Daily Archives: June 9, 2012

ಬಿ.ಜೆ.ಪಿ. ಮತ್ತು ಭಂಡತನ


– ಡಾ.ಎನ್.ಜಗದೀಶ್ ಕೊಪ್ಪ


ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಒಂದು ಸರ್ಕಾರದ ಯಶಸ್ವಿಗೆ ಪ್ರಜ್ಞಾವಂತ ಮತದಾರರು ಎಷ್ಟು ಮುಖ್ಯವೊ, ಜವಾಬ್ದಾರಿಯುತ ರಾಜಕೀಯ ಪಕ್ಷಗಳ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಅಲಿಖಿತ ಸಂವಿಧಾನವಿರುವ ಬ್ರಿಟನ್‌ನಲ್ಲಿ ಲೇಬರ್ ಮತ್ತು ಕನ್ಸರ್‍ವೇಟೀವ್ ರಾಜಕೀಯ ಪಕ್ಷಗಳು, ಲಿಖಿತ ಸಂವಿಧಾನ ಇರುವ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ರಿಪಬ್ಲಿಕನ್ ಮತ್ತು ಡೆಮಕ್ರಟಿಕ್ ಪಕ್ಷಗಳು, ಸರ್ಕಾರದ ರಚನೆ ಮತ್ತು ಆಡಳಿತ ನಿರ್ವಹಣೆ, ಹಾಗೂ ವಿರೋಧ ಪಕ್ಷವಾಗಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದನ್ನು ನಾವು ಬಲ್ಲೆವು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲೂ ಕೂಡ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ, ಜಗತ್ತಿನ ಶ್ರೇಷ್ಟ ಲಿಖಿತ ಸಂವಿಧಾನ ಅಸ್ತಿತ್ವದಲ್ಲಿದೆ. ಜೊತೆಗೆ ಎರಡು ಪ್ರಬಲ ರಾಷ್ಟ್ರೀಯ ರಾಜಕೀಯ ಪಕ್ಷಗಳು ಕ್ರಿಯಾಶೀಲವಾಗಿವೆ. ಇವುಗಳಲ್ಲಿ ಶತಮಾನದ ಇತಿಹಾಸವಿರುವ ಕಾಂಗ್ರೇಸ್‌ ಪಕ್ಷ ಒಂದಾದರೆ, ಇನ್ನೊಂದು ಅರ್ಧ ಶತಮಾನದಷ್ಟು ಇತಿಹಾಸವಿರುವ ಭಾರತೀಯ ಜನತಾ ಪಕ್ಷ. ಕಳೆದವಾರ ಕಾಂಗ್ರೇಸ್ ಪಕ್ಷದ ಬಗ್ಗೆ, ಹಾಗೂ ಅದರ ಇತಿಮಿತಿಗಳನ್ನು ಚರ್ಚಿಸಿದ ರೀತಿಯಲ್ಲಿ ಭಾರತೀಯ ಜನತಾಪಕ್ಷವನ್ನು, ಅದರ ಸಿದ್ಧಾಂತ ಮತ್ತು ಇತ್ತೀಚೆಗಿನ ಪಕ್ಷದೊಳಗಿನ ಬೆಳವಣಿಗೆಯನ್ನು ಚರ್ಚೆಗೆ ಒಳಪಡಿಸಿ ಪರಾಮರ್ಶಿದರೇ, ತೀವ್ರ ನಿರಾಶೆಯಾಗುತ್ತದೆ.

1925 ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡಲ ಕುಡಿಯಾಗಿ ಹೊರಹೊಮ್ಮಿದ ಜನಸಂಘ ಎಂಬ ರಾಜಕೀಯ ಪಕ್ಷ, ಈಗ ನಮ್ಮೆದುರು ಭಾರತೀಯ ಜನತಾ ಪಕ್ಷದ ರೂಪದಲ್ಲಿದೆ. 1978 ರಲ್ಲಿ ಇಂದಿರಾ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು, ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕಾಗಿ, ಭಾರತದ ಜನತೆ ಅಧಿಕಾರದಿಂದ ಕಿತ್ತೊಗೆಯಿತು. ಈ ವೇಳೆ ಮುರಾರ್ಜಿ ದೇಸಾಯಿ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಜೊತೆ ಜನಸಂಘ ಕೂಡ ಕೈ ಜೋಡಿಸಿತು. ಮುರಾರ್ಜಿ ಪ್ರಧಾನಿಯಾಗಿದ್ದಾಗ, ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ ಅಟಲ್ ಬಿಹಾರಿ ವಾಜಪೇಯಿ, ತಮ್ಮ ಮುಕ್ತ ಮನಸ್ಸಿನ ನಡುವಳಿಕೆಯಿಂದ, ಯಾವುದೇ ಕಲ್ಮಶವಿಲ್ಲದ ಭಾವನೆಗಳಿಂದ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಮನೆಮಾತಾದರು. ವಾಜಪೇಯಿಯವರ ಈ ಜನಪ್ರಿಯತೆ, ಕೇವಲ ಪ್ರಾದೇಶಿಕ ಪಕ್ಷದಂತೆ, ಒಂದು ಕೋಮಿನ ಸಮುದಾಯವನ್ನು ಮಾತ್ರ ಪ್ರತಿನಿಧಿಸುತ್ತಿದ್ದ ಜನಸಂಘಕ್ಕೆ ರಾಷ್ಟ್ರಮಟ್ಟದಲ್ಲಿ ವರ್ಚಸ್ಸನ್ನು ತಂದುಕೊಟ್ಟಿತು.

ಕೇಂದ್ರದಲ್ಲಿ 1978 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸೇತರ ಸರ್ಕಾರದಲ್ಲಿ ವ್ಯಕ್ತಿಗತ ಅಧಿಕಾರದ ಲಾಲಸೆ ಮತ್ತು ಆಂತರೀಕ ಕಚ್ಚಾಟದಿಂದ ಕೇವಲ ಎರಡು ವರ್ಷದಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಜನತಾ ಪಕ್ಷ, ನಂತರದ ದಿನಗಳಲ್ಲಿ ಅಣು ವಿಭಜನೆಯಂತೆ, ಒಂದು ಎರಡಾಗಿ, ಎರಡು ನಾಲ್ಕಾಗಿ ಸಿಡಿದು ತನ್ನ ಮೂಲ ಛಹರೆ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿತು. ಇದರ ಜೊತೆಗೆ ಜಯಪ್ರಕಾಶ್ ನಾರಾಯಣರ ಕಂಡಿದ್ದ ಕನಸುಗಳನ್ನು ನುಚ್ಚುನೂರು ಮಾಡಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಇಡೀ ದೇಶಾದ್ಯಂತ, 80ರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಎಂಬ ಹೊಸ ರೂಪದಲ್ಲಿ ಜನಸಂಘ. ತನ್ನ ಛಾಪನ್ನು ಮೂಡಿಸತೊಡಗಿತು. ಆ ದಿನಗಳಲ್ಲಿ ಬಿ.ಜೆ.ಪಿ. ಪಕ್ಷದ ಆಧಾರ ಸ್ಥಂಭಗಳೆಂದರೆ, ಒಬ್ಬರು, ವಾಜಪೇಯಿ, ಮತ್ತೊಬ್ಬರು, ರಾಮನಿಗೆ ಲಕ್ಷ್ಮಣನಿದ್ದಂತೆ, ವಾಜಪೇಯಿಗೆ ನೆರಳಿನಂತೆ ಹಿಂಬಾಲಿಸಿದ ಎಲ್.ಕೆ. ಅಧ್ವಾನಿ. ಇವರಿಬ್ಬರಿಗೂ ಬೆನ್ನೆಲುಬಾಗಿ ನಿಂತವರು, ಬೈರೂನ್ ಸಿಂಗ್ ಶೇಖಾವತ್. ಇವತ್ತಿಗೂ ಆ ಪಕ್ಷಕ್ಕೆ ಇವರೆಲ್ಲಾ ಶಿಖರಪ್ರಾಯದ ವ್ಯಕ್ತಿತ್ವಗಳು.

ಬಿ.ಜೆ.ಪಿ. ಪಕ್ಷದ ಬಗೆಗಿನ ನಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ಅಸಹನೆಗಳು ಏನೇ ಇರಲಿ, ಸಾರ್ವಜನಿಕ ಬದುಕಿನಲ್ಲಿ, ವಿಶೇಷವಾಗಿ ರಾಜಕೀಯ ಬದುಕಿನಲ್ಲಿ ಒಬ್ಬ ವ್ಯಕ್ತಿಗೆ ಇರಬೇಕಾದ ಸನ್ನಡತೆ, ಸಚ್ಛಾರಿತ್ರ್ಯ, ನೈತಿಕತೆ, ಶುದ್ಧ ಹಸ್ತ ಇವುಗಳಿಗೆ ಇವರು ಮಾದರಿಯಾದವರು. ಜೊತೆಗೆ ಕಾಂಗ್ರೇಸ್‌ನ ಗುಲಾಮಗಿರಿ ಸಂಸ್ಕೃತಿಗೆ ಭಿನ್ನವಾಗಿ, ತಮ್ಮ ಜೊತೆಜೊತೆಯಲ್ಲಿ ಎರಡನೇ ವರ್ಗದ ನಾಯಕರನ್ನು ಬೆಳಸಿದರು. ಇದರ ಫಲವಾಗಿ ವಾಜಪೇಯಿ ಮೂರು ಬಾರಿ ಪ್ರಧಾನಿಯಾಗಲು ಸಾಧ್ಯವಾಯಿತು.

1984ರ ಅಕ್ಟೋಬರ್ ತಿಂಗಳಿನಲ್ಲಿ ಇಂದಿರಾ ಗಾಂಧಿಯ ಹತ್ಯೆ ಹಿನ್ನಲೆಯಲ್ಲಿ ಇಂದಿರಾ ಯುಗ ಅಂತ್ಯಗೊಂಡರೂ, ವಾಜಪೇಯಿ ಬಿ.ಜೆ.ಪಿ. ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಅಧಿಕಾರಕ್ಕೆ ತರಲು 12 ವರ್ಷಗಳ ಕಾಲ ಹೆಣಗಬೇಕಾಯಿತು. ಇದಕ್ಕಾಗಿ, ಅಧ್ವಾನಿಯವರ ರಥಯಾತ್ರೆ, 1991 ರಲ್ಲಿ ಅಯೋಧೈಯಲ್ಲಿ ಮಸೀದಿಯನ್ನು ಉರುಳಿಸಿದ ನಾಟಕಿಯ ಬೆಳವಣಿಗೆಗಳು ಸಹ ಸಹಕಾರಿಯಾದವು. ಒಟ್ಟಾರೆ, ಧರ್ಮ ಮತ್ತು ಜಾತಿಯನ್ನು ನೇರವಾಗಿ ರಾಜಕೀಯವಾಗಿ ಬಳಸಿಕೊಂಡು, ಭಾರತದ ಬಹುಮುಖಿ ಸಂಸ್ಕೃತಿಯ ಸಮಾಜಕ್ಕೆ ಧಕ್ಕೆಯಾಗುವ ರೀತಿಯಲ್ಲಿ, ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದದ್ದನ್ನು ಯಾರೂ ಅಲ್ಲಗೆಳೆಯಲಾರರು. ಅಜಾತ ಶತ್ರು ಎನಿಸಿಕೊಂಡಿದ್ದ ವಾಜಪೇಯಿ, ತಮ್ಮ ಅಂತರಾಳದಲ್ಲಿ ಏನನ್ನೂ ಮುಚ್ಚಿಡಲಾರದ ವ್ಯಕ್ತಿಯಾಗಿದ್ದರು. ಬಾಬರಿ ಮಸೀದಿಯನ್ನು ಕರಸೇವಕರು ಉರುಳಿಸಿದಾಗ, ಅಥವಾ ಗುಜರಾತ್‌ನ ಗೋದ್ರಾ ಹತ್ಯಾಕಾಂಡ ಮುಂತಾದ ಘಟನೆಗಳಲ್ಲಿ ತಮ್ಮ ನೋವನ್ನು ನೇರವಾಗಿ ತೋಡಿಕೊಂಡವರು. ಈ ಕಾರಣಕ್ಕಾಗಿ ಸಂಘ ಪರಿವಾರಕ್ಕೆ ವಾಜಪೇಯಿ ಎಂದರೆ ಒಂದು ರೀತಿ ಅಲರ್ಜಿ. ಅಧ್ವಾನಿ ಎಂದರೆ, ಮುದ್ದಿನ ಕೂಸು ಎಂಬಂತಾಗಿತ್ತು.

ಬಿ.ಜೆ.ಪಿ. ಪಕ್ಷದಲ್ಲಿನ ಮರೆಮಾಚಿದ ಯೋಜನೆಗಳು. ಅಮಾನವೀಯ ನಡುವಳಿಕೆಗಳು, ಕೋಮುಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು, ಅಮಾಯಕ ಜೀವಗಳ ಬದುಕಿನ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಯಾವೊಬ್ಬ ಪ್ರಜ್ಞಾವಂತ ನಾಗರೀಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಪ್ಪಲಾರ. ಆದರೆ, ಆ ಪಕ್ಷದಲ್ಲಿ ಅವರದೇ ನೀತಿ, ತತ್ವ, ಸಿದ್ಧಾಂತಗಳು, ನಡುವಳಿಕೆಗಳು, ಶಿಸ್ತು, ಇವುಗಳೆಲ್ಲಾ ಒಂದು ಕಾಲಘಟ್ಟದಲ್ಲಿ ಇತರೆ ಪಕ್ಷಗಳಿಗೆ ಮಾದರಿಯಾಗಿದ್ದವು. ಆದರೆ, ಈಗ ಇವೆಲ್ಲಾ ಕಾಣೆಯಾಗಿ ಕೇವಲ ಭಂಡತನವೊಂದೇ ಪಕ್ಷದ ಬಂಡವಾಳವಾಗಿದೆ. ಭಾರತೀಯ ಜನತಾ ಪಕ್ಷದ ಅಂತರಂಗವನ್ನು ಬಯಲು ಮಾಡಿ, ಅದರ ಹುಳುಕನ್ನು ಅನಾವರಣಗೊಳಿಸಿ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟವರು, ನಮ್ಮ ಕರ್ನಾಟಕದ ಲಿಂಗಾಯುತರ ಬಸವಣ್ಣ, ದ ಗ್ರೇಟ್ ಯಡಿಯೂರಪ್ಪ. ಇವರಿಗೆ ಭಾರತದ ಪ್ರಜ್ಙಾವಂತ ನಾಗರೀಕರು ಋಣಿಯಾಗಿರಬೇಕು. ಏಕೆಂದರೆ, ಈ ದೇಶದಲ್ಲಿ ರಾಜಕೀಯ ಮಾಡಲು ಅಥವಾ ಸಾರ್ವಜನಿಕ ಬದುಕಿನಲ್ಲಿ ಇರಲು ಸನ್ನಡತೆ, ಸಚ್ಛಾರಿತ್ರ್ಯ ಅಗತ್ಯವಿಲ್ಲ. ಅವುಗಳ ಬದಲು ಭಂಡತನ ಮತ್ತು ಜಾತಿಯ ಬೆಂಬಲವಿದ್ದರೆ ಸಾಕು ಎಂಬುದನ್ನು ತೋರಿಸಿಕೊಟ್ಟಿದ್ದು, ಸಹ ಇದೇ ಯಡಿಯೂರಪ್ಪ.

ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಪ್ರಪಥಮ ಬಾರಿಗೆ ಬಿ.ಜೆ.ಪಿ. ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು ಎನ್ನುವ ಸಂತೋಷ ಅಥವಾ ಹೆಮ್ಮೆ ರಾಷ್ಟ್ರ ಮಟ್ಟದ ಬಿ.ಜೆ.ಪಿ. ನಾಯಕರಿಗೆ ಬಹಳ ದಿನ ಉಳಿಯಲಿಲ್ಲ. ಏಕೆಂದರೆ, ಭಾರತದ ರಾಜಕೀಯ ಇತಿಹಾಸದಲ್ಲಿ ಯಾವ ರಾಜ್ಯದಲ್ಲೂ ಒಂದು ಸರ್ಕಾರದ ಅಷ್ಟೊಂದು ಸಂಪುಟದ ಸಚಿವರು, ಅಕ್ರಮ ವ್ಯವಹಾರಗಳ ಮೂಲಕ (ಮುಖ್ಯಮಂತ್ರಿಯೂ ಸೇರಿದಂತೆ) ಜೈಲು ಪಾಲಾಗಿರಲಿಲ್ಲ. ಹಗರಣಗಳ ಸರಮಾಲೆಯೇ ಕರ್ನಾಟಕದ ಬಿ.ಜೆ.ಪಿ. ಸರ್ಕಾರದಲ್ಲಿ ಸೃಷ್ಟಿಯಾಯಿತು. ಭೂ ಹಗರಣ, ಭ್ರಷ್ಟಾಚಾರ, ಲಂಚಪ್ರಕರಣ, ಅತ್ಯಾಚಾರ ಪ್ರಕರಣ, ಅಶ್ಲೀಲ ಚಿತ್ರ ವೀಕ್ಷಣೆ ಹಗರಣ, ಒಂದೇ ಎರಡೇ? ಇವೆಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶವೇ ಬೆಚ್ಚಿ ಬೀಳುವಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ, ಇದೀಗ, ನ್ಯಾಯಾಂಗ ವ್ಯವಸ್ಥೆಯ ಬುಡಕ್ಕೆ ಲಂಚದ ಮೂಲಕ ಬಾಂಬ್ ಇಟ್ಟಿರುವ ಗಾಲಿ ಜನಾರ್ಧನ ರೆಡ್ಡಿ ಕೂಡ ಈ ಸರ್ಕಾರದ ಒಬ್ಬ ಸಚಿವನಾಗಿದ್ದ ಎನ್ನುವುದು ಸಹ ನಾಚಿಕೆಗೇಡಿನ ಸಂಗತಿ, ಅಧ್ವಾನಿ ಒಬ್ಬರನ್ನು ಹೊರತು ಪಡಿಸಿದರೆ, ಉಳಿದ ನಾಯಕರಿಗೆ ಕರ್ನಾಟಕದ ಬಿ.ಜೆ.ಪಿ. ಸರ್ಕಾರದ ಹಗರಣಗಳು ಮುಜಗರದ ಸಂಗತಿಗಳು ಎಂದು ಎನಿಸಿಲ್ಲ.

ಅನೈತಿಕ ರಾಜಕಾರಣದ ಪರಾಕಾಷ್ಟೆ ಎನ್ನಬಹುದಾದ ಶಾಸಕರ ಪಕ್ಷಾಂತರದ ವಿಷಯ, ಬಿ.ಜೆ.ಪಿ. ಪಕ್ಷದ ಭಂಡರ ಪಾಲಿಗೆ ಹೆಮ್ಮೆಯ ಸಂಗತಿ. ಆಪರೇಷನ್ ಕಮಲ ಎಂದು ಎದೆಯುಬ್ಬಿಸಿ ಕರೆದುಕೊಳ್ಳುವ ಇವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರವೆಂಬುದು ಮತದಾರರಿಗೆ ಮಾಡಬಹುದಾದ ಅತಿ ದೊಡ್ಡ ಅವಮಾನ ಎಂಬ ಕನಿಷ್ಟ ವಿವೇಚನೆ ಕೂಡ ಇಲ್ಲ. ಇದಕ್ಕೆ ವಿ.ಸೋಮಣ್ಣನ ಪಕ್ಷಾಂತರ ಘಟನೆಯೊಂದು ಸಾಕು. ಕಾಂಗ್ರೇಸ್‌ಗೆ ರಾಜಿನಾಮೆ ನೀಡಿ ಅದೇ ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ ಈತನ ವಿರುದ್ಧ ಅಲ್ಲಿ ಮತದಾರರು ನಿನ್ನ ನಡುವಳಿಕೆ ತಪ್ಪು ಎನ್ನುವ ರೀತಿಯಲ್ಲಿ ತೀರ್ಪು ನೀಡಿ ಸೋಲಿಸಿ, ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸಿದರು. ಆದರೆ, ಯಡಿಯೂರಪ್ಪ ಮಾಡಿದ್ದೇನು? ಜಾತಿಯ ಕಾರಣಕ್ಕಾಗಿ ಹಿಂಬಾಗಿಲಿನ ಮೂಲಕ ಅಂದರೆ, ವಿಧಾನಪರಿಷತ್‌ಗೆ ಸೋಮಣ್ಣನನ್ನು ಆಯ್ಕೆ ಮಾಡಿಕೊಂಡು ಸಚಿವರನ್ನಾಗಿ ಮಾಡಿಕೊಂಡರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳ ಸ್ಥಾನದಲ್ಲಿರುವ  ಮತದಾರರಿಗೆ ಮಾಡಿದ ಅವಮಾನ ಎಂದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಅನಿಸಲೇ ಇಲ್ಲ. ಏಕೆಂದರೆ, ಇಂದಿನ ಭಾರತೀಯ ಜನತಾ ಪಕ್ಷದಲ್ಲಿ ಎಲ್.ಕೆ.ಅಧ್ವಾನಿ ಹಾಗೂ ಒಂದಿಬ್ಬರನ್ನು ಹೊರತು ಪಡಿಸಿದರೆ, ಉಳಿದ ಬಹುತೇಕ ಮಂದಿ ರೆಡ್ಡಿ ಮತ್ತು ಯಡಿಯೂರಪ್ಪನ ಲೂಟಿಯ ಹಣಕ್ಕೆ ಪಾಲುದಾರರು ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಎಲ್ಲರೂ  ಅಮೇದ್ಯವನ್ನು ತಿಂದು ಬಾಯಿ ಒರೆಸಿಕೊಂಡವರೇ ಆಗಿದ್ದಾರೆ.

ಮಾತೆತ್ತಿದರೆ, ಹಿಂದೂ ಧರ್ಮದ ಬಗ್ಗೆ ಅದರ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುವ ಆರ.ಎಸ್.ಎಸ್. ನಾಯಕರೂ ಇದಕ್ಕೆ ಹೊರತಾಗಿಲ್ಲ. ಬೆಂಗಳೂರು ನಗರ, ಆನೇಕಲ್, ಮಾಗಡಿ ರಸ್ತೆಯಲ್ಲಿರುವ ಚನ್ನಸಂದ್ರ, ಧಾರವಾಡ, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ 300 ಕೋಟಿ ಮೌಲ್ಯದ ಆಸ್ತಿ ಆರ್.ಎಸ್.ಎಸ್. ಸಂಸ್ಥೆಯ ಪಾಲಾಗಿದೆ. ಹಾಗಾಗಿ ಗರ್ಭಗುಡಿ ನಾಯಕರ ನಾಲಿಗೆಗಳು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲಾರದೆ ವಿಲವಿಲನೆ ಮಿಸುಕಾಡುತ್ತಿವೆ. ಅಧಿಕಾರ ಒಂದನ್ನೇ ಕೇಂದ್ರ ಮತ್ತು ಗುರಿಯಾಗಿಟ್ಟು ಇವರುಗಳು ಆಡುತ್ತಿರುವ ನಾಟಕ, ಕಟ್ಟುತ್ತಿರುವ ವೇಷ, ಜನಸಾಮಾನ್ಯರಲ್ಲಿ ಜಿಗುಪ್ಸೆ ಮತ್ತು ಅಸಹನೆ ಮೂಡಿಸಿವೆ. ಈವರೆಗೆ ಜೈಲಿಗೆ ಹೋಗಿ ಬಂದ ಶಾಸಕರು ಮತ್ತು ಸಚಿವರನ್ನು ಪಕ್ಷದಿಂದ ಅಮಾನತ್ತು ಮಾಡುವ ನೈತಿಕತೆ ಕೂಡ ಪಕ್ಷದಲ್ಲಿ ಉಳಿದಿಲ್ಲ. ಕಳೆದ ಆರು ತಿಂಗಳಿಂದ ಪಕ್ಷದ ವಿರುದ್ದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಳ್ಳಾರಿಯ ಸಂಸದೆ ಜೆ.ಶಾಂತ, ರಾಯಚೂರಿನ ಸಂಸದ ಪಕೀರಪ್ಪ, ಬಳ್ಳಾರಿ ಜಿಲ್ಲೆಯ ಶಾಸಕರಾದ ಸೋಮಶೇಖರರೆಡ್ಡಿ, ಕಂಪ್ಲಿಯ ಶಾಸಕ ಸುರೇಶ್ ಬಾಬು ಇವರನ್ನು ಪ್ರಾಥಮಿಕ ಸದಸ್ಯ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಇವರೆಲ್ಲಾ ಬಳ್ಳಾರಿಯ ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸಮಾಡಿದವರು, ಈಗಲೂ ಪಕ್ಷವನ್ನು ನೇರವಾಗಿ ತೆಗಳುತ್ತಿರುವುದಲ್ಲಿ ವಿರೋಧ ಪಕ್ಷವನ್ನು ಮೀರಿಸಿದವರಾಗಿದ್ದಾರೆ. ಒಂದು ರಾಷ್ಟ್ರೀಯ ಪಕ್ಷವೊಂದರ ರಾಜ್ಯದ ಅಧ್ಯಕ್ಷನಾಗಿದ್ದುಕೊಂಡು,  ಹಾದಿ ಬೀದಿಯಲ್ಲಿ ಹೋಗುತ್ತಿದ್ದವರನ್ನು ಹಣ ಕೊಟ್ಟು ಕರೆತಂದು ಜಾತಿಯ ಕಾರಣಕ್ಕೆ ಅಧಿಕಾರ ಕೊಟ್ಟಿದ್ದೇವೆ ಎಂಬ ಬೇಜಾವಬ್ದಾರಿ ಹಾಗೂ ಸತ್ಯವಾದ ಹೇಳಿಕೆಯನ್ನ ಈಶ್ವರಪ್ಪ ಕೊಡುತ್ತಾನೆ ಎಂದರೆ, ಈತ ಎಂತಹ ಯಡವಟ್ಟು ಗಿರಾಕಿ ಎಂಬುದರ ಬಗ್ಗೆ ನೀವೆ ಯೋಚಿಸಿ? ಇಂತಹ ಅಯೋಗ್ಯರಿಂದ ಆಳಿಸಿಕೊಳ್ಳವ ದೌರ್ಭಾಗ್ಯ ನಮ್ಮ ಶತ್ರುಗಳಿಗೂ ಬರಬಾರದು ಎಂದು ನಾವೆಲ್ಲಾ ಆಶಿಸೋಣ.

ಒಂದು ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಕ್ಕೆ ಯೋಗ್ಯರಲ್ಲದ ಅನೇಕ ಮಂದಿ ಇಂದು ಕರ್ನಾಟಕ ಬಿ.ಜೆ.ಪಿ. ಸರ್ಕಾರದ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಬೆಳಿಗ್ಗೆ ಎದ್ದು ಕೂಡಲೇ ಅಧಿಕಾರ ದಕ್ಕಿಸಿಕೊಟ್ಟರು ಎಂಬ ಏಕೈಕ ಕಾರಣಕ್ಕೆ ಯಡಿಯೂರಪ್ಪನ ಕಾಲು ನೆಕ್ಕುವುದೇ ದಿನ ನಿತ್ಯದ ವೃತ್ತಿಯಾಗಿದೆ. ಈ ಮಹಾಶಯರ ಓಡಾಟಕ್ಕೆ, ಬಂಗಲೆಗೆ, ವಿಮಾನ ಪ್ರಾಯಾಣಕ್ಕೆ, ಯಡಿಯೂರಪ್ಪನ ಜೊತೆ ಮಠ ಮಂದಿರಗಳ ಸುತ್ತಾಟಕ್ಕೆ ನಮ್ಮ ತೆರಿಗೆ ಹಣ ವೆಚ್ಚವಾಗುತ್ತಿದೆ. ಕರ್ನಾಟಕದ ಬಿ.ಜೆ.ಪಿ. ಸರ್ಕಾರದಲ್ಲಿ ಕೆ. ಸುರೇಶ್ ಕುಮಾರ್ ಎಂಬ ಸಜ್ಜನ ಹಾಗೂ ಸರಳ ವ್ಯಕ್ತಿಯನ್ನು ಹೊರತು ಪಡಿಸಿದರೆ, ಉಳಿದವರಲ್ಲಿ ಇನ್ನೊಬ್ಬ ಸಜ್ಜನನ್ನು ಹುಡುಕುವುದು ನಿಜಕ್ಕೂ ಕಷ್ಟವಾಗಿದೆ. ರಾಜ್ಯದಲ್ಲಿ ಒಂದು ರಾಷ್ಟ್ರೀಯ ಪಕ್ಷ ಸರ್ಕಾರ ಇಂತಹ ದಯನೀಯ ಮತ್ತು ಅಸಹನೀಯ ಸ್ಥಿತಿಯಲ್ಲಿ ಆಡಳಿತ ನಡೆಸುತ್ತಿದ್ದರೂ ರಾಷ್ಟ್ರೀಯ ನಾಯಕರು ಕಣ್ಮುಚ್ಚಿ ಕುಳಿತಿರುವುದನ್ನ ಗಮನಿಸಿದರೆ, ಇದನ್ನು ರಾಜಕೀಯ ತಂತ್ರ ಎಂದು ಎನ್ನಲಾಗದು. ಬದಲಿಗೆ ಬಿ.ಜೆ.ಪಿ. ಪಕ್ಷದ ಭಂಡತನವೆಂದು ಕರೆಯಬೇಕಾಗುತ್ತದೆ.