Daily Archives: April 24, 2013

ಚುನಾವಣಾ ಪ್ರಣಾಳಿಕೆಗಳೆಂಬ ಪ್ರಹಸನ

– ಡಾ. ಎನ್. ಜಗದಿಶ್ ಕೊಪ್ಪ
ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಂತೆ ತಮ್ಮ ತಮ್ಮ ಚುನಾವಣಿಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ, ಇವುಗಳನ್ನು ಗಮನಿಸಿದರೆ, ಅಥವಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಓದಿದರೆ, ಇವುಗಳನ್ನು ನಮ್ಮ ಪತ್ರಿಕೆಗಳು ‘ಹಾಸ್ಯಲೇಖನಗಳು ಎಂಬ ಶೀರ್ಶಿಷಿಕೆಯಡಿ ಪ್ರಕಟಿಸಬಹುದಾದ ಎಲ್ಲಾ ಗುಣಗಳನ್ನು ಹೊಂದಿವೆ Poverty_4C_--621x414ಎಂದು ನಿಸ್ಸಂಕೋಚವಾಗಿ ಹೇಳಬಹುದು.
ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ದಿನದ 24 ಗಂಟೆ ವಿದ್ಯುತ್, ನಿರಂತರ ಕುಡಿಯುವ ಯೋಜನೆ, ರಸ್ತೆ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಅಭಿವೃದ್ಧಿಗೆ ಒತ್ತು, ಹೀಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುತ್ತಿರುವ ರಾಜಕೀಯ ಪಕ್ಷಗಳಿಗೆ ತಾವು ಅಧಿಕಾರದಲ್ಲಿದ್ದಾಗ ಈ ಯೋಜನೆಗಳನ್ನು ಏಕೆ ಅನುಷ್ಟಾನಗೊಳಿಸಲಿಲ್ಲ? ಎಂದು ಯಾರೂ ಪ್ರಶ್ನಿಸಲಿಲ್ಲ, ಜೊತೆಗೆ ಪ್ರಶ್ನಿಸಲೂ ಬಾರದು ಏಕೆಂದರೆ, ಇವುಗಳು ಬಡವರನ್ನು ಬಡವರಾಗಿ ಇಡುವ ಒಂದು ವ್ಯವಸ್ಥಿತ ತಂತ್ರ ಅಷ್ಟೇ. ಇವುಗಳ ಬಗ್ಗೆ ಭಾರತದ ಮತದಾರರು ನಂಬಿಕೆಗಳನ್ನು ಕಳೆದುಕೊಂಡು ಎಷ್ಟೋ ವರ್ಷಗಳಾಗಿವೆ, ಈಗಿನ ಚುನಾವಣಾ ಪ್ರಣಾಳಿಕೆಗಳೆಂದರೆ, ಮನಸ್ಸಿಗೆ ತುಂಬಾ ಬೇಸರವಾದಾಗ ಓದಬಹುದಾದ ಹಾಸ್ಯದ ಕರಪತ್ರಗಳು ಎಂಬಂತಾಗಿವೆ.
ನಮ್ಮ ಜನಪ್ರತಿನಿಧಿಗಳು ವಾಸ್ತವ ಬದುಕಿನಿಂದ ಎಷ್ಟೊಂದು ದೂರ ಚಲಿಸಿದ್ದಾರೆ ಎಂಬುದಕ್ಕೆ, ಚುನಾವಣಾ ಪ್ರಣಾಳಿಕೆಗಳು ಸಾಕ್ಷಿಯಾಗಿವೆ.  ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಇತ್ತೀಚೆಗೆ ದೆಹಲಿ ರಸ್ತೆಗಳಲ್ಲಿ ಕಸ ಗುಡಿಸಲು, 5.400 ಹುದ್ದೆಗಳಿಗೆ, ಕೇವಲ ಐದನೇಯ ತರಗತಿ ಪಾಸಾಗಿರುವ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಿತ್ತು. ಒಟ್ಟು 18 ಸಾವಿರ ಅಜರ್ಿಗಳು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಎಸ್.ಎಸ್,ಎಲ್.ಸಿ. ಪಾಸಾದವರು ಎರಡು ಸಾವಿರ ಮಂದಿ ಇದ್ದರೆ, 50 ಮಂದಿ ಪದವೀಧರರು ಇದ್ದರು. ಉದ್ಯೋಗ ಸೃಷ್ಟಿಯ ಬಗ್ಗೆ ಬೊಗಳೆ ಬಿಡುವ ನಮ್ಮ ರಾಜಕೀಯ ಪಕ್ಷಗಳಿಗೆ ಕಪಾಳಕ್ಕೆ ಬಾರಿಸಿದಂತೆ ಇರುವ ಈ ಕಟು ವಾಸ್ತವ ಸಂಗತಿ ಅರ್ಥವಾಗುವುದು ಯಾವಾಗ?
ಕಳೆದ ವಾರ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಹಾಂಗ್ ಕಿನ್, ಜಾಗತಿಕ ಬಡತನದ ಕುರಿತಂತೆ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿ 120 ಕೋಟಿ ಬಡಜನರಿದ್ದು, ಭಾರತದಲ್ಲಿ ಇಲ್ಲಿನ ಜನಸಂಖ್ಯೆಯ 120 ಕೋಟಿಯಲ್ಲಿ, ಶೇಕಡ 33 ರಷ್ಟು ಬಡವರಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವಬ್ಯಾಂಕ್, ಬಡತನ ಕುರಿತಂತೆ ತನ್ನ ಮಾನದಂಡವನ್ನು ಬದಲಾಯಿಸಿದೆ. ದಿನವೊಂದಕ್ಕೆ  ಒಂದು ಡಾಲರ್ ( ಸುಮಾರು 55 ರೂಪಾಯಿ) ಬದಲಾಗಿ, ಒಂದುಕಾಲು ಡಾಲರ್ ದುಡಿಯುವ ಅಂದರೆ, ಸುಮಾರು 68 ರೂಪಾಯಿ ಸಂಪಾದಿಸುವ ವ್ಯಕ್ತಿ ಬಡವನಲ್ಲ. ಆದರೆ, ಭಾರತದಲ್ಲಿ ಈ ಮಾನದಂಡವನ್ನು ದಿನವೊಂದಕ್ಕೆ 28 ರೂಪಾಯಿ ಎಂದು ನಿರ್ಧರಿಸಲಾಗಿದೆ. ಬಡತನ ಕುರಿತಂತೆ ವಿಶ್ವಬ್ಯಾಂಕ್ ನ  ಮಾನದಂಡವನ್ನು ಭಾರತಕ್ಕೆ ಅಳವಡಿಸಿದರೆ, ಬಡವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ನಮ್ಮ ರಾಜಕಾರಣಿಗಳು ಎಷ್ಟು ಅವಿವೇಕದಿಂದ ವತರ್ಿಸಬಲ್ಲರು ಎಂಬುದಕ್ಕೆ ತಿಂಗಳಿಗೆ ನಾಲ್ಕು ನೂರು ಸಂಪಾದಿಸುವ ದಂಪತಿಗಳು ರಾಜಧಾನಿ ದೆಹಲಿಯಲ್ಲಿ ಬದುಕಬಹುದೆಂದು ದೆಹಲಿಯ ಮುಖ್ಯ ಮಂತ್ರಿ ಶೀಲಾದೀಕ್ಷಿತ್ ಹೇಳಿಕೆ ನೀಡಿದ್ದರು. ಭಾರತದ ಬಡತನದ ಮಾನದಂಡವನ್ನು ನಿರ್ಧರಿಸುವ ಯೋಜನಾ ಆಯೋಗ, ಕಳೆದ ನವಂಬರ್ ತಿಂಗಳಿನಲ್ಲಿ ತನ್ನ ಕಛೇರಿಯ ಎರಡು ಶೌಚಾಲಯಗಳ ನಿಮರ್ಾಣಕ್ಕೆ ಖಚರ್ು ಮಾಡಿದ ಹಣ, ಬರೋಬ್ಬರಿ 14 ಲಕ್ಷ ರೂಪಾಯಿ. ಇದೇ ಯೋಜನಾ ಆಯೋಗ, ಒಂದು ಶೌಚಾಲಯದ ವೆಚ್ಚ ಕ್ಕೆ 20 ಸಾವಿರ ರುಪಾಯಿಗಳನ್ನು ನಿಗದಿ ಮಾಡಿದೆ. ಇದನ್ನು ವ್ಯಂಗ್ಯ ಎಂದು ಕರೆಯಬೇಕೊ? ಅಥವಾ ದುರಂತವೆನ್ನಬೇಕೊ? ತಿಳಿಯದು.
ಈ ಹಿನ್ನಲೆಯಲ್ಲಿ ಚುನಾವಣಾ ಪ್ರಣಾಳಿಕೆಗಳು, ಭರವಸೆಗಳಂತೆ ಕಾಣದೆ, ಕೇವಲ ಆಮೀಷಗಳಂತೆ ಕಾಣುತ್ತವೆ. ವಿಶ್ವ ಬ್ಯಾಂಕ್ ಸಮೀಕ್ಷೆ ಪ್ರಕಾರ, 2026 ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿಗೆ ಏರಲಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ.  ಭಾರತದಲ್ಲಿ ಶೇಕಡ 46 ಮಂದಿಗೆ ಇಂದಿಗೂ ಶೌಚಾಲಯ ಇಲ್ಲ, ಇಂತಹ ಸ್ಥಿತಿಯಲ್ಲಿ ನಮ್ಮ ರಾಜಕೀಯ ಪಕ್ಷಗಳಿಂದ ಅಥವಾ ಸಕರ್ಾರಗಳಿಂದ ಉದ್ಯೋಗ ಸೃಷ್ಟಿ ಸಾಧ್ಯವೆ? ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ದೂರರದೃಷ್ಟಿಯ ಯೋಜನೆಗಳನ್ನು ರೂಪಿಸಿದಂತೆ ಕಾಣುವುದಿಲ್ಲ.
ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಚುನಾವಣೆ ಎಂದರೆ, ಹಣ, ಹೆಂಡ, ಮಾಂಸ, ಮತ್ತು ಆಮೀಷ ಎಂಬುದು ಜಗಜ್ಜಾಹಿರಾಗಿದೆ. ಚುನಾವಣೆ ಆಯೋಗದ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಗಾಳಿಗೆ ತೂರುವ ಕಲೆಯನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳ ದುರ್ಬಳಕೆಯನ್ನು ಗಮನಿಸಿಬಹುದು.
ನಮ್ಮ ನೆರೆಯ ಬಂಗ್ಲಾ ದೇಶದಲ್ಲಿ 1970 ದಶಕದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಪರಿಕಲ್ಪನೆಯನ್ನು ಕೊಟ್ಟ ಡಾ. ಮಹಮ್ಮದ್ ಯೂನಸ್ ರವರ ಕನಸಿನ ಕೂಸಾದ ಮಹಿಳೆಯರ ಸ್ವ ಸಹಾಯ ಗುಂಪು ಯೋಜನೆ ಭಾರತದಲ್ಲಿ ಮತಬೇಟೆಯ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಿದೆ. ವಿಶ್ವ ಬ್ಯಾಂಕ್ ಸೇರಿದಂತೆ, ಜಗತ್ತಿನ ಎಂಬತ್ತೊಂಬತ್ತು ರಾಷ್ಟ್ರಗಳು ಈ ಯೋಜನೆಯನ್ನು ಅಳವಡಿಸಿಕೊಂಡು, ಬಡತನದ ನೇರ ಪರಿಣಾಮದ ಮೊದಲ ಬಲಿ ಪಶುವಾಗುವ ಮಹಿಳೆಯನ್ನು ಹಸಿವು ಮತ್ತು ಬಡತನದ ಕೂಪದಿಂದ ಮೇಲೆತ್ತಲು ಶ್ರಮಿಸುತ್ತಿವೆ. ಆದರೆ, ಭಾರತದಲ್ಲಿ ಚುನಾವಣಾ ಪ್ರಚಾರಕ್ಕಾಗಿ, ಮತಕ್ಕಾಗಿ ಸ್ರೀ ಸಹಾಯ ಗುಂಪುಗಳನ್ನು ಯಾವ ವಿವೇಚನೆಯಿಲ್ಲದೆ, ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅನಕ್ಷರಸ್ತ ಮುಗ್ಧ ಮಹಿಳೆಯರು ಈ ದಿನ ಐನೂರು ರೂಪಾಯಿ ಕಾಣಿಕೆಗಾಗಿ ಊರಿಗೆ ಬರುವ ರಾಜಕಾರಣಿಗಳಿಗೆ ಆರತಿ ಬೆಳಗುತ್ತಿದ್ದಾರೆ. ಮನೆಗೆ ಬಂದ ಮಗನಿಗೆ, ಅಥವಾ ಸೊಸೆಗೆ ಆರತಿ ಎತ್ತುತ್ತಿದ್ದ ಸಾಂಸ್ಕೃತಿಕ ಸಂಪ್ರದಾಯ ಈಗ ಹಣದಾಸೆಗೆ ಮುಖಹೇಡಿ ಜನಪ್ರತಿನಿಧಿಗಳಿಗೆ ಮೀಸಲಾಗಿದೆ. ಇದೊಂದು ರಾಜಕೀಯ ವ್ಯವಸ್ಥೆಯ ವ್ಯಭಿಚಾರವಲ್ಲದೆ ಮತ್ತೇನು?
ಭಾರತದಲ್ಲಿ ಪ್ರತಿ ಮುವತ್ತು ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈವರೆಗೆ ಒಟ್ಟು 2 ಲಕ್ಷದ 56 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಗತಿ ಈ ನಾಡಿನ ದುರಂತ ಎಂದು ಪರಿಭಾವಿಸಲಾಗದ ರಾಜಕೀಯ ಪಕ್ಷಗಳು, ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ  ಪ್ರಣಾಣಿಕೆಗಳನ್ನು ಪ್ರಕಟಿಸಿದರೆ, ನಾವುಗಳು ಅವುಗಳನ್ನು  ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆಯಾ?

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

 – ಆನಂದ ಪ್ರಸಾದ್

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು.  ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗೆಯ ಕೊಡುಗೆಗಳನ್ನು ನೀಡಿ ಮತವನ್ನು ಖರೀದಿಸುವ ವ್ಯವಹಾರವಾಗಿ ಮಾರ್ಪಾಟಾಗಿದೆ.  ಇಂಥ ವ್ಯವಸ್ಥೆಯಲ್ಲಿ ಹೆಚ್ಚು ಹಣ ಹೊಂದಿದವರೇ ಗೆದ್ದು ಮತ್ತೆ ದೇಶವನ್ನು ಐದು ವರ್ಷಗಳ ಕಾಲ ಲೂಟಿ ಮಾಡಿ ಪುನಃ ಆ ಹಣದ ಒಂದಂಶವನ್ನು ಚುನಾವಣೆಗಳಲ್ಲಿ ಹಂಚಿ ಗೆದ್ದು ಬರುವ ಪರಿಸ್ಥಿತಿ ಬಂದಿದೆ.  ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುಡ್ಡಿರುವವರ ಕಾಲಿನಡಿಯಲ್ಲಿ ಬಿದ್ದು ನರಳುತ್ತಿದೆ ಮತ್ತು ಊಳಿಗಮಾನ್ಯ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ಇದಕ್ಕೆ ಯಾರು ಹೊಣೆ?  ಇದಕ್ಕೆ ಹಣ, ಹೆಂಡ, ಸೀರೆ ಹಾಗೂ ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಮತವನ್ನು ಮಾರಿಕೊಳ್ಳುವ ಮತದಾರರೇ ಕಾರಣ.  ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ತೆಗೆದುಕೊಳ್ಳುವವರು ಇದ್ದಾಗ ಮಾತ್ರ ಹಣವಂತರು ಇಂಥ ಅಡ್ಡದಾರಿಯನ್ನು ಹಿಡಿದು ಗೆಲ್ಲಲು ಸಾಧ್ಯವಾಗುತ್ತದೆ.  ಸ್ವಾಭಿಮಾನ ಉಳ್ಳ ಮತದಾರರು ಇದ್ದರೆ ಇಂಥ ಆಮಿಷಗಳನ್ನು ಖಡಾಖಂಡಿತವಾಗಿ ವಿರೋಧಿಸಿ ತರಾಟೆಗೆ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದರೆ ಆಮಿಷ ಒಡ್ಡಿ ಓಟು ಖರೀದಿಸುವ ಧೈರ್ಯ ಯಾವ ಹಣವಂತನಿಗೂ ಬpillars_of_democracyರುತ್ತಿರಲಿಲ್ಲ.  ಹೀಗಾಗಿ ಇಂಥ ಪ್ರವೃತ್ತಿ ಬೆಳೆಯಲು ನಮ್ಮ ಮತದಾರರೇ ಹೆಚ್ಚು ಜವಾಬ್ದಾರರು.  ಇದನ್ನು ಆರಂಭದಲ್ಲೇ ವಿರೋಧಿಸಿ ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ನೀಡುವ ಅಭ್ಯರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ  ಇಂಥ ಕೆಟ್ಟ ಪ್ರವೃತ್ತಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಬಡತನ ಹಾಗೂ ಅಜ್ಞಾನ ಈ ರೀತಿ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂದು ಹೇಳಿ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ.  ನಮ್ಮ ಮತದಾರರ ನೈತಿಕ ಅಧಃಪತನವೇ ಇದಕ್ಕೆ ಕಾರಣ.  ಕೇವಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರವೇ ಭ್ರಷ್ಟವಾಗಿಲ್ಲ ಮತದಾರರೂ ಭ್ರಷ್ಟರಾಗಿದ್ದಾರೆ, ನೈತಿಕ ಅಧಃಪತನವನ್ನು ಹೊಂದಿದ್ದಾರೆ ಎಂಬುದನ್ನು ಈ ಪ್ರವೃತ್ತಿ ಎತ್ತಿ ತೋರಿಸುತ್ತದೆ.  ಇತ್ತೀಚೆಗೆ ಟಿವಿ ವಾಹಿನಿಯೊಂದರಲ್ಲಿ ಈ ರೀತಿ ಹಣ ತೆಗೆದುಕೊಂಡು ಓಟು ಹಾಕುವುದನ್ನು ಮತದಾರರು ಸಮರ್ಥಿಸಿದ್ದು ಹೇಗೆಂದರೆ ಜನಪ್ರತಿನಿಧಿಗಳು ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲವೇ, ಹೀಗಿರುವಾಗ ನಾವು ಓಟಿಗಾಗಿ ಹಣ ತೆಗೆದುಕೊಂಡರೆ ಏನು ತಪ್ಪು ಎಂಬುದಾಗಿತ್ತು.  ಇಂಥ ಮತದಾರರು ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಉದ್ಧಾರವಾಗುವುದಾದರೂ ಹೇಗೆ?  ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಗುವುದು.  ಮತದಾರರು ಚುನಾವಣಾ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿ ಅನೈತಿಕತೆಯನ್ನು ಪ್ರೋತ್ಸಾಹಿಸುತ್ತಿರುವ ಕಾರಣವೇ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗೇ ಗಂಡಾಂತರಕಾರಿಯಾಗಿಬೆಳೆಯುತ್ತಿದೆ.  ಹೀಗಾಗಿ ನಮ್ಮ ಚುನಾವಣಾ ವ್ಯವಸ್ಥೆ ಭ್ರಷ್ಟವಾಗಿದೆ ಎಂದಾದರೆ ಅದಕ್ಕೆ ಮತದಾರರು ಹೆಚ್ಚು ಜವಾಬ್ದಾರರು.  ಏಕೆಂದರೆ ಮತದಾರರು ಬಹುಸಂಖ್ಯಾತರು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಅವರು ಅಲ್ಪಸಂಖ್ಯಾತರು.  ಬಹುಸಂಖ್ಯಾತ ಇರುವ ಮತದಾರರು ಅಲ್ಪಸಂಖ್ಯೆಯಲ್ಲಿ ಇರುವ ಅಭ್ಯರ್ಥಿಗಳು ಹಣ, ಹೆಂಡ ಹಾಗೂ ಇನ್ನಿತರ ಕೊಡುಗೆಗಳನ್ನು ಹಂಚಲು ಬರುವಾಗ ತರಾಟೆಗೆ ತೆಗೆದುಕೊಳ್ಳಲು ಅವಕಾಶ ಇದೆ.  ಹೀಗೆ ಎಲ್ಲ ಮತದಾರರೂ ಇಂಥ ಅನೈತಿಕ ಕೆಲಸವನ್ನು ತರಾಟೆಗೆ ತೆಗೆದುಕೊಂಡರೆ ಯಾವುದೇ ಅಭ್ಯರ್ಥಿಗೂ ಇಂಥವುಗಳನ್ನು ಹಂಚುವ ಧೈರ್ಯ ಬರಲಾರದು.

ಚುನಾವಣಾ ಆಯೋಗ ಹಣ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡುವವರು ಹಾಗೂ ಅವುಗಳನ್ನು ತೆಗೆದುಕೊಳ್ಳುವವರು ಇಬ್ಬರ ಮೇಲೂ ಜಾಮೀನುರಹಿತ ಬಂಧನಕ್ಕೆ ಅವಕಾಶ ನೀಡುವ ಕಾನೂನು ತರಲು ಯೋಚಿಸುತ್ತಿದ್ದು ಇದನ್ನು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿದೆ ಎಂದು ತಿಳಿದುಬಂದಿದೆ.  ಇಂಥ ಕಾನೂನು ತಂದರೂ ಮತದಾರರು ನೈತಿಕವಾಗಿ ಬೆಳೆಯದಿದ್ದರೆ ಹೆಚ್ಚಿನ ಪ್ರಯೋಜನ ಆಗಲಾರದು ಏಕೆಂದರೆ ಇದೆಲ್ಲ ಮತದಾರರು ಹಾಗೂ ಅಭ್ಯರ್ಥಿಗಳು ಜೊತೆಗೂಡಿ ನಡೆಸುತ್ತಿರುವ ಅನೈತಿಕ ಕಾರ್ಯವಾದುದರಿಂದ ಇದು ಕಾನೂನಿನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ನಡೆಯುವ ವ್ಯವಹಾರವಾಗಿದೆ.  ಹೀಗಾಗಿ ಇದನ್ನು ಮತದಾರರು ವಿರೋಧಿಸದ ಹೊರತು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಅಸಾಧ್ಯ.  ಮತದಾರರೇ ನೈತಿಕವಾಗಿ ಅಧಃಪತನ ಹೊಂದಿದ್ದಾಗ ಈ ಕದ್ದುಮುಚ್ಚಿ ನಡೆಯುವ ವ್ಯವಹಾರ ನಡೆಯುತ್ತಿರುವ ಬಗ್ಗೆ ಆಯೋಗಕ್ಕೆ ಸಾಕ್ಷ್ಯ ಸಹಿತ ದೂರು ನೀಡುವವರಾದರೂ ಯಾರು?

 
ಮತದಾರರು ನೈತಿಕವಾಗಿ ದೃಢತೆ ಬೆಳೆಸಿಕೊಂಡರೆ ಹಣ ಹಾಗೂ ಇನ್ನಿತರ ಕೊಡುಗೆ ನೀಡಿ ಓಟು ಖರೀದಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಊಳಿಗಮಾನ್ಯ ವ್ಯವಸ್ಥೆಯಾಗಿ ಪರಿವರ್ತಿಸುತ್ತಿರುವ ಕೆಟ್ಟ ಪ್ರವೃತ್ತಿಯನ್ನು ತಡೆಯಲು ಸಾಧ್ಯ.  ಮತದಾರರೇ ಭ್ರಷ್ಟರಾದರೆ ನಮ್ಮ ನಾಗರಿಕತೆಯ ಅಧಃಪತನ ತಡೆಯುವುದು ಸಾಧ್ಯವಿಲ್ಲ.  ಬಡತನ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂಬುದು ಒಪ್ಪತಕ್ಕ ಮಾತಲ್ಲ.  ಬಡತನವಿದ್ದರೂ ದುಡಿದು ತಿನ್ನುವ ಸ್ವಾಭಿಮಾನ ಬೆಳೆಸಿಕೊಂಡವರು ಎಂಜಲು ಕಾಸಿಗೆ ಕೈಯೊಡ್ಡುವುದಿಲ್ಲ.  ಸ್ವಾಭಿಮಾನವಿಲ್ಲದ, ದೇಶದ ಬಗ್ಗೆ ಕಾಳಜಿ ಇಲ್ಲದ ಮತದಾರರು ಮಾತ್ರ ಈ ರೀತಿ ಎಂಜಲು ಕಾಸಿಗೆ ಕೈಯೊಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವಲು ಮುಖ್ಯ ಕಾರಣರಾಗುತ್ತಿದ್ದಾರೆ.  ಇಂಥ ಪ್ರವೃತ್ತಿಯನ್ನು ಸಾಮೂಹಿಕವಾಗಿ ವಿರೋಧಿಸುವ, ತರಾಟೆಗೆ ತೆಗೆದುಕೊಳ್ಳುವ ಎಚ್ಚರ ಬೆಳೆದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ.  ಇಲ್ಲದಿದ್ದರೆ ಇದು ಉಳ್ಳವರ, ಭ್ರಷ್ಟರ ಪ್ರಭುತ್ವವಾಗಿ ಮಾತ್ರ ಮುಂಬರುವ ದಿನಗಳಲ್ಲಿ ಪರಿವರ್ತನೆಯಾಗಲಿದೆ.  ಹಾಗಾದರೆ ಅದಕ್ಕೆ ನಮ್ಮ ಮತದಾರರೇ ಜವಾಬ್ದಾರರು.  ಹಾಗಾಗದಂತೆ ತಡೆಯುವ ಹಕ್ಕು ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿದೆ.  ಅದನ್ನು ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಅವರ ಕೈಯಲ್ಲಿಯೇ ಇದೆ.