Monthly Archives: January 2014

ಅಣ್ಣಾ ಹಜಾರೆಯನ್ನು ಭೇಟಿ ಮಾಡಿದ 16 ವರ್ಷಗಳ ನಂತರ…

– ಚಂದ್ರಶೇಖರ ಬೆಳಗೆರೆ

ಹದಿನಾರು ವರ್ಷಗಳ ನಂತರ ನಾನು ಮತ್ತೆ ಜನವರಿ 13 ರಂದು ಮಹಾರಾಷ್ಟ್ರದ ಅಹಮದ್ ನಗರ್ ಜಿಲ್ಲೆಯ ಪರೇಲ್ ತಾಲೂಕಿನ ರಲೇಗಾಂವ್ ಸಿದ್ದಿ ಗ್ರಾಮಕ್ಕೆ ಹೋಗಿದ್ದೆ. ಈ ಗ್ರಾಮದ ಅಭಿವೃದ್ಧಿಯ ಮೂಲಕ ಭಾರತಕ್ಕೆ ಗ್ರಾಮೀಣ ಅಭಿವೃದ್ಧಿಯ ಮಾದರಿಯನ್ನು ನೀಡಿದ ಅಣ್ಣಾ ಹಜಾರೆ ಅವರನ್ನು ಒಂದೂವರೆ ದಶಕದ ನಂತರ ಅವರ ಈ ಊರಿನಲ್ಲಿ ಮತ್ತೆ ಭೇಟಿ ಮಾಡುವ ಅವಕಾಶ ಸಿಕ್ಕಿತು. 1997 ರಲ್ಲಿ ರಲೇಗಾಂವ್‌ ಸಿದ್ಧಿ ದೇಶದ ಗ್ರಾಮೀಣ ಅಭಿವೃದ್ಧಿಯ ಪ್ರತೀಕವಾಗಿ ಭಾರೀ ಸುದ್ದಿ ಮಾಡಿತ್ತು. ralegan_siddhi_the_sustainable_villageಅಣ್ಣಾ ಆಗ ಸೇನೆಯಿಂದ ವಾಪಾಸು ಬಂದು ಒಂದು ದಶಕವಾಗಿತ್ತಷ್ಟೆ. ತಮ್ಮ ಪುಟ್ಟ ಹಳ್ಳಿಯನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣ ಅಭಿವೃದ್ಧಿ ಎಂದರೆ ಏನು ಎಂಬುದನ್ನು ದೇಶಕ್ಕೆ ಪರಿಚಯಿಸುತ್ತಿದ್ದರು ಈ ಮಾಜಿ ಸೇನಾನಿ. ಆಗಷ್ಟೇ ಊರಿನ ದೇವಸ್ಥಾನ ದುರಸ್ಥಿಯಾಗಿತ್ತು. ಬೆಟ್ಟದ ಸಾಲುಗಳಲ್ಲಿ ಚೆಕ್ ಡ್ಯಾಂಗಳು-ಹೊಂಡಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಗ್ರಾಮದ ಆಸು-ಪಾಸಿನ ಗೋಮಾಳದಲ್ಲಿ, ರಸ್ತೆ ಬದಿಯಲ್ಲಿ ಬೆಳೆದ ಮರಗಳಿಂದಾಗಿ ತಂಪಿನ ವಾತಾವರಣವಿತ್ತು. ಬತ್ತದ ಅಂತರ್ಜಲ ಮತ್ತು ಮಳೆ ನೀರಿನ ಸಂಗ್ರಹದಿಂದಾಗಿ ದನಕರುಗಳಿಗೆ ಹುಲ್ಲುಗಾವಲು ಸಹಜವಾಗಿ ಸೃಷ್ಟಿಯಾಗಿತ್ತು. ಭ್ರಷ್ಟ ವ್ಯವಸ್ಥೆಯಲ್ಲಿ ಕೊಳೆತು ಹೋಗಿದ್ದ ತಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡಲು ಅಣ್ಣಾ ಹಜಾರೆ ಜನರನ್ನೇ ಸಂಘಟಿಸಿದ್ದರು. ಹಳ್ಳಿಯ ನಾಗರೀಕರು ಮೊದಲು ಹಿಂದೇಟು ಹಾಕಿದರೂ ನಂತರ ಅಣ್ಣಾ ಅವರನ್ನು ಅನುಸರಿಸಿದರು. ಗ್ರಾಮದ ಪ್ರತಿಯೊಬ್ಬರೂ ಪ್ರಾಮಾಣಿಕರಾಗುವ ಮೂಲಕ ಒಂದು ಮಾದರಿ ವ್ಯವಸ್ಥೆ ಸೃಷ್ಟಿಯಾಗಲು ಎಲ್ಲರೂ ಕಾರಣರಾದರು.

ತಮ್ಮ ಊರಿನ ಅಭಿವೃದ್ಧಿಯ ಜೊತೆಗೆ ಅಣ್ಣಾ ಭ್ರಷ್ಟಾಚಾರದ ವಿರುದ್ಧ ಜನಾಂದೋಲನವನ್ನು ರೂಪಿಸುತ್ತಿದ್ದರು. anna-ralegaonಇವರಂತೆ ಯೋಚಿಸುತ್ತಿದ್ದ ಸಮಾನ ಮನಸ್ಕರು ಇವರಿಗೆ ಕೈ ಜೋಡಿಸಿದರು. ರಲೇಗಾಂವ್ ಸಿದ್ಧಿ ಗ್ರಾಮವನ್ನು ಬಂಗಾರವಾಗಿಸುವ ಮೂಲಕ ಮಾಜಿ ಯೋಧ ಜನ ಸಾಮಾನ್ಯರ ಸೇನಾನಿಯಾಗಿ ಬೆಳೆದಿದ್ದರು. ದೇಶಕ್ಕೆ ಗ್ರಾಮೀಣ ಅಭಿವೃದ್ಧಿಯ ಮಾದರಿ ನೀಡಿದ ಅಣ್ಣಾ ಹಜಾರೆ ಮಾಹಿತಿ ಹಕ್ಕು ಕಾನೂನಿನ ಅನುಷ್ಠಾನಕ್ಕೆ ಹೋರಾಡಿ ಯಶಸ್ವಿಯಾದರು. ಭ್ರಷ್ಟ ಅಧಿಕಾರಿಗಳಿಗೆ ಅಂಕುಶವಾಗುವ ಲೋಕಪಾಲ ಕಾನೂನು ಆಗಲು ಅಣ್ಣಾ ಕೊಡುಗೆ ಅಪಾರ.

ಇಂತಹ ಹಜಾರೆ ದೆಹಲಿ ಚುನಾವಣೆಯ ನಂತರ ಮಂಕು ಬಡಿದವರಂತಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಇವರ ನಡುವಿನ ಭಿನ್ನಾಭಿಪ್ರಾಯ ಮಾಧ್ಯಮಗಳ ಕೆನ್ನಾಲಿಗೆಗೆ ತುತ್ತಾದ ಮೇಲಂತೂ ಹಜಾರೆ ಸುತ್ತಾ ಮತ್ತೆ-ಮತ್ತೆ ವಿವಾದದ ಹುತ್ತ ಹೆಚ್ಚುತ್ತಲೇ ಇದೆ.

ಈಗ ರಲೇಗಾಂವ್ ನಿತ್ಯ ಸುದ್ದಿಯಲ್ಲಿದೆ. ಲೋಕಪಾಲ ಮಸೂದೆಯ ಹೋರಾಟದ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ಅಣ್ಣಾ ರಲೇಗಾಂವ್ ಗ್ರಾಮವನ್ನು ಪುಟ್ಟ ಪಟ್ಟಣದಂತೆ ಮಾರ್ಪಡಿಸಿದ್ದಾರೆ. ಕೃಷಿ ಬದುಕನ್ನು ಹಸನಾಗಿ ನಡೆಸಲು ಸಂಪೂರ್ಣ ಯೋಗ್ಯವಾಗಿದ್ದ ಈ ಆದರ್ಶ ಗ್ರಾಮ ಈಗ ಅಭಿವೃದ್ಧಿಯ ಮಾದರಿಯಾಗಿ ರೂಪು ತಾಳಿದೆ. ಗ್ರಾಮೀಣ ಅಭಿವೃದ್ಧಿ ತರಬೆತಿ ಸಂಸ್ಥೆ, ಭ್ರಷ್ಟಾಚಾರ ವಿರೋಧಿ ಜನಾಂದೋಲನ ಟ್ರಸ್ಟ್ ಹೀಗೆ ಅನೇಕ ಕಟ್ಟಡಗಳು ಈ ಪುಟ್ಟ ಗ್ರಾಮದಲ್ಲಿ ತಲೆ ಎತ್ತಿವೆ.

‘ಗುರುಗಾಂವ್ ಪಟ್ಟಣದಲ್ಲಿ ನಮ್ಮ ಅಭಿಮಾನಿಗಳು ನನ್ನ ಪ್ರತಿಮೆ ಹಾಕಲು ನಿಮ್ಮ ಸ್ಥಳೀಯ ಕಾರ್ಯಕರ್ತರು ಅಡ್ಡಿ ಪಡಿಸುತ್ತಿದ್ದಾರೆ, anna_hazare_at_ralegan_siddhiದಯವಿಟ್ಟು ನೀವು ಮಧ್ಯ ಪ್ರವೇಶಿಸಿ ಸರಿಪಡಿಸಿ’ ಎಂದು ಅಣ್ಣಾ ಹಜಾರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದ ಸುದ್ದಿ ಪತ್ರಿಕೆಗಳಲ್ಲಿ ಬಂದ ನಂತರ ಅಣ್ಣಾ ಕೊಂಚ ಟೀಕೆಗೊಳಗಾಗಿದ್ದಾರೆ. ಇಳಿ ವಯಸ್ಸಿನ ಅಣ್ಣಾ ಹಜಾರೆ ಇಂತಹ ಅನೇಕ ಪ್ರಕರಣಗಳಿಂದ ಮುಜಗರಗೊಂಡ ಪಕ್ಷಿಯಾಗಿದ್ದಾರೆ.

ಅಂದು ಊರ ಮುಂದಿನ ಚಾವಡಿ ಮೇಲೆ ಎಲ್ಲರಿಗೂ ಸಿಗುತ್ತಿದ್ದ ಅಣ್ಣಾ ಹಜಾರೆ ಕಟ್ಟಡಗಳ ಆವರಣದಲ್ಲಿರುವ ಒಂದು ಕೋಣೆಯಲ್ಲಿದ್ದಾರೆ. ಭದ್ರತಾ ವ್ಯವಸ್ಥೆಯನ್ನು ಭೇದಿಸದೆ ಇವರನ್ನು ಯಾರೂ ನೋಡುವಂತಿಲ್ಲ. ನಾವು (ನನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳ ನನ್ನ ಕುಟುಂಬ) ಬೆಂಗಳೂರಿನಿಂದ ಬಂದಿದ್ದೇವೆ ಎಂದು ಅವರ ಸಹಾಯಕರನ್ನು ಅಂಗಲಾಚಿದಾಗ ಸುಮಾರು ಒಂದು ಗಂಟೆ ನಂತರ ಅಣ್ಣಾ ನಮಗೆ ಸಿಕ್ಕರು. ಅಣ್ಣಾ ನಮ್ಮೊಂದಿಗೆ ಸುಮಾರು ಐದು ನಿಮಿಷಗಳ ಕಾಲ ಇದ್ದರು. ನಂತರ ಕೋಣೆಯೊಳಗೆ ಹೋದರು. ಅವರ ಸಿಬ್ಬಂದಿ ಅಣ್ಣಾರನ್ನು ನೋಡಲು ಬಂದ ಸ್ಥಳೀಯ ಜನರಿಗೆ ಸಂಜೆಯವರೆಗೂ ಅವರು ಸಿಕ್ಕುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದರು.

ಭಾರತದ ಮಾದರಿ ಗ್ರಾಮವನ್ನು ಸಾಕಾರ ರೂಪಕ್ಕಿಳಿಸಿದ ಅಣ್ಣಾ ತಮ್ಮ ಇತರ ಹೋರಾಟಗಳ ಜೊತೆ-ಜೊತೆಗೆ ದೇಶದ ಎಲ್ಲಾ ಭಾಗಗಳಲ್ಲೂ ಗ್ರಾಮೀಣ ಅಭಿವೃದ್ಧಿಯ ಪಡೆಗಳನ್ನೇ ನಿರ್ಮಿಸಿದ್ದರೆ ನಗರ ವಿಲಾಸಿ ಮಧ್ಯಮ ವರ್ಗದ ರಾಜಕೀಯ ನಾಯಕರ ಮಧ್ಯೆ ಸಿಕ್ಕಿ ಹಾಕಿಕೊಳ್ಳುತ್ತಿರಲಿಲ್ಲವೇನೋ. ಅಣ್ಣಾ ತಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಎಂದು ಸರ್ಕಾರದ ಮುಂದೆ ಭಿಕ್ಷೆ ಕೇಳುತ್ತಿರಲಿಲ್ಲ. ಜನರನ್ನು ಸಂಘಟಿಸಿ ಅಗತ್ಯವಿರುವ ಕೆಲಸಗಳನ್ನು ಆರಂಭಿಸುತ್ತಿದ್ದರು. chambe-family-with-anna-hazareಆಗ ಸರ್ಕಾರ ಇವರಿಗೆ ಕೈ ಜೋಡಿಸುವುದು ಅನಿವಾರ್ಯವಾಗುತ್ತಿತ್ತು. ಅಣ್ಣಾ ಹಜಾರೆ ಇದೇ ತಂತ್ರವನ್ನು ತಮ್ಮ ಜಿಲ್ಲೆಯಲ್ಲಿ ಅನುಸರಿಸಿದ್ದರೂ ಸಾಕಾಗಿತ್ತು. ಈ ಕ್ರಾಂತಿ ತನ್ನಿಂದ ತಾನೇ ದೇಶವ್ಯಾಪಿ ವಿಸ್ತರಣೆಯಾಗುತ್ತಿತ್ತೇನೋ. ಆದರೆ ಇದು ಸಾಧ್ಯವಾಗಲಿಲ್ಲ. ಇದಕ್ಕೆ ಹಜಾರೆ ಕಾರಣರೋ, ಸರ್ಕಾರ ಕಾರಣವೋ ಗೊತ್ತಿಲ್ಲ.

ಅಣ್ಣಾ ಹಜಾರೆ ಅವರನ್ನು ನೋಡಿಕೊಂಡು ಸಂಜೆ ಪುಣೆ ಪಟ್ಟಣದಲ್ಲಿ ಬಸ್ಸು ಹತ್ತಿದ ನಾವು ಮುಂಜಾನೆ ಬೆಂಗಳೂರಿನಲ್ಲಿ ಕಣ್ಣು ಬಿಟ್ಟಾಗ ರಸ್ತೆ ಬದಿಯಲ್ಲಿ ಕನ್ನಡದ ಬೋರ್ಡ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಅಯ್ಯಪ್ಪನ ಭಕ್ತರು ಉದ್ಘೋಷ ಹಾಕುತ್ತಾ ವಾಹನಗಳಲ್ಲಿ ಸಾಗುತ್ತಿದ್ದುದು ಸಾಮಾನ್ಯವಾಗಿತ್ತು. ಗುರುಸ್ವಾಮಿಗೆ ಕಿರಿ ಸ್ವಾಮಿಗಳು ಕಾಲಿಗೆ ಬೀಳುವ ದೊಡ್ಡ ಫ್ಲೆಕ್ಸ್‌ಗಳಲ್ಲಿನ ಚಿತ್ರಗಳು ಹಜಾರೆ ಅಭಿವೃದ್ಧಿಯನ್ನು ಕಂಡು ಬಂದ ನನ್ನನ್ನು ಅಣಕಿಸುತ್ತಿದ್ದವು. ಹಜಾರೆ ರಲೇಗಾವ್ ಸಿದ್ಧಿಯಲ್ಲಿ ಕಟ್ಟಿದ ಸೇನಾ ಪಡೆಯನ್ನು ಭಾರತದ ಎಲ್ಲಾ ಗ್ರಾಮಗಳಿಗೂ ವಿಸ್ತರಿಸಿದ್ದರೆ ಅಯ್ಯಪ್ಪನ ಭಕ್ತರ ಪಡೆಗಿಂತ ಹೆಚ್ಚು ಸಂಖ್ಯೆಯ ಗ್ರಾಮೀಣ ಅಭಿವೃದ್ಧಿ ಸೇನಾನಿಗಳನ್ನು ನಾವು ಇಂದು ಕಾಣಬಹುದಾಗಿತ್ತು. ಇದು ಏಕೆ ಸಾಧ್ಯವಾಗಿಲ್ಲ ಎಂದು ಯೋಚಿಸಿದಾಗ ಹದಿನಾರು ವರ್ಷಗಳ ಹಿಂದೆಯೇ ಅಣ್ಣಾ ಹಜಾರೆಯನ್ನು ಭೇಟಿ ಮಾಡಿ ಬಂದು ಒಂದು ಲೇಖನ ಬರೆದು ಸುಮ್ಮನಾದ ನನ್ನ ಬಗ್ಗೆ ನಾಚಿಕೆಯಾಯಿತು.

ಆಮ್ ಆದ್ಮಿ ಪಕ್ಷ ಜನತೆಯ ಆಶೋತ್ತರ ಕಡೆಗಣಿಸದಿರಲಿ

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೇರಿದ ನಂತರ ಅದರ ಕಾರ್ಯವೈಖರಿಯನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ. ಹೀಗಾಗಿ ಆಮ್ ಆದ್ಮಿ ಪಕ್ಷದ ದಿನ ದಿನದ ಚಟುವಟಿಕೆಗಳೂ ಸುದ್ದಿ ವಾಹಿನಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಿಂದಿ ಸುದ್ದಿ ವಾಹಿನಿಗಳಲ್ಲಿ ವಿಮರ್ಶೆಗೆ, ಚರ್ಚೆಗೆ ಒಳಗಾಗುತ್ತಿವೆ. ಆಮ್ ಆದ್ಮಿ ಪಕ್ಷದ ಪ್ರತಿಯೊಂದು ನಡೆಯನ್ನೂ ಭೂತಗನ್ನಡಿ ಹಿಡಿದು ಟಿವಿ ಮಾಧ್ಯಮಗಳು ಪ್ರತಿ ದಿನದ ಆಧಾರದಲ್ಲಿ ವಿಮರ್ಶೆಗೆ ಒಳಪಡಿಸುತ್ತಿರುವುದರಿಂದ ಈ ಪಕ್ಷವು ದೇಶದಲ್ಲಿ ಅಪಾರ ಭರವಸೆಯನ್ನು ಹುಟ್ಟು ಹಾಕಿದೆ ಎಂಬುದು ಕಂಡುಬರುತ್ತದೆ. ಈ ಹಿಂದಿನ ಯಾವ ಸರ್ಕಾರದ ನಡೆಯನ್ನೂ ಈ ರೀತಿ ಭೂತಗನ್ನಡಿ ಹಿಡಿದು ದೈನಂದಿನ ಆಧಾರದಲ್ಲಿ ವಿಮರ್ಶಿಸುವ ಕೆಲಸ ನಡೆದಿರಲಿಲ್ಲ. ಭಾರೀ ಸಾಧನೆಗೈದ ಸರ್ಕಾರ ಎಂದು ಹೇಳಲ್ಪಡುವ ಮೋದಿಯ ಗುಜರಾತ್ ಸರ್ಕಾರದ ನಡೆಯನ್ನು ಕೂಡ ಮಾಧ್ಯಮಗಳು ದೈನಂದಿನ ಆಧಾರದಲ್ಲಿ ವಿಮರ್ಶಿಸುವ ಕೆಲಸ ಮಾಡಿರಲಿಲ್ಲ. ಇದರ ಅರ್ಥವಿಷ್ಟೇ. ದೇಶದಲ್ಲಿ ಬದಲಾವಣೆಯ ತುಡಿತ ಇದೆ. kejriwal_aap_pti_rallyದೇಶವು ಪರ್ಯಾಯಕ್ಕಾಗಿ, ಜವಾಬ್ದಾರಿಯುತ ಹಾಗೂ ದಕ್ಷ ಆಡಳಿತ ನೀಡಬಲ್ಲ ಜನರಿಗಾಗಿ ಕಾಯುತ್ತಿದೆ. ಹೀಗಾಗಿ ಈ ಪಕ್ಷವು ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕಾಗಿರುವುದು ಅಗತ್ಯವಾಗಿದೆ. ದೆಹಲಿಯಲ್ಲಿ ಮುಖ್ಯ ವಿರೋಧ ಪಕ್ಷವಾದ ಬಿಜೆಪಿ ಆಮ್ ಆದ್ಮಿ ಪಕ್ಷದ ಸರಕಾರದ ಕಾರ್ಯವೈಖರಿಯನ್ನು ವಿಮರ್ಶೆ ಮಾಡಲು ಹಾಗೂ ಟೀಕಿಸಲು ತುದಿಗಾಲಿನಲ್ಲಿ ನಿಂತಿದ್ದು ಅತ್ಯಾತುರ ತೋರಿಸುತ್ತಿದೆ. ಯಾವುದೇ ಸರ್ಕಾರವಾದರೂ ಅದರ ಕಾರ್ಯವೈಖರಿಯನ್ನು ಅಳೆಯಲು, ಅಂದಾಜು ಮಾಡಲು ಕನಿಷ್ಠ ಆರು ತಿಂಗಳನ್ನಾದರೂ ನೀಡಬೇಕು. ಬೀಜವು ಬಿತ್ತಿದ ಕೂಡಲೇ ಗಿಡವಾಗಿ ಫಲ ನೀಡುವುದಿಲ್ಲ. ಬೀಜವು ಹುಟ್ಟಿದ ಕೂಡಲೇ ಫಲ ನೀಡಬೇಕೆಂದು ಆಗ್ರಹಿಸುವುದು ಸೂಕ್ತವಲ್ಲ. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಕೆಲವೇ ದಿನಗಳಷ್ಟೇ ಆಗಿವೆ. ಆಡಳಿತ ಯಂತ್ರವನ್ನು ಹಿಡಿತಕ್ಕೆ ತರಲು ಆರಂಭದಲ್ಲಿ ಕೆಲವು ದಿನಗಳು ಹಿಡಿಯುತ್ತವೆ ಏಕೆಂದರೆ ಹದಿನೈದು ವರ್ಷಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರವಿದ್ದ ಕಾರಣ ಎಲ್ಲ ಆಯಕಟ್ಟಿನ ಸ್ಥಾನಗಳಲ್ಲಿ ಆ ಪಕ್ಷಕ್ಕೆ ನಿಷ್ಠರಾದ ಅಧಿಕಾರಿ ವರ್ಗ ಗಟ್ಟಿಯಾಗಿ ಬೇರೂರಿರುತ್ತದೆ. ಆಮ್ ಆದ್ಮಿ ಪಕ್ಷವು ಎಷ್ಟೇ ಪ್ರಾಮಾಣಿಕವಾಗಿ ನಡೆದುಕೊಂಡರೂ ದೈನಂದಿನ ಆಡಳಿತ ಕಾರ್ಯವು ಕಾರ್ಯಾಂಗದ ಮೂಲಕ ಅಂದರೆ ಅಧಿಕಾರಿವರ್ಗದ ಮೂಲಕವೇ ನಡೆಯಬೇಕು. ಈ ಅಧಿಕಾರಿವರ್ಗದ ಮನಸ್ಥಿತಿಯನ್ನು ರಾತ್ರಿ ಬೆಳಗಾಗುವುದರಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಸಮಯವೇ ಹಿಡಿಯಬಹುದು. ಸರ್ಕಾರೀ ನೌಕರ ವರ್ಗಕ್ಕೆ ಭಾರತದಲ್ಲಿ ಅತಿಯಾದ ನೌಕರಿಯ ಭದ್ರತೆ ಇರುವ ಕಾರಣ ಅವರನ್ನು ಬೇಕಾದಂತೆ ಪಳಗಿಸುವುದು ಅಷ್ಟು ಸುಲಭವಲ್ಲ. ಕೆಲಸ ಮಾಡದ ಸೋಮಾರಿ ಹಾಗೂ ಭ್ರಷ್ಟ ಸರ್ಕಾರೀ ನೌಕರರನ್ನು ಖಾಸಗಿ ಸಂಸ್ಥೆಗಳು ತೆಗೆದು ಬಿಸಾಡಿದಂತೆ ಬಿಸಾಡಲು ಯಾವುದೇ ಸರ್ಕಾರಕ್ಕೂ ಆಗುವುದಿಲ್ಲ. ಹೀಗಾಗಿ ಸರ್ಕಾರೀ ನೌಕರರ ಸೋಮಾರಿತನ, ಭ್ರಷ್ಟತೆಯನ್ನು ರಾತ್ರಿ ಹಗಲಾಗುವುದರೊಳಗೆ ಬದಲಾಯಿಸಲು ಸಾಧ್ಯವಿಲ್ಲ. ಇರುವ ಸರ್ಕಾರಿ ಅಧಿಕಾರಿಗಳಲ್ಲಿಯೇ ದಕ್ಷ ಹಾಗೂ ಪ್ರಾಮಾಣಿಕರನ್ನು ಹುಡುಕಿ ಪ್ರಮುಖ ಹುದ್ದೆಗಳಿಗೆ ನೇಮಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಾಗುತ್ತದೆ. ಹೊಸ ಸರ್ಕಾರ ಬಯಸಿದರೂ ಹಿಂದಿದ್ದ ಭ್ರಷ್ಟ ಸರ್ಕಾರಕ್ಕೆ ಬದ್ಧರಾಗಿದ್ದ ಅಧಿಕಾರಿಗಳು ಹೊಸ ಸರ್ಕಾರದ ಜೊತೆ ಸಹಕರಿಸುವುದಿಲ್ಲ. ಹೀಗಾಗಿ ಹೊಸ ಸರ್ಕಾರಕ್ಕೆ ಸಮಯ ಕೊಡಬೇಕಾಗಿರುವುದು ಅಗತ್ಯ.

ಬಿಜೆಪಿ ಪಕ್ಷದ ನಾಯಕರು ಹಿಂದಿನ ಸರ್ಕಾರದ ಭ್ರಷ್ಟತೆಯ ಬಗ್ಗೆ ತನಿಖೆ ಮಾಡಲು ಆಮ್ ಆದ್ಮಿ ಪಕ್ಷದ ನಾಯಕರು ಮುಂದಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. aap-kejriwal-yogendra-yadavಬಹುಶ: ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಇದನ್ನು ನಡೆಸಲು ದೆಹಲಿಯಲ್ಲಿ ಸೂಕ್ತ ತನಿಖಾ ಸಂಸ್ಥೆಯನ್ನು ಅಥವಾ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಹಾಗೆ ಮಾಡದೆ ಹಿಂದಿನ ಸರ್ಕಾರದ ಭ್ರಷ್ಟತೆಯ ಬಗ್ಗೆ ಹಿಂದಿನ ಸರ್ಕಾರದ ಭ್ರಷ್ಟ ಅಧಿಕಾರಿಗಳ ಮೂಲಕವೇ ತನಿಖೆ ನಡೆಸಿದರೆ ಹಿಂದಿನ ಸರ್ಕಾರದ ಎಲ್ಲ ಭ್ರಷ್ಟಾಚಾರಗಳನ್ನೂ ಮುಚ್ಚಿ ಹಾಕುವ ಸಾಧ್ಯತೆ ಇದೆ. ದೆಹಲಿಗೆ ಹೊಸ ಜನಲೋಕಪಾಲ್ ಅಥವಾ ಲೋಕಾಯುಕ್ತ ವ್ಯವಸ್ಥೆಯನ್ನು ಆಮ್ ಆದ್ಮಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಹದಿನೈದು ದಿನಗಳಲ್ಲಿ ತರುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇಂಥವುಗಳನ್ನು ರೂಪಿಸಲು ಕಾನೂನಿನ ಪ್ರಕ್ರಿಯೆ ಸಾಂವಿಧಾನಿಕವಾಗಿ ನಡೆಯಬೇಕಾಗಿರುವ ಕಾರಣ ಇದು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಹೊಸ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರಮಣಕಾರಿಯಾಗಿ ಅದರ ಮೇಲೆ ಮುಗಿಬೀಳುವ ಧೋರಣೆ ಸಮಂಜಸವಲ್ಲ. ಹೊಸ ಸರ್ಕಾರದ ಇದುವರೆಗಿನ ಕೆಲಸ ನೋಡಿದರೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕಂಡುಬರುತ್ತಾ ಇದೆ. ಹೀಗಿದ್ದರೂ ಅದೇ ಪಕ್ಷದ ವಿನೋದ್ ಕುಮಾರ್ ಬಿನ್ನಿ ಎಂಬ ಮಾಜಿ ಕಾಂಗ್ರೆಸ್ಸಿಗ ಪಕ್ಷದ ವಿರುದ್ಧ ಭುಗಿಲೆದ್ದಿರುವುದು ಅಧಿಕಾರದಾಹದಿಂದ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಂಥ ಬೇರೆ ಪಕ್ಷಗಳ ಅಧಿಕಾರದಾಹಿಗಳನ್ನು ಆಮ್ ಆದ್ಮಿ ಪಕ್ಷವು ತೆಗೆದುಕೊಂಡು ತಪ್ಪು ಮಾಡಿದೆ. ಈಗ ಅಧಿಕಾರ ಸಿಕ್ಕದೆ ಇದ್ದಾಗ ಅಂಥವರು ಭುಗಿಲೇಳುತ್ತಿದ್ದಾರೆ. ಇನ್ನು ಮುಂದಾದರೂ ಬೇರೆ ಪಕ್ಷಗಳ ಅಧಿಕಾರದಾಹಿಗಳನ್ನು ಆಮ್ ಆದ್ಮಿ ಪಕ್ಷವು ತೆಗೆದುಕೊಳ್ಳದೆ ರಾಜಕೀಯ ಕ್ಷೇತ್ರಕ್ಕೆ ಹೊಸಬರಾದ ಅಧಿಕಾರದ ಬಗ್ಗೆ ತೆವಲು ಇಲ್ಲದ ಜನರನ್ನು ತೆಗೆದುಕೊಳ್ಳುವುದು ಅದರ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅಗತ್ಯ. ಇಲ್ಲದೆ ಹೋದರೆ ಪಕ್ಷದ ವಿಶ್ವಾಸಾರ್ಹತೆಯ ಮೇಲೆ ಜನರ ಅಪನಂಬಿಕೆ ಬೆಳೆಯಲು ಆರಂಭವಾಗಿ ಪಕ್ಷದ ರಾಷ್ಟ್ರವ್ಯಾಪಿ ಬೆಳವಣಿಗೆಗೆ ಧಕ್ಕೆಯಾದೀತು.

ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷವು ದೃಢ ನಿಲುವನ್ನು ತೆಗೆದುಕೊಂಡು ಹಿಂದಿನ ಸರ್ಕಾರದ ಭ್ರಷ್ಟತೆಯ ವಿರುದ್ಧ ಸೂಕ್ತ ಕ್ರಮ Kejriwal-janata-durbarಕೈಗೊಳ್ಳದೆ ಹೋದರೆ ಅದು ಭ್ರಷ್ಟತೆಯ ವಿರುದ್ಧ ರಾಜಿ ಮಾಡಿಕೊಂಡು ಅಧಿಕಾರಕ್ಕೆ ಅಂಟಿಕೊಳ್ಳುತ್ತಿದೆ ಹಾಗೂ ಉಳಿದ ಪಕ್ಷಗಳಿಗಿಂತ ಭಿನ್ನ ಅಲ್ಲ ಎಂಬ ಸಂದೇಶ ದೇಶಕ್ಕೆ ಹೋಗುವುದು ಖಚಿತ. ಇಂಥ ಸಂದೇಶ ದೇಶಕ್ಕೆ ಹೋದರೆ ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಗೆ ತೀವ್ರ ಪೆಟ್ಟು ಬೀಳಬಹುದು. ಇಂಥ ಒಂದು ಸನ್ನಿವೇಶ ನಿರ್ಮಾಣ ಆಗಲಿ ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಕಾಯುತ್ತಿವೆ ಹಾಗೂ ಆ ಕುರಿತು ಪ್ರಚಾರ ಮಾಡಲು ಹಾತೊರೆಯುತ್ತಿವೆ. ಹೀಗಾಗಿ ದೆಹಲಿಯ ಸರ್ಕಾರ ಬಿದ್ದು ಹೋದರೂ ಭ್ರಷ್ಟತೆಯ ವಿರುದ್ಧ ತಮ್ಮ ದೃಢ ಸಮರ ಮುಂದುವರಿಯಲಿದೆ ಎಂಬ ಸಂದೇಶ ದೇಶಕ್ಕೆ ನೀಡುವುದು ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾಗಿದೆ. ಆಮ್ ಆದ್ಮಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಗೆ ಸೀಮಿತ ಸಂಖ್ಯೆಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಅದು ಲೋಕಸಭಾ ಚುನಾವಣೆಗಳಲ್ಲಿ ಕಾರ್ಯ ಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡುವ ತಪ್ಪು ಮಾಡಬಾರದು. ಈಗಾಗಲೇ ಅದು ದೇಶದ ಗಮನ ಸೆಳೆದಿರುವ ಕಾರಣ ಇನ್ನು ದೇಶದ ಗಮನ ಸೆಳೆಯಲು ಯಾವುದೇ ಗಿಮಿಕ್ ಮಾಡಬೇಕಾದ ಅಗತ್ಯ ಇಲ್ಲ. ದಕ್ಷ, ಪ್ರಾಮಾಣಿಕ ಹಾಗೂ ಸ್ಪಂದನಶೀಲ ಆಡಳಿತದ ಭರವಸೆ ನೀಡಿದರೂ ಸಾಕು. ದೇಶದಲ್ಲಿ ಇಂದು ಕಾಂಗ್ರೆಸ್ ವಿರೋಧಿ ಅಲೆ ಇದೆ, ಆದರೆ ಹಾಗೆಂದು ಬಿಜೆಪಿ ಪರ ಅಲೆಯೇನೂ ಇಲ್ಲ. ಕಾಂಗ್ರೆಸ್ಸಿನ ವಿರುದ್ಧ ದೇಶಾದ್ಯಂತ ಸಿಟ್ಟಿಗೆದ್ದಿರುವ ಮತದಾರರು ಬೇರೆ ಪರ್ಯಾಯ ಇಲ್ಲದೆ ಬಿಜೆಪಿಯ ಕಡೆ ಹಾಗೂ ಮೋದಿಯ ಕಡೆ ಮುಖ ಮಾಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ಸಿನ ಜೊತೆ ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಕಾಂಗ್ರೆಸ್ಸಿನ ಬಾಹ್ಯ ಬೆಂಬಲದಿಂದ ದೆಹಲಿಯಲ್ಲಿ ಇಷ್ಟವಿಲ್ಲದಿದ್ದರೂ ಸರ್ಕಾರ ಮಾಡಿರುವ ಆಮ್ ಆದ್ಮಿ ಪಕ್ಷದ ನಿಲುವನ್ನು ಜನ, ಬಿಜೆಪಿಯ ಬೆಂಬಲಿಗರನ್ನು ಹೊರತುಪಡಿಸಿ, ಒಪ್ಪಿಕೊಳ್ಳಬಲ್ಲರು ಆದರೆ ಅಧಿಕಾರದ ಮಾಯೆಗೆ ಬಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆಯ ಬಗ್ಗೆ ಮೃದು ಧೋರಣೆ ತಳೆದರೆ ಒಪ್ಪಿಕೊಳ್ಳಲಾರರು. ಅಂಥ ಮೃದು ಧೋರಣೆಯನ್ನು ಆಮ್ ಆದ್ಮಿ ಪಕ್ಷ ತಳೆದರೆ ದೇಶದಾದ್ಯಂತ ಕವಿದಿರುವ ಕಾಂಗ್ರೆಸ್ ವಿರೋಧಿ ಅಲೆಯ ದುಷ್ಪರಿಣಾಮ ಆಮ್ ಆದ್ಮಿ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಚುನಾವಣಾ ಸಾಧನೆಯ ಮೇಲೆಯೂ ಬೀಳಬಹುದು. ಅಂಥ ದುಷ್ಪರಿಣಾಮ ಬೀಳದಂತೆ ವಿವೇಕದ ನಡೆಯನ್ನು ಆಮ್ ಆದ್ಮಿ ಪಕ್ಷ ಅಳವಡಿಸಿಕೊಳ್ಳಬೇಕಾಗಿದೆ.

ದೆಹಲಿಯಂಥ ಸಣ್ಣ ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವಾಗ ಸಾಮಾಜಿಕ, ಆರ್ಥಿಕ, ವಿದೇಶಾಂಗ ಮೊದಲಾದ ವಿಷಯಗಳ ಬಗ್ಗೆ ಸ್ಪಷ್ಟ ಧೋರಣೆ ಅಗತ್ಯ ಇಲ್ಲದೆ ಇರಬಹುದು, ಆದರೆ ದೇಶವ್ಯಾಪಿ ಪಕ್ಷವನ್ನು ಬೆಳೆಸುವಾಗ ಸ್ಪಷ್ಟ ಧೋರಣೆಗಳನ್ನು ಇಂಥ ವಿಷಯಗಳಲ್ಲಿ ತೆಗೆದುಕೊಳ್ಳುವುದು ಉತ್ತಮ. ಇಲ್ಲದೆ ಹೋದರೆ ಪಕ್ಷದೊಳಗೆ ವಿವಿಧ ಸದಸ್ಯರ ನಡುವೆ ಮುಂದೆ ಭಿನ್ನಮತ ಹಾಗೂ ಗೊಂದಲ ತಲೆದೋರಬಹುದು. ಇಂಥ ಬೆಳವಣಿಗೆಗಳನ್ನು ತಪ್ಪಿಸಲು ಸೂಕ್ತ ಸಾಮಾಜಿಕ, ಆರ್ಥಿಕ, ವಿದೇಶಾಂಗ ಮೊದಲಾದ ನೀತಿಗಳನ್ನು ಆಮ್ ಆದ್ಮಿ ಪಕ್ಷ ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಇಂಥವುಗಳನ್ನು ಈಗಲೇ ಅಳವಡಿಸಿದರೆ ಅದಕ್ಕೆ ಹೊಂದಿಕೊಂಡವರು ಪಕ್ಷದೊಳಗೆ ಬರುತ್ತಾರೆ, ಅದಕ್ಕೆ ಹೊಂದಿಕೊಳ್ಳದವರು ಹೊರಗೆ ನಿಲ್ಲುತ್ತಾರೆ. ಇದು ಮುಂದೆ ಉಂಟಾಗಬಹುದಾದ ಗೊಂದಲಗಳನ್ನು ತಡೆಯಲು ಅಗತ್ಯ.

ಕೈಗಾರಿಕೆ, ವಾಣಿಜ್ಯ, ಉದ್ಯಮ ಸ್ನೇಹಿ ನೀತಿಗಳನ್ನು ಯಾವುದೇ ಸರ್ಕಾರವಾದರೂ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಇದೆ. ಹೀಗಾಗಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳನ್ನು ಯಾವ ಸರ್ಕಾರ ಬಂದರೂ ತಡೆಯಲಾಗದ ಅನಿವಾರ್ಯತೆ ಇದೆ. Tilling_Rice_Fieldsಇದು ದೇಶದ ಜನರ ಜೀವನ ಶೈಲಿಯನ್ನು ಅವಲಂಬಿಸಿದೆ. ಜನ ಇಂದು ಸರಳ ಜೀವನದಲ್ಲಿ ತೃಪ್ತಿ ಪಡುವ ಪ್ರವೃತ್ತಿ ಹೊಂದಿಲ್ಲ. ಹೀಗಿರುವ ಪರಿಸ್ಥಿತಿಯಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ತೆರೆದುಕೊಳ್ಳದೆ ವಿಧಿ ಇಲ್ಲ. ಹೀಗೆ ಮಾಡುವಾಗ ಕೃಷಿಕರು, ಕಾರ್ಮಿಕರು, ತಳಸಮುದಾಯದ ಜನವರ್ಗದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರದ ರೀತಿಯಲ್ಲಿ ಸರ್ಕಾರ ನೋಡಿಕೊಳ್ಳಬೇಕಾಗುತ್ತದೆ. ದೇಶದ ಅಗತ್ಯಕ್ಕೆ ಅನುಗುಣವಾಗಿ ಗಣಿಗಾರಿಕೆ ಮಾಡಲೇಬೇಕಾಗುತ್ತದೆ. ಗಣಿ ಸಂಪತ್ತಿನ ಲಾಭ ದೇಶದ ಬೊಕ್ಕಸಕ್ಕೆ ಆಗುವ ರೀತಿಯಲ್ಲಿ ನೀತಿಗಳನ್ನು ರೂಪಿಸಬೇಕಾದ ಅಗತ್ಯ ಇದೆ. ಇಂದು ಇರುವ ನೀತಿಗಳು ದೇಶದ ಗಣಿ ಹಾಗೂ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು ಖಾಸಗಿ ಖಜಾನೆ ತುಂಬಿಸಿಕೊಳ್ಳುವವರಿಗೆ ಅನುಕೂಲಕರವಾಗಿವೆ. ಇದನ್ನು ದೇಶದ ಬೊಕ್ಕಸ ತುಂಬಿಸುವ ರೀತಿ ಬದಲಾಯಿಸಬೇಕಾಗಿದೆ ಹಾಗೂ ಹಾಗೆ ಪಡೆದ ಹಣದಿಂದ ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವು ಸೂಕ್ತ ನೀತಿಗಳನ್ನು ತರುವ ಕುರಿತು ಚಿಂತನೆ ನಡೆಸಬೇಕಾಗಿದೆ. ದೇಶದಲ್ಲಿ ಕೃಷಿ ಕ್ಷೇತ್ರವು ಅತೀ ಹೆಚ್ಚು ಜನರಿಗೆ ಜೀವನಾಧಾರವಾಗಿ ಇಂದಿಗೂ ಉಳಿದುಕೊಂಡಿದೆ. ಹೀಗಾಗಿ ಕೃಷಿ ಕ್ಷೇತ್ರದ ಸುಧಾರಣೆಗೆ ಯಾವ ಹಾಗೂ ಕೃಷಿ ಲಾಭದಾಯಕವಾಗಿ ರೂಪುಗೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚಿಂತಕರ, ಪ್ರತಿಭಾವಂತರ ಸಲಹೆಗಳನ್ನು ಆಮ್ ಆದ್ಮಿ ಪಕ್ಷವು ಆಹ್ವಾನಿಸಿ ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಹೀಗೆ ಮಾಡುವಾಗ ಕೂಡ ಯಾವುದೇ ಕಾರ್ಯಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡಲೇಬಾರದು. ನೀಡಿದರೆ ಮುಂದೆ ಅದನ್ನು ಪೂರೈಸುವುದು ಕಷ್ಟವಾದರೆ ಜನ ಭ್ರಮನಿರಸನಕ್ಕೆ ಒಳಗಾಗುತ್ತಾರೆ ಎಂಬ ಎಚ್ಚರ ಇದ್ದರೆ ಒಳ್ಳೆಯದು. ವಿದ್ಯಾವಂತರು ಹಾಗೂ ಪ್ರತಿಭಾವಂತರು ಇಂದು ಕೃಷಿ ಕ್ಷೇತ್ರದಿಂದ ದೂರವಾಗುತ್ತಿದ್ದಾರೆ. ಅವರನ್ನು ಮತ್ತೆ ಕೃಷಿ ಕ್ಷೇತ್ರಕ್ಕೆ ಬರುವಂತೆ ಮಾಡುವ ನೀತಿ ರೂಪಿಸಿದರೆ ದೇಶದ ಕೃಷಿ ಕ್ಷೇತ್ರ ಬಹಳಷ್ಟು ಜನರಿಗೆ ಉದ್ಯೋಗ ನೀಡಬಲ್ಲುದು. ಈ ಕುರಿತು ಆಮ್ ಆದ್ಮಿ ಪಕ್ಷದ ಪ್ರತಿಭಾವಂತರು ಯೋಚಿಸಬೇಕಾದ ಅಗತ್ಯ ಇದೆ.

ಅತ್ಯಾಚಾರ ಮತ್ತು ಅರ್ಧ ಕಿಲೋ ರಿವಾಲ್ವರ್..!


– ಡಾ.ಎಸ್.ಬಿ. ಜೋಗುರ


 

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಅಪವರ್ತಿಗಳು ಇದ್ದೇ ಇದ್ದಾರೆ. ಇವರ ಮನೋವ್ಯಾಪಾರಗಳು ವಿಚಿತ್ರವಾಗಿರುವಂತೆಯೇ ಅಪಾಯಕಾರಿಯೂ ಹೌದು. ಯಾವುದೇ ಮನೋವಿಜ್ಞಾನಿಯ ಕ್ಯಾಲಕ್ಯುಲೇಶನ್ ಗೂ ಸಿಗದ ಇಂಥವರ ಮನ:ಸ್ಥಿತಿಯ ಅಧ್ಯಯನ ಮಾಡಹೊರಟರೆ ಸಿಗ್ಮಂಡ್ ಫ಼್ರಾಯಿಡ್ ಥರಾ ಕೊಕೇನ್ ದಾಸರಾಗಬೇಕಾಗುತ್ತದೆಯೇನೋ.. ಸಾರ್ವಜನಿಕ ಬದುಕಿನಲ್ಲಿ ಭಯ ಬಿತ್ತುವ, ಬೆಳೆಯುವ ಕಟಾವು ಮಾಡುವ, ಅದನ್ನೇ ಮಾರುವ ಈ ಮನೋವಿಕ್ಷಿಪ್ತರು ಕೇವಲ ಒಂದೇ ಒಂದು ಮೂರನೇ ದರ್ಜೆಯ ಬಾಟಲ್ ವಿಸ್ಕಿಗಾಗಿ ಮರ್ಡರ್ ಮಾಡುವಲ್ಲಿಯೂ ಹಿಂದೇಟು ಹಾಕಲಾರರು. ಈ ಅಪವರ್ತಿಗಳು ಕದಿಯುವ, ಕಸಿಯುವ, ಕೊಲ್ಲುವ, ಅತ್ಯಾಚಾರಗೈಯುವ ಮೂಲಕ ಸಮಾಜದ ನೈತಿಕ ಸ್ವಾಸ್ಥ್ಯವನ್ನು ಕುಲಗೆಡಿಸುವ, ಮತ್ತೆ ಮತ್ತೆ ಸಮಾಜ ಬಯಸದಿರುವ ಸ್ಥಿತಿಯನ್ನು ನಿರ್ಮಿಸುವ ರೇಜಿಗೆಗೆ ಕಾರಣರಾಗುವ ಇಂಥವರನ್ನು ತಿದ್ದಲು ಮಾಡುವ ಪ್ರಯತ್ನಗಳು, ಪ್ರಯೋಗಗಳು, ಚಿಕಿತ್ಸೆಗಳು ಕೆಟ್ಟ ಮೇಲಿನ ಬುದ್ದಿಯ ಮುಲಾಮಾಗುವುದೇ ಒಂದು ಬಹುದೊಡ್ದ ವಿಪರ್ಯಾಸ..! ಈ ಬಗೆಯ ವಿಕ್ಷಿಪ್ತರ ಮನ:ಸ್ಥಿತಿಯನ್ನು ಬೇರುಮಟ್ಟದಿಂದ ಕಿತ್ತು ಹಾಕುವುದು ಕಷ್ಟ. ಯಾಕೆಂದರೆ ಯಾವುದೇ ಒಂದು ಮರ ಬಲಿತಾದ ಮೇಲೆ ಅದರ ಟೊಂಗೆ, ಎಲೆಗಳನ್ನು ಕತ್ತರಿಸುವದರಿಂದ ಅದರ ಅಸ್ಥಿತ್ವವನ್ನು ಇಲ್ಲವಾಗಿಸಲಾಗುವದಿಲ್ಲ. ಬೇರು ಹಾಗೇ ಉಳಿದಿರುತ್ತದೆ. ಹೀಗೆಲ್ಲಾ ಹೇಳುವ ಮೂಲಕ ನಾನು ನಮ್ಮ ದೇಶದ ಮೂಲೆಮೂಲೆಗಳಲ್ಲಿ ನಡೆಯುತ್ತಿರುವ ಲೈಂಗಿಕ ಅತ್ಯಾಚಾರದ ಕುರಿತು ಕೆಲವು ಸಂಗತಿಗಳನ್ನು ಚರ್ಚಿಸಬಯಸುತ್ತೇನೆ. rape-illustrationನಿಮಗೆಲ್ಲಾ ಗೊತ್ತಿರುವ ಹಾಗೆ ಡಿಶೆಂಬರ್ 16, 2012 ನಿಮಗಿನ್ನೂ ನೆನಪಿರಬಹುದು. ನಿರ್ಭಯಾ ಎನ್ನುವ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಂತ ತುಚ್ಚವಾಗಿ ಚಲಿಸುವ ಬಸ್ಸಿನಲ್ಲಿ ಅತ್ಯಾಚಾರ ಎಸಗಲಾಯಿತು. ಅದರಲ್ಲಿ ಒಬ್ಬಾತ 18 ವರ್ಷ ವಯೊಮಿತಿಯ ಒಳಗಿನ ಬಾಲಾರೋಪಿಯೂ ಇದ್ದ. ಆ ಘಟನೆಯಿಂದ ಆಕೆ ಸಾವನ್ನಪ್ಪಿದ್ದು ಆಕೆಯ ಹೆಸರಲ್ಲಿ ಕೋಟಿಗಟ್ಟಲೆ ಹಣವನ್ನು ಮೀಸಲಿಟ್ಟಿದ್ದು, ಅದರಲ್ಲಿ ಒಂದೇ ರೂಪಾಯಿಯನ್ನು ಬಳಸದೇ ಇದ್ದದ್ದು ಈಗ ಹಳೆಯ ಮಾತಾಯಿತು. ಹೊಸ ಮಾತು ಏನೆಂದರೆ ಡಿಶೆಂಬರ್ 16, 2013 ಕ್ಕೆ ಬರೊಬ್ಬರಿ ಒಂದು ವರ್ಷ. ಈ ದೇಶದಲ್ಲಿ ನಿರ್ಭಯಾಳಿಂದ ಆರಂಭವಾದ ಅತ್ಯಾಚಾರದ ಪ್ರಕರಣಗಳು ತಮ್ಮ ನಿರಂತರತೆಯನ್ನಂತೂ ಕಾಪಾಡಿಕೊಂಡಿವೆ. ಈಗ ಪ್ರತಿ ಅರ್ಧಘಂಟೆಗೊಂದು ಅತ್ಯಾಚಾರದ ಪ್ರಕರಣಗಳು ನಮ್ಮಲ್ಲಿ ಜರುಗುವದಿದೆ. ಕಳೆದ ಡಿಶೆಂಬರ್ 16, 2013 ರಂದು ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ವಿಷಯವಾಗಿ ಒಟ್ಟು 38 ದೂರುಗಳು ದಾಖಲಾಗಿದ್ದು ಅದರಲ್ಲಿ ಮೂರು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು. ಕಳೆದ ವರ್ಷದ ಅತ್ಯಾಚಾರದ ಪ್ರಕರಣಗಳಲ್ಲಿ ತೀರಾ ತುಚ್ಚವಾದ, ಹೇಯವಾದ ಪ್ರಕರಣಗಳೇ ಜಾಸ್ತಿ. ಅಂಥವುಗಳಲ್ಲಿ ಕೋಲ್ಕತ್ತಾದ ಒಂದು ಶಾಲೆಯ ಮುಖ್ಯೋಪಾಧ್ಯಾಯಿನಿಯ ಗಂಡ ಚಿಕ್ಕ ಬಾಲಕಿಯನ್ನು ತನ್ನ ಕಾಮಪಿಪಾಸುತನಕ್ಕೆ ಬಳಸಿಕೊಂಡದ್ದು ಈಗಲೂ ಮನ ಕಂಪಿಸುವಂತೆ ಮಾಡುತ್ತದೆ. ಇನ್ನು ಅಗಮ್ಯಗಮನ ಸಂಬಂಧಗಳಲ್ಲಿಯೂ ಜರುಗಿದ ಅತ್ಯಾಚಾರಗಳಿಗೂ ಕೊರತೆಯಿಲ್ಲ. ಮೂರು ವರ್ಷದ ಮಗುವಿನಿಂದ ಹಿಡಿದು ವಯಸ್ಸಾದ ವಿಧವೆಯವರೆಗೂ ಅಸಹ್ಯ ಹುಟ್ಟಿಸಬಹುದಾದ ರೀತಿಯ ಅತ್ಯಾಚಾರದ ಪ್ರಕರಣಗಳು ಬಯಲಾದವು.

ನಮ್ಮ ಸಾಮಾಜಿಕ ವ್ಯವಸ್ಥೆ ಎಷ್ಟು ದೋಷಪೂರ್ಣವಾಗಿದೆಯೆಂದರೆ ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಶಿಕ್ಷೆ ಅನುಭವಿಸುವ ಪ್ರಕರಣಗಳೂ ನಮ್ಮಲ್ಲಿ ರಾಶಿ ರಾಶಿ. ಬಿಜಾಪುರ ಜಿಲ್ಲೆಯ ತಾಲೂಕು ಒಂದರಲ್ಲಿ ಆಕೆಯ ಮಗ ಮಾಡಿದ ತಪ್ಪಿಗೆ ಅವನ ತಾಯಿಯನ್ನು ಬೆತ್ತಲೆ ಮಾಡಿದ ಪ್ರಸಂಗ ಮನುಷ್ಯರಾದವರು ನಾಚುವಂತಿತ್ತು. ಇನ್ನು ಮಹಿಳೆಯ ಮೇಲಿನ ಅತ್ಯಾಚಾರದ ಪ್ರಕರಣಗಳು ಇಡೀ ವಿಶ್ವದಾದ್ಯಂತ ಜರುಗುತ್ತವಾದರೂ ನಮ್ಮಲ್ಲಿ ಈ ಬಗೆಯ ಅತ್ಯಾಚಾರದ ಪ್ರಕರಣಗಳು ಪರೋಕ್ಷವಾಗಿ ಹೆಣ್ಣು ಮಗುವಿನ ಜನನದಲ್ಲಿ ವರದಕ್ಷಿಣೆಯನ್ನು ಮೀರಿ ಒಂದು ಹೊಸ ಬಗೆಯ ದಿಗಿಲನ್ನು ಸೃಷ್ಟಿಸಿದಂತಾಯಿತು. ಹೇಗೆ ಮಾಡುವುದು..? ಏನು ಮಾಡುವುದು..? Sowjanya-Rape-Murderಎನ್ನುವುದು ಹೆಣ್ಣು ಹೆತ್ತವರ ಅಳಲಾದರೆ ಇದನ್ನು ಹೇಗೆ ತಡೆಯಬೇಕು ಎನ್ನುವ ವಿಚಾರವಾಗಿ ಸಾಕಷ್ಟು ಸಲಹೆಗಳೂ ಬಂದವು. ಝಾಡಿಸಿ ಸೊಂಟದ ಕೆಳಗೆ ಒದೆಯುವದರಿಂದ ಹಿಡಿದು, ಖಾರದ ಪುಡಿ ಎರಚುವ, ಇಲೆಕ್ಟ್ರಿಕ್ ಶಾಕ್ ನೀಡುವ ಜಾಕೆಟ್ ಧರಿಸುವವರೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆಯಾದವು. ಇವೆಲ್ಲವನ್ನೂ ಮೀರಿ ಪುರುಷರ ಮನ:ಪರಿವರ್ತನೆಯೇ ಅತ್ಯುತ್ತಮ ಮಾರ್ಗ ಎನ್ನುವ ಮಾತುಗಳೂ ಕೇಳಿಬಂದವು. ಈ ಬಗೆಯ ಸಲಹೆಗಳಿಗೆ ಬೆನ್ನು ಮಾಡಿ ಆಕೆ ಆ ಬಗೆಯ ಟೀ ಶರ್ಟ್ ಯಾಕೆ ಧರಿಸಬೇಕಿತ್ತು..? ಅವಳು ಅವನ ಕಾಲಿಗೆ ಬಿದ್ದು ಅಣ್ಣಾ ಎಂದು ಗೋಗರೆಯಬೇಕಿತ್ತು ಎನ್ನುವ ತೀರಾ ಚಿಲ್ಲರೆ ವಿಚಾರಗಳೂ ಕೇಳಿ ಬಂದವು.

ಈಗ ಇವೆಲ್ಲವುಗಳನ್ನು ಮೀರಿ ಅತ್ಯಾಚಾರಿಗಳನ್ನು ಎದುರಿಸಲು ಮಹಿಳೆಯ ಕೈಗೆ ನೀಡಲು ಇಂಡಿಯನ್ ಆರ್ಡಿನನ್ಸ್ ಫ಼್ಯಾಕ್ಟರಿ ಅರ್ಧ ಕಿಲೋ ತೂಕದ ಗನ್ ಒಂದನ್ನು ರೆಡಿ ಮಾಡಿದೆ. ಅದಕ್ಕೆ ನಿರ್ಭೀಕ ಎಂದು ನಾಮಕರಣವೂ ಮಾಡಿ ಆಗಿದೆ. 7.55 ಎಮ್.ಎಮ್ 32 ರಿವಾಲ್ವರ್ ನ್ನು ಮಹಿಳೆಯರು ಸುಲಭವಾಗಿ ಹ್ಯಾಂಡಲ್ ಮಾಡುವಂತೆ ರೂಪಿಸಲಾಗಿದೆ. ಈ ರಿವಾಲ್ವರ್ ಸಾಮಾನ್ಯ ಮಹಿಳೆಯರಿಗಂತೂ ಅಲ್ಲ. ಅವರಿಗೆ ಸೆಂಟರ್ ಪಾಯಿಂಟ್ ಮೇಲೆ ಝಾಡಿಸಿ ಒದೆಯುವುದೇ ಸರಿಯಾದ ಸೂತ್ರ ಎಂದು ನನಗನಿಸುತ್ತದೆ. ಯಾಕೆಂದರೆ ಈ ಗನ್ ಬೆಲೆ 1 ಲಕ್ಷ 22 ಸಾವಿರ ರೂಪಾಯಿ. ಅಡುಗೆ ಮನೆಯಲ್ಲಿ ಒಂದು ಸಣ್ಣ ಅಡುಗೆ ಯಂತ್ರ ತರಲು ಐದಾರು ವರ್ಷ ಕನಸು ಕಾಣುವ, ಕಾಯುವ ನಮ್ಮ ಮಧ್ಯಮ ವರ್ಗದ ಮಹಿಳೆ ಆ ಮೊತ್ತದ ಗನ್ ಅನ್ನು ತನ್ನ ರಕ್ಶಣೆಗಾಗಿ ಖರೀದಿಸುತ್ತಾಳೆ ಎನ್ನುವ ಯೋಚನೆಯೇ ಸರಿಯಿಲ್ಲ. ಸುಲಭವಾದ ಕಂತುಗಳಲ್ಲಿ ಕೊಟ್ಟರೂ ಅದು ಸಾಧ್ಯವಿಲ್ಲ. ಅದೇನಿದ್ದರೂ ಅಪಾರ ಪ್ರಮಾಣದ ಕಮಾಯಿಯಿರುವ ಮಹಿಳಾಮಣಿಗಳು ಮಾತ್ರ ಖರೀದಿಸಲು ಸಾಧ್ಯ. ಇನ್ನು ಬರೀ ಗನ್ ಖರೀದಿಸಿದರೆ ಸಾಕೆ..? ಅದನ್ನು ಚಲಾಯಿಸುವುದು ಹೇಗೆ.. ಎನ್ನುವ ತಾಲೀಮು ಬೇಡವೇ..? india-rapeಅತ್ಯಾಚಾರಿಯೊಬ್ಬ ಮೈಮೇಲೆ ಪಶುವಿನಂತೆ ಎರಗಿದಾಗ ಆ ಗನ್ ತೆಗೆದು ಅವನ ಮೇಲೆ ಚಲಾಯಿಸುವಷ್ಟು ಚಾಕಚಕ್ಯತೆ ಸಾಧ್ಯವೇ..? ಎನ್ನುವ ಪ್ರಶ್ನೆಯೂ ಹುಟ್ಟುತ್ತದೆ. ಇವೆಲ್ಲವುಗಳನ್ನು ಮೀರಿಯೂ ಆಕೆ ತೊಂದರೆಗೆ ಸಿಲುಕುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ನಾವೀಗ ಬದುಕುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ ಎಷ್ಟು ಕೊಳಕಾಗಿದೆ ಎಂದರೆ ಯಾವ ಗಳಿಗೆಯಲ್ಲೂ ಏನು ಬೇಕಾದರೂ ಕೆಟ್ಟದ್ದು ಘಟಿಸಬಹುದು. ಹೀಗಿರುವಾಗ ಗಂಡಿರಲಿ ಹೆಣ್ಣಿರಲಿ ನಮ್ಮ ಬಳಿ ಗನ್ ಇರುವುದು ಒಂದು ಸಮಾಧಾನವೇ ಹೊರತು ಪರಿಹಾರವಲ್ಲ. ಇಂದು ಬೇರೆ ಬೇರೆ ರಾಷ್ಟ್ರಗಳಲ್ಲಿ ಮಹಿಳೆ ಹೇಗೆ ತನ್ನನ್ನು ತಾನು ಸಂರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಸಂವಾದ, ಚರ್ಚೆಗಳನ್ನು ನಡೆಸಲಾಗುತ್ತದೆ. ನಮ್ಮಲ್ಲಿ ಆ ಬಗೆಯ ವಿಚಾರ ಸಂಕಿರಣಗಳು ಜರುಗಿದ ಬಗ್ಗೆ ನಾನಂತೂ ಕೇಳಿಲ್ಲ. ಡೆರೆನ್ ಲಾರ್ ಮತ್ತು ಬೆತ್ ಲಾರ್ ಎನ್ನುವ ದಂಪತಿಗಳು ’ಟೊಟಲ್ ಅವೇರನೆಸ್’ ಎನ್ನುವ ಕೃತಿಯೊಂದನ್ನು ರಚಿಸಿದ್ದಾರೆ. ಅದರಲ್ಲಿ ಅವರು ಮಹಿಳೆ ತನ್ನ ರಕ್ಷಣೆಗಾಗಿ ಅನುಸರಿಸಬೇಕಾದ ಹತ್ತು ಸೂತ್ರಗಳನ್ನು ಗುರುತಿಸಿದ್ದಾರೆ:

  • ನಮ್ಮ ಸುತ್ತಮುತ್ತಲಿನ ಸಾಮಾಜಿಕ ಪರಿಸರದ ಬಗ್ಗೆ ನಮಗೆ ತಿಳುವಳಿಕೆಯಿರಬೇಕು
  • ನಿಮ್ಮ ಆರನೇ ಇಂದ್ರಿಯವನ್ನು ಸರಿಯಾಗಿ ಬಳಸಿಕೊಳ್ಳಿ
  • ಸ್ವರಕ್ಷಣಾ ತಂತ್ರಗಳ ಬಗ್ಗೆ ತರಬೇತಿ
  • ಪಾರಾಗಿ ಓಡುವ ಚುರುಕತನವಿರಲಿ
  • ಮರುದಾಳಿ ಅನಿವಾರ್ಯ
  • ಖಾರದ ಪುಡಿ ಎರಚುವಾಗ ಕಣ್ಣನ್ನೇ ಗುರಿಯಾಗಿಡಿ
  • ನಿಮ್ಮ ಬಳಿ ಇರುವ ಎಲ್ಲ ಆಯುಧಗಳಿಗಿಂತಲೂ ನಿಮ್ಮ ಜಾಣ್ಮೆಯೇ ಮುಖ್ಯ
  • ಅಪರಿಚಿತರಿಗೆ ಮನೆ ಬಾಗಿಲನ್ನು ತೆರೆಯಬೇಡಿ ಪೋಲಿಸರ ವೇಷ ಧರಿಸಿಯೂ ಅಪರಾಧ ಎಸಗಿರುವದಿದೆ
  • ಕಾರನ್ನು ನಿಲ್ಲಿಸಿದಾಗ ಕಿಡಕಿಯ ಗಾಜುಗಳನ್ನು ಕೆಳಗಿಳಿಸಬೇಡಿ
  • ಲಾಜಿಂಗ್ ಲ್ಲಿರುವಾಗ ಒಬ್ಬರೇ ಇರುವಾಗ ಬಾಗಿಲನ್ನು ತೆಗೆಯಬೇಡಿ
  • ಇಂಟರ್ ನೆಟ್ ಬಳಕೆಯಲ್ಲಿ ಹುಷಾರಾಗಿರಿ. ಎಲ್ಲರಿಗೂ ನಿಮ್ಮ ನಿಜವಾದ ಹೆಸರು, ಆಯ್.ಡಿ. ಗೊತ್ತಾಗಲು ಬಿಡಬೇಡಿ

ಈ ಸಲಹೆಗಳು ಅಡುಗೆ ಪುಸ್ತಕ ಓದಿ ಅಡುಗೆ ಮಾಡುವಷ್ಟೇ ಸಾಮಾನ್ಯ ಸೂತ್ರಗಳು. ಇವುಗಳಿಂದ ಮಹಿಳೆ ಲೈಂಗಿಕ ಅತ್ಯಾಚಾರದ ವಿಷಯವಾಗಿ ಸಂಪೂರ್ಣ ಸುರಕ್ಷಿತ ಎಂದರ್ಥವಲ್ಲ. ಆದಾಗ್ಯೂ ಇವುಗಳ ಬಗ್ಗೆ ತಿಳಿದಿರುವುದು ಕ್ಷೇಮ. ಮೊನ್ನೆ ತಾನೆ ಒಬ್ಬ ದುರುಳ ಓರ್ವ ಯುವತಿಯನ್ನು ಪ್ರೀತಿಸುವದಾಗಿ ನಂಬಿಸಿ ಆಕೆಯ ಬೆತ್ತಲೆ ದೃಶ್ಯಗಳ ಫ಼ೋಟೊ ತೆಗೆದು ಫ಼ೇಸಬುಕ್‌ಗೆ ಅಪಲೋಡ್ ಮಾಡಿದ್ದು ನೀಚತನದ ವಿಶ್ವಾಸ ದ್ರೋಹ. ಯಾವ ಹುಡುಗಿಯರೂ ಇಂಥಾ ಕ್ಷುದ್ರ ಮನ:ಸ್ಥಿತಿಯವರ ಪಾಲಾಗಬಾರದು. ನೀವು ಎಷ್ಟೇ ಹುಷಾರಾಗಿದ್ದೀರಿ ಎಂದರೂ ಈ ಕೊಳಕರು ಮೋಸ ಮಾಡುವುದರಲ್ಲಿ ನಿಮಗಿಂತಲೂ ತುಸು ಜಾಸ್ತಿ ಚಾಲಾಕಿಗಳು.

ನಿನ್ನ ಬಾಂದಳದಂತೆ ನನ್ನ ಮನವಿರಲಿ, ನಿನ್ನ ಸಾಗರದಂತೆ ನನ್ನ ಎದೆಯಿರಲಿ

– ಬಿ.ಶ್ರೀಪಾದ ಭಟ್

ನೀನೊಬ್ಬನೆಯೆ ಅಲ್ಲ, ಸಾವಿನಳುಕಿಗೆ ಸಿಕ್ಕಿ
ಮುದ್ದಾಡಲರ್ಹವಹ ಶಿಶುಗಳೇನು ಶಿಲೆಗೆ
ಬಡಿದು ಕೊಂದೆಂಟನೆಯದರ ಕೈಲಿ ಸೀಳಲ್ಗೊಲೆಗೆ
ತುತ್ತಾದವನು ಕಂಸ ನಮ್ಮೆದೆಗಳನು ಕುಕ್ಕಿ
ನೋಡಿದರೆ ಕಾಣುವುದು ಮಕ್ಕಳೆಲುಬಿನ ರಾಶಿ !
ಒಂದೊಂದು ಹೃದಯವೂ ಕಂಸಶಿಲೆ
– ಕುವೆಂಪು

ಜೀವನವಿಡೀ ನಿಗಿನಿಗಿ ಕೆಂಡದಂತೆ ಉರಿದು ಕಡೆಗೆ ಬೂದಿಯಾಗಿದ್ದಾರೆ ನಾಮದೇವ ಢಸಾಳ. ಢಸಾಳ ನಿನ್ನೆ ಕರುಳಿನ ಕಾನ್ಸರ್‌ನಿಂದ ಕೊನೆಯುಸಿರೆಳಿದಿದ್ದಾರೆ. ಢಸಾಳರ ಹೆಸರು ಕೇಳಿದಾಕ್ಷಣ ನೋವಿನಿಂದ ಹೃದಯ ಕಿವುಚುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಎನ್ನುವ ಪ್ರಶ್ನೆಗೆ ಎಲ್ಲವನ್ನೂ ಕಂಡೆ ಎನ್ನುವಂತಿತ್ತು ಢಸಾಳರ ಬದುಕು. ಅಲ್ಲಿ ಹೋರಾಟವಿತ್ತು, ಕವಿತೆಯಿತ್ತು, ದಾರಿ ತಪ್ಪಿದ ಮಗುವಿನ ನಡೆಗಳಿತ್ತು, ಕ್ರೌರ್ಯವಿತ್ತು, ಸಂಸಾರ ಇನ್ನೇನು ನುಚ್ಚು ನೂರಾಗುತ್ತದೆ ಎನ್ನುವಷ್ಟರಲ್ಲಿ ಮರಳಿ ತೇಲುವಂತಹ ನೋವಿನ ಪಯಣವಿತ್ತು. ನಾಮದೇವ ಢಸಾಳರ ಕುರಿತು ಬರೆಯಲಿಕ್ಕೆ ನಮ್ಮಲ್ಲಿ ಶಕ್ತಿ ಇದೆಯಾ ಎನ್ನುವಷ್ಟರ ಮಟ್ಟಿಗೆ ಸದಾ ಉರಿಯುತ್ತಿದ್ದ ಢಸಾಳರ ಕುರಿತು ನಾವು ಪ್ರಾಮಾಣಿಕವಾಗಿ ಬರೆಯದಿದ್ದರೆ ನಾವೂ ಉರಿದು ಹೋಗುವುದರಲ್ಲಿ ಅನುಮಾನವೇ ಇಲ್ಲ.

ಎಪ್ಪತ್ತರ ದಶಕದಲ್ಲಿ ತಮ್ಮ ಬೆಂಕಿಯುಗಳುವ ಕವಿತೆಗಳನ್ನು ಕುರಿತು “ಕವಿತೆಗಳು ಬುಲೆಟ್‌ನಂತಿರಬೇಕು, ಅವುಗಳನ್ನು ಸರಿಯಾಗಿ ಗುರಿಯಿಡಬೇಕು, ಅವುಗಳನ್ನು ಸ್ನೇಹಿತರಿಗಾಗಿ ಬಳಸಬೇಕು” ಎಂದು ಹೇಳಿದ್ದರು. ಅವರ ಮೊದಲ ಕವನ ಸಂಕಲನ “ಗೋಳಪಿತ’ದ ಮೂಲಕ ಮರಾಠಿ ಸಾಹಿತ್ಯವನ್ನೇ ಬೆಚ್ಚಿಬೀಳಿಸಿದ್ದರು. namdeo-dasalಅದರ rawness, intense & unorthodox ಶೈಲಿ ಇಡೀ ಮರಾಠಿ ಸಾಹಿತ್ಯಕ್ಕೆ ನೀಡಿದ ಆ ಮಹಮದ್ ಅಲಿ ಪಂಚ್ ಐತಿಹಾಸಿಕವಾದ್ದು.

ತಮ್ಮ ಕವಿತೆಗಳ ಮೂಲಕ ಮೌನವಾಗಿ ಬೇಯುತ್ತಿದ್ದ ದಲಿತರಿಗೆ ಧ್ವನಿಯಾಗಿದ್ದಲ್ಲದೆ ಮಧ್ಯಮವರ್ಗದ ಮರಾಠಿ ಮಾನೂಸ್‌ರನ್ನು ಕಾಮಟೀಪುರದ ಸ್ಲಂನ ಕ್ರೌರ್ಯಕ್ಕೆ,ತಳಸಮುದಾಯಗಳ ದಯನೀಯ ಬುದುಕಿಗೆ, ಹಿಜಡಾಗಳ ನೋವಿಗೆ ಮುಖಾಮುಖಿಯಾಗಿಸಿದ್ದರು ಢಸಾಳ. ಇದನ್ನು ಸಾಧಿಸಿದ್ದು ಯಾವುದೇ ಅಕಾಡೆಮಿಕ್ ಅಹಂಕಾರದಿಂದಲ್ಲ ಬದಲಾಗಿ ಸದಾ ಸಮಾಜಕ್ಕೆ ಕತ್ತು ಕೊಡುವ ತನ್ನ ನಿಸ್ವಾರ್ಥ ಬಂಡಾಯದ ಗುಣದಿಂದ. ಹೈಸ್ಕೂಲನ್ನೂ ಮುಗಿಸದ ಢಸಾಳ ಮರಾಠಿ ಸಾಹಿತ್ಯದ ಉದ್ದಾಮ ಪಂಡಿತರಿಗೆ ಬನ್ನಿ ನೀವು ಕಂಡರಿಯದ ಲೋಕವೊಂದಿದೆ ಇಲ್ಲಿ ಎಂದು ಪ್ರತ್ಯಕ್ಷ ದರ್ಶನ ಮಾಡಿಸಿದರು.

ಆಗ ತಾನೆ ಅಮೇರಿಕದ ಬ್ಲಾಕ್ ಪ್ಯಾಂಥರ್‍ಸ್‌ನಿಂದ ಪ್ರಭಾವಿತರಾಗಿ ಗೆಳೆಯರಾದ ರಾಜ ಡಾಳಿ, ಜೆ.ವಿ.ಪವಾರ್ ಅವರ ಜೊತೆಗೂಡಿ “ದಲಿತ ಪ್ಯಾಂಥರ್‍ಸ್” ಅನ್ನು ಸ್ಥಾಪಿಸಿದ್ದರು. ಎಪ್ಪತ್ತರ ದಶಕದಲ್ಲಿ “ದಲಿತ್ ಪ್ಯಾಂಥರ್‍ಸ್” ಮಹರಾಷ್ಟ್ರದಲ್ಲಿ ಅಂಬೇಡ್ಕರ್‌ವಾದಿಗಳಿಗೆ ವಿಶಾಲವಾದ ಹೋರಾಟದ ಆಡೊಂಬಲವಾಗಿತ್ತು. ಅತ್ಯಂತ ಪ್ರಖರ ವೈಚಾರಿಕತೆ, ಸಮತಾವಾದದ, ಎಡಪಂಥೀಯ ಲೇಖಕರು ಮತ್ತು ಚಿಂತಕರ ಪಡೆಯೇ ಅಂದಿನ ದಲಿತ ಪ್ಯಾಂಥರ್‍ಸ ಸಂಘಟನೆಯಲ್ಲಿತ್ತು. ಆದರೆ ಎಲ್ಲಾ ಪ್ರಗತಿಪರ ಹಾಗೂ ಜಾತ್ಯಾತೀತ ಸಂಘಟನೆಗಳಿಗೂ ತಗಲುವ ಜಾಡ್ಯದಂತೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜ ಢಾಳೆ ಹಾಗೂ ನಾಮದೇವ ಢಸಾಳರ ನಡುವಿನ ಈ ವೈಯುಕ್ತಿಕ ಸಿದ್ಧಾಂತಗಳ ಭಿನ್ನತೆ ದಲಿತ ಪ್ಯಾಂಥರ್‍ಸ್ ಸಂಘಟನೆಯನ್ನೂ ಬಿಡಲಿಲ್ಲ. ರಾಜ ಢಾಳೆಯವರ ನೇತೃತ್ವದ ಗುಂಪು ಎಡಪಂಥೀಯ ಒಲವುಳ್ಳ ಸೆಕ್ಯುಲರ್ ರಾಜಕಾರಣವನ್ನು ಪುರಸ್ಕರಿಸಲಿಲ್ಲ. ಬದಲಾಗಿ ಅಂಬೇಡ್ಕರ ಪ್ರತಿಪಾದಿಸಿದ ಬುದ್ಧ ಧರ್ಮದ ಮಾರ್ಗದ ಕಡೆಗೆ ತನ್ನ ನಿಲುವನ್ನು ತಳೆದಿತ್ತು. ಇಲ್ಲಿ ಬುದ್ಧನ ಚಿಂತನೆಗಳ ಪ್ರಜ್ಞೆಯಲ್ಲಿ ಮುನ್ನಡೆಯಬೇಕೆಂಬುದೇ ರಾಜ ಢಾಳೆಯವರ ಪ್ರಮುಖ ಆಶಯವಾಗಿತ್ತು. ಆದರೆ ನಾಮದೇವ ಢಸಾಳರವರ ನೇತೃತ್ವದ ಗುಂಪು ಮಾರ್ಕ್ಸವಾದದ ನೆಲೆಗಟ್ಟಿನಲ್ಲಿ, ತಮ್ಮ ಎಡಪಂಥೀಯ ಚಿಂತನೆಗಳನ್ನು ನೇರವಾಗಿಯೇ ಪ್ರತಿಪಾದಿಸುತ್ತಾ ಬುದ್ಧನೆಡೆಗಿನ ನಡೆಯನ್ನು ಅಷ್ಟೊಂದು ತೀವ್ರವಾಗಿ ಸಮರ್ಥಿಸಲಿಲ್ಲ. ಇಲ್ಲಿ ಢಸಾಳರು ಮಾರ್ಕ್ಸವಾದಿಗಳ ಮೂಲ ಸಿದ್ಧಾಂತವಾದ ವರ್ಗ ಸಂಘರ್ಷ ಮತ್ತು ಆರ್ಥಿಕ ಆಭಿವೃದ್ಧಿ ಮೂಲಕ ಅಸ್ಪೃಶ್ಯತೆಯ ನಿರ್ನಾಮ ಹಾಗೂ ಜಾತಿವಿನಾಶದ ಕನಸನ್ನು ಕಂಡರು. ಇದು ಅಂಬೇಡ್ಕರವಾದದ Namdeo_Dhasalಬುದ್ಧನಡೆಗಿನ ನಡೆಯ ಮೂಲಕ ಜಾತಿವಿನಾಶ ಮತ್ತು ದಲಿತರ ಆತ್ಮಾಭಿಮಾನದ ಕನಸಿಗೆ, ಚಿಂತನೆಗೆ ವ್ಯತಿರಿಕ್ತವಾಗಿತ್ತು.

ಕಡೆಗೆ ಢಸಾಳರು 1977 ರಲ್ಲಿ ದಲಿತರ ಪರವಾಗಿ ಇಂದಿರಾಗಾಂದಿಯವರನ್ನು ಬೆಂಬಲಿಸುವುದರೊಂದಿಗೆ ದಲಿತ ಪ್ಯಾಂಥರ್‍ಸ ಇಬ್ಭಾಗವಾಯಿತು. ಆ ದಿನಗಳನ್ನು ಢಸಾಳರ ಅಪ್ತ ಸ್ನೇಹಿತ ದಿಲೀಪ್ ಚಿತ್ರೆ ಅವರಿಂದಲೇ ಕೇಳಬೇಕು. ಕಡೆಗೆ ಢಸಾಳರು ಇಂಡಿಯಾದ ಕಮ್ಯನಿಷ್ಟರ ಕುರಿತಾಗಿಯೂ ತೀವ್ರ ನಿರಾಸೆ ಹೊಂದಿದ್ದರು. ಎಪ್ತತ್ತರ ದಶಕದಲ್ಲಿ ಶಿವಸೇನೆಯ ಪುಂಡಾಟಿಕೆಯ ವಿರುದ್ಧ, ದೌರ್ಜನ್ಯದ ವಿರುದ್ಧ ದಲಿತ್ ಪ್ಯಾಂಥರ್‍ಸನ ಮೂಲಕ ನಿರಂತರವಾಗಿ ಹೋರಾಡಿದ್ದ ಢಸಾಳ ತೊಂಬತ್ತರ ದಶಕದ ಹೊತ್ತಿಗೆ ಶಿವಸೇನೆಯೊಂದಿಗೆ ಗುರುತಿಸಿಕೊಂಡು ಅದರ ಮುಖವಾಣಿ “ಸಾಮ್ನ” ಪತ್ರಿಕೆಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಇದು ಅವರ ಅಭಿಮಾನಿಗಳನ್ನು, ಗೆಳೆಯರನ್ನು ಶಾಕ್‌ಗೊಳಿಸಿತ್ತು. ಢಸಾಳರ ಒಟ್ಟಾರೆ ರಾಜಕೀಯ ನಡೆಗಳು ದಯನೀಯವಾಗಿ ಸೋಲುತ್ತಿದ್ದದ್ದು ಅವರ ಆತ್ಮಶಕ್ತಿಯನ್ನೇ ನಾಶಮಾಡಿತ್ತು.

ಢಸಾಳರಿಗಿಂತ ಹದಿನೈದು ವರ್ಷಗಳಷ್ಟು ಕಿರಿಯರಾದ ಅವರ ಪತ್ನಿ, ಲೇಖಕಿ, ಕವಿಯತ್ರಿ ಮಲ್ಲಿಕಾ ಅಮರ್ ಶೇಕ್‌ರು ಢಸಾಳರ ಅನಿಶ್ವಿತ, ಕ್ಷಣಕ್ಷಣಕ್ಕೆ ತಿರುಗುತ್ತಿದ್ದ ರಾಜಕೀಯ ನಡೆಗಳೊಂದಿಗೆ ತೀವ್ರ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಇವರ ವೈಯುಕ್ತಿಕ ಬದುಕು ಅನೇಕ ತಲ್ಲಣಗಳನ್ನು , ಆಳವಾದ ನೋವಿನ ಜೀವನವನ್ನು ಒಳಗೊಳ್ಳಬೇಕಾಯಿತು.

ಕಡೆಗೆ ದೀರ್ಘಕಾಲದ ಮಾನಸಿಕ, ದೈಹಿಕ ಕಾಯಿಲೆಯಿಂದ ಮುಕ್ತಿ ಹೊಂದಿದ ಢಸಾಳ ಮೊನ್ನೆ ತೀರಿಕೊಂಡಿದ್ದಾರೆ.

ಅವರ ಪದ್ಯವೊಂದರ ಆಯ್ದ ಸಾಲುಗಳು:
This is hell
This is a swirling vortex
This is an ugly agony
This is pain wearing a dancer’s anklets

Shed your skin, shed your skin from its very roots
Skin yourself
Let these poisoned everlasting wombs become disembodied.
Let not this numbed ball of flesh sprout limbs
Taste this
Potassium cyanide!
As you die at the infinitesimal fraction of a second,
Write down the small ‘s’ that’s being forever lowered.

Here queue up they who want to taste
Poison’s sweet or salt flavour
Death gathers here, as do words,
In just a minute, it will start pouring here.

Skin yourself ಎಂದು ಬರೆದ ನಾಮದೇವ ಢಸಾಳ, ನಿನ್ನ ಆತ್ಮ ಇನ್ನಾದರೂ ಶಾಂತಿಯಿಂದಿರಲಿ.

ಮಹಿಳಾ ಚಳವಳಿಗಳು ಮತ್ತು ಆಧುನಿಕ ಲೇಖಕಿಯರ ಮೇಲೆ ವಿಜಯಾ ದಬ್ಬೆಯವರ ಪ್ರಭಾವಗಳು


– ರೂಪ ಹಾಸನ


 

[ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗು ಹಾಸನದ ಜಿಲ್ಲಾ ಲೇಖಕಿಯರ ಬಳಗದ ವತಿಯಿಂದ ದಿನಾಂಕ 27.2.2010 ರಂದು ಬೇಲೂರಿನಲ್ಲಿ ನಡೆದ ‘ವಿಜಯಾನ್ವೇಷಣೆ’ ವಿಜಯಾ ದಬ್ಬೆ ಸಾಹಿತ್ಯ -ಸಾಧನೆ ಕುರಿತ ವಿಚಾರಸಂಕಿರಣದಲ್ಲಿ ಮಂಡಿಸಿದ ವಿಚಾರಗಳ ಬರಹ ರೂಪ.]

ಪ್ರಜಾವಾಣಿಯಲ್ಲಿ ಆತ್ಮಕಥೆಗಳ ಹಿನ್ನಲೆಯಲ್ಲಿ ವಿಜಯಾದಬ್ಬೆಯವರ ಕುರಿತ ನನ್ನ ಅಂಕಣ ಪ್ರಕಟವಾದ ನಂತರ, ವಿವಿಧ ದೂರದರ್ಶನ ವಾಹಿನಿಗಳಲ್ಲಿ ನಾನು ಮೇಡಂ ಕುರಿತು “ಅವರು ನಮ್ಮ ಜಿಲ್ಲೆಯ ಆಧುನಿಕ ಕವಯಿತ್ರಿಯರಲ್ಲಿ ಮೊದಲಿಗರು ಮತ್ತು ಕನ್ನಡ ಸಾಹಿತ್ಯದ ಮಹತ್ವದ ಲೇಖಕಿ, ಅವರಿಂದು ಕ್ರಿಯಾಶೀಲರಾಗಿದ್ದರೆ ಮಹಿಳಾ ಲೋಕದಲ್ಲಿ ಪ್ರಮುಖ ಸ್ಥಾನದಲ್ಲಿರ್‍ತಿದ್ದರು” ಎಂದು ಮಾತನಾಡಿದ್ದು ಕೇಳಿದ ರಾಜ್ಯದ ಬೇರೆ ಬೇರೆ ಭಾಗದ ಕೆಲವು ಲೇಖಕ-ಲೇಖಕಿಯರು ನನ್ನೊಂದಿಗೆ ಮಾತನಾಡಿ “ವಿಜಯಾ ದಬ್ಬೆಯವರು ಈಗ ಅಪ್ರಸ್ತುತ. ಅವರ ಬಗ್ಗೆ ಯಾಕೆ ಅಷ್ಟೊಂದು ಬರೆದು, ಮಾತನಾಡಲು ಹೋದ್ರಿ?” ಎಂದಿದ್ದರು. ಅವರ ಮಾತು ಕೇಳಿ ನನಗೆ ವಿಷಾದವಾಗಿತ್ತು. ಸಾಹಿತ್ಯ ಲೋಕದ ಸಣ್ಣತನದ ಪರಿಚಯವೂ ಆಗಿತ್ತು. ಜಾತಿ, ಲಿಂಗ, ವರ್ಗ, ಬೌದ್ಧಿಕ ಸಾಮರ್ಥ್ಯ ಆಧಾರಿತವಾಗಿರುವ ಅಸೂಯೆ, vijaya-dabbeಹೊಟ್ಟೆಕಿಚ್ಚುಗಳು ಬೇರೆಲ್ಲ ಕ್ಷೇತ್ರಕ್ಕಿಂತ ಸಾಹಿತ್ಯ ಕ್ಷೇತ್ರದಲ್ಲೇ ಹೆಚ್ಚು ಎಂದು ಇಂಥಹ ಸಂದರ್ಭದಲ್ಲೆಲ್ಲಾ ನನಗೆ ಅನ್ನಿಸುತ್ತಿರುತ್ತದೆ. ಆದರೆ ಹಾಗೇ, “ಮೇಡಂ ಬಗ್ಗೆ ಓದಿ, ಟಿ.ವಿ. ನಲ್ಲಿ ನೋಡಿ ಸಂತೋಷವಾಯ್ತು. ಈಗ ಹೇಗಿದ್ದಾರೆ? ಎಲ್ಲಿದ್ದಾರೆ?” ಎಂದು ವಿಚಾರಿಸಿದವರ ಸಂಖ್ಯೆ ಕಿಡಿಕಾರಿದವರ ಸಂಖ್ಯೆಗಿಂತಾ ಹೆಚ್ಚಿತ್ತೆನ್ನುವುದೇ ಒಂದು ಸಮಾಧಾನ. ಆಗ ನನ್ನಲ್ಲಿ ಪ್ರಶ್ನೆಗಳೆದ್ದಿತ್ತು, ‘ಒಬ್ಬ ಲೇಖಕ ನಿಷ್ಕ್ರಿಯನಾದ ಎಂದ ತಕ್ಷಣ ಅವನು ಅಪ್ರಸ್ತುತನೇ? ಅವನು ತನ್ನ ಬರವಣಿಗೆಯ ಮೂಲಕ ಸದಾ ಪ್ರಸ್ತುತನಾಗಿರುತ್ತಾನಲ್ಲವೇ? ಸಾಹಿತ್ಯ ಚರಿತ್ರೆಯಲ್ಲಿ ದಾಖಲಾದ ಯಾವುದೇ ಸಾಹಿತಿ ಆಯಾ ಕಾಲಘಟ್ಟದ ಜೊತೆಗೆ, ಸಾರ್ವಕಾಲಿಕ ಸತ್ಯಗಳನ್ನು ಪ್ರತಿಪಾದಿಸಿದ್ದರೆ ಸರ್ವಕಾಲಕ್ಕೂ ಪ್ರಸ್ತುತನಾಗಿರುತ್ತಾನಲ್ಲವೇ?’ ಅನ್ನಿಸಿತ್ತು. ಅದರಲ್ಲೂ ವಿಜಯಾ ದಬ್ಬೆಯವರು ಲೇಖಕಿ ಮಾತ್ರ ಅಲ್ಲ. ಮುಖ್ಯವಾಗಿ ಅವರೊಬ್ಬ ದಿಟ್ಟ ಮಹಿಳಾಪರ ಹೋರಾಟಗಾರ್ತಿ. ಸಾಹಿತ್ಯದ ಜೊತೆಗೆ ಪ್ರತಿಭಟನೆ, ಹೋರಾಟಗಳ ಮೂಲಕ ಲಿಂಗಾಧಾರಿತವಾದ ಸಾಮಾಜಿಕ ಬದಲಾವಣೆಯನ್ನು, ಸಮಾನತೆಯನ್ನು ತರಬೇಕು, ಜಾಗೃತಿ ಮೂಡಿಸಬೇಕು ಎಂದು ನಂಬಿದವರು. ಹೀಗಾಗಿ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರ ಅಲ್ಲ, ಮಹಿಳಾ ಚರಿತ್ರೆಯಲ್ಲಿ ಕೂಡ ಅವರ ಹೆಸರು ಚಿರಸ್ಥಾಯಿಯಾಗಿರುವಂತದ್ದು ಎಂದು ನಾನು ಭಾವಿಸಿದ್ದೇನೆ.

ಹಾಗೆ ವಿಜಯಾ ಮೇಡಂ ನನಗೆ ವೈಯಕ್ತಿಕವಾಗಿ ತುಂಬಾ ಪರಿಚಿತರಲ್ಲ. ಆದರೆ ಒಂದು ರೀತಿಯಲ್ಲಿ ಅವರು ನನ್ನ ಮಾನಸ ಗುರುಗಳು ಅಂದ್ರೆ ತಪ್ಪಿಲ್ಲ. ನನ್ನ ಕಾಲೇಜು ದಿನಗಳಲ್ಲಿ [ನಾನು ಪದವಿ ಓದಿದ್ದು ಗೌರಿಬಿದನೂರಿನಂತ ಒಂದು ಪುಟ್ಟ ಊರಿನಲ್ಲಿ] ಅವರ ಶಿಷ್ಯೆ ಆಗಿದ್ದ ನನ್ನ ಕನ್ನಡ ಉಪನ್ಯಾಸಕರಾದ ಪೂರ್ಣಿಮಾ ಅವರು ವಿಜಯಾ ಮೇಡಂ ಬಗ್ಗೆ ಎಷ್ಟೊಂದು ಹೇಳ್ತಿದ್ದರು ಎಂದರೆ, ನಮಗೆಲ್ಲ ‘ಆದ್ರೆ ವಿಜಯಾ ದಬ್ಬೆ ತರಹ ಧೈರ್ಯವಂತ ಹೆಣ್ಣುಮಗಳಾಗಬೇಕು’ ಎನ್ನುವಂತಾ ಆಸೆಯನ್ನ ಹುಟ್ಟಿಸಿದ್ದರು. ಅವರ ಮಹಿಳಾಪರ ಲೇಖನಗಳನ್ನು ಓದಿ, ಅವರ ಸಮತಾ ಚಟುವಟಿಕೆಗಳ ಬಗ್ಗೆ ಕೇಳಿ ಅವರನ್ನು ನೋಡದಿದ್ದರೂ ನಾವು ಗೆಳತಿಯರು ಅದೆಷ್ಟೊಂದು ಪ್ರೇರಣೆ ಪಡೆದಿದ್ದೆವು ಎನ್ನುವುದನ್ನು ವಿವರಿಸೋದು ತುಂಬಾ ಕಷ್ಟ. ಅವರ ಮೊದಲ ಪ್ರಭಾವ ನನ್ನಂತವರ ಮೇಲೆ ಲೇಖಕಿಯಾಗಿ ಆಗಿದ್ದಕ್ಕಿಂತಾ ಹೆಚ್ಚಾಗಿ ಹೋರಾಟಗಾರ್ತಿಯಾಗಿಯೇ ಹೆಚ್ಚು ಎಂದು ಭಾವಿಸುತ್ತೇನೆ. ಆನಂತರದ ಪ್ರಭಾವ ಕವಿಯಾಗಿ, ಬರಹಗಾರ್ತಿಯಾಗಿ. ನನ್ನ ಕಾಲೇಜು ದಿನಗಳಲ್ಲೇ ಮೈಸೂರಿಗೆ ಹೋದಾಗ ಅವರನ್ನ ಒಮ್ಮೆ ನೋಡಲೇಬೇಕು ಎಂದು ಯೂನಿವರ್ಸಿಟಿಗೆ ಹುಡುಕಿಕೊಂಡು ಹೋಗಿದ್ದು ಇನ್ನೂ ನೆನಪಿದೆ. ಆಗ ಅವರನ್ನ ನೋಡಿ ನನಗೆ ಬಹಳವೇ ನಿರಾಶೆ ಆಗಿತ್ತು. ಅವರು ಅತ್ಯಂತ ಮೃದು ಸ್ವಭಾವದ, ತೀರಾ ಮುಗ್ಧ ಹೆಣ್ಣು ಮಗಳಾಗಿ ನನಗೆ ಕಂಡಿದ್ದರು. ದಿಟ್ಟ ಮಹಿಳಾ ಹೋರಾಟಗಾರ್ತಿ, ಅನ್ಯಾಯಗಳ ವಿರುದ್ಧ ಕಿಡಿಕಾರುವ ಬಂಡಾಯಗಾರ್ತಿ, ಸಮಾನತೆಗಾಗಿ ಪ್ರತಿಭಟನೆ ಮಾಡೋ ಚಳವಳಿಗಾರ್ತಿ ಇವರೇನಾ? ಅಂತ ಆಶ್ಚರ್ಯ ಆಗಿತ್ತು. ಅವರ ವ್ಯಕ್ತಿತ್ವ ನಾನು ಕಲ್ಪಿಸಿಕೊಂಡಂತಾ ‘ದಿಟ್ಟ ಹೆಣ್ಣು ಮಗಳ’ ಚಿತ್ರಕ್ಕೆ ಸ್ವಲ್ಪ ಕೂಡ ಹೊಂದಿಕೆ ಆಗುತ್ತಿರಲಿಲ್ಲ. ಅದು ನನ್ನ ಹದಿಹರೆಯದ ತಿಲಿವಳಿಕೆಯ ದೋಷವಿರಬಹುದು! ‘ಇವರು ಮಹಿಳೆಯರ ಪರವಾಗಿ ಅದೆಂಥಾ ಹೋರಾಟ ಮಾಡ್ತಾರೆ?’ ಎಂದು ವಿಸ್ಮಯಪಟ್ಟುಕೊಂಡಿದ್ದೆ. ಆದರೆ ನನ್ನ ಮೇಲಿನ ಅವರ ಪ್ರಭಾವ ಮಾತ್ರ ಅಳಿಸಿ ಹೋಗುವಂತದ್ದಾಗಿರಲಿಲ್ಲ. ಯಾಕೆಂದರೆ ಎಂಭತ್ತರ ದಶಕದಲ್ಲಿ ಅವರು ಮಾಡ್ತಿದ್ದಂತಾ ಕೆಲಸಗಳು ಅಷ್ಟೊಂದು ಶಕ್ತಿಶಾಲಿಯಾಗಿದ್ದವು.

ಇನ್ನು ಮಹಿಳಾ ಚಳವಳಿಗಳ ಕುರಿತು ಹೇಳ್ಬೇಕು ಅಂದ್ರೇ ಯಾವುದೇ ಚಳವಳಿನೂ ದಿಢೀರನೆ ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡುಬಿಡುವಷ್ಟು ಸ್ವಯಂಭು ಅಲ್ಲ. ಪಕ್ವವಾದ ಬೀಜಕ್ಕೆ ಪೂರಕವಾಗಿ ಹದವಾದ ಮಣ್ಣು, ಗಾಳಿ, ಬೆಳಕು, ನೀರು ಎಲ್ಲವೂ ಬೇಕು. ಆಗ ಮಾತ್ರ ಬೀಜ ಮೊಳಕೆ ಒಡೆಯುತ್ತೆ, ಚಿಗುರುತ್ತೆ, ಹೂ-ಹಣ್ಣುಗಳನ್ನ ನೀಡುತ್ತೆ. ಇಂತಹ ಎಲ್ಲ ಪೂರಕ ಪರಿಸರ ೭೦ರ ದಶಕದಲ್ಲಿ ನಿರ್ಮಾಣ ಆಗಿದ್ದರಿಂದಲೇ ಮಹಿಳಾ ಚಳವಳಿ ಆ ಕಾಲಕ್ಕೆ ಸಶಕ್ತವಾಗಿ ರೂಪುಗೊಂಡಿತು. ಬಂಡಾಯ ಸಾಹಿತ್ಯ ಚಳವಳಿ, ದಲಿತ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ…… ಹೀಗೆ ಹತ್ತು ಹಲವು ಚಳವಳಿಗಳು ಪ್ರಬಲವಾಗಿ ಹುಟ್ಟಿಕೊಂಡಂತಾ ಕಾಲಘಟ್ಟದಲ್ಲಿ ಅವುಗಳೆಲ್ಲದರಿಂದ ಪ್ರೇರಣೆ ಪಡೆದು, ಅದರ ಜೊತೆಜೊತೆಗೇ ಹೆಜ್ಜೆ ಹಾಕಲು ಪ್ರಾರಂಭಿಸಿದ್ದು ಈ ಮಹಿಳಾ ಚಳವಳಿ. ದೇಶದ ಬೇರೆ ಬೇರೆ ಭಾಗಗಳಲ್ಲಿ ಮಹಿಳಾ ಸಂಘಟನೆಗಳvijaya-dabbe-2 ಅಡಿಯಲ್ಲಿ ರೂಪುಗೊಂಡ ಈ ಮಹಿಳಾ ಚಳವಳಿ ತನ್ನ ಅನನ್ಯತೆ ಹಾಗೂ ವಿಶಿಷ್ಟತೆಯಿಂದ ಇತಿಹಾಸದಲ್ಲಿ ದಾಖಲಾಗಿದ್ದು ಒಂದು ವಿಶೇಷ.

ಬೇರೆ ಬೇರೆ ಚಳವಳಿಗಳು ಹಾಗೂ ವಿಚಾರವಾದದ ಹಿನ್ನಲೆಯ ಜೊತೆಗೆ, ಹೆಚ್ಚಾದ ಮಹಿಳಾ ಶಿಕ್ಷಣ ಪ್ರಮಾಣ, ಮಹಿಳಾ ಸಬಲೀಕರಣ ಹಾಗೂ ಔದ್ಯೋಗಿಕ ಕ್ರಾಂತಿ, ಆ ಸಂದರ್ಭದಲ್ಲಿ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿತ್ತು. ಇದೇ ಸಂದರ್ಭದಲ್ಲಿ ೧೯೭೨ರಲ್ಲಿ ಅದೇಮೊದಲ ಬಾರಿಗೆ ಇಂದಿರಾಗಾಂಧಿಯವರ ಸರ್ಕಾರ ಮಹಿಳಾ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ನೇಮಕ ಮಾಡಿದ್ದ ಸಮಿತಿಯ ವರದಿ, ಬೌದ್ಧಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮಹಿಳೆಯರಲ್ಲಿ ಹೊಸ ಎಚ್ಚರವನ್ನು ಮೂಡಿಸಿತು. ಮಹಿಳೆಯರ ಸ್ಥಾನಮಾನ, ಸಾಮಾಜಿಕ ಸ್ಥಿತಿಯ ಕುರಿತು ಕಾಳಜಿ ಇದ್ದ ಹಲವು ಮಹಿಳೆಯರು ಈ ವರದಿ ಕುರಿತು ದೇಶದ ಎಲ್ಲೆಡೆ ಚರ್ಚೆಗಳನ್ನು, ವಿಚಾರಗೋಷ್ಠಿಗಳನ್ನು, ಕಾರ್ಯಾಗಾರಗಳನ್ನು ನಡೆಸಿದರು. ಇಂಥಹ ಒಂದು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಮೈಸೂರಿನ ಆಹಾರವಿಜ್ಞಾನಿಗಳಾದ ಡಾ.ಈ.ರತಿರಾವ್ ಹಾಗೂ ಡಾ.ವಿಜಯಾ ದಬ್ಬೆಯವರ ದೃಢ ನಿರ್ಧಾರದಿಂದ 1978 ರಲ್ಲಿ, ಮೈಸೂರಿನಲ್ಲಿ “ಸಮತಾ” ವೇದಿಕೆಯನ್ನು ಹುಟ್ಟುಹಾಕಿಕೊಂಡರು. ಹಾಗೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲೂ ಅನೇಕ ಮಹಿಳಾ ಪರ ಸಂಸ್ಥೆಗಳು, ಸಂಘಟನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಬೆಂಗಳೂರಿನ “ವಿಮೋಚನಾ” ಹಾಗೂ “ಮಾನಿನಿ” ಮುಖ್ಯವಾದವುಗಳು.

“ಸಮತಾ” ಪ್ರಾರಂಭದಲ್ಲಿ ಒಂದು ಮಹಿಳಾ ಅಧ್ಯಯನ ಕೇಂದ್ರವಾಗಿ ಕೆಲಸ ಮಾಡಲು ಉದ್ದೇಶಿಸಿದ್ದರೂ ಮಹಿಳೆಯರ ಸಮಸ್ಯೆಗಳ ತೀವ್ರತೆಯನ್ನು ಗಮನಿಸಿ, ಅಧ್ಯಯನದ ಜೊತೆಗೆ ಹೋರಾಟದ ಹಾದಿಯನ್ನು ಹಿಡಿಯಿತು. ವಿಜಯಾ ದಬ್ಬೆಯವರ ವ್ಯಕ್ಕಿತ್ವವನ್ನು ಈ “ಸಮತಾ ವೇದಿಕೆ” ಹಾಗೂ “ಸಮತಾ ಅಧ್ಯಯನ ಕೇಂದ್ರ”ಗಳನ್ನು ಹೊರತುಪಡಿಸಿ ಕಟ್ಟಿಕೊಳ್ಳುವುದಿಕ್ಕೆ ಸಾಧ್ಯವೇ ಇಲ್ಲ. ಇವು, ಅವರು ಮಹಿಳಾಪರ ಮತ್ತು ಸಮಾಜಮುಖಿಯಾಗುವಂತೆ ಹಂತ ಹಂತವಾಗಿ ಬೆಳೆಸಿವೆ. ಮಹಿಳಾ ಚಳವಳಿಗೆ ಒಂದು ಸಾಂಸ್ಕೃತಿಕ ನೆಲೆಗಟ್ಟು ರೂಪಿಸುವಲ್ಲಿ ಇದವರಿಗೆ ನೆರವಾಗಿವೆ. ಸಮಾಜದ ಎಲ್ಲ ಸ್ತರದ ಮಹಿಳೆಯರ ಮೇಲಿನ ವಿವಿಧ ರೀತಿಯ ಶೋಷಣೆಯ ವಿಶ್ವರೂಪದರ್ಶನ ವಿಜಯಾ ಅವರಿಗಾಗಿದ್ದು ಇವುಗಳಿಂದಲೇ. ‘ಸ್ತ್ರೀವಾದವೆಲ್ಲಾ ಪಾಶ್ಚಾತ್ಯರಿಂದ ಬಂದದ್ದು ನಮ್ಮಲ್ಲಿ ಅದರ ಅವಶ್ಯಕತೆ ಇಲ್ಲ’ ಎನ್ನುವಂತಹ ನಂಬಿಕೆ ಇದ್ದ ಕಾಲದಲ್ಲಿ ಕಲಿತ ತಿಳಿವಳಿಕೆಯ ಜೊತೆಗೆ, ಸ್ವಂತ ಅನುಭವದ ಸಾರವನ್ನು ಬೆರೆಸಿ ತನ್ನ ಬದುಕನ್ನು-ಬರಹವನ್ನು-ಚಟುವಟಿಕೆಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ, ಅದು ಸಮಾಜಕ್ಕೆ ಉಪಯೋಗಿಯಾಗುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಲೆ, ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು ವಿಜಯಾ ದಬ್ಬೆಯವರು. ಜೊತೆಗೆ ವಿಚಾರವಂತ ಮಹಿಳೆಯರನ್ನು ನಿರಂತರವಾಗಿ ಸಂಘಟನೆಯಲ್ಲಿ ಹಿಡಿದಿಡುವಂತಾ ಕೆಲಸ ಕಡಿಮೆಯದಲ್ಲ.

ಕರ್ನಾಟಕದಾದ್ಯಂತ ಹಲವಾರು ಮಹಿಳಾ ಜಾಗೃತಿ ಶಿಬಿರ, ಸಂಕಿರಣ, ಸಂಘಟನೆಗಳನ್ನು ವ್ಯವಸ್ಥಿತವಾಗಿ ಇಪ್ಪತ್ತು ವರ್ಷಗಳ ಕಾಲ, ಸಮಾನಮನಸ್ಕರೊಡಗೂಡಿ ನಡೆಸಿದ ಗಟ್ಟಿಗಿತ್ತಿ ಇವರು. ಮಹಿಳೆಯರ ಮೇಲೆ ವಿವಿಧ ರೂಪಗಳಲ್ಲಿ ನಡೆಯುತ್ತಿದ್ದ ವರದಕ್ಷಿಣೆ ಕಿರುಕುಳ, ಸಾವು ಅಥವಾ ಕೊಲೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮುಂತಾದವುಗಳನ್ನು ಪ್ರತಿಭಟನೆ, ಹೋರಾಟಗಳ ಮೂಲಕ ಹೆಣ್ಣಿನಪರವಾಗಿ ನ್ಯಾಯ ಕೇಳಲು ಬಳಸಿಕೊಂಡಿದ್ದಾರೆ. ಅನೇಕ ದನಿಯಿಲ್ಲದ ಮಹಿಳೆಯರಿಗೆ ದನಿ ನೀಡಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು “ಸಮತಾ ವೇದಿಕೆ”.

ಚೇತನ ಕನ್ನಡ ಸಂಘದ ಪುಸ್ತಕ ಪುರವಣಿಯ ಸಂಪಾದಕಿಯಾಗಿ, ನೆಲೆ ತಪ್ಪಿದ ಮಹಿಳೆಯರಿಗೆ ಭದ್ರನೆಲೆ ಒದಗಿಸುವ ಉದ್ದೇಶದಿಂದ ರೂಪಿತಗೊಂಡಿರುವ “ಶಕ್ತಿಧಾಮ”ದ ಖಜಾಂಚಿಯಾಗಿ, ಆಳಕ್ಕಿಳಿದು ಅಭ್ಯಸಿಸುವ ಸಂಶೋಧಕಿಯಾಗಿ, ಪುರುಷ ಪ್ರಧಾನ ವ್ಯವಸ್ಥೆಯ ಮೂಲ ಬೇರುಗಳನ್ನು ಜಾಗೃತ ನೆಲೆಗಳಿಂದ ದಿಟ್ಟವಾಗಿ ಪ್ರಶ್ನಿಸುವ ಕವಯಿತ್ರಿಯಾಗಿ, ಕಡ್ಡಿ ತುಂಡು ಮಾಡುವ ನಿಷ್ಠೂರತೆ ಇಲ್ಲದೇ, ಮಗುವಿಗೆ ತಿಳಿ ಹೇಳುವ ನೆಲೆಯ ವಿಮರ್ಶಕಿಯಾಗಿ, ನಿರ್ಲಕ್ಷಿತ ಲೇಖಕಿಯರ ಕುರಿತ ಲೇಖನಗಳ ಸಂಪಾದಕಿಯಾಗಿ, ಮಹಿಳಾ ಲೋಕದ ಅಧ್ಯಯನದ ಗಂಭೀರ ಲೇಖಕಿಯಾಗಿ, ಸಂಸ್ಕೃತಿಯ ಪುನರ್ ನಿರ್ಮಾಣದ ದಿಟ್ಟ ಚಿಂತಕಿಯಾಗಿ, ಪುರಾಣ ಪ್ರತೀಕಗಳನ್ನು ಮುರಿದು ಕಟ್ಟುವ ವಿದ್ವಾಂಸರಾಗಿ, ಸಮರ್ಥ ಅನುವಾದಕಿಯಾಗಿ, ಪ್ರವಾಸದಲ್ಲಿ ತನ್ನ ಸುತ್ತಲನ್ನು ಸೂಕ್ಷ್ಮತೆಯೊಂದಿಗೆ ದಾಖಲಿಸುವ ಸಾಹಿತಿಯಾಗಿ, ವಿಮೆನ್ ರೈಟಿಂಗ್ ಇನ್ ಇಂಡಿಯಾ- ಕನ್ನಡ ವಿಭಾಗದ ಪ್ರಾದೇಶಿಕ ಸಂಪಾದಕಿಯಾಗಿ, ಲೇಖಕಿಯರ ಆತ್ಮ ಕಥಾನಕ “ಲೇಖ-ಲೋಕ”ದ ಸಂಪಾದಕಿಯಾಗಿ……… ಹೀಗೆ ಆಧುನಿಕ ಲೇಖಕಿಯರು ಮಾತ್ರವಲ್ಲ, ಆಧುನಿಕ ಮಹಿಳೆಯರೆಲ್ಲರ ಮೇಲೂ ಪ್ರಭಾವ ಬೀರಬಲ್ಲಂತಾ ಬಹುಮುಖಿ ವ್ಯಕ್ತಿತ್ವ ವಿಜಯಾ ದಬ್ಬೆಯವರದ್ದು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾರಂಭದ ದಿನಗಳಲ್ಲಿ, ಮಹಿಳೆಯರು ಓದಲು ಸೇರಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅನೇಕರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದಾರೆ. ಮಹಿಳಾ ಉಪನ್ಯಾಸಕಿಯರನ್ನು ರೂಪಿಸಿದ್ದಾರೆ. ಮಹಿಳಾ ಪಿ.ಹೆಚ್.ಡಿ ಗೈಡ್‌ಗಳು ಇಲ್ಲದಿದ್ದ ಕಾಲದಲ್ಲಿ ತಾವೇ ಪ್ರಥಮ ಮಹಿಳಾ ಗೈಡ್ ಆಗಿ ದಾಖಲೆ ನಿರ್ಮಿಸುವುದರೊಂದಿಗೆ, ಅನೇಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವೆಲ್ಲವೂ ಅವರ “ವಿಜಯಾಭಿನಂದನ” ಗ್ರಂಥದಲ್ಲಿ ದಾಖಲಾಗಿವೆ. ಅವರ ಗುರುಗಳು, ಸಹವರ್ತಿಗಳು, ಮಿತ್ರವೃಂದ, ಶಿಷ್ಯರು, ಸಹಾಯ ಪಡೆದವರು ಅವರನ್ನು, ಅವರ ಗುಣ-ಸ್ವಭಾವಗಳನ್ನು ಮೆಚ್ಚಿ ಬರೆದಿರುವ ಬರಹಗಳನ್ನು ಓದಿದರೆ ಕಣ್ಣು ತುಂಬಿಬರುತ್ತದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವುದೆಲ್ಲವನ್ನೂ ಅವರು ಕೇವಲ ಇಪ್ಪತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂಬುದೇ ಅಚ್ಚರಿಯ ವಿಷಯ. ಅನೇಕರಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡಿದ್ದಾರೆ. ತಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸಿದ್ದಾರೆ. ಇಂತಹ ಅನನ್ಯ ವ್ಯಕ್ತಿತ್ವದ ವಿಜಯಾ ದಬ್ಬೆಯವರ ಬರಹಗಳು ಮಾತ್ರವಲ್ಲ, ಅವರ ಕೆಲಸಗಳೂ ನಮಗೆ ಮಾದರಿಯಾಗುವಂತದ್ದು.

ನನ್ನ ವೈಯಕ್ತಿಕ ನೆಲೆಯಲ್ಲಿ ವಿಜಯಾ ದಬ್ಬೆಯವರ ಪ್ರಭಾವ ತುಂಬಾ ದೊಡ್ಡದು. ವಿದ್ಯಾರ್ಥಿ ಜೀವನದಲ್ಲಿದ್ದಾಗ, ಅವರು ಮತ್ತವರ ತಂಡದವರು ಶತಮಾನಗಳಿಂದ ಸ್ತ್ರೀ ಪ್ರವೇಶ ನಿಷಿದ್ಧವಾಗಿದ್ದ ದೇವಾಲಯವೊಂದಕ್ಕೆ ಪ್ರತಿಭಟನಾತ್ಮಕವಾಗಿ ಪ್ರವೇಶಿಸಿದ್ದು ಕೇಳಿ ರೋಮಾಂಚನಗೊಂಡಿದ್ದೆ. ಅವರ ಮಹಿಳಾ ಪರ ಹೋರಾಟಗಳಿಂದ ಪ್ರೇರಿತರಾಗಿ ರಾಜ್ಯಾದ್ಯಂತ ಅನೇಕ ಮಹಿಳಾ ಸಂಘಟನೆಗಳು- ಸಂಸ್ಥೆಗಳು ಎಂಭತ್ತರ ದಶಕದಲ್ಲಿ ಹುಟ್ಟಿಕೊಂಡಿದ್ದವು. ಗೌರಿಬಿದನೂರಿನಂತ ಪುಟ್ಟ ತಾಲ್ಲೂಕಿನಲ್ಲಿ ಕಾಲೇಜು ಓದುತ್ತಿದ್ದ ನಾನು, ರೂಪ್ ಕನ್ವರಳ ಸತಿಸಹಗಮನ, ಹಾಗೂ ತಿಪಟೂರಿನ ವೈದ್ಯರ ಪತ್ನಿ ಶಶಿಕಲಾ ವರದಕ್ಷಿಣೆ ಪ್ರಕರಣಗಳಲ್ಲಿ, ಮೈಸೂರಿನ ಸಮತಾ ನಡೆಸಿದ ಪ್ರತಿಭಟನೆಯಂತೆಯೇ ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಹಾಗೂ ಆಚಾರ್ಯ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಮೌನ ಪ್ರತಿಭಟನೆ ಮಾಡಿದ್ದು ಹಾಗೂ ಬೀದಿಗಿಳಿದು ಹೋರಾಟ ನಡೆಸಿದ್ದು ನೆನಪಾಗುತ್ತದೆ. ಮಹಿಳೆಯರನ್ನು ಸೇರಿಸಿ ಪುರಸಭೆಯ ಎದುರು ಖಾಲಿಕೊಡಗಳ ಪ್ರದರ್ಶನ ನಡೆಸಿದ್ದು, ಮಹಿಳಾ ಉಪನ್ಯಾಸಕಿಯರಿಗೆ ಅನುಸರಿಸುತ್ತಿದ್ದ ತಾರತಮ್ಯ ನೀತಿಯನ್ನು, ವಿದ್ಯಾರ್ಥಿಗಳನ್ನು ಸೇರಿಸಿ ಪ್ರತಿಭಟಿಸಿದ್ದು……… ಹೀಗೆ ಇಂಥಹ ಹತ್ತು ಹಲವು ಪ್ರಗತಿಪರ ಕಾರ್ಯಗಳಿಗೆ ಸಮತಾ ಹಾಗೂ ವಿಜಯಾ ದಬ್ಬೆಯವರು ನನಗೆ ಪರೋಕ್ಷ ಪ್ರೇರಣೆ ನೀಡಿದ್ದಾರೆ. ನನ್ನಂತೆ ಅವರಿಂದ ಪ್ರೇರಣೆ ಪಡೆದ ಅನೇಕ ಲೇಖಕಿಯರು, ಮಹಿಳೆಯರು, ಅಜ್ಞಾತರಿರಬಹುದು. ಇನ್ನು ಅವರ ‘ಇರುತ್ತವೆ’, ‘ನೀರು ಲೋಹದ ಚಿಂತೆ’, ‘ಇತಿಗೀತಿಕೆ’ ಕವನ ಸಂಕಲನಗಳು ಕಾವ್ಯಾಭ್ಯಾಸಿಗಳಿಗೆಲ್ಲಾ, ಅದರಲ್ಲೂ ಮಹಿಳಾ ಚಳುವಳಿಗಳ ಹಿನ್ನಲೆಯಲ್ಲಿ ಕವಿತೆಗಳನ್ನು ಅಧ್ಯಯನ ಮಾಡುವ ಸಂಶೋಧಕರು, ಹಾಗೂ ವಿದ್ಯಾರ್ಥಿಗಳಿಗೆಲ್ಲಾ ಆಕರ ಕೃತಿಗಳಾಗಿವೆ ಹಾಗೂ ಪ್ರಭಾವ ಬೀರುವಂತವೇ ಆಗಿವೆ. ಸ್ತ್ರೀವಾದಿ ಅಧ್ಯಯನಕ್ಕೆ ಅವರ ಮಹಿಳಾ ಕಾಳಜಿಯ ಅಸಂಖ್ಯ ಲೇಖನಗಳು ಮುನ್ನುಡಿಗಳಿದ್ದಂತೆ. ಅವನ್ನು ಓದಿಕೊಳ್ಳದೇ ಮುನ್ನಡೆಯುವಂತೆಯೇ ಇಲ್ಲ.

ಅವರು ಆರೋಗ್ಯದಿಂದಿದ್ದಾಗ ನಾನವರನ್ನು ನೋಡಿದ್ದು ಒಂದೇ ಬಾರಿ. ಆದರೆ ಅವರು ಅಪಘಾತಕ್ಕೀಡಾಗಿ ನೆನಪಿನಶಕ್ತಿ ಕಳೆದುಕೊಂಡ ನಂತರದ ಇತ್ತೀಚೆಗಿನ ಎರಡು ವರ್ಷಗಳಲ್ಲಿ 3-4 ಬಾರಿ ಅವರನ್ನು ಭೇಟಿಯಾಗಿದ್ದೇನೆ. ಆಗೆಲ್ಲಾ ಅವರ ಅದಮ್ಯ ಜೀವನ ಪ್ರೀತಿಯನ್ನು ಕಂಡು ಬೆರಗಾಗಿದ್ದೇನೆ. vijaya-dabbe-3ಹೊರಗಿನದೆಲ್ಲವನ್ನೂ ಗ್ರಹಿಸುವ ಶಕ್ತಿ ಇದ್ದರೂ ಅದನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಶಕ್ತಿಯನ್ನು ಕಳೆದುಕೊಂಡಿರುವ ವಿಜಯಾ ಮೇಡಂ, ಈಗ ಕವಿತೆಗಳನ್ನು, ಚಿಕ್ಕ ಕಥೆಗಳನ್ನು ಬರೀತಿದ್ದೀನಿ. ಪ್ರಕಟಣೆಗೆ ಕಳಿಸಕ್ಕಾಗಲ್ಲ ಇನ್ನೂ ತಿದ್ದಬೇಕು. ನಿಮ್ಮೆಲ್ಲರ ಪ್ರೀತಿ ನಾನು ಮೊದಲಿನಂತಾಗಲು ಸಹಕರಿಸುತ್ತದೆ ಎಂದು ಹೇಳುವಾಗ ಕಣ್ಣು ತುಂಬಿ ಬರುತ್ತದೆ. ಅವರ ಅಸ್ಪಷ್ಟ ಕವಿತೆಗಳು ನಿಗೂಢವಾಗಿ, ಅವರೊಳಗಿನದನ್ನೆಲ್ಲಾ ತೋಡಿಕೊಳ್ಳಲು ಕಾದಿರುವ ಏಕೈಕ ಮಾಧ್ಯಮವಾಗಿ ನನಗೆ ತೋರುತ್ತದೆ. ಇಂಥಹಾ ಹೊತ್ತಿನಲ್ಲೂ ಅವರಲ್ಲಿರುವ ಆಶಾವಾದ ಬರೀ ಲೇಖಕಿಯರನ್ನು ಮಾತ್ರವಲ್ಲ, ಯಾವುದೇ ಪರಿಸ್ಥಿತಿಯಲ್ಲಿರುವ ಎಂಥಹಾ ನಿರಾಶಾವಾದಿಗಳನ್ನೂ ಪ್ರೇರೇಪಿಸುವಂತದ್ದು.

ಅವರ ಊರು ದಬ್ಬೆಗೆ ಹೋದಾಗ ಅವರ ತಂದೆ-ತಾಯಿ ವಿಜಯ ಮೇಡಂ ಅವರ ಬಾಲ್ಯದ ಕುರಿತು ವಿವರಿಸುವಾಗಲೆಲ್ಲಾ ಅವರ ಬಗೆಗಿನ ಗೌರವ ಮತ್ತಷ್ಟು ಹೆಚ್ಚುತ್ತದೆ. ದಬ್ಬೆಯಂಥಾ ಪುಟ್ಟಹಳ್ಳಿಯಲ್ಲಿ ಆ ಕಾಲಕ್ಕೆ ಶಿಕ್ಷಣ ಸೌಲಭ್ಯಗಳಿಲ್ಲದಿದ್ದಾಗ, ಪರ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಿಜಯಾ ಅವರು, ನಂತರ ಹಾಸನದಲ್ಲಿ ಮನೆ ಮಾಡಿಕೊಂಡು, ಹೈಸ್ಕೂಲಿಗೆ ಸೇರಿ ತಮ್ಮ-ತಂಗಿಯರನ್ನೂ ಜೊತೆಗಿರಿಸಿಕೊಂಡು ಅಡಿಗೆ, ಮನೆವಾರ್ತೆ ನೋಡಿಕೊಳ್ಳುತ್ತಾ ಓದಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋಗಿ, ಅಲ್ಲಿ ಇಷ್ಟೆಲ್ಲಾ ಪ್ರಬುದ್ಧವಾಗಿ ಬೆಳೆದಿದ್ದನ್ನು ಕೇಳುವಾಗ, ಕಡು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರಿಗೆ, ಒಬ್ಬಂಟಿಯಾಗಿ ಎಲ್ಲವನ್ನೂ ಎದುರಿಸುವ ಇಂಥಹಾ ದಿಟ್ಟತನ ಎಲ್ಲಿಂದಾ ಬಂತು? ಎಂದು ಆಶ್ಚರ್ಯವಾಗುತ್ತದೆ. ಜೊತೆಗೇ ಅವರ ಬದುಕಿನ ಈ ಎಲ್ಲ ಘಟ್ಟಗಳೂ ಜೀವನ ಚರಿತ್ರೆಯ ರೂಪದಲ್ಲಾದರೂ ದಾಖಲಾಗಬೇಕು ಎಂಬ ಆಸೆ ನನ್ನದು. ಅವರು ಮಾಮೂಲಿನಂತೆ ಆರೋಗ್ಯದಿಂದ ಇದ್ದಿದ್ದರೆ ಇಷ್ಟು ಹೊತ್ತಿಗೆ ಅವರೇ ಆತ್ಮಕಥೆಯನ್ನು ಬರೆದುಕೊಂಡಿರುತ್ತಿದ್ದರೇನೋ? ಅವರ ಬದುಕನ್ನು ದಾಖಲಿಸುವ ಕುರಿತು ಅವರೊಡನೆ ಒಡನಾಡಿದ ಗೆಳತಿಯರಲ್ಲಿ ಹೇಳುತ್ತಲೇ ಬಂದಿದ್ದೇನೆ. ಅದು ಖಂಡಿತಾ ಮುಂದಿನ ಪೀಳಿಗೆಯ ನಮ್ಮಂಥಾ ಅನೇಕರಿಗೆ ಪ್ರೇರಣೆ ನೀಡುವಂತದ್ದು.

ಕರ್ನಾಟಕ ಲೇಖಕಿಯರ ಸಂಘದಿಂದ ಹೊರ ಬಂದ “ಲೇಖ-ಲೋಕ” ಮಹಿಳೆಯರ ಆತ್ಮಕಥಾನಕಗಳ ಸಂಕಲನದಲ್ಲಿ ನಾನು ಮೊದಲು ಹುಡುಕಿದ್ದು ವಿಜಯಾ ದಬ್ಬೆಯವರ ಆತ್ಮಕಥಾನಕವನ್ನು. ಆದರೆ, ತಮ್ಮ ಬದುಕಿನ ಕಥೆಯನ್ನು ಸಂಘದ ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದವರಿಗೆ ಅದನ್ನು ಲಿಖಿತ ರೂಪದಲ್ಲಿ ದಾಖಲಿಸುವ ಮೊದಲೇ ಅಪಘಾತವಾಗಿದ್ದು ನಮ್ಮ ದುರದೃಷ್ಟ ಎಂದು ನಾನು ಭಾವಿಸುತ್ತೇನೆ. ಅವರೇ ಅವರ ಬದುಕಿನ ಸೂಕ್ಷ್ಮ, ಮುಖ್ಯ ವಿಷಯಗಳ ಕುರಿತು ಬರೆದುಕೊಂಡಿದ್ದರೆ ಖಂಡಿತಾ ಅದೊಂದು ಮನೋಜ್ಞವಾದ ಬರಹವಾಗಿರುತ್ತಿತ್ತು. ಈಗಲೂ ಅವರ ಕುಟುಂಬದವರು, ಆತ್ಮೀಯರು, ಗೆಳತಿಯರು ಅವರ ಬದುಕಿನ ಪ್ರಮುಖಘಟ್ಟಗಳನ್ನು ದಾಖಲಿಸುವ ಕೆಲಸವನ್ನು ಮಾಡಬೇಕು. ಅವರ ಅನನ್ಯವೂ, ವಿಶಿಷ್ಟವೂ ಆದ ಬದುಕು ಸರ್ವಕಾಲಕ್ಕೂ ಮಾದರಿಯಾಗಿ ಉಳಿಯುವಂತೆ ದಾಖಲಾಗಬೇಕು ಎಂದು ಆಶಿಸುತ್ತೇನೆ. ಹಾಸನ ಜಿಲ್ಲೆಯ ಪುಟ್ಟಹಳ್ಳಿಯ ಹೆಣ್ಣುಮಗಳೊಬ್ಬಳು ಸಾಹಿತ್ಯ ಹಾಗೂ ಮಹಿಳಾ ಚರಿತ್ರೆಯಲ್ಲಿ ಈ ಎತ್ತರವನ್ನು ತಲುಪಿದ್ದು ಖಂಡಿತಾ ದೊಡ್ಡ ಸಾಧನೆಯೇ. ವಿಜಯಾ ದಬ್ಬೆಯವರು ಮತ್ತೆ ಮೊದಲಿನಂತಾಗಲಿ ನನ್ನಂಥಾ ಅನೇಕ ಕಿರಿಯರಿಗೆ ಅವರ ಬರಹ, ಕೆಲಸಗಳು, ಚೈತನ್ಯ ಸದಾ ಪ್ರೇರಣೆ ನೀಡುವಂತಾಗಲಿ ಎಂದು ಮನತುಂಬಿ ಹಾರೈಸುತ್ತೇನೆ. ಅವರ ಬದುಕು-ಬರಹ-ಚಟುವಟಿಕೆಗಳನ್ನು ಈ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳಲು ಅನುವು ಮಾಡಿಕೊಟ್ಟ ಕರ್ನಾಟಕ ಸಾಹಿತ್ಯ ಅಕಾಡೆಮಿ, ಹಾಸನ ಜಿಲ್ಲಾ ಲೇಖಕಿಯರ ಬಳಗಕ್ಕೆ ಹೃತ್ಪೂರ್ವಕವಾಗಿ ವಂದಿಸುತ್ತೇನೆ.