Monthly Archives: September 2014

ಸಾಮಾಜೀಕರಣಗೊಳ್ಳದ ಲೈಂಗಿಕತೆಯ ಸವಾಲು


– ರೂಪ ಹಾಸನ


 

ನಮ್ಮ ಜೀವವಿಕಸನ ಪ್ರಕ್ರಿಯೆಯಲ್ಲಿ ಎಷ್ಟೋ Stages in human evolutionಶತಮಾನಗಳ ಕಾಲ ಹೆಣ್ಣು- ಗಂಡುಜೀವಿಗಳ ಪ್ರತ್ಯೇಕತೆಯಿಲ್ಲದೆ ಒಂದೇ ಜೀವಿಯಿಂದಲೇ ಸಂತಾನೋತ್ಪತ್ತಿ ಮತ್ತು ವಂಶಾಭಿವೃದ್ಧಿ ನಡೆಯುತ್ತಿತ್ತಂತೆ. ಆದರೆ ಆಗ ಒಂದೇ ಬಗೆಯ ವರ್ಣತಂತು[ಜೀನ್]ಗಳಿರುವ ಜೀವಿಗಳು ಉತ್ಪತ್ತಿಯಾಗಿ, ಅವುಗಳ ಆರೋಗ್ಯದ ಗುಣಮಟ್ಟ, ಬದುಕುವ ಸಾಮರ್ಥ್ಯ ಅಷ್ಟಾಗಿ ಇರಲಿಲ್ಲವಾದ ಕಾರಣವಾಗಿ ಎಷ್ಟೋ ಕಾಲದ ನಂತರ ಈ ಕೊರತೆಯನ್ನು ತುಂಬಲು ಜೀವವಿಕಸನದ ಹಾದಿಯ ಮಧ್ಯದಲ್ಲಿ ಹೆಣ್ಣು-ಗಂಡುಜೀವಿಗಳ ಸೃಷ್ಟಿಯಾಯಿತು, ಲೈಂಗಿಕ ಕ್ರಿಯೆಯ ಮೂಲಕ ಹುಟ್ಟುವ ಜೀವಿಗಳ ವೈವಿಧ್ಯತೆ ಮತ್ತು ಆಯಸ್ಸು ಹೆಚ್ಚಿತು. ಆದರೆ ಇಂದು ಅದರ ಜೊತೆಗೇ ಕಾಮವು ಜಟಿಲಗೊಳ್ಳುತ್ತಾ ಹೋಗಿ ವಿಕೃತ ರೂಪವನ್ನು ಪಡೆದು ಕ್ರೂರವಾಗಿ ನಮ್ಮ ಸುತ್ತ ಕುಣಿಯುತ್ತಿದೆ.

ಇಂದು ಜಗತ್ತಿನ ಮೂರನೇ ಅತಿ ಹೆಚ್ಚಿನ ಲಾಭದಾಯಕ ಉದ್ದಿಮೆ ಸೆಕ್ಸೋದ್ಯಮವಾಗಿದೆ. ಜೊತೆಗೆ ವಿಸ್ತ್ರತವೂ, ಕಡಿವಾಣವಿಲ್ಲದ್ದೂ ಆದ ಹೆಣ್ಣುಮಕ್ಕಳ ಮಾರಾಟ ಜಾಲ, sex-sellsಹೆಣ್ಣುಮಕ್ಕಳ ಮೇಲಿನ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು, ಹದಿಹರೆಯದವರ ಮುಕ್ತಕಾಮ ತಂದೊಡ್ಡುತ್ತಿರುವ ಆಧುನಿಕ ಸಾಮಾಜಿಕ ಸಮಸ್ಯೆಗಳು, ಅನೈತಿಕ ಸಂಬಂಧಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳ ಹೆಚ್ಚಳ, ಎಗ್ಗಿಲ್ಲದೇ ನಡೆಯುತ್ತಿರುವ ಅವಿವಾಹಿತ ಹೆಣ್ಣುಮಕ್ಕಳ ಗರ್ಭಪಾತಗಳು, ಅತಿ ಹೆಚ್ಚು ಮಾರಾಟವಾಗುತ್ತಿರುವ ಸಂತಾನನಿರೋಧಕ ಸಾಮಗ್ರಿಗಳು, ಹೆಚ್ಚುತ್ತಿರುವ ಹೆಚ್ಐವಿ, ಏಡ್ಸ್, ಗನ್ಹೋರಿಯಾ ಮುಂತಾದ ಭೀಕರ ಲೈಂಗಿಕ ಗುಪ್ತರೋಗಗಳು……. ಹೀಗೆ ಸೆಕ್ಸ್ ಕೇಂದ್ರೀಕರಿಸಿರುವ ಸಾಮಾಜಿಕ ಸಮಸ್ಯೆಗಳ ಸಾಗರವೇ ಎದುರಾಗಿ ಸಮಾಜ ಆತಂಕದಲ್ಲಿ ತಲ್ಲಣಿಸುವಂತಾಗಿದೆ.

ನಮ್ಮ ಇಂದಿನ ಭಾರತದಲ್ಲಿಯಷ್ಟೇ ಅಲ್ಲ ವಿಶ್ವದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೂ ಲೈಂಗಿಕತೆಯ ವೈಪರೀತ್ಯದಿಂದ ಉಂಟಾಗುತ್ತಿರುವ ವಿಕೃತ ಪ್ರಕರಣಗಳು ಹೆಚ್ಚಾಗುತ್ತಿರುವುದು ಮೇಲ್ನೋಟಕ್ಕೇ ಗೋಚರಿಸುತ್ತದೆ. ಇವು ಹಿಂದೆಯೂ ಇತ್ತು. ಈಗ ಕಾನೂನಿನ ಅರಿವು ಹೆಚ್ಚಾಗಿ, ದಾಖಲಾಗುವ ಪ್ರಮಾಣ ಜಾಸ್ತಿಯಾಗಿದೆಯಷ್ಟೇ ಎಂಬುದೊಂದು ಮಾತೂ, ‘ಇವೆಲ್ಲ ಇಲ್ಲಿ ಅತ್ಯಂತ ಸಹಜ’ ಎಂಬ ದನಿಯಲ್ಲಿ ಕೇಳಿಬರುತ್ತಿರುತ್ತದೆ. ಹಿಂದೆಯೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದುದು ನಿಜ. ಹಾಗೇ ಇಂದು ಅವುಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗಿರುವುದರ ಜೊತೆಗೆ ಅವು ಘಟಿಸುತ್ತಿರುವ ಪ್ರಮಾಣ ಹೆಚ್ಚಾಗಿರುವುದೂ ಅಷ್ಟೇ ನಿಜ.

ಜಾಗತೀಕರಣವೆಂಬ ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ ಹೆಸರಿನ ಬಿರುಗಾಳಿ ಹೆಣ್ಣಿನ ದೇಹವನ್ನು ಸರಕಾಗಿ ವಿಜೃಂಭಿಸುವ ಜೊತೆಗೆ ಲೈಂಗಿಕತೆಯನ್ನು ವಿಕೃತವಾಗಿ ಪ್ರಚೋದಿಸಲಾರಂಭಿಸಿದ ಈ ಎರಡು-ಮೂರು ದಶಕಗಳಿಂದ ಸಭ್ಯತೆಯ ಹೆಸರಿನೊಳಗೆ ಸಾಮಾಜಿಕ ಚೌಕಟ್ಟಿನಲ್ಲಿದ್ದ ಲೈಂಗಿಕತೆ ಲಂಗುಲಗಾಮಿಲ್ಲದಂತಾಗಿದೆ. ಅದರಲ್ಲೂ ಕೆಲ ದೃಶ್ಯ ಮಾಧ್ಯಮದ ವಿಕೃತ ಛಾನೆಲ್ಲುಗಳು, ಅಂಕೆಯಿಲ್ಲದ ಅಶ್ಲೀಲ ವೆಬ್ಸೈಟ್ ಗಳು, ಸಿನಿಮಾ, ಲೈವ್ ಶೋಗಳು, ಯಾರು ಯಾವಾಗ ಬೇಕಾದರೂ ಎಲ್ಲೆಂದರಲ್ಲಿ ಇವುಗಳನ್ನು ನೋಡಬಲ್ಲ ಸಾಧ್ಯತೆಗಳಿರುವ ಮೊಬೈಲ್ ಗಳು ಕೀಳು ಅಭಿರುಚಿಯನ್ನು ನಿರ್ಮಾಣ ಮಾಡುತ್ತಾ ವೇಗದ ವಿಕೃತ ಸಾಮಾಜಿಕ ಬೆಳವಣಿಗೆಯಾಗಿ ನಮ್ಮನ್ನು ಅಪ್ಪಳಿಸುತ್ತಿದೆ.

ಇದಕ್ಕೆ ಕಾನೂನನ್ನು ಬಲಗೊಳಿಸುವುದು, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು, ಹೆಣ್ಣುಮಕ್ಕಳ ಚಲನಶೀಲತೆಯನ್ನು ನಿರ್ಬಂಧಿಸುವುದು, ಅವರಿಗೆ ಕರಾಟೆ ಕಲಿಸುವುದು, ವಸ್ತ್ರಸಂಹಿತೆ ಅಳವಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರ ಅಳವಡಿಸುವುದು, ಎಲ್ಲರನ್ನೂ ಅನುಮಾನದಿಂದ ನೋಡುವಂತೆ ತರಬೇತಿ ನೀಡುವುದು, ಹೆಣ್ಣುಮಕ್ಕಳ ರಕ್ಷಣೆಗಾಗಿ ಹಳ್ಳಿಹಳ್ಳಿಗಳಲ್ಲಿ ಕಾವಲುಪಡೆಗಳನ್ನು ನಿರ್ಮಿಸುವುದು…ಇವೆಲ್ಲವೂ ಹೊರ ರೂಪದ ತಕ್ಷಣದ ರಕ್ಷಣಾ ಸಿದ್ಧತೆಗಳಷ್ಟೇ. ಇದರಿಂದ ಸಮಸ್ಯೆಗೆ ಮೂಲರೂಪದ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲವೆನಿಸುತ್ತದೆ.

ನಿದ್ದೆ, ಹಸಿವು, ಮೈಥುನಗಳು ಮನುಷ್ಯನ ಮೂಲಭೂತವಾದ ಸಹಜ ಪ್ರವೃತ್ತಿಗಳು. ಆದರೆ ಇವುಗಳನ್ನು ಶಿಸ್ತುಬದ್ಧವಾದ ನಾಗರೀಕ ಪ್ರಪಂಚದsex-ratio ಸಾಮಾಜೀಕರಣಕ್ಕೆ ಬೇಕೆಂದಂತೆ ಹಂತ ಹಂತವಾಗಿ ಪಳಗಿಸುತ್ತಾ ಹೋಗುತ್ತೇವೆ. ಉದಾಹರಣೆಗೆ ಆಗಷ್ಟೇ ಜನಿಸಿರುವ ಮಗುವೊಂದು ಹೊಟ್ಟೆ ಹಸಿವಾದಾಗ ಹಾಲು ಬೇಕೆಂದು ಹಠ ಹಿಡಿಯುತ್ತದೆ. ಅದಕ್ಕೆ ಅಮ್ಮ ಯಾವ ಸ್ಥಿತಿಯಲ್ಲಿದ್ದಾಳೆ? ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ಒಂದೂ ಬೇಕಿಲ್ಲ. ಒಟ್ಟಿನಲ್ಲಿ ಅದಕ್ಕೆ ಹಾಲು ಬೇಕಷ್ಟೇ! ಅದನ್ನು ಅಮ್ಮನೇ ಕೊಡಬೇಕೆಂದೂ ಇಲ್ಲ! ಆದರೆ ದಿನ ಕಳೆದಂತೆ ನಿಧಾನಕ್ಕೆ ನಾವದಕ್ಕೆ ಹೊಟ್ಟೆ ತುಂಬಿಸುವುದಕ್ಕೆ ಒಂದು ಸಮಯಸೂಚಿಯನ್ನು ಸಿದ್ಧ ಮಾಡಿ ಅದರಂತೆ ಉಣಿಸುತ್ತಾ ಹೊಗುತ್ತೇವೆ. ಹಸಿವಾದಾಗಲೆಲ್ಲಾ ತಿನ್ನುವುದನ್ನು ಪಳಗಿಸಿ ನಿಗದಿತ ಸಮಯಕ್ಕೆ ಸರಿಯಾಗಿ ತಿನ್ನುವ ಸಾಮಾಜೀಕರಣಕ್ಕೆ ಒಳಪಡಿಸುತ್ತೇವೆ. ನಿದ್ದೆಗೂ ಇದೇ ತತ್ವ ಅಳವಡಿಕೆಯಾಗುತ್ತದೆ. ಆದರೆ ಉಣ್ಣುವ ಸಮಯವಲ್ಲದಿದ್ದಾಗಲೂ ವಿಧವಿಧದ ಭಕ್ಷ್ಯಗಳನ್ನು ಕಂಡಾಗ ನಾಲಿಗೆ ನೀರೂರುವ ಸಾಧ್ಯತೆಯಿರುತ್ತದೆ. ಹಸಿವು ಕೆರಳುತ್ತದೆ! ನಿದ್ದೆಗೆಂದೇ ನಿಯಮಿತ ಸಮಯವನ್ನು ರೂಢಿಸಿಕೊಂಡಿದ್ದಾಗಲೂ, ಅ ವೇಳೆಯಲ್ಲೂ ಅನುಕೂಲಕರ ಸಂದರ್ಭ, ಸುಖಮಯವಾದ ವಾತಾವರಣ ಸಿಕ್ಕರೆ ನಿದ್ದೆ ಓಡಿ ಬಂದು ಅಪ್ಪುತ್ತದೆ! ಅಂದರೆ ಇವುಗಳನ್ನು ಎಷ್ಟೇ ಪಳಗಿಸಿಟ್ಟುಕೊಂಡಿದ್ದರೂ ಸುಪ್ತಪ್ರಜ್ಞೆಯಲ್ಲಿ ಹೊಂಚು ಹಾಕುತ್ತಿದ್ದು ಸಮಯ, ಸಂದರ್ಭ, ಪರಿಸರ, ಪ್ರಚೋದನೆಗಳು ಸಿಕ್ಕಾಗ ಸಾಮಾಜೀಕರಣದ ಚೌಕಟ್ಟುಗಳನ್ನು ಮೀರಿ ಕಾಣಿಸಿಕೊಂಡುಬಿಡುತ್ತವೆ! ಅವುಗಳನ್ನು ಪ್ರಯತ್ನಪೂರ್ವಕವಾಗಿ ಗೆಲ್ಲುವ ಅನಿವಾರ್ಯತೆ ನಮಗಿರುತ್ತದೆ. ಆದರೆ ನಿದ್ದೆ, ಹಸಿವುಗಳೆರಡೂ ವ್ಯಕ್ತಿಯ ವೈಯಕ್ತಿಕ ನೆಲೆಯ ಪೂರೈಕೆಗಳಾದ್ದರಿಂದ ಅದರಿಂದ ಅಪರಾಧಗಳಾಗುವಂಥಹ ತೀವ್ರತೆರನಾದ ತೊಂದರೆಯೇನೂ ಸಮಾಜಕ್ಕಿಲ್ಲ.

ಆದರೆ ಕಾಮದ ತೃಪ್ತಿಯ ಸಾಂಗತ್ಯಕ್ಕೆ ಇನ್ನೊಂದು ವ್ಯಕ್ತಿಯ ಅವಶ್ಯಕತೆ ಇರುವುದರಿಂದ ಇಲ್ಲಿ ಆ ವ್ಯಕ್ತಿಯ ಇಷ್ಟ-ಒಪ್ಪಿಗೆಯ ಜೊತೆಗೆ, ಸಮಾಜದ ಆಯಾಕಾಲದ ನೈತಿಕತೆಯ ಮಿತಿಗಳಿಗೆ ಹಾಗೂ ಕಾನೂನಿನ ಕಟ್ಟುಪಾಡುಗಳಿಗೆ ಒಳಪಡುವುದು ಅನಿವಾರ್ಯವಾಗಿರುತ್ತದೆ. ಜೊತೆಗೆ ಮನುಷ್ಯರಲ್ಲಿ ಲೈಂಗಿಕ ಕ್ರಿಯೆ ಪ್ರಾಣಿಗಳಲ್ಲಿ ನಡೆಯುವಂತೆ ಕೇವಲ ಸಂತಾನಾಭಿವೃದ್ಧಿಗಾಗಿ ಮಾತ್ರ ನಡೆಯುವುದಲ್ಲ. ಇದು ದೇಹಗಳ ನಡುವೆ ನಡೆಯುವ ಯಾಂತ್ರಿಕ ಕ್ರಿಯೆಯೂ ಅಲ್ಲ. ಎರಡು ಮನಸುಗಳ ಪ್ರೀತಿಯ ಸಂಬಂಧದ ಮಿಲನವೂ ಆಗಿರುವುದರಿಂದ ಪರಸ್ಪರ ಘಾಸಿಯಾಗದಂತೆ, ಇದನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲವಾಗಿ ನಿರ್ವಹಿಸುವ ಕಲೆಗಾರಿಕೆಯನ್ನೂ ಭಾವನಾತ್ಮಕ ನೆಲೆಯಲ್ಲಿ ಅರಿತುಕೊಳ್ಳುವುದು ಅಥವಾ ರೂಢಿಸಿಕೊಳ್ಳುವುದೂ ಅವಶ್ಯಕ.

ಆದರೆ ಲೈಂಗಿಕತೆ ಹಾಗೂ ಪ್ರೀತಿಯ ಕುರಿತಾದ ನಮ್ಮ ಸಮಾಜದ ಮಡಿವಂತಿಕೆಯ ದೃಷ್ಟಿಕೋನದಿಂದಾಗಿ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಕಲಿಕೆಯನ್ನುsex-ed ಅಥವಾ ಅದನ್ನು ಪಳಗಿಸಲು ಬೇಕಾದ ತಿಳಿವಳಿಕೆ ನೀಡುವ ಕೆಲಸಗಳು ನಮ್ಮಲ್ಲಿ ಆಗುತ್ತಿರುವುದು ಅತ್ಯಂತ ಕಡಿಮೆ. ಈ ಕುರಿತು ನಮ್ಮ ಸಮಾಜದಲ್ಲಿ ಮುಕ್ತವಾಗಿ ಮಾತನಾಡುವುದೇ ಅಪರಾಧವೆನ್ನುವಂತೆ ಪರಿಗಣಿಸಲ್ಪಟ್ಟಿರುವಾಗ, ಮಗುವಿನ ಜನನದೊಂದಿಗೇ ಹುಟ್ಟುವ ಲೈಂಗಿಕತೆಯನ್ನು ಅದೊಂದು ಚರ್ಚಿಸಬಾರದ ಅಸಹ್ಯ ವಿಷಯವೆಂದು ಭಾವಿಸಿ ಮಕ್ಕಳಿಗೆ ಆ ಕುರಿತು ಏನನ್ನೂ ತಿಳುವಳಿಕೆ ನೀಡದೆ, ತನ್ನ ದೇಹದ ಲೈಂಗಿಕ ಅಂಗಾಂಗಗಳು, ಅದರ ನಿರ್ವಹಣೆ, ಬೆಳವಣಿಗೆ, ಕಾಮದ ಉದ್ದೇಶ, ಅದರ ನೈತಿಕ ಜವಾಬ್ದಾರಿಯ ಬಗೆಗೆ ಮಕ್ಕಳಿಗೆ ತಿಳಿಹೇಳದೇ ಉಳಿಯುವ ಪೋಷಕರೇ ಹೆಚ್ಚು. ಅದರಲ್ಲೂ ಹದಿಹರೆಯದಲ್ಲಿ ಲೈಂಗಿಕ ಆಕರ್ಷಣೆಗಳು ಅತ್ಯಂತ ಸಹಜವಾದುದೆಂಬುದನ್ನು ತಿಳಿಹೇಳುತ್ತಲೇ ಅದನ್ನು ಆರೋಗ್ಯಕರವಾಗಿ ನಿರ್ವಹಿಸುವ ಕುರಿತೂ ಇಂದು ಕಡ್ಡಾಯವಾಗಿ ಅರಿವು ಮೂಡಿಸುತ್ತಲೇ ಮಕ್ಕಳನ್ನು ಬೆಳೆಸುವ ಅನಿವಾರ್ಯತೆ ಇದೆ.

ಲೈಂಗಿಕ ಅಪರಾಧಗಳಲ್ಲಿ ತೊಡಗುತ್ತಿರುವ ಅಪ್ರಾಪ್ತರ ಸಂಖ್ಯೆ ಇಂದು ದಿಗಿಲು ಹುಟ್ಟಿಸುವಷ್ಟು ಏರಿದೆ. ಅವರ ಶಿಕ್ಷೆಗೆ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ಕುರಿತೂ ಗಂಭೀರ ProtectingChildrenfromSexTraffickingಚರ್ಚೆಳಾಗುತ್ತಿವೆ. ಆದರೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಅಪರಾಧಿಗಳಾಗಿ ಬಂಧಿಗಳಾಗಿರುವ ಹಲವು ಅಪ್ರಾಪ್ತರೊಡನೆ ನಾನು ಆಪ್ತಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಹೆಚ್ಚಿನವರು ಅಶ್ಲೀಲ ನೀಲಿ ಚಿತ್ರಗಳನ್ನು ನೋಡಿ ಪ್ರಚೋದನೆ ಪಡೆದಿದ್ದನ್ನು ಹೇಳಿಕೊಳ್ಳುತ್ತಾರೆ. ಮತ್ತೆ ಕೆಲವರು ಹಿರಿಯ ಗೆಳೆಯರ ಕುಮ್ಮಕ್ಕಿನಿಂದ, ಸಂದರ್ಭದ ಅನುಕೂಲ ಪಡೆದು ಅತ್ಯಾಚಾರದಲ್ಲಿ ಭಾಗಿಗಳಾಗಿರುವುದು ಕಂಡುಬರುತ್ತದೆ. ಮೂಲತಃ ಪ್ರಾಣಿವರ್ಗಕ್ಕೆ ಸೇರಿದ ಮನುಷ್ಯ ತನ್ನ ಲೈಂಗಿಕ ಕಾಮನೆಗಳನ್ನು ಸಾಮಾಜಿಕ ಶಿಸ್ತಿಗಾಗಿ ಹತ್ತಿಕ್ಕಿದ್ದರೂ ಸುಪ್ತಪ್ರಜ್ಞೆಯ ಆಳದಲ್ಲಿ ಎಲ್ಲೋ ಅಡಗಿರುವ ಅದು, ಅನುಕೂಲಕರ ಸಮಯ, ಸಂದರ್ಭ, ಪರಿಸರಗಳು, ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಚೋದನೆ ಸಿಕ್ಕರೆ ದಾಳಿ ಮಾಡಲು ಕಾಯುತ್ತಿರುತ್ತದೆ. ಹೀಗಾಗಿ ಇಂತಹ ಸಂದರ್ಭಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಬದಲಿಗೆ ಅದನ್ನು ನಿರ್ವಹಿಸುವ, ನಿಗ್ರಹಿಸುವ ಬಗೆಯನ್ನು ಪೋಷಕರು ಮತ್ತು ಶಿಕ್ಷಣ ವ್ಯವಸ್ಥೆ ಹೇಳಿಕೊಡದಿದ್ದರೆ ಇಂತಹ ಅಪರಾಧಗಳಿಂದ ಸಾಮಾಜಿಕ ಅಸಮತೋಲನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ಮನುಷ್ಯ ಸಹಜ ಪ್ರವೃತ್ತಿಯನ್ನು ಅತ್ಯಂತ ಸಹಜ ರೀತಿಯಲ್ಲಿ ನಿರ್ವಹಿಸಲು ಎರಡು ಬಗೆಯ ಕಾರ್ಯವಿಧಾನಗಳು ಮುಖ್ಯವೆನಿಸುತ್ತವೆ. ವ್ಯಕ್ತಿಯನ್ನು sex-educationಸಾಮಾಜೀಕರಣಗೊಳಿಸಲು ಬಾಲ್ಯದಿಂದಲೇ ಅಂದರೆ ವಿದ್ಯಾಭ್ಯಾಸದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು, ಪರಸ್ಪರ ಗಂಡು-ಹೆಣ್ಣು ಸಮಾನತೆಯ ನೆಲೆಯಲ್ಲಿ ಪ್ರೀತಿಸುವಂತೆ ಮತ್ತು ಗೌರವಿಸಿಕೊಳ್ಳುವಂತೆ ಮನಸು-ಬುದ್ಧಿಗಳನ್ನು ಹದಗೊಳಿಸುವ ಆರೋಗ್ಯಕರ ಶಿಕ್ಷಣವನ್ನು ನೀಡುವುದು ಒಂದು ವಿಧಾನವಾದರೆ, ಮಾಧ್ಯಮದ ಮೂಲಕ ಲೈಂಗಿಕತೆಯನ್ನು ಅಶ್ಲೀಲವಾದ ರೀತಿಯಲ್ಲಿ ಪ್ರಚೋದನೆ ನೀಡಿ ಕೆರಳಿಸುತ್ತಿರುವುದನ್ನು ನಿರ್ಬಂಧಿಸುವುದು ಮತ್ತೊಂದು ವಿಧಾನ. ಈ ದಿಕ್ಕಲ್ಲಿ ಮನಃಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಸಮಾಜವಿಜ್ಞಾನಿಗಳು ಮತ್ತಷ್ಟು ದಾರಿಗಳನ್ನು ಹುಡುಕ ಬೇಕಾಗಿದೆ.

ಅಭಿವೃದ್ಧಿ ಎನ್ನುವ ಮಿಥ್ ಮತ್ತು ಹಿಂದುತ್ವ ಎನ್ನುವ ವಾಸ್ತವ: ಇವೆರಡನ್ನೂ ಸಹಿಸಿಕೊಳ್ಳುತ್ತಿರುವ ಇಂಡಿಯಾ


– ಬಿ. ಶ್ರೀಪಾದ ಭಟ್


“ಐದು ದಶಕಗಳ ನಂತರ ಆರೆಸಸ್‌ಗೆ ಸಾವರ್ಕರ್ ಅವರ ಲೆಗಸಿಯನ್ನು ಮತ್ತೆ ಕೇಂದ್ರ ಸ್ಥಾನಕ್ಕೆ ತರುವ ಅವಕಾಶ ದೊರೆತಿದೆ. ಆದರೆ ಶೇಕಡಾ 80 ರಷ್ಟಿರುವ ಹಿಂದೂಗಳು ಈ ಹಿಂದೂ ಹಕ್ಕುಗಳ ಪಿತನನ್ನು ಸ್ವೀಕರಿಸುತ್ತಾರೋ ಅಥವಾ ತಿರಸ್ಕರಿಸುತ್ತಾರೋ? ಸಾಮಾನ್ಯ ಹಿಂದೂಗಳು ಸಾವರ್ಕರ್ ಅವರನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಾರೋ ಅಥವಾ ಸ್ವತಃ ಸಾವರ್ಕರ್ ಇತಿಹಾಸದ ಕತ್ತಲಲ್ಲಿ ಮಸುಕಾಗಿ ಕಾಣೆಯಾಗುತ್ತಾರೋ?

“ಇತ್ತೀಚೆಗೆ ನಾನು ನೋಡಿದ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ಕೂರಿಸಿದ ಸಾವರ್ಕರ್ ಅವರ ಭಾವಚಿತ್ರವು ನೇರವಾಗಿ ಗಾಂಧಿಯ ಭಾವಚಿತ್ರವನ್ನು ದೃಷ್ಟಿಸುತ್ತಿರುವುದು ಕಂಡುಬಂತು. ಅದು ನನಗೆ ಹಿಂದ್ ಸ್ವರಾಜ್ ವಿರುದ್ಧ ಹಿಂದು ರಾಷ್ಟ್ರದ ರೂಪಕವಾಗಿಯೇ ಕಾಣಿಸುತ್ತಿತ್ತು.”

– ಅನನ್ಯ ವಾಜಪೇಯಿ

ಪ್ರತಿಯೊಬ್ಬ ಸೆಕ್ಯುಲರ್‌ವಾದಿಯು ತನ್ನದೇ ಆದ, ವ್ಯಕ್ತಿಗತವಾದ ಸೆಕ್ಯುಲರ್ ರಾಗದಲ್ಲಿ ತನ್ನ ಜೀವನಚರಿತ್ರೆಯನ್ನು ಹಾಡುತ್ತಿರುತ್ತಾನೆ ಎಂದು ಒಂದು ಕಡೆ ಶಿವ ವಿಶ್ವನಾಥನ್ ಬರೆಯುತ್ತಾರೆ. ಸ್ವತಃ ಹಿಂದೂ ಆದರೂ ತನ್ನ ಮನೆಯ ದೇವರ ಕೋಣೆಯಲ್ಲಿ ಬೈಬಲ್ ಅಥವಾ ಕುರಾನ್ ಅನ್ನು ಇಟ್ಟು ಪೂಜಿಸುವವನೂ ಒಬ್ಬ ಸೆಕ್ಯುಲರ್ ಎಂದು ಗುರುತಿಸಲ್ಪಡುತ್ತಾನೆ ಅಥವಾ ಹಾಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾನೆ. grass-map-indiaಮತ್ತೊಬ್ಬ ತನ್ನ ಸುತ್ತಲೂ ಮತೀಯವಾದ ತುಂಬಿದ್ದರೂ ತಾನು ಮಾತ್ರ ತನ್ನ ಸೆಕ್ಯುಲರ್ ತತ್ವಗಳನ್ನು ಬಿಡುವುದಿಲ್ಲ ಎಂದು ತನ್ನ ಸೆಕ್ಯುಲರ್ ತತ್ವವನ್ನು ಪ್ರತಿಪಾದಿಸುತ್ತಾನೆ ಎಂದು ಶಿವ ಹೇಳುತ್ತಾರೆ. ಇಲ್ಲಿನ ವೈಚಿತ್ರವೇನೆಂದರೆ ಖಾಸಗಿಯಾಗಿ ನನ್ನ ಬದುಕು ಎಷ್ಟರ ಮಟ್ಟಿಗೆ ಸೆಕ್ಯುಲರಿಸಂಗೆ ಹತ್ತಿರವಿದೆ ಮತ್ತು ಅಧಿಕೃತವಾಗಿ ಅಂದರೆ ಸಾರ್ವಜನಿಕವಾಗಿ ನಾನು ಹೇಗೆ ಸೆಕ್ಯುಲರ್ ಆಗಿ ಗುರುತಿಸಲ್ಪಡಲು ಬಯಸುತ್ತೇನೆ ಎನ್ನುವುದರ ಗ್ರಹಿಕೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಇವೆರೆಡೂ ಒಂದಕ್ಕೊಂದು ಹೇಗೆ ತಳುಕು ಹಾಕಿಕೊಂಡಿದೆ ಎನ್ನುವ ಗ್ರಹಿಕೆಯೂ ಕೂಡ. ಇಲ್ಲಿ ಅಧಿಕೃತವಾದ ಸಾರ್ವಜನಿಕವಾದ ಸೆಕ್ಯಲರಿಸಂ ನಿಜದ ಅರ್ಥದಲ್ಲಿ, ಎಲ್ಲವನ್ನೂ ಒಳಗೊಳ್ಳುವ ಆದರೆ ಸದಾ ಎಚ್ಚರದ ಸ್ಥಿತಿಯಲ್ಲಿ ಬಳಕೆಯಾಗದಿದ್ದರೆ ಅದು ಸೋತು ಹೋಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಮೂಲಭೂತವಾದಿಗಳು, ಕೋಮುವಾದಿಗಳು ಬಹುಮತದಿಂದ ಅಧಿಕಾರಕ್ಕೆ ಬಂದಿರುವುದು ನಮ್ಮ ಕಣ್ಣೆದುರಿಗಿದೆ. ಎಡಪಂಥೀಯ ಒಲವುಳ್ಳ ಲೇಖಕರು, ಬುದ್ಧಿಜೀವಿಗಳು ವಿಜ್ಞಾನವನ್ನು ಕೇವಲ ಮೇಲ್ಮಟ್ಟದಲ್ಲಿ ಆಧರಿಸಿ ಚಿಂತಿಸಿದ ಸೆಕ್ಯುಲರಿಸಂನ ಬರಡುತನವೇ ಇದಕ್ಕೆ ಪೂರಕವಾಗಿ ಸಹಾಯ ಮಾಡಿವೆ ಎಂದು ಸೋಷಿಯಾಲಜಿಸ್ಟ್‌ಗಳು ಅಭಿಪ್ರಾಯ ಪಡುತ್ತಾರೆ. ಹಿಂದೂಯಿಸಂನ ಮೃದುತ್ವ, ಸಹನೀಯತೆ ಮಾಯವಾಗಿ ಹಿಂದುತ್ವದ ಫೆನಟಿಸಂ ಮೇಲುಗೈ ಸಾಧಿಸಲು ಕೇವಲ ಸಂಘಪರಿವಾರ ಮಾತ್ರವಲ್ಲ ಈ ಬರಡು ಸೆಕ್ಯುಲರಿಸಂ ಸಹ ಕಾರಣವೆಂದು ಅಭಿಪ್ರಾಯ ಪಡುತ್ತಾರೆ. ವಿಜ್ಞಾನವನ್ನು ಕೇವಲ ಅದರ ಪ್ರಸ್ತುತ ಸ್ವರೂಪದಲ್ಲಿರುವ ಮೆಥಡಾಲಜಿಯನ್ನಾಧರಿಸಿದ ಆಧ್ಯಯನಗಳ ಮೂಲಕ ಮಾತ್ರ ಅರಿತುಕೊಳ್ಳುವುದಲ್ಲ, ಜೊತೆಗೆ ಅದರ ಮೌನದ, ಮಾತನಾಡದ ಜ್ಞಾನವನ್ನೂ ಸಹ ಗ್ರಹಿಸಬೇಕೆಂದು ಶಿವ ಬರೆಯುತ್ತಾರೆ. ಹಾಗೆಯೇ ಸಾರ್ವಜನಿಕವಾಗಿ ಬಳಕೆಯಲ್ಲಿರುವ ನುಡಿಕಟ್ಟುಗಳ ಮೂಲಕ ಮಾತನಾಡುವುದು ಮಾತ್ರ ಸೆಕ್ಯುಲರಿಸಂ ಅನಿಸಿಕೊಳ್ಳುವುದಿಲ್ಲ. ಅದರ ಮೌನದ, ಮಾತನಾಡದ ಜ್ಞಾನವನ್ನೂ ಸಹ ಗ್ರಹಿಸಿದಾಗಲೇ ಇಡೀ ಸೆಕ್ಯುಲರಿಸಂನ ಅರ್ಥವಂತಿಕೆ ಜೀವಂತವಾಗಿರುತ್ತದೆ. ಅಲ್ಲಿ ನಮ್ಮ ವರ್ತನೆಗಳೇ ಮಾತನಾಡುತ್ತಿರುತ್ತವೆ. ಹೊಸ ವ್ಯವಸ್ಥೆಯನ್ನೇ ನಮಗರಿವಿಲ್ಲದಂತೆಯೇ ರೂಪಿಸುತ್ತಿರುತ್ತವೆ.

ಕೆಲವೇ ತಿಂಗಳುಗಳ ಹಿಂದೆ ಮೋದಿಯನ್ನು ಟೀಕಿಸಿದ ಸೆಕ್ಯುಲರ್ ಧ್ವ್ವನಿಗಳೇ ಇಂದು ಮೋದಿಯ ಪರವಾಗಿ ಪ್ರಶಂಸೆ ಮಾಡುತ್ತಿವೆ, ಮತ್ತು ಕುತೂಹಲವೆಂದರೆ ಹಿಂದೆ ಪ್ರಶಂಸಿಸುತ್ತಿದ್ದ ಬಲಪಂಥೀಯ ಧ್ವನಿಗಳು ಇಂದು ವಿಮರ್ಶೆ ಮಾಡುತ್ತಿವೆ. ಅನನ್ಯ ವಾಜಪೇಯಿ ಅವರು “ಇಂದು ಯಾರು ಸಂಘ ಪರಿವಾರದ ಪರ ಯಾರು ವಿರೋಧ ಎನ್ನುವ ಸ್ಪಷ್ಟತೆ ಕಾಣುತ್ತಿಲ್ಲ. ಇಂದು ನಿಜದ ಸುಧಾರಣಾವಾದಿಗಳು ಮತ್ತು ಸೆಕ್ಯುಲರ್‌ಗಳು ಮತ್ತು Advani-Rath-Yatraಮತೀಯವಾದಿ ಮತ್ತು ಬಹುಸಂಖ್ಯಾತ ತತ್ವವಾದಿಗಳ ನಡುವೆ ನೇರವಾದ ಮುಖಾಮುಖಿಯಾಗುವ ಕಾಲ ಬಂದಿದೆ” ಎಂದು ಹೇಳುತ್ತಾರೆ. ಇಂದು ಗುಜರಾತ್ ಹತ್ಯಾಕಾಂಡ ಹೆಚ್ಚೂ ಕಡಿಮೆ ಮರೆತು ಹೋಗಿದೆ. ಅದನ್ನು ಕುರಿತು ಮಾತನಾಡಿದಷ್ಟೂ ಇಂದು ನಮ್ಮ ಸೆಕ್ಯುಲರಿಸಂನ ಕ್ರೆಡಿಬಿಲಿಟಿ ಪ್ರಶ್ನಿಸಲ್ಪಡುತ್ತಿರುತ್ತದೆ. ಕೆಲವು ತಿಂಗಳುಗಳಷ್ಟು ಹಿಂದೆ ಮುಜಫರ್‌ನಗರದಲ್ಲಿ ನಡೆದ ಮತೀಯವಾದಿ ಹಿಂಸಾಚಾರ ಮತ್ತು ಜಾತಿ ಹಾಗು ಧರ್ಮಗಳ ಧೃವೀಕರಣ ಮತ್ತು ಇದರ ಅಪಾಯಕಾರಿ ಪರಿಣಾಮಗಳನ್ನು ಕುರಿತು ಇಂದು ಮಾತನಾಡಲು ಅವಕಾಶವೇ ಇಲ್ಲ. ಅದಕ್ಕೆ ವೇದಿಕೆಗಳೇ ಇಲ್ಲ. ಹೀಗೆಯೇ ಮುಂದಿನ ದಿನಗಳಲ್ಲಿ ಪ್ರತಿಯೊಂದು ಮತೀಯವಾದಿ ಹಿಂಸಾಚಾರಗಳೂ ಕಾನೂನುಬದ್ಧವಾಗಿ ಶಿಕ್ಷೆಗೆ ಒಳಪಡುವದರಿಂದ ತಪ್ಪಿಸಿಕೊಳ್ಳುತ್ತಲೇ ಇರುತ್ತವೆ. ಕೆಲವೇ ತಿಂಗಳುಗಳಲ್ಲಿ ಅದು ಮುಗಿದ ಅಧ್ಯಾಯವಾಗಿ ಇತಿಹಾಸದ ಪುಟಗಳಲ್ಲಿ ಕರಗಿಹೋಗುತ್ತದೆ ಮತ್ತು ಅದರ ಕುರಿತು ಮಾತನಾಡಿದಷ್ಟೂ ಗೇಲಿಗೊಳಗಾಗುವುದಂತೂ ಗ್ಯಾರಂಟಿ. ಬರುವ ದಿನಗಳಲ್ಲಿ ಇದು ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ.

ಜಾಗತೀರಣದ ನಂತರ ಇಂಡಿಯಾದ ಸಾಮಾಜಿಕ-ರಾಜಕೀಯ ಚಿಂತನೆಗಳು ಮತ್ತು ಗ್ರಹಿಕೆಗಳು ವಿಚಿತ್ರ ರೀತಿಯ ಮಿಥ್‌ಗಳಿಗೆ ಬಲಿಯಾಗುತ್ತಿವೆ. ತೊಂಬತ್ತರ ದಶಕದಲ್ಲಿ ವಾಜಪೇಯಿಯವರು ಪಾರಿವಾಳದಂತೆ ಮತ್ತು ಅಡ್ವಾನಿ ಹದ್ದಿನಂತೆ ಗೋಚರಿಸಿದರೆ ಇಪ್ಪತ್ತೊಂದನೇ ಶತಮಾನದ ಹೊತ್ತಿಗೆ ಅಡ್ವಾನಿ ಪಾರಿವಾಳವಾಗಿ ಬದಲಾಗಿದ್ದರೆ ನರೇಂದ್ರ ಮೋದಿ ಹದ್ದಿನಂತೆ ಗೋಚರಿಸತೊಡಗಿದ್ದರು ಎಂದು ಪ್ರಮುಖ ಪತ್ರಕರ್ತ ಶಹಜತ್ ಬರೆದಿದ್ದರು. ಕೇವಲ ಒಂದು ದಶಕದ ನಂತರ ಇದೇ ಮೋದಿ ಪಾರಿವಾಳವೆಂದು ಪ್ರಶಂಸಿಸಲ್ಪಡುತ್ತಿದ್ದಾರೆ. ಎಂತಹ ಮಿಥ್‌ಗಳ, ಭ್ರಮೆಗಳ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ ಎಂದರೆ Manufacturing Consent ಎನ್ನುವ ಸಿದ್ಧಾಂತಕ್ಕೆ ನಾವಾಗಲೇ ಒಳಗಾಗಿಯೇ ವರ್ತಿಸತೊಡಗಿದ್ದೇವೆ. ದಿನನಿತ್ಯ ನಮ್ಮ ಒಪ್ಪಿಗೆಗಳು, ಅನುಮತಿಗಳನ್ನು ತಯಾರಿಸಿ ಕೊಡಲಾಗುತ್ತಿದೆ. ನಾವು ಅದನ್ನು ಗಿಳಿ ಪಾಠದಂತೆ ಒಪ್ಪಿಸುತ್ತಿದ್ದೇವೆ. ಬಡವರನ್ನು ಸುಲಿದು ಶ್ರೀಮಂತರಿಗೆ ಹಂಚುತ್ತಿರುವ ನರೇಂದ್ರ ಮೋದಿಯ ಕ್ರೌರ್ಯದ ಮನಸ್ಥಿತಿಯ ಈ ನವ ಉದಾರೀಕರಣದ ಮಾಡೆಲ್‌ನ ಅನುಮೋದನೆಯ ಪ್ರತೀಕವಾಗಿಯೇ ಇಡೀ ದೇಶವೂ ಚಿಂತಿಸುತ್ತಿದೆ ಎನ್ನುವುದು ಕೇವಲ ಮಿಥ್ ಮಾತ್ರವಲ್ಲ ಅದು Manufacturing Consent ಎನ್ನುವ ಸಿದ್ಧಾಂತದ ವ್ಯವಸ್ಥೆ ಜಾರಿಗೊಂಡಿದೆ ಎಂದರ್ಥ. ಇಲ್ಲಿ ಸರ್ವಾಧಿಕಾರದ ಆಡಳಿತದಲ್ಲಿ ಹಿಂಸೆಯ ಮೂಲಕ ಏನನ್ನು ಸಾಧಿಸಲಾಗುತ್ತದೆಯೋ ಅದನ್ನು ಪ್ರಜಾಪ್ರಭುತ್ವದ ಸಂದರ್ಭದಲ್ಲಿ ನಿರಂತರವಾದ ವ್ಯಾಪಕ ಪ್ರಚಾರದ ಮೂಲಕ, ಮರೀಚಿಕೆಗಳ ಮೂಲಕ ಸಾಧಿಸಲಾಗುತ್ತದೆ. ಏಕೆಂದರೆ ಇಂದು ಇದನ್ನು ಮೋದಿಯ ಮಾದರಿ ಎಂದೇ ಜನಪ್ರಿಯಗೊಳಿಸಲಾಗಿದೆ ನಮ್ಮ ಒಪ್ಪಿಗೆಯನ್ನೂ ತಯಾರಿಸುವುದರ ಮೂಲಕ. ಗುಜರಾತ್‌ನಲ್ಲಿ ಪ್ರಯೋಗಗೊಂಡ ಈ ಮಾಡಲ್ ಇಡೀ ದೇಶಕ್ಕೆ ಅನ್ವಯಗೊಳ್ಳಲಿದೆ manufacturing consent ನ ಮೂಲಕ. ಇದರ ಪ್ರಕಾರ ವಿವಿಧ ರೀತಿಯ ಭಿನ್ನಮತೀಯ ಧ್ವನಿಗಳನ್ನು ಕೇಳಿಸಿಕೊಳ್ಳುವುದಿಲ್ಲ. ಸರ್ವಾಧಿಕಾರದ ಆಡಳಿತದಲ್ಲಿ ಈ ಧ್ವನಿಗಳನ್ನು ಹತ್ತಿಕ್ಕಲಾಗುತ್ತದೆ ,ಆದರೆ ಪ್ರಜಾಪ್ರಭುತ್ವದಲ್ಲಿ ಈ ಧ್ವನಿಗಳನ್ನು ಸಂಪೂರ್ಣವಾಗಿ ಅಲಕ್ಷ ಮಾಡಲಾಗುತ್ತದೆ ಮತ್ತು ಸಂವಾದಗಳ ಅಳತೆಯನ್ನು ಮಿತಿಗೆ ಒಳಪಡಿಸಲಾಗುತ್ತದೆ. ಯಾವ ಪ್ರಮುಖವಾದ, ಪ್ರಚಲಿತ ಗಂಭೀರ ಸಂಗತಿಗಳ ಕುರಿತಾಗಿ ಜನರು ಚಿಂತಿಸಬೇಕಾಗುತ್ತದೆಯೋ (ಕೋಮುವಾದ, ಮತೀಯವಾದ, ಜಾತೀಯತೆ, ಇತ್ಯಾದಿ) ಅವುಗಳಿಂದಲೇ ಜನರ ಗಮನವನ್ನು ಬೇರೆಡೆ ಸೆಳೆದುಬಿಡುತ್ತಾರೆ.

ಉದಾಹರಣೆಗೆ ಪ್ರಧಾನಿಯಾಗಿ ತಮ್ಮ ಮೊದಲ ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುತ್ತmodi_amit_shah ಮೋದಿ “ಭಾರತ ದೇಶವು ತನ್ನ 1200 ವರ್ಷಗಳ ಗುಲಾಮಗಿರಿಯಿಂದ ಹೊರಬರಬೇಕು” ಎಂದು ಹೇಳುತ್ತಾರೆ. ಅಂದರೆ 200 ವರ್ಷಗಳ ಬ್ರಿಟೀಷರ ಆಡಳಿತ ಮತ್ತು 1000 ವರ್ಷಗಳ ಮಧ್ಯಯುಗೀನ ಕಾಲದ ಮೊಗಲರ, ಬಹುಮನಿಗಳ, ಶಾಗಳ ಆಡಳಿತವನ್ನು ಸಹ ಈ ಗುಲಾಮಗಿರಿಯಲ್ಲಿ ಸೇರಿಸುತ್ತಾರೆ. ಚುನಾವಣಾ ಗೆಲುವಿನ ನಂತರ ಈ ಮತೀಯವಾದದ ಕುರಿತಾಗಿ ಮೌನವಾಗಿರುವ ಮೋದಿ ತಮ್ಮ ಪ್ಲಾನ್ “ಎ” ನಲ್ಲಿ ಬಂಡವಾಳಶಾಹಿ ಆಧಾರಿತ ಆರ್ಥಿಕ ನೀತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಒಂದು ವೇಳೆ ಇದು ನಿರೀಕ್ಷಿತ ಯಶಸ್ಸನ್ನು ಕೊಡದಿದ್ದ ಪಕ್ಷದಲ್ಲಿ ತಮ್ಮ ಹಳೆಯದಾದ ಹಿಂದುತ್ವ, ಮತೀಯವಾದ ಎನ್ನುವ ಪ್ಲಾನ್ “ಬಿ” ಬಿಡುಗಡೆ ಮಾಡುತ್ತಾರೆ ಎಂದು ರಾಜಕೀಯ ವಿಜ್ಞಾನಿ ಕ್ರಿಸ್ಟೋಫರ್ ಜೆಫರಲಾಟ್ ಹೇಳುತ್ತಾರೆ. (ಮೊನ್ನೆ ನಡೆದ ಉಪ ಚುನಾವಣೆಗಳಲ್ಲಿ ಸೋಲುಂಡ ಬಿಜೆಪಿ ಈಗ ಪ್ಲಾನ್ ‘ಬಿ’ ಬಿಡುಗಡೆ ಮಾಡಬಹುದು. ಆದರೆ ಪ್ಲಾನ್ ‘ಬಿ’ ಕಾರಣದಿಂದಲೇ ಈ ಉಪಚುನಾವಣೆಗಳನ್ನು ಸೋತಿದ್ದು ಎಂದು ಬಿಜೆಪಿಗೆ ಮನವರಿಕೆಯಾದರೆ??)

ಬೆಳಗಿನ ಹೊತ್ತು ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ‘ಎಲ್ಲರ ಜೊತೆ, ಎಲ್ಲರ ವಿಕಾಸ’ ಎನ್ನುವ ಹೇಳಿಕೆಗಳನ್ನು ಕೊಡುತ್ತಾ ಜನಪ್ರಿಯರಾಗುತ್ತಿದ್ದರೆ ಸಂಘ ಪರಿವಾರ ಮತ್ತೊಂದು ಕಡೆ ಬಹುಸಂಖ್ಯಾತ ತತ್ವವನ್ನು ಉಗ್ರವಾಗಿ ಪ್ರತಿಪಾದಿಸುತ್ತಿದೆ, ಪ್ರತಿಯೊಂದು ರಾಜ್ಯಗಳಲ್ಲಿಯೂ ಅಲ್ಪಸಂಖ್ಯಾತರ ನಡುವೆ ಆಭದ್ರತೆಯನ್ನು ಹುಟ್ಟು ಹಾಕುತ್ತಿದೆ. ಧರ್ಮಗಳ, ಜಾತಿಗಳ ಧೃವೀಕರಣದ ಮುಜಫರ್ ನಗರದ ಮಾಡೆಲ್ ಇನ್ನಿತರ ರಾಜ್ಯಗಳಿಗೂ ವಿಸ್ತರಿಸಲಾಗುತ್ತಿದೆ. ಇದರ ನೇತೃತ್ವವನ್ನು ಸಹಜವಾಗಿಯೇ ಹಿಂದೂ ಮತ್ತು ಮುಸ್ಲಿಂ ನಡುವಿನ ಪಂದ್ಯದ ನುರಿತ, ಶ್ರೇಷ್ಠ ಆಟಗಾರ ಅಮಿತ್ ಷಾ ವಹಿಸಿಕೊಂಡಿದ್ದಾನೆ. ಸಂಘ ಪರಿವಾರದ ಮುಖಂಡನೊಬ್ಬ “ಇಂದು ಕಾಲ ಬದಲಾಗಿದೆ. ಮುಸ್ಲಿಂರು ಸಾಮಾನ್ಯ ನಾಗರಿಕರಂತೆ ಬದುಕಬೇಕು. ಅವರಿಗೆ ಕೊಡುತ್ತಿದ್ದ ಮುಂಚಿನ ಸವಲತ್ತುಗಳು ಇನ್ನು ದೊರಕುವುದಿಲ್ಲ. ಇನ್ನು ಮುಂದೆ ಅವರು ಹಿಂದೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು” ಎಂದೇ ಎಚ್ಚರಿಸುತ್ತಾನೆ ಮತ್ತು ಇದು ಸಂಘ ಪರಿವಾರದ ಒಟ್ಟು ಭಾಷೆಯೂ ಹೌದು. ಮತ್ತು ಇಂದು ಸಂಘ ಪರಿವಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಅದರ ನಾಯಕ ಮೋದಿ “ಸಂಪೂರ್ಣ ಆಡಳಿತ, ಎಲ್ಲರ ವಿಕಾಸ” ಎಂದು ಹೇಳುತ್ತಾ, ಅಭಿವೃದ್ಧಿಯೇ ನಮ್ಮ ಮಾದರಿ ಎಂದು ಪ್ರತಿಪಾದಿಸುತ್ತಾರೆ. ಆದರೆ ತನ್ನದೇ ಸಂಘ ಪರಿವಾರದ ಹಿಂದುತ್ವದ ಪುನುರುಜ್ಜೀವನದ ಕುರಿತಾದ ಚಟುವಟಿಕೆಗಳನ್ನು ಟೀಕಿಸುವುದಿಲ್ಲ. ನಿಗ್ರಹಿಸುವುದಿಲ್ಲ. ಇದು ಪ್ಲಾನ್ ‘ಎ’ ಮತ್ತು ಪ್ಲಾನ್ ‘ಬಿ’ ಅನ್ನು ಸಮತೋಲನದಲ್ಲಿ ಕಾಯ್ದುಕೊಂಡುಬರುವ ಕಾರ್ಯಸೂಚಿಗಳು.

ಪ್ಲಾನ್ ‘ಬಿ’ಯಂತೆ ಆರೆಸಸ್‌ನ ಅಂಗ ಸಂಸ್ಥೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಯ ಅಧ್ಯಕ್ಷರಾದ ವೈ.ಸುದರ್ಶನ ರಾವ್ ಅವರನ್ನು Indian Council of Historical Research (ಐಸಿಎಚ್‌ಆರ್) ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅಧಿಕಾರ ವಹಿಸಿಕೊಂಡ ಮೊದಲನೇ ದಿನವೆ ಸುದರ್ಶನ್ ರಾವ್ ಹೇಳಿದ್ದು: “ಭಾರತದ ಇತಿಹಾಸವನ್ನು ನಾವು ಪುನರಚಿಸಲಿದ್ದೇವೆ.” ಮುಂದುವರೆದು ಈ ಸುದರ್ಶನ ರಾವ್ ಅವರು ‘ಈ ಸತ್ಯ ಸಂಗತಿಗಳನ್ನು ಬಯಲಿಗೆಳೆಯಲು ಮಹಾಭಾರತ ಮತ್ತು ರಾಮಾಯಣಗಳನ್ನು ಆಧಾರವಾಗಿ ಸಂಶೋಧನೆಗೆ ಬಳಸಿಕೊಳ್ಳಲಾಗುವುದು. ಇವೆರೆಡೂ ನಮಗೆ ಅಕರ ಗ್ರಂಥಗಳು’ ಎಂದು ಹೇಳಿದ್ದಾರೆ. ಇವರು ‘ನಾವು ಭಾಷೆ, ಸಂಸ್ಕೃತಿ, ಅವೈದಿಕತೆಯ ಆಚರಣೆಗಳು ಮತ್ತು ಇತಿಹಾಸಕ್ಕೆ ಗಮನವನ್ನು ಕೊಡುವುದಿಲ್ಲ. ಬದಲಾಗಿ ಆರ್ಯ ಸಂಸ್ಕ್ರತಿಯ ಕಾಲಘಟ್ಟವನ್ನು ಪ್ರಮುಖವಾಗಿ ಪರಿಗಣಿಸುತ್ತೇವೆ’ ಎಂದೇ ಹೇಳುತ್ತಾರೆ.

ಇಂದು ಸಂಘ ಪರಿವಾರವು ಇಂಡಿಯಾ ದೇಶವು ಮತ್ತೇನಲ್ಲದೆ ಹಿಂದೂ ದೇಶ ಎಂದು ಬಹಿರಂಗವಾಗಿಯೇ ಹೇಳಿಕೆಗಳನ್ನು ಕೊಡುತ್ತಿದೆ. bhagvat-gadkari-modiಅದರ ಮುಖ್ಯಸ್ಥ ಭಾಗವತ್ “ಹಿಂದುಸ್ತಾನವನ್ನು ಹಿಂದೂ ರಾಷ್ಟ್ರವೆಂದೇ ನೋಡಬೇಕು” ಎಂದು ಆದೇಶ ಕೊಡುತ್ತಾರೆ.ಅದನ್ನು ಸಮರ್ಥಿಸುವಂತೆಯೇ ಅಲ್ಪಸಂಖ್ಯಾತ ಖಾತೆಯ ನಜ್ಮಾ ಹೆಫ್ತುಲ್ಲ ಮಾತನಾಡುತ್ತಾರೆ. (ನಂತರ ಅದನ್ನು ನಿರಾಕರಿಸುತ್ತಾರೆ, ಅದು ಬೇರೆ ವಿಷಯ.) ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ದಿನನಿತ್ಯ ಮತೀಯವಾದಿ ಹೇಳಿಕೆಗಳನ್ನು ಕೊಡುತ್ತ ಬಹುಸಂಖ್ಯಾತರಲ್ಲಿ ಜನಪ್ರಿಯನಾಗುತ್ತಿದ್ದಾನೆ. (ಓದಿ ಲೇಖನ- ಬಹುಸಂಖ್ಯಾತ ತತ್ವ) ಆಸ್ತಿತ್ವದಲ್ಲೇ ಇಲ್ಲದ ’ಲವ್ ಜಿಹಾದ್’ ಮರುನವೀಕರಣಗೊಳ್ಳುತ್ತಿದೆ. ಮತ್ತೊಬ್ಬ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸಂವಿಧಾನದ ಎಲ್ಲಾ ಆಶಯಗಳನ್ನು ಗಾಳಿಗೆ ತೂರಿ ನೇರವಾಗಿ ಮುಸ್ಲಿಂ ಧರ್ಮದ ಮೇಲೆ ಅಪಾದನೆ ಮಾಡುತ್ತಾ ಮದರಸಾಗಳು ಭಯೋತ್ಪಾನೆ ಮತ್ತು ಲವ್ ಜಿಹಾದ್‌ಗಳಿಗೆ ತರಬೇತಿ ಕೊಡುತ್ತಿವೆ ಎಂದು ಬೇಜವಬ್ದಾರಿಯಿಂದ ಹೇಳುತ್ತಿದ್ದಾರೆ. ಮತ್ತೊಂದು ಕಡೆ ಗೃಹಮಂತ್ರಿ ರಾಜನಾಥ್ ಸಿಂಗ್ ಇದರ ಕುರಿತಾಗಿ ಮುಗ್ಧತೆ ವ್ಯಕ್ತಪಡಿಸಿದ್ದಾರೆ. (ಅದರೆ ಈ ’ಲವ್ ಜಿಹಾದ್’ ಫೋಬಿಯಾ ಬಿಜೆಪಿಗೆ ಸರಿಯಾಗಿಯೇ ತಿರುಗೇಟು ನೀಡಿದಂತಿದೆ. ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಸೋಲುಂಡು ಮುಖಭಂಗ ಅನುಭವಿಸುತ್ತಿದೆ.) ಸಂಘ ಪರಿವಾರದ ವಕ್ತಾರರು “ಒಂದು ಧರ್ಮದ ವ್ಯಕ್ತಿ ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಅದನ್ನು ಕೇವಲ ಕಾಕತಾಳೀಯವೆಂದು ತಿಳಿದುಕೊಳ್ಳಬಾರದು, ಅದು ಅತ್ಯಂತ ಗಂಭೀರವಾದ ಸಂಗತಿ ಎಂದೇ ಪರಿಗಣಿಸಲಾಗುತ್ತದೆ” ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಮಾತ್ರಕ್ಕೆ ಅವರಿಗೆ ನಮ್ಮ ಮಹಿಳೆಯರನ್ನು ಮುಟ್ಟಬೇಕೆಂದು ಅವರಿಗೆ ಸರ್ಟಿಫಿಕೇಟ್ ನೀಡಲಾಗಿದೆಯೇ ಎಂದು ಸಂಘ ಪರಿವಾರದ ಸಂಸದರೊಬ್ಬರು ಪ್ರಚೋದಿಸುವಂತೆ ಕೇಳುತ್ತಾರೆ. ಹಿಂದೂ ಯುವಕರು ಲವ್ ಜಿಹಾದ್ ಕುರಿತಾಗಿ ಎಚ್ಚರಿಕೆ ಇಂದ ಇರಬೇಕೆಂದು ಆದೇಶಿಸುತ್ತಾರೆ.

ಛತ್ತೀಸಗಡ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯದವರನ್ನು ಮತ್ತು ಅವರ ಸ್ವಯಂಸೇವಾ ಸಂಸ್ಥೆಗಳನ್ನು ಮತ್ತು ಹಿಂದೂಗಳಲ್ಲದ ಸಮುದಾಯದವರನ್ನು ಬಸ್ತರ್‌ನ ಪ್ರದೇಶದಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ’ನಮ್ಮನ್ನು ಇಂಡಿಯಾದ ನೆಲದ ಮೇಲೆ ಕಾಲಿಡದಂತೆ ಹೇಗೆ ತಾನೆ ತಡೆಯಲು ಸಾಧ್ಯ? ಯಾವುದೇ ಧಾರ್ಮಿಕ ಮಿಶನರಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ’ ಎಂದು ಅವರ ನಾಯಕ ಅರುಣ್ ಪನ್ನಾಲಾಲ್ ಕೇಳುತ್ತಾರೆ. ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಈ ನಿಷೇಧವನ್ನು ಹೇರಲಾಗಿದೆ ಎಂದು ವಿಎಚ್‌ಪಿಯ ಬಸ್ತರ್ ವಿಭಾಗದ ನಾಯಕ ಸುರೇಶ್ ಯಾದವ್ ಹೇಳುತ್ತಾರೆ.

ಕೇಂದ್ರದ ಮಹಿಳಾ ಮತ್ತು ಸಮಾಜ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಅವರು ಭಾರತದಿಂದ ರಫ್ತಾಗುವ ಎಲ್ಲಾ ಬಗೆಯ ಮಾಂಸವು ನೇರವಾಗಿ ಪಕ್ಕದ ಇಸ್ಲಾಂ ರಾಷ್ಟ್ರಗಳಿಗೆ ಹೋಗುತ್ತದೆ. ಆ ದೇಶಗಳು ಆದನ್ನು ಮಾರಿ ಅದರ ವ್ಯಾಪಾರದಿಂದ ಬಂದ ದುಡ್ಡಿನಿಂದ ಶಸ್ತ್ರಾಸ್ತಗಳನ್ನು ಖರೀದಿಸಿ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುತ್ತಾರೆ, ಹೀಗಾಗಿ ಮಾಂಸದ ರಫ್ತನ್ನು ನಿಲ್ಲಿಸಿ ಎಂದು ಕರೆ ಕೊಟ್ಟಿದ್ದಾರೆ. ಜವಬ್ದಾರಿಯುತ ಮಂತ್ರಿಯೊಬ್ಬರ ಇಂತಹ ಬೇಜವಬ್ದಾರಿಯುತ ಹೇಳಿಕೆಗಳ ಪರಿಣಾಮಗಳನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಮತ್ತೊಂದು ಕಡೆ ಇಪ್ಪತ್ತೊಂದನೇ ಶತಮಾನದಲ್ಲಿ ದಲಿತ ನಾಯಕತ್ವ ಮತ್ತು ಅದರ ಚಿಂತಕರು ನಿಧಾನವಾಗಿ ಬಲಪಂಥೀಯ ತತ್ವದೆಡೆಗೆ ಚಲಿಸುತ್ತಿದ್ದಾರೆ RSS-mohanbhagwatಎಂದು ಚಿಂತಕರು ಅಭಿಪ್ರಾಯ ಪಡುತ್ತಿದ್ದಾರೆ. ಜಾತಿ ವಿನಾಶದ ಚಿಂತನೆಗಳಿಂದ ಜಾತಿಯ ಸೆಕ್ಯೂಲೀಕರಣ ಮತ್ತು ಹಿಂದೂಯಿಸಂನಿಂದ, ಮತಾಂತರದ ಚಳುವಳಿಯಿಂದ ಹೊರಬಂದು ಹಿಂದೂ ಐಡೆಂಟಿಟಿ ಕಡೆಗೆ ಚಲಿಸುತ್ತಿದ್ದಾರೆ ಎಂದು ಬುದ್ಧಿಜೀವಿಗಳು ಅಭಿಪ್ರಾಯ ಪಡುತ್ತಾರೆ. ಒಂದು ಕಾಲದಲ್ಲಿ ದಲಿತರು ಬೌಧ್ಧ ಧರ್ಮಕ್ಕೆ ಮತಾಂತರವಾಗಬೇಕೆಂದು ಪ್ರತಿಪಾದಿಸುತ್ತಿದ್ದ ದಲಿತ ನೌಕರರ ಸಂಘಟನೆಯ ಅಧ್ಯಕ್ಷ ಉದಿತ್ ರಾಜ್ ಇಂದು ಬಿಜೆಪಿ ಪಕ್ಷ ಸೇರಿದ್ದಾರೆ. ರಾಮ್‌ವಿಲಾಸ್ ಪಾಸ್ವಾನ್ ಬಿಜೆಪಿಯ ಸಹೋದ್ಯೋಗಿ. ಚಂದ್ರಬಾನು ಪ್ರಸಾದ ದಲಿತ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಲೇ ಅದರ ಮುಂದಿನ ತಾಣ ಬಿಜೆಪಿ ಎಂದು ನಂಬಿ ಅದರ ಕಡೆಗೆ ಚಲಿಸುತ್ತಿರುವಂತಿದೆ. ಉತ್ತರ ಪ್ರದೇಶದಲ್ಲಿ ಮುಜಫರ್ ನಗರ ಕೋಮುಗಲಭೆಗಳ ನಂತರ ಅಲ್ಲಿ ಮುಸ್ಲಿಂ ವಿರುದ್ಧ ದಲಿತರು ಎನ್ನುವ ಕಾಳಗದ ಭೂಮಿಕೆ ತಯಾರಾಗಿದೆ. ಅಲ್ಲಿನ ಗ್ರಾಮಗಳಲ್ಲಿ ಮೇಲ್ಜಾತಿಗಳ ಕ್ರೌರ್ಯ ಮತ್ತು ದೌರ್ಜನ್ಯ ವಿರೋಧಿ ಹೋರಾಟಗಳನ್ನು ಕೈ ಬಿಟ್ಟ ದಲಿತರು ಬಹುಸಂಖ್ಯಾತ ತತ್ವದ ಸಿದ್ಧಾಂತದಡಿಯಲ್ಲಿ ಹಿಂದೂಯಿಸಂನ ಕೊಡೆಯ ಅಡಿಯಲ್ಲಿ ಒಟ್ಟುಗೂಡುತ್ತಿದ್ದಾರೆ ಎನ್ನುವುದು ಮಾತ್ರ ಸತ್ಯ. ಇಡೀ ವಾತಾವರಣವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವ ಆರೆಸಸ್ ಮತ್ತು ಬಿಜೆಪಿ ಅತ್ಯಂತ ಚಾಣಾಕ್ಷತನದಿಂದ ಯೋಜನೆಗಳನ್ನು ಹೆಣೆಯುತ್ತಿವೆ. ಮೇಲ್ಮುಖದಿಂದ ಕೆಳಮುಖದ ಚಲನೆಯ ಸಂಕೇತವಾಗಿ ಸರ್ವಜನದಿಂದ ಬಹುಜನದವರೆಗೆ ಎನ್ನುವ ಸ್ಲೋಗನ್‌ಗಳನ್ನು ಪ್ರಚಾರ ಮಾಡುತ್ತಿದೆ. ಅವರ ಮುಖ್ಯಸ್ಥ ಮೋಹನ್ ಭಾಗವತ್ ಮೊನ್ನೆ ಮೀಸಲಾತಿಯ ಪರವಾಗಿ ವಾದಿಸಿದ್ದಾರೆ. ಇದಕ್ಕಾಗಿ ದಲಿತರು ಹಿಂದುತ್ವದ ಅಡಿಯಲ್ಲಿ ಬಹುಸಂಖ್ಯಾತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ಆದೇಶಿಸಿದ್ದಾರೆ. ದಲಿತರ ವಿಮೋಚನೆ ಆಗದೆ ಭಾರತದ ವಿಮೋಚನೆ ಇಲ್ಲ ಎಂದು ಚಿಂತಿಸಿದ ಅಂಬೇಡ್ಕರ್ ತತ್ವಗಳು ಹಿನ್ನೆಲೆಗೆ ತಳ್ಳಲ್ಪಟ್ಟು ಬಹುಜನ ಎಂದರೆ ಹಿಂದುತ್ವದ, ಸವರ್ಣೀಯ ಸಮಾಜವನ್ನು ಒಪ್ಪಿಕೊಂಡ ಬಹುಸಂಖ್ಯಾತ ತತ್ವದ ಒಳಗಿರುವವರು ಎನ್ನುವ ಚಿಂತನೆ ಮತ್ತು ಸಂಘಟನೆ ಬಲಗೊಳ್ಳುತ್ತಿದೆ. ಹಿಂದೂ ಧರ್ಮ ಮತ್ತು ದಲಿತರ ನಡುವೆ ಯಾವುದೇ ಬಗೆಯ ಸಂಧಾನಗಳನ್ನು ತಿರರಸ್ಕರಿಸಿದ್ದ ಅಂಬೇಡ್ಕರ್ ಮತ್ತು ದಲಿತರ ಬದುಕಿನೊಂದಿಗೆ ಬಿಡಿಸಲಾಗದ ಸಂಬಂಧವನ್ನು ಹೊಂದಿದ್ದ ಅಂಬೇಡ್ಕರ್ ಚಿಂತನೆಯ ಬಲವಾದ ಕೊಂಡಿ ನಿಧಾನವಾಗಿ ಕಳಚಿಕೊಳ್ಳುತ್ತಿದೆಯೇ ಎನ್ನುವಂತಹ ಅನುಮಾನಗಳು ಬರುತ್ತಿವೆ. ಆದರೆ ಈ ಅಂಶಗಳನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕಾಗುತ್ತದೆಯೇನೋ.

ಸಂಘ ಪರಿವಾರದ ಎಲ್ಲಾ ಬಗೆಯ ಹಿಂಸಾತ್ಮಕ ಚಿಂತನೆಗಳು ಈ ಮೊದಲಿನಂತೆ ಸಮಾಜದ ಮೇಲೆ ನೇರವಾಗಿ ಹೇರಲ್ಪಡುವುದಿಲ್ಲ. ಬದಲಾಗಿ ಕಾನೂನು, ಕಟ್ಟಳೆಗಳ ಮೂಲಕ ಜಾರಿಗೊಳ್ಳಲ್ಪಡುತ್ತವೆ. ಇಲ್ಲಿ ಧಾರ್ಮಿಕ ನೆಲೆಯಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು,ರಾಜಕೀಯ ಚಟುವಟಿಕೆಗಳನ್ನು ಆರೆಸಸ್ ಮತ್ತು ಅದರ ಅಂಗ ಪಕ್ಷಗಳು ಪ್ರತ್ಯಕ್ಷವಾಗಿ ಜಾರಿಗೊಳಿಸುತ್ತಿದ್ದರೆ ನರೇಂದ್ರ ಮೋದಿ ಇದಕ್ಕೆ ಸಂಬಂದಪಟ್ಟಿಲ್ಲದವರಂತೆಯೇ ವರ್ತಿಸುತ್ತಿರುತ್ತಾರೆ.

ಆದರೆ ಇತ್ತೀಚಿನ ಉಪಚುನಾವಣೆಗಳಲ್ಲಿ ಬಿಜೆಪಿ ಸೋತು ಮುಖಭಂಗ ಅನುಭವಿಸಿರುವುದು ಮತ್ತು ಈ ಸೋಲು ಅದರ ಸ್ವಯಂಕೃತ ಅಪರಾಧಗಳ ಕಾರಣದಿಂದ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ಇದನ್ನು ಅಚ್ಚರಿಯ ಫಲಿತಾಂಶ ಎಂದಷ್ಟೇ ನಾವು ಅವಲೋಕಿಸಬೇಕೇನೋ. ಇದನ್ನೇ ಜನಮತ ಎಂದುಕೊಂಡರೆ ಅದು ಬಾಲಿಶತನವೇ ಸರಿ. ರಾಜಕೀಯ ವಿಶ್ಲೇಷಕರು ಮತೀಯವಾದಿ ಫೆನಟಿಸಂ ಅನ್ನು ಜನತೆ ತಿರಸ್ಕರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನು ಸಂಪೂರ್ಣವಾಗಿ ಒಪ್ಪಲು ಆಗದು, ಏಕೆಂದರೆ ಮುಜಫರ್ ನಗರದ ಘಟನೆಗಳು, ಧೃವೀಕರಣ ಇಂದಿಗೂ ಹಸಿಹಸಿಯಾಗಿದೆ. ಮತೀಯವಾದಿ ಸಂಸದರಾದ ಯೋಗಿ ಆದಿತ್ಯನಾಥ, ಸಾಕ್ಷಿ ಮಹರಾಜ್‌ರಂವರಿಗೆ ಪಾಠ ಕಲಿಸಿದೆ ಈ ಉಪಚುನಾವಣೆಯ ಫಲಿತಾಂಶಗಳು ಎಂದೂ ವಿಶ್ಲೇಷಿಸುತ್ತಾರೆ. ಆದರೆ ಇದೂ ಕೂಡ ಅರ್ಧಸತ್ಯವೇನೋ.

ಒತ್ತಡವೇ ಒಡನಾಟವಾದ ಬದುಕು


– ಡಾ.ಎಸ್.ಬಿ. ಜೋಗುರ


ಮನುಷ್ಯ ಮಿಕ್ಕ ಎಲ್ಲ ಪ್ರಾಣಿಗಳಿಗಿಂತಲೂ ನೆಮ್ಮದಿಯಿಂದ ಬದುಕಲೆಬೇಕು. ಯಾಕೆಂದರೆ ಸಾಂಸ್ಕೃತಿಕ ಪರಿಸರದ ಪ್ರಜ್ಞೆ ಮತ್ತು ಅದರ ರೂಪಧಾರಣೆಯ ಶಕ್ತಿ ಇದ್ದದ್ದು ಕೇವಲ ಮನುಷ್ಯನಿಗೆ ಮಾತ್ರ. ಹಾಗಿರುವಾಗಲೂ ಮನುಷ್ಯನ ಸಹವಾಸದಲ್ಲಿರುವ ಸಾಂಸ್ಕೃತಿಕ ಅಪವರ್ತನೆ ಅಪಾರವಾಗಿದೆ. ಮಾನವನ ಸಾಮಾಜಿಕ ಬದುಕಿನ ವಿಕಾಸದ ಸಂಕೀರ್ಣತೆ ಮನುಷ್ಯನನ್ನು ಮತ್ತಷ್ಟು ಸಂಘರ್ಷಗಳಲ್ಲಿ ನೂಕಲು ಕಾರಣವಾಯಿತು. ಪ್ರಾಚೀನ ಕಾಲದ ಸಾಮಾಜಿಕ ಜೀವನದಲ್ಲಿಯ ನೆಮ್ಮದಿ ಮಧ್ಯಯುಗದ ಕಾಲಕ್ಕೆ ಅದೇ ಪ್ರಮಾಣದಲ್ಲಿ ಉಳಿಯಲಿಲ್ಲ. ಆಧುನಿಕ ಸಂದರ್ಭದಲ್ಲಿ ಅದರಲ್ಲೂ ಜಾಗತೀಕರಣದ ಪ್ರಕ್ರಿಯೆಯ ಸಹವಾಸದಲ್ಲಿ ಮನುಷ್ಯ ಒಂದು ಕಮಾಡಿಟಿಗಿಂತಲೂ ಯಾವುದೇ ರೀತಿಯಿಂದ ಭಿನ್ನವಾಗಿಲ್ಲ. ಜಾಹಿರಾತಿನ ಜಗತ್ತು ಮನುಷ್ಯನನ್ನು ಡಿಸ್ಕೌಂಟ್ ಲೋಕಕ್ಕೆ ತಳ್ಳುವ ಮೂಲಕ ಅವನಲ್ಲಿ ಇನ್ನೂ ಕೊಳ್ಳಬೇಕು ಎನ್ನುವ ಹಪಾಹಪಿತನವನ್ನು ಹುಟ್ಟು ಹಾಕಿದ್ದಲ್ಲದೇ ಅದೇ ವೇಗದಲ್ಲಿ ಅವನಲ್ಲಿಯ ಸಂವೇದನೆಗಳನ್ನು ಪರೋಕ್ಷವಾಗಿ ಕೊಲ್ಲುವ ಕ್ರಿಯೆಯೂ ಆರಂಭವಾಯಿತು. ಅಂತಿಮವಾಗಿ ಆಧುನಿಕ ವಿದ್ಯಮಾನಗಳು ಮನುಷ್ಯನನ್ನು ಕಮಾಡಿಟಿಯ ಸ್ಥಾನದಲ್ಲಿ ನಿಲ್ಲಿಸಿಬಿಟ್ಟವು. ಅದರ ಪರಿಣಾಮವೇ ಮನುಷ್ಯನ ಈಗಿನ ಉದ್ವೇಗದ ಬದುಕು.

ಈ ಉದ್ವೇಗ ಎನ್ನುವುದು ಈಗಂತೂ ಎಲ್ಲ ವಯೋಮಾನದ ಸ್ತರಗಳನ್ನು ಬಾಧಿಸತೊಡಗಿದೆ. stress-1ಇಂಗ್ಲಂಡನ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ ಆಡಿ ನಲಿಯುವ ವಯೋಮಾನದಲ್ಲಿರುವ ಯುವಕರನ್ನು ಆಧರಿಸಿ ಒಂದು ಅಧ್ಯಯನ ಕೈಗೊಂಡು, ಆ ಮೂಲಕ ಒಂದು ಮಹತ್ತರವಾದ ವರದಿಯನ್ನು ಹೊರಹಾಕಿದೆ. ಇಂದಿನ ಯುವಕರಲ್ಲಿ ಮೂರು ಗುಣಗಳು ವ್ಯಾಪಕವಾಗಿ ಕಂಡು ಬರುತ್ತಿವೆ. ಒಂದನೆಯದು ಸುಳ್ಳು ಹೇಳುವುದು, ಎರಡನೆಯದು ಕಳ್ಳತನ, ಮೂರನೆಯದು ಅವಿಧೇಯತೆಯ ಗುಣ ಎಂದು ಆ ವರದಿ ಹೇಳುತ್ತದೆ. ಕಳೆದ ತಿಂಗಳಲ್ಲಿ ನೇಚರ್ ಎಂಬ ಪತ್ರಿಕೆಯೊಂದು ಮನುಷ್ಯ ಅಪಾರ ಜನಜಂಗುಳಿಯ ನಡುವೆಯೂ ಏಕಾಂಗಿಯಾಗಿ ಬದುಕುತ್ತಿದ್ದಾನೆ ಎಂದು ಅಭಿಪ್ರಾಯ ಪಟ್ಟಿದೆ. ಆಲ್ಬರ್ಟ್ ಕಾಮು ಹೇಳಿದ್ದ ‘ಮನುಷ್ಯ ಭವಿಷ್ಯದಲ್ಲಿ ನಡುಗಡ್ದೆಯಂತೆ ಬದುಕುತ್ತಾನೆ’ ಎಂಬ ಮಾತು ಈಗ ಸತ್ಯವಾಗಿದೆ. ಮಹಾನಗರಗಳ ರಸ್ತೆಯಲ್ಲಿ ಮೈಗೆ ಮೈ ತಾಕಿಸಿ ಅಪಾರ ಜನ ದಟ್ಟಣೆಯ ನಡುವೆ ಅಲೆದರೂ ಎಲ್ಲರೂ ಆಪರಿಚಿತರಾಗಿಯೇ ಬದುಕುವ ರೀತಿ ಮಾತ್ರ ಕಟು ವಾಸ್ತವ.

ಇತ್ತೀಚಿನ ದಿನಗಳಲ್ಲಿ ಮನುಷ್ಯ ನೆಮ್ಮದಿಯನ್ನು ಕಳೆದುಕೊಂಡವನಾಗಿ ಜರ್ಜರಿತನಾಗಿದ್ದಾನೆ. ಈಚೆಗೆ ನಮ್ಮ ದೇಶದ ಐ.ಸಿ.ಎಮ್.ಆರ್ ಸಂಸ್ಥೆ ಎಂಟು ಪ್ರಮುಖ ರಾಜ್ಯಗಳನ್ನಿಟ್ಟುಕೊಂಡು stress-2ಸುಮಾರು 16607 ವ್ಯಕ್ತಿಗಳನ್ನು ಸಮೀಕ್ಷ್ಶಿಸಿ ಕಂಡುಕೊಂಡ ಸತ್ಯ ಏನೆಂದರೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಹೈಪರ್ ಟೆನ್ಸನ್ ಇರುವ ಸ್ಥಿತಿ ಬಹಿರಂಗವಾಗಿರುವದಿದೆ. ಸುಮಾರು 27.6 ಪ್ರತಿಶತ ಜನ ಉದ್ವೇಗಕ್ಕೆ ಒಳಗಾಗಿದ್ದಾರೆ. ನಂತರ ಚಂಡಿಗಡದಲ್ಲಿ 25.8 ಪ್ರತಿಶತ, ಮಹಾರಾಷ್ಟ್ರ 25 ಪ್ರತಿಶತ. ಒಟ್ಟಾರೆಯಾಗಿ ಈ ಬಗೆಯ ತೀವ್ರ ಮಾನಸಿಕ ಒತ್ತಡ ಹೆಚ್ಚಾಗಿ ಇರುವಂತದ್ದು ನಗರ ಪ್ರದೇಶಗಳಲ್ಲಿ. ಹಾಗೆಯೇ ಮಹಿಳೆ ಮತ್ತು ಪುರುಷರನ್ನು ಹೋಲಿಕೆ ಮಾಡಿ ಮಾತನಾಡುವದಾದರೆ ಪುರುಷರಲ್ಲಿ ಆ ಪ್ರಮಾಣ ಇನ್ನಷ್ಟು ಹೆಚ್ಚಿಗಿದೆ. ಈ ಬಗೆಯ ತೀವ್ರ ಒತ್ತಡವನ್ನು ನಿಯಂತ್ರಿಸದಿದ್ದರೆ ಮೆದುಳು, ಕಣ್ಣು, ಹೃದಯದ ಮೇಲೆಯೂ ಕೆಟ್ಟ ಪರಿಣಾಮ ಉಂಟಾಗುತ್ತದೆ. ಜೊತೆಗೆ ಕಿಡ್ನಿ, ರಕ್ತನಾಳಗಳ ಮೇಲೆಯೂ ಮಾರಕ ಪರಿಣಾಮಗಳಾಗುತ್ತವೆ. ಅರ್ಥಿಕ ಬೆಳವಣಿಗೆ ಮತ್ತು ತೀವ್ರ ನಗರೀಕರಣದ ಪರಿಣಾಮವಾಗಿ ಈ ಬಗೆಯ ಒತ್ತಡ ಇಲ್ಲವೇ ಮಾನಸಿಕ ಖಿನ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಮನುಷ್ಯನಿಗೆ ಎಲ್ಲ ಬಗೆಯ ಸಾಧಕ ಬಾಧಕಗಳ ಅರಿವಿರುವಾಗಲೂ ಒತ್ತಡದ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅನೇಕ ಬಗೆಯ ಸಮಸ್ಯೆಗಳು ಮನುಷ್ಯನನ್ನು ಮುತ್ತಿಕೊಂಡಿವೆ. ಕೆಲವು ಸಮಸ್ಯೆಗಳಿಗೆ ಸ್ವತ: ಅವನೇ ಕಾರಣನಾಗಿರುವದೂ ಇದೆ. ಆ ಬಗೆಯ ಸಮಸ್ಯೆಗಳಿಗಾದರೂ stress-3ಪರಿಹಾರ ಅವನಿಂದ ಸಾಧ್ಯವಿದೆ. ಮನುಷ್ಯ ತನ್ನಂತೆಯೇ ಇರುವ ಇನ್ನೊಬ್ಬನನ್ನು ಸಹಿಸದ ವಕ್ರ ದೃಷ್ಟಿಯನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಓಶೊ ಒಂದು ಕಡೆ ಹೀಗೆ ಹೇಳುತ್ತಾರೆ. ಒಂದು ನಾವೆಯಲ್ಲಿ ಸಾಗುವಾತ ಎದುರು ಬದಿಯಲ್ಲಿ ಬರುವ ಇನ್ನೊಂದು ನಾವೆಗೆ ಡಿಕ್ಕಿ ಹೊಡೆಯುತ್ತಾನೆ. ತಕ್ಷಣವೇ ಎದ್ದು ಆ ನಾವೆಯಲ್ಲಿದ್ದವನಿಗೆ ಬೈಯಲು ನೋಡುತ್ತಾನೆ. ಆದರೆ ಆ ನಾವೆಯಲ್ಲಿ ಯಾರೂ ಇರುವದಿಲ್ಲ ಎನ್ನುವದನ್ನು ಗಮನಿಸಿ ಸುಮ್ಮನಾಗುತ್ತಾನೆ. ಅದೇ ಒಂದೊಮ್ಮೆ ಆ ನಾವೆಯಲ್ಲಿ ಇನ್ನೊಬ್ಬನಿದ್ದರೆ ದೊಡ್ಡ ಸಂಘರ್ಷವೇ ಜರಗುತ್ತಿತ್ತು. ಈತ ಮನುಷ್ಯನಿಲ್ಲದ ನಾವೆಯೊಂದು ಡಿಕ್ಕಿ ಹೊಡೆದರೆ ಸಹಿಸುತ್ತಾನೆ. ಆದರೆ ಮನುಷ್ಯನಿರುವ ನಾವೆಯನ್ನಲ್ಲ. ನಮ್ಮ ತೀವ್ರವಾದ ಬದುಕು, ಸಂಕೀರ್ಣ ಸಾಮಾಜಿಕ ಜೀವನ, ತೀಕ್ಶ್ಣವಾದ ಕಾರ್ಯ ವಿಧಾನ, ನಮ್ಮ ಅಪರಿಮಿತ ಬೇಡಿಕೆ ಮುಂತಾದವುಗಳು ಮನುಷ್ಯನನ್ನು ಹೀಗೆ ಹೈಪರ್ ಟೆನ್ಶನ್ ಸುಳಿಗೆ ನೂಕುತ್ತಿದೆ. ಹಾಗಾಗುವ ಮುನ್ನ ಜಾಗೃತರಾಗಿ ಒತ್ತಡಗಳಿಂದ ಹೊರಗುಳಿಯುವ ಬಗೆಯನ್ನು ಯೋಚಿಸಿ..ನೆಮ್ಮದಿಯ ಬದುಕನ್ನು ಅರಿಸಿಕೊಳ್ಳಿ.

ದಲಿತ ಸಾಹಿತ್ಯ ಸಮ್ಮೇಳನ: ಕೆಲವು ಪ್ರಶ್ನೆಗಳು

M.Venkatesh-1

– ಶಾಂತ್ ಹೂಟಗಳ್ಳಿ

ಮೈಸೂರಿನಲ್ಲಿ ೫ ನೇ ದಲಿತ ಸಾಹಿತ್ಯ ಸಮ್ಮೇಳನ ಇದೇ ಸೆಪ್ಟಂಬರ್ ೧೪,೧೫ ರಂದು ನಡೆಯುತ್ತಿದೆ. ಈ ಸಮ್ಮೇಳನ ಕುರಿತು ಎತ್ತಲೇಬೇಕಾದ ಕೆಲವು ಪ್ರಶ್ನೆಗಳು ಮೌನತಾಳಿವೆ. ಅಥವಾ ಮುಗುಮ್ಮಾಗಿ ಅಡಗಿ ಕೂತಂತಿವೆ. ದಲಿತ ಸಾಹಿತ್ಯ ಪರಿಷತ್ತು ಈಗ್ಗೆ ಐದು ವರ್ಷಗಳಿಂದ ಸಾಹಿತ್ಯ ಸಮ್ಮೇಳವನ್ನು ಆಚರಿಸುತ್ತಾ ಬಂದಿದೆ. ಇದನ್ನು ದಲಿತ ಸಾಹಿತ್ಯ ಪರಿಷತ್ತು (ದಸಪ) ಆಯೋಜಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ದಲಿತರಿಗೆ ಆಧ್ಯತೆ ದೊರೆಯುತ್ತಿಲ್ಲ. ಈ ತನಕ ದಲಿತರೊಬ್ಬರು ಕಸಾಪ ಸಮ್ಮೇಳನದ ಅಧ್ಯಕ್ಷರಾಗಿಲ್ಲ ಎನ್ನುವ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಮುಂದುಮಾಡಿ ದಸಾಪ ಹುಟ್ಟಿದೆ. ಇದೊಂದು ಚಾರಿತ್ರಿಕವಾಗಿ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಆಗಿರುವ ಬಹುಮುಖ್ಯ ಪಲ್ಲಟವೂ ಹೌದು.

ಕನ್ನಡ ಸಾಹಿತ್ಯ ಪರಿಷತ್ತು ಈಗಲೂ ಮೇಲು ಜಾತಿಯ ಹಿಡಿತದಲ್ಲಿದೆ. ಕಾರಣ ಈತನಕ ಒಬ್ಬ ದಲಿತ ಸಾಹಿತಿಯೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಲ್ಲದಿರುವುದನ್ನು ನೋಡಬಹುದು. ಹಾಗೆಯೇ ಕಸಾಪದ ಜಿಲ್ಲಾ, ತಾಲೂಕು ಘಟಕಗಳಲ್ಲಿಯೂ ದಲಿತ ಕೆಳಜಾತಿಗಳ ಪ್ರಾತಿನಿಧ್ಯ ತುಂಬಾ ಕಡಿಮೆ. ಅದರಲ್ಲೂ ಕಸಾಪ ದಕ್ಷಿಣ ಕನ್ನಡ ಭಾಗದಲ್ಲಿ ಬ್ರಾಹ್ಮಣ, ಹಾಸನ ಮೈಸೂರು ಭಾಗದಲ್ಲಿ ಗೌಡ ಸಮುದಾಯ, ಹೈದರಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದ ಹಿಡಿತದಲ್ಲಿದೆ. ಅದಕ್ಕೆ ಪೂರಕವಾಗಿ ಆಯಾ ಜಿಲ್ಲಾ ತಾಲೂಕ ಕಸಾಪ ಚಟುವಟಿಕೆಗಳು ನಡೆಯುತ್ತವೆ. ಹೀಗೆ ಮೇಲು ಜಾತಿಗಳ ಬಿಗಿಯಾದ ಹಿಡಿತದಿಂದ ಕಸಾಪವನ್ನು ಪಾರು ಮಾಡದಿದ್ದರೆ, ಜಾತಿಯ ನೆಲೆಯಲ್ಲಿ ಹುಟ್ಟಬಹುದಾದ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಕಸಾಪ ನಿರಂತರವಾಗಿ ಎದುರಿಸಬೇಕಾಗುತ್ತದೆ. ಆ ಕಾರಣಕ್ಕೆ ಕೆಳಜಾತಿಗಳ ವಿಶ್ವಾಸವನ್ನೂ ಕಸಾಪ ಗಳಿಸಲಾರದು. ೧೯೭೯ ರಲ್ಲಿ ಗೋಪಾಲಕೃಷ್ಣ ಅಡಿಗರು ಕಸಾಪ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ದಲಿತ ಸಾಹಿತ್ಯದ ಚರ್ಚೆಯನ್ನು ಏರ್ಪಡಿಸಲು ನಿರಾಕರಿಸಿದ್ದರು. ಈ ಘಟನೆಯ ಕಾರಣವೇ ಬಂಡಾಯ ಸಾಹಿತ್ಯ ಸಂಘಟನೆ ರೂಪುಗೊಂಡ ಚಾರಿತ್ರಿಕ ಸಂಘರ್ಷವೂ ನಮ್ಮ ಮುಂದಿದೆ.

ಕಸಾಪವನ್ನು ವಿರೋಧಿಸಿ ಹುಟ್ಟಿದ ದಸಾಪ ತುಂಬಾ ಎಚ್ಚರ ಮತ್ತು ಸೂಕ್ಷ್ಮತೆಯೊಂದಿಗೆ ಸಮ್ಮೇಳನವನ್ನು ರೂಪಿಸಬೇಕಾಗಿದೆ. ಕಸಾಪದ ಎಲ್ಲಾ ಮಿತಿಗಳನ್ನು ಮೀರುವ ಹಾಗೆ ತನ್ನದೇ ಆದ ಮಾದರಿಯೊಂದನ್ನು ಕಟ್ಟಿಕೊಳ್ಳಬೇಕಾಗಿದೆ. ಆದರೆ ಹಲವು ಸಂಗತಿಗಳಲ್ಲಿ ಕಸಾಪ ಮತ್ತು ದಸಾಪ ಸಮ್ಮೇಳನಕ್ಕೆ ಸಾಮ್ಯಗಳಿವೆ. ಅಥವಾ ಕಸಾಪ ಸಮ್ಮೇಳನದ ರಿಮೇಕ್‌ನಂತೆ ದಸಾಪ ಸಮ್ಮೇಳನವು ಕಾಣುತ್ತಿದೆ. ಅಧ್ಯಕ್ಷರ ಮೆರವಣಿಗೆ, ಸಮ್ಮೇಳನದ ಗೋಷ್ಠಿಗಳಲ್ಲಿ ದಂಡಿಯಾಗಿ ಕಿಕ್ಕಿರಿದ ಕವಿ ಸಾಹಿತಿಗಳು, ಅಸಾಹಿತಿಗಳ ಮೆರೆಸುವಿಕೆ, ಅಸೂಕ್ಷ್ಮ ಚಿಂತಕರ ಪಾಲ್ಗೊಳ್ಳುವಿಕೆ, ದಸಾಪ ದಲ್ಲಿಯೂ ಮುಂದುವರಿಯುತ್ತಿದೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಜಾತಿ ನೆಲೆಯಲ್ಲಿ ದಲಿತರ ಪಾಲ್ಗೊಳ್ಳುವಿಕೆ ಮತ್ತು ದಲಿತ ಸಮುದಾಯಕ್ಕೆ ಪೂರಕವಾದ ಕೆಲ ಸಂಗತಿಗಳ ಚರ್ಚೆಯ ಹೆಚ್ಚುವರಿಯನ್ನು ಹೊರತು ಪಡಿಸಿದರೆ ಕಸಾಪ ಸಮ್ಮೇಳನಕ್ಕಿಂತ ದಸಾಪ ಸಮ್ಮೇಳನದ ಚಹರೆ ಭಿನ್ನವಾಗಿಯೇನೂ ಕಾಣುವುದಿಲ್ಲ.

ಮುಖ್ಯವಾಗಿ ೫ ನೇ ದಸಾಪ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯೇ ಪ್ರಶ್ನಾರ್ಹ. ಹಿರಿಯರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ಸಂಸ್ಕೃತ ವಿದ್ವತ್ತಿನ ಕಾರಣ ಅವರನ್ನು ಗೌರವಿಸೋಣ. ಅಂತೆಯೇ ಅವರು ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದು ಅವರ ಸಂಸ್ಕೃತ ವಿದ್ವತ್ತಿಗೆ ಕೊಟ್ಟ ಗೌರವವೂ ಆಗಿದೆ. ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ದಲಿತ ಕುಲಪತಿ ಎನ್ನುವುದು ಚಾರಿತ್ರಿಕವಾಗಿ ದಾಖಲಾರ್ಹ. ಆದರೆ ಮಲ್ಲೇಪುರಂ ಅವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಿನಿಂದಲೂ ಅವರು ವಿದ್ವತ್ತಿನ ಕಾರಣಕ್ಕಲ್ಲದೆ ಬೇರೆ ಕಾರಣಗಳಿಗೆ ಹೆಸರಾಗಿದ್ದಾರೆ. ಸಂಸ್ಕೃತ ವಿವಿಯಲ್ಲಿಯೂ ಹುದ್ದೆಗಳ ಆಯ್ಕೆಯ ವಿವಾದ ನಿರಂತರವಾಗಿ ಸುದ್ದಿಯಾಗುತ್ತಲೇ ಇತ್ತು. ಮೇಲಿನ ಯಾವ ಸಂಗತಿಗಳೂ ಮುಚ್ಚಿಟ್ಟವೇನಲ್ಲ ಕಾಲ ಕಾಲಕ್ಕೆ ಮಾಧ್ಯಮಗಳಲ್ಲಿ ಬಹಿರಂಗಗೊಂಡತವುಗಳು.

ಇನ್ನು ಮಲ್ಲೇಪುರಂ ಅವರ ಸಾಹಿತ್ಯ ಸಾಧನೆಯನ್ನು ಗಮನಿಸಿದರೆ ದಲಿತರನ್ನು ಎಚ್ಚರಿಸುವ ಯಾವ ಗಂಭೀರ ಬರಹಗಳೂ ಇಲ್ಲ. ದಲಿತ ಪರವಾದ ಯಾವ ಹೋರಾಟ, ಚಳವಳಿಗಳಲ್ಲಿ ಅವರೆಂದೂ ಭಾಗಿಯಾಗಿಲ್ಲ. ಮೇಲಾಗಿ ಅವರು ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವವರೆಗೂ ದಲಿತರೆಂದು ಗುರುತಿಸಿಕೊಂಡಿಲ್ಲ ಕೂಡ. ಅವರು ಜೀವನಪೂರ್ತಿ ಬ್ರಾಹ್ಮಣರಂತಿದ್ದು, ಬ್ರಾಹ್ಮಣಪರವಾದ ಕೆಲಸ ಮಾಡಿಕೊಂಡಿದ್ದು ಇದ್ದಕ್ಕಿದ್ದಂತೆ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಬಿಟ್ಟರೆ ಅಖಿಲ ಕರ್ನಾಟಕದ ದಲಿತ ಮತ್ತು ದಲಿತ ಪರ ಚಿಂತಕರು ಅವರನ್ನು ದಿಢೀರನೆ ಒಪ್ಪಿಕೊಳ್ಳುವುದಾದರೂ ಹೇಗೆ?

ಮಲ್ಲೇಪುರಂ ಅವರು ತಮ್ಮ ಹೆಸರು ಮತ್ತು ವ್ಯಕ್ತಿತ್ವಕ್ಕಂಟಿದ ಕಳಂಕವನ್ನು ಅಳಿಸಿಕೊಳ್ಳುವ ಕೆಲಸಗಳಲ್ಲಿ ನಿರತರಾದಂತಿದೆ. ಈಚೆಗೆ ಮಲ್ಲೇಪುರಂ ಪ್ರತಿಷ್ಠಾನವೊಂದು ಸ್ಥಾಪನೆಯಾಗಿದೆ. ಈ ಪ್ರತಿಷ್ಠಾನದ ಮೂಲಕ ಪ್ರಶಸ್ತಿಗಳನ್ನೂ ಕೊಡಲಾಗುತ್ತಿದೆ. ಪ್ರಶಸ್ತಿ ಪಡೆದವರ ಹೆಸರಲ್ಲಿ ಪುಸ್ತಕಗಳನ್ನೂ ಬರೆಸಲಾಗಿದೆ. ಸೂಕ್ಷ್ಮಸಂವೇದನೆಯ ಲೇಕಖ/ಖಿಯರೂ ಕೂಡ ಮಲ್ಲೇಪುರಂ ಪ್ರತಿಷ್ಠಾನದ ಪ್ರಶಸ್ತಿಯನ್ನು ಯಾವ ತಕರಾರಿಲ್ಲದೆ ಸ್ವೀಕರಿಸುತ್ತಾರೆ. ತಮ್ಮ ಸಾಧನೆಯ ಪುಸ್ತಕ ಬರೆಸಿಕೊಳ್ಳುತ್ತಾರೆ. ದಸಾಪ ಸಮ್ಮೇಳನದ ಅಧ್ಯಕ್ಷಗಿರಿ ಕೂಡ ತಮಗಂಟಿದ ಕಳಂಕವನ್ನು ಮರೆಮಾಚಲು ಮಾಡುವ ಪ್ರಯತ್ನದಂತೆಯೇ ಕಾಣುತ್ತಿದೆ. ಇದರಿಂದಾಗಿ ಇಡೀ ದಸಾಪ ಸಮ್ಮೇಳನವೇ ಪ್ರೊ.ಮಲ್ಲೇಪುರಂ ಅವರಿಗಂಟಿದ ಕಳಂಕ ಅಳಿಸಲು ಬಲಿಯಾಗುತ್ತಿದ್ದಂತೆ ಕಾಣುತ್ತಿದೆ. ದಲಿತ ಎನ್ನುವ ಕಾರಣಕ್ಕೇ ಮಲ್ಲೇಪುರಂ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಾದರೆ ದಲಿತ ಸಮುದಾಯದಲ್ಲಿಯೇ ಪ್ರಾಮಾಣಿಕರೂ ದಲಿತ ಹೋರಾಟಕ್ಕೆ ಶ್ರಮಿಸಿದವರೂ ಹಲವರಿದ್ದರು. ಈ ವಿಷಯದಲ್ಲಿ ದಸಾಪ ಸಂಘಟನಕಾರರು, ಪದಾಧಿಕಾರಿಗಳು ಅಸೂಕ್ಷ್ಮವಾದರೆ? ಅಥವಾ ಜಾಣಮರೆವಿನಿಂದ ಮೌನವಾದರೆ?

ದಸಾಪ ದಲಿತ ಎನ್ನುವ ಪದವನ್ನು ತುಂಬಾ ಸೀಮಿತ ಅರ್ಥದಲ್ಲಿ ಬಳಸಿದಂತೆ ಕಾಣುತ್ತದೆ. ಮೇಲು ಜಾತಿ ಮತ್ತು ವರ್ಗಗಳನ್ನು ಹೊರತು ಪಡಿಸಿ ಎಲ್ಲಾ ಧರ್ಮಗಳ ಶೋಷಿತ ಕೆಳಜಾತಿ ಮತ್ತು ಸಮುದಾಯಗಳನ್ನು ಒಳಗೊಳ್ಳುವ ವಿಶಾಲ ಹರವಿನಿಂದ ದಸಾಪ ಹೊರತಾಗಿದೆ. ಇದರಿಂದಾಗಿ ಕಸಾಪದಂತೆಯೇ ದಸಾಪ ಕೂಡ ಮತ್ತೊಂದು ಅತಿರೇಕದ ನಡೆಯಾಗುತ್ತಿರುವುದು ಸದ್ಯಕ್ಕೆ ಕಾಣುತ್ತಿದೆ. ದಸಾಪ ಸಮ್ಮೇಳನದ ಆಹ್ವಾನ ಪತ್ರಿಕೆಯ ಹೆಸರುಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರಿವಿಗೆ ಬರುತ್ತದೆ. ಕಸಾಪ ಈಗ ದಲಿತರ ವಿರೋಧಕ್ಕೆ ಕಾರಣವಾದಂತೆ ಮುಂದೊಂದು ದಿನ ಶೋಷಿತ ಕೆಳಜಾತಿ/ವರ್ಗಗಳ ವಿರೋಧಕ್ಕೂ ದಸಾಪ ಒಳಗಾಗುವುದಿಲ್ಲ ಎಂದು ಹೇಳಲಿಕ್ಕಾಗದು.

ಕಸಾಪ ಸಮ್ಮೇಳನದ ಹಲವು ಮಿತಿಗಳು ದಸಾಪ ಸಮ್ಮೇಳನದಲ್ಲಿಯೂ ಮುಂದುವರಿಯುತ್ತಿದೆsahitya. ಕಸಾಪ ಸಮ್ಮೇಳನ ಹೆಚ್ಚು ಟೀಕೆಗೊಳಗಾಗಿರುವುದು ಅದರ ಜಡತೆ ಮತ್ತು ಅಸೂಕ್ಷ್ಮತೆಯ ಕಾರಣಕ್ಕೆ. ಅಂದರೆ ಅದು ವರ್ತಮಾನದ ತಲ್ಲಣಗಳಿಗೆ ಎಂದೂ ಮೊದಲ ಆದ್ಯತೆಯನ್ನು ಕೊಡುವುದಿಲ್ಲ. ಅಥವಾ ವರ್ತಮಾನದ ಸಂಗತಿಗಳನ್ನು ಸಮ್ಮೇಳನ ಒಳಗೊಂಡರೂ ಆ ಕುರಿತು ಮಾತನಾಡುವವರು ಮಾತ್ರ ನಿಷ್ಠುರಿಗಳಾಗಿರುವುದಿಲ್ಲ, ಸೂಕ್ಷ್ಮಜ್ಞರಾಗಿರುವುದಿಲ್ಲ. ಬದಲಾಗಿ ಎಲ್ಲವನ್ನೂ ಸಪಾಟುಗೊಳಿಸಿ ಆಕರ್ಷಕವಾಗಿ ಜನಪ್ರಿಯ ನಗೆಚಟಾಕಿ ಹಾರಿಸಿ ಗಂಭೀರತೆಯನ್ನು ಹಾಳುಗೆಡವುವರಾಗಿರುತ್ತಾರೆ. ಯಾವಾಗಲೂ ಆಯಾ ಕಾಲದ ಸೂಕ್ಷ್ಮ ಯುವ ಬರಹಗಾರರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದು ಕಡಿಮೆಯೆ. ಕಾರಣ ಕಸಾಪ ಜಡಗೊಂಡ ಹಿರಿಯ ಸಾಹಿತಿಗಳಿಗೇ ಮಣೆ ಹಾಕುತ್ತಾ ಬಂದಿದೆ. ಇಂತಹ ಲಕ್ಷಣಗಳು ದಸಾಪ ಸಮ್ಮೇಳನದಲ್ಲಿಯೂ ಮುಂದುವರೆಯುತ್ತಿದೆ. ಇಲ್ಲಿಯೂ ಜಡತೆ ಅಸೂಕ್ಷ್ಮತೆ ಕಾಣುತ್ತಿದೆ. ಇಲ್ಲಿಯೂ ಕವಿಗಳಲ್ಲದವರು ಕವಿಗಳ ವೇಷದಲ್ಲಿಯೂ, ಸೂಕ್ಷ್ಮಜ್ಞ ಚಿಂತಕರಲ್ಲದವರು ಚಿಂತಕರ ವೇಷದಲ್ಲಿಯೂ ಪ್ರವೇಶ ಪಡೆಯುತ್ತಿರುವುದು ದಸಾಪದ ಅಸೂಕ್ಷ್ಮತೆಗೆ ಸಾಕ್ಷಿಯಾಗಿದೆ.

ದಸಾಪ ಸಮ್ಮೇಳನ ದಲಿತ ಸಮುದಾಯದ ಸಮಸ್ಯೆಗಳ ಸೂಕ್ಷ್ಮಗಳನ್ನು ದೊಡ್ಡ ನಿಯಲ್ಲಿ ತೋರುವಂತಾಗಲಿ, ಈ ಪ್ರಶ್ನೆಗಳನ್ನು ನಾಡಿನ ಚಳವಳಿಗಾರರು ಪ್ರಗತಿಪರರು ಚರ್ಚಿಸುವಂತಾಗಲಿ, ಸರಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಲಿ ಎನ್ನುವ ಕಾಳಜಿಯಿಂದ ಮೇಲಿನ ಪ್ರಶ್ನೆಗಳನ್ನು ಎತ್ತಲಾಗಿದೆ. ಕಾರಣ ಇದನ್ನೊಂದು ಜನಜಂಗುಳಿಯ ಜಾತ್ರೆಯನ್ನಾಗಿಸಿ ಅಸೂಕ್ಷ್ಮಗೊಳಿಸಿದರೆ ಈ ಸಮ್ಮೇಳನ ಸಾಹಿತ್ಯವಲಯದ ಅವಜ್ಞೆಗೆ ಗುರಿಯಾಗುತ್ತದೆ. ದಲಿತರಿಗೆ ಮಾತ್ರ ಸಂಬಂಧಿಸಿದ, ದಲಿತರು ಮಾತ್ರ ಪಾಲ್ಗೊಳ್ಳುವ, ದಲಿತರಿಗಷ್ಟೆ ಸಂಬಂಧಿಸಿದ್ದು ಎಂದು ಸಾರ್ವಜನಿಕ ವಲಯ ಭಾವಿಸುವಷ್ಟು ಕುಬ್ಜವಾಗುವ ಸಾಧ್ಯತೆ ಇದೆ. ಅಥವಾ ದಸಾಪದ ತಪ್ಪುಗಳನ್ನು ಮುಂದುಮಾಡಿ ತಿರಸ್ಕಾರಕ್ಕೆ ಕಾರಣವಾಗುತ್ತದೆ. ಹೀಗೆ ಸಾಹಿತ್ಯದ ಪ್ರಗತಿಪರರ, ಚಳವಳಿಗಾರರ ಗಂಭೀರ ಅಲಕ್ಷ್ಯಕ್ಕೆ ಒಳಗಾದರೆ ಈ ಸಮ್ಮೇಳನವನ್ನು ಆಯೋಜಿಸಿಯೂ ಫಲವೇನು? ಈ ಎಲ್ಲಾ ಪ್ರಶ್ನೆಗಳನ್ನು ದಲಿತಪರವಾದ ಪ್ರಾಮಾಣಿಕ ಕಾಳಜಿಯಿಂದ ಮಾತ್ರ ಎತ್ತಲಾಗಿದೆ. ಈ ಪ್ರಶ್ನೆಗಳಿಗೆ ದಸಾಪ ಸಂಘಟಕರು, ಪದಾದಿಕಾರಿಗಳು ಸೂಕ್ಷ್ಮವಾಗಿ ಮುಖಾಮುಖಿಯಾಗಲಿ ಎನ್ನುವುದು ಈ ಬರಹದ ಆಶಯ.

ವಿಮೋಚಕಿಯ ಕನಸುಗಳು: ಮರೆಮಾಚಲಾದ ಮೊದಲ ಶಿಕ್ಷಕಿಯ ಮರುನೆನಕೆ


 ಎಚ್.ಜಯಪ್ರಕಾಶ್ ಶೆಟ್ಟಿ


ಸೆಪ್ಟೆಂಬರ್ ಬರುತ್ತಿದ್ದಂತೆಯೇ ಶಿಕ್ಷಕರುಗಳಲ್ಲನೇಕರು ತಾವು ಗುಜರಾಯಿಸಿದ ಅರ್ಜಿಗಳ ಬೆನ್ನುಹತ್ತಿ ಶಿಕ್ಷಕರ ದಿನದ ಪ್ರಶಸ್ತಿಯ ಸಂಭ್ರಮಕ್ಕೆ ಹಾತೊರೆಯುತ್ತಾರೆ. ಈ ಲಾಬಿ ಮಾಡಲಾರದವರು ಕ್ಯಾಲೆಂಡರಿನಲ್ಲಿ ನಮೂದಿತವಾದ ಶಿಕ್ಷಕರ ದಿನದಂದು ನಿಗದಿತ ವ್ಯಕ್ತಿಯ ಗುಣಗಾನ ಮಾಡಿ ದೇಶ ಅಂದರೇನು, ಶಿಕ್ಷಣ ಅಂದರೇನು ಅಂತ ತಮ್ಮ ಮಕ್ಕಳಿಂದ ತಾವೇ ಹೇಳಿಸಿಯೋ, ಇಲ್ಲ ತಾವೇ ಹೇಳಿಯೋ ಆ ದಿನದ ಜವಾಬ್ದಾರಿ ತೀರಿತೆಂದುಕೊಳ್ಳುತ್ತಾರೆ. ಹೀಗೆಲ್ಲಾ ನಮ್ಮ ಶಿಕ್ಷಕರು ತಮ್ಮ ದಿನವಾಗಿ ನೆನೆಸಿಕೊಳ್ಳುತ್ತಿರುವುದು ಜಾಗತಿಕ ಶಿಕ್ಷಕರ ದಿನವನ್ನಲ್ಲ. ತಳಸಮುದಾಯಗಳ ಶಿಕ್ಷಣಕ್ಕೆ ಜೀವತೇದ ಮಹಾತ್ಮರನ್ನು ಕುರಿತ ದಿನವನ್ನೂ ಅಲ್ಲ. ಭಾರತೀಯ ತತ್ವಶಾಸ್ತ್ರ ಕ್ಷೇತ್ರಕ್ಕೆ ಅಪ್ರತಿಮಕಾಣಿಕೆ ಸಲ್ಲಿಸಿದವರೆಂದೇ ಕೀರ್ತಿಸಲ್ಪಟ್ಟು ಸ್ಥಾಪಿತರಾದ ಸರ್ವಪಳ್ಳಿ ರಾಧಾಕೃಷ್ಣನ್ ಹುಟ್ಟಿದ್ದೆನ್ನಲಾದ ದಿನವನ್ನು!

ವಾಸ್ತವಿಕವಾಗಿ ಈ ದಿನಕ್ಕೂ, ಅದನ್ನಾಚರಿಸುವ ತಳಸಮುದಾಯದ ಹಿನ್ನೆಲೆಯ ಶಿಕ್ಷಕರು ಮತ್ತು ಮಕ್ಕಳಿಗೂ ಯಾವುದೇ ನಂಟಿಲ್ಲ. ಅದಲ್ಲದೆ ರಾಧಾಕೃಷ್ಣನ್ radhakrishnan-sarvepalliಭಾರತೀಯ ತತ್ವಶಾಸ್ತ್ರ ಕ್ಷೇತ್ರದ ಅಧ್ಯಯನದ ದಿಕ್ಕುತಪ್ಪಿಸಿದವರಲ್ಲೊಬ್ಬರೆನ್ನುವ ಆಪಾದನೆ ಇದೆ. ಈ ಕ್ಷೇತ್ರದಲ್ಲಿನ ಅವರ ಕೊಡುಗೆ ಮತ್ತು ಪ್ರತಿನಿಧಿಸಿದ ಆಲೋಚನಾಪರಂಪರೆ ಈ ದೇಶದ ಸಾಮಾನ್ಯರ ಪರವಾದುದಲ್ಲವೆಂಬ ಚರ್ಚೆಗಳಿವೆ. ವ್ಯಕ್ತಿಬದುಕಿನ ನೆಲೆಯಲ್ಲೂ ಅವರ ಆದರ್ಶಗಳ ಪಾರದರ್ಶಕತೆಯ ಕುರಿತು ಪ್ರಶ್ನೆಗಳಿವೆ. (ಉದಾಹರಣೆಗೆ ಅವರದೇ ಹತ್ತಿರದ ಬಂಧು ಎಸ್.ಗೋಪಾಲ್ ಅವರ ಪುಸ್ತಕವನ್ನಾಧರಿಸಿ ಪ್ರಜಾವಾಣಿಯಲ್ಲಿ ಪ್ರಕಟವಾದ ಪಂಪಪ್ರಶಸ್ತಿ ಪುರಸ್ಕೃತ ವಿಮರ್ಶಕ ಜಿ.ಎಚ್.ನಾಯಕರ ಲೇಖನವನ್ನು  ಗಮನಿಸಿ). ಇಲ್ಲಿಯ ಪ್ರಶ್ನೆ ರಾಧಾಕೃಷ್ಣನ್ ಅವರ ತಾತ್ವಿಕವಿಚಾರಗಳ ಗುಣಮಟ್ಟ ಮತ್ತು ಜೀವಪರತೆಯ ಕುರಿತಷ್ಟೇ ಅಲ್ಲ. ಅಕ್ಷರಸಂಸ್ಕೃತಿಯ ನಿರಂತರ ಒಡನಾಟದಲ್ಲಿದ್ದು, ಆಧುನಿಕಕಾಲದ ಸಾಂಸ್ಥಿಕಶಿಕ್ಷಣದ ಅನುಕೂಲ ಬಾಚಿಕೊಳ್ಳಲು ಹಾದಿ  ಬದಲಾಯಿಸಿದ ಪಾರಂಪರಿಕ ನೆಲೆಯಿಂದಲೇ ಆಧುನಿಕ ಮಾದರಿಯನ್ನು ಆಯ್ದುಕೊಳ್ಳುವ ಅಥವಾ ಮಾದರಿಗಳ ಆಯ್ಕೆಯಲ್ಲಿಯೂ ’ವಿಪ್ರಹಸ್ತೇನ ಅಕ್ಷರಂ’ ಎಂಬ ಮಾತಿಗೇ ಜೋತುಬೀಳುವ ಔಚಿತ್ಯವೇನು ಎನ್ನುವುದು. ಯಾಕೆಂದರೆ ಆಧುನಿಕ ಕಾಲವೇ ಮಾದರಿಗಳ ಆಯ್ಕೆಗೆ ವಿಸ್ತಾರವಾದ ಹರವನ್ನು ನಿರ್ಮಿಸಿದೆ. ಜೀವಪ್ರೀತಿ, ಸಾಮಾನ್ಯರಪರ ನಿಲುವುಗಳ ಹಿನ್ನೆಲೆಯ ಅನೇಕ ಮಾದರಿಗಳನ್ನು ಕೊಟ್ಟಿದೆ. ತಳಸಮಾಜವನ್ನು, ಅದರಲ್ಲಿಯೂ ಮುಖ್ಯವಾಗಿ ಚರಿತ್ರೆಯುದ್ದಕ್ಕೂ ಅಕ್ಷರದ ಪಾಲಿಗೆ ಅಸ್ಪೃಶ್ಯರೆನಿಸಿದ ಮಹಿಳೆಯರನ್ನು ಶಿಕ್ಷಣದ ಮೂಲಕ ಮೇಲೆತ್ತಲು ಹಠತೊಟ್ಟ ಮಾದರಿಗಳಿವೆ. ಈ ಹರವನ್ನು ಹೀಗೆ ಕೆದಕಿದಾಗಷ್ಟೇ ನಮಗೆ ಮಹಾತ್ಮಾ ಜ್ಯೋತಿಭಾ ಪುಲೆ ಮತ್ತವರ ಪತ್ನಿ ಸಾವಿತ್ರಿಬಾಯಿ ಪುಲೆ ತರಹದ ಅನೇಕ ಮಾದರಿಗಳು ಸಿಗುತ್ತವೆ.

ಸಾವಿತ್ರಿಬಾಯಿಪುಲೆ ಅವರಂತೂ ನಿಜಾರ್ಥದಲ್ಲಿ ಶಿಕ್ಷಕಿ. ಇದು ಕೇವಲ ಭಾವನಾತ್ಮಕ ನಿರಾಕರಣೆ ಮತ್ತು ಸ್ವೀಕಾರದ ಮಾತಲ್ಲ. ಈ ಅತ್ಯುಚ್ಚ ಗೌರವಕ್ಕೆ ಆಕೆಯ ಬದುಕು ಅರ್ಹವೂ ಆಗಿದೆ. ಆದರೆ ಸ್ಥಾಪಿತ ಹಿತಾಸಕ್ತಿಗಳಿಂದ ಕಥಿಸಲ್ಪಟ್ಟ ಭಾರತೀಯ ಶಿಕ್ಷಣದ ಚರಿತ್ರೆ ಸಾವಿತ್ರಿಬಾಯಿಯ ಜೀವಕರುಣೆಯ ಹೋರಾಟದ ಬದುಕನ್ನೇ ನಾಪತ್ತೆಗೊಳಿಸಿದೆ. ಹೀಗಾಗಿ ನಮ್ಮದೇ ಮಾದರಿ ನಮಗೆ ಅಪರಿಚಿತವಾಗುಳಿದಿದೆ. ಆದರೆ ತಳಮೂಲದ ಕಣ್ಣುಗಳ ಹುಡುಕಾಟಕ್ಕೆ ಈ ಉಪೇಕ್ಷಿತ ಮಾದರಿಗಳು ಈಗೀಗ ಎಟುಕುತ್ತಿರುವುದು ಸಂತಸದ ಸಂಗತಿ. ಇದು ಕನ್ನಡದಲ್ಲೂ ಸಂಭವಿಸುತ್ತಿದೆ. ಇಂಗ್ಲೀಷ್ ಕೃತಿಯ ಕನ್ನಡಾನುವಾದ ರೂಪದ ‘ವಿಮೋಚಕಿಯ ಕನಸುಗಳು’ ಆ ಸಂತಸಕ್ಕೊಂದು ಸಾಕ್ಷಿಯನಿಸಿ, ಚರಿತ್ರೆಯ ಉದ್ದೇಶಿತ ಉಪೇಕ್ಷೆಯು ಮರೆಮಾಚಿದ ಸಾವಿತ್ರ್ರಿಬಾಯಿಯ ಬದುಕನ್ನು ಆಪ್ತವಾಗಿಯೇ ತೆರೆದಿಡುವ ಕನ್ನಡದ ಮಹತ್ವದ ಕೃತಿಯನಿಸಿದೆ.

ನಮ್ಮ ಶಿಕ್ಷಣದಲ್ಲಿ ನಾವು ಕಲಿಯುತ್ತಾ ಬಂದ ವಿಮೋಚಕರ ಸರದಿಯ ಆರಂಭ ನೆಲದಿಂದಲ್ಲ, ಆಕಾಶದಿಂದಾಗುತ್ತದೆ.  ಸಮೂಹದ ಉದ್ಧಾರಕ್ಕೆಂದು ಹುಟ್ಟಿಬಂದ ಅವತಾರ ಪುರುಷರನ್ನೇ ಆಮದು ಮಾಡಿಕೊಡುತ್ತಾ ಬಂದ ಈ ಕ್ರಮ, ಚರಿತ್ರೆಯ ಕುರಿತ ಚಿಕಿತ್ಸಕದೃಷ್ಟಿಯ ನಮ್ಮದೇ ಕಾರಣಕ್ಕೆ ನಮಗೆ ಆಪ್ತವಾಗಬೇಕಿದ್ದ ಮಾದರಿಗಳನ್ನು ಸಿಕ್ಕದಂತೆ ಮುಚ್ಚಿಟ್ಟಿದೆ. ಹೀಗಾಗಿ ಈ ದೇಶದ ಶಮಣಪರಂಪರೆ, ಸಿದ್ಧರು, ನಾಥರು, ತತ್ವಪದಕಾರರಾಗಲೀ, ಜನಸಮೂಹದ ಕಾವ್ಯಗಳಾಗಲೀ ನಮ್ಮವೆನಿಸಿಯೇ ಇಲ್ಲ. ಬದಲಿಗೆ ದ್ವೈತಾದ್ವೈತ ಹಾಗೂ ವಿಶಿಷ್ಟಾದ್ವೈತಗಳನ್ನು ಪ್ರಸಾರಿಸಿ ಆತ್ಮವೆಂಬ ಗೂಟಕ್ಕೆ ಬಿಗಿದಿಟ್ಟವರನ್ನೇ ನಮ್ಮ ಬಿಡುಗಡೆಯ ಹರಿಕಾರರಾಗಿ ಓದಿಕೊಳ್ಳುತ್ತಾ ಬಂದಿದ್ದೇವೆ. ಅದ್ವಯವನ್ನು ದಾಟಿದ ಸಂತರನ್ನಾಗಲೀ, ಯುದ್ಧಕ್ಕೆ ಹೊರತಾದ ಬದುಕು ಕಲಿಸಿದ ನಮ್ಮದೇ ಜನಕಾವ್ಯಗಳನ್ನಾಗಲೀ, ನಮ್ಮದೆಂಬ ಆತ್ಮೀಯತೆಯಲ್ಲಿ ನಾವು ಮಾತನಾಡಿಸಿಯೇ ಇಲ್ಲ.

ನಮ್ಮೀ ವಿಸ್ಮೃತಿಯ ಉಪೇಕ್ಷೆಗೆ ಗುರಿಯಾದವರಲ್ಲಿ ಸಾವಿತ್ರಿಬಾಯಿಪುಲೆ ಅವರೂ ಒಬ್ಬರು. ಸನಾತನ ಮನಸ್ಸುಗಳಿಂದ ಕಲ್ಲೇಟು, savithri bai puleಸೆಗಣಿಯೇಟು ತಿಂದರೂ, ತಾವು ಹುಟ್ಟುಹಾಕಿದ್ದ ‘ಸತ್ಯಶೋಧಕ ಸಮಾಜ’ದ ಧ್ಯೇಯೋದ್ದೇಶಕ್ಕೆ ಬದ್ಧರಾಗಿ, ಅಂಚಿನ ಅಸ್ಪೃಶ್ಯರು ಮತ್ತು ಮಹಿಳೆಯರಿಗೆ ಅಕ್ಷರದ ಅನ್ನ ಬಡಿಸಿದ ಈ ಹೋರಾಟಗಾರ್ತಿ ಸಾವಿತ್ರಿಯನ್ನು ಘೋರ ವಿಸ್ಮೃತಿಯಿಂದ ಹೊರತರುವ ಯತ್ನದ ಭಾಗವಾಗಿಯೇ ‘ವಿಮೋಚಕಿಯ ಕನಸುಗಳು’ ಮೈತಳೆದಿದೆ. ಆದರಿದು ಕೇವಲ ಸಾವಿತ್ರಿಬಾಯಿಯ ವೈಭವೀಕರಣವಲ್ಲ. ಇಲ್ಲಿ ಸಾವಿತ್ರಿ ಬೇರಲ್ಲ. ಜ್ಯೋತಿಬಾ ಬೇರೆಯಲ್ಲ. ಇನ್ನೂ ಖಚಿತವಾಗಿ ಅದು ಸಾವಿತ್ರಿ ಜ್ಯೋತಿಬಾರನ್ನೂ ಮೀರಿ, ವಿಚಾರ ಮತ್ತು ವಿದ್ಯಮಾನದ ನಿರೂಪಣೆ. ತಳಸಮುದಾಯದ ಶತಮಾನಗಳ ಅಕ್ಷರದ ಹಸಿವೇ ಆ ವಿದ್ಯಮಾನ. ಹಾಗಾಗಿ ಅದು ಸಾವಿತ್ರಿಬಾಯಿಗಿಂತಲೂ ಸಾವಿತ್ರಿಯ ಬೆನ್ನಿಗಿದ್ದ ಜ್ಯೋತಿಬಾ ಹಾಗೂ ಸಮೂಹದ ಆಕಾಂಕ್ಷೆಯ ಸ್ಥೂಲ ಅನಾವರಣವುಳ್ಳ ಸಮೂಹಸಂಬಂಧದ ಕೃತಿ. ಅಕ್ಷರದ ಹಸಿವಿನಿಂದ ಹುಟ್ಟಿದ ವಿವೇಕ ಮತ್ತು ವಿಚಾರವನ್ನು ಸಮೂಹದ ಸಂಪತ್ತಾಗಿಸಲು ಕ್ರಮಿಸಿದ ಪೆಡಸು ಹಾದಿಯನ್ನು ನಿರೂಪಿಸುತ್ತಲೇ ನಮಗೆ ನಮ್ಮನ್ನೇ ಕಾಣಿಸುವ ಕೃತಿ. ಇತ್ತೀಚೆಗೆ ‘ಎದೆಗೆ ಬಿದ್ದ ಅಕ್ಷರ’ ಎಂಬ ಹೆಸರಲ್ಲಿ ದೇವನೂರ ಮಹಾದೇವ ಅವರ ಕೃತಿಯೊಂದು ಹೊರಬಂತು. ಅದು ಅಕ್ಷರ ಎದೆಗೆ ಬಿದ್ದುದರಿಂದಲೇ ಹುಟ್ಟಿದ ಕೃತಿ. ಬಿದ್ದ ಮಳೆಯನ್ನು ಹಿಡಿದಿಟ್ಟು ಫಲಕೊಡುವ ಎರೆಮಣ್ಣಿನಂತೆ ಎದೆ ಕೊಟ್ಟ ಫಲ. ಆದರೆ ಈ ದೇಶದ ಸಾಮಾನ್ಯರಿಗೆ ಎರೆಮಣ್ಣಿನ ಮೇಲೆ ಬೀಳುವ ಮಳೆಯಂತೆ ಅಕ್ಷರ ದಕ್ಕಿಯೂ ಇಲ್ಲ, ದಕ್ಕುತ್ತಲೂ ಇಲ್ಲ. ಬೀಳುವ ಮಳೆಗೆ ಚಪ್ಪರವಿಕ್ಕಿ ಕೊಟ್ಟ ಬರಗಾಲದ ಉಡುಗೊರೆಯಂತೆ ಎದೆಗೆ ಬೀಳುವ ಅಕ್ಷರವನ್ನೇ ಕಸಿದು ಬತ್ತಿಸಿದ ಎದೆಯೊರತೆಯ ಕರಾಳಗತ ಮತ್ತು ಸಹಜಮಳೆಯನ್ನೇ ಆಮ್ಲೀಯಗೊಳಿಸಿ ಕೆಡಿಸಿದಂತೆ ಎದೆಗೆ ಬೀಳುವ ಅಕ್ಷರವನ್ನೇ ಕಂಟ್ಯಾಮಿನೇಟೆಡ್ ಆಗಿಸಿದ ವರ್ತಮಾನದ ವಂಚನೆ ಎರಡಕ್ಕೂ ಅವರು ಬಲಿಯಾಗಿದ್ದಾರೆ.

ಎದೆಯೊರತೆ ಜಿನುಗಿಸುವ ಅಕ್ಷರವೆಂಬ ಸತ್ಯ ಈ ದೇಶದ ಸಾಮಾನ್ಯರಿಗೆ ಸಮಾನ, ಸರಳ, ಸಹಜವಾಗಿsavitri-bai ದಕ್ಕಿಯೇ ಇಲ್ಲ. ದೇಶದ ಸಾಮಾನ್ಯರ ಮೇಲೆ ಸಾಂಪ್ರದಾಯಿಕ ಮನಸ್ಸುಗಳ ಯಾಜಮಾನ್ಯ ಸ್ಥಾಪಿತವಾದದ್ದೇ ಜ್ಞಾನದ ಮೇಲಿನ ಈ ಹಿಡಿತದಿಂದ. ಆದರೆ ಆಧುನಿಕ ಭಾರತ ಜ್ಞಾನದ ಮೇಲಿನ ಸಾಂಪ್ರದಾಯಿಕ ಒಡೆತನಕ್ಕೆ ಅರ್ಥಪೂರ್ಣ ಪ್ರತಿರೋಧವನ್ನು ಒಡ್ಡುತ್ತಲೇ ಬಂದಿದೆ. ಈ ಪ್ರತಿರೋಧದ ಸೇನಾನಿಗಳು ಅನೇಕರು. ಆದರೆ ತರ್ಕಬದ್ಧ ನೆಲೆಯಲ್ಲಿ ಆರಂಭದ ಸೇನಾನಿಗಳೆನಿಸಿದವರು ಪುಲೆ ದಂಪತಿಗಳೇ. ಅವರ ಈ ಹೋರಾಟ ನಿರಾಯಾಸವಾದುದಲ್ಲ. ಶಾಲೆ ತೆರೆದು ಶಿಕ್ಷಕಿಯಾಗಿ ದುಡಿದ ತಪ್ಪಿಗಾಗಿಯೇ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ತ ದೇವತಾ’ ಎನ್ನುವವರಿಂದಲೇ ಸಾವಿತ್ರಿಬಾಯಿಪುಲೆ ಸೆಗಣಿ ಮತ್ತು ಕಲ್ಲೇಟು ತಿನ್ನುತ್ತಾಳೆ! ಸಮಾಜಕ್ಕೆ ಹೆದರಿ ಜ್ಯೋತಿಬಾರವರ ತಂದೆ ಜ್ಯೋತಿಬಾರನ್ನೇ ಮನೆಯಿಂದ ಹೊರಹಾಕುತ್ತಾನೆ. ‘ಬ್ರಾಹ್ಮಣರ ಆದೇಶ ಪಾಲಿಸು’ವಂತೆ ತಮ್ಮನೇ ಸಾವಿತ್ರಿಬಾಯಿಗೆ ಆದೇಶಿಸುತ್ತಾನೆ. ಆದರೆ ಶಿಕ್ಷಣವನ್ನು ಅಕ್ಷರಾಭ್ಯಾಸಕ್ಕಿಂತ, ಸಾಮಾಜಿಕ-ಸಾಂಸ್ಕೃತಿಕ ಬದಲಾವಣೆಗಾಗಿ ತಳಸಮುದಾಯದವರ ಮನಸ್ಸನ್ನು ಪ್ರಜ್ವಲಿಸುವಂತೆ ಮಾಡುವ ಮೂಲಭೂತ ಕೆಲಸವೆಂದೇ ನಂಬಿದ ಪುಲೆ ದಂಪತಿಗಳು ಯಾವುದಕ್ಕೂ ಹೆದರದೆ ಸವಾಲುಗಳನ್ನು ಅವಕಾಶಗಳಂತೆ ಹಾದುಬರುತ್ತಾರೆ. ಎದೆಗೆ ಬೀಳುವ ಅಕ್ಷರವನ್ನು ಬಲಾತ್ಕಾರವಾಗಿ ತಡೆಯುವ ಕೈಗಳಿಗೆ ಪ್ರತಿಯಾಗಿ ‘ಸತ್ಯಶೋಧಕ ಸಮಾಜ’ ಸಂಘಟಿಸಿ ಸಾಮಾನ್ಯರಲ್ಲಿ ಅರಿವಿನ ದೀಪಹಚ್ಚಲು ಹೆಣಗುತ್ತಾರೆ. ಈ ಹೋರಾಟದಲ್ಲಿ ಗಂಡನಿಗೆ ನೆರಳಾಗಿ ನಿಲ್ಲುವ ಸಾವಿತ್ರಿಬಾಯಿಯ ಬದುಕಿನ ಮುಖ್ಯ ಘಟನೆಗಳೇ ‘ವಿಮೋಚಕಿಯ ಕನಸುಗಳು’ ಕೃತಿಯ ಒಳತಿರುಳು. ಆಕೆ ಶಾಲೆಗೆಂದು ಹೊರಡುವಲ್ಲಿ ವಹಿಸುತ್ತಿದ್ದ ಮುಂಜಾಗರೂಕತೆ ಮತ್ತು ಅಂತಿಮವಾಗಿ ತೋರಿದ ದಿಟ್ಟತನದ ಕುರಿತು ಬರೆಯುತ್ತಾ, ಅವರು ಪ್ರತಿದಿನ ಹಳೆಯ ಸೀರೆಯನ್ನು ಉಟ್ಟು ಶಾಲೆಗೆ ಬರುತ್ತಿದ್ದರು. ನಂತರ ಮಲಿನಗೊಂಡ ಸೀರೆಯನ್ನು ಬದಲಾಯಿಸಿಕೊಳ್ಳುತ್ತಿದ್ದರು. ಕಡೆಗೆ ಒಂದು ದಿನ ದೌರ್ಜನ್ಯದಿಂದ ಬೇಸತ್ತ ಸಾವಿತ್ರಿಬಾಯಿ ದಾರಿಯಲ್ಲಿ ಕಲ್ಲೆಸೆಯುತ್ತಿದ್ದ ಯುವಕನೊಬ್ಬನ ಕೆನ್ನೆಗೆ ಬಾರಿಸಿಯೇ ಬಿಟ್ಟರು. ನಂತರದ ದಿನಗಳಲ್ಲಿ ನಿದಾನಕ್ಕೆ ಪರಿಸ್ಥಿತಿ ಸುಧಾರಿಸತೊಡಗಿತು. ಮುಂದೆ ಜವಾನನೊಬ್ಬನನ್ನು ಅಂಗರಕ್ಷಕನಾಗಿ ನೇಮಿಸಲಾಯಿತು(ವಿಮೋಚಕಿಯ ಕನಸುಗಳು, ಪು.38) ಎನ್ನುವ ವಿವರಗಳನ್ನು ದಾಖಲಿಸುತ್ತದೆ. ಹೀಗೆ ಸರಣಿಯಂತೆ ತೆರೆದುಕೊಳ್ಳುವ ವಿವರಗಳಲ್ಲಿ ಸಾಮಾನ್ಯರ ಶಿಕ್ಷಣಕ್ಕೆ  ಆ ತಾಯಿ ಪಟ್ಟ ಪಾಡಿದೆ. ಶಿಕ್ಷಕಿಯಲ್ಲಿರಬೇಕಾದ ಧೈರ್ಯ ಮತ್ತು ಚತುರಮತಿತ್ವದ ಸಾಕ್ಷಿಯಿದೆ. ಚರಿತ್ರೆ ಮತ್ತು ವರ್ತಮಾನದ ಸರಿಯಾದ ವಿವರಣೆಯಲ್ಲಿ ಸವರ್ಣಿಯ ಸಮಾಜದ ಆದೇಶಗಳ ಅನಾಹುತವನ್ನು ಅರಿತ ವಿವೇಕವಿದೆ. ಹೀಗೆ ಕೃತಿ ಈ ದೇಶದ ಸಾಮಾನ್ಯರ ‘ಎದೆಗೆ ಬಿದ್ದ ಅಕ್ಷರ’ದ ಹಿಂದಿನ ರೋಚಕ ಕತೆಯಂತೆಯೇ ತೆರೆದುಕೊಳ್ಳುತ್ತದೆ.

ಪುಲೆ ದಂಪತಿಯ ಹೆಚ್ಚುಗಾರಿಕೆ ಅವರು ತೆರೆದ ಶಾಲೆ ಮತ್ತು ಕಲಿಸಿದ ಅಕ್ಷರವಷ್ಟೇ ಅಲ್ಲ. ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎಂಬ ಅಕ್ಷರದ ಮೇಲಿನ ಒಡೆತನದ ಪರಂಪರೆಯೂ ಅವರದಲ್ಲ. ಅವರಿಗೆ ಸಾಮಾಜಿಕ ಜಾಗೃತಿ ಮುಖ್ಯವಾಗಿತ್ತು. ಅಕ್ಷರದ ಮೂಲಕ ಒಂದು ಜೀವನಕ್ರಮದ ಮೇಲೆ ಆಚ್ಛಾದಿಸಿಕೊಂಡಿದ್ದ ‘ಹೆಜಿಮನಿ’ಯನ್ನು ಹೋಗಲಾಡಿಸುವ ಗುರಿಯಿತ್ತು. ಇದಕ್ಕೆಂದೇ ಅವರು ಎಲ್ಲಾ ವಿಧವಾದ ದಮನಿತ ಜಾತಿಗಳನ್ನು ಸ್ತ್ರೀ-ಶೂದ್ರ-ಅತಿಶೂದ್ರ ವೇದಿಕೆಯಡಿ ಒಂದುಗೂಡಿಸಿ ಸಾಮಾಜಿಕ-ಸಾಂಸ್ಕೃತಿಕ ರ್ಯಾಡಿಕಲಿಸಂ ಚಳುವಳಿಯನ್ನು ಹುಟ್ಟುಹಾಕಿ(ವಿಮೋಚಕಿಯಕನಸುಗಳು ಪು.28) ಎಚ್ಚರದ ದಾರಿಯೊಂದನ್ನು ನಿರ್ಮಿಸಲು ಶ್ರಮಿಸಿದರು. ಜಾತಿ ಸಮಾಜವನ್ನು ವರ್ಗಸಮಾಜಕ್ಕಿಂತ ಭಿನ್ನವೂ ಅಪಾಯಕಾರಿಯೂ ಆಗಿ ಗುರುತಿಸಿದ್ದ ಪುಲೆ, ಜಾತಿಸಮಾಜದ ಸಾಮಾಜಿಕ ಹೈರಾರ್ಕಿಯ ಬದಲಾವಣೆಗೆ ಯಜಮಾನ್ಯದ ಮೂಲಬೇರುಗಳನ್ನೇ ಕದಲಿಸಬೇಕೆಂಬುದನ್ನು ಬಲ್ಲವರಾಗಿದ್ದರು. ಯಥಾಸ್ಥಿತಿ ವಾದಿಗಳ ಯಶಸ್ಸು ಜ್ಞಾನಕ್ಷೇತ್ರದ ಮೇಲಿನ ಅದರ ಹಿಡಿತ ಹಾಗೂ ಮಹಿಳಾ ಸಮುದಾಯದ ಮೇಲಿನ ನಿಯಂತ್ರಣದಲ್ಲಿದೆ ಎಂಬುದನ್ನು ನಿಖರವಾಗಿ ಗುರುತಿಸಿದ್ದರು. ಕಳಂಕಿತವಾದ ಈ ಅಪಾಯಕಾರಿ ಧಾರ್ಮಿಕ-ಸಾಮಾಜಿಕ ವ್ಯವಸ್ಥೆಯಲ್ಲಿನ ಜಾತಿಪದ್ಧತಿ-ಫ್ಯೂಡಲ್ ವ್ಯವಸ್ಥೆಯಂತಹ ರೋಗಕ್ಕೆ ಶಿಕ್ಷಣವನ್ನೇ ಔಷಧಿಯೆಂದು ನಿರ್ಧರಿಸಿದ್ದ ಅವರು, ಈ ಕ್ಷೇತ್ರದ ಬಂಧ ವಿಮೋಚನೆಗೆ ಜೀವಮಾನವಿಡೀ ಶ್ರಮಿಸಿದರು. ಹಾಗಾಗಿ ಪುಲೆ ದಂಪತಿ ಶಾಲೆ ಮತ್ತು ಕಲಿಕೆಯಿಂದಾಚೆಗೂ ವಿಸ್ತರಿಸಿಕೊಂಡರು.

ಇದರ ಭಾಗವಾಗಿಯೇ ದಮನಿತರಿಗೆ ಶಾಲೆ ತೆರೆಯುವ ಜೊತೆಗೆ ವಿವಾಹಬಾಹಿರ ಗರ್ಭಿಣಿ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನೂ, mahatma-jyoti-rao-phuleವಿವಾಹಬಾಹಿರ ಮಕ್ಕಳಿಗೆ ಶಿಶುಕೇಂದ್ರ ಗಳನ್ನೂ ಸ್ಥಾಪಿಸಿದರು. ವಿಧವಾ ಕೇಶಮುಂಡನವನ್ನು ಕ್ಷೌರಿಕರ ಸಂಘಟನೆಯ ಪ್ರತಿಭಟನೆ ಮೂಲಕ ವಿರೋಧಿಸಿದರು. ಈ ಹಿನ್ನೆಲೆಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪುವಂತಹ ಜ್ಞಾನ ಪ್ರಕ್ರಿಯೆಯನ್ನು ಬುದ್ಧಿಪೂರ್ವಕವಾಗಿ ವಿರೋಧಿಸುವ ಹಿಂದೂ-ಬ್ರಾಹ್ಮಣ್ಯದ ರಾಷ್ಟ್ರೀಯವಾದದ ಕುತಂತ್ರಗಳನ್ನು ಉತ್ಕೃಷ್ಟವಾಗಿ ಅನಾವರಣಗೊಳಿಸಿದ ಮತ್ತು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿ ಅಕ್ಷರಕ್ರಾಂತಿಯನ್ನು ಸಾಧಿಸಿದ ಮಹಾತ್ಮಪುಲೆ ಆಧುನಿಕ ಭಾರತದ ಮೊದಲ ಕ್ರಾಂತಿಕಾರಿ(ವಿ. ಕನಸುಗಳು ಪು.29)ಎಂದೇ ಕೃತಿ ಗುರುತಿಸುತ್ತದೆ. ‘ಮಾನವೀಯವಾದ, ದಯೆಯುಳ್ಳ, ಒಳಗೊಳ್ಳುವಿಕೆಯ ಜಗತ್ತನ್ನು ಕಟ್ಟುವ ಕುರಿತು ಹೊಂದಿದ ನಂಬಿಕೆ ಮತ್ತು ಬದ್ಧತೆಯ ಕಾರಣಕ್ಕಾಗಿ ಮತ್ತು ‘ಯಜಮಾನ್ಯವನ್ನು ಜಾತಿಯೊಂದಿಗೆ ಸಮೀಕರಿಸಿ ಚಿಂತಿಸಿದ’ ಕಾರಣಕ್ಕಾಗಿ ಕೃತಿ ಸಾವಿತ್ರಿಬಾಯಿಪುಲೆ ಅವರನ್ನು 19ನೇ ಶತಮಾನದ ಸಮಾಜಸುಧಾರಣೆಯ ಮುಂಚೂಣಿಯಲ್ಲಿದ್ದ ಏಕೈಕ ಮಹಿಳಾ ಚಿಂತಕಿಯಾಗಿ ಗುರುತಿಸುತ್ತದೆ. ಈ ಗುರುತಿಸುವಿಕೆಗೆ ಐತಿಹಾಸಿಕ ಮಹತ್ವದ ಜೊತೆಗೆ ವರ್ತಮಾನದ ಪ್ರಸ್ತುತತೆಯೂ ಇದೆ. ಯಾಕೆಂದರೆ ಸಾಮಾನ್ಯರ ಮತ್ತು ಮಹಿಳೆಯರ ಶಿಕ್ಷಣಕ್ಕೆ ಸಂಬಂಧಿಸಿ ಸನಾತನ ಪ್ರತಿಗಾಮಿ ಮನಸ್ಸುಗಳ ಅಸಹನೆಯ ಉದಾಹರಣೆಗಳು ನಮಗೆ ಇಂದಿಗೂ ಸಿಗುತ್ತಿವೆ. ‘ಎದೆಗೆ ಬಿದ್ದ ಅಕ್ಷರ’ ಓದಿದ ಮಹಿಳೆಯರನ್ನು ಕೇಂದ್ರೀಕರಿಸಿದ ವಿ.ಆರ್.ಭಟ್ಟರ ಟ್ವಿಟರ್ ಮೆಸೇಜ್ ಮಹಿಳಾಶಿಕ್ಷಣದ ವಿರುದ್ಧದ ಸನಾತನಿಗಳ ಸಿಟ್ಟಿನ ಇತ್ತೀಚೆಗಿನ ಕಚ್ಚಾ ಸ್ಯಾಂಪಲ್. ಇದಕ್ಕಿಂತ ಭಿನ್ನವಲ್ಲದ ಕಲಾತ್ಮಕತೆಯ ಹೆಸರಿನ ಅಭಿವ್ಯಕ್ತಿಗಳಿಗೂ ಕೊರತೆಯಿಲ್ಲ. ಈ ಕಾದಂಬರಿಗಳಿರಲಿ, ಟ್ವಿಟ್ ಗಳಿರಲಿ, ಸಾವಿತ್ರಿಬಾಯಿ ಮೇಲೆ ಸೆಗಣಿ ಎರಚಿದ ಕೈಗಳಿರಲಿ ಎಲ್ಲವೂ ಹೆಣ್ಣು ಮಕ್ಕಳ ಓದಿನ ಕುರಿತ ನೈತ್ಯಾತ್ಮಕ ಅಭಿವ್ಯಕ್ತಿಗಳೇ. ಇವು ಆಕಸ್ಮಿಕಗಳಲ್ಲ. ಅವುಗಳಿಗೆ ಪುರಾತನ ಬೇರುಗಳಿವೆ. ಇನ್ನೂ ಜೀವಂತವಿರುವ ಈ ನೈತ್ಯಾತ್ಮಕತೆ ಪುಲೆದಂಪತಿಯ ದೂರಗಾಮಿ ಚಿಂತನೆಯ ಮಹತ್ವವನ್ನು ಮತ್ತಷ್ಟು ನಿಖರಗೊಳಿಸುತ್ತವೆ.

ಪುಲೆಯವರ ಸೋಷಿಯಲ್ ಆಕ್ಟಿವಿಸಂನ ಭಾಗವಾಗಿದ್ದ ಈ ತಾಯಿ ಶಿಕ್ಷಣವನ್ನೇ ಕುರಿತು ಬರೆದ ಕೆಲವು ಕವಿತೆಗಳನ್ನೂ  ಒಳಗೊಳ್ಳುವ ಮೂಲಕ ಶಿಕ್ಷಕಿ ಸಾವಿತ್ರಿಬಾಯಿಯ ಜೊತೆಗೆ ಕವಯಿತ್ರಿ, ಹೋರಾಟಗಾರ್ತಿ ಸಾವಿತ್ರಿಯ ಪರಿಚಯವೂ ಈ ಕೃತಿಯಲ್ಲಿದೆ. ಸಾಮಾಜಿಕ ಜಾಗೃತಿಯ ಚಟುವಟಿಕೆಗಳ ಹಿಂದಿನ ಆಕೆಯ ತುಡಿತಗಳ ದಾಖಲೆಯಂತಿರುವ ಆಕೆಯ ಕವಿತೆಗಳಲ್ಲಿ, ’ನೆನಪಿರಲಿ ಬಲಿರಾಜನ ರಾಜ್ಯಭಾರದಲ್ಲಿ ನಮ್ಮ ದಿವ್ಯವಾದ ಧ್ವಜಸ್ತಂಭವು ಸುರುಳಿ ಬಿಚ್ಚಿಕೊಂಡು ಪ್ರಜ್ವಲವಾಗಿ ಬೆಳಗುತ್ತದ’ ಎನ್ನುವ ಸಾಂಸ್ಕೃತಿಕ ಚರಿತ್ರೆಯ ನೆನಪಿಸುವಿಕೆ ಇದೆ. ‘ವಾಮನ’ನ ಯಜಮಾನ್ಯ ತೊಡೆದು ಹಾಕುವ ಆಶಯದೊಂದಿಗೆ ”ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಶಿಕ್ಷಿತರಾಗಿ ಕಟ್ಟುಪಾಡುಗಳನ್ನು ಚೂರು ಚೂರು ಮಾಡಿ- ಸ್ವತಂತ್ರರಾಗಿ’ ಎಂಬ ಉಲ್ಲಂಘನೆಯ ಕರೆಯೂ ಇದೆ. ಪರಿಸ್ಥಿತಿಗನುಗುಣವಾಗಿ ತಳಸಮುದಾಯದವರ ವಿಮೋಚನೆಯ ದಾರಿಯಾಗಿ ಇಂಗ್ಲೀಷ್ ಶಿಕ್ಷಣವನ್ನು ಸ್ವಾಗತಿಸುವ ಸಾವಿತ್ರಿಬಾಯಿ, ’ಇಂಗ್ಲೀಷ್ ತಾಯಿಯ ಬಾಗಿಲಲ್ಲಿ ಮನು ಸತ್ತಿದ್ದಾನೆ’ ಎಂದೇ ಬರೆಯುತ್ತಾರೆ. ಕವನಗಳಲ್ಲಿ ಆವರ್ತನಗೊಳ್ಳುವ ಈ ಇಂಗ್ಲೀಷ್ ಸ್ವಾಗತ, ಗುಣಗಾನದ ಹಿಂದೆ ಧಮನಿತರ ಬಿಡುಗಡೆಯ ತೀವ್ರವಾದ ತುಡಿತವಿದೆ. ಈ ಅರಿವಿಲ್ಲವಾದರೆ ಬೋಳಾಗಿ ಅವರನ್ನೂ ಜ್ಯೋತಿಬಾಪುಲೆಯವರನ್ನೂ ಇಂಗ್ಲೀಷರ ಏಜೆಂಟರಾಗಿಯೇ ಪರಿಭಾವಿಸುವ ತಪ್ಪೂ ನಮ್ಮಿಂದಾಗಬಹುದು. ಸಾಂಪ್ರದಾಯಿಕ ಶಕ್ತಿಗಳು ಇವತ್ತಿಗೂ ಅಂಬೇಡ್ಕರ್ ಮೇಲೆ ಮಾಡುತ್ತಿರುವ ಆಪಾದನೆಯನ್ನೇ ಪುಲೆದಂಪತಿಯ ಮೇಲೂ ಹೊರಿಸುವ ಅಪಾಯ ನಮ್ಮಿಂದಾಗಬಹುದು.

ಈ ಕೃತಿ ಓದುತ್ತಿದ್ದಂತೆಯೇ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ಅತುಲ್‌ಪೇಟೆ ನಿರ್ದೇಶನದ ‘ಸತ್ಯಶೋಧಕ್’ ಹೆಸರಿನ ಮರಾಠೀ ನಾಟಕವನ್ನೇ ಮತ್ತೆ ಕಂಡಂತೆನಿಸಿತು. ವರ್ಣಶ್ರೇಷ್ಠರ ಯಜಮಾನಿಕೆಗೆ ಎದುರಾಗಿ ವಸಾಹತುಶಾಹಿ ಆಡಳಿತದ ಬೆಂಬಲದಲ್ಲಿ ಶಾಲೆ ಆರಂಭಿಸಿದ ಜ್ಯೋತಿಬಾ ಪುಲೆ ದಂಪತಿ ಅನುಭವಿಸುವ ಕಿರುಕುಳಗಳ ಸರಣಿಯನ್ನೇ ಕೇಂದ್ರೀಕರಿಸಿದ ಈ ನಾಟಕ ಮಹಾರಾಷ್ಟ್ರದ ಭಂಗಿ ಕಾರ್ಮಿಕರೇ ಕೂಡಿಕೊಂಡು ಆಡಿದ ಪ್ರಯೋಗ. ಜ್ಯೋತಿಬಾಗೆ ಬೆನ್ನೆಲುಬಾಗಿ ನಿಲ್ಲುವ ಸಾವಿತ್ರಿಬಾಯಿ ಶಿಕ್ಷಕಿಯಾಗಿ ರೂಪುಗೊಳ್ಳುವುದು ನಾಟಕದ ಮುಖ್ಯ ಬೆಳವಣಿಗೆಗಳಲ್ಲೊಂದು. ದೇಶದ ಮೊದಲ ಶಿಕ್ಷಕಿಯಾಗಿ ಸೇವೆಗೆ ನಿಂತ ತಪ್ಪಿಗೆ ಅನುಭವಿಸಬೇಕಾಗಿ ಬಂದ ಸಂಕಟ ಮತ್ತು ಸವಾಲುಗಳನ್ನು ಎದುರಿಸಿದ ಆಕೆಯ ಧೈರ್ಯ ಮತ್ತು ಜಾಣ್ಮೆ ಇವೆಲ್ಲವನ್ನೂ ನಾಟಕ ಅಚ್ಚುಕಟ್ಟಾಗಿಯೇ ತೆರೆದಿಡುತ್ತದೆ. ಇಲ್ಲಿ ಧೃತಿಗೆಡದೆ ಸಮುದಾಯದ ಏಳಿಗೆಗಾಗಿ ಹಟತೊಟ್ಟು ನಿಲ್ಲುವ ಪುಲೆ ದಂಪತಿ ಅರಿವಿನ ಬೆಳಕು ಬಿತ್ತುವ ಬೀಜಗಳಂತೆ ಹೊಳೆಯುತ್ತಾರೆ. ತಳಸಮಾಜ ಅವರನ್ನು ನಿಧಾನವಾಗಿ ಅಂತರಂಗದಿಂದ ಪ್ರೀತಿಸಲಾರಂಭಿಸುವುದನ್ನು ನಾಟಕ ಸೊಗಸಾಗಿಯೇ ಮನವರಿಕೆ ಮಾಡಿಕೊಡುತ್ತದೆ. ಆದರೆ ಈ ಕಥಾಸರಣಿಯನ್ನು ಮೀರಿ, ಸಾಮಾನ್ಯರ ಹಾಗೂ ಹೆಮ್ಮಕ್ಕಳ ಶಿಕ್ಷಣಕ್ಕಾಗಿ ಹಿರಿಯರು ನಡೆಸಿದ ಹೋರಾಟದ ಚರಿತ್ರೆಯ ತುಂಡೊಂದರಂತೆ ಇರುವ ದೃಶ್ಯವೊಂದು ಆ ನಾಟಕದಲ್ಲಿತ್ತು. ಅಚ್ಚಳಿಯದೆ ನನ್ನಲ್ಲಿ ಉಳಿದಿರುವ ಆ ದೃಶ್ಯದಲ್ಲಿ ಕತ್ತಲಾಗುತ್ತಿದ್ದಂತೆ ವ್ಯಕ್ತಿಯೊಬ್ಬ ಬೆನ್ನಿಗೇರಿಸಿಕೊಂಡ ಮೂಟೆಯೊಂದಿಗೆ ಕಳ್ಳನಂತೆ ಒಳಪ್ರವೇಶಿಸುತ್ತಾನೆ. ಆ ಕಡೆ ಈ ಕಡೆ ನೋಡಿ ಆತ ಇಳಿಸುವ ಮೂಟೆ ಮತ್ತು ಆತನನ್ನು ಪುಲೆದಂಪತಿ ಬೆರಗು ಮತ್ತು ಆತಂಕದಿಂದ ನೋಡುತ್ತಾರೆ. ಈ ಪರಿವೆಯಿಲ್ಲದೆ ನೋಡನೋಡುತ್ತಿದ್ದಂತೆಯೇ ಅದನ್ನು ತೆರೆದು ಹುದುಗಿಸಿ ತಂದಿದ್ದ ತನ್ನ ಪುಟ್ಟಮಗಳನ್ನು ಪುಲೆದಂಪತಿ ಕೈಗೊಪ್ಪಿಸಿ, ಆತ ಆಕೆಯ ಶಿಕ್ಷಣಕ್ಕಾಗಿ ಬೇಡುತ್ತಾನೆ. ಇದಷ್ಟೇ ಆ ದೃಶ್ಯ. ಪ್ರಾಯಶಃ ಇದು ಈ ದೇಶದ ಸಾಮಾನ್ಯರು, ಅದರಲ್ಲಿಯೂ ಸಮಸ್ತ ಹೆಮ್ಮಕ್ಕಳು ತಮ್ಮ ಶಿಕ್ಷಣದ ಚರಿತ್ರೆಯಾಗಿ ನೆನಪಿಡಬೇಕಾದ ದೃಶ್ಯ. ಆದರೆ ಈಗ ಆರಾದಿಸಲಾಗುತ್ತಿರುವ ಶಿಕ್ಷಕರ ದಿನಾಚರಣೆಯ ಮಾದರಿಯೊಳಗೆ ಈ ಚರಿತ್ರೆಯನ್ನು ಹುಡುಕಿಕೊಳ್ಳಲು ಸಾಧ್ಯವಿದೆಯೇ ಎಂದು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವಂತೆ ಸಾವಿತ್ರಿಬಾಯಿ ಪುಲೆ ಅವರ ಬದುಕನ್ನು ಆತ್ಮೀಯವಾಗಿ ಪರಿಚಯಿಸುವ ಕೃತಿಯೊಂದನ್ನು ಪ್ರಕಟಿಸಿದ ಅಹರ್ನಿಶಿ ಪ್ರಕಾಶನಕ್ಕೂ, ಶ್ರಮವಹಿಸಿ ಕನ್ನಡಕ್ಕೆ ಅನುವಾದಿಸಿದ ಬಿ.ಶ್ರೀಪಾದ ಭಟ್ಟರಿಗೂ, ಇಂಗ್ಲೀಷ್ ಕೃತಿಯ ಮೂಲ ಆವೃತ್ತಿಗೆ ಕಾರಣರಾದ ಬೃಜ್ ರಂಜನ್ ಮಣಿ ಹಾಗೂ ಪಮೇಲಾ ಸರ್ದಾರ್ ಅವರಿಗೂ ಸಾವಿತ್ರಿತಾಯಿಯ ಹೆಸರಲ್ಲಿ ಪ್ರೀತಿಯ ಸಲಾಮುಗಳನ್ನು ಹೇಳಲೇಬೇಕಿದೆ.