Monthly Archives: February 2012

ವಿಶ್ರಾಂತ ಕುಲಪತಿ ಡಾ.ಮುರಿಗೆಪ್ಪರವರಿಗೆ ಕೆಲವು ಪ್ರಶ್ನೆಗಳು…


– ಪರಶುರಾಮ ಕಲಾಲ್


ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಒಂದುವರ್ಷ ಹೆಚ್ಚುವರಿಯಾಗಿ ರಾಜ್ಯಪಾಲರಿಂದ ಅವಕಾಶ ಪಡೆದು, ಒಟ್ಟು ನಾಲ್ಕು ವರ್ಷ ಅವಧಿಪೂರ್ಣಗೊಳಿಸಿ, ಡಾ.ಎ. ಮುರಿಗೆಪ್ಪ ಈಗ ವಿಶ್ರಾಂತ ಕುಲಪತಿಗಳಾಗಿದ್ದಾರೆ. ಪ್ರಭಾರಿ ಕುಲಪತಿಯಾಗಿ ಡಾ.ಹಿ.ಚಿ.ಬೋರಲಿಂಗಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.

ಡಾ.ಹಿ.ಚಿ.ಬೋರಲಿಂಗಯ್ಯ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು, ಅವರ ಮೇಲೆ ತನಿಖೆ ನಡೆಸಬೇಕೆಂದು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಈ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈಗ ಪ್ರಭಾರಿ ಕುಲಪತಿಗಳಾಗಿಯೇ ಡಾ.ಹಿ.ಚಿ.ಬೋರಲಿಂಗಯ್ಯ ಕೆಲಸ ನಿರ್ವಹಿಸಬೇಕಿದೆ. ಇದು ಆಡಳಿತಾತ್ಮಕವಾಗಿ ಎಷ್ಟು ಸರಿ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.

ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಬುಧವಾರ ಕನ್ನಡ ವಿವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಸಂಕಷ್ಟದ ದಿನಗಳನ್ನು ಹೀಗೆ ನೆನಪಿಸಿಕೊಂಡಿದ್ದಾರೆ:

  1. ಹಂಪಿ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ವಿಜಯನಗರ ಪುನಃಶ್ಚೇತನ ಟ್ರಸ್ಟ್‌ಗೆ ಥೀಮ್ ಪಾರ್ಕ್‌ಗಾಗಿ ನೀಡಲು ನನ್ನನ್ನು ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರು ಎಂದಿದ್ದಾರೆ. ಥೀಮ್ ಪಾರ್ಕ್ ಅನ್ನು ಕನ್ನಡ ವಿವಿ ಪಕ್ಕ ಮಾಡುತ್ತೇವೆ. ಕನ್ನಡ ವಿವಿಯ 80 ಏಕರೆಯಲ್ಲಿ ರಿಸರ್ಚ್ ಸೆಂಟರ್ ಬಿಲ್ಡಿಂಗ್ ಕಟ್ಟಿ ಕನ್ನಡ ವಿವಿ.ಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿ ಆ ಮೇಲೆ ಈ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು. ದಾರಿ ತಪ್ಪಿಸಿದರು.
  2. ಯು.ಆರ್. ಅನಂತಮೂರ್ತಿ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಿದಾಗ, “ಅವರಿಗೆ ಯಾಕೆ ನಾಡೋಜ ಗೌರವ ಪದವಿ ನೀಡುತ್ತೀರಿ. ಅದನ್ನು ಕೈ ಬಿಡಿ, ಬೇರೆಯವರನ್ನು ಆಯ್ಕೆ ಮಾಡಿ, ಇಲ್ಲವಾದರೆ ನುಡಿಹಬ್ಬದಲ್ಲಿ ಗಲಾಟೆ ಮಾಡಿಸಬೇಕಾಗುತ್ತದೆ,” ಎಂದು ಸಚಿವರಾದ ಜಿ.ಜನಾರ್ಧನ ರೆಡ್ಡಿ, ಬಿ.ಶ್ರೀರಾಮುಲು, ಶಾಸಕ ಆನಂದ್ ಸಿಂಗ್ ಒತ್ತಾಯಿಸಿದರು. ಅವರಿಗೆ ಸಮರ್ಪಕ ಉತ್ತರ ಹೇಳಿ ನಿಭಾಯಿಸಿದೆ.
  3. ನಾಡೋಜ ಗೌರವ ಪದವಿಯನ್ನು ತಾವು ಸೂಚಿಸಿದವರಿಗೆ ಕೊಡಬೇಕೆಂದು ರಾಜ್ಯಪಾಲ ಹಂಸರಾಜ ಭಾರದ್ವಾಜ, ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಬೇರೆ ಬೇರೆ ಹೆಸರನ್ನು ಸೂಚಿಸಿದರು. ಅದನ್ನು ಪರಿಗಣಿಸಲಿಲ್ಲ. ಇದರಿಂದ ಕುಲಾಧಿಪತಿಯಾಗಿದ್ದ ರಾಜ್ಯಪಾಲರು, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನುಡಿಹಬ್ಬ ಘಟಿಕೋತ್ಸವಕ್ಕೆ ಬರಲಿಲ್ಲ.
  4. ಸಿಂಡಿಕೇಟ್ ಸದಸ್ಯರಾದವರಿಗೆ ದೂರದೃಷ್ಠಿ ಇರಬೇಕು. ಕನಸು ಇರಬೇಕು. ಅದು ಇಲ್ಲದವರು ಸದಸ್ಯರಾದರೆ ಸಮಸ್ಯೆ ಸೃಷ್ಠಿಯಾಗುತ್ತದೆ. (ಹೀಗೆ ಹೇಳುವ ಮೂಲಕ ಸಿಂಡಿಕೇಟ್ ಸದಸ್ಯರ ಆಯ್ಕೆ ಸರಿ ಇರಲಿಲ್ಲ ಎಂದು ಹೇಳಿದಂತಾಯಿತು. ಅಲ್ಲವೆ?)

ಈ ಸಂದರ್ಭಗಳಲ್ಲಿ ಕುಲಪತಿಗಳಾಗಿ ಡಾ.ಎ.ಮುರಿಗೆಪ್ಪ ಯಾವ ರೀತಿ ದಿಟ್ಟಕ್ರಮ ಕೈಗೊಂಡರು?
ಯಾಕೆ ಈ ಕುರಿತಂತೆ ತಮ್ಮ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಲಿಲ್ಲ?
ಎಲ್ಲರನ್ನೂ ಸರಿದೂಗಿಸುವ ಪ್ರಯತ್ನ ನಡೆಸುವ ಅಗತ್ಯ ಏನಿತ್ತು? ಇದು ಸರಿಯಾದ ಕ್ರಮವೇ?

ಇಂತಹ ಪ್ರಶ್ನೆಗಳು ಬರುವುದು ಸಹಜ. ಕಠಿಣವಾಗಿಯೇ ನಡೆದುಕೊಂಡೆ ಎಂದೇ ಈಗ ಡಾ.ಎ.ಮುರಿಗೆಪ್ಪ ಹೇಳುತ್ತಾರೆ. ಕನ್ನಡ ವಿವಿಯ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದವರು, ಅವರೂ ಏನನ್ನೂ ಮಾಡಲಿಲ್ಲ, ಎಲ್ಲದಕ್ಕೂ ಬೆಂಡಾದರು ಎಂದೇ ಹೇಳುತ್ತಾರೆ.

ಕನ್ನಡ ವಿವಿ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಮೊಟ್ಟ ಮೊದಲು ಕುವೆಂಪು ಅವರಿಗೆ ಮರಣೋತ್ತರವಾಗಿ ಕೊಡುವ ಮೂಲಕ ಆರಂಭವಾಯಿತು. ಕನ್ನಡ ನಾಡು, ನುಡಿಗೆ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ಕೊಡಬೇಕೆನ್ನುವುದು ಇದರ ಉದ್ದೇಶವಾಗಿತ್ತು. ಇದು ಬರುತ್ತಾ ಹಿಗ್ಗಿಸಿಕೊಂಡು ಏರುತ್ತಾ ಹೋಗಿ ರಾಜ್ಯೋತ್ಸವ ಪ್ರಶಸ್ತಿಯಂತೆ ಅಗ್ಗವಾಗಿ ಬಿಟ್ಟಿತು. ಜಾತಿ, ಪ್ರದೇಶವಾರು ಗುರುತಿಸಲು ಆರಂಭವಾಯಿತು. ನಾ ಎಂಬ ಡೋಜು ಹೆಚ್ಚಾದವರಿಗೆ ಈ ನಾಡೋಜ ಎಂಬ ಅನ್ವರ್ಥನಾಮಕ್ಕೆ ತಿರುಗಿ ಬಿಟ್ಟಿತು. ಹೀಗಾಗಿ ಕಳೆದ ವರ್ಷ ಯೋಗಪಟು ಒಬ್ಬರಿಗೆ ನಾಡೋಜ ದೊರೆಯಿತು. ಜ್ಯೋತಿಷಿಗಳಿಗೆ ಮುಂದಿನ ವರ್ಷ ಕೊಟ್ಟರೂ ಕೊಡಬಹುದು ಎನ್ನುವಲ್ಲಿಗೆ ಬಂದಿದೆ.

ಈ ಗೌರವ ಪದವಿಗೆ ಗೌರವ ಸಿಗುವಂತೆ ಮಾಡಬೇಕಿದೆ.

ಕನ್ನಡ ವಿವಿ ಕುಲಪತಿಗಳಾಗಲು ದೊಡ್ಡ ಲಾಬಿಯೇ ಪ್ರಾರಂಭಗೊಂಡಿದೆ. ಈಗಾಗಲೇ 14 ಅಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಯುಜಿಸಿ ಒಬ್ಬ ಸದಸ್ಯರ ಹೆಸರನ್ನು ಸೂಚಿಸಿಲ್ಲವಾದ್ದರಿಂದ ಇನ್ನೂ ಆಯ್ಕೆ ಸಮಿತಿ ಪೂರ್ಣಗೊಂಡಿಲ್ಲ. ಸಮಿತಿ ರಚನೆಯಾದ ಮೇಲೆ ಅರ್ಜಿ ಸಲ್ಲಿಸುವ ಇನ್ನಷ್ಟು ಅಕಾಂಕ್ಷಿಗಳು ಇದ್ದಾರೆ.

ಕನ್ನಡ ವಿಶ್ವವಿದ್ಯಾಲಯ ಈಗ ಸಂಕಷ್ಟದಲ್ಲಿದೆ. ಜಡವಾಗಿದೆ. ಅಲ್ಲಿ ಗುಂಪುಗಾರಿಕೆಗೆ ಹೆಚ್ಚಾಗಿ ಪರಸ್ಪರ ಟೀಕೆ, ಅಪಸ್ಪರಗಳು ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ವಿವಿಯನ್ನು ಸಾಂಸ್ಕೃತಿಕವಾಗಿ, ಸಂಶೋಧನಾತ್ಮಕವಾಗಿ, ಆಡಳಿತಾತ್ಮಕವಾಗಿ ಮುನ್ನೆಡೆಸುವ ಛಾತಿ ಇರುವವರು ಕುಲಪತಿಗಳಾಗಿ ಬರಬೇಕಿದೆ. ಕನ್ನಡ ವಿವಿ.ಗೆ ಹೊಸ ಸ್ವರೂಪ ಕೊಟ್ಟ ಮೊದಲಿನ ಉತ್ಸಾಹ, ಕನ್ನಡ ನಾಡು-ನುಡಿ ಕಟ್ಟುವ ಕೆಲಸ ಆರಂಭವಾಗಬೇಕಿದೆ. ಇದನ್ನು ಮಾಡಬೇಕಾದವರು ಯಾರು? ಇದು ಪ್ರಶ್ನೆಯಾಗಿಯೇ ಇದೆ.

ಜೀವನದಿಗಳ ಸಾವಿನ ಕಥನ – ಅಂತಿಮ ಅಧ್ಯಾಯ (24)


– ಡಾ.ಎನ್.ಜಗದೀಶ್ ಕೊಪ್ಪ    


[ಗೆಳೆಯರೆ, ನಮ್ಮ ವರ್ತಮಾನ.ಕಾಮ್ ಆರಂಭವಾದ ಒಂದು ತಿಂಗಳ ಒಳಗೇ ಆರಂಭವಾದ (4/9/2011) ಜಗದೀಶ್ ಕೊಪ್ಪರ ಈ ಲೇಖನ ಸರಣಿ ತನ್ನ ನಿಲುವು ಮತ್ತು ಅಧ್ಯಯನಶೀಲತೆಯಿಂದ ನಮ್ಮನಿಮ್ಮೆಲ್ಲರನ್ನು ಪ್ರಭಾವಿಸಿದ್ದು ಮಾತ್ರವಲ್ಲದೆ, ಚಿಂತನೆಗೂ ಹಚ್ಚಿತ್ತು. ಇಂದಿನದು ಆ ಸರಣಿಯ ಅಂತಿಮ ಅಧ್ಯಾಯ. ವರ್ತಮಾನ.ಕಾಮ್‌ನಲ್ಲಿ ಇದನ್ನು ಪ್ರಥಮ ಬಾರಿಗೆ ಪ್ರಕಟಿಸಲು ಇಚ್ಚಿಸಿದ್ದಕ್ಕಾಗಿ ಶ್ರೀ ಜಗದೀಶ್ ಕೊಪ್ಪರವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆದಷ್ಟು ಬೇಗ ಇದು ಪುಸ್ತಕರೂಪದಲ್ಲಿಯೂ ಬಂದು ಇನ್ನೂ ಹೆಚ್ಚು ಜನರನ್ನು ತಲುಪಲಿ ಎಂದು ಆಶಿಸುತ್ತೇನೆ. ಹಾಗೆಯೇ, ಅಂತರ್ಜಾಲದಲ್ಲಿನ ನಮ್ಮ ವರ್ತಮಾನ.ಕಾಮ್ ಪ್ರಯತ್ನಕ್ಕೆ ಮೊದಲಿನಿಂದಲೂ ಕ್ರಿಯಾಶೀಲವಾಗಿ ಬೆಂಬಲಿಸುತ್ತ ಬಂದಿರುವ ಜಗದೀಶ್ ಕೊಪ್ಪರ ಸಹಾಯ ದೊಡ್ಡದು. ಮತ್ತೊಮ್ಮೆ ಅವರಿಗೆ ಧನ್ಯವಾದಗಳು ಮತ್ತು ಕನ್ನಡದಲ್ಲಿ ಇಂತಹುದೊಂದು ಅಪರೂಪದ ವಿಷಯದ ಬಗ್ಗೆ ಬರೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. -ರವಿ…]

ಜಗತ್ತಿನ ನದಿಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಬದ್ಧತೆ, ಕಾಳಜಿ ಹಾಗೂ ಸ್ವಾಭಿಮಾನದ ಮೂಲಕ ಘನತೆ ತಂದುಕೊಟ್ಟವರು ಬ್ರೆಜಿಲ್ ಮತ್ತು ಭಾರತದ ಪರಿಸರವಾದಿ ಸತ್ಯಾಗ್ರಾಹಿಗಳು. ತಮ್ಮ ಎದೆಯೊಳಗಿನ ಕಿಚ್ಚು ಮತ್ತು ಸಂಕಟಗಳನ್ನು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿ ಅಣೆಕಟ್ಟುಗಳ ವಿರುದ್ಧದ ಹೋರಾಟಕ್ಕೆ ಎಲ್ಲರನ್ನೂ ಕ್ರೂಢೀಕರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬ್ರೆಜಿಲ್ ದೇಶದ ಮೂಲ ನಿವಾಸಿಗಳು ಮತ್ತು ಭಾರತದ ನರ್ಮದಾ ಬಚಾವ್ ಆಂದೋಲನದ ಚಳವಳಿಗಾರರು ತಮ್ಮ ಅವಿರತ ಪ್ರತಿಭಟನೆಯ ಮೂಲಕ ವಿಶ್ವದ ಗಮನ ಸೆಳೆದರು ಅಲ್ಲದೆ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿ ಪರಿಸರವಾದಿಗಳಿಗೆ ಸ್ಪೂರ್ತಿಯಾಗಿ ನಿಂತರು.

ಅದು 1989ರ ಪಬ್ರವರಿ ತಿಂಗಳಿನ ಮೊದಲ ವಾರದ ಒಂದು ದಿನ. ಬ್ರೆಜಿಲ್ ಈಶಾನ್ಯ ಭಾಗದ ಅಮಜೋನಿಯಾ ಪ್ರಾಂತ್ಯದ ಅಲ್ಟಮಿರಾ ಎಂಬ ಪಟ್ಟಣದ ಸಮುದಾಯ ಭವನದಲ್ಲಿ ಅಲ್ಲಿನ 20ಕ್ಕು ಹೆಚ್ಚಿನ ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳ ನಡುವೆ ಸಂಧಾನ ಸಭೆ ಏರ್ಪಟ್ಟಿತ್ತು. ಸಮಾರು ಒಂದು ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದ ಆ ಸಭೆಯಲ್ಲಿ ಬ್ರೆಜಿಲ್ ಸರ್ಕಾರದ ಅಣೆಕಟ್ಟು ನಿರ್ಮಾಣ ಹಾಗೂ ವಿದ್ಯುತ್ ಉತ್ಪಾದನೆಯ ಉಸ್ತುವಾರಿ ಹೊತ್ತಿದ್ದ ಮುಖ್ಯ ಇಂಜಿನಿಯರ್ ಸರ್ಕಾರದ ರೂಪು ರೇಷೆ ಮತ್ತು ಪುನರ್ವಸತಿ ಕುರಿತಂತೆ, ಸರ್ಕಾರ ನೀಡುವ ಪರಿಹಾರ ಧನ ಕುರಿತಂತೆ ಮಾತನಾಡುತಿದ್ದ. ಆ ದೇಶದ ಎಲ್ಲಾ ಸುದ್ಧಿ ಮಾಧ್ಯಮಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು. ಬ್ರೆಜಿಲ್‌ನ ಮುಖ್ಯ ನದಿಗಳಲ್ಲಿ ಒಂದಾದ ಕ್ಷಿಂಗು ನದಿಗೆ ಕಟ್ಟಲಾಗುವ ಅಣೆಕಟ್ಟುಗಳು, ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯಪ್ರದೇಶ, ವಸತಿ ಪ್ರದೇಶದ ವಿವರ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಇವುಗಳ ಕುರಿತು ಸ್ಥಳೀಯ ಮೂಲನಿವಾಸಿಗಳಿಗೆ ಸವಿವರವಾಗಿ ಮನದಟ್ಟು ಮಾಡಿಕೊಡುತಿದ್ದ.

ಆ ಸಭೆಯಲ್ಲಿ ಕುಳಿತಿದ್ದ ಕಯಾಪು ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕುಡುಗೋಲು ಆಕಾರದ ಆಯುಧದೊಂದಿಗೆ ಮುಂದೆ ಬಂದು ಅದನ್ನು ನೇರವಾಗಿ ಮುಖ್ಯ ಇಂಜಿನಿಯರ್ ಆಂಟೋನಿಯಾ ಎಂಬಾತನ ಕುತ್ತಿಗೆಗೆ ಹಿಡಿದು, “ನೀನೊಬ್ಬ ಅಪ್ಪಟ ಸುಳ್ಳುಗಾರ, ನಮಗೆ ನಿನ್ನ ವಿದ್ಯುತ್ ಬೇಕಾಗಿಲ್ಲ ನಿನ್ನ ವಿದ್ಯುತ್‌ನಿಂದ ನಮಗೆ ಆಹಾರ ದಕ್ಕುವುದಿಲ್ಲ. ನಮಗೆ ಆಹಾರ ಸಿಗುವುದು ನೀನು ಮುಳುಗಡೆ ಮಾಡಲಿರುವ ಅರಣ್ಯದಿಂದ. ಅದು ನಮ್ಮನ್ನು ಪೊರೆಯುವ ತಾಯಿ. ಈ ಅರಣ್ಯ ಹೀಗೆ ಇರಬೇಕು, ಈ ನದಿ ಇದೇ ರೀತಿ ಹರಿಯಬೇಕು,” ಎಂದು ಅವನು ತೋರಿಸುತಿದ್ದ ನಕಾಶೆಯತ್ತ ಕೈ ಮಾಡಿ ದೊಡ್ಡ ಗಂಟಲಿನಲ್ಲಿ ಬಡಬಡಸಿದಳು. ಇಡೀ ದೃಶ್ಯ ಟಿ.ವಿ. ಚಾನಲ್ ಗಳಲ್ಲಿ ನೇರಪ್ರಸಾರವಾಗುತಿತ್ತು. ಆತ ಸ್ತಂಭೀಭೂತನಾಗಿ ಮಾತಿಲ್ಲದೆ, ಬೆವರುತ್ತಾ ನಿಂತಿದ್ದ. ಈ ಬುಡಕಟ್ಟು ಮಹಿಳೆಯ ಸಿಟ್ಟು ಕೇವಲ ಅವಳೊಬ್ಬಳ ಒಡಲಾಳದ ಸಂಕಟವಾಗಿರಲಿಲ್ಲ. ಅದು ಇಡೀ ಬ್ರೆಜಿಲ್ ದೇಶದ ಮೂಲನಿವಾಸಿಗಳ ಆಕ್ರೋಶದ ಧ್ವನಿಯಾಗಿತ್ತು.

ಕ್ಷಿಂಗ್ ನದಿಯ ಹರಿವಿನುದ್ದಕ್ಕು ಒಟ್ಟು ಆರು ಅಣೆಕಟ್ಟುಗಳನ್ನ ನಿಮಿಸಲು ಬ್ರೆಜಿಲ್ ಸರ್ಕಾರ ಯೋಜನೆಗಳನ್ನ ರೂಪಿಸಿತ್ತು. ಇವುಗಳಲ್ಲಿ 11 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾನೆಯೂ ಸೇರಿತ್ತು. ಈ ಯೋಜನೆಗಳಿಗಾಗಿ ಅಪರೂಪದ ಸಾವಿರಾರು ಹೆಕ್ಟೇರ್ ಮಳೆಕಾಡು ಹಿನ್ನೀರಿನಲ್ಲಿ ಮುಳುಗಡೆಯಾಗುವುದು ಮತ್ತು ಅನೇಕ ಬುಡಕಟ್ಟು ಜನಾಂಗಗಳು ನಿರ್ವಸತಿರಾಗುವುದು ಅನಿವಾರ್ಯವಾಗಿತ್ತು. ಅಭಿವೃದ್ಧಿಯ ಅಂಧಯುಗಲ್ಲಿ ಸಾಗುತಿದ್ದ ಅಲ್ಲಿನ ಸರ್ಕಾರಕ್ಕೆ ನೂರಾರು ವರ್ಷಗಳಿಂದ ಅರಣ್ಯದಲ್ಲಿ ಪರಿಸರಕ್ಕೆ ಮಾರಕವಾಗದಂತೆ ಜೀವಿಸಿದ್ದ ಮೂಲನಿವಾಸಿಗಳು ತೃಣಸಮಾನರಾಗಿದ್ದರು ಯಾವ ಕ್ಷಣದಲ್ಲಿ ಬೇಕಾದರೂ ಇವರನ್ನು ಹೊಸಕಿ ಹಾಕಬಹುದು ಎಂಬ ಅಹಂಕಾರವನ್ನ ಬ್ರೆಜಿಲ್ ಸರ್ಕಾರ ಬೆಳೆಸಿಕೊಂಡಿತ್ತು.

ಇದಕ್ಕು ಮುನ್ನ ಸರ್ಕಾರ ಸ್ಥಳೀಯ ನದಿಯೊಂದಕ್ಕೆ ಟುಕುರ್ವ ಎಂಬ ಅಣೆಕಟ್ಟನ್ನು ನಿರ್ಮಿಸಿ ಅಲ್ಲಿನ ಸ್ಥಳೀಯ ನಿವಾಸಿಗಳಾದ ಗೇವಿಯೊ ಎಂಬ ಬುಡಕಟ್ಟು ಜನಾಂಗಕ್ಕೆ ಆಸೆ ಆಮಿಷಗಳನ್ನು ತೋರಿಸಿ ಅವರನ್ನು ಒಕ್ಕಲೆಬ್ಬಿಸಿತ್ತು. ಆ ಜನಾಂಗದ ನಾಯಕನೊಬ್ಬ ಸಭೆಗೆ ಆಗಮಿಸಿ ತನ್ನ ಜನಾಂಗದ ಬದುಕು ಮೂರಾಬಟ್ಟೆಯಾದುದನ್ನು ಹೃದಯಕ್ಕೆ ನಾಟುವಂತೆ ವಿವರಿಸಿದ್ದ.

ಅಂತಿಮವಾಗಿ ಬ್ರೆಜಿಲ್‌ನ ಬುಡಕಟ್ಟು ಜನಾಂಗದ ನಾಯಕರು ಒಗ್ಗೂಡಿ, ಅಮೇರಿಕಾಕ್ಕೆ ತೆರಳಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಿಶ್ವಬ್ಯಾಂಕ್ ಅಧಿಕಾರಿಗಳನ್ನ ಬೇಟಿಮಾಡಿ ಸರ್ಕಾರದ ವಂಚನೆಯನ್ನ ವಿವರಿಸಿ, ಅಣೆಕಟ್ಟುಗಳ ವಿಷಯವಾಗಿ ಬ್ರೆಜಿಲ್ ಸರ್ಕಾರಕ್ಕೆ ಯಾವುದೇ ಆರ್ಥಿಕ ನೆರವು ನೀಡದಂತೆ ಮನವಿ ಸಲ್ಲಿಸಿದರು.ಇದರಿಂದ ಆಕ್ರೋಶಗೊಂಡ ಬ್ರೆಜಿಲ್ ಸರ್ಕಾರ ಆ ಮೂವರು ನಾಯಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿತು. ಅಲ್ಲದೆ ವಿದೇಶಿಯರು ನಡೆಸಬಹುದಾದ ಬುಡಮೇಲು ಕೃತ್ಯದಂತಹ ಗುರುತರ ಆರೋಪ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿತು.ಈ ಘಟನೆ ಸಹಜವಾಗಿ ಬ್ರೆಜಿಲ್‌ನ ಎಲ್ಲಾ ನಾಗರೀಕರನ್ನು ಕೆರಳಿಸಿತು. ಅಲ್ಲಿನ ಟಿ.ವಿ.ಚಾನಲ್ ಒಂದರ ನಿರೂಪಕ ಸಚಿವನೊಬ್ಬನನ್ನು ಚರ್ಚೆಗೆ ಆಹ್ವಾನಿಸಿ, ಬುಡಕಟ್ಟು ಜನಾಂಗದ ನಾಯಕರು ವಿದೇಶಿ ಪ್ರಜೆಗಳಾದರೆ, ಇಲ್ಲಿ ಚರ್ಚೆ ಮಾಡುತ್ತಿರುವ ನಾನು ನೀವು ಯಾವ ದೇಶದ ಪ್ರಜೆಗಳು ಎಂದು ಪ್ರಶ್ನೆ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ. ಈ ದೃಶ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದ ಅಲ್ಲಿನ ಪ್ರಜೆಗಳು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಅಂತಿಮವಾಗಿ ಮೂಲನಿವಾಸಿಗಳ ಮತ್ತು ಜನಗಳ ಒತ್ತಾಯಕ್ಕೆ ಮಣಿದ ಬ್ರೆಜಿಲ್ ಸರ್ಕಾರ ಆರು ಅಣೆಕಟ್ಟುಗಳ ಯೋಜನೆಯನ್ನು ರದ್ದುಪಡಿಸಿತು. ಇದರಿಂದಾಗಿ 7.200 ಹೆಕ್ಟೇರ್ ಪ್ರದೇಶದ ಮಳೆಕಾಡು ಹಾಗೂ ಅರಣ್ಯದೊಳಗೆ ವಾಸವಾಗಿದ್ದ 20 ಕ್ಕೂ ಹೆಚ್ಚು ಬುಡಕಟ್ಟು ಜನಾಂಗ ಹಿನ್ನೀರಿನಲ್ಲಿ ಮುಳುಗುವುದರಿಂದ ಪಾರಾದವು.

ದಕ್ಷಿಣ ಏಷ್ಯಾದ ಸುಂದರ ಭೌಗೋಳಿಕ ಪ್ರದೇಶಗಳಿಂದ, ಅಲ್ಲಿನ ಕಡಲ ತೀರಗಳಿಂದ, ಹೆಸರುವಾಸಿಯಾದ ಥಾಯ್ಲೆಂಡ್ ದೇಶ ಇತ್ತೀಚಿಗೆ ಪ್ರವಾಸೋದ್ಯಮದ ಮೂಲಕ ಜಗತ್ತಿನ ಗಮನ ಸೆಳೆದಿದೆ. 1980ರಿಂದ ಅಲ್ಲಿ ತೀವ್ರಗೊಂಡ ಉದ್ಯಮೀಕರಣದಿಂದ ವಿದ್ಯುತ್ ಬೇಡಿಕೆ ಹೆಚ್ಚಾಯಿತು. ಈ ಕಾರಣಕ್ಕಾಗಿ ಥಾಯ್ಲೆಂಡ್ ಸರ್ಕಾರ 1982ರಲ್ಲಿ ವಿಶ್ವಬ್ಯಾಂಕ್ ಹಾಗೂ ಜಪಾನ್ ಸರ್ಕಾರದ ನೆರವಿನಿಂದ ಅಲ್ಲಿನ ಪ್ರಸಿದ್ದ ಕ್ವಾಯ್ ನದಿಗೆ 187 ಮೀಟರ್ ಎತ್ತರದ ನಾಮ್ ಚೋನ್ ಎಂಬ ಅಣೆಕಟ್ಟು ನಿರ್ಮಿಸಲು ಆರಂಭಿಸಿತು. ಈ ಅಣೆಕಟ್ಟಿನ ಹಿನ್ನೀರಿನಲ್ಲಿ 75 ಕಿ.ಮಿ. ವ್ಯಾಪ್ತಿಯ ಅಭಯಾರಣ್ಯ ಹಾಗೂ ಆನೆಗಳು ಚಲಿಸುವ ಕಾರಿಡಾರ್ ಮುಳುಗುವ ಸಂಭವ ಹೆಚ್ಚಾಯಿತು. ಜೊತೆಗೆ ಎರಡು ಸಾವಿರ ಕರೇನ್ ಎಂಬ ಮೀನುಗಾರಿಕೆಯನ್ನ ಕಸಬಾಗಿಸಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಸಹ ಒಕ್ಕಲೆಬ್ಬಿಸಲು ಸರ್ಕಾರ ನೊಟೀಸ್ ಜಾರಿ ಮಾಡಿತ್ತು. ಈ ಅಭಯಾರಣ್ಯದಲ್ಲಿ ಅಪರೂಪದ ಪಕ್ಷಿ ಸಂಕುಲವಿದ್ದುದನ್ನು ಮನಗಂಡಿದ್ದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಪಿಲಿಪ್ ಹಾಗೂ ಅವನ ಪುತ್ರ ಪ್ರಿನ್ಸ್ ಚಾರ್ಲ್ಸ್ ಅಭಯಾರಣ್ಯದ ರಕ್ಷಣೆಗೆ ಆರ್ಥಿಕ ನೆರವು ನೀಡಿದ್ದರು. ಇವೆಲ್ಲವನ್ನು ಲೆಕ್ಕಿಸದ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾದಾಗ ಅಲ್ಲಿನ ವಿದ್ಯಾರ್ಥಿ ಸಂಘಟನೆ, ನಾಗರೀಕರು, ಪರಿಸರವಾದಿಗಳು ಪ್ರತಿಭಟನೆಗೆ ಮುಂದಾದರು. ಇವರುಗಳಿಗೆ ರಾಜಧಾನಿ ಬ್ಯಾಂಕಾಕ್‌ನ ಸ್ವಯಂ ಸೇವಾ ಸಂಘಟನೆ ನೆರವಿಗೆ ಬಂದಿತು. ನಾಮ್ಚೋನ್ ಅಣೆಕಟ್ಟು ಮತ್ತು ಇದರಿಂದ ಸೃಷ್ಟಿಯಾಗುವ ಜಲಾಶಯದಿಂದ ಆಗುವ ದುಷ್ಪಾರಿಣಾಮಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿ ವರದಿಯನ್ನ ಹೊರಜಗತ್ತಿಗೆ ಬಿಡುಗಡೆ ಮಾಡಿತು. ನಂತರ ಅಣೆಕಟ್ಟಿನ ವಿರುದ್ಧ ಸ್ಥಳೀಯವಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ಎದುರಾದಾಗ ಥಾಯ್ಲೆಂಡ್ ಸರ್ಕಾರ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗುವ ಯಾವುದೇ ಅಣೆಕಟ್ಟುಗಳನ್ನು ನಿರ್ಮಿಸುವುದಿಲ್ಲ ಎಂದು ಘೋಷಿಸಿತು. ಥಾಯ್ಲೆಂಡ್ ನಾಗರೀಕರ ಈ ಹೋರಾಟ ನೆರೆಯ ಬರ್ಮಾ, ಕಾಂಬೋಡಿಯ, ಲಾವೋಸ್ ರಾಷ್ಟ್ರಗಳ ನಾಗರೀಕರಿಗೆ ಸ್ಪೂರ್ತಿ ನೀಡಿತು.

ಭಾರತದಲ್ಲಿ ಅಣೆಕಟ್ಟುಗಳ ವಿರುದ್ಧದ ಪ್ರತಿಭಟನೆ ಪ್ರಾರಂಭವಾದದ್ದು 1946ರಲ್ಲಿ ಆರಂಭವಾದ ದೇಶದ ಪ್ರಥಮ ಹಿರಾಕುಡ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ. ಅಲ್ಲಿನ ಸಂತ್ರಸ್ತರ ಪ್ರತಿಭಟನೆಯನ್ನ ಪೊಲಿಸರು ಲಾಠಿಚಾರ್ಜ್ ಮಾಡುವುದರ ಮೂಲಕ ಹತ್ತಿಕ್ಕಿದರು. 1978ರಲ್ಲಿ ಬಿಹಾರದ ಸುವರ್ಣರೇಖ ನದಿಗೆ ಕಟ್ಟಲಾದ ಚಾಂಡಿಲ್ ಅಣೆಕಟ್ಟು ಅನೇಕ ಹಿಂಸೆ ಸಾವು ನೋವಿಗೆ ಕಾರಣವಾಯಿತು. ಭಾರತದಲ್ಲೆ ಪ್ರಥಮ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿದರು. 1982ರಲ್ಲಿ 8 ಸಾವಿರ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ನಡೆದ ಘರ್ಷಣೆಯಲ್ಲಿ ಪೋಲಿಸರ ಗುಂಡಿಗೆ ಮೂವರು ಬಲಿಯಾದರು. ಘಟನೆಯ ನಂತರ ಸಂತ್ರಸ್ತರಿಗೆ ನೀಡುವ ಪರಿಹಾರ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡತೊಡಗಿತು.

ಇದಾದ ನಂತರ ಅಣೆಕಟ್ಟುಗಳ ವಿರುದ್ಧ ವಿರೋಧ ಇವತ್ತಿಗೂ ಮುಂದುವರಿದುಕೊಂದು ಬಂದಿದೆ, ಪಶ್ಚಿಮ ಹಿಮಾಲಯದ ತೆಹ್ರಿ ಅಣೆಕಟ್ಟು ವಿಷಯದಲ್ಲಿ ಅಲ್ಲಿನ ಪರಿಸರವಾದಿ ಹಾಗೂ ಮರಗಳ ರಕ್ಷಣೆಗಾಗಿ ಅಪ್ಪಿಕೊ ಚಳುವಳಿಯನ್ನು ಹುಟ್ಟು ಹಾಕಿದ ನೇತಾರ ಸುಂದರ್ ಲಾಲ್ ಬಹುಗುಣ ಇವರ ಪ್ರಬಲ ವಿರೋಧದ ಫಲವಾಗಿ ಅಣೆಕಟ್ಟು ಸಾಧ್ಯವಾಗಿಲ್ಲ.

ಭಾರತದ ಪರಿಸರವಾದಿಗಳಿಗೆ ನೈತಿಕ ವಿಜಯವನ್ನು ಕೇರಳದ ಮೌನ ಕಣಿವೆಯ ಅಣೆಕಟ್ಟು ತಂದಿಕೊಟ್ಟಿತು. 1980ರ ದಶಕದಲ್ಲಿ 120 ಮೀಟರ್ ಎತ್ತರದ ಅಣೆಕಟ್ಟನ್ನು ಕೇರಳದ ಇಡುಕ್ಕಿ ಜಿಲ್ಲೆಯ ಮೌನಕಣಿವೆಯಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಹೊರಟಾಗ ಪಶ್ಚಿಮಘಟ್ಟದ ಜೀವ ಸಂಕುಲಗಳ ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಎಲ್ಲಾ ವರ್ಗದ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ 1983ರಲ್ಲಿ ಅಂದಿನ ಪ್ರದಾನಿ ಇಂದಿರಾಗಾಂಧಿ ಯೋಜನೆಯನ್ನ ರದ್ದುಪಡಿಸಿದರು.

ಭಾರತದ ಅಣೆಕಟ್ಟುಗಳ ಪ್ರತಿಭಟನೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೆಂದರೆ ನರ್ಮದಾ ಬಚಾವ್ ಆಂಧೋಲನ. ಮಹರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳ ನಡುವೆ ಹರಿಯುವ ನರ್ಮದಾ ನದಿಗೆ ಕಟ್ಟಲಾಗುತ್ತಿರುವ ಅಣೆಕಟ್ಟುಗಳ ವಿರುದ್ಧ ದನಿಯೆತ್ತಿ ನಿರಾಶ್ರಿತರ ಪರವಾಗಿ ಹೋರಾಡುತ್ತಾ ಹೋರಾಟಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಮೇಧಾ ಪಾಟ್ಕರ್‌ರಿಗೆ ಸಲ್ಲುತ್ತದೆ.

1985 ರಲ್ಲಿ 30 ವರ್ಷ ವಯಸ್ಸಿನ ಮೇಧಾ ಪಾಟ್ಕರ್ ನರ್ಮದಾ ಅಣೆಕಟ್ಟಿನಿಂದ ಮುಳುಗಡೆಯಾಗುವ ಹಳ್ಳಿಗಳ ಅಧ್ಯಯನಕ್ಕೆ ಬಂದವರು, ಅಲ್ಲಿನ ಹಳ್ಳಿಗರ ನೋವು, ಆಕ್ರಂದನ, ಸರ್ಕಾರದ ಅಧಿಕಾರಿಗಳ ಶೋಷಣೆಯನ್ನ ಸಹಿಸಲಾರದೆ ನಿರಾಶ್ರಿತರ ಪರವಾಗಿ ಅಧ್ಯಯನ ಕೈಬಿಟ್ಟು ಹೋರಾಟಕ್ಕೆ ನಿಂತರು. ಸತತ 27 ವರ್ಷಗಳಿಂದ ಮನೆ ಮಠ ತೊರೆದು, ಅವಿವಾಹಿತರಾಗಿ ಉಳಿದು ಹೋರಾಟ ನಡೆಸುತ್ತಿರುವ ಮೇಧಾರಿಂದ ಸ್ಫೂರ್ತಿ ಪಡೆದ ಅನೇಕ ಇಂಜಿನಿಯರ್‌ಗಳು, ವೈದ್ಯರು, ಸಾಮಾಜಿಕ ಸೇವಾಕರ್ತರು ಇವರ ಜೊತೆ ಕೈಜೋಡಿಸಿದ್ದಾರೆ.. ಈ ಹೋರಾಟಕ್ಕೆ ಅನೇಕ ಮಗ್ಗಲುಗಳಿದ್ದು ಆಸಕ್ತರು ಲೇಖಕಿ ಅರುಂಧತಿರಾಯ್ ರವರ “ದ ಗ್ರೇಟರ್ ಕಾಮನ್ ಗುಡ್” ಕೃತಿಯನ್ನು ಅವಲೋಕಿಸಬಹುದು. (ಪ್ರಕಾಶಕರು: ಇಂಡಿಯಾ ಬುಕ್ ಹೌಸ್-1999)

ಸಮಾರು 200 ಕಿಲೋಮೀಟರ್ ಪಾದಯಾತ್ರೆ ಮಾಡಿ ನಿರಾಶ್ರಿತರ ಬವಣೆಗಳನ್ನ ಅರಿತ ಮೇಧಾ ನರ್ಮದಾ ಕಣಿವೆಯಲ್ಲಿರುವ ಆದಿವಾಸಿಗಳಿಗೆ ಬದುಕು ಕಟ್ಟಿಕೊಡಲು ನಡೆಸಿದ ಹೋರಾಟ ವಿಶ್ವಾದ್ಯಂತ ಪ್ರಸಿದ್ಧಿಯಾಗಿದೆ. ಇವರ ಹೋರಾಟಕ್ಕೆ ಮಣಿದ ವಿಶ್ವಬ್ಯಾಂಕ್ ಕೆಲವು ವರ್ಷಗಳ ಕಾಲ ಆರ್ಥಿಕ ನೆರವನ್ನ ತಡೆಹಿಡಿತ್ತು.

ಸರ್ಕಾರದ ಸುಳ್ಳು ಮಾಹಿತಿಗಳು, ಪರಿಹಾರದಲ್ಲಿ ಮಾಡಲಾದ ವಂಚನೆಗಳು ಇವಲ್ಲವನ್ನೂ ಅಮೇರಿಕಾಕ್ಕೆ ತೆರಳಿ ವಿಶ್ವಬ್ಯಾಂಕ್‌ಗೆ ಮನದಟ್ಟು ಮಾಡಿಕೊಟ್ಟು ಬಂದ ದಿಟ್ಟ ಹೆಣ್ಣು ಮಗಳು ಈಕೆ. ಈಗ ನರ್ಮದಾ ಸರೋವರ ಅಣೆಕಟ್ಟಿನ ಎತ್ತರವನ್ನು 63 ಮೀಟರ್‌ಗಿಂತ ಹೆಚ್ಚು ಮಾಡಕೂಡದೆಂಬ ಎಚ್ಚರಿಕೆಯನ್ನು ಗುಜರಾತ್ ಸರ್ಕಾರಕ್ಕೆ ರವಾನಿಸಿರುವ ಮೇಧಾ ಪಾಟ್ಕರ್ ತಮ್ಮ ಹೋರಾಟವನ್ನು ಇಂದಿಗೂ ಮುಂದುವರಿಸಿ ಜಗತ್ತಿನ ಅನೇಕ ರಾಷ್ಟ್ರಗಳ ಹೋರಾಟಗಾರರಿಗೆ ಮಾದರಿಯಾಗಿ ನಿಂತಿದ್ದಾರೆ.

ಜೀವನದಿಗಳ ರಕ್ಷಣೆ ಮತ್ತು ಅಣೆಕಟ್ಟುಗಳ ವಿರೋಧಕ್ಕೆ ಅಂತರಾಷ್ಟ್ರೀಯ ವೇದಿಕೆ ನಿರ್ಮಾಣ ಮಾಡಿಕೊಟ್ಟವರೆಂದರೆ, ಎಡ್ವರ್ಡ್ ಗೊಲ್ಡ್‌ಸ್ಮಿತ್ ಮತು ನಿಕೊಲಸ್ ಹಿಲ್ಡ್‌ಯಾರ್ಡ್. ಈ ಇಬ್ಬರು ಮಹನೀಯರು ಸೇರಿ 1984ರಲ್ಲಿ ರಚಿಸಿದ “ದ ಸೊಷಿಯಲ್ ಅಂಡ್ ಎನ್ವಿರಾನ್ಮೆಂಟಲ್ ಎಪೆಕ್ಟ್ಸ್ ಆಪ್ ಲಾರ್ಜ್ ಡ್ಯಾಮ್ಸ್” ಕೃತಿ ಪರಿಸರವಾದಿಗಳಿಗೆ ಆಧಾರವಾಯಿತು. ಈ ಇಬ್ಬರು ಲೇಖಕರು ತಾವು ಸಂಪಾದಕರಾಗಿದ್ದ “ದ ಎಕಾಲಜಿಸ್ಟ್” ಪತ್ರಿಕೆಯಲ್ಲಿ ಕೂಡ ನಿರಂತರ ಲೇಖನಗಳನ್ನು ಬರೆದು ಅಣೆಕಟ್ಟುಗಳ ಕ್ರೂರ ಇತಿಹಾಸವನ್ನು ಬಿಚ್ಚಿಟ್ಟರು. ಇದರಿಂದಾಗಿ “ಇಂಟರ್‌ನ್ಯಾಷನಲ್ ರಿವರ್ ನೆಟ್ವರ್ಕ್” ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.

ಈಗ ಜಗತ್ತಿನಾದ್ಯಂತ ಅಣೆಕಟ್ಟು ಕುರಿತಂತೆ ಸರ್ಕಾರಗಳಿಗೆ ಇದ್ದ ಕುರುಡು ನಂಬಿಕೆ ಅಳಿಸಿಹೋಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿದೆ. ಸಣ್ಣದು ಸುಂದರ ಎಂಬ ಪ್ರಸಿದ್ಧ ಅರ್ಥಶಾಸ್ತ್ರಜ್ಙ ಶೂಮಾಕರ್ನ ತತ್ವ ಅರಿವಾಗತೊಡಗಿದೆ. ಹಾಗಾಗಿ ಜೀವನದಿಗಳ ಮಾರಣ ಹೋಮಕ್ಕೆ ತಡೆಯುಂಟಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕಮ್ಯುನಿಸ್ಟ್ ಪ್ರಭುತ್ವ ಇರುವ ಚೀನಾ ದೇಶದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಿ ಅಣೆಕಟ್ಟುಗಳನ್ನು ಸಮರೋಪಾದಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಇತ್ತೀಚಿಗೆ ಬಿಡುಗಡೆಯಾದ ಲೇಖಕ ಬ್ರಹ್ಮ ಚೆಲ್ಲನೀ ಅವರ “ವಾಟರ್: ಏಷ್ಯಾಸ್ ನ್ಯೂ ಬ್ಯಾಟಲ್‌ಗ್ರೌಂಡ್” ಕೃತಿಯಲ್ಲಿ ಸವಿವರವಾಗಿ ವಿವರಿಸಲಾಗಿದೆ.

ಒಟ್ಟಾರೆ ಹಲವು ತ್ಯಾಗಮಯಿ ಜೀವಿಗಳಿಂದ, ಈ ನೆಲದ ಮೆಲಿನ ಅಕ್ಕರೆಯಿಂದ, ಇಲ್ಲಿ ನೆಲ ಜಲ ನಮ್ಮ ಪಾಲಿಗೆ, ನಮ್ಮ ಮುಂದಿನ ತಲೆಮಾರಿಗೆ ಉಳಿದುಕೊಂಡಿವುದು ನಮ್ಮ ಪುಣ್ಯವಿಶೇಷವೆಂದೇ ಹೇಳಬೇಕು. ನಾವು ಜೀವನಪೂರ್ತಿ ಈ ಹೋರಾಟಗಾರರಿಗೆ ಚಿರಋಣಿಯಾಗಿರಬೇಕು.

(ಮುಗಿಯಿತು.)

ಜ್ಯೋತಿಬಾ ಪುಲೆಯವರ ಚಿಂತನೆಗಳ ಪ್ರಸ್ತುತತೆ


-ಬಿ. ಶ್ರೀಪಾದ್ ಭಟ್


 

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಈ ಸಂಘಪರಿವಾರ ತನ್ನ ಕೇಸರಿ ಧ್ವಜ ಹಾರಿಸಿದಂತಹ ರಾಜ್ಯವೆನ್ನುವ ಅಪಖ್ಯಾತಿಗೆ ಒಳಗಾಗಿದ್ದ ನಮ್ಮ ಕರ್ನಾಟಕ ಈಗ ಮತ್ತೆ ಇದೇ ಸಂಘ ಪರಿವಾರ ತನ್ನ ನೀಲಿ ಧ್ವಜವನ್ನು ಹಾರಿಸಿದ ರಾಜ್ಯವೆನ್ನುವ ಅಪಖ್ಯಾತಿಗೆ ಒಳಗಾದ ದುರಂತ ಕೂಡ ಈ ರಾಜ್ಯದ್ದು. ರೇಣುಕಾಚಾರ್ಯ, ಹಾಲಪ್ಪ, ಈಗ ಸವದಿ, ಸಿ.ಸಿ.ಪಾಟೀಲ, ಕೃಷ್ಣ ಪಾಲೇಮಾರ್‌ಗಳು ಮೊಟ್ಟ ಮೊದಲ ಬಾರಿಗೆ ಮಂತ್ರಿಗಳಾಗಿದ್ದಂತಹವರು. ಇವರೆಲ್ಲ ನಮ್ಮ ಶಿಕಾರಿಪುರ ಶಾಸಕರ ಹಿಂಬಾಲಕರು!!! ಆದರೆ ಈ ಬಿಜೆಪಿಯ ಹಿರಿಯಣ್ಣ ಆರ್.ಎಸ್.ಎಸ್.ನದೂ ಕೂಡಾ ಅತ್ಯಂತ ಕಸಬುದಾರಿಕೆಯ ನಡೆಗಳೇ. ತನ್ನ ಕೇಸರೀಕರಣ ಅಜೆಂಡಾವನ್ನು ಬೆಳೆಸಲು, ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಕೋಮುವಾದಿ ಅಜೆಂಡಾವನ್ನು ತುಂಬಲು, ತನ್ನ ಶಾಖಾ ಮಠಗಳನ್ನು ವಿಸ್ತರಿಸಲು ಇದೇ ಬಿಜೆಪಿ ಸರ್ಕಾರ ತನ್ನ, ತನ್ನ ಬಳಗದ ಸರ್ಕಾರವಾಗುತ್ತದೆ. ಆದರೆ ಇದೇ ಬಿಜೆಪಿ ಸರ್ಕಾರ ಹಗರಣಗಳ ಮೇಲೆ ಹಗರಣಗಳಲ್ಲಿ ಸಿಲಿಕಿಕೊಂಡಾಗ ಇದೇ ಆರ್.ಎಸ್.ಎಸ್ .ಕೈ ತೊಳೆದುಕೊಂಡು ಅದು ಪಕ್ಷದ ಅಂತರಿಕ ವಿಚಾರ ಎಂದು ಬೂಸಿ ಬಿಡುತ್ತದೆ. ಇದನ್ನು ನಂಬಲು ಕನ್ನಡದ ಜನತೆ ಎಲ್ಲಾ ಶುದ್ಧ ಹುಂಬರೂ, ಮುಗ್ಧರೂ, ಮತಿಹೀನರೂ, ಸಿನಿಕರೂ ಆಗಿರಬೇಕು. ಇವೆಲ್ಲದರ ಮಧ್ಯೆ ಸಂಘ ಪರಿವಾದವರು ಆರ್.ಎಸ್.ಎಸ್. ನೇತೃತ್ವದಲ್ಲಿ ನಮ್ಮ ಶಿಕ್ಷಣದಲ್ಲಿ ಅಖಂಡ ಹಿಂದೂತ್ವದ ಕೋಮುವಾದಿ ಚಿಂತನೆಗಳನ್ನು, ಅನಾದಿ ಕಾಲದಿಂದಲೂ ಬಿತ್ತುತ್ತಾ ಬಂದಂತಹ ತನ್ನ ಪರಧರ್ಮದ ದ್ವೇಷದ ವಿಚಾರಗಳನ್ನು ಮಾಧ್ಯಮಿಕ ಹಾಗೂ ಹೈಸ್ಕೂಲ್ ಶಿಕ್ಷಣದಲ್ಲಿ ತಂದಿರುವ ರೀತಿ ನಿಜಕ್ಕೂ ಖಂಡನಾರ್ಹ. ಇದನ್ನು ಇವರು ಆರ್. ಎಸ್. ಎಸ್. ಕಣ್ಣಳತೆಯಲ್ಲಿ ನಡೆಸಿದ್ದಾರೆ.

ಇದು ಇಂದು ಎಂದಿನಂತೆ ಗುಪ್ತ ಕಾರ್ಯಸೂಚಿಯಾಗಿ ಉಳಿದಿಲ್ಲ. ಈ ಬಾರಿ ಬಹಿರಂಗವಾಗಿಯೇ ಇಂತಹ ಜೀವವಿರೋಧಿ, ಕೋಮುವಾದೀ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇದಕ್ಕೆ ಮೂಲಭೂತ ಕಾರಣಗಳೆಂದರೆ ನಮ್ಮ ಪ್ರಜ್ಞಾವಂತರ ಮೌನ ಹಾಗೂ ನಿರ್ಲಕ್ಷ್ಯ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿರುವುದು. ಸ್ವಾತಂತ್ರ ನಂತರ ಸುಮಾರು 45 ವರ್ಷಗಳಷ್ಟು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ನಿರಂತರ ರಾಜಕೀಯದಲ್ಲಿ ಇಷ್ಟು ಬೇಗ ನಿಸ್ಸಾಹಯಕರಾಗಿ ದಣಿದವರಂತೆ ಬೇಜವ್ದಾರಿಯಿಂದ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಹತಾಶೆಯ ದಿನಗಳನ್ನು ಸೂಚಿಸುತ್ತವೆ. ಇವರಿಗೆ ವಿರೋಧ ಪಕ್ಷವೆಂದರೇನೆ ಅಪಥ್ಯವೆನ್ನುವಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವದ ದೊಡ್ಡ ಸೋಲು. ಇದರಿಂದಾಗಿಯೇ ಇಂದು ಆರ್.ಎಸ್.ಎಸ್. ನವರಿಗೆ ತಮ್ಮ ಹಿಂದುತ್ವದ ಅಜೆಂಡವನ್ನು ಹುಟ್ಟು ಹಾಕಲು ಮೊದಲಿನ ಹಾಗೆ ಒಳಗೊಳಗೆ ಭಯ, ಆತಂಕವಾಗಲಿ ಇಲ್ಲ, ಯಾವ ಗುಪ್ತ ಕಾರ್ಯಸೂಚಿಗಳಿಲ್ಲ. ಎಲ್ಲವೂ ಬಹಿರಂಗವಾದ, ನಿರ್ಭಯ ನಡಾವಳಿಗಳೇ !!!!

ಇಂತಹ ಸಂದರ್ಭದಲ್ಲಿ ನಾವು ಮಹಾತ್ಮ ಜ್ಯೋತಿಬಾ ಪುಲೆಯವರ ಕ್ರಾಂತಿಕಾರೀ ಪ್ರಗತಿಪರ ಚಿಂತನೆಗಳನ್ನು, ಶಿಕ್ಷಣದ ಬಗೆಗಿನ ಅವರ ಚಿಂತನೆಗಳು ಹಾಗೂ ಸಾಧನೆಗಳನ್ನು ನೆನೆಯುವುದು ಹಾಗೂ ಅದನ್ನೂ ನಿಜಕ್ಕೂ ಈ ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದೂ ಅತ್ಯಂತ ಪ್ರಸ್ತುತವಾಗಿದೆ. ಏಕೆಂದರೆ ಮಹಾತ್ಮ ಪುಲೆಯವರು ಕೇವಲ ಬೋಧಕರಾಗಿರಲಿಲ್ಲ, ಕೇವಲ ಅಕಡೆಮಿಕ್ ಚಿಂತಕರಾಗಿರಲಿಲ್ಲ, ಸಾರ್ವಜನಿಕವಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು, ಸ್ವತಹ ಮಾಡಿ ತೋರಿಸಿದವರು. ಇದು ನಮ್ಮೆಲ್ಲರಿಗೆ ಮಾದರಿಯಾಗಬೇಕು. ಮಹಾರಾಷ್ಟ್ರದ ಸತಾರ ಜಿಲ್ಲೆಯ ಲಾಲ್ ಗುಣಿ ಗ್ರಾಮದಲ್ಲಿ ಹುಟ್ಟಿದ ಮಹಾತ್ಮ “ಜ್ಯೋತಿಬಾ ಪುಲೆ” ಹತ್ತೊಂಬತ್ತನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು. ತಳಸಮುದಾಯಗಳ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ದೊಡ್ಡ ಸಂತ. ಇವರು 28.2.1828 ರಲ್ಲಿ ಜನಿಸಿದರು. ಓದಿದ್ದು ಮಾಧ್ಯಮಿಕ ಶಾಲೆಯವರೆಗೆ ಮಾತ್ರ. ಇವರ ಜೀವನ ಚರಿತ್ರೆಯ ಪ್ರಮುಖ ಅಂಶಗಳನ್ನು Leftword books, Delhi ಪ್ರಕಾಶನದಿಂದ ಪ್ರಕಟಿಸಲಾದ ” ಜಿ.ಪಿ.ದೇಶಪಾಂಡೆ” ಬರೆದ ಹಾಗೂ ಸಂಪಾದಿಸಿದ ” Selected Writings of Jyotiba Phule ” ಎನ್ನುವ ಪುಸ್ತಕದಿಂದ ಸಂಗ್ರಹರೂಪವಾಗಿ ಇಲ್ಲಿ ಅನುವಾದಿಸಿಲಾಗಿದೆ. .

ಪುಲೆಯವರು 1847ರಲ್ಲಿ Thomas Pains ಬರೆದ The rights of man ಎನ್ನುವ ಕೃತಿಯಿಂದ ಪ್ರಭಾವಿತರಾದರು. 1848ರಲ್ಲಿ ಪುಲೆಯವರು ಶೂದ್ರಾತಿಶೂದ್ರ ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದರು. ಸ್ವತ ತಾವೂ ಹಾಗೂ ತಮ್ಮ ಪತ್ನಿ ಸಾವಿತ್ರಿಬಾಯೀ ಪುಲೆಯವರು ಇದನ್ನು ನಡೆಸುತ್ತಿದ್ದರು. ಆದರೆ ಆ ಕಾಲದ ಕಟ್ಟುನಿಟ್ಟಿನ ಸಮಾಜ ಸಂಪ್ರದಾಯಗಳಿಗೆ ಭಯಬೀತರಾಗಿದ್ದ ಅವರ ತಂದೆ ಗೋವಿಂದರಾವ್ ಪುಲೆ ಅವರು ಇದರಿಂದ ಬಲು ಅಸಮಧಾನಗೊಂಡರು. ಆದರೆ ಜ್ಯೋತಿಬಾ ಪುಲೆಯವರು ತಮ್ಮ ಆದರ್ಶವನ್ನು ಬಿಟ್ಟುಕೊಡದೆ ಅಸ್ಪೃಶ್ಯರಿಗೋಸ್ಕರ ಪತ್ನಿಯೊಂದಿಗೆ ತಮ್ಮ ತಂದೆಯ ಮನೆಯನ್ನೇ ತೊರೆದರು. 1851 ರಲ್ಲಿ ಎಲ್ಲ ಜಾತಿಯ ಹೆಣ್ಣುಮಕ್ಕಳಿಗೋಸ್ಕರ ಶಾಲೆಯನ್ನು ಆರಂಭಿಸಿದರು. 1855 ರಲ್ಲಿ ಕೆಲಸ ಮಾಡುವ ಅನಕ್ಷರಸ್ಥರಿಗಾಗಿ ಸಂಜೆ ಶಾಲೆಯನ್ನು ಆರಂಭಿಸಿದರು. ಇವರ ಈ ಕ್ರಾಂತಿಕಾರಿ ಧೋರಣೆಗಳಿಗೆ ಆ ಕಾಲದ ಸಂಪ್ರದಾಯಸ್ಥ ಗುಂಪುಗಳಿಂದ 1856ರಲ್ಲಿ ಜೀವದ ಮೇಲೆ ಹಲ್ಲೆಯ ಪ್ರಯತ್ನ ಕೂಡ ನಡೆಯಿತು. ಆದರೆ ಪುಲೆ ಹಾಗೂ ಅವರ ಪತ್ನಿ ಸಾವಿತ್ರಿ ಬಾಯಿಯವರು ಇದಕ್ಕೆಲ್ಲ ಎದೆಗುಂದಲಿಲ್ಲ. ಅದೇ ವರ್ಷ ತಮ್ಮ ಮನೆಯಲ್ಲಿನ ಕುಡಿಯುವ ನೀರಿನ ತೊಟ್ಟಿಯನ್ನು ಅಸ್ಪೃಶ್ಯರಿಗಾಗಿ ತೆರೆದುಕೊಟ್ಟರು. ಇದು ಆ ಕಾಲಕ್ಕಿರಲಿ ಈ ಕಾಲಕ್ಕೂ ಅತ್ಯಂತ ಕ್ರಾಂತಿಕಾರಿ ನಡೆಯೆನ್ನಬಹುದು. 1860ರಲ್ಲಿ ವಿಧವಾ ವಿವಾಹ ಆಂದೋಲನವನ್ನು ಹುಟ್ಟು ಹಾಕಿದರು. 24.9.1873ರಲ್ಲಿ ಸತ್ಯ ಶೋದಕ ಸಮಾಜವನ್ನು ಸ್ಥಾಪಿಸಿದರು. ಆ ಮೂಲಕ ಶೂದ್ರಾತಿಶೂದ್ರರನ್ನು ಅಕ್ಷರ ದಾಸೋಹದ ಮೂಲಕ ಕತ್ತೆಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕಾರ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. 1876 – 1882 ರ ಅವಧಿಯಲ್ಲಿ ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಸದಸ್ಯರಾಗಿದ್ದರು. ಆ ಕಾಲಘಟ್ಟದಲ್ಲಿ ಪಾನ ನಿಷೇಧದ ವಿರುದ್ಧ, ಬಾಲ್ಯ ವಿವಾಹದ ವಿರುದ್ಧ ಹೋರಾಡಿದ್ದರು. ಆ ಕಾಲದ ಇತರೇ ಸಮಾಜ ಸುಧಾರಣ ಆಂದೋಲನಗಳು ಮೇಲ್ಜಾತಿಯಲ್ಲಿನ ಕಂದಾಚಾರಗಳ ವಿರುದ್ಧ ಹೋರಾಡಿದರೆ ಜ್ಯೋತಿಬಾ ಪುಲೆಯವರು ಈ ಹೋರಾಟವನ್ನು ಕೆಳಜಾತಿಗಳ ಸಮಾಜೋದ್ಧಾರಕ್ಕೆ ವಿಸ್ತರಿಸಿದರು. Total inclusive policy ಯನ್ನು ಮೊಟ್ಟ ಮೊದಲ ಬಾರಿಗೆ ಚಿಂತಿಸಿದವರು ಜ್ಯೋತಿಬಾ ಪುಲೆಯವರು.

150 ವರ್ಷಗಳ ಹಿಂದೆ ಪುಲೆಯವರು ಇಲ್ಲಿನ ಜಾತೀಯತೆಯನ್ನು ವಿಶ್ಲೇಷಿಸುವಾಗ ಹಿಂದುತ್ವವಾದಕ್ಕಿಂತಲೂ “ಬ್ರಾಹ್ಮಣವಾದಕ್ಕೆ” ಹೆಚ್ಚು ಒತ್ತು ನೀಡುತ್ತಾರೆ. ಇವರ ಪ್ರಕಾರ ಹಿಂದುತ್ವವೆನ್ನುವುದು ವೇದಗಳು, ಮನುಸ್ಮೃತಿ ಎನ್ನುವ ಎರಡು ಕೃತಿಗಳಿಂದ, ಚಿಂತನೆಗಳಿಂದ ರೂಪುಗೊಂಡಿದೆ. ಈ ಕೃತಿಗಳು ಬ್ರಾಹ್ಮಣವಾದದಿಂದ ಬರೆಯಲ್ಪಟ್ಟವು. ಈ ಮೂಲಕ ತಮ್ಮ ಸಾರ್ವಭೌಮತ್ವವನ್ನು ಸಮಾಜದಲ್ಲಿ ಪ್ರತಿಷ್ಟಾಪಿಸಿದವು. ಬ್ರಾಹ್ಮಣಿಕೆಯ ಈ ಶ್ರೇಷ್ಟತೆಯ ಯಜಮಾನಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಪುಲೆಯವರು ಈ ಕೃತಿಗಳ ಏಕಸ್ವಾಮತೆಯನ್ನೂ ಕೂಡ ತಿರಸ್ಕರಿಸಿದರು. ಅಂದರೆ ಈ ಪುರೋಹಿತಶಾಹಿ ಕೃತಿಗಳನ್ನು ಪರಿಷ್ಕರಿಸಿ ಇವಕ್ಕೆ ಮಾನವೀಯತೆಯ ಸ್ಪರ್ಶ ನೀಡಬೇಕೆನ್ನುವ ಉದಾರವಾದದ ಚಿಂತನೆಯನ್ನೂ ಪುಲೆ ಪ್ರತಿಪಾದಿಸಲಿಲ್ಲ. ಬದಲಾಗಿ ಪುಲೆಯವರು ಪ್ರತಿಪಾದಿಸಿದ್ದು ಈ ಬ್ರಾಹ್ಮಣೀಕೃತ ಪ್ರೇರೇಪಿತ ಎಲ್ಲ ಶೈಕ್ಷಣಿಕ, ಸಾಮಾಜಿಕ ಪುಸ್ತಕಗಳನ್ನೂ ನಿಷೇದಿಸಬೇಕೆಂಬುದನ್ನು. ಪುಲೆಯವರು ಭಗವಂತನ ಅವತಾರಗಳ ಬಗೆಗಿನ ಸಿದ್ಧಾಂತಗಳನ್ನು ಕಟುವಾಗಿ ಟೀಕಿಸುತ್ತಾರೆ. ಶೂದ್ರಾತಿಶೂದ್ರ ನೆಲೆಗಟ್ಟಿನಲ್ಲಿ ಈ ಬ್ರಾಹ್ಮಣತ್ವ ಅಧಾರಿತ ಚರಿತ್ರೆಯನ್ನು ಅಲ್ಲಗೆಳೆಯುತ್ತಾ ಅದನ್ನು ತಿರಸ್ಕರಿಸಿ ಚರಿತ್ರೆಯನ್ನು ತಳಸಮುದಾಯಗಳ ಮೂಲಕ ಪುನರಚಿಸುವುದಕ್ಕೆ ಕರೆಕೊಡುತ್ತಾರೆ. ಇದಕ್ಕೆ ಸ್ವತಹ ತಾವೇ ಮುಂದು ನಿಂತು ಪ್ರಾಯೋಗತ್ಮಕವಾಗಿ ಚಾಲನೆ ನೀಡುತ್ತಾರೆ. ತಮ್ಮ ಚಿಂತನೆಗಳಲ್ಲಿ ಜಾತೀಯತೆಗಿಂತಲೂ ವರ್ಣಾಶ್ರಮತೆಗೆ ಪ್ರಾಧಾನತೆಯನ್ನು ನೀಡುತ್ತ ಆ ಮೂಲಕ Dichotomous Structure ಅನ್ನು ಸೃಷ್ಟಿಸುತ್ತಾ ಇಲ್ಲಿ ಬ್ರಾಹ್ಮಣತ್ವ ಹಾಗೂ ಶೂದ್ರಾತಿಶೂದ್ರರೆನ್ನುವ ಎರಡು ಧೃವಗಳ ಸಮಾಜದ ಪರಿಕಲ್ಪನೆಯನ್ನು ಬಳಸುತ್ತಾರೆ. ಹಿಂದೂ ಧರ್ಮದ ಉಸಿರುಗಟ್ಟುವ ವಾತಾವರಣದಿಂದ ಪಾರಾಗಲು ತಳಸಮುದಾಯದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದನ್ನು ಪುಲೆ ಸಮರ್ಥಿಸುತ್ತಾರೆ. ಮತಾತಂರವೆನ್ನುವುದು ಮೂಲಭೂತ ಹಕ್ಕು ಎನ್ನುವುದನ್ನು ಮೊಟ್ಟಮೊದಲು ಪ್ರತಿಪಾದಿಸಿದವರು ಪುಲೆಯವರು. ಇಲ್ಲಿ ಅವರು ಕ್ರಿಶ್ಚಿಯಾನಿಟಿ ಧರ್ಮದ ಶ್ರೇಷ್ಟತೆಗಿಂತ ಹಿಂದೂ ಧರ್ಮದ ಅಸ್ಪೃಶ್ಯತೆಗೆ ಹೆಚ್ಚು ಒತ್ತು ನೀಡುತ್ತಾರೆ. ಚಿತ್ಪಾವಣ ಭ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಪಂಡಿತ ರಮಾಬಾಯಿಯವರು ಕ್ರ್ಶಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಈ ನೆಲೆಗಟ್ಟಿನಲ್ಲಿ ಸಮರ್ಥಿಸುತ್ತಾರೆ. ಅನೇಕ ಬಾರಿ ಪುಲೆಯವರ ಬ್ರಾಹ್ಮಣತ್ವದ ಕಟುಟೀಕೆ ಅವರ ಹಿಂಬಾಲಕರಿಗೂ, ಶಿಷ್ಯಂದಿರಿಗೂ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ತಮ್ಮ ಕಾಲದ ಇತರ ಸಮಾಜ ಸುಧಾಕರಿಗಿಂತ ಪುಲೆಯವರು ಭಿನ್ನವಾಗಿರುವುದಕ್ಕೆ ಕಾರಣ ಅವರು ಶೂದ್ರಾತಿಶೂದ್ರರ ಜೀವನೋದ್ಧಾರಕ್ಕಾಗಿ ಕ್ರಾಂತಿಕಾರಕ ಬದಲಾವಣೆಗಳ ಹರಿಕಾರರಾಗಿದ್ದರು.

1881 ಲಾರ್ಡ್ ರಿಪ್ಪನ್ ಎನ್ನುವ ವೈಸರಾಯ್ “ವಿಲಿಯನ್ ಹಂಟರ್” ನೇತೃತ್ವದಲ್ಲಿ Education commission ಒಂದನ್ನು ಸ್ಥಾಪಿಸುತ್ತಾರೆ. ಇದನ್ನು “ಹಂಟರ್ ಶಿಕ್ಷಣ ಸಮಿತಿ” ಎಂದು ಕರೆಯಲಾಗುತ್ತದೆ. ಇದಕ್ಕೆ ಜ್ಯೋತಿಬಾ ಪುಲೆಯವರನ್ನು ತಮ್ಮ ಚಿಂತನೆಗಳನ್ನು, ಸಂಶೋಧನೆಗಳನ್ನು ಮಂಡಿಸಲು ಕೋರಲಾಯಿತು. ಈ ಕಮಿಷನ್ ಮುಂದೆ ಪುಲೆಯವರು ಮಂಡಿಸಿದ ಅತ್ಯಂತ ವಿಚಾರಪೂರ್ಣ ಹಾಗೂ ಕ್ರಾಂತಿಕಾರಿ ನಿಲುವುಗಳನ್ನು, ಚಿಂತನೆಗಳನ್ನು ಹಂಟರ್ ಒಪ್ಪಲಿಲ್ಲ. ಅಲ್ಲದೆ ಇದನ್ನು ತಮ್ಮ ಕಮಿಷನ್‌ನಲ್ಲಿ ಸೇರಿಸಲಿಲ್ಲ. ಇದರಲ್ಲಿ ಆಶ್ಚರ್ಯವೇನಿರಲಿಲ್ಲ. ಏಕೆಂದರೆ 130 ವರ್ಷಗಳ ಹಿಂದೆ ಶಿಕ್ಷಣದ ಸುಧಾರಣೆಗಾಗಿ ಕೇವಲ ಉದಾರವಾದದ, ಮನ ಪರಿವರ್ತನೆಯ ತಿರುಳನ್ನು ನೆಚ್ಚದೆ ಅಮೂಲಾಗ್ರ ಬದಲಾವಣೆಯನ್ನು ಪ್ರತಿಪಾದಿಸಿದ ಪುಲೆಯವರ ಆದರ್ಶಗಳು ಅಂದಿನ ಬ್ರಿಟಿಷ್ ಸರ್ಕಾರಕ್ಕಾಗಲಿ, ಹಂಟರ್‌ಗಾಗಲಿ ಅರ್ಥವಾಗಿವುರುವ ಸಾಧ್ಯತೆಗಳೇ ಕಡಿಮೆ. ಇದರಿಂದ ಬೇಸತ್ತ ಪುಲೆಯವರು ಈ ಹಂಟರ್ ಕಮಿಷನ್ ಒಂದು ವ್ಯರ್ಥ ಕಾಲಹರಣವೆಂದು ಕಿಡಿಕಾರಿದ್ದರು. ಇವು ಪ್ರಾಥಮಿಕ ಶಿಕ್ಷಣದ ನೀತಿಗಾಗಿ ಪುಲೆಯವರು ಪ್ರತಿಪಾದಿಸಿದ, ಚಿಂತಿಸಿದ, ಇದನ್ನು ತಾವು ನಡೆಸುವ ಶಾಲೆಗಳಲ್ಲಿ ಯಸಸ್ವಿಯಾಗಿ ಜಾರಿಗೆ ತಂದ, ಮತ್ತು ಹಂಟರ್ ಕಮಿಷನ್ ಮುಂದಿಟ್ಟಂತಹ ಪ್ರಮುಖ ವಿಚಾರಗಳು . (1880 ರಲ್ಲಿ)

  1. 1. ಇಂದಿನ ಶಿಕ್ಷಣ ( 1880 ರಲ್ಲಿ ) ಇಲಾಖೆಯು ಬ್ರಾಹ್ಮಣರ, ಇಂಗ್ಲೀಷರ ಅಧಿಪತ್ಯದಲ್ಲಿದೆ. ಇಲ್ಲಿ ಕೆಳಜಾತಿಯ ಮಕ್ಕಳಿಗೆ ಪ್ರವೇಶವೇ ಇಲ್ಲ. ಆದರೆ ಬ್ರಿಟಿಷ ಸರ್ಕಾರದ ಆದಾಯದ ಮೂಲ ಇರುವುದು ರೈತರಿಂದ, ಕೂಲಿಕಾರರ ಬೆವರಿನ ದುಡಿಮೆಯಿಂದ. ಮೇಲ್ವರ್ಗಗಳ ಸಮಾಜದಿಂದ ಸರ್ಕಾರದ ಆದಾಯಕ್ಕೆ ಬರುತ್ತಿರುವ ಕಾಣಿಕೆ ಅತ್ಯಲ್ಪ. ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಶಿಕ್ಷಣವನ್ನು ಇಂದಿನ ಅಧೋಗತಿಗೆ ಇಳಿಸಿದ್ದಕ್ಕೆ ಸರ್ಕಾರವನ್ನೇ ದೂರಬೇಕು. ಈ ದೇಶದ ಬಹುಸಂಖ್ಯಾತ ಶೂದ್ರರ ಹಾಗೂ ಅತಿ ಹಿಂದುಳಿದವರನ್ನು ಸರ್ಕಾರವೇ ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಅವರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿ ಇಡೀ ಶಿಕ್ಷಣ ಇಲಾಖೆಯನ್ನು ಬ್ರಾಹ್ಮಣರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಬೇಕು.
  2. ಹಿಂದೆಂದಿಗಿಂತಲೂ ಈಗ ಪ್ರಾಥಮಿಕ ಶಾಲೆಗಳು ಹೆಚ್ಚಿವೆ. ಆದರೆ ಅವು ಬಹು ಸಂಖ್ಯಾತರನ್ನು ಒಳಗೊಂಡಿಲ್ಲ. ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚುವರಿ CESS ಅನ್ನು ಪಡೆಯುತ್ತದೆ. ಆದರೆ ಬಹುಸಂಖ್ಯಾತರ ಶಿಕ್ಷಣಕ್ಕಾಗಿ ಯಾವುದೇ ಖರ್ಚನ್ನು ಮಾಡುತ್ತಿಲ್ಲ. ಇಲ್ಲಿನ ಪ್ರಾಂತದಲ್ಲಿ ಸುಮಾರು ಹತ್ತು ಲಕ್ಷದಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಇವರೆಲ್ಲ ಸರ್ಕಾರದ ಮೇಲೆ ಅವಲಂಬಿತರು. ಆದರೆ ಸರ್ಕಾರ ಇವರ ಬಗ್ಗೆ ಕುರುಡಾಗಿ ವರ್ತಿಸುತ್ತಿದೆ. ನನ್ನ ಪ್ರಕಾರ ಬಹುಸಂಖ್ಯಾತ ಜಾತಿಯ ಮಕ್ಕಳಿಗೆ 12 ನೇ ವರ್ಷದವರೆಗೂ ಪ್ರಾಥಮಿಕ ಶಿಕ್ಷಣವನ್ನು ಕಡ್ದಾಯಗೊಳಿಸಬೇಕು .ಅದೂ ಉಚಿತವಾಗಿ. ಹಳ್ಳಿಗಳಲ್ಲಿ ಬಡತನದಿಂದಾಗಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಬಹುಪಾಲು ಮಕ್ಕಳು ಒಕ್ಕಲುತನ, ಕೂಲಿಕೆಲಸಕ್ಕೆ, ದನಕಾಯುವುದಕ್ಕೆ ಹೋಗುತ್ತಾರೆ. ಇವರನ್ನು ಶಾಲೆಗೆ ಕರೆತರಲು ಸರ್ಕಾರ ಸ್ಕಾಲರ್‌ಷಿಪ್ ಯೋಜನೆಯನ್ನು ಜಾರಿಗೆ ತರಬೇಕು. ಚುರುಕಾಗಿ ಓದುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಬಹುಮಾನಗಳನ್ನು ಕೊಡಬೇಕು. ಇದು ಆ ಮಕ್ಕಳಿಗೆ ಓದನ್ನು ಮುಂದುವರೆಸಲು ಉತ್ತೇಜನ ಸಿಗುತ್ತದೆ. ಆದರೆ ನಮ್ಮ ದೇಶದಲ್ಲಿ ಜಾತಿ ಕಾರಣಕ್ಕಾಗಿ ಮುಮರು, ಮಹರ್, ಮಾಂಗ್ ಜಾತಿಗೆ ಸೇರಿದ ಅಸ್ಪೃಶ್ಯರನ್ನು ಶಾಲೆಗೆ ಸೇರಿಸಿಕೊಳ್ಳುತ್ತಿಲ್ಲ. ಮೇಲ್ಜಾತಿ ಮಕ್ಕಳ ಜೊತೆಗೆ ಕೂರಿಸುತ್ತಿಲ್ಲ. ಅಲ್ಲದೆ ಮೇಲ್ಜಾತಿಯ ಶಿಕ್ಷಕರು ಈ ಅಸ್ಪೃಶ್ಯ ಮಕ್ಕಳನ್ನು ಮುಟ್ಟುತ್ತಿಲ್ಲ. ಅಲ್ಲದೆ ಈ ಮಕ್ಕಳನ್ನು ಬೋಧನೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಹೀಗಾಗಿ ಸರ್ಕಾರ ತುರ್ತಾಗಿ ಅಸ್ಪೃಶ್ಯ ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕು.
  3. ಶಿಕ್ಷಕರ ಸಂಬಳವನ್ನು ಈಗಿನ ರೂಪಾಯಿ 10ರಿಂದ ರೂಪಾಯಿ 12ಕ್ಕೆ ಹಾಗೂ ರೂಪಾಯಿ 15ಕ್ಕೆ ಏರಿಸಬೇಕು. ಶಿಕ್ಷಕರನ್ನು ಆರಿಸುವಾಗಲೂ ರೈತರ, ಕೂಲಿಕಾರ್ಮಿಕರ ವಲಯದಿಂದ ಆರಿಸಬೇಕು. ಆಗ ಶಿಕ್ಷಕರು ಎಲ್ಲಾ ಜಾತಿಯ ಮಕ್ಕಳೊಂದಿಗೆ ಬೆರೆಯುತ್ತಾರೆ ಅಲ್ಲದೆ ಬಹುಸಂಖ್ಯಾತ ಮಕ್ಕಳ ಮೂಲಭೂತ ಅವಶ್ಯಕತೆಗಳನ್ನು ಅರಿತವರಾಗಿರುತ್ತಾರೆ ಹಾಗೂ ಈ ಅವಶ್ಯಕತೆಗಳಿಗೆ ತುರ್ತಾಗಿ ಸ್ಪಂದಿಸುತ್ತಾರೆ. ಆದರೆ ಬ್ರಾಹ್ಮಣ ಶಿಕ್ಷಕರು ಹಾಗಲ್ಲ. ಇವರು ಮಕ್ಕಳನ್ನು ಮುಟ್ಟುವುದೂ ಇಲ್ಲ.
  4. ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣದ ಜೊತೆಗೆ ವ್ಯವಸಾಯ, ನೈರ್ಮಲೀಕರಣದ ಬಗೆಗೆ ಪ್ರಾಥಮಿಕ ಅಂಶಗಳನ್ನು ಅಳವಡಿಸಬೇಕು. ಈ ಶಿಕ್ಷಕರನ್ನು ಗ್ರಾಮದ ಗ್ರಾಮ ಲೆಕ್ಕಿಗರ ಜೊತೆಗೆ, ತಹಶೀಲ್ದಾರರ ಜೊತೆಗೆ, ಪೋಸ್ಟ್ ಮಾಸ್ಟರ್ ಜೊತೆಗೆ ದಿನದ ಕೆಲಕಾಲ ಬೆರೆಯುವಂತೆ ಮಾಡಬೇಕು. ಈ ಮೂಲಕ ಶಿಕ್ಷಕರಿಗೆ ಸಮಾಜದ ಇತರೇ ಸ್ತರಗಳ ಬಗೆಗೆ ಜ್ಞಾನ ಪ್ರಾಪ್ತವಾಗುತ್ತದೆ ಹಾಗೂ ಆ ಗ್ರಾಮದಲ್ಲಿ ಒಂದು ಬಗೆಯ ಅಧಿಕಾರವೂ ದೊರೆಯುತ್ತದೆ. ಉತ್ತಮ ಫಲಿತಾಂಶಗಳನ್ನು ತಂದಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಬಹುಮಾನಗಳನ್ನು, ಅವರ ಸಂಬಳದಲ್ಲಿ ಉತ್ತಮ ಏರಿಕೆಯನ್ನು ಕೊಡಬೇಕು. ಇದು ಅವರಿಗೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸಲು ಉತ್ತೇಜನ ದೊರೆಯುತ್ತದೆ.
  5. ಮಕ್ಕಳು ಪಠ್ಯಪುಸ್ತಕಗಳನ್ನು ಓದುವುದರ ಜೊತೆಜೊತೆಗೆ ಬಾಲಭೋದಿ, ಮಾತೃಭಾಷೆ, accounts, grammar, ಭೂಗೋಳ, ಇತಿಹಾಸ, ವ್ಯವಸಾಯ, ನೀತಿ ತತ್ವದ ಪಾಠಗಳು, ನೈರ್ಮಲೀಕರಣಗಳನ್ನು ಬೋಧಿಸಬೇಕು. ದ್ವಿಭಾಷಾ ಮಾಧ್ಯಮ ( ಮಾತೃಭಾಷೆ, ಇಂಗ್ಲೀಷ್) ವನ್ನು ಜಾರಿಗೆ ತರಬೇಕು.
  6. ಶಿಕ್ಷಣಾಧಿಕಾರಿಗಳು ಈಗಿನ ಸಂಪ್ರದಾಯದಂತೆ ವರ್ಷಕ್ಕೊಮ್ಮೆ ಶಾಲೆಗೆ ಭೇಟಿ ಕೊಡುವುದನ್ನು ಬದಲಿಸಿ ಮೂರು ತಿಂಗಳಿಗೊಮ್ಮೆ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ಗುಣ ಮಟ್ಟವನ್ನು, ಸೌಲಭ್ಯಗಳನ್ನು ಪರಿಶೀಲಿಸಬೇಕು. ಈ ಶಿಕ್ಷಣಾಧಿಕಾರಿಗಳು ಶಾಲಾ ವೇಳೆಯ ಹೊರತಾಗಿಯೂ ಬೇರೆ ವೇಳೆಯಲ್ಲಿ ಭೇಟಿ ಕೊಟ್ಟು ಪಠ್ಯೇತರ ಚಟುವಟಿಕೆಗಳನ್ನೂ ಪರಿಶೀಲಿಸಬೇಕು. ಶಿಕ್ಷಕರ ಹಾಗೂ ಬಡ ವಿದ್ಯಾರ್ಥಿಗಳ ವಸತಿ ಸೌಕರ್ಯ, ಓದಲಿಕ್ಕೆ ಅನುಕೂಲಕರವಾದ ನೈರ್ಮಲೀಕರಣದ ವ್ಯವಸ್ಥೆ ಕೂಡ ಶಿಕ್ಷಣಾಧಿಕಾರಿಗಳಿಗೆ ವಹಿಸಬೇಕು. ಇದರಿಂದ ಅವರ ಜವಾಬ್ದಾರಿಯ ವ್ಯಾಪ್ತಿ ಹೆಚ್ಚಾಗುತ್ತದೆ.
  7.  ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರಾಥಮಿಕ ಶಿಕ್ಷಣಕ್ಕಾಗಿ ಗ್ರಾಮದ, ಮುನ್ಸಿಪಾಲಿಟಿಯ ಆದಾಯದ ಅರ್ಧದಷ್ಟು ಹಣವನ್ನು ಮೀಸಲಿಡಬೇಕು. ಮುನ್ಸಿಪಾಲಿಟಿ ವ್ಯಾಪ್ತಿಯೊಳಗೆ ಬರುವ ಪಟ್ಟಣಗಳಲ್ಲಿ Grant in aid ಪದ್ಧತಿಯನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ನೀಡಬೇಕು.
  8.  ಕನಿಷ್ಠ ಆರನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಮಾಡಿದವರನ್ನು, ಕಾಲೇಜು ವಿದ್ಯಾಭ್ಯಾಸ ಮಾಡಿದವರನ್ನು ಶಿಕ್ಷಕರಾಗಿ ಆರಿಸಬೇಕು. ಬೇಕಿದ್ದರೆ ಸಮಾಜದ ವಿವಿಧ ಇಲಾಖೆಗಳಿಂದಲೂ ಸಮರ್ಥರನ್ನು ಶಿಕ್ಷಕರಾಗಿ ಪ್ರಯೋಗಾತ್ಮಕವಾಗಿ ಆರಿಸಬೇಕು.

ಇವು ಜ್ಯೋತಿಬಾ ಪುಲೆಯವರು ಶಿಕ್ಷಣದ ಹಾಗೂ ಸಮಾಜದ ಉನ್ನತೀಕರಣಕ್ಕಾಗಿ ಚಿಂತಿಸಿದ ಕೆಲವು ಪ್ರಮುಖ ಅಂಶಗಳು. ಮೇಲ್ಕಾಣಿಸಿದ ಪುಸ್ತಕದಿಂದ ಸಂಗ್ರಹವಾಗಿ ಆರಿಸಿದ್ದು. ಇದನ್ನು ಅವರು 130 ವರ್ಷಗಳಷ್ಟು ಹಿಂದೆಯೇ ಪ್ರತಿಪಾದಿಸಿದ್ದರು. ಇಂದಿನ ವ್ಯವಸ್ಥೆಯಲ್ಲಿ, ಶಿಕ್ಷಣದ ವ್ಯವಸ್ಥೆಯಲ್ಲಿ ಪುಲೆಯವರು ಹೇಳಿದ ಬಹುಪಾಲು ವಿಚಾರಗಳು ದೈಹಿಕವಾಗಿ ಅಂದರೆ ಬಾಹ್ಯವಾಗಿ ಅನುಷ್ಟಾನಗೊಂಡರೂ ಮಾನಸಿಕವಾಗಿ ಇಂದಿಗೂ 130 ವರ್ಷಗಳಷ್ಟು ಹಿಂದೆ ಇದೆ. ಅಸ್ಪೃಶ್ಯತೆ ಈಗಲೂ ಚಾಲ್ತಿಯಲ್ಲಿದೆ. ಈಗಲೂ ಹಳ್ಳಿಗಾಡಿನ ಬಡಮಕ್ಕಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತಾರೆ. ಈಗಲೂ ಶಿಕ್ಷಕರ ಗುಣಮಟ್ಟ ಮೇಲೇರಿಲ್ಲ. ಅವರ ತರಬೇತಿಯ ಪರಿಕರಗಳೂ, ಹಾಗೂ ಅದರ content ಇಂದಿಗೂ ಓಬಿರಾಯನ ಕಾಲದ್ದಾಗಿದೆ. ಹಾಗೆಯೇ ನೌಕರಶಾಹಿ ಸಹ. ಇನ್ನು ರಾಜಕಾರಣಿಗಳ ಬಗ್ಗೆ ಹೇಳುವುದಕ್ಕೆ ಏನೂ ಉಳಿದಿಲ್ಲ. 150 ವರ್ಷಗಳ ಹಿಂದೆಯೇ ಪುಲೆಯವರು ಇದನ್ನು ಮನಗಂಡೇ ಉದಾರವಾದದ ನೀತಿಯನ್ನು ತಿರಸ್ಕರಿಸಿ ಅಮೂಲಾಗ್ರ ಬದಲಾವಣೆಗಳನ್ನು ಅನುಷ್ಟಾನಗೊಳಿಸಲು ತೀವ್ರವಾಗಿ ಕಾರ್ಯತತ್ಪರರಾಗಿದ್ದರು. ಆದರೆ ಇಂದು ಕೂಡ ನಾವೆಲ್ಲ ಚಿಂತಿಸುತ್ತಿರುವುದು ಸುಧಾರಣಾವಾದದ ನೆಲೆಗಟ್ಟಿನಲ್ಲಿ. ಇದು ದುರಂತವಲ್ಲದೆ ಮತ್ತಿನ್ನೇನು. ನಾವು ಕೇವಲ ಅಕಡೆಮಿಕ್ ಚೌಕಟ್ಟನ್ನು ಮೀರಿ ಹೊರಬಂದು ವಾಸ್ತವಕ್ಕೆ ಮುಖಾಮುಖಿಯಾದರೆ ಮಾತ್ರ ಏನಾದರೂ ಬದಲಾವಣೆ ಗೋಚರಿಸಲು ಸಾಧ್ಯ. ಚಿಂತನೆಗಳನ್ನು ಕೇವಲ ಬೋಧನೆಗಳ ಮಟ್ಟಕ್ಕೆ, ಸೆಮಿನಾರ್‌ಗಳ ಮಟ್ಟಕ್ಕೆ ನಿಲ್ಲಿಸದೆ ಸ್ವತಹ ಸಮಾಜದಲ್ಲಿ ಅವನ್ನು ಪ್ರಯೋಗಕ್ಕೆ ಅಳಪಡಿಸಿದಾಗ ಅವುಗಳ ಪ್ರಭಾವ, ಮಿತಿಗಳು ಗೋಚರಿಸುತ್ತವೆ. ಇದನ್ನು ಪುಲೆಯವರು 150 ವರ್ಷಗಳ ಹಿಂದೆ ಸ್ವತಹ ತಾವೇ ಮಾಡಿ ತೋರಿಸಿದ್ದರು. ನಾವೂ ಕೂಡ ಇದನ್ನೇ ಅನುಸರಿದೆ ಬೇರೆ ದಾರಿಯೇ ಇಲ್ಲ. ಏಕೆಂದರೆ ಅಂಬೇಡ್ಕರ್ ಸಹ ಅನುಸರಿಸಿದ್ದು ಪುಲೆ ಮಾದರಿಯನ್ನೇ. ಆದರೆ ಇಂದು ಜಾತೀಯತೆ, ಅಸ್ಪೃಶ್ಯತೆ ಎನ್ನುವುದು ಕೇವಲ ಬ್ರಾಹ್ಮಣತ್ವದ ಕೈಯಲ್ಲಿ ಉಳಿದಿಲ್ಲ. ಇಂದು ಮಧ್ಯಮ ಶೂದ್ರ ಜಾತಿಗಳೂ ಕೂಡ ತಮ್ಮ ಜಾತೀಯತೆಗಳ ಕರಾಳ ಸ್ವರೂಪಗಳನ್ನು, ಅತ್ಯಾಚಾರಗಳನ್ನು ಅತ್ಯಂತ ಅಮಾನವೀಯವಾಗಿ ವ್ಯವಸ್ಥೆಯಲ್ಲಿ ಜಾರಿಗೊಳಿಸುತ್ತಿದ್ದಾರೆ.

ಇದೆಲ್ಲರ ಪ್ರತಿರೂಪವನ್ನು, ಶೂದ್ರ ಜಾತಿಗಳ ದಬ್ಬಾಳಿಕೆಗಳ ವಿರುದ್ಧವಾಗಿ ದಲಿತರು ಬ್ರಾಹ್ಮಣರೊಂದಿಗೆ ಧೃವೀಕರಣಗೊಳ್ಳುತ್ತಿರುವುದನ್ನು ಇಂದಿನ ಉತ್ತರ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಅಸಂಗತ ಜೋಡಿಯ ಸಾಧ್ಯತೆಗಳನ್ನು ಕಾನ್ಸೀರಾಮ್ ಅವರು ತೊಂಬತ್ತರ ದಶಕದಲ್ಲಿ ಚಾಲ್ತಿಗೆ ತಂದರು. 2004 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಾಯಾವತಿ ಅದನ್ನು ಯಶಸ್ವಿಯಾಗಿ ಪ್ರಯೋಗಿಸಿ ಅಧಿಕಾರವನ್ನೂ ಪಡೆದರು. ಈ ಬಾರಿ ಇದರ ಭವಿಷ್ಯವನ್ನು ಚುನಾವಣ ಫಲಿತಾಂಶಗಳೇ ನಿರ್ಧರಿಸುತ್ತವೆ. ಆದರೆ ಈ ದ್ವಿಜ ಹಾಗೂ ದಲಿತ ಹೊಂದಾಣಿಕೆ ಸಹ ಕೇವಲ ವ್ಯಾವಹಾರಿಕ, ಅಧಿಕಾರ ಗ್ರಹಣಕ್ಕೆ ಮಾತ್ರ ಸಂಬಂಧಪಟ್ಟಿದೆ. ಶತ್ರುವಿನ ಶತ್ರು ನಮ್ಮ ಮಿತ್ರ ಎನ್ನುವ ಹಳೇ ಗಾದೆ ಮಾತಿನ ತತ್ವದಡಿ ಈ ಕೂಡುವಿಕೆ ಜಾರಿಗೊಂಡಿದೆ. ಕಡೆಗೂ ಬಲಿಪಶುಗಳು ತಳಸಮುದಾಯಗಳೇ. ಪುಲೆ ಶೂದ್ರಾತಿಶೂದ್ರರ ಬಗ್ಗೆ ಮಾತನಾಡಿದಾಗಲೂ ಅವರು ಇಂದಿನ ಪರಿಸ್ಥಿಯನ್ನು 150 ವರ್ಷಗಳ ಹಿಂದೆ ಕಲ್ಪಿಸಿರಲೂ ಇಲ್ಲ. ಇದರ ಪರಿಕಲ್ಪನೆ ಕೂಡ ಬಹುಶ ಅವರಿಗೆ ಇರಲಾರದು.

ತೀವ್ರವಾದ ಬದಲಾವಣೆಯ ಹರಿಕಾರರಾಗಿದ್ದ, ಬ್ರಾಹ್ಮಣೀಕರಣದ ಕಟು ವಿರೋಧಿಯಾಗಿದ್ದ, ಆದರೆ ಭಕ್ತಿ ಪಂಥದಿಂದ ಪ್ರಭಾವಗೊಂಡಿದ್ದ, ಚರ್ಚೆಗಳ, ಸಿದ್ಧಾಂತಗಳ ಗಂಗೋತ್ರಿಯಾಗಿದ್ದ, ಹತ್ತೊಂಬತ್ತನೇ ಶತಮಾನದ ಬಲು ದೊಡ್ಡ ಸಮಾಜ ಸುಧಾರಕ ಜ್ಯೋತಿಬಾ ಪುಲೆಯವರು.

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 6


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5

94ರ ಚುನಾವಣೆಯಲ್ಲಿ ಕಾನ್ಶಿರಾಂ ನೇತೃತ್ವದ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ನೀಡಲು ತೀರ್ಮಾನಿಸಿದ್ದ ದಸಂಸ ಕಡೆಗೆ ಇಡಿಯಾಗಿ ಆ ಪಕ್ಷದಲ್ಲೇ ವಿಲೀನಗೊಂಡುಬಿಟ್ಟಿತು. …ಬಹುಶಃ ಇಂಡಿಯಾದ ಪರ್ಯಾಯ ರಾಜಕಾರಣದ ಇತಿಹಾಸದಲ್ಲಿ ಜನಚಳವಳಿಯ ಸಂಘಟನೆಯೊಂದು ಇಷ್ಟೊಂದು ಅಮಾಯಕವಾಗಿ ತನ್ನ ಕಣ್ಣನ್ನೇ ತಾನು ಚುಚ್ಚಿಕೊಂಡ ಮೊದಲ ನಿದರ್ಶನ ಇದೇ ಇರಬೇಕು. ಮುಖಂಡರೆಲ್ಲರೂ ಉತ್ಸಾಹದಿಂದ ಬಿಎಸ್ಪಿ ಚಿಹ್ನೆಯ ಮೇಲೇ ವಿಧಾನಸಭೆಗೆ ಸ್ಪರ್ಧಿಸಿ ಒಬ್ಬರು (ಬೀದರ್‌ನಿಂದ) ಗೆದ್ದೂಬಿಟ್ಟರು…

ಆಯಿತಾ? 95ರಲ್ಲಿ ಬಿಎಸ್ಪಿ, ಉತ್ತರಪ್ರದೇಶದಲ್ಲಿ ಬಿಜೆಪಿ ಜತೆ ಗೆಳೆತನ ಬೆಳೆಸಿ ಅಧಿಕಾರಕ್ಕೆ ಬಂತು. ಮಾಯಾವತಿ ಮುಖ್ಯಮಂತ್ರಿಯೂ ಆದರು. ಆಗ ಇಲ್ಲಿನ ದಲಿತ ಸಂಘಟನೆಯ ಒಂದು ಗುಂಪು ಬಿಜೆಪಿ ಸಖ್ಯವನ್ನು ವಿರೋಧಿಸಿ ಒಡೆದುಕೊಂಡು ಹೊರಬಂತು. ಆಗ ಬಿಎಸ್ಪಿ ಜೊತೆಗೇ ಉಳಿದ ಬಿ. ಕೃಷ್ಣಪ್ಪ, ‘ಇದೇನೋ ಹೊಸ ಕಣಿ ತೆಗೆದರಲ್ಲಪ್ಪ…?’ ಎಂದು ಉದ್ಗರಿಸಿದರು. ಮತ್ತು ಈಗಿನ ಒಡಕು, ಮೂಲದಲ್ಲಿ ಎಡಗೈ- ಬಲಗೈ ಬಣಗಳ- ಅಂದರೆ ಸಾಗರ್- ಜಯಣ್ಣ ಬಣಗಳ- ವಿಭಜನೆಯಾಗಿತ್ತು. ಅಥವಾ ಗೋವಿಂದಯ್ಯನವರು ಹೇಳಿದಂತೆ ‘ಮಹಾದೇವ- ಕೃಷ್ಣಪ್ಪ ಎಂಬ ಜಾತಿಧ್ರುವಗಳ ಇಬ್ಭಾಗವಾಗಿತ್ತು’. ಹೀಗಾಗಿ ಹುಟ್ಟಿದ ಇಪ್ಪತ್ತೈದು ವರ್ಷಗಳಲ್ಲಿ ಒಂದು ಮಹಾನ್ ಬದಲಾವಣೆಗೆ ಕಾರಣವಾಗಬಹುದಾಗಿದ್ದ ದಲಿತ ಶಕ್ತಿ, ವಿಭಜಕ ರಾಜಕಾರಣದ ಸ್ವವಂಚನೆಗೆ ಒಳಗಾಗಿ ಚಳವಳಿ ರಾಜಕಾರಣವನ್ನು ಪಕ್ಷ ರಾಜಕಾರಣದ ಮಟ್ಟಕ್ಕೆ ತಂತಾನೇ ತಂದು ನಿಲ್ಲಿಸಿಕೊಂಡಿತು. ಪಕ್ಷ ರಾಜಕಾರಣ ಪ್ರವೇಶದ ನಂತರ ದಲಿತ ಅಸ್ತಿತ್ವ ರೂಪಿಸುವ ಒಂದೇ ಒಂದು ಕಾರ್ಯಕ್ರಮ ಕೂಡ ಯಾವುದೇ ಬಣದಿಂದಲೂ ಮೂಡಿ ಬರದೆ ಹೋಯಿತು….

ತನ್ನ ಹುಟ್ಟಿನಲ್ಲಿ ಭೂಹೀನರ, ಆಧಾರ ತಪ್ಪಿದವರ ವೇದಿಕೆಯಾಗಿದ್ದ ದಲಿತ ಸಂಘಟನೆ ಕ್ರಮೇಣ ಹೊಟ್ಟೆ ತುಂಬಿದ ದಲಿತ ನೌಕರಶಾಹಿಯ ವೇದಿಕೆಯಾಗಿ ಪರಿವರ್ತನೆಗೊಳ್ಳುತ್ತ ಬಂದಿತ್ತು. ಕಟ್ಟಕಡೆಯ ಮನುಷ್ಯನ ಕಣ್ಣೀರು ತೊಡೆಯಲು ಬಳಕೆಯಾಗುತ್ತಿದ್ದ ಸಂಘಟನೆಗಳ ಲೆಟರ್‌ಹೆಡ್‌ಗಳು ಇಂತಿಂಥ ನೌಕರರನ್ನು ಇಂತಿಂಥ ಜಾಗಗಳಿಗೆ ವರ್ಗಾವಣೆ ಮಾಡಿ ಎಂದು ಮೊರೆಯಿಡುತ್ತ ವಿಧಾನಸೌಧದ ಮಂತ್ರಿ ಶಾಸಕರ, ಸಚಿವಾಲಯದ ಮೇಜುಗಳನ್ನು ಅಲಂಕರಿಸತೊಡಗಿದವು.

ಹೀಗಾಗಬೇಕಿರಲಿಲ್ಲ.

**

ಆ ದಶಕಗಳ ಒಟ್ಟೂ ಎಚ್ಚರ, ಸಮೂಹ ರಾಜ್ಯಾಧಿಕಾರವಾಗಿ ಪರಿವರ್ತನೆಗೊಳ್ಳಲೆಂದು ನಾಡಿನ ಸಮಸ್ತ ಪ್ರಜ್ಞಾವಂತ ವಲಯ ನಿರೀಕ್ಷಿಸಿತ್ತು. ಕಿಷನ್ ಪಟ್ನಾಯಕ್‌ರಂಥ ಧೀಮಂತ ಸಮಾಜವಾದಿ ನಾಯಕ ಕೂಡ- ‘ಕರ್ನಾಟಕದಲ್ಲಿ ರೈತಸಂಘ, ದಲಿತ ಸಂಘಟನೆ ಮತ್ತು ಪ್ರಗತಿರಂಗ ಒಗ್ಗೂಡಿ ಸಮಾನ ವೇದಿಕೆ ಮಾಡಿಕೊಂಡು ಹೊಸ ರಾಜಕೀಯ ಆರಂಭಿಸಬೇಕೆಂದು’ ಸೂಚಿಸಿದ್ದರು. ಪ್ರೊಫೆಸರ್ ನಂಜುಂಡಸ್ವಾಮಿಯವರಿಗೇನೋ ಯಾವಾಗಿನಿಂದಲೂ ದಲಿತ ಸಂಘದ ಜೊತೆ ಸೇರುವ ಬಯಕೆ ಇದ್ದೇ ಇತ್ತು. 87ರಲ್ಲಿ ಅವರು ರೈತರದೇ ರಾಜಕೀಯ ಪಕ್ಷ ‘ಕನ್ನಡ ದೇಶ’ ಸ್ಥಾಪಿಸುವ ಮುನ್ನವೂ ತಮ್ಮ ಜೊತೆಗೂಡಲು ದಲಿತ ಸಂಘವನ್ನು ಆಹ್ವಾನಿಸಿದ್ದರು. ಅವರ ವಿರೋಧ ಇದ್ದದ್ದು ಲಂಕೇಶರೊಂದಿಗೆ ಕೈ ಜೋಡಿಸುವ ವಿಷಯದಲ್ಲಿ ಮಾತ್ರ. ಆದರೆ ಕಿಷನ್ರ ಚಿಂತನೆಯ ಹಾದಿಯಲ್ಲೇ ಮೂರೂ ಶಕ್ತಿಗಳ ಒಕ್ಕೂಟದ ಕನಸು ಕಾಣುತ್ತಿದ್ದ ದೇವನೂರ ಮಹಾದೇವ, ಪ್ರೊಫೆಸರರ ಆಹ್ವಾನಕ್ಕೆ ಆ ಸಂದರ್ಭದಲ್ಲಿ ಪ್ರತಿಕ್ರಿಯಿಸದೆ ಸುಮ್ಮನಿದ್ದರು.

ಮುಂದೆ 89ರ ಚುನಾವಣೆ ಸಮಯದಲ್ಲಿ ತೃತೀಯ ಶಕ್ತಿ ರಚನೆಯ ಪ್ರಯತ್ನಕ್ಕೆ ದಲಿತ ಸಂಘರ್ಷ ಸಮಿತಿ ಹಾಗೂ ಮಹಾದೇವ ಮತ್ತೊಮ್ಮೆ ಕೈ ಹಾಕಿದರು. ಎಲ್ಲರೂ ಒಪ್ಪಿದರೆ ಹಾಸನದಲ್ಲಿ ಸಭೆ ಸೇರಿ ಮಾತಾಡುವುದು ಎಂದೂ ಆಯಿತು. ಆಗ ಪರಸ್ಪರ ಮುಖ ನೋಡದಿದ್ದ ಲಂಕೇಶ್- ಪ್ರೊ. ನಂಜುಂಡಸ್ವಾಮಿಯವರ ನಡುವೆ, ದಲಿತ ಸಂಘಟನೆ ಪರವಾಗಿ ದೇವನೂರು ಮತ್ತು ಪ್ರೊ. ಗೋವಿಂದಯ್ಯನವರ ನಿರ್ದೇಶನದ ಮೇರೆಗೆ ರಾಜಿ ಸಂಧಾನಕ್ಕೆ ಓಡಾಡಿದವನು ನಾನೇ ಆದ್ದರಿಂದ ವಿವರಗಳು ನೆನಪಿವೆ. ಆಗ ನಾನು ಮೊದಲು ಭೇಟಿ ಮಾಡಿದ್ದು ಪ್ರೊಫೆಸರ್ರನ್ನು. ಅದಕ್ಕೆ ಮುಂಚೆ ಒಮ್ಮೆ ಯಾರೋ ನಂಜುಂಡಸ್ವಾಮಿಯವರ ಮುಂದೆ ‘ನೀವೂ, ಲಂಕೇಶರೂ ರಾಜಕೀಯವಾಗಿ ಸೇರಬಾರದೇಕೆ?’ ಎಂದು ಕೇಳಿ, ಅದಕ್ಕೆ ಉತ್ತರವಾಗಿ ಪ್ರೊಫೆಸರ್ ‘ಹೆಣ್ಣು ಕೇಳೋಕೆ ಬರೋರು ಯಾರಾದರೂ ಕೈಯಲ್ಲಿ ಬೆಕ್ಕು ಹಿಡಕೊಂಡು ಬರ್ತಾರೇನ್ರೀ?’ ಎಂದು ಗದರಿದ್ದರಂತೆ! ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನನಗಿದು ಗೊತ್ತೂ ಇರಲಿಲ್ಲ. ಅದೇನು ನನ್ನಅದೃಷ್ಟವೋ, ಪ್ರೊಫೆಸರ್ ನನ್ನೊಂದಿಗೆ ಅಂಥ ಅಡ್ಡಮಾತೂ ಆಡಲಿಲ್ಲ. ಪ್ರೊಫೆಸರರ ಮೊದಲ ಪ್ರಶ್ನೆ:

‘ನಿಮಗೆ- ದಲಿತರಿಗೆ- ಲಂಕೇಶ್ ಅಂದ್ರೆ ಯಾಕೆ ಅಷ್ಟು ಮೋಹ?’
‘ನಮಗೆ ನಿಮ್ಮನ್ನು ಕಂಡರೂ ಅಷ್ಟೇ ಮೋಹ ಸಾರ್’.
‘ಪ್ರಗತಿರಂಗ ಪ್ರಣಾಳಿಕೆ ನೋಡಿದ್ದೀರೇನು? ಏನಿದೆ ಅದರಲ್ಲಿ? ರೈತಸಂಘದ್ದೂ ನೋಡಿದ್ದೀರಲ್ಲ?…’

ಆ ವೇಳೆಗಾಗಲೇ ಲಂಕೇಶರು ಪ್ರಗತಿರಂಗ ಹುಟ್ಟುಹಾಕಿ ರಾಜ್ಯಾದ್ಯಂತ ಓಡಾಡಿ ಪಕ್ಷದ ಪ್ರಣಾಳಿಕೆಯನ್ನೂ ಅಚ್ಚು ಹಾಕಿದ್ದರು. ಅದರಲ್ಲಿ ಎಲ್ಲರಿಗೂ ಹಿಡಿಸುವ ಹಲವಾರು ಅಂಶಗಳಿದ್ದವು. ಆದರೆ ಆ ಯಾವ ಉಸಾಬರಿಗೂ ಹೋಗದೆ- ‘ಮೊದಲು ಎಲ್ಲರೂ ಒಂದಾಗಲಿ ಸಾರ್. ಆಮೇಲೆ, ಎಲ್ಲರೂ ಸೇರಿ ಹೊಸ ಪ್ರಣಾಳಿಕೆ ಬರಕೋಬಹುದು’ ಅಂದೆ.

ಅವರಿಗೇನನಿಸಿತೋ, ಅದೂ ಇದೂ ಮಾತಾಡಿ ‘ಆಯ್ತು, ಸಭೆಗೆ ಬರ್ತೀನಿ ಬಿಡಿ’ ಅಂದುಬಿಟ್ಟರು! ನನಗಾಗಲೇ ಅರ್ಧ ಯುದ್ಧ ಗೆದ್ದಂತಾಗಿಬಿಟ್ಟಿತು.

ಮತ್ತೆ ಲಂಕೇಶರ ಹತ್ತಿರ ಇದೇ ಪ್ರಸ್ತಾಪ ಇಟ್ಟಾಗ, ಅವರು ಹೆಚ್ಚು ಮಾತೇ ಆಡದೆ ‘ಆಯ್ತು, ಮಾತಾಡಕ್ಕೇನಂತೆ? ಹಾಸನಕ್ಕೆ ಹೋಗಣ’ ಅಂದರು. ನಾನು ಸಂತೋಷದಿಂದ ಇಷ್ಟೂ ಬೆಳವಣಿಗೆ ಗೋವಿಂದಯ್ಯನವರಿಗೆ ತಿಳಿಸಿದೆ. ಅಲ್ಲಿಗೆ ಎಲ್ಲರ ಮನಸ್ಥಿತಿಯೂ ಒಂದು ಹದಕ್ಕೆ ಬಂದು ಇನ್ನೇನು ಸಭೆ ನಡೆದೇ ತೀರುವುದು ಎಂದಾದಾಗ, ಇಂಥದೊಂದು ಸಮಾವೇಶವೇ ನಡೆಯದಂತೆ ಕೆಲವರು ಅಟ ಆಡಿ ಎಲ್ಲ ಮುರಿದುಬಿತ್ತು….!

‘ಅವರೆಲ್ಲ ಆಗ ಸೇರಿ ಮಾತಾಡಿದ್ದರೂ, ಒಂದಾಗುತ್ತಿದ್ದುದು ಅನುಮಾನ’ ಅನ್ನುತ್ತಾರೆ ಮಹಾದೇವ: “ಅವರಿಗೇನು ಕಡಿಮೆ ಸ್ವಪ್ರತಿಷ್ಠೆಯಿತ್ತೇ…?” ನಿಜವೇ. ‘ದೇವರಂಥ ಮನುಷ್ಯ’ ಕಡಿದಾಳು ಶಾಮಣ್ಣನವರನ್ನೇ ರಾಜ್ಯಸಮಿತಿಯಿಂದ ಕೈ ಬಿಟ್ಟ ಪ್ರಸಂಗ ರೈತಸಂಘದಲ್ಲಿ ನಡೆಯಿತೆಂದರೆ…! (22 ಜುಲೈ 89) ಆ ಸಂದರ್ಭದಲ್ಲಿ ಶಾಮಣ್ಣನವರಿಗೆ ತೇಜಸ್ವಿ ಬರೆದಿದ್ದನ್ನೂ ನೋಡಬೇಕು (ಆ ದಶಕ): …ನಂಜುಂಡಸ್ವಾಮಿ ಇಡೀ ರೈತಸಂಘವನ್ನು ಚೇಲಾಗಳ ಸಂಘಟನೆ ಮಾಡಬೇಕೆಂದಿದ್ದಾರೆ…. ಈಗ ನಿಮ್ಮ ಮೇಲೆ ಹಾರಾಡಿರುವ ಅವಿವೇಕಿಗಳೇ ಇನ್ನು ಒಂದೆರಡು ತಿಂಗಳೊಳಗಾಗಿ ನಿಮ್ಮದೆ ಸರಿ ಎಂದು ಹೇಳದಿದ್ದರೆ ಕೇಳಿ. ಎಂಡಿಎನ್‌ಗೆ ಈಗ ರೈತಸಂಘ ಬಿಟ್ಟರೆ ಬೇರೆಲ್ಲೂ ಗತಿ ಇಲ್ಲ. ಹಾಗಾಗಿ ರೈತಸಂಘ ನಾಶವಾದರೂ ಅದರ ನಾಯಕ ನಾನೇ ಆಗಿರಬೇಕೆಂದು ತೀರ್ಮಾನಿಸಿರುವಂತಿದೆ… (29 ಜುಲೈ 89.)

ಕೇವಲ ಕಬ್ಬು ಬೆಳೆಗಾರರ ಸಂಘವಾಗಿದ್ದ ರೈತ ಸಂಘಟನೆಯನ್ನು ಜನಾಂದೋಲನವಾಗಿ ರೂಪಿಸಿ ಬೆಳೆಸಿದ ಪ್ರೊಫೆಸರ್ ಇರುವವರೆಗೆ, ರೈತಸಂಘ ತನ್ನ ‘ಒನ್ ಮ್ಯಾನ್ ಷೋ’ ಸ್ವರೂಪ ಕಳೆದುಕೊಳ್ಳಲೇ ಇಲ್ಲ. ಆ ಸ್ಥಿತಿಯ ಅನುಕೂಲ ಹಾಗೂ ತೊಡಕುಗಳನ್ನು, ಜೊತೆಗೆ ಆ ವಾತಾವರಣದಲ್ಲಿ ತೇಜಸ್ವಿ ಮತ್ತು ಶಾಮಣ್ಣನಂಥವರು ಎಷ್ಟು ತಲೆ ಚಚ್ಚಿಕೊಂಡಿರಬಹುದೆಂಬುದನ್ನು, ಊಹಿಸುವುದು ಕಷ್ಟವೇನಲ್ಲ. ಅಷ್ಟಾದರೂ 84ರ ಲೋಕಸಭಾ ಚುನಾವಣಾ ಸಂದರ್ಭದಿಂದಲೇ ಅಧಿಕಾರ ರಾಜಕೀಯಕ್ಕಿಳಿದು, 89ರಲ್ಲಿ ಒಂಟಿಯಾಗಿ ನೇರ ಸ್ಪರ್ಧೆಗಿಳಿದು ಬಾಬಾಗೌಡರನ್ನು ಗೆಲ್ಲಿಸಿಕೊಂಡು, ಕೇವಲ 200ರಿಂದ 2000 ಮತಗಳ ಅಂತರದಲ್ಲಿ ಇಪ್ಪತ್ತು ಕ್ಷೇತ್ರಗಳನ್ನು ಕಳೆದುಕೊಂಡ ರೈತಸಂಘ, ದಲಿತ ಸಂಘಟನೆಯ ಹಾಗೆ ರಾಜಕೀಯ ಸಂಗದಲ್ಲಿ ಕಕ್ಕಾಬಿಕ್ಕಿಯಾಗಲಿಲ್ಲ ಎಂಬುದೂ ಗಮನಾರ್ಹವಾಗಿದೆ.

ಅದು ಹೇಗೇ ಹೋಗಲಿ, ದಲಿತ ಸಂಘಟನೆ, ರೈತಸಂಘ, ಪ್ರಗತಿರಂಗ ಮೂರೂ ನಿಜಕ್ಕೂ ಸೇರುತ್ತಿದ್ದವೋ ಇಲ್ಲವೋ, ಸೇರಿದ್ದರೂ ಒಗ್ಗಟ್ಟು ಉಳಿಯುತ್ತಿತ್ತೋ ಇಲ್ಲವೋ, ಅವೆಲ್ಲ ಈಗ ನಿರರ್ಥಕ ಪ್ರಶ್ನೆಗಳು. ಆದರೆ ಆ ಕಾಲದಲ್ಲಿ ಅಂಥದೊಂದು ಪ್ರಯತ್ನ- ಅಲ್ಪ ಕಾಲಕ್ಕೇ ಆದರೂ- ಯಶಸ್ವಿಯಾಗಿದ್ದಿದ್ದರೆ ಅದು ಎಬ್ಬಿಸುತ್ತಿದ್ದ ಮಹತ್ತರ ಕಂಪನಗಳ ಕಲ್ಪನೆಯೇ ರೋಮಾಂಚಕ….**

(ಮುಂದುವರೆಯುವುದು)

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ

-ದಿನೇಶ್ ಕುಮಾರ್ ಎಸ್.ಸಿ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ.

ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ. ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ.

ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ತಾವೂ ಅಂಧಶ್ರದ್ಧೆಗೆ ಬಿದ್ದು ಜ್ಯೋತಿಷ್ಯದಂಥ ಕಾರ್ಯಕ್ರಮಗಳನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲ. ಚಾನಲ್‌ನಲ್ಲಿ ಮಾತನಾಡುವ ಜ್ಯೋತಿಷಿಗಳು ಹೇಳುವ ಮಾತುಗಳನ್ನು ಚಾನಲ್ ನವರೇ ನಂಬುವುದಿಲ್ಲ, ಅನುಸರಿಸುವುದಿಲ್ಲ. ಈ ಮೀಡಿಯಾ ಜನರಿಗೆ ತಮ್ಮದು ಮುಠ್ಠಾಳ, ಮನೆಹಾಳ ಕಾರ್ಯಕ್ರಮಗಳು ಎಂಬುದು ಚೆನ್ನಾಗಿಯೇ ಗೊತ್ತು.

ಎಲೆಕ್ಟ್ರಾನಿಕ್ ಮಾಧ್ಯಮಗಳು ಹಲವು ಬಗೆಯ ಮೌಢ್ಯಗಳನ್ನು ಪ್ರಸಾರ ಮಾಡುತ್ತಿವೆ. ಪ್ರಸಾರ ಮಾಡುತ್ತಿವೆ ಎಂಬ ಶಬ್ದಕ್ಕಿಂತ ಮಾರಾಟ ಮಾಡುತ್ತಿವೆ ಎಂಬ ಶಬ್ದವನ್ನು ಬಳಸಲು ಬಯಸುತ್ತೇನೆ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಪ್ರತಿ ಕಾರ್ಯಕ್ರಮವೂ ಮಾರಾಟದ ಸರಕು. ಜ್ಯೋತಿಷ್ಯ, ಪುನರ್ಜನ್ಮ, ಬಾನಾಮತಿ, ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರ, ಮಾಟ-ಮಂತ್ರ ಇತ್ಯಾದಿಗಳೆಲ್ಲವೂ ಬಹುಬೇಗ ಸೇಲ್ ಆಗುವ ವಸ್ತುಗಳು. ಜನರಿಗೆ ಅಂತೀಂದ್ರಿಯವಾದದ್ದೆಲ್ಲ ಕುತೂಹಲ ಹುಟ್ಟಿಸುತ್ತವೆ. ಯಾವುದಕ್ಕೆ ವೈಜ್ಞಾನಿಕ ತರ್ಕ ವಿಶ್ಲೇಷಣೆಗಳು ಬಹುಬೇಗ ತಲೆಗೆ ಹೊಳೆಯುತ್ತವೋ ಅಂಥವು ಜನರಿಗೆ ಬೇಕಾಗಿಲ್ಲ. ಹೀಗಾಗಿ ತಮ್ಮ ಬುದ್ಧಿಗೆ ನಿಲುಕದ್ದನ್ನೆಲ್ಲ ಜನರು ಆಶ್ಚರ್ಯದಿಂದ ನೋಡುತ್ತಾರೆ. ಮತ್ತು ಅದಕ್ಕೆ ತಲೆಕೊಡುತ್ತಾರೆ. ಇದು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ಗೊತ್ತಿರುವ ವಿಷಯ. ಹೀಗಾಗಿ ಅವು ಒಂದಾದ ಮೇಲೊಂದರಂತೆ ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನ ಗೆಳೆಯನೊಬ್ಬ ಇದನ್ನು ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾನೆ. ಅವನ ದೃಷ್ಟಿಯಲ್ಲಿ ಅವನೊಬ್ಬ ಪತ್ರಕರ್ತನಲ್ಲ. ಒಬ್ಬ ಬಿಜಿನೆಸ್ ಮ್ಯಾನ್, ಅವನ ಜತೆ ಕೆಲಸ ಮಾಡುವ ಸಹ ಪತ್ರಕರ್ತರು ಸೇಲ್ಸ್ ಮನ್‌ಗಳು. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಅವರಿಗೆ ಮುಖ್ಯ. ಜನರಿಗೆ ಏನನ್ನು ಕೊಡಬೇಕು ಎಂಬುದು ಮುಖ್ಯವಲ್ಲ. ಒಂದು ವೇಳೆ ಜನರಿಗೆ ನಿಜವಾಗಿಯೂ ಕೊಡಬೇಕಾಗಿದ್ದನ್ನು ಕೊಟ್ಟರೆ ಅವರು ಸ್ಪರ್ಧೆಯಲ್ಲಿ ಉಳಿಯುವುದಿಲ್ಲ. ಹೀಗಾಗಿ ನಾವು ಜನ ನೋಡುವುದನ್ನಷ್ಟೆ ಕೊಡುತ್ತೇವೆ ಎನ್ನುತ್ತಾನೆ ಆತ. ಹೀಗಾಗಿ ಜ್ಯೋತಿಷ್ಯ, ಮಾಟ-ಮಂತ್ರ, ಸೆಕ್ಸ್, ಕ್ರಿಕೆಟ್ ಇಂಥವುಗಳೇ ಚಾನಲ್‌ಗಳಿಗೆ ಆದ್ಯತೆಯ ವಿಷಯ. ಅವುಗಳನ್ನು ಬಿಟ್ಟು ಇವು ಬದುಕಲಾರಂತೆ ಆಗಿಹೋಗಿವೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡ ತರುವಾಯ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಹೇಳಿದ್ದು ಇದನ್ನೇ. ಅವರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು ತೀವ್ರ ಅಸಮಾಧಾನವಿತ್ತು. ಚಾನಲ್‌ಗಳು ಅಂಧಶ್ರದ್ಧೆಗಳನ್ನು ಹರಡುತ್ತಿವೆ. ಇವುಗಳಿಗೆ ಲಗಾಮು ಹಾಕಲೇಬೇಕು ಎಂಬ ಮಾತುಗಳನ್ನು ಅವರು ಆಡಿದರು. ಖಟ್ಜು ಕೆಲವು ದೇಶಮಟ್ಟದ ಹಿಂದಿ ಚಾನಲ್‌ಗಳನ್ನು ನೋಡಿ ಈ ಅಭಿಪ್ರಾಯ ಹೇಳಿರಬಹುದು. ಒಂದು ವೇಳೆ ಅವರು ನಮ್ಮ ಕನ್ನಡ ಚಾನಲ್‌ಗಳನ್ನು ನೋಡಿದ್ದರೆ, ಅದರಲ್ಲೂ ನರೇಂದ್ರ ಬಾಬು ಶರ್ಮನಂಥವನ ಮಾತುಗಳನ್ನು ಒಂದು ಹತ್ತು ನಿಮಿಷ ಕೇಳಿದ್ದರೆ ಅವರ ಎದೆ ಒಡೆದುಹೋಗುತ್ತಿತ್ತೇನೋ?

ಆರ್ಥಿಕ ಉದಾರೀಕರಣ, ಜಾಗತೀಕರಣದ ಪರಿಣಾಮವಾಗಿ ದೇಶದಲ್ಲಿಂದು ಎಲೆಕ್ಟ್ರಾನಿಕ್ ಮಾಧ್ಯಮ ಬೆಳೆದು ನಿಂತಿದೆ. ಈಗ ಅದು ಲಂಗು ಲಗಾಮಿಲ್ಲದ ಕುದುರೆ. ನಮ್ಮ ಪತ್ರಿಕಾ ಮಾಧ್ಯಮಕ್ಕೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ ಅವುಗಳ ರಚನೆ, ದೃಷ್ಟಿಯಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಪತ್ರಿಕಾ ಮಾಧ್ಯಮ ಭಾರತದ ಮಟ್ಟಿಗೆ ಬೆಳೆಯಲು ಶುರುವಾಗಿದ್ದು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ. ಆ ಕಾಲದಲ್ಲಿ ಪತ್ರಿಕಾ ಮಾಧ್ಯಮಗಳ ಧೋರಣೆ ಹೇಗಿತ್ತೆಂದರೆ ಅದು ಒಂದು ಆದರ್ಶದ ಕ್ಷೇತ್ರವಾಗಿತ್ತು. ಅದೂ ಕೂಡ ಚಳವಳಿಯ ಭಾಗವಾಗಿಯೇ ಕೆಲಸ ಮಾಡುತ್ತಿತ್ತು.

ಇವತ್ತಿಗೂ ನೀವು ಪತ್ರಿಕೆಗಳನ್ನು, ಅದರಲ್ಲೂ ವಿಶೇಷವಾಗಿ ದಿನಪತ್ರಿಕೆಗಳನ್ನು ನೋಡಿ. ಅವುಗಳು ಸಾಮಾಜಿಕ ಕಳಕಳಿ ಅವುಗಳಿಗೆ ಸ್ಥಾಯಿಯಾದ ಉದ್ದೇಶಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಕೆಲವು ರಾಜಕೀಯ ಪಕ್ಷಗಳ, ವ್ಯಕ್ತಿಗಳ, ಸಂಘಟನೆಗಳ ತುತ್ತೂರಿಯಾಗಿದ್ದರೂ ಅಲ್ಲಿ ಜನಪರವಾದ ಸುದ್ದಿಗಳಿಗೆ ಮಹತ್ವ ಇದ್ದೇ ಇರುತ್ತದೆ. ಯಾವುದೋ ಹಳ್ಳಿಯ ಏನೋ ಸಮಸ್ಯೆಯನ್ನು ಒಬ್ಬ ಓದುಗ ವಾಚಕರ ವಾಣಿಯಲ್ಲಿ ಬರೆಯಬಲ್ಲ, ಆ ಸುದ್ದಿ ಇತರ ಓದುಗರಿಗೆ ಅಪ್ರಸ್ತುತವಾಗಿದ್ದರೂ ಕೂಡ.

ಅದಕ್ಕಿಂತ ಹೆಚ್ಚಾಗಿ ವೃತ್ತ ಪತ್ರಿಕೆಗಳ ಪತ್ರಕರ್ತರನ್ನು ಆ ಪತ್ರಿಕೆಗಳ ಮಾಲೀಕ ನನಗೆ ಸೇಲ್ ಆಗುವ ಸುದ್ದಿಯನ್ನೇ ಬರೆಯಬೇಕು ಎಂದು ಎಂದೂ ಸಹ ಕೈಹಿಡಿದು ಬರೆಸಲು ಹೋಗುವುದಿಲ್ಲ. ಅಷ್ಟು ಸ್ವಾತಂತ್ರ್ಯವನ್ನು ಈ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ವರದಿಗಾರ ಸೇಲ್ ಆಗುವ ಸುದ್ದಿಯನ್ನೇ ಕೊಡಬೇಕು. ಕೊಡದೇ ಇದ್ದರೆ ಸಂಪಾದಕ ಸ್ಥಾನಗಳಲ್ಲಿರುವವರು ತಲೆ ತಿನ್ನಲು ಶುರು ಮಾಡಿರುತ್ತಾನೆ. ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕುವ ವರದಿಗಾರ ತನ್ನ ಇಚ್ಛೆಗೆ ವಿರುದ್ಧವಾಗಿ ಜನಪ್ರಿಯ ಸುದ್ದಿಗಳ ಬೆನ್ನುಹತ್ತುತ್ತಾನೆ.

ಹೀಗಾಗಿ ಯಾವುದೋ ಒಂದು ಕಾಲೇಜಿನ ಮುಂಭಾಗ ಯಾರೋ ಒಂದು ನಿಂಬೆಹಣ್ಣು, ಕುಂಕುಮದ ಪೊಟ್ಟಣ, ಸಣ್ಣ ಬೊಂಬೆ ಇಟ್ಟು ಹೋಗಿದ್ದರೆ ಚಾನಲ್ ವರದಿಗಾರ ಎಲ್ಲವನ್ನೂ ಬಿಟ್ಟು ಓಬಿವ್ಯಾನ್ ತಂದು ಅದರ ಕವರೇಜ್ ಗೆ ನಿಂತುಬಿಡುತ್ತಾನೆ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲೆಂದೇ ಮಾಟ ಮಾಡಿಸಿದ್ದಾನೆ ಎಂದು ಓತಪ್ರೋತ ಕಥೆ ಕಟ್ಟುತ್ತಾನೆ. ಚಾನಲ್ ಗಳಲ್ಲಿ ಗಂಟೆಗಟ್ಟಲೆ ಪ್ಯಾನಲ್ ಚರ್ಚೆ ಶುರುವಾಗಿಬಿಡುತ್ತದೆ. ಅಲ್ಲಿ ಕೆಲವು ಚಿತ್ರವಿಚಿತ್ರ ವೇಷದ ಜ್ಯೋತಿಷಿಗಳು, ಮಾಟಗಾರರು, ಕಾಳಿ ಉಪಾಸಕರೆಂದು ಹೇಳಿಕೊಳ್ಳುವ ಆಂಟಿ ಮಾಟಗಾರರು (ವೈರಸ್ ಗಳಿಗೆ ಆಂಟಿವೈರಸ್ ಗಳಿದ್ದಂತೆ ಈ ಆಂಟಿ ಮಾಟಗಾರರು, ಇವರೂ ಕೂಡ ಒಂದು ಥರದ ವೈರಸ್ಸುಗಳೇ) ಬಂದು ಕುಳಿತುಬಿಡುತ್ತಾರೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತೇವೆಂಬ ಕಾರಣಕ್ಕೆ ಕ್ಯಾಮೆರಾ ಮುಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಚಾನಲ್‌ಗಳ ಹೊಟ್ಟೆ ತುಂಬುತ್ತದೆ.

ನಿತ್ಯ ಬೆಳಿಗ್ಗೆ ನೀವು ಟಿವಿ ಆನ್ ಮಾಡಿ ನೋಡಿ. ಎಲ್ಲ ಚಾನಲ್ ಗಳಲ್ಲೂ ವಿಚಿತ್ರ ಪೋಷಾಕುಗಳನ್ನು ಧರಿಸಿ, ವಿಚಿತ್ರ ರೀತಿಯಲ್ಲಿ ಸಜ್ಜುಗೊಳಿಸಿದ ಸ್ಟುಡಿಯೋದಲ್ಲಿ ಜ್ಯೋತಿಷಿಗಳು ಹಾಜರಾಗಿರುತ್ತಾರೆ. ಕೆಲವು ಜ್ಯೋತಿಷಿಗಳೋ ತಮ್ಮನ್ನು ತಾವು ಗರ್ಭಗುಡಿಯಲ್ಲಿ ಕುಳಿತುಕೊಂಡ ಹಾಗೆ ಸ್ಟುಡಿಯೋ ಅಲಂಕಾರ ಮಾಡಿಸಿಕೊಂಡಿರುತ್ತಾರೆ. ತಮ್ಮ ತಲೆಯ ಹಿಂದೆ ಡ್ಯೂಪ್ಲಿಕೇಟ್ ಪ್ರಭಾವಳಿಗಳ ಸಮೇತ ಆಸೀನರಾಗಿ ಜ್ಯೋತಿಷ್ಯ ಶುರುಮಾಡುತ್ತಾರೆ. sಸಾಧಾರಣವಾಗಿ ಕನ್ನಡ ಚಾನಲ್‌ಗಳಲ್ಲಿ ಈ ಜ್ಯೋತಿಷಿಗಳು ಲ್ಯಾಪ್ ಟಾಪ್ ನಲ್ಲಿ ಜ್ಯೋತಿಷ್ಯದ ಒಂದು ರೆಡಿಮೇಡ್ ಸಾಫ್ಟ್ ವೇರ್ ಹಾಕಿಕೊಂಡು ಕೂತಿರುತ್ತಾರೆ. ಒಬ್ಬ ನಿರೂಪಕಿ ಜತೆಗೆ ಕುಳಿತಿರುತ್ತಾಳೆ. ಆಕೆಯೇ ದೂರವಾಣಿ ಕರೆಗಳನ್ನು ಸ್ವೀಕರಿಸಿ ವೀಕ್ಷಕನ/ವೀಕ್ಷಕಳ ಜನ್ಮದಿನಾಂಕ ಪಡೆಯುತ್ತಾಳೆ, ಅವಳು ಅವನ ಜತೆ ಮಾತನಾಡುತ್ತಿರುವಾಗ ಜ್ಯೋತಿಷಿ ಲ್ಯಾಪ್ ಟಾಪ್‌ನಲ್ಲಿ ಜನ್ಮದಿನಾಂಕ ಎಂಟ್ರಿ ಮಾಡಿ, ಗುರು, ಶನಿ, ರಾಹು ಎಲ್ಲರೂ ಯಾವ್ಯಾವ ಮನೆಯಲ್ಲಿದ್ದಾರೆ ಎಂಬುದನ್ನು ಗಮನಿಸಿ ತನ್ನ ಜಡ್ಜ್‌ಮೆಂಟ್ ಕೊಡೋದಕ್ಕೆ ಶುರು ಮಾಡುತ್ತಾನೆ.

ಸಾಧಾರಣವಾಗಿ ಈ ಜ್ಯೋತಿಷಿಗಳು ದುರಹಂಕಾರಿಗಳು. ಅವರು ಮಾತನಾಡುವ ಶೈಲಿಯನ್ನು ಸರಿಯಾಗಿ ಗಮನಿಸಿ. ತಾವು ಏನನ್ನು ಹೇಳುತ್ತಿದ್ದೇವೋ ಅದೇ ಸತ್ಯ ಎಂಬ ಉಡಾಫೆ ಅವರುಗಳದ್ದು. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಅವರ ಬಳಿ ಪರಿಹಾರವಿದೆ. ಚಿತ್ರ ವಿಚಿತ್ರವಾದ ಪರಿಹಾರಗಳನ್ನು ಅವರು ನೀಡುತ್ತಾರೆ. ತುಪ್ಪದ ದೀಪ ಹಚ್ಚಿ ಎನ್ನುವುದರಿಂದ ಹಿಡಿದು, ಆ ದೇವಸ್ಥಾನದಲ್ಲಿ ಅಭಿಷೇಕ ಮಾಡಿ, ಈ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ಮನೆ ಸುತ್ತ ಎಳ್ಳು ಚೆಲ್ಲಿ, ಬಿಳಿ ಬಟ್ಟೆ ಹಾಕ್ಕೊಳ್ಳಿ, ಶನಿವಾರ ಮನೆಯಿಂದ ಹೊರಗೆ ಹೋಗಬೇಡಿ, ಬೀದಿ ನಾಯಿಗೆ ಊಟ ಹಾಕಿ ಎನ್ನುವವರೆಗೆ ಈ ಪರಿಹಾರಗಳಿರುತ್ತವೆ. ಒಬ್ಬ ಜ್ಯೋತಿಷಿ ಕಳೆದ ವರ್ಷ ಫೆಬ್ರವರಿಯಲ್ಲಿ ಜಗತ್ತು ಪ್ರಳಯವಾದಂತೆ ತಡೆಯಲು ದೇವಸ್ಥಾನಗಳಲ್ಲಿ ಐದು ವಿಧವಿಧದ ಎಣ್ಣೆಗಳನ್ನು ಬಳಸಿ ದೀಪ ಹಚ್ಚಿ ಎಂದು ಕರೆ ನೀಡಿದ್ದ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಅಂದು ನೂಕುನುಗ್ಗಲು.

ಜ್ಯೋತಿಷ್ಯ ಸಾಕಾಗದೇ ಹೋದಾಗ ಚಾನಲ್‌ಗಳು ಪುನರ್ಜನ್ಮ ಕುರಿತು ಕಾರ್ಯಕ್ರಮ ಮಾಡುತ್ತವೆ. ವ್ಯಕ್ತಿಯೊಬ್ಬನಿಗೆ ಪ್ರಜ್ಞೆ ತಪ್ಪಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿ ಅವನ ಪುನರ್ಜನ್ಮದ ಕಥೆ ಕೇಳುವುದು ಈ ಕಾರ್ಯಕ್ರಮದ ತಂತ್ರ. ಇದೂ ಸಹ ಸ್ಕ್ರಿಪ್ಟೆಡ್ ಕಾರ್ಯಕ್ರಮ. ಸತ್ತ ಕೆಲವೇ ದಿವಸಕ್ಕೆ ಚಾನಲ್ ಒಂದರಲ್ಲಿ ಸಾಯಿಬಾಬಾ ಬಂದು ಮಾತನಾಡಿದ್ದೂ ಸಹ ಹೀಗೆಯೇ.

ಇನ್ನೊಂದು ಗಮನಿಸಬೇಕಾದ ಅಂಶವೊಂದಿದೆ. ಜ್ಯೋತಿಷ್ಯ, ಮಾಟ ಮಂತ್ರ ಇನ್ನಿತ್ಯಾದಿ ಅಂಧಶ್ರದ್ಧೆಗಳ ವಿರುದ್ಧ ಸುದ್ದಿ ಮಾಡಿದರೂ, ಕಾರ್ಯಕ್ರಮ ಮಾಡಿದರೂ ಜನರು ನೋಡುತ್ತಾರೆ. ಹಿಂದೆ ಕ್ರೈಂ ಡೈರಿ, ಕ್ರೈಂಡ ಸ್ಟೋರಿ ಥರಹದ ಕಾರ್ಯಕ್ರಮಗಳಲ್ಲಿ ಬ್ಲೇಡ್ ಬಾಬಾಗಳು, ಡೋಂಗಿ ಸ್ವಾಮಿಗಳು, ಸುಳ್ಳು ದೇವರನ್ನು ಆವಾಹನೆ ಮಾಡಿಕೊಳ್ಳುವವರ ವಿರುದ್ಧ ಕಾರ್ಯಕ್ರಮಗಳು ಬರುತ್ತಿದ್ದವು. ಇತ್ತೀಚಿಗೆ ಹುಲಿಕಲ್ ನಟರಾಜ್ ಅವರ ಪವಾಡ ಬಯಲು ಕಾರ್ಯಕ್ರಮಗಳೂ ಸಹ ಜನಪ್ರಿಯವಾಗಿದ್ದವು. ಆದರೆ ಚಾನಲ್ ಗಳಿಗೆ ಹೊಟ್ಟೆ ತುಂಬಿಸುವಷ್ಟು ಇವು ಶಕ್ತವಾಗಿಲ್ಲ. ಹೀಗಾಗಿ ಅವು ಹೀಗೂ ಉಂಟೆ ಥರದ ಕಾರ್ಯಕ್ರಮಗಳನ್ನು ವರ್ಷಗಟ್ಟಲೆ ಪ್ರಸಾರ ಮಾಡುತ್ತವೆ.

ಜ್ಯೋತಿಷ್ಯ ಈಗ ಕವಲೊಡೆದು ಹೆಮ್ಮರವಾಗಿ ಬೆಳೆದಿದೆ. ಜ್ಯೋತಿಷಿಗಳಿಗೆ ವಾಸ್ತು ತಜ್ಞರು, ಸಂಖ್ಯಾ ತಜ್ಞರು, ಮಂತ್ರವಾದಿಗಳು ಪೈಪೋಟಿ ನೀಡುತ್ತಿದ್ದಾರೆ. ಹಿಂದೆ ಜ್ಯೋತಿಷಿಗಳನ್ನು ಸ್ಟುಡಿಯೋ ಚರ್ಚೆಗೆ ಕರೆದರೆ ಜತೆಯಲ್ಲಿ ಪ್ರತಿವಾದ ಮಾಡಲು ಒಬ್ಬ ವಿಜ್ಞಾನಿಯನ್ನೋ, ವಿಜ್ಞಾನ ಬರಹಗರಾರನ್ನೋ ಕಾಟಚಾರಕ್ಕಾದರೂ ಕರೆಯುತ್ತಿದ್ದರು. ಈಗ ಇವರುಗಳದ್ದೇ ದರ್ಬಾರು. ಕೆಲವು ಜ್ಯೋತಿಷಿಗಳನ್ನು ಕಿರುತೆರೆಯ ಮೇಲೆ ನೊಡುವುದಕ್ಕೆ ಭಯವಾಗುತ್ತದೆ. ಹಾಗಿರುತ್ತದೆ ಅವರ ವೇಷಭೂಷಣ. ಈ ಜ್ಯೋತಿಷಿಗಳೇ ಈಗ ಚಾನಲ್‌ಗಳಿಗೆ ಹಣ ತರುವ ಏಜೆಂಟರಾಗಿದ್ದಾರೆ.

ಅಂಧಶ್ರದ್ಧೆಗಳನ್ನು ಹರಡುವ ಚಾನಲ್‌ಗಳ ಮುಖ್ಯಸ್ಥರನ್ನೆಲ್ಲ ಒಮ್ಮೆ ಕರೆಸಿ ಅವರೊಂದಿಗೆ ಮಾತನಾಡಿ ನೋಡಿ. ಎಲ್ಲರೂ ಒಂದೇ ಉತ್ತರ ನೀಡುತ್ತಾರೆ. ಟಿಆರ್‌ಪಿಗಾಗಿ ನಾವು ಇದನ್ನೆಲ್ಲ ಮಾಡುತ್ತೇವೆ ಎಂಬುದು ಅವರು ಸೋಗು. ತಾವು ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ಅವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಟಿಆರ್‌ಪಿ ಕಪಿಮುಷ್ಠಿಯಲ್ಲಿ ನಾವೆಲ್ಲ ಸಿಕ್ಕಿಬಿದ್ದಿದ್ದೇವೆ ಎಂದು ಅವರು ತಮ್ಮ ಅಸಹಾಯಕತೆ ತೋರ್ಪಡಿಸಿಕೊಳ್ಳುತ್ತಾರೆ.

ಅಷ್ಟಕ್ಕೂ ಟಿಆರ್ ಪಿ ಎಂಬುದೇ ಮಹಾಮೋಸದ ಪ್ರಕ್ರಿಯೆ. ಅದು ನಿಜವಾದ ನೋಡುಗರ ಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಟಿಆರ್‌ಪಿಯನ್ನು ನಿರ್ಧರಿಸುವ ಸಂಸ್ಥೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಯ್ದ ಕೆಲವು ಟಿವಿ ವೀಕ್ಷಕರ ಮನೆಗಳಲ್ಲಿ ತಮ್ಮ ಉಪಕರಣಗಳನ್ನು ಜೋಡಿಸಿರುತ್ತಾರೆ. ಅವರು ಯಾವ ಚಾನಲ್ ನ ಯಾವ ಕಾರ್ಯಕ್ರಮ ನೋಡುತ್ತಾರೆ ಎಂಬುದರ ಆಧಾರದ ಮೇಲೆ ಟಿಆರ್‌ಪಿ ಮತ್ತು ಜಿಆರ್‌ಪಿಗಳು ನಿರ್ಧಾರವಾಗುತ್ತವೆ. ಟಿಆರ್ ಪಿಯನ್ನು ಆಧರಿಸಿ ಜಾಹೀರಾತು ಸಂಸ್ಥೆಗಳು ಜಾಹೀರಾತು ನೀಡುತ್ತವೆ. ಜಾಹೀರಾತು ಇಲ್ಲದೇ ಇದ್ದರೆ ಚಾನಲ್‌ಗಳು ಬದುಕುವುದಿಲ್ಲ. ಹೀಗಾಗಿ ಅವುಗಳಿಗೆ ಟಿಆರ್‌ಪಿ ಬೇಕೇಬೇಕು.

ಟಿಆರ್ ಪಿ ಮೆಷಿನ್ನುಗಳು ಪಟ್ಟಣಗಳಲ್ಲಿ ಇರುವುದಿಲ್ಲ, ಹಳ್ಳಿಗಳಲ್ಲಿ ಇರುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಜನರ ಇಷ್ಟಾನಿಷ್ಟಗಳು ಮೆಷಿನ್ನುಗಳಲ್ಲಿ ಲೆಕ್ಕ ಆಗೋದೇ ಇಲ್ಲ. ಹಾಗೆ ನೋಡಿದರೆ ಆಧುನೀಕರಣದ ಭರಾಟೆಯಲ್ಲಿ ಗ್ರಾಮೀಣ ಜನರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವವರಾದರೂ ಯಾರು? ಟಿಆರ್‌ಪಿ ಮೆಷಿನ್ನುಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಯಾಕೆ ಇಡುವುದಿಲ್ಲವೆಂಬ ಪ್ರಶ್ನೆಗೆ ಉತ್ತರವೂ ಆಘಾತಕಾರಿಯಾಗಿಯೇ ಇದೆ. ಗ್ರಾಮೀಣ ಜನರು ಜಾಹೀರಾತುದಾರರ ಗ್ರಾಹಕರಲ್ಲವಾದ್ದರಿಂದ ಹಳ್ಳಿಗಳ ಜನರ ಅಭಿರುಚಿ, ಇಷ್ಟಗಳನ್ನು ಅವರು ಲೆಕ್ಕ ಹಾಕುವುದಿಲ್ಲವಂತೆ.

ಇಂಥ ಸನ್ನಿವೇಶದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮೌಢ್ಯವನ್ನು ಬಿತ್ತುವ ಕೆಲಸವನ್ನು ನಿಲ್ಲಿಸುವುದಾದರೂ ಹೇಗೆ? ಇದು ಯಾರ ಹೊಣೆಗಾರಿಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಈ ಸಮಸ್ಯೆಗೆ ಇದುವರೆಗೆ ಯಾರೂ ಸಹ ಮುಖಾಮುಖಿಯಾಗಿ ನಿಂತು ಪರಿಹಾರಕ್ಕೆ ಯತ್ನಿಸದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಸಾಮಾಜಿಕ ಸಂಘಟನೆಗಳು ಇಂಥ ಅಂಧಶ್ರದ್ಧೆಗಳ ವಿರುದ್ಧ ಮಾತನಾಡುತ್ತವೆ, ಆದರೆ ಚಾನಲ್ ಗಳ ಮುಂದೆ ನಿಂತು ಇದನ್ನು ಹೇಳಲು ಯತ್ನಿಸಿದ ಉದಾಹರಣೆಗಳು ಕಡಿಮೆ. ಸುದ್ದಿಮಾಧ್ಯಮಗಳನ್ನು ಎದುರುಹಾಕಿಕೊಳ್ಳಲು ಸಂಘಟನೆಗಳು ಹಿಂದೆಮುಂದೆ ನೋಡುತ್ತವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಧ್ವನಿಗಳು ಮೊಳಗಿದರೂ ಅವು ಹಾಗೆಯೇ ತಣ್ಣಗಾಗುತ್ತವೆ.

ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಪಾತ್ರ ವಹಿಸಬಹುದಾಗಿರುವುದು ಮೀಡಿಯಾದ ಬಹುಮುಖ್ಯ ಭಾಗವಾಗಿರುವ ಪತ್ರಿಕಾರಂಗ. ಎಲೆಕ್ಟ್ರಾನಿಕ್ ಮಾಧ್ಯಮಗಳ ಇಂಥ ಹೊಣೆಗೇಡಿತನದ ವಿರುದ್ಧ ಮಾತನಾಡಬಹುದಾಗಿರುವುದು ಪತ್ರಿಕೆಗಳು. ಆದರೆ ನೋವಿನ ಸಂಗತಿಯೆಂದರೆ ಈ ಪತ್ರಿಕೆಗಳು ಕೂಡ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವಳಿಗೆ ಒಳಗಾಗಿ ಜ್ಯೋತಿಷ್ಯ ಸಂಬಂಧಿ ಲೇಖನಗಳನ್ನು ದಿನೇದಿನೇ ಹೆಚ್ಚು ಮಾಡುತ್ತಲೇ ಇವೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜ್ಯೋತಿಷ್ಯಕ್ಕಾಗಿಯೇ ವಾರಕ್ಕೊಂದು ವಿಶೇಷ ಪುರವಣಿಯನ್ನು ನೀಡುತ್ತಿವೆ. ಯಾವ ನೈತಿಕ ಧೈರ್ಯದಿಂದ ಇವುಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಮಾತನಾಡಬಲ್ಲವು? ಒಂದು ಮಾಧ್ಯಮದ ತಪ್ಪುಗಳನ್ನು ಇನ್ನೊಂದು ಮಾಧ್ಯಮದವರು ಬರೆಯಬಾರದು ಎಂಬ ಅಲಿಖಿತ ನಿಯಮವೊಂದು ಕನ್ನಡ ಮಾಧ್ಯಮರಂಗದಲ್ಲಿ ಜಾರಿಯಲ್ಲಿದೆ. ಇದು ಇನ್ನೊಂದು ಬಗೆಯ ಮೌಢ್ಯ. ಇವರು ಪರಸ್ಪರ ಕೆಸರು ಎರಚಿಕೊಂಡು ಹೊಡೆದಾಡಲಿ ಎಂದು ಯಾರೂ ಬಯಸುತ್ತಿಲ್ಲ. ಆದರೆ ಒಂದು ಮಾಧ್ಯಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವಾಗ ಇನ್ನೊಂದು ಮಾಧ್ಯಮ ಸುಮ್ಮನೇ ಕುಳಿತುಕೊಳ್ಳುವುದು ಆತ್ಮವಂಚನೆಯಲ್ಲವೇ?

ಈ ಆತ್ಮವಂಚನೆಯ ವಿರುದ್ಧ ಕರ್ನಾಟಕದ ಜನರು ಜಾಗೃತರಾಗಬೇಕಿದೆ. ಅದಕ್ಕೂ ಮುನ್ನ ವೈಜ್ಞಾನಿಕ ಮನೋಭಾವವಿರುವ ಎಲ್ಲರೂ ಸಂಘಟಿತರಾಗಬೇಕಿದೆ. ಕರ್ನಾಟಕ ವಿಜ್ಞಾನ್ ಪರಿಷತ್‌ನಂಥ ಸಂಘಟನೆಗಳು ಈ ಚಾನಲ್‌ಗಳ ಮುಖ್ಯಸ್ಥರೊಂದಿಗೆ ಮಾತನಾಡಬೇಕಿದೆ, ಒತ್ತಡ ಹೇರಬೇಕಿದೆ. ಚಾನಲ್‌ಗಳು ಸರಿಪಡಿಸಲಾಗದ ತಪ್ಪು ಮಾಡಿದಾಗ ಅವುಗಳ ವಿರುದ್ಧ ಪ್ರತಿಭಟಿಸಬೇಕಿದೆ. ಮೀಡಿಯಾಗಳು ಹರಡುವ ಅಂಧಶ್ರದ್ಧೆಯ ವಿರುದ್ಧ ದೂರು ನೀಡುವಂಥ ಧೈರ್ಯ ಮತ್ತು ಬದ್ಧತೆಯನ್ನು ನಾವು ನೀವೆಲ್ಲರೂ ಸೇರಿ ಪ್ರದರ್ಶಿಸಬೇಕಿದೆ.

(ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ತು, ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ಬೆಂಗಳೂರಿನ ಕಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ೫ನೇ ರಾಜ್ಯಮಟ್ಟದ ವಿಜ್ಞಾನ ಸಾಹಿತಿಗಳ ಸಮಾವೇಶದ ಎರಡನೇ ದಿನ (ಫೆಬ್ರವರಿ ೧೨) ನಡೆದ ವಿದ್ಯುನ್ಮಾನ ಮಾಧ್ಯಮದಲ್ಲಿ ಮೂಢನಂಬಿಕೆ ವಿಷಯ ಕುರಿತ ಗೋಷ್ಠಿಯಲ್ಲಿ ಮಂಡಿಸಿದ ಭಾಷಣ.

ಉಪಸ್ಥಿತರು: ಅಧ್ಯಕ್ಷತೆ: ಜಿ. ರಾಮಕೃಷ್ಣ, ಸಂಪಾದಕರು, ಹೊಸತು ಪತ್ರಿಕೆ

ಸಹ ವಿಷಯ ಮಂಡಕರು: ಡಾ. ನಾ.ಸೋಮೇಶ್ವರ ಹಾಗು ಬಿ.ಎಸ್.ಸೊಪ್ಪಿನ