Monthly Archives: January 2013

ದಿಲ್ಲಿ ಅತ್ಯಾಚಾರ : ದಾಖಲಾಗದ ಭಾವಗಳು

-ಎಲ್.ಎಂ. ನಾಗರಾಜು

ದಿಲ್ಲಿ ಅತ್ಯಾಚಾರ ಪ್ರಕರಣದ ಪ್ರತಿಭಟನೆಯ ಪ್ರಖರತೆಯ ಓಘ ವೇಗ ಕಳೆದುಕೊಳ್ಳುತ್ತಿದೆ. ಕಳೆದರ್ಧ ತಿಂಗಳು ದೇಶದ ಮಾಧ್ಯಮಗಳಲ್ಲಿ ಈ ಪ್ರಕರಣದ್ದೇ ಪುಕಾರು. ಈ ‘ಅತ್ಯಾಚಾರ ಸುದ್ದಿ ಸಂತೆ’ಯಲ್ಲಿ ಮೀಡಿಯಾಕ್ಕೆ ಉತ್ತಮ ವ್ಯಾಪಾರವೂ ಆಯಿತು. ಈ ಮಾರಾಟದ ಭರಾಟೆಯಲ್ಲಿ ಚರ್ಚೆಯಾಗಬೇಕಿದ್ದ ಹಲವು ಮುಖ್ಯ ಅಂಶಗಳು ಮುನ್ನಲೆಗೆ ಬರಲೇ ಇಲ್ಲ. ಈ ‘ಗದ್ದಲ ಮತ್ತು ಸಂತೆ’ ಬಗ್ಗೆ ಸ್ವಲ್ಪವೇ ತಕರಾರೆತ್ತಿದರೂ ಸಮೂಹ ಸನ್ನಿಯ ಅಮಲಿನಲ್ಲಿದ್ದ ಜನ ಮುಗಿಬಿದ್ದಾರೆಂಬ ಭಯವೂ ಹಲವರಲ್ಲಿ ಇಲ್ಲದಿರಲಿಲ್ಲವೇನೋ.

ನನಗೆ ತಿಳಿದಂತೆ ಮಾಧ್ಯಮೋದ್ಯಮದ ‘ಮೊಗಸಾಲೆ ಚರ್ಚೆ’ಯಲ್ಲಿ ಅತ್ಯಾಚಾರದ ಕಾರಣ, ಪರಿಹಾರ ಕುರಿತ ಚರ್ಚೆಯೇ ಆಗಲಿಲ್ಲ. rape-illustrationಬದಲಿಗೆ ‘ಆರೋಪಿಗಳನ್ನು ನಿರ್ವೀರ್ಯರನ್ನಾಗಿ ಮಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸಿ, ಸರಕಾರ ವಿಫಲ’ ಇದರ ಸುತ್ತಲೇ ಮಾತುಗಳು ಗಿರಕಿ ಹೊಡೆದವು.

ಭಾರತದಂಥ ದೇಶ ಪುರುಷಪ್ರಧಾನ ಮನಃಸ್ಥಿತಿಯಿಂದ ಕೂಡಿದ್ದು, ‘ನ ಸ್ತ್ರೀ ಸ್ವಾತಂತ್ರಮರ್ಹತಿ’ ಎಂಬ ಮನುಶಾಸ್ತ್ರ ಇಲ್ಲಿ ಶತಮಾನಗಳ ಕಾಲ ಆಳಿದೆ. ಅದು ಗತಕಾಲವಾದರೂ ನಮ್ಮ ಮನಸ್ಥಿತಿ ಆ ಚಿಂತನೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಬದಲಿಗೆ ಅದೇ ಶ್ರೇಷ್ಠವೆಂದು ಪುನಃ ಅದನ್ನು ಕಟ್ಟುವ ಕೆಲಸವೂ ನಡೆಯುತ್ತಿರುವುದು ನಿಗೂಢವೇನಲ್ಲ.

ಅದೆಲ್ಲ ಇರಲಿ, ಈಗ ಅತ್ಯಾಚಾರದಂಥ ಪಾಶವೀ ಕತ್ಯಗಳಿಗೆ ಪ್ರೇರಕವಾಗುತ್ತಿರುವ ಕೆಲ ವಿಷಯಗಳತ್ತ ಚಿತ್ತ ಹರಿಸೋಣ. ಆ ಪೈಕಿ ಮೊದಲನೆಯದು ಜಾತಿ. ಈ ಕಾರಣಕ್ಕೇ ಮೇಲು ಕೀಳು ಎಂಬ ಕಲ್ಪನೆ ಜತೆಗೆ ‘ಕೀಳವರನ್ನು ಅನುಭವಿಸುವುದು ತಪ್ಪಲ್ಲ’ ಎಂಬ ಕಲ್ಪನೆ ದೇಶದ ಲಕ್ಷಾಂತರ ಹೆಣ್ಣುಮಕ್ಕಳ ಮಾನ, ಪ್ರಾಣಹರಣಕ್ಕೆ ಕಾರಣವಾಗಿದೆ. ಈ ಬಗ್ಗೆ ಚರ್ಚೆಯಾಗುವ ಕಾಲ ಬೇಗ ಬರಲಿ.

ಇನ್ನು ಧನ ಮತ್ತು ಅಧಿಕಾರ ಬಲ ಮತ್ತು ಇವುಗಳೆದುರು ನಡೆಯದ ಕಾನೂನಿನ ಆಟಕ್ಕೆ ನಿತ್ಯವೂ ಹಲವು ತಾಯಂದಿರ ಮಾನ, ಪ್ರಾಣ ಹಾಗೂ ಬದುಕಿನ ಘನತೆಯೇ ಪತನವಾಗುತ್ತಿದೆ. ಕಠಿಣ ಕಾನೂನು ಬೇಕು ಎನ್ನುವವರು ಕಾನೂನು ಖರೀದಿ ಬಗ್ಗೆ ಯೋಚಿಸುವಷ್ಟರ ಮಟ್ಟಿಗೆ ಪ್ರಾಜ್ಞರಲ್ಲದಿರಬಹುದು, ಇರಲಿ ಬಿಡಿ.

ಇನ್ನು ಅನುಭೋಗಿ ಸಂಸ್ಕೃತಿಯ ಆಟಾಟೋಪ ಕಣ್ಣಿಗೆ ಕಾಣಿಸದಂಥದ್ದು. ಕೆಲವೊಮ್ಮೆಯಷ್ಟೇ ಬೀದಿಗಿಳಿಯುವ ‘ಥಳುಕು-ಬಳುಕಿನ ಮಹಿಳೆಯರು ಮತ್ತು ಪುರುಷರು’ ಇದೇ ಸಂಸ್ಕೃತಿಯವರು; ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳೂ. ಇದರ ಪರಿಣಾಮ ಕೇವಲ ವಸ್ತುಗಳಷ್ಟೇ ಅಲ್ಲ, ಮನುಷ್ಯ ಮತ್ತು ಮನಸ್ಸುಗಳೂ ಭೋಗವಸ್ತುಗಳಾಗಿಬಿಟ್ಟಿವೆ. ನಮಗೆ ಪ್ರತಿಕ್ಷಣವೂ ಮಾಧ್ಯಮಗಳು ತೋರುವುದು ಹೆಂಗಸರ ಹೊಕ್ಕಳು, ಕೂದಲಿಲ್ಲದ ಕಂಕುಳು, ಹಿಡಿಗೆ ಸಿಗುವ ತೊಡೆಗಳು, ನಿರ್ದಿಷ್ಟ ಅಳತೆಯ ನಡು, sex-sellsಬೊಜ್ಜಿಲ್ಲದ ಹೊಟ್ಟೆ, ಗಂಡಸರ ಸಿಕ್ಸ್ ಪ್ಯಾಕ್, ಅದಕ್ಕೆ ತರಾವರಿ ವಸ್ತ್ರವಿನ್ಯಾಸ, ಇತ್ಯಾದಿ, ಇತ್ಯಾದಿ. ಇದನ್ನು ತೋರಿಸದಿದ್ದರೆ ‘ಕಾಸಾಗದು’ ಎನ್ನುವ ಧೋರಣೆ ಅದರದ್ದು. ಹೀಗೆ ನೋಡುಗರ ಕಣ್ಣಿಗೆ ‘ಮಜಾ’ ಕೊಡುವ ಉದ್ಯಮ ಸೃಷ್ಟಿಯಾಗಿದೆ.

ಹೊಟ್ಟೆ ಮತ್ತು ಅದರ ಕೆಳಗಿನ ಭಾಗದ ಅಂಗಗಳ ಸಂತೃಪ್ತಿಯನ್ನಷ್ಟೇ ಮನುಷ್ಯ ತಲುಪಬೇಕಾದ ಗಮ್ಯ ಎನ್ನಲಾಗುತ್ತಿದೆ. ಇದೇ ಸಂಸ್ಕೃತಿ ದೇಶದ ಮೂಲೆಮೂಲೆಗೆ ನುಗ್ಗುತ್ತಿದೆ. ಮೊಬೈಲು ಕೊಟ್ಟು, ಅದರಲ್ಲಿ ಸೆಕ್ಸ್ ವಿಡಿಯೋ ಕೊಡುತ್ತಿದೆ. ಮಕ್ಕಳು, ಯುವಕರು, ಮುದುಕರು, ಎಲ್ಲ ವಯೋಮಾನದವರೂ ಇದರ ಫಲಾನುಭವಿಗಳಾಗುತ್ತಿದ್ದಾರೆ. ಈ ಹಕೀಕತ್ತು ಯಾರಿಗೂ ಅರ್ಥವಾಗುವಂಥದ್ದಲ್ಲ. (ಈ ಸಂಸ್ಕೃತಿಯ ಸಿನಿಮಾ, ಟಿವಿ ಕಾರ್ಯಕ್ರಮಗಳ ಸಂದೇಶ ಮತ್ತು ರಂಜನೆಯಂತೂ ಹೇಳಲೇ ಬೇಡಿ) ಜನಕ್ಕೆ ಕಾಸೇ ನೀತಿ, ಕಾಸೇ ಧರ್ಮವಾಗಿದೆ. ಉಳ್ಳವರ ತೃಷೆ ತಣಿಸಲು ದಾರಿಗಳಿವೆ. ಇಲ್ಲದವರದ್ದು ಅಡ್ಡದಾರಿ.

ಇನ್ನು ಸೆಕ್ಸ್‌ಗೆ ನಮ್ಮಲ್ಲಿ ಯಾವ ಸ್ಥಾನವಿದೆ ಎಂದು ಮಾತಾಡಿದರೂ ಅದು ಬಹಿಷ್ಕಾರದ ಆದೇಶಕ್ಕೆ ಆಹ್ವಾನವೇ ಸರಿ. ಮನುಷ್ಯ ಸಹಜ ಹಸಿವಾದ ಲೆಂಗಿಕತೆ ಇಲ್ಲಿ ದಕ್ಕಬೇಕಾದರೆ, ಜಾತಿ, ವಯಸ್ಸು, ಧರ್ಮ, ವಿವಾಹ, ಇತ್ಯಾದಿಯಂತಹ ಅನೈಸರ್ಗಿಕ ಹಾದಿಯನ್ನು ಕ್ರಮಿಸಬೇಕು. ಆದರೆ, ದೇಹದ ಸಹಜ ಹಸಿವನ್ನು ಅಸಹಜವಾಗಿಯಾದರೂ ಹೆಚ್ಚಿಸಿ ಅವರನ್ನು ಅತ್ಯಾಚಾರದಂಥ ಕುಕೃತ್ಯಕ್ಕೆ ಪ್ರೇರಣೆ ನೀಡುವಂಥ ಸಂದರ್ಭಗಳೇ ಸೃಷ್ಟಿಯಾಗುತ್ತಿವೆ. ಆದಾಗ್ಯೂ, ‘ಕಾಲ ಕೆಟ್ಟೋಯ್ತು ಕಣ್ರೀ, ಅಮ್ಮನ್ನ ಅಮ್ಮನ್ ತರಾ ನೋಡ್ತಿಲ್ಲ, ತಮ್ಮನ್ನ ತಮ್ಮನ್ ತರಾ ನೋಡಲ್ಲ’ ಎಂದು ಮಮ್ಮಲ ಮರುಗುವ ಮಂದಿ, ಅದರ ಪರಿಹಾರಕ್ಕೆ ಇರುವ ದಾರಿಗಳೇನು ಎಂದು ಯಾರಾದರು ಸೂಚಿಸಿದರೆ ಅಥವ ಕೇಳಿದರೆ ಬಟ್ಟೆ ಬಿಚ್ಚಿ ಜಂಗಿ ಕುಸ್ತಿಗೆ ನಿಂತುಬಿಡುತ್ತಾರೆ. ಮಚ್ಚು, ಕುಡ್ಲು ಕೊಡ್ಲಿಗಳೂ ಕೈಗೆ ಬಂದು ಬಿಡುತ್ತವೆ. ಹಾಗೆಯೇ, ಕೆಲವು ಮೂಢ ನಂಬಿಕೆಗಳಿಗೂ ಕೊರತೆಯಿಲ್ಲ. ‘ವರ್ಜಿನ್ ಸವಿದರೆ, ರೋಗ ದೂರ’, ‘ಇಂಥ ಜಾತಿಯ ಹೆಣ್ಣಿನ ರುಚಿ ಹೀಗೆ,’ ಇತ್ಯಾದಿ, ಇತ್ಯಾದಿ.

ಇನ್ನು ನಗರೀಕರಣ ಎಂಬ ನರಕದಲ್ಲಿ ಧನಿಕರ ಪಾಲಿಗೆ ಬದುಕೆಂದರೆ ಭೋಗ. ಒಬ್ಬ ಬಾಯ್‌ಫ್ರೆಂಡ್ ಇಲ್ಲದಿದ್ದರೆ ಆಕೆ ಹೆಣ್ಣೇ ಅಲ್ಲ. ಒಬ್ಬ ಗರ್ಲ್‌ಫ್ರೆಂಡ್ ಇಲ್ಲದಿದ್ದರೆ ಆತ ಗಂಡೇ ಅಲ್ಲ ಎನ್ನುವ ಭಾವ ಯುವಜನರಲ್ಲಿ. ಜತೆಜತೆಗೆ ಹೈ-ಫೈ ಕಲ್ಚರ್ ಎಂಬ ಪ್ರತ್ಯೇಕ ಜಾತಿ ಬೆಳೆಯುತ್ತಿದೆ. ಓದು, ಹಣ, ಕೆಲಸ, ಅಂತಸ್ತುಗಳ ಆದಾರದ ಮೇಲೆ ಜನ ಎರಡು ಜಾತಿಯಾಗಿ ವಿಭಾಗವಾಗುತ್ತಿದ್ದಾರೆ. ಈ ಪೈಕಿ ಮೇಲು ಜಾತಿಗೆ ಸೇರಲು ಶ್ರಮಿಸುತ್ತಿರುವ ಜನರು ಹತಾಶರಾಗಿ, ಅದು ನಾನಾ ರೂಪದಲ್ಲಿ ವ್ಯಕ್ತವಾಗುತ್ತಿದೆ. ಒಂದು ಜಾತಿಗೆ ಮತ್ತೊಂದು ಜಾತಿ ಬಗ್ಗೆ ಜುಗುಪ್ಸೆ ಬೆಳೆಯುತ್ತಿದೆ. ಅತ್ಯಾಚಾರಿಗಳ ಮನಸ್ಸು ಇಂಥ ಮಾದರಿಯದ್ದೇನೋ ಎನಿಸುತ್ತದೆ. ಇಲ್ಲದಿರೆ, ತೃಷೆ ತೀರಿದ ಬಳಿಕವಾದರೂ ಬಿಟ್ಟು ಕಳುಹಿಸಬಹುದಿತ್ತಲ್ಲ. ಸರಳು ತುರುಕಿ ಕೊಂದರೇಕೆ ಎಂಬ ಪ್ರಶ್ನೆಗೆ, ರಾಜಕೀಯ ಮನಃಶಾಸ್ತ್ರಜ್ಞರೊ, ಸಮಾಜ ಶಾಸ್ತ್ರಜ್ಞರೋ ಉತ್ತರ ಕೊಡಲಿ.

ಇದೇ “ಸಂಸ್ಕೃತಿ”ಯ ಇನ್ನೊಂದು ರೂಪವು ಯುಟಿವಿಗಳಂಥ ಕಾರ್ಯಕ್ರಮಗಳಲ್ಲಿ ಕಾಣಬಹುದು. ಪರಸ್ಪರ ಕಾಸಿದೆ ಎಂದು ಲವ್ ಮಾಡುವ ಹುಡುಗ ಹುಡುಗಿಯರು, ‘ಒಂದು ತಿಂಗಳ ಬಳಿಕ ಸೆಕ್ಸ್‌ನಲ್ಲಿ ಅನ್‌ಫಿಟ್ ಅನಿಸಿದ.. ಸೋ ಬೇರೆಯವನ ಹುಡುಕಾಡಿದೆ’ ಎನ್ನುವ ಕನ್ಯೆಯರು, ಐದು ದಿನ ಕೆಲಸ ಮಾಡುತ್ತಾ ಪ್ರತಿ ವಾರದ ಎರಡು ದಿನ ಹೊಸ ಸಂಗಾತಿಯೊಂದಿಗೆ ಇರವಬಯಸುವ ಯುವಜನರು ನಮ್ಮ ಮಧ್ಯೆಯೇ ಇದ್ದಾರೆ. ಭೋಗದ ಬೆನ್ನುಬಿದ್ದು ತಪ್ತಿ ಕಾಣದೆ ನಿರಂತರ ’ಲವ್, ಸೆಕ್ಸ್, ಔರ್ ಧೋಖಾ’ದಲ್ಲಿ ಮುಳುಗಿರುವ ವಿಷಯವನ್ನೂ ಯಾರೂ ಉದಾಹರಿಸಲಿಲ್ಲ.

ಅತ್ಯಾಚಾರಗಳಂಥ ಸಾಮಾಜಿಕ ಪಿಡುಗುಗಳ ಬಗ್ಗೆ ಬರೆಯುವವರು, ಮಾತಾಡುವವರಿಂದ ಜನ ಸ್ವಲ್ಪವಾದರೂ ನಿಯತ್ತು, ಬದ್ಧತೆಯನ್ನು ನಿರೀಕ್ಷಿಸುತ್ತಾರೆ. ಆ ಜಾಗ್ರತೆ ಇಲ್ಲದೆ ಹೋದರೆ, ‘ಎಲ್ಲ ಗಂಡಸರೂ ದಪ್ಪ ದಪ್ಪ ಜಿರಲೆಗಳು ಕಂಡಂತೆ ಕಾಣುತ್ತಿದ್ದಾರೆ’ ಎಂದು ನಾಟಕೀಯವಾಗಿ ಗೀಚಬೇಕಾಗುತ್ತದೆ. ಅತ್ಯಾಚಾರ ಘಟನೆ ಮರೆತು, ‘ಮರ್ಕಟ ಮನದ ತುರಿಕೆ ತಡೆಯಲಾಗದೆ ಹುಡುಕಿ ಹೊರಡುವ ಪ್ರೀತಿ!’ ಬಗ್ಗೆ ಬರೆದು ಬೆತ್ತಲಾಗುತ್ತೇವೆ. ಅತ್ಯಾಚಾರದಲ್ಲೂ ರಾಜಕೀಯ ಬೆಳೆ ಅರಸಿ ಸಣ್ಣವರಾಗುತ್ತೇವೆ. ಇಲ್ಲವೇ ಯಾವುದನ್ನೂ ಕಟುವಾಗಿ ಮಾತನಾಡದೆ ‘ಎಲ್ಲೆಡೆ ಸಲ್ಲುವ ಬರವಣಿಗೆ ಬರೆದು’ ಆರಾಮವಾಗಿ ಹೊಟ್ಟೆ ಹೊರೆಯುತ್ತೇವೆ. sowjanya-rape-murderನಮ್ಮ ಪಕ್ಕದ ಮನೆಯ ಬಾಲೆ “ಸೌಜನ್ಯ ಅತ್ಯಾಚಾರ ಪ್ರಕರಣ” ಗೊತ್ತಾಗುವುದೇ ಇಲ್ಲ. ಇನ್ನು ಖೈರ್ಲಂಜಿ ಬಗ್ಗೆ ಯಾರಿಗೆ ಗೊತ್ತಾಗುತ್ತೆ? ಈ ಕುರಿತು ನಾವು ಬಳಸುವ ರೂಪಕಗಳೂ ‘ನೋ ಕಾಮೆಂಟ್ಸ್’ ಅನಿಸಬೇಕು. ಎಲ್ಲೆಲ್ಲಿಂದಲೋ ಪೆಕಪೆಕ ನಗು ತರುವಂತಿರಬಾರದು ಎನ್ನುತ್ತಾರೆ, ಏನಂತೀರಿ?

ಕಾಕತಾಳೀಯವೋ ಏನೋ, ದೆಹಲಿ ಘಟನೆ ಬಳಿಕ ಇಂದಿನವರೆಗೂ ಅತ್ಯಾಚಾರ ಪ್ರಕರಣಗಳು ನಿರಂತರ ವರದಿಯಾಗುತ್ತಲೇ ಇವೆ. ರಾಜ್ಯದಲ್ಲಂತೂ ಪ್ರಕರಣ ದಾಖಲಾಗುತ್ತಿರುವ ಪ್ರಮಾಣ ಏರುತ್ತಿದೆ. ವಿದೇಶಗಳಲ್ಲಿ ಸಣ್ಣ ಘಟನೆಗಳಿಗೂ ಜನ ಸರಕಾರಗಳು ವಿವಿಗಳತ್ತ ನೋಡುತ್ತವೆ. ಆದರೆ, ನಮ್ಮ ವಿವಿಗಳ ಸಮಾಜಶಾಸ್ತ್ರ ವಿಭಾಗಗಳು, ಮಹಿಳಾ ವಿವಿಗಳು ಅಸಲಿಯತ್ತೇನು ಎಂಬ ಬಗ್ಗೆ ಜನರ ಮನಹೊಕ್ಕು ಹೊಸ ವಿಷಯಗಳನ್ನು ತರುವ ಕೆಲಸ ಮಾಡುತ್ತಿಲ್ಲ. ಬದಲಿಗೆ ನಮ್ಮಂಥಹ ಅಯೋಗ್ಯರು ಬಾಯಿಗೆ ಬಂದಂತೆ ಹರಟುತ್ತಾ, ಸಮಸ್ಯೆಗಳನ್ನು ಸಮಸ್ಯೆಗಳಾಗಿಯೇ ಉಳಿಸುವ ಅಧ್ವಾನ ಮಾಡುತ್ತೇವೆ.

ಕೊನೆಯದಾಗಿ, ಮಹಿಳೆಯರ ಮೇಲಿನ ಲೈಂಗಿಕ ಹಲ್ಲೆಗಳಷ್ಟೇ ಅತ್ಯಾಚಾರಗಳೇ? ಖಂಡಿತ ಅಲ್ಲ, ವೈಯಕ್ತಿಕ ತೀಟೆಗೆ ಯಾರದ್ದೋ ಕೆಲಸ ಕಳೆಯುವುದು, ಲಾಭಕ್ಕಾಗಿ ಜನರನ್ನು ಬಳಸಿ ಬೀಸಾಡುದುವುದು, ಯಾವಾಗಲೂ ಒಬ್ಬರ ಅಸಹಾಯಕತೆ ಮೇಲೆ ಆಟ ಆಡುವುದು. ಸುಖಾ-ಸುಮ್ಮನೆ ಇನ್ನೊಬ್ಬರ ಮೇಲೆ ಅಪಪ್ರಚಾರ ಮಾಡಿಬಿಡುವುದು, ಅಧಿಕಾರ, ಹಣ, ಜಾತಿ, ಅಂತಸ್ತು, ಬಣ್ಣ ಇವುಗಳ ಹೆಸರಿನಲ್ಲಿ ಅನ್ಯರಿಗೆ ಕೊಡುವ ನೋವು, ಇವೆಲ್ಲ ವೇಳೆಯೂ ಅಗುವ ಪರಿಣಾಮ ಅತ್ಯಾಚಾರದಷ್ಟೇ ಘೋರವಾಗಿರುತ್ತದೆ. “ನೇಣು ಹಾಕಿ, ನಿರ್ವೀರ್ಯರಾಗಿಸಿ, ಆಕೆಯ ಕುಟುಂಬಕ್ಕೆ ನ್ಯಾಯಕೊಡಿ” ಎಂದು ಅರಚುತ್ತಿರುವ ನಮ್ಮೆಲ್ಲರಿಗೂ ಇದು ಅರ್ಥವಾಗಲಿ.

ಮಹೇಶಪ್ಪರಂತಹ “ಕುಲಪತಿ”ಗಳು ತೊಲಗಲಿ…

– ರವಿ ಕೃಷ್ಣಾರೆಡ್ಡಿ

ನಮ್ಮ ಸಾರ್ವಜನಿಕ ಜೀವನದಲ್ಲಿ ಇಂದು ಲಜ್ಜೆ ಮತ್ತು ಸಂಕೋಚಗಳೇ ಇಲ್ಲವಾಗಿವೆ. ವೈಯಕ್ತಿಕವಾಗಿ ಜನ ಲಜ್ಜೆ ಕಳೆದುಕೊಳ್ಳಬಹುದು, ಆದರೆ ಈ ಮಟ್ಟದಲ್ಲಿ ಇಡೀ ಸಮಾಜವೇ ವಿಕೃತ ಸಂವೇದನೆಗಳಿಂದ, ಸಣ್ಣದಷ್ಟೂ ಮಾನ-ಮರ್ಯಾದೆ-ನಾಚಿಕೆಗಳಿಲ್ಲದೇ ವರ್ತಿಸುವುದು ಅಧಮತನ.

ಇತ್ತೀಚೆಗೆ ಕೆಲವು ದಿನಗಳಿಂದ ಕನ್ನಡದ ನ್ಯೂಸ್ ಚಾನಲ್‌ಗಳಲ್ಲಿ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ”ದ ಜಾಹೀರಾತೊಂದು ಬರುತ್ತಿದೆ. ಸುಮಾರು ಒಂದು-ಒಂದೂವರೆ ನಿಮಿಷದ ಸುದೀರ್ಘ ಜಾಹೀರಾತಿದು. ಮೊದಲಿಗೆ, ಈ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ” ಜಾಹೀರಾತು ನೀಡುವ ಅಗತ್ಯ ಏನಿದೆ? ಮತ್ತು, ಇದು ಕೊಡುತ್ತಿರುವ ಜಾಹೀರಾತಂತೂ ಅತ್ಯಂತ ಕೀಳುಮಟ್ಟದ್ದಾಗಿದ್ದು, ಒಬ್ಬ ಅಯೋಗ್ಯ, ಕೀಳು ಅಭಿರುಚಿಯ, ಪುಡಾರಿಯೊಬ್ಬ ಕೊಟ್ಟುಕೊಳ್ಳುವ ಸ್ವಯಂಜಾಹೀರಾತಿನಂತಿದೆ.

ಇಡೀ ಜಾಹೀರಾತು ಈ ವಿಶ್ವವಿದ್ಯಾಲಯದ ಕುಲಪತಿಯ ಹೆಸರನ್ನು ಮತ್ತು ಅವರ ಸಾಧನೆಗಳನ್ನು, ಪವಾಡಗಳನ್ನು, ದೈವಾಂಶಸಂಭೂತತ್ವವನ್ನು ರಾಜ್ಯದ ಜನತೆಗೆ ಸಾರಿ ಹೇಳುವ ಅಗತ್ಯದಿಂದ ಕೂಡಿದೆ. “ಮಹೇಶಪ್ಪ” ಎನ್ನುವ ಈ ವಿಶ್ವವಿದ್ಯಾಲಯದ ಕುಲಪತಿಯ ಚಿತ್ರ ಬಂದಾಕ್ಷಣ ಈ ಜಾಹೀರಾತಿನಲ್ಲಿ ಅವರ ಮುಖದ ಹಿಂದೆ ಪ್ರಭೆ ಕಾಣಿಸುತ್ತದೆ; ದೇವರ ಪೋಟೋಗಳ ಹಿಂದೆ ಕಾಣಿಸುವ ಪ್ರಭೆಯಂತೆ. ಮತ್ತು ಇಡೀ ಜಾಹೀರಾತು ಈ ವ್ಯಕ್ತಿಯ ಏಕಮೇವ ತಿಕ್ಕಲು ಪ್ರಚಾರಕ್ಕಾಗಿ ನಿರ್ಮಾಣಗೊಂಡಂತಿದೆ.

ರಾಜ್ಯದ ಅಕಡೆಮಿಕ್ ಮತ್ತು ಶಿಕ್ಷಣ ವಲಯದಲ್ಲಿ ಮಹೇಶಪ್ಪ ನಿಜಕ್ಕೂ ಖ್ಯಾತಿವಂತರು. ಆದರೆ ಅದು ಪ್ರಖ್ಯಾತಿ ಅಲ್ಲ. maheshappaಅವರು ಕುಲಪತಿಗಳಾಗಿ ಆಯ್ಕೆಯಾದಂದಿನಿಂದ ಅವರ ಸ್ವಯಾಂಕೃತಾಪರಾಧಗಳಿಂದಾಗಿ, ಸುಳ್ಳು ಘೋಷಣೆಗಳಿಂದಾಗಿಯೇ ಹೆಚ್ಚು ಪ್ರಸಿದ್ದರಾದವರು. ಈ ವಿಷಯಕ್ಕೆ ಹೆಚ್ಚಿನ ವಿವರಗಳು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈ ಪುಟದಲ್ಲಿವೆ. ಇಷ್ಟೆಲ್ಲ ಆರೋಪ, ಕುಖ್ಯಾತಿ, ತೆಗಳಿಕೆಗಳು ಮನುಷ್ಯನನ್ನು ಇನ್ನೂ ಭಂಡನನ್ನಾಗಿ, ನಿರ್ಲಜ್ಜನನ್ನಾಗಿ ಮಾಡಿಬಿಡುತ್ತದೆಯೆ?

ಮತ್ತು, ಸಮಾಜವೂ ಇಷ್ಟು ನಿರ್ಲಜ್ಜವೂ, ಸಂವೇದನಾರಹಿತವೂ ಆಗಿಬಿಟ್ಟಿದೆಯೆ? ಬಹುಶಃ ಒಂದು ವಾರದಿಂದ ಬರುತ್ತಿರುವ ಈ ಜಾಹೀರಾತಿನ ಬಗ್ಗೆ ಎಲ್ಲೂ ಸುದ್ದಿಯಿಲ್ಲ. ಒಂದು ವಿಶ್ವವಿದ್ಯಾಲಯ, ಅದೂ ತನ್ನ ಕುಲಪತಿಯ ವೈಯಕ್ತಿಕ ತೆವಲಿಗೋಸ್ಕರ, ಈ ರೀತಿ ಮಾಡುವುದು ಸರಿಯೇ ಎಂದು ಒಂದು ಪತ್ರಿಕೆಯಾಗಲಿ, ರಾಜಕಾರಣಿಯಾಗಲಿ, ಹಾಲಿ ಮತ್ತು ಮಾಜಿ ಅಕಡೆಮೀಷಿಯನ್‌ಗಳಾಗಲಿ ಉಸಿರೆತ್ತಿದ ಸುದ್ದಿಯೇ ಇಲ್ಲ.

ಇಂದು ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆ ಸಂಪೂರ್ಣವಾಗಿ ರಾಜಕೀಯ ನೇಮಕಾತಿಗಳಾಗಿಬಿಟ್ಟಿವೆ. ಯಾವ ಮನುಷ್ಯನಿಗೆ ಜಾತಿ ಮತ್ತು ಹಣದ ಪ್ರಭಾವ ಇದೆಯೋ ಆತ ಮಾತ್ರ ಇಂದು ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಯಾಗಬಲ್ಲ. ಇದು ನಮ್ಮ ವಿಶ್ವವಿದ್ಯಾಲಯಗಳನ್ನು ಕೀಳು ಮಟ್ಟದ, ಭ್ರಷ್ಟಾಚಾರದಿಂದ ಕೂಡಿದ, ಯಾವುದೇ ರೀತಿಯ ಶೈಕ್ಷಣಿಕ-ಜ್ಞಾನದ ಕೊಡುಗೆಗಳಿಲ್ಲದ, ರಾಜಕಾರಣಿಗಳ ಮತ್ತು ಭ್ರಷ್ಟ ಅಧಿಕಾರಿಗಳ ಕುಟಿಲ ಕಾರಸ್ಥಾನಗಳನ್ನಾಗಿ ಪರಿವರ್ತಿಸಿವೆ.

ನಿಮಗೆ ನೆನಪಿರಬಹುದು; ಕಳೆದ ಶುಕ್ರವಾರ ನಮ್ಮಲ್ಲಿ ““ದೊಡ್ಡವರು” ಎಂಬ ಕುಲದೈವ!” ಲೇಖನ ಪ್ರಕಟವಾಗಿತ್ತು. ಅಂದು ರಾಜ್ಯದ ಹಲವು ಪತ್ರಿಕೆಗಳಲ್ಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ”ದ ಪರೀಕ್ಷೆಗಳಲ್ಲಿ ನಡೆಯುವ “ಮುಕ್ತ ನಕಲು” ಬಗ್ಗೆ ಫೋಟೋ ಸಮೇತ ವರದಿಗಳು ಪ್ರಕಟವಾಗಿದ್ದವು. KSOU_OpenCopying_Jan1113ಅದರ ಹಿಂದಿನ ದಿನ ಅದೇ ಪರೀಕ್ಷೆಗಳ ಬಗ್ಗೆ ಕೆಲವು ಟಿವಿ ಮಾಧ್ಯಮಗಳಲ್ಲಿ “ಕುಟುಕು ಕಾರ್ಯಾಚರಣೆ”ಯ ವರದಿಗಳೂ ಪ್ರಸಾರವಾಗಿದ್ದವು. ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಇಂತಹ “ಪ್ರಬುದ್ಧ ಮತ್ತು ಉನ್ನತಮಟ್ಟದ ಶಿಕ್ಷಣ”ಕ್ಕಾಗಿ ಅದರ ಕುಲಪತಿಗಳನ್ನು ಬೆಂಗಳೂರಿಗೇ ಕರೆಸಿಕೊಂಡ ರಾಜ್ಯದ ರಾಜ್ಯಪಾಲ, ಈ ಕುಲಪತಿಗಳನ್ನು ಇನ್ನೂ ದೊಡ್ದದಾದ, ಹಲವು ಪಟ್ಟು ಯೋಜನೆಗಳ, ನೂರಾರು-ಸಾವಿರಾರು ಶಿಕ್ಷಕರ ನೇಮಕಾತಿ ಬೇಡುವ “ಮೈಸೂರು ವಿಶ್ವವಿದ್ಯಾಲಯ”ದ ಕುಲಪತಿಗಳನ್ನಾಗಿ ನೇಮಿಸಿ ಆದೇಶ ಪತ್ರ ಕೊಟ್ಟು ಕಳುಹಿಸಿಕೊಟ್ಟರು. ನಿಮಗೆ ಗೊತ್ತಿರಲಿ, ಇದಕ್ಕಿಂತ ಒಳ್ಳೆಯ ಮುಂಭಡ್ತಿ ಇವತ್ತಿನಂತಹ ನೀಚ ಸಂದರ್ಭದಲ್ಲಿಯೂ ಸಾಧ್ಯವಿಲ್ಲ.

ಇವೆಲ್ಲದಕ್ಕಿಂತ ನಾಚಿಕೆ ಪಡಬಹುದಾದ ಸಂಗತಿ ನಡೆದದ್ದು ಅಂದು ಸಂಜೆ. ಬೆಂಗಳೂರಿನಿಂದ ನೇಮಕಾತಿ ಹಿಡಿದು ವಾಪಸಾದ ನಿಯುಕ್ತ ಕುಲಪತಿಗಳು ಅಂದೇ ಸಂಜೆ ಆತುರಾತುರದಲ್ಲಿ ಅಧಿಕಾರ ವಹಿಸಿಕೊಂಡೂ ಬಿಟ್ಟರು. ಆದು ಘಟಿಸುತ್ತಿದ್ದಂತೆ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಅಲ್ಲಿಯವರೆಗೂ ಘಟಿಸದ್ದೇ ಇದ್ದದ್ದು ಆಗ ನಡೆಯಿತು. ಅದು ಪಟಾಕಿ ಸದ್ದು. ಒಳಗೆ ಕುಲಪತಿಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‌ನ ಹೊರಗೆ ಹೊಸ ಕುಲಪತಿಗಳ ಅಭಿಮಾನಿಗಳು, ಚೇಲಾಗಳು, ಬಹುಶಃ ಅವರಿಂದ ಲಾಭ ಮಾಡಿಕೊಂಡ ಅಥವ ಲಾಭ ಮಾಡಿಕೊಳ್ಳಲಿರುವ ಭ್ರಷ್ಟರು, ಚುನಾವಣೆಯೊಂದರಲ್ಲಿ ಗೆದ್ದ ಪುಡಾರಿಯ ಹಿಂಬಾಲಕರು ಮಾಡುವಂತೆ ಪಟಾಕಿ ಸಿಡಿಸಿ ಸಂಭ್ರಮೋತ್ಸವ ಆಚರಿಸಿದರು.

ಈ ವಿಷಯ ಮಾರನೆ ದಿನದ ಪತ್ರಿಕೆಗಳಲ್ಲಿ ಬಂತು. ಅಂದು ಏನಾದರೂ ಮೈಸೂರಿನ ಬರಹಗಾರರ, ಅಧ್ಯಾಪಕರ, ಪ್ರಜ್ಞಾವಂತರ ಮನಸ್ಸು ಅಸಹನೆ ಮತ್ತು ಸಂಕೋಚದಿಂದ ಮಿಡುಕಿಲ್ಲ ಎಂದಾದರೆ ಮೈಸೂರಿನ ಸಾಕ್ಷಿಪ್ರಜ್ಞೆ ಸತ್ತಿದೆ ಎಂದರ್ಥ. ಮತ್ತು, ರಾಜ್ಯದ್ದೂ.

ಮೊದಲೇ ಪ್ರಸ್ತಾಪಿಸಿದ ಹಾಗೆ, ನಮ್ಮ ರಾಜ್ಯದ ಯಾವ ವಿಶ್ವವಿದ್ಯಾಲಯದ ಕುಲಪತಿಗಳೂ ಇಂದು ಹಣ ಅಥವ ಜಾತಿಯ ಪ್ರಭಾವ ಇಲ್ಲದೆ ಆಯ್ಕೆಯಾಗುತ್ತಿಲ್ಲ. ಮತ್ತು ಅದೇ ಆ ಹುದ್ದೆಗೆ ಬೇಕಾದ ಮಾನದಂಡ ಎಂದು ನಮ್ಮ ನೀಚ ಆಡಳಿತಗಾರರು ಕಾನೂನು ಬದಲಾಯಿಸಿಬಿಟ್ಟಿದ್ದಾರೆ. ಹಿರಿಯ ಅಧ್ಯಾಪಕನೊಬ್ಬ ಸರ್ಕಾರಿ ಅಧ್ಯಾಪಕನ ಕೆಲಸ ಕೊಡಿಸುವುದಾಗಿ ಒಬ್ಬನ ಹತ್ತಿರ ಕಮಿಟ್ ಆಗಿಬಿಟ್ಟಿದ್ದಾನೆ. ಅಭ್ಯರ್ಥಿ ತನ್ನ ಸಂದರ್ಶನಕ್ಕೆ ತನ್ನ ಪ್ರಕಟಿತ ಸಂಶೋಧನೆಗಳನ್ನೊ, ಶೈಕ್ಷಣಿಕ ವರದಿಗಳನ್ನೋ ಒಯ್ಯಬೇಕಾಗಿರುತ್ತದೆ. ಆತನ ಬಳಿ ಅಂತಹವು ಯಾವುದೂ ಇಲ್ಲ. ಆದರೆ ಆತ ಪತ್ರಿಕೆಯೊಂದರ ವರದಿಗಾರ. ತನ್ನ ಪತ್ರಿಕಾ ವರದಿಗಳನ್ನೇ/ಸುದ್ದಿಗಳನ್ನೇ ಒಯ್ದಿರುತ್ತಾನೆ. ಈ ಹಿರಿಯ ಅಧ್ಯಾಪಕ ಹೇಗಾದರೂ ಮಾಡಿ ಈತನಿಗೆ ಕೆಲಸ ಕೊಡಿಸಬೇಕು. ಈ ಪತ್ರಿಕಾ ವರದಿಗಳನ್ನೇ ಶೈಕ್ಷಣಿಕ ವರದಿಗಳೆಂದು ಪರಿಗಣಿಸಿ ಆತನನ್ನು ಆಯ್ಕೆ ಮಾಡಿ ಎಂದು ಆಯ್ಕೆ ಸಮಿತಿಯ ಮೇಲೆ ಒತ್ತಡ ತರುತ್ತಾನೆ. ಇಂದು ಅದೇ ಹಿರಿಯ ಅಧ್ಯಾಪಕ ನೂರಾರು ಕೋಟಿ ರೂಗಳ ಕೆಲಸಗಳು ನಡೆಯುತ್ತಿರುವ, ನೂರಾರು ಸಿಬ್ಬಂದಿಯನ್ನು, ಅಧ್ಯಾಪಕರನ್ನು, ನೇಮಿಸಿಕೊಳ್ಳುತ್ತಿರುವ ವಿಶ್ವವಿದ್ಯಾಲಯದ ಕುಲಪತಿ. ಹಾಗೆಂದು ನೀವು ಆ ವ್ಯಕ್ತಿ ರಾಜ್ಯದ ಬಲಿಷ್ಟ ಜಾತಿಗೆ ಸೇರಿದವರು ಎಂದುಕೊಳ್ಳಬೇಡಿ. ಮೀಸಲಾತಿ ಸೌಲಭ್ಯ ದೊರೆಯದ ಸಮುದಾಯದಿಂದ ಬಂದವರವರು.

ಮತ್ತು ಈಗಿನ ಸರ್ಕಾರವಂತೂ ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಹೆಚ್ಚು ಲಂಪಟರಿಂದ ಕೂಡಿದೆ. ನೇಮಕಾತಿಗಳಲ್ಲಿ, ಹಂಗಾಮಿ ನೌಕರರನ್ನು ಕಾಯಂ ಗೊಳಿಸುವುದರಲ್ಲಿ, ವರ್ಗಾವಣೆಗಳಲ್ಲಿ, ಆಡಳಿತದ ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಹಪ್ತಾ ವಸೂಲು ಮಾಡಲು ಟೇಬಲ್ ಹಾಕಿಕೊಂಡು ಕುಳಿತಿದೆ. (ಮಂತ್ರಿಗಳು ಕೇಳುವ “ಮಾಮೂಲಿ” ಕೊಡಲಾಗದೆ ಸಭ್ಯರೊಬ್ಬರು ತಮ್ಮ ಕುಲಪತಿ ಅಧಿಕಾರಾವಧಿ ಇನ್ನೂ ಇರುವಾಗಲೇ ರಾಜೀನಾಮೆ ಕೊಟ್ಟು ಹೋದ ಉದಾಹರಣೆಯೂ ಒಂದಿದೆಯಂತೆ.)  ಕೆಲವರು ಹೇಳುವ ಪ್ರಕಾರ ರಾಜ್ಯದ ಅತ್ಯುನ್ನತ ಸಂವಿಧಾನಿಕ ಸ್ಥಾನದಲ್ಲಿ ಇರುವವರೂ ಹೀಗೆ ಬಟ್ಟೆ ಹರಡಿಕೊಂಡು ಕುಳಿತಿದ್ದಾರೆ. ಅದು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಮತ್ತು ಮುಂದುವರಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಮತ್ತು ಎಲ್ಲಾ ಭ್ರಷ್ಟರೂ ಒಂದಾಗಿ ತಮಗೆ ಅನುಕೂಲವಾಗುವ ಹಾಗೆ ಆದೇಶಗಳನ್ನು ಹೊರಡಿಸುವ, ಸುಗ್ರೀವಾಜ್ಞೆಗಳನ್ನು ತರುವ ಆತುರವನ್ನೂ ತೋರಿಸುತ್ತಿದ್ದಾರೆ. ರಾಜ್ಯದ ಹಲವು ಮಾನ್ಯ, ಘನತೆವೆತ್ತ ಕುಲಪತಿಗಳಿಗೆ ಅನುಕೂಲ ಮಾಡಿಕೊಡುವುದು ಇಂತಹ ಸುಗ್ರೀವಾಜ್ಞೆಯೊಂದರ ಹಿಂದಿರುವ ಹುನ್ನಾರ ಎಂದು ಪ್ರಜಾವಾಣಿಯ ಇಂದಿನ ಈ ವರದಿ ಹೇಳುತ್ತದೆ.

ನಮ್ಮಲ್ಲಿಯ ನೈತಿಕ ಅಧಃಪತನಕ್ಕೆ ಜಾತಿ, ಲಿಂಗ, ವಯಸ್ಸು, ಶಿಕ್ಷಣ, ಪ್ರದೇಶವಾರು ಭೇದಗಳಿಲ್ಲ.

ಹೀಗಿರುವಾಗ, ಇವುಗಳಿಗೆ ತಡೆ ಒಡ್ಡುವುದು ಹೇಗೆ? ಸುಮ್ಮನಿರುವುದಾದರೂ ಹೇಗೆ?

(ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್, ದಿ ಹಿಂದು.)

ಆ ದ್ಯಾವರು ತಂದ ಆಸ್ತಿ

– ಬಿ.ಶ್ರೀಪಾದ ಭಟ್

“ಬೊಮ್ಮಿರೆಡ್ಡಿ ನಾಗಿರೆಡ್ಡಿ” ಎನ್ನುವ ಹೆಸರಿನ ವಿವರುಗಳು ಸಿನಿಮಾದ ಹುಚ್ಚು ಹಿಡಿಸಿಕೊಂಡವರ ಹೊರತಾಗಿ ಇತರರಿಗೆ ಬೇಗನೆ ಫ್ಲಾಶ್ ಆಗುವ ಸಾಧ್ಯತೆಗಳಿಲ್ಲ. ಜೊತೆಗೆ “ಆಲೂರು ಚಕ್ರಪಾಣಿ” ಮತ್ತು “ಕೆ.ವಿ.ರೆಡ್ಡಿ” ಹೆಸರುಗಳನ್ನು ತೇಲಿ ಬಿಟ್ಟಾಗಲೂ ಅಷ್ಟೇ. ಆದರೆ ಈ ಮೂವರು ಸ್ನೇಹಿತರು ಮತ್ತು ಪಾಲುದಾರರು ಒಟ್ಟಾಗಿ ಜೊತೆಗೂಡಿ 40 ರ ದಶಕದಲ್ಲಿ ಆಗಿನ ಮದ್ರಾಸ್‌ನಲ್ಲಿ “ವಿಜಯಾ ವಾಹಿನಿ” ಸ್ಟುಡಿಯೋ ಸ್ಥಾಪಿಸಿದರು ಎಂದಾಕ್ಷಣ ಅನೇಕರ ಕಣ್ಣು ಮಿನುಗುವ ಸಾಧ್ಯತೆಗಳು ಇವೆ.

ಪರಿಚಯಾತ್ಮಕವಾಗಿ ಒಂದೇ ವಾಕ್ಯದಲ್ಲಿ ಹೇಳಿ ಎಂದಾಗ “ವಿಜಯಾ ವಾಹಿನಿ” ಸ್ಟುಡಿಯೋದ ಮೂಲಕ ಈ ಮೂವರು ದಿಗ್ಗಜರು ತೆಲುಗು ಭಾಷೆಯಲ್ಲಿ 50 ಮತ್ತು 60 ರ ದಶಕದಲ್ಲಿ ಕೆಲವು ಅತ್ಯುತ್ತಮ ಚಿತ್ರಗಳನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದರು. ಆ ಮೂಲಕ ತೆಲಗು ಚಿತ್ರರಂಗವನ್ನು ಕಟ್ಟಿ ಬೆಳೆಸಿದರು. ಆ ಕಾಲಘಟ್ಟದಲ್ಲಿ ಇವರಿಲ್ಲದಿದ್ದರೆ ಇಂದು ತೆಲುಗು ಚಿತ್ರರಂಗವನ್ನು ಈ ಮಟ್ಟದಲ್ಲಿ ನೆನಸಿಕೊಳ್ಳಲೂ ಸಾಧ್ಯವಿಲ್ಲ. ಇವರ ಚಿತ್ರಗಳು ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ಎಸ್.ವಿ.ರಂಗರಾವ್ ಎನ್ನುವ ತ್ರಿಮೂರ್ತಿ ನಟರ, ಸಾವಿತ್ರಿ, ಜಮುನ ಎನ್ನುವ ನಟಿಯರ ಸಿನಿಮಾ ಭವಿಷ್ಯವನ್ನೇ ರೂಪಿಸಿತು. 1947 ರಲ್ಲಿ “ಚಂದಮಾಮ” ಮಾಸ ಪತ್ರಿಕೆಯನ್ನು ಶುರುಮಾಡಿ ಅದನ್ನು ದಕ್ಷಿಣ ಭಾರತದ ಜನಪ್ರಿಯ ಮಕ್ಕಳ ಮಾಸ ಪತ್ರಿಕೆಯನ್ನಾಗಿ ರೂಪಿಸಿದರು ಎಂದೆಲ್ಲಾ ವಿವರಿಸುವಾಗ ನಮ್ಮ ಎದೆಯೂ ತುಂಬಿ ಬರುತ್ತದೆ ಹಾಗೂ ಓದುಗರ ಮನಸ್ಸೂ ಸಹ.

ಇನ್ನು ವಿಜಯಾ ವಾಹಿನಿ ಸ್ಟುಡಿಯೋ ಬ್ಯಾನರ್‌ನ ಮೂಲಕ ಇವರು ಬರೆದು, ನಿರ್ಮಿಸಿ, ನಿರ್ದೇಶಿಸಿದ ಚಿತ್ರಗಳನ್ನು ಹೆಸರಿಸಬೇಕೆಂದರೆ, ಓಹ್!! ರೋಮಾಂಚನವಾಗುತ್ತದೆ. “ಯೋಗಿ ವೇಮನ್ನ”ದ ಮೂಲಕ ಪ್ರಾರಂಭಗೊಂಡ ಚಿತ್ರಗಳ ಸರಣಿ ಕೆಲವು ಹೀಗಿವೆ: Mayabazarಪಾತಾಳ ಭೈರವಿ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್), ಪೆಳ್ಳಿ ಚೇಸಿ ಚೂಡು(ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಸಾವಿತ್ರಿ, ಜಮುನ, ಜಗ್ಗಯ್ಯ), ಚಂದ್ರಹಾರಂ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಸಾವಿತ್ರಿ), ಮಿಸ್ಸಮ್ಮ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ, ಜಮುನ), ಗುಣಸುಂದರಿ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್), ಮಾಯಾ ಬಜಾರ್ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ), ಜಗದೇಕ ವೀರುನಿ ಕಥ (ಎನ್.ಟಿ.ರಾಮರಾವ್), ಗುಂಡಮ್ಮ ಕಥ (ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ, ಜಮುನ), ಕನ್ನಡದಲ್ಲಿ Dr-Rajkumar-in-Satya-Harischandra- ಸತ್ಯ ಹರಿಶ್ಚಂದ್ರ ( ರಾಜ್‌ಕುಮಾರ್, ಫಂಡರೀಬಾಯಿ), ಹಿಂದಿಯಲ್ಲಿ ರಾಮ್ ಔರ್ ಶ್ಯಾಮ್ (ದಿಲೀಪ್ ಕುಮಾರ್, ವಹೀದ ರೆಹಮಾನ್)…

ಮೇಲಿನವು ಕೆಲವು ಉದಾಹರಣೆಗಳು ಮಾತ್ರ. ಇವಲ್ಲದೇ ಇನ್ನೂ ಇಪ್ಪತ್ತಕ್ಕೂ ಮೇಲ್ಪಟ್ಟು ಚಿತ್ರಗಳನ್ನು ನಿರ್ಮಿಸಿ, ನಿದೇಶಿಸಿದ್ದಾರೆ. ಮೇಲಿನ ಎಲ್ಲಾ ಚಿತ್ರಗಳು ಮನರಂಜನಾತ್ಮಕವಾದ, ಮುಗ್ಧತೆಯನ್ನು ಜೀವಾಳವಾಗಿರಿಸಿಕೊಂಡ, ಬಲು ಎತ್ತರದ ಸ್ತರದಲ್ಲಿ ಫ್ರೊಫೆಶನಲ್ ಅನ್ನು ಮೈಗೂಡಿಸಿಕೊಂಡ, ಕಮರ್ಶಿಯಲ್ ಆಗಿ ಸೂಪರ್ ಹಿಟ್ ಮತ್ತು ಟ್ರೆಂಡ್ ಸೆಟ್ಟರ್ ಆದ, ಸಾಮಾಜಿಕ,ಪೌರಾಣಿಕ, ಜಾನಪದ ಸಿನಿಮಾಗಳೆಂದೇ ಪ್ರಖ್ಯಾತಗೊಂಡಿವೆ. ಇಲ್ಲಿ ನಾಗಿರೆಡ್ಡಿ ಚಿತ್ರಗಳನ್ನು ನಿರ್ಮಿಸುತ್ತಿದ್ದರೆ, ಆಲೂರು ಚಕ್ರಪಾಣಿ ಕಥೆ, ಚಿತ್ರಕಥೆ ಬರೆಯುತ್ತಿದ್ದರು, ಕೆ.ವಿ.ರೆಡ್ಡಿ ನಿರ್ದೇಶಕರು. ಇವರಲ್ಲದೆ ಎಲ್.ವಿ.ಪ್ರಸಾದ್ ಮತ್ತು ಕಮಲಾಕರ ಕಮಲೇಶ್ವರ್ ರಾವ್ ಸಹ ಮೇಲಿನ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಮತ್ತೊಂದು ವಿಶೇಷವೆಂದರೆ 50 ರ ಮತ್ತು 60 ರ ದಶಕದಲ್ಲಿ ಎನ್.ಟಿ.ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರರಾವ್ ತೆಲುಗು ಸಿನಿಮಾರಂಗದ ಸೂಪರ್ ಸ್ಟಾರ್ ನಟರಾಗಿದ್ದರೂ ಸಹ ಇವರಿಬ್ಬರೂ ಯಾವುದೇ ಬಿಗುಮಾನ, ಅಹಂಕಾರ, ದರ್ಪವಿಲ್ಲದೆ, ತನ್ನ ಪಾತ್ರವೇ ಮೇಲುಗೈ ಸಾಧಿಸಬೇಕೆನ್ನುವ ಹಠವಿಲ್ಲದೆ ವಿಜಯಾ ವಾಹಿನಿ ಸ್ಟುಡಿಯೋದ ಬ್ಯಾನರ್ ಅಡಿಯಲ್ಲಿ ಮೂರು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇಲ್ಲಿನ ಉದಾಹರಣೆಯನ್ನು ಹೊರತುಪಡಿಸಿ ಇಂಡಿಯಾದ ಬೇರಾವ ಭಾಷೆಯಲ್ಲಿಯೂ ಸೂಪರ್ ಸ್ಟಾರ್‌ಗಳು ಒಂದಕ್ಕಿಂತಲೂ ಮೇಲ್ಪಟ್ಟು ಒಟ್ಟಾಗಿ ನಟಿಸಿದ್ದಕ್ಕೆ ಉದಾಹರಣೆಗಳಿಲ್ಲ. ಇದು ಇವರಿಬ್ಬರ ಸರಳತೆ ಮತ್ತು ಬದ್ಧತೆಯನ್ನು ತೋರುವುದರ ಜೊತೆಗೆ ನಾಗಿರೆಡ್ಡಿ, ಕೆ.ವಿ.ರೆಡ್ಡಿಯವರ ಸಾಮರ್ಥ್ಯವನ್ನು ನಮಗೆ ಪರಿಚಯಿಸಿಕೊಡುತ್ತದೆ. ಈ ಮಹಾನುಭಾವರು ಅಂದು ಬುನಾದಿ ರೂಪದಲ್ಲಿ ಕಟ್ಟಿದ ಅಪಾರ ವಿನಯವಂತಿಕೆಯ ಈ ಫ್ರೊಫೆಶನಲ್ ಶೈಲಿ ಮತ್ತು ನಡತೆ ಇಂದಿಗೂ ತೆಲುಗು ಚಿತ್ರರಂಗವನ್ನು ಪೊರೆಯುತ್ತಿದೆ. ಇಂದಿಗೂ ಯಾವುದೇ ನಖರಾಗಳಿಲ್ಲದ, ರಾಜಕೀಯವಿಲ್ಲದ, ಒಳ ಪಿತೂರಿಗಳಿಲ್ಲದ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ ಮಾತ್ರ. ಇದರ ಸಂಪೂರ್ಣ ಶ್ರೇಯಸ್ಸು ಮೇಲಿನ ದೊಡ್ಡವರಿಗೆ ಸಲ್ಲುತ್ತದೆ.

ವಿಜಯಾ ವಾಹಿನಿಯ ತಂಡ ತಮ್ಮ ಸರಳ ಮತ್ತು ನೇರ ಚಿತ್ರಗಳ ಮೂಲಕ ಕಟ್ಟಿಕೊಟ್ಟ ಅಪಾರವಾದ, ಉಕ್ಕುವ ಜೀವನಪ್ರೇಮ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಯಾವುದನ್ನೂ ಸಂಕೀರ್ಣಗೊಳಿಸದೆ ನಟ, ನಟಿಯರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಈ ದೊಡ್ಡವರು ಸಿನಿಮಾ ಭಾಷೆಗೆ ಬರೆದ ನುಡಿಕಟ್ಟುಗಳು ಇಂದಿಗೂ ನವನವೀನ ಮತ್ತು ಅನನ್ಯವಾದದ್ದು. ಪಾತಾಳ ಭೈರವಿ, ಮಾಯಾ ಬಜಾರ್‍, ಸತ್ಯ ಹರಿಶ್ಚಂದ್ರ ಚಿತ್ರಗಳ ಜನಪದ ಲೋಕ ಒಂದಲ್ಲ, ಎರಡಲ್ಲ, ಐದು ತಲೆಮಾರುಗಳನ್ನು ರೂಪಿಸಿದೆ. ಮಿಸ್ಸಮ್ಮ, ಗುಂಡಮ್ಮ ಕಥ ಚಿತ್ರಗಳ ಅಪ್ಪಟ ಸಾಮಾಜಿಕ ಲೋಕ ಲಕ್ಷಾಂತರ ಸದಭಿರುಚಿಯ ಪ್ರೇಕ್ಷಕರನ್ನು ಸೃಷ್ಟಿಸಿದವು. ಇವರಿಗೆ ಸಿನಿಮಾ ನೋಡುವ ಬಗೆಯನ್ನೇ ಪರಿಚಯಿಸಿದವು.

ಮತ್ತೆ ಇವರೆಲ್ಲ ಕೀರ್ತಿಶನಿಯನ್ನು ಸಂಪೂರ್ಣವಾಗಿ ದೂರವಿಟ್ಟರು. ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರೂ ಕ್ಯಾಕಸ್ ಅನ್ನು ಬೆಳೆಸಲೇ ಇಲ್ಲ. ಈ ದೊಡ್ಡವರು ಕ್ರಿಯಾಶೀಲವಾಗಿ ಬದುಕಿ, ಆ ಕ್ರಿಯಾಶೀಲತೆಯನ್ನೇ ನೆಚ್ಚಿ ಪ್ರಾಮಾಣಿಕತೆ ಮತ್ತು ದಿಟ್ಟತನವನ್ನು ತೆಲುಗು ಚಿತ್ರರಂಗಕ್ಕೆ ತಂದೊಕೊಟ್ಟಿದ್ದು ಕಡಿಮೆ ಸಾಧನೆಯಂತೂ ಅಲ್ಲವೇ ಅಲ್ಲ.

ಇವರು “ಚಂದಮಾಮ” ಮಾಸ ಪತ್ರಿಕೆಗೆ ಜನ್ಮ ನೀಡಿ, ಮುತುವರ್ಜಿಯಿಂದ ಬೆಳೆಸಿದ್ದನ್ನು ಕುರಿತು ಹೊಸದಾಗಿ ಹೇಳುವುದೇನಿದೆ? ಇದರ ಕುರಿತಾಗಿ ಬರೆದಷ್ಟು ನಮ್ನ ಅಕ್ಷರದ ಅಹಂಕಾರವಾಗುತ್ತದೆ. ಅಷ್ಟೇ.

ಇದೆಲ್ಲ ನೆನಪಾದದ್ದು 2012 ರ ವರ್ಷ ನಾಗಿರೆಡ್ಡಿ ಮತ್ತು ಕೆ.ವಿ.ರೆಡ್ಡಿಯವರ ಜನ್ಮ ಶತಮಾನೋತ್ಸವಗಳ ವರ್ಷವಾಗಿತ್ತೆಂದು ನೆನಪಾದಾಗ. ಕೆ.ವಿ.ರೆಡ್ಡಿ ಜುಲೈ 1912 ರಲ್ಲಿ ಹುಟ್ಟಿದರೆ, ನಾಗಿರೆಡ್ಡಿ ಡಿಸೆಂಬರ್ 1912 ರಲ್ಲಿ ಜನಿಸಿದರು. ತೆಲುಗು ಚಿತ್ರರಂಗ ಮತ್ತು ಅಲ್ಲಿನ ಪ್ರೇಕ್ಷಕರು ಇವರನ್ನು ನೆನೆಸಿಕೊಂಡಿತೇ? ಗೊತ್ತಿಲ್ಲ. ಮಗಧೀರರ, ಫ್ಯಾಕ್ಷನಿಷ್ಟರ ಈ ಕಾಲಘಟ್ಟದಲ್ಲಿ ನಳನಳಿಸುವ, ಅಪಾರ ಕಾಂತಿಯ ಈ ಗುಲಾಬಿ ಹೂಗಳು ನಲುಗಿ ಹೋಗಿರಲಿಕ್ಕೂ ಸಾಕು. ಹಾಗಿದ್ದರೆ ಬಲು ಬೇಸರವಾಗುತ್ತದೆ. ಮನಸ್ಸಿಗೆ ವ್ಯಥೆಯಾಗುತ್ತದೆ.

ಸಿನಿಕರಿಗೆ ಸಂಜೀವಿನಿಯಂಥಾ ಕೃತಿ : ಏನೇ ಆಗಲಿ…

– ಡಾ.ಎಸ್.ಬಿ.ಜೋಗುರ

ಏನೂ ಕಳೆದುಕೊಳ್ಳದಿರುವಾಗಲೂ ಎಲ್ಲವೂ ಕಳೆದುಕೊಂಡವರಂತೆ ತಡಕಾಡುವ, ಹುಡುಕಾಡುವ ಸಂದರ್ಭದಲ್ಲಿ ರವಿ ಕೃಷ್ಣಾರೆಡ್ದಿಯವರು ಕೆಂಟ್ ಎಂ. ಕೀತ್ ಎನ್ನುವ ಲೇಖಕರ ಕೃತಿಯನ್ನು “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ” ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಓದುಗರ ಕೈಗಿಟ್ಟಿರುವದು ಒಂದು ಸದ್ಯದ ಅವಶ್ಯಕತೆಯೇ ಹೌದು. ಅದರಲ್ಲೂ ಸದಾ ಸಿನಿಕರಾಗಿಯೇ ಮಾತನಾಡುವವರಿಗೆ ವ್ಯವಹರಿಸುವವರಿಗೆ ಈ ಕೃತಿ ಒಂದು ಹೊತ್ತಿಗೊದಗಿದ ಸಂಜೀವಿನಿಯಂತೆ ನೆರವಾಗಲಿದೆ. ಹಿಂದೆ ಗುರು ಮುಂದೆ ಗುರಿ ಇಲ್ಲದೇ ತಾವು ನಡೆದದ್ದೇ ದಾರಿ ಎಂದು ಹೆಜ್ಜೆಯೂರುತ್ತಿರುವ ಯುವಕರ ಪಾಲಿಗೆ ಒಂದು ಉತ್ತಮ ಮೆನಿಫ಼ೆಸ್ಟೊ ಥರಾ ಈ ಕೃತಿ ಇದೆ.

ಇಲ್ಲಿರುವ ಪ್ರತಿಯೊಂದು ಕಟ್ಟಳೆಯೂ ತಾಯಿ ತೊಡೆಯ ಮೇಲೆ ಮಲಗಿಸಿಕೊಂಡು ಹೆಳುವ ಕಿವಿ ಮಾತಿನಂತಿವೆ. anyway-partial-coverಅದರಲ್ಲೂ ಆರನೆಯ ಕಟ್ಟಳೆಯಂತೂ ಹುಡುಗಿಯೊಬ್ಬಳು ಮದುವೆಯಾಗಿ ಗಂಡನಮನೆಗೆ ತೆರಳುವಾಗ ತಾಯಿಯಾದವಳು ಆಪ್ತವಾಗಿ ಹೇಳುವಂತಿದೆ. ದೊಡ್ದ ಆಲೋಚನೆಗಳು, ಕನಸುಗಳು ನಮ್ಮನ್ನು ಹೇಗೆ ರೂಪಿಸಬಲ್ಲವು ಎನ್ನುವದನ್ನು ಕೆಲವು ಮಹಾನ್ ಸಾಧಕರ ಕನಸುಗಳು, ತಲುಪಿರುವ ಗುರಿಗಳನ್ನು ಚಿತ್ರರೂಪಕ ಶಕ್ತಿಯ ಹಾಗೆ ಮನಮುಟ್ಟುವಂತೆ ರೆಡ್ದಿಯವರು ಅನುವಾದಿಸಿದ್ದಾರೆ. ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಜನರು ಮರೆಯುತ್ತಾರೆ ಎಂದು ಯೋಚಿಸಿ ಮಾಡದಿರುವದು ಸರಿಯಲ್ಲ, ನಮ್ಮ ಮನಸಿನ ಆನಂದಕ್ಕಾಗಿಯಾದರೂ ಆ ಕೆಲಸ ನಿರಂತರವಾಗಿರಲಿ ಎನ್ನುವ ವಿಚಾರದ ಶಕ್ತಿ ಮತ್ತು ಸತ್ವದಂತೆಯೇ, ಯಾರೋ ಒಬ್ಬರು ನಮ್ಮನ್ನು ಹೊಗಳಲಿ ಎನ್ನುವ ಕಾರಣಕ್ಕಾಗಿಯೂ ನಾವು ಕೆಲಸ ಮಾಡಬಾರದು, ಹಾಗಾದಾಗ ನಾವು ಹೊಗಳುವವರ ಮರ್ಜಿ ಕಾಯಲು ಕೆಲಸ ಮಾಡಬೇಕಾಗುತ್ತದೆ ಎನ್ನುವ ಸತ್ಯವನ್ನು ಕೂಡಾ ತುಂಬಾ ಸೊಗಸಾಗಿ ಸಾದರಪಡಿಸಲಾಗಿದೆ.

ನನ್ನ ಪ್ರಕಾರ ಈ ಪುಟ್ಟ ಹೊತ್ತಿಗೆ ಸದ್ಯದ ಸಂದರ್ಭದ ಮಾನಸಿಕ ಜಂಜಾಟಗಳಿಗೆ ಮತ್ತು ಬದುಕಿನ ಬಿಕ್ಕಟ್ಟುಗಳಿಗೆ ಪರಿಹಾರದ ರೂಪದಲ್ಲಿ ಮೂಡಿಬಂದಿದೆ. ಮೂಲ ಲೇಖಕ ಕೇಂಟ್ ಎಂ. ಕೀತ್‌ರ ವಿಚಾರಧಾರೆಗಳಿಗೆ ಧಕ್ಕೆ ಬಾರದ ಹಾಗೆ, ನಮ್ಮ ನೆಲದ ಸಂಸ್ಕೃತಿಯ ಭಾಷೆಗೆ ಸಮ್ಮತಿಯಾಗಬಹುದಾದ ರೀತಿಯಲ್ಲಿ, ಓದುಗನಿಗೆ ಗೊಂದಲವಾಗದ ಹಾಗೆ ರೆಡ್ದಿಯವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಇದೊಂದು ಒಳ್ಳೆಯ ಕೃತಿಯೂ ಹೌದು. ಅನುವಾದಕನ ಒಳ್ಳೆಯ ಕೆಲಸವೂ ಹೌದು.


ಕೃತಿ : “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ”
ಆಂಗ್ಲ ಮೂಲ : ಕೆಂಟ್ ಎಂ. ಕೀತ್
ಕನ್ನಡಕ್ಕೆ: ರವಿ ಕೃಷ್ಣಾ ರೆಡ್ದಿ
ಪ್ರಕಾಶಕರು : ಮೌಲ್ಯಾಗ್ರಹ ಪ್ರಕಾಶನ, ನಂ.400, 23ನೇ ಮುಖ್ಯ ರಸ್ತೆ, ಕುವೆಂಪು ನಗರ ಎರಡನೇ ಹಂತ, ಬೆಂಗಳೂರು – 560076
ಪುಟ :112
ಬೆಲೆ: ರೂ. 75

ಹಾಸನದ “ಜನತಾ ಮಾಧ್ಯಮ”ದ ಆರೋಗ್ಯಕರ ಪ್ರಯೋಗಗಳು

– ಮಂಜುನಾಥ ಹಂದ್ರಂಗಿ

ಹಾಸನ ಮೂಲದ “ಜನತಾ ಮಾಧ್ಯಮ” ದಿನಪತ್ರಿಕೆಗೆ ರಾಜ್ಯ ಪತ್ರಿಕೋದ್ಯಮ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ರೈತ ಸಂಘದ ಹೋರಾಟದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪತ್ರಿಕೆ ಇದು. ಕಾಲ ಕಾಲಕ್ಕೆ ಸಾಮಾಜಿಕ, ಆರ್ಥಿಕ ಬದಲಾವಣೆಗಳಿಗೆ ಇದು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದೆ. ಮಂಜುನಾಥ ದತ್ತ ಮತ್ತು ಆರ್. ಪಿ. ವೆಂಕಟೇಶಮೂರ್ತಿಯವರ ನೇತೃತ್ವದಲ್ಲಿ ಪತ್ರಿಕೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿದಿದೆ. ಅನೇಕ ಬಾರಿ ಪತ್ರಿಕೆಯ ನೇತಾರರು ಬೀದಿಗಿಳಿದು ಹೋರಾಡಿದ್ದಾರೆ, ಹಲವರನ್ನು ಹೋರಾಟಕ್ಕೆ ಹಚ್ಚಿದ್ದಾರೆ.

ಒಂದು ಪತ್ರಿಕೆ ಸಮಾಜ ಮುಖಿಯಾಗಿ ಇರಬೇಕಾದದ್ದೇ ಹೀಗೆ. ಇತ್ತೀಚೆಗೆ ಈ ಪತ್ರಿಕೆ ಕೆಲವು ಪ್ರಯೋಗಗಳನ್ನು ಮಾಡಿತು. ನವೆಂಬರ್ 14 ರಂದು ಮಕ್ಕಳ ದಿನಾಚರಣೆಗೆಯಂದು “ವಿಶೇಷ ಸಂಚಿಕೆ” ಹೊರತಂದಿತು. ಅನೇಕ ಮಕ್ಕಳು ಭಾರತದ ಬಗ್ಗೆ ತಮ್ಮ ಕನಸುಗಳನ್ನು ಮತ್ತು ಆ ಭವ್ಯ ಕನಸುಗಳನ್ನು ನನಸು ಮಾಡಲು ಬೇಕಾದ ಕ್ರಮಗಳನ್ನು ಕುರಿತು ಬರೆದಿದ್ದರು. ಲೇಖಕಿ ಮತ್ತು ಕವಿ ರೂಪಾ ಹಾಸನ ಅವರು ಈ ವಿಶೇಷ ಸಂಚಿಕೆಯನ್ನು ಅತಿಥಿ ಸಂಪಾದಕರಾಗಿ ಜತನದಿಂದ ಸಿದ್ಧ ಪಡಿಸಿದ್ದರು. ಪತ್ರಿಕೆ ಅಷ್ಟಕ್ಕೆ ನಿಲ್ಲಲಿಲ್ಲ, ಇದೇ ಸಂಬಂಧ ಒಂದು ಕಾರ್ಯಕ್ರಮವನ್ನೂ ಏರ್ಪಡಿಸಿ, ಮಕ್ಕಳು ತಾವು ಬರೆದದ್ದನ್ನು ಸಭೆಯ ಮುಂದೆ ಮಂಡಿಸಲು ಅವಕಾಶ ಮಾಡಿಕೊಟ್ಟಿತು.

ಮಕ್ಕಳ ಆಲೋಚನೆಗಳು ಕೆಲವರನ್ನು ದಂಗು ಬಡಿಸಿತು. ಮಕ್ಕಳ ಮಾತುಗಳಿಗೆ ಕಿವಿ ಕೊಡುವವರೇ ಇಲ್ಲದಾಗ, ಇಂತಹದೊಂದು ಅವಕಾಶ ಜನಮನ್ನಣೆ ಗಳಿಸಿತು.

ಇದೇ ಗಣರಾಜ್ಯೋತ್ಸವ ದಿನದಂದು ಈ ಪತ್ರಿಕೆ ಪೌರಕಾರ್ಮಿಕರನ್ನು ಕೇಂದ್ರವನ್ನಾಗಿಟ್ಟುಕೊಂಡು ವಿಶೇಷ ಸಂಚಿಕೆ ರೂಪಿಸುವ ಬಗ್ಗೆ ಪ್ರಕಟಣೆ ನೀಡಿದೆ. ಪೌರಕಾರ್ಮಿಕರು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯ. ಇದೇ ಗುಂಪಿಗೆ ಸೇರಿದೆ ಮಲ ಹೊರುವವರ ಸ್ಥಿತಿ ಶೋಚನೀಯ. ದಿನ ಬೆಳಗ್ಗೆ ಸಂಡಾಸಿಗೆ ಹೋಗುವ ಪ್ರತಿ ಮನುಷ್ಯ ಯಾರಿಗಾದರೂ ಆಜೀವ ಪರ್ಯಂತ ಋಣಿಯಾಗಿರಬೇಕಾಗಿದೆ ಎಂದರೆ ಅವರು ಈ ಜನ. ದಿನಕ್ಕೆ ಮೂರ್‍ನಾಲ್ಕು ಹೊತ್ತು ತಿಂದು, ಕಕ್ಕಸ್ಸು ಗುಂಡಿ ತುಂಬಿಸಿ, ಅದನ್ನು ಬರಿದು ಮಾಡಲು, ನೂರೋ, ಇನ್ನೂರಕ್ಕೋ ಯಾರನ್ನೋ ಕರೆತಂದು, ಗುಂಡಿಗಿಳಿಸಿ, ಮೇಲೆ ಮೂಗು ಮುಚ್ಚಿಕೊಂಡು ನಿಂತುಕೊಳ್ಳುವ ಎಲ್ಲರಿಗೂ ಸಾಯುವವರೆಗೂ ಕಾಡಲೇಬೇಕಾದ ಗಿಲ್ಟ್ ಇಂದಿಗೂ ಜಾರಿಯಲ್ಲಿರುವ “ಮ್ಯಾನುಯೆಲ್ ಸ್ಕ್ಯಾವೆಂಜಿಂಗ್!!”

ಈ ಬಗ್ಗೆ ಒಂದು ವಿಶೇಷ ಸಂಚಿಕೆ ತರಲು ಉದ್ದೇಶಿಸಿರುವ ಜನತಾ ಮಾಧ್ಯಮ ಪತ್ರಿಕೆ ಅಭಿನಂದನಾರ್ಹ.

ಇಷ್ಟೇ ಅಲ್ಲ, ಇತ್ತೀಚೆಗೆ ಪತ್ರಿಕೆ ಇನ್ನೊಂದು ಅಂಕಣದ ಬಗ್ಗೆ ಪ್ರಕಟಣೆ ನೀಡಿದೆ. ಅದರ ಹೆಸರು “ದೂರು ಕಾರ್ನರ್”. Janatha-Madhyama-vartamaanaಅನ್ಯಾಯ, ಅಕ್ರಮ, ಅತ್ಯಾಚಾರ..ಹೀಗೆ ಯಾವುದೇ ಸಂಕಷ್ಟಕ್ಕೆ ತುತ್ತಾದವರು ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಳ್ಳಬಹುದು. ಅವರು ತಮ್ಮ ದೂರು ದಾಖಲಿಸುವಾಗ ಸ್ವವಿವರ ನೀಡಬೇಕಾದರೂ, ಅವರ ಗುರುತನ್ನು ಗೋಪ್ಯವಾಗಿಡಲಾಗುವುದು ಎಂದು ಪತ್ರಿಕೆ ಭರವಸೆ ನೀಡಿದೆ. ಎಷ್ಟೋ ಬಾರಿ ಅನ್ಯಾಯ, ಅಕ್ರಮಗಳಾದ ಸಂದರ್ಭದಲ್ಲಿ ನೋವುಂಡವರಿಗೆ ನೆರವಾಗಬೇಕಾದ ಪೊಲೀಸ್ ಇಲಾಖೆ ಕುರುಡಾಗಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದೆ ಎನಿಸುತ್ತಿದೆ.

ಎಷ್ಟೋ ಬಾರಿ ಸಣ್ಣ ಪತ್ರಿಕೆಗಳಲ್ಲಿ ನಡೆಯುವ ಇಂತಹ ಪ್ರಯೋಗಗಳು ಸೀಮಿತ ಪ್ರದೇಶದ ಆಚೆಗೆ ಗೊತ್ತೇ ಆಗುವುದಿಲ್ಲ.