Monthly Archives: February 2012

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ -7)


– ಡಾ.ಎನ್.ಜಗದೀಶ ಕೊಪ್ಪ


ಸಮಷ್ಟೀಪುರದ ರೈಲ್ವೆ ನಿಲ್ದಾಣದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಹೊರ ಜಗತ್ತಿನ ಅನುಭವಗಳನ್ನು ದಕ್ಕಿಸಿಕೊಂಡ ಜಿಮ್ ಕಾರ್ಬೆಟ್‌ ಕೆಲ ಕಾಲ ಸರಕು ಸಾಗಾಣಿಕೆಯ ರೈಲಿನಲ್ಲಿ ಗಾರ್ಡ್ ಆಗಿ ಕತಿಹಾರ್ ಮತ್ತು ನೇಪಾಳದ ಗಡಿಭಾಗದ ಮೋತಿಹಾರಿ ನಡುವೆ ಸಂಚರಿಸಿ ಹೊಸ ಅನುಭವವನ್ನು ಪಡೆದನು.

ಮಧೈ ಬಿಡುವಾದಾಗ ರೈಲ್ವೆ ಕೇಂದ್ರ ಕಚೇರಿ ಇರುವ ಗೋರಖ್‌ಪುರಕ್ಕೆ ಬೇಟಿ ನೀಡುತಿದ್ದ. ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಇಂಜಿನ್‌ಗಳ ದುರಸ್ತಿ, ಇಂಧನ ಕ್ಷಮತೆ ಮತ್ತು ಉಳಿತಾಯ ಮಾಡುವ ಬಗೆ ಇವುಗಳ ಬಗ್ಗೆ ಅಪಾರ ಆಸಕ್ತಿಯನ್ನೂ ಕೂಡ ತಾಳಿದ್ದ. ಜಿಮ್ ಕಾರ್ಬೆಟ್‌ನ ಕೆಲಸದ ಬಗೆಗಿನ ಬಧ್ಧತೆ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಕಾರ್ಬೆಟ್‌ ಎಂತಹ ಸವಾಲಿನ ಕೆಲಸವನ್ನೂ ಸಹ ನಿಭಾಯಿಸಬಲ್ಲ ಎಂಬ ನಂಬಿಕೆ ಅಧಿಕಾರಿಗಳಿಗಿತ್ತು. ಇಂತಹ ನಂಬಿಕೆ ಕಾರ್ಬೆಟ್‌ಗೆ ರೈಲ್ವೆ ಇಲಾಖೆಯಲ್ಲಿ ಹೊಸ ಹಾದಿಗೆ ಕಾರಣವಾಯಿತು.

ಸಮಷ್ಟೀಪುರದಿಂದ ಸಮಾರು 40 ಕಿಲೋಮೀಟರ್ ದೂರದಲ್ಲಿ ಹರಿಯುತಿದ್ದ ಗಂಗಾನದಿಗೆ ಆಕಾಲದಲ್ಲಿ ಯಾವುದೇ ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ ಸುಮಾರು ಐದು ಕಿಲೋಮೀಟರ್ ವಿಸ್ತೀರ್ಣ ಅಗಲ ಹರಿಯುತಿದ್ದ ನದಿಗೆ ರೈಲ್ವೆ ಮಾರ್ಗಕ್ಕಾಗಿ ಸೇತುವೆ ನಿರ್ಮಿಸುವುದು ದುಬಾರಿ ವೆಚ್ಚದ ಕೆಲಸ ಎಂದು ಬ್ರಿಟೀಷರು ತೀರ್ಮಾನಿಸಿದ್ದರು. ಹಾಗಾಗಿ ನದಿಯ ಎರಡು ದಂಡೆಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಿ ಪ್ರಯಾಣಿಕರನ್ನು ಹಾಗೂ ಸರಕು, ಕಲ್ಲಿದ್ದಲು, ಮರದ ದಿಮ್ಮಿ ಇತರೆ ವಸ್ತುಗಳನ್ನು ಮಧ್ಯಮ ಗಾತ್ರದ ಹಡಗುಗಳಲ್ಲಿ ಸಾಗಿಸುತಿದ್ದರು. ಇದರಿಂದಾಗಿ ಉತ್ತರ ಭಾರತದ ವಿಶೇಷವಾಗಿ ನೇಪಾಳ ಗಡಿಭಾಗದ ಜನತೆಗೆ ಕೊಲ್ಕತ್ತ ಸೇರಿದಂತೆ ದಕ್ಷಿಣ ಭಾಗಕ್ಕೆ ಸಂಚರಿಸಲು ಅನುಕೂವಾಗಿತ್ತು.

ಈಗಿನ ಬಿಹಾರ ರಾಜ್ಯಕ್ಕೆ ಹೊಂದಿಕೊಂಡಂತಿರುವ ಗಂಗಾ ನದಿಯ ದಕ್ಷಿಣ ಭಾಗದ ನಿಲ್ದಾಣಕ್ಕೆ ಮೊಕಮೆಘಾಟ್ ಎಂತಲೂ, ಉತ್ತರ ಭಾಗದ ನಿಲ್ದಾಣಕ್ಕೆ ಸಮಾರಿಯಾ ಘಾಟ್ ಎಂದು ಹೆಸರಿಡಲಾಗಿತ್ತು. ನದಿಯಲ್ಲಿ ಪ್ರಯಾಣಿಕರನ್ನು ಮತ್ತು ಸರಕುಗಳನ್ನು ಸಾಗಿಸುವ ಜವಬ್ದಾರಿಯನ್ನು ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ದಕಿಣ ಭಾಗದ ಮೊಕಮೆಘಾಟ್ ನಿಲ್ದಾಣದಲ್ಲಿ ಕಾರ್ಮಿಕರ ಸಮಸ್ಯೆಯಿಂದ ಸರಕುಗಳು ಮತ್ತು ಪ್ರಯಾಣಿಕರು ನಿಗದಿತ ಅವಧಿಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. 24 ಗಂಟೆಯೊಳಗೆ ಖಾಲಿಯಾಗಬೇಕಿದ್ದ ಸರಕುಗಳು ತಿಂಗಳುಗಟ್ಟಳೆ ನಿಲ್ದಾಣದಲ್ಲಿ ಕೊಳೆಯತೊಡಗಿದವು. ಕೊನೆಗೆ ಉಸ್ತುವಾರಿ ಹೊತ್ತಿದ್ದ ಕಂಪನಿ ಈ ಕೆಲಸ ತನ್ನಿಂದ ಸಾಧ್ಯವಿಲ್ಲವೆಂದು ಹೇಳಿ ಕೈಚೆಲ್ಲಿತು. ಆಂಧ್ರದ ಸಿಂಗರೇಣಿ ಮತ್ತು ಪಶ್ಚಿಮ ಬಂಗಾಳದ ಧನಬಾದ್‌ನಿಂದ ಉತ್ತರ ಭಾಗದ ರೈಲುಇಂಜಿನುಗಳಿಗೆ ಪೂರೈಕೆಯಾಗುತಿದ್ದ ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡ ಕಾರಣ ರೈಲುಗಳ ಓಡಾಟದಲ್ಲಿ ವೆತ್ಯಯ ಉಂಟಾಯಿತು. ಇದರಿಂದ ಬೇಸತ್ತ ಅಧಿಕಾರಿಗಳು ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಯ ಕೆಲಸವನ್ನು ಗುತ್ತಿಗೆ ನೀಡುವ ಬದಲು ಕಾರ್ಬೆಟ್‌ಗೆ ವಹಿಸಲು ನಿರ್ಧರಿಸಿದರು.

ಯುವಕ ಕಾರ್ಬೆಟ್‌ಗೆ ಮತ್ತೆ 50 ರುಪಾಯಿ ಸಂಬಳ ಹೆಚ್ಚಿಸಿ, ಪ್ರಯಾಣಕರು ಮತ್ತು ಸರಕುಗಳ ಸಾಗಾಣಿಕೆಯ ಉಸ್ತುವಾರಿ ವಹಿಸಿ ಅವನನ್ನು ಮೊಕಮೆಘಾಟ್ ರೈಲ್ವೆ ನಿಲ್ದಾಣಕ್ಕೆ ವರ್ಗಾವಣೆ ಮಾಡಲಾಯಿತು. ಸಂಬಳದ ಜೊತೆಗೆ ಕೂಲಿ ಕಾರ್ಮಿಕರಿಗೆ ನೀಡುವ ಹಣದಲ್ಲಿ ಶೇ.2ರಷ್ಟು ಕಮಿಷನ್ ಮತ್ತು ನಿಗದಿತ ಅವಧಿಯೊಳಗೆ ಸರಕುಗಳನ್ನು ಮತ್ತು ಕಲ್ಲಿದ್ದಲನ್ನು ಕ್ರಮಬದ್ಧವಾಗಿ ಸಾಗಾಣಿಕೆ ಮಾಡಿದರೆ, ಹೆಚ್ಚುವರಿ ಬೋನಸ್ ನೀಡುವುದಾಗಿ ರೈಲ್ವೆ ಇಲಾಖೆ ಪ್ರಕಟಿಸಿತು. ಈ ಹೊಸ ಸವಾಲಿನ ಕೆಲಸವನ್ನು ಜಿಮ್ ಕಾರ್ಬೆಟ್‌ ಸಂತೋಷದಿಂದಲೇ ಸ್ವೀಕರಿಸಿದ.

ಬಿರು ಬೇಸಿಗೆ ಆದಿನಗಳಲ್ಲಿ ತನ್ನ ಹೊಸ ಹುದ್ದೆಯ ನೇಮಕಾತಿ ಪತ್ರ ಹಿಡಿದು ಬಂದ 22ವರ್ಷದ ಯುವಕ ಕಾರ್ಬೆಟ್‌ನನ್ನು ನೋಡಿದ ಅಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿ ಸ್ಟೋರರ್ ಇವರಿಗೆ ಅಚ್ಚರಿಯಾಯಿತು. ಆ ವೇಳೆಗಾಗಲೇ ಮೊಕಮೆಘಾಟ್‌ನ ರೈಲ್ವೆ ನಿಲ್ದಾಣದಲ್ಲಿ ಅನೇಕ ಬ್ರಿಟಿಷ್ ವ್ಯಕ್ತಿಗಳು ಸೇವೆ ಸಲ್ಲಿಸುತಿದ್ದರು. ನಿಲ್ದಾಣಕ್ಕೆ ಸ್ಟೇಶನ್ ಮಾಸ್ಟರ್ ಆಗಿ ರಾಮ್ ಶರಣ್ ಎಂಬ ವ್ಯಕ್ತಿ, ಹಾಗೂ ಚಟರ್ಜಿ ಎಂಬ ಬಂಗಾಳಿ ಅಸಿಸ್ಟೆಂಟ್ ಸ್ಟೇಶನ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತಿದ್ದರು. ಇವರಿಬ್ಬರೂ ಕಾರ್ಬೆಟ್‌ಗಿಂತ 20 ವರ್ಷ ಹಿರಿಯವರಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಈ ಹುದ್ದೆಗಳಿಗೆ ಬಡ್ತಿ ಪಡೆದಿದ್ದರು. ಕಾರ್ಬೆಟ್‌ ಈ ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸ್ಥಿತಿ ಗತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ. ಕಂಪನಿಯಲ್ಲಿ ಕೆಲಸ ಮಾಡುತಿದ್ದ ಕೂಲಿ ಕಾರ್ಮಿಕರನ್ನು ಕರೆಸಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ. ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆಯಲ್ಲಿ ಆಗುತಿದ್ದ ಲೋಪಗಳನ್ನು ಗುರುತಿಸಿದ.

ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರನ್ನು ದಿನಗೂಲಿ ಆಧಾರದ ಮೇಲೆ ನೇಮಕ ಮಾಡಿಕೊಂಡು. ಪ್ರತಿ ಕಾರ್ಮಿಕನ ಬೌದ್ಧಿಕ ಮತ್ತು ದೈಹಿಕ ಶಕ್ತಿ ಆಧಾರದ ಮೇಲೆ ವಿಂಗಡನೆ ಮಾಡಿದ. ಹತ್ತು ಕಾರ್ಮಿಕರನ್ನು ಒಲಗೊಂಡ ತಂಡವನ್ನು ಮಾಡಿ ಪ್ರತಿ ತಂಡಕ್ಕೆ ಒಬ್ಬ ಮೇಸ್ತ್ರಿಯನ್ನು ನೇಮಕ ಮಾಡಿದ. ಆರು  ತಂಡಗಳನ್ನು ಕಲ್ಲಿದ್ದಲು ಸಾಗಾಣಿಕೆಗೆ  ಮತ್ತು ಕೆಲವು ತಂಡಗಳಿಗೆ ಸರಕು ಸಾಗಾಣಿಕೆ, ಉಳಿದ ತಂಡಗಳಿಗೆ ಪ್ರಯಾಣಿಕರನ್ನು ಸಾಗಿಸುವ ಹೊಣೆಗಾರಿಕೆ ವಹಿಸಿಕೊಟ್ಟ. ತಾನು ಅವರ ಜೊತೆ ನಿಂತು  ಒಡನಾಡುತ್ತಾ ಅವರನ್ನು ಹುರಿದುಂಬಿಸುತ್ತಾ ಕೇವಲ ಒಂದು ತಿಂಗಳ ಅವಧಿಯಲ್ಲಿ ಮೊಕಮೆಘಾಟ್ ನಿಲ್ದಾಣದ ಅವ್ಯವಸ್ತೆಯನ್ನ ಹತೋಟಿಗೆ ತಂದು ಕಾರ್ಬೆಟ್‌ ಎಲ್ಲರಲ್ಲೂ ಅಚ್ಚರಿ ಮೂಡಿಸಿದ. ಅವನ ಈ ಯಶಸ್ವಿನ ಹಿಂದಿನ ಸೂತ್ರವೇನೆಂದರೆ, ತಾನೊಬ್ಬ ವಿದೇಶಿ ಮೂಲದ ವ್ಯಕ್ತಿ ಎಂಬುದನ್ನು ಮರೆತು, ತನ್ನ ಬಣ್ಣ, ಹಾಗೂ ಜಾತಿ, ಧರ್ಮ, ಹಿರಿಯ, ಕಿರಿಯ, ಬಡವ, ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಬೆರೆಯುವ ವ್ಯಕ್ತಿತ್ವ ಅದ್ಭುತವಾಗಿ ಕೆಲಸ ಮಾಡಿತ್ತು. ಭಕ್ತಿಯಾರ್‌ಪುರದಲ್ಲಿ ಅರಣ್ಯದ ನಡುವೆ ಮರ ಕಡಿಯುವ ಬಡ ಕಾರ್ಮಿಕರ ನಡುವೆ ಅವನು ಒಡನಾಡಿದ್ದ ಅನುಭವ  ಇಲ್ಲಿ ಉಪಯೋಗಕ್ಕೆ ಬಂತು. ಕಾರ್ಬೆಟ್‌ ನ ಪ್ರೀತಿ ವಿಶ್ವಾಸಕ್ಕೆ ಮನಸೋತ ಕಾರ್ಮಿಕರು, ಭಾನುವಾರದ ರಜಾದಿನ, ಹಬ್ಬವೆನ್ನದೆ ವಾರದ ಏಳು ದಿನವೂ ಕೆಲಸ ಮಾಡತೊಡಗಿದರು. ತಾವು ಹಿಂದೆ ಕೆಲಸ ಮಾಡುತಿದ್ದ ಕಂಪನಿಯಲ್ಲಿ ಪಡೆಯುತಿದ್ದ ಹಣಕ್ಕಿಂತ ಹೆಚ್ಚಿನ ಕೂಲಿಯನ್ನು ಪಡೆಯತೊಡಗಿದರು. ನಿಗದಿತ ಅವಧಿಯಲ್ಲಿ ಸರಕುಗಳು, ಮತ್ತು ಕಲ್ಲಿದ್ದಲು ರವಾನೆಯಾದ ಪ್ರಯುಕ್ತ ನೀಡುತಿದ್ದ ಬೋನಸ್ ಹಣದಲ್ಲಿ ಕೇವಲ ಶೇ. 20 ರಷ್ಟನ್ನು ತಾನು ಇಟ್ಟಕೊಂಡು ಉಳಿದ 80ರಷ್ಟು ಭಾಗವನ್ನು  ಕಾರ್ಬೆಟ್‌ ಕಾರ್ಮಿಕರಿಗೆ ಹಂಚಿಬಿಡುತಿದ್ದ.

ರೈಲ್ವೆ ನಿಲ್ಧಾಣದ ಪಕ್ಕದಲ್ಲಿ ಕಾಮಿಕರಿಗೆ ವಸತಿ ಕಾಲೋನಿ ನಿರ್ಮಿಸಿ ಎಲ್ಲರೂ ಒಂದೆಡೆ ವಾಸಿಸುವಂತೆ ಮಾಡಿ ತಾನೂ ಕೂಡ ಕಾರ್ಮಿಕರ ಮನೆಗಳಿಗೆ ಹತ್ತಿರವಾಗಿರುವ ರೈಲ್ವೆ ಸಿಬ್ಬಂದಿಗಾಗಿ ನಿರ್ಮಿಸಿದ್ದ ಒಂದು ಮನೆಯೊಂದನ್ನು ಪಡೆದು ಅದರಲ್ಲಿ ವಾಸಿಸತೊಡಗಿದ.. ಕಾರ್ಬೆಟ್‌ಗೆ ನಿಲ್ದಾಣದ ಉಗ್ರಾಣದ ಉಸ್ತುವಾರಿ ಅಧಿಕಾರಿಯಾದ ಸ್ಟೋರರ್ ಬಂಗಲೆಯಲ್ಲಿ ಒಂದು ಕೊಠಡಿಯನ್ನು ನೀಡಲಾಗಿತ್ತು. ಅಲ್ಲದೆ, ನಿಲ್ದಾಣದಲ್ಲಿ ಕೆಲಸ ಮಾಡುವ ಬ್ರಿಟೀಷರಿಗೆ ಪ್ರತ್ಯೇಕ ಕ್ಯಾಂಟಿನ್ ವ್ಯವಸ್ತೆ ಇತ್ತು. ಆದರೆ, ಅಪ್ಪಟ ಭಾರತೀಯನಂತೆ ಬದುಕಿದ್ದ ಜಿಮ್ ಕಾರ್ಬೆಟ್‌ ಇವೆಲ್ಲವನ್ನು ನಿರಾಕರಿಸಿ ಬಡ ಕೂಲಿಕಾರ್ಮಿಕರ ನಡುವೆ ಬದುಕುತ್ತಾ ಅದರಲ್ಲೇ ನೆಮ್ಮದಿ ಕಾಣುತಿದ್ದ. ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರ ಓಡಾಟ ಎಲ್ಲವೂ ಒಂದು ಸುವ್ಯವಸ್ತೆಗೆ ತಲುಪಿದ ಮೇಲೆ ಪ್ರತಿಭಾನುವಾರ ಕಾರ್ಮಿಕರಿಗೆ ಅರ್ಧ ದಿನ ರಜೆ ಘೋಷಿಸಿದ. ವಾರದ  ಸಂಬಳವನ್ನು ತಾನೇ ತನ್ನ ಮನೆಯ ಅಂಗಳದಲ್ಲಿ ಎಲ್ಲರನ್ನೂ ಕೂರಿಸಿಕೊಂಡು ಕೈಯ್ಯಾರೆ ನೀಡುತಿದ್ದ. ಪ್ರತಿಯೊಬ್ಬ ಕಾರ್ಮಿಕನ ಕುಟುಂಬದ ಬಗ್ಗೆ ವಿಚಾರಿಸುತಿದ್ದ. ಅವರು ಕಾಯಿಲೆ ಬಿದ್ದರೆ, ತಾನೇ ಉಪಚರಿಸುತಿದ್ದ. ಜಿಮ್ ಕಾರ್ಬೆಟ್‌ನ ಈ ಪ್ರೀತಿ, ಅವನ ನಡುವಳಿಕೆ ಕಾರ್ಮಿಕರ ಮೇಲೆ ಅಗಾಧ ಪರಿಣಾಮವನ್ನುಂಟು ಮಾಡಿದವು.

ದಿನವಿಡಿ ದುಡಿಯುತಿದ್ದ ಕಾರ್ಮಿಕರ ಮಕ್ಕಳ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಮಾಡಬೇಕೆಂದು ಕಾರ್ಬೆಟ್‌ನ ಒಳಮನಸ್ಸು ತುಡಿಯುತಿತ್ತು. ಆದರೆ ಅದು ಒಬ್ಬ ವ್ಯಕ್ತಿ ಏಕಾಂಗಿಯಾಗಿ ಮಾಡುವ ಕೆಲಸವಾಗಿರಲಿಲ್ಲ. ಕಾರ್ಮಿಕರ ಮಕ್ಕಳು ಶಾಲೆಗೆ ಹೋಗದೇ ಇಡೀ ದಿನ ತಮ್ಮ ಶೆಡ್ಡುಗಳ ಹತ್ತಿರ ಆಟವಾಡುತ್ತಾ ಕಾಲ ಕಳೆಯುತಿದ್ದರು. ಒಮ್ಮೆ ಈ ಕುರಿತಂತೆ ಕಾರ್ಬೆಟ್‌ ತನಗಿಂತ ಹಿರಿಯವನಾಗಿದ್ದ, ರೈಲ್ವೆ ಸ್ಟೇಶನ್ ಮಾಸ್ಟರ್ ರಾಮ್ ಶರಣ್ ಜೊತೆ ಮಾತನಾಡುತ್ತಾ ಕಾರ್ಮಿಕರ ಮಕ್ಕಳಿಗೆ ಶಾಲೆ ಪ್ರಾರಂಭಿಸಿದರೆ ಹೇಗೆ? ಎಂಬ ಪ್ರಶ್ನೆ ಹಾಕಿದ. ತನ್ನ ಸೇವೆಯುದ್ದಕ್ಕೂ ಬ್ರಿಟೀಷರು ಭಾರತೀಯರನ್ನು ಎರಡನೇ ದರ್ಜೆಯ ನಾಗರೀಕರಂತೆ ಕಾಣುತಿದ್ದುದನ್ನು ಮನಗಂಡಿದ್ದ ರಾಮ್ ಶರಣ್, ಕಾರ್ಬೆಟ್‌ ನಲ್ಲಿ ಇಂತಹ ಅಂಶವನ್ನು ಕಂಡಿರಲಿಲ್ಲ. ಎಲ್ಲರನ್ನೂ ಸಮಾನ ಮನೋಭಾವದಿಂದ ನೋಡುತಿದ್ದ ಕಾರ್ಬೆಟ್‌ ಬಗ್ಗೆ ಅವನಲ್ಲಿ ಅಪಾರ ಗೌರವ ಇತ್ತು ಹಾಗಾಗಿ ಕೂಡಲೇ ಕಾರ್ಬೆಟ್‌ ನ ಕನಸಿನ ಯೋಜನೆಗೆ ರಾಮ್ ಶರಣ್ ಕೈಜೋಡಿಸಿದ.

ಇಬ್ಬರೂ ಸೇರಿ ನಿಲ್ದಾಣದ ಬಳಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿ ಒಬ್ಬ ಶಿಕ್ಷಕನನ್ನು ನೇಮಕ ಮಾಡಿ ಶಾಲೆಯನ್ನು ಪ್ರಾರಂಭಿಸಿದರು. ಮುವತ್ತು ಮಕ್ಕಳು ಮತ್ತು ಒಬ್ಬ ಶಿಕ್ಷಕನಿಂದ ಪ್ರಾರಂಭವಾದ ಈ ಶಾಲೆ ಕೇವಲ ಎರಡು ವರ್ಷದಲ್ಲಿ 270 ಮಕ್ಕಳು ಮತ್ತು 7 ಮಂದಿ ಶಿಕ್ಷಕರನ್ನು ಒಳಗೊಂಡಿತು. ಕಾರ್ಬೆಟ್‌ ತನ್ನ ಸ್ವಂತ ಖರ್ಚಿನಲ್ಲಿ ಮತ್ತಷ್ಟು ಕೊಠಡಿಗಳನ್ನ ನಿರ್ಮಿಸಿಕೊಟ್ಟ.. ಪಾಠದ ಜೊತೆ ಆಟಕ್ಕೂ ಪ್ರಾಶಸ್ತ್ಯ ನೀಡಿದ ಜಿಮ್ ಕಾರ್ಬೆಟ್‌ ಸಮಾರಿಯಾ ರೈಲ್ವೆ ನಿಲ್ದಾಣದಲ್ಲಿ ಸ್ಟೇಶನ್ ಮಾಸ್ಟರ್ ಆಗಿದ್ದ ಟಾಮ್ ಕೆಲ್ಲಿ ಜೊತೆಗೂಡಿ ಶಾಲೆಯ ಮಕ್ಕಳಿಗೆ ಹಾಕಿ ಮತ್ತು ಪುಟ್ಬಾಲ್ ಕ್ರೀಡೆಗಳನ್ನು ಪರಿಚಯಿಸಿದ. ಆಟಕ್ಕೆ ಬೇಕಾದ ಕ್ರೀಡಾ ಸಾಮಾಗ್ರಿಗಳನ್ನು ಕಾರ್ಬೆಟ್‌ ಮತ್ತು ಟಾಮ್ ಕೆಲ್ಲಿ ಇಬ್ಬರೂ ಕೂಡಿ  ತಮ್ಮ ಸ್ವಂತ ಹಣದಿಂದ ಖರೀದಿಸಿ ಶಾಲೆಗೆ ಧಾನವಾಗಿ ನೀಡಿದರು. ಅಲ್ಲದೆ, ತಮಗೆ ಬಿಡುವು ದೊರೆತಾಗ  ಮಕ್ಕಳ ಜೊತೆ ಹಾಕಿ, ಪುಟ್ಬಾಲ್ ಪಂದ್ಯಗಳಲ್ಲಿ  ಪಾಲ್ಗೊಂಡು ಆಟವಾಡುತಿದ್ದರು. ಮುಂದೆ ಈ ಶಾಲೆಯನ್ನು ಸರ್ಕಾರ ವಹಿಸಿಕೊಂಡಿತು. ಇದೀಗ ಈ ಶಾಲೆ ಮೊಕಮೆಘಾಟ್ ರೈಲ್ವೆ ನಿಲ್ದಾಣದ ಸಮೀಪ ಕೇಂದ್ರೀಯ ವಿದ್ಯಾಲಯವಾಗಿ ಹೆಮ್ಮರದಂತೆ ಬೆಳೆದು ನಿಂತಿದೆ ಅಲ್ಲದೆ  ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರುತಿದೆ.

(ಮುಂದುವರಿಯುವುದು)

ಒಂದು ಕೆಂಪು ಸಂಜೆ

“ಒಂದು ಕೆಂಪು ಸಂಜೆ”

ಕಿಶೋರಿ ಚರಣ್ ದಾಸ
ಅನುವಾದ: ಬಿ. ಶ್ರೀಪಾದ್ ಭಟ್

[ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದ ಕಿಶೋರಿ ಚರಣ್ ದಾಸ ಒರಿಯಾದಲ್ಲಿ ನವ್ಯ ಲೇಖಕರೆಂದೇ ಪ್ರಸಿದ್ದಿಯಾಗಿದ್ದರು. ಅವರ ಕತೆಗಳು ನವ್ಯದ ಅಭಿವ್ಯಕ್ತಿಯನ್ನು ಮೈಗೂಡಿಸಿಕೊಂಡಿದ್ದರೂ ಅವರ ಕತೆಗಳ ಹೂರಣ, ಗ್ರಹಿಕೆಗಳು ಮಾತ್ರ ಸಾಮಾಜಿಕತೆಯನ್ನು, ಅದರ ಅಸಹಾಯಕತೆಯನ್ನು, ತಳಮಳವನ್ನೂ ಒಳಗೊಂಡಿತ್ತು. ನಾನು ಇಲ್ಲಿ ಅನುವಾದಿಸಿದ 1970 ರಲ್ಲಿ ಬರೆದ  “ಒಂದು ಕೆಂಪು ಸಂಜೆ”  ಕಥೆ ಮಧ್ಯಮ, ಮೇಲ್ಮಧ್ಯಮ ವರ್ಗಗಳ ಸ್ವಾರ್ಥ, ಆತ್ಮವಂಚನೆಯ ಮನೋಭಾವನೆಯನ್ನು ಬಯಲಾಗಿಸುತ್ತದೆ. 42 ವರ್ಷಗಳ ನಂತರವೂ ಈ ಕಥೆ ತನ್ನ ಅನನ್ಯತೆಯಿಂದ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಇದಕ್ಕಾಗಿಯೇ ಇದನ್ನು ಮರು ಓದಿದಾಗ ಅನುವಾದಿಸಬೇಕೆನಿಸಿತು. – ಬಿ. ಶ್ರೀಪಾದ್ ಭಟ್]


“ದಯವಿಟ್ಟು ನನಗಾಗಿ ಕಾಯುತ್ತೀಯ ತಾನೆ?”
“ಖಂಡಿತ, ನಿಧಾನವಾಗಿ ಬಾ. ಅವಸರವೇನಿಲ್ಲ”

ಮತ್ತೇನಿಲ್ಲ, ನನ್ನ ಬಲಗಾಲಿನ ಶೂ ಒಳಗೆ ಮೊಳೆಯೋ, ಕಲ್ಲೋ ಸಿಕ್ಕಿಕೊಂಡು ನನ್ನ ಕಾಲಿನ ಹೆಬ್ಬೆರಳನ್ನು ಒತ್ತುತ್ತಿದೆ. ಅದನ್ನು ವಿವರವಾಗಿ ನೋಡಲೂ ನನಗೆ ವ್ಯವಧಾನವಿಲ್ಲ. ನಾನು ಸದ್ಯಕ್ಕೆ ದತ್ತ ಅವರನ್ನು ಕೂಡಿಕೊಳ್ಳಬೇಕು. ಅವರು ಪರವಾಗಿಲ್ಲ ನಿಧಾನಕ್ಕೆ ಬನ್ನಿ ಎನ್ನುತ್ತಿದ್ದರೂ ನನಗಾಗಿ ಕಾಯದೆ ತಾವು ಮಾತ್ರ ದಾಪುಗಾಲಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿದ್ದರು. ನಾನು ಅವರನ್ನು ನನ್ನ ದೃಷ್ಟಿಯಳತೆಯಲ್ಲಿ ಇರಿಸಿಕೊಂಡು ನನ್ನಿಂದ ಕಣ್ಮರೆಯಾಗದಂತೆ ಆಗಾಗ ಅವರನ್ನು ಕೂಗಿ ಕರೆಯುತ್ತಾ ನನ್ನ ಕಣ್ಣಳತೆಯಲ್ಲೇ ಇರುವಂತೆ ನೋಡಿಕೊಳ್ಳುತ್ತಿದ್ದೆ. ನಾನು ಅವರ ಹತ್ತಿರ ಹೋದಾಗಲೆಲ್ಲ ಅತ್ಯಂತ ನಿರ್ಭಾವುಕದಿಂದ ನನ್ನೆಡೆ ನೋಡುತ್ತಾ, “ನನ್ನನ್ನು ಕ್ಷಮಿಸಿ. ನನ್ನ ಕಾರನ್ನು ಆ ಬದಿಯ ಮೂಲೆಯ, ಡ್ರೈ ಕ್ಲೀನರ್ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ್ದೇನೆ. ನಾವು  ಅಲ್ಲಿಗೆ ತಲುಪಬೇಕಾಗಿದೆ’  ಎಂದು ಹೇಳಿದರು. ಅದರಲ್ಲಿ ನನಗೆ ನನ್ನ ನಡಿಗೆಯನ್ನು ತೀವ್ರಗೊಳಿಸಲು ಸೂಚನೆಯಿತ್ತು.

ನಾನು ಅವನ ಯಾವುದೇ ರೀತಿಯ ತೋರಿಕೆಯ ಸಭ್ಯ ನಡುವಳಿಕೆಗಳಿಗೆ ಅಷ್ಟೊಂದು ಗಮನ ಕೊಡಲಿಲ್ಲ. ಏಕೆಂದರೆ ಇವನೂ ಕೂಡ ತನ್ನ ಈ ವರ್ಗಗಳ ಜನರಂತೆಯೇ ಎಂದು ನನಗೆ ಗೊತ್ತಿತ್ತು. ನಾನು ಅವನನ್ನು ಹಿಂಬಾಲಿಸುತ್ತಿರುವುದಕ್ಕೆ ಮೂಲಭೂತ ಕಾರಣ ಈ ದತ್ತ ಎನ್ನುವವನು ಈ ಕ್ರಾಂತಿಕಾರಿ ನಗರ ಕಲ್ಕತ್ತಕ್ಕೆ ಸೇರಿದವನಾಗಿದ್ದಕ್ಕಾಗಿ ಹಾಗೂ ಇಲ್ಲಿಗೆ ನಾನು ಹೊಸಬನಾಗಿದ್ದಕ್ಕಾಗಿ. ಇವನ ಈ ಕಲ್ಕತ್ತ ನಗರದೊಂದಿಗಿನ ಚಿರಪರಿಚತೆಯೇ ನನಗೆ ತನ್ನಿಷ್ಟ ಬಂದಂತೆ ಮಾರ್ಗದರ್ಶನ ಮಾಡುವ ಅರ್ಹತೆಯನ್ನು ದೊರಕಿಸಿತ್ತು. ಆದರೆ ಇವೆಲ್ಲದರ ಮಧ್ಯೆ ನನ್ನ ಬಲಗಾಲಿನ ಶೂ ನನಗೆ ತೊಂದರೆ ಕೊಡುತ್ತಲೇ ಇತ್ತು. ನಗರದ ಅಂಗಡಿ, ಮುಂಗಟ್ಟುಗಳು ತಮ್ಮ ದೈನಂದಿನ ವ್ಯವಹಾರವನ್ನು ಮಾಡದೆ ಮುಚ್ಚಿದ್ದವು. ಇದು ಒಂದು ಸಣ್ಣ ಕ್ರಾಂತಿಗಾಗಿ ತೆರಬೇಕಾದ ಬೆಲೆಯೇನೊ. ಆದರೆ ಇದೇ ಕಾರಣಕ್ಕಾಗಿ ಬೀದಿ ಬದಿಯ ಸಣ್ಣ ಸಣ್ಣ ವಸ್ತುಗಳನ್ನು ವ್ಯಾಪಾರ ಮಾಡುವ ಬಡವರು ಕೂಡ ಈ ಸಣ್ಣ ಕ್ರಾಂತಿಗಾಗಿ ಅಲ್ಲಿಂದ ಕಣ್ಮರೆಯಾಗಿದ್ದು ಮಾತ್ರ ನನ್ನಲ್ಲಿ ಆಕ್ರೋಶವನ್ನುಂಟು ಮಾಡಿತ್ತು. ಆದರೆ ಆ ಗಲಭೆಪೀಡಿತ ರಸ್ತೆಯ ಮಧ್ಯದಲ್ಲಿ ಕೇವಲ ಒಂದು ಬೀದಿ ನಾಯಿ ಮಾತ್ರ ಸ್ವಾತಂತ್ರದ್ಯೋತಕವಾಗಿ ಬಾಲವನ್ನು ಅಲ್ಲಾಡಿಸುತ್ತಾ ನಿಂತಿತ್ತು. ಸಹಜವಾಗಿಯೇ ಈ ಪ್ರಮುಖ ನಗರದಲ್ಲಿ ಮನುಷ್ಯರಿಗೆ ಬದುಕುವ ಹಕ್ಕನ್ನು ಕಲ್ಪಿಸಲಾಗಿತ್ತು. ಆದರೆ ಅವರು ನಿಜವಾದ ಅರ್ಥದಲ್ಲಿ ಬದುಕಿದ್ದರೇ?  ಅಲ್ಲಿ ಬೀದಿ ದೀಪಕಂಬದ ಹಿಂದೆ ಕಾಣಿಸುತ್ತಿರುವ ಮನುಷ್ಯನಾರು? ಅವನು ತನ್ನ ಕಳಚಿಬೀಳುತ್ತಿರುವ ಲುಂಗಿಯನ್ನು ಮರೆತು ಕೈಯ್ಯಲ್ಲಿ ಕಲ್ಲನ್ನು ಹಿಡಿದು ನಿಂತಿದ್ದಾನೆಯೇ? ಆ ತರಹ ಕಾಣಿಸುತ್ತಿದೆ?  ಅಂದರೆ ಈ ನಿರ್ಜನ ನಗರ ಒಂದು ದೊಡ್ಡ ಕ್ರಾಂತಿಗಾಗಿ ತಯಾರಾಗುತ್ತಿರುವುದು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿ ಹೋಯ್ತು. ಇಲ್ಲಿ ಕಳಚಿ ಬೀಳುತ್ತಿರುವ ಲುಂಗಿಯುಟ್ಟ ಒಬ್ಬ ವ್ಯಕ್ತಿ, ಅಲ್ಲಿ ಮೊಣಕಾಲು ಮಟ್ಟಕ್ಕೆ ಧೋತಿಯುಟ್ಟ ವ್ಯಕ್ತಿ ದಾಳಿ ನಡೆಸಲು ತಯಾರಾಗಿದ್ದರು. ಅವರು ಶೋಷಕರ ಪ್ರತಿನಿಧಿಯಂತಿದ್ದ ಪೋಲೀಸ್ ನವನ ಮೇಲೆ ದಾಳಿ ನಡೆಸಿ ನಂತರ ಜನಜಂಗುಳಿಯಲ್ಲಿ ಕರಗಿ ಹೋಗುವ ತಯಾರಿಯಲ್ಲಿದ್ದಂತಿತ್ತು. ನಾನು ಈ ಸಾಮಾನ್ಯ ಜನರ ನಿಸ್ವಾರ್ಥ, ಸಮರ್ಪಣಾ ಮನೋಭಾವದ ಕ್ರಾಂತಿಗೆ ಮೆಚ್ಚಿಕೊಳ್ಳುತ್ತಿರುವಂತೆಯೇ ಈ ಕ್ರಾಂತಿಯ ಆಗಮನವನ್ನು ಸೂಚಿಸುವಂತೆ ಒಂದು ದೊಡ್ಡ ಶಬ್ದ ನನ್ನ ಕಿವಿಗಪ್ಪಳಿಸಿತು,  ಜೊತೆ ಜೊತೆಗೇ ದೂರದಿಂದ ಚೀರಾಟದ, ಹೆಜ್ಜೆಯ ದಡಬಡ ಶಬ್ದ ಕೂಡ ಕೇಳಿಸಲಾರಂಬಿಸಿತು. ನಾನೂ ಕೂಡಲೇ ಓಡಿದೆ.

ಆಗ ದತ್ತ ಅಪಾದಮಸ್ತಕವಾಗಿ ನನ್ನನ್ನು ಪರೀಕ್ಷಿಸುತ್ತಾ ನನ್ನ ಕಣ್ಣಲ್ಲಿ ಕಣ್ಣಿಟ್ಟು ಆಳದ ಆ ದೊಡ್ದ ಶಬ್ದದ ಧ್ವನಿಯಂತೆಯೇ ಹೇಳಿದ  “ನೀನು ಈ ರೀತಿ ಓಡಿದರೆ ಪೋಲೀಸರ ಕೋಲು ನಿನ್ನನ್ನು ಹಿಂಬಾಲಿಸುತ್ತದೆ, ಅಥವಾ ಬೇಕಿದ್ದರೆ ಬಂದೂಕು ಸಹ.”  “ನೀನೊಬ್ಬ ಬಂಡವಾಳಶಾಹಿ, ಬೂರ್ಜ್ವ ವರ್ಗಗಳ ಪ್ರತಿನಿಧಿ, ದುಡಿಯುವ ವರ್ಗಗಳ ಶೋಷಕ,” ಎಂದು ನನ್ನೊಳಗೆ ನಾನು ಗೊಣಗಿಕೊಂಡೆ, ಅಷ್ಟರಲ್ಲಿ ಮತ್ತೊಂದು ದೊಡ್ಡ ಶಬ್ದ, ಮತ್ತೆ ಮನುಷ್ಯರ ಚೀರಾಟದ ಧ್ವನಿಗಳು ನನ್ನ ಕಿವಿಗಪ್ಪಳಿಸಿತು. ನಾನು ಒಂದು ದೊಡ್ಡ ಗಲಭೆಯಲ್ಲಿ ಸಿಲುಕಿಕೊಂಡಿರುವುದು ಖಾತ್ರಿಯಾಯ್ತು. ಆದರೆ ನಾನು ಭಯದಿಂದ ಕಂಪಿಸಲಿಲ್ಲ. ನನ್ನ ಧೀರೋಧಾತ್ತ ನಡವಳಿಕೆಯನ್ನು ತೋರಿಸಲು ಈ ಸಂದರ್ಭಕ್ಕಾಗಿ ಎದುರು ನೋಡುತ್ತ. ಆದರೆ ಚೀರಾಟ ದೊಡ್ಡದಾಗ ತೊಡಗಿತು. ಜನರ ಓಡುತ್ತಿರುವ ಹೆಜ್ಜೆಯ ಸಪ್ಪಳದೊಂದಿಗೆ ಕುದುರೆಗಳ ಖರಪುಟ ಸದ್ದು ಮಿಳಿತವಾಗತೊಡಗಿತ್ತು. ಹೊಗೆ ಕೇವಲ ವಾಸನೆಯಾಗಿರದೆ ಕಣ್ಣಿಗೆ ಕಾಣತೊಡಗಿತ್ತು. ಈ ಹೊಗೆ ನನ್ನ ಕಣ್ಣನ್ನು, ಕಿವಿಯನ್ನು, ಶ್ವಾಸಕೋಶವನ್ನು ಆವರಿಸಿಕೊಳ್ಳತೊಡಗಿತು. ನಾನು ಕೆಮ್ಮುತ್ತಾ ದಾರಿಯಲ್ಲಿ ಬಿದ್ದ ಬುಟ್ಟಿಯೊಂದಕ್ಕೆ ಅಡ್ಡಗಾಲು ಹಾಕಿ ಎಡವಿ ದತ್ತನ ಕೈ ಹಿಡಿದುಕೊಂಡೆ. ಅದರೆ ಇದರರ್ಥ ನಾನು ಭಯಗೊಂಡಿದ್ದೇನೆಂತಲ್ಲ. ಅಥವಾ ಸ್ವಲ್ಪ ಹೊತ್ತಿನ ಮುಂಚೆ ನಾನು ಓಡಲೆತ್ನಿಸಿದ್ದು ಭಯದಿಂದಲ್ಲ.  ಬದಲಾಗಿ ನಿಜ ಹೇಳಬೇಕೆಂದರೆ ನನ್ನೊಳಗೆ ಉದ್ವೇಗವಿತ್ತು.  ಈ ಗಲಭೆಯ  ಸಂದರ್ಭದಲ್ಲಿ ಏನನ್ನಾದರೂ ಮಾಡಬೇಕೆನ್ನುವ ಹುಮ್ಮಸ್ಸಿತ್ತು. ಕ್ರಾಂತಿಗಾಗಿ ಕನಿಷ್ಟ ಒಂದು ಚಪ್ಪಲಿಯನ್ನು ತೂರುವುದರ ಮೂಲಕವಾದರು.

ಆ ಹೊಗೆಯಲ್ಲಿ ಕೆಲವು ಜನರನ್ನು ಪೋಲೀಸರು ಆಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ನಾನು ಪೋಲೀಸರತ್ತ ಉಗುಳಿದೆ. ನಾನು ಪೋಲಿಸರ ವಿರುದ್ಧ ಉಗುಳಿದ್ದನ್ನು ದತ್ತ ನೋಡಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಅವನಿಗೆ ಈ ಬಂಡವಾಳಶಾಹಿಗಳ ವಿರುದ್ಧದ ನನ್ನೊಳಗಿನ ಆಕ್ರೋಶ ಅರಿವಾಗಬೇಕೆಂಬುದು ನನ್ನ ಆಸೆ. ಅದರೆ ಅವನು ಇದ್ಯಾವುದನ್ನು ಗಮನಿಸದೆ ಯಂತ್ರದಂತೆ ನೆಟ್ಟಗೆ ನಡೆಯುತ್ತಿದ್ದ. ಅವನ ನೇರವಾದ, ಗೊಂದಲವಿಲ್ಲದ ಈ ನಡಿಗೆ ಯಾವುದೋ ಸೆಮಿನಾರ್ ನ  ಭಾಷಣಕ್ಕೆ ಹೋಗುವಂತಿತ್ತು. ನನಗೆ ಅಸಹ್ಯವೆನಿಸಿತು.  ನಾನು ತಿರುವಿನ ಬಳಿ ಸಾಗುತ್ತಿದ್ದಂತೆಯೇ ಗಲಭೆ ನಮ್ಮೆಲ್ಲರ ಕೈಮೀರಿದಂತಿತ್ತು. ಹಠಾತ್ತಾಗಿ ಬೀದಿಯ ಮದ್ಯೆ, ಮನೆ, ಅಂಗಡಿಗಳ ಮೇಲೆ ಎಲ್ಲೆಲ್ಲಿಯೂ ಜನರು ಕಾಣಿಸಕೊಳ್ಳತೊಡಗಿದರು. ನಾನು ಈ ಜನಸಮೂಹದಲ್ಲಿ, ಈ ಸಮೂಹ ಸನ್ನಿಯಲ್ಲಿ ಸಿಕ್ಕಿಕೊಂಡಿರುವುದು ಖಾತ್ರಿಯಾಯಿತು. ನನ್ನ ಅಸಹಾಯಕತೆಯನ್ನು ಹಳಿದುಕೊಂಡೆ. ನಾನು ಉತ್ತೇಜನಕ್ಕಾಗಿ ರೋಧಿಸತೊಡಗಿದೆ. ನಾನು ಈ ಜನ ಸಮೂಹವನ್ನು ಪ್ರಚೋದಿಸುತ್ತಾ, ಅದರ ನಾಯಕತ್ವ ವಹಿಸಿಕೊಳ್ಳಲು ಬಯಸಿದ್ದೆ…. ಆದರೆ ಈ ಜನ ಸಮೂಹ ನನ್ನನ್ನು ನೆಲದ ಮೇಲೆ ಕಾಲಿಡದಂತೆ ತಳ್ಳತೊಡಗಿತು. ನಾನು ಹರಸಾಹಸ ಮಾಡಿ ದತ್ತನಿಗೆ ಅಂಟಿಕೊಂಡು ಇಲ್ಲ ನಾನು ಈ ರೀತಿಯ ಅಸಹಾಯಕ ಮನುಷ್ಯನಲ್ಲ ! ನನಗೆ ಈ ಶೋಷಣೆ ವಿರುದ್ದ ಹೋರಾಟಕ್ಕೆ ಒಂದು ಅಸ್ತ್ರವನ್ನು ಕೊಡಿ !! ಒಂದು ಬಾಂಬನ್ನು ಕೊಡಿ!! ಇಲ್ಲವೇ ನಿಮ್ಮ ಕಾರೊಳಗೆ ತೂರಿಕೊಳ್ಳಲು ಬಿಟ್ಟುಬಿಡಿ !! ಇಲ್ಲಿ ಏನನ್ನೂ ಮಾಡಲಿಕ್ಕಾಗದ ಅವಮಾನಕ್ಕಿಂತ ನಿಮ್ಮ ಕಾರಲ್ಲಿ ತೂರಿಕೊಳ್ಳುವುದು ಉತ್ತಮವೆಂದು ನನಗನ್ನಿಸುತ್ತಿದೆ!!! ಹೌದು ಮಿ.ದತ್ತರ ಬಳಿ ಈ ರೀತಿಯ ಒಂದು ಹುಚ್ಚು ಹುಚ್ಚಾದ ಮೌನ ಕೋರಿಕೆಯನ್ನು ಮಾಡಿದೆ.

ನನಗೆ ಈ ದತ್ತನ ಜಾಣತನದ ಬಗೆಗೆ ಮೆಚ್ಚುಗೆಯಾಯ್ತು. ಇಷ್ಟೊಂದು ಗಲಭೆ, ಕಲ್ಲು ತೂರಾಟ, ಬೆಚ್ಚಿಬೀಳಿಸುವ ಶಬ್ದಗಳ ನಡುವೆಯೂ ಇವನು ಚಾಣಾಕ್ಷತನದಿಂದ ನನ್ನನ್ನು ಈ ಗಲಭೆಪೀಡಿತ ರಸ್ತೆಯಿಂದ ಪಾರುಮಾಡಿಸಿ ಅಲ್ಲಿ ಮೂಲೆಯಲ್ಲಿದ್ದ ತನ್ನ ಕಾರ್‌ನ ಬಳಿಗೆ ಕರೆದೊಯ್ದಿದ್ದ. ಆ ಅತ್ಯಂತ ದೊಡ್ಡ ಮಿರಮಿರ ಮಿಂಚುವ ಕಪ್ಪು ಕಾರು ನೋಡಿದ ತಕ್ಷಣ ನನಗೆ ಒಂದು ರೀತಿಯಲ್ಲಿ ಅದು ಅತಿ ಘೋರವೆನಿಸಿತು. ಹಾಗೂ ಈ ದತ್ತನ ಶ್ರೀಮಂತ ಪ್ರದರ್ಶನಕ್ಕೆ ಹೀಯಾಳಿಸಬೇಕೆನಿಸಿತು. ನೀನು ಇಂದಿನ ಈ ಗಲಭೆ, ಸಾವು ನೋವಿನ ದಿನದಂದೂ ಕೂಡ ಸೂಟ್ ಹಾಗೂ ಟೈ ಅನ್ನು ಧರಿಸಿ, ಇದರ ಜೊತೆಗೆ ಇಂತಹ ಐಷಾರಾಮಿ ಕಾರನ್ನು ಇಟ್ಟುಕೊಂಡು ಶ್ರೀಮಂತಿಕೆಯಿಂದ ಓಡಾಡುತ್ತಿರುವುದು ಈ ಗಲಭೆಯಿಂದ ತೊಂದರೆಗೊಳಗಾದ ಸಾವಿರಾರು ಜನರನ್ನು ಅವಮಾನ ಮಾಡಿದಂತಾಗಲಿಲ್ಲವೇ ಎಂದು ಕೇಳಬೇಕೆನಿಸಿತು. ಅಲ್ಲಿ ಅ ರಸ್ತೆಯ ಅಂಚಿನಲ್ಲಿ ಒಂದು ಗಾಡಿ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಿತ್ತು. ಆದರೆ ದತ್ತ ಇದನ್ನು ಕಡೆಗಣಿಸಿ ಕಾರನ್ನೇರಿದ. ಅವನ ಜೊತೆಗೆ ನಾನೂ ಕಾರೊಳಗೆ ತೂರಿಕೊಂಡೆ ಆರಾಮಾಗಿ!

(ಈ ಬಾರಿ ನನ್ನಲ್ಲಿ ಅಂತಹ ಗೊಂದಲಗಳಿದ್ದಂತಿರಲಿಲ್ಲ.)  ಚಲಿಸುವ ಕಾರಿನೊಳಗೆ ನನ್ನನ್ನು ನಾನು ಹಿಂಬದಿಯ ಕನ್ನಡಿಯೊಳಗೆ ನೋಡಿಕೊಂಡೆ. ಅಲ್ಲಿನ ಪ್ರತಿಬಿಂಬ ನನಗೆ ಧೈರ್ಯವನ್ನು ಕೊಡುತ್ತಿತ್ತು. ಅದೇ ಪರಿಚಿತ ಗುಳಿಬಿದ್ದ ಕೆನ್ನೆಗಳು, ಉಬ್ಬಿದ ಹಣೆ, ಆತಂಕದ ಕಣ್ಣುಗಳು. ಅಥವಾ ಅದೇ ಉಪೇಂದ್ರ ದಾಸ್‌ನ ಕ್ರಾಂತಿಕಾರಿ ಚಹರೆ. ಒಂದು ಕಾಲದಲ್ಲಿ ಹಳ್ಳಿಯ ಶಾಲೆಯಲ್ಲಿ ಇಂಗ್ಲೀಷನ್ನು ಭೋದಿಸುತ್ತಿದ್ದ ಈ ಉಪೇಂದ್ರ ದಾಸ್ ಈಗ ಕಲ್ಕತ್ತದ ಸರ್ಕಾರಿ ಕಛೇರಿಯಲ್ಲಿ ಪ್ರಥಮ ದರ್ಜೆಯ ಗುಮಾಸ್ತ. ನನ್ನ ಈ ಚಹರೆಯನ್ನು ಎಣ್ಣೆ ಮುಖದ ಕಾರೊಳಗಿನ ನನ್ನ ಸಂಗಾತಿಯೊಂದಿಗೆ ಯಾರಾದರೂ ಹೋಲಿಸಿ ಗೊಂದಲಗೊಂಡರೆ??  ಒಂದು ವೇಳೆ ಹೋಲಿಸಿದರೂ ಅವರಿಗೆ ವ್ಯತ್ಯಾಸಗಳು ಗೊತ್ತಾಗುತ್ತವೆ. ಏಕೆಂದರೆ ನಾನು ಅಲ್ಲಿ ಬೀದಿಗಳಲ್ಲಿ ಗಲಭೆಯಲ್ಲಿ ಹೋರಾಡುತ್ತಿರುವ ಸಾವಿರಾರು ಜನರೊಂದಿಗೆ ಬಾಯಲ್ಲಿ ಹೇಳಲಾರದ ಹೃದಯದ ಮೌನ ಭಾಷೆಯನ್ನು ಬಳಸಿ ಮಾತನಾಡಿದ್ದೇನೆ.

“ಕಾಮ್ರೇಡ್ಸ್, ನಾನು ಇವನೊಂದಿಗೆ ಇರುವುದು ತಾತ್ಕಾಲಿಕ ಮಾತ್ರ. ನಾನು ಎಂದಿಗೂ ನಿಮ್ಮವನೇ.  ಇವನೊಂದಿನ ಈ ತಾತ್ಕಾಲಿಕ ಐಷಾರಾಮಿ ಸ್ನೇಹ ನಿಮ್ಮೊಂದಿಗಿನ ಸಂಬಂಧವನ್ನು ಕಡಿದು ಹಾಕಲಾರದು !! ನನ್ನ ಪ್ರಿಯ ಕಾಮ್ರೇಡ್ ಸ್ನೇಹಿತರೇ, ನಾನು ಸಧ್ಯಕ್ಕೆ ಸ್ಥಗಿತಗೊಂಡಿದ್ದೇನೆ!!  ಆದರೂ ನಾನು ನಿಮ್ಮೊಂದಿಗಿದ್ದೇನೆ!!  ಕ್ರಾಂತಿ ಚಿರಾಯುವಾಗಲಿ!!!” ಅತ್ಯಂತ ಸುಖಮಯವಾಗಿ ಈ ವಿದೇಶಿ ಕಾರು ಚಲಿಸುತ್ತಿರುವಾಗಲೂ ಕೂಡ ನನ್ನಲ್ಲಿ ಅನೇಕ ಪ್ರಶ್ನೆಗಳೇಳುತ್ತಿದ್ದವು.   “ನಾವು ಸಾಗುತ್ತಿರುವ ರಸ್ತೆ ಗಲಭೆಗ್ರಸ್ತ ರಸ್ತೆಗೆ ಸಮಾನಂತರದಲ್ಲಿದೆ. ಯಾರಿಗೆ ಗೊತ್ತು ಇಲ್ಲಿಯೂ ಕೂಡ ಲುಂಗಿಯನ್ನು ಧರಿಸಿದ ಯುವಕರು ಕೈಯಲ್ಲಿ ಕಲ್ಲು ಹಿಡಿದು ಮರದ, ಕಟ್ಟಡದ ಮರೆಯಲ್ಲಿ ನಿಂತಿದ್ದರೆ ? ನಮ್ಮ ಸುರಕ್ಷತೆಯ ಬಗೆಗೆ ಯಾವ ಗ್ಯಾರಂಟಿ ?  ಇಲ್ಲಿ ನಮ್ಮ ಅಂದರೆ ಈ ಬೂರ್ಜ್ವ ದತ್ತನ ಸುರಕ್ಷತೆ ಹೇಗೆ ಎಂದರ್ಥ.” ಹೀಗೆ ಪ್ರಯಾಣ ಮುಂದುವರಿಯುತ್ತಿದ್ದಾಗ ದಾರಿಯಲ್ಲಿ ಗುಡಿಸಲುಗಳು, ಬಡತನವನ್ನು ಹೊದ್ದುಕೊಂಡು ನಿಂತಿದ್ದ ಅರೆಬೆತ್ತಲಿನ ಸಣ್ಣ ಹುಡುಗರು, ಟೀ ಅಂಗಡಿ, ಅದಕ್ಕೆ ನೇತುಬಿದ್ದ ಒಣಗಿದ ಬಾಳೆ ಹಣ್ಣು, ಟೀ ಪೊಟ್ಟಣಗಳು ಕಣ್ಣಿಗೆ ಬಿದ್ದವು. ಒಂದು ರೀತಿಯಲ್ಲಿ ಮಂಕು ಕವಿದ ನೀರವತೆ! ಈ ಮಧ್ಯೆ ಅಂಬುಲೆನ್ಸ್ ನಮ್ಮನ್ನು ದಾಟಿ ಮುಂದೆ ಚಲಿಸಿದ್ದನ್ನು ಬಿಟ್ಟರೆ ಸಧ್ಯಕ್ಕೆ ಅಂತಹ ವಿಶೇಷವಾದುದ್ದೇನು ಕಾಣಿಸಲಿಲ್ಲ. ಅಂದರೆ ನಾವು ಗಲಭೆಪೀಡಿತ ಪ್ರದೇಶವನ್ನು ದಾಟಿದ್ದೇವೆಂದಾಯ್ತು. ದಾರಿ ಮುಂದೆ ಸಾಗಿದಂತೆ ಇಲ್ಲಿ ಯಾವುದೇ ಹೊಗೆ ಕಾಣಿಸುತ್ತಿರಲಿಲ್ಲ. ಅದರ ಬದಲಿಗೆ ಆಕಳುಗಳು, ಬಾತುಕೋಳಿಗಳು ಕಣ್ಣಿಗೆ ಬಿದ್ದವು. ಹಸಿರು ಕಣ್ಣಿಗೆ ಮುದಗೊಳಿಸುತ್ತಿದೆ. ಆದರೆ ನನ್ನೊಳಗಿನ ಅಂತರಾತ್ಮ ನನ್ನನ್ನು ಕೆಣಕುತ್ತಿದ್ದ.  “ಉಪೇಂದ್ರ ದಾಸ್, ನೀನು ಆ ಚಳುವಳಿಯಲ್ಲಿ ಭಾಗವಹಿಸದೆ ತಪ್ಪು ಮಾಡಲಿಲ್ಲವೇ?  ಈ ಬೂರ್ಜ್ವ ಕ್ರಿಮಿಯ ಜೊತೆ ಸೇರಿ ನಿನ್ನನ್ನು ನೀನು ಈ ಗಲಭೆಯಿಂದ ರಕ್ಷಿಸಿಕೊಂಡೆಯಲ್ಲವೇ?  ಇಲ್ಲಿ ಗೆದ್ದದ್ದು ಆ ಬೂರ್ಜ್ವ ದತ್ತ !!  ಇವನು ಬಲಶಾಲಿಯಾದಂತಹ ಆನೆ ಇರುವೆಗಿಂತಲೂ ಶಕ್ತಿಶಾಲಿ ಎಂದು ಸಾಬೀತುಪಡಿಸಿಬಿಟ್ಟ. ಈ ಎಲ್ಲ ಪ್ರಶ್ನೆಗಳನ್ನು ಆ ಗಲಭೆಗ್ರಸ್ತ ಜನ ನಿನ್ನನ್ನು ಕೇಳುತ್ತಾರೆ.”

ನಾನು ಆಪಾದನೆ ಮುಕ್ತಗೊಳ್ಳುವ ಭರವಸೆಯಿದ್ದರೂ ನನಗೆ ಸುಸ್ತಾಗತೊಡಗಿತು. “ಆ ಬಾತು ಕೋಳಿಗಳನ್ನು ನೋಡಿದಾಗ ಆ ಬಾತು ಕೋಳಿಯಂತಹ ಕತ್ತಿನ ನನ್ನ ಜೊತೆಗಾರನ ಕತ್ತನ್ನು ತಿರುಚಲು ನನಗೆ ಮನಸ್ಸಾಗಿತ್ತೆಂದು ನಾನು ಆ ಹೋರಾಟಗಾರರಿಗೆ ಹೇಗೆ ಹೇಳಲಿ?” ಈ ಸುಖಕರ ಪ್ರಯಾಣ ಕ್ಷಣಿಕವಾಗಿತ್ತು. ಒಂದು ಕಲ್ಲು ಎಲ್ಲಿಂದಲೋ ತೂರಿ ಬಂದು ನಾವು ಕುಳಿತಿದ್ದ ವಿದೇಶಿ ಕಾರಿಗೆ ಬಡಿಯಿತು. ಮತ್ತೊಂದು ಕಲ್ಲು ನಾನು ಕುಳಿತ ಸೀಟಿನ ಬಾಗಿಲಿಗೆ ಬಂದಪ್ಪಳಿಸಿತು. ನಮ್ಮ ಕಣ್ಣೆದುರಿಗೆ ಈ ಕೃತ್ಯವನ್ನು ಎಸುಗಿದ ವ್ಯಕ್ತಿ ಗೋಚರಿಸತೊಡಗಿದ. ಆದರೆ ಇವನು ಲುಂಗಿ ಅಥವಾ ಧೋತಿಯನ್ನು ಉಟ್ಟಿರಲಿಲ್ಲ. ಬದಲಿಗೆ ಇವನ ಕಣ್ಣಲ್ಲಿ ಮೃಗದ ಬೇಟೆಯ ಛಾಯೆಯಿತ್ತು. ಅಲ್ಲಿ ಅಪಾರವಾದ ಸಿಟ್ಟಿತ್ತು. ನಾನು ನಡುಗಲಾರಂಬಿಸಿದೆ. ಆದರೆ ಜೊತೆಗಾರ ದತ್ತ ಇದರಿಂದ ವಿಚಲಿತನಾಗದೆ ತಣ್ಣಗೆ ಕಾರು ಓಡಿಸುತ್ತಿದ್ದ. ಇವನ ಕೆನ್ನೆ, ತುಟಿ ಹಾಗೂ ಕಣ್ಣುಗಳಲ್ಲಿ ಒಂದು ರೀತಿಯ ವಿಚಿತ್ರವಾದ ತಣ್ಣಗಿನ ಧೃಡತೆಯಿತ್ತು. ಇವನಲ್ಲಿ ಈ ಹಲ್ಲೆಗಾರನನ್ನು ಮುಗಿಸುವಂತಹ ಯೋಜನೆಯಿದ್ದಂತಿತ್ತು. ಆದರೆ ಕಲ್ಲುಗಳ ಮೇಲೆ ಕಲ್ಲುಗಳು ಇದೇ ರೀತಿ ಬಂದು ಈ ಕಾರಿನ ಮೇಲೆ, ಇವನ ಮೇಲೆ ಅಪ್ಪಳಿಸಲಿ, ಈ ಬೂರ್ಜ್ವ ದತ್ತ ಅಪಾರವಾಗಿ ನರಳಿ ಮಂಡಿಯೂರಿ ಪ್ರಾಣಭಿಕ್ಷೆ ಬೇಡುವಂತಾಗಲಿ ಎಂದು ನಾನು ಮೌನವಾಗಿ ಪ್ರಾರ್ಥಿಸುತ್ತಿದ್ದೆ. ಅಷ್ಟರಲ್ಲಿ ಮತ್ತೊಂದು ದೊಡ್ಡ ಕಲ್ಲು ನೇರವಾಗಿ ಬಂದು ಕಾರಿನ ಮುಂಬದಿಯ ಗಾಜಿಗೆ ಬಂದಪ್ಪಳಿಸಿತು.  ಗಾಜು ಸಂಪೂರ್ಣವಾಗಿ ಬಿರುಕು ಬಿಟ್ಟುಕೊಂಡರೂ ಛಿದ್ರ ಛಿದ್ರವಾಗಲಿಲ್ಲ. ಈ ದತ್ತ  “ಈ ಗಲಭೆಕೋರರಿಗೆ ಈ ಗಾಜು ಒಡೆಯಲಾರದಂತೆ ಪುಲ್ ಪ್ರೂಫ್ ಆಗಿದೆ ಎಂದು ಗೊತ್ತಿಲ್ಲ,”  ಎಂದು ಗೊಣಗುತ್ತಿದ್ದುದು ಕಿವಿಗೆ ಬಿತ್ತು.  ಎಂತಹ ಅವಮಾನ!!  ಅಷ್ಟರಲ್ಲಿ ಆ ಹಲ್ಲೆಗಾರ ಕೈಯಲ್ಲಿ ದುಂಡನೆಯ ಲೋಹವನ್ನು ಹಿಡಿದುಕೊಂಡು ನೇರವಾಗಿ ನಮ್ಮ ಕಾರಿನ ಮುಂಭಾಗಕ್ಕೇ ಬಂದು ನಿಂತ.  ಅದು ಬಾಂಬ್!!!  ಆದರೆ ಕಿರುಚಿಕೊಳ್ಳಲೂ ಸಮಯವಿಲ್ಲ!!  ಅರೆ ನಿಲ್ಲು ನಿಲ್ಲು ನಾನೂ ಕೂಡ ನಿನ್ನ ಜೊತೆಗಿದ್ದೇನೆ, ಈ ಬಾಂಬ್ ಏತಕ್ಕೆ??  ಇದು ಹೇಡಿತನದ ಕೃತ್ಯ ಎಂದು ಕಿರುಚಲಾರಂಬಿಸಿದೆ. ಅಷ್ಟರಲ್ಲಿ ದತ್ತ ಹಾವಿನಂತೆ ಬುಸುಗುಡುತ್ತಾ ಮೆಲ್ಲಗೆ ಸರಿಯಲಾರಂಭಿಸಿದ.

ಅಷ್ಟರಲ್ಲಿ ಒಬ್ಬ ಪೋಲೀಸ್ ಬಂದೂಕಿನೊಂದಿಗೆ ಬರುತ್ತಿರುವುದು,  ರಸ್ತೆಯಲ್ಲಿ ರಕ್ತ ಚೆಲ್ಲಿದ್ದು ಎಲ್ಲವೂ ನನಗೆ ಮುಸುಕಾಗಿ ಕಾಣಲಾರಂಬಿಸಿತು.  ಆಗಲೇ ನಾನು ಎಚ್ಚರ ತಪ್ಪಿ ಕೆಳಗೆ ಬಿದ್ದಿದ್ದೆ. ನಾನು ಎಚ್ಚರಗೊಂಡಾಗ ಒಂದು ಮುರುಕು ಗ್ಯಾರೇಜಿನಲ್ಲಿ ಬಿದ್ದಿರುವುದು ಗೊತ್ತಾಯಿತು. ಜೊತೆಗಾರ ದತ್ತ ಜೋರಾಗಿ ಉಸಿರಾಡುತ್ತಿರುವುದು ಕಿವಿಗೆ ಬೀಳುತ್ತಿತ್ತು. ಜೊತೆಗೆ ಅಲ್ಲಿ ಒಬ್ಬ ಸರ್ದಾರ್‌ಜಿ ಇದ್ದ. ಬಹುಶ ಆ ಗ್ಯಾರೇಜಿನ ಮಾಲೀಕನಿರಬಹುದು. ಈ ಸರ್ದಾರ್‌ಜಿ ನನ್ನನ್ನು ಉದ್ದೇಶಿಸಿ ಹೇಳತೊಡಗಿದ,  “ನೀನು ನಿಜಕ್ಕೂ ಅದೃಷ್ಟಶಾಲಿ, ನೀನು ಅವನಂತೆ ಸಾಯಲಿಲ್ಲ … ” ಎಂದು ಅರ್ಧದಲ್ಲೇ ಮಾತು ನಿಲ್ಲಿಸಿ ದತ್ತನೆಡೆಗೆ ನೋಡಿದ.  ಅವರಿಬ್ಬರ ನಡುವೆ ಅಲ್ಲೇನೋ ಕಣ್ಣುಗಳ ಮೂಲಕ ಸಂಭಾಷಣೆ ನಡೆದಂತಾಯ್ತು. ಇದಕ್ಕೆ ಅಷ್ಟು ಗಮನ ಕೊಡದೆ ನಾನು ನಡೆಯಿರಿ ಇಲ್ಲಿಂದ ಹೊರಡೋಣ ಎಂದೆ.  ಆಗ ದತ್ತ ನನ್ನ ಭುಜದ ಸುತ್ತ ಕೈ ಹಾಕಿ ಸಂಕ್ಷಿಪ್ತವಾಗಿ ಹೇಳಿದ  “ನನ್ನ ಕಾರು ಹಾಳಾಗಿದೆ,  ನನ್ನ ನಾದಿನಿಯ ಮನೆಗೆ ನಡೆದೇ ಹೋಗೋಣ, ಈ ಸರ್ದಾರ್‌ಜಿಯ ಸಹಕಾರದಿಂದ ನಿನ್ನ ಪ್ರಾಣ ಉಳಿಯಿತು.”  ಸರ್ದಾರ್‌ಜಿ ನಿಮ್ಮಿಂದಲೂ ಸಹ ಎಂದು ದತ್ತನಿಗೆ ಹೇಳಿದ. ಒಟ್ಟಿನಲ್ಲಿ ಇವರಿಬ್ಬರೂ ನನ್ನನ್ನು ಉಳಿಸಿದರೆಂದಾಯ್ತು.  (ಸಾಯಿಸಿದ್ದು ಯಾರನ್ನ??)  ಆ ಸಂಜೆ ಕತ್ತಲಿನ ದಾರಿಯನ್ನು ನಾವು ನಡೆದು ದತ್ತನ ನಾದಿನಿ ಅನುರಾಧ ಅವರ ಮನೆ ತಲುಪಿದೆವು. ಅವರ ಮನೆಯ ಸೋಫಾದಲ್ಲಿ ನಾನು ನಿಶ್ಯಕ್ತನಾಗಿ ಕುಸಿದು ಕುಳಿತೆ. ದೊಡ್ಡದಾದ ಕಣ್ಣುಗಳನ್ನು ಹೊಂದಿದ್ದ ದತ್ತನ ನಾದಿನಿ ಅನುರಾಧ ತೆಳ್ಳಗೆ ಎತ್ತರವಿದ್ದಳು. ಪಟ ಪಟನೆ ಮಾತನಾಡುತ್ತಿದ್ದಳು. ಅವಳ ಮಾತಿನಲ್ಲಿ ಸ್ತ್ರೀವಾದದ ಛಾಯೆ ಇಣುಕುತ್ತಿತ್ತು. ಅವಳು ನೀಡಿದ ಕಾಫಿಯನ್ನು ಕುಡಿಯುತ್ತಾ ಅನುರಾಧಳನ್ನು ಗಮನಿಸಿದಾಗ ಅವಳು ಒಂದು ರೀತಿಯಲ್ಲಿ ಉತ್ಸಾಹದ ಬುಗ್ಗೆಯಂತೆಯೂ ಮಗದೊಮ್ಮೆ ನನ್ನ ನಾದಿನಿಯಂತೆಯೂ ಮತ್ತೊಮ್ಮೆ ಅಪ್ತ ಸ್ನೇಹಿತಳಂತೆಯೂ ಗೋಚರಿಸುತ್ತಿದ್ದಳು. ಪರಿಚಯವಾದ ಕೆಲವೇ ಕ್ಷಣಗಳಲ್ಲಿ ನನ್ನೊಂದಿಗೆ ಬೆರೆತು ಮಾತನಾಡುವ ರೀತಿ ನನ್ನಲ್ಲಿ ಇನ್ನಿಲ್ಲದ ಉತ್ಸಾಹವನ್ನು ಹುಟ್ಟಿಹಾಕಿದಂತಿತ್ತು.

ಆ ಮನೆಯನ್ನೊಮ್ಮೆ ಕಣ್ಣಾಡಿಸಿದಾಗ ಅಲ್ಲಿ ಇಕೆಬಾನದ ಹೂವುಗಳು, ವ್ಯಾನ್‌ಗೋವನ ಪೇಂಟಿಂಗಳೂ, ಮೊಘಲರ, ಟಾಲ್‌ಸ್ಟಾಯ್, ಠ್ಯಾಗೂರ್ ರವರ ಭಾವಚಿತ್ರಗಳೂ ಕಣ್ಣಿಗೆ ಬಿದ್ದವು. ಅಂದರೆ ಈ ಅನುರಾಧ ನನಗಿಂತಲೂ ಬುದ್ಧಿಜೀವಿಯೇ??  ಹಿಂದೊಮ್ಮೆ ನಮ್ಮಿಬ್ಬರ ಪ್ರಥಮ ಭೇಟಿಯ ಸಂದರ್ಭದಲ್ಲಿ ದತ್ತನಿಗೆ ನಾನು ಇಂಗ್ಲೀಷ್ ಕ್ಲಾಸಿಕ್ ನಾಟಕದ ಪುಸ್ತಕವೊಂದನ್ನು ತೋರಿಸಿ ಅದನ್ನು ಓದಲು ಶಿಫಾರಸ್ಸನ್ನು ಮಾಡಿದ್ದೆ.  ಆ ಪುಸ್ತಕವನ್ನು ಈಗ ಅವನ ನಾದಿನಿ ಅನುರಾಧಳ ಮನೆಯಲ್ಲಿ ನೋಡಿದೆ. ಇದನ್ನು ಆ ದತ್ತ ಇವಳಿಗೆ ಉಡುಗೊರೆಯಾಗಿ ಕೊಟ್ಟನೆ??  ಅಷ್ಟರಲ್ಲಿ ದತ್ತ ನನಗೆ ಮತ್ತಷ್ಟು ಉಪಚಾರ ಮಾಡತೊಡಗಿದ. ಈ ಮಧ್ಯೆ ದತ್ತ ಹಾಗೂ ಅನುರಾಧಾ ಅವರ ನಡುವೆ ಸರಸದ ಸಂಭಾಷಣೆಗಳು ವಿನಿಮಯವಾಗುತ್ತಿದ್ದವು. ಅಲ್ಲಿ ಸಾಹಿತ್ಯವಿತ್ತು, ಚರಿತ್ರೆಯಿತ್ತು. ಈ ದತ್ತನಿಗೆ ಈ ಸ್ಥಿಥಪ್ರಜ್ಞಾತೆ ಹೇಗೆ ಸಾಧ್ಯವಾಯಿತು??  ಇದರ ಮಧ್ಯೆ ನನಗೆ ದತ್ತನನ್ನು ಕೇಳಬೇಕೆನಿಸಿದ  “ಆ ಹಲ್ಲೆಕೋರನನ್ನು ಕೊಂದಿದ್ದು ನೀನೋ ಅಥವಾ ಪೋಲೀಸನೋ??  ನನಗೆ ನಿಜಕ್ಕೂ ಆಗಿದ್ದೇನು??  ಈ ಮಧ್ಯೆ ಆ ಸರ್ದಾರ್ಜಿ ಎಲ್ಲಿಂದ ಬಂದ ??” ಎನ್ನುವ ಪ್ರಶ್ನೆಗಳು ನನ್ನೊಳಗೇ ಉಳಿದವು. ಒಂದು ವೇಳೆ ಕೇಳಿದರೆ ಪ್ರತ್ಯುತ್ತರವಾಗಿ ದತ್ತ ಇದನ್ನೆಲ್ಲಾ ಕೇಳಲು ಹಾಗೂ ಹೇಳಲು ಇದು ಸಂದರ್ಭವಲ್ಲ ಎಂದರೆ ಏನು ಮಾಡುವುದು?. ಇಷ್ಟರಲ್ಲಾಗಲೇ ಕಾಫಿ ತಣ್ಣಗಾಗುತ್ತಿತ್ತು. ಅತಿಥೇಯಳು ಕೊಂಚ ದುಗುಡದಲ್ಲಿದ್ದಂತಿತ್ತು. ನನ್ನೊಳಗಿನ ಅಂತರಾತ್ಮ ಮತ್ತೆ ನನ್ನನ್ನು ಕೆಣಕತೊಡಗಿದ. “ದತ್ತ ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವನೇ?? ನಿನಗಿಂತಲೂ ಅವನು ಅನುಭವಸ್ಥ.  ನೀನಿನ್ನೂ ಎಳಸು.” ನನ್ನಲ್ಲಿ ಗೋಜಲಾಗತೊಡಗಿತು. ಆ ಗಲಭೆಪೀಡಿತ ರಸ್ತೆಗಳು, ಯಾವ ಬಾಂಬ್ ಗೂ ಒಡೆಯದ ಕಾರಿನ ಗಾಜು, ರಕ್ಷಣೆಗಾಗಿ ಮೊರೆಯಿಡುತ್ತಿರುವ ಹತ್ಯೆಗೊಳಗಾದ ಜನ, ಈ ಸುಂದರ ಮನೆ, ಇಲ್ಲಿನ ಕವಿಗಳ, ಚಿತ್ರಕಾರರ ಭಾವಚಿತ್ರಗಳು, ಮನಮೋಹಕ ಅನುರಾಧ … ಅಷ್ಟರಲ್ಲಿ ನನ್ನ ಗಮನ ತೆರೆದ ಕಿಟಿಕಿಯೆಡೆಗೆ ಹರಿಯಿತು. ಹೊರಗಡೆಯಿಂದ ಗಲಭೆಯ ಸದ್ದಿಗೆ ಕಾತರಿಸಿದೆ. ಆದರೆ ಎಲ್ಲವೂ ನಿಶ್ಯಬ್ದವಾದಂತಿತ್ತು. ಅಂದರೆ ಪ್ರತಿಭಟನೆಯ ಧ್ವನಿಗಳು ಸತ್ತು ಹೋದವೆ??  ಅದರ ಪ್ರತಿಧ್ವನಿಗಳೂ ಸಹ??  ಈ ದತ್ತನನ್ನು ಕೇಳಲೆ ? ಅವನ ನಾದಿನಿ ಅನುರಾಧಳನ್ನು??  ಇವೆಲ್ಲವನ್ನೂ ಮರೆತೂ ನಾನೂ ಇಲ್ಲಿನಂತೆ ಹವಾನಿಯಂತ್ರಿತ ಮನೆಯನ್ನು, ಸುಂದರ ತೋಟವನ್ನು ಹೊಂದಬೇಕೆನಿಸುತಿತ್ತು. ಏಕೆಂದರೆ ನಾನೂ ಮನುಷ್ಯನಲ್ಲವೇ !!  ನಾನು ನನ್ನ ಬದುಕಿನ ಅಂತಸ್ಥಿನಲ್ಲಿ ಮೇಲೇರಿದಾಗಲೇ ನಿಮ್ಮ ಕ್ರಾಂತಿಗೆ ನಾನು ಸಹಾಯ ಮಾಡಲು ಸಾಧ್ಯ. ನಿಮ್ಮನ್ನು ಮುನ್ನಡೆಸಲು ಸಾಧ್ಯ.  ಓಹ್ ಎಲ್ಲಾ ಗೋಜಲುಗಳು!!  ದತ್ತ ಹಾಗೂ ಅವನ ನಾದಿನಿ ಪದೇ ಪದೇ ತಮ್ಮ ಗಡಿಯಾರವನ್ನೂ ಆ ತೆರೆದ ಕಿಟಿಕಿಯನ್ನೂ ಆತುರದಿಂದ ನೋಡುತ್ತಿದ್ದರು. ನಾನು ಇದರ ಬಗ್ಗೆ ವಿಚಾರಿಸಿದಾಗ ಇವರಿಬ್ಬರೂ ಹೇಳಿದರು.

“ಅವನು ಬರುವುದು ಇಂದು ತಡವಾಗಬಹುದು. ಏಕೆಂದರೆ ಬಹಳಷ್ಟು ತಲೆಗಳನ್ನು ಎಣಿಸಬೇಕಲ್ಲವೇ?” ನನಗೆ ತಬ್ಬಿಬ್ಬಾಯಿತು. ಯಾರೀತ??  ಕುರಿಗಳ ತಲೆ ಎಣಿಸುವ ಕುರುಬನೇ?  ನನ್ನ ಗೊಂದಲವನ್ನು ಅರ್ಥ ಮಾಡಿಕೊಂಡ ದತ್ತ ಹೇಳಿದ. “ಆತನ ಹೆಸರು ನಾರಿಯನ್ ಬೋಸ್. ನನ್ನ ನಾದಿನಿ ಅನುರಾಧಾಳ ಪತಿ. ಆತ ಪೋಲೀಸ್ ವಿಶೇಷ ಪಡೆಗಾಗಿ ಕೆಲಸ ಮಾಡುತ್ತಿದ್ದಾನೆ. ನೀನು ಅವನ ಬಗೆಗೆ ಕೇಳಿರಬೇಕಲ್ಲವೇ?”  ಇಲ್ಲ ಆತನ ಹೆಸರನ್ನು ನಾನು ಕೇಳಿರಲಿಲ್ಲ. ಮುಂದೆಯೂ ತಿಳಿದುಕೊಳ್ಳುವುದೂ ಬೇಡ. ನನಗೆ ಇವರಿಬ್ಬರೂ ನನ್ನನ್ನು ಇಲ್ಲಿಂದ ಹೊರಕಳುಹಿಸಲು ಪಿತೂರಿ ನಡೆಸುತ್ತಿರುವಂತಿತ್ತು. ಮತ್ತೆ ನನ್ನಲ್ಲಿ ರಕ್ತ,  ಆ ಎದೆಯನ್ನು (ಅಥವಾ ಹೊಟ್ಟೆಯನ್ನೋ ಅಥವಾ ಗಂಟಲನ್ನೋ) ಚಿಮ್ಮಿಕೊಂಡು ಬಂದಂತಹ ರಕ್ತ ತಲೆಯಲ್ಲಿ, ಕಣ್ಣಲ್ಲಿ ಹರಿದಾಡತೊಡಗಿತು. ಮತ್ತೆ ಸ್ವಲ್ಪ ಕಾಫೀ ಬೇಕೆ ಎಂದು ಅನುರಾಧಾ ಕೇಳುತ್ತಿದ್ದುದು ದೂರದಲ್ಲೆಲ್ಲೋ ಕೇಳಿಸುತ್ತಿತ್ತು. ಅಷ್ಟರಲ್ಲಿ ದತ್ತ ನನ್ನ ಬಳಿ ಬಂದು ಅನುಕಂಪದ ಧ್ವನಿಯಲ್ಲಿ ಹೇಳತೊಡಗಿದ  “ಈಗ ಹೇಗಿದ್ದೀಯ? ನಿನಗೆ ತಡವಾಗುತ್ತಿದೆ. ಮನೆಗೆ ಹೋಗಲ್ಲವೇ?  ನೀನಿರುವುದು ಮೋಮಿಪುರದಲ್ಲವೇ? ಕೆಳಗಿನ ವೃತದ ರಸ್ತೆಯನ್ನು ಬಳಸಿ ನಂತರ ಎಡಕ್ಕೆ ತಿರುಗಿದಾಗ ಈ ರಸ್ತೆಯ ಕೊನೆ ಸಿಗುತ್ತದೆ. ಅಲ್ಲಿಂದ ನಿಧಾನವಾಗಿ ಕೆಳಗೆ ನಡೆದುಕೊಂಡು ಹೋಗು.  ಹಿಂತಿರುಗಿ ಮಾತ್ರ ನೋಡಬೇಡ.”  ಆದರೆ ನಾನು ಹೊರಡುವ ಗಡಿಬಿಡಿಯನ್ನು ತೋರಿಸಲಿಲ್ಲ. ನನ್ನಲ್ಲಿ ಒಳಗೊಳಗೇ ನಡುಕವುಂಟಾಗತೊಡಗಿತು. ಅನುರಾಧ ಮತ್ತೊಮ್ಮೆ ಬರಲು ಆಹ್ವಾನಿಸಿದಳು. ದತ್ತ ನನ್ನನ್ನು ಗೇಟಿನವರೆಗೂ ಬಿಡಲಿಕ್ಕೆ ಬಂದ. ಕೆಳಗಿನ ವೃತ್ತದ ರಸ್ತೆಯಲ್ಲಿ ಬೆಳಕು ಚೆಲ್ಲಿತ್ತು. ಅಲ್ಲಿ ಸುತ್ತಲೂ ಕಲ್ಲು, ಮುರಿದ ಗಾಜಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಯಾರಾದರೂ ಬಂದು ಅವುಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಕಾಯುತ್ತಿದ್ದವು …..

‘ಸರಿತಾ ಅವರ ಮನೆಗೆ ಹೋಗಿದ್ದೇಕೆ?’

-ಭೂಮಿ ಬಾನು

ಮೊನ್ನೆ ವಿಧಾನಸಭೆಯಲ್ಲಿ ನಡೆದ ಅಸಹ್ಯಕರ ಘಟನೆಯಲ್ಲಿ ಸವದಿ ಮತ್ತು ಸಿ.ಸಿ ಪಾಟೀಲರ ಬದಲಿಗೆ ಬೇರೆ ಕೋಮಿನ ಬೇರೆ ಯಾರೇ ಇದ್ದರೂ ಇತರೆ ರಾಜಕೀಯ ಮುಖಂಡರ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ಕಾರಣ ಈ ಹೊತ್ತು ಸ್ವಜಾತಿ ಪ್ರೇಮ ಭ್ರಷ್ಟನನ್ನು, ಲಂಪಟನನ್ನೂ ಸಮರ್ಥಿಸುವ ಮಟ್ಟಿಗೆ ವ್ಯಾಪಿಸಿದೆ.

ಇತ್ತೀಚೆಗೆ ತಮ್ಮ ಸ್ವಜಾತಿ ಪ್ರೇಮವನ್ನು ವಿಧಾನ ಪರಿಷತ್ತಿನಲ್ಲಿ ಢಾಳಾಗಿ ಪ್ರದರ್ಶನಕ್ಕಿಟ್ಟವರು ವಿರೋಧ ಪಕ್ಷದ ನಾಯಕಿ ಶ್ರೀಮತಿ ಮೋಟಮ್ಮ. ಕಾಂಗ್ರೆಸ್ ನಲ್ಲಿರುವ ದಲಿತ ಸಮುದಾಯದ ನಾಯಕರ ಪೈಕಿ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿದವರು ಮೋಟಮ್ಮ. ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಅದು ಪಕ್ಷದ ಚೌಕಟ್ಟಿನಲ್ಲಿ ಒಬ್ಬ ಕಾರ್ಯಕರ್ತನಿಗೆ ಸಿಗಬಹುದಾದ ಅತ್ಯುನ್ನತ ಸ್ಥಾನ. ಸದ್ಯ ಅವರು ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರು.

ತಮ್ಮ ಮಾತಿಗೆ ಹೆಚ್ಚಿನ ಮಹತ್ವ ಇರುತ್ತದೆ, ತಾವು ಯಾರೋ ಹೇಳಿದ ಮಾತನ್ನು ಕೇಳಿ ಸದನದಲ್ಲಿ ಮಾತನಾಡಿದರೆ ತಪ್ಪಾಗುತ್ತದೆ ಎಂಬ ಜಾಣ್ಮೆ ಅವರಿಗಿಲ್ಲ ಎನಿಸುತ್ತದೆ.

ಮೈಸೂರು ವಿಶ್ವವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿ ಸರಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಚರ್ಚೆಯಲ್ಲಿ ಪಾಲ್ಗೊಂಡ ಮೋಟಮ್ಮ, “ಸರಿತಾ ಅವರು ಪ್ರೋ. ಶಿವಬಸವಯ್ಯ ನವರ ಮನೆಗೆ ಆತನ ಪತ್ನಿ ಇಲ್ಲದಿರುವಾಗ ಹೋಗಿದ್ದು ತಪ್ಪು. ಅವರೇಕೆ ಹೋಗಬೇಕಿತ್ತು?’ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆ ಕೇಳುವಾಗ ಮೋಟಮ್ಮನವರಿಗೆ ಪ್ರಕರಣದ ಪೂರ್ಣ ವಿವರ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಸರಿತಾ ಅವರ ಮನೆಗೆ ಅವರ ಗೈಡ್ ಪ್ರೊ. ಶಿವಬಸವಯ್ಯ ಭೇಟಿ ನೀಡಿದಾಗ ನಡೆದದ್ದು ಆ ಘಟನೆ. ಸರಿತಾ ತನ್ನ ಗೈಡ್ ಮನೆಗೆ ಹೋಗಿರಲಿಲ್ಲ. ಒಂದು ಪಕ್ಷ ತನ್ನ ಗೈಡ್ ಮನೆಗೆ ಹೋದರೂ ಅದರಲ್ಲಿ ತಪ್ಪೇನು? ಹೋದ ತಕ್ಷಣ ಅವರ ಮೇಳೆ ಲೈಂಗಿಕ ದೌರ್ಜನ್ಯ ನಡೆಸಲು ಅನುಮತಿ ನೀಡಿದಂತೆಯೇ?

ಒಬ್ಬ ಮಹಿಳೆ ತನ್ನಮೇಲೆ ಆದ ದೌರ್ಜನ್ಯವನ್ನು ಪ್ರಶ್ನೆ ಮಾಡಲು ಬೀದಿಗಿಳಿಯುವುದೇ ಅಪರೂಪ. ಹಾಗೆ ಮಾಡಬೇಕೆಂದರೆ ಧೈರ್ಯ, ಪತಿಯ ಬೆಂಬಲ ಬೇಕಾಗುತ್ತದೆ. ಇಷ್ಟೆಲ್ಲದರ ನಡುವೆ ತನ್ನ ಮೇಲೆ ದೌರ್ಜನ್ಯ ಆಗಿದೆ ಎಂದು ಪದೇ ಪದೇ ಹೇಳಿಕೊಳ್ಳುವುದೇ ಹಿಂಸೆಯ ಕೆಲಸ. ಅಷ್ಟರ ಮೇಲೆ ಹೀಗೆಲ್ಲಾ ಅನ್ನಿಸಿಕೊಳ್ಳಬೇಕೆ? ಅದೂ ಮತ್ತೊಬ್ಬ ಮಹಿಳೆಯಿಂದ!

ಶಿವಬಸವಯ್ಯ ದಲಿತರಿರಬಹುದು. ಆದರೆ ಅವರ ಮೇಲೆ ಕೇಳಿ ಬಂದ ಆರೋಪಗಳನ್ನು ಎದುರಿಸಲಾರದಷ್ಟು ನಿಶಕ್ತರೇನಲ್ಲ. ಯಾವ ದಲಿತ ಸಂಘಟನೆಗಳ, ದಲಿತ ನಾಯಕರ ಬೆಂಬಲವೂ ಅವರಿಗೇನು ಅಗತ್ಯವಿರಲಿಲ್ಲ. ವಿಚಿತ್ರ ನೋಡಿ, ಈ ಆರೋಪ ಕೇಳಿ ಬಂದ ಮರುದಿನವೇ ಮೈಸೂರಿನ ಕೆಲ ದಲಿತ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತವು, ಸರಿತಾ ಬಗ್ಗೆ ಆರೋಪ ಮಾಡಿದವು.

ಇಷ್ಟೆಲ್ಲಾ ಆದ ನಂತರ, ವಿಶ್ವವಿದ್ಯಾನಿಲಯ ತನಿಖೆ ನಡೆಸಿತು. ಫ್ರೊ. ಶಿವಬಸವಯ್ಯ ತಪ್ಪಿತಸ್ಥ ಎಂದು ತನಿಖೆ ನಡೆಸಿದ ಸಮಿತಿ ವರದಿ ನೀಡಿತು. ಅದರ ಆಧಾರದ ಮೇಲೆ ಅವರ ಒಂದಿಷ್ಟು ಇಂಕ್ರಿಮೆಂಟ್‌ಗಳನ್ನು ಕಟ್ ಮಾಡಿ, ಚಾಮರಾಜನಗರಕ್ಕೆ ವರ್ಗಮಾಡಿದರು. ಅದು ಶಿಕ್ಷೆಯೆ?

ಸರಿತಾ ಮತ್ತು ಅವರ ಪತಿ ಪ್ರಕಾರ ಅದು ತೀರಾ ಕನಿಷ್ಟ ಶಿಕ್ಷೆ. ಅವರ ಮೇಲಿರುವ ಆರೋಪಗಳು ಸಾಬೀತಾಗಿರುವ ಕಾರಣ ಇನ್ನೂ ಹೆಚ್ಚಿನ ಶಿಕ್ಷೆಗೆ ಅವರು ಗುರಿಯಾಗಬೇಕಿತ್ತು ಎನ್ನುವುದು ಅವರ ವಾದ. ಆದರೆ ಮೋಟಮ್ಮ ಈ ಹಂತದಲ್ಲಿ ‘ಸರಿತಾ ಅವರ ಮನೆಗೆ ಹೋಗಿದ್ದೇಕೆ’ ಎಂದು ಅಸಂಬದ್ಧ ಪ್ರಶ್ನೆ ಕೇಳಿ ತಾವೆಷ್ಟು ಸಣ್ಣವರು ಎಂದು ತೋರಿಸಿದ್ದಾರೆ.

ಯಡಿಯೂರಪ್ಪನ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಅವರ ಬೆಂಬಲವಾಗಿ ಒಂದಿಷ್ಟು ಮಠಾಧೀಶರು, ಒಂದು ಜಾತಿಯ ಬಂಧುಗಳು ನಿಂತುಕೊಳ್ಳುತ್ತಾರೆ. ಅವರಾರಿಗೂ ತಮ್ಮ ಜಾತಿಯ ರಾಜಕಾರಣಿಯೊಬ್ಬ ಇಂತಹ ಆರೋಪ ಎದುರಿಸಬೇಕಾಯಿತಲ್ಲ ಎಂಬ ಕಾರಣಕ್ಕ ಕನಿಷ್ಟ ನಾಚಿಕೆಯೂ ಇರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಗೃಹ ಮಂತ್ರಿ ಆರ್. ಅಶೋಕ್ ವಿರುದ್ಧ ಪ್ರಕರಣ ದಾಖಲು ಮಾಡಿದಾಗಲೂ ಜೆಡಿಎಸ್ ಪಕ್ಷದ ಹೆಚ್.ಡಿ. ರೇವಣ್ಣ ‘ಅಶೋಕ್ ರಾಜೀನಾಮೆ ಕೊಡುವ ಅಗತ್ಯವೇನಿಲ್ಲ’ ಎನ್ನುತ್ತಾರೆ.

ಈ ವರ್ತನೆಯ ಮುಂದುವರಿದ ಭಾಗವಾಗಿಯೇ ಮೋಟಮ್ಮನ ಈ ಪ್ರತಿಕ್ರಿಯೆಯನ್ನು ಗ್ರಹಿಸಬೇಕು. ಅಮಾಯಕ ದಲಿತರು ಉಳ್ಳವರ ಸಂಚಿಗೆ ಬಲಿಯಾಗಿ ಅನೇಕಬಾರಿ ವಿನಾಕಾರಣ ಆರೋಪಗಳಿಗೆ ಗುರಿಯಾಗುತ್ತಾರೆ. ಅಂತಹ ಪ್ರಕರಣಗಳಲ್ಲಿ ಅವರ ಬೆಂಬಲಕ್ಕೆ ಕೆಲವರು ನಿಲ್ಲಬೇಕಾಗುತ್ತದೆ. ಅದು ಕೇವಲ ದಲಿತ ಸಂಘಟನೆಗಳ ಕೆಲಸ ಮಾತ್ರ ಅಲ್ಲ. ಎಲ್ಲಾ ಪ್ರಜ್ಞಾವಂತರೂ ದಲಿತರ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ.

ಮೋಟಮ್ಮ ಇನ್ನೂ ಮುಂದೆ ಹೋಗಿ, ಸಂಘ ಪರಿವಾರದ ವಕ್ತಾರರಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆ ಬೇಕು ಎಂದಿದ್ದಾರೆ. ಆ ಮೂಲಕ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಬಹುದು ಎನ್ನುವುದು ಅವರ ಲೆಕ್ಕಾಚಾರ. ಆದಷ್ಟು ಬೇಗ, ಮೋಟಮ್ಮ ಸಂಘ ಪರಿವಾರ ಸೇರಿಕೊಳ್ಳುವುದು ಉತ್ತಮ.

ಇಷ್ಟೆಲ್ಲಕ್ಕೂ ಕಾರಣ ಒಂದು ನಿರ್ದಿಷ್ಟ ‘ಜನಪರ ಸಿದ್ಧಾಂತ’ ಇಲ್ಲದ ಪಕ್ಷದಲ್ಲಿ ಅವರು ಇದ್ದದ್ದು. ಕಾಂಗ್ರೆಸ್ ಗೆ ಇತರೆ ಪ್ರಮುಖ ಪಕ್ಷಗಳ ಹಾಗೆ (ಬಿಜೆಪಿ, ಎಡ ಪಕ್ಷ) ಒಂದು ಸಿದ್ಧಾಂತ ಇಲ್ಲ. ಆ ಪಕ್ಷದಲ್ಲಿ ಕಟ್ಟಾ ಹಿಂದೂವಾದಿಗಳು, ಜಾತಿವಾದಿಗಳು, ಕೋಮುವಾದಿಗಳು..ಹೀಗೆ ಎಲ್ಲರೂ ಇದ್ದಾರೆ. ಚುನಾವಣೆ ಬಂದಾಗ ಅವರು ತಾವು ಸೆಕುಲರ್ ಎಂದು ಹೇಳಿಕೊಂಡರೂ ಅದು ಕೇವಲ ಸ್ಟಂಟ್.

ಆದರೆ ಬಿಜೆಪಿಗೆ ಅಂತಹ ತೊಂದರೆ ಇಲ್ಲ. ಕಾರಣ ಅವರ ಸಿದ್ಧಾಂತ ನಿರೂಪಿಸುವ ಕೆಲಸವನ್ನು ಆರ್.ಎಸ್.ಎಸ್. ಎಂಬಂತಹ ಕೋಮುವಾದಿ ಸಂಘಟನೆ ಮಾಡುತ್ತದೆ. ಅದೆಷ್ಟೇ ಅಪಾಯಕಾರಿ ಸಿದ್ಧಾಂತವಾದರೂ, ತನ್ನ ಕಾರ್ಯಕರ್ತರನ್ನು ಅದಕ್ಕೆ ಬದ್ಧರನ್ನಾಗಿ ಮಾಡುವಲ್ಲಿ ಒಂದಿಷ್ಟು ಪ್ರಯತ್ನಗಳು ನಡೆಯುತ್ತವೆ. ಅಂತೆಯೇ ಎಡ ಪಕ್ಷಗಳಿಗೆ ಒಂದು ಪ್ರಬಲ ಸಿದ್ಧಾಂತ ಇದೆ. ತಮ್ಮ ಗಳಿಕೆ ಇಂತಿಷ್ಟನ್ನು ಸಂಘಟನೆಗೆಂದೇ ಕೊಟ್ಟು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪರಂಪರೆ ಇದೆ.

ಆದರೆ ಇದಾವುದೂ ಇಲ್ಲದಿರುವುದು ಕಾಂಗ್ರೆಸ್. ಅದೇ ಕಾರಣಕ್ಕೆ ಮೋಟಮ್ಮ ನಂತಹವರು ನಾಲ್ಕು ದಶಕಗಳ ಕಾಲ ಅಲ್ಲಿಯೇ ಇದ್ದರೂ ಆರ್.ಎಸ್.ಎಸ್. ವಕ್ತಾರರಂತೆ ಮಾತನಾಡುವುದು.

Shameless

Bhoomi Banu

Shameless! What else they can be?

Life with criminals around is far better than with shameless people in the vicinity. The absence of shame or remorse on faces of the accused, charges against whom are proven beyond doubt thanks to media and RTI, is conspicuous everywhere. A fair trial in courts is required to nail them all.

Alleged prostitutes cover their faces when TV cameras focus them. They are ashamed of their profession though economic inequalities in society forced them take up the job. But politicians hardly admit to their misdeeds, forget covering their faces in public.

Gujarat Chief Minister Narendra Modi has never been apologetic in the last 10 years after the communal riots which killed many and rendered thousands homeless. The fact that he advanced the assembly elections only to cash in on the communal disharmony prevailing then in the state was enough to prove that he was shameless. Today he has a coterie of thinkers who find fault with human rights activists fighting for justice to the victims of the pogrom orchestrated by the Modi-led dispensation.

Coming to Karnataka, former Chief Minister B.S Yeddyurappa was not in poverty either to loot property or demand donations in the guise of investment for his enterprise. Katta Subramanya Naidu and his son had no shortage of land for a dwelling place to eye on poor farmers’ land either. Yet, they wanted more property, more money. Any legal procedure against Yeddyurappa is looked down upon as an assault on a particular community. The shameless accused had the temerity to term the high command’s decision to shunt him out of the position as a conspiracy to avoid him enjoying the post because he hailed from a particular community.

Two ministers watched a porn clip in the House and exhibited the audacity to defend their act citing that it was a ‘knowledge acquiring exercise’. A Speaker, who forgot that his post expects him to conduct the business of the House in a non-partisan way, shows no sign of remorse when the highest court of the land finds fault with his conduct.

All are shameless. They are so because some chelas, benefitted religious institutions, businessmen profited by them stand by them. Their support and incessant shower of praises prompt them believe that they had done nothing wrong and need not sulk.

All these accused find defence in their opponents’ misdeeds. Every sin and a sinner have a defence. Whenever the justice for post-Godhra violence victims was discussed, the BJP people question whether the victims of anti-Sikh riots were delivered justice?

Even when the three ministers are criticised for their act in the House, members in the treasury benches bring in the issue of a governor’s misconduct at Raj Bhavan in a neighbour state. Then who will answer the public? For the sake of debate, let us agree, no political party has moral right to blame others, then for the god sake, do these politicians agree that at least the public have the right to demand a decent behaviour from their so called representatives.

ತಲೆದಂಡ ಪಡೆದ ಮಾಧ್ಯಮ


– ಪರಶುರಾಮ ಕಲಾಲ್


ಅಂತೂ ಮೂವರು ಸಚಿವರ ತಲೆದಂಡವನ್ನು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವೆಂದು ಬಣ್ಣಿತವಾಗುವ ಪತ್ರಿಕಾ/ಟಿವಿ ಮಾಧ್ಯಮ ಬಲಿ ತೆಗೆದುಕೊಂಡಿದೆ.

ಸಮರ್ಥ ವಿರೋಧ ಪಕ್ಷವಾಗಿ ಮಾಧ್ಯಮ ಈ ವಿಷಯದಲ್ಲಿ ಕಾರ್ಯನಿರ್ವಹಿಸಿದೆ. ದೃಶ್ಯಮಾಧ್ಯಮದ ಈ ಕಾರ್ಯಕ್ಕೆ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡದೇ ದಿನ ಪತ್ರಿಕೆಗಳು ಸಹ ಸರಿಯಾಗಿ ಸಾಥ್ ನೀಡಿ, ಬೆಂಬಲಿಸಿವೆ. ಕಳೆದ ಎರಡುದಿನಗಳಿಂದ ನಡೆದ ಈ ಹೋರಾಟ ಯಶಸ್ವಿಯಾಯಿತು ಎಂದೇ ಹೇಳಬೇಕು.

ನಾಚಿಕೆ ಕಳೆದುಕೊಂಡ ವ್ಯವಸ್ಥೆಯಲ್ಲಿ ಜೀವಿಸುವುದು ತುಂಬಾ ಅತ್ಯಂತ ನೋವು, ಬೇಸರದ ಸಂಗತಿ. ಇಂತಹ ಸಂದರ್ಭದಲ್ಲಿಯೂ ಇದೊಂದು ಆಶಾಕಿರಣವಾಗಿ ಮೂಡಿ ಬಂದಿದೆ.

ಮಾಧ್ಯಮದ ಮೇಲೆ ರೇಗಾಡುವ ಸರ್ಕಾರದ ಅತಿರಥಮಹಾರಥರು ತಮ್ಮೊಳಗೆ ಆಪಾರ ಕೋಪ, ತಾಪಗಳಿದ್ದರೂ ಏನೋ ಮಾಡಲಾರದ ಸ್ಥಿತಿ ಮುಟ್ಟಿದ್ದರು.

ಶೀಲ, ಚಾರಿತ್ರ್ಯದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಸಂಘ, ಪರಿವಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಎಂದಿನಂತೆ ದಿವ್ಯ ಮೌನವಹಿಸಿದೆ. ನರಗುಂದದಲ್ಲಿ ಮೂವರು ಸಚಿವರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘ ಪರಿವಾರಕ್ಕೆ ಸೇರಿದ ಸದಸ್ಯನೊಬ್ಬ ಮಾಧ್ಯಮದ ಎದುರು ಹೇಳಿದ್ದು ನನಗೆ ಇಲ್ಲಿ ಮುಖ್ಯ ಎನ್ನಿಸುತ್ತಿದೆ. ಧೀಮಂತ ಹೋರಾಟಗಾರ ಜಗನ್ನಾಥರಾವ್ ಜೋಷಿಯ ಸ್ಮಾರಕವನ್ನು ಅಭಿವೃದ್ಧಿ ಪಡಿಸುತ್ತೇನೆಂದು ಮಾತು ಕೊಟ್ಟ ಬಿಜೆಪಿ ಸರ್ಕಾರವೂ ಈಗ ಇಂತಹ ಅನೈತಿಕ ಚಟುವಟಿಕೆಯಲ್ಲಿ ತೊಡಗಿದೆ. ಇವರಿಗೆ ಯಾವ ಮೌಲ್ಯವೂ ಇಲ್ಲ.

ಆರ್.ಎಸ್.ಎಸ್. ಬಗ್ಗೆ ಗೊತ್ತಿರುವವರಿಗೆ ಜಗನ್ನಾಥ ರಾವ್ ಜೋಷಿಯ ಬಗ್ಗೆ ಗೊತ್ತಿರುತ್ತದೆ. ಸಂಘದ ಬೈಠಕ್‌ನಲ್ಲಿ ಭಾಗವಹಿಸಿ, ಸಂಘದ ದೀಕ್ಷೆ ಪಡೆದು ರಾಷ್ಟ್ರಭಕ್ತಿ ಪ್ರದರ್ಶಿಸುವ ಯುವಕರು  ಭ್ರಮನಿರಸನ ಹೊಂದಲು ಇನ್ನೇನೂ ಬೇಕು. ಸಂಘ ಪರಿವಾರ ಈ ಘಟನೆಯ ಬಗ್ಗೆ ದಿವ್ಯಮೌನ ವಹಿಸಲು ಇದು ಒಂದು ಕಾರಣವಾಗಿದೆ. ಯುವಕರನ್ನು ಬಡಿದೆಬ್ಬಿಸಬಹುದು, ಆದರೆ ಕುಳಿತುಕೊಳ್ಳಲು ಹೇಳಲು ಅದಕ್ಕೆ ಆಗದ ಸ್ಥಿತಿಯಲ್ಲಿ ಅದರ ನಾಯಕತ್ವವಿದೆ. ಅದರ ಹಿಡಿತ ಸರ್ಕಾರದ ಮೇಲೆ ಇದೆ. ಆದರೆ ಅದು ಹೇಳುವ ಶೀಲ, ಚಾರಿತ್ರ್ಯವೇ ಹರಣವಾಗುತ್ತಿದ್ದರೆ ಅದನ್ನು ತಿದ್ದುವುದು ಅದಕ್ಕೆ ಸಾಧ್ಯವಿಲ್ಲ. ಅಧಿಕಾರದ ಮುಂದೆ ಅದು ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಇಂತಹ ಹೊಂದಾಣಿಕೆಯನ್ನು ಅದು ಮಾಡಿಕೊಳ್ಳುತ್ತಲೇ ಬಂದಿದೆ.

ನಮ್ಮ ಮಾಧ್ಯಮಗಳು ಈಗ ಎಚ್ಚೆತ್ತುಕೊಂಡಿವೆ. ಒಂದಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿವೆ. ಇದೇ ರೀತಿ ಮುಂದಿನ ದಿನಗಳಲ್ಲೂ ನಡೆದುಕೊಂಡರೆ ಕರ್ನಾಟಕದ ರಾಜಕಾರಣವನ್ನು ಒಂದು ತಹಬಂದಿಗೆ ತರಲು ಸಾಧ್ಯವಾಗುತ್ತದೆ ಎಂಬ ಭರವಸೆಗೆ ಈ ಮೂವರು ಸಚಿವರ ತಲೆದಂಡ ಒಂದು ದಿಕ್ಸೂಚಿಯಾಗಿದೆ.