Monthly Archives: January 2013

ಎಲ್.ಕೆ.ಜಿ ಮಕ್ಕಳಿಗೂ ಹಾಸ್ಯದ ವಸ್ತುವಾದ ‘ಕೆ.ಜಿ.ಬೋಪಯ್ಯ ನಾಪತ್ತೆ ಪ್ರಕರಣ’

– ಸುಧಾಂಶು ಕಾರ್ಕಳ

ಮಗು ಎರಡು ಮೂರು ವರ್ಷಗಳಷ್ಟು ಕಾಲ ಬೆಳೆದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜಿಸಲು ಹಿಂಜರಿಯುತ್ತದೆ. ಕಾರಣ, ಆ ಹೊತ್ತಿಗೆ ಆ ಮಗುವಿಗೆ ಹಾಗೆ ಮಾಡುವುದು ಮುಜುಗರದ ಕೆಲಸವಾಗಿರುತ್ತೆ. ಅದಾಗ್ಯೂ ಯಾವುದಾದರೂ ಮಗು, ಹಾಗೆ ಮಾಡಿದಲ್ಲಿ, ಹಿರಿಯರು ನಾಚಿಕೆ ಆಗೋಲ್ವಾ ಅಂತ ಪ್ರೀತಿಯಿಂದಲೇ ಛೇಡಿಸುವುದುಂಟು. ಆದರೆ, ತಕ್ಕಮಟ್ಟಿಗೆ ಸುಶಿಕ್ಷಿತ ಹಾಗೂ ಸಮಾಜದಲ್ಲಿ ಗಂಭೀರವಾಗಿ ಪರಿಗಣಿಸಬಹುದಾದ ವಯಸ್ಸು ದಾಟಿದ ನಂತರ ಯಾರೇ ಹಾಗೆ ಮಾಡಿದರೆ, ಅವರನ್ನು ಲಜ್ಜೆಗೆಟ್ಟವನು ಎಂದು ಕರೆಯುವುದು ರೂಢಿ.

ಪಕ್ಷಾತೀತನಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬ ತನ್ನ ಜವಾಬ್ದಾರಿಯನ್ನು ಮರೆತು ಕಣ್ಮರೆಯಾಗುವುದೆಂದರೆ, ಆ ಮೂಲಕ ತನ್ನ ಮೂಲ ಪಕ್ಷಕ್ಕೆ ನಿಷ್ಠೆಯನ್ನು ತೋರಿಸುತ್ತಾರೆಂದರೆ, ಅವರನ್ನು ಬೇರೆ ಏನೆಂದು ಕರೆಯಬೇಕು? ಕೆ.ಜಿ. ಬೋಪಯ್ಯನವರು ಸದ್ಯ ವಿಧಾನ ಸಭೆಯ ಅಧ್ಯಕ್ಷ. ರಾಜ್ಯದ ಪ್ರೊಟೋಕಾಲ್ ವ್ಯವಸ್ಥೆಯಲ್ಲಿ ಅವರಿಗೆ ಮೂರನೇ ಸ್ಥಾನ. ವಿಧಾನ ಸಭೆ ಅಧಿವೇಶನದಲ್ಲಿ ಎಲ್ಲರೂ ಅವರನ್ನು ‘ಅಧ್ಯಕ್ಷರು’ ಎಂದೇ ಸಂಭೋದಿಸಬೇಕು. ಅವರಿಗೆ ತೋರುವ ಅಗೌರವ ಶಿಕ್ಷಾರ್ಹ.

ಅಂತಹ ಸ್ಥಾನದಲ್ಲಿರುವ ವ್ಯಕ್ತಿ ಘನತೆ ಮರೆತು ವರ್ತಿಸುತ್ತಿದ್ದಾರೆ. ತನ್ನ ವರ್ತನೆಯಲ್ಲಿ ಲೋಪಗಳಿವೆ ಎಂಬುದನ್ನು ಎಲ್.ಕೆ.ಜಿ ಹುಡುಗ/ಹುಡುಗಿಯರಿಗೂ ಅರ್ಥವಾಗುತ್ತೆ ಎನ್ನವ ಸಾಮಾನ್ಯ ಜ್ಞಾನ ಈ ಕೆ.ಜಿ. ಬೋಪಯ್ಯನವರಿಗಿಲ್ಲವೆ? ಖಂಡಿತ ಇದೆ. ಹಾಗಿದ್ದರೂ, ಅಂತಹ ಕೆಲಸ ಮಾಡುತ್ತಾರೆ, ಯಾರ ಕೈಗೂ ಸಿಗದಂತೆ ಕಣ್ಮರೆಯಾಗುತ್ತಾರೆ ಎಂದರೆ ಅವರನ್ನು ‘ಸ್ವ ಇಚ್ಚೆಯಿಂದ ನಾಚಿಕೆ ಬಿಟ್ಟವರು’ ಎಂದು ಕರೆಯಬಹುದೆ?

ಒಬ್ಬ ಸ್ಪೀಕರ್ ನಾಪತ್ತೆ ಅಂದರೆ ಏನು? ಅವರು ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲವಂತೆ! ಅರವಿಂದ ಲಿಂಬಾವಳಿ ಎಂಬ ಮಂತ್ರಿ ಹೇಳುತ್ತಾರೆ, “ಅವರು ಸದನ ಸಮಿತಿಯ ನೇತಾರರು, ಹಾಗಾಗಿ ಅವರು ಸಮಿತಿಯ ವಿದೇಶ ಪ್ರವಾಸದಲ್ಲಿದ್ದಾರೆ”. ಆಯ್ತಪ್ಪ, ಅವರು ಅಧ್ಯಕ್ಷರಾಗಿರುವ ಸಮಿತಿ ಯಾವುದು, ಅವರು ಸದ್ಯ ಯಾವ ದೇಶದಲ್ಲಿದ್ದಾರೆ ಎಂದು ಕೇಳಿದರೆ, ಉತ್ತರ ಇಲ್ಲ. ( ಲೇಖನ ಬರೆಯುತ್ತಿರುವ  ಈ ಹೊತ್ತಿನವರೆಗೂ,  ಅವರುಎಲ್ಲಿದ್ದಾರೆಂದು ಪತ್ತೆಯಾಗಿಲ್ಲ.)

ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗಿ ರಾಜೀನಾಮೆ ನೀಡಿರುವ ಶೋಭಾ ಕರಂದ್ಲಾಜೆ ಮತ್ತು ಸಿ.ಎಂ. ಉದಾಸಿಯವರು ಸ್ಪೀಕರ್ ಅವರನ್ನು ದಿನಾಂಕ ಜನವರಿ 22 ರಂದು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಬೆಂಗಳೂರಿನಲ್ಲೇ ಇದ್ದರು. ನಂತರದ ದಿನವೂ ಕಚೇರಿಯಲ್ಲಿಯೇ ಇರುತ್ತೇನೆ, ಬಂದು ಭೇಟಿ ಮಾಡಬಹುದು ಎಂದು ಹೇಳಿದ್ದರು. ಆದರೆ ರಾತ್ರೋರಾತ್ರಿ ಅವರು ಗಾಯಬ್! ಅವರು ಹೋಗಿರಬಹುದಾದ ಸ್ಥಳ, ಉದ್ದೇಶಗಳ ಬಗ್ಗೆ ಹೇಳಲು ಅವರ ಕಚೇರಿಯಲ್ಲಿ ಯಾರೂ
ಸಿದ್ಧರಿಲ್ಲ. Anarchy ಎಂದರೆ ಇದಲ್ಲವೆ?

ಸ್ಪೀಕರ್ ಹಕ್ಕು, ಕರ್ತವ್ಯಗಳ ಬಗ್ಗೆ ಸದನದ ನಿಯಮಾವಳಿಗಳಲ್ಲಿ ಸ್ಪಷ್ಟತೆ ಇದೆ. ಸದಸ್ಯರೊಬ್ಬರು ರಾಜೀನಾಮೆ ನೀಡಬೇಕು ಎಂದರೆ, ದಿನದ ಯಾವುದೇ ಸಮಯದಲ್ಲಿ ಸ್ಪೀಕರ್ ಅವರನ್ನು ಸಂಪರ್ಕಿಸಬಹುದು. ಸ್ಪೀಕರ್ ಸ್ಥಾನದ ವಿಶೇಷತೆ ಏನೆಂದರೆ, ಅವರು ಎಲ್ಲಿಯೇ ಇದ್ದರೂ ಅವರಿಗೆ ರಾಜೀನಾಮೆ ಪತ್ರ ಕೊಡಬಹುದು. ಅವರ ಸಮ್ಮುಖದಲ್ಲಿ ಸದಸ್ಯರು ರಾಜೀನಾಮೆ ಕೊಟ್ಟರೆ, ಸ್ಪೀಕರ್ ‘ಸ್ವ ಇಚ್ಚೆಯಿಂದ ನೀಡುತ್ತಿದ್ದೀರಾ, ಅಥವಾ ಯಾವುದಾದರೂ/ಯಾರದಾದರೂ ಒತ್ತಡವೋ’ ಎಂದು ಕೇಳಬಹುದು. ಅವರ ಪ್ರತಿಕ್ರಿಯೆ ಸೂಕ್ತ ಎನಿಸಿದ ಕೂಡಲೆ ಅವರು ಪತ್ರ ಸ್ವೀಕರಿಸಿ ರುಜು ಹಾಕಿದರೆಂದರೆ, ಆ ಕ್ಷಣದಿಂದ ರಾಜೀನಾಮೆ ಸಲ್ಲಿಸಿದ ವ್ಯಕ್ತಿ ಸ್ಥಾನದಿಂದ ಬಿಡುಗಡೆ ಹೊಂದಿದಂತೆ.

ಆದರೆ, ಪಕ್ಷಾತೀತನಾಗಿ ಕೆಲಸ ನಿರ್ವಹಿಸುವ ಉದ್ದೇಶವೇ ಇಲ್ಲದ ವ್ಯಕ್ತಿ ಹೇಗೆ ಬೇಕಾದರೂ ಅಡ್ಡ ದಾರಿ ಹುಡುಕಬಹುದು. ಇದೇ ಬೋಪಯ್ಯನವರು ರಾತ್ರೋರಾತ್ರಿ ರಾಜೀನಾಮೆ ಪಡೆದುಕೊಂಡಿದ್ದಾರೆ (ಆಪರೇಶನ್ ಕಮಲ), ಅಂತೆಯೇ ತಿಂಗಳುಗಟ್ಟಲೆ ಕಾದು ಕ್ಯಾಬಿನೆಟ್ನಲ್ಲಿ ಲೋಕಾಯುಕ್ತರ ಗಣಿ ವರದಿಯ ಬಗ್ಗೆ ಸ್ಪಷ್ಟೀಕರಣ ಕೇಳುವ ತೀರ್ಮಾನ ತೆಗೆದುಕೊಳ್ಳುವ ದಿನದ ತನಕ ಕಾದಿದ್ದು ಶ್ರೀರಾಮುಲು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೂ ಇದೆ. (ಹಲವರಿಗೆ ನೆನಪಿರಬಹುದು, ಶ್ರೀರಾಮುಲು ರಾಜೀನಾಮೆ ನೀಡಿದ್ದೇ ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರು ಬಂದ ಕಾರಣ. ಆ ವರದಿಯನ್ನೇ ಪ್ರಶ್ನಿಸುವಂತಹ ನಿರ್ಧಾರವನ್ನು ಕ್ಯಾಬಿನೆಟ್ ತೆಗೆದುಕೊಳ್ಳುವ ದಿನ, ಅವರ ರಾಜೀನಾಮೆ ಅಂಗೀಕಾರವಾಯಿತು. ರಾಮುಲು ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು).

ರಾಜೀನಾಮೆ ಅಂಗೀಕರಿಸುವುದಷ್ಟೇ ಅಲ್ಲ, ರಾತ್ರೋರಾತ್ರಿ ಸದಸ್ಯರನ್ನು ಮುಲಾಜಿಲ್ಲದೆ ಸದಸ್ಯರನ್ನು ಅನರ್ಹಗೊಳಿಸಿದ್ದರು. ಆ ನಂತರ ಸದಸ್ಯರು ಸುಪ್ರೀಂ ಕೋರ್ಟ್ ತನಕ ಹೋಗಿ ಸದಸ್ಯತ್ವ ಉಳಿಸಿಕೊಂಡರು. ಸುಪ್ರೀಂ ಕೋರ್ಟ್ ಕೂಡಾ ಈ ಸ್ಪೀಕರ್ ರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು. ನಂತರ ಗೂಳಿಹಟ್ಟಿ ಶೇಖರ್ ಅವರು ಬೋಪಯ್ಯನವರನ್ನು ‘ಕಳಂಕಿತ ಅಧ್ಯಕ್ಷರೇ’ ಎಂದು ಕರೆದು ತನ್ನ ಪ್ರತಿಭಟನೆಯನ್ನು ದಾಖಲಿಸಲು ಹೋದಾಗ, ಅವರನ್ನು ಒಂದು ದಿನದ ಮಟ್ಟಿಗೆ ಅಮಾನತ್ತು ಮಾಡಿದರು.

ಈ ಎಲ್ಲಾ ವರ್ತನೆಗಳ ಹಿನ್ನೆಲೆಯಲ್ಲಿ ಬೋಪಯ್ಯ ಕಾಣುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಜನಪ್ರತಿನಿಧಿಯಾಗಿ ಅಲ್ಲ, ಬದಲಿಗೆ ಉಳಿಗಮಾನ್ಯ ಪದ್ಧತಿಯ ಅಸಲಿ ವಾರಸುದಾರನಂತೆ. ಪ್ರಜಾಪ್ರಭುತ್ವ ಅಂತೆಲ್ಲಾ ಅವರ ಎದುರು ಮಾತನಾಡಲು ಹೊರಟವರು ನಗೆಪಾಟಿಲಿಗೆ ಈಡಾದರೆ ಅಚ್ಚರಿಯಿಲ್ಲ.

ಇಂತಹ ಬೆಳವಣಿಗೆಗಳಿಂದ ತೀರಾ ವಿಚಲಿತರಾದಂತೆ ಕಂಡವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ತನ್ನ ಅವಧಿಯಲ್ಲಿ 16 ಜನ ಶಾಸಕರು ಅನರ್ಹರಾದಾಗ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದ ಯಡಿಯೂರಪ್ಪ, 13 ಜನ ರಾಜೀನಾಮೆ ಕೊಡಲು ಮುಂದಾದ ತಕ್ಷಣ ಜಗದೀಶ್ ಶೆಟ್ಟರ್ “ನಾಚಿಕೆಗೆಟ್ಟ” ಮುಖ್ಯಮಂತ್ರಿಯಾದರು. ತಮ್ಮದೇ ತಂತ್ರಗಳು ತಿರುಗುಬಾಣವಾಗುವುದು ಎಂದರೆ ಇದೇ ಅಲ್ಲವೇ, ಮಿಸ್ಟರ್. ಬಿ.ಎಸ್.ವೈ.? ಅಂದು ಆ ಹದಿನಾರು ಶಾಸಕರು ಸ್ಪಷ್ಟವಾಗಿ ತಾವು ಬಿಜೆಪಿಯಲ್ಲಿಯೇ ಇದ್ದೇವೆ, ಆದರೆ ಮುಖ್ಯಮಂತ್ರಿ ಬದಲಾಗಬೇಕು ಎಂದು ಕೇಳಿದರು. ಆದರೂ ಅವರನ್ನು (ಸ್ವತಂತ್ರವಾಗಿ ಆಯ್ಕೆಯಾದ ಸದಸ್ಯರೂ ಸೇರಿದಂತೆ) ‘ಪಕ್ಷ ವಿರೋಧಿ ಚಟುವಟಿಕೆ’ ಆರೋಪದ ಮೇಲೆ ಅನರ್ಹಗೊಳಿಸಲಾಯಿತು.

ಸದ್ಯ ರಾಜೀನಾಮೆ ಕೊಡಲು ಮುಂದಾಗಿರುವವರ ಆತಂಕವೂ ಅದೇ. ಅವರು ರಾಜ್ಯಪಾಲರನ್ನು ಭೇಟಿಯಾದಾಗ ಸ್ಪಷ್ಟವಾಗಿ ಕೇಳಿದ್ದು ಸ್ಪೀಕರ್ ಅವರನ್ನು ಕರೆಸಿ ಎಂದು. ಅವರಿಗೆ ಶೆಟ್ಟರ್ ಸಭೆಯಲ್ಲಿ ವಿಶ್ವಾಸ ಗೊತ್ತುವಳಿ ಮಂಡಿಸಬೇಕು ಎಂಬ ಉದ್ದೇಶವಿಲ್ಲ. ಈ ಸ್ಪೀಕರ್ ತಮ್ಮ ರಾಜೀನಾಮೆ ಒಪ್ಪುವ ಮೊದಲೆ, ವಿಶ್ವಾಸ ಗೊತ್ತುವಳಿ ಮಂಡಿಸುವ ಸಂದರ್ಭ ಬಂದರೆ, ಬಿಜೆಪಿ ಖಂಡಿತವಾಗಿ ಶೆಟ್ಟರ್ ಅವರನ್ನು ಬೆಂಬಲಿಸುವಂತೆ ತನ್ನ ಶಾಸಕರಿಗೆ ವ್ಹಿಪ್ ಜಾರಿ ಮಾಡುತ್ತದೆ. ಅದನ್ನು ಉಲ್ಲಂಘಿಸುವ ಧೈರ್ಯ ಯಾರಿಗೂ ಇಲ್ಲ. ಒಂದೊಮ್ಮೆ ಹಾಗೆ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಇವರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ. bhopayyaಹಿಂದೊಮ್ಮೆ 16 ಜನ ಶಾಸಕರನ್ನು ಅನರ್ಹಗೊಳಿಸಿ ಯಡಿಯೂರಪ್ಪನವರಿಗೆ ಬಹುಮತ ಸಾಬೀತುಮಾಡಲು ಅವಕಾಶ ಮಾಡಿಕೊಟ್ಟ ಬೋಪಯ್ಯನವರಿಗೆ, ಅದೇ ದಾಳ ಹೂಡಿ, 13 ಜನರ ರಾಜೀನಾಮೆ ಅಂಗೀಕರಿಸದೆ, ಶೆಟ್ಟ್ರರ್ ಸರಕಾರ ಉಳಿಸುವುದು ಕಷ್ಟವೇನಲ್ಲ.

(ಸಂಪಾದಕರ ಮಾತು: ಈ  ಲೇಖನ ಪ್ರಕಟವಾಗುವ ಹೊತ್ತಿಗೆ ಬೋಪಯ್ಯನವ ರು ಮಂಗಳೂರಿನಲ್ಲಿ ಪತ್ತೆಯಾಗಿ ಮಡಿಕೇರಿ ತಲುಪಿದ್ದಾರೆ.)

ಪ್ರಜಾ ಸಮರ – 19 (ನಕ್ಸಲ್ ಕಥನದ ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

ಅಧಿಕೃತವಾಗಿ 45 ವರ್ಷಗಳನ್ನು, ಅನಧಿಕೃತವಾಗಿ 50 ವರ್ಷಗಳನ್ನು ಪೂರೈಸಿರುವ ಭಾರತದ ನಕ್ಸಲ್ ಹೋರಾಟವನ್ನು 2013 ರ ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದರೆ, ಸಂಭ್ರಮ ಪಡುವ ವಿಷಯಕ್ಕಿಂತ ಸಂಕಟ ಪಡುವ ಸಂಗತಿಗಳೆ ಹೆಚ್ಚಾಗಿವೆ.

2010 ರಲ್ಲಿ ಅಜಾದ್ ಅಲಿಯಾಸ್ ಚುರುಮುರಿ ರಾಜ್ ಕುಮಾರ್, 2011 ನವಂಬರ್ ತಿಂಗಳಿನಲ್ಲಿ ಕಿಶನ್ ಜಿ ಇವರ ಹತ್ಯೆಯಿಂದಾಗಿ ತೀವ್ರ ಹಿನ್ನಡೆ ಅನುಭವಿಸಬೇಕಾದ ನಕ್ಸಲ್ ಹೋರಾಟಕ್ಕೆ 2012 ರಲ್ಲಿ ಆರ್.ಕೆ. ಎಂದು ಜನಪ್ರಿಯವಾಗಿದ್ದ ರಾಮಕೃಷ್ಣ ಅವರ ಬಂಧನದಿಂದ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿತು. ಮಾವೋವಾದಿ ನಕ್ಸಲ್ ಚಳುವಳಿಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣರಾಗಿದ್ದramakrishna-naxal-india ರಾಮಕೃಷ್ಣರನ್ನು ಕೊಲ್ಕತ್ತ ಪೊಲೀಸರು, ಆಂಧ್ರ ಪೊಲೀಸರ ನೆರವಿನಿಂದ ಕೊಲ್ಕತ್ತ ನಗರದಲ್ಲಿ ರಾಕೆಟ್ ಲಾಂಚರ್‌ಗಳಿಗೆ ಬೇಕಾದ ಬಿಡಿಭಾಗಗಳನ್ನು ವರ್ಕ್‌ಶಾಪ್ ಒಂದರಲ್ಲಿ ತಯಾರಿಸುತ್ತಿದ್ದ ವೇಳೆ ಬಂಧಿಸುವಲ್ಲಿ ಯಶಸ್ವಿಯಾದರು.

ಆಂಧ್ರದ ಕರೀಂನಗರ ಜಿಲ್ಲೆಯ ಹಳ್ಳಿಯಿಂದ ಬಂದಿದ್ದ ರಾಮಕೃಷ್ಣರು 1976 ರಲ್ಲಿ ವಾರಂಗಲ್‌ನ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಸಂಸ್ಥೆಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಪದವಿ ಪಡೆದು 1978 ರಲ್ಲಿ ಭೂಗತರಾಗುವ ಮೂಲಕ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು, ಕೊಲ್ಕತ್ತ. ಚೆನ್ನೈ ನಗರಗಳಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ಸಣ್ಣ ಕೈಗಾರಿಕೆಗಳಿಗೆ ಆದೇಶ ನೀಡಿ ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳುತ್ತಿದ್ದರು. ಹೀಗೆ ಬಿಡಿಭಾಗ ಸಂಗ್ರಹಿಸಲು ಕೊಲ್ಕತ್ತ ನಗರಕ್ಕೆ ತೆರಳಿದಾಗ, ಪೊಲೀಸರಿಂದ ಬಂಧಿತರಾದರು. ಈಗ ಗಣಪತಿಯವರನ್ನು ಹೊರತು ಪಡಿಸಿದರೆ ಸೈದ್ಧಾಂತಿಕ ಹಿನ್ನೆಲೆಯುಳ್ಳ ಒಬ್ಬ ಹಿರಿಯ ನಾಯಕನನ್ನು ನಕ್ಸಲ್ ಹೋರಾಟದಲ್ಲಿ ಹುಡುಕುವುದು ಕಷ್ಟವಾಗಿದೆ.

ಕಳೆದ ಒಂದು ದಶಕದಿಂದ ನಗರಗಳಿಂದ ಹೋರಾಟಗಳತ್ತ ಆಕರ್ಷಿತರಾಗಿ ಬರುತ್ತಿದ್ದ ವಿದ್ಯಾವಂತರ ಸಂಖ್ಯೆ ಸಂಪೂರ್ಣ ಸ್ಥಗಿತಗೊಡಿದೆ. ವ್ಯವಸ್ಥೆಯಯ ವಿರುದ್ದದ ಹೋರಾಟಕ್ಕೆ ಅರಣ್ಯಕ್ಕೆ ಹೋಗಿ ಬಂದೂಕ ಹಿಡಿಯಬೇಕೆಂಬುದು ಈಗಿನ ಯುವಜನತೆಗೆ ಸವಕಲು ಮಾದರಿಯಾಗಿದೆ. ಇದೆ ವೇಳೆಗೆ 2010 ರ ಮಾರ್ಚ್ 23 ರಂದು ನಕ್ಸಲ್ ಚಳುವಳಿಯ ಸಂಸ್ಥಾಪಕ ಹಾಗೂ ಚಾರು ಮುಜುಂದಾರ್ ಸಂಗಾತಿ ಕನು ಸನ್ಯಾಲ್ ತಮ್ಮ ವೃದ್ಧಾಪ್ಯದಲ್ಲಿ ತೀವ್ರ ಬಡತನ ಮತ್ತು ಹದಗೆಟ್ಟ ಆರೋಗ್ಯಕ್ಕೆ ಔಷಧಕೊಳ್ಳಲು ಹಣವಿಲ್ಲದ ಸ್ಥಿತಿಯಲ್ಲಿ ತಮ್ಮ ಮಗಳ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಗಿನ ತಲೆಮಾರಿಗೆ ಹೋರಾಟ ಕುರಿತು ಮರುಚಿಂತನೆಗೆ ಪ್ರೇರೇಪಿಸಿದೆ. 1980 ಮತ್ತು 1990 ರ ದಶಕದಲ್ಲಿ ನಕ್ಸಲ್ ಹೋರಾಟಕ್ಕೆ ಸೇರ್ಪಡೆಯಾದ ಅನಕ್ಷರಸ್ತ ಆದಿವಾಸಿ ಯುವಕರು ಈಗ ಚಳುವಳಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಮಾವೋವಾಗಲಿ, ಲೆನಿನ್ ಆಗಲಿ ಅಥವಾ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತಗಳ ಗಂಧ ಗಾಳಿ ತಿಳಿದಿಲ್ಲ. ಇಂತಹ ಕಾರಣಗಳಿಂದಾಗಿಯೆ ಸತ್ತು ಹೋಗಿರುವ ಯೋಧನ ಹೊಟ್ಟೆಯೊಳಗೆ ಸಿಡಿಮದ್ದನ್ನು ತುಂಬಿಸಿ ಇಡುವ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ.

ಒಂದು ನೆಮ್ಮದಿಯ ಸಂಗತಿಯೆಂದರೆ, ಇಡೀ ರಾಷ್ಟ್ರಾದ್ಯಂತ ನಕ್ಸಲರು ಮತ್ತು ಸರ್ಕಾರಗಳ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಹಿಂಸೆಯ ಪ್ರಮಾಣ ಇಳಿಮುಖವಾಗುತ್ತಿದೆ. ಜಾರ್ಖಂಡ್ ಮತ್ತು ಛತ್ತೀಸ್‌ ಗಡ್ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಆಶಾಭಾವನೆ ಮೂಡುವಂತಿದೆ. pwg-naxalನಕ್ಸಲ್ ಚಳುವಳಿಯನ್ನು ಹುಟ್ಟುಹಾಕಿದ ಆಂಧ್ರಪ್ರದೇಶದಲ್ಲಿ ಕೇವಲ 13 ಸಾವುಗಳು ಸಂಭವಿಸಿವೆ. ಜಾರ್ಖಂಡ್ ನಲ್ಲಿ 160 ಸಾವು (2011 ರಲ್ಲಿ 182 ) ಛತ್ತೀಸ್‌ಗಡದಲ್ಲಿ 107 (2011 ರಲ್ಲಿ 204) ಬಿಹಾರದಲ್ಲಿ 43 ಸಾವು (2011 ರಲ್ಲಿ 63) ಪಶ್ಚಿಮ ಬಂಗಾಳದಲ್ಲಿ 6 ಸಾವು (2011 ರಲ್ಲಿ 45), ಹೀಗೆ ಭಾರತದಲ್ಲಿ 2011 ರಲ್ಲಿ 1760 ಪ್ರಕರಣಗಳು ನಡೆದು, 611 ನಾಗರೀಕರು ಮತ್ತು 99 ನಕ್ಸಲಿಯರು ಮೃತಪಟ್ಟಿದ್ದರೆ, 2012 ರ ವೇಳೆಗೆ 1365 ಪ್ರಕರಣಗಳು ದಾಖಲಾಗಿ 409 ನಾಗರೀಕರು ಮತ್ತು 74 ನಕ್ಸಲಿಯರು ಮೃತಪಟ್ಟಿದ್ದಾರೆ. ಒಟ್ಟಾರೆ ಸಕಾರ ಮತ್ತು ನಕ್ಸಲ್ ಸಂಘಟನೆಗಳಿಗೆ ಸಂಘರ್ಷ ಮತ್ತು ಹಿಂಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಮೂಡತೊಡಗಿದೆ.

ಭಾರತದ ನಕ್ಸಲ್ ಇತಿಹಾಸದಲ್ಲಿ ಪೊಲೀಸರತ್ತ, ಅಥವಾ ಸರ್ಕಾರಗಳತ್ತ, ಇಲ್ಲವೆ ನಕ್ಸಲ್ ಸಂಘಟನೆಗಳತ್ತ ಬೆರಳು ತೋರಿಸಿ ಆರೋಪ ಹೊರಿಸುವ ಮುನ್ನ ಉಭಯ ಬಣಗಳು ಎಲ್ಲಿ ಎಡವಿದವು ಎಂಬುದರತ್ತ ಗಮನಹರಿಸಿ ಹಿಂಸೆ ಮತ್ತು ಹೋರಾಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಮುಕ್ತ ಮನಸ್ಸಿನಿಂದ ಕೈ ಜೋಡಿಸಬೇಕಿದೆ. ಇತಿಹಾಸದ ಘಟನೆಗಳನ್ನು ಕೆದುಕುತ್ತಾ ಪರಸ್ಪರ ಆರೋಪ ಮಾಡಿ ಕಾಲ ಕಳೆಯುವ ಬದಲು, ಹಿಂಸೆ ಮುಕ್ತ ಜಗತ್ತಿನತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಸೃಷ್ಟಿಸ ಬೇಕಾದ ಸಮಾಜದಲ್ಲಿ ಹಿಂಸೆ, ಬಡತನ, ಅಪಮಾನ, ಶೋಷಣೆ, ದಲಿತರು, ಆದಿವಾಸಿಗಳು, ಮತ್ತು ಅಲ್ಪಸಂಖ್ಯಾತರು ಇವರೆಲ್ಲಾ ಭಯಮುಕ್ತರಾಗಿ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ನೈತಿಕ ಹೊಣೆ ಅಕ್ಷರ ಮತ್ತು ವಿದ್ಯೆಯನ್ನು ಬಲ್ಲ ನಮ್ಮೆಲ್ಲರ ಮೇಲಿದೆ. ವೈದ್ಯನೊಬ್ಬ ಖಾಯಿಲೆಯ ಮೂಲಕ್ಕೆ ಕೈ ಹಾಕುವಂತೆ ನಾವುಗಳು ಕೂಡ ಸಮಸ್ಯೆಗಳ ಬುಡಕ್ಕೆ ಕೈ ಹಾಕಬೇಕಿದೆ.

ಭಾರತದ ನಕ್ಸಲ್ ಹೋರಾಟದ ಇತಿಹಾಸವಾಗಲಿ ಅಥವಾ ಅದು ಹಿಡಿದ ಹಿಂಸೆಯ ಮಾರ್ಗ ಕುರಿತಂತೆ ನಮ್ಮಗಳ ಅಸಮಾಧಾನ ಏನೇ ಇರಲಿ, ಅವರುಗಳ ಹೋರಾಟದಲ್ಲಿ ಎಲ್ಲಿಯೂ ಸ್ವಾರ್ಥವೆಂಬುದು ಇರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇವೊತ್ತಿಗೂ ಮೂಕ ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿಗಳು, ಹಿಂದುಳಿದ ಬುಡಕಟ್ಟು ಜನಾಂಗಗಳ ನೆಮ್ಮದಿಯ ಬದುಕಿಗಾಗಿ ನಕ್ಸಲಿಸಂ ಹೆಸರಿನಲ್ಲಿ ಸಾವಿರಾರು ವಿದ್ಯಾವಂತ ಯುವಕರು ಪ್ರಾಣತೆತ್ತಿದ್ದಾರೆ. ಇವರ ಹೋರಾಟದ ಹಿಂದಿನ ಕಾಳಜಿಯನ್ನು ನಮ್ಮನ್ನಾಳುವ ಸರ್ಕಾರಗಳು ಅರಿಯುವ ಮನಸ್ಸು ಮಾಡಿದ್ದರೆ, ನಕ್ಸಲ್ ಸಂಘಟನೆಗಳು ಮತ್ತು ಸರ್ಕಾರಗಳ ನಡುವಿನ ಸಂಘರ್ಷಕ್ಕೆ ರಕ್ತದ ಕಲೆಗಳು ಅಂಟಿಕೊಳ್ಳುತ್ತಿರಲಿಲ್ಲ. ಸಂಘರ್ಷಕ್ಕೆ ಮೂಲ ಕಾರಣರಾದ ಭಾರತದ ಅರಣ್ಯವಾಸಿ ಆದಿವಾಸಿಗಳ ಬದುಕು ಹಸನಾಗಿದೆಯಾ? ಅದೂ ಇಲ್ಲ.

ನಮ್ಮ ನಡುವಿನ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರ ಗುಹಾ 2011 ರ ಲ್ಲಿ ಆಗಸ್ಟ್ ಹದಿನೈದರೆಂದು ದೆಹಲಿಯ ಹಿಂದೂಸ್ತಾನ್ naxalite24fo4ಟೈಮ್ಸ್ ಪತ್ರಿಕೆಗೆ “ಟ್ರೈಬಲ್ ಟ್ರ್ಯಾಜಿಡಿಸ್” ( ಆದಿವಾಸಿಗಳ ದುರಂತ) ಎಂಬ ವಿಶೇಷ ಲೇಖನ ಬರೆದಿದ್ದರು. ಭಾರತದ ಆದಿವಾಸಿಗಳ ಸಮಸ್ಯೆಯನ್ನು ನಿಖರವಾಗಿ ಗುರುತಿಸಿರುವ ಗುಹಾ ಅವರು, ರಾಜಕಾರಣಿಗಳ ಕಪಟ ನಾಟಕವನ್ನೂ ಸಹ ಅನಾವರಣಗೊಳಿಸಿದ್ದಾರೆ. 2010 ರ ಆಗಸ್ಟ್ ತಿಂಗಳಿನಲ್ಲಿ ಒರಿಸ್ಸಾದಲ್ಲಿ ಆದಿವಾಸಿಗಳನ್ನು ಭೇಟಿ ಅವರ ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ, ಇನ್ನುಮುಂದೆ ದೆಹಲಿಯಲ್ಲಿ ನಿಮ್ಮ ಪರವಾಗಿ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಮರೆತು ಹೋದ ಪ್ರಸಂಗವನ್ನು ಪ್ರಸ್ತಾಪಿಸುತ್ತಾ, ಭಾರತದ ಬುಡಕಟ್ಟು ಅಥವಾ ಆದಿವಾಸಿಗಳ ಸಮಸ್ಯೆಯನ್ನು ಏಳು ಬಗೆಯಲ್ಲಿ ರಾಮಚಂದ್ರ ಗುಹಾ ಗುರುತಿಸಿದ್ದಾರೆ:

  1. ದಟ್ಟವಾದ ಅರಣ್ಯದಲ್ಲಿ ತಮ್ಮದೇ ಆದ ಸಂಸ್ಕೃತಿಯ ನೆರಳಿನಲ್ಲಿ ಮತ್ತು ಸಮೃದ್ಧಿಯಾದ ಖನಿಜ ಸಂಪತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಬದುಕಿರುವ ಆದಿವಾಸಿಗಳು ಇಂದು ಅಭಿವೃದ್ಧಿಯ ನೆಪದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯದಲ್ಲಿ ನಿರಂತವಾಗಿ ನಡೆದಿರುವ ಮರಗಳ ಮಾರಣಹೋಮ ಇವೆಲ್ಲವೂ ಅವರನ್ನು ಆಧುನಿಕ ಅಭಿವೃದ್ಧಿ ಯೋಜನೆಗಳು ಅತಂತ್ರರನ್ನಾಗಿ ಮಾಡಿವೆ.
  2. ಭಾರತದಲ್ಲಿ ದಲಿತರಿಗೆ ದಿಕ್ಕುದೆಸೆಯಾಗಿ ಅಂಬೇಡ್ಕರ್ ಜನ್ಮತಾಳಿದ ಹಾಗೆ ಆದಿವಾಸಿಗಳಿಗೆ ಒಬ್ಬ ಅಂಬೇಡ್ಕರ್ ದೊರೆಯದಿರುವುದು ಅವರ ಈ ಶೋಚನೀಯ ಬದುಕಿಗೆ ಕಾರಣವಾಗಿದೆ.
  3. ಭಾರತದಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಹರಿದು ಹಂಚಿಹೋಗಿರುವ ಆದಿವಾಸಿಗಳು ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷಗಳಿಗೆ ದಲಿತರು ಅಥವಾ ಅಲ್ಪಸಂಖ್ಯಾತರ ಹಾಗೆ ಮತಬ್ಯಾಂಕ್‌ಗಳಾಗಿ ಕಾಣಲಿಲ್ಲ.
  4. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನಾಂಗಕ್ಕಾಗಿ ಮೀಸಲಿಟ್ಟ ಉದ್ಯೋಗಗಳು ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾವಂತರ ಪಾಲಾದವು.
  5. ಆದಿವಾಸಿಗಳ ಪ್ರತಿನಿಧಿಯಂತೆ ಉನ್ನತ ಹುದ್ದೆಯಲ್ಲಿ ಮೇಲ್ಮಟ್ಟದ ಅದಿಕಾರಿಯಾಗಲಿ, ಅಥವಾ ಒಬ್ಬ ಜನಪ್ರತಿನಿಧಿಯಾಗಲಿ ಇಲ್ಲದಿರುವುದು, ಆದಿವಾಸಿಗಳ ಸಮಸ್ಯೆಗಳು ಈವರೆಗೆ ಸರ್ಕಾರಗಳ ಕಣ್ಣಿಗೆ ಗೋಚರವಾಗಿಲ್ಲ.
  6. ಆದಿವಾಸಿಗಳ ಬದುಕು ಪರಿಸರಕ್ಕೆ ಮಾರಕವಾಗದಂತೆ, ದೇಶಿ ಜ್ಞಾನಪರಂಪರೆಯಿಂದ ಕೂಡಿದ್ದು ಅವರುಗಳು ಕಾಪಾಡಿಕೊಂಡು ಬಂದಿರುವ ಜ್ಞಾನಶಿಸ್ತುಗಳನ್ನು ಸುಲಭವಾಗಿ ಆಧುನಿಕ ಬದುಕಿಗಾಗಲಿ, ತಂತ್ರಜ್ಞಾನಕ್ಕಾಗಲಿ ಅಳವಡಿಸಲು ಸಾಧ್ಯವಾಗಿಲ್ಲ.
  7. ಪಶ್ಚಿಮ ಬಂಗಾಳದ ಸಂತಾಲ್ ಭಾಷೆಯೊಂದನ್ನು ಹೊರತು ಪಡಿಸಿದರೆ ಆದಿವಾಸಿಗಳ ಮಾತೃಭಾಷೆಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಈ ಕಾರಣದಿಂದಾಗಿ ಆದಿವಾಸಿ ಮಕ್ಕಳು ಮಾತೃ ಭಾಷೆಯ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಲಭಿಸಿ 66 ವರ್ಷಗಳಾದರೂ ಯಾವ ಪಕ್ಷಗಳಾಗಲಿ, ಸರ್ಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಇಲ್ಲವೆ ಯೋಜನೆಗಳನ್ನು ರೂಪಿಸಿದ್ದನ್ನು ನಾವುಗಳು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಿದ್ದರೆ ಈ ನತದೃಷ್ಟರು ಸಮಾಜದ ಮುಖ್ಯವಾಹಿನಿ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರು. ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾದಂತಿದೆ. ಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.

2003 ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ ನಕ್ಸಲರ ಹಾವಳಿಯನ್ನು tribal-schools-educationತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲಿನ್ಲ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆ ಇವುಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸರ್ಕಾರ ಗ್ರಹಿಸಿತು. ಇದರಿಂದಾಗಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007 ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012 ರ ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ ಮುಂದುವರಿಸಲು ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶರ್ಮ ಮಧ್ಯಸ್ಥಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರ್ಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವುದಿಲ್ಲ. ನಕ್ಸಲ್ ಚಳುವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದನ್ನು ತಡೆಯಬೇಕು. ಇದಕ್ಕಿರುವ ಏಕೈಕ ಪರಿಹಾರ ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದ “ಜಲ್, ಜಂಗಲ್, ಜಮೀನ್” ಎಂಬ ಬೇಡಿಕೆಗಳು.

ಅರಣ್ಯದಲ್ಲಿ ಅತಂತ್ರರಾಗಿರುವ ಆದಿವಾಸಿಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರ್ಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಹಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಈ ಕುರಿತು ಸೃಷ್ಟನಿದರ್ಶನ ನೀಡಿದೆ.) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸ ಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಆ ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನು ತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಈ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಿಗಳಲ್ಲಿ ಕುಡಿಯುವ ಶುದ್ದ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೊದಲು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.

ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾತ್ರ ಸರ್ಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಚಿವುಟಿ ಹಾಕಲು ಸಾಧ್ಯ. ನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಪಾತ್ರವಿದೆ. communist-photoಈ ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುದ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್ ಸಿಂಗ್, ಸುಂದರಯ್ಯ, ಜ್ಯೋತಿ ಬಸು ಇಂತಹ ನಾಯಕರು ಬೇಕಾಗಿದ್ದಾರೆ. ಕಮ್ಯುನಿಸ್ಟ್ ಪಕ್ಷದ ವೈಪಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ದದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರ ಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯುನಿಸ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸಿತಾರಾಮ್ ಯಚೂರಿ, ಬೃಂದಾ ಕಾರಟ್ ಮುಂತಾದ ಬದ್ಧತೆಯುಳ್ಳ ನಾಯಕರಿದ್ದರೂ ಸಹ ಕಮ್ಯುನಿಸ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕೃತಿಯ ಜನರಂತೆ ಚಿಂತಿಸುತ್ತಿದ್ದಾರೆ. ಉಳ್ಳವರ ಈ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಅವರು ಮನಗಾಣಬೇಕಿದೆ.

ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ದಗೊಂಡಿರುವ ಮನಸ್ಸುಗಳು ಬೇಕು. ಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖ್ಯಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡು ಕಡೆಯಿಂದ ಸಿದ್ಧವಾಗಿರುವ ಮುಕ್ತ ಮನಸ್ಸುಗಳು ಮಾತ್ರ. ಇಂತಹ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೇ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ದವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಅಂತಹ ನೋವಿನ ಗಳಿಗೆಯಲ್ಲಿ ನಾವುಗಳು ಮೌನವಾಗಿ ಸಾಕ್ಷಿಗಳಾಗಬೇಕಾಗುತ್ತದೆ. ಅಂತಿಮವಾಗಿ ಇದು ಮಾನವೀಯತೆಗಾಗಿ ತುಡಿಯುವ ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯ ಜಗತ್ತು.


[ಕೊನೆಯ ಮಾತು :- ಪ್ರಿಯ ಓದುಗರೆ, ವರ್ತಮಾನ ಅಂತರ್ಜಾಲ ಪತ್ರಿಕೆಯಲ್ಲಿ ನಕ್ಸಲ್ ಕಥನದ ಸರಣಿ ಬರೆಯಲು ಅವಕಾಶ ಮಾಡಿಕೊಟ್ಟ ಪ್ರ್ರಿಯ ಮಿತ್ರ ರವಿ ಕೃಷ್ಣಾರೆಡ್ಡಿಯವರಿಗೆ ನನ್ನ ಧನ್ಯವಾದಗಳು. ಈ ಕಥನಕ್ಕೆ ಓದುಗ ಮಿತ್ರರು ತೋರಿದ ಪ್ರೀತಿ, ಪ್ರತಿಕ್ರಿಯೆ ಮತ್ತು ಆಸಕ್ತಿಯಿಂದಾಗಿ ನಾನು ಗಂಭೀರವಾಗಿ ಇಂತಹ ಅಧ್ಯಯನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ನಾನು ಕಳೆದ ಮುವ್ವತ್ತು ವರ್ಷಗಳಿಂದ ಹಲವು ಪ್ರಗತಿಪರ ಸಂಟನೆಗಳ ಜೊತೆ ಗುರುತಿಸಿಕೊಂಡಿದ್ದರೂ, ನಕ್ಸಲ್ ಚಳುವಳಿಯಿಂದ ಬಂದವನಲ್ಲ. ಕೆಲವು ರಾಜ್ಯಗಳಲ್ಲಿ ಪ್ರವಾಸ ಮಾಡಿ ಒರ್ವ ಪತ್ರಕರ್ತನಾಗಿ, ಸಂಶೋಧಕನಾಗಿ ನಡೆಸಿದ ಕ್ಷೇತ್ರ ಕಾರ್ಯ ಮತ್ತು ಮಾಜಿ ಹೋರಾಟಗಾರರ ಜೊತೆ ನಡೆಸಿದ ಚರ್ಚೆ ಮತ್ತು ಮಾತುಕತೆ, ಹಾಗೂ ಅವರು ನೀಡಿದ ಮಾಹಿತಿ ಮತ್ತು ಇತಿಹಾಸದ ದಾಖಲೆಗಳಿಂದ ಇಂತಹದ್ದೊಂದು ಸರಣಿ ಸಾಧ್ಯವಾಯಿತು. ನನ್ನ ಈ ಸರಣಿ ಕಥನದಲ್ಲಿ ಏನಾದರೂ ಕೊರತೆಯಿದ್ದರೆ, ಅಥವಾ ತಪ್ಪು ಮಾಹಿತಿಗಳಿದ್ದರೆ ನನ್ನ ಗಮನಕ್ಕೆ ತರಬೇಕಾಗಿ ವಿನಂತಿಸಿಕೊಳ್ಳತ್ತೇನೆ. ನನ್ನ ಇ-ಮೈಲ್ ವಿಳಾಸ : jagadishkoppa@gmail.com.

ಮುಂದಿ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನ ಪ್ರಸಿದ್ದ ಪ್ರಕಾಶನ ಸಂಸ್ಥೆಯಿಂದ “ಎಂದೂ ಮುಗಿಯದ ಯುದ್ದ” (ಭಾರತದ ನಕ್ಸಲ್ ಇತಿಹಾಸದ ಕಥನ) ಎಂಬ ಹೆಸರಿನಲ್ಲಿ ಪ್ರಕಟವಾಗುವ ಈ ಲೇಖನಗಳ ಸರಣಿಯ ಕೃತಿಯಲ್ಲಿ 1967 ರಿಂದ 1980 ರ ವರೆಗೆ ಜರುಗಿದ ಹೋರಾಟದ ಕಥನ ಮೊದಲ ಭಾಗದಲ್ಲಿ, ನಂತರ 1980 ರಿಂದ 2012 ರವರೆಗೆ ನಡೆದ ಹೋರಾಟ ಎರಡನೆ ಭಾಗದಲ್ಲಿ ಅಡಕವಾಗಿರುತ್ತದೆ. ಕೃತಿಯ ಕೊನೆಯ ಪುಟಗಳ ಅನುಬಂಧದ ವಿಭಾಗದಲ್ಲಿ ಈವರೆಗೆ ನಕ್ಸಲ್ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ನಕ್ಸಲ್ ಹುತಾತ್ಮ ನಾಯಕರ ವಿವರ ಮತ್ತು 1967 ರಿಂದ 2012 ರವರೆಗೆ ನಡೆದ ಪ್ರಮುಖ ಹಿಂಸಾಚಾರ ಘಟನೆಗಳು ಹಾಗೂ ನಕ್ಸಲ್ ಹೋರಾಟಕ್ಕಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ಹುಟ್ಟಿಕೊಂಡ ಸಂಘಟನೆಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆಸಕ್ತರು ಗಮನಿಸ ಬಹುದು. ಎಲ್ಲರಿಗೂ ನಮಸ್ಕಾರ. – ಡಾ. ಎನ್. ಜಗದೀಶ್ ಕೊಪ್ಪ]

(ಮುಗಿಯಿತು)

ಬಲಿತ ಸಚಿವರ ದಲಿತ ಚಿಂತನೆ…!

– ಡಾ. ಕಿರಣ್. ಎಂ. ಗಾಜನೂರು

ಸನ್ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಎ.ನಾರಾಯಣಸ್ವಾಮಿಯವರು ಮತಾಂತರ ಹೊಂದಿದ ದಲಿತರಿಗೆ ಇನ್ನು ಮುಂದೆ ಮಿಸಲಾತಿ ಸೌಲಭ್ಯಗಳು ಸಿಗುವುದಿಲ್ಲ ಎಂಬ ಎಚ್ಚರಿಕೆಯ ಹೇಳಿಕೆಯನ್ನು ನೀಡಿದ್ದಾರೆ. ನಿಜಕ್ಕೂ ಈ ಹೇಳಿಗೆ ಅಂತ್ಯಂತ ಬೇಜಾವಬ್ದಾರಿ ಮತ್ತು ಬಾಲಿಷವಾದುದು. a-narayanaswamyಏಕೆಂದರೆ ಸಚಿವರ ಹೇಳಿಕೆಯ ಅರ್ಥ ಹಿಂದೂ ಧರ್ಮದಿಂದ (ಹಾಗೆಂದರೆ ಎನು ಎಂದು ಇದುವರೆಗೂ ವೈಜ್ಞಾನಿಕವಾಗಿ ಯಾರೂ ನಿರೂಪಿಸಿಲ್ಲ, ಅದು ಬೇರೆಯೇ ವಿಚಾರ) ಮುಖ್ಯವಾಗಿ ಕ್ರಿಶ್ಚಿಯನ್ ಅಥವ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರ ಕುರಿತು ಮಾತ್ರವಾಗಿದೆಯೊ ಅಥವಾ ಅಂಬೆಡ್ಕರ್ ಅವರನ್ನು ಅನುಸರಿಸಿ ಹಿಂದೂ ಧರ್ಮವನ್ನು ಮತ್ತು ಅದರ ಅರ್ಥಹಿನ ಆಚರಣೆಗಳನ್ನು ಧಿಕ್ಕರಿಸಿ ಬೌಧ್ದ ಧರ್ಮವನ್ನು ಸ್ವಿಕರಿಸಿದ ಬಹುದೊಡ್ಡ ಸಂಖ್ಯೆಯ ದಲಿತ ಬಾಂಧವರು ಈ ಎಚ್ಚರಿಕೆಯ ವ್ಯಾಪ್ತಿಯೋಳಗೆ ಬರುತ್ತಾರೆಯೇ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲ. ಎಕೆಂದರೆ ಇದೂ ಮತಾಂತರವೇ ತಾನೆ!

ಅಷ್ಟೇ ಅಲ್ಲದೆ, ಭಾರತೀಯ ಸಮಾಜದ ಜೀವನಾಡಿ ದುಡಿಯುವ ವರ್ಗವಾದ ದಲಿತರು ಮಾತಾಂತರಗೊಳ್ಳಲು ಮೊದಲ ಕಾರಣ ಬಡತನವಾಗಿದ್ದರೆ, ಎರಡನೇಯದು ಸೊ ಕಾಲ್ಡ್ ಹಿಂದೂ ಧರ್ಮದ ಅನಿಷ್ಟ ಮತ್ತು ಅಸಮಾನ ಪದ್ದತಿಗಳು. ಒಬ್ಬ ಪ್ರಸಿದ್ಧ ಇತಿಹಾಸಕಾರ ಗುರುತಿಸುವಂತೆ ಭಾರತದ ಸುಮಾರು ಶೇ. 60 ರಿಂದ 70 ರಷ್ಟು ಜನಸಂಖ್ಯೆ ಇಂದಿಗೂ ಪ್ರಾಣಿಗಳ ಮಾದರಿಯಲ್ಲಿ ಆಹಾರ ಸಂಗ್ರಹಣೆ ಮತ್ತು ಅದರ ಶೇಖರಣೆಯ ಹಂತದಲ್ಲಿಯೇ ಇದ್ದಾರೆ. ಶಿಕ್ಷಣ, ಸಬಲಿಕರಣ, ಆರ್ಥಿಕ ಸ್ವಾಯತ್ತತೆ ಮತ್ತು ಸಮಾಜಿಕ ಸ್ಥಾನ ಅವರಿಗೆ ಕನಸಿನ ಮಾತಾಗಿದೆ. ದುರಂತವೆಂದರೆ ಇವರಲ್ಲಿ ಶೇಕಡಾ 90 ರಷ್ಟು ಮಂದಿ ದಲಿತರೇ ಇದ್ದಾರೆ ಎಂಬುದನ್ನು ಅವರು ಗುರುತಿಸುತ್ತಾರೆ. ಇವರುಗಳು ಯಾರದೋ ಮನೆ ಮತ್ತು ಹೊಲಗಳಲ್ಲಿ ದುಡಿಯುವುದು, ಶೌಚಾಲಯ ಬಳಿಯುವುದು, ಜೀತಕ್ಕೆ ಒಳಗಾಗುವುದು, ಎಲ್ಲವೂ ತನ್ನ ಮತ್ತು ತನ್ನ ಕುಟುಂಬದ ಆ ಹೊತ್ತಿನ ಅನ್ನಕ್ಕಾಗಿಯೇ.

ಹಾಗೆ ನೋಡುವುದಾದರೆ, ಪ್ರಜಾತಾಂತ್ರಿಕ ಶಿಕ್ಷಣದ ಗಂಧ ಗಾಳಿಯೂ ಗೊತ್ತಿರದ ಈ ಅನಕ್ಷರಸ್ಥ ವರ್ಗ ಚುನಾವಣೆಯಲ್ಲಿ ಹಣ Young_Ambedkarಪಡೆಯುವುದು ಅನ್ನಕ್ಕಾಗಿಯೇ. ಇದನ್ನು ನಾವು ಭ್ರಷ್ಟತೆ ಅದು ಇದು ಎಂಬೆಲ್ಲ ಚರ್ಚಿಸುತ್ತಿದ್ದೇವೆ! ಈ ಹಿನ್ನೆಲೆಯಲ್ಲಿ ದಲಿತರ ಮತಾಂತರಕ್ಕೆ ಕಾರಣ ಅವರ ಆ ಹೊತ್ತಿನ ಅನ್ನವೇ ಹೊರತು ಯಾವುದೇ ಧಾರ್ಮಿಕ ವಿಚಾರಗಳಲ್ಲ…

ಅದ್ದರಿಂದ ಸನ್ಮಾನ್ಯ ಸಚಿವರು ಮೇಲೆ ತಿಳಿಸಿದ ದಲಿತರಿಗೆ ’ಯಾವುದೇ ಧರ್ಮಕ್ಕೆ ಮಾತಾಂತರ ಹೊಂದಬೇಡಿ, ದಲಿತರೆಂದು ನೀವು ಗುರುತಿಸಿಕೊಳ್ಳಬೇಕಾದರೆ ಎಷ್ಟೇ ಅಸಮಾನತೆ ಅವಮಾನಗಳಾದರೂ ಹಿಂದೂಗಳಾಗಿಯೇ ಉಳಿಯಿರಿ, ಹಿಂದೂ ಧರ್ಮವೇ ನಿಮಗೆ ದಲಿತತ್ವ ನೀಡಿ ನಿಮಗೆ ಮೀಸಲಾತಿ ಮತ್ತಿತರ ಸವಲತ್ತುಗಳನ್ನು ದಯಪಾಲಿಸಿದೆ (ಸಂವಿಧಾನವಲ್ಲ), ಅದ್ದರಿಂದ ದಲಿತರಾಗಿ ಹಿಂದೂ ಧರ್ಮದಲ್ಲಿಯೇ ಇರಿ ಮತ್ತು ಹಿಂದುತ್ವವನ್ನು ಗಟ್ಟಿಗೊಳಿಸಿ, ಅದಕ್ಕೆ ಪ್ರತಿಯಾಗಿ ಈ ಮಹಾನ್ ಧರ್ಮಿಯರು ನೀಡುವ ಮೀಸಲಾತಿ ಅವಕಾಶವನ್ನು ಪಡೆಯಿರಿ,’ ಎಂಬ ಮಾದರಿಯ ತತ್ವ ಬೋಧನೆಯನ್ನು ಬಿಟ್ಟು ಅನ್ನ, ಹಕ್ಕು, ಮತ್ತು ಶಿಕ್ಷಣಕ್ಕಾಗಿ ಪರಿತಪಿಸುತ್ತಿರುವ ದಲಿತ ಸಮಾಜದ ಕುಟುಂಬಗಳಿಗೆ ದುಡಿಯಲು ಭೂಮಿ ಅಥವಾ ಹೂಡಲು ಬಂಡವಾಳ ಮತ್ತು ಆಧುನಿಕ ಉದ್ಯೋಗಿಕರಣದ ಭಾಗವಾಗಲು ಬೇಕಾದ ಸ್ಕಿಲ್‌ಗಳನ್ನು ನೀಡುವತ್ತ ತಮ್ಮ ಗಮನ ಹರಿಸಲಿ.

(ಚಿತ್ರಕೃಪೆ: ದಿ ಹಿಂದು)

ಮನೆಯೊಳಗಿನ ಅತ್ಯಾಚಾರಗಳು…

– ಡಾ.ಎಸ್.ಬಿ.ಜೋಗುರ

ಕುಂದಾಪುರದ ಹುಣಸಮಕ್ಕಿ ಎನ್ನುವ ಗ್ರಾಮದಲ್ಲಿ ಅಪ್ಪನೆಂಬ ಪರಮಪಾಪಿಯಿಂದ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಮಗಳು, ಕೊನೆಗೂ ತಾಯಿಯಾಗುವ ಮೂಲಕ ಅಪ್ಪನ ಪಾಪವನ್ನು ಹೊರುವಂತಾಗಿದ್ದು ಅತ್ಯಂತ ಹೇಯವಾದ ಕೃತ್ಯ. ಪಕ್ಕದ ಮನೆಯ ಹುಡುಗನಿಂದ ಅತ್ಯಾಚಾರ, ಸ್ನೇಹಿತನಿಂದ ಹೆಂಡತಿಯ ಅತ್ಯಾಚಾರ, ಹೀಗೆ ಮನುಷ್ಯ ಸಂಬಂಧಗಳೇ ಅಸಹ್ಯ ಹುಟ್ಟಿಸುವಂತೆ ನಡೆಯುವ ವಿಕೃತಿಗಳಲ್ಲಿ ಮನೆಯೊಳಗಿನ ಅತ್ಯಾಚಾರ ಇನ್ನೂ ಭಯಂಕರವಾದುದು.

ದೆಹಲಿಯ ಬಸ್ಸಲ್ಲಿ ಜರುಗಿದ ಅತ್ಯಾಚಾರದ ಕರ್ಮಕಾಂಡ ಇಡೀ ದೇಶವನ್ನು ಬೆಚ್ಚಿ ಬೀಳಿಸಿತುrape-illustration ಎನ್ನುವಾಗಲೇ ಅದರ ಬೆನ್ನಲ್ಲಿಯೇ ಸರಣಿ ಹಂತದಲ್ಲಿ ಅತ್ಯಾಚಾರದ ಪ್ರಕರಣಗಳು ಬಯಲಾಗಿ, ಥಾಮಸ್ ಹಾಬ್ಸ್ ಹೇಳುವ “ನಿಯಂತ್ರಣ ಶಿಥಿಲತೆ ಮಾನವನ ಸಮಾಜವನ್ನು ಪಶುಸದೃಶಗೊಳಿಸುತ್ತದೆ,” ಎನ್ನುವ ಮಾತು ನಮ್ಮ ದೇಶದ ಸದ್ಯದ ಸಂದರ್ಭ ಮತ್ತು ಅಪರಾಧಿ ಕೃತ್ಯಗಳ ವಿಜೃಂಭಿಸುವಿಕೆಗೆ ಪಕ್ಕಾ ಅನ್ವಯಿಸುವಂತಾಗಿದೆ. ದೆಹಲಿ ಅತ್ಯಾಚಾರ ಪ್ರಕರಣದ 23 ವರ್ಷದ ಯುವತಿ ತಾನಳಿದು ಉಳಿದವರಾದರೂ ಸೇಫ್ ಆಗಿರಲಿ ಎನ್ನುವಂತೆ ನಮ್ಮನ್ನಗಲಿ ಬೆಂಕಿಯಲ್ಲಿ ಬೀದಿಯಾದರೂ, ಅದರ ಕಾವಿನಲ್ಲಿಯೇ ಮೈ ಕಾಯಿಸಿಕೊಳ್ಳುವವರ ನಡುವೆ ಅದರ ಬಿಸಿ ತಟ್ಟಬೇಕಾದವರನ್ನು ಸರಿಯಾಗಿ ತಟ್ಟಿಲ್ಲ. ಮತ್ತೊಮ್ಮೆ ಕೊನೆಗೂ ದಪ್ಪ ಚರ್ಮಗಳು ಸಂವೇದನಾಹೀನವೇ.. ಎನ್ನುವದನ್ನು ತೋರಿಸಿಕೊಟ್ಟಂತಾಗಿದೆ.

ಕರ್ನಾಟಕದಂತಹ ನೆಲದಲ್ಲಿಯೂ ಕಳೆದ ಅನೇಕ ದಿನಗಳಿಂದ ಅತ್ಯಾಚಾರಗಳು ಮತ್ತೆ ಮತ್ತೆ ಮರುಕಳುಹಿಸುತ್ತಿವೆ. ದೆಹಲಿಯ ಬಸ್‌ನಲ್ಲಿ ಜರುಗಿದ ಅತ್ಯಾಚಾರದ ಪ್ರಕರಣ ಇನ್ನೂ ಬಿಸಿಯಾಗಿರುವಾಗಲೇ ಡಿಸೆಂಬರ್ ತಿಂಗಳ ಕೊನೆಯಲ್ಲಿ ಸಿಟಿ ಬಸ್ಸಲ್ಲಿ ಮತ್ತೊಂದು ಅತ್ಯಾಚಾರದ ಪ್ರಕರಣ ಬಯಲಾಗಿದೆ. ಇಡೀ ದೇಶ ಹೊಸ ವರ್ಷದ ಆಚರಣೆಯ ಹೊಸ್ತಿಲಲ್ಲಿರುವಾಗಲೇ ದೆಹಲಿಯ ಸಿಟಿ ಬಸ್ಸಲ್ಲಿ 16 ವರ್ಷದ ಬಾಲಕಿಯ ಮೇಲೆ 19 ವರ್ಷದ ಆಕೆಯ ಮಲ ಸಹೋದರನೇ ಅತ್ಯಾಚಾರ ನಡೆಸಿದ ಘಟನೆಯೊಂದು ಬಯಲಾಗಿ, ಬೇಲಿಯೇ ಎದ್ದು ಹೊಲ ಮೇಯುವ ಇಂತಹ ಪ್ರಕರಣಗಳು ಕೂಡಾ ಈಗ ಬಯಲಾಗುತ್ತಿರುವುದು, ದಾಖಲಾಗುತ್ತಿರುವದು ನೋಡಿದರೆ ಕುಟುಂಬದ ಮಾನ ಹರಾಜು, ಹುಡುಗಿಯ ಮಾನದ ಪ್ರಶ್ನೆ ಎಂದೆಲ್ಲಾ ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಿದ್ದ ದಿನಗಳು ಹೋದವು. ಕೊನೆಯ ಪಕ್ಷ ಪೋಲಿಸ್ ಠಾಣೆಗೆ ತೆರಳಿ ಕಂಪ್ಲೇಂಟ್ ಕೊಡುವ ಮಟ್ಟಿಗಾದರೂ ಧೈರ್ಯ ತಂದು ಕೊಡುವಲ್ಲಿ ದೆಹಲಿಯಲ್ಲಿ ಪಾರ್ಲಿಮೆಂಟ್ ಎದುರಲ್ಲಿ ನಡೆದ ಅತ್ಯಾಚಾರ ವಿರೋಧಿ ಬೃಹತ್ ಆಂದೋಲನ ಕೆಲಸ ಮಾಡಿದೆ.

ಹೀಗೆ ಅಣ್ಣ ತಂಗಿಯ ಮೇಲೆ, ಅಪ್ಪ ಮಗಳ ಮೇಲೆ, ಅತ್ಯಾಚಾರ ಎಸಗುವ ಪ್ರಕರಣಗಳಿಗೇನೂ ಕೊರತೆಯಿಲ್ಲ. prohibited-marriages-Clerke_tableಆದರೆ ಇಲ್ಲಿಯವರೆಗೆ ಅವು ಬಹುತೇಕವಾಗಿ ಗಪ್‌ಚುಪ್ ಆಗಿಯೇ ನಡೆಯುತ್ತಿದ್ದವು. ತೀರಾ ಅಪರೂಪಕ್ಕೆ ಎನ್ನುವ ಹಾಗೆ ಮನೆಯ ಗೋಡೆ ದಾಟಿ ಪೋಲಿಸ್ ಸ್ಟೇಷನ್‌ವರೆಗೂ‍ ಬಂದು ದಾಖಲಾಗುವದು ತುಂಬಾ ವಿರಳವಾಗಿತ್ತು. ಈಗ ಇಡೀ ಸಮಾಜ ಅತ್ಯಾಚಾರದ ವಿರುದ್ಧ ರೋಸಿ ಹೋಗಿದೆ. ಹಾಗಾಗಿಯೇ ಮತ್ತೆ ಮತ್ತೆ ಅತ್ಯಾಚಾರದ ಪ್ರಕರಣಗಳು ಬಯಲಾಗುತ್ತಿವೆ. ಈ ಮೊದಲು ಅಳು ನುಂಗಿ ನಗುವ ಅನಿವಾರ್ಯತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ ನಾರಿಯರು, ಇಂದು ಅತ್ಯಾಚಾರವನ್ನು ದಾಖಲಿಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗುವ ಮೂಲಕ ತಾನು ಮುನಿದರೆ ಮಾರಿ ಎನ್ನುವದನ್ನು ಸಾಬೀತು ಮಾಡಹೊರಟಂತಿದೆ. ಮನೆಯ ಹೊರಗಿನವರು ಮಾಡುವ ಅತ್ಯಾಚಾರದ್ದು ಒಂದು ಮುಖವಾದರೆ, ಮನೆಯ ಒಳಗಡೆ ನಡೆಯುವ ಅತ್ಯಾಚಾರ ಇನ್ನೂ ಭಯಂಕರವಾದುದು. ಇಲ್ಲಿ ಪ್ರತಿಭಟನೆಯಾಗಲೀ, ಪ್ರಕರಣ ಬಯಲುಗೊಳಿಸುವದಾಗಲೀ ತೀರಾ ಕಡಿಮೆ. ಹೀಗೆ ಮನೆಯ ಒಳಗಿನವರೇ ಅದರಲ್ಲೂ ಲೈಂಗಿಕವಾಗಿ ನಿಷೇಧಿತ ಸಂಬಂಧಗಳಲ್ಲಿಯೇ ನಡೆಯುವ ಲೈಂಗಿಕ ಕ್ರಿಯೆಯನ್ನು ಅಗಮ್ಯಗಮನ ಸಂಬಂಧ [Incest relations] ಎಂದು ಕರೆಯಲಾಗುತ್ತದೆ.

ಈ ಬಗೆಯ ಸಂಬಂಧಗಳು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ತೀರಾ ಪ್ರಾಚೀನ ಕಾಲದಲ್ಲಿ, ಪುರಾಣ ಮಹಾಕಾವ್ಯಗಳ ಕಾಲದಲ್ಲಿ ಸ್ವೀಕೃತ ಎನ್ನುವಂತೆ ಇರಬಹುದಾದ ಉದಾಹರಣೆಗಳೂ ಇಲ್ಲದಿಲ್ಲ. ಬ್ರಹ್ಮ ತನ್ನ ಮಗಳೊಂದಿಗೆ ಹೊಂದಿರುವ ಸಂಬಂಧ, ಯಮ ತನ್ನ ಸಹೋದರಿ ಯಮಿಯೊಂದಿಗೆ ಹೊಂದಿರುವ ಸಂಬಂಧಗಳು ಈ ಪ್ರಕಾರದ್ದಾಗಿವೆ. ಮಧ್ಯ ಅಮೇರಿಕೆಯಲ್ಲಿ ರೆಡ್ ಇಂಡಿಯನ್ನರು ತಮ್ಮ ಮಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಬಗ್ಗೆ ಉಲ್ಲೇಖಗಳಿವೆ. ಹಾಗೆಯೇ ಕೆಲವು ಪ್ರಾಚೀನ ರಾಜಮನೆತನಗಳಲ್ಲಿಯೂ ಈ ಬಗೆಯ ಆಚರಣೆಗಳಿದ್ದವು. ತಮ್ಮದು ಪರಿಶುದ್ಧ ರಕ್ತ, ಅದರ ಸಂರಕ್ಷಣೆಯೇ ತಮ್ಮ ಪರಮಕರ್ತವ್ಯ ಎನ್ನುವ ಹಿನ್ನೆಲೆಯಲ್ಲಿ ಈ ಬಗೆಯ ಸಂಬಂಧಗಳು ಆಗ ಇದ್ದವು. ಪ್ರಾಚೀನ ಈಜಿಪ್ತ ಮತ್ತು ಇರಾನಗಳಲ್ಲಿ ಸಹೋದರಿಯರನ್ನು ವಿವಾಹವಾಗುವ ಕ್ರಮವಿತ್ತು.Cleopatra_and_Caesar_by_Jean-Leon-Gerome ಕ್ಲೀಯೋಪಾತ್ರಾ ತನ್ನ ಸಹೋದರ ಟಾಲೆಮಿಯನ್ನೇ ವಿವಾಹವಾದ ಪ್ರಸ್ತಾಪವಿದೆ. ಪ್ರಾಚೀನ ಕಾಲದ ರೋಮನ್ನರಲ್ಲಿಯೂ ಈ ಬಗೆಯ ಅಗಮ್ಯಗಮನ ವಿವಾಹಕ್ಕೆ ಸಮ್ಮತಿಯಿತ್ತು. ಮುಂಗೋಲಿಯನ್, ರಷ್ಯನ್, ಕೊರ್ಶಿಕನ್ಸ್, ಐರಿಷ್, ಮೀಡ್ಸ್, ಕಾಂಬೊಡಿಯನ್ಸ್, ಅಮೇರಿಕಾದ ರೆಡ್ ಇಂಡಿಯನ್ಸ್, ಎಸ್ಕಿಮೋಗಳು, ಟಿಟೀನ್ಸ್ ಮುಂತಾದ ಜನಾಂಗಗಳಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧ ಪ್ರಚಲಿತದಲ್ಲಿತ್ತು. ಖ್ಯಾತ ಚಿಂತಕ ಬರ್ಟಂಡ್ ರಸಲ್ ಅವರು ತಮ “ಮ್ಯಾರೇಜ್ ಆಂಡ್ ಮಾರಲ್ಸ್” ಎನ್ನುವ ಕೃತಿಯಲ್ಲಿ ಈ ಅಗಮ್ಯಗಮನ ಸಂಬಂಧಗಳ ಅಸ್ಥಿತ್ವದ ಬಗ್ಗೆ ಪ್ರಸ್ತಾಪಿಸಿರುವುದಿದೆ.

ಹ್ಯಾವಲಾಕ್ ಎಲ್ಲಿಸ್ ಎನ್ನುವ ಮನ:ಶಾಸ್ತ್ರಜ್ಞ ತನ್ನ ಕೃತಿ “ಸ್ಟಡೀಸ್ ಆಫ಼್ ದಿ ಸೈಕಾಲಾಜಿ ಆಫ಼್ ಸೆಕ್ಸ್” ಎನ್ನುವದರಲ್ಲಿ ‘ಕೌಟುಂಬಿಕ ಪರಿಸರದಲ್ಲಿ ತಂದೆ-ತಾಯಿ, ಮಕ್ಕಳು, ಸಹೋದರ, ಸಹೋದರಿಯರು ಬೆಳೆದು ಬರುವ ರೀತಿಯ ಮಧ್ಯೆ ತಪ್ಪಿಯೂ ಈ ಅಗಮ್ಯಗಮನ ಸಂಬಂಧಕ್ಕೆ ಆಸ್ಪದವೇ ಇಲ್ಲ,’ ಎಂದಿದ್ದಾರೆ. ಆದಾಗ್ಯೂ ಡಯಾನಾ ರಸಲ್‌ರವರು ಸುಮಾರು 4.5 ಪ್ರತಿಶತ ಸಂಬಂಧಗಳು ತಂದೆ-ಮಗಳ ನಡುವಿನ ಅಗಮ್ಯಗಮನ ಸಂಬಂಧಗಳಾಗಿರುವ ಬಗ್ಗೆ ಅವರು ಸ್ಯಾನ್ ಫ಼್ರಾನ್ಸಿಸ್ಕೋದಲ್ಲಿ ಮಾಡಲಾದ ಅಧ್ಯಯನದ ಮೂಲಕ ಗುರುತಿಸಿರುವದಿದೆ. ಹಿಂದೊಮ್ಮೆ ಬ್ರಿಟಿಷ ಮೂಲದ ನ್ಯಾಯಾಧೀಶ ಮೆಕಾರ್ಟಿ ಎನ್ನುವವರು, ’ತಂದೆ ಮಗಳನ್ನು ಬಲಾತ್ಕರಿಸಿದ, ಸಹೋದರ ತನ್ನ ಮಂದಬುದ್ಧಿಯ ಸಹೋದರಿಯನ್ನು ಕೆಡಿಸಿದ ಅನೇಕ ಉದಾಹರಣೆಗಳು ನ್ಯಾಯಾಲಯದಲ್ಲಿ ದಾಖಲಾಗಿವೆ,’ ಎಂದಿದ್ದರು. ಈ ಬಗೆಯ ಅಗಮ್ಯಗಮನ ಸಂಬಂಧಗಳನ್ನು ಯೋಚಿಸಲು ಸಾಧ್ಯವೇ ಇಲ್ಲ ಎನ್ನಬಹುದಾದ ನಮ್ಮ ನೆಲದಲ್ಲಿಯೇ ಇಂಥಾ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತವೆ. ಇನ್ನು ಕತ್ತಲಲ್ಲಿಯೇ ಉಳಿಯುವ ಪ್ರಮಾಣಗಳೆಷ್ಟೋ..?

ಈ ಅಗಮ್ಯಗಮನ ಸಂಬಂಧಗಳಲ್ಲಿ ಜರುಗುವ ಲೈಂಗಿಕ ಶೋಷಣೆಗೆ ಧ್ವನಿ ಇರುವದೇ ಅಪರೂಪ. ಇದೊಂಥರಾ ಬಾಯಿ ಸತ್ತವರ ಮೇಲಿನ ಅತ್ಯಾಚಾರ, ನಿರ್ವಾಹವಿಲ್ಲದ ಸ್ಥಿತಿಯಲ್ಲಿರುವವರ ಮೇಲಿನ ದೌರ್ಜನ್ಯ. ಈ ಬಗೆಯ ಸಂಬಂಧಗಳು ಬಿಸಿ ತುಪ್ಪದಂತೆ ಇತ್ತ ಹೇಳುವಂತೆಯೂ ಇಲ್ಲ, ಹೇಳದೇ ಇರುವಂತೆಯೂ ಇಲ್ಲ. ಅನೇಕ ಸಂದರ್ಭಗಳಲ್ಲಿ ತಮ್ಮ ತಂದೆ-ತಾಯಿಗಳು ‘ಆ ಅಂಕಲ್ ತುಂಬಾ ಒಳ್ಳೆಯವರು,’ ಎಂದು ಪರಿಚಯ ಮಾಡಿಸಿದ ಮೇಲೆಯೂ ಆ ಅಂಕಲ್ ಎಂಬುವಾತ ಆ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದಾಗ ಆಕೆಗೆ ತನ್ನ ಪಾಲಕರ ಮುಂದೆ ಹೇಳಲಾಗುವುದಿಲ್ಲ. ಪಾಲಕರಿರದಿದ್ದರಂತೂ ಆ ಬಾಲಕಿಯ ಬದುಕು ನರಕವೇ ಸರಿ. ಇತ್ತೀಚಿಗೆ ಫ್ರೆಂಚ್ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ತನ್ನ ಮೂರು ವರ್ಷದ ಮಗಳನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಬಗ್ಗೆ ನಮ್ಮ ರಾಜ್ಯದ ಮತ್ತು ರಾಷ್ಟ್ರದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಡಿ.ರಸಲ್ ಎನ್ನುವವರು 80 ರ ದಶಕದಲ್ಲಿ ಸುಮಾರು 930 ರಷ್ಟು ಮಾದರಿಗಳನ್ನು [ಮಹಿಳೆಯರು] ಆಯ್ಕೆ ಮಾಡಿ ಅವರಿಗೆ ಬಾಲ್ಯದಲ್ಲಿ ಅಗಿರಬಹುದಾದ ಅಗಮ್ಯಗಮನ ಸಂಬಂಧಗಳಲ್ಲಿಯ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಳು. ಈ 930 ಮಹಿಳೆಯರಲ್ಲಿ ಸುಮಾರು 16 ಪ್ರತಿಶತದಷ್ಟು ಮಹಿಳೆಯರು ತಮ್ಮ 18 ವರ್ಷ ವಯೋಮಿತಿ ತಲುಪುವದರೊಳಗಾಗಿ ಒಂದಿಲ್ಲಾ ಒಂದು ಬಗೆಯ ಅಗಮ್ಯಗಮನ ಸಂಬಂಧದಲ್ಲಿಯ ಲೈಂಗಿಕ ಶೋಷಣೆಯ ಬಗ್ಗೆ ಮಾತನಾಡಿರುವುದಿದೆ. ಹಾಗೆಯೇ 152 ಮಹಿಳೆಯರು ತಮಗೆ ಸಂಬಂಧಗಳಲ್ಲಿಯೇ ಉಂಟಾದ 186 ಬಗೆಯ ಲೈಂಗಿಕ ಶೋಷಣೆಯ ಅನುಭವವನ್ನು ಡಯಾನಾ ರಸಲ್ ಎದುರು ಹಂಚಿಕೊಂಡಿರುವದಿದೆ [Sexual Exploitation. pages 182-183]. sexual-exploitationಇದರಲ್ಲಿ ಸುಮಾರು 12 ಪ್ರತಿಶತ ಮಹಿಳೆಯರು ಅವರಿನ್ನೂ 14 ವರ್ಷ ತಲುಪುವದರೊಳಗೆ ತಮ್ಮ ಸಂಬಂಧಿಗಳಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮಾಹಿತಿ ನೀಡಿರುವದಿದೆ. ರಸಲ್, ಸ್ಯಾನ್ ಫ಼್ರಾನ್ಸಿಸ್ಕೋದಲ್ಲಿ ತನ್ನ ಅಧ್ಯಯನ ಮಾಡಿರುವರಾದರೂ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧಗಳ ಹಾವಳಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇದ್ದೇ ಇದೆ.

ಈಗಾಗಲೇ ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣ ಮತ್ತು ಸ್ವರೂಪ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ದೇಶದ ಬಹುತೇಕ ಕಡೆಯಿಂದ ಅತ್ಯಂತ ರೋಷದಿಂದ ಗಲ್ಲು ಶಿಕ್ಷೆಯೇ ಆಗಬೇಕು, ಅವರ ಪುರುಷತ್ವವನ್ನೇ ಕತ್ತರಿಸಬೇಕು, ಸಾರ್ವಜನಿಕರ ಎದುರಲ್ಲಿ ಕಲ್ಲು ಹೊಡೆದು ಸಾಯಿಸಬೇಕು, ಹೀಗೆ ಹತ್ತಾರು ಬಗೆಯ ಆಕ್ರೋಶಭರಿತ ಸಲಹೆಗಳು ಬಂದಿವೆ. ಇಂತಹ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳ ಅರ್ಥವಂತಿಕೆಯನ್ನೇ ಕಳೆಯ ಹೊರಟ, ಮಾನವ ಮತ್ತು ಪ್ರಾಣಿಗಳ ನಡುವಿನ ಗೆರೆಯನ್ನೇ ಅಳಿಸ ಹೊರಟವರಿಗೆ ಕೊಡಬೇಕಾದ ಶಿಕ್ಷೆಯ ಪ್ರಮಾಣ ಹೇಗಿರಬೇಕು?

ಟಿಪ್ಪು ವಿ.ವಿ. ವಿವಾದ – ತಲೆ ಮಾಸಿದವರ ತಳಮಳಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಕೇಂದ್ರ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಉನ್ನತ ಶಿಕ್ಷಣಕ್ಕಾಗಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ ನಂತರ ಕರ್ನಾಟಕದ ಹಿಂದೂ ಮತೀಯವಾದಿಗಳು ಕುಂಡೆಗೆ ಬೆಂಕಿ ಬಿದ್ದವರಂತೆ ಕಿರುಚುತ್ತಾ ರಾಜ್ಯದ ಉದ್ದಗಲಕ್ಕು ಓಡಾಡುತ್ತಿದ್ದಾರೆ. ಇವರಿಗೆ ಮಠಾಧೀಶರೆಂಬ ಮತಿಹೀನರು ಮತ್ತು ಲೇಖಕ ಮತ್ತು ಸಂಶೋಧಕರೆಂಬ ತಲೆಮಾಸಿದ ಗಿರಾಕಿಗಳು ಹಾಗೂ ಇವರ ಪಾಲಿಗೆ ಬೊಗಳುವ ನಾಯಿಯಂತಿರುವ ಹಲವು ಮಾಧ್ಯಮಗಳ ಅಂಕಣಕಾರರು ಬೆಂಬಲವಾಗಿ ನಿಂತಿದ್ದಾರೆ.

ಈ ದೇಶದಲ್ಲಿ ಎಡಪಂಥೀಯ ಚಿಂತನೆಯ ಶಾಲೆಗಳಿಂದ ಬಂದ ಇತಿಹಾಸಕಾರರು ಬರೆದ ಚರಿತ್ರೆಗಳು ನಕಲಿ; ನಾವು ಬರೆದದ್ದು ಮಾತ್ರ ಅಪ್ಪಟ ಇತಿಹಾಸ ಎಂದು ನಂಬಿರುವ, ಹಾಗೂ ಜನರನ್ನು ನಂಬಿಸಲು ಹೊರಟಿರುವ ಈ ಮೂರ್ಖರು ತಾವು ಹೇಳುತ್ತಿರುವ ಸಂಗತಿಗಳನ್ನು ನನ್ನ ನೆಲವಾದ ಮಂಡ್ಯ ಜಿಲ್ಲೆಯ ಯಾವುದಾದರೂ ಹಳ್ಳಿಗೆ ಹೋಗಿ ದನ ಆಥವಾ ಕುರಿ ಕಾಯುವ ಒಬ್ಬ ವೃದ್ಧ ಅನಕ್ಷರಸ್ತನ ಬಳಿ ಹೋಗಿ ಹೇಳಬೇಕು, ಆತ ನಗಬಾರದ ಜಾಗದಲ್ಲಿ ಗೊಳ್ ಎಂದು ನಕ್ಕು ಬಿಡುತ್ತಾನೆ. ಏಕೆಂದರೆ ನನ್ನ ಜನ ಅಕ್ಷರ ಲೋಕದಿಂದ ದೂರ ಉಳಿದಿದ್ದರೂ, Tippuಕಳೆದ ನಾಲ್ಕು ಶತಮಾನಗಳಿಂದ ನನ್ನ ನೆಲದ ನೆಲದ ಜನ ಟಿಪ್ಪು ಸುಲ್ತಾನ್ ಮತ್ತು ಆತನ ಶೌರ್ಯ ಮತ್ತು ಪರಧರ್ಮ ಸಹಿಷ್ಣುತೆ ಕುರಿತಂತೆ ಬಾಯಿಂದ ಬಾಯಿಗೆ ಹರಿದು ಬಂದಿರುವ ಮೌಖಿಕ ಕಾವ್ಯ ಪ್ರಕಾರಗಳಲ್ಲಿ ಒಂದಾಗಿರುವ ಲಾವಣಿಯಿಂದ ಟಿಪ್ಪು ಸುಲ್ತಾನ್ ಬಗ್ಗೆ ಅಪಾರ ಜ್ಞಾನ ಮತ್ತು ತಿಳುವಳಿಕೆ ಸಂಪಾದಿಸಿದ್ದಾರೆ. ಚರಿತ್ರೆ ಸುಳ್ಳಾದರೂ ವಾಸ್ತವಿಕ ಘಟನೆಗಳ ಆಧಾರದ ಮೇಲೆ ಸೃಷ್ಟಿಯಾಗಿರುವ ಗಾದೆಗಳು ಮತ್ತು ಲಾವಣಿಗಳು ಭೂತಕಾಲದ ಬಗ್ಗೆ ಸುಳ್ಳು ಹೇಳುವುದಿಲ್ಲ. ಇವೊತ್ತಿಗೂ ಮಂಡ್ಯ ಜಿಲ್ಲೆಯಲ್ಲಿ ಒಂದು ಜನಪ್ರಿಯವಾದ ಬೈಗುಳವಿದೆ. ಏನೂ ಕೈಲಾಗದ ಸೋಮಾರಿ ಗಂಡಸನ್ನು “ಗಂಜಾಮ್‌ಗೆ ಹೆಣ ಹೊರೋಕೆ ಹೋಗು” ಎಂದು ಬೈಯ್ಯುವ ವಾಡಿಕೆಯಿದೆ. ತನ್ನ ಜೀವಮಾನದ ಬಹುತೇಕ ಸಮಯವನ್ನು ಬ್ರಿಟಿಷರೊಂದಿಗೆ ಯುದ್ಧ ಮಾಡುವುದರಲ್ಲಿ ಕಳೆದ ಟಿಪ್ಪುವಿನ ಹೋರಾಟ ಮತ್ತು ಜೀವ ಕಳೆದುಕೊಂಡ ಸಾವಿರಾರು ಸೈನಿಕ ಕಥನನವನ್ನು ಪರೋಕ್ಷವಾಗಿ ಬಿಂಬಿಸುವ ಬೈಗುಳವಿದು. (ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಸಮೀಪ ಇರುವ ಪ್ರದೇಶದಲ್ಲಿ ಗಂಜಾಂ ಎಂಬ ಗ್ರಾಮವಿದೆ.)

ಟಿಪ್ಪು ಸುಲ್ತಾನ್ ಒಬ್ಬ ಕೋಮುವಾದಿಯಾಗಿದ್ದ ಎಂದು ಬಿಂಬಿಸುವ ಈ ಮಹಾಶಯರು ಒಮ್ಮೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ ಮತ್ತು ಮೇಲುಕೋಟೆಯ ಯೋಗನರಸಿಂಹ ದೇವಾಲಯಕ್ಕೆ ಹೋಗಿ ಟಿಪ್ಪು ಕೊಟ್ಟಿರುವ ಒಡವೆಗಳು ಯಾವುವು ಹಾಗೂ ಶೃಂಗೇರಿಯ ಶಾರದಾ ದೇವಿಗೆ ನೀಡಿರುವ ಕಾಣಿಕೆಗಳು ಏನು, ಈ ದಾನ ಪತ್ರಗಳು ಯಾವ ಭಾಷೆಯಲ್ಲಿವೆ ಎಂಬುದನ್ನು ನೋಡಿ ಬರಲಿ. ಇಷ್ಟೆಲ್ಲಾ ಸುಳ್ಳು ಹೇಳುವ ಇವರು ಟಿಪ್ಪು ಸುಲ್ತಾನ್ ಆಸ್ಥಾನದಲ್ಲಿ ಸಲಹೆಗಾರರಾಗಿದ್ದವರು ದಿವಾನ್ ಪೂರ್ಣಯ್ಯ, ದೆಹಲಿಯ ಮೊಗಲ್ ಸುಲ್ತಾನ ಆಲಂ ಶಾ ಆಸ್ಥಾನಕ್ಕೆ ಟಿಪ್ಪು ಸುಲ್ತಾನ್ ರಾಯಭಾರಿ ಆಗಿ ನೇಮಕವಾದದ್ದು ಮಾಧವರಾವ್, ವಕೀಲರಾಗಿ ಸೇವೆ ಸಲ್ಲಿಸಿದ್ದು ಸಜ್ಜನರಾವ್, ಇವೆರೆಲ್ಲಾ ಹಿಂದೂ ಜನಾಂಗದ ಬ್ರಾಹಣರಾಗಿದ್ದರು ಎಂದು ತಿಳಿಯದಷ್ಟು ಅಜ್ಞಾನಿಗಳೆ? ಈ ಸತ್ಯ ಕರ್ನಾಟಕದಲ್ಲಿ ಯಾವುದೇ ಮುಸ್ಲಿಂ ಗೋರಿ ಕಂಡೊಡನೆ ಕಿಟಾರನೆ ಕಿರಿಚಿಕೊಳ್ಳುವ ಚಿದಾನಂದಮೂರ್ತಿಗೆ, ಭಾರತದ ಇತಿಹಾಸವನ್ನೆಲ್ಲಾ ಅರೆದು ಕುಡಿದು ಅದನ್ನು ಆಧಾರವಾಗಿ ಇಟ್ಟುಕೊಂಡು ಕಾದಂಬರಿ ಹೊಸೆಯುವ ಎಸ್ .ಎಲ್. ಬೈರಪ್ಪನವರಿಗೆ ಮತ್ತು ಈ ಇಬ್ಬರೂ ಪುರುಷೋತ್ತಮರಿಗೆ ಉತ್ತರ ಕೊಡಿ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಿರುವ, ನಮ್ಮ ಪೇಜಾವರ ಸ್ವಾಮಿಗೆ ಏಕೆ ಅರ್ಥವಾಗುವುದಿಲ್ಲ?

ಪ್ರಿಯ ಓದುಗರೆ, ನಿಮ್ಮಲ್ಲಿ ಕೆಲವರಿಗಾದರೂ ಶ್ರೀರಂಗಪಟ್ಟಣದ ಪರಿಚಯವಿದೆ ಎಂದು ಭಾವಿಸಿದ್ದೇನೆ. ಮುಂದೆ ನೀವು ಬೇಟಿ ನೀಡಿದಾಗ ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಾವೇರಿ ನದಿ ಶ್ರೀರಂಗಪಟ್ಟಣಕ್ಕೆ ಮೊದಲು ಎರಡು ಭಾಗವಾಗಿ ಹರಿದು ನಂತರ ಗಂಜಾಂ ಎಂಬ ಊರಿನ ಬಳಿ ಮತ್ತೇ ಸೇರುತ್ತದೆ. aerial_view_srirangapattanaಈ ಪ್ರದೇಶವನ್ನು ಸಂಗಮ ಎಂದು ಕರೆಯಲಾಗುತ್ತದೆ. ಒಂದು ರೀತಿಯಲ್ಲಿ ದ್ವೀಪದಂತಿರುವ ಶ್ರೀರಂಗಪಟ್ಟಣದ ಕೋಟೆಯ ಮುಖ್ಯಬಾಗಿಲು ಪೂರ್ವದಿಕ್ಕಿಗಿದೆ (ಈಗಿನ ಬಸ್ ನಿಲ್ದಾಣದ ಸಮೀಪ.) ಇನ್ನೊಂದು ಬಾಗಿಲು ದಕ್ಷಿಣ ಭಾಗಕ್ಕಿದ್ದು ಇದನ್ನು ಆನೆ ಬಾಗಿಲು ಎಂದು ಕರೆಯುತ್ತಾರೆ. ಸದಾ ಯುದ್ಧದಲ್ಲಿ ತೊಡಗಿರುತ್ತಿದ್ದ ಟಿಪ್ಪು, ಬ್ರಿಟೀಷರ ಅಂಜಿಕೆಯಿಂದ ಬಲಿಷ್ಟವಾದ ಕೋಟೆಯನ್ನು ಕಟ್ಟಿದ್ದ. ಈ ಎರಡು ಬಾಗಿಲು ಬಿಟ್ಟರೆ ಪಟ್ಟಣ ಪ್ರವೇಶಕ್ಕೆ ಬೇರೆ ಯಾವುದೇ ಅವಕಾಶವಿರಲಿಲ್ಲ. ಆದರೆ ಪ್ರತಿ ದಿನ ಶ್ರೀರಂಗನಾಥನ ದೇವಾಲಯಕ್ಕೆ ಮತ್ತು ದೇವಾಲಯದ ಕೂಗಳತೆಯಲ್ಲಿ ಉತ್ತರ ಭಾಗದ ಕೋಟೆಗೆ ಅಂಟಿಕೊಂಡಂತೆ ಇರುವ ಶ್ರೀರಾಮ ದೇವಸ್ಥಾನದ (ಟಿಪ್ಪು ಶವ ಸಿಕ್ಕ ಜಾಗದ ಬಳಿ ಇರುವ ದೇವಸ್ಥಾನ) ಪೂಜೆ ಪುನಸ್ಕಾರ ಮುಂತಾದ ಕಾರ್ಯಕ್ರಮಗಳಿಗೆ ಉತ್ತರ ಭಾಗದಲ್ಲಿ ಹರಿಯುವ ಕಾವೇರಿಯಿಂದ ನೀರು ತರಲು ಕೋಟೆಯಲ್ಲಿ ಎರಡು ವಿಶೇಷ ಬಾಗಿಲುಗಳನ್ನು ನಿರ್ಮಿಸಿದ್ದ. ಅವುಗಳು ಈಗಲೂ ಅಸ್ತಿತ್ವದಲ್ಲಿವೆ. ಅವನು ಹಿಂದೂ ವಿರೋಧಿಯಾಗಿದ್ದರೆ ಅತಿಕ್ರಮಣದ ಭಯದ ನಡುವೆಯೂ ಬಾಗಿಲು ತೆರೆಯಲು ಸಾಧ್ಯವಿತ್ತೆ? ಶತ್ರುಗಳು ನದಿಯನ್ನು ಈಜಿ ಕೋಟೆ ಪ್ರವೇಶಿಸುವ ಸಾಧ್ಯತೆಗಳಿರಲಿಲ್ಲವೆ? ಟಿಪ್ಪು ಸುಲ್ತಾನನ ಮೂಲ ಅರಮನೆ (ಕುಸಿದ ಹೋಗಿರುವ ಅವಶೇಷಗಳು) ಶ್ರೀರಂಗನಾಥನ ದೇವಸ್ಥಾನಕ್ಕೆ ಅಭಿಮುಖವಾಗಿದೆ. ಅವನು ಪಕ್ಕಾ ಮುಸ್ಲಿಂ ದೊರೆಯಾಗಿದ್ದರೇ ತನ್ನ ಅರಮನೆಯ ಮುಂದೆ ಶ್ರೀರಂಗನಾಥನ ಹಿಂದೂ ದೇಗುಲವಿರಲು ಸಾಧ್ಯವಿತ್ತೆ? ಇಂತಹ ಇತಿಹಾಸದ ಸತ್ಯಗಳನ್ನು ಏಕೆ ಮರೆ ಮಾಚುತ್ತಿದ್ದಾರೆ?

ಕನ್ನಡದ ದಿನಪತ್ರಿಕೆಯಲ್ಲಿ ಯಾವನೋ ಒಬ್ಬ ಆಸಾಮಿ ತನ್ನ ಹೆಸರಿನ ಮುಂದೆ “ಬ್ಲಾಗಿಗ, ಸಾಪ್ಟ್‌ವೇರ್ ತಜ್ಞ” ಎಂದು ವಿಶೇಷಣಗಳನ್ನು ಸೇರಿಸಿಕೊಂಡು ಅಂಕಣ ಬರೆಯುತ್ತಿದ್ದಾನೆ. ಅವನ ಇತಿಹಾಸ ಪ್ರಜ್ಞೆ ಮತ್ತು ಅವನು ಬರೆಯುತ್ತಿರುವ ವಿಷಯ ವೈಖರಿಗಳನ್ನು ಗಮನಿಸಿದರೆ, ಈತ ತನ್ನ ಹೆಸರಿನ ಮುಂದೆ “ಅರಬೆಂದ ಮಡಕೆ” ಎಂಬ ಅರ್ಹತೆಯನ್ನು ಸಹ ಸೇರಿಸಿಕೊಳ್ಳುವುದು ಒಳಿತು.

ಯಾಕೆಂದರೆ, ಟಿಪ್ಪು ಸುಲ್ತಾನ್ ಮತ್ತು ಅವನ ತಂದೆ ಹೈದರ್‌ ಆಲಿ ಬೆಂಗಳೂರು ಸಮೀಪದ ದೇವನಳ್ಳಿಯಲ್ಲಿ ಜನಿಸಿದ ಕನ್ನಡಿಗ ಮುಸ್ಲಿಂರು ಎಂಬ ಜ್ಞಾನವಿಲ್ಲದ ಈ ಅವಿವೇಕಿ, ಟಿಪ್ಪು ಆಳ್ವಿಕೆಯಲ್ಲಿ ಕರ್ನಾಟಕದಲ್ಲಿ ಪರ್ಷಿಯನ್ ಭಾಷೆ ಜಾರಿಗೆ ಬಂತು ಎಂದು ಬರೆಯುತ್ತಾನೆ. ನನ್ನೂರಾದ ಕೊಪ್ಪ ಗ್ರಾಮದಲ್ಲಿ “ಮದ್ದನಹಟ್ಟಿ ನಂಜೇಗೌಡರ ಕುಟುಂಬ” ಎಂಬ ನಮ್ಮ ಮನೆತನದಲ್ಲಿ ನನ್ನ ತಾತ, ಮುತ್ತಾತ ಎಲ್ಲರೂ ಆಗಿನ ಕಾಲದ ಮಠಗಳಲ್ಲಿ ಮರಳಿನ ಮೇಲೆ ಕನ್ನಡ ಅಕ್ಷರ ಕಲಿತು ಕುಮಾರವ್ಯಾಸನ ಮಹಾಭಾರತ ಮತ್ತು ರಾಮಾಯಣ ಕಾವ್ಯಗಳನ್ನು ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳ ಸಮಯದಲ್ಲಿ ವಾಚನ ಮಾಡುತ್ತಿದ್ದರು. 1966 ರಲ್ಲಿ ಹತ್ತು ವರ್ಷದವನಿರುವಾಗ ನನ್ನ ಚಿಕ್ಕತಾತ ಪುಟ್ಟೀರೆಗೌಡ ನನಗೆ ಅವುಗಳನ್ನು ಕಂಠ ಪಾಠ ಮಾಡಿಸುತ್ತಿದ್ದ. ಟಿಪ್ಪು ಪರ್ಷಿಯನ್ ಭಾಷೆ ಜಾರಿಗೆ ತಂದಿದ್ದರೆ ನನ್ನ ತಾತ ಮತ್ತು ಅವನ ಅಪ್ಪ, ಅಜ್ಜ ಇವರೆಲ್ಲಾ ಪರ್ಷಿಯನ್ ಭಾಷೆ ಕಲಿಯಬೇಕಿತ್ತಲ್ಲವೆ? ಕನ್ನಡವನ್ನು ಏಕೆ ಕಲಿತರು? ಕರ್ನಾಟಕದಲ್ಲಿ ಅತ್ಯಧಿಕ ಕನ್ನಡ ಭಾಷೆಯನ್ನಾಡುವ ಜಿಲ್ಲೆ ಮಂಡ್ಯ ಜಿಲ್ಲೆ ( ಶೇಕಡ 97 ರಷ್ಟು.) ಮಂಡ್ಯ ಟಿಪ್ಪು ಆಳಿದ ನೆಲ. ಇವೊತ್ತಿಗೂ ಕಂದಾಯ ಇಲಾಖೆಯಲ್ಲಿರುವ ಅಮಲ್ದಾರ್, ಶಿರಸ್ತೆದಾರ್, ತಹಶಿಲ್ದಾರ್, ಖಾತೆ, ಪಹಣಿ, ತಲಾಟಿ, ಕಛೇರಿ, ಇಂತಹ ಶಬ್ಧಗಳು ಮೊಗಲರ ಆಳ್ವಿಕೆಯಿಂದಾಗಿ ಮತ್ತು ಹಿಂದಿ, ಉರ್ದು, ಮರಾಠಿ ಭಾಷೆಗಳ ಕೊಡುಕೊಳ್ಳುವಿಕೆಗಳಿಂದಾಗಿ ಜಾರಿಗೆ ಬಂದ ಶಬ್ದಗಳು. ಡಾ. ಹಂಪ ನಾಗರಾಜಯ್ಯನವರು ನಲವತ್ತೈದು ವರ್ಷಗಳ ಹಿಂದೆ ಪಿ.ಹೆಚ್.ಡಿ. ಸಂಶೋಧನೆಗಾಗಿ ಆರಿಸಿಕೊಂಡ ವಿಷಯ, “ದ್ರಾವಿಡ ಭಾಷಾ ವಿಜ್ಞಾನ”. ಈ ಸಂಶೋಧನಾ ಕೃತಿಯಲ್ಲಿ ಕನ್ನಡ ಭಾಷೆಗೆ ಭಾರತೀಯ ಇತರೆ ಭಾಷೆಗಳ ಜೊತೆ ಇರಬಹುದಾದ ಸಂಬಂಧ ಅದ್ಭುತವಾಗಿ ವಿವರಿಸಿದ್ದಾರೆ. ಈ ಅಂಕಣಕೋರನಿಗೆ ಭಾರತೀಯ ಭಾಷೆಗಳ ಬಗ್ಗೆ ಜ್ಞಾನವಿದ್ದರೆ ಟಿಪ್ಪುವಿನಿಂದಾಗಿ ಮುಸ್ಲಿಮರು ಉರ್ದು ಭಾಷೆಯನ್ನಾಡುತ್ತಿದ್ದಾರೆ ಎಂದು ಬರೆಯುತ್ತಿರಲಿಲ್ಲ. ಕರ್ನಾಟಕಕ್ಕೆ 16 ನೇ ಶತಮಾನದಲ್ಲಿ ಆದಿಲ್ ಶಾಹಿ ಆಡಳಿತದಲ್ಲಿ ದಖಃನಿ ಎಂದು ಕರೆಸಿಕೊಳ್ಳುತ್ತಿದ್ದ ಉರ್ದು ನೆರೆಯ ಆಂಧ್ರದ ಮೂಲಕ ಕನ್ನಡದ ನೆಲಕ್ಕೆ ಕಾಲಿಟ್ಟಿತ್ತು.

ಹಾಗೆಯೇ, ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನ ಹೈದರ್ ಆಲಿ ಮತ್ತು ಟಿಪ್ಪು ಇವರ ಕೊಡುಗೆ ಎಂಬುದನ್ನು ಹಿಂದೂ ಧರ್ಮದ ಗುತ್ತಿಗೆ ಹಿಡಿದ ಇವರೆಲ್ಲಾ ಏಕೆ ಮುಚ್ಚಿಡುತ್ತಿದ್ದಾರೆ?

ಭಾರತದ ಪ್ರಖ್ಯಾತ ಇತಿಹಾಸ ತಜ್ಞರಲ್ಲಿ ಕೆ.ಎನ್. ಪಣಿಕ್ಕರ್ ಮುಖ್ಯರು. ಇವರು ಜಗತ್ತಿನ 56 ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸಮಾಡಿದವರು. ಇವರು ಭಾರತದ ಇತಿಹಾಸ ಕುರಿತ ಬರೆದ ಲೇಖನಗಳು “ದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಪತ್ರಿಕೆಯಲ್ಲಿ ಪ್ರಕಟವಾಗಿವೆ. panikkar-bookನಾಲ್ಕೈದು ವರ್ಷಗಳ ಹಿಂದೆ  ಆಕ್ಷ್‌ಪರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆ ಈ ಲೇಖನಗಳ ಸಂಕಲನವನ್ನು “Colonialism, Culture, and Resistance” ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಈ ಕೃತಿಯಲ್ಲಿ ಟಿಪ್ಪು ಸುಲ್ತಾನ್ ಕುರಿತು ಅಯ್ಯಪ್ಪ ಪಣಿಕ್ಕರ್ ಹೀಗೆ ಬರೆದಿದ್ದಾರೆ:

“The Mysoreans, the Marathas, and the Sikhs, who had fairly large army at their command, fought against the British independently and were worsted. The others Like rulers of Rajputana, the Nizam, Nawab of Carnatic, and others preferred to function as subordinate allies of the British.
“The Indians had larger infantry and superior on the side, as demonstrated by Mysoreans and the Marathas, but were unable to match the Europeans in artillery which proved to be decisive. By the time the Indian rulers realized this, it was too late to acquire the necessary resources and skills, as in the case of Tipu Sultan, who initiated rather desperate attempts to modernize the state institutaion, including the army, by acquiring scientific knowledge and technological skills from the French.”

ಟಿಪ್ಪು ಸುಲ್ತಾನ್ ಆಧುನಿಕ ತಂತ್ರಜ್ಞಾನಕ್ಕೆ ಎಷ್ಟೊಂದು ಕಾಳಜಿ ವಹಿಸಿದ್ದ ಮತ್ತು ಭಾರತದಲ್ಲಿ ಬ್ರಿಟೀಷರ ವಿರುದ್ದ ಎಷ್ಟು ಕಠಿಣವಾಗಿದ್ದ ಎಂಬುದಕ್ಕೆ ಈ ಮೇಲಿನ ವಾಖ್ಯೆಗಳು ಸಾಕ್ಷಿಯಾಗಿವೆ.

ಭಾರತದ ಇತಿಹಾಸದಲ್ಲಿ ಫಿರಂಗಿಗಳನ್ನು ಆಧುನಿಕ ಪ್ರೆಂಚ್ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿದ ಮೊದಲ ದೊರೆ ಅವನು. ಚೀನಾದಿಂದ ರೇಷ್ಮೆ ಬೆಳೆಯನ್ನು ತಂದು ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಅವನದು. (ಈಗಲೂ ಚನ್ನಪಟ್ಟಣದಲ್ಲಿ ರೇಷ್ಮೆ ಇಲಾಖೆಯ ಆರು ಎಕರೆ ತೋಟಕ್ಕೆ ಟಿಪ್ಪುವಿನ ಹೆಸರಿಡಲಾಗಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತೋಟದ ಪಕ್ಕ ರೈಲ್ವೆ ಹಳಿ ಹಾದು ಹೋಗಿದೆ. ಆಸಕ್ತರು ಗಮನಿಸಬಹುದು.) ಸಕ್ಕರೆ ತಂತ್ರಜ್ಞಾನದ ಬಗ್ಗೆ ಅವನಿಗೆ ಆಸಕ್ತಿ ಇತ್ತು ಎಂಬುದಕ್ಕೆ ಮೈಸೂರಿನಿಂದ ಕೆ.ಆರ್.ಎಸ್. ಜಲಾಶಯಕ್ಕೆ ಹೋಗುವ ಮಾರ್ಗದಲ್ಲಿ ಪಾಲಹಳ್ಳಿ ಎಂಬ ಒಂದು ಊರಿದೆ. ಆ ಊರಿನ ಬತ್ತದ ಗದ್ದೆಗಳಲ್ಲಿ ಟಿಪ್ಪು ಸ್ಥಾಪಿಸಿದ್ದ ಸಕ್ಕರೆ ಕಾರ್ಖಾನೆಯ ಕಟ್ಟಡಗಳ ಅವಶೇಷಗಳಿವೆ.

ನಮ್ಮ ಕಣ್ಣೆದುರಿಗೆ ಇಷ್ಟೆಲ್ಲಾ ಸಾಕ್ಷಾಧಾರಗಳಿರುವಾಗ ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರ ದ್ರೋಹಿ, ಒಬ್ಬ ಮತಾಂಧ ಎಂದು ಬೊಬ್ಬೆ ಹಾಕುವವರನ್ನು ನಾವು ಏನೆಂದು ಕರೆಯಬೇಕು?

1799 ರ ಮೇ 4 ರಂದು ನಾಲ್ಕನೇ ಮೈಸೂರು ಯುದ್ದದಲ್ಲಿ ಟಿಪ್ಪು ಮಡಿದಾಗ ಅವನ ಅರಮನೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡ ಬ್ರಿಟೀಷರು ಅವುಗಳನ್ನು ಈಸ್ಟ್ ಇಂಡಿಯಾ ಕಂಪನಿಯ ಕಚೇರಿಯಿದ್ದ ಕೊಲ್ಕತ್ತ ನಗರಕ್ಕೆ ಕೊಡೊಯ್ದರು. ಟಿಪ್ಪು ಯುದ್ದದಲ್ಲಿ ಮಡಿದಾಗ ಓರ್ವ ಬ್ರಿಟಿಷ್ ಅಧಿಕಾರಿ ಇನ್ನು ಮುಂದೆ ಭಾರತ ನಮ್ಮದಾಯಿತು ಎಂದು ಘೋಷಿಸಿದ ಅಧಿಕೃತ ದಾಖಲೆಗಳಿವೆ. ಬ್ರಿಟೀಷರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಎಷ್ಟೊಂದು ಭಯವಿತ್ತು ಎಂಬುದಕ್ಕೆ ಈಗ ಕೊಲ್ಕತ್ತ ನಗರದಲ್ಲಿರುವ ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಸಾಕ್ಷಾಧಾರವಿದೆ. kolkata-victoria-memorial1799 ರಲ್ಲಿ ಟಿಪ್ಪು ಮಡಿದನಂತರ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಟೀಷರು 1802 ರಲ್ಲಿ ಸಿದ್ದಪಡಿಸಿರುವ 10 ಅಡಿ ಅಗಲ ಮತ್ತು 15 ಅಡಿ ಉದ್ದ ಮೇಜಿನ ಮೇಲೆ ಶ್ರೀರಂಗಪಟ್ಟಣದ ಪ್ರತಿಕೃತಿಯನ್ನು ನಾವು ಇಂದಿಗೂ ನೋಡಬಹುದು. ಇಷ್ಟೆಲ್ಲಾ ಸಾಹಸ ಮೆರೆದ ವ್ಯಕ್ತಿಯನ್ನು ಅನುಮಾನದಿಂದ ನೊಡುವ ಮನಸ್ಸುಗಳಿಗೆ, ಅಪಮಾನಿಸುತ್ತಿರುವ ವಿದ್ವಾಂಸರೆಂಬ ಆರೋಪ ಹೊತ್ತಿರುವವರಿಗೆ ನಾವೀಗ ಕೇಳಲೇ ಬೇಕಿದೆ, “ನೀವು ಹೊಟ್ಟೆಗೆ ಏನು ತಿನ್ನುತ್ತೀರಿ?” ಎಂದು.