Monthly Archives: July 2015

ನಿಮ್ಮ ದುಬಾರಿ ಕಾರು, ಬೈಕಿಗಿಂತ ಜೀವ ಅಮೂಲ್ಯ..


– ಡಾ.ಎಸ್.ಬಿ. ಜೋಗುರ


ನಾನು ಚಿಕ್ಕವನಾಗಿದ್ದಾಗ ಮನೆಯಿಂದ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗಲು ಅಪ್ಪನಿಂದ ಸೈಕಲ್ ಬಾಡಿಗೆಗಾಗಿ ದುಡ್ಡು ಕೇಳುತ್ತಿದ್ದೆ. ಆಗ ಅ ಬಾಡಿಗೆ ಘಂಟೆಗೆ ಎಂಟಾಣೆ. ಕಿಸೆಯಿಂದ ಐವತ್ತು ಪೈಸೆ ತೆಗೆದುಕೊಡುತ್ತಲೇ ಅಪ್ಪ ತುಸು ಸಿಟ್ಟಿನಿಂದ ಸಾವಕಾಶ ಹೋಗು ಅದು ಸೈಕಲ್ ಅಲ್ಲ, ಸಾಯೋಕಾಲ ಅಂತಿದ್ದ. ಅದು ಯಾಕೆ ಹಾಗೆ ಅಂತಿದ್ದ ಅನ್ನೋದು ನಾವು ಬೆಳೀತಾ ಹೋದ ಹಾಗೆ ಗೊತ್ತಾಯಿತು. ಹುಂಬತನದ ಚಾಲನೆ ಎಷ್ಟು ಅಪಾಯಕಾರಿ ಎನ್ನುವುದು ನನ್ನ ಜೊತೆಗಿರುವ ಸ್ನೇಹಿತರುಗಳೇ ಕೈಕಾಲು ಮುರಿದುಕೊಂಡಾಗ, ಜೀವ ಕಳೆದುಕೊಂಡಾಗ ನಮ್ಮಪ್ಪ ಹೇಳುತ್ತಿದ್ದimages ಮಾತು ಅದೆಷ್ಟು ಸತ್ಯವಾಗಿತ್ತು ಎಂದು ಈಗಲೂ ನನಗೆ ಅನಿಸುವದಿದೆ. ನಮ್ಮ ಮಕ್ಕಳಿಗೆ ಅದೇ ಮಾತನ್ನು ನಾವೀಗ ರಿಪೀಟ್ ಮಾಡಿ ಬೈಕ್ ಸ್ಪೀಡ್ ಓಡಿಸಬೇಡಪ್ಪಾ ಟ್ರಾಫಿಕ್ ತುಂಬಾ ಇರುತ್ತದೆ ಎಂದಾಗ ಅವನು ನೆಪಕ್ಕೆ ಹುಂ ಎಂದು ಮತ್ತೆ ತನ್ನದೇ ಗತಿಯಲ್ಲಿ ಅದನ್ನು ಓಡಿಸಿಕೊಂಡು ಹೋಗುತ್ತಾನೆ. ಈಗ ಜಮಾನಾ ತುಂಬಾ ಸ್ಪೀಡ್ ಆಗಿದೆ. ನನಗೆ ನೌಕರಿ ಬಂದ ಮೇಲೆಯೂ ಆರು ತಿಂಗಳು ನಾನು ಸೈಕಲ್ ಮೇಲೆ ಕಾಲೇಜಿಗೆ ಹೋಗಿರುವದಿದೆ. ಆ ನಂತರ ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟರ್ ನಂತರ ಈಗ ನಾನು ಓಡಿಸುತ್ತಿರುವ ಬೈಕ್ ಕೊಂಡಿರುವದು. ಈಗಿನ ಸಂತಾನ ಹಾಗಲ್ಲ ಇನ್ನೂ ಮೀಸೆ ಮೂಡುವ ಮೂದಲೇ ಎಲ್ಲವನ್ನು ಮಾಡಿ ಮುಗಿಸುವ ಆತುರಗಾರರಾಗಿರುವ ಪರಿಣಾಮವೇ ಹೆಚ್ಚೆಚ್ಚು ಅನಾಹುತಗಳು ಜರುಗುತ್ತಿವೆ. ಈಗಿನ ಯುವಕರು ಇನ್ನೂ ಓದುವ ಅವಧಿಯಲ್ಲಿ ಬೈಕು, ಕಾರು ಹತ್ತಬೆಕೆನ್ನುವವರು. ಕೆಲ ಬಾರಿ ಯುವಕರು ಬೈಕ್ ಓಡಿಸುವದನ್ನು ಕಂಡಾಗ ತುಂಬಾ ಸಿಟ್ಟು ಬರುತ್ತದೆ ಅದರ ಬೆನ್ನಲ್ಲೇ ಕನಿಕರವೂ ಬರುತ್ತದೆ. ಸಿಟ್ಟಿಗೆ ಕಾರಣ ಅವರು ಹಾವು ಹೊರಳಾಡುವಂತೆ ಅದನ್ನು ಯರ್ರಾಬಿರ್ರಿ ಓಡಿಸಿ, ಎಲ್ಲೋ ಒಂದೆಡೆ ಹೊಡೆದು ತಮಗೋ ಇಲ್ಲಾ ಗುದ್ದಿಸಿಕೊಂಡವನಿಗೋ ಭಯಂಕರ ಪ್ರಮಾಣದ ಹಾನಿ ಉಂಟು ಮಾಡಿ, ಕೆಲವೊಮ್ಮೆ ಜೀವಹಾನಿಗೂ ಕಾರಣವಾಗುವ ರೀತಿಯ ಬಗ್ಗೆ ನನಗೆ ಅಪಾರವಾದ ಸಿಟ್ಟಿದೆ. ಇನ್ನು ಕನಿಕರ ಯಾಕೆಂದರೆ ಇರೋದೇ ಒಂದೋ ಹೆಚ್ಚೆಂದರೆ ಎರಡು ಮಕ್ಕಳಿರೋ ಕಾಲದಲ್ಲಿ ಸಿನೇಮಾ ಶೂಟಿಂಗಲ್ಲಿ ತೊಡಗಿರುವ ಹಾಗೆ, ಇಲ್ಲವೇ ರೇಸಲ್ಲಿ ಭಾಗವಹಿಸಿರುವವರ ಹಾಗೆ ಬೈಕ್ ಓಡಿಸಿ ಅನಾಹುತ ಮಾಡಿಕೊಂಡು ಹೆತ್ತವರನ್ನು ಜೀವನ ಪರ್ಯಂತ ನರಳಿಸುವದಿದೆಯಲ್ಲ, ಆ ಬಗ್ಗೆ ಕನಿಕರವಿದೆ. ನಗರ ಪ್ರದೇಶಗಳಲ್ಲಿಯೂ ಇವರು ಓಡಿಸುವ ಬೈಕ್ ವೇಗದ ಮಿತಿಗೆ ಒಳಪಟ್ಟ್ತಿರುವದಿಲ್ಲ. ತಲೆಯ ಮೇಲೆ ಹೆಲ್ಮೆಟ್ ಕೂಡಾ ಇರುವದಿಲ್ಲ. ಹಾಗಿರುವಾಗಲೂ ಪೋಲಿಸರ ಎದುರಲ್ಲೇ ಇವರು ರಾಜಾರೋಷವಾಗಿ ಭಂವ್ ಎಂದು ಓಡಿಸಿಕೊಂಡು ಹೋಗುವ ರೀತಿಗೆ ಅನೇಕ ಬಾರಿ ನಾನೇ ಬೆಚ್ಚಿ ಬಿದ್ದಿರುವೆ. ಇನ್ನು ಅತ್ಯಂತ ವಿಕಾರವಾಗಿರುವ ಹಾರ್ನ್ ಹಾಕಿಸಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಖಾಸ್ ಆಗಿ ಹುಡುಗಿಯರಿರುವ ಜಾಗೆಯಲ್ಲಿ ಅದನ್ನು ಹಾರ್ನ್ ಮಾಡುತ್ತಾ ಸಾಗುವ ಕ್ರಮವಂತೂ ಇನ್ನಷ್ಟು ವಿಕೃತ. ಇಂಥಾ ಅಸಂಬದ್ಧವಾಗಿರುವ ಹಾರ್ನ್ ಇರುವ ವಾಹನಗಳನ್ನು ಕೂಡಲೇ ಸೀಜ್ ಮಾಡುವಂಥಾ ಕ್ರಮಗಳು ಜರುಗಬೇಕು. ಇನ್ನೊಂದು ಸಂಗತಿ ನಿಮಗೆ ತಿಳಿದಿರಬಹುದು. ನಮ್ಮ ದೇಶದಲ್ಲಿ ಅತೀ ಹೆಚ್ಚು ನಡೆಯುವ ಅಪಘಾತಗಳಲ್ಲಿ ಈ ಬೈಕ್ ಗಳದ್ದೇ ಸಿಂಹಪಾಲು, ಅದರ ನಂತರ ಕಾರುಗಳದ್ದು. ನಾವು ಓಡಿಸುವ ವಾಹನ ಹೇಳೀ ಕೇಳೀ ಒಂದು ಯಂತ್ರ ಅದಕ್ಕೆ ಯಾವುದೇ ಬಗೆಯ ಸೆಟಿಮೆಂಟ್ ಗಳಿರುವದಿಲ್ಲ. ಆದರೆ ಅದನ್ನು ಕೊಡಿಸಿದವರಿಗೆ, ಹೆತ್ತವರಿಗೆ ನಿಮ್ಮ ಬಗ್ಗೆ ಅಪಾರವಾದ ಕಾಳಜಿಗಳಿವೆ, ಕನಸುಗಳಿವೆ, ಭರವಸೆಗಳಿವೆ. ಅವೆಲ್ಲವುಗಳನ್ನು ಥ್ರಿಲ್ ಗಾಗಿ ಬಲಿಕೊಟ್ಟು ನೀವು ಬಲಿಯಾಗಬೇಡಿ. ತಾಳ್ಮೆಯಿರದ ಯಾವುದೇ ಸವಾರಿ ಸುಖಕರವಲ್ಲ. ಒಂದೇ ಒಂದು ನಿಮಿಷದ ನಿಧಾನ ನಿಮ್ಮ ಜೀವವನ್ನು ಕಾಯಿಬಲ್ಲದು ಎನ್ನುವ ಎಚ್ಚರದ ನಡುವೆ ವಾಹನವನ್ನು ಚಲಿಸಬೇಕು.

ನಮ್ಮ ದೇಶದಲ್ಲಿ ನಡೆಯುವ ರಸ್ತೆ ಅಪಘಾತಗಳ ಬಗೆಗಿನ ಅಂಕಿ ಅಂಶಗಳನ್ನು ನೋಡಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. 2013 ರ ವರ್ಷ, ಕೇವಲ ಆ ಒಂದೇ ವರ್ಷದಲ್ಲಿ  1,37,000 ಜನ ರಸ್ತೆ ಅಪಘಾತದಲ್ಲಿ ಸತ್ತಿರುವದಿದೆ. ಈ ಪ್ರಮಾಣ ಯಾವುದೇ ಮಾಹಾಯುದ್ಧದಲ್ಲಿ ಮಡಿದವರ ಸಂಖ್ಯೆಗಿಂತಲೂ ಜಾಸ್ತಿಯೆಂಬುದು. ಪ್ರತಿನಿತ್ಯ ಸುಮಾರು 16 ಮಕ್ಕಳು ಈ ರಸ್ತೆ ಅಪಘಾತಕ್ಕೆ ಅಕಾಲಿಕ ಸಾವನ್ನಪ್ಪುತ್ತಾರೆ. ದೆಹಲಿಯಲ್ಲಿ ಪ್ರತಿನಿತ್ಯ ರಸ್ತೆ ಅಪಘಾತದಲ್ಲಿ ಐದು ಸಾವುಗಳು ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ ಒಂದು ರಸ್ತೆ ಅಪಘಾತದ ಸಾವು ಸಂಭವಿಸುತ್ತದೆ. ಕುಡಿದು ಗಾಡಿ ಓಡಿಸುವದೇ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತದೆ. ಪ್ರತಿ ಘಂಟೆಗೆ ನಮ್ಮ ದೇಶದಲ್ಲಿ 16 ಜನರು ಈ ಭೀಕರ ರಸ್ತೆ ಅಪಘಾತದಲ್ಲಿ ಮರಣ ಹೊಂದುವದಿದೆ. ಈ ಎಲ್ಲ ಬಗೆಯ ಒಟ್ಟು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳದ್ದೇ 25 ಪ್ರತಿಶತ ಪಾಲಿದೆ. ಪ್ರತಿನಿತ್ಯ 20 ವರ್ಷ ವಯೋಮಿತಿಯ ಒಳಗಿನ 14 ಮಕ್ಕಳು ಈ ರಸ್ತೆ ಅಪಘಾತದಲ್ಲಿ ಅಸುನೀಗುತ್ತವೆ. ದಿನಾಲು ಹೆಚ್ಚೂ ಕಡಿಮೆsklar-accident 1214 ರಷ್ಟು ರಸ್ತೆ ಅಪಘಾತಗಳು ಜರಗುತ್ತವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಜರಗುವ ನಗರಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಪ್ರಥಮ ಸ್ಥಾನದಲ್ಲಿ ದೆಹಲಿ ನಗರ ನಂತರ ಚೆನೈ, ಜೈಪುರ, ಬೆಂಗಳೂರು, ಮುಂಬೈ, ಕಾನಪುರ, ಲಖನೌ, ಆಗ್ರಾ, ಹೈದರಾಬಾದ, ಪುಣೆ ಎಂದು ಹತ್ತು ಪ್ರಮುಖ ನಗರಗಳನ್ನು ಪಟ್ಟಿ ಮಾಡಲಾಗಿದೆ. ಎಡಬದಿಯಿಂದ ಓವರ ಟೇಕ್ ಮಾಡುವುದು, ಡಿಮ್- ಡಿಪ್ ಮಾಡದೇ ಗಾಡಿ ಓಡಿಸುವದು, ಹೆಚ್ಚು ಪ್ರತಿಫಲನ ಇರುವ ಬಲ್ಬುಗಳನ್ನು ಕಾನೂನಿನ ನಿಯಮ ಉಲ್ಲಂಘಿಸಿ ಬಳಸುವುದು ಇವುಗಳ ಜೊತೆಯಲ್ಲಿ ವಾಹನ ಚಲಿಸುವಾಗ ಮೊಬೈಲಿನಲ್ಲಿ ಮಾತನಾಡುತ್ತಾ, ಏನನ್ನೋ ತಿನ್ನುತ್ತಾ, ಕುಡಿಯುತ್ತಾ ಓಡಿಸುವದರಿಂದಾಗಿಯೂ ಹೆಚ್ಚಿನ ಪ್ರಮಾಣದ ರಸ್ತೆ ಅಪಘಾತಗಳು ಜರುಗುತ್ತಿವೆ. ಜೊತೆಗೆ ಯರ್ರಾಬಿರ್ರಿಯಾಗಿ ಬೈಕ್ ಓಡಿಸುವವರ ಪ್ರಮಾಣ ಈಗಂತೂ ಹೆಚ್ಚಾಗಿ ಕಂಡು ಬರುತ್ತದೆ ಅದರ ಜೊತೆಗೆ ಶಾಸನಬದ್ಧವಾಗಿ ಓಡಿಸೋ ವಯಸ್ಸು ಬಾರದಿದ್ದರೂ ಅಪ್ಪನ ಬೈಕ್ ಹತ್ತಿ ಸಿಕ್ಕಾಪಟ್ಟೆ ವೇಗದಿಂದ ಓಡಿಸುವ ವಾಯುಪುತ್ರರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲವನ್ನು ಸಂಬಧಿಸಿದವರು ಕಟ್ಟು ನಿಟ್ಟಾಗಿ ನಿಯಂತ್ರಿಸಬೇಕು. ಕಾರುಗಳ ವೇಗವನ್ನು ಕ್ಯಾಮರಾ ಮೂಲಕ ಸೆರೆಹಿಡಿದು ಶಿಕ್ಷೆ ವಿಧಿಸುವಂತೆ, ನಗರ ಪ್ರದೇಶಗಳಲ್ಲಿ ಬೈಕುಗಳ ವೇಗದ ಮಿತಿಮೀರಿದರೆ ಶಿಕ್ಷೆ ಕಡ್ಡಾಯ ಮಾಡುವ ಜರೂರತ್ತಿದೆ. ಈ ಪಡ್ಡೆ ಹುಡುಗರ ಹುಂಬತನದ ಸವಾರಿಯ ನಡುವೆ ವಯಸ್ಸಾದವರು, ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ತಿರುಗಾಡುವಂತಿಲ್ಲ. ಇವರೇನೋ ಗುದ್ದಿ ಹೋಗುತ್ತಾರೆ, ಪಾಪ ತೊಂದರೆ ಅನುಭವಿಸುವವರು ಬೇರೆಯೇ ಆಗಿರುತ್ತಾರೆ. ಈ ಬಗ್ಗೆ ಟ್ರಾಫಿಕ್ ಪೋಲಿಸರು ತುಂಬಾ ಜಾಗೃತರಾಗಿ ಕಾರ್ಯನಿರ್ವಹಿಸಬೇಕಿದೆ. ನಿಮ್ಮದೇ ನಜರಲಿ ತಲೆಯ ಮೇಲೆ ಹೆಲ್ಮೆಟ್ ಇಲ್ಲದೇ ಭಂವ್ ಎಂದು ಸ್ಪೀಡ್ ಲಿಮಿಟ್ ಮೀರಿ ಧಿಮಾಕಿನಿಂದ ಗಾಡಿ ಓಡಿಸಿಕೊಂಡು ಹೋಗುವಂಥಾ ಯುವಕರನ್ನು ನೀವು ತಕ್ಷಣ ಹಿಡಿದು ಶಿಕ್ಷೆ ಕೊಡಿ. ಆಗ ಅವನಂಥಾ ಹತ್ತಾರು ಜನ ಪಾಠ ಕಲಿಯುತ್ತಾರೆ. ಅದು ಯಾವುದೇ ವಾಹನವಿರಲಿ ಡ್ರೈವಿಂಗ್ ಮಾಡುವಾಗ ತುಂಬಾ ಜಗೃತವಾಗಿರಬೇಕು. ಬೇಕಾ ಬಿಟ್ಟಿಯಾಗಿ ಓಡಿಸುವದು, ತೀರಾ ವೇಗವಾಗಿ ಓಡಿಸುವದು, ನಿಯಂತ್ರಣ ಮೀರಿ ಓಡಿಸುವದು ಯಾರಿಗೂ ಹಿತಕರವಲ್ಲ. ನಿಮ್ಮ ಕಾರು, ಬೈಕು ಎಷ್ಟೇ ಬೆಲೆ ಬಾಳುವದಾಗಿರಲಿ ಆದರೆ ನಿಮ್ಮ ಜೀವ ಮಾತ್ರ ಅವೆಲ್ಲವುಗಳಿಗಿಂತಲೂ ಅಮೂಲ್ಯ ಎನ್ನುವ ಸತ್ಯವನ್ನು ಮರೆಯಬೇಡಿ.

ಮಹಿಳಾ ಕೈದಿಗಳು ಮತ್ತು ಪಿರಿಯೆಡ್ಸ್

Naveen Soorinje


– ನವೀನ್ ಸೂರಿಂಜೆ


 

 

“ಪೊಲೀಸ್ ಠಾಣೆಗಳಲ್ಲಿ ನ್ಯಾಪ್ಕಿನ್ ಪ್ಯಾಡ್ ಒದಗಿಸಿ” ಎಂದು ಭಾರತೀಯ ವಿದ್ಯಾರ್ಥಿAngellica Aribam_1 ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರ ಬಗ್ಗೆ ಚರ್ಚೆಯಾಗುತ್ತಿರುವ ದಿನಗಳಲ್ಲಿ ಜೈಲಿನಲ್ಲಿರುವ ಮಹಿಳಾ ಕೈದಿಗಳ ಅವಸ್ಥೆ ನೆನಪಿಗೆ ಬಂತು. ಸಾರ್ವಜನಿಕರ ಜೊತೆಗೆ ನಿತ್ಯ ವ್ಯವಹರಿಸುವ ಪೊಲೀಸ್ ಠಾಣೆಗಳಲ್ಲಿ ಇಂತಹ ಪರಿಸ್ಥಿತಿಯಾದರೆ ಹೊರ ಜಗತ್ತಿಗೇ ಸಂಪರ್ಕವಿಲ್ಲದ ಜೈಲುಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ನಾನು ಮಂಗಳೂರು ಜೈಲಿನಲ್ಲಿ ನಾಲ್ಕುವರೆ ತಿಂಗಳು ಕಳೆಯಲು ಅವಕಾಶ ಸಿಕ್ಕಿದಾಗ ಮಹಿಳಾ ಕೈದಿಗಳು ಪಿರಿಯೆಡ್ಸ್ ಸಂದರ್ಭದಲ್ಲಿ ಅನುಭವಿಸುವ ನೋವು ಸಂಕಟಗಳ ಅರಿವಾಗಿ ದಂಗಾಗಿ ಹೋಗಿದ್ದೇನೆ. ಮಹಿಳೆಯೊಬ್ಬಳು ನನ್ನನ್ನೇ ಕೊಲೆ ಮಾಡಿದರೂ ಕೂಡ ಆಕೆಯನ್ನು ಕರ್ನಾಟಕದ ಜೈಲಿಗೆ ಹಾಕುವಂತಹ ಸ್ಥಿತಿ ಬರಬಾರದು ಎಂದು ಅಂದುಕೊಂಡರೂ ತಪ್ಪಿಲ್ಲ ಅನ್ನಿಸುತ್ತದೆ.

ಜೈಲುಗಳ ಮಹಿಳಾ ಬ್ಯಾರಕುಗಳ ಸ್ಥಿತಿ ಯಾರಿಗೂ ಬೇಡ. ಠಾಣೆಯಲ್ಲಿ ಎಂಟು ಗಂಟೆಗಳ ಕಾಲ ಪೊಲೀಸ್ ವಶದಲ್ಲಿದ್ದಾಗ ಎಂಜಲಿಕಾರವರಿಗೆ ನ್ಯಾಪ್ಕಿನ್ ಪ್ಯಾಡ್ ಸಿಗದೇ ಇದ್ದಾಗ ಅವರು ಅನುಭವಿಸಿದ ಸಂಕಟಕ್ಕೆ ಹೋಲಿಕೆನೇ ಮಾಡಲಾಗದಷ್ಟು ನರಕಯಾತನೆಯನ್ನು ಮಹಿಳಾ ಕೈದಿಗಳು ಇಂದು ಅನುಭವಿಸುತ್ತಿದ್ದಾರೆ. ಬೇರೆ ಯಾವ ಕಡೆಯಲ್ಲಾದರೂ ಯಾರನ್ನಾದರೂ ಸಂಪರ್ಕ ಮಾಡಬಹುದು. ಜೈಲಿನ ಮಹಿಳಾ ಬ್ಯಾರಕುಗಳ ಲೋಕವೇ ನಿಗೂಢವಾಗಿದ್ದು. ಇಲ್ಲಿ ವರ್ಷಗಟ್ಟಲೆ ಕೈದಿಗಳಾಗಿರುವ ಮಹಿಳೆಯರಿದ್ದಾರೆ. ಜೈಲು ಸೇರಿದ ನಂತರ ಒಂದೇ ಒಂದು ಬಾರಿಯೂ ಮನೆಯವರ ಮುಖ ನೋಡದ ಮಹಿಳೆಯರೂ ಇದ್ದಾರೆ. ಅವರ ಸ್ಥಿತಿ ಹೇಗಿರಬೇಡ ?

ಜೈಲಿನಲ್ಲಿದ್ದ ನನಗೆ ಅದೊಂದು ದಿನ ಜೈಲರ್ರಿಂದ ಕರೆ ಬಂದಿತ್ತು.Angellica Aribam ಜೈಲರನ್ನು ಭೇಟಿಯಾದಾಗ “ಮಹಿಳಾ ಕೈದಿಯೊಬ್ಬರು ನಿಮ್ಮನ್ನು ಭೇಟಿಯಾಗಬೇಕಂತೆ” ಎಂದರು. ಮಹಿಳಾ ಕೈದಿಗಳ ಭೇಟಿಗೆ ಅವಕಾಶವಿರುವ ಕೊಠಡಿಯಲ್ಲಿ ಆ ಮಹಿಳಾ ಕೈದಿಯನ್ನು ಭೇಟಿಯಾಗಿದ್ದೆ. ಆಕೆ ಸೇರಿದಂತೆ ಆಗ ಜೈಲಿನಲ್ಲಿದ್ದ 15 ಕ್ಕೂ ಅಧಿಕ ಮಹಿಳಾ ಕೈದಿಗಳ ತಮ್ಮ ದುಸ್ಥಿತಿಯನ್ನು ತೋಡಿಕೊಂಡರು. ಸೀಮಿತವಾಗಿರುವ ಬಟ್ಟೆಬರೆಗಳನ್ನು ಇಟ್ಟುಕೊಂಡು ಮಹಿಳೆಯೊಬ್ಬಳು ಬದುಕುವುದೇ ದುಸ್ಥರವಾಗಿರುವಾಗ ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಇಲ್ಲವೆಂದರೆ ಹೇಗೆ? ಜೈಲಿಗೆ ನ್ಯಾಪ್ಕಿನ್ ಒದಗಿಸಲೆಂದೇ ಪ್ರತ್ಯೇಕ ಹಣದ ವ್ಯವಸ್ಥೆ ಇದೆ. ಆದರೆ, ಅದು ಅಧಿಕಾರಿಗಳ ಕಿಸೆ ಸೇರುತ್ತದೆ. ಪಿರಿಯೆಡ್ಸ್ ಸಂದರ್ಭದಲ್ಲಿ ಮಹಿಳೆಯ ಮಾನಸಿಕ ಸ್ಥಿತಿಯಲ್ಲೂ ಏರುಪೇರಾಗುತ್ತದೆ. ಪಿರಿಯೆಡ್ಸ್ ಸಮಯದಲ್ಲಿ ಮಹಿಳೆಯ ಸ್ವಚ್ಚವಾಗಿರುವ ಶೌಚಾಲಯ ಬಳಸಬೇಕು. ಇಲ್ಲದೇ ಇದ್ದಲ್ಲಿ ಆಕೆ ಹಲವು ರೋಗಗಳಿಗೆ ಈಡಾಗುತ್ತಾಳೆ. ಆದರೆ ಯಾವ ಮಹಿಳಾ ಬ್ಯಾರಕಿನಲ್ಲೂ ಯಾವುದೇ ಶೌಚಾಲಯಗಳು ಸ್ವಚ್ಚವಾಗಿಲ್ಲ.

ವಿಚಿತ್ರವೆಂದರೆ ಜೈಲಿನೊಳಗಿನ ಈ ಪರಿಪಾಟಲನ್ನು ಮಹಿಳಾ ಜೈಲರ್ ಗಳಿಗೆ ಹೇಳಿದರೂ ಪ್ರಯೋಜನವಾಗುವುದಿಲ್ಲ. ಒಂದು ಉಪ-ಕಾರಾಗೃಹದಲ್ಲಿ ಸಾಮಾನ್ಯವಾಗಿ ಒಂದು ಪುರುಷ ಜೈಲರ್, ಒಂದು ಮಹಿಳಾ ಜೈಲರ್ ಮತ್ತು ಒಬ್ಬ ಜೈಲ್ ಸೂಪರಿಂಡೆಂಟ್ ಇರುತ್ತಾರೆ. ಮಹಿಳಾ ಜೈಲರ್ ಎಂಬುದು ಮಹಿಳಾ ಬ್ಯಾರಕಿಗಷ್ಟೇ ಸೀಮಿತ ಆಗಿರೋದ್ರಿಂದ ಅವರ ಅಧಿಕಾರ ಅಷ್ಟಕ್ಕಷ್ಟೆ. ನೂರಾರು ಕೈದಿಗಳನ್ನು ಸಂಭಾಳಿಸುವ ಪುರುಷ ಜೈಲರುಗಳದ್ದೇ ಜೈಲುಗಳಲ್ಲಿ ಕಾರುಬಾರು ಇರುತ್ತದೆ. ಮಹಿಳಾ ಜೈಲರುಗಳು ನ್ಯಾಪ್ಕಿನ್ ಬಗ್ಗೆ ಪ್ರಸ್ತಾಪಿಸಿದ್ರೂ ಸುಪರಿಂಡೆಂಟ್ ಎದುರು ಸ್ವತಃ ಮುಜುಗರಕ್ಕೆ ಈಡಾಗಬೇಕಾಗುತ್ತದೆ.

ನನ್ನ ಬ್ಯಾರಕಿನಲ್ಲೇ ನಕ್ಸಲ್ ಆರೋಪ Women Jail inmatesಹೊತ್ತು ವಿಚಾರಣಾಧೀನ ಬಂಧನದಲ್ಲಿದ್ದ ಕೈದಿಯೊಬ್ಬರಿದ್ದರು. ಮಹಿಳಾ ಬ್ಯಾರಕಿನಲ್ಲಿ ನ್ಯಾಪ್ಕಿನ್ ಇಲ್ಲದಿರುವ ಬಗ್ಗೆ ನಾವಿಬ್ಬರೂ ಒಮ್ಮೆ ಜೈಲರನ್ನು ಭೇಟಿಯಾಗಿ ಕೇಳಿದ್ದೆವು. ಆತ ನಕ್ಕ ಶೈಲಿ ಇದೆಯಲ್ಲಾ, ಅದನ್ನು ನೆನೆಪಿಸಿಕೊಂಡಾಗ ಈಗಲೂ ಮೈ ಉರಿಯುತ್ತೆ. ನಂತರ ಜೈಲಿನೊಳಗೆ ವಿಚಾರಣಾಧೀನ ಮುಸ್ಲಿಂ ಬಂಧಿತರಿಗೆ ತೊಂದರೆಯಾದಾಗ ಜೈಲಿನಲ್ಲಿ ಪ್ರತಿಭಟನೆ ಮಾಡಿದ್ದೆವು. ಆಗ ಬೇಡಿಕೆ ಈಡೇರಿಕೆಯ ಬಗ್ಗೆ ಅಧಿಕಾರಿಗಳ ಜೊತೆ ಸಂಧಾನ ಸಭೆ ನಡೆಸಿದಾಗ, ನ್ಯಾಪ್ಕಿನ್ ವಿಚಾರವನ್ನು ಬೇಡಿಕೆಯ ಪಟ್ಟಿಯಲ್ಲಿ ಹಾಕಿದ್ದೆವು. ಸ್ವಲ್ಪ ದಿನ ನ್ಯಾಪ್ಕಿನ್ ಪೂರೈಕೆಯೂ ಆಯಿತು. ನಂತರ ನಿಂತು ಹೋಗಿದೆ.

ಜೈಲು ವ್ಯವಸ್ಥೆಯಲ್ಲೇ ತಪ್ಪುಗಳಿವೆ. ಇಲ್ಲಿ ಪುರುಷ ಕೈದಿಗಳು ಮತ್ತು ಮಹಿಳಾ ಕೈದಿಗಳ ಮಧ್ಯೆ ಆವರಣ ಗೋಡೆ ಹೊರತುಪಡಿಸಿದರೆ ಬೇರಾವ ಸರಕಾರಿ ಸೌಲಭ್ಯಗಳಲ್ಲೂ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಜೈಲಿಗೆ ಎಂದು ಬರುವ ಎಲ್ಲಾ ಅನುದಾನಗಳ ಪ್ರಯೋಜನಗಳು ಪುರುಷರ ಬ್ಯಾರಕಿಗೆ ಸಲ್ಲಿಕೆಯಾಗುತ್ತದೆ. ಗ್ರಂಥಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸರಕಾರಿ ಯೋಜನೆಗಳು ದೊಡ್ಡದಾಗಿ ಕಾಣುವ ಪುರುಷರ ಬ್ಯಾರಕುಗಳಿರುವ ಬ್ಲಾಕಿಗೆ ಹೋಗುತ್ತದೆ. ಉನ್ನತ ಅಧಿಕಾರಿಗಳು ಪರಿಶೀಲನೆಗೆ ಬರುವ ಸಂಧರ್ಭದಲ್ಲೂ ಕೇವಲ ಪುರುಷರ ಬ್ಯಾರಕುಗಳನ್ನಷ್ಟೇ ಪರಿಶೀಲನೆ ಮಾಡುತ್ತಾರೆ. ಯಾವತ್ತೋ ಒಮ್ಮೆ ಭೇಟಿ ನೀಡೋ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು ಇಲ್ಲಿಯವರೆಗೂ ಮಹಿಳಾ ಬ್ಯಾರಕಿಗೆ ಭೇಟಿ ನೀಡಿದ್ದು ನನಗಂತೂ ಗೊತ್ತಿಲ್ಲ. ಉನ್ನತ ಅಧಿಕಾರಿಗಳು ಪರಿಶೀಲನೆಯ ವೇಳೆ ಗೋಡೆ, ಕಿಟಕಿ, ಬಾಗಿಲು, ಬೀಗ ಸರಿಯಿದೆಯೇ ಎಂದು ಪರಿಶೀಲನೆ ನಡೆಸುತ್ತಾರೆಯೇ ಹೊರತು ಮನುಷ್ಯ ಬದುಕಲು ಯೋಗ್ಯವಾದ ವಾತಾವರಣ ಇದೆಯೇ ಎಂಬ ಕಡೆ ಗಮನ ಕೊಡುವುದಿಲ್ಲ. ಇಂತಹ ಪರಿಸರದಲ್ಲಿ ಪಿರಿಯೆಡ್ಸ್ ಟೈಮಲ್ಲಿ ಮಹಿಳೆಯರ ಸ್ಥಿತಿ ಹೇಗಿರಬೇಡ ?

ಪುರುಷ ಬ್ಯಾರಕ್ ಇರೋ ಜೈಲು ಆವರಣದ ಒಳಗೆ ಜೈಲಿನ ಊಟ ಸಿದ್ದವಾಗುತ್ತದೆ. ಪುರುಷ ಕೈದಿಗಳಿಗೆJail ಹಂಚಿದ ನಂತರ ಮಹಿಳಾ ಕೈದಿಗಳಿಗೆ ಊಟ ನೀಡಲಾಗುತ್ತದೆ. ಊಟ ಕಳುಹಿಸುವುದರಿಂದ ಹಿಡಿದು ಪಿರಿಯೆಡ್ಸ್ ಸಮಯದಲ್ಲಿ ನ್ಯಾಪ್ಕಿನ್ ಕೊಡೋದ್ರ ತನಕ ಮಹಿಳಾ ಕೈದಿಗಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾವುದೇ ಜೈಲುಗಳಲ್ಲಿ ಹಾಸಿಗೆ ತಲೆದಿಂಬು ಬಳಸುವಂತಿಲ್ಲ. ನೆಲದ ಮೇಲೆ, ಚಾಪೆ ಅಥವಾ ಬೆಡ್ ಶೀಟ್ ಹಾಸಿ ಮಲಗಬೇಕು. ಹಾಸಿಗೆ ದಿಂಬು ಜೈಲಿನಲ್ಲಿ ಬಳಸಲು ಒಂದೋ ನ್ಯಾಯಾಲಯದ ಅನುಮತಿ ಬೇಕು ಅಥವಾ ಪ್ರಭಾವಶಾಲಿಯಾಗಿರಬೇಕು. ಜೈಲಿನಲ್ಲಿ ದಿನಗಟ್ಟಲೆ, ವರ್ಷಗಟ್ಟಲೆ ಇದ್ದಾಗ ಪಿರಿಯೆಡ್ಸ್ ಟೈಮಲ್ಲಿ ಕೇವಲ ನ್ಯಾಪ್ಕಿನ್ ಅಲಭ್ಯತೆ ಮಾತ್ರ ಸಮಸ್ಯೆ ಅಲ್ಲ. ಪಿರಿಯೆಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ತಲೆಯನ್ನು ಗೋಡೆಗೆ ಚಚ್ಚಬೇಕು ಅನ್ನುವಷ್ಟು ತಲೆ ಸಿಡಿತವಾಗುತ್ತದೆ. ಆಗ ಒರಗಿಕೊಳ್ಳಲು ದಿಂಬಿಲ್ಲದೆ ಗೋಡೆಗೆ ತಲೆ ಇಡಬೇಕಾಗುತ್ತದೆ. ಇನ್ನು ಕೆಲ ಮಹಿಳೆಯರಿಗೆ ಪಿರಿಯೆಡ್ಸ್ ಸಮಯದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಆ ಸಂಧರ್ಭದಲ್ಲೂ ನೆಲದ ಮೇಲೆಯೇ ಮಲಗಬೇಕು ಎನ್ನುವುದು ಅದ್ಯಾವ ಶಿಕ್ಷೆ? ಮನೆಯಲ್ಲಿ ಅಕ್ಕನೋ, ತಂಗಿಯೋ, ಹೆಂಡತಿಯೋ ಬೇಕಾದ ಸೌಲಭ್ಯಗಳು ಕೈಗೆಟುಕುವಂತಿದ್ದರೂ ಪಿರಿಯೆಡ್ಸ್ ಟೈಮಲ್ಲಿ ಅವರ ಕಷ್ಟ ನಮಗೆ ನೋಡೋಕಾಗಲ್ಲ. ಅಂತಹುದರಲ್ಲಿ ನಾಲ್ಕು ಗೋಡೆಗಳ ಮಧ್ಯೆ ತಮ್ಮವರ್ಯಾರು ಇಲ್ಲದೆ, ಕನಿಷ್ಠ ಶುಚಿಯಾದ ಶೌಚಾಲಯವೂ ಇಲ್ಲದೆ, ನ್ಯಾಪ್ಕಿನ್ ಬಿಡಿ ಕನಿಷ್ಠ ಬಳಸೋಕೆ ಬಟ್ಟೆಯೂ ಇಲ್ಲದೆ ಪಿರಿಯೆಡ್ಸ್ ಟೈಮಲ್ಲಿ ಬದುಕುವ ಮಹಿಳಾ ಕೈದಿಗಳ ಪಾಡು ಹೇಗಿರಬೇಕು ಎಂದು ನೆನೆಯುವಾಗ ಮೈ ಜುಂ ಎನಿಸುತ್ತದೆ.

ಏಂಜಿಲಿಕಾರವರು ದೆಹಲಿ ಪೊಲೀಸರಿಗೆ ಬರೆದ ಪತ್ರದ ವಿಚಾರ ಚರ್ಚೆಯ ಹೊತ್ತಿನಲ್ಲಿ ಇದೆಲ್ಲ ನೆನಪಿಗೆ ಬಂತು.

ರಾಗಿಮುದ್ದೆ ಕಳ್ಳತನ ಮಾಡಿದ್ದಕ್ಕೆ ಜೀವ ಉಳಿದಿದೆ…

– ಜೀವಿ

ನನಗಿನ್ನು ಎಂಟು-ಒಂಬತ್ತು ವರ್ಷ ವಯಸ್ಸು. ಊರಿನಲ್ಲೆ ಇದ್ದ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದೆ. ತಿಂದುಂಡು ಆಡಿ ನಲಿಯುವ ಕಾಲ. ಆದರೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಕಾರಣ ಅಪ್ಪ ಶಾಲೆ ಬಿಡಿಸಿ ಜೀತಕ್ಕೆ ಅಟ್ಟಿದ್ದ. ಅಲ್ಲಾದರೂ ಮಗ ಹೊಟ್ಟೆ ತುಂಬಾ ಊಟ ಮಾಡ್ತಾನೆ ಎನ್ನೋದು ಅಪ್ಪನ ಲೆಕ್ಕಾಚಾರ. ಬೆಟ್ಟ ಸುತ್ತಿ ಐವತ್ತು ಕುರಿ ಮೇಯಿಸುವುದು, ಕೊಟ್ಟಿಗೆ ಕಸ ಬಾಚುವುದು ನನ್ನ dalit_pantherಜವಾಬ್ದಾರಿ. ಅಪ್ಪ ಕೂಡ ಕೈಒಡ್ಡಿದ್ದ ಸಾಲ ತೀರಿಸಲು ಜಮೀನ್ದಾರನ ಮನೆ ಆಲೆಮನೆಯಲ್ಲಿ ಗಾಣದಾಳಾಗಿ ದುಡಿಯುತ್ತಿದ್ದ. ಇತ್ತ ಅವ್ವ ಒಂಬತ್ತು ತಿಂಗಳ ಗಭರ್ಿಣಿ. ಅವಳು ಹೊಟ್ಟೆ ತುಂಬ ಊಟ ಮಾಡಿ ಅದೆಷ್ಟೋ ದಿನಗಳು ಕಳೆದಿದ್ದವು. ಊರಿನಲ್ಲಿ ಯಾವುದಾದರೂ ಮದುವೆ-ತಿಥಿ ನಡೆದರೆ ಅಂದು ಹೊಟ್ಟೆ ತುಂಬ ಊಟ. ಬೇರೆ ದಿನವೆಲ್ಲ ಅರೆಹೊಟ್ಟೆಯೇ ಗತಿ. ಹೇಗೋ ದಿನಗಳು ಉರುಳುತ್ತಿದ್ದವು.

ಪಟೇಲರ ಮನೆಯಲ್ಲಿ ಮದುವೆ ಎದ್ದಿತ್ತು. ಎಲ್ಲರು ಆ ದಿನಕ್ಕಾಗಿಯೇ ಕಾದು ಕುಳಿತಿದ್ದರು. ಅವ್ವ ಮತ್ತು ತಂಗಿ ನಾಲ್ಕೈದು ದಿನ ಮುನ್ನವೇ ಆ ಮನೆಯ ದನ-ಕರು, ಕಸ-ಮುಸುರೆಯ ಜವಾಬ್ದಾರಿ ನೋಡಿಕೊಂಡಿದ್ದರು. ದಿನದಲ್ಲಿ ಎರಡು ಹೊತ್ತು ಹೊಟ್ಟೆ ತುಂಬ ಊಟ ಸಿಗುತ್ತಿರುವುದೇ ತೃಪ್ತಿಯಾಗಿತ್ತು. ಮದುವೆ ಕಾರ್ಯ ಮುಗಿದು ಹೋಯಿತು. ನಿರೀಕ್ಷೆಯಷ್ಟು ನೆಂಟರು ಬರಲಿಲ್ಲ. ಮಾಡಿದ್ದ ಅನ್ನವೆಲ್ಲಾ ಮಿಕ್ಕಿತ್ತು. ಪಟೇರಿಗೆ ಅನ್ನ ಮಿಕ್ಕಿದೆ ಎಂಬ ಸಂಕಟವಾದರೆ ನಮ್ಮೂರಿನ ದಲಿತರಿಗೆ ಸಂಭ್ರಮ. ಮಿಕ್ಕಿರುವ ಅನ್ನ ನಮ್ಮ ಪಾಲೇ ಎಂಬುದು ಅವರಿಗೆ ಗೊತ್ತಿತ್ತು. ನಿರೀಕ್ಷೆಯಂತೆ ಅನ್ನ ಕೊಂಡೊಯ್ದು ಹಂಚಿಕೊಳ್ಳಲು ಪಟೇಲರು ಹೇಳಿ ಕಳುಹಿಸಿದ್ದರು.

ಬಿದಿರು ಕುಕ್ಕೆಗಳನ್ನು ಹೊತ್ತು ದಲಿತ ಕೇರಿಯ ಹೆಂಗಸರು ಮಕ್ಕಳು ಮದುವೆ ಮನೆ ಮುಂದೆ ಹಾಜರಾದರು. ಒಬ್ಬೊಬ್ಬರಿಗೆ ಮುಕ್ಕಾಲು ಕುಕ್ಕೆಯಷ್ಟು ಅನ್ನ ಸಿಕ್ಕಿತ್ತು. ಮಧ್ಯಾಹ್ನ ಮದುವೆ ಮನೆಯಲ್ಲೇ ಊಟ ಆಗಿತ್ತು. ಸಂಜೆ ಕೂಡ ಹೊಟ್ಟೆ ಬಿರಿಯುವಂತೆ ಎಲ್ಲರು ಊಟ ಮಾಡಿದರು. ಆದರೂ ಅರ್ಧ ಕುಕ್ಕೆ ಅನ್ನ ಉಳಿದಿತ್ತು. ನಾಳೆಗೂ ಚಿಂತೆ ಇಲ್ಲ ಎಂದುಕೊಂಡು ಮಲಗಿದ್ದರು. ಬೆಳಗ್ಗೆ ಸಾರು ಮಾಡಿ ಅನ್ನ ಇಕ್ಕಲು ಅವ್ವ ಕುಕ್ಕೆ ತೆಗೆದಳು. ಆದರೆ ಅದೇಕೋ ಅನ್ನ ಮೆತ್ತಾಗಾಗಿತ್ತು, ಉಳಿ ಘಮಲು ಆವರಿಸಿತ್ತು. ಅವ್ವ ಅಯ್ಯೋ…. ಎಂದು ದೊಡ್ಡದಾಗಿ ಉಸಿರು ಬಿಟ್ಟಳು. ಕೈತೊಳೆದು ತಟ್ಟೆ ಹಾಸಿಕೊಂಡು ಮೂಲೆಯಲ್ಲಿ ಕುಳಿತಿದ್ದ ಅಜ್ಜಿ ಅನ್ನಕ್ಕೂ ನಮ್ಮ ಮೇಲೆ ಮುನಿಸೇ ಎಂದು ತಟ್ಟೆ ಬದಿಗೆ ಸರಿಸಿ ನೀರು ಕುಡಿದಳು. ಬಿಸಿನೀರು ಕಾಯಿಸಿ ಅದಕ್ಕೆ ಅನ್ನ ಸುರಿದು ಕುದಿಸು ಎಂದು ಅಜ್ಜಿ ಅವ್ವನಿಗೆ ಆಜ್ಞೆ ಮಾಡಿದಳು. ಜಮೀನ್ದಾರರ ಮನೆಯಲ್ಲಿ ಅನ್ನ ಹಳಸಿದರೆ ಅದನ್ನು ತಂದು ಬಿಸಿನೀರಿನಲ್ಲಿ ಕುದಿಸಿ ಉಪ್ಪು ಹಾಕಿ ಹಿಂಡಿಕೊಂಡು ತಿನ್ನುವುದು ಸಾಮಾನ್ಯವಾಗಿತ್ತು. ಅವ್ವ ಅದೇ ರೀತಿ ಮಾಡಿ ಕಾದು ಕುಳಿತಿದ್ದ ಅಜ್ಜಿ ಮತ್ತು ಮಕ್ಕಳಿಗೆ ಬಡಿಸಿದಳು. ಉಳಿಯ ಘಮಲು ಇದ್ದರೂ ಒಂದಿಷ್ಟು ಕಡಿಮೆ ಆಗಿದೆ ಎನ್ನಿಸಿತು. ಅಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೇರೆ ದಾರಿ ಇರಲಿಲ್ಲ. ಹಾಗಾಗಿ ಹಳಸಿದ ಅನ್ನ ಊಟ ಮಾಡಲೇಬೇಕಾಯಿತು. ರಾತ್ರಿ ಕೂಡ ಹೇಗೋ ಮೂಗು ಮುಚ್ಚಿಕೊಂಡು ಅದೇ ಅನ್ನ ಉಂಡು ಮಲಗಿದರು.

ನನಗೋ ಜಮೀನ್ದಾರರ ಮನೆಯಲ್ಲಿ ಜೀತದಾಳಾಗಿದ್ದ ಕಾರಣಕ್ಕೆ ಊಟ ಸಿಗುತ್ತಿತ್ತು. ಅಜ್ಜಿ, ತಂಗಿ, ತಮ್ಮ ಮತ್ತು ಅವ್ವನಿಗೆ ದಿನದಲ್ಲಿ ಎರಡು ಹೊತ್ತು ಊಟ ಮಾಡಿದರೆ ಅದು ಸುಖದ ದಿನ. ಹೇಗೋ ಕೂಡಿಟ್ಟುಕೊಂಡಿದ್ದ ರಾಗಿ ಚೀಲ ಬರಿದಾಗಿ ಹಲವು ದಿನವೇ ಕಳೆದಿತ್ತು. ಹಿಟ್ಟಿನ ಮಡಿಕೆ ಲೊಟ್ಟೆ ಹೊಡೆಯುತ್ತಿದ್ದಂರಿಂದ ಹೆಡಕಲಿಗೆ ಸುಂಡ(ಇಲಿ) ಕೂಡ ಹತ್ತುವುದನ್ನು ಮರೆತಿತ್ತು. ಊರಿನಲ್ಲೆ ಕೆರೆ ಹಿಂಭಾಗದ ಗದ್ದೆಯಲ್ಲಿ ಗಾಣದಾಳಗಿದ್ದ ಅಪ್ಪ ರಾತ್ರಿ ಮನೆಗೆ ಬರುವಾಗ ಅಲ್ಲಿ ಉಳಿದಿದ್ದ ಮುದ್ದೆ ತಂದು ಕೊಡುತ್ತಿದ್ದ. ಅಲ್ಲಿ ಖಾಲಿ ಆಗಿದ್ದರೆ ಮನೆಯಲ್ಲಿ ಎಲ್ಲರೂ ಖಾಲಿ ಹೊಟ್ಟೆ. ಅದೊಂದು ದಿನ ಕುರಿ ಮೇಯಿಸಿಕೊಂಡು ಸಂಜೆ ಕೊಟ್ಟಿಗೆಯತ್ತ ಹೆಜ್ಜೆ ಹಾಕುತ್ತಿದ್ದೆ. ಅಲ್ಲಿಗೆ ಬಂದ ಅಪ್ಪ, ಮನೆಯೊಡತಿಗೆ ಏನಾದರೂ ಹೇಳಿ ಕತ್ತಲಾಗುವ ಹೊತ್ತಿಗೆ ಮನೆ ಹತ್ತಿರ ಬಾ ಎಂದು ಅಪ್ಪ ಹೇಳಿ ಹೊರಟ. ಕುರಿಗಳನ್ನು ಕೊಟ್ಟಿಗೆಗೆ ಕೂಡಿ, ಮನೆಯೊಡತಿಗೆ ಏನೋ ಸುಳ್ಳು ಹೇಳಿ ಮನೆಗೆ ಬಂದೆ. ಮನೆಯಲ್ಲಿ ಏನೋ ವಿಶೇಷ ಎರಬಹುದು ಎಂದು ಊಹಿಸಿ ಓಡಿ ಬಂದೆ. ಕತ್ತಲಾಗುವುದನ್ನೇ ಕಾದು ಕುಳಿತಿದ್ದ ಅಪ್ಪ, ನನಗೂ, ತಂಗಿಗೂ ಒಂದೊಂದು ರಗ್ಗು ಹೊದಿಸಿ ತನ್ನನ್ನು ಹಿಂಬಾಲಿಸುವಂತೆ ಹೇಳಿದ. ಬೆಳದಿಂಗಳು ಹಾಲು ಚೆಲ್ಲದಿಂತೆ ಹರಡಿತ್ತು. ಅಪ್ಪಿ-ತಪ್ಪಿಯೂ ತುಟಿ ಬಿಚ್ಚದಂತೆ ಆಜ್ಞೆ muddeಮಾಡಿದ್ದ. ಹಾಗಾಗಿ ಅಪ್ಪ ಏನೋ ಕಳ್ಳತನಕ್ಕೆ ಕರೆದೊಯ್ಯುತ್ತಿದ್ದಾನೆ ಎಂಬುದು ನಮಗೆ ಖಾತ್ರಿ ಆಗಿತ್ತು. ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ರಾಗಿ ಪೈರು ಕಟಾವಾಗುವ ಕಾಲ. ಜಮೀನು ಉಳ್ಳವರು ಬೆಳೆ ಕಟಾವು ಮಾಡಿ ಒಣಗಲು ಅನುಕೂಲ ಆಗುವಂತೆ ಸಣ್ಣ-ಸಣ್ಣ ಗುಪ್ಪೆ ಹಾಕಿದ್ದರು. ಏಳೆಂಟು ಗುಪ್ಪೆ ಒಂದೇ ಕಡೆ ಇರುವ ಜಾಗದಲ್ಲಿ ನಿಂತ ಅಪ್ಪ, ಅಲ್ಲೆ ಕೂರುವಂತೆ ಇಬ್ಬರಿಗೂ ಆಜ್ಞೆ ಮಾಡಿದ. ರಗ್ಗುಗಳನ್ನು ತಲೆ ತುಂಬ ಹೊದ್ದು ಕುಳಿತೆವು. ಅಪ್ಪ ಒಂದೊಂದು ಗುಪ್ಪೆಯಿಂದಲೂ ಒಂದೊಂದೇ ರಾಗಿ ಪೈರಿನ ಕಂತೆ ತಂದು ನಮಗೆ ಕೊಟ್ಟ ಅದನ್ನು ರೊಗ್ಗಿನೊಳಗೆ ಮುದುರಿಕೊಂಡು ಕುಳಿತೆವು. ಇನ್ನಷ್ಟ ತರಲು ಅಪ್ಪ ಹೋಗಿದ್ದ. ಅದ್ಯಾವ ಕೇಡುಗಾಲಕ್ಕೋ ನನಗೂ ಅಂದು ಬರಬಾರದ ಕೆಮ್ಮು ಬಂದಿತ್ತು. ತುಟಿ ಬಿಚ್ಚದಂತೆ ಅಪ್ಪ ಆಜ್ಞೆ ಮಾಡಿದ್ದರಿಂದ ತಡೆದು ನಿಲ್ಲಿಸಿಕೊಂಡಿದ್ದೆ. ತಡೆದಷ್ಟು ಕೆಮ್ಮು ಜೋರಾಯಿತು. ತಡೆದುಕೊಳ್ಳಲಾಗದೆ ಜೋರಾಗಿ ಕೆಮ್ಮಿಬಿಟ್ಟೆ. ದೂರದಲ್ಲಿದ್ದ ಅಪ್ಪ ಓಡಿ ಬಂದವನೆ ಬೆನ್ನಿಗೆ ನಾಲ್ಕೈದು ಬಾರಿ ತನ್ನ ಶಕ್ತಿಯನ್ನೆಲ್ಲಾ ಒಂದು ಮಾಡಿಕೊಂಡು ಗುದ್ದಿದ. ಜೀವ ಹೋದಂತಾಯಿತು. ಅಪ್ಪಕೊಟ್ಟ ಗುದ್ದು, ಎದೆಯಿಂದ ಉಕ್ಕಿ ಬರುತ್ತಿದ್ದ ಕೆಮ್ಮು ಎರಡನ್ನೂ ತಡೆದುಕೊಳ್ಳುವು ಕಷ್ಟವಾಯಿತು. ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿದು ಹೋದವು. ಉಸಿರು ನಿಂತ ಅನುಭವ ಆಯಿತು. ತಂಗಿ ಬೆನ್ನು-ಎದೆ ನೀವಿ, ಕಣ್ಣೀರು ಒರೆಸಿ ಸಮಾಧಾನ ಮಾಡಿದಳು. ಹೇಗೋ ನಿಧಾನವಾಗಿ ಉಸಿರು ಎಳೆದುಕೊಂಡೆ. ಮತ್ತೊಮ್ಮೆ ಕೆಮ್ಮು ಬಂದೇ ಬಿಟ್ಟಿತು. ಕೆಮ್ಮಿದರೆ ಈ ಬಾರಿ ಅಪ್ಪ ಸಾಯಿಸಿಯೇ ಬಿಡುತ್ತಾನೆ ಎಂದು ಮನದಲ್ಲೆ ಆಲೋಚಿಸಿದೆ. ಕೆಮ್ಮಿನ ಶಬ್ದ ಕೇಳಿ ರಾಗಿ ಕಂತೆ ಕಳ್ಳತನ ಸಿಕ್ಕಿ ಬೀಳುವ ಆತಂಕ ಅಪ್ಪನದು. ಕೆಮ್ಮು ತಡೆದು ಸಾಕಾಗಿದ್ದ ನನಗೊಂದು ಉಪಾಯ ಹೊಳೆಯಿತು. ಹೊದ್ದು ಕುಳಿತಿದ್ದ ರಗ್ಗನ್ನು ಮುದುರಿಕೊಂಡು ಬಾಯಿಗೆ ತುರುಕಿಕೊಂಡು ಕುಳಿತೆ. ಕೆಮ್ಮುತ್ತಿದ್ದರೂ ಶಬ್ದ ಹೊರಕ್ಕೆ ಕೇಳಲಿಲ್ಲ. ಐದರಿಂದ ಹತ್ತು ನಿಮಿಷದಲ್ಲಿ ಎಲ್ಲಾ ಗುಪ್ಪೆಯಿಂದ ಒಂದೊಂದು ಕಂತ ತಂದು ನಾವು ಕುಳಿತಿದ್ದ ಜಾಗದಲ್ಲಿ ಅಪ್ಪ ರಾಶಿ ಹಾಕಿದ. ತಲಾ ನಾಲ್ಕೈದು ಕಂತೆ ರಗ್ಗಿನೊಳಗೆ ಮುದುರಿಕೊಂಡು ಮನೆಯತ್ತ ಹೊರಟೆವು. ಕಾದು ಕುಳಿತಿದ್ದ ಅವ್ವ ಮತ್ತು ಅಜ್ಜಿ ಮನೆ ಬಾಗಿಲು ಹಾಕಿಕೊಂಡು ತೆನೆಗಳನ್ನು ಕೊಯ್ದು ಉಜ್ಜಿ ರಾಗಿ ಬಿಡಿಸಿದರು. ಸ್ವಚ್ಛಗೊಳಿಸಿ ರಾಗಿ ಬೀಸಿಕೊಂಡು ಮುದ್ದೆ ತಯಾರು ಮಾಡಿದರು. ರಾಗಿ ಕಂತೆ ಕಳ್ಳತನ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ಹುಲ್ಲಿನ ಕಂತೆಯನ್ನು ಒಲೆಗೆ ಹಾಕಿ ಬೂದಿ ಮಾಡಿದರು. ಎಲ್ಲವು ಮುಗಿಯುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಮನೆಯಲ್ಲಿ ಏನೋ ಸಂಭ್ರಮ ಎಂದುಕೊಂಡು ಓಡೋಡಿ ಬಂದ ನನಗೆ ಅಪ್ಪ ಕೊಟ್ಟ ಗುದ್ದು ಸುಧಾರಿಸಿಕೊಳ್ಳಲು ಇಡೀ ರಾತ್ರಿ ನರಳಬೇಕಾಯಿತು.

ನಾಲ್ಕೈದು ದಿನ ಕಳೆಯಿತು. ಕುರಿ ಕೊಟ್ಟಿಗೆಗೆ ಮುಟ್ಟಿಸಿ ಮನೆಗೆ ಬರುವಷ್ಟರಲ್ಲಿ ಮನೆಮುಂದೆ ಜನ ನಿಂತಿದ್ದರು. ಅವ್ವನಿಗೆ ಹೆರಿಗೆ ನೋವು ಶುರುವಾಗಿತ್ತು. ಮಧ್ಯರಾತ್ರಿ ಹೊತ್ತಿಗೆ ಗಂಡು ಮಗುವಿಗೆ ಅವ್ವ ಜನ್ಮ ನೀಡಿದ್ದಳು. ಮಗು ಗುಂಡು-ಗುಂಡಾಗಿತ್ತು, ಆದರೆ ಅವ್ವನಿಗೆ ಹೋದ ಪ್ರಜ್ಞೆ ಬಂದಿರಲಿಲ್ಲ. ಗರ್ಭಿಣಿ ಸಂದರ್ಭದಲ್ಲಿ ಹೊಟ್ಟೆ ತುಂಬ ಊಟ ಮಾಡದ ಕಾರಣಕ್ಕೆ ಅವ್ವನಿಗೆ ಅದ್ಯಾವುದೋ ಖಾಯಿಲೆ ಬಡಿದಿತ್ತು. ಬಟ್ಟೆ-ಬರೆಗಳ ಮೇಲೆ ragiನಿಗಾ ಇರಲಿಲ್ಲ, ಮಾನಸಿಕ ಅಸ್ವಸ್ಥೆಯಂತಾಗಿದ್ದಳು. ಮಗುವಿನ ಕಡೆಗೂ ಗಮನ ಇರಲಿಲ್ಲ. ಅಜ್ಜಿ ಜಮೀನ್ದಾರನ ಮನೆಯಲ್ಲಿ ಎಮ್ಮೆ ಹಾಲು ಬೇಡಿ ತಂದು ಕುಡಿಸಿ ಹೇಗೋ ಮಗುವಿನ ಜೀವ ಉಳಿಸಿಕೊಂಡಿದ್ದಳು. ಮೂರು ತಿಂಗಳು ಕಳೆದರೂ ಅವ್ವನ ಆರೋಗ್ಯ ಸುಧಾರಿಸಲಿಲ್ಲ. ಖಾಯಿಲೆ ಗುಣಪಡಿಸಲು ಅಪ್ಪ ಆಸ್ಪತ್ರೆ ಮತ್ತು ದೇವಸ್ಥಾನ ಎಂದು ಸುತ್ತಾಡಿ ಸಾಲದ ಹೊರೆಯನ್ನು ಮತ್ತಷ್ಟು ಮೈಮೇಲೆ ಎಳೆದುಕೊಂಡಿದ್ದ. ಹಾಲಿಗಾಗಿ ಮಗು ಹಾತೊರೆಯುತ್ತಿತ್ತು. ಸಿಕ್ಕಿದ್ದನ್ನು ತಿನ್ನಿಸುತ್ತಿದ್ದ ಅಜ್ಜಿಗೆ ದಿಕ್ಕು ತೋಚದಾಗಿತ್ತು. ಮುದ್ದೆ ಸಿಕ್ಕಿದರೂ ತಿನ್ನಿಸಿ ಮಗು ಉಳಿಸಿಕೊಳ್ಳಲು ಅಜ್ಜಿ ಪರದಾಡುತ್ತಿದ್ದಳು.

ಮಗು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ತೋಚದಾಯಿತು. ನಾನು ಜೀತಕ್ಕೆ ಸೇರಿದ್ದ ಮನೆಯಲ್ಲಿ ಊಟಕ್ಕೆ ಕಡಿಮೆಯಾಗಿರಲಿಲ್ಲ. ಬೆಳಗ್ಗೆ ಕುರಿ ಮೇಯಿಸಲು ಹೋಗುವ ಮುನ್ನ ನಾನು ಕೊಟ್ಟಿಗೆ ಕಸ ಬಾಚಿ ತಿಪ್ಪಿಗೆ ಸೇರಿಸಿ ನಂತರ ಊಟ ಮಾಡುತ್ತಿದ್ದೆ. ತಿಪ್ಪೆಗೆ ಕಸ ಎಸೆದು ಕೈಕಾಲು ತೊಳೆದುಕೊಂಡು ಬರುವಾಗ ಮುತ್ತುಗದ ಎಲೆಯೊಂದನ್ನು ಚಡ್ಡಿ ಜೇಬಿನಲ್ಲಿ ಇರಿಸಿಕೊಂಡು ಊಟಕ್ಕೆ ಕೂರುತ್ತಿದ್ದೆ. ಕೊಟ್ಟಿಗೆಯಲ್ಲಿ ಕುಳಿತು ಊಟ ಮಾಡುವಾಗ ಮನೆಯೊಡತಿ ಮುದ್ದೆ ಇಕ್ಕಿ, ಸಾಂಬಾರ್ ಬಿಟ್ಟು ಹೋಗುತ್ತಿದ್ದಳು. ಅವಳು ಒಳ ಹೋಗುತ್ತಿದ್ದಂತೆ ಮುದ್ದೆಯಲ್ಲಿ ಮುಕ್ಕಾಲು ಭಾಗ ಮುರಿದುಕೊಂಡು ಮುತ್ತುಗದ ಎಲೆಗೆ ಮುದುರಿಕೊಂಡು ಜೇಬಿನೊಳಗೆ ತುರುಕಿಕೊಳ್ಳುತ್ತಿದ್ದೆ. ಅವ್ವ ಮುದ್ದೆ ಎಂದರೆ ಮನೆಯೊಡತಿ ಮತ್ತೊಂರ್ಧ ಮುದ್ದೆ ಇಕ್ಕುತ್ತಿದ್ದಳು. ಊಟ ಮಾಡಿ ಕೈತೊಳೆದುಕೊಂಡವನೇ ಓಡೋಡಿ ಬಂದು ಅಜ್ಜಿ ಕೈಗೆ ಮುದ್ದೆ ಒಪ್ಪಿಸುತ್ತಿದ್ದೆ. ಮೂರು ಹೊತ್ತು ಆ ಮುದ್ದೆ ತಿನ್ನಿಸಿ ಹೇಗೋ ಮಗು ಉಳಿಸಿಕೊಂಡಳು. ಒಂದಷ್ಟು ದಿನ ಮುದ್ದೆ ಕಳ್ಳತನ ಮುಂದುವರಿಯಿತು. ಮಗು ಜೀವವೂ ಉಳಿಯಿತು. 6 ತಿಂಗಳ ನಂತರ ಅವ್ವನ ಆರೋಗ್ಯ ಸುಧಾರಿಸಿತು. ಪಟೇಲರ ಮನೆ ಕೊಟ್ಟಿಗೆ ಬಾಚುವ ಕೆಲಸಕ್ಕೆ ಸೇರಿಕೊಂಡ ಅವ್ವ ಮಗು ಉಳಿಸಿಕೊಂಡಳು. ರಾಗಿ ಮತ್ತು ಮುದ್ದೆ ಕದ್ದು ಜೀವ ಉಳಿಸಿಕೊಂಡಿದ್ದೇವೆ. ಅಂದಿನ ಸ್ಥಿತಿ ನೆನದರೆ ಇಂದಿಗೂ ಕಣ್ಣಂಚು ಒದ್ದೆಯಾಗುತ್ತವೆ.

ಹಸಿದ ಹೊಟ್ಟೆ ಅನ್ನವನ್ನು ಮಾತ್ರ ಹುಡುಕುತ್ತದೆ


– ಡಾ.ಎಸ್.ಬಿ. ಜೋಗುರ 


“ಅನ್ನ ಭಾಗ್ಯ” ಯೋಜನೆಯ ಬಗ್ಗೆ ಅನೇಕ ಹೊಟ್ಟೆ ತುಂಬಿದವರು ಮಾತನಾಡಿದ್ದಾಯಿತು. ಹಾಗೆಯೇ ಜನ ಸೋಮಾರಿಗಳಾಗುತ್ತಾರೆ ಎನ್ನುವ ಕಳಕಳಿಯನ್ನೂ ತೋರಿದ್ದಾಯಿತು. ಸೋಮಾರಿಗಳಾಗಿದ್ದವರು ಎಲ್ಲ ಭಾಗ್ಯಗಳನ್ನು ಮೀರಿಯೂ ಸೋಮಾರಿಗಳಾಗಿರುತ್ತಾರೆ. ನಿರಂತರವಾಗಿ ದುಡಿಯುವವರು ಎಲ್ಲ ವರ್ಗಗಳಲ್ಲಿ ಇರುವ ಹಾಗೆ, ಎಲ್ಲ ಸಂದರ್ಭಗಳಲ್ಲಿಯೂ ಸೋಮಾರಿಗಳಾಗಿ ಬದುಕುವವರು ಕೂಡಾ ಎಲ್ಲ ವರ್ಗಗಳಲ್ಲಿ ಇದ್ದೇ ಇದ್ದಾರೆ. ಈ ಎರಡೂ ಬಗೆಯ ಜನ ಸಮೂಹಗಳು ಸರ್ಕಾರದ ಯಾವುದೇ ಸೌಲಭ್ಯಗಳಿಗೆ ಸೀಮಿತವಾಗಿಲ್ಲ. ಚರಿತ್ರೆಯುದ್ಧಕ್ಕೂ ಆಹಾರ ಧಾನ್ಯಗಳ ಬೆಲೆ ಮತ್ತು ಪೂರೈಕೆ ಅನೇಕ ಬಗೆಯ ನಾಗರಿಕ ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿರುವ ಸತ್ಯವನ್ನು ನಾವಾರೂ ಮರೆಯಬಾರದು. 18 ನೇ ಶತಮಾನದಲ್ಲಿ ಜರುಗಿದ ಮ್ಯಾಡ್ರಿಡ್ ಹಿಂಸೆ, ಪ್ರೆಂಚ್ ಕದನಗಳು ಆಹಾರದ ಹಾಹಾಕಾರವನ್ನೇ ಆಧರಿಸಿದ್ದವು. ರೋಮ್ ಮತ್ತು ಈಜಿಪ್ತಗಳಲ್ಲಿಯೂ ಈ ಬ್ರೆಡ್ ಗಾಗಿ ಹೋರಾಟಗಳು ನಡೆದಿವೆ. ಆಹಾರದ ಕೊರತೆ ಮತ್ತು ಬೆಲೆ ಏರಿಕೆ ಹಿಂಸೆಗೆ ಎಡೆ ಮಾಡಿಕೊಟ್ಟಿರುವದಿದೆ. 2008 ರ ಸಂದರ್ಭದಲ್ಲಿ ಆಹಾರಕ್ಕಾಗಿ ಕದನಗಳು, ಹಿಂಸೆಗಳು ಬಾಂಗ್ಲಾದೇಶದಲ್ಲಿ, ಹೈತಿಯಲ್ಲಿ ಇಂಡೋನೇಶಿಯಾದಲ್ಲಿ, ಉಜಬೆಕಿಸ್ಥಾನದಲ್ಲಿ, ಬೊಲಿವಿಯಾದಲ್ಲಿ, ಮೊಜಾಂಬಿಕ್ ಮತ್ತು ಕೆಮರೂನ್ ದಲ್ಲಿ ಜರುಗಿರುವದನ್ನು ಮರೆಯುವದಾದರೂ ಹೇಗೆ..? ಆಗ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವದಿದೆ. india-poverty-hungerಆಹಾರಧಾನ್ಯಗಳ ಬೆಲೆಗಳು ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ಪ್ರಭಾವಿಸುವ, ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಜಾಗೃತವಾಗಿ ಆಹಾರದ ಬೆಲೆಗಳನ್ನು ಕಡಿಮೆ ಮಾಡುವಲ್ಲಿ, ನಿಯಂತ್ರಿಸುವಲ್ಲಿ ಹರಸಾಹಸ ಮಾಡುತ್ತಲಿವೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಜುಟ್ಟಕ್ಕೆ ಮಲ್ಲಿಗೆ ಹೂ ಎನ್ನುವ ಮಾತು ಸಾರ್ವತ್ರಿಕವಲ್ಲ. ಹಸಿದವನ ಮುಂದೆ ಅನ್ನವನ್ನಿಡಬೇಕೇ ಹೊರತು ವೇದಾಂತವನ್ನಲ್ಲ ಎನ್ನುವ ಮಾತು ಮಾತ್ರ ಸಾರ್ವತ್ರಿಕ.

2008 ರ ಮೇ ತಿಂಗಳಲ್ಲಿ ರೋಮ್ ದಲ್ಲಿ ಜರುಗಿದ ವಿಶ್ವ ಆಹಾರ ಸಮ್ಮೇಳನದಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ನಾಯಕರು ತಮ್ಮಲ್ಲಿಯ ಆಹಾರ ಸಮಸ್ಯೆಯನ್ನು ಕುರಿತು ಮಾತನಾಡಿದರು. ಎಲ್ಲರಿಗಿಂತಲೂ ವಿಶಿಷ್ಟವಾದ ರೀತಿಯಲ್ಲಿ ಮತ್ತು ಗಮನ ಸೆಳೆಯುವ ಹಾಗೆ ಮಾತನಾಡಿದವರು ಜಿಂಬ್ವಾಬೆಯ ಅಧ್ಯಕ್ಷ ಮುಗಾಬೆ. ತನ್ನ ಜನರ ಹಸಿವು ಮತ್ತು ಅಲ್ಲಿಯ ಆಹಾರ ಸಮಸ್ಯೆಯ ಬಗ್ಗೆ ವಸ್ತುನಿಷ್ಟವಾಗಿ ಮಾತನಾಡಿ ಇಡೀ ವಿಶ್ವದ ಗಮನ ಸೆಳೆದರು. ಭಾರತ ಮತ್ತು ಚೈನಾದಂತ ರಾಷ್ಟ್ರಗಳು ತಮ್ಮ ದೇಶಕ್ಕೆ ಬೇಕಾಗಬಹುದಾದ ಆಹಾರವನ್ನು ಉತ್ಪಾದಿಸುವಲ್ಲಿ ಸಮರ್ಥರಾಗುವ ಜೊತೆಯಲ್ಲಿ ಸ್ವಾವಲಂಬನೆಯನ್ನೂ ಸಾಧಿಸಿಕೊಂಡವು. ಅಂದ ಮಾತ್ರಕ್ಕೆ ಭಾರತ ಮತ್ತು ಚೈನಾಗಳಲ್ಲಿ ಹಸಿವು, ಬಡತನ ಇಲ್ಲವೆಂದಲ್ಲ. ಒಂದು ದೇಶದ ರಾಜಕೀಯ ಸುಭದ್ರತೆಯಲ್ಲಿ ಆಹಾರ ಉತ್ಪಾದನೆಗಳ ಬೆಲೆ ಇಳಿಕೆ ಇಲ್ಲವೇ ಬಡವರಿಗಾಗಿ ಈ ಬಗೆಯ ಯೋಜನೆಗಳು ತೀರಾ ಅವಶ್ಯಕ. ಇನ್ನು ಅನ್ನಭಾಗ್ಯ ಎನ್ನುವುದು ಯಾವುದೋ ಒಂದು ಐಷಾರಾಮಿ ಯೋಜನೆಗೆ ಸಂಬಂಧಿಸಿಲ್ಲ. ಸರಕಾರ ಒಂದೊಮ್ಮೆ ಬಡವರಿಗೆ ಒಂದಷ್ಟು ಮೈಸೂರ ಸ್ಯಾಂಡಲ್ ಸೋಪ್ ಉಚಿತವಾಗಿ ಕೊಡುತ್ತಿದ್ದರೆ ಅಪಸ್ವರ ಎತ್ತಬಹುದು, ರೇಷ್ಮೆ ಸೀರೆ ಕೊಡುತ್ತಿದ್ದರೆ ಆಗಲೂ ಅಪಸ್ವರ ಎತ್ತಬಹುದು ಅನ್ನ Streetchildrenಎನ್ನುವುದು ಪಾಪಿ ಪೇಟ್ ಕಾ ಸವಾಲಿಗೆ ಸಂಬಂಧಿಸಿದೆ. ನಮ್ಮಲ್ಲಿ ಇಂದಿಗೂ ಅಪೌಷ್ಟಿಕತೆಯಿಂದ ಸಾಯುವ ಮಕ್ಕಳ ಪ್ರಮಾಣ ಕಡಿಮೆಯಿಲ್ಲ. ಅಪೌಷ್ಟಿಕತೆ ಎನ್ನುವುದು ಆಹಾರದ ಕೊರತೆಯಿಂದ ಉಧ್ಬವವಾಗಬಹುದಾದ ಸಮಸ್ಯೆ.

ಅಪೌಷ್ಟಿಕತೆಯಲ್ಲಿ ಇಡಿಯಾಗಿ ಎರಡು ಪ್ರಕಾರಗಳಿವೆ ಒಂದನೆಯದು ಪ್ರೋಟೀನ್ ಎನರ್ಜಿ ಮ್ಯಾಲ್‌ನ್ಯುಟ್ರಿಶನ್ ಅಂದರೆ ಸೇವಿಸುವ ಕ್ಯಾಲೊರಿ ಮತ್ತು ಪ್ರೋಟಿನ್ ಕೊರತೆಯಿಂದಾಗಿ ಸೃಷ್ಟಿಯಾಗುವ ಅಪೌಷ್ಟಿಕತೆ. ಇನ್ನೊಂದು ಮೈಕ್ರೊನ್ಯುಟ್ರಿಯಂಟ್ ಡೆಫಿಸಿಯನ್ಸಿ ಅಂದರೆ ವಿಟಾಮಿನ್ ಮತ್ತು ಮಿನರಲ್ ಗಳ ಕೊರತೆಯಿಂದ ಉದ್ಭವವಾಗುವ ಅಪೌಷ್ಟಿಕತೆ. ಮೊದಲನೆಯದು ಶರೀರದ ಬೆಳವಣಿಗೆಯಲ್ಲಿ ಬಹಳ ಮುಖ್ಯ ಅದರ ಕೊರತೆಯುಂಟಾದರೆ ಶರೀರ ಕೃಷವಾಗತೊಡಗುತ್ತದೆ ಅದು ಬೇರೆ ಬೇರೆ ತೊಂದರೆಗಳಿಗೂ ಕಾರಣವಾಗುತ್ತದೆ. ಸಂಯುಕ್ತರಾಷ್ಟ್ರ ಸಂಘದ ವರದಿಯಂತೆ 2012-2014 ರ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಸುಮಾರು 805 ಮಿಲಿಯನ್ ಜನತೆ ಈ ಬಗೆಯ ಅಪೌಷ್ಟಿಕತೆಯ ಕೊರತೆಯಿಂದ ಬಳಲುವವರಿದ್ದಾರೆ. ಪ್ರತಿ 9 ಜನರಲ್ಲಿ ಒಬ್ಬಾತ ಆಹಾರ ಕೊರತೆಯಿಂದ ಬಳಲುವವನಿದ್ದಾನೆ. ಈ 805 ಮಿಲಿಯನ್ ಜನಸಂಖ್ಯೆಯಲ್ಲಿ 790 ಮಿಲಿಯನ್ ಜನರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಯೇ ಇದ್ದಾರೆ. ಸಬ್ ಸಹರಾನ್ ಆಫ್ರಿಕಾ ಮತ್ತು ಆಫ್ರಿಕಾ, ಏಶ್ಯಾ ಅದರಲ್ಲೂ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಆಹಾರದ ಕೊರತೆ ತೀವ್ರವಾಗಿದೆ. 2012 ರ ಸಂದರ್ಭದಲ್ಲಿ ಜಾಗತಿಕ ಹಸಿವಿನ ಸೂಚ್ಯಾಂಕ ಮಾಡಿದ ಸಮೀಕ್ಷೆಯಲ್ಲಿ ಮೂರು ಮುಖ್ಯ ಸಂಗತಿಗಳನ್ನು ಗಮನಹರಿಸಿ ಅದು ಅಧ್ಯಯನ ಮಾಡಿತ್ತು. ಒಂದನೆಯದು ಸತ್ವಭರಿತ ಆಹಾರದ ಕೊರತೆಯ ಜನಸಮೂಹದ ಪ್ರಮಾಣ, ಎರಡನೆಯದು ಶಿಶುವಿನ ಮ್ರಣ ಪ್ರಮಾಣ, ಮೂರನೇಯದು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ. cooked-riceಈ ಮೂರು ಸಂಗತಿಗಳನ್ನು ಆದರಿಸಿ ಮಾಡಲಾದ ಸಮೀಕ್ಷೆಯ ಪ್ರಕಾರ 79 ರಾಷ್ಟ್ರಗಳ ಪೈಕಿ ಭಾರತ 65 ನೇ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದೆ. 2008 ರ ಸಂದರ್ಭದಲ್ಲಿ ಭಾರತೀಯ ರಾಜ್ಯಗಳ ಹಸಿವಿನ ಸೂಚ್ಯಾಂಕದ ಪ್ರಕಾರ ದೇಶದ ಬೇರೆ ಬೇರೆ ರಾಜ್ಯಗಳ ಸ್ಥಿತಿ ಬೇರೆ ಬೇರೆಯಾಗಿದೆ. ದೇಶದ ಸುಮಾರು 12 ರಾಜ್ಯಗಳು ಆಹಾರದ ವಿಷಯವಾಗಿ ಸಂಕಷ್ಟದಲ್ಲಿವೆ. ಅದರಲ್ಲೂ ಮಧ್ಯಪ್ರದೇಶ ತೀರ ಗಂಭೀರವಾದ ಸ್ಥಿತಿಯಲ್ಲಿದೆ ಎಂದು ವರದಿ ಆಗಿರುವದಿದೆ. ಸತ್ವಭರಿತ ಆಹಾರ ಮತ್ತು ಅಭಿವೃದ್ಧಿ ಸೂಚ್ಯಾಂಕದ ವಿಷಯದಲ್ಲಿ ದೇಶದ 12 ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಹತ್ತು ರಾಜ್ಯಗಳ ಶ್ರೇಣಿ ಹೀಗಿದೆ. ಮೊದಲ ಸ್ಥಾನದಲ್ಲಿ ಕೇರಳ, ಎರಡನೆಯ ಸ್ಥಾನ ಹರಿಯಾಣಾ, ಮೂರನೇಯ ಸ್ಥಾನ ತಮಿಳುನಾಡು, ನಾಲ್ಕನೇಯ ಸ್ಥಾನದಲ್ಲಿ ಗುಜರಾತ, ಐದನೇಯ ಸ್ಥಾನದಲ್ಲಿ ಮಹಾರಾಷ್ಟ್ರ, ಆರನೇಯ ಸ್ಥಾನದಲ್ಲಿ ಕರ್ನಾಟಕ, ಏಳನೇ ಸ್ಥಾನದಲ್ಲಿ ಆಂದ್ರಪ್ರದೇಶ, ಎಂಟನೆಯ ಸ್ಥಾನದಲ್ಲಿ ಆಸ್ಸಾಂ, ಒಂಬತ್ತನೇಯ ಸ್ಥಾನದಲ್ಲಿ ಓಡಿಸಾ ಹತ್ತನೇಯ ಸ್ಥಾನದಲ್ಲಿ ರಾಜಸ್ಥಾನ ಇತ್ತು. ಆದರೆ ಯುನಿಸೆಫ್ನ ರಾಪಿಡ್ ಸರ್ವೆ ಆಫ್ ಚಿಲ್ಡ್ರನ್ ಎನ್ನುವ ಸಂಸ್ಥೆ ದೇಶವ್ಯಾಪಿ ಕೈಗೊಂಡ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ 2013-14 ರಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಈಗಲೂ ಸುಮರು 53 ಪ್ರತಿಶತ 5 ವರ್ಷದಳಗೊಳ ಹೆಣ್ಣು ಮಕ್ಕಳು ಕಡಿಮೆ ತೂಕದವರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಸುಮರು 50 ಪ್ರತಿಶತ ಮಕ್ಕಳ ಬೆಳವಣಿಗೆ ಕೃಶವಾಗಿದೆ ಎನ್ನುವ ಅಂಶವನ್ನು ಹೊರಹಾಕಿದೆ ಜೊತೆಗೆ ಗ್ರಮೀಣ ಭಾಗಗಳಲ್ಲಿ ನಗರ ಪ್ರದೇಶಗಳಿಗಿಂತಲೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪ್ರಮಾಣ ಹೆಚ್ಚಿಗಿದೆ. ಗ್ರಾಮೀಣ ಭಾಗಗಳಲ್ಲಿ ಸುಮಾರು 42 ಪ್ರತಿಶತ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುವವರಿದ್ದಾರೆ.

ಆಹಾರದ ವಿಷಯವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮೂರು ರೀತಿಯ ಸಮೂಹಗಳನ್ನು ಗುರುತಿಸಿರುವದಿದೆ ಒಂದನೆಯದಾಗಿhunger04-061 ವರ್ಷವಿಡೀ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದಿರುವ ಕುಟುಂಬಗಳು, ಎರಡನೆಯದಾಗಿ ವರ್ಷದ ಕೆಲವು ತಿಂಗಳುಗಳಲ್ಲಿ ತೊಂದರೆಯನ್ನು ಎದುರಿಸುವ ಕುಟುಂಬಗಳು, ಮೂರನೆಯದು ವರ್ಷದುದ್ದಕ್ಕೂ ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊಂದದೇ ಇರುವವರು. ಇನ್ನು ಈ ಮೇಲಿನ ಮೂರು ಪ್ರಕಾರಗಳು ದೇಶದ ಉದ್ದಗಲಕ್ಕೂ ಕಂಡು ಬರುವ ಸಮೂಹಗಳು. ಮೊದಲನೆಯ ಸಮೂಹಗಳಿಗೆ ಈ ಆಹಾರ ಸುಭದ್ರತೆಯ ಪ್ರಶ್ನೆಯೇ ಬರುವದಿಲ್ಲ. ಇನ್ನು ಎರಡನೆಯವರಿಗೆ ಸಂಕಟ ಬಂದಾಗ ವೆಂಕಟರಮಣ. ನಿಜವಾಗಿಯೂ ಆಹಾರದ ಸುಭದ್ರತೆ ಮತ್ತು ಹಕ್ಕಿನ ಪ್ರಶ್ನೆ ಇದ್ದದ್ದೇ ಮೂರನೇಯ ಜನಸಮೂಹದವರಿಗಾಗಿ. ಇವರು ಹಸಿವು ಮತ್ತು ಕೊರತೆಗಳ ನಡುವೆಯೇ ದಿನದೂಡುವವರು. ಎರಡನೆಯ ಮತ್ತು ಮೂರನೇಯ ಪ್ರರೂಪದ ಕುಟುಂಬದ ವಿಷಯಗಳ ಪ್ರಶ್ನೆ ಬಂದರೆ ವರ್ಷದ ಕೆಲವು ತಿಂಗಳುಗಳಲ್ಲಿ ಆಹಾರ ಧಾನ್ಯಗಳ ಕೊರತೆಯ ವಿಷಯವಾಗಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿದ್ದರೆ, ವರ್ಷವಿಡೀ ಆಹಾರ ಧಾನ್ಯಗಳ ಕೊರತೆ ಎದುರಿಸುವ ರಾಜ್ಯಗಳ ಸಾಲಲ್ಲಿ ಆಸ್ಸಾಂ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪೌಷ್ಟಿಕತೆಯ ಕೊರತೆ ಮತ್ತು ಕಡಿಮೆ ತೂಕದ ಮಕ್ಕಳ ವಿಷಯವಾಗಿ ಮಾತನಾಡುವದಾದರೆ ಭಾರತದಲ್ಲಿ 217 ಮಿಲಿಯನ ಜನಸಂಖ್ಯೆ ಹೆಚ್ಚೂ ಕಡಿಮೆ ಇಂಡೊನೇಷಿಯಾದ ಒಟ್ಟು ಜನಸಂಖೆಯಷ್ಟು ಜನ ನಮ್ಮಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವ ಬಗ್ಗೆ ಸಮೀಕ್ಷೆಯಲ್ಲಿ ವರದಿಯಾಗಿದೆ. ಹಸಿರು ಕ್ರಾಂತಿಗಿಂತಲೂ ಮೊದಲು ದೇಶದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಜನ ಅಪಾರವಾಗಿ ಸಾಯುತ್ತಿದ್ದರು. ಆಗ ಮರಣ ಪ್ರಮಾಣ ಸಹಜವಾಗಿ ಹೆಚ್ಚಾಗುತ್ತಿತ್ತು. ಈಗ ಅಂಥ ಬರಗಾಲಗಳಿಲ್ಲ. ಆದರೆ ಈ ಬಗೆಯ ಸತ್ವಭರಿತ ಆಹಾರದ ಕೊರತೆಯಿಂದಾಗಿ ಸಾಯುವವರ ಪ್ರಮಾಣ ಆಗಿನ ಬರಗಾಲಗಳಿಗಿಂತಲೂ ಹೆಚ್ಚಾಗಿದೆ. child-labourಇದನ್ನು ಗಮನದಲ್ಲಿಟ್ಟುಕೊಂಡೇ ಜನೆವರಿ 2011 ರ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ರವರು ‘ನಮ್ಮಲ್ಲಿ ಹಸಿವು ಮತ್ತು ಅಪೌಷ್ಟಿಕತೆ ಎನ್ನುವದು ರಾಷ್ಟ್ರ ತಲೆತಗ್ಗಿಸುವಂತಿದೆ’ ಎಂದಿದ್ದರು.

ಹಾಗೆ ನೋಡಿದರೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಇರಲಿ ಇಲ್ಲವೇ ಅನ್ನ ಭಾಗ್ಯ ಯೋಜನೆ ಇರಲಿ ನಮಗಿಂತಲೂ ಮೊದಲು ಆರಂಭಿಸಿದವರು ನೆರೆಯ ತಮಿಳುನಾಡು. ನಮ್ಮಲ್ಲಿ ಈಗ ಆಹಾರ ಉತ್ಪಾದನೆಯ ಕೊರತೆಯಿಲ್ಲ. ಸಾಕಷ್ಟು ಆಹಾರಧಾನ್ಯವನ್ನು ಸಂಗ್ರಹಿಸಿಡಲಾಗದೇ ಹಾಳಾಗುವದನ್ನು ನಾವೇ ನೋಡಿದ್ದೇವೆ. ಹುಳ ಹಿಡಿದು ಹಾಳಾಗಿ ತಿಪ್ಪೆ ಸೇರುವ ಬದಲು ಬಡ ಜನತೆಯ ಹೊಟ್ಟೆ ಸೇರುವದರಲ್ಲಿಯೇ ಒಂದರ್ಥವಿದೆ ಎನಿಸುವದಿಲ್ಲವೆ..? ಸಾಕಷ್ಟು ನಿರರ್ಥಕವಾದ ಕಾರಣಗಳಿಗಾಗಿ ಕೊಟಿಗಟ್ಟಲೆ ದುಡ್ಡು ಸುರಿಯುವಾಗ, ನಮ್ಮದೇ ಬಡ ಜನರಿಗೆ ಅನ್ನವನ್ನು ನೀಡುವ ಯೋಜನೆ ಅದು ಹೇಗೆ ವ್ಯರ್ಥವಾಗಿ ಕಂಡಿತೊ ಗೊತ್ತಿಲ್ಲ. ಕೆಲ ಬಾರಿಯಾದರೂ ನಾವು ರಾಜಕೀಯದಿಂದ ದೂರ ನಿಂತು ಯೋಚಿಸುವ, ಮಾತನಾಡುವ ಅಗತ್ಯವಿದೆ ಎನಿಸುವದರಲ್ಲಿಯೇ ನಮ್ಮ ಸಾಕ್ಷರತೆಗೆ ಬೆಲೆಯಿದೆ.

ನಮ್ಮನ್ನು ಕಾಡದಿರುವ ಅಸಹಾಯಕ ಮಹಿಳೆಯರ ಸಮಸ್ಯೆ


– ರೂಪ ಹಾಸನ


ಇತ್ತೀಚೆಗೆ ಮಾಧ್ಯಮಗಳಲ್ಲಿ ಚರ್ಚಿತವಾಗುತ್ತಿರುವ ಮಹಿಳೆಗೆ ಸಂಬಂಧಿಸಿದ ಮುಖ್ಯವಾದ ಎರಡು ವಿಷಯಗಳೆಂದರೆ, ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಿಕೆ ಕುರಿತಾದದ್ದು. ಇವು ಸರಿಯೋ ತಪ್ಪೋ ಎಂದು ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ, ಮತ್ತು ವಾಸ್ತವ ಸ್ಥಿತಿಯ ಬೇರೆ ಬೇರೆ ಮುಖಗಳನ್ನು ಬಿಚ್ಚಿಡುವುದಷ್ಟೇ ಈ ಲೇಖನದ ಪ್ರಮುಖ ಉದ್ದೇಶ ಎಂಬುದನ್ನು hallaki_woman_uttarakannadaಮೊದಲಿಗೇ ಸ್ಪಷ್ಟಪಡಿಸುತ್ತೇನೆ. ಈ ಎರಡೂ ವಿಷಯಗಳೂ ನೇರವಾಗಿ ಮತ್ತು ಮುಖ್ಯವಾಗಿ ಹೆಣ್ಣಿಗೆ ಸಂಬಂಧಿಸಿದವಾದರೂ, ಎಂದಿನಂತೆ ಹೆಣ್ಣು ಮಕ್ಕಳಿಗಿಂತಾ ಪುರುಷರೇ ಹೆಚ್ಚು ಉತ್ಸಾಹದಿಂದ ಪೂರ್ವ-ಪರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಒಂದು ಮನಸ್ಸು ಹೆಣ್ಣು ಹೀಗೆಯೇ ಇರಬೇಕು ಎಂದು ಯೋಚಿಸುವ ಸಂಪ್ರದಾಯಬದ್ಧ ಪೂರ್ವಾಗ್ರಹಪೀಡಿತ ಮನಸ್ಥಿತಿಯದಾದರೆ, ಇನ್ನೊಂದು ಮುಕ್ತಕಾಮದ ಅನುಕೂಲಗಳ ಬಗ್ಗೆ ಯೋಚಿಸುವ ಲಂಪಟ ಮನಸ್ಸು. ಇವುಗಳನ್ನು ಮೀರಿ ಹೆಣ್ಣುಮಕ್ಕಳ ಮನಸ್ಸನ್ನು, ಅವರಿರುವಂಥಾ ಸ್ಥಿತಿಯನ್ನು ವಿವೇಚಿಸಿ ನಿಜವಾಗಿ ಹೆಣ್ಣಿಗೆ ಏನು ಬೇಕು? ಎಂದು ಯೋಚಿಸುವ ಮನಸ್ಸುಗಳು ಕಡಿಮೆ.

ನಮ್ಮ ಬಹಳಷ್ಟು ವಿಚಾರಗಳು, ಕಾನೂನುಗಳೂ ಹೆಚ್ಚಾಗಿ ನಗರಕೇಂದ್ರಿತ-ಉಚ್ಚವರ್ಗ-ಸುಶಿಕ್ಷಿತ-ಬೌದ್ಧಿಕ ಸಮಾಜವನ್ನು ಉದ್ದೇಶಿಸಿ ರೂಪುಗೊಳ್ಳುವಂತವು. ಹಾಗೇ ನಮ್ಮ ಮಾಧ್ಯಮಗಳೂ ಹೆಚ್ಚಾಗಿ ಇವುಗಳ ಪರ. ಗ್ರಾಮೀಣ ಪ್ರದೇಶದ-ಬಡ-ಅಶಿಕ್ಷಿತ, ಅದರಲ್ಲೂ ಮುಖ್ಯವಾಗಿ ಮುಗ್ಧ, ಅಸಹಾಯಕ ಹೆಣ್ಣುಮಕ್ಕಳ ಬದುಕಿನ ಮೇಲೆ ಇವು ಯಾವ ರೀತಿಯ ಪರಿಣಾಮವನ್ನು ಬೀರಬಲ್ಲುವೆಂಬುದನ್ನು ಚರ್ಚಿಸುವ ಸಂದರ್ಭಗಳು ಬಹಳ ಕಡಿಮೆ. ಇಲ್ಲಿ ಅಳುವ ಮಗುವಿಗಷ್ಟೇ ಹಾಲು. ದನಿಯಿದ್ದವರಿಗಷ್ಟೇ ನ್ಯಾಯ. ಈ ಎರಡು ರೀತಿಯ ಬದುಕನ್ನು ಬದುಕುತ್ತಿರುವ ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯದಲ್ಲಿ woman-unchainedಅಗಾಧ ವ್ಯತ್ಯಾಸಗಳಿರುವುದನ್ನು ನಾವು ಗುರುತಿಸಬೇಕಿದೆ.

ಇತ್ತೀಚೆಗೆ ನಮ್ಮ ಹೆಣ್ಣುಮಕ್ಕಳು ವಿಭಿನ್ನ ಕಾರಣಗಳಿಂದಾಗಿ 10-11 ನೆಯ ವಯಸ್ಸಿಗೇ ಋತುಮತಿಯರಾಗುತ್ತಿದ್ದಾರೆ. ಅವರ ದೇಹ ಪ್ರಬುದ್ಧವಾಗುವಷ್ಟು ವೇಗದಲ್ಲಿ ಮನಸ್ಸು ಹಾಗೂ ಬುದ್ಧಿ ಪ್ರಬುದ್ಧವಾಗಲಾರದೆಂಬುದು ನಿರ್ವಿವಾದ. ವಯೋಸಹಜ ಆಕರ್ಷಣೆ, ಅಸಹಾಯಕತೆ, ಮುಗ್ಧ ಪ್ರೇಮದ ಹೆಸರಿನಲ್ಲಿ ಲೈಂಗಿಕ ಶೋಷಣೆಗೆ ಗುರಿಯಾಗಿ ಕುಟುಂಬದ ಆಶ್ರಯವಿಲ್ಲದೇ, ಅಡ್ಡದಾರಿ ಹಿಡಿದಿದ್ದ ಸಾವಿರಾರು ಹೆಣ್ಣುಮಕ್ಕಳು ಇಂದು ರಾಜ್ಯಾದ್ಯಂತ ರಿಮ್ಯಾಂಡ್ ಹೊಮ್‍ಗಳಲ್ಲಿ, ಬಾಲಮಂದಿರಗಳಲ್ಲಿ, ಸರ್ಟಿಫೈಡ್‍ಶಾಲೆಗಳಲ್ಲಿದ್ದಾರೆ. ಅಲ್ಲಿನ ಬಹಳಷ್ಟು ಹೆಣ್ಣುಮಕ್ಕಳ ಕಥೆ, ಅರಿವಿಲ್ಲದ ವಿವಾಹ ಪೂರ್ವ ಲೈಂಗಿಕ ಸಂಬಂಧದಿಂದ ದುರಂತದಲ್ಲಿ ಕೊನೆಗೊಂಡಿರುವಂತದ್ದು. ಬಹಳಷ್ಟು ಸಂದರ್ಭಗಳಲ್ಲಿ ಹೀಗೆ ಹೆಣ್ಣು ಮಕ್ಕಳನ್ನು ನಂಬಿಸಿ ಮೋಸ ಮಾಡುವವರು ಹತ್ತಿರದ ಸಂಬಂಧಿಗಳು ಹಾಗೂ ಆತ್ಮೀಯರೇ ಆಗಿರುತ್ತಾರೆ. ಮರ್ಯಾದೆಗೆ ಅಂಜಿ ಇಂತಹ ವಿಷಯಗಳು ಬಹಿರಂಗಗೊಳ್ಳದೇ, ಅಪರಾಧಿ ರಾಜಾರೋಷವಾಗಿ ತಿರುಗಾಡುತ್ತಿರುತ್ತಾನೆ. ಆದರೆ ಹೆಣ್ಣುಮಕ್ಕಳು ಮಾತ್ರ ಜೀವನ ಪರ್ಯಂತ ಅದರ ದುಷ್ಪರಿಣಾಮವೆದುರಿಸಬೇಕಾಗುತ್ತದೆ. ತಮ್ಮ ಬದುಕಿನ ಅಮೂಲ್ಯ ಗಳಿಗೆಗಳನ್ನು ತಮ್ಮವರೆನ್ನುವವರಿಲ್ಲದೇ, ಸುರಕ್ಷಿತ ಭವಿಷ್ಯವಿಲ್ಲದೇ ಕಳೆಯಬೇಕಾಗುತ್ತದೆ.

ಹಾಸನದಂತಾ ಚಿಕ್ಕ ಜಿಲ್ಲಾ ಕೇಂದ್ರವೊಂದರಲ್ಲೇ 1500ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ವಿವಿಧ ಸೌಲಭ್ಯಗಳಿಗಾಗಿ, woman-abstractಮುಖ್ಯವಾಗಿ ಏಡ್ಸ್ ಮತ್ತಿತರ ಲೈಂಗಿಕ ರೋಗಗಳು ಹರಡದಂತೆ ಸುರಕ್ಷಿತ ಲೈಂಗಿಕತೆಯ ಅರಿವು ಮೂಡಿಸಿಕೊಳ್ಳಲು ತಮ್ಮದೇ ಒಂದು ಸಂಘಟನೆಯನ್ನೂ ಮಾಡಿಕೊಂಡಿದ್ದಾರೆ. ಇವರೆಲ್ಲ ಬಡ ಮಹಿಳೆಯರು ಎಂದು ಬೇರೆ ಹೇಳಬೇಕಿಲ್ಲ. ಮತ್ತು ಇವರ್ಯಾರೂ ಸ್ವಇಚ್ಛೆಯಿಂದ ಈ ವೃತ್ತಿಯನ್ನು ಆಯ್ದುಕೊಂಡವರಲ್ಲ. ಅನಿವಾರ್ಯತೆಗೆ ಸಿಕ್ಕು, ಅಸಹಾಯಕತೆಯಿಂದ ಬಲಿಪಶುಗಳಾದವರು. ಇಲ್ಲಿ ನಾನು ಮುಖ್ಯವಾಗಿ ಹೇಳಹೊರಟ ಅಂಶವೆಂದರೆ ವೇಶ್ಯಾವಾಟಿಕೆಯನ್ನು ಕಾನೂನು ಬದ್ಧಗೊಳಿಸಿಲ್ಲವಾದರೂ ಅದನ್ನು ಸಾಮಾಜಿಕವಾಗಿ ಒಪ್ಪಿಕೊಂಡಿದ್ದೇವೆ. ಹೀಗೆಂದೇ ಅವರಿಗೆ ಸುರಕ್ಷಿತ ಲೈಂಗಿಕತೆಯ ಪಾಠವನ್ನು ಆರೋಗ್ಯ ಇಲಾಖೆಯೂ ಸೇರಿದಂತೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ನೀಡುತ್ತಿವೆ. ವೇಶ್ಯಾವಾಟಿಕೆಯನ್ನು ಯಾವುದೇ ದೇಶ ಕಾನುನುಬದ್ಧಗೊಳಿಸಲೀ ಬಿಡಲೀ ವಿಶ್ವದ ಮೂರನೇ ಹೆಚ್ಚು ಆದಾಯಗಳಿಕೆಯ ಉದ್ಯಮವಾಗಿ ಸೆಕ್ಸೋದ್ಯಮ ಸ್ಥಾನ ಪಡೆದಿರುವುದು, ನಾವೆಲ್ಲರೂ ಒಪ್ಪಲೇ ಬೇಕಾದ ಸತ್ಯ.

ಕಳೆದ 7-8ವರ್ಷದಲ್ಲಿ 150ಕ್ಕೂ ಹೆಚ್ಚು ಬೀದಿಗೆ ಬಿಸಾಡಲ್ಪಟ್ಟ ನವಜಾತ ಶಿಶುಗಳನ್ನು ಹಾಸನದಲ್ಲಿ ಸಂರಕ್ಷಿಸಿ ದತ್ತು ನೀಡಲಾಗಿದೆ ಹಾಗೂ ಇನ್ನೂ ಹಲವು ಬಿಸಾಡಲ್ಪಟ್ಟ ಶಿಶುಗಳು ನಾಯಿ-ಹಂದಿಗಳ ಪಾಲಾಗಿ ಜೀವ ಕಳೆದುಕೊಂಡಿವೆ. ಈ ಮಕ್ಕಳ ತಾಯಂದಿರಲ್ಲಿ ಹೆಚ್ಚಿನವರು ವಿವಾಹ ಪೂರ್ವ ಲೈಂಗಿಕ ಸಂಬಂಧಗಳಿಂದ ಮೋಸ ಹೋದವರು, ಅತ್ಯಾಚಾರಕ್ಕೊಳಗಾದವರೇ ಆಗಿದ್ದಾರೆ ಎಂಬುದು ಗಮನಿಸ ಬೇಕಾದ ವಿಷಯ. ಪ್ರತಿ ಜಿಲ್ಲೆಯಿಂದ ವರ್ಷಕ್ಕೆ 200-300ರಷ್ಟು ಹದಿಹರೆಯದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದಾಗಿ ಕಾಣೆಯಾಗುತ್ತಿದ್ದಾರೆ. ಅವರ ಪತ್ತೆಯೇ ಆಗುತ್ತಿಲ್ಲ. ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಇಲ್ಲಿ ಉಲ್ಲೇಖಿತರಾದ ಹೆಚ್ಚಿನವರು ಲೈಂಗಿಕ ಸಂಬಂಧಗಳಿಂದ ಮೋಸ ಹೋದ ಅಶಿಕ್ಷಿತ, ಅಲ್ಪ ವಿದ್ಯಾಭ್ಯಾಸ ಪಡೆದ, ಬಡ ಹೆಣ್ಣು ಮಕ್ಕಳೆಂಬುದನ್ನು ವಿವಿಧ ಇಲಾಖೆಯ ದಾಖಲೆಗಳು ಸ್ಪಷ್ಟೀಕರಿಸುತ್ತವೆ.

ಇದು ಒಂದು ಜಿಲ್ಲೆಯ ಉದಾಹರಣೆಯಷ್ಟೇ. ಸೃಷ್ಟಿ ಸಹಜವಾದ ಲೈಂಗಿಕತೆಯೇ ಹೆಣ್ಣಿಗೆ ಶಾಪವಾಗುವ ಅಸಂಖ್ಯ ಕಥೆಗಳು ಜಗತ್ತಿನಾದ್ಯಂತ ಇವೆ. woman-insightಅರಿವಿಲ್ಲದೇ ಇದರ ಸುಳಿಗೆ ಸಿಲುಕುವ ಇಂಥಹಾ ಹೆಣ್ಣುಮಕ್ಕಳಿಗೆ ನ್ಯಾಯ ನೀಡುವವರ್ಯಾರು? ನಿಜವಾದ ಅಪರಾಧಿಗೆ ಶಿಕ್ಷೆ ನೀಡುವವರ್ಯಾರು? ನಮ್ಮ ಕಾನೂನಿಗೆ ಇವನ್ನೆಲ್ಲಾ ನೋಡುವ ಕಣ್ಣು-ಮನಸ್ಸು ಇದೆಯೇ? ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಕ್ಕಳದು ಇನ್ನೂ ದೊಡ್ಡ ದುರಂತದ ಕಥೆಯಾದ್ದರಿಂದ ಅದನ್ನು ಪ್ರತ್ಯೇಕವಾಗಿಯೇ ಚರ್ಚಿಸುವ ಅವಶ್ಯಕತೆಯಿದೆ.

4-5 ವರ್ಷಗಳ ಹಿಂದಿನ ಒಂದು ಉದಾಹರಣೆಯನ್ನು ನೋಡುವುದಾದರೆ, ಹೆಣ್ಣುಮಕ್ಕಳನ್ನು ಮೋಸಗೊಳಿಸಿದ ಪ್ರಕರಣಗಳ ಅಪರಾಧಿ ಮೋಹನಕುಮಾರನೆಂಬ ವಿಕೃತಕಾಮಿಯ ಸಕ್ಕರೆ ಮಾತಿಗೆ ಮರುಳಾಗಿ ವಿವಾಹ ಪೂರ್ವ ಲೈಂಗಿಕತೆಗೆ ಒಪ್ಪಿ ಬದುಕು ಕಳೆದುಕೊಂಡ ಇಪ್ಪತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳು ಬಡ ಕುಟುಂಬಗಳ, ಅಲ್ಪ ವಿದ್ಯೆ ಪಡೆದ, ಉತ್ತಮ ಬದುಕು ಕಟ್ಟಿಕೊಳ್ಳುವ ಆಕಾಂಕ್ಷಿಗಳಾಗಿದ್ದರೆಂಬುದನ್ನು ಗಮನಿಸಬಹುದು.

ಶಾಸ್ತ್ರೋಕ್ತ ಹಾಗೂ ಪ್ರೇಮ ವಿವಾಹಗಳೆರಡರಲ್ಲೂ ಇಂದು ಬದ್ಧತೆ, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆ ಕಡಿಮೆಯಾಗುತ್ತಿರುವುದನ್ನು, ವಿಚ್ಛೇದನಗಳು, ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದನ್ನೂ ನಾವಿಂದು ಕಾಣುತ್ತಿದ್ದೇವೆ. ಹಾಗಿರುವಾಗ ವಿವಾಹ ಪೂರ್ವ ಲೈಂಗಿಕ ಸಂಬಂಧ ಅಥವಾ ಲಿವಿಂಗ್ ಟುಗೆದರ್‍ಗಳಲ್ಲಿ ಇವುಗಳನ್ನು ನಿರೀಕ್ಷಿಸುವುದು ಇನ್ನೂ ಕಷ್ಟ. ಯಾವುದೇ ಅನಿಶ್ಚಿತ-ಅನಪೇಕ್ಷಿತ ಸಂಬಂಧದಿಂದ ಹುಟ್ಟುವ ಮಕ್ಕಳ ಮನಸ್ಥಿತಿ childmarriageಅದೆಷ್ಟು ಅಭದ್ರತೆಯಿಂದ ಕೂಡಿರಬಹುದೆಂಬ ಊಹೆ ಮಾಡಿದರೂ ಆ ಮಕ್ಕಳ ಸ್ಥಿತಿಯ ಕುರಿತು ವ್ಯಥೆಯಾಗುತ್ತದೆ. ಪ್ರಬುದ್ಧ ಗಂಡು-ಹೆಣ್ಣಿನ ನಡುವಿನ ಸಂಬಂಧ ಪರಸ್ಪರ ಬದ್ಧತೆ, ಜವಾಬ್ದಾರಿ, ನಂಬಿಕೆಗಳಿಂದ ಕೂಡಿದ್ದಾಗ ಅದು ಪ್ರಶ್ನಾತೀತವಾದದ್ದು. ಯಾವುದೇ ವಿಷಯಕ್ಕೆ ಕಾನೂನಿನ ಮಾನ್ಯತೆ ದೊರಕಿದರೂ ಅದಕ್ಕೆ ಸಾಮಾಜಿಕ ಒಪ್ಪಿಗೆ ಸಿಗುವವರೆಗೂ ಜನಮಾನ್ಯತೆ ಹಾಗೂ ಗೌರವಗಳಿಲ್ಲ ಎಂಬುದು ನಾವು ಕಾಣುತ್ತಾ ಬಂದಿರುವ ಸತ್ಯ.

ವಿವಾಹ ಪೂರ್ವ ಲೈಂಗಿಕತೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ಲೈಂಗಿಕ ಕಾರ್ಯಕರ್ತೆಯಾಗುವ ಇಚ್ಛೆ ಹೆಣ್ಣಿಗೆ ಸ್ವಯಂ ಆಯ್ಕೆಯ ವಿಷಯವಾಗುವಷ್ಟು ಅವಳು ದೈಹಿಕ-ಮಾನಸಿಕ-ಬೌದ್ಧಿಕವಾಗಿ ಪ್ರಬುದ್ಧಳಾಗಿದ್ದರೆ ಅದು ಅವಳ ಆಯ್ಕೆಗೆ ಬಿಟ್ಟ ವಿಷಯ. ಆದರೆ ಬಹಳಷ್ಟು ಬಾರಿ ವಯೋಸಹಜ ಆಕರ್ಷಣೆ, ಒತ್ತಡ, ಅಸಹಾಯಕತೆ, ಮಹತ್ವಾಕಾಂಕ್ಷೆ , ಮುಗ್ಧತೆಯ ಹೆಸರಿನಲ್ಲಿ ಒಮ್ಮೆ ಲೈಂಗಿಕ ಸಂಬಂಧದ ಸುಳಿಯಲ್ಲಿ ಸಿಲುಕುವ ಹೆಣ್ಣುಮಕ್ಕಳು ಜೀವನ ಪರ್ಯಂತ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾದಂತಾ ಪರಿಸ್ಥಿತಿಗೆ ಸಿಕ್ಕಿಬೀಳುವುದು ದುರಂತ.

ಆದ್ದರಿಂದ ಮೊದಲು ಮಾನಸಿಕ- ಬೌದ್ಧಿಕ ಪ್ರಬುದ್ಧತೆಯನ್ನು ಪಡೆಯುವಂತಾ ಶಿಕ್ಷಣ-ಅರಿವು, ಜೊತೆಗೆ ಆರ್ಥಿಕ ಸಬಲತೆಯನ್ನು ನಮ್ಮ ಹೆಣ್ಣುಮಕ್ಕಳಿಗೆ ನೀಡಿ, ಅವರ ಬದುಕಿನ ಪ್ರತಿಯೊಂದು ಘಟ್ಟದ ಆಯ್ಕೆಯನ್ನೂ ಸ್ವಯಂ ಇಚ್ಛೆಯಿಂದ, ಯಾವುದೇ ಬಾಹ್ಯ ಒತ್ತಡವೂ ಇಲ್ಲದಂತೆ ಅವರೇ ಮಾಡಿಕೊಳ್ಳುವಂತಾ ಸ್ವಾತಂತ್ರ್ಯವನ್ನು ಅವರು ಪಡೆಯಬೇಕಿದೆ. ಅಲ್ಲಿಯವರೆಗೆ ಯಾವುದೇ ಕಾರಣದಿಂದ ಹೆಣ್ಣು ವಿವೇಕವಿಲ್ಲದ ಮುಕ್ತ ಮನೋಭಾವದವಳೂ, ಸ್ವೇಚ್ಛಾಚಾರಿಯೂ, ಕಾಮುಕರ ಸೆಳೆತಕ್ಕೆ ಸಿಕ್ಕುವವಳೂ ಆದಷ್ಟೂ ಅದರಿಂದ ಹೆಚ್ಚಿನ ಲಾಭ ಲಂಪಟ, ಬೇಜಾವಬ್ಧಾರಿಯುತ ಪುರುಷರಿಗೆ. ಜೊತೆಗೆ ವ್ಯಕ್ತಿಗೆ ಸಿಗಬೇಕಿರುವ ಘನತೆ, ಗೌರವಗಳೊಂದನ್ನೂ ಪಡೆಯದೇ ಬರಿಯ ಭೋಗದ ವಸ್ತು ಮಾತ್ರವಾಗಿ ಇನ್ನಷ್ಟು ಹೆಚ್ಚು ಸಂಕಷ್ಟಕ್ಕೆ, ನೋವಿಗೆ ಗುರಿಯಾಗುವವಳು ಮಹಿಳೆಯೇ ಆಗುತ್ತಾಳೆ.

ಹೆಣ್ಣಿನ ಘನತೆಯ-ನೆಮ್ಮದಿಯ ಬದುಕಿನ ಕುರಿತ ಕಾಳಜಿ ಇರುವ ಪ್ರಜ್ಞಾವಂತರೆಲ್ಲರೂ ಈ ಮುಖಗಳನ್ನು ಕುರಿತೂ ಅಗತ್ಯವಾಗಿ ಚರ್ಚಿಸಬೇಕಿದೆ.