Monthly Archives: September 2014

ಬುರ್ಖಾದೊಳಗಿನ ಅವಳ ಮೌನಕ್ಕೆ ಧ್ವನಿಯಾದಾಗ…


-ಇರ್ಷಾದ್


 

 

 

“ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಂಗಳೂರಿನಲ್ಲಿ  ’ಬಾಡೂಟದ ಜೊತೆಗೆ ಗಾಂಧೀ ಜಯಂತಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡುತ್ತಾbasheer-book-release-dinesh-1 “ ಬುರ್ಖಾ ಬೇಕೋ ಬೇಡವೋ ಎಂದು 25 ರಿಂದ 30 ವರ್ಷದೊಳಗಿನ ಮುಸ್ಲಿಮ್ ಮಹಿಳೆಯರ ರಹಸ್ಯ ಮತದಾನ ಮಾಡಿದ್ದಲ್ಲಿ ಬಹುಸಂಖ್ಯಾತ ಮಹಿಳೆಯರು ಬುರ್ಖಾ ಬೇಡ ಎನ್ನಬಹುದು. ಪಾಪ ಬಹಿರಂಗವಾಗಿ ಅವರಿಗೆ ಬುರ್ಖಾವನ್ನು ವಿರೋಧಿಸಲು ಧೈರ್ಯವಿಲ್ಲದಿರಬಹುದು” ಅಂದಿದ್ದಾರೆ. ಅಮೀನ್ ಮಟ್ಟು ಅವರ ಈ ಮಾತುಗಳನ್ನು ದಿನಪತ್ರಿಕೆಗಳಲ್ಲಿ ಓದಿದಾಗ ನನ್ನ ಒಳ ಮನಸ್ಸಿನ ಮೂಲೆಯಲ್ಲಿ ಆಸೆಯೊಂದು ಚಿಗುರಿತು. ಬುರ್ಖಾ ಬೇಕೋ ಬೇಡವೋ ಎಂಬ ರಹಸ್ಯ ಮತದಾನದಲ್ಲಿ ನನ್ನ ಮತವನ್ನು ಹಾಕುವ ಹಂಬಲ ಮನದಲ್ಲಿ ಮೂಡಿತು. ತಕ್ಷಣ ಮನೆಯ ತೆರದಿದ್ದ ಕಪಾಟಿನ್ನು ನೋಡಿದಾಗ ಅಲ್ಲಿ ತೂಗು ಹಾಕಿದ್ದ ಕಪ್ಪು ಬಣ್ಣದ ಬುರ್ಖಾ ನನ್ನನ್ನೇ ದಿಟ್ಟಿಸುವಂತೆ ನನಗೆ ಭಾಸವಾಯಿತು. ಎರಡು ತಿಂಗಳ ಹಿಂದೆಯಷ್ಟೇ ಉಪವಾಸ ಹಿಡಿದು ಈದ್ ಉಲ್ ಫಿತರ್ ಹಬ್ಬ ಆಚರಿಸಿದ್ದೆವು. ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬಕ್ಕೆ ಮಂಗಳೂರಿನ ಪೇಟೆಗೆ ಹೊಸ ಬಟ್ಟೆ ಖರೀದಿ ಮಾಡಲು ಅಪ್ಪ ಅಮ್ಮನ ಜೊತೆ ಹೋಗಿದ್ದೆ. ನನ್ನ ತಮ್ಮನಿಗಿಂತ ಹೆಚ್ಚು ಬೆಳೆಬಾಳುವ ಸಲ್ವಾರ್ ನನಗೆ ಖರೀದಿಸಲು ಅಪ್ಪ ಅಮ್ಮ ಮುಂದಾದರು. ಅವರ ಪ್ರೀತಿಯ ಮಗಳು ಚೆನ್ನಾಗಿ ಕಾಣಬೇಕು, ಖುಷಿಯಾಗಿ ಇರಬೇಕು ಎಂಬ ಬಯಕೆ ಅವರದ್ದು. ನಾನು ಹೇಳಿದೆ ಅಮ್ಮಾ ನನಗೆ ಈ ಬೆಳೆಬಾಳುವ ಸಲ್ವಾರ್ ಗಿಂತ ಬೇರೆ ಬಣ್ಣದ ಬುರ್ಖಾ ಖರೀದಿಸಿ ಕೊಡು. ಈ ಸುಡು ಬಿಸಿಲಿಗೆ ಕಪ್ಪು ಬಣ್ಣದ ಬುರ್ಖಾ ತೊಟ್ಟು ಸಾಕಾಗಿದೆ. ಅಮ್ಮ ನನ್ನ ಮುಖವನ್ನು ನೋಡಿ ಒಮ್ಮ ನಕ್ಕು ಸುಮ್ಮನಾದರು. ಆಮ್ಮನ ಆ ನಗುವಿನಲ್ಲಿ ಎಲ್ಲ ಅರ್ಥವೂ ತುಂಬಿಕೊಂಡಿತ್ತು. ನಾನು ಸುಮ್ಮನಾದೆ.

ಮರುದಿನ ಮನೆಯಲ್ಲಿ ಹಬ್ಬ. ತನ್ನ ಸಹೋದರ ರಿಜ್ವಾನ್ ಗೆ ಸಂಭ್ರವೋ ಸಂಭ್ರಮ. ಹೊಸ ಬಟ್ಟೆ ತೊಟ್ಟು ಎಲ್ಲಾ ಗೆಳೆಯರಿಗೂ ತೋರಿಸಿ ಸ್ನೇಹಿತರ ಹೊಗಳಿಕೆಯಿಂದ ಗಾಳಿಯಲ್ಲಿ ಹಾರಾಡುತ್ತಿದ್ದ. burka-girlsಅಮ್ಮ ಅಪ್ಪ ಖರೀದಿಸಿ ಕೊಟ್ಟ ಸಲ್ವಾರನ್ನು ನಾನು ತೊಟ್ಟು ನನ್ನ ಸ್ನೇಹಿತೆಯರಿಗೆ ತೋರಿಸಿ ಅವನಷ್ಟೇ ಸಂಭ್ರಮ ಪಡಬೇಕು ಎಂದು ನನ್ನ ಮನಸ್ಸೂ ಹಂಬಲಿಸುತಿತ್ತು. ಅಯ್ಯೋ ಅದು ಸಾಧ್ಯಾನಾ? ಮನೆಯ ಹೊರಗಡೆ ಹಾಗೆಲ್ಲಾ ಕಾಲಿಡುವ ಹಾಗಿಲ್ಲ ನಾನು. ಒಂದು ವೇಳೆ ಕಾಲಿಡುವುದಾದರೆ ಮತ್ತದೇ ಹಳೇ ಕಪ್ಪು ಬುರ್ಖಾ ಧರಿಸಬೇಕು. ಸ್ನೇಹಿತೆಯ ಮನೆಗೆ ಹೋದರೂ ಅಲ್ಲೂ ನೆಂಟರು. ಅವರ ಮುಂದೆ ಬುರ್ಖಾ ತೆಗೆಯುವಂತಿಲ್ಲ. ಮನೆಯ ಒಳಗಿನ ಕೋಣೆಗೆ ಹೋಗಿ ಬುರ್ಖಾ ತೆಗೆದು ನಾನು ಧರಿಸಿದ ಹೊಸ ಬಟ್ಟೆಯನ್ನು ಸ್ನೇಹಿತೆಗೆ ತೋರಿಸಿ ಖುಷಿ ಪಡುವುದಕ್ಕಿಂದ ನನ್ನನ್ನು ನಾನೇ ಕನ್ನಡಿ ಮುಂದೆ ನಿಂತು ನೋಡಿ ಖುಷಿ ಪಟ್ಟೆ. ಇನ್ನೇನು ಮುಂದಿನ ತಿಂಗಳು ಕಾಲೇಜಿನಲ್ಲಿ ನಡೆಯಲಿರುವ ಕಾಲೇಜ್ ಡೇ ಕಾರ್ಯಕ್ರಮದಲ್ಲಾದರೂ ಈ ಹೊಸ ಬಟ್ಟೆ ಧರಿಸಿ ಖುಷಿ ಪಡಬೇಕು ಎಂದೆನಿಸಿ ಸುಮ್ಮನಾದೆ. ಆದರೆ ಕಾಲೇಜ್ ಡೇ ಕಾರ್ಯಕ್ರಮದಲ್ಲಿ ಮನೆಯಿಂದ ಹೊರಡುವಾಗಲೇ ಅಮ್ಮ ಅಪ್ಪನ ಎಚ್ಚರಿಕೆಯ ಸಂದೇಶ. ಮತ್ತೆ ಈ ಕಪ್ಪು ಬುರ್ಖಾ ವನ್ನು ದ್ವೇಷಿಸುವಂತಾಯಿತು. “ರಜಿಯಾ ಕಾಲೇಜಿನಲ್ಲಿ ಬುರ್ಖಾ ಇಲ್ಲದೆ ತಿರುಗಾಡಬೇಡ ಮತ್ತೆ ಯಾರಾದರೂ ನೋಡಿದರೆ ನಿಮ್ಮ ಮಗಳೇಕೆ ಹಿಂದೂ ಹುಡುಗಿಯರ ತರ ಎಂದು ನನ್ನನ್ನು ಬೈತಾರೆ” ಎಂದು ಎಚ್ಚರಿಸಿದರು ಅಪ್ಪ. ಕಾಲೇಜು ಡೇ ಗೆ ಬೇಡದ ಮನಸ್ಸಿನಲ್ಲಿ ಹಬ್ಬದ ಬೆಳೆಬಾಳುವ ಬಟ್ಟೆಯನ್ನು ಒಳಗೆ ಧರಿಸಿಕೊಂಡು ಅದರ ಮೇಲೆ ಕಪ್ಪು ಬುರ್ಖಾ ಧರಿಸಿಕೊಂಡು ಹೋದೆ. ಎಲ್ಲಾ ನನ್ನ ಇತರ ಧರ್ಮದ ಸ್ನೇಹಿತೆಯರು ಹೊಸ ಹೊಸ ಬಟ್ಟೆಯನ್ನು ಧರಿಸಿ ಅತ್ತಿತ್ತ ಓಡಾಡುತ್ತಿದ್ದರು. ನಾನು ಮಾತ್ರ ಕಪ್ಪು ಬುರ್ಖಾದಲ್ಲೇ ಬಂಧಿಯಾಗಿದ್ದೆ. ಅಬ್ಬಾ ಸಾಕು ಈ ಬುರ್ಖಾ ಸಹವಾಸ ಎಂದು ಬುರ್ಖಾ ತೆಗೆದು ಬಿಡಬೇಕು ಎನ್ನುವಷ್ಟರಲ್ಲಿ ನನ್ನಂತೆಯೇ ಆಸೆಯನ್ನು ಹತ್ತಿಕ್ಕಲಾರದೆ ಬುರ್ಖಾ ತೆಗೆದು ಇತರ ಹೆಣ್ಣುಮಕ್ಕಳ ಜೊತೆ ತಿರುಗಾಡುತ್ತಿದ್ದ ಆಯಿಷಾಳಿಗೆ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟು ಸ್ಟೈಲ್ ಆಗಿ ಬೈಕಲ್ಲಿ ಸುತ್ತಾಡುತ್ತಿರುವ ಮುಸ್ಲಿಮ್ ಹುಡುಗರು ಬೈಯುತ್ತಿದ್ದರು. “ಏನೇ ನೀನು ಮುಸ್ಲಿಮ್ ಅಲ್ವಾ? ಬುರ್ಖಾ ಹಾಕಲು ನಿನಗೇಕೆ ಸಂಕಟ” ಪಾಪ ಅವರ ಬೈಗುಳಕ್ಕೆ ಭಯಗೊಂಡ ಆಯಿಷಾ ಮತ್ತೆ ಬುರ್ಖಾ ತೊಟ್ಟು ನನ್ನ ಪಕ್ಕದಲ್ಲೇ ಕುಳಿತುಕೊಂಡಳು.

ಅಷ್ಟಕ್ಕೆ ನನಗೆ ದಿನೇಶ್ ಅಮೀನ್ ಮಟ್ಟು ಹೇಳಿದ ಮತ್ತೊಂದು ಮಾತು ನೆನಪಾಯಿತು. ಸಾಕಷ್ಟು ಮುಸ್ಲಿಮ್ ಸಿನಿಮಾ ನಟಿಯರು ಬುರ್ಖಾನೇ ಧರಿಸುವುದಿಲ್ಲ. taslima-nasreenಬಾಂಗ್ಲಾ ದೇಶದ ದಿಟ್ಟ ಮಹಿಳೆ ಶೇಖ್ ಹಸೀನಾ ಯಾವತ್ತೂ ಬುರ್ಖಾ ಧರಿಸಿಲ್ಲ, ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನೆಜೀರ್ ಬುಟ್ಟೂ ಬುರ್ಖಾ ಧರಸಲೇ ಇಲ್ಲ. ಹೌದಲ್ವಾ ಎಂದು ಯೋಚಿಸಲಾರಂಭಿಸಿದಾಗ ಬುರ್ಖಾ ಬೇಡ ಎಂದ ಇನ್ನು ಕೆಲವು ಮುಸ್ಲಿಮ್ ಮಹಿಳೆಯರು ನನ್ನ ಕಣ್ಣ ಮುಂದೆ ಸುಳಿದಾಡಲಾರಂಭಿಸಿದರು. ಮುಸ್ಲಿಮ್ ಪುರೋಹಿತಶಾಹಿ, ಮೂಲಭೂತವಾದ ಧಿಕ್ಕರಿಸಿದ ಸಾರಾ ಅಬೂಬಕ್ಕರ್, ತಸ್ಲೀಮಾ ನಸ್ರೀನಾ, ಶರೀಫಾ, ಜೊಹರಾ ನಿಸಾರ್ ಹೀಗೆ ಹತ್ತು ಹಲವು ಮಹಿಳೆಯರು ಬುರ್ಖಾ ಪದ್ದತಿಯ ವಿರುದ್ದ ಧ್ವನಿ ಎತ್ತಿದಕ್ಕಾಗಿ ಅವರು ಅನುಭವಿಸಿದ ನೋವುಗಳು, ಅವಮಾನಗಳು, ಅಡ್ಡಿ ಆತಂಕಗಳು ಹಾಗೆ ಕಣ್ಣ ಮುಂದೆ ಸುಳಿದಾಡಿದವು. ಈ ಸುಳಿದಾಟದಲ್ಲಿ ಸಾರಾ ಅಬೂಬಕ್ಕರ್ ಅವರ ’ಚಪ್ಪಲಿಗಳು’ ಪುಸ್ತಕದ ಪ್ರತಿಯೊಂದು ಪ್ಯಾರಾ ನೆನಪಾಗತೊಡಗಿತು. ಅದು ಭಯಾನಕ ಎಂದನಿಸಿತು. ಇದರ ನಡುವೆ ಬುರ್ಖಾ ಮಹಿಳೆಯನ್ನು ಅತ್ಯಾಚಾರದಂತಹಾ ದೌರ್ಜನ್ಯದಿಂದ ತಡೆಯುತ್ತದೆ ಎಂಬ ಪುರುಷ ಪ್ರಧಾನ ಸಮಾಜದ ಗರ್ವದ ಮಾತುಗಳು ನನ್ನನ್ನು ಇರಿಯತೊಡಗಿದವು. ಸ್ವಾಮೀ, ಅತ್ಯಾಚಾರಿಗೆ ಬುರ್ಖಾ ತೊಟ್ಟ ಹೆಣ್ಣಾದರೇನು? ಬುರ್ಖಾ ತೊಡದ ಹೆಣ್ಣಾದರೇನು? ಆತನ ಕಣ್ಣಿಗೆ ಎಲ್ಲ ಹೆಣ್ಣು ನಗ್ನವಾಗಿಯೇ ಕಾಣುತ್ತಾಳೆ. ಆ ಕಾರಣಕ್ಕಾಗಿ ನನಗೆ ಬುರ್ಖಾ ತೊಡಿಸಬೇಡಿ. ಬದಲಾಗಿ ಎಲ್ಲಾ ಸ್ತ್ರೀಯರಲ್ಲೂ ನಗ್ನತೆಯನ್ನು ಕಾಣುವ ಅವನ ಕಣ್ಣುಗಳಿಗೆ ಬುರ್ಖಾ ತೊಡಿಸಿ ಎಂದೆ. ಅದಕ್ಕೆ ಯಾರಲ್ಲೂ ಉತ್ತರವಿರಲಿಲ್ಲ. ಬಹುಷಃ ಬುರ್ಖಾದೊಳಗಿನ ನನ್ನ ಮಾತು ಅವರಿಗೆ ಕೇಳಿಸಿರಲಿಕ್ಕಿಲ್ಲ. ಮತ್ತೆ ನಾನು ಕಪ್ಪು ಬುರ್ಖಾವನ್ನು ದಿಟ್ಟಿಸಿ ನೋಡಿ ಸುಮ್ಮನಾದೆ.

ಆಯ್ಯೋ, ಬುರ್ಖಾ ಧರಿಸದಿದ್ದರೆ ನನ್ನನ್ನು ನೋಡುವ ದೃಷ್ಟಿಕೋನ ಒಂದಾದರೆ ಬುರ್ಖಾ ಧರಿಸಿದ ನನ್ನಂತಹಾ ಹೆಣ್ಣುಮಗಳನ್ನು ನೋಡುವ ದೃಷ್ಟಿಕೋನ ಬೇರೆಯದ್ದೇ. ಬುರ್ಖಾ sara abubakarತೊಟ್ಟು ಕಾಲೇಜಿಗೆ ಹೋದರೆ ಕಲವರು ನೋಡುವ ರೀತಿಯೇ ಬೇರೆ. ಪ್ರಚಂಚದ ಯಾವ ಮೂಲೆಯಲ್ಲಾದರೂ ಬಾಂಬ್ ಸ್ಟೋಟವಾದರೆ ಎಲ್ಲರ ಕಣ್ಣಿನ ನೋಟ ನನ್ನತ್ತ ಸುಳಿಯುತ್ತಿರುತ್ತದೆ. ಒಂದು ದಿನ ಕಾಲೇಜಿನ ಮೇಷ್ಟ್ರು ಇದ್ಯಾವುದಮ್ಮಾ ಹಳೆಯ ವೇಷ, ಕಾಲೇಜಿಗೆ ಬರುವಾಗ ಬುರ್ಖಾ ಧರಿಸಬೇಡ ಎಂದರು. ಈ ವಿಚಾರ ಮನೆಗೆ ಗೊತ್ತಾಗಿ, ಅಬ್ಬಾ ಮನೆಯಲ್ಲಿ ಕೊಲಾಹಲ ಎದ್ದುಬಿಟ್ಟಿತು. ದೂರದ ಪ್ರಾನ್ಸ್ ನಲ್ಲಿ ಬುರ್ಖಾ ಧರಿಸಲು ಅಲ್ಲಿಯ ಸರ್ಕಾರ ಅನುಮತಿ ನೀಡದಕ್ಕಾಗಿ ಅಲ್ಲಿಯ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ. “ನೀನು ಅಷ್ಟೇ ಬುರ್ಖಾ ಹಾಕಿ ಕಾಲೇಜಿಗೆ ಹೋಗೋದು ಬೇಡವಾದರೆ ನೀನು ಶಿಕ್ಷಣ ಮುಂದುವರಿಸುವುದೇ ಬೇಡ” ಎಂದ ನನ್ನ ಸಹೋದರ ರಿಜ್ವಾನ್. ನನ್ನ ಅಸಹನೆ ಮೀರಿ ಹೋಗಿತ್ತು, ಲೋ, ರಿಜ್ವಾನ್ ಇಸ್ಲಾಮ್ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಧರ್ಮದ ಮಹಿಳೆಯರಿಗೂ ಕಡ್ಡಾಯ ಬುರ್ಖಾ ಧರಿಸಬೇಕೆಂದು ಅಲ್ಲಿಯ ಸರ್ಕಾರ ಆದೇಶ ಮಾಡಿರುವಾಗ ಪ್ರಾನ್ಸ್ ನಲ್ಲಿ ಬುರ್ಖಾ ನಿಶೇಧದ ಕುರಿತಾಗಿ ಮಾತನಾಡುವ ನೈತಿಕತೆ ನಿನಗೆಲ್ಲಿದೆ ಎಂದು. ಮತ್ತೆ ಕಪ್ಪು ಬುರ್ಖಾವನ್ನು ದಿಟ್ಟಿಸುತ್ತಾ ಸುಮ್ಮನಾದೆ.

ಇಲ್ಲ! ದಿನೇಶ್ ಅಮೀನ್ ಮಟ್ಟು ಅವರೇ, ನೀವು ರಹಸ್ಯ ಮತದಾನ ಮಾಡಿದರೂ ಮುಸ್ಲಿಮ್ ಮಹಿಳೆಯರು ಬುರ್ಖಾ ಬೇಡ ಅನ್ನೋದಿಲ್ಲ. ಯಾಕೆಂದರೆ ಅವರು greenಅದಕ್ಕೆ ಒಗ್ಗಿಕೊಂಡು ಹೋಗಿದ್ದಾರೆ. ಬುರ್ಖಾದೊಳಗೇ ಪ್ರಪಂಚವನ್ನು ನೋಡುವುದನ್ನು ಅವರು ಕಂಡುಕೊಂಡಿದ್ದಾರೆ. 7 ನೇ ತರಗತಿಗೆ ಕಾಲಿಡುತ್ತಿದ್ದಂತೆ ಅಮ್ಮಾ ನನಗೆ ಬುರ್ಖಾ ತೊಡಿಸು ಎಂದು ಮಗಳೇ ಒತ್ತಾಯಿಸುತ್ತಾಳೆ. ಸಮಾಜ, ಧರ್ಮ ಆ ಎಳೆ ಮನಸ್ಸನ್ನು ಆ ರೀತಿಯಲ್ಲಿ ಬದಲಾವಣೆ ಮಾಡಿದೆ. ಮನೆಯ ಮಗ ಧರ್ಮ ಮೀರಿ ಯಾವ ರೀತಿಯ ವಸ್ತ್ರನೂ ಧರಿಸಬಹುದು, ಆದರೆ ನಾನು ಮಾತ್ರ ಧರ್ಮದ ಇಂಚು ಇಂಚುಗಳನ್ನೂ ಪಾಲಿಸಬೇಕು. ಇದನ್ನು ಪ್ರಶ್ನಿಸಿದರೆ ಅಪ್ಪ ಪದೇ ಪದೇ ಧರ್ಮದ ಈ ಶ್ಲೋಕಗಳನ್ನು ನೆನಪಿಸುತ್ತಿರುತ್ತಾರೆ. “ನಿಮ್ಮಮನೆಗಳಲ್ಲೇ ಇದ್ದುಕೊಳ್ಳಿರಿ. ಗತಕಾಲದ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ” ( ಪವಿತ್ರ ಕುರ್ ಆನ್ 33:33 ), “ಮಹಿಳೆ ಬುದ್ದಿ ಮತ್ತು ಧರ್ಮ ಎರಡೂ ವಿಧದಲ್ಲಿ ದುರ್ಬಲರಾಗಿರುತ್ತಾರೆ” ( ಬುಖಾರಿ ) “ನಿಮ್ಮ ಸ್ರೀಯರಿಂದ ಆಜ್ಞೋಲಂಘನೆಯ ಅಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ.” ಪವಿತ್ರ ಕುರ್ ಆನ್ ( 4:34 ). ಇವುಗಳನ್ನು ಅಪ್ಪನ ಬಾಯಿಂದ ಕೇಳುತ್ತಿದ್ದಂತೆ ನಾನು ಮತ್ತೆ ಸುಮ್ಮನಾದೆ. ನನ್ನಂತೆ ಲಕ್ಷಾಂತರ ಮಂದಿ ಹೀಗೆ ಮೌನಿಗಳಾಗಿದ್ದಾರೆ.

ನಾವೇ ಹೀಗಿರುವಾಗ, ದಿನೇಶ್ ಅಮೀನ್ ಮಟ್ಟು ನೀವ್ಯಾಕೆ ಸುಮ್ಮನೆ ನಿಷ್ಠುರರಾಗುತ್ತೀರಾ ಎಂದನಿಸುತ್ತದೆ. ಅದರ ಜೊತೆಗೆ ನನ್ನ ಮೌನಕ್ಕೆ ಧ್ವನಿಯಾದಿರಲ್ಲಾ ಎಂಬburkha sielence ಸಂತಸವೂ ಆಗುತ್ತಿದೆ. ಅಂದು ಕೆಟ್ಟ ಉದ್ದೇಶಕ್ಕಾಗಿ ಬುರ್ಖಾ ಬ್ಯಾನ್ ಮಾಡಲು ಹೊರಟ ಸಂಘಪರಿವಾರದ ನಿಲುವನ್ನು ನೀವು, ಮಂಗಳೂರಿನಲ್ಲಿ ನವೀನ್ ಸೂರಿಂಜೆ ಹಾಗೂ ಸಮಾನ ಮನಸ್ಕ ಪತ್ರಕರ್ತರು ವಿರೋಧಿಸಿದಾಗ ನಮ್ಮವರಿಗೆಲ್ಲಾ ನೀವು ನಮ್ಮೊಳಗಿನವರಾಗಿ ಕಂಡಿರಿ. ಆದರೆ ಇಂದು ಒಳ್ಳೆಯ ಉದ್ದೇಶಕ್ಕಾಗಿ ಮೌನಿಯಾಗಿರುವ ನನ್ನ ಮನದೊಳಗಿನ ಧ್ವನಿಗೆ ಧ್ವನಿಯಾಗುತ್ತಿರುವ ಕೆಲವೇ ಕೆಲವರಲ್ಲಿ ಒಂದು ಧ್ವನಿಯಾಗಿ ಸೇರಿಕೊಂಡ ನೀವು ನಮ್ಮವರಿಗೆಲ್ಲಾ ಇಸ್ಲಾಮ್ ವಿರೋಧಿಯಾಗಿ ಕಾಣುತ್ತಿದ್ದೀರಿ. ನೀವು ನಿಮ್ಮ ಧರ್ಮದ ಕಂದಾಚಾರ, ಪುರೋಹಿತಶಾಹಿ ವ್ಯವಸ್ಥೆ, ಕೋಮುವಾದ, ಮೂಲಭೂತವಾದದ ಬಗ್ಗೆ ಧ್ವನಿ ಎತ್ತಿದ್ದಾಗ ನಿಮ್ಮ ವಿರುದ್ಧ ಆ ವರ್ಗದ ಜನರು ಮುಗಿಬಿದ್ದಾಗ ನನ್ನ ಧರ್ಮದ ಮೂಲಭೂತವಾದಿಗಳು ನಿಮ್ಮನ್ನು ಜ್ಯಾತ್ಯಾತೀತ ಮನೋಭಾವದ ಉತ್ತಮ ವ್ಯಕ್ತಿಯಂತೆ ಕಂಡರು. ಆದರೆ ಇಂದು ನೀವು ನನ್ನ ಧರ್ಮದ ಬುರ್ಖಾ, ಮೂಲಭೂತವಾದದ ಕುರಿತಾಗಿ ಧ್ವನಿ ಎತ್ತಿದಕ್ಕಾಗಿ ಅಂದು ನಿಮ್ಮನ್ನು ಬೆಂಬಲಿಸಿದ ನನ್ನವರು ಇಂದು ನಿಮ್ಮ ಮೇಲೆ ಮುಗಿಬೀಳುತ್ತಿದ್ದಾರೆ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ನಿಮಗೆ ಬೆಂಬಲವನ್ನು ಸೂಚಿಸಲು ನನ್ನಂತಹಾ ಸಾವಿರಾರು ಧ್ವನಿಗಳು ನಿಮ್ಮೊಂದಿಗಿದೆ. ಆದರೆ ಏನು ಮಾಡೋಣ, ನನ್ನಂತಹಾ ಮಹಿಳೆಯರ ಮೌನಿ ಧ್ವನಿಗಳು ಯಾರಿಗೂ ಕೇಳಿಸುತಿಲ್ಲವಲ್ಲ”

ಬಿ.ಎಂ. ಬಶೀರರ ಬಾಡೂಟದ ಜೊತೆಗೆ ದಿನೇಶ್ ಅಮೀನ್ ಮಟ್ಟು ಭಾಷಣ

ಮಂಗಳೂರಿನಲ್ಲಿ ದಿನಾಂಕ 05-09-14 ರಂದು ನಡೆದ ಪತ್ರಕರ್ತ ಹಾಗೂ ಲೇಖಕ ಬಿ.ಎಮ್ ಬಶೀರ್ ಅವರ “ಬಾಡೂಟದ ಜೊತೆಗೆ ಗಾಂಧೀಜಯಂತಿ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾಡಿದ ಭಾಷಣದ ಬರಹರೂಪ.

ನನಗೆ ಇತ್ತೀಚೆಗೆ ಮಾತನಾಡೊದಕ್ಕೆ ಸ್ವಲ್ಪ ಹಿಂಜರಿಕೆಯಾಗುತ್ತಿದೆ. ನಾನು ವಿವಾದದ ವಿಷಯಗಳನ್ನು ಎತ್ತಿಕೊಂಡು ಮಾತನಾಡುತ್ತಿದ್ದೇನೋ ಅಥವಾ ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತೋ ಗೊತ್ತಿಲ್ಲ. ಹಿಂದೆ ಮಾತನಾಡೋದಕ್ಕೆ ಬರುವಾಗ ನಾನು ಏನು ಮಾತನಾಡಬೇಕು ಎಂದು ಯೋಚನೆ ಮಾಡಿಕೊಂಡು ಬರುತ್ತಿದ್ದೆ. ಆದರೆ ಈಗ ನಾನು ಏನು ಮಾತನಾಡಬಾರದು ಎಂದು ಯೋಚನೆ ಮಾಡಿಕೊಂಡು ಬರುವಂತಾಗಿದೆ. basheer-book-release-dinesh-1ಇದು ಅಭಿವ್ಯಕ್ತಿ ಸ್ವಾತಂತ್ರದ ಕೊಡುಗೆನೋ ಅಥವಾ ಹರಣನೋ ಗೊತ್ತಾಗುತಿಲ್ಲ. ಅದಕ್ಕಾಗಿ ಎರಡು ವಿಚಾರಗಳ ಕುರಿತಾಗಿ ನಾನು ಮಾತನಾಡುವುದಿಲ್ಲ ಎಂದುಕೊಂಡಿದ್ದೇನೆ. ಆದರೂ ಆ ಮಾತುಗಳು ನನ್ನ ಭಾಷಣದ ನಡುವೆ ಬರಬಹುದು. ಒಂದು ದೇಶದ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯಾದರೆ ಮತ್ತೊಂದು ನಮ್ಮದೇ ಪತ್ರಿಕೋದ್ಯಮದ ಬಗ್ಗೆ. ಯಾಕೆಂದರೆ ಇತ್ತೀಚೆಗೆ ಒಂದು ಕಡೆ ಮಾಧ್ಯಮದ ಬಗ್ಗೆ ಮಾತನಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ನಾನು ಕಲಿತಿರುವ ಇಂಗ್ಲಿಷ್‌ನಲ್ಲಿ ’ಪ್ಯಾಕೇಜ್’ ಎಂಬ ಪದಕ್ಕೆ ಹಣ ಎಂಬ ಅರ್ಥ ಯಾವ ನಿಘಂಟಿನಲ್ಲೂ ಇಲ್ಲ. ನಾನು ಭಾಷಣದಲ್ಲಿ ಬಳಸಿದ “ಪ್ಯಾಕೇಜ್” ಎಂಬ ಪದವನ್ನು ’ಪತ್ರಕರ್ತರಿಗೆ ಹಣದ ಆಮಿಷ ಒಡ್ಡಿ ನರೇಂದ್ರ ಮೋದಿಯವರು ಪ್ರಚಾರ ಪಡೆದುಕೊಂಡಿದ್ದಾರೆ’ ಎಂಬ ರೀತಿಯಲ್ಲಿ ಸುದ್ದಿಯನ್ನು ತಿರುಚಿ ನನ್ನ ಮೇಲೆ ದಾಳಿ ನಡೆಯಿತು. ಈ ರೀತಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಅಜ್ಞಾನದ ಬಗ್ಗೆ ನನಗೆ ಕನಿಕರವಿದೆ. ನಾನೊಬ್ಬ ಪತ್ರಕರ್ತ. ಪುರಾವೆಗಳಿಲ್ಲದೆ ನಾನು ಯಾವುದನ್ನೂ ಮಾತನಾಡೋದಿಲ್ಲ. ಟಿವಿ ಚಾನಲ್‌ಗಳಲ್ಲಿ ಪ್ಯಾಕೇಜ್ ಎಂಬ ಪದ ಸಾಮಾನ್ಯ, ಪ್ಯಾಕೇಜ್ ಎಂದರೆ ಸುದ್ದಿಯ ಬಗೆಗೆ ಬಳಸುವಂತಹಾ ಪರಿಭಾಷೆ. ನ್ಯೂಸ್ ಪ್ಯಾಕೇಜ್‌ಗಳ ರೀತಿಯಲ್ಲೇ ’ಜಾಹಿರಾತು ಪ್ಯಾಕೇಜ್’ಗಳೂ ಕೂಡಾ ಇವೆ. ಆದರೆ ಪ್ಯಾಕೇಜ್ ಎಂಬ ಪದದ ಅರ್ಥ ’ಹಣದ ಆಮಿಷ’ ಎಂಬುವುದು ನನಗೆ ಈ ವಿವಾದ ಹುಟ್ಟಿದಾಗಲೇ ಗೊತ್ತಾಗಿದ್ದು.

ಬರೆಯುವುದು ಬಹಳ ಕಷ್ಟ. ಆದರೆ ಸೃಜನಶೀಲ ಬರವಣಿಗೆಗಳಾದ ಕಥೆ, ಕವನ, ಕಾದಂಬರಿಗಳನ್ನು ಬರೆಯುವುದು ಸುಲಭ. ಅದನ್ನು ಬರೆಯುವವರ ಕ್ಷಮೆ ಕೋರಿ ಈ ಮಾತನ್ನು ಹೇಳುತ್ತಿದ್ದೇನೆ. ಆದರೆ ಸೃಜನಶೀಲೇತರ ಬರವಣಿಗೆ ಬರೆಯೋದು ಕಷ್ಟ. ಸೃಜನಶೀಲ ಬರವಣಿಗೆಯಲ್ಲಿ ಅತ್ಯಂತ ವಿವಾದಾತ್ಮಕ ವಿಷಯಗಳನ್ನು basheer-book-release-dinesh-2ರೂಪಕಗಳ ಮೂಲಕ , ಉಪಮೆಗಳ ಮೂಲಕ ತೇಲಿಬಿಡಬಹುದು. ಆದರೆ ಸೃಜನಶೀಲೇತರ ಬರವಣಿಗೆಯಾಗಿರುವ ಪತ್ರಿಕೆಗಳ ಬರವಣಿಗೆಯಲ್ಲಿ ಏನು ಹೇಳಬೇಕೋ ಅದನ್ನು ನೇರವಾಗಿ, ಸ್ಪಷ್ಟವಾಗಿ, ನಿಷ್ಠುರವಾಗಿ ಹೇಳಬೇಕಾಗುತ್ತದೆ. ಅದರಿಂದ ಈ ರೀತಿಯ ಬರವಣಿಗೆ ಕಷ್ಟ. ಅದರಲ್ಲೂ ಪತ್ರಕರ್ತರ ಬರವಣಿಗೆ ಇನ್ನೂ ಕಷ್ಟ. ಅದರಲ್ಲೂ ಮುಸ್ಲಿಮ್ ಪತ್ರಕರ್ತನಾಗಿ ಬರೆಯೋದು ಮತ್ತಷ್ಟೂ ಕಷ್ಟದ ಕೆಲಸ. ಪತ್ರಕರ್ತನ ಕಷ್ಟ ಅಲ್ಲಿಗೆ ನಿಲ್ಲೋದಿಲ್ಲ. ಒಬ್ಬ ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದೇ ಇರುವಂತಹಾ, ಕಿವಿಗೆ ಕೇಳದೇ ಇರುವಂತಹಾ ವಿಚಾರಗಳು ಒಬ್ಬ ಪತ್ರಕರ್ತನ ಕಣ್ಣಿಗೆ ಕಾಣುತ್ತದೆ ಹಾಗೂ ಕಿವಿಗೆ ಕೇಳುತ್ತದೆ. ಆದರೆ ಕಣ್ಣಿಗೆ ಕಂಡದ್ದೆಲ್ಲಾ, ಕಿವಿಗೆ ಕೇಳಿದ್ದೆಲ್ಲಾ ಅವನು ವರದಿ ಮಾಡುವ ಸ್ಥಿತಿಯಲ್ಲಿರುವುದಿಲ್ಲ , ಯಾಕೆಂದರೆ ಅದಕ್ಕೆ ಪುರಾವೆಗಳ ಅಗತ್ಯತೆ ಇದೆ. ಅದರಿಂದಾಗಿ ಅದು ಒಳಗೊಳಗಡೇ ಆತನನ್ನು ದಹಿಸುತ್ತಿರುತ್ತದೆ. ಆದುದರಿಂದಲೇ ಬಹಳಷ್ಟು ಮಂದಿ ಪತ್ರಕರ್ತರು ವಯಸ್ಸಾದ ನಂತರ ಸಿನಿಕರಾಗಿಬಿಡುತ್ತಾರೆ. ನಾನು ಮುಂಗಾರು ಪತ್ರಿಕೆಯಲ್ಲಿ ಪ್ರಾರಂಭದ ದಿನಗಳಲ್ಲಿದ್ದಾಗ ಬಹಳಷ್ಟು ಮಂದಿ ಹಿರಿಯ ಪತ್ರಕರ್ತರು ಸಿನಿಕತೆಯ ಹಂತದಲ್ಲಿದ್ದರು. ನನಗೂ ಕೆಲವೊಮ್ಮೆ ನಾನೊಬ್ಬ ಸಿನಿಕ ಪತ್ರಕರ್ತನಾಗುವ ಕೆಟ್ಟ ಕನಸು ಬೀಳುತಿತ್ತು. ನನಗೆ ಮುಖ್ಯಮಂತ್ರಿಯ ’ಮಾಧ್ಯಮ ಸಲಹೆಗಾರ’ ಹುದ್ದೆಯ ಆಹ್ವಾನ ಬಂದಾಗ ನನಗೆ ಎರಡು ರೀತಿಯ ಪ್ರತಿಕ್ರಿಯೆಗಳು ಬಂದವು. ಹಿರಿಯ ಪತ್ರಕರ್ತ ಮಿತ್ರರು ಪತ್ರಿಕೋದ್ಯಮ ಕ್ಷೇತ್ರ ಬಿಟ್ಟು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಹುದ್ದೆಯ ಆಹ್ವಾನ ಸ್ವೀಕರಿಸುವಂತೆ ಸಲಹೆ ನೀಡಿದರು. ಆದರೆ ಯುವ ಪತ್ರಕರ್ತರು ನನ್ನನ್ನು ಈ ಕ್ಷೇತ್ರ ಬಿಟ್ಟು ಹೋಗದಂತೆ ಒತ್ತಾಯ ಮಾಡಿದರು. ಈಗಲೂ ವಾಪಾಸು ಬರುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣ, ನನಗೆ ತಿಳಿದುಬಂದ ಅನೇಕ ವಿಚಾರಗಳನ್ನು ಸುದ್ದಿ ಮಾಡಲು ಸಾಧ್ಯವಾಗುವುದಿಲ್ಲ ಎಂಬುವುದು. ಇದನ್ನೆಲ್ಲವನ್ನೂ ಆತ ನಿತ್ಯ ಅನುಭವಿಸಬೇಕಾಗುತ್ತದೆ. ಆದ್ದರಿಂದ ಬರೆಯುವುದು ಕಷ್ಟ, ಸೃಜನಶೀಲೇತರ ಬರವಣಿಗೆ ಇನ್ನೂ ಕಷ್ಟ, ಅದರಲ್ಲೂ ಮುಖ್ಯವಾಗಿ ಒಬ್ಬ ಮುಸ್ಲಿಮನಾಗಿ ಬರೆಯುವುದು ಇತ್ತೀಚಿನ ದಿನಗಳಲ್ಲಿ ಬಹಳ ಕಷ್ಟ.

ಬರಹಗಾರನಿಗೆ ತನ್ನ ಬರಹ ತಟ್ಟುವುದು ಆತ ಹೃದಯದಿಂದ ಬರೆದಾಗ ವಿನಹಃ ಬುದ್ದಿಯಿಂದ ಬರೆದಾಗಲ್ಲ. ಇತ್ತೀಚೆಗೆ ಸ್ವಾತಂತ್ರ ದಿನಾಚರಣೆಯಂದು ಒಬ್ಬ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯ ಭಾಷಣಗಳ ಪೈಕಿ ಯಾರದ್ದು ಸಪ್ಪೆ ಯಾರದ್ದು ಸ್ಫೂರ್ತಿದಾಯಕ ಎಂದು ಮಾದ್ಯಮಗಳು ಹೋಲಿಕೆ ಮಾಡುತ್ತಿದ್ದವು. dinesh-aminmattuನಾನು ದೆಹಲಿಯಲ್ಲಿದ್ದಾಗ ಮಹಾತ್ಮ ಗಾಂಧಿಯ ಭಾಷಣದ ರೆಕಾರ್ಡಿಂಗ್‌ಗಳನ್ನು ಆಲಿಸುತ್ತಿದ್ದೆ. ಮಹಾತ್ಮ ಗಾಂಧಿಯ ಭಾಷಣ ಕೇಳಿದರೆ ಅದು ಅತ್ಯಂತ ಪೀಚಲು ಮತ್ತು ಅತ್ಯಂತ ಕೀರಲು ಧ್ವನಿ. ಆದರೆ ಗಾಂಧಿ ಒಂದು ಕರೆ ಕೊಟ್ಟ ಕೂಡಲೇ ಲಕ್ಷಾಂತರ ಮಂದಿ ಬಂದು ಗುಂಡಿಗೆ ಎದೆಕೊಡುತ್ತಿದ್ದರು. ಲಾಠಿಗೆ ತಲೆ ಕೊಡುತ್ತಿದ್ದರು. ಯಾಕೆಂದರೆ ಆ ಮನುಷ್ಯನ ಮಾತಿಗೂ ಕೃತಿಗೂ ಸಂಬಂಧವಿತ್ತು. ಆವರು ಹೃದಯದಿಂದ ಮಾತನಾಡುತ್ತಿದ್ದರು ವಿನಹಃ ಬುದ್ದಿಪೂರ್ವಕವಾಗಿ ಮಾತನಾಡುತ್ತಿರಲಿಲ್ಲ. ಆದರೆ ಇತ್ತೀಚಿನ ಬಹಳಷ್ಟು ನಾಯಕರು ಹೃದಯದಿಂದ ಮಾತನಾಡುತ್ತಿಲ್ಲ ಬದಲಾಗಿ ಬುದ್ದಿಪೂರ್ವಕವಾಗಿ ಮಾತನಾಡುತ್ತಾರೆ. ಆದರೆ ಒಬ್ಬ ಪತ್ರಕರ್ತ ಹೃದಯದಿಂದ ಮಾತನಾಡುತ್ತಾನೆ. ಆದರೆ ಇವತ್ತಿನ ಪತ್ರಿಕೋದ್ಯಮದ ಬಹಳ ದೊಡ್ಡ ಸಮಸ್ಯೆ ಅಂದರೆ ಪತ್ರಕರ್ತರು ಇನ್‌ಸೆನ್ಸಿಟ್ವಿವ್ ಆಗಿದ್ದಾರೆ. ಅದಕ್ಕೆ ಕಾರಣ ವೃತ್ತಿ ಜೀವನದ ಸಂಪರ್ಕ. ಪತ್ರಕರ್ತರಿಗೆ ಒಳ್ಳೆಯವರಿಗಿಂತ ಕೆಟ್ಟವರ ಜೊತೆಗೇ ಹೆಚ್ಚಿನ ಸಂಪರ್ಕ. ಇಂಥವರ ಜೊತೆ ಆಟವಾಡುತ್ತಾ ನಾವೇ ಆಟದ ಮೈದಾನದೊಳಗೆ ಸೇರಿಬಿಡುತ್ತಿದ್ದೇವೆ. ಪತ್ರಕರ್ತರು ಇನ್‌ಸೆನ್ಸಿಟಿವ್ ಆಗುತ್ತಿರುವುದರಿಂದಲೇ ಆತನಿಗೆ ಯಾವುದೋ ಅಪಘಾತದಲ್ಲಿ ಆದ ಒಬ್ಬನ ಸಾವಿಗಿಂತಲೂ ಹತ್ತು ಜನರ ಸಾವು ಸಂಭ್ರಮವನ್ನು ಕೊಡುತ್ತದೆ. ಆತ ಹತ್ತು ಸಾವು ಆಗಬೇಕು ಎಂದು ಖಂಡಿತಾ ಬಯಸಿಲ್ಲ. ಇಂಥಹಾ ಪರಿಸ್ಥಿತಿಗಳನ್ನು ನೋಡಿ ನೋಡಿ ಪತ್ರಕರ್ತ ಸೂಕ್ಷತೆಯನ್ನು, ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಯಾವ ಬರವಣಿಗೆಯಲ್ಲಿ ಸಂವೇದನಾಶೀಲತೆ ಇರುವುದಿಲ್ಲವೋ ಅದು ಒಣ ಬರವಣಿಗೆಯಾಗಿರುತ್ತದೆ. ನಾನು ಇದನ್ನು ಯಾಕೆ ಪ್ರಸ್ತಾಪ ಮಾಡಿದ್ದೇನೆ ಎಂದರೆ, ಬಿ.ಎಮ್. ಬಶೀರ್ ಇಷ್ಟು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿದ್ದೂ ಕೂಡಾ ಆ ಸಂವೇದನಾಶೀಲತೆಯನ್ನು ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಇಂತಹ ಬರಹ ಸಾಧ್ಯವಾಗಿದೆ. ನಮ್ಮಲ್ಲಿರುವ ಬಹಳಷ್ಟು ಕವಿಗಳು, ಸಾಹಿತಿಗಳು ಪತ್ರಕರ್ತರಾದ ಕೂಡಲೇ ಅವರ ಸೃಜನಶೀಲ ಬರವಣಿಗೆಯಿಂದ ಹಿಂದಕ್ಕೆ ಸರಿಯುತ್ತಾರೆ. ಆದರೆ ಬಶೀರ್ ಅವರು ಇವತ್ತಿಗೂ ಉತ್ತಮ ಕವಿತೆಗಳನ್ನು ಬರೆಯುತ್ತಾರೆ. ಒಬ್ಬ ಪತ್ರಕರ್ತನಿಗೆ ಮುಖ್ಯವಾಗಿ ಬೇಕಾಗಿರುವುದು ಸಂವೇದನಾಶೀಲತೆ. ಅಂದರೆ ಸಾಮಾಜಿಕ ಜವಾಬ್ದಾರಿ.

ನನಗೆ ಇನ್ನೊಂದು ಆಶ್ಚರ್ಯ ಏನೆಂದರೆ, ಮುಸ್ಲಿಮ್ ಲೇಖಕರಲ್ಲಿ ಬಹಳಷ್ಟು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. sara abubakarಬೊಳುವಾರು, ಪಕೀರ್ ಮುಹಮ್ಮದ್ ಕಟ್ಪಾಡಿ, ಸಾರಾ ಅಬೂಬಕ್ಕರ್, ಮುಹಮ್ಮದ್ ಕುಳಾಯಿ, ಬಿ.ಎಮ್. ಬಶೀರ್ ಇವರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದವರು. ಮುಸ್ಲಿಮರಲ್ಲಿ ಸಾಕ್ಷರತೆ ಕಡಿಮೆ. ಮಾತೃ ಭಾಷೆ ಬ್ಯಾರಿ. ಹಾಗೂ ಸಾಹಿತ್ಯ ವಲಯದ ಪರಿಸರದಲ್ಲೂ ಬೆಳೆದು ಬಂದವರಲ್ಲ. ಇಂಥಹಾ ಪರಿಸ್ಥಿತಿಯಲ್ಲೂ ಕನ್ನಡದಲ್ಲಿ ಮಹತ್ವದ ಲೇಖಕರಾಗಿ ಹೇಗೆ ಬೆಳೆದು ಬಂದರು ಎಂಬುವುದು ಆಶ್ಚರ್ಯದ ಸಂಗತಿ. ಇದು ಗಮನಾರ್ಹವೂ ಆಗಿದೆ. ಇದಲ್ಲದೆ ಸಾಕಷ್ಟು ಯುವ ಮುಸ್ಲಿಮ್ ಲೇಖಕರು ಕೂಡಾ ಬೆಳೆದುಬರುತ್ತಿದ್ದಾರೆ. ’ಮುಸ್ಲಿಮ್ ಲೇಖಕರ ಸಂಘ’ವನ್ನೂ ಕಟ್ಟಿಕೊಂಡಿದ್ದಾರೆ. ’ಮುಸ್ಲಿಮ್ ಲೇಖಕರ ಸಂಘ’ದ ಬಗ್ಗೆ ಮಾತನಾಡಿದರೆ ಅದೊಂದು ವಿವಾದದ ವಿಚಾರವಾಗುತ್ತದೆಯಾದ್ದರಿಂದ ಅದರ ಬಗ್ಗೆ ಮಾತನಾಡಲು ಹೋಗೋದಿಲ್ಲ. ಮುಸ್ಲಿಮ್ ಲೇಖಕರಲ್ಲಿ ನಾನು ಇನ್ನೊಂದು ಸಂಗತಿಯನ್ನು ಗಮನಿಸಿದ್ದೇನೆ, 80 ರ ದಶಕಗಳಲ್ಲಿ ಬೊಳುವಾರು ಮುಹಮ್ಮದ್ ಕುಂಙಯವರ ಕಥೆಗಳು, ಕಾದಂಬರಿ ಒಂಥರಾ ಸೆನ್ಸೇಶನಲ್ ಆಗಿದ್ದವು. ಆದರೆ ಅದರ ನಂತರ ಅಂದರೆ 90ರ ದಶಕಗಳಲ್ಲಿ ಇದ್ದಕ್ಕಿದ್ದಾಗೆ ಸಾಹಿತ್ಯ ವಲಯದ ಮುಸ್ಲಿಮ್ ಧ್ವನಿಗಳು ಸ್ಥಬ್ಧವಾಗಿವೆ ಎಂಬ ಅಭಿಪ್ರಾಯ ನಮ್ಮಲ್ಲಿದೆ.

ಬೊಳುವಾರು ಒಂದು ಚಳುವಳಿಯ ರೂಪದಲ್ಲಿ ಬರೆದರು. ಆದರೆ ಇನ್ನೂ 80, 90 ವರ್ಷಗಳವರೆಗೂ ಅವರೇ ಬರೆಯಬೇಕು ಎಂಬುವುದನ್ನು ನಾವು ನಿರೀಕ್ಷೆ ಮಾಡಬಾರದು. ಬಹಳಷ್ಟು ಮಂದಿ ಚಳುವಳಿ ಅಥವಾ ಹೋರಾಟವನ್ನು ಒಂದು ಪ್ರಾಜೆಕ್ಟ್ ಎಂದು ತಿಳಿದುಕೊಂಡಿರುತ್ತಾರೆ. ಚಳುವಳಿಗಳು ಒಂದು ಪ್ರಾಜೆಕ್ಟ್ ಅಲ್ಲ. ಅದೊಂದು ಪ್ರಕ್ರಿಯೆ ಎಂದು ನಾವು ಮೊದಲು ಅರಿಯಬೇಕು. ಬೊಳುವಾರರು ರಿಲೇ ಬ್ಯಾಟನ್ ಹಿಡಿದುಕೊಂಡು ಒಂದಷ್ಟು ದೂರ ಓಡಿಕೊಂಡು ಬಂದಿದ್ದಾರೆ. ಅದರ ನಂತರ ಆ ಬ್ಯಾಟನ್ ಹಿಡಿದುಕೊಂಡು ಮುಂದಿನ ತಲೆಮಾರು ಓಡಬೇಕಿದೆ. ಯಾವುದೇ ಚಳುವಳಿಯು ಸ್ಥಬ್ಧವಾಗಿದೆ ಎಂದು ಅನ್ನಿಸಲು ಕಾರಣ ಆ ಬ್ಯಾಟನ್ ಹಿಡಿದುಕೊಂಡು ಹೋಗುವ ಮುಂದಿನ ತಲೆಮಾರುಗಳು ನಿಷ್ಕ್ರಿಯವಾದಾಗ. ಬೊಳುವಾರು, ಫಕೀರ್ ಮುಹಮ್ಮದ್ ಕಟ್ಪಾಡಿ ಮತ್ತು ಸಾರಾ ಅಬೂಬಕ್ಕರ್ ಪರಂಪರೆ ಎಲ್ಲೋ ನಿಂತ ಹಾಗೆ ನಮಗೆ ಯಾಕೆ ಅನ್ನಿಸುತ್ತದೆ ಅಂದರೆ, ಅದರ ನಂತರ ಅವರಷ್ಟೇ ತೀವ್ರವಾಗಿ ಅನುಭವಿಸಿ, ಅಷ್ಟೇ ತೀಕ್ಷವಾಗಿ ಬರೆಯುವ ಲೇಖಕರು ನಮಗೆ ಕಾಣಿಸುತ್ತಿಲ್ಲ. ಇದಕ್ಕೆ ಬಹಳ ಮುಖ್ಯವಾದ ಕಾರಣನೂ ಇದೆ. ಬಾಬರೀ ಮಸೀದಿ ಧ್ವಂಸದ ನಂತರ ಎದ್ದ ಹಿಂದುತ್ವದ ಅಲೆ ಅಬ್ಬರದಲ್ಲಿ ಇವರ ಧ್ವನಿಗಳು ಉಡುಗಿ ಹೋಯಿತು. ಮುಖ್ಯವಾಗಿ ಬೊಳುವಾರು ಹಾಗೂ ಸಾರಾ ಅಬೂಬಕ್ಕರ್ ಸಾಹಿತ್ಯವನ್ನು ನೋಡಿದರೆ, ಅವರು ಉಳಿದವರ ಬಗ್ಗೆ ಬರೆಯಲೇ ಇಲ್ಲ. ಅವರು ಅವರೊಳಗಿದ್ದದ್ದನ್ನು ಬರೆದರು. ಒಂದು ಆತ್ಮವಿಮರ್ಶನಾ ದಾಟಿಯಲ್ಲಿ ಬರೆದರು. ಮುಸ್ಲಿಮ್ ಸಮುದಾಯದ ಒಳಗಿನ ಕಂದಾಚಾರಗಳ ಬಗ್ಗೆ, ಅಲ್ಲಿರುವ ಪುರೋಹಿತಶಾಹಿಗಳ ಬಗ್ಗೆ ಬರೆದರು. ಆದರೆ ಬಾಬರೀ ಮಸೀದಿ ಧ್ವಂಸದ ನಂತರದ ಬೆಳವಣಿಗೆಯು ಈ ರೀತಿ ಮುಸ್ಲಿಂ ಸಮುದಾಯದೊಳಗಿನ ಕಂದಾಚಾರಗಳ ಬಗ್ಗೆ ಬರೆದರೂ ಕೂಡಾ ಅದನ್ನು ಬೇರೆ ಯಾರೋ ಬಂಡವಾಳ ಮಾಡಿಕೊಳ್ಳುತ್ತಾರೆ ಎಂಬ ಭಯ ಆವರಿಸಲಾರಂಭಿಸಿತು. 90 ರ ದಶಕದ ನಂತರ ಭುಗಿಲೆದ್ದ ಕೋಮುವಾದಿ ವಾತಾವರಣವು ಬಹಳಷ್ಟು ಪ್ರಗತಿಪರ ಮುಸ್ಲಿಂ ಲೇಖಕರ ಬಾಯನ್ನು ಮುಚ್ಚಿಸಿತು.

ಮುಖ್ಯವಾಗಿ ದಕ್ಷಿಣ ಕನ್ನಡದಲ್ಲಿ ಒಂದಂತೂ ಬಹಳ ವಿಚಿತ್ರ. ದಕ್ಷಿಣ ಕನ್ನಡದಲ್ಲಿ ಬಹಳಷ್ಟು ಕಟ್ಟರ್ ಕೋಮುವಾದಿಗಳು ಇದ್ದಾರೆ. ಇಲ್ಲಿರುವಷ್ಟು ಕಟ್ಟರ್ ಕೋಮುವಾದಿಗಳು ಬಹುಷಃ ಬೇರೆ ರಾಜ್ಯಗಳಲ್ಲಿ ಇಲ್ಲ ಎಂದು ನನಗನಿಸುತ್ತದೆ. ಆದರೆ ಇಲ್ಲಿ ಅತ್ಯಂತ ಕಟ್ಟರ್ ಸೆಕ್ಯುಲರ್ ವಾದಿಗಳೂ ಕೂಡಾ ಇದ್ದಾರೆ. ಇತ್ತಿಚೆಗೆ ಬೆಂಗಳೂರಿನಲ್ಲಿ ಜನಶಕ್ತಿ ವಾರಪತ್ರಿಕೆಯ ಸೆಮಿನಾರ್‌ನಲ್ಲಿ ಭಾಗವಹಿಸಿದ್ದೆ. ಅಲ್ಲಿ ಪತ್ರಿಕೋದ್ಯಮದ ಬಗ್ಗೆ ಮಾತನಾಡಲಿಕ್ಕೆ ಇದ್ದವರು ಎಂದರೆ, ನಾನು, ಎನ್.ಎ.ಎಮ್. ಇಸ್ಲಾಯಿಲ್ ಮತ್ತು ನವೀನ್ ಸೂರಿಂಜೆ. ಒಂದು ಕಡೆ ದಕ್ಷಿಣ ಕನ್ನಡವನ್ನು ಹಿಂದುತ್ವದ ಪ್ರಯೋಗ ಶಾಲೆ ಮಾಡಿದವರು ಇಲ್ಲಿನ ಪತ್ರಿಕೋದ್ಯಮವನ್ನೂ ಪ್ರಯೋಗ ಶಾಲೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಕೊನೆಗೆ ಅದರ ವಿರುದ್ಧ ಮಾತನಾಡಲಿಕ್ಕೆ ಮಂಗಳೂರು ಮೂಲದ ಪತ್ರಕರ್ತರನ್ನೇ ಆರಿಸುವಂತಹಾ ಪರಿಸ್ಥಿತಿ. ಇದು ಬಹಳ ದೊಡ್ಡ ಸಂಘರ್ಷ.

ಬಹು ಸಂಸ್ಕೃತಿ ಬಹಳ ದೊಡ್ಡ ಶಕ್ತಿ. ಬಹುಸಂಸ್ಕೃತಿ ಎಷ್ಟು ದೊಡ್ಡ ಶಕ್ತಿಯೋ ಅಷ್ಟೇ ದೊಡ್ಡ ದೌರ್ಬಲ್ಯ ಕೂಡಾ ಹೌದು. ನಾನು ಬಹಳ ಹಿಂದೆ ದಕ್ಷಿಣ ಕನ್ನಡದ ಕೋಮುವಾದದ ಬಗ್ಗೆ ಅಂಕಣ ಬರೆದಿದ್ದೆ. ಮಾಜಿ ಸಚಿವ ಬಿ.ಎಮ್. ಮೊಯ್ದಿನ್ ಅವರು ಈಗಲೂ ಅದನ್ನು ನೆನಪಿಸಿಕೊಂಡು ಮಾತನಾಡುತ್ತಿರುತ್ತಾರೆ. ಇಲ್ಲಿಯ ಈ ಬಹುಸಂಸ್ಕೃತಿಯನ್ನು ಹಿಂದುಗಳು, ಮುಸ್ಲಿಮರು, ಕೈಸ್ತ್ರರು ಕೂಡಿ ಕಟ್ಟಿದ್ದರು. ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಮತ್ತು ಅದರ ನಂತರದ ವಿದ್ಯಾರ್ಥಿ ದೆಸೆಯಲ್ಲಿಯೂ ಕೂಡಾ ನನಗೆ ಬಹಳ ಮಂದಿ ಮೊಗವೀರ ಸಮುದಾಯದ ಮಿತ್ರರಿದ್ದರು. ನೀವು ಕರಾವಳಿಯ ಮತ್ಸ್ಯೋಧ್ಯಮವನ್ನು ಗಮನಿಸಿ. ಸಮುದ್ರಕ್ಕೆ ಹೋಗಿ ಮೀನು ಹಿಡಿಯುವವರು ಮೊಗವೀರರು. ಮೊಗವೀರರು ಹಿಡಿದು ತಂದ ಮೀನನ್ನು ಮಾರಾಟ ಮಾಡುವುದು ಬ್ಯಾರಿಗಳು. ಇದು ಬಹಳ ವರ್ಷಗಳ ಕಾಲದಿಂದ ನಡೆದುಕೊಂಡು ಬಂದಿದೆ. ಮಂಗಳೂರು ಮಲ್ಲಿಗೆ ವ್ಯಾಪಾರವೂ ಇಂತಹುದೇ ರೀತಿಯದ್ದು. ಮಲ್ಲಿಗೆಯನ್ನು ಬಹುತೇಕ ಬೆಳೆಯುವವರು ಕ್ರೈಸ್ತರು. ಮಾರಾಟ ಮಾಡುವವರು ಮುಸ್ಲಿಮರು. ಮಲ್ಲಿಗೆಯ ಗ್ರಾಹಕರು ಮಾತ್ರ ಹಿಂದೂ ಮಹಿಳೆಯರು. ಇವೆಲ್ಲಾ ಬಹು ದೊಡ್ಡ ಬಹುಸಂಸ್ಕೃತಿಯ- ಸಾಮರಸ್ಯದ ಸಂಕೇತವಾಗಿದೆ. ವಿಪರ್ಯಾಸವೆಂದರೆ ಈ ಸಾಮರಸ್ಯದ ಪ್ರಸಂಗವನ್ನಿಟ್ಟುಕೊಂಡೇ ಇಲ್ಲಿ ಕೋಮುವಾದ ಬೆಳೆದಿರುವುದು. ಮೊಗವೀರರು ಹಾಗೂ ಮುಸ್ಲಿಮರ ನಡುವಿನ ಬಾಂಧವ್ಯದಲ್ಲಿ ಮಹಿಳೆಯರ ವಿಷಯವನ್ನು ಮುಂದಿಟ್ಟುಕೊಂಡು ಯುವಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ಅವರ ನಡುವೆ ಒಂದು ರೀತಿಯ ಒಡಕನ್ನು ಉಂಟುಮಾಡಲಾಯಿತು.

ಇರಲಿ, ನನಗಿಂತ ಕಿರಿಯರಾಗಿರುವ ಪತ್ರಕರ್ತ, ಸಾಹಿತಿ ಬಿ.ಎಮ್. ಬಶೀರ್ ಅವರು ತಪ್ಪು ತಿಳಿದುಕೊಳ್ಳುವುದಿಲ್ಲ basheer-book-release-dinesh-3ಎಂದು ಭಾವಿಸಿಕೊಳ್ಳುತ್ತಾ ಅವರಿಗೆ ಕೆಲವು ಮಾತುಗಳನ್ನು ಸಲಹೆ ರೂಪದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಬಿ.ಎಂ. ಬಶೀರ್ ಅವರ ಅಂಕಣಗಳನ್ನು ಓದಿದಾಗ, ಅದು ’ಸಾಫ್ಟ್ ಕಾರ್ನರ್’ನಲ್ಲಿದೆ ಎನಿಸುತ್ತದೆ. ಅವರು ಅಂಕಣಗಳನ್ನು ಇನ್ನಷ್ಟು ದಿಟ್ಟತನ, ನಿಷ್ಠುರತೆಯಿಂದ ಬರೆಯಬೇಕಾಗಿದೆ. ಹತ್ತು ವರ್ಷಗಳ ಹಿಂದಿನ ಬಶೀರ್‌ಗೂ ಈಗಿನ ಬಶೀರ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಬಶೀರ್ ಇವತ್ತು ಸಾಹಿತ್ಯ, ಪತ್ರಿಕಾ ವಲಯದಲ್ಲಿ ಚಿರಪರಿಚಿತರು. ಅವರು ಸಾಹಿತ್ಯ ವಲಯದಲ್ಲಿ ಮತ್ತು ಪತ್ರಿಕೋದ್ಯಮದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ನಾನು ಆಗಲೇ ಹೇಳಿದಂತೆ ಬೊಳುವಾರು, ಪಕೀರ್ ಮಹಮ್ಮದ್ ಕಟ್ಪಾಡಿ ಹಾಗೂ ಸಾರಾ ಅಬೂಬಕ್ಕರ್ ಒಂದಷ್ಟು ದೂರ ಓಡಿ ಬಂದಿದ್ದಾರೆ. ಅವರ ಆ ಓಟವನ್ನು ಇವತ್ತು ಮುಂದುವರಿಸಬೇಕಾಗಿದೆ. ಬಶೀರ್ ಅವರ ಈ ಪುಸ್ತಕವನ್ನು ತೆಗೆದು ನೋಡಿದರೆ, ನಾನು ಏನನ್ನು ಹುಡುಕುತ್ತಿದ್ದೇನೋ ಅದು ಸಿಗುತ್ತಿಲ್ಲ. ಒಬ್ಬ ಮುಸ್ಲಿಮ್ ಲೇಖಕನ ಪುಸ್ತಕವನ್ನು ಎತ್ತಿಕೊಂಡಾಗ ನಾನು ಅದರಲ್ಲಿ ಓದಿ ತಿಳಿದುಕೊಳ್ಳಲು ಬಯಸುವುದು ನಮ್ಮ ಅರಿವಿಗೆ ಬಾರದ ಮುಸ್ಲಿಂ ಲೋಕವನ್ನು. ಆದರೆ ಬಿ.ಎಂ. ಬಶೀರ್ ಬರೆದಿರುವ ಈ ಪುಸ್ತಕದಲ್ಲಿ ಅವ್ಯಾವುದೂ ಇಲ್ಲ. ಮುಸ್ಲಿಂ ಸಮುದಾಯದೊಳಗಿನ ತಲ್ಲಣಗಳು, ಸಮುದಾಯದ ಕಷ್ಟ ಸುಖಗಳು, ಕಂದಾಚಾರಗಳು, ಮೂಲಭೂತವಾದದ ಸಮಸ್ಯೆಗಳು ಬಶೀರ್ ಬರವಣಿಗೆಯಲ್ಲಿ ಕಾಣುತ್ತಿಲ್ಲ. ಉದಾಹರಣೆಗೆ ಕಳೆದ 10 ವರ್ಷಗಳಲ್ಲಿ ಮಂಗಳೂರಿನಲ್ಲಿ ಅಲ್ಪಸಂಖ್ಯಾತರನ್ನು ಹೆಚ್ಚು ಸಂಕಷ್ಟಕ್ಕೆ ಸಿಲುಕಿಸಿದ್ದು ಮತ್ತು ಮುಸ್ಲೀಮರನ್ನು ಅಪನಂಬಿಕೆಗೆ ಒಳಪಡಿಸಿದ್ದು ’ಲವ್ ಜಿಹಾದ್’ ಎಂಬ ಸುಳ್ಳು ವಿಚಾರ ಮತ್ತು ನೈತಿಕ ಪೊಲೀಸ್‌ಗಿರಿ. ನೂರಾರು ಸಂಖ್ಯೆಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಬಶೀರ್ ಪುಸ್ತಕದಲ್ಲಿ ಕಾಣುತ್ತಿಲ್ಲ. ಇದಲ್ಲದೆ ಇವತ್ತಿಗೆ ಮುಸ್ಲಿಮರಲ್ಲೂ ಕೂಡಾ ಮೂಲಭೂತವಾದಿ ಸಂಘಟನೆಗಳು ಹುಟ್ಟಿಕೊಂಡಿವೆ. ಮುಸ್ಲಿಂ ಮೂಲಭೂತವಾದ ಮತ್ತು ಕೋಮುವಾದದ ಬಗ್ಗೆ ನೀವು ಬರೆಯಬೇಕಾಗುತ್ತದೆ. ನಮ್ಮಂತವರು ನಿಮ್ಮ ಜೊತೆ ನಿಲ್ಲೋದಕ್ಕಾಗಿಯಾದರೂ ನೀವು ಬರೆಯಬೇಕಾಗುತ್ತದೆ. ನಾನು ಸ್ವಾಮಿ ವಿವೇಕಾನಂದರ ಬಗ್ಗೆ ಬರೆದಾಗ ನನಗೆ ಬೆದರಿಸಿ ಬಂದ ಬಹುತೇಕ ಕರೆಗಳಲ್ಲಿ ಕೇಳಿದ ಒಂದೇ ಒಂದು ಪ್ರಶ್ನೆ — ಸೂ…. ಮಗನೇ, ನೀನು ವಿವೇಕಾನಂದರ ಬಗ್ಗೆ ಬರೀತಿಯಾ. ನಿನಗೆ ಧೈರ್ಯವಿದ್ದರೆ ಮುಹಮ್ಮದ್ ಪೈಗಂಬರ ಬಗ್ಗೆ ಬರಿ.— ಬಶೀರ್‌ರವರಂತಹ ಲೇಖಕರು ಪ್ರವಾದಿ ಬಗ್ಗೆ ಬರೆಯಬೇಕೆಂದು ಹೇಳೋದಲ್ಲ. ಮುಸ್ಲಿಮರ ಒಳಗೇ ಇರುವಂತಹಾ ಮೂಲಭೂತವಾದ, ಪುರೋಹಿತಶಾಹಿಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಮೂಲಭೂತವಾದವಾದವು ನಿಮ್ಮ ಅಭಿವ್ಯಕ್ತಿಯ ಶಕ್ತಿಯನ್ನೇ ಭ್ರಷ್ಟಗೊಳಿಸುತ್ತದೆ. ಮೂಲಭೂತವಾದವೆಂದರೆ ಕೇವಲ ಹಿಂದೂ ಮುಸ್ಲೀಮರ ಜಗಳ ಎಂದು ನೀವು ತಿಳಿದುಕೊಳ್ಳಬೇಡಿ. ಮೂಲಭೂತವಾದವು ಅದನ್ನೂ ಮೀರಿದ್ದಾಗಿರುತ್ತದೆ. ಆದರೂ ಮಂಗಳೂರಿನ ಮಹಮ್ಮದ್ ಇರ್ಷಾದ್‌ನಂತಹ ಮುಸ್ಲಿಂ ಯುವ ಲೇಖಕರು, ಪತ್ರಕರ್ತರು ಈಗಲೂ ದಿಟ್ಟತನದಿಂದ ಬರೆಯುತ್ತಾರೆ. ನನ್ನ ಜೊತೆಗೂ ಯುವ ಲೇಖಕರು ಪತ್ರಕರ್ತರು ಈ ಬಗ್ಗೆ ಜಗಳ ಮಾಡುತ್ತಾರೆ. ನಾನು ಇತ್ತೀಚೆಗೆ ಮಂಗಳೂರಿನ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮಕ್ಕೆ ಹೋಗಿ ಭಾಷಣ ಮಾಡಿದಾಗ ನನ್ನ ಮೇಲೆ ದಾಳಿ ನಡೆಸೋ ರೀತಿಯಲ್ಲಿ ಲೇಖನಗಳನ್ನು ಬರೆದ ಮಹಮ್ಮದ್ ಇರ್ಷಾದ್, ನವೀನ್ ಸೂರಿಂಜೆ ಈಗಲೂ ಉತ್ತಮ ಸ್ನೇಹಿತರು. ಇದೆಲ್ಲಾ ನೋಡಿದಾಗ ಖುಷಿಯಾಗುತ್ತದೆ. ಮುಸ್ಲಿಂ ಸಮುದಾಯದೊಳಗಿನ ತಲ್ಲಣಗಳು, ಕಂದಾಚಾರಗಳು, ಮೂಲಭೂತವಾದಗಳ ಬಗ್ಗೆ ಬರೆಯುವ ಲೇಖಕರ ಸಂಖ್ಯೆ ಹೆಚ್ಚಾಗಬೇಕಿದೆ.

ಡಾ. ಯು.ಆರ್. ಅನಂತಮೂರ್ತಿ ನಿಧನದ ನಂತರ ಫೇಸ್‌ಬುಕ್‌ನಲ್ಲಿ ನಾನೊಂದು ಸ್ಟೇಟಸ್ ಅಪ್‌ಡೇಟ್ ಮಾಡಿದ್ದೆ. ನಮ್ಮ ಸಮಾಜದಲ್ಲಿ ಸಜ್ಜನರು ಬಹುಸಂಖ್ಯೆಯಲ್ಲಿದ್ದಾರೆ. ಜಾತ್ಯಾತೀತವಾಗಿ ಯೋಚನೆ ಮಾಡುವವರು ಬಹುಸಂಖ್ಯೆಯಲ್ಲಿದ್ದಾರೆ. ದುಷ್ಟರು ಕೋಮುವಾದಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಸಮಸ್ಯೆ ಏನಂದರೆ ಸಜ್ಜನರು ಹಾಗೂ ಜ್ಯಾತ್ಯಾತೀತವಾದಿಗಳು ಸದಾ ಮೌನಿಗಳಾಗಿರುತ್ತಾರೆ. ಕೋಮುವಾದಿಗಳು ಹಾಗೂ ದುಷ್ಟರು ಕೂಗುಮಾರಿಗಳಾಗಿದ್ದಾರೆ. ಅವರ ಕೂಗಿನ ಮುಂದೆ ನಾವೇ ಅಲ್ಪಸಂಖ್ಯಾತರು ಎಂಬ ಆತಂಕ ನಮ್ಮನ್ನು ಕಾಡುತ್ತದೆ. ಆ ಆತಂಕವನ್ನು ಹೋಗಲಾಡಿಸಬೇಕಾದರೆ ನಾವು ಈ ಮೌನವನ್ನು ಮುರಿದು ಮಾತನಾಡಬೇಕು. ಎಲ್ಲಾ ಸಮುದಾಯದಲ್ಲಿರುವ ಪ್ರಗತಿಪರ ಮನಸ್ಸುಗಳೂ ಮೌನ ಮುರಿದು ಮಾತನಾಡಬೇಕು. ಮುಸ್ಲಿಂ ಜನಾಂಗದ ಲೇಖಕರೂ ಕೂಡಾ ದಿಟ್ಟತನದಿಂದ, ನಿಷ್ಠುರವಾಗಿ ಅವರ ಒಳಗಿನ ಸಂಕಟಗಳ ಬಗ್ಗೆ ಧ್ವನಿ ಎತ್ತಬೇಕು.

ಮುಸ್ಲಿಂ ಸಮುದಾಯದಲ್ಲಿ ಬುರ್ಕಾ ವಿಚಾರವು ಚರ್ಚೆಗೆ ಅರ್ಹವಾದ ವಿಚಾರ. ಶಿವಮೊಗ್ಗ ಜಿಲ್ಲೆಯಲ್ಲಿ ಗಲಾಟೆಯಾದಾಗ “ಮುಸ್ಲಿಮರಿಗೆ ಉದಾರವಾದಿ ನಾಯಕನೊಬ್ಬ ಸಿಗಲಿ ಎಂದು ಹಾರೈಸುತ್ತಾ” ಎಂದು ಒಂದು ಲೇಖನ ಬರೆದಿದ್ದೆ. ಬಹಳಷ್ಟು ಮುಸ್ಲಿಮ್ ಸಿನಿಮಾ ನಟಿಯರು ಬುರ್ಖಾ ಹಾಕೋದೆ ಇಲ್ಲ. ಬೆನಜಿರ್ ಬುಟ್ಟೋ ತಲೆಗೆ ಸ್ಕಾರ್ಪ್ ಹಾಕುತ್ತಿದ್ದರೇ ವಿನಹಃ ಬುರ್ಖಾ ತೊಡುತ್ತಿರಲಿಲ್ಲ. ಬಾಂಗ್ಲಾ ದೇಶದ ಶೇಕ್ ಹಸೀನಾ ಕೂಡಾ ಬುರ್ಖಾ ಹಾಕುತ್ತಿರಲಿಲ್ಲ. ಬುರ್ಕಾದ ಕಾರಣಕ್ಕಾಗಿ ಅವರ ವಿರುದ್ಧ ಜನ ದಂಗೆಯೇನೂ ಎದ್ದಿರಲಿಲ್ಲ. ಬದಲಾಗಿ ಅವರು ನಾಯಕರಾದರು. ಬುರ್ಖಾವನ್ನ ಹಿಂದೂ ಸಂಘಟನೆಗಳು ವಿರೋಧಿಸಿದಾಗ ಅದಕ್ಕೆ ಪ್ರತಿಕ್ರಿಯೆಯಾಗಿ ನಾವು ಕೂಡಾ ಅದನ್ನು ವಿರೋಧ ಮಾಡಿದರೆ ಅವರ ಒತ್ತಡಕ್ಕೆ ನಾವು ಬಲಿಯಾದಂತಾಗುತ್ತದೆ. ಹಿಂದೂ ಸಂಘಟನೆಗಳು ಮಾತನಾಡುವುದಕ್ಕೂ ಮೊದಲೇ ನಾವು ಮಾತನಾಡಬೇಕು. 25 ರಿಂದ 30 ವರ್ಷದೊಳಗಿನ ಮುಸ್ಲಿಮ್ ಮಹಿಳೆಯರನ್ನು ಬುರ್ಖಾ ಬೇಕೋ ಬೇಡವೋ ಎಂದು ರಹಸ್ಯ ಮತದಾನ ನಡೆಸಿದರೆ ಬಹುಸಂಖ್ಯೆಯ ಮಹಿಳೆಯರು ಬುರ್ಕಾ ಬೇಡ ಅನ್ನಬಹುದು. ಬಹಿರಂಗವಾಗಿ ಬುರ್ಕಾ ಬೇಡ ಎನ್ನಲು ಮುಸ್ಲಿಂ ಮಹಿಳೆಯರಿಗೆ ಧೈರ್ಯವಿರುವುದಿಲ್ಲ. ಒಬ್ಬ ಲೇಖಕ ಈ ರೀತಿ ಒಳ ಧ್ವನಿಗಳಿಗೆ ಧ್ವನಿಯಾಗಬೇಕು. ಮುಸ್ಲಿಮರ ಒಳಗಿರುವ ಕಂದಾಚಾರಗಳು, ಅವರೊಳಗಿನ ಸಂಕಟಗಳಿಗೆ ಧ್ವನಿಯಾಗಬೇಕು. ಹಾಗಾದಾಗ ನಾವೊಂದು ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಗೆಳೆಯ ಬಿ.ಎಂ. ಬಶೀರ್ ಅವರ ಮುಂದಿನ ಬರವಣಿಗೆಗೆಳು ಈ ದಿಕ್ಕಿನಲ್ಲಿ ಸಾಗಲಿ ಎಂದು ಹಾರೈಸುತ್ತೇನೆ. ನಮಸ್ಕಾರ.

ವಾಹಿನಿಯೊಂದು ಖಾಸಗಿ ಬದುಕಿನಲ್ಲಿ ಎಷ್ಟರಮಟ್ಟಿಗೆ ಮಧ್ಯಪ್ರವೇಶಿಸಬಹುದು?

download                                                                        ಭಾರತೀದೇವಿ ಪಿ.

ಕಳೆದ ಕೆಲವು ದಿನಗಳಿಂದ ಎರಡು ಸುದ್ದಿಗಳು ನಮ್ಮ ಸುದ್ದಿವಾಹಿನಿಗಳಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿವೆ. ಒಂದು ರೈಲ್ವೆ ಸಚಿವ ಸದಾನಂದಗೌಡರ ಮಗ ಕಾರ್ತಿಕ್ ಗೌಡ ಮತ್ತು ಮೈತ್ರಿಯಾ ಮದುವೆ ವಿವಾದ, ಮತ್ತೊಂದು ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲಿನ ಆರೋಪ ಮತ್ತು ಅವರು ಇನ್ನಿತರರ ಮೇಲೆ ಆರೋಪ ಮಾಡುತ್ತಿರುವ ಪ್ರಕರಣ. ಎರಡನೇ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗದಂತೆ ತಡೆಯಾಜ್ಞೆ ತರಲಾಗಿದೆ.

ಈ ಬೆಳವಣಿಗೆ ಬಹಳ ಮುಖ್ಯ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಮೊದಲನೆಯದು, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ಎರಡನೆಯದು ಮಾಧ್ಯಮಗಳು ವ್ಯಕ್ತಿಯ ಖಾಸಗಿ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಪ್ರವೇಶಿಸಬಹುದು ಎಂಬ ಪ್ರಶ್ನೆ. ಇವುಗಳ ಜೊತೆಗೆ ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಪ್ರಭಾವಿ ವ್ಯಕ್ತಿಗಳು ತಮ್ಮ ವಿರುದ್ಧದ ಸುದ್ದಿ ಪ್ರಸಾರವಾಗದಂತೆ ನೋಡಿಕೊಳ್ಳುತ್ತಾ ತಮ್ಮ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳದ ಹಾಗೆ ಹೇಗೆ ನೋಡಿಕೊಳ್ಳುತ್ತಿವೆ ಎಂಬುದು.

ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋಗಳಾಗಿದ್ದ ‘ಬದುಕು ಜಟಕಾಬಂಡಿ’, ‘ಇದು ಕತೆಯಲ್ಲ ಜೀವನ’ ಇವುಗಳಲ್ಲಿ ಯಾವ್ಯಾವುದೋ ಸಮಸ್ಯೆಗಳಿಗೆ ಸಿಲುಕಿದ ಜನ ಬರುತ್ತಿದ್ದರು, ಜೋರು ಜೋರು ಮಾತುಕತೆ ನಡೆಯುತ್ತಿತ್ತು, ನಿರೂಪಣೆ ಮಾಡುವವರು ಜೋರು ದನಿಯಲ್ಲಿ ಮಾತನಾಡಿ ತಮಗೆ ತೋರಿದ ಪರಿಹಾರ ನೀಡುತ್ತಿದ್ದರು, ಎಷ್ಟೋ ಸಲ ಕಟ್ಟಪ್ಪಣೆ ಹೊರಡಿಸಿದ್ದೂ ಇದೆ. ಇಲ್ಲಿ ತಮ್ಮ ಖಾಸಗಿ ಬದುಕನ್ನು ಪ್ರದರ್ಶನದ ಸರಕಾಗಿ ಒಡ್ಡಿಕೊಳ್ಳುತ್ತಿದ್ದವರು ಬಹುಪಾಲು ಕೆಳಮಧ್ಯಮವರ್ಗದವರು.

ಒಬ್ಬ ಪಿಕ್ ಪಾಕೆಟ್ ಮಾಡಿದ ಬಡ ಯುವಕನಿಗೆ ಸಾಯುವಂತೆ ಹೊಡೆಯುವ ನಮ್ಮ ವ್ಯವಸ್ಥೆ ಪ್ರಭಾವೀ ವ್ಯಕ್ತಿಗಳು ದೊಡ್ಡ ದೊಡ್ಡ ಅಪರಾಧ ಮಾಡಿದರೂ ಅವರಿಗೆ ವಿಶಿಷ್ಟ ‘ಇಮ್ಯುನಿಟಿ’ಯನ್ನು ನೀಡಿದೆ. ಕರಾವಳಿಯ ‘ಧರ್ಮಸಂರಕ್ಷಕರು’ ಎಂದು ಕರೆಸಿಕೊಳ್ಳುವವರೊಬ್ಬರು ತಮ್ಮ ವಿರುದ್ಧ ಸುದ್ದಿ ಬರೆದ ಟಾಬ್ಲಾಯ್ಡ್ ನ ಒಂದು ಪ್ರತಿಯೂ ಊರು ಸೇರದ ಹಾಗೆ ನೋಡಿಕೊಳ್ಳುತ್ತಾರೆ. ಅವರ ವಿರುದ್ಧ ಬರೆದ ಪತ್ರಿಕಾ ಕಚೇರಿ ಮೇಲೆ ಬೆಂಬಲಿಗರಿಂದ ದಾಳಿಯಾಗುತ್ತದೆ. ಉತ್ತರ ಕರ್ನಾಟಕದ ಸಚಿವರೊಬ್ಬರ ವಿರುದ್ಧ ಸುದ್ದಿ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಆ ಕ್ಷೇತ್ರದ ಹಲವು ಕಡೆ ವಿದ್ಯುತ್ ಸರಬರಾಜು ಹಠಾತ್ ಕಡಿತವಾಗುತ್ತದೆ.

ಒಬ್ಬ ಮನುಷ್ಯ ಹುಡುಗಿಯೊಬ್ಬಳನ್ನು ಛೇಡಿಸಿದರೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸುವುದನ್ನು ಜೂಮ್ ಮಾಡಿ ಪ್ರಸಾರ ಮಾಡುವ ವಾಹಿನಿಗಳು, ಅಂತಹ ಸನ್ನಿವೇಶ ನಡೆಯುವಂತೆ ಪರೋಕ್ಷ ಚಿತಾವಣೆ ಮಾಡುವವರು ಎಲ್ಲರೂ ಸೇರಿ ವ್ಯಕ್ತಿಯ ದೌರ್ಬಲ್ಯ ಮತ್ತು ಅಸಹಾಯಕತೆಯನ್ನು ಕೇವಲ ಮನೋರಂಜನೆಯ ಮಟ್ಟಕ್ಕೆ ಇಳಿಸಿದ್ದು ಒಂದು ಕಡೆ. ಜೊತೆಗೆ ಕೇವಲ ಒಂದು ಸುದ್ದಿಯಾಗಬಹುದಾದ ಘಟನೆಗಳನ್ನು ರಾತ್ರಿ ಮಲಗುವ ಮುನ್ನ ಕ್ರೈಂ ಸ್ಟೋರಿಯೋ ಅಥವಾ ಕ್ರೈಂ ನ್ಯೂಸಿನ ಹೆಸರಿನಲ್ಲೋ ವ್ಯಕ್ತಿಗಳ ಖಾಸಗಿ ಬದುಕಿನ ವಿವರಗಳೊಂದಿಗೆ ಕೆಟ್ಟ ಕುತೂಹಲದಿಂದ ನೋಡುವ ಜನ ಒಂದು ಕಡೆ. ಸಾರ್ವಜನಿಕವಾಗಿ ‘ಪೀಪಿಂಗ್ ಸಿಂಡ್ರೋಂ’ ಅನ್ನು ಎಲ್ಲೆಡೆ ಭಯಂಕರವಾಗಿ ಹಬ್ಬಿಸಿ ಇನ್ನೊಬ್ಬರ ಬದುಕಲ್ಲಿ ಅನಗತ್ಯ ಇಣಿಕುವ ಕೆಟ್ಟ ಚಾಳಿಯನ್ನು ಇವು ಹುಟ್ಟುಹಾಕಿವೆ.

ಇದರ ಜೊತೆಗೇ ಗಂಭೀರವಾಗಿ ತೆಗೆದುಕೊಳ್ಳಲೇಬೇಕಾದ ಒಂದು ಸಂಗತಿ ವಾಹಿನಿಗಳಲ್ಲಿ ನಡೆಯುವ ನ್ಯಾಯ ತೀರ್ಮಾನದ ವಿಷಯ. ಹಿಂದೊಮ್ಮೆ ಕಾಳಿಸ್ವಾಮಿ ವಂಚನೆ ಪ್ರಕರಣದಲ್ಲಿ ಬತ್ತಲಾದಾಗ ವಾಹಿನಿಯೊಂದು ‘ಜನತಾ ನ್ಯಾಯಾಲಯ’ವನ್ನೇ ರೂಪಿಸಿ ವಾದ, ಪ್ರತಿವಾದ ನಡೆಸಿ ತೀರ್ಪು ನೀಡಿ ಪಟ್ಟದಿಂದ ಇಳಿಸುವ ಕಾರ್ಯಕ್ರಮ ನಡೆಸಿತ್ತು. ಇತ್ತೀಚೆಗಂತೂ ವಾಹಿನಿಗಳು ಪರ್ಯಾಯ ನ್ಯಾಯಾಂಗವಾಗಿಯೇ ಕೆಲಸ ನಿರ್ವಹಿಸುತ್ತಿದೆಯೇನೋ ಎಂಬಂತೆ ವರ್ತಿಸುತ್ತಿವೆ. ಪೊಲಿಸ್ ಠಾಣೆಯಲ್ಲಿ ದಾಖಲಾಗುವ ಎಫ್ ಐ ಆರ್ ಒಂದಕ್ಷರ ಬಿಡದಂತೆ ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ, ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಮುಂದೆ ಹಾಜರುಪಡಿಸಬೇಕಾದ ದಾಖಲೆಗಳು ಮಾಧ್ಯಮಗಳಲ್ಲಿ ಮೊದಲಿಗೇ ಬಿತ್ತರವಾಗುತ್ತವೆ. ನಿರೂಪಕರು ಪಾಟೀಸವಾಲು ನಡೆಸಿ ತೀರ್ಮಾನವನ್ನೂ ಕೊಟ್ಟುಬಿಡುತ್ತಾರೆ.

ರಿಯಾಲಿಟಿ ಶೋ ಒಂದರಲ್ಲಿ ಆರೋಪಿಯನ್ನು ವೇದಿಕೆಗೆ ಕರೆಸಿ ಮಾತಿಗೆ ಮಾತು ನಡೆದು ಸಾರ್ವಜನಿಕರೇ ಥಳಿಸಿರುವುದನ್ನು ನೋಡಿದ್ದೇವೆ. ಎಂತಹ ಆರೋಪಿಯೇ ಆಗಲಿ, ಕೊಲೆಗಡುಕನೇ ಆಗಲಿ ಅವನಿಗೆ ಗೌರವಯುತ0ವಾಗಿ ವಿಚಾರಣೆಗೆ ಒಳಗಾಗುವ ಹಕ್ಕು ಇದೆ. ಆರೋಪ ಸಾಬೀತಾದಾಗ ಅವನಿಗೆ ಅದಕ್ಕೆ ತಕ್ಕ ಕಠಿಣ ಶಿಕ್ಷೆಯನ್ನು ನ್ಯಾಯಾಂಗ ವಿಧಿಸುತ್ತದೆ. ಆದರೆ ಆರೋಪಿಯನ್ನು ತಮಗೆ ಮನಬಂದಂತೆ ಥಳಿಸುವ ಹಕ್ಕು ನಾಗರಿಕ ಸಮಾಜದಲ್ಲಿ ಸಾರ್ವಜನಿಕರಿಗೆ ಇರುವುದಿಲ್ಲ.

ಇವನ್ನೆಲ್ಲ ನೋಡಿದಾಗ ಮಾಧ್ಯಮಗಳ ಮಿತಿ ಮತ್ತು ವ್ಯಾಪ್ತಿ ಕುರಿತ ಪ್ರಶ್ನೆಗಳು ಏಳುತ್ತವೆ. 24×7 ಸುದ್ದಿ ವಾಹಿನಿಗಳ ಹಾವಳಿಯಲ್ಲಿ ಎಷ್ಟರಮಟ್ಟಿಗೆ ಬದುಕಿನ ಖಾಸಗಿತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂಬ ಯೋಚನೆ ಉಂಟಾಗುತ್ತದೆ. ಬೇರೊಬ್ಬರ ಬದುಕಿನ ವೈಯಕ್ತಿಕ ವಿವರಗಳು, ಪ್ರೀತಿಯ ಕನವರಿಕೆಗಳು, ನೋವಿನ ನರಳಾಟ ಇವನ್ನೆಲ್ಲ ಮನೆಮಂದಿಯೊಂದಿಗೆ ಕೂತು ನೋಡುವಾಗ ನಮಗೆ ಕನಿಷ್ಟ ಮಟ್ಟದ ಮುಜುಗರ, ದಾಕ್ಷಿಣ್ಯ ಆಗದಿದ್ದರೆ ಹೇಗೆ? ಜೊತೆಗೇ ಇವನ್ನೆಲ್ಲ ನೋಡುವಾಗ ಪ್ರಜಾಪ್ರಭುತ್ವದ ಅಂಗಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬ ಕಳವಳ ಮೂಡುತ್ತದೆ. ನಾಗರಿಕ ಸಮಾಜದ ಸುಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇವಕ್ಕೆ ಉತ್ತರ ಕಂಡುಕೊಳ್ಳಲೇಬೇಕಾದ ಘಟ್ಟದಲ್ಲಿ ನಾವಿದ್ದೇವೆ.

ಸಾಂಸ್ಕೃತಿಕ ಚಳುವಳಿ ರೂಪಿಸುವ ಅಗತ್ಯ

DSC01418ಆಗಸ್ಟ್ 30-31ರಂದು ಕೊಟ್ಟೂರಿನಲ್ಲಿ ‘ನಾವು-ನಮ್ಮಲ್ಲಿ-2014’ ಆಯೋಜಿತವಾಗಿತ್ತು. ‘ಹೊಸ ತಲೆಮಾರು-ಸೃಜನಶೀಲ ಸ್ಪಂದನ’ ಎಂಬ ಹೆಸರಿನಡಿಯಲ್ಲಿ ನಾಡಿನ ಹಲವು ಚಿಂತಕರು ಭಾಗವಹಿಸಿ ಮಾತನಾಡಿದರು. ಅರ್ಥಪೂರ್ಣ ಸಂವಾದವೂ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅನುರಣಿತವಾದ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ಸ್ವರೂಪದ ಬರಹ ಇಲ್ಲಿದೆ.

– ಭಾರತೀದೇವಿ ಪಿ.

ನಮ್ಮ ಬದುಕಿನ ಭಾಗವಾದ ಹಲವು ಆಚರಣೆಗಳು, ಕಲೆಗಳು ಜನವಿರೋಧಿ ಮೌಲ್ಯಗಳನ್ನು ಸಂಸ್ಕೃತಿಯ ಹೆಸರಿನಲ್ಲಿ, ಸಮುದಾಯದ ವೈಶಿಷ್ಟ್ಯವನ್ನು ಕಾಪಿಟ್ಟುಕೊಳ್ಳುವ ಹೆಸರಿನಲ್ಲಿ ಮುನ್ನಡೆಸುತ್ತಾ ಬಂದಿರುವುದನ್ನು ಎದುರಾಗುವುದು ಹೇಗೆ ಎಂಬುದು ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ. ಏಕೆಂದರೆ ಪರೋಕ್ಷವಾಗಿ ಜನರ ಅಧೀನ ಸ್ಥಿತಿಯನ್ನು ಬಲಪಡಿಸುವ ಇವನ್ನು ನೇರವಾಗಿ ಎದುರಿಸುವ ಪ್ರಯತ್ನ ಕ್ಷುಲ್ಲಕವಾಗಿಯೋ, ಆವೇಶಭರಿತವಾಗಿಯೋ ತೋರಬಹುದು. ಸರಳ, ಸುಂದರವಾದ ಸಂಗತಿಯಲ್ಲಿ ಇವರು ತಪ್ಪು ಹುಡುಕಿ ತೋರುತ್ತಿದ್ದಾರಲ್ಲ ಎನಿಸಬಹುದು. ಆದರೆ ಇವನ್ನು ಅಡ್ರೆಸ್ ಮಾಡುವುದೇ ನಮ್ಮ ದೊಡ್ಡ ಸವಾಲು.

ಯಾರ ಮನೆಗೇ ಹೋಗಲಿ, ಹೆಣ್ಣುಮಕ್ಕಳಿಗೆ ಕುಂಕುಮ ಕೊಡುವುದು ಸಂಪ್ರದಾಯ. ಕಾಲೇಜು ದಿನಗಳಲ್ಲಿದ್ದಾಗ ತಂದೆಯನ್ನು ಕಳೆದುಕೊಂಡ ಗೆಳತಿ ಕುಂಕುಮ ಕೊಡುವ ಪದ್ಧತಿ ಬಗ್ಗೆ ನನಗೆ ವಿರೋಧವಿದೆ ಎಂದಾಗ ನನಗೆ ಅಚ್ಚರಿಯಾಗಿತ್ತು. ಯಾವುದೇ ತಪ್ಪಿಲ್ಲದೆ ವೈಧವ್ಯದ ಪಟ್ಟ ಪಡೆದ ತಾಯಿ ಮುತ್ತೈದೆಯರ ನಡುವೆ ಮೂಲೆಗುಂಪಾಗುವುದನ್ನು ಕಂಡಾಗ ಹೆಂಗಸರಲ್ಲೇ ಭೇದಭಾವ ತಂದಿಡುವ, ಗಂಡನ ಮೂಲಕವೇ ಹೆಣ್ಣಿನ ಇರುವಿಕೆಯನ್ನು ಮಾನ್ಯಮಾಡುವ ಈ ಬಾಗಿನ, ಅರಶಿನ-ಕುಂಕುಮ ನೀಡುವುದು ಇವೆಲ್ಲ ‘ಮುತ್ತೈದೆಯರ ಪೊಲಿಟಿಕ್ಸ್’ ಎಂದು ಅವಳು ರೋಷದಿಂದ ಹೇಳಿದ್ದಳು. ಆ ದಿನದಿಂದ ನನಗೆ ಯಾರು ಕುಂಕುಮ ಕೊಟ್ಟರೂ ಇರಿಸುಮುರುಸಾಗುತ್ತಿದೆ. ಇದೇ ರೀತಿಯಲ್ಲಿ ನಮ್ಮ ದೈನಿಕದಲ್ಲಿ ಸೇರಿಹೋಗಿರುವ ಅನೇಕ ಸಹಜಸಂಗತಿಗಳು ಒಳಗೊಳಗೇ ವ್ಯವಸ್ಥೆಯ ಹಿಡಿತವನ್ನು ಬಿಗಿಗೊಳಿಸುತ್ತಾ ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳಿಗೆ ಮಂಕುಬೂದಿ ಎರಚುತ್ತಿರುತ್ತವೆ.

ಮದುವೆ ಇರಬಹುದು, ನಾಮಕರಣ ಇರಬಹುದು, ಊರಿನ ಜಾತ್ರೆ ಇರಬಹುದು ಹೀಗೆ ನಮ್ಮ ಸಂಸ್ಕೃತಿಯ ಸಂಕೇತಗಳಾಗಿರುವ ಆಚರಣೆಗಳ ಒಳಗೆ ಗುಪ್ತಗಾಮಿನಿಯಾಗಿರುವ ಪಾಳೆಗಾರಿಕೆ, ಜಾತೀಯತೆ ಮತ್ತು ಪಿತೃಪ್ರಧಾನ ಮೌಲ್ಯಗಳನ್ನು ಎದುರಿಸುವುದು ಹೇಗೆ? ನಮ್ಮ ಸಮುದಾಯದ ಆಚರಣೆಗಳು ಎಂಬ ನೆಲೆಯಲ್ಲಿ ನಮ್ಮ ಅಸ್ಮಿತೆಯ ಗುರುತುಗಳಾಗಿರುವ ಇವನ್ನು ನಿರಾಕರಿಸುವುದು ಹೇಗೆ? ರಾಜಕೀಯವಾಗಿ, ಸಾಮಾಜಿಕವಾಗಿ ಖಚಿತ ನಿಲುವು ತಳೆದು ಮಾತಾಡುವ ನಮಗೆ ಬದುಕಿನಲ್ಲಿ ಎದುರಾಗುವ ಇಂಥ ಸವಾಲುಗಳನ್ನೆಲ್ಲ ಎದುರಿಸುವ ಸಿದ್ಧತೆ ಇದೆಯೇ? ಮಡೆಸ್ನಾನ, ಸಹಪಂಕ್ತಿ ಭೋಜನ, ಗಂಡು ಪ್ರಧಾನವಾಗಿರುವ ನಮ್ಮ ಕುಟುಂಬ ಪದ್ಧತಿ ಇವೆಲ್ಲವನ್ನೂ ಸಂಸ್ಕೃತಿಯನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರಲ್ಲ ಇವನ್ನು ಎದುರಾಗುವುದು ಹೇಗೆ?

ನಮ್ಮ ನಡುವೆ ಇರುವ ಶಾಸ್ತ್ರೀಯ ಮತ್ತು ಜನಪ್ರಿಯ ಮಾಧ್ಯಮಗಳೂ ಇವೇ ಮೌಲ್ಯಗಳನ್ನು ಬಿತ್ತುವುದು ಮಾತ್ರವಲ್ಲ, ವಿಜೃಂಭಿಸುತ್ತಾ ಬರುತ್ತಿರುವುದನ್ನು ನೋಡಿದಾಗ ಇವುಗಳಿಗೆ ಪ್ರತಿಯಾಗಿ ಜನಪರವಾದ ವಿಚಾರಗಳನ್ನು ಸ್ಥಾಪಿಸುವುದಕ್ಕೆ ನಮ್ಮ ಬಳಿ ಸಾಕಷ್ಟು ಹತಾರಗಳಿಲ್ಲ ಎಂದು ಅನಿಸುತ್ತದೆ. ಇಂತಹ ವ್ಯವಸ್ಥೆಯನ್ನು ಕೇವಲ ರಾಜಕೀಯ ಚಳುವಳಿಗಳಿಂದ ಮಾತ್ರ ಎದುರಿಸಲು ಹೊರಡುವುದು ಸಾಧ್ಯವೇ? ಈ ಪ್ರಶ್ನೆಯನ್ನು ಆಗಸ್ಟ್ 30,31ರಂದು ಕೊಟ್ಟೂರಿನಲ್ಲಿ ನಡೆದ ನಾವು-ನಮ್ಮಲ್ಲಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಎತ್ತಿದರು. ಅದು ಪ್ರಗತಿಪರರೆನಿಸಿಕೊಂಡವರು ಎದುರುಮಾಡಿಕೊಳ್ಳಬೇಕಾದ ದೊಡ್ಡ ಪ್ರಶ್ನೆ ಎನಿಸುತ್ತದೆ.DSC01285

ಇಂತಹುದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅವಕಾಶವಂಚಿತರ ಮನೆಬಾಗಿಲಿಗೇ ಹೋಗಿ ಕಲಾಮಾಧ್ಯಮದ ಮೂಲಕ ಜಾತಿ, ವರ್ಗ, ಲಿಂಗ ತಾರತಮ್ಯಗಳ ವಿರುದ್ಧ ಎಚ್ಚರ ಮೂಡಿಸುವ ದಿಸೆಯಲ್ಲಿ ಹುಟ್ಟಿಕೊಂಡದ್ದು ಮಹಾರಾಷ್ಟ್ರದ ‘ಕಬೀರ್ ಕಲಾಮಂಚ್’. ನಮ್ಮ ಶಾಸ್ತ್ರೀಯ ಮತ್ತು ಜನಪ್ರಿಯ ಕಲೆಗಳು ಒಂದೆಡೆ ಉಳ್ಳವರ ಅಹಂಕಾರವನ್ನು ಪೋಷಿಸುವ ಸೊತ್ತಾಗಿವೆ, ಇನ್ನೊಂದೆಡೆ ಯಾವುದನ್ನೂ ಆಳಕ್ಕೆ ಹೋಗಿ ನೋಡದೆ ಥಳುಕುಬಳುಕಿನ ಆವರಣದಲ್ಲಿ ಮತ್ತದೇ ಮೌಲ್ಯಗಳನ್ನು ಚಾಲ್ತಿಗೆ ತರುತ್ತಾ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣ ಮರೆತಿವೆ. ಹೀಗಿರುವಾಗ ಕಲೆಗೆ ಇರುವ ಸಾಮಾಜಿಕ ಆಯಾಮವನ್ನು ಎತ್ತಿತೋರಿಸುವ ಕೆಲಸವನ್ನು ಕಬೀರ್ ಕಲಾಮಂಚ್ ನ ಕಲಾವಿದರು ಮಾಡುತ್ತಿದ್ದಾರೆ.

ಇಂತಹ ಪ್ರಯತ್ನವೊಂದು ಪ್ರಭುತ್ವವನ್ನು ಎಷ್ಟು ಅಲ್ಲಾಡಿಸಿದೆ ಎಂದರೆ ಈ ತಂಡದ ಹಲವು ಸದಸ್ಯರನ್ನು ಬಗೆಬಗೆಯ ಕೇಸು ಜಡಿದು ಜೈಲಿಗೆ ತಳ್ಳಲಾಗಿದೆ. ಇವರ ತಂಡ ಎಷ್ಟು ಪರಿಣಾಮಕಾರಿಯಾಗಿ ವ್ಯವಸ್ಥೆಯನ್ನು ಅಲ್ಲಾಡಿಸಿದೆ ಎಂಬುದಕ್ಕೆ ಇದು ನಿದರ್ಶನ. ಈ ಎಲ್ಲ ಆತಂಕಗಳ ನಡುವೆಯೂ ಅವರ ಪ್ರಯತ್ನ ಮುಂದುವರೆದಿದೆ. ಈ ಹೋರಾಟದ ಹೆಜ್ಜೆಯನ್ನೇ ಪುಣೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಕಬೀರ್ ಕಲಾಮಂಚ್ ನ ಜ್ಯೋತಿ ಜಗತಾಪ್ ಬಿಚ್ಚಿಟ್ಟು ಸಾಂಸ್ಕೃತಿಕ ಚಳುವಳಿಯನ್ನು ರೂಪಿಸುವ ಅಗತ್ಯದ ಕುರಿತು ಮಾತಾಡಿದರು. (ಜಗತಾಪ್ ಗಂಡ ಕೂಡ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದಾರೆ).

ಹೀಗಾಗಿ ನಮ್ಮನ್ನು ಆವರಿಸಿರುವ ಸಂಸ್ಕೃತಿಯ ಅದೃಶ್ಯಜಾಲದಿಂದ ಹೊರಬರುವುದಕ್ಕೆ ಬರಹಗಾರರ ಜೊತೆಗೆ, ಹೋರಾಟಗಾರರು, ಎಲ್ಲ ಬಗೆಯ ಕಲಾವಿದರು, ಸಮಾಜವಿಜ್ಞಾನಿಗಳು ಒಂದಾಗಿ ಜನರ ಬಳಿಗೆ ಹೋಗುವ ಅಗತ್ಯವಿದೆ. ನಮ್ಮ ಸಮಾಜದ ಕಟ್ಟೋಣವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡುವ ಅಗತ್ಯವಿದೆ. ಇಲ್ಲದಿದ್ದಲ್ಲಿ ನಮ್ಮೆಲ್ಲ ಪ್ರಯತ್ನಗಳು ಆಕ್ಷಣದ ನಮ್ಮ ಅಸಹಾಯಕತೆಯಿಂದ ಹೊರಬರುವ ದಾರಿಯಷ್ಟೆ ಆಗಿಬಿಡುವ ಆತಂಕವಿದೆ. ಇದನ್ನು ಮೀರುವ ದಾರಿಯಾಗಿ ಒಂದು ಸಾಂಸ್ಕೃತಿಕ ಎಚ್ಚರವನ್ನು ಮೂಡಿಸಿಕೊಳ್ಳುವ ಮೂಲಕ ಮುಂದಿನ ಹೆಜ್ಜೆಯಿಡಬೇಕಾಗಿದೆ.

ಲಂಕೇಶ: ಅಳಿದ ಮೇಲೂ ಉಳಿದ ಪ್ರತಿಭೆ


– ಡಾ.ಎಸ್.ಬಿ. ಜೋಗುರ


ಲಂಕೇಶ ಆ ಹೆಸರೇ ಹಾಗೆ.. ಎರಡು ದಶಕಗಳ ಕಾಲ ಕನ್ನಡ ನಾಡಿನ ಮನ:ಸ್ಥಿತಿಯನ್ನು ಜಾಗೃತವಾಗಿಡುವಷ್ಟು ಶಕ್ತಿ ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡ ಹೆಸರದು. ತನ್ನ ಹೆಸರಿನ ಪತ್ರಿಕೆಯೊಂದು ತನ್ನ ನಂತರವೂ ಇಷ್ಟು ಗಾಢವಾದ, ಅನೂಹ್ಯವಾದ ಪ್ರಭಾವವನ್ನು ಹೊಂದಿರಬಲ್ಲದು ಎನ್ನುವುದನ್ನು ಲಂಕೇಶ ಅರಿತಿದ್ದರೋ.. ಇಲ್ಲವೋ ಆ ಮಾತು ಬೇರೆ. ಇಂದಿಗೂ ಮಾಧ್ಯಮ ಜಗತ್ತಿನ ವಿಪರ್ಯಾಸಗಳನ್ನು ಕುರಿತು ಚರ್ಚಿಸುವಾಗ ಇಲ್ಲವೇ ಅಲ್ಲಿಯ ವಸ್ತುನಿಷ್ಟತೆ ಮತ್ತು ಖಚಿತತೆಯ ಬಗ್ಗೆ ಮಾತನಾಡುವಾಗ ಲಂಕೇಶರು ನೆನಪಾಗದೇ ಇರಲಾರರು. ಕೆಲವರು ಬದುಕಿರುವಾಗಲೇ ಸತ್ತಿರುತ್ತಾರೆ, ಮತ್ತೆ ಕೆಲವರು ಸತ್ತ ಮೇಲೆ ಬದುಕಿರುತ್ತಾರೆ ಆದರೆ ಬದುಕಿರುವಾಗಲೂ ಮತ್ತು ಸತ್ತ ಮೇಲೆಯೂ ಜೀವಂತವಾಗಿರುವ ಕೆಲವೇ ಕೆಲವರಲ್ಲಿ ಲಂಕೇಶರೂ ಒಬ್ಬರು. ನನ್ನ ಪ್ರಕಾರ ಲಂಕೇಶರು ಕರ್ನಾಟಕದ ಖುಶ್ವಂತಸಿಂಗ್ ಎನ್ನುವಲ್ಲಿ ಎರಡು ಮಾತಿಲ್ಲ. ಬದುಕನ್ನು ತನ್ನಿಷ್ಟದಂತೆಯೇ ಬದುಕಿದ ಅಪರೂಪದ ವ್ಯಕ್ತಿ. ತಾನು ಇಂದ್ರ.. ಚಂದ್ರ.. ಎಂದು ಬಡಾಯಿ ಕೊಚ್ಚಿಕೊಳ್ಳುವ ಜಾಯಮಾನವೇ ಅವರಲ್ಲಿ ಇರಲಿಲ್ಲ. ಹಾಗಾಗಿದ್ದರೆ ಹುಳಿ ಮಾವಿನ ಮರ ದಂತಹ ಅಪರೂಪದ ಆತ್ಮಕತೆಯೊಂದು ಹೊರಬರುತ್ತಿರಲಿಲ್ಲ. ತಮ್ಮ ಊರಾದ ಕೊನಗವಳ್ಳಿಯಲ್ಲಿ ಅವರ ಬಾಲ್ಯದಲ್ಲಿ ಊರಿನ ಕೆಲವು ಹಿರಿಯರು lankeshಈರಿ ಎನ್ನುವ ಓರ್ವ ಯುವತಿಯನ್ನು ಆಕೆ ನೀರಿಗೆ ಹೊರಟಾಗ ಹಾಗೇ ಚುಡಾಯಿಸುತ್ತಿದ್ದುದಿತ್ತು. ಅದರಲ್ಲಿ ಅವರ ತಂದೆಯವರೂ ಒಬ್ಬರು ಎನ್ನುವದನ್ನು ದಾಖಲಿಸಿರುವ ಲಂಕೇಶರು, ಅವರ ಮಗ ಇಂದ್ರಜಿತ್ ಹಿಂದೊಮ್ಮೆ ಬೆಂಗಳೂರಲ್ಲಿ ಒಂದು ಸಣ್ಣ ಅಪಘಾತದಲ್ಲಿ ಸಿಲುಕಿ ಲಂಕೇಶರ ಹೆಸರನ್ನು ಬಳಸಿ ಪಾರಾಗಿ ಬಂದಿರುವದಿತ್ತು. ಆಗ ಮೇಸ್ಟ್ರು ಇನ್ನೊಮ್ಮೆ ಇಂಥಾ ಕೆಲಸ ಮಾಡಿ ನನ್ನ ಹೆಸರನ್ನು ಎಲ್ಲೂ ಬಳಸತಕ್ಕದ್ದಲ್ಲ ಎಂದು ಖಡಕ್ ಆಗಿ ವಾರ್ನಿಂಗ್ ಮಾಡಿದ ಲಂಕೇಶರು ಎಂದೂ ತಾನೊಂದು ಪತ್ರಿಕೆಯ ಸಂಪಾದಕ ಎಂದು ರಿಯಾಯತಿ ಪಡೆದವರಲ್ಲ. ಅತ್ಯಂತ ತತ್ವ, ನಿಷ್ಟೆಯ ಮೂಲಕ ಎರಡು ದಶಕಗಳಷ್ಟು ಕಾಲ ಯಾವುದೇ ಜಾಹೀರಾತುಗಳಿಲ್ಲದೆಯೂ ಲಂಕೇಶರು ಪತ್ರಿಕೆಯನ್ನು ನಡೆಸಿರುವದಿತ್ತು. ಅದು ಕೇವಲ ಪತ್ರಿಕೆಯಾಗಿರಲಿಲ್ಲ. ನಾಡಿನ ಪ್ರಜ್ಞಾವಂತ ಮನಸುಗಳ ಮೂರ್ತ ರೂಪವಾಗಿ ಪ್ರತಿವಾರವೂ ಓದುಗರ ಕೈ ಸೇರುತ್ತಿತ್ತು. ಪತ್ರಿಕೆಯ ದರವನ್ನು ತೀರಾ ಅಪರೂಪಕ್ಕೆ ಹೆಚ್ಚಿಸುವ ಪ್ರಮೇಯ ಬಂದಾಗ ಅದನ್ನು ನೇರವಾಗಿ ಹೆಚ್ಚಿಸಿ ಪತ್ರಿಕೆಯನ್ನು ಮಾರುಕಟ್ಟೆಗೆ ಬಿಡದೆ ಆ ದರ ಹೆಚ್ಚಿಸುವ ಅನಿವಾರ್ಯತೆ ಯಾಕೆ ಬಂತು..? ಹೊಟೆಲನಲ್ಲಿ ಒಂದು ಪ್ಲೇಟ್ ಇಡ್ಲಿ ಒಂದು ಚಹಾ ದರ ಎಷ್ಟಿದೆ ಎನ್ನುವದನ್ನೆಲ್ಲಾ ಅತ್ಯಂತ ವಸ್ತುನಿಷ್ಟವಾಗಿ ವಿವರಿಸಿ ಒಂದು ರೂಪಾಯಿನೋ.. ಎರಡು ರೂಪಾಯಿನೋ ಹೆಚ್ಚಿಸುತ್ತಿದ್ದರು. ತೀರಾ ಸಾಮಾನ್ಯ ಬರವಣಿಗೆ ಎನ್ನುವುದು ಕೂಡಾ ಲಂಕೇಶ ಪತ್ರಿಕೆಯ ಸಹವಾಸಕ್ಕೆ ಬಂದದ್ದೇ ಅಗಾಧವಾದ ಪ್ರಚುರತೆಯನ್ನು ಪಡೆಯುತ್ತಿತ್ತು. ಲಂಕೇಶ ಪತ್ರಿಕೆಗೆ ಬರೆಯುವದೇ ಒಂದು ಹೆಮ್ಮೆ ಎನ್ನುವ ದಿನಮಾನಗಳಿದ್ದವು. ನಮ್ಮ ನಡುವೆಯೇ ಸಾಕಷ್ಟು ಪತ್ರಿಕಾ ಸಂಪಾದಕರುಗಳಿದ್ದಾರೆ ಇವರು ಇದ್ದರೂ ಇಲ್ಲದಿದ್ದರೂ ಏನೂ ಫ಼ರಕ್ ಬೀಳುವದಿಲ್ಲ ಎನ್ನುವಂತೆ ಇವರು ಬದುಕಿದವರು. ಲಂಕೇಶ ಹಾಗಿರಲಿಲ್ಲ. ಸರಿ ಇದ್ದದ್ದನ್ನು ಸರಿ ಎಂದು ಹೇಳುವ, ತಪ್ಪನ್ನು ತಪ್ಪು ಎಂದು ಹೇಳುವ ಧಾಡಸೀತನ ಲಂಕೇಶರಲ್ಲಿತ್ತು. ಓದುಗರನ್ನು ಹೊರತುಪಡಿಸಿ ಯಾರನ್ನೋ ಓಲೈಸಬೇಕು ಎನ್ನುವ ಕಾರಣಕ್ಕೆ ಲಂಕೇಶ ಎಂದೂ ಬರವಣಿಗೆಯನ್ನು ಮಾಡಲಿಲ್ಲ. ತನ್ನ ಓದುಗರು ಇಷ್ಟ ಪಡುತ್ತಾರೆ ಎನ್ನುವ ಕಾರಣಕ್ಕಾಗಿ ಕೆಲವೊಮ್ಮೆ ತಮ್ಮ ಖಾಸಗಿ ಬದುಕಿನ ಬಗ್ಗೆ ಬರೆದುಕೊಂಡಿರಬಹುದೇ ಹೊರತು ತಮ್ಮ ಬಗ್ಗೆ ಕೊಚ್ಚಿ ಕೊಂಡದ್ದು ಇಲ್ಲ.

ಲಂಕೇಶ ಮೂಲತ: ಅಧ್ಯಾಪಕರಾಗಿದ್ದವರು. ಅಪಾರವಾದ ಓದು, ವ್ಯಾಪಕವಾದ ಬರವಣಿಗೆಯ ಮೂಲಕ ಅವರು ಗುರುತಿಸಿಕೊಂಡಿದ್ದರೂ ಉತ್ತಮ ಬೋಧಕರಾಗಿ ಲಂಕೇಶ ವಿದ್ಯಾರ್ಥಿಗಳ ವಲಯದಲ್ಲಿ ಗಮನ ಸೆಳೆಯಲಿಲ್ಲ. ಆದರೆ ಒಬ್ಬ ನಾಟಕಕಾರರಾಗಿ, ಕವಿಯಾಗಿ, ಕ್ರೀಡಾ ಪ್ರೇಮಿಯಾಗಿ, ಚಿತ್ರ ನಿರ್ದೇಶಕನಾಗಿ [ನಟನಾಗಿ ಎನ್ನದಿದ್ದರೆ ಲಂಕೇಶರು ಕೋಪಿಸಿಕೊಳ್ಳಬಹುದೇನೋ..] ಹಾಗೆಯೇ ಒಬ್ಬ ವಿಮರ್ಶಕನಾಗಿ, ಕಾದಂಬರಿಕಾರರಾಗಿ, ಕತೆಗಾರರಾಗಿ, ಪತ್ರಿಕಾ ಸಂಪದಾಕರಾಗಿ ಹೀಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಆಸಕ್ತಿಯಿದ್ದ ಲಂಕೇಶರು ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಅವರು ಒಂದೆರಡು ಪೆಗ್ ಹಾಕಿ ಚರ್ಚೆಗೆ ಕುಳಿತರೆ ಅತ್ಯಂತ ಗಹನವಾದ ವಿಚಾರಗಳು ಬಿಚ್ಚಿಕೊಳ್ಳುತ್ತಿದ್ದವು. ಅವರು ಮತ್ತು ಡಿ.ಆರ್.ನಾಗರಾಜ ಜೊತೆಗಿನ ಸಹವಾಸವನ್ನು ಕುರಿತು ನಟರಾಜ ಹುಳಿಯಾರ ಈಚೆಗಷ್ಟೆ “ಇಂತಿ ನಮಸ್ಕಾರಗಳು” ಎನ್ನುವ ಕೃತಿಯನ್ನು ಹೊರತಂದಿರುವದಿದೆ. ಲಂಕೇಶರು ತಮ್ಮ ಅಪ್ರತಿಮವಾದ ಪ್ರತಿಭೆಯ ಮೂಲಕ ನಾಡಿನ ಬಹುತೇಕರಿಗೆ ಮೇಸ್ಟ್ರಾಗಿದ್ದಾರೆ. ಇದು ಬಹಳ ಮುಖ್ಯ. ಇವತ್ತು ಡಾಕ್ಟರೇಟ್ ಡಿಗ್ರಿ ಮಾಡಿಕೊಂಡು ಮೂರು ದಶಕ ಅಧ್ಯಾಪಕನೆಂದು ಪಾಠ ಮಾಡಿzವರನ್ನೇ ಅವರ ವಿದ್ಯಾರ್ಥಿಗಳು ಪ್ರೀತಿಯಿಂದ ನಮ್ಮ ಮೇಷ್ಟ್ರು ಎಂದು ಕರೆಯುವದಿಲ್ಲ ಹೀಗಿರಬೇಕಾದರೆ ಲಂಕೇಶರನ್ನು ಇಂದಿಗೂ ಅವರ ವಿಚಾರಧಾರೆಗಳನ್ನು ಒಪ್ಪಿಕೊಂಡವರೆಲ್ಲಾ ಮೇಷ್ಟ್ರೆಂದೇ ಕರೆಯುವದಿದೆ. ಅವರ ಪತ್ರಿಕೆ ಬರೀ ಪತ್ರಿಕೆಯಾಗಿರಲಿಲ್ಲ ಎನ್ನುವುದನ್ನು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಮಾತುಗಳಲ್ಲಿ ಹೇಳುವದಾದರೆ ಒಂದು ಕಾಲವಿತ್ತು ಇಡೀ ರಾಜ್ಯದಲ್ಲಿ ಪ್ರಜ್ಞಾವಂತ ಮನಸುಗಳನ್ನು ರೂಪಿಸುವ ಮತ್ತು ನಿರ್ದೇಶಿಸುವ ಲಂಕೇಶ ಪತ್ರಿಕೆ ಎನ್ನುವುದೊಂದಿತ್ತು ಇಂಥಾ ಸಂದರ್ಭಗಳಲ್ಲಿ ಅದು ಅತ್ಯಂತ ವಸ್ತು ನಿಷ್ಟವಾಗಿ ತನ್ನ ಅಭಿಪ್ರಾಯಗಳನ್ನು ಹೊರಹಾಕುವುದು ಮಾತ್ರವಲ್ಲದೇ ಏನಾಗಬೇಕು ಎನ್ನುವುದನ್ನು ಖಡಾಖಂಡಿತವಾಗಿ ಹೇಳುತ್ತಿತ್ತು. ಈಗ ಅಂಥಾ ಯಾವುದೇ ಪತ್ರಿಕೆಗಳು ನಮ್ಮಲ್ಲಿ ಆ ರೀತಿಯ ಖಂಡಿತವಾದವನ್ನು ಹುಟ್ಟುಹಾಕುವಷ್ಟು ಪರಿಣಾಮಕಾರಿಯಾಗಿ ಉಳಿದಿಲ್ಲ. ಅದನ್ನೇ ಪೂರ್ಣಚಂದ್ರ ತೇಜಸ್ವಿಯವರು, “ಲಂಕೇಶ ಆ ಪೇಪರನ್ನು ಹೇಗೆ ಕ್ರಿಯೇಟ್ ಮಾಡಿದರೆಂದರೆyou can throw anything.it will digest. ಹೀಗೆ ಒಟ್ಟು human situation DV develop ಆಗ್ತಾ ಬಂತು. You see every writer will have his own concept of audience. ಸಡನ್ನಾಗಿ ಯಾರಾರೋ ಸೈಕಲ್ ಶಾಪಿನವರು, ಬೀಡಿ ಅಂಗಡಿಯವರು ನನ್ನ ಕತೇನ ಓದೋಕೆ ಶುರು ಮಾಡಿದರು. ಅಂಥವರೆಲ್ಲ ನನ್ನ ಕತೆ ಓದುತ್ತಾರೆ ಅನ್ನೋದೇ ಮುಖ್ಯ ಅಂತಲ್ಲ. But psychologically there was a shift of audience. ಹೀಗೆ ಒಂದರಿಂದ ಇನ್ನೊಂದಕ್ಕೆ ಶಿಫ಼್ಟಾದ್ದರಿಂದ ಹೊಸ ಛಾಲೆಂಜಗಳು ಎದುರಾದವು. ಅಲ್ಲ್ಲಿಯತನಕ ಸಭೆಗಳು ಸೆಮಿನಾರ್ ಗಳಲ್ಲೇ ಇದ್ದ ಆಡಿಯನ್ಸ್ ಕಲ್ಪನೆ ಬದಲಾಯ್ತು” [ಹೊಸ ವಿಚಾರಗಳು-ಪು-೭೩೬] ಹೀಗೆ ಲಂಕೇಶ ಮತ್ತು ಅವರ ಹೆಸರಿನ ಪತ್ರಿಕೆ ಈ ನಾಡಿಗೆ ಅಗಾಧವಾದ ಕೊಡುಗೆಯನ್ನು ನೀಡಿವೆ. ನನ್ನಂಥ ಅನೇಕರಿಗೆ ಆಗಾಗ ನಿಜವಾಗಿಯೂ ಲಂಕೇಶರು ಜ್ಞಾನಪೀಠಕ್ಕೆ ಅರ್ಹರಿದ್ದರಲ್ಲ..! ಎಂದು ಅನಿಸಿರುವದಿದೆ. ಆದರೆ ಅದಾವ ಮಾನದಂಡವೋ ಕಾಣೆ ಅವರನ್ನು ಈ ಪ್ರಶಸ್ತಿಯಿಂದ ವಂಚಿಸಿತು. ಯಾವುದೇ ಪ್ರಶಸ್ತಿ ಇರಲಿ ಅವುಗಳ ಗೌರವ ಹೆಚ್ಚಬೇಕಾದರೆ ಇಂಥವರಿಗೇ ಸಿಗಬೇಕು.

ಲಂಕೇಶ ಎನ್ನುವದು ಕೇವಲ ಒಂದು ವ್ಯಕ್ತಿಯಲ್ಲ ಅದೊಂದು ಪ್ರಜ್ಞೆ. ಶೋಷಿತರ, ದಮನಿತರ, ಕೆಳಸ್ತರಗಳ ಜನರಿಗಾಗುವ ಅನ್ಯಾಯವನ್ನು ಪ್ರಶ್ನಿಸುವ ಪ್ರಜ್ಞೆ. ಹಿಂದುಳಿದ ಸಮುದಾಯಗಳ ಬಗ್ಗೆ ಅಪಾರ ಕಳಿಕಳಿಯಿದ್ದ ಲಂಕೇಶರು ತಮ್ಮ ಬದುಕಿನುದ್ದಕ್ಕೂ ಅವರ ಪರವಾಗಿಯೇ ಯೋಚಿಸಿದವರು. ಆದರೆ ಅವರ ಹೆಸರನ್ನು ಹೇಳುತ್ತಾ ಸುಖಿಸುವ, ಬೀಗುವ ಕೆಲ ಅನುಯಾಯಿಗಳಲ್ಲಿ ಲಂಕೇಶರ ವಿಚಾರಗಳು, ಧೋರಣೆಗಳು ಪ್ರಾಮಾಣಿಕವಾಗಿ ಎದೆಯ ಒಳಗೆ ಇಳಿಯಲಿಲ್ಲ. ಬರೀ ಗಂಟಲ ಮಟ್ಟಕ್ಕೆ ಬಂದು ಗಕ್ಕನೇ ನಿಂತು ಬಿಡುತ್ತವೆ. ಬಸವನ ಹೆಸರು ಬಳಸಿಕೊಂಡು ಪ್ರತಿಷ್ಟೆ ಮೆರೆಯುವವರಿಗಿಂತಾ ಇವರು ಭಿನ್ನವಾಗಿ ಕಾಣುವದಿಲ್ಲ. ನಡೆ-ನುಡಿಯ ನಡುವೆ ಅಪಾರ ಅಂತರವಿದ್ದರೂ ತತ್ವ, ಸಿದ್ಧಾಂತ, ಬದ್ಧತೆ ಎನ್ನುವ ಬೂಸಾತನ ಮಾತ್ರ ಇವರು ಬಿಡುವದಿಲ್ಲ. ಇವರು ನಿಜವಾಗಿಯೂ ಲಂಕೇಶರಂಥವರ ಪಾಲಿಗೆ ಕಳಂಕಿತರು. ಸದ್ಯದ ಸಾಹಿತ್ಯಕ ವಾತಾವರಣ ಎಷ್ಟು ಕಲುಷಿತವಾಗಿದೆಯೆಂದರೆ, ಬದ್ಧತೆ ಎನ್ನುವದು ಅಳವಡಿಕೆಗಲ್ಲ, ಹೊಟ್ಟೆ ಪಾಡಿಗೆ ಮತ್ತು ಒಣ ಹೆಸರಿಗೆ ಎನ್ನುವ ಸಾಹಿತಿಗಳು ಹೆಚ್ಚಾಗಿದ್ದಾರೆ. ಬರೆದಂತೆ ಬದುಕಬೇಕು ಎಂದು ಎಲ್ಲಿದೆ..? ಅಂತ ಕೇಳುವ ಕುಭಂಡರೂ ಇದ್ದಾರೆ. ಎಲ್ಲ ವಲಯಗಳಲ್ಲಿ ಜಾತೀಯತೆ, ಸ್ವಜನಪಕ್ಷಪಾತ, ಪ್ರಾದೇಶಿಕತೆಯ ತರತಮಗಳು ಅವಕಾಶಗಳನ್ನು ಸಮರ್ಥರಿಗೆ ಹಂಚದೇ ಅನ್ಯಾಯವೆಸಗುವ ಸಂದರ್ಭದಲ್ಲಿ ಲಂಕೇಶರು ಬದುಕಿರಬೇಕಿತ್ತು ಎನಿಸುತ್ತದೆ. ಇಂದು ಮಾಧ್ಯಮಗಳಂತೂ ಪಕ್ಕಾ ಉದ್ದಿಮೆಗಳಾಗಿಯೇ ಮಾರ್ಪಟ್ಟ ರೀತಿಗೆ ಮೇಸ್ಟ್ರು ಅದು ಹೇಗೆ ಉತ್ತರಿಸುತ್ತಿದ್ದರೋ ಗೊತ್ತಿಲ್ಲ. ಲಂಕೇಶರು ಬದುಕಿರುವಷ್ಟು ದಿನ ಬಾಯಿ ಮುಚ್ಚಿ ಕುಳಿತವರು ಅವರು ಇಲ್ಲವಾದದ್ದೇ ಕಿಸಬಾಯಿ ದಾಸರಾದದ್ದೂ ಇದೆ. ದೊಡ್ಡ ಬಂಡೆಗಲ್ಲೊಂದು ಉರುಳಿದ ಮೇಲೆ ಅದರಡಿಯಲ್ಲಿರುವ ಸಣ್ಣ ಪುಟ್ಟ ಹುಳುಗಳು ಪುಟು ಪುಟು ನೆಗೆದು ಹೊರಬರುವಂಥ ಸ್ವಾತಂತ್ರ್ಯವನ್ನು ಇವರು ಅನುಭವಿಸುತ್ತಿದ್ದಾರೆ.

ಲಂಕೇಶರಂಥಾ ಗದ್ಯ ಬರಹಗಾರರು ಕನ್ನಡ ನಾಡಿನ ಬಹುದೊಡ್ದ ಆಸ್ತಿ. ಯಾವುದನ್ನೇ ಬರೆಯಲಿ ಅದರ ಪ್ರಕಾರದ ತಾತ್ವಿಕ ಚೌಕಟ್ಟಿಗೆ ತಕ್ಕ ಹಾಗೆಯೇ ಬರೆಯುವ ಲಂಕೇಶ ಎಲ್ಲೂ ವಿಮರ್ಶೆಯನ್ನು ತುತ್ತೂರಿ ಮಾಡಿ ಊದಿದವರಲ್ಲ, ಹಾಗೆಯೇ ಸಿನೇಮಾ ವಿಮರ್ಶೆ, ಟೀಕೆ ಟಿಪ್ಪಣಿ, ಕಂಡದ್ದು ಕಂಡ ಹಾಗೆ, ಮರೆಯುವ ಮುನ್ನ ಹೀಗೆ ಯಾವುದನ್ನೇ ಬರೆದರೂ ಓದುಗರು ಖುಷಿ ಪಡುವಂತೆ ಬರೆಯುತ್ತಿದ್ದರು. ಅವರು ಕಾಟಾಚಾರಕ್ಕೆ ಬರೆದವರಲ್ಲ. ಬೋದಿಲೇರ ನಂಥ ಫ಼್ರೆಂಚ್ ಕವಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ ರೀತಿಯೇ ಅನನ್ಯ. ಒಂದು ವಾರಪತ್ರಿಕೆಯನ್ನು ಪ್ರತಿ ಬುಧವಾರ ಸಂಜೆ ಬಸ್ ನಿಲ್ದಾಣದ ಬುಕ್ ಸ್ಟಾಲ್ ಗಳಲ್ಲಿ ನಿಂತು, ಕಾದು, ಖರೀದಿಸಿ ಕೊಂಡು ಓದುವ ಆರೋಗ್ಯಕರ ಪರಂಪರೆಯನ್ನು ಲಂಕೇಶ ಪತ್ರಿಕೆಯ ಹಾಗೆ ಮತ್ತಾವುದೂ ಬೆಳೆಸಲಿಲ್ಲ. ಈಗ ಲಂಕೇಶ ಪತ್ರಿಕೆಗಿಂತಲೂ ಹೆಚ್ಚು ಪ್ರಸರಣ ಇರುವ ವಾರಪತ್ರಿಕೆಗಳು ಇರಬಹುದು. ಮಸಾಲಾ ಸುದ್ಧಿಯನ್ನೇ ತುರುಕಿ ರೋಚಕವಾಗಿ ಬರೆದು ಓದುಗರನ್ನು ಹೊಂದಿರಬಹುದು ಆದರೆ ಕನ್ನಡ ನಾಡಿನ ಜಾಣ-ಜಾಣೆಯರನ್ನು ಸೃಷ್ಟಿಸುವ ಸೃಜನಶೀಲ ಗುಣ ಇರುವ ಪತ್ರಿಕೆಗಳು ಕಡಿಮೆ. ಇಂದು ಜಾಹೀರಾತನ್ನು ಓದಿ ಮಿಕ್ಕದ್ದನ್ನು ಓದಬೇಕೋ ಇಲ್ಲಾ ಸುದ್ದಿಯನ್ನು ಓದಿ ಜಾಹೀರಾತನ್ನು ಗಮನಿಸಬೇಕೋ ಎನ್ನುವಷ್ಟು ಪತ್ರಿಕೋದ್ಯಮ ಬದಲಾಗಿದೆ. ಲಂಕೇಶರ ಪ್ರಭಾವ ಅಷ್ಟು ಸುಲಭವಾಗಿ ಅಳಿಸಿಹಾಕುವಂಥದ್ದಲ್ಲ, ಹಾಗೆ ಮಾಡ ಹೋದರೆ ಇನ್ನಷ್ಟು ಗಟ್ಟಿಯಾಗುತ್ತ ಹೋಗುವ ಪ್ರಭಾವ. ಲಂಕೇಶ ತಮ್ಮ ಪತ್ರಿಕೆಯನ್ನು ಬೆಳೆಸುವ ಜೊತೆಗೆ ಅನೇಕ ಹೊಸ ಹೊಸ ಲೇಖಕರನ್ನೂ ಬೆಳೆಸಿದರು. ತುಸು ನಿಷ್ಟುರವಾದಿಯಾಗಿದ್ದ ಲಂಕೇಶ ಅನೇಕರನ್ನು ಮೂಗಿನ ನೇರಕ್ಕೆ ಮಾತಾಡಿ ಬೇಸರಿಸಿದ್ದೂ ಇದೆ. ಲಂಕೇಶರು ಎಲ್ಲ ವಿಷಯಗಳಲ್ಲಿ ಪರಿಪೂಣವಾದ ಮನುಷ್ಯ ಎಂದಲ್ಲ, ಅವರಲ್ಲಿಯೂ ಮನುಷ್ಯ ಸಹಜವಾದ ದೌರ್ಬಲ್ಯಗಳಿದ್ದವು ಆದರೆ ಆ ದೌರ್ಬಲ್ಯಗಳನ್ನು ಬಳಸಿ ಅವರು ಬೇರೆಯವರನ್ನು ಶೋಷಣೆ ಮಾಡಲಿಲ್ಲ. ಆ ದೌರ್ಬಲ್ಯಗಳಿಗೆ ತಮ್ಮನ್ನೇ ತಾವು ಒಗ್ಗಿಸಿಕೊಂಡರು. ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಕ್ರಿಯಾಶೀಲರಾಗಿರುತ್ತಿದ್ದ ಲಂಕೇಶ ಒಂದೇ ಒಂದು ವಾರವೂ ಕಳಪೆ ಪತ್ರಿಕೆಯನ್ನು ರೂಪಿಸಿದವರಲ್ಲ. ಇಂಥಾ ಲಂಕೇಶ ಅಮೂರ್ತವಾಗಿ ಅವರ ಆಲೋಚನೆಗಳನ್ನು, ಬರವಣಗೆಯನ್ನು ಇಷ್ಟ ಪಡುವ ಎಲ್ಲರೊಂದಿಗೆ ಸದಾ ಕಾಲ ಇದ್ದೇ ಇರುತ್ತಾರೆ. ಇಂಥವರು ಇಲ್ಲವಾದಾಗಲೇ ಹೆಚ್ಚೆಚ್ಚು ಮಹತ್ವ ಪಡೆಯುತ್ತಾರೆ. ಆದರೂ ಲಂಕೇಶರಂಥಾ ಚಿಂತಕರು ಅಷ್ಟು ಬೇಗ ಸಾಯಬಾರದಿತ್ತು ಎನ್ನುವ ನನ್ನ ಹಳಹಳಿಕೆ ಮತ್ತು ಬೇಸರ ಮಾತ್ರ ನಿರಂತರವಾಗಿ ಹಾಗೇ ಉಳಿದಿದೆ.