Daily Archives: July 13, 2012

ವಸ್ತ್ರ ಸಂಹಿತೆ ಎಂಬ ಎರಡು ಅಲಗಿನ ಕತ್ತಿ

– ಭಾರತೀ ದೇವಿ. ಪಿ

ನಮ್ಮ ದೇಶದಲ್ಲಿ ವಸ್ತ್ರ ಸಂಹಿತೆಯ ವಿಷಯ ಬಂದಾಗಲೆಲ್ಲ ಅದು ಯಾವಾಗಲೂ ಎರಡು ಅತಿಯಾದ ವಾದಗಳಿಗೆ ಹೋಗಿ ನಿಲ್ಲುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಉಂಟುಮಾಡುವಲ್ಲಿ, ಶಿಸ್ತು ಮೂಡಿಸುವಲ್ಲಿ ಒಂದೇ ಬಗೆಯ ಬಟ್ಟೆ ಎಂಬ ತಿಳುವಳಿಕೆ ನಮ್ಮಲ್ಲಿ ಎಲ್ಲೆಡೆ ಕಾಣಬರುವ ಸಮಾಚಾರ. ಇದು ಪ್ರಜಾಪ್ರಭುತ್ವೀಯ ನೆಲೆಯದು. ಆದರೆ ಅದರಾಚೆಗೆ ವಯಸ್ಸಿನಲ್ಲಿ ಒಂದು ಹಂತ ದಾಟಿದ ಮಕ್ಕಳ ಮೇಲೆ, ಕೆಲಸದ ಸ್ಥಳದಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಇಂತಹುದೇ ಬಟ್ಟೆ ಧರಿಸಬೇಕೆಂದು ಹೇರುವುದು ಇಂದು ಸಂಸ್ಕೃತಿಯ ಹೆಸರಿನಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇಲ್ಲಿ ಸಮಾನ ಭಾವನೆ ಮೂಡಿಸಬೇಕು ಎನ್ನುವುದಕ್ಕಿಂತ  ಹೆಚ್ಚಾಗಿ ’ಇಂಥವರಿಗೆ ಪಾಠ ಕಲಿಸಬೇಕು’ ಎಂದು ಕತ್ತಿ ಹಿರಿದ ಸಂಸ್ಕೃತಿಯ ಪೊಲೀಸರ ದರ್ಬಾರು ಹೆಚ್ಚು.

ಇಂತಹ ಜನಗಳಿಗೆ ಸಂಸ್ಕೃತಿ ಎನ್ನುವುದು ನಿಂತ ನೀರಲ್ಲ, ಸದಾ ಬದಲಾವಣೆಗೆ ಒಡ್ಡಿಕೊಳ್ಳುತ್ತಾ ಚಲನಶೀಲವಾಗಿರುವುದು ಎಂಬ ತಿಳುವಳಿಕೆ ಇಲ್ಲ. ಸಾವಿರ ವರ್ಷಗಳ ಹಿಂದೆ ಇದ್ದಂತೆ ಇಂದು ನಾವಿಲ್ಲ. ಇವರ್‍ಯಾರೂ ಇಂದು ಬಸ್, ಮೊಬೈಲ್ ಫೋನ್, ಕಂಪ್ಯೂಟರ್ ಬಳಸದಿರಲಾರರು. ಸಂಸ್ಕೃತಿ ಎಂಬುದು ಕೇವಲ ಆಹಾರ, ಉಡುಗೆ ತೊಡುಗೆ, ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ್ದಲ್ಲ. ಇಡೀ ಜೀವನಶೈಲಿಗೆ ಸಂಬಂಧಿಸಿದ್ದು ಎಂಬ ಅರಿವಿಲ್ಲದಾಗ ಇಂತಹ ದುಡುಕುಗಳು ಉಂಟಾಗುತ್ತವೆ. ಅಲ್ಲದೆ, ಪಂಚೆ ಉಡುವುದು, ಸೀರೆ ತೊಡುವುದು ಮಾತ್ರ ಸಂಸ್ಕೃತಿಯಲ್ಲ, ಇನ್ನೂ ಹಲವು ಬಗೆಯ ಉಡುಗೆ ತೊಡುಗೆಗಳೂ ಇವೆ ಎಂಬ ಬಹುತ್ವದ ಕಲ್ಪನೆ ಇದ್ದಾಗಲೂ ಈ ಬಗೆಯ ಕೂಗು ಕೇಳಿಬರುವುದಿಲ್ಲ.

ಆದರೆ ಒಂದು ವಿಚಾರ ನೀವು ಗಮನಿಸಿ, ವಸ್ತ್ರ ಸಂಹಿತೆಯ ಆಯುಧ ಬಹುತೇಕ ಸಂದರ್ಭದಲ್ಲಿ ಪ್ರಯೋಗವಾಗುವುದು ಹೆಣ್ಣಿನ ಮೇಲೆ ಮತ್ತು ಅದು ಪ್ರಯೋಗವಾಗುವುದು ಸಂಸ್ಕೃತಿಯ ಹೆಸರಿನಲ್ಲಿ. ಹೆಣ್ಣುಮಕ್ಕಳು ಪ್ಯಾಂಟ್ ಶರ್ಟು ಧರಿಸಬಾರದು, ಪಬ್‌ಗೆ ಹೋಗಬಾರದು, ರಾತ್ರಿ ಒಬ್ಬಳೇ ತಿರುಗಬಾರದು… ಹೀಗೆ ಇದು ಮುಂದುವರೆಯುತ್ತದೆ. ಇದನ್ನು ಪ್ರಶ್ನಿಸಿದಾಗಲೆಲ್ಲ ’ಹಾಗಿದ್ದರೆ ಹೆಣ್ಣುಮಕ್ಕಳು ಗಂಡುಮಕ್ಕಳಂತೆ ಕುಡಿದರೆ, ಪ್ಯಾಂಟು ಹಾಕಿದರೆ ಸಮಾನತೆಯೇ?’ ಎಂಬ ಸವಾಲು ಸಿದ್ಧವಿರುತ್ತದೆ. ಇದರರ್ಥ ಹೆಣ್ಣುಮಕ್ಕಳೂ ಹಾಗೆ ಮಾಡಲೇಬೇಕೆಂದಲ್ಲ. ಬಯಸಿದ ಬಟ್ಟೆ ಹಾಕುವುದು, ಬೇಕಿದ್ದನ್ನು ಸೇವಿಸುವುದು ಅವರವರ ಖುಷಿಗೆ ಬಿಟ್ಟ ವಿಚಾರ. ಆದರೆ ಈ ಸಂಸ್ಕೃತಿಯ ಹೆಸರಿನ ಬೇಲಿ ಸದಾ ಯಾಕೆ ಹೆಣ್ಣುಮಕ್ಕಳ ಸುತ್ತಲೇ ಕಟ್ಟಲಾಗುತ್ತದೆ ಎಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಒಂದೊಮ್ಮೆ ಗಂಡಸರಂತೆ ಹೆಣ್ಣೂ ಇಂಥವುಗಳಿಗೆ ಒಳಗಾದರೆ ಈಕೆಯ ಬಗ್ಗೆ ಮಾತ್ರ ಯಾಕೆ ಇಂತಹ ವರ್ತನೆ ಕಾಣುತ್ತದೆ? ನಮ್ಮ ಸ್ತ್ರೀಯರು ಹಾಳಾದರೆ ಸಂಸ್ಕೃತಿ ಹಾಳಾಗುತ್ತದೆ, ಹೆಣ್ಣು ಸರಿಯಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಹೇಳುವ ಮಂದಿ ತಮ್ಮ ಜವಾಬ್ದಾರಿಯನ್ನು ಹೆಣ್ಣುಮಕ್ಕಳನ್ನು ಕಾಯುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆಯೇ? ಎಂಬ ಪ್ರಶ್ನೆಯೂ ಏಳುತ್ತದೆ. ಹೆಣ್ಣು ಸಂಸ್ಕೃತಿಯನ್ನು ಸಿಕ್ಕಿಸುವ ಗೂಟವಾಗಿ ಕಾಣುತ್ತಾಳೆ.

ಇತ್ತೀಚೆಗೆ ವಸ್ತ್ರ ಸಂಹಿತೆ ಬಗ್ಗೆ ಹೆಚ್ಚಿನ ಕೂಗು ಕೇಳಿಬರುತ್ತಿರುವುದಕ್ಕೆ ಹಿನ್ನೆಲೆಯಾಗಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ. ಇವತ್ತಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೋಡೆಗಳನ್ನು ದಾಟಿ ಹೊರಬಂದಿದ್ದಾರೆ. ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಅನೇಕ ಮೂಲಭೂತವಾದಿಗಳಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಬಹುಶಃ ಈ ಪ್ರಕ್ರಿಯೆಯನ್ನು ಹಿಂದಕ್ಕೊಯ್ಯುವುದಂತೂ ಸಾಧ್ಯವಿಲ್ಲ. ಆದರೆ ನಿಧಾನಗೊಳಿಸುವ ರೀತಿಯಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಅಡ್ಡಗಾಲು ಹಾಕುವುದನ್ನು ಕಾಣುತ್ತೇವೆ. ಇಂದು ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೂ ಈ ಮನೋಭಾವವೇ ಕಾರಣವಾಗಿದೆ ಎನಿಸುತ್ತದೆ.

ಅಲ್ಲದೆ, ಹಿಂದಿನಿಂದಲೂ ನಾಗರಿಕವೆನಿಸಿಕೊಂಡ ಸಮಾಜಗಳಲ್ಲಿ ಹೆಣ್ಣಿನ ದೇಹ ಅದು ಸದಾ ಮುಚ್ಚಿಡಬೇಕಾದದ್ದು ಎಂಬ ಭಾವನೆ ಇದೆ. ಆದರೆ ಗಂಡಿನ ದೇಹದ ಬಗ್ಗೆ ಈ ಭಾವನೆ ಇಲ್ಲ. ಇಂದಿಗೂ ಬುಡಕಟ್ಟು ಜನಾಂಗಗಳ ಹೆಣ್ಣುಮಕ್ಕಳು ತಮ್ಮ ದೇಹದ ಬಗ್ಗೆ ನಮ್ಮಷ್ಟು ಚಿಂತಿತರಲ್ಲ. ಎಂದು ಹೆಣ್ಣೊಬ್ಬಳ ದೇಹ ಒಬ್ಬನ ಆಸ್ತಿ ಎಂಬ ಕಲ್ಪನೆ ಮೂಡಿತೋ ಆಗ ಅದು ಕಾಪಿಟ್ಟುಕೊಳ್ಳಬೇಕಾದ, ಅನ್ಯರ ಕಣ್ಣಿಗೆ ಬೀಳಬಾರದಾದ ವಸ್ತು ಎಂಬ ತಿಳುವಳಿಕೆ ಮೂಡಿತು. ಪರ್ದಾ, ಬುರ್ಖಾ ಇದರ ತೀರಾ ಮುಂದುವರಿದ ಹಂತಗಳು ಅಷ್ಟೆ.

ಅತ್ಯಾಚಾರದ ಬಗ್ಗೆ ಮಾತು ಬಂದಾಗಲೆಲ್ಲ ಸದಾ ಕೇಳಿಬರುವ ಒಂದು ಮಾತು ’ಹುಡುಗಿಯರು ಅಂತಹ ಬಟ್ಟೆ ಧರಿಸಿದರೆ ಹುಡುಗರ ಮನಸ್ಸು ಕೆಡದಿರುತ್ತದೆಯೇ? ಹುಡುಗಿಯೇ ಸರಿ ಇಲ್ಲ, ಅದಕ್ಕೆ ಹಾಗಾಗಿದೆ’. ಆದರೆ ಗಮನಿಸಿದರೆ, ಕಟ್ಟಡ ಕಾರ್ಮಿಕನ ಮಗಳು, ಶಾಲೆಗೆ ಒಂಟಿಯಾಗಿ ಹೋಗುವ ಹುಡುಗಿ ಅಥವಾ ಏನೂ ಅರಿಯದ ಮೂರು ತಿಂಗಳ ಹಸುಳೆಯ ಮೇಲೆ ಎರಗುವ ಜನರಿರುವಾಗ ಅವರನ್ನು ಹುಡುಗಿಯರ ಯಾವ ಅಶ್ಲೀಲ ಭಂಗಿ ಕೆರಳಿಸಿರುವುದು ಸಾಧ್ಯ? ಮೂರು ತಿಂಗಳ ಹಸುಳೆ ಏನು ಮಾಡಬಲ್ಲದು? ಇಲ್ಲಿ ಮದ್ದು ಅರೆಯಬೇಕಾದದ್ದು ಹೆಣ್ಣನ್ನು ಒಂದು ಭೋಗದ ವಸ್ತುವಾಗಿ ನೋಡುವ ಮನಸ್ಸುಗಳಿಗೆ, ಕಣ್ಣುಗಳಿಗೆ ಹೊರತು ಹೆಣ್ಣುಮಕ್ಕಳ ನಡವಳಿಕೆಯನ್ನು ನಿರ್ಬಂಧಿಸುವುದು ಸರಿಯಾದ ದಾರಿಯಲ್ಲ.

ನಮ್ಮ ಸಮಾಜದಲ್ಲಿ ಗಂಡು ಹೆಣ್ಣುಗಳು ಪರಸ್ಪರರ ದೇಹದ ಬಗ್ಗೆ ತಿಳಿಯುವುದಕ್ಕೆ ಆರೋಗ್ಯಕರವಾದ ದಾರಿಗಳು ಇಲ್ಲ. ಅದರ ಕುರಿತು ಮಾತಾಡುವುದು ನಿಷಿದ್ಧ. ಅವರು ಯಾವುದೋ ಮೂರನೇ ದರ್ಜಿ ಪುಸ್ತಕವೋದಿ, ಸಿನೆಮಾ ನೋಡಿ ತಲೆತುಂಬಾ ವಿಚಿತ್ರವಾದ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಹೀಗಾದಾಗಲೇ ಹೆಣ್ಣಿನ ದೇಹವನ್ನು ಅದಿರುವಂತೆಯೇ ಸಹಜವಾಗಿ ನೋಡುವುದು ಇವರಿಗೆ ಸಾಧ್ಯವಾಗುವುದಿಲ್ಲ, ಮನಸ್ಸಿನಲ್ಲಿ ವಿಕಾರಗಳು ಹುಟ್ಟುತ್ತವೆ. ಇದಕ್ಕೆ ಇಬ್ಬರಲ್ಲೂ ಸರಿಯಾದ ತಿಳುವಳಿಕೆ ನೀಡುವುದು ಮುಖ್ಯವೇ ಹೊರತು ಕಟ್ಟಿಹಾಕುವುದಲ್ಲ.

ಸಂಸ್ಕೃತಿಯ ಬಗ್ಗೆ ನಮಗೆ ಗೌರವವಿದೆ. ಆದರೆ ದಮನಿಸುವ ಸಂಸ್ಕೃತಿಯ ಬಗ್ಗೆ ಅಲ್ಲ. ಹೆಣ್ಣಿನ ಸಮಾನತೆಯ ಬಗ್ಗೆ ಕಿಂಚಿತ್ತೂ ಅರಿವಿರದೆ ಮನೆಯಲ್ಲಿ ಇನ್ನೂ ಹೆಣ್ಣು ‘ಸರ್ವಿಸ್ ಪ್ರೊವೈಡರ್’ ಆಗಿರಬೇಕೆಂದು ಬಯಸುತ್ತಾ, ಗೃಹಿಣೀ ಧರ್ಮದ ಬಗ್ಗೆ ಹೊಗಳುತ್ತಾ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಎಲ್ಲರಿಗಿರುವ ಹಕ್ಕು, ಬಾಧ್ಯತೆಗಳನ್ನು ಮರೆತು ಮಾತಾಡುವ ಜನರ ‘ಸಂಸ್ಕೃತಿ’ ಇಂದಿನ ಸಂದರ್ಭದಲ್ಲಿ ಆರೋಗ್ಯಕರವಲ್ಲ.

ಉಚಿತ ಕಡ್ಡಾಯ ಶಿಕ್ಷಣಕ್ಕೆ ಎಳ್ಳುನೀರು?

– ರೂಪ ಹಾಸನ

ಅಳೆದುಸುರಿದು ಲೆಕ್ಕ ಹಾಕಿ ಅಂತೂ ಇಂತೂ ಈ ವರ್ಷ ಕರ್ನಾಟಕ ಸರ್ಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಭರವಸೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಇನ್ನೊಂದೆಡೆ ಕಡಿಮೆ ಮಕ್ಕಳಿರುವ ಮೂರು ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳನ್ನೂ ಭರದಿಂದ ಮುಚ್ಚಲು ಪ್ರಾರಂಭಿಸಿದೆ. ಆದರೆ ಈ ಪ್ರಕ್ರಿಯೆಯಿಂದ ಗ್ರಾಮೀಣ ಮಕ್ಕಳಿಗೆ ಆಗುತ್ತಿರುವ ಅನಾನುಕೂಲದ ಬಗೆ, ತಾನು ಗೊತ್ತಿದ್ದೂ ಮಾಡುತ್ತಿರುವ ನ್ಯಾಯಾಂಗ ನಿಂದನೆಯ ಕುರಿತು ಜಾಣ ಕುರುಡು ನಟಿಸುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ವಯ ಪ್ರತಿ ಒಂದು ಕಿ.ಮಿ.ಗೆ ಕನಿಷ್ಠ ಒಂದು ಕಿರಿಯ ಪ್ರಾಥಮಿಕ ಶಾಲೆಯನ್ನು ಹಾಗೂ ಪ್ರತಿ ಮೂರು ಕಿ.ಮಿ.ಗೆ ಒಂದು ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವುದಾಗಿ, ಹಾಗೂ ಅದಕ್ಕಿಂತಾ ದೂರವಾದಲ್ಲಿ ಮಕ್ಕಳಿಗೆ ಉಚಿತ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ. ಆದರೆ ಹಾಗೆ ನಡೆದು ಕೊಳ್ಳುತ್ತಿಲ್ಲವೆಂಬುದು ವಾಸ್ತವ ಸತ್ಯ.

ಮುಚ್ಚಿದ ಶಾಲೆಯ ಮಕ್ಕಳನ್ನು ಹತ್ತಿರದ ಇನ್ನೊಂದು ಸರ್ಕಾರಿ ಶಾಲೆಗೆ ವಿಲೀನ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ಆದರೆ ಹಳ್ಳಿಗಾಡಿನ ಪ್ರದೇಶಗಳಲ್ಲಿ ಶಾಲೆ ಮೊದಲೇ ಮಗುವಿನ ವಾಸಸ್ಥಾನದಿಂದ ದೂರವಿದ್ದು, ಅನೇಕ ಕಡೆಗಳಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ. ಒಂದೋ, ಎರಡೋ ಬಸ್ ವ್ಯವಸ್ಥೆ ಇದ್ದರೂ ಶಾಲೆಯ ಸಮಯಕ್ಕೆ ಬರುವುದಿಲ್ಲ. ಅಲ್ಲಿ ಸರಕಾರ ಕೊಡಲು ಬಯಸುವ ಬಸ್ ಪಾಸ್ ಯಾವ ಉಪಯೋಗಕ್ಕೆ? ಖಾಸಗಿ ಬಾಡಿಗೆ ವಾಹನಗಳಲ್ಲಿಯಾದರೂ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ತಯಾರಿದ್ದರೂ ಆ ವ್ಯವಸ್ಥೆಯೂ ಹೆಚ್ಚಿನ ಕಡೆಗಳಲ್ಲಿ ಇಲ್ಲ. ಸರ್ಕಾರ ಆಶ್ವಾಸನೆ ನೀಡಿದ್ದ ಸಾರಿಗೆ ಭತ್ಯೆಯಂತೂ ಇನ್ನೂ ಮಕ್ಕಳನ್ನು ತಲುಪಿಯೇ ಇಲ್ಲ.

ಹಾಸನ ತಾಲ್ಲೂಕಿನದೇ ಕೆಲವು ಉದಾಹರಣೆಯನ್ನು ನೋಡುವುದಾದರೆ ಈ ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ತಾಲ್ಲೂಕಿನಲ್ಲಿ 29 ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಸಾಣೆಹಳ್ಳಿ ಕ್ಲಸ್ಟರ್‌ನ ಹಿರಿಯ ಪ್ರಥಮಿಕ ಶಾಲೆಯಲ್ಲಿ 6 ಮಕ್ಕಳಿರುವ ಕಾರಣಕ್ಕೆ ಶಾಲೆಯನ್ನು ನಾಲ್ಕು ಕಿ.ಮಿ ವ್ಯಾಪ್ತಿಯ ಕುಪ್ಪಳ್ಳಿ ಶಾಲೆಗೆ ವಿಲೀನ ಮಾಡಲಾಗಿದೆ. ಆದರೆ ಈ ಮಕ್ಕಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಅವರು ಒಂದೂವರೆ ಕಿ.ಮಿ ದೂರದಲ್ಲಿರುವ ದೇವೇಗೌಡನಹಳ್ಳಿ[ಉಗನೆ]ಯಲ್ಲಿರುವ ಖಾಸಗಿ ಶಾಲೆಗೆ ದಾಖಲಾಗಿದ್ದಾರೆ. ಈಗ ಬಡ ಪೋಷಕರಿಗೆ ಜೀವನ ನಿರ್ವಹಣೆಯ ಜೊತೆಗೆ ಮಕ್ಕಳ ಶಿಕ್ಷಣದ ಜವಾಬ್ದಾರಿಯೂ ಹೆಗಲಿಗೇರಿ ಕಂಗಾಲಾಗಿದ್ದಾರೆ. ಹಾಗೇ ಗೇಕರವಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 2 ಕಿ.ಮಿ ದೂರದ ಕೆಂಚಟ್ಟಹಳ್ಳಿಗೆ ವಿಲೀನ ಮಾಡಲಾಗಿದೆ. ನಂಜೇದೇವರ ಕಾವಲಿನ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 4 ಕಿ.ಮಿ ದೂರದ ಕಂದಲಿ ಶಾಲೆಗೆ ವಿಲೀನಗೊಳಿಸಲಾಗಿದೆ. ಇಲ್ಲಿನ ಮಕ್ಕಳು ತಮ್ಮದೇ ವೆಚ್ಚದಲ್ಲಿ ಶಾಲೆಗೆ ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆಯ ನಿಯಮವನ್ನು ಗಾಳಿಗೆ ತೂರಲಾಗಿದೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 1,11,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ! ಸ್ವಯಂಸೇವಾ ಸಂಸ್ಥೆ ’ನೆಲೆ’ ನಡೆಸಿದ ಸಮೀಕ್ಷೆಯ ಪ್ರಕಾರ ಬೆಂಗಳೂರೊಂದರಲ್ಲೇ ಬೀದಿ ಮಕ್ಕಳ ಸಂಖ್ಯೆ 40 ಸಾವಿರ ದಾಟಿದೆ! ಇದರಲ್ಲಿ ಹೆಚ್ಚಿನವರು ಹತ್ತು ವರ್ಷದ ಒಳಗಿನವರಾಗಿದ್ದು ಬಹುತೇಕರು ಚಿಂದಿ ಆಯುವುದರಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಈ ಮಕ್ಕಳನ್ನೆಲ್ಲಾ ಕಡ್ಡಾಯವಾಗಿ ಶಾಲೆಗೆ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಸರಕಾರ ಮಾಡಿದರೆ ಈಗ ಇರುವ ಶಾಲೆಗಳು ಸಾಲದೇ ಸಾವಿರಾರು ಹೊಸ ಶಾಲೆಗಳನ್ನು ತಾನೇ ತೆರೆಯಬೇಕಾಗುತ್ತದೆ!

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ವಿಶೇಷ ಅಧ್ಯಯನ ನಡೆಸಿರುವ ’ಕೇಂದ್ರ ಸಂಪನ್ಮೂಲ ಸಚಿವಾಲಯ’ದ ಅಧಿಕಾರಿಗಳನ್ನು ಒಳಗೊಂಡ ಕಾರ್ಯತಂಡ ನೂರಕ್ಕೆ ನೂರರಷ್ಟು ಶಾಲಾ ದಾಖಲಾತಿ ಸಾಧ್ಯವಾಗಬೇಕಾದರೆ ದೇಶಾದ್ಯಂತ ಇನ್ನೂ ಸುಮಾರು 20 ಸಾವಿರ ಶಾಲೆಗಳನ್ನು, ಅದರಲ್ಲೂ ಕರ್ನಾಟಕದಲ್ಲೇ ಮುಂದಿನ ಐದು ವರ್ಷಗಳಲ್ಲಿ ಇನ್ನೂ 1241 ಸರ್ಕಾರಿ ಶಾಲೆಗಳನ್ನು ತೆರೆಯುವುದು ಅತ್ಯಂತ ಅವಶ್ಯಕವೆಂದು ಈ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ನೀಡಿದೆ. ಹೀಗಿದ್ದೂ ರಾಜ್ಯ ಸರ್ಕಾರ ಈ ಶಿಪಾರಸ್ಸಿಗೆ ಕವಡೆ ಕಿಮ್ಮತ್ತನ್ನೂ ಕೊಟ್ಟಿಲ್ಲ. ಬದಲಾಗಿ ಇರುವ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿದೆ.

ಸರಕಾರಿ ಶಾಲೆಗಳನ್ನು ಹೀಗೆ ಮುಚ್ಚುತ್ತಾ ಹೋದರೆ ವಿಲೀನಗೊಂಡ ದೂರದ ಶಾಲೆಗಳಿಗೆ ಕಳಿಸಲಾಗದ, ಕಳಿಸಲು ಇಷ್ಟವಿಲ್ಲದ, ಕಳಿಸಲು ಸಮಸ್ಯೆಗಳಿರುವ ಪೋಷಕರು ಅನಿವಾರ್ಯವಾಗಿ ಹತ್ತಿರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಥವಾ ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ ಅಥವಾ ಇಂದು ಹಳ್ಳಿ ಹಳ್ಳಿಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಅಧಿಕೃತವೋ ಅಥವಾ ಅನಧಿಕೃತವೋ ಒಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ ಸೇರುವ ಅಸಹಾಯಕ ಪರಿಸ್ಥಿತಿ ಉಂಟಾಗುತ್ತದೆ. ಈಗಾಗಲೇ ಸರ್ಕಾರಿ ಶಾಲೆ ಹಾಗೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಸಾವಿರದ ಲೆಕ್ಕದಲ್ಲಿ ಕಡಿಮೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದಲೇ ದೃಢಪಡುತ್ತದೆ. ಸರ್ಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗಿ ವಲಯವನ್ನು ಕದ್ದು ಮುಚ್ಚಿ ಬಲಗೊಳಿಸುತ್ತಾ ಬಂದಿರುವ ಸರ್ಕಾರದ ನೀತಿಯಿಂದಾಗಿ ಪ್ರಸ್ತುತ 46400 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 43.92 ಲಕ್ಷ ಮಕ್ಕಳು ಓದುತ್ತಿದ್ದರೆ, ಕೇವಲ 12,909ರಷ್ಟಿರುವ ಖಾಸಗಿ ಶಾಲೆಗಳಲ್ಲಿ 29.31 ಲಕ್ಷ ಮಕ್ಕಳು ಓದುತ್ತಿದ್ದಾರೆ! ಕಳೆದ ಎರಡು ವರ್ಷಗಳಲ್ಲಿ 3.37 ಲಕ್ಷ ಮಕ್ಕಳು ಸರಕಾರಿ ಶಾಲೆ ತೊರೆದಿದ್ದಾರೆ ಎಂದು ’ಇಂಡಿಯಾ ಗವರ್ನನ್ಸ ಇನ್ಸ್‌ಟಿಟ್ಯೂಟ್’ ಸರಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ದುರಂತವೆಂದರೆ ರಾಜ್ಯಾದ್ಯಂತ ಈಗಾಗಲೇ 3000 ಕ್ಕೂ ಅಧಿಕವಾಗಿರುವ ಅನಧಿಕೃತ ಶಾಲೆಗಳು ಹಾಗೂ ಅಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕುರಿತು ಶಿಕ್ಷಣ ಇಲಾಖೆಯಲ್ಲಿ ಯಾವ ಮಾಹಿತಿಯೂ ಲಭ್ಯವಿಲ್ಲ. ಏಕೆಂದರೆ ಅವುಗಳ ಮೇಲೆ ಇಲಾಖೆಗೆ ಯಾವ ನಿಯಂತ್ರಣವೂ ಇಲ್ಲ! ಪ್ರತಿ ಶೈಕ್ಷಣಿಕ ವಷದ ಆರಂಭದಲ್ಲಿ “ಈ ಶಾಲೆಗಳೆಲ್ಲ ಅನಧಿಕೃತ….. ಇಲ್ಲಿಗೆ ಮಕ್ಕಳನ್ನು ಸೇರಿಸಬೇಡಿ…….” ಎಂದು ಅನಧಿಕೃತ ಶಾಲೆಗಳ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಷ್ಟೇ ಇಲಾಖೆಯ ಜವಾಬ್ದಾರಿ! ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಇಚ್ಚೆಯಿಲ್ಲ. ಬದಲಾಗಿ ಸರ್ಕಾರವೇ ಕುಮ್ಮಕ್ಕು ಕೊಟ್ಟಂತೆ ಕಾಣಿಸುತ್ತಿದೆ.

ಏಕೆಂದರೆ ಪ್ರತಿವರ್ಷ ಇಂತಹ ಅನಧಿಕೃತ ಖಾಸಗಿ ಶಾಲೆಗಳಿಂದ ಇಂತಿಷ್ಟು ಎಂದು ಎಂಜಲು ನೈವೇದ್ಯ ತಿಂದು ವರ್ಷಗಟ್ಟಲೆ ಇಂದ ಭ್ರಷ್ಟಗೊಂಡಿರುವ ಶೈಕ್ಷಣಿಕ ಆಡಳಿತಶಾಹಿ, ಜಾಣ ಮೌನ ವಹಿಸಿ ಕೊಬ್ಬಿಸುತ್ತಿದೆ. ಎಲ್ಲೆಂದರಲ್ಲಿ ಸರ್ಕಾರದ ಪರವಾನಗಿ ಪಡೆಯದೆ ತಲೆ ಎತ್ತುತ್ತಿರುವ ಈ ಅನಧಿಕೃತ ಖಾಸಗಿ ಶಾಲೆಗಳು ಮನಬಂದಂತೆ ವಂತಿಗೆ, ಶುಲ್ಕದ ಹೆಸರಿನಲ್ಲಿ ಹಣ ಹಿರಿದು, ಕಳಪೆ ಶಿಕ್ಷಣವನ್ನು ನೀಡುತ್ತ ಇಡೀ ಶಿಕ್ಷಣ ವ್ಯವಸ್ಥೆಗೇ ಗೆದ್ದಲು ಹಿಡಿಸಿದೆ. ಇಂತಹ ಅನಧಿಕೃತ ಶಾಲೆಗಳಿಗೆ ಯಾವುದೇ ಸರ್ಕಾರಿ ಶೈಕ್ಷಣಿಕ ನಿಯಮಗಳಿಲ್ಲದೇ, ಶಿಕ್ಷಣ ಹಕ್ಕು ಕಾಯ್ದೆ-ಮೀಸಲಾತಿಯ ಗೊಡವೆಯೂ ಇಲ್ಲದೇ, ಭಾಷಾ ನೀತಿಯ ತಲೆಬಿಸಿಯೂ ಇಲ್ಲದೇ ಶಿಕ್ಷಣವನ್ನು ಲಾಭದ ದಂಧೆಯನ್ನಾಗಿ ಮಾಡಿಕೊಂಡಿವೆ. ಇವುಗಳಿಗೆ ಮೂಗುದಾರ ಹಾಕಲಾಗದ ಸರ್ಕಾರ, ಈಗ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಮುಚ್ಚಿ ಅನಧಿಕೃತ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಬಲಿ ನೀಡುತ್ತಿದೆ. ಯಾರ ಯಾವ ನಿಯಂತ್ರಣವೂ ಇಲ್ಲದೇ ನಿರ್ಭಿಡೆಯಿಂದ ಬೆಳೆಯಲು ಅವಕಾಶಗಳಿರುವುದರಿಂದಲೇ ಇನ್ನು ಮುಂದೆ ಹಳ್ಳಿಗಳಲ್ಲಿ ಅನಧಿಕೃತ ಖಾಸಗಿ ಶಾಲೆಗಳು ಇನ್ನಷ್ಟು ಹೆಚ್ಚುವ ಆತಂಕವಿದೆ. ಸರ್ಕಾರಿ ಶಾಲೆಯ ಮಕ್ಕಳನ್ನು ಅನಿವಾರ್ಯವಾಗಿ ’ಉಚಿತ’ ಶಿಕ್ಷಣದಿಂದ ವಂಚಿಸಿ ಸರ್ಕಾರ ಅನಧಿಕೃತ ಖಾಸಗಿ ಶಾಲೆಗಳ ಬಾಯಿಗೆ ಆಹಾರವಾಗಿಸಿದೆ.

3000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು “ಈ ಅನಧಿಕೃತ ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಾರೆ! “ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಬಯಸುವವರಿಗೆ ದತ್ತು ನೀಡಲು ಸಿದ್ಧ” ಎಂದು ಆಹ್ವಾನ ನೀಡುತ್ತಾರೆ! ಇವರು ನಮ್ಮ ಶಿಕ್ಷಣ ಸಚಿವರು! ಇದು ಖಾಸಗಿಗೆ ತನ್ನನ್ನು ಬಿಕರಿಗಿಟ್ಟುಕೊಂಡು ಆತ್ಮಸಾಕ್ಷಿ ಇಲ್ಲದೇ ಸರ್ಕಾರ ನಡೆಸುವ ಪರಿ!

ನಿಜಕ್ಕೂ ಶಿಕ್ಷಣ ಕಾಯ್ದೆಯನ್ವಯ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಮನಸು ಸರ್ಕಾರಕ್ಕಿದ್ದರೆ ತಕ್ಷಣವೇ ಕಳಪೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನಧಿಕೃತ ಖಾಸಗಿ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಂಡು, ಮುಂದೆ ಇಂತಹ ಶಾಲೆಗಳು ತಲೆ ಎತ್ತದಂತೆ ಪ್ರಬಲ ಶೈಕ್ಷಣಿಕ ಕಾಯ್ದೆಯೊಂದನ್ನು ರೂಪಿಸಬೇಕು. ಶಿಕ್ಷಣವನ್ನು ಖಾಸಗಿಯಾಗಿ ಹಣಕೊಟ್ಟು ಕೊಳ್ಳುವಂತಹ ಪರಿಸ್ಥಿತಿ ಯಾವುದೇ ಬಡ ಗ್ರಾಮೀಣ ಪೋಷಕರಿಗೆ ಬಂದೊದಗದಂತೆ ತಕ್ಷಣವೇ ಮುಚ್ಚಲ್ಪಟ್ಟ ಶಾಲೆಯ ಮಕ್ಕಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಭಾರತ ಅದರಲ್ಲೂ ಹೆಣ್ಣುಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಹಳ್ಳಿ ಹಳ್ಳಿಗಳಲ್ಲೂ ಲಂಗುಲಗಾಮಿಲ್ಲದೇ ಹುಟ್ಟಿಕೊಂಡಿರುವ-ಹುಟ್ಟಿ ಕೊಳ್ಳುತ್ತಿರುವ, ಅನಧಿಕೃತ ಖಾಸಗಿ ಶಾಲೆಗಳಿಗೆ ದಾಖಲಾಗದಂತೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಹಕ್ಕು ಕಾಯ್ದೆ ನಿಜವಾಗಿಯೂ ಜಾರಿಯಾಗಬೇಕೆಂದರೆ, ಶಾಲೆಯಿಂದ ಹೊರಗುಳಿದಿರುವ ಸಾವಿರಾರು ಮಕ್ಕಳನ್ನು ಶಾಲೆಗೆ ದಾಖಲಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು. ಇದಾಗದಿದ್ದರೆ ’ಉಚಿತ’ ಮತ್ತು ’ಕಡ್ಡಾಯ’ ಶಿಕ್ಷಣ ಎಂಬ ಕಾಯ್ದೆಗೇ ಎಳ್ಳು ನೀರು ಬಿಟ್ಟಂತಾಗುತ್ತದೆ. ಹಾಗಾಗದಿರಲೆಂಬುದು ನಮ್ಮ ಹಾರೈಕೆ.