Monthly Archives: November 2011

ಶಿಕ್ಷಣ ಖಾಸಗಿಕರಣದ ಕರಾಳ ಮುಖಗಳು

– ರೂಪ ಹಾಸನ

ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶವನ್ನು ವಿರೋಧಿಸಿ ರಾಜ್ಯದೆಲ್ಲೆಡೆಯಿಂದ ಪ್ರತಿರೋಧ ಬಂದುದನ್ನು ಗಮನಿಸಿದ ಸರ್ಕಾರ ಈಗ, ಶಾಲೆಗಳನ್ನು ಮುಚ್ಚುತ್ತಿಲ್ಲ, ಆದರೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುತ್ತಿದ್ದೇವಷ್ಟೇ ಎಂದು ನಾಜೂಕಾಗಿ ಜಾಣತನದ ಮಾತನಾಡುತ್ತಿದೆ. ಒಂದರೊಳಗೆ ಇನ್ನೊಂದು ಶಾಲೆ ಸೇರಿಕೊಂಡರೆ ಉಳಿದ ಇನ್ನೊಂದು ಶಾಲೆ ತಾನಾಗಿಯೇ ಮುಚ್ಚಿಕೊಳ್ಳುತ್ತದೆ ಎಂಬ ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜನ ಮೂರ್ಖರಲ್ಲ.

ಶೈಕ್ಷಣಿಕ ನಿಯಮಗಳನ್ನು ಪಾಲಿಸದ, ಅದನ್ನು ಲಾಭದ ವ್ಯಾಪಾರವಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದೇ  ಪರವಾನಗಿ ನೀಡಿ, ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ, ಒಂದೆಡೆ ಖಾಸಗಿಯವರ ತೊಟ್ಟಿಲನ್ನು ತೂಗುತ್ತಾ, ಇನ್ನೊಂದೆಡೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲವೆಂದು, ಗ್ರಾಮೀಣ-ಬಡ ಮಕ್ಕಳನ್ನು ಚಿವುಟಿ ಅಳಿಸುವ ಪ್ರಯತ್ನವನ್ನು ಏಕಕಾಲಕ್ಕೆ ಮಾಡುತ್ತಿದೆ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆವಷ್ಟೇ ಅಮಾನವೀಯ.

ಡಿಸ್ಟ್ರಿಕ್ಟ್ ಇನಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ [ಡೈಸ್]ನ ಅಧ್ಯಯನವನ್ನು ಆಧರಿಸಿ ರೂಪುಗೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ಕುತೂಹಲಕ್ಕಾಗಿ ಗಮನಿಸಿದರೆ ಸಾಕು ಗಾಬರಿಗೊಳಿಸುವಂತಹ ಹಲವಾರು ಅಂಕಿ-ಅಂಶಗಳು ಕಾಣಸಿಗುತ್ತವೆ. 2009-10ನೇ ಸಾಲಿನ ಅಧ್ಯಯನದಂತೆ 46288 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 54,45,484 ಮಕ್ಕಳು ಓದುತ್ತಿದ್ದರೆ, 11884 ಖಾಸಗಿ ಶಾಲೆಗಳಲ್ಲಿ 24,76,484 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಖಾಸಗಿ ಶಾಲೆಯ ಪ್ರಮಾಣ ಕಡಿಮೆ ಎಂದೆನಿಸಿದರೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಇದಕ್ಕೆ ಕಾರಣ ಒಂದು ಖಾಸಗಿ ಶಾಲೆಗೆ ಅನುಮತಿ ಪಡೆದರೆ ಸಾಕು ಪ್ರತಿಯೊಂದು ತರಗತಿಯ 3-4 ವಿಭಾಗಗಳನ್ನಾದರೂ ಮಾಡಿ ತಮ್ಮ ಶಾಲಾ ಕಟ್ಟಡ ಮೀರುವಷ್ಟು ಮಿತಿಯಲ್ಲಿ ಮಕ್ಕಳನ್ನು ತುಂಬಿಕೊಳ್ಳಬಹುದು! ಜೊತೆಗೆ ವಂತಿಗೆ, ಶುಲ್ಕದ ಹೆಸರಿನಲ್ಲಿ ತಮ್ಮ ಖಜಾನೆಯನ್ನೂ ಭರ್ತಿ ಮಾಡಿಕೊಳ್ಳಬಹುದು. ಶಿಕ್ಷಣ ಸೇವೆಗಾಗಿ ಅಲ್ಲದೇ ಲಾಭಕ್ಕಾಗಿ ಆದಾಗ ಅದು ಭ್ರಷ್ಟತೆಯ ಇನ್ನೊಂದು ಕರಾಳ ಮುಖವಷ್ಟೇ. ಅದೇ ಸರ್ಕಾರಿ ಶಾಲೆಗಳಲ್ಲಾದರೆ ಪ್ರತಿ ತರಗತಿಗೆ ಒಂದು, ಅಪರೂಪಕ್ಕೆ ಎರಡು ವಿಭಾಗ. ಈಗ ಒಂದು ವಿಭಾಗಕ್ಕೇ ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ! ಹೀಗೆಂದೇ ಒಂದು ಸರ್ಕಾರಿ ಶಾಲೆಯಲ್ಲಿ ಸರಾಸರಿ 120 ಮಕ್ಕಳು ಓದುತ್ತಿದ್ದರೆ, ಒಂದು ಖಾಸಗಿ ಶಾಲೆಯಲ್ಲಿ ಸರಾಸರಿ 229 ಮಕ್ಕಳು ಓದುತ್ತಿದ್ದಾರೆ!

ಮಾನ್ಯ ಶಿಕ್ಷಣ ಸಚಿವರು ಹಳ್ಳಿಗಳಲ್ಲಿ ಮಕ್ಕಳಿಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ 2007-08 ರ ಡೈಸ್‌ನ ಅಧ್ಯಯನದಂತೆ, ಗ್ರಾಮೀಣ ಪ್ರದೇಶದಲ್ಲಿರುವ 5724 ಖಾಸಗಿ ಶಾಲೆಗಳು, ಅಲ್ಲಿ ಕಲಿಯುತ್ತಿರುವ 7,37,017 ಮಕ್ಕಳು, ಎಲ್ಲಿಂದ ಬಂದರು? ಮಕ್ಕಳಿದ್ದರೂ ಅವರಿಗೆ ಉಚಿತ ಶಿಕ್ಷಣ ನೀಡುವ ಮನಸ್ಸು ಸರ್ಕಾರಕ್ಕಿಲ್ಲವಷ್ಟೇ.

ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸುವ ಉದ್ದೇಶದಿಂದ 2004 ರಿಂದ ಆದಾಯ ತೆರಿಗೆಯಲ್ಲಿ ಶೇಕಡಾ 2 ರಷ್ಟು ಶಿಕ್ಷಣ ಕರವನ್ನು ವಿಧಿಸುತ್ತಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 4000-5000 ಕೋಟಿ ಆದಾಯ ಲಭಿಸುತ್ತಿದೆ. ಇದರಿಂದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅನೇಕ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಕೋಟಿಗಟ್ಟಲೆ ಹಣ ವಿತರಣೆಯಾಗುತ್ತಿದೆ. ಇಷ್ಟೂ ಸಾಲದೇ ಇನ್ಫೋಸಿಸ್, ಇಸ್ಕಾನ್, ಜಿಂದಾಲ್, ಅಜೀಮ್ ಪ್ರೇಮ್ಜಿ ಫೌಂಡೇಶನ್ ಸೇರಿದಂತೆ ಇಪ್ಪತ್ತು ಖಾಸಗಿ ಸಂಸ್ಥೆ-ವ್ಯಕ್ತಿಗಳು ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ಆರ್ಥಿಕವಾಗಿ ಕೈ ಜೋಡಿಸಿವೆ! ಈ ರೀತಿಯಲ್ಲಿ ಸರ್ಕಾರ, ಈಗಾಗಲೇ ಸರ್ಕಾರಿ ಶಾಲೆಗಳನ್ನೂ ಸದ್ದಿಲ್ಲದೇ ಖಾಸಗಿಯವರಿಗೆ ದತ್ತು ನೀಡಿ ಆಗಿದೆ!

ಪ್ರಾಥಮಿಕ ಶಿಕ್ಷಣಕ್ಕಾಗಿ 2010-11ನೇ ಸಾಲಿನ ಬಜೆಟ್‌ನಲ್ಲಿ 7700 ಕೋಟಿ, ಅಂದರೆ ಒಟ್ಟು ಬಜೆಟ್‌ನ ಶೇಕಡಾ 15 ರಷ್ಟು ಮೀಸಲಿರಿಸಲಾಗಿದೆ. ಇಷ್ಟೆಲ್ಲಾ ಆರ್ಥಿಕ ಸಬಲತೆ ಇದ್ದರೂ ಗುಣಾತ್ಮಕ ಶಿಕ್ಷಣವನ್ನು ತಾವೇಕೆ ಕೊಡಲಾಗುತ್ತಿಲ್ಲ? ಸರ್ಕಾರಿ ಶಾಲೆಗೆ ಮಕ್ಕಳೇಕೆ ಬರುತ್ತಿಲ್ಲ? ಎಂದು ಸರ್ಕಾರ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ತನ್ನ ಖಾಸಗಿ ಹುಳುಕು ತನ್ನ ಮುಖಕ್ಕೇ ರಾಚುವಷ್ಟು ಸ್ಪಷ್ಟವಾದ ಉತ್ತರಗಳು ಹೊಳೆಯುತ್ತವೆ.

ಕಡ್ಡಾಯ ಮತ್ತು ಉಚಿತ ಶಿಕ್ಷಣದ ಉದಾತ್ತ ಆಶಯ ಹೊತ್ತ, ಕೇಂದ್ರ ಸರ್ಕಾರ 2009 ರಲ್ಲೇ ರೂಪಿಸಿದ  ಶಿಕ್ಷಣ ಹಕ್ಕು ಕಾಯ್ದೆ ಯನ್ನು ಜಾರಿಗೊಳಿಸಿದರೆ ರಾಜ್ಯದ 6-14 ವರ್ಷದವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯೇ ಆಗುತ್ತದೆ. ಈಗಾಗಲೇ ಶಿಕ್ಷಣ ಖಾಸಗಿಕರಣಕ್ಕೆ ಅನಧಿಕೃತವಾಗಿ ತನ್ನನ್ನೇ ದತ್ತು ನೀಡಿಕೊಂಡಿರುವ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳುವುದಕ್ಕೇ ಮೀನಮೇಷ ಎಣಿಸುತ್ತಿದೆ. ಸಾರ್ವಜನಿಕರ-ತಜ್ಞರ ಚರ್ಚೆಗೆ ವಿಷಯವನ್ನಿಡದೇ ನಿರ್ದಾಕ್ಷಿಣ್ಯವಾಗಿ ನೂರಾರು ಶಾಲೆಗಳನ್ನು ಮುಚ್ಚುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಶಿಕ್ಷಣವನ್ನು ಖಾಸಗಿಯಾಗಿ ಕೊಳ್ಳಲಾಗದ ಗ್ರಾಮೀಣ, ತಳ ಸಮುದಾಯದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವಂತೆ ಯೋಜನೆ ರೂಪಿಸುತ್ತಿದೆ.

2011ರ ಜನಗಣತಿಯಂತೆ ಈಗಲೂ ಇನ್ನೂ 1,08,542 ಮಕ್ಕಳು ಶಾಲೆಯಿಂದ ಹೊರಗೇ ಇದ್ದಾರೆ. ಅವರಿಗೂ ಕಡ್ಡಾಯ ಶಿಕ್ಷಣ ನೀಡುವಂತಾದರೆ ಇನ್ನೂ ನೂರಾರು ಶಾಲೆಗಳನ್ನು ಸರ್ಕಾರವೇ ಪ್ರಾರಂಭಿಸಬೇಕಿದೆ. ಗ್ರಾಮೀಣ ಪ್ರದೇಶದ ಶಾಲೆಗಳನ್ನು ಇದೇ ರೀತಿ ಮುಚ್ಚುತ್ತಾ ಹೋದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುತ್ತದೆ. ಮನೆ ಮುಂದಲ ಶಾಲೆಗಳಿಗೇ ಹೆಣ್ಣುಮಕ್ಕಳನ್ನು ಕಳಿಸಲು ಅನುಮಾನಿಸುವ ಗ್ರಾಮೀಣ ಪೋಷಕರು, ಶಾಲೆಗಳು ದೂರವಾದಷ್ಟೂ ಮಕ್ಕಳನ್ನು ಅದರಿಂದ ಇನ್ನಷ್ಟು ದೂರ ಉಳಿಸುತ್ತಾರೆ.

ಕಡಿಮೆ ಮಕ್ಕಳಿರುವ ಶಾಲೆಯ ಅಭಿವೃದ್ಧಿಯ ಹೊಣೆ ಹೊರುವವರಿಗೆ ಶಾಲೆಯನ್ನು ದತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವರು ಹೊರಡಿಸಿರುವ ಫರ್ಮಾನು ನಾಚಿಕೆಗೇಡಿನದಾಗಿದೆ. ಸರ್ವಜನರ ಹಿತವನ್ನು ಬಯಸುವ ಮಾತೃಸ್ವರೂಪಿಯಾದ ಯಾವುದೇ ಸರ್ಕಾರ, ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗದ ಜವಾಬ್ದಾರಿಯನ್ನು ತಾನೇ ಹೊರಬೇಕೇ ಹೊರತು ಅದನ್ನು ಖಾಸಗಿಯವರಿಗೆ ದತ್ತು ನೀಡಿ, ತನ್ನ ನೈತಿಕಶಕ್ತಿಯನ್ನು ಮಾರಿಕೊಳ್ಳವುದಿಲ್ಲ!

ಸಾರ್ವಜನಿಕ ಶಿಕ್ಷಣದ ಬೇರುಗಳಿಗೆ ಹಿಡಿದಿರುವ ಖಾಸಗಿ ಗೆದ್ದಲನ್ನು ಕೊಡವಿ, ಬೇರುಗಳು ಗಟ್ಟಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಮತ್ತು ಸಮಾನತೆಯ ಆಧಾರದ ಸಮಾನಶಾಲೆಗಳನ್ನು ಇನ್ನಾದರೂ ಸರ್ಕಾರ ಪುನರ್ ರೂಪಿಸಬೇಕಿದೆ. ಶಿಕ್ಷಣ ವ್ಯಾಪಾರಿಕರಣವಾಗದಂತೆ ಖಾಸಗಿವಲಯವನ್ನು ಹತ್ತಿಕ್ಕಿ, ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದ ಸಮಸ್ಯೆ ಬರಲು ಸಾಧ್ಯವೇ ಇಲ್ಲ.

ಜೀವನದಿಗಳ ಸಾವಿನ ಕಥನ – 10

– ಡಾ.ಎನ್. ಜಗದೀಶ್ ಕೊಪ್ಪ

ಇದು ಉತ್ಪ್ರೇಕ್ಷೆಯ ಮಾತಲ್ಲ. ಇಂದು ಜಗತ್ತಿನೆಲ್ಲೆಡೆ ಅಣೆಕಟ್ಟಿನ ಯೋಜನೆಯಿಂದ ಸಂತ್ರಸ್ತರಾದ ಬಹುತೇಕ ಮಂದಿ ಹೇಳಹಸರಿಲ್ಲದಂತೆ ಕಣ್ಮರೆಯಾಗಿದ್ದಾರೆ. ಹಲವರನ್ನು ನಗರದ ಕೊಳೆಗೇರಿಗಳು ನುಂಗಿಹಾಕಿದರೆ, ಮತ್ತೆ ಕೆಲವರು ನಗರದಿಂದ ನಗರಕ್ಕೆ ವಲಸೆ ಹೋಗುವ ಕಾರ್ಮಿಕರಾಗಿ ಪರಿವರ್ತನೆ ಹೊಂದಿದ್ದಾರೆ.

ಪುನರ್ವಸತಿ ಪ್ರದೇಶದಲ್ಲಿ ಸರಕಾರಗಳು ನೀಡಿದ ಪರಿಹಾರ ಧನದಿಂದ ಹೊಸ ಬದುಕನ್ನು ರೂಪಿಸಿಕೊಂಡವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವು ಪುನರ್ವಸತಿ ಪ್ರದೇಶಗಳಲ್ಲಿ ಸಂತ್ರಸ್ತರ ಬದಲು ಹೊರಗಿನಿಂದ ಬಂದವರೇ ಬದುಕುತ್ತಿದ್ದಾರೆ. ಒರಿಸ್ಸಾದ ರೆಂಗಿಲಿ ಅಣೆಕಟ್ಟಿನ ಪುನರ್ವಸತಿ ಪ್ರದೇಶದಲ್ಲಿ ಒಂದೇ ಒಂದು ಕುಟುಂಬವೂ ಇಲ್ಲದಿರುವುದು ಸಮೀಕ್ಷೆಯಿಂದ ಧೃಡಪಟ್ಟಿದೆ. ಇಲ್ಲಿನ ಬಹುತೇಕ ಫಲಾನುಭವಿಗಳು ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಾಗಿದ್ದಾರೆ.

ಚೀನಾ ಸರಕಾರ ಅಧಿಕೃತವಾಗಿ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ ಚೀನಾದಲ್ಲಿ ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದವರ ಪೈಕಿ ಶೇ.30ರಷ್ಟು ಮಂದಿ ಪರಿಹಾರ ಧನದಿಂದ ಹೊಸಬದುಕು ರೂಪಿಸಿಕೊಂಡಿದ್ದರೆ, ಶೇ.30 ರಷ್ಟು ಮಂದಿ ಸಂತೃಪ್ತ ಬದುಕು ರೂಪಿಸಲು ಹೆಣಗುತ್ತಿದ್ದಾರೆ. ಉಳಿದ ಶೇ.40 ರಷ್ಟು ಮಂದಿ ನಗರಗಳ ಕೊಳಗೇರಿಯಲ್ಲಿ ಬಡತನದ ರೇಖೆಯ ಕೆಳಗೆ ಬದುಕು ದೂಡುತ್ತಿದ್ದಾರೆ.

ಜಾಗತಿಕ ಮಟ್ಟದ ಸಮೀಕ್ಷೆಯಿಂದ ದೃಢ ಪಟ್ಟಿರುವ ಅಸಲಿ ಸಂಗತಿಯೆಂದರೆ, ಈವರೆಗೆ ಅಣೆಕಟ್ಟು ಯೋಜನೆಗಳಿಂದ ನೆಲೆ ಕಳೆದುಕೊಂಡವರ ಪೈಕಿ ಶೆ.80 ರಷ್ಟು ಅರಣ್ಯವಾಸಿಗಳು, ಕೃಷಿ ಕಾರ್ಮಿಕರು, ಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಇವರೆಲ್ಲಾ ಅರಣ್ಯದಲ್ಲಿ ದೊರೆಯುತ್ತಿದ್ದ ಪುಕ್ಕಟೆ ಉರುವಲು ಕಟ್ಟಿಗೆ, ಹಣ್ಣು ಹಂಪಲು, ಗೆಡ್ಡೆ-ಗೆಣಸು, ತಮ್ಮ ಜಾನುವಾರುಗಳಿಗೆ ಯಥೇಚ್ಛವಾಗಿ ದೊರೆಯುತ್ತಿದ್ದ ಮೇವು ಮತ್ತು ನೀರಿನಿಂದ ಬಡತನದ ನಡುವೆಯೂ ಸರಳ ಸಂತೃಪ್ತ ಜೀವನ ಸಾಗಿಸುತ್ತಿದರು. ಆದರೆ ಪರಿಹಾರ ಧನ ಪಡೆದು ಹೊಸ ಸ್ಥಳಗಳಿಗೆ ಸ್ಥಳಾಂತರಗೊಂಡ ನಂತರ ಪ್ರತಿಯೊಂದಕ್ಕೂ ಹಣ ತೆರಬೇಕಾದ ಅಸಹಾಯಕ ಸ್ಥಿತಿಯಲ್ಲಿ, ಇತ್ತ ಬದುಕಲೂ ಆಗದೆ, ಅತ್ತ ಸಾಯಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ.

ಅಣೆಕಟ್ಟು ಯೋಜನೆಗಳಿಂದ ಭೂಮಿ ಕಳೆದುಕೊಂಡವರಲ್ಲಿ ಬಹುತೇಕ ಅನಕ್ಷರಸ್ಥ ರೈತರೇ ಆಗಿರುವುದರಿಂದ, ಭ್ರಷ್ಟ ಅಧಿಕಾರಿಗಳು, ವಕೀಲರು, ರಿಯಲ್ ಎಸ್ಟೇಟ್ ಏಜೆಂಟರುಗಳ ದೊಡ್ಡ ಭೂಮಾಫಿಯಾವೊಂದು ಜಗತ್ತಿನೆಲ್ಲೆಡೆ ಈಗ ತಲೆಯೆತ್ತಿದೆ. ಯೋಜನೆಗಾಗಿ ಸರಕಾರ ನಿಗದಿ ಪಡಿಸಿದ ಭೂ ವಿಸ್ತೀರ್ಣ ಕುರಿತಂತೆ ಅಧಿಸೂಚನೆ ಹೊರಬೀಳುತ್ತಿದ್ದಂತೆ, ಅಣೆಕಟ್ಟು ಸ್ಥಳದ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಆಗಮಿಸುವ ಈ ಮಾಫಿಯಾ ತಂಡದ ಸದಸ್ಯರು, ರೈತರಿಗೆ ಹಣ ನೀಡಿ, ಅವರಿಂದ ಭೂಮಿ ಖರೀದಿಸಿ, ಅಧಿಕಾರಿಗಳೊಂದಿಗೆ ಶಾಮೀಲಾಗಿ, ಬಂಜರು ಭೂಮಿಯನ್ನು ಕೃಷಿ ಭೂಮಿಯೆಂದು ದಾಖಲೆಗಳನ್ನು ಪರಿವರ್ತಿಸಿ, ಹಣ ಕೊಳ್ಳೆ ಹೊಡೆಯುತ್ತಿದ್ದಾರೆ.

Almatti-Dam

Almatti Dam

ಆಲಮಟ್ಟಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಬಾಗಲಕೋಟೆ ಸುತ್ತ-ಮುತ್ತ ಈ ರೀತಿ ದಂಧೆ ನಡೆದು ನೂರಾರು ವಕೀಲರು ಕೋಟ್ಯಾಧೀಶರಾಗಿದ್ದಾರೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಿಶ್ವಬ್ಯಾಂಕ್, ಕರ್ನಾಟಕ ಮತ್ತು ಕೇಂದ್ರ ಸರಕಾರಕ್ಕೆ ಯೋಜನೆ ಮುಗಿಯುವವರೆಗೂ, ಪುನರ್ವಸತಿ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಬಿ.ಎಂ.ಜಾಮ್‌ದಾರ್ ಎಂಬ ಪ್ರಾಮಾಣಿಕ ಅಧಿಕಾರಿಯನ್ನು ಬದಲಾಯಸಬಾರದೆಂದು ಷರತ್ತು ವಿಧಿಸಿತ್ತು. ಜಾಮ್‌ದಾರ್ ಅವಧಿಯಲ್ಲಿ ನಿಜವಾದ ಫಲಾನುಭವಿಗಳಿಗೆ ಪರ್ಯಾಯ ಭೂಮಿ ಹಾಗೂ ಪರಿಹಾರ ದೊರೆಯಿತು. ಇಂದಿಗೂ ಬಾಗಲಕೋಟೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಎಸ್.ಎಮ್. ಜಾಮ್‌ದಾರ್ ಎಂಬ ಪರಿಶುದ್ಧ ಹಸ್ತದ, ಜಿಗಟು ವ್ಯಕ್ತಿತ್ವದ ಐ.ಎ.ಎಸ್. ಅಧಿಕಾರಿ ದಂತಕತೆಯಾಗಿದ್ದಾರೆ.(ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಇವರ ಪಾತ್ರ ಮಹತ್ವದ್ದು.)

ನೆರೆಯ ಆಂದ್ರದ ಶ್ರೀಶೈಲ ಅಣೆಕಟ್ಟು ಯೋಜನೆಯ ಸಂದರ್ಭದಲ್ಲಿ (1981ರಲ್ಲಿ) ಭೂಮಿ ಕಳೆದುಕೊಂಡ 1 ಲಕ್ಷ ರೈತರಲ್ಲಿ ಪರ್ಯಾಯ ಕೃಷಿ ಭೂಮಿ ಸಿಗದೆ, ಶೇ.80 ರಷ್ಟು ರೈತರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ದೆಹಲಿ ಮೂಲದ ಲೋಕಾಯಣ್ ಸ್ವಯಂ ಸೇವಾ ಸಂಸ್ಥೆ ಸಮೀಕ್ಷೆ ನಡೆಸಿ ವರದಿ ಪ್ರಕಟಿಸಿದೆ.

ಮಧ್ಯ ಪ್ರದೇಶದಲ್ಲಿಯೂ ಹರಿಯುವ ನರ್ಮದಾ ನದಿಗೆ 1980 ರಲ್ಲಿ ಬಾರ್ಗಿ ಅಣೆಕಟ್ಟು ನಿರ್ಮಿಸುವ ಸಂದರ್ಭದಲ್ಲಿ ಅಲ್ಲಿನ ಸರಕಾರ, ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಪ್ರತಿಯೊಂದು ಆದಿವಾಸಿ ಕುಟುಂಬಕ್ಕೆ 5 ಎಕರೆ ಪರ್ಯಾಯ ಭೂಮಿ ಒದಗಿಸುವುದಾಗಿ ಭರವಸೆ ನೀಡಿತ್ತು, ಇದನ್ನು ನಂಬಿ ಸ್ಥಳಾಂತರಗೊಂಡ ಕುಟುಂಬಗಳಿಗೆ ಸರಕಾರ ನೀಡಿದ್ದು ಒಂದು ನಿವೇಶನ, ಒಂದಿಷ್ಟು ಹಣ ಸಹಾಯ ಮಾತ್ರ. ಯೋಜನೆಯಿಂದ ಮುಳುಗಡೆಯಾಗುವುದು 29 ಸಾವಿರ ಹೆಕ್ಟೇರ್ ಪ್ರದೇಶ ಎಂದು ಹೇಳಲಾಗಿತ್ತು. ಯೋಜನೆ ಪೂರ್ಣಗೊಂಡು ಜಲಾಶಯದಲ್ಲಿ ನೀರು ಸಂಗ್ರಹವಾದಾಗ, ಅರಣ್ಯ ಹಾಗೂ ಕೃಷಿ ಭೂಮಿ ಸೇರಿ ಮುಳುಗಡೆಯಾದದ್ದು ಒಟ್ಟು 87 ಸಾವಿರ ಹೆಕ್ಟೇರ್ ಪ್ರದೇಶ. ಸರಕಾರದ ಸುಳ್ಳು ಆಶ್ವಾಸನೆಗಳಿಂದ 1 ಲಕ್ಷ 14 ಸಾವಿರ ಮಂದಿ ನಿರ್ಗತಿಕರಾದರು.

ಪುನರ್ವಸತಿಗಾಗಿ ಗೋರಕ್‌ಪುರ ಎಂಬಲ್ಲಿ ಭೂಮಿ ನಿಗದಿ ಪಡಿಸಿ, ಅಲ್ಲಿ ವಸತಿ, ಶಾಲೆ, ಸಮುದಾಯಭವನ, ಆಸ್ಪತ್ರೆ ಎಲ್ಲವೂ ನಿರ್ಮಾಣವಾದವು. ಆದರೆ ಅಲ್ಲಿ ಬಂದು ವಾಸಿಸಿದವರು, ಇತರೆಡೆಯಿಂದ ಬಂದ ವಲಸೆ ಕಾರ್ಮಿಕರು.

ಒಟ್ಟಾರೆ ಈ ಯೋಜನೆಗಳಿಂದ ಸಂತ್ರಸ್ತರಾದವರು ಮತ್ತು ನಿರ್ಗತಿಕರಾದವರು ಕೆಳ ಮಧ್ಯಮ ವರ್ಗದ ರೈತರು, ಆದಿವಾಸಿಗಳು ಮಾತ್ರ. 1994 ರಲ್ಲಿ ತಾನು ಕೈಗೆತ್ತುಕೊಂಡಿದ್ದ 192 ಯೋಜನೆಗಳ ಕುರಿತಂತೆ, ಪುನರ್ವಸತಿ ಕುರಿತು ಪರಾಮರ್ಶಿಸಿದ ವಿಶ್ವಬ್ಯಾಂಕ್, ಪರಿಹಾರ ಹಾಗೂ ಪುನರ್ವಸತಿ ವಿಷಯಗಳಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಂಡಿದೆ. ಆದರೆ ಇದರ ಹೊಣೆಗಾರಿಕೆಯನ್ನು ಸ್ಥಳೀಯ ಸರಕಾರಗಳ ಮೇಲೆ ಹಾಕಿದೆ.

ಸ್ಥಳಾಂತರಗೊಂಡ ರೈತರ ದೊಡ್ಡ ಬವಣೆಯೆಂದರೆ ತಾವು ಪಾರಂಪರಿಕವಾಗಿ ತಮ್ಮ ಕೃಷಿಭೂಮಿಯಲ್ಲಿ ಬೆಳೆಯುತ್ತಿದ್ದ ಬೆಳೆಗಳನ್ನು ಬೆಳೆಯಲಾರದ ಅಸಹಾಯಕ ಸ್ಥಿತಿ. ಇವರಿಗೆ ಸರಕಾರಗಳು ಪರ್ಯಾಯವಾಗಿ ಭೂಮಿ ನೀಡಿದ್ದರೂ ಕೂಡ ಬಹುತೇಕ ಎಲ್ಲಾ ಭೂಮಿಗಳು ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಗಳು.

1992 ರಲ್ಲಿ ವಿಯೆಟ್ನಾಂನ ಹೊಯಾಬಿನ್ ಅಣೆಕಟ್ಟು ಕಟ್ಟಿದ ಸಂದರ್ಭದಲ್ಲಿ ಅಲ್ಲಿನ ಪ್ರಮುಖ ಬೆಳೆಯಾಗಿದ್ದ ಭತ್ತದ ಬೆಳೆಯಿಂದ ರೈತರು ವಂಚಿತರಾದರು. ಅವರಿಗೆ ನೀಡಿದ್ದ ಬಂಜರು ಭೂಮಿಯಲ್ಲಿ ಮೆಕ್ಕೆಜೋಳ ಮಾತ್ರ ಬೆಳೆಯಲು ಸಾಧ್ಯವಾಗಿತ್ತು. ಅನ್ನವೇ ಅವರಿಗೆ ಪ್ರಮುಖ ಆಹಾರವಾಗಿದ್ದ ಸಂದರ್ಭದಲ್ಲಿ ಈ ಸಂತ್ರಸ್ತರು ಮೆಕ್ಕೆಜೋಳವನ್ನೇ ತಿಂದು ಬದುಕಬೇಕಾಯಿತು.

ಬಹುತೇಕ ಜಗತ್ತಿನೆಲ್ಲೆಡೆ ಕಂಡು ಬಂದಿರುವ ಒಂದು ಸಾಮ್ಯತೆಯೆಂದರೆ, ಅಣೆಕಟ್ಟು ಯೋಜನೆಗಳಿಂದ ಸಂತ್ರಸ್ತರಾದ ಜನತೆ ಹೊಸ ಜಾಗದ ಪರಿಸರ, ನೀರು, ಆಹಾರಕ್ಕೆ ಹೊಂದಿಕೊಳ್ಳಲಾಗದೆ ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿರುವುದು. ಈ ಕುರಿತಂತೆ ನಮ್ಮ ನರ್ಮದಾ ಅಣೆಕಟ್ಟು ಯೋಜನೆಯ ನಿರಾಶ್ರಿತರ ಕುರಿತ ವರದಿ ಚಿಂತಾಜನಕ ಮಾತ್ರವಲ್ಲ ಭಯಾನಕವೂ ಆಗಿದೆ. ಕರಿಬಾ ಎಂಬ ಮೂಲ ಗ್ರಾಮದಿಂದ ಸ್ಥಳಾಂತರಗೊಂಡ ಜನತೆ, ಕೇವಲ 2 ತಿಂಗಳ ಅವಧಿಯಲ್ಲಿ ನಿದ್ರಾಹೀನತೆ, ಸಿಡುಬುರೋಗಗಳಿಗೆ ತುತ್ತಾಗಿ ಒಂದು ವರ್ಷದಲ್ಲಿ 121 ಮಂದಿ ಮೃತಪಟ್ಟರು. ಇವರಲ್ಲಿ ಬಹಳಷ್ಟು ಮಂದಿ ಮಕ್ಕಳು ಮತ್ತು ವೃದ್ಧರೇ ಆಗಿದ್ದರು.  1984 ರಲ್ಲಿ ಪರ್ವೆಟ ಎಂಬ ಪುನರ್ವಸತಿ ಶಿಬಿರದಲ್ಲಿ 17 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 11 ಮಕ್ಕಳು 4 ವರ್ಷಗಳ ಒಳಗಿನವರಾಗಿದ್ದರು. ಇವುಗಳ ಜೊತೆಗೆ ಬಹುತೇಕ ನಿರಾಶ್ರಿತರಿಗೆ ಅಣೆಕಟ್ಟು ಕೆಳಗಿನ ನದಿ ಪಾತ್ರದ ದಡದಲ್ಲಿ ಪುನರ್ವಸತಿ ಕಲ್ಪಿಸಿದ್ದು, ಜಲಾಶಯದಿಂದ ನೀರು ಹೊರಬಿಟ್ಟ ವೇಳೆ ಉಂಟಾಗುವ ಪ್ರವಾಹದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

The Sardar Sarovar Dam, partially completed in August 2008

ಸ್ಥಳಾಂತರದಿಂದ ಆದ ಮತ್ತೊಂದು ದೊಡ್ಡ ಅನಾಹುತವೆಂದರೆ ಅಗೋಚರವಾಗಿ ಸಂಭವಿಸಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳು. ಇಂದಿಗೂ ಕೂಡ ಅನೇಕ ಬುಡಕಟ್ಟು ಸಮುದಾಯಗಳಲ್ಲಿ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದೆ. ಆದರೆ  ಸಂತ್ರಸ್ತರಿಗೆ ಪರಿಹಾರದ ಹಣವನ್ನು ನೀಡುವಾಗ ಪುರುಷರನ್ನು ಮಾತ್ರ ಗಣನೆಗೆ ತೆಗೆದುಕೊಂಡ ಪರಿಣಾಮವಾಗಿ, ಕೆಲವೊಮ್ಮೆ ಯಜಮಾನನ ದುಶ್ಚಟ, ವ್ಯಸನಗಳ ಕಾರಣದಿಂದ ಕುಟುಂಬದ ಮಹಿಳೆಯರು, ಮಕ್ಕಳು ಹಸಿವಿನಿಂದ ಬಳಲುವಂತಾಗಿದೆ. ಜೊತೆಗೆ ತಾವು ಬದುಕಿದ್ದ ಹಳ್ಳಿಯಲ್ಲಿ ಆಚರಿಸುತ್ತಿದ್ದ ಹಬ್ಬ, ಸಾಂಸ್ಕೃತಿಕ ಆಚರಣೆಗಳನ್ನು ಬಿಟ್ಟು, ಹೊಸಜಾಗದಲ್ಲಿ ಇವರಂತಯೇ ಸ್ಥಳಾಂತರಗೊಂಡ ಬೇರೆ ಹಳ್ಳಿಗಳ, ಬೇರೆ ಧರ್ಮ, ಜಾತಿಯ ಅಪರಿಚಿತ ಜನರ ಜೊತೆ ಒಟ್ಟಿಗೆ ಬದುಕಬೇಕಾದ ಸಂದರ್ಭದಲ್ಲಿ ಆವರಿಸಿಕೊಂಡ ಖಿನ್ನತೆಯಿಂದ ಬಳಲುತ್ತಿದ್ದಾರೆ.

ಈ ಕುರಿತಂತೆ ಒರಿಸ್ಸಾದ ರೆಂಗಿಲಿ ಅಣೆಕಟ್ಟು ಯೋಜನೆಯ ನಿರಾಶ್ರಿತರ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿರುವ ಒರಿಸ್ಸಾದ ಸಮಾಜ ಶಾಸ್ತ್ರಜ್ಞರಾದ ಎನ್.ಕೆ. ಬೆಹುರ ಮತ್ತು ಪಿ.ಕೆ.ನಾಯಕ್, ಪರಿಹಾರದ ಹಣ ಹಂಚಿಕೆಯ ಸಂಬಂಧ ಕುಟುಂಬ ಸದಸ್ಯರಲ್ಲಿ ಕಲಹ, ಒಡೆದುಹೋದ ಅವಿಭಕ್ತ ಕುಟುಂಬ ಪದ್ಧತಿ, ಹೊಸ ಪರಿಸರದಲ್ಲಿ ಪೋಷಿಸಿಕೊಂಡು ಬಂದಿದ್ದ ಜಾತಿ ಪದ್ಧತಿಯನ್ನು ಮುಂದುವರಿಸಲಾಗದ ಅಸಹಾಯಕತೆ, ಪತನಗೊಂಡ ಅವರ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆ ಇವೆಲ್ಲವನ್ನೂ ಗುರುತಿಸಿದ್ದಾರೆ. ಹಾಗಾಗಿ ಒಂದು ಯೋಜನೆಯ ಸಫಲತೆಯ ಹಿಂದೆ ಅನೇಕ ವಿಕಾರ ಮತ್ತು ವಿಷಾದದ ಮುಖಗಳಿವೆ ಎಂಬುದನ್ನು ಅಭಿವೃದ್ಧಿಯ ಬಾಲ ಬಡುಕರು ಚಿಂತಿಸಬೇಕಾಗಿದೆ.

 (ಮುಂದುವರಿಯುವುದು)

ಚಿತ್ರಕೃಪೆ: ವಿಕಿಪೀಡಿಯ ಮತ್ತು ರವಿ ಕೃಷ್ಣಾರೆಡ್ಡಿ

ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ

– ಪರಶುರಾಮ ಕಲಾಲ್

’ಪತ್ರಕರ್ತರಾಗಿ ಬರುವವರು ಸಾಹಿತ್ಯ, ಸಂಸ್ಕೃತಿ ಇತ್ಯಾದಿ ಓದಿಕೊಂಡಿರುವುದಿಲ್ಲ. ಇತ್ತೀಚೆಗಂತೂ ಬರುವ ಪತ್ರಕರ್ತರಿಗೆ ರಾಜಕೀಯ ಪರಿಜ್ಞಾನವೂ ಇರುವುದಿಲ್ಲ,’ ಎಂಬ ಮಾತುಗಳನ್ನು ಕೇಳುತ್ತಿದ್ದೇವೆ. ಪತ್ರಕರ್ತ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದ ಯುವಕನಿಗೆ ಪಂಪ, ರನ್ನ ಗೊತ್ತಿಲ್ಲ ಎಂಬ ದಿಗ್ಭ್ರಮೆಯನ್ನು ಸಂಪಾದಕರೊಬ್ಬರು ಬರೆದುಕೊಂಡಿದ್ದರು. ಅವರ ಪತ್ರಿಕೆಯೇ ಇತ್ತೀಚೆಗೆ ವರದಿಗಾರರು/ಉಪ ಸಂಪಾದಕರು ಬೇಕಾಗಿದ್ದಾರೆ ಎಂಬ ಜಾಹಿರಾತಿನಲ್ಲಿ ವಯಸ್ಸಿನ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಿದ್ದಾರೆ. ಈ ವಯಸ್ಸಿನಲ್ಲಿ ಬರುವ ಯುವಕರಿಗೆ ಪಂಪ, ರನ್ನ ಹೇಗೆ ಗೊತ್ತಾಗಲು ಸಾಧ್ಯ? ಅದೃಷ್ಟವಶಾತ್ ತೆಳ್ಳಗೆ, ಬೆಳ್ಳಗೆ ನೋಡಲು ಚೆಂದ ಇರಬೇಕು ಎಂದು ಹೇಳದಿರುವುದು ನಮ್ಮ ಪುಣ್ಯ ಎಂದೇ ಭಾವಿಸಬೇಕಾಗಿದೆ.

ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ. ಅವರು ಆಯಾ ಎಡಿಷನ್‌ಗಳ ಫೇಜ್ ತುಂಬಿಸುತ್ತಾ ಹೋಗಬೇಕು. ಹೀಗೆ ನಿವ್ವಳ ಗುಡ್ಡೆ ಹಾಕುವ ಕೆಲಸಕ್ಕೆ ವರದಿಗಾರರು ಬೇಕಾಗಿದ್ದಾರೆ ಹೊರತು ಅವರು ಹೇಗೆ ಬರೆಯಬಲ್ಲರು? ಅವರಲ್ಲಿ ಒಳನೋಟ ಇರುವ ಬರವಣಿಗೆ ತೆಗೆಯಲು ಸಾಧ್ಯವೇ? ಅವರನ್ನು ಹೇಗೆ ಮಾನಿಟರ್ ಮಾಡಬೇಕು. ಸಿದ್ಧಗೊಳಿಸಬೇಕು ಎಂಬ ಕಳಕಳಿ ಈಗ ಯಾವ ಪತ್ರಿಕೆಯಲ್ಲೂ ಉಳಿದಿಲ್ಲ.

ಉಪ ಸಂಪಾದಕರು/ ಜಿಲ್ಲಾ ವರದಿಗಾರರು ಕೂಡಾ ಸ್ಥಳೀಯ ಪೇಜು ತುಂಬಿಸುವವರಾಗಿಯೇ ಹೋಗಿದ್ದಾರೆ. ಬಿಡಿ ಸುದ್ದಿಗಾರರಂತೂ ಒಂದೆರಡು ಫೋಟೋ, ಎರಡುಮೂರು ಸುದ್ದಿ ಹಾಕಿ, ನಿಟ್ಟಿಸಿರು ಬಿಡುತ್ತಾರೆ.

ಈ ಪೇಜ್ ನೋಡಿಕೊಳ್ಳುವ ಉಪ ಸಂಪಾದಕ ಮಹಾಶಯರು ಬೇಗನೇ ಪೇಜು ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿ ಬಣವಿ ತರಹ ಸುದ್ದಿಗಳನ್ನು ಜೋಡಿಸಿ, ಕೈ ತೊಳೆದು ಕೊಂಡು ಹೋಗಿ ಬಿಡುತ್ತಾರೆ. ಈ ಎಡಿಷನ್ ಹಾವಳಿಯಿಂದ ಈ ಸ್ಥಳೀಯ ಪೇಜ್‌ಗಳು ಎಷ್ಟು ಹಾಳಾಗಿವೆ ಎಂದರೆ ಅಲ್ಲಿ ಕಾಗುಣಿತ ದೋಷ ಸೇರಿದಂತೆ ಪತ್ರಿಕೆಗಳಿಗೆ ಇರುವ ತನ್ನದೇ ಆದ ಭಾಷೆಯೇ (ಸ್ಟೈಲ್‌ಷೀಟ್) ಮಾಯವಾಗಿ ಹೋಗಿರುತ್ತದೆ.

ನಮ್ಮ ಬಳ್ಳಾರಿ ಜಿಲ್ಲೆಯ ಉದಾಹರಣೆಯನ್ನು ತೆಗೆದುಕೊಂಡರೆ ಪ್ರಜಾವಾಣಿ ಎರಡು ಪುಟಗಳನ್ನು ಬಳ್ಳಾರಿ ಜಿಲ್ಲೆಗೆ ಮೀಸಲಿಟ್ಟಿದೆ (2-3ನೇ ಪೇಜ್‌ಗಗಳು). ಜಾಹಿರಾತು ಹೆಚ್ಚಾದರೆ ಮತ್ತೇ ಎರಡು ಪೇಜ್‌ಗಳನ್ನು ಹೆಚ್ಚಿಗೆ ಕೊಡುತ್ತದೆ. ವಿಜಯ ಕರ್ನಾಟಕದ್ದಂತೂ ಇನ್ನೂ ವಿಚಿತ್ರ. ಯಾವ ಪುಟದಲ್ಲಿ ಯಾವುದು ಲೋಕಲ್, ಯಾವುದು ಸ್ಟೇಟ್ ನ್ಯೂಸ್ ಎಂದು ಗೊತ್ತಾಗದಷ್ಟು ಮಿಕ್ಸ್  ಮಾಡಿ ಹಾಕಲಾಗಿರುತ್ತೆ. ಕೆಲವೊಮ್ಮೆ ಮುಖ ಪುಟದಲ್ಲಿ ಬಂದಿರುವ ಸುದ್ದಿ ಇನ್ನೊಂದು ಎಡಿಷನ್‌ನಲ್ಲಿ ಮಂಗಮಾಯ ಆಗಿರುತ್ತದೆ. ಕನ್ನಡಪ್ರಭ, ಉದಯವಾಣಿಯದು ಕೂಡಾ ಇದೇ ಕಥೆ.

ಗಣಿಗಾರಿಕೆಯ ಉಬ್ಬರ ಇರುವಾಗ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾದ ಅನೇಕ ಅಂಶಗಳನ್ನು ಬಿಡಿ ಸುದ್ದಿಗಾರರು ಬರೆದಿದ್ದಾರೆ. ಈ ಸುದ್ದಿಗಳು ಬಂದಿವೆ ಕೂಡಾ. ರಾಜ್ಯಮಟ್ಟದ ಸುದ್ದಿಯನ್ನಾಗಿ ಮಾಡಬಹುದಾದ ಗಮನ ಸೆಳೆಯುವ ಸುದ್ದಿಗಳೇ ಅವು. ಬರೆಯುವ ಶೈಲಿಯಲ್ಲಿ ಹೆಚ್ಚುಕಡಿಮೆ ಇರಬಹುದು. ಡೆಸ್ಕ್‌ನಲ್ಲಿ ಇರುವ ಉಪ ಸಂಪಾದಕರು ಅದರ ಮಹತ್ವ ನೋಡಿ, ಪುನಃ ಬರೆಸಿ, ಅದನ್ನು ರಾಜ್ಯ ಸುದ್ದಿಯನ್ನಾಗಿ ಮಾಡಬೇಕಿತ್ತು. ಆದರೆ ಪೇಜ್ ತುಂಬಿಸುವ ಧಾವಂತ, ಬಿಡಿ ಸುದ್ದಿಗಾರರ ಬಗ್ಗೆ ಇರುವ ಉಪೇಕ್ಷೆ ಎಲ್ಲವೂ ಸ್ಥಳೀಯ ಪೇಜ್‌ಗಳಲ್ಲಿ ಬಂದು ಅಂತಹ ಸುದ್ದಿಗಳು ಕಳೆದು ಹೋಗಿ ಬಿಡುತ್ತವೆ. ಎಷ್ಟು ಸುದ್ದಿಗಳು ಹೀಗೆ ಕಳೆದು ಹೋಗಿವೆ?

ರಾಜ್ಯಮಟ್ಟದ ಸುದ್ದಿಗಳಿಗಾಗಿ ಎಷ್ಟು ಪೇಜ್‌ಗಳನ್ನು ಮೀಸಲಿಟ್ಟಿವೆ. ಯಾವುದು ರಾಜ್ಯದ ಸುದ್ದಿ? ಇದು ಒಂದು ಪ್ರಶ್ನೆಯಾದರೆ ಮತ್ತೊಂದು ಅಂಕಣಕೋರರ ಹಾವಳಿ. ಪ್ರಜಾವಾಣಿಯನ್ನು ಹೊರತು ಪಡೆಸಿ, ಉಳಿದ ದಿನ ಪತ್ರಿಕೆಗಳನ್ನು ನೋಡಿ ಅಲ್ಲಿ ಮುಕ್ಕಾಲು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಈ ಅಂಕಣಕಾರರೇ ಸಾಗುವಳಿ ಮಾಡುತ್ತಿರುತ್ತಾರೆ. ಈ ಅಂಕಣಕೋರರ ಹಾವಳಿಯಿಂದಾಗಿ ಜಿಲ್ಲಾ ವರದಿಗಾರರು, ಉಪ ಸಂಪಾದಕರು ಕೂಡಾ ಏನೂ ಬರೆಯದ ಸ್ಥಿತಿ ನಿರ್ಮಾಣವಾಗಿದೆ. ಇರುವ ಸ್ಥಳೀಯ ಪೇಜ್‌ಗಳಲ್ಲಿಯೇ ಅವರು ಕೃಷಿ ಮಾಡಲಾರಂಭಿಸುತ್ತಾರೆ. ಬೈಲೈನ್ ಹಾಕಿಕೊಂಡು ಚರಂಡಿ, ಟ್ರಾಫಿಕ್, ಹಂದಿಗಳ ಹಾವಳಿ ಎಂದೆಲ್ಲಾ ಬರೆದುಕೊಳ್ಳುತ್ತಾರೆ. ಅಂಕಣಕೋರನೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು ಕೇಳಿ, ಅಯ್ಯೋ ಎಲ್ಲಿಗೆ ಬಂತು ಜರ್ನಲಿಸಂ ಪ್ರತಾಪ ಅಂತಾ ಲೊಚಗುಡುವುದು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯ?

ಹೀಗೆ ಪ್ರಶ್ನೆಗಳು ಸಾಕಷ್ಟು ಎದ್ದು ಬರುತ್ತವೆ. ಒಡನೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಸಹ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

advt-details-from-news-information-dept-to-various-dailies

ಮಾಧ್ಯಮ ಫಲಾನುಭವಿಗಳು – ಕೆಲವು ದಾಖಲೆಗಳು…

 -ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಸ್ವಾತಂತ್ರ್ಯವಿದೆ. ಆದರೆ ಅವು ಸ್ವತಂತ್ರವಾಗಿಲ್ಲ.

ನಾನು ಕಳೆದ ವಾರ ಬರೆದ ಪತ್ರಕ್ಕೆ ಉತ್ತರವಾಗಿ ಸಂಪಾದಕೀಯ ಬಳಗ ಒಂದು ಪತ್ರ ಬರೆದಿತ್ತು. ಅದರಲ್ಲಿ “ಹೊಸ ದಿಗಂತ” ಪತ್ರಿಕೆಯ ಕುರಿತು ಹೀಗೆ ಬರೆಯಲಾಗಿತ್ತು:

“ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?”

ಇಂದು ಯಡ್ಡ್‌ಯೂರಪ್ಪನವರಿಗೆ ಜಾಮೀನು ಸಿಕ್ಕರೂ ಸಿಗಬಹುದು. ನಾಳೆ ಯಾವಯಾವ ಪತ್ರಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೊ? ಇಂದು ಕನ್ನಡ ಪತ್ರಿಕೆಗಳನ್ನು ಸುದ್ದಿಗಾಗಿ ಓದುವುದಕ್ಕಿಂತ ಅವುಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ಪ್ರಾಮಾಣಿಕತೆ/ಅಪ್ರಾಮಾಣಿಕತೆಯನ್ನು ಅಳೆಯಲು ಅವುಗಳ ಪತ್ರಿಕೆಗಳ ಪುಟ ತಿರುವಬೇಕಿದೆ.

ತೆಹಲ್ಕಾದಲ್ಲಿ ಬಂದಿರುವ ಲೇಖನವೊಂದರ ಬಗ್ಗೆ ನಮ್ಮಲ್ಲಿ ನೆನ್ನೆ ಒಂದು ಸಣ್ಣ “ದುರಾಡಳಿತದ ಲಾಭ ಪಡೆದವರು” ಲೇಖನ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿ ನಮಗೆ ಕೆಲವು ದಾಖಲೆಗಳು ಲಭ್ಯವಾಗಿದ್ದು ಅವನ್ನು ಇಲ್ಲಿ ಕೊಡಲಾಗುತ್ತಿದೆ.

ಆದರೆ, ಇಷ್ಟಕ್ಕೂ ಇದರಿಂದ ಏನಾಗುತ್ತದೆ? ಸರ್ಕಾರದ ಭ್ರಷ್ಟತೆಯನ್ನು ಮತ್ತು ಅನೀತಿಯನ್ನು ಹುಡುಕಿ, ವಿಚಾರಣೆಗೆ ಕೋರ್ಟಿಗೆಳೆಯುವ ಒಂದು ಸರ್ಕಾರಿ ಸಂಸ್ಥೆ ನಮ್ಮಲ್ಲಿ ಇಲ್ಲ. ಲೋಕಾಯುಕ್ತವೂ ಸಹ ದೂರು ಕೊಟ್ಟರೆ ವಿಚಾರಣೆ ಎಂಬ ಹಂತದಲ್ಲಿದೆ. ಸ್ವತಂತ್ರ ಆಂತರಿಕ ವಿಚಾರಣಾ ಸಂಸ್ಠೆಯೊಂದು ಇಂದು ತೀರಾ ಅಗತ್ಯವಿದೆ. ಇಲ್ಲದಿದ್ದರೆ, ಇಂತಹ ಕರ್ಮಕಾಂಡಗಳು ಜನರಿಗೆ ಗೊತ್ತಾಗುತ್ತದೆ. ಆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಫಲಾನುಭವಿಗಳು ವಿಚಾರಣೆಗೊಳಪಡುವುದಿಲ್ಲ. ಸುಳ್ಳು ದಾಖಲೆ ಕೊಟ್ಟ ತಪ್ಪಿತಸ್ಥರಿಗೆ, ಅದರ ಮೇಲೆ ತೀರ್ಮಾನ ಕೈಗೊಳುವ ಸ್ವಜನಪಕ್ಷಪಾತಿಗಳಿಗೆ ಶಿಕ್ಷೆಯಾಗುವುದಿಲ್ಲ. ಎಂದು ನಾವು ಇದನ್ನು ಮೀರುವುದು?

ಆದರೂ…

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

 

objection-to-yeddyurappa's-approval-for-statewide-paper-page1

objection-to-yeddyurappa's-approval-for-statewide-paper-page1

 

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

 

objection-to-yeddyurappa's-approval-for-statewide-paper-page3

objection-to-yeddyurappa's-approval-for-statewide-paper-page3

 

hosadiganta-requesting-industrial-shed-yeddyurappas-approval

hosadiganta-requesting-industrial-shed-yeddyurappas-approval

 

industrial-shed-approval-letter-to-hosadiganta

industrial-shed-approval-letter-to-hosadiganta

 

advt-details-from-news-information-dept-to-various-dailies

advt-details-from-news-information-dept-to-various-dailies

 

20-lakhs-advt-in-2months-to-hosadiganta