Monthly Archives: November 2014

ಕೇವಲ ಒಂದು ಜಾಕೆಟ್, ಟೋಪಿ ಮತ್ತು ಒಂದು ಗುಲಾಬಿ

– ಇಂಗ್ಲೀಷ್ : ಸಾಬಾ ನಕ್ವಿ
– ಅನುವಾದ: ಬಿ.ಶ್ರೀಪಾದ ಭಟ್

೧೯೯೧ರಲ್ಲಿ ಸೋವಿಯತ್ ಯೂನಿಯನ್ ಗಣರಾಜ್ಯ ವ್ಯವಸ್ಥೆ ಕುಸಿದು ಬಿದ್ದಾಗ ಜನಸಮೂಹವು ಲೆನಿನ್ ಮತ್ತು ಜೋಸೆಫ್ ಸ್ಟಾಲಿನ್ ಅವರ ಪ್ರತಿಮೆಗಳನ್ನು ಕೆಡವಿ ಧ್ವಂಸಗೊಳಿಸಿದರು. ಸೋವಿಯತ್‌ನ ನಾಗರಿಕರ ಆಕ್ರೋಶ ಮತ್ತು ಕೋಪ ಎಷ್ಟಿತ್ತೆಂದರೆ ಆ ಪ್ರತಿಮೆಗಳನ್ನು ಅವುಗಳ ಪೀಠದಿಂದ ನೆಲಕ್ಕೆ ಕೆಡವಿ, ಕಲ್ಲುಗಳನ್ನು ತೂರಿ ಉನ್ಮಾದದಿಂದ ವರ್ತಿಸಿದರು. ನಂತರ ವಿರೂಪಗೊಂಡ ಆ ಪ್ರತಿಮೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ, ಅದಕ್ಕಂಟಿದ ಧೂಳನ್ನು ಕೊಡವಿ ಆಧುನಿಕ ಪ್ರತಿಮೆಗಳೊಂದಿಗೆ ಲೆನಿನ್, ಸ್ಟಾಲಿನ್‌ರ ದುರಸ್ತಿಗೊಂಡ ಪ್ರತಿಮೆಗಳನ್ನು ಮಾಸ್ಕೋ ಪಾರ್ಕನಲ್ಲಿ ಮರಳಿ ಸ್ಥಾಪಿಸಲಾಯಿತು. ಆದರೆ ಈ ಲೆನಿನ್ ಮತ್ತು ಸ್ಟಾಲಿನ್ ಪ್ರತಿಮೆಗಳನ್ನು ಹಿಂದಿನಂತೆ ಸೋವಿಯತ್‌ನ ಎತ್ತರದ ಪೀಠಗಳಲ್ಲಿ ಆ ಗತಕಾಲದ ವೈಭವದೊಂದಿಗೆ ಮರಳಿ ಸ್ಥಾಪಿಸಲು ಮಾತ್ರ ಸಾಧ್ಯವಾಗಲಿಲ್ಲ.

ನರೇಂದ್ರ ಮೋದಿಯ ಅಧಿಕಾರದ ಕಡೆ ಎತ್ತರೆತ್ರಕ್ಕೆ ಏರುತ್ತಿರುವುದು ಮತ್ತು ಆ ಅಧಿಕಾರವು ಏಕವ್ಯಕ್ತಿ ಕೇಂದ್ರಿತ, ಏಕಪಕ್ಷ ಕೇಂದ್ರಿತ ವ್ಯವಸ್ಥೆಯ ಕಡೆಗೆ ನೆಲೆಗೊಳ್ಳತೊಡಗಿರುವುದರ ಕುರಿತಾಗಿ ಯಾವುದೇ ಅನುಮಾನ ಇಟ್ಟುಕೊಳ್ಳುವ ಅಗತ್ಯವಿಲ್ಲ. ಇದೇ ಸಂದರ್ಭದಲ್ಲಿ ಇಂಡಿಯಾದ ಚುನಾವಣಾ ರಾಜಕಾರಣದ ಸಿನಿಕತನದಿಂದಾಗಿ ಮತ್ತು ನೆಹರೂ ಸಂತತಿಯ ದೋಷಪೂರಿತ ಮತ್ತು ಊಹಾತೀತ ಆಡಳಿತದ ಕಾರಣಕ್ಕಾಗಿ ಇಂದು ನೆಹ್ರೂವಿಯನ್ ಐಡಿಯಾಲಜಿಗಳು ಮತ್ತು ಆದರ್ಶಗಳು ಟೊಳ್ಳಾಗಿರುವುದನ್ನೂ ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಕಾಲವು ಬದಲಾಗುತ್ತಿದೆ, ಸಂಗತಿಗಳೂ ಬದಲಾಗುತ್ತಿವೆ ಮತ್ತು ಇದು ಆರಂಭ ಮಾತ್ರ.

ಅತ್ಯಂತ ಉನ್ನತವಾದ ಆದರ್ಶಗಳನ್ನು ಹೊಂದಿದ್ದ ಮತ್ತು ಆ ಆದರ್ಶಗಳನ್ನು ವ್ಯಕ್ತಪಡಿಸಲು ಬಳಸುತ್ತಿದ್ದ nehru_ambedkarಅಸಾಧಾರಣವಾದ ವಾಕ್ಪಟುತ್ವವನ್ನು ಹೊಂದಿದ್ದ ನೆಹರೂ ಕೆಲವು ಗುರುತರವಾದ ತಪ್ಪುಗಳನ್ನು ಸಹ ಮಾಡಿದ್ದರು. ವ್ಯಕ್ತಿ ಸ್ವಾತಂತ್ರ, ಬಹುತ್ವವಾದ, ಒಳಗೊಳ್ಳುವಿಕೆ, ಸೆಕ್ಯುಲರಿಸಂ, ಮಾನವೀಯತೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ಕ್ಷಮತೆಗಳಂತಹ ಉದಾತ್ತವಾದ ಆದರ್ಶ ಗುಣಗಳನ್ನು ಹೊಂದಿದ್ದ ನೆಹರೂರವರ ಈ ಮೌಲ್ಯಗಳ ವಿಷಯದಲ್ಲಿ ಎಲ್ಲಿಯೂ ರಾಜಿಯಾಗದಂತಹ ವ್ಯಕ್ತಿತ್ವವನ್ನು ಇನ್ನು ಮುಂದೆ ಕಾಪಾಡಿಕೊಳ್ಳಲು ಸಾಧ್ಯವೇ ಎನ್ನುವುದು ಈಗ ನಮ್ಮ ಮುಂದಿರುವ ಪ್ರಶ್ನೆ. ಏಕೆಂದರೆ ಕೇರಳದ ಆರೆಸಸ್‌ನ ಮುಖವಾಣಿ ಪತ್ರಿಕೆ ಕೇಸರಿಯಲ್ಲಿ ಇತ್ತೀಚೆಗೆ ಬರೆದ ಒಂದು ಲೇಖನದಲ್ಲಿ ನಾಥುರಾಮ್ ಗೋಡ್ಸೆ ಗಾಂಧಿ ಬದಲಿಗೆ ನೆಹರೂವನ್ನು ಹತ್ಯೆ ಮಾಡಬೇಕಿತ್ತು ಎಂದು ಪ್ರತಿಪಾದಿಸಲಾಗಿದೆ. ನಂತರ ಈ ಲೇಖನವನ್ನು ಹಿಂತೆಗೆದುಕೊಳ್ಳಲಾಗುವುದೆಂದು ಘೋಷಿಸಿದರೂ ಆ ಭಾವನಾತ್ಮಕ ಮನಸ್ಥಿತಿ ಮಾತ್ರ ನಿಚ್ಛಳವಾಗಿದೆ. ಅಂದರೆ ನೆಹರೂ ಏನೋ ಬದುಕಿಕೊಂಡರು ಆದರೆ ನೆಹರೂ ಪ್ರತಿಪಾದಿಸಿದ ಮೌಲ್ಯಗಳು ಮತ್ತು ನೈತಿಕತೆಗಳು ತೀರಿಕೊಂಡವೇ?

ವಿಕೃತಗೊಂಡ ಸ್ವರೂಪಗಳಲ್ಲಿ ಸಾಮಾಜಿಕ ಸ್ಥಿತ್ಯಂತರಗಳು ನಮ್ಮ ಕಣ್ಣ ಮುಂದೆಯೇ ಘಟಿಸುತ್ತಿವೆ. ಪ್ರಾಣಿ ಹತ್ಯೆ ಮತ್ತು ಲವ್ ಜಿಹಾದ್‌ನಂತಹ ವಿಷಯಗಳನ್ನು ಪದೇ ಪದೇ ಎತ್ತಿಕೊಂಡು ಹಲ್ಲೆಗಳನ್ನು ನಡೆಸುವುದು ವ್ಯಕ್ತಿಸ್ವಾತಂತ್ರದ ಉಲ್ಲಂಘನೆ ಮತ್ತು ಅವಕಾಶಗಳ ನಿರಾಕರಣೆಗೆ ಉದಾಹರಣೆಗಳು ಮತ್ತು ಈ ದುಷ್ಕ್ರತ್ಯಗಳನ್ನು ನಡೆಸುತ್ತಿರುವವರು ವಿಶ್ವದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಹೊಂದಿದ ಸಂಘಟನೆಯ ಸದಸ್ಯರು ಎನ್ನುವ ಸತ್ಯ ನಾವು ಮತ್ತಷ್ಟು ಜಾಗರೂಕರಾಗಿರಬೇಕು ಎಂದು ಎಚ್ಚರಿಸುತ್ತದೆ.

ವಾಸ್ತವ ಸಂಗತಿಯೇನೆಂದರೆ ಭಾರತವು ಹಿಂದೂ ರಾಷ್ಟ್ರ ಮತ್ತು ಇನ್ನೊಂದು ರಾಷ್ಟ್ರ ಎನ್ನುವ ಎರಡು ದೇಶಗಳನ್ನು ಒಳಗೊಂಡಿದೆ ಎನ್ನುವ ನಂಬಿಕೆ ಮತ್ತು ಮೂಲಭೂತ ತತ್ವವನ್ನು ಬಿಜೆಪಿ ಮತ್ತು ಸಂಘ ಪರಿವಾರವು ಪ್ರತಿಪಾದಿಸುತ್ತಿವೆ. ಮಸಲ ಈ ವಿಷಯದಲ್ಲಿ ಬೆಜೆಪಿಯಲ್ಲಿ ಬಿರುಕು ಉಂಟಾದರೂ ಸಹಿತ ಸಂಘ ಪರಿವಾರದ ಭಯದ ಎಚ್ಚರಿಕೆಯ ಮೂಲಕ ಆ ಬಿರುಕಿಗೆ ಯಶಸ್ವಿಯಾಗಿ ತೇಪೆ ಹಚ್ಚಲಾಗಿದೆ. ಸಂಘ ಪರಿವಾರದಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹ ಮನಸ್ಥಿತಿ ಮತ್ತು ಚಿಂತನೆಗಳ ಏಕತಾನತೆಯ ಮೂಲಕ ಈ ಮಾದರಿಯ ಚಿಂತನೆಗಳು ಮತ್ತು ಅದರ ಯೋಜನೆಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ ಮತ್ತು ಮತ್ತು ರಾಜಕೀಯ ಔಚಿತ್ಯತೆ ಮತ್ತು ಪ್ರಯೋಜಕತೆಯ ಆಧಾರದ ಮೇಲೆ ಮುಂದುವರೆಯುತ್ತವೆ. ಬಿಜೆಪಿಗೆ ರಾಜಕೀಯ ಏಳಿಗೆಗಾಗಿ, bhagvat-gadkari-modiಲಾಭಕ್ಕಾಗಿ ಯಾವುದೇ ರಾಜ್ಯ ಅಥವಾ ನಗರವನ್ನ ಗುರುತಿಸಿಲಾಗಿದೆ ಎಂದರೆ ಆ ರಾಜ್ಯ ಮತ್ತು ನಗರದಲ್ಲಿ ಕೋಮು ಗಲಭೆಗಳು ನಿರಂತರವಾಗಿ ವೃದ್ಧಿಯಾಗುತ್ತವೆ. ತೀರಾ ಇತ್ತೀಚಿನ ಉದಾಹರಣೆಯೆಂದರೆ ದೆಹಲಿಯ ತ್ರಿಲೋಕಪುರಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಹುಟ್ಟುಹಾಕಲಾದ ಕೋಮು ಗಲಭೆಗಳು.ಮುಂದಿನ ಕೆಲವೇ ತಿಂಗಳುಗಳಲ್ಲಿ ದೆಹಲಿಯಲ್ಲಿ ಚುನಾವಣೆಗಳು ನಡೆಯುತ್ತವೆ. ದಲಿತರನ್ನು ಚುರುಕಾದ ಹಿಂದೂ ಏಜೆಂಟರಂತೆ ಬಳಸಿಕೊಂಡು ಮುಸ್ಲಿಂರು ನಮ್ಮೆಲ್ಲರಿಗೆ ಸಮಾನವಾದ ಶತೃ ಎನ್ನುವ ಚಿಂತನೆಯ ಮೂಲಕ ದಲಿತರು ವರ್ಸಸ್ ಮುಸ್ಲಿಂ ಎನ್ನುವ ಕಾಳಗದ ಅಖಾಡವನ್ನು ಸಜ್ಜುಗೊಳಿಸಲಾಗುತ್ತದೆ ಮತ್ತು ಮತ್ತಷ್ಟು ಗಟ್ಟಿಗೊಳಿಸಲಾಗುತ್ತದೆ. ೨೦೧೫ರಲ್ಲಿ ಬಿಹಾರ್ ರಾಜ್ಯದಲ್ಲಿ ಚುನಾವಣೆಗಳು ಜರುಗಲಿವೆ.ಆಗ ಆ ರಾಜ್ಯದಲ್ಲಿ ಕೋಮು ಗಲಭೆಗಳು ತೀವ್ರವಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಇನ್ನು ಪಶ್ಚಿಮ ಬಂಗಾಳ. ಅಲ್ಲಿ ಎಡ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಕಡೆಗೆ ವಲಸೆ ಹೋಗತೊಡಗಿದ್ದಾರೆ ಮತ್ತು ಈ ಪ್ರಕ್ರಿಯೆಯಿಂದಾಗಿ ಅಲ್ಲಿನ ಸಾಮಾಜಿಕ ವಲಯವು ಸಂಪೂರ್ಣವಾಗಿ ಏರುಪೇರಾಗುತ್ತಿದೆ. ತೃಣಮೂಲ ಕಾಂಗ್ರಸ್ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದರೆ ಆ ರಾಜ್ಯದಲ್ಲಿ ಬಾಂಬ್ ತಯಾರಿಕೆ ಮತ್ತು ಭಯೋತ್ಪಾದಕರ ಕುರಿತಾದ ಕೋಮುವಾದಿ ಸುದ್ದಿಗಳನ್ನು ದಿನನಿತ್ಯ ತೇಲಿಬಿಡಲಾಗುತ್ತಿದೆ. ಕಾಂಗ್ರೆಸ್ ಶೂನ್ಯದಲ್ಲಿ ಲೀನವಾಗುತ್ತಿದ್ದರೆ ಸಂಘ ಪರಿವಾರದ ಅಭಿವೃದ್ಧಿ ಸೂಚ್ಯಂಕ ಏರುಮುಖದಲ್ಲಿದೆ. ಶಾಂತಿವಾದದ ತತ್ವ ಎಂದೂ ಕಾಣೆಯಾಗಿದೆ ಮತ್ತು ನೆರೆಹೊರೆ ರಾಷ್ಟ್ರಗಳ ವಿರುದ್ಧ ೫೬ ಇಂಚಿನ ಎದೆಯನ್ನು ತಟ್ಟುವ ಪರಾಕ್ರಮದ ಅಭಿವ್ಯಕ್ತಿಯಿಂದ ರಾಜಕೀಯ ಲಾಭಗಳು ದ್ವಿಗುಣಗೊಳ್ಳತೊಡಗಿರುವುದಂತೂ ವಾಸ್ತವ.

ಹಾಗಿದ್ದಲ್ಲಿ ಮೋದಿಯ ಕಾಲದಲ್ಲಿ ನೆಹರೂ ಏನಾಗಬಹುದು? ಏಕಚಕ್ರಾಧಿಪತ್ಯದಲ್ಲಿ ಪ್ರತಿಮೆಗಳು ನೆಲಕ್ಕರುಳಿ ಆ ಬಿಡುಗಡೆಯ ಕ್ಷಣಗಳಲ್ಲಿ ಜನಸಾಮಾನ್ಯರು ಪರಸ್ಪರ ಮುಖಾಮುಖಿಯಾಗುವಂತಹ ಸಂದರ್ಭಗಳಾಗಲಿ, ಪ್ರತಿಮೆಗಳನ್ನು ಒಡೆದು ನೆಲಕ್ಕುರುಳಿಸುವ ಮತ್ತು ಐಕಾನ್‌ಗಳ ಮುಖಕ್ಕೆ ಮಸಿ ಬಳಿಯುವಂತಹ ನಾಟಕೀಯ ಬೆಳವಣಿಗೆಗಳಾಗಲಿ ಸದ್ಯಕ್ಕೆ ಗೋಚರಿಸುತ್ತಿಲ್ಲ.Nehru ಈ ನಾವೀನ್ಯ ಮಾದರಿಯ ಚುನಾವಣಾ ಪ್ರಜಾಪ್ರಭುತ್ವದ ಇಂದಿನ ಇಂಡಿಯಾದಲ್ಲಿ ಇತಿಹಾಸದ ವ್ಯಕ್ತಿಗಳನ್ನು ಬಳಸಿಕೊಂಡು ಸಮಕಾಲೀನ ಸಂದರ್ಭದಲ್ಲಿ ಉದ್ರೇಕಗೊಂಡ ಗುಂಡಿಗಳನ್ನು ಒತ್ತುವಂತಹ ಒಂದು ಬಗೆಯ ನವಮಾದರಿಯ ಪ್ರಕ್ರಿಯೆ ಸದ್ಯಕ್ಕೆ ಚಲಾವಣೆಯಲ್ಲಿದೆ. ಈ ಕಾಲವನ್ನು ಐಕಾನ್‌ಗಳನ್ನು ಉದ್ದೇಶಪೂರ್ವಕವಾಗಿ ತ್ವರಿತಗತಿಯಲ್ಲಿ ಸ್ವಾಧೀನಪಡಿಸಿಕೊಳ್ಳುವ, ಕೊಂಡುಕೊಳ್ಳುವ ಕಾಲಘಟ್ಟವೆಂದು ಖಚಿತವಾಗಿ ಕರೆಯಬಹುದು. ಮೋದಿ ಈ ಇತಿಹಾಸದ ಪ್ರತಿಯೊಂದು ವ್ಯಕ್ತಿಯನ್ನು ತಣ್ಣಗೆ ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಗಾಂಧಿಯನ್ನು ಇಂದು ಕೇವಲ ಒಂದು ಸ್ವಚ್ಛ ಭಾರತದ ಪ್ರಚಾರದ ಮಾಡೆಲ್ ಆಗಿ ಪರಿವರ್ತನೆಗೊಳಿಸಲಾಗಿದೆ. (ಇಲ್ಲಿ ಮೋದಿ ಮೊದಲಿಗರೇನಲ್ಲ. ಈ ಹಿಂದೆ ಅಡ್ವಾನಿಯವರು ತಮ್ಮನ್ನು ತಾವು ಆಧುನಿಕ ಲೋಹಪುರುಷ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದರು). ಬಲಿಪಶುಗಳಾಗಿರುವ ಸಾವಿರಾರು ಅಲ್ಪಸಂಖ್ಯಾತರ ಸ್ವಾಸ್ಥಕ್ಕಾಗಿ ಯಾವುದೇ ಯೋಜನೆಗಳನ್ನು ರೂಪಿಸದೇ ಮೌನವಾಗಿರುತ್ತಲೇ ಮಾಧ್ಯಮ ಮತ್ತು ರಾಷ್ಟ್ರವನ್ನು ೧೯೮೪ರ ಗಲಭೆಗಳಲ್ಲಿ ಹತರಾದ ಸಿಖ್ ಸಮುದಾಯಕ್ಕೆ ಪರಿಹಾರವನ್ನು ಕೊಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಮೋದಿ ಅತ್ಯಂತ ಚಾಣಾಕ್ಷತೆಯಿಂದ ವರ್ತಿಸಿದ್ದಾರೆ.

ಏರುಗತಿಯಲ್ಲಿರುವ ಬಹುಸಂಖ್ಯಾತ ತತ್ವವೂ ಇಂದು ನಮ್ಮೆದುರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂದರೆ ಹಿಂದೂ ರಾಷ್ಟ್ರದ ನಗಾರಿ ಬಡಿತವು ನೆಹರೂ ಅವರ ಸೆಕ್ಯುಲರಿಸಂ ಕನಸುಗಳ ಹಿಂದೆ ಅವಿತುಕೊಂಡಿದೆಯೇ? ಹೊರ ಬರಲು ಕಾಯುತ್ತಿದೆಯೇ? ೧೯೬೫ರಿಂದಲೂ ಇಂಡಿಯಾದ ರಾಜಕೀಯವನ್ನು ವರದಿ ಮಾಡುತ್ತಿರುವ ಮಾರ್ಕ ಟುಲಿ ಅವರು “ಈಗಲೇ ಭವಿಷ್ಯ ನುಡಿಯುವುದು ಕಷ್ಟವಾದರೂ ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಸೆಕ್ಯುಲರಿಸಂ ಪರಿಕಲ್ಪನೆಯನ್ನು ಬದಲಾಯಿಸಲು ನಿಶ್ಚಯಿಸಲಾಗಿದೆ. ಇದರ ಅರ್ಥ ಸೆಕ್ಯುಲರಿಸಂ ಸಾಯುತ್ತದೆ ಎಂದಲ್ಲ.” ಎನ್ನುತ್ತಾರೆ. ಮುಂದುವರೆದ ಟುಲಿ ಭಾರತದ ಮೊದಲ ಪ್ರಧಾನಿ ನೆಹರೂ ಮಾಡಿದ ತಪ್ಪನ್ನು ನರೇಂದ್ರ ಮೋದಿ ತನ್ನ ಅನುಕೂಲಕ್ಕೆ ತಕ್ಕಂತೆ ಸರಿಪಡಿಸಿಕೊಳ್ಳತ್ತಾರೆ ಎಂದು ವಿವರಿಸುತ್ತಾ “ಆಡಳಿತಾತ್ಮಕ ವಿಷಯದಲ್ಲಿ ನೆಹರೂ ಅವರು ಓಬಿರಾಯನ ಕಾಲದ ಬ್ರಿಟೀಷ್ ಮಾದರಿಯನ್ನು ಮುಂದುವರೆಸಿ ದೊಡ್ಡ ತಪ್ಪನ್ನೇ ಮಾಡಿದರು. ಹೀಗಾಗಿ ಬಾಬೂಗಳು ಜನರನ್ನು ಹೀಗೆಳೆದು ಮಾತನಾಡಿಸುವ ಕಲೋನಿಯಲ್ ವ್ಯವಸ್ಥೆಯಿಂದ ಇಂಡಿಯಾ ಹೊರಬರಲಿಲ್ಲ. ಮೋದಿಯು ಮತ್ತೇನಿಲ್ಲ, ಈ ಅಧಿಕಾರಿಶಾಹಿ ವರ್ಗ ಸರಿಯಾದ ವೇಳೆಗೆ ಕೆಲಸಕ್ಕೆ ಹಾಜರಾಗವಂತೆ ಮಾಡಿ ಇಡೀ ಬ್ಯೂರೋಕ್ರಾಸಿಯನ್ನು ಹದ್ದುಬಸ್ತಿನಲ್ಲಿಟ್ಟರೆ ಅದು ಮೋದಿಯು ಪ್ರಜಾಪ್ರಭುತ್ವವನ್ನು ಜಾರಿಗೊಳಿಸಿದಂತೆಯೇ” ಎಂದು ಹೇಳುತ್ತಾರೆ. ಆದರೆ ಮಾಜಿ ಸಂಪಾದಕ ಮತ್ತು ಪತ್ರಕರ್ತ ಕುಮಾರ್ ಕೇತ್ಕರ್ ಅವರು “ನೆಹರೂ ಅವರೊಂದಿಗೆ ಮೋದಿಯನ್ನು ಹೋಲಿಸುವುದು ದೈವನಿಂದನೆ ಎನಿಸಿಕೊಳ್ಳುತ್ತದೆ. ನೆಹರೂ ಒಬ್ಬ ದೂರದರ್ಶಿತ್ವವನ್ನುಳ್ಳ ದಾರ್ಶನಿಕರಾಗಿದ್ದರು. ಅವರನ್ನು ಅರ್ಥ ಮಾಡಿಕೊಳ್ಳುವುದೆಂದರೆ ಜಗತ್ತನ್ನೇ ಅರ್ಥ ಮಾಡಿಕೊಂಡಂತೆ. ನೆಹರೂ ಬರ್ನಾಡ್ ಷಾ ಮತ್ತು ಐನ್‌ಸ್ಟೀನ್ ಅವರೊಂದಿಗೆ ಸಂಭಾಷಿಸುತ್ತಿದ್ದರು. ಆದರೆ ಮೋದಿಯು ಈ ದೇಶದ ಅಧಿಕಾರವನ್ನು ಆವಾಹಿಸಿಕೊಳ್ಳುವ ಕೇವಲ ಒಬ್ಬ ಸಿಇಓ ಅಷ್ಟೆ. ನೆಹರೂ ಮೋದಿಯ ಮುಂದೆ ಆಸ್ತಿತ್ವದಲ್ಲಿ ಉಳಿದಾರೆಯೇ ಎನ್ನುವ ಪ್ರಶ್ನೆಯೇ ತುಂಬಾ ಬಾಲಿಶ. ಇಲ್ಲಿ ಈ ಪ್ರಶ್ನೆಯ ಅವಶ್ಯಕತೆಯೇ ಇಲ್ಲ” ಎಂದು ವಿವರಿಸುತ್ತಾರೆ.

ನೆಹರೂ ಅವರ ಪಕ್ಷ ಮತ್ತು ವಂಶ ಹಿಂದೆಂದಿಗಿಂತಲೂ ಹೆಚ್ಚಾಗಿ ನಾಶವಾಗಿ ಹೋಗಿದೆ. ಕಣ್ಮರೆಯಾಗುತ್ತಿದೆ. ರಾಹುಲ್ ಗಾಂಧಿಯ ರಾಜಕೀಯ ಸೋಲು ಮತ್ತು ರಾಬರ್ಟ ವಧೇರನ ಅನಾಕರ್ಷಕ ವ್ಯಕ್ತಿತ್ವ ಮಾತ್ರ ಇಂದು ಉಳಿದುಕೊಂಡಿವೆ. ಭವಿಷ್ಯದಲ್ಲಿ ನಿರಂತರ ಸೋಲನ್ನು ದಿಟ್ಟಿಸುತ್ತಿರುವ ನೆಹರೂ ಅವರ ಈ ಪಕ್ಷಕ್ಕೆ ಗೆಲುವೆನ್ನುವುದು ಮರೀಚಿಕೆಯಾಗಿದೆ. (ಒಂದಂತೂ ನಿಜ. ಒಂದು ವಂಶದ ಸದಸ್ಯರ ಹೆಸರಿನ ಕಟ್ಟಡಗಳು, ಯೋಜನೆಗಳು, ಅವಾರ್ಡಗಳು ಇನ್ನು ಮುಂದೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ನೆಹರೂ ಬೆಂಬಲಿಗರೂ ಸಹ ಈ ಬೆಳವಣಿಗೆಯಿಂದ ಖುಷಿಯಾಗಿದ್ದಾರೆ). ಅಷ್ಟೇಕೆ, ಇತ್ತಿಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವೂ ಸಹ ನೆಹರೂ ಅವರನ್ನು ದೊಡ್ಡ ಮಟ್ಟದಲ್ಲೇನು ಬಳಸಿಕೊಳ್ಳುತ್ತಿರಲಿಲ್ಲ. ಬಿಜೆಪಿಯ ಪ್ರಮುಖರೊಬ್ಬರು ನೆಹರೂ ಇಂಡಿಯಾ ದೇಶವನ್ನು ಕಟ್ಟಿದ ಶಿಲ್ಪಿಗಳಲ್ಲೊಬ್ಬರು ಎಂದು ಇಂದಿಗೂ ಗುರುತಿಸುತ್ತಾರೆ. ಆರೆಸಸ್ ಪ್ರತಿಯೊಂದು ನಡೆಯನ್ನು ವಿರೋಧಿಸುತ್ತದ್ದ ನೆಹರೂ ಲೆಗಸಿಯನ್ನು ಅಳಸಿ ಹಾಕುವುದು ಸುಲಭವಲ್ಲ. ಅದನ್ನು ಉದ್ದೇಶಪೂರ್ವಕವಾಗಿಯೂ ಸಾಧಿಸುವುದು ಕಷ್ಟ ಎಂದು ಹೇಳುತ್ತಾರೆ. ಬಹುಶ ಸರ್ದಾರ್ ಪಟೇಲ್ ನೆಹರೂ ಅವರನ್ನು ಎದುರಿಸಲು ಉತ್ತಮ ಆಯ್ಕೆ ಏನೋ ಎಂದು ಸಹ ಒಪ್ಪಿಕೊಳ್ಳುತ್ತಾರೆ. ಗಾಂಧಿಯನ್ನು ಇಂದಿಗೂ ದೇಶವು ಐಕಾನ್ ಆಗಿ, ನಿಜದ ದೇಶಭಕ್ತನೆಂದು ಪೂಜಿಸುತ್ತಿದೆ ಆದರೆ ದೇಶದ ಯಾವುದೇ ರಾಜ್ಯವು, ಪಕ್ಷವು 200px-MKGandhi[1]ಗಾಂಧೀವಾದವನ್ನು ಆಚರಿಸುತ್ತಿಲ್ಲ, ಬೆಳಸುತ್ತಿಲ್ಲ. ಒಂದು ದೇಶವಾಗಿ ನಾವು ಎನ್ನುವ ಪರಿಕಲ್ಪನೆಯ ಅಡಿಯಲ್ಲಿ ನಮ್ಮನ್ನು ರೂಪಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲಬೇಕು. ನೆಹರೂ ಮಾದರಿಯ ಸೋಷಿಲಿಸಂ ಎನ್ನುವ ಐಡಿಯಾಲಜಿಗಳ ಸ್ತಂಭಗಳನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ೧೯೪೭ರಿಂದ ೧೯೬೪ರವರೆಗೆ ಪ್ರಧಾನಿಯಾಗಿದ್ದ ನೆಹರೂ ನಮ್ಮ ಈ ದೇಶವು ಒಂದು ಕಾಲೋನಿಯ ವ್ಯವಸ್ಥೆಯಿಂದ ಸದೃಢ ಪ್ರಜಾಪ್ರಭುತ್ವ ದೇಶವಾಗಿ ರೂಪುಗೊಂಡಿದ್ದನ್ನು ನೆಹರೂ ಸಾಕ್ಷೀಕರಿಸಿದ್ದರು. ಆ ಬೆಳವಣಿಗೆಯ ಹಂತಗಳನ್ನು ನೀರೆರೆದು ಪೋಷಿಸಿದರು. ನಾವು ಕಲೋನಿಯೋತ್ತರ ಜಗತ್ತನ್ನು ಗಮನಿಸಿದಾಗ ಅನೇಕ ಕಲೋನಿಯಲ್ ದೇಶಗಳು ಸ್ವಾತಂತ್ರಗೊಂಡು ಪ್ರಜಾಪ್ರಭುತ್ವದ ಹತ್ತಿರಕ್ಕೆ ಬಂದು ಮರಳಿ ಸರ್ವಾಧಿಕಾರಕ್ಕೆ ಜಾರಿಕೊಂಡಿದ್ದನ್ನು ಕಾಣುತ್ತೇವೆ. ಆದರೆ ನೆಹರೂ ಅವರ ೧೭ ವರ್ಷಗಳ ಆಡಳಿತ ಇಂಡಿಯಾ ದೇಶ ಸರ್ವಾಧಿಕಾರಕ್ಕೆ ತೆವಳಲೂ ಸಹ ಅವಕಾಶ ಮಾಡಿಕೊಡಲಿಲ್ಲ ಬದಲಾಗಿ ಎಲ್ಲಾ ಇನ್ಸಿಟ್ಯೂಟ್‌ಗಳನ್ನು ವ್ಯವಸ್ಥಿತವಾಗಿಟ್ಟರು.

ಹೀಗಿದ್ದಲ್ಲಿ ಬಿಜೆಪಿ ಪಕ್ಷವು ನೆಹರೂ ಅವರನ್ನು ಹೇಗೆ ಎದುರುಗೊಳ್ಳುತ್ತದೆ? ಆರೆಸಸ್‌ನ ಮುಖವಾಣಿ ಪತ್ರಿಕೆಯ ಮಾಜಿ ಸಂಪಾದಕ ಶೇಷಾದ್ರಿಚಾರಿ ಅವರು “ನಾವು ನೆಹರೂ ಅವರ ವಿರೋಧಿಗಳೆಂದು ಊಹಿಸಲೂ ಸಾಧ್ಯವಿಲ್ಲ. ಇಂಡಿಯಾದ ಎಲ್ಲ ಐಕಾನ್ ಗಳನ್ನು ನಾವು ಗೌರವಿಸುತ್ತೇವೆ. ಗಾಂಧಿಯಿಂದ ಪಟೇಲ್ ವರೆಗೆ ಮತ್ತು ಮನ್ನಣೆಗಳನ್ನು ನಿರಾಕರಿಸಲ್ಪಟ್ಟ ಪ್ರಾಂತೀಯ ನಾಯಕರನ್ನು ಸಹ ನಾವು ಗೌರವಿಸುತ್ತೇವೆ” ಎಂದು ಹೇಳುತ್ತಾರೆ.

ಆದರೆ ಮೋದಿಯು ಎಲ್ಲಾ ಬಗೆಯ ವಿರೋಧಾಭಾಸಗಳನ್ನು ತಮಗೆ ಅನುಕೂಲಕರವಾಗುವಂತೆ ರೂಪಿಸಿಕೊಳ್ಳುವಲ್ಲಿ ನುರಿತರಾಗಿದ್ದಾರೆ. ಮೋದಿಯು ಪುರಾಣಗಳ ಮಹತ್ವವನ್ನು ಹೊಗಳುತ್ತಾ ಹಿಂದೂ ಸನಾತನ ಧರ್ಮವನ್ನು ಪ್ರತಿಪಾದಿಸುತ್ತಿದ್ದರೂ ಸಹ ಸಮಾಜದ ಒಂದು ವರ್ಗವು ಮೋದಿಯನ್ನು ಅಭಿವೃದ್ಧಿಯ ಮತ್ತು ಆಧುನಿಕತೆಯ ಸಂಕೇತವೆಂದು ಪರಿಗಣಿಸುತ್ತದೆ

ಇತಿಹಾಸಕಾರ, ಚಿಂತಕ ಮುಶ್ರಲ್ ಹಸನ್ ಅವರು “ಇಂದಿನ ದಿನಗಳಲ್ಲಿ ಪಟೇಲ್ ಅವರನ್ನು ಅಬ್ಬರದಿಂದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ನೆಹರೂ ಅವರನ್ನು ಗೌಣಗೊಳಿಸಲು. ನೆಹರೂವಿಯನ್ ಲೆಗಸಿಯನ್ನು ತ್ಯಜಿಸಲಾಗುತ್ತಿದೆ. ಇತಿಹಾಸದ ಒಂದು ಐಕಾನ್ ಅನ್ನು ಮತ್ತೊಂದು ಐಕಾನ್‌ನ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಆ ಮೂಲಕ ಹೊಸ ಇತಿಹಾಸವನ್ನೇ ಕಂಡು ಹಿಡಿಯಲಾಗುತ್ತದೆ” ಎಂದು ಹೇಳುತ್ತಾರೆ. ಆದರೆ ಬಿಜೆಪಿ ಪಕ್ಷಕ್ಕೆ ಹಿಂದೂಯಿಸಂನ ಐಡಿಯಾಲಜಿಯ ಮಿತಿಗಳು ಮತ್ತು ಅದರ ಕುಂಠಿತಗೊಂಡ ಪ್ರಭಾವದ narender_modi_rssಕುರಿತಾಗಿ ಅರಿವಿದೆ. ಹೀಗಾಗಿಯೇ ಪಾನ್-ಇಂಡಿಯಾ ಇಕಾನ್‌ಗಳನ್ನು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ೨೦೧೪ರ ಚುನಾವಣೆಯಲ್ಲಿ ಗೆದ್ದು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾದ ಬಿಜೆಪಿಯ ದೇವೇಂದ್ರ ಫಡ್ನಿಸ್ ಒಬ್ಬ ಆರೆಸಸ್ ಸ್ವಯಂಸೇವಕ. ಕಟ್ಟಾ ಆರೆಸಸ್. ಭ್ರಾಹ್ಮಣ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡುತ್ತ ಅಪ್ಪಿತಪ್ಪಿ ಆರೆಸಸ್‌ನ ಸ್ಥಾಪಕರಾದ ಗೋಳ್ವಲ್ಕರ್, ಸಾವರ್ಕರ್, ಹೆಡ್ಗೇವಾರ್ ಇವರನ್ನು ನೆನೆಸಿಕೊಳ್ಳಲೇ ಇಲ್ಲ. ಬದಲಾಗಿ ಅಂಬೇಡ್ಕರ್, ಜೋತಿಬಾ ಫುಲೆ ಅವರನ್ನು ಉದಾಹರಿಸಿದರು. ದೆಹಲಿಯ ಪಾಲಿಸಿ ಸಂಶೋಧನ ಕೇಂದ್ರದ ಅಧ್ಯಕ್ಷರಾದ ಪ್ರತಾಪ್ ಬಾನು ಮೆಹ್ತ ಅವರು “ಇತಿಹಾಸದ ವ್ಯಕ್ತಿಗಳನ್ನು ಕೇವಲ ಐಕಾನ್‌ಗಳ ಮಟ್ಟಕ್ಕೆ ಇಳಿಸಿ ಅವರ ಕುರಿತಾದ ನಿಜವಾದ ಸಂವಾದವನ್ನು ಕಡೆಗಣಿಸುತ್ತಿದ್ದೇವೆ ಮತ್ತು ಇದರ ಕುರಿತಾದ ಚರ್ಚೆಗಳು ಉಸಿರುಗಟ್ಟಿಸುತ್ತವೆ. ನೆಹರೂ ಮತ್ತು ಗಾಂಧಿಯ ನಡುವೆ ಅಪಾರ ಭಿನ್ನಾಭಿಪ್ರಾಯಗಳಿದ್ದರಿಬಹುದು. ನೆಹರೂ ಮತ್ತು ಪಟೇಲ್ ಒಟ್ಟಾಗಿ ಕಾರ್ಯ ನಿರ್ವಹಿಸಲೂ ಸಾಧ್ಯವಿರಲಿಲ್ಲ. ಇಂದು ಸೆಕ್ಯುಲರ್ ಯುಟೋಪಿಯ ಮತ್ತು ಸೆಕ್ಯುಲರಿಸಂನ ಆಚರಣೆ ಬಳಕೆಯಲ್ಲಿದೆ. ನಿಜಕ್ಕೂ ನೆಹರೂ ಅವರು ಇಂಡಿಯಾದ ಸೆಕ್ಯುಲರಿಸಂನ ಬಲು ದೊಡ್ಡ ಪ್ರವರ್ತಕರು. ಆದರೆ ಕಾಂಗ್ರೆಸ್ ಪಕ್ಷವು ಇಂಡಿಯಾ ದೇಶವನ್ನು ಎರಡು ಸಮುದಾಯಗಳ ಗಣರಾಜ್ಯವೆಂದು ನಂಬಿತ್ತು. ಹಿಂದೂ ರಾಷ್ಟ್ರವನ್ನು ಇತಿಹಾಸದ ಹಿನ್ನೆಲೆಯಲ್ಲಿ ನೋಡುವ ತಪ್ಪನ್ನು ನಾವು ಮಾಡಬಾರದು” ಎಂದು ಬರೆಯುತ್ತಾರೆ.

ತಮ್ಮ ಭಾಷಣದ ಕೊನೆಯ ಭಾಗದಲ್ಲಿ ನೆಹರೂ ಅವರು ಹೇಳುತ್ತಾರೆ, “ತಮ್ಮ ಚಿಂತನೆಗಳಲ್ಲಿ ಮತ್ತು ಆಚರಣೆಗಳಲ್ಲಿ ಸಂಕುಚಿತ ಮನೋಭಾವವುಳ್ಳ ಜನರರಿರುವ ದೇಶವು ನಿಜಕ್ಕೂ ಗ್ರೇಟ್ ದೇಶವಲ್ಲ.” ಇದು ಅತ್ಯಂತ ಶಕ್ತಿಯುತವಾದ ಸಂದೇಶವೆಂದೇ ಹೇಳಬಹುದು. ಇದು ತನ್ನ ಸರಳತೆ ಮತ್ತು ತರ್ಕದಲ್ಲಿ ವಿಶ್ವರೂಪಿಯಾಗಿದೆ. ಇದಕ್ಕಾಗಿಯೇ ನೆಹರೂ ಅವರನ್ನು ನೆಲಸಮಗೊಳಿಸಲು ಕಷ್ಟ. ಪ್ರತಿಮೆಗಳನ್ನು ಧ್ವಂಸಗೊಳಿಸಿ ನೆಲಕ್ಕುರುಳಿಸಬಹುದು, ಆದರೆ ವಿಚಾರಗಳು ಜೀವಂತವಾಗಿರುತ್ತವೆ.

ಅಸಮಾನ ಶಿಕ್ಷಣವೆಂಬ ಹೆಣ್ಣುಮಕ್ಕಳ ಹಕ್ಕುನಾಶಕ


– ರೂಪ ಹಾಸನ


 

ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ಆದರೆ ಮಕ್ಕಳ ಮೇಲಿನ ದೌರ್ಜನ್ಯದ ವರದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಹೆಣ್ಣುಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ವ್ಯವಸ್ಥೆ ಅತ್ಯಂತ ಕ್ರೂರವಾಗಿ ಕಿತ್ತುಕೊಳ್ಳುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ನಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕಿರುವ ತಡೆಗೋಡೆಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜ ಆತ್ಮಾವಲೋಕನ ಮಾಡಿಕೊಳ್ಳುವುದೇ ಆ ಮಕ್ಕಳಿಗೆ ನಾವು ಕೊಡಬಹುದಾದ ಮಕ್ಕಳ ದಿನಾಚರಣೆಯ ಉಡುಗೊರೆ ಎಂದು ನಾನು ಭಾವಿಸಿದ್ದೇನೆ.

ಭಾರತದ ಸಂವಿಧಾನದ ಪ್ರಕಾರ ಸ್ತ್ರೀ ಪುರುಷರಿಬ್ಬರಿಗೂ ವಿದ್ಯಾಭ್ಯಾಸ, ಉದ್ಯೋಗದ ಸರಿಸಮಾನ ಅವಕಾಶ, ಹಕ್ಕುಗಳಿವೆ. ಆದರೆ ಹುಡುಗರ ವಿದ್ಯಾಭ್ಯಾಸ ಸಾಗಿದಷ್ಟು ಹೆಚ್ಚು ಹುಡುಗಿಯರ ವಿದ್ಯಾಭ್ಯಾಸ ಸಾಗಿಲ್ಲ. ಆ ಅಂತರ ಇಂದಿಗೂ ಹೆಚ್ಚಾಗಿಯೇ ಇದೆ. ಹೆಣ್ಣುಮಕ್ಕಳಿಗೆ ಓದಲು ಅವಕಾಶಗಳು ಮಿತವಾಗಿವೆ.School_children ಸಣ್ಣ ವಯಸ್ಸಿನಲ್ಲೇ ಹುಡುಗಿಯರಿಗೆ ಮದುವೆ ಮಾಡಿ, ಮುಂದೆ ಅವಳು ಕೇವಲ ಮಕ್ಕಳನ್ನು ಹಡೆದು, ಅವನ್ನು ಸಾಕಿ ಅದಕ್ಕಾಗೇ ಬದುಕನ್ನು ಮುಡುಪಾಗಿಡಬೇಕೆಂಬ ದೃಷ್ಟಿ ಇಂದಿಗೂ ಹೆಚ್ಚಿನ ಗ್ರಾಮೀಣ ಪ್ರದೇಶದಲ್ಲಿದೆ. ಜೊತೆಗೆ ಗಂಡು ಮಗ ಓದಿ ವಿದ್ಯಾಭ್ಯಾಸ ಪಡೆದು, ಕೆಲಸಕ್ಕೆ ಸೇರಿ ತಮ್ಮನ್ನು ಸಾಕುತ್ತಾನೆ. ಹೆಣ್ಣು ಮಗಳಾದರೆ ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಅವಳಿಗಾಗಿ ಮಾಡುವ ಖರ್ಚು ವ್ಯರ್ಥ ಎಂಬುದು ಹಲವರ ಭಾವನೆ. ಸದ್ಯಕ್ಕೆ ಭಾರತದಲ್ಲಿ ೨೦೦ ಮಿಲಿಯ ಅನಕ್ಷರಸ್ಥ ಹೆಣ್ಣು ಮಕ್ಕಳಿದ್ದಾರೆ. ಈ ಅಂಕಿ ಅಂಶ ನಮ್ಮ ಮಹಿಳೆಯರು ಶೈಕ್ಷಣಿಕ ಅಭಿವೃದ್ಧಿಯಿಂದ ಎಷ್ಟೊಂದು ದೂರದಲ್ಲಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

ಹೆಣ್ಣುಮಕ್ಕಳ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆ, ಸವಾಲುಗಳಿಗೆ ಶಿಕ್ಷಣ ಒಂದು ಪ್ರಬಲ ಅಸ್ತ್ರವಾಗಬಲ್ಲದು. ಆದರೆ ಪ್ರಸ್ತುತ ಭಾರತದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಕುರಿತು ದೃಷ್ಟಿ ಹರಿಸಿದರೆ ಗಾಬರಿ ಹುಟ್ಟಿಸುವಂಥಾ ಅಂಕಿ-ಅಂಶಗಳು ಕಣ್ಣಿಗೆ ಬೀಳುತ್ತವೆ. ೨೦೧೧ನೇ ಇಸವಿಯ ಅಂಕಿ ಅಂಶಗಳಂತೆ ಪುರುಷರ ವಿದ್ಯಾಭ್ಯಾಸ ಪ್ರಮಾಣ ೭೫% ರಷ್ಟಿದ್ದರೆ, ಅದೇ ಸಮಯದಲ್ಲಿ ಮಹಿಳೆಯರ ವಿದ್ಯಾಭ್ಯಾಸದ ಪ್ರಮಾಣ ೬೫.೪೬%ರಷ್ಟಿದೆ. ೨೦೦೧ರ ಜನಗಣತಿಯಂತೆ ಮಹಿಳೆಯರ ವಿದ್ಯಾಭ್ಯಾಸ ಪ್ರಮಾಣ ೫೩.೬೩% ರಷ್ಟಿದ್ದು ಕಳೆದ ಹತ್ತು ವರ್ಷಗಳಲ್ಲಿ ಅವರ ವಿದ್ಯಾಭ್ಯಾಸ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಬದಲಾವಣೆ ಆಗದಿರುವುದು ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಕುರಿತು ಇರುವ ಅವಜ್ಞೆಯ ಸೂಚಕವಾಗಿದೆ.

ನಗರ ಪ್ರದೇಶದ ೬೫% ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದರೆ, ಗ್ರಾಮೀಣ ಪ್ರದೇಶದ ೪೬% ಹೆಣ್ಣುಮಕ್ಕಳು ಶಿಕ್ಷಿತರಾಗಿದ್ದಾರೆ ಅಷ್ಟೇ. ಶೇಕಡಾ ೬೦ರಷ್ಟು ಅಕ್ಷರಸ್ಥ ಮಹಿಳೆಯರು ಕೇವಲ ಪ್ರಾಥಮಿಕ ಶಿಕ್ಷಣ ಅಥವಾ ಅದಕ್ಕಿಂಥಾ ಕಡಿಮೆ ವಿದ್ಯಾಭ್ಯಾಸ ಪಡೆದಿದ್ದಾರೆ. ಇದರಲ್ಲಿ ೧೩% ಹೆಣ್ಣುಮಕ್ಕಳು ಮಾತ್ರ ಪ್ರೌಢಶಿಕ್ಷಣಕ್ಕಿಂತಾ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದಾರೆಂದರೆ ಅವರಿನ್ನೂ ಸಾಮಾಜಿಕ ಪಾಲ್ಗೊಳ್ಳುವಿಕೆಯಲ್ಲಿ ಯಾವ ಹಂತದಲ್ಲಿದ್ದಾರೆಂದು ಯೋಚಿಸಬಹುದಾಗಿದೆ. ಹಾಗೆ ಸಾಕ್ಷರತೆಯ ಪ್ರಮಾಣವನ್ನು ಅಳೆಯಲು ಯಾವುದೇ ನಿರ್ದಿಷ್ಟ ಮಾನದಂಡಗಳೂ ಇಲ್ಲದಿರುವುದರಿಂದ ಸಹಿ ಮಾಡಲು ಬರುವವರೆಲ್ಲಾ ಸಾಕ್ಷರರೆಂದೇ ಪರಿಗಣಿಸಲಾಗುತ್ತಿದೆ! ಕನಿಷ್ಟ ಪ್ರೌಢಶಾಲೆಯ ಹಂತದವರೆಗಿನ ವಿದ್ಯಾಭ್ಯಾಸವನ್ನಾದರೂ ಗಣನೆಗೆ ತೆಗೆದುಕೊಳ್ಳುವುದಾದರೆ ಈಗ ದಾಖಲಾಗಿರುವ ಪ್ರಮಾಣದಲ್ಲಿ ಅರ್ಧದಷ್ಟೂ ಸಾಕ್ಷರ ಮಹಿಳೆಯರು ನಮಗೆ ಸಿಕ್ಕುವುದಿಲ್ಲ ಎನ್ನುವುದು ವಾಸ್ತವ ಸತ್ಯ!

ಜೊತೆಗೆ ತಳ ಸಮುದಾಯದ ಹೆಣ್ಣುಮಕ್ಕಳಂತೂ ಶಿಕ್ಷಣದಿಂದ ಇನ್ನೂ ಬಹಳಷ್ಟು ದೂರದಲ್ಲಿಯೇ ಇದ್ದಾರೆ. ಇಂದಿಗೂ ಇಂತಹ ೩೧% ಹೆಣ್ಣುಮಕ್ಕಳು ಮಾತ್ರ ಶಿಕ್ಷಣ ಪಡೆದಿದ್ದಾರೆ ಎಂಬುದೇ ಪ್ರಗತಿಯ ಹಾದಿಯಲ್ಲಿರುವ ಭಾರತಕ್ಕೆ ನಾಚಿಕೆಗೇಡಿನ ವಿಷಯವಾಗಬೇಕಿದೆ. ಕರ್ನಾಟಕ ಸರ್ಕಾರ ವರ್ಷಗಳ ಕೆಳಗೆ ೩೦೦೦ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಬಡ ಮತ್ತು ತಳಸಮುದಾಯದ ಹೆಣ್ಣುಮಕ್ಕಳು ಶಾಶ್ವತವಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಮುಂದೆ ಇರುವ ಶಾಲೆಗಳಿಗೇ ಹೆಣ್ಣು ಮಕ್ಕಳನ್ನು ಕಳಿಸಲು ಮೀನಮೇಷ ಎಣಿಸುವ ಪೋಷಕರು ದೂರದ ಶಾಲೆಗಳಿಗೆ ಮಕ್ಕಳನ್ನು ಕಳಿಸಲು ತಯಾರಾಗುವುದು ದೂರದ ಮಾತೇ ಸರಿ. ಹೀಗಾಗೆ ನಮ್ಮ ದಲಿತ ಹಾಗೂ ಮಹಿಳಾಪರ ಹೋರಾಟಗಾರರು, ಸಂಘಟನೆಗಳು-ಚಳುವಳಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಸಂವಿಧಾನಾತ್ಮಕವಾಗಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದ್ದರೂ, ೨೦೦೯ರ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಈಗ ಕನಿಷ್ಟ ೧೪ರ ವಯಸ್ಸಿನವರೆಗಿನ ಶಿಕ್ಷಣ ಉಚಿತ ಮತ್ತು ಕಡ್ಡಾಯವಾಗಿದ್ದರೂ ಕಲಿಯಲು ಶಾಲೆಗೆ ಹೋಗುವ ಸಮಯದಲ್ಲಿ ಮನೆಗೆಲಸಕ್ಕೆ, ಹೊರಗಿನ ಕೆಲಸಕ್ಕೆ ಮಗಳು ಜೊತೆ ನೀಡಿದರೆ ಕೆಲಸವೂ ಹಗುರ, ಹಣವನ್ನೂ ಸಂಪಾದಿಸಬಹುದೆಂಬ children-of-Indiaಯೋಜನೆ ಹಲವರದು. ಕುಟುಂಬದಲ್ಲಿ ಆರ್ಥಿಕವಾಗಿ ಹೆಚ್ಚಿನ ಹೊರೆ ಬೀಳುತ್ತಿದ್ದರೆ ಅದಕ್ಕೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಕತ್ತರಿ ಹಾಕಿ ಗಂಡುಮಕ್ಕಳನ್ನು ಓದಲು ಕಳಿಸುವ ಸಂಪ್ರದಾಯ ನಮ್ಮ ಗ್ರಾಮೀಣ ಪ್ರದೇಶದಲ್ಲಿದೆ. ಶಿಕ್ಷಣದಿಂದ ವಂಚಿತರಾದ ಅತಿ ಹೆಚ್ಚು ಕೂಲಿಕಾರ್ಮಿಕ ಹೆಣ್ಣುಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚಾಗಿ ಇರುವುದು, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಇಂದು ಭಾರತದಲ್ಲಿ ನಿರುದ್ಯೋಗಿ ಅಶಿಕ್ಷಿತ ಹುಡುಗಿಯರ ಸಂಖ್ಯೆ ನಾಲ್ಕು ಕೋಟಿ ಎಂದು ಒಂದು ಅಧ್ಯಯನ ತಿಳಿಸುತ್ತದೆ. ಗಂಡೊಂದು ಕಲಿತರೆ ಅದು ಅವನ ವಿದ್ಯಾಭ್ಯಾಸ ಮಾತ್ರ. ಆದರೆ ಹೆಣ್ಣು ವಿದ್ಯಾವಂತಳಾದರೆ ಇಡೀ ಕುಟುಂಬವೇ ಸಾಕ್ಷರವಾಗುತ್ತದೆ ಎಂದು ಗಾಂಧೀಜಿ ಹೇಳುತ್ತಿದ್ದ ಮಾತು ಸತ್ಯವಾಗಲು ಇನ್ನೂ ಎಷ್ಟು ವರ್ಷಗಳು ಕಾಯಬೇಕೋ?

ಇತ್ತೀಚೆಗೆ ನಮ್ಮ ರಾಜ್ಯ ಸರ್ಕಾರ ಉಚ್ಛ ನ್ಯಾಯಾಲಯದ ಆದೇಶದಂತೆ ಶಾಲೆಯಿಂದ ಹೊರಗಿರುವ ೭-೧೪ವರ್ಷ ವಯಸ್ಸಿನ ಮಕ್ಕಳ ಸಮೀಕ್ಷೆಯನ್ನು ಮತ್ತೊಮ್ಮೆ ಮಾಡಿದೆ, ಅದರಲ್ಲಿ ನಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವ ಅನೇಕ ಅಂಕಿಅಂಶಗಳು ದಾಖಲಾಗಿವೆ. ಶಾಲೆ ದೂರವಿರುವುದರಿಂದ ೨೮೩೨ ಹುಡುಗಿಯರು, ತಮ್ಮದೇ ಮನೆಗೆಲಸದಲ್ಲಿ ತೊಡಗಿರುವುದರಿಂದ ೧೪೬೭೧ ಬಾಲೆಯರು, ದುಡಿಮೆಯಲ್ಲಿ ತೊಡಗಿರುವುದರಿಂದ ೫೧೧ ಹೆಣ್ಣುಮಕ್ಕಳು, ಬೇರೆ ಕೆಲಸದಲ್ಲಿ ತೊಡಗಿರುವುದರಿಂದ ೨೮೭೩ ಹುಡುಗಿಯರು, ಬಾಲ್ಯವಿವಾಹವಾದ ಕಾರಣಕ್ಕೆ ೧೩೬೫ ಬಾಲೆಯರು, ಮೈನೆರೆದ ಕಾರಣಕ್ಕೆ ೫೨೩೮, ಹೆಣ್ಣುಮಗುವಿಗೆ ಸಂಬಂಧಿಸಿದ ಇತರೆ ಕಾರಣಗಳಿಗಾಗಿ ೨೮೫೮, ಅನಾಕರ್ಷಕ ಶಾಲಾ ವಾತಾವರಣದ ಕಾರಣಕ್ಕೆ ೭೮, ವಲಸೆಯ ಕಾರಣಕ್ಕೆ ೧೪೨೭೬, ಶಿಕ್ಷಕರ ಹೆದರಿಕೆಯಿಂದ ೬೨, ಮನೆ ಬಿಟ್ಟು ಓಡಿ ಹೋದ ಕಾರಣಕ್ಕೆ ೮೮, ಬೀದಿಯಲ್ಲಿ ಚಿಂದಿ ಆಯುವ ಕಾರಣದಿಂದ ೧೧೪ ಮಕ್ಕಳು, ಅಂಗವೈಕಲ್ಯದಿಂದ ೧೫೦೮ ಮಕ್ಕಳು, ಸಾವಿನ ಕಾರಣಕ್ಕೆ ೮೨೪ ಮತ್ತು ಬೇರೆ ಕಾರಣಗಳಿಗಾಗಿ ೩೬೫೭೧ ಹೆಣ್ಣಮಕ್ಕಳು ಶಾಲೆ ತೊರೆದಿರುವುದು ತಿಳಿಯುತ್ತದೆ. ಅಂದರೆ ಒಟ್ಟು ಸುಮಾರು ೮೩,೮೬೯ ಹೆಣ್ಣುಮಕ್ಕಳು ಈ ಎಲ್ಲಾ ವಿವಿಧ ಕಾರಣಗಳಿಗಾಗಿ ಶಾಲೆ ತೊರೆದಿರುವುದು ತಿಳಿಯುತ್ತದೆ. ಇದರಲ್ಲಿ ಹೆಚ್ಚಿನ ಹೆಣ್ಣುಮಕ್ಕಳು ತಳಸಮುದಾಯದವರು ಹಾಗೂ ಹಿಂದುಳಿದ ವರ್ಗಗಳವರೇ ಆಗಿದ್ದಾರೆ ಎಂಬುದು ವಿಪರ್ಯಾಸ.

ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಸಮಗ್ರವಾಗಿ ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ತಕ್ಷಣವೇ ಸರ್ಕಾರ ಮುಂದಾಗಬೇಕು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಮಗ್ರ ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಎಲ್ಲವೂ ಒಟ್ಟಾಗಿ ಸೇರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮನಃಪೂರ್ವಕವಾಗಿ ಶ್ರಮಿಸಬೇಕಿದೆ. ಆಗ ಮಾತ್ರ ಹೆಣ್ಣುಮಕ್ಕಳ ಶೈಕ್ಷಣಿಕ ಹಕ್ಕಿನ ಸಾಕಾರವಾಗಲು ಸಾಧ್ಯವಿದೆ.

ಹೆಣ್ಣುಮಕ್ಕಳಿಗೂ ಸಮಾನ ವಿದ್ಯಾಭ್ಯಾಸ ನೀಡುವ ನೆಲೆಯಲ್ಲಿ ಸರ್ಕಾರದ ಪ್ರಯತ್ನಗಳೇನೋ ನಿರಂತರವಾಗಿ ಸಾಗಿವೆ. ಹೆಣ್ಣುಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮನವೊಲಿಸಲು ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಉಚಿತ ಊಟ, ಪುಸ್ತಕದ ಜೊತೆಗೆ, ಸೈಕಲ್ ವಿತರಿಸಲಾಗುತ್ತಿದೆ. ಅದರ ಜೊತೆಗೆ ಒಂದನೇ ತರಗತಿಯ ಹೆಣ್ಣುಮಕ್ಕಳ ದಿನವೊಂದರ ಹಾಜರಾತಿಗೆ ೨ರೂಪಾಯಿಗಳನ್ನು ನೀಡುವ ಯೋಜನೆಯೂ ಸರ್ಕಾರದಿಂದ ಜಾರಿಯಾಗಿದೆ. ಅದರ ಫಲವಾಗಿ ಹೆಣ್ಣುಮಕ್ಕಳು ಹೆಚ್ಚಾಗಿ ಶಾಲೆಗಳೆಡೆಗೆ ಮುಖಮಾಡಬಹುದೆಂಬ ಆಶಾಭಾವನೆ ಇದೆ. ಆದರೆ ಇದರ ಹೊರತಾಗಿಯೂ ಹೆಣ್ಣುಮಕ್ಕಳ ಸೂಕ್ಷ್ಮ ಸಮಸ್ಯೆಗಳನ್ನು ಗುರುತಿಸಿ ಹೆಚ್ಚು ಸಮರ್ಥವಾದ ಯೋಜನೆಗಳನ್ನು ಸರ್ಕಾರ ರೂಪಿಸಬೇಕಿದೆ.

ಭಾರತದಂತಾ ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ, ಭೌಗೋಳಿಕ, ರಾಜಕೀಯ ಕಾರಣಗಳ ಜೊತೆಗೆ child-marriage-indiaಗೊಡ್ಡು ಸಂಪ್ರದಾಯ, ವಿವಾಹ, ಆಚರಣೆ, ಕಂದಾಚಾರಗಳು ಮತ್ತು ಅವರನ್ನು ದುಡಿಮೆಯ ಯಂತ್ರಗಳೆಂದು ಭಾವಿಸಿರುವುದೂ ಕಾರಣವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪ್ರಮಾಣ ಕಡಿಮೆ ಇರುವುದಕ್ಕೆ ಅನೇಕ ಕಾರಣಗಳಿವೆ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಓದಿನೊಂದಿಗೆ ನಿತ್ಯದ ಬಿಡುವಿಲ್ಲದ ಕೆಲಸದಲ್ಲಿಯೂ ತೊಡಗಿಕೊಳ್ಳಬೇಕು. ಪೌಷ್ಟಿಕ ಆಹಾರದ ಕೊರತೆಯೊಂದಿಗೆ ಹೊಲಗದ್ದೆ, ಕಸಮುಸುರೆ, ಕೊಟ್ಟಿಗೆ ಕೆಲಸಗಳಲ್ಲಿ ಭಾಗಿಯಾಗುತ್ತಲೇ ಶಾಲೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಾಗ ಆಯಾಸ, ಒತ್ತಡಗಳಾಗುವುದು ಸಹಜ. ಇದನ್ನೂ ಮೀರಿ ವಿದ್ಯಾಭ್ಯಾಸವನ್ನು ಮುಂದುವರೆಸಿದರೂ ಶಾಲೆಗಳು ಹತ್ತಿರವಿದ್ದಾಗ ನಿರಾತಂಕವಾಗಿ ಕಳುಹಿಸುವ ಪೋಷಕರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಕ್ಕದ ಊರಿಗೆ ಕಳಿಸಬೇಕಾದಾಗ ಸುರಕ್ಷತೆಯ ದೃಷ್ಟಿಯಿಂದ ಹೆದರುತ್ತಾರೆ. ಬೆಳೆದ ಹೆಣ್ಣುಮಕ್ಕಳ ಶೀಲ ರಕ್ಷಣೆ ಸಧ್ಯದ ಸಮಾಜದಲ್ಲಿ ಪೋಷಕರನ್ನು ಕಾಡುವ ಗಂಭೀರ ವಿಷಯ. ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳ ಶೀಲದ ಪರಿಕಲ್ಪನೆ ಅವರು ಮುಕ್ತವಾಗಿ ಸಮಾಜದಲ್ಲಿ ಬೆರೆಯದ, ಬೆಳೆಯದ ಒಂದು ಚೌಕಟ್ಟನ್ನು ಹಾಕಿಬಿಟ್ಟಿದೆ. ಅದೊಂದು ಆತಂಕ ನೆಪವಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಗ್ರಾಮೀಣ ಪ್ರದೇಶದ ಜನರಿಗೆ ರಿಸ್ಕ್ ಎನ್ನಿಸಿದೆ. ಇಲ್ಲೆಲ್ಲಾ ಹೆಣ್ಣುಮಕ್ಕಳು ತಮಗೇ ಅರಿವಿಲ್ಲದೇ ತಮ್ಮ ಶೈಕ್ಷಣಿಕ ಹಕ್ಕನ್ನು ಕಳೆದುಕೊಳ್ಳುತ್ತಿರುತ್ತಾರೆ. ಅವರಿಗೆ ನಿಜಕ್ಕೂ ತಮಗಾಗಿ ಇಂತಹದೊಂದು ಹಕ್ಕಿರುವ ಅರಿವೂ ಇಲ್ಲ.

ಮಹಿಳೆಯನ್ನು ಒಂದು ಆಸ್ತಿಯನ್ನಾಗಿ ಪರಿಗಣಿಸುವ ಪರಿಪಾಠದಿಂದಾಗಿ ಅವಳನ್ನು ಸಂರಕ್ಷಿಸುವ ಕೆಲಸದ ಮುಖಾಂತರ ಅವಳ ಶೀಲವನ್ನು ಜೋಪಾನ ಮಾಡುವ ಕೆಲಸ ತಲೆತಲಾಂತರದಿಂದ ನಡೆಯುತ್ತಾ ಬಂದಿದೆ. ಎಲ್ಲಿಯವರೆಗೆ ಪಾತಿವ್ರತ್ಯದ, ಕೌಮಾರ್ಯದ, ಶೀಲದ ಕಲ್ಪನೆಗಳು ನಮ್ಮ ಸಮಾಜವನ್ನು ಬಿಟ್ಟು ಹೋಗುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣವಿರಲಿ, ಮೂಲಭೂತ ಶಿಕ್ಷಣವನ್ನೂ ಸಮರ್ಪಕವಾಗಿ ನೀಡಲು ಸಾಧ್ಯವಾಗದ ಜೊತೆಗೆ ಮಹಿಳೆಯ ಸಬಲೀಕರಣ ತಳಮಟ್ಟದಿಂದ ಸಾಧ್ಯವಾಗುವುದಿಲ್ಲ. ಹಾಗೂ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳೂ ಕೂಡ ಹೆಣ್ಣುಮಕ್ಕಳ ಶಿಕ್ಷಣದ ತೊಡಕಿನಲ್ಲಿ ಗಮನಾರ್ಹವಾದ ಸಮಸ್ಯೆಯಾಗಿದೆ. ಜೊತೆಗೆ ಇದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಹು ಮುಖ್ಯವಾದ ತಡೆಗೋಡೆಯೂ ಹೌದು.

ಇಂದಿಗೂ ಬಹುಜನರ ದೃಷ್ಟಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣವೆಂದರೆ ಮದುವೆಯಾಗುವವರೆಗೆ ಹೊತ್ತು ಕಳೆಯುವ ಸಾಧನ ಎಂಬಂತಾ ಭಾವನೆ ಇದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಋತುಮತಿಯಾದ ನಂತರ ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸುವ ಪೋಷಕರೂ ಇದ್ದಾರೆ. ಹಬ್ಬ ಹರಿದಿನಗಳಲ್ಲಿ, ಮಾಸಿಕ ಸ್ರಾವದ ದಿನಗಳಲ್ಲಿ, ಮನೆಯಲ್ಲಿ ಹೆಚ್ಚಿನ ಕೆಲಸಗಳಿದ್ದಾಗ, ಹೆಣ್ಣುಮಕ್ಕಳು ಶಾಲೆಗೆ ಹೋಗದೇ ಉಳಿದು ಬಿಡುತ್ತಾರೆ. ಕುಟುಂಬದಲ್ಲಿ ಹೆಚ್ಚಿನ ಮಕ್ಕಳಿದ್ದ ಸಂದರ್ಭದಲ್ಲಿ ಹೆಚ್ಚಿನ ಹೊರೆ ಅನಿವಾರ್ಯವಾಗಿ ಸ್ವಲ್ಪ ದೊಡ್ಡ ಹೆಣ್ಣುಮಕ್ಕಳ ಮೇಲೇ ಬೀಳುವುದರಿಂದ ಹಾಗೂ ಪಕ್ಕದ ಹಳ್ಳಿಗಳಿಗೆ ಓದಲು ಹೋಗಬೇಕಾದಾಗ ಆಗುವ ತೊಂದರೆ-ಆಯಾಸದಿಂದ, ಬಸ್ ಸೌಕರ್ಯಗಳು ಇಲ್ಲದಿದ್ದಾಗ, ಶಾಲೆಗೆ ಹೋಗುವ ದಾರಿಯಲ್ಲಿ ಸುರಕ್ಷತೆ ಇಲ್ಲದಿದ್ದಾಗ ಕೂಡ ಹೆಣ್ಣುಮಕ್ಕಳ ವಿದ್ಯಾಭ್ಯಾಸ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ. ಎಷ್ಟು ಓದಿದರೇನು ಅಡಿಗೆ ಮಾಡಿಕೊಂಡಿರೋದು ತಾನೇ? ಎಂಬ ಉದಾಸೀನವು ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮಹತ್ವವನ್ನು ನಿರಂತರವಾಗಿ ತಿಳಿಹೇಳಿ ಪೋಷಕರ ಮನ ಒಲಿಸಬೇಕಾಗುತ್ತದೆ.

ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮುಖ್ಯ ಹಿನ್ನಡೆ ಎಂದು ಭಾವಿಸಲಾಗಿದೆ. ಇದೊಂದು ಅತ್ಯಂತ ಅನಿವಾರ್ಯವಾದ ಮತ್ತು ಸೂಕ್ಷ್ಮವಾದ ವಿಚಾರವಾಗಿರುವುದರಿಂದ ಇದನ್ನು ಯಾರೊಂದಿಗೂ ಚರ್ಚಿಸುವುದನ್ನೂ ಗ್ರಾಮೀಣ ಪ್ರದೇಶದ ಮಹಿಳೆಯರು ಇಷ್ಟ ಪಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಡಿ ದರ್ಜೆ ನೌಕರರು ಇಲ್ಲದಿರುವುದರಿಂದ ಶೌಚಾಲಯ ಶುದ್ಧಿಯಿಂದ ಹಿಡಿದು ಶಾಲೆಯ ಕಸ ಗುಡಿಸಿ ಒರೆಸುವುದನ್ನೂ ಮಕ್ಕಳಿಂದಲೇ ಮಾಡಿಸುವುದು, ಸರ್ಕಾರಿ ಶಾಲೆಯಿಂದ ಮಕ್ಕಳು ದೂರಾಗುವುದಕ್ಕೆ ಒಂದು ಕಾರಣ. ಜೊತೆಗೆ ಮಹಿಳಾ ಶಿಕ್ಷಕರ ಕೊರತೆಯೂ ಹೆಣ್ಣುಮಕ್ಕಳ ಶಿಕ್ಷಣದ ಆಸಕ್ತಿಯನ್ನು ಪೋಷಕರಲ್ಲಿ ಕಡಿಮೆ ಮಾಡುತ್ತದೆ. ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ೨೯% ಮಹಿಳಾ ಶಿಕ್ಷಕರು ಹಾಗೂ ಪ್ರೌಢ ಶಿಕ್ಷಣದ ಹಂತದಲ್ಲಿ ಕೇವಲ ೨೨% ಮಹಿಳಾ ಶಿಕ್ಷಕರಿರುವುದೂ ಪರೋಕ್ಷವಾಗಿ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತದೆ. ಈ ಯಾವ ಸಮಸ್ಯೆಗಳೂ ಗಂಡು ಮಕ್ಕಳನ್ನು ಕಾಡದೇ ಇರುವುದರಿಂದ ಅವರ ಶಿಕ್ಷಣ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಸರ್ಕಾರದ ವತಿಯಿಂದ ಗ್ರಾಮಾಂತರ ಪ್ರದೇಶದ ಹೆಣ್ಣುಮಕ್ಕಳಿಗಾಗಿ ಶಿಕ್ಷಣದ ಸೌಲಭ್ಯ ದೊರಕುವಂತೆ ಮಾಡಲು ಪ್ರತಿ ಹಳ್ಳಿಯಲ್ಲಿಯೂ schoolಶಾಲೆಗಳನ್ನು ತೆರೆಯಬೇಕು. ಇದು ಸಾಧ್ಯವಾಗದಿದ್ದರೆ ಉಚಿತ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಬೇಕು. ಅವರ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಕೆಲವು ಹಳ್ಳಿಗಳನ್ನು ಒಳಗೊಂಡಂತೆ ಕಾಲೇಜು ಶಿಕ್ಷಣ ವ್ಯವಸ್ಥೆ, ವೃತ್ತಿ ತರಬೇತಿ ಕೇಂದ್ರಗಳು, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯಬೇಕು. ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಕರ್ಯವಿರುವ ವಿದ್ಯಾರ್ಥಿನಿಲಯಗಳನ್ನು ದೊಡ್ಡ ಪ್ರಮಾಣದಲ್ಲಿ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಒದಗಿಸಬೇಕು. ಹೆಣ್ಣುಮಕ್ಕಳ ಶಿಕ್ಷಣವೆಂದರೆ ಅವಶ್ಯಕ ಮೂಲ ಶಿಕ್ಷಣ ಮಾತ್ರವಲ್ಲ. ಅವರು ಸಂಪೂರ್ಣವಾಗಿ ಸ್ವಾವಲಂಬಿಗಳಾಗುವ ನೆಲೆಯಲ್ಲಿ ಎಲ್ಲ ರೀತಿಯ ಅನುಕೂಲವನ್ನೂ ಸರ್ಕಾರ ಮಾಡಿಕೊಡಬೇಕು. ಅದಕ್ಕಾಗಿ ನಿಗದಿತ ವಿದ್ಯಾಭ್ಯಾಸದ ನಂತರ ವೃತ್ತಿ ಶಿಕ್ಷಣ ಪಡೆಯಲು ಅನುಕೂಲವಾಗುವಂತಹಾ ಸಾದ್ಯತೆಗಳನ್ನು ಸರ್ಕಾರ ರೂಪಿಸಬೇಕು. ಆಗ ಮಾತ್ರ ಆರ್ಥಿಕ ದಾಸ್ಯವನ್ನು ಮೀರಿ ಆತ್ಮ ಸ್ವಾತಂತ್ರ್ಯದ ಸಿದ್ಧಿಯೆಡೆಗೆ ಸಾಗಲು ನಮ್ಮ ಹೆಣ್ಣುಮಕ್ಕಳಿಗೆ ಸಾಧ್ಯವಾಗುತ್ತದೆ.

ಇಂದು ಕಾಲ ವೇಗವಾಗಿ ಓಡುತ್ತಿದೆ. ಜೊತೆಗೆ ಅದು ಇಂದು ಸ್ಪರ್ಧಾತ್ಮಕವಾಗಿದೆ. ಅದಕ್ಕೆ ತಕ್ಕಂತೆ ನಮ್ಮ ಹೆಣ್ಣುಮಕ್ಕಳು ಅದರ ಮಹತ್ವವನ್ನು ಅರಿತು ನಡೆಯಬೇಕಿದೆ. ಶಿಕ್ಷಣದ ಹಕ್ಕು ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ, ಛಲ, ಧೈರ್ಯವನ್ನು ತುಂಬುವುದರೊಂದಿಗೆ ಬದುಕನ್ನು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ಎದುರಿಸುವ ಮನೋಸ್ಥೈರ್ಯವನ್ನು ನೀಡಬೇಕಿದೆ. ಅಂತಹ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಿದೆ. ಉನ್ನತ ವ್ಯಾಸಂಗ ಮಾಡಿದ ನಮ್ಮ ಅನೇಕ ಮಹಿಳೆಯರು ಇಂದಿಗೂ ಮೂಢನಂಬಿಕೆಗಳ ದಾಸರೂ, ಕಂದಾಚಾರಿಗಳೂ ಗೊಡ್ಡು ಸಂಪ್ರದಾಯಸ್ಥರು ಆಗಿರುತ್ತಾರೆ. ಹಾಗಿದ್ದರೆ ನಮ್ಮ ಶಿಕ್ಷಣ ನಮಗೆ ನೀಡುತ್ತಿರುವುದಾದರೂ ಏನನ್ನು? ಎಂಬ ಪ್ರಶ್ನೆ ಏಳುತ್ತದೆ.

ಶಿಕ್ಷಣ ಜ್ಞಾನದ ಪರಿಧಿಯನ್ನು ವಿಸ್ತರಿಸುವುದರೊಂದಿಗೆ ಅರಿವಿನ ಬಾಗಿಲನ್ನು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಿಸಬೇಕು. ಹೆಣ್ಣುಮಕ್ಕಳು ವೈಚಾರಿಕವಾಗಿ, ಚೌಕಟ್ಟುಗಳಿಂದ ಮುಕ್ತವಾಗಿ ಚಿಂತಿಸುವ ನೆಲೆಯಲ್ಲಿ ನಮ್ಮನ್ನು ತಯಾರು ಮಾಡಬೇಕು. ಮಹಿಳಾ ಸಬಲೀಕರಣದ ಮೊದಲ ಮೆಟ್ಟಿಲು, ಸ್ವಾವಲಂಬನೆಯ ಮೊದಲ ಹೆಜ್ಜೆ ಹೆಣ್ಣುಮಕ್ಕಳ ಶಿಕ್ಷಣವಾಗಿರುವುದರಿಂದ ಭವಿಷ್ಯದಲ್ಲಿ ದೃಢತೆಯನ್ನು ಬಯಸುವ ಹೆಣ್ಣುಮಕ್ಕಳೆಲ್ಲರಿಗೂ ಇದು ಅತ್ಯಂತ ಅವಶ್ಯಕ. ಈ ತಿಳಿವನ್ನು ಪ್ರತಿ ಹೆಣ್ಣು ಮಗುವಿನಲ್ಲೂ ಮೂಡಿಸಬೇಕಿರುವುದೇ ಇಂದಿನ ತುರ್ತು. ಯಾವಾಗ ಈ ಅರಿವು ಒಳಗಿನಿಂದಲೇ ಅವರಲ್ಲಿ ಮೂಡಿ ಬಂದು ಮಾನಸಿಕ ಹಾಗೂ ಬೌದ್ಧಿಕವಾಗಿ ಸಬಲರಾಗುತ್ತಾರೋ ಆಗ ಮಹಿಳೆಯರ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ಪರಿಪೂರ್ಣವಾದ ಅರ್ಥ ಬರುತ್ತದೆ. ಅದು ಸಾಧ್ಯವಾಗುವುದು ಗುಣಾತ್ಮಕ, ವೈಚಾರಿಕ ಶಿಕ್ಷಣದಿಂದ ಮಾತ್ರ. ಇಂತಹ ಶೈಕ್ಷಣಿಕ ಹಕ್ಕು ನಮ್ಮ ಹೆಣ್ಣುಮಕ್ಕಳಿಗೆ ದೊರಕಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಅವರು ಈ ದೇಶದ ಆಸ್ತಿಯಾಗಿ ಹೊರಹೊಮ್ಮುತ್ತಾರೆ.

‘ಬೋನಿಗೆ ಬಿದ್ದವರು’– ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ


– -ಟಿ.ಕೆ. ದಯಾನಂದ


ಅಲ್ಲಿಯವರೆಗೂ ಕಾಡುನಂಬಿಕೊಂಡು ಬದುಕುತ್ತಿದ್ದ ಬುಡಕಟ್ಟುಗಳನ್ನು ಕಾಡುವಾಸಿಗಳ ಪುನರ್ವಸತಿ ಯೋಜನೆಯ ಹೆಸರಿನಲ್ಲಿ ಸರ್ಕಾರ ಮತ್ತು ಅರಣ್ಯಇಲಾಖೆಯು ಒಟ್ಟುಸೇರಿ ಬುಡಬುಡಕೆಯವರು, ಹಕ್ಕಿಪಿಕ್ಕರು, ಗೊರವರು, ಕರಡಿಖಲಂದರ್ ಗಳು, ಗಿಣಿಶಾಸ್ತ್ರದವರು, ಗೊಂಬೆಯಾಟದವರು, ಹಾವುಗೊಲ್ಲರು, ದೊಂಬರು, ಕೊರಚರು ಕೊರಮರಿತ್ಯಾದಿಯೆಲ್ಲರನ್ನೂ ಕಾಡುಬಿಡಿಸಿ ಲಾರಿಯೊಳಗೆ ತುಂಬಿಕೊಂಡು ಬಂದು ಚೆಂಗಾವಿಯ ಊರಾಚೆಗೆ ಬಿಸಾಕಿ ಹೋಗಿದ್ದರಲ್ಲ.., ಆವತ್ತಿನಿಂದಲೇ ಒಂದರ ಹಿಂದೊಂದು ಪೀಕಲಾಟಗಳು ಚೆಂಗಾವಿಯೆಂಬ ಪಟ್ಟಣಕ್ಕೆ ಅಮರಿಕೊಂಡಿದ್ದವು.

ಮೊದಮೊದಲಿಗೆ ಲಾರಿಯಿಂದ ಕಸದಂತೆ ಇಳಿದ ಕಾಡುವಾಸಿಗಳ ವೇಷಭೂಷಣ, ಮಾತುಕತೆ, ಬಿದಿರುಬಾಣ, ಗೋಣಿಚೀಲಗಳ ಕಂತೆಗಳನ್ನು ಕಂಡವರು ಇವರ್ಯಾರೋ ಅನ್ಯಗ್ರಹವಾಸಿಗಳಿರಬಹುದೆಂದು ಡೌಟು ಬರುವಷ್ಟರ ಮಟ್ಟಿಗೆ ಆಶ್ಚರ್ಯದಿಂದ ನೋಡಿದ್ದರು. ನೋಡ ನೋಡುತ್ತಲೇ ಊರಾಚೆಗಿನ ಈ ಪ್ರದೇಶವನ್ನು ಟೆಂಟು, ಗುಡಿಸಲು ಬಿದಿರುಕಮಾನು ಮನೆಗಳಿಂದ ತುಂಬಿಕೊಂಡ ಕಾಡುಬುಡಕಟ್ಟಿನವರು ಹೊಕ್ಕಳಕರುಳುktshivprasad-art ಕತ್ತರಿಸಿಕೊಂಡ ಎಳೆಗೂಸುಗಳಂತೆ ಹೊಸಜಾಗಕ್ಕೆ ಹೊಂದಿಕೊಳ್ಳಲು ಪಡಬಾರದ ಯಾತನೆ ಪಡುವುದನ್ನು ಯಾರಾದರೂ ನೋಡಬಹುದಿತ್ತು. ಕಾಡಿನ ಸಣ್ಣಪುಟ್ಟ ಪ್ರಾಣಿಗಳನ್ನು ಪಳಗಿಸಿಟ್ಟುಕೊಂಡು ಬೀದಿಗಳಲ್ಲಿ ಪ್ರದರ್ಶಿಸಿ ಅಲ್ಲಿಯತನಕ ಹೊಟ್ಟೆ ಹೊರೆಯುತ್ತಿದ್ದವರಿಗೆ ಅರಣ್ಯಕಾನೂನುಗಳು ಕೊರಳಿಗಿಟ್ಟ ಕೊಡಲಿಯಂತೆ ಕಾಡಲು ಶುರುವಾಗಿದ್ದು ಅನುಭವಕ್ಕೆ ಬಂದ ಕೂಡಲೇ ಮುಂದೇನೆಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅವರವರೊಳಗೇ ಗೊಂದಲಮಯ ಪರಿಹಾರಗಳು ಮೂಡುತ್ತಿದ್ದವು. ಕರಡಿಯಾಡಿಸುವವರಿಗೆ ಗುರುತುಚೀಟಿ ಕೊಟ್ಟು ಕರಡಿಗಳನ್ನು ಹೊತ್ತೊಯ್ದಿದ್ದ ಫಾರೆಸ್ಟಿನವರು ಪರಿಹಾರವೆಂದು ಕೊಟ್ಟ ತುಂಡುಭೂಮಿ ಮತ್ತು ಚಿಲ್ಲರೆಕಾಸೊಳಗೆ ಏನು ಮಾಡುವುದೆಂಬ ಕುರಿತಂತೆ ಯಾವ ವಿವರವೂ ಗೊತ್ತಿಲ್ಲದ ಖಲಂದರ್ ಗ್ಳು ಉಳುಮೆ ಕೃಷಿಯ ತಲೆಬುಡ ತಿಳಿಯದೆ ಕೈಲಿದ್ದ ಕಾಸನ್ನು ಅದಕ್ಕಿದಕ್ಕೆಂದು ಖರ್ಚು ಮಾಡಿ ಖಾಲಿಜೇಬುಗಳೊಡನೆ ಗುದ್ದಾಡುತ್ತಿದ್ದರೆ, ಇದ್ದಬದ್ದ ಹಾವುಗಳೆಲ್ಲವನ್ನೂ ಬಿದಿರುಬುಟ್ಟಿಯ ಸಮೇತ ಕಳೆದುಕೊಂಡ ಹಾವುಗೊಲ್ಲರ ಕಥೆ ಬೇರೆಯೇ ಆಗಿತ್ತು. ಪುಸ್ತಕದ ಕಾನೂನು ಹೇಳುವಂತೆ ಅವರ್ಯಾರೂ ಹಾವನ್ನು ಆಡಿಸುವಂತೆಯೇ ಇರಲಿಲ್ಲ, ಅದ್ಯಾರು ಅದೇನು ಕಿತ್ತುಕೊಳ್ಳುವರೆಂದು ಹೊಸ ಹಾವುಗಳನ್ನು ಹಿಡಿದು ಪಳಗಿಸಿ ಕೂಡುರಸ್ತೆಗಳಲ್ಲಿ ಆಟವಾಡಿಸುತ್ತಿದ್ದವರ ಮೇಲೆ ಮುಗಿಬೀಳುತ್ತಿದ್ದ ಫಾರೆಸ್ಟು ಇಲಾಖೆಯವರು ಕೈಗೆಸಿಕ್ಕ ಹಾವುಗಳೆಲ್ಲವನ್ನೂ ದಿವೀನಾಗಿ ಹೊತ್ತೊಯ್ದು ಕಾಡಿಗೆ ಬಿಡುತ್ತಿದ್ದರು. ಇವರು ಹಿಡಿದು ತರುವುದು, ಅವರು ಹೊತ್ತೊಯ್ಯುವ ಸರ್ಕಸ್ಸು ನಡೆದಿರುವಾಗಲೇ ಹೊಸತೊಂದು ಐಡಿಯಾ ಕಂಡುಕೊಂಡ ಹಾವುಗೊಲ್ಲರು ಪ್ಲಾಸ್ಟಿಕ್ಕು ಹಾವುಗಳು, ಸ್ಪ್ರಿಂಗಿನ ಹಾವುಗಳನ್ನು ನೆಲದಮೇಲೆ ಜೋಡಿಸಿ ಕೂಗಿ ಕರೆದು ಎಷ್ಟೇ ಪುಂಗಿಯೂದಿದರೂ ಅಷ್ಟರಾಗಲೇ ಜಿಯಾಗ್ರಫಿಯಂತೆ, ಡಿಸ್ಕವರಿಯಂತೆ, ಅನಿಮಲ್ಲುಪ್ಲಾನೆಟ್ಟಂತೆ ಎಂದು ಹತ್ತಾರು ಟಿವಿ ಚಾನೆಲ್ಲುಗಳಲ್ಲಿ ತರೇವಾರಿ ಹಾವುಹುಪ್ಪಟೆಗಳನ್ನು ನೋಡುತ್ತಿದ್ದ ಚೆಂಗಾವಿಯ ಜನರು ಇವರ ಪ್ಲಾಸ್ಟಿಕ್ಕುಹಾವುಗಳನ್ನು ಮೂಸಿಯೂ ನೋಡದೆ ಮುಂದೆ ಹೋಗಿಬಿಡುತ್ತಿದ್ದರು.

ಪುನರ್ವಸತಿಗೊಳಗಾದ ಎಲ್ಲರಿಗೂ ರೇಷನ್ನುಕಾರ್ಡು ಕೊಟ್ಟಿದ್ದರಾದರೂ ರೇಷನ್ ಡಿಪೋದಲ್ಲಿ ಸೀಮೆಎಣ್ಣೆ ಬಿಟ್ಟು ಬೇರೇನನ್ನೂ ಕೊಡುತ್ತಿರಲಿಲ್ಲ. ತಲೆ ಮೇಲೆ ಸುರಿದುಕೊಂಡು ಜೀವಂತವಾಗಿ ಬೆಂಕಿಯಿಟ್ಟುಕೊಂಡು ನೆಗೆದು ಬೀಳಲಷ್ಟೇ ಅನುಕೂಲಕರವಾಗಿದ್ದ ಸೀಮೆಎಣ್ಣೆಯನ್ನು ಏನು ಮಾಡುವುದೆಂದು ತಿಳಿಯದೆ ಅದನ್ನು ದೇಹಕ್ಕೆ ಗಾಯವಾದ ಕಡೆಗೆ ಎರಡು ಚಮಚ ಸುರಿದು ನೋವು ನಿವಾರಕ ಔಷಧಿಯಾಗಷ್ಟೇ ಬಳಸಲು Work of Temporary tent for stay.ಪುನರ್ವಸತಿ ಸಂತ್ರಸ್ತರು ಬಳಸುತ್ತಿದ್ದರು. ಇದಿಷ್ಟು ಸಾಲದೆಂದು ಇವರ ಪಾಲಿಗೆ ದೇವದೂತನ ಭಕ್ತರ ಹೊಸಕಾಟವೂ ತಗಲಿಕೊಂಡಿತ್ತು. ಬೆಳಗ್ಗೆಯಾದರೆ ಸಾಕು ಬಂದು ವಕ್ಕರಿಸುತ್ತಿದ್ದ ಪಾಸ್ತರ್ ಜಸಿಂತಮ್ಮನು ನಿಮ್ಮನ್ನು ಸುತ್ತುವರೆದಿರುವ ಕಷ್ಟಗಳಿಗಾಗಿ ಕರ್ತನನ್ನು ಪ್ರಾರ್ಥಿಸಿರಿ, ನಿಮಗೆ ಹಿಂಸೆ ಕೊಡುತ್ತಿರುವ ವೈರಿಗಳಿಗೋಸ್ಕರ ದೇವರಲ್ಲಿ ಬೇಡಿಕೊಳ್ಳಿರಿ ಎಂದು ಈ ಕಾಡುವಾಸಿಗಳನ್ನು ದುಂಬಾಲು ಬೀಳುತ್ತಿತ್ತು. ತಮ್ಮನ್ನು ಈ ಗತಿಗೆ ತಂದಿಟ್ಟವರು ಕೈಗೆ ಸಿಕ್ಕರೆ ರುಂಡವೊಂದು ಕಡೆ ಮುಂಡವೊಂದು ಕಡೆ ನೋಡಲು ತಹತಹಿಸುತ್ತಿದ್ದ ಜನರಿಗೆ ಈಯಮ್ಮನ ಗ್ರಾಮಾಪೋನು ಬೋಧನೆಯು ಇನ್ನಷ್ಟು ಸಿಟ್ಟಿಗೇಳಿಸುತ್ತಿತ್ತು. ಇಲಿಗಳನ್ನೇ ನಂಬಿಕೊಂಡು ಬದುಕುತ್ತಿದ್ದ ಇರುಳರ ಕುಲದ ನಂಬೀಸನು ಒಂದುದಿನ ತನ್ನ ಗುಡಿಸಲಿನ ಮುಂದೆ ನಿಂತು ಕರ್ತರು ನಿಮಗೋಸ್ಕರ ಬಂದಿದ್ದಾರೆ ಎಂದು ಗಾಸ್ಪೆಲ್ ಬೋಧನೆ ಮಾಡುತ್ತಿದ್ದ ಜಸಿಂತಮ್ಮನನ್ನು ಸಂದಿಗೊಂದಿಯಲ್ಲಿ ಓಡಿದರೂ ಬಿಡದೆ ತಲೆಕೆಟ್ಟು ಅಟ್ಟಾಡಿಸಿಬಿಟ್ಟಿದ್ದ. ಇದರ ಫಲವಾಗಿ ದೇವದೂತನ ಭಕ್ತರು ಆವತ್ತಿನಿಂದ ಇವರ ನಡುವಿಂದ ಮಟಾಮಾಯವಾಗಿ ಹೋಗಿದ್ದರು.

ಹೀಗಿರುವಾಗ, ಬದುಕಲಿಕ್ಕೆಂದು ಒಂದೇ ವಿಧಾನವನ್ನು ಅರೆದು ಕುಡಿದಿದ್ದ ಇವರೆಲ್ಲರಿಗೂ ಇದೀಗ ಬದುಕಲು ಬೇರೆಯದೊಂದೇನಾದರನ್ನು ಪತ್ತೆಹಚ್ಚಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ತಮಗೆ ಪಾರಂಪರಿಕವಾಗಿ ತಿಳಿದುದನ್ನೇ ಹೊಸಬಣ್ಣ ಹೊಡೆದು ಜನರನ್ನೇ ಆಶ್ರಯಿಸಿ ಬದುಕಬೇಕಿರುವ ಕಟುಸತ್ಯ ಅರ್ಥವಾಗಲು ತುಂಬ ದಿನಗಳೇನು ಹಿಡಿಯಲಿಲ್ಲ. ಅದರಂತೆ ಕುಂಚಿಕೊರವರು ಹುಲ್ಲುಕೂಡಿಸಿ ದಾರದಲ್ಲಿ ಬಿಗಿದು ನೆಲ್ಲುಪೊರಕೆಗಳನ್ನು ಮಾರುತ್ತಲೂ, ಸೊನಾಯಿ ಕೊರಮರು ವಾಲಗದವರಾಗಿ ಮದುವೆಮುಂಜಿ, ದೇವರುತ್ಸವದ ವಾದ್ಯಗಾರರಾಗಿಯೂ, ಕೊರಚರು ಕತ್ತಾಳೆನಾರಿನ ಹಗ್ಗ ಹೆಣೆದು ಮಾರುವವರಾಗಿಯೂ, ದಬ್ಬೆಗೊಲ್ಲರು ಬಿದಿರಿನಬುಟ್ಟಿ, ಮಂಕರಿ ಮಾರುವವರಾಗಿಯೂ ಪರಿವರ್ತಿತರಾಗಿದ್ದರು. ಇದೇ ಥರನಾಗಿ ಉಳಿದದವರ ಪಾಡೂ ಇದೇ ಗತಿಗೆ ಬಂದುನಿಂತಿದ್ದ ಸಮಯದಲ್ಲಿ ಚೆಂಗಾವಿಯ ರೈತಾಪಿಕುಲಕ್ಕೆ ಇಲಿರೋಧನೆ ಶುರುವಾಗಿದ್ದು, ಅದರ ಪರಿಹಾರಕ್ಕೆಂದು ಗಿಣಿಶಾಸ್ತ್ರದ ಮಂಕಾಳಿ ಬಂದದ್ದು ಮತ್ತದು ನಾನಾಬಗೆಯ ರಂಕಲುಗಳಿಗೆ ಕಾರಣವಾಗಿದ್ದು ಕೇಳಲೇಬೇಕಾದ ಕಥೆ. ಭತ್ತವಂತೆ, ಸೇಂಗಾ ಅಂತೆ, ರಾಗಿಯಂತೆ ಎಂದು ಬೆಳೆದುಕೊಂಡು ದುಡ್ಡುದಮ್ಮಡಿಯ ಮುಖ ನೋಡುತ್ತಿದ್ದ ಚೆಂಗಾವಿಯ ರೈತರಿಗೆ ತಮ್ಮ ಹೊಲಗಳಲ್ಲಿ ಕಟಾವಿಗೆ ಬಂದು ನಿಂತ ರಾಗಿ, ಸೇಂಗಾ, ಭತ್ತವನ್ನು ಇಲಿಸಮೂಹವು ಯೋಜಿತವಾಗಿ ಹಾಳುಗೆಡವುವುದು ಕಣ್ಣಿಂದ ನೋಡಲಾಗುತ್ತಿರಲಿಲ್ಲ, ರಸಭರಿತ ಭತ್ತ, ರಾಗಿತೆನೆಗಳನ್ನು artನಾಜೂಕಾಗಿ ಕಟಾವು ಮಾಡುತ್ತಿದ್ದ ಇಲಿಗಳು ಸೇಂಗಾಬೇರುಗಳನ್ನು ಬುಡಸಮೇತ ಹೊತ್ತೊಯ್ಯುವ ಪರಿಪಾಠ ಬೆಳೆಸಿಕೊಂಡಿದ್ದವು. ಆಧುನಿಕ ಕೃಷಿ, ಯಾಂತ್ರಿಕ ಉಳುಮೆ, ರಸಗೊಬ್ಬರ, ಔಷಧಿ ಸಿಂಪರಣೆಯೆಂದು ಕಂಡಾಪಟ್ಟೆ ದುಡ್ಡುಚೆಲ್ಲಿ ತಮ್ಮಪಾಡಿಗೆ ತಾವು ಬೆಳೆದುಕೊಳ್ಳುತ್ತಿದ್ದ ಬೆಳೆಯನ್ನು ಐದುಪೈಸದ ಬಂಡವಾಳವಿಲ್ಲದೆ ಇಲಿಗಳು ತಂಡೋಪತಂಡವಾಗಿ ಬಂದು ಹೊತ್ತೊಯ್ದು ಗೂಡು ತುಂಬಿಕೊಳ್ಳುವುದು ತನ್ಮೂಲಕ ತಾವು ಕಷ್ಟಪಟ್ಟು ಬೆಳೆದ ಅರ್ಧಕ್ಕರ್ಧ ಬೆಳೆಯು ರುಂಡ ಕಳೆದುಕೊಂಡ ಮುಂಡ ಮಾತ್ರವಾಗಿ ಹೊಲದೊಳಗೆ ಉಳಿಯುತ್ತಿರುವುದನ್ನು ನೋಡಲಾಗದೆ ಚೆಂಗಾವಿಯ ರೈತಕುಲ ರೋಸತ್ತುಹೋಗಿತ್ತು. ಗೂಬೆಗಳಿಗೆ ಇಷ್ಟವಾಗುವ ಬೀಡಿಎಲೆಯ ಕಡ್ಡಿಗಳನ್ನು ಹೊಲದೊಳಗೆ ನೆಟ್ಟು ಗೂಬೆಗಳನ್ನು ಆಕರ್ಷಿಸಿ ಅವುಗಳ ಮೂಲಕ ಇಲಿಗಳನ್ನು ಕೊಲ್ಲಬಹುದೆಂದು ಹೇಳಿದ ತಲೆಮಾಸಿದ ಮುದುಕನೊಬ್ಬನ ಐಡಿಯಾ ನಂಬಿಕೊಂಡು ಬೆಳೆಯ ಮಧ್ಯೆಮಧ್ಯೆ ಗುಮ್ಮನಗೂಟಗಳನ್ನೂ ಇಟ್ಟು ನೋಡಿದರು, ಅದರಿಂದಲೂ ಪ್ರಯೋಜನವೇನೂ ಆಗಲಿಲ್ಲ. ಇದ್ದಬದ್ದ ತಾಳ್ಮೆಯೆಲ್ಲವನ್ನೂ ಕಳೆದುಕೊಂಡ ಚೆಂಗಾವಿಯ ರೈತರು ಮನೆಯೊಳಗೆ ಯಾವುದಾದರೊಂದು ಇಲಿ ಕಂಡರೆ ಅದನ್ನು ಅಟ್ಟಾಡಿಸಿಕೊಂಡು ಹೋಗಿ ಕೈಗೆಸಿಕ್ಕದ್ದರಿಂದ ಬಡಿಯಲೆತ್ನಿಸುತ್ತಿದ್ದರು. ಹೊಲಗಳಿಗೆ ಯಾವ ಮುನ್ಸೂಚನೆಯನ್ನೂ ಕೊಡದೆ ನುಗ್ಗುವ ಇಲಿಗಳನ್ನು ನಿಯಂತ್ರಿಸಲು ಒಂದಷ್ಟು ದಿನ ಮುಂಗುಸಿ, ಬೆಕ್ಕುಗಳನ್ನು ಬಳಸಲು ನೋಡಿದರಾದರೂ, ಇತ್ತ ಕಡೆಯಿಂದ ಬೆಕ್ಕುಮುಂಗುಸಿಗಳನ್ನು ಹೊಲದೊಳಗೆ ಬಿಟ್ಟುಬಂದರೆ, ಅತ್ತಕಡೆಯಿಂದ ಯಾವುದೋ ಮಾಯದಲ್ಲಿ ಪುನರ್ವಸತಿಯ ಜೈಲಿನೊಳಗಿದ್ದ ಶಿಳ್ಳೆಕ್ಯಾತರು ಇವುಗಳನ್ನು ಹಿಡಿದೊಯ್ದು ಸುಟ್ಟು ತಿನ್ನಲು ಶುರುವಿಡುತ್ತಿದ್ದರು. ಅದೂಪೋಯ ಇದೂಪೋಯ ಎಂಬ ಸ್ಥಿತಿಗೆ ತಳ್ಳಲ್ಪಟ್ಟ ರೈತರು ಕೊನೆಗೆ ಚೆಂಗಾವಿಯ ಕೃಷಿಅಧಿಕಾರಿಗಳಿಗೆ ತಮ್ಮ ಹೊಲಗಳಿಗೆ ಗಂಡಾಂತರವಾಗಿರುವ ಇಲಿಗಳ ಕಾಟದಿಂದ ತಮ್ಮನ್ನು ಕಾಪಾಡುವಂತೆಯೂ ಇಲ್ಲವಾದಲ್ಲಿ ತಮ್ಮೆಲ್ಲರನ್ನೂ ಪರಿಹಾರ ಕೊಟ್ಟು ಚೆಂಗಾವಿಯಿಂದ ಗಡೀಪಾರು ಮಾಡುವಂತೆಯೂ  ದುಂಬಾಲು ಬಿದ್ದಿದ್ದರು.

ಆಧುನಿಕ ಕೃಷಿ ಉತ್ತೇಜನಕ್ಕೆಂದು ಬಿಡುಗಡೆಯಾಗಿರುವ ಅನುದಾನದ ದುಡ್ಡನ್ನು ಎಲ್ಲಾ ಮೂಲೆಯಿಂದಲೂ ಮುಂಡಾಮೋಚಿ ಉಳಿದ ಅನುದಾನಕ್ಕೆ ಏನಾದರೊಂದು ಗತಿ ಕಾಣಿಸಲು ಹೊಸ ಪಿತೂರಿಗಳಿಲ್ಲದೆ ನೊಂದುಕೊಳ್ಳುತ್ತಿದ್ದ ಕೃಷಿ ಅಧಿಕಾರಿಗಳು ಆಹಾರಧಾನ್ಯ ಸಂರಕ್ಷಣಾ ಆಂದೋಲನ ಯೋಜನೆಯಡಿಯಲ್ಲಿ ಇಲಿಟೆಂಡರು ಕರೆದಿದ್ದೂ ಆಯಿತು. ಟೆಂಡರು ತೆಗೆದುಕೊಂಡ ಆಸಾಮಿಯೊಬ್ಬ ತನಗೆ ನೇರೂಪಾಗಿ ಕಂಡ ಕರಪತ್ರ ಪ್ರಕಟಣೆ, ಪಾಷಾಣ, ಇಲಿಬೋನು, ಇಕ್ಕಳದ ಪ್ರಯೋಗವೆಲ್ಲವನ್ನೂ ಹೊಲಗಳೊಳಗೆ ಬಳಸಿ ನೋಡಿದ್ದರು. ಅವಕ್ಕೂ ಇಲಿಗಳು ಕ್ಯಾರೇ ಎನ್ನದೆ ಯಾವ ತಂತ್ರೋಪಾಯಗಳಿಗೂ ಬಗ್ಗದಂತೆ ಇಲಿಸಮೂಹ ತನ್ನ ಪಾಡಿಗೆ ತಾನು ಬೆಳೆದರೋಡೆಯ ಸಾಹಸಗಳನ್ನು ಯಾವ ಎಗ್ಗುಸಿಗ್ಗಿಲ್ಲದೆ ನಡೆಸುತ್ತಲೇ ಇದ್ದುದನ್ನು ಕಂಡ ಪರಿಣಾಮವಾಗಿ ಅಧಿಕಾರಿಗಳು ಕೃಷಿವಿಶ್ವವಿದ್ಯಾಲಯದ ಇಲಿನಿಯಂತ್ರಣ ವಿಭಾಗದ ಮುಖ್ಯಸ್ಥ ಪುಗಳೇಂದಿಯ ಮೊರೆ ಹೋಗಿದ್ದರು. ಎಲ್ಲವನ್ನೂ ಕೇಳಿಸಿಕೊಂಡ ಪುಗಳೇಂದಿಯು ಫಿಲಿಪೈನ್ಸ್‌ನಲ್ಲಿ ಈ ಬಗೆಯ ಇಲಿಕಾಟ ನಿಯಂತ್ರಣಕ್ಕೆಂದು ಅಲ್ಲಿನ ಕೃಷಿವಿಜ್ಞಾನಿಗಳು ಸಸ್ಯವೊಂದನ್ನು ಅಭಿವೃದ್ಧಿಪಡಿಸಿದಾರೆಂದೂ, ತಮ್ಮ ವಿಶಿಷ್ಟ drought-kelly-stewart-sieckವಾಸನೆಯಿಂದ ಇಲಿಗಳನ್ನು ಆಕರ್ಷಿಸುವ ಅದು ಇಲಿಯು ಆ ಗಿಡದ ಎಲೆಗಳನ್ನು ತಿನ್ನುತ್ತಿದ್ದಂತೆಯೇ ಸಾಯುತ್ತವೆಂದೂ, ಅದರ ಬೀಜಗಳನ್ನು ತರಿಸಿಕೊಂಡು ಚೆಂಗಾವಿಯ ಹೊಲದ ಅಲ್ಲಲ್ಲಿ ಬೆಳೆಸುವ ಮೂಲಕ ಇಲಿ ನಿಯಂತ್ರಿಸಬಹುದೆಂಬ ಅದ್ದೂರಿ ಐಡಿಯಾವೊಂದನ್ನು ಕೃಷಿಅಧಿಕಾರಿಗಳ ಮುಂದಿಟ್ಟಿದ್ದನು. ಚೆಂಗಾವಿ ಹುಣ್ಣಿಗೆ ಫಿಲಿಪೈನ್ಸ್ ಕನ್ನಡಿಯ ಪರಿಹಾರವು ದುಬಾರಿಯಾಗುವುದರಿಂದ ಬೇರೆ ಏನಾದರೂ ಸಸ್ತಾ ಪರಿಹಾರವನ್ನು ಆಲೋಚಿಸಿ ಸಹಕರಿಸಲು ಕೃಷಿಅಧಿಕಾರಿಗಳು ಕೇಳಿಕೊಂಡಿದ್ದರಿಂದ ಎಷ್ಟು ಯೋಚಿಸಿದರೂ ಏನೂ ತೋಚದಾಗಿ, ಕೊನೆಗೆ ಇದಕ್ಕೆ ಮದ್ದರೆಯಲು ತಕ್ಕುನಾಗಿದ್ದ ಗಿಣಿಶಾಸ್ತ್ರದ ಮಂಕಾಳಿಯನ್ನು ತನ್ನಲ್ಲಿಗೆ ಕರೆಯಿಸಿಕೊಂಡಿದ್ದನು.

ಇಲ್ಲಿಯವರೆಗೂ ಒಂದು ಹದದೊಳಗೆ ಇದ್ದ ಚೆಂಗಾವಿಯ ರೈತರ ಪೀಕಲಾಟವು ಗಿಣಿಶಾಸ್ತ್ರದ ಮಂಕಾಳಿಯ ಪ್ರವೇಶದಿಂದಾಗಿ ರೇಸು ಕುದುರೆಯೋಪಾದಿಯಲ್ಲಿ ಕಂಡಾಪಟ್ಟೆ ರಚ್ಚೆಗೆ ತಿರುಗುತ್ತದೆಂದು ಪುಗಳೇಂದಿಗಾಗಲೀ, ರೈತರಿಗಾಗಲೀ, ಉಳಿಕೆ ಚೆಂಗಾವಿಯ ಪ್ರಜೆಗಳಿಗಾಗಲಿ ಆಗ ಗೊತ್ತಾಗಲೇ ಇಲ್ಲ. ಪುನರ್ವಸತಿಯ ಕೊಡಲಿಗೆ ತಲೆಕೊಟ್ಟಿದ್ದ ಛಪ್ಪನ್ನೈವತ್ತಾರು ಬುಡಕಟ್ಟುಗಳಲ್ಲೊಂದಾಗಿದ್ದ ಗಿಣಿಶಾಸ್ತ್ರದವರ ಪೈಕಿಯವನಾಗಿದ್ದ ಮಂಕಾಳಿಯು ಕುಲವಿದ್ಯೆಯು ತಲೆಯಿಂದ ತಲೆಗೆ ದಾಟಿಕೊಳ್ಳಲು ಬೇಕಿದ್ದ ಗಿಣಿಶಾಸ್ತ್ರದ ರಹಸ್ಯಗಳನ್ನು ತನ್ನ ನೆರೆತು ಬಿಳಿಯಾಗಿದ್ದ ತಲೆಗೂದಲೊಳಗೆ ಬಚ್ಚಿಟ್ಟುಕೊಂಡು ಬದುಕುವವನಾಗಿದ್ದನು. ದೂರದ ಎರವಾಡಿಯಲ್ಲಿ ಗಿಣಿಶಾಸ್ತ್ರ ಹೇಳುವ ಅವನದ್ದೇ ಕುಲದ ಮಂದಿಗೆ ಪಳಗಿಸಿದ ಗಿಣಿಗಳನ್ನು ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ ಅವನು ಹೀಗೆ ಪಳಗಿಸಿದ ಗಿಣಿಯೊಂದಕ್ಕೆ ಮೂರರಿಂದ ಐದು ಸಾವಿರದವರೆಗೂ ಚಾರ್ಜು ಮಾಡುತ್ತಿದ್ದನು. ಶಾಸ್ತ್ರದಗಿಣಿಯು ಪಂಜರದೊಳಗಿನಿಂದ ಹೊರಗೆ ಬರಲು ಯಾವ ಸನ್ನೆ ಮಾಡಬೇಕು, ಯಾವದಿಕ್ಕಿನಿಂದ ಗಿಣಿಯ ತಲೆ ಮುಟ್ಟಿದರೆ ಅದಕ್ಕೆ ಯಾವ ಮೆಸೇಜು ರವಾನೆಯಾಗುತ್ತದೆ, ನೆಲಕ್ಕೆ ಎಷ್ಟುಸಲ ತೋರುಬೆಳಿನಿಂದ ಮಡಚಿ ಕುಟ್ಟಿ ಯಾವ ಕಾರ್ಡು ತೆಗೆಯಬೇಕೆಂಬ ಸೂಚನೆ ಕೊಡಬೇಕು, ಮನುಷ್ಯರ ಹೆಬ್ಬೆರಳಿನ ಚಲನೆಯನ್ನು ಗಿಣಿಗಳು ಗ್ರಹಿಸುವ ಬಗೆ ಇವೆಲ್ಲವನ್ನೂ ಪಾರಂಪರಿಕವಾಗಿ ಕಲಿತವನಾಗಿದ್ದ ಮಂಕಾಳಿಯು ಗಿಣಿಶಾಸ್ತ್ರವನ್ನೇ ನಂಬಿ ಬದುಕುತ್ತಿದ್ದವರಿಗೆ ಕುಲಪಿತಾಮಹನಾಗಿದ್ದನು. ಲಾಗಾಯ್ತಿನಿಂದಲೂ ಕುಲದ ಜನರಿಂದ ದೊರೆಯಂತೆ ಸಿಕ್ಕುತ್ತಿದ್ದ ಗೌರವಗಳನ್ನು ಪಡೆಯುತ್ತಿದ್ದ ಮಂಕಾಳಿಯು ತಾನು ಜಮೈಕಾ ದೇಶದ ಗಿಣಿಸಾಮ್ರಾಜ್ಯದ ದೊರೆಗಳ ಪರಂಪರೆಯ ಕೊನೆಯ ಸಂತತಿಯೆಂದು ಉಳಿದ ಗಿಣಿಶಾಸ್ತ್ರದವರೆದುರು ತವುಡು ಕುಟ್ಟುತ್ತಿದ್ದ. ಇದು ಎಷ್ಟು ನಿಜವೋ ಎಷ್ಟು ಸುಳ್ಳೋ ಎಂದು ಖಚಿತಪಡಿಸಿಕೊಳ್ಳಲು ಜಮೈಕಾದೇಶಕ್ಕೆ ಖರ್ಚಿಟ್ಟುಕೊಂಡು ಹೋಗಿ ವಿಚಾರಿಸಿಕೊಂಡು ಬರಲು ಯಾರಿಗೂ ಪುರುಸೊತ್ತು ಇರಲಿಲ್ಲವಾದ್ದರಿಂದ ಕೇಳಿದವರೂ ಹೌದೆಂದು ನಂಬುತ್ತಿದ್ದರು.

ಗಿಣಿಯಾಪಾರಕ್ಕೆ ಬೇಕಿದ್ದ ಗಿಣಿಗಳನ್ನು ಎರವಾಡಿಯ ಕಾಡುಗಳ ಬೋಗಿಮರದ ಪೊಟರೆಗಳಿಂದ ಮಂಕಾಳಿ ಹಿಡಿದು ತರುತ್ತಿದ್ದ. ಒಂದು ವತ್ತಾರೆ ಹತ್ತಿ ತುಂಬಿಸಿಟ್ಟ ಬುಟ್ಟಿಯೊಡನೆ ಎರವಾಡಿ ಕಾಡು ನುಗ್ಗುತ್ತಿದ್ದ ಅವನಿಗೆ ಗಿಣಿಗಳ ಜಗತ್ತು ಅವನ ಬೆರಳುಗಳಷ್ಟೇ ಚಿರಪರಿಚಿತವಾಗಿದ್ದವೆಂದರೂ ನಡೆಯುತ್ತದೆ ಬಿಡಿ. ವಯಸ್ಸಿರುವವರೆಗೆ ಬೋಗಿಮರಗಳನ್ನು ಚಕಪಕನೆ ಹತ್ತಿ ಪೊಟರೆಗೆ ಕೈಬಿಟ್ಟು ಸಲೀಸಾಗಿ ಗಿಣಿಗಳನ್ನು ಹಿಡಿಯುತ್ತಿದ್ದ ಮಂಕಾಳಿಗೆ ವಯಸ್ಸೆಂಬುದು ಅಮರಿಕೊಂಡಾಗಿನಿಂದ ಮರಹತ್ತಲು ನರಗಳು ಸಪೋರ್ಟು ಮಾಡುತ್ತಿರಲಿಲ್ಲವಾಗಿ, ಈಗೀಗ ಹೊಸ ಪ್ಲಾನೊಂದಕ್ಕೆ ಜೋತುಬಿದ್ದಿದ್ದನು. ಯಾವ ಪಕ್ಷಿಗಳಲ್ಲೂ ಕಾಣಬರದ ಬಹುಸಂಗಾತಿ ತೆವಲಿಗೆ ಬೀಳುವ ಹೆಣ್ಣುಗಿಣಿಗಳು ಇರೋಬರೋ ಗಂಡುಗಿಳಿಗಳಿಗೆಲ್ಲ ತಲೆಕೆಡಿಸಿ ಬುಟ್ಟಿಗೆ ಬೀಳಿಸಿಕೊಂಡು ಪೊಟರೆಯಲ್ಲಿದ್ದುಕೊಂಡೇ ಅವುಗಳ ಮೂಲಕ ತಿಂಡಿಊಟ ತರಿಸಿಕೊಳ್ಳುವುದನ್ನು ಬಲ್ಲವನಾಗಿದ್ದ ಮಂಕಾಳಿಯು ಹೆಣ್ಣುಗಿಣಿಗಳನ್ನು ಕೂಡಲು ಗಂಡುಗಿಳಿಗಳ ನಡುವೆ ಪುಟ್ಟದೊಂದು ಯುದ್ಧವೇ ನಡೆಯುತ್ತದಲ್ಲ.. ಅಂತಹ oil-paintingಟೈಮನ್ನೇ ಕಣ್ಣಿಗೆ ವಂಗೆಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ. ಆ ಟೈಮಿನಲ್ಲಿ ಬಲಶಾಲಿ ಗಂಡುಗಿಳಿಯು ಇತರೆ ಪಡಪೋಶಿ ಗಂಡುಗಿಳಿಗಳೊಡನೆ ಗುದ್ದಾಡಿಕೊಂಡು ಮಣ್ಣಲ್ಲಿ ಉರುಳಾಡುತ್ತ ಅವುಗಳ ಇಸ್ತ್ರಿ ಮಾಡಿಕೊಂಡು ಬಂದಂತಿದ್ದ ರೆಕ್ಕೆಪುಕ್ಕವನ್ನೆಲ್ಲ ಕೆಪ್ಪನೆಕದರಿಹಾಕಿ ಮಕಾಡೆ ಕೆಡವುತ್ತಲೇ ಓಡಿಹೋಗಿ ಈಗಾಗಲೇ ಸೋತು ಸುಣ್ಣವಾಗಿರುತ್ತಿದ್ದ ಗಿಣಿಗಳನ್ನೆತ್ತಿಕೊಂಡು ಹತ್ತಿ ಬುಟ್ಟಿಯೊಳಗಿಟ್ಟುಕೊಳ್ಳುತ್ತಿದ್ದ. ನಂತರ ಅವುಗಳನ್ನು ತನ್ನಣತಿಗೆ ಕುಣಿಯುವ ಮಂಗಗಳಂತೆ ಪಳಗಿಸಿಟ್ಟುಕೊಂಡು ಎಲ್ಲೆಲ್ಲಿಂದಲೋ ಬರುತ್ತಿದ್ದ ಶಾಸ್ತ್ರದವರಿಗೆ ಮಾರುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದ. ಅತ್ತ ಹೆಣ್ಣುಗಿಣಿಯೂ ಇಲ್ಲದೆ, ಪುಕ್ಕ ಕೆದರಿಕೊಂಡು ಮಂಕಾಳಿಯ ಬುಟ್ಟಿಸೇರುತ್ತಿದ್ದ ಕಾಮವನ್ನೇ ನೆತ್ತಿಗೆ ಹತ್ತಿಸಿಕೊಂಡಿರುತ್ತಿದ್ದ ಗಿಣಿಗಳೇ ಮುಂದ್ಯಾವತ್ತೋ ಒಂದು ದಿನ ಇವನಿಂದ ಕೈಬದಲಿಸಿಕೊಂಡು ಯಾವುದೋ ಊರಿನ ಮರದಕೆಳಗೆ ಇನ್ಯಾರೋ ಗಿಣಿಶಾಸ್ತ್ರದವರು ಇಡುತ್ತಿದ್ದ ಗಿಣಿಮನೆಯೊಳಗೆ ಅವರು ಹಾಕಿದ ಪುಡಿಹಣ್ಣುಗಳನ್ನು ತಿಂದುಕೊಂಡು ಶಾಸ್ತ್ರದ ಕಾರ್ಡು ಎತ್ತಿಕೊಟ್ಟು ಅಬ್ಬೇಪಾರಿಗಳಂತೆ ಹೊಟ್ಟೆ ಹೊರೆಯುತ್ತಿದ್ದವು. ಒಂದು ಗಿಣಿಬೇಟೆ ಮುಗಿದ ನಂತರ ಎರಡು ತಿಂಗಳು ಮಂಕಾಳಿ ಎರವಾಡಿಯ ಕಾಡಿನೊಳಕ್ಕೆ ಮುಖ ಹಾಕುತ್ತಿರಲಿಲ್ಲ. ಅಷ್ಟರೊಳಗೆ ಗಿಣಿಗಳು ಮೊಟ್ಟೆಯಿಟ್ಟು ಮರಿಗಳು ದೊಡ್ಡವಾಗಿ ಆಗಷ್ಟೇ ಹಾರಲು ಕಲಿತುಕೊಂಡು ತಾವಿರುವ ಕಾಡಿನ ಕಾನೂನೂ ಅರ್ಥವಾಗದೆ ನೀಲಗಿರಿ ಮರಗಳ ಬೀಜದಕಾಯಿ ತಿಂದುಕೊಂಡು ಎಲ್ಲೆಂದರಲ್ಲಿ ಪೋಲಿ ತಿರುಗುತ್ತಿದವ್ದು. ಇದೇ ಹೊಸಗಿಣಿಗಳು ಯಾಮಾರಿ ಮಂಕಾಳಿಯ ಬುಟ್ಟಿಪಾಲಾಗುತ್ತಿದ್ದವು. ಹೆಣ್ಣುಗಿಳಿಗಳನ್ನು ಕೂಡಿಕೊಳ್ಳುವ ಮುನ್ನ ಗಂಡುಗಿಳಿಗಳು ಕೊಂಬೆಕಡ್ಡಿಯೊಂದನ್ನು ಮುರಿದುಕೊಂಡು ಎಡಗಾಲಿನಲ್ಲಿ ಆ ಸೌದೆಕಡ್ಡಿಯನ್ನು ಮರದರೆಂಬೆಗೆ ಲಟಲಟನೆಂದು ಶ್ರಾವ್ಯವಾಗಿ ಬಡಿಯುತ್ತ ತಿಕ್ಕಲು ಹಿಡಿದಂತೆ ಪಂಗುಪಂಗೆಂದು ಕುಣಿಯುವುದನ್ನು ನೋಡಲು ಮಂಕಾಳಿಗೆ ಎಲ್ಲಿಲ್ಲದ ಆನಂದವಾಗುತ್ತಿತ್ತು. ಇಂತಹ ನಿರುಪದ್ರವಿ ತೀಟೆಗಳೊಂದಿಗೆ ಆನಂದಮಯ ಕಾಲಘಟ್ಟದಲ್ಲಿ ತಾನಾಯ್ತು ತನ್ನ ಗಿಣಿಗಳಾಯ್ತು ಎಂದು ಮಂಕಾಳಿ ರಾಜನಂತೆ ಮೆರೆಯುತ್ತಿದ್ದನಲ್ಲ.. ಅದೇ ಸಮಯಕ್ಕೆ ದೆಹಲಿಯಲ್ಲಿ ಪ್ರಾಣಿಪ್ರಿಯೆ ಮೇನಕಮ್ಮ ಜಡಿಯುತ್ತಿದ್ದ ಥರೇವಾರಿ ಪಿಐಎಲ್ ಕೇಸುಗಳಿಂದ ಬೇಸತ್ತ ಕೇಂದ್ರಸರ್ಕಾರವು ವನ್ಯಜೀವಿ ಸಂರಕ್ಷಣ ಕಾಯ್ದೆಯ ಶೆಡ್ಯೂಲ್ ನಾಲ್ಕಕ್ಕೆ ತಿದ್ದುಪಡಿ ತಂದಿಟ್ಟುಬಿಟ್ಟಿತ್ತು. ಅದರಂತೆ ಹಾವುಪಾವು-ಗಿಣಿಪಣಿಗಳು ಮನುಷ್ಯರು ಬೆವರುಸುರಿಸಿ ಕಷ್ಟಪಟ್ಟು ರಕ್ಷಿಸಬೇಕಾದ ವನ್ಯಜೀವಿಗಳ ಪಟ್ಟಿಗೆ ಹಾರಿಹೋಗಿದ್ದವು. ಗಿಣಿಸಾಕಣೆ ಮತ್ತವುಗಳನ್ನು ಗೂಡುಗಳೊಳಗೆ ಬಂಧಿಸಿಡುವುದು ಶಿಕ್ಷಾರ್ಹ ಅಪರಾಧವೆಂಬ ಕುಣಿಕೆಯನ್ನು ಅರಣ್ಯ ಇಲಾಖೆಯವರು ಯಾವಾಗ ಬೀದಿಯಲ್ಲಿ ಒಂದು ಟವೆಲ್ಲು ಹಾಸಿಕೊಂಡು ಗಿಣಿಗೂಡಿಟ್ಟುಕೊಂಡು ಚಿಲ್ರೆಕಾಸು ದುಡಿಯುತ್ತಿದ್ದ ಗಿಣಿಶಾಸ್ತ್ರದವರ ಕುತ್ತಿಗೆಗೆ ಬಿಗಿಯತೊಡಗಿದರೋ ಅಲ್ಲಿಂದ ಮಂಕಾಳಿಯ ಪಾರಂಪರಿಕ ಕುಲಕಸುಬು ನಾಲಿಗೆ ನೆಲಕ್ಕೆ ಹಾಕಿ ತೇಕತೊಡಗಿತ್ತು.

ಪಾರಂಪರಿಕವಾಗಿ ತನ್ನ ಕುಲದವರು ಗಿಣಿಗಳನ್ನು ನಂಬಿಕೊಂಡು ಬದುಕುತ್ತಿದ್ದ ಹೊತ್ತಿನಲ್ಲಿ ತಿಕ ತೊಳೆಯಲೂ ಕೈಯೆಟುಕದಿದ್ದ ಕಾನೂನುಕೋರರು ಇದೀಗ ತನ್ನೆದುರು ಕತ್ತಿಗಳನ್ನು ಆಡಿಸುತ್ತ ಜೊಂಯ್ಯು ಜೊಂಯ್ಯನೆ ಕುಣಿದಾಡುತ್ತಿರುವುದನ್ನು ಕೆಂಡಗಣ್ಣಿನಲ್ಲೇ ನೋಡುತ್ತಿದ್ದ ಮಂಕಾಳಿಯತ್ತ ಗಿಣಿಶಾಸ್ತ್ರದವರು ಪಳಗಿದ ಗಿಣಿಯ ಖರೀದಿಗೆ ಬರುವುದು ಕ್ರಮೇಣ ನಿಂತು ಹೋಗಿತ್ತು. ಬಿಡುಬೀಸಾಗಿ ಕಿಂಗು ಸಿಗರೇಟು ಹಿಡಿಯುತ್ತಿದ್ದ ಮಂಕಾಳಿಯ ಬೆರಳುಗಳ ಮಧ್ಯೆ ಯಂಗಟೇಸ ಬೀಡಿ ಬಂದು ಹಲ್ಲುಗಿಂಜಿಕೊಂಡು ಕುಳಿತುಕೊಂಡಿತ್ತು. abstract-art-sheepಸಿಂಗಪೂರು ದೇಶದ ಸೆರಾಂಗೂನ್ ರೋಡಿನಲ್ಲಿ ತನ್ನ ಷಡ್ಡಕನೊಬ್ಬ ಗಿಣಿಶಾಸ್ತ್ರ ಹೇಳುತ್ತ ವರ್ಷಕ್ಕೊಮ್ಮೆ ಕಂತೆಗಟ್ಟಲೆ ದುಡ್ಡು ತರುವುದನ್ನು ನೋಡಿದ್ದ ಮಂಕಾಳಿಗೆ ತಾನು ಸಿಂಗಪೂರು ದೇಶದಲ್ಲಾದರೂ ಹುಟ್ಟಬೇಕಿತ್ತು ಎಂದು ಎಷ್ಟೋಸಲ ಅನಿಸುತ್ತಿತ್ತು. ಇತ್ತ ಹೊತ್ತೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಗೆ ತಂದು ನಿಲ್ಲಿಸಲ್ಪಟ್ಟಿದ್ದ ಗಿಣಿಶಾಸ್ತ್ರದವರು ಬದುಕುವುದೇ ಹೆಚ್ಚು ಎಂಬಂಥ ಸ್ಥಿತಿಗೆ ತಳ್ಳಲ್ಪಟ್ಟು ಕೆಲವರು ಬೇರೇನೂ ಕೆಲಸ ಗೊತ್ತಿಲ್ಲದೆ ಮನೆಗಳ್ಳತನಕ್ಕೂ ಇಳಿದು ಜೈಲುಪಾಲಾದ ಘಟನೆಗಳೂ ನಡೆಯುತ್ತಿದ್ದವು. ಇಂಥಹ ಸ್ಥಿತಿಯಲ್ಲಿ ಗಿಣಿವ್ಯಾಪಾರವೇ ಇಲ್ಲದೆ ನೊಣ ಹೊಡೆಯುವ ಫುಲ್‌ಟೈಮ್ ಉದ್ಯೋಗಕ್ಕೆ ನೂಕಲ್ಪಟ್ಟ ಮಂಕಾಳಿಯು ಆಗಿದ್ದಾಗಲೆಂದು ಒಂದುದಿನ ಎದ್ದುಹೋದವನೇ ಗೋಳಿಕಾವಿನ ಗದ್ದೆಗಳಲ್ಲಿ ಓಡಾಡಿಕೊಂಡಿದ್ದ ಬೆಳ್ಳಿಲಿ, ಹೆಗ್ಗಣಗಳನ್ನು ಹಿಡಿದು ತಂದು ತನ್ನ ಗಿಣಿತರಬೇತು ಶಾಸ್ತ್ರವೆಲ್ಲವನ್ನೂ ಇವುಗಳ ಮೇಲೆ ಪ್ರಯೋಗಿಸಲು ಶುರುವಿಟ್ಟಿದ್ದ. ಒಂದೆರಡು ತಿಂಗಳುಗಳಲ್ಲಿಯೇ ಅವುಗಳ ಗುಣಸ್ವಭಾವ, ಜೈವಿಕಬದುಕು, ಇತ್ಯಾದಿಯೆಲ್ಲವನ್ನು ತಿಳಿದುಕೊಂಡು ಪಳಗಿದ ನಂತರ ಅವುಗಳನ್ನು ಬೆರಳಸದ್ದಿನ ಸೂಚನೆಗೆ ಕಾರ್ಡೆತ್ತಿಕೊಡುವಂತೆ ತಯಾರಿಸಿಟ್ಟುಕೊಂಡು ಹಳೇಗಿರಾಕಿಗಳನ್ನು ಹುಡುಕುಡುಕಿ ಅವುಗಳನ್ನು ಕಡಿಮೆರೇಟಿಗೆ ಮಾರಿ ‘ಗಿಣಿಶಾಸ್ತ್ರ ಹೋದ್ರೆ ಶ್ಯಾಟ ಒಂದೋಯ್ತು ಇಲಿಶಾಸ್ತ್ರ ಹೇಳ್ರೋ’ ಎಂದು ಪಳಗಿದ ಇಲಿಗಳ ಮೂಲಕ ಕಾರ್ಡುಗಳನ್ನು ತೆಗೆಸಿ ನಿರೂಪಿಸಿದ್ದ. ಗಿಣಿಶಾಸ್ತ್ರಕ್ಕೆ 20 ರುಪಾಯಿಯ ಬದಲು ಮೂಷಿಕಶಾಸ್ತ್ರಕ್ಕೆ 30 ರುಪಾಯಿ ಕೇಳಬಹುದು ಎಂಬ ಐನಾತಿ ಐಡಿಯಾವನ್ನೂ ಅವರಿಗೆ ತುಂಬಿಸಿ ತನ್ನ ಕೆಲಸಕ್ಕೆ ಮಾರುಕಟ್ಟೆಯನ್ನು ಕುದುರಿಸಿಕೊಂಡು ಬಿದ್ದೇಹೋಗಿದ್ದ ಅವನ ಬದುಕನ್ನು ಮತ್ತೆ ಎತ್ತಿ ನಿಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.

ಇವೆಲ್ಲವೂ ನಡೆದಿದ್ದ ಹೊತ್ತಿನಲ್ಲೇ ಚೆಂಗಾವಿಯೊಳಗೆ ಇಲಿಕಾಟವೂ ಅಲಲಲಲ ಎಂದು ಎದ್ದು ಕುಳಿತುಬಿಟ್ಟಿತ್ತು. ಇತ್ತ ಕೃಷಿವಿಶ್ವವಿದ್ಯಾಲಯದ ಇಲಿ ನಿಯಂತ್ರಣ ವಿಭಾಗದ ಮುಖ್ಯಸ್ಥ ಪುಗಳೇಂದಿಯು ಕೊಟ್ಟ ಫಿಲಿಪೈನ್ಸ್ ಗಿಡದ ಪರಿಹಾರವನ್ನು ಕೃಷಿ ಅಧಿಕಾರಿಗಳು ಮೂಸುನೋಡದ ಪರಿಣಾಮವಾಗಿ, ಚೆಂಗಾವಿಯ ಇಲಿಕಾಟಕ್ಕೆ ಗೋಡೆಕಟ್ಟುವುದು ಹೇಗೆಂದು ಪುಗಳೇಂದಿಯು ವಿಪರೀತವಾಗಿ ತಲೆಕೆಡಿಸಿಕೊಂಡಿದ್ದನು. ಅದೇ ಸಮಯಕ್ಕೆ ಇಲಿಗಳನ್ನು ಪಳಗಿಸುವಲ್ಲಿ ಎತ್ತಿದಕೈನವನಾಗಿದ್ದ ಮಂಕಾಳಿಯ ಬಗ್ಗೆ ಇವನ ಕಿವಿಗೆ horror_rainy_artಬಿದ್ದು ಅವನೊಟ್ಟಿಗೆ ಮಾತನಾಡಲಾಗಿ ಇಲಿಹೆಗ್ಗಣಗಳಂತಹ ಪ್ರಾಣಿಗಳ ಜೈವಿಕವಿವರಗಳನ್ನು ಅಮೂಲಾಗ್ರವಾಗಿ ಅರೆದುಕುಡಿದಂತಿದ್ದ ಮಂಕಾಳಿಯೇ ಈ ಸಮಸ್ಯೆಪರಿಹಾರಕ್ಕೆ ತಕ್ಕುನಾದವನಾಗಿ ಅವನನ್ನು ಕೃಷಿಅಧಿಕಾರಿಗಳ ಕೊರಳಿಗೆ ಗಂಟುಹಾಕಿ ಕೈತೊಳೆದುಕೊಂಡಿದ್ದನು. ಅದರಂತೆ ಚೆಂಗಾವಿಯ ಗದ್ದೆಗಳಲ್ಲಿ ಬಾವುಟ ನೆಟ್ಟಿರುವ ಇಲಿಗಳನ್ನು ನಿಯಂತ್ರಿಸಲು ಮಂಕಾಳಿಗೆ ಅರ್ಜಿ ಹಾಕದೆಯೂ ಸರ್ಕಾರಿ ಟೆಂಡರು ಸಿಕ್ಕಿತ್ತು. ಗದ್ದೆಗಿಷ್ಟು ರೇಟು ಎಂದು ಮಾತನಾಡಿಕೊಂಡ ಮಂಕಾಳಿಯು ನಂತರ ತನ್ನ ಇಲಿಶಿಕಾರಿಗೆ ಮೊದಲಿಟ್ಟಿದ್ದ. ಮೊದಲಿಗೆ ಗದ್ದೆಯ ಬದುಗಳು ಮತ್ತು ದೂರದ ಮರದ ಬುಡಗಳಲ್ಲಿ ಇರಬಹುದಾದ ಇಲಿಬಿಲಗಳನ್ನು ಪತ್ತೆಹಚ್ಚುತ್ತಿದ್ದ ಅವನು, ನಂತರ ಒಂದೊಂದೇ ಬಿಲವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಇಲಿಗಳು ಪ್ರವೇಶಕ್ಕೆಂದು ಒಂದು ಮುಖ್ಯ ಬಿಲದಬಾಗಿಲನ್ನು ಇಟ್ಟಿದ್ದರೆ, ಅಪಾಯದ ಸಂದರ್ಭದಲ್ಲಿ ಪರಾರಿಯಾಗಲು ಐದಾರು ಕಡೆಗಳಲ್ಲಿ ನಿರ್ಗಮನ ಬಾಗಿಲುಗಳನ್ನು ತೋಡಿಕೊಂಡಿದ್ದವು. ಒಂದೇಟಿಗೆ ನೋಡಿದರೆ ಐದಾರು ಇಲಿಬಿಲಗಳಂತೆ ಕಾಣುತ್ತಿದ್ದ ಅವುಗಳಲ್ಲಿ ಬಿಲದ ಪ್ರವೇಶದ್ವಾರವನ್ನು ಇಲಿಹೆಜ್ಜೆಗಳ ಗುರುತಿನ ಮೇಲೆ ಪತ್ತೆಹಚ್ಚುತ್ತಿದ್ದ. ಅದೊಂದನ್ನು ಹೊರತುಪಡಿಸಿ ಉಳಿದ ಎಲ್ಲ ತುರ್ತು ನಿರ್ಗಮನ ಬಿಲದ್ವಾರಗಳನ್ನು ಮಣ್ಣಲ್ಲಿ ಮುಚ್ಚಿ ತಪ್ಪಿಸಿಕೊಳ್ಳಲು ಒಂದೇದ್ವಾರವನ್ನು ಬಿಟ್ಟವನೇ ಒಂದು ಮಡಕೆಯ ತಳಕ್ಕೆ ಎಂಟಾಣೆಗಾತ್ರದ ತೂತು ಕೊರೆದು ಮಡಕೆಯೊಳಗೆ ನೀಲಗಿರಿಮರದ ಎಣ್ಣೆಭರಿತ ಎಲೆಪುಳ್ಳೆಗಳನ್ನು ತುಂಬಿ ಬೆಂಕಿಯಿಟ್ಟು ಹೊಗೆಯೆಬ್ಬಿಸುತ್ತಿದ್ದನು. ಮಡಕೆಯ ದೊಡ್ಡಬಾಯನ್ನು ಇಲಿಬಿಲಕ್ಕೆ ಅಡ್ಡಲಾಗಿ ಮುಚ್ಚಿ ಮಡಕೆಯ ತಳಕ್ಕಿದ್ದ ತೂತಿನಿಂದ ಉಫ್ಫು ಉಫ್ಫೆಂದು ಆ ಹೊಗೆಯನ್ನು ಬಿಲದ ಅಭಿಮುಖವಾಗಿ ಊದಿಊದಿ ಇಲಿಗಳನ್ನು ಕುಸ್ತಿಗೆ ಕರೆಯುತ್ತಿದ್ದ. ಇದೇನೋ ವರಾತವಾಗಿದೆಯಲ್ಲ ಎಂದು ನಿರ್ಗಮನ ದ್ವಾರಗಳತ್ತ ಓಡುತ್ತಿದ್ದ ಬಿಲದೊಳಗಿನ ಇಲಿಗಳಿಗೆ ಯಾವ ತುರ್ತು ನಿರ್ಗಮನವೂ ಲಭ್ಯವಿಲ್ಲದೆ ಹೊಗೆಗೆ ಸಿಕ್ಕೇ ಒಂದಷ್ಟು ಇಲಿಗಳು ಸಾಯುತ್ತಿದ್ದವು. ಹೊಗೆಯ ನಡುವೆಯೂ ಬದುಕಿ ತೊಡೆತಟ್ಟಿಕೊಂಡು ಪ್ರವೇಶದ್ವಾರದ ಮೂಲಕವೇ ಪುಳಪುಳನೆ ಓಡಿಬರುತ್ತಿದ್ದ ಇಲಿಗಳನ್ನು ಕುಕ್ಕರುಗಾಲಿನಲ್ಲಿ ಕುಳಿತು ಕಾಯುತ್ತಿದ್ದ ಮಂಕಾಳಿಯು ಹಲಗೆಯೊಂದರಿಂದ ಭೈಡುಭೈಡು ಚಚ್ಚುತ್ತಿದ್ದ. ಬಿದ್ದ ಏಟುಗಳಿಗೆ ಸತ್ತ ಇಲಿಗಳನ್ನು ಒಂದೆಡೆ ರಾಶಿ ಹಾಕಿಕೊಂಡು ಮತ್ತೆ ಹಲಗೆ ಹಿಡಿದು ಬಿಲನೋಡುತ್ತ ಕೂರುತ್ತಿದ್ದ. ಬಿಲದೊಳಗಿನ ಸೈನ್ಯವೆಲ್ಲ ಖಾಲಿಯಾದ ಮೇಲೆ ಬಿಲದ ಎಲ್ಲ ಬಾಗಿಲುಗಳೂ ಹಬ್ಬಿದ ಕಡೆಯೆಲ್ಲ ನೆಲದ ಮೇಲೆ ಕಡ್ಡಿಯಲ್ಲಿ ಗೀಟುಹಾಕುತ್ತಿದ್ದ ಅವನು ಗೀರುಹೋದ ಕಡೆಯಲ್ಲೆಲ್ಲ ನಾಜೂಕಾಗಿ ಪಿಕಾಸಿಯಲ್ಲಿ ಅಗೆದು ಇಲಿಬಿಲದ ನಕ್ಷೆಯನ್ನು ಕಲ್ಲಂಗಡಿಯನ್ನು ಎರಡು ಹೋಳುಮಾಡಿದಂತೆ ಬಿಡಿಸಿ, ಇಲಿಗಳು ತನ್ನ ಬಿಲದೊಳಗೇ ಇರುವ ಪ್ರತ್ಯೇಕ ಉಗ್ರಾಣಗಳಲ್ಲಿ ಶೇಖರಿಸಿಟ್ಟುಕೊಂಡಿದ್ದ ಹಾಲುಭರಿತ ಧಾನ್ಯ,ಭತ್ತ,ತೆನೆಕಾಳುಗಳನ್ನು ಆಯ್ದು ಚೀಲಕ್ಕೆ ತುಂಬಿಕೊಂಡು ಸತ್ತ ಇಲಿಗಳ ಬಾಲಗಳ ಗೊಂಚಲು ಹಿಡಿದು ಇನ್ನೊಂದು ಬಿಲವನ್ನು ಹುಡುಕುತ್ತ ಹೊರಟುಬಿಡುತ್ತಿದ್ದನು. ಬಸುರಿಬಾಣಂತಿ ಹೆಣ್ಣುಇಲಿಗಳಿಗೆಂದೇ ಒಂದು ಒಳಕೋಣೆ, ಓಡಾಡಲೆಂದು ಕಾಲುದಾರಿಯಂತಹ ಸುರಂಗ, ಯಾವ ಕಾಲಕ್ಕೂ ಧಾನ್ಯಗಳು ಕಡೆದಂತೆ ವ್ಯವಸ್ಥೆಗೊಳಿಸಿದ ಬಿಲದೊಳಗಿನ ಉಗ್ರಾಣಕ್ಕೆ ಸೆಪರೇಟು ವ್ಯವಸ್ಥೆಯಿರುವ ಇಂತಹ ನೆಲದಗೂಡುಗಳನ್ನು ಕಟ್ಟಿಕೊಂಡಿದ್ದ ಇಲಿಗಳು ಮಂಕಾಳಿಗೆ ಗಿಣಿಗಳಿರಲಿ, ಮನುಷ್ಯರಿಗಿಂತ ದೊಡ್ಡಜೀವಗಳಂತೆ ಅಚ್ಚರಿ ತಂದಿದ್ದವು.

ಹೀಗೆ ಇಲಿಬಿಲದೊಳಗಿನ ಡಿಪೋಗಳಿಂದ ಮಂಕಾಳಿ ಶೇಖರಿಸುತ್ತಿದ್ದ ರೇಷನ್ನೇ ದಿನಕ್ಕೆ 7ರಿಂದ 8 ಕೆಜಿಯಷ್ಟು ಆಗುತ್ತಿತ್ತು. ಸತ್ತ ಇಲಿಗಳನ್ನು ಇರುಳರ ಜನಗಳಿಗೆ ಕೊಟ್ಟು ಅವನಪಾಡಿಗವನು ನಡೆದುಬಿಡುತ್ತಿದ್ದನು. ಬಾಯಿಚಪ್ಪರಿಸಿಕೊಂಡು ಇಲಿತಿನ್ನುವುದನ್ನು ಕಾಲಾನುಕಾಲದಿಂದ ಕಲಿತಿದ್ದ ಇರುಳರು ಮಂಕಾಳಿ ಕೊಟ್ಟುಹೋದ ಇಲಿಗಳನ್ನು ಕೆಂಡದ ಮೇಲೆ ಸುಟ್ಟು ಅದರ ಚರ್ಮದ ಕೂದಲನ್ನು ಸುಟ್ಟು ಕ್ರುಂಕ್ರುಂ ಎನ್ನುವಂತೆ ಬೇಯ್ದಿರುತ್ತಿದ್ದ ಇಲಿಗಳ ಕಾಲನ್ನು ಆಸೆಯಿಂದ ತಿಂದು ಕೋಳಿಕುಯ್ದಂತೆ ಇಲಿಯನ್ನು ಕುಯ್ದು ಸಾರು ಮಾಡಿಕೊಂಡು ತಿನ್ನುತ್ತಿದ್ದರು. ಇಲಿಶಿಕಾರಿಗೆ ದುಡ್ಡಿಗೆ ದುಡ್ಡು, ರೇಷನ್ನಿಗೆ ರೇಷನ್ನು ಸತ್ತ ಇಲಿಗಳು ಇರುಳರ ಹೊಟ್ಟೆಗೆಂದು ಸಿಕ್ಕಿದ್ದ ಮಜಬೂತಾದ ಕೆಲಸವನ್ನು ಅವನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಚೆಂಗಾವಿಯ ರೈತರಿಗೆ ಕಿಂದರಿಜೋಗಿಯೂ ಆಗಿ ರೂಪಾಂತರಗೊಂಡಿದ್ದನು. ಒಮ್ಮೊಮ್ಮೆ ತಮ್ಮ ಬದುಕನ್ನೇ ತುಂಡರಿಸಿ ತಿನ್ನುತ್ತಿರುವ ಇಲಿಗಳ ಶಿಕಾರಿಗೆಂದು ದೇವರೇ ಏನಾದರೂ ಮಂಕಾಳಿಯ ಕೈಗೆ ತೂತುಮಡಕೆ ಕೊಟ್ಟು ಕಳಿಸಿದನೇನೋ ಎಂದು ಚೆಂಗಾವಿಯ ರೈತರು ಕಕ್ಕಾಬಿಕ್ಕಿಯಾಗುವಷ್ಟರ ಮಟ್ಟಿಗೆ ಮಂಕಾಳಿ ರಾತ್ರೋರಾತ್ರಿ ಇಲಿಶಿಕಾರಿಗೆ ಫೇಮಸ್ಸಾಗಿ ಹೋಗಿದ್ದನು.

ಎಲ್ಲವೂ ನೆಟ್ಟಗೆ ನಡೆಯುತ್ತಿದ್ದ ಹೊತ್ತಿನಲ್ಲಿಯೇ ಮಂಕಾಳಿಗೆ ಇದು ತನ್ನೊಬ್ಬನಿಂದ ಆಗುವ ಕೆಲಸವಲ್ಲವೆಂಬುದು ಮನದಟ್ಟಾಗಲು ತುಂಬ ದಿನಗಳೇನೂ ಹಿಡಿಯಲಿಲ್ಲ. ಅದಕ್ಕೆಂದು ಇರುವುದನ್ನು ಬಿಟ್ಟು kt_shivaprasad-art-familyಬೇರೊಂದು ಹಿಡಿದು ಬದುಕಲು ಶುರುವಿಟ್ಟಿದ್ದ ಹಾವುಗೊಲ್ಲರು, ದೊಂಬರು, ಕೊರಚರು ಕೊರಮರಿತ್ಯಾದಿಯೆಲ್ಲರ ನಡುವೆ ಏನೂ ಮಾಡಲಾಗದೆ ನಿಂತಲ್ಲೇ ನಿಂತವರೂ ಇದ್ದರು. ಅದರಲ್ಲಿ ಇರುಳರ ನಂಬೀಸ ಮತ್ತವನ ಜನ, ಗೊತ್ತಿದ್ದ ಕಸುಬನ್ನು ಪ್ರಯೋಗಿಸಲು ಎಜುಕೇಟೆಡ್ಡು ಬೇಕೂಫರು ಕಟ್ಟಿದ್ದ ಗೋಡೆ ಹಾರುವ ಯಾವ ವಿದ್ಯೆಯೂ ಗೊತ್ತಿಲ್ಲದೆ ತಳಮಳಿಸುತ್ತಿದ್ದ ಹಾವಾಡಿಗರ ರಫೀಕು ಮತ್ತವನ ಜನರನ್ನು ಕಂಡಾಗಲೆಲ್ಲ ಮಂಕಾಳಿಗೆ ಅವರ ಹಸಿವು ತುಂಬಿದ ಮುಖಗಳು ಆತ್ಮವನ್ನೇ ಇರಿಯುವ ಚೂರಿಗಳಂತೆ ಕಾಣುತ್ತಿದ್ದವು. ಅವರೆಲ್ಲರನ್ನೂ ಒಂದೆಡೆ ಕಲೆಹಾಕಿ ಹಿಂಗಿಂಗೆ ಹಿಂಗಿಂಗೆ ಇಲಿ ಹಿಡಿಯಕ್ಕೆ ಬತ್ತಿರೇನ್ರಪ್ಪ ಹೊಟ್ಟೆಗೂ ಕಾಸಿಗೂ ಮೋಸ ಇಲ್ಲ ಎಂದ ಕೂಡಲೇ ಸರ್ವಾನುಮತದಿಂದ ಒಪ್ಪಿಕೊಂಡ ಅವರು ಮಂಕಾಳಿಯ ಇಲಿ ನಿಯಂತ್ರಣ ಪಡೆಯ ಸದಸ್ಯರಾಗಿ ಸೇರ್ಪಡೆಗೊಂಡಿದ್ದರು. ಬರುವ ದುಡ್ಡನ್ನು ಕೂಡಿಟ್ಟು ಕೈಗಿಡಲು ಮಂಕಾಳಿಗೆ ಹುಟ್ಟಿದ ಯಾವ ಪಿಳ್ಳೆಪಿಸುಗಗಳೂ ಇರಲೇ ಇಲ್ಲವಾದ್ದರಿಂದ ಇಲ್ಲದವರೊಡನೆ ಹಂಚಿಕೊಂಡು ತಿನ್ನುವ ಸಮಾಜವಾದಕ್ಕೆ ಅವನು ತಲೆಬಗ್ಗಿಸಿದ್ದನು. ಮಂಕಾಳಿಯ ಮೂಲಕ ಇಲಿಬೇಟೆಯ ವಿದ್ಯೆಯನ್ನು ಯಶಸ್ವಿಯಾಗಿ ಮುಗಿಸಿದ ನಂಬೀಸ ಮತ್ತು ರಫೀಕನ ಜನಗಳು ಕೆಲಸಕ್ಕೆ ಸಂಬಳವನ್ನೂ, ಇಲಿಬಿಲದ ರೇಷನ್ನನ್ನೂ, ಇಲಿಮಾಂಸವನ್ನೂ ಪಡೆಯುವಂತಾದರು. ಇಷ್ಟರಲ್ಲೇ ಚೆಂಗಾವಿಯ ಯಶಸ್ವಿ ಇಲಿನಿಯಂತ್ರಣದ ಕಥೆಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಸುತ್ತಮುತ್ತಲೂರುಗಳಿಗೂ ಎಗರಿಕೊಂಡ ಪರಿಣಾಮವಾಗಿ ಆ ಊರುಗಳ ಕೃಷಿ ವಿಭಾಗೀಯ ಕಚೇರಿಗಳಿಗೂ ಅಲ್ಲಲ್ಲಿನ ರೈತರು ಚೆಂಗಾವಿಯ ಇಲಿಪ್ರಯೋಗವನ್ನು ತಮ್ಮ ಹೊಲಗಳ ಮೇಲೂ ಪ್ರಯೋಗಿಸಬೇಕೆಂಬ ಒತ್ತಡ ಕಿತ್ತುಕೊಂಡಿತ್ತು. ಕೃಷಿ ವಿಶ್ವವಿದ್ಯಾಲಯದ ಇಲಿ ಸಂಶೋಧಕ ಪುಗಳೇಂದಿಯ ಶಿಫಾರಸ್ಸಿನಂತೆ ಮಂಕಾಳಿಯ ತಂಡಕ್ಕೆ ಬೇರೆ ಊರುಗಳ ಇಲಿಟೆಂಡರೂ ಸಿಕ್ಕು ಚೆಂಗಾವಿಯಲ್ಲಿ ಒಂದಷ್ಟು ತಿಂಗಳ ಕೆಳಗೆ ಎಡಗಾಲ ಚಪ್ಪಲಿಯೋಪಾದಿಯಲ್ಲಿ ನೋಡಲ್ಪಡುತ್ತಿದ್ದ ಪುನರ್ವಸಿತರು ಇದ್ದಕ್ಕಿದ್ದಂತೆ ಗದ್ದೆಇಲಿಗಳನ್ನು ಠಣ್ಣನೆ ಮಾಯ ಮಾಡುವ ಶಕ್ತಿಯಿರುವ ಮಂತ್ರದ ಮಡಕೆಯಿಟ್ಟುಕೊಂಡಿರುವ ಕಲ್ಲುದೇವರಂತೆ ನೋಡಲ್ಪಡತೊಡಗಿದರು.

ಆವತ್ತಿನಿಂದ ಮಂಕಾಳಿಯ ಇಲಿಹರಣ ಪಡೆಯ ಸದಸ್ಯರು ಇಲಿಯಬಾಲದ ಗೊಂಚಲುಗಳನ್ನು ಹಿಡಿದು ಖುಷಿಖುಷಿಯಿಂದ ಓಡಾಡುವುದನ್ನು ಮಂಕಾಳಿ ಎಷ್ಟು ಹೆಮ್ಮೆಯಿಂದ ನೋಡುತ್ತಿದ್ದನೆಂದರೆ, ಅವನ ಗಿಣಿಯಾಪಾರ, ಕುಲಪರಂಪರೆಯ ಘನತೆ, ಜಮೈಕಾದೇಶದ ಗಿಣಿಸಾಮ್ರಾಜ್ಯದ ಕೊನೆಯ ಸಂತತಿಯೆಂಬ ಹೆಮ್ಮೆ.. ಇವೆಲ್ಲವುಗಳಿಗಿಂತಲೂ, ಕೆಲಸ ಮುಗಿದ ಮೇಲೆ ರಾತ್ರೆಹೊತ್ತು ಇರುಳರ ನಂಬೀಸನು ಬೇಯಿಸಿಹಾಕುವ ಇಲಿಮಾಂಸದೂಟದ ಪರಿಮಳವೇ ದೊಡ್ಡದೆಂದು ಕಂಡಿತ್ತು. ಆದರೆ ಈಗ ದಕ್ಕಿಸಿಕೊಂಡಿರುವ ಕೆಲಸ ಮತ್ತು ಘನತೆಯು ಬಹಳಕಾಲ ಉಳಿಯುವಂಥದಲ್ಲ, ಇಲಿಕಾಟ ಇರುವತನಕ ಮಾತ್ರ ತಮ್ಮ ಪ್ರಾಮುಖ್ಯತೆಗೆ ಅಸ್ತಿತ್ವವಿದ್ದು ಒಂದೊಮ್ಮೆ ಇಲಿವರಾತವು ಮುಗಿಯಿತೆಂದಾದಾಗ ತಮ್ಮ ಕತೆಯೂ ಮುಗಿಯಲಿದೆಯೆಂಬುದನ್ನು ಎಲ್ಲರಿಗಿಂತ ಮೊದಲು ಅರ್ಥ ಮಾಡಿಕೊಂಡಿದ್ದ ಮಂಕಾಳಿಯು ಅದಕ್ಕೂ ಒಂದು ಆಪತ್ಕಾಲದ ಪ್ಲಾನು ಹೊಸೆದುಕೊಂಡಿದ್ದನು. ಅದರಂತೆ ತಾವು ಎಲ್ಲಿಂದ ಕಸುಬು ಶುರು ಮಾಡಿದ್ದರೋ ಕರೆಕ್ಟಾಗಿ ಅದೇ suicide-paintingಊರಿನ ಗದ್ದೆಗಳಲ್ಲಿ ಕಟಾವಿಗಿಂತ ಮುಂಚೆ ಇಲಿಗಳನ್ನು ಅವನೇ ಬಿಟ್ಟು ಇಲಿವರಾತವು ಮತ್ತೆ ಹುಟ್ಟಿಕೊಳ್ಳುವಂತೆ ವ್ಯವಸ್ಥೆ ಮಾಡಿಕೊಂಡಿದ್ದನು. ಅತ್ತ ಒಂದೂರಿನಲ್ಲಿ ಕೆಲಸ ಮುಗಿಯುತ್ತಿದಂತೆ ಇನ್ನೊಂದೂರಿಗೆ ಕರೆ ಬರುತ್ತಿತ್ತಲ್ಲ, ಅದೇ ಟೈಮಿಗೆ ಈಗಾಗಲೇ ಹಿಂದೆಯೇ ಬಗೆಹರಿಸಿದ್ದ ಹೊಲಗಳಲ್ಲಿ ಮತ್ತೆ ಇಲಿರೋಧನೆ ಶುರುವಾಗುವಂತೆ ನೋಡಿಕೊಳ್ಳಿಕೊಳ್ಳುತ್ತಿದ್ದ ಅವನು, ಕೆಲಸದ ಬೇಡಿಕೆ ಮತ್ತು ಪೂರೈಕೆ ಎರಡೂ ಸಮಾನಾಂತರರೇಖೆಯಲ್ಲೇ ಎದುರುಬದುರು ಚಲಿಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದ. ರೈತರಿಗೆ ಮತ್ತು ಕೃಷಿಅಧಿಕಾರಿಗಳಿಗೆ ಯಾವತ್ತೂ ಬೇಕಾದ ಆಪದ್ಭಾಂಧವರಾಗಿ ತನ್ನನ್ನು ಮತ್ತು ತನ್ನ ತಂಡವನ್ನು ಕಟ್ಟಿಕೊಂಡಿದ್ದಕ್ಕೆ ಅವನೊಳಗೆ ತಾವೆಲ್ಲಿ ಅಪ್ರಸ್ತುತರಾಗುತ್ತೇವೋ ಎಂಬ ದೂರದ ಭಯವೂ ಕಾರಣವಾಗಿತ್ತು. ಒಂದೆಡೆ ಸಮಸ್ಯೆ ಇನ್ನೊಂದೆಡೆ ಪರಿಹಾರವೆಂಬ ಎರಡನ್ನೂ ಜೀವಂತವಿರಿಸಿಕೊಳ್ಳುವ ಕಿರಾತಕ ಪ್ಲಾನುಗಳನ್ನು ಅತ್ಯಂತ ಯಶಸ್ವಿಯಾಗಿಯೇ ನಡೆಸಿಕೊಂಡು ಬಂದ ಮಂಕಾಳಿಯ ಬಗ್ಗೆ ಮೊದಲ ಡೌಟು ಹುಟ್ಟಿದ್ದೇ ಪುಗಳೇಂದಿಗೆ.

ಒಂದೆಡೆಯಲ್ಲಿ ಕಂಟ್ರೋಲಿಗೆ ಬರುತ್ತಿದ್ದ ಇಲಿವರಾತವು ಮತ್ತೊಂದೆಡೆ ಭುಗಿಲೆದ್ದು, ಅದು ಮುಗಿಯುವುದರೊಳಗೆ ಮತ್ತೆ ಮೂಲಸಮಸ್ಯೆಯು ಅದರ ಅಷ್ಟೂ ಪ್ರಬಲತೆಯೊಟ್ಟಿಗೆ ಹಳೆವೂರುಗಳಲ್ಲಿ ತೊಡೆತಟ್ಟಿಕೊಂಡು ಎದ್ದು ಕುಳಿತುಕೊಳ್ಳುವುದರ ಹಿಂದೆ ಏನೋ ಇರುವಂತಿದೆಯಲ್ಲ ಎಂಬುದರ ವಾಸನೆ ಹಿಡಿದ ಪುಗಳೇಂದಿಯು ಮಂಕಾಳಿಯನ್ನು ಒಮ್ಮೆ ಕರೆಸಿಕೊಂಡು ಈ ಬಗ್ಗೆ ವಿಚಾರಿಸಿದ್ದನು.  ಮಂಕಾಳಿಯ ಬಳಿಯಿಂದ ಅವನ ಖತರನಾಕು ತಂತ್ರವನ್ನು ಬಾಯಿಬಿಡಿಸಿಕೊಂಡ ಪುಗಳೇಂದಿಗೆ ಇದನ್ನು ಯಾವ ನೈತಿಕೆತೆಯ ತಕ್ಕಡಿಯಲ್ಲಿಟ್ಟು ತೂಗುವುದೆಂಬ ಗೊಂದಲವೆದ್ದಿದ್ದು ನಿಜ. ದೆಹಲಿಯ ಮೇನಕಮ್ಮನ ಪ್ರಾಣಿಪ್ರೇಮವು ಪ್ರಾಣಿಪಕ್ಷಿಗಳನ್ನೇ ಪರಂಪರಾನುಗತವಾಗಿ ನಂಬಿಕೊಂಡು ಬದುಕುತ್ತಿರುವ ಈ ದೇಶದ ಸಾವಿರಗಟ್ಟಲೆ ಸಮುದಾಯಗಳನ್ನು ಬಲಿಹಾಕುವುದು ನೈತಿಕತೆಯೋ, ರೈತರು ಮತ್ತು ಸರ್ಕಾರಿ ಅಧಿಕಾರಿಗಳ ಕಣ್ಣಿಗೆ ಒಂದೇಸಲ ಮಣ್ಣೆರಚುತ್ತಿರುವ ಮಂಕಾಳಿಯ ಇಲಿನಿಯಂತ್ರಣ ಯೋಜನೆಯ ತಂತ್ರೋಪಾಯಗಳು ನೈತಿಕತೆಯೋ ಎಂಬ ಬಗ್ಗೆ ಗೊಂದಲಕ್ಕೆ ಬಿದ್ದ ಅವನಿಗೆ ಯಾವುದು ಅರ್ಥವಾಗದಿದ್ದರೂ ಅಕ್ಷರ-ಪುಸ್ತಕಗಳನ್ನು ಹರಿದುತಿಂದು ಅದನ್ನೇ ಉಸಿರಾಡುವ ಬುದ್ದಿವಂತರು ಮಂಕಾಳಿಯೆದುರು ಇಟ್ಟ ಬೋನಿಗೆ.. ಯಾವ ಸುಳಿವೂ ಇಲ್ಲದೇ, ಅವರೇ ಬಿದ್ದಿದ್ದಾರಲ್ಲ ಎಂಬುದಂತೂ ಸ್ಪಷ್ಟವಾಗಿ ಅರ್ಥವಾಗಿತ್ತು.

***

ಹೆಸರಾಯಿತು ಕರ್ನಾಟಕ.. ಉಸಿರಾಗಲಿಲ್ಲ ಕನ್ನಡ..!


– ಡಾ.ಎಸ್.ಬಿ. ಜೋಗುರ


 

 

ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಾಪದಂ ವಸು
ಧಾವಲಯವಿಲೀನ ವಿಶದ ವಿಷಯ ವಿಶೇಷಂ

ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ವಿಸ್ತರಿಸಿತ್ತು ಎನ್ನುವುದನ್ನು ಕವಿ ನೃಪತುಂಗ ವರ್ಣಿಸಿರುವ ಹಾಗೆ ಚಾರಿತ್ರಿಕವಾಗಿ ಮಾತನಾಡುವದಾದರೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂದ್ರಪ್ರದೇಶ ಮುಂತಾದ ರಾಜ್ಯಗಳ ಗಡಿ ಭಾಗಗಳಲ್ಲಿ ಕನ್ನಡದ ಸೀಮೆಗಳಿರುವುದು ವಿಧಿತವಾಗುತ್ತದೆ. ಅದರ ಪರಿಣಾಮವಾಗಿಯೇ ನಾವು ಇವತ್ತಿನವರೆಗೂ ಕನ್ನಡ ಭಾಷೆಯನ್ನು ಗಟ್ಟಿಯಾಗಿ ಬೆಳೆಸುವ ಬಗ್ಗೆ ಆಲೋಚಿಸುವ, ಮಾತನಾಡುವ ಸ್ಥಿತಿ ಎದುರಾಗಿದೆ. ಕರ್ನಾಟಕದ ಏಕೀಕರಣದ ಸಂದರ್ಭದಿಂದಲೂ ಒಂದಿಲ್ಲಾ ಒಂದು ರೀತಿಯ ಅಪಸ್ವರಗಳು ನಾಡಿನ ಏಕೀಕರಣದ ಬಗ್ಗೆ ಮತ್ತು ಮೈಸೂರು ರಾಜ್ಯ ಇದ್ದದ್ದು ಕರ್ನಾಟಕವಾಗಿ ಮರು ನಾಮಕರಣಗೊಳ್ಳುವವರೆಗಿನ ಬೆಳವಣಿಗೆಗಳು ಮಾತ್ರವಲ್ಲದೇ, ಸದ್ಯದ ಜಾಗತೀಕರಣದ ಸಂದರ್ಭದಲ್ಲಿಯೂ ನಾವು ನಾಡ Karnataka mapನುಡಿಯ ಸಂರಕ್ಷಣೆ ಬಗ್ಗೆ ಆಲೋಚಿಸಬೇಕಾಗಿದೆ. ನವಂಬರ್ ೧-೧೯೫೬ ರ ಸಂದರ್ಭದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಗಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯ ಎನ್ನುವ ಹೆಸರಿನಲ್ಲಿ ಕನ್ನಡ ರಾಜ್ಯ ಉದಯವಾಯಿತು. ಆ ಸಂದರ್ಭದಲ್ಲಿ ಕನ್ನಡದ ಕಟ್ಟಾಳು ಎಂದೇ ಕರೆಯಿಸಿಕೊಳ್ಳುತ್ತಿದ್ದ ಕೃಷ್ಣ ಕುಮಾರ ಕಲ್ಲೂರ ಅವರು ಪಾಟೀಲ ಪುಟ್ಟಪ್ಪನವರಿಗೆ ಒಂದು ಪತ್ರ ಬರೆದಿದ್ದರು [ ಸಮಗ್ರ ಪಾಪು ಪ್ರಪಂಚ- ಸಂಪುಟ ೩ ಪುಟ ೨೧೩] ‘ಕರ್ನಾಟಕ ಎನ್ನುವ ಹೆಸರಿಲ್ಲದ, ಹಂಪೆಯು ರಾಜಧಾನಿಯಲ್ಲದ, ಈ ರಾಜ್ಯವು ನನಗೆ ಕರ್ನಾಟಕವೇ ಅಲ್ಲ. ಎಲ್ಲಿಯೋ ನಿಮ್ಮಂಥ ಕೆಲವರು, ಪಂಡರೀಕನಿಗೋಸುಗ ಪರಿತಪಿಸುವ ಮಹಾಶ್ವೇತೆಯಂತೆ, ಕರ್ನಾಟಕ ಎಂದು ಬಡಬಡಿಸುತ್ತ ಕುಳಿತಿದ್ದೀರಿ’ ಎಂದು ಬರೆದಿದ್ದರು. ಈ ಬಗೆಯ ಅಸಮಾಧಾನ ಅನೇಕರಲ್ಲಿ ಇದ್ದ ಕಾರಣದಿಂದಲೇ ೧೯೭೩ ರ ಸಂದರ್ಭದಲ್ಲಿ “ಕರ್ನಾಟಕ” ಎಂದು ಮರು ನಾಮಕರಣವಾಯಿತು. ಆ ನಾಮಕಾರಣಕ್ಕಾಗಿ ದಾವಣಗೇರಿಯ ಕೆ.ಎಮ್.ರುದ್ರಪ್ಪನಂಥವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೂ ಅದರ ಕೊಡುಗೆ ಸಂದದ್ದು ಆಗಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರಿಗೆ. ಕರ್ನಾಟಕ ಎಂಬ ಹೆಸರಿನ ಬಗ್ಗೆ ಅಷ್ಟಕ್ಕಷ್ಟೇ ಮನಸಿದ್ದ ದೇವರಾಜ ಅರಸರಿಗೆ ಆ ಕ್ರೆಡಿಟ್ ಹೋದ ಬಗ್ಗೆಯೂ ಪಾಟೀಲ ಪುಟ್ಟಪ್ಪ ತಮ್ಮ ಕೃತಿಯಲ್ಲಿ ವಿಷಾದ ವ್ಯಕ್ತ ಪಡಿಸಿರುವದಿದೆ. ಕರ್ನಾಟಕದ ಏಕೀಕರಣ ಚಳುವಳಿ ಜರುಗಿ ಆರು ದಶಕಗಳಾದರೂ ಇಂದಿಗೂ ನಾವು ಕನ್ನಡದ ಸ್ಥಿತಿ ಗತಿಯ ಬಗ್ಗೆ ಮತ್ತು ಕನ್ನಡ ನಾಡು-ನುಡಿಯ ಬಲಸಂವರ್ಧನೆಯ ಬಗೆಗಿನ ಮಾತುಗಳು ಕೇಳಿ ಬರುತ್ತಿವೆ ಎನ್ನುವುದೇ ಬಹು ದೊಡ್ಡ ವಿಪರ್ಯಾಸ. ಯಾವ ಮಟ್ಟದಲ್ಲಿ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಬಲಗೊಳ್ಳಬೇಕೋ ಅದು ಸಾಧ್ಯವಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲವೇ ಗಡಿ ಭಾಗಗಳಲ್ಲಿ ಕುತ್ತು ಬರಲಿದೆ ಎಂದಾಗ ಒಂದಷ್ಟು ಕನ್ನಡದ ಕಟ್ಟಾಳುಗಳು ಮಾತಾಡುವುದು, ಹೇಳಿಕೆಗಳನ್ನು ಕೊಡುವುದನ್ನು ಬಿಟ್ಟರೆ ಮಿಕ್ಕಂತೆ ಮತ್ತೆ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಮತ್ತು ಚರ್ಚೆ ಮತ್ತೊಂದು ರಾಜ್ಯೋತ್ಸವದ ಸಂದರ್ಭದಲ್ಲಿಯೇ.. ಅಷ್ಟಕ್ಕೂ ನಮ್ಮ ನೆಲದ ಭಾಷೆಯ ಬಗ್ಗೆ, ಅದರ ಸಂರಕ್ಷಣೆಯ ಬಗೆಗೆ ತನ್ನದೇ ನೆಲದಲ್ಲಿ ಹೀಗೆ ಉಳಿವು, ಬಲ ಸಂವರ್ಧನೆಯ ಬಗ್ಗೆ ಮಾತಾಡಬಂದದ್ದು ಕನ್ನಡ ಭಾಷೆಯ ಬಹುದೊಡ್ದ ವ್ಯಂಗ್ಯವೂ ಹೌದು. ಶಾಸ್ತ್ರೀಯ ಸ್ಥಾನಮಾನ ಸಿಕ್ಕನಂತರ ಭಯಂಕರ ಬದಲಾವಣೆಗಳಾಗುತ್ತವೆ. ಒಂದು ಹೊಸ ಬಗೆಯ ಪುಷ್ಟಿ ಕನ್ನಡ ಭಾಷೆಗೆ ದೊರೆಯುತ್ತದೆ ಎನ್ನುವ ಮಾತುಗಳೀಗ ಕನ್ನಡ ಭಾಷೆ ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದೆ ಎನ್ನುವಂತಾಗಿದೆ. ಯಾವುದೇ ಒಂದು ಪ್ರಾದೇಶಿಕ ಭಾಷೆ ಬಲಗೊಳ್ಳುವುದು ಅದರ ದೈನಂದಿನ ವ್ಯವಹಾರಿಕ ಬಳಕೆಯ ಮಹತ್ವದ ಮೂಲಕವೇ ಹೊರತು ಭಾಷಣಗಳ ಮೂಲಕ..ಘೋಷಣೆಗಳ ಮೂಲಕವಲ್ಲ.

ಕನ್ನಡಕ್ಕೆ ಆಧುನಿಕ ಸಂದರ್ಭಲ್ಲಿ ಇನ್ನಷ್ಟು ತೊಡಕುಗಳು ಎದುರಾದಂತಿವೆ. ಜಾಗತೀಕರಣದ ಸಂದರ್ಭದಲ್ಲಿ ಈ ಪ್ರಾದೇಶಿಕ ಭಾಷೆಗಳು ಕೇವಲ ಅವರವರ ಮನೆಗೆ ಮಾತ್ರ ಸೀಮಿತವಾಗಿ ಉಳಿಯುವ ಸ್ಥಿತಿ ಬಂದೊದಗಿದೆ. ಜಾಗತೀಕರಣ ಆಂಗ್ಲ ಭಾಷೆ ಬಲ್ಲವರನ್ನು ಮಾತ್ರ ಎತ್ತಿಕೊಳ್ಳುತ್ತದೆ ಎನ್ನುವದನ್ನು ಮತ್ತೆ ಮತ್ತೆ ಎತ್ತಿ ಹೇಳಲಾಗುತ್ತದೆ. ಜೊತೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದ ಮಿತಿಗಳಿವೆ ಎನ್ನುವ ಮೂಲಕ ಪರೊಕ್ಷವಾಗಿ ಈ ಭಾಷೆಯನ್ನು ಮನೆಯ ಹೊರಗಡೆ ಬೆಳೆಸುವ ಯತ್ನಗಳು ಅಷ್ಟಾಗಿ ನಡೆಯುತ್ತಿಲ್ಲ. ಇನ್ನು ಕಾನ್ವೆಂಟ್ ಶಿಕ್ಷಣ ಪಡೆಯುವ ಒಂದು ದೊಡ್ಡ ತಲೆಮಾರಿಗೆ ಕನ್ನಡದ ಬಗ್ಗೆ ಅಲರ್ಜಿ. ಅವರಿಗೆ ನಾಲ್ಕು ಕನ್ನಡ ಲೇಖಕರ ಹೆಸರುಗಳ ಬಗ್ಗೆಯಾಗಲೀ, ಅವರ ಕೃತಿಗಳ ಬಗ್ಗೆಯಾಗಲೀ ತಿಳಿದಿಲ್ಲ. ಅವರು ಕನ್ನಡದಲ್ಲಿ ಮಾತಾಡುವುದೇ ಕನಿಷ್ಟ ಎಂದು ತಿಳಿದವರು.

ನಗರ ಪ್ರದೇಶಗಳಲ್ಲಿ ದೈಹಿಕ ಪರಿಶ್ರಮದ ವ್ಯವಹಾರಗಳನ್ನು ಅವಲಂಬಿಸಿರುವವನು ಕೂಡಾ ಆಂಗ್ಲ ಭಾಷೆಯಲ್ಲಿ ವ್ಯವಹರಿಸುವ ಅಗತ್ಯವಿದೆಯೇ..? Flag_of_Karnatakaಅಷ್ಟಕ್ಕೂ ಅವನು ವ್ಯವಹರಿಸುತ್ತಿರುವುದು ತನ್ನದೇ ನೆಲದ ಜನರೊಡನೆ ಎನ್ನುವುದನ್ನು ಮರೆಯುವಂತಿಲ್ಲ. ಇನ್ನು ಕೆಲ ಕಡೆಗಳಲ್ಲಿ ನಮ್ಮ ಪ್ರಾದೇಶಿಕತೆಯ ಒಳಗಡೆಯೇ ಜನ್ಮ ಪಡೆದ ತೀರಾ ಸಣ್ಣ ಪುಟ್ಟ ಸ್ಥಳೀಯ ಭಾಷೆಗಳು ಕೂಡಾ ಕನ್ನಡ ಭಾಷೆಗೆ ತಕ್ಕ ಮಟ್ಟಿಗೆ ತೊಡಕಾಗಿವೆ.. ಆಗುತ್ತಿವೆ. ಉದಾಹರಣೆಗೆ ಮಂಗಳೂರು ಭಾಗದಲ್ಲಾದರೆ ತುಳು ಮತ್ತು ಕೊಂಕಣಿ, ಕಾರವಾರದಲ್ಲಿ ಕೊಂಕಣಿ, ಬೆಳಗಾವಿಯಲ್ಲಿ ಮರಾಠಿ, ಗುಲಬರ್ಗಾ ಮತ್ತು ಬಿಜಾಪುರ ಭಾಗದಲ್ಲಿ ಉರ್ದು, ಬಳ್ಳಾರಿಯಲ್ಲಿ ತೆಲುಗು, ಬೆಂಗಳೂರಲ್ಲಿ ನೆರೆಯ ರಾಜ್ಯದ ತಮಿಳು, ತೆಲುಗು ಹೀಗೆ ಇತರೆ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡುವ ಮೂಲಕ ಅದರ ಬೆಳವಣಿಗೆಯನ್ನು ಇನ್ನಷ್ಟು ಕುಂಠಿತಗೊಳಿಸಲಾಗುತ್ತಿದೆ. ಈ ನಮ್ಮದೇ ನೆಲದ ಸಣ್ಣ ಪುಟ್ಟ ಭಾಷೆಗಳಾದ ಕೊಂಕಣಿ, ತುಳು, ಕೊಡವ ಮುಂತಾದ ಭಾಷೆಗಳನ್ನು ಉಳಿಸಿಕೊಂಡು ಕನ್ನಡವನ್ನು ಬೆಳೆಸುವ ಬಗ್ಗೆ ಯೊಚಿಸಬೇಕಾಗಿದೆ. ೧೮೯೦ ರ ಸಂದರ್ಭದಲ್ಲಿ ಕನ್ನಡಕ್ಕಾಗಿಯೇ ಕೈ-ಮೈ ಎತ್ತಲು ಜನ್ಮ ತಳೆದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಅಂದಿನಿಂದ ಇಂದಿನವರೆಗೂ ಕನ್ನಡ ನಾಡು-ನುಡಿಯ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತ ಬಂದಿದೆ. ಅದು ಹುಟ್ಟುವದಕ್ಕಿಂತಾ ಎರಡು ದಶಕಗಳ ಮುಂಚೆಯೇ ಡೆಪ್ಯುಟಿ ಚನ್ನಬಸಪ್ಪನಂಥವರು ಕನ್ನಡದ ಶ್ರೇಯೋಭಿವೃದ್ಧಿಗಾಗಿ ಕಂಕಣ ಕಟ್ಟಿದ್ದರು. ಹುಯಿಲಗೋಳ ನಾರಾಯಣರಾವ, ಆಲೂರ ವೆಂಕಟರಾಯ, ಅಂದಾನಪ್ಪ ದೊಡ್ದಮೇಟಿ, ಅದರಗುಂಚಿ ಶಂಕರಗೌಡ, ರಾ.ಹ.ದೇಶಪಾಂಡೆ ಮುಂತಾದವರು ನಾಡು ನುಡಿಗಾಗಿ ಹಗಲಿರುಳು ಶ್ರಮಿಸಿದವರು.

ಕನ್ನಡ ಭಾಷೆ ಶಿಕ್ಷಣ ಮತ್ತು ಉದ್ಯೋಗದ ಭಾಷೆಯಾಗಬೇಕೆನ್ನುವ ಕೂಗು ಇಂದು ನೆನ್ನೆಯದಲ್ಲ. ೧೯೩೯ ರ ಸಂದರ್ಭದಲ್ಲಿ ಅಂದಿನ ವಿದ್ಯಾಂಮತ್ರಿಗಳಾಗಿದ್ದ ಡಾ ಸುಬ್ಬರಾಯ ಅವರು ಮಂಗಳೂರಿನ ಕಾರ್ಯಕ್ರಮ ಒಂದರಲ್ಲಿ ಭಾಗವಾಹಿಸಿ ಮಾತನಾಡುತ್ತಾ ‘ಸ್ಥಳೀಯ ಭಾಷೆಯೇ ಶಿಕ್ಷಣ ಭಾಷೆಯಾಗಬೇಕು. ದಕ್ಷಿಣ ಕನ್ನಡದ ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಶಿಕ್ಷಣ ಭಾಷೆಯಾಗಿ ಸ್ವೀಕರಿಸಬೇಕು. ಈ ನಿಯiಕ್ಕೆ ತಾತ್ಕಾಲಿಕವಾಗಿ ಅಪವಾದಗಳನ್ನು ತರಬಹುದಾಗಿದ್ದರೂ ಇಂದಲ್ಲದಿದ್ದರೆ ನಾಳೆ ಕನ್ನಡವನ್ನು ಒಪ್ಪಿಕೊಳ್ಳಲು ಸಕಲರೂ ಸಿದ್ಧರಿರಬೇಕು’ ಎಂದು ಕರಾರುವಕ್ಕಾಗಿ ಮಾತನಾಡಿದ್ದರು [ಕಡೆಂಗೋಡ್ಲು ಲೇಖನಗಳು -ಪು ೩೬೨] ನಾವು ಅತಿ ಮುಖ್ಯವಾಗಿ ವಾಸ್ತವದಲ್ಲಿ ನಿಂತು ಕನ್ನಡವನ್ನು ಕಟ್ಟುವ ಬಗ್ಗೆ ಆಲೋಚಿಸಬೇಕಿದೆ. ಕನ್ನಡ ಎನ್ನುವುದು ಉದ್ಯೋಗದ ಭಾಷೆಯಾಗಬೇಕು.ನಾಡಿನ ಯಾವುದೇ ಇಲಾಖೆಯ ಹುದ್ದೆಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಪ್ರಥಮ ಪ್ರಾಶಸ್ತ್ಯ ಕೊಡುವಂತಾಗಬೇಕು. ಒಂದು ಭಾಷೆ ಕೇವಲ ಸೆಂಟಿಮೆಂಟಲ್ ಆಗಿ ಬೆಳೆಸಲು ನೋಡುವುದು ಆ ಭಾಷೆಯ ಜಡತ್ವಕ್ಕೆ ಕಾರಣವಾಗಬಹುದಾದ ಸಾಧ್ಯತೆಗಳಿವೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಪಾಟೇಲ ಪುಟ್ಟಪ್ಪ ಜೂನ್ ೧೧-೧೯೮೬ ರ ಸಂದರ್ಭದಲ್ಲಿಯೇ ನಾನು ಮೇಲೆ ಚರ್ಚಿಸಿದ ಭಾಷೆ ಮತ್ತು ಉದ್ಯೋಗದ ವಿಷಯವಾಗಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರಿಗೆ ಪತ್ರ ಬರೆದಿರುವದಿz. ಅದರ ಒಕ್ಕಣಿಕೆ ಹೀಗಿತ್ತು [ ಕನ್ನಡ ಕಾವಲು-ಸಂ ಡಾ.ಗುರುಲಿಂಗ ಕಾಪಸೆ ಪು-೯]

ಪ್ರಿಯ ಶ್ರೀ ರಾಮಕೃಷ್ಣ ಹೆಗಡೆಯವರಿಗೆ,

ಸಪ್ರೇಮ ವಂದನೆಗಳು.

ಆಡಳಿತದಲ್ಲಿ ಕನ್ನಡವನ್ನು ತರಬೇಕೆಂದು ಸರ್ಕಾರ ಉದ್ದೇಶಪಟ್ಟು ಆದೇಶಗಳನ್ನು ಹೊರಡಿಸಿದೆ.ಆದರೆ ಇದಕ್ಕೆ ಅನುಗುಣವಾಗಿ ಕೈಗೊಳ್ಳಬೇಕಾದ ಅನೇಕ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಇನ್ನೂ ಬಾಕಿ ಉಳಿದಿದೆ. ಸರ್ಕಾರದ ನೇಮಕಾತಿ ಸಮಿತಿಗಳ ಮೂಲಕ ಎಲ್ಲಾ ಇಲಾಖೆಗಳಿಗೆ ಜನರನ್ನು ಆಯ್ಕೆ ಮಾಡಲಾಗುತ್ತಿದೆ. ಈರೀತಿ ಆಯ್ಕೆಯಾಗುವ ಜನರು ಕನ್ನಡ ಜ್ಞಾನವನ್ನು ಹೊಂದಿರಲೇಬೆಕೆಂಬ ನಿಬಂಧನೆ ಏನೂ ಇಲ್ಲ. ಈ ನೇಮಕಾತಿ ನಿಯಮಗಳಲ್ಲಿ ಈಕುರಿತು ನೀವು ಸೂಕ್ತ ಬದಲಾವಣೆಗಳನ್ನು ಮಾಡಿ ಕನ್ನಡದ ಜ್ಞಾನವು ಅತ್ಯಗತ್ಯವಾಗಿ ಇರಲೇಬೇಕೆಂದು ನೀವು ಅವುಗಳನ್ನು ಮಾರ್ಪಡಿಸಬೇಕು. ಇದು ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗೂ ಅನ್ವಯವಾಗಬೇಕು. ನೀವು ಈ ವಿಷಯವನ್ನು ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ಮಾಡಿ ಸಂಬಂಧಪಟ್ಟ ನೇಮಕಾತಿ ಸಮಿತಿಗಳಿಗೆ ಕೂಡಲೇ ಸೂಕ್ತ ತಿದ್ದುಪಡಿ ಮಾಡುವದರ ಕುರಿತು ಕ್ರಮ ಕೈಗೊಳ್ಳಬೇಕು. ಇದು ಯಾವುದೇ ಕಾರಣದಿಂದಲೂ ವಿಳಂಬ ಆಗಕೂಡದೆಂದು ನಾನು ನಿಮ್ಮನ್ನು ಪುನ: ಒತ್ತಾಯ ಮಾಡುತ್ತಿದ್ದೇನೆ.

ಪ್ರೀತಿ ಗೌರವಾದರಗಳೊಂದಿಗೆ
ನಿಮ್ಮವ
ಪಾಟೀಲ ಪುಟ್ಟಪ್ಪ

ಇಂಥಾ ಸಾವಿರಾರು ಪತ್ರಗಳನ್ನು ಕನ್ನಡದ ವಿಷಯವಾಗಿ ಪಾಪು ಬರೆದಿದ್ದಾರೆ. ೧೯೮೨ ರ ಸಂದರ್ಭದಲ್ಲಿ ಆರಂಭವಾದ ಗೋಕಾಕ ಚಳುವಳಿಯಂತೂ ಕನ್ನಡದ ಬಗೆಗಿನ ಅಭಿಮಾನದ ಮರುಹುಟ್ಟಿಗೆ ಕಾರಣವಾಯಿತು. ಕನ್ನಡದ ಧೀಮಂತ ಕವಿಗಳು, ಸಾಹಿತಿಗಳು, ಸಂಘಟನೆಗಳು, Kavi_kannadaಕ್ರಿಯಾ ಸಮಿತಿಗಳು, ಪ್ರಾಧಿಕಾರಗಳು ನಿರಂತರವಾಗಿ ಕನ್ನಡವನ್ನು ಬೆಳೆಸುವಲ್ಲಿ ಪ್ರಯತ್ನಿಸುತ್ತಿರುವರಾದರೂ ಮತ್ತೂ ಪ್ರಯತ್ನ ಸಾಲದು ಎನ್ನುವ ಭಾವ ಬರುವಂತಾಗಲು ಕಾರಣ ತಳಮಟ್ಟದ ಯತ್ನಗಳ ಕೊರತೆಯೇ ಆಗಿದೆ. ಕನ್ನಡ ಭಾಷೆ ಸಾವಿರಾರು ವರ್ಷಗಳ ಚರಿತ್ರೆಯನ್ನು ಹೊಂದಿದ್ದರೂ ಅದು ಬಲಗೊಳ್ಳಲು ಆ ಭಾಷೆಯನ್ನು ಮಾತನಾಡುವ ಜನರಿಗೆ ದೊರಕಬೇಕಾದ ಭಾಷೀಕರಣದ ದೀಕ್ಷೆ ಅಚ್ಚುಕಟ್ಟಾಗಿ ಜರುಗದಿರುವದು ಕೂಡಾ ಅದಕ್ಕೆ ಇನ್ನೊಂದು ಕಾರಣ. ಯಾವುದೇ ಒಂದು ಭಾಷೆ ಜನಾಸಮುದಾಯದ ದೈನಂದಿನ ಅಗತ್ಯವಾಗಿ ಪರಿಣಮಿಸಿದರೆ ಮಾತ್ರ ಅದು ಬಲಗೊಳ್ಳಲು ಸಾಧ್ಯ, ಇಲ್ಲದಿದ್ದರೆ ಕೇವಲ ಆ ಹೊತ್ತಿನ ಒಂದು ಅಗತ್ಯವಾಗಿ ವಾರ್ಷಿಕ ದಿನಾಚರಣೆಯ ಚರ್ಚೆಯ ಭಾಗವಾಗಿ ಉಳಿಯುವ ಸಾಧ್ಯತೆಯಿದೆ. ಆ ದಿಸೆಯಲ್ಲಿ ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಮಹತ್ತರವಾದ ಕೆಲಸಗಳನ್ನು ಮಾಡಿದಂತಿಲ್ಲ. ಜಾತ್ರೆಗಳ ರೂಪದಲ್ಲಿ ಸಮ್ಮೇಳನ ಸಂಘಟಿಸುವದನ್ನು ಹೊರತು ಪಡಿಸಿದರೆ ನಾಡು-ನುಡಿಗಾಗಿ ಒಂದು ಚಾರಿತ್ರಿಕವಾಗಿ ಗುರುತಿಸಬಹುದಾದ ಕೆಲಸಗಳನ್ನು ಮಾಡಿದ್ದು ತೀರಾ ಅಪರೂಪವೇನೋ..? ಕನ್ನಡ ಭಾಷೆ ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಅನೇಕ ಬಗೆಯ ಸವಾಲುಗಳಿಗೆ ಒಡ್ಡಿಕೊಳ್ಳುತ್ತಲೇ ಬೆಳೆಯುವ, ಗಟ್ಟಿಗೊಳ್ಳುವ ದಿಶೆಯತ್ತ ಹೆಜ್ಜೆಹಾಕಬೇಕಿದೆ. ಅತಿ ಮುಖ್ಯವಾಗಿ ಕಲಿಕಾ ಮಧ್ಯಮವೊಂದು ವ್ಯಾಪಕವಾಗಿ ಕನ್ನಡ ಮಾಧ್ಯಮವಾಗಿಬಿಟ್ಟರೆ ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಾತಿನಿಧಿಕ ಸಂಸ್ಥೆಗಳಿಗೆ ಟಾನಿಕ್ ನ ಅವಶ್ಯಕತೆಯಿಲ್ಲ.

ಕರ್ನಾಟಕದ ವಿದ್ಯಾಸಾಗರ: ಪಂಚಮರ ಅರ್ ಗೋಪಾಲಸ್ವಾಮಿ ಅಯ್ಯರ್


– ಶ್ರೀಧರ್ ಪ್ರಭು


 

ಭಾರತದ ಇತಿಹಾಸದಲ್ಲಿಯೇ ದಲಿತರಿಗೆ ರಾಜರ ಆಸ್ಥಾನ ಪ್ರವೇಶ ಮಾಡಲು ಅನುವು ಮಾಡಿಕೊಟ್ಟ ಮೊದಲ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಇರಬಹುದೇನೋ. ಅಂಥಹ ಪುಣ್ಯ ಪುರುಷರ ಆಳ್ವಿಕೆಯ ಕಾಲ (೧೯೩೨). ಕುನ್ನೀರುಕಟ್ಟೆ, ಅಂದಿನ ಕಾಲಕ್ಕೆ ಇಡೀ ಮಳವಳ್ಳಿಯ ಬಾಯಾರಿಕೆ ತಣಿಸುವ ಉಣಿಸುವ ಕೆರೆ. ಆದರೆ ಅದು ದಲಿತರಿಗಲ್ಲ. ಕುನ್ನೀರುಕಟ್ಟೆ ಮಾತ್ರವಲ್ಲ, ದಲಿತರು, ಸುತ್ತಮುತ್ತಲ ಯಾವೊಂದು ಕೆರೆ, ಮಡುವು, Krishnaraja_Wodiyarಬಾವಿ ಇತ್ಯಾದಿಯಿಂದ ನೀರು ಬಳಸುವಂತಿರಲಿಲ್ಲ. ಮಳವಳ್ಳಿಯಿಂದ ಸುಮಾರು ೨೫ ಕಿ.ಮಿ ದೂರದ ಶ್ರೀರಂಗಪಟ್ಟಣದ ಹತ್ತಿರದ ಒಂದು ಜಾಗೆಯಿಂದ ನೀರು ಹೊರಬೇಕಿತ್ತು ಎಂದರೆ ನಂಬುತ್ತೀರಾ?

ನಾಲ್ವಡಿ ಕೃಷ್ಣರಾಜರ ಅವಿರತ ಪ್ರಯತ್ನದಿಂದ ದಲಿತರ ಮನೆಗಳಲ್ಲಿ ಶಿಕ್ಷಣದ ಹೊಂಗಿರಣ ಹೊಕ್ಕಿತ್ತು. ೧೯೨೭ ರಲ್ಲಿ ನಡೆದ “ಮಹಾಡ ಕೆರೆ ಸತ್ಯಾಗ್ರಹ” ವನ್ನು ಮಾದಯ್ಯನೆಂಬ ಯುವ ಶಿಕ್ಷಕ ತನ್ನವರಿಗೆಲ್ಲ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದ. ದಲಿತರಲ್ಲಿನ ಒಂದು ಜಾಗೃತ ವರ್ಗ ಕುನ್ನೀರುಕಟ್ಟೆಯ ನೀರು ಬಳಸಲು ಮುಂದಾಯಿತು.

ನಾಲ್ವಡಿ ಕೃಷ್ಣರಾಜರ ಆಡಳಿತ ಎಂಥಹ ಪ್ರಗತಿಪರವಾಗಿತ್ತೆಂದರೆ, ಡಾ.ಅಂಬೇಡ್ಕರ್ ಮೈಸೂರು ಸಂಸ್ಥಾನದ ಮುಖ್ಯ ಕಾನೂನು ಸಲಹಗಾರರಾಗಿ ನೇಮಿಸಿಕೊಂಡು, ದಲಿತರಿಗೆ ಎಲ್ಲಾ ಸಾರ್ವಜನಿಕ ಸ್ಥಳಗಳು ಮತ್ತು ಸಂಪನ್ಮೂಲಗಳೂ ಸಿಗುವಂತೆ ಮಾಡಿತ್ತು. ಹಾಗಾಗಿ ನೀರಿಗಾಗಿ ದಲಿತರು ಹೋರಾಟವೇ ಮಾಡದೇ, ಅಮಲ್ದಾರರಿಗೆ ಆದೇಶವಿತ್ತು ಕುನ್ನೀರುಕಟ್ಟೆಯ ಒಂದು ಭಾಗದಲ್ಲಿ ಮೆಟ್ಟಿಲುಗಳನ್ನು ಕಟ್ಟಿಸಿಕೊಟ್ಟಿತು. ಅಷ್ಟೇ ಅಲ್ಲ, ಅಮಲ್ದಾರರ ನೇತೃತ್ವದಲ್ಲಿಯೇ ದೊಡ್ಡದೊಂದು ಮೆರವಣಿಗೆ ಆಯೋಜಿಸಿ ನೀರು ಬಳಸಲು ವ್ಯವಸ್ಥೆ ಮಾಡಲಾಯಿತು!

ಊರಿನ ಸವರ್ಣೀಯರು ಮತ್ತು ಮುಸಲ್ಮಾನರು ರೊಚ್ಚಿಗೆದ್ದರು. ಇಪ್ಪತ್ತೆರಡು ಜನ ದಲಿತರನ್ನು ಹಿಗ್ಗಾಮುಗ್ಗ ಥಳಿಸಲಾಯಿತು. ಕೆಲವರು ನಾಪತ್ತೆಯೇ ಆಗಿ ಹೋದರು. ಇಡೀ ಊರು ರಣರಂಗವಾಯಿತು. ನೀರು, ಸೀಮೆಯೆಣ್ಣೆ, ಕಾಳು-ಕಡಿ ಸಿಗುವುದಿರಲಿ, ಕಡೆಗೆ ಊರ ಆಚೀಚೆ ಕೂಡ ದಲಿತರು ಓಡಾಡದಂತೆ ಕಾವಲು ಹಾಕಿದರು.

ರುದ್ರಯ್ಯ ಎಂಬ ಧೈರ್ಯಸ್ಥ ದಲಿತ ಯುವಕನೊಬ್ಬ, ಅಂತಹ ಭಯಾನಕ ವಾತಾವರಣದಲ್ಲಿ ಬರಿ ಕ್ಷೌರಕತ್ತಿಯೊಂದನ್ನು ಹಿಡಿದು ಮದ್ದೂರು ರೈಲುನಿಲ್ದಾಣಕ್ಕೆ ಹೊರಟೇಬಿಟ್ಟ. ಮಳವಳ್ಳಿಯ ದಲಿತ ಯುವಕನೊಬ್ಬ ಬೆಂಗಳೂರಲ್ಲಿ ಮೆಟ್ರಿಕ್ ಪರೀಕ್ಷೆ ಬರಿಯುತ್ತಿದ್ದ ಶಂಕರಯ್ಯ ಎಂಬ ಇನ್ನೊಬ್ಬನನ್ನು ಜತೆ ಮಾಡಿಕೊಂಡು ಸೀದಾ ಹೋಗಿದ್ದು ವೈದಿಕ ಸಂಪ್ರದಾಯದಲ್ಲಿ ಅದ್ದಿಹೋಗಿದ್ದ ಬೆಂಗಳೂರಿನ ಚಾಮರಾಜಪೇಟೆ ಬಡಾವಣೆಗೆ! ಅದೂ, ಒಬ್ಬ ತಮಿಳು ಬ್ರಾಹ್ಮಣರ ಮನೆಗೆ!!

ಇತ್ತ ಮಳವಳ್ಳಿಯಲ್ಲಿ ಇಡೀ ದಲಿತೇತರ ಸಮುದಾಯ ಪಕ್ಷ, ಜಾತಿ, ಅಂತಸ್ತು ಮತ್ತು ಧರ್ಮಭೇದ ಮರೆತು ಒಂದಾಗಿತ್ತು. ದೌರ್ಜನ್ಯಕ್ಕೆ ಕಾರಣರಾದವರ ರಕ್ಷಣೆಗೆ ಊರಿಗೆ ಊರೇ ಟೊಂಕ ಕಟ್ಟಿ ನಿಂತಿತ್ತು. ಒಂದೆಡೆ ಬಹಿಷ್ಕಾರ, ಇನ್ನೊಂದೆಡೆ ದೌರ್ಜನ್ಯ, ದಲಿತರು ಬೆದರಿ, ಮುದುಡಿ ಹೋಗಿದ್ದರು. ಆಡಳಿತ ಯಂತ್ರ ನಡೆಸುವವರಿಗೂ, ಎಂಥ ಆಶಾವಾದಿ ಸುಧಾರಕ ಮನಸ್ಸಲ್ಲೂ, ಇನ್ನು ದಲಿತರು ಗುಳೆ ಹೋಗುವುದು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎನ್ನಿಸುವ ವಾತಾವರಣ ಮನೆ ಮಾಡಿತ್ತು.

ಅಂಥಹದರಲ್ಲಿ ಮೈಸೂರು ಪೇಟ, ಇಂಗ್ಲಿಷ್ ದಿರಿಸು ತೊಟ್ಟ ಐವತ್ತರ ಅಂಚಿನ ಮೈಸೂರು ಸಂಸ್ಥಾನದ ಕೃಶಕಾಯ ಅಧಿಕಾರಿಯೊಬ್ಬರು ಮಳವಳ್ಳಿಗೆ ಬಂದರು. ಅವರ ರಕ್ಷಣೆಗೆ ಅಷ್ಟಿಷ್ಟು ಪೋಲಿಸ್ ಪಡೆ ಇತ್ತಾದರೂ, ಅದಿಲ್ಲದಿದ್ದರೂ ಪರವಾಗಿಲ್ಲ ಎನ್ನುವಂತಿತ್ತು ಅವರ ಧೈರ್ಯ ಮತ್ತು ಗತ್ತು. ನೋಡಿದರೆ ಪಕ್ಕಾ ಸಂಪ್ರದಾಯಸ್ಥ ತಮಿಳು ಬ್ರಾಹ್ಮಣನೆಂದು ಯಾರು ಬೇಕಿದ್ದರೂ ಹೇಳಬಹುದಿತ್ತು. ಹಿಂದೆಂದೂ ನಡೆಯದ ಸಾಮೂಹಿಕ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದ ರಣರಂಗದಂತಹ ವಾತಾವರಣದಲ್ಲಿ ರಾತ್ರಿ ಹಗಲು ತಿರುಗಲು ಅವರಿಗೆ ಭಯವೇನೂ ಇರಲಿಲ್ಲ. gopalaswami iyerಪೊಲೀಸರಿಗೆ ಯಾವುದೇ, ಭಯ, ಆಮಿಷ ಅಥವಾ ಪಕ್ಷಪಾತವಿಲ್ಲದ ನಿರ್ಭೀತ ತನಿಖೆಗೆ ಆದೇಶ ಕೊಟ್ಟು, ಆಮೇಲೆ ಏನೂ ಆಗಿಯೇ ಇಲ್ಲವೇನೋ ಎಂಬಂತೆ ತಮ್ಮ ಇವರು ಕೆಲಸದಲ್ಲಿ ನಿರತರಾದರು. ಮಳವಳ್ಳಿ ಪಟ್ಟಣ ಏಕ ದಂ ತಣ್ಣಗಾಯಿತು. ಎಲ್ಲವೂ ಸಾಮಾನ್ಯ ಸ್ಥಿತಿಗೆ ಬಂತು. ಎಲ್ಲ ಆರೋಪಿಗಳ ಬಂಧನವಾಯಿತು. ಇನ್ನು ಸವರ್ಣೀಯರು ಲೆಕ್ಕ ಹಾಕಿದ್ದೇನೆಂದರೆ, ದಲಿತರು ಶ್ರೀರಂಗಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ತಿರುಗುವುದು ಅಸಾಧ್ಯ. ಹಾಗಾಗಿ ಮುಕದ್ದಮೆಗಳು ಬಿದ್ದು ಹೋಗುವುದು ಖಚಿತ ಎಂದು. ಹಾಗೇನೂ ಆಗಲಿಲ್ಲ. ಇದನ್ನು ಮೊದಲೇ ಗೃಹಿಸಿದ್ದ ಈ ಅಧಿಕಾರಿ ದೌರ್ಜನ್ಯದ ತನಿಖೆಗೆ ಮಳವಳ್ಳಿಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆದೇಶ ನೀಡಿದರು. ಹೀಗಾಗಿ ನ್ಯಾಯ ಸಿಗಲು ಸಾಧ್ಯವಾಗಿ ತಪ್ಪಿತಸ್ಥರಿಗೆಲ್ಲ ತಪ್ಪದೇ ಶಿಕ್ಷೆಯಾಯಿತು. ನ್ಯಾಯದೇವತೆ ದಲಿತರ ಮನೆಗೇ ನಡೆದು ಬಂದಳು.

ಈ ಘಟನೆಯ ನಂತರದ ಮೂರು ನಾಲ್ಕು ವರ್ಷಗಳಲ್ಲಿ ಮಂಡ್ಯದ ಕೊಮ್ಮರಹಳ್ಳಿ, ಹೆಮ್ಮನಹಳ್ಳಿ, ಸೋಮನಹಳ್ಳಿ, ರಾವಣಿ, ತುಮಕೂರಿನ ಹುಲಿಯೂರುದುರ್ಗ ಮತ್ತು ಹಲವು ಭಾಗಗಳಲ್ಲಿ ಸ್ವಾಭಿಮಾನ ಸಾಧನೆಯ ಹೋರಾಟಗಳು ನಡೆದವು. ಈ ಹೋರಾಟದ ನೇತೃತ್ವ ವಹಿಸಿದ್ದು ಪ್ರಭುತ್ವದ ಭಾಗವಾಗಿದ್ದ ಈ ವ್ಯಕ್ತಿ!

ಆಡಳಿತ ಯಂತ್ರವನ್ನು ದಲಿತ-ದಮನಿತರ ರಕ್ಷಣೆಗೆ ಹೇಗೆ ಸಮರ್ಥವಾಗಿ ಬಳಸಬಹುದು ಎಂದು ಮೊದಲ ಬಾರಿಗೆ ತೋರಿಸಿಕೊಟ್ಟವರು: ಪಂಚಮರ ಅರ್. ಗೋಪಾಲಸ್ವಾಮಿ ಅಯ್ಯರ್ ((೧೮೮೧-೧೯೪೩).

ಮೇಲು-ಕೀಳಿನ ಕಂದರವನ್ನು ಮುಚ್ಚುವ ಮೊದಲ ಪ್ರಯತ್ನವಾಗಿ, ದಲಿತರನ್ನು ಪಂಚಮರೆಂದು ಸಂಬೋಧಿಸಬೇಕೆಂದು ಮೈಸೂರು ಸಂಸ್ಥಾನದಲ್ಲಿ ಅಧಿಸೂಚನೆ ಜಾರಿಯಲ್ಲಿತ್ತು. ಸದಾ ದಲಿತರ ಹಿತಾಸಕ್ತಿಯನ್ನೇ ತಮ್ಮ ಭಾವಕೋಶದಲ್ಲಿ ತುಂಬಿಕೊಂಡ ಗೋಪಾಲಸ್ವಾಮಿಯವರನ್ನು “ಪಂಚಮರ ಗೋಪಾಲಸ್ವಾಮಿ” ಎಂದೇ ಸಂಬೋಧಿಸುವುದು ವಾಡಿಕೆಯಾಯಿತು.

ಹಳೆ ಮೈಸೂರಿನ ದಲಿತರ ಮೊದಲ ತಲೆಮಾರು ಶಿಕ್ಷಣ, ಸ್ಥೈರ್ಯ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಸಾಧಿಸಿದ್ದು ಇವರಿಂದಲೇ ಎಂದು ಹೇಳಬೇಕು.

ಚಾಮರಾಜಪೇಟೆಯ ನಾಲ್ಕನೆ ಮುಖ್ಯ ರಸ್ತೆಯಲ್ಲಿರುವ ‘ಎಲಿಫೆಂಟ್ ಲಾಡ್ಜ್’ ಎಂಬ ಹೆಸರಿನ ಮನೆಯನ್ನು ಈಗಲೂ ನೋಡಬಹುದು. ಒಂದು ಕಾಲಕ್ಕೆ ಈ ಮನೆಯಲ್ಲಿ ಸಹಸ್ರಾರು ಜನ ವಿದ್ಯಾಭ್ಯಾಸ ಪಡೆದಿದ್ದಾರೆ. ಇವರ ಅವಿರತ ಪ್ರಯತ್ನದಿಂದ, ಬೆಂಗಳೂರಿನ ಶ್ರೀರಾಮಪುರದಲ್ಲಿ ಇಂದು ಗೋಪಾಲಪುರ ( ಇವರ ನೆನಪಿನ ದ್ಯೋತಕವಾಗಿ) ಎಂದು ಕರೆಯಲಾಗುವ ಜಾಗದಲ್ಲಿ ೧೯೧೮ ರಲ್ಲಿ ಪಂಚಮರ ಹಾಸ್ಟೆಲ್ (ಈಗ “ಗೋಪಾಲಸ್ವಾಮಿ ಹಾಸ್ಟೆಲ್”) ತೆರೆಯಲಾಯಿತು. ಆ ಕಾಲದಲ್ಲೇ, ಹಾಸ್ಟೆಲ್ ಶುರುವಾದ ಮೊದಲ ವರ್ಷವೇ ಸುಮಾರು ೧೮೬ ದಲಿತ ವಿದ್ಯಾರ್ಥಿಗಳನ್ನ ಇವರು ಈ ಹಾಸ್ಟೆಲ್ ಗೆ ಸೇರಿಸಿದ್ದರು.

ಸೈಕಲ್ ಮೂಲಕ ಊರು ಹಳ್ಳಿ, ಕೇರಿಗಳನ್ನು ತಿರುಗುತ್ತಿದ್ದ ಗೋಪಾಲಸ್ವಾಮಿಗಳಿಗೆ ರೈಲು ಗಾಡಿ ಯಲ್ಲಿ ಸೈಕಲ್ ಕೊಂಡೊಯ್ಯಲು ಅರಸರು ಅವರಿಗೆ ವಿಶೇಷ ಅನುಮತಿ ನೀಡಿದ್ದರು. ಅನೇಕ ಬಾರಿ ಪ್ರೀತಿ ವಿಶ್ವಾಸ ಗೆದ್ದು, ಕೆಲವು ಬಾರಿ ಬಲವಂತದಿಂದ ವರ್ಷವೂ ನೂರಾರು ದಲಿತರ ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸುತ್ತಿದ್ದ ಗೋಪಾಲಸ್ವಾಮಿ, ಹಳೆ ಮೈಸೂರು ಭಾಗದ ಪ್ರತಿ ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಗಳನ್ನು ಗುರುತಿಸಿ, ಬೆಂಗಳೂರಿಗೆ ಬರುವುದಾದರೆ ಎಲ್ಲಾ ಖರ್ಚು ಭರಿಸಿ ಹಾಸ್ಟೆಲ್ ವ್ಯವಸ್ಥೆ ಮಾಡುವುದಾಗಿ ಪ್ರತೀ ವರ್ಷವೂ ಸ್ವತಃ ತಾವೇ ಪತ್ರ ಬರೆಯುತ್ತಿದ್ದರು.

ಇವರ ಶಿಷ್ಯರಾದವರಲ್ಲಿ ಪ್ರಮುಖರು: ಕೊರಟಗೆರೆ ಭೀಮಯ್ಯ (ಕರ್ನಾಟಕ ಉಚ್ಚ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಾಧೀಶ), ಶಿಕ್ಷಣ ಭೀಷ್ಮ ಎನಿಸಿರುವ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಎಚ್. ಎಂ. ಗಂಗಾಧರಯ್ಯ (ಹಾಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಾ. ಜಿ. ಪರಮೇಶ್ವರರ ತಂದೆ), ಕರ್ನಾಟಕದ ಮೊದಲgopalaswami-iyer-elephant-lodge ದಲಿತ ಐ. ಎ. ಎಸ್. ಅಧಿಕಾರಿ ಭರಣಯ್ಯ, ಮಾಜಿ ಕೇಂದ್ರ ಮಂತ್ರಿ ಮತ್ತು ರಾಜ್ಯಪಾಲರಾದ ಬಿ. ರಾಚಯ್ಯ, ಡಾ. ಜಿ. ಗೋಪಾಲ್ (ಕರ್ನಾಟಕದ ಮೊದಲ ಶಿಶು ತಜ್ಞ ಮತ್ತು ವೈದ್ಯಾಧಿಕಾರಿ) ದಲಿತ ಜನಾಂಗದ ಮೊದಲ ಮಂತ್ರಿ ಚನ್ನಿಗರಾಮಯ್ಯ, ಖ್ಯಾತ ದಲಿತ ಕವಿ ಡಾ.ಸಿದ್ಧಲಿಂಗಯ್ಯ ಮೊದಲಾದವರು.

ಗೋಪಾಲಸ್ವಾಮಿಯವರಿಗೆ ಮಕ್ಕಳಿರಲಿಲ್ಲ. ಆದರೆ ಅವರ ಮಕ್ಕಳ ಪ್ರೀತಿ ಅಪೂರ್ವವಾದ್ದು. ೧೯೩೨ರ ಕಾಲಮಾನ. ಗಾಂಧೀಜಿ ಬೆಂಗಳೂರಿಗೆ ಬಂದಿದ್ದರು. ಎಚ್. ಎಂ. ಗಂಗಾಧರಯ್ಯನವರಿಗೆ ಸುಮಾರು ಹದಿನಾಲ್ಕು ಹದಿನೈದು ವರ್ಷವಿರಬೇಕು. ಯಾವ ಪುಸ್ತಕ, ತರಬೇತಿಯಿಲ್ಲದೆ ಗಾಂಧೀಜಿಯ ತೈಲವರ್ಣವೊಂದನ್ನು ಅತಿ ಸುಂದರವಾಗಿ ಬಿಡಿಸಿದರು. ಇದನ್ನು ನೋಡಿದ ಗೋಪಾಲಸ್ವಾಮಿಗಳು ಹುಡುಗನನ್ನು ಸೀದಾ ಗಾಂಧೀಜಿ ಬಳಿ ಕರೆದುಕೊಂಡು ಹೋಗಿಯೇ ಬಿಟ್ಟರು. ಅಪಾರ ಜನಸಂದಣಿಯಿದ್ದ ಕಾರಣ ಕಾಂಗ್ರೆಸ್ ನ ಪ್ರಮುಖ ನಾಯಕರಿಗೂ ಗಾಂಧೀಜಿಯನ್ನು ಭೇಟಿ ಯಾಗುವುದು ಅಷ್ಟು ಸುಲಭವಿರಲಿಲ್ಲ. ಛಲ ಬಿಡದ ತ್ರಿವಿಕ್ರಮನಂತೆ, ಗೋಪಾಲಸ್ವಾಮಿಗಳು ತಮ್ಮ ಶಿಷ್ಯನನ್ನು ಗಾಂಧೀಜಿಗೆ ಭೇಟಿ ಮಾಡಿಸಿದ್ದೇ ಅಲ್ಲದೇ ಮನಸ್ಸು ತುಂಬಿ ಪರಿಚಯಿಸಿದರು. ತುಂಬಾ ಸಂತಸಗೊಂಡ ಗಾಂಧೀಜಿ, ತರುಣ ಕಲಾವಿದನ ಬೆನ್ನು ಚಪ್ಪರಿಸಿ, ತೈಲಚಿತ್ರದ ಮೇಲೆ ಸಹಿ ಕೂಡ ಹಾಕಿ ಕೊಟ್ಟರು!

ಸಹಸ್ರಾರು ದಲಿತ ಕುಟುಂಬಗಳ ದೀಪ ಗೋಪಾಲಸ್ವಾಮಿ, ದೇಶ ಕಂಡ ಅಪ್ರತಿಮ ಸಾಧಕ. ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ತಮ್ಮ 200px-MKGandhi[1]ಇಡೀ ಜೀವನವನ್ನು ದಲಿತರಿಗೊಸ್ಕರ ಮುಡುಪಾಗಿಟ್ಟು ಆದರ್ಶ ಪ್ರಾಯ ಜೀವನ ನಡೆಸಿದ್ದವರು. ತಮ್ಮ ಇಳಿ ವಯಸ್ಸಿನಲ್ಲೂ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದ ಧೀರ!. ದಲಿತ ವಿಮೋಚನೆ, ಸಮಾಜ ಸೇವೆ, ನೈಜ ದೇಶಪ್ರೇಮದ ಮಾದರಿ ಗೋಪಾಲಸ್ವಾಮಿಯವರ ಬದುಕು.

ಪ್ರಭಾವಿ ರಾಜಕೀಯ ನೇತಾರರು, ಅಧಿಕಾರಿಗಳು, ವೈದ್ಯರು, ವಕೀಲರು ಸೇರಿದಂತೆ ಇವರ ಅಸಂಖ್ಯ ಶಿಷ್ಯಗಣ ಪ್ರಪಂಚದೆಲ್ಲೆಡೆ ಹಬ್ಬಿದೆ. ಆದರೆ ಅದೃಷ್ಟವಶಾತ್ ಇಂದೂ ಮೂಲ ಸ್ವರೂಪದಲ್ಲೇ ಇರುವ ಇವರ ಮನೆಯನ್ನೇ ಆಗಲಿ ಅಥವಾ ಇನ್ನೊಂದು ಸೂಕ್ತ ಕಡೆಯಲ್ಲಾಗಲಿ, ಇವರ ಪ್ರತಿಮೆ, ಸ್ಮಾರಕ ಮಾಡುವ ಯತ್ನ ಮಾತ್ರ ನಡೆದಂತಿಲ್ಲ.