Monthly Archives: November 2012

ನವೀನ್ ಸೂರಿಂಜೆ : ದಾರಿ ಬಲು ದೂರ…

ಸ್ನೇಹಿತರೆ,

ಮಂಗಳೂರಿನ ಜೆ‍ಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ಇಂದು ನವೀನ್ ಸೂರಿಂಜೆಯವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಬೀಳಲಿದೆ. ಈ ವಾರದಲ್ಲಿ ಹೆಚ್ಚು ರಜೆಗಳು ಇದ್ದವು. ಹಾಗಾಗಿ ಪರ-ವಿರುದ್ಧದ ವಾದ-ಪ್ರತಿವಾದಗಳು ಮೊನ್ನೆ ಮಂಗಳವಾರದಂದು ಮುಗಿದು ಇಂದಿಗೆ ಆದೇಶ ನೀಡುವುದಾಗಿ ಅಲ್ಲಿಯ ನ್ಯಾಯಾಧೀಶರು ಪ್ರಕಟಿಸಿದ್ದರು. ಆ ಆದೇಶ ನಿರಪರಾಧಿಯ ಪರ ಇರಲಿ ಎನ್ನುವುದು ನಮ್ಮೆಲ್ಲರ ಆಶಯ.

ಆದೇಶ ಏನೇ ಇರಲಿ, ಸಂವೇದನೆಯನ್ನೇ ಕಳೆದುಕೊಂಡ ಈ ಸರ್ಕಾರ ಮತ್ತು ಇಂತಹ ವಿಚಾರಗಳಿಗೆ ಹೆಚ್ಚು ಮಂಡೆ ಬಿಸಿ ಮಾಡಿಕೊಳ್ಳದ indifferent ಸಮಾಜದ ಸಮಕಾಲೀನ ಸಂದರ್ಭದಲ್ಲಿ ನವೀನ್ ಸೂರಿಂಜೆಯವರ ಕಾನೂನು ಹೋರಾಟದ ದಾರಿ ಬಹುದೂರ ಇದೆ. ಈ ಸಮಯದಲ್ಲಿ ಅವರಿಗೆ ನಮ್ಮೆಲ್ಲರ ನೈತಿಕ ಬೆಂಬಲ ಮತ್ತು ಸಹಕಾರ ಬಹಳ ಬೇಕಿದೆ. ನಮ್ಮ ವರ್ತಮಾನ.ಕಾಮ್ ಬಳಗದ ಶ್ರೀಪಾದ್ ಭಟ್ ಮತ್ತು ನಾನು ಕಳೆದ ಶನಿವಾರ ಮಂಗಳೂರಿಗೆ ಹೋಗಿಬರೋಣ ಎಂದು ಸಿದ್ದವಾದೆವು. ಆದರೆ ಜೈಲಿನಲ್ಲಿ ರಜಾ ದಿನಗಳಂದು ಸಂದರ್ಶನ ಇಲ್ಲದ ಕಾರಣ ಕೊನೆಕ್ಷಣದಲ್ಲಿ ಪ್ರಯಾಣ ರದ್ದು ಮಾಡಬೇಕಾಯಿತು. ಈಗಿನ ತೀರ್ಮಾನದ ಪ್ರಕಾರ ನಾಳೆ ಬೆಳಗ್ಗೆ ನಾವಿಬ್ಬರೂ ಮಂಗಳೂರಿನಲ್ಲಿರುತ್ತೇವೆ. ನವೀನರನ್ನು ನಾಳೆ ಜೈಲಿನಲ್ಲಿ ನೋಡುವುದಕ್ಕಿಂತ ಹೊರಗಡೆ ನೋಡುವ ಸಂದರ್ಭ ಇಂದು ಕೋರ್ಟ್ ಆದೇಶದ ಮೂಲಕ ಸೃಷ್ಟಿಯಾಗಲಿ ಎಂದು ಬಯಸುತ್ತಿದ್ದೇನೆ.

ಈ ವಾರ ಇಂಟರ್ನೆಟ್ ಹೆಚ್ಚು ನೋಡಿರಲಿಲ್ಲ. ಈಗ ತಾನೆ ದಿನೇಶ್ ಅಮಿನ್‌ಮಟ್ಟುರವರು ಬುಧವಾರ ಅವರ ಫೇಸ್‌ಬುಕ್‌ನಲ್ಲಿ ಬರೆದಿರುವ ಪೋಸ್ಟ್ ನೋಡಿದೆ. ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ ಎಂದು ಇಲ್ಲಿ ಕೊಡುತ್ತಿದ್ದೇನೆ.

ನವೀನ್ ಸೂರಿಂಜೆ ಜೈಲು ಸೇರಿ ಇಂದು ಸಂಜೆಗೆ ಒಂದು ವಾರವಾಗುತ್ತದೆ. ಈತನ ಬಂಧನವಾದ ಎರಡು ದಿನಗಳ ನಂತರ ಯಾರಿಂದಲೋ ಮೊಬೈಲ್ ನಂಬರ್ ಪಡೆದು ನವೀನ್ ಅಮ್ಮನಿಗೆ ಪೋನ್ ಮಾಡಿದ್ದೆ. ವಯಸ್ಸಾಗಿರುವ ನವೀನ್ ತಂದೆತಾಯಿಗಳು ಮನೆಯಲ್ಲಿ ಈಗ ಇಬ್ಬರೇ ಇದ್ದಾರೆ. ಆಸರೆಗೆ ಇದ್ದ ಮಗ ಜೈಲಲ್ಲಿ ಇದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ತಂದೆ-ತಾಯಿಯ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಬಹುದು. ನಾನೂ ಅದನ್ನೇ ನಿರೀಕ್ಷಿಸಿದ್ದೆ. ಆದರೆ ನಾನು ಕಂಡ ಆ ಅಮ್ಮನ ಚಿತ್ರವೇ ಬೇರೆ. ಅವರು ಬಂಧನವಾದ ದಿನದ ಬೆಳವಣಿಗೆಗಳನ್ನು ಹೇಳುತ್ತಾ ಹೋದರು.

‘……ಸಾಮಾನ್ಯವಾಗಿ ರಾತ್ರಿ ಮನೆಗೆ ಬರುವುದು ಲೇಟ್ ಆದ ಕೂಡಲೇ ನಾನು ಪೋನ್ ಮಾಡ್ತೇನೆ… ಆ ದಿನವೂ ಪೋನ್ ಮಾಡಿದ್ದೆ…. ಗೆಳೆಯನ ಮನೆಯಲ್ಲಿರುವುದಾಗಿ ಹೇಳಿದ್ದ…ಮರುದಿನ ನನಗೆ ಗೊತ್ತಾದರೂ ಅವನ ತಂದೆಗೆ ಹೇಳಲಿಲ್ಲ..ಈಗ ಗೊತ್ತಾಗಿದೆ…ಅವನ ಅಣ್ಣಂದಿರೆಲ್ಲ ಬೇರೆ ಊರಿನಲ್ಲಿದ್ದಾರೆ…ನೀವೇ ಅವನಿಗೆ ಸಹಾಯ ಮಾಡಬೇಕು…’ ಎಂದು ಹೇಳುತ್ತಾ ಹೋದರು.

ಹತ್ತು ನಿಮಿಷಗಳ ನಮ್ಮ ಸಂಭಾಷಣೆಯಲ್ಲಿ ಆ ತಾಯಿ ಒಂದೇ ಒಂದು ಶಬ್ದ ನವೀನ್ ವಿರುದ್ಧ ಮಾತನಾಡಲಿಲ್ಲ. ‘…ಊರಿನ ಉಸಾಬರಿ ಇವನಿಗ್ಯಾಕೆ ಬೇಕು…ಈಗ ನಮ್ಮನ್ನು ನೋಡಿಕೊಳ್ಳುವವರು ಯಾರಿದ್ದಾರೆ?..ಎಲ್ಲರೂ ಹೀಗೆ, ಕಂಡವರ ಮಕ್ಕಳನ್ನು ಬಾವಿಗೆ ದೂಡಿ ಚಂದ ನೋಡ್ತಾರೆ..’ – ಇಂತಹ ಡೈಲಾಗ್ಗಳನ್ನು ನಿರೀಕ್ಷಿಸಿದ್ದ ನನಗೆ ಆ ತಾಯಿಯ ಮಾತು ಕೇಳಿ ಅಚ್ಚರಿಯಷ್ಟೇ ಅಲ್ಲ, ಕಾಲುಮುಟ್ಟಿ ನಮಸ್ಕರಿಸಬೇಕೆನಿಸುವಷ್ಟು ಗೌರವವೂ ಮೂಡಿತು.

ಇಂತಹ ಒಳ್ಳೆಯ ತಾಯಿಯ ಮಗ ನವೀನ್ ತಪ್ಪು ಕೆಲಸ ಮಾಡಲು ಸಾಧ್ಯವೇ? ನವೀನ್ ಸೂರಿಂಜೆಯನ್ನು ಬಂಧಿಸಿ ಸೇಡು ತೀರಿಸಿಕೊಳ್ಳಲು ಹೊರಟಿರುವ ಮಂಗಳೂರಿನ ಪೊಲೀಸರಿಗೆ ಕೂಡಾ ನವೀನ್ಗೆ ಸಿಕ್ಕಂತಹ ಒಳ್ಳೆಯ ಅಮ್ಮ ಸಿಕ್ಕಿಬಿಟ್ಟಿದ್ದಿದ್ದರೆ? ಇಲ್ಲದೆ ಇದ್ದರೆ ಅವರ ತಾಯಿಯ ಬುದ್ದಿ ಮಾತು ಕೇಳುವಷ್ಟು ಅವರು ಒಳ್ಳೆಯವರಾಗಿರುತ್ತಿದ್ದರೆ? ನಮ್ಮೆಲ್ಲರ ಪ್ರೀತಿಯ ನವೀನ್ ಬೆಳಕಿನ ಹಬ್ಬವನ್ನು ಕತ್ತಲೆಯಲ್ಲಿ ಕಳೆಯಬೇಕಾಗುತ್ತಿರಲಿಲ್ಲ. ನವೀನ್‌ಗೆ ಸಿಕ್ಕಂತಹ ಅಮ್ಮ ಎಲ್ಲರಿಗೂ ಸಿಗಲಿ.

ದಿನೇಶ್ ಅಮಿನ್‌ಮಟ್ಟು

ಇಂದು, ನವೀನ್‌ರಂತಹವರು, ನವೀನರ ತಾಯಿ-ತಂದೆಯಂತಹವರು ಈ ಸಮಾಜಕ್ಕೆ ಹೆಚ್ಚುಹೆಚ್ಚು ಅಗತ್ಯವಾಗುತ್ತ ಹೋಗುತ್ತಿದ್ದಾರೆ. ನಾವೂ ಸಹ ಅವರಲ್ಲೊಬ್ಬರಾಗೋಣ, ಅಲ್ಲವೇ?

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಪ್ರಜಾ ಸಮರ-9 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಆಂಧ್ರದಲ್ಲಿ ಎನ್.ಟಿ.ಆರ್. ನೇತೃತ್ವದ ತೆಲುಗು ದೇಶಂ ಸರ್ಕಾರ 1989ರ ಚುನಾವಣೆಯಲ್ಲಿ ಪತನಗೊಂಡು ಡಿಸಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಮುಖ್ಯಮಂತ್ರಿಯಾಗಿ ಡಾ.ಎಂ. ಚೆನ್ನಾರೆಡ್ಡಿ ಅಧಿಕಾರ ವಹಿಸಿಕೊಂಡರು. ಪ್ರಜಾಸಮರಂ ಗ್ರೂಪ್ ಮೇಲೆ ತೆಲುಗು ದೇಶಂ ಸರ್ಕಾರ ಹೇರಲಾಗಿದ್ದ ನಿಷೇಧವನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿತು. ಬಂಧಿಸಲಾಗಿದ್ದ ಎಲ್ಲಾ ನಾಯಕರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ಇದರ ಅಂಗವಾಗಿ ವಾರಂಗಲ್ ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಬಹಿರಂಗ ರ್‍ಯಾಲಿಗೆ ಐದು ಲಕ್ಷ ಜನ ಸೇರುವುದರ ಮೂಲಕ ನಕ್ಸಲಿಯರ ಸಾಮರ್ಥ್ಯ ಏನೆಂಬುದನ್ನು ಸಮಾಜಕ್ಕೆ ತೋರಿಸಿಕೊಡಲಾಯಿತು. ಈ ವೇಳೆಗಾಗಲೇ ವಯಸ್ಸು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಬಸ್ತಾರ್ ಅರಣ್ಯ ಪ್ರದೇಶದ ಗುಪ್ತ ಸ್ಥಳಕ್ಕೆ ಸಾಗಿಸಿ ವಿಶ್ರಾಂತಿ ನೀಡಲಾಗಿತ್ತು.

ಇದೇ ಸಮಯಕ್ಕೆ ಸರಿಯಾಗಿ ಆಂಧ್ರದ ಪಿ.ಡಬ್ಲ್ಯು.ಜಿ. ಗುಂಪಿನ ಸದಸ್ಯರು ತಮಿಳುನಾಡಿನ ಕೆಲವು ಸದಸ್ಯರ ಮೂಲಕ ಶ್ರೀಲಂಕಾದ ಎಲ್.ಟಿ.ಟಿ.ಇ. ಗುಂಪಿನ ಜೊತೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ತಮಿಳು ಮೂಲದ ಎಲ್.ಟಿ.ಟಿ.ಇ. ಸಂಘಟನೆಯ ಸದಸ್ಯರು ಶ್ರೀಲಂಕಾದಿಂದ  ಆಂಧ್ರಕ್ಕೆ ಬಂದು ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳು ಕಾಲ ನಕ್ಸಲಿಯರಿಗೆ ಆಧುನಿಕ ಗೆರಿಲ್ಲಾ ಯುದ್ಧ ತಂತ್ರಗಳನ್ನು ಕಲಿಸಿದರು. ಅಷ್ಟೇ ಅಲ್ಲದೇ ಕೇವಲ ಬಂದೂಕು ಮತ್ತು ಬಾಂಬ್‌‌ಗಳನ್ನು ಬಳಸುತ್ತಿದ್ದ ನಕ್ಸಲರಿಗೆ ಅತ್ಯಾಧುನಿಕ ಶಸ್ರಾಸ್ತ್ರಗಳಾದ ಏ.ಕೆ. 47 ಬಂದೂಕು, ಮಿಷಿನ್‌ಗನ್, ರಾಕೇಟ್‌ಲಾಂಚರ್‌‍ಗಳನ್ನು ಕೊಟ್ಟು ಹೋದರು. ಪಿ.ಡಬ್ಲ್ಯು.ಜಿ. ಮತ್ತು ಎಲ್.ಟಿ.ಟಿ.ಇ. ಸಂಘಟನೆಗಳ ನಡುವೆ ಶಸ್ರಾಸ್ತ್ರಗಳ ಖರೀದಿ ಒಪ್ಪಂದ ಕೂಡ ಏರ್ಪಟ್ಟಿತು.

ಕೇವಲ ಒಂದು ವರ್ಷದ ಅವಧಿಯಲ್ಲಿ, ಅಂದರೆ 1990ರಲ್ಲಿ ಡಾ. ಎಂ. ಚೆನ್ನಾರೆಡ್ಡಿಯ ಸ್ಥಾನಕ್ಕೆ ಮುಖ್ಯಮಂತ್ರಿಯಾಗಿ ಬಂದ ಎನ್. ಜನಾರ್ದನ ರೆಡ್ಡಿಯ ಆಗಮನದಿಂದಾಗಿ ಮಾವೋವಾದಿ ನಕ್ಸಲರ ಮತ್ತು ಸರ್ಕಾರದ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿತು. ಉಭಯ ಬಣಗಳ ಸಂಘರ್ಷ  ಮುಂದುವರೆದು, 92ರಲ್ಲಿ ಕಾಂಗ್ರೆಸ್ ಪಕ್ಷದ ಮೂರನೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ವಿಜಯಬಾಸ್ಕರ ರೆಡ್ಡಿಯ ಕಾಲದಲ್ಲಿ ತೀವ್ರವಾಗಿ ಉಲ್ಭಣಗೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರ ಕೂಡ ಆಂಧ್ರ ಪ್ರದೇಶದಲ್ಲಿ ಎಲ್ಲಾ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧವನ್ನು  ಜಾರಿ ಮಾಡಿತು.

1995ರಲ್ಲಿ ನಡೆದ ಚುಣಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಎನ್.ಟಿ.ಆರ್. ಮತ್ತೇ ಅಧಿಕಾರಕ್ಕೆ ಬಂದರು. ಆದರೆ ಅವರ ಅವಧಿ ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ಏಕೆಂದರೆ, ಎನ್.ಟಿ.ಆರ್. ತಮ್ಮ ವೃದ್ಧಾಪ್ಯದಲ್ಲಿ ಶಿವಪಾರ್ವತಿ ಎಂಬ ಹೆಸರಿನ ಹರಿಕಥೆ ಮಾಡುತ್ತಿದ್ದ ಮಧ್ಯ ವಯಸ್ಸಿನ ಹೆಣ್ಣುಮಗಳನ್ನು ಮೋಹಿಸಿ ವಿವಾಹವಾದ ಕಾರಣಕ್ಕಾಗಿ ಕುಟುಂಬದ ಸದಸ್ಯರಿಂದ ಮತ್ತು ಪಕ್ಷದ ಶಾಸಕರಿಂದ ತಿರಸ್ಕೃತಗೊಂಡರು. ಕ್ಷಿಪ್ರಗತಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಎನ್.ಟಿ.ಆರ್. ಸ್ಥಾನಕ್ಕೆ ಅವರ ಅಳಿಯ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಬಂದರು. ನಾಯ್ಡು ಕೂಡ 1996ರ ಜುಲೈ ತಿಂಗಳಿನಲ್ಲಿ ಪ್ರಜಾ ಸಮರಂ ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿ, ಕಾರ್ಯಕರ್ತರನ್ನು ಬಂಧಿಸಲು ಸೂಚಿಸಿದರು. ಇದರಿಂದ ಕೆರಳಿದ ನಕ್ಸಲರು ನಾಯ್ಡು ಹತ್ಯೆಗೆ ಸಂಚು ರೂಪಿಸಿದರು. 1998 ರಲ್ಲಿ ಕರೀಂನಗರ ಜಿಲ್ಲೆಯೊಂದರಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವ ಸಂದರ್ಭದಲ್ಲಿ ಸ್ಪೋಟಕಗಳನ್ನು ಇಡಲಾಗಿದ್ದ ಎತ್ತಿನ ಗಾಡಿಯೊಂದನ್ನು ರಸ್ತೆ ಬದಿ ನಿಲ್ಲಿಸಿ  ನಾಯ್ಡ ಅವರ ಕಾರು ಹಾಯ್ದು ಹೋಗುವಾಗ ಸ್ಪೋಟಿಸಲು ನಕ್ಸಲರು ಯೋಜನೆ ರೂಪಿಸಿದ್ದರು. ಆದರೆ, ಪೊಲೀಸರ ಮುಂಜಾಗ್ರತಾ ಕ್ರಮದಿಂದ ಬಾಂಬುಗಳು ಪತ್ತೆಯಾದ ಕಾರಣ ಆ ದಿನ ಚಂದ್ರಬಾಬು ನಾಯ್ಡುರವರ ಪ್ರಾಣ ಉಳಿಯಿತು.

ಪ್ರಜಾಸಮರ ದಳ ತನ್ನ ಕಾರ್ಯ ಚಟುವಟಿಕೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಪೀಪಲ್ಸ್ ಆರ್ಮಿ ಗ್ರೂಪ್ (ಪಿ.ಜಿ.ಎ.) ಎಂಬ ಇನ್ನೊಂದು ಹೋರಾಟದ ಪಡೆಯನ್ನು 2000ದ ಡಿಸಂಬರ್ ತಿಂಗಳಿನಲ್ಲಿ ಹುಟ್ಟುಹಾಕಿತು. ಇದಕ್ಕೆ ಶ್ರೀಲಂಕಾದ ಎಲ್.ಟಿ.ಟಿ. ಸಂಘಟನೆಯ ಕಾರ್ಯಯೋಜನೆ ಪರೋಕ್ಷವಾಗಿ ಪ್ರೇರಣೆಯಾಗಿತ್ತು. ಈ ಬೆಳವಣಿಗೆಯಿಂದ ವಿಚಲಿತಗೊಂಡ ನಾಯ್ಡು ಆಂಧ್ರ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಯನ್ನು ಬುಡಸಮೇತ ಕಿತ್ತೊಗೆಯಬೇಕೆಂದು ನಿರ್ಧರಿಸಿದರು. ಈ ಕಾರಣಕ್ಕಾಗಿ ಆಂಧ್ರ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರು. ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ಪೊಲೀಸರು ನಕ್ಸಲ್ ನಾಯಕರನ್ನು ನಿರಂತರ ಬೇಟೆಯಾಡಿ ಕೊಂದರು. ಪೊಲೀಸರ ಈ ಆಕ್ರೋಶಕ್ಕೆ ಒಂದು ಬಲವಾದ ಕಾರಣವಿತ್ತು.

1989ರಲ್ಲಿ ನಕ್ಸಲ್ ಚಟುವಟಿಕೆಯ ನಿಗ್ರಹಕ್ಕೆ ಆಂಧ್ರ ಸರ್ಕಾರ ವಿಶೇಷ ಪಡೆಯೊಂದನ್ನು ರೂಪಿಸಿ, ಅದರ ನೇತೃತ್ವವನ್ನು ಹಿರಿಯ ಪೊಲೀಸ್ ಅಧಿಕಾರಿ ಕೆ.ಎಸ್.ವ್ಯಾಸ್ ಅವರಿಗೆ ವಹಿಸಿತ್ತು. ರಾಷ್ಟ್ರೀಯ ಭದ್ರತಾ ಕಮಾಂಡೋ ಪಡೆಯ ಮಾದರಿಯಲ್ಲಿ ಪೊಲೀಸರನ್ನು ತಯಾರು ಮಾಡಲು ವ್ಯಾಸ್ ಅವರು ಅರಣ್ಯದ ಮಧ್ಯೆ ತರಬೇತಿ ಶಿಬಿರ ಆರಂಭಿಸಿ, ಮಿಲಿಟರಿ ಅಧಿಕಾರಿಗಳ ಮೂಲಕ ಆಂಧ್ರ ಪೊಲೀಸರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಈ ತರಬೇತಿ ಮತ್ತು ನಕ್ಸಲ್ ನಿಗ್ರಹ ಪಡೆ ಸೇರುವ ಪೊಲೀಸರಿಗೆ ತಮ್ಮ ವೇತನದ ಶೇ. 60 ರಷ್ಟು ಹೆಚ್ಚು ವೇತನ ನೀಡುವುದಾಗಿ ಆಂಧ್ರ ಸರ್ಕಾರ ಘೋಷಿಸಿತು.

ಆಂಧ್ರ ಸರ್ಕಾರದ ಈ ಯೋಜನೆಗೆ ಹಿಂಸೆಯ ಮೂಲಕ ಪ್ರತಿಕ್ರಿಯಿಸಿದ ನಕ್ಸಲರು 2001ರಲ್ಲಿ ಚಿತ್ತೂರು ಬಳಿ ಚಂದ್ರಬಾಬು ನಾಯ್ಡು ಮಾಲಿಕತ್ವದ ಹೆರಿಟೇಜ್ ಹಾಲು ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದರು. ಇದಲ್ಲದೆ ಚಿತ್ತೂರು ಕೈಗಾರಿಕಾ ವಲಯದಲ್ಲಿ ಇರುವ ಟಾಟಾ ಟೀ ಕಂಪನಿ ಮತ್ತು ಕೋಕಾಕೋಲಾ ಕಂಪನಿಯ ಮೇಲೆ ದಾಳಿ ನಡೆಸಿದರು. ಕೇಂದ್ರ ಸಚಿವರೊಬ್ಬರ ಗ್ರಾನೈಟ್ ಉದ್ದಿಮೆಯ ಘಟಕವನ್ನೂ ಸಹ ನಾಶಪಡಿಸಿದರು. ಈ ಸಂದರ್ಭದಲ್ಲಿ ವಿಚಲಿತಗೊಂಡ ಆಂಧ್ರ ಸರ್ಕಾರ ನಕ್ಸಲರನ್ನು ಮಾತುಕತೆಗೆ ಆಹ್ವಾನಿಸಿತು. 2002 ರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸತತವಾಗಿ ನಡೆದ ಮೂರು ಸುತ್ತಿನ ಮಾತುಕತೆಗಳು ವಿಫಲವಾದವು. ಕೇಂದ್ರ ಸರ್ಕಾರ ಕೂಡ 2003ರ ಫೆಬ್ರವರಿ 8ರಂದು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸುಧೀರ್ಘವಾಗಿ ಚರ್ಚಿಸಿತು. ನಕ್ಸಲರ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ನಕ್ಸಲ್ ಪೀಡಿತ ರಾಜ್ಯಗಳ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಪ್ರತಿ ವರ್ಷ 15 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿತು.

ತಮ್ಮ ಪ್ರತಿರೋಧವನ್ನು ತೀವ್ರಗೊಳಿಸಿದ ನಕ್ಸಲ್ ಕಾರ್ಯಕರ್ತರು 2003ರ ಮಾರ್ಚ್ 23ರಂದು ಅನಂತಪುರದ ಬಳಿ ಇರುವ ತಂಪು ಪಾನೀಯ ತಯಾರಿಕೆಯಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪನಿಯಾದ ಪೆಪ್ಸಿ ಘಟಕದ ಮೇಲೆ ದಾಳಿ ಮಾಡಿದರು. ಮೇ 28ರಂದು ರಾಯಾವರಂ ಎಂಬ ಗ್ರಾಮದಲ್ಲಿ ದೂರವಾಣಿ ಕೇಂದ್ರವನ್ನು ಧ್ವಂಸಗೊಳಿಸಿದರು. ಜುಲೈ ನಾಲ್ಕರಂದು ನಲ್ಗೊಂಡ ಜಿಲ್ಲೆಯ ದೊಂಡಪಡು ಎಂಬ ಗ್ರಾಮದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ದಾಳಿ ನಾಲ್ಕು ಲಕ್ಷ ರೂ ನಗದು ಮತ್ತು ಐವತ್ತು ಲಕ್ಷ ರೂಪಾಯಿ ಮೌಲ್ಯದ ಒಂಬತ್ತು ಕೆ.ಜಿ. ಚಿನ್ನವನ್ನು ದೋಚುವುದರ ಮೂಲಕ ನಕ್ಸಲ್ ಹೋರಾಟ ರಾಯಲಸೀಮಾ (ಕಡಪ,  ಕರ್ನೂಲು, ಅನಂತಪುರ, ಚಿತ್ತೂರು ಜಿಲ್ಲೆಗಳು) ಪ್ರದೇಶಕ್ಕೂ ಕಾಲಿಟ್ಟಿದೆ ಎಂಬ ಸಂದೇಶವನ್ನು ಆಂಧ್ರ ಸರ್ಕಾರಕ್ಕೆ ರವಾನಿಸಿದರು. ಇದೂ ಸಾಲದೆಂಬಂತೆ ಪೊಲೀಸ್ ಅಧಿಕಾರಿ ವ್ಯಾಸ್ ಅವರನ್ನು ತಮ್ಮ ಹಿಟ್ ಲಿಸ್ಟ್‌‌ನಲ್ಲಿ ದಾಖಲಿಸಿಕೊಂಡಿದ್ದ ನಕ್ಸಲರು 1993ರಲ್ಲಿ ಹೈದರಾಬಾದ್ ನಗರದ ಅವರ ನಿವಾಸದ ಮುಂದಿ ಕೈತೋಟದಲ್ಲಿ ಬೆಳಗಿನ ಜಾವ ವ್ಯಾಯಾಮ ಮಾಡುತ್ತಿದ್ದ ಸಮಯದಲ್ಲಿ ಹತ್ಯೆ ಮಾಡಿದರು.

ಇವುಗಳಿಗೆ ತೃಪ್ತರಾಗದ ಪ್ರಜಾಸೈನ್ಯ ದಳ (ಪಿ.ಜಿ.ಎ.) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹತ್ಯೆಗೆ ಮತ್ತೇ ಯೋಜನೆ ರೂಪಿಸಿತು. 1993 ರ ಅಕ್ಟೋಬರ್ ತಿಂಗಳಿನಲ್ಲಿ ನಾಯ್ಡು ತಿರುಪತಿಗೆ ಭೇಟಿ ನೀಡುವ ಸಮಯದಲ್ಲಿ ರಸ್ತೆಯಲ್ಲಿ ನೆಲಬಾಂಬ್ ಇರಿಸಿ ಕೊಲ್ಲಲು ಪ್ರಯತ್ನಿಸಲಾಯಿತು. ತಿರುಮಲ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಅನ್ನು ಸ್ಪೋಟಿಸಲಾಯಿತಾದರೂ, ನಾಯ್ಡು ಪ್ರಯಾಣಿಸುತ್ತಿದ್ದ ಕಾರಿನ ಮುಂದಿನ ಚಕ್ರ ಮುಂದೆ ಸಾಗಿ, ಕಾರಿನ ಹಿಂದಿನ ಚಕ್ರದ ಬಳಿ ಬಾಂಬ್ ಸಿಡಿಯಿತು. ಮುಂದಿನ ಆಸನದಲ್ಲಿ ಕುಳಿತ್ತಿದ್ದ ನಾಯ್ಡು ಪ್ರಾಣಪಾಯದಿಂದ ಪಾರಾದರೂ ಕೂಡ ಅವರ ಭುಜಕ್ಕೆ ಬಲವಾದ ಪೆಟ್ಟು ಬಿದ್ದು ಪ್ರಜ್ಞಾಹೀನರಾದರು. ವೆಂಕಟೇಶ್ವರನ ದಯೆಯಿಂದ ಉಳಿದುಕೊಂಡೆ ಎಂದು ಹೇಳಿದ ಚಂದ್ರಬಾಬು ನಾಯ್ಡುಗೆ ಆಂಧ್ರದಲ್ಲಿ ನಕ್ಸಲಿಯರ ಬಗ್ಗೆ ಎಷ್ಟೊಂದು ಜೀವಭಯವಿದೆ ಎಂದರೆ, ಇವತ್ತಿಗೂ ಅವರು ಗೋದಾವರಿ ನದಿ ದಾಟಿ ಉತ್ತರ ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಿಗೆ ಹೋಗಲು ಹೆದರುತ್ತಾರೆ. ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸುವುದಿಲ್ಲ. ಈ ಘಟನೆ ನಡೆದ ಒಂಬತ್ತು ವರ್ಷದ ನಂತರವೂ ಕೂಡ ನಕ್ಸಲರ ಹಿಟ್ ಲಿಸ್ಟ್‌ನಲ್ಲಿ ಚಂದ್ರಬಾಬು ನಾಯ್ಡು ಎಂಬ ಹೆಸರು ಮೊದಲನೇ ಸ್ಥಾನದಲ್ಲಿದೆ. ಏಕೆಂದರೆ, ನಾಯ್ಡು ಹತ್ಯೆಗೆ ಸಂಚು ರೂಪಿಸಿದ್ದ ಹಿರಿಯ ಮಾವೋವಾದಿ ನಾಯಕ ಸಂಡೆ ರಾಜಮೌಳಿಯನ್ನು 2007ರಲ್ಲಿ ಬಂಧಿಸದ ಆಂಧ್ರ ಪೊಲೀಸರು ಎನ್‌‍ಕೌಂಟರ್ ಮೂಲಕ ಮುಗಿಸಿದರು. ಈ ನಾಯಕನ ಸುಳಿವಿಗಾಗಿ ಆಂಧ್ರ ಸರ್ಕಾರ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಆಂಧ್ರದಲ್ಲಿ ಪ್ರಜಾಸಮರಂ ಮತ್ತು ಅದರ ಅಂಗ ಘಟಕಗಳಿಂದ ತೀವ್ರತರವಾದ ಹಿಂಸಾತ್ಮಕ ಚಟುವಟಿಕೆ ನಡೆಯಲು ಅದರ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯನವರ ಅನುಪಸ್ಥಿತಿ ಕೂಡ ಪರೋಕ್ಷವಾಗಿ ಕಾರಣವಾಯಿತು. ಈ ನಡುವೆ ಕೊಂಡಪಲ್ಲಿಯವರ ವಿಚಾರಗಳಿಗೆ ಒಪ್ಪದ ಬಿಸಿರಕ್ತದ ಯುವ ನಾಯಕರು ಕೊಂಡಪಲ್ಲಿ ಅವರನ್ನು 1991ರಲ್ಲಿ ಸಂಘಟನೆಯಿಂದ ಹೊರಹಾಕಿದರು. ತನ್ನ ಒಡನಾಡಿ ಕೆ.ಜಿ. ಸತ್ಯಮೂರ್ತಿಯವರನ್ನು ಸೈದ್ಧಾಂತಿಕ ಭಿನ್ನಾಭಿಪ್ರಯಾದ ಮೇಲೆ ಹೊರಹಾಕಿದ್ದ ಕೋಡಪಲ್ಲಿ ಅದೇ ರೀತಿಯಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯಿಂದ ವೃದ್ಧಾಪ್ಯದಲ್ಲಿ ಹೊರದಬ್ಬಿಸಿಕೊಂಡರು. ಪಾರ್ಕಿಸನ್ ಕಾಯಿಲೆಗೆ ತುತ್ತಾಗಿದ್ದ ಅವರು 1992ರಲ್ಲಿ ತಮ್ಮೂರಾದ ಜೊನ್ನಪಡು ಗ್ರಾಮದ ಮನೆಯಲ್ಲಿದ್ದಾಗ ಆಂಧ್ರ ಪೊಲೀಸರಿಂದ ಬಂಧಿತರಾದರು. ನಾಲ್ಕು ವರ್ಷಗಳ ನಂತರ ಆಂಧ್ರ ಸರ್ಕಾರ ವೃದ್ಧಾಪ್ಯದ ಹಿನ್ನಲೆ ಮತ್ತು ಮಾನವೀಯ ನೆಲೆಯಲ್ಲಿ ಅವರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ರದ್ದು ಪಡಿಸಿ ಬಿಡುಗಡೆ ಮಾಡಿತು. 2002ರ ಏಪ್ರಿಲ್ ತಿಂಗಳಿನ 12 ರಂದು ತಮ್ಮ 87 ನೇ ವಯಸ್ಸಿನಲ್ಲಿ ವಿಜಯವಾಡದ ತಮ್ಮ ಮೊಮ್ಮಗಳ ಮನೆಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯ ನಿಧನರಾದರು. ಹತ್ತು ವರ್ಷಗಳ ನಂತರ 2012ರ ಅದೇ ಏಪ್ರಿಲ್ 8 ರಂದು ಅವರ ಒಡನಾಡಿ ಕೆ.ಜಿ.ಸತ್ಯಮೂರ್ತಿ ಸಹ ವಿಜಯವಾಡದ ಸಮೀಪದ ಹಳ್ಳಿಯಲ್ಲಿ ಲಾರಿ ಚಾಲಕನಾಗಿದ್ದ ಅವರ ಕಿರಿಯ ಮಗನ ಮನೆಯಲ್ಲಿದ್ದಾಗ 84 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಮೃತಪಟ್ಟರು. ಇದೇ 2012ರ ಏಪ್ರಿಲ್ ಕೊನೆಯ ವಾರ ಹೈದರಾಬಾದ್ ನಗರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟು ಹಾಕಿದ ಇಬ್ಬರು ಮಹಾನ್ ನಾಯಕರ ನೆನಪಿಗೆ ಯಾವುದೇ ಭಾಷಣಗಳಿಲ್ಲದೆ, ಹೋರಾಟದ ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಗೌರವ ಸಮರ್ಪಿಸಿದರು.

ಆಂಧ್ರ ಪ್ರದೇಶದಲ್ಲಿ 2003ರ ವೇಳೆಗೆ, 23 ವರ್ಷಗಳ ಅವಧಿಯಲ್ಲಿ (1980-2003) ಸರ್ಕಾರ ಮತ್ತು ನಕ್ಸಲಿಯರ ನಡುವೆ ನಡೆದ ಸಂಘರ್ಷದಲ್ಲಿ 6 ಸಾವಿರ ಮಂದಿ ಮೃತಪಟ್ಟಿದ್ದರು. ಇದರಲ್ಲಿ ಆಂಧ್ರ ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ 1800 ನಕ್ಸಲ್ ನಾಯಕರನ್ನು ಹತ್ಯೆಗೈಯ್ದಿದ್ದರು. ಅಲ್ಲದೇ ನಕ್ಸಲರ ಗುಂಡಿಗೆ 1100ಕ್ಕು ಹೆಚ್ಚು ಪೊಲೀಸರು ಬಲಿಯಾಗಿದ್ದರು. ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅತಿ ಹೆಚ್ಚು ಎನ್‌‍ಕೌಂಟರ್‌ಗಳು ಜರುಗಿದ್ದವು. ಈ ನಡುವೆ ನಕ್ಸಲ್ ಸಂಘಟನೆಯಲ್ಲಿ ಮಹತ್ತರ ಬೆಳವಣಿಗೆಯೊಂದು ಜರುಗಿತು. ಎಂ.ಸಿ.ಸಿ. (ಮಾವೋ ಕಮ್ಯೂನಿಷ್ಟ್ ಸೆಂಟರ್) ಎಂದು ಪ್ರತ್ಯೇಕ ಗೊಂಡಿದ್ದ ಬಣ ಪೀಪಲ್ಸ್ ವಾರ್ ಗ್ರೂಪ್ ಜೊತೆ 2004ರಲ್ಲಿ ಸೇರ್ಪಡೆಗೊಂಡಿತು. ಇದರಿಂದಾಗಿ ಮಧ್ಯಭಾರತ ಮತ್ತು ಪೂರ್ವ ಭಾಗದ ರಾಜ್ಯಗಳ ಮೇಲೆ ಪೀಪಲ್ಸ್ ವಾರ್ ಗ್ರೂಪ್ ಬಣದ ಪ್ರಾಬಲ್ಯ ಮತ್ತಷ್ಟು ಹೆಚ್ಚಾಯಿತು.

2004ರಲ್ಲಿ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಸರ್ಕಾರ ಪತನಗೊಂಡು, ಡಾ.ವೈ.ಎಸ್. ರಾಜಶೇಖರರೆಡ್ಡಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾದ ಕೂಡಲೇ ಆಂಧ್ರದ ನಕ್ಸಲ್ ಸಂಘಟನೆಗಳ ಮೇಲಿದ್ದ ನಿಷೇಧವನ್ನು ತೆಗೆದು ಹಾಕಿದರು. ಎಲ್ಲಾ ಸಂಘಟನೆಯ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದರು. 2004ರ ಅಕ್ಟೋಬರ್ 15 ರಿಂದ 18 ರವರೆಗೆ ಹೈದರಾಬಾದ್ ನಗರದಲ್ಲಿ ನಡೆದ ಮಾತುಕತೆಯಲ್ಲಿ ಪೀಪಲ್ಸ್ ವಾರ್ ಗ್ರೂಪ್‌‍ನ ಕಾರ್ಯದರ್ಶಿ ರಾಮಕೃಷ್ಣ ಅಲಿಯಾಸ್ ಅಕ್ಕಿರಾಜು ಮತ್ತು ಆಂಧ್ರ-ಒರಿಸ್ಸಾ ಗಡಿಭಾಗದ ಹೊಣೆಹೊತ್ತಿದ್ದ ಸುಧಾಕರ್ ಮತ್ತು ಉತ್ತರ ತೆಲಂಗಾಣ ಭಾಗದಿಂದ ಜಿ.ರವಿ ಹಾಗೂ ಜನಶಕ್ತಿ ಸಂಘಟನೆಯ ನಾಯಕರಾದ ಅಮರ್ ಮತ್ತು ರಿಯಾಜ್ ಸೇರಿದಂತೆ ಹಲವು ಪ್ರಮುಖರು ಮಾತುಕತೆಯಲ್ಲಿ ಪಾಲ್ಗೊಂಡರು. ಆಂಧ್ರ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ನಂತರ ನಾಗರೀಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದ ಎಸ್.ಆರ್. ಶಂಕರನ್ ಉಭಯ ಬಣಗಳ ನಡುವೆ ಮಧ್ಯಸ್ತಿಕೆ ವಹಿಸಿದ್ದರು. ನಕ್ಸಲ್ ಸಂಘಟನೆಗಳ ನಾಯಕರು ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇರಿಸಿದರು.

ಅವುಗಳೆಂದರೆ:

  1. ಸರ್ಕಾರ ಸ್ವತಂತ್ರ ಆಯೋಗವನ್ನು ರಚಿಸಿ ಸರ್ಕಾರಿ ಭೂಮಿಯನ್ನು ಗುರುತಿಸಬೇಕು.
  2. ಈ ಭೂಮಿಯನ್ನು ಆದಿವಾಸಿಗಳಿಗೆ ಮತ್ತು ಭೂರಹಿತ ಕೃಷಿಕೂಲಿಕಾರ್ಮಿಕರಿಗೆ ಹಂಚಬೇಕು.
  3. ಆಂಧ್ರ ಪ್ರದೇಶದಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ನಡೆಯುತ್ತಿರುವ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಬೇಕು.

ಈ ಬೇಡಿಕೆಗಳನ್ನು ಆಲಿಸಿದ  ಸರ್ಕಾರ ತಕ್ಷಣಕ್ಕೆ ಯಾವುದೇ ಆಶ್ವಾಸನೆ ನೀಡದೇ ಬೇಡಿಕೆಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿ ತೀರ್ಮಾನ ಕೈಗೊಳ್ಳುವುದಾಗಿ  ತಿಳಿಸಿತು. ಶಾಂತಿ ಮಾತುಕತೆಗಾಗಿ ಮೂರು ತಿಂಗಳ ಕಾಲ ಘೋಷಿಸಲಾಗಿದ್ದ ಕದನ ವಿರಾಮ ಮುಕ್ತಾಯದ ಹಂತಕ್ಕೆ ಬಂದರೂ ಕೂಡ ಆಂಧ್ರ ಸರ್ಕಾರದಿಂದ ನಕ್ಸಲರ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಮಾತುಕತೆ ವಿಫಲವಾಯಿತು. ಆದರೆ, ಇದರಿಂದ ಆಂಧ್ರ ಪೊಲೀಸರಿಗೆ ಮಾತ್ರ ಉಪಯೋಗವಾಗಿತ್ತು. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಹಲವಾರು ನಾಯಕರ ಭಾವಚಿತ್ರಗಳನ್ನ ಈ ಸಂದರ್ಭದಲ್ಲಿ ಸೆರೆ ಹಿಡಿದರು.

ಸರ್ಕಾರದೊಂದಿಗೆ ಮಾತುಕತೆ ವಿಫಲಗೊಂಡ ನಂತರ 2004ರ ಡಿಸಂಬರ್ ತಿಂಗಳಿನಲ್ಲಿ ಹೈದರಾಬಾದ್ ಸಮೀಪದ ಘಾಟ್‌ಶೇಖರ್ ಎಂಬ ಪಟ್ಟಣದ ಬಳಿ ಆಂಧ್ರ ಸರ್ಕಾರದ ಪಂಚಾಯತ್ ಖಾತೆ ಸಚಿವ ಎ. ಮಾಧವರೆಡ್ಡಿ ನಕ್ಸಲರ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾಯಿತು. ನಂತರ 2005ರ ಮಾರ್ಚ್ 11ರಂದು ಗುಂಟೂರು ಜಿಲ್ಲೆಯ ಚಿಲ್ಕುರಿಪೇಟ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ನಕ್ಸಲಿಯರು ಏಳು ಮಂದಿ ಪೊಲೀಸರ ಹತ್ಯೆಗೆ ಕಾರಣರಾದರು. ಇದಕ್ಕೆ ಪ್ರತಿಯಾಗಿ ಆಂಧ್ರ ಪೊಲೀಸರು 2005 ರ ಏಪ್ರಿಲ್ 5 ರಂದು ಜನಶಕ್ತಿ ಸಂಘಟನೆಯ ನಾಯಕ ರಿಯಾಜ್‌‍ನನ್ನು ಎನ್‌ಕೌಂಟರ್ ಮೂಲಕ ಮುಗಿಸಿದರು. ಇದರಿಂದ ರೊಚ್ಚಿಗೆದ್ದ ನಕ್ಸಲ್ ಸಂಘಟನೆಗಳು ಎನ್‌ಕೌಂಟರ್‌ಗೆ ಪ್ರತಿಯಾಗಿ 2005ರ ಆಗಸ್ಟ್ 15ರಂದು ಮೆಹಬೂಬ್ ನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ನರಸರೆಡ್ಡಿ ಸೇರಿದಂತೆ ಎಂಟು ಮಂದಿ ಕಾಂಗ್ರೇಸ್ ಕಾರ್ಯಕರ್ತರನ್ನು ಹತ್ಯೆಮಾಡಿದರು. ಅಂತಿಮವಾಗಿ 2005ರ ಆಗಸ್ಟ್ 17ರಂದು ಆಂಧ್ರಾದ್ಯಂತ ಪೀಪಲ್ಸ್ ವಾರ್ ಗ್ರೂಪ್ ಸೇರಿದಂತೆ ಎಲ್ಲಾ ಸಂಘಟನೆಗಳ ಮೇಲೆ ಮತ್ತೇ ನಿಷೇಧ ಹೇರಲಾಯಿತು. ಮತ್ತೇ ಎರಡನೇ ಬಾರಿ ಆಂಧ್ರದಲ್ಲಿ ಅಧಿಕಾರದ ಗದ್ದುಗೆಯೇರಿದ ಡಾ. ರಾಜಶೇಖರ್ ರೆಡ್ಡಿ ನಂತರದ ಕೆಲವೇ ದಿನಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಇದರಿಂದಾಗಿ ಸರ್ಕಾರ ಮತ್ತು ನಕ್ಸಲರ ನಡುವಿನ ಸಂಧಾನದ ಬಾಗಿಲು ಮುಚ್ಚಿ ಹೊಯಿತು.

ಈ ನಡುವೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಪ್ರತ್ಯೇಕ ತೆಲಂಗಣಾ ರಾಜ್ಯಕ್ಕೆ ಹೋರಾಟ ತೀವ್ರಗೊಂಡಿದ್ದರಿಂದ ಇಡೀ ರಾಜ್ಯದ ಎಲ್ಲಾ ಜನತೆಯ ಗಮನ ಅತ್ತ ಹರಿಯಿತು. ಇತ್ತೀಚೆಗೆ ಆಂಧ್ರದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಸಂಘರ್ಷ ಕಡಿಮೆಯಾಗಿದ್ದು, ಅಘೋಷಿತ ಕದನ ವಿರಾಮ ಏರ್ಪಟ್ಟಂತೆ ಕಾಣಬರುತ್ತಿದೆ. ನಕ್ಸಲ್ ಸಂಘಟನೆಯ ನಾಯಕರು ತೆಲಂಗಣಾ ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಕಾರ್ಯಚಟುವಟಿಕೆಯನ್ನು ಮಧ್ಯಪ್ರದೇಶ, ಛತ್ತೀಸ್‌ಘಡ ನಡುವಿನ ದಂಡಕಾರಣ್ಯ ಮತ್ತು ಬಸ್ತಾರ್ ಅರಣ್ಯ ಪ್ರದೇಶದ ಆದಿವಾಸಿಗಳಿಗೆ ಮೀಸಲಿರಿಸಿದ್ದಾರೆ. ಆಂಧ್ರದ ಕರೀಂನಗರ, ನಲ್ಗೊಂಡ, ವಾರಂಗಲ್. ಶ್ರೀಕಾಕುಳಂ, ಅದಿಲಾಬಾದ್, ಕೃಷ್ಣಾ, ಗೋದಾವರಿ, ಕಮ್ಮಂ ಜಿಲ್ಲೆಗಳಲ್ಲಿ ಇವತ್ತಿಗೂ ನಕ್ಸಲರ ಪ್ರಾಬಲ್ಯವಿದ್ದು, ಸರ್ಕಾರದ ಎಲ್ಲಾ ಕಾಮಗಾರಿ ಕೆಲಸಗಳ ಗುತ್ತಿಗೆದಾರರು ಮತ್ತು  ಅಬ್ಕಾರಿ ಗುತ್ತಿಗೆದಾರರ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಅಬ್ಕಾರಿ ಗುತ್ತಿಗೆಯನ್ನು ತಾವೇ ನಿಭಾಯಿಸುತಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಬಳಿ ಗೋದಾವರಿ ನದಿಗೆ ಪೊಲಾವರಂ ಬಳಿ ನಿರ್ಮಿಸಲು ಉದ್ದೇಶಿಲಾಗಿರುವ ಇಂದಿರಾ ಸಾಗರ ಅಣೆಕಟ್ಟಿನಿಂದ ಎರಡು ಲಕ್ಷ ಆದಿವಾಸಿ ಕುಟುಂಬಗಳು ಅತಂತ್ರರಾಗುವ ಸಂಭವವಿದೆ. ಈ ಅಣೆಕಟ್ಟಿನ ನಿರ್ಮಾಣಕ್ಕೆ ಪೀಪಲ್ಸ್ ವಾರ್ ಸಂಘಟನೆಯ ಈಗಿನ ನಾಯಕ ಗಣಪತಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟ ಸ್ಥಗಿತಗೊಂಡಂತೆ ಭಾಸವಾದರೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಕ್ಷಣದಲ್ಲಾದರೂ ಅಗ್ನಿಪರ್ವತದಂತೆ ಬಾಯಿ ತೆರೆಯಬಹುದು.

(ಮುಂದುವರಿಯುವುದು)

ರಾಮರಾಜ್ಯ ಮತ್ತು ಗ್ರಾಮಸ್ವರಾಜ್ಯ

– ಪ್ರಸಾದ್ ರಕ್ಷಿದಿ

ಕರ್ನಾಟಕದಲ್ಲೀಗ ರಾಮರಾಜ್ಯ ತರುವವರು ಅಧಿಕಾರಕ್ಕೆ ಬಂದು ಐದನೇ ವರ್ಷ. ರಾಮರಾಜ್ಯದವರ ಆಳ್ವಿಕೆಯಲ್ಲಿ ಗ್ರಾಮರಾಜ್ಯ ಎಲ್ಲಿಗೆ ತಲಪಿದೆ ಎಂಬುದಕ್ಕೆ ನಮ್ಮೂರೊಂದು ಸಣ್ಣ ಉದಾಹರಣೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಪಂಚಾಯತ್ ಏಳು ಗ್ರಾಮಗಳು ಸೇರಿರುವ ಒಂದು ಗ್ರೂಪ್ ಪಂಚಾಯತ್. ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಚುನಾವಣೆ ನಡೆದಾಗ ಹದಿಮೂರು ಜನ ಸದಸ್ಯರಿರುವ ಈ ಪಂಚಾಯತಿಗೆ ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿಯಿಂದ ಸುಮಾರಾಗಿ ಸಮಾನ ಸಂಖ್ಯೆಯ ಸದಸ್ಯರು ಆರಿಸಿ ಬಂದಿದ್ದರು. ಈ ಹಿಂದೆಲ್ಲಾ ಪಂಚಾಯತ್ ಚುನಾವಣೆಯೆಂದರೆ ತಿಂಗಳುಗಟ್ಟಲೆ ಕಾಲ ಹಳ್ಳಿಗಳು ಬಿಗುವಿನಲ್ಲಿರುತ್ತಿದ್ದರಿಂದ ಈ ಬಾರಿ ನಮ್ಮೂರಿನ ಮಟ್ಟಿಗಾದರೂ ಜಗಳ ಬೇಡವೆಂದು ಊರಿನ ಹಿರಿಯರು ಹಾಗೂ ರಾಜಕೀಯ ಕಾರ್ಯಕರ್ತರೂ ಸೇರಿ ಒಮ್ಮತದಿಂದ ಅಧ್ಯಕ್ಷ-ಉಪಾಧ್ಯಕ್ಷರನ್ನು ಆರಿಸಿದೆವು. ಉನ್ನತ ಶಿಕ್ಷಣ ಪಡೆದ ನಿವೃತ್ತ ಸೈನಿಕರೊಬ್ಬರು ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಬಂದಾಗ ನಾವೆಲ್ಲ ನಮ್ಮ ಗ್ರಾಮರಾಜ್ಯ ರಾಮರಾಜ್ಯವಾಗುವ ದಿನವನ್ನು ಕಾಯುತ್ತ ಕುಳಿತಿದ್ದೆವು.

ಆಕಾಶ ಕಾಣುತ್ತಿರುವ ಮೀಟಿಂಗ್ ಹಾಲ್

ನಮ್ಮ ತಾಲ್ಲೂಕಿನಲ್ಲಿ ಹೇಮಾವತಿ ನದಿಹರಿಯುವುದರಿಂದ ಅನೇಕ ಪಂಚಾಯತ್‍ಗಳಿಗೆ ನದಿಮರಳಿನ ಟೆಂಡರ್ ಹಣ ಬರುತ್ತದೆ. ಈಗ ಟೆಂಡರ್ ನಿಂತಿದ್ದರೂ ಎರಡು ವರ್ಷದ ಹಿಂದೆ ನಮ್ಮ ಪಂಚಾಯತಿಗೆ ಬಂದ ಮರಳಿನ ವರಮಾನವೇ ಸುಮಾರು ಮೂವತ್ತೇಳು ಲಕ್ಷ ರೂಪಾಯಿಗಳು! (ನಮ್ಮ ಪಂಚಾಯತ್‌ನ ಗಡಿಯಲ್ಲೇ ಹೇಮಾವತಿ ನದಿ ಹರಿಯುತ್ತದೆ.) ಇನ್ನು ರಾಜ್ಯ ಕೇಂದ್ರ ಸರ್ಕಾರಗಳ ಬೇರೆ ಬೇರೆ ಯೋಜನೆಗಳ ಮೊತ್ತ ಸೇರಿದರೆ ಕೋಟಿಯನ್ನು ದಾಟುತ್ತಿತ್ತು.

ಆ ನಂತರ ಎಲ್ಲರೂ ರಾಜ್ಯ ರಾಜಕೀಯದ ನಿತ್ಯಪ್ರಹಸನವನ್ನು ಕೇಂದ್ರದ ರಾಮಲೀಲಾವನ್ನೂ ಟಿವಿಯಲ್ಲಿ ರೋಚಕವಾಗಿ ನೋಡುತ್ತಾ ಮೈಮರೆತದ್ದರಿಂದ ಗ್ರಾಮಪಂಚಾಯತಿಯನ್ನು ಮರೆತುಬಿಟ್ಟಿದ್ದರು. ಒಂದು ವರ್ಷ ಕಳೆಯುವಷ್ಟರಲ್ಲಿ ಪಂಚಾಯತಿಯಲ್ಲಿ ಬಡವರಿಗೆ ಏನೂ ಸಿಗುತ್ತಿಲ್ಲ, ಕುಡಿಯಲು ನೀರೂ ಇಲ್ಲ, ಪಂಚಾಯತ್ ದುಡ್ಡೆಲ್ಲಾ ಖಾಲಿಯಾಗಿದೆ ಎಂಬ ದೂರು ಪ್ರಾರಂಭವಾಯಿತು. ನಮ್ಮೂರಿನ ಅತ್ಯುತ್ಸಾಹಿ ಯುವಕರೊಬ್ಬರು, ಇದಕ್ಕೆಲ್ಲ ಕೊನೆ ಹಾಡುತ್ತೇನೆಂದು ಮಾಹಿತಿ ಹಕ್ಕು ಕಾಯಿದೆ ಪ್ರಕಾರ ದಾಖಲೆಗಳನ್ನು ತೆಗೆದರು. ಅದರ ಪ್ರಕಾರ ಪಂಚಾಯಿತಿಯ ಎಲ್ಲ ಯೋಜನೆಗಳಲ್ಲೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೇ ಕಾಣುತ್ತಿತ್ತು. ಉದ್ಯೋಗ ಖಾತ್ರಿ ಯೋಜನೆಯಂತೂ ಅವ್ಯವಹಾರ ಖಾತ್ರಿ ಯೋಜನೆಯಾಗಿತ್ತು. ಮರಳಿನ ಹಣ ನೀರಿನಂತೆ ಇಂಗಿಹೋಗಿತ್ತು. ಅವ್ಯವಹಾರಗಳ ಬಗ್ಗೆ ಒಂದು ಪತ್ರಿಕಾ ಗೋಷ್ಟಿಯೂ ನಡೆಯಿತು. ಎಂಟು ದಿನಗಳಕಾಲ ನಿರಂತರ ಸುದ್ದಿ ಮಾಡುತ್ತೇನೆಂದು ಹೊರಟ ಸುದ್ದಿವೀರರು ಎರಡನೇ ದಿನಕ್ಕೆ ತೆಪ್ಪಗಾದರು. ತೆರೆಮರೆಯಲ್ಲಿ ರಾಜೀ ಸಂಧಾನಗಳು ನಡೆದವು. ಪತ್ರಕರ್ತರ ಪೆನ್ನಿನಲ್ಲಿ ಇಂಕು ಖಾಲಿಯಾಯಿತು. ಜಿಲ್ಲಾಪಂಚಾಯತಿಗೆ ನೀಡಿದ ದೂರು ಕಡತ ವಿಲೇವಾರಿಯಾಯಿತು. ಲೋಕಾಯುಕ್ತಕ್ಕೆ ಹೋಗುತ್ತೇನೆಂದು ಹೊರಟ ಕೆಲವರು ತಣ್ಣಗೇ ಕುಳಿತರು.

ಹಾಳುಬಿದ್ದಂತಿರುವ ಪಂಚಾಯತ್ ಕಛೇರಿ

ಅಷ್ಟರಲ್ಲಿ ರಾಜ್ಯದಲ್ಲಿ ಯಡಿಯೂರಪ್ಪನವರು ಹೋಗಿ ಸದಾನಂದಗೌಡರ ಸರ್ಕಾರ ಬಂತು. ಸಕಲೇಶಪುರದಲ್ಲಿ ಸದಾನಂದ ಗೌಡರ ಕಾರ್ಯಕ್ರಮವಿತ್ತು. ಆದಿನ ಹೇಗೋ ಮುಖ್ಯಮಂತ್ರಿಗಳ ಭೇಟಿಯ ಅವಕಾಶ ಪಡೆದ ಗ್ರಾಮಸ್ಥರು, ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ದೂರು ನೀಡಿ ಎಲ್ಲ ಮಾಹಿತಿಗಳ ಕಡತವನ್ನು ಒಪ್ಪಿಸಿದರು. ಮುಖ್ಯಮಂತ್ರಿಗಳು ವೀರಾವೇಶದಿಂದ ಇಂತಹ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ, ಕೂಡಲೇ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿ ಹೋದರು.

ಅಲ್ಲಿಂದ ಮುಂದೆ, ದೂರುನೀಡಿದವರು ಗೇಲಿಗೊಳಗಾಗಿ ನಮ್ಮ ಪಂಚಾಯತ್‌ನಲ್ಲಿ ಓಡಾಡುವುದೇ ಕಠಿಣವಾಗಿಬಿಟ್ಟತು. ಕಡತ ಎಲ್ಲಿಗೆ ಹೋಯಿತೋ ತಿಳಿಯದು.

ಈಗ ಕೆಲವು ದಿನಗಳ ಹಿಂದೆ ಮನೆಸಿಕ್ಕದಿರುವ ಬಡವನೊಬ್ಬ ಪಂಚಾಯತ್ ಸದಸ್ಯನೊಬ್ಬನಿಗೆ ವಾಚಾಮಗೋಚರವಾಗಿ ಬೈದದ್ದರಿಂದ ಅವನಿಗೆ ಅಸಾಧ್ಯ ಸಿಟ್ಟುಬಂದು ಟಿವಿಯಲ್ಲಿ ಬರುತ್ತಿದ್ದ ರೋಚಕ ಸುದ್ದಿಗಳನ್ನೆಲ್ಲ ಬದಿಗಿಟ್ಟು, ಪಂಚಾಯ್ತಿ ಕಛೇರಿಗೆ ಹೋಗಿ ತನಗೆ ತಿಳಿದಷ್ಟು ಮಾಹಿತಿ ಕಲೆಹಾಕಿದ ನಂತರ ಅದು ಹೇಗೊ ಕೆಲವು ಸದಸ್ಯರುಗಳನ್ನು ಹಿಡಿದುತಂದ. ಎಲ್ಲರೂ ಸೇರಿ ಪಂಚಾಯತ್ ಅವ್ಯವಹಾರಗಳ ತನಿಖೆಯಾಗಬೇಕೆಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರುಕೊಟ್ಟರು. ಗ್ರಾಮ ಪಂಚಾಯತಿಯ ಸದಸ್ಯರು ಹೇಳಿದಾಕ್ಷಣ ತನಿಖೆ ನಡೆಸಲು ಬರುವುದಿಲ್ಲ, ನೀವು ನಿರ್ದಿಷ್ಟವಾದ ಪ್ರಕರಣಗಳಿದ್ದರೆ ತಿಳಿಸಿ, ಎಂದು ತಾಲ್ಲೂಕು ಪಂಚಾಯತಿಯ ಖಾವಂದರು ಅಪ್ಪಣೆ ಕೊಡಿಸಿದರು. ನಂತರ ಗ್ರಾಮದ ಹಲವರು ಹಿರಿಯರೂ ಸೇರಿ ಒತ್ತಡ ತಂದದ್ದರಿಂದ, ಇಡೀ ಪಂಚಾಯತ್ ತನಿಖೆ ಅವಸರದಲ್ಲಿ ಸಾಧ್ಯವಿಲ್ಲ, ಕೆಲವು ನಿರ್ದಿಷ್ಟ ಪ್ರಕರಣಗಳ ಬಗ್ಗೆ ಮಾತ್ರ ತನಿಖೆ ನಡೆಸುವುದೆಂದು ತೀರ್ಮಾನವಾಗಿ ಒಬ್ಬ ತನಿಖಾಧಿಕಾರಿಯನ್ನು ನೇಮಿಸಿದರು.

ದೂರಿನ ತನಿಖೆ ನಡೆಯುತ್ತಿರುವದು

ನಮ್ಮ ಗ್ರಾಮ ಪಂಚಾಯತ್ ದಟ್ಟ ಮಲೆನಾಡಿನ ಪ್ರದೇಶದಲ್ಲಿರುವುದರಿಂದ ಇಲ್ಲಿ ಮನೆಗಳನ್ನೂ ಮನುಷ್ಯರನ್ನೂ ಹುಡುಕಿಯೇ ಗುರುತಿಸಬೇಕಾಗುತ್ತದೆ. ಆದ್ದರಿಂದ ಕೊನೆಗೆ ಪಂಚಾಯತ್‌ನ ಒಂದು ಗ್ರಾಮದ, ಒಂದು ವಾರ್ಡನ ಹತ್ತು ಆಶ್ರಯ ಯೋಜನೆ ಮನೆಗಳ ಬಗ್ಗೆ ಹಾಗೂ ನಿರ್ಮಲಗ್ರಾಮ ಯೋಜನೆಯ ಐವತ್ತೊಂದು ಶೌಚಾಲಯಗಳ ಬಗ್ಗೆ ಮಾತ್ರ ತನಿಖೆ ನಡೆಯಿತು. ಇವೆಲ್ಲ ಕಾಮಗಾರಿ ಪೂರ್ಣಗೊಂಡ ಬಿಲ್ ಪಾವತಿಯಾದಂತಹವುಗಳು. ತನಿಖೆ ನಡೆದಾಗ ಐವತ್ತೊಂದು ಶೌಚಾಲಯಗಳ ಪೈಕಿ ಎರಡು ಮಾತ್ರ ಅಸ್ತಿತ್ವದಲ್ಲಿ ಇದ್ದವು! ಉಳಿದ ನಲುವತ್ತೊಂಬತ್ತು ಶೌಚಾಲಯಗಳು ದಾಖಲೆಗಳಲ್ಲಿ ಮಾತ್ರ ಇದ್ದವು. ಅಷ್ಟಕ್ಕೂ ಕೃತಕ ದಾಖಲೆ ಸೃಷ್ಟಿಲಾಗಿತ್ತು. ಕಾಫಿ ಪ್ಲಾಂಟರುಗಳ ಹೆಸರಿನಲ್ಲೂ ಶೌಚಾಲಯ ಮಂಜೂರಾಗಿ, ನಕಲಿ ಸಹಿ ಬಳಸಿ ಹಣ ಪಡೆಯಲಾಗಿದೆ. ಹತ್ತು ವರ್ಷದ ಹಿಂದೆ ಸತ್ತು ಹೋಗಿರುವ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ಸಹಿ ಮಾಡಿದ್ದಾರೆ! ಇನ್ನು ಆಶ್ರಯ ಯೋಜನೆಯ ಮನೆಗಳ ಪೈಕಿ ಹತ್ತನ್ನು ಮಾತ್ರ ಪರಿಶೀಲಿಸಿದರೆ ಹತ್ತೂ ಮನೆಗಳು ಇಲ್ಲವೇ ಇಲ್ಲ. ಒಂದೆರಡು ತಳಕಟ್ಟು ಮಾತ್ರ ಮಾಡಲಾಗಿದೆ. ದಾಖಲೆಯಲ್ಲಿ ಎಲ್ಲವೂ ಪೂರ್ಣಗೊಂಡು ಹಣ ಪಡೆಯಲಾಗಿದೆ.. ಸಿಕ್ಕಿದ ಒಂದಿಬ್ಬರು ಫಲಾನುಭವಿಗಳ ಸಹಿಯನ್ನೂ ನಕಲಿ ಮಾಡಲಾಗಿತ್ತು.

ಕೆಲವು ದಿನಗಳಿಂದ ಸರಿಯಾಗಿ ಕುಡಿಯಲು ನೀರಿಲ್ಲ. ನಲ್ಲಿಪೈಪುಗಳು ಕಿತ್ತುಹೋಗಿವೆ. ಪಂಚಾಯತ್ ಕಛೇರಿ ತಿಪ್ಪೆ ಗುಂಡಿಯಾಗಿದೆ. ಮೋಟಾರುಗಳು ಸುಟ್ಟು ಕುಳಿತಿವೆ. ಲಕ್ಷಾಂತರ ರೂ ರಿಪೇರಿ ಬಿಲ್ ಪಾವತಿಯಾಗಿದೆ. ಮನೆಯಿಲ್ಲದವರು ಪ್ಲಾಸ್ಟಿಕ್ ಗುಡಿಸಲಿನಲ್ಲೇ ಇದ್ದಾರೆ.

ಹಿಂದೆ ಗ್ರಾಮ ಪಂಚಾಯತಿಗೆ ಬರುತ್ತಿದ್ದ ಹಣ ಕಡಿಮೆಯಿತ್ತು. ಆದರೂ ಕೆಲವು ವರ್ಷಗಳಿಂದ ನಮ್ಮ ಪಂಚಾಯತ್ (ಅನೇಕ ಜಗಳಗಳಿದ್ದರೂ) ಒಳ್ಳೆಯ ಗ್ರಾಮ ಪಂಚಾಯತ್ ಎಂದು ಹೆಸರು ಗಳಿಸಿತ್ತು. ಈಗ ಜಗಳ ಕಡಿಮೆಯಾಗಿದೆ. ಹಣ ಹರಿದುಬಂದಿದೆ, ಬಂದ ಹಾಗೇ ಹರಿದು ಹೋಗಿದೆ. ಹಿರಿಯರ ಗಾದೆ ಮಾತು ನೆನಪಾಗುತ್ತಿದೆ: ಅಕ್ಕಿ ತಿನ್ನೋನ ಓಡ್ಸುದ್ರೆ ಭತ್ತ ತಿನ್ನೋನೆ ತಗಲಾಕ್ಕಂಡ.

ಅರ್ದಕ್ಕೇ ನಿಂತಿರುವ ಹೊಸ ಕಟ್ಟಡ (ಕಳಪೆ ಕಾಮಗಾರಿ)

ಈ ತನಿಖೆಯ ಫಲಶ್ರುತಿಯ ಬಗ್ಗೆಯೂ ಯಾರಿಗೂ ಅಂತಹ ಭರವಸೆಯೇನೂ ಇಲ್ಲ. ಈ ಹಿಂದೆ ಬಾವಿ ಕಾಣೆಯಾದ ಕತೆ ಕೇಳಿದ್ದೆವು ಇನ್ನು ಮುಂದೆ ಊರೇ ಕಾಣೆಯಾಗಬಹುದು. ಜನ ಟಿ.ವಿ ಮುಂದೆ ಕುಳಿತು ಅಣ್ಣಾಹಜಾರೆ-ಕೇಜ್ರಿವಾಲರ ಹೋರಾಟವನ್ನು ನೋಡಿ ಆನಂದಿಸುತ್ತಿದ್ದಾರೆ.

ಇಂದು ಒಂದು ಗ್ರಾಮಪಂಚಾಯತಿಯ ಕತೆಯಲ್ಲ — ನಿಜ ಸಂಗತಿ. ಎಲ್ಲ ಗ್ರಾಮಪಂಚಾಯತಿಗಳೂ ಹೆಚ್ಚೂ ಕಡಿಮೆ ಹೀಗೇ ಇವೆ.

ಅಸಹ್ಯ ಹುಟ್ಟಿಸುವ ಕ್ರಿಮಿಯಾಗಿ ರೂಪಾಂತರಗೊಂಡ ಗ್ರೆಗರ್ ಸಂಸ


-ಬಿ. ಶ್ರೀಪಾದ್ ಭಟ್


 

ಕೆಲವೊಮ್ಮೆ ಚರಿತ್ರೆ ತೆವಳುತ್ತದೆ, ಬಸವನ ಹುಳುವಿನ ಹಾಗೆ; ನಿಧಾನಕ್ಕೆ ಚಲಿಸುವ ಉಡದ ಹಾಗೆ. ಕೆಲವೊಮ್ಮೆ ಚರಿತ್ರೆ ಹಾರುತ್ತದೆ, ಹದ್ದಿನ ಹಾಗೆ. ಮಿಂಚಿನ ಹಾಗೆ ಕಣ್ಕುಕ್ಕಿ ಮಾಯವಾಗುತ್ತದೆ.  – ಡಿ.ಆರ್.ನಾಗರಾಜ್

ಯಾವುದೇ ಸಿದ್ಧಾಂತಗಳಿಲ್ಲದ, ಆದರ್ಶಗಳಿಲ್ಲದ, ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ, ಸಂಪೂರ್ಣವಾಗಿ ಫ್ಯೂಡಲ್ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ರಾಜಕಾರಣಿಯೊಬ್ಬ ಸರ್ಕಾರವೊಂದರ ಪ್ರಮುಖ ಖಾತೆಗಳಾದ ಗೃಹ ಇಲಾಖೆ ಮತ್ತು ಸಾರಿಗೆ ಇಲಾಖೆಯ ನೇತೃತ್ವ ವಹಿಸಿಕೊಂಡಾಗ ಹಾಗೂ ಇದಕ್ಕೆ ಗರಿ ಇಟ್ಟಂತೆ ಬೆಂಗಳೂರು ನಗರದ ಉಸ್ತುವಾರಿ ಮಂತ್ರಿಯ ಜವಾಬ್ದಾರಿ ದೊರೆತಾಗ ಆ ರಾಜ್ಯವು ಭೌತಿಕವಾಗಿಯೂ, ಸಾಂಸ್ಕೃತಿಕವಾಗಿಯೂ, ಬೌದ್ಧಿಕವಾಗಿಯೂ ಕೊಳೆತು ನಾರುತ್ತದೆ. ಇಂದಿನ ಕರ್ನಾಟಕ ಈ ಕೊಳೆತು ನಾರುವ ಸ್ಥಿತಿಗೆ ಜ್ವಲಂತ ಉದಾಹರಣೆ. ಸದರಿ ಗೃಹ ಮಂತ್ರಿಯ ಫ್ಯೂಡಲ್ ದಾಹವನ್ನು ತಣಿಸಲು ಉಪ ಮುಖ್ಯಮಂತ್ರಿಯ ಪಟ್ಟ ಬೇರೆ! ಇದಕ್ಕೆ ಪೂರಕವಾಗಿ ನಿಷ್ಕ್ರಿಯ ಮುಖ್ಯಮಂತ್ರಿ! ಈ ಸ್ವತಃ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಈ ಗೃಹ ಮಂತ್ರಿಗಳು ಪ್ರಮುಖವಾಗಿ ಹಾಗೂ ಇವರ ಸಚಿವ ಸಹೋದ್ಯೋಗಿಗಳು ಒಟ್ಟಾಗಿ ಇಡೀ ಕರ್ನಾಟಕ ರಾಜಕೀಯಕ್ಕೆ ಕೊಡುಕೊಳ್ಳುವಿಕೆಯ ಅನೈತಿಕ ಸಂಸ್ಕೃತಿಯ ಜಾಡ್ಯವನ್ನು ಅಂಟಿಸಿದ್ದಾರೆ. ಇವರಿಗೆ ಪೂರಕವಾಗಿಯೇ ವರ್ತಿಸುತ್ತಿರುವ ನಿಷ್ಕ್ರಿಯ ವಿರೋಧ ಪಕ್ಷಗಳ ಸಂಪೂರ್ಣ ದಿವಾಳಿತನ ಕಾಫ್ಕಾನ ಗ್ರೆಗರಿಯು ಬೆಳಗಾಗುವುದರೊಳಗೆ ಅಸಹ್ಯ ಹುಟ್ಟಿಸುವ ಕ್ರಿಮಿಯಂತೆ ರೂಪಾಂತರಗೊಂಡಂತೆ ಕರ್ನಾಟಕವನ್ನು ರೂಪಾಂತರಗೊಳಿಸಿದ್ದಾರೆ.

ಮಾತಿಗೊಮ್ಮೆ ತುರ್ತುಪರಿಸ್ಥಿಯ ದಿನಗಳ ದೌರ್ಜ್ಯನ್ಯವನ್ನು ನೆನಪಿಸುತ್ತ ತಾವು ಹುತಾತ್ಮರಂತೆ ಬಿಂಬಿಸಿಕೊಳ್ಳುತ್ತಿರುವ ಈ ಫ್ಯಾಸಿಸ್ಟ್ ಸಂಘಪರಿವಾರದವರು, ಇಂದಿನ ಬಿಜೆಪಿ ಪಕ್ಷ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಹೆಚ್ಚೂ ಕಡಿಮೆ ಆ ತುರ್ತುಪರಿಸ್ಥಿಯ ದಿನಗಳನ್ನು ನೆನಪಿಸುವಂತೆ ಅಟ್ಟಹಾಸದಿಂದ ವರ್ತಿಸಿ, ಪ್ರಜೆಯೊಬ್ಬನ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದ್ದರೆ, ಇವರನ್ನು ವಿರೋಧಿಸಿ ಮಹತ್ವದ ರಾಜಕೀಯ ಪ್ರಶ್ನೆಗಳನ್ನು ಎತ್ತದೆ ಮೂಕವಿಸ್ಮಿತರಾಗಿ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಅತ್ಯಂತ ಶ್ರದ್ಧೆಯಿಂದ ನಿಶ್ಚಲರಾಗಿ ಕುಳಿತಿರುವ ನಮ್ಮ ನಾಡಿನ ಬುದ್ಧಿಜೀವಿಗಳು ಮತ್ತು ಪ್ರಮುಖ ವಿರೋಧ ಪಕ್ಷಗಳು ಇವೆ. ಈ ಸಂದರ್ಭದಲ್ಲಿ ಈ ಎಲ್ಲರನ್ನೂ ಒಟ್ಟಾಗಿ ಏಕಾಂಗಿಯಾಗಿ ಎದುರಿಸುವಂತಹ ಅತ್ಯಂತ ಕಠಿಣ ಪರಿಸ್ಥಿತಿ ನಾಡಿನ ಪ್ರಜ್ಞಾವಂತರ ಮೇಲಿದೆ. ಡಿ.ಆರ್. ಹೇಳಿದ ಹಾಗೆ ಇಲ್ಲಿ ಚರಿತ್ರೆ ಹದ್ದಿನ ಹಾಗೆ ಕಣ್ಣು ಕುಕ್ಕಿ ಮಿಂಚಿನಂತೆ ಮಾಯವಾಗುತ್ತಿದೆ. ಆದರೆ ನಮ್ಮಲ್ಲಿ ಯಾವುದೇ ಸಿದ್ಧತೆಗಳಿಲ್ಲದೆ ಮೂಢರಂತೆ ಕುಳಿತಿರುವ ನಾವೆಲ್ಲ ಜಡತ್ವವನ್ನು ಕಳಚಿಕೊಳ್ಳದಿದ್ದರೆ ಈ ಅನಾಹುತಗಳ ಬಕಾಸುರನ ಚಕ್ರಕ್ಕೆ ಇಂದು ನವೀನ ಸೂರಂಜೆ ಬಲಿಯಾದರೆ ಮುಂದೆ ನಾವೆಲ್ಲ ಒಬ್ಬೊಬ್ಬರಾಗಿ ಕೈಕೋಳ ತೊಡಸಿಕೊಂಡು ನಿಲ್ಲಲೇಬೇಕಾಗುತ್ತದೆ. ಈ ಕೈ ಕೋಳ ತೊಡಿಸಲು ಸಂಘಪಾರಿವಾರ ಸರ್ಕಾರ ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಸಹ ಇದರಲ್ಲಿ ಸಮಾನಮನಸ್ಕರು.

ತೀರ ಹಿಂದೆ ಬೇಡ, ಈ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಸಹಭಾಗಿತ್ವದ ಸರ್ಕಾರದಲ್ಲಿ ಪ್ರಗತಿಪರರ ಗೆಳೆಯರೆಂದೇ ಪ್ರಸಿದ್ಧರಾಗಿದ್ದ ದಿವಂಗತ ಎಂ.ಪಿ. ಪ್ರಕಾಶರು ಗೃಹ ಮಂತ್ರಿಗಳಾಗಿದ್ದಾಗ ಇವರ ಅನೇಕ ಪ್ರಗತಿಪರ ಬುದ್ಧಿಜೀವಿಗಳು ಮತ್ತು ರೈತ ನಾಯಕರ ಮೇಲೆ ನಕ್ಸಲ್ ಬೆಂಬಲಿತರೆಂದು ಆರೋಪ ಪಟ್ಟಿಯನ್ನು ತಯಾರಿಸಲಾಗಿತ್ತು. ಆಗ ಪೋಲೀಸ್ ಅಧಿಕಾರಿಯಾಗಿದ್ದ ಶಂಕರ ಬಿದರಿಯವರಿಗೆ ಇಂದು ಮತ್ತೊಬ್ಬ ಪ್ರಗತಿಪರ ಸ್ವಾಮಿಗಳಿಂದ ಬಸವಶ್ರೀ ಪ್ರಶಸ್ತಿ ದೊರಕಿದೆ. ನಮ್ಮೆಲ್ಲರ ಗ್ರಹಿಕೆಗಳಿಗೆ ಸುಲಭವಾಗಿ ದಕ್ಕದ ಇಂತಹ ಸಂಕೀರ್ಣತೆಯ ಸ್ವರೂಪವನ್ನು ನಾವೆಲ್ಲ ಸರಳವಾಗಿಯೇ ಬಗೆಹರಿಸಿಕೊಳ್ಳುಬೇಕಾಗಿದೆ. ಇಲ್ಲಿ ನಾವು ಯಾರೊಂದಿಗೆ ಗುರುತಿಸಿಕೊಳ್ಳಬೇಕೆಂಬುವ ಪ್ರಶ್ನೆಯನ್ನೇ ಕೈ ಬಿಟ್ಟು ಸಮಾನಮನಸ್ಕರೆಲ್ಲ ಒಟ್ಟಾಗಿ ಸಂಘಟಿತರಾಗಬೇಕಾಗಿದೆ. ಇದಕ್ಕೆ ಒಂದು ವಿಶಾಲವಾದ ತಾತ್ವಿಕ ನೆಲೆಯನ್ನು ಕಂಡುಕೊಳ್ಳಲೇಬೇಕು. ಇಲ್ಲಿ ನಮ್ಮನ್ನೆಲ್ಲ ಮುನ್ನಡೆಸುವ ನಾಯಕನಿಗಾಗಿ ಕಾಯುತ್ತ ಕೂರುವ ದರ್ದಂತೂ ಇಲ್ಲವೇ ಇಲ್ಲ. ಏಕೆಂದರೆ ಡಿ.ಆರ್. ಉಲ್ಲೇಖಿಸಿದ ಹಾಗೆ ಬ್ರೆಕ್ಟ್ ಹೇಳುತ್ತಾನೆ: ” ನಾಯಕನಿಗಾಗಿ ಕಾಯುವ ನಾಡಿಗೆ ದುರಂತ ಖಾತ್ರಿ.”

ಡಿ.ಆರ್. ಮುಂದುವರೆಯುತ್ತ, “ನಾಯಕನಿಗಾಗಿ ಕಾದು ಕಾದು ಹಂಬಲಿಸಿ ಕಡೆಗೆ ಹಿಟ್ಲರ್‌ನಂತಹ ಪಿಶಾಚಿಯನ್ನು ಆ ನಾಡು ಪಡೆಯಿತು. ಸಮಾಜದ ಉಳಿದೆಲ್ಲ ಅಂಗಗಳಿಗೆ ಲಕ್ವ ಹೊಡೆದ ಸ್ಥಿತಿಯಲ್ಲಿ ಮಾತ್ರ ನಾಯಕನೊಬ್ಬ ಹುಟ್ಟುತ್ತಾನೆ ಎಂದು ಜರ್ಮನಿ ಸಾಬೀತುಗೊಳಿಸಿತು,” ಎಂದು ಹೇಳುತ್ತಾರೆ. ಇಂದು ಕರ್ನಾಟಕದಲ್ಲಿ ಎಷ್ಟೊಂದು ಪಿಶಾಚಿಗಳು!! ಎಣಿಕೆಗೂ ಸಿಗದಷ್ಟು! ಮಾನಸಿಕ ನೈತಿಕತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳದಷ್ಟು ನಾವೆಲ್ಲ ಸೋತು ಹೋದೆವೇ ಎಂದು ಮರುಗುತ್ತ ಕೂಡಲಾಗದು. ನಮ್ಮ ಆದರ್ಶಗಳು ಪ್ರದರ್ಶನಪ್ರಿಯತೆಯ ಲಕ್ಷಣವನ್ನು ಪಡೆದುಕೊಳ್ಳದಂತೆ ಎಚ್ಚರವಹಿಸಿಕೊಳ್ಳಬೇಕಾಗಿರುವುದು ನಮ್ಮ ಮುಂದಿರುವ ಮೊದಲ ಪಾಠ. ವಿತಂಡವಾದಗಳನ್ನು ಕೈಬಿಡುವುದು ನಾವು ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರ. ನಮ್ಮ ಮಾತುಗಳು ಬೈಗುಳ ರೂಪವನ್ನು ಪಡೆದುಕೊಳ್ಳದೆ ವಿನಯವಾಗಿಯೇ, ಪ್ರಾಮಾಣಿಕವಾಗಿಯೇ ಪಿತೃಹತ್ಯೆಯ ಮಾರ್ಗಗಳನ್ನು ನಮ್ಮದಾಗಿಸಿಕೊಳ್ಳಬೇಕು. ಕಡೆಗೆ ವ್ಯಕ್ತಿಗತವಾದ ಆದರ್ಶಗಳನ್ನು ಕಡು ಪ್ರಾಮಾಣಿಕತೆಯಿಂದ ಸಾಮಾಜೀಕರಣಗೊಳಿಸುಕೊಳ್ಳುವುದೇ ಈಗ ಉಳಿದಿರುವ ಬಿಡುಗಡೆಯ ಮಾರ್ಗ.

ಇದನ್ನು ನಾವು ಸೃಷ್ಟಿಸಿಕೊಳ್ಳಲಾಗುವುದಿಲ್ಲ. ಏಕೆಂದರೆ ಇದು ನಮ್ಮ ಮುಂದೆಯೇ ಇದೆ. ನಮ್ಮ ನೋಡುವ ಕಣ್ಣುಗಳು ಬದಲಾಗಬೇಕಷ್ಟೆ. ಮಾನವೀಯ ಒಳನೋಟಗಳು ನಿರಂತರವಾಗಿ ಪೊರೆಯತ್ತಿದ್ದರೆ ಹಿಂದೆ ಮಲೆಕುಡಿಯ ವಿಠ್ಠಲ, ಇಂದು ನವೀನ್ ಸೂರಂಜೆ, ಮುಂದೆ ನಮ್ಮಲ್ಲೊಬ್ಬರು ಎಂಬಂತಹ ಪ್ರಶ್ನೆಗೆ ದಾರಿಗಳೂ ಸ್ಪಷ್ಟವಾಗತೊಡಗುತ್ತವೆ. ಬಲು ದೂರವಾದ ಕತ್ತಲ ದಾರಿಯನ್ನು ಮೊಟುಕೊಗೊಳಿಸುವುದೂ ನಮ್ಮ ಕೈಯಲ್ಲಿದೆ. ಏಕೆಂದರೆ ನಮ್ಮಲ್ಲಿ ಅಸಂಖ್ಯಾತ ಮಿಂಚು ಹುಳುಗಳಿವೆ.

ರಾಜ್ಯೋತ್ಸವ ಪ್ರಶಸ್ತಿ ಮತ್ತು ಆಯ್ಕೆಯ ಮಾನದಂಡ


-ಚಿದಂಬರ ಬೈಕಂಪಾಡಿ


 

ಕನ್ನಡ ರಾಜ್ಯೋತ್ಸವ ಆಚರಣೆಯ ಸಂಭ್ರಮ ಮುಗಿಯಿತು. ಮತ್ತೆ ಮುಂದಿನ ವರ್ಷ ನವೆಂಬರ್ 1 ರಂದು ಸಂಭ್ರಮ, ಅಲ್ಲಿಯ ತನಕ ಕಾಯುತ್ತಿರಬೇಕು. ಆದರೆ ಅಲ್ಲಲ್ಲಿ ಕನ್ನಡದ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದು ಕನ್ನಡ ಅಭಿಮಾನಿಗಳ ಕಾಯಕ. ರಾಜ್ಯ ಸರ್ಕಾರ ಆಯೋಜಿಸುವ ಕನ್ನಡ ರಾಜ್ಯೋತ್ಸವದ ಬಗ್ಗೆ ಯಾರಿಗೆ ಅದೆಷ್ಟು ಉತ್ಸಾಹವಿದೆಯೋ ಗೊತ್ತಿಲ್ಲ, ಆದರೆ ರಾಜ್ಯೋತ್ಸವದ ಸಂದರ್ಭದಲ್ಲಿ ಕೊಡುವ ಪ್ರಶಸ್ತಿಗಳ ಬಗ್ಗೆ ಮಾತ್ರ ಅಪರಿಮಿತವಾದ ಉತ್ಸಾಹವಿರುವುದನ್ನು ಯಾರೂ ನಿರಾಕರಿಸುವಂತಿಲ್ಲ. ಜೀವಮಾನದಲ್ಲಿ ಈ ಪ್ರಶಸ್ತಿಯನ್ನು ಪಡೆಯಲೇಬೇಕು ಎನ್ನುವ ಹಠ ಪ್ರಶಸ್ತಿಗೆ ಅರ್ಹರಾದವರಿಗಿಂತಲೂ ಪ್ರಶಸ್ತಿಗಾಗಿಯೇ ಅರ್ಹತೆಯನ್ನು ದಾಖಲೆಗಳ ಮೂಲಕ ಸಾಬೀತು ಮಾಡುವ ಉತ್ಸಾಹಿಗಳಿಗಿರುತ್ತದೆ. ನೂರಾರು ಪುಟಗಳಷ್ಟು ತಮ್ಮ ಬಗ್ಗೆ ಬರೆಯಲಾದ, ಬರೆಸಲ್ಪಟ್ಟ ಪತ್ರಿಕೆಯ ತುಣುಕುಗಳ ಜೆರಾಕ್ಸ್ ಕಡತ, ಫೋಟೋಗಳು, ಶಿಫಾರಸುಗಳ ಜೆರಾಕ್ಸ್‌ಗಳನ್ನು ಪುಸ್ತಕದ ರೂಪದಲ್ಲಿ ಬೈಂಡಿಂಗ್ ಮಾಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿ, ರಾಜ್ಯ ಕಚೇರಿ, ಶಾಸಕರು, ಮಂತ್ರಿಗಳು, ಅವರಿಗೆ ತೀರಾ ಪರಿಚಿತ ಪ್ರಭಾವಿಗಳ ಮೂಲಕ ರವಾನಿಸಿ ತಮ್ಮ ಹೆಸರು ಪ್ರಶಸ್ತಿಗೆ ಅಂತಿಮಗೊಳ್ಳುವ ಸುದ್ದಿ ತಿಳಿಯಲು ಹಗಲು ರಾತ್ರಿ ಕಾಯುತ್ತಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಹೇಳಿಕೆಯನ್ನು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳುತ್ತಾರೆ. ಇಲಾಖೆಯಿಂದ ದೂರವಾಣಿ ಕರೆ ಬರಬಹುದೆಂದು ಕಾಯುತ್ತಾರೆ. ಅಂತಿಮವಾಗಿ ಪ್ರಶಸ್ತಿ ಬರದಿದ್ದಾಗ ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ಮುಂದಿನ ವರ್ಷಕ್ಕೆ ಮತ್ತಷ್ಟು ಹೆಚ್ಚುವರಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುತ್ತಾರೆ. ಹೀಗೆ ಮರಳಿ ಯತ್ನವ ಮಾಡಿ ಅನೇಕ ಜನ ಫಲಕಂಡಿದ್ದಾರೆ ಎನುವುದರಲ್ಲಿ ಯಾವ ಅನುಮಾನವೂ ಬೇಡ. ಆದ್ದರಿಂದಲೇ ಪ್ರಶಸ್ತಿಗೆ ಅರ್ಹರಾದವರು ಸರ್ಕಾರದ ಪಟ್ಟಿಯಲ್ಲಿ ಶೇ.10 ಆಗಿದ್ದರೆ ಪ್ರಭಾವ ಬೀರಿ, ವಶೀಲಿ ಮಾಡಿ ಶೇ.90ರಷ್ಟು ಮಂದಿ ಅರ್ಹರಾಗಿಬಿಡುತ್ತಾರೆ, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ, ಅದು ಅವರ ನಿಜವಾದ ಸಾಮರ್ಥ್ಯ, ಜೈ ಭುವನೇಶ್ವರಿ.

ಆದರೆ ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ನಾಡು-ನುಡಿಯ ಬಗ್ಗೆ ತಿಳುವಳಿಕೆ ಇದ್ದವರಿಗೆ ಅರ್ಹರನ್ನು ಗುರುತಿಸುವುದು ಕಷ್ಟವಾಗುವುದಿಲ್ಲ. ಉದಾಹರಣೆಗೆ ಈ ಸಾಲಿನಲ್ಲಿ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞ ಇಷ್ಟು ವರ್ಷಗಳಿಂದ ಪ್ರಶಸ್ತಿ ಆಯ್ಕೆ ಸಮಿತಿಯ ಕಣ್ಣುತಪ್ಪಿಸಿಕೊಂಡಿದ್ದವರು ಕೊನೆಗೂ ಸಿಕ್ಕಿಬಿದ್ದರು ಎನ್ನುವ ಸಂತೃಪ್ತಿಯಾಗುತ್ತದೆ. ಇಂಥ ಅನೇಕ ಮಂದಿ ಈ ವರ್ಷದ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದಾರೆ, ಅವರನ್ನು ಅಭಿನಂದಿಸಲೇಬೇಕು. ಸರ್ಕಾರದ ಆಯ್ಕೆ ಮಾರ್ಗದರ್ಶಿ ಸೂತ್ರವನ್ನು ಮೊದಲು ಸುಟ್ಟು ಹಾಕಬೇಕು. ಯಾಕೆಂದರೆ ಪ್ರಶಸ್ತಿ ಅವರ ಸಾಧನೆಯನ್ನು ಗುರುತಿಸಿಕೊಡುವಂಥದ್ದೇ ಹೊರತು ಜಾತಿ, ಭಾಷೆ, ಪ್ರಾದೇಶಿಕತೆಯನ್ನು ಆಧರಿಸಿ ಆಗಬಾರದು. ಪ್ರಶಸ್ತಿಗೂ ಮೀಸಲಾತಿ ಸೂತ್ರ ಜಾರಿಗೆ ತಂದರೆ ಅರ್ಹತೆ ಎನ್ನುವ ಮಾನದಂಡವನ್ನು ಕಸದಬುಟ್ಟಿಗೆ ಎಸೆಯಬೇಕಾಗುತ್ತದೆ. ಈಗ ಸರ್ಕಾರವೇ ಹೇಳಿರುವುದನ್ನು ಸರಿಯಾಗಿ ಕೇಳಿಸಿಕೊಂಡಿದ್ದರೆ ಜಿಲ್ಲೆ, ಪ್ರಾದೇಶಿಕತೆ ಮತ್ತು ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನುವ ನೀತಿಯೇ ಅಕ್ಷಮ್ಯ. ಇಂಥ ನೀತಿಯಿಂದಾಗಿಯೇ ಗಟ್ಟಿ ಕಾಳಿನ ಜೊತೆ ಅನಿವಾರ್ಯವಾಗಿ ಜೊಳ್ಳು ಸೇರಿಕೊಂಡುಬಿಡುತ್ತವೆ.

ಅರ್ಜಿ ಹಾಕದವರನ್ನೂ ಪ್ರಶಸ್ತಿಗೆ ಆಯ್ಕೆಮಾಡುವ ಸರ್ಕಾರದ ಕ್ರಮವನ್ನು ಮೆಚ್ಚಲೇ ಬೇಕು. ಮೊಟ್ಟಮೊದಲು ಪ್ರಶಸ್ತಿಗೆ ಅರ್ಜಿ ಹಾಕುವ ಪದ್ಧತಿಯನ್ನೇ ರದ್ಧುಮಾಡುವುದು ಸೂಕ್ತ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಪ್ರಶಸ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕಾಯಕ ಮಾಡುವುದಿಲ್ಲ. ಪ್ರವೃತ್ತಿಯಾಗಿ, ವೃತ್ತಿಯಾಗಿ, ವಂಶಪಾರಂಪರ್‍ಯವಾಗಿ ಮಾಡುತ್ತಾರೆ. ಇಂಥವರು ಅರ್ಜಿ ಹಾಕಿ ಪ್ರಶಸ್ತಿಯ ಭಿಕ್ಷೆ ಕೇಳುವಂಥ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಬಾರದು. ಅಕಾಡೆಮಿಗಳು ಈ ನಾಡಿನ ಕಲೆ, ಸಂಸ್ಕೃತಿ, ಭಾಷೆ, ಪರಂಪರೆಯನ್ನು ಪ್ರತಿನಿಧಿಸುವಂಥವು. ಇವುಗಳ ಅಧ್ಯಕ್ಷರುಗಳು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿರುತ್ತಾರೆ. ತಮ್ಮ ವ್ಯಾಪ್ತಿಯಲ್ಲಿರುವ ಅರ್ಹರನ್ನು ಆಯ್ಕೆ ಮಾಡುವುದು ಅವರಿಗೆ ಕಷ್ಟವೇನೂ ಆಗದು. ಇದು ನಿಜವಾದ ಸಾಧಕರನ್ನು ಗುರುತಿಸಲು ಸೂಕ್ತ ಮಾನದಂಡವಾಗುತ್ತದೆ.

ಅರ್ಜಿ ಹಾಕಿಸುವುದೆಂದರೆ ಪ್ರಶಸ್ತಿಯನ್ನು ಒಲಿಸಿಕೊಳ್ಳಲು ಮಾಡುವ ಕಸರತ್ತು ಮತ್ತೊಂದು ಅರ್ಥದಲ್ಲಿ ಭಿಕ್ಷೆ ಕೇಳುವುದಕ್ಕೆ ಸಮನಾದುದು. ಜಾತಿ, ಧರ್ಮ, ಭಾಷೆ, ವರ್ಣಗಳ ಮಾರ್ಗಸೂಚಿಯ ಮೂಲಕ ಅರ್ಹತೆಯನ್ನು ಅಳೆಯುವುದು ಅರ್ಹತೆಗೇ ಅವಮಾನ. ಇಂಥ ಅವಮಾನ ಮಾಡಿಸಿಕೊಂಡು ಪ್ರಶಸ್ತಿ ಸ್ವೀಕರಿಸಬೇಕೇ ಎನ್ನುವ ಪ್ರಶ್ನೆ.

ನಿಜವಾದ ಅರ್ಹರು ಹೇಗೆ ಪ್ರಶಸ್ತಿ ವಂಚಿತರಾಗುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಅನಕ್ಷರಸ್ಥ, ತುತ್ತು ಕೂಳಿಗಾಗಿ ನಿತ್ಯವೂ ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ತಿರುಗಾಡಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಾನೆ. ಒಂದು ದಿನ ಹಣ್ಣು ಮಾರಲು ಹೋಗದಿದ್ದರೆ ಅವನ ಮನೆಯವರಿಗೆ ಉಪವಾಸ. ಇಂಥ ಸ್ಥಿತಿಯಲ್ಲಿದ್ದರೂ ತನ್ನ ಹಳ್ಳಿಯ ಮಕ್ಕಳಿಗೆ ಓದು ಬರಹ ಕಲಿಯಲು ಶಾಲೆ ಬೇಕೆನ್ನುವ ಕನಸು ಕಾಣುತ್ತಾನೆ. ತಾನು ನಿತ್ಯವೂ ಕಿತ್ತಳೆ ಹಣ್ಣು ಮಾರಿ ಬಂದ ಹಣದಲ್ಲಿ ಒಂದಂಶವನ್ನು ಕೂಡಿಟ್ಟು ಶಾಲೆ ತೆರೆಯಲು ಬಾಡಿಗೆ ಕಟ್ಟಡ ಪಡೆಯುತ್ತಾನೆ. ಅಲ್ಲೇ ಸ್ಥಳೀಯ ಮಕ್ಕಳಿಗೆ ಪುಟ್ಟ ಶಾಲೆ ಆರಂಭಿಸುತ್ತಾನೆ. ಸರ್ಕಾರದ ಕಚೇರಿಗಳಿಗೆ ಅಲೆದು ಅಲೆದು, ಅರ್ಜಿ ಹಾಕಿ ಕಾಡಿ ಬೇಡಿ ಶಾಲೆಗೆ ಮಂಜೂರಾತಿ ಪಡೆದುಕೊಳ್ಳುತ್ತಾನೆ. ಒಂದು, ಎರಡು, ಮೂರು, ಹೀಗೆ ಪ್ರಾಥಮಿಕ ಶಾಲೆ ತರಗತಿಗಳು ಆರಂಭವಾಗುತ್ತವೆ. ಇದು ಮಂಗಳೂರು ಸಮೀಪದ ಹರೇಕಳ ಎನ್ನುವ ಹಳ್ಳಿಯಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಹತ್ತಿರ. ಈ ಕೆಲಸ ಮಾಡಿದವರು ಹರೇಕಳ ಹಾಜಬ್ಬ ಎನ್ನುವ ಅನಕ್ಷರಸ್ಥ. ಈ ಅಕ್ಷರ ಯೋಗಿಯ ಬಗ್ಗೆ ಗುರುವಪ್ಪ ಎನ್ನುವ ಸ್ಥಳೀಯ ಪತ್ರಿಕೆಯ ವರದಿಗಾರ ಪುಟ್ಟ ಬರಹ ಬರೆದಿದ್ದರು.

2004ರಲ್ಲಿ ‘ಕನ್ನಡಪ್ರಭ’ ದಿನಪತ್ರಿಕೆ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ವರ್ಷದ ವ್ಯಕ್ತಿ ಎಂದು ಒಂದು ಲಕ್ಷ ರೂಪಾಯಿ ಬಹುಮಾನ ನೀಡುವ ಯೋಜನೆ ಪ್ರಕಟಿಸಿತ್ತು. ಆಗ ಆ ಪತ್ರಿಕೆಯ ಪ್ರಧಾನ ವರದಿಗಾರನಾಗಿದ್ದ ನಾನು ಹರೇಕಳ ಹಾಜಬ್ಬ ಅವರನ್ನು ಸಾಧಕನೆಂದು ಗುರುತಿಸಿ ಟಿಪ್ಪಣಿಯೊಂದಿಗೆ ಆಯ್ಕೆಸಮಿತಿಗೆ ಕಳುಹಿಸಿದ್ದೆ. ಹಾಜಬ್ಬರ ಅರ್ಹತೆಯನ್ನು ಸಮಿತಿ ಗುರುತಿಸಿ 2004ರ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿತು. ಅಂದು ನಾಡಿನಾದ್ಯಂತ ಹಾಜಬ್ಬ ಸುದ್ದಿಯಾಗಿಬಿಟ್ಟರು. ಈ ಪ್ರಶಸ್ತಿಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಸಹಿತ ಯಾವುದೇ ಅಧಿಕಾರಿಗಳ, ಬ್ಯಾಂಕ್ ಅಧ್ಯಕ್ಷರುಗಳ ಕಚೇರಿಯ ಬಾಗಿಲು ಹಾಜಬ್ಬ ಅವರ ಪಾಲಿಗೆ ಮುಕ್ತವಾಯಿತು. ಯಾವುದೇ ಪೂರ್ವಾನುಮತಿಯಿಲ್ಲದೆ ಭೇಟಿ ಮಾಡುವ ಅವಕಾಶವನ್ನು ತಂದುಕೊಟ್ಟಿತು. ಅಂದಿನ ರಾಜ್ಯಪಾಲರು ಹಾಜಬ್ಬ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಸತ್ಕರಿಸಿ ಕಳುಹಿಸಿದರು. ಮುಂದೆ ಈ ಹಾಜಬ್ಬ ಅವರನ್ನು ಹಳ್ಳಿಯ ಸುತ್ತಮುತ್ತಲಿನ ಜನ ತಮ್ಮ ಸಮುದಾಯದ ಸಾಧಕನೆಂದು ಹೆಮ್ಮೆಪಟ್ಟುಕೊಂಡರು. ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಯಿತು. ದಾನಿಗಳ ಮಹಾಪೂರವೇ ಹರಿದು ಬಂತು. ಸಿಎನ್‌ಎನ್ ಐಬಿಎನ್ ಅನಕ್ಷರಸ್ಥ ಹಾಜಬ್ಬರನ್ನು ವಿಮಾನದಲ್ಲಿ ಕರೆಸಿಕೊಂಡು ಐದು ಲಕ್ಷ ರೂಪಾಯಿ ಸಹಿತ ಪ್ರಶಸ್ತಿ ನೀಡಿ ಗೌರವಿಸಿತು. ‘ಕನ್ನಡಪ್ರಭ’ ಪತ್ರಿಕೆಯ ನಗದು ಹಣವನ್ನು ಬ್ಯಾಂಕಿನಲ್ಲಿ ಠೆವಣಿ ಇಡಬೇಕು, ನಿಮ್ಮ ಮಗಳ ಮದುವೆಗೆ ಖರ್ಚು ಮಾಡಲು ಬೇಕಾಗುತ್ತದೆ ಎಂದು ಸಲಹೆ ಕೊಟ್ಟಿದ್ದೆ, ಹಾಗೇಯೇ ಮಾಡಿದ್ದರು.

ಅವರನ್ನು ‘ಕನ್ನಡಪ್ರಭ’ ಪ್ರಶಸ್ತಿಗೆ ಆಯ್ಕೆ ಮಾಡಲು ಕಾರಣವಾದ ನನ್ನನ್ನು ನನ್ನ ಮನೆಗೆ ಬಂದು ಬೇಡವೆಂದರೂ ಕೇಳದೆ ಹಠಕ್ಕೆ ನಿಂತು ಒಂದು ವಾರ ತಿಂದರೂ ಮುಗಿಯದಷ್ಟು ಕಿತ್ತಳೆ ಹಣ್ಣು ಕೊಟ್ಟು ಅವರು ಹೇಳಿದ ಮಾತು: ‘ದೇವರು ನಿಮ್ಮನ್ನು ಸುಖ, ಸಂಪತ್ತು ಕೊಟ್ಟು ಸುಖವಾಗಿರಿಸಲಿ. ನನ್ನಂಥ ಬಡವನನ್ನು ಇಷ್ಟು ದೊಡ್ಡ ಜನ ಮಾಡಿಸಿದಿರಿ…’ ಹೀಗೆ ಹೇಳಿ ಕೈಮುಗಿದು ಹೋದರು.

ಈ ಅನಕ್ಷರಸ್ಥ ಹಾಜಬ್ಬ ಈಗ ಕುವೆಂಪು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲಿ ಪಾಠವಾಗಿದ್ದಾರೆ. ಆದರೆ ಹಾಜಬ್ಬ ಅವರ ಈ ಸಾಧನೆ, ಅವರ ಶಿಕ್ಷಣ ಪ್ರೇಮ ಕರ್ನಾಟಕ ಸರ್ಕಾರ ಅರ್ಹರನ್ನು ಹುಡುಕಿಕೊಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮಾತ್ರ ಸುಳಿದಿಲ್ಲ. ಸರ್ಕಾರದ ಪ್ರಶಸ್ತಿ ನೀಡುವ ಕ್ಷೇತ್ರಗಳಲ್ಲಿರುವ ಶಿಕ್ಷಣ ಕ್ಷೇತ್ರಕ್ಕೆ ಹಾಜಬ್ಬ ಅರ್ಹರು ಅನಿಸಿಲ್ಲ ಯಾಕೆ? ಉತ್ತರ ಅತ್ಯಂತ ಸರಳ ಅವರು ಹಳ್ಳಿಯ ಮಕ್ಕಳಿಗೆ ವಿದ್ಯೆ ಕಲಿಯಲು ಶಾಲೆ ಬೇಕೆಂದು ಅರ್ಜಿ ಹಾಕಿದ್ದರು ಹೊರತು ನಾನು ಶಾಲೆ ಮಾಡಲು ಶ್ರಮಪಟ್ಟಿದ್ದೇನೆ, ನನಗೆ ಪ್ರಶಸ್ತಿ ಕೊಡಿ ಎಂದೇನೂ ಅರ್ಜಿ ಹಾಕಿಲ್ಲವಲ್ಲಾ?

ಈಗ ತೀರ್ಮಾನ ನೀವು ಕೊಡಿ, ಹಾಜಬ್ಬ ಅವರಂಥ ಶಿಕ್ಷಣ ಪ್ರೇಮಿ ಪ್ರಶಸ್ತಿಗೆ ಅರ್ಹರಲ್ಲವೇ?