Monthly Archives: November 2012

ಬಂಡವಾಳಶಾಹಿ ಪ್ರಭುತ್ವವಾಗಿ ಮಾರ್ಪಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ

– ಆನಂದ ಪ್ರಸಾದ್

ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ವ್ಯವಸ್ಥೆಯಾಗಿರದೆ ಬಂಡವಾಳಶಾಹಿಗಳಿಂದ, ಬಂಡವಾಳಶಾಹಿಗಳಿಗಾಗಿ, ಬಂಡವಾಳಶಾಹಿಗಳೇ ನಡೆಸುವ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳು ನೀಡುವ ದೇಣಿಗೆಗಳಿಂದ ಸಮೃದ್ಧವಾಗಿ ಬೆಳೆದು ಪ್ರಜೆಗಳ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾ ಮೆರೆಯಲು ಆರಂಭಿಸಿವೆ.  ಹೀಗಾಗಿ ಅಧಿಕಾರದಲ್ಲಿರುವ ಯಾವುದೇ ಪಕ್ಷಕ್ಕೂ ಸಿದ್ಧಾಂತ, ದೇಶದ ಹಿತಾಸಕ್ತಿ, ಪ್ರಜೆಗಳ ಹಿತಾಸಕ್ತಿ ಮುಖ್ಯವಾಗುವುದಿಲ್ಲ.  ತಮಗೆ ಯಾರು ಹೆಚ್ಚು ದೇಣಿಗೆಗಳನ್ನು ನೀಡುತ್ತಾರೋ ಅವರ ಹಿತ ಕಾಯುವ ದಲ್ಲಾಳಿಗಳಾಗಿ ರಾಜಕೀಯ ಪಕ್ಷಗಳು ಮಾರ್ಪಾಟಾಗಿವೆ.  ರಾಜಕೀಯ ಪಕ್ಷಗಳಿಗೆ ಬಂಡವಾಳಶಾಹಿಗಳು ನೀಡುವ ಹಣ ದೇಣಿಗೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರೂ ಅದು ನಿಜವಾಗಿ ತಮ್ಮ ಪರವಾಗಿ ಸರ್ಕಾರದ ನಿಯಮಗಳನ್ನು ರೂಪಿಸಿಕೊಳ್ಳಲು ಬಂಡವಾಳಶಾಹಿಗಳು ಕೊಡುವ ಲಂಚವೇ ಆಗಿದೆ.  ಈ ರೀತಿಯ ಲಂಚವೇ ಇಡೀ ಚುನಾವಣಾ ವ್ಯವಸ್ಥೆಯನ್ನು, ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಮಣ್ಣುಪಾಲು ಮಾಡುತ್ತಿದೆ.  ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತರುವಂತಾಗಲು ರಾಜಕೀಯ ಪಕ್ಷಗಳಿಗೆ ದೇಣಿಗೆ ಎಂಬ ಹೆಸರಿನಲ್ಲಿ ನೀಡುವ ಲಂಚವನ್ನು ನಿಲ್ಲಿಸುವ ಕುರಿತು ಜನಾಭಿಪ್ರಾಯ ರೂಪುಗೊಳ್ಳಬೇಕಾಗಿದೆ.

ಚುನಾವಣೆಗಳಲ್ಲಿ ಹಣದ ಪ್ರಭಾವವನ್ನು ತಡೆಯಲು ಸರ್ಕಾರವೇ ಚುನಾವಣಾ ವೆಚ್ಚಗಳನ್ನು ಭರಿಸುವಂತಾಗಬೇಕೆಂಬ ಮಾತು ಕೆಲವು ವಲಯಗಳಿಂದ ಕೇಳಿ ಬರುತ್ತಿದೆ.  ಆದರೆ ಇದನ್ನು ಜಾರಿ ಮಾಡುವುದು ಯಾವ ಮಾನದಂಡದ ಆಧಾರದ ಮೇಲೆ ಎಂಬುದು ಸ್ಪಷ್ಟವಾಗಿಲ್ಲ.  ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಮಾತ್ರ ಇದನ್ನು ಅಳವಡಿಸಿದರೆ ಪಕ್ಷೇತರರಾಗಿ ಸ್ಪರ್ಧಿಸುವವರಿಗೆ ಚುನಾವಣಾ ವೆಚ್ಚ ಭರಿಸುವುದು ಹೇಗೆ ಎಂಬ ಪ್ರಶ್ನೆಯೂ ಇದೆ.  ಹೀಗೆ ಮಾಡಿದರೆ ಪಕ್ಷೇತರರ ಚುನಾವಣಾ ಸ್ಪರ್ಧೆಯ ಅವಕಾಶವನ್ನು ಮತ್ತು ಗೆಲ್ಲುವ ಅವಕಾಶವನ್ನು ಕುಂಠಿತಗೊಳಿಸಿದಂತೆ ಆಗಬಹುದು.  ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳೇ ಉದ್ಯಮಿಗಳೂ, ಬಂಡವಾಳಶಾಹಿಗಳೂ ಆಗಿ ರೂಪುಗೊಳ್ಳುವ ಹೊಸ ಪರಂಪರೆ ಶುರುವಾಗಿದೆ.  ಇದರಿಂದಾಗಿ ಇಂಥ ಉದ್ಯಮಿ ಹಾಗೂ ರಾಜಕಾರಣಿ ತನ್ನ ಬಂಡವಾಳವನ್ನು ಚುನಾವಣೆಗಳಲ್ಲಿ ಬಳಸಿ ಗೆಲ್ಲುವ ವಿಕಾರ ಪ್ರವೃತ್ತಿ ಬೆಳೆಯುತ್ತಿದೆ.  ಇಂಥ ಬಂಡವಾಳಶಾಹಿ ಉದ್ಯಮಿಗಳು ಮತ್ತು ಅವರ ಪಕ್ಷ ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತೆ ರಾಜಪ್ರಭುತ್ವದ ರೀತಿಯ ಆಡಳಿತಕ್ಕೆ ದೂಡುತ್ತಿದೆ.  ಇಂಥ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿರುವುದರ ವಿರುದ್ಧ ಜನ ಜಾಗೃತಿ ಮೂಡಿಸುವ ಕುರಿತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಪ್ರಯತ್ನಿಸಬೇಕಾಗಿದೆ.

ಬಂಡವಾಳಶಾಹಿಗಳು ನಡೆಸುವ ಉದ್ಯಮಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ವಿನಾಯತಿ ನೀಡಲಾಗುತ್ತಿದೆ.  ಆದರೆ ಜನಸಾಮಾನ್ಯರಿಗೆ ನೀಡುವ ಅಡುಗೆ ಅನಿಲ ಸಬ್ಸಿಡಿಯನ್ನು, ಡೀಸೆಲಿಗೆ ನೀಡುವ ಸಬ್ಸಿಡಿಯನ್ನು, ಬಡವರಿಗೆ ನೀಡುವ ಕಡಿಮೆ ದರದ ಆಹಾರ ಧಾನ್ಯಗಳನ್ನು, ರೈತರಿಗೆ ನೀಡುವ ರಸಗೊಬ್ಬರ ಇತ್ಯಾದಿ ಸಬ್ಸಿಡಿಗಳನ್ನೂ ತೆಗೆದುಹಾಕಬೇಕೆಂದು ಬಂಡವಾಳಗಾರರ ಲಾಬಿ ಸರ್ಕಾರವನ್ನು ಮಣಿಸುತ್ತದೆ.  ನೈಸರ್ಗಿಕ ಸಂಪನ್ಮೂಲಗಳನ್ನು ಮೂರು ಕಾಸಿಗೆ ಬಂಡವಾಳಶಾಹಿಗಳಿಗೆ ನೀಡುವ ಸರ್ಕಾರದ ನಿರ್ಧಾರದ ಹಿಂದೆ ಪಕ್ಷದ ನಿಧಿಗೆ ಅವರು ನೀಡುವ ಕೋಟ್ಯಂತರ ದೇಣಿಗೆ ಕೆಲಸ ಮಾಡುತ್ತದೆ.  ಪ್ರಜಾಪ್ರಭುತ್ವ ಸರ್ಕಾರ ಇಂಥ ಅಧರ್ಮ ಹಾಗೂ ಅನ್ಯಾಯಗಳಿಗೆ ಮಣಿಯಬೇಕಾಗಿಲ್ಲ.  ಆದರೆ ನಮ್ಮದು ಬಂಡವಾಳಶಾಹಿಗಳು ರಾಜಕಾರಣಿಗಳ ಹಿಂದೆ ನಿಂತು ನಡೆಸುವ ಪ್ರಜಾಪ್ರಭುತ್ವದ ಮುಖವಾಡ ಹೊತ್ತ ವ್ಯವಸ್ಥೆಯಾಗಿರುವುದರಿಂದ ಇಲ್ಲಿ ಜನತೆಯ ಧ್ವನಿಗೆ ಯಾವುದೇ ಬೆಲೆಯಿಲ್ಲ.

ಭೋಪಾಲ್ ವಿಷಾನಿಲ ದುರಂತದಲ್ಲಿ ಸಂತ್ರಸ್ತರಾದ ಲಕ್ಷಾಂತರ ಜನರಿಗೆ ನ್ಯಾಯ ಸಿಗದೇ ಇರಲು ಬಂಡವಾಳಶಾಹಿ ಪ್ರಭುತ್ವವೇ ಕಾರಣವಾಗಿದೆ.  ಅಂಬಾನಿಯಂಥ ಉದ್ಯಮಪತಿಗಳು ರಾಜಕೀಯ ಪಕ್ಷಗಳು ತನ್ನ ಕಿಸೆಯ ಒಳಗೆ ಇವೆ ಎಂದು ಅಹಂಕಾರದ ಹೇಳಿಕೆ ನೀಡಲೂ ಅವರು ರಾಜಕೀಯ ಪಕ್ಷಗಳಿಗೆ ದೇಣಿಗೆಯ ಹೆಸರಿನಲ್ಲಿ ನೀಡುವ ಲಂಚವೇ ಕಾರಣ.  ಹೀಗಾಗಿ ರಾಜಕೀಯ ಪಕ್ಷಗಳು ಉದ್ಯಮಿಗಳಿಂದ ದೇಣಿಗೆ ಪಡೆಯುವ ಪರಂಪರೆಯನ್ನು ನಿಷೇಧಿಸಬೇಕಾದ ಅಗತ್ಯ ಇದೆ.  ರಾಜಕೀಯ ಪಕ್ಷಗಳು ಜನತೆಯ ದೇಣಿಗೆಯಿಂದ ಮಾತ್ರ ಬೆಳೆಯುವಂತೆ ಆಗಬೇಕು ಮತ್ತು ಅದರ ಸಂಪೂರ್ಣ ಲೆಕ್ಕಪತ್ರ ಸಾರ್ವಜನಿಕರಿಗೆ ಲಭ್ಯವಿರಬೇಕು.  ಇಂದು ದೇಶದಲ್ಲಿ ಅಸ್ತಿತ್ವದಲ್ಲಿ ಇರುವ ಎಲ್ಲ ಪಕ್ಷಗಳು ರಾಷ್ಟ್ರೀಯ ಪಕ್ಷಗಳೇ ಇರಲಿ, ಪ್ರಾದೇಶಿಕ ಪಕ್ಷಗಳೇ ಇರಲಿ ಉದ್ಯಮಿಗಳಿಂದ ದೇಣಿಗೆ ಹೆಸರಿನ ಲಂಚ ಸ್ವೀಕರಿಸಿಯೇ ಚುನಾವಣೆಗೆ ನಿಲ್ಲುವ ವ್ಯವಸ್ಥೆ ಇರುವಾಗ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ತರಲು ಸಾಧ್ಯವೇ ಇಲ್ಲ.

ಇಂದು ಉದ್ಯಮಿಗಳೇ ಸರ್ಕಾರದಲ್ಲಿ ಮಂತ್ರಿಗಳಾಗಿ ತಮಗೆ ಬೇಕಾದಂತೆ ನೀತಿ ನಿಯಮಗಳನ್ನು ರೂಪಿಸುತ್ತಾ ಉದ್ಯಮದ ಹಿತಾಸಕ್ತಿಗಳನ್ನು ರಕ್ಷಿಸುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ.  ಇದನ್ನು ತಪ್ಪಿಸಲು ರಾಜಕೀಯ ಪಕ್ಷಗಳಲ್ಲಿ ಹಾಗೂ ಸರ್ಕಾರದಲ್ಲಿ ದೊಡ್ಡ ಉದ್ಯಮಿಗಳು ಪಾಲುಗೊಳ್ಳದಂತೆ  ಜನಾಭಿಪ್ರಾಯ ರೂಪುಗೊಂಡು ದೊಡ್ಡ ಉದ್ಯಮಿಗಳು ಸರ್ಕಾರದಲ್ಲಾಗಲೀ, ರಾಜಕೀಯ ಪಕ್ಷಗಳಲ್ಲಾಗಲೀ ಸೇರಲಾಗದಂತೆ  ಕಾನೂನು ರೂಪಿಸಬೇಕಾದ ಅಗತ್ಯ ಇದೆ.  ಇಲ್ಲದೆ ಹೋದರೆ ಪ್ರಜಾಪ್ರಭುತ್ವ ನಾಶವಾಗಿ ಉಳ್ಳವರ, ಬಂಡವಾಳಶಾಹಿಗಳ ಪ್ರಭುತ್ವ ಮೇಲುಗೈ ಸಾಧಿಸುವುದು ಖಚಿತ.  ರಾಜಕೀಯ ಪಕ್ಷಗಳಿಗೆ ಉದ್ಯಮಿಗಳ, ಶ್ರೀಮಂತರ ದೇಣಿಗೆ ಹೆಸರಿನ ಲಂಚವನ್ನು ಪಡೆಯದೇ ಜನತೆಯ ಸಣ್ಣ ಪ್ರಮಾಣದ ದೇಣಿಗೆಯ ಹಣದಿಂದ ಮಾತ್ರ ರಾಜಕೀಯ ಪಕ್ಷಗಳು ಕಾರ್ಯನಿರ್ವಹಿಸುವಂತೆ ಆಗಬೇಕು.  ದೊಡ್ಡ ಉದ್ಯಮಿಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಲಂಚ ಪಡೆಯುವುದನ್ನು ನಿಷೇಧಿಸುವ ಕಾನೂನು ರೂಪುಗೊಳ್ಳಬೇಕು.  ಕಪ್ಪು ಹಣದ ರೂಪದಲ್ಲಿಯೋ ಅಥವಾ ಬಿಳಿ ಹಣದ ರೂಪದಲ್ಲಿಯೋ ಉದ್ಯಮಿಗಳಿಂದ ರಾಜಕೀಯ ಪಕ್ಷಗಳು ದೇಣಿಗೆ ಹೆಸರಿನ ಲಂಚ ಪಡೆದರೆ ದೇಣಿಗೆ ಹೆಸರಿನ ಲಂಚ ಕೊಟ್ಟ ಉದ್ಯಮಿಗಳು ಮತ್ತು ಪಡೆದ ರಾಜಕೀಯ ಪಕ್ಷಗಳಿಗೆ ಶಿಕ್ಷೆ ಆಗುವಂತೆ ಕಾನೂನು ರಚನೆಗೊಳ್ಳಬೇಕಾದ  ಅಗತ್ಯ ಇದೆ.  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾದರೆ ಇಂಥ ಕಾನೂನುಗಳು ಅಗತ್ಯ.

ಬಂಡವಾಳಶಾಹಿಗಳ ದೇಣಿಗೆ ಇಲ್ಲದೆ ರಾಜಕೀಯ ಪಕ್ಷ ನಡೆಸುವುದು ಹಾಗೂ ಚುನಾವಣೆ ಎದುರಿಸುವುದನ್ನು ರಾಜಕೀಯ ಪಕ್ಷಗಳಿಗೆ ಕಡ್ಡಾಯಪಡಿಸುವ ಕಾನೂನು ಅಗತ್ಯ ಇದೆ.  ರಾಜಕೀಯ ಪಕ್ಷಗಳು ದುಂದುವೆಚ್ಚದ ಸಮಾವೇಶಗಳನ್ನು ಏರ್ಪಡಿಸುವ ಹಾಗೂ ಜನರನ್ನು ಪಕ್ಷದ ವತಿಯಿಂದ ಹಣ ಕೊಟ್ಟು ಸಾರಿಗೆ ವ್ಯವಸ್ಥೆ ಮಾಡಿ ಸಮಾವೇಶಗಳಿಗೆ ಬರಿಸುವ, ಮತದಾರರಿಗೆ ವಿವಿಧ ಆಮಿಷಗಳ ಕೊಡುಗೆ ನೀಡುವ, ಅದ್ಧೂರಿ ಕಛೇರಿಗಳನ್ನು ತೆರೆಯುವ ಪ್ರವೃತ್ತಿಯನ್ನು ನಿಲ್ಲಿಸಿದರೆ ರಾಜಕೀಯ ಪಕ್ಷಗಳನ್ನು ಬಂಡವಾಳಶಾಹಿಗಳ ದೇಣಿಗೆಯ ಹೆಸರಿನ ಲಂಚ ಇಲ್ಲದೆ ಕಾರ್ಯಕರ್ತರ, ಜನಸಾಮಾನ್ಯರ ದೇಣಿಗೆಯಿಂದಲೇ ನಿರ್ವಹಿಸುವುದು ಸಾಧ್ಯವಿದೆ.  ಸೇವಾ ಮನೋಭಾವ ಇರುವ, ಜೀವನೋಪಾಯಕ್ಕೆ ಬೇರೆ ಸಾಮಾನ್ಯ ಮಧ್ಯಮ ವರ್ಗದ ಆದಾಯಮೂಲ ಇರುವವರು ಮಾತ್ರವೇ ರಾಜಕೀಯಕ್ಕೆ ಬಂದರೆ ರಾಜಕೀಯ ಪಕ್ಷಗಳನ್ನು ನಿರ್ವಹಿಸುವುದು ಕಷ್ಟವೇನೂ ಆಗಲಾರದು.  ಉದಾಹರಣೆಗೆ ಸಣ್ಣ ಉದ್ಯಮ, ವ್ಯಾಪಾರ ಇದ್ದು ಉದ್ಯೋಗಿಗಳ ಮೂಲಕ ಆಗಾಗ ಮೇಲ್ವಿಚಾರಣೆ ಮಾಡುವ ಮೂಲಕ ಸಂಸ್ಥೆ ನಡೆಸಲು ಸಾಧ್ಯ ಇರುವವರು; ಗಂಡ ಹಾಗೂ ಹೆಂಡತಿ ಇಬ್ಬರಲ್ಲಿ ಒಬ್ಬರು ದೃಢವಾದ ಉದ್ಯೋಗದಲ್ಲಿದ್ದರೆ ಇನ್ನೊಬ್ಬರು ರಾಜಕೀಯಕ್ಕೆ ಇಳಿಯಲು ಸಾಧ್ಯವಿದೆ.  ಅದೇ ರೀತಿ ಬಾಡಿಗೆಗೆ ನೀಡುವ ಕಟ್ಟಡ, ಮನೆ, ಅಪಾರ್ಟ್ ಮೆಂಟ್, ವಾಣಿಜ್ಯ ಸಮುಚ್ಛಯ ಇರುವವರಿಗೆ ನಿಗದಿತ ಆದಾಯ ಮೂಲ ಇರುವ ಕಾರಣ ಮತ್ತು ಅವರಿಗೆ ಜೀವನೋಪಾಯಕ್ಕೆ ಬೇರೆ ಕೆಲಸ ಬೇಕಾಗಿಲ್ಲದೆ ಇರುವುದರಿಂದ ರಾಜಕೀಯ ಪಕ್ಷಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ.  ಉದ್ಯೋಗ ನಿವೃತ್ತಿ ಪಡೆದಿರುವವರಲ್ಲಿ ಉಳಿತಾಯದ ಹಣ ಇರುವುದರಿಂದ ಹಾಗೂ ನಿವೃತ್ತಿವೇತನ ಬರುವುದರಿಂದ ಅಂಥವರೂ ರಾಜಕೀಯ ಪಕ್ಷಗಳಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ.

ರಾಕ್ಷಸ ವಧೆಗೆ ದೈವಕ್ಕೆ ಜತೆಯಾಗುವವರು ತುಳುನಾಡಲ್ಲಿ ಯಾರೂ ಇಲ್ಲವೇ?

– ತೇಜ ಸಚಿನ್ ಪೂಜಾರಿ

ಬಾಲ್ಯದ ಒಂದು ನೆನಹು ಇತ್ತೀಚೆಗೆ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ನಮ್ಮ ಹಳ್ಳಿಗಳಲ್ಲಿ ವರ್ಷಂಪ್ರತಿ ಬಹು ಸಂಭ್ರಮದಿಂದ ನಡೆಯುತ್ತಿದ್ದ ದೇವಿ ಮಹಾತ್ಮೆ ಯಕ್ಷಗಾನವನ್ನು ವೀಕ್ಷಿಸಲು ನಾವು ಗೆಳೆಯೋರೋಪಾದಿಯಾಗಿ ತೆರಳುತ್ತಿದ್ದೆವು. ಇಡೀ ರಾತ್ರಿ ಜರುಗುತ್ತಿದ್ದ ಬಯಲಾಟದ ವೀಕ್ಷಣೆಯ ಸಲುವಾಗಿ ಊರಿನ ಅಷ್ಟೂ ಮಂದಿ ಅಲ್ಲಿ ಹಾಜರಿರುತ್ತಿದ್ದರು. ತುಳುವರಿಗೆ ದೇವಿ ಮಹಾತ್ಮೆ ಒಂದು ಮನೋರಂಜನೆಯಲ್ಲ. ಅದೊಂದು ಆರಾಧನೆ; ಒಂದು ಹರಕೆ. ಹೀಗಾಗಿ ತಮ್ಮೆಲ್ಲಾ ತುರ್ತುಗಳನ್ನು ಬದಿಗಿರಿಸಿ ನಮ್ಮವರು ಭಕ್ತಿಭಾವಗಳೊಂದಿಗೆ ಬಯಲಾಟಕ್ಕೆ ಹೋಗುತ್ತಿದ್ದರು. ನಮಗೂ ಸಂಭ್ರಮವೇ. ಹಾಗೆ, ಗೆಳೆಯರೆಲ್ಲಾ ಸೇರಿ ಪೋಕರಿತನಗಳನ್ನು ಮೆರೆದು, ಅಲ್ಲಿರುತ್ತಿದ್ದ ಪುಗ್ಗೆ ಚುರುಮುರಿ ಸಂತೆಗಳನ್ನು ಸುತ್ತಿ ಕೊನೆಗೆ ಅಮ್ಮನ ಮಡಿಲು ಸೇರುತಿದ್ದೆವು. ಅಷ್ಟೊತ್ತಿಗೆ ಆಟವೂ ಕೂಡಾ ರಂಗೇರಿ ಸಹೃದಯಿಗಳ ಮನದಲ್ಲಿ ರಸಭಾವಗಳು ಓಕುಳಿಯಾಡುತ್ತಿರುತ್ತಿದ್ದವು. ನಮಗೋ ನಿಧಾನವಾಗಿ ನಿದ್ದೆಯ ಸಪಳ. ಹಾಗೆಯೇ ತೂಕಡಿಸುತ್ತಿದ್ದ ನಮ್ಮನ್ನು ಮತ್ತೆ ಮತ್ತೆ ಎಬ್ಬಿಸಿ ಚಹಾ ಕುಡಿಸಿ ಎನೇನೋ ಸುಳ್ಳುಗಳನ್ನು ಹೇಳುತ್ತಾ ಅಮ್ಮಾ, “ನೋಡು ಈಗ ಸ್ವಲ್ಪ ಹೊತ್ತಲ್ಲೇ ಮಹಿಷಾಸುರ ಬರುತ್ತಾನೆ. ಅಲ್ಲಿವರೆಗೆ ನಿದ್ದೆ ಬೇಡ ಮಗೂ! ಮತ್ತೆ ಮನೆಗೆ ಹೋಗೋಣವಂತೆ,” ಅನ್ನುತ್ತಿದ್ದಳು. ಕೊನೆಗೂ ಮಹಿಷಾಸುರ ಬರುತಿದ್ದ. ಆಟದಲ್ಲಿ ಆತನೆ ಬರುವಿಕೆಯೇ ಒಂದು ವಿಶೇಷ. ಅದೆಲ್ಲೋ ದೂರದಿಂದ ವಿಕಾರವಾಗಿ ಬೊಬ್ಬಿರಿಯುತ್ತಾ, ಧೂಪದ ಪುಡಿಯನ್ನು ದೀವಿಟಿಗೆಯತ್ತ ಎಸೆದು ಬೆಂಕಿಯ ಉಂಡೆಗಳನ್ನು ಎಬ್ಬಿಸುತ್ತಾ ಬರುತಿದ್ದ ಆತ ಅಲ್ಲಿಯವರೆಗೆ ಶಾಂತವಾಗಿರುತಿದ್ದ ಸಭೆಯನ್ನು ಒಮ್ಮಗೆ ಅಲ್ಲೋಲ ಕಲ್ಲೋಲ ಮಾಡುತಿದ್ದ. ಆರ್ಭಟ, ರಣಕೇಕೆಗಳು, ವಾದ್ಯ ಹಿಮ್ಮೇಳಗಳ ವೇಗ, ಸಿಡಿಮದ್ದಗಳ ಸದ್ದು ನಮ್ಮನ್ನೆಲ್ಲಾ ಹೆದರಿಸುತಿದ್ದವು. ಅಂತೂ ಇಂತೂ ಹತ್ತಿಪ್ಪತ್ತು ನಿಮಿಷಗಳ ಕಾಲ ವಿಜೃಂಭಿಸಿ ನಿಧಾನವಾಗಿ ಮಹಿಷಾಸುರ ರಂಗಸ್ಥಳ ಪ್ರವೇಶಿಸುತಿದ್ದ. ಅದು ನಮ್ಮ ಪಾಲಿಗೆ ಯಕ್ಷಗಾನದ ಅಂತ್ಯ. ತರುವಾಯ ನಾವು ಅಪ್ಪ ಅಮ್ಮನ ಜೊತೆಗೆ ಮನೆಗೆ ಹಿಂತಿರುಗುತಿದ್ದೆವು. ನಮ್ಮ ಹಾಗೆಯೇ ಬಹುತೇಕ ಸಭಿಕರು “ಮಹಿಷಾಸುರ ರಂಗಸ್ಥಳ ಪ್ರವೇಶ”ದ ನಂತರ ಮನೆ ನಿದ್ದೆಯ ಮೊರೆ ಹೋಗುತಿದ್ದರು. ಇಂತಹ ಪ್ರವೃತ್ತಿಗಳು ಮತ್ತೆ ಮತ್ತೆ ಪುನಾರಾವರ್ತನೆಯಾಗುತ್ತಿದ್ದವು. ಶ್ರೀದೇವಿಯು ಮಹಿಷಾಸುರನನ್ನು ಎದುರಿಸುವ, ವಧಿಸುವ ಕಾರ್ಯದಲ್ಲಿ ಆಕೆಗೆ ಉಪಸ್ಥಿತಿಯ ಬೆಂಬಲ ನೀಡಲು ಅಲ್ಲಿರುತ್ತಿದ್ದುದು ಕೆಲವೇ ಕೆಲವು ಮಂದಿ. ನಮಗೋ ಮಹಿಷಾಸುರನ್ನು ಸ್ವಾಗತಿಸುವುದೊಂದೇ ಸಂಭ್ರಮ. ಮತ್ತೆ ಭರ್ಜರಿ ನಿದ್ದೆ.

ಮಂಗಳೂರಿನಲ್ಲಿ ಸದ್ಯ ನಡೆಯುತ್ತಿರುವುದು ಇದೇ. ನಮ್ಮವರು ತಮ್ಮ ಮನ ಮನೆಗಳಿಗೆ ಮಹಿಷಾಸುರನನ್ನು ಒಳಬಿಟ್ಟಿದ್ದಾರೆ. ಬಿಟ್ಟು ಮಲಗಿದ್ದಾರೆ. ರಾಕ್ಷಸ ವಧೆಗೆ ದೈವಕ್ಕೆ ಜತೆಯಾಗುವವರು ಯಾರೂ ಇಲ್ಲ. ಧರ್ಮಸಂಘರ್ಷಗಳು, ಕೋಮು ಜ್ವಾಲೆಗಳು, ಮೌಡ್ಯ ಆಚರಣೆಗಳು, ಜಾತಿ ದ್ವೇಷ-ದೌರ್ಜನ್ಯಗಳು, ಅಸಹಿಷ್ಣುತೆ-ಅಹಂಕಾರಗಳು ಹೀಗೆ ಒಂದೋ ಎರಡೋ! ನಾನಾ ನಮೂನೆಯ ರಕ್ಕಸ ಪ್ರವೃತ್ತಿಗಳು ತುಳುನಾಡನ್ನು ಪೂರ್ತಿಯಾಗಿ ಆವರಿಸಿವೆ. ನಮ್ಮದೋ ಗಾಡ ನಿದ್ದೆ. ಮಹಿಷಾಸುರನ ಅಟ್ಟಹಾಸ ನಡೆಯುತ್ತಲೇ ಇದೆ. ಆತನನ್ನು ಧಿಕ್ಕರಿಸ ಹೊರಟವರೇ ಬಂಧನಕ್ಕೊಳಗಾಗುತಿದ್ದಾರೆ. ಸಾಕ್ಷಾತ್ ದೈವವೇ ಆಘಾತಗೊಂಡಿದೆ!

ಘಟನೆ ಯಾ ಪ್ರವೃತ್ತಿಗಳಿಗೆ ವಿಮರ್ಷೆಯ ನೆಪದಲ್ಲಿ ಯಾವುದೋ ವ್ಯಕ್ತಿ ಅಥವಾ ಸಂಘಟನೆಯನ್ನು ದೂಷಿಸುವುದು ಸಾಮಾನ್ಯ. ಆ ಧರ್ಮದ ಈ ಧರ್ಮದ ಕೋಮುವಾದಿಗಳನ್ನೋ, ಸಂಸ್ಥೆ-ಫ್ರಂಟ್ಗಳನ್ನೋ ನಾವೂ ಟೀಕಿಸಿಯಾಗಿದೆ. ಆದಾಗ್ಯೂ ಅಸಹನೆ ನಿಂತಿಲ್ಲ, ಹಿಂಸೆಯೂ ನಿಂತಿಲ್ಲ. ನಿಲ್ಲುವುದೂ ಇಲ್ಲಾ. ಏಕೆಂದರೆ ರಾಕ್ಷಸನ ಪ್ರವೇಶವನ್ನು ಬೆರಗಿನಿಂದ ನೋಡಿದ ನಾವು ನಂತರದಲ್ಲಿ ಪೂರ್ತಿಯಾಗಿ ನಿಷ್ಕ್ರಿಯಯರಾಗಿದ್ದೆವೆ. ನಮ್ಮೂರಲ್ಲಿ ನಡೆಯುತ್ತಿರುವ ಅಷ್ಟೂ ಅಸಹ್ಯಗಳ ಹೊಣೆಯನ್ನು ನಾವೇ ಹೊರಬೇಕಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಹಿಂಸೆಯನ್ನು ವಿಶ್ಲೇಷಿಸುತ್ತಾ ನೋಮ್ ಚಾಮ್ಸ್ಕಿಯವರು ಒಂದೆಡೆ, “ಆತ್ಮಹತ್ಯಾ ಬಾಂಬರುಗಳು ಅಥವಾ ತುಪಾಕಿಗಳ ಸದ್ದುಗಳು ನನ್ನಲ್ಲಿ ಆತಂಕವನ್ನು ಉಂಟುಮಾಡುತಿಲ್ಲ. ಆದರೆ, ತನ್ನ ಮಗುವಿನ ಸೌಖ್ಯವನ್ನು ಬಯಸುವ ಸಹಜ ಪ್ರಾಮಾಣಿಕ ಹಾಗೂ ಹಿಂಸಾವಾದಿಯಲ್ಲದ ತಾಯೊಬ್ಬಳು, ತನ್ನ ಇದಿರ ಗುಂಪಿನ ಮಗುವಿನ ಹತ್ಯೆಗೆ ಒಳಗೊಳಗೆ ಸಮ್ಮತಿಸುತ್ತಾಳಲ್ಲ ಅದು ಆತಂಕವನ್ನುಂಟುಮಾಡುತ್ತದೆ” ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಇದು ಪ್ಯಾಲೆಸ್ತೇನಿ ಮಗುವಿನ ಸಾವನ್ನು ಸ್ವೀಕರಿಸುವ ಇಸ್ರೇಲಿ ತಾಯಿಗೂ, ಹಿಂದೂ ಯಾ ಮುಸಲ್ಮಾನ ಮಗುವಿನ ಹತ್ಯೆಗೆ ಸಮ್ಮತಿಸುವ ಹಿಂದೂ ಯಾ ಮುಸಲ್ಮಾನ ತಾಯಿಗೂ, ಸಮಾನವಾಗಿ ಒಪ್ಪುತ್ತದೆ. ಇದು ಅಸಹಿಷ್ಣು ವ್ಯವಸ್ಥೆಯನ್ನು ಕುರಿತಂತೆ ಸಾಮಾನ್ಯ ಪ್ರಜಾಸಮೂಹದಲ್ಲಿ ನೆಲೆಸಿರುವ ಒಂದು ಬಗೆಯ ಸ್ವೀಕರಣೆಯ ಭಾವವನ್ನು ಪ್ರತಿನಿಧಿಸುತ್ತದೆ. ಅಂತಹ ಒಂದು ಮೌನಸಮ್ಮತಿ ಅಥವಾ ನಿರ್ಲಿಪ್ತತೆಯ ನಿಲುವು ನಮ್ಮಲ್ಲೂ ಇದೆ. ಅದುವೇ ಮಹಿಷಾಸುರ ಸೃಷ್ಟಿಸೋ ಬೆಂಕಿಯುಂಡೆಗಳ ಮೂಲದ್ರವ್ಯವಾದ ಧೂಪದ ಪುಡಿ.

ಮಂಗಳೂರಿನ ಸದ್ಯದ ಸಂಕಟಗಳಿಗೆ ಒಂದು ನಿರ್ದಿಷ್ಟ ಗುಂಪು ಅಥವಾ ಓರ್ವ ವ್ಯಕ್ತಿ ಕಾರಣವೇ? ಅಷ್ಟಕ್ಕೂ ಅಸಹಿಷ್ಣು ಪ್ರವಚನಗಳಿಗೆ ಬಲಿ ಬೀಳಲು ಮಂಗಳೂರಿಗರು ಅಪ್ರಾಜ್ಞರೇ? ಹಿಂಸಾರತಿಯ ಬಾಹ್ಯ ಸಂಸ್ಕ್ರತಿಯೊಂದರ ಹೊಡೆತಕ್ಕೆ ಸಿಲುಕಲು ತುಳುವರಲ್ಲಿ ಸಹಿಷ್ಣು ಸಾಂಸ್ಕೃತಿಕ ಪರಂಪರೆಯೇ ಇಲ್ಲವೇ? ಇವೆಲ್ಲಾ ಪ್ರಶ್ನೆಗಳಿಗೂ ಸಿಗುವುದು ಕೇವಲ ನೇತ್ಯಾತ್ಮಕ ಉತ್ತರಗಳು. ನಮ್ಮಲ್ಲಿ ಒಳ್ಳೆಯ ಶಿಕ್ಷಣ ಇದೆ. ಜನರು ಪ್ರಾಜ್ಞರು. ನೆಲೆಸಿರುವ ಅಷ್ಟೂ ಸಮುದಾಯಗಳನ್ನು ಗೌರವಿಸುವ ಉಪಚರಿಸುವ ಸಹಿಷ್ಣು ಸಾಂಸ್ಕೃತಿಕ ಪರಂಪರೆಯೂ ಇದೆ. ಕ್ರಿಶ್ಚಿಯನ್ನರು ಬೆಳೆದು ಬ್ಯಾರಿಗಳಿಂದ ಮಾರಲ್ಪಟ್ಟು ಹಿಂದೂ ಮುಡಿಯಲ್ಲಿ ಘಮಿಸುವ ಮಲ್ಲಿಗೆಯ ಪರಿಮಳವಿದೆ. ಸಾಮರಸ್ಯದ ಬಲಿಷ್ಟ ನೆಲೆಗಟ್ಟಿದೆ. ತುಳು ಭಾಷೆಯ ಬಲೀಂದ್ರ ಪಾಡ್ದನದಲ್ಲಿ ಬರುವ ಕಥೆಯಲ್ಲಿ, ತಾನು ದಾನವಾಗಿ ನೀಡಲಿರುವ ಮೂರು ಹೆಜ್ಜೆ ಭೂಮಿಯನ್ನು ಏನು ಮಾಡುತ್ತೀಯ ಎಂದು ಬಲಿ ಚಕ್ರವರ್ತಿಯು ವಾಮನನ್ನು ಕೇಳಿದನಂತೆ. ಆಗ ವಾಮನನು,
“ದೇವೆರೆಗು ದೇವಾಲ್ಯೊ,
ದೈವೋಳೆಗು ಬದಿಮಾಡ,
ಬೆರ್ಮೆರೆಗು ಸಾನ,
ನಾಗೆರೆಗ್ ಬನ,
ಜೈನೆರೆ ಬಸ್ತಿ,
ಬ್ಯಾರಿಳೆ ಪಲ್ಲಿ,
ಕುಡುಂಬೆರೆ ಇಂಗ್ರೇಜಿ ಕಟ್ಟಾವ”
ಅನ್ನುತ್ತಾನೆ. (ದೇವರಿಗೆ ದೇವಾಲಯ, ನಾಗದೇವರಿಗೆ ಬನ, ಜೈನರಿಗೆ ಬಸದಿ, ಬ್ಯಾರಿಗಳಿಗೆ ಮಸೀದಿ ಹಾಗೂ ಕ್ರಿಶ್ಚಿಯನ್ನರಿಗೆ ಚರ್ಚುಗಳನ್ನು ಕಟ್ಟಿಸುತ್ತೇನೆ) ಇದು ತುಳುವರ ಸಾಂಸ್ಕೃತಿಕ ಶ್ರೀಮಂತಿಕೆಯ, ಸಾಮರಸ್ಯದ ಆಳವನ್ನು ಸಂಕೇತಿಸುತ್ತದೆ. ಹೀಗೆ ಶಿಕ್ಷಣ, ಪ್ರಜ್ಞೆ ಹಾಗೂ ಸಹಿಷ್ಣು-ಪರಂಪರೆಯ ಇಂತಹ ಬಲಿಷ್ಟ ಹಿನ್ನೆಲೆ ಇದ್ದರೂ ಮಂಗಳೂರಿನಲ್ಲಿ ಹಲವು ಅಸಹಜತೆಗಳು ಯಾಕೆ ನೆಲೆಸಿವೆ? ಇದಕ್ಕೆ ಉತ್ತರ ತುಳುವರ ನಿರ್ಲಿಪ್ತತೆ ಅಥವಾ ನಿಷ್ಕ್ರಿಯತೆ ಹಾಗೂ ಮಂಗಳೂರು ಪ್ರಾಂತ್ಯದಲ್ಲಿ ಸದ್ಯ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯ ಪ್ರವೃತ್ತಿಗಳಲ್ಲಿ ಇದೆ.

ಅನಾಹುತಗಳನ್ನು ಸೃಷ್ಟಿಸುವ ಎಷ್ಟೇ ಬಲಶಾಲಿ ಶಕ್ತಿಗಳಿರಲಿ, ಜಾಗರೂಕ ಜನರಿದ್ದಲ್ಲಿ ಅವುಗಳಿಗೆ ವೈಫಲ್ಯವೇ ಖಚಿತ ಸಂಗಾತಿ. ತುಳುವರ ಸದ್ಯದ ಅನಿವಾರ್ಯತೆ ಇದೇ ಆಗಿದೆ. ಅದು ಮಹಿಷಾಸುರನ ಪ್ರವೇಶದ ನಂತರವೂ ಇರುವ, ಉಳಿಯುವ “ಜಾಗರಣೆ”. ದುಷ್ಟತೆಯ ವಿರುದ್ಧ ಧಿಕ್ಕಾರದ ಕೂಗಿಗೆ ಮೂಡುವ ಜೈಕಾರ. ದೈವಕ್ಕೆ ಉಪಸ್ಥಿತಿಯ ಸಹಯೋಗ. ರಾಕ್ಷಸಿ ಪ್ರಜ್ಞೆಯೊಂದರ ವಿರುಧ್ಧ ನಡೆಯ ಹೊರಟ ಪತ್ರಕರ್ತ ನವೀನ್ ಸೂರಿಂಜೆ ಸದ್ಯ ಬಂಧನಕ್ಕೆ ಒಳಗಾಗಿದ್ದಾರೆ. ಇಂತಹ ಅನಾಚಾರಗಳನ್ನು ಎಸಗುತ್ತಿರುವ ಮಹಿಷಾಸುರನ ಅಟ್ಟಹಾಸವನ್ನು ನಾವಿಂದು ಕೊನೆಗೊಳಿಸುವ ಅವಶ್ಯಕತೆಯಿದೆ. ನಾವೇ ಮುಂದಡಿಯಿಟ್ಟು ಹೊರಟಲ್ಲಿ ದೈವವೂ ನಮಗೆ ಸಹಯೋಗ ನೀಡುತ್ತದೆ. ದೇವಿ ಮಹಾತ್ಮೆಗೆ ನಾವೇ ಶುಭ ಅಂತ್ಯವನ್ನು ಬರೆಯಬೇಕಿದೆ.

ನ್ಯಾಯ ಸಿಗುವವರೆಗೆ, ಸ್ಥೈರ್ಯ ಕುಗ್ಗದ ಹಾಗೆ…

ಸ್ನೇಹಿತರೆ,

ಸಾಕ್ಷಿಯಾಗಬೇಕಿದ್ದ ನವೀನ್ ಸೂರಿಂಜೆಯವರನ್ನು ದಕ್ಷಿಣ ಕನ್ನಡದ ಪೋಲಿಸರು ಮತ್ತು ಅಲ್ಲಿಯ ರಾಜಕೀಯ ಪಟ್ಟಭದ್ರರು ಬೇಕಂತಲೇ ಆರೋಪಿಪಟ್ಟಿಯಲ್ಲಿ ಸೇರಿಸಿ ಈಗ ಬಂಧನಕ್ಕೂ ಕಾರಣರಾಗಿದ್ದಾರೆ. ಇವರು ನ್ಯಾಯಾಲಯದ ದಿಕ್ಕು ತಪ್ಪಿಸಿರುವುದು ಬಹುಶಃ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಸಾಬೀತಾಗಬಹುದು. ಆದರೆ, ಇಷ್ಟಕ್ಕೂ ಒಬ್ಬ ನಿರಪರಾಧಿಯ ಬಂಧನವಾದರೂ ಏಕಾಗಬೇಕು?

ನೆನ್ನೆ ರಾಜ್ಯದ ಅನೇಕ ಕಡೆ ನವೀನ್ ಸೂರಿಂಜೆಯ ಬಂಧನವನ್ನು ವಿರೋಧಿಸಿ ಪ್ರತಿಭಟನೆಗಳು ಜರುಗಿವೆ. ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರರು ಇಂದೂ ಸಹ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳಾಗಲಿವೆ ಎಂದಿದ್ದಾರೆ. ನೆನ್ನೆ ಜನಶ್ರೀ ಚಾನಲ್‌ನಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು ಈ ಪ್ರತಿಭಟನೆ ಮುಂದುವರೆಯುತ್ತದೆ ಮತ್ತು ನವೀನರ ಹೆಸರನ್ನು ಚಾರ್ಜ್‍ಷೀಟ್‌ನಿಂದ ಕೈಬಿಡುವವರೆಗೂ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ. ಅದೊಂದು ಉತ್ತಮ ನಿರ್ಧಾರ. ಇದು ಕೇವಲ ಒಂದು ದಿನದ ಪ್ರತಿಭಟನೆಗೆ ಮುಗಿಯಬಾರದು. ಇದರ ತಾರ್ಕಿಕ ಅಂತ್ಯ ಇರುವುದು ನಿರಪರಾಧಿಯ ಹೆಸರು ಆರೋಪ ಪಟ್ಟಿಯಿಂದ ಕೈಬಿಡುವುದರಲ್ಲಿ, ಮತ್ತು ಇಂತಹ ಅವಘಡಕ್ಕೆ ಮತ್ತು ಕುತಂತ್ರಕ್ಕೆ ಕಾರಣರಾದವರಿಗೆ ಶಿಕ್ಷೆ ಆಗುವುದರಲ್ಲಿ.

ಇಂದಿನ ಪತ್ರಿಕೆಗಳ ವಾಚಕರವಾಣಿಯಲ್ಲಿ ರಾಜ್ಯದ ಅನೇಕ ಪ್ರಮುಖ ಪ್ರಗತಿಪರ ಲೇಖಕಿಯರು ನವೀನರ ಬಂಧನಕ್ಕೆ ಆಘಾತ ವ್ಯಕ್ತಪಡಿಸಿ ಕಟುಮಾತುಗಳಲ್ಲಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಎಲ್ಲಾ ಪ್ರಗತಿಪರರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಅದು ಕೊಡಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವವರು, ನ್ಯಾಯದ ಪರ ನಿಲ್ಲುವವರು, ಎಲ್ಲರೂ ನವೀನರ ಪರ ನಿಲ್ಲಬೇಕಿದೆ. ಈಗ ನಮ್ಮನ್ನು ಆಳುತ್ತಿರುವುದು ಅತಿ ಭ್ರಷ್ಟ, ಸಂವೇದನೆಯನ್ನೇ ಕಳೆದುಕೊಂಡ ಸರ್ಕಾರವೇ ಆಗಿದ್ದರೂ, ಅದರ ಮೇಲೆ ಒತ್ತಡ ತರಲೇಬೇಕಿದೆ. ಅದು ಪತ್ರರೂಪದಲ್ಲಾಗಿರಬಹುದು, ಪ್ರತಿಭಟನೆಯಾಗಿರಬಹುದು, ಗಣ್ಯರು ನೇರವಾಗಿ ಗೃಹಮಂತ್ರಿ ಮತ್ತು ಮುಖ್ಯಮಂತ್ರಿಗೆ ದೂರವಾಣಿ ಮೂಲಕ ಮಾತನಾಡುವುದಾಗಿರಬಹುದು; ಎಲ್ಲರೂ ಅವರವರ ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.

ಮತ್ತು, ಇಲ್ಲ್ಲಿ ನವೀನ್ ಸೂರಿಂಜೆ ಕೇವಲ ನಿಮಿತ್ತ ಮಾತ್ರ. ಮುಂದೆ ಹೀಗಾಗದಂತೆ, ನಿರಪರಾಧಿಗಳನ್ನು ಪೋಲಿಸರು ಮತ್ತು ಪಟ್ಟಭದ್ರರು “ಫಿಕ್ಸ್” ಮಾಡುವುದಕ್ಕೆ ಭಯ ಪಡುವಂತಹ ವಾತಾವರಣ ನಾವು ನಿರ್ಮಿಸಿಕೊಳ್ಳುವುದಕ್ಕೆ ಈ ಪ್ರಯತ್ನ ಬಹಳ ಮುಖ್ಯವಾಗಿದೆ. ಹಾಗಾಗಿ ಸದರಿ ಪ್ರಕರಣದಲ್ಲಿ  ಕೋರ್ಟ್‌ನಿಂದ ಛೀಮಾರಿ ಆದರೆ ಮಾತ್ರ ಸಾಲದು.  ತಪ್ಪು ಎಸಗಿರುವ ಅಧಿಕಾರಿಗಳಿಗೆ, ಮಾನವ ಹಕ್ಕುಗಳನ್ನು ದಮನ ಮಾಡಿದವರಿಗೆ ಶಿಕ್ಷೆ ಮತ್ತು ಸೇವೆಯಿಂದ ವಜಾ ಮಾಡಿಸುವವರೆಗೆ ಈ ಹೋರಾಟ ಮುಂದುವರೆಯಬೇಕಿದೆ.

ನವೀನ್ ಕೇವಲ ಜೀವನೋಪಾಯಕ್ಕೆ ದುಡಿಯುವ  ಪತ್ರಕರ್ತನಲ್ಲ, ಜೊತೆಜೊತೆಗೆ ಸಮಾಜಮುಖಿಯಾಗಿ ಚಿಂತಿಸುವ ಲೇಖಕ ಮತ್ತು ಸಾಮಾಜಿಕ ಕಾರ್ಯಕರ್ತ ಸಹ ಎನ್ನುವುದು ನಮ್ಮ ವರ್ತಮಾನ.ಕಾಮ್‌ನ ಓದುಗ ಬಳಗಕ್ಕೆ ಗೊತ್ತಿರುವ ಸಂಗತಿಯೇ. ಹಾಗಾಗಿ, ನವೀನ್ ಸೂರಿಂಜೆಯ ನೈತಿಕ ಸ್ಥೈರ್ಯ ಕುಗ್ಗದ ಹಾಗೆ ನೋಡಿಕೊಳ್ಳುವುದು ಈ ಸಮಾಜದ ಕರ್ತವ್ಯವಾಗಿದೆ. ನಾವೆಲ್ಲರೂ ನಮ್ಮನಮ್ಮ ನೆಲೆಯಲ್ಲಿ ಇದನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ವರ್ತಮಾನದ ಓದುಗ ಬಳಗವೂ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ ಎನ್ನುವ ನಂಬಿಕೆ ನನ್ನದು. ನಿಮ್ಮೆಲ್ಲರ ಬೆಂಬಲ ಮತ್ತು ಪಾಲ್ಗೊಳ್ಳುವಿಕೆ ಅತ್ಯವಶ್ಯ. ದಯವಿಟ್ಟು ಇಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಸಿಕ್ಕ ವೇದಿಕೆಗಳಲ್ಲಿ ಧ್ವನಿಯೆತ್ತಿ ಜನಾಭಿಪ್ರಾಯ ರೂಪಿಸಬೇಕೆಂದೂ, ಆ ಮೂಲಕ ನಮ್ಮೆಲ್ಲರ ಒಡನಾಡಿ ನವೀನರ ಪರ ನಿಲ್ಲಬೇಕೆಂದು ಈ ಮೂಲಕ ನಿಮ್ಮೆಲ್ಲರನ್ನು ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ದಿ

ನವೀನ್ ಸೂರಿಂಜೆ ಬಂಧನ… ನಿರಪರಾಧಿಗಳ ಬೆನ್ನತ್ತಿ ಪೋಲಿಸರು…

ಸ್ನೇಹಿತರೆ,

ರಾತ್ರಿ ಹನ್ನೊಂದರ ಸುಮಾರಿಗೆ ವಿಷಯ ಗೊತ್ತಾಯಿತು. ಸುಮಾರು ಒಂದು ತಿಂಗಳ ಹಿಂದೆ ನವೀನ್ ಸೂರಿಂಜೆಯವರ ವಿರುದ್ಧ ಮಂಗಳೂರಿನ ನ್ಯಾಯಾಲಯ ಜಾಮೀನುರಹಿತ ಅರೆಸ್ಟ್ ವಾರಂಟ್ ಹೊರಡಿಸಿದ್ದದ್ದು ನಿಮಗೆ ಗೊತ್ತೇ ಇದೆ. ಈ ಘಟನೆಗೆ ಮೂಲಕಾರಣವಾದ ವಿಷಯಗಳೂ ಸಹ ನಿಮಗೆ ಗೊತ್ತಿದೆ. (ಇಲ್ಲಿ, ಇಲ್ಲಿ, ಮತ್ತು ಇಲ್ಲಿ.)

ನಮ್ಮ ರಾಜ್ಯದ ನೋವು, ಅಕ್ರಮ, ಅಸಹಾಯಕತೆಗಳು ಒಂದೆರಡಲ್ಲ. ನಮ್ಮ ಪೋಲಿಸ್ ವ್ಯವಸ್ಥೆ ಪ್ರಭಾವಶಾಲಿಗಳ ಮತ್ತು ಅಧಿಕಾರಸ್ಥರ ಕುತಂತ್ರಗಳಿಗೆ ಬಲಿಯಾಗಿ ಪಟ್ಟಭದ್ರರ ಕೈಗೊಂಬೆಯಾಗಿ ಬದಲಾಗಿದೆ. ಆ ಇಲಾಖೆ ಸಂವೇದನಾಶೀಲತೆ ಮತ್ತು ಆತ್ಮವಿಮರ್ಶೆಯನ್ನು ಕಳೆದುಕೊಂಡಿದೆ. ಇಲ್ಲವಾದಲ್ಲಿ ಸಾಕ್ಷಿಯನ್ನೇ ಅಪರಾಧಿಯನ್ನಾಗಿಸುವ, ಅದೂ ತನ್ನ ಕರ್ತವ್ಯ ನಿರ್ವಹಿಸಲು ಹೋಗಿದ್ದ ಪತ್ರಕರ್ತನನ್ನೇ ಆರೋಪಿಯೆಂದು ಚಾರ್ಜ್‌ಶೀಟ್‌ನಲ್ಲಿ ಸೇರಿಸುವ ಕೆಲಸ ಮಾಡುತ್ತಿರಲಿಲ್ಲ. ಯಾವುದೇ ಸರ್ಕಾರಿ ವ್ಯವಸ್ಥೆ ಅಥವ ಸಂಸ್ಥೆಯನ್ನು ನಂಬುವಂತಹ, ನೆಚ್ಚುವಂತಹ ವಾತಾವರಣವನನ್ನು ನಮ್ಮ ರಾಜಕಾರಣಿಗಳು ಮತ್ತು ಪಟ್ಟಭದ್ರರು ಸಂಪೂರ್ಣವಾಗಿ ಹಾಳುಮಾಡಿದ್ದಾರೆ. ಹಾಗೆಯೇ, ಸಮಾಜಮುಖಿಯಾಗಿ ಕೆಲಸ ಮಾಡುವವರ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಈಗ ನವೀನ್ ಸೂರಿಂಜೆಯವರ ಬಂಧನವಾಗಿದೆ. ರಾಜ್ಯದ ಪತ್ರಕರ್ತರು ಅವರಿಗೆ ನೈತಿಕ ಬೆಂಬಲ ನೀಡಬೇಕು ಮತ್ತು  ಅವರನ್ನು ಆರೋಪಪಟ್ಟಿಯಿಂದ — ಸಕಾರಣಕ್ಕಾಗಿ, ನ್ಯಾಯದ ಹಿನ್ನೆಲೆಯಲ್ಲಿ — ಕೈಬಿಡಬೇಕೆಂಬ ಒತ್ತಡ ತರಬೇಕೆಂದು ನಾನು ಈ ಮೂಲಕ ಅವರೆಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ. ಈಗಲ್ಲದಿದ್ದರೆ ಇನ್ಯಾವಾಗ?

ನವೀನ್ ಸೂರಿಂಜೆಯವರು ಈ ವಾರಂಟ್ ವಿಚಾರವಾಗಿ ಎರಡು-ಮೂರು ವಾರಗಳ ಹಿಂದೆಯೇ ವಕೀಲರನ್ನು ಬೇಟಿಯಾಗಿ ಕಾನೂನು ಪ್ರಕ್ರಿಯೆ ಬಗ್ಗೆ ಚರ್ಚಿಸಿದ್ದರು. ಅವರ ಎಲ್ಲಾ ಕಾನೂನಾತ್ಮಕ ಹೋರಾಟಕ್ಕೆ ನಮ್ಮ ವರ್ತಮಾನ ಬಳಗದ ಬೆಂಬಲ ಇದೆ. ಪೋಲಿಸರು ಬೇಕೆಂತಲೇ “ಫಿಟ್” ಮಾಡಿರುವ ಈ ಕೇಸಿನಿಂದ ಅವರು ಆದಷ್ಟು ಬೇಗ ಹೊರಬರಲಿ, ತಮ್ಮ ಕೆಲಸ ಮುಂದುವರೆಸಲಿ ಎಂದು ಈ ಮೂಲಕ ಆಶಿಸುತ್ತೇವೆ. ಈ ಯುವ ಪತ್ರಕರ್ತನ ಮನೆಯವರು, ಅವರ ತಾಯಿತಂದೆ, ಧೈರ್ಯಗೆಡಬಾರದೆಂದು, ನಮ್ಮೆಲ್ಲರ ನೈತಿಕ ಬೆಂಬಲ ಅವರಿಗಿದೆ ಎಂದು ಈ ಮೂಲಕ ಹೇಳಬಯಸುತ್ತೇವೆ. ಅವರ ಮಗ ಮಾಡಿರುವ ಕೆಲಸದ ಬಗ್ಗೆ ಮತ್ತು ಅವರ ಕಾಳಜಿ ಮತ್ತು ಪ್ರಾಮಾಣಿಕತೆ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ.

ಆದರೂ, ವಿಷಾದನೀಯ ಸಮಯದಲ್ಲಿ ನಾವು ಬದುಕುತ್ತಿದ್ದೇವೆ.

ರವಿ ಕೃಷ್ಣಾರೆಡ್ಡಿ

ಮಾಧ್ಯಮದವರ ಆತ್ಮವಂಚನೆ ಮತ್ತು ಆತ್ಮಶೋಧನೆ


-ಚಿದಂಬರ ಬೈಕಂಪಾಡಿ


 

ಯಾರೂ ತೆಗಳಿಕೆಯನ್ನು ಇಷ್ಟಪಡುವುದಿಲ್ಲ, ಹಾಗೊಂದು ವೇಳೆ ತೆಗಳಿಕೆಯನ್ನೇ ಬಯಸುತ್ತೇನೆ ಎಂದು ಹೇಳುವುದು ಆತ್ಮವಂಚನೆಯಾಗುತ್ತದೆ. ತೆಗಳಿಸಿಕೊಳ್ಳಲು ಹೆಚ್ಚು ಪರಿಶ್ರಮ ಬೇಕಾಗಿಲ್ಲ, ಹೊಗಳಿಸಿಕೊಳ್ಳಲು ಪರಿಶ್ರಮ ಹಾಗೂ ಕಾಲಾವಕಾಶ ಅತಿಯಾಗಿ ಬೇಕಾಗುತ್ತದೆ. ಆದ್ದರಿಂದ ತೆಗಳಿಕೆಯನ್ನು ಯಾರೂ ಬಯಸುವುದಿಲ್ಲ. ನಾನು ಬರೆದ ಸಾಹಿತ್ಯವನ್ನು ಓದುಗರು ಮೆಚ್ಚಿಕೊಳ್ಳಬೇಕು ಎನ್ನುವ ತುಡಿತ ಸಹಜವಾಗಿ ಇರುತ್ತದೆ, ಆದರೆ ಹಾಗೆ ಮೆಚ್ಚಿಕೊಳ್ಳಬೇಕಾದರೆ ಅವರಿಗೆ ನಾನು ಬರೆದದ್ದು ಅವರ ಗ್ರಹಿಕೆಗೆ ಹತ್ತಿರವಾಗಿರಬೇಕು ಎನ್ನುವ ಕಾಳಜಿಯೂ ನನಗಿರಬೇಕಾಗುತ್ತದೆ. ಅಂಥ ಕಾಳಜಿಗೆ ಕೊರತೆಯಾದಾಗ ಬರವಣಿಗೆ ನನಗೆ ಮಾತ್ರ ಆಪ್ಯಾಯಮಾನವಾಗುತ್ತದೆ ಹೊರತು ಓದುಗರಿಗಲ್ಲ. ಅಂತೆಯೇ ಓದುಗ ಕೂಡಾ ಬರಹಗಾರನ ಮೇಲೆ ಕಾಳಜಿ ಹೊಂದಿರಬೇಕಾಗುತ್ತದೆ ಎನ್ನುವ ನಿರೀಕ್ಷೆ ಸಹಜವಾದುದೇ ಆದರೂ ಬರಹಗಾರ ನಿರೀಕ್ಷಿಸುವಷ್ಟರಮಟ್ಟಿಗೆ ಓದುಗ ಪ್ರತಿಕ್ರಿಯಿಸುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಓದುಗನ ನಿರೀಕ್ಷೆಗೆ ವಿರುದ್ಧವಾಗಿ ಅಥವಾ ಬರಹಗಾರ ತಪ್ಪಾಗಿ ಬರೆದಿದ್ದರೆ ಅವನ ಪ್ರತಿಕ್ರಿಯೆ ಆ ಕ್ಷಣಕ್ಕೆ ವ್ಯಕ್ತವಾಗುತ್ತದೆ, ಒಂದು ವೇಳೆ ಓದುಗನ ಗ್ರಹಿಕೆಗೆ ಅದು ತಾಳೆಯಾಗುವಂತಿದ್ದರೆ ಅವನಿಗೆ ಪ್ರತಿಕ್ರಿಯಿಸಬೇಕು ಅನ್ನಿಸುವುದಿಲ್ಲ. ಆದ್ದರಿಂದಲೇ ಓದುಗನ ಪ್ರತಿಕ್ರಿಯೆ ಬಹುತೇಕ ಮೌನವಾಗಿರುತ್ತದೆ, ಆದರೆ ಅದು ಬರಹಗಾರನ ಪರವಾಗಿದೆ ಎಂದೇ ಅರ್ಥ.

ಮಾಧ್ಯಮಗಳ ಜಾಲ ಈಗ ವಿಸ್ತಾರಗೊಂಡಿರುವುದರಿಂದ ಓದುಗ ಅಥವಾ ವೀಕ್ಷಕರ ಜಾಲವೂ ವಿಸ್ತಾರಗೊಂಡಿದೆ. ಮುದ್ರಣ ಮಾಧ್ಯಮವೊಂದೇ ಇದ್ದಾಗ ಮುದ್ರಣ ಮಾಧ್ಯಮದಲ್ಲಿ ಅದರಲ್ಲೂ ಪತ್ರಕರ್ತನಾಗಿದ್ದವರಿಗೆ ಅತಿಯಾದ ಜವಾಬ್ದಾರಿಯಿತ್ತು ಮತ್ತು ಅಂಥ ಜವಾಬ್ದಾರಿಯುತ ವೃತ್ತಿಪರತೆಯನ್ನೇ ಓದುಗರು ಬಯಸುತ್ತಿದ್ದರು. ಒಂದು ಸುದ್ದಿಯನ್ನು ಬರೆಯುವಾಗ ಬಳಸುವ ಪದಗಳ ಬಗ್ಗೆಯೂ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿತ್ತು. ಪತ್ರಕರ್ತನಿಗೆ ಬರೆಯುವ ಪೂರ್ಣಸ್ವಾತಂತ್ರ್ಯವಿತ್ತಾದರೂ ಅದನ್ನು ಓದುಗರು ಪ್ರಶ್ನೆ ಮಾಡುತ್ತಾರೆ ಎನ್ನುವ ಎಚ್ಚರ ಅವನಲ್ಲಿ ಜಾಗೃತ ಸ್ಥಿತಿಯಲ್ಲಿತ್ತು.

‘ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ’ ಎನ್ನುವ ಒಂದು ವಾಕ್ಯದಿಂದಾಗಿ ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ತಮ್ಮ ಕುರ್ಚಿ ಕಳೆದುಕೊಂಡರು ಅಂದರೆ ಹೊಸತಲೆಮಾರಿನ ಪತ್ರಕರ್ತರಿಗೆ ನಂಬುವುದು ಕಷ್ಟ, ಆದರೆ ವಾಸ್ತವ. ಅಂದು ಪತ್ರಿಕೆಯ ಪ್ರಭಾವ ಅಷ್ಟಿತ್ತು ಮತ್ತು ಅಂಥ ಸುದ್ದಿ ಬರೆದ ಪತ್ರಕರ್ತನಿಗೆ ಅಂಥ ಕ್ರೆಡಿಬಿಲಿಟಿ ಇತ್ತು. ಓದುಗರೂ ಅಷ್ಟೇ ವಿಶ್ವಾಸವನ್ನು ಸುದ್ದಿ ಹಾಗೂ ಆ ಸುದ್ದಿ ಬರೆದ ಪತ್ರಕರ್ತನ ಮೇಲೆ ಇಟ್ಟಿರುತ್ತಿದ್ದರು. ಈ ಮಾತುಗಳು ಈಗಿನ ಪತ್ರಕರ್ತರಿಗೆ ರುಚಿಸದೇ ಹೋಗಬಹುದು ಅಥವಾ ಇದು ನಂಬುವಂಥದ್ದಲ್ಲ ಎನ್ನುವ ಅಭಿಪ್ರಾಯವೂ ಇರಬಹುದು, ಮೆಚ್ಚಲೇಬೇಕೆನ್ನುವ ಒತ್ತಾಸೆಯೂ ಇಲ್ಲ. ಅದಕ್ಕೆ ಕಾರಣಗಳೂ ಅನೇಕಾನೇಕ.

80ರ ದಶಕದಲ್ಲಿ ಪತ್ರಿಕೆಯೊಂದು ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸುವಷ್ಟು ಸಾಮರ್ಥ್ಯ ಹೊಂದಿದ್ದರೆ ಈಗ ನಿತ್ಯವೂ ಒಬ್ಬೊಬ್ಬರು ರಾಜೀನಾಮೆ ಕೊಡುತ್ತಿರಬೇಕಿತ್ತಲ್ಲ ಎನ್ನುವ ಪ್ರಶ್ನೆ ಮೂಡಿದರೆ ಅಚ್ಚರಿಯಿಲ್ಲ. ಈಗ ಪ್ರತ್ಯೇಕ ರಾಜ್ಯ ಕೇಳುತ್ತಾರೆ, ತಮಗಾಗಿಯೇ ಜಿಲ್ಲೆ ಬೇಕೆನ್ನುತ್ತಾರೆ, ಮನೆ ಮಂದಿಯ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡುತ್ತಾರೆ, ಜಾತಿಯ ಹೆಸರಲ್ಲಿ ಮಠ-ಮಂದಿರ ಕಟ್ಟುತ್ತಾರೆ, ಸರ್ಕಾರದ ಬೊಕ್ಕಸದಿಂದ ಕೋಟಿ ಕೋಟಿ ದಾನ ಮಾಡುತ್ತಾರೆ. ಧಾರಾವಾಹಿಗಳಾಗಿ ಇವೆಲ್ಲವುಗಳ ಬಗ್ಗೆ ಮುದ್ರಣ ಮಾಧ್ಯಮದಲ್ಲಿ ಲೇಖನಗಳು ಪ್ರಕಟವಾಗುತ್ತವೆ. ದೃಶ್ಯಮಾಧ್ಯಮಗಳಲ್ಲಿ ದಿನಪೂರ್ತಿ ಚರ್ಚೆಗಳಾಗುತ್ತವೆ. ಓದುಗ, ವೀಕ್ಷಕ ಇವೆಲ್ಲಕ್ಕೂ ಸಾಕ್ಷಿಯಾಗುತ್ತಾರೆ. ಇಂಥ ವಿವಾದಕ್ಕೆ ಕಾರಣರಾದವರು ದಿನ ಬೆಳಗಾಗುವುದರೊಳಗೆ ಹೀರೋ ಆಗಿಬಿಡುತ್ತಿದ್ದಾರೆ ಹೊರತು ಗುಂಡೂರಾವ್ ಅವರಂತೆ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗುವುದಿಲ್ಲ. ಇಂಥ ಸುದ್ದಿಗಳನ್ನು ಬರೆದ ಪತ್ರಕರ್ತ ಹಿಂದೆ ಹೀರೋ ಆಗುತ್ತಿದ್ದ ಈಗ ‘ವಿಲನ್’ ಅನ್ನಿಸಿಕೊಳ್ಳುತ್ತಿದ್ದಾನೆ (ಈ ಮಾತಿಗೆ ಅಪವಾದಗಳಿರಬಹುದು).

ಶತಮಾನಗಳ ಇತಿಹಾಸವುಳ್ಳ, ಮಹಾಕಾವ್ಯ ಪರಂಪರೆಯಿರುವ ಕನ್ನಡ ಸಾಹಿತ್ಯವನ್ನು ಬಸವಲಿಂಗಪ್ಪ ‘ಬೂಸಾ’ ಅಂದದ್ದು ಹೊಸ ಸಾಹಿತ್ಯ ಚಳವಳಿಗೆ ಪ್ರೇರಣೆಯಾಯಿತು ಅಂದರೆ ಈಗ ನಂಬುವುದು ಕಷ್ಟ. ಇದು ಇತಿಹಾಸದಲ್ಲಿರುವ ಸತ್ಯ. ಆರ್ಥಿಕ ಪರಿಣತರಾಗಿದ್ದ ಅರುಣ ಶೌರಿ 1980ರಲ್ಲಿ ಬಾಗಲ್ಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಕೊಡುತ್ತಿದ ಹಿಂಸೆ, ಕಣ್ಣುಗಳಿಗೆ ಸೂಜಿಯಿಂದ ಚುಚ್ಚುವುದು, ಆ್ಯಸಿಡ್ ಹಾಕುವುದನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಸರಣಿ ಲೇಖನ ಬರೆದು ಜಗತ್ತಿನ ಗಮನ ಸೆಳೆದ ಪತ್ರಕರ್ತರಾದರು. ಸರ್ಕಾರದ ವಿರುದ್ಧ ತನಿಖಾ ವರದಿ ಬರೆದು ಸುಮಾರು 300 ಕೇಸುಗಳನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಮೇಲೆ ಜಡಿಯಲು ಕಾರಣರಾದರು. ಇದನ್ನು ಕೂಡಾ ಈಗ ನಿರಾಕರಿಸಲಾಗದು. ಆಗ ಸರ್ಕಾರ, ರಾಜಕಾರಣಿಗಳು ನಡುಗಿದ್ದೂ ಕೂಡಾ ಸತ್ಯ. ಆದರೆ ಈಗ ಇಂಥ ಬರವಣಿಗೆಗಳಿಗೇನೂ ಕೊರತೆಯಾಗಿಲ್ಲ. ಅಂದಿಗಿಂತ ಇಂದು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಪ್ರಬಲವಾಗಿವೆಯಾದರೂ ಅಂದಿನಂತೆ ಫಲಿತಾಂಶಗಳು ಬರುತ್ತಿಲ್ಲ ಯಾಕೆ? ಎನ್ನುವುದು ಪ್ರಶ್ನೆ.

ಇದಕ್ಕೆ ಉತ್ತರ ಹುಡುಕುವ ಅಗತ್ಯ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರೇ ಮಾಡಬೇಕಾಗಿದೆ, ಆತ್ಮಶೋಧನೆಯನ್ನು ನಾವೇ ಮಾಡಿಕೊಳ್ಳಬೇಕಾಗಿದೆ. ಪ್ರಾಮಾಣಿಕತೆಯನ್ನು ಸುದೀರ್ಘ ಕಾಲದವರೆಗೆ ಉಳಿಸಿಕೊಳ್ಳುವುದು ಈಗ ಕಷ್ಟ ಎಂದು ಮಾಧ್ಯಮಗಳಿಗೆ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನ್ನಿಸುತ್ತಿದೆ. ಚುನಾವಣೆ ಕಾಲದಲ್ಲಿ ಮಾಧ್ಯಮಗಳು ಕಂಡುಕೊಂಡಿರುವ ‘ಪೇಯ್ಡ್ ನ್ಯೂಸ್’ ಮಾಡುವ ಅವಾಂತರಗಳ ಗಂಭೀರತೆಯ ಅರಿವು ಇರಬೇಕಾಗುತ್ತದೆ. ಲೋಕಾಯುಕ್ತರು ಅಧಿಕಾರಿಗಳ, ರಾಜಕಾರಣಿಗಳ ಮನೆಗಳ ಮೇಲೆ ದಾಳಿ ಮಾಡಿ ಕೋಟಿ ಕೋಟಿ ಅಕ್ರಮ ಆಸ್ತಿ ಜಪ್ತಿ ಮಾಡಿದಾಗ ಆ ಸುದ್ದಿಯನ್ನು ಬರೆಯುವ ನಾವು, ನಮ್ಮ ಮಾಧ್ಯಮಗಳು ನಾವಿರುವ ಸ್ಥಿತಿಯ ಬಗ್ಗೆಯೂ ಎದೆಮುಟ್ಟಿ ನೋಡಿಕೊಳ್ಳಬೇಕೆನಿಸುವುದಿಲ್ಲವೇ?

ಮಾಧ್ಯಮ ಪ್ರಬಲವಾಗಿದ್ದರೆ, ಅದರ ಜಾಲ ವಿಸ್ತಾರವಾಗಿದ್ದರೆ ಅದರ ಪತ್ರಕರ್ತನೂ ಪ್ರಭಾವಿಯಾಗಿತ್ತಾನೆ. ಅವನು ಹೇಳಿದ್ದೇ ನೀತಿಯಾಗುತ್ತದೆ. ಮಾಧ್ಯಮ ದುರ್ಬಲವಾಗಿದ್ದರೆ ಪ್ರಬಲ ಪತ್ರಕರ್ತನಾಗಿದ್ದರೂ ಅವನು ಅಭಿಪ್ರಾಯ ರೂಪಿಸಲು ಸಾಧ್ಯವಿಲ್ಲ. ಮಾಧ್ಯಮದಿಂದ ಪತ್ರಕರ್ತ ಬೆಳೆಯುವಷ್ಟರಮಟ್ಟಿಗೆ ಮಾಧ್ಯಮವನ್ನು ಒಬ್ಬ ಪತ್ರಕರ್ತ ಬೆಳೆಸುವುದು ಸಾಧ್ಯವಿಲ್ಲ. ತಾನು ಮಾತ್ರ ಮಾಧ್ಯಮದ ಪ್ರಭಾವದಲ್ಲಿ ಬೆಳೆಯಬಲ್ಲ. ತಾನು ಬೆಳೆಯಬೇಕೆನ್ನುವ ತಹತಹಿಕೆಯಲ್ಲಿ ಬೆಳೆದ ಹಿನ್ನೆಲೆಯನ್ನು ಮರೆತುಬಿಟ್ಟರೆ ಒಂದು ಸುದ್ದಿ ಮುಖ್ಯಮಂತ್ರಿಯ ಕುರ್ಚಿ ಕಸಿಯಲಾರದು ಅಥವಾ ಒಂದು ಚಳವಳಿಯನ್ನು ಹುಟ್ಟು ಹಾಕಲಾರದು.