[ಅಪರಾಧ ಕೃತ್ಯವೊಂದಕ್ಕೆ ಸಾಕ್ಷಿಯಾಗಬೇಕಿದ್ದ ನಮ್ಮ ಒಡನಾಡಿ ನವೀನ್ ಸೂರಿಂಜೆಯವರು ಭ್ರಷ್ಟರ ಮತ್ತು ಮತೀಯವಾದಿ ಗೂಂಡಾಗಳ ಕುಮ್ಮಕ್ಕು ಮತ್ತು ಪ್ರಚೋದನೆಯಿಂದಾಗಿ ಹಾಗೂ ನಮ್ಮ ವ್ಯವಸ್ಥೆಯ ತೀವ್ರದೋಷದ ಪರಿಣಾಮವಾಗಿ ಆರೋಪಿ ಎಂದು ಗುರುತಿಸಲ್ಪಟ್ಟು ಹಾಗೂ ಆ ಕಾರಣಕ್ಕಾಗಿ ಬಂಧನಕ್ಕೊಳಗಾಗಿ ಈಗ ಒಂದು ತಿಂಗಳ ಮೇಲಾಯಿತು. ಯಾರು ಏನು ಬೇಕಾದರೂ ಯಾವಾಗ ಬೇಕಾದರೂ ತೀರ್ಮಾನಿಸಲಿ. ನಮಗಂತೂ ಅವರು ನಿರಪರಾಧಿ. ಆದರೆ ವ್ಯವಸ್ಥೆ ಅಂಗೈ ಹುಣ್ಣಿಗೆ ಸಾಕ್ಷ್ಯ ಕೇಳುತ್ತಿದೆ. ನಿರಪರಾಧಿಯಾಗಿ ಜೈಲಿನಲ್ಲಿದ್ದರೂ ನವೀನ್ ತಮ್ಮ ಸಹಜ ಗುಣ ಮತ್ತು ನಿಲುವುಗಳಾದ ಜನಪರ ಕಾಳಜಿಯನ್ನು ಬಿಟ್ಟಿಲ್ಲ. ಕೆಲವು ದಿನಗಳ ಹಿಂದೆ ಕರ್ನಾಟಕದ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರಿನ MRPL ಕಾರ್ಖಾನೆಗೆ ಒಂದು ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ. ಈ ವಿಷಯದ ಮೇಲೆ ನವೀನರು ಜೈಲಿನಿಂದಲೆ ನಮಗೆ ಈ ಲೇಖನ ಬರೆದು ಕಳುಹಿಸಿದ್ದಾರೆ. ಅವರು ತಮ್ಮ ಸದಾಶಯ, ಆಶಾವಾದ ಹಾಗೂ ಜನಪರ ಚಿಂತನೆಯ ಹುಮ್ಮಸ್ಸನ್ನು ಇಂತಹ ಕಠಿಣ ಮತ್ತು ಪರೀಕ್ಷೆಯ ಕಾಲದಲ್ಲೂ ಹೊಂದಿದ್ದಾರೆ ಎನ್ನುವುದು ಮನುಷ್ಯನ ಅದಮ್ಯ ಚೇತನಕ್ಕೊಂದು ಉದಾಹರಣೆಯಾಗಿ ಇಂದಿನ ಭ್ರಷ್ಟ ಮತ್ತು ಮಲಿನ ಸಂದರ್ಭದಲ್ಲಿಯೂ ನಮ್ಮನ್ನು ಎಚ್ಚರಿಸುತ್ತಿದೆ. – ರವಿ ಕೃಷ್ಣಾರೆಡ್ಡಿ]
ಬದುಕಿಗೆ ವಿಷವಿಕ್ಕುವ MRPL
– ನವೀನ್ ಸೂರಿಂಜೆ
ಮಂಗಳೂರು ತಾಲೂಕಿನ ಕುತ್ತೆತ್ತೂರು, ಸೂರಿಂಜೆ, ಮದ್ಯ, ಚೇಳ್ಯಾರು, ಪಂಜ, ಕೊಯ್ಕುಡೆ ಗ್ರಾಮಗಳು ಕ್ಯಾನ್ಸರ್ ಪೀಡಿತ ಗ್ರಾಮಗಳಾಗಿ ದುರಂತ ಎದುರಿಸುವ ಸಾಧ್ಯತೆಗಳಿವೆ. ಎಂ.ಆರ್.ಪಿ.ಎಲ್.ನ ಪೆಟ್ರೋಲಿಯಂ ಘನ ತ್ಯಾಜ್ಯವನ್ನು ಕುತ್ತೆತ್ತೂರು ಸಮೀಪದ ಅತ್ರುಕೋಡಿಯಲ್ಲಿ ತಂದು ಸುರಿಯಲಾಗುತ್ತಿದ್ದು ಅದರ ತೇವಾಂಶ ನೇರವಾಗಿ ನಂದಿನಿ ನದಿಯ ಉಪನದಿಯನ್ನು ಸೇರಿಕೊಳ್ಳುತ್ತದೆ. ಪೆಟ್ರೋಲಿಯಂ ತ್ಯಾಜ್ಯ ನಂದಿನಿ ನದಿ ಸೇರ್ಪಡೆಯಿಂದಾಗಿ ನಂದಿನಿ ನದಿಯ ಅಂತರ್ಜಲವನ್ನೇ ನಂಬಿಕೊಂಡಿರುವ ನಂದಿನಿ ನದಿ ಪಾತ್ರದ ಗ್ರಾಮಗಳು ಸಹಜವಾಗಿ ಕ್ಯಾನ್ಸರ್ಗೆ ತುತ್ತಾಗಲಿವಯೇ ಎಂಬ ಚಿಂತೆ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.
ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನ ದ್ರವ ತ್ಯಾಜ್ಯವನ್ನು ಶುಧ್ಧೀಕರಿಸಿ ಕುಳಾ ಸಮೀಪ ಸಮುದ್ರಕ್ಕೆ ಬಿಡಲಾಗುತ್ತದೆ. ಎಷ್ಟೇ ಶುಧ್ದೀಕರಿಸಿದರೂ ತೈಲದಂಶ ಸಮುದ್ರ ಸೇರುತ್ತಿದ್ದು, ಸಮುದ್ರದಲ್ಲಿ ಮೀನು ಸಂತತಿ ಕಡಿಮೆಯಾಗಿದೆ ಎಂಬ ಆರೋಪ ಮೀನುಗಾರರದ್ದು. ಎಂ.ಆರ್.ಪಿ.ಎಲ್.ಗೆ ದ್ರವ ತ್ಯಾಜ್ಯಕ್ಕಿಂತಲೂ ಘನತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಕಚ್ಛಾತೈಲವನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್ನಂತಹ ವಿವಿಧ ಉತ್ಪನ್ನಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ವಿವಿಧ ರೀತಿಯ ಕ್ಯಾಟಲಿಸ್ಟ್ ಎಂಬ ಪ್ರಚೋದಕಗಳನ್ನು ಬಳಸಲಾಗುತ್ತದೆ. ಇಲ್ಲಿ ಸಿರಾಮಿಕ್ ಉಂಡೆಗಳನ್ನು (ಸಿರಾಮಿಕ್ ಬಾಲ್ಸ್) ಕ್ಯಾಟಲಿಸ್ಟ್ಗಳಾಗಿ ಬಳಸಲಾಗುತ್ತದೆ. ಇವುಗಳನ್ನು ಹಲವು ಬಾರಿ ಬಳಸಿದ ನಂತರ ಅಪಾಯಕಾರಿ ತ್ಯಾಜ್ಯವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಈ ಅಪಾಯಕಾರಿ ತ್ಯಾಜ್ಯಕ್ಕೆ ಸ್ಪೆಂಟ್ ಸೆರಾಮಿಕ್ ಬಾಲ್ಸ್ (ಬಳಸಿದ ಸೆರಾಮಿಕ್ ಉಂಡೆಗಳು) ಎಂದು ಕರೆಯಲಾಗುತ್ತದೆ.
ಆರ್ಸೆನಿಕ್, ಬೆಂಜಿನ್ನಂತಹ ವಿಷಯುಕ್ತ ರಾಸಾಯನಿಕಗಳಿರುವ ಈ ಅಪಾಯಕಾರಿ ತ್ಯಾಜ್ಯದ ಸೂಕ್ತ ವಿಲೇವಾರಿಗಾಗಿ ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ ಎಂ.ಆರ್.ಪಿ.ಎಲ್. ಕುತ್ತೆತ್ತೂರು ಗ್ರಾಮದ ಅತ್ರುಕೋಡಿ ಬಳಿಯ ಮೂಡು ಪದವು ಎಂಬಲ್ಲಿ ತಂದು ಸುರಿಯುತ್ತದೆ ಎಂಬ ಸತ್ಯ ಎಚ್ಚೆತ್ತ ಸ್ಥಳೀಯರಿಂದಾಗಿ ಹೊರಬಿದ್ದಿದೆ!
ಪತ್ರಿಕೆಗಳಿಗೆ ಇದು ಸಿರಾಮಮಿಕ್ ತ್ಯಾಜ್ಯ ಹಾಗೂ ರಸ್ತೆ ಡಾಮರು ಎಂದಿರುವ ಎಂಆರ್ಪಿಎಲ್ ಆಧಿಕಾರಿಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಬಳಿ ಅಪಾಯಕಾರಿಯಲ್ಲದ ಅಲ್ಯುಮೀನಿಯಂ ಸಿಲಿಕಾ ಫ್ಲೇಕ್ಸ್ ಸುರಿದಿದ್ದೇವೆ ಎಂದು ಹೇಳಿದ್ದಾರೆಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂಆರ್ಪಿಎಲ್ಗೆ ಜಾರಿಯಾಗಿರುವ ಶೋಕಾಸ್ ನೋಟೀಸಿನಿಂದ ಸ್ಪಷ್ಟವಾಗಿದೆ.
ಈ ತ್ಯಾಜ್ಯ ತಂದು ಸುರಿವಲ್ಲೇ ಸಣ್ಣ ತೊರೆಯೊಂದು ಹರಿಯುತ್ತಿದ್ದು ಇದು ಮುಂದುವರಿದಂತೆ ಅಗಲವಾಗುತ್ತಾ ನಂದಿನಿ ನದಿಯ ಉಪನದಿಯಾಗುತ್ತದೆ. ಕುತ್ತೆತ್ತೂರಿನಿಂದ ಹಾದುಹೋಗುವ ಈ ತೊರೆ ಹಲವಾರು ಕೃಷಿಕರ ಜೀವನಾಡಿ. ಈ ತೊರೆಗೆ ಸೂರಿಂಜೆಯ ಪಾಪುದಂಗಡಿ ಅಥವಾ ಕಕ್ಕೇ ತೋಟ ಎಂಬಲ್ಲಿ ಸಂಚಾರಕ್ಕಾಗಿ ಸೇತುವೆಯನ್ನು ಕಟ್ಟಲಾಗಿದೆ. ಈ ತೊರೆ ಅಥವಾ ಉಪನದಿ ಹಾದು ಹೋಗುವ ಇಕ್ಕೆಲಗಳಲ್ಲಿ ವಿಶಾಲವಾದ ಕೃಷಿಭೂಮಿ ಇದ್ದು ಇದರ ನೀರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವಲಂಭಿಸಲಾಗುತ್ತದೆ. ಇಲ್ಲಿನ ನೂರಾರು ನಿವಾಸಿಗಳ ಕುಡಿಯುವ ನೀರಿನ ಭಾವಿಗಳಿಗೆ ಈ ಉಪನದಿಯೇ ಅಂತರ್ಜಲದ ಮೂಲ.
ಇದಲ್ಲದೆ ಮಳೆಗಾಲ ಮುಗಿಯುವ ಸಂದರ್ಭದಲ್ಲಿ ಈ ತೊರೆಗೆ ಪೊರಿಕಾನ ಎಂಬಲ್ಲಿ ತಡೆಯೊಂದನ್ನು ನಿರ್ಮಿಸಲಾಗಿದೆ. ಮರಳಿನ ಚೀಲ ಮತ್ತು ಮಣ್ಣು ಬಳಸಿ ಕಟ್ಟಲಾಗುವ ಈ ತಡೆಯಿಂದಾಗಿ ಕೃಷಿ ಭೂಮಿ ಮತ್ತು ಕುಡಿವ ನೀರಿನ ಭಾವಿಗಳ ನೀರಿನ ಪ್ರಮಾಣ ಹೆಚ್ಚುತ್ತದೆ. ಈ ಉಪನದಿ ಮುಂದುವರಿದಂತೆ ಬೊಟ್ಲಕ್ಕೆ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿದ ಅಣೆಕಟ್ಟು ಇದೆ. ಈ ಅಣೆಕಟ್ಟಿನಿಂದಾಗಿ ತುರುಂಜ, ಸೂರಿಂಜೆ ಗುತ್ತು, ಕನಕಬೆಟ್ಟು, ತೀವು, ಮತ್ತು ಬೊಟ್ಲಕ್ಕೆ ಪರಿಸರದ ಕೃಷಿಭೂಮಿ ಮತ್ತು ಕುಡಿಯುವ ನೀರಿನ ಭಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ಈ ಉಪನದಿಯ ದಂಡೆಗಳಲ್ಲಿ 12ಕ್ಕೂ ಅಧಿಕ ಪಂಪುಸೆಟ್ಟುಗಳಿದ್ದು ಉಪನದಿಯಿಂದ ಕೃಷಿಭೂಮಿಗೆ ನೀರು ಹಾಯಿಸಲಾಗುತ್ತದೆ.
ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಬಳಕೆಯಾಗುವ ನಂದಿನಿ ಉಪನದಿಗೆ ಪೆಟ್ರೋಲಿಯಂ ತ್ಯಾಜ್ಯ ಸೇರಿದರೆ ನೂರಾರು ನಿವಾಸಿಗಳು ಶಾಶ್ವತ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆಳನ್ನು ಅಲ್ಲಗಳೆವಂತಿಲ್ಲ. ಉಪನದಿಯ ಆಸುಪಾಸಿನ ಪ್ರದೇಶಗಳಲ್ಲದೆ ನಂದಿನಿ ನದಿ ಪಾತ್ರದ ಮದ್ಯ, ಚೇಳ್ಯಾರು, ಪಂಜ, ಕೊಯ್ಕುಡೆ ಗ್ರಾಮಗಳು ಕೂಡಾ ಈ ಅಪಾಯಕಾರಿ ತ್ಯಾಜ್ಯದಿಂದಾಗುವ ತೊಂದರೆಯನ್ನು ಅನುಭವಿಸಲಿದೆ. ಈ ಉಪನದಿಯು ಸೂರಿಂಜೆಯ ತೇವು ಎಂಬಲ್ಲಿ ನಂದಿನಿ ನದಿಯನ್ನು ಸೇರುತ್ತದೆ.
ನಂದಿನಿ ನದಿಗೆ ಪೆಟ್ರೋಲಿಯಂ ತ್ಯಾಜ್ಯವನ್ನು ಹರಿಯಬಿಟ್ಟು ಸೂರಿಂಜೆ, ಕುತ್ತೆತ್ತೂರು, ಮದ್ಯ, ಪಂಜ ಗ್ರಾಮಗಳನ್ನು ಕ್ಯಾನ್ಸರ್ ಪೀಡಿತಗ್ರಾಮಗಳನ್ನಾಗಿ ಪರಿವರ್ತಿಸುವ ಮುನ್ನ ರಚನಾತ್ಮಕ ಹೋರಾಟದ ಅಗತ್ಯವಿದೆ ಎನ್ನುವುದು ಸ್ಥಳೀಯರ ಅಂಬೋಣ.