Monthly Archives: January 2013

“ದೊಡ್ಡವರು” ಎಂಬ ಕುಲದೈವ!

– ರಾಜೇಶ್. ಡಿ

“ಹೋಗಿ ದೊಡ್ಡವರನ್ನ ಕಂಡೆ, ಕೇಳ್ಕೊಂಡೆ.. ಕೆಲಸ ಆಯ್ತು ಕಣೋ.”.. ಎಂದು ಆಕಡೆಯಿಂದ ಮಿತ್ರ ಹೇಳಿದ. ಅವನ ಜೊತೆ ಅವನ ಜೊತೆ ಅವನ ಅಪ್ಪ, ಅಮ್ಮ ಕೂಡ ’ದೊಡ್ಡವರನ್ನು’ ಕಾಣಲು ಹೋಗಿದ್ದರು. ಅವರು ಕೆಲಸ ಆಗುವ ವಿಶ್ವಾಸ ತುಂಬಿಸಿ ಕಳುಹಿಸಿದ್ದರು. ನಂತರ ಅವರ ನಿರೀಕ್ಷೆಯಂತೆ, ಕೆಲಸ ಆಯಿತು. ಈಗ ಉತ್ತಮ ಹುದ್ದೆಯಲ್ಲಿದ್ದಾನೆ.

ಈ ಮೇಲಿನ ಘಟನೆಗೆ ಹೋಲುವಂತಹ ಪ್ರಕರಣಗಳು ಮೈಸೂರು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಬೇಕಾದಷ್ಟು ಸಿಗುತ್ತವೆ. ಈ ಪ್ರದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಭೂ ಹಿಡುವಳಿಯಲ್ಲಿ ತುಂಬಾ ಮುಂದಿರುವ ಜನಾಂಗದ ಜನರ ಮಧ್ಯೆ ’ದೊಡ್ಡವರು’ ಎಂಬ ಪದ ಬಳಕೆಯಲ್ಲಿದೆ. ಅದು ಸೂಚಿಸುವುದು ಒಬ್ಬರನ್ನೇ. ಅವರು ಈ ರಾಜ್ಯದಿಂದ ದೇಶಕ್ಕೆ ಆಯ್ಕೆಯಾದ ಏಕೈಕ ಪ್ರಧಾನಿ. ಅವರ ಆಶೀರ್ವಾದದಿಂದ ಒಂದು ಸಮುದಾಯದ ಹುಡುಗ-ಹುಡುಗಿಯರು ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಸಾಕ್ಷಿ ಸಮೇತ ನಿರೂಪಿಸಲು ಸಾಧ್ಯವಿಲ್ಲ. ಆದರೆ ಆ ದೊಡ್ಡ ನಾಯಕರಿಗೆ ಆ ಮಟ್ಟಿನ ಸಾಮರ್ಥ್ಯ ಇದೆ ಎಂಬ ಸತ್ಯವನ್ನು ಬಹುಶಃ ಯಾರೂ ಪ್ರಶ್ನಿಸಲಾರರು.

ಹೀಗೆ ದೊಡ್ಡ ದೊಡ್ಡ ಸರಕಾರಿ ಹುದ್ದೆ ಪಡೆದ ನೂರಾರು ಉದಾಹರಣೆಗಳಿವೆ. ಅವರ ಪಾಲಿಗೆ ’ದೊಡ್ಡವರು’ ದೇವರು. ಆದರೆ ಆ ದೇವರು, ದಲಿತ, ಬಲಿತ ಎನ್ನದೆ ಎಲ್ಲರೂ ಹರಕೆ ಒಪ್ಪಿಸುವ ಮಾರಮ್ಮನೋ ಅಥವಾ ಪುರದಮ್ಮನೋ ಅಲ್ಲ, ಬದಲಿಗೆ ಒಂದು ಕುಲದೈವ! ಕಳೆದ ಹತ್ತು ವರ್ಷಗಳಲ್ಲಿ ಕೆಪಿಎಸ್‌ಸಿ ಮೂಲಕ ನಡೆದ ನೇಮಕಾತಿಗಳಲ್ಲಿ, ಸಾಮಾನ್ಯ ವರ್ಗಕ್ಕೆಂದು ನಿಗದಿ ಪಡಿಸಿದ್ದ ಸೀಟುಗಳಲ್ಲಿ ಯಾವ್ಯಾವ ಜಾತಿಯವರು ಆಯ್ಕೆಯಾಗಿದ್ದಾರೆ ಎಂದು ಯಾರಾದರೂ ಹುಡುಕಿದರೆ, ಈ ಕುಲದೈವದ ಮಹಾತ್ಮೆ ಅರಿವಾಗುತ್ತದೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯವರ ಅಧಿಕಾರಾವಧಿ ಇತ್ತೀಚೆಗಷ್ಟೆ ಮುಗಿಯಿತು. ಆದರೆ ರಾಜ್ಯಪಾಲರು ತಮ್ಮ ವಿಶೇಷ ಅಧಿಕಾರ ಬಳಸಿ ಅವರ ಅವಧಿಯನ್ನು ಒಂದು ವರ್ಷದವರೆಗೂ ವಿಸ್ತರಿಸಿದರು. ಕಾರಣ ಹೇಳಬೇಕೆ – ಅವರು ಈ ಕುಲದೈವಕ್ಕೆ ಹತ್ತಿರದವರು. ರಾಜ್ಯಪಾಲರೊಬ್ಬರು ಇತ್ತೀಚಿನ ದಿನಗಳಲ್ಲಿ ಹೀಗೆ ಕುಲಪತಿಯವರ ಅಧಿಕಾರಾವಧಿಯನ್ನು ವಿಸ್ತರಿಸಿದ ಉದಾಹರಣೆ ಇಲ್ಲ. ಹೋಗಲಿ, ಈ ಕುಲಪತಿಯವರು ಇನ್ನೊಂದು ವರ್ಷ ವಿವಿಯಲ್ಲಿ ಕಾರ್ಯನಿರ್ವಹಿಸಿದರೆ ಏನೋ ಮಹತ್ವದ ಕಾರ್ಯ ಅಥವಾ ಸೇವೆ ದೊರಕುತ್ತದೆ ಎಂದು ನಂಬಲು ಇಲ್ಲಿಯವರೆಗೆ ಅಂತಹದ್ದೇನೂ ನಡೆದೇ ಇಲ್ಲವಲ್ಲ.

ಮುಕ್ತ ವಿವಿಯ ಸಾಧನೆಗಳನ್ನು ಪಟ್ಟಿಮಾಡುವಾಗಲೆಲ್ಲ, ತಾವು ಎಷ್ಟು ವಿದ್ಯಾರ್ಥಿಗಳಿಗೆ ಪದವಿ ನೀಡಿದ್ದೇವೆ, ಎಷ್ಟು ಅಧ್ಯಯನ ಕೇಂದ್ರ ಸ್ಥಾಪಿಸಿದ್ದೇವೆ..ಹೀಗೆ ಹಲವು ಪಟ್ಟಿ ನೀಡುತ್ತಾರೆಯೇ ವಿನಹ, ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ತಡೆಯಲು ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದೇವೆ, ಸೂಕ್ತ ವ್ಯವಸ್ಥೆ ಇಲ್ಲದೆ ಅಧ್ಯಯನ ಕೇಂದ್ರ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಎನ್ನುವಂತಹ ಮಾತುಗಳೇನಾದರೂ ಕೇಳಿ ಬಂದಿವೆಯಾ?

ಇದೇ ಗುರುವಾರ (ದಿನಾಂಕ ಜನವರಿ 10) ಕೂಡಾ ಬೆಂಗಳೂರಿನ ಕೇಂದ್ರವೊಂದರಲ್ಲಿ (ಮಾಧ್ಯಮಗಳು ವರದಿ ಮಾಡಿದಂತೆ) ಎಂಬಿಎ ವಿದ್ಯಾರ್ಥಿಗಳು ’ಮುಕ್ತ’ವಾಗಿ ಪರೀಕ್ಷೆ ಬರೆಯುತ್ತಿದ್ದರು. ಕೆಲವರು ಹೆಗಲಿಗೆ ಬ್ಯಾಗ್ ಹಾಕಿಕೊಂಡೇ ಉತ್ತರ ಬರೆಯುತ್ತಿದ್ದರು. KSOU_OpenCopying_Jan1113ಇನ್ನೂ ವಿಚಿತ್ರವೆಂದರೆ ಒಂದು ಬೆಂಚಿಗೆ ಮೂರು ಮಂದಿಯನ್ನು ಪರೀಕ್ಷೆ ಬರೆಯಲು ಕೂರಿಸಿದ್ದಾರೆ. ಬಹುಶಃ ಪ್ರಾಥಮಿಕ ಶಾಲಾ ಮಕ್ಕಳನ್ನೂ ಪರೀಕ್ಷೆಗೆ ಹೀಗೆ ಕೂರಿಸುವುದಿಲ್ಲ. ಮುಕ್ತ ವಿವಿಯ ಪದವಿಗಳಿಗೆ ಮರ್ಯಾದೆ ದಿನೇ ದಿನೇ ಮೋರಿ ಪಾಲಾಗುತ್ತಿದೆ, ಆದರೂ, ಈ ಕುಲಪತಿ ಸಾಧಕರು. ಆ ಕಾರಣಕ್ಕೆ ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೂ ಕುಲಪತಿಗಳಾಗಬೇಕು!

ಕುಲಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಸೂಚಿಸಲು ನೇಮಕಗೊಂಡಿರುವ ಸಮಿತಿಯಲ್ಲಿ ಇದೇ ಕಾರಣಕ್ಕೆ ಒಡಕು ಉಂಟಾಗಿದೆ. ಇಬ್ಬರು ಸದಸ್ಯರು ಸದ್ಯ ಮುಕ್ತ ವಿ.ವಿ ಕುಲಪತಿಯವರ ಹೆಸರನ್ನು ಒಪ್ಪಲು ನಿರಾಕರಿಸಿದ್ದಾರೆ. ಆದರೆ ಉಳಿದ ಇಬ್ಬರು, ಅವರ ಹೆಸರನ್ನೇ ಸೂಚಿಸಿದ್ದಾರೆ ಮತ್ತು ಅವರ ಹೆಸರನ್ನೇ ಪಟ್ಟಿಯಲ್ಲಿ ಮೊದಲನೆಯವರಾಗಿ ನಮೂದಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಏನಿದರ ಅರ್ಥ?

ಸದ್ಯ ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆ ಮತ್ತು ನೇಮಕಾತಿಯಲ್ಲಿ ಉಳ್ಳವರ ಪ್ರಾಬಲ್ಯವನ್ನು ಇಂತಹ ಬೆಳವಣಿಗೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಯಾವ ಹುದ್ದೆಯೂ, ಯಾವ ಅವಕಾಶವೂ ಕೆಲವೇ ಸಮುದಾಯಗಳಿಗೆ ಸೀಮಿತವಾಗಬಾರದು. ಆದರೆ ಬಲಾಢ್ಯರು, ಅನ್ಯರನ್ನು ಕಡೆಗಣಿಸುತ್ತಲೇ ಸಾಗುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವ ಸಂವಿಧಾನೇತರ ಶಕ್ತಿಗಳು ಇವರಲ್ಲದೆ ಮತ್ತ್ಯಾರು? ಆದರೆ ಸಭೆ ಸಮಾರಂಭಗಳಲ್ಲಿ ನಿಂತು ಮಾತನಾಡುವಾಗ ’ನಾನು ದೀನ ದಲಿತರ ಪರ, ಹಿಂದುಳಿದವರ ಏಳಿಗೆಗೆ ಶ್ರಮಿಸಿದವನು,’ ಎನ್ನುತ್ತಾರಲ್ಲಾ.. ಒಮ್ಮೆ ಯೋಚಿಸಲಿ.

(ಚಿತ್ರಕೃಪೆ: ದಿ ಹಿಂದು)

ಪ್ರಜಾ ಸಮರ – 17 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

2005 ರ ಪೆಬ್ರವರಿ 5 ಮತ್ತು 6 ರ ನಡುರಾತ್ರಿ ಚಿಕ್ಕಮಗಳೂರು ಅರಣ್ಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಸಾಕೇತ್ ರಾಜ್‌ರ ಶವವನ್ನು ತಕ್ಷಣಕ್ಕೆ ಪೊಲೀಸರಿಗೆ ಗುರುತಿಸಲು ಸಾಧ್ಯವಾಗಲಿಲ್ಲ. SakethRajanಏಕೆಂದರೆ, ಸಾಕೇತ್ “ಪ್ರೇಮ್” ಎಂಬ ಹೆಸರಿನಲ್ಲಿ ತಂಡದೊಂದಿಗೆ ಅಲ್ಲಿ ಬೀಡು ಬಿಟ್ಟಿದ್ದರು. ಸಾಯುವ ಕೆಲ ದಿನಗಳ ಹಿಂದೆ ತಾವಿದ್ದ ಅಡಗುತಾಣಕ್ಕೆ ಕರೆಸಿಕೊಂಡಿದ್ದ ಆಯ್ದ ಪತ್ರಕರ್ತರಿಗೂ ಸಹ ತಾನು ಪ್ರೇಮ್ ಎಂದು ಪರಿಚಯಿಸಿಕೊಂಡಿದ್ದರು. ಪತ್ರಕರ್ತರ ತಂಡದಲ್ಲಿದ್ದ ಗೌರಿ ಲಂಕೇಶ್ ಮಾತ್ರ ನಿಜಸಂಗತಿ ಗೊತ್ತಿತ್ತು. ಆ ದಿನ ಸತತ ಐದು ಗಂಟೆಗಳ ಕಾಲ ಪತ್ರಕರ್ತರ ಜೊತೆ ಮಾತನಾಡಿದ್ದ ಸಾಕೇತ್, “ನನಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ನಂಬಿಕೆ ಇದೆ, ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಉಳ್ಳವರ ಮತ್ತು ಸುಲಿಯುವವರ ಆಯುಧವಾಗಿದೆ,” ಎಂದು ತಮ್ಮ ಅತೃಪ್ತಿಯನ್ನು ಹೊರ ಹಾಕಿದ್ದರು. ಪತ್ರಕರ್ತರಿಗೆ ತಮ್ಮ ಭಾವಚಿತ್ರ ತೆಗೆಯದಂತೆ ಸಾಕೇತ್ ವಿನಂತಿಕೊಂಡಿದ್ದರು. ಆದರೆ ತಮ್ಮ ಸಹಪಾಠಿ ಗೌರಿ ಲಂಕೇಶ್‌ಗೆ ಮಾತ್ರ ಇತರರಿಗೆ ತಿಳಿಯದಂತೆ ಎರಡು ಚಿತ್ರಗಳನ್ನು ತೆಗೆಯಲು ಅವಕಾಶ ನೀಡಿದ್ದರು. ಕೊನೆಗೆ ಸಾಕೇತ್ ನೆನಪಾಗಿ ಅವರ ಗೆಳೆಯರಿಗೆ ಉಳಿದದ್ದು ಇಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳು ಮಾತ್ರ.saketh-jnu

ಸಾಕೇತ್ ರಾಜ್ ನಕ್ಸಲ್ ಚಳುವಳಿಯಲ್ಲಿ ಗುರುತಿಸಿಕೊಳ್ಳುವ ಮುನ್ನ ಮೈಸೂರಿನಲ್ಲಿ ತಮ್ಮ ತಂದೆಗೆ ಮಿಲಿಟರಿ ಅಧಿಕಾರಿ ಕೋಟಾದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಪೆಟ್ರೋಲ್ ಬಂಕ್‌ನಲ್ಲಿ ಬರುತ್ತಿದ್ದ ಆದಾಯದ ಹಣವನ್ನು ತಮ್ಮ ದಿನ ನಿತ್ಯದ ಖರ್ಚಿಗೆ ಬಳಸುತಿದ್ದರು. ಆದರೆ ಅವರು ಕೈಗೆ ಬಂದೂಕ ಹಿಡಿದ ನಂತರ ತಾಯಿಗಾಗಲಿ, ಸಹೋದರನಿಗಾಗಲಿ ಅಥವಾ ಪೆಟ್ರೋಲ್ ಬಂಕ್ ಸಿಬ್ಬಂದಿಗಾಗಲಿ ಒಂದು ಪತ್ರ ಬರೆಯಲಿಲ್ಲ, ಅಥವಾ ಹಣದ ಸಹಾಯ ಕೇಳಲಿಲ್ಲ ಜೊತೆಗೆ ತಾನು ಎಲ್ಲಿದ್ದೀನಿ ಎಂಬುದರ ಕುರಿತು ಒಂದು ಸಣ್ಣ ಸುಳಿವನ್ನೂ ಸಹ ನೀಡಿರಲಿಲ್ಲ.

ಸಾಕೇತ್ ನಿಧನರಾದ ಸುಮಾರು 12 ಗಂಟೆಗಳ ನಂತರ ಪೊಲೀಸರಿಗೆ ಅವರ ಗುರುತು ಸಿಕ್ಕಿತು. ಕರ್ನಾಟಕದ ಹಿರಿಯ ಐ.ಪಿ.ಎಸ್. ಪೊಲೀಸ್ ಅಧಿಕಾರಿಯೊಬ್ಬರು ಮೈಸೂರಿನ ಕಾಲೇಜು ದಿನಗಳಲ್ಲಿ ಸಾಕೇತ್‌ಗೆ ಸಹಪಾಠಿಯಾಗಿದ್ದರು. ಸಾಕೇತ್ ಶವದ ಭಾವ ಚಿತ್ರ ನೋಡಿ ಗುರುತಿಸಿದವರಲ್ಲಿ ಅವರು ಕೂಡ ಒಬ್ಬರು. ಇನ್ನೊಬ್ಬ ಸಹಪಾಠಿ ಹೊರ ರಾಜ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕೇತ್ ಸಾವಿನಿಂದ ಮನನೊಂದ ಐ.ಎ.ಎಸ್. ಅಧಿಕಾರಿ, ತಮ್ಮ ಬ್ಲಾಗ್‌ನಲ್ಲಿ ತಾನು ಮತ್ತು ಪೊಲೀಸ್ ಅಧಿಕಾರಿ ಇಬ್ಬರೂ ಸಾಕೇತ್ ರಾಜ್‌ಗೆ ಹೇಗೆ ಮಿತ್ರರಾದೆವು ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತನ್ನ ಅಸ್ಖಲಿತ ಇಂಗ್ಲೀಷ್ ಭಾಷೆಯ ಮೂಲಕ ಎಲ್ಲಾ ಚರ್ಚಾ ಸ್ಪರ್ಧೆಗಳಲ್ಲಿ ಸಾಕೇತ್ ಜಯ ಗಳಿಸುತ್ತಿದ್ದುದನ್ನು ಹಾಗೂ ದೇಶದ ಸಮಸ್ಯೆಗಳನ್ನು ಅರಿತು ಆಳವಾಗಿ, ಗಂಭೀರವಾಗಿ ವಿಮರ್ಶೆ ಮಾಡುತ್ತಿದ್ದ ಬಗೆಯನ್ನು ಅವರು ವಿವರಿಸಿದ್ದಾರೆ.

ಪೆಬ್ರವರಿ ಎಂಟರಂದು ಸಾಕೇತ್ ಶವವನ್ನು ಮರೋಣತ್ತರ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ತರಲಾಗಿತ್ತು. ಅಷ್ಟರ ವೇಳೆಗೆ ಮೈಸೂರಿನಿಂದ ಅವರ ತಾಯಿಯವರು ಶವವನ್ನು ಪೊಲೀಸರು ಅಂತ್ಯಕ್ರಿಯೆ ಮಾಡಬಹುದೆಂದು ಸರ್ಕಾರಕ್ಕೆ ಪತ್ರ ಬರೆದು ಫ್ಯಾಕ್ಸ್ ಮಾಡಿದ್ದರು.

ಅಷ್ಟರ ವೇಳೆಗೆ ಹೈದರಾಬಾದಿನಿಂದ ನಕ್ಸಲ್ ಚಳುವಳಿ ಪರ ಸಹಾನುಭೂತಿಯುಳ್ಳ ಕವಿ ವರವರರಾವ್ ಮತ್ತು ಗಾಯಕ ಗದ್ದಾರ್ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಹಲವು ಸಮಾನ ಮನಸ್ಕರು ಒಡಗೂಡಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‌ರನ್ನು ಭೇಟಿ ಮಾಡಿ, ಅಂತ್ಯಕ್ರಿಯೆಗಾಗಿ ಸಾಕೇತ್ ಅವರ ಶವವನ್ನು ತಮಗೆ ಒಪ್ಪಿಸಬೇಕೆಂದು ಮನವಿ ಮಾಡಿಕೊಂಡರು. ಆದರೆ ಸರ್ಕಾರ್ ಮನವಿಯನ್ನು ತಿರಸ್ಕರಿಸಿತು. Saket_gaddarಕೊನೆಗೆ ವರವರರಾವ್ ಮತ್ತು ಗದ್ದಾರ್ ಸೇರಿದಂತೆ ಗೌರಿ ಲಂಕೇಶ್ ಎಲ್ಲರೂ ಸಾಕೇತ್ ಅವರ ಮೃತ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು. ಮುಖ್ಯಮಂತ್ರಿ ಧರ್ಮಸಿಂಗ್ ಇದಕ್ಕೆ ಸಮ್ಮತಿ ಸೂಚಿಸಿದರು. ಆದರೆ, ಇತ್ತ ಬೆಂಗಳೂರಿನ ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಪೊಲೀಸ್ ಅಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಮರೋಣತ್ತರ ಪರೀಕ್ಷೆ ಮುಗಿಸಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ ಪೊಲೀಸರು, ಗೌರಿ ಲಂಕೇಶ್ ಮತ್ತು ಇತರರು ಆಸ್ಪತ್ರೆಗೆ ಬರುತ್ತಿರುವ ಸುದ್ಧಿ ತಿಳಿದು, ತರಾತುರಿಯಲ್ಲಿ ಫ್ರೇಜರ್ ಟೌನ್‌ನಲ್ಲಿರುವ ವಿದ್ಯುತ್ ಚಿತಾಗಾರಕ್ಕೆ ಸಾಕೇತ್ ಶವವನ್ನು ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿಬಿಟ್ಟರು.

ಕರ್ನಾಟಕ ಪೊಲೀಸರ ಈ ಸಣ್ಣತನದ ಬಗ್ಗೆ ಸಿಟ್ಟಿಗೆದ್ದ ಸಾಕೇತ್ ರಾಜನ್ ಅವರ ಅಭಿಮಾನಿಗಳು ಮತ್ತು ಗೆಳೆಯರು ಪೊಲೀಸರ ಕಾರಿಗೆ ಅಡ್ಡ ಕುಳಿತು ದಿನವಿಡಿ ಪ್ರತಿಭಟನೆ ನಡೆಸಿದರು. ಗದ್ದಾರ್ ಗತಿಸಿ ಹೋದ ಗೆಳೆಯನ ಕುರಿತು ಪ್ರತಿಭಟನೆಯಲ್ಲಿ ಕುಳಿತಿದ್ದವರ ಕಣ್ನು ಒದ್ದೆಯಾಗುವಂತೆ ತೆಲುಗು ಭಾಷೆಯಲ್ಲಿ ಹುತಾತ್ಮ ಗೀತೆಗಳನ್ನು ಹಾಡುತ್ತಾ, ನರ್ತಿಸುತ್ತಾ ಸಾಕೇತ್‌ಗೆ ಶ್ರದ್ಧಾಂಜಲಿ ಅರ್ಪಿಸಿದರು. ನಂತರ ಸಾಕೇತ್‌ರ ನೆನಪಿಗಾಗಿ ಚಿತಾಗಾರದಿಂದ saaket_ashesಚಿತಾ ಭಸ್ಮವನ್ನು ಪಡೆಯಲಾಯಿತು.

ಸಾಕೇತ್‌ ರಾಜ್‌ರ ಸಾವು ರಾಷ್ಟ್ರದ ಎಲ್ಲಾ ಪ್ರಮುಖ ದಿನ ಪತ್ರಿಕೆಗಳಲ್ಲಿ ಸುದ್ದಿಯಾಗುವುದರ ಜೊತೆಗೆ ಚರ್ಚೆಯಾಯಿತು. ದೆಹಲಿಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಪ್ ಮಾಸ್ ಕಮ್ಯೂನಿಕೇಷನ್ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸಾಕೇತ್ ಬಗ್ಗೆ ಲೇಖನ ಬರೆದು ಶ್ರದ್ಧಾಂಜಲಿ ಸಲ್ಲಿಸಿತು. ಇವೊತ್ತಿಗೂ ಮೈಸೂರಿನ ಕುಕ್ಕರಹಳಿ ಕೆರೆ ಬಳಿ ಹೋದಾಗ ಗೆಳೆಯರಿಗೆ ತಕ್ಷಣ ನೆನಪಿಗೆ ಬರುವುದು ಕುವೆಂಪು ಮತ್ತು ಸಾಕೇತ್. ಏಕೆಂದರೆ ಈ ಇಬ್ಬರೂ ಆ ಕೆರೆಯನ್ನು ಅಪಾರವಾಗಿ ಪ್ರೀತಿಸುತಿದ್ದರು. ಅದೇ ರೀತಿ ಅವರ ಪೆಟ್ರೋಲ್ ಬಂಕ್ ಮುಂದೆ ಹಾಯ್ದು ಹೋಗುವಾಗ ಗೆಳೆಯರ ಜೊತೆ ಚಹಾ ಕುಡಿಯುತ್ತಾ ಹರಟುತ್ತಾ ಕುಳಿತಿರುತಿದ್ದ ಸಾಕಿಯ ಚಿತ್ರಗಳು ನೆನಪಿಗೆ ಬರುತ್ತವೆ.

ಕರ್ನಾಟಕದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಸಾಕಿಯ ರೀತಿಯಲ್ಲಿ ಕಳೆದು ಹೋದ ಮತ್ತೊಬ್ಬ ಗೆಳೆಯನ ಹೆಸರು ಸಿರಿಮನೆ ನಾಗರಾಜ್. ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಆತ್ಮೀಯ ಮಿತ್ರರ ಬಳಗದಲ್ಲಿ ನಾಗರಾಜ್ ಕೂಡ ಒಬ್ಬರು. ನಾಗರಾಜ್ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಕೊಪ್ಪ ಪಟ್ಟಣದಲ್ಲಿ ಮುಂಜಾವು ಎಂಬ ವಾರಪತ್ರಿಕೆಯನ್ನು ಹೊರತರುತಿದ್ದರು. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತೀರ್ಥಹಳ್ಳಿ, ಬಾಳೇಹೊನ್ನೂರು, ಹರಿಹರಪುರ, ಕಳಸ ಮುಂತಾದ ಪ್ರದೇಶಗಳಲ್ಲಿ ಪತ್ರಿಕೆ ಹೆಸರುವಾಸಿಯಾಗಿತ್ತು. ಸಿರಿಮನೆ ಎಂಬ ಗ್ರಾಮದ ಬ್ರಾಹ್ಮಣ ಕುಟುಂಬದಿಂದ ಬಂದಿದ್ದ ನಾಗರಾಜ್ ಜಾತಿ ಧರ್ಮಗಳ ಹಂಗು ತೊರೆದು ತನ್ನ ಯೌವನದ ದಿನಗಳಿಂದಲೆ ಸಮಾಜದ ಅಸಮಾನತೆಗಳ ವಿರುದ್ದ ಹೋರಾಡುತ್ತಾ ಬಂದವರು. ಜಿಲ್ಲೆಯ ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರ ಪರ ಹೋರಾಡುವುದರ ಮೂಲಕ ಕಾಫಿ ಪ್ಲಾಂಟರ್‌ಗಳಲ್ಲಿ ಭಯ ಮತ್ತು ನಡುಕ ಹುಟ್ಟಿಸಿದವರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 1980 ರ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷ ಹೋರಾಟದ ಮೂಲಕ ಪ್ರಬಲವಾಗಿ ಬೇರೂರಿತ್ತು. ಸುಂದರೇಶ್ ಎಂಬ ಅಪ್ರತಿಮ ಪ್ರತಿಭಾವಂತ ಯುವ ನಾಯಕ ಇಡೀ ಜಿಲ್ಲೆಯಲ್ಲಿ ಕಾಫಿ ತೋಟದ ಕೃಷಿ ಕೂಲಿ ಕಾರ್ಮಿಕರನ್ನು ಒಗ್ಗೂಡಿಸಿ ರಾಜಕೀಯ ಪಕ್ಷಗಳಿಗೆ, ಸಿರಿವಂತ ಜಮೀನ್ದಾರರು ಮತ್ತು ಕಾಫಿ ಬೆಳೆಗಾರರಿಗೆ ಸಿಂಹ ಸ್ವಪ್ನವಾಗಿದ್ದ. ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಮಾತೃಹೃದಯ ಸುಂದರೇಶ್‌ಗೆ ಇತ್ತು. ಬಹುಶಃ 1985 ಅಥವಾ 86 ರಲ್ಲಿ ಇರಬೇಕು, ಸುಂದರೇಶ್ ದೆಹಲಿಗೆ ಹೋಗಿ ವಾಪಸ್ ಬರುತ್ತಿದ್ದ ಸಮಯದಲ್ಲಿ ಬೆಂಗಳೂರಿನ ಯಲಹಂಕ ಬಳಿ ಹಳಿ ತಪ್ಪಿದ ಕರ್ನಾಟಕ ಎಕ್ಸ್‌ಪ್ರಸ್ ರೈಲು ಅಪಘಾತಕ್ಕೀಡಾಯಿತು. ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಲ್ಲಿ ಸುಂದರೇಶ್ ಕೂಡ ಒಬ್ಬರು. ಸುಂದರೇಶ್‌ಗೆ ಇದ್ದ ಸಂಘಟನಾ ಚಾತುರ್ಯ ನಾಗರಾಜ್ ಮೇಲೆ ಪ್ರಭಾವ ಬೀರಿತ್ತು. ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ ಕೂಡ ಮೌಡ್ಯವನ್ನು ಕಂದಾಚಾರವನ್ನು ವಿರೋಧಿಸುತ್ತಾ ಎಲ್ಲ ಮಠ ಮಾನ್ಯ ಪೀಠಾಧಿಪತಿಗಳೆಂಬ ಆಧುನಿಕ ಸರ್ವಾಧಿಕಾರಿಗಳನ್ನು ಸಿರಿಮನೆ ನಾಗರಾಜ್ ಎದುರು ಹಾಕಿಕೊಂಡಿದ್ದರು. ಪರಿಚಯವಿಲ್ಲದಿದ್ದರೂ ಸಹ ಕಷ್ಟಕ್ಕೆ ಒಳಗಾಗುವವರ ನೆರವಿಗೆ ಓಡಿ ಹೋಗುವ ಧಾವಂತಕ್ಕೆ ಸದಾ ತುಡಿಯುತ್ತಿದ್ದರು.

1984 ರಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರರಾಗಿದ್ದ ವಡ್ಡರ್ಸೆ ರಘುರಾಮಶೆಟ್ಟರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, 17 ಮಂದಿ ಶಿಷ್ಯರ ಕೈಯಲ್ಲೂ ರಾಜಿನಾಮೆ ಕೊಡಿಸಿ ಮಂಗಳೂರಿಗೆ ಹೋಗಿ ಸಹಕಾರ ತತ್ವದ ಅಡಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ, “ಮುಂಗಾರು” ದಿನಪತ್ರಿಕೆಯನ್ನು ಆರಂಭಿಸಿದರು. vaddarse_mungaruಅಲ್ಲಿಯವರೆಗೆ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ’ಊರಿಗೊಬ್ಬಳೇ ಪದ್ಮಾವತಿ’ ಎಂಬಂತೆ ಮಣಿಪಾಲದ ಪೈ ಕುಟುಂಬದ ಉದಯವಾಣಿ ದಿನಪತ್ರಿಕೆ ಅಲ್ಲಿನ ಜನರ ಜೀವನಾಡಿಯಾಗಿತ್ತು. ಮುಂಗಾರು ಆರಂಭಗೊಂಡ ಕೆಲದಿನಗಳಲ್ಲೇ ತನ್ನ ಪ್ರಗತಿಪರ ಚಿಂತನೆ, ಆಲೋಚನೆ ಹಾಗೂ ಎಲ್ಲಾ ವರ್ಗಕ್ಕೂ ಸಲ್ಲುವ ಸುದ್ದಿಗಳಿಂದ ಹೆಸರುವಾಸಿಯಾಯಿತು. ಇದರಿಂದ ಗಾಬರಿಗೊಂಡ ಪೈ ಕುಟುಂಬ ಅಲ್ಲಿನ ಮಠಾಧೀಶರು ಮತ್ತು ಧರ್ಮಾಧಿಕಾರಿಗಳ ಮೇಲೆ ಪ್ರಭಾವ ಬೀರಿ ಮುಂಗಾರು ಪತ್ರಿಕೆಯ ಬಂಡಲುಗಳನ್ನು ಸಾಗಿಸದಂತೆ ಬಸ್ ಮಾಲೀಕರಿಗೆ ತಾಕೀತು ಮಾಡಿಸಿದರು. ಅಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳುರು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳದೇ ದರ್ಬಾರ್ ಆಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲಕರು ಮತ್ತು ಕಂಡಕ್ಟರ್ ಹಾಗೂ ಇತರೆ ಜನಸಾಮಾನ್ಯರು ಸೇರಿ ಸ್ಥಾಪಿಸಿದ ಸಹಕಾರಿ ಸಾರಿಗೆ ಬಸ್‌ಗಳು ಜನಪ್ರಿಯವಾಗಿದ್ದವು. (ಇವುಗಳಿಗೆ ಶಂಕರ್ ಸಹಕಾರಿ ಸಾರಿಗೆ ಎಂಬ ಹೆಸರಿದ್ದ ನೆನಪು.) ಮುಂಗಾರು ಪತ್ರಿಕೆಯ ಬಂಡಲುಗಳನ್ನು ತಡೆ ಹಿಡಿಯಲಾಗುತ್ತಿದೆ ಎಂಬ ಸುದ್ದಿ ತಿಳಿದ ನಾಗರಾಜ್ ನಮ್ಮ ಊರುಗಳಿಗೆ ಮುಂಗಾರು ಪತ್ರಿಕೆ ತರದಿದ್ದ ಮೇಲೆ ನಿಮ್ಮ ಬಸ್ ಸೇವೆ ನಮಗೆ ಬೇಡ ಎಂಬ ಮುಷ್ಕರ ಆರಂಭಿಸಿ ಎಲ್ಲಾ ಬಲಿಷ್ಟ ಶಕ್ತಿಗಳನ್ನು ಮಣಿಸಿದ್ದರು. ಮುಂಗಾರು ದಿನಪತ್ರಿಕೆ ಆರಂಭದ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಗಿಂತ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಓದುಗರನ್ನು ಸಂಪಾದಿಸಿತ್ತು.

ಕೊಪ್ಪ ಹಾಗೂ ಸುತ್ತ ಮುತ್ತಲಿನ ನಾಲ್ಕು ತಾಲ್ಲೂಕುಗಳಲ್ಲಿ ಜನಪ್ರಿಯರಾಗಿದ್ದ ಸಿರಿಮನೆ ನಾಗರಾಜ್ 1986 ರಲ್ಲಿ ನನಗೆ ಹತ್ತಿರವಾಗಲು ಒಂದು ಕಾರಣವಿತ್ತು. ಪ್ರಜಾವಾಣಿ ತೊರೆದು ಮುಂಗಾರು ಸೇರಿದ್ದ ನನ್ನ ಮಿತ್ರರು ಕೇವಲ ಆರು ತಿಂಗಳ ಅವಧಿಯಲ್ಲಿ ತಾತ್ವಿಕ ಭಿನ್ನಾಭಿಪ್ರಾಯದಿಂದ ಪತ್ರಿಕೆಯಿಂದ ಹೊರಬಂದರು. ನಂತರ ಹಿರಿಯ ಮಿತ್ರ ದೇವನೂರು ಮಹಾದೇವರ ಸಲಹೆ ಮೇರೆಗೆ ಒಂದಷ್ಟು ಸಮಾನ ಮನಸ್ಕರು ಸೇರಿ ಬೆಂಗಳೂರಿನ ವಿಜಯನಗರದಲ್ಲಿ ’ಪೃಥ್ವಿ ಪ್ರಕಾಶನ ಲಿಮಿಟೆಡ್’ ಎಂಬ ಸಂಸ್ಥೆ ಯನ್ನು ಸ್ಥಾಪಿಸಿದರು. ಬೆಂಗಳೂರಿನಿಂದ ಸುದ್ದಿಸಂಗಾತಿ ವಾರಪತ್ರಿಕೆ ಆರಂಭಿಸಿದಾಗ ತಾವಾಗಿಯೇ ಮುಂದೆ ಬಂದು ಆ ಕಾಲದಲ್ಲಿ ನಲವತ್ತು ಸಾವಿರ ರೂಪಾಯಿ ಶೇರು ಬಂಡವಾಳವನ್ನು ಸಂಗ್ರಹಿಸಿಕೊಟ್ಟಿದ್ದ ಸಹೃದಯ ನಾಗರಾಜ್‌ರದು. ಸುದ್ದಿಸಂಗಾತಿಯಲ್ಲಿದ್ದ ನಾನು ನಾಲ್ಕು ದಿನಗಳ ಕಾಲ ಅವರ ಮನೆಯಲ್ಲಿದ್ದುಕೊಂಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಿರುಗಾಡುತ್ತಾ ಅವರಿಗಿದ್ದ ಪ್ರಭಾವ, ನಿಷ್ಟರುತೆ, ನೈತಿಕತೆ ಇವುಗಳಿಗೆ ಸಾಕ್ಷಿಯಾಗಿದ್ದೆ. ಸಿರಿಮನೆ ನಾಗರಾಜ್‌ರವರ ಅತಿದೊಡ್ಡ ದೌರ್ಬಲ್ಯವೆಂದರೆ, ಅನಾವಶ್ಯಕವಾಗಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಹೋರಾಡುವುದು. ಇಂತಹ ಹುಚ್ಚು ಪ್ರವೃತ್ತಿ ಅಂತಿಮವಾಗಿ ಅವರನ್ನು ನಕ್ಸಲ್ ಹೋರಾಟಕ್ಕೆ ಎಳೆದೊಯ್ದು ಬದುಕನ್ನು ಮೂರಾಬಟ್ಟೆಯಾಗಿಸಿತು.

ನಾಗರಾಜ್ ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದರ ಹಿಂದೆ ಒಂದು ಸಣ್ಣ ಇತಿಹಾಸ ಅಡಗಿದೆ. ಚಿತ್ರದುರ್ಗದ ಮೂಲದ ನನ್ನ ಇನ್ನೊಬ್ಬ ಕಿರಿಯ ಆತ್ಮೀಯ ಮಿತ್ರ Banjagere-Jayaprakashಡಾ. ಬಂಜಗೆರೆ ಜಯಪ್ರಕಾಶ್ ಮೈಸೂರಿನಲ್ಲಿ ಓದುತ್ತಿದ್ದಾಗಲೆ ವಿದ್ಯಾರ್ಥಿ ಸಂಘಟನೆಯೊಂದಿಗೆ ಗುರುತಿಸಿಕೊಂಡು ತನ್ನ ಪ್ರಖರ ವೈಚಾರಿಕತೆಯಿಂದ ಮುಂಚೂಣಿಗೆ ಬಂದ ಯುವಕ. ವಿದ್ಯಾಭ್ಯಾಸದ ನಂತರ ಅಸಮಾನತೆ, ಜಾತಿ ಸಂಘರ್ಷ, ಸಮಾಜದ ವೈರುದ್ಧ್ಯಗಳ ಕುರಿತಂತೆ ಯುಜನತೆಯಲ್ಲಿ ಪ್ರಜ್ಞೆ ಹುಟ್ಟುಹಾಕಬೇಕೆಂಬ ಕನಸು ಹೊತ್ತಿದ್ದ ಬಂಜಗೆರೆ 1987 ರ ಸಮಯದಲ್ಲಿ “ಕರ್ನಾಟಕ ವಿಮೋಚನಾ ರಂಗ” ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಅದಕ್ಕೆ ರಾಜ್ಯ ಮಟ್ಟದ ಸ್ವರೂಪ ನೀಡಿದ್ದರು. ಈ ಸಂಘಟನೆಗೆ ಸಿರಿಮನೆ ನಾಗರಾಜ್ ಉಪಾಧ್ಯಕ್ಷರಾಗಿ ಸೇರ್ಪಡೆಯಾದರು. ಮಲೆನಾಡಿನಲ್ಲಿ ನಡೆಯುತ್ತಿದ್ದ ಪರಿಸರ ಉಳಿಸಿ ಚಳುವಳಿಗೆ ಕೆ.ವಿ.ಆರ್. ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ ವಿಮೋಚನಾ ರಂಗ ಕೈಜೋಡಿಸಿತ್ತು.

ಇದೇ ವೇಳೆಗೆ ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್ ನಗರದ ಹೊರಭಾಗದಲ್ಲಿರುವ ಕೊಲಾರ ಎಂಬ ಗ್ರಾಮದ ಬಳಿ ರಾಜ್ಯ ಸರ್ಕಾರ ಸ್ಥಾಪಿಸಿದ್ದ ಕೈಗಾರಿಕಾ ಬಡಾವಣೆಯಲ್ಲಿ ಆಂಧ್ರದ ಉದ್ಯಮಿಗಳು ತಳ ಊರಿ ಸಗಟು ಔಷಧ ತಯಾರಿಕೆಯ ಘಟಕಗಳನ್ನು ಸ್ಥಾಪಿಸಿದ್ದರು. ಈ ಕೈಗಾರಿಕೆಗಳಿಂದ ಹೊರಬೀಳುತಿದ್ದ ವಿಷಯುಕ್ತ ತ್ಯಾಜ್ಯದ ನೀರು ಸುತ್ತ ಮುತ್ತಲಿನ ಕೃಷಿ ಭೂಮಿಯನ್ನು ಕಲುಷಿತಗೊಳಿಸಿ, ಹಲವಾರು ಜಾನುವಾರುಗಳ ಸಾವಿಗೆ ಕಾರಣವಾಗಿದ್ದವು. ಅಲ್ಲಿನ ಜನರ ಮುಗ್ದತೆಯನ್ನು ಮತ್ತು ಅನಕ್ಷರತೆ ಹಾಗೂ ಬಡತನವನ್ನು ಬಂಡವಾಳ ಮಾಡಿಕೊಂಡಿದ್ದ ಕೈಗಾರಿಕೋದ್ಯಮಿಗಳು ಇನ್ನಿಲ್ಲದಂತೆ ಕೊಬ್ಬಿಹೋಗಿದ್ದರು.

ಚಿಕ್ಕಮಗಳೂರಿನಿಂದ ದೂರದ ಬೀದರ್ ಜಿಲ್ಲೆಗೆ ತೆರಳಿದ ಸಿರಿಮನೆ ನಾಗರಾಜು ಕರ್ನಾಟಕ ವಿಮೋಚನಾ ರಂಗದ ಮೂಲಕ ಅಲ್ಲಿನ ಜನರನ್ನು ಸಂಘಟಿಸಿ ಹೋರಾಟ ನಡೆಸುವುದರ ಮೂಲಕ ಕೈಗಾರಿಕೆಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು. ಸಹಜವಾಗಿ ಈ ಹೋರಾಟ ನೆರೆಯ ಗಢಿಭಾಗದ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್‌ನ ಮಾವೋವಾದಿ ನಕ್ಸಲರ ಸಂಘಟನೆಯ ಗಮನ ಸೆಳೆದಿತ್ತು. ಹೋರಾಟದ ಜೊತೆಗೆ ಹುಂಬತನವನ್ನು ಮೈಗೂಡಿಸಿಕೊಂಡಿದ್ದ ಸಿರಿಮನೆ ನಾಗರಾಜ್, ಈ ಘಟನೆಯಿಂದಾಗಿ ಆಂಧ್ರ ನಕ್ಸಲರ ಸಂಪರ್ಕಕ್ಕೆ ಬಂದರು.

ಯಾವ ಕಾರಣಕ್ಕೂ ಅಹಿಂಸೆಯನ್ನು ಒಪ್ಪದ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ವ್ಯವಸ್ಥೆಯ ವಿರುದ್ಧ ಹೋರಾಡಬೇಕೆಂದು ಕನಸು ಕಂಡಿದ್ದ ಬಂಜಗೆರೆಗೆ ಸಿರಿಮನೆ ನಾಗರಾಜುವಿನ ನಿರ್ಧಾರ ದೊಡ್ಡ ಶಾಕ್ ನೀಡಿತು. ಅಂತಿಮವಾಗಿ ಕರ್ನಾಟಕ ವಿಮೋಚನಾ ವೇದಿಕೆಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಂಜಗೆರೆ ಜಯಪ್ರಕಾಶ್, ಹೋರಾಟದ ಹಾದಿಯನ್ನು ತೊರೆದು ಬೆಂಗಳೂರಿನ ಹೊರ ವಲಯದ ಕನಕಪುರ ರಸ್ತೆಯ ಹಾರೋಹಳ್ಳಿಗೆ ಬಂದು ನೆಲೆಸಿ ಓದು ಬರಹ ಇವುಗಳತ್ತ ಗಂಭೀರವಾಗಿ ತೊಡಗಿಸಿಕೊಳ್ಳಬೇಕಾಯಿತು. ಕಳೆದ ಇಪ್ಪತ್ತೈದು ವರ್ಷಗಳಿಂದ ಯಾವುದೇ ಸಂಘಟನೆಯೊಂದಿಗೆ ನೇರವಾಗಿ ಗುರುತಿಸಿಕೊಳ್ಳದ ಬಂಜಗೆರೆ ಜಯಪ್ರಕಾಶ್, ಸೈದ್ಧಾಂತಿಕ ವಿಚಾರಗಳ ತಳಹದಿಯಿಲ್ಲದ ಸಂಘಟನೆಗಳು ಅಪಾಯಕಾರಿ ಎಂದು ನಂಬಿದ ವ್ಯಕ್ತಿ.

ಹೀಗೆ 1988-89 ರ ಸಮಯದಲ್ಲಿ ಕಾಣೆಯಾಗುವುದರ ಮೂಲಕ ನಕ್ಸಲ್ ಚಳುವಳಿಯಲ್ಲಿ ಇದ್ದಾರೆ ಎಂದು ಹೇಳಲ್ಪಡುವ ಸಿರಿಮನೆ ನಾಗರಾಜ್ ಈವರೆಗೆ ಯಾರ ಸಂಪರ್ಕಕ್ಕೂ ಬಂದಿಲ್ಲ. ಈಗ ಆಸುಪಾಸು 58 ಅಥವಾ 59 ವರ್ಷವಾಗಿರುವ ಈ ನನ್ನ ಗೆಳೆಯ ಮಲೆನಾಡ ಅರಣ್ಯದಲ್ಲಿ ಇದ್ದಾರೆ ಎಂದರೆ, ನಾನು ನಂಬಲು ಸಿದ್ಧನಿಲ್ಲ. ಏಕೆಂದರೇ ಪಶ್ಚಿಮ ಘಟ್ಟದ ಮಳೆಯ ಕಾಡುಗಳಲ್ಲಿ ಜೀವಿಸುವಷ್ಟು ದೈಹಿಕ ಶಕ್ತಿ ಸಿರಿಮನೆಗೆ ಇಲ್ಲ. ಈಗ ಕರ್ನಾಟಕದ ಪೋಲಿಸರು ಅವರ ಸುಳಿವಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಕಳೆದ ನವಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ನಕ್ಸಲ್ ಪ್ಯಾಕೇಜ್ ಯೋಜನೆಯಡಿ ಸಿರಿಮನೆ ಶರಣಾಗುತ್ತಾರೆ ಎಂದು ನಂಬಿದ್ದವರ ಪೈಕಿ ನಾನೂ ಒಬ್ಬನಾಗಿದ್ದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಅವರ ಪತ್ನಿ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನಲ್ಲಿ ಅನಾಮಿಕರಂತೆ ವಾಸಿಸುತ್ತಿದ್ದಾರೆ. ಒಂದು ಸುಂದರ ಹೂವಿನ ಹೆಸರುಳ್ಳ ಮಗಳನ್ನು ಐದಾರು ವರ್ಷವಿರುವಾಗ ತೊರೆದು ಹೋದ ನಾಗರಾಜ್ ಈವರೆಗೆ ತಿರುಗಿ ನೋಡಿಲ್ಲ. ಬುದ್ಧಿವಂತ ಪದವೀಧರೆಯಾದ ಆಕೆ ತಂದೆಯ ಕೃತ್ಯದಿಂದಾಗಿ ಸರ್ಕಾರಿ ಉಗ್ಯೋಗಗಳಿಂದ ವಂಚಿತಳಾಗಿ, ಹೆಣ್ಣು ಮಕ್ಕಳ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಸ್ವಯಂ ಸೇವಾ ಸಂಘಟನೆಯಲ್ಲಿ ದುಡಿಯುತ್ತಿದ್ದಾಳೆ. ಆಕೆಯನ್ನು ನೋಡಿದಾಗಲೆಲ್ಲಾ ಮನಸ್ಸಿಗೆ ಬೇಸರ ಮತ್ತು ಸಂಕಟವಾಗುತ್ತದೆ.

ತನ್ನ ಮನೆಯನ್ನು ಉದ್ಧಾರ ಮಾಡಲಾಗದ ವ್ಯಕ್ತಿಯೊಬ್ಬ ಸಮಾಜವನ್ನು ಉದ್ಧಾರ ಮಾಡುತ್ತೇನೆ ಎಂದು ಹಿಂಸೆಯ ಹಾದಿ ತುಳಿದರೆ ಆತನನ್ನು ಹೇಗೆ ಅರ್ಥೈಸೋಣ? ತನ್ನ ಮನೆಗೆ ಬೆಂಕಿ ಹಚ್ಚಿ ಊರಿಗೆ ಬೆಳಕಾಗಲು ಹೊರಟ ವ್ಯಕ್ತಿಯನ್ನು ಉದಾರಿ ಎಂದು ಕರೆಯಲು ಸಾಧ್ಯವೇ? ಬದಲಾಗಿ ಅಜ್ಞಾನಿ ಅಥವಾ ಮೂರ್ಖ ಎಂದು ಕರೆಯಲಾಗುತ್ತದೆ. ನನ್ನ ಮಿತ್ರ ಸಿರಿಮನೆ ನಾಗರಾಜು ಸ್ಥಿತಿ ಕೂಡ ಅದೇ ಆಗಿದೆ.

(ಮುಂದುವರಿಯುವುದು)

ಉಪವಾಸ ಸತ್ಯಾಗ್ರಹ – ಮೂರು ದಿನಗಳಲ್ಲಿ ಏನೇನಾಯಿತು…

ಸ್ನೇಹಿತರೇ,

ನವೀನ್ ಬಂಧನವಾದ ಆರಂಭದ ದಿನಗಳಲ್ಲಿಯೇ ಒಮ್ಮೆ ನಾನು ಬರೆದಿದ್ದೆ: “ದಾರಿ ಬಲು ದೂರ“. ಅದು ಸುಳ್ಳಾಗದೇ ಇರುವುದಕ್ಕೆ ಖಂಡಿತ ಬೇಸರವಾಗುತ್ತಿದೆ.

ಕಳೆದ ಬುಧವಾರ ಮತ್ತು ಗುರುವಾರ ಸಮಾನಮನಸ್ಕರ ಜೊತೆ ಮತ್ತು ಪತ್ರಕರ್ತರ ಹಲವು ಸಂಘಟನೆಗಳ ಜೊತೆ ಮಾತನಾಡಿ ಶನಿವಾರದಿಂದ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡುವುದೆಂದು ತೀರ್ಮಾನಿಸಿದೆವು. ಆ ಬಗ್ಗೆ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಒಂದು ಪತ್ರಿಕಾಗೋಷ್ಟಿ ಸಹ ನಡೆಯಿತು. “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ” ಅಡಿಯಲ್ಲಿ ನಡೆದ ಈ ಗೋಷ್ಟಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಂಗಾಧರ ಮೊದಲಿಯಾರ್, ಪ್ರೆಸ್‌ಕ್ಲಬ್‌ನ ಉಪಾಧ್ಯಕ್ಷ ವೈ.ಜಿ.ಅಶೋಕ್‌ ಕುಮಾರ್, ಪತ್ರಕರ್ತರ ಪರವಾಗಿ ಭಾಗೇಶ್ರೀ ಸುಬ್ಬಣ್ಣ, ದಿನೇಶ್ ಕುಮಾರ್, ಮಹಿಳಾ ಸಂಘಟನೆಗಳ ಪರವಾಗಿ ಕೆ.ಎಸ್.ಲಕ್ಷ್ಮಿ, ಮತ್ತು ನಾನು ಭಾಗವಹಿಸಿದ್ದೆವು. ಅಂದಿನ ಪತ್ರಿಕಾಗೋಷ್ಟಿಗೆ ಸಂಬಂಧಿಸಿದ ಕೆಲವು ಪತ್ರಿಕಾ ವರದಿಗಳು ಈ ಪುಟದಲ್ಲಿ ಇವೆ.

ಮಾರನೆಯ ದಿನ, ಅಂದರೆ ಶನಿವಾರದಂದು ಉಪವಾಸ ಸತ್ಯಾಗ್ರಹ ಆರಂಭವಾಯಿತು. ನಮ್ಮ ವರ್ತಮಾನ ಬಳಗದ ಶ್ರೀಪಾದ್ ಭಟ್ ಮತ್ತು ಲೋಕಸತ್ತಾ ಪಕ್ಷದ ನನ್ನ ಸಹೋದ್ಯೋಗಿಯಾದ ದೀಪಕ್ ನಾಗರಾಜ್, ಫ್ರೀಡಂ ಪಾರ್ಕ್‌ನಲ್ಲಿಯ ಎಲ್ಲಾ ವ್ಯವಸ್ಥೆಗಳ ಉಸ್ತುವಾರಿ ತೆಗೆದುಕೊಂಡಿದ್ದರು. ಸುಮಾರು 9:30 ಕ್ಕೆಲ್ಲ ವೇದಿಕೆ ಸಿದ್ಧವಾಗಿ ನಾವೊಂದಿಷ್ಟು ಜನ ಧರಣಿ ಕುಳಿತೆವು. ಶ್ರೀಪಾದ್ ಭಟ್, ಬಸವರಾಜು ಮತ್ತು ಸಂಜ್ಯೋತಿ ದಂಪತಿಯರು, ಪ್ರಜಾ ರಾಜಕೀಯ ವೇದಿಕೆಯ ಮನೋಹರ್ ಎಳವರ್ತಿ, ಮತ್ತು ನಾನು ಉಪವಾಸ ಕುಳಿತೆವು. ದೇವನಹಳ್ಳಿಯಿಂದ ಬೆಳಗ್ಗೆಯೇ ಬಂದ ಬೆಂಗಳೂರು ಗ್ರಾಮಾಂತರ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತಮ್ಮ ಬ್ಯಾನರ್ ಕಟ್ಟಿ ನಮ್ಮೊಡನೆ ಧರಣಿ ಕೂತರು. ಹತ್ತರ ಸುಮಾರಿಗೆಲ್ಲ ’ಜನಶ್ರೀ’ ಟಿವಿಯ ಅನಂತ ಚಿನಿವಾರ ಮತ್ತು ’ಟಿವಿ-9’ ನ Photo Captionಲಕ್ಷಣ ಹೂಗಾರ್ ನಮ್ಮ ಜೊತೆಗೂಡಿದರು. ಅದಾದ ಸ್ವಲ್ಪ ಸಮಯಕ್ಕೆ ಪಬ್ಲಿಕ್ ಟಿವಿಯ ಎಚ್. ರಂಗನಾಥ್ ಸಹ ಜೊತೆಯಾದರು. ನೋಡನೋಡುತ್ತಿದ್ದಂತೆ ಹನ್ನೊಂದರ ಸುಮಾರಿಗೆ ವೇದಿಕೆ ತುಂಬ ಪತ್ರಕರ್ತರು, ಲೇಖಕರು, ವಕೀಲರು, ಸಾಮಾಜಿಕ ಹೋರಾಟಗಾರರು ಜೊತೆಯಾದರು. ಸುವರ್ಣ ನ್ಯೂಸ್‌ನ ರಂಗನಾಥ್ ಭಾರದ್ವಾಜ್ ಮತ್ತು ಅಜಿತ್ ಹನುಮಕ್ಕನವರ್, ಕಸ್ತೂರಿ ಟಿವಿಯ ಬದ್ರುದ್ದೀನ್, ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾಧರ್ ಮೊದಲಿಯಾರ್, ಪ್ರಜಾವಾಣಿಯ ಪದ್ಮರಾಜ್ ದಂಡಾವತಿ, ಪ್ರೆಸ್‌ಕ್ಲಬ್‌ನ ಉಪಾಧ್ಯಕ್ಷ ವೈ.ಜಿ.ಅಶೋಕ್‌ ಕುಮಾರ್, ಖ್ಯಾತ ವಕೀಲರಾದ ಬಿ.ಟಿ.ವೆಂಕಟೇಶ್, ಕೋಡಿಹಳ್ಳಿ ಚಂದ್ರಶೇಖರ್, ನಗರಿ ಬಾಬಯ್ಯ, ನಗರಗೆರೆ ರಮೇಶ್, ಭಾಗೇಶ್ರೀ, ಗೌರಿ ಲಂಕೇಶ್, ಪಾರ್ವತೀಶ ಬಿಳಿದಾಳೆ, ಕೆ.ಎಸ್.ಲಕ್ಷ್ಮಿ, ದಿನೇಶ್ ಕುಮಾರ್, ಮಂಗಳೂರು ವಿಜಯ, ’ದ ಹಿಂದೂ’ ಪತ್ರಿಕೆಯ ಅನೇಕ ವರದಿಗಾರರು, ಇಂಗ್ಲಿಷ್ ಚಾನಲ್‌ಗಳ ಮತ್ತು ಇಂಗ್ಲಿಷ್ ಪತ್ರಿಕೆಗಳ ಹಲವರು, ಜಯ ಕರ್ನಾಟಕ ಸಂಘಟನೆಯವರು, ಸಂವಾದ ಸಂಸ್ಥೆಯ ಮಾಧ್ಯಮ ವಿದ್ಯಾರ್ಥಿಗಳು, ಇನ್ನೂ ಅನೇಕರು ಮತ್ತು ವಿವಿಧ ಸಂಘಟನೆಗಳ ಅನೇಕ ಮುಖಂಡರು ಅಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ನಮ್ಮ ವೇದಿಕೆಯ ಪಕ್ಕ ನಡೆದ ಟಿಬೇಟಿಯನ್ನರ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ದಿನೇಶ್ ಗುಂಡೂರಾವ್ ನಮ್ಮ ವೇದಿಕೆಗೂ ಬಂದು ಸತ್ಯಾಗ್ರಹ ನಿರತರೊಡನೆ ಮಾತನಾಡಿ, ಬೆಂಬಲ ವ್ಯಕ್ತಪಡಿಸಿ ಹೋದರು. ಬಂದ ಎಲ್ಲರಿಗೂ ನವೀನ್ ಸೂರಿಂಜೆಯ ವಿರುದ್ಧ ಹತ್ತು-ಹನ್ನೊಂದು ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಆರೋಪಗಳು ಧಿಗ್ಭ್ರಾಂತಿ ಉಂಟು ಮಾಡಿದವು. ಸಂವಾದ ಸಂಸ್ಥೆಯ ಮಾಧ್ಯಮ ವಿದ್ಯಾರ್ಥಿಗಳು ಇಡೀ ದಿನ ಹೋರಾಟದ ಹಾಡುಗಳನ್ನು ಮತ್ತು ಭಾವಗೀತೆಗಳನ್ನು ಹಾಡುವ ಮೂಲಕ ಧರಣಿಗೆ ಸಾಂಸ್ಕೃತಿಕ ಆಯಾಮ ನೀಡಿದರು. ಕೆಲವರು ಕವನ ವಾಚನ ಮಾಡಿದರು. ಮೊದಲ ದಿನದ ಸತ್ಯಾಗ್ರಹಕ್ಕೆ ಹರಿದು ಬಂದ ಬೆಂಬಲ ನಮಗೆ ಅಪಾರ ಭರವಸೆ ನೀಡಿತು.

ಅಂದು ರಾತ್ರಿ ನಾವು ಹತ್ತು ಜನ ಅಲ್ಲಿಯೇ ಉಳಿದು ಧರಣಿ ಮುಂದುವರೆಸಿದೆವು. ಉಪವಾಸ ಮಾಡುತ್ತಿದ್ದ ಸಂಜ್ಯೋತಿ ಮತ್ತು ತೇಜಸ್ವಿನಿ ಮನೆಗೆ ಹೋದರೆ, ಉಪವಾಸ ಮುಂದುವರೆಸಿದ ಶ್ರೀಪಾದ್ ಭಟ್, ಮನೋಹರ್ ಎಳವರ್ತಿ, ಬಸವರಾಜ್, ಆನಂದ್ ಯಾದವಾಡ್, ಮತ್ತು ನಾನು ಅಂದು ರಾತ್ರಿ ಅಲ್ಲಿಯೇ ಉಳಿದೆವು. ನಮ್ಮೊಡನೆ ಹಿರಿಯ ಕವಿ-ಪತ್ರಕರ್ತ-ಲೇಖಕರಾದ ಆದಿಮದ ಕೋಟಗಾನಹಳ್ಳಿ ರಾಮಯ್ಯ ಸಹ ಉಳಿದರು. ಸಂವಾದದ ಮುರಳಿ ಮೋಹನ್ ಕಾಟಿ ಮತ್ತವರ ತಂಡದ ನಾಲ್ಕೈದು ಜನ ಸಹ ಅಲ್ಲಿಯೇ ಉಳಿದರು. ಅಂದ ಹಾಗೆ, ನಮ್ಮ ಪಕ್ಕದ ವೇದಿಕೆಯಲ್ಲಿ ಧರಣಿ ನಿರತರಾಗಿದ್ದ ದಾವಣಗೆರೆಯ ರೈತರು ನಮ್ಮಲ್ಲಿ ಉಪವಾಸ ಮಾಡದೇ ಇದ್ದವರಿಗೆ ತಾವು ತಯಾರಿಸಿದ ಊಟವನ್ನು ಹಂಚಿಕೊಂಡದ್ದೇ ಅಲ್ಲದೆ, ನಮ್ಮ ವೇದಿಕೆಯಲ್ಲಿ ಮಲಗಲು ಕೆಲವರಿಗೆ ಸ್ಥಳ ಸಾಲದೇ ಬಂದದ್ದರಿಂದ ಅವರ ವೇದಿಕೆಯಲ್ಲಿ ಸ್ಥಳವನ್ನೂ ಕೊಟ್ಟರು. KIADB ಎಂಬ ಕರ್ನಾಟಕ ಸರ್ಕಾರದ ರಿಯಲ್ ಎಸ್ಟೇಟ್ ಏಜೆಂಟ್ ಸಂಸ್ಥೆ ತಮ್ಮ ಕೃಷಿ ಜಮೀನುಗಳನ್ನು ಕಿತ್ತುಕೊಂಡಿರುವುದರ ವಿರುದ್ಧ ಈ ರೈತರು ಸಂಸಾರ ಸಮೇತರಾಗಿ (ಸುಮಾರು ನಲವತ್ತೈವತ್ತು ಜನ, ಹೆಚ್ಚಿನವರು ಹೆಂಗಸರೇ) ಅಲ್ಲಿಯೇ ಸುಮಾರು ಹದಿನೈದು ದಿನಗಳಿಂದ ಧರಣಿಯಲ್ಲಿ ನಿರತರಾಗಿದ್ದಾರೆ. ತಾವೇ ಸಂತ್ರಸ್ತರಾಗಿದ್ದರೂ ನಮ್ಮೊಡನೆ ಅವರು ತೋರಿದ ಪ್ರೀತಿ-ವಿಶ್ವಾಸ ದೊಡ್ದದು.

ಮಾರನೆಯ ದಿನ ಭಾನುವಾರ ಸಹ ನಮ್ಮ ಉಪವಾಸ ಮತ್ತು ಧರಣಿ ಮುಂದುವರೆಯಿತು. ಅಂದೂ ಸಹ ಬೆಳಗ್ಗೆಯೇ ಅನಂತ ಚಿನಿವಾರ್ ಮತ್ತು ಲಕ್ಷ್ಮಣ್ ಹೂಗಾರ್ ಬಂದರು. ಅಷ್ಟೊತ್ತಿಗೆ ಸತ್ಯಮೂರ್ತಿ ಆನಂದೂರು ಸಹ ಜೊತೆಯಾಗಿದ್ದರು. ಸ್ವಲ್ಪ ಸಮಯದ ನಂತರ ಬರಗೂರು ರಾಮಚಂದ್ರಪ್ಪ, ಗಂಗಾಧರ ಮೊದಲಿಯಾರ್ ಬಂದು ಕೂಡಿಕೊಂಡರು. ಮಧ್ಯಾಹ್ನಕ್ಕೆ ಶಿವಸುಂದರ್, ಎಸ್.ಜಿ.ಸಿದ್ದರಾಮಯ್ಯ ಮತ್ತು ಚಂಪಾ ಬಂದಿದ್ದರು. ಮಧ್ಯಾಹ್ನಕ್ಕೆ ಕಚೇರಿಗೆ ತೆರಳಿದ್ದ ಜನಶ್ರೀಯ ಅನಂತ ಚಿನಿವಾರರು ಪತ್ರಕರ್ತರ ಮತ್ತು ಪ್ರಜಾಪ್ರಭುತ್ವವಾದಿಗಳ ಈ ಧರಣಿಯ ಬಗ್ಗೆ ಗೃಹಸಚಿವ ಆರ್.ಅಶೋಕರೊಡನೆ ಪ್ರಸ್ತಾಪ ಮಾಡಿದ್ದರು.Photo Caption ಅವರಿಗೆ ಸಂಜೆ ಆರಕ್ಕೆ ಬಂದು ಧರಣಿ ನಿರತರೊಡನೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿದ್ದರಂತೆ. ಸಂಜೆಯ ನಾಲ್ಕೂವರೆ ಸುಮಾರಿಗೆ ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನಮ್ಮ ಧರಣಿಯ ಸ್ಥಳಕ್ಕೆ ಬಂದು, ನವೀನ್ ಸೂರಿಂಜೆಯ ವಿರುದ್ಧ ದಾಖಲಾಗಿರುವ ಆರೋಪಗಳನ್ನು ನೋಡಿ ದಂಗಾದರು. ಕೂಡಲೇ ನಮ್ಮ ಮನವಿಗೆ ಓಗೊಟ್ಟು ಅವರೂ ಸಹ ಗೃಹ ಸಚಿವರೊಡನೆ ಮಾತನಾಡಿದರು. ಅವರ ಮನವಿಗೂ ಸ್ಪಂದಿಸಿದ ಸಚಿವರು ಸಂಜೆ ಆರಕ್ಕೆ ಬರುವುದಾಗಿ ತಿಳಿಸಿದರು. ಅಂದು ರಾತ್ರಿ ಹೊಸಪೇಟೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಬೇಕಿದ್ದ ವಿ.ಆರ್.ಸುದರ್ಶನ್‌ರವರು ಸಚಿವರು ಬರುವ ತನಕವೂ ಎರಡು ಘಂಟೆಗಳ ಕಾಲ ನಮ್ಮೊಡನೆ ಧರಣಿ ಕೂತರು. ಅದೇ ಸಮಯಕ್ಕೆ ಈ ಹೋರಾಟಕ್ಕೆ ಬೆಂಬಲವಾಗಿ IDL BLIND BAND ನವರು ಆಗಮಿಸಿ ತಮ್ಮ ಹಾಡುಗಳ ಮೂಲಕ ಬೆಂಬಲಿಸಿದರು.

ಕತ್ತಲಾವರಿಸಿದ ನಂತರ, ಅಂದರೆ 6:45 ಕ್ಕೆ ಸಚಿವರು ಬಂದರು. ಅಷ್ಟೊತ್ತಿಗೆ ಮಾಧ್ಯಮದ ಬಹುತೇಕ ಹಿರಿಯರು ಸ್ಥಳಕ್ಕೆ ಬಂದಿದ್ದರು. ಗಂಗಾಧರ ಮೊದಲಿಯಾರ್, ಲಕ್ಷ್ಮಣ್ ಹೂಗಾರ್, ಅನಂತ ಚಿನಿವಾರ ಎಲ್ಲರೂ ಬಂದರು. ಸಚಿವರು ಬಂದು ಧರಣಿ ನಿರತರೊಡನೆ ತಾವೂ ಕುಳಿತು ವಿ.ಆರ್.ಸುದರ್ಶನರಿಗೆ ಮತ್ತು ಮಾಧ್ಯಮ ಮಿತ್ರರಿಗೆ ’ಪೋಲಿಸರ ಕಡೆಯಿಂದ ತಪ್ಪಾಗಿದೆ, ನವೀನರ ವಿರುದ್ಧ ಹಾಕಲಾಗಿರುವ ಕೇಸುಗಳನ್ನು ಹಿಂಪಡೆಯುವುದಾಗಿ Photo Captionತಾನು ಸದನದಲ್ಲಿ ಮಾತು ಕೊಟ್ಟಿದ್ದೇನೆ, ಅದೇ ರೀತಿ ನಾಲ್ಕೈದು ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ, ಅದು ವಿವಿಧ ಹಂತಗಳಲ್ಲಿ ಇದೆ, ಮತ್ತು ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಲು ಆ ಕಡತ ಹೀಗೀಗೆ ಸಾಗಬೇಕಾಗಿದೆ,’ ಎಂದು ಎಲ್ಲವನ್ನೂ ವಿವರಿಸಿದರು. ಸಚಿವರಿಗೆ ಧರಣಿ ನಿರತರ ಪರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಸಂಜ್ಯೋತಿಯವರು ಮನವಿ ಪತ್ರ ಸಲ್ಲಿಸಿದರು. ತಾವು ಈಗಾಗಲೇ ನವೀನ್ ಸೂರಿಂಜೆಯವರ ವಿರುದ್ಧ ಹಾಕಲಾಗಿರುವ ಸುಳ್ಳು ಆರೋಪಗಳನ್ನು ಕೈಬಿಡಲು ಕ್ರಮ ಕೈಗೊಂಡಿರುವುದಾಗಿಯೂ, ನಾಳೆಯಿಂದ ನೀವುಗಳೂ ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಮುಗಿಯಲು ಅದನ್ನು ಹಿಂಬಾಲಿಸಿ ಎಂತಲೂ, ತಾವು ನವೀನರ ಮೇಲಿನ ಕೇಸುಗಳನ್ನು ಹಿಂಪಡೆಯಲು ಕಟಿಬದ್ದರಾಗಿದ್ದೇವೆ, ಹಾಗಾಗಿ ನೀವುಗಳೂ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಅದನ್ನೇ ಅವರು ಮಾಧ್ಯಮಗಳ ಮುಂದೆಯೂ ನಂತರ ಹೇಳಿದರು.

ನವೀನ್ ಸೂರಿಂಜೆಗೆ ಆಗಿರುವ ಅನ್ಯಾಯವನ್ನು ಜನರ ಮುಂದೆ ಇಡಬೇಕು, ಕಾರ್ಯನಿರತ ಪತ್ರಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹಾಕಿ ಪತ್ರಿಕಾ ಸ್ವಾತಂತ್ರ್ಯವನ್ನು ಸರ್ಕಾರ ದಮನ ಮಾಡಲು ಬಿಡಬಾರದು, ನವೀನ್ ಸೂರಿಂಜೆಯ ವಿಷಯಕ್ಕೆ ಸರ್ಕಾರ ತನ್ನ ನಿಲುವನ್ನು ಬಹಿರಂಗಗೊಳಿಸಬೇಕು, ಆದಷ್ಟು ಬೇಗ ನವೀನ್ ಸೂರಿಂಜೆಯನ್ನು ಕಾನೂನು ರೀತ್ಯ ಬಿಡುಗಡೆ ಮಾಡಲು ಈ ಕೂಡಲೇ ಕ್ರಮಕೈಗೊಳ್ಳಬೇಕು, ಎಂದಿದ್ದ ನಮ್ಮ ಒತ್ತಾಯಗಳು ಒಂದು ಹಂತಕ್ಕೆ ಈಡೇರಿದ ಕಾರಣಕ್ಕೆ ನಾವು ಮೂರು ದಿನದ ಉಪವಾಸವನ್ನು ಎರಡನೇ ದಿನ ರಾತ್ರಿ ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆವು. ನಮ್ಮೊಡನೆ ಕೊನೆಯ ತನಕವೂ ಇದ್ದ ವಿ.ಆರ್.ಸುದರ್ಶನ್ ಇಂದಿನ ರಾಜಕಾರಣಿಗಳಲ್ಲಿ ತಾವೊಬ್ಬ ಅಪರೂಪದ ವ್ಯಕ್ತಿ ಎಂದು ತೋರಿಸಿ ನಮ್ಮೆಲ್ಲರ ಕೃತಜ್ಞತೆಗೆ ಪಾತ್ರರಾದರು. ರಾತ್ರಿ ಎಂಟರ ನಂತರ ನಮ್ಮವರೆಲ್ಲ ಮನೆಗಳಿಗೆ ವಾಪಸಾದರು.

(ಈ ಎರಡೂ ದಿನಗಳ ಉಪವಾಸ ಸತ್ಯಾಗ್ರಹದ ಕೆಲವು ಪತ್ರಿಕಾ ವರದಿಗಳು ಈ ಪುಟದಲ್ಲಿವೆ.)

ಈ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಮತ್ತು ಕೃತಜ್ಞತೆಗಳನ್ನು ತಿಳಿಸುತ್ತೇನೆ. ಪತ್ರಕರ್ತರ, ಅವರ ಸಂಘಟನೆಗಳ, ಸಮಾನ-ಮನಸ್ಕರ ಸಂಘಟಿತ ಬೆಂಬಲದಿಂದ ಮಾತ್ರ ನಾವು ಇಷ್ಟಾದರೂ ಸಾಧಿಸಲು ಸಾಧ್ಯವಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಮತ್ತು ಪರೋಕ್ಷವಾಗಿ ನಮ್ಮೊಡನೆ ನಿಂತ ಎಲ್ಲರಿಗೂ ವೇದಿಕೆಯ ಪರವಾಗಿ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ. ಹಾಗೆಯೇ ಎರಡು ಹಗಲು ಮತ್ತು ಒಂದು ರಾತ್ರಿ ನಮ್ಮೊಡನೆ ಇದ್ದ ಪೋಲಿಸರಿಗೂ ನಮ್ಮ ಧನ್ಯವಾದಗಳು.

ಮತ್ತು, ಎರಡೂ ದಿನ ಉಪವಾಸ ಮಾಡಿದ ತೇಜಸ್ವಿನಿ, ಶ್ರೀಪಾದ್ ಭಟ್, ಮನೋಹರ್ ಎಳವರ್ತಿ, ಸಂಜ್ಯೋತಿ, ಬಸವರಾಜ್, ಆನಂದ್ ಯಾದವಾಡ್, ಶಿವಸುಂದರ್, ಮತ್ತು ಗೊತ್ತಾಗದೇ ಉಳಿದ ಎಲ್ಲರಿಗೂ ಧನ್ಯವಾದಗಳು. ಹಾಗೂ, ಕಾರ್ಯಕ್ರಮ ವ್ಯವಸ್ಥೆಯ ವಿಚಾರದಲ್ಲಿ ಅನೇಕ ರೀತಿಯಲ್ಲಿ ಸಹಕರಿಸಿ ನಮ್ಮೊಡನೆ ನಿಂತ ದೀಪಕ್ ನಾಗರಾಜರಿಗೂ ಸಹ.

ಮೊನ್ನೆ ಸೋಮವಾರದಿಂದಲೇ ನಮ್ಮ ಪರವಾಗಿ ಸಂಜ್ಯೋತಿ ಮತ್ತು ಬಸವರಾಜ್‌ರವರು ಈ ಕೇಸಿನ ಹಿಂದೆ ಬಿದ್ದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಕಡತ ಆದಷ್ಟು ಬೇಗ ಸಂಪುಟ ಸಭೆಗೆ ಬರುವ ನಿಟ್ಟಿನಲ್ಲಿ ನಮ್ಮವರು ಕಾರ್ಯಪ್ರವೃತ್ತರಾಗಿದ್ದಾರೆ.

ಆದರೆ ನವೀನ್ ಸೂರಿಂಜೆಯ ಮೇಲಿನ ಆರೋಪಗಳನ್ನು ಕೈಬಿಟ್ಟು, ಆತ ಜೈಲಿನಿಂದ ಹೊರಬರುವ ತನಕವೂ ನಮಗೆ ನ್ಯಾಯ ಸಿಗುವುದಿಲ್ಲ ಮತ್ತು ಅದು ಇಷ್ಟೇ ಅವಧಿಯಲ್ಲಿ ಆಗುತ್ತದೆ ಎನ್ನುವುದಕ್ಕೆ ಆಗುವುದಿಲ್ಲ. ಮತ್ತು, ಇಲ್ಲಿಯವರೆಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಯೂ ಹಾಗೆಯೇ ಇದೆ.

ಇದೇ ಸಂದರ್ಭದಲ್ಲಿ ಇದೇ ಕೇಸಿಗೆ ಸಂಬಂಧಪಟ್ಟಂತೆ ಶರಣ್ ಎನ್ನುವ ಕ್ಯಾಮೆರಾಮನ್‌ನನ್ನು ಸಹ ಮಂಗಳೂರಿನ ಪೋಲಿಸರು ಕಳೆದ ವಾರ ಬಂಧಿಸಿದ್ದಾರೆ. ಅವರ ಮೇಲೆಯೂ ನವೀನರ ಮೇಲಿರುವ ಆರೋಪಗಳನ್ನೇ ಹೊರೆಸಿದ್ದಾರೆ ಎನ್ನುವ ಸುದ್ಧಿಯಿದೆ. ಹಾಗಿದ್ದ ಪಕ್ಷದಲ್ಲಿ ಸರ್ಕಾರ ಅವರ ಮೇಲೆಯೂ ಹಾಕಿರುವ ಕೇಸುಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು. ಪೋಲಿಸರಿಗೆ ಈ ಸುಳ್ಳು ಆರೋಪಗಳ ಹೊರತಾಗಿ ಬೇರೆಯದೇ ಆದ ಸಬೂತುಗಳಿದ್ದಲ್ಲಿ ಆ ಆಧಾರದ ಮೇಲೆ ಕೇಸುಗಳನ್ನು ಹಾಕಬೇಕೇ ಹೊರತು ಸುಳ್ಳುಸುಳ್ಳು ಆರೋಪಗಳನ್ನು ಹೊರೆಸಿ ಬಂಧಿಸುವುದು ಅಕ್ಷಮ್ಯ. ಶರಣರಿಗೆ ನನ್ನ ನೈತಿಕ ಬೆಂಬಲ ಹಿಂದೆ.

ಇಂತಹ ಸಂದರ್ಭದಲ್ಲಿಯೇ ವೃತ್ತಿಪರ ಸಂಘಟನೆಗಳ ಅಗತ್ಯ ಮತ್ತು ಅವುಗಳು ನಿಭಾಯಿಸಬೇಕಾದ ಜವಾಬ್ದಾರಿಗಳ ಪರೀಕ್ಷೆ ನಡೆಯುವುದು. ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ಮಾಧ್ಯಮಗಳ ಬಗ್ಗೆ, ಅದರಲ್ಲೂ ದೃಶ್ಯ ಮಾಧ್ಯಮಗಳ ಬಗ್ಗೆ ಜನರಿಗೆ ಗೌರವ, ಭಯ, ತಿರಸ್ಕಾರ ಎಲ್ಲವೂ ಇದೆ. ಈ ತಿರಸ್ಕಾರದ ಭಾಗವೇ ನವೀನ್ ಸೂರಿಂಜೆಯವರ ವಿಷಯಕ್ಕೆ ಅವರು ನಿರಪರಾಧಿಯಾಗಿದ್ದರೂ ಪ್ರತಿಕೂಲವಾಗಿ ಪರಿಣಮಿಸಿದ್ದು. ಹಾಗಾಗಿ, ಮಾಧ್ಯಮ ರಂಗ ನಿರಂತರವಾಗಿ ಆತ್ಮಶೋಧನೆಯಲ್ಲಿ ಮತ್ತು ಸರಿಪಡಿಸಿಕೊಳ್ಳುವ ಕ್ರಿಯೆಯಲ್ಲಿ ತೊಡಗಬೇಕಿದೆ. ಹಾಗೆಯೇ, ಕಾರ್ಯನಿರತ ಪತ್ರಕರ್ತರಿಗೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಡುವ ಒಂದು ಉತ್ತಮ ವೃತ್ತಿಪರ ಸಂಘಟನೆಯೊಂದರ ಅಗತ್ಯ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರಿಗೆ ಬೇಕಾಗಿದ್ದು, ಅದನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತರು ಆಲೋಚಿಸಿ ಕಾರ್ಯೋನ್ಮುಖರಾಗುತ್ತಾರೆ ಎಂದು ಭಾವಿಸುತ್ತೇನೆ. ಈಗ ನಾವು ಕಟ್ಟಿಕೊಂಡ “ಪತ್ರಕರ್ತ ಅಕ್ರಮ ಬಂಧನ ವಿರೋಧಿ ವೇದಿಕೆ”ಯಲ್ಲಿ ಪತ್ರಕರ್ತರು, ಸಂಘಟನೆಗಳು, ಪತ್ರಕರ್ತರಲ್ಲದವರು, ಎಲ್ಲರೂ ಇದ್ದಾರೆ. ಆದರೆ, ಪತ್ರಕರ್ತರೇ ಇರುವ ಒಂದು ಸಂಘಟನೆಯ ಅಗತ್ಯತೆ ತೀರಾ ಇದೆ, ಇಲ್ಲದಿದ್ದರೆ, ಮೊನ್ನೆ ನವೀನ್ ಸೂರಿಂಜೆ, ನೆನ್ನೆ ಶರಣ್, ಇಂದು ಮತ್ತೊಬ್ಬರು, ತಾವು ಮಾಡದ ತಪ್ಪುಗಳಿಗಾಗಿ ಶಿಕ್ಷೆ ಅನುಭವಿಸುವಂತಾಗುತ್ತದೆ ಮತ್ತು ಅದು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಗೌರವ ತರುವಂತಹುದೂ ಅಲ್ಲ ಮತ್ತು ನೈತಿಕವಾಗಿ ಉತ್ತಮವೂ ಅಲ್ಲ, ಮಾಧ್ಯಮ ಮಿತ್ರರು ಇದರ ಬಗ್ಗೆ ಯೋಚಿಸುತ್ತಾರೆ ಎಂದು ಭಾವಿಸುತ್ತೇನೆ. ಈ ಕೂಡಲೆ ಪತ್ರಕರ್ತರ ಸಂಘಟನೆಗಳು ಶರಣರ ಪರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲು ಕೋರುತ್ತೇನೆ. “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ”ಯ ಪರವಾಗಿಯೂ ಪತ್ರಿಕಾ ಪ್ರಕಟಣೆ ನೀಡಲು ಸಿದ್ಧತೆಗಳಾಗುತ್ತಿವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಅತ್ಯಾಚಾರಗಳ ರಾಜಧಾನಿಗಳು..!

– ಡಾ. ಎಸ್.ಬಿ.ಜೋಗುರ

ಸಾಮೂಹಿಕ ಅತ್ಯಾಚಾರ ಎನ್ನುವದು ಒಂದು ಸಾರ್ವತ್ರಿಕವಾದ ವಿಕೃತ ಪಿಡುಗಾಗಿ ಪರಿಣಮಿಸುತ್ತಿದೆ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, ಎಲ್ಲ ಬಗೆಯ ವ್ಯಾಪ್ತಿಯನ್ನು ಮೀರಿ ಈ ಬಗೆಯ ವಿಕೃತ ಕ್ರಿಯೆ ನಡೆಯುವದಿದೆ. ಶಾಲೆ, ಕಾರ್ಯಸ್ಥಳ, ಗದ್ದೆಯ ಬಯಲು, ಪಾಳು ಬಿದ್ದ ಕಟ್ಟಡ, ರೈಲು ಭೋಗಿಯ ಟಾಯ್ಲೆಟ್ ಕೋಣೆ, ಕಾರು, ಬಸ್ಸು, ನಿರಾಶ್ರಿತರ ತಾಣ, ಕ್ಲಬ್ ಹಾಗೂ ಬಾರ್‌ಗಳು, ದಲಿತರ ಕೇರಿ, ಹೀಗೆ ಎಲ್ಲೆಂದರಲ್ಲಿ ಅತ್ಯಂತ ತುಚ್ಛವಾಗಿ ನಡೆಯುವ ಈ ಸಾಮಾಹಿಕ ಅತ್ಯಾಚಾರ ಮನುಷ್ಯನಲ್ಲಿಯ ಮೃಗೀಯತನಕ್ಕೆ ಸಾಕ್ಷಿಯಂತಿದೆ.

ಮೊನ್ನೆಯಷ್ಟೇ ದೆಹಲಿಯಲ್ಲಿ ಚಲಿಸುವ ಬಸ್ ಒಂದರಲ್ಲಿ ಅತ್ಯಂತ ತುಚ್ಚವಾಗಿ ಓರ್ವ ವಿದ್ಯಾರ್ಥಿನಿಯ ಮೇಲೆ ಹರಿದು ಮುಕ್ಕುವಂತೆ ನಾಲ್ವರು ದುರುಳುರು ಸಾಮೂಹಿಕ ಅತ್ಯಾಚಾರ ಎಸಗಿ, ಅವಳನ್ನು ಚಲಿಸುವ ಬಸ್‌ನಿಂದ ಹೊರಗೆಸೆದು ತಮ್ಮ ನೀಚತನದ ಪರಮಾವಧಿಯನ್ನು ಮೆರೆದಿದ್ದಾರೆ. rape-illustrationರಾಜಧಾನಿಯಲ್ಲಿ ನಡೆದ ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ‍ಮಹಿಳೆಯರ ಪಾಲಿಗೆ ದೆಹಲಿ ಈಗ ಸೇಫ್ ಆಗಿ ಉಳಿದಿಲ್ಲ ಎನ್ನುವದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದೆಹಲಿ ಒಂದರಲ್ಲಿಯೇ 2012 ರ ಸಂದರ್ಭದಲ್ಲಿ 635 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಡಿಶೆಂಬರ್ ತಿಂಗಳಲ್ಲಿ ಕೇವಲ 14 ದಿನಗಳಲ್ಲಿ 5 ಅತ್ಯಾಚಾರದ ಪ್ರಕರಣಗಳು ದಾಖಲಾಗಿರುವದನ್ನು ಗಮನಿಸಿದರೆ ದೆಹಲಿ ಇಡೀ ದೇಶದಲ್ಲಿ ಈ ಅತ್ಯಾಚಾರದ ಪ್ರಕರಣದಲ್ಲಿ ಮುಂಚೂಣಿಯಲ್ಲಿದೆ. 2011 ರ ಸಂದರ್ಭದಲ್ಲಿ ಮುಂಬೈಯಲ್ಲಿ 221 ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದರೆ, ದೆಹಲಿಯಲ್ಲಿ 572 ಪ್ರಕರಣಗಳು ವರದಿಯಾಗಿವೆ. ರಾಜ್ಯ ರಾಜಧಾನಿ ಬೆಂಗಳೂರು ಕೂಡಾ ಅತ್ಯಾಚಾರದ ಪ್ರಕರಣದಲ್ಲಿ ಹಿಂದೆ ಬಿದ್ದಿಲ್ಲ. 2011 ರಲ್ಲಿ 94 ಹಾಗೂ 2012 ರಲ್ಲಿ 30 ಅತ್ಯಾಚಾರದ ವರದಿಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಬರೀ ಡಿಶೆಂಬರ್ ತಿಂಗಳು ಒಂದರಲ್ಲಿಯೇ 15 ದಿನಗಳಲ್ಲಿ 14 ಅತ್ಯಾಚಾರದ ಪ್ರಕರಣಗಳು ಬಯಲಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ವಿಶ್ವದ ಬಹುತೇಕ ಭಾಗಗಳಲ್ಲಿ ಮಹಿಳೆಯ ಮೇಲಾಗುವ ದೈಹಿಕ ಮತ್ತು ಲೈಂಗಿಕ ಹಿಂಸೆಯ ಪ್ರಮಾಣ ಸರಾಸರಿ 30 ರಿಂದ 60 ಪ್ರತಿಶತದಷ್ಟಿದೆ. ಅತ್ಯಾಚಾರದ ಪ್ರಕರಣಗಳ ಮೇಲೆ ಕಣ್ಣು ಹಾಯಿಸುವದಾದರೆ 2002 ರಲ್ಲಿ 16373 ಅತ್ಯಾಚಾರದ ಪ್ರಕರಣಗಳು ರಾಷ್ಟ್ರೀಯ ಅಪರಾಧಿ ಮಾಹಿತಿ ಇಲಾಖೆಯಲ್ಲಿ ದಾಖಲಾಗಿದ್ದರೆ 2009 ರ ಸಂದರ್ಭದಲ್ಲಿ ಆ ಪ್ರಮಾಣ 21397 ರಷ್ಟಾಗಿದ್ದರ ಬಗ್ಗೆ ದಾಖಲೆಗಳಿವೆ. ವರ್ಷದಿಂದ ವರ್ಷಕ್ಕೆ ಅತ್ಯಾಚಾರದ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ನಡೆದಿದೆ. ಕೇವಲ ನಮ್ಮ ದೇಶ ಮಾತ್ರವಲ್ಲ ವಿಶ್ವದ ಇತರೇ ರಾಷ್ಟ್ರಗಳ ಸ್ಥಿತಿ ಇದಕ್ಕೆ ತೀರಾ ಹೊರತಾಗಿಲ್ಲ. ಇಂಗ್ಲಂಡನ ‘ದ ಇಂಡಿಪೆಂಡೆಂಟ್’ ಎನ್ನುವ ಪತ್ರಿಕೆ [21 ಜೂನ್ 2009] ಹೊರಹಾಕಿರುವ ಮಾಹಿತಿಯಂತೆ ಕೇವಲ 2008 ರ ಸಂದರ್ಭದಲ್ಲಿ ಅಲ್ಲಿ ಸುಮಾರು 85 ರಷ್ಟು ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ಲಂಡನ್ ಮಹಾನಗರ ಪೋಲಿಸ್ ಠಾಣೆಯಲ್ಲಿ ದಾಖಲೆಯಾದ ಬಗ್ಗೆ ವರದಿ ಮಾಡಿದೆ. ಆ ಪತ್ರಿಕೆ ಹೇಳುವಂತೆ ಅಲ್ಲಿ ನಡೆಯುವ ಈ ಬಗೆಯ ಸಾಮೂಹಿಕ ಅತ್ಯಾಚಾರಗಳು ಬಹುತೇಕವಾಗಿ ಜನಾಂಗೀಯ ಹಿನ್ನೆಯಲ್ಲಿ ಘಟಿಸಿದವುಗಳೇ ಹೆಚ್ಚು ಎಂದಿರುವದಿದೆ. 92 ಜನ ಅಪರಾಧಿಗಳನ್ನು ಈ ಸಾಮೂಹಿಕ ಅತ್ಯಾಚಾರದ ಪ್ರಕರಣಗಳಲ್ಲಿ ಬಂಧಿಸಿದಾಗ ಅವರಲ್ಲಿ ಸುಮಾರು 66 ಜನ ಕಪ್ಪು ಜನಾಂಗ ಇಲ್ಲವೇ ಮಿಶ್ರಿತ ಜನಾಂಗದವರೇ ಇದ್ದಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ಬಹಳಷ್ಟು ಸಾಮೂಹಿಕ ಅತ್ಯಾಚಾರದ ಪ್ರಕರಣಗಳಲ್ಲಿ ತೊಡಗಿದವರು ಹದಿಹರೆಯದ ಯುವಕರು. ಹದಿನಾರು ತುಂಬದವರೂ ಇರುವ ಬಗ್ಗೆ ಅನೇಕ ವಿದೇಶಗಳಲ್ಲಿಯ ಸಾಮೂಹಿಕ ಅತ್ಯಾಚಾರಗಳಲ್ಲಿ ಬಯಲಾಗಿರುವದಿದೆ.

ಮೆಟ್ಸ್ ಎನ್ನುವ ಚಿಂತಕರು ಹೇಳುವ ಹಾಗೆ ಮೂವರು ಇಲ್ಲವೇ ಮೂವರಿಗಿಂತಲೂ ಹೆಚ್ಚು ಜನ ಕೂಡಿ ಎಸಗುವ ಅತ್ಯಾಚಾರವನ್ನು ಸಾಮೂಹಿಕ ಅತ್ಯಾಚಾರ ಎಂದು ಕರೆಯಲಾಗುತ್ತದೆ, ಎಂದಿರುವರು. ಇದೊಂದು ವಿಕೃತ ಮನ:ಸ್ಥಿತಿಯವರು ಎಸಗುವ ಹೇಯ ಕೃತ್ಯ. ಹಿಂದೊಮ್ಮೆ ನಮ್ಮದೇ ದೇಶದಲ್ಲಿ ಈ ಬಗೆಯ ಸಾಮೂಹಿಕ ಅತ್ಯಾಚಾರ ಪೋಲಿಸ್ ಠಾಣೆಯೊಂದರಲ್ಲಿ ಘಟಿಸಿ ಆ ಎಲ್ಲ ಪೋಲಿಸರು ಏಡ್ಸ್ ರೊಗಕ್ಕೆ ಸಿಲುಕಿದ ದುರಂತವನ್ನು ಓದಿದ ನೆನಪು. rape-and-murder-of-thangjam-manorama-protestsಬಲತ್ಕಾರಕ್ಕೆ ಒಳಗಾದ ಆ ಮಹಿಳೆ ತಾನು ಎಚ್.ಆಯ್. ವಿ. ಪೊಜಿಟಿವ್ ಎನ್ನುವದನ್ನು ತಿಳಿದಿದ್ದರೂ ಬಾಯಿ ಬಿಟ್ಟಿರಲಿಲ್ಲ. ಹೆಣ್ಣನ್ನು ಅತ್ಯಂತ ಗೌರವಭಾವದಿಂದ ಕಾಣುವ ನಮ್ಮ ನೆಲದಲ್ಲೂ ಈಗೀಗ ಈ ಸಾಮೂಹಿಕ ಅತ್ಯಾಚಾರ ಎನ್ನುವದು ಒಂದು ವ್ಯಾಪಕ ಪಿಡುಗಾಗಿ ಹಬ್ಬತೊಡಗಿದೆ. ಮೊದಮೊದಲು ಕೇವಲ ದೆಹಲಿಯಲ್ಲಿ ಮಾತ್ರ ಆಗಾಗ ಅಪರೂಪಕ್ಕೊಮ್ಮೆ ಕೇಳಿಬರುವ ಈ ಬಗೆಯ ಸಾಮೂಹಿಕ ಅತ್ಯಾಚಾರದ ಪ್ರಕರಣ ಈಗೀಗ ಎಲ್ಲೆಂದರಲ್ಲಿ ಘಟಿಸುವ ಕುಕೃತ್ಯವಾಗಿದೆ. ಕೇವಲ ಕಳೆದ 25 ದಿನಗಳಲ್ಲಿ 10 ರಷ್ಟು ಅತ್ಯಾಚಾರದ ಪ್ರಕರಣಗಳು ಹರಿಯಾಣಾ ರಾಜ್ಯ ಒಂದರಲ್ಲಿಯೇ ದಾಖಲಾಗಿವೆ. ಅವುಗಳಲ್ಲಿ ಅರ್ಧದಷ್ಟು ಈ ಸಾಮಾಹಿಕ ಅತ್ಯಾಚಾರದ ಪ್ರಕರಣಗಳಿವೆ. ಹಿಸಾರ, ಜಿಂದ್, ಭಿವಾನಿ, ಸೋನಿಪತ್, ಯಮುನಾನಗರ ಜಿಲ್ಲೆಗಳಲ್ಲಿ ಈ ಪ್ರಕರಣಗಳು ಘಟಿಸಿವೆ. ಹರಿಯಾಣಾ ರಾಜ್ಯದಲ್ಲಿ 2011 ರಲ್ಲಿ ಸುಮಾರು 773 ಪ್ರಕರಣಗಳು ಅತ್ಯಾಚಾರಕ್ಕೆ ಸಂಬಂಧಿಸಿ ದಾಖಲಾಗಿವೆ. 2012 ರ ಆರಂಭದ ಆರು ತಿಂಗಳಲ್ಲಿ ಒಟ್ಟು 367 ಅತ್ಯಾಚಾರದ ಪ್ರಕರಣಗಳು ವರದಿಯಾಗಿವೆ [ಹಿಲ್ ಪೋಸ್ಟ್ ಅಕ್ಟೊಬರ್-2012], 2011 ರಿಂದ ಇಲ್ಲಿಯವರೆಗೆ ಹೆಚ್ಚೂ ಕಡಿಮೆ 1140 ಅತ್ಯಾಚಾರದ ಪ್ರಕರಣಗಳು ಬಿಹಾರದಲ್ಲಿ ಜರುಗಿರುವದಿದೆ.

ನನಗೆ ತಿಳಿದಂತೆ ತೀರಾ ಇತ್ತೀಚಿನವರೆಗೂ ಕರ್ನಾಟಕದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ತೀರಾ ಅಪರೂಪ ಎನ್ನುವಂತೆ ನಡೆಯುವದಿತ್ತು. ಆದರೆ ಕೇವಲ ಒಂದು ವಾರದೊಳಗೆ ಎಂಟು ಅತ್ಯಾಚಾರಗಳು ಜರುಗಿ, ಹರಿಯಾಣದ ದಾಖಲೆಯನ್ನು ಮುರಿಯಲು ನಿಂತಂತಿದೆ. ಇವುಗಳಲ್ಲಿ ಕೆಲವು ಸಾಮೂಹಿಕ ಅತ್ಯಾಚಾರಗಳೂ ಸೇರಿವೆ. ಸಾಮೂಹಿಕ ಅತ್ಯಾಚಾರ ಎನ್ನುವದರಲ್ಲಿ ಮಾನಸಿಕ ವಿಕೃತಿ ಅಡಕವಾಗಿರುವ ಬಗ್ಗೆ ಕೆಲ ಅಧ್ಯಯನಗಳು ತೋರಿಸಿಕೊಟ್ಟಿರುವದಿದೆ. ಈ ಬಗೆಯ ಗ್ಯಾಂಗ್-ರೇಪ್ ನಡೆದಾಗ ಅಲ್ಲಿ ಘಟಿಸಬಹುದಾದ ಸಂಗತಿಗಳನ್ನು ಗಮನಿಸಿದಾಗ ಅದು ನಿಜವೆನಿಸದೇ ಇರದು. ಒಂದು ಬಗೆಯ ಸಿಟ್ಟು, ಆಕ್ರೋಶ, ಬಲಪ್ರಯೋಗ, ದೌರ್ಜನ್ಯ, ದೈಹಿಕ ಹಿಂಸೆಗಳು ಅಲ್ಲಿ ಅನಾವರಣಗೊಂಡಿರುವದಿದೆ.

ಈ ಬಲತ್ಕಾರದ ವಿಷಯವಾಗಿ ಅನೇಕ ಅಧ್ಯಯನಗಳು ಜರುಗಿವೆ ಅವರಲ್ಲಿ ಪ್ರಮುಖವಾಗಿ ಡಬ್ಲ್ಯು.ಬಿ. ಸ್ಯಾಂಡರ್ಸ್, ಡಯಾನಾ ರಸಲ್, ಪೋರ್ಟರ್ ಹಾಗೂ ಇನ್ನಿತರರು ಹೇಳುವಂತೆ ಅತ್ಯಾಚಾರದಲ್ಲಿ ಅದು ಸಾಮೂಹಿಕ ಅತ್ಯಾಚಾರವೇ ಆಗಿರಲಿ ಇಲ್ಲವೇ ವ್ಯಕ್ತಿಗತವಾಗಿರಲಿ ಅದರಲ್ಲಿ ಸಿಲುಕಿರುವವವರು ಒಬ್ಬರಿಗೊಬ್ಬರು ಈ ಮುಂಚೆ ಪರಿಚಯವಾಗಿರುವವರೇ ಹೆಚ್ಚು. ಅಂದರೆ ಅತ್ಯಾಚಾರಗಳು ಹುಡುಗಿಗೆ ಪರಿಚಿತರಾಗಿರುವವರಿಂದಲೇ ನಡೆಯುವ ಸಾಧ್ಯತೆ ಹೆಚ್ಚು ಎನ್ನುವದನ್ನು ಇವರು ಒಪ್ಪಿಕೊಂಡಿರುವರು. ಜೊತೆಗೆ ಸಾಮೂಹಿಕ ಅತ್ಯಾಚಾರದ ಸಂದರ್ಭದಲ್ಲಿ ಆ ಗುಂಪಿನ ಒಬ್ಬ ಹುಡುಗ ಇಲ್ಲವೇ ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ಗೆಳತಿಯೊಬ್ಬಳಿಂದಲೇ ಈ ಬಗೆಯ ಕೃತ್ಯ ಜರುಗುವ ಬಗ್ಗೆಯೂ ಅವರು ಮಾತನಾಡಿರುವದಿದೆ. ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ಹುಡುಗಿಯೊಬ್ಬಳ ಮೇಲೆ ಸೇಡು ತೀರಿಸಿಕೊಳ್ಳುವ ಹಿನ್ನೆಲೆಯಲ್ಲಿ ಈ ಬಗೆಯ ಗ್ಯಾಂಗ್ ರೇಪ್ ಗಳು ಜರುಗುವದು ಹೆಚ್ಚು. hang-ropeದೆಹಲಿಯಲ್ಲಿ ಬಸ್‌ನಲ್ಲಿ ನಡೆದ ಅತ್ಯಾಚಾರದ ನಂತರ ಜನ ಬೀದಿಗಿಳಿದು ಆ ಕಾಮಣ್ಣಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಒತ್ತಾಯಿಸುತ್ತಿದ್ದಾರೆ. ಅತ್ಯಾಚಾರ ಎನ್ನುವದು ಉತ್ಪೀಡನೆಯಾದಾಗ ಈ ಬಗೆಯ ಪ್ರತಿಕ್ರಿಯೆ ಸಾರ್ವಜನಿಕರಿಂದ ಸಾಮಾನ್ಯ.

ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವದೇ ಒಂದು ದೊಡ್ಡ ಚ್ಯಾಲೆಂಜಾಗಿದೆ. ಅವರು ಮನೆಯಲ್ಲಿ ಹೆತ್ತವರ ಮಾತನ್ನು ಕೇಳುವದಿಲ್ಲ, ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರ ಮಾತಿಗೆ ಬೆಲೆಯಿಲ್ಲ, ಸಮಾಜವನ್ನು ಕ್ಯಾರೇ ಮಾಡುವದಿಲ್ಲ. ಮುಖದ ಮೇಲೆ ಮೀಸೆ ಚಿಗಿಯುತ್ತಿದ್ದಂತೆ ಪಟಿಂಗರ ಸಹವಾಸದಲ್ಲಿ ಸಿಲುಕಿ, ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರದಲ್ಲಿ ಕಲಬೆರಕೆ ಮಾಡಿ ಮಸಾಲಾ ಸಿನಿಮೀಯ ರೀತಿಯಲ್ಲಿ ಬದುಕುವ ಇವರ ಜೀವನ ಶೈಲಿಯ ನಡುವೆ ಮುಂದುವರೆದ ಎಲ್ಲ ಪಾಶ್ಚಿಮಾತ್ಯ ರಾಷ್ಟ್ರಗಳ ಡೌಲುಗಳು.. ಇವರ ವೇಷ ಭೂಷಣ.. ಆಹಾರ ಪದ್ಧತಿ.. ಭಾಷೆ.. ಮಹಾನಗರಗಳ ಮಾಲ್ ಸಂಸ್ಕೃತಿ.. ಇವರು ಖರ್ಚು ಮಾಡುವ ರೀತಿ ಎಲ್ಲವೂ ಇವರಿಗೆ ಸಾಥ್ ನೀಡುತ್ತಿವೆ. ನಮ್ಮ ಇಂದಿನ ಪೀಳಿಗೆ ಪಕ್ಕಾ ಆನಿಮೇಟೆಡ್ ಕಾರ್ಟೂನ್‌ಗಳಂತೆ ಬದುಕುವ ಖಯಾಲಿ ಬೆಳೆಸಿಕೊಳ್ಳುತ್ತಿರುವಂತಿದೆ.

ಇಂದು ಇಡೀ ವಿಶ್ವದಾದ್ಯಂತ ಈ ಅತ್ಯಾಚಾರದ ಪಿಡುಗು ಒಂದು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ನಮ್ಮಂತಾ ನಾಡಿನಲ್ಲೂ ಹೀಗೆ ವಾರದಲ್ಲಿ ನಾಕೈದು ಅತ್ಯಾಚಾರಗಳು ಜರುಗುವಂತಾಗಿದೆ ಎಂದಾಗ ಖಂಡಿತವಾಗಿ ಇಡೀ ಸಮಾಜ ವ್ಯಕ್ತಿಯ ಎದುರು ನಿಂತು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು..? ಎಂದು ಕೇಳುತ್ತಿರುವಂತಿದೆ ಎನಿಸುತ್ತದೆ. ಎಲ್ಲ ಬಗೆಯ ಅಹಿತಕರ ಘಟನೆಗಳು ನಡೆದಾಗಲೂ ನಮಗ್ಯಾಕೆ..? ಎನ್ನುವ ಪ್ರಶ್ನೆಯೇ ನಮಗೆ ಇಷ್ಟವಾದರೆ ನಮ್ಮ ಮುಂದಿನ ಪೀಳಿಗೆಯನ್ನು ನಾವು ಪಾಪಕೂಪಕ್ಕೆ ತಳ್ಳಲು ರೆಡಿಯಾಗಿದ್ದೇವೆ ಎಂದರ್ಥ.

ಸೂರಿಂಜೆ ಕುರಿತ ನಿರಶನ ಅಂತ್ಯ, ಗೃಹಮಂತ್ರಿ ಭರವಸೆ… ಪತ್ರಿಕಾ ವರದಿಗಳು

[ಇವು ಇಂದು (7/1/13) ಮತ್ತು ನೆನ್ನೆ (6/1/13)  ವಿವಿಧ ಪತ್ರಿಕೆಗಳಲ್ಲಿ ಬಂದ ಕೆಲವು ವರದಿಗಳು. ನೆನ್ನೆ ರಾತ್ರಿ ನಿರಶನ ಹಿಂತೆಗೆದುಕೊಂಡ ನಂತರ ವಿಷಯದ ಬಗ್ಗೆ ನಾನು ಕ್ಲುಪ್ತವಾಗಿ ಬರೆದ ಪೋಸ್ಟ್ ಇಲ್ಲಿದೆ.  – ರವಿ ಕೃಷ್ಣಾರೆಡ್ಡಿ]

ಉದಯವಾಣಿ :
udayavani-7-1-13

ಪ್ರಜಾವಾಣಿ :
prajavani-7-1-13

ವಿಜಯವಾಣಿ :
vijayavani-7-1-13

ಕನ್ನಡಪ್ರಭ :
kannadaprabha-7-1-13

ವಿಜಯ ಕರ್ನಾಟಕ :
vijaykarnataka-7-1-13

The Hindu :
thehindu-7-1-13

newzfirst : Home-stay attack: Karnataka Home Minister assures withdrawal of cases against journalist


6/1/13 ರಂದು ಪ್ರಕಟವಾದ ಕೆಲವು ವರದಿಗಳು.

ಪ್ರಜಾವಾಣಿ :
prajavani-6-1-13

ಉದಯವಾಣಿ :
udayavani-6-1-13

ಕನ್ನಡಪ್ರಭ :
kannadaprabha-6-1-13

ವಿಜಯ ಕರ್ನಾಟಕ :
vijaykarnataka-6-1-13

The Hindu :
thehindu-6-1-13

Deccan Chronicle :
deccanchronicle-6-1-13