Monthly Archives: September 2014

ಹರಿಯುತ್ತಿರುವ  ರಕ್ತಕ್ಕೆ ಸಾಕ್ಷಿಯಾಗುತ್ತಿದೆ ಈ ಗೋಮಾತೆ……..


-ಇರ್ಷಾದ್


ಆ ಯುವಕನ  ಹೆಸರು ಅಬ್ದುಲ್ ಸಮೀರ್. ವಯಸ್ಸು 32. ಮದುವೆಯಾಗಿ ಐವರು  ಮಕ್ಕಳ ತಂದೆ. ಮಂಗಳೂರಿನಿಂದ ಕೇರಳದ ಕಣ್ಣೂರಿಗೆ  ಮೀನು ವ್ಯಾಪಾರ  ಮಾಡಿ ಜೀವನ ಸಾಗಿಸುತ್ತಿದ್ದ ಕಾಸರಗೋಡು ನಿವಾಸಿ ಅಬ್ದುಲ್  ಸಮೀರ್ ಇಂದು ಅಕ್ಷರಷಃ ಕೋಮ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವಚ್ಚವವಾಗಿ ಮಲಗಿದ್ದಾನೆ. ಈತನ ಈ ದಾರುಣ ಸ್ಥಿತಿ ಕಂಡು ಅಸಾಹಯಕರಾಗಿ ಪೋಷಕರು, ಹೆಂಡತಿ ಮಕ್ಕಳು ನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ. ಕಡುಬಡವರಾದ ಅಬ್ದುಲ್ ಸಮೀರ್  ಕುಟುಂಬ ಈಗಾಗಲೇ ಸುಮಾರು 3 ಲಕ್ಷ ರೂಪಾಯಿಯನ್ನು ಚಿಕಿತ್ಸೆಗಾಗಿ ವ್ಯಯ ಮಾಡಿದೆ. ಇಷ್ಟಾದರೂ ಗಂಬೀರವಾಗಿ  ಗಾಯಗೊಂಡಿರುವ ಅಬ್ದುಲ್ ಸುಧಾರಿಸಿಲ್ಲ.

ಅಂದಹಾಗೆ ಈತನ ಈ ಪರಿಸ್ಥಿತಿಗೆ ಕಾರಣರಾದವರು ಮಂಗಳೂರಿನ ಗೋರಕ್ಷಣೆಯ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಮತಾಂಧರು. go sagata_1ದಿನಾಂಕ 24-8-2014 ರಂದು ಅಬ್ದುಲ್  ಸಮೀರ್ ಹಾಗೂ ಇನ್ನಿಬ್ಬರು ದನ ವ್ಯಾಪಾರಿಗಳು ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಿಂದ 14 ದನಗಳನ್ನು  ಖರೀದಿ ಮಾಡಿ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಸುಮಾರು 30 ರಿಂದ 40 ಜನರನ್ನು ಒಳಗೊಂಡ ಹಿಂದೂಪರ ಸಂಘಟನೆಗಳ ತಂಡ ರಾತ್ರಿ ಸುಮಾರು 10.30 ಘಂಟೆಗೆ ಮಂಗಳೂರಿನ ಪಂಪ್ ವೆಲ್ ಎಂಬಲ್ಲಿ ಜಾನುವಾರು ಸಾಗಾಟ ವಾಹನವನ್ನು ಅಡ್ಡಗಟ್ಟಿದ್ದರು. ವಾಹನದಲ್ಲಿದ್ದ ಚಾಲಕ ಅಬ್ದುಲ್ ಸಮೀರ್, ಫಯಾಜ್ ಹಾಗೂ ಶೌಕತ್ ಎಂಬುವವರಿಗೆ ಹಿಗ್ಗಾಮುಗ್ಗಾ ಥಳಿಸಿದರು. ಚಾಲಕ ಅಬ್ದುಲ್ ಸಮೀರ್ ಅವರ ಹೊಡೆತಕ್ಕೆ  ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ಎಲ್ಲಾ  ಆದ ನಂತರದಲ್ಲಿ ಸ್ಥಳಕ್ಕೆ ಬಂದ ಮಂಗಳೂರು ಗ್ರಾಮಾಂತರ ಪೊಲೀಸರು ಗಾಯಗೊಂಡ ದನದ ವ್ಯಾಪಾರಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರು. 14 ದಿನ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಸಮೀರ್ ಇನ್ನೂ ಕೋಮಾ ಸ್ಥಿತಿಯಿಂದ  ಸಂಪೂರ್ಣವಾಗಿ ಹೊರಬಂದಿಲ್ಲ. ಪುತ್ರನ  ಚಿಕಿತ್ಸೆಗಾಗಿ  ಅಬ್ದುಲ್  ಸಮೀರ್  ತಂದೆ  ಶೇಕ್ ಅಲೀ ತಮ್ಮ  ಪುತ್ರಿಯ ಮೈಮೇಲಿದ್ದ ಚಿನ್ನಾಭರಣವನ್ನು ಅಡವಿಟ್ಟು  ಈಗಾಗಲೇ  150000 ದುಡ್ಡು ಆಸ್ಪತ್ರೆಗೆ ಪಾವತಿ  ಮಾಡಿದ್ದಾರೆ, ಇನ್ನೂ  120000  ಹಣವನ್ನು ಪಾವತಿ  ಮಾಡಬೇಕಾಗಿದೆ.  ವೈದ್ಯರು  ಜೀವಕ್ಕೆ ಅಪಾಯವಿಲ್ಲ ಎಂದರೂ ಮತ್ತೆ ಸಮೀರ್ ಹಿಂದಿನಂತಾಗುವ ಯಾವುದೇ ಭರವಸೆಯನ್ನು ನೀಡಿಲ್ಲ. ಸಮೀರ್ ಕನಿಷ್ಠ ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳುಗಳ  ಕಾಲಾವಕಾಶ ಬೇಕಾಗಬಹುದು.

ಇದು ಅಬ್ದುಲ್ ಸಮೀರ್ ಒಬ್ಬನ ವ್ಯಥೆ ಮಾತ್ರವಲ್ಲ. ಕರಾವಳಿಯ ಅವಳಿ  ಜಿಲ್ಲೆಯಗಳಲ್ಲಿ ಇದು ಸಾಮಾನ್ಯವಾಗುತ್ತಿದೆ. ಕರಾವಳಿ ಭಾಗದಲ್ಲಿ ಗೋಮಾತೆಯು ತನ್ನ  ಕಣ್ಣ ಮುಂದೆ ಹರಿದ ಸಾಕಷ್ಟು ನೆತ್ತರಿಗೆ ಸಾಕ್ಷಿಯಾಗಿದ್ದಾಳೆ. ಗೋ ಮಾತೆಯ ರಕ್ಷಣೆಯ ಹೆಸರಲ್ಲಿ  ಸ್ವಘೋಷಿತ ಗೋರಕ್ಷಕರು ಕಾನೂನು ಕೈಗೆತ್ತಿಕೊಂಡು ಸಿಕ್ಕಿದ್ದೇ ಅವಕಾಶ go sagata_2ಎಂಬಂತೆ ದನದ ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆ  ನಡೆಸಿ  ಕ್ರೌರ್ಯ  ಮೆರೆಯುತ್ತಿದ್ದಾರೆ. ಇವರ  ಪಾಲಿಗೆ ಗೋ ಕಳ್ಳರು, ಅಕ್ರಮ ದನ ಸಾಗಾಟಕರು, ಪರವಾನಿಗೆ ಹೊಂದಿರುವ ಜಾನುವಾರು ವ್ಯಾಪಾರಿಗಳು, ಎಲ್ಲರೂ ಒಂದೇ. ಒಮ್ಮೆ ತಮ್ಮ ಕೈಗೆ  ಸಿಕ್ಕಿಬಿದ್ದರೆ ಸಾಕು. ಗೋಮಾತೆಯ ರಕ್ಷಣೆಯ ಹೆಸರಲ್ಲಿ ಕ್ರೌರ್ಯದ ಪರಾಕಾಷ್ಠೆಯನ್ನು ಮೆರೆಯುತ್ತಾರೆ. ಈ ಮತಾಂಧರು ಅಂದು ಆದಿ ಉಡುಪಿಯಲ್ಲಿ ದನದ  ವ್ಯಾಪಾರಿ ಅಪ್ಪ –ಮಗನನ್ನು ಹಿಂಸಿಸಿ ಬೆತ್ತಲೆ ಮಾಡಿದ್ದರು. ಅದೇ ಮನಸ್ಥಿತಿಯ ಮತಾಂಧರು ಇಂದು ದನ ಸಾಗಾಟ ವಾಹನ ಚಾಲಕ ಅಬ್ದುಲ್ ಸಮೀರ್‌ನನ್ನು ಜೀವಚ್ಚವವನ್ನಾಗಿಸಿದರು. ಧರ್ಮದ ಹೆಸರಲ್ಲಿ ಅಮಾನವೀಯತೆ ಮೆರೆದಾಡುವ ಈ ಮತಾಂಧರು ಮೊದಲು ತಮ್ಮದೇ ಧರ್ಮ ಹಾಗೂ ಅದರ ಸದಾಶಯಗಳಿಗೆ ಧ್ವನಿಯಾದ ಆದರ್ಶ ಪುರುಷರುಗಳನ್ನು ತಿಳಿದುಕೊಳ್ಳಬೇಕು. ಇಂದು ಧರ್ಮಗಳ  ನಡುವೆ ವಿಷಬೀಜವನ್ನು ಬಿತ್ತಿ ಸಾವು ನೋವಿಗೆ ಕಾರಣವಾಗುತ್ತಿರುವ ಗೋ ರಕ್ಷಕರು ಗೋವಿನ ಕುರಿತಾಗಿ  ಹಿಂದೂ ಧರ್ಮಗ್ರಂಥಗಳು  ಹಾಗೂ  ಸ್ವಾಮೀ  ವಿವೇಕಾನಂದ,  ಭಗತ್ ಸಿಂಗ್  ಮೊದಲಾದರು  ಏನು ಹೇಳಿದ್ದಾರೆ ಎಂಬುವುದನ್ನು ಮೊದಲು  ತಿಳಿದುಕೊಳ್ಳಬೇಕಾಗಿದೆ.

ಸ್ವಾಮೀ ವಿವೇಕಾನಂದರು ಹೇಳುತ್ತಾರೆ “ಭಾರತದಲ್ಲಿ ಸನ್ಯಾಸಿ, ರಾಜ, ಅಥವಾ ಶ್ರೇಷ್ಟ ವ್ಯಕ್ತಿಯೊಬ್ಬನು ಮನೆಗೆ ಬಂದರೆ ಅವನ ಔತಣಕ್ಕಾಗಿ ಅತ್ಯುತ್ತಮವಾದ ಎತ್ತನ್ನು ಕೊಲ್ಲುತ್ತಿದ್ದರು ಎಂಬುವುದನ್ನು ನಾವು ವೇದದಲ್ಲಿ ಓದಿದ್ದೇವೆ. ಆದರೆ ಕಾಲ ಕ್ರಮೇಣ ನಮ್ಮದು ಕೃಷಿ ಪ್ರಾಧಾನ್ಯ ಜೀವನವಾಗಿದ್ದರಿಂದ ಅತ್ಯುತ್ತಮ ಎತ್ತುಗಳನ್ನು ಕೊಂದರೆ ಕ್ರಮೇಣ ದನದ ಕುಲವೇ ನಾಶವಾಗುವುದೆಂದು swami-vivekananda-1ತಿಳಿದು ಗೋಹತ್ಯೆ ಮಹಾ ಪಾಪವೆಂದು ಪರಿಗಣಿಸಲು ಪ್ರಾರಂಭಿಸಿದರು. ಪಂಜಾಬಿನ ಹಲವು ಗ್ರಾಮಗಳಲ್ಲಿ ಹಂದಿಯನ್ನು ತಿನ್ನುವವರನ್ನು ಹಿಂದೂಗಳೆಂದು ಪರಿಗಣಿಸುವುದೇ ಇಲ್ಲ.” ( ವಿವೇಕಾನಂದರ  ಕೃತಿ ಶ್ರೇಣಿ 5-129 )

ಸ್ವಾಮಿ ವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಚರ್ಚೆ ನಡೆಸುವ ಈ ಸನ್ನಿವೇಶ ಗೋ ರಕ್ಷಣೆಯ ಹೆಸರಲ್ಲಿ ಮನುಷ್ಯ ಮನುಷ್ಯನ  ರಕ್ತ ಹೀರುವ ಮನಸ್ಥಿತಿಗೆ ಸುಲಭ ರೀತಿಯಲ್ಲಿ ಅರ್ಥವಾಗುವ ಪಾಠದಂತಿದೆ.

ಸ್ವಾಮೀವಿವೇಕಾನಂದ ಗೋರಕ್ಷಿಣಿ ಸಭೆಯ ಪ್ರಚಾರಕನೊಂದಿಗೆ ಮಾತನಾಡುತ್ತಾ-

ಸ್ವಾಮೀಜಿ: ನಿಮ್ಮ  ಉದ್ದೇಶವೇನು ?

ಪ್ರಚಾರಕ : ನಮ್ಮ ದೇಶದ ಗೋ ಮಾತೆಯನ್ನು ಕಟುಕರ ಕೈಯಿಂದ ತಪ್ಪಿಸಿ ಕಾಪಾಡುತ್ತಿದ್ದೇವೆ. ಅಲ್ಲಲ್ಲಿ ದೊಡ್ಡಿಗಳು ಸ್ಥಾಪಿಸಲ್ಪಟ್ಟಿವೆ. ಅವುಗಳಲ್ಲಿ ಕಾಯಿಲೆಯ, ಕೈಲಾಗದ ಮತ್ತು ಕಟುಕರಿಂದ ಕೊಂಡು ತಂದ ಗೋ ಮಾತೆಯನ್ನು  ರಕ್ಷಿಸುತ್ತೇವೆ.

ಸ್ವಾಮೀಜಿ : ಇದು ಬಹಳ  ಒಳ್ಳೆಯ  ಕೆಲಸ; ತಮ್ಮ ಸಂಪಾದನೆಯ  ಮಾರ್ಗ ?

ಪ್ರಚಾರಕ: ದಯಾಪರರಾದ ತಮ್ಮಂಥವರು ಏನಾದರೂ ಕೊಡುತ್ತಾರೆಯಲ್ಲ, ಅದರಿಂದಲೇ ಸಭೆಯ ಈ ಕಾರ್ಯ ನಡೆಯುವುದು.

ಸ್ವಾಮೀಜಿ: ನಿಮ್ಮ ಹತ್ತಿರ  ಮೂಲಧನ ಎಷ್ಟು  ರೂಪಾಯಿ ಇದೆ?

ಪ್ರಚಾರಕ: ಮಾರವಾಡಿ ವರ್ತಕರು ಈ ಕಾರ್ಯಕ್ಕೆ ಒಳ್ಳೆಯ ಪೋಷಕರಾಗಿದ್ದಾರೆ. ಅವರು ಈ ಸತ್ಕಾರ್ಯಕ್ಕೆ ಬಹುದ್ರವ್ಯವನ್ನು ಕೊಟ್ಟಿದ್ದಾರೆ.

ಸ್ವಾಮೀಜಿ: ಹಿಂದೂಸ್ಥಾನದಲ್ಲಿ ಭಯಂಕರ ಕ್ಷಾಮ ಬಂದಿದೆ. ಹೊಟ್ಟೆಗಿಲ್ಲದೆ ಒಂದು ಲಕ್ಷ ಜನರು ಸತ್ತುಹೋದರೆಂದು ಇಂಡಿಯಾ ಸರ್ಕಾರದವರು ಪಟ್ಟಿಕೊಟ್ಟಿದ್ದಾರೆ. ನಿಮ್ಮ  ಸಭೆ ಈ ದುರ್ಭಿಕ್ಷ ಕಾಲದಲ್ಲಿ ಏನಾದರೂ ಸಹಾಯ  ಮಾಡುವುದಕ್ಕೆ ಏರ್ಪಾಡು ಮಾಡಿದೆಯೇನು?

ಪ್ರಚಾರಕ: ನಾವು ದುರ್ಭಿಕ್ಷ ಮೊದಲಾದುವುಗಳಲ್ಲಿ ಸಹಾಯ ಮಾಡುವುದಿಲ್ಲ . ಕೇವಲ ಗೋ ಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ: ಅಣ್ಣ ತಮ್ಮಂದಿರಾದ ನಿಮ್ಮ ದೇಶದ ಜನರು ಲಕ್ಷಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿರಲು, ಕೈಯಲ್ಲಾಗುತ್ತಿದ್ದರೂ ಇಂಥ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ತೋರುವುದಿಲ್ಲವೇ?

ಪ್ರಚಾರಕ:  ಇಲ್ಲ, ಜನರ ಕರ್ಮಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣ ತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರ ಜೀವವನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆಂದು ನಾನು ನಂಬುವುದಿಲ್ಲ. ಕರ್ಮಫಲದಿಂದ ಜನರು ಸಾಯುತ್ತಾರೆ. ಹೀಗೆ ಕರ್ಮದ ನೆವವನ್ನು ಹೇಳುವುದಾದರೆ ಜಗತ್ತಿನ ಯಾವ ವಿಷಯದಲ್ಲೂ ಕೆಲಸ ಮಾಡುವುದೇ ನಿಷ್ಪ್ರಯೋಜಕವೆಂದು ಒಟ್ಟಿಗೆನಿಶ್ಚಯಿಸಬಹುದು. ತಮ್ಮ ಪಶುರಕ್ಷಣೆಯ  ಕೆಲಸವೂ ಆ  ಮೇಲೆ ನಡೆಯುದಿಲ್ಲ.ಈ ಕೆಲಸದ ವಿಚಾರದಲ್ಲಿಯೂ ಗೋಮಾತೆಗಳು ತಮ್ಮ  ತಮ್ಮ ಕರ್ಮಫಲದಿಂದಲೇ ಕಟುಕರ ಕೈಗೆ ಹೋಗುತ್ತವೆ ಮತ್ತು  ಸಾಯುತ್ತವೆ. ಆದ್ದರಿಂದ ಅದಕ್ಕೆ ನಾವು ಏನೂ ಮಾಡಬೇಕಾದ ಅವಶ್ಯಕತೆಯಿಲ್ಲ  ಎಂದು  ಹೇಳಬಹುದು.

ಪ್ರಚಾರಕ: ತಾವು ಹೇಳುತ್ತಿರುವುದು ಸರಿ. ಆದರೆ ಹಸು ನಮಗೆ ‘ತಾಯಿ’ ಎಂದು ಶಾಸ್ತ್ರ  ಹೇಳುತ್ತದೆ.

ಸ್ವಾಮೀಜಿ: ಹಸು ತಮ್ಮ ತಾಯಿ ಎಂಬುವುದನ್ನು ನಾನು ವಿಲಕ್ಷಣವಾಗಿ ಅರ್ಥಮಾಡಿಕೊಂಡಿದ್ದೇನೆ- ಇಲ್ಲದಿದ್ದಲ್ಲಿ ಇಂಥ ಧನ್ಯರಾದ ಪುತ್ರರನ್ನೆಲ್ಲಾ ಇನ್ನು ಯಾರು ಹೆತ್ತಾರು?  (ವಿವೇಕಾನಂದ ಬಹುಮುಖಿ ಚಿಂತಕ ಪುಟ 43-44 )

ಇಷ್ಟೇ  ಅಲ್ಲ, ಹಿಂದೂ  ಧರ್ಮದ  ಧರ್ಮಶಾಶ್ತ್ರ  ಮನುಸ್ಮೃತಿಯಲ್ಲಿ ಗೋವಿನ ಕುರಿತು  ಅನೇಕ ಉಲ್ಲೇಖಗಳಿವೆ ಮನುಸ್ಮೃತಿ ಪ್ರಕಾರ-

ಚರಣಾಮನ್ನಮಚರಾ ದಂಷ್ಟ್ರಿಣಾಮಪ್ಯದಂಷ್ಟ್ರಿಣ:
ಅಹಾಸ್ತಾಶ್ಚ ಸಹಸ್ತಾನಾಂ ಶೂರಾಣಂ ಚೈವ ಭೀರವ:  ( ಮನುಸ್ಮೃತಿ 5:29)

ಅಂದರೆ ಚಲಿಸುವ ಪಶು ಪ್ರಾಣಿಗಳಿಗೆ ಚಲಿಸದಿರುವ ಹುಲ್ಲು- ಸಸ್ಯಗಳು ಆಹಾರಗಳು, ಕೋರೆ ದಾಡೆಗಳಿರುವ ಸಿಂಹ-ಹುಲಿಗಳಿಗೆ ಕೋರೆ ದಾಡೆಗಳಿರದ ಜಿಂಕೆ  ಇತ್ಯಾದಿಗಳು ಆಹಾರಗಳು, ಕೈಗಳಿರುವ ಮನುಷ್ಯರಿಗೆ ಕೈಗಳಿಲ್ಲದ ಪಶು ಪ್ರಾಣಿಗಳು ಆಹಾರಗಳು. ಹಾಗೂ  ಶೂರವಾದ, ಕ್ರೋರವಾದ ಪ್ರಾಣಿಗಳಿಗೆ ಸಾಧುವಾದ –ಭೀರುವಾದ ಪ್ರಾಣಿಗಳು  ಆಹಾರಗಳು.

ನಾತ್ತಾ ದುಷ್ಯತ್ಯದನ್ನಾದ್ಯಾನ್ಟ್ರಾನೋಹನ್ಯಹನ್ಯಪಿ
ಧಾತ್ರೈವ ಸೃಷ್ಟಾಹ್ಯಾದ್ಯಾಶ್ಚ  ಪ್ರಾಣಿನೋತ್ತಾರ  ಏವ ಚ (ಮನುಸ್ಮೃತಿ  5:30)

ಅಂದರೆ, “ಪ್ರತಿದಿನವೂ ತಿನ್ನಲಿಕ್ಕೆ ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾಧವಲ್ಲ. ಏಕೆಂದರೆ ತಿನ್ನುವವರನ್ನು ಪ್ರಾಣಿಗಳನ್ನು ಭಗವಂತನೇ ಸೃಷ್ಟಿ ಮಾಡಿದ್ದಾನೆ.” ಇನ್ನು ಯಜ್ಞ ಯಾಗಾಧಿಗಳಲ್ಲೂ ಪಶುವಧೆಯನ್ನು ಮಾಡಲಾಗುತ್ತಿತ್ತು ಎಂಬುವುದಕ್ಕೂ ಮನುಸ್ಮೃತಿಯಲ್ಲಿ  ಉಲ್ಲೇಖಗಳಿವೆ. ಯಜ್ಞಸ್ಯ ಭೂತ್ಯೈ ಸರ್ವಸ್ಯ ತಸ್ಮಾದ್ಯಜ್ಞೆ  ವಧೋವಧ (ಮನುಸ್ಮೃತಿ 5:39) ಯಜ್ಞಗಳಿಗೆಂದೇ ಪರಮಾತ್ಮನು ಈ ಪಶುಗಳನ್ನು ಸೃಷ್ಟಿ ಮಾಡಿದ್ದಾನೆ. ಈ ಎಲ್ಲವೂ ಯಜ್ಞದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ಞದಲ್ಲಿ ಮಾಡುವ ಪಶುವಧೆಯು  ಪಾಪಕರವಲ್ಲ”

ಗೋವಿನ ಕುರಿತಾದ ಧರ್ಮಗ್ರಂಥಗಳು, ಮಹಾನ್ ದಾರ್ಶನಿಕರು ಈ ವಿಚಾರಗಳನ್ನು ಇಂದು ಅರ್ಥೈಸಿಕೊಳ್ಳಲು ಮತಾಂಧರು ತಯಾರಿಲ್ಲ. ಯಾಕೆಂದರೆ ಅದನ್ನುSiddaramaiah ಪಾಲಿಸಿದರೆ ಮತಾಂಧರ ಉದ್ದೇಶ ಈಡೇರುವುದಿಲ್ಲ. ಪರಿಣಾಮ ಕರಾವಳಿಯಲ್ಲಿ ಗೋವಿನ ಹೆಸರಲ್ಲಿ ನೆತ್ತರು ಹರಿಯುತ್ತಿದೆ. ಇನ್ನೊಂದೆಡೆ ಈ ಮೂಕಪ್ರಾಣಿಯನ್ನು ಮಾರಾಟಕ್ಕಾಗಿ ಸಾಗಿಸುವ ರೀತಿಯೂ  ಅಮಾನವೀಯ. ಆ ಮೂಕ ಪ್ರಾಣಿಯ  ವೇದನೆ ಕಟುಕರ  ಎದೆಗೆ ನಾಟುತ್ತಿಲ್ಲ. ಇದಕ್ಕೆ  ಪರೋಕ್ಷವಾಗಿ  ಕಾರಣ ಗೋ ರಕ್ಷಕ ವೇಷದಲ್ಲಿರುವ ಮತಾಂಧರು ಎಂದರೆ ತಪ್ಪಾಗಲಾರದು. ಇವರ ಉಪಟಳ ಒಂದೆಡೆಯಾದರೆ  ವ್ಯಾಪಾರಿಯ ವ್ಯವಹಾರಿಕ ದೃಷ್ಠಿಕೋನವೂ ಈ ಪರಿಸ್ಥಿತಿಗೆ ಕಾರಣ. ರಾಜ್ಯದಲ್ಲಿ ಮತ್ತೆ  ಅಧಿಕಾರಕ್ಕೆ  ಬಂದ  ಕಾಂಗ್ರೆಸ್  ಸರ್ಕಾರದ ದಕ್ಷಿಣ  ಕನ್ನಡ ಜಿಲ್ಲೆಯ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿ ಮಾಧ್ಯಮದ ಮುಂದೆ  ನೀಡಿದ ಮೊದಲ ಹೇಳಿಕೆ “ನೈತಿಕ ಪೊಲೀಸ್ ಗಿರಿಯನ್ನು ನಮ್ಮ  ಸರ್ಕಾರ  ಯಾವತ್ತೂ  ಸಹಿಸೋದಿಲ್ಲ. ಎಲ್ಲಿ  ನೈತಿಕ ಪೊಲೀಸ್ ಗಿರಿ ನಡೆಯುತ್ತದೋ  ಆ ವ್ಯಾಪ್ತಿಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದಕ್ಕೆ ಹೊಣೆಯಾಗಿರುತ್ತಾರೆ.” ಮುಖ್ಯಮಂತ್ರಿ  ಸಿದ್ದರಾಮಯ್ಯ ಕೂಡಾ ಪದೇ ಪದೇ  ಇಂಥಹಾ  ಹೇಳಿಕೆಯನ್ನೇ ನೀಡುತ್ತಿರುತ್ತಾರೆ. ಆದರೆ ಇವರುಗಳ  ಹೇಳಿಕೆ  ಬರೀ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ಕಾಂಗ್ರೆಸ್  ಸರ್ಕಾರ ಅಧಿಕಾರಕ್ಕೆ ಬಂದ  ನಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಭಯ ಕೋಮುಗಳ ನೈತಿಕ ಪೊಲೀಸರು ಬಾಲ ಮುದುಡಿ ಕೂತಿಲ್ಲ. ಗೋ ಸಾಗಾಟ ತಡೆ ಹೆಸರಲ್ಲಿ ಕಾನೂನು  ಕೈಗೆತ್ತಿಕೊಂಡು ಹಲ್ಲೆ ನಡೆಸುವುದು ದಿನೇ  ದಿನೇ  ಹೆಚ್ಚಾಗುತ್ತಿದೆ ಕೆಲವೊಂದು  ಬಹಿರಂಗಗೊಳ್ಳುತ್ತದೆ  ಇನ್ನೂ  ಕೆಲವೂ ಅಲ್ಲೇ  ಮುಚ್ಚಿಹೋಗುತ್ತಿವೆ. ಹೀಗೆ ಗೋವಿನ ರಕ್ಷಣೆಯ ಹೆಸರಲ್ಲಿ ಅಂದು ಹಾಜಪ್ಪ ಹಸನಬ್ಬ ಇಂದು ಅಬ್ದುಲ್ ಸಮೀರ್ ಇನ್ನು ನಾಳೆ ಮತ್ತೊಬ್ಬ ಹೀಗೆ ಅವಮಾನಕ್ಕೊಳಗಾಗಿ, ಏಟು ತಿನ್ನುತ್ತಿದ್ದರೆ, ಗೋರಕ್ಷಣೆಯ ಹುಮ್ಮಸ್ಸಿನಿಂದ ಒಂದಿಷ್ಟು ಧರ್ಮದ ಅಮಲು ತುಂಬಲ್ಪಟ್ಟ ಹಿಂದುಳಿದ ವರ್ಗಗಳ ಯುವಕರು ಜೈಲು ಸೇರುತ್ತಾರೆ. ಬಹುಷಃ  ಇದು ಹೀಗೆ ಮುಂದುವರಿಯುತ್ತಲೇ ಹೋಗುತ್ತದೆ.

ವೀರ ಭಗತ್‌ಸಿಂಗ್  ಹೇಳುತ್ತಾರೆ “ ಅರಳಿಮರದ ರೆಂಬೆಯೊಂದನ್ನು ಯಾರೋ ಮುರಿದರೆಂದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿಬಿಡುತ್ತದೆ.Bhagat-Singh ಮುಹಮ್ಮದೀಯರ ಕಾಗದದ ಪ್ರತಿಮೆ ತಾಜಿಯಾದ ಮೂಲೆಯೊಂದು ಮುಕ್ಕಾಗಿ ಬಿಟ್ಟಿತೂ ಅಲ್ಲಾಹುವಿಗೆ ಕೆಂಡದಂಥ ಕೋಪಬಂದುಬಿಡುತ್ತದೆ; ಅವನು  ಕಾಫಿರ ಹಿಂದುಗಳ ರಕ್ತದ ಹೊರತು ಇನ್ಯಾರಿಂದಲೂ ಸಮಾಧಾನಗೊಳ್ಳನು. ಇಲ್ಲಿ ಪವಿತ್ರ ಪಶುಗಳ ಹೆಸರಲ್ಲಿ ಮನುಷ್ಯರು ಒಬ್ಬರೊಬ್ಬರ ತಲೆ  ಒಡೆದುಕೊಳ್ಳುತ್ತಿದ್ದಾರೆ. ನಮ್ಮ ದೃಷ್ಟಿ ಧಾರ್ಮಿಕ ರಾಷ್ಟ್ರೀಯತೆಯಿಂದ ಮಸುಕಾಗಿದೆ”

 ಕರಾವಳಿಯಲ್ಲಿ  ನಿನ್ನ ರಕ್ಷಣೆಯ ಹೆಸರಲ್ಲಿ ಇನ್ನೆಷ್ಟು ಪ್ರಮಾಣದ  ರಕ್ತ ಹರಿಸುತ್ತಾರೂ  ಈ ಮತಾಂಧರು, ಓ ಗೋಮಾತೆಯೇ?

ಬೆಂಗಳೂರೆಂಬ ಆತ್ಮಹತ್ಯೆ ನಗರ..!


– ಡಾ.ಎಸ್.ಬಿ. ಜೋಗುರ


ಬದುಕನ್ನು ಗ್ರಹಿಸುವ, ಸ್ವೀಕರಿಸುವ ರೀತಿಯಲ್ಲಿಯೇ ಬಾಳಿನ ಸಾರ್ಥಕತೆ ಮತ್ತು ನಿರರ್ಥಕತೆಗಳು ನಿರ್ಣಯವಾಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರ suicide_5ತಂದೊಡ್ಡುವ ಅನೇಕ ಬಗೆಯ ಧಾವಂತಗಳ ನಡುವೆಯೂ ನಾವು ನೆಮ್ಮದಿಯಿಂದ ಬದುಕಿ ಉಳಿಯಬೇಕು ಎಂತಾದರೆ ಭೌತಿಕತೆಯ ಮೋಹವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಭೌತಿಕತೆಯ ಸಹವಾಸದ ದಟ್ಟ ನೆರಳು ನಿಮ್ಮನ್ನು ಅಷ್ಟು ಸರಳವಾಗಿ ನೆಮ್ಮದಿಯಿಂದ ಇರಲು ಬಿಡುವದಿಲ್ಲ. ನೀವು ಓಡಿದರೆ ಹಿಂಬಾಲಿಸುವ, ಹಿಂಬಾಲಿಸಿದರೆ ಓಡುವ ಮೂಲಕ ಅದು ಸದಾ ನೀವು ಮೋಹದಲ್ಲಿ ಮಥಿಸುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ ಬುದ್ಧನ ‘ಆಸೆಯೇ ದು:ಖಕ್ಕೆ ಮೂಲ ಎನ್ನುವ ಮಾತು ಹೆಚ್ಚು ಇಷ್ಟವಾಗುತ್ತದೆ. ಆಧುನಿಕ ಸಂದರ್ಭದಲ್ಲಿ ಮನುಷ್ಯ ಅನೇಕ ಬಗೆಯ ಒತ್ತಡ ಮತ್ತು ಸಂವೇದನಾ ಶೂನ್ಯವಾದ, ಹೀನವಾದ ಬದುಕು ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಅವನು ಇಲ್ಲವೇ ಅವಳು ಬಾಲ್ಯವನ್ನು ಅನುಭವಿಸದೇ ಬೆಳೆದು, ಭಯಂಕರವಾಗಿ ಓದಿ ಅಂಕ ಗಳಿಸಿ, ಉದ್ಯೊಗ ಗಿಟ್ಟಿಸಿಕೊಂಡರೂ ನೆಮ್ಮದಿಯ ಜೀವನ ಸಾಧ್ಯವಾಗುತ್ತಿಲ್ಲ. ಅವರ ಅರ್ಧ ಬದುಕು ಕೇವಲ ಅಂಕಗಳಿಸುವದರಲ್ಲಿಯೇ ಕಳೆದು ಹೋದರೆ ಇನ್ನರ್ಧ ಅವರು ಕೆಲಸ ಮಾಡುವ ಕಚೇರಿಯ ನಿರೀಕ್ಷೆಗೆ ತಕ್ಕಂತೆ ನೌಕರಿ ನಿರ್ವಹಿಸುವದರಲ್ಲಿ ಕಳೆದುಹೋಗುತ್ತದೆ. ಜಾಬ್ ಸ್ಯಾಟಿಸ್ ಫ್ಯಾಕ್ಷನ್ ಕಿಂತಲೂ ನಮ್ಮಲ್ಲಿ ಈಗೀಗ ಜೋಬು ಸ್ಯಾಟಿಸ್ ಫ್ಯಾಕ್ಷನ್ ಮುಖ್ಯವಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿಯೆ ಅತ್ಯಂತ ಮಹತ್ವಾಕಾಂಕ್ಷಿ ಸಂತಾನವನ್ನು ರೂಪಿಸುವ ನಾವು ಮುಂದುವರೆದsuicide_4 ರಾಷ್ಟ್ರಗಳಿಗಿಂತಲೂ ವಿಭಿನ್ನವಾಗಿ ಮಕ್ಕಳನ್ನು ಪರಿಗಣಿಸುತ್ತಿಲ್ಲ. ಇದರ ಪರಿಣಾಮವಾಗಿ ಹೈಸ್ಕೂಲ್ ಮುಗಿಯುತ್ತಿರುವಂತೆ ಜೀವನ ನೀರಸವೆನಿಸುತ್ತಿದೆ. ಈ ಮುಂಚೆ ನಾವು ಎಂದೂ ಆರು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವದನ್ನು ಕೇಳಿರಲಿಲ್ಲ. ಆದರೆ ಈಗ ತೀರಾ ಚಿಲ್ಲರೆ ಕಾರಣಗಳಿಗಾಗಿಯೂ ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಅಷ್ಟಕ್ಕೂ ಒಬ್ಬ ವ್ಯಕ್ತಿ ತನ್ನನ್ನು ತಾನು ಕೊಂದುಕೊಳ್ಳುವ ಕ್ರಿಯೆ ಸ್ವಾಭಾವಿಕವಾದುದಂತೂ ಅಲ್ಲ. ನಿಸರ್ಗದ ಯಾವ ಜೀವಿಗಳು ಕೂಡಾ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವದಿಲ್ಲ. ಹುಟ್ಟು ಆಕಸ್ಮಿಕ ಸಾವು ಖಚಿತ. ಆದರೆ ತಾನಾಗಿಯೇ ತನ್ನನ್ನು ಕೊಂದುಕೊಳ್ಳುವ ಕ್ರಿಯೆ ಮಾತ್ರ ಅತ್ಯಂತ ಅಸಹಜವಾದುದು. ಎಲ್ಲ ಜೀವಿಗಳು ಬದುಕಿ ಉಳಿಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತವೆ. ತೀರಾ ವಯಸ್ಸಾಗಿ ಹಣ್ಣು ಹಣ್ಣಾಗಿ ಜೀವಜಾಲದ ದೇಟು ಕಳಚುವದರಲ್ಲಿದ್ದ ಮುಪ್ಪಾನು ಮುಪ್ಪು ಮುದುಕರು ಕೂಡಾ ತಮ್ಮನ್ನು ’ಮಣಿಪಾಲಕ್ಕೆ ಕರೆದುಕೊಂಡು ಹೋಗಿ..ಮಿರಜಗೆ ಕರೆದೊಯ್ಯಿರಿ’ ಎಂದು ಹಲಬುವವರ ನಡುವೆ ಹೀಗೆ ತೀರಾ ಚಿಕ್ಕ ವಯಸ್ಸಿನಲ್ಲಿ ಕಾರಣವೇ ಅಲ್ಲದ ಕಾರಣವನ್ನು ಮುಂದೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಎಳೆಯ ಜೀವಗಳನ್ನು ಕಂಡಾಗ ತೀರಾ ಬೇಸರವೆನಿಸುತ್ತದೆ.

ಯಾವುದೇ ಜೀವಿ ತನ್ನಷ್ಟಕ್ಕೆ ತಾನೇ ಸಾಯಲು ಬಯಸುವುದಿಲ್ಲ. ಒಂದೊಮ್ಮೆ ತನ್ನ ಜೀವಕ್ಕೆ ಇತರ ಜೀವಿಗಳಿಂದ ಗಂಡಾಂತರವಿದೆ ಎನಿಸಿದಾಗ ಮಾತ್ರ ಆಕ್ರಮಣ ಮಾಡುತ್ತವೆ. ಮನುಷ್ಯ ಜೀವಿ ಮಾತ್ರ ಎದುರಾದ ಸಂದಿಗ್ದಗಳಿಗೆ ಪರಿಹಾರ ಕಾಣದೇ ಸೋತೆ ಎನಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈಗೀಗ ಮನುಷ್ಯ ಪ್ರತಿಯೊಂದನ್ನೂ ಹೋಲಿಕೆ ಮಾಡುವ ಮೂಲಕವೇ ಸಮಾಧಾನ ಪಡುವುದು ಇಲ್ಲವೇ ಕಷ್ಟಪಡುವ ಮಾನಸಿಕ ಸ್ಥಿತಿಯನ್ನು ಅನುಭವಿಸುತ್ತಾನೆ. ಹಾಗೆ ಹೋಲಿಕೆ ಮಾಡುವಾಗಲೂ ಇತ್ಯಾತ್ಮಕವಾಗಿರುವದನ್ನು ಗಮನಿಸದೇ ನೇತ್ಯಾತ್ಮಕವಾಗಿರುವ ಸಂಗತಿಗಳನ್ನೇ ಹೆಚ್ಚಾಗಿ ಪರಿಗಣಿಸುವುದರ ಪರಿಣಾಮವಾಗಿ ಮನಸ್ಸು ಹುತ್ತಗಟ್ಟತೊಡುತ್ತದೆ. ನಿರಾಸೆಯೇ ಸುತ್ತಲೂ ಆವರಿಸಿಕೊಂಡು ಬಿಡುತ್ತದೆ. ಯಾವುದರಲ್ಲಿಯೂ ಮನಸ್ಸು ಖುಷಿ ಪಡುವ ಸ್ಥಿತಿಯಲ್ಲಿರುವುದಿಲ್ಲ. ಅದು ಒಂದು ಸೀಮಿತ ಗಳಿಗೆಯವರೆಗೆ ಉಳಿದರೆ ಸರಿ. ಆದರೆ ಹಾಗಾಗುವುದಿಲ್ಲ. ಗಾಢವಾದ ಕರಾಳ ಛಾಯೆ ಮನಸ್ಸನ್ನು ಆವರಿಸಿಕೊಂಡು ಬಿಡುತ್ತದೆ. ಅದೇ ಧ್ಯಾನ, ಅದೇ ಗುಂಗು ತೀವ್ರವಾಗಿ ಕಾಡಿದಾಗ ವ್ಯಕ್ತಿಯಲ್ಲಿ ಬೇರು ಕಿತ್ತಿದ ಭಾವನೆ ಬಲಿಯತೊಡಗುತ್ತದೆ. ಆತ್ಮಹತ್ಯೆ ಎನ್ನುವುದು ಆ ಒಂದು ಗಳಿಗೆಗೆ ಮಾತ್ರ ಸೀಮಿತವಾಗಿರುತ್ತದೆ. ಆ ಗಳಿಗೆಯನ್ನು ದಾಟಿದರೆ ಆ ವ್ಯಕ್ತಿ ಮತ್ತೆಂದೂ ಆತ್ಮಹತ್ಯೆ ಮಾಡಿಕೊಳ್ಳಲಾರ. ಇನ್ನು ಅವನು ಮತ್ತೆ ಮತ್ತೆ ಆ ಯತ್ನ ಮಾಡಿರುವನೆಂದಾದರೆ ಅದೊಂಥರಾ ವಿಕ್ಷಿಪ್ತ ಖಯಾಲಿ.

ಮಹಾನಗರಗಳಲ್ಲಿ ವ್ಯಾಪಕವಾಗಿರುವ ಈ ಪೀಡೆ ಈಗೀಗ ಗ್ರಾಮೀಣ ಪರಿಸರವನ್ನು ಬಾಧಿಸತೊಡಗಿದೆ. ಇನ್ನು ನಗರಗಳಂತೂ ಅಕ್ಷರಶ: ನೆಮ್ಮದಿಯstress-1 ಬದುಕಿನ ಹರಣಕ್ಕೆ ಕಾರಣವಾಗುತ್ತಿವೆ. ಆ ಬಗೆಗೆ ಅನೇಕ ಅಧ್ಯಯನಗಳೂ ನಡೆದಿವೆ. ಚೆನೈನಂತಹ ನಗರಗಳಲ್ಲಿ 27 ಪ್ರತಿಶತದಷ್ಟು ಜನರು ಮಾನಸಿಕ ಕಿರಿಕಿರಿಗೆ ಒಳಗಾಗಿ ಬದುಕುತ್ತಿದ್ದಾರೆ. ಭೌತಿಕ ಪ್ರಧಾನ ಬದುಕಿನ ನಡುವೆ ಮನುಷ್ಯನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕುರುಡು ಕಾಂಚಾಣದ ಕಾಲಿಗೆ ಸಿಲುಕಿ ಜಜ್ಜಿ ಹೋಗುತ್ತಿರುವ ಮನುಷ್ಯ ಭಾವಶೂನ್ಯ ಮನ:ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಆಪ್ತವಾಗಿ ಮಾತನಾಡಿಸುವ, ಸಮಸ್ಯೆಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರ ಕೊರತೆ ದೊಡ್ಡ ಪ್ರಮಾಣದಲ್ಲಿ ಕಾಡತೊಡಗಿದೆ. ಇಂದು ಮಹಾನಗರಗಳಲ್ಲಿ ಆತ್ಮಹತ್ಯೆಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಪೂನಾ, ಬೆಂಗಳೂರಿನಂತಹ ನಗರಗಳು ಆತ್ಮಹತ್ಯಾ ನಗರಗಳಾಗಿ ಗುರುತಿಸಿಕೊಳ್ಳುತ್ತಿವೆ.

ಬೆಂಗಳೂರಿನಲ್ಲಿರುವ ಸಹಾಯಿ ಎನ್ನುವ ಸ್ವಯಂ ಸೇವಾ ಸಂಸ್ಥೆಯೊಂದು ಸೆಪ್ಟಂಬರ್ 2012 ರಿಂದ ಫೆಬ್ರುವರಿ 2014 ರವರೆಗೆ 1100 ಆತ್ಮಹತ್ಯೆ ಪ್ರಕರಣಗಳು ಜರುಗಿದ ಬಗ್ಗೆ ವರದಿ ಮಾಡಿದೆ. ಇದರಲ್ಲಿ 580 ರಷ್ಟು ಮಹಿಳೆಯರಿದ್ದರೆ 475 ಪುರುಷರಿದ್ದಾರೆ. ಅತ್ಯಂತ ವಿಷಾದದ ಸಂಗತಿ ಎಂದರೆ ಇದರಲ್ಲಿ 55 ಜನರು 18 ವರ್ಷ ವಯೋಮಿತಿಯಲ್ಲಿದ್ದವರಿದ್ದಾರೆ. ಅನೇಕ ಯುವಕರು ಅದೇ ದೈನಂದಿನ ಏಕತಾನತೆಗೆ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಕಲಿಯುವಾಗಲೇ ಅಪಾರವಾದ ಒತ್ತಡ ಮತ್ತು ಬರೀ ಓದು ಓದು ಎನ್ನುವ ಪಾಲಕರ ಒತ್ತಾಸೆಯ ನಡುವೆ ಜೀವನವೇ ನೀರಸವೆನಿಸಿ ಪೂರ್ಣವಿರಾಮ ಇಟ್ಟವರೂ ಇದ್ದಾರೆ.

ಜೂನ್ 2014 ಬೆಂಗಳೂರು ಆತ್ಮಾಹತ್ಯಾ ನಗರ ಎನ್ನುವದನ್ನು ಮತ್ತೆ ಮತ್ತೆ ಸಾಬೀತು ಮಾಡುವಂತಿತ್ತು. ಜೂನ 13 ಮತ್ತು 14 ಎರಡೇ ದಿನದಲ್ಲಿ ಸುಮಾರು 10 stress-2ಆತ್ಮಹತ್ಯಾ ಪ್ರಕರಣಗಳು ದಾಖಲಾಗಿದೆ. ಬೆಂಗಳೂರಲ್ಲಿ ಕಳೆದ 2005 ರ ನಂತರ ಆತ್ಮಹತ್ಯಾ ಪ್ರಮಾಣ ಏರುತ್ತಲೇ ನಡೆದಿದೆ. ರಾಷ್ಟ್ರೀಯ ಅಪರಾಧಿ ದಾಖಲೆ ವಿಭಾಗದ ಪ್ರಕಾರ 2013 ರಲ್ಲಿ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ನಂ 1 ಸ್ಥಾನದಲ್ಲಿದೆ. ಬೆಂಗಳೂರಲ್ಲಿ ಆ ವರ್ಷ ಅತ್ಮಹತ್ಯೆಯ ಪ್ರಮಾಣ 23.9 ಪ್ರತಿಶತದಷ್ಟಿದ್ದರೆ, ದೆಹಲಿಯಲ್ಲಿ ಆ ಪ್ರಮಾಣ ಕೇವಲ 10.7ಪ್ರತಿಶತವಿದೆ. ಮುಂಬೈ ನಗರದಲ್ಲಿ 7.2 ಪ್ರತಿಶತವಿದ್ದರೆ, ಕೋಲ್ಕತ್ತಾದಲ್ಲಿ ಆ ಪ್ರಮಾಣ ತಿರುವು ಮುರುವಾಗಿದೆ ಅಂದರೆ 2.7 ಪ್ರತಿಶತ. 2008 ರ ಸಂದರ್ಭದಲ್ಲಂತೂ ಬೆಂಗಳೂರು ಆತ್ಮಹತ್ಯೆಯ ವಿಷಯದಲ್ಲಿ ಶಿಖರವನ್ನೇ ತಲುಪಿದೆ. ಆ ವರ್ಷ 42.8 ಪ್ರತಿಶತ ಆತ್ಮಹತ್ಯೆ ದಾಖಲಾಗಿದೆ. ಕಳೆದ ವರ್ಷ ಬೆಂಗಳೂರಲ್ಲಿ 2033 ಆತ್ಮಹತ್ಯೆಗಳು ಜರುಗಿದರೆ, ಚೆನೈನಲ್ಲಿ ಆ ಪ್ರಮಾಣ 2183 ರಷ್ಟಿತ್ತು. ಬಹುಷ: ಬೆಂಗಳೂರಲ್ಲಿ ಆ ಪ್ರಮಾಣದಲ್ಲಿ ಆತ್ಮಹತ್ಯೆ ಜರುಗಲು ಕಾರಣ ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ಹೆಚ್ಚು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿರುವುದೇ ಅದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಈ ಮಾಹಿತಿ ತಂತ್ರಜ್ಞಾನದ ವಲಯದಲ್ಲಿರುವ ಉದ್ಯೋಗಗಳಿಗೆ ಮನುಷ್ಯರಂತಿರುವ ರೋಬೋಗಳು ಬೇಕಿದೆ. ಅಪ್ಪಟ ಯಾಂತ್ರಿಕವಾಗಿ, ಭಾವಶೂನ್ಯರಾಗಿ ದುಡಿಯುವವರಿರಬೇಕು. ಇಲ್ಲಿ ಸಂವೇದನೆಗಳಿಗೆ ಜಾಗವೇ ಇಲ್ಲ. ಪರಸ್ಪರ ಸುಖ ದು:ಖಗಳನ್ನು ಎದೆಗೆ ಹಚ್ಚಿಕೊಂಡು ಆಲಿಸುವವರು ಸಿಗುವುದೇ ಅಪರೂಪ ಎಲ್ಲರೂ ಅವರವರ ಒತ್ತಡಗಳಲ್ಲಿ ಸಿಲುಕಿ ನಲಗುವಂತಾದಾಗ ಮನಸಿನ ನೆಮ್ಮದಿ ಸಾಧ್ಯವಾಗುವದಾದರೂ ಹೇಗೆ?

ಡರ್ಖಹೀಂ ಎನ್ನುವ ಫ್ರಾನ್ಸ್ ದೇಶದ ಸಮಾಜಶಾಸ್ತ್ರಜ್ಞ 1897 ರ ಸಂದರ್ಭದಲ್ಲಿ ಆತ್ಮಹತ್ಯೆಯನ್ನು ಅಧ್ಯಯನ ಮಾಡಿ ಅದನ್ನು ಇಡಿಯಾಗಿ ಮೂರು ಪ್ರಕಾರಗಳಲ್ಲಿ ವಿಂಗಡಣೆ ಮಾಡಿದ್ದಾನೆ. ಒಂದನೆಯದು ಸಮೂಹಪ್ರೇರಿತ ಆತ್ಮಹತ್ಯೆ, ಎರಡನೆಯದು ಸ್ವಯಂ ಪ್ರೇರಿತ ಆತ್ಮಹತ್ಯೆ, ಮೂರನೆಯದು ನಿಯಮರಾಹಿತ್ಯತೆಯ ಆತ್ಮಹತ್ಯೆ. ಮೊದಲ ಮತ್ತು ಮೂರನೇಯ ಪ್ರಕಾರಗಳಲ್ಲಿ ವ್ಯಕ್ತಿಗಿಂತಲೂ ಸಾಮೂಹಿಕ ಸಂಗತಿಗಳು ಮುಖ್ಯವಾಗಿರುತ್ತವೆ. ಎರಡನೆಯದರಲ್ಲಿ ಮಾತ್ರ ವ್ಯಕ್ತಿಯ ಅಹಂ ಭಾವ ಕೆಲಸ ಮಾಡುತ್ತದೆ. ಆ ಅಹಂಗೆ ತೀವ್ರವಾದ ಪೆಟ್ಟು ಬಿದ್ದದ್ದೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮೂರನೇಯ ಪ್ರಕಾರದ ಆತ್ಮಹತ್ಯೆಯಲ್ಲಿ ಸಾಮಾಜಿಕ ಅವ್ಯವಸ್ಥೆ ಇಲ್ಲವೇ ನಿಯಾಮರಾಹಿತ್ಯತೆಯ ಸ್ಥಿತಿ ಆತ್ಮಹತ್ಯೆಗೆ ಕಾರಣವಾಗುತ್ತದೆ. ಡರ್ಖಹೀಮ್ ರಂಥಾ ಚಿಂತಕರು ಆತ್ಮಹತ್ಯೆಗೆ ವ್ಯಕ್ತಿಗತ ಕಾರಣಗಳಿಗಿಂತಲೂ ಸಾಮಾಜಿಕ ಕಾರಣಗಳೇ ನಿರ್ಣಾಯಕ ಎಂದಿದ್ದಾರೆ.

ನಮ್ಮ ಸುದ್ದಿ ಸಮಾಚಾರಗಳನ್ನು ಉತ್ತೇಜನಗೊಳಿಸುತ್ತಿರುವ ಉನ್ಮಾದಗಳು


ಇಂಗ್ಲೀಷ್ : ಆಕಾರ್ ಪಟೇಲ್
ಅನುವಾದ : ಬಿ.ಶ್ರೀಪಾದ ಭಟ್


ನನ್ನ ಹೊಸ ಪುಸ್ತವೊಂದನ್ನು ಬರೆದು ಮುಗಿಸುವ ಧಾವಂತದಲ್ಲಿದ್ದ ನನಗೆ ಇತ್ತೀಚಿನ ಒಂದೆರೆಡು ವಾರಗಳಲ್ಲಿ ದಿನಪತ್ರಿಕೆಗಳನ್ನು ಓದಲು ಸಾಧ್ಯವಾಗಿರಲಿಲ್ಲ. tv-mediaದಿನಪತ್ರಿಕೆಗಳನ್ನು ಓದಲಾಗದ ಈ ವಾರಗಳಲ್ಲಿ ನಾನೇದರೂ ಮುಖ್ಯವಾದದ್ದನ್ನು ಕಳೆದುಕೊಂಡೆನೆ ಎನ್ನುವ ಚಿಂತೆ ಈಗ ನನ್ನನ್ನು ಕಾಡತೊಡಗಿತ್ತು? ಆದರೆ ನಂತರ ಕೆಲವು ದಿನಪತ್ರಿಕೆಗಳನ್ನು ಓದಿದ ನಂತರ ಇಂಡಿಯಾದಲ್ಲಿ ಸುದ್ದಿ ಸಮಾಚಾರಗಳು ವಿವೇಕವನ್ನು, ತಿಳುವಳಿಕೆಗಳನ್ನು ಕಳೆದುಕೊಂಡಿವೆ ಎಂದು ನನಗೆ ಖಾತ್ರಿಯಾಯಿತು. ಬಿಜೆಪಿ ಪಕ್ಷವು 33 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೂ ಅದು ಸೋತಿದೆ ಎಂದು ವಿಶ್ಲೇಷಿಸಲಾಗುತ್ತಿದೆ ಮತ್ತು ಕಾಂಗ್ರೆಸ್ ಆ 33 ಕ್ಷೇತ್ರಗಳ ಪೈಕಿ ಕೇವಲ 7 ಕ್ಷೇತ್ರಗಳನ್ನು ಮಾತ್ರ ಗೆದ್ದಕೊಂಡರೆ ಅದರ ವಕ್ತಾರರು ತಮ್ಮ ಪಕ್ಷ ಜಯಭೇರಿ ಬಾರಿಸಿದೆಯೆಂಬಂತೆ ಕುಣಿಯುತ್ತಿದ್ದಾರೆ. ಗ್ರೀಕ್ ಬುಡಕಟ್ಟು ಮಲೋಸಿಯನ್ಸ್ ನ ನಾಯಕನಾಗಿದ್ದ ಪೈರಥಸ್ ರೋಮ್ ನ ವಿರುದ್ಧ ಯುದ್ಧದ ಸಂದರ್ಭದಲ್ಲಿ (ಕ್ರಿ.ಪೂ.281) ಪ್ರಚಾರ ಮಾಡುತ್ತಾ “ರೋಮನ್ನರ ವಿರುದ್ಧ ಮುಂದಿನ ಮತ್ತೊಂದು ಯುದ್ಧದಲ್ಲಿ ನಾವೇನಾದರೂ ಗೆದ್ದರೆ ನಾವೆಲ್ಲಾ ನಾಶವಾಗುತ್ತೇವೆ” ಎಂದು ಹೇಳುತ್ತಾನೆ. ನಾನು ಸಂಪೂರ್ಣವಾಗಿ ಒಂದು ದಿನದ ಸಮಯವನ್ನು ಸಿಎನ್ಎನ್, ಎಬಿಪಿ,ಸಿ.ಎನ್.ಬಿ.ಸಿ (ಗುಜರಾತಿ) ಟಿವಿ ಸುದ್ದಿ ಛಾನಲ್ ಗಳನ್ನು ನೋಡುತ್ತ ಹೊಸ ಒಳನೋಟಗಳಿಗಾಗಿ ವ್ಯರ್ಥ ಪ್ರಯತ್ನ ಮಾಡಿದೆ. ಮುದ್ರಣ ಮಾಧ್ಯಮದ ಟೈಮ್ಸ್ ಆಫ್ ಇಂಡಿಯಾದಲ್ಲಿ ಉತ್ತರ ಪ್ರದೇಶ, ರಾಜಸ್ತಾನ, ಗುಜರಾತ್ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಸೋತಿದೆ ಮತ್ತು ವಾಸ್ತವದ ಚಿತ್ರಣವನ್ನು ಎದುರಿಸುತ್ತಿದೆ ಎಂದು ಮುಖಪುಟದಲ್ಲಿ ವರದಿ ಮಾಡಿದೆ. ಆದರೆ ಗುಜರಾತ್ ನಲ್ಲಿ ಬಿಜೆಪಿ 9 ಕ್ಷೇತ್ರಗಳಲ್ಲಿ 6 ಕ್ಷೇತ್ರಗಳನ್ನು ಗೆದ್ದು ಮುಕ್ಕಾಲು ಪಾಲು ಸೀಟುಗಳನ್ನು ಗಳಿಸಿರುವುದು ಪ್ರಧಾನ ಮಂತ್ರಿಯ ಸೋಲು ಎನ್ನುವುದಾದರೆ ಪ್ರಧಾನ ಮಂತ್ರಿಯ ಸಾಮರ್ಥ್ಯ ಅಷ್ಟೊಂದು ದೊಡ್ಡ ಮಟ್ಟದ್ದೇ ಎನ್ನುವುದೇ ನನ್ನ ಚಿಂತೆ? ಈ ಕೂಡಲೆ ಮೀಡಿಯಾಗಳು ಎಲ್ಲ ಘಟನೆಗಳು ವಿಭಿನ್ನವಾಗತೊಡಗಿವೆ, ಉಜ್ವಲ ಭವಿಷ್ಯವಿದೆ ಎಂದು ನಂಬತೊಡಗಿದೆಯೇ?

ಗುಜರಾತ್ ನ ಪತ್ರಿಕೆಗಳ ಪ್ರಕಾರ ಚೀನಾದ ಅಧ್ಯಕ್ಷ ಜೀಪಿಂಗ್ ಅವರ ಭೇಟಿಯು ಅಷ್ಟೊಂದು ಭಾವೋದ್ರೇಕಗೊಳಿಸುವಷ್ಟು ಉತ್ತೇಜನಕಾರಿಯಾಗಿದೆಯೆ? modi-xinpingಅಹಮದಾಬಾದ್ ಮಿರರ್ ಪತ್ರಿಕೆಯಲ್ಲಿನ ಪಿಟಿಐ ವರದಿಯ ಅನುಸಾರ ಚೀನಾ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಮೋದಿಯ ಆತಿಥ್ಯದಲ್ಲಿ ಏರ್ಪಡಿಸಿದ ಭೋಜನಕೂಟವು ಹಿಂದಿನ ಎಲ್ಲಾ ಭೋಜನಕೂಟಗಳ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದು ಈಗಿನ ಸಂದರ್ಭದಲ್ಲಿ ಅದು ಕೇವಲ ಗುಜರಾತಿ ಭೋಜನವನ್ನು ಒಳಗೊಂಡಿರುತ್ತದೆ ಎಂದು ಅಲ್ಲಿನ ರಾಜ್ಯ ಸರ್ಕಾರವು ಹೇಳಿಕೆ ನೀಡಿದೆ. ನನಗೆ ಆಶ್ಚರ್ಯವಾಗಿದ್ದು ಆ ಹಳೆಯ ಉಹಾಪೋಹಗಳ ಕುರಿತಾಗಿ. ಅದೇನದು? ರೀಢಿಫ್ ಅಂತರ್ಜಾಲ ತಾಣವು 50 ವಿವಿಧ ಬಗೆಯ ಸಾತ್ವಿಕವಾದ, ದೇಸಿಯವಾದ ಆಹಾರವನ್ನು ಈ ಭೋಜನಕೂಟದಲ್ಲಿ ಆಯೋಜಿಸಲಾಗಿತ್ತು ಮತ್ತು ಅತ್ಯತ್ತಮ ಮಟ್ಟದ ಮಜ್ಜಿಗೆಯಲ್ಲಿ ಕೈ ತೊಳೆಯುವಂತಹ ಅವಕಾಶವನ್ನು ಕಲ್ಪಿಸಲಾಗಿತ್ತು ಎಂದು ಬರೆದುಕೊಂಡಿದೆ. ಸಂಪೂರ್ಣ ಸಸ್ಯಹಾರಿ ಎನ್ನುವುದು ಒಂದು ಸಹಜ ಸಂಗತಿಯೆಂದು ಅಂದುಕೊಳ್ಳಬಹದು. ಆದರೆ ಅದನ್ನು ನ್ಯಾಯಬದ್ಧವಾದ ಗುಜರಾತಿ ಆಹಾರವೆಂದು ಕ್ರಮಬದ್ಧಗೊಳಿಸತೊಡಗಿದರೆ? ಈ ಮೂಲಕ ನ್ಯಾಯಬದ್ಧವಾದ ಗುಜರಾತಿ ಆಹಾರವೆಂದರೆ ಅದು ಸಸ್ಯಹಾರಿ ಆಹಾರವೆಂದು ಪ್ರತಿಪಾದಿಸುತ್ತಿದ್ದೇವೆಯೇ? ಗುಜರಾತ್ ಆಹಾರದ ಹೆಸರಿನಲ್ಲಿ ನಡೆಯುತ್ತಿರುವ ಈ ಬಗೆಯ ವಂಚನೆಯು ಚೀನಿಯರ ಮೇಲೆ ಮಾತ್ರ ನಡೆಯುತ್ತಿಲ್ಲ, ಬದಲಾಗಿ ಎಲ್ಲಾ ಭಾರತೀಯರ ಮೇಲೆಯೂ ನಡೆಯುತ್ತಿದೆ.

ಗುಜರಾತ್ ನಲ್ಲಿ ಶೇಕಡಾ 1 ರಷ್ಟಕ್ಕಿಂತಲೂ ಕಡಿಮೆ ಜನಸಂಖ್ಯೆಯಲ್ಲಿರುವ ಮಾರ್ವಾಡಿಗಳು ಇಂದುgujarati-thali ಗುಜರಾತ್ ನ ಆಹಾರದ ಪ್ರತಿನಿಧಿಗಳಾಗಿದ್ದಾರೆ. ಏಕೆ ಗೊತ್ತೆ? ಅಲ್ಲಿನ ರಾಜ್ಯದ ಹೊರತಾಗಿ ಹೊರಗಿನವರೆಲ್ಲರೂ ಗುಜರಾತಿಗಳೆಂದರೆ ಮಾರ್ವಾಡಿಗಳೆನ್ನುವ  (ಶಾ, ಮೆಹ್ತ, ಸಾಂಘ್ವಿ, ಇತ್ಯಾದಿ) ಭ್ರಮೆಯಲ್ಲಿರುವುದು ಮತ್ತು ತೀರಾ ಸಣ್ಣ ಸಂಖ್ಯೆಯಲ್ಲಿರುವ ಸಂಪೂರ್ಣ ಸಸ್ಯಹಾರಿಗಳಾದ ಬನಿಯಾಗಳನ್ನು ಸಹ ಇದೇ ದೃಷ್ಟಿಯಲ್ಲಿ ನೋಡಲಾಗಿದೆ. ಈ ಕಮ್ಯುನಿಟಿಗಳು ವ್ಯಾಪಾರದ ಹಿನ್ನೆಲೆಯುಳ್ಳವರು ಮತ್ತು ವ್ಯಾಪಾರದ ಸಲುವಾಗಿ ಇತರೆ ರಾಜ್ಯಗಳಿಗೆ ಪ್ರಯಾಣ ಮಾಡುವಾಗ ತಮ್ಮೊಂದಿಗೆ ತಮ್ಮದೇ ಆಹಾರವನ್ನು ಕೊಂಡೊಯ್ಯುವಂತಹವರು. ಇಂತಹದೇ ಇನ್ನಿತರ ಕಾರಣಕ್ಕಾಗಿ ಮಿಕ್ಕೆಲ್ಲ ಗುಜರಾತಿಗಳು ಈ ಕಮ್ಯುನಿಟಿಗಳನ್ನು ಸಾಂಸ್ಕೃತಿಕವಾಗಿ ಶ್ರೇಷ್ಠ್ಟರೆಂದೇ ಒಪ್ಪಿಕೊಂಡುಬಿಟ್ಟಿದ್ದಾರೆ. ಆದರೆ ಇನ್ನೂ ಅನೇಕರು ಇದನ್ನು ಒಪ್ಪಿಕೊಂಡಿಲ್ಲ. ಗುಜರಾತ್ ನgujrati- non veg ತಳಸಮುದಾಯಗಳು ಮಾಂಸಾಹಾರಿಗಳು. ಕೋಲಿಗಳು, ಸೂರತ್ ನ ಖತ್ರಿಗಳು, ದರ್ಬಾರ್ ಗಳು, ಗಾಂಚಿ ಸಮುದಾಯದವರು ಇಂದಿಗೂ ದೊಡ್ಡ ಸಂಖ್ಯೆಯಲ್ಲಿರುವ ಮಾಂಸಹಾರಿಗಳು. ಬಹುಶಃ ನರೇಂದ್ರ ಮೋದಿಯವರ ಸಮುದಾಯವಾದ ಗಾಂಚಿ ಸಮುದಾಯದವರು ಮಾಂಸಹಾರಿಗಳಾಗಿದ್ದರೂ ತಮ್ಮ ಕುಟುಂಬದ ಹಿನ್ನಲೆಯಿಂದಾಗಿ ಮತ್ತು ದಶಕಗಳ ಕಾಲ ಸ್ವತ ಆರೆಸಸ್ ಸಂಚಾಲಕರಾಗಿದ್ದಕ್ಕಾಗಿ ನರೇಂದ್ರ ಮೋದಿಯು ವೈಯುಕ್ತಿಕ ಆಯ್ಕೆಯಿಂದ ಮಾತ್ರ ಸಸ್ಯಹಾರಿ. ಗಾಂಚಿ ಸಮುದಾಯದವರು ಹೊಸ ವರ್ಷದ ಸಂದರ್ಭದಲ್ಲಿ ಅತ್ಯುತ್ತಮವಾದ ಪಾಂಫ್ರೆಟ್ ಅಥವಾ ನಾವು ಕರೆಯುವ ಪಾಪ್ಲೆಟ್ ಅನ್ನು ಮಾಡುತ್ತಾರೆ. ನಾನೂ ಸಹ ಸಸ್ಯಹಾರಿ ಅಲ್ಲ. ತನ್ನ ಬಾತೇ ಎನ್ನುವ ಪ್ರಬಂಧದಲ್ಲಿ (ಗಲಭೆಗಳ ಸಂದರ್ಭದಲ್ಲಿ ಬಾಂಬೆ ಎಂದು ನಾನು ಅನುವಾದ ಮಾಡಿದ್ದೆ) ಸಾದತ್ ಹಸನ್ ಮಂಟೋ ಹಳೆಯ ಸಂಗತಿಗಳಿಂದಲೇ ಹಿಂಸೆಯು ಹುಟ್ಟುತ್ತದೆ ಎಂದು ಬರೆಯುತ್ತಾ “ಮಂದಿರ ಮತ್ತು ಮಸೀದಿ ಎರಡೂ ಮತ್ತೇನಲ್ಲ ಕಲ್ಲು ಮಾತ್ರ ಎಂದು ನಾನು ನಂಬಿದ್ದೇನೆ. ಗೋವು ಮತ್ತು ಹಂದಿ ಸಹ ನನಗೆ ಕೇವಲ ಮಾಂಸ ಮಾತ್ರ ಮತ್ತೇನಿಲ್ಲ” ಎಂದು ಹೇಳುತ್ತಾನೆ. ನನಗೂ ಅಷ್ಟೇ. ಪಟೇಲ್ ಸಮುದಾಯದ ಆಹಾರವು ಬನಿಯಾ-ಜೈನ್ ಸಮುದಾಯದ ಆಹಾರಕ್ಕಿಂತ ಹೆಚ್ಚು ಶ್ರೇಷ್ಠ ಮತ್ತು ಆರೋಗ್ಯಕಾರಿಯಾದದ್ದು ಎಂದು ನಂಬಿದ್ದೇನೆ. ಹೀಗಾಗಿ, “ಮಿ. ಜೀಪಿಂಗ್ ನೀವು ನಿಮ್ಮ ಆಹಾರವನ್ನು ಆಸ್ವಾದಿಸಿದ್ದೀರೆಂದು ನಾನು ನಂಬಿದ್ದೇನೆ ಆದರೆ ಇದನ್ನೇ ಪ್ರತಿನಿಧಿತ್ವ ಎಂದು ನಂಬಬೇಡಿ.”

ಗುಜರಾತಿನ ವಿಷಯಕ್ಕೆ ಮತ್ತೆ ಮರಳಿದರೆ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ಬಿಜೆಪಿ ಶಾಸಕರು ಇನ್ನು ಮುಂದೆ Garba-crashing  ಅನ್ನು ನಿಷೇಧಿಸಬೇಕು ಎಂದು ಬಯಸಿದ್ದಾರೆ Garba-Festivalಎಂದು ವರದಿಯಾಗಿತ್ತು. ಇದು ನನ್ನಲ್ಲಿ ಕುತೂಹಲವನ್ನು ಕೆರಳಿಸಿತು. ಈ ವರದಿಯಲ್ಲಿ ಬಿಜೆಪಿ ಪಕ್ಷದ ಇಂದೂರ್ ನ ಉಷಾ ಠಾಕೂರ್ ಅವರು ಗರ್ಬಾ ಸಂಘಟಕರಿಗೆ ತಮ್ಮ ಯೋಗ್ಯತೆಯನ್ನು ಪ್ರಮಾಣ ಮಾಡಿ ತೋರಿಸುವ ಗಂಡಸರಿಗೆ ಮಾತ್ರ ಇಡೀ ರಾತ್ರಿ ನಡೆಯುವ ಗರ್ಬ ನೃತ್ಯದಲ್ಲಿ ಭಾಗವಹಿಸಲು ಅನುಮತಿ ಕೊಡಿ ಎಂದು ನಿರ್ದೇಶಿಸಿದ್ದಾರೆ ಎಂದು ಬರೆಯಲಾಗಿದೆ. ಏಕೆಂದರೆ ಮುಸ್ಲಿಂರಿಗೆ ಗರ್ಬಾ ಸ್ಥಳದಲ್ಲಿ ಪ್ರವೇಶಿಸಲು ಅವಕಾಶ ಇರಬಾರದು ಎನ್ನುವುದು ಆಕೆಯ ಇರಾದೆ. ಸಂಘಟಕರಿಗೆ ಬರೆದ ಪತ್ರದಲ್ಲಿ ಮುಸ್ಲಿಂ ಗಂಡಸರಿಗೆ ಗರ್ಬಾ ಸ್ಥಳಗಳಲ್ಲಿ ಪ್ರವೇಶಕ್ಕೆ ಅನುಮತಿ ಕೊಡಬೇಡಿ, ಅವರು ನಮ್ಮ ಹಿಂದೂ ಹೆಣ್ಣು ಮಕ್ಕಳನ್ನು ಪ್ರಚೋದಿಸಿ ಮರಳು ಮಾಡುತ್ತಾರೆ ಎಂದು ಹೇಳಿದ್ದಾರೆ. ಇದರ ಮೇಲೆ ಏನೇ ವಾಖ್ಯಾನ ಮಾಡಿದರೂ ಅದು ಮೇಲಿನ ಕತೆಯ ವೈಶಿಷ್ಟತೆಯನ್ನೇ ಹಾಳು ಮಾಡುವುದರಿಂದ ಹಾಗೆ ಮಾಡದೆ ಮತ್ತೊಂದು ವರದಿಯನ್ನು ನೋಡೋಣ. ಭೂಪಾಲ್ ನ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮ ಹಿಂದೂಸ್ತಾನ್ ಟೈಮ್ಸ್’ ನೊಂದಿಗೆ ಮಾತನಾಡುತ್ತ “ನಾನು ಈ ಮುಸ್ಲಿಂರನ್ನು ವಿರೋಧಿಸುವುದಿಲ್ಲ. ಆದರೆ ಯಾರೇ ಆಗಲಿ ನಮ್ಮ ಈ ಹಿಂದೂ ಹಬ್ಬಗಳಲ್ಲಿ ಭಾಗವಹಿಸಬೇಕೆಂದು ಬಯಸುವವರು ಮೊದಲು ನಮ್ಮ ಧರ್ಮದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ನಂತರವಷ್ಟೇ ಅದರಲ್ಲಿ ಭಾಗವಹಿಸಬಹುದು” ಎಂದು ಹೇಳಿದ್ದಾರೆ. ಈ ಬಿಜೆಪಿ ಶಾಸಕರಿಗೆ ಮುಸ್ಲಿಮರು ಹಿಂದೂಗಳಾಗಿರುವವರೆಗೂ ಅವರ ಕುರಿತಾಗಿ ಯಾವುದೇ ತಕರಾರಿಲ್ಲ.

ಅದೇ ದಿನದ ಮತ್ತೊಂದು ಸಮಾಚಾರದ ಪ್ರಕಾರ ಜಲ ಸಂಪನ್ಮೂಲ ಮಂತ್ರಿ ಉಮಾ ಭಾರತಿ ಅವರು “ಉತ್ತರಾಂಚಲದ ಕೇದಾರನಾಥ ಬಳಿಯ ದೇವಸ್ಥಾನದ ಸಮುಚ್ಛಯದಲ್ಲಿumabharathi-kedarnath 1882ರಲ್ಲಿ ಮಂದಾಕಿನಿ ಮತ್ತು ಸರಸ್ವತಿ ನದಿಗಳು ಹರಿಯುತ್ತಿದ್ದವು. ನಾಸ್ತಿಕರು ವ್ಯವಹಾರಕ್ಕಾಗಿ ಇಲ್ಲಿಗೆ ಬಂದರು. ವ್ಯವಹಾರವನ್ನು ಪ್ರಾರಂಬಿಸಿದರು. ಕ್ಷುಲ್ಲಕವಾದ ಸಂಗತಿಗಳಲ್ಲಿ ತೊಡಗಿದರು. ಇದರ ಫಲವಾಗಿಯೇ 2013ರಲ್ಲಿ ಕೇದಾರನಾಥ ದಲ್ಲಿ ಪ್ರವಾಹ ಉಕ್ಕಿಬಂದು ಸುಮಾರು 1000 ಜನ ತೀರಿಕೊಂಡರು” ಎಂದು ಹೇಳಿದ್ದಾರೆಂದು ವರದಿಯಾಗಿದೆ. ಕೇವಲ ಆರನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಆಕೆಯಿಂದ ಹೆಚ್ಚಿನದೇನನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಉಮಾಭಾರತಿಯವರ ಈ ದೃಷ್ಟಿಕೋನವು ನನಗೇನು ಆಶ್ಚರ್ಯವನ್ನುಂಟು ಮಾಡಲಿಲ್ಲ. ಆದರೆ ನನಗೆ ಆಶ್ಚರ್ಯವನ್ನುಂಟು ಮಾಡಿರುವುದು ನಾಸ್ತಿಕರು ಇಂಡಿಯಾದಲ್ಲಿ ವ್ಯವಹಾರ ಮಾಡಲು ಬಂದರು ಎನ್ನುವ ದೃಷ್ಟಿಕೋನದಿಂದ. ಆದರೆ ಗಂಗಾ ಶುದ್ಧೀಕರಣಕ್ಕಾಗಿ ನರೇಂದ್ರ ಮೋದಿಯವರಿಂದ ನೇಮಿಸಲ್ಪಟ್ಟಿರುವ ಉಮಾಭಾರತಿಯವರು ಈ ಗಂಗಾ ನದಿಯ ಕುರಿತಾಗಿ ಏನು ಹೇಳುತ್ತಾರೆಂದು ನನಗೆ ಕುತೂಹಲವಿದೆ. ಇದೇ ಪತ್ರಿಕೆಯಲ್ಲಿ ಸಮಾಜ ಮತ್ತು ಮಹಿಳಾ ಕಲ್ಯಾಣ ಸಚಿವೆ ಮನೇಕಾ ಗಾಂಧಿಯವರು ದನದ ಮಾಂಸದ ರಫ್ತಿನಿಂದಾಗಿ ಭಯೋತ್ಪಾದನೆ ಬೆಳೆಯುತ್ತಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ. ಉನ್ಮಾದದ, ಭ್ರಾಂತಚಿತ್ತರ ನಾಡಿನವರೆಂದು ಕರೆಯಲ್ಪಡುವ ನಮ್ಮ ಕುರಿತಾದ ಈ ವರದಿಗಳಿಗೆ ವಿದೇಶಿ ವರದಿಗಾರರು ಅಂತಹ ಹೆಚ್ಚಿನ ಗಮನ ಕೊಡಲಾರರೆಂದು ನಾನು ಭಾವಿಸಿದ್ದೇನೆ. ಆದರೆ ನನ್ನ ಈ ಆಶಯವೂ ವ್ಯರ್ಥವಾದದ್ದೆಂದು ನನಗೆ ಗೊತ್ತಾಯಿತು. ಏಕೆಂದರೆ ಕೆಲವು ದಿನಗಳ ಹಿಂದೆ ರಾಷ್ಟ್ರೀಯ ರೇಡಿಯೊವೊಂದರ ಸಂದರ್ಶನಕ್ಕೆ ಹೋಗಿದ್ದ ನನಗೆ ಅಮೇರಿಕಾದ ವರದಿಗಾರರೊಬ್ಬರು ಇಲ್ಲಿನ ವಿಜ್ಞಾನಿಗಳು ಈ ಜ್ಯೋತಿಷ್ಯ ಮತ್ತು ಜಾತಕಗಳನ್ನು ನಂಬಿ,ಆ ನಂಬಿಕೆಗಳ ಮೇಲೆ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಹಾರಿ ಬಿಡುತ್ತಾರೆ ಎಂದು ಅಚ್ಚರಿಯಿಂದ ನನ್ನನ್ನು ಪ್ರಶ್ನಿಸಿದ್ದರು. ( ಆಕೆ ಕೆಲವು ವಿಜ್ಞಾನಿಗಳನ್ನು ಸಂದರ್ಶಿಸಿದ್ದರು)

ಇಂಗ್ಲೀಷ್ ಮಾಧ್ಯಮದಲ್ಲಿ, ಆಧುನಿಕ ಶಿಕ್ಷಣದಲ್ಲಿ ವಿಧ್ಯಾಭ್ಯಾಸMangalyaan ಮಾಡಿರುವ ಭಾರತೀಯರು ಈ ಶನಿ, ಮಂಗಳ ಗ್ರಹಗಳ ಕುರಿತಾಗಿ ವೈಜ್ಞಾನಿಕವಾಗಿ ಪರಿಣಿತಿಯನ್ನು ಮತ್ತು ಜ್ಞಾನವನ್ನು ಹೊಂದಿರುತ್ತಾರೆ. ಅದೇ ಸಂದರ್ಭದಲ್ಲಿ ಇವರು ಮಂಗಳ, ಶನಿ ಗ್ರಹಗಳ ಕುರಿತಾಗಿ ಪುರಾಣದ ನಂಬಿಕೆಯ ಅಡಿಯಲ್ಲಿ ಭಯವನ್ನು ಸಹ ಹೊಂದಿರುತ್ತಾರೆ. ಈ ಮಂಗಳ ಮತ್ತು ಶನಿ ಗ್ರಹಗಳು ವಸ್ತುವಿನ ಸ್ವರೂಪದಲ್ಲಿ ಒಂದೇ ಆಗಿದ್ದರು ಸಹ ಭಾರತೀಯರು ಮಾತ್ರ ನಂಬಿಕೆ ಮತ್ತು ಆಚರಣೆಯ ಸಂದರ್ಭದಲ್ಲಿ ವಿಜ್ಞಾನ ಮತ್ತು ಪುರಾಣ ಎನ್ನುವ ಎರಡು ವಿರುದ್ಧ ನೆಲೆಗಳಲ್ಲಿ ನೆಮ್ಮದಿಯಿಂದಲೇ ಜೀವಿಸುತ್ತಾರೆ. ಹಿಂದೂ ನಂಬಿಕೆಯು ವಿಗ್ರಹಾರಾಧನೆಯ ಮೇಲೆ ಆಧರಿಸಿಲ್ಲ. ಬದಲಾಗಿ ಸ್ವಪ್ನದೃಷ್ಟವಾದದ ಮೇಲೆ ( ಕಲ್ಲುಗಳಲ್ಲಿ, ನದಿಗಳಲ್ಲಿ ಜೀವವಿದೆ ಎನ್ನುವಂತಹ) ಆಧರಿಸಿದೆ. ಹಿಂದೂ ನಂಬಿಕೆಯು ಬಹುರೂಪಿ ಸಂಸ್ಕೃತಿಗಳ ಮೇಲೆ, ಬಹುದೇವಾರಾಧನೆಗಳ ಮೇಲೆ ಆಧರಿಸಿಲ್ಲ. ಬದಲಾಗಿ ಎಲ್ಲೆಡೆಯೂ ದೇವರಿದ್ದಾನೆ, ದೇವನೊಬ್ಬನೇ, ಅದ್ವೈತವಾದ ಎನ್ನುವ ನಂಬಿಕೆಯ ಮೇಲೆ ಆಧರಿಸಿದೆ.mangal-Dev_01 ಈ ಬಗೆಯ ನಂಬಿಕೆಗಳು ಧಾರ್ಮಿಕ ಜಾಗಗಳಲ್ಲಿ ಸಹಜವಾದ ಜಗತ್ತನ್ನು ತಂದು ಕೂಡಿಸುತ್ತವೆ. ಈ ಬಗೆಯ ನಂಬಿಕೆಗಳು ಹಿಂದೂ ಧರ್ಮೀಯನಿಗೆ ರಾಹುಕಾಲ, ಗುಳಿಕಾಲಗಳ ಐಡಿಯಾಗಳನ್ನು ಪರಿಚಯಿಸುತ್ತವೆ. ಮಂತ್ರ ವಿದ್ಯೆಗಳ ಸಹಾಯದಿಂದ, ಪವಿತ್ರ ದಾರಗಳನ್ನು ಮಣಿಕಟ್ಟಿಗೆ ಕಟ್ಟಿಕೊಳ್ಳುವುದರ ಮೂಲಕ ತಾನು ಈ ದುರ್ವಿಚಾರಗಳಿಂದ ರಕ್ಷಿಸಲ್ಪಟ್ಟಿದ್ದೇನೆ ಎಂದು ಹಿಂದೂ ಧರ್ಮೀಯನು ನಂಬಿರುತ್ತಾನೆ. ಈ ಆಧುನಿಕ ಸಂದರ್ಭದಲ್ಲಿ ತನ್ನ ಈ ನಂಬಿಕೆಗಳ ಸಮರ್ಥನೆಗಾಗಿ ವೈಜ್ಞಾನಿಕವಾದ, ತರ್ಕಬದ್ಧವಾದ ವಿವರಣೆಗಳನ್ನು ಕಟ್ಟಿಕೊಂಡಿರುತ್ತಾನೆ ಎಂದೂ ನನಗೆ ಮನವರಿಕೆಯಾಗಿದೆ ಮತ್ತು ಈತನಿಗಾಗಿಯೇ ನಮ್ಮ ಸುದ್ದಿ ಮಾಧ್ಯಮಗಳು ಬರೆಯುತ್ತವೆ ಎಂದೂ ನನಗೆ ಸಂಪೂರ್ಣ ಮನವರಿಕೆಯಾಗಿದೆ

ಸರ್ಕಾರಿ ಶಾಲೆಯಲ್ಲಿ ಬಾಡೂಟ : ಅಪರಾಧವಲ್ಲ, ಅನುಕರಣೀಯ

– ಸರ್ಜಾಶಂಕರ ಹರಳಿಮಠ

ಕುರಿಕೋಳಿ ಕಿರುಮೀನು ತಿಂಬುವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು
ವಚನಕಾರ್ತಿ ಕಾಳವ್ವೆ

ಶಿವಮೊಗ್ಗ ಜಿಲ್ಲೆ ಸೊರಬದ ಶಾಲೆಯೊಂದರ ಶೈಕ್ಷಣಿಕ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವಿಸಿದ್ದು ಅನಗತ್ಯವಾಗಿ ವಿಶೇಷ ಸುದ್ದಿಯಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ರೀತಿ ಮಾಂಸಾಹಾರ ಸೇವಿಸಿದ್ದು ತಪ್ಪು ಎನ್ನುವ ರೀತಿಯಲ್ಲಿಯೂegg ಈ ಸುದ್ದಿ ಪ್ರಕಟವಾಗಿದೆ.

ಈ ದೇಶದ ನೂರು ಜನರಲ್ಲಿ ತೊಂಬತ್ತೈದಕ್ಕೂ ಹೆಚ್ಚು ಜನ ಮಾಂಸಾಹಾರಿಗಳೇ ಆಗಿದ್ದಾರೆ. ಸಹಜವಾಗಿ ಶಾಲಾಮಕ್ಕಳಲ್ಲಿಯೂ ಕೂಡ ಹೆಚ್ಚಿನವರು ಮಾಂಸಾಹಾರಿಗಳೇ ಆಗಿರುತ್ತಾರೆ. ಹೀಗಿರುವಾಗ ಶಾಲೆಯ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವನೆ ಹೇಗೆ ತಪ್ಪಾಗುತ್ತದೆ?

ಸಸ್ಯವಿಜ್ಞಾನಿ ಜಗದೀಶಚಂದ್ರ ಬೋಸರು ಸಸ್ಯಗಳಿಗೂ ಜೀವವಿದೆ ಎಂದು ಎಂದೋ ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದಾರೆ. ಇದನ್ನೇ ಉದಾಹರಿಸಿ ದೇವನೂರು ಮಹಾದೇವ ಅವರು ತಾತ್ವಿಕವಾಗಿ ಸಸ್ಯಾಹಾರಕ್ಕೂ ಮತ್ತು ಮಾಂಸಾಹಾರಕ್ಕೂ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದು ತರ್ಕಬದ್ಧವಾಗಿದೆ. ಸಸ್ಯಗಳ ಜೀವಹರಣಕ್ಕೂ ಪ್ರಾಣಿಗಳ ಜೀವಹರಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ನಾವೂ ತುಂಬ ಸೂಕ್ಷ್ಮಮತಿಗಳಾದರೆ ಚಾಕುವಿನಿಂದ ಸಸ್ಯ, ತರಕಾರಿಗಳನ್ನು ಕೊಯ್ಯುವಾಗಲೂ ಅವುಗಳ ನೋವಿನ ಆಕ್ರಂದನ ನಮಗೆ ಕೇಳಿಸಬಹುದು.

ಸಸ್ಯಾಹಾರ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎಂಬ ಪ್ರಚಾರ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಇದು ಜಾತಿವ್ಯವಸ್ಥೆಯನ್ನು ಕಾಯ್ದಿರಿಸಿಕೊಂಡು ಹೋಗುವ ಸ್ವಹಿತಾಸಕ್ತ ವರ್ಗದ ಒಂದು ವ್ಯವಸ್ಥಿತ ಹುನ್ನಾರ. ಈ ಹುನ್ನಾರಗಳು ಎಷ್ಟು ಯಶಸ್ವಿಯಾಗಿವೆ ಎಂದರೆ ದಮನಿತ ಜಾತಿಗಳ ಮುಂದಾಳುಗಳೇ ಈಗ ಸಸ್ಯಾಹಾರದ ಶ್ರೇಷ್ಟತೆಯನ್ನು ಪ್ರಚಾರ ಮಾಡುವ ವಕ್ತಾರರಾಗಿಬಿಟ್ಟಿದ್ದಾರೆ. ಹಾಗಾಗಿಯೇ ಪಕ್ಕಾ ಮಾಂಸಾಹಾರಿ ಮಾರಮ್ಮ, ಚೌಡಮ್ಮಗಳ ಗುಡಿಗಳ ಆವರಣದಲ್ಲಿಯೇ ಮಾಂಸಾಹಾರ ನಿಷೇಧಿಸಲ್ಪಟ್ಟಿದೆ. ಈ ಶಕ್ತಿಶಾಲಿ ದೈವಗಳೂ ಪಾನಕ, ಕೋಸಂಬರಿಗಳ ಮೂಲಕವೇ ಶಕ್ತಿವೃದ್ಧಿಸಿಕೊಂಡು ವೈರಿಗಳನ್ನು ನಿಗ್ರಹಿಸಬೇಕಾದ ದುರಂತ ಸ್ಥಿತಿ ಎದುರಾಗಿದೆ.

ಈಗ ಯಾವ ಹಬ್ಬ ಹರಿದಿನಗಳು ಬಂದರೂ ಮಾಂಸಮಾರಾಟ ನಿಷೇಧವನ್ನು ಜಾರಿಗೊಳಿsarja-1ಸಲಾಗುತ್ತದೆ. ಇದು ಎಲ್ಲಿಯವರೆಗೆ ಬಂದಿದೆ ಎಂದರೆ ಮಾಂಸಾಹಾರವನ್ನೇ ಪ್ರಧಾನ ಆಹಾರವಾಗಿ ಬಳಸುವ ದಮನಿತ ಜಾತಿಗಳ ಸ್ವಾಭಿಮಾನದ ಸಂಕೇತವಾದ ಅಂಬೆಡ್ಕರ್ ಅವರ ಜನ್ಮದಿನದಂದೂ ಮಾಂಸ ಮಾರಾಟವನ್ನು ನಿಷೇಧಿಸಲಾಗುತ್ತದೆ.

ಈಗ ಸರ್ಕಾರಿ ಹಾಸ್ಟೆಲ್ಲುಗಳಲ್ಲಿ ವಾರದಲ್ಲಿ ಒಂದು ದಿನ ಮಾಂಸಾಹಾರವನ್ನು ನೀಡಲಾಗುತ್ತದೆ. ಇದು ಸರಿಯಾದದ್ದು. ಅದೇ ರೀತಿ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿಯೂ ವಾರಕ್ಕೆ ಒಂದು ದಿನ ಮಾಂಸಾಹಾರವನ್ನು ನೀಡುವುದು ಸೂಕ್ತವಾದುದಾಗಿದೆ.
ಮಾಂಸಾಹಾರ ತಯಾರಿಕೆಗೆ ಹೆಚ್ಚಿನ ಮುತುವಜರ್ಿ ಬೇಕಾಗುತ್ತದೆ, ಹೆಚ್ಚಿನ ಸ್ವಚ್ಚತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂಬುದು ನಿಜ. ಇದೇನು ಪಾಲಿಸಲು ಅಸಾಧ್ಯವಾದ ಕೆಲಸವಲ್ಲ. ಎಸ್.ಎಂ ಕೃಷ್ಣ ಸಕರ್ಾರ ಶಾಲೆಗಳಲ್ಲಿ ಬಿಸಿಯೂಟ ಕೊಡುತ್ತೀವಿ ಎಂದು ಪ್ರಕಟಿಸಿದಾಗ ಅದನ್ನು ಜಾರಿಗೆ ತರಲಾಗದ್ದೆಂದು ಲೇವಡಿ ಮಾಡಿದವರೇ ಹೆಚ್ಚು ಜನ. ಆದರೆ ಅದು ಯಶಸ್ವಿಯಾಗಿದೆ. ಬಿಸಿಯೂಟ ತಯಾರು ಮಾಡುವವರು ಕೆಳಜಾತಿಯವರು ಎಂಬ ಕಾರಣಕ್ಕೆ ಊಟ ಬಹಿಷ್ಕರಿಸಿದ ಪ್ರಕರಣಗಳೂ ನಡೆದವು. ಆದರೆ ಕ್ರಮೇಣ ಸರಿ ಹೋಯಿತು. ಸರ್ಕಾರ ಬಿಸಿಯೂಟದಲ್ಲಿ ವಾರದಲ್ಲಿ ಒಂದು ದಿನ ಮಾಂಸಾಹಾರ ನೀಡಲು ಆರಂಭಿಸಿದರೆ ಅದೂ ಯಶಸ್ವಿಯಾಗುತ್ತದೆ.
ಮಾಂಸಾಹಾರದ ಪ್ರಶ್ನೆಯಿರುವುದು ಆಹಾರದ ಪ್ರಶ್ನೆಯಾಗಿ ಅಲ್ಲ. ಮನುಷ್ಯನೊಬ್ಬ ತಿನ್ನುವ ಆಹಾರದ ಮೂಲಕವೇ ಆತನನ್ನು ನೋಡುವ ದೃಷ್ಟಿಕೋನದ ಪ್ರಶ್ನೆ. ಡಾ.ರಹಮತ್ ತರೀಕೆರೆ ಅವರು ತಮ್ಮ ಮರದೊಳಗಣ ಕಿಚ್ಚು ಕೃತಿಯಲ್ಲಿ ವಿಶ್ಲೇಷಿಸುವ ಹಾಗೆ ಬಹುಸಂಸ್ಕೃತಿಗಳ ಈ ದೇಶದೊಳಗೆ ನಡೆದ, ಈಗಲೂ ನಡೆಯುತ್ತಿರುವ ದೊಡ್ಡ ದೌರ್ಜನ್ಯವೆಂದರೆ, ಸಂಸ್ಕೃತಿನಿಷ್ಟವೂ ಖಾಸಗಿಯೂ ಆದ ಉಣ್ಣುವ ವಸ್ತುಗಳನ್ನು, ಕನಿಷ್ಟ ಮತ್ತು ಶ್ರೇಷ್ಠವೆಂದು ವಿಂಗಡಿಸಿ ಪ್ರಮಾಣೀಕರಿಸಿರುವುದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧೀನದ ಸಂಸ್ಥೆಗಳಲ್ಲಿ ಮಾಂಸಾಹಾರದ ಸಾರ್ವತ್ರಿಕ ಬಳಕೆ ಅಗತ್ಯವಾಗಿದ್ದು ಅದಕ್ಕಾಗಿ ಒತ್ತಾಯಿಸಬೇಕಾಗಿದೆ.
ಸರ್ಕಾರಿ ಶಾಲೆಯಲ್ಲಿ ಬಾಡೂಟ ಮಾಡಿದರೆ ಅದು ಅಪರಾಧವಲ್ಲ, ಅನುಕರಣೀಯವಾದದ್ದು.

ಶಿಕ್ಷಕರಿಗೆ ಕ್ವಿಝ್: ಮಂತ್ರಿಯ ಅಧಿಕ’ಪ್ರಸಂಗ’!

– ದೀಪು, ಕುವೆಂಪು ನಗರ

ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಮೂವರು ಶಿಕ್ಷಕರನ್ನು ಕ್ವಿಝ್ ಮಾಡಿದ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದೇ ಹಿನ್ನೆಲೆಯಲ್ಲಿ ಶನಿವಾರ ಟಿ.ವಿ9 ಸುದ್ದಿ ವಾಹಿನಿ ರಾಜ್ಯದ ನೂರಾರು ಶಿಕ್ಷಕರನ್ನು ಇದೇ ರೀತಿಯ ಕ್ವಿಝ್ ಗೆ ಒಳಪಡಿಸಿ, ಬಹುತೇಕ ಶಿಕ್ಷಕರಿಗೆ ಗಾಂಧಿ ಜನ್ಮ ದಿನ, ವಿವೇಕಾನಂದರ ಜನ್ಮದಿನ, ಅವರೀರ್ವರು ಜಗತ್ತಿಗೆ ನೀಡಿದ ಸಂದೇಶಗಳ ಬಗ್ಗೆ ಗೊತ್ತಿಲ್ಲ ಎಂದು ಸಾರಿತು. ಸುದ್ದಿವಾಹಿನಿಯ ಚರ್ಚೆಯಲ್ಲಿ ಸ್ವತಹ ಶಿಕ್ಷಣ ಸಚಿವರೂ ಭಾಗವಹಿಸಿದ್ದರು. ಪ್ರಶ್ನೆ ಕೇಳುವ ಮೂಲಕ ‘ಶಿಕ್ಷಕ ಸಮುದಾಯವನ್ನು ದೂಷಿಸುವ ಉದ್ದೇಶ ನಮ್ಮದಲ್ಲ’ ಎಂದು ಸಚಿವರು ಚರ್ಚೆಯಲ್ಲಿ ಹೇಳಿದರೂ, ಅವರು ಅಂತಿಮವಾಗಿ ಮಾಡಿದ್ದು ಅದನ್ನೇ.

ಪ್ರಶ್ನೆ ಕೇಳುವುದರಲ್ಲಿ ಎರಡು ವಿಧ. ಶಾಲೆಗಳಲ್ಲಿ ಮಕ್ಕಳು ಆಗಾಗ ಶಿಕ್ಷಕರನ್ನು ಪ್ರಶ್ನಿಸುತ್ತಾರೆ. ಆಗ teachersಅವರಿಗೆ ಶಿಕ್ಷಕರಿಂದ ಮಾಹಿತಿ ಪಡೆಯುವ ಉದ್ದೇಶ ಇರುತ್ತದೆ. ಅಂದು ಒಂದು ರೀತಿಯಾದರೆ, ಇನ್ನೊಂದು, ಉತ್ತರ ಗೊತ್ತಿದ್ದೂ ಎದುರು ಇರುವವರ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಶ್ನೆ ಮಾಡುವುದು ಇನ್ನೊಂದು ಬಗೆ. ಕಾಂಗ್ರೆಸ್ ಕಚೇರಿಗೆ ಸಚಿವರನ್ನು ಹುಡುಕಿಕೊಂಡು ಬಂದಿದ್ದ ಮೂವರು ಶಿಕ್ಷಕರನ್ನು ಪ್ರಶ್ನೆ ಮಾಡಿದ್ದು, ಅದೂ ಮಾಧ್ಯಮದವರ ಎದುರು, ಎರಡನೇ ಮಾದರಿಗೆ ಸೇರುತ್ತದೆ.

ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ಕೋಲಾರದ ಶಿಕ್ಷಕರು ಬಂದದ್ದು ಅಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯಿಂದ ತುಂಬಾ ಕಿರುಕುಳ ಆಗುತ್ತಿದೆ ಎಂಬ ಅಹವಾಲು ಮಂಡಿಸಲು. ಅವರನ್ನು ದಯವಿಟ್ಟು ಬೇರೆಡೆಗೆ ವರ್ಗಮಾಡಿಕೊಡಿ ಎಂಬುದು ಅವರ ಬೇಡಿಕೆ. ಆ ಸಂದರ್ಭವನ್ನು ಒಮ್ಮೆ ವಿಶ್ಲೇಷಿಸೋಣ. ಶಿಕ್ಷಣ ಇಲಾಖೆಯ ತೀರಾ ಕೆಳಹಂತದ ಸಿಬ್ಬಂದಿ ಅವರು. ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಂತಹ ಶಿಕ್ಷಕರನ್ನು ನಾನಾ ರೀತಿಯಲ್ಲಿ ಷೋಷಣೆಗೆ ಒಡ್ಡುತ್ತಿರುತ್ತಾರೆ ಎನ್ನುವುದು ಗೊತ್ತಿರುವ ಸಂಗತಿ. ಇಂತಹ ಶಿಕ್ಷಕರು ಭೇಟಿ ಮಾಡಲು ಬಂದದ್ದು ತಮ್ಮ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿರುವ ಮಂತ್ರಿಯನ್ನು.

ಇಲಾಖೆಯ ಸಿಬ್ಬಂದಿಯಿಂದ ಆಗುತ್ತಿರುವ ಕಿರುಕುಳದಿಂದ ಪಾರು ಮಾಡಲು ನೆರವು ಕೋರಲು ಬಂದ ಶಿಕ್ಷಕರಿಗೆ, ಈ ಪ್ರಸಂಗದಿಂದ ತಾವೇ ದೂಷಣೆಗೆ ಒಳಗಾಗುತ್ತೇವೆ ಎಂಬ ಕಲ್ಪನೆ ಎಳ್ಳಷ್ಟೂ ಇರಲಿಕ್ಕೆ ಸಾಧ್ಯವಿಲ್ಲ. ಶಿಕ್ಷಕರು ಪ್ರಶ್ನೆಗಳಿಗೆ ಉತ್ತರ ಹೇಳದೇ ಹೋಗಿದ್ದರ ಬಗ್ಗೆ ನಂತರ ಚರ್ಚಿಸೋಣ. ಸದ್ಯ, ಶಿಕ್ಷಣ ಮಂತ್ರಿ ತನ್ನ ಕರ್ತವ್ಯ ನಿರ್ವಹಿಸಿದರೇ, ಎನ್ನುವುದು ಮುಖ್ಯ ಪ್ರಶ್ನೆ. ಆ ಶಿಕ್ಷಕರ ನೋವು, ಅನುಭವಿಸುತ್ತಿರುವ ಅವಮಾನ, ಕಿರುಕುಳ ಅದಕ್ಕೆ ಕಾರಣ ಆಗಿರುವ ಅಧಿಕಾರಿ ಸಿಬ್ಬಂದಿಗಳ ಮಾಹಿತಿ ಪಡೆದುಕೊಳ್ಳದೆ, ವರ್ಗಾವಣೆ ವಿಚಾರಕ್ಕೆ ರಜೆ ಹಾಕಿಕೊಂಡು ಇಲ್ಲಿಗೆ ಬಂದಿದೀರಾ..ಅಂತ ಕೇಳುತ್ತಾರೆ ಸಚಿವರು. ಹೌದು ಸ್ವಾಮಿ, ಅವರು ಇರುವ ಸ್ಧಳದಲ್ಲಿಯೇ ಅವರ ಸಮಸ್ಯೆಗಳನ್ನು ಕೇಳಿ ಪರಿಹರಿಸುವ ವ್ಯವಸ್ಥೆ ಇಲ್ಲದ ಕಾರಣ, ಶಿಕ್ಷಕರು ರಜೆಹಾಕಿ ಬರಬೇಕಾಯಿತು, ಅದರಲ್ಲಿ ತಪ್ಪೇನು? ಪಾಪ, ಅವರು ತಮ್ಮ ಕಷ್ಟ ಹೇಳಿಕೊಳ್ಳಲುkimmane-ratnakar ಬಂದರೆ, ಅವರನ್ನು ಪ್ರಶ್ನೆ ಕೇಳಿ ಕಿಚಾಯಿಸುತ್ತೀರಾ?

ಚಿಕ್ಕಮಕ್ಕಳಲ್ಲಿ ಒಂದು ಅಭ್ಯಾಸ ಇರುತ್ತೆ. ದೈಹಿಕವಾಗಿ ತಮಗಿಂತ ದುರ್ಬಲರಾದವರನ್ನು ಗೇಲಿ ಮಾಡುವುದು. ಅವರಿಂದ ಬೇಕೆಂದೇ ಏನನ್ನೋ ಕಸಿದುಕೊಂಡು, ಅಟ್ಟಿಸಿಕೊಂಡು ಬರುವಂತೆ ಮಾಡುವುದು. ಜೋರಾಗಿ ಓಡಲಾಗದೆ, ಪರಿತಪಿಸುವುದನ್ನು ಕಂಡು ಎಂತಹದೋ ಖುಷಿ ಅನುಭವಿಸುವ ಚಾಳಿಯದು. ಆ ಖುಷಿ ಕೆಲವೊಮ್ಮೆ ವಿಕೃತಿ ಮಟ್ಟಕ್ಕೂ ಹೋಗಬಹುದು. ಈ ಸಚಿವ-ಶಿಕ್ಷಕರ ಪ್ರಕರಣದಲ್ಲಿ ಇದೇ ತರಹದ ವರ್ತನೆಯ ನೆರಳುಗಳು ಕಾಣುತ್ತವೆ. ಗಾಂಧಿ ಹುಟ್ಟಿದ ದಿನ ಯಾವುದು, ವಿವೇಕಾನಂದರ ಹುಟ್ಟಿದ ದಿನ ಯಾವುದು? ಅನ್ ಟೊ ದ ಲಾಸ್ಟ್ ಬರೆದವರಾರು ಎಂಬ ಪ್ರಶ್ನೆಗಳನ್ನು ಸಚಿವರು ಕೇಳಿದ್ದಾರೆ. ಶಿಕ್ಷಕರು ಉತ್ತರ ಹೇಳದೆ ತಡಬಡಾಯಿಸಿದ್ದಾರೆ. ಮರೆಯಬಾರದ ಮುಖ್ಯ ಸಂಗತಿ ಎಂದರೆ ಇದೆಲ್ಲವೂ ನಡೆದದ್ದು ಮಾಧ್ಯಮದ ಕೆಮರಾಗಳು ಚಾಲ್ತಿಯಲ್ಲಿದ್ದಾಗ.

ಒಬ್ಬ ಜವಾಬ್ದಾರಿಯುತ ಸಚಿವ ಹೀಗೆ ತನ್ನ ಸಿಬ್ಬಂದಿಯ ಅಸಹಾಯಕತೆಯನ್ನು ಟಿವಿ ಕೆಮರಾಗಳ ಮುಂದೆ ಹರಾಜಿಗಿಟ್ಟಿದ್ದು ಸರಿಯೆ? ಈ ಶಿಕ್ಷಕರು ನಾಳೆ ಶಾಲೆಗೆ ಹೋದಾಗ, ಮಕ್ಕಳು ಏನೆಂದಾರು? ಪೋಷಕರ ಪ್ರತಿಕ್ರಿಯೆ ಏನಿರಬಹುದು? ಅಷ್ಟೇ ಅಲ್ಲ, ಇವರು ಯಾರ ಕಾಟದಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದರೋ, ಅವರಿಂದ ಎದುರಿಸಬಹುದಾದ ತೊಂದರೆಗಳೇನು..ಎನ್ನುವುದರ ಕನಿಷ್ಟ ಅರಿವು ಈ ಸಚಿವರಿಗೆ ಇರಬೇಕಿತ್ತಲ್ಲ? ಔಚಿತ್ಯ ಪ್ರಜ್ಞೆ ಇಲ್ಲದ ಸಚಿವರು, ಕೆಮರಾಗಳ ಮುಂದೆಯೇ, ಶಿಕ್ಷಕರ ಉತ್ತರಗಳಿಂದ ಬೇಸತ್ತು ತಲೆ ಚಚ್ಚಿಕೊಳ್ಳುತ್ತಾರೆ, ನಿಮ್ಮಿಂದ ಹುಡುಗರು ಏನು ಪಾಠ ಕಲಿಯುತ್ತಾರೋ ಎಂದು ಮೂದಲಿಸುತ್ತಾರೆ. ತನ್ನ ಶಿಕ್ಷಕರನ್ನು ಮೂದಲಿಸುವ ಮೂಲಕ ತನ್ನನ್ನು ತಾನೇ ಹೀಯಾಳಿಸಿಕೊಳ್ಳುತ್ತಿದ್ದೇನೆ ಎಂದು ಸಚಿವರು ಅರ್ಥಮಾಡಿಕೊಳ್ಳಬೇಕಿತ್ತಲ್ಲವೆ?

ಗಾಂಧಿ ಮತ್ತು ವಿವೇಕಾನಂದರ ಹುಟ್ಟಿದ ದಿನಗಳನ್ನು ತಕ್ಷಣಕ್ಕೆ ಹೇಳದೇ ಹೋದರೆ, ಅವರು ದಡ್ಡರೆಂದು ಅರ್ಥವೆ? ಕೆಲವು ಸಂದರ್ಭಗಳಲ್ಲಿ ಎಂತಹ ಸಲೀಸಾದ ಉತ್ತರವೇ ಆದರೂ, ಹೇಳಲಾಗದೇ ಹೋಗಬಹುದು. ಇಲ್ಲಿಯೂ ಅಂತಹದೇ ಪರಿಸ್ಥಿತಿ ಇತ್ತು. ಪ್ರಶ್ನೆ ಕೇಳುತ್ತಿರುವವರು ಮಂತ್ರಿ, ಸುತ್ತಲೂ ಮಾಧ್ಯಮದವರು, ಕೆಮರಾಗಳು. ಆ ಕ್ಷಣಕ್ಕೆ ಅಧೀರರಾಗಿರುತ್ತಾರೆ. ಮೇಲಾಗಿ, ತಾವು ಬಂದಿರುವ ಉದ್ದೇಶ ಈಡೇರದೆ ಇಡೀ ಸನ್ನಿವೇಶ ತಮಗೆ ಉಲ್ಟಾ ಹೊಡೆಯುತ್ತಿರುವಾಗ, ತಲೆಯಲ್ಲಿ ಒಮ್ಮೆಲೆ ನೂರೆಂಟು ಆಲೋಚನೆಗಳು ಧುಮುಕಿ, ಉತ್ತರ ಹೊಳೆಯದಂತಾಗಬಹುದು. ಕೆಮರಾಗಳನ್ನು ನೋಡಿ, ನಾಳೆ ನಮ್ಮ ಮುಖಗಳೆಲ್ಲಾ ಟಿವಿಯಲ್ಲಿ ಪ್ರಸಾರವಾಗಿ, ನಾವು ಯಾರ ವಿರುದ್ಧ ದೂರು ಕೊಡಲು ಬಂದಿದ್ದೇವೋ, ಅವರಿಗೆ ದೂರು ಕೊಡಲು ಹೋಗಿದ್ದು ನಾವೇ ಎಂಬುದು ಗೊತ್ತಾಗಿ ಏನೇನೆಲ್ಲಾ ಎದುರಿಸಬೇಕಾಗುತ್ತೋ ಎಂಬೆಲ್ಲಾ ಆಲೋಚನೆ, ಆತಂಕಗಳ ಮಧ್ಯೆ ಅವರಿಗೆ ಉತ್ತರಗಳು ಹೊಳೆಯುವುದು ಕಷ್ಟ ಆಗಿರಬಹುದು.

ಅಷ್ಟೇ ಅಲ್ಲ, ಸಚಿವರ ಮಾತಿನ ಧಾಟಿ (ಆರಂಭದಿಂದಲೇ) ತಮ್ಮನ್ನು ಭೇಟಿ ಮಾಡಲು ಬಂದ ಶಿಕ್ಷಕರು ತಪ್ಪಿತಸ್ಥರು ಎಂಬುದನ್ನು ಸಾರಿ ಹೇಳುತ್ತಿತ್ತು. ಅಪ್ಪಿ ತಪ್ಪಿ ಮೊದಲಿನ ಪ್ರಶ್ನೆಗೆ ಆತ್ಮವಿಶ್ವಾಸದಿಂದ ಉತ್ತರ ಕೊಟ್ಟಿದ್ದರೂ, ಸಚಿವರು ಸುಮ್ಮನಾಗುತ್ತಿದ್ದರು ಎಂಬ ಗ್ಯಾರಂಟಿ ಇಲ್ಲ. ಏಕೆಂದರೆ ಇವರನ್ನು ಅಸಮರ್ಥರೆಂದು ತೋರಿಸುವುದೇ ತಮ್ಮ ಉದ್ದೇಶವೆಂಬಂತೆ ಅವರು ವರ್ತಿಸುತ್ತಿದ್ದರು. ಗಾಂದಿ ಜಯಂತಿಯನ್ನು ಸರಿಯಾಗಿ ಹೇಳಿಬಿಟ್ಟಿದ್ದರೆ, ನಂತರ ಎಲ್ಲರೂ ಸಾಲಾಗಿ ನಿಂತು ತಪ್ಪಿಲ್ಲದೆ, ಜನಗಣ ಮನ ಹಾಡಿ ನೋಡೋಣ ಎನ್ನುತ್ತಿದ್ದರೇನೋ.

ಪ್ರಶ್ನೆಗಳನ್ನು ಕೇಳುವ ಮೂಲಕ ಎಂಥವರನ್ನೂ ಇಕ್ಕಟ್ಟಿಗೆ ಸಿಲುಕಿಸುವುದು ಸುಲಭ. ಇದೇ ಮಂತ್ರಿಗಳನ್ನು ಕೇಳಬಹುದು, “ದೇಶದ ಮೊದಲ ಶಿಕ್ಷಣ ಮಂತ್ರಿ ಯಾರು ಗೊತ್ತೇನ್ರಿ..?”, “ಕೊಠಾರಿ ಕಮೀಷನ್ ಯಾವಾಗ ನೇಮಕ ಆಯ್ತು, ಅದು ಯಾವಾಗ ವರದಿ ಕೊಟ್ಟಿತು, ಅದರ ಪ್ರಮುಖ ಸಲಹೆಗಳೇನು”.. ಹೀಗೆ ಈ ಮಂತ್ರಿಯವರು ಉತ್ತರ ಹೇಳಲಾಗದ ಪ್ರಶ್ನೆ ಹುಡುಕಿ ಕೇಳುವುದು ಕಷ್ಟವೇನಲ್ಲ. ಟಿವಿ9 ಸಿಬ್ಬಂದಿ ಶಾಲೆಗಳಿಗೆ ಹೋಗಿ ಶಿಕ್ಷಕರನ್ನು ಪ್ರಶ್ನೆ ಕೇಳಿತ್ತಲ್ಲ, ಅದೇ ಶಿಕ್ಷಕರು “ರೀ ನಮ್ಮನ್ನು ಕೇಳೋಕೆ ಬಂದಿದಿರಲ್ಲ, ಪ್ರಪಂಚದಲ್ಲಿ ಮೊದಲು ಪತ್ರಿಕೆ ಹುಟ್ಟಿದ್ದು ಎಲ್ಲಿ ಗೊತ್ತಾ? ಜೋಸೆಫ್ ಪುಲಿಟ್ಜರ್ ಯಾರು ಗೊತ್ತಾ? ಅವನ ಸಾಧನೆ ಗೊತ್ತಾ? ವಾಟರ್ ಗೇಟ್ ಹಗರಣದ ಬಗ್ಗೆ ಸ್ವಲ್ಪ ಹೇಳಿ ನೋಡೋಣ. ಹೋಗಲಿ All the President’s Men ಸಿನಿಮಾ ಗೊತ್ತಾ?.” – ಎಂದೆಲ್ಲಾ ಕೇಳಿ ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು.

ಅರ್ಥಾತ್, ಪ್ರಶ್ನೆಗಳನ್ನು ಕೇಳುವ ಮೂಲಕ ಎಂತಹವರನ್ನೂ ಇಕ್ಕಟ್ಟಿಗೆ ಸಿಲುಕಿಸಬಹುದು. ಉತ್ತರ ಗೊತ್ತಿಲ್ಲದವರನ್ನು ತೀವ್ರ ಹಳಹಳಿಕೆಗೆ ದೂಡುವುದು, ಅವಮಾನ ಮಾಡುವುದು ಸಲೀಸು. ಇದು ಸ್ವಲ್ಪ ಹೆಚ್ಚು ತಿಳಿದುಕೊಂಡವರು, ಕಡಿಮೆ ತಿಳಿದುಕೊಂಡವರ ಮೇಲೆ ನಡೆಸುವ ದಬ್ಬಾಳಿಕೆ, ಶೋಷಣೆ ಅಷ್ಟೆ. ಉತ್ತರ ಹೇಳದ ಶಿಕ್ಷಕರನ್ನು ಟಿವಿ ಕೆಮರಾಗಳ ಮುಂದೆ exhibit ಮಾಡಿ ಅವರನ್ನು ನಾಲಾಯಕ್ (ಶಿಕ್ಷಣ ಮಂತ್ರಿಯವರೇ ಬಳಸಿದ ಪದ) ಎಂದು ಘೋಷಿಸುವ ಮನಸ್ಥಿತಿಯ ಹಿತ್ತಲಿನಲ್ಲಿ ಜಾತಿ, ಹಣ, ಅಕ್ಷರ ಜ್ಞಾನದಿಂದ ವಂಚಿತರಾದವರನ್ನು ನೂರಾರು ವರ್ಷಗಳ ಕಾಲ ನಿಕೃಷ್ಟವಾಗಿ ಕಂಡ ಬಹುಜನ ವಿರೋಧಿ ಆಲೋಚನೆಯ ಪಳೆಯುಳಿಕೆಗಳಿವೆ.

ಹುಟ್ಟಿದ ಜಾತಿಯ ಕಾರಣಕ್ಕೋ, ಬಡತನದ ಕಾರಣಕ್ಕೋ ಉತ್ತಮ ವಿದ್ಯಾಭ್ಯಾಸದಿಂದ ವಂಚಿತರಾದವರು ಆಗಾಗ ಇಂತಹ ಅವಮಾನಗಳನ್ನು ಅನುಭವಿಸಿರುತ್ತಾರೆ. ಚಿಕ್ಕಂದಿನಿಂದ ಕನ್ನಡ ಶಾಲೆಯಲ್ಲಿ ಓದಿದವರು ಒಮ್ಮೆಲೆ ಪದವಿ ಹಂತಕ್ಕೆ ಇಂಗ್ಲಿಷ್ ಓದಬೇಕಾಗಿ ಬಂದಾಗ, ತೀವ್ರ ಕಷ್ಟ ಪಡುತ್ತಿರುತ್ತಾರೆ. ಆದರೆ ಮೊದಲಿನಿಂದಲೂ ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದಿ ಬಂದವರ ಮುಂದೆ ಅವರು ಎರಡನೇ ದರ್ಜೆಯ ವಿದ್ಯಾರ್ಥಿಗಳಂತೆ ಕಾಣುತ್ತಾರೆ. ಪಾಠಮಾಡುವ ಕೆಲ ಶಿಕ್ಷಕರೂ ಇದೇ ಭಾವನೆಗಳನ್ನು ಪೋಷಿಸಿದರೆ, ಅವರು ಮತ್ತಷ್ಟು ಅವಮಾನಕ್ಕೀಡಾಗಿ ದಿನ ನೂಕುತ್ತಿರುತ್ತಾರೆ. ಅಂತಹ ಅವಮಾನಗಳನ್ನು ಅನುಭವಿಸಿದವರಿಗೆ ಮಾತ್ರ ಈ ಶಿಕ್ಷಕ-ಮಂತ್ರಿ ಪ್ರಶ್ನೋತ್ತರ ಘಟನೆಯನ್ನು ಬೇರೊಂದು ಕೋನದಿಂದ ನೋಡಲು ಸಾಧ್ಯ.

ಕಿಮ್ಮನೆ ರತ್ನಾಕರ ಅವರು ಇಂತಹದೊಂದು ಕ್ವಿಝ್ ಕಾರ್ಯಕ್ರಮ ನಡೆಸುವುದರ ಮೂಲಕ ಸಾಧಿಸಿದ್ದೇನೆಂದರೆ, ಇನ್ನು ಮುಂದೆ ಶಿಕ್ಷಕರು ಅವರನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ. “ಯಾಕೆ ಬೇಕು ಗುರು, ಸುಮ್ನೆ ಏನೇನೋ ಪ್ರಶ್ನೆ ಕೇಳಿ ಅವಮಾನ ಮಾಡ್ತಾರೆ, ಅವರ ತಂಟೆಯೇಕೆ” ಎಂದುಕೊಂಡು ಶಿಕ್ಷಕರು ಸಾಧ್ಯವಾದಷ್ಟು ಅವರಿಂದ ದೂರ ಇರಲು ಬಯಸಬಹುದು. ನಿಜಕ್ಕೂ ವಿಪರ್ಯಾಸ ಎಂದರೆ, ಟಿವಿಯವರು ಕೆಮರಾ ಹಿಡಿದು ಪ್ರಶ್ನೆ ಕೇಳಲು ಹೋದಾಗ, “ರೀ..ನೀವೇನು ವಿಷಯ ಪರಿವೀಕ್ಷಕರಾ (subject inspector), ನಮ್ಮ ಅಧಿಕಾರಿನಾ..ಪ್ರಶ್ನೆ ಕೇಳೋಕೆ. ನಮ್ಮ ಬುದ್ಧಿಮತ್ತೆ ಪರೀಕ್ಷೆ ಮಾಡೋಕೆ ನೀವ್ಯಾರು..?” – ಎಂದು ಯಾವ ಶಿಕ್ಷಕರೂ ಹೇಳಲಿಲ್ಲವೇ? ನಮ್ಮ ಶಿಕ್ಷಕರು ಮುಖ್ಯವಾಗಿ ಬೆಳೆಸಿಕೊಳ್ಳಬೇಕಾಗಿರುವುದು ತಮ್ಮ ವೃತ್ತಿಗಿರುವ ಘನತೆಯನ್ನು. ಆ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆದರೆ ಸಂಬಂಧ ಪಟ್ಟ ಮಂತ್ರಿಯೇ ಹೀಗೆ ವರ್ತಿಸಿದಾಗ, ಅದು ಕಷ್ಟವಾಗುವುದು ಸಹಜ.

ಹಿಂದೊಮ್ಮೆ ಸುವರ್ಣ ಸುದ್ದಿ ವಾಹಿನಿಯವರು ನಮ್ಮ ಮಂತ್ರಿಗಳ ಚಾಲಕರಾಗಿರುವವರ ಬಳಿ ಎಷ್ಟು ಮಂದಿ ಚಾಲನಾ ಪರವಾನಗಿ ಪಡೆದಿದ್ದಾರೆ ಎಂದು ಒಂದು ರಿಯಾಲಿಟಿ ಚೆಕ್ ಮಾಡಲು ಹೋಗಿದ್ದರು. ಆಗ ರೋಶನ್ ಬೇಗ್ ವಾಹನ ತಡೆದು ನಿಲ್ಲಿಸಿ, ದಾಖಲೆಗಳನ್ನು ಕೇಳಿದಾಗ, ಬೇಗ್ ಅವರು, “ದಾಖಲೆ ಕೇಳೋಕೆ ನೀವೇನು ಸಾರಿಗೆ ಇಲಾಖೆಯವರಾ..ಸುಮ್ಮನೆ ಹೋಗ್ರೀ..”ಎಂದು ಸಾಗಹಾಕಿದ್ದರು. ಶಿಕ್ಷಕರು ಅದನ್ನೇ ಮಾಡಬೇಕಿತ್ತು.