Daily Archives: January 17, 2012

ದಿನೇಶ್ ಅಮಿನ್‌ಮಟ್ಟು ಬರಹಕ್ಕೆ ಹಿಂದೂ ಮತಾಂಧರ ವಿರೋಧ

– ಡಾ. ಎನ್. ಜಗದಿಶ್ ಕೊಪ್ಪ

ಮಿತ್ರರೇ,

ನಿನ್ನೆ ಸೋಮವಾರ ಗೆಳೆಯ ದಿನೇಶ್ ಅಮಿನ್‌ಮಟ್ಟು ವಿವೇಕಾನಂದರ ಬಗ್ಗೆ ಬರೆದ ವಸ್ತುನಿಷ್ಟ ಬರಹವನ್ನು ಪ್ರಜಾವಾಣಿಯಲ್ಲಿ ನೀವೆಲ್ಲಾ ಓದಿದ್ದೀರಾ ಎಂದು ಭಾವಿಸಿದ್ದೇನೆ. ಕೆಳೆದ ಒಂದು ವಾರದಿಂದ ಕನ್ನಡ ಪತ್ರಿಕೆಗಳಲ್ಲಿ ವಿವೇಕಾನಂದರ ಬಗ್ಗೆ ಕಾಗಕ್ಕ, ಗೂಬಕ್ಕನ ಕಥೆಗಳನ್ನ ಹೋಲುವಂತಹ ಲೇಖನಗಳನ್ನ ಪ್ರಕಟಿಸಿದವರಿಗೆ ಮರ್ಮಕ್ಕೆ ತಾಗುವಂತೆ  ತಮ್ಮ ಅಂಕಣದಲ್ಲಿ ದಿನೇಶ್ ವಿವೇಕಾನಂದರ ಬಗ್ಗೆ ನಿಖರ ಮಾಹಿತಿಗಳೊಂದಿಗೆ ಬರೆದಿದ್ದಾರೆ. ಇದು ಹಿಂದು ಮತಾಂಧರ ಪಾಲಿಗೆ ಅರಗಿಸಿ ಕೊಳ್ಳಲಾರದ ಕಹಿ ಮಾತ್ರೆಯಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ ನಿನ್ನೆ ಸೋಮವಾರ ಹುಬ್ಬಳ್ಳಿಯ ಪ್ರಜಾವಾಣಿ ಕಛೇರಿ ಎದುರು ಕೆಲವು ಮತಾಂಧರು ದಿನವಿಡಿ ಧರಣಿ ನಡೆಸಿದರು.

ದಬ್ಬಾಳಿಕೆ ಮತ್ತು ದೌರ್ಜನ್ಯದ ಮೂಲಕ ಸತ್ಯದ ಬಾಯಿ ಮುಚ್ಚಿಸಿಕೊಂಡು ಬಂದಿರುವ ಸಂಘ ಪರಿವಾರದ ಅವಿವೇಕಿಗಳು ಹಿಂದೂ ಧರ್ಮದ ಬಗ್ಗೆ ವಿವೇಕಾನಂದ ಹಾಗೂ ಬಿ,ಆರ್. ಅಂಬೇಡ್ಕರ್ ಮಾಡಿರುವ ವ್ಯಾಖ್ಯಾನಗಳನ್ನು ಮುಚ್ಚಿ ಹಾಕುವ ಬದಲು ಗಂಭೀರವಾಗಿ ಕುಳಿತು ಓದುವುದು ಒಳಿತು. ಅಷ್ಟೇ ಅಲ್ಲ, ವಿವೇಕಾನಂದರು ಕೇವಲ 39ನೇ ವಯಸ್ಸಿಗೆ ಏಕೆ ಸತ್ತರು ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ವಾಸ್ತವವನ್ನು ಸುಳ್ಳು ಲೇಪನಗಳ ಮೂಲಕ ಬಹುಕಾಲ ಮುಚ್ಚಿಡಲಾಗದು. ಚಿಕಾಗೊ ನಗರದಲ್ಲಿ  ವಿವೇಕಾನಂದರು ಮಾಡಿರುವ  ಭಾಷಣದ ಬಗ್ಗೆ ಪುಂಖಾನು ಪುಂಖವಾಗಿ ಬೊಬ್ಬಿರಿಯುವ ಇವರು, ಅದೇ ಹಿಂದೂ ಧರ್ಮದ ಬಗ್ಗೆ, ಅದರೊಳಗಿನ ಕೊಳಕುಗಳ ಬಗ್ಗೆ ವಿವೇಕಾನಂದರು ಎತ್ತಿರುವ ಮೌಲ್ಯಯುತ ಪ್ರಶ್ನೆಗಳ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ?

ಹಿಂದೂ ಧರ್ಮದ ಅಮಲನ್ನ ನೆತ್ತಿಗೇರಿಸಿಕೊಂಡಿರುವ ಈ ಮತಾಂಧರ ಆಲೋಚನೆಗಳು ಹೇಗಿರುತ್ತವೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ ನೋಡಿ:
ಕಳೆದ 6 ಮತ್ತು 7 ನೆ ತಾರೀಖು ನಾನು ಒರಿಸ್ಸಾದ ಭುವನೇಶ್ವರದಲ್ಲಿದ್ದಾಗ 6ರ ಶುಕ್ರವಾರ ಮಧ್ಯಪ್ರದೇಶದ ಭೂಪಾಲ್ ನಗರದಲ್ಲಿ ನಡೆದ ಆರ್. ಎಸ್.ಎಸ್. ಶಿಬಿರದಲ್ಲಿ ಮಾಡಲಾದ ಒಂದು ಉಪನ್ಯಾಸದ ಬಗ್ಗೆ  “ಇಂಡಿಯನ್ ಎಕ್ಸ್‌ಪ್ರೆಸ್” ಇಂಗ್ಲಿಷ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಅದರ ಸಾರಾಂಶ ಹೀಗಿತ್ತು.

  • 1980ರಲ್ಲಿ ಭೂಪಾಲ್ ನಗರದಲ್ಲಿ ನಡೆದ ವಿಷಾನಿಲ ದುರಂತದಲ್ಲಿ ಬದುಕಿ ಉಳಿದವರು ತಮ್ಮ ಮನೆಯ ಮುಂದೆ ಗೋಡೆಗಳಿಗೆ ಯಾರು ಸಗಣಿ ಬಳಿದಿದ್ದರೋ ಅವರು ಮಾತ್ರ.
  • ಸಗಣಿಗೆ ( ಹಸುವಿನ ಸಗಣಿಗೆ) ವಿಷಾನಿಲ ತಡೆಯುವ ಶಕ್ತಿ ಇದೆಯಂತೆ.
  • ದೇಶಿ ಹಸುಗಳ ಹಾಲು ಕುಡಿಯುವವರು ಮತ್ತು ಕುಡಿದವರು ಸತ್ಪ್ರಜೆಗಳಾಗಿ ಬದುಕುವರಂತೆ.
  • ವಿದೇಶಿ ಆಕಳುಗಳ ಹಾಲು ಕುಡಿದವರಲ್ಲಿ ಅಪರಾಧ ಮನೋಭಾವ ಹೆಚ್ಚುವುದಂತೆ. ಅವರೆಲ್ಲಾ ಕ್ರೂರಿಗಳಾಗಿ ಬದುಕುವರಂತೆ.
  • ದನ ಮಾತ್ರ ಮಾನವಸಂತತಿಯನ್ನು ಉಳಿಸಬಲ್ಲುದಂತೆ; ಅದನ್ನು ಮುಟ್ಟಿದರೆ ಸಾಕು ರಕ್ತದೊತ್ತಡ ಹತೋಟಿಗೆ ಬರುವುದಂತೆ.

ಇಂತಹ ಅಪ್ರಬುದ್ಧ ಹೇಳಿಕೆಯನ್ನು ಪತ್ರಿಕೆ ಗೇಲಿ ಮಾಡಿ ಮುಖಪುಟದಲ್ಲಿ ವರದಿಮಾಡಿತ್ತು. ವಿಷಾನಿಲ ಮತ್ತು ವಿಕಿರಣಗಳ ವೈಜ್ಙಾನಿಕ ಪ್ರಭಾವಗಳ ಬಗ್ಗೆ ಅರಿಯದ ಮೂರ್ಖರು ಮಾತ್ರ ಈ ರೀತಿ ಮಾತನಾಡಬಲ್ಲರು. ಹೋಗಲಿ ಈ ದೇಶದ ನಾಗರೀಕರಿಗೆ ಪೂರೈಕೆಯಾಗುತ್ತಿರುವ ಹೆಚ್ಚಿನ ಪ್ರಮಾಣದ ಹಾಲು ಎಮ್ಮೆಯ ಹಾಲು ಎಂಬ ವಾಸ್ತವ ಅಂಶ ಕೂಡ ಗೊತ್ತಿಲ್ಲ. ಇಂತಹವರಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ?

ದಿನಾಂಕ 8 ರ ಭಾನುವಾರ ಬೆಳಿಗ್ಗೆ ನಾನು ಕೊಲ್ಕತ್ತ ನಗರದಲ್ಲಿದ್ದೆ. ಆ ದಿನ ವಿವೇಕಾನಂದರ 150 ನೇ ವರ್ಷದ ಹುಟ್ಟು ಹಬ್ಬ. ಶ್ಯಾಮ್ ಬಜಾರ್ ಪಕ್ಕದಲ್ಲಿರುವ ವಿವೇಕಾನಂದ ರಸ್ತೆಯಲ್ಲಿರುವ ಅವರ ಮನೆಗೆ ಬೇಟಿ ನೀಡಿದಾಗ ಅಲ್ಲಿನ ಜನ ಅವರ ಜಯಂತಿಯನ್ನ ಅರ್ಥಪೂರ್ಣವಾಗಿ ಆಚರಿಸಿದರು. ಬಂಗಾಳಿಗಳು ವಿವೇಕಾನಂದರನ್ನ ಇಲ್ಲಿನ ಮತಾಂಧರ ಹಾಗೆ ದೇವರೆಂದು ಭಾವಿಸುವುದಿಲ್ಲ. ಪಶ್ಚಿಮ ಬಂಗಾಳದ ಕ್ರಾಂತಿ ಪುರುಷ ಎಂದು ಗೌರವಿಸುತ್ತಾರೆ. ಅವರ ಪ್ರಖರ ವಿಚಾರಧಾರೆಯನ್ನ ಕೊಂಡಾಡುತ್ತಾರೆ. ಅದೇ ದಿನ ದಕ್ಷಿಣೇಶ್ವರದಲ್ಲಿ ರಾಮಕೃಷ್ಣ ಪರಮಹಂಸರ ಆಶ್ರಮದ ಎದುರು ವಿವೇಕಾನಂದರ 150ನೇ ಜಯಂತಿಯ ಅಂಗವಾಗಿ ಅವರ ಅಪರೂಪದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಇಡೀ ದಿನ ಅವರ ವೈಚಾರಿಕ ಪ್ರಜ್ಞೆ ಕುರಿತಂತೆ ಉಪನ್ಯಾಸಗಳಿದ್ದವೇ ಹೊರತು, ತಲೆಮಾಸಿದವರ ಗೊಡ್ಡು ವಿಚಾರಗಳಿರಲಿಲ್ಲ. ವಿವೇಕಾನಂದರ ಕುರಿತು ಟನ್ನುಗಟ್ಟಲೆ ಪತ್ರಿಕೆಯಲ್ಲಿ ಬರೆಯುವ ಶಿಖಾಮಣಿಗಳು ಒಮ್ಮೆ ಬಂಗಾಲಿ ಜನರ ಜೊತೆ ಬೆರೆತು ಅವರ ಬಗ್ಗೆ ತಿಳಿದುಕೊಳ್ಳುವುದು ಒಳಿತು.

ದಿನೇಶ್ ಅಮಿನ್‌ಮಟ್ಟು ಬರೆದಿರುವ ಲೇಖನದಲ್ಲಿ ಮಣಿಸಂಕರ್ ಮುಖರ್ಜಿಯವರ ಕೃತಿಯನ್ನು ಉಲ್ಲೇಖಿಸಿ ಎಲ್ಲ ಅಂಕಿ ಅಂಶಗಳನ್ನ ದಾಖಲಿಸಿದ್ದಾರೆ. ಅದನ್ನು ಓದುವ, ಪರಿಶೀಲಿಸುವ ವ್ಯವಧಾನ ಹಿಂದು ಪರಿವಾರದ ಬೃಹಸ್ಪತಿಗಳಿಗೆ ಇದ್ದಂತಿಲ್ಲ. ಹೋಗಲಿ ಪಶ್ಚಿಮ ಬಂಗಾಳದ ಬ್ರಾಹ್ಮಣರು ಮೀನು, ಮೊಟ್ಟೆ ತಿನ್ನತ್ತಾರೆ, ಇವು ಅವರ ದಿನ ನಿತ್ಯದ ಆಹಾರ ಕ್ರಮ. ಈ ಸತ್ಯವಾದರೂ ಮತಾಂಧರರಿಗೆ ಗೊತ್ತೆ? ಏಕೇಂದರೆ, ಇದೇ ಅವಿವೇಕಿಗಳು ಕರ್ನಾಟಕದ ಶಾಲೆಗಳಲ್ಲಿ ಬಿಸಿಯೂಟದ ಜೊತೆ ಮೊಟ್ಟೆ ಕೊಡುವುದನ್ನು ತಪ್ಪಿಸಿದರು..

 

ಚಿತ್ರಗಳು:
ರಾಮಕೃಷ್ಣ ಪರಮಹಂಸರ ಆಶ್ರಮ, ವಿವೇಕಾನಂದರ ಪ್ರತಿಮ: ಲೇಖಕರವು

ದಿನೇಶ್ ಅಮಿನ್‌ಮಟ್ಟು ಚಿತ್ರ: ಚಂದ್ರಶೇಖರ್ ಐಜೂರ್