Monthly Archives: November 2012

ಹುಲಿಯ ನೆರಳಿನಲ್ಲಿ ನಾಮದೇವ ನಿಮಗಾಡೆ


-ಬಿ. ಶ್ರೀಪಾದ್ ಭಟ್


1920ರ ಸುಮಾರಿಗೆ ಮಹಾರಾಷ್ಟ್ರದ ಸತಗಾಂವ್ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ನಾಮದೇವ ನಿಮಗಾಡೆ ಮುಂದೆ ದೊಡ್ಡ ವಿಜ್ಞಾನಿಯಾಗಿ, ಅಂಬೇಡ್ಕರ್‌ವಾದಿಯಾಗಿ ಮತ್ತು ಮುಖ್ಯವಾಗಿ ಮಾನವತಾವಾದಿಯಾಗಿ ರೂಪುಗೊಂಡ ಜೀವನ ವೃತ್ತಾಂತವನ್ನು ತಮ್ಮ ‘ಹುಲಿಯ ನೆರಳಿನೊಳಗೆ’ ಎನ್ನುವ ಆತ್ಮಕಥೆಯಲ್ಲಿ ವಿವರವಾಗಿ ದಾಖಲಿಸುತ್ತಾರೆ. ಅಸ್ಪೃಶ್ಯನಾಗಿ ಹುಟ್ಟಿದ್ದರ ಪರಿಣಾಮವಾಗಿ ತಮ್ಮ ಜೀವನದಲ್ಲಿ ಅನುಭವಿಸಿದ ಅವಮಾನ, ಶೋಷಣೆಗಳನ್ನು ಸರಳವಾಗಿ ಆದರೆ ಅರ್ಥಪೂರ್ಣವಾಗಿ, ಅನೇಕ ರೀತಿಯ ಶೋಷಣೆಯ ಘಟನೆಗಳನ್ನು ವಿನೋದದ ಧಾಟಿಯಲ್ಲಿ (ನಮ್ಮ ಕವಿ ಸಿದ್ಧಲಿಂಗಯ್ಯನವರ ಮಾದರಿಯಲ್ಲಿ) ನಿರೂಪಿಸುತ್ತಾರೆ. 290 ಪುಟಗಳ ಆತ್ಮಕಥೆಯಲ್ಲಿ ಎಲ್ಲಿಯೂ ತಮ್ಮನ್ನು ಬಲಿಪಶುವಾಗಿ ಬಿಂಬಿಸಿಕೊಂಡಿಲ್ಲ, ಶ್ರೇಣೀಕೃತ ವ್ಯವಸ್ಥೆಯಲ್ಲಿ ನಾಲ್ಕೂ ಜಾತಿಗಳ ನಂತರ ಬರುವ, ಊರ ಹೊರಗೆ ಬದುಕುವ ಅಸ್ಪೃಶ್ಯನ ದುರಂತ ಬದುಕನ್ನು ಎಲ್ಲಿಯೂ ಸೌಂದರ್ಯೀಕರಿಸಿಲ್ಲ, ಅವಮಾನಗಳನ್ನು ಉತ್ಪ್ರೇಕ್ಷೀಕರಿಸಿಲ್ಲ, ಆತ್ಮಾನುಕಂಪದಲ್ಲಿ ತೇಲಿಸಿಲ್ಲ. ಆ ಮೂಲಕ ತಮ್ಮ ಅಂಬೇಡ್ಕರ್‌ವಾದಿಯೊಬ್ಬನ ಆತ್ಮಕಥೆಗೆ ಒಂದು ಮಾದರಿಯ ಹುತಾತ್ಮತೆಯ ಆಯಾಮವನ್ನು ನಿರಾಕರಿಸಿದ್ದಾರೆ. ತಾವು ಅಸ್ಪೃಶ್ಯನಾಗಿದ್ದಕ್ಕೆ ಮೇಲ್ಜಾತಿಯವರು ವಿಧಿಸಿದ ನಿರ್ಬಂಧನೆಗಳನ್ನು ಬಾಲ್ಯಕಾಲದಲ್ಲಿ ಮುರಿದಾಗ ಅನೇಕ ಬಾರಿ ದೈಹಿಕವಾಗಿ ಹಲ್ಲೆಗೊಳಗಾಗುತ್ತಾರೆ. ದೈಹಿಕವಾಗಿ ಮೈ ತುಂಬಾ ರಕ್ತದ ಗಾಯಗಳು ಮೂಡುವಂತೆ ಏಟು ತಿಂದ ತಮ್ಮ ಬಾಲ್ಯ ದಿನಗಳ ಕುರಿತಾಗಿ ನಾಮದೇವರು, “ನಾನು ಹೊಳೆಯಲ್ಲಿ ನನ್ನ ಕೈ ಮತ್ತು ಬಾಯಿಯನ್ನು ತೊಳೆದುಕೊಂಡು ಗಾಯವು ಬಹಿರಂಗವಾಗಿ ಗೋಚರಿಸದಂತೆ ಎಚ್ಚರಿಕೆ ವಹಿಸುತ್ತಿದ್ದೆ. ಈ ರೀತಿಯಾಗಿ ಶಾಲೆಯನ್ನು ಪ್ರವೇಶಿಸಿದ್ದಕ್ಕಾಗಿ, ಬಾವಿ ನೀರನ್ನು ಮುಟ್ಟಿದ್ದಕ್ಕಾಗಿ ನನಗೆ ಬಿದ್ದ ಏಟುಗಳ ಕುರಿತಾಗಿ ನನ್ನ ಹಳ್ಳಿಯಲ್ಲಿ ಯಾರೊಬ್ಬರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಈ ಸಮಾಜದ ಜಾತಿ ಆಧಾರಿತ ಹಲ್ಲೆಗಳ ಹಿನ್ನೆಲೆಗಳೆಲ್ಲವನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದ ನನ್ನ ಪೋಷಕರಿಗೆ ಹರಿದ ನನ್ನ ಬಟ್ಟೆಗಳು ಎಲ್ಲವನ್ನೂ ಬಯಲುಗೊಳಿಸಿತ್ತು. ಹಾಗೂ ಇದಕ್ಕೆಲ್ಲ ಅವರು ಹೊಂದಿಕೊಂಡಂತ್ತಿದ್ದರು. ಆದರೆ ನಾನು ನನ್ನೊಳಗೆ ಬಲು ದೊಡ್ಡ ಪದವೀಧರನಾಗುವ ಕನಸನ್ನು ಗಟ್ಟಿಗೊಳಿಸುತ್ತ, ನನ್ನನ್ನು ನಾನು ಸ್ವತಃ ಅಭಿವೃದ್ಧಿಗೊಳಿಸಿಕೊಳ್ಳುತ್ತ, ಶೈಕ್ಷಣಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಸ್ವಾವಲಂಬನೆ ಸಾಧಿಸುವತ್ತ ಪಯಣಿಸತೊಡಗಿದೆ,” ಎಂದು ಹೇಳುತ್ತಾರೆ.

ತಮ್ಮ ಈ  ಬದ್ಧತೆ ಮತ್ತು ಏಕಾಗ್ರತೆಯ ಫಲವಾಗಿ ನಾಗಪುರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಿಮಗಾಡೆಯವರು 1962ರಲ್ಲಿ ಅಮೇರಿಕಾದ ವಿಸ್ಕಾನಸಿನ್ ವಿಶ್ವವಿದ್ಯಾಲಯದಿಂದ ಮಣ್ಣು ವಿಜ್ಞಾನದಲ್ಲಿ ಪಿಎಚ್‌ಡಿಯನ್ನು ಪದವಿಯನ್ನು ಪೂರೈಸಿದರು. ಅಂಬೇಡ್ಕರ್ ನಂತರ ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ಅನ್ನು ಪಡೆದ ಎರಡನೇ ದಲಿತ ನಾಮದೇವ ನಿಮಗಾಡೆ.

ಅಂಬೇಡ್ಕರ್ ಅವರನ್ನು ಧಗಧಗಿಸುವ, ಪ್ರಜ್ವಲವಾಗಿ ಸುಡುತ್ತಿರುವ ಹುಲಿಯೆಂದು ವರ್ಣಿಸಿದ ನಿಮಗಾಡೆ ಅಂಬೇಡ್ಕರ್ ಅವರ ಕಟ್ಟಾ ಅನುಯಾಯಿ. ಅಂಬೇಡ್ಕರ್ ಅವರೊಂದಿಗೆ ಒಮ್ಮೆ ಸಂವಾದದಲ್ಲಿದ್ದಾಗ ನಿಮಗಾಡೆಯವರು ಅವರನ್ನು ನೀವೇಕೆ ನಿಮ್ಮ ಆತ್ಮ ಕಥೆಯನ್ನು ಬರೆಯಬಾರದು ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಂಬೇಡ್ಕರ್ ಅವರು ಬೇರೆಯವರ ಹಾಗೂ ಇತರೇ ವಿಷಯಗಳ ಕುರಿತಾಗಿ ಬರೆಯುವುದು ಬಹಳ ಸುಲಭ. ಆದರೆ ನನ್ನದೇ ಆತ್ಮಚರಿತ್ರೆಯನ್ನು ಬರೆಯಲು ಮಾತ್ರ ವರ್ಷಗಳೇ ಬೇಕಾಗುತ್ತವೆ ಎಂದು ಮಾರ್ಮಿಕವಾಗಿ ಉತ್ತರಿಸುತ್ತಾರೆ. ಕಳೆದ 50 ವರ್ಷಗಳಲ್ಲಿ ಅತ್ಯಂತ ಮೇಧಾವಿ ಹಾಗೂ ಸಂಪೂರ್ಣವಾಗಿ ಸಮರ್ಪಿತ ಅಂಬೇಡ್ಕರ್‌ವಾದಿಯಾಗಿ ತಮ್ಮನ್ನು ಹಾಗೂ ತಮ್ಮ ಸಾರ್ವಜನಿಕ ಮತ್ತು ವೈಯುಕ್ತಿಕ ಬದುಕನ್ನು ಕಟ್ಟಿಕೊಳ್ಳುತ್ತಾರೆ ನಾಮದೇವ ನಿಮಗಾಡೆ.

ತಮ್ಮ ಮನೆತನದ ಹೆಸರಾದ ನಿಮಗಾಡೆ ಕುರಿತಾಗಿ ಹಾಗೂ ಇತರ ದಲಿತರ ಜಾತಿ ಸೂಚಕ ಹೆಸರಿನ ಕುರಿತಾಗಿ ಅತ್ಯಂತ ಸ್ವಾರಸ್ಯಕರವಾಗಿ ಹೀಗೆ ಬರೆಯುತ್ತಾರೆ: “ನನ್ನ ಮನೆತನದ ಹೆಸರಾದ ನಿಮಗಾಡೆ ಮೂಲತಃ ಬೇವಿನ ಮರವನ್ನು ಆಧರಿಸಿದ ಹೆಸರು. ಈ ಬೇವಿನ ಮರವು ಅನೇಕ ನೋವು ಉಪಶಮನಕ ಗುಣಗಳನ್ನು ಹೊಂದಿದೆ. ಇದೇ ರೀತಿಯಾಗಿ ನಮ್ಮ ಅಸ್ಪೃಶ್ಯ ಮನೆತನಗಳಲ್ಲಿ ಅನೇಕ ಉಪಯುಕ್ತ ಗಿಡಗಳ ಹೆಸರನ್ನೇ ತಮ್ಮ ಮನೆತನದ ಹೆಸರನ್ನಾಗಿ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ನನ್ನ ಭಾವ ಮೈದುನನ ಮನೆತನದ ಹೆಸರು ‘ಕೋಬ್ರಗಾಡೆ’. ಅದರರ್ಥ ತೆಂಗಿನ ಮರ. ಅದೇ ರೀತಿ ಮತ್ತೊಂದು ದಲಿತ ಮನೆತನದ ಹೆಸರು ‘ಅಂಬಗಾಡೆ’. ಅದರರ್ಥ ಮಾವಿನ ಗಿಡ. ‘ಜಮಗಾಡೆ’ ಎಂದರೆ ಸೀಬೆ ಮರ. ‘ಬೋರ್ಕರ್ ಎಂದರೆ ಚೆಕ್ಕಕಾಯಿ. ಈ ಮಾದರಿಯ ಹೆಸರುಗಳು ಬುದ್ಧನ ಕಾಲದಿಂದಲೇ ಬಳಕೆಯಲ್ಲಿವೆ. ಇದು ಭಾರತದ ಅಸ್ಪೃಶ್ಯರು ಮೂಲಭೂತವಾಗಿ ಬೌಧ್ಧರು ಎಂದು ಸಾಬೀತಾಗುತ್ತದೆ.”

ತಮ್ಮ ಅಜ್ಜ, ಅಜ್ಜಿಯರಾದ ಬುಧ ಮತ್ತು ಸಗುಣ ಅವರ ಕುರಿತಾಗಿ ಅತ್ಯಂತ ಹೃದಯಂಗಮವಾಗಿ ಬರೆಯುತ್ತಾರೆ, “ನನ್ನ ತಾತ ಬುಧ ಅವರೊಂದಿಗೆ ಹರೆಯದಲ್ಲಿ ನಿಶ್ಚಿತಾರ್ಥಗೊಂಡ ಮಹಿಳೆ ಸಿಡುಬು ರೋಗಿದಿಂದ ಮೃತವಾದಳು. ಇದರಿಂದ ತೀವ್ರವಾಗಿ ಬೇಸರಗೊಂಡ ನನ್ನ ತಾತ ಬುಧ ಒಬ್ಬ ಹಕೀಮನಾಗಿ ಹಳ್ಳಿಗಳನ್ನು ತಿರುಗುತ್ತಿದ್ದ. ಇಂತಹ ಸಂದರ್ಭದಲ್ಲಿ ಆಕಸ್ಮಾತ್ತಾಗಿ 30ರ ಹರೆಯದ, ಮಕ್ಕಳನ್ನು ಕಳೆದುಕೊಂಡ ವಿಧವೆಯಾದ ನನ್ನ ಅಜ್ಜಿ ಸಗುಣಳನ್ನು ಭೇಟಿಯಾಗಿ ಆಕೆಯನ್ನೇ ವಿವಾಹವಾದ. ಆ ಕಾಲದಲ್ಲಿ ನನ್ನ ತಾತ ವಿಧವೆಯನ್ನು ವಿವಾಹವಾಗಿದ್ದು ಒಂದು ಕ್ರಾಂತಿಕಾರಿ ನಡೆಯಾಗಿತ್ತು.”

ಸುಮಾರು 30ರ ದಶಕದಲ್ಲಿನ ತಮ್ಮ ಬಾಲ್ಯದ ದಿನಗಳಲ್ಲಿ ಅಚಾನಕ್ಕಾಗಿ ತಮ್ಮ ಸೋದರ ಮಾವನಿಂದ ದೊರೆತ ಬಂಗಾರದ ಬಣ್ಣದ ಅಂಚುಳ್ಳ ಟೋಪಿಯನ್ನು ಧರಿಸಿ ಶ್ರೀಮಂತರ, ಮೇಲ್ಜಾತಿಗಳ ಬೀದಿಗಳಲ್ಲಿ ಹೆಮ್ಮೆಯಿಂದ ಅಡ್ಡಾಡಿದ್ದನ್ನು ಬರೆಯುತ್ತ ‘ಈ ಬಂಗಾರದ ಬಣ್ಣದ ಅಂಚುಳ್ಳ ಟೋಪಿಯು ನನಗೆ ಒಂದು ಬಗೆಯ ಆತ್ಮ ವಿಶ್ವಾಸವನ್ನು ದೊರಕಿಸಿಕೊಟ್ಟಿತ್ತು. ಈ ಟೋಪಿಯನ್ನು ಧರಿಸಿದ ಕ್ಷಣ ನನ್ನ ಅಸ್ಪೃಶ್ಯತೆಯೇ ಕೊನೆಗಂಡಂತೆ ನನಗನ್ನಿಸುತ್ತಿತ್ತು. ಈ ಟೋಪಿಯು ನಾನು ತಲೆಯೆತ್ತಿ ಬದುಕುವ ಮೊದಲ ಅವಕಾಶವನ್ನು ದೊರಕಿಸಿತ್ತು. ಒಮ್ಮೆ ಈ ಟೋಪಿಯನ್ನು ಧರಿಸಿ ಗಲ್ಲಿಗಳಲ್ಲಿ ಅಡ್ಡಾಡುತಿದ್ದಾಗ ಆಗ ಭಾರತ್ ಮಾತಾಕಿ ಜೈ, ಮಹಾತ್ಮ ಗಾಂಧೀಕಿ ಜೈ, ಎಂದು ಕೂಗುತ್ತ ಹೊರಟ ಗುಂಪೊಂದು ನನ್ನನ್ನೂ ಹಾಗೂ ನನ್ನ ಟೋಪಿಯನ್ನು ಕಂಡು ತೀವ್ರವಾಗಿ ಆಕ್ಷೇಪಿಸಿ ನನ್ನ ಘನತೆಯ, ಜೀವದ ಟೋಪಿಯನ್ನು ಕಸಿದುಕೊಂಡು ಬೆಂಕಿಯಲ್ಲಿ ಬಿಸಾಡಿದರು! ಅಂದರೆ ನನ್ನ ಆತ್ಮಸಾಕ್ಷಿಯನ್ನು ಬೆಂಕಿಯಲ್ಲಿ ಸುಟ್ಟರು! ಇದು ವಿದೇಶಿ ವಸ್ತುಗಳನ್ನು, ಬಟ್ಟೆಗಳನ್ನು ಸುಡಬೇಕೆಂದು ಗಾಂಧಿ ನೀಡಿದ ಕರೆಗೆ ಓಗೊಟ್ಟು ಮೇಲಿನ ಗುಂಪು ನನ್ನ ಟೋಪಿಯನ್ನು ಸುಟ್ಟರು ಎಂದು ತದನಂತರ ನನಗೆ ಗೊತ್ತಾಯಿತು. ಆಗ ನನಗೆ ಮಹಾತ್ಮ ಗಾಂಧಿಯವರು ಒಬ್ಬ ರಾಕ್ಷಸನಂತೆ ಗೋಚರಿಸಿದರು!’ ಎಂದು ವಿವರಿಸುತ್ತಾರೆ. ಗಾಂಧಿಯ ಈ ಸ್ವದೇಶಿ ವ್ಯಾಮೋಹದ ಧೋರಣೆಗಳು ಕೇವಲ ಏಕಮುಖವಾದದ್ದು. ಈ ಏಕಮುಖ ಚಿಂತನೆಯು ದಲಿತರ ಆತ್ಮಸಾಕ್ಷಿಯ ಅನೇಕ ಸಂಕೇತಗಳನ್ನು, ಬಿಡುಗಡೆಯ ದಾರಿಗಳನ್ನು ನಾಶಗೊಳಿಸುತ್ತವೆ ಎಂದು ಅಂಬೇಡ್ಕರ್ ಅವರು ಕಟುವಾಗಿ ಟೀಕಿಸುತ್ತಾರೆ. ಇದನ್ನು ನಾಮದೇವ ನಿಮಗಾಡೆಯವರಿಗೆ ಉಂಟಾದ ಮೇಲಿನ ಅನುಭವವು ದೃಢಪಡಿಸುತ್ತದೆ.

ಬಾಲ್ಯದ ದಿನಗಳಲ್ಲಿನ ಅಸ್ಪೃಶ್ಯತೆಯ ಅನುಭವಗಳ ಕುರಿತಾಗಿ ಅತ್ಯಂತ ನಿರುದ್ವಿಗ್ನ ಶೈಲಿಯಲ್ಲಿ ಹೇಳುತ್ತಾರೆ: “ನನ್ನ ತಾತ ಒಬ್ಬ ಜೀತದಾಳಾಗಿದ್ದ. ಸವರ್ಣೀಯರೊಬ್ಬರ ಮನೆಯಲ್ಲಿ ದುಡಿಯುತ್ತಿದ್ದ. ಈ ಜಮೀನ್ದಾರರ ಮನೆಗಳಲ್ಲಿ ಮದುವೆಗಳು ನಡೆದಾಗ ನಮ್ಮನ್ನು ಅತ್ಯಂತ ಹೀನಾಯವಾಗಿ, ಬಿಡುವಿಲ್ಲದೆ ದುಡಿಸಿಕೊಳ್ಳುತ್ತಿದ್ದರು. ದಿನದ ಇಪ್ಪತ್ನಾಲ್ಕು ಗಂಟೆಗಳೂ ಅವರ ಜೀತಕ್ಕೆ ಮೀಸಲಾಗುತ್ತಿತ್ತು. ಇಂತಹ ಮದುವೆಯ ಸಂದರ್ಭದಲ್ಲಿ ಅಲಂಕಾರಭೂಷಿತನಾದ ಮದುಮಗನ ಸ್ವಗೃಹದಿಂದ ಮದುಮಗಳ ಮನೆವರೆಗೂ ಮೆರವಣಿಗೆಯು ನಡೆಯುತ್ತಿತ್ತು. ಈ ಮೆರವಣಿಗೆಗಾಗಿ ಅಂದವಾಗಿ ಸಿಂಗರಿಸಿದ ಎತ್ತಿನ ಬಂಡಿಯನ್ನು ಬಳಸುತ್ತಿದ್ದರು. ನಾನು ಮತ್ತು ನನ್ನ ಚಿಕ್ಕಪ್ಪ ಈ ಎತ್ತಿನ ಬಂಡಿಯ ಮುಂದೆ ಓಡುತ್ತಾ ಸಾಗಬೇಕು. ನಮ್ಮನ್ನು ಹಿಂಬಾಲಿಸಿ ಅಲಂಕಾರಭೂಷಿತ ಮದುಮಗನನ್ನು ಹೊತ್ತ ಎತ್ತಿನ ಗಾಡಿಯು ಅಟ್ಟಿಸಿಕೊಂಡು ನಮ್ಮನ್ನು ಬರುತ್ತಿತ್ತು. ಅದನ್ನು ಇನ್ನಷ್ಟು ಹುರುಪುಗೊಳಿಸಲು ಅಸ್ಪೃಶ್ಯರಾದ ನಾವು ಬರಿಗಾಲಲ್ಲಿ ಮತ್ತಷ್ಟು ವೇಗದಿಂದ ಓಡಬೇಕಾಗುತ್ತಿತ್ತು. ಮತ್ತಷ್ಟು ಹುರುಪುಗೊಂಡು ನಮ್ಮನ್ನು ಅಟ್ಟಿಸಿಕೊಂಡು ಮುದಮಗನ ಎತ್ತಿನ ಬಂಡಿ! ಈ ಬಿಡುವಿರದ ಓಟದ ಗುರಿ ಮದುಮಗಳ ಮನೆಯನ್ನು ತಲಪುವರೆಗೂ ನಿಲ್ಲುತ್ತಿರಲಿಲ್ಲ. ಮೇಲ್ಜಾತಿಯವರ ಸೃಷ್ಟಿಯಾದ ಅನೇಕ ಅಮಾನವೀಯ ಆಚರಣೆಗಳಲ್ಲೊಂದಾದ ಈ ನಮ್ಮ ಬರಿಗಾಲಿನ ಓಟದ ದುಃಸ್ಥಿತಿ ಅತ್ಯಂತ ಅಮಾನುಷವಾಗಿತ್ತು. ಆದರೆ ನಾವೆಲ್ಲ ಅಸಹಾಯಕರಾಗಿದ್ದೆವು .”

ಅಸ್ಪೃಶ್ಯನಾಗಿದ್ದರಿಂದ ದಲಿತರ ವಿರುದ್ಧದ ಸವರ್ಣೀಯರ ನಿಬಂಧನೆಗಳನ್ನು ಮುರಿದು ಶಾಲೆಯ ಒಳಗೆ ಪ್ರವೇಶಿಸಿದ್ದಕ್ಕಾಗಿ ಅನೇಕ ವೇಳೆ ಹಲ್ಲೆಗೊಳಗಾಗಿದ್ದ ನಿಮಗಾಡೆಯವರು ತಮ್ಮ ಆರಂಭದ ಶಾಲೆಯ ಅನುಭವಗಳ ಕುರಿತಾಗಿ ಹೇಳುತ್ತಾರೆ: “1934ರಲ್ಲಿ ನನ್ನ 14ನೇ ವಯಸ್ಸಿನಲ್ಲಿ ನಾನು ಶಾಲೆ ಸೇರಿಕೊಂಡೆ. ನನ್ನ ಹೆಸರನ್ನು ನೊಂದಾಯಿಸಿಕೊಳ್ಳುವ ದಿನದಂದು ಶಾಲೆಯ ಮುಖ್ಯೋಪಾಧ್ಯಾಯರು ನಾನು ಅಸ್ಪೃಶ್ಯನಾಗಿದ್ದಕ್ಕಾಗಿ ನಾನು ತರಗತಿಯೊಳಗೆ ಪ್ರವೇಶಿಸಬಾರೆದೆಂದು ಕಟ್ಟಪ್ಪಣೆಯನ್ನು ಕೊಟ್ಟಿದ್ದರು. ನಾನು ಶಾಲೆಯ ಹೊರಗಿನ ಬಿಸಿಲಿನ ವರಾಂಡದಲ್ಲಿ ನಿಂತು ಕಿಟಿಕಿಯ ಮೂಲಕ ಪಾಠವನ್ನು ಕಲಿಯಬೇಕಾಯಿತು. ನನ್ನ ಆ ಶಾಲೆಯ ಒಂದು ದೊಡ್ಡ ಹಾಲಿನಲ್ಲಿ ನಾಲ್ಕು ವಿವಿಧ ತರಗತಿಗಳ ಪಾಠಗಳು ನಡೆಯುತ್ತಿದ್ದವು. ಅಸ್ಪೃಶ್ಯನಾದ ನಾನು ಹೊರಗೆ ಬಿಸಿಲಿನಲ್ಲಿ ನಿಂತುಕೊಂಡು ಒಳಗಡೆ ನಡೆಯುವ ವಿಭಿನ್ನ ತರಗತಿಗಳ ಪಾಠಗಳನ್ನು ಕಲಿಯಬೇಕಾಗಿತ್ತು. ನಮಗೆ ಬಾಯಾರಿಕೆಯಾದಾಗಲೂ ಶಾಲೆಯ ಬಾವಿಯಿಂದ ನೀರನ್ನು ಕುಡಿಯುವಂತಿರಲಿಲ್ಲ. ನೀರಿಗಾಗಿ ದೂರದ ನಮ್ಮದೇ ಜಾತಿಯ ಹಟ್ಟಿಗಳಿಗೆ ಹೋಗಬೇಕಾಗುತ್ತಿತ್ತು. ನನ್ನ ಹಳ್ಳಿಯಾದ ಸತಗಾಂವ್‌ನಿಂದ ಈ ಶಾಲೆಗೆ ಸುಮಾರು ಏಳೆಂಟು ಹುಡುಗರು ಹೋಗುತ್ತಿದ್ದೆವು. ಇವರಲ್ಲಿ ನಾನೊಬ್ಬನೇ ಅಸ್ಪೃಶ್ಯನಾಗಿದ್ದೆ. ತದನಂತರ ಇನ್ನೂ ಮೂವರು ದಲಿತರು ನನ್ನ ಜೊತೆಗೂಡಿದರು. ನಾವೆಲ್ಲ ಒಂದೇ ಗುಂಪಿನವರಾಗಿದ್ದದ್ದು ಈ ಶ್ರೇಣೀಕೃತ ಸಮಾಜದಲ್ಲಿ ಸಹಜವಾಗಿತ್ತು. ಮಳೆಗಾಲದ ದಿನಗಳು ನಮಗೆ ಅತ್ಯಂತ ಕಷ್ಟದ ದಿನಗಳು. ಬರಿಗಾಲಲ್ಲಿ ನಡೆಯುತ್ತಿದ್ದರಿಂದ ಕಾಲಲ್ಲಿ ಚುಚ್ಚಿಕೊಳ್ಳುತ್ತಿದ್ದ ಮುಳ್ಳುಗಳಿಂದಾಗಿ ಅಪಾರ ಯಾತನೆಯನ್ನು ಅನುಭವಿಸಬೇಕಾಗಿತ್ತು. ಜೊತೆಗೆ ತೋಳ, ಹಾವುಗಳ ಕಾಟ. ಆದರೆ ಮೇಲ್ಜಾತಿಯ ಹುಡುಗರಿಗೆ ಈ ನೈಸರ್ಗಿಕವಾಗಿ ಅಪಾಯಕಾರಿಯಾದ ಜೀವಜಂತುಗಳಿಗಿಂತ  ವ್ಯವಸ್ಥೆಯೊಳಗೆ ಬದುಕುತ್ತಿರುವ ಅಸ್ಪೃಶ್ಯರಾದ ನಾವು ಹೆಚ್ಚು ಬೆದರಿಕೆಯ, ಅನಿಷ್ಟದ ಸೂಚನೆಗಳಾಗಿದ್ದೆವು.”

ಈ ಭಾಗಗಳಲ್ಲಿ ನಿಮಗಾಡೆಯವರು ತಾವು ಜಾತಿ ನಿರ್ಬಂಧಿತ ಸಂಕೋಲೆಗಳನ್ನು ಮುರಿದಿದ್ದಕ್ಕಾಗಿ ಅನುಭವಿಸಿದ ಅನೇಕ ಕಷ್ಟಗಳನ್ನು ಸ್ಥಿತಪ್ರಜ್ಞರಾಗಿ ವಿವರಿಸುತ್ತಾರೆ. ಇಲ್ಲಿ ವೈಯುಕ್ತಿಕವಾಗಿ ಯಾರನ್ನೂ ದೋಷಿಯಾಗಿ ಕಟಕಟೆಯಲ್ಲಿ ನಿಲ್ಲಿಸದೆ ತಮ್ಮ ನಿರೂಪಣೆಯ ಮೂಲಕವೇ ಇಡೀ ವರ್ಣಾಶ್ರಮದ ಅಮಾನವೀಯ ವ್ಯವಸ್ಥೆಯೇ ಮೂರ್ತವಾದ ಖಳನಾಯಕನೆಂದು ತೀವ್ರವಾದ ತಣ್ಣಗಿನ, ಪ್ರಾಮಾಣಿಕ ಮನಸ್ಸಿನೊಂದಿಗೆ ಬಿಡಿಬಿಡಿಯಾಗಿ ಬಿಚ್ಚಿಡುತ್ತಾರೆ. ತಮ್ಮ ತಂದೆಯವರ ಜಾತ್ಯಾತೀತ ನಡುವಳಿಕೆಗಳನ್ನು, ಸಮಾಜಸುಧಾರಕನ ಮನಸ್ಸನ್ನು ಕುರಿತಾಗಿ ಬರೆಯುತ್ತಾರೆ. ಇಡೀ ನಿರೂಪಣೆಯಲ್ಲಿ ಎಲ್ಲಿಯೂ ದೈನ್ಯತೆಯು, ಕೃತಜ್ಞಭಾವವು ಸುಳಿಯುವುದಿಲ್ಲ. ಈ ಮೇಲ್ಜಾತಿಯ ಶೋಷಣೆಯ ಕುರಿತಾಗಿ ಬರೆಯುವಾಗಲೂ ಯಾವ ಪದವೂ ಬೆಂಕಿಯುಂಡೆಯನ್ನು, ದ್ವೇಷವನ್ನು ಹೊರಹಾಕುವುದಿಲ್ಲ. ಬದಲಾಗಿ ಇಡೀ ಕಥನಕ್ಕೆ ಒಂದು ಬಗೆಯ ಲಯ ದಕ್ಕಿದೆ. ಆ ಲಯ ಬುದ್ಧನ ಮಾನವೀಯತೆಯ ಲಯ. ಇದೇ ನಿಮಗಾಡೆಯವರ ಬಲು ದೊಡ್ಡ ಯಶಸ್ಸು. ನಿಮಗಾಡೆಯವರದು ಕ್ರಾಂತಿಯ, ಸಿಡಿದೇಳುವ ಮನಸ್ಥಿತಿಯಲ್ಲ. ಬದಲಾಗಿ ದೌರ್ಜನ್ಯಗಳನ್ನು ಅನುಭವಿಸುತ್ತಲೇ ತಮ್ಮ ಮುಗ್ಧತೆಯನ್ನು, ನೈತಿಕತೆಯನ್ನು ಬಳಸಿಕೊಂಡು ಅದರ ಕಟ್ಟುಪಾಡುಗಳ ಬುಡಕ್ಕೆ ಏಟು ಕೊಡುತ್ತಲೇ ಈ ಶ್ರೇಣೀಕೃತ ಸಮಾಜದಲ್ಲಿ ಮೇಲಿನ ಮೆಟ್ಟಿಲುಗಳನ್ನೇರುವುದು ನಿಮಗಾಡೆಯವರ ವ್ಯಕ್ತಿತ್ವ ಮತ್ತು ಅನಿವಾರ್ಯವಾಗಿಯೇ ಈ ಚಲನಶೀಲತೆಯೇ ಒಂದು ಬಿಡುಗಡೆಯ ರಹದಾರಿಯೂ ಸಹ. ಬುದ್ಧಿಜೀವಿಗಳು ಹೇಳುವ ನೆಲದೊಳಕ್ಕೆ ಬೇರು ಬಿಟ್ಟು ಆಧುನಿಕರಾಗುವ ಪ್ರಕ್ರಿಯೆಯನ್ನು ಬಿಡುಗಡೆಯ ದಾರಿಯನ್ನಾಗಿಸುವ ಮಾದರಿಗೆ ಸ್ವತಃ ತಮ್ಮ ಬದುಕನ್ನು ರೂಪಿಸಿಕೊಂಡರು ಈ ಅಂಬೇಡ್ಕರ್‌ವಾದಿ ‘ನಾಮದೇವ ನಿಮಗಾಡೆ’ಯವರು.

ತಮ್ಮ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಭೀಮರಾವ್ ಅಂಬೇಡ್ಕರ್ ಹೆಸರನ್ನು ಕೇಳಿದ ಘಟನೆಯನ್ನು ಹೀಗೆ ನಿರೂಪಿಸುತ್ತಾರೆ: “1936ರ ದೀಪಾವಳಿ ಸಂದರ್ಭದಲ್ಲಿ ನನ್ನ ತಂದೆಯವರು ನಮ್ಮ ಸತಗಾಂವ್ ಹಳ್ಳಿಯ ಎಲ್ಲ ಅಸ್ಪೃಶ್ಯ ಸಮುದಾಯದ ಕುಟುಂಬಗಳನ್ನು ಒಟ್ಟಾಗಿ ಸೇರಿಸಿ ಮೊಟ್ಟ ಮೊದಲ ಬಾರಿಗೆ ದಲಿತ ಸಮಾವೇಶವನ್ನು ಆಯೋಜಿಸಿದ್ದರು. ಅಲ್ಲಿ ನನಗೆ ತಮ್ಮ ಭಾಷಣವನ್ನು ಬರೆದುಕೊಳ್ಳುವಂತೆ ಸೂಚಿಸಿದರು. ನಂತರ ಈ ಭಾಷಣವನ್ನು ನೆರೆದ ಜನತೆಯ ಮುಂದೆ ಓದಲು ಹೇಳಿದರು. ಅಂದು ನಾನು ಓದಿದ ಆ ಭಾಷಣದ ಸಾರಾಂಶ ಹೀಗಿತ್ತು: ’ನಮ್ಮ ದಲಿತ ಜನಾಂಗದಲ್ಲಿ ಜನಿಸಿ ಉನ್ನತ ವ್ಯಾಸಂಗವನ್ನು ಪಡೆದ ಅತ್ಯಂತ ಮೇಧಾವಿಯ ಹೆಸರು ಡಾ.ಭೀಮರಾವ್ ಅಂಬೇಡ್ಕರ್. ಈ ಅಂಬೇಡ್ಕರ್ ಅವರು ವಿದೇಶಕ್ಕೆ ಹೋಗಿ ಬಿಳಿಯ ಜನರ ನೆಲದಲ್ಲಿ ಡಾಕ್ಟರೇಟನ್ನು ಪಡೆದು ಭಾರತಕ್ಕೆ ಬ್ಯಾರಿಸ್ಟರ್ ಆಗಿ ಮರಳಿದ್ದಾರೆ. ಅಸ್ಪೃಶ್ಯರಾದ ನಾವೆಲ್ಲರೂ ಮೇಲ್ಜಾತಿಯವರ ಸಮಾನರೆಂದೂ, ನಮಗೆ ಊರಿನ ಬಾವಿಗಳಲ್ಲಿ ನೀರನ್ನು ಕುಡಿಯುವ ಹಕ್ಕಿದೆಯೆಂದು, ದೇವಸ್ಥಾನಗಳಲ್ಲಿ ಪ್ರವೇಶಿಸಿ ಪೂಜಿಸುವ ಹಕ್ಕಿದೆಯೆಂದು ಮಾನ್ಯ ಅಂಬೇಡ್ಕರ್ ಅವರು ಹೇಳುತ್ತಾರೆ. ನಾವೆಲ್ಲ ಈ ಮೇಲ್ಜಾತಿಯವರ ಮುಂದೆ ಕೈಯೊಡ್ಡಿ ಬೇಡುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಆದೇಶಿಸಿದ್ದಾರೆ. ನಾವು ಸತ್ತ ದನದ ಮಾಂಸವನ್ನು ತಿನ್ನಬಾರದೆಂದು ಹೇಳುತ್ತಾರೆ. ನಮ್ಮ ಮಕ್ಕಳೆಲ್ಲ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಅಂಬೇಡ್ಕರ್ ಅವರು ಒತ್ತಾಯಿಸಿದ್ದಾರೆ. ಇದನ್ನು ಸಾಧಿಸಲು ನಮ್ಮೊಳಗಿನ ಜಾತೀಯ ತಾರತಮ್ಯವನ್ನು ತ್ಯಜಿಸಿ ಒಗ್ಗಟ್ಟಾಗಿ ಹೋರಾಡಬೇಕೆಂದು ಅಂಬೇಡ್ಕರ್‌ಜಿಯವರ ಬಯಕೆ’”.

(ಕೃಪೆ : ನವಾಯಾನ ಪ್ರಕಾಶನದ ಪುಸ್ತಕ “In the Tiger’s Shodow” – The autobiography of an Ambedkarite – Namdeo Nimgade)

ಪ್ರಜಾ ಸಮರ-8 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕೊಂಡಪಲ್ಲಿ ಸೀತಾರಾಮಯ್ಯ ನಾಯಕತ್ವದ ಯುವ ಮಾವೋ-ಲೆನಿನ್‌ವಾದಿ ಕಮ್ಯೂನಿಷ್ಟ್ ಕಾರ್ಯಕರ್ತರು ಆಂಧ್ರದ ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಊಳಿಗ ಮಾನ್ಯ ವ್ಯವಸ್ಥೆಯ ವಿರುದ್ದ ಸಾರಿದ ಬಹಿರಂಗ ಸಮರದಿಂದಾಗಿ ದೊರೆಗಳಂತೆ ಮೆರೆಯುತ್ತಿದ್ದ ರೆಡ್ಡಿ ಮತ್ತು ವೆಲಮ ಜಾತಿಗೆ ಸೇರಿದ ಜಮೀನ್ದಾರರು ತಮ್ಮ ಸಾವಿರಾರು ಎಕರೆ ಜಮೀನುಗಳನ್ನು ತೊರೆದು ಊರು ಬಿಡುವಂತಹ ವಾತಾವರಣ ಸೃಷ್ಟಿಯಾಯಿತು. ಹಲವರಂತೂ ಜೀವ ಭಯದಿಂದ ಆಕ್ರಮಿಸಿಕೊಂಡಿದ್ದ ದಲಿತರು ಮತ್ತು ಆದಿವಾಸಿಗಳ ಭೂಮಿಯನ್ನು ನಕ್ಸಲಿಯರ ಸಂಘಟನೆಗೆ ಮರು ಮಾತಿಲ್ಲದೆ ಒಪ್ಪಿಸಿದ್ದರು.

ಆಂಧ್ರ ಸಕಾರವೇ ಅಧಿಕೃತವಾಗಿ ಒಪ್ಪಿಕೊಂಡಂತೆ, ಜಮೀನ್ದಾರರಿಂದ ವಶಪಡಿಸಿಕೊಂಡಿದ್ದ 80 ಸಾವಿರ ಎಕರೆ ವ್ಯವಸಾಯದ ಜಮೀನು ಮತ್ತು 1 ಲಕ್ಷದ 20 ಸಾವಿರ ಅರಣ್ಯದ ಭೂಮಿಯನ್ನು ಭೂರಹಿತ ದಲಿತರು ಮತ್ತು ಕೃಷಿ ಕೂಲಿಕಾರ್ಮಿಕರಿಗೆ ಕಮ್ಯೂನಿಷ್ಟ್ ಕಾರ್ಯಕರ್ತರು ಹಂಚಿದ್ದರು. ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ವ್ಯವಸಾಯದ ಕೂಲಿ ದರವನ್ನು 15 ರೂಪಾಯಿಗಳಿಂದ ದಿನವೊಂದಕ್ಕೆ 25 ರೂಪಾಯಿಗಳಿಗೆ ಏರಿಕೆ ಮಾಡಲಾಯಿತು. ಶ್ರೀಮಂತರ ಮನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಆಳುಗಳ ವಾರ್ಷಿಕ ಸಂಬಳವನ್ನು ಎರಡು ಸಾವಿರದಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಈ ಅಚ್ಚರಿಯ ಬೆಳವಣಿಗೆ ದೀನ ದಲಿತರಿಗೆ ನಕ್ಸಲ್ ಹೋರಾಟಗಾರರ ಮೇಲೆ ಪ್ರೀತಿ ವಿಶ್ವಾಸ ಹೆಚ್ಚಲು ಕಾರಣವಾಯಿತು.

‘ಕಾಡಿನಿಂದ ಬಂದ ದೊರೆಗಳಿಂದಾಗಿ ನಾಡಿನ ದೊರೆಗಳ ಕಿರುಕುಳ ತಪ್ಪಿತು ಎಂಬ ಮಾತು ತೆಲಂಗಾಣ ಪ್ರಾಂತ್ಯದ ಗ್ರಾಮಾಂತರ ಪ್ರದೇಶಗಳಲ್ಲಿ 1978-79 ರಲ್ಲಿ ಸಾಮಾನ್ಯವಾಗಿತ್ತು. ಈ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿದ್ದ ’ಆಂಧ್ರಪ್ರಭ’ ದಿನಪತ್ರಿಕೆಯ ಸಂಪಾದಕರಾಗಿದ್ದ ಪೊಟ್ಟೂರಿ ವೆಂಕಟೇಶ್ವರ ರಾವ್ ಈ ಹೋರಾಟವನ್ನು ಬಣ್ಣಿಸುತ್ತಾ ‘ಕೊಂಡಪಲ್ಲಿ ನೇತೃತ್ವದ ಕಾರ್ಯಕರ್ತರು ತೆಲಂಗಾಣದ ಕರೀಂನಗರ, ಅದಿಲಾಬಾದ್ ಮತ್ತು ವಾರಂಗಲ್, ಶ್ರೀಕಾಕುಳಂ, ಜಿಲ್ಲೆಗಳಲ್ಲಿ ಪರ್ಯಾಯ ಸಕಾರವನ್ನೇ ನಡೆಸಿದರು. ಜನತಾ ನ್ಯಾಯಲಯದ ಮೂಲಕ ತಪ್ಪಿತಸ್ಥ ಜಮೀನ್ದಾರರು, ಅರಣ್ಯಾಧಿಕಾರಿಗಳನ್ನು ದಂಡ ಇಲ್ಲವೇ ಶಿಕ್ಷೆ ಮೂಲಕ ದಂಡಿಸಿದರು. ಅರಣ್ಯ ಗುತ್ತಿಗೆದಾರರು, ಲೇವಾದೇವಿದಾರರು, ಸಾರಾಯಿ ಗುತ್ತಿಗೆದಾರರು ಇವರುಗಳಿಂದ ತೆರಿಗೆ ವಸೂಲಿ ಮಾಡುವುದರ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಒತ್ತು ಕೊಟ್ಟು ಭವಿಷ್ಯದ ಚಳವಳಿಗೆ ಭದ್ರ ಬುನಾದಿ ಹಾಕಿಕೊಂಡರು,’ ಎಂದು ವಿಶ್ಲೇಷಿಸಿದ್ದಾರೆ.

ಈ ನಡುವೆ ಮಾವೋ ಮತ್ತು ಲೆನಿನ್‌ವಾದಿ ಕಮ್ಯೂನಿಷ್ಟ್ ಪಕ್ಷ ಎಂದು ಗುರುತಿಸಿಕೊಂಡಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಘಟನೆಗೆ ಹೆಸರು ಬದಲಿಸಬೇಕಾದ ಪ್ರಸಂಗವೊಂದು 1979ರಲ್ಲಿ ನಡೆಯಿತು. ಸೀತಾರಾಮಯ್ಯ ನೀಡಿದ್ದ ಕರೆಯ ಮೇರೆಗೆ ಅಸಂಖ್ಯಾತ ವಿದ್ಯಾರ್ಥಿಗಳು ಕಾಲೇಜು ತೊರೆದು ಕ್ರಾಂತಿಕಾರಿ ಚಳವಳಿಗೆ ದುಮುಕುತ್ತಿರುವುದನ್ನು ಗಮನಿಸಿದ್ದ ವಾರಂಗಲ್ ನಗರದ ಕಾಕತೀಯ ಮೆಡಿಕಲ್ ಕಾಲೇಜಿನ ಹಾಸ್ಟಲ್‌ನ ಅಡುಗೆ ಸಹಾಯಕ ಚಿನ್ನುಲು ಎಂಬ ಅವಿದ್ಯಾವಂತ ಯುವಕ ಉದ್ಯೋಗ ತೊರೆದು ವಿದ್ಯಾರ್ಥಿಗಳ ಜೊತೆ ಸಂಘಟನೆಗೆ ಸೇರಿಕೊಂಡಿದ್ದ. ಅರಣ್ಯ ಅಥವಾ ಹಳ್ಳಿಗಳಲ್ಲಿ ವಿದ್ಯಾರ್ಥಿಗಳ ಜೊತೆ ಇದ್ದು ಅಡುಗೆ ತಯಾರಿಸಿಕೊಡುತ್ತಿದ್ದ. ಯಾವುದೇ ಪ್ರತಿಫಲವನ್ನು ಬೇಡದೇ ಹೊಟ್ಟೆಪಾಡಿನ ಉದ್ಯೋಗ ತ್ಯಜಿಸಿ ಹೋರಾಟದ ಸಾಗರಕ್ಕೆ ದುಮುಕಿದ್ದ ಈ ಹುಡುಗನ ಬಗ್ಗೆ ಕೊಂಡಪಲ್ಲಿಗೆ ಅಪಾರ ಪ್ರೀತಿ ಮತ್ತು ಕರುಣೆಯಿತ್ತು. ಅದೇ ವರ್ಷ ವಾರಂಗಲ್‌ನಲ್ಲಿ ಕಮ್ಯೂನಿಷ್ಟ್ ಪಕ್ಷದ ಎರಡು ಬಣಗಳ ನಡುವೆ ಏರ್ಪಟ್ಟ ಘರ್ಷಣೆಯಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರಿಂದ ಚಿನ್ನುಲು ಹತ್ಯೆಯಾದ. ಈತನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮಯ್ಯ ಸಂಘಟನೆಯ ಹೆಸರನ್ನು ಬದಲಿಸುವ ಮತ್ತು ಯೋಜನೆಯ ಕಾರ್ಯತಂತ್ರಗಳನ್ನು ಮರು ರೂಪಿಸುವ ಬಗ್ಗೆ ಸುಳಿವು ನೀಡಿದರು. ಅದರಂತೆ 1980ರ ಏಪ್ರಿಲ್ 20ರಂದು ಸಂಘಟನೆಯ ಹೆಸರನ್ನು “ಪೀಪಲ್ಸ್ ವಾರ್ ಗ್ರೂಪ್” ಎಂದು ಅಧಿಕೃತವಾಗಿ ಬದಲಾಯಿಸಿದರು.

ತಾವು ಕನಸಿದ್ದ ಸಾಮಾಜಿಕ ಕ್ರಾಂತಿ ಸದ್ಯದ ಕಾರ್ಯತಂತ್ರದ ಮೂಲಕ ಸಾಧ್ಯವಿಲ್ಲ ಎಂಬುದು ಕೊಂಡಪಲ್ಲಿಗೆ ಆ ವೇಳೆಗಾಗಲೇ ಮನದಟ್ಟಾಗಿಬಿಟ್ಟಿತ್ತು. ವಿದ್ಯಾರ್ಥಿಗಳು, ಯುವಕರು, ಮತ್ತು ಜನನಾಟ್ಯಮಂಡಲಿ ಎಂಬ ಸಾಂಸ್ಕೃತಿಕ ಸಂಘಟನೆ ಮೂಲಕ ತೆಲಂಗಾಣ ಮತ್ತು ಗೋದಾವರಿ ಪ್ರಾಂತ್ಯದಲ್ಲಿ ಅಪಾರ ಪ್ರಮಾಣದಲ್ಲಿ ಜನಬೆಂಬಲವೇನೊ ವ್ಯಕ್ತವಾಗಿತ್ತು. ಆದರೆ, ಸೀತಾರಾಮಯ್ಯ ಇನ್ನು ಮುಂದೆ ಸಮಾಜದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ನಿಜವಾದ ಶತ್ರುಗಳನ್ನು ಹಿಡಿದು ಸದೆಬಡಿಯಬೇಕು ಎಂದು ನಿರ್ಧರಿಸಿದರು. ಅಂದರೆ, ಬಿಲ್ಲು ಬಾಣಗಳನ್ನು, ಪ್ರತಿಭಟನೆ, ಸತ್ಯಾಗ್ರಹ ಇವುಗಳನ್ನು ಬದಿಗೊತ್ತಿ ವ್ಯವಸ್ಥೆಯ ವಿರುದ್ಧ ಶಸ್ತ್ರ ಸಜ್ಜಿತರಾಗಿ ಹೋರಾಡುವುದೊಂದೇ ಅನಿವಾರ್ಯ ಎಂದು ಅವರು ಘೋಷಿಸಿದರು. ಕೊಂಡಪಲ್ಲಿಯವರ ತೀರ್ಮಾನವನ್ನು ಬಹುತೇಕ ಮಂದಿ ಸ್ವಾಗತಿಸಿದರು. ಏಕೆಂದರೆ ಈ ಮೊದಲು ಅವರೆಲ್ಲಾ ಸೀತಾರಾಮಯ್ಯ ನಮ್ಮ ಕೈಗೆ ಬಂದೂಕು ಕೊಡುವ ಬದಲು ಕೊಂಡಪಲ್ಲಿಯ ಗೊಂಬೆಗಳನ್ನು ಕೊಡುವ ಆಲೋಚನೆಯಲ್ಲಿದ್ದಾರೆ ಎಂದು ಗೇಲಿಮಾಡುತ್ತಿದ್ದರು. (ವಿಜಯವಾಡ ನಗರದಿಂದ 20 ಕಿ.ಮಿ. ದೂರದಲ್ಲಿ ಕೊಂಡಪಲ್ಲಿ ಎಂಬ 16 ಸಾವಿರ ಜನಸಂಖ್ಯೆಯ ಗ್ರಾಮವಿದೆ. ಈ ಊರು ನಮ್ಮ ಕರ್ನಾಟಕದ ಚನ್ನಪಟ್ಟಣದ ಹಾಗೇ ಮರದ ಬೊಂಬೆಗಳ ತಯಾರಿಕೆಯಲ್ಲಿ ಆಂಧ್ರಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಊರಿಗೂ ಕೊಂಡಪಲ್ಲಿ ಸೀತಾರಾಮಯ್ಯನವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಸೀತಾರಾಮಯ್ಯ ಹೆಸರಿನ ಜೊತೆ ಕೊಂಡಪಲ್ಲಿ ಎಂಬುದು ತಳಕು ಹಾಕಿಕೊಂಡಿದೆ.)

ಜಮೀನ್ದಾರರ ದೌರ್ಜನ್ಯ ಮತ್ತು ಅವರ ಬೆಂಬಲವಾಗಿ ನಿಂತಿರುವ ಪೊಲೀಸ್ ವ್ಯವಸ್ಥೆಗೆ ಹಿಂಸೆಯೊಂದೇ ಉತ್ತರ ಎಂಬ ಚಾರುಮುಜುಂದಾರ್‌ನ ವಿಚಾರ ಧಾರೆಯನ್ನು ತಮ್ಮ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಗೆ ಸೀತಾರಾಮಯ್ಯ ಅಳವಡಿಸಿಕೊಂಡರು. ಇದನ್ನು ತನ್ನ ಕಾರ್ಯಕರ್ತರಿಗೆ ಒಂದು ಉಪಮೆ ಮುಖಾಂತರ ಸೀತಾರಾಮಯ್ಯ ಸರಳವಾಗಿ ವಿವರಿಸುತ್ತಿದ್ದರು: ‘ಒಬ್ಬ ರೈತ ಹೊಲದಲ್ಲಿ ದುಡಿಮೆ ಮಾಡುವಾಗ ಅನಾವಶ್ಯಕವಾಗಿ ಬೆಳೆಗೆ ತೊಂದರೆ ಕೊಡುವ ಕಳೆಗಳನ್ನು ಕಿತ್ತು ಬಿಸಾಡುತ್ತಾನೆ. ವಿಷಕಾರಿ ಅಲ್ಲದ ಹಾವುಗಳು ಕಂಡು ಬಂದರೆ ಅವುಗಳನ್ನು ಕೋಲಿನಿಂದ ಎತ್ತಿ ಹೊರಗೆ ಎಸೆಯುತ್ತಾನೆ. ಆದರೆ ತನ್ನ ಜೀವಕ್ಕೆ ಅಪಾಯಕಾರಿಯಾಗುವ ವಿಷಪೂರಿತ ಹಾವುಗಳನ್ನು ಕಂಡರೆ ಕೂಡಲೇ ಕೊಂದು ಹಾಕುತ್ತಾನೆ. ಈಗ ನಾವು ಅನುಸರಿಸಬೇಕಾದ್ದು ರೈತನ ಮಾರ್ಗವನ್ನು,’ ಎಂದು ಅವರು ಪ್ರತಿಪಾದಿಸುತಿದ್ದರು.ಈ ಕಾರಣಕ್ಕಾಗಿ ‘ಆಟ, ಪಾಠ, ಮಾಟ ಬಂದ್’, ಅಂದರೆ, ಹಾಡು, ನೃತ್ಯ, ಭಾಷಣಗಳಿಗೆ ತಾತ್ಕಾಲಿಕ ವಿರಾಮ ಹೇಳಿದರು.

ಈ ನಡುವೆ ಆದಿಲಾಬಾದ್ ಜಿಲ್ಲೆಯಲ್ಲಿ 1981ರ ಏಪ್ರಿಲ್ ತಿಂಗಳಿನಲ್ಲಿ ಗೊಂಡ ಜನಾಂಗದ ನರಮೇಧವೊಂದು ನಡೆದುಹೋಯಿತು. (ಈ ಕುರಿತು ಹಿಂದಿನ ಅಧ್ಯಾಯ-4 ರಲ್ಲಿ ಪ್ರಸ್ತಾಪಿಸಲಾಗಿದೆ.) ಆಂಧ್ರ ಪ್ರದೇಶದಲ್ಲಿ ಗೊಂಡ ಜನಾಂಗದಲ್ಲಿ ಲಂಬದಾಸ್ ಎಂಬ ಉಪ ಪಂಗಡವಿದ್ದು ಈ ಜನಾಂಗಕ್ಕೆ ಬುಡಕಟ್ಟು ಜನಾಂಗದ ಮೀಸಲಾತಿ ಸೌಲಭ್ಯವಿತ್ತು. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಮೀಸಲಾತಿ ಇಲ್ಲದ ಕಾರಣ ಅಲ್ಲಿನ ಜನಾಂಗ ಅದಿಲಾಬಾದ್ ಜಿಲ್ಲೆಗೆ ವಲಸೆ ಬಂದು ಆಂಧ್ರ ಜನರ ಮೀಸಲಾತಿ ಸೌಕರ್ಯವನ್ನು ಕಬಳಿಸತೊಡಗಿತ್ತು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇಂದ್ರಾವಳಿ ಪಟ್ಟಣದಲ್ಲಿ ಗೊಂಡ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಪೊಲೀಸರ ಗೋಲಿಬಾರ್‌ಗೆ 40ಕ್ಕೂ ಹೆಚ್ಚು ಆದಿವಾಸಿಗಳು ಬಲಿಯಾದರು. ಈ ಘಟನೆಯಿಂದ ಸಿಡಿದು ನಿಂತ ಜಿಲ್ಲೆಯ 30 ಸಾವಿರ ಗೊಂಡ ಜನಾಂಗದ ಆದಿವಾಸಿಗಳು ಕೊಂಡಪಲ್ಲಿ ಸೀತಾರಾಮಯ್ಯನವರ ‘ಪ್ರಜಾ ಸಮರಂ ದಳ’ಕ್ಕೆ ಬೆಂಬಲವಾಗಿ ನಿಂತು ಪೊಲೀಸರ ವಿರುದ್ದ ಸಮರ ಸಾರಿದರು.

ಸಂಘಟನೆ ಬಲಗೊಳ್ಳುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಸೀತಾರಾಮಯ್ಯ 1882ರಲ್ಲಿ ಹೈದರಾಬಾದ್ ನಗರ ಬೇಗಂ ಪೇಟ್ ರೈಲ್ವೆ ನಿಲ್ದಾಣದಲ್ಲಿ ಆಂಧ್ರ ಪೊಲೀಸರಿಗೆ ಸಿಕ್ಕಿಬಿದ್ದರು. ಸಂಘಟನೆಯ ನೇರ ಹೊಣೆ ಕೆ.ಜಿ. ಸತ್ಯಮೂರ್ತಿಯವರ ಮೇಲೇ ಬಿತ್ತು. ಮೂಲತಃ ದಲಿತ ಕವಿಯಾಗಿದ್ದ ಸತ್ಯಮೂರ್ತಿ ಸಾಂಸ್ಕೃತಿಕ ಚಟುವಟಿಕೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ನಿಲುವುಳ್ಳವರಾಗಿದ್ದರು. ಭಾವನಾತ್ಮಕವಾಗಿ ಹಿಂಸೆಯನ್ನು ವಿರೋಧಿಸುತ್ತಿದ್ದ ಅವರು ಹಿಂಸಾತ್ಮಕ ಹೋರಾಟಕ್ಕೆ ಹೆಚ್ಚಿ ಆಸಕ್ತಿ ವಹಿಸುತ್ತಿರಲಿಲ್ಲ.

ಇದೇ ವೇಳೆಗೆ ಆಂಧ್ರದಲ್ಲಿ ರಾಜಕೀಯದ ಹೊಸ ಶಕೆಯೊಂದು ಆರಂಭವಾಯಿತು. ಆಂಧ್ರದ ಚಲನಚಿತ್ರರಂಗದಲ್ಲಿ ತನ್ನ ಪೌರಾಣಿಕ ಪಾತ್ರಗಳಿಂದ ಅಲ್ಲಿನ ಜನತೆಯ ಆರಾಧ್ಯ ದೈವವಾಗಿದ್ದ ನಾಯಕ ನಟ ಎನ್.ಟಿ. ರಾಮರಾವ್ ‘ತೆಲುಗು ದೇಶಂ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ತಮ್ಮ ಮಗನ ಜೊತೆ ಇಡೀ ಆಂಧ್ರಾದ್ಯಂತ ಪ್ರವಾಸ ಮಾಡಿದರು. ಜೊತೆಗೆ ತೆಲಂಗಾಣ ಪ್ರಾಂತ್ಯದಲ್ಲಿ ಸಾರ್ವಜನಿಕ ಸಭೆಗಳಲ್ಲಿ ನಕ್ಸಲಿಯ ಹೋರಾಟಗಾರರನ್ನು ‘ದೇಶಭಕ್ತಲು’ ಎಂದು ಕರೆದು ಅವರಿಗೆ ತಮ್ಮ ಪಕ್ಷದ ಬೆಂಬಲ ಘೋಷಿಸಿದರು. ಆದರೆ, 1983ರಲ್ಲಿ ತೆಲುಗುದೇಶಂ ಪಕ್ಷ ಕಾಂಗ್ರೇಸ್ ಪಕ್ಷವನ್ನು ಧೂಳಿಪಟ ಮಾಡಿ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿಯಾದ ಎನ್.ಟಿ.ರಾಮರಾವ್ ತಮ್ಮ ಮಾತುಗಳನ್ನು ಮರೆತರು. ಈ ನಡುವೆ ಅನಾರೋಗ್ಯದ ನೆಪದಲ್ಲಿ ಹೈದರಾಬಾದ್ ನಗರದ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೀತಾರಾಮಯ್ಯನವರನ್ನು ಅವರ ಬೆಂಬಲಿಗರು 1984 ರ ಜನವರಿ 4 ರ ನಡುರಾತ್ರಿ ಆಸ್ಪತ್ರೆ ಮೇಲೆ ದಾಳಿ ಮಾಡಿ ಕರ್ತವ್ಯದ ಮೇಲಿದ್ದ ಪೊಲೀಸ್ ಪೇದೆಯನ್ನು ಹತ್ಯೆ ಮಾಡುವುದರ ಮೂಲಕ ಬಿಡಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರು. ಇದು ಪರೋಕ್ಷವಾಗಿ ಎನ್.ನ್.ಟಿ.ಆರ್. ನೇತೃತ್ವದ ತೆಲುಗು ದೇಶಂ ಸರ್ಕಾರ ಮತ್ತು ಪಿ.ಡಬ್ಲ್ಯು.ಜಿ. ನಡುವೆ ಹಿಂಸೆಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

ಚಾರು ಮುಜುಂದಾರ್ ಹಾಕಿಕೊಟ್ಟ ಹಾದಿಯಲ್ಲಿ ಅಂದರೆ, ಊಳಿಗಮಾನ್ಯ ಪದ್ಧತಿಯನ್ನು, ಪಾಳೆಗಾರ ಸಂಸ್ಕೃತಿಯನ್ನು ಹಿಂಸೆಯ ಮೂಲಕ ಬುಡ ಸಮೇತ ಕಿತ್ತು ಹಾಕಲು ಹೊರಟಿದ್ದ ಕೊಂಡಪಲ್ಲಿ ಹಾಗೂ ಸತ್ಯಮೂರ್ತಿ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಬಂದು 1985ರಲ್ಲಿ ಸತ್ಯಮೂರ್ತಿಯನ್ನು ಪೀಪಲ್ಸ್ ವಾರ್ ಗ್ರೂಪ್‌ನಿಂದ ಉಚ್ಛಾಟಿಸಲಾಯಿತು. ಇದನ್ನು ಪ್ರಶ್ನಿಸಿದ ಹಾಗೂ ಪ್ರಜಾಸಮರಂ ಸಂಘಟನೆಗೆ ದಳಂ ಎಂಬ ಹೆಸರಿನಲ್ಲಿ ಬಲಿಷ್ಟ ಯುವ ಕಾರ್ಯಕರ್ತರ ಪಡೆಯನ್ನು ಹುಟ್ಟು ಹಾಕಿದ್ದ ಸತ್ಯನಾರಾಯಣ ರೆಡ್ಡಿಯನ್ನೂ ಸಹ ಸಂಘಟನೆಯಿಂದ ಹೊರ ಕಳಿಸಲಾಯಿತು. ಸೈದ್ದಾಂತಿಕ ಸಂಘರ್ಷದಿಂದಾಗಿ ಈ ಇಬ್ಬರೂ ಬಲಿಷ್ಟ ಮುಖಂಡರನ್ನು ಕಳೆದುಕೊಂಡ ಕೊಂಡಪಲ್ಲಿಯವರು ಇಡೀ ಸಂಘಟನೆಯ ಹೊರೆಯನ್ನು ಹೊರಬೇಕಾಯಿತು.

ಪಿಪಲ್ಸ್ ವಾರ್ ಗ್ರೂಪ್‌ನ ಅಂಗ ಘಟಕಗಳಾಗಿ ಮತ್ತೇ ಹೊಸದಾಗಿ ರೈತು ಕೂಲಿ ಸಂಘಂ, ಕಿಸಾನ್ ಮಜ್ದೂರ್ ಸಂಘಟನೆ, ಮಹಿಳಾ ಶ್ರಾವಂತಿ ಮತ್ತು ಸಿಂಗರೇಣಿ ಕಲ್ಲಿದ್ದಲು ಕಾರ್ಮಿಕರ ಸಂಘಟನೆ ಇವುಗಳನ್ನು ಹುಟ್ಟು ಹಾಕಿ ಇವುಗಳ ನೇತೃತ್ವವನ್ನು ಜನನಾಟ್ಯ ಮಂಡಲಿಗೆ ವಹಿಸಿದರು. ಜೊತೆಗೆ ಇಡೀ ಸಂಘಟನೆಗೆ ಇರಬೇಕಾದ ಗುರಿಗಳನ್ನು ರೂಪಿಸಿದರು. ಪ್ರಮುಖವಾಗಿ

  1. ಭೂಮಿಯ ಮರು ಹಂಚಿಕೆ
  2. ಕೃಷಿ ಕೂಲಿ ಕಾರ್ಮಿಕರಿಗೆ ಕನಿಷ್ಟ ಕೂಲಿ ದರ
  3. ತಪ್ಪು ಎಸಗುವ ವ್ಯಕ್ತಿಗಳ ಮೇಲೆ ತೆರಿಗೆ ಅಥವಾ ದಂಡ ವಿಧಿಸುವುದು
  4. ಜನತಾ ನ್ಯಾಯಲಯಗಳ ಸ್ಥಾಪನೆ
  5. ಸರ್ಕಾರದ ಆಸ್ತಿಗಳನ್ನು ಧ್ವಂಸ ಮಾಡುವುದು
  6. ಸರ್ಕಾರಿ ನೌಕರರನ್ನು ಅಪಹರಣ ಮಾಡುವುದು
  7. ಪೊಲೀಸರ ಮೇಲೆ ದಾಳಿ
  8. ಕಟ್ಟು ನಿಟ್ಟಾದ ಸಾಮಾಜಿಕ ನ್ಯಾಯದ ಮರು ಸ್ಥಾಪನೆ ಇವುಗಳು ಮುಖ್ಯವಾಗಿದ್ದವು.

ಈ ಮೇಲ್ಕಂಡ ಗುರಿಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ 1987ರ ಅಕ್ಟೋಬರ್ 5 ರಂದು 60 ಜನರಿದ್ದ ನಕ್ಸಲಿಯರ ತಂಡ ಕರೀಂನಗರ ಜಿಲ್ಲೆಯ ರಾಮಗೊಂಡಂ ಎಂಬ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸರಕು ಸಾಗಾಣಿಕೆ ರೈಲಿನ ಮೇಲೆ ದಾಳಿ ಮಾಡಿದರು. 1988ರ ಮಾರ್ಚ್ 1 ರಂದು ಕಾಗಜ್ ಪುರ್ ರೈಲ್ವೆ ನಿಲ್ದಾಣದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇವುಗಳ ನಡುವೆ ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿತ್ತು. 1988ರ ಮಾರ್ಚ್ 11ರಂದು ವಾರಂಗಲ್ ಜಿಲ್ಲೆಯಲ್ಲಿ ನಕ್ಸಲ್ ಸಂಘಟನೆಯ ಪ್ರಮುಖ ನಾಯಕನಾಗಿದ್ದ ದಗ್ಗು ರಾಯಲಿಂಗು ಎಂಬಾತನನ್ನು ಆಂಧ್ರ ಪೊಲೀಸರು ಎನ್ಕೌಂಟರ್ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕಾರವಾಗಿ ಕರೀಂ ನಗರ ಮತ್ತು ವಾರಂಗಲ್ ಜಿಲ್ಲೆಯಲ್ಲಿ ಪಿ.ಡಬ್ಲ್ಯು.ಜಿ. ಗ್ರೂಪ್‌ನ ನಕ್ಸಲ್ ಸದಸ್ಯರಿಂದ ಹಿಂಸಾಚಾರ ಭುಗಿಲೆದ್ದಿತು. ಎರಡು ರೈಲ್ವೆ ನಿಲ್ದಾಣಗಳು, ಅಸಂಖ್ಯಾತ ದೂರವಾಣಿ ವಿನಿಮಯ ಕೇಂದ್ರಗಳು, ಬಾನುಲಿ ಮರು ಪ್ರಸಾರದ ಕೇಂದ್ರಗಳು ಮತ್ತು ಬೀಡಿ ತಯಾರಿಕೆಗೆ ಬಳಸುವ ಎಲೆಗಳನ್ನು ಶೇಖರಿಸಿ ಇಟ್ಟಿದ್ದ ಗೋದಾಮುಗಳು ಬೆಂಕಿಗೆ ಆಹುತಿಯಾದವು.

ಪೊಲೀಸರಿಂದ ಸೆರೆಯಾದ ತಮ್ಮ ಸಹಚರರನ್ನು ಬಿಡುಗಡೆ ಮಾಡಿಸಲು ಸರ್ಕಾರಿ ಅಧಿಕಾರಿಗಳನ್ನು ಅಪಹರಿಸುವ ಕಾರ್ಯತಂತ್ರವನ್ನು ಸಹ ರೂಪಿಸಲಾಯಿತು. 1987ರ ಡಿಸಂಬರ್ 27ರಂದು ಗೋದಾವರಿ ಜಿಲ್ಲೆಯಲ್ಲಿ ಪುಲಿಮಾಟು ಎಂಬ ಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಬುಡಕಟ್ಟು ಜನರ ಅಭಿವೃದ್ಧಿ ಕುರಿತ ಸಮಾವೇಶ ಮುಗಿಸಿ ಬರುತಿದ್ದ ಆರು ಮಂದಿ ಐ.ಎ.ಎಸ್. ಅಧಿಕಾರಿಗಳನ್ನು ನಕ್ಸಲರು ಅಪಹರಿಸಿದರು. ಇವರಲ್ಲಿ ಆಂಧ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಇದ್ದುದು ವಿಶೇಷವಾಗಿತ್ತು. ಸರ್ಕಾರ ಬಂಧಿಸಿದ್ದ ಎಂಟು ಮಂದಿ ನಕ್ಸಲ್ ನಾಯಕರನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಅಪಹೃತರನ್ನು ಕೊಲ್ಲುವದಾಗಿ ಬೆದರಿಕೆ ಹಾಕಿದರು. ದಿಲ್ಲಿಯಿಂದ ಕಮಾಂಡೋ ಕರೆಸಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾದ ಸರ್ಕಾರ ನಂತರ ನಕ್ಸಲಿಯರ ಒತ್ತಡಕ್ಕೆ ಮಣಿದು ರಾಜಮಂಡ್ರಿ ಜೈಲಿನಲ್ಲಿದ್ದ ನಾಯಕರನ್ನು ಬಿಡುಗಡೆ ಮಾಡಿತು.

ಈ ಘಟನೆಯಿಂದ ಆತ್ಮ ಸ್ಥೈರ್ಯ ಹೆಚ್ಚಿಸಿಕೊಂಡ ನಕ್ಸಲಿಯರು ಮುಖ್ಯಮಂತ್ರಿಯಾಗಿದ್ದ ಎನ್.ಟಿ. ರಾಮರಾವ್‌ರವರ ಅಳಿಯ ಹಾಗೂ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ವೆಂಕಟೇಶ್ವರ ರಾವ್ ಇವರ ತಂದೆಯನ್ನು ಪ್ರಕಾಶಂ ಜಿಲ್ಲೆಯಲ್ಲಿ ಗುಂಡಿಟ್ಟು ಕೊಂದರು. ಈ ಹತ್ಯೆಯಿಂದ ಭಯ ಭೀತರಾದ ತೆಲುಗು ದೇಶಂ ಪಕ್ಷದ ಶಾಸಕರು, ಸಂಸದರು, ಗ್ರಾಮ ಪಂಚಾಯತ್ ಅಧ್ಯಕ್ಷರು ತಮ್ಮ ಊರುಗಳನ್ನು ಬಿಟ್ಟು ನಗರಗಲ್ಲಿ ವಾಸಿಸತೊಡಗಿದರು.

ತೆಲಂಗಾಣ ಪ್ರಾಂತ್ಯದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸಲು ಹಾಗೂ ನಕ್ಸಲ್ ಹೋರಾಟವನ್ನು ಸದೆಬಡಿಯಲು ಅರಣ್ಯದಲ್ಲಿ ಪೊಲೀಸರ ತರಬೇತಿ ಶಿಬಿರ ಪ್ರಾರಂಭಿಸಿದ  ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಪಿ.ಡಬ್ಲ್ಯು.ಜಿ. ಕಾರ್ಯಕರ್ತರು ಪ್ರತಿಕಾರವಾಗಿ ಒಬ್ಬ ಡಿ.ವೈ.ಎಸ್.ಪಿ. ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಹತ್ಯೆಗೈದರು. 1987ರಲ್ಲಿ ಆಂಧ್ರದಲ್ಲಿ ಹತ್ಯೆಯಾದ ಪೊಲೀಸರ ಸಂಖ್ಯೆ ನಿಜಕ್ಕೂ ಗಾಬರಿ ಮೂಡಿಸುವ ಸಂಗತಿಯಾಯಿತು. 1984 ರಲ್ಲಿ ಎರಡು, 1985 ರಲ್ಲಿ ಆರು, 1986 ರಲ್ಲಿ ನಾಲ್ಕು ಮಂದಿ ಪೊಲೀಸರು ಹತ್ಯೆಯಾದರೆ, 87ರ ಒಂದೇ ವರ್ಷದಲ್ಲಿ ಅಧಿಕಾರಿಗಳು ಸೇರಿ ಇಪ್ಪತ್ತೈದು ಮಂದಿ ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದ್ದರು.

ಆಂಧ್ರದ ಉತ್ತರದ ತೆಲಂಗಾಣದ ಪ್ರಾಂತ್ಯದಲ್ಲಿ ಪರ್ಯಾಯ ಸರ್ಕಾರವನ್ನೇ ನಡೆಸತೊಡಗಿದದ ಪಿ.ಡಬ್ಲ್ಯು.ಜಿ. ನಕ್ಸಲ್ ಸಂಘಟನೆ ಹಳ್ಳಿಗಳಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸಿತು. ತಾಲೂಕು ಕೇಂದ್ರ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ವೈಶ್ಯಾವಾಟಿಕೆಯ ಚಟುವಟಿಕೆಗಳಿಗೆ ನಿಯಂತ್ರಣ ಹೇರಲಾಯಿತು. ತಮ್ಮ ಮಾತು ಮೀರಿದ ಸಾರಾಯಿ ಗುತ್ತಿಗೆದಾರರನ್ನು ಬಂಧಿಸಿ, ಅವರಿಗೆ ದಂಡ ವಿಧಿಸಿ, ತಪ್ಪೊಪ್ಪಿಗೆ ಪತ್ರ ಬರೆಸಿ ಬಿಡುಗಡೆಗೊಳಿಸಲಾಯಿತು. ತಮ್ಮ ಚಲನ ವಲನಗಳ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ 197 ಮಂದಿ ಮಾಹಿತಿದಾರರ ಕೈ ಕಾಲುಗಳನ್ನು ನಿರ್ಧಯವಾಗಿ ಕತ್ತರಿಸಿ ಶಾಶ್ವತ ಅಂಗವಿಕಲರನ್ನಾಗಿ ಮಾಡಲಾಯಿತು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೂಜಾಟ ನಿಷೇಧಿಸಿ ಕರಪತ್ರ ಹಂಚಲಾಯಿತು. ಕರೀಂ ನಗರ ಜಿಲ್ಲಾ ಕೇಂದ್ರದ ಇಬ್ಬರು ಬಾರ್ ಮಾಲೀಕರನ್ನು ನಡು ರಸ್ತೆಯಲ್ಲಿ ಮನಸ್ಸೋ ಇಚ್ಚೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಲಾಯಿತು. ನಕ್ಸಲಿಯರ ಇಂತಹ ನಿರ್ಧಾಕ್ಷಿಣ್ಯ ಕ್ರಮಗಳಿಂದಾಗಿ ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಲ್ಲಿ ಕೆಲಸ ಮಾಡುವ ಪೊಲೀಸರು, ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದು ನಿಷ್ಟೆಯಿಂದ ಕೆಲಸ ಮಾಡುವಂತಾಯಿತು. ಇದರ ಪರಿಣಾಮವಾಗಿ ತೆಲಂಗಾಣ ಜಿಲ್ಲೆಗಳಲ್ಲಿ ಭ್ರಷ್ಟಾಚಾರಕ್ಕೆ ಇನ್ನಿಲ್ಲದಂತೆ ಕಡಿವಾಣ ಬಿದ್ದಿತು.

 (ಮುಂದುವರಿಯುವುದು)