Monthly Archives: October 2012

ರಾಹುಲ್ ಗಾಂಧಿ ಭವಿಷ್ಯದ ನಾಯಕರಾಬಗಲ್ಲರೇ?

– ಆನಂದ ಪ್ರಸಾದ್

ಕಾಂಗ್ರೆಸ್ ಪಕ್ಷವು ಭವಿಷ್ಯದ ನಾಯಕನಿಗಾಗಿ ರಾಹುಲ್ ಗಾಂಧಿಯೆಡೆಗೆ ಕಳೆದ ಕೆಲವು ವರ್ಷಗಳಿಂದ ನೋಡುತ್ತಿದೆ.  ಆದರೆ ರಾಹುಲ್ ಗಾಂಧಿ ನಾಯಕನಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿರುವುದು ಕಂಡುಬರುತ್ತಿಲ್ಲ.  42 ವರ್ಷ ವಯಸ್ಸಿನ ರಾಹುಲರಲ್ಲಿ ನಾಯಕತ್ವದ ಲಕ್ಷಣಗಳು ಇದ್ದಲ್ಲಿ ಈಗಾಗಲೇ ಕಂಡು ಬರಬೇಕಾಗಿತ್ತು.  ಕೇವಲ ವಂಶ ಪಾರಂಪರ್ಯದಿಂದ ನಾಯಕತ್ವದ ಲಕ್ಷಣಗಳು ಬರಲಾರವು.  ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸೊತ್ತಿಗೆಯಂತೆ ವಂಶ ಪಾರಂಪರ್ಯವಾಗಿ ನಾಯಕತ್ವದ ಪಟ್ಟ ಸಿಗಲಾರದು.  ಅದು ಸಿಕ್ಕುವುದಿದ್ದರೆ ಈಗಾಗಲೇ ಕಾಂಗ್ರೆಸ್ ಪಕ್ಷವು ತನ್ನ ಸ್ವಂತ ಬಲದಿಂದಲೇ ಸರಕಾರ ರಚಿಸುವ ಮಟ್ಟಕ್ಕೆ ಬರಬೇಕಾಗಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ಒಂದು ಕುಟುಂಬಕ್ಕೆ ನಿಷ್ಠೆ ತೋರುವ ಪರಂಪರೆ ಸ್ವಾತಂತ್ರ್ಯಾನಂತರದ ಕಾಲದಲ್ಲಿ ನಡೆದುಕೊಂಡು ಬಂದಿದೆ.  ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು ನೆಹರೂ ಕುಟುಂಬದ ಸದಸ್ಯರೇ ಆಗಿದ್ದಾರೆ.  ಇಂದಿರಾ ಕಾಂಗ್ರೆಸ್ ರಚನೆಯಾದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಹಾಗೂ ಅವರ ಮಕ್ಕಳ ಮಾತೇ ಅಂತಿಮ ಎಂಬ ಪರಂಪರೆ ಇದೆ.  ಇಂಥ ಅನುಕೂಲ ಸನ್ನಿವೇಶ ಇದ್ದರೂ ಕಾಂಗ್ರೆಸ್ ಪಕ್ಷವು ದೇಶವನ್ನು ಸಮರ್ಪಕವಾಗಿ ಕಟ್ಟುವಲ್ಲಿ ಸೋತಿದೆ.  ದೇಶದ ಪ್ರಧಾನ ಸಮಸ್ಯೆಗಳ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡರೆ ಅದನ್ನು ವಿರೋಧಿಸುವ ಧ್ವನಿ ಕಾಂಗ್ರೆಸ್ ಪಕ್ಷದಲ್ಲಿ ಏಳದಂಥ ವಾತಾವರಣ ಇದ್ದಾಗ್ಯೂ ಇಂದಿರಾ ಗಾಂಧಿಯಾಗಲೀ, ರಾಜೀವ ಗಾಂಧಿಯಾಗಲೀ, ಸೋನಿಯಾ ಗಾಂಧಿಯಾಗಲೀ ದಿಟ್ಟ ನಿಲುವನ್ನು ತೆಗೆದುಕೊಳ್ಳಲಿಲ್ಲ.  ಭ್ರಷ್ಟಾಚಾರ ದೇಶದ ಪ್ರಧಾನ ಸಮಸ್ಯೆಯಾಗಿದ್ದರೂ ಅದನ್ನು ಹಗುರವಾಗಿ ಕಂಡವರು ಇಂದಿರಾ ಗಾಂಧಿ.  ಭ್ರಷ್ಟಾಚಾರವನ್ನು ಗಂಭೀರವಾಗಿ ತೆಗೆದುಕೊಂಡು ಅದರ ನಿಯಂತ್ರಣಕ್ಕೆ ಲೋಕಪಾಲದಂಥ ಬಲಿಷ್ಠ ವ್ಯವಸ್ಥೆಯನ್ನು ರೂಪಿಸುವುದು ಇಂದಿರಾ ಗಾಂಧಿಗಾಗಲೀ, ರಾಜೀವ ಗಾಂಧಿಗಾಗಲೀ ಅಸಂಭಾವ್ಯವೇನೂ ಆಗಿರಲಿಲ್ಲ.  ದೇಶದ ಬಗ್ಗೆ ಸಮರ್ಪಕ ಮುನ್ನೋಟ ಅವರಲ್ಲಿ ಇರಲಿಲ್ಲ.  ಇದ್ದಿದ್ದರೆ ಇದನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕಾಗಿತ್ತು.  ರಾಜೀವ ಗಾಂಧಿಯವರಂತೂ ಇಂದಿರಾ ಹತ್ಯೆಯ ನಂತರ ನಡೆದ ಚುನಾವಣೆಗಳಲ್ಲಿ 2/3 ಬಹುಮತ ಪಡೆದಿದ್ದು ಲೋಕಪಾಲ ವ್ಯವಸ್ಥೆಯನ್ನು ಸಂಸತ್ತಿನಲ್ಲಿ ಪಾಸು ಮಾಡಿಸಿಕೊಳ್ಳುವ ಸುವರ್ಣಾವಕಾಶ ಇತ್ತು.  ಓರ್ವ ಉತ್ತಮ ನಾಯಕ ಇಂಥ ಬಹುಮತ ಇದ್ದಿದ್ದರೆ ಮೊದಲು ಮಾಡಬೇಕಾದ ಕೆಲಸ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಲಿಷ್ಠ ಲೋಕಪಾಲ ವ್ಯವಸ್ಥೆ ರೂಪಿಸುವುದು.  ಹೀಗಾಗಿ ರಾಜೀವರು ಓರ್ವ ಮುತ್ಸದ್ಧಿ ನಾಯಕರಾಗಿರಲಿಲ್ಲ ಎಂಬುದು ಕಂಡುಬರುತ್ತದೆ.  ಶ್ರೀಲಂಕಾದ ಆಂತರಿಕ ಸಮಸ್ಯೆಯಲ್ಲಿ ಮೂಗು ತೋರಿಸಿದ್ದು ರಾಜೀವ ಗಾಂಧಿಯವರು ಮಾಡಿದ ಇನ್ನೊಂದು ದೊಡ್ಡ ತಪ್ಪು.  ಈ ತಪ್ಪು ಅಂತಿಮವಾಗಿ ಅವರ ಪ್ರಾಣವನ್ನೇ ಬಲಿ ತೆಗೆದುಕೊಂಡಿತು.  ಇಂಥದೇ ತಪ್ಪನ್ನು ಇಂದಿರಾಗಾಂಧಿಯವರು ಭಿಂದ್ರನ್ವಾಲೆಯಂಥವರನ್ನು ಬೆಳೆಸುವಲ್ಲಿಯೂ ಮಾಡಿ ಅದು ಕೂಡ ಅವರ ಬಲಿ ಪಡೆಯುವಲ್ಲಿಗೆ ಮುಟ್ಟಿತು.

ಓರ್ವ ಮುತ್ಸದ್ಧಿ ನಾಯಕನು ತಾನೇ ಪರಿಸ್ಥಿತಿಯ ಅವಲೋಕನ ಮಾಡಿ ಸ್ವತಂತ್ರವಾಗಿ ಚಿಂತಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವವನಾಗಿರುತ್ತಾನೆ.  ಸೋನಿಯಾ ಗಾಂಧಿಯವರ ವಿಚಾರದಲ್ಲಿ ಇದು ಕಂಡು ಬರುತ್ತಿಲ್ಲ.  ತಮ್ಮ ರಾಜಕೀಯ ಕಾರ್ಯದರ್ಶಿಗಳು ಕೊಡುವ ಸಲಹೆಗಳ ಮೂಲಕ ತೀರ್ಮಾನಗಳನ್ನು ತೆಗೆದುಕೊಳ್ಳುವವರು ಓರ್ವ ಮುತ್ಸದ್ಧಿ ನಾಯಕನಾಗಲು ಸಾಧ್ಯವೇ ಇಲ್ಲ.  ಇದುವೇ ಕಾಂಗ್ರೆಸ್ ಪಕ್ಷದ ಇಂದಿನ ಹಾಗೂ ಹಿಂದಿನ ದೊಡ್ಡ ಸಮಸ್ಯೆಯಾಗಿದೆ.  ಕಾಂಗ್ರೆಸ್ ಪಕ್ಷವು ತನ್ನ ಹಿಂದಿನ ಜನಪ್ರಿಯತೆಯನ್ನು ಕಳೆದುಕೊಂಡಿದೆ.  ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರ ನಿರ್ಧಾರಗಳೇ ಕಾರಣವಾಗಿವೆ.  ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲಾಗದವರು ಪಕ್ಷವನ್ನು ಮುನ್ನಡೆಸುತ್ತಿರುವುದೇ ಇದಕ್ಕೆ ಕಾರಣ.  ರಾಹುಲಗಾಂಧಿಯವರ ನಡೆನುಡಿಗಳನ್ನು ನೋಡುವಾಗ ಅವರಿಗೆ ದೇಶವನ್ನು ಮುನ್ನಡೆಸುವ ಆಸಕ್ತಿಯಾಗಲೀ, ಮುನ್ನೋಟವಾಗಲೀ  ಇರುವಂತೆ ಕಾಣುವುದಿಲ್ಲ.  ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವೂ ಅವರಲ್ಲಿ ಇರುವಂತೆ ಕಾಣುವುದಿಲ್ಲ.  ಅಂಥ ಸಾಮರ್ಥ್ಯ ಇದ್ದಿದ್ದರೆ ಅದು 42 ವರ್ಷಗಳ ವಯಸ್ಸನ್ನು ತಲುಪಿರುವ ಅವರಲ್ಲಿ ಈಗಾಗಲೇ ಪ್ರಕಟವಾಗಬೇಕಾಗಿತ್ತು.  ರಾಜಕುಮಾರನಂತೆ ಇಂದು ಜನರೊಡನೆ ಬೆರೆಯದೆ, ಜನರ ಸಮಸ್ಯೆಗಳಿಗೆ ಕಿವಿಗೊಡದೆ, ಅವರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಬಂದು ಒಮ್ಮೆ ಮುಖ ತೋರಿಸಿ ಹೋಗುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ.  ಸಾಧ್ಯವಿದ್ದಿದ್ದರೆ ಕಾಂಗ್ರೆಸ್ ಬಹುಮತ ಪಡೆಯಬೇಕಾಗಿತ್ತು.

ದೇಶದ ಮುನ್ನಡೆಯ ಬಗ್ಗೆಯಾಗಲೀ, ದೇಶದ ಪ್ರಧಾನ ಸಮಸ್ಯೆಗಳ ನಿವಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯಾಗಲೀ ರಾಹುಲ ಗಾಂಧಿ ಎಲ್ಲೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಂಡುಬರುವುದಿಲ್ಲ.  ದೇಶವನ್ನು ಮುನ್ನಡೆಸುವ ಬಗ್ಗೆ ತನ್ನ ಕನಸುಗಳೇನು ಎಂಬ ಬಗ್ಗೆಯೂ ರಾಹುಲರು ಎಲ್ಲಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಂಡುಬರುವುದಿಲ್ಲ.  ಇಂದಿನ ಇಂಟರ್ನೆಟ್ ಯುಗದಲ್ಲಿ ದೇಶದ ಜನರ ಜೊತೆ ನೇರವಾಗಿ ಸಂಪರ್ಕ ಏರ್ಪಡಿಸಿಕೊಳ್ಳಲು, ಜನರ ಅಭಿಪ್ರಾಯ, ಅನಿಸಿಕೆ ಅರಿತುಕೊಳ್ಳಲು, ಅವರ ಸಲಹೆಸೂಚನೆ ಪಡೆದುಕೊಳ್ಳಲು ಒಂದು ವೆಬ್ಸೈಟ್ ಆಗಲೀ, ಟ್ವಿಟ್ಟರ್, ಫೇಸ್ಬುಕ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿಯಾಗಲೀ ರಾಹುಲ್ ಉಪಸ್ಥಿತಿ ಕಂಡುಬರುವುದಿಲ್ಲ.  ಇದನ್ನೆಲ್ಲಾ ನೋಡುವಾಗ ರಾಹುಲ್ ಗಾಂಧಿಗೆ ನಾಯಕನಾಗುವ, ದೇಶವನ್ನು ಮುನ್ನಡೆಸುವ ಇಚ್ಛೆ ಇಲ್ಲ. ಯಾರದೋ ಒತ್ತಾಯಕ್ಕೆ ಅವರು ರಾಜಕೀಯಕ್ಕೆ ಬಂದಂತೆ ಕಾಣುತ್ತದೆ.  ಹೀಗಾಗಿ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದೆ ಒತ್ತಾಯಕ್ಕೆ ರಾಜಕೀಯಕ್ಕೆ ಬರುವ ಬದಲು ಸುಮ್ಮನೆ ತನ್ನ ಪಾಡಿಗೆ ಇದ್ದು ಅರ್ಹರು ಯಾರಾದರೂ ಇದ್ದರೆ ಅವರನ್ನು ಪಕ್ಷವನ್ನು ಮುನ್ನಡೆಸಲು ಬಿಡುವುದು ಒಳ್ಳೆಯದು.  ಇದರಿಂದ ದೇಶಕ್ಕೆ ಮುಂದೆ ಒಳ್ಳೆಯದಾಗಬಹುದು.  ವಂಶ ಪಾರಂಪರ್ಯ ಆಡಳಿತ ಕಾಂಗ್ರೆಸ್ ಪಕ್ಷದಿಂದ ತೊಲಗಬಹುದು ಅಥವಾ ಕಾಂಗ್ರೆಸ್ ಪಕ್ಷವೇ ತುಂಡು ತುಂಡಾಗಿ ಬೇರೆ ಪ್ರಜಾಸತ್ತಾತ್ಮಕ ಪಕ್ಷಗಳು ಉದಯವಾಗಿ ದೇಶವು ತನ್ನ ಸಮಸ್ಯೆಗಳಿಂದ ಬಿಡಿಸಿಕೊಳ್ಳುವ ನಾಯಕತ್ವ ನೀಡುವ ಜನ ಬರಬಹುದು.  ಹೀಗಾಗಿ ದೇಶವನ್ನು ಮುತ್ಸದ್ಧಿತನದಿಂದ ಮುನ್ನಡೆಸುವ ಆಸಕ್ತಿ, ಅಭಿರುಚಿ, ವಿಶಾಲ ಮನೋಭಾವ, ಕನಸುಗಳು ಇಲ್ಲದಿದ್ದರೆ ರಾಹುಲಗಾಂಧಿಯವರು ರಾಜಕೀಯದಿಂದ ಹೊರಗೆ ನಿಂತರೆ ದೇಶಕ್ಕೆ ಒಳ್ಳೆಯದು.  ಒಂದು ವೇಳೆ ದೇಶವನ್ನು ಮುನ್ನಡೆಸುವ ನಿಜವಾದ ಆಸಕ್ತಿ, ಕನಸು, ವಿಶಾಲ ಮನೋಭಾವ ಇದ್ದರೆ ಅದನ್ನು ತೋರಿಸಲು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿ ದೇಶಕ್ಕೆ ಒಳಿತನ್ನು ಉಂಟುಮಾಡಬಲ್ಲ ಲೋಕಪಾಲ ಮಸೂದೆ, ಕಪ್ಪು ಹಣ ವಾಪಸಾತಿ, ಕಪ್ಪು ಹಣ ನಿಯಂತ್ರಣ, ರಾಜಕೀಯ ಹಸ್ತಕ್ಷೇಪವಿಲ್ಲದ ಸ್ವತಂತ್ರ ತನಿಖಾ ಸಂಸ್ಥೆ ರಚನೆ, ನ್ಯಾಯಾಂಗ ಹಾಗೂ ಚುನಾವಣಾ ಸುಧಾರಣೆಗಳ ಬಗ್ಗೆ ತನ್ನ ದೃಢ ನಿಲುವನ್ನು ತೋರಿಸುವ ಬದ್ಧತೆ ತೋರಿಸಬೇಕಾದ ಅಗತ್ಯ ಇದೆ.

ಉಲ್ಟಾ ಸ್ಟಿಂಗ್: ಬಯಲಾಯಿತು ಮಿಡಿಯಾ ಡೀಲ್!

– ಮೇಘನಾದ

ಕಾಂಗ್ರೆಸ್ ಸಂಸದ ಮತ್ತು ಉದ್ಯಮಿ ನವೀನ್ ಜಿಂದಾಲ್ ಝೀ ಸಮೂಹದ ಝೀ ನ್ಯೂಸ್ ಮತ್ತು ಝೀ ಬುಸಿನೆಸ್ ವಾಹಿನಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬರೋಬ್ಬರಿ ನೂರು ಕೋಟಿ ರೂಗಳ ವ್ಯವಹಾರವಿದು. ಕಲ್ಲಿದ್ದಲು ಅವ್ಯವಹಾರದಲ್ಲಿ ಆರೋಪಿ ಎಂದು ಬಿಂಬಿತವಾಗಿರುವ ಜಿಂದಾಲ್ ಕಂಪನಿಗಳ ವಿರುದ್ಧ ಸುದ್ದಿ ಪ್ರಸಾರ ಆಗುವುದನ್ನು ತಡೆಯಲು ಎರಡೂ ವಾಹಿನಿಗಳ ಮುಖ್ಯಸ್ಥರು ಉದ್ಯಮಿಯೊಂದಿಗೆ ವ್ಯವಹಾರ ಮಾತನಾಡುತ್ತಾರೆ. ವರ್ಷಕ್ಕೆ ಇಷ್ಟು ಎಂಬಂತೆ ನೂರು ಕೋಟಿಯಷ್ಟು ಜಾಹೀರಾತು ನೀಡುವುದಾದರೆ, ನಿಮ್ಮ ವಿರುದ್ಧ ಸುದ್ದಿಗಳ ಪ್ರಸಾರ ನಿಲ್ಲುತ್ತವೆ ಎಂಬಂತ ಡೀಲ್ ನ್ನು ಚಾನೆಲ್ ಮುಖ್ಯಸ್ಥರು ಮುಂದಿಡುತ್ತಾರೆ. ಜಿಂದಾಲ್ ಕಂಪನಿಯ ಕಾರ್ಪೊರೇಟ್ ಕಮ್ಯುನಿಕೇಷನ್ ವಿಭಾಗದವರು ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಈ ಸಂಭಾಷಣೆ ಬಯಲಾಗಿದೆ.

ಝೀ ವಾಹಿನಿಗಳು ಈ ಸುದ್ದಿಯನ್ನು ಹೇಗೇ ಅಲ್ಲಗಳೆದರೂ ಎದುರಿಸುತ್ತಿರುವ ಆರೋಪಗಳಿಂದ ಮುಕ್ತರಾಗುವುದು ಸುಲಭವಿಲ್ಲ. ನವೀನ್ ಜಿಂದಾಲ್ ಈ ಮೊದಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥ ನ್ಯಾ. ಮಾರ್ಕಂಡೇಯ ಕಾಟ್ಜು ಅವರನ್ನು ಭೇಟಿ ಮಾಡಿ ಈ ಬಗ್ಗೆ ವಿವರಿಸಿದ್ದರಷ್ಟೇ ಅಲ್ಲ, ಕುಟುಕು ಕಾರ್ಯಾಚರಣೆಯ ಕೆಲ ದೃಶ್ಯಗಳನ್ನು ಅವರಿಗೂ ತೋರಿಸಿದ್ದರು. ಆ ನಂತರ ನ್ಯಾ. ಕಾಟ್ಜು ಈ ಮಾಹಿತಿಯನ್ನು ವಿದ್ಯುನ್ಮಾನ ಮಾಧ್ಯಮ ಸಮೂಹಗಳ ಸ್ವನಿಯಂತ್ರಣಕ್ಕಾಗಿ ಇರುವ ಸಂಸ್ಥೆ – ಸುದ್ದಿ ಪ್ರಸರಣ ಗುಣಮಟ್ಟ ಪ್ರಾಧಿಕಾರ (ಎನ್ ಎಸ್ ಬಿ ಎ) ಮುಖ್ಯಸ್ಥ ನಾ. ಜೆ.ಎಸ್ ವರ್ಮಾ ಅವರಿಗೆ ರವಾನಿಸಿದ್ದರು. ಈ ಪ್ರಕರಣವನ್ನು ತನಿಖೆಗೆ ಎತ್ತಿಕೊಂಡ ಪ್ರಾಧಿಕಾರ, ಝೀ ಸಮೂಹದ ಸಂಪಾದಕರನ್ನು ಪ್ರಾಧಿಕಾರದ ಖಜಾಂಜಿ ಸ್ಥಾನದಿಂದ ಬಿಡುಗಡೆ ಮಾಡಿದೆ. ನೂರು ಕೋಟಿ ಮೊತ್ತದ ಭಕ್ಷೀಸು ಬಯಸಿದ ಆರೋಪ ಹೊತ್ತವರ ವಿರುದ್ಧ ಎಂತಹ ‘ಘೋರ’ ಕ್ರಮ!

ಸಲ್ಮಾನ್ ಖುರ್ಷಿದ್, ರಾಬರ್ಟ್ ವಾದ್ರಾ, ನಿತಿನ್ ಗಡ್ಕರಿ, ಯಡಿಯೂರಪ್ಪ.. ಮುಂತಾದವರ ಅವ್ಯವಹಾರಗಳ ಬಗ್ಗೆ ದಿನಗಟ್ಟಲೆ/ಪುಟಗಟ್ಟಲೆ ವರದಿ ಮಾಡುವ ಸುದ್ದಿ ವಾಹಿನಿಗಳು, ಪತ್ರಿಕೆಗಳು ತಮ್ಮ ಸಮೂಹದವರ ಮೇಲೆ ಆರೋಪ ಬಂದಾಗ ಮೌನವಹಿಸಿಬಿಡುತ್ತವೆ ಎಂಬುದಕ್ಕೆ ಈ ಪ್ರಕರಣವೂ ಒಂದು ಸಾಕ್ಷಿ. ಎನ್ ಡಿ ಟಿವಿ, ಸಿಎನ್ಎನ್ ಐಬಿಎನ್, ಟೈಮ್ಸ್ ನೌ, ವಾಹಿನಿಗಳು ನವೀನ್ ಜಿಂದಾಲ್ ಪತ್ರಿಕಾ ಗೋಷ್ಟಿ ನಡೆಸಿದ ದಿನ ವಿಸ್ತೃತ ವರದಿಗಳನ್ನೇ ಬಿತ್ತರಿಸಿದರು. ಆದರೆ ರಾಜಕಾರಣಿಗಳ ಪ್ರಕರಣಗಳಿಗೆ ಸಿಕ್ಕಷ್ಟು ಮಹತ್ವ – ಪ್ರಚಾರ ಈ ಪ್ರಕರಣಕ್ಕೆ ಸಿಗಲಿಲ್ಲ. ಸುದ್ದಿ ಪತ್ರಿಕೆಗಳಂತೂ, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ದಿ ಹಿಂದು ಪತ್ರಿಕೆ ಮಾತ್ರ, ಈ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿ, ಸಂಪಾದಕೀಯವನ್ನು ಪ್ರಕಟಿಸಿತ್ತು.

ಇತರೆ ಮಾಧ್ಯಮ ಸಂಸ್ಥೆಗಳು ಈ ಸುದ್ದಿಯನ್ನು ಮರೆಮಾಚಿದ್ದಕ್ಕೆ ಕಾರಣಗಳಿವೆ. ಬಹುತೇಕ ಸುದ್ದಿ ಮಾಧ್ಯಮಗಳು ‘ಪೇಯ್ಡ್ ನ್ಯೂಸ್’ ಮುಕ್ತವಾಗಿಲ್ಲ. ಆಡಳಿತದಲ್ಲಿರುವ ಸರಕಾರ ಭರಪೂರ ಜಾಹಿರಾತು ನೀಡುವುದಾದರೆ, ತಮಗೆ ಬೇಕಾದ ಜಮೀನನ್ನು ಡಿನೋಟಿಫೈ ಮಾಡಿಕೊಡುವುದಾದರೆ, ತಮ್ಮವರಿಗೆ ಸೂಕ್ತ ಸ್ಥಾನಮಾನ ನೀಡುವುದಾದರೆ ಅದರ ವಿರುದ್ಧ ಟೀಕೆಯ ಗೋಜಿಗೇ ಹೋಗದ ಅನೇಕ ಸಂಸ್ಥೆಗಳು ಎಲ್ಲೆಲ್ಲೂ ಇವೆ. ಹಾಗಿರುವಾಗ, ಕಾರ್ಪೋರೇಟ್ ಸಂಸ್ಥೆಯೊಂದಿಗೆ ಜಾಹೀರಾತು ಒಪ್ಪಂದ ಮಾಡಿಕೊಂಡು, ಅದರ ವಿರುದ್ಧದ ಸುದ್ದಿ ಪ್ರಕಟಿಸದೇ ಇರಲು ತೀರ್ಮಾನಿಸುವುದು ಈ ಸಂಸ್ಥೆಗಳಿಗೆ ಅಪರಾಧವಾಗಿ ಕಾಣದಿರುವುದರಲ್ಲಿ ಅಚ್ಚರಿಯೇನಿಲ್ಲ.

ಒಂದು ಸಣ್ಣ ಉದಾಹರಣೆ ನೋಡಿ. ಕೆಲ ವರ್ಷಗಳ ಹಿಂದಿನ ಘಟನೆ. ಶಾಸಕರೊಬ್ಬರು ನಾಡಿನ ಪ್ರಮುಖ ಪತ್ರಿಕೆಯೊಂದಕ್ಕೆ ಕಾಲು ಪುಟದ ಜಾಹೀರಾತು ನೀಡಿದ್ದರು. ಮುದ್ರಣ ಯಂತ್ರದ ತಾಂತ್ರಿಕ ಸಮಸ್ಯೆಯೋ, ತಂತ್ರಜ್ಞರ ಬೇಜವಾಬ್ದಾರಿತನದಿಂದಲೋ ಆ ಜಾಹೀರಾತು ಸ್ಪಷ್ಟವಾಗಿ ಮೂಡಿಬರಲಿಲ್ಲ. ಜಾಹೀರಾತಿನಲ್ಲಿದ್ದ ಪಠ್ಯ, ಭಾವಚಿತ್ರಗಳು ಅಸ್ಪಷ್ಟವಾಗಿದ್ದವು. ಸಹಜವಾಗಿ ಆ ಶಾಸಕರು ಬೇಸರಗೊಂಡರು. “ಜಾಹೀರಾತು ಸ್ಪಷ್ಟವಾಗಿ ಬಂದಿಲ್ಲ, ಹಾಗಾಗಿ ತಪ್ಪು ನಿಮ್ಮದೆ. ನಾನು ಜಾಹೀರಾತು ಬಿಲ್ ಕ್ಲಿಯರ್ ಮಾಡುವುದಿಲ್ಲ” ಎಂದು ಪಟ್ಟು ಹಿಡಿದರು. ಜಾಹೀರಾತು ವಿಭಾಗದ ಸಿಬ್ಬಂದಿ ಪದೇ ಪದೇ ಶಾಸಕರ ಮನೆಗೆ ತಿರುಗಿದರೂ ಇದೇ ಉತ್ತರ. ಈ ಬೆಳವಣಿಗೆ ಸುದ್ದಿ ವಿಭಾಗಕ್ಕೆ ರವಾನೆಯಾಯಿತು.

ಶಾಸಕರು ಬ್ಯಾಲೆನ್ಸ್ ಕ್ಲಿಯರ್ ಮಾಡುವ ತನಕ ಅವರ ಯಾವುದೇ ಸುದ್ದಿಗಳನ್ನು ಪ್ರಕಟ ಮಾಡುವುದು ಬೇಡ ಎಂದು ಪತ್ರಿಕೆ ನಿರ್ಧರಿಸಿತು. ಅದು ಹಾಗೆಯೇ ಮುಂದುವರಿಯಿತು. ಕೆಲ ತಿಂಗಳುಗಳಲ್ಲಿ ಚುನಾವಣೆ. ಈ ಸಂದರ್ಭದಲ್ಲಿ ಪ್ರಮುಖ ಪತ್ರಿಕೆಯಲ್ಲಿ ತನ್ನ ಸುದ್ದಿಗಳು ಪ್ರಕಟಗೊಳ್ಳದಿದ್ದರೆ, ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಶಾಸಕರಿಗೂ ಗಾಬರಿಯಾಯಿತು. ಅದು ಉತ್ತಮ ಪ್ರಸರಣ ಇರುವ ಪ್ರಮುಖ ಪತ್ರಿಕೆ. ಚುನಾವಣಾ ವಿಶ್ಲೇಷಣೆ ಸಂದರ್ಭದಲ್ಲಿ ಇವರು ಸೋಲುತ್ತಾರೆ ಎಂದು ಬರೆದರೆ, ಏನು ಗತಿ? ಹೀಗೆಲ್ಲಾ ಯೋಚಿಸಿ, ಅವರೇ ಜಾಹಿರಾತು ಸಿಬ್ಬಂದಿಯನ್ನು ಸಂಪರ್ಕಿಸಿ ಜಾಹೀರಾತು ಹಣ ನೀಡಿದರು, ಅಷ್ಟೇ ಅಲ್ಲ, ಮತ್ತಷ್ಟು ಜಾಹೀರಾತೂ ಕೊಟ್ಟರು.

ಈ ಉದಾಹರಣೆಯಲ್ಲಿ ಪತ್ರಿಕೆಯ ಹೆಸರು, ಶಾಸಕರ ಹೆಸರು ಅಗತ್ಯವಿಲ್ಲ. ಏಕೆಂದರೆ, ಈ ಅನುಭವ ನಾಡಿನ ಅನೇಕರಿಗೆ, ಅನೇಕ ಪತ್ರಿಕೆಗಳ ಜೊತೆ ಆಗಿರುವ ಸಾಧ್ಯತೆಗಳಿವೆ. ಬರಬೇಕಾಗಿರುವ ಬಾಕಿಗೆ, ಸುದ್ದಿಯನ್ನೇ ಬಂದ್ ಮಾಡುವ ಪರಿಪಾಟ ಇಟ್ಟುಕೊಂಡಿರುವ ಮಾಧ್ಯಮ ಸಂಸ್ಥೆಗಳಲ್ಲಿ, ಉತ್ತಮ ಮೊತ್ತದ ಜಾಹೀರಾತು ಕೊಡುವ ಉದ್ಯಮಿಯನ್ನು ಚೆನ್ನಾಗಿ ಬಿಂಬಿಸುವ ಪರಂಪರೆಯೂ ಇದ್ದೇ ಇದೆ. ಈ ಕಾರಣಕ್ಕಾಗಿಯೇ ನವೀನ್ ಜಿಂದಾಲ್-ಝೀ ಸಮೂಹ ಪ್ರಕರಣ ಇತರೆ ಮಾಧ್ಯಮ ಸಂಸ್ಥೆಗಳಿಗೆ ಅಷ್ಟು ಮುಖ್ಯವಾಗುವುದೇ ಇಲ್ಲ. ಜಾಹೀರಾತು ವಿಭಾಗದಲ್ಲಿ ಉನ್ನತ ಸ್ಥಾನದಲ್ಲಿರುವ ಯಾರನ್ನೇ ಕೇಳಿ ನೋಡಿ, ಇಂತಹ ಅದೆಷ್ಟೋ ವ್ಯವಹಾರಗಳು ನಡೆದಿರುವ ಉದಾಹರಣೆಗಳು ಸಿಗುತ್ತವೆ.

ಸದ್ಯ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವುದು ಅಗತ್ಯ. ಪ್ರಸ್ತುತ ಪ್ರಕರಣವನ್ನು ಆಮೂಲಾಗ್ರ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿ, ಉಳಿದವರಿಗೆ ಸೂಕ್ತ ಸಂದೇಶ ನೀಡುವುದು ಇಂದಿನ ತುರ್ತು.

ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೋ?

-ವಿಶ್ವಾರಾಧ್ಯ ಸತ್ಯಂಪೇಟೆ

ಇಂದು ನಾವು ಯಾವುದೆ ಚಾನಲ್‌‍ಗಳನ್ನು ನೋಡಿದರೂ, ಪತ್ರಿಕೆಗಳನ್ನು ಓದಿದರೂ ನಿಮ್ಮ ಕಣ್ಣಿಗೆ ರಾಚುವಂತೆ ಜೋತಿಷ್ಯ-ಭವಿಷ್ಯ ಹೇಳುವವರ ಹಿಂಡು ಕಾಣುತ್ತದೆ. ದೃಶ್ಯಮಾಧ್ಯಮಗಳಲ್ಲಂತೂ ಮೈತುಂಬಾ ಜರತಾರಿ ಬಟ್ಟೆಗಳನ್ನುಟ್ಟುಕೊಂಡ, ಹಣೆಗೆ ಢಾಳವಾಗಿ ವಿಭೂತಿ ಬಡಿದುಕೊಂಡು ಕೈಗಳ ತುಂಬೆಲ್ಲ ರುದ್ರಾಕ್ಷಿಗಳನ್ನು ಕಟ್ಟಿಕೊಂಡಿರುವ ಜೋತಿಷ್ಯಿಗಳು ಆವರಿಸಿಕೊಂಡಿರುತ್ತಾರೆ. ಕೆಲವು ಸಲ ನಮ್ಮ ಮನೆಗಳ ಟಿ.ವಿ.ಯ ಪರದೆ ಆಚೆಗೂ ಅವರ ಮೈ ಕೈ ಇವೆಯೇನೋ ಎಂಬಂತೆ ಭಾತುಕೊಂಡಿರುವ ದೃಶ್ಯಾವಳಿ ನೋಡಿದಾಗ ನಿಜಕ್ಕೂ ನನಗೆ ಅತ್ಯಂತ ನೋವಾಗುತ್ತದೆ. ಹಸಿ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಷ್ಟು ಸ್ಪಷ್ಟವಾಗಿ, ವಿಚಿತ್ರ ಮಾನರಿಸಂಗಳ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ತಂತ್ರಗಾರಿಕೆಗೆ ಬೆರಗಾಗಿದ್ದೇನೆ.

ಆದರೆ ಇವರ ತಂತ್ರಗಾರಿಕೆ, ಮೋಸಗಳು ಗೊತ್ತಿಲ್ಲದ ಜನಸಾಮಾನ್ಯರು ಮಾತ್ರ ನಿತ್ಯವೂ ಲೈವ್‌ಪ್ರೋಗ್ರಾಮ್‌ಗಳಲ್ಲಿ ವಿಚಿತ್ರವಾದ ಪ್ರಶ್ನೆಗಳನ್ನು ಭವಿಷ್ಯವಾದಿಗಳಿಗೆ ಕೇಳುತ್ತಿರುವುದನ್ನು ನೋಡಿದಾಗಲೆಲ್ಲ ಸಂಕಟ ಪಟ್ಟಿದ್ದೇನೆ. ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ನಮ್ಮ ದೇಶವನ್ನು ಸಶಕ್ತವಾಗಿ ಕಟ್ಟುವ ಶಕ್ತಿ ಇರುವ ಮಾಧ್ಯಮಗಳು ಮೌಢ್ಯವನ್ನೆ ಆಧುನಿಕ ವಿಜ್ಞಾನ ಎನ್ನುವಂತೆ ತೋರಿಸುತ್ತ ನಡೆದಿವೆಯಲ್ಲ ಎಂದು ಖೇದವಾಗುತ್ತದೆ.

ಬರವಣಿಗೆಯ ಮಾಧ್ಯಮವಾದ ಪತ್ರಿಕೆಗಳು, ದೃಶ್ಯ ಮಾಧ್ಯಮವಾದ ಚಾನಲ್‌ಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತ ಸ್ಪಷ್ಟವಾಗಿ ಈ ದೇಶಕ್ಕೆ ಮತ್ತದೆ ಸನಾತನ ವಾದದ ವಿಚಾರಗಳನ್ನು ಚಾಲಾಕಿತನದಿಂದ ಹೇಳುತ್ತಿರುವಂತೆ ಕಂಡುಬರುತ್ತದೆ. ಏಕೆಂದರೆ ಬೆಳಂಬೆಳಗ್ಗೆ ಚಾನಲ್‌ಗಳ ಕಿವಿ ಹಿಂಡುತ್ತಿರುವಂತೆ ದುತ್ತನೆ ಎದುರಾಗುವುದೆ ಅಸಂಖ್ಯಾತ ದೇವರುಗಳು. ಆ ದೇವರುಗಳನ್ನು ಹಾಲಿನಿಂದ, ಮೊಸರಿನಿಂದ, ತುಪ್ಪದಿಂದ, ಜೇನುತುಪ್ಪ ಹಾಗೂ ಶ್ರೀಗಂಧ ಎಂಬ ಪಂಚಗವ್ಯಗಳ ಮೂಲಕ ಮೈ ತೊಳೆಯುವುದನ್ನೆ ದೊಡ್ಡ ಕಸರತ್ತು ಎಂಬಂತೆ ತೋರಿಸಲಾಗುತ್ತದೆ. ಇದರ ಜೊತೆ ಜೊತೆಗೆ ಅರ್ಥವೆ ಆಗದಿರುವ ಮಂತ್ರಗಳು ಮುಗ್ಧ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ‘ತಿಳಿಯದವರು ತಿಳಿಯದವರಿಗೆ ತಿಳಿಯದಂತೆ ಹೇಳುವುದೇ ಜ್ಞಾನ’ ಎಂದು ಲಿಂ.ವೀರನಗೌಡ ನೀರಮಾನ್ವಿ ಅವರ ಮಾತು ಅಕ್ಷರಶಃ ಸತ್ಯ.

ದೇಹಕ್ಕೆ ವಿಪರೀತವಾಗುವಷ್ಟು ಬೊಜ್ಜು ಬರಿಸಿಕೊಂಡಿರುವ ಟೊಣ್ಯಾನಂತಹ ಪುರೋಹಿತ ಮಾತಾಡದ, ಕಿವಿಯ ಮೂಲಕ ಕೇಳಿಸಿಕೊಳ್ಳದ ದೇವರಿಗೆ ‘ಎದ್ದೇಳು ಮಂಜುನಾಥ ಏಳು ಬೆಳಗಾಯಿತು’, ‘ಕಾಪಾಡು ಶ್ರೀಸತ್ಯ ನಾರಾಯಣ’, ‘ ವಾರ ಬಂತಮ್ಮ ಗುರುವಾರ ಬಂತಮ್ಮ’, ‘ಸ್ವಾಮಿಯೆ ಶರಣಂ ಅಯ್ಯಪ್ಪ…’, ‘ಭಾಗ್ಯದ ಲಕ್ಷ್ಮೀಬಾರಮ್ಮ ನಮ್ಮಮ್ಮ ನೀ ಸೌಭ್ಯಾಗ್ಯದ ಲಕ್ಷ್ಮಿಬಾರಮ್ಮ…’ ಮುಂತಾಗಿ ಹಾಡಿ ಎಚ್ಚರಿಸಿದರೂ ದೇವರುಗಳು ಎದ್ದು ಕೂಡುವುದಿಲ್ಲ. ಅದು ನಮ್ಮೆಡೆಗೆ ಬರುವುದಂತೂ ದೂರದ ಮಾತು. ಹೂವಿನ ರಾಸಿಗಳಲ್ಲಿ ಮುಳುಗಿಸಿ, ಗಂಧದ ಪರಿಮಳ ಅವುಗಳ ಮೈಮೆಲೆಲ್ಲ ಚೆಲ್ಲಿದರು ಅವು ಮಿಸುಗಾಡುವುದಿಲ್ಲ. ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು’ ಎಂಬ ಕವಿ ಕುವೆಂಪು ಅವರ ಮಾತು ಅಕ್ಷರಶಃ ನಾವೆಲ್ಲ ಮರೆತುಹೋಗಿದ್ಧೇವೇನೋ ಎಂದು ಭಾಸವಾಗುತ್ತದೆ.

‘ಕಣ್ಣೊಳಗೆ ಕಣ್ಣಿದ್ದು ಕಾಣಲರಿಯರಯ್ಯ
ಕಿವಿಯೊಳಗೆ ಕಿವಿಯಿದ್ದು ಕೇಳಲರಿಯರಯ್ಯ,
ಘ್ರಾಣದೊಳಗೆ ಘ್ರಾಣವಿದ್ದು ಘ್ರಾಣಿಸಲರಿಯರಯ್ಯ’

ಎಂಬ ಅಲ್ಲಮಪ್ರಭುಗಳ ಮಾತು ಅರ್ಥವಾಗುವುದು ಇನ್ನೂ ಯಾವಾಗ?

‘ಭವ್ಯ ಬ್ರಮ್ಮಾಂಡ’ ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಪುರೋಹಿತನಂತೂ ತನ್ನ ದಿವ್ಯ ಅಜ್ಞಾನವನ್ನು ಹೊರಗೆಡಹುತ್ತಿರುತ್ತಾನೆ. ಆದರೆ ಅದನ್ನು ಪರಾಂಭರಿಸಿ ನೋಡುವಾಗ-ವಿವೇಚಿಸುವ ಮನಸ್ಸುಗಳ ಕೊರತೆಯಿಂದ ಅವರು ಹೇಳಿದ್ದೆ ದೊಡ್ಡ ಸತ್ಯ ಎಂದು ಜನ ತಿಳಿಯುತ್ತಾರೆ. ಮತ್ತೊಂದು ಸಂಗತಿಯನ್ನು ಇಲ್ಲಿ ಹೇಳುವ ಅವಶ್ಯಕತೆ ಇದೆ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಗಳಲ್ಲಿ ಬರುವ ಸಂಗತಿಗಳೆಲ್ಲ ಪರಮಗಂತವ್ಯ ಎಂದು ನಂಬಿರುವ ಸಾಕಷ್ಟು ಜನರು ನಮ್ಮ ದೇಶದಲ್ಲಿದ್ದಾರೆ. ಇದನ್ನು ಚೆನ್ನಾಗಿಯೆ ಮನಗಂಡಿರುವ ಪುರೋಹಿತಶಾಹಿ ಮಾತ್ರ ಹಿಂದೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಎಂಬ ಕತೆಗಳ ಮೂಲಕ ಮೌಢ್ಯ ಹಂಚಿ ದೇಶವನ್ನು ಬೌದ್ಧಿಕ ಅಥಃಪತನಕ್ಕೆ ತಳ್ಳಿಬಿಟ್ಟಿದ್ದರು. ‘ಯದಾ ಯದಾಯಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ’ ಎಂಬಂತಹ ನುಣ್ಣನೆಯ ಮಾತುಗಳನ್ನು ಹೇಳಿ ನಮ್ಮನ್ನೆಲ್ಲ ನಂಬಿಸಿಬಿಟ್ಟಿದ್ದಾರೆ. ಭಾರತ ಹಾಳಾಗುವವರೆಗೆ ಶ್ರೀಕೃಷ್ಣ (ಸಿರಿ ಕೃಷ್ಣ) ಯಾಕೆ ಕಾಯಬೇಕು? ಅದು ಅವನತಿಯ ದಾರಿಹಿಡಿಯುತ್ತಿದೆ ಎಂದು ಗೊತ್ತಾಗುತ್ತಿರುವಂತೆಯೆ ಪ್ರತ್ಯಕ್ಷರಾಗಿ ಅದನ್ನು ಸರಿಪಡಿಸಬೇಕು ಎಂಬ ಚಿಕ್ಕಜ್ಞಾನವೂ ಆತನಿಗೆ ಇಲ್ಲವೆ, ಎಂದು ಎಂದಾದರೂ ನಾವುಗಳು ಆಲೋಚಿಸಿದ್ದೇವೆಯೆ?

ಪ್ರಪಂಚದ ಎಲ್ಲಾ ರಾಷ್ಟ್ರಗಳು ತಮ್ಮ ವೈಜ್ಞಾನಿಕ ಕೌಶಲ್ಯವನ್ನು ಮೆರೆದು ಖಗೋಳಶಾಸ್ತ್ರಗಳ ಬೆನ್ನುಹತ್ತಿ ಹೋಗುತ್ತಿದ್ದರೆ ಭಾರತ ಮಾತ್ರ ಜ್ಯೋತಿಷ್ಯದ ಕೊಳಕಿನಲ್ಲಿ ಕೊಳೆಯುತ್ತಿದೆ. ರಷ್ಯಾ, ಅಮೇರಿಕಾದವರು ಕ್ಷಿಪಣಿ, ರಾಕೇಟ್‌ಗಳನ್ನು ಕಂಡು ಹಿಡಿಯಲು ಗ್ರಹತಾರೆಗಳ ಗುಣಿಸಿ ಲೆಕ್ಕಹಾಕುತ್ತಿದ್ದರೆ ಭಾರತ ಮಾತ್ರ ಜ್ಯೋತಿಷ್ಯವನ್ನು ಹಿಡಿದು ಹುಟ್ಟುವ ಮಗು ಹೆಣ್ಣೋ-ಗಂಡೋ, ಕಂಕಣಬಲ ಕೂಡಿಬರುತ್ತದೋ ಇಲ್ಲವೊ ಎಂಬ ಲೆಕ್ಕಾಚಾರ ಹಾಕುತ್ತಿದೆ ಎಂಬ ಲೋಹಿಯಾ ಅವರು ಅರವತ್ತು ವರ್ಷಗಳ ಹಿಂದೆ ಹೇಳಿದ ಮಾತಿಗೆ ಈಗಿನ ಪರಿಸ್ಥಿತಿಗೂ ಏನೂ ಬದಲಾವಣೆ ಆಗಿಲ್ಲವೆನಿಸುತ್ತದೆ.

ವಿವೇಚನೆ ಹಾಗೂ ವೈಜ್ಞಾನಿಕ ಮನೋಭಾವವನ್ನು ನಾವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ (ಕೆಲವನ್ನು ಹೊರತುಪಡಿಸಿ) ಹುಡುಕುವುದೆ ತಪ್ಪಾಗಬಹುದೇನೊ ಎಂದನಿಸುತ್ತದೆ. ಏಕೆಂದರೆ ಈ ಎರಡು ಮಾಧ್ಯಮಗಳಲ್ಲಿ ತೊಡಗಿಕೊಂಡಿರುವವರು ಮತ್ತದೆ ಬ್ರಾಹ್ಮಣಿಕೆಯ ಪಳಿಯುಳಿಕೆಗಳು. ನೂಲು ಎಂಥದೋ ಅಂಥ ಸೀರೆ ಎಂದು ಹೇಳುವಂತೆ, ಎಂಥ ಬೀಜವೋ ಅಂಥದೆ ವೃಕ್ಷ ಸಹಜವಾಗಿ ಪ್ರಕಟಗೊಳ್ಳುತ್ತದೆ. ‘ಹೀಗೂ ಉಂಟೆ?’, ‘ಜನ್ಮಾಂತರ’, ‘ಭವಿಷ್ಯ ಹೇಳುವುದು’, ‘ವಾಮಾಚಾರದ ಸಂಗತಿ’ಗಳನ್ನು ಪದೆ ಪದೇ ಹೇಳುವುದು ತೋರಿಸುವುದು ಮಾಡುವುದರಿಂದ ಸಹಜವಾಗಿಯೆ ಓದುಬರಹ ಹಾಗೂ ವಿವೇಚನೆಯನ್ನು ಮಾಡದೆ ಇರುವ ಮನುಷ್ಯ ನಂಬಿಬಿಡುವುದೆ ಹೆಚ್ಚು.

ಸಿನೆಮಾಗಳಲ್ಲಿ ತೋರಿಸುವ ಮೋಹಿನಿಯರ ರೂಪವನ್ನು ಗಮನಿಸಿ ಗಮನಿಸಿ ನಮಗೆ ಗೊತ್ತಿಲ್ಲದೆ ಮೋಹಿನಿಗೆ ಕಾಲುಗಳು ಇರುವುದಿಲ್ಲ, ಮುಖ ಕಾಣುವುದಿಲ್ಲ, ಆಕೆ ನಡೆದಾಡುವಾಗ ಪ್ರಕಾಶಮಾನವಾದ ಬೆಳಕು ಆಕೆಯ ಸುತ್ತಲೆ ಸುತ್ತುತ್ತಿರುತ್ತದೆ, ಬೆನ್ನು ಮಾತ್ರ ಕಾಣುತ್ತದೆ, ಆಕೆ ಪ್ರತ್ಯಕ್ಷ್ಯಳಾಗುವುದು ಮದ್ಯರಾತ್ರಿಯ ನಂತರ, ಎಂಬಂತಹ ಅನಿಸಿಕೆಗಳು ನಮ್ಮಲ್ಲಿ ಈಗಾಗಲೆ ಬೇರೂರಿ ಬಿಟ್ಟಿವೆ. ಆಕಸ್ಮಿಕವಾಗಿ ಗವ್ವೆನ್ನುವ ಕತ್ತಲಲ್ಲಿ ಯಾರಾದರೂ ಬಿಳಿಸಿರಿ ಉಟ್ಟು ಅವರು ನಡೆದಾಡಿದಂತೆಲ್ಲ ಗೆಜ್ಜೆ ಸಪ್ಪಳವಾದರೆ ಸಾಕು ನಮ್ಮ ಎದೆಗಳಲ್ಲೆಲ್ಲ ಭಯದ ತಾಂಡವ ನೃತ್ಯ ಶುರುವಾಗಿರುತ್ತದೆ. ಮಸಂಟಿಗೆಗಳಲ್ಲಿ ಆಗ ಕುಣಿದು ಕುಪ್ಪಳಿಸುತ್ತ ಗ್ರಾಮಕ್ಕೆ ಗ್ರಾಮವನ್ನೆ ಭಯದ ನೆರಳಿನಲ್ಲಿ ಇಡುತ್ತಿದ್ದ ಕೊಳ್ಳಿದೆವ್ವಗಳು ಈಗ ಎಲ್ಲಿ ಮಾಯವಾಗಿವೆಯೊ? ಆದರೆ ಇಂದಿಗೂ ಕೆಲವು ಸಿನೆಮಾಗಳಲ್ಲಿ ಮತ್ತು ಧಾರವಾಹಿಗಳಲ್ಲಿ ಅವು ಹಾಗೆ ವಿಜೃಂಭಿಸುತ್ತಿವೆ.

ನಾಗರಹಾವು ತನಗೆ ಕಚ್ಚುತ್ತದೆ ಎಂದರಿತ ಹೀರೋ ಒಬ್ಬ ಸಿನೆಮಾದಲ್ಲಿ ಆಕಸ್ಮಿಕವಾಗಿ ಸಾಯಿಸಿ ಬಿಟ್ಟರೆ ಆ ಹಾವು ಮಾತ್ರ ಪದೆ ಪದೆ ಬಂದು ಆತನಿಗೆ ಕಾಟ ಕೊಡುತ್ತಲೆ ಇರುತ್ತದೆ. ಆ ಹೀರೋನನ್ನು ನರಳಿಸಿ, ನರಳಿಸಿ ಸಾಯುವಂತೆ ಮಾಡುವವರೆಗೆ ಆ ಸಿನೆಮಾ ನಿರ್ದೇಶಕನಿಗೆ ಸಮಾಧಾನವೆ ಇರುವುದಿಲ್ಲ. ಈ ನಡುವೆ ಆ ಸಿನೆಮಾ ಹೀರೋಯಿನ್ ದೈವಭಕ್ತೆಯಾಗಿ ನಾಗದೇವತೆಗೆ ಪೂಜೆ ಮಾಡಿ ಆ ನಾಗದೇವತೆ ಪ್ರತ್ಯಕ್ಷಳಾಗಿ ವರವನ್ನು ಕರುಣಿಸಿದರೆ, ಗಂಡುಮಕ್ಕಳು ಬಚಾವಾಗೊದು ತುಸು ಕಷ್ಟವೆಂದೆ ಹೇಳಬೇಕು.

ಮೈನೆರೆದು ದೊಡ್ಡವಳಾದ ಯುವತಿಗೆ ಸರಿಯಾದ ವರ ದೊರಕಬೇಕೆಂದರೆ ಹಳೆ ಸಿನೆಮಾಗಳಲ್ಲಿ ಸತ್ಯನಾರಾಯಣವ್ರತವನ್ನು ಆಚರಿಸಲೆ ಬೇಕಿತ್ತು. ಯಾರಿಗೋ ಸಂಬಂಧಿಸಿದ ಕತೆಯನ್ನು ಓದುವುದರಿಂದ, ನೆನೆಯುವುದರಿಂದ ನಾವು ಅವರಂತೆ ಆಗುತ್ತೇವೆ ಎಂದು ಹೇಳುವುದು ಎಷ್ಟು ಮೂರ್ಖತನ?

ಕರಿಕ ಕೆಂಚನನೆನೆದರೆ ಕೆಂಚನಾಗಬಲ್ಲನೆ
ಕೆಂಚ ಕರಿಕನನೆನೆದರೆ ಕರಿಕನಾಗಬಲ್ಲನೆ
ದರಿದ್ರ ಸಿರಿವಂತನನೆನೆದರೆ ಸಿರಿವಂತನಾಗಬಲ್ಲನೆ
ಸಿರಿವಂತೆ ದರಿದ್ರನನೆನೆನೆದರೆ ದರಿದ್ರನಾಗಬಲ್ಲನೆ
ಮುನ್ನಿನ ಪುರಾತನರನೆನೆದು ಧನ್ಯನಾದೆಹೆವೆಂಬ
ಮಾತಿನ ರಂಜನಕರನೇನೆಂಬೆ ಕೂಡಲಸಂಗಮದೇವಾ

ಬೇಕಂತಲೆ ಒಂದು ಸಲ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ರಾಶಿ-ಫಲ ನಕ್ಷತ್ರಗಳ ಕುರಿತುಹೇಳುತ್ತಿದ್ದ ಜ್ಯೋತಿಷ್ಯಿಯ ಅಟಾಟೋಪವನ್ನು ಗಮನಿಸಿದೆ. ಅವನ ವಾಕ್ಚಾತುರ್ಯ, ಸುಳ್ಳನ್ನು ನಯವಾಗಿ, ನವಿರಾಗಿ ಹೇಳುವ ಫಟಿಂಗತನ ಅವನಿಂದ ಮಾತ್ರ ಕಲಿಯಲು ಸಾಧ್ಯ ಎನ್ನುವಂತೆ ಇತ್ತು. ಯಾವುದೆ ದೇವಸ್ಥಾನವನ್ನು ಬಲಗಡೆಯಿಂದಲೇ ಸುತ್ತಬೇಕಂತೆ. ಬಲಗೈಯಲ್ಲಿ ಅಗ್ನಿ ಇದೆಯಂತೆ. ಅದು ಶಾಂತವಾಗಿ ಇರಬೇಕೆಂದರೆ, ನಾವು ಬಯಸಿದ್ದೆಲ್ಲ ನಮಗೆ ಸಿಗಬೇಕಾದರೆ ಹಾಗೆ ಸುತ್ತಿದಾಗಲೆ ನಮಗೆ ಒಳ್ಳೆಯದಾಗುತ್ತದಂತೆ. ಮತ್ತೆ ನಾವು ಯಾವುದೆ ಮೌಲ್ಯವುಳ್ಳ ವಸ್ತುಗಳನ್ನು ಪಡೆಯಬೇಕೆಂದರೂ ಅದು ಬಲಗೈಯಲ್ಲಿಯೆ ತೆಗೆದುಕೊಳ್ಳಬೇಕಂತೆ. ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬರುವ ಹೆಣ್ಣು ಆಕೆ ಬಲಗಾಲನ್ನು ಮಾತ್ರವೆ ಇಟ್ಟು ಬರಬೇಕೆಂಬುದನ್ನು ರೂಢಿಯೆ ಮಾಡಿಬಿಟ್ಟಿದ್ದಾರೆ. ಆಕಸ್ಮಿಕವಾಗಿ ಆಕೆ ಎಡಗಾಲು ಇಟ್ಟು ಒಳಬಂದರೆ ಆ ಮನೆಯಲ್ಲಿ ಏನೇನೋ ಅವಘಡಗಳು ಘಟಿಸಿಬಿಡುತ್ತವೆ ಎಂದು ಭಯದ ಬೀಜ ಬಿತ್ತುತ್ತಾರೆ. ಆದರೆ ಎಡಗೈ ಬಾಲಿಂಗ್ ಹಾಗೂ ಬ್ಯಾಟ್ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಕ್ರಿಕೆಟಿಗರ ಸಾಧನೆಯನ್ನು ಮುದ್ದಾಂ ಮರೆಯಿಸಿಬಿಡುತ್ತಾರೆ. ನಮ್ಮದೆ ದೇಹದ ಅಂಗಾಗಳಲ್ಲಿಯೂ ಶ್ರೇಷ್ಠ-ಕನಿಷ್ಠ ಎಂಬ ತರತಮ ಭಾವನೆ ಉಂಟುಮಾಡಿರುವ ರೋಗಿಷ್ಟ ಮನಸ್ಸುಗಳ ಕುರಿತು ಏನು ಹೇಳುವುದು?

ನಮ್ಮ ಇಂದಿನ ಬದುಕಿಗೆ ಸುಖ-ಸಂತೋಷ, ಒಳ್ಳೆಯದು-ಕೆಟ್ಟದ್ದಕ್ಕೆ, ಸ್ನೇಹ-ವೈರತ್ವಕ್ಕೆ, ಹಣಗಳಿಸುವುದಕ್ಕ-ಬಿಕಾರಿಯಾಗುವುದಕ್ಕೆ ಕಾರಣ ನಾವಲ್ಲವೆ ಅಲ್ಲವಂತೆ. ಅದೆಲ್ಲ ಮೊದಲೆ ನಮ್ಮ ಹುಟ್ಟಿದ ನಕ್ಷತ್ರ, ರಾಶಿ-ಫಲಗಳನ್ನು ಅವಲಂಬಿಸಿದೆಯಂತೆ. ತೀರಾ ಇತ್ತೀಚೆಗೆ ಈ ರಾಶಿ-ನಕ್ಷತ್ರಗಳನ್ನು ಎಷ್ಟು ಸೀಳಿ ಸೀಳಿ ಇಟ್ಟಿದ್ದಾರೆಂದರೆ ಇನ್ಮುಂದೆ ಸೀಳುವುದಕ್ಕೆ ಸಾಧ್ಯವೆ ಇಲ್ಲವೆನ್ನುವಷ್ಟು ಸೂಕ್ಷ್ಮವಾಗಿ ಸೀಳಿ ಬಿಟ್ಟಿದ್ದಾರೆ. ನಮ್ಮ ವ್ಯಾಪಾರ ವಹಿವಾಟಿಗೂ, ಗಂಡ-ಹೆಂಡತಿಯ ಸಂಬಂಧಕ್ಕೆ, ನಮ್ಮ ಉಡುಗೆ ತೊಡುಗೆಗಳ ಬಣ್ಣಕ್ಕೆ, ಚಂದ್ರ ಗ್ರಹಕ್ಕೆ ರಾಹು ಪ್ರವೇಶಿಸುವ, ಪ್ರವೇಶಿಸದೆ ಇರುವುದರಿಂದಲೆ ಸುಖ-ದುಃಖಗಳು ಉಂಟಾಗುತ್ತವಂತೆ.

ಕರ್ಕಲಗ್ನ ರಾಶಿಯನ್ನು ಹೊಂದಿದವರಂತೂ ಬಹಳ ಸೆನ್ಸಿಟಿವ್ ಆಗಿ ಇರುತ್ತಾರಂತೆ. ಏಕೆಂದರೆ ಇವರ ರಾಶಿಯಲ್ಲಿ ಚಂದ್ರ ದುರ್ಬಲನಂತೆ. ಇದೆಲ್ಲ ಹೀಗೇಕೆ? ಎಂದು ನೀವು ಯಾರಾದರೂ ಪ್ರಶ್ನೆ ಕೇಳಿದರೆ ಮತ್ತೆ ಸುಳ್ಳಿನ ಮಾತಿಗೆ ಮತ್ತಷ್ಟು ಸುಳ್ಳು ಪೋಣಿಸಿ ಸುಳ್ಳಿನ ಸರಮಾಲೆಯನ್ನೆ ನಿಮ್ಮ ಕೊರಳಿಗೆ ಹಾಕಿಬಿಡುತ್ತಾರೆ. ‘ಜಟ್ಟಿ ಕೆಳಗೆ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ’ ಎಂದು ವಾದಿಸುವ ಧೂರ್ತತನ ಇವರಲ್ಲಿ ತುಂಬಿತುಳುಕ್ಯಾಡುತ್ತಿದೆ. ಕಪೋಲ ಕಲ್ಪಿತ ಕಟ್ಟು ಕತೆಗಳೆ ಇವರಿಗೆ ಆಧಾರ. ತಮ್ಮ ಇಂಥ ಪೊಳ್ಳು ಮಾತಿಗೆ ಆಧಾರವಾಗಿ ಕೆಲವು ದಾಸರು ಬರೆದ ‘ನಂಬಿಕೆಟ್ಟವರಿಲ್ಲವೋ ಓ ಮನುಜ ನಂಬಿಕೆಟ್ಟವರಿಲ್ಲವೊ’ ಎಂದು ಹೇಳಿ ಬುದ್ದಿಯನ್ನು ಕ್ಷೀಣಿಸುವಂತೆ ಆಲೋಚಿಸದಂತೆ ಮಾಡುತ್ತಾರೆ.

ಭೂಮಿಯೆ ವಿಶ್ವದ ಕೇಂದ್ರ, ಅದು ಚಪ್ಪಟೆಯಾಗಿದೆ, ಭೂಮಿಯ ಸುತ್ತಲೆ ಎಲ್ಲಾ ಗ್ರಹಗಳು, ನಕ್ಷತ್ರಗಳು ತಿರುಗುತ್ತವೆ ಎಂದು ಜ್ಯೋತಿಷ್ಯ ಹೇಳುವವರು ನಂಬಿದ್ದರು. ಆದರೆ ಗೆಲಿಲಿಯೋ ಮಾತ್ರ ಭೂಮಿ ಗುಂಡಗಿದೆ, ಅದು ಸೂರ್ಯನ ಸುತ್ತ ತಿರುಗುತ್ತದೆ ಎಂದು ಸತ್ಯವನ್ನು ವೈಜ್ಞಾನಿಕ ಆಧಾರಗಳ ಮೇಲೆ ಹೇಳಿದ. ಆದರೆ ಗೆಲಿಲಿಯೋನ ಪರಿಸ್ಥಿತಿ ಏನಾಯಿತು? ಆದ್ದರಿಂದ ಭವಿಷ್ಯವಾದಿಗಳಿಗೆ ನಂಬಿಕೆಯೆ ಆಧಾರವೆ ಹೊರತು ಸತ್ಯವಲ್ಲ. ಈಗಲೂ ಈ ಮೂರ್ಖರು ನವಗ್ರಹಗಳಿವೆ ಎಂದು ಹೇಳುತ್ತಾರೆ. ವಾಸ್ತವವಾಗಿ ಆ ಪಟ್ಟಿಯಲ್ಲಿ ಗ್ರಹಗಳಿರುವುದು ಐದುಮಾತ್ರ. ಒಂದು ನಕ್ಷತ್ರ, ಇನ್ನೊಂದು ಉಪಗ್ರಹ. ಎರಡಂತೂ ಇಲ್ಲವೆ ಇಲ್ಲ. ಇಂಥ ಇಲ್ಲಸಲ್ಲದ ಗ್ರಹಗಳ ಮೇಲೆ ರಚಿತವಾದ ಭವಿಷ್ಯ ರಾಶಿ -ಫಲ-ಜ್ಯೋತಿಷ್ಯ ಅದು ಹೇಗೆ ಖರೆಯಾದೀತು? ರಾಹು, ಕೇತು ಆಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ, ಗುಳಿಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಪ್ರಯಾಣ, ಮದುವೆ, ಧಾರ್ಮಿಕ ಕಾರ್ಯ ಈ ಬಗೆಯ ಶುಭಕಾರ್ಯಗಳನ್ನು ನಡೆಸಬಾರದು. ಈ ನಂಬಿಕೆ ನಿಜವಾದ ಪಕ್ಷದಲ್ಲಿ ರಾಹುಕಾಲದಲ್ಲಿ ಹೊರಟ ವಿಮಾನಗಳು, ರೈಲುಗಳು, ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು. ಅಪಘಾತಗಳ ಸ್ವರೂಪವನ್ನು ಸ್ಥೂಲವಾಗಿ ಪರೀಕ್ಷಿಸಿ ನೋಡಿದರೂ ಕೂಡ, ಅಪಘಾತಗಳಿಗೂ ವಾಹನಗಳು ಹೊರಟ ಕಾಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಶಯವಿಲ್ಲದೆ ಗೊತ್ತಾಗುತ್ತದೆ. ಮನುಷ್ಯನ ಎಲ್ಲಾ ಗುಣಗಳನ್ನು ಗ್ರಹಗಳೆ ನಿಯಂತ್ರಿಸುತ್ತವೆ ಎಂಬುದು ಯಾವ ವಿಜ್ಞಾನಿಯೂ ಖಚಿತಪಡಿಸಿಲ್ಲ.

ಜ್ಯೋತಿಷ್ಯನ ಒಂದು ಹಳೆಯ ಕಥೆ ಇದೆ. ಅವನು ಒಬ್ಬ ರಾಜನ ಬಳಿ ಬಂದು ‘ನೀನು ಇನ್ನು ಆರು ತಿಂಗಳಲ್ಲಿ ಸಾಯುವೆ’ ಎಂದ. ರಾಜ ಭಯದಿಂದ ಕಂಪಿಸತೊಡಗಿದ. ಅಂಜಿಕೆಯಿಂದ ಅವನು ಆಗಲೇ ಸಾಯುವ ಸ್ಥಿತಿಯಲ್ಲಿದ್ದ. ಆದರೆ ಮಂತ್ರಿ ಬಹಳ ಬುದ್ದಿವಂತ. ರಾಜನಿಗೆ ಈ ಜ್ಯೋತಿಷ್ಯವನ್ನೆಲ್ಲಾ ನಂಬಬೇಡಿ, ಇವರೆಲ್ಲಾ ಮೂರ್ಖರು ಎಂದು ಬುದ್ದಿ ಹೇಳಿದ. ರಾಜ ಇದನ್ನು ನಂಬಲಿಲ್ಲ. ಮಂತ್ರಿ ಜ್ಯೋತಿಷ್ಯ ಮೂರ್ಖ ಎಂಬುದನ್ನು ತೋರಿಸುವುದಕ್ಕೆ ಜ್ಯೋತಿಷ್ಯನನ್ನು ಪುನಃ ಅರಮನೆಗೆ ಬರಮಾಡಿಕೊಂಡ. ಮಂತ್ರಿ ಅವನಿಗೆ ನಿನ್ನ ಲೆಕ್ಕಾಚಾರವೆಲ್ಲ ಸರಿಯಾಗಿದೆಯೇ? ನೋಡು ಎಂದ. ಜ್ಯೋತಿಷ್ಯನಿಗೆ ಲವಲೇಶವೂ ಸಂದೇಹವಿರಲಿಲ್ಲ. ಆದರೆ ಮಂತ್ರಿಯ ತೃಪ್ತಿಗಾಗಿ ಪುನಃ ಲೆಕ್ಕಾಚಾರ ಹಾಕಿ ಎಲ್ಲ ಸರಿಯಾಗಿದೆ ಎಂದ. ಭಯದಿಂದ ರಾಜನ ಮುಖ ಸಪ್ಪೆಯಾಯಿತು. ಮಂತ್ರಿ ಜ್ಯೋತಿಷ್ಯನನ್ನು ನೀನು ಇನ್ನೆಷ್ಟು ದಿನಗಳವರೆಗೆ ಬದುಕಿರುವೆ ಎಂದ. ಜ್ಯೋತಿಷ್ಯ ತನ್ನ ಜಾತಕದ ಪ್ರಕಾರ ಹನ್ನೆರಡು ವರ್ಷ ಎಂದ. ಮಂತ್ರಿ ತಕ್ಷಣ ತನ್ನ ಸೊಂಟದ ಕತ್ತಿಯಿಂದ ಜ್ಯೋತಿಷ್ಯನ ತಲೆಯನ್ನು ಛೇದಿಸಿ ರಾಜನಿಗೆ ಈ ಸುಳ್ಳುಗಾರನ ಗತಿ ಏನಾಯಿತು ಗೊತ್ತಿಲ್ಲವೆ? ಹನ್ನೆರಡು ವರುಷ ಬದುಕಿರುತ್ತೇನೆ ಎಂದವನು ಈ ಕ್ಷಣ ಸತ್ತು ಹೋದನು ಎಂದು ಹೇಳಿದ.

ಬಹುತೇಕ ಜೋತಿಷ್ಯಿಗಳು ಮಗು ಹುಟ್ಟುವ ಜನನ ಸಮಯದಿಂದ ಜಾತಕ ಬರೆದಿಡುವ ಪದ್ಧತಿ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ಆದರೆ ಮಗು ಹುಟ್ಟುವ ಸಮಯ ಅಂದರೆ ಯಾವುದು? ಆ ಮಗು ನೆಲಕ್ಕೆ ಬಿದ್ದು ಅತ್ತಾಗಲೋ, ಅಥವಾ ಗಂಡಿನ ವೀರ್ಯ ಹೆಣ್ಣಿನ ಅಂಡಾಶಯದೊಂದಿಗೆ ಫಲಿತವಾಗಿ ಭ್ರೂಣವಾಗಿ ಬೆಳೆಯುತ್ತಿರುವಾಗಲೋ? ಇವರಿಗೆ ಖಚಿತವಾಗಿ ಅದು ಹೇಗೆ ಗೊತ್ತಾಗುತ್ತದೆ? ಆದ್ದರಿಂದಲೆ ಮಹಾತ್ಮ ಬುದ್ಧ ‘ಜ್ಯೋತಿಷ್ಯವನ್ನು ಹೇಳಿ ಉದರ ಪೋಷಣೆ ಮಾಡುವವರ ಜೊತೆ ಸಂಬಂಧ ಇಟ್ಟುಕೊಳ್ಳಬೇಡಿ’ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ‘ಜ್ಯೋತಿಷ್ಯ ಮಂತ್ರವಾದಿಗಳ ಕೈಗೆ ಸಿಕ್ಕುಬಿದ್ದು ಒದ್ದಾಡುವುದಕ್ಕಿಂತ ಯಾವುದನ್ನೂ ನಂಬದೆ ಸಾಯುವುದು ಲೇಸು’, ‘ಜ್ಯೋತಿಷ್ಯ-ಭವಿಷ್ಯ ಮುಂತಾದ ರಹಸ್ಯಗಳನ್ನೆಲ್ಲ ನೆಚ್ಚುವುದು ದೌರ್ಬಲ್ಯದ ಚಿಹ್ನೆ’ ಎಂಬುದು ವಿವೇಕಾನಂದರ ಅಭಿಪ್ರಾಯ.

ಗುಡಿ ಗುಂಡಾರ, ಮಸೀದಿ, ಇಗರ್ಜಿಗಳನ್ನು ಒಂದು ರೌಂಡು ಸುತ್ತಿ ಬಂದರಂತೂ ಎಲ್ಲಾ ಫಲಾಫಲಗಳು ಉದುರಿ ಬೀಳುತ್ತವೆ ಎಂದು ಚಿತ್ರಿಸಿ ತೋರಿಸಲಾಗುತ್ತದೆ. ಗಂಗಾ-ಯಮುನಾ-ಬ್ರಹ್ಮಪುತ್ರ ನದಿಗಳ ನೀರು ಅತ್ಯಂತ ಪವಿತ್ರ ಎಂದು ಹೇಳಾಗುತ್ತದೆ. ಹರಿದ್ವಾರ-ಋಷಿಕೇಷ-ಕೇದಾರ-ಬದರಿ-ವೈಷ್ಣವಿದೇವಿ ದೇವರ ದರ್ಶನಭಾಗ್ಯ ದೊರಕಿದರೆ ಏನೆಲ್ಲವೂ ಸಾಧ್ಯ ಎಂದು ನಂಬಿಸಲಾಗುತ್ತದೆ. ಆದರೆ ವಾಸ್ತವವಾಗಿ ಇದೆಲ್ಲ ಸಾಧ್ಯವೆ ಎಂದು ಯಾರೂ ಆಲೋಚಿಸಿ ನೋಡುವುದಿಲ್ಲ.

ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ
ತುಟ್ಟ ತುದಿಯಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ
ಅತ್ತಲಿತ್ತ ಹರಿವಮನವ ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು

ಎಂಬ ಅರಿವಿನ ಮಾತುಗಳಿಗೆ ನಾವು ಕಿವಿಕೊಡುವುದು ಯಾವಾಗ?

ತಮ್ಮ ಚಾನಲ್‌ಗಳ ಟಿ.ಆರ್.ಪಿ. ಹೆಚ್ಚಿಸುವುದಕ್ಕೆ ಏನನ್ನಾದರೂ ಕೊಡಲು ರೆಡಿಯಾಗಿರುವ, ಯಾವುದೆ ಬದ್ಧತೆಗಳನ್ನು ಇಟ್ಟುಕೊಳ್ಳದಿರುವ ಸಮೂಹ ಮಾಧ್ಯಮಗಳು ಜನ್ಮಜನ್ಮಾಂತರ ಎಪಿಸೋಡುಗಳನ್ನು ಮಾಡುತ್ತಲೆ ಜನರನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತ ನಡೆದಿವೆ. ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಈ ಐನಾತಿ ಆಸಾಮಿಗಳು ಅವರ ಮೌಢ್ಯದ ಮೇಲೆ ತಮ್ಮ ಉಪ್ಪರಿಗೆ ಕಟ್ಟಿಕೊಂಡು ಆರಾಮವಾಗಿರುತ್ತಾರೆ. ಇಂಥ ಫಟಿಂಗರನ್ನು ನೋಡಿಯೆ ಕುವೆಂಪು

ಬೆಂಕಿಯನಾರಿಸಿ ಬೂದಿಯಮಾಡಿ
ಆ ಬೂದಿಯ ಮಹಿಮೆಯ ಕೊಂಡಾಡಿ
ಪೂಜಾರಿಯೆ ಮಿಂಚುವನು

ಎಂದು ಅತ್ಯಂತ ಸ್ಪಷ್ಟವಾಗಿ ಪುರೋಹಿತರ ಚಾಲಬಾಜಿತನದ ಕುರಿತು ಹೇಳಿದರೂ ನಾವು ಎಷ್ಟು ಮಂದಿ ಆ ಮಾತುಗಳನ್ನು ಕೇಳಿಸಿಕೊಂಡಿದ್ದೇವೆ? ಹಿಂದೊಂದು ಸಂದರ್ಭದಲ್ಲಿ ತರಂಗ ಪತ್ರಿಕೆಯ ಸಂಪಾದಕನೋರ್ವ ತನ್ನ ಪತ್ರಿಕೆ ಪ್ರಳಯದ ಅಂಚಿಗೆ ತಲುಪಿದಾಗ ಪ್ರಳಯವಾಗುತ್ತದೆ ಎಂದು ಲೇಖನಗಳನ್ನು ಬರೆಬರೆದು ತನ್ನ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡ. ಆ ಪತ್ರಿಕೆಯಲ್ಲಿ ಬರೆದ ಜ್ಯೋತಿಷ್ಯಿಗಳಿಗೆ ವಿಜ್ಞಾನಜ್ಯೋತಿಷ್ಯಿಗಳೆಂದು ಕರೆದು ತನ್ನ ಬಡತನವನ್ನು ತಾನೆ ಹೇಳಿಕೊಂಡ. ಡಿವೈನ್‌ಪಾರ್ಕ್‌ನ ಮತ್ತೊಬ್ಬ ಫಟಿಂಗ ಡಾ.ಉಡುಪ ಎಂಬ ತಿರುಬೋಕಿಯೊಬ್ಬ ತಾನೇ ವಿವೇಕಾನಂದರ ಅಪರವತಾರ ಎಂದು ಹೇಳಿದ್ದನ್ನು, ವಿವೇಕಾನಂದರೆ ತನ್ನ ಮೈಯೊಳಗೆ ಪ್ರವೇಶಿಸಿ ಏನನ್ನೋ ಉಪದೇಶಿಸುತ್ತಾರೆ ಎಂದು ನಂಬಿಸಿ ಜನರನ್ನು ದಿಶಾಬೂಲ್‌ಗೊಳಿಸುತ್ತಿರುವುದನ್ನು ಬಹುದೊಡ್ಡ ವಿಸ್ಮಯ ಎಂಬಂತೆ ಪ್ರಕಟಿಸಿಬಿಟ್ಟ.

ದಕ್ಷಿಣ ಕನ್ನಡದ ಆ ಸಾಲಿಗ್ರಾಮದ ಒಂದು ತುದಿಗೆ ಶಿವರಾಮ್ ಕಾರಂತ ಎಂಬ ಅಪ್ಪಟ ವೈಚಾರಿಕ ಪ್ರಜ್ಞೆಯ ಮನುಷ್ಯನಿದ್ದರೆ ಇನ್ನೊಂದು ಕಡೆ ಚಂದ್ರಶೇಖರ ಉಡುಪ ಎಂಬ ಅವಿವೇಕಿಯೊಬ್ಬ ಮೆಲ್ಲಗೆ ಬೆಳೆದು “ವಿವೇಕ ಸಂಪದ” ಎಂಬ ಧಾರ್ಮಿಕ ಲೇಬಲ್‌ನ ಅವಿವೇಕತನವನ್ನು-ಅಜ್ಞಾನವನ್ನು ವಿವೇಕ ಎಂಬಂತೆ ಮಾರುತ್ತಿರುವುದು, ಇಂದಿನ ವಿಸ್ಮಯಗಳಲ್ಲಿ ಒಂದು.

‘ಎಲ್ಲಾ ಮೂಢನಂಬಿಕೆಗಳನ್ನು ಧ್ವಂಸಮಾಡಿ. ಗುರುವಾಗಲಿ, ಧರ್ಮ ಗ್ರಂಥಗಳಾಗಲಿ, ದೇವರಾಗಲಿ ಇಲ್ಲ. ಈ ಎಲ್ಲವೂ ನೆಲೆಯಿಲ್ಲದವು. ಅವತಾರ ಪುರುಷರನ್ನು ಪ್ರವಾದಿಗಳನ್ನು ಧ್ವಂಸ ಮಾಡಿ. ನಾನೇ ಪರಮ ಪುರುಷೋತ್ತಮ, ತತ್ವಜ್ಞಾನಿಗಳೆ ಎದ್ದು ನಿಲ್ಲಿ, ಭಯಬೇಡ. ದೇವರನ್ನು ಕುರಿತು ಮೂಢನಂಬಿಕೆಗಳನ್ನು ಕುರಿತು ಮಾತು ಬೇಡ! ಸತ್ಯಕ್ಕೇ ಜಯ ಇದು ನಿಜ, ನಾನು ಅನಂತ. ಎಲ್ಲಾ ಮೂಢನಂಬಿಕೆಗಳು ಹುರುಳಿಲ್ಲದ ಕಲ್ಪನೆಗಳು’ – ಎಂದು ಅತ್ಯಂತ ನಿಖರವಾಗಿ, ಅಷ್ಟೆ ಸತ್ವಶಾಲಿಯಾಗಿ ಹೇಳಿದ ವಿವೇಕಾನಂದರ ಮಾತುಗಳಿಗೆ ಉಡುಪ ಎಂಬ ಉಪದ್ವ್ಯಾಪಿ ಏನು ಹೇಳುತ್ತಾನೊ?

ಚದ್ಮವೇಷಧಾರಿಯಾಗಿರುವ, ಬ್ರಾಹ್ಮಣಿಕೆಯ ಪಳಿಯುಳಿಕೆಗಳ ಹಾವಳಿ ಇಪ್ಪತ್ತೊಂದನೆಯ ಶತಮಾನದ ಇಂದಿನ ಕಂಪ್ಯೂಟರ ಯುಗದ ಈ ದಿನಗಳಲ್ಲಿಯೂ ವಿಪರೀತವಾಗಿದೆ. ಅನಂತಪದ್ಮನಾಭ ದೇವಾಲಯದ ಒಳಗಡೆಯ ಕೋಣೆಯ ಬಾಗಿಲುಗಳ ಬೀಗ ತೆಗೆದರೆ ಎಂಥೆಂಥವೋ ಅನಾಹುತಗಳು ಸಂಭವಿಸುತ್ತವೆ ಎಂದು ಕೋರ್ಟ್‌ನ ಮುಂದೆಯೂ ರೀಲು ಬಿಡುತ್ತಾರೆ. ಆ ರೀಲಿನಲ್ಲಿ ಸುತ್ತಿಕೊಳ್ಳದವರು ಯಾರಿದ್ದಾರೆ? ಕೋರ್ಟಿನ ಜಡ್ಜುಗಳೆಲ್ಲರೂ ನಮ್ಮ ನಿಮ್ಮಂತೆ ಅಲ್ಲವೆ? ಹೀಗಾಗಿಯೆ ಅನಂತ ಪದ್ಮನಾಭನ ದೇವಾಲಯದ ಒಂದು ಕೋಣೆಯ ಬೀಗ ತೆಗೆಯಲಾಗಲಿಲ್ಲ.

ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಬಹುದೊಡ್ಡ ಕಿರೀಟವನ್ನು ನೀಡಿದರೂ ಬಳ್ಳಾರಿಯ ರೆಡ್ಡಿಗಳಿಗೆ ಜೇಲುವಾಸ ತಪ್ಪಲಿಲ್ಲ ಎಂದು ಯಾರಾದರೂ ಪುರೋಹಿತರನ್ನು ಕೆಣಕಿದರೆ ರೀ ದೇವರಿಗೆ ಕೊಟ್ಟ ಆ ಕಿರೀಟದ ಮೇಲೆ ತಮ್ಮ ಹೆಸರನ್ನು ಬರೆಯಿಸಿದ್ದರಿಂದಲೆ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಯಿತು ಎಂಬ ಮತ್ತೊಂದು ಸುಳ್ಳನ್ನು ಉರುಳಿಸಿ ಬಿಡುತ್ತಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಬಂದು ಸಚಿನ್ ತೆಂಡೋಲ್ಕರ ದರ್ಶನ ಮಾಡಿದ್ದರಿಂದ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸಮನ್ವಂತರ ಬರೆಯಲು ಸಾಧ್ಯವಾಯಿತಂತೆ. ಹಾಗಾದರೆ ಸಚಿನ್ನನ ಸಾಧನೆಗಿಂತಲೂ ಸುಮ್ಮನೆ ಕುಳಿತಲ್ಲಿಯೆ ಕುಳಿತು ಆಶಿರ್ವದಿಸುವ ಸುಬ್ರಮಣ್ಯನೆ ಸರ್ವಶ್ರೇಷ್ಠನೆ? ಎಂಥ ಬಾಲಿಶವಾದ ಮಾತು?

ಅಯ್ಯಯ್ಯಪ್ಪ ಸ್ವಾಮಿಯ ಹುಟ್ಟಿನ ಕತೆಯಂತೂ ಅತ್ಯಂತ ಹೇಸಿಗೆಯಿಂದ ಕೂಡಿದ್ದು. ಆದರೆ ಆ ಹಿನ್ನೆಲೆಯನ್ನು ಮಾಧ್ಯಮಗಳು ಎಲ್ಲೂ ತೋರಿಸದೆ ಅಯ್ಯಪ್ಪ ಸ್ವಾಮಿಯ ಜ್ಯೋತಿಯನ್ನು ಲೈವ್ ತೋರಿಸುತ್ತೇವೆ ಎಂದು ಕೋಟ್ಯಂತರ ಜನರನ್ನು ಮೌಢ್ಯದ ಹೊಂಡಕ್ಕೆ ತಳ್ಳುತ್ತಾರಲ್ಲ?! ಈ ಅಧಿಕಾರವನ್ನು ಇವರಿಗೆ ಯಾರು ಕೊಟ್ಟರು? ಸುಮಾರು 50 ವರ್ಷಗಳ ಹಿಂದೆಯೆ ಕೇರಳದ ವಿಚಾರವಾದಿಗಳು ಹಾಗೂ ದೇಶದ ಹಲವಾರು ಜನ ಪ್ರಾಜ್ಞರು ಅಯ್ಯಪ್ಪಸ್ವಾಮಿಯ ಪೊನ್ನಾಂಬುಲ ಮೇಡು ಬೆಟ್ಟದಲ್ಲಿ ಕಾಣಿಸುವ ಜ್ಯೋತಿ ಕೃತಕವಾದ ಜ್ಯೋತಿ ಎಂದು ಸಾರಿಕೊಂಡು ಬಂದರು. ಆ ಮಾತುಗಳಿಗೆ ಹೆಚ್ಚು ಪ್ರಚಾರವನ್ನು ಈ ಮಾಧ್ಯಮಗಳು ನೀಡಲಿಲ್ಲವೇಕೆ? ಮೌಢ್ಯವನ್ನು ಹೇಳುವುದು, ಪುರಸ್ಕರಿಸುವುದು ಕಾನೂನು ವಿರೋಧಿ ಕೃತ್ಯವೆಂದು ನಮ್ಮ ಸಂವಿಧಾನ ಹೇಳುತ್ತಿದ್ದರೂ ಯಾರೊಬ್ಬರೂ ಮಾಧ್ಯಮಗಳ ಅವಿವೇಕತನವನ್ನು ಪ್ರಶ್ನಿಸಲಿಲ್ಲ?

ಸಂಘಪರಿವಾರಿಗಳು ದೇಶದ ಚುಕ್ಕಾಣಿ ಎಂದು ಹಿಡಿದರೋ ಅಂದಿನಿಂದ ಪುರೋಹಿತರು ನೇರವಾಗಿ ಯಾವ ನಾಚಿಕೆ-ಹೆದರಿಕೆಗಳಿಲ್ಲದೆ ಧೂರ್ತರಂತೆ ಮುನ್ನುಗ್ಗಿ ಹೊರಟಿದ್ದಾರೆ. ಮೇಲ್ಪಂಕ್ತಿಯಲ್ಲಿದ್ದಾರೆ. ರವಿಶಂಕರ ಗುರೂಜಿ, ಪೇಜಾವರ ಮಠದ ಸ್ವಾಮಿಗಳ ಅಟಾಟೋಪಗಳು ಮೇರೆ ಮೀರಿವೆ. ಪ್ರತಿಯೊಂದು ಸಂಗತಿ, ಸಂದರ್ಭದಲ್ಲೂ ತಮ್ಮೊಂದಿಷ್ಟು ಇರಲಿ ಎಂದು ಮೂಗು ತೂರಿಸಿ ಇಡೀ ರಾಷ್ಟ್ರವನ್ನೆ ತಾವು ಹೊತ್ತುಕೊಂಡವರಂತೆ ಪ್ರತಿಕ್ರಿಯಿಸುತ್ತ ನಡೆದಿದ್ದಾರೆ. ನಮ್ಮ ಆಹಾರ ವಿಹಾರಗಳು ಕೂಡ ಇಂತಿಂಥವೆ ಇರಬೇಕು ಎಂದು ಫರ್ಮಾನು ಹೊರಡಿಸಿದರೆ ಅದನ್ನು ಯಾವ ನಾಚಿಕೆಯಿಲ್ಲದೆ ಬಿತ್ತರಿಸುವ ಮಾಧ್ಯಮಗಳಿಂದ ನಮಗೇನು ಲಾಭ ?

ನಮ್ಮ ದೇಶದ ಇಂದಿನ ರಾಜಕೀಯ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಅವರ ಅಡಿದಾವರೆಗಳಿಗೆ ಅಡ್ಡಬಿದ್ದಿವೆಯೇನೋ ಎಂಬಂತೆ ಕಾಣಿಸುತ್ತಿರುವುದು ಸುಳ್ಳೆ? ಇದರ ಕುರಿತು ಯಾವ ಮಾಧ್ಯಮಗಳು ಯಾಕೆ ಚಕಾರ ಎತ್ತುವುದಿಲ್ಲ? ರಾಮಚಂದ್ರಾಪುರ ಮಠದ ರಾಘವೇಶ ಭಾರತಿ ಎಂಬ ಸ್ವಾಮಿ ಸುಖಾಸುಮ್ಮನೆ ಗೋಕರ್ಣ ದೇವರ ದೇವಸ್ಥಾನಕ್ಕೆ ಅಮರಿಕೊಂಡಾಗ, ಉಡುಪಿಯ ಮಠ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಪೇಜಾವರರು ಹೊಡಕೊಂಡಾಗಲೂ ಮಾಧ್ಯಮಗಳು ಸುದ್ದಿಗಳನ್ನು ಮಾಡಲಿಲ್ಲವೇಕೆ? ಬಿಡದಿ ಆಶ್ರಮದ ನಿತ್ಯಾನಂದನ ಲೀಲೆಗಳನ್ನು ಪುಂಖಾನುಪುಂಖವಾಗಿ ಸಾರುವ ದೃಶ್ಯಮಾಧ್ಯಮಗಳು ನಿತ್ಯಾನಂದನನ್ನು ಮೀರಿಸುವ ಸ್ವಾಮಿ-ಸನ್ಯಾಸಿಗಳಿದ್ದರೂ ಅವಕೆ ಏಕೆ ರಿಯಾಯತಿ ನೀಡಿದ್ದಾರೆ? ಮಂತ್ರಾಯಲದ ರಾಘವೇಂದ್ರನನ್ನು ವಾರ ಬಂತು, ಸ್ಮರಣೆಮಾಡು ಎಂಬ ಹಾಡುಗಳನ್ನು ಹಾಡಿ ಹಾಡಿ ಡಾ.ರಾಜ್ ಆತನನ್ನು ಪಾಪುಲರ್ ಮಾಡಿದರು. ಆದರೆ ಅದೆ ರಾಜ್‌ರನ್ನು ಮಂತ್ರಾಲಯದ ಗುಡಿಯ ಪಟಾಲಂ ಗರ್ಭಗುಡಿಯ ಒಳಗೆ ಬಿಟ್ಟುಕೊಳ್ಳಲಿಲ್ಲವೇಕೆ ಎಂದು ಒಮ್ಮೆಯಾದರೂ ಯಾವುದಾದರೂ ಮಾಧ್ಯಮ ಕೂಗಿ ಹೇಳಿದೆಯೆ?

ವಾಸ್ತುವಿನ ವಿಷಯವಾಗಿಯಂತೂ ವಿವರಿಸದ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳೆ ಇಲ್ಲವೆಂದರು ನಡೆಯುತ್ತದೆ. ಈ ಹಿಂದೆ ಅಷ್ಟಾಗಿ ಗಮನಿಸದೆ ತಮ್ಮ ವಾಸ್ತವ ಸ್ಥಿತಿಗೆ ಅನುಗುಣವಾಗಿ ಮನೆಗಳನ್ನು-ಅಂಗಡಿಗಳನ್ನು ಕಟ್ಟಿಕೊಳ್ಳುತ್ತಿದ್ದವರು, ಇದೀಗ ಪ್ರತಿಯೊಂದಕ್ಕೂ ವಾಸ್ತುವಿಗೆ ತಗಲುಬಿದ್ದು ಬಿಟ್ಟಿದ್ದಾರೆ. ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದ ಅತ್ತತ್ತ ಬ್ರಹ್ಮಾಂಡದಿಂದ ಅತ್ತತ್ತ ಆವರಿಸಿಕೊಂಡಿರುವ ಶಿವ ಇರುವಿಕೆ ಯಾವುದೋ ಒಂದು ಮೂಲೆಯಲ್ಲಿ ಇಲ್ಲ ಎಂದು ಯಾವನೋ ಒಬ್ಬ ಫಟಿಂಗ ಹೇಳುತ್ತಾನೆಂದರೆ ನಾವು ಕೇಳುತ್ತ ಅದನ್ನು ಅನುಸರಿಸುತ್ತಿದ್ದೇವೆಂದರೆ ನಮ್ಮನ್ನು ಕುರಿಗಳು ಎನ್ನದೆ ಮತ್ತೆ ಯಾವ ಹೆಸರಿನಿಂದ ಕರೆಯಬೇಕು?

ಸಮಾಜದಲ್ಲಿ ರಾಜಕಾರಣಿಗಳನ್ನು ನಾವು ಬಹುದೊಡ್ಡವರು ಎಂದು ತಿಳಿದುಕೊಂಡಿರುವುದೆ ಮೊದಲ ತಪ್ಪು. ರಾಜಕೀಯದ ಚದುರಂಗದಲ್ಲಿ ಪಳಗಿರುವ ಪುಢಾರಿಗಳು ಬೌದ್ಧಿಕವಾಗಿ ಬೆಳೆದಿರುವುದಿಲ್ಲ. ಅತಿ ಕಡಿಮೆ ಅವಧಿಯಲ್ಲಿ ಮೋಸ, ದಗಲ್ಬಾಜಿತನ ಮಾಡಿ ದುಡ್ಡು ಗಳಿಸಿದಾಗ ಸಹಜವಾಗಿ ಇವರಲ್ಲಿ ಭಯ ಹುಟ್ಟಿಕೊಳ್ಳುತ್ತದೆ. ಈ ಭಯ ನಿವಾರಣೆ ಮಾಡಿ ದೇವರ ಕರುಣೆ ಒದಗಿಸುವುದಾಗಿ ಪೂಜಾರಿ ಪುರೋಹಿತರು ಹೇಳಿದಾಕ್ಷಣ ಇವರು ಅವರ ಬುಟ್ಟಿಗೆ ಬಿದ್ದು ಮಾಡಬಾರದ ಏನೆಲ್ಲವನ್ನು ಯಾವ ನಾಚಿಕೆ ಇಲ್ಲದೆ ಮಾಡತೊಡಗಿದ್ದಾರೆ. ಆಂಧ್ರದ, ಕೇರಳದ, ಜಮ್ಮು-ಕಾಶ್ಮೀರದ ದೇವರುಗಳಿಗೆ ಇವರೆಲ್ಲ ಎಡತಾಕುವುದು ಪೂಜಾರಿಯ ಅಪ್ಪಣೆಯ ಮೇರೆಗೆ. ಅವರಿಂದ ಸಂಕಲ್ಪ ಪೂಜೆ ಹೋಮ ಹವನಗಳನ್ನು ಮಾಡಿಸಿ ಬಿಟ್ಟರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ನಂಬಿಕೊಂಡು ಓಡಾಡುತ್ತಾರೆ. ಇಂಥ ಅವಿವೇಕಿಗಳ ಬಾಲಿಶ ನಡಾವಳಿಕೆಗಳನ್ನು ಪತ್ರಿಕೆಗಳು ಪ್ರಕಟಿಸುತ್ತವೆ. ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತವೆ. ‘ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ?’ ಎಂಬಂತೆ ನಾವೆಲ್ಲ ಅವನ್ನು ಅನುಸರಿಸುತ್ತೇವೆ.

‘ಬ್ರಾಹ್ಮಣ ಬನಿಯಾಗಳಿಬ್ಬರ ನೃಪರ ಕೌಲು ಕೂಟವು ಇಂಡಿಯಾದ ಇತಿಹಾಸದ ಮುಖ್ಯ ಬೋಧನೆಗಳಲ್ಲಿ ಒಂದಾಗಿದೆ. ಬನಿಯಾ ಹೊಟ್ಟೆಯನ್ನು ಆಳುತ್ತಾನೆ. ಬ್ರಾಹ್ಮಣ ದೇಶದ ಮನಸ್ಸನ್ನು ಆಳುತ್ತಾನೆ. ಈ ರಾಷ್ಟ್ರ ತನ್ನನ್ನು ಬಲಪಡಿಸಿಕೊಳ್ಳಬೇಕಿದ್ದರೆ ಅದು ಬ್ರಾಹ್ಮಣ ಬನಿಯಾ ಗುತ್ತೇದಾರಿಕೆಯನ್ನು ನಾಶ ಮಾಡುವ ಮೂಲಕವೆ ಆಗಬೇಕು’ ಎಂಬ ಡಾ.ರಾಮಮನೋಹರ ಲೋಹಿಯಾರ ನಿಷ್ಠುರವಾದ ಮಾತುಗಳ ಹಿಂದಿನ ಆಂತರ್ಯವನ್ನು ಅರಿತವರಿಗೆ ಮಾತ್ರ ಸತ್ಯ ಗೋಚರವಾಗುತ್ತದೆ.

ಯಾವುದೇ ಒಂದು ಗ್ರಂಥವಾಗಲಿ, ಇಲ್ಲಾ ವ್ಯಕ್ತಿಯಾಗಲೀ ಪರಮ ಪೂಜ್ಯ ಎಂದು ನಂಬುವುದು ಸಹಜತೆ ವಿರೋದವಾದುದು. ಅದು ಅಂಧ ಆಚರಣೆಗೆ ಅವಕಾಶ ಮಾಡಿಕೊಡುತ್ತದೆ. ಮೌಢ್ಯಕ್ಕೆ ಮೂಲವಾಗುತ್ತದೆ. ಮೂಢನಂಬಿಕೆ ಮಾನವನ ದೊಡ್ಡ ಶತ್ರು. ಎಂದು ಅರಿತುಕೊಂಡರೆ ಮಾತ್ರ ಮಾಧ್ಯಮಗಳ ಮುಖವಾಡಗಳು ಬಿಚ್ಚಿಕೊಳ್ಳುತ್ತವೆ.

“ಸತ್ಯಾನ್ವೇಷಣೆ” : ಪ್ರೋತ್ಸಾಹಕ ಬಹುಮಾನ ಪಡೆದ ಕತೆ

 – ಧ್ರುವಮಾತೆ

’ಅರ್ಥವಾಗದ ಭಾಷೇಲಿ ಸತ್ಯಣ್ಣನಿಗೆ ಪತ್ರ ಬರೀತಿದ್ದವರಾದರೂ ಯಾರು?’

ಅರ್ಥವಾಗದ ಭಾಷೇಲಿ ಮೇಲಿಂದ ಮೇಲೆ ಪತ್ರಗಳು ಬರತೊಡಗಿದಾಗ ಸತ್ಯಣ್ಣನಿಗೆ ನಿಜವಾಗಿ ತಲೆಕೆಟ್ಟು ಹೋಗಿತ್ತು. ಗಂಡನ ಒದ್ದಾಟ ನೋಡಲಾರದೆ ಸಾವಿತ್ರಿ ಅಂದಿದ್ಲು “ಮಾಲಯಕ್ಕೆ ಬೆಂಗ್ಳೂರಿಂದ ಮೂರ್ತಣ್ಣ ಭಾವ ಬಂದಿದಾರಂತಲ್ಲ. ಅವ್ರಗೆ ತೋರ್‍ಸಿ ನೋಡಾಣ, ಹತ್ತೂರು ಸುತ್ತಿದೋರವರು, ಅದೆಂತಾಂತ ಅವ್ರಿಗೆ ಗೊತ್ತಾದೀತು.” ಪತ್ನಿಯ ಮಾತು ಸರಿ ಎನಿಸಿ ಸತ್ಯಣ್ಣ ಪತ್ರಗಳ ಕಟ್ಟಿನೊಂದಿಗೆ ದೊಡ್ಡಪ್ಪಯ್ಯನ ಮನೆಯತ್ತ ಹೆಜ್ಜೆ ಹಾಕಿದ್ರು. “ಹೋಯ್ ನೀ ಯಾವಾಗ ತೆಲುಗು ಕಲ್ತದ್ದಾ ಮಾರಾಯ?”, ಮೂರ್ತಣ್ಣ ನಗೆಯಾಡಿದಾಗ ಸತ್ಯಣ್ಣ ಅಂದಿದ್ರು “ನೀವ್ ತಮಾಷೆ ಮಾಡಬ್ಯಾಡಿ ಮೂರ್ತಣ್ಣ, ಮೂರ್ ತಿಂಗ್ಳಲ್ಲಿ ಇದು ಹತ್ತನೇ ಪತ್ರ ಗೊತ್ತುಂಟಾ? ನಂಗಂತೂ ಮಂಡೆ ಕೆಟ್ಟು ಮೊಸರಾಗಿದೆ. ಅಲ್ಲಾ, ಇದ್ನೆಲ್ಲ ಅದ್ಯಾರ್ ಬರೀತಿದಾರೋ, ಯಾಕ್ ಬರೀತಿದಾರೋ ಆ ದೇವ್ರಿಗೆ, ಗೊತ್ತು ಮಾರಾಯ್ರೆ.”
“ಮೂರ್ ತಿಂಗಳಿಂದಾನಾ?! ಮತ್ಯಾಕ್ ಇಷ್ಟು ದಿನ ಸುಮ್ನಿದ್ಯೋ? ತೀರ್ಥಳ್ಳಿ ಪೇಟೇಲಿ ಯಾರಿಗಾರ ತೋರ್‍ಸಿ ಅದೆಂತಾಂತ ತಿಳ್ಕಣಾದು ತಾನೇ?”
“ಹಂಗ್ ಮಾಡಾಕ್ ಹೋಗೀನೇ ಎಡವಟ್ಟಾದ್ದಲ್ವ. ತೀರ್ಥಳ್ಳಿ ರೈಸ್ ಮಿಲ್ ರೈಟ್ರಿಗೆ ಪತ್ರಗಳನ್ನು ತೋರಿಸ್ದೆ, ಒಂದೇ ಏಟಿಗೆ ಆ ಅಸಾಮಿ ’ಏನ್ ಭಟ್ರೆ ನಿಮ್ ಊರಿಗೂ, ಕರ್ನೂಲಿಗೂ ಬಾಳಾಬಾಳಾ ದೋಸ್ತ್ ಇದ್ದಂಗಿದೆಯಲ್ಲ ಏನ್ ಸಮಾಚಾರ?’ ಅಂದ್ ಬಿಡಾದಾ? ಒಂದ್ ನಿಮಿಷ ನನ್ ಗುಂಡಿಗೆ ನಿಂತೋತು ನೋಡಿ.”
“ಹೋಯ್ , ಅದೆಂತಾಂತ ಸರ್‍ಯಾಗಿ ಹೇಳಬಾರ್‍ದನಾ?”
“ಅಯ್ಯೋ ರಾಮ್ನೆ, ಅದ್ಯಾಕೆ ಕೇಳ್ತೀರಿ ಆ ಕಥೇನ? ಹೋದ್ವರ್ಷ, ಸೂರತ್‌ಕಲ್ಲಿಗೋಗ ಬೇಕಿತ್ತು, ಆದ್ರೆ ಬಸ್ ತಪ್ಪೋತೂಂತ ಯಾವನೋ ಬಂದು ಕೇಳ್ದಾಂತ ಅಂಗ್ಡಿ ಹೂವಪ್ಪ ಅವನಂಗಡೀಲಿ ರಾತ್ರಿ ಮಲ್ಕಣಾಕೆ ಜಾಗ ಕೊಟ್ಟಿದ್ದೆ ತಪ್ಪಾತು ನೋಡಿ. ಮರ್‍ದಿನ ಬೆಳಗಾಗುತ್ತಿದ್ದಂತೆ ಆ ಅಸಾಮಿ ಹೋಗಿಯಾಗಿತ್ತು. ಆದ್ರೆ ಮದ್ಯಾಹ್ನದೊತ್ತಿಗೆ ಅಂಗ್ಡೀಗೆ ಬಂದ ಪೋಲಿಸ್ನೋರು ಹೂವಪ್ಪನ್ನ ಸ್ಟೇಷನ್ನಿಗೆ ಎಳಕಂಡು ಹೋಗಿ, ’ನಿಂಗೂ ಅವ್ನಿಗೂ ಏನ್ ಸಂಬಂಧ’ ಅಂತ ಕೇಳಿ ಹೂವಪ್ಪನ್ನ ಹಣ್ಣುಗಾಯಿ-ನೀರುಗಾಯಿ ಮಾಡಿದಾರೆ. ಯಾಕ್ ಗೊತ್ತುಂಟಾ? ಅವತ್ತು ಹೂವಪ್ಪನಂಗಡೀಲಿ ಉಳಕೊಂಡೋನು ಕರ್ನೂಲಿನ ಉಗ್ರಗಾಮಿಯಂತೆ ಮಾರಾಯ್ರೆ.”
“ಹೋಗ್ಲಿ ಬಿಡು. ನೀ ಏನೂ ಯೋಚ್ನೆ ಮಾಡಬ್ಯಾಡ. ನವ್ ಆಫೀಸ್ನಾಗೆ ತೆಲುಗಿನೋರಿದಾರೆ, ಪತ್ರಾನ ತೋರಿಸಿ, ಅದೇನೂಂತ ವಿಚಾರ್‍ಸಿ ತಿಳಿಸ್ತೀನಿ. ಅಂದಂಗೆ ಅವರೂ ಕರ್ನೂಲಿನೋರೆ,” ಮೂರ್ತಣ್ಣ ಅಂದಾಗ ಮೂಲೆಯಲ್ಲಿ ಮುದುರಿ ಮಲಗಿದ್ದ ಅನಂತಯ್ಯ ಗೊಣಗಿದ್ದರು.
“ನಮ್ ಮೀನೂನ ಕರ್ನೂಲಿಗೇ ಕೊಟ್ಟಿದ್ದು. ಬ್ಯಾಡ, ಬ್ಯಾಡಾಂದ್ರೂ ಕೇಳ್ದೆ ಆ ಪಾಪದ ಕೂಸನ್ನ ಮೈ ನೆರೆಯೋ ಮುಂಚೇನೇ ಆ ಕಣ್ ಕಾಣದಿದ್ ರಾಜ್ಯಕ್ಕೆ..”
ಸತ್ಯಣ್ಣ, ಮೂರ್ತಣ್ಣ ಮುಖ-ಮುಖ ನೋಡಿ ಕೊಂಡ್ರು. ತಕ್ಷಣ ಸತ್ಯಣ್ಣ ಅನಂತಯ್ಯನ ಹತ್ತಿರ ಹೋಗಿ ಕೇಳಿದ್ರು, “ಹೇಳಿ ದೊಡ್ಡಪ್ಪಯ್ಯ ನೀವೆಂತ ಹೇಳಿದ್ದು. ಯಾರನ್ನ ಕರ್ನೂಲಿಗೆ ಕೊಟ್ಟಿದ್ದು?” ಉಹೂಂನ್ ಅನಂತಯ್ಯ ಜಪ್ಪಯ್ಯ ಅನ್ಲಿಲ್ಲ. ಸತ್ಯಣ್ಣ ಮತ್ತೆ ಮತ್ತೆ ಪೀಡಿಸಿದಾಗ “ಥೂ ಹೋಗಾ ಆಚೆ ಮಂಗನ್  ತಂದು” ಎಂದು ಬೈದು ಮಗ್ಗುಲಾಗಿದ್ರು.

“ಮೀನು, ಮೀನಾಕ್ಷಿ, ಮೀನಾ, ಮೀನಾಕ್ಷಕ್ಷ’ ತುಂಬ ಚಿರಪರಿಚಿತ ಹೆಸರೆನ್ನಿಸಿತು ಸತ್ಯಣ್ಣನಿಗೆ. ಹೌದು, ಈ ಹೆಸರು ತನಗೆ ಚೆನ್ನಾಗಿ ಗೊತ್ತು. ಯಾರದು? ಉಹೂಂ, ಗೊತ್ತಾಗ್ತಿಲ್ಲ. ಎಲ್ಲ ಗೋಜಲು, ಗೋಜಲು. ನೆರೆದ ಮಂದಿ, ತಳಿರು-ತೋರಣ, ವಾಲಗದ ಸದ್ದು, ಅಲಂಕರಿಸಿಕೊಂಡ ಪುಟ್ಟ ಹುಡುಗಿ ಹೌದು, ಅವಳ್ಯಾರು? ತನಗೆ ಗೊತ್ತಿರುವವಳೇ ಆದ್ರೆ ಈಗ ನೆನಪಾಗ್ತಿಲ್ಲ, ಮಸುಕುಮಸುಕು ನೆನಪು, ಅಸ್ಪಷ್ಟ ದೃಶ್ಯಗಳು! ತುಂಬ ಹಿಂಸೆ ಎನಿಸಿ ಕಣ್ಮುಚ್ಚಿ ಕುಳಿತುಬಿಟ್ಟರು ಸತ್ಯಣ್ಣ.

ಹತ್ತಿರ ಬಂದ ಮೂರ್ತಣ್ಣ ” ಅಪ್ಪಯ್ಯರಿಗೆ 90 ವರ್ಷ ದಾಟ್ತು. ಜೊತೆಗೆ ಮರೆವಿನ ಖಾಯಿಲೆ ಬೇರೆ. ಅವರೆಂತ ಮಾತಾಡ್ತಾರೇಂತ ಅವರಿಗೇ ಗೊತ್ತಿರಲ್ಲ. ಅಂತಾದ್ರಾಗೆ ನೀ ಯಾಕೆ ಅವರ ಮಾತಿಗೆ ಮಂಡೆ ಕೆಡಿಸ್ಕೋತಿ. ನಾ ವಿಚಾರಿಸಿ ತಿಳಿಸ್ತೀನೀಂತ ಹೇಳಿದೀನಲ್ಲ, ಏನೂ ಯೋಚ್ನೆ ಮಾಡ ಬ್ಯಾಡ, “ಸಮಾಧಾನಿಸಿದ್ದರು.

ಮೂರ್ತಣ್ಣ ಪಕ್ಷ ಮುಗಿಸಿ ಬೆಂಗಳೂರಿಗೆ ಹೊರಟು ಹೋಗಿದ್ರು. ಆದ್ರೆ ಸತ್ಯಣ್ಣ ಮಾತ್ರ ದೊಡ್ಡಪ್ಪನನ್ನು ಬಿಟ್ಟಿರಲಿಲ್ಲ, ಅದರ ಬಾಯಿ ಬಿಡಿಸಲು ಪ್ರಯತ್ನಿಸಿದ್ದರು. ಕೆಲವೊಮ್ಮೆ ಗೆಲುವಾಗಿ ಮಾತಾಡ್ತಿದ್ದ ಅನಂತಯ್ಯ ಇದ್ದಕ್ಕಿದ್ದಂತೆ ತಟಸ್ಥರಾಗಿಬಿಡ್ತಿದ್ರು. ಮತ್ತೇ ಕೆಲವೊಮ್ಮೆ ತಾವೇ ಸಾಕಿದ ಸತ್ಯಣ್ಣನನ್ನು ಗುರುತಿಸದೇ ’ಇವನ್ಯಾರೊ ಬಂದು ನನ್ನ ಪ್ರಾಣ ತಿಂತಾನಲ್ಲೋ ಓಡಿಸ್ರೋ ಇವನನ್ನ’ ಅಂತ ಬೊಬ್ಬೆ ಹಾಕ್ತಿದ್ರು.

ವಾರದ ನಂತರ ಮೂರ್ತಣ್ಣನ ಫೋನು ಬಂದಿತ್ತು. ” ಏನೋ ದಿನಾ ಮನೆಗೆ ಹೋಗಿ ಬರ್‍ತಿದ್ಯಂತೆ, ಪ್ರಾಣೇಶ ಹೇಳ್ದ. ಅಪ್ಪಯ್ಯ ಏನಾರ ಬಾಯಿ ಬಿಟ್ರಾ?”
“ಹೂಂ, ಹಳೇದೆಲ್ಲ ಪೂರ್ತಿ ಮರೆತಿಲ್ಲ ಅವ್ರು. ನಾ ಹುಟ್ತಿದ್ದ ಹಾಗೆ ನನ್ನ ಹಡೆದಮ್ಮ ತೀರಿಕೊಂಡ್ಳಂತೆ. ನನ್ನಪ್ಪಯ್ಯಗೆ ವೈರಾಗ್ಯ ಬಂದು ದೇಶಾಂತರ ಹೋದ್ರಂತೆ. ಮೂರು ವರ್ಷದ ಮೇಲೆ ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷ ಆದೋರು ’ನಂಗೆ ಉಡುಪೀಲಿ ಅಡ್ಗೆ ಕೆಲ್ಸಸಿಕ್ಕಿದೆ. ಹುಡುಗ್ರನ್ನ ಕರ್ಕೊಂಡು ಹೋಗ್ತೀನಿ’ ಅಂದ್ರಂತೆ. ನಮ್ಮನ್ನ ಕರ್ಕೊಂಡೋಗಿ ವರ್ಷದ್ ಮೇಲೆ ಇದ್ದಕ್ಕಿದ್ದ ಹಾಗೆ ಊರಿಗ್ ಬಂದು ’ಮೀನಾಕ್ಷಿಗೆ ಮದ್ಯೆ ಮಾಡ್ತಿದೀನಿ. ಆಂಧ್ರದ ಕಡೆಯೋರು, ನಮ್ಮೋರೇ, ಉಡುಪಿಗೆ ಯಾತ್ರೆಗೆ ಬಂದೋರು ನಂಗೆ ಗುರುತಾದ್ರು. ಚುರುಕಾಗಿರೋ ಮೀನೂನ ಕಂಡು ಖುಷಿಯಾಗಿ ತಮ್ ಸೊಸೆ ಮಾಡ್ಕಾತೀವಿ ಅಂತ ಒಂದೇ ಹಠ ಹಿಡಿದಿದಾರೆ. ಹುಡುಗ ಚಂದಾಗಿದಾನೆ. ನೀವೆಲ್ಲ ಮದ್ವೆಗೆ ಬರ್‍ಬಕು’ ಅಂದ್ರಂತೆ. ಅಂದ್ರೆ ಅವತ್ತು ದೊಡಪಯ್ಯ ಮೀನೂ, ಮೀನೂಂತ ಗೊಣಗಿದ್ರಲ್ಲ, ಅವ್ಳು ನನ್ನಕ್ಕನಂತೆ. ’ಭಾಷೆ ಬರದಿರೋ ಪ್ರಾಂತ್ಯಕ್ಕೆ ಆ ಎಳೇ ತತ್ತೀನಿ ಮದ್ವೆ ಮಾಡಿ ಕಳಿಸಿ ಅದಕನ್ಯಾಯ ಮಾಡಬ್ಯಾಡ. ನಿಂಗಷ್ಟು ಕಷ್ಟವಾದ್ರೆ ಹುಡುಗ್ರನ್ನ ನಾ ಸಾಕ್ತೀನಿ’ ಅಂತ ದೊಡಪ್ಪಯ್ಯ ಎಷ್ಟು ಹೇಳಿದ್ರೂ ಕೇಳದೇ ಅಪ್ಪಯ್ಯ ಅಕ್ಕನ ಮದ್ವೆ ಮಾಡಿದ್ರಂತೆ. ತಮ್ಮ ತನ್ನ ಮಾತನ್ನ ಕೇಳಲಿಲ್ಲ ಅನ್ನಾ ಸಿಟ್ಟಿಗೆ ಅಕ್ಕನ ಮದುವೆಗೆ ಅವ್ರು ಹೋಗಿಲ್ಲಿಲ್ವಂತೆ. ಆದ್ರೆ ಅಕ್ಕನ ಮದ್ವೆಯಾಗಿ ಆರು ತಿಂಗ್ಳಿಗೇ ಅಪ್ಪಯ್ಯ ತೀರಿಕೊಂಡ್ರೂತ ಹೇಳಿ ಯಾರೋ ನನ್ನ ತಂದು ದೊಡಪಯ್ಯನ ಹತ್ರ ಬಿಟ್ರಂತೆ. ’ನಿನಪ್ಪಯ್ಯ ಗೊಟಕ್ ಅಂದ; ಆಮೇಲೆ ಮೀನಾಕ್ಷಿ ಮನೆಯೋರ ಸಂಪರ್ಕವೇ ಆಗ್ಲಿಲ್ಲ. ಒಟ್ಟಿನಲ್ಲಿ ನಿನ್ನಪಯ್ಯ ನಿನ್ನಕ್ಕಂಗೆ ಮೋಸ ಮಾಡ್ದ’ ಅಂತ ಕಣ್ಣೀರು ಹಾಕಿದ್ರು. ’ ಮಿನಾಕ್ಷಿ’ ಅನ್ನ ಹೆಸ್ರು ನಂಗೆ ತುಂಬ ಗೊತ್ತಿದೆ ಅನ್ನಿಸ್ತಿರತ್ತೆ ನಂಗೆ. ಅಪ್ಪಯ್ಯ ಹೇಳಾದು ದಿಟವೇ ಇರಬೌದು ಅಲ್ವಾ ಮೂರ್ತಣ್ಣ?”

“ಇರಬೌದೇನು ದಿಟವೇ. ಯಾಕೆಂದ್ರೇ ನಿಂಗೆ ಪತ್ರ ಬರೆದಿರೋಳು ಮೀನಾಕ್ಷಿ ಅನ್ನೋಳೇಯ. ’ನಾ ನಿನಕ್ಕ, ಗಂಡ ತೀರಿಕೊಂಡಿದಾರೆ, ಮದ್ವೆಗಿರಾ ಮಗ್ಳಿದಾಳೆ, ಏನಾರ ಸಹಾಯ ಮಾಡೂಂತ’ ಎಲ್ಲ ಕಾಗದದಲ್ಲೂ ಬರಕಂಡಿದಾಳೆ. ಏನಾರ ಆಗ್ಲಿ, ನನ್ ಫ್ರೆಂಡೊಂಬ್ರು ಕರ್ನೂಲಿನೋರಿದಾರೆ ಅಂದಿದ್ನಲ್ಲ. ಅವ್ರ ಹೆಸ್ರು ಸತೀಶ್‌ಬಾಬು ಅಂತ. ಅವರ್ ಜತೆ ಒಂದಪ ಕರ್ನೂಲಿಗೆ ಹೋಗಿ ಬಾ ನೋಡಾಣ,” ಮೂರ್ತಣ್ಣ ಅಂದಿದ್ರು. ಒಪ್ಪಿದ ಸತ್ಯಣ್ಣ ಕರ್ನೂಲಿಗೆ ಹೊರಟಿದ್ರು.

“ಇಲ್ಲಿಂದ ಬೆಂಗ್ಳೂರು, ಅಲ್ಲಿಂದ ಕರ್ನೂಲು ಅದೆಷ್ಟು ದೂರವೋ ಬ್ಯಾಡ ಮಾರಾಯ್ತಿ ಇವೆಲ್ಲ,” ಸತ್ಯಣ್ಣ ಅಂತಿದ್ರೆ “ನೀವ್ ಸುಮ್ನಿರಿ, ನೀವೇನು ನಡಕಂಡು ಹೋಗ್ತೀರಾ? ಇಲ್ವಲ್ಲ. ಬಸ್ಸಲ್ಲೋ, ರೈಲಲ್ಲೋ ತಾನೆ ಹೋಗದು. ಇಷ್ಟಕ್ಕೂ ಮೂರ್ತಣ್ಣ ಭಾವನ ಫ್ರೆಂಡೂ ಜತೇಲಿರ್‍ತಾರಲ್ಲ. ಐವತ್ತು ವರ್ಷದ ಮೇಲೆ ಒಡಹುಟ್ಟಿದೋಳನ್ನು ನೋಡ್ತಿದೀರಿ, ಬರಿಗೈಲಿ ಹೋದ್ರೆ ಏನ್ ಚಂದ?” ಅಂತೇಳಿ ಸಾವಿತ್ರಿ ಮನೇಲೇ ಬೆಳೆದ 25 ಕೆ.ಜಿ ಅಕ್ಕಿ, 25 ತೆಂಗಿನಕಾಯಿ, 5 ಕೆ.ಜಿ. ಕಾಫಿಪುಡಿ ಎಲ್ಲ ಮೂಟೆ ಕಟ್ಟಿ ಕೊಟ್ಟಿದ್ಲು. “ಹೋಯ್, ಸಾಲ ಮಾಡಿಯಾದ್ರೂ ಸೈ, ಅತ್ಗೆ ಕೈಮೇಲೆ ಒಂದೈದು ಸಾವ್ರ ಹಾಕಿ ಬನ್ನಿ. ಹೋಯ್ ಇಲ್ ಕೇಳಿ ಇನ್ನೊಂದು ವಿಷ್ಯ. ಮದ್ವೆಗಿರಾ ಮಗ್ಳಿದ್ದಾಳೆ ಅಂತ ಬರಕಂಡಿದಾರಲ್ಲ ಅತ್ಗೆ ನಮ್ ಗುರೂಗೇನಾರಾ ಆಗತ್ತಾಂತ ವಿಚಾರಿಸಿ.” ವಿಷಯ ಪ್ರಸ್ಥಾಪಿಸೋ ಮೊದ್ಲೇ “ನೀವ್ ನೆಗಾಡ ಬಾರ್‍ದು” ಅಂತ ಪತ್ನಿ ಹೇಳಿದ್ರೂ ಸತ್ಯಣ್ಣ ಗೊಳ್ಳನೆ ನಕ್ಕು ಬಿಟ್ಟಿದ್ರು.

ಒಂದೂವರೆ ದಿನದ ಪ್ರಯಾಣದ ನಂತರ ಸತೀಶ್‌ಬಾಬು ಜತೆ ಕರ್ನೂಲು ತಲುಪಿದ ಸತ್ಯಣ್ಣ ತುಂಬ ಉದ್ವೇಗಗೊಂಡಿದ್ರು. ಪೂರ್ತಿ ಹಳೆಯದಾದ ಮನೆಯೊಂದರ ಮುಂದೆ ನಿಂತು ಬಾಗಿಲು ಬಡಿದಾಗ ಒಳಗಿಂದ ’ಎವರಂಡಿ?’ (ಯಾರ್ರಿ?) ಎಂಬ ಕ್ಷೀಣ ದನಿ ಕೇಳಿತ್ತು. ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆದ ತೀರ ಬಡಕಲು ಹೆಂಗಸೊಬ್ಬರು “ಎವರಂಡಿ? ಎವರು ಕಾವಲಾ? “(ಯಾರ್‍ರಿ? ಯಾರು ಬೇಕಾಗಿತ್ತು.) ಅಂತ ಕೇಳಿದ್ರು. ಅವರನ್ನು ನೋಡುತ್ತಲೇ ಅವರು ಸತ್ಯಣ್ಣನ ಅಕ್ಕನೆಂದು ತಿಳಿದು ಹೋಗಿತ್ತು ಸತೀಶ್‌ಬಾಬುಗೆ. ಅಷ್ಟೊಂದು ಹೋಲಿಕೆ ಇತ್ತು ಅಕ್ಕ-ತಮ್ಮನಲ್ಲಿ! ಆದರೂ ಕೇಳಿದ್ದರವರು “ನೂವು ಮೀನಾಕ್ಷಿಯಮ್ಮ ಕದ?” (ನೀನು ಮೀನಾಕ್ಷಮ್ಮ ಅಲ್ವಾ?) “ಅವುನು, ಮಿರೂ?” (ಹೌದು, ನೀವು?) ಅಂದ ಆ ಹೆಂಗಸು ಹಿಂದೆಯೇ ನಿಂತಿದ್ದ ಸತ್ಯಣ್ಣನನ್ನು ಕಂಡು ಬಾಯಲ್ಲಿ ಮಾತು ಹೊರಡದೇ ಕಲ್ಲಿನಂತೆ ನಿಂತು ಬಿಟ್ಟಿದ್ರು! ಅಷ್ಟೇ ಉದ್ವೆಗಗೊಂಡಿದ್ದ ಸತ್ಯಣ್ಣ ಅದು ಹೊರಬಾಗಿಲೆಂಬುದನ್ನು ಮರೆತು ಅಕ್ಕನ ಕಾಲಿಗೆರಗಿದ್ರು. ಐವತ್ತು ವರ್ಷಗಳ ನಂತರ ಅಕ್ಕ-ತಮ್ಮನ ಮಿಲನವಾಗಿತ್ತು! ತಕ್ಷಣ ಎಚ್ಚೆತ್ತ ಮೀನಾಕ್ಷಿ ತಮ್ಮನನ್ನೆಬ್ಬಿಸಿ “ರಂಡಿ, ರಂಡಿ, ಲೋಪಲ ರಂಡಿ” (ಬನ್ನಿ, ಬನ್ನಿ, ಒಳಗೆ ಬನ್ನಿ) ಅಂತ ಒಳಕರೆದು ಉಪಚರಿಸಿದ್ರು.

ಮನೆಯ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಕಾಫಿ ಕುಡಿದು, ಸ್ನಾನ ಮುಗಿಸಿ ಬಂದವರಿಗೆ ಮೀನಾಕ್ಷಿ ತಿಂಡಿ ಎಂದು ತಂದಿತ್ತ ಒಣ ಅವಲಕ್ಕಿ ಅವರ ಬಡತನವನ್ನು ಸಾರಿ ಹೇಳ್ತಿತ್ತು. ತಿಂಡಿ ಮುಗಿಸಿ ಎದುರು ಬದುರು ಕೂತ ಅಕ್ಕ ತಮ್ಮನಿಗೆ ಮಾತಾಡಲು ಬೆಟ್ಟದಷ್ಟಿತ್ತು, ಆದ್ರೆ ಭಾಷೆ ತೊಡಕಾಗಿತ್ತು. ತೀರ ಎಳೆಯ ವಯಸ್ಸಿನಲ್ಲಿ ಮದುವೆಯಾಗಿ ಕರ್ನೂಲು ಸೇರಿದ ಮೀನಾಕ್ಷಿಗೆ ಕನ್ನಡ ಪೂರ್ತಿ ಮರೆತೇ ಹೋಗಿತ್ತು. ಇನ್ನು ಸತ್ಯಣ್ಣನಿಗೆ ತೆಲುಗಿನ ಗಂಧ-ಗಾಳಿಯೇ ಇರಲಿಲ್ಲ. ಇಬ್ಬರ ನಡುವೆ ಭಾಷಾಂತರಿಯಾಗಿ ಕುಳಿತರು ಸತೀಶ್‌ಬಾಬು.

“ಮದ್ವೆ ಮಾಡಿ ಕಳಿಸಿಬಿಟ್ರೆ ಮುಗೀತಾ ತವರಿನ ಜವಾಬ್ದಾರಿ? ಒಂದ್ಸಾರಿಯಾದ್ರೂ ಯಾರಾದ್ರೂ ಬಂದು ನಾ ಹೇಗಿದೀನೀಂತ ನೋಡಿದ್ರಾ? ಏನೋ ಅತ್ತೆ, ಮಾವ ಒಳ್ಳೆಯವರು ಮಗಳ ತರ ನೋಡಿಕೊಂಡ್ರು. ಪ್ರೈವೇಟಾದ್ರೂ ನಿನ್ ಭಾವನಿಗೆ ಒಳ್ಳೇ ಕೆಲಸವೇ ಇತ್ತು. ಅವರಿದ್ದಾಗ ಸುಖವಾಗೇ ಇದ್ವಿ. ಅವರು ಹೋಗಿದ್ದೇ ಹೋಗಿದ್ದು ನಂಗೆ ಬಿ.ಪಿ., ಶುಗರ್, ಹಾರ್ಟ್ ಪ್ತಾಬ್ಲಮ್, ಎಲ್ಲಾ ಒಟ್ಟಿಗೇ ಶುರುವಾಯ್ತು, ಜೀವನ ನರಕವಾಯ್ತು. ಔಷಧಿಗೋಸ್ಕರ ಮನೆಯ ಒಂದೊಂದೇ ಸಾಮಾನು ಮಾರತೊಡಗಿದೆವು, ಆಗಲೇ ನಿನ್ ಭಾವನ ಪೆಟ್ಟಿಗೇಲಿ ಊರಿನ ಅಡ್ರೆಸ್ ಸಿಕ್ಕಿದ್ದು. ನಿನ್ ಹೆಸ್ರು ಮಾತ್ರ ಚೆನ್ನಾಗಿ ನೆನಪಿತ್ತು ನಂಗೆ, ಹಾಗಾಗಿ ಪತ್ರ ಬರೆಸಿ ಹಾಕ್ದೆ ಮಗಳ ಕೈಲಿ. ನೋಡು, ಇವ್ಳೇ ನನ್ ಮಗ್ಳು ಭಾರ್ಗವಿ. ಎಂಟತ್ತು ಮಕ್ಕಳು ಸತ್ತು ಕೊನೆಗುಳಿದೋಳು. ಬುದ್ಧಿವಂತೆ, ಅದ್ರೆ ಓದಿಸ್ಲಿಕ್ಕಾಗಿಲ್ಲ ಮುಂದೆ. ಹೈಸ್ಕೂಲು ಮುಗೀತಿದ್ದ ಹಾಗೆ ಟೈಲರಿಂಗ್ ಕಲಿತ್ಲು. ಈಗ ನಮಗೆ ಅದೇ ಜೀವನಾಧಾರ,” ಬಡಬಡನೆ ಮಾತಾಡಿದ್ರು ಮೀನಾಕ್ಷಿ.

“ನಿನ್ ಮದ್ವೆ ಆದಾಗ ನಂಗೆ ಬರೀ ಐದು ವರ್ಷವಂತೆ. ನಿನ್ ಮದ್ವೆಯಾಗಿ ಆರು ತಿಂಗ್ಳಿಗೇ ಅಪ್ಪಯ್ಯ ತೀರಿಕೊಂಡ್ರಂತೆ. ನಂಗವರನ್ನು ನೋಡಿದ ನೆನಪೇ ಇಲ್ಲ. ಇನ್ನು ನಿನ್ನ ನೆನಪೆಲ್ಲಿಂದ ಇರಬೇಕು? ನಿನ್ ಪತ್ರ ಬರೋತನಕ ನಂಗೆ ಒಬ್ಳು ಅಕ್ಕ ಇದಾಳೇನ್ನೋದೇ ಮರೆತೋಗಿತ್ತು. ನನ್ನ ಸಾಕಿ, ಬೆಳೆಸಿದ್ದೆಲ್ಲ ದೊಡ್ಡಪ್ಪಯ್ಯನೇ. ಅವರಿಗಿಬ್ರು ಮಕ್ಳು ಕೃಷ್ಣಮೂರ್ತಿ, ಪ್ರಾಣೇಶಾಂತ. ನಿನ್ ಪತ್ರ ಕಂಡ ಕೂಡ್ಲೆ ಬರ್‍ಲಿಕ್ಕೆ ನಂಗೆಲ್ಲಿ ತೆಲುಗು ಬರ್‍ತಿತ್ತು ಹೇಳು? ಮೂರ್ತಣ್ಣನೇ ಯಾರಿಗೋ ಪತ್ರ ತೋರಿಸಿ, ಅದ್ರಲ್ಲಿರಾ ವಿಚಾರ ನಂಗ್ ತಿಳಿಸಿ, ಇವರ್ ಜತೆ ನನ್ಗಿಲ್ಲಿಗೆ ಬರ್‍ಲಿಕ್ಕೆ ಸಹಾಯ ಮಾಡಿದ್ದು. ಇವರು ಸತೀಶ್‌ಬಾಬುಂತ, ಮೂರ್ತಣ್ಣನ ಫ್ರೆಂಡು, ಈ ಊರಿನೋರೇ ಇವ್ರು.”

ಮೀನಾಕ್ಷಿ ಸತ್ಯಣ್ಣನ ಸಂಸಾರದ ಬಗ್ಗೆ ವಿಚಾರಿಸಿದಾಗ ಅವರೆಂದಿದ್ರು, “ಹೆಂಡ್ತಿ ಸಾವಿತ್ರಿ ದಕ್ಷಿಣ ಕನ್ನಡ ಜಿಲ್ಲೆಯೋಳು, ನಂಗಿಬ್ರು ಗಂಡು ಮಕ್ಕಳು, ಇಬ್ರಿಗೂ ವಿದ್ಯೆ ಅಷ್ಟಕ್ಕಷ್ಟೇ. ಹೈಸ್ಕೂಲು ಮುಗಿಸಿದಾರೆ. ದೊಡ್ಡೋನಿಗೆ ಪ್ಯಾಟೆ ಹುಚ್ಚು. ಹಂಗಾಗಿ ಮಂಗ್ಳೂರು ಸೇರಕಂಡು ಹೋಟ್ಲಲ್ಲಿ ಮೇನೇಜರ್ ಆಗಿದಾನೆ. ಎರಡ್ನೇಯವನು ಮಾತ್ರ ನಮ್ದೇ ಜಮೀನು, ತೋಟ ನೋಡಿಕೊಂಡಿದಾನೆ. ಇಗಾ, ಇದೆಲ್ಲ ನಮ್ ತೋಟದ್ದೇ. ನಿಂಗೇಂತ ನಿನ್ ನಾದ್ನಿ ಕಳ್ಸಿದಾಳೆ.” ಸತ್ಯಣ್ಣನ ಮಾತು ಕೇಳಿ ತಾಯಿ-ಮಗಳ ಮುಖ ಊರಗಲವಾಗಿತ್ತು!

ಮರುದಿನ ಊರಿಗೆ ಹೊರಡುವ ತನಕವೂ ಸತೀಶ್‌ಬಾಬು ಸ್ವಲ್ಪವೂ ಬೇಸರಿಸದೇ ಅಕ್ಕ-ತಮ್ಮನ ಮಾತಿಗೆ ಸಹಕರಿಸಿದ್ರು. ಒಂದೆರಡು ದಿನವಿದ್ದು ಹೋಗುವಂತೆ ಅಕ್ಕ ಒತ್ತಾಯಿಸಿದಾಗ “ಇಲ್ಲ ಅಡಿಕೆ ಕೊಯಿಲು ನಡೀತಿದೆ, ಹೋಗ್ಲೇಬೇಕು. ಎಲ್ಲಾ ಮುಗಿದ್ಮೇಲೆ ಬರ್‍ತೀನಿ. ಸಾವಿತ್ರಿ ತಿರುಪತಿ ನೋಡ್ಬೇಕೂಂತಿದ್ಲು. ಎಲ್ರೂ ಒಟ್ಟಿಗೆ ತಿರುಪತಿಗೆ ಹೋಗಿ ಹಂಗೇ ಊರಿಗೆ ಹೋಗೋಣ. ದೊಡ್ಡಪ್ಪಯ್ಯಂಗೆ ಇನ್ನೂ ನಿನ್ನ ನೆನೆಪಿದೆ; ನಾ ನಿಮ್ಮೂರಿಗೆ ಬರ್‍ತೀನಿ ಅಂತಿದ್ದ ಹಾಗೇ ’ಮೀನೂನ ಕರ್ಕಂಬಾ, ಅದ್ನ ನೋಡ್ದೇ ಯಾವ ಕಾಲವಾತೋ’ ಅಂದಿದಾರೆ. ಆದ್ರೆ ನಂದೊಂದು ಷರತ್ತು. ಇನ್ನೊಂದ್ಸತಿ ನಾ ಬರೋದ್ರಾಗೆ ನೀವಿಬ್ರೂ ಕನ್ನಡ ಕಲ್ತಿರಬೇಕು ಮತ್ತೆ, ಕೇಳ್ತೆನೇ ಹುಡ್ಗಿ?” ಸತ್ಯಣ್ಣ ಸೊಸೇನ ತಮಾಷೆ ಮಾಡಿದ್ರು. ’ಖಂಡಿತ ಹೆಂಡ್ತಿ ಜತೆ ಬರಬೇಕು’ ಅಂತ ಅಕ್ಕ ಪದೇ ಅಂದಾಗ ಸರಿಯೆಂದ ಸತ್ಯಣ್ಣ ಅಕ್ಕನ ಕೈಗೆ ಐದು ಸಾವಿರ ರೂಪಾಯಿ ಇಟ್ಟಿದ್ರು. ಈಗಂತೂ ಮೀನಾಕ್ಷಿಗೆ ದುಃಖ ತಡಿಲಿಕ್ಕಾಗಿರಲಿಲ್ಲ, ಆದರೆ ಭಾರ್ಗವಿ ಕಂಗಳಲ್ಲಿ ನಕ್ಷತ್ರದ ಹೊಳಪು!

ಮಾತು ಕೊಟ್ಟಂತೆ, ಮೂರು ತಿಂಗಳ ನಂತರ ಸತ್ಯಣ್ಣ ಮತ್ತೆ ಕರ್ನೂಲಿಗೆ ಹೋಗಿದ್ರು. ಆದ್ರೆ ಸಾವಿತ್ರಿ ಬರದ ಕಾರಣ ತಿರುಪತಿಗೆ ಹೋಗುವುದು ಕ್ಯಾನ್ಸಲ್ ಆಗಿ, ಅಕ್ಕ, ಅಕ್ಕನ ಮಗಳೊಂದಿಗೆ ಊರಿಗೆ ಮರಳಿದ್ರು.

ಸಾವಿತ್ರಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದ್ರೆ ಅವಳಿಗಿಂತ ಸಂತೋಷ ಪಟ್ಟೋರು ಅನಂತಯ್ಯ. ಮರೆವಿನ ಖಾಯಿಲೆ ಇದ್ದರೂ ಐವತ್ತು ವರ್ಷಗಳ ದೀರ್ಘಾವಧಿಯ ನಂತರವೂ ತಮ್ಮನ ಮಗಳನ್ನು ಗುರುತಿಸಿದ್ರು. “ಹ್ಯಾಂಗಿದ್ದಿ ಕೂಸು?” ತಲೆ ನೇವರಿಸಿ ಕಣ್ಣೀರು ಹಾಕಿದ್ರು.

“ಅತ್ತೆ ಬಂದು ಒಂದು ವಾರವಾತು, ಒಂದ್ಸರಿ ಬಂದು ಮಾತಾಡ್ಸಿ ಹೋಗ್ ಬಾರ್‍ದನಾ?” ತಾಯಿ ಪದೇ ಪದೇ ಫೋನು ಮಾಡಿದಾಗ ಗುರುಗುಡುತ್ತಲೇ ಬಂದ ಗುರುರಾಜ, “ನೋಡು, ಮದ್ವೆ ಗಿದ್ವೆ ಅಂತೆಲ್ಲ ಏನಾರ ರಗಳೆ-ರಾಮಾಯಣ ತಗದ್ಯೋ ನಾ ದೇಶಾಂತ್ರ ಹೋಗ್ತೀನಷ್ಟೇ. ಮದ್ಲೇ ನಮ್ದು ತೊಳೆದಿಟ್ಟ ಕೆಂಡದ ವಂಶ, ಅದ್ರ ಮೇಲೆ ಈ ಮನೇಗೆ ಬಂದ್ ಸೇರಾದೂ ಅಂತಾ ಹೆಣ್ಣೇ ಅಗ್ಬೇಕಾ?” ಅಂದವನೇ ಗುಡು-ಗುಡು ಉಪ್ಪರಿಗೆ ಏರಿದ್ದ.

“ಅಯ್ಯೋ ರಾಮ್ನೇ, ಏನಾತಿವ್ನಿಗೆ? ಏನೇನೋ ಮಾತಾಡ್ತಾನಲ್ಲ, ಮಂಗನ್ ತಂದು” ಸಾವಿತ್ರಿ ಗೊಣಗಿದ್ಲು.

ತಂದೆಯೊಡನೆ ತೋಟಕ್ಕೆ ಹೋಗಿದ್ದ ಅತ್ತೆ, ಅವ್ರ ಮಗ್ಳು ಮನೆಗೆ ಬಂದ್ಮೇಲೂ ಗುರಾಜ ಉಪ್ಪರಿಗೆಯಿಂದ ಇಳೀಲಿಲ್ಲ. ರಾತ್ರಿ ಊಟಕ್ಕೆ ತಾಯಿ ಕರೆದಾಗ ವಿಧಿ ಇಲ್ಲದೇ ದುಮುಗುಡುತ್ತಲೇ ಕೆಳಗಿಳಿದು ಬಂದಿದ್ದ. ತಂದೆ, ತಮ್ಮನ ಮದ್ಯೆ ಊಟಕ್ಕೆ ಕೂತೋನು ತಲೆ ಎತ್ತಿರಲಿಲ್ಲ. ’ಇವ್ನೇ ನನ್ ದೊಡ್ಮಗ ಮಂಗ್ಳೂರಾಗಿರಾದು’ ಅಂತ ತಂದೆ ಅತ್ತೆಗೆ ಪರಿಚಯಿಸಿದಾಗ ಮಾತ್ರ ಬೇರೆ ದಾರಿ ಕಾಣದೇ ತಲೆ ಎತ್ತಿದ್ದ. ಅಷ್ಟೇ ಶಾಕ್’ ಹೊಡೆಸಿ ಕೊಂಡವನಂತಾಗಿದ್ದ! ಅಣ್ಣನ ಅವಸ್ಥೆ ಕಂಡು ನಾಗ್ರಾಜ ಮುಸಿ-ಮುಸಿ ನಕ್ಕಿದ್ದ. ಊಟ ಮುಗಿದು ಕೈತೊಳೀಲಿಕ್ಕೆ ಬಂದಾಗ ತಮ್ಮನ ಬೆನ್ನಿಗೊಂದು ಗುದ್ದಿದ್ದ, “ಇಜ್ಜಲಿನ ಬಣ್ಣ, ಬಾಯ್ತುಂಬ ಹುಳುಕು ಹಲ್ಲು ಅಂತ ಏನೇನೋ ಹೇಳಿ ನನ್ನೇ ಮಂಗ ಮಾಡಿದ್ಯನಾ, ಪೆಕರನ್ನ ತಂದು.”

ಊಟ ಮುಗಿಸಿ ಎಲೆಯಡಿಕೆ ಹಾಕ್ತಿದ್ದಾಗ ಸತ್ಯಣ್ಣ ಅಕ್ಕನಿಗಂದ್ರು “ನಿನ್ ಮಗ್ಳನ್ನ ನಮ್ಮನೆ ಸೊಸೆ ಮಾಡ್ಕಾಬೇಕೂಂತ ನಮ್ ಸಾವಿತ್ರಿ ಆಸೆ. ನಮ್ ಕರಿಯನ್ನ ದಂತದ ಗೊಂಬೆ ತರಾ ಇರೋ ನಿನ್ ಮಗ್ಳು ಒಪ್ಪಬೇಕಲ್ಲ?’

“ಏನೋ ಹಾಗಂದ್ರೆ, ಅವ್ಳು ತಂದೆ ತರ ಬೆಳ್ಳಗೆ ಲಕ್ಷಣವಾಗಿದಾಳೆ ನಿಜ, ಆದ್ರೆ ಅವಳ್ನ ಹಡೆದ ನಾನು ಕಪ್ಪೇ ಅಲ್ವಾ? ನಿಜವಾಗಿ ನಿನ್ ಮಗ ಇವಳನ್ನೇನಾರ ಒಪ್ಪಿದ್ರೆ ಅದು ನಮ್ಮ ಎಷ್ಟೋ ಜನ್ಮಗಳ ಪುಣ್ಯ ಅಂದ್ಕೋತೀವಿ.” ಮೀನಾಕ್ಷಿ ಹೇಳ್ತಿದ್ದ ಹಾಗೆ ಸಾವಿತ್ರಿ ಅಂದಿದ್ಲು “ಓಯ್ ಕೇಳಿ ಇಲ್ಲಿ, ಗುರಾಜ ಈಗ್ಲೇ ಮದ್ವೆ ಆಗಲ್ವಂತೆ.” ತಕ್ಷಣ ಗುರಾಜನೆಂದಿದ್ದ “ಥೂ, ನಾ ಏನೋ ತಮಾಷಿ ಮಾಡೀಲೆ ನೀ ಎಂತ ಮಾರಾಯ್ತಿ?” ಗುರಾಜನ ಮಾತು ಕೇಳಿ ಸತ್ಯಣ್ಣ, ಸಾವಿತ್ರಿ, ಮೀನಾಕ್ಷಿ, ನಾಗ್ರಾಜ ಒಟ್ಟಿಗೇ ಗೊಳ್ಳನೆ ನಕ್ಕು ಬಿಟ್ಟಿದ್ರು. ಸತ್ಯಣ್ಣ ಮಗ್ನಿಗೆ ತಮಾಷಿ ಮಾಡಿದ್ರು, “ಅಂದ್ರೇ, ನಮ್ ಭಾರ್ಗವಿ ನಿಂಗೊಪ್ಗೆ ಅಂತಾತು, ಈಗ್ ನೀ ಹೇಳೇ ಹುಡ್ಗಿ ನಮ್ ಕರಿಯ ನಿಂಗ್ ಒಪ್ಗೇನಾ?”

’ಥೂ, ಈ ಅಪ್ಪಯ್ಯಂಗೆ ಯಾವಾಗ್ಲೂ ತಮಾಷಿನೇ.” ಗುರಾಜ ನಾಚಿದರೆ, ಪಳಕ್ಕನೆ ನಕ್ಕ ಭಾರ್ಗವಿ ಮುಖ ಕೆಂಪಾಗಿತ್ತು!

ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ?


-ಚಿದಂಬರ ಬೈಕಂಪಾಡಿ


ಬಿಜೆಪಿಗೆ ಇಂಥ ಸ್ಥಿತಿ ಬರುತ್ತದೆಂದು ಬಹುಷ: ಯಾರೂ ಊಹಿಸಿರಲಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ಒಂದು ರಾಜ್ಯ ಘಟಕವನ್ನು ತನ್ನ ಅಂಕಿತದಲ್ಲಿಟ್ಟುಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದೆ ಹೈಕಮಾಂಡ್ ಎನ್ನುವುದು ಸಾಮಾನ್ಯ ಸಂಗತಿಯಲ್ಲ. ಸಂಘಪರಿವಾರದ ಶಿಸ್ತು, ಬದ್ಧತೆ, ಸಾಮಾಜಿಕ ಕಾಳಜಿಯನ್ನು ಬಿಜೆಪಿಯಿಂದ ಜನರು ನಿರೀಕ್ಷೆ ಮಾಡಿದ್ದರೆ ಅದು ಅಪರಾಧವೆನಿಸುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ, ಕುಟುಂಬ ರಾಜಕಾರಣ ಅಥವಾ ಅರಸೊತ್ತಿಗೆಯನ್ನೇ ಒಪ್ಪಿಕೊಂಡು ಸದಾಕಾಲ ಹೈಕಮಾಂಡ್ ಮುಂದೆ ಮಂಡಿಯೂರಿ ಕುಳಿತುಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಗೌಡರ ಕುಟುಂಬದ ಹಿಡಿತದಲ್ಲೇ ಇರುವುದರಿಂದ, ಪ್ರಜಾಪ್ರಭುತ್ವ ಎನ್ನುವುದು ಗೌಡರ ಇಶಾರೆಯಲ್ಲೇ ಇರುವುದರಿಂದ ಅದೂ ಕೂಡಾ ಸುಲಭವಾಗಿ ಜೀರ್ಣವಾಗುವುದಿಲ್ಲ. ಇಂಥ ಕಾಲಘಟ್ಟದಲ್ಲಿ ಹಿಂದುತ್ವದ ಆಕರ್ಷಣೆಗೆ ಒಳಗಾದ ಯುವಕರು ಬಿಜೆಪಿಯನ್ನು ಆವಾಹಿಸಿಕೊಂಡದ್ದು ವಾಸ್ತವ.

ರಾಮಜನ್ಮಭೂಮಿ, ದತ್ತಪೀಠ, ಈದ್ಗಾ ಮೈದಾನ; ಈ ಮೂರು ವಿಚಾರಗಳು ಈ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದ ದಡ ಮುಟ್ಟಿಸಲು ಕಾರಣವಾಯಿತು ಎನ್ನುವುದನ್ನು ಇತಿಹಾಸ ಅವಲೋಕಿಸಿ ಅರಿತುಕೊಳ್ಳಬಹುದು. ಕಳೆದ ಒಂದು ದಶಕದಲ್ಲಿ ಬಿಜೆಪಿ ಒಂದು ಪ್ರಬಲ ವಿರೋಧಪಕ್ಷವಾಗಿ ಕಾಣಿಸಿಕೊಂಡಿದ್ದರೆ ಅದಕ್ಕೆ ಶಿಕಾರಿಪುರದ ಸಿಡಿಲಮರಿ ಬಿ.ಎಸ್.ಯಡಿಯೂರಪ್ಪ ಅವರ ಕಾಣ್ಕೆಯೂ ಕಾರಣ. ನಿರಂತರವಾಗಿ ಬಿಜೆಪಿಯನ್ನು ಚಲಾವಣೆಯಲ್ಲಿಡುವ ಮೂಲಕ ಗಟ್ಟಿಯಾದ ನಾಯಕತ್ವ ಕೊಟ್ಟರು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಕರಂಬಳ್ಳಿ ಸಂಜೀವ ಶೆಟ್ಟಿ, ಡಾ.ದತ್ತಾತ್ರಿ, ಕೆ.ರಾಮ್ ಭಟ್, ಡಾ.ವಿ.ಎಸ್.ಆಚಾರ್ಯ, ಡಿ.ಎಚ್.ಶಂಕರಮೂರ್ತಿ, ಬಿ.ಎಸ್.ಯಡಿಯೂರಪ್ಪ, ಹೀಗೆ ಕರ್ನಾಟಕದ ಬಿಜೆಪಿಯನ್ನು ಬೆಳೆಸಿದವರ ಹಿರಿತನದ ಪಟ್ಟಿ ಬೆಳೆಯುತ್ತದೆ. ಎ.ಕೆ.ಸುಬ್ಬಯ್ಯ ಅವರ ಸಿಡಿಲಬ್ಬರದ ಭಾಷಣ, ಅವರ ಭಾಷಣಕ್ಕೆ ವಸ್ತುವಾಗುತ್ತಿದ್ದ ಇಂದಿರಾ ಗಾಂಧಿ ಅವರ ರಾಜಕೀಯ ನಡೆಗಳು ಜನರ ಮನಸ್ಸಿನಲ್ಲಿ ಬಿಜೆಪಿಯತ್ತ ಹೊರಳಿನೋಡುವುದಕ್ಕೆ ಅವಕಾಶವಾಯಿತು. ಬದಲಾದ ರಾಜಕೀಯ ಸ್ಥಿತ್ಯಂತರಗಳಲ್ಲಿ ಕರಂಬಳ್ಳಿ ಸಂಜೀವ ಶೆಟ್ಟಿ, ಸುಬ್ಬಯ್ಯ, ಶಿವಪ್ಪ, ಕೆ.ರಾಮ್ ಭಟ್ ಯುಗಮುಗಿದು ಯಡಿಯೂರಪ್ಪ ಭರವಸೆಯ ನಾಯಕರಾಗಿ ಬೆಳೆದರು, ಹೈಕಮಾಂಡ್ ಬೆಳೆಸಿತು ಕೂಡಾ.

ಅನಂತ್ ಕುಮಾರ್ ಮತ್ತು ವಿ.ಧನಂಜಯ ಕುಮಾರ್ ದೆಹಲಿ ವರಿಷ್ಠರೊಂದಿಗೆ ಅದರಲ್ಲೂ ಎಲ್.ಕೆ.ಅಡ್ವಾಣಿ ಅವರೊಂದಿಗೆ ನೇರಸಂಪರ್ಕ ಹೊಂದಿ ಕರ್ನಾಟಕದ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವರು. ಆದರೆ ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರು ಉಳಿದವರೆಲ್ಲರಿಗಿಂತಲೂ ಮುಂಚೂಣಿಯಲ್ಲಿದ್ದರು ಎನ್ನುವುದು ಅತಿಶಯೋಕ್ತಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ತುಡಿತ ಹೈಕಮಾಂಡ್‌ಗೆ ಇತ್ತಾದರೂ ಸ್ವಂತ ಬಲದ ಮೇಲೆ ಬರಬೇಕೆನ್ನುವ ಅತಿಯಾದ ವ್ಯಾಮೋಹವಿತ್ತು.

ಡಿ.ವಿ.ಸದಾನಂದ ಗೌಡ ಮತ್ತು ಬಿ.ಎಸ್.ಯಡಿಯೂರಪ್ಪ ಉರುಳಿಸಿದ ದಾಳಕ್ಕೆ ಜೆಡಿಎಸ್‌ನ ಅಂದಿನ ಭರವಸೆಯ ನಾಯಕ ಎಚ್.ಡಿ.ಕುಮಾರಸ್ವಾಮಿ ಕೈಜೋಡಿಸಿ 20-20 ಅಧಿಕಾರಕ್ಕೆ ಮುಂದಾದರು. ಇಂಥ ಅನಿರೀಕ್ಷಿತ ಬೆಳವಣಿಗೆಯಿಂದ ರಾಜಕೀಯ ಪಕ್ಷಗಳು ಕಂಗೆಟ್ಟದ್ದೂ ನಿಜ. ಯಾಕೆಂದರೆ ಬಿಜೆಪಿಯನ್ನು ಎಂದೂ ಒಪ್ಪಿಕೊಳ್ಳದಿದ್ದ ದೇವೇಗೌಡರ ಮನಸ್ಥಿತಿಯನ್ನು ಅರಿತಿದ್ದರೂ ಅವರ ಪುತ್ರ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡದ್ದು ರಾಜಕೀಯದ ಅಚ್ಚರಿಯೇ ಸರಿ. ಮೂರುದಶಕಗಳ ನಿರಂತರ ಹೋರಾಟ ಮಾಡಿಕೊಂಡೇ ಬಂದ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಟ್ರೆಜರಿಬೆಂಚ್‌ನಲ್ಲಿ ಕಾಣಿಸಿಕೊಂಡಾಗ ಬಿಜೆಪಿ ಹೈಕಮಾಂಡ್ ಕೂಡಾ ಅವರ ರಾಜಕೀಯ ಚತುರತೆಗೆ ಭೇಷ್ ಎಂದಿತ್ತು. ಆ ಕಾಲಕ್ಕೆ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಡಿ.ವಿ.ಸದಾನಂದ ಗೌಡರು ನಡೆದುಕೊಂಡ ರೀತಿ ಕೂಡಾ ಮುಖ್ಯವೆನಿಸುತ್ತದೆ.

ಹೀಗೆ ಅಧಿಕಾರದ ದಡಸೇರಿದ ಬಿಜೆಪಿ, ಅದಕ್ಕೆ ನಾಯಕತ್ವ ಕೊಟ್ಟ ಯಡಿಯೂರಪ್ಪ ಮತ್ತು ಸದಾನಂದ ಗೌಡರು ಅದೇ ಅಧಿಕಾರದ ಸುಳಿಗೆ ಸಿಲುಕಿ ಒಬ್ಬರನ್ನೊಬ್ಬರು ದ್ವೇಷಿಸುವಂತಾಗಿರುವುದೂ ಕೂಡಾ ರಾಜಕೀಯದ ವಿಪರ್ಯಾಸ. ಕುಮಾರಸ್ವಾಮಿ ಮಾತಿನಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ರಾಜಕೀಯದ ಗತಿಯೇ ಬದಲಾಗುತ್ತಿತ್ತು. ಬಿಜೆಪಿಯನ್ನು ಮಣಿಸಲು ಕುಮಾರಸ್ವಾಮಿ ಉರುಳಿಸಿದ ದಾಳಗಳು ಯಡಿಯೂರಪ್ಪ ಅವರಿಗೆ ವರವಾದವು. ರೆಡ್ಡಿ ಬ್ರದಸರ್ ನೆರವಿನಲ್ಲಿ ನಡೆದ `ಆಪರೇಷನ್ ಕಮಲ’ ರಾಜಕೀಯವನ್ನು ಅಲ್ಲೋಲಕಲ್ಲೋಲಗೊಳಿಸಿತು.

ಇದೆಲ್ಲವೂ ಬಿಜೆಪಿಯ ಇತಿಹಾಸವಾದರೆ ವರ್ತಮಾನ ಮಾತ್ರ ದುರಂತಮಯವಾಗಿರುವುದು ಯಡಿಯೂರಪ್ಪ ಅವರ ಪ್ರಾರಾಬ್ಧವೋ, ಹೈಕಮಾಂಡ್‌ನ ದುರ್ದೈವವೋ, ಎನ್ನುವಂತಾಗಿದೆ. ಯಡಿಯೂರಪ್ಪ ಅವರೇ ಹೇಳಿಕೊಂಡಿರುವಂತೆ ಅವರು ಬಿಜೆಪಿಯಿಂದ ಬಹಳ ದೂರ ಸಾಗಿದ್ದಾರೆ. ಹಿಂದಕ್ಕೆ ಬರಲಾಗದಷ್ಟು ಹೆಜ್ಜೆಗಳನ್ನು ಮುಂದಿಟ್ಟಿದ್ದಾರೆ. ಈಗ ಬಿಜೆಪಿ ಹೈಕಮಾಂಡ್ ಮೈಕೊಡವಿಕೊಳ್ಳುತ್ತಿರುವುದು ಅದರ ನಾಯಕರ ಮುತ್ಸದ್ದಿತನದ ಕೊರತೆ ಎನ್ನಲೇ ಬೇಕಾಗಿದೆ. ಕಡಿವಾಣ ಹಾಕದೆ ಕುದುರೆಗೆ ಓಟ ಕಲಿಸಿದರೆ ಅದು ಓಡುತ್ತಲೇ ಇರುತ್ತದೆ, ಅದಕ್ಕೆ ಆಯಾಸವಾದಾಗ ಮಾತ್ರ ತಾನಾಗಿಯೇ ನಿಲ್ಲುತ್ತದೆ. ಇದೇ ಸ್ಥಿತಿ ಯಡಿಯೂರಪ್ಪ ಅವರದೂ ಕೂಡಾ. ಹೈಕಮಾಂಡ್ ಪೂರ್ಣಸ್ವಾತಂತ್ರ್ಯ ನೀಡಿ ಕೈಕಟ್ಟಿ ಕುಳಿತು ದಕ್ಷಿಣ ಭಾರತದ ಮೊಟ್ಟ ಮೊದಲ ಸರ್ಕಾರದ ಕಾರ್ಯವೈಖರಿಯನ್ನು ನೋಡಿ ಆನಂದಿಸಿ ಮೈಮರೆಯಿತೇ ಹೊರತು ಕಾಲಕಾಲಕ್ಕೆ ಕಿವಿಹಿಂಡಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎನ್ನುವುದನ್ನು ಹೇಳಲು ರಾಜಕೀಯ ಪಂಡಿತರೇ ಆಗಬೇಕಾಗಿಲ್ಲ.

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಅನ್ನಿಸಲು ಅವರು ಪಕ್ಷ ಬಿಡುವುದಾಗಿ ಬಾಯಿಬಿಟ್ಟು ಹೇಳಬೇಕಾಯಿತು. ಈ ಹಂತದಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡುವಂತೆ ರಾಜ್ಯ ಬಿಜೆಪಿ ಪಾಳೆಯದಿಂದ ಒತ್ತಡ ಹಾಕುತ್ತಿರುವುದು ಕೂಡಾ ರಾಜಕೀಯದ ಎಳಸುತನವೆನಿಸುತ್ತದೆ. ಬಿಜೆಪಿಯ ಮನಸ್ಥಿತಿ ಯಾವ ಹಂತ ತಲುಪಿದೆ ಎನ್ನುವುದಕ್ಕೆ ಒಂದೇ ಒಂದು ಉದಾಹರಣೆ ವಿ.ಧನಂಜಯ ಕುಮಾರ್ ಅವರನ್ನು ಪಕ್ಷದಿಂದ ಹೊರಹಾಕಿದ್ದು ಮತ್ತು ಯಡಿಯೂರಪ್ಪ ಅವರನ್ನು ಎದುರಿಸಲು ತಡಬಡಾಯಿಸುತ್ತಿರುವುದು.

ಧನಂಜಯ ಕುಮಾರ್ 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದವರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಸೂತ್ರ ಹಿಡಿದಾಗ ಕೇಂದ್ರ ಮಂತ್ರಿಯಾದವರು. ಯಡಿಯೂರಪ್ಪ 1983ರಲ್ಲಿ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದವರು. ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದವರು.

ಒಂದೇ ಒಂದು ಬಾರಿ ಧನಂಜಯ ಕುಮಾರ್ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದು. ಯಡಿಯೂರಪ್ಪ ಹಲವು ಸಲ ರಾಜ್ಯ, ಕೇಂದ್ರ ನಾಯಕರನ್ನು ವಾಚಾಮಗೋಚರವಾಗಿ ಟೀಕಿಸಿದ್ದಾರೆ. ಆದರೆ ಒಂದೇ ಬಾರಿಗೆ ಧನಂಜಯ ಕುಮಾರ್ ಪಕ್ಷ ವಿರೋಧಿಯಾಗುತ್ತಾರೆ, ಅವರನ್ನು ಪಕ್ಷದಿಂದ ವಜಾಮಾಡಲಾಗುತ್ತದೆ. ಇದಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರನ್ನು ಮುಟ್ಟುವ ಧೈರ್ಯವಿಲ್ಲ ಎನ್ನುವುದೋ, ಅಥವ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕೆಂದು ಯತ್ನಿಸುತ್ತಿರುವುದನ್ನು ಅಸಹಾಯಕತೆ ಎನ್ನುವುದೋ?

ಕೊನೆಯದಾಗಿ ಹೇಳಲೇಬೇಕಾದ ಮಾತು, ಯಡಿಯೂರಪ್ಪ ತಾವಾಗಿಯೇ ಪಕ್ಷ ಬಿಟ್ಟು ಹೋದರೆ ಆಗುವ ಅನಾಹುತ ಕಡಿಮೆ ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಅಂತೆಯೇ ತಾನಾಗಿ ಹೋದರೆ ಜನರಿಂದ ಸಿಗುವ ಸಿಂಪಥಿ ಕಡಿಮೆ, ಹೈಕಮಾಂಡ್ ತಾನಾಗಿಯೇ ಹೊರದಬ್ಬಿದರೆ ಬಂಪರ್ ಎನ್ನುವ ಮುಂದಾಲೋಚನೆ ಯಡಿಯೂರಪ್ಪ ಅವರದು.

ಆದರೆ, ಜನರ ಲೆಕ್ಕಾಚಾರ ಏನಿದೆ?