Monthly Archives: November 2012

ಮುದ್ದು ಕಂದ ಸ್ಪರ್ಧೆ : ಮಾನಸಿಕ ಅಸ್ವಸ್ಥರು ನಡೆಸುವ ಕಾರ್ಯಕ್ರಮ


– ನವೀನ್ ಸೂರಿಂಜೆ 


 

ಮಕ್ಕಳ ದಿನಾಚರಣೆಯ ನೆಪದಲ್ಲಿ ಕೆಲವು ಪತ್ರಿಕೆಗಳು ಸಂವಿಧಾನದ ಅನುಚ್ಚೇದ 15 ರಲ್ಲಿ ಪ್ರಸ್ತಾಪಿಸಿರುವ ಮಕ್ಕಳ ತಾರತಮ್ಯದ ವಿರುದ್ಧದ ಹಕ್ಕನ್ನು ಉಲ್ಲಂಘಿಸುತ್ತಿವೆ. ಪತ್ರಿಕೆ ಅಥವಾ ಯಾವುದೇ ಮಾಧ್ಯಮದಲ್ಲಿ “ಮುದ್ದು ಕಂದ ಸ್ಪರ್ಧೆ” ನಡೆಸುವುದು ಮಕ್ಕಳ ತಾರತಮ್ಯದ ವಿರುದ್ಧದ ಹಕ್ಕು ಉಲ್ಲಂಘನೆಯಾಗುತ್ತದೆ. ಬಿಳಿ ಮಗು, ಕಪ್ಪು ಮಗು ಎಂದು ವಿಂಗಡನೆ ಮಾಡುವುದು ಒಂದು ಕ್ರೂರ ಮನಸ್ಥಿತಿಯಿಂದಷ್ಟೇ ಸಾಧ್ಯ. ಇಂತಹ ಕೆಲಸವನ್ನು ಕೆಲವೊಂದು ಪತ್ರಿಕೆಗಳು ಹಲವು ವರ್ಷಗಳಿಂದ ಸಾಂಗವಾಗಿ ಮಾಡುತ್ತಾ ಬಂದಿದೆ. ಮೇಲ್ವರ್ಗ-ಮೇಲ್ಜಾತಿ ಅಥವ ಶ್ರೀಮಂತರ ಮಗುವಷ್ಟೇ ಈ ಮುದ್ದು ಕಂದ ಸ್ಪರ್ಧೆಯ ಬಹುಮಾನ ಪಡೆಯಬಹುದಾಗಿದ್ದು, ಬಡ ದಲಿತ ಅಥವಾ ಫುಟ್‌ಪಾತ್‌ನಲ್ಲಿ ವಾಸಿಸುವ ಮಗು ಮುದ್ದು ಕಂದ ಸ್ಪರ್ಧೆಯಲ್ಲಿ ಭಾಗವಹಿಸುವ ಸಾಧ್ಯತೆ ಮತ್ತು ಪ್ರಶಸ್ತಿ ಪಡೆಯುವ ಸಾಧ್ಯತೆಗಳೇ ಇಲ್ಲ.

ನವೆಂಬರ್ 14 ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯ ಸಂಧರ್ಭ ಮಕ್ಕಳ ಹಕ್ಕು, ಶಿಕ್ಷಣ, ಬದುಕಿನ ಬಗ್ಗೆ ಗಂಭೀರ ಚರ್ಚೆ ನಡೆಸಬೇಕಾದ ಪತ್ರಿಕೆಗಳಲ್ಲಿ ಕೆಲವು ಪತ್ರಿಕೆಗಳು ಪ್ರಸಾರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮುದ್ದು ಕಂದ ಸ್ಪರ್ಧೆಯನ್ನು ಆಯೋಜಿಸುತ್ತವೆ. ಬಹಳ ಸೂಕ್ಷ್ಮವಾಗಿ ಆಲೋಚಿಸಿದರೆ ಇದೊಂದು ತೀರಾ ಕೆಟ್ಟ ಗುಣಮಟ್ಟದ ಸ್ಪರ್ಧೆ ಮತ್ತು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಸ್ಪರ್ಧೆ. ಈ ಮುದ್ದು ಕಂದ ಸ್ಪರ್ಧೆಯಲ್ಲಿ ಮಗುವಿನ ಪ್ರತಿಭೆಗೆ ಯಾವುದೇ ಅವಕಾಶ ಇಲ್ಲ. ಬದಲಾಗಿ ಚೆಂದ ನೋಡಿ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಪತ್ರಿಕೆಗಳು ಮನೆ ಮನೆಗೆ ತೆರಳುವುದರಿಂದ ಈ ಸ್ಪರ್ಧೆಗಳು ಪ್ರಶಸ್ತಿ ಪುರಸ್ಕೃತವಲ್ಲದ ಮಗುವಿನ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇಷ್ಟಕ್ಕೂ ಬಿಳಿ ಇದ್ದ ಮಕ್ಕಳು ಮಾತ್ರ ಚೆಂದ ಎಂದು ಈ ಪತ್ರಿಕೆಗಳಿಗೆ ಹೇಳಿ ಕೊಟ್ಟವರ್‍ಯಾರು? ಎಲ್ಲಾ ಮಕ್ಕಳು ಚೆಂದ. ಎಲ್ಲಾ ಮಕ್ಕಳು ಮುದ್ದು ಕಂದಗಳೆ. ಅದರಲ್ಲಿ ಸ್ಪರ್ಧೆ ಏನು ಬಂತು?

ಮುಖ್ಯವಾಗಿ ಕರ್ನಾಟಕದ ಎರಡು ಪ್ರಮುಖ ಪತ್ರಿಕೆಗಳು ಆಯೋಜಿಸುವ ಮುದ್ದು ಕಂದ ಸ್ಪರ್ಧೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ. ಮೇಲ್ನೋಟಕ್ಕೆ ಈ ಸ್ಪರ್ಧೆ ರಂಗು ರಂಗಾಗಿ ಕಂಡರೂ ಇದರ ಆಳದಲ್ಲಿ ಕ್ರೌರ್ಯ ಅಡಗಿದೆ. ಈ ಸ್ಪರ್ಧೆಗಾಗಿ ತಿಂಗಳ ಮೊದಲೇ ಜಾಹೀರಾತನ್ನು ನೀಡಲಾಗುತ್ತದೆ. ಮಗುವಿನ ಬೇರೆ ಬೇರೆ ಪೋಸ್‌ನ ಫೋಟೋಗಳನ್ನು ಪತ್ರಿಕೆಯ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೇಳಿಕೊಳ್ಳಲಾಗುತ್ತದೆ. ಯಾವುದಾದರೂ ಪ್ರತಿಷ್ಠಿತ ಕಂಪನಿಗಳು ಈ ಸ್ಪರ್ಧೆಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿರುತ್ತದೆ. ಹೆತ್ತವರಿಗೆ ಮಕ್ಕಳ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗುವುದೆಂದರೆ ಅದು ಆಕಾಶಕ್ಕೆ ಸ್ವರ್ಗಕ್ಕೆ ಉಳಿದಿರೋದು ಮೂರೇ ಗೇಣು ಎಂಬಂತಹ ಸ್ಥಿತಿ. ಪತ್ರಿಕಾ ಕಚೇರಿಗೆ ನೂರಾರು ಮಂದಿ ಮಕ್ಕಳ ಪೋಟೋ ಕಳುಹಿಸುತ್ತಾರೆ. ಈ ಫೋಟೋಗಳ ಆಯ್ಕೆಗಾಗಿ ಮಕ್ಕಳ ತಜ್ಞೆ, ಕಲಾವಿದರು, ಖ್ಯಾತ ಫೊಟೋಗ್ರಾಫರ್ ಮತ್ತಿತರರ ತೀರ್ಪುಗಾರರ ಪ್ಯಾನಲ್ ಒಂದನ್ನು ರಚಿಸಿರುತ್ತಾರೆ. ಎಲ್ಲಾ ಮಕ್ಕಳ ಫೋಟೋ ವೀಕ್ಷಿಸಿದ ನಂತರ ತೀರ್ಪುಗಾರರು “ಎಲ್ಲಾ ಮಕ್ಕಳೂ ಚಂದವೇ. ಕಷ್ಟಪಟ್ಟು 30 ಫೋಟೋವನ್ನು ಆಯ್ಕೆ ಮಾಡಿದ್ದೇವೆ” ಎಂದು ಹೇಳುತ್ತಲೇ ಮುದ್ದು ಕಂದ ಪ್ರಶಸ್ತಿಯನ್ನು ಘೋಷಿಸುತ್ತಾರೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷವಾದರೂ ಇನ್ನೂ ನಾವು “ಬಿಳಿ ಚರ್ಮ” ಉಚ್ಚವಾದುದು ಎಂಬ ಭ್ರಮೆಯಿಂದ ಹೊರ ಬಂದಿಲ್ಲ. ಇದೊಂದು ವಿಕೃತ racist ಮನಸ್ಸು. ನಮ್ಮ ರಾಜ್ಯದಲ್ಲೇ ಬೇಕಾದಷ್ಟು ದಲಿತ ಕೇರಿಗಳು, ಸ್ಲಂಗಳು, ಬೀದಿಯ ಬದಿಯಲ್ಲಿ ಜೋಪಡಿ ಹಾಕಿಕೊಂಡ ಬದುಕುಗಳು ಇನ್ನೂ 21 ನೇ ಶತಮಾನಕ್ಕೆ ಬಂದೇ ಇಲ್ಲ ಎಂದು ಇವರಿಗಿನ್ನೂ ಗೊತ್ತೇ ಇಲ್ಲ ಎಂದು ಕಾಣುತ್ತದೆ. ಸಾವಿರಾರು ಮಕ್ಕಳ ಬೆನ್ನಿನ ಎಲುಬಿಗಂಟಿರುವ ಹೊಟ್ಟೆಗೆ ಮದ್ದೇ ಇಲ್ಲ ಎಂಬಂತಾಗಿದೆ. ಹಾಗೆಂದು ಇವರೆಲ್ಲ ಮುದ್ದು ಕಂದಗಳು ಅಲ್ಲವೇ?

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್ -3) ಪ್ರಕಾರ ರಾಷ್ಟ್ರ ಮಟ್ಟದಲ್ಲಿ ಶಿಶು ಮರಣ ಪ್ರಮಾಣ 1000 ಜನನಕ್ಕೆ ಶೇಕಡಾ 45 ರಷ್ಟು ಮಕ್ಕಳು. ಗ್ರಾಮೀಣ ಪ್ರದೇಶದಲ್ಲಿ ಇದು 50 ಇದ್ದರೆ ಮತ್ತು ನಗರ ಪ್ರದೇಶದಲ್ಲಿ ಈ ಮರಣ ಪ್ರಮಾಣ 30 ಇದೆ. ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ 1000 ಕ್ಕೆ 55. ಅಂದರೆ ಇದು ರಾಷ್ಟ್ರೀಯ ಸರಾಸರಿಗಿಂತ ಅಧಿಕ. ಉತ್ತರ ಕರ್ನಾಟಕದಲ್ಲಿ ಈ ಸಮಸ್ಯೆ ಇನ್ನೂ ತೀವ್ರವಾಗಿದೆ. ಪ್ರತ್ಯೇಕ ಪ್ರತ್ಯೇಕವಾಗಿ ಜಿಲ್ಲೆಗಳ ಅಂಕಿ ಅಂಶಗಳನ್ನು ನೋಡಿದರೆ ಈ ಸಮಸ್ಯೆಯ ತೀವ್ರತೆ ಮತ್ತಷ್ಟೂ ಅಘಾತಕಾರಿಯಾಗಿದೆ. ಬೀದರ್‌ನಲ್ಲಿ 66, ಬಿಜಾಪುರದಲ್ಲಿ 67, ಧಾರವಾಡದಲ್ಲಿ 69, ಗುಲ್ಬರ್ಗದಲ್ಲಿ 67, ಗದಗದಲ್ಲಿ 66, ಹಾವೇರಿಯಲ್ಲಿ 66, ಕೊಪ್ಪಳದಲ್ಲಿ 65 ರಷ್ಟು ಶಿಶು ಮರಣ ನಡೆಯುತ್ತದೆ.

ರಾಯಚೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ವಿಭಾಗದ ಅಂಕಿ ಅಂಶಗಳ ಪ್ರಕಾರ 2009 ರಲ್ಲಿ 811 ನವಜಾತ ಶಿಶುಗಳು ಸಾವನ್ನಪ್ಪಿದರೆ, 2010 ರಲ್ಲಿ 1233 ಶಿಶುಗಳು, ಮತತ್ತು 2011 ರ ಜನವರಿಯಿಂದ ಆಗಸ್ಟ್ ಅವಧಿಯಲ್ಲಿ 645 ಶಿಶುಗಳು ಸಾವನ್ನಪ್ಪಿವೆ. ಒಟ್ಟು ಎರಡು ವರ್ಷ ಎಂಟು ತಿಂಗಳ ಅವಧಿಯಲ್ಲಿ ರಾಯಚೂರು ಜಿಲ್ಲೆಯೊಂದರಲ್ಲೇ 2,689 ಮಕ್ಕಳು ಸಾವನ್ನಪ್ಪಿದ್ದಾರೆ. ಆತಂಕಕಾರಿ ವಿಷಯವೆಂದರೆ ಈ ಎಲ್ಲಾ ಸಾವುಗಳೂ ಅಪೌಷ್ಠಿಕತೆಯಿಂದಲೇ ಸಂಭವಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ಇಷ್ಟಕ್ಕೆ ಮುಗಿಯುವುದಿಲ್ಲ. ರಾಯಚೂರು ಜಿಲ್ಲೆಯೊಂದರಲ್ಲೇ 4,531 ಮಕ್ಕಳು ಅಪೌಷ್ಠಿಕತೆಯಿಂದ ಇನ್ನೂ ಬಳಲುತ್ತಿದ್ದಾರೆ ಎಂದು ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ.

ನವಜಾತ ಶಿಶುಗಳ ಮರಣ ಮತ್ತು ಅಪೌಷ್ಠಿಕತೆಯ ವಿಚಾರ ಕೇವಲ ರಾಯಚೂರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಇದು ವ್ಯಾಪಿಸಿದೆ. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಬಾಗಲಕೋಟೆಯಲ್ಲಿ 8,957, ಬಿಜಾಪುರದಲ್ಲಿ 8,953, ಬೆಳಗಾವಿಯಲ್ಲಿ 7,016, ಬಳ್ಳಾರಿಯಲ್ಲಿ 6,411, ಹಾವೇರಿಯಲ್ಲಿ 4,537 ಮತ್ತು ಕೊಪ್ಪಳದಲ್ಲಿ 4,085 ಆಗಿದೆ. ಕರ್ನಾಟಕದಲ್ಲೇ ಇಷ್ಟೊಂದು ಮಕ್ಕಳು ಸಾವಿನ ಹೊಸ್ತಿಲಲ್ಲಿ ನಿಂತಿರುವಾಗ ಒಂದಷ್ಟು ಬಿಳಿ ಚರ್ಮದ ಮುಗ್ದ ನಗುವಿನ ಮಕ್ಕಳನ್ನು ತೋರಿಸಿ “ಮುದ್ದು ಕಂದಗಳು” ಎಂದು ತಾರತಮ್ಯ ಮಾಡಲು ಮಾನಸಿಕ ಅಸ್ವಸ್ಥರಲ್ಲದವರಿಗೆ ಮನಸ್ಸಾದರೂ ಹೇಗೆ ಬಂದೀತು?

ಮುಂದುವರಿದ ಜಿಲ್ಲೆ ಎಂದೇ ಪರಿಗಣಿಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 2012 ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 870 ಮಕ್ಕಳಲ್ಲಿ ಅಪೌಷ್ಠಿಕತೆ ಕಂಡು ಬಂದಿತ್ತು. ಮಂಗಳೂರಿನ ಚೇಳ್ಯಾರು ಗ್ರಾಮದ ಮಧ್ಯ ಎಂಬಲ್ಲಿರುವ ಕೊರಗ ಬುಡಕಟ್ಟು ನಿವಾಸಿಗಳ ಕಾಲನಿಯಲ್ಲಿ ಇತ್ತೀಚೆಗೆ ಅಪೌಷ್ಠಿಕತೆ ಕಂಡು ಬಂದಿತ್ತು. ಅಪೌಷ್ಠಿಕತೆಗೆ ಒಳಗಾಗಿರುವ ಈ ಸಾವಿರಾರು ಮಕ್ಕಳ ಫೋಟೋ ಪತ್ರಿಕಾ ಕಚೇರಿ ತಲುಪಿದರೆ ಒಂದಾದರೂ ಮಕ್ಕಳು ಮುದ್ದು ಕಂದ ಸ್ಪರ್ಧೆಯಲ್ಲಿ ಆಯ್ಕೆಯಾಗುವರೇ? ಅಪೌಷ್ಠಿಕತೆಗೆ ಒಳಗಾಗಿ ಮುಖದ ತೇಜಸ್ಸನ್ನೇ ಕಳೆದುಕೊಂಡಿರುವ ಇವರುಗಳು ಮುದ್ದು ಕಂದಗಳಲ್ಲವೇ?

ದೇವರು-ಭಕ್ತಿ-ಹರಕೆ-ಸಂಪ್ರದಾಯಗಳ ಹೆಸರಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಸಾಲಿನಲ್ಲೇ ಮುದ್ದು ಕಂದ ಸ್ಪರ್ಧೆಯನ್ನೂ ಸೇರಿಸಬೇಕಾಗುತ್ತದೆ. ಎರಡೂ ವಿಷಯಗಳಲ್ಲಿ ಮಕ್ಕಳಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದರ ಕನಿಷ್ಠ ಅರಿವೂ ಇರುವುದಿಲ್ಲ. ಗುಲ್ಬರ್ಗ ಜಿಲ್ಲೆಯ ಇಳಂಗೀ ತಾಲೂಕಿನ ಹಿರೋಳಿ ಗ್ರಾಮದ ಸೋಮೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಸಂದರ್ಭ ದೇವಸ್ಥಾನ ಮೊದಲನೇ ಮಹಡಿಯಿಂದ ಹಸುಗೂಸುಗಳನ್ನು ಕೆಳಕ್ಕೆಸೆಯುವ ಸಂಪ್ರದಾಯವಿದೆ. ದೇವಸ್ಥಾನದ ಕೆಳಭಾಗದಲ್ಲಿ ಬಟ್ಟೆ ಹಿಡಿದುಕೊಂಡು ನಿಂತಿದ್ದ ಮಂದಿ ಮೇಲಿಂದ ಬೀಳೋ ಮಕ್ಕಳು ಬಟ್ಟೆಯ ಮೇಲೆ ಬೀಳುವಂತೆ ಮಾಡುತ್ತಾರೆ. ಮೇಲಿಂದ ಕೆಳಕ್ಕೆ ಬೀಳುವಂತಹ ಸಮಯದಲ್ಲಿ ಮುಗ್ದ ಮಗುವಿನ ಮನಸ್ಸಿನಲ್ಲಿ ಆವರಿಸೋ ಭಯ ಎಂತದ್ದಿರಬಹುದು?

ಬೆಳಗಾವಿಯ ಮದಭಾವಿ ಗ್ರಾಮದ ಸಿದ್ದೇಶ್ವರ ಜಾತ್ರೆಯಲ್ಲಿ, ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಶಾಂತೇಶ್ವರ ದೇವಸ್ಥಾನದಲ್ಲಿಯೂ ಮಕ್ಕಳನ್ನು ಎತ್ತರದಿಂದ ಎಸೆದು ಕಂಬಳಿಯಲ್ಲಿ ಹಿಡಿಯುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ದೇವರು ಸಂತುಷ್ಠನಾಗುತ್ತಾನೆ ಎಂಬ ನಂಬಿಕೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೇಪು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯ ಸಂದರ್ಭ ಮಧ್ಯ ರಾತ್ರಿ ಇನ್ನೂ ಮಾತು ಬಾರದ ಪುಟ್ಟ ಮಕ್ಕಳನ್ನು ನೀರಲ್ಲಿ ಮುಳುಗಿಸೋ ಸಂಪ್ರದಾಯವಿದೆ. ಸಾವಿರಾರು ಮಕ್ಕಳನ್ನು ಏಕಕಾಲದಲ್ಲಿ ತೋಡಿನ ಕೊಳಕು ನೀರಿನಲ್ಲಿ ಮುಳುಗಿಸಲಾಗುತ್ತದೆ. ಇಲ್ಲೂ ಒಂದು ವಿಶೇಷವಿದೆ. ಈ ಮುಳುಗಿಸುವಿಕೆ ಬ್ರಾಹ್ಮಣ ಮತ್ತು ದಲಿತ ಮಕ್ಕಳಿಗೆ ಇಲ್ಲ. ಬ್ರಾಹ್ಮಣ ಮಕ್ಕಳು ಶೂದ್ರರ ಜೊತೆ ಮುಳುಗುವುದು ನಿಷೇದವಾದರೆ, ದಲಿತರ ಮಕ್ಕಳು ಶೂದ್ರರಿಗೂ ಅಸ್ಪ್ರಶ್ಯರು! ಗೌರಿಬಿದನೂರು ತಾಲೂಕಿನ ಅಲಿಪುರಲ್ಲಿ ಶಿಯಾ ಮುಸ್ಲೀಮರು “ಮಾತಂ” ಆಚರಿಸುವುದು ಹಿಂಸೆಯ ಪರಮಾವಧಿ. ಮಕ್ಕಳ ಎದೆ ತಲೆಗೆ ರಕ್ತ ಬರುವಂತೆ ಬ್ಲೇಡಿನಿಂದ ಕೊಯ್ದು ಕೈದಿಯಂತೆ ಮಕ್ಕಳಿಗೆ ಸರಪಳಿ ಬಿಗಿಯುವುದು ಈ ಆಚರಣೆಯ ಶೈಲಿ. ಮುಸ್ಲೀಮರು ಆಚರಿಸೊ ಮೊಹರಂ ಕೂಡಾ ಇದರಿಂದ ಹೊರತಾಗಿಲ್ಲ. ಅದೇನೇ ಇರಲಿ. ಇಂತಹ ಆಚರಣೆಗಳಿಗೂ ಈ ಮುದ್ದು ಕಂದ ಸ್ಪರ್ಧೆಗೂ ಹೋಲಿಕೆ ಇದೆ. ಈ ಎಲ್ಲಾ ಪ್ರಕರಣಗಳಲ್ಲೂ ಬಲಿಪಶುಗಳು ಏನೂ ಅರಿಯದ ಮಕ್ಕಳು.

ಈವರೆಗೆ ನಡೆದ ಮುದ್ದು ಕಂದ ಸ್ಪರ್ಧೆಯಲ್ಲಿ ಒಂದೇ ಒಂದು ದಲಿತರ ಮಗುವಿಗೆ ಪ್ರಶಸ್ತಿ ಬಂದಿಲ್ಲ. ಉತ್ತಮ ಫೋಟೋಗ್ರಫಿ ಪ್ರಶಸ್ತಿ ನೀಡುವುದಾದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಆಗ ಬೀದಿ ಮಕ್ಕಳ ಫೋಟೋಗಳು, ಜೋಪಡಿಯಲ್ಲಿ ವಾಸಿಸೋ ಮಕ್ಕಳ ಫೋಟೋಗಳು, ಬಿಕ್ಷುಕರ ಮಕ್ಕಳ ಫೋಟೋಗಳಿಗೂ ಪ್ರಾಮುಖ್ಯತೆ ದೊರೆಯುತ್ತದೆ. ಅಲ್ಲಿ ಛಾಯಾಗ್ರಾಹಕನ ಕ್ರಿಯೇಟಿವಿಟಿ ಮಾತ್ರ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಪತ್ರಿಕೆಗಳು ನಡೆಸುವ ಈ ಕ್ರೂರ ಸ್ಪರ್ಧೆಯಲ್ಲಿ ಮಗುವಿನ ಬಿಳಿ ಚರ್ಮ ಮತ್ತು ಶ್ರೀಮಂತಿಕೆ ಪ್ರಭಾವವಿರುವ ಮುಖ ಲಕ್ಷಣಗಳು ಮಾತ್ರ ಗಣನೆಗೆ ಬರುತ್ತದೆ. ಇದು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮಾತ್ರವಲ್ಲ ಬಿಳಿ ತೊಗಲೇ ಶ್ರೇಷ್ಠ ಎಂದು ಮುಗ್ದ ಕಂದಮ್ಮಗಳನ್ನು ಪ್ರತ್ಯೇಕಿಸಿ ತಾರತಮ್ಯ ಮಾಡುವ ವಿಕೃತ ಪುರೋಹಿತಶಾಹಿ ಮನಸ್ಸುಗಳ ಕ್ರೂರ ಮನಸ್ಥಿತಿಯಾಗಿದೆ.

ಏರು ಇಳಿದ ಹೊತ್ತಿನಲ್ಲಿ ಕಾವೇರಿ ವಿವಾದ

 – ತೇಜ ಸಚಿನ್ ಪೂಜಾರಿ

ಆಧುನಿಕ ಜಗತ್ತಿನಲ್ಲಿ ನೀರಿಗೆ ಒಂದು ಸಂಘರ್ಷಾತ್ಮಕ ನೆಲೆಯಿದೆ. ಪೂರೈಕೆ ಹಾಗೂ ಬೇಡಿಕೆಯ ಸಮೀಕರಣದಲ್ಲಿ ಇರುವ ಅಸಮಾನತೆಗಳು ಹಲವು ಬಿಕ್ಕಟ್ಟುಗಳ ಸಾಧ್ಯತೆಗಳನ್ನು ಸೃಷ್ಟಿಸಿವೆ. ಸಹಜ ಪ್ರಾಕೃತಿಕ ವೈಕಲ್ಯಗಳ ನಡುವೆಯೇ ನುಸುಳುತ್ತಿರುವ “ಬಳಸು ರಾಜಕಾರಣ”, ಸಾಮ್ರಾಜ್ಯಶಾಹಿತ್ವ ಹಾಗೂ ಕಾರ್ಪೋರೇಟ್ ಮೊದಲಾದ ಸ್ಥಾಪಿತ ಹಿತಾಸಕ್ತಿಗಳು ನೀರಿನ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಇದೇ ಹಿನ್ನೆಲೆಯಲ್ಲಿ, “ತೃತೀಯ ಮಹಾಯುಧ್ಧವು ಸಂಭವಿಸಿದಲ್ಲಿ ಅದು ನೀರಿನ ಸಲುವಾಗಿಯೇ ಆಗಿರುತ್ತದೆ” ಎಂಬ ಕೊಂಚ ಉತ್ಪ್ರೇಕ್ಷೆ ಅನ್ನಿಸುವಂತಹ, ಆದರೆ ನೆಲದ ವಾಸ್ತವಗಳನ್ನು ಮೀರದ ಮಾತುಗಳನ್ನು ಹಲವು ವ್ಯೂಹತಜ್ಞರು ನುಡಿಯುತ್ತಿದ್ದಾರೆ.

ಕಾವೇರಿ ಸಮಸ್ಯೆಯು ಕೂಡ ಇಂತಹದ್ದೇ ಬಿಕಟ್ಟು ಸಂರಚನೆಯನ್ನು ಹೊಂದಿದೆ. ಯಾವ ಆಯಾಮದಿಂದ ನೋಡಿದರೂ ಅದೊಂದು ಪೂರ್ಣ ಮಾನವ ನಿರ್ಮಿತ ಬಿಕ್ಕಟ್ಟು. ಒಂದೆಡೆ ನೀರಿನ ಪೂರೈಕೆಗೇ ಮಿತಿಯೊಡ್ಡುವ ಅರಣ್ಯ ನಾಶದಂತಹ ಚಟುವಟಿಕೆಗಳು, ಇನ್ನೊಂದೆಡೆ ಅವೈಜ್ಞಾನಿಕ ಹಾಗೂ ಸುಸ್ಥಿರವಲ್ಲದ ಅಭಿವೃದ್ಧಿ ಮಾದರಿಗಳು ಕಾಣಿಸಿರುವ ಅತಿ ಬೇಡಿಕೆಯ ಪ್ರವೃತ್ತಿಗಳು. ಜೊತೆಗೆ, ಇಂತಹ ಸಂರಚನೀಯ ವೈಫಲ್ಯವನ್ನು ವ್ಯಾಪಿಸಿರುವ “ಬಳಸು ರಾಜಕಾರಣ”. ಇವೇ ಮೊದಲಾದ ಮಾನವಿಕ ಅಂಶಗಳು ಕಾವೇರಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಾಧ್ಯವಾಗದ ಪರಿವೇಶವೊಂದನ್ನು ನಿರ್ಮಿಸಿವೆ.

ವಾರ್ಷಿಕ ವಿದ್ಯಮಾನವೆಂಬಂತೆ ನಡೆಯುತ್ತಿರುವ ಈ ಜಗಳದಲ್ಲಿ ಕ್ಷಣಿಕತೆ ಹಾಗು ನಿಯಮಿತತೆ-ಇವೆರಡೂ ಅಂಶಗಳಿವೆ. ಬಾಹ್ಯ ಪ್ರೇರಣೆಗಳು ಕಾವೇರಿ ತಟದಲ್ಲಿ ಉಂಟುಮಾಡುವ ತಲ್ಲಣಗಳು ತೀರಾ ಕ್ಷಣಿಕವಾದವು. ಯೌವನದ ಆವೇಶವು ಉಕ್ಕಿ ಕ್ಷಣಾರ್ಧದಲ್ಲಿ ವೃದ್ಧಾಪ್ಯದ ಮೌನವು ಆವರಿಸಿದಂತೆ. ಆದರೆ ಕೊನೆಗುಳಿಯುವ ಮೌನದಲ್ಲಿ ವೃದ್ಧಾಪ್ಯದ ಫ್ರೌಢತೆ ಯಾ ಅನುಭವ ಸಾಫಲ್ಯವು ಕಾಣಿಸುವುದಿಲ್ಲ ಎನ್ನುವುದೇ ಕಾವೇರಿ ಸಂಕಟದ ನಿಜವಾದ ದುರಂತತೆಯಾಗಿದೆ. ಹೀಗಾಗಿ ಮೌನದಲ್ಲಿ ನಡೆಯುವ ಜಿಜ್ಞಾಸೆಗಳಿಗೆ ವಿಶೇಷವಾದ ಮೌಲ್ಯವಿದೆ. ಇದೇ ಹಿನ್ನಲೆಯಲ್ಲಿ ಸದ್ಯದ ಏರು ಇಳಿದ ಹೊತ್ತಿನಲ್ಲಿ ಕಾವೇರಿ ವಿವಾದ ಕುರಿತು ಮೂಡಿದ ಕೆಲವು ವಿಚಾರಗಳು ಇಂತಿವೆ.

  ***

ಮೊದಲನೆಯ ವಿಚಾರ ಕಾವೇರಿಯ ಮೇಲಣ ಹಕ್ಕು ಸ್ಥಾಪನೆಗೆ ಸಂಬಂಧಿಸಿದ್ದಾಗಿದೆ. ಹುಟ್ಟು, ಪಥ, ಗಮ್ಯ ಮೊದಲಾದ ಸಹಜ ಪ್ರಾಕೃತಿಕ ವಿಚಾರಗಳನ್ನು ಆಧರಿಸಿ ನಡೆಯುವ ಹಕ್ಕೊತ್ತಾಯದ ಪ್ರವೃತ್ತಿಗಳು ಕಾವೇರಿ ವಿಚಾರದಲ್ಲಿ ಆಗಾಗ್ಗೆ ಕಂಡುಬರುತ್ತವೆ. ಈ ಅಂಶವು ಕಾವೇರಿ ಸಮಸ್ಯೆಯ ಇತ್ಯರ್ಥದ ಹಾದಿಯಲ್ಲಿ ಒಂದು ಪ್ರಮುಖವಾದ  ತೊಡಕಾಗಿದೆ. ವಾಸ್ತವದಲ್ಲಿ ಹರಿಯುವ ನೀರು ಬೀಸುವ ಗಾಳೀ ಇವೇ ಮೊದಲಾದ ಪ್ರಾಕೃತಿಕ ಅಂಶಗಳ ಮೇಲೆ ಪ್ರತಿಪಾದಿಸಲ್ಪಡುವ ಹಕ್ಕೊತ್ತಾಯವೇ ಒಂದು ಬಗೆಯ ಅಸಹಜತೆಯಾಗಿದೆ. ಯಾವುದೇ ನದಿಗೆ “ಮೂಲ” ಎಷ್ಟು ಮುಖ್ಯವೋ ಅಷ್ಟೇ ಮಹತ್ವದ್ದು ಅದು “ಸೇರುವ ತಾಣ” ಹಾಗೂ ಇವೆರಡರ ನಡುವೆ “ಚಲಿಸುವ ಪಥ”. ಇದರ ಯಾವುದೇ ಒಂದಂಶದ ಆಧಾರದಲ್ಲಿ ನಡೆಯವ ಹಕ್ಕೊತ್ತಾಯಗಳು ತೀರಾ ಕೃತ್ತಿಮವಾದದ್ದಾಗಿರುತ್ತದೆ.

ಇಂತಹ ಹಕ್ಕು ಮಂಡನೆಯ ಪ್ರವೃತ್ತಿಗಳು ಮಾನವನ ಅಹಮಿಕೆಯ ಅಭಿವ್ಯಕ್ತಿಯೂ ಆಗಿವೆ. ಅದು ತಾನು ಪ್ರಕೃತಿಯನ್ನು ಜಯಿಸಿದ್ದೆನೆ ಎಂಬ ಗತ್ತು; ಸಹಜತೆಯನ್ನು ತನ್ನಿಷ್ಟಕ್ಕೆ ತಕ್ಕ ಹಾಗೆ ಮಾರ್ಪಡಿಸಬಲ್ಲೆನೆಂಬ ಧಿಮಾಕು. ವಾಸ್ತವದಲ್ಲಿ ಇದು ಮಾನವನ ಮೂರ್ಖತನವೇ ಆಗಿದೆ. ಪ್ರಕೃತಿಗೆ ಮನುಷ್ಯ ಯಾವತ್ತಿಗೂ ಶಿಶುವೇ. ಕಾಲಕಾಲಕ್ಕೆ ಮನುಕುಲದ ಅಹಂಗೆ ಪಾಠಕಲಿಸುವ ಪ್ರಯತ್ನಗಳನ್ನು ಆಕೆ ಮಾಡುತ್ತಳೇ ಇದ್ದಾಳೆ. ಘಟನೆ ಹಾಗೂ ಪರಿಣಾಮಗಳ ನೆಲೆಯಲ್ಲಿ ಬಹು ಅಸಹಜ ಅನ್ನಿಸುವಂತಹ ಭೂಕಂಪನಗಳು, ಚಂಡಮಾರುತಗಳು, ನೆರೆ-ಬರ ಪರಿಸ್ಥಿತಿಗಳು ತನ್ನ ದುರ್ಬಳಕೆಯ ವಿರುದ್ಧ ಪ್ರಕೃತಿಯ ತೋರ್ಪಡಿಸುವ ಪ್ರತಿಭಟನೆಗಳೇ ಆಗಿವೆ. ಇದನ್ನು ಅರ್ಥೈಸುವುದರಲ್ಲಿಯೇ ಇಳೆಯ ಅಷ್ಟೂ ಜೀವಿಗಳ ಶ್ರೇಯಸ್ಸಿದೆ.

ಪ್ರಜೆಗಳ ಅಹಮಿಕೆಗಳು ನಾಯಕರಿಗೆ ಮೂರ್ಖತನವನ್ನು ದಯಪಾಲಿಸುತ್ತವೆ. ಕಾವೇರಿ ವಿಚಾರದಲ್ಲಿ ಆಗಿರುವುದು ಇದೇ. ಸಭಾತ್ಯಾಗ, ಪಾದಯಾತ್ರೆಯಂತಹ ವೈಫಲ್ಯ ಖಚಿತ ಜನಮರುಳು ನಡೆಗಳು ವಾಸ್ತವದ ಜೊತೆಗೆ ಯಾವ ನೆಲೆಯಲ್ಲೂ ಕೂಡಿಕೆಯಾಗದ ಕೇವಲ ಮೂರ್ಖತನದ ಆಚರಣೆಗಳಾಗಿವೆ. ಹೀಗೆ, “ನನ್ನದು” ಅನ್ನೋ ಅಹಂನ್ನು ಬಿಟ್ಟಾಗಲೇ “ಹಂಚಿಕೆ” ಎಂಬ ದಾಸೋಹ ತತ್ವವು ತಾತ್ವಿಕವಾಗಿ ಸಾಧಿತವಾಗುತ್ತದೆ. “ನನ್ನದೇ” ಆದಲ್ಲಿ ಹಂಚುವ ಅನಿವಾರ್ಯತೆಯಾದರೂ ಏನಿರುತ್ತದೆ? ಆಗ ನಡೆಯುವುದು ಹಂಚಿಕೆಯಲ್ಲ; ಅದು “ದಾನ”. ದಾನ ನೀಡಲು ಕಾವೇರಿ ಯಾರ ಸ್ವತ್ತೂ ಅಲ್ಲ; ಕಿತ್ತುಕೊಳ್ಳಲು ಇನ್ಯಾರ ಆಸ್ತಿಯೂ ಅಲ್ಲ. ಕಾವೇರಿ  ಸ್ವಯಂ ಪ್ರಕೃತಿಯ ಮೂರ್ತರೂಪ. ಅದರೊಳಗೆ ನಾವುಗಳು; ನಮ್ಮೊಳಗೆ ಅದಲ್ಲ. ಇದು ಸಾರ್ವಕಾಲಿಕ, ಸಾರ್ವತ್ರಿಕವಾದ ಸತ್ಯ. ಇದೇ ಪರಿಸರ ಕಾರ್ಯಕರ್ತೆ ವಂದನಾ ಶಿವ ಅವರು ಪ್ರತಿಪಾದಿಸುವ ಜಲ ಪ್ರಜಾಪ್ರಭುತ್ವದ ಅಡಿಗಲ್ಲು.

ಇಂತಹ ತಾತ್ವಿಕ ನೆಲೆಗಟ್ಟನ್ನು ಒಪ್ಪಿಕೊಂಡೇ “ಹಂಚಿಕೆ” ಎಂಬ “ಏರ್ಪಾಟು ವ್ಯವಸ್ಥೆ”ಯ ವ್ಯವಹಾರಗಳನ್ನು ನಿರ್ವಹಿಸಬೇಕಾಗಿದೆ. ನಮ್ಮಲ್ಲಿ ಸಮಸ್ಯೆಯ ಸಮಾಧಾನಗಳಿಗೆ ಹಲವು ಮಟ್ಟದ ಸಾಂಸ್ಥಿಕ ಸಂರಚನೆಗಳಿವೆ. ಆಯಾ ಘಟಕಗಳ ಅಸ್ವೀಕಾರಾರ್ಹ ತೀರ್ಪುಗಳನ್ನು ಪ್ರಶ್ನಿಸುವ ಅಫೀಲು ವ್ಯವಸ್ಥೆಯೂ ಇದೆ. ಇಂತಹ ಪ್ರಜಾತಾಂತ್ರಿಕ ಸಂರಚನೆಯ ಮೂಲಾಂಶ “ಚರ್ಚೆ”. ಅದರೊಳಗೆ ಬರುವಂತಹದ್ದು ವಾದ-ಪ್ರತಿವಾದ ಮಂಡನೆಗಳು ಹಾಗೂ ಇತ್ಯಾತ್ಮಕ ಒತ್ತಡ ಸೃಷ್ಟಿಯ ಯತ್ನಗಳು. ಇಂತಹ ವ್ಯವಸ್ಥೆಯನ್ನು ವಿಶ್ವಾಸದಿಂದ ಸ್ವೀಕರಿಸಿ ಸಮಷ್ಟಿಯ ಹಿತಕ್ಕೆ ಪೂರಕವಾಗುವಂತೆ ಚಾತುರ್ಯದಿಂದ ಜಯಿಸಬೇಕಾದದ್ದು ರಾಜಕೀಯ ನಾಯಕತ್ವ. ಕರ್ನಾಟಕ ಸರ್ಕಾರದ ವೈಫಲ್ಯ ಇರುವುದು ಇಲ್ಲಿಯೇ. ತಮಿಳುನಾಡಿನ ಯಶಸ್ಸೂ ಇಲ್ಲಿಯೇ. ತಮಿಳುನಾಡಿನ ರಾಜಕೀಯ ನಾಯಕತ್ವವು “ಎಲ್ಲರನ್ನೂ ಒಳಗೊಂಡ” ಏಕತ್ವದ ವ್ಯವಸ್ಥೆಯೊಂದನ್ನು ವಿಕಸಿಸಿದ್ದು, ಕಾವೇರಿಯ ಅಂಕಣದಲ್ಲಿ ಸದಾ ಗೆಲ್ಲುತ್ತಿದೆ. ತನ್ನ ಜನ ಹಾಗೂ ಆಸ್ಮಿತೆಯ ಹಿತ ಕಾಯುವ ತಮಿಳು ಮಾದರಿ ಮೆಚ್ಚತಕ್ಕದ್ದೇ. ಸಂಕುಚಿತತೆಯನ್ನು ಬಿಟ್ಟು ಇನ್ನಷ್ಟು ಇನ್‌ಕ್ಲೂಸಿವ್ ಆದಲ್ಲಿ ಅದು ಅನುಕರಣೀಯವಾಗಬಲ್ಲದು. ಇದಕ್ಕೆ ತದ್ವಿರುದ್ದವಾಗಿ, ಕರ್ನಾಟಕದ ನಾಯಕತ್ವವು ಕೇವಲ ಜನಾನುರಾಗಿ ಆಚರಣೆಗಳಿಗೆ ಮೊರೆ ಹೋಗುತ್ತಿದೆ. ಪ್ರಧಾನಿ ನೇತೃತ್ವದ ಸಭೆಯಿಂದ ಹೊರನಡೆದ ಪ್ರಕರಣವು ಇದನ್ನೇ ಪ್ರತಿನಿಧಿಸುತ್ತದೆ. ಅದು ಪ್ರಜಾತಂತ್ರದ ಮೂಲಾಂಶವಾದ ಚರ್ಚೆಯಲ್ಲಿಯೇ ಅವಿಶ್ವಾಸವನ್ನು ಸಂಕೇತಿಸುತ್ತದೆ. “ಹಿತಕಾಯುವ” ಕಾರ್ಯವನ್ನು ವಕೀಲರಿಗೆ ಹೊರಗುತ್ತಿಗೆ ನೀಡಿ ತಾನು ಕೇವಲ ಅಗ್ಗದ ಜನಪ್ರಿಯತೆಯಲ್ಲಿ ಈಜಾಡುವುದು ಅಪಾಯಕಾರಿಯಾದ ಪ್ರವೃತ್ತಿಯಾಗಿದೆ.

   ***

ಹೋರಾಟ ಸಮಾಜದ ಕ್ರಿಯಾಶೀಲತೆ ಹಾಗೂ ಜೀವಂತಿಕೆಯ ಪ್ರಾಥಮಿಕ ಲಕ್ಷಣ. ನಮ್ಮ ದೇಶಕ್ಕೆ ಯಶಸ್ವಿ ಹೋರಾಟದ ಆಂದೋಲನಗಳ ತೀರಾ ಇತ್ತೀಚಿನ ನೆನಪುಗಳಿವೆ. ಸ್ವಾತಂತ್ರ್ಯೋತ್ತರ ಭಾರತದ ಪ್ರಾತಿನಿಧಿಕ ರಾಜಕೀಯ ಸಂರಚನೆಯಲ್ಲಿ ಒಂದು ಇತ್ಯಾತ್ಮಕ ಒತ್ತಡ ತಂತ್ರವಾಗಿ ಹೋರಾಟ ಇನ್ನಷ್ಟು ಮಹತ್ವವನ್ನು ಪಡೆದಿದೆ. ಇಲ್ಲಿ ಹೋರಾಟ ಎಂಬುವುದು ಕಾಲಕಾಲಕ್ಕೆ ಕಾಣಿಸಿಕೊಳ್ಳುವ ಕೇವಲ ಆವೇಶ ಭರಿತ ಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯಷ್ಟೇ ಅಲ್ಲ. ಅದು ಮೂರ್ತ ಹಾಗೂ ಅಮೂರ್ತ ಎರಡೂ ನೆಲೆಗಳಲ್ಲಿ ನಿರಂತರವಾಗಿ ನಡೆಯುವ ಜನಜಾಗೃತಿಯ ಪ್ರಕ್ರಿಯೆಯಾಗಿದೆ. ಇಂತಹ ಸಫಲ ಹೋರಾಟಗಳ ಗಮ್ಯ ಹಾಗೂ ಗಮನ — ಇವೆರಡರಲ್ಲಿಯೂ ವೈಶಾಲ್ಯತೆ ಇರುತ್ತದೆ.

ಕಾವೇರಿ ಹೋರಾಟದ ಆಂತರ್ಯದಲ್ಲೇ ಹಲವು ವೈರುಧ್ಯಗಳಿವೆ. ಅದು ಕೇವಲ ಒಂದು ಪ್ರತಿಕ್ರಿಯೆ, ಒಂದು ಔಟ್‌ಬ್ರಸ್ಟ್ ಅಷ್ಟೇ. ಅಲ್ಲಿ ನಿರಂತರತೆಯಿದೆ. ಆದರೆ ಅದು ಕೇವಲ ಘಟನೆಗೆ ಸೀಮಿತವಾಗಿದೆ. ಸಂಕುಚಿತ ನೆಲೆಗಳಿಂದ ಅದರ ತಾತ್ವಿಕ ತಳಹದಿಯೂ ದುರ್ಬಲವಾಗಿದ್ದು ಬೌದ್ಧಿಕತೆಯ ಒಳಗೊಳ್ಳುವಿಕೆ ಕೂಡಾ ಪೂರ್ಣ  ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಹೀಗಾಗಿ ಚಳವಳಿಯ ಗರ್ಭದಲ್ಲಿ ಪರ್ಯಾಯ ಸೃಷ್ಟಿಯ ಯಾವುದೇ ಕನಸುಗಳು ಅಥವಾ ಹೊಳಹುಗಳು ಗೋಚರಿಸುವುದಿಲ್ಲ.

ಆದಾಗ್ಯೂ ತನ್ನೆಲ್ಲಾ ದೋಷಗಳು ಹಾಗೂ ವೈಫಲ್ಯಗಳ ನಡುವೆಯೂ ಹಲವು ಸಾಧ್ಯತೆಗಳು ಮತ್ತು ಆಶಾವಾದಗಳನ್ನು ಕಾವೇರಿ ಚಳವಳಿಯು ಸೃಷ್ಟಿಸಿದೆ. ವರ್ತಮಾನದ ಸವಾಲುಗಳು ಅಂತಹ ಸಾಧ್ಯತೆಗಳಿಗೆ ನೀರುಣಿಸುತ್ತಿವೆ. ಒಂದು ಪರಿಪೂರ್ಣ ರೈತ ಆಂದೋಲನವಾಗಿ ರೂಪುಗೊಳ್ಳುವ ತಾಕತ್ತು ಸದ್ಯದ ಹೋರಾಟಕ್ಕಿದೆ.  ಈ ಹಿನ್ನೆಲೆಯಲ್ಲಿ ಕಾವೇರಿ ಹೋರಾಟವು ಹೊಸ ಚಿಂತನೆಗಳು ಹಾಗೂ ಚಳವಳಿಯ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.

ಪ್ರಸ್ತುತ ವ್ಯವಸಾಯಿಗರ ಜೀವನವು ದಯನೀಯ ಸ್ವರೂಪದಲ್ಲಿದೆ. ಕೇವಲ ನೀರಿನ ಲಭ್ಯತೆಯೊಂದೇ ರೈತರ ಜೀವನ ಮಟ್ಟದ ಸುಧಾರಣೆಗೆ ಕಾರಣವಾಗುತ್ತದೆಯೇ? ಖಂಡಿತಾ ಇಲ್ಲ. ಅದು ಸಾಧ್ಯವಾಗುವುದು “ನೀರುಣಿಸಿ, ಬೆವರ ಹರಿಸಿ” ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಮೌಲ್ಯವು ದೊರೆತಾಗಲೇ ಆಗಿದೆ. ಬೆಳೆದ ಅಷ್ಟೂ ಟೊಮ್ಯಾಟೊಗಳನ್ನು, ಈರುಳ್ಳಿಗಳನ್ನು ಬೀದಿಗೆಸೆಯುವುದೇ ಆದಲ್ಲಿ ಹರಿದ ನೀರಿಗೆ ಅಥವಾ ಬೆವರಿಗೆ ಯಾವ ಬೆಲೆಯಿರುತ್ತದೆ? ವರ್ತಮಾನದ ಸವಾಲು ಇದೊಂದೇ ಅಲ್ಲ. ನೀರು ನಿಧಾನವಾಗಿ ಕಾರ್ಪೋರೇಟ್ ಹಿತಾಸಕ್ತಿಗಳ ವಕ್ರದೃಷ್ಟಿಗೆ ಬೀಳುತ್ತಿದೆ. ಪ್ರಕೃತದತ್ತವಾಗಿರುವ, ಸಕಲ ಜೀವಿಗಳ ಪೋಷಣೆಗೆ ಇರುವ ನೀರನ್ನು ಸರಕೀಕರಣಗೊಳಿಸುವ ಅಥವಾ ಅದಕ್ಕೆ ವಿತ್ತೀಯ ಮೌಲ್ಯವನ್ನು ನೀಡುವ ಯತ್ನಗಳು ನಡೆಯುತ್ತಲೇ ಇವೆ.

ಇಂತಹ ಸವಾಲುಗಳ ಹಿನ್ನೆಲೆಯಲ್ಲಿಯೇ ಕಾವೇರಿ ಚಳವಳಿಯು ಹೊಸ ರೂಪವನ್ನು ಪಡೆದುಕೊಳ್ಳಬೇಕಿದೆ. ಅದು ಕನ್ನಡ ತಮಿಳು ಸೇರಿದಂತೆ ಕಾವೇರಿ ಪಾತ್ರದ ಅಷ್ಟೂ ರೈತರ ಆಂದೋಲನವಾಗಬೇಕು. ಒಂದು ವರ್ಗಶಕ್ತಿಯಾಗಿ ಐಕ್ಯತೆಯ ನೆಲೆಯಲ್ಲಿ ಮರುಜೀವ ಪಡೆದುಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರು ಒಮ್ಮೆ ಲಂಡನ್‌ಗೆ ತೆರಳಿದ್ದಾಗ ಮ್ಯಾಂಚೆಸ್ಟರ್‌ನ ಕಾರ್ಮಿಕೆಯೊಬ್ಬಳು ಗಾಂಧಿಯ ಸ್ವದೇಶಿ ನೆಲೆಯ ಆಂದೋಲನಗಳ ಪರಿಣಾಮ ಸಂಕಷ್ಟಕ್ಕೀಡಾಗಿ ದೀನಳಾದ ಘಟನೆಯನ್ನು ಹೇಳಿಕೊಂಡಿದ್ದಳಂತೆ. ಆಗ ಗಾಂಧಿ ಆಕೆಯೂ ಕೂಡಾ ತನ್ನ ದೀನ ಪರ ಚಳವಳಿಯಲ್ಲಿ ಪಾಲ್ಗೊಳ್ಳಬೇಕೆಂದು ಕೇಳಿಕೊಂಡರಂತೆ. ಇದು ವರ್ಗಸ್ವರೂಪಿ ನೆಲೆ. ಇಂತಹ ನೆಲೆಯನ್ನು ಕಾವೇರಿ ಹೋರಾಟವು ಪಡೆಯಬೇಕು. ಇಲ್ಲಿ ಪರಸ್ಪರ ವಿಶ್ವಾಸ ವರ್ಧಕ ಕ್ರಮಗಳ ಅವಶ್ಯಕತೆಯಿದೆ.

ಕಾವೇರಿ ಸಮಸ್ಯೆಯ ಪರಿಹಾರ ಕಾರ್ಪೋರೇಟ್ ಜಗತ್ತು ಹಾಗೂ ಬಳಸು ರಾಜಕಾರಣ ದ್ವೇಷಿಸುವ “ಸಹಕಾರ ತತ್ವ”ದಲ್ಲಿದೆ. ಕಾವೇರಿ ಪಾತ್ರದ ಎಲ್ಲಾ ರೈತರ ನಡುವೆ ಸಮರ್ಪಕ ಹಾಗೂ ವ್ಯವಸ್ಥಿತವಾದ ಸಹಕಾರ ವ್ಯವಸ್ಥೆಯೊಂದು ರೂಪುಗೊಳ್ಳವುದು ಇಲ್ಲಿ ಅವಶ್ಯಕ. “ನ್ಯಾಯಯುತ ಹಂಚಿಕೆ”, “ಸಧ್ಬಳಕೆ”, ಹಾಗೂ “ಸುಸ್ಥಿರತೆ” ಅಂತಹ ಸಂರಚನೆಯ ಮೂಲಾಂಶಗಳಾಗಬೇಕು. ಜಲ ಮರುಪೂರಣ, ಅರಣ್ಯೀಕರಣ, ಸೂಕ್ಷ್ಮ ನೀರಾವರಿ ಹಾಗೂ ಸಾವಯವ ಕೃಷಿ ಇವೇ ಮೊದಲಾದ ಆಚರಣೆಗಳು ಆಂದೋಲನ ಸ್ವರೂಪದಲ್ಲಿ ನಡೆಯಬೇಕು. ಇವಿಷ್ಟೂ ಅಂಶಗಳು ರೈತರ ಪಾರಂಪರಿಕ ಬದುಕಿನಲ್ಲಿಯೇ ಇವೆ ಎನ್ನುವುದು ಇಲ್ಲಿ ಉಲ್ಲೇಖನೀಯ. ಹಾಗೆಯೇ ಹೊಸ ವ್ಯವಸ್ಥೆಯ ನಿಗಾವಣೆಗೆ ಸಮರ್ಥ ಗ್ರಾಮ ಸಭೆಗಳ ಅನಿವಾರ್ಯತೆಯೂ ಇದೆ. ಹೀಗೆ, ರಾಜ್ಯಗಳ ನಡುವಣ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ಸಾಧ್ಯತೆಗಳಿರುವುದು ಕಾವೇರಿ ಹೋರಾಟವು ಒಂದು ಪರಿಪೂರ್ಣ ರೈತ ಚಳವಳಿಯಾಗಿ ರೂಪುಗೊಂಡಾಗಲೇ ಆಗಿದೆ.

ಇಂತಹ ಒಂದು ವ್ಯವಸ್ಥೆಯ ವಿಕಾಸದ ಹಾದಿಯಲ್ಲಿ ಪೂರಕ ರಾಜಕೀಯ ನೆಲೆಯೊಂದರ ಅಸ್ತಿತ್ವವೂ ಅಗತ್ಯವಾಗಿದೆ. ಒಮ್ಮೆ ಜೆ.ಎಚ್. ಪಟೇಲರು ತಮಿಳುನಾಡಿನ ಮುಖ್ಯಮಂತ್ರಿಗಳೂ ಭಾಗವಹಿಸಿದ್ದ ಕಾವೇರಿ ಕುರಿತಾದ ಸಭೆಯಲ್ಲಿ ಆಡಿದ್ದ ಮಾತುಗಳನ್ನು ಯು.ಆರ್. ಅನಂತಮೂರ್ತಿಯವರು ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. “ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ತಮಿಳುನಾಡಿನ ರೈತರ ಬಗ್ಗೆ ಯೋಚಿಸಬೇಕು. ಹಾಗೆಯೇ ಶ್ರೀ ಕರುಣಾನಿಧಿಯವರು ಕನ್ನಡದ ರೈತರ ಕುರಿತಾಗಿ ಕಾಳಜಿ ವಹಿಸಬೇಕು.” ಇದು ಎನೇಬಲಿಂಗ್ ರಾಜಕೀಯದ ಮಾದರಿ. ಅಂತಹ ವ್ಯವಸ್ಥೆಯೊಂದರ ನಿರ್ಮಾಪಕರಾಗಬೇಕಾಗಿರುವುದು ಕೂಡಾ ನಾವೇ ಅಲ್ಲವೇ?

ಕರ್ನಾಟಕದ ಕಾಂಗ್ರೆಸ್ ಮನೆ ರಿಪೇರಿಗೆ ಎಸ್.ಎಂ.ಕೃಷ್ಣ


-ಚಿದಂಬರ ಬೈಕಂಪಾಡಿ


 

ಕರ್ನಾಟಕದ ಕಾಂಗ್ರೆಸ್ ಪಾಳೆಯದಲ್ಲೀಗ ಏನೋ ಒಂಥರಾ. ಈ ‘ಒಂಥರಾ’ ಎನ್ನುವ ಪದವನ್ನು ಹಲವು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು, ಅರ್ಥ ಹುಡುಕಿಕೊಳ್ಳಬಹುದು. ಇದರಲ್ಲಿ ಪುಳಕವಿದೆ, ಆತಂಕವಿದೆ, ರೋಮಾಂಚನವಿರಬಹುದು, ಕಳೆದುಕೊಂಡದ್ದು ಮರಳಿ ಸಿಕ್ಕಿದಂತಿರಬಹುದು, ಹೇಳಲಾಗದಂಥ ಅನುಭವ ಆಗುತ್ತಿರಬಹುದು. ಆದ್ದರಿಂದಲೇ ಅದು ‘ಒಂಥರಾ’.

ಕರ್ನಾಟಕದಲ್ಲಿ ಕಾಂಗ್ರೆಸ್ ಗುಂಪುಗಳು ಎಷ್ಟಿವೆ ಎನ್ನುವುದನ್ನು ನಿಮ್ಮಷ್ಟಕ್ಕೆ ನೀವೇ ಲೆಕ್ಕ ಮಾಡಿ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕೋಶಾಧಿಕಾರಿ ಶ್ಯಾಮನೂರು ಶಿವಶಂಕರಪ್ಪ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ; ಇವರ ಬೆನ್ನಹಿಂದೆ ತಮ್ಮದೇ ಆದ ಬೆಂಬಲಿಗರ ಗುಂಪಿದೆ. ಸಿ.ಎಂ.ಇಬ್ರಾಹಿಂ, ತೇಜಸ್ವಿನಿ, ಧರಂ ಸಿಂಗ್ ಇವರೂ ತಮ್ಮ ನಿಷ್ಠಾವಂತರನ್ನು ಹೊಂದಿದ್ದಾರೆ. ಇದು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸ್ಥೂಲ ನೋಟ. ಇವರೆಲ್ಲರೂ ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿದ್ದರೂ ಒಬ್ಬರನ್ನೊಬ್ಬರು ಅತಿಯಾಗಿ ದ್ವೇಷಿಸದಿದ್ದರೂ ಮುಕ್ತವಾಗಿ ಪ್ರೀತಿಸುವುದಿಲ್ಲ. ಇವರಿಗೆಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರ ನಾಯಕರು. ಅವರು ಹೇಳಿದ್ದನ್ನು ಮಾತ್ರ ಕೇಳುತ್ತಾರೆ ಹೊರತು ಅನ್ಯರು ಯಾರೇ ಹೇಳಿದರೂ ಕೇಳುವ ಜಾಯಮಾನ ಇವರದ್ದಲ್ಲ. ಆದ್ದರಿಂದಲೇ ಕಾಂಗ್ರೆಸ್ ಹಿಡಿತ ಈಗಲೂ ನೆಹರೂ ಕುಟುಂಬದಲ್ಲೇ ಇದೆ ಎನ್ನುವ ವಾದಕ್ಕೆ ಇದು ಪುಷ್ಠಿ ನೀಡುತ್ತದೆ.

ಈ ಎಲ್ಲಾ ನಾಯಕರೂ ಒಂದಾಗಿದ್ದರೆ, ಪರಸ್ಪರ ನಂಬಿಕೆಯಿಂದ ಕೆಲಸ ಮಾಡಿದರೆ ಸೋನಿಯಾ ಅಥವಾ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸವೇ ಇಲ್ಲವಾಗುತ್ತಿತ್ತು ಇನ್ನೊಂದರ್ಥದಲ್ಲಿ ಖಾತೆಯಿಲ್ಲದ ಮಂತ್ರಿಯಂತಿರುತ್ತಿದ್ದರು. ಅವರು ಚುನಾವಣೆ ಕಾಲಕ್ಕೆ ಪ್ರಚಾರಕ್ಕೆ ಬರುವ ಅಗತ್ಯವೂ ಇರಲಾರದು. ಇಲ್ಲಿಯ ತನಕ ಇವರೆಲ್ಲರೂ ಪರಸ್ಪರ ಅಪನಂಬಿಕೆಯಿಂದ ಇರುತ್ತಾರೋ ಅಲ್ಲಿಯ ತನಕ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲರಾಗಿರುವುದು ಅನಿವಾರ್ಯ ಮತ್ತು ಇವರಿಂದಾಗಿ ಅವರು ಕ್ರಿಯಾಶೀಲರಾಗಿರುತ್ತಾರೆ. ರಾಜೀವ್ ಗಾಂಧಿ ನಂತರ ಪಿ.ವಿ.ನರಸಿಂಹರಾವ್ ಕಾಂಗ್ರೆಸ್ ಮುನ್ನಡೆಸಿದಾಗ ಪ್ರಣಬ್ ಮುಖರ್ಜಿ, ಶರದ್ ಪವಾರ್, ಪಿ.ಎ.ಸಂಗ್ಮಾ ಮುಂತಾದವರು ಅಧಿಕಾರಕ್ಕಾಗಿ ತಹತಹಿಸದೇ ಇರುತ್ತಿದ್ದರೆ ಕಾಂಗ್ರೆಸ್ ಪಕ್ಷ ನೆಹರೂ ಕುಟುಂಬದ ಹಿಡಿತದಿಂದ ಸುಲಭವಾಗಿ ಕಳಚಿಕೊಳ್ಳುತ್ತಿತ್ತು. ಮತ್ತೆ ಆ ಕುಟುಂಬದ ಹಿಡಿತಕ್ಕೆ ಕಾರಣರಾದವರು ಇವರೇ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು.

ಇಂಥ ವಾಸ್ತವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅವಲೋಕಿಸಿದರೆ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸೋನಿಯಾ ಮತ್ತು ರಾಹುಲ್ ಕನಸು ಕಾಣುತ್ತಿರುವುದು ಅಸಹಜವಂತೂ ಅಲ್ಲ. ಆದ್ದರಿಂದಲೇ ಕೇಂದ್ರ ಸಚಿವರಾಗಿದ್ದ ಎಸ್.ಎಂ.ಕೃಷ್ಣರನ್ನು ಸೋನಿಯಾ ಮತ್ತು ರಾಹುಲ್ ಕರ್ನಾಟಕಕ್ಕೆ ಹಿಂದಕ್ಕೆ ಕಳುಹಿಸಿದ್ದಾರೆ. ಈಗಾಗಲೇ ಡಜನ್ ನಾಯಕರು ಕರ್ನಾಟಕದಲ್ಲಿದ್ದರೂ ಸೋನಿಯಾ ಹಾಗೂ ರಾಹುಲ್ ಕೃಷ್ಣ ಅವರನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಕೃಷಿಗೆ ಹಚ್ಚಿರುವುದಕ್ಕೆ ಕಾರಣ ಇದೇ ಡಜನ್ ನಾಯಕರು.

ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್ ಪಕ್ಷದಲ್ಲಿ ಜನನಾಯಕರಲ್ಲ ಎನ್ನುವುದು ಸೋನಿಯಾ ಗಾಂಧಿಗೂ ಗೊತ್ತಿರುವ ಸತ್ಯ. ಆದರೆ ಉಳಿದವರು ತಮ್ಮ ಬೆನ್ನಿಗಂಟಿಕೊಂಡು ಬಂದಿರುವ ಜಾತಿಯ ಹಗ್ಗದಿಂದ ಒಂದಷ್ಟು ಜನರನ್ನು ಕಟ್ಟಿಕೊಂಡಿದ್ದರೆ ವೀರಪ್ಪ ಮೊಯ್ಲಿಯಂಥವರು ತಮ್ಮ ಪ್ರಭಾವಿ ವಲಯದಿಂದ ಚಲಾವಣೆಯಲ್ಲಿದ್ದಾರೆ ಹೊರತು ಜಾತಿಯ ಬಲದಿಂದ ಅಲ್ಲ. ಆದರೂ ಎಸ್.ಎಂ.ಕೃಷ್ಣರಲ್ಲಿ ಸೋನಿಯಾ ಮತ್ತು ರಾಹುಲ್ ಗುರುತಿಸಿರುವ ಗುಣ ಯಾವುದು ?.

ಎಸ್.ಎಂ.ಕೃಷ್ಣ ಒಕ್ಕಲಿಗ ಸಮುದಾಯದವರು ನಿಜ. ಆದರೆ ಅವರು ಎಂದು ತಮ್ಮ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಬುದ್ಧಿವಂತಿಕೆ ಮತ್ತು ಚಾಣಾಕ್ಷತೆ ಕೃಷ್ಣ ಅವರನ್ನು ರಾಜಕಾರಣದಲ್ಲಿ ಎತ್ತರದ ಸ್ಥಾನಕ್ಕೆ ಒಯ್ದಿರುವುದೇ ಹೊರತು ಅವರ ಹಣಬಲವಾಗಲೀ, ಜಾತಿಯ ಅಸ್ತ್ರವಾಗಲೀ ನೆರವಿಗೆ ಬಂದಿಲ್ಲ, ಅವರ ರಾಜಕೀಯ ಜೀವನದಲ್ಲಿ ಅದು ಅನಿವಾರ್ಯವಾಗಲಿಲ್ಲ. ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯನ್ನು ಸಕಾಲದಲ್ಲಿ ಮಿತವಾಗಿ ಬಳಸುವುದರಲ್ಲಿ ಕೃಷ್ಣ ನಿಪುಣರು. ಆದ್ದರಿಂದಲೇ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ಅಧಿಕಾರ ಉಳಿಸಿಕೊಳ್ಳುವುದು ಸಾಧ್ಯವಾಯಿತು.

ಮಹಾಭಾರತದಲ್ಲಿ ಕೃಷ್ಣ ಜಾತಿಯ ಬಲದಿಂದ ಗುರುತಿಸಿಕೊಳ್ಳಲಿಲ್ಲ ಅಥವಾ ಯುದ್ಧ ಗೆಲ್ಲಲು ಸಾರಥಿಯಾಗಲಿಲ್ಲ. ತನ್ನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆಯಿಂದ ಅಂದುಕೊಂಡದ್ದನ್ನು ಸಾಧಿಸಿದ. ಈ ಕೃಷ್ಣ ಕೂಡಾ ಕಾಂಗ್ರೆಸ್ ಅಧಿಕಾರಕ್ಕೇರಲು ಸಾಧ್ಯವೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ಪಾಂಚಜನ್ಯ ಊದಿ ಅಧಿಕಾರಕ್ಕೆ ತರುವಲ್ಲಿ ಸಮರ್ಥರಾಗಿದ್ದರು. ಅದರ ಪುನರಾವರ್ತನೆ ಈಗ ಆಗಬೇಕು ಎನ್ನುವುದು ಸೋನಿಯಾ ಮತ್ತು ರಾಹುಲ್ ಕನಸಿಗೆ ಕಾರಣವಿರಬೇಕು.

ಕರ್ನಾಟಕದ ಕಾಂಗ್ರೆಸ್ ಪಕ್ಷದೊಳಗಿರುವ ಡಜನ್ ನಾಯಕರು ಆತ್ಮಪೂರ್ವಕವಾಗಿ ಕೃಷ್ಣರನ್ನು ಒಪ್ಪದಿರಬಹುದು ಆದರೆ ಸರಾಸಗಟಾಗಿ ನಿರಾಕರಿಸಲಾರರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎನ್ನುವುದೇ ಡಜನ್ ನಾಯಕರ ಚಿಂತೆಯಾಗಿದೆ ಹೊರತು ಅಧಿಕಾರಕ್ಕೆ ಬೇಕಾದಷ್ಟು ಸಂಖ್ಯೆಯ ಶಾಸಕರನ್ನು ಗೆಲ್ಲಿಸುವ ತಂತ್ರಗಾರಿಕೆಯ ಚಿಂತನೆಯಿಲ್ಲ. ತಾನು ಬೇಕಾದರೆ ಮುಖ್ಯಮಂತ್ರಿಯಾಗದಿದ್ದರೂ ಪರವಾಗಿಲ್ಲ ಅವನು ಮಾತ್ರ ಆಗಬಾರದು, ಅದನ್ನು ಸಾಧಿಸುವುದು ಹೇಗೆ ಎನ್ನುವುದೇ ಚಿಂತೆ. ಆದರೆ ಎಸ್.ಎಂ.ಕೃಷ್ಣರಿಗೆ ಇಂಥ ಯಾವ ಚಿಂತೆಗಳೂ ಇಲ್ಲ. ಸ್ಪೀಕರ್, ಉಪಮುಖ್ಯಮಂತ್ರಿ, ಕೇಂದ್ರ ಮಂತ್ರಿ, ರಾಜ್ಯಪಾಲ ಹುದ್ದೆಗಳನ್ನು ಅನುಭವಿಸಿದ್ದಾರೆ, ಜಗತ್ತನ್ನು ಬೇಸರಬರುವಷ್ಟು ಸುತ್ತಿದ್ದಾರೆ. ಈಗ ಅವರೇ ಹೇಳಿಕೊಂಡಂತೆ ವಿಶ್ರಾಂತಿ ಬೇಕಾಗಿದೆ. ವಿಶ್ರಾಂತ ಜೀವನ ಬುದ್ಧಿವಂತಿಕೆ ಮತ್ತು ಚಾಣಾಕ್ಷತೆ ಬಳಕೆಗೆ ಅಡ್ಡಿಯಾಗದು. ಆದ್ದರಿಂದಲೇ ಆಸೆಯಿಲ್ಲದ, ವೈರಾಗಿಯೂ ಅಲ್ಲದ ಆದರೆ ಚಲನಶೀಲ ಮನಸ್ಸಿನ ಕೃಷ್ಣರನ್ನು ಸೋನಿಯಾ ಮತ್ತು ರಾಹುಲ್ ಅವರು ಕರ್ನಾಟಕದ ಕಾಂಗ್ರೆಸ್ ಮನೆ ರಿಪೇರಿಗೆ ಕಳುಹಿಸಿದ್ದಾರೆ. ವಾಸಕ್ಕೆ ಮನೆ ಯೋಗ್ಯವಾದರೆ ಸೂಕ್ತರಾದವರನ್ನು ಅವರೇ ವಾಸಕ್ಕೆ ಬಿಡುತ್ತಾರೆ!

“ಹೀಗೊಂದು ಬಾನಾಮತಿ” : ಪ್ರೋತ್ಸಾಹಕ ಬಹುಮಾನ ಪಡೆದ ಕತೆ

– ಡಿ.ಎನ್. ಗೀತಾ

ನಾನು ಮನೆಗೆ ಹಿಂದಿರುಗುವಾಗ ಪೂರ್ತಿ ಕತ್ತಲಾಗಿತ್ತು. ಮಾಯಾನಗರಿಯ ಝಗಮಗಿಸುವ ದೀಪಗಳ ಬೆಳಕಿನಲ್ಲಿ ಹತ್ತಾರು ಸಿಗ್ನಲ್‌ಗಳನ್ನು ದಾಟಿ ಈಗಷ್ಟೇ ತಲೆಯೆತ್ತಿರುವ ನಮ್ಮ ಹೊಸ ಬಡಾವಣೆಗೆ ಬಂದಾಗ ತಾಯಿಯ ಮಡಿಲಿಗೆ ಬಂದಷ್ಟೇ ನೆಮ್ಮದಿಯೆನಿಸಿತು. ಸುಳಿಗಾಳಿಗೆ ಬಡಾವಣೆಯ ಸಾಲು ಮರಗಳು ಮೆಲ್ಲಗೆ ತಲೆದೂಗುತ್ತಿದ್ದರೆ, ನಾನೇ ಕಾಂಪೌಂಡಿನ ಮುಂದೆ ನೆಟ್ಟಿದ್ದ ಪಾರಿಜಾತದ ಪುಟ್ಟ ಸಸಿ ಈಗ ದೊಡ್ಡದಾಗಿ ಒಡಲ ತುಂಬಾ ಹೂವರಳಿಸಿಕೊಂಡು ನಿಂತಿತ್ತು.

ಕಾರನ್ನು ಪೋರ್ಟಿಕೋದಲ್ಲಿ ನಿಲ್ಲಿಸಿ, ಸುತ್ತ ತುಂಬಿದ್ದ ಪಾರಿಜಾತದ ಪರಿಮಳವನ್ನು ಎಳೆದುಕೊಳ್ಳುತ್ತಾ ಕಾಲಿಂಗ್ ಬೆಲ್ಲನ್ನು ಒತ್ತಿದ್ದೆ. ನೇತ್ರ ಬಾಗಿಲು ತೆರೆದಳು. ಎಂದಿನಂತೆ ಈ ದಿನ ಮುಖ ಕಳೆಕಳೆಯಾಗಿರದೆ ಮಂಕಾಗಿತ್ತು. ಏಕಿರಬಹುದೆಂದು ಯೋಚಿಸುತ್ತಲೇ ಒಳಬಂದೆ.

“ಅಲ್ಲಾ, ಎಷ್ಟು ಸಾರಿ ನಿಮ್ಮ ಮೊಬೈಲಿಗೆ ಕಾಲ್ ಮಾಡೋದು, ನೀವು ಒಂದು ಕಾಲನ್ನೂ ಅಟೆಂಡ್ ಮಾಡಲಿಲ್ಲ…..,” ಆಕ್ಷೇಪಿಸಿದಳು ನೇತ್ರ.

ನಿಜ…. ಈ ದಿನ ಲ್ಯಾಬ್‌ನಲ್ಲಿ ತೀರ ಜಾಸ್ತಿ ಎನಿಸುವಷ್ಟು ಕೆಲಸದ ಒತ್ತಡವಿತ್ತು. ಈ ಸಂಜೆಯೊಳಗೆ ರಿಪೋರ್ಟೊಂದನ್ನು ಒದಗಿಸಲೇಬೇಕಿತ್ತು. ಹಾಗಾಗಿ ಮೊಬೈಲನ್ನು ಸೈಲೆಂಟ್ ಮೋಡಿನಲ್ಲಿಟ್ಟು ನನ್ನ ಕಾರ್ಯದಲ್ಲಿ ತಲ್ಲೀನವಾಗಿದ್ದೆ.

“ಯಾಕಪ್ಪಾ, ಏನಂಥಾ ಅರ್ಜೆಂಟ್ ಇತ್ತು?…..”

“ಕೈ ಕಾಲು ಮುಖ ತೊಳೆದು ಬಂದು ಫ್ರೆಷ್ ಆಗುತ್ತಾ ಕೇಳಿದೆ”.

“ನಮ್ಮ ಚಿನ್ನುವಿನ ಸ್ಕೂಲ್‌ನಲ್ಲಿ ಬಾನಾಮತಿಯ ಕಾಟ ಶುರುವಾಗಿದೆಯಂತೆ ರೀ…”

ಬೆದರಿದವಳಂತೆ ಕಂಡಳು ನೇತ್ರ. ನನಗೆ ತಮಾಷೆಯೆನಿಸಿತು. ಬಾನಾಮತಿಯೇ? ಯಾವಯಾವುದೋ ಕುಗ್ರಾಮಗಳಲ್ಲಿ ಈ ಕಾಟವಿದೆಯೆಂದು ಪತ್ರಿಕೆಗಳಲ್ಲಿ ವರದಿ ಓದಿದ ನೆನಪು. ಅದೀಗ ದಿನಕ್ಕೊಂದು ಹೊಸ ಅವತಾರವೆತ್ತುವ ನಮ್ಮ ಮಾಯಾನಗರಿಗೂ ಕಾಲಿಟ್ಟಿತೇ?

“ಹೌದಾ, ಬಾನಾಮತಿಯಾ, ಅವಳು ಯಾವ ಭಾಷೆಯ ಹೀರೋಯಿನ್ ಅಂತೆ…,” ತಮಾಷೆ ಮಾಡಿದೆ.

“ನಿಮಗೆ ಯಾವಾಗಲೂ ತಮಾಷೇನೇ, ನಾನು ಹೇಳ್ತಿರೋದು ನಿಜವಾಗ್ಲೂ ಹೌದೂ ರೀ, ಪ್ರತಿ ಅಮಾವಾಸ್ಯೆ ಹುಣ್ಣಿಮೆಗೆ ಬಾನಾಮತಿ ಕಾಟ ಶುರುವಾಗತ್ತಂತೆ….”

“ಆ ಕಾಟಾನಾದ್ರೂ ಹೇಗಿರುತ್ತೆ ಅಂತ ಹೇಳು ಮಹರಾಯ್ತಿ….” ಮತ್ತೆ ಛೇಡಿಸಿದೆ.

“ಕ್ಲಾಸ್ ರೂಮ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತಂತೆ ರೀ, ಎಲ್ಲೆಲ್ಲಿಂದಲೋ ಬಟ್ಟೆಯ ಸುರುಳಿ ಬಂದು ಬೀಳುತ್ತಂತೆ. ಬಿದ್ದ ಸ್ವಲ್ಪ ಹೊತ್ತಿಗೆ ಅವೂ ಹೊತ್ತಿಕೊಂಡು ಉರಿಯುತ್ತಂತೆ, ಇವತ್ತು ಸ್ಕೂಲಿನ ಲೈಬ್ರವರಿಗೂ ಬೆಂಕಿ ಬಿತ್ತು ಅಂತ ಚಿನ್ನು ಹೇಳ್ತಿದ್ಳು, ತುಂಬಾ ಮಕ್ಳು ಹೆದ್ರಿಕೊಂಡು ಸ್ಕೂಲಿಗೂ ಹೋಗ್ತಿಲ್ಲವಂತೆ, ನಾಳೆಯಿಂದ ನಾನೂ ಚಿನ್ನುವನ್ನು ಖಂಡಿತಾ ಕಳಿಸಲ್ಲ…”

ನೇತ್ರ ಬಹಳ ಹೆದರಿದ್ದಾಳೆಂದು ನನಗೆ ಗೊತ್ತಾಯಿತು. ಅವಳು ಯಾವಾಗಲೂ ಹಾಗೆಯೇ. ಎಲ್ಲವನ್ನೂ ಬಹಳ ಬೇಗ ನಂಬುತ್ತಾಳೆ. ಮಗಳಿಗೆ ಸ್ಡಲ್ಪ ಮೈ ಬಿಸಿಯಾದರೂ ಸಾಕು ದೇವಾಲಯಗಳಿಗೆ ಹೋಗಿ ತಾಯತ ಕಟ್ಟಿಸಿಕೊಂಡು ಬರುತ್ತಾಳೆ. ಪ್ರತೀ ಹುಣ್ಣಿಮೆ ಅಮಾವಾಸ್ಯೆ ಬಂದರೆ ಯಾವುದೇ ಜರೂರಿ ಕೆಲಸವಿದ್ದರೂ ಹೊರಹೋಗುವುದಿಲ್ಲ.

“ಮಹರಾಯ್ತಿ, ನೀನೇನಾದ್ರೂ ವರ್ಕಿಂಗ್ ವುಮನ್ ಆಗಿದ್ರೆ ನಿನ್ನ ಈ ಹುಚ್ಚಾಟ ನೋಡೋಕಾಗ್ದೆ  ಡಿಸ್ಮಿಸ್ ಮಾಡಿಬಿಟ್ಟಿರೋರು, ಅಷ್ಟಕ್ಕೆ ಬಚಾವಾದೆ ಬಿಡು….”

ನಾನು ಆಗಾಗ ಛೇಡಿಸಿದರೆ ಗಂಭೀರಳಾಗುತ್ತಾಳಲ್ಲ ನೇತ್ರ.

’ಅಲ್ಲಾ ಕಾಲ ಬದಲಾಗಿದೆ ಅಂತೀವಿ, ಆದ್ರೆ ರಾತ್ರಿ-ಹಗಲು, ಬಿಸಿಲು-ಮಳೆ ಇವೆಲ್ಲಾ ನಿಜ ಅನ್ನೋದಾದ್ರೆ ಈ ದೆವ್ವ ಭೂತ ಇಂಥವೂ ನಿಜ…’ ಅವಳ ವಾದ ಮುಂದುವರೆಯುತ್ತದೆ ಆಗಾಗ.

“ಅವೆಲ್ಲಾ ಇರ್‍ಲಿ, ಈಗ ಚಿನ್ನು ಎಲ್ಲಿ ಕಾಣ್ತಿಲ್ಲ…” ಆರರ ಹರೆಯದ ಮಗಳು ತನ್ಮಯಿಗಾಗಿ ಸುತ್ತಲೂ ಕಣ್ಣಾಡಿಸಿದೆ.

“ಅವಳಿಗೆ ಮೈ ಸ್ವಲ್ಪ ಬಿಸಿಯಾಗಿತ್ತು, ಭಯದಿಂದ ಜ್ವರ ಬಂದಿರಬಹುದು, ಸಿರಪ್ ಕೊಟ್ಟು ಮಲಗ್ಸಿದೀನಿ…,” ನೇತ್ರಾಳಿಂದ ವಿವರಣೆ ಬಂದಿತ್ತು.

“ಸರಿ ಬಿಡು, ಎರಡು ದಿನ ಚಿನ್ನುವನ್ನು ಸ್ಕೂಲಿಗೆ ಕಳಿಸಬೇಡ, ನಾಳೆ ನಾನೇ ಹೋಗಿ ಅಲ್ಲಿ ಏನಾಗಿದೆ ಅಂತ ನೋಡಿ ಬರ್‍ತೀನಿ…” ಎಂದೆ.

“ಪ್ಲೀಸ್, ಹಾಗೆ ಮಾತ್ರಾ ಮಾಡ್ಬೇಡಿ, ನಿಮ್ಗೇನಾದ್ರೂ ಅಪಾಯ ಆದ್ರೆ…. ಬೇಡ ಬೇಡ ನೀವೂ ಹೋಗ್ಬೇಡಿ, ಚಿನ್ನುವನ್ನು ಬೇರೆ ಸ್ಕೂಲಿಗೆ ಹಾಕೋಣ…”
ಉದ್ವೇಗದಿಂದ ನೇತ್ರ ನುಡಿದಾಗ ಈಗ ಮೌನವಾಗಿರುವುದೇ ಒಳಿತೆನಿಸಿತು.

ಆ ರಾತ್ರಿ ನನಗೆ ಬಹಳ ಹೊತ್ತು ನಿದ್ರೆ ಬರಲಿಲ್ಲ. ಈ ಆಧುನಿಕ ಕಾಲದಲ್ಲೂ ಬಾನಾಮತಿಯಂತಹ ಪದಕ್ಕೆ ಅರ್ಥವಿದೆಯೇ? ತಮ್ಮ ಶತೃಗಳನ್ನು ನಿರ್ಮೂಲನ ಮಾಡಲು, ಅಥವಾ ಅವರ ಬಲ ಕುಗ್ಗಿಸಲು ಕ್ಷುದ್ರ ಶಕ್ತಿಗಳ ಸಹಾಯದಿಂದ ಛಾವಣಿಯ ಮೇಲೆ ಕಲ್ಲು ಬೀಳಿಸುವುದು, ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಸುವುದು, ಇಂಥವೆಲ್ಲಾ ಈ ಬಾನಾಮತಿಯ ಪ್ರಯೋಗದಲ್ಲಿ ನಡೆಯುತ್ತವೆ ಎಂಬುದನ್ನು ನಾನೂ ಯಾವಾಗಲೋ ಓದಿದ್ದೆ. ಆದರೆ ಅದು ವಾಸ್ತವದಲ್ಲಿ ಎಷ್ಟು ನಿಜವೋ ಗೊತ್ತಿಲ್ಲವಲ್ಲ.

ಹೌದು…. ಇಂಥದ್ದೇ ಒಂದು ಪ್ರಕರಣ ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಡೆದಿದ್ದ ನೆನಪು. ಆಗ ಅಪ್ಪ ಕೊಡಗಿನ ಗ್ರಾಮವೊಂದರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಮಳೆಗಾಲ ಚಳಿಗಾಲವೆನ್ನದೇ ಸದಾ ಹಸಿರಿನಲ್ಲಿ ಕಂಗೊಳಿಸುವ ಆ ಗ್ರಾಮ ನಮಗೆ ಖುಷಿ ಕೊಟ್ಟಿದ್ದಂತೂ ಹೌದು. ಅಪ್ಪನೊಂದಿಗೆ ತುಂಬಿ ಹರಿಯುವ ಪ್ರವಾಹವನ್ನು ದೋಣಿಯಲ್ಲಿ ದಾಟಿ ತಮ್ಮ ಆನಂದನೊಂದಿಗೆ ಶಾಲೆಗೆ ಹೋಗುತ್ತಿದ್ದ ನೆನಪಂತೂ ಬಹು ಸೊಗಸು. ಒಂದು ಚಳಿಗಾಲದ ದಿನಗಳಲ್ಲಿ ಶಾಲೆಯಲ್ಲಿ ಕೊಳ್ಳಿದೆವ್ವವಿದೆಯೆಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಶನಿವಾರ ಅರ್ಧ ದಿನ ನಡೆಯುವ ತರಗತಿಗೆ ನಾವೆಲ್ಲಾ ಬೆಳಿಗ್ಗೆ ಏಳಕ್ಕೆಲ್ಲಾ ಶಾಲೆಯಲ್ಲಿರಬೇಕಿತ್ತು. ಪೂರ್ತಿ ಮಂಜು ಆವರಿಸಿ ಶಾಲೆ ಪೂರ್ತಿ ಮಂಜಿನ ಬೆಟ್ಟವೇನೋ ಎಂಬ ಭ್ರಮೆ ಉಂಟಾಗುತ್ತಿತ್ತು. ಅಂಥಹ ಒಂದು ಮುಂಜಾನೆ ಶಾಲೆಯ ಮುಂದೆ ಹತ್ತಾರು ಕೊಳ್ಳಿಗಳು ಥಕಥಕನೆ ಕುಣಿದಿದ್ದನ್ನು ನೋಡಿ ನಾನು ಅಪ್ಪನನ್ನು ಭಯದಿಂದ ಅಪ್ಪಿಕೊಂಡಿದ್ದೆ. ಸ್ವಲ್ಪ ದಿನ ತರಗತಿಗಳೂ ನಿಂತು ಹೋದವು.

ಶಾಲೆಗೂ ಬೀಗ ಹಾಕಲಾಗಿತ್ತು. ಕೊನೆಗೆ ಗ್ರಾಮದ ಚುರುಕು ಯುವಕನೊಬ್ಬ ಆ ಕೊಳ್ಳಿದೆವ್ವದ ರಹಸ್ಯವನ್ನು ಬಯಲು ಮಾಡಿದ್ದ. ಶಾಲೆಯ ಪಕ್ಕದಲ್ಲಿ ಒಂದು ಕಾಫಿ ತೋಟವಿತ್ತು. ಅದರ ಮಾಲಿಕ ಸಾಕಷ್ಟು ದೊಡ್ಡ ಕುಳ. ಆತನಿಗೆ ಸರ್ಕಾರಿ ಶಾಲೆಯಿದ್ದ ಭೂಮಿಯ ಮೇಲೆ ಮೊದಲಿನಿಂದ ಕಣ್ಣಿತ್ತು. ಅದಕ್ಕೆ ಆಳುಗಳಿಂದ ಕೊಳ್ಳಿದೆವ್ವದ ನಾಟಕವಾಡಿಸಿದ್ದ. ಹಾಗೆ ಮಾಡಿದರೆ ಶಾಲೆ ಪಾಳು ಬೀಳುತ್ತದೆ. ಮತ್ತೆಲ್ಲೋ ಶಾಲೆ ಆರಂಭವಾದರೆ ಜನ ಆ ನೆಲವನ್ನೂ ಮರೆಯುತ್ತಾರೆ. ಆಗ ನಿಧಾನವಾಗಿ ತನ್ನ ತೋಟವನ್ನೂ ಅಲ್ಲಿಗೂ ವಿಸ್ತರಿಸಬಹುದು. ಇದು ಆತನ ಹಂಚಿಕೆ. ಊರಿನವರ ಮುಂದೆ ಆತನ ಹಂಚಿಕೆ ಬಯಲಾಗಿ ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಆತ. ಕೊಳ್ಳಿದೆವ್ವದ ರಹಸ್ಯವನ್ನು ಬೇಧಿಸಿದ ಯುವಕನನ್ನು ಎತ್ತಿನ ಗಾಡಿಯಲ್ಲಿ ಕುಳ್ಳಿರಿಸಿ ಊರ ತುಂಬಾ ಮೆರವಣಿಗೆ ಮಾಡಿದ ಘಟನೆ ಇನ್ನೂ ನೆನಪಿನಲ್ಲಿ ಹಸಿರಾಗಿದೆ. ಆ ರಹಸ್ಯ ಒಂದು ವೇಳೆ ಬಯಲಾಗಿರದಿದ್ದರೆ ಶಾಲೆಯಿರುವ ಜಾಗದಲ್ಲಿ ಇನ್ನೊಂದು ಕಾಫಿ ತೋಟ ನಿರ್ಮಾಣವಾಗಿರುತ್ತಿತ್ತಲ್ಲ.

ನಡೆದ ಘಟನೆಗಳನ್ನು ಮೆಲುಕು ಹಾಕುತ್ತಿದ್ದ ಮನಸ್ಸು ಮತ್ತೆ ಬಾನಾಮತಿಯತ್ತ ಹೊರಳಿತು. ಈಗ ಚಿನ್ನುವಿನ ಶಾಲೆಯಲ್ಲಿ ಬಾನಾಮತಿಯ ಕಾಟ ನಿಜವಿರಬಹುದು ಎನ್ನುವುದೇ ಅನುಮಾನ. ಯಾವುದೋ ಸ್ವಾರ್ಥ ಸಾಧನೆಗಾಗಿ ಯಾರೋ ನಡೆಸುತ್ತಿರುವ ಆಟವೇ ಇದಾಗಿರಬಹುದೇ?

‘ಮಕ್ಕಳೇ, ಈ ದೆವ್ವ ಭೂತ ಇಂಥಹ ಸಂಗತಿಗಳನ್ನೆಲ್ಲಾ ನಂಬಲೇಬೇಡಿ, ನಿಮ್ಮ ಆತ್ಮವಿಶ್ವಾಸ, ಸತತ ಪ್ರಯತ್ನ ಇವಿಷ್ಟರಲ್ಲಿ ನಂಬಿಕೆ ಇಡಿ, ಆಗ ಎಂಥ ದೆವ್ವವೂ ಓಡಿ ಹೋಗುತ್ತದೆ…..’ ಎಂದು ಆಗಾಗ ಅಪ್ಪ ಶಾಲೆಯಲ್ಲಿ ಬೋಧಿಸುತ್ತಿದ್ದರಲ್ಲ.

ಈ ಘಟನೆ ನಡೆದು ಬಹಳ ವರ್ಷಗಳೇ ಕಳೆದಿವೆ. ಈಗ ಅಪ್ಪನೂ ಬದುಕಿಲ್ಲ. ಆದರೆ ಅವರ ಮಾತುಗಳು ಕಿವಿಯಲ್ಲಿ ಗುಂಯ್‌ಗುಟ್ಟುತ್ತವೆ. ಅಪ್ಪನಿಂದ ಪ್ರೇರಣೆಯಾಗಿ ನಾನೂ ಎಲ್ಲರಂತೆ ಡಾಕ್ಟರ್, ಇಂಜೀನಿಯರ್ ಎಂಬ ಭ್ರಮೆಗೆ ಬೀಳದೆ ವಿಧಿ ವಿಜ್ಞಾನದ ತರಬೇತಿ ಮುಗಿಸಿದ್ದೆ. ಕೂದಲು, ಉಗುರೂ ಕೂಡಾ ಬಿಡದೆ ಪರೀಕ್ಷೆ ಮಾಡಿ ಅಪರಾಧಿಗಳನ್ನು ಕಂಡು ಹಿಡಿಯುವ ಈ ವಿದ್ಯೆ ನಾನು ಕಲಿತ ಕಾಲಕ್ಕೆ ಸಾಕಷ್ಟು ಅಪರಿಚಿವಾಗಿಯೇ ಇತ್ತು. ನನ್ನ ಭಿನ್ನರುಚಿಯನ್ನು ಗಮನಿಸಿದ ಅಪ್ಪ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅಮ್ಮನೂ ಅಪ್ಪನಂತೆಯೇ. ನನ್ನ ಎಲ್ಲಾ ಪ್ರಯತ್ನಕ್ಕೂ ಬೆಂಬಲವಾಗಿ ನಿಂತಳು. ನಾನು ವಿಧಿವಿಜ್ಞಾನದಲ್ಲಿ ಮುಖ್ಯಸ್ಥನಾಗಿ ನೇಮಕವಾಗುವ ವೇಳೆಗೆ ಅಪ್ಪ ಬದುಕಿರದಿದ್ದರೂ ನೋಡುವುದಕ್ಕೆ ಅಮ್ಮನಿರುವುದು ಸ್ಡಲ್ಪ ಸಮಾಧಾನ ತಂದಿತ್ತು. ಈಗಲೂ ಅಮ್ಮನಿಗೆ ನನ್ನ ಪ್ರಯೋಗಗಳಲ್ಲಿ ನಡೆಯುವ ಆಸಕ್ತಿದಾಯಕ ವಿಷಯಗಳನ್ನು ಕೇಳಲು ಬಲು ಆಸಕ್ತಿ. ಸದ್ಯಕ್ಕೆ ಅವಳೀಗ ಇಲ್ಲಿಲ್ಲ. ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿರುವ ತಮ್ಮ ಆನಂದನ ಮನೆಗೆ ಹೋಗಿದ್ದಾಳೆ.

ಬಹಳಷ್ಟು ಹೊತ್ತು ಯೋಚಿಸುತ್ತಾ ಮಲಗಿದ್ದೆ. ಏನಾದರಾಗಲಿ ನಾಳೆ ಚಿನ್ನುವಿನ ಶಾಲೆಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಬರಬೇಕೆಂದು ನಿರ್ಧರಿಸಿದೆ.

ಮರುದಿನ ಎಂದಿನಂತೆಯೇ ಹೊರಟೆ. ಚಿನ್ನುವಿನ ಜ್ವರ ಕಡಿಮೆಯಾಗಿತ್ತು. ನೇತ್ರಾಳಿಗೆ ನಾನು ಶಾಲೆಗೆ ಹೋಗುತ್ತಿರುವ ವಿಷಯ ಗೊತ್ತಾಗದಂತೆ ಎಚ್ಚರಿಕೆ ವಹಿಸಿದೆ.

“ಅಪ್ಪಿ ತಪ್ಪಿ ಚಿನ್ನುವಿನ ಸ್ಕೂಲಿನ ಹತ್ತಿರ ಹೋಗಿಬಿಡ್ಬೇಡಿ, ಹೇಳಿದ್ದೀನಿ…”

ಅವಳ ಎಚ್ಚರಿಕೆಗೆ ನಸುನಗುತ್ತಾ ತಲೆಯಲುಗಿಸಿದೆ. ಆದರೆ ನನ್ನ ಕಾರು ಸ್ವಲ್ಪ ದೂರ ಸಾಗಿ ನಂತರ ಚಿನ್ನುವಿನ ಶಾಲೆಯತ್ತ ತಿರುಗಿತು.

ನಾಲ್ಕಂಥಸ್ತಿನ ಭವ್ಯವಾದ ಶಾಲೆಯ ಕಟ್ಟಡ ನನ್ನನ್ನು ಸ್ವಾಗತಿಸಿತು. ಕಾರನ್ನು ಪಾರ್ಕ್ ಮಾಡಿ ಮುಖ್ಯೋಪಾಧ್ಯಾಯಿನಿಯನ್ನು ಹುಡುಕಿಕೊಂಡು ಹೊರಟೆ. ಆಕೆ ತನ್ನ ಕ್ಯಾಬಿನ್‌ನಲ್ಲಿ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು. ಸುಮಾರು ಐವತ್ತು ವರ್ಷದವರಾದ ಆಕೆ ಗೌರವವಾದ ಚಹರೆಯನ್ನು ಹೊಂದಿದ್ದರು. ಕಂಗಳಿಗೆ ದಪ್ಪ ಗಾಜಿನ ಕನ್ನಡಕವಿತ್ತು.

ನನ್ನ ಪರಿಚಯವಿದ್ದುದರಿಂದ ಒಣನಗೆಯನ್ನು ಬೀರಿ ಕುಳಿತುಕೊಳ್ಳಲು ಎದುರಿದ್ದ ಕುರ್ಚಿಯನ್ನು ತೋರಿದರು. ನಾನೇ ಮೆಲ್ಲನೆ ಬಾನಾಮತಿಯ ಬಗ್ಗೆ ಪ್ರಸ್ಥಾಪಿಸಿದೆ.

“ಹೌದು ಸರ್, ನಮ್ಗೂ ಪೇರೆಂಟ್ಸಿಗೆ ಉತ್ತರಿಸಿ ಸಾಕಾಗಿದೆ, ಪಾಪ ಮಕ್ಳನ್ನು ಸ್ಕೂಲಿಗೆ ಕಳಿಸೋಕೆ ಎಲ್ರೂ ಹೆದರ್ತಿದ್ದಾರೆ, ಎಲ್ಲೆಲ್ಲಿಂದಲೋ ಬಟ್ಟೆಗಳ ಸುರುಳಿಗಳು ಬಂದು ಬೀಳುತ್ವೆ, ಇದ್ದಕ್ಕಿದ್ದಂತೆ ಕ್ಲಾಸ್ ರೂಮ್ಸ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತೆ, ನಿನ್ನೆ ನೋಡಿ, ನಮ್ಮ ಲೈಬ್ರವರಿಗೂ ಬೆಂಕಿ ಬಿದ್ದಿತ್ತು, ಹೇಗೋ ಆಗುವ ಅನಾಹುತವನ್ನು ತಡೆದಿದ್ದೇವೆ, ಇದು ಹೀಗೆಯೇ ಮುಂದುವರೆದ್ರೆ ನಾವು ಸ್ಕೂಲನ್ನು ಮುಚ್ಚಬೇಕಾಗುತ್ತೆ, ಸುಮಾರು 1200 ಸ್ಟೂಡೆಂಟ್ಸ್ ಇಲ್ಲಿದ್ದಾರೆ, 60 ಜನ ಟೀಚರ್ಸ್ ಇದ್ದಾರೆ, ಇವರೆಲ್ಲರ ಭವಿಷ್ಯವೇನು ಸರ್, ಮ್ಯಾನೇಜ್ಮೆಂಟಿನವರೂ ತುಂಬ ಚಿಂತೆ ಮಾಡ್ತಿದ್ದಾರೆ…..”

ಆಕೆ ಪ್ರಾಮಾಣಿಕವಾಗಿ ತನ್ನ ಅಳಲನ್ನು ತೋಡಿಕೊಂಡರು.

“ಮೇಡಂ, ನಿಮ್ಗೆ ಗೊತ್ತಿರ್ಬೋದು, ನಾನು ಪೋರೆನ್ಸಿಕ್ ತಜ್ಞನಾಗಿದ್ದೇನೆ , ಬಾನಾಮತಿಯಂತಹ ಭೂತ ಚೇಷ್ಟೆಗಳನ್ನು ನನ್ನ ಉದ್ಯೋಗ ಖಂಡಿತಾ ಒಪ್ಪಲ್ಲ, ಇದನ್ನು ಯಾರೋ, ಯಾವುದೋ ಸ್ವಾರ್ಥಕ್ಕೆ ಮಾಡುತ್ತಿದ್ದಾರೆಂದು ಖಂಡಿತವಾಗಿ ಹೇಳಬಲ್ಲೆ, ನೀವು ಒಪ್ಪೋದಾದ್ರೆ ಇದರ ಬಗ್ಗೆ ತನಿಖೆ ಮಾಡ್ಬೇಕು ಅಂತ ಅಂದುಕೊಂಡಿದ್ದೀನಿ….”
ನನ್ನ ಮಾತುಗಳಿಂದ ಆಕೆಗೆ ಸಂತೋಷವಾಗಿದೆಯೆಂದು ಮುಖಭಾವವೇ ಹೇಳಿತು.
“ಥ್ಯಾಂಕ್ಯೂ ಮಿ……”

ನನ್ನ ಹೆಸರಿಗಾಗಿ ಆಕೆ ತಡವರಿಸಿದಾಗ ಅಶೋಕ್ ಎಂದೆ.

“ಥ್ಯಾಂಕ್ಯೂ ಮಿ.ಅಶೋಕ್, ನಿಮ್ಮ ಈ ಮನೋಭಾವ ನಂಗೆ ಮೆಚ್ಚುಗೆಯಾಯ್ತು, ನೀವು ತನಿಖೆ ಮಾಡೋದಾದ್ರೆ ನಂದೇನೂ ಅಭ್ಯಂತರ ಇಲ್ಲ, ಯಾವ್ದೇ ಸಹಕಾರ ಬೇಕಾದ್ರೂ ಕೊಡ್ತೀನಿ..” ಎಂದರಾಕೆ.

“ಮೇಡಂ, ಮೊದಲನೆಯದಾಗಿ ಈ ತನಿಖೆ ಪೂರ್ತಿ ರಹಸ್ಯವಾಗಿರ್‍ಲಿ, ಯಾಕೇಂದ್ರೆ ಅಪರಾಧಿಗಳು ವಿಷಯ ತಿಳಿದ್ರೆ ತಪ್ಪಿಸಿಕೊಳ್ಳುವ ಚಾನ್ಸ್ ಇರುತ್ತೆ…..”

ನನ್ನ ಮಾತಿಗೆ ಆಕೆಯೂ ಒಪ್ಪಿದರು. ನನ್ನಿಚ್ಛೆಯಂತೆ ಅವರು ಶಾಲೆಯ ಅಧ್ಯಾಪಕರ ವಿವರಗಳನ್ನು ಲ್ಯಾಪ್‌ಟಾಪ್‌ನಲ್ಲಿ ತೋರಿಸುತ್ತಾ ಹೋದರು. ಆ ಶಾಲೆ ಬಾಲಕಿಯರ ಶಾಲೆಯಾಗಿತ್ತು. ನರ್ಸರಿಯಿಂದ ಹತ್ತನೇ ತರಗತಿಯವರೆಗೂ ತರಗತಿಗಳು ವಿಸ್ತರಿಸಿದ್ದವು. ಬಹಳ ಉಪಾಧ್ಯಾಯಿನಿಯರಿದ್ದರೂ ಉಪಾಧ್ಯಾಯರೂ ವಿರಳ ಸಂಖ್ಯೆಯಲ್ಲಿದ್ದರು. ಅವರ ಪ್ಯೆಕಿ ಒಬ್ಬ ಉಪಾಧ್ಯಾಯರ ಭಾವಚಿತ್ರ ನನ್ನನ್ನು ಆಕರ್ಷಿಸಿತು. ಉದ್ದಕೂದಲನ್ನು ಹುಡುಗಿಯರಂತೆ ಪೋನಿಟೈಲ್ ಕಟ್ಟಿ, ಒಂದು ಕಿವಿಗೆ ಟಿಕ್ಕಿ ಹಾಕಿಕೊಂಡಿದ್ದ ಆತ ಕುರುಚಲು ಗಡ್ಡವನ್ನೂ ಬಿಟ್ಟು ವಿಲಕ್ಷಣವಾಗಿ ಕಾಣುತ್ತಿದ್ದ.

“ಯಾರೀತ?….” ಆಸಕ್ತಿಯಿಂದ ಕೇಳಿದೆ.

“ಇವ್ರು ಡ್ಯಾನ್ಸ್ ಮಾಸ್ಟರ್ ರಾಕೇಶ್ ಅಂತ, ಇತ್ತೀಚೆಗೆ ಸೇರಿದ್ದಾರೆ, ಈ ವರ್ಷದಿಂದ ನಮ್ಮ ಸ್ಕೂಲಿನಲ್ಲೂ ಕರಾಟೆ, ಡ್ಯಾನ್ಸ್ ಇತ್ಯಾದಿ ವಿಷಯಗಳನ್ನು ಸೇರಿಸಿದ್ದೇವೆ, ಅದಕ್ಕೆ ಪ್ರತ್ಯೇಕ ಫೀ ಇರುತ್ತೆ, ಸಂಜೆ ರೆಗ್ಯುಲರ್ ಕ್ಲಾಸಸ್ ಮಗಿದ್ಮೇಲೆ ಆ ಕ್ಲಾಸಸ್ ಇರುತ್ತೆ…..” ಆಕೆ ವಿವರಿಸಿದರು.

ನನಗೆ ಆತನ ಮುಖಚಹರೆ ಮೆದುಳಿನಲ್ಲಿ ಅಚ್ಚೊತ್ತಿತು. ಅವನ ತೀಕ್ಷ್ಣ ಕಣ್ಣುಗಳು ಒಂದು ಅಸಹಜ ಭಾವನೆಯನ್ನು ನನ್ನಲ್ಲಿ ಹುಟ್ಟಿಸಿತು. ದಿನವೂ ಅಪರಾಧಿಗಳ ಸುಳಿವಿಗಾಗಿ ಸೂಕ್ಷ್ಮ ವಸ್ತುಗಳನ್ನು ಪರೀಕ್ಷಿಸುವ ನನಗೆ ಆತ ಅನುಮಾನ ಹುಟ್ಟಿಸತೊಡಗಿದ್ದ.

“ಮೇಡಂ, ಥ್ಯಾಂಕ್ಯೂ… ಈಗ ಇಷ್ಟು ಸಾಕು ಅನ್ಸುತ್ತೆ, ಆ ಡ್ಯಾನ್ಸ್ ಮಾಸ್ಟರ್ ಎಷ್ಟು ಹೊತ್ತಿಗೆ ಸಿಕ್ತಾರೆ…”

“ಸಂಜೆ ನಾಲ್ಕೂವರೆಗೆ ಬೇಸ್ಮೆಂಟ್ ರೂಮ್ಸ್‌ನಲ್ಲಿರ್‍ಟಾರೆ…” ಆಕೆ ವಿವರಿಸಿದರು.

“ಸರಿ ಮೇಡಂ, ಸಂಜೆ ಬಂದು ಅವರನ್ನು ಭೇಟಿ ಮಾಡ್ತೀನಿ… ಎಂದ ನನಗೆ ಆಕೆ ಧನ್ಯವಾದ ಹೇಳಿದರು.”

ಅವರಿಂದ ಬೀಳ್ಕೊಂಡು ಹೊರಬಂದೆ. ಎಲ್ಲೆಂದರಲ್ಲಿ ಅರೆಬರೆ ಸುಟ, ಸುತ್ತಿದ್ದ ಬಟ್ಟೆಯ ತುಂಡುಗಳು ಬಿದ್ದಿದ್ದವು. ಕಾರಿನ ಹತ್ತಿರ ನಡೆಯುವಾಗ ಕುಂಕುಮ ಹಚ್ಚಿದ್ದ ಲಿಂಬೆಹಣ್ಣಿನ ಎರಡು ಹೋಳುಗಳು, ಒಂದಷ್ಟು ಅರಿಷಿಣ ಹೂವುಗಳು ನೆಲದಲ್ಲಿ ಕಂಡವು. ಮೆಲ್ಲನೆ ಬಾಗಿ ಕುಳಿತೆ. ನನ್ನ ಸೂಕ್ಷ್ಮ ದೃಷ್ಟಿಗೆ ಲಿಂಬೆಹಣ್ಣಿಗೆ ಒಂದೆರಡು ತಲೆಗೂದಲುಗಳು ಅಂಟಿದ್ದು ಕಂಡಿತು. ಮತ್ತೆ ತಡಮಾಡದೆ ಆ ಕೂದಲುಗಳನ್ನು ಹೊರತೆಗೆದು ನನ್ನ ಕರವಸ್ತ್ರದಿಂದ ಸುತ್ತಿ ಜೇಬಿಗಿಳಿಸಿದೆ. ತರಗತಿಗಳು ನಡೆಯುತ್ತಿದ್ದುದರಿಂದ ಅಲ್ಲಲ್ಲಿ ಅಧ್ಯಾಪಕರ ಧ್ವನಿಗಳು ಕೇಳಿ ಬರುತ್ತಿದ್ದವು. ಸಮಯ ನೋಡಿದೆ. ಆಗಲೇ ಹನ್ನೊಂದು ಘಂಟೆಯಾಗಿತ್ತು. ಅಲ್ಲಿಂದ ನೇರವಾಗಿ ನಮ್ಮ ಲ್ಯಾಬಿನತ್ತ ಹೊರಟೆ. ಮತ್ತೆ ನನ್ನ ಕೆಲಸಗಳಲ್ಲಿ ಮುಳುಗಿ ಹೋದೆ. ಆದರೆ ಸಂಜೆ ಆ ಡ್ಯಾನ್ಸ್ ಮಾಸ್ಟರನ್ನು ಭೇಟಿಯಾಗುವುದನ್ನು ನಾನು ಮರೆಯುವಂತಿರಲಿಲ್ಲ. ಲ್ಯಾಬಿಗೆ ಊಟ ತರಿಸಿಕೊಂಡು ಉಂಡ ಶಾಸ್ತ್ರಮಾಡಿ, ಕೆಲವು ರಿಪೋರ್ಟ್ಸ್‌ಗಳನ್ನು ನೋಡಿ, ಕೆಲಸ ಮಾಡುವ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನಿತ್ತು ಹೊರಬಿದ್ದೆ. ಚಿನ್ನುವಿನ ಶಾಲೆ ತಲುಪಿದಾಗ ಸರಿಯಾಗಿ ಸಮಯ ನಾಲ್ಕೂವರೆಯಾಗಿತ್ತು.

ತರಗತಿಗಳು ಮುಗಿದಿದ್ದರಿಂದ ಶಾಲಾ ಆವರಣ ನಿಶ್ಯಬ್ದವಾಗಿತ್ತು. ಮೊದಲ ಹಂತದಿಂದ ಕೆಳಗಿಳಿದರೆ ಬೇಸ್ಮೆಂಟ್ ರೂಮ್ಸ್ ಸಿಗುತ್ತದೆ. ಅಲ್ಲೂ ನಾಲ್ಕಾರು ರೂಮುಗಳಿವೆ. ಒಂದು ರೂಮಿನಲ್ಲಿ ನಾನು ಲ್ಯಾಪ್ಟಾಪಿನಲ್ಲಿ ಕಂಡ ಆ ವಿಲಕ್ಷಣ ವ್ಯಕ್ತಿ ಪ್ಯಾಂಟು ಜುಬ್ಬಾ ಧರಿಸಿ ಹುಡುಗಿಯರಿಗೆ ಡ್ಯಾನ್ಸ್ ಹೇಳಿ ಕೊಡುತ್ತಿದ್ದ.

ನಾನೇ ಹೋಗಿ ಆತನನ್ನು ಮಾತನಾಡಿಸಿದೆ. ನನ್ನ ಮಗಳು ತನ್ಮಯಿಯನ್ನು ಡ್ಯಾನ್ಸಿಗೆ ಸೇರಿಸುವ ಬಗ್ಗೆ ಸುಳ್ಳು ಸುಳ್ಳೇ ಪ್ರಸ್ಥಾಪ ಮಾಡಿದೆ.

“ಅದಕ್ಕೇನು ಸರ್, ಧಾರಾಳವಾಗಿ ಕಳಿಸಿಕೊಡಿ, ನನ್ನದೊಂದು ಡ್ಯಾನ್ಸ್ ಟ್ಯುಟೇರಿಯಲ್ ಕೂಡಾ ಇದೆ, ಅಲ್ಲಿಗೆ ಭಾನುವಾರ ಬೇಕಿದ್ರೆ ಕಳಿಸಿ….” ಆತ ಸ್ನೇಹದಿಂದಲೇ ಮಾತನಾಡಿದ.

ನಾನು ಮೆಲ್ಲನೆ ಬಾನಾಮತಿಯ ವಿಷಯವನ್ನು ಪ್ರಸ್ಥಾಪಿಸಿದೆ. ಆತ ಬೆದರಿದಂತೆ ಕಂಡ.

“ಸರ್, ನಿಜ ಹೇಳ್ತಿದೀನಿ, ಈ ಬಾನಾಮತಿ ಇರೋದು ನಿಜ, ನಮ್ಮ ಹಳ್ಳೀಲೇ ನಾನು ಇಂಥವನ್ನೆಲ್ಲಾ ನೋಡಿದ್ದೀನಿ, ಏನಾಗುತ್ತೋ ಏನೋ, ಪ್ರತೀ ಹುಣ್ಣಿಮೆ, ಅಮಾವಾಸ್ಯೆ ಬಂದ್ರೆ ಭಯವಾಗುತ್ತೆ…..” ಎಂದ ಆತನ ಮಾತಿಗೆ ತಲೆಯಾಡಿಸಿದೆ.

ಈಗ ಹುಡುಗಿಯರಿಗಾಗಿ ಹಾಡಿನ ಕ್ಯಾಸೆಟ್ ಒಂದನ್ನು ಹಾಕಿ ಬಂದ. ನಮ್ಮ ಚಿನ್ನುವಿನ ವಯಸ್ಸಿನಿಂದ ಹದಿವಯಸ್ಸಿನ ಹುಡುಗಿಯವರೆಗೂ ಎಲ್ಲಾ ವಯೋಮಾನದ ಹುಡುಗಿಯರೂ ಅಲ್ಲಿದ್ದರು. ಸುಮಾರು 15 ಜನವಿರಬಹುದು. ಎಲ್ಲರೂ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕತೊಡಗಿದ್ದರು.

ಈಗ ಆತ ರಿಲ್ಯಾಕ್ಸ್ ಆದವನಂತೆ ಜುಬ್ಬಾದ ಪಾಕೇಟಿನಿಂದ ಪುಟ್ಟ ಬಾಚಣಿಗೆಯೊಂದನ್ನು ಹೊರತೆಗೆದು, ಪೋನಿಟೈಲ್ ಬಿಚ್ಚಿ ಭುಜದವರೆಗೆ ಇಳಿಬಿದ್ದ ತನ್ನ ನೀಳ ಕೂದಲನ್ನು ಬಾಚಿಕೊಂಡ. ಅಷ್ಟರಲ್ಲಿ ಟೇಬಲ್ ಮೇಲಿಟ್ಟಿದ್ದ ಆತನ ಮೊಬೈಲ್ ರಿಂಗಾಯಿತು. ಆತ ಕೈಲಿದ್ದ ಬಾಚಣಿಗೆಯನ್ನು ಅಲ್ಲಿಯೇ ಇಟ್ಟು ಮೊಬೈಲ್ ಕೈಗೆತ್ತಿಕೊಂಡ. ನನ್ನ ಎದೆ ಢವಗುಟ್ಟಿತು. ಆತನ ಬಾಚಣಿಗೆಯಲ್ಲಿ ನಾಲ್ಕಾರು ನೀಳ ಕೂದಲುಗಳು ಸಿಕ್ಕಿಕೊಂಡಿದ್ದವು. ಆತನ ಮೇಲಿನ ಅನುಮಾನ ಬಗೆಹರಿಯಬೇಕೆಂದರೆ ನನಗೆ ಆ ಕೂದಲುಗಳು ಬೇಕಿತ್ತು. ಆಗಷ್ಟೇ ಕೆಂಪು ಲಿಂಬೆಹಣ್ಣಿನ ಮೇಲೆ ಸಿಕ್ಕಿರುವ ತಲೆಗೂದಲಿನೊಂದಿಗೆ ಇದನ್ನೂ ತುಲನೆ ಮಾಡಲು ಸಾದ್ಯ. ಆತ ಸಿಗ್ನಲ್ ಸಿಗಲಿಲ್ಲವೆಂದು ರೂಮಿನ ಹೊರಗೆ ಹೋಗಿದ್ದು ನನಗೆ ಅನುಕೂಲವೇ ಆಯಿತು. ಮೆಲ್ಲನೆ ಆ ಬಾಚಣಿಗೆಯಿಂದ ನಾಲ್ಕಾರು ತಲೆಗೂದಲುಗಳನ್ನು ಬಿಡಿಸಿ ಕರವಸ್ತ್ರದಿಂದ ಸುತ್ತಿ ಜೇಬಿಗಿಳಿಸಿ ನಿರಾಳವಾಗಿ ಹೊರ ಬಂದೆ. ಬೆಳಿಗ್ಗೆ ಸಿಕ್ಕಿದ್ದ ತಲೆಗೂದಲುಗಳನ್ನು ಜೋಪಾನವಾಗಿ ಲ್ಯಾಬಿನಲ್ಲಿರಿಸಿ ಬಂದಿದ್ದರಿಂದ ಆತಂಕವಿರಲಿಲ್ಲ. ಬಾಗಿಲಲ್ಲಿ ನಿಂತಿದ್ದ ಡ್ಯಾನ್ಸ್ ಮಾಸ್ಟರ್‌ಗೆ ಧನ್ಯವಾದ ಹೇಳಿ ಹೊರಬಿದ್ದೆ.

ಪರೀಕ್ಷೆಗಳು ಪೂರ್ತಿ ಮುಗಿದು ರಿಪೋಟರ್ ಹೊರಬೀಳುವ ಹೊತ್ತಿಗೆ ಮತ್ತೆರೆಡು ದಿನಗಳು ಕಳೆದಿದ್ದವು. ನಾನು ಈ ಬಗ್ಗೆ ತನಿಖೆ ಮಾಡುತ್ತಿರುವುದು ನೇತ್ರಾಳ ಗಮನಕ್ಕೆ ಬರಲೇ ಇಲ್ಲ. ಒಂದು ವೇಳೆ ನನ್ನ ಅನಿಸಿಕೆ ಸುಳ್ಳಾಗಿದ್ದರೆ… ಆ ಎರಡು ಕೂದಲುಗಳು ಹೊಂದದಿದ್ದರೆ….. ನನಗೆ ಉದ್ವೇಗವಾಗಿತ್ತು.

ಕೊನೆಗೂ ಫಲಿತಾಂಶ ಹೊರಬಿತ್ತು. ಆ ಎರಡೂ ಕಡೆ ಸಿಕ್ಕಿದ ತಲೆಗೂದಲುಗಳು ಪೂರ್ತಿ ಹೊಂದಾಣಿಕೆಯಾಗಿದ್ದವು. ಅಂದರೆ ಬಾನಾಮತಿಯ ಪ್ರಕರಣಕ್ಕೂ, ಆ ಡ್ಯಾನ್ಸ್ ಮಾಸ್ಟರ್ ರಾಕೇಶನಿಗೂ ಯಾವುದೋ ಸಂಪರ್ಕ ಇತ್ತು. ಆದರೆ ಅದೇನೆಂದು ಕಂಡು ಹಿಡಿಯಬೇಕಿತ್ತಷ್ಡೇ.

ನಾನು ಮತ್ತೆ ತಡ ಮಾಡಲಿಲ್ಲ. ಹತ್ತಿರದ ಪೋಲಿಸ್ ಸ್ಡೇಷನ್ನಿಗೆ ಸುದ್ದಿ ಮುಟ್ಟಿಸಿದೆ. ಅಲ್ಲಿನ ಇನ್ಸ್‌ಪೆಕ್ಟರ್ ಸ್ನೇಹಜೀವಿ, ಶಿಸ್ತಿನ ಮನುಷ್ಯ. ತಕ್ಷಣ ಆತ ಈ ಬಗ್ಗೆ ಕ್ರ್ರೆಂ ಬ್ರಾಂಚಿಗೆ ಸುದ್ದಿ ಮುಟ್ಟಿಸಿದ. ಶಾಲೆಯ ಮುಖ್ಯೋಪಾಧ್ಯಾಯಿನಿಗೂ ಸುದ್ದಿ ಹೋಯಿತು. ಆದರೆ ಎಲ್ಲ ವಿಷಯವನ್ನೂ ಗೌಪ್ಯವಾಗಿಡಲಾಯಿತು.

ಆ ದಿನ ಬಾನಾಮತಿಯ ಪ್ರಕರಣ ನಡೆದ ನಾಲ್ಕನೇ ದಿನ. ಶಾಲೆಯ ಪ್ರಾರ್ಥನೆ ನಡೆಯುತ್ತಿದ್ದ ಬೆಳಗ್ಗಿನ ಸಮಯದಲ್ಲಿ ಡ್ಯಾನ್ಸ್ ಮಾಸ್ಟರ್ ರಾಕೇಶ್ ಬಂಧಿತನಾದ. ಸುತ್ತಲೂ ಪೋಲಿಸರಿದುದ್ದರಿಂದ ಅವನಿಗೆ ತಪ್ಪಿಸಿಕೊಳ್ಳುವ ಅವಕಾಶವೂ ಇರಲಿಲ್ಲ. ಮೊದಮೊದಲಿಗೆ ಅವನು ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ತನ್ನ ತಪ್ಪನ್ನು ಒಪ್ಪಿಕೊಂಡ. ಶಾಲೆಯಲ್ಲಿ ಬಾನಾಮತಿಯ ಪ್ರಕರಣವನ್ನು ಸೃಷ್ಟಿಸಿದ್ದ ಕಾರಣವನ್ನು ಅವನು ಬಾಯ್ಬಿಟ್ಟಾಗ ಮಾತ್ರಾ ಇನ್ಸ್‌ಪೆಕ್ಟರ್ ರಾದಿಯಾಗಿ ಎಲ್ಲರೂ ಸ್ಥಂಭಿತರಾಗಿದ್ದರು.

ತಬ್ಬಲಿಯಾಗಿ ಅನಾಥಾಶ್ರಮವೊಂದರಲ್ಲಿ ಬೆಳೆದ ರಾಕೇಶ ಹೈಸ್ಕೂಲು ಓದುವಾಗಲೇ ವಿಕೃತ ಮನೋಭಾವನೆಯನ್ನು ಬೆಳೆಸಿಕೊಳ್ಳತೊಡಗಿದ್ದ. ಅಲ್ಲಿ ಒಣ ಹಾಕುವ ಹೆಂಗಸರ ಒಳ ಉಡುಪುಗಳನ್ನು ಕದ್ದು ತಂದು ತಾನು ಗುಟ್ಟಾಗಿ ಹಾಕಿಕೊಳ್ಳುವ ಕೆಟ್ಟ ಚಾಳಿ ಬೆಳೆಸಿಕೊಂಡ. ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಳ್ಳುತ್ತಾ ಬೆಳೆದರೂ ಪ್ರತಿಭೆಯಿತ್ತು. ಡ್ಯಾನ್ಸ್ ಮಾಸ್ಟರ್ ಒಬ್ಬರ ಬಳಿ ಪಾಶ್ಚಾತ್ಯ ನೃತ್ಯ ಕಲಿತ. ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವ ಕಲೆ ಕರಗತವಾಯಿತು. ಸ್ವಲ್ಪ ಕಾಲ ಕಲಿತು ಕೊನೆಗೆ ತಾನೇ ನೃತ್ಯ ಶಾಲೆಯನ್ನು ತೆರೆದ. ಆದರೆ ಆ ವಿಕೃತ ಮನೋಭಾವ ಒಳಗೊಳಗೆ ಹೊಗೆಯಾಡುತ್ತಿತ್ತು. ಆಗ ಅವನಿಗೆ ಸಿಕ್ಕಿದ್ದೇ ಚಿನ್ನು ಓದುತ್ತಿದ್ದ ಬಾಲಕಿಯರ ಶಾಲೆ. ಅಲ್ಲಿ ಅರಳುತ್ತಿದ್ದ ಹೆಣ್ಣುಮಕ್ಕಳನ್ನು ನೋಡಿ ಅವನ ವಿಕೃತ ಮನೋಭಾವನೆ ಜಾಗೃತವಾಯಿತು. ತನಗೆ ಇಷ್ಟವಾದ ಹುಡುಗಿಯನ್ನು ಬೇಸ್ಮೆಂಟಿನ ರೂಮೊಂದರಕ್ಕೆ ಎಳೆದೊಯ್ದು ಆಕೆಯ ನಗ್ನ ದೇಹವನ್ನು ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿದ್ದ. ಹುಡುಗಿಯರನ್ನು ಬೆದರಿಸಲು ಬಾನಾಮತಿಯ ಸೃಷ್ಟಿ ಮಾಡಿದ. ತಾನು ಆ ದೆವ್ವದ ತೃಪ್ತಿಗಾಗಿ ಹೀಗೆಲ್ಲಾ ಮಾಡುತ್ತಿರುವುದಾಗಿ ಮುಗ್ಧ ಹುಡುಗಿಯರನ್ನು ನಂಬಿಸಿದ. ವಿಷಯ ಬಾಯ್ಬಿಟ್ಟರೆ ಆ ಬಾನಾಮತಿ ಎಲ್ಲರನ್ನೂ ಆ ಆಹುತಿ ತೆಗೆದುಕೊಳ್ಳುವುದಾಗಿ ಹೆದರಿಸುತ್ತಿದ್ದ. ಹಾಗಾಗಿ ಪಾಪದ ಹುಡುಗಿಯರು ಸುಮ್ಮನಾಗುತ್ತಿದ್ದರು. ಪುಣ್ಯಕ್ಕೆ ರಾಕೇಶ ಅತ್ಯಾಚಾರದಂತಹ ಕುಕೃತ್ಯಕ್ಕೆ ಮನಸ್ಸು ಮಾಡಿರಲಿಲ್ಲ. ಇದ್ದುದರಲ್ಲಿ ಅದೊಂದು ಸಮಾಧಾನವಿತ್ತು. ತಾನು ಮೊಬೈಲಿನಲ್ಲಿ ಚಿತ್ರೀಕರಿಸಿದ್ದನ್ನು ಕಂಪ್ಯೂಟರಿಗೆ ಡೌನ್‌ಲೋಡ್ ಮಾಡಿಕೊಂಡು ನೋಡಿ ಸುಖಿಸುತ್ತಿದ್ದ.

ಇಷ್ಟು ವಿಷಯ ರಾಕೇಶನಿಂದ ಹೊರಬಿದ್ದಾಗ ಎಲ್ಲರೂ ಆಕ್ರೋಶದಿಂದ ತುಟಿ ಕಚ್ಚಿದರು.

“ಅದೆಲ್ಲಾ ಸರಿ, ಆದ್ರೆ ಬಾನಾಮತಿಯ ಹೆಸರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಳ್ತಿತ್ತಲ್ಲ, ಅದು ಹೇಗೆ, ಅದನ್ನು ಮೊದಲು ಬೊಗಳು….” ಇನ್ಸ್‌ಪೆಕ್ಟರ್ ಜೋರು ಮಾಡಿದರು.

“ಓ ಅದಾ, ಪೊಟ್ಯಾಷಿಯಂ ಪರ್ಮಾಂಗನೇಟ್ ಹಾಗೂ ಗ್ಲಿಸರೀನನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಬಟ್ಟೆಯಲ್ಲಿ ಸುತ್ತಿ ಎಸೆದ್ರೆ ಬೆಂಕಿ ಹೊತ್ತಿಕೊಳ್ಳುತ್ತೆ. ನಾನೂ ಹಾಗೇ ಮಾಡ್ತಾ ಇದ್ದೆ. ರಂಜಕವನ್ನು ತೆರೆದು ಕ್ಲಾಸ್‌ರೂಮ್‌ಗಳಲ್ಲಿ ಬಚ್ಚಿಡ್ತಾ ಇದ್ದೆ. ಅದು ಗಾಳಿಯಲ್ಲಿರುವ ಆಕ್ಸಿಜನ್ ಜೊತೆ ಸೇರಿ ಬೆಂಕಿ ಹೊತ್ತಿಕೊಳ್ತಿತ್ತು ಅಷ್ಟೇ. ಪುಸ್ತಕ ಓದಿ ಈ ವಿಷಯ ತಿಳಿದುಕೊಂಡಿದ್ದೆ…..”

ಮೇಧಾವಿಯಂತೆ ಮಾತನಾಡಿದ ರಾಕೇಶನ ಕೆನ್ನೆಗೆರಡು ಬಾರಿಸಿದ ಇನ್ಸ್‌ಪೆಕ್ಟರ್ ಅಲ್ಲೇ ನಿಂತಿದ್ದ ನನಗೆ ಧನ್ಯವಾದ ಹೇಳಿ, ಅವನನ್ನು ಬಂಧಿಸಿ ಎಳೆದೊಯ್ದರು.

“ಮಿ.ಅಶೋಕ್, ಸ್ವಾತಂತ್ರ್ಯ ಬಂದ ವರ್ಷ ಆರಂಭವಾದ ಶಾಲೆ ನಮ್ದು, ಪ್ರತೀ ವರ್ಷ ಗಾಂಧೀಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸ್ತೀವಿ, ಆ ದಿನ ದೇಶಭಕ್ತಿಯ ನಾಟಕ, ನೃತ್ಯ ಎಲ್ಲವನ್ನೂ ಮಕ್ಕಳೇ ನಡೆಸಿಕೊಡ್ತಾರೆ, ಮುಂದಿನ ತಿಂಗಳೇ ಗಾಂಧಿ ಜಯಂತಿ ಬರ್ತಿದೆಯಲ್ಲ, ಈಗ ಹೀಗಾಯ್ತಲ್ಲ ಅಂತ ತುಂಬಾ ಬೇಜಾರಾಗಿತ್ತು. ಸದ್ಯ ನಿಮ್ಮಿಂದ ಎಲ್ಲ ಸರಿಯಾಯ್ತು. ‘ನಂಬಿಕೆಗಳಿರಲಿ, ಆದ್ರೆ ಮೂಢನಂಬಿಕೆ ಬೇಡ’ ಅಂದ್ರು ಬಾಪೂಜಿ, ಆದ್ರೆ ಈ ರಾಕೇಶನಂತಹ ಕೆಟ್ಟ ಜನಗಳು ಹೇಗೆ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಆಡಬಾರದ ಆಟ ಆಡ್ತಾರೆ ನೋಡಿದ್ರಲ್ಲಾ, ಎನಿಹೌ ಥ್ಯಾಂಕ್ಯೂ ವೆರಿಮಚ್, ನಮ್ಮ ಶಾಲೆಯ ಗಾಂಧಿ ಜಯಂತಿಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನೀವೇ ಬರಬೇಕು…”

ಮುಖ್ಯೋಪಾಧ್ಯಾಯಿನಿ ಕಣ್ತುಂಬಿಕೊಂಡು ನನ್ನನ್ನು ಬೀಳ್ಕೊಟ್ಟರು.

ವಿಷಯ ತಿಳಿದ ನೇತ್ರ, ತನ್ಮಯಿಗೂ ಸಮಾಧಾನವಾಯಿತು.

“ಅಂತೂ ಮನೆಯವರಿಗೂ ವಿಷಯ ತಿಳಿಸದೆ ಇನ್ವೆಸ್ಟಿಗೇಷನ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಆದ್ರಿ ಬಿಡಿ, ಸುಮ್ನೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಒಂದು ಪತ್ತೇದಾರಿ ಆಫೀಸೇ ತೆರೆದುಬಿಡಿ….” ನೇತ್ರ ತಮಾಷೆ ಮಾಡಿದಳು.

ನನಗೂ ನಾಲ್ಕು ದಿನಗಳಿಂದ ಕವಿದಿದ್ದ ಆತಂಕ ಬಿಟ್ಟಂತಾಗಿ ನಿರಾಳವಾಗಿ ಉಸಿರಾಡಿದೆ.

ಇದು “ದೇಶ-ಕಾಲ”ದ ಚರ್ಚೆ

– ಮೇಘನಾದ

ವಿವೇಕ್ ಶಾನುಭಾಗರ ‘ದೇಶ ಕಾಲ’ – ಸಾಹಿತ್ಯಕ ಪತ್ರಿಕೆಯ ವಿಶೇಷ ಸಂಚಿಕೆ ಹುಟ್ಟುಹಾಕಿದ ಚರ್ಚೆಯ ಸಂಗ್ರಹ ರೂಪ ಈ ಪುಸ್ತಕ. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಆಗಲೇ ಬಹು ಓದುಗರನ್ನು ತಲುಪಿದ್ದವು. ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಅಗ್ನಿ ಪತ್ರಿಕೆಯಲ್ಲಿ ಹೆಚ್ಚು-ಕಮ್ಮಿ ಒಂದು ದಶಕದ ಹಿಂದೆ ಮೊಗಳ್ಳಿ ಗಣೇಶ್ ರ ಕಾಲಂ ‘ತಕರಾರು’ ಹುಟ್ಟುಹಾಕಿದ್ದ ಚರ್ಚೆ ಥಟ್ಟನೆ ನೆನಪಾಗುತ್ತದೆ. ಎರಡೂ ಚರ್ಚೆಯ ಸಂದರ್ಭಗಳು ಮತ್ತು ವ್ಯಾಪ್ತಿ ಭಿನ್ನವಾದರೂ, ಮಂಜುನಾಥ್ ಲತಾ ಮತ್ತು ಐಜೂರ್ ಎತ್ತಿರುವ ಪ್ರಶ್ನೆಗಳಿಗೂ ಮೊಗಳ್ಳಿಯವರ ತಕರಾರಿಗೂ ಸಾಮ್ಯ ಇದೆ. ಈ ಇಬ್ಬರು ಗೆಳೆಯರು, ‘ತಕರಾರು’ ಎತ್ತಿದ ಪ್ರಶ್ನೆಗಳನ್ನು ದೇಶಕಾಲದ ವಿಶೇಷ ಸಂಚಿಕೆ ನೆಪದಲ್ಲಿ ಮತ್ತಷ್ಟು ಹಿಗ್ಗಿಸಿದರು ಹಾಗೂ ಸಾಂಸ್ಕೃತಿಕ ಲೋಕದ ಬಹುಮಂದಿಯನ್ನು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಐದು ವರ್ಷಗಳ ಹರೆಯದ ಪತ್ರಿಕೆಯೊಂದು ಒಂದು ಶತಮಾನದ ಲೇಖಕರನ್ನು, ಕವಿಗಳ ಪಟ್ಟಿ ಪ್ರಕಟಿಸುವ ಮೂಲಕ ಸಾಂಸ್ಕೃತಿಕ ಲೋಕದ ಯಾಜಮಾನಿಕೆಯನ್ನು ವಹಿಸಿಕೊಳ್ಳಲು ಹೊರಟ್ಟಿದ್ದರಿಂದಲೇ ಈ ಚರ್ಚೆ ಸಾಧ್ಯವಾಯಿತು. ಜೊತೆಗೆ ನಾಡಿನ ಪ್ರಮುಖ ಪತ್ರಿಕೆಗಳು ವಿಶೇಷ ಸಂಚಿಕೆ ಬರುವ ಮುನ್ನ, ನಂತರ ಸಾಹಿತ್ಯ ಜಗತ್ತಿನಲ್ಲಿ ಏನೋ ಒಂದು ಅದ್ಭುತ ಘಟಿಸಿದೆಯೇನೋ ಎಂಬಂತೆ ನಡೆದುಕೊಂಡದ್ದೂ ಚರ್ಚೆಯ ಅಗತ್ಯತೆಯನ್ನು ತೀವ್ರಗೊಳಿಸಿತು. ಹಲವಾರು ವರ್ಷಗಳಿಂದ ಪ್ರಕಟಣೆಯಲ್ಲಿರುವ ಹತ್ತಾರು ಪತ್ರಿಕೆಗಳಿಗೆ ಸಿಗದ ಪ್ರಚಾರ ಒಂದು ಪತ್ರಿಕೆಗೆ ಸಿಕ್ಕಾಗ, ಕೇವಲ ಅದು ಮಾತ್ರ ಸಾಂಸ್ಕೃತಿಕ ಲೋಕದ ನಿಜಗನ್ನಡಿ ಎಂದು ಬಿಂಬಿತವಾಗುವ ಅಪಾಯವಿತ್ತು. ಇದನ್ನು ಮನಗಂಡು ಮಂಜುನಾಥ್ ಲತಾ ಮತ್ತು ಐಜೂರ್ ಚರ್ಚೆ ಆರಂಭಿಸಿದರು.

ಇವರ ಕಟು ನಿಷ್ಠುರ ಮಾತುಗಳಲ್ಲಿ ಹೇಳಬೇಕಾದ್ದನ್ನು ಹೇಳಲು ಹೋದಾಗ ಅನೇಕರು ದಂಗಾದರು. ಇದು ವಿಮರ್ಶೆಯ ಭಾಷೆಯಲ್ಲ ಎಂದು ಹೇಳುತ್ತಲೇ ಹಿರಿಯರು ಚರ್ಚೆಗೆ ಸ್ಪಂದಿಸಿದರು. ವಿಶೇಷ ಸಂಚಿಕೆಯಲ್ಲಿ ಶತಮಾನದ ಲೇಖಕರು, ಕವಿಗಳು ಎಂದೆಲ್ಲಾ ಕರೆಸಿಕೊಂಡಿದ್ದವರೇ ತೀವ್ರ ಮುಜುಗರದಿಂದ ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. (ಮತ್ತೆ ಕೆಲವರು ತಾವು ಆ ಮಾನ್ಯತೆಗೆ ಅರ್ಹರಲ್ಲ ಎಂದು ಒಳಗೊಳಗೇ ಅನ್ನಿಸಿದರೂ, ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಯಾಕೆ ರಾಡಿ ಮಾಡಿಕೊಳ್ಳುವುದು ಎಂದು ತಮಗೆ ಪುಕ್ಕಟೆ ಸಿಕ್ಕ ಮಾನ್ಯತೆ ಬಗ್ಗೆ ಚರ್ಚಿಸಲು ಹೋಗಲಿಲ್ಲ). ಚರ್ಚೆಯ ಹಾದಿಯಲ್ಲಿ ಹಲವರಿಗೆ ಬೇಸರ, ಸಂಕಟ, ಸಿಟ್ಟು..ಹೀಗೆ ಏನೆಲ್ಲಾ ಆಗಿದ್ದರೂ, ಇಂತಹದೊಂದು ಚರ್ಚೆ ಅಗತ್ಯವಿತ್ತು. ಕಾರಣ, ಈ ಚರ್ಚೆಯ ಮೂಲಕ, ತಮಗನ್ನಿಸಿದ್ದನ್ನು ಹೇಳಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಅನೇಕರಿಗೆ ವೇದಿಕೆ ದೊರೆತಿದೆ.

ಜಿ.ರಾಜಶೇಖರ್ ಮತ್ತು ಕೆ.ಫಣಿರಾಜ್ ‘ದೇಶ ಕಾಲ’ದ ಪರವಾಗಿ ನಿಲ್ಲುತ್ತಾರೆ. ಅವರ ವಾದಗಳಲ್ಲಿ ಒಪ್ಪಿಕೊಳ್ಳಲು ಕಷ್ಟವಾಗುವ ಸಂಗತಿಗಳು ಬೇಕಾದಷ್ಟಿದ್ದರೂ, ಚರ್ಚೆಯಲ್ಲಿ ಪಾಲ್ಗೊಂಡ ಕಾರಣ ಅವರನ್ನು ಮೆಚ್ಚಲೇ ಬೇಕು. ಅವರು ‘ದೇಶ ಕಾಲ’ದ ಸಂಪಾದಕರಿಗಿಂತ ಭಿನ್ನವಾಗಿ ನಿಲ್ಲುವುದೇ ಅಲ್ಲಿ. (ಇಂತಹ ಚರ್ಚೆ ನಡೆಯುತ್ತಿದ್ದರೂ, ಪ್ರತಿಕ್ರಿಯಿಸದೆ ಉದಾಸೀನ ತೋರಿಸಲು ಸಂಪಾದಕರಿಗೆ ಸಾಧ್ಯವಾಯಿತು.) ಹಿರಿಯ ಜೀವಿಯೊಬ್ಬರು ಆಪ್ತ ವಲಯದಲ್ಲಿ ‘ಆ ಹುಡುಗರು ಏನೆಲ್ಲಾ ಬರೆದಿದ್ದಾರೆ, ಕಪಾಳಕ್ಕೆ ಬಾರಿಸಬೇಕು..’ ಎಂದು ತುಸು ಕೋಪದಿಂದಲೇ ಹೇಳಿಕೊಂಡಂತೆ ಇವರಿಬ್ಬರೂ ಮಾತನಾಡಿಕೊಂಡು ಸುಮ್ಮನೆ ಇರಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಅದೇ ಕಾರಣಕ್ಕಾಗಿ ಇವರನ್ನು ಟೀಕಿಸಿದ ಹುಡುಗರು ಸಿಕ್ಕಾಗ ಇವತ್ತಿಗೂ ಅದೇ ಹಳೆಯ ನಗುವಿನಿಂದ, ವಿಶ್ವಾಸದಿಂದ ಮಾತನಾಡಿಸುತ್ತಾರೆ.

ಇದು ಪ್ರಸ್ತುತ ಸಂದರ್ಭದಲ್ಲಿ ಪ್ರಮುಖ ಕೃತಿ. ಮುಂದೆ ಕೆಲವು ವರ್ಷಗಳ ಮಟ್ಟಿಗಾದರೂ ಇಲ್ಲಿಯ ಬರಹಗಳು ಅಲ್ಲಲ್ಲಿ ಉಲ್ಲೇಖವಾಗುತ್ತವೆ, ಆ ಮೂಲಕ ಚರ್ಚೆ ಮುಂದುವರಿಯುತ್ತದೆ. ಆ ಕಾರಣ ಸಂಪಾದಕರಿಬ್ಬರು ಅಭಿನಂದನೆಗಳಿಗೆ ಅರ್ಹರು. ಜೊತೆಗೆ ಪ್ರಕಾಶಕರೂ ಕೂಡ. ಪ್ರಕಾಶಕರು ತಮ್ಮ ಮಾತುಗಳಲ್ಲಿ ಹೇಳಿಕೊಂಡಂತೆ, ಅವರು ಸಂಪಾದಕರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪದೇ ಇದ್ದರೂ ಪ್ರಕಟಣೆಗೆ ಒಪ್ಪಿದ್ದಾರೆ. ಅಷ್ಟಲ್ಲದೇ, ಕೆಲ ಪ್ರಕಾಶಕರು ಪ್ರಕಟಿಸಲು ಒಪ್ಪಿ ಹಿಂದೆ ಸರಿದ ಮೇಲೂ ಇವರು ಆ ಜವಾಬ್ದಾರಿ ಹೊತ್ತರು ಎನ್ನುವುದು ಗಮನಾರ್ಹ. ಈ ಮಹತ್ವದ ಕೃತಿಯನ್ನು ಒಮ್ಮೆ ಕೊಂಡು ಓದಿ.


ಪುಸ್ತಕ: ದೇಶವಿದೇನಹಾ! ಕಾಲವಿದೇನಹಾ!!
ಸಂಪಾದಕರು: ಮಂಜುನಾಥ ಲತಾ ಮತ್ತು ಕೆ.ಎಲ್. ಚಂದ್ರಶೇಖರ್ ಐಜೂರ್
ಪ್ರಕಾಶನ: ಮೌಲ್ಯಾಗ್ರಹ ಪ್ರಕಾಶನ
ಪುಟ ಸಂಖ್ಯೆ: 184
ಬೆಲೆ: ರೂ 140.
ಪ್ರತಿಗಳಿಗಾಗಿ:
ಕೆ.ಎಲ್. ಚಂದ್ರಶೇಖರ್ ಐಜೂರ್ – 98809-14578
ಮಂಜುನಾಥ್ ಲತಾ – 91412-07031