Monthly Archives: March 2013

ಅಮಲಿನಲ್ಲಿರುವವರಿಗೆ ಕಳಕಳಿಯ ಮನವಿ ಅಣಕದಂತೆ ಕಂಡಿತೆ?

– ರಂಜನ್ ರಾಗಿಗುಡ್ಡ

ಸಿಯೆರಾ ಲಿಯೋನ್ ನಲ್ಲಿ ನಡೆದ (1999) ಬಂಡುಕೋರರ ದಾಳಿಯಲ್ಲಿ ಅನೇಕ ಅಮಾಯಕರು ಸತ್ತರು. ಮಕ್ಕಳನ್ನೂ ಕೊಂದರು. ಬಂಡುಕೋರರ ತಂಡದ ನಾಯಕನೊಬ್ಬ ಬಿಬಿಸಿಗೆ ಸಂದರ್ಶನ ನೀಡಿದ. ಸಂದರ್ಶಕ, ‘ಹೆಣ್ಣು ಮಕ್ಕಳು..ಮಕ್ಕಳು ನಿಮ್ಮನ್ನು ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಕೇಳಿದಾಗಲೂ ನಿಮಗೆ ಏನೂ ಅನ್ನಿಸುತ್ತಿರಲಿಲ್ಲವೆ’ ಎಂದು ಕೇಳುತ್ತಾನೆ. ಬಂಡುಕೋರ ಹೇಳುತ್ತಾನೆ.. “ನಾವು ದಾಳಿ ಮಾಡುವಾಗ ಮಾದಕ ವಸ್ತು ಸೇವಿಸಿರುತ್ತಿದ್ದ ಕಾರಣ ಅಮಲಿನಲ್ಲಿರುತ್ತಿದ್ದೆವು. ಯಾರಾದರೂ ಪ್ಲೀಸ್ ಎಂದು ಬೇಡಿಕೊಂಡರೆ ನಮಗೆ ಅವರ ಕೋರಿಕೆ ನಮ್ಮನ್ನು ಅಣಕ ಮಾಡಿದಂತೆ ಎನಿಸುತ್ತಿತ್ತು. ನಾವು ಆಗ ಮತ್ತಷ್ಟು ಹಿಂಸೆ ಮಾಡಲು ಪ್ರಚೋದಿತರಾಗುತ್ತಿದ್ದೆವು..”

ಮಂಗಳೂರಿನ ವರದಿಗಾರ ಮಿತ್ರ ನವೀನ್ ಸೂರಿಂಜೆ ವಿರುದ್ದ ದುರುದ್ದೇಶದಿಂದ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ, ದಯವಿಟ್ಟು ಅವನ ವಿರುದ್ಧದ ಸುಳ್ಳು ಕೇಸುಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಕೇಳುವಾಗಲೂ.. naveen-soorinjeಬಹುಶಃ ಈ ಅಮಲಿನಲ್ಲಿರುವ ವ್ಯವಸ್ಥೆಗೆ ಅಣಕ ಮಾಡಿದಂತೆ ಕಾಣಿಸಬಹುದು. ವ್ಯವಸ್ಥೆ ಎಂದರೆ ಕೇವಲ ಆಡಳಿತದಲ್ಲಿರುವ ಸರಕಾರ ಮಾತ್ರ ಅಲ್ಲ. ಸರಕಾರವನ್ನು ಆಡಿಸುತ್ತಿರುವ ಕೈಗಳು, ಮಹಿಳೆಯರ ಉಡುಪನ್ನು ನಿರ್ಧರಿಸುವ ಸಂಘ ಸಂಸ್ಥೆಗಳು ಮತ್ತು ಇಂಥ ಘಾತುಕ ಶಕ್ತಿಗಳನ್ನು ಬೆಂಬಲಿಸುವ ಮನಸ್ಸುಗಳು – ಎಲ್ಲವೂ ಅಮಲಿನಲ್ಲಿಯೇ ಇವೆ ಎಂದೆನಿಸುತ್ತದೆ.

ಕೃಷ್ಣ ಜೆ. ಪಾಲೆಮಾರ್ ಎಂಬ ಮಾಜಿ ಮಂತ್ರಿಗೆ ನವೀನ್ ಸೂರಿಂಜೆ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸಮ್ಮತವಲ್ಲ. ಅವರ ಕಡೆಯ ಅನೇಕ ಅಮಾಯಕರೂ ಇದೇ ಪ್ರಕರಣದಲ್ಲಿ ಸಿಕ್ಕಿ ಜೈಲಿನಲ್ಲಿದ್ದಾರಂತೆ..ಅವರ ಬಿಡುಗಡೆಯೂ ಆಗುವುದಾದರೆ ಮಾತ್ರ ಸೂರಿಂಜೆಯನ್ನು ಬಿಡುಗಡೆ ಮಾಡಬೇಕಂತೆ. ಮತ್ತೊಬ್ಬ ಘನ ಮಂತ್ರಿ ತನ್ನ ಅಸಹಾಯಕತೆಯನ್ನು ಆಪ್ತರ ಬಳಿ ತೋಡಿಕೊಂಡಿದ್ದಾರೆ. ಇದೆಲ್ಲದರ ಹಿಂದೆ ಮಂಗಳೂರು ಭಾಗದಲ್ಲಿ ಕೋಮುವಾದದ ಅಮಲನ್ನು ಹಂಚುತ್ತಿರುವ ಕಲ್ಲು ಹೃದಯದವರೊಬ್ಬರ ಪ್ರಭಾವ ನಿಚ್ಚಳವಾಗಿ ಕಾಣುತ್ತಿದೆ.

ಮಂಗಳೂರಿನ ಕಾರಾಗೃಹದಲ್ಲಿ ನವೀನ್ ಸೂರಿಂಜೆ ಬಂಧಿತನಾಗಿರುವುದು ಮುಸಲ್ಮಾನ ಮಿತ್ರರು ಇರುವಂತಹ ಕೋಣೆಯಲ್ಲಿ. ಹೋಮ್ ಸ್ಟೇ ಪ್ರಕರಣದಲ್ಲಿ ಬಂಧಿಗಳಾಗಿರುವ ಇತರರು ಪ್ರತ್ಯೇಕ ಕೋಣೆಯಲ್ಲಿದ್ದಾರೆ. ಹೋಮ್ ಸ್ಟೇ ದಾಳಿಯ ಸಂಚಿನಲ್ಲಿ ಸೂರಿಂಜೆಯ ಪಾತ್ರ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನವೀನ್ ಮತ್ತು ಪ್ರಕರಣದ ಇತರರು ಮುಖಾಮುಖಿಯಾಗುವುದನ್ನು ತಡೆಯುವ ಸಲುವಾಗಿ ಬೇರೆ ಬೇರೆ ಕೋಣೆಯಲ್ಲಿ ಇರಿಸಲಾಗಿದೆ ಎಂಬ ಸಂಗತಿಯಷ್ಟೇ ಸಾಕು,

ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖರಲ್ಲ ಮಿಸ್ಟರ್ ಜಗದೀಶ್ ಶೆಟ್ಟರ್. Jagadish Shettarಆದರೆ ಅವರು ಬಹುಶಃ ಸಂಘ ಪರಿವಾರ ಹಂಚಿರುವ ಮಾದಕ ಸಿದ್ಧಾಂತದ ಪರಿಣಾಮ ಉಂಟಾಗಿರುವ ಅಮಲಿನಲ್ಲಿದ್ದಾರೆ. ಇಲ್ಲವಾದರೆ ಹಿಂದಿನ ಕ್ಯಾಬಿನೆಟ್ ತೀರ್ಮಾನದ ನಂತರವೂ ಸಹಿ ಹಾಕಲು ಹಿಂಜರಿಯುತ್ತಿರಲಿಲ್ಲ. ಸಚಿವ ಸುರೇಶ್ ಕುಮಾರ್ ಕ್ಯಾಬಿನೆಟ್ ಮೀಟಿಂಗ್ ನಂತರದ ಪತ್ರಿಕಾ ಗೋಷ್ಟಿಯಲ್ಲಿ ಸೂರಿಂಜೆ ವಿರುದ್ಧದ ಪ್ರಕರಣ ಹಿಂಪಡೆಯಲು ಮಂತ್ರಿ ಮಂಡಲ ತೀರ್ಮಾನಿಸಿದೆ ಎಂದು ಘೋಷಿಸಿದ್ದರು. ಆದರೆ ಇದುವರೆಗೂ ಮುಖ್ಯಮಂತ್ರಿ ಅದಕ್ಕೆ ಅಧಿಕೃತ ಮುದ್ರೆ ಒತ್ತಿಲ್ಲ.

ನವೆಂಬರ್ 7 ರಂದು ಜೈಲು ಸೇರಿದ ನವೀನ್ ಸೂರಿಂಜೆ ಈಗಾಗಲೆ ಹತ್ತಿರ ಹತ್ತಿರ ನಾಲ್ಕು ತಿಂಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ನವೀನ್ ಒಬ್ಬ ವರದಿಗಾರನಾಗಿ ಮುಖವಾಡ ಕಳಚಿದ್ದ ಅನೇಕರಿಗೆ ಇದು ಖುಷಿಯ ಸಂಗತಿ. ಅಷ್ಟೇ ಏಕೆ, ಮಂತ್ರಿಯೊಬ್ಬರು ಆಪ್ತರೊಬ್ಬರ ಹತ್ತಿರ ಮಾತನಾಡುತ್ತಾ ಸರಕಾರದ ಹೆಸರಿಗೇ ಮಸಿ ಬಳಿಯಲು ಪ್ರಯತ್ನಪಟ್ಟವನನ್ನು ಸುಮ್ಮನೆ ಬಿಡಲು ಸಾಧ್ಯವೇ.. ಎಂದಿದ್ದರು.

ಅದಕ್ಕೆ ಪದೇ ಪದೇ ಅನ್ನಿಸುತ್ತೆ – ಇವರೆಲ್ಲಾ ಅಮಲಿನಿಂದ ಹೊರಬರೋದು ಯಾವಾಗ?

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯೇ?

-ಬಸವರಾಜು

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೋದಲ್ಲಿ ಬಂದಲ್ಲಿ “ನಾನು ಕೂಡ ಸಿಎಂ ಪದವಿ ಆಕಾಂಕ್ಷಿ” ಎಂದು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಕಲ್ಚರ್ ಅರಿತವರು, ಹೈಕಮಾಂಡ್ ಅರ್ಥ ಮಾಡಿಕೊಂಡವರು ಯಾರೂ ಹೀಗೆ ಮಾತನಾಡಲಾರರು. ಆದರೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಏಳು ವರ್ಷಗಳಾದರೂ ಸಿದ್ದರಾಮಯ್ಯನವರು ಇನ್ನೂ ಫ್ಯೂಡಲ್ ಗುಣಗಳನ್ನು ಬಿಟ್ಟಿಲ್ಲ. ಸಿದ್ದರಾಮಯ್ಯನವರ ದುರಾದೃಷ್ಟವೋ ಏನೋ, ಅವರ “ಸಿಎಂ ಆಕಾಂಕ್ಷಿ” ಒಬ್ಬೊಬ್ಬರಿಗೆ ಒಂದೊಂದು ರೀತಿ ಕೇಳಿಸುತ್ತಿದೆ. ಹತ್ತಾರು ವಿರೋಧಿಗಳನ್ನು ಹುಟ್ಟುಹಾಕಿದೆ. ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಹಾಗೆ ನೋಡಿದರೆ, ಸಿದ್ದರಾಮಯ್ಯನವರು ಚಾಣಾಕ್ಷ ರಾಜಕಾರಣಿಯಲ್ಲ. ಇವತ್ತಿನ ರಾಜಕಾರಣಕ್ಕೆ ಬೇಕಾದ ಡ್ಯಾಷಿಂಗ್ ಗುಣಗಳಿಲ್ಲ. Siddaramaiahಆದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರದವರು. ಅಷ್ಟೇ ಅಲ್ಲ, ಜನಪರವಾಗಿ ಚಿಂತಿಸುವವರು. ನೆಲ-ಜಲ-ಭಾಷೆಯ ವಿಷಯದಲ್ಲಿ ಬದ್ಧತೆಯಿಂದ ವರ್ತಿಸುವವರು. ಜೊತೆಗೆ ರಾಮಮನೋಹರ ಲೋಹಿಯಾರ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜವಾದಿ ಹೋರಾಟ, ಎಡಪಂಥೀಯ ವಿಚಾರಧಾರೆಗಳತ್ತ ಒಲವುಳ್ಳವರು. ಹಿಂದುಳಿದವರು, ಬಡವರು, ದಲಿತರ ಪರ ಕಾಳಜಿ ಕಳಕಳಿಯುಳ್ಳವರು. ತಮ್ಮ ಹಿಂಬಾಲಕರಿಗೆ, ಜಾತಿಯವರಿಗೆ ಅನುಕೂಲ ಮಾಡಿಕೊಟ್ಟರೂ, ಕಡು ಭ್ರಷ್ಟರ ಪಟ್ಟಿಗೆ ಸೇರದವರು. ಅಧಿಕಾರದಲ್ಲಿದ್ದಾಗ ಜನರತ್ತ ನೋಡದೆ “ಹಾಂ ಹೂಂ” ಎನ್ನುವ ಅಹಂಕಾರದ ಮೂಟೆಯಂತೆ ಕಂಡರೂ, ಕೇಡಿ ರಾಜಕಾರಣದಿಂದ ದೂರವಿರುವವರು.

ಇಂತಹ ಸಿದ್ಧರಾಮಯ್ಯನವರು ಹುಟ್ಟಿದ್ದು 12 ಆಗಸ್ಟ್, 1948ರಲ್ಲಿ, ಮೈಸೂರು ತಾಲೂಕಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ. ರಾಜಕೀಯ ರಂಗಕ್ಕೆ ಧುಮುಕಿದ್ದು 1978ರಲ್ಲಿ, ತಾಲೂಕ್ ಬೋರ್ಡ್ ಮೆಂಬರ್ ಆಗುವ ಮೂಲಕ. ಆನಂತರ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊಟ್ಟ ಮೊದಲಬಾರಿಗೆ ಭಾರತೀಯ ಲೋಕದಳ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯನವರು, ಆ ನಂತರ ಜನತಾ ಪಕ್ಷ ಸೇರಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪರಿಚಿತರಾದರು. 1985ರಲ್ಲಿ ಮತ್ತೆ ಶಾಸಕರಾಗಿ ಚುನಾಯಿತರಾದ ಸಿದ್ದರಾಮಯ್ಯನವರು, ಮೊದಲ ಬಾರಿಗೆ ಪಶು ಸಂಗೋಪನೆ ಮಂತ್ರಿಯಾದರು. ಅಲ್ಲಿಂದ ಇಲ್ಲಿಯವರೆಗೆ, ತಮ್ಮ 35 ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಹತ್ತು ಹಲವು ಹುದ್ದೆಗಳನ್ನು ನಿರ್ವಹಿಸಿ ನಿಭಾಯಿಸಿ ಹೆಸರು ಗಳಿಸಿದರು. ಈಗ ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ಸದ್ಯದ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಗೆಲುವಿನ ಗಾಳಿ ಬೀಸುತ್ತಿದೆ, ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗುವ ಕನಸು ಈಡೇರುವ ಕಾಲ ಕೂಡಿ ಬರುತ್ತಿದೆ. ಆದರೆ ಸಿದ್ದರಾಮಯ್ಯನವರ ಒರಟು ಸ್ವಭಾವ ಅವಕಾಶಗಳಿಂದ ವಂಚಿತರನ್ನಾಗಿಸುತ್ತಿದೆ. ಸಿದ್ದರಾಮಯ್ಯನವರನ್ನು ಹತ್ತಿರದಿಂದ ಬಲ್ಲವರು, “ಪಾರ್ಟಿಗೆ ಸೇರಿಸಿಕೊಂಡು ಮೊದಲು ಮಂತ್ರಿ ಮಾಡಿದವರು ರಾಮಕೃಷ್ಣ ಹೆಗಡೆಯವರು. ಸಿದ್ದರಾಮಯ್ಯನವರು ಅವರನ್ನು ಬಿಟ್ಟು ದೇವೇಗೌಡರ ಹಿಂದೆ ಹೋದರು. ಗೌಡರು ಸಿದ್ದರಾಮಯ್ಯರನ್ನು ಪಕ್ಷದ ಅಧ್ಯಕ್ಷರನ್ನಾಗಿಸಿದರು. ಉಪಮುಖ್ಯಮಂತ್ರಿಯನ್ನಾಗಿಸಿದರು. ಸಿದ್ದರಾಮಯ್ಯನವರು ಗೌಡರನ್ನೂ ಬಿಟ್ಟರು. siddaramaiah_dharam_khargeಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಆ ಪಕ್ಷದ ರೀತಿ ರಿವಾಜುಗಳನ್ನು ಅರಿತು ವರ್ತಿಸಬೇಕಾದವರು, ಹೋದಲ್ಲಿ ಬಂದಲ್ಲಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇದು ಅವರ ಹಾದಿಗೆ ತೊಡಕಾದರೂ ಆಗಬಹುದು” ಎನ್ನುತ್ತಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ- ಇವರಿಬ್ಬರದೇ ಕಾರುಬಾರು. ಹೈಕಮಾಂಡ್ ಕೂಡ ಕುರುಬ-ದಲಿತ ಜಾತಿ ಸಮೀಕರಣವನ್ನು ಮುಂದಿಟ್ಟು, ಸಿದ್ದರಾಮಯ್ಯ- ಪರಮೇಶ್ವರ್ ಅವರುಗಳ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸುವುದೆಂದು ನಿರ್ಧರಿಸಿದೆ. ಹೈಕಮಾಂಡ್ ಹೀಗೆ ನಿರ್ಧರಿಸಿದ ಮೇಲೆ, ಸಿದ್ದರಾಮಯ್ಯನವರು ಮುತ್ಸದ್ದಿ ರಾಜಕಾರಣಿಯಂತೆ ವರ್ತಿಸಿ ಎಲ್ಲರ ನಾಯಕನಾಗಿ ಹೊರಹೊಮ್ಮಬೇಕಾದವರು, ಯಾಕೋ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಪರಮೇಶ್ವರ್ ಗುಂಪು, ಎಸ್.ಎಂ. ಕೃಷ್ಣರ ಗುಂಪು ಮತ್ತು ಹಿರಿಯ ನಾಯಕರ ಗುಂಪುಗಳಿಗೆ ಕಂಡರಾಗದ ವ್ಯಕ್ತಿಯಾಗುತ್ತಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವ ಖಾತೆಗೆ ರಾಜೀನಾಮೆ ಕೊಟ್ಟು ಎಸ್.ಎಂ. ಕೃಷ್ಣ ಮರಳಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದಾಗ,smkrsihwig ನಿಜಕ್ಕೂ ಕಂಗಾಲಾದವರು ಜೆಡಿಎಸ್‌ನ ದೇವೇಗೌಡ ಮತ್ತು ಕುಮಾರಸ್ವಾಮಿ. ಜೆಡಿಎಸ್‌ಗೆ ಬಲ ಇರುವುದೇ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ. ಅಲ್ಲಿಗೆ ಮತ್ತೊಬ್ಬ ಒಕ್ಕಲಿಗ ನಾಯಕ ಬಂದರೆ, ಪಕ್ಷಾಂತರದ ಮೂಲಕ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಂಡರೆ ಸಹಜವಾಗಿಯೇ ಜೆಡಿಎಸ್ ಸೊರಗುತ್ತದೆ. ಇದನ್ನರಿತ ಅಪ್ಪಮಕ್ಕಳು ಕೃಷ್ಣರ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಸಿದ್ದರಾಮಯ್ಯನವರೇ ಕೃಷ್ಣರ ವಿರುದ್ಧ ಉಗ್ರ ವಿರೋಧ ವ್ಯಕ್ತಪಡಿಸಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ಕೃಷ್ಣರಿಗೆ ಯಾವ ಸ್ಥಾನವನ್ನೂ ನೀಡದಿರುವಂತೆ ನೋಡಿಕೊಂಡರು.

ಹೈಕಮಾಂಡ್ ಮೇಲೆ ಒತ್ತಡ ಹಾಕಲು ಸಿದ್ದರಾಮಯ್ಯನವರನ್ನು ಮುಂದೆ ಬಿಟ್ಟು, ಬೆನ್ನ ಹಿಂದೆ ನಿಂತು ಬೆಂಬಲಿಸಿದವರು ಯಾರು ಎಂದರೆ, “ಕೃಷ್ಣರನ್ನು ಕಂಡರಾಗದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಮತ್ತು ಶ್ಯಾಮನೂರು ಶಿವಶಂಕರಪ್ಪನವರು” ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ಸಿನೊಳಗಿನ ಗುಂಪು ರಾಜಕಾರಣವನ್ನು ಬಿಚ್ಚಿಟ್ಟರು. ಮುಂದುವರೆದು, “ಈ ಗುಂಪಿಗೆ ಮುಂದಿನ ಮುಖ್ಯಮಂತ್ರಿಯಾಗುವ ಆಸೆ ಇದೆ. ಸೀನಿಯಾರಿಟಿ ಮುಂದೆ ಮಾಡಿ ಖರ್ಗೆಯವರನ್ನು ಸಿಎಂ ಮಾಡಿದರೆ, ಸಿದ್ದರಾಮಯ್ಯನವರಿಗೆ ಡೆಪ್ಯೂಟಿ ಸಿಎಂ ಮಾಡುವುದು. ಇಲ್ಲ, ಚುನಾವಣೆಯನ್ನು ಎದುರಿಸಿದವರೇ ಸಿಎಂ ಆಗಬೇಕು ಎಂದರೆ, ಪರಮೇಶ್ವರ್ ಬಿಟ್ಟು ಸಿದ್ದುವನ್ನು ಬೆಂಬಲಿಸುವುದು ಈ ಗುಂಪಿನ ಒಳ ಒಪ್ಪಂದ” ಎನ್ನುತ್ತಾರೆ ಆ ಹಿರಿಯರು.

ಹೀಗಾಗಿ ಈ ಗುಂಪು ಕೃಷ್ಣರನ್ನು, ಅವರ ಶಿಷ್ಟಕೋಟಿಯನ್ನು ವ್ಯವಸ್ಥಿತವಾಗಿ ಅಧಿಕಾರ ರಾಜಕಾರಣದಿಂದ ದೂರವಿಡಲು ಈ ಸಂಚನ್ನು ರೂಪಿಸಿತು. ಹೈಕಮಾಂಡ್ ಕೂಡ ಈ ಸಂಚಿಗೆ ಬಲಿಯಾಗಿ, ಕೃಷ್ಣರಿಗೆ ಯಾವ ಸ್ಥಾನಮಾನ ನೀಡದಂತೆ ನೋಡಿಕೊಂಡಿತು. ಮುಂದುವರೆದು, ಲಿಂಗಾಯಿತ ಕೋಮಿನ ವೀರಣ್ಣ ಮತ್ತಿಕಟ್ಟಿಯನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿಸಿತು. ಅಲ್ಲಿಗೆ ಕೃಷ್ಣರ ಅಧ್ಯಾಯ ಮುಗಿಯಿತು. ಸಿದ್ದರಾಮಯ್ಯನವರ ಹಾದಿ ಸುಗಮವಾಯಿತು.

ಹೀಗಾಗಿದ್ದು, ಕಾಂಗ್ರೆಸ್ಸಿನ ಕೃಷ್ಣ ಮತ್ತವರ ಗುಂಪಿಗಷ್ಟೇ ಅಲ್ಲ, ಸಿದ್ದರಾಮಯ್ಯನವರನ್ನು ಕಂಡರಾಗದ ಜೆಡಿಎಸ್‌ನ devegowda_kumaraswamyದೇವೇಗೌಡ ಮತ್ತವರ ಮಕ್ಕಳಿಗೆ ಸಹಿಸಲಸಾಧ್ಯ ಸಂಕಟ ತಂದಿಟ್ಟಿದೆ. ಮತ್ತೊಂದು ಕಡೆ, ಬಿಜೆಪಿಯ ಮತ್ತೊಬ್ಬ ಕುರುಬ ಜನಾಂಗದ ನಾಯಕ ಕೆ.ಎಸ್. ಈಶ್ವರಪ್ಪನವರ ಮೆರೆದಾಟಕ್ಕೆ ಬ್ರೇಕ್ ಹಾಕಿದೆ. ಸಹಜವಾಗಿ ಈಗ ಇವರೆಲ್ಲರೂ ಸಿದ್ದು ಮೇಲೆ ಬಿದ್ದಿದ್ದಾರೆ. ಹೇಗಾದರೂ ಸರಿ, ಸಿದ್ದು ಸಿಎಂ ಆಗದಂತೆ ನೋಡಿಕೊಳ್ಳಬೇಕೆಂಬ ಒಳ ಒಪ್ಪಂದಕ್ಕೆ ಬಂದಿದ್ದಾರೆ. ಅವರೆಲ್ಲರ ಕಣ್ಣು ವರುಣಾ ಕ್ಷೇತ್ರದತ್ತ ನೆಟ್ಟಿದೆ.

ಸಿದ್ದರಾಮಯ್ಯನವರ ಉಡಾಫೆ ಗುಣಕ್ಕೆ ಸರಿಯಾಗಿ, ಮೈಸೂರಿನ ವರುಣಾದಿಂದ ಗೆದ್ದುಬಂದ ದಿನದಿಂದ ಇಲ್ಲಿಯವರೆಗೆ ಪಾರ್ಟಿಯೊಳಗಿನ ಕಸರತ್ತಿನಲ್ಲಿ ಕಳೆದುಹೋಗಿ, ಹೈಕಮಾಂಡಿನ ಜೊತೆ ಜಗಳಕ್ಕಿಳಿದು ವಿರೋಧಪಕ್ಷದ ನಾಯಕನ ಸ್ಥಾನ ಗಿಟ್ಟಿಸುವಲ್ಲಿ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಮತ ನೀಡಿ ಗೆಲ್ಲಿಸಿದ ಮತದಾರರನ್ನೇ ಮರೆತುಬಿಟ್ಟಿದ್ದಾರೆ. ಜೊತೆಗೆ ಕ್ಷೇತ್ರವನ್ನು ಮಗ ರಾಕೇಶನ ಉಸ್ತುವಾರಿಗೆ ಕೊಟ್ಟಿದ್ದರಿಂದ, ಆ ಹುಡುಗಾಟಿಕೆಗೆ ಜನ ಬೆಚ್ಚಿ ಬಿದ್ದು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆ.

ಸಿದ್ದರಾಮಯ್ಯನವರು ಕೈಬಿಟ್ಟ ಕ್ಷೇತ್ರ ವಿರೋಧಿಗಳ ಪಾಲಾಗಿದೆ. ವರುಣಾ ಕ್ಷೇತ್ರಕ್ಕೆ ಸೇರಿದ, ಯಡಿಯೂರಪ್ಪನವರ ಬಲಗೈ ಬಂಟ ಕಾಪು ಸಿದ್ದಲಿಂಗಸ್ವಾಮಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹುಟ್ಟಿದೆ. ಜೊತೆಗೆ ಕ್ಷೇತ್ರದಲ್ಲಿ 42 ಸಾವಿರ ಲಿಂಗಾಯತ ಕೋಮಿನ ಮತದಾರರಿರುವುದು, ಇದಕ್ಕೆ ಸುತ್ತೂರು ಸ್ವಾಮಿಗಳ ಸಹಕಾರವಿರುವುದು ಸಿದ್ದಲಿಂಗಸ್ವಾಮಿಗೆ ಆನೆಬಲ ಬಂದಂತಾಗಿದೆ. ಅಷ್ಟೇ ಅಲ್ಲ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಸಿದ್ದಲಿಂಗಸ್ವಾಮಿಗೆ ತಾವೇ ಶಾಸಕರಂತೆ ಓಡಾಡುತ್ತ, ಸರ್ಕಾರದಿಂದ ಹತ್ತೆಂಟು ಕೋಟಿ ರೂಪಾಯಿಗಳ ಯೋಜನೆಗಳನ್ನು ತಂದು ಸುರಿಯುತ್ತ, ಕೇಳಿದವರಿಗೆಲ್ಲ ಹಣ ಕೊಟ್ಟು ಆಪ್ತರಾಗಿದ್ದಾರೆ. ಸಿದ್ದರಾಮಯ್ಯನವರ ಮಗನ ಅಟಾಟೋಪಕ್ಕೆ ಬೇಸತ್ತಿದ್ದ ಜನ ಸಿದ್ದಲಿಂಗಸ್ವಾಮಿ ಕೆಲಸ ಮತ್ತು ಹಣಕ್ಕೆ ಮನಸೋತು, ಅವರಿಗಿಂತ ಇವರೇ ವಾಸಿ ಎನ್ನತೊಡಗಿದ್ದಾರೆ.

ಮತ್ತೊಂದು ಬದಿಯಿಂದ ಜೆಡಿಎಸ್‌ನ ದೇವೇಗೌಡರು, “ಬೆನ್ನಿಗೆ ಚೂರಿ ಹಾಕಿ ಹೋದವನು, ಅದು ಹೇಗೆ ಮುಖ್ಯಮಂತ್ರಿಯಾಗುತ್ತಾನೋ ನೋಡ್ತೀನಿ” ಎಂದು ಹಠಕ್ಕೆ ಬಿದ್ದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದು ಎದುರಿಗೆ ನಿಲ್ಲಿಸಲು ಐನಾತಿ ಆಸಾಮಿಯನ್ನೇ ಅಭ್ಯರ್ಥಿಯನ್ನಾಗಿ ಹುಡುಕಿದ್ದಾರೆ. ಮೈಸೂರಿನ ದೇವರಾಜ ಠಾಣೆಯಲ್ಲಿ ಎಸಿಪಿಯಾಗಿದ್ದ ಚೆಲುವರಾಜು ಎಂಬ ನಾಯಕ ಜನಾಂಗದ ಪೊಲೀಸ್ ಅಧಿಕಾರಿ, ಸ್ವಯಂನಿವೃತ್ತಿ ಪಡೆದು ಮನೆಗೆ ಮರಳಿದ್ದಾರೆ. ಜೊತೆಗೆ ಸೇವೆಯಲ್ಲಿದ್ದಾಗ ಒಳ್ಳೆಯ ಹೆಸರನ್ನೂ ಸಂಪಾದಿಸಿದ್ದಾರೆ. ಈಗ ಗೌಡರು ಈ ಚೆಲುವರಾಜು ಅವರನ್ನು ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿಸುತ್ತಿದ್ದಾರೆ. ಹಾಗೆ ನೋಡಿದರೆ, ವರುಣಾ ಕ್ಷೇತ್ರದಲ್ಲಿ 35 ಸಾವಿರ ಕುರುಬ ಮತದಾರರಿದ್ದಾರೆ. ಇವರಷ್ಟೇ ಸಂಖ್ಯೆಯಲ್ಲಿ ನಾಯಕರ ಜನಾಂಗದ ಜನರೂ ಇದ್ದಾರೆ.

ಇದಷ್ಟೇ ಅಲ್ಲ, ಮುಂಬರುವ ಚುನಾವಣೆ ಮತ್ತು ಚುನಾವಣಾ ನಂತರ ಬಿಜೆಪಿ-ಜೆಡಿಎಸ್ ಒಂದಾಗುವ ಸೂಚನೆಗಳಿವೆ. KS-Eshwarappaಒಳಒಪ್ಪಂದವೂ ನಡೆದಿದೆ. ಹೀಗಾಗಿ ದೇವೇಗೌಡರ ಮಾತು ಈಗ ಬಿಜೆಪಿಗೆ ವೇದವಾಕ್ಯವಾಗಿದೆ. ಮೊದಲೇ ಸಿದ್ಧರಾಮಯ್ಯನವರನ್ನು ಕಂಡರಾಗದ ಈಶ್ವರಪ್ಪ, ದೇವೇಗೌಡರ ತಂತ್ರಕ್ಕೆ ತಲೆಬಾಗಿ ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದೆ ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಿದರೆ, ಬಿಜೆಪಿಯ ಮತಗಳ ಜೊತೆಗೆ ಜೆಡಿಎಸ್‌ನ ಮತಗಳು ಸೇರಿ ನಾಯಕ ಜನಾಂಗದ ಚೆಲುವರಾಜು, ಸಿದ್ದರಾಮಯ್ಯನವರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಇದೇ ಫಾರ್ಮುಲಾ 2006 ರಲ್ಲಿ ನಡೆದ ವರುಣಾ ಉಪಚುನಾವಣೆಯಲ್ಲಿ ಕಾರ್ಯರೂಪಕ್ಕೆ ಬಂದಿತ್ತು, ಕೇವಲ 257 ಓಟುಗಳಿಂದ ಸಿದ್ಧರಾಮಯ್ಯ ಏದುಸಿರು ಬಿಟ್ಟು ಗೆದ್ದಿದ್ದರು. ಇದು ಮತ್ತೆ ಪುನರಾವರ್ತನೆಯಾಗಲಿದೆ.

ಹಾಗೆಯೇ ಮತ್ತೊಂದು ಬದಿಯಿಂದ ಕಾಪು ಸಿದ್ದಲಿಂಗಸ್ವಾಮಿ, ಸುತ್ತೂರು ಸ್ವಾಮಿ, ಯಡಿಯೂರಪ್ಪನವರ ಹೊಡೆತವೂ ಬಿದ್ದರೆ ಸಿದ್ದು ಮೇಲೇಳುವುದು ಕಷ್ಟವಿದೆ. ಇದಲ್ಲಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ವಿರೋಧಿ ಗುಂಪು ಒಳಗಿಂದೊಳಗೇ ಸಿದ್ದರಾಮಯ್ಯನವರ ವಿರೋಧಿಗಳೊಂದಿಗೆ ಕೈ ಜೋಡಿಸಿದರೆ, ಅಲ್ಲಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಿರಲಿ, ಶಾಸಕರಾಗುವುದೂ ಕಷ್ಟವಾಗುತ್ತದೆ.

ಈಗ ಸಿದ್ದರಾಮಯ್ಯನವರ ಮುಂದಿರುವ ದಾರಿ- ತಮ್ಮ ಗುಣಸ್ವಭಾವವನ್ನು ಬದಲಿಸಿಕೊಳ್ಳುವುದು, ಕಾಂಗ್ರೆಸ್ ಕಲ್ಚರ್ ಅಳವಡಿಸಿಕೊಳ್ಳುವುದು, ವಿರೋಧಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು. ಇದು ಸಿದ್ದರಾಮಯ್ಯನವರಿಗೆ ಸಾಧ್ಯವೇ?

ಯಡಿಯೂರಪ್ಪ ಮತ್ತು ನಿರಾಣಿಯ ತಪ್ಪು ಕಂಡುಹಿಡಿದ ಲೋಕಾಯುಕ್ತ ಪೋಲಿಸರು…

– ರವಿ ಕೃಷ್ಣಾರೆಡ್ಡಿ

ಅಕ್ಟೋಬರ್  18, 2011 ರಂದು ವರ್ತಮಾನ.ಕಾಮ್‌ನಲ್ಲಿ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…” ವರದಿ ದಾಖಲೆಗಳ ಸಮೇತ ಪ್ರಕಟವಾಗಿತ್ತು. ಆಗ ಈ ಕೇಸು ಲೋಕಾಯುಕ್ತ ನ್ಯಾಯಾಲಯದಲ್ಲಿತ್ತು ಮತ್ತು ಲೋಕಾಯುಕ್ತ ಪೋಲಿಸರು ತನಿಖೆ ನಡೆಸುತ್ತಿದ್ದರು. ಎಷ್ಟೋ ತಿಂಗಳಗಳ ನಂತರ, ಬಹುಶಃ ವರ್ಷದ ನಂತರ, ನಮ್ಮ ಘನ, ದಕ್ಷ ಲೋಕಾಯುಕ್ತ ಪೋಲಿಸರು ಈ ಕೇಸಿನಲ್ಲಿ ಸತ್ಯಾಂಶ ಇಲ್ಲ ಎಂದು ನವೆಂಬರ್ 13, 2012 ರಂದು ನ್ಯಾಯಾಲಯಕ್ಕೆ ’ಬಿ’ ರಿಪೋರ್ಟ್ ಸಲ್ಲಿಸಿದರು. DC-bsy-nirani-lokayukta_141112ನ್ಯಾಯಾಲಯ ಅದನ್ನು ತಿರಸ್ಕರಿಸಿ ಮತ್ತೊಮ್ಮೆ ತನಿಖೆಗೆ ಆದೇಶಿಸಿತು.

ಮತ್ತೆ ತಿಂಗಳುಗಳಾದ ಮೇಲೆ, ನೆನ್ನೆ, ನಮ್ಮ ದಕ್ಷ ಮತ್ತು ನಿಷ್ಪಕ್ಷಪಾತಿ ಲೋಕಾಯುಕ್ತ ಪೋಲಿಸರು ಲೊಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎರಡನೆ ವರದಿ ಸಲ್ಲಿಸಿದ್ದಾರೆ. ಈ ಬಾರಿ ಯಡಿಯೂರಪ್ಪ ಮತು  ಸಚಿವ ಮುರುಗೇಶ್ ನಿರಾಣಿಯ ವಿರುದ್ಧದ ಆರೋಪದಲ್ಲಿ ನಿಜಾಂಶ ಇದೆ ಎಂದಿದ್ದಾರೆ. ನ್ಯಾಯಾಲಯದ ಅಭಿಪ್ರಾಯ ಇನ್ನೂ ಪ್ರಕಟವಾಗಿಲ್ಲ.

ಲೋಕಾಯುಕ್ತ ಪೋಲಿಸರಿಗೆ ಈಗ ಯಾವ ಹೊಸ ವಿವರಗಳು ಸಿಕ್ಕವು ಗೊತ್ತಿಲ್ಲ. ಆದರೆ, ಲೋಕಾಯುಕ್ತ ಪೋಲಿಸರು ಹಾಕುತ್ತಿದ್ದ ಮತ್ತು ಹಾಕುತ್ತಿರುವ ’ಬಿ’ ರಿಪೋರ್ಟ್‌ಗಳು ಎಷ್ಟು ಅಸಂಬದ್ಧ ಎಂದು ಇದರಿಂದ ಗೊತ್ತಾಗುತ್ತದೆ. ರಾಜಕೀಯ ಹಸ್ತಕ್ಷೇಪದಿಂದ ಲೋಕಾಯುಕ್ತ ಸಂಸ್ಥೆಯನ್ನು ಮುಕ್ತಗೊಳಿಸಿ ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡದಿದ್ದರೆ ಆ ಸಂಸ್ಥೆ ಪೋಲಿಸ್ ಇಲಾಖೆಯ ಹೆಚ್ಚುವರಿ ಅಂಗ ಮಾತ್ರವಾಗಿರುತ್ತದೆ.

ಇನ್ನು ಫ್ರಾಡ್‌ಗಳೆಲ್ಲ ಈ ರಾಜ್ಯದಲ್ಲಿ ಮಂತ್ರಿಗಳಾಗಿ ಮುಂದುವರೆಯುತ್ತಲೇ ಇದ್ದಾರೆ. ಲೊಕಾಯುಕ್ತ ಪೋಲಿಸರು ಸರಿಯಾಗಿ ತನಿಖೆ ನಡೆಸಿ ಶೀಘ್ರಗತಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುವು ಮಾಡಿಕೊಟ್ಟರೆ ನಮ್ಮ ಅನೇಕ ಭ್ರಷ್ಟ ರಾಜಕಾರಣಿಗಳು ಜೈಲಿನಲ್ಲಿದ್ದು ನಮ್ಮ ರಾಜಕೀಯ ಕ್ಷೇತ್ರ ಅಷ್ಟು ಮಾತ್ರಕ್ಕಾದರೂ ಶುದ್ದವಾಗಿರುತ್ತಿತ್ತು. ಆದರೆ,  ಕೊತ್ವಾಲನೂ ಕಳ್ಳರೊಂದಿಗೆ ಶಾಮೀಲಾಗಿರುವಾಗ ಅಥವ ಮಂತ್ರಿಯೇ ಕಳ್ಳನಾಗಿರುವಾಗ ಅವನ ಕೆಳಗಿರುವ ಕೊತ್ವಾಲ ತಾನೆ ಏನು ಮಾಡುತ್ತಾನೆ? ಲೊಕಾಯುಕ್ತ ಸಂಸ್ಥೆಯ ಸ್ವಾಯತ್ತತೆಗಾಗಿ ನಮ್ಮ ರಾಜಕೀಯ ಪಕ್ಷಗಳನ್ನು ಜನರು ಒತ್ತಾಯಿಸಬೇಕಿದೆ.

ವಿಜಯ ಕರ್ನಾಟಕ:

bsy-nirani-pasha

The Hindu:

thehindu-bsy-nirani-lokayukta

 

ಅತಿ ದೈವಭಕ್ತಿ ಇದ್ದೂ ನಮ್ಮ ದೇಶ ನಾಗರಿಕತೆಯಲ್ಲಿ ಯಾಕೆ ಹಿಂದೆ?

– ಆನಂದ ಪ್ರಸಾದ್

ನಮ್ಮ ದೇಶವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಅಧ್ಯಾತ್ಮಿಕ ಪರಂಪರೆ ಹೊಂದಿದೆ ಹಾಗೂ ಪ್ರಪಂಚದಲ್ಲೇ ಶ್ರೇಷ್ಠ ಸಂಸ್ಕೃತಿ ಉಳ್ಳ ದೇಶವೆಂದು ಹಿಂದುತ್ವವಾದಿಗಳು ಅವಕಾಶ ಸಿಕ್ಕಿದಾಗಲೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಮ್ಮ ದೇಶದ ಎಲ್ಲಾ ರಂಗಗಳಲ್ಲೂ ಇದಕ್ಕೆ ವ್ಯತಿರಿಕ್ತವಾದ ಅನುಭವ ಜನತೆಗೆ ಆಗುತ್ತಾ ಇರುತ್ತದೆ. ನಮ್ಮ ದೇಶದ ಜನ ದೇವರಲ್ಲಿ ಅಪಾರವಾದ ಭಕ್ತಿ ಹಾಗೂ ಶ್ರದ್ಧೆ ತೋರಿಸುತ್ತಾರೆಯೇ ವಿನಃ ಅದೇ ಶ್ರದ್ಧೆ ಹಾಗೂ ಕಾಳಜಿಯನ್ನು ತಮ್ಮ ಸಹಮಾನವರ ಬಗ್ಗೆ ತೋರಿಸುವುದಿಲ್ಲ. ಹೀಗಾಗಿ ಆಧ್ಯಾತ್ಮಿಕ ಶ್ರದ್ಧೆ ಹಾಗೂ ದೇವರ ಭಕ್ತಿಗೂ ಹಾಗೂ ನಾಗರಿಕತೆಯ ವಿಕಾಸಕ್ಕೂ ಸಂಬಂಧ ಇರುವಂತೆ ಕಾಣುವುದಿಲ್ಲ. tirupati-brahmotsavತೀರಾ ಇತ್ತೀಚೆಗಿನ ಕೆಲವು ಶತಮಾನಗಳ ಇತಿಹಾಸವುಳ್ಳ ಅಮೇರಿಕಾ ಹಾಗೂ ಯೂರೋಪಿನ ದೇಶಗಳು ನಾಗರಿಕತೆಯಲ್ಲಿ ನಮಗಿಂತ ಮುನ್ನಡೆ ಸಾಧಿಸಿರುವುದು ಕಂಡುಬರುತ್ತದೆ. ಅಲ್ಲಿನ ದೇಶಗಳು ತಮ್ಮ ನಾಗರಿಕರ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿವೆ. ಅಲ್ಲಿನ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳಿರಲಿ, ರಾಜಕಾರಣಿಗಳಿರಲಿ ನಮ್ಮ ದೇಶಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಕಾಳಜಿಯನ್ನು ತಮ್ಮ ದೇಶದ ಪ್ರಜೆಗಳ ಬಗ್ಗೆ ತೋರಿಸುತ್ತಾರೆ. ತೀರಾ ಇತ್ತೀಚೆಗಿನ ಇತಿಹಾಸ ಉಳ್ಳ ಅಲ್ಲಿನ ದೇಶಗಳು ಇದನ್ನು ಸಾಧಿಸಿರುವುದು ಅಲ್ಲಿನ ನಾಗರಿಕತೆ ನಮ್ಮ ದೇಶಕ್ಕಿಂತ ಮುಂದುವರಿದಿರುವುದನ್ನು ತೋರಿಸುತ್ತದೆ.

ನಮ್ಮ ದೇಶದಲ್ಲಿ ರಾಜಕಾರಣಿಗಳಾಗಲಿ, ಸರ್ಕಾರೀ ಅಧಿಕಾರಿಗಳಾಗಲೀ ಹೆಚ್ಚಿನವರೂ ಪರಮ ದೈವಭಕ್ತರೇ ಆಗಿರುತ್ತಾರೆ. ಇಂಥ ದೈವಶ್ರದ್ಧೆ ಇದ್ದೂ ಭ್ರಷ್ಟಾಚಾರ, ಮೋಸ, ವಂಚನೆ, ತಮ್ಮ ಕೆಲಸ ನಿರ್ವಹಿಸುವಲ್ಲಿ ಉದಾಸೀನತೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ದೈವಭಕ್ತಿ ತಮ್ಮ ಸ್ವಾರ್ಥ ಸಾಧನೆಗೆ ಮಾತ್ರ ನಮ್ಮ ಜನರಲ್ಲಿ ಇರುವಂತೆ ಕಂಡುಬರುತ್ತದೆ. ನಮ್ಮ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿವರ್ಗ ಭ್ರಷ್ಟಾಚಾರದಲ್ಲಿ ಇಡೀ ಪ್ರಪಂಚದಲ್ಲೇ ಮೊದಲ ಕೆಲ ಸ್ಥಾನಗಳಲ್ಲೇ ಇರುತ್ತಾರೆ. ದೈವಭಕ್ತರಲ್ಲಿ ತಮ್ಮ ಸಹಮಾನವರ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲದೆ ಹೋದರೆ ದೈವಭಕ್ತಿ ಇದ್ದು ಏನು ಪ್ರಯೋಜನ? ಯುರೋಪ್ ಹಾಗೂ ಅಮೇರಿಕಾ ದೇಶಗಳ ಉದ್ಯಮಿಗಳು ನಮ್ಮ ದೇಶದ ಉದ್ಯಮಿಗಳಷ್ಟು ಪರಮ ದೈವಭಕ್ತರಲ್ಲದಿದ್ದರೂ tirupati-brahmotsavತಮ್ಮ ಸಂಪಾದನೆಯ ಬಹುಪಾಲನ್ನು ಸಮಾಜದ ಒಳಿತಿಗೆ ದಾನ ಮಾಡುವ ಕಾಳಜಿ ತೋರಿಸುತ್ತಾರೆ. ಆದರೆ ಪರಮ ದೈವಭಕ್ತರಾಗಿರುವ ನಮ್ಮ ಕೋಟ್ಯಾಧಿಪತಿ ಉದ್ಯಮಿಗಳು ಸಮಾಜದ ಒಳಿತಿಗೆ ದಾನ ನೀಡುವ ಪ್ರಮಾಣ ಬಹಳ ಕಡಿಮೆ ಇದೆ. ನಿಜವಾಗಿ ಪರಮ ದೈವಭಕ್ತರಲ್ಲಿ ಈ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗಿತ್ತು.

ಪಾಶ್ಚಾತ್ಯ ದೇಶಗಳಲ್ಲಿ ಉದ್ಯೋಗದ ಹಿನ್ನೆಲೆಯಲ್ಲಿ ಮೇಲು ಕೀಳು ಎಂದು ಸಾಮಾಜಿಕ ಭೇದಭಾವ ಪ್ರವೃತ್ತಿ ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಅತ್ಯಂತ ವಿದ್ಯಾವಂತ ವರ್ಗ ಕೂಡ ವ್ಯಕ್ತಿಯ ಉದ್ಯೋಗ ನೋಡಿಕೊಂಡು ಮೇಲುಕೀಳು ತಾರತಮ್ಯ ತೋರಿಸುವ ಪ್ರವೃತ್ತಿ ಎದ್ದು ಕಾಣುತ್ತದೆ. ಜಾತಿ ತಾರತಮ್ಯ ಇದ್ದದ್ದೇ. ಇದು ನಾವು ಪಾಶ್ಚಾತ್ಯರಿಗಿಂತ ನಾಗರಿಕತೆಯಲ್ಲಿ ಹಿಂದುಳಿದಿರುವುದನ್ನು ತೋರಿಸುತ್ತದೆ. ಸಹಸ್ರಾರು ವರ್ಷಗಳ ಸಂಸ್ಕೃತಿ ಹೊಂದಿದೆ ಎಂದು ಹೇಳಲಾಗುವ ನಮಗಿಂತ ಕೆಲವು ನೂರು ವರ್ಷಗಳ ಸಂಸ್ಕೃತಿ ಹೊಂದಿರುವ ಪಾಶ್ಚಾತ್ಯರು ತಮ್ಮ ನಾಗರಿಕರ ನಡುವೆ ಪರಸ್ಪರ ಸಾಧಿಸಿರುವ ಈ ಸಮಾನತೆ ಅವರನ್ನು ನಾಗರಿಕತೆಯಲ್ಲಿ ದೈವಭಕ್ತ ನಮ್ಮ ಸಮಾಜಕ್ಕಿಂತ ಎಷ್ಟೋ ಎತ್ತರದಲ್ಲಿ ನಿಲ್ಲಿಸುತ್ತದೆ. ಪ್ರಾಮಾಣಿಕತೆ, ಸಹಮಾನವರಿಗೆ ತೋರಿಸುವ ಕಾಳಜಿಯಲ್ಲೂ ಪಾಶ್ಚಾತ್ಯ ದೇಶಗಳ ನಾಗರಿಕರು ನಮಗಿಂತ ಎಷ್ಟೋ ಎತ್ತರದಲ್ಲಿ ನಿಂತಿರುವುದು ಕಂಡುಬರುತ್ತದೆ. ನಮ್ಮ ದೇಶದಲ್ಲಿ ನಾವು ಯಾವುದಾದರೂ ವ್ಯಕ್ತಿಗಳಿಗೆ ಅಥವಾ ಏನಾದರೂ ಮಾಹಿತಿ ಕೇಳಿ ಪತ್ರ ಬರೆದರೆ ಬಹಳಷ್ಟು ಸಂದರ್ಭಗಳಲ್ಲಿ ಉತ್ತರ ಬರುವುದಿಲ್ಲ. ಆದರೆ ಪಾಶ್ಚಾತ್ಯ ದೇಶಗಳ ಜನರಿಗೆ ಯಾವುದೇ ಮಾಹಿತಿ ಕೇಳಿ ಪತ್ರ ಬರೆದರೂ ಹೆಚ್ಚಿನ ಸಂದರ್ಭಗಳಲ್ಲೂ, ನಮಗೆ ಅವರು ಪರಿಚಿತರಲ್ಲದಿದ್ದರೂ ಉತ್ತರ ಬರುತ್ತದೆ.

ನಮ್ಮ ದೇಶದಲ್ಲಿ ಯಾವುದೇ ಯೋಜನೆ ಕೈಗೊಂಡರೂ ನಿರಾಶ್ರಿತಗೊಂಡವರಿಗೆ, ಸಂತ್ರಸ್ತರಿಗೆ ದಶಕಗಳೇ ಕಳೆದರೂ ಸಮರ್ಪಕ ಪರಿಹಾರ ದೊರೆಯುವುದಿಲ್ಲ. ಕೈತುಂಬಾ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಎಂದೂ ಸ್ಪಂದಿಸುವುದಿಲ್ಲ. maha-kumbhಆದರೆ ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ನಾಗರಿಕರಿಗೆ, ಯೋಜನೆಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ದೊರಕುತ್ತದೆ. ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಶೀಘ್ರ ಸ್ಪಂದಿಸುತ್ತಾರೆ. ಪ್ರಪಂಚದಲ್ಲಿಯೇ ನಮ್ಮದು ಅತ್ಯುನ್ನತ ನಾಗರಿಕತೆ, ಸಂಸ್ಕೃತಿ ಎಂದು ನಮ್ಮ ಹಿಂದುತ್ವವಾದಿಗಳು ಹಾಗೂ ಆಧ್ಯಾತ್ಮವಾದಿಗಳು ಇಲ್ಲಿ ಜಂಭ ಕೊಚ್ಚುತ್ತಾರಾದರೂ ಇಲ್ಲಿನ ಅಧಿಕಾರಿಗಳ ಜನಪರ ಕಾಳಜಿ ಶೂನ್ಯದ ಸಮೀಪ ಇರುತ್ತದೆ. ಅಧ್ಯಾತ್ಮ ಹಾಗೂ ದೈವಭಕ್ತಿಗೂ ಜನರ ನಾಗರಿಕತೆಯ ಮಟ್ಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಇದರಿಂದ ಕಂಡುಬರುತ್ತದೆ. ನಮ್ಮ ದೈವಭಕ್ತಿ ಹಾಗೂ ಆಧ್ಯಾತ್ಮದ ಅತಿ ಗೀಳು ನಮ್ಮಲ್ಲಿ ಉನ್ನತ ನಾಗರಿಕತೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿಲ್ಲ. ರಾಜಕೀಯ ನಾಯಕರಲ್ಲಿ ಧರ್ಮ, ದೈವಭಕ್ತಿ ಬಗ್ಗೆ ಬಹಳ ಮಾತಾಡುವವರಲ್ಲಿಯೇ ಸಹಮಾನವರ ಬಗ್ಗೆ ಕಾಳಜಿ ಕಡಿಮೆ ಇರುವುದು ಕಂಡುಬರುತ್ತದೆ. ಧರ್ಮ, ದೇವರ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಪಕ್ಷಗಳಲ್ಲೇ ಹೆಚ್ಚಿನ ಭ್ರಷ್ಟಾಚಾರ, ಸಂವೇದನಾಹೀನತೆ ಇರುವ ರಾಜಕಾರಣಿಗಳು ಕಂಡುಬರುತ್ತಾರೆ. ಇಂಥ ರಾಜಕೀಯ ಪಕ್ಷಗಳು ಬೆಳವಣಿಗೆಯಾದ ನಂತರ ನಮ್ಮ ದೇಶದ ರಾಜಕೀಯ ಮತ್ತಷ್ಟು ಕಲುಷಿತವಾಗಿದೆ. ಹೀಗಾಗಿ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಜನರ ಬಗ್ಗೆ ನಾವು ಜಾಗೃತರಾಗದೆ ದೇಶದ ನಾಗರಿಕತೆಯ ವಿಕಾಸ ಸಾಧ್ಯವಿರುವಂತೆ ಕಾಣುವುದಿಲ್ಲ.