Monthly Archives: December 2012

ಈಶ್ವರಪ್ಪ ರಾಜೀನಾಮೆ ನೀಡಬಾರದು…

– ರವಿ ಕೃಷ್ಣಾರೆಡ್ಡಿ

ನಾಲ್ಕೈದು ದಿನಗಳ ಹಿಂದೆ ಶಿವಮೊಗ್ಗದ ವಿಶೇಷ ಲೋಕಾಯುಕ್ತ ನ್ಯಾಯಾಲಯ ರಾಜ್ಯದ ಉಪ-ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆಯ ಆರೋಪದ ಕುರಿತು ಲೋಕಾಯುಕ್ತ ಪೋಲಿಸರಿಗೆ ವಿಚಾರಣೆಗೆ ಆದೇಶಿಸಿದಾಗಲೇ ಈಶ್ವರಪ್ಪನವರ ಮನೆ-ಮಠಗಳ ಮೇಲೆ ಲೋಕಾಯುಕ್ತ ಪೋಲಿಸರ ದಾಳಿ ನಿಶ್ಚಿತವಾಗಿತ್ತು. ಪ್ರಥಮ ಮಾಹಿತಿ ವರದಿ ದಾಖಲಿಸಿದ ನಂತರ ಎಂದಾದರೂ ಲೋಕಾಯುಕ್ತ ಪೋಲಿಸರು ಮಾಡಲೇಬೇಕಾಗಿದ್ದ ಕೆಲಸ ಅದು. ಹಾಗಾಗಿ ಈಶ್ವರಪ್ಪನವರಿಗೆ ಏನೇನು ಮುಂಜಾಗ್ರತೆ ತೆಗೆದುಕೊಳ್ಳಬೇಕಾಗಿತ್ತೊ ಅದಕ್ಕೆ ಸಾಕಷ್ಟು ಸಮಯವೂ ಇತ್ತು.

ನೆನ್ನೆ ಈಶ್ವರಪ್ಪನವರ ಮನೆ-ಸಂಸ್ಥೆಗಳ ಮೇಲೆ ದಾಳಿಯಾಯಿತು. ಇಂತಹ ಸಮಯದಲ್ಲಿ ಮಾಮೂಲಿಯಾಗಿ ಕೇಳಿ ಬರುವಂತೆ ಈಶ್ವರಪ್ಪನವರ ರಾಜೀನಾಮೆಗೆ ಒತ್ತಾಯಗಳೂ ಬಂದವು. ಹಾಗೆ ನೋಡಿದರೆ ಪ್ರಮುಖವಾಗಿ ಸಿದ್ದರಾಮಯ್ಯ ಮತ್ತು ಧನಂಜಯ್ ಕುಮಾರ್‌ರಿಂದ ಮಾತ್ರ. KS-Eshwarappaಈಗ ನೈತಿಕಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಕೇಳುವ ರಾಜಕಾರಣಿಗಳಿಗೂ ಆ ನೈತಿಕತೆ ಉಳಿದಿಲ್ಲ ಮತ್ತು ಹಾಗೆ ಯಾರೂ ಸುಮ್ಮನೆ ರಾಜೀನಾಮೆ ನೀಡುವುದೂ ಇಲ್ಲ ಎಂದು ಗೊತ್ತಾಗಿಬಿಟ್ಟಿದೆ. ಪ್ರಾಮಾಣಿಕರು ಮತ್ತು ನೈತಿಕವಾಗಿ ಉನ್ನತಮಟ್ಟದಲ್ಲಿರುವವರು ಕೇಳಿದಾಗಲೇ ರಾಜೀನಾಮೆ ಕೊಡದ ಈ ಮೂರೂ ಬಿಟ್ಟವರು, ಇನ್ನು ಮೂರೂ ಬಿಟ್ಟವರು ಕೇಳಿದಾಕ್ಷಣ ಕೊಟ್ಟುಬಿಡುತ್ತಾರೆಯೇ?

ಇಷ್ಟಕ್ಕೂ, ಕೇವಲ ಈಶ್ವರಪ್ಪನವರೊಬ್ಬರಿಂದ ರಾಜೀನಾಮೆ ಕೇಳುವುದೇ ಅಸಮಂಜಸ. ಕೇಳುವುದೇ ಹಾಗಿದ್ದರೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿರುವ ಎಲ್ಲಾ ಸಚಿವರಿಂದಲೂ ಪ್ರತಿದಿನ ನಾವು ರಾಜೀನಾಮೆ ಕೇಳುತ್ತಿರಬೇಕು. ಮುರುಗೇಶ್ ನಿರಾಣಿ, ಆರ್. ಅಶೋಕ, ಸೋಮಣ್ಣ, ಸಿ.ಟಿ. ರವಿ,.. ಇವರ ಜೊತೆಜೊತೆಗೆ ಈಶ್ವರಪ್ಪನದೂ. ಇನ್ನು ಆರೋಪಕ್ಕೆ ಒಳಗಾಗಿರುವ, ಆದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿರದ ಸಚಿವರ ದಂಡೇ ಈ ಸಂಪುಟದಲ್ಲಿದೆ. ಸುರೇಶ್ ಕುಮಾರ್, ನಾರಾಯಣ ಸ್ವಾಮಿ, ಆನಂದ್ ಸಿಂಗ್, ಉದಾಸಿ, ರಾಮದಾಸ್, ಯೊಗೇಶ್ವರ್, ಅಸ್ನೋಟಿಕರ್, ಲಿಂಬಾವಳಿ, ಶೋಭಾ ಕರಂದ್ಲಾಜೆ… ಬಗೆದರೆ ಎಲ್ಲರ ವಿರುದ್ಧವೂ ದಾಖಲೆಗಳು ಸಿಗಬಹುದು. ಬಹುಶಃ ಒಬ್ಬೇ ಒಬ್ಬ ಮಂತ್ರಿ ಹಣಕಾಸಿನ, ಸ್ವಂತಕ್ಕೆ ಲಾಭವಾಗುವ ಭ್ರಷ್ಟಾಚಾರ ಮಾಡಿಲ್ಲದಿರಬಹುದು. ಆದರೆ ಆತನೂ ಅಧಿಕಾರ ದುರುಪಯೋಗ ಮತ್ತು ಅನೈತಿಕ ಮತ್ತು ತಾರತಮ್ಯದ ಕೆಲಸ ಮಾಡಿರುತ್ತಾನೆ. ಇದು ನಮ್ಮ ರಾಜ್ಯದ ಮಂತ್ರಿಮಂಡಲ.

ಕಳೆದ ರಾತ್ರಿ ಜನಶ್ರೀ ಟಿವಿಯಲ್ಲಿ ಈಶ್ವರಪ್ಪನವರ ವಿಚಾರದ ಬಗ್ಗೆಯೇ ಇದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಕಾಂತ್ ಕುಲಕರ್ಣಿ ಎಂಬ ಜಮಖಂಡಿಯ ಬಿಜೆಪಿ ಶಾಸಕ ಬಹುಶಃ ನಮ್ಮ ರಾಜ್ಯದ ಅವಿದ್ಯಾವಂತ, ಅವೈಚಾರಿಕ, ಅನರ್ಹ ಶಾಸಕರೆಲ್ಲರನ್ನೂ ಪ್ರತಿನಿಧಿಸುತ್ತಿದ್ದರು. ವಿತಂಡವಾದ ಮೂರ್ಖ ಶಿಖಾಮಣಿಯಂತೆ, ಮತ್ತು ತನ್ನ ಪಕ್ಷ ಈ ರಾಜ್ಯದಲ್ಲಿ ನಡೆಸಿದ ಗಂಡಾಗುಂಡಿಗಳ ವಾಸ್ತವಿಕತೆಯ ಪರಿಚಯವೇ ಇಲ್ಲದವರಂತೆ ಮಾತನಾಡುತ್ತಿದ್ದರು. ಅವರ ಪಕ್ಷ ಸಚ್ಚಾರಿತ್ಯವಂತರ, ಪ್ರಾಮಾಣಿಕರ ಪಕ್ಷವಂತೆ. ಈಶ್ವರಪ್ಪನವರ ಬಗ್ಗೆ ಮತ್ತು ವಿಚಾರಣೆ ನಡೆಯುತಿರುವ ಸಂದರ್ಭದಲ್ಲಿ ಮಂತ್ರಿಗಳಾಗಿ ಮುಂದುವರೆಯುವುದು ಸರಿಯೇ ತಪ್ಪೇ ಎಂಬ ಬಗ್ಗೆ ಇದ್ದ ಚರ್ಚೆಯಲ್ಲಿ ಅವರಿಗಿದ್ದ ಒಂದೇ ಒಂದು ಅಭಿಪ್ರಾಯ ಏನೆಂದರೆ ಮೊದಲು ಕೇಂದ್ರದ ಕಾಂಗ್ರೆಸ್‌ನವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು. ಎಂತೆಂತಹವರೆಲ್ಲ ಈ ನೆಲದಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ? ಅಂದ ಹಾಗೆ ಇವರು ಸೋಲಿಸಿರುವುದು ಸಿದ್ಧು ನ್ಯಾಮೆಗೌಡರನ್ನು. ಅದೂ 20000 ಮತಗಳ ಅಂತರದಿಂದ.

ಸದ್ಯದ ನಮ್ಮರಾಜಕಾರಣಿಗಳ ಮನಸ್ಥಿತಿ ಮತ್ತು ನಮ್ಮ ಸಮಾಜವೂ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಗಮನಿಸಿ ಕೊನೆಗೆ ನಾನೊಂದು ಮಾತು ಹೇಳಿದೆ; “ಈಶ್ವರಪ್ಪನವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಆವರು ಕೊಟ್ಟರೆ ಇನ್ನೂ ಬಹಳ ಜನ ರಾಜೀನಾಮೆ ಕೊಡಬೇಕಾಗುತ್ತದೆ. ಆವರ್ಯಾರೂ ಕೊಟ್ಟಿಲ್ಲ. ಹಾಗಾಗಿ ಈಶ್ವರಪ್ಪನವರ ರಾಜೀನಾಮೆಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಭ್ರಷ್ಟ ಅಧಿಕಾರಿಗಳ ಮತ್ತು ರಾಜಕಾರಣಿಗಳ ವಿರುದ್ದ ಇರುವ ಎಲ್ಲಾ ಆರೋಪ-ಮೊಕದ್ದಮೆಗಳನ್ನು ಕೈಬಿಡಬೇಕು. ಜೊತೆಜೊತೆಗೆ ಜೈಲುಗಳಲ್ಲಿರುವ ಕೊಲೆಗಡುಕರನ್ನು, ರೇಪಿಸ್ಟ್‌ಗಳನ್ನೂ ಬಿಡುಗಡೆ ಮಾಡಬೇಕು. ಹಾಗೆ ಮಾಡುವುದರಿಂದ ಜೈಲು ಸಿಬ್ಬಂದಿಗೆ ಕೆಲಸ ಇಲ್ಲದಂತಾಗುತ್ತದೆ ಎಂದಾದರೆ ದಾರಿಯಲ್ಲಿ ಹೋಗುವ ನಿರಪರಾಧಿಗಳನ್ನು, ಕಾನೂನು ಪಾಲಿಸುವವರನ್ನು ಬಂಧಿಸಿ ಜೈಲಿಗೆ ಹಾಕಬಹುದು. ರಾಜೀನಾಮೆ ಕೊಡದೆ ಈಶ್ವರಪ್ಪನವರು ತಮ್ಮ ಸತ್ಯಸಂಧತೆ ಮತ್ತು ಹರಿಶ್ಚಂದ್ರತೆಯನ್ನು ಮುಂದುವರೆಸಬೇಕು.”

ಇದು ನಿರಾಶಾವಾದದ ಮಾತಲ್ಲ. ವ್ಯಂಗ್ಯವಾದರೂ ಈಗ ನಡೆಯುತ್ತಿರುವ ವಿದ್ಯಮಾನವೇ. naveen-soorinjeಕರ್ನಾಟಕಕ್ಕಷ್ಟೇ ಸೀಮಿತ ಮಾಡಿಕೊಂಡರೆ, ನಮಗೆ ಗೊತ್ತಿರುವ ಹಾಗೆ ನವೀನ್ ಸೂರಿಂಜೆಯಂತಹ ಅನೇಕ ನಿರಪರಾಧಿಗಳು ಜೈಲಿನಲ್ಲಿದ್ದಾರೆ. ಸದ್ಯಕ್ಕೆ ಎಲ್ಲೂ ನ್ಯಾಯ ಸಿಗುವ ಸಾಧ್ಯತೆ ಇಲ್ಲ. ನ್ಯಾಯಾಂಗವೂ ಭ್ರಷ್ಟಾಚಾರದಿಂದ, ಅನರ್ಹರಿಂದ, ಅದಕ್ಷರಿಂದ ಕೂಡಿದೆ. ಜನತಾ ನ್ಯಾಯಾಲಯಗಳೂ ಪ್ರತಿ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಅನರ್ಹರ ಮತ್ತು ಭ್ರಷ್ಟರ ಪರವೇ ತೀರ್ಪು ನೀಡುತ್ತಿವೆ. ಅದೂ ಹತ್ತಾರು ಸಾವಿರ ಮತಗಳ ಅಂತರದಲ್ಲಿ.

ಪಾಪ, ಮತಿಭ್ರಮಣೆಗೊಳಗಾದವರಂತೆ ಏನೇನೊ ಹುಚ್ಚುಚ್ಚಾಗಿ ಮಾತನಾಡುವ, ಕರ್ನಾಟಕದ ಜನತೆಗೆ ಆಗಾಗ ಉಚಿತ ಮನರಂಜನೆ ಒದಗಿಸುವ ಮಾನ್ಯ ಈಶ್ವರಪ್ಪ ಯಾಕೆ ರಾಜೀನಾಮೆ ಕೊಡಬೇಕು? ಹಸ್ತಕ್ಷೇಪ ಮತ್ತು ಅಧಿಕಾರ ದುರುಪಯೋಗ ಇವರೆಲ್ಲರ ಆಜನ್ಮಸಿದ್ಧ ಹಕ್ಕಲ್ಲವೇ?


ಜನಶ್ರೀ ಟಿವಿಯಲ್ಲಿ ನಡೆದ ಚರ್ಚೆ:
ಭಾಗ – 1 : http://www.yupptv.com/vod/player.aspx?sc=1193731
ಭಾಗ – 2 : http://www.yupptv.com/vod/player.aspx?sc=1193818

ಮೊನ್ನೆ ತನ್ಕ ಕೋಮುವಾದಿ ಅನ್ನಿಸಿಕೊಂಡವ್ರು ಈಗ ಜಾತ್ಯತೀತರು!!

– ರಾಜೇಶ್. ಡಿ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗೋ ಹತ್ಯೆ ನಿಷೇಧ ಕಾನೂನನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ಗೋಮಾಂಸವನ್ನು ಆಹಾರವನ್ನಾಗಿ ಸೇವಿಸುವವರ ಹೊಟ್ಟೆಗೆ ಕಲ್ಲು ಹಾಕುವ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದರು.

ಅವರು ಈಗ ಬಿಜೆಪಿಯಲ್ಲಿಲ್ಲ. ಅವರ ಕೆಜೆಪಿ ಈಗ ಜಾತ್ಯತೀತ ಪಕ್ಷ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶ ಎಂದು ಹೋದಕಡೆಯಲ್ಲೆಲ್ಲಾ ಹೇಳುತ್ತಿದ್ದಾರೆ. ಅವರ ಜೊತೆಗಿರುವ ಇತರೆ ನಾಯಕರೂ ಇದೇ ಮಾತನ್ನು ಹೇಳಲಾರಂಭಿಸಿದ್ದಾರೆ.

ವಿಚಿತ್ರ ನೋಡಿ, ಬಿಜೆಪಿ ಮುಖ್ಯಮಂತ್ರಿಯಾಗಿದ್ದಾಗ ಇವರನ್ನು ಇನ್ನಿಲ್ಲದೆ ಟೀಕೆ ಮಾಡುತ್ತಿದ್ದ ಚಂದ್ರಶೇಖರ ಪಾಟೀಲರು ಮತ್ತು ಆಗಾಗ ಸರಕಾರಕ್ಕೆ ಸಲಹೆ ಕೊಡುತ್ತಲೇ ತಾನು ಬಿಜೆಪಿ ಕಡುವಿರೋಧಿ ಎನ್ನುತ್ತಿದ್ದ ಯು.ಆರ್. ಅನಂತಮೂರ್ತಿಯವರು ಈಗ ಕೆಜೆಪಿ ಪ್ರಣಾಳಿಕೆಗೆ ಸಲಹೆಗಾರರು!!

ನಲವತ್ತು ವರ್ಷಗಳ ಕಾಲ ಯಡಿಯೂರಪ್ಪನವರು (ಅವರೇ ಹೇಳುವಂತೆ) ಹೋರಾಟ ಮಾಡಿಕೊಂಡು ರಾಜ್ಯದಲ್ಲಿ ಕಟ್ಟಿದ ಪಕ್ಷ ಬಿಜೆಪಿ. ಆಡಳಿತದಲ್ಲಿರುವಾಗ ಆಗಾಗ ಬಿಜೆಪಿಯ ಮಾರ್ಗದರ್ಶಕ ಸಂಸ್ಥೆಯಾದ ಆರ್.ಎಸ್.ಎಸ್ ನಿರ್ದೇಶನಗಳನ್ನು ತಪ್ಪದೇ ಪಾಲಿಸಿದರು. ಚಡ್ಡಿ ಹಾಕಿಕೊಂಡು ಡ್ರಿಲ್ ಮಾಡಿದರು. ಕಳೆದ ಸಾರಿ 2008ರಲ್ಲಿ ಬಿಜೆಪಿ ಚುನಾವಣೆಗೆ ಸ್ಪರ್ಧಿಸಿದಾಗ 224 ಕ್ಷೇತ್ರಗಳಲ್ಲಿ ಪಾರ್ಟಿ ಅಭ್ಯರ್ಥಿಯಾಗಿ ಒಬ್ಬೇ ಒಬ್ಬ ಅಲ್ಪಸಂಖ್ಯಾತ ಇರಲಿಲ್ಲ. ಒಂದು ಸಮುದಾಯವನ್ನು ದೂರ ಇಟ್ಟುಕೊಂಡೇ ಅಧಿಕಾರಕ್ಕೆ ಬರಬಹುದು ಎಂದು ನಂಬಿಕೊಂಡಿದ್ದ ಪಕ್ಷ ಅದು.

ಬಿಜೆಪಿ ಬಿಟ್ಟ ನಂತರ ಮಾನ್ಯ ಯಡಿಯೂರಪ್ಪನವರು ಏಕ್ ದಂ ಜಾತ್ಯತೀತರಾಗಿಬಿಟ್ಟರು. ಜಬ್ಬಾರ್ ಖಾನ್ ಹೊನ್ನಾಳಿ ಜೊತೆ ನಿಂತು ಪೋಸು ಕೊಡುತ್ತಾರೆ. ಅವರು ಬಿಜೆಪಿಯಲ್ಲಿ ಮುಂದುವರಿದಷ್ಟೂ ಕಾಲ ಹೊನ್ನಾಳಿ ಯಡಿಯೂರಪ್ಪನ ಜೊತೆ ಸೇರುವ ಸಾಧ್ಯತೆ ಇರಲಿಲ್ಲವೇನೋ. ಹಾಗಾದರೆ ಕೋಮುವಾದಿ ಜಾತ್ಯತೀರಾಗುವುದು ಅಷ್ಟು ಸುಲಭದ ಪರಿವರ್ತನೆಯೇ? ಜನಸಾಮಾನ್ಯರ ಪಾಲಿಗೆ ಹೋಗಲಿ, ಚಂಪಾ ಮತ್ತು ಅನಂತಮೂರ್ತಿಯಂತಹವರಿಗೆ ಆ ಪರಿವರ್ತನೆ ಅಷ್ಟು ಸಲೀಸು ಎನಿಸಿತೆ?

ಯಡಿಯೂರಪ್ಪ Yeddyurappa-Honnali-Khanಆರ್.ಎಸ್.ಎಸ್ ವಿಚಾರವಾಗಿ ಇನ್ನೂ ಗೊಂದಲದಲ್ಲಿದ್ದಾರೆ. ಬಹುಶಃ ಅದೇ ಕಾರಣಕ್ಕೆ ಗೋ ಹತ್ಯೆ ಮಸೂದೆ ವಿಚಾರವಾಗಿ ಎಲ್ಲಿಯೂ ಸ್ಪಷ್ಟವಾಗಿ ತಮ್ಮ ನಿಲುವು ಹೇಳಿಲ್ಲ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮಸೂದೆಯನ್ನು ವಿರೋಧಿಸಿ ರಾಜ್ಯಪಾಲರಿಗೂ ಮನವಿ ಮಾಡಿದ್ದಾರೆ. ಆದರೆ ಇದುವರೆಗೂ ಕೆಜೆಪಿ ಆ ತರಹದ ಯಾವುದೇ ಚಟುವಟಿಕೆಗೆ ಕೈ ಹಾಕಿಲ್ಲ.

ಇವರ ಜೊತೆ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತರು ಮತ್ತು ಗೋಮಾಂಸ ಸೇವಿಸುವ ಸಮುದಾಯದವರು ಅಷ್ಟೇ ಅಲ್ಲ, ಪ್ರಾಂಜಲ ಮನಸ್ಸಿನ ಪ್ರಗತಿಪರರು ಕೇಳಲೇ ಬೇಕಾದ ಪ್ರಶ್ನೆ: ಗೋ ಹತ್ಯೆ ನಿಷೇಧಿಸುವ ಮಸೂದೆಯ ಬಗ್ಗೆ ಕೆಜೆಪಿ ಪಕ್ಷದ ನಿಲುವೇನು?

(ಚಿತ್ರ ಕೃಪೆ: ದಿ ಹಿಂದು)

ಬದುಕು ಕಸಿದುಕೊಂಡವನಿಗೆ ಬದುಕುವ ಹಕ್ಕು ಬೇಕೇ?


-ಚಿದಂಬರ ಬೈಕಂಪಾಡಿ


 

ರಾಷ್ಟ್ರದ ಶಕ್ತಿ ಕೇಂದ್ರ ದೆಹಲಿಯಲ್ಲಿ ನಡೆದಿರುವ ಎರಡು ಗ್ಯಾಂಗ್ ರೇಪ್ ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸಿವೆ, ಭಯದ ವಾತಾವರಣದಲ್ಲಿ ಬದುಕು ಅದೆಷ್ಟು ಅಸುರಕ್ಷಿತ ಎನ್ನುವ ಚಿಂತೆ ಹುಟ್ಟು ಹಾಕಿವೆ. ಕೇವಲ ಐದು ದಿನಗಳ ಅಂತರದಲ್ಲಿ ರಾಜಧಾನಿಯಲ್ಲಿ ನಡೆದಿರುವ ಈ ಕುಕೃತ್ಯಗಳು ವಿಕೃತ ಮನಸ್ಸಿನ ಅಟ್ಟಹಾಸ ಎನ್ನುವುದರಲ್ಲಿ ಅನುಮಾನವಿಲ್ಲ.

ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಒಂಟಿ ಮಹಿಳೆಯ ಮೇಲೆ ಮನೆಗೆ ನುಗ್ಗಿ ನಡೆಸಿದ ಕ್ರೌರ್ಯ ಅಮಾನುಷ ಮಾತ್ರವಲ್ಲ ಹೇಯವಾದುದು. ಓರ್ವ ಹೆಣ್ಣು ಮಗಳು ಅಧಿಕಾರ ನಡೆಸುತ್ತಿರುವ ದೆಹಲಿಯಲ್ಲಿ ಹೆಣ್ಣು ಮಕ್ಕಳಿಗೇ ರಕ್ಷಣೆಯಿಲ್ಲ ಎನ್ನುವಂತಾಗಿರುವುದು ಕಾಕತಾಳೀಯ. ಹಾಗೆಂದು ಬೇರೆ ರಾಜ್ಯಗಳು ಇಂಥ ಘಟನೆಗಳಿಂದ ಹೊರತಾಗಿವೆ ಎನ್ನುವಂತಿಲ್ಲ. ಬೆಳಕಿಗೆ ಬಂದಿರುವ ಮತ್ತು ಮಾಧ್ಯಮಗಳ ಬೆಳಕಲ್ಲಿ ಗಮನ ಸೆಳೆದ ಪ್ರಕರಣಗಳು ಇವು ಹೊರತು ಇಡೀ ದೇಶದಲ್ಲಿ ನಿತ್ಯವೂ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ, ಆದರೆ ಅವುಗಳು ಬೆಳಕಿಗೆ ಬರುವುದಿಲ್ಲ; ಅನೇಕ ಕಾರಣಗಳಿಂದಾಗಿ.

ಒಂದು ಮಾಹಿತಿಯ ಪ್ರಕಾರ ದೇಶದಲ್ಲಿ ಪ್ರತೀ 20 ನಿಮಿಷಗಳಿಗೆ ಓರ್ವ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯುತ್ತಿದೆಯಂತೆ. ಕಳೆದ ಅಕ್ಟೋಬರ್ ಒಂದೇ ತಿಂಗಳಲ್ಲಿ ಹರ್ಯಾಣದಲ್ಲಿ 17 ಅತ್ಯಾಚಾರ ಪ್ರಕರಣಗಳು ನಡೆದಿವೆ. 2010 ರಲ್ಲಿ ದೇಶದಲ್ಲಿ 20,206 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೆಳಕಿಗೆ ಬಂದು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ಇಷ್ಟಿದ್ದರೆ ಬೆಳಕಿಗೆ ಬಾರದೆ ಅವಮಾನಕ್ಕೆ ಅಂಜಿ, ದಬ್ಬಾಳಿಕೆಗೆ ನಲುಗಿ ಬದುಕು ಕಳೆದುಕೊಂಡ ಪ್ರಕರಣಗಳು ಅದೆಷ್ಟಿರಬಹುದು? ನೀವೇ ಊಹಿಸಿಕೊಳ್ಳಿ.

ಇಂಥ ಕೃತ್ಯಗಳು ಯಾಕಾಗಿ ಘಟಿಸುತ್ತವೆ ಎನ್ನುವ ಪ್ರಶ್ನೆಗೆ ಉತ್ತರ ಇಂಥ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕೊಡುವ ಶಿಕ್ಷೆ ದುರ್ಬಲವಾಗಿರುವುದು. ಮಾನವಹಕ್ಕುಗಳನ್ನು ಪ್ರತಿಪಾದಿಸುವವರು ಮರಣ ದಂಡನೆಯಂಥ ಶಿಕ್ಷೆ ರದ್ಧು ಮಾಡಬೇಕು ಎನ್ನುತ್ತಾರೆ. rape-illustrationಆದರೆ ಕೀಚಕರ ಕೈಗೆ ಸಿಕ್ಕಿ ನಲುಗಿ ಬದುಕು ಕಳೆದುಕೊಂಡ ಹೆಣ್ಣು ಮಗಳಿಗೆ ನ್ಯಾಯ ಕೊಡುವ ವಿಧಾನ ಹೇಗೆ? ಅತ್ಯಾಚಾರಿಗೆ ಜೈಲು ಶಿಕ್ಷೆ ಅವನಿಂದ ಶೀಲ ಕಳೆದುಕೊಂಡವಳಿಗೆ ಮರಳಿ ಶೀಲ ತಂದುಕೊಡುವುದೇ? ಆಕೆ ಇತರರಂತೆ ಬದುಕು ಸಾಗಿಸಲು ಸಾಧ್ಯವೇ? ಈ ಸಮಾಜ ಆಕೆಯನ್ನು ಹೇಗೆ ನೋಡುತ್ತದೆ? ಕಾನೂನು, ಕೋರ್ಟ್ ಆಕೆಯನ್ನು ಹೇಗೆಲ್ಲಾ ಪ್ರಶ್ನೆ ಮಾಡುತ್ತದೆ? ಕಟಕಟೆಯಲ್ಲಿ ನಿಂತು ಆಕೆ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಹೇಳಿಕೊಳ್ಳುವುದು ಸಾಧ್ಯವೇ? ಆಕೆ ಹೇಳಿಕೊಳ್ಳದಿದ್ದರೆ ಕಾನೂನು ಆಕೆಗೆ ರಕ್ಷಣೆ ಕೊಡುತ್ತದೆಯೇ? ಇಂಥ ನೂರೆಂಟು ಪ್ರಶ್ನೆಗಳು ಉತ್ತರ ಕೊಡುವುದಿಲ್ಲ, ಅವು ಪ್ರಶ್ನೆಗಳಾಗಿಯೇ ಉಳಿದು ಬಿಡುತ್ತವೆ. ಈ ದೌರ್ಬಲ್ಯವನ್ನು ಅತ್ಯಾಚಾರಿಗಳು ತಮ್ಮ ಬಂಡವಾಳ ಮಾಡಿಕೊಳ್ಳುತ್ತಾರೆ, ಕಾನೂನಿನ ನೆರವಿನಿಂದ ಅವನೂ ಪಾರಾಗಲು ಸಾಕಷ್ಟು ಅನುಕೂಲತೆಗಳಿವೆ ಎನ್ನುವುದನ್ನು ಮರೆಯಲು ಸಾಧ್ಯವೇ?

ಜಿದ್ದು, ಆಕರ್ಷಣೆ, ವಿಕೃತ ಕಾಮ, ಮನೋವಿಕೃತಿ, ದ್ವೇಷ, ದೌರ್ಬಲ್ಯ ಅತ್ಯಾಚಾರಕ್ಕೆ ಹಲವು ಕಾರಣಗಳು. ಅವಳು ಅಬಲೆ ಎನ್ನುವ ಪುರುಷನ ಬಹುಮುಖ್ಯ ನಂಬಿಕೆ ಹೇಯ ಕೃತ್ಯಕ್ಕೆ ಹೇತು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಸಮಾನಳು ಎನ್ನುವ ಅಥವಾ ಆಕೆಯೂ ಸರಿಸಮಾನಳು ಎನ್ನುವುದು ಇನ್ನೂ ನೆಲೆಗೊಂಡಿಲ್ಲ. ಆಕೆಯನ್ನು ಹಲವು ನಿರ್ಬಂಧಗಳು ಬಂಧಿಸಿಟ್ಟಿವೆ. ಓರ್ವ ಹೆಣ್ಣು ಮಗಳ ಮೇಲೆ ಅತ್ಯಾಚಾರ ಮಾಡಲು ಮುಗಿ ಬೀಳುವ ದಾಂಡಿಗರನ್ನು ಕಂಡು ಮನೆ ಮಂದಿ ತಮ್ಮ ಮನೆಯ ಬಾಗಿಲು ಭದ್ರಪಡಿಸಿಕೊಳ್ಳುವ ದೃಶ್ಯಗಳನ್ನು ಸಿನಿಮಾಗಳಲ್ಲಿ ತೋರಿಸುತ್ತಾರೆ. ಆಕೆ ನಡುಬೀದಿಯಲ್ಲಿ ಶೀಲಕಳೆದುಕೊಂಡು ರೋಧಿಸುವುದನ್ನು ಕಿಟಕಿ ಮರೆಯಲ್ಲಿ ಇಣುಕಿ ಜನ ನೋಡುತ್ತಾರೆ. ಅತ್ಯಾಚಾರಿಗಳು ತಮ್ಮ ಪೌರುಷವನ್ನು ಪ್ರದರ್ಶಿಸಿಕೊಂಡು ರಾಜಾರೋಷವಾಗಿ ಹೋಗುತ್ತಾರೆ. ಇಂಥ ದೃಶ್ಯಗಳು ಕೊಡುವ ಸಂದೇಶವಾದರೂ ಏನು? ಇದು ಕಾಲ್ಪನಿಕವಾದರೂ ದೆಹಲಿಯಲ್ಲಿ ಬಸ್‌ನಲ್ಲಿ ನಡೆದಿರುವ ರೇಪ್, ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಾಡಿದ ರೇಪ್ ವಾಸ್ತವಕ್ಕಿಳಿಯಲು ಪ್ರೇರಣೆ ಏನಿರಬಹುದು?

ಮಾನವ ಹಕ್ಕುಗಳ ರಕ್ಷಣೆಯ ನೆಪದಲ್ಲಿ ಇಂಥ ಅಮಾನವೀಯ ಕೃತ್ಯಗಳನ್ನು ಸಹಿಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ಗ್ಯಾಂಗ್ ರೇಪ್ ಪ್ರಕರಣಗಳು ಉದಾಹರಣೆ. ಅಮಾನವೀಯತೆಯನ್ನು ಮಾನವೀಯತೆಯ ಬೆಳಕಲ್ಲಿ ನೋಡಿದರೆ ಬದುಕು ಕಳೆದುಕೊಂಡ ಹೆಣ್ಣು ಮಗಳ ಹಕ್ಕಿನ ನಿರಾಕರಣೆಯಾಗುವುದಿಲ್ಲವೇ?

ಇವೆಲ್ಲವೂ ನಗರಕೇಂದ್ರೀಕೃತ ವ್ಯವಸ್ಥೆಯ ಮೇಲಿನ ನೋಟವಾದರೆ ಹಳ್ಳಿ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಅರಣ್ಯರೋಧನ. ಹಾಲು ಕೊಡಲು ಹೋಗುವ ಬಾಲಕಿ, ಜಾನುವಾರು ಮೇಯಿಸಲು ಕಾಡಿಗೆ ಹೋಗುವ ಹೆಣ್ಣು ಮಕ್ಕಳು, ಹೊಲ, ಗದ್ದೆ ಕೆಲಸಗಳಿಗೆ ಹೋಗಿ ಬರುವ ಮಹಿಳೆಯರು ಅನುಭವಿಸುತ್ತಿರುವ ಯಾತನೆ ಬೆಳಕಿಗೆ ಬರುವುದೇ ಇಲ್ಲ.

ಹಾಗಾದರೆ “ಮುಂದೇನು?” ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಎಷ್ಟಿಡಬಹುದು? ದೆಹಲಿಯ ಪರಿಸ್ಥಿತಿ ಅವಲೋಕಿಸಿದರೆ ಈಗ ಭುಗಿಲೆದ್ದಿರುವ ಅಲ್ಲಿನ ಮಹಿಳೆಯರ ಆಕ್ರೋಶ ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಿರುವುದರ ದ್ಯೋತಕ. ನೈತಿಕ ಪೊಲೀಸಿಂಗ್ ಪ್ರೋತ್ಸಾಹಿಸುವಂಥದ್ದಲ್ಲ. ಆದರೆ ಇಂಥ ಘಟನೆಗಳಿಗೆ ಕಡಿವಾಣ ಹಾಕಲು ಕಾನೂನನ್ನೇ ಕೈಗೆತ್ತಿಕೊಳ್ಳುವ ಅನಿವಾರ್ಯತೆ ಆತ್ಮರಕ್ಷಣೆಗೆ ಅನಿವಾರ್ಯವೇನೋ ಅನ್ನಿಸದಿರದು. ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್, ಜಯಲಲಿತಾ, ಉಮಾಭಾರತಿ ತಮ್ಮ ರಾಜಕೀಯವನ್ನು ಪಕ್ಕಕ್ಕೆ ಸರಿಸಿ ಚಿಂತನೆಗೆ ಮುಂದಾಗುವುದು ಈ ಕ್ಷಣದ ತುರ್ತು.

ಸಾಮೂಹಿಕ ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವುದು ಒಂದು ದಿನಕ್ಕೆ ಸೀಮಿತವಾಗಬಾರದು. ಅಬಲೆಯ ಬದುಕನ್ನು ಕಸಿದುಕೊಳ್ಳುವ ಅತ್ಯಾಚಾರಿಗೆ ಬದುಕುವ ಹಕ್ಕು ಬೇಕೆನ್ನುವುದು ಅಮಾನವೀಯ. ಗಲ್ಲು ಶಿಕ್ಷೆ ಅತ್ಯಾಚಾರಿಗೆ ಅತಿಯಾದ ಶಿಕ್ಷೆ ಎನ್ನುವುದು ಸಹಜ, ಆದರೆ ನಡುಬೀದಿಯಲ್ಲಿ ಬದುಕು ಕಳೆದುಕೊಂಡ ಅಬಲೆಗೆ ನ್ಯಾಯ ಸಿಗಬೇಕಾದರೆ, ಹೆಣ್ಣು ಮಕ್ಕಳು ನೆಮ್ಮದಿಯಿಂದ ಬದುಕಬೇಕಾದರೆ ಅತ್ಯಾಚಾರಿಗಳ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಅಪರಾಧವಾಗಲಾರದು, ಅಲ್ಲವೇ?

(ಚಿತ್ರಕೃಪೆ: ತೆಹೆಲ್ಕ)

ಪ್ರಜಾ ಸಮರ – 14 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಮಧ್ಯಭಾರತದ ಕೆಲವು ಸರ್ಕಾರಗಳು ಅಭಿವೃದ್ಧಿಯ ನೆಪದಲ್ಲಿ ಅಮಾಯಕರನ್ನು ಶೋಷಿಸುತ್ತಾ ಇರುವ ಇತಿಹಾಸವನ್ನು ಅರಿಯಬೇಕಾದರೆ ನೀವು ದಂಡಕಾರಣ್ಯ, ದಂತೇವಾಡ, ಬಸ್ತಾರ್ ಅರಣ್ಯ ಪ್ರದೇಶಕ್ಕೆ ಹೋಗಬೇಕು. ಹೊರಜಗತ್ತಿನ ಪಾಲಿಗೆ ಶಾಂತಿ ಮಂತ್ರ ಜಪಿಸುತ್ತಾ ಮುಖವಾಡ ಹೊತ್ತು ನಿಂತಿರುವ ಈ ಸರ್ಕಾರಗಳ ದ್ವಂದ್ವ ನೀತಿ, ನಾಚಿಕೆ ಮತ್ತು ನೈತಿಕತೆಯಿಲ್ಲದ ನಡುವಳಿಕೆ ಎಲ್ಲವೂ ಅಲ್ಲಿ ನಿಮ್ಮೆದುರು ಅನಾವರಣಗೊಳ್ಳುತ್ತವೆ.

ಕಣ್ಣೆದುರಿಗೆ ಕಾಣುತ್ತಿರುವ ಒಂದು ಜ್ವಲಂತ ಸಮಸ್ಯೆಯನ್ನು ಕಳೆದ ಮೂರು ದಶಕಗಳಿಂದ ಪರಿಹರಿಸಲಾಗದ ಸರ್ಕಾರದ ವೈಫಲ್ಯಗಳು ಮತ್ತು ಗುಪ್ತವಾಗಿ ಹಿಂಸೆಯ ಹಾದಿ ತುಳಿದಿರುವ ಸರ್ಕಾರದ ನೀತಿಗಳು ನಾಗರಿಕ ಜಗತ್ತಿಗೆ ಅಸಹ್ಯ ಮೂಡಿಸುತ್ತವೆ. ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳು ಬಡವರು ಎಂದು ವಾಖ್ಯಾನ ಮಾಡುವ ನಮ್ಮ ಪ್ರದಾನ ಮಂತ್ರಿಗೆ, ಅವರು ಅಪಾರ ಖನಿಜ ಸಂಪತ್ತು ಇರುವ ಅರಣ್ಯದ ಭೂಮಿಗೆ ನಿಜವಾದ ವಾರಸುದಾರರು ಎಂಬ ಕನಿಷ್ಟ ತಿಳುವಳಿಕೆ ಇಲ್ಲ. ನಕ್ಸಲರ ಸಮಸ್ಯೆಯ ಮೂಲವನ್ನು ಗ್ರಹಿಸಲು ವಿಫಲವಾಗಿರುವ, ಸಿಕ್ಕಿದಷ್ಟು ದೋಚಲು ದಲ್ಲಾಳಿಗಳಂತೆ ನಿಂತಿರುವ ಈ ದೇಶದ ಸರ್ಕಾರಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ನಕ್ಸಲರ ಚಟುವಟಿಕೆ ತಡೆಯಲು, ಆದಿವಾಸಿಗಳ, ಬಡ ಕೂಲಿಗಾರರ, ರೈತರ ಅಭಿವೃದ್ದಿಯನ್ನು ಮಾನದಂಡವಾಗಿಟ್ಟುಕೊಳ್ಳಲು ವಿಫಲವಾಗಿರುವ ಸರ್ಕಾರಗಳು ಹಿಂಸೆಯ ಹಾದಿಯನ್ನು ತುಳಿದಿರುವುದು ವರ್ತಮಾನ ಭಾರತದ ದುರಂತ.

ದಂತೇವಾಡ ಮತ್ತು ಬಸ್ತರ್ ಅರಣ್ಯ ಪ್ರದೇಶದಲ್ಲಿ ಗಿರಿಜನರ ಅಭಿವೃದ್ಧಿಯನ್ನು ತಮ್ಮ ಉಸಿರಾಗಿಸಿಕೊಂಡು ದುಡಿಯುತ್ತಿರುವB.D. Sharma ಗಾಂಧಿವಾದಿ ಹಾಗೂ ವನವಾಸಿ ಚೇತನ ಆಶ್ರಮ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ದುಡಿಯುತ್ತಿರುವ ಹಿಮಾಂಶು ಕುಮಾರ್ ಮತ್ತು ಬಸ್ತರ್ ಪ್ರದೇಶದಲ್ಲಿ ನಾಲ್ಕು ದಶಕಗಳ ಕಾಲ ಜಿಲ್ಲಾಧಿಕಾರಿಯಾಗಿ ದುಡಿದು ನಿವೃತ್ತರಾಗಿ ಈಗ ಗಿರಿಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಹಿರಿಯ ನಿವೃತ್ತ ಐ.ಎ.ಎಸ್. ಅಧಿಕಾರಿ himamsu kumarಬಿ.ಡಿ.ಶರ್ಮ ಇವರನ್ನು ಮಾತನಾಡಿಸಿದರೆ ಸಾಕು ಸರ್ಕಾರಗಳ ಹಲವಾರು ಮುಖವಾಡಗಳು ಅನಾವರಣಗೊಳ್ಳುತ್ತವೆ.

ಮಾವೋವಾದಿ ನಕ್ಷಲರು ಇಟಲಿ ಪ್ರಜೆಗಳನ್ನ, ಒರಿಸ್ಸಾದ ಶಾಸಕನನ್ನ, ಮತ್ತು ಮಲ್ಕನ್ ಗಿರಿ ಜಿಲ್ಲಾಧಿಕಾರಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಮಧ್ಯಬಾರತದ ರಾಜ್ಯ ಸರ್ಕಾರಗಳು ಇದೇ ಶರ್ಮ ಎದುರು ಮಂಡಿಯೂರಿ ಕುಳಿತು ಬಿಡುಗಡೆಗಾಗಿ ಪ್ರಾರ್ಥಿಸುತ್ತವೆ. ಇಡೀ ದಂಡಕಾರಣ್ಯದಲ್ಲಿ ಎಲ್ಲಿ ಬೇಕಾದರಲ್ಲಿ ಬರಿಗೈಲಿ ತಿರುಗಬಲ್ಲ ನೈತಿಕತೆ ಮತ್ತು ಗೌರವವನ್ನು ಶರ್ಮ ಹೊಂದಿದ್ದಾರೆ. ಇವರನ್ನು ಕಂಡ ಮಾವೋವಾದಿ ನಕ್ಸಲರು ಬಂದೂಕ ಕೆಳಗಿಟ್ಟು ತಮ್ಮ ಎರಡು ಕೈಯೆತ್ತಿ ನಮಸ್ಕರಿಸುತ್ತಾರೆ. ಇವೊತ್ತಿಗೂ ನಾನೊಬ್ಬ ನಿವೃತ್ತ ಐ.ಎ.ಎಸ್. ಅಧಿಕಾರಿ ಎಂಬ ಅಹಂಕಾರವಿಲ್ಲದೆ, ಖಾದಿ ಜುಬ್ಬಾ, ಪೈಜಾಮ ಧರಿಸಿ, ಒಂದು ಕೈಚೀಲವನ್ನು ಹೆಗಲಿಗೆ ನೇತುಹಾಕಿಕೊಂಡು, ಸಾಧಾರಣ ಹವಾಯಿ ಚಪ್ಪಲಿಗಳನ್ನು ಧರಿಸಿ ಪ್ರೈಮರಿ ಶಾಲೆಯ ನಿವೃತ್ತ ಶಿಕ್ಷರಂತೆ ಇವರು ತಮ್ಮ ನಿವೃತ್ತಿ ವೇತನದ ಹಣವನ್ನು ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಿ ಅಪ್ಪಟ ಗಾಂಧಿವಾದಿಗಳಾಗಿ ಬದುಕುತ್ತಿದ್ದಾರೆ.

ತಮ್ಮ ಸೇವಾವಧಿಯಲ್ಲಿ ಅವರು ಕೇಂದ್ರ ಸರ್ಕಾರಕ್ಕೆ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಸಲ್ಲಿಸಿದ ವರದಿಗಳು ಧೂಳು ತಿನ್ನುತ್ತಿವೆ. ಆದರೆ ಹಿಂದೆ ಅರಣ್ಯವಾಸಿಗಳಿಗೆ ಅಧಿಕಾರಿಯಾಗಿ ಸಲ್ಲಿಸಲಾಗದ ಸೇವೆಯನ್ನು ಈಗ ಗಾಂಧಿವಾದಿಯಾಗಿ ಅಲ್ಲಿದ್ದುಕೊಂಡು ಸಲ್ಲಿಸುತಿದ್ದಾರೆ.

ಅವರ ಎದೆಯೊಳಗೆ ನಮ್ಮನ್ನಾಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ಮಡುವುಗಟ್ಟಿದೆ. 1996 ರಲ್ಲಿ ಆದಿವಾಸಿಗಳ ಅಭಿವೃದ್ಧಿಗಾಗಿ ಸಲ್ಲಿಸಿದ ಬುರಿಯ ವರದಿಯನ್ನು ಕಣ್ಣೆತ್ತಿ ನೋಡದ ಕೇಂದ್ರ ಸರ್ಕಾರದ ಬಗ್ಗೆ ಅವರಿಗೆ ಬೇಸರವಿದೆ. ಆದಿವಾಸಿಗಳ ಬೇಡಿಕೆಯಾದ ಜಲ್, ಜಂಗಲ್, ಜಮೀನ್ ( ನೀರು, ಅರಣ್ಯ, ಭೂಮಿ) ಇವುಗಳ ಮೇಲಿನ ಹಕ್ಕನ್ನು ವರ್ಗಾಯಿಸುವವರೆಗೂ ನಕ್ಸಲ್ ಸಮಸ್ಯೆ ಬಗೆಹರಿಯುದಿಲ್ಲ ಎಂಬುದು ಬಿ.ಡಿ.ಶರ್ಮರವರ ಧೃಡವಾದ ನಿಲುವು. ಕೇಂದ್ರದ ಬುಡಕಟ್ಟು ಜನಾಂಗದ ಅಭಿವೃದ್ಧಿಯ ಮಂಡಲಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಕ್ಸಲ್ ಪೀMavo Indiaಡಿತ ಜಿಲ್ಲೆಗಳ ಆದಿವಾಸಿಗಳ ಅಭಿವೃಧ್ಧಿಗಾಗಿ ಕೇಂದ್ರ ಸರ್ಕಾರ 10000 ಕೋಟಿ ಹಣವನ್ನು ಮೀಸಲಿಟ್ಟು, ಗ್ರಾಮಪಂಚಾಯತ್ ಮಾದರಿಯಲ್ಲಿ ಆದಿವಾಸಿ ಹಳ್ಳಿಗಳನ್ನು ಸಬಲಿಕರಣಗೊಳಿಸಬೇಕೆಂದು ಸಲಹೆ ನೀಡಿದ್ದರು. ಜೊತೆಗೆ 2006 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಜಾರಿಗೆ ಬಂದ ಅರಣ್ಯ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಆದಿವಾಸಿಗಳಿಗೆ ವರ್ಗಾಯಿಸಿ ಉತ್ಪನ್ನಗಳಿಂದ ಬರುವ ಆದಾಯವನ್ನು ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮುಂತಾದ ಯೋಜನೆಗಳಿಗೆ ವಿನಿಯೋಗಿಬೇಕೆಂದು ಶರ್ಮ ಒತ್ತಾಯಿಸಿದ್ದರು.

ಸರ್ಕಾರಗಳು ಮತ್ತು ಪೋಲಿಸರು ಇಂತಹ ಅತ್ಯಮೂಲ್ಯ ಸಲಹೆಗಳನ್ನು ಬದಿಗಿತ್ತು, ತಮ್ಮ ವಿವೇಚನಾ ರಹಿತ ನಡುವಳಿಕೆ ಮುಖಾಂತರ ಹಿಂಸೆ ಮತ್ತು ರಕ್ತಪಾತಕ್ಕೆ ಕಾರಣರಾಗಿದ್ದಾರೆ. ದಶಕದ ಹಿಂದೆ ದಂಡಕಾರಣ್ಯದಲ್ಲಿ ಕೇವಲ ಐದು ಸಾವಿರ ಇದ್ದ ಮಾವೋವಾದಿ ನಕ್ಸಲಿಯರ ಸಂಖ್ಯೆ ಈಗ ಒಂದು ಲಕ್ಷ ದಾಟಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ವಿವೇಕ ಯಾರಿಗೂ ಇದ್ದಂತಿಲ್ಲ.

2005 ರಲ್ಲಿ ನಕ್ಸಲರನ್ನು ನಿಗ್ರಹಿಸುವ ಸಲುವಾಗಿ ಆದಿವಾಸಿಗಳನ್ನು ಎತ್ತಿಕಟ್ಟುವ ಯೋಜನೆಯಾದ “ಸಲ್ವ ಜುಡಂ” (ಶಾಂತಿ ಅಂದೋಲನ) ಹೆಸರಿನಲ್ಲಿ ಅಮಾಯಕ ಆದಿವಾಸಿ ಯುವಕರಿಗೆ ಬಂದೂಕ ಕೊಟ್ಟು ನಕ್ಸಲರನ್ನು ಮಟ್ಟ ಹಾಕಲು ಹೇಳಲಾಯಿತು. Salwa Judumಇದಕ್ಕೊಂದು ಸುಧೀರ್ಘ ಇತಿಹಾಸವಿದೆ. ನಕ್ಸಲರಿಂದ ಘಾಸಿಗೊಂಡಿದ್ದ ಜಮೀನ್ದಾರರುಗಳಲ್ಲಿ ಒಬ್ಬನಾಗಿದ್ದ ಮಹೇಂದ್ರಕುಮಾರ್ ಎಂಬ ಕ್ರಿಮಿನಲ್ ವ್ಯಕ್ತಿ ಇದನ್ನು 1990 ರ ದಶಕದಲ್ಲಿ ಹುಟ್ಟುಹಾಕಿದ್ದ. 2005 ರಲ್ಲಿ ಆತನೇ ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದನಾಗಿ ಆಯ್ಕೆಯಾದ ಮೇಲೆ ಈ ಸಂಘಟನೆಗೆ ಮರುಜೀವ ಬಂತು. ನಕ್ಸಲರಿಗೆ ಸಹಾಯ ಮಾಡುತಿದ್ದಾರೆ ಎಂಬ ಒಂದೇ ಕಾರಣದಿಂದ ಹಳ್ಳಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿಕೊಂಡು ಬಂದು ಸರ್ಕಾರಿ ಕಟ್ಟಡಗಳಲ್ಲಿ ಕೂಡಿಹಾಕಲಾಯಿತು. ಆದಿವಾಸಿಗಳ ಜಾನುವಾರುಗಳು, ಕುರಿ, ಕೋಳಿ, ಮೇಕೆ ಎಲ್ಲವೂ ನಿಗ್ರಹ ಪಡೆಯ ಸೈನಿಕರು ಮತ್ತು ಪೊಲೀಸರ ಪಾಲಾದವು. ಕೂಡಿ ಹಾಕಿರುವ ಶಿಬಿರಗಳಿಂದ ಮತ್ತೆ ಅರಣ್ಯಕ್ಕೆ ಓಡಿ ಹೋಗುವ ಆದಿವಾಸಿಗಳನ್ನು ನಕ್ಸಲ್ ಬೆಂಬಲಿಗರು ಎಂಬ ಹಣೆ ಪಟ್ಟಿ ಕಟ್ಟಿ ಗುಂಡಿಟ್ಟು ಕೊಲ್ಲಲಾಯಿತು. ಈ ರೀತಿ ನಕಲಿ ಕಾರ್ಯಾಚರಣೆಯಲ್ಲಿ ಛತ್ತೀಸ್ ಗಡ ರಾಜ್ಯದ ಬಸ್ತರ್ ಅರಣ್ಯ ಪ್ರದೇಶದಲ್ಲಿ ಇನ್ನೂರಕ್ಕೂ ಹೆಚ್ಚು ಆದಿವಾಸಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅರಣ್ಯ ತೊರೆದು ಶಿಬಿರಕ್ಕೆ ಬರಲು ಒಪ್ಪದ ಆದಿವಾಸಿಗಳ ಹಳ್ಳಿಗಳನ್ನು ಸುಟ್ಟು ಭಸ್ಮ ಮಾಡಲಾಗಿದೆ. ಇಂತಹ ಅನ್ಯಾಯದ ವಿರುದ್ದ ದನಿಯೆತ್ತಿದ ನಾಗರೀಕ ಹಕ್ಕುಗಳ ಸಂಘಟನೆಯ ಉಪಾಧ್ಯಕ್ಷರಾಗಿದ್ದ ಮಕ್ಕಳ ತಜ್ಞ ಡಾ. ಬಿಯಾಂಕ ಸೇನ್‌ರ ಮೇಲೆ ಸುಳ್ಳು ಆಪಾದನೆ ಹೊರಿಸಿ ಛತ್ತಿಸ್ ಗಡ ಸರ್ಕಾರ ಜೀವಾವಧಿ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿತ್ತು.

ದೆಹಲಿಯ ಜವಹರಲಾಲ್ ವಿ.ವಿ.ಯಲ್ಲಿ ಪ್ರಾಧ್ಯಪಕರಾಗಿದ್ದ ಬಿಯಾಂಕ ಸೇನ್ ತಮ್ಮ ಪತ್ನಿ ಇಲಿನಾ ಸೇನ್ ಜೊತೆ ಬಸ್ತರ್ ಮತ್ತು ದಂತೆವಾಡ ಅರಣ್ಯ ವಲಯದಲ್ಲಿ ಆದಿವಾಸಿ ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದರು. ಬಿಯಾಂಕ ಸೇನ್ ತಮ್ಮ ಈ ಸೇವೆಗಾಗಿ ಗಾಂಧಿ ಶಾಂತಿ ಪುರಸ್ಕಾರವು ಸೇರಿದಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಶಸ್ತಿಯ ಜೊತೆಗೆ ಹನ್ನೆರಡಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆಳುವ ಸರ್ಕಾರದ ದಮನ ನೀತಿಯನ್ನು ಹೊರಜಗತ್ತಿಗೆ ಎತ್ತಿ ತೋರಿಸಿದ ಒಂದೇ ಒಂದು ಕಾರಣಕ್ಕೆ ಅವರನ್ನು ಛತ್ತೀಸ್‌ ಗಡ ಸರ್ಕಾರ ಕ್ರಿಮಿನಲ್ ಅಪರಾಧಿಯಂತೆ ಚಿತ್ರಿಸಿ 18 ತಿಂಗಳುಗಳ ಕಾಲ ಜೈಲಿಗೆ ತಳ್ಳಿತ್ತು. (ಜೈಲಿನಲ್ಲಿದ್ದ ಹಿರಿಯ ಮಾವೋವಾದಿ ನಾಯಕ ನಾರಾಯಣ್ ಸನ್ಯಾಲ್ ಎಂಬುವರನ್ನು ಬೇಟಿ ಮಾಡಿದ ಸಂದರ್ಭದಲ್ಲಿ ಡಾ.ಸೇನ್‌ರವರು ಸನ್ಯಾಲ್‌ರಿಂದ ಒಂದು ಸಂದೇಶವನ್ನು ನಕ್ಸಲಿಯರಿಗೆ ತಲುಪಸಿದರು ಎಂಬ ಆರೋಪ.) ಜಗತ್ತಿನ ಪ್ರಸಿದ್ದ ಚಿಂತಕರಲ್ಲಿ ಒಬ್ಬರಾದ ನೋಮ್ ಚಾಮ್‌ಸ್ಕಿ ಸೇರಿದಂತೆ ವಿಶ್ವಸಂಸ್ಥೆಯ ಅಧ್ಯಕ್ಷ ಬಾನ್ ಕಿ ಮೂನ್ ಮುಂತಾದವರು Binayak_Senಬಿಯಾಂಕ ಸೇನ್ ಬಂಧನದ ವಿರುದ್ದ ಧ್ವನಿ ಎತ್ತಿದ ಮೇಲೆ ಸುಪ್ರೀಂ ಕೋರ್ಟ್‌ನಿಂದ ಅವರ ಬಿಡುಗಡೆಯಾಯಿತು. ಇವರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಆರು ವರ್ಷಗಳಿಂದ ಜೈಲಿನಲ್ಲಿದ್ದ ನಾರಾಯಣ್ ಸನ್ಯಾಲ್‌ರ ವಯಸ್ಸನ್ನು ಗಮನಿಸಿ (78 ವರ್ಷಗಳು) ಅವರ ಮೇಲಿನ ಮೊಕದ್ದಮೆಗಳನ್ನು ಪಕ್ಕಕ್ಕೆ ಸರಿಸಿ ಬಿಡುಗಡೆ ಮಾಡಿತು. (ಗಮನಿಸಿ, ನಕ್ಸಲ್ ಚಳುವಳಿ ಸಂಸ್ಥಾಪಕರಲ್ಲಿ ಒಬ್ಬರಾದ ಕನು ಸನ್ಯಾಲ್ ಬೇರೆ.)

ಇಂತಹದ್ದೇ ಇನ್ನೊಂದು ನೋವಿನ ಕಥೆ ವನವಾಸಿ ಚೇತನ ಆಶ್ರಮ ಸ್ಥಾಪಿಸಿದ ಗಾಂಧಿವಾದಿ ಹಿಮಾಂಶು ಕುಮಾರ್‌ರವರದು. ಅವರ ಆಶ್ರಮವನ್ನು ಸಹ ಸಲ್ವ ಜುಡಂ ಕಾರ್ಯಕರ್ತರ ಮೂಲಕ ಬೆಂಕಿ ಹಚ್ಚಿ ಸುಟ್ಟು ಹಾಕಲಾಯಿತು. ಹಿಮಾಂಶು ಕುಮಾರ್ ಸೇರಿದಂತೆ ಅರಣ್ಯದ ಹಳ್ಳಿಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಕ್ಸಲರ ಕಿರುಕುಳಕ್ಕೆ ಒಳಗಾಗದ ಶಿಕ್ಷಕರು, ಅರೋಗ್ಯ ಇಲಾಖೆಯ ಸೇವಕರು ಇವರ ಮೇಲೆ ನಕ್ಸಲ್ ಮಾಹಿತಿದಾರರು ಮತ್ತು ಬೆಂಬಲಿಗರು ಎಂದು ಆರೋಪಿಸಿ ಕಿರುಕುಳ ನೀಡಲಾಯಿತು. ಏಕೆಂದರೆ ಪೊಲೀಸರು ಮತ್ತು ನಿಗ್ರಹ ಪಡೆಯ ಸೈನಿಕರು ಅರಣ್ಯದಲ್ಲಿ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇವರು ನೆಮ್ಮದಿಯಿಂದ ಓಡಾಡುವುದು ಅನುಮಾನಕ್ಕೆ ಕಾರಣವಾಗಿತ್ತು. ಇಂತಹ ಅವಿವೇಕದ ನಡುವಳಿಕೆಗಳಿಂದಾಗಿ ಸರ್ಕಾರಗಳು ಏಕಕಾಲದಲ್ಲಿ ನಕ್ಸಲರು ಮತ್ತು ನಾಗರಿಕ ಜಗತ್ತಿನ ಪ್ರಜ್ಞಾವಂತರ ವಿರುದ್ದ ಹೋರಾಡಬೇಕಾಗಿದೆ. ಸರ್ಕಾರಗಳು ಮತ್ತು ನಕ್ಸಲ್ ನಿಗ್ರಹ ಪಡೆಗಳು ಹಾಗೂ ಸಲ್ವ ಜುಡಂ ರಾಕ್ಷಸಿ ಕೃತ್ಯವನ್ನು ನೀವು ಹಿಮಾಂಶು ಕುಮಾರ್ ಮುಂಬೈನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯ ವರದಿಯಲ್ಲಿ ಕಾಣಬಹುದು. ಇದರ ಸಂಪೂರ್ಣ ವರದಿ 2009 ನವಂಬರ್ 21 ರ “ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಪತ್ರಿಕೆಯಲ್ಲಿ ಪ್ರಕಟವಾಗಿದೆ.

2009 ರಲ್ಲಿ ಏಳುಸಾವಿರ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ದಾಖಲಾಗಿದ್ದರೂ ಸರ್ಕಾರಗಳು ಇವುಗಳ ಬಗ್ಗೆ ಆಸಕ್ತಿ ವಹಿಸಿಲ್ಲ. ದಂತೆವಾಡ ಮತ್ತು ಬಸ್ತಾರ್ ಅರಣ್ಯದಲ್ಲಿ 2223 ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಅನ್ಯಾಯ ಮತ್ತು ಅಕ್ರಮಗಳ ವಿರುದ್ದ ನಾಗರಿಕ ಹಕ್ಕುಗಳ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದಾಗ ಅಂತಿಮವಾಗಿ 2011 ರ ಜುಲೈ 5 ರಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿ ಸಲ್ವ ಜುಡಂ ಅನ್ನು ವಿಸರ್ಜಿಸಿ, ಶಿಬಿರಗಳಲ್ಲಿ ಕೂಡಿ ಹಾಕಿರುವ ಆದಿವಾಸಿಗಳನ್ನು ಅವರವರ ಹಳ್ಳಿಗಳಿಗೆ ಕಳಿಸಬೇಕೆಂದು ಮಧ್ಯಭಾರತದ ರಾಜ್ಯಗಳಿಗೆ ಆದೇಶಿಸಿತು.

ಸಲ್ವ ಜುಡಂ ಹುಟ್ಟು ಹಾಕಿದ್ದರಿಂದ ಕುಪಿತರಾದ ನಕ್ಸಲರಿಂದ ಸತತ ಐದು ವರ್ಷಗಳ ಕಾಲ ಈ ಅರಣ್ಯದಲ್ಲಿ ಪೊಲೀಸರ ಮಾರಣ ಹೋಮವೇ ನಡೆದು ಹೋಯಿತು. ಇವುಗಳಲ್ಲಿ 2006 ಜುಲೈ 17 ರಂದು ಪೊಲೀಸ್ ಕ್ಯಾಂಪ್ ಮೇಲೆ ನಡೆಸಿದ ದಾಳಿಯಲ್ಲಿ 150 ಪೊಲೀಸರು ಹತರಾಗಿದ್ದರು. 2007 ಮಾರ್ಚ್ 17 ರಂದು ದಂತೆವಾಡದ ವಿದ್ಯಾರ್ಥಿ ನಿಲಯದಲ್ಲಿ ಬಿಡಾರ ಹೂಡಿದ್ದ 80 ಪೊಲಿಸರ ಪೈಕಿ ಅಧಿಕಾರಿಗಳು ಸೇರಿದಂತೆ 55 ಮಂದಿ ಪೊಲೀಸರು ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದರು. ಸಮಸ್ಯೆಯ ಆಳಕ್ಕೆ ಇಳಿಯದ ನಮ್ಮನ್ನಾಳುವ ಜನಪ್ರತಿನಿಧಿಗಳ ಮೂರ್ಖತನದ ನಿರ್ಧಾರಗಳಿಂದಾಗಿ ಇಂತಹ ಹಿಂಸೆ ಮತ್ತು ರಕ್ತಪಾತಕ್ಕೆ ನಾಗರಿಕ ಜಗತ್ತು ಮೌನವಾಗಿ ಸಾಕ್ಷಿಯಾಗಬೇಕಾಗಿದೆ.

(ಮುಂದುವರಿಯುವುದು)

ಪಾಕಿಸ್ತಾನದ ಮಾಧ್ಯಮವೂ, ಭಗತ್‌ಸಿಂಗ್ ಎನ್ನುವ ಶಹೀದರೂ, ಮತ್ತು ನೂರುಲ್ ಅಮಿನ್ ಮೆಂಗಲ್ ಎನ್ನುವ ಲಾಹೋರ್‌ನ ಸರ್ಕಾರಿ ಅಧಿಕಾರಿಯೂ..

– ಬಿ.ಶ್ರೀಪಾದ ಭಟ್

28 ನೇ ಸೆಪ್ಟೆಂಬರ್ 2012 : ಲಾಹೋರ್ : ಪಾಕಿಸ್ತಾನದ ಡಾನ್ ದಿನಪತ್ರಿಕೆಯ ವರದಿ

ಹುತಾತ್ಮ ಭಗತ್ ಸಿಂಗ್‌ರ 105 ನೇ ಜನ್ಮ ದಿನಾಚರಣೆಯನ್ನು ಲಾಹೋರನ ಎರಡು ಪ್ರಮುಖ ಸ್ಥಳಗಳಲ್ಲಿ ಆಚರಿಸಲಾಯಿತು. ಸುಮಾರು 24 ರಾಜಕೀಯ ಹಾಗು ರಾಜಕೀಯೇತರ ಸಂಘಟನೆಗಳನ್ನೊಳಗೊಂಡ “ಭಗತ್ ಸಿಂಗ್ ಮೆಮೋರಿಯಲ್ ಸೊಸೈಟಿ”ಯು ಈ ವಿಶೇಷ ಸಮಾರಂಭಗಳನ್ನು ಆಯೋಜಿಸಿತ್ತು. ಮೊದಲು ಇದನ್ನು “ದಾಯಲ್ ಸಿಂಗ್ ಕಾಲೊನಿ”ಯಲ್ಲಿ Bhagat_Singh_1922ನಡೆಸಲಾಯಿತು. ಆ ಸಂದರ್ಭದಲ್ಲಿ ಅಜೋಕ ತಂಡವು ನಿರ್ವಾನ್ ನದೀಮ್ ನಿರ್ದೇಶಿಸಿದ ಭಗತ್ ಸಿಂಗ್ ಕುರಿತಾದ ಚಲನಚಿತ್ರವನ್ನು ಪ್ರದರ್ಶಿಸಿತು. ನಂತರದ ಭಾಷಣಗಳಲ್ಲಿ ಭಾಷಣಕಾರರು ಭಗತ್ ಸಿಂಗ್‌ನ ಹಿರಿಮೆಯನ್ನು, ಆತನ ಶೌರ್ಯವನ್ನು, ವ್ಯಕ್ತಿತ್ವವನ್ನು ಕುರಿತಾಗಿ ವಿವರವಾಗಿ ಚರ್ಚಿಸಿದರು. ಭಗತ್ ಸಿಂಗ್ ಹಳ್ಳಿಯಾದ ಪಿಂಗಕ್ಕೆ ಸೇರಿದ ಇಕ್ಬಾಲ್ ವಿರ್ಕರವರು ಭಗತ್ ಸಿಂಗ್ ವಾಸಿಸುತ್ತಿದ್ದ ಮನೆಯಲ್ಲಿಯೇ ತಾವು ವಾಸಿಸುತ್ತಿದ್ದೇವೆ ಎಂದು ಹೇಳಿದರು. ಭಗತ್ ಸಿಂಗ್ ತಂದೆಯವರು ಕಟ್ಟಿಸಿದ ಶಾಲೆಯು ಇಂದು ಅತ್ಯಂತ ದುರಾವಸ್ಥೆಯಲ್ಲಿದೆ ಎಂದು ವಿಷಾದಿಸಿದರು. ನಂತರ ಲೇಬರ್ ಪಕ್ಷದ ಫರೂಕ್ ತಾರೀಖ್ ಮಾತನಾಡಿದರು.

ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ ಸ್ಥಳವಾದ “ಶಾದ್ಮನ್ ಚೌಕ್‌”ನ ಬಳಿ ಮತ್ತೊಂದು ಸಮಾರಂಭವನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ಭಗತ್ ಸಿಂಗ್ ಮೆಮೋರಿಯಲ್ ಸೊಸೈಟಿಯು “ಶಾದ್ಮನ್ ಚೌಕ್” ಅನ್ನು “ಭಗತ್ ಸಿಂಗ್ ಚೌಕ್” ಎಂದು ಪುನರ್ ನಾಮಕರಣ ಮಾಡಬೇಕೆಂದು, ಪಿಂಗ ಗ್ರಾಮದಲ್ಲಿರುವ ಭಗತ್ ಸಿಂಗ್ ಅವರ ಮನೆಯನ್ನು “ಭಗತ್ ಸಿಂಗ್ ಲಿಬರೇಶನ್ ಮ್ಯೂಸಿಯಂ”ನ್ನಾಗಿ ಪರಿವರ್ತಿಸಬೇಕೆಂದು, ಸಾರ್ವಜನಿಕರಿಂದ ಚಂದಾ ಹಣವನ್ನೆತ್ತಿ ಭಗತ್ ಸಿಂಗ್ ತಂದೆಯವರು ಸ್ಥಾಪಿಸಿದ ಶಾಲೆಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಗೊತ್ತುವಳಿಯನ್ನು ಮಂಡಿಸಿತು. ಅದರ ಎಲ್ಲ ಸದಸ್ಯರು ಮತ್ತು ನೆರೆದಿದ್ದ ಜನಸಮೂಹ ಈ ನಿಲುವಳಿಯನ್ನು ಸಂಪೂರ್ಣವಾಗಿ ಅನುಮೋದಿಸಿತು.

(ಕೃಪೆ: ಡಾನ್ ದಿನ ಪತ್ರಿಕೆ)

29 ನೇ ಸೆಪ್ಟೆಂಬರ್ 2012 : ಲಾಹೋರ್ : ಪಾಕಿಸ್ತಾನದ ಡಾನ್ ದಿನಪತ್ರಿಕೆಯ ವರದಿ

ಜಿಲ್ಲಾ ಸಂಯೋಜಕ ಅಧಿಕಾರಿ ನೂರುಲ್ ಅಮಿನ್ ಮೆಂಗಲ್ ಶನಿವಾರದಂದು ಲಾಹೋರ್‌ನ ನಗರ ಜಿಲ್ಲಾ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶನವೊಂದನ್ನು ನೀಡಿದರು. ಆ ನಿರ್ದೇಶನದ ಪ್ರಕಾರ ಲಾಹೋರ್‌ನ “ಶಾದ್ಮನ್ ಚೌಕ್” ಅನ್ನುShadman-Square-Bhagat-Singh-Chowk-Lahore “ಭಗತ್ ಸಿಂಗ್ ಚೌಕ್” ಎಂದು ಪುನರ್ ನಾಮಕರಣ ಮಾಡಬೇಕೆಂಬುದಾಗಿತ್ತು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಧಿಕಾರಿ ನೂರುಲ್ ಅಮಿನ್ ಮೆಂಗಲ್, “ಭಗತ್ ಸಿಂಗ್ ಯಾರೆಂದು ನಿಮಗೆ ಗೊತ್ತಿದೆ. ಭಗತ್ ಸಿಂಗ್ ಬ್ರಿಟೀಷರ ವಿರುದ್ಧ ಹೋರಾಡುತ್ತ, ಕ್ರಾತಿಕಾರಿ ಘೋಷಣೆಗಳನ್ನು ಕೂಗುತ್ತ ಈ ಚೌಕಿನಲ್ಲಿ (ಶಾದ್ಮನ್ ಚೌಕ್) ಹುತಾತ್ಮರಾದರು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಪಾಕಿಸ್ತಾನದ ನಾಗರಿಕರು ಅಂದರೆ ಮುಸ್ಲಿಂರು, ಸಿಖ್ಖರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎಲ್ಲರೂ ಈ ಚೌಕನ್ನು ಭಗತ್‌ಸಿಂಗ್ ಹೆಸರಿನಲ್ಲಿ ನಾಮಕರಣ ಮಾಡುವುದನ್ನು ಗೌರವಿಸಬೇಕು, ಯಾರೂ ವಿರೋಧಿಸಬಾರದು, ಏಕೆಂದರೆ ಮೇಲಿನ ಎಲ್ಲ ನಾಗರಿಕರಿಗೆ ಸಂವಿಧಾನಬದ್ಧವಾದ ಆಧಿಕಾರವಿದೆ,” ಎಂದು ಹೇಳಿದರು. ನಂತರ ತಮ್ಮ ಆಧೀನ ಅಧಿಕಾರಿಗಳಿಗೆ ಈ ಕ್ಷಣಕ್ಕೆ ಜಾರಿಗೆ ಬರುವಂತೆ ಪತ್ರಿಕೆಗಳಿಗೆ ಇದರ ಕುರಿತಾಗಿ ಸುದ್ದಿಯನ್ನು ಬಿಡುಗಡೆ ಮಾಡಬೇಕೆಂದೂ, ಈ ಜಾಗದಲ್ಲಿ ಭಗತ್ ಸಿಂಗ್ ಅವರ ಹೆಸರಿನ ನಾಮಫಲಕವನ್ನು ಹಾಕಿಸಬೇಕೆಂದೂ ಆದೇಶಿಸಿದರು. ಮುಂದುವರೆದು ಭಗತ್ ಸಿಂಗ್ ಚೌಕ್ ಎಂದು ಪುನರ್ ನಾಮಕರಣ ಮಾಡುವುದರ ಮೂಲಕ ಹುತಾತ್ಮ ಭಗತ್ ಸಿಂಗ್‌ರ ಚಿರಸ್ಮರಣೆಯನ್ನು ಮಾಡಿದಂತಾಗುತ್ತದೆ ಮತ್ತು ಈ ಏಷ್ಯಾ ಖಂಡಕ್ಕೆ ಪಾಕಿಸ್ತಾನದ ಪರವಾಗಿ ಭಗತ್ ಸಿಂಗರ ಚೈತನ್ಯಕ್ಕೆ ಗೌರವಿಸಿದಂತಾಗುತ್ತದೆ ಎಂದರು ಮೆಂಗಲ್.

(ಕೃಪೆ: ಡಾನ್ ದಿನ ಪತ್ರಿಕೆ)

ಸಹಜವಾಗಿ ಇದರ ಕುರಿತಾಗಿ ಪರ, ವಿರೋಧ ಚರ್ಚೆಗಳು ನಡೆಯಿತು. ಇಂದಿಗೂ ಈ ವಿವಾದವು ಮುಂದುವರೆಯುತ್ತಿದೆ. dawnnewsಆದರೆ ಕುತೂಹಲ ಅಂಶವೆಂದರೆ ಲಾಹೋರ್‌ನ ಚೌಕವೊಂದಕ್ಕೆ ಹುತಾತ್ಮ ಭಗತ್ ಸಿಂಗ್‌ರ ಹೆಸರನ್ನು ಇಡಬೇಕೆಂಬುದರ ಪರವಾಗಿ ವಾದಿಸುವವರ ಪ್ರಮಾಣವೇ ಹೆಚ್ಚಾಗಿತ್ತು. ಇದರ ವಿರೋಧಿಸುವವರ ಶೇಕಡಾವಾರು ಸಂಖ್ಯೆ ಬಹಳ ಕಡಿಮೆಯಿತ್ತು. ಎಂದಿನಂತೆ ನಮ್ಮ ದೇಶೀಯ ಮಾಧ್ಯಮಗಳು ಇದಕ್ಕೆ ಹೆಚ್ಚಿನ ಒತ್ತನ್ನು ನೀಡಲಿಲ್ಲ. ಬಹುಶಃ ’ದ ಹಿಂದೂ’ ಪತ್ರಿಕೆಯಲ್ಲಿ ಮಾತ್ರ ಇದರ ಕುರಿತಾದ ವರದಿಯೊಂದು ಪ್ರಕಟವಾಯಿತು. ಎರಡನೇಯದಾಗಿ ಭಗತ್ ಸಿಂಗ್‌ರವರ 100 ನೇ ಜನ್ಮೋತ್ಸವದ ಅಂಗವಾಗಿ 2007 ರಲ್ಲಿ ಆಗಿನ ಸ್ವಾತಂತ್ರ್ಯ ಚಳುವಳಿ ಮತ್ತು ಶಹೀದ್ ಭಗತ್ ಸಿಂಗ್ ಕುರಿತಾಗಿ ಸರಣಿ ನಾಟಕೋತ್ಸವಗಳು ಜರಗಿದವು. ಅದು ಇಂದಿಗೂ ಚಾಲ್ತಿಯಲ್ಲಿದೆ. 2012 ರ ವರ್ಷವನ್ನು ಭಗತ್‌ಸಿಂಗ್‌ರವರ 105 ನೇ ಜನ್ಮಾಚರಣೆಯನ್ನಾಗಿ ಪಾಕಿಸ್ತಾನದಲ್ಲಿ ಆಚರಿಸಲಾಗುತ್ತಿದೆ.

ಅಕ್ಟೋಬರ್ 9, 2012 : ಲಾಹೋರ್ : ಪಾಕಿಸ್ತಾನದ ಡಾನ್ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ “ಆಶಾರ್ ರೆಹಮಾನ” ಅವರ ಸಂಪಾದಕೀಯದ ಸಾರಾಂಶ

ಪಾಕಿಸ್ತಾನದ ಸಮಸ್ತ ನಾಗರಿಕರಾದ ಮುಸ್ಲಿಂ, ಹಿಂದೂ, ಸಿಖ್, ಕ್ರಿಶ್ಚಿಯನ್ ಬಾಂಧವರಿಗೆ ಸಮಾನವಾದ ಹಕ್ಕುಗಳಿವೆ…” ಇದು ಖೈದ್ ಎ ಅಜಮ್‌ನ ಆಗಸ್ಟ್ 11 ರ ಘೋಷಣೆಯಲ್ಲ, ಬದಲಾಗಿ ಲಾಹೋರ್‌ನ ಜಿಲ್ಲಾ ಸಂಯೋಜಕ ಅಧಿಕಾರಿ ನೂರುಲ್ ಅಮಿನ್ ಮೆಂಗಲ್‌ರವರ ಉದ್ಘೋಷಣೆ. ಈ ಡಿಸಿಒ ಮೆಂಗೆಲ್ ಅವರ ಹೇಳಿಕೆ ನೇರವಾಗಿ ಅಲ್ಲಿನ ಸೇನೆಗೆ ಸಂಬಂಧಿಸಿತ್ತು. ಮೆಂಗಲ್ ಅವರು “ಭಗತ್ ಸಿಂಗ್ ಬ್ರಿಟೀಷ್ ಸೇನೆಯ ವಿರುದ್ಧ ಹೋರಾಡಿದ ಹೋರಾಟಗಾರ, ಕ್ರಾಂತಿಕಾರಿ” ಎಂದು ಹೇಳಿದರು. ಈ ವರ್ಷವು ನಾವು ಅಲಕ್ಷಿಸಿದಂತಹ ವ್ಯಕ್ತಿತ್ವಗಳನ್ನು ಮರಳಿ ನಮ್ಮದಾಗಿಸಿಕೊಳ್ಳುವ ವರ್ಷವಾಗಿದೆ. ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನದ ರಾಜ್ಯವು ಸಾಹಿತಿ ಸಾದತ್ ಹಸನ್ ಮಂಟೋ ಅವರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿತು, ಈಗ ಲಾಹೋರನ ಅಧಿಕಾರಿಯೊಬ್ಬರು ಭಗತ್ ಸಿಂಗ್ ಹೆಸರನ್ನು ಇಲ್ಲಿನ ಚೌಕ ಒಂದಕ್ಕೆ ನಾಮಕರಣ ಮಾಡುತ್ತಿದ್ದಾರೆ. ಆದರೆ ಈ ಲಾಹೋರ್ ಪಟ್ಟಣವು ಇನ್ನೂ ಅನೇಕ ಮುಸ್ಲೀಮೇತರ ಹೀರೋಗಳನ್ನು ನೆನಸಿಕೊಳ್ಳಬೇಕಾಗಿದೆ. ಇಂದಿನ ಕಠಿಣವಾದ ಸಂಕೀರ್ಣ ಪರಿಸ್ಥಿತಿಯಲ್ಲಿ ಮೌಲ್ಯಗಳ, ಆತ್ಮಸಾಕ್ಷಿಯ ಪ್ರತಿಪಾದಕರು ಇತಿಹಾಸದ ನಾಯಕರ ನೆನಪಿಗಾಗಿ ದಾರಿಗಳ ಹುಡುಕಾಟದಲ್ಲಿದ್ದಾರೆ.

ಇತಿಹಾಸದ ಅಂಚಿನಲ್ಲೇ ಬದುಕಿದ್ದ ಆದರೆ ಆಧುನಿಕ ಲಾಹೋರಿನ ಪಿತಾಮಹನೆಂದೇ ಕರೆಯಲ್ಪಡುವ, “ಗಂಗಾರಾಮ್” ಅವರನ್ನು ಇತ್ತೀಚಿನ ದಿನಗಳಲ್ಲಿ ನೆನಪಿಸಿಕೊಳ್ಳುತ್ತ ಕೈಯಲ್ಲಿ ಹೂವಿನ ಗುಚ್ಚನ್ನು ಹಿಡಿದು ರಾವಿ ರಸ್ತೆಯಲ್ಲಿರುವ ಗಂಗಾರಾಮ್ ಅವರ ಮೆಮೋರಿಯಲ್ ಬಳಿ ಆಗಮಿಸುತ್ತಿರವ ಕೆಲವು ಜನರೇ ನಮಗೆ ಮುಂದಿನ ದಿನಗಳ ಭವಿಷ್ಯದ ನೆಮ್ಮದಿಯನ್ನು ಮೂಡಿಸುತ್ತಿದ್ದಾರೆ. … ಹಿಂದುಸ್ತಾನವನ್ನು ಆಳಿದ ಮುಸ್ಲಿಂ ರಾಜರುಗಳ ವೈಭವೋಪೇತ ರಾಜ್ಯಾಡಳಿತವನ್ನು ನೆನೆಪಿಸುವ ಅಸಂಖ್ಯಾತ ಕತೆಗಳ ತಳದಲ್ಲಿ ಹೂತು ಹೋಗಿರುವ “ಮಹಾರಾಜ ರಣಜಿತ ಸಿಂಗ್” ಇಂದು ಕೆಲವರ ಸಂಭಾಷಣೆಗಳಲ್ಲಿ, ಅಪರೂಪಕ್ಕೊಮ್ಮೆ ದಿನಪತ್ರಿಕೆಗಳ ಕಾಲಂನಲ್ಲಿ ಒಬ್ಬ ಸ್ವಯಂಅಡಳಿತ ಮತ್ತು ಪಾವಿತ್ರ್ಯವನ್ನು ಪ್ರತಿಪಾದಿಸಿದ ಆದರ್ಶ ಮಹಾರಾಜನಾಗಿ ಜೀವಂತವಾಗಿದ್ದಾರೆ. ಮುಸ್ಲಿಂರಲ್ಲೇ ದೋಷಪೂರಿತ ಮತ್ತು ದೋಷರಹಿತರೆಂದು ವರ್ಗೀಕರಿಸುತ್ತಿದ್ದಾರೆ. ಅಧಿಕಾರಕ್ಕಾಗಿ ನಡೆದ ಘರ್ಷಣೆಯಲ್ಲಿ ಸೋತಂತಹ, ತನ್ನ ಪ್ರಭಾವಶಾಲೀ ಸಹೋದರ ಔರಂಗಜೇಬ ಅವರ ನೆರಳಿನಿಂದ ಹೊರಬರಲು ಶ್ರಮಪಡುತ್ತಿದ್ದ, ಲಾಹೋರ್‌ನ ಪ್ರವಾದಿ ಮಿಯಾ ಮಿರ್ ಅವರ ಹತ್ತಿರದವರಾಗಿದ್ದ, ದಾರಾ ಶಿಕೋಹ ಅವರನ್ನು ಮುಸ್ಲಿಂ ದೊರೆಗಳಲ್ಲೇ ಕಲ್ಮಶರಹಿತ ದೊರೆಯೆಂದು, ಇಂದಿನ ಪಾಕಿಸ್ತಾನದ ಮೊದಲ ಕನಸುಗಾರನೆಂದು ಅನೇಕರು ಇಂದಿಗೂ ನೆನಪಿಸಿಕೊಳ್ಳ್ಳುತ್ತಾರೆ ಹಾಗೂ ಉಲ್ಲೇಖಿಸುತ್ತಾರೆ. ದಾರಾ ಶಿಕೋಹ ಅವರ ಸೌಮ್ಯವಾದಿ, ಆಧ್ಯಾತ್ಮದ ವ್ಯಕ್ತಿತ್ವವು ಬಹುಜನರಲ್ಲಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವಂತೆ ಮಾಡಿದೆ.

ದೇಶ ವಿಭಜನೆಯ ನಂತರದ ಕಾಲಘಟ್ಟದಲ್ಲಿ ಸಿಖ್ ಸಮುದಾಯದ ಕುರಿತಾಗಿ ಚಾಲ್ತಿಯಲ್ಲಿದ್ದ ತಿರಸ್ಕಾರದ, ದ್ವೇಷದ ವಾತಾವರಣ ಬಹುಬೇಗ ತಿಳಿಯಾಗುತ್ತಿದೆ. ಬದಲಾಗಿ ಸಿಖ್ಖರನ್ನು ತಮ್ಮಿಂದ ಬೇರ್ಪಟ್ಟ ದಾಯಾದಿಗಳೆಂದೇ ವಾಘಾದ ಈ ಬದಿಯ ಜನ ಭಾವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅತಿಥಿ ಪ್ರವಾಸಗಾರರಾದ ಸರ್ದಾರರು ಮತ್ತು ಅವರ ಲಾಹೋರಿ ಅತಿಥೇಯರ ನಡುವಿನ ಸಂಬಂಧ ಮತ್ತಷ್ಟು ಬಲಗೊಂಡಿದೆ. ತನ್ನ ಕ್ರಾಂತಿಕಾರಿ ಚಿಂತನೆಗಳು, ಸ್ವಾತಂತ್ರ್ಯ ಹೋರಾಟಗಾರನಾಗಿ ತರುಣ ವಯಸ್ಸಿನಲ್ಲಿಯೇ ಹುತಾತ್ಮನಾದ ಭಗತ್ ಸಿಂಗ್‌ನ ಜನಪ್ರಿಯತೆಗೆ ಈ ಸರ್ದಾರ ಮತ್ತು ಲಾಹೋರಿಗಳ ನಡುವಿನ ಇತ್ತೀಚಿನ ಸೌಹಾರ್ದಯುತ ಸಂಬಂಧಗಳೂ ಸಹ ಕಾರಣವಿರಬಹುದು. ಆದರೂ ಭಗತ್ ಸಿಂಗ್ ಹೆಸರಿನ ಅಧಿಕೃತ ಸ್ಮಾರಕವು ನಿಜಕ್ಕೂ ಒಂದು ಮೈಲಿಗಲ್ಲು.

ಮತ್ತೊಂದು ವಿಶೇಷವೇನೆಂದರೆ ಈ ಭಗತ್ ಸಿಂಗ್ ಸ್ಮಾರಕದ ಪ್ರೇರಕ ಶಕ್ತಿಯಾದ ನೂರ್ ಅಮಿನ್ ಮೆಂಗಲ್ ಪಂಜಾಬ್ ಪ್ರಾಂತ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊತ್ತ ಮೊದಲ ಬಲೂಚಿಸ್ತಾನ ಮೂಲದ ಅಧಿಕಾರಿ. ಅಧಿಕಾರ ವಹಿಸಿಕೊಂಡ ಪ್ರಥಮ ದಿನಗಳಲ್ಲೇ ಪಂಜಾಬ್‌ನ ಹಣ್ಣಿನ ಬೀದಿಗಳಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಈ ಬಲೂಚಿಸ್ತಾನದ ಅಧಿಕಾರಿ ಮೆಂಗಲ್ ಅಲ್ಲಿನ ಮೇಲ್ವಿಚಾರಕರಿಗೆ ಹೇಳಿದ್ದು ಎಲ್ಲಾ ಖುರ್ಚಿಗಳೂ ಒಂದೇ ಬಣ್ಣದ್ದಾಗಿದ್ದರೆ ಮಾತ್ರ ಈ ಹಣ್ಣಿನ ಬೀದಿಯ ಘನತೆ ಹೆಚ್ಚುತ್ತದೆ.

ಕಡೆಗೆ ಪ್ರಜಾಪ್ರಭುತ್ವದ ಫಲವು ಅಂಚಿನಲ್ಲಿರುವ ಜನರಿಗೆ ತಲುಪತೊಡಗಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿದೆ ಎಂದು ನಾವು ನಂಬಬಹುದು. ಏಕೆಂದರೆ ಬಹುಸಂಖ್ಯಾತರ ಆಸೆಗಳಿಗಾಗಿ ಪ್ರಜಾಪ್ರಭುತ್ವವು ರೂಪಿತಗೊಂಡಿರುವುದಿಲ್ಲ. ಬದಲಾಗಿ ಅಲ್ಪಸಂಖ್ಯಾತರಿಗೆ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಡಲು, ಅದರಲ್ಲೂ ನಿರ್ಭೀತಿಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪ್ರಜಾಪ್ರಭುತ್ವವು ರೂಪಿತಗೊಂಡಿರುತ್ತದೆ. ಅಲ್ಪಸಂಖ್ಯಾತರ ಭಾವನೆಗಳನ್ನು ಗೌರವಿಸುವುದಕ್ಕಾಗಿ ಪ್ರಜಾಪ್ರಭುತ್ವದಲ್ಲಿ ಅನುಕೂಲಕರ ಜಾಗವಿರಲೇಬೇಕು.

( ಕೃಪೆ: ಡಾನ್ ದಿನ ಪತ್ರಿಕೆ )

ಮೇಲಿನ ಮಾತುಗಳು, ನಿದರ್ಶನಗಳು ನಡೆಯುತ್ತಿರುವುದು ಪಕ್ಕದ ಮೂಲಭೂತವಾದಿ ದೇಶವೆಂದು ಕುಖ್ಯಾತಿ ಗಳಿಸಿದ ಪಾಕಿಸ್ತಾನದಲ್ಲಿ. Shadman-Square-Bhagat-Singh-Chowkಇದು ನಮ್ಮ ಘನ ದೇಶಪ್ರೇಮಿಗಳಿಗೆ, ಕೂಗುಮಾರಿ ಸಂಘ ಪರಿವಾರಕ್ಕೆ ಅರ್ಥವಾಗುತ್ತದೆಯೇ? ಖಂಡಿತವಾಗಿಯೂ ಇಲ್ಲ. ದಶಕಗಳಿಂದ ಮುಚ್ಚಿದ ಮನಸ್ಸಿನಿಂದ ಅಲ್ಪಸಂಖ್ಯಾತರ ವಿರುದ್ಧ ಭಾವಾವೇಶದ ಧ್ವನಿಯಿಂದ, ಧಾರ್ಮಿಕ ಸಂಕೇತಗಳನ್ನು ದುರ್ಬಳಕೆ ಮಾಡಿಕೊಂಡು ದ್ವೇಷದ ವಿಷಬೀಜ ಬಿತ್ತುತ್ತಿರುವ ಈ ಫ್ಯಾಸಿಸ್ಟ್ ಸಂಘ ಪರಿವಾರಕ್ಕೆ “ನೂರ್ ಅಮಿನ್ ಮೆಂಗಲ್” ಗೋಚರಿಸುವುದಿಲ್ಲ. ಏಕೆಂದರೆ 1925 ರಂದು ಸ್ವಾತಂತ್ರ್ಯ ಚಳುವಳಿ ತೀವ್ರವಾಗಿದ್ದಂತಹ ಸಂದರ್ಭದಲ್ಲಿ ನಾಗಪುರದಲ್ಲಿ ಯಾರೋ ಪುಂಡರು ಅಲ್ಲಾಹೋ ಅಕ್ಬರ್ ಎಂದು ಕೂಗುತ್ತ ಹಿಂದೂ ಡಾಕ್ಟರ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಪುಕಾರೆಬ್ಬಿಸಿ ಕೋಮುಗಲಭೆಗಳಿಗೆ ನಾಂದಿ ಹಾಡಿದ ಸಂಘಪರಿವಾರ 87 ವರ್ಷಗಳ ನಂತರವೂ ಇಂದಿಗೂ ಅನ್ಯ ಮತ ದ್ವೇಷದ ಮನಸ್ಥಿತಿಯಿಂದ ಹೊರ ಬಂದಿಲ್ಲ. ಅತ್ಯಂತ ಕ್ರೂರವಾಗಿ, ನೀಚತನದಿಂದ “ಮಿಯಾ ಮುಷರಫ್” ಎಂದು ವ್ಯಂಗವಾಗಿ ಮಾತನಾಡುತ್ತ ಜನರ ಭಾವನೆಗಳನ್ನು ಕೆರಳಿಸುತ್ತಿರುವ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದಿಗೂ ಆರೆಸಸ್‌ನ ಅಚ್ಚುಮೆಚ್ಚಿನ ಸ್ವಯಂಸೇವಕ ಮತ್ತು ಮಾಧ್ಯಮಗಳ ಪ್ರಕಾರ ಭವಿಷ್ಯದ ಪ್ರಧಾನ ಮಂತ್ರಿ. ಕೋಮುವಾದಿ ಸಂಘಪರಿವಾರ ಮತ್ತು ಬಲಪಂಥೀಯ ಪತ್ರಕರ್ತರು ಮತ್ತು ಚಿಂತಕರು ಕೇವಲ ತಾವಷ್ಟೇ ಕೋಮುಭಾವನೆಗಳ ಗೂಡಾಗಿಲ್ಲ, ಜೊತೆಗೆ ಈ ದೇಶದ ಮಧ್ಯಮವರ್ಗವನ್ನು ಇದಕ್ಕೆ ಬಲಿಯಾಗಿಸಿದ್ದಾರೆ.

ಇನ್ನು ನಮ್ಮ ಕೃತಕ ಸೆಕ್ಯುಲರ್ ಚಿಂತನೆಗಳೂ ಸಹ ಅಷ್ಟೇ. ಬಿಜೆಪಿಯಲ್ಲಿರುವವರೆಗೂ ಆತ/ಅವಳು ಕೋಮುವಾದಿ. ಬಿಜೆಪಿ ತೊರೆದ ಮರುದಿನದಿಂದ ಅವರೆಲ್ಲ “ಸೆಕ್ಯುಲರ್”. ಆಗ ಕೆಜೆಪಿಗಳು, ಬಿಎಸ್‌ಆರ್‌ಗಳು ಜಾತ್ಯಾತೀತ ಪಕ್ಷವಾಗಿಬಿಡುತ್ತವೆ. ಇದೆಂತಹ ಹಿಪೋಕ್ರೆಸಿ ಎಂದು ಅಚ್ಚರಿ ಪಡುವಂತೇನಿಲ್ಲ. ಎಲ್ಲವೂ ಪ್ರಜ್ಞಾಪೂರ್ವಕವಾಗಿಯೇ ನಡೆಯುತ್ತಿರುತ್ತವೆ.