’ಗಳ ಕುರಿತ ಕನ್ನಡಸಮೂಹದ ವರ್ತನೆಯ ಹಿಂದಿನ ಸಾಂಸ್ಕೃತಿಕ ಸೂಕ್ಷ್ಮಗಳನ್ನೂ ವಿವರಿಸಿಕೊಳ್ಳುವ ಅಗತ್ಯವಿದೆ. ಕನ್ನಡ ಸೃಜನಶೀಲ ಪರಂಪರೆ ಕಟ್ಟಿಕೊಟ್ಟಿರುವ ಕನ್ನಡದ ವ್ಯಾಪಕತೆ ಮತ್ತು ಒಳಗೊಳ್ಳುವಿಕೆಯ ಗುಣವನ್ನು ವರ್ತಮಾನದ ಗುರುತಿನ ರಾಜಕಾರಣದ ಒಳಸೂಕ್ಷ್ಮಗಳ ಜೊತೆಗಿಟ್ಟು ನೋಡಬೇಕಿದೆ. ‘ಅನ್ಯ’ಗಳಾಗಿ ಕಟ್ಟಿಕೊಡಲಾಗುತ್ತಿರುವ ಸಮೂಹ, ಭಾಷೆಗಳ ಕುರಿತ ನಿರೂಪಣೆಗಳು ರಕ್ಷಿಸುತ್ತಿರುವ ಮತ್ತು ಮರೆಮಾಚುತ್ತಿರುವ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಾರ್ಗಕಾರನನ್ನೂ ಒಳಗೊಂಡು ಕನ್ನಡ ಕವಿಮನಸ್ಸುಗಳು ನಿರೂಪಿಸುತ್ತಾ ಬಂದ ‘ಕನ್ನಡ’ ಹಾಗೂ ಸಾಂಸ್ಥಿಕಶಕ್ತಿಕೇಂದ್ರಗಳು ಸಮೂಹಸಮ್ಮತಿಯ ಉತ್ಪಾದನೆಯಲ್ಲಿ ಸಾಧ್ಯವಾಗಿಸಿದ ಕನ್ನಡಗಳ ಭಿನ್ನ ಚಹರೆಗಳನ್ನು ವಿವರಿಸಿಕೊಳ್ಳುವ ಪ್ರಯತ್ನವಿಲ್ಲಿದೆ.

ಭೌತಿಕವಾಗಿದ್ದೂ ಭಾವಿತವಾಗುವ, ಸ್ಥಳೀಯವಾಗಿದ್ದೂ ವಿಶ್ವಜಗತ್ತಾಗುವ ವಿಶಿಷ್ಟ ಭೂಗೋಳ

ಕನ್ನಡವೆಂಬ ಮೂರಕ್ಷರದ ನುಣುಪು ನುಡಿಯಲ್ಲಿ ಮಾರ್ಗಕಾರ ಬರೆದ ‘ಭಾವಿಸಿದ ಜನಪದ’ದ ನಕಾಶೆಯಲ್ಲಿ ಭೌತಿಕ ಭೂಗೋಳ ಹಾಗೂ ಭಾವಿತ ಭಾವಗೋಳಗಳಿವೆ. 000ಈ ಕನ್ನಡದ ಹಿಂದೆ ಜಗತ್ತು ಭಗವಂತನಿಂದಾದುದಾಗಿ ನಂಬುವ ಸೃಷ್ಟಿವಾದಿ ವೈದಿಕ ತಾತ್ವಿಕತೆಗಿಂತ ಭಿನ್ನವಾಗಿ, ಜಗತ್ತನ್ನೊಂದು ‘ಅನಾದಿ’ಯಾಗಿ ನಂಬುವ ಜೈನತಾತ್ವಿಕತೆ ಇದೆ. ಮಾರ್ಗಕಾರ ನಿರೂಪಿಸುವ ಕನ್ನಡವೆಂಬ ಜನಪದವೂ ಸೃಷ್ಟಿವಾದಿ ನಿರೂಪಣೆಯಂತೆ ‘ಇರುವಿಕೆ’ಯಾಗದೆ ಆಗುವಿಕೆಯ ಮಾದರಿಯಲ್ಲಿದೆ. ‘ಆಗುವಿಕೆಯ’ ತಾತ್ವಿಕತೆಯಲ್ಲರಳಿದ ಈ ಕನ್ನಡ ಭೌತಿಕಚಹರೆಗಳನ್ನು ಹೊಂದಿಯೂ ಆಹ್ವಾನ-ವಿಸರ್ಜನದ ಮಾದರಿಯಲ್ಲಿ ನಾಡಾಡಿಯೊಬ್ಬ ಕಟ್ಟಿಕೊಳ್ಳುತ್ತಲೇ ಹೋಗುವ ಭಾವಿತಸತ್ಯ. ‘ಕಾವೇರಿಯಿಂದ ಗೋದಾವರಿವರೆಗೆ….’ ಎಂಬ ಪದ್ಯವಂತೂ ನಾಡು-ನುಡಿ-ಜನಪದಗಳೆಂಬ ಸಮಸ್ತವನ್ನೂ ಮೂರ್ತ-ಅಮೂರ್ತ, ಭೌತಿಕ-ಭಾವಕವೆಂಬ ವಿರುದ್ಧ ದ್ವಂದ್ವಗಳಲ್ಲಿ ಏಕತ್ರ ಗ್ರಹಿಸಿ ಕಂಡರಿಸುತ್ತದೆ. ಈ ರೇಖಾಚಿತ್ರದಲ್ಲಿನ ಕಾವೇರಿ-ಗೋದಾವರಿಗಳು ಕೇವಲ ಭೌಗೋಳಿಕ ಅಸ್ತಿತ್ವವಲ್ಲ. ಭಾರತೀಯ ಸಮಷ್ಟಿಮನಸ್ಸಿನ ಭಾವ ವಾಸ್ತವಗಳು. ಅಷ್ಟೇ ಅಲ್ಲ, ಯಾವುದೇ ಧಾರ್ಮಿಕ, ಮತೀಯ ಗುರುತಿಗೂ ಬಂಧಿಯಲ್ಲದ ಚಲನಶೀಲ ಜಲಸತ್ಯಗಳಾದ ಈ ನಿಸರ್ಗದತ್ತ ಭೌತಿಕಮೇರೆಗಳು, ಅನುಲ್ಲಂಘನೀಯವಾದ ಗಡಿಕಲ್ಪನೆಯನ್ನು ಅಪಹಾಸ್ಯಕ್ಕೂ ಗುರಿಪಡಿಸುತ್ತವೆ.

ಜೊತೆಗೆ ಮಾರ್ಗಕಾರನ ‘ಕನ್ನಡ’ ನೆಲವೆಂಬ ಏಕಸತ್ಯವಾಗದೆ, ‘ಜನಪದ’ವಾಗಿ ಜನವನ್ನು ಒಳಗೊಳ್ಳುತ್ತದೆ. ವಸುಧಾವಲಯ ವಿಲೀನವಾಗಿಯೂ, ‘ವಿಶದವಾಗುಳಿಯಬಲ್ಲ’ ಪ್ರಕಟ ಅಸ್ಮಿತೆ ಮತ್ತು ಸಹತ್ವಗಳೆರಡೂ ಅದಕ್ಕೆ ಸಾಧ್ಯವಿದೆ. ಸ್ಥಳೀಯತೆಯ ಭಿನ್ನತೆಯನ್ನು ವಿಶ್ವಾತ್ಮಕತೆಯ ಸಾಮ್ಯತೆಯಲ್ಲಿ ಹೊಂದಿಸಬಲ್ಲ ಸಂಘರ್ಷವಿಲ್ಲದ ‘ಸಹತ್ವ’ದಿಂದಾಗಿ ಅದು ವಿಷಯವಿಶೇಷವೂ ಆಗಿದೆ. ಮೂರನೇ ಪರಿಚ್ಛೇದದಲ್ಲಿ ಉದಾತ್ತಾಲಂಕಾರಕ್ಕೆ ಲಕ್ಷ್ಯನೀಡುತ್ತಾ, ‘ಪರಧರ್ಮ ಪರವಿಚಾರಗಳ ಸೈರಣೆಯನ್ನೇ ‘ಕಸವರಮೌಲ್ಯ’ವೆನ್ನುವ ಮಾರ್ಗಕಾರನ ಮಾತು, ಇಂತಹ ಜನಪದವೊಂದರ ಆಗುವಿಕೆಗೆ ಬೇಕಾದ ತಾತ್ವಿಕ ಭೂಮಿಕೆಯಂತಿದೆ. ಜನಪದ ಅಥವಾ ನಾಡೊಂದು ವಿಶ್ವಸ್ಥ-ಸ್ಥಳೀಯವೆನ್ನುವ, ವಿಲೀನ-ವಿಶದವೆಂಬ ದ್ವಂದ್ವದ ಏಕತ್ರ ಸ್ಥಿತಿಯನ್ನು ಆಗುಗೊಳಿಸಿಕೊಳ್ಳಲು, ‘ಸ್ವ’ ಮತ್ತು ‘ಅನ್ಯ’ವೆಂಬ ಭಿನ್ನತೆಗಳನ್ನು ಸಹನೆಯ ಆವರಣದಲ್ಲಿ ಸಂಬಾಳಿಸಲು ಶಕ್ತವಾಗಬೇಕು. ಹೀಗೆ ಸಹಸ್ರಮಾನಗಳ ನಂತರವೂ ಕನ್ನಡದ ಜನ ಮತ್ತೆ ಮತ್ತೆ ಚಿಂತಿಸಿ, ಕಟ್ಟಿಕೊಳ್ಳುತ್ತಲೇ ಇರಬಹುದಾದ ಕನ್ನಡದ ನಿರೂಪಣೆಯೊಂದನ್ನು ಮಾರ್ಗಕಾರ ನಮ್ಮೆದುರು ಬಿಟ್ಟುಹೋಗಿದ್ದಾನೆ. ಆತನಲ್ಲಿ ಕನ್ನಡವೆಂಬುದು ನೆಲವೇ, ಭಾಷೆಯೇ, ಜನವೇ ಎಂಬ ತಕರಾರಿಗಿಂತ ಎಲ್ಲವನ್ನೂ ಒಳಗೊಂಡು ದಾಟುತ್ತಲೇ ಹೋಗುವ ಅನಿಕೇತನವಾಗುತ್ತದೆ.

ಸುಡುವ ಕಿಚ್ಚಾಗದೆ ಸುಳಿವ ಗಾಳಿ-ಬೆಳೆವ ಬಳ್ಳಿಯಾಗಿ

ದೇಶವೆಂದರೆ ಮಣ್ಣು ಬೆಟ್ಟ ಗುಡ್ಡ ನಕ್ಷೆ ಬಾವುಟವೆಂದು ನಂಬುವುದು ಬೇರೆ. ಆ kannada_Kuvempuದೇಶ ಮತ್ತು ಭಾಷೆಯು ದಕ್ಕುವುದು ಮೂರ್ತಚಹರೆಯಲ್ಲೇ. ಅಲ್ಲಿ ಬೆಳೆಯುವ ಬಳ್ಳಿಯ ಗುಣವಾಗಲೀ, ಬೆರೆಯುವ ಗಾಳಿಯ ಗುಣವಾಗಲೀ ಇರದು. ಆದರೆ ಪುತಿನ ಹೇಳುವಂತೆ ‘ದೇಶ ಅಂದರೆ ಜನ’ ಎಂದುಕೊಳ್ಳಲು ಸಾಧ್ಯವಾಗುತ್ತಲೇ, ದೇಶ ಅಥವಾ ನಾಡಿನ ಸೀಮಿತ ಭೌತಿಕಚಹರೆ ಕಳಚಿಕೊಳ್ಳುತ್ತದೆ. ಈ ಕಣ್ಣೋಟವು ಎಲ್ಲವನ್ನೂ ಕನ್ನಡವಾಗಿಸಿ, ಕನ್ನಡಕ್ಕಾಗಿಸಿಕೊಂಡು ಬೆರೆಯುವ ಅಪೂರ್ವ ಶಕ್ತಿಯಾಗುತ್ತದೆ. ಕನ್ನಡ ಕಾವ್ಯಜಗತ್ತು ಎದುರಿಗೆ ತಂದುಕೊಳ್ಳುವ ಕನ್ನಡ ಮತ್ತು ಕರ್ನಾಟಕದಲ್ಲಿ ಇಂಥದ್ದೊಂದು ಆಹ್ವಾನ-ವಿಸರ್ಜನದ ಗುಣವಿದೆ. ಅಲ್ಲಿ ಏಕಕಾಲದಲ್ಲಿ ಸಾಮ್ಯತೆ-ಭಿನ್ನತೆಗಳು ಏಕತ್ರಗೊಳ್ಳುತ್ತಲೇ ಭಿನ್ನವಾಗಿ ಉಳಿಯುತ್ತವೆ. ಮಾರ್ಗಕಾರನಿಂದ ಹಿಡಿದು ಕವಿಶೈಲ ಕುವೆಂಪು ತನಕ ಕನ್ನಡಕಾವ್ಯದೊಳಗೆ ಈ ಮಾದರಿಯ ಹರಿವಿದೆ. ‘ನೀ ಮೆಟ್ಟುವ ನೆಲ ಅದೇ ಕರ್ನಾಟಕ, ನೀನೇರುವ ಮಲೆ ಸಹ್ಯಾದ್ರಿ, ನೀನ್ ಕುಡಿಯುವ ನೀರ್ ಕಾವೇರಿ….’ ಇತ್ಯಾದಿಯಾಗಿ ಕುವೆಂಪು ಕಲ್ಪಿಸುವ ಕನ್ನಡವೂ ಒಂದು ಭಾವವಾಸ್ತವವೇ. ಮೂರ್ತವಾಗಿ ನೆಲೆಗೊಳ್ಳದ, ಆದರೆ ಕಟ್ಟಿಕೊಳ್ಳುತ್ತಲೇ ಹೋಗಬಹುದಾದ ಈ ಕನ್ನಡ ನವನವೀನವೇ. ಈ ಕನ್ನಡಕ್ಕೆ ಗುರುತಾಗಿಯೂ ಗುರುತಿಗೆ ಹೊರತಾಗುವ ಶಕ್ತಿಯಿದೆ. ಎಲ್ಲಿಯೋ, ಹೇಗಾದರೂ ಇದ್ದೂ ಎಂದೆಂದಿಗೂ ಕನ್ನಡವಾಗುವ ಈ ಅಂತರಂಗದ ಪರಿಗೆ ಮಾರ್ಗಕಾರನ ‘ಭಾವಿಸಿದ ಕನ್ನಡದ’ ಛಾಯೆ ಇದೆ. ಇದಕ್ಕೆ ಅನ್ಯವೆಂಬ ಎದುರಾಳಿ ಕುರುಹೇ ಇರದು. ಹೀಗಾಗಿ ಅದು ಸಂಘರ್ಷರಹಿತವಾದುದೂ ಆಗುತ್ತದೆ.

ಕನ್ನಡ ಕವಿಜಗತ್ತು ಸಂಘರ್ಷಕ್ಕೆ ಕಾರಣವಾಗುವ ಅಸಹನೆಯ ನಿರಸನದಲ್ಲಿ ಲೋಕಸಮಸ್ತಕ್ಕೂ ಚಾಚಿಕೊಳ್ಳಬಯಸುತ್ತದೆ. ಆದಿಕವಿ ಪಂಪನ ಲೋಕಾನುಭವ ಭಾಗವಾದ ರಸಿಕಜೀವನದಲ್ಲಿರುವುದು ಸೀಮೋಲ್ಲಂಘನವೇ. ಆಂಧ್ರ, ಕೇರಳ, ಮಲಯ ಯುವತಿಯರ ಸ್ತನಹಾರ, ಕಟೀಸೂತ್ರ, ದರ್ಪಣವಾಗಿ ಬೆರೆತ ಪಂಪನೆಂಬ ಕನ್ನಡಮನಸ್ಸು ಕನ್ನಡದ್ದಲ್ಲದ ಹೆಣ್ತನಗಳ ತೋಳತೆಕ್ಕೆಯಲ್ಲಿ ಪಡೆದ ಸಂಸಾರಸಾರವನ್ನು ಕನ್ನಡದ ಸಂಪತ್ತಾಗಿಸಿದೆ. ನಡುಗನ್ನಡ ಕವಿ ರತ್ನಾಕರವರ್ಣಿಯಾದರೋ ತನ್ನ ಕಾವ್ಯವನ್ನು ಮೆಚ್ಚುವವರ ಸರಣಿಯಲ್ಲಿ ಕನ್ನಡಿಗರ ಜೊತೆಗೆ ತೆಲುಗ, ತುಳುವರನ್ನೂ ಸೇರಿಸಿಕೊಳ್ಳುತ್ತಾನೆ. ಅವರೆಲ್ಲರೂ ಮೈಯುಬ್ಬಿ ಕೇಳಬೇಕೆಂದೂ ಆಶಿಸುತ್ತಾನೆ. ಭಾಷೆ ಇಲ್ಲಿ ವೈವಿಧ್ಯವೇ ಹೊರತು, ಎದುರಾಳಿಯಲ್ಲ. ಉಸಿರಿನ ನಾದತರಂಗದ ಹೊಸಬಗೆಯ ಕಸುವಲ್ಲದೆ, ಉಸಿರನ್ನೇ ಹಿಚುಕುವ ಕದನ ಕಣವಲ್ಲ. ಪ್ರಾಯಶಃ ಆರೋಗ್ಯಕರವಾದ ಕವಿಮನಸ್ಸೊಂದು ಭಾಷೆಯ ಜೊತೆಗೆ ವ್ಯವಹರಿಸುವಲ್ಲಿ ಅನುಸರಿಸಬಹುದಾದ ಆರೋಗ್ಯಕರ ದಾರಿಯಲ್ಲೇ ಪಂಪ, ರತ್ನಾಕರ, ಕುವೆಂಪು ಅವರುಗಳು ಸಾಗಿದ್ದಾರೆ. ಇದು ಹೊರಗಿನದನ್ನು ದ್ವೇಷಿಸದೆ, ಎಲ್ಲಿಯೇ ಇರಲಿ ಒಳಗಿನದಾಗುವ ಅಥವಾ ಕನ್ನಡವನ್ನು ತನ್ನೊಳಗಿನ ಸತ್ಯವಾಗಿಸುವ ದಾರಿ. ಇರುವಿಕೆ ತೋರುತ್ತಲೇ ಬಯಲೊಳಗೆ ಬೆರೆತು ಬೆತ್ತಲಾಗುವ ಗಂಧಹೊತ್ತ ಗಾಳಿಯಂತೆ, ಮೆದೆಯೊಳಗೆ ಹುದುಗಿ ಮೈಮರೆತಂತಿದ್ದೂ ಟಿಸಿಲೊಡೆದ ನಿಡುಗೊರಳ ಕುಡಿಗಳಲ್ಲಿ ಅಸ್ಮಿತೆಯ ಕುರುಹು ಉಳಿಸಿಡುವ ಬಳ್ಳಿಯಂತೆ, ವಸುಧಾವಲಯ ವಿಲೀನವಾಗಿಯೂ ಸದಾಕಾಲ ವಿಶದವಾಗುಳಿಯಬಲ್ಲ ಕನ್ನಡದ ನಡೆಯಿದು.

ಸಹನೆ ಅಸಹನೆಗಳ ಸಾಂಸ್ಕೃತಿಕ ತರಬೇತಿ

ಆದರೆ ನಮ್ಮೆದುರು ಇಂದು ಪ್ರಕಟಗೊಳ್ಳುತ್ತಿರುವ ಕನ್ನಡಕ್ಕೆ ಬೇರೆ ಚಹರೆಗಳಿವೆ.bhuvaneshwari ಅದಕ್ಕೆ ಬಾವುಟ, ಬಣ್ಣ, ಪ್ರತಿಮೆಗಳೆಂಬ ಸ್ಥಿರ ರೂಪಗಳಿವೆ. ಅದು ಭಾವಸತ್ಯದಾಚೆಯ ಭೌತಿಕಸತ್ಯವಾಗಿ, ಭೂಗೋಳದ ನಕ್ಷೆ, ಭುವನೇಶ್ವರಿಯ ಆಕಾರದ ಮೂರ್ತ ಗುರುತಾಗಿ ಮತೀಯ ಚಹರೆಗೆ ಲಗತ್ತುಗೊಂಡಿದೆ. ಅನ್ಯ-ಸ್ವ ಎನ್ನುವ ಎದುರಾಳಿಗಳನ್ನು ಕಟ್ಟಿಕೊಡುವ ಮಾಧ್ಯಮವೂ ಆಗಿದೆ. ಅಂದರೆ ಕನ್ನಡವೆಂಬ ವಿಶೇಷಣವನ್ನು ಹರಳುಗಟ್ಟಿಸಿದ ಮಾರ್ಗಕಾರ ಎರಕಹೊಯ್ದಿಟ್ಟ ‘ಕಸವರ ಮೌಲ್ಯ’ವನ್ನು ಅದು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದೆ ಎಂದಲ್ಲ. ಆದರೆ ಕನ್ನಡ ಮನಸ್ಸಿನ ಈ ಸಹತ್ವ ಮತ್ತು ಸಹನೆಯು ಆಯ್ಕೆ-ನಿರಾಕರಣದ ಮಾದರಿಯಲ್ಲಿದೆ. ಇದನ್ನು ಅನೇಕ ವೇಳೆ ಸಾಮ್ರಾಜ್ಯಗಳ ಕಲ್ಪಿತಚರಿತ್ರೆಗಳು ಬೆರೆತ ಕನ್ನಡದ ಗತವಲಸೆಗಳು ನಿರ್ಧರಿಸುತ್ತಿವೆ. ಹಾಗಾಗಿ ಕನ್ನಡದ ವೈರಿಗಳ ಆಯ್ಕೆಯಲ್ಲಿ ಭೌತಿಕ ಸೀಮೆಗಳೆಂಬ ರಾಜಕೀಯ ಗಡಿಗಳ ಜೊತೆಗೆ ಮತೀಯ ಅನ್ಯತೆಯ ಗುರುತುಗಳೂ ಸೇರಿಕೊಳ್ಳುತ್ತಿವೆ. ಕನ್ನಡದ ಹೆಗಲೇರಿ ಕುಳಿತ ಸಾಂಸ್ಕೃತಿಕ ಯಾಜಮಾನ್ಯಕ್ಕೆ ತನ್ನ ವೈರಿಯನ್ನು ಹಣಿಯಲು ಕನ್ನಡವು ಚಿಮ್ಮುಹಲಗೆಯಾಗುತ್ತಿದೆ. ಹೀಗಾಗಿ ಅನೇಕ ವೇಳೆ ಭಾಷೆಯೆಂಬುದು ಪ್ರಾಣಘಾತುಕವೇ ಆಗುತ್ತಿದೆ.

ಭಾಷಾವಾರು ಪ್ರಾಂತ್ಯಗಳ ನೆಲೆಯಲ್ಲಿ ತಮಿಳು-ತೆಲುಗು-ಮಲಯಾಳಂ-ಮರಾಠಿಗಳ ಜೊತೆಗೆ ಕನ್ನಡದ ವೈಮನಸ್ಸಿಗೆ ಗಡಿಹಂಚಿಕೆ, ಅವಕಾಶದ ಅಸಮಾನತೆಯ ಆರ್ಥಿಕ ಕಾರಣಗಳಿವೆ. ಇಂಗ್ಲೀಷನ್ನೋ, ಹಿಂದಿಯನ್ನೋ ಎದುರಾಳಿಯಾಗಿ ಪರಿಭಾವಿಸಿಕೊಳ್ಳುವಲ್ಲಿಯೂ ಅವಕಾಶಗಳ ನಾಪತ್ತೆಯ ಸಾಮೂಹಿಕ ಭಯವಿದೆ. ಇಲ್ಲಿ ಭಾಷೆ ಕೇವಲ ಭಾವನೆಯ ಅಭಿವ್ಯಕ್ತಿ ಮಾಧ್ಯಮವಷ್ಟೇ ಎಂದರಾಗದು. ಆದರೆ ಕನ್ನಡದ ಆಕ್ರಮಣಶೀಲತೆ ಮತ್ತು ಸಹನೆಗಳು ಈ ನಿರ್ದಿಷ್ಟ ರಾಜಕೀಯ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ. ಕನ್ನಡವು ತಮಿಳು-ತೆಲುಗುಗಳಂತೆ ಯಾವುದೇ ಗಡಿ, ಅವಕಾಶ ಇತ್ಯಾದಿಗಳ ತಕರಾರಿದ ಅನೇಕ ಭಾಷೆಗಳೊಂದಿಗೆ ಬದುಕುತ್ತಿದೆ. ಅವೆಲ್ಲವುಗಳ ಜೊತೆಗೆ ಅದರ ಸಂಬಂಧ ಏಕಪ್ರಕಾರವೂ ಆಗಿಲ್ಲ. ಉದಾಹರಣೆಗೆ ಕನ್ನಡದ ಯಾವ ನೆಲ-ಜಲ-ಸಾಂಸ್ಕೃತಿಕ ಆಸ್ತಿಯ ಒತ್ತುವರಿ ಮಾಡುವ ಸ್ಥಿತಿಯಲ್ಲಿರದ ಉರ್ದುವಿನೊಂದಿಗೆ ವೈರದ ಸಂಬಂಧವಿದ್ದರೆ, ಮೃತಭಾಷೆ ಎನಿಸಿಯೂ ಕನ್ನಡದ ಮೇಲೆ ಒಂದರ್ಥದ ಯಜಮಾನಿಕೆ ನಡೆಸುತ್ತಲೇ ಇರುವ ಸಂಸ್ಕೃತದ ಜೊತೆಗೆ ಅದಕ್ಕೆ ವಿನಯಶೀಲ ಸಂಬಂಧವಿದೆ. ಕೊಂಕಣಿ, ಕೊಡವ, ತುಳು ಇನ್ನೂ ಎಷ್ಟೋ ಭಾಷೆಗಳೊಂದಿಗೆ ವಿಶೇಷ ತಕರಾರುಗಳಿಲ್ಲದ, ಆದರೆ ಯಜಮಾನಿಕೆಯ ಸಂಬಂಧವಿದೆ.

ಗೋಕಾಕ್ ವರದಿಯ ಸಂದರ್ಭವೋ, ದೂರದರ್ಶನದಲ್ಲಿನ ಉರ್ದು ವಾರ್ತೆಯೋkarnataka Sanskrit University ಉರ್ದುವಿನ ವಿರುದ್ಧವಾಗಿ ಪ್ರಚೋದಿಸಿದಂತೆ, ಸಂಸ್ಕೃತವಿಶ್ವವಿದ್ಯಾಲಯದ ಪ್ರಶ್ನೆಯೋ, ನಿರಂತರವಾಗಿ ಪ್ರಸಾರವಾಗುತ್ತಿರುವ ಸಂಸ್ಕೃತ ವಾರ್ತೆಗಳೋ ಕನ್ನಡ ಮನಸ್ಸನ್ನು ಪ್ರಚೋದಿಸಿಲ್ಲ! ಕನ್ನಡಿಗರ ಯಾವ ಹಕ್ಕನ್ನೂ ಕಸಿಯದ, ಯಾವ ನೌಕರಿಯನ್ನೂ ಅಪಹರಿಸದ, ಹೆಚ್ಚೂ ಕಡಿಮೆ ಶೇ.10ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಮನೆಮಾತಾಗಿರುವ ಭಾಷೆಯೊಂದು ಕನ್ನಡದ ಸಂದರ್ಭದಲ್ಲಿ ಉಗ್ರ ವಿರೋಧಕ್ಕೆ ಒಳಗಾಗುವುದು ಹಾಗೂ ಕನ್ನಡದ ಮೇಲೆ ಯಜಮಾನಿಕೆ ನಡೆಸಿಯೂ ಇನ್ನೊಂದು ಭಾಷೆ ಕನ್ನಡದ ವಿನಯಗೌರವವನ್ನು ಪಡೆಯುವುದು ಅಚ್ಚರಿ ಎನಿಸುತ್ತದೆ. ಕನ್ನಡದ ನಡುವೆಯೇ ಇರುವ ಅದೆಷ್ಟೋ ಭಾಷೆಗಳಿಗೆ ಕನಿಷ್ಠ ಒಂದು ಅಕಾಡೆಮಿಯೂ ಇಲ್ಲದಿರುವ ಸ್ಥಿತಿಯನ್ನು ಮೌನವಾಗಿ ಸಹಿಸಿಕೊಂಡಿರುವ ಸಮುದಾಯಗಳ ಬಗೆಗೆ ಕನಿಷ್ಠ ಸೌಜನ್ಯದ ಸಹಾನುಭೂತಿ ತೋರದ ನಾವು, ಸೀಮಿತ ಕಲಿಕಾ ಸಮೂಹವಿರುವ ಒಂದು ಭಾಷೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿತವಾಗುವುದನ್ನು ಕನ್ನಡದ ಕರ್ತವ್ಯ ಎನ್ನುವಂತೆ ಸಹಮತ ತೋರುತ್ತೇವೆ! ನಮ್ಮ ಮನಸ್ಸಿಗೆ ಈ ಮಾದರಿಯ ಅಸಹನೆ ಮತ್ತು ಸಹನೆಯ ತರಬೇತಿ ಎಲ್ಲಿಂದ ದೊರೆಯಿತೆನ್ನುವುದೇ ಅಚ್ಚರಿಯೆನಿಸುತ್ತದೆ.

ಭಾಷೆ, ಧರ್ಮ, ಜಾತಿ ಇನ್ನೂ ಏನೇನೋ ಮಾದರಿಗಳಲ್ಲಿ ವ್ಯಕ್ತವಾಗುವ ದ್ವೇಷ-ಸಹನೆಗಳು ಆಕಸ್ಮಿಕಗಳಲ್ಲ. ಅವುಗಳನ್ನು ಸಹಜವಾದ ಅಭಿವ್ಯಕ್ತಿಗಳೆಂದು ಕರೆಯಲಾಗುತ್ತದೆಯಾದರೂ, ಅವುಗಳ ಮರೆಯಲ್ಲಿ ಹದಗೊಂಡ ಸಾಂಸ್ಕೃತಿಕ ತರಬೇತಿಯ ಬೆಚ್ಚನೆಯ ಇರುವಿಕೆ ನಿರಾಕರಿಸಲಾಗದು. ನಮ್ಮ ನಡುವೆಯೇ ಸಂಭವಿಸಿಹೋದ ಎರಡು ಗಾಂಧಿಗಳ ಹತ್ಯೆಯ ನಂತರದ ಸಹನೆ, ಅಸಹನೆಗಳೇ ಇದಕ್ಕೆ ಸಾಕ್ಷಿಯಂತಿವೆ. ಇಂದಿರಾ ಗಾಂಧಿಯನ್ನು ಸಿಕ್ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಗುಂಡಿಟ್ಟು ಕೊಂದರೆ, ಗಾಂಧೀಜಿಗೆ ಗುಂಡಿಟ್ಟು ಕೊಂದುದು ಚಿತ್ಪಾವನ್ ಬ್ರಾಹ್ಮಣಧರ್ಮ/ಜಾತಿಗೆ ಸೇರಿದ ವ್ಯಕ್ತಿ. ಆದರೆ ಎರಡೂ ಸಂದರ್ಭದಲ್ಲಿ ಈ ದೇಶದ ಮನಸ್ಸುಗಳು ಪ್ರತಿಕ್ರಿಯಿಸಿದ ರೀತಿಯಲ್ಲಿ ಅಗಾಧ ವ್ಯತ್ಯಾಸವಿದೆ. ಇಂದಿರಾ ಸತ್ತಾಗ ಕೊಂದವರ ಸಮುದಾಯಕ್ಕೆ ಸೇರಿದವರೆಂಬ ಒಂದೇ ಕಾರಣಕ್ಕೆ ಸಮುದಾಯವೊಂದರ ಸಾಮೂಹಿಕ ನರಮೇಧವೇ ನಡೆಯಿತು. ಒಂದು ದೊಡ್ಡಮರ ಬೀಳುವಾಗ ಇದೆಲ್ಲವೂ ಸಾಮಾನ್ಯವೆಂಬ ಸಮಜಾಯಿಷಿಯೊಂದಿಗೆ ಕೊಲೆಮಾಡಿದ ವ್ಯಕ್ತಿಗಳ ಪಾಪವನ್ನು ಸಮುದಾಯಕ್ಕೆ ವರ್ಗಾಯಿಸಲಾಯಿತು. ಆದರೆ ಈ ದೇಶದ ಆತ್ಮಸಾಕ್ಷಿಯಂತಿದ್ದ ಗಾಂಧೀ ಕೊಲೆಯ ಅಪರಾಧವು ಸಮುದಾಯಕ್ಕೆ ವರ್ಗಾವಣೆಗೊಂಡಿತೇ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಗಾಂಧೀ ಕೊಲೆಯನ್ನು ವ್ಯಕ್ತಿಯ ಕೃತ್ಯವಾಗಿಯೇ ಸೀಮಿತಗೊಳಿಸಿ ಅದರಲ್ಲಿ ಸಂಘಟನಾತ್ಮಕ ಪಾಲನ್ನೂ ನಿರಾಕರಿಸುವ ಯತ್ನವೇ ನಡೆಯಿತು. ಪ್ರಾಯಶಃ ಇಂದಿರಾ ಗಾಂಧಿಯ ಕೊಲೆಯನ್ನೂ ಈ ದೇಶದ ಬಹುಸಂಖ್ಯಾತ ಧರ್ಮಕ್ಕೆ ಸೇರಿದ ಮೇಲ್ಜಾತಿ ಶಕ್ತಿಗಳೇ ನಿರ್ವಹಿಸಿದ್ದಲ್ಲಿ, ಸಮುದಾಯವನ್ನೇ ಹೊಣೆಮಾಡಿ ಆ ಪ್ರಮಾಣದ ರಕ್ತಪಾತ ಸಂಭವಿಸುತ್ತಿತ್ತೆನ್ನಲಾಗದು. ಏಕೆಂದರೆ ಇಂದಿಗೂ ಈ ದೇಶದ ದಲಿತ, ಅಲ್ಪಸಂಖ್ಯಾತ, ತಬ್ಬಲಿಜಾತಿಗಳಿಗೆ ಸೇರಿದವರುಗಳು ಮಾಡುವ ತಪ್ಪುಗಳು ಸಮುದಾಯದ ತಪ್ಪುಗಳಾಗುವಂತೆ, ಮೇಲ್ಜಾತಿಯ ವ್ಯಕ್ತಿಗಳ ತಪ್ಪುಗಳು ಸಮುದಾಯದ ತಪ್ಪುಗಳಾಗುತ್ತಿಲ್ಲ.

ಈ ಜಾತಿಗಳಿಗೆ ಕೆಳಜಾತಿ, ಅನ್ಯ ಸಮುದಾಯಗಳಂತೆ ವರ್ತಮಾನದ ತಪ್ಪಿನ ಜೊತೆಗೆ ಚರಿತ್ರೆಯ ಪಾಪದ ಮಣಭಾರವನ್ನೂ ಹೊರಬೇಕಾದ ಹೊಣೆಗಳಿಲ್ಲ. ಇದಕ್ಕೆ ನಮ್ಮೆದುರಿನ ಕೈರ್ಲಾಂಜಿ ಇದೆ, ಕಂಬಾಲಪಲ್ಲಿ ಇದೆ. ಇತ್ತೀಚೆಗಿನ ಉತ್ತರ ಪ್ರದೇಶದಲ್ಲಿನ ದಲಿತರ ಮೇಲಿನ ದಾಳಿಗಳಿವೆ, ನಿರಂತರವಾದ ಕೋಮುಗಲಬೆಗಳಿವೆ. ಭಾಷೆಯ ಸಂಬಂಧದಲ್ಲೂ ನಮ್ಮ ಸಹನೆ ಅಸಹನೆ ಔದಾರ್ಯಗಳು ಇದಕ್ಕಿಂತ ಭಿನ್ನವಲ್ಲ. ಆದರೆ ಇವು ನಮ್ಮವಲ್ಲ. ನಮ್ಮದೆಂದು ನಂಬಿಕೊಂಡ ತರಬೇತಿಯ ಫಲಿತಗಳು. ಪ್ರಾಯಶಃ ಈ ಅರಿವಿರುವ ಮತೀಯ ಅಲ್ಪಸಂಖ್ಯಾತನೂ ಆಗಿರಬಹುದಾದ ಶ್ರೀವಿಜಯನಿಗೆ ಭಾರತ ಮತ್ತು ಕನ್ನಡದ ಸಂದರ್ಭದಲ್ಲಿ ಯಾವುದು ‘ಕಸವರ ಮೌಲ್ಯ’ ಎಂಬುದು ಸ್ಪಷ್ಟವಾಗಿ ತಿಳಿದಿರಲೇ ಬೇಕು. ಅಷ್ಟಕ್ಕೂ ಸಹನೆ, ಔದಾರ್ಯಗಳು ಬೇಕಿರುವುದು ಅಧಿಕಾರ ಉಳ್ಳವರಿಗಲ್ಲ. ಅಧಿಕಾರ ವಂಚಿತರ ಬದುಕಿನ ಆಧಾರಗಳವು. ಅವು ಯಾವೊತ್ತೂ ‘ಕೊಲುವುದುಚಿತವೇ ಹೇಳು’ ಎಂದು ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ. ‘ಕಸವರಮೌಲ್ಯ’ವನ್ನು ನೆನಪಿಸುತ್ತಲೇ ಇರಬೇಕಾಗುತ್ತದೆ. ಅಂತೆಯೇ ಬಿದ್ದವರ ದನಿಯಾದ ಸಾಹಿತ್ಯಕ್ಕೂ ಅಂತಹ ಹೊಣೆ ಇರುವುದರಿಂದ ಅದೂ ‘ಭಾವಿಸಿದ ಕನ್ನಡ’ವನ್ನಲ್ಲದೆ, ಭೌತಿಕವಾದ ಗೆರೆ ಎಳೆಯುವ ಗುರುತಿನ ರಾಜಕಾರಣವನ್ನು ಮಾಡಲಾಗದು. ಬೆಳಕಿನೊಳಗಣ ಬೆಂಕಿಯಾಗದೆ, ಬೆಂಕಿಯೊಳಗಣ ಬೆಳಕಾಗುವುದು ಅದರ ಹೊಣೆಯಲ್ಲವೆ?