Monthly Archives: June 2013

ಯುದ್ಧಭೂಮಿಯಲ್ಲಿ ಶಸ್ತ್ರತ್ಯಾಗ ಮಾಡಿದ ದಂಡನಾಯಕ

– ಚಿದಂಬರ ಬೈಕಂಪಾಡಿ

ಬಿಜೆಪಿಯ ಎಲ್ಲಾ ಹುದ್ದೆಗಳಿಗೆ ಎಲ್.ಕೆ.ಅಡ್ವಾಣಿ ಅವರ ರಾಜೀನಾಮೆ ಸೋಮವಾರದ ದೊಡ್ಡ ಸುದ್ದಿ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆರು ದಶಕಗಳ ಅಡ್ವಾಣಿ ಅವರ ರಾಜಕೀಯವನ್ನು , ರಾಜಕಾರಣಿಗಳನ್ನು ಬಹಳ ಹತ್ತಿರದಿಂದ ಗಮನಿಸುತ್ತಿರುವ ಮಾಧ್ಯಮ ಮಂದಿಯ ಪೈಕಿ ಬಹಳ ಮಂದಿ ಈಗ ಸಕ್ರಿಯರಲ್ಲ. ಅಷ್ಟೊಂದು ಸುದೀರ್ಘ ಅವಧಿಯ ರಾಜಕೀಯ ಒಳನೋಟ ಹೊಂದಿರುವ ಅಡ್ವಾಣಿ ಏಕಾಏಕಿ ರಾಜೀನಾಮೆ ಕೊಟ್ಟಿರುವುದು Advaniಮಾಧ್ಯಗಳಿಗೆ ಬ್ರೇಕಿಂಗ್ ನ್ಯೂಸ್ ಹೊರತು ಅವರ ಪಕ್ಷದಲ್ಲಿ ಅವರನ್ನು ಹತ್ತಿರದಿಂದ ನೋಡುತ್ತಿದ್ದವರಿಗೆ ಅಂಥದ್ದೇನೂ ಶಾಕಿಂಗ್ ನ್ಯೂಸ್ ಅಲ್ಲ. ಆ ಕೆಲಸವನ್ನು ಅಡ್ವಾಣಿ ಬಹಳ ಹಿಂದೆಯೇ ಮಾಡಬೇಕಾಗಿತ್ತು ಎನ್ನುವವರೇ ಹೆಚ್ಚು. ಎಂಟು ವರ್ಷಗಳ ಅವಧಿಯಲ್ಲಿ ಅಡ್ವಾಣಿಯವರು ಮೂರು ಸಲ ರಾಜೀನಾಮೆ ಕೊಟ್ಟಿರುವುದರಿಂದ ಮನವೊಲಿಕೆಗೆ ಅವಕಾಶವಿದೆ ಎನ್ನುವ ವಿಶ್ವಾಸವೂ ಇದೆ.

ಅಡ್ವಾಣಿ ಅವರ ರಾಜೀನಾಮೆ ನಿರ್ಧಾರ ಅವರ ಸ್ವಂತದ್ದು ಅಂದುಕೊಂಡರೂ, ಅದು ಸರಿಯೆಂದು ಹೇಳಬಹುದಾದರೂ ಅವರಂಥ ಹಿರಿಯರು ರಾಜೀನಾಮೆ ಕೊಡಲು ಆಯ್ಕೆ ಮಾಡಿಕೊಂಡ ಸಂದರ್ಭ ಸೂಕ್ತವಲ್ಲ ಎನ್ನುವುದು. ಅವರು ಎತ್ತಿರುವ ಮೂಲಭೂತ ಪ್ರಶ್ನೆಯೂ ಕೂಡಾ ಹಳೆತಲೆಮಾರಿನವರಿಗೆ ಸರಿಯೆಂದು ಕಂಡು ಬಂದರೂ ಈಗಿನ ಪೀಳಿಗೆಗೆ ರುಚಿಸುವುದಿಲ್ಲ.

ನರೇಂದ್ರ ಮೋದಿ ಅವರನ್ನು ತಮ್ಮ ಆಕ್ಷೇಪಣೆಯ ಹೊರತಾಗಿಯೂ ಸರ್ವಸಮ್ಮತವಾಗಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅಡ್ವಾಣಿ ಅವರ ಈ ನಿರ್ಧಾರಕ್ಕೆ ಕಾರಣವೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಹಾಗೆಂದು ಮೋದಿ ಅವರಿಗೆ ಯಾವುದೇ ಹುದ್ದೆಯನ್ನೇ ಕೊಡಬಾರದೆಂದು ಅವರು ವಾದಿಸಿರಲಿಲ್ಲ.
ರಾಜಕೀಯದಲ್ಲಿ ಪಕ್ಷ ವ್ಯಕ್ತಿಕೇಂದ್ರೀಕೃತವಾಗುವುದು ಅಪಾಯಕಾರಿ. ಯಾವುದೇ ಸಂದರ್ಭದಲ್ಲೂ ಹೀಗಾಗಬಾರದು. ಈ ಮಾತು ಸ್ವತ: ಅಡ್ವಾಣಿಯವರಿಗೂ ಅನ್ವಯಿಸುತ್ತದೆ. ಅಲ್ಲವೆಂದಾದರೆ ಅಡ್ವಾಣಿ ತಾವು ವಹಿಸಿಕೊಂಡಿದ್ದ ಹುದ್ದೆಗಳಿಗೆ ರಾಜೀನಾಮೆ ಕೊಟ್ಟ ಕೂಡಲೇ ಬಿಜೆಪಿ ನಾಯಕರು ಇಷ್ಟೊಂದು ಘಾಸಿಗೊಳ್ಳುವ ಅಗತ್ಯವೇನಿತ್ತು?. ಅಡ್ವಾಣಿ ನಿರ್ಗಮಿಸಿದರೆ ಆ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಬಹುದು ಎನ್ನುವ ಹಲವು ಆಯ್ಕೆಗಳು ಬಿಜೆಪಿಯಲ್ಲಿರಬೇಕಿತ್ತು, ಆದರೆ ಅಲ್ಲಿ ಇಲ್ಲ. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಅವರನ್ನು ಹೊರತು ಪಡಿಸಿದರೆ ಬಹುದೊಡ್ಡ ನಿರ್ವಾತ ಬಿಜೆಪಿಯಲ್ಲಿದೆ. ಯಾವ ಕಾರಣಕ್ಕೆ ಇಂಥ ನಿರ್ವಾತ ಉಂಟಾಗಿದೆ ಅಂದರೆ ಬಿಜೆಪಿ ಕೆಲವೇ ಕೆಲವು ವ್ಯಕ್ತಿಕೇಂದ್ರೀಕೃತವಾಗಿ ಬೆಳೆಯಿತು ಎನ್ನಬಹುದು ಅಥವಾ ನಿರ್ಧಾರಗಳು ಕೆಲವೇ ವ್ಯಕ್ತಿಗಳ ಮೂಲಕ ಆದವು, ಅವುಗಳೇ ಮುಂದೆ ಪಕ್ಷದ ನಿರ್ಧಾರಗಳೆನಿಸಿದವು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಇಂಥ ನಿರ್ವಾತವನ್ನು ಅಡ್ವಾಣಿಯವರು ಗುರುತಿಸಿದ್ದಾರೆ. ಅದನ್ನು ತುಂಬಬಲ್ಲವರು ಎನ್ನುವ ಕಾರಣಕ್ಕಾಗಿಯೇ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ಉಮಾಭಾರತಿ ಹೀಗೆ ಕನಿಷ್ಠ ೨೫ ಮಂದಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದ್ದಾರೆ. ಇವರು ಎಂದೂ ಅಡ್ವಾಣಿಯವರ ಮಾತನ್ನು ಮೀರಿದವರಲ್ಲ. ಗೋಧ್ರಾ ಘಟನೆ ನಡೆದ ಮೇಲೆ ಮೋದಿ ಅಧಿಕಾರಕ್ಕೆ ಕುತ್ತು ಬರುವಂಥ ಸಂದರ್ಭದಲ್ಲೂ ಇದೇ ಉಕ್ಕಿನಮನುಷ್ಯ ಬೆಂಬಲಕ್ಕೆ ನಿಂತು ಅಧಿಕಾರದಲ್ಲಿ ಉಳಿಸಿದ್ದವರು ಎನ್ನುವುದನ್ನು ಮರೆಯುವುದಾದರೂ ಹೇಗೆ?. ಆದರೆ ಶಿಷ್ಯನೇ ಬಿಜೆಪಿಯ ನಿರ್ವಾತ ತುಂಬುವಂಥ ಸಂದರ್ಭದಲ್ಲಿ ಅಡ್ವಾಣಿಗೆ ಬೇಸರ ಯಾಕೆ ? ಎನ್ನುವ ಪ್ರಶ್ನೆಯೂ ಮೂಡುತ್ತದೆ.
ಅಡ್ವಾಣಿ ಅನೇಕ ಸಂದರ್ಭಗಳಲ್ಲಿ ಎಡವಿದ್ದಾರೆ. ಹಾಗೆ ಎಡವಿದ್ದೆಲ್ಲವೂ ತಮ್ಮ ಶಿಷ್ಯರ ಕಾರಣಕ್ಕೆ. ಉಮಾಭಾರತಿ, ವಸುಂದರರಾಜೇ, ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ, ನಿತಿನ್ ಗಡ್ಕರಿ ನಿಯೋಜನೆ ಹೀಗೆ ಹಲವು ಘಟನೆಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. Narendra_Modiಸ್ವತ: ಗುಜರಾತ್‌ನಲ್ಲೂ ಅಡ್ವಾಣಿ ಬಿಜೆಪಿಯ ಹಿರಿಯ ನಾಯಕರೆಂಬ ಗೌರವ ಇದೆಯಾದರೂ ತಮ್ಮ ನಾಯಕ ನರೇಂದ್ರ ಮೋದಿ ಎಂದು ಅಲ್ಲಿನ ಬಿಜೆಪಿ ಮಂದಿ ಭಾವಿಸಿರುವುದಕ್ಕೆ ಹೊಣೆ ಯಾರು?. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ನಿರೀಕ್ಷೆಯಿಟ್ಟುಕೊಳ್ಳದೆ ಮೋದಿ ಜಯಭೇರಿ ಭಾರಿಸಿರುವುದನ್ನು ಹೇಗೆ ವ್ಯಾಖ್ಯಾನಿಸಬೇಕು?. ಒಂದೇ ಮಾತಲ್ಲಿ ಹೇಳುವುದಿದ್ದರೆ ನರೇಂದ್ರ ಮೋದಿ ತಮ್ಮದೇ ಇಮೇಜ್ ಬೆಳೆಸಿಕೊಂಡು ಬಿಜೆಪಿಗೆ ಬಲ ಕೊಡುತ್ತಿದ್ದಾರೆ. ಇಲ್ಲೂ ನರೇಂದ್ರ ಮೋದಿ ವ್ಯಕ್ತಿ ಕೇಂದ್ರೀಕೃತವಾಗಿ ಬೆಳೆದುನಿಂತಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ಧಾರಗಳು ಗುಜರಾತ್‌ಗೆ ಅನ್ವಯಿಸಲಾರವು. ಮೋದಿ ಹೇಳುವುದೇ ಅಲ್ಲಿ ಅಂತಿಮ ಹೊರತು ಹೈಕಮಾಂಡ್ ನಿರ್ಧಾರ ಬೇಕಾಗಿಲ್ಲ, ಮೋದಿಗೆ ಮೋದಿಯೇ ಹೈಕಮಾಂಡ್. ಇದು ಅಡ್ವಾಣಿಯವರನ್ನು ಘಾಸಿಗೊಳಿಸಿದೆ. ಇದಕ್ಕೇ ಅಡ್ವಾಣಿ ಸಾಮೂಹಿಕ ನಾಯಕತ್ವ ಬೇಕೆಂದು ಪ್ರತಿಪಾದಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ.

ಅಡ್ವಾಣಿ ತಮ್ಮ ಅನುಭವ, ರಾಜಕೀಯ ಚಾಲಾಕಿತನವನ್ನು ಶಿಷ್ಯರಿಗೆ ಕಲಿಸಿ ಸೂತ್ರಧಾರನಂತೆ ಕಾರ್ಯನಿರ್ವಹಿಸಬಾರದಿತ್ತೇ ? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಆದರೆ ಇದಕ್ಕೆ ಕಾಲಪಕ್ವ ಆಗಿಲ್ಲ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅಡ್ವಾಣಿಯವರು ಬಿಜೆಪಿಯ ಎಲ್ಲಾ ಮಹತ್ವದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರೂ ಎನ್‌ಡಿಎ ಕಾರ್ಯಾಧ್ಯಕ್ಷ ಹುದ್ದೆಯನ್ನು ತ್ಯಜಿಸಿಲ್ಲ ಎನ್ನುವುದನ್ನು ಗಮನಿಸಬೇಕು. ಎನ್‌ಡಿಎ ಮಿತ್ರಪಕ್ಷಗಳು ಅಡ್ವಾಣಿಯವರನ್ನು ಬೆಂಬಲಿಸುವಷ್ಟು ಸುಲಭವಾಗಿ ಬಿಜೆಪಿಯ ಬೇರೆ ಯಾವ ನಾಯಕರನ್ನು ಬೆಂಬಲಿಸುವುದಿಲ್ಲ. ಇದಕ್ಕೆ ಶರದ್ ಯಾದವ್ ನೀಡಿರುವ ಪ್ರತಿಕ್ರಿಯೆಯನ್ನು ಉದಾಹರಿಸಬಹುದು.

ಅಡ್ವಾಣಿಯವರು ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ನೋವಿದೆ, ಹತಾಶೆಯಿದೆ, ಅಪಾರವಾದ ಸಿಟ್ಟಿದೆ, ವೈರಾಗ್ಯವಿದೆ. ಬಿಜೆಪಿಯಲ್ಲಿ ವ್ಯಕ್ತಿಗಳಷ್ಟೇ ಬೆಳೆಯುತ್ತಿದ್ದಾರೆ ಪಕ್ಷ ಬೆಳೆಸುತ್ತಿಲ್ಲ ಎನ್ನುವ ನೋವಿನ ಎಳೆಗಳನ್ನು ಅಡ್ವಾಣಿಯವರ ಪತ್ರದಲ್ಲಿ ಗುರುತಿಸಬಹುದು. ವ್ಯಕ್ತಿಯ ಇಮೇಜ್ ಪಕ್ಷಕ್ಕೆ ಮತಗಳನ್ನು ತಂದುಕೊಡುವುದಿಲ್ಲ, ಪಕ್ಷದ ಇಮೇಜ್ ಮತಪೆಟ್ಟಿಗೆ ತುಂಬುತ್ತದೆ. ಅಡ್ವಾಣಿಯವರ ಈ ಮಾತುಗಳನ್ನು ಎಲ್ಲಾ ರಾಜಕೀಯ ಪಕ್ಷಗಲಿಗೂ ಅನ್ವಯಿಸುತ್ತದೆ. 750px-BJP-flag.svg[1]ಆದರೆ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮರುಕ್ಷಣದಲ್ಲಿ ಅಡ್ವಾಣಿಯವರು ವೈರಾಗ್ಯ ಆವಾಹಿಸಿಕೊಂಡದ್ದು ಮಾತ್ರ ಸರಿಯಾದ ನಡೆಯಲ್ಲ.

ಮೋದಿ ಇಮೇಜ್ ಬೆಳೆಸಿಕೊಂಡು ಬಿಜೆಪಿಯ ನಾಯಕತ್ವವನ್ನು ನೇಪತ್ಯಕ್ಕೆ ಸರಿಯುವಂತೆ ಮಾಡುತ್ತಿದ್ದಾರೆ ಎನ್ನುವ ಆತಂಕ ಅಡ್ವಾಣಿಯವರನ್ನು ಕಾಡಿರುವುದು ಸಹಜ. ಆದರೆ ಇದಕ್ಕೆ ಅಡ್ವಾಣಿಯೂ ಹೊಣೆಗಾರರು ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪಕ್ಷ ಮುಖ್ಯ, ವ್ಯಕ್ತಿ ಮುಖ್ಯವಲ್ಲ ಎನ್ನುವ ಅಂಶವನ್ನು ಪ್ರತಿಪಾದಿಸುತ್ತಲೇ ಬಂದವರಿಗೆ ವ್ಯಕ್ತಿಗೆ ಅಂಕುಶ ಹಾಕಬೇಕೆನ್ನುವುದು ಮರೆತದ್ದಾದರೂ ಹೇಗೆ?

ಈಗ ಬಿಜೆಪಿ ಕವಲು ದಾರಿಯಲ್ಲಿದೆ. ಎರಡು ಬಳಗಳ ನಡುವೆ ಕಮಲದ ದಳಗಳು ಅರಳಬೇಕಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣೆಯ ಬಾಗಿಲಲ್ಲಿ ನಿಂತಿರುವ ಈ ಕಾಲಘಟ್ಟದಲ್ಲಿ ಅಡ್ವಾಣಿ ಶಸ್ತ್ರತ್ಯಾಗ ಮಾಡಿರುವ ದಂಡನಾಯಕ. ಯುದ್ಧ ಭೂಮಿಯಲ್ಲಿ ದಂಡನಾಯಕ ಹಿಂದೆ ಸರಿಯುತ್ತಿರುವುದರಿಂದ ಸಹಜವಾಗಿಯೇ ಆತಂಕ ಸೈನಿಕರಲ್ಲಿ. ಆತಂಕವನ್ನು ಮೆಟ್ಟಿನಿಂತು ಸೈನಿಕರು ಮುನ್ನುಗ್ಗುತ್ತಾರೆಂದು ಭಾವಿಸಬಹುದು, ಆದರೆ ಹಾಗೆ ಆಗುವುದಿಲ್ಲ ಮತ್ತು ದಂಡನಾಯಕನಿಲ್ಲದೆ ಸೈನಿಕರು ಮುಂದುವರಿದರೆ ಏನಾಗಬಹುದೆನ್ನುವ ಅರಿವಿದೆ. ಇದಕ್ಕೆ ತನ್ನ ಗುರುವನ್ನು ಅರಿತಿರುವ ಶಿಷ್ಯನೇ ತಾನು ಮಾಡಿದ ತಪ್ಪುಗಳೇನೆಂದು ಕೇಳಬೇಕಾಗಿದೆ. ಅಂಥ ಕೇಳುವ ಮನಸ್ಸು ಮೋದಿಗೆ ಬರಬೇಕಾಗಿದೆ, ಕೇಳಿಸಿಕೊಳ್ಳುವಂಥ ತಾಳ್ಮೆ ಅಡ್ವಾಣಿಗೂ ಬೇಕಾಗಿದೆ. ಇದು ಸಾಧ್ಯವೇ?, ಎಷ್ಟೇ ಆದರೂ ರಾಜಕೀಯವಾದ್ದರಿಂದ ಅಸಾಧ್ಯ ಯಾವುದೂ ಅಲ್ಲ ಎನ್ನುವುದು ಇತಿಹಾಸ ಹೇಳಿರುವ ಪಾಠ.

ದುರ್ಬಲ “ಬೇರು”ಗಳ ಸಸಿ ನೆಟ್ಟು ಭರಪೂರ ಫಲ ಬೇಕೆಂದರೆ…

– ರಾಮಸ್ವಾಮಿ 

ಲೇಖಕಿ ಬಾನು ಮುಷ್ತಾಕ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿಯವರು ಭಾನುವಾರ ಹಾಸನಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಅವರು ಉತ್ತಮ ಚಿತ್ರಗಳಿಗೆ ಹಾಗೂ ಉತ್ತಮ ಕೃತಿಗಳಿಗೆ ಪ್ರೇಕ್ಷಕ/ಓದುಗ ವರ್ಗದ ಪ್ರತಿಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಉತ್ತಮ ಚಿತ್ರಗಳನ್ನು ನೋಡುವವರು ಹಾಗೂ ಉತ್ತಮ ಪುಸ್ತಕಗಳನ್ನು ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಚಿತ್ರನಟಿ ರಮ್ಯ ಬಂದರೆ ಸೇರುವಷ್ಟು ಜನ, ತಾವು ಬಂದರೆ ಸೇರುವುದಿಲ್ಲ, ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನೋಡುವಷ್ಟು ಮಂದಿ ತಮ್ಮ ಚಿತ್ರಗಳನ್ನು ನೋಡುವುದಿಲ್ಲ, ಬಾನು ಮುಷ್ತಾಕ್ ರಂತಹ ಉತ್ತಮ ಲೇಖಕರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೂ ಸಾಕಷ್ಟು ಜನ ಸೇರುವುದಿಲ್ಲ.. ಹೀಗೆಲ್ಲಾ ಬೇಸರ ಹೊರಹಾಕಿದರು.

ಅವರು ಹಾಸನಕ್ಕೆಭೇಟಿ ನೀಡುವ ಒಂದು ದಿನದ ಹಿಂದಷ್ಟೆಸಹಮತ ವೇದಿಕೆ ಮಹಿಳೆಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಶೇಷಾದ್ರಿಯವರ ಬಹುಚರ್ಚಿತ, ಪ್ರಶಸ್ತಿ ವಿಜೇತ ಚಿತ್ರ ’ಬೇರು’ ಪ್ರದರ್ಶನ ಏರ್ಪಡಿಸಿತ್ತು. ಮೂವತ್ತರಿಂದ ನಲ್ವತ್ತು ಜನ ಸಿನಿಮಾ ನೋಡಿ, ನಂತರದ ಸಂವಾದದಲ್ಲೂ ಆಸಕ್ತಿಯಿಂದ ಪಾಲ್ಗೊಂಡಿದ್ದರು.

’ಬೇರು’ ಭ್ರಷ್ಟ ವ್ಯವಸ್ಥೆಯ ಆಳವನ್ನು ತೋರಿಸುವ ನಿಟ್ಟಿನಲ್ಲಿ ಸಿದ್ಧಗೊಂಡ ಚಿತ್ರ ಎಂಬ ಮಾತಿದೆ. ಅದು ತಕ್ಕಮಟ್ಟಿಗೆ ನಿಜ. ಸರಕಾರಿ ನೌಕರಿಯಲ್ಲಿರುವವರು ಎಂತೆತಹ ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಭ್ರಷ್ಟರಾಗಬೇಕಾಯಿತು ಎಂಬುದನ್ನು ಬಿಂಬಿಸಿದ್ದಾರೆ. ತಾವು ಪ್ರೇಕ್ಷಕರಿಗೆ ತಲುಪಿಸಬೇಕೆನಿಸಿದ್ದನ್ನು ಹೇಳಲು ನಿರ್ದೇಶಕರು – ಮನೆಯನ್ನು ಬೀಳಿಸಲು ಹೊರಟ ಬೇರು, ಗೋಡೆ ಕೊರೆಯುವ ಹೆಗ್ಗಣ, ಅಸಹಾಯಕ ಬಡವ, ಹಿರಿಯ ಅಧಿಕಾರಿ, ಸ್ಟಿರಿಯೋಟಿಪಿಕಲ್ ಹೆಂಡತಿ, ಮೂರು ಹೆಣ್ಣುಮಕ್ಕಳ ತಂದೆಯಾಗಿರುವ ಸರಕಾರಿ ನೌಕರ, ತನ್ನ ಭ್ರಷ್ಟಾಚಾರ ಬಯಲಾದದ್ದಕ್ಕೆ ಹೆದರಿ ಬಾವಿಗೆ ಬಿದ್ದ ನಿವೃತ್ತ ನೌಕರ, ಆತನ ಪತ್ನಿ, ಮಗಳು-ಅಳಿಯರ ಸಂತೋಷಕ್ಕಾಗಿ ತನ್ನ ಪ್ರಭಾವ ಬಳಸುವ ಲೇಖಕ.. ಹೀಗೆ ಕೆಲ ಪಾತ್ರಗಳನ್ನು ಸಾಧನಗಳಾಗಿ ಬಳಸಿದ್ದಾರೆ. ಒಂದೆಡೆ ಗೊರವಯ್ಯ ತನ್ನ ಮನೆ ಉಳಿಸಿಕೊಳ್ಳಲು ಮರ ಕಡಿಯಲು ಅನುಮತಿ ಪಡೆಯಲಾಗದೆ, ಜೋರು ಮಳೆಗೆ ಮನೆ ಮುರಿದುಬಿದ್ದು ಸಾಯುತ್ತಾನೆ. ಅತ್ತ ಪ್ರಾಮಾಣಿಕ ಅಧಿಕಾರಿ ಇಲ್ಲದ ಪ್ರವಾಸಿ ಮಂದಿರ ಹುಡುಕುತ್ತಲೇ ಭ್ರಷ್ಟ ವ್ಯವಸ್ಥೆಯ ಪಾಲುದಾರನಾಗಿ ನೈತಿಕವಾಗಿ ಅಧಃಪತನಗೊಳ್ಳುತ್ತಾನೆ.

ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ತೀವ್ರ ಸ್ವರೂಪಗಳು ಅಚ್ಚರಿ ಮೂಡಿಸುತ್ತವೆ ಎನ್ನುವುದೇನೋ ನಿಜ. ಆದರೆ, ಪ್ರಮುಖ ಇಲಾಖೆಯೊಂದು ಪ್ರವಾಸಿ ಮಂದಿರವನ್ನು ಕಟ್ಟದೇ, ಕಟ್ಟಲಾಗಿದೆ ಎಂದು ದಾಖಲೆ ಸೃಷ್ಟಿಸಿ, ಆಗಾಗ ಅದರ ನವೀಕರಣಕ್ಕೆ ಹಣ ವ್ಯಯಮಾಡಿ, ಅದರ ಉಸ್ತುವಾರಿಗೆ ಮೇಟಿಯನ್ನೂ ನೇಮಿಸಿ ಅವನಿಗೂ ಸಂಬಳ ಕೊಟ್ಟು…- ಹೀಗೆ ವರ್ಷಗಟ್ಟಲೆ ನಡೆಯುತ್ತದೆ ಎನ್ನುವುದೇ ವಾಸ್ತವಕ್ಕೆ ದೂರ. ಭ್ರಷ್ಟಾಚಾರದ ಕರಾಳ ಸುಳಿಗಳನ್ನು ಬಿಚ್ಚಿಡಲು ಹೀಗೊಂದು ಕಟ್ಟುಕತೆ ಅಗತ್ಯವಿರಲಿಲ್ಲ.

ಈ ಚಿತ್ರ ಭ್ರಷ್ಟಾಚಾರವನ್ನು ಟೀಕಿಸುವುದಿಲ್ಲ. ಮೇಟಿಯ ಸಂಬಳವನ್ನೂ ತಾನೇ ಬಳಸಿಕೊಳ್ಳುವ ವೆಂಕಟೇಶಯ್ಯ copy-beruಮೂರು ಹೆಣ್ಣುಮಕ್ಕಳ ತಂದೆ. ಆತನಿಗೆ ಮನೆ ನಡೆಸಲು, ಮದುವೆ ಮಾಡಲು ಅನಿವಾರ್ಯವಿತ್ತು ಎನ್ನುತ್ತದೆ ಚಿತ್ರಕತೆ. ಪ್ರಾಮಾಣಿಕ ಅಧಿಕಾರಿ ರಘುನಂದನ್ ತಾನು ಭ್ರಷ್ಟನಲ್ಲದಿದ್ದರೂ, ಬಡ ವೆಂಕಟೇಶಯ್ಯನನ್ನು ಬಚಾವು ಮಾಡುವ ಒಳ್ಳೆಯ ಉದ್ದೇಶದಿಂದ ಭ್ರಷ್ಟನಾಗಬೇಕಾಗುತ್ತದೆ. ಪಾಪ ಅವನದೇನೂ ತಪ್ಪಿಲ್ಲ. ಮೇಲಧಿಕಾರಿ ತನ್ನ ಮೇಷ್ಟ್ರ ಮೇಲಿನ ಗೌರವಕ್ಕೆ ಕಟ್ಟುಬಿದ್ದು ಅವರ ಅಳಿಯನನ್ನು ಉಳಿಸಲು ತಾನೂ ಇಲ್ಲದ ಪ್ರವಾಸಿ ಮಂದಿರ ಇದೇ ಎಂದೇ ಒಪ್ಪಿಕೊಳ್ಳಲು ಸಿದ್ಧರಾಗುತ್ತಾರೆ. ಈ ಚಿತ್ರದಲ್ಲಿ ಭ್ರಷ್ಟ ಪಾತ್ರಗಳು ತಮ್ಮ ಆಸೆ ಅಥವಾ ದುರಾಸೆಗೆ ಭ್ರಷ್ಟರಾದವರಲ್ಲ, ಬದಲಿಗೆ ಪರಿಸ್ಥಿತಿಗಳು ಅವರನ್ನು ಆ ಕೂಪಕ್ಕೆ ನೂಕಿವೆ ಅಷ್ಟೆ. ಆ ಕಾರಣಕ್ಕೆ ಇದು ಭ್ರಷ್ಟಾಚಾರದ ವಿರೋಧಿ ಚಿತ್ರವಲ್ಲ, ಬದಲಿಗೆ ಭ್ರಷ್ಟರ ಪರ ಅನುಕಂಪ ಮೂಡಿಸುವ ಒಂದು ಪ್ರಯತ್ನ.

ಅಂತ್ಯದಲ್ಲಿ ಬಡ ಗೊರವಯ್ಯನ ಸಾಕು ಮೊಮ್ಮಗಳು ಅಧಿಕಾರಿ ವರ್ಗದತ್ತ ಥೂ ಎಂದು ಉಗಿದು ಮುಂದೆ ಸಾಗುತ್ತಾಳೆ. ಅವಳ ಆಕ್ರೋಶವೇ ಚಿತ್ರದ ಮುಖ್ಯ ಸಂದೇಶವೆಂದು ಸಿನಿಮಾ ನೋಡಿದ ಅನೇಕರು ಅಭಿಪ್ರಾಯಪಟ್ಟರು. ಆ ಹುಡುಗಿಯ ಆಕ್ರೋಷ ಇದ್ದದ್ದು ತನ್ನ ಅಜ್ಜನಿಗೆ ಮರ ಕಡಿಯಲು ಅನುಮತಿ ಕೊಡದೆ, ಕೊನೆಗೆ ಆತ ಸಾಯಲು ಕಾರಣರಾದ ಅಧಿಕಾರಿಗಳ ಬಗ್ಗೆಯೇ ಹೊರತು, ಇಲ್ಲದ ಪ್ರವಾಸಿ ಮಂದಿರವನ್ನು ದಾಖಲೆಯಲ್ಲಿ ಸೃಷ್ಟಿ ಮಾಡಿ ದುಡ್ಡುಹೊಡೆಯುವ ವ್ಯವಸ್ಥೆಗೆ ಅಲ್ಲ. ಚಿತ್ರದ ಯಾವ ದೃಶ್ಯದಲ್ಲೂ ಆ ಬಾಲಕಿ ಈ ಅವ್ಯವಸ್ಥೆಗೆ ಮುಖಾಮುಖಿಯಾಗುವುದೇ ಇಲ್ಲ.

ಅಧಿಕಾರಿಯ ಹೆಂಡತಿಯ ಪಾತ್ರ ತೀರಾ ಸ್ಟಿರಿಯೋಟಿಪಿಕಲ್. ತಾನು ಅಧಿಕಾರಿಯನ್ನು ಮದುವೆಯಾಗಿ ಯಾವುದೋ ಕೊಂಪೆಗೆ ಬಂದು ನೆಲೆಸಬೇಕಾಯಿತು ಅವಳು ಕೊರಗುತ್ತಾಳೆ. ತಾನು ಹಳ್ಳಿಯಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪದೇ ಪದೇ ವ್ಯಕ್ತಪಡಿಸುತ್ತಾಳೆ. ಆದರೆ ಅಧಿಕಾರಿ ಮಾತ್ರ ಹಳ್ಳಿಯ ಜೀವನವೇ ಸುಂದರ.. ಹೀಗೆ ಆದರ್ಶವಾಗಿ ಮಾತನಾಡುತ್ತಾನೆ. ಭಿನ್ನ ಚಿತ್ರಗಳನ್ನು ಮಾಡುತ್ತೇವೆ ಎನ್ನುವವರು ಈಗಾಗಲೆ ಸವಕಲಾಗಿರುವ ಚೌಕಟ್ಟುಗಳನ್ನು ದಾಟುವುದೇ ಇಲ್ಲ ಎನ್ನುವುದಾದರೆ, ಅವರು ಹೇಗೆ ಭಿನ್ನ? ಪ್ರತಿಮೆ, ರೂಪಕಗಳ ಆಯ್ಕೆಯಲ್ಲೂ ಹೊಸತೇನಿಲ್ಲ.

ಚಿತ್ರದ ನಿರ್ಮಾಣ ಕೂಡ ಸಾಧಾರಣ. ಕಚೇರಿಯ ಸಿಬ್ಬಂದಿಗೆ ನಟನೆಯೇ ಗೊತ್ತಿಲ್ಲ. ಎಲ್ಲಾ ಸಂಭಾಷಣೆಯಲ್ಲೂ ಅವರದು ಅಸಹಜ ನಟನೆ. ಈಗ ತಾನೆ ನಟನೆ ಕಲಿಯುತ್ತಿರುವವರನ್ನು ಇಟ್ಟುಕೊಂಡು ಒಂದು ನಾಟಕದ ರಿಹರ್ಸಲ್ ಮಾಡಿದ ಹಾಗಿದೆ. ಚಿತ್ರ ನಿರ್ದೇಶಕರು ಅದು ಯಾವ ಕಚೇರಿ, ಆತ ಯಾವ ಇಲಾಖೆಯ ಅಧಿಕಾರಿ ಎನ್ನುವುದನ್ನು ಎಲ್ಲಿಯೂ ಸ್ಪಷ್ಟಪಡಿಸುವುದಿಲ್ಲ. ಸಿನಿಮಾ ವೀಕ್ಷಣೆಯ ನಂತರ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಒಂದು ಪಾಳು ಗುಡಿಯಲ್ಲಿ ಬಚ್ಚಿಟ್ಟುಕೊಂಡಿರುವ ಪ್ರವಾಸಿ ಮಂದಿರದ ಮೇಟಿ ಹೊರಬಂದಾಗಲೂ ಅವನ ಬಟ್ಟೆಗಳು ಈಗಷ್ಟೇ ಇಸ್ತ್ರಿ ಮಾಡಿ ಧರಿಸಿರುವಷ್ಟು ಶುಭ್ರ. ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ತಂತ್ರಜ್ಞರು ಇಂತಹ ಅನೇಕ ಲೋಪಗಳನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಬಹುದು. ಸೂಕ್ಷ್ಮ ಮನಸ್ಸಿನ ನಿರ್ದೇಶಕರಿಗೆ ಇಂತಹ ಸೂಕ್ಷ್ಮಗಳ ಕಡೆ ಗಮನಹರಿಸಬೇಕು ಎನಿಸಲಿಲ್ಲವೇ?

ಶೇಷಾದ್ರಿಯವರು ತಮ್ಮ ಭಾಷಣದಲ್ಲಿ ತಮ್ಮ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದರೂ ಪ್ರೇಕ್ಷಕರು ಬರಲಿಲ್ಲ ಎಂದು ಅವಲತ್ತುಕೊಂಡರು. ಪ್ರಶಸ್ತಿ ಬಂದಾಕ್ಷಣ ಪ್ರೇಕ್ಷಕರು ಸಿನಿಮಾ ನೋಡೋಕೆ ಬರಬೇಕೆ?

ಬಿಜೆಪಿಗೆ ಮೋದಿ ಅನಿವಾರ್ಯ ಸಾರಥಿ

– ಚಿದಂಬರ ಬೈಕಂಪಾಡಿ

ಬಿಜೆಪಿಯಲ್ಲೀಗ ಸಂಚಲನ. ನರೇಂದ್ರ ಮೋದಿ ಹೆಗಲಿಗೆ 2014ರ ಲೋಕಸಭಾ ಚುನಾವಣೆಯ ಭಾರ ಹೊರಿಸಿರುವುದರಿಂದ ಸಹಜವಾಗಿಯೇ ಮೋದಿ ಬೆಂಬಲಿಗರಿಗೆ ಅಮಿತೋತ್ಸಾಹ. ಮೋದಿಗೆ ಇಂಥ ಜವಾಬ್ದಾರಿ ನೀಡಿರುವುದಕ್ಕೆ ಬಿಜೆಪಿಯ ಉಕ್ಕಿನ ಮನುಷ್ಯ ಎಲ್.ಕೆ.ಅಡ್ವಾಣಿ ಪಾಳೆಯದಲ್ಲಿ ಮುಜುಗರ. ಈ ಎರಡೂ ರೀತಿಯ ಸಂಚಲನಗಳನ್ನು ಸಮಚಿತ್ತದಿಂದ ಬಿಜೆಪಿ ಅಭಿಮಾನಿಗಳು ಅನುಭವಿಸಬೇಕಾಗಿದೆ. ವ್ಯಕ್ತಿ ಮುಖ್ಯವಲ್ಲ ಎನ್ನುವುದು ಬಿಜೆಪಿಯ ತತ್ವ. ಆದರೆ ವ್ಯಕ್ತಿಯೂ ಮುಖ್ಯ ಎನ್ನುವುದು ಇತ್ತೀಚಿನ ಚುನಾವಣೆಗಳಲ್ಲಿ ಜನ ನೀಡಿರುವ ತೀರ್ಪಿನಲ್ಲಿ ಸ್ಪಷ್ಟ.

ಯಾರೇ ಕೂಗಾಡಿದರೂ ಬಿಜೆಪಿ ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ ಎನ್ನುವ ಕಠಿಣ ನಿರ್ಧಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಬಂದ ಹಿನ್ನೆಲೆಯಲ್ಲೇ ಗೋವಾದಲ್ಲಿ ಸಮಾಪನಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ 750px-BJP-flag.svg[1]ಎಲ್.ಕೆ.ಅಡ್ವಾಣಿಯವರ ಗೈರು ಹಾಜರಿಯಲ್ಲಿ ಮೋದಿಗೆ ಪಟ್ಟ ಕಟ್ಟಲಾಗಿದೆ. ಪಕ್ಷದ ಆಂತರಿಕ ವಲಯದಲ್ಲಿ ಮೋದಿಗೆ ಕೊಟ್ಟಿರುವ ಈ ಜವಾಬ್ದಾರಿ ಬಗ್ಗೆ ದ್ವಂದ್ವ ನಿಲುವುಗಳಿರುವುದನ್ನು ಯಾರೂ ನಿರಾಕರಿಸುವಂತಿಲ್ಲ. ಹಾಗೆಂದು ಬಿಜೆಪಿಗೆ ಮೋದಿಯನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಸಧ್ಯ ಬಿಜೆಪಿಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ ಮೋದಿ ಮಾತ್ರ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ.

ನರೇಂದ್ರ ಮೋದಿಯನ್ನು ಎರಡು ರೀತಿಯಲ್ಲಿ ನೋಡಬೇಕಾಗಿದೆ. ಮೋದಿ ಅವರ ನಿಲುವು ಪಕ್ಷದ ಹಿನ್ನೆಲೆಯಲ್ಲಿ ಮತ್ತು ಮೋದಿ ಅವರ ಕಾರ್ಯವೈಖರಿ ಸಾರ್ವಜನಿಕವಾಗಿ. ಈ ಎರಡನ್ನೂ ಸಮೀಕರಿಸುವಂತಿಲ್ಲ. ಎರಡೂ ಭಿನ್ನವಾದವು.

ಗೋಧ್ರಾ ಘಟನೆಯನ್ನು ಅವಲೋಕಿಸಿದಾಗ ನರೇಂದ್ರ ಮೋದಿ ಹೆಚ್ಚು ಜನರ ದ್ವೇಷಕ್ಕೆ ಗುರಿಯಾಗುತ್ತಾರೆ. ಅಲ್ಲಿ ಅವರ ಪಾತ್ರವನ್ನು ಜನ ಒಪ್ಪುವುದಿಲ್ಲ. ನರಮೇಧಕ್ಕೆ ಮೋದಿಯೇ ಕಾರಣ, ಅವರ ನಿಲುವುಗಳೇ ಕಾರಣವೆಂದು ಹೇಳುವ ಕಾರಣಕ್ಕೆ ಓರ್ವ ವಿಲನ್ ರೀತಿಯಲ್ಲಿ ಗುರುತಿಸಲಾಗುತ್ತದೆ. ಈ ಹಿನ್ನೆಲೆಯಿಂದಾಗಿಯೇ ಎನ್‌ಡಿಎ ಮೈತ್ರಿಯಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯೆಂದು ಒಪ್ಪುವುದಕ್ಕೆ ಅಲ್ಲಿರುವ ಮಿತ್ರ ಪಕ್ಷಗಳ ಮನಸ್ಸುಗಳು ಸಿದ್ಧವಿಲ್ಲ. ಇದು ನರೇಂದ್ರ ಮೋದಿಗೆ ರಾಷ್ಟ್ರಮಟ್ಟದಲ್ಲಿ ಬಲುದೊಡ್ಡ ಹಿನ್ನಡೆ. ಗೋಧ್ರಾ ಘಟನೆಯಲ್ಲದಿದ್ದರೆ ಎನ್ನುವುದು ಬೇರೆಯೇ ಮಾತು.

ಗುಜರಾತ್ ಅಭಿವೃದ್ಧಿ ಮತ್ತು ಮೋದಿಯ ನಡೆಗಳನ್ನು ಅವಲೋಕಿಸಿದಾಗ ಜನಕಲ್ಯಾಣವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಗುಜರಾತ್ ಭೂಕಂಪದಿಂದ ನಲುಗಿದ ಮೇಲೆ ನಿರಂತರವಾಗಿ ಮೋದಿಯ ಹೆಜ್ಜೆಗುರುತುಗಳು ಅಲ್ಲಿನ ಜನರ ಮನಸ್ಸಿನಲ್ಲಿ ಅಚ್ಚೊತ್ತಿವೆ. ಆ ಕಾರಣಕ್ಕಾಗಿ ಮೋದಿಯನ್ನು ಮೆಚ್ಚುತ್ತಾರೆ. ಒಂದು ರಾಜ್ಯದ ಅಭಿವೃದ್ಧಿಯನ್ನೇ ಆಧಾರವಾಗಿಟ್ಟುಕೊಂಡು ಒಂದು ದೇಶದ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು, ಆದರೆ ಅದು ಅನುಷ್ಠಾನಕ್ಕೆ ಅಷ್ಟು ಸುಲಭವಾಗಿ ಬರುತ್ತದೆಂದು ಹೇಳಲಾಗದು. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡೇ ಮುನ್ನಡಿಯಿಡಬೇಕಾಗಿರುವುದರಿಂದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಾದೇಶಿಕ ಸಮಸ್ಯೆಗಳನ್ನು ಒಳಗೊಂಡಿರುವುದರಿಂದ ಗುಜರಾತ್ ಮಾದರಿಯನ್ನು ಅಳವಡಿಸುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿ ಮೋದಿ ಅಭಿವೃದ್ಧಿ ಎನ್ನುವುದು ಸಮಗ್ರ ರಾಷ್ಟ್ರದ ಚಿಂತನೆ ಹೊರತು ಅದು ಅನುಷ್ಠಾನದ ಮಾದರಿಯಾಗುವುದಿಲ್ಲ. ಹೀಗೆ ಹೇಳಿದರೆ ಮೋದಿ ಬೆಂಬಲಿಗರು ಮೆಚ್ಚುವುದಿಲ್ಲ, ಆದರಿಂದ ಬಹಳ ಮಂದಿ ಮೋದಿಯನ್ನು ವಿಮರ್ಶಾತ್ಮಕವಾಗಿ ನೋಡದೆ ಭಾವನಾತ್ಮಕವಾಗಿ ಮೆಚ್ಚುತ್ತಾರೆ. ಇದು ಮೋದಿ ಅಭಿವೃದ್ಧಿ ಚಿಂತನೆಗೆ ಅದರಲ್ಲೂ ಅಖಂಡ ಭಾರತವನ್ನು ಗಮನದಲ್ಲಿಟ್ಟುಕೊಂಡು ನೋಡುವ ಬದಲು ಗುಜರಾತ್ ರಾಜ್ಯಕ್ಕೆ ಸೀಮಿತವಾಗುವಂತೆ ಮಾಡಲಾಗುತ್ತಿದೆ.

ನರೇಂದ್ರ ಮೋದಿಯನ್ನು ಬಿಜೆಪಿಯೇತರ ಪಕ್ಷಗಳು ವಿರೋಧಿಸುವುದಕ್ಕೆ ಹಲವು ಕಾರಣಗಳಿರುತ್ತವೆ. Narendra_Modiಆದರೆ ಬಿಜೆಪಿಯಲ್ಲೇ ಅವರನ್ನು ವಿರೋಧಿಸುವುದಕ್ಕೆ ಇರುವ ಕಾರಣಗಳು ಅತ್ಯಂತ ಅಪಾಯಕಾರಿ. ಬಿಜೆಪಿಯಲ್ಲಿ ಸಾಮೂಹಿಕವಾಗಿ ಮೋದಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆಂದರೆ ಅದು ಆತ್ಮವಂಚನೆಯಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತು ಪಡಿಸಿದರೆ ಬಿಜೆಪಿಯಲ್ಲೂ ಎಲ್ಲರೂ ಒಪ್ಪುವ ನಾಯಕರು ಖಂಡಿತಕ್ಕೂ ಇಲ್ಲ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಎಲ್.ಕೆ.ಅಡ್ವಾಣಿ ಅವರ ಹಿರಿತನಕ್ಕೆ, ಅವರ ಮುತ್ಸದ್ದಿತನಕ್ಕೆ ಗೌರವ ಸಿಗುತ್ತದೆ. ಆದರೆ ಅಲ್ಲೂ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಇದೇ ಸ್ಥಿತಿ ನರೇಂದ್ರ ಮೋದಿ ಅವರಿಗೂ.

2014 ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ತನ್ನ ಸಾರಥಿಯೆಂದು ನರೇಂದ್ರ ಮೋದಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಮೋದಿಯನ್ನು ಬಿಟ್ಟರೆ ಆ ಪಕ್ಷದೊಳಗೇ ಮೋದಿಯನ್ನು ಮೀರಿಸುವಷ್ಟು ಮತ್ತು ದೇಶದ ಮುಂದೆ ತಂದು ನಿಲ್ಲಿಸುವಷ್ಟರಮಟ್ಟಿಗೆ ವರ್ಚಸ್ಸಿರುವವರಿಲ್ಲ. ಇದು ಬಿಜೆಪಿಯ ಮುಂದಿರುವ ಬಹುದೊಡ್ಡ ಸವಾಲು. ಎಲ್.ಕೆ.ಅಡ್ವಾಣಿ ಅವರನ್ನು ಮತ್ತೊಂದು ಅವಧಿಗೆ ಮುಂಚೂಣಿಗೆ ತಂದು ಪ್ರಯೋಗ ಮಾಡುವುದಕ್ಕೆ ಆ ಪಕ್ಷದಲ್ಲಿರುವವರೇ ಸಿದ್ಧರಿಲ್ಲ. ಆದರೆ ಬಿಜೆಪಿ ಆತ್ಮಪೂರ್ವಕವಾಗಿ ಮತ್ತೊಂದು ಅವಕಾಶವನ್ನು ಅಡ್ವಾಣಿಗೆ ಕೊಡುವಷ್ಟು ಔದಾರ್ಯ ತೋರಿಸಿದ್ದರೆ ಅಡ್ವಾಣಿಯವರೂ ನಿರಾಕರಿಸುವಂಥ ಸನ್ಯಾಸಿ ಮನಸ್ಥಿತಿಯವರಲ್ಲ.

ಈಗ ಬಿಜೆಪಿ ಮಟ್ಟಿಗೆ ಯಾರು ಸಾರಥಿ ಎನ್ನುವುದು ಮುಗಿದ ಅಧ್ಯಾಯವಾದರೂ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಆ ಪಕ್ಷದ ಮುಂದಿರುವ ದೊಡ್ಡ ಸವಾಲು, ಇದು ಕಾಂಗ್ರೆಸ್‌ಗೆ ಸಿಕ್ಕಿರುವ ಪ್ರಬಲ ಅಸ್ತ್ರವೂ ಹೌದು.

ತಿರುಗುತ್ತಿರುವ ಹಿಂಸೆ, ಪ್ರತಿಹಿಂಸೆಯ ಚಕ್ರ

– ಬಿ.ಶ್ರೀಪಾದ ಭಟ್

ಕಳೆದ 45 ವರ್ಷಗಳಲ್ಲಿ ಪ್ರಭುತ್ವದ ಹಿಂಸೆ ಮತ್ತು ಮಾವೋವಾದಿಗಳ ಪ್ರತಿ ಹಿಂಸೆಯನ್ನು ಪ್ರತ್ಯಕ್ಷವಾಗಿ ಕಂಡು ಅನುಭವಿಸಿದವರು, ಹತ್ತಿರದಿಂದ ಅನುಭವಿಸಿದವರು, ದೂರದಿಂದ ಕಂಡವರು ಮೊನ್ನೆ ಛತ್ತೀಸ್‌ಘಡದಲ್ಲಿ ನಡೆದ ಹಿಂಸಾಚಾರದ ಕ್ರೌರ್ಯವನ್ನು ಕಂಡು ತತ್ತರಿಸಿದ್ದಾರೆ. ಆದರೆ ಇಲ್ಲಿ ಪ್ರಭುತ್ವದ ಹಿಂಸೆಯೊಂದಿಗೆ ಖಾಸಗೀ ಪಡೆಯಾದ ಜಮೀನ್ದಾರರ ಹಿಂಸೆಯು, ಖಾಸಗಿ ಉದ್ದಿಮೆದಾರರ ವ್ಯಾಪಾರೀಕರಣದ ರಾಕ್ಷಸ ಪ್ರಭಾವಳಿಗಳು ಒಂದಕ್ಕೊಂದು ತಳುಕು ಹಾಕಿಕೊಂಡು ಅಮಾಯಕ ಆದಿವಾಸಿ, ದಲಿತರ ಮೇಲೆ ನಿರಂತರವಾಗಿ ನಡೆಸಿದ ಶೋಷಣೆ ಮತ್ತು ಅತ್ಯಾಚಾರಗಳು ಮತ್ತು ಇದಕ್ಕೆ ಪ್ರತಿಕಾರವಾಗಿ ಮಾವೋವಾದಿಗಳ ಪ್ರತಿಹಿಂಸೆಯ ಸರಣಿ ಕ್ರೌರ್ಯಕ್ಕೆ ಕೊನೆ ಹಾಡುವ ಆಶಾವಾದವೇ ಇಂದು ಭಗ್ನಗೊಂಡಿದೆ.

ಇಂದು ಭಾರತದಲ್ಲಿ ಅಧಿಕೃತವಾಗಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗೆ ವಿರೋಧವಾಗಿ ಪ್ರಜಾ ವಿಮೋಚನೆಯ ಹೆಸರಿನಲ್ಲಿ ನಡೆಯುವ ಎಲ್ಲ ಬಗೆಯ ಭೂಗತ ಹೋರಾಟಗಳು ನಡೆಸುವ ಹಿಂಸೆಯ ಕುರಿತು ಅರಿವಿದ್ದವರೂ ಸಹ ಮೇ 25ರಂದು ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯ ಜೀರಂ ಘಾಟ್‌ನ ಬಳಿ ನಡೆದ ಕಾಂಗ್ರೆಸ್ ನಾಯಕರನ್ನೊಳಗೊಂಡ 27 ನಾಗರಿಕರ ಹತ್ಯೆಯ ಈ ಬರ್ಬರತೆಯ ಪರಿಮಾಣವನ್ನು ಊಹಿಸಿರಲಿಲ್ಲ. ಅಲ್ಲಿನ ಸಾಮಾಜಿಕ, ರಾಜಕೀಯವನ್ನು ಹತ್ತಿರದಿಂದ ಕಂಡವರೆಲ್ಲ ಹತ್ಯೆಗೊಳಗಾದ ಈ ಕಾಂಗ್ರೆಸ್ ನಾಯಕರಲ್ಲೊಬ್ಬರಾದ, ಮಾವೋವಾದಿಗಳ ಹಿಂಸೆಗೆ ಉತ್ತರವಾದ M_Id_52179_Salwa_Judumಸಾಲ್ವಜುಡಂನ ನೇತಾರ ಮಹೇಂದ್ರ ಕರ್ಮರ ಸಾವನ್ನು ಅನೇಕ ವರ್ಷಗಳ ಹಿಂದೆಯೇ ನಿರೀಕ್ಷಿಸಿದ್ದರು. ಏಕೆಂದರೆ ಅನಿರೀಕ್ಷ್ಷಿತವಾಗಿ ದೊರೆತ ರಾಜಕೀಯ ಅಧಿಕಾರವನ್ನು ಅದರ ಎಲ್ಲ ಸಾಧ್ಯತೆಗಳೊಂದಿಗೆ ಒಂದಿಂಚನ್ನೂ ಬಿಡದೆ ಬಳಸಿಕೊಂಡು ಯಾವುದೇ ಪ್ರಜ್ಞಾವಂತಿಕೆ, ನೈತಿಕತೆ, ವಿವೇಚನೆ, ನ್ಯಾಯಯತ ಪರ್ಯಾಯ ಮಾರ್ಗವಿಲ್ಲದೆ ಮಾವೋವಾದಿಗಳ ಹಿಂಸೆಯನ್ನು ಪ್ರತಿಹಿಂಸೆಯ ಮೂಲಕವೇ ಹತ್ತಿಕ್ಕಬೇಕೆಂಬ ಶಿಲಾಯುಗದ ಶಾಸನವನ್ನು ಆಧರಿಸಿ ಪವಿತ್ರೀಕರಣದ ಬೇಟೆಯೆಂದು ಕರೆಯಲ್ಪಡುವ ಸಾಲ್ವಜುಡುಂ ಎನ್ನುವ ಆರ್ಮಿಯನ್ನು ಸ್ಥಾಪಿಸಿದವರು ಈ ಮಹೇಂದ್ರ ಕರ್ಮ. ನಂತರ ನಡೆದದ್ದಲ್ಲೆವೂ ರಕ್ತಸಿಕ್ತ ಇತಿಹಾಸ.

ಸಾಲ್ವೋಜುಡಂ ಎನ್ನುವ ಅಧಿಕೃತವಾಗಿಯೇ ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಗೆ ಶಸ್ತ್ರಾಸ್ತ್ರಗಳ ತರಬೇತಿಯನ್ನು ನೀಡಿ ಮಾವೋವಾದಿಗಳ ನಿರ್ಮೂಲನೆಯ ಮೂಲಮಂತ್ರವನ್ನು ಆ ಸಂಘಟನೆಯ ಯುವ ಆದಿವಾಸಿಗಳ ತಲೆಯಲ್ಲಿ ತುಂಬಿ ಅವರ ಮೂಲಕ ತಮ್ಮ ಸಹೋದರ ಆದಿವಾಸಿಗಳನ್ನೇ ಹತ್ಯೆಗೈಯುವಂತಹ ಬಲು ದೊಡ್ಡ ಕಾರ್ಯಾಚರಣೆಯೇ ಕಳೆದ ವರ್ಷಗಳಲ್ಲಿ ಛತ್ತೀಸ್‌ಘಡ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ನಡೆದುಹೋಯ್ತು. ಇದಕ್ಕೆ ಬಹಿರಂಗವಾಗಿ ಬೆಂಬಲಕ್ಕೆ ನಿಂತಿದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರ ಮತ್ತು ಈ ಎರಡೂ ರಾಜ್ಯಗಳ ಬಿಜೆಡಿ ಮತ್ತು ಬಿಜೆಪಿ ಸರ್ಕಾರಗಳು. ಇವರೆಲ್ಲರೂ ಜಪಿಸುತ್ತಿದ್ದ ಮಂತ್ರವೊಂದೇ ಈ ಸಾಲ್ವೋಜುಡಂನ ಮೂಲಕ ಮಾವೋವಾದಿಗಳೇ ನಾಮಾವಶೇಷವಾಗುತ್ತಾರೆ. ನಂತರ ಎಲ್ಲವೂ ಸುಖಾಂತ್ಯವೆಂದು. ಆದರೆ ಈ ಹುಂಬ ಹಾಗೂ ಭ್ರಷ್ಟ ಮಹೇಂದ್ರ ಕರ್ಮನಿಗಾಗಲೀ, ಕಾಂಗ್ರೆಸ್, ಬಿಜೆಡಿ, ಬಿಜೆಪಿ ಪಕ್ಷಗಳಿಗಾಗಲೀ 70ರ, 80ರ ದಶಕದ ಫ್ಯೂಡಲ್ ವಿರೋಧಿ ನಕ್ಸಲ್ ಚಳುವಳಿಗೂ ೯೦ರ ದಶಕದ ಜಾಗತೀಕರಣಗೊಂಡ ಇಂಡಿಯಾದ ನಂತರದ 15 ವರ್ಷಗಳ ಮಾವೋವಾದಿಗಳ ಭೂಗತ ಚಳುವಳಿಗಳಿಗೂ ಇರುವ ಅಪಾರ ಭಿನ್ನತೆ ಮತ್ತು ಅಜಗಜಾಂತರ ವ್ಯತ್ಯಾಸಗಳೇ ಗೊತ್ತಿರಲಿಲ್ಲ ಹಾಗೂ ಇವರಿಗೆಲ್ಲ ಅದು ಬೇಕಿರಲಿಲ್ಲ. ಇಂದಿನ ನವ ಕಲೋನಿಯಲ್‌ನ ದಿನಗಳಲ್ಲಿ ಈ ಭೂಗತ ಚಳುವಳಿ ದಕ್ಷಿಣದ ಆಂದ್ರಪ್ರದೇಶದಿಂದ ಕ್ರಮೇಣ ಪೂರ್ವ ರಾಜ್ಯಗಳಿಗೆ ಕೇಂದ್ರಿತಗೊಂಡಿರುವುದರ ಹಿಂದಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಅರ್ಥಮಾಡಿಕೊಳ್ಳುವ ವ್ಯವಧಾನವೂ ಮೇಲಿನ ಪಕ್ಷಗಳ ಯಾವುದೇ ರಾಜಕಾರಣಿಗಳಿಗಿರಲಿಲ್ಲ.

ಮುಖ್ಯವಾಗಿ ಇಂದು ಒರಿಸ್ಸ ಹಾಗೂ ಛತ್ತೀಸಗಡ್ ರಾಜ್ಯಗಳಲ್ಲಿ ಮಾವೋವಾದಿಗಳಲ್ಲಿ ಹೆಚ್ಚಿನವರು ಆದಿವಾಸಿಗಳು. mail_today5_070611101748ಇಲ್ಲಿನ ಖನಿಜ ಸಂಪತ್ತು ತಂದುಕೊಡುವ ಕೋಟ್ಯಾಂಟತರ ರೂಪಾಯಿಗಳ ಆದಾಯವು ಜಾಗತೀಕರಣದ ನೆಪದಲ್ಲಿ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಸರ್ಕಾರದ ತತ್ವದಡಿಯಲ್ಲಿ ಸಾರ್ವಜನಿಕತೆ ಸಂಪೂರ್ಣವಾಗಿ ಗೌಣಗೊಂಡು ಹೆಚ್ಚೂ ಕಡಿಮೆ ಖಾಸಗಿ ಉದ್ಯಮಿಗಳ ಕೈಗೆ ಜಾರಿಕೊಂಡಿದ್ದು ಹಾಗೂ ಈ ಪ್ರಕ್ರಿಯೆಯಲ್ಲಿ ಆದಿವಾಸಿಗಳ ಹಾಗೂ ಹಿಂದುಳಿದ ಜನತೆಯ ಜನಜೀವನವೇ ಹದಗೆಟ್ಟು ಸಂಪೂರ್ಣವಾಗಿ ಅತಂತ್ರಗೊಂಡಿದ್ದು ಮತ್ತು ಅವರು ತಮ್ಮ ನೆಲದಿಂದಲೇ ಸ್ಥಳಾಂತರಗೊಳ್ಳುವ ನಿರಂತರ ಪ್ರಕ್ರಿಯೆಗೆ ಮತ್ತು ಅವರ ಭವಿಷ್ಯವೇ ಹೆಚ್ಚೂ ಕಡಿಮೆ ಮುಗಿದ ಕಥೆಯಂತಾಗಿದ್ದು ಪ್ರಮುಖ ಅಂಶಗಳಾದರೆ, ಇವಕ್ಕೆಲ್ಲ ಮೂಲಭೂತ ಕಾರಣ ತಮ್ಮ ಈ ಸರ್ಕಾರಗಳ ಅತ್ಮಹ್ಯತ್ಯಾತ್ಮಕ ಹಾಗೂ ಭ್ರಷ್ಟಾಚಾರದ ಆಡಳಿತ ನೀತಿಗಳು ಎಂದು ಈ ಭ್ರಷ್ಟ ರಾಜಕಾರಣಿಗಳಿಗೆ ಗೊತ್ತಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಇಂದಿನ ದುರಂತ ಸ್ಥಿತಿಗೆ ಮತ್ತೊಂದು ಕಾರಣ. ಮುಖ್ಯವಾಗಿ ಸರ್ಕಾರಿ ಉದ್ದಿಮೆಗಳಾಗಿದ್ದಾಗ ಬಂಡವಾಶಾಹೀ ಮಾದರಿಗಳು ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಷ್ಟೋ ಇಷ್ಟೋ ಪಾಲಿಸುತ್ತಿರುವಂತೆ ಕಂಡುಬಂದರೂ ಒಮ್ಮೆ ಆ ಉದ್ದಿಮೆಗಳು ಖಾಸಗೀಕರಣಗೊಂಡಾಗ ಈ ಎಲ್ಲಾ ನೆಲದ ಹಕ್ಕಿನ ಮಾದರಿಗಳಿಗೂ, ಮಾನವೀಯ ನೆಲೆಗಳಿಗೂ, ಆದಿವಾಸಿಗಳ ಮೂಲಭೂತ ಹಕ್ಕುಗಳಿಗೂ, ಸಾಮಾಜಿಕ ನ್ಯಾಯಕ್ಕೂ ಸಂಪೂರ್ಣ ತಿಲಾಂಜಲಿ ದೊರೆಯತ್ತದೆ.

ಈ ಖಾಸಗೀ ಪಡೆಗಳಿಗೆ ಪ್ರಜಾತಾಂತಿಕ ಮೌಲ್ಯಗಳು ಕೇವಲ ಪುಸ್ತಕದ ಬದನೇಕಾಯಿ ಮಾತ್ರ. ಇಲ್ಲಿ ಐಡಿಯಾಲಜಿಗಳು ನಗೆಪಾಟಲಿಗೀಡಾಗುತ್ತವೆ. ಇದು ಸಹ ಸರ್ಕಾರದ ಅಧಿಪತಿಗಳಿಗೆ ಗೊತ್ತಿಲ್ಲವೆಂದೆಲ್ಲ. ಗೊತ್ತಿದೆ. ಆದರೆ ಈ ಪಕ್ಷಗಳು ಮತ್ತು ರಾಜಕಾರಣಿಗಳು ಈ ನವ ಕಲೋನಿಯಲ್‌ನ ಆರ್ಥಿಕ ಲಾಭ ತಂದುಕೊಡುವ, ತಲೆಮಾರುಗಳಿಗಾಗುವಷ್ಟು ಅಪಾರ ಸಂಪತ್ತನ್ನು ಪೂರೈಸುವ ಈ ನವ ಫ್ಯೂಡಲ್‌ನ ರೋಮಾಂಚಕತೆಯನ್ನು ಬಿಟ್ಟುಬಿಡುವಷ್ಟು ದಡ್ಡರೇ ?? ಅಲ್ಲವೇ ಅಲ್ಲ !! ಈ ಕಾರಣದಿಂದಲೇ ಭೃಹತ್ ಯೋಜನೆಗಳು ತಲೆಯತ್ತತೊಡಗಿದವು. ಅಧಿಕಾರಸ್ಥ ರಾಜಕಾರಣಿಗಳು ಮತ್ತು ಖಾಸಗೀ ಉದ್ದಿಮೆದಾರರ ಈ ಅನೈತಿಕ ಒಡಂಬಡಿಕೆ ಮತ್ತು ಕೋಟಿಗಟ್ಟಲೆಯ ಸಂಪತ್ತಿನ ವಹಿವಾಟು ಕಂಡವರ, ಹೊರಗಿನವರ ಪಾಲಾಗುವ, ನೆಲದ ಮಣ್ಣಿನ ಮಕ್ಕಳನ್ನು ಬಾವಿಗೆ ತಳ್ಳುವ ಒಟ್ಟಾರೆ ಈ ನೈತಿಕ ಶೂನ್ಯತೆಯ ವ್ಯಾಪಾರವನ್ನು ಪ್ರತಿರೋಧಿಸುವ ನೆಲೆಯಲ್ಲಿಯೇ ಮಾವೋವಾದಿಗಳ ಈ ಹಿಂಸಾತ್ಮಕ ಭೂಗತ ಮಾದರಿಗಳ ಪರ್ಯಾಯ ಆಯಾಮವೇ ಹುಟ್ಟಿಕೊಳ್ಳುತ್ತದೆ. ಇಂತಹ ಅತ್ಯಂತ ಎದೆನಡುಗಿಸುವ ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ವ್ಯವಸ್ಥೆಯನ್ನು ಈ ಮಹೇಂದ್ರ ಕರ್ಮನಂತಹ ಅವಾಂತಕಾರಿಯ ಕೈಗೊಪ್ಪಿಸುವ, ಸಾಲ್ವಾಜುಡಂನಂತಹ ಹಿಂಸಾತ್ಮಕ ಸಂಘಟನೆಯನ್ನು ಪ್ರೋತ್ಸಾಹಿಸುವ ಸರ್ಕಾರದ ಹುಂಬ ಮತ್ತು ಮತಿಗೆಟ್ಟ ನಿರ್ಧಾರಗಳಿಗೆ ಒಂದು ಇಡೀ ಸಂಸ್ಕೃತಿ ಮತ್ತು ಸಮುದಾಯಗಳು ಹೆಚ್ಚೂ ಕಡಿಮೆ ಮಂಕಾಗಿ ನಾಶವಾಗುತ್ತಿವೆ.

ಇದಕ್ಕೆ ಜ್ವಲಂತ ಉದಾಹರಣೆ ಕಳೆದ ಮೇ ೧೭ರಂದು ಇದೇ ಛತ್ತೀಸ್‌ಘಡ ಜಿಲ್ಲೆಯ, ಬಿಜಾಪುರ ತಾಲೂಕಿನ ಎಡೆಸಮೇಟ್ಟ ಗ್ರಾಮದ ಗ್ರಾಮಸ್ಥರು ತಮ್ಮ ವಾರ್ಷಿಕ ಸಾಂಸ್ಕೃತಿಕ ಹಬ್ಬವಾದ ಬೀಜ ನೆಡುವ ಬೀಜ ಪಾಂಡಂನ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಹತ್ಯೆಗಳು. ಈ ಬೀಜ ಪಾಂಡಂ ಇಲ್ಲಿನ ಗ್ರಾಮಸ್ಥರಿಗೆ, ಆದಿವಾಸಿಗಳಿಗೆ ಅತ್ಯಂತ ಪ್ರಮುಖವಾದ ಈ ನೆಲದ ಸಾಂಸ್ಕೃತಿಕ ಹಬ್ಬ. ಈ ಹಬ್ಬದ ವಿಶೇಷತೆಯೇನಂದರೆ ಈ ಬೀಜ ಪಾಂಡಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹೊರಗಿನವರು ಇದೇ ಗ್ರಾಮವನ್ನು ಪ್ರವೇಶಿಸಿದರೆ ಅವರನ್ನು ಬೀಜವನ್ನು ಕದ್ದೊಯ್ಯಲು ಬಂದವರೆಂದು ಪರಿಗಣಿಸಿ ಅವರಿಗೆ ಜುಲ್ಮಾನೆಯನ್ನು ವಿಧಿಸುತ್ತಾರೆ. ಈ ಸಾಂಸ್ಕೃತಿಕ ಹಿನ್ನೆಲೆಯನ್ನರಿಯದ ಅಲ್ಲಿನ ಸರ್ಕಾರದ ಪೋಲೀಸ್ ಪಡೆಗಳು ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗುಂಪುಗೂಡಿದ chhattisgarh-naxalattackಆದಿವಾಸಿ ಗ್ರಾಮಸ್ಥರನ್ನು ಶಂಕಿತ ಮಾವೋವಾದಿಗಳೆಂದು ಅನುಮಾನಿಸಿ ಎಂಟು ಮಂದಿ ಗ್ರಾಮಸ್ಥರು ಮತ್ತು ನಾಲ್ಕು ಮಕ್ಕಳನ್ನು ಕೊಲ್ಲುತ್ತಾರೆ. ಆದರೆ ಈ ಅಮಾಯಕರ ಅನಾಗರಿಕ ಹತ್ಯೆ ರಾಜ್ಯದ,ರಾಷ್ಟ್ರದ ಜನತೆಯ, ಪ್ರಭುತ್ವದ, ಮಾಧ್ಯಮಗಳ ಗಮನ ಸೆಳೆಯುವುದೇ ಇಲ್ಲ!! ಅಂದರೆ ಆದಿವಾಸಿಗಳನ್ನು ಈ ಪ್ರಭುತ್ವ ಮತ್ತು ವ್ಯವಸ್ಥೆ ತಮ್ಮ ಪ್ರೀತಿಯ ಬಳಗದವರೆಂದು ಪರಿಭಾವಿಸಿಯೇ ಇಲ್ಲ ! ಇದೇ ರಾಜ್ಯದಲ್ಲಿ 2011ರಲ್ಲಿ 300 ಮನೆಗಳನ್ನು ಸುಟ್ಟು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಯಿತು, ಜೂನ್ 2012ರಂದು ಸರ್ಕೇಗುಡದ ಗ್ರಾಮದ ಹದಿನೇಳು ಗ್ರಾಮಸ್ಥರನ್ನು ಇದೇ ಬೀಜ ಪಾಡಂ ಆಚರಣೆಯ ಸಂದರ್ಭದಲ್ಲಿ ಕೊಲ್ಲಲಾಯಿತು.

ಇಂತಹ ನೂರಾರು ಉದಾಹರಣೆಗಳು ಕಳೆದ ಹದಿನೈದು ವರ್ಷಗಳಲ್ಲಿ ನಡೆದಿವೆ. ಈ ಕಾಲಘಟ್ಟದಲ್ಲಿ ಸಾಲ್ವಾಜುಡಂನ ಕಾರ್ಯಾಚರಣೆಯಲ್ಲಿ ಸಾವಿರಾರು ಆದಿವಾಸಿಗಳು ಸರ್ಕಾರದ ಅಧಿಕೃತ ಗುಂಡೇಟಿಗೆ ಬಲಿಯಾಗಿ ಅನಾಮಿಕವಾಗಿ ಸಾವನ್ನಪ್ಪಿದರು. ಯಾವುದೇ ಬೆಂಬಲವಿಲ್ಲದಂತಹ ಈ ಅರಾಜಕತೆಯ, ಅಸಹಾಯಕತೆಯ ಸಂದರ್ಭದಲ್ಲಿ ಆ ರಾಜ್ಯಗಳ ಆದಿವಾಸಿಗಳ ಸಮೂಹವೇ ಮಾವೋವಾದಿಗಳ ತೆಕ್ಕೆಗೆ ಜಾರಿಕೊಂಡಿದ್ದು ಇಂದು ಇತಿಹಾಸ ಮತ್ತು ವರ್ತಮಾನ.

ಇದು ಮೇಲ್ನೋಟಕ್ಕೆ ತೀರಾ ಸರಳ ವಿಶ್ಲೇಷಣೆಯಂತೆ ಕಂಡುಬಂದರೂ ಅದರ ಕ್ಲೀಷೆಗಳು ತೀರ ಜಟಿಲವೇನಲ್ಲ. ಈ ಜಟಿಲವಲ್ಲದ ಕ್ಲಿಷ್ಟ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕೆಂದರೆ ಸರ್ಕಾರವೂ ಈ ಕೂಡಲೆ ನಕ್ಸಲ್‌ಪೀಡಿತ ಈ ಹಿಂದುಳಿದ ರಾಜ್ಯಗಳಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸಿ ಅಲ್ಲಿ ಸ್ವರ್ಗವನ್ನು ಸ್ಥಾಪಿಸಿದರೆ ಮಾವೋವಾದಿಗಳು ಇನ್ನಿಲ್ಲದಂತೆ ಮಾಯವಾಗುತ್ತಾರೆ ಎನ್ನುವ ಸರಳೀಕೃತ ಗ್ರಹಿಕೆಯೂ ಸಹ ನಗೆಪಾಟಲಿಗೀಡಾಗುತ್ತದೆ. ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಯಾವುದೂ ಸರಳವಲ್ಲ. ಏಕೆಂದರೆ ಸರ್ಕಾರದ ಅಭಿವೃದ್ಧಿ ಚಿಂತನೆಗಳು ಶೇಕಡಾ ನೂರಷ್ಟು ಪಶ್ಚಿಮದಿಂದ ಪ್ರೇರಿತಗೊಂಡಿದ್ದು. ಅಲ್ಲಿನ ಮಾದರಿಗಳನ್ನೇ ಇಲ್ಲಿ ಅಳವಡಿಸಿದ ಸರ್ಕಾರ ಹೆಚ್ಚೂ ಕಡಿಮೆ ಇಡೀ ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಅರಾಜಕತೆಗೆ ತಳ್ಳಿದ್ದು ಇಂದಿಗೂ ನಮ್ಮ ಕಣ್ಣ ಮುಂದಿದೆ. ಈ ವೈರುದ್ಧ್ಯಗಳನ್ನು ಅರಿಯಲು, ಗ್ರಹಿಸಲು ವಿಫಲಗೊಂಡ ಸರ್ಕಾರ ತನ್ನ ಈ ಹುಸಿ ಅಭಿವೃದ್ದಿ ಮಾದರಿಗಳೇ ಸಂಪೂರ್ಣವಾಗಿ ಪರಾಮಾರ್ಶೆಗೊಳಗಾಗಬೇಕದಂತಹ ಸಂದರ್ಭದಲ್ಲಿ, ಯಾವುದೇ ಜನಪರ ಹಿನ್ನೆಲೆ, ಯೋಜನೆಗಳಿಲ್ಲದೆ ಕೇವಲ ತಂತ್ರಜ್ಞಾನವನ್ನೇ ವೈಭವೀಕರಿಸಿ, ದೈಹಿಕ ಶ್ರಮದ ಪರಿಕಲ್ಪನೆಯನ್ನು ಶೂನ್ಯಗೊಳಿಸಿದ್ದು ಇಲ್ಲಿನ ಅಂತಸ್ಸತ್ವವನ್ನು ನಾಶಮಾಡಿತು. ಶ್ರಮಿಕರಾದ ರೈತರು ಮತ್ತು ಆದಿವಾಸಿಗಳು ಅತಂತ್ರರಾದರು. ಗ್ರಾಮೀಣ ಬಡತನ ಮತ್ತು ನಗರಗಳ ಬಡತನದ ಮಟ್ಟ, ಅಸಮಾನತೆ ಹೆಚ್ಚತೊಡಗಿದ್ದೇ ಕಳೆದ ಹದಿನೈದು ವರ್ಷಗಳ ಸಾಧನೆ. ಎಲ್ಲಾ ಬಗೆಯ ಅಹಿಂಸಾತ್ಮಕ ಚಳುವಳಿಗಳು ನಿಷ್ಕ್ರಿಯೆಗೊಂಡ ಇಂದಿನ ಸಂದರ್ಭದಲ್ಲಿ ಹಿಂಸಾತ್ಮಕ ಮಾವೋವಾದಿಗಳ ಸಂಘಟನೆ ಮೇಲುಗೈ ಸಾಧಿಸುವುದು ಅತ್ಯಂತ ಆತಂಕಕಾರಿಯಾದರೂ ಅದು ಸಹಜವೇ. ಆದರೆ ಇದು ಅಷ್ಟು ಸರಳವೂ ಅಲ್ಲ. ಆದರೆ ಇದಾವುದನ್ನು ಅಮೂಲಾಗ್ರವಾಗಿ, ಸೂಕ್ಷ್ಮವಾಗಿ, ಮಾನವೀಯ ನೆಲೆಯಲ್ಲಿ ವಿಮರ್ಶಿಸದ ಸರ್ಕಾರ ಹೆಚ್ಚೂ ಕಡಿಮೆ ನಿಯಂತ್ರಣವನ್ನು ಕಳೆದುಕೊಂಡು ಹಿಂಸೆಗೆ ಪ್ರತಿ ಹಿಂಸೆಯಾಗಿ ಮಾವೋವಾದಿಗಳ ಬೇಟೆಗೆ ತೊಡಗುತ್ತಾರೆ. ಮತ್ತೆ ಹಿಂಸೆಯ ಚಕ್ರ ತಿರುಗತೊಡಗುತ್ತದೆ.

ಈ ಹಿಂಸೆ ಹಾಗೂ ಪ್ರತಿಹಿಂಸೆಯ ಕರ್ಮಕಾಂಡಗಳನ್ನು ಕೇವಲ ಅಧ್ಯಯನಗಳ ಮೂಲಕ, ಮಾಧ್ಯಮಗಳ ಮೂಲಕ ಅರಿತುಕೊಳ್ಳುವ Chhattisgarh_Naxal_attack_siteನಾವು ಸಹ ಗೊಂದಲದಲ್ಲಿದ್ದೇವೆ. ಈ ಹಿಂಸೆ ಹಾಗೂ ಪ್ರತಿಹಿಂಸೆಯನ್ನು ನೇರವಾಗಿ ಮುಖಾಮುಖಿಯಾಗದ ಅದರ ಕಾರಣಕರ್ತರುಗಳನ್ನು ಹತ್ತಿರದಿಂದ ಕಂಡು ಚರ್ಚಿಸದ ಇಲ್ಲಿನ ಪ್ರಜ್ಞಾವಂತರು ಮತ್ತು ಪ್ರಗತಿಪರ ಗಂಪುಗಳು ಬಹಳ ಸರಳವಾಗಿ ಮಾವೋವಾದಿಗಳ ಪರ ಅಥವಾ ವಿರೋಧದ ನೆಲೆಗೆ ಬಂದು ತಲಪುತ್ತಾರೆ. ಕಾನೂನನ್ನು ಉಲ್ಲಂಘಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಧಿಕ್ಕರಿಸಿ ಹಿಂಸಾತ್ಮಕ ಮಾರ್ಗದಲ್ಲಿರುವ ಮಾವೋವಾದಿಗಳನ್ನು ಮೇಲಿನ ಕಾರಣಗಳಿಗೋಸ್ಕರ ಟೀಕಿಸುವವರೆಗೂ ಸಮಂಜಸವಾಗಿಯೇ ಕಾಣುವ ವಾದಗಳು, ನಮ್ಮ ಬುದ್ಧಿಜೀವಿಗಳು ಕಳೆದ ಐವತ್ತು ವರ್ಷಗಳ ಅಭಿವೃದ್ಧಿಯನ್ನು ಉದಾಹರಿಸುತ್ತಾ , ಭೂ ಸುಧಾರಣೆಗಳನ್ನು, ಬ್ಯಾಂಕ್‌ಗಳ ರಾಷ್ಟ್ರೀಕರಣಗಳನ್ನು, ಮೀಸಲಾತಿಯ ಸೌಲಭ್ಯಗಳನ್ನು ಉದಾಹರಿಸುತ್ತಾ ನೋಡಿ ಇವೆಲ್ಲ ಅಹಿಂಸಾತ್ಮಕ ಹೋರಾಟಗಳಿಂದ ಪಡೆದಿದ್ದಲ್ಲವೇ ಎಂದು ಪ್ರಶ್ನಿಸುತ್ತಾ ಈ ವ್ಯವಸ್ಥೆಯಲ್ಲಿಯೇ ಇದ್ದು ಹೋರಾಟ ಮಾಡಿ ಪಡೆಯಿರಿ ಎಂದು ಮುಗ್ಧವಾಗಿ ಮಾವೋವಾದಿಗಳನ್ನು ಟೀಕಿಸುತ್ತಾರೆ, ಆದರೆ ಈ ಬುದ್ಧಿಜೀವಿಗಳು ಪರಿಭಾವಿಸುವ ವ್ಯವಸ್ಥೆಯು ಎಂದು, ಎಷ್ಟು ವರ್ಷಗಳ ಕಾಲ ಚಲನಶೀಲವಾಗಿರುತ್ತದೆ, ಎಂದು,ಎಷ್ಟು ವರ್ಷಗಳ ಕಾಲ ಜಡಗೊಳ್ಳುತ್ತದೆ ಎಂದೇನು ಘೋಷಿಸಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ತಳಹದಿಯಲ್ಲಿ ಅಹಿಂಸಾತ್ಮಕ ಚಳುವಳಿಗಳನ್ನು ಕಟ್ಟುವಾಗ ಅದು ಬಹುಪಾಲು ಆ ಕ್ಷಣದ ಅಗತ್ಯಕ್ಕೆ ತಕ್ಕಷ್ಟೇ ರೂಪುಗೊಂಡಿರುತ್ತದಷ್ಟೇ. ಸಾಮರಸ್ಯದ, ಹೊಂದಾಣಿಕೆಯ ಹಿನ್ನೆಲೆಯಲ್ಲಿ ಪ್ರತಿಯೊಂದನ್ನು ನಿರ್ಧರಿಸಲಾಗುತ್ತದೆ. ಇದನ್ನು ಕ್ರಾಂತಿಕಾರಿಗಳು ಒಪ್ಪುವುದೇ ಇಲ್ಲ.

ಎಲ್ಲ ಸಮಸ್ಯೆಗಳನ್ನೂ ಒಂದೇ ಏಟಿನ ಮೂಲಕ ನಿವಾರಿಸಿಕೊಳ್ಳಬಯಸುವ ಈ ಕ್ರಾಂತಿಕಾರಿ ಚಳುವಳಿಗಳು ಸಂವಿಧಾನದ ಪರಿಕಲ್ಪನೆಯನ್ನು ತಿರಸ್ಕರಿಸುವುದು ಸಹ ಈ ಹಿನ್ನೆಲೆಯಲ್ಲಿ. ಆದರೆ ಈ ಹಿಂಸಾತ್ಮಕ ಚಳುವಳಿಗಳನ್ನು ಕೊನೆಗಾಣಿಸಬೇಕೆಂದರೆ ಅದು ಸಾಂಸ್ಕೃತಿಕ ಯಜಮಾನಿಕೆಯ ಮೂಲಕ ಮಾತ್ರ ಸಾಧ್ಯ. ಇಂದಿನ ಜಾಗತೀಕರಣದ ನವ ಆರ್ಥಿಕತೆಯನ್ನು ಬಳಸಿಕೊಂಡೇ ಹೊಸ ಬಗೆಯ ಆಕ್ಟಿವಿಸಂ ಅನ್ನು ಕಟ್ಟಿದಾಗ ಮಾತ್ರವೇ ಹಿಂಸೆಗೆ ತಕ್ಕ ಉತ್ತರ ನೀಡಲು ಸಾಧ್ಯ. ನಮ್ಮ ಬುದ್ಧಿಜೀವಿಗಳು ತಮ್ಮ ಯೂನಿವರ್ಸಿಟಿಗಳ, ಅಕಡೆಮಿಕ್ ವಲಯಗಳಿಂದ ಹೊರಬಂದು ಗ್ರಾಮ್ಷಿ ಹೇಳಿದಂತೆ ಜನಸಾಮಾನ್ಯರೊಂದಿಗೆ ಬೆರೆತು ಅವರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸಿತೊಡಗಿದಾಗ ಮಾತ್ರ ಈ ಹಿಂಸೆಗೆ ಪ್ರತ್ಯುತ್ತರ ಕೊಡಬಹುದೇನೊ. ನಾವು ಮರಳಿ ಈ ನವ ಕಲೋನಿಯಲ್‌ನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಂಧೀಜಿಯವರ ಹಿಂದ್ ಸ್ವರಾಜ್ ಚಿಂತನೆಯ ಮಾದರಿಗಳನ್ನು, ಕನಸುಗಳನ್ನು ಇಂದಿನ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಅಳವಡಿಸಿಕೊಂಡು ಮುಖಾಮುಖಿಯಾದಾಗಲೇ ಹೊಸ ಹೆಜ್ಜೆಗಳು ಶುರುವಾಯಿತೆಂದರ್ಥ.

ಮೊರಾರ್ಜಿದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ನೇಮಕಾತಿಯಲ್ಲಿ ಅಕ್ರಮ

[ಈ ಮೇಲ್ಕಂಡ ವಿಷಯವಾಗಿ ಬಡವರು ಮತ್ತು ಹಿಂದುಳಿದವರಿಗಾಗಿ ಸ್ಥಾಪಿಸಲ್ಪಟ್ಟಿರುವ ಈ ಶಾಲೆಗಳು ಯಶಸ್ವಿಯಾಗಬೇಕೆಂದು ಬಯಸುವ ಜನ ಈ ವಸತಿ ಶಾಲೆಗಳ ನೇಮಕಾತಿಯಲ್ಲಿಯ ಅಕ್ರಮ ಮತ್ತು ಭ್ರಷ್ಟಾಚಾರವನ್ನು ರಾಜ್ಯದ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ, ಸಮಾಜ ಕಲ್ಯಾಣ ಸಚಿವ, ಮತ್ತಿತರ ಪ್ರಮುಖರಿಗೆ ಪತ್ರ ಬರೆದಿದ್ದಾರೆ. ಇಲ್ಲಿ ಪ್ರಾಮಾಣಿಕರಿಗೆ ಶಿಕ್ಷೆ ಮತ್ತು ಅನ್ಯಾಯವಾಗುತ್ತಿದೆಯಷ್ಟೇ ಅಲ್ಲ, ಬಹುಕೋಟಿಗಳ ಅಕ್ರಮ ಮತ್ತು ಹಗರಣ ಇದು. ಆ ಪತ್ರದ ಸಾರಾಂಶ ಇಲ್ಲಿದೆ. ಈ ವಿಷಯವನ್ನು ಇತರೆ ಮಾಧ್ಯಮ ಮಿತ್ರರು ಕೈಗೆತ್ತಿಕೊಳ್ಳಬೇಕೆಂದು ವರ್ತಮಾನ.ಕಾಮ್ ವತಿಯಿಂದ ಕೋರುತ್ತೇವೆ.]

ವಿಷಯ: ಮೊರಾರ್ಜಿದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಮಾಡಿದ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳನ್ನು ತಮ್ಮ ಗಮನಕ್ಕೆ ತರುತ್ತಾ ಈ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರ ಅನುಮಾನಾಸ್ಪದ ನಡವಳಿಕೆಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೋರಿಕೆ

ಮಾನ್ಯರೆ,

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ೨೦೧೧ ರಲ್ಲಿ ಖಾಯಂ ಶಿಕ್ಷಕರನ್ನು ನೇಮಿಸುವಾಗ ಅಲ್ಲಿಯವರೆಗೆ ಕಾರ್ಯನಿರ್ವಹಿಸಿದ ಜಿಲ್ಲಾ ಪಂಚಾಯತ್ ಮಟ್ಟದ ಗುತ್ತಿಗೆ ಆಧಾರದ ಶಿಕ್ಷಕರಿಗೆ ಕೃಪಾಂಕವನ್ನು ನೀಡಿರಲಿಲ್ಲ. ಈ ವಿಚಾರವನ್ನು ಗುತ್ತಿಗೆ ಶಿಕ್ಷಕರು ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆನಂತರ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರ ಈ ಕೆಳಗಿನ ನಡವಳಿಕೆಗಳು ಅಕ್ರಮ ಮತ್ತು ಅನುಮಾನಾಸ್ಪದವಾಗಿ ಕಂಡು ಬರುತ್ತಿವೆ.

  1. ಉಚ್ಛನ್ಯಾಯಾಲಯವು ನೀಡಿದ ಮಧ್ಯಂತರ ಆದೇಶದಲ್ಲಿ ಜಿಲ್ಲಾ ಪಂಚಾಯತ್ಗಳ ಮೂಲಕ ಈ ಮೊದಲೇ ನೇಮಕ ಮಾಡಿದ ಹೊರಗುತ್ತಿಗೆ ಶಿಕ್ಷಕರ ಪರವಾಗಿ ಮಧ್ಯಂತರ ಆದೇಶನೀಡಿ, ನೇಮಕಾತಿಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿರತಕ್ಕದ್ದೆಂದು ತಿಳಿಸಿದ್ದರೂ ಸಹ ನ್ಯಾಯಾಲಯದ ತೀರ್ಪು ಬರುವ ಮೊದಲೇ ಹೊಸಶಿಕ್ಷಕರ ನೇಮಕಾತಿ ನಡೆಸಿರುವುದು.
  2. ನ್ಯಾಯಾಲಯವು ಸೇವಾ ಮುಂದುವರಿಕೆಯನ್ನು ನೀಡಿದ ಶಿಕ್ಷಕರ ಸ್ಥಾನವನ್ನು ಖಾಲಿ ಬಿಡದೇ ಅದೇ ಜಾಗಕ್ಕೆ ಎರಡನೇ ಅಭ್ಯರ್ಥಿಯಾಗಿ ಖಾಯಂ ಶಿಕ್ಷಕರನ್ನು ನೇಮಿಸಿರುವುದು.
  3. ಒಂದೇ ಹುದ್ದೆಯಲ್ಲಿ ಇಬ್ಬರು ಕೆಲಸ ಮಾಡುವುದರಿಂದ ಅವರ ವೇತನ ಇತ್ಯಾದಿ ಬಾಬ್ತು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹಣ ನಷ್ಟವಾಗುತ್ತದೆಂದು ತಿಳಿದೂ ಸಹ ಸುಮಾರು ಏಳುನೂರು ಜನ ಶಿಕ್ಷಕರನ್ನು ಒಂದೇ ಹುದ್ದೆಯಲ್ಲಿ ಇಬ್ಬಿಬ್ಬರು ಕೆಲಸ ಮಾಡುವಂತೆ ನೇಮಿಸಿರುವುದು.
  4. ಹೊಸ ನೇಮಕಾತಿಯ ಕೌನ್ಸೆಲಿಂಗ್‌ಗೆ ಕಾಲಾವಕಾಶ ಕೊಡದೆ, ಮೊಬೈಲ್ ಮೂಲಕ ಸಂದೇಶ ನೀಡಿ ಅವಸರದಲ್ಲಿ ಕರೆಸಿಕೊಂಡು ರಾತ್ರಿ ಹೊತ್ತಿನಲ್ಲೂ ಕೌನ್ಸೆಲಿಂಗ್ ನಡೆಸಿ ನೇಮಕಾತಿ ನೀಡಿರುವುದು.
  5. ಹೊಸನೇಮಕಾತಿಯ, ನೇಮಕಾತಿ ಆದೇಶದಲ್ಲೇ – ನೇಮಕಾತಿಯು ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರತಕ್ಕದ್ದೆಂದು ತಿಳಿಸಿದ್ದರೂ ಸಹ ನ್ಯಾಯಾಲಯದ ತೀರ್ಪು ಬಂದಾಗ ಅದನ್ನು ಪಾಲಿಸದೇ ಇದ್ದು, ವಿಭಾಗೀಯ ಪೀಠಕ್ಕೆ ಸ್ವಇಚ್ಛೆಯಿಂದ, ಸ್ವಯಂಪ್ರೇರಿತರಾಗಿ ಮೇಲ್ಮನವಿ ಸಲ್ಲಿಸಿರುವುದು. ನ್ಯಾಯಾಲಯದ ಆದೇಶದಿಂದ ತೊಂದರೆಗೊಳಗಾಬಹುದಾದ ಹೊಸ ಶಿಕ್ಷಕರು ಯಾವುದೇ ಬಹಿರಂಗಬೇಡಿಕೆಯನ್ನೂ ಮಂಡಿಸದೇ, ಯಾವುದೇ ರೀತಿಯ ಒತ್ತಡವನ್ನೂ ತಾರದೇ ಇದ್ದಾಗಲೂ, ಕಾರ್ಯನಿರ್ವಾಹಕ ನಿರ್ದೇಶಕರು ಈರೀತಿ ಸ್ವಯಂಪ್ರೇರಿತರಾಗಿ ಮೇಲ್ಮನವಿ ಸಲ್ಲಿಸಿರುವುದು ಅವರ ಈ ಕೃತ್ಯದ ಹಿಂದೆ ನಡೆದಿರಬಹುದಾದ ಅವ್ಯವಹಾರಗಳನ್ನು ಸೂಚಿಸುತ್ತದೆ.
  6. ನ್ಯಾಯಾಲಯದ ತೀರ್ಪು ಹೊರಗುತ್ತಿಗೆ ಶಿಕ್ಷಕೇತರ ಸಿಬ್ಬಂದಿ ವಿರುದ್ಧ ಬಂದಿದ್ದಾಗ ಅವರಿಗೆ ಮೇಲ್ಮನವಿ ಯನ್ನು ಸಲ್ಲಿಸಲೂ ಸಹ ಅವಕಾಶ ಕೊಡದೆ, ಕೇವಲ ಎರಡೇ ದಿನಗಳಲ್ಲಿ ಅವರನ್ನು ಕೆಲಸದಿಂದ ತೆಗೆದು ಹಾಕಿರುವುದು, ಆದರೆ ವಿಭಾಗೀಯ ಪೀಠವು ಹೊರಗುತ್ತಿಗೆ ಶಿಕ್ಷಕರ ಪರವಾಗಿ ತೀರ್ಪು ನೀಡಿದಾಗ ಇಂದು ಕಾರ್ಯನಿರ್ವಹಿಸುತ್ತಿರುವ- ಕಾರ್ಯನಿರ್ವಾಹಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸದೆ, ನ್ಯಾಯಾಲದ ಆದೇಶವನ್ನೇ ಬದಿಗಿಟ್ಟು ಅದರಿಂದ ತಪ್ಪಿಸಿಕೊಳ್ಳಲು ನೆಪಗಳನ್ನು ಹೇಳುತ್ತಿರುವುದು. ಮತ್ತು ಈ ಮೂಲಕ ಅವರು ಆಡಳಿತಾಧಿಕಾರಿಯಾಗಿ ನ್ಯಾಯ ಒದಗಿಸುವ ಬದಲಾಗಿ ಹೊಸದಾಗಿ ನೇಮಕಗೊಂಡ ಶಿಕ್ಷಕರ ಪರವಾಗಿ ವರ್ತಿಸುತ್ತಿರುವುದು, ಇದರ ಹಿಂದೆ ದೊಡ್ಡ ಪ್ರಮಾಣದ ಅಕ್ರಮ-ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದೆ.
  7. ನ್ಯಾಯಾಲಯದಿಂದ ಸೇವಾಮುಂದುವರಿಕೆಯನ್ನು ಪಡೆದ ಹೊರಗುತ್ತಿಗೆ ಶಿಕ್ಷಕರಿಗೆ ಕಾಲಕಾಲಕ್ಕೆ ವೇತನ ನೀಡದೇ ಅವರು ಕಾನೂನು ಹೋರಾಟ ನಡೆಸದಂತೆ ಅವರ ಶಕ್ತಿಯನ್ನು ಕುಗ್ಗಿಸಲು ಪ್ರಯತ್ನಿಸಿರುವುದು. ಹೊಸದಾಗಿ ನೇಮಕಗೊಂಡವರಿಗೆ ನ್ಯಾಯಾಲಯದ ತೀರ್ಪುಬರುವ ಮೊದಲೇ ವೇತನ ಪಾವತಿ ಮಾಡಿ ಅವರ ಸೇವಾ ದಾಖಲಾತಿಯನ್ನು ತೆರೆದಿರುವುದು.
  8. ಹೊಸನೇಮಕಾತಿಯಲ್ಲಿ, ಕೆಲವು ನೇಮಕಾತಿಗಳಿಗೆ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶವನ್ನು ನೀಡದೇ ಕಛೇರಿಯಲ್ಲಿರುವ ಇತರರು ಆದೇಶ ನೀಡಿ, ಯಾರು ಬೇಕಾದರೂ ಆದೇಶ ನೀಡಬಹುದು ಎಂಬಂತೆ ವರ್ತಿಸಿರುವುದು.
  9. ದಿನಾಂಕ ೨೨/೨/೨೦೧೩ ರಂದು ಹೊಸದಾಗಿ ನೇಮಕಗೊಂಡ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಕಾರ್ಯನಿರ್ವಾಹಕ ನಿರ್ದೇಶಕರು ತರಬೇತಿಯ ಹೆಸರಿನಲ್ಲಿ ಕರೆಸಿಕೊಂಡು, ಅವರ ಪ್ರೊಬೇಷನರಿ ಅವಧಿ ಮುಗಿಯುವ ಮೊದಲೇ ಸಂಘ ರಚಿಸಿಕೊಂಡು, ಈಗಾಗಲೇ ಇರುವ ಗುತ್ತಿಗೆ ಶಿಕ್ಷಕರ ವಿರುದ್ಧ ಹೋರಾಡಲು ಚಿತಾವಣೆ ನೀಡಿರುವುದು. ಈ ಶಿಕ್ಷಕರು ಸಂಘವನ್ನು ರಚಿಸಿಕೊಂಡು ಹೇಗೆ ಹೋರಾಡಬೇಕೆಂದು ಸಲಹೆನೀಡಲು, ಕಾರ್ಯನಿರ್ವಾಹಕ ನಿರ್ದೇಶಕರು ತಮ್ಮ ವಕೀಲರಾದ ಮಧುಸೂಧನ್ ಮತ್ತು ತಮ್ಮ ಅಧೀನ ಸಿಬ್ಬಂದಿಯಾದ ಶ್ರೀ ಗಂಗಪ್ಪಗೌಡ ಅವರನ್ನು ಸಭೆಗೆ ಕಳುಹಿಸಿಕೊಟ್ಟಿರುವುದು. ಹೀಗೆ ರಚಿಸಲ್ಪಟ್ಟ ಸಂಘದ ಎಲ್ಲ ಮಾಹಿತಿಗಳೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟವಾಗಿರುವುದು, ಈ ಎಲ್ಲಾ ಕಾರಣಗಳಿಂದ, ಈ ಶಿಕ್ಷಕರ ಸಂಘವನ್ನು ಕಾರ್ಯನಿರ್ವಾಹಕ ನಿರ್ದೇಶಕರೇ ಹುಟ್ಟುಹಾಕಿರುವ ಅನುಮಾನವಿದೆ.
  10. ಹೊಸ ಶಿಕ್ಷಕರ ಸಂಘದ ಸದಸ್ಯತ್ವ ಶುಲ್ಕ ಅಸಹಜವೆನ್ನಿಸುವಷ್ಟು ಅತಿಯಾಗಿದೆ. ಇದು ತಲಾ ಒಂದು ಸಾವಿರ ರೂಪಾಯಿಗಳಾಗಿದ್ದು ಸುಮಾರು ೪೦೦೦ ಶಿಕ್ಷರಿಂದ ನಲುವತ್ತು ಲಕ್ಷರೂಪಾಯಿಗಳಷ್ಟು ಹಣ ಸಂಗ್ರಹವಾಗಿದ್ದು ಇದರಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರ ಪಾತ್ರವೇನೆಂದು ತನಿಖೆ ಮೂಲಕವೇ ಅರಿಯಬೇಕಾಗಿದೆ. ಮತ್ತು ಈ ಕಾರ್ಯನಿರ್ವಾಹಕ ನಿರ್ದೇಶಕರು ಸದಾ ಕಾಲ ನ್ಯಾಯಾಲಯದಿಂದ ತಮ್ಮ ಪರವಾಗಿ ಆದೇಶ ಪಡೆದಿರುವ ಶಿಕ್ಷಕರ ವಿರೋಧಿಯಾಗಿಯೂ ಮತ್ತು ಹೊಸ ಶಿಕ್ಷಕರ ಪರಮಾಪ್ತನಾಗಿಯೂ ನಡೆದುಕೊಳ್ಳುತ್ತಿರುವ ನಡೆವಳಿಕೆಯೊಂದಿಗೆ ತಾಳೆ ನೋಡಿ ತನಿಖೆ ನಡೆಸಬೇಕಾಗಿದೆ.
  11. ದಿನಾಂಕ ೩/೬/೨೦೧೩ ರ ವಿಜಯವಾಣಿ ಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ನ್ಯಾಯಾಲಯದ ಆದೇಶವನ್ನು ತಿರುಚಿ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಹೂಡುವಾಗ ಹೊರಗುತ್ತಿಗೆ ಶಿಕ್ಷಕರ ಸಂಖ್ಯೆ ಕಡಿಮೆ ಇತ್ತು. ಅದೀಗ ಜಾಸ್ತಿಯಾಗಿರುವುದರಿಂದ ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳು ಹೆಚ್ಚುವರಿಯಾಗಿ ಬೇಕಾಗುತ್ತವೆಂಬ ಅರ್ಥದಲ್ಲಿ ಹೇಳಿಕೆ ನೀಡಿರುತ್ತಾರೆ. ಆದರೆ ನ್ಯಾಯಾಲಯದ ವಿಭಾಗೀಯ ಪೀಠವು ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಶಿಕ್ಷಕರನ್ನು ಭರ್ತಿಮಾಡಿ ಎಂದು ಹೇಳಿಲ್ಲ, ಬದಲಾಗಿ ಹುದ್ದೆಗಳು ಭರ್ತಿಯಾಗಿಯೇ ಇದ್ದರೂ ಹೊರಗುತ್ತಿಗೆ ಶಿಕ್ಷಕರಿಗೆ ಕೃಪಾಂಕಗಳನ್ನು ನೀಡಿದಾಗ ಯಾರ್‍ಯಾರು ಹೆಚ್ಚು ಅಂಕಗಳನ್ನು ಪಡೆಯುತ್ತಾರೋ ಅಂತವರನ್ನು ಭರ್ತಿಮಾಡಿಕೊಳ್ಳತಕ್ಕದ್ದೆಂದು ಹೇಳಿದೆ. ಒಂದೇ ಒಂದು ಹುದ್ದೆಗೆ ನೂರಾರು ಜನ ಅಭ್ಯರ್ಥಿಗಳಿದ್ದರೂ ಕೃಪಾಂಕವನ್ನು ಸೇರಿಸಿದಾಗ ಯಾರು ಹೆಚ್ಚಿನ ಅಂಕ ಪಡೆಯತ್ತಾರೋ ಅವರನ್ನೇ ನೇಮಕ ಮಾಡಿಕೊಳ್ಳತಕ್ಕದ್ದೆಂದು ನ್ಯಾಯಾಲಯದ ಆಶಯವಾಗಿದೆ. ನ್ಯಾಯಾಲಯದ ಆದೇಶವನ್ನೇ ತಿರುಚಿ ವ್ಯಾಖ್ಯಾನಿಸಲು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪ್ರಚೋದನೆ ನೀಡಿದ ಶಕ್ತಿ ಯಾವುದು ?
  12. ಹೊರ ಗುತ್ತಿಗೆ ಶಿಕ್ಷಕರನ್ನು ಸರ್ಕಾರದ ನಿರ್ದೇಶನದ ಅನುಸಾರ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ/ಜಿಲ್ಲಾಧಿಕಾರಿಗಳು ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯ ಸಮಿತಿಗಳು ಕೆಲಸ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಮುದಾಯದ ಶಿಕ್ಷಕರು ಇದ್ದಾರೆ. ನೇಮಕಾತಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು ಅವರಿಗೆ ಯಾವುದೇ ರೀತಿಯ ಅನುಕೂಲ ಮಾಡಿಕೊಟ್ಟಿಲ್ಲ. ಆದರೆ ನ್ಯಾಯಾಲಯವು ದಲಿತರಿಗೆ ಅನುಕೂಲ ಮಾಡಿಕೊಟ್ಟಾಗಲೂ ಸಹ ಕಾರ್ಯನಿರ್ವಾಹಕ ನಿರ್ದೇಶಕರು ದಲಿತರಿಗೆ ಸಿಕ್ಕಿರುವ ಅವಕಾಶವನ್ನು ನಿರಾಕರಿಸುವುದಕ್ಕೆ ಆದ್ಯತೆ ನೀಡಲು ಕಾರಣವಾಗಿರುವ ಅಂಶಗಳೇನು ?

ಈ ಮೇಲಿನ ಎಲ್ಲಾ ಅನುಮಾನಗಳಿಗೆ ಸಂಬಂಧಿಸಿ ನಮ್ಮಲ್ಲಿರುವ ದಾಖಲೆಗಳನ್ನು ಈಗಲೇ ನೀಡಿದರೆ ದಾಖಲೆಗಳನ್ನೇ ತಿದ್ದುವ ಇಲ್ಲವೇ ಮುಂದೆ ಅವು ಲಭ್ಯವಾಗದಂತೆ ಮಾಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಈಗ ನಾವು ಅದನ್ನು ತಮಗೆ ಸಲ್ಲಿಸುತ್ತಿಲ್ಲ. ಆದರೆ ತನಿಖೆಯನ್ನು ನ್ಯಾಯಾಲಯದ ಮೂಲಕವೇ ಮಾಡಿಸಬೇಕಾದ ಅನಿವಾರ್ಯತೆ ಬಂದರೆ ಆ ಸಂದರ್ಭದಲ್ಲಿ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವವರಿದ್ದೇವೆ. ಅದಕ್ಕೂ ಮೊದಲು ತಾವು ಆದ್ಯತೆ ಮೇರೆಗೆ, ಇಲ್ಲಿ ನಡೆದಿರುವ ಭಾರಿ ಪ್ರಮಾಣದ ಅಕ್ರಮ- ಅವ್ಯವಹಾರಗಳ ಕುರಿತು ಸೂಕ್ತ ತನಿಖೆಗೆ ಆದೇಶ ನೀಡಬೇಕಾಗಿ ಕೋರುತ್ತೇವೆ.

ಇತಿ ತಮ್ಮ ವಿಶ್ವಾಸಿಗಳು,
(ಹಲವರ ಸಹಿ ಇದೆ.)