Daily Archives: December 10, 2012

ಬದುಕಿಗೆ ವಿಷವಿಕ್ಕುವ MRPL

[ಅಪರಾಧ ಕೃತ್ಯವೊಂದಕ್ಕೆ ಸಾಕ್ಷಿಯಾಗಬೇಕಿದ್ದ ನಮ್ಮ ಒಡನಾಡಿ ನವೀನ್ ಸೂರಿಂಜೆಯವರು ಭ್ರಷ್ಟರ ಮತ್ತು ಮತೀಯವಾದಿ ಗೂಂಡಾಗಳ ಕುಮ್ಮಕ್ಕು ಮತ್ತು ಪ್ರಚೋದನೆಯಿಂದಾಗಿ ಹಾಗೂ ನಮ್ಮ ವ್ಯವಸ್ಥೆಯ ತೀವ್ರದೋಷದ ಪರಿಣಾಮವಾಗಿ ಆರೋಪಿ ಎಂದು ಗುರುತಿಸಲ್ಪಟ್ಟು ಹಾಗೂ ಆ ಕಾರಣಕ್ಕಾಗಿ ಬಂಧನಕ್ಕೊಳಗಾಗಿ ಈಗ ಒಂದು ತಿಂಗಳ ಮೇಲಾಯಿತು. ಯಾರು ಏನು ಬೇಕಾದರೂ ಯಾವಾಗ ಬೇಕಾದರೂ ತೀರ್ಮಾನಿಸಲಿ. ನಮಗಂತೂ ಅವರು ನಿರಪರಾಧಿ. ಆದರೆ ವ್ಯವಸ್ಥೆ ಅಂಗೈ ಹುಣ್ಣಿಗೆ ಸಾಕ್ಷ್ಯ ಕೇಳುತ್ತಿದೆ. ನಿರಪರಾಧಿಯಾಗಿ ಜೈಲಿನಲ್ಲಿದ್ದರೂ ನವೀನ್ ತಮ್ಮ ಸಹಜ ಗುಣ ಮತ್ತು ನಿಲುವುಗಳಾದ ಜನಪರ ಕಾಳಜಿಯನ್ನು ಬಿಟ್ಟಿಲ್ಲ. ಕೆಲವು ದಿನಗಳ ಹಿಂದೆ ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರಿನ MRPL ಕಾರ್ಖಾನೆಗೆ ಒಂದು ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ. ಈ ವಿಷಯದ ಮೇಲೆ ನವೀನರು ಜೈಲಿನಿಂದಲೆ ನಮಗೆ ಈ ಲೇಖನ ಬರೆದು ಕಳುಹಿಸಿದ್ದಾರೆ.  ಅವರು ತಮ್ಮ ಸದಾಶಯ, ಆಶಾವಾದ  ಹಾಗೂ ಜನಪರ ಚಿಂತನೆಯ ಹುಮ್ಮಸ್ಸನ್ನು ಇಂತಹ ಕಠಿಣ ಮತ್ತು ಪರೀಕ್ಷೆಯ ಕಾಲದಲ್ಲೂ ಹೊಂದಿದ್ದಾರೆ ಎನ್ನುವುದು ಮನುಷ್ಯನ ಅದಮ್ಯ ಚೇತನಕ್ಕೊಂದು ಉದಾಹರಣೆಯಾಗಿ ಇಂದಿನ ಭ್ರಷ್ಟ ಮತ್ತು ಮಲಿನ ಸಂದರ್ಭದಲ್ಲಿಯೂ ನಮ್ಮನ್ನು ಎಚ್ಚರಿಸುತ್ತಿದೆ. – ರವಿ ಕೃಷ್ಣಾರೆಡ್ಡಿ]


ಬದುಕಿಗೆ ವಿಷವಿಕ್ಕುವ MRPL

– ನವೀನ್ ಸೂರಿಂಜೆ

ಮಂಗಳೂರು ತಾಲೂಕಿನ ಕುತ್ತೆತ್ತೂರು, ಸೂರಿಂಜೆ, ಮದ್ಯ, ಚೇಳ್ಯಾರು, ಪಂಜ, ಕೊಯ್ಕುಡೆ ಗ್ರಾಮಗಳು ಕ್ಯಾನ್ಸರ್ ಪೀಡಿತ ಗ್ರಾಮಗಳಾಗಿ ದುರಂತ ಎದುರಿಸುವ ಸಾಧ್ಯತೆಗಳಿವೆ. ಎಂ.ಆರ್.ಪಿ.ಎಲ್.ನ ಪೆಟ್ರೋಲಿಯಂ ಘನ ತ್ಯಾಜ್ಯವನ್ನು ಕುತ್ತೆತ್ತೂರು ಸಮೀಪದ ಅತ್ರುಕೋಡಿಯಲ್ಲಿ ತಂದು ಸುರಿಯಲಾಗುತ್ತಿದ್ದು ಅದರ ತೇವಾಂಶ ನೇರವಾಗಿ ನಂದಿನಿ ನದಿಯ ಉಪನದಿಯನ್ನು ಸೇರಿಕೊಳ್ಳುತ್ತದೆ. ಪೆಟ್ರೋಲಿಯಂ ತ್ಯಾಜ್ಯ ನಂದಿನಿ ನದಿ ಸೇರ್ಪಡೆಯಿಂದಾಗಿ ನಂದಿನಿ ನದಿಯ ಅಂತರ್ಜಲವನ್ನೇ ನಂಬಿಕೊಂಡಿರುವ ನಂದಿನಿ ನದಿ ಪಾತ್ರದ ಗ್ರಾಮಗಳು ಸಹಜವಾಗಿ ಕ್ಯಾನ್ಸರ್‌ಗೆ ತುತ್ತಾಗಲಿವಯೇ ಎಂಬ ಚಿಂತೆ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.

ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ದ್ರವ ತ್ಯಾಜ್ಯವನ್ನು ಶುಧ್ಧೀಕರಿಸಿ ಕುಳಾ ಸಮೀಪ ಸಮುದ್ರಕ್ಕೆ ಬಿಡಲಾಗುತ್ತದೆ. ಎಷ್ಟೇ ಶುಧ್ದೀಕರಿಸಿದರೂ ತೈಲದಂಶ ಸಮುದ್ರ ಸೇರುತ್ತಿದ್ದು, ಸಮುದ್ರದಲ್ಲಿ ಮೀನು ಸಂತತಿ ಕಡಿಮೆಯಾಗಿದೆ ಎಂಬ ಆರೋಪ ಮೀನುಗಾರರದ್ದು. ಎಂ.ಆರ್.ಪಿ.ಎಲ್‌.ಗೆ ದ್ರವ ತ್ಯಾಜ್ಯಕ್ಕಿಂತಲೂ ಘನತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಕಚ್ಛಾತೈಲವನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್‌ನಂತಹ ವಿವಿಧ ಉತ್ಪನ್ನಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ವಿವಿಧ ರೀತಿಯ ಕ್ಯಾಟಲಿಸ್ಟ್ ಎಂಬ ಪ್ರಚೋದಕಗಳನ್ನು ಬಳಸಲಾಗುತ್ತದೆ. ಇಲ್ಲಿ ಸಿರಾಮಿಕ್ ಉಂಡೆಗಳನ್ನು (ಸಿರಾಮಿಕ್ ಬಾಲ್ಸ್) ಕ್ಯಾಟಲಿಸ್ಟ್‌ಗಳಾಗಿ ಬಳಸಲಾಗುತ್ತದೆ. ಇವುಗಳನ್ನು ಹಲವು ಬಾರಿ ಬಳಸಿದ ನಂತರ ಅಪಾಯಕಾರಿ ತ್ಯಾಜ್ಯವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಈ ಅಪಾಯಕಾರಿ ತ್ಯಾಜ್ಯಕ್ಕೆ ಸ್ಪೆಂಟ್ ಸೆರಾಮಿಕ್ ಬಾಲ್ಸ್ (ಬಳಸಿದ ಸೆರಾಮಿಕ್ ಉಂಡೆಗಳು) ಎಂದು ಕರೆಯಲಾಗುತ್ತದೆ.

ಆರ್ಸೆನಿಕ್, ಬೆಂಜಿನ್‌ನಂತಹ ವಿಷಯುಕ್ತ ರಾಸಾಯನಿಕಗಳಿರುವ ಈ ಅಪಾಯಕಾರಿ ತ್ಯಾಜ್ಯದ ಸೂಕ್ತ ವಿಲೇವಾರಿಗಾಗಿ ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ ಎಂ.ಆರ್.ಪಿ.ಎಲ್. ಕುತ್ತೆತ್ತೂರು ಗ್ರಾಮದ ಅತ್ರುಕೋಡಿ ಬಳಿಯ ಮೂಡು ಪದವು ಎಂಬಲ್ಲಿ ತಂದು ಸುರಿಯುತ್ತದೆ ಎಂಬ ಸತ್ಯ ಎಚ್ಚೆತ್ತ ಸ್ಥಳೀಯರಿಂದಾಗಿ ಹೊರಬಿದ್ದಿದೆ!

ಪತ್ರಿಕೆಗಳಿಗೆ ಇದು ಸಿರಾಮಮಿಕ್ ತ್ಯಾಜ್ಯ ಹಾಗೂ ರಸ್ತೆ ಡಾಮರು ಎಂದಿರುವ ಎಂಆರ್‌ಪಿಎಲ್ ಆಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಬಳಿ ಅಪಾಯಕಾರಿಯಲ್ಲದ ಅಲ್ಯುಮೀನಿಯಂ ಸಿಲಿಕಾ ಫ್ಲೇಕ್ಸ್ ಸುರಿದಿದ್ದೇವೆ ಎಂದು ಹೇಳಿದ್ದಾರೆಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂಆರ್‌ಪಿಎಲ್‌ಗೆ ಜಾರಿಯಾಗಿರುವ ಶೋಕಾಸ್ ನೋಟೀಸಿನಿಂದ ಸ್ಪಷ್ಟವಾಗಿದೆ.

ಈ ತ್ಯಾಜ್ಯ ತಂದು ಸುರಿವಲ್ಲೇ ಸಣ್ಣ ತೊರೆಯೊಂದು ಹರಿಯುತ್ತಿದ್ದು ಇದು ಮುಂದುವರಿದಂತೆ ಅಗಲವಾಗುತ್ತಾ ನಂದಿನಿ ನದಿಯ ಉಪನದಿಯಾಗುತ್ತದೆ. ಕುತ್ತೆತ್ತೂರಿನಿಂದ ಹಾದುಹೋಗುವ ಈ ತೊರೆ ಹಲವಾರು ಕೃಷಿಕರ ಜೀವನಾಡಿ. ಈ ತೊರೆಗೆ ಸೂರಿಂಜೆಯ ಪಾಪುದಂಗಡಿ ಅಥವಾ ಕಕ್ಕೇ ತೋಟ ಎಂಬಲ್ಲಿ ಸಂಚಾರಕ್ಕಾಗಿ ಸೇತುವೆಯನ್ನು ಕಟ್ಟಲಾಗಿದೆ. ಈ ತೊರೆ ಅಥವಾ ಉಪನದಿ ಹಾದು ಹೋಗುವ ಇಕ್ಕೆಲಗಳಲ್ಲಿ ವಿಶಾಲವಾದ ಕೃಷಿಭೂಮಿ ಇದ್ದು ಇದರ ನೀರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವಲಂಭಿಸಲಾಗುತ್ತದೆ. ಇಲ್ಲಿನ ನೂರಾರು ನಿವಾಸಿಗಳ ಕುಡಿಯುವ ನೀರಿನ ಭಾವಿಗಳಿಗೆ ಈ ಉಪನದಿಯೇ ಅಂತರ್ಜಲದ ಮೂಲ.

ಇದಲ್ಲದೆ ಮಳೆಗಾಲ ಮುಗಿಯುವ ಸಂದರ್ಭದಲ್ಲಿ ಈ ತೊರೆಗೆ ಪೊರಿಕಾನ ಎಂಬಲ್ಲಿ ತಡೆಯೊಂದನ್ನು ನಿರ್ಮಿಸಲಾಗಿದೆ. ಮರಳಿನ ಚೀಲ ಮತ್ತು ಮಣ್ಣು ಬಳಸಿ ಕಟ್ಟಲಾಗುವ ಈ ತಡೆಯಿಂದಾಗಿ ಕೃಷಿ ಭೂಮಿ ಮತ್ತು ಕುಡಿವ ನೀರಿನ ಭಾವಿಗಳ ನೀರಿನ ಪ್ರಮಾಣ ಹೆಚ್ಚುತ್ತದೆ. ಈ ಉಪನದಿ ಮುಂದುವರಿದಂತೆ ಬೊಟ್ಲಕ್ಕೆ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿದ ಅಣೆಕಟ್ಟು ಇದೆ. ಈ ಅಣೆಕಟ್ಟಿನಿಂದಾಗಿ ತುರುಂಜ, ಸೂರಿಂಜೆ ಗುತ್ತು, ಕನಕಬೆಟ್ಟು, ತೀವು, ಮತ್ತು ಬೊಟ್ಲಕ್ಕೆ ಪರಿಸರದ ಕೃಷಿಭೂಮಿ ಮತ್ತು ಕುಡಿಯುವ ನೀರಿನ ಭಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಈ ಉಪನದಿಯ ದಂಡೆಗಳಲ್ಲಿ 12ಕ್ಕೂ ಅಧಿಕ ಪಂಪುಸೆಟ್ಟುಗಳಿದ್ದು ಉಪನದಿಯಿಂದ ಕೃಷಿಭೂಮಿಗೆ ನೀರು ಹಾಯಿಸಲಾಗುತ್ತದೆ.

ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಬಳಕೆಯಾಗುವ ನಂದಿನಿ ಉಪನದಿಗೆ ಪೆಟ್ರೋಲಿಯಂ ತ್ಯಾಜ್ಯ ಸೇರಿದರೆ ನೂರಾರು ನಿವಾಸಿಗಳು ಶಾಶ್ವತ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆಳನ್ನು ಅಲ್ಲಗಳೆವಂತಿಲ್ಲ. ಉಪನದಿಯ ಆಸುಪಾಸಿನ ಪ್ರದೇಶಗಳಲ್ಲದೆ ನಂದಿನಿ ನದಿ ಪಾತ್ರದ ಮದ್ಯ, ಚೇಳ್ಯಾರು, ಪಂಜ, ಕೊಯ್ಕುಡೆ ಗ್ರಾಮಗಳು ಕೂಡಾ ಈ ಅಪಾಯಕಾರಿ ತ್ಯಾಜ್ಯದಿಂದಾಗುವ ತೊಂದರೆಯನ್ನು ಅನುಭವಿಸಲಿದೆ. ಈ ಉಪನದಿಯು ಸೂರಿಂಜೆಯ ತೇವು ಎಂಬಲ್ಲಿ ನಂದಿನಿ ನದಿಯನ್ನು ಸೇರುತ್ತದೆ.

ನಂದಿನಿ ನದಿಗೆ ಪೆಟ್ರೋಲಿಯಂ ತ್ಯಾಜ್ಯವನ್ನು ಹರಿಯಬಿಟ್ಟು ಸೂರಿಂಜೆ, ಕುತ್ತೆತ್ತೂರು, ಮದ್ಯ, ಪಂಜ ಗ್ರಾಮಗಳನ್ನು ಕ್ಯಾನ್ಸರ್ ಪೀಡಿತಗ್ರಾಮಗಳನ್ನಾಗಿ ಪರಿವರ್ತಿಸುವ ಮುನ್ನ ರಚನಾತ್ಮಕ ಹೋರಾಟದ ಅಗತ್ಯವಿದೆ ಎನ್ನುವುದು ಸ್ಥಳೀಯರ ಅಂಬೋಣ.

[ಶೋಕಾಸ್-ನೋಟಿಸ್‌ನ ಅಂಶಗಳು]

ಬಿ.ಜೆ.ಪಿ. ಮತ್ತು ಕೆ.ಜೆ.ಪಿ. : ಆಪರೇಶನ್ ಪತನ ಆರಂಭ


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದ ಜನತೆ ಆಸೆಯಿಂದ ನಿರೀಕ್ಷಿಸುತಿದ್ದ ಬಿ.ಜೆ.ಪಿ. ಸರ್ಕಾರದ ಪತನಕ್ಕೆ ಹಾವೇರಿಯಲ್ಲಿ ನಡೆದ ಕೆ.ಜೆ.ಪಿ. ಸಮಾವೇಶದ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಂದಿ ಹಾಡಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ಈ ಬಿ.ಜೆ.ಪಿ. ಸರ್ಕಾರ ಮತ್ತು ಅದರ ನಾಯಕರು, ಸಚಿವರು, ಶಾಸಕರು ಕಟ್ಟಿದ ವೇಷ, ಆಡಿದ ನಾಟಕ ಇವುಗಳನ್ನು ನೋಡಿದ ಕರ್ನಾಟಕದ ಜನತೆ ಕೇವಲ ರೋಸಿಹೋಗಿರಲಿಲ್ಲ, ದಂಗುಬಡಿದುಹೋಗಿದ್ದರು.

ಎರಡು ದಶಕದ ಹಿಂದಿನ ಕಥೆ ನಿಮಗೆ ಬೇಡ, ಇದು ಕೇವಲ ಆರು ವರ್ಷದ ಹಿಂದಿನ ಮಾತು. ಮಲ್ಲೇಶ್ವರಂನಲ್ಲಿದ್ದ ಬಿ.ಜೆ.ಪಿ. ಕಚೇರಿಯಲ್ಲಿ ಖಾಲಿದೋಸೆ ತಿಂದು, ಬೈಟು ಕಾಫಿ ಕುಡಿದು, ಚರ್ಚೆಯ ಮೂಲಕ ಪಕ್ಷವನ್ನು ಮುನ್ನೆಡೆಸುತಿದ್ದ ಬಿ.ಜೆ.ಪಿ. ನಾಯಕರು ಮತ್ತು ಬೆಂಗಳೂರು, ಮೈಸೂರು, ಮಂಗಳೂರು ನಗರಗಳ ಬ್ರಾಹ್ಮಣರ ಮನೆಗಳಲ್ಲಿ ವಾರಾನ್ನ ತಿಂದು ಬದುಕುತಿದ್ದ ಆರ್.ಎಸ್.ಎಸ್. ಸಂಸ್ಥೆಯ ಬೃಹಸ್ಪತಿಗಳು ಕೇವಲ ನಾಲ್ಕೂವರೆ ವರ್ಷಗಳ ಬಿ.ಜೆ.ಪಿ. ಸರ್ಕಾರದ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಆರ್ಥಿಕವಾಗಿ ಕೊಬ್ಬಿಹೋಗಿದ್ದಾರೆಂದರೇ, ಇವರ ಒಂದು ಗಂಟೆಯ ಚರ್ಚೆಗೆ ಐಷಾರಾಮಿ ಹೋಟೇಲುಗಳು ಮತ್ತು ರಿಸಾರ್ಟ್‌ಗಳು ಈಗ ಬಳಕೆಯಾಗುತ್ತಿವೆ.

ಹನ್ನೆರೆಡು ವರ್ಷ ಅನ್ನ ಕಾಣದೆ ಹಸಿವಿನಿಂದ ಬರಗೆಟ್ಟಿದ್ದ ವ್ಯಕ್ತಿಯೊಬ್ಬ ಅನ್ನವನ್ನು ತಿನ್ನುವ ಹಾಗೇ ಈ ನಾಡಿನ ಯಾವುದೇ ಸಂಪತ್ತನ್ನೂ ಬಿಡದೇ ಲೂಟಿಮಾಡಿದ ಪಕ್ಷ ಎಂಬುದು ಕರ್ನಾಟಕದಲ್ಲಿ ಇರುವುದಾದರೇ ಅದು ಬಿ.ಜೆ.ಪಿ. ಪಕ್ಷ ಮಾತ್ರ. ಇವರ ಭೂದಾಹಕ್ಕೆ ಬಲಿಯಾದ ಸರ್ಕಾರದ ಭೂಮಿಗಳು, ಸೈಟುಗಳು ಇವುಗಳ ಸಂಖ್ಯೆಗೆ ಲೆಕ್ಕವಿಲ್ಲ.

ಯಡಿಯೂರಪ್ಪನವರ ಬಗ್ಗೆ ನಮ್ಮ ತಕರಾರುಗಳು ಏನೇ ಇರಲಿ ಅವರನ್ನು ನಾವು ಒಂದು ವಿಷಯದಲ್ಲಿ ಅಭಿನಂದಿಸಲೇಬೇಕು. ತಾವು ಒಬ್ಬರೇ ಕರ್ನಾಟಕವನ್ನು ಲೂಟಿಮಾಡಿ ತಿನ್ನಲಿಲ್ಲ, ಬದಲಾಗಿ ತಮ್ಮ ಎಂಜಲನ್ನು ಯಾವುದೇ ಭೇಧ ಭಾವ ಮಾಡದೇ ಮಠಾಧೀಶರ ಬಾಯಿಗೆ ಮತ್ತು ಆರ್.ಎಸ್.ಎಸ್. ಗರ್ಭಗುಡಿಯ ಪೂಜಾರಿಗಳ ಬಾಯಿಗೆ ಒರೆಸಿ ತಮ್ಮ ಜೊತೆ ಅವರನ್ನೂ ಕುಲಗೆಡಿಸಿದರು. ಅದಕ್ಕಾಗಿ ಅವರು ಸದಾ ವೇದಿಕೆಗಳಲ್ಲಿ “ಸರ್ವರಿಗೆ ಸಮ ಬಾಳು, ಸರ್ವರಿಗೆ ಸಮಪಾಲು” ಎಂದು ಹೇಳುತ್ತಾ ಇರುವುದನ್ನು ನೀವು ಗಮನಿಸಿರಬಹುದು.

ಶಿಸ್ತು ಮತ್ತು ನೈತಿಕತೆಗೆ ಹೆಸರಾಗಿದ್ದ ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ. ಪಕ್ಷ ಇಂತಹ ದಯನೀಯವಾದ ಪತನದ ಅಂಚಿಗೆ ತಲುಪಿರುವ ಈ ದಿನಗಳಲ್ಲಿ ಅದರ ನಾಯಕರು ಮತ್ತು ಕಾರ್ಯಕರ್ತರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಆದರೇ, ಪಕ್ಷವಾಗಲಿ, ಅದರ ನಾಯಕರಾಗಲಿ ಈಗ ಆ ಸ್ಥಿತಿಯಲ್ಲಿ ಇಲ್ಲ. ಏಕೆಂದರೇ, ಆಪರೇಶನ್ ಕಮಲ ಎಂಬ ಹೆಸರಿನ ಅನೈತಿಕತೆಯ ಮಾರ್ಗದಲ್ಲಿ ನಡೆದು ಬಂದಿರುವ ಪಕ್ಷ ನೈತಿಕವಾಗಿ ದಿವಾಳಿಯೆದ್ದು ಹೋಗಿದೆ. ಪಕ್ಷದ ನಾಯಕರು ಎಂತಹ ಭಂಡತನವನ್ನು ಮೈಗೂಡಿಸಿಕೊಂಡಿದ್ದಾರೆ ಎಂದರೇ, ರಸ್ತೆಯ ಬದಿಯಲ್ಲಿ ಮಗು ಮಾಡಿದ ಹೇಸಿಗೆಯನ್ನು ಸಹ ಇವರು “ಆಪರೇಷನ್ ಐಸ್‌ಕ್ರೀಮ್” ಎಂದು ಹೆಸರಿಸಿ ಅದನ್ನು ತಾವೂ ತಿಂದು; ಜನತೆಗೂ ತಿನ್ನಿಸಬಲ್ಲರು.

ಕರ್ನಾಟಕ ಕಂಡ ಒಬ್ಬ ಹುಂಬ ಮತ್ತು ಭಂಡ ರಾಜಕಾರಣಿ ಯಡಿಯೂರಪ್ಪ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ಕರ್ನಾಟಕ ಜನತಾ ಪಕ್ಷ ಹುಟ್ಟು ಹಾಕಿ, ಬಿ.ಜೆ.ಪಿ. ಪಕ್ಷದ ಪತನಕ್ಕೆ ಕೈ ಹಾಕುವುದರ ಜೊತೆ ಜೊತೆಯಲ್ಲಿ ತಮ್ಮ ನಾಶಕ್ಕೆ ತಾವೇ ಮುಂದಾಗಿದ್ದಾರೆ.

ಒಂದೂವರೆ ಸಾವಿರ ಬಸ್‌ಗಳು, ಎಂಟು ಸಾವಿರ ಮಿನಿ ಬಸ್ ಮತ್ತು ಟೆಂಪೊ ಇವುಗಳ ಮೂಲಕ ಸಾವಿರ ಸಾವಿರ ಹಣ ನೀಡಿ ಕರೆಸಿಕೊಂಡ ಬಾಡಿಗೆ ಜನರ ಮುಂದೆ ವೀರಾವೇಶದಿಂದ ಮಾತನಾಡುವ, ಕಣ್ಣೀರು ಸುರಿಸುವ ಯಡಿಯೂರಪ್ಪ ಅರಿಯಬೇಕಾದ ವಾಸ್ತವ ಸತ್ಯ ಒಂದಿದೆ. ಸಮಾವೇಶಕ್ಕೆ ಬಂದ ಅಥವಾ ಬರುವ ಜನಗಳೆಲ್ಲಾ ಪಕ್ಷದ ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಹೊಲ ಗದ್ದೆಗಳಲ್ಲಿ ಬಿಸಿಲಿನಲ್ಲಿ ಕೂಲಿ ಮಾಡುವ ಬದಲು, ಐನೂರು ರೂಪಾಯಿಗಾಗಿ ಸಮಾವೇಶಕ್ಕೆ ಬಂದು ಭಾಷಣ ಕೇಳುವ ಜನತೆಯ ಒಂದು ವರ್ಗ ಕರ್ನಾಟಕದಲ್ಲಿ ಇತ್ತೀಚೆಗೆ ಸೃಷ್ಟಿಯಾಗಿದೆ.

ಸತ್ಯ ಹರಿಶ್ಚಂದ್ರನಂತೆ, ಹುತಾತ್ಮನಂತೆ ಮಾತನಾಡುವ ಯಡಿಯೂರಪ್ಪ ಹಾವೇರಿಯ ಸಮಾವೇಶಕ್ಕೆ ಖರ್ಚು ಮಾಡಿದ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಕರ್ನಾಟಕದ ಜನತೆಗೆ ಮಾಹಿತಿ ನೀಡಬೇಕಿದೆ. ಕನ್ನಡದ ಎಲ್ಲಾ ಪತ್ರಿಕೆಗಳಿಗೆ ನಾಲ್ಕು ಪುಟಗಳ ವಿಶೇಷ ಪುರವಣಿಗೆಗೆ ಜಾಹಿರಾತು ಮೂಲಕ ತಲಾ 20 ಲಕ್ಷದಿಂದ 40 ಲಕ್ಷದ ವರೆಗೆ ಹಣ ನೀಡಿದವರು ಯಾರು? ಕೇವಲ ಒಂದು ದಿನದ ಹಾವೇರಿಯ ಸಮಾವೇಶಕ್ಕೆ 15 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಯಡಿಯೂರಪ್ಪ ಒಮ್ಮೆ ತಣ್ಣಗೆ ಕುಳಿತು ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದುವುದು ಒಳಿತು. ಜೊತೆಗೆ ತಾನು ಸಾಗಿ ಬಂದ ಬದುಕಿನ ಹಾದಿಯನ್ನೂ ತಿರುಗಿ ನೋಡಬೇಕಿದೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೋಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದ ಯಡಿಯೂರಪ್ಪ ನಿಂಬೆ ಹಣ್ಣು ಮಾರುತ್ತಾ, ಕಷ್ಟದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದವರು. ನಂತರ ಪಿ.ಯು.ಸಿ. ಓದುವ ಸಂದರ್ಭದಲ್ಲಿ ಕಡು ಬಡತನದ ಕಾರಣಕ್ಕಾಗಿ ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಾಸ್ತ್ರಿ ಎಂಬುವರ ಅಕ್ಕಿ ಗಿರಣಿಯಲ್ಲಿ ಗುಮಾಸ್ತನಾಗಿ ಬದುಕು ಕಂಡುಕೊಂಡವರು. ಶಾಸ್ರಿಯವರ ಪುತ್ರಿ ಮೈತ್ರಾ ದೇವಿಯವರನ್ನು ವಿವಾಹವಾಗುವುದರ ಮೂಲಕ ಪುರಸಭೆಯ ಸದಸ್ಯನಾಗಿ ರಾಜಕೀಯ ಪ್ರವೇಶ ಮಾಡಿದ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗುವವರೆಗೂ ಹುಟ್ಟು ಹೋರಾಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಆದರೆ, ಅವರು ಮುಖ್ಯಮಂತ್ರಿ ಸ್ಥಾನದ ಹುದ್ದೆಗೆ ಏರಿದ ಕೂಡಲೇ ತಾನೊಬ್ಬ ಜಾತಿವಾದಿ, ಧನದಾಹಿ, ಕಡು ಭ್ರಷ್ಟ ಎಂಬುದನ್ನು ಯಾವ ಮುಚ್ಚು ಮರೆಯಿಲ್ಲದೆ ಹೊರಜಗತ್ತಿಗೆ ತಮ್ಮನ್ನು ತಾವೇ ಅನಾವರಣಗೊಳಿಸಿಕೊಂಡರು.

ಮೋಹಿನಿ ಭಸ್ಮಾಸುರನಂತೆ ತಮ್ಮ ತಲೆಯ ಮೇಲೆ ತಾವೇ ಕೈಇಟ್ಟು ಕೊಂಡು ನಾಶವಾಗಲು ಹೊರಟಿರುವ ಯಡಿಯೂರಪ್ಪ ಕೆ.ಜೆ.ಪಿ. ಪಕ್ಷ ಕಟ್ಟುವುದರ ಮೂಲಕ ಆಟವಾಡಲು ಹೊರಟಂತಿಲ್ಲ. ಬದಲಾಗಿ ಅವರು ಆಟ ಕೆಡಿಸಲು ಹೊರಟಂತಿದೆ. 1980ರ ದಶಕದಲ್ಲಿ ಇಂತಹದ್ದೇ ಆಟವಾಡಲು ಹೊರಟ ದೇವರಾಜು ಅರಸು ರಾಜಕೀಯದಲ್ಲಿ ಇನ್ನಿಲ್ಲದಂತೆ ಮಣ್ಣು ಮುಕ್ಕಿದ್ದರು.

1975 ರ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಜಾರಿಗೆ ತಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ವಾಧಿಕಾರಿಣಿಯಂತೆ ಮೆರೆದ ಇಂದಿರಾಗಾಂಧಿ 1978 ರ ಚುನಾವಣೆಯಲ್ಲಿ ಸೋತು ದೆಹಲಿಯ ತಿಹಾರ್ ಜೈಲುಪಾಲಾಗಿದ್ದರು. ಆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಸರ್ಕಾರ ಮುರಾರ್ಜಿ ದೇಸಾಯಿ ಎಂಬ ಜಿಗುಟು ಸ್ವಭಾವದ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಿತ್ತು. ಗೃಹ ಮಂತ್ರಿಯಾಗಿದ್ದ ಚರಣ ಸಿಂಗ್‌ರ ಅಧಿಕಾರದ ದಾಹ ಮತ್ತು ಇಂದಿರಾಗಾಂಧಿಯನ್ನು ರಾಯ್ ಬರೇಲಿ ಕ್ರೇತ್ರದಿಂದ ಸೋಲಿಸಿ, ಕೇಂದ್ರ ಸಚಿವ ಸಂಪುಟದಲ್ಲಿ ಸಚಿವನಾಗಿದ್ದ ರಾಜ್ ನಾರಾಯಣ್ ಎಂಬ ಹಗಲು ಹನುಮಂತರಾಯ ಉರುಪ್ ರಾಜಕೀಯ ಬಫೂನ್ ಇವರ ಚಿತಾವಣೆಯಿಂದಾಗಿ ಕೇವಲ ಒಂದೂವರೆ ವರ್ಷದಲ್ಲಿ ಜನತಾ ಸರ್ಕಾರ ಪತನಗೊಡು ಜಯಪ್ರಕಾಶ್ ನಾರಾಯಣರ ಕನಸು ನುಚ್ಚು ನೂರಾಯಿತು. ಜೊತೆಗೆ ದೇಶದಲ್ಲಿ ಮತ್ತೇ ಚುನಾವಣೆ ಎದುರಾಯಿತು.‍

ಕೇಂದ್ರದಲ್ಲಿ ಜನತಾ ಸರ್ಕಾರವಿದ್ದಾಗ, ಇಡೀ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೇಸ್ ಅಧಿಕಾರ ಕಳೆದುಕೊಂಡಿತ್ತು. ಆದರೇ ಕರ್ನಾಟಕದಲ್ಲಿ ಅರಸು ನೇತೃತ್ವದ ಕಾಂಗ್ರೇಸ್ ಪಕ್ಷ ಮಾತ್ರ ಅಧಿಕಾರದಲ್ಲಿತ್ತು. ಪಕ್ಷದ ಪ್ರಭಾವವಿಲ್ಲದೇ ಹಿಂದುಳಿದ ವರ್ಗದ ಏಳಿಗೆ ಮತ್ತು ಅಭಿವೃದ್ಧಿಯ ಮೂಲಕ ಹೆಸರಾಗಿದ್ದ ಅರಸು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಸಂಸತ್ತಿನ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೇಸ್ ಪಕ್ಷಕ್ಕೆ ಮತ್ತೇ ಚುನಾವಣೆ ಎದುರಾದಾಗ ಇಡೀ ರಾಷ್ಟ್ರದ ಅಷ್ಟು ಕ್ರೇತ್ರಗಳ ಅಭ್ಯರ್ಥಿಗಳಿಗೆ ಹಣ ಪೂರೈಸುವ ಹೊಣೆ ಅರಸು ಹೆಗಲಿಗೆ ಬಿತ್ತು. ಹಿಂದುಳಿದವರ ಆಶಾಕಿರಣವಾಗಿ, ಹೊರ ಹೊಮ್ಮಿದ್ದ ಅರಸು ಮೊಯ್ಲಿ, ಖರ್ಗೆ, ಧರ್ಮಸಿಂಗ್, ಬಂಗಾರಪ್ಪ, ಬಸವಲಿಂಗಪ್ಪ, ಮುಂತಾದ ನಾಯಕರನ್ನು ಹುಟ್ಟುಹಾಕಿದ್ದರು. ಜನ ಸಾಮಾನ್ಯರ ಬಾಯಲ್ಲಿ ದೊರೆ ಎಂದು ಪ್ರೀತಿಯಿಂದ ಕರೆಸಿಕೊಳ್ಳುತಿದ್ದ ಅರಸು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶದ ಬಾಗಿಲನ್ನು ಮುಕ್ತವಾಗಿ ತೆರೆದಿಟ್ಟರು.

ಒಂದು ಅಘಾತಕಾರಿ ಸೋಲಿನ ನಂತರ ಮತ್ತೇ ಕೇಂದ್ರದಲ್ಲಿ ಇಂದಿರಾಗಾಂಧಿಯ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಹಜವಾಗಿ ತನ್ನಿಂದಾಗಿ ಪಕ್ಷ ಅಧಿಕಾರಕ್ಕೆ ಬಂತು ಎಂಬ ಅಹಂ ಮತ್ತು ಹೆಮ್ಮೆ ಅರಸುರವರಲ್ಲಿ ಬೆಳೆಯತೊಡಗಿದವು. ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಾಂಗ್ರೇಸ್ ಪಕ್ಷದಲ್ಲಿ ತಾನೊಬ್ಬಳು ಮಾತ್ರ ಪ್ರಶ್ನಾತೀತ ನಾಯಕಿ ಎಂಬಂತಿದ್ದ ಇಂದಿರಾ ಗಾಂಧಿಗೆ ದೇವರಾಜು ಅರಸುರವರ ನಡುವಳಿಕೆ ಹಿಡಿಸಲಿಲ್ಲ. ಅಷ್ಟರ ವೇಳೆಗೆ ಅರಸು ಸಂಪುಟದಲ್ಲಿ ಇದ್ದುಕೊಂಡು ಇಂದಿರಾ ಪುತ್ರ ಸಂಜಯಗಾಂಧಿ ಮೂಲಕ ಕೇಂದ್ರಕ್ಕೆ ಹತ್ತಿರವಾಗಿದ್ದ ಗುಂಡೂರಾವ್ ಮತ್ತು ಎಪ್.ಎಂ.ಖಾನ್ ನಡೆಸಿದ ಗುಪ್ತ ರಾಜಕೀಯ ಚಟುವಟಿಕೆಯ ಫಲವಾಗಿ ಅರಸು ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಸ್ವಾಭಿಮಾನಿಯಾದ ಅರಸು ಇದೇ ಯಡಿಯೂರಪ್ಪನವರ ಮಾದರಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಹಸು ಮತ್ತು ಕರು ಚಿಹ್ನೆಯ ಪ್ರತ್ಯೇಕ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದರು. ಅಧಿಕಾರದ ಕನಸು ಕಂಡು ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುವುದರ ಮೂಲಕ ತಾವು ರಾಜಕೀಯದಲ್ಲಿ ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನು ಕಳೆದುಕೊಂಡರು. ಅವರ ಕೊನೆಯ ದಿನಗಳಲ್ಲಿ ಅರಸು ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಎನ್.ಹುಚ್ಚಮಾಸ್ತಿಗೌಡ ಮಾತ್ರ ಸದಾ ಜೊತೆಗಿರುತಿದ್ದರು.

ಅರಸು ಬಾಲಬ್ರೂಯಿ ಭವನದ ನಿವಾಸದಲ್ಲಿ ಬೆನ್ನು ಪಣಿ ಎಂಬ ಕಾಯಿಲೆ ಮತ್ತು ಮಧುಮೇಹ ರೋಗಕ್ಕೆ ತುತ್ತಾಗಿ, ಉಪ್ಪು ಬೆರಸಿದ ರಾಗಿ ಗಂಜಿ ಕುಡಿಯುತ್ತಾ ಮಲಗಿದ್ದಾಗ ಅವರಿಂದ ರಾಜಕೀಯವಾಗಿ ಬೆಳದ ಒಬ್ಬ ನಾಯಕನೂ ಅವರತ್ತ ತಿರುಗಿ ನೋಡಲಿಲ್ಲ. ಅವರ ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿತ್ತೆಂದರೇ, ಅವರು ಸೇದುತಿದ್ದ ಪೈಪಿಗೆ ವಿದೇಶಿ ಮೂಲದ ವರ್ಜಿನಿಯಾ ತಂಬಾಕು ತುಂಬಿಸಿಕೊಳ್ಳಲು ಅವರ ಬಳಿ ಹಣವಿರಲಿಲ್ಲ. ಇದು ನಮ್ಮ ಕಣ್ಣೆದುರು ಬೆಳೆದು, ಬಾಗಿ, ಮಣ್ಣಲ್ಲಿ ಮಣ್ಣಾಗಿ ಹೋದ ರಾಜಕೀಯ ಧೀಮಂತ ನಾಯಕನೊಬ್ಬನ ದುರಂತ ಕಥನ.

ಮನುಷ್ಯನ ಮಾಂಸದ ರುಚಿ ನೋಡಿದ ಹುಲಿಯಂತೆ ಮುಖ್ಯಮಂತ್ರಿ ಗಾದಿಯ ರುಚಿ ನೋಡಿರುವ ಯಡಿಯೂರಪ್ಪ ಅಧಿಕಾರಕ್ಕಾಗಿ ಮತ್ತು ಸಂಪತ್ತಿನ ಲೂಟಿಗಾಗಿ ಹಗಲಿರುಳು ಹಂಬಲಿಸುತಿದ್ದಾರೆ. ಮುಖ್ಯಮಂತ್ರಿಯ ಕುರ್ಚಿಗಾಗಿ ಯಡಿಯೂರಪ್ಪ ಆಡುತ್ತಿರುವ ರಾಜಕೀಯ ನಾಟಕದ ಹಿಂದೆ ಹಲವಾರು ಹುನ್ನಾರಗಳಿವೆ. ತನ್ನ ಅವಧಿಯ ಭ್ರಷ್ಟಾಚಾರದಿಂದಾಗಿ ಸಿ.ಬಿ.ಐ. ಕುಣಿಕೆಗೆ ಕೊರಳೊಡ್ಡಿರುವ ಯಡಿಯೂರಪ್ಪ ಅದರಿಂದ ಪಾರಾಗಲು ತಾನೂ ಒಂದಿಷ್ಟು ಶಾಸಕರನ್ನು ಜೊತೆಗಿಟ್ಟುಕೊಂಡು ಕಾಂಗ್ರೇಸ್ ಪಕ್ಷದ ಜೊತೆ ಚೌಕಾಸಿ ಕುದುರಿಸಬೇಕಿದೆ. ಏಕೆಂದರೇ, ಸೋಮಾರಿತನ ಮತ್ತು ಗುಲಾಮಗಿರಿತನ ಎರಡನ್ನೂ ಪಕ್ಷದ ಪ್ರಣಾಳಿಕೆಯಂತೆ ಮಾಡಿಕೊಂಡಿರುವ ಕಾಂಗ್ರೇಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಆಸಕ್ತಿ ಇದ್ದಂತಿಲ್ಲ. ಈ ಅವಕಾಶ ಉಪಯೋಗಿಸಿಕೊಳ್ಳಲು ಸಿದ್ಧರಾಗಿರುವ ಯಡಿಯೂರಪ್ಪ ಹೊಸ ಪಕ್ಷವನ್ನು ಹುಟ್ಟು ಹಾಕುವುದರ ಮೂಲಕ ತನಗೆ ರಾಜಕೀಯವಾಗಿ ಜನ್ಮ ನೀಡಿದ ಬಿ.ಜೆ.ಪಿ. ಪಕ್ಷದ ಕುತ್ತಿಗೆ ಹಿಸುಕಲು ಮುಂದಾಗಿದ್ದಾರೆ. ಇಂತಹ ಒಂದು ಸಾವನ್ನು ಕರ್ನಾಟಕದ ಪ್ರಜ್ಞಾವಂತ ಜನತೆ ಸಹ ಆಸೆಯಿಂದ ಎದುರು ನೋಡುತ್ತಿದ್ದಾರೆ.