Monthly Archives: December 2012

ಜೀವನದಿಗಳ ಸಾವಿನ ಕಥನ : ಹೊತ್ತಿಗೊದಗಿದ ಮಾತಾಗಿ ಮೂಡಿ ಬಂದ ಕೃತಿ

– ಡಾ. ಎಸ್.ಬಿ.ಜೋಗುರ

ಡಾ. ಎನ್. ಜಗದೀಶ್ ಕೊಪ್ಪ ಅವರ ಕೃತಿ “ಜೀವನದಿಗಳ ಸಾವಿನ ಕಥನ” ಒಂದು ಅಪರೂಪದ ಕೃತಿ. ಅಭಿವೃದ್ಧಿಯ ಜೊತೆಗೆ ಥಳುಕು ಹಾಕಿಕೊಂಡು ಮಾತನಾಡುವ ಅನೇಕ ಸ್ಥಾಪಿತ ಸಂಗತಿಗಳ ಚೌಕಟ್ಟಿನಾಚೆ ಬಂದು ಅವರು ಮೂರ್ತ ಭಂಜನೆ [ಮೂರ್ತಿ ಭಂಜನೆಯಲ್ಲ] ಯನ್ನು ಅತ್ಯಂತ ಸಮರ್ಪಕವಾಗಿ ಸಾಕ್ಷಿ ಸಮೇತ ಮಾಡಿರುವದಿದೆ. ಮೂಲತ: ಅರ್ಥಶಾಸ್ತ್ರದ ಅಧ್ಯಯನ ಶಿಸ್ತಿನಿಂದ ಬಂದಿರುವ ಕೊಪ್ಪ ಅವರು ಈ ಕೃತಿಯನ್ನು ಮಾನವಶಾಸ್ತ್ರ ಮತ್ತು ಭೂಗೋಳಶಾಸ್ತ್ರದ ಅಧ್ಯಯನ ಮಾಡುವವರಿಗೆ ಒಂದು ಉಲ್ಲೇಖ ಗ್ರಂಥವಾಗುವ ಹಾಗೆ ರಚಿಸಿದ್ದಾರೆ. ಈ ಜೀವನದಿಗಳ ಸಾವಿನ ಕಥನ ಒಂದು ಅಪೂರ್ವವಾದ ಮಾಹಿತಿ ಸಾಗರ. ಜಗತ್ತಿನಲ್ಲಿ ಮೊಟ್ಟ ಮೊದಲನೆಯ ಆಣೆಕಟ್ಟು ಸ್ಥಾಪನೆಯಾದ ಮಾಹಿತಿಯ ಜೊತೆಗೆ ಆದಿವಾಸಿ ಸಮುದಾಯದ ಅಪರೂಪದ ನೆಲೆಗಳನ್ನು ಈ ಬಗೆಯ ಅಭಿವೃದ್ಧಿಯ ಮೂಲಗಳು ಹೇಗೆ ಕರಗಿಸುತ್ತ ಬಂದಿವೆ ಎನ್ನುವದರ ಬಗ್ಗೆ ಅವರು ವಸ್ತುನಿಷ್ಟವಾಗಿ ವಿವರಿಸಿದ್ದಾರೆ.

’ಅಭಿವೃದ್ಧಿಯ ಅಂಧಯುಗ’ ಎನ್ನುವ ಲೇಖನದಲ್ಲಿ ಕೊಪ್ಪ ಬರೆಯುವ ಹಾಗೆ ಆಣೆಕಟ್ಟುಗಳ ನಿರ್ಮಾಣವಾದ ಮೇಲೆ, ನದಿಗಳ ನೈಜ ಹರಿವಿನ ವೇಗ ಕುಂಠಿತಗೊಂಡು ಅವುಗಳ ಇಕ್ಕೆಲಗಳ ಮುಖಜ ಭೂಮಿಯಲ್ಲಿ ಮಣ್ಣಿನ ಫ಼ಲವತ್ತತೆಗೆ ಧಕ್ಕೆಯುಂಟಾಯಿತು. ಅಲ್ಲದೇ ನದಿಗಳ ಮೀನುಗಾರಿಕೆಯನ್ನೇ ಕುಲಕಸುಬಾಗಿ ಬದುಕುತ್ತಿದ್ದ ಅಸಂಖ್ಯಾತ ಕುಟುಂಬಗಳು ತಮ್ಮ ವೃತ್ತಿ ಬದುಕಿನಿಂದ ವಂಚಿತವಾದವು. ಅಮೇರಿಕೆಯಲ್ಲಿ ನದಿಯ ಮಕ್ಕಳೆಂದು ಕರೆಯಲ್ಪಡುತ್ತಿದ್ದ , ಶತಮಾನದ ಹಿಂದೆ 1200 ಕುಟುಂಬಗಳಿದ್ದ ಕುಕುಪಾ ಜನಾಂಗ, ಈಗ ಬರೀ 40 ಕುಟುಂಬಗಳಿಗೆ ಇಳಿದಿದ್ದು, ಈ ಆದಿವಾಸಿಗಳು ಈಗ ಮೀನುಗಾರಿಕೆಯಿಂದ ವಂಚಿತರಾಗಿ ಗೆಡ್ದೆ ಗೆಣಸುಗಳನ್ನು ನಂಬಿ ಬದುಕುತ್ತಿದ್ದಾರೆ. [ಪುಟ-17] ಇದು ಕೇವಲ ಯಾವುದೋ ಒಂದು ರಾಷ್ಟ್ರ ಅಭಿವೃದ್ಧಿಯ ಹೆಸರಲ್ಲಿ ಅನುಭವಿಸಿದ ಧಾರುಣ ಪರಿಣಾಮವೆಂದು ಭಾವಿಸುವ ಅವಶ್ಯಕತೆಯಿಲ್ಲ. ನಮ್ಮ ನರ್ಮದಾ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿಯೂ ಉಂಟಾಗಿರಬಹುದಾದ ತೊಡಕುಗಳನ್ನು, ಈ ತೊಡಕಿಗೆ ಬಹುತೇಕವಾಗಿ ಆದಿವಾಸಿ ಜನಸಮುದಾಯಗಳು ಇಲ್ಲವೇ ಕೃಷಿ ಕುಟುಂಬಗಳು ಬಲಿಪಶುಗಳಾಗುವ ಚಿತ್ರಣವನ್ನು ಕೊಪ್ಪ ಅವರು ಜೀವನದಿಗಳ ಕಥನದಲ್ಲಿ ವಿವರಿಸಿದ್ದಾರೆ.

ವಿದ್ಯುತ್ ಉತ್ಪಾದನೆಯಲ್ಲಿ ಜಲವಿದ್ಯುತ್ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಜನಸಾಮಾನ್ಯನ ಅರಿವಿಗೆ ಬಾರದ ರೀತಿಯಲಿ ಅವು ಹೇಗೆ ಜಾಗತಿಕ ಪರಿಸರಕ್ಕೆ ಅಡ್ದಿಯಾಗುತ್ತಿವೆ ಎನ್ನುವದನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಈಗಾಗಲೇ ಇಡೀ ವಿಶ್ವದಲ್ಲಿ ಜಾಗತಿಕ ತಾಪಮಾನದ ಕೂಗು ಎದ್ದಿದೆ. ಅದಕ್ಕೆ ಪೂರಕವಾಗಿ ಜಲವಿದ್ಯುತ್ ಆಗರಗಳು ಕೆಲಸ ಮಾಡುತ್ತವೆ. ಅದೇ ವೇಳೆಗೆ ಆಣೆಕಟ್ಟುಗಳನ್ನು ಪ್ರವಾಹ ನಿಯಂತ್ರಣದಲ್ಲಿ ನೆರವಾಗುವ ಹಾಗೆ ಕಟ್ಟದಿರುವ ಬಗ್ಗೆಯೂ ಅವರು ಬರೆಯುತ್ತಾರೆ. ಅವರು ಆ ದಿಶೆಯಲಿ ನಮ್ಮ ದೇಶದ ಓರಿಸ್ಸಾದ ಹಿರಾಕುಡ್ ಹಾಗೂ ಪಂಜಾಬನ ಬಾಕ್ರಾ ನಂಗಲ್ ಆಣೆಕಟ್ಟನ್ನು ಉದಾಹರಿಸಿದ್ದಾರೆ. [ಪುಟ-65]

ಸಾಮಾನ್ಯ ಜನರ ಮೂಗಿಗೆ ತುಪ್ಪ ಹಚ್ಚುವ ಕ್ರಿಯೆ ಆಣೆಕಟ್ಟುಗಳ ನಿರ್ಮಾಣದ ಸಂದರ್ಭದಲ್ಲಿ ನಡೆಯುತ್ತದೆ. ಸರ್ದಾರ್ ಸರೋವರ್ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಮಧ್ಯಪ್ರದೇಶ, ಗುಜರಾತ, ರಾಜಸ್ಥಾನದ ಜನರಿಗೆ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ನೀರು ಕುಡಿಸುವ ಬಗ್ಗೆ ಹಸಿ ಹಸಿ ಸುಳ್ಳುಗಳನ್ನು ಬಿತ್ತಿರುವ ಬಗ್ಗೆಯೂ ಅವರು ಸುಳ್ಳುಗಳ ಸರಮಾಲೆ ಎನ್ನುವ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ಪೂರ್ಣಪ್ರಮಾಣದಲ್ಲಿ ಖಾಲಿಯಾಗಿರುವ 236 ಹಳ್ಳಿಗಳಿಗೂ ಕುಡಿಯುವ ನೀರನ್ನು ಪೂರೈಸಿರುವ ಬಗ್ಗೆ ಮಾಹಿತಿಗಳು ಅಲ್ಲಿದ್ದವು ಎನ್ನುವ ವ್ಯಂಗ್ಯವನ್ನು ಅವರು ಚರ್ಚಿಸಿದ್ದಾರೆ.

ಒಟ್ಟಾರೆ “ಜೀವನದಿಗಳ ಸಾವಿನ ಕಥನ” ಮನುಷ್ಯನ ಹಪಾಪಿತನಕ್ಕೆ ಹಿಡಿದ ಕನ್ನಡಿ. ಸತ್ಯವನ್ನು ಒಪ್ಪಿಕೊಳ್ಳುವ ಮನಸು ಮಾಡದಿದ್ದರೆ ಮುಂಬರುವ ದಿನಗಳಲ್ಲಿ ನಮ್ಮೆಲ್ಲರ ಮುಖ ಇನ್ನಷ್ಟು ಅಸಹ್ಯ, ವಿಕಾರವಾಗಿರುತ್ತದೆ. ಆಗ ನಮಗೆ ಕನ್ನಡಿಯ ಮುಂದೆ ನಿಲ್ಲುವ ಎದೆಗಾರಿಕೆ ಉಳಿದಿರುವದಿಲ್ಲ. ಪ್ರತಿಯೊಂದು ತಲೆಮಾರು ತಾನೇ ಕೊನೆ, ಮುಂದೆ ಮತ್ತೆ ಪೀಳಿಗೆಯಿಲ್ಲ ಎನ್ನುವಂತೆ ಬದುಕುವ ಕ್ರಮ ಸರಿಯಲ್ಲ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕಾಲನ ಕ್ಷಮೆಯೇ ಇಲ್ಲ. ಬಂದದ್ದೆಲ್ಲಾ ಅನುಭವಿಸಬೇಕು ಎನ್ನುವ ಎಚ್ಚರವೂ ಈ ಕೃತಿಯ ಹಿಂದೆ ಅಡಕವಾಗಿದೆ. ಇಲ್ಲಿರುವ ಮಾಹಿತಿ ಅಪಾರ ಮತ್ತು ವಿರಳ. ಭೂಗೊಳಶಾಸ್ತ್ರ, ಮಾನವಶಾಸ್ತ್ರ, ಜೀವಪರಿಸರಶಾಸ್ತ್ರ ಮುಂತಾದ ಅಧ್ಯಯನ ಶಿಸ್ತುಗಳಿಗೆ ಜಗದೀಶ ಕೊಪ್ಪ ಅವರ ಈ “ಜೀವನದಿಗಳ ಸಾವಿನ ಕಥನ” ಒಂದು ಹೊತ್ತಿಗೊದಗಿದ ಮಾತಿನಂತೆ ಮೂಡಿಬಂದಿದೆ.


ಜೀವನದಿಗಳ ಸಾವಿನ ಕಥನ
ಲೇಖಕ : ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು : ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ: ಎಮ್ಮಿಗನೂರು, ಬಳ್ಳಾರಿ – 583113
ಬೆಲೆ : 100 ರುಪಾಯಿ.

ಪೊಲೀಸರೇ, ನಿಮ್ಮ ಎದೆಯಲ್ಲಿ ಮಾನವೀಯತೆ ಇರಲಿ…

– ಜಿ.ಮಹಂತೇಶ್‌ ಭದ್ರಾವತಿ

ಈ ಘಟನೆ ನಡೆದು ಹತ್ತಿರತ್ತಿರ 15 ದಿವಸ ಕಳೆದು ಹೋಗಿದೆ. ತುಮಕೂರಿನ ಗುಬ್ಬಿ ಗೇಟ್ ಬಳಿ ಬೆಳ್ಳಂಬೆಳಗ್ಗೆ ಬೆಂಗಳೂರಿನತ್ತ ಬರುತ್ತಿದ್ದ ಕಾರೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಅರೆ ಮಂಪರಿನಲ್ಲಿ ಕಾರು ಓಡಿಸುತ್ತಿದ್ದ ಚಾಲಕ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ. ಕಾರಿನ ಹಿಂಬದಿ ನಿದ್ರೆಗೆ ಜಾರಿದ್ದ ವಯಸ್ಕರೊಬ್ಬರು, ಅವರ ಪತ್ನಿ ಮತ್ತು ಅವರ ಮಗಳು ಗಂಭೀರವಾಗಿ ಗಾಯಗೊಂಡರು. ಈ ಮೂವರನ್ನು ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಯಸ್ಕರು ಸಾವನ್ನಪ್ಪಿದರು. ಇನ್ನು, ತಲೆಗೆ ಗಂಭೀರವಾಗಿ ಹೊಡೆತ ಬಿದ್ದಿದ್ದ ಮಗಳು ಮತ್ತು ಪ್ರಾಣಾಪಾಯವಿಲ್ಲದಿದ್ದರೂ ತೀವ್ರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆ ತರಲಾಯಿತು. ಮಗಳು, ಒಂದಷ್ಟು ದಿವಸ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಜೀವಭಯವೇನೂ ಇಲ್ಲದಿದ್ದರೂ ಅವರಿಗೆ ನೆನಪಿನ ಶಕ್ತಿ ಎಂದಿನಂತೆ ಬರಲು ಹಾಗೂ ಈ ಹಿಂದಿನ ಜೀವನಕ್ಕೆ ಮರಳಲು ಸಾಕಷ್ಟು ಸಮಯ ಬೇಕಾದೀತು. ಹಾಗೆಯೇ ವಯಸ್ಕರ ಪತ್ನಿ ಅದೃಷ್ಟವಶಾತ್ ಪಾರಾದರು. ಇದಿಷ್ಟು ಘಟನೆ ನಡೆದ ನಂತರ ಆದ ಮನುಷ್ಯ ಜೀವಕ್ಕೆ ಸಂಬಂಧಿಸಿದ ಬೆಳವಣಿಗೆಗಳು.

ಆದರೆ, ದುರ್ಘಟನೆ ನಡೆದ ಸಂದರ್ಭದಲ್ಲಿ ಎಂಥವರೇ ಇದ್ದರೂ ತಕ್ಷಣ ಅವರು ಮಾನವೀಯತೆಯಿಂದ ವರ್ತಿಸಬೇಕು ಮತ್ತು ಪೊಲೀಸರಂತೂ ಜವಾಬ್ದಾರಿಯಿಂದ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಅಪಘಾತ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲೇ ತುಮಕೂರು ಜಿಲ್ಲೆಯ ಸ್ಥಳೀಯ ಪೊಲೀಸರು ಸ್ಥಳಕ್ಕೆ ಹಾಜರಾಗಿದ್ದಾರೆ. ಅವರು ಮೊದಲು ಏನು ಮಾಡಬೇಕಿತ್ತೆಂದರೆ, ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಜತೆಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಗಾಯಗೊಂಡವರ ಬಳಿ ಇದ್ದ ನಗ-ನಾಣ್ಯಗಳನ್ನ ಜೋಪಾನವಾಗಿ ಎತ್ತಿಟ್ಟು, ನಂತರ ಅದನ್ನು ಸಂಬಂಧಿಸಿದವರಿಗೆ ಮರಳಿಸಬೇಕಿತ್ತು.

ಆದರೆ ಅಲ್ಲಿಯ ಪೊಲೀಸರು ಮೊದಲು ಮಾಡಿದ್ದೇನೆಂದರೇ, ನುಜ್ಜುಗುಜ್ಜಾಗಿದ್ದ ಕಾರನ್ನು ತಡಕಾಡಿದ್ದಾರೆ. ಕಾರಿನಲ್ಲಿ ಇದ್ದ ಜೋಳದ ಚೀಲವನ್ನು ಎತ್ತಿ ತಮ್ಮ ಬೈಕ್‌ಗೆ ಹಾಕುವಂತೆ ಸ್ಥಳದಲ್ಲಿದ್ದವರಿಗೆ ಸೂಚಿಸಿ ಅದನ್ನು ಎತ್ತೊಯ್ದಿದಾರೆ. ನಂತರ, ಅದೇ ಕಾರಿನ ಒಳಗಡೆ ಇದ್ದ ಹತ್ತಿರಹತ್ತಿರ ಅರ್ಧ ಕೆ.ಜಿ. ತೂಕದ ಬಂಗಾರದ ಒಡವೆಗಳನ್ನು ಮೆಲ್ಲಗೆ ಎತ್ತಿಟ್ಟುಕೊಂಡು, ಅಲ್ಲೇನೂ ನಗ-ನಾಣ್ಯಗಳು ಇರಲಿಲ್ಲ ಎಂದು ಮಹಜರು ಬರೆದುಕೊಂಡು, ಒಡವೆಗಳನ್ನು ತಮ್ಮ ಕಿಸೆಗಿಳಿಸಿಕೊಂಡು ಹೋಗಿದ್ದಾರೆ. ಗಾಯಗೊಂಡಿದ್ದ ವಯಸ್ಕ ಪುರುಷರು ತುರ್ತು ಅಪಘಾತ ಚಿಕಿತ್ಸಾ ಘಟಕದಲ್ಲಿ ಮರಣ ಹೊಂದಿದ ನಂತರ ಅವರ ಕೊರಳಲಿದ್ದ ಚಿನ್ನದ ಸರವೂ ಮಾಯವಾಗಿದೆ. ನಗ-ನಾಣ್ಯಗಳಿಗೆ ಸಂಬಂಧಿಸಿದಂತೆ ಪೋಲಿಸರು ಅಪಘಾತಕ್ಕೀಡಾದವರ ಸಂಬಂಧಿಕರಿಗೆ ಎರಡು-ಮೂರು ದಿನವಾದರೂ ಏನನ್ನೂ ತಿಳಿಸಿಲ್ಲ.

ಆಸ್ಪತ್ರೆ ಓಡಾಟ ಮತ್ತು ದುಃಖದ ಮಡುವಿನಲ್ಲಿದ್ದ ಗಾಯಾಳುಗಳ ಸಂಬಂಧಿಕರು ಇದರ ಬಗ್ಗೆ ಆ ಕ್ಷಣದಲ್ಲಿ ಯೋಚಿಸಲೂ ಹೋಗಿರಲಿಲ್ಲ ಮತ್ತು ಅವರಿಗೆ ವ್ಯವಧಾನವೂ ಇರಲಿಲ್ಲ. ಅವರೆಲ್ಲರಿಗೂ ಇದ್ದ ಒಂದೇ ಚಿಂತೆ ಸಾವು-ಬದುಕಿನ ನಡುವೆ ಇದ್ದವರನ್ನು ಉಳಿಸಿಕೊಳ್ಳುವುದು ಮತ್ತು ಅವರು ಬೇಗನೆ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳುವುದು. ಹಾಗಾಗಿ ಗಾಯಾಳುಗಳು ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ನಗ-ನಾಣ್ಯಗಳ ಬಗ್ಗೆ ಯೋಚಿಸಿ, ಸಂಬಂಧಿಸಿದ ಠಾಣೆಗೆ ತೆರಳಿ, ಈ ವಿಷಯದ ಬಗ್ಗೆ ಅವರು ಅಲ್ಲಿ ಮಾತನಾಡಿದರು. ಆದರೆ, ಅಲ್ಲಿಯ ಪೊಲೀಸರು ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸದೇ, ಮಹಜರು ಮಾಡಿದ ಸಂದರ್ಭದಲ್ಲಿ ಯಾವ ಆಭರಣಗಳೂ ಇರಲಿಲ್ಲ ಎಂದು ಶುದ್ಧ ಒರಟುತನವನ್ನು ಪ್ರದರ್ಶಿಸಿ ಇವರನ್ನೇ ಗದರಿದರು. ಇದರಿಂದ ಅವಮಾನಿತರಾದ ಮತ್ತು ಬೇಸರಗೊಂಡ ಸಂಬಂಧಿಕರು ಪೊಲೀಸರ ಅಮಾನವೀಯ ವರ್ತನೆಯನ್ನ ಶಪಿಸಿ ಹಿಂದಿರುಗಿದರು. ಆದರೆ, ಅವರು ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಬರುವ ಮಾರ್ಗದಲ್ಲಿ ಅವರಿಗೆ ಬಂದ ಫೋನ್ ಕರೆಯೊಂದು, ಅಲ್ಲಿದ್ದ ಬಂಗಾರದ ಆಭರಣಗಳನ್ನ ಯಾರ್‍ಯಾರು ಕದ್ದೊಯ್ದರು… ಜೋಳದ ಚೀಲ ಯಾರ ಬೈಕೇರಿತು ಎನ್ನುವುದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದರು. ಹೀಗೆ ಹೇಳಿದಾತ ಒಬ್ಬ ಸ್ವೀಪರ್. ಸಿಕ್ಕ ಈ ಸಣ್ಣ ಸುಳಿವನ್ನು ಆಧರಿಸಿ, ಅದರ ಬೆನ್ನತ್ತಿ ಹೋದ ಸಂಬಂಧಿಕರು, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಯಾವಾಗ ಉನ್ನತ ಪೊಲೀಸ್ ಅಧಿಕಾರಿಗಳು ಚಾಟಿ ಬೀಸಿದರೋ, ಬಂಗಾರದ ಆಭರಣಗಳನ್ನು ಕದ್ದೊಯ್ದಿದ್ದ ಪೊಲೀಸರು ಬೆವರಿದರು. ಇದರ ಮಧ್ಯೆಯೇ ಸಾಕ್ಷಿದಾರನನ್ನೇ ಬೆದರಿಸಿ ದೂರು ನಿಲ್ಲದಂತೆ ಮಾಡುವ ಅವರ ಪ್ರಯತ್ನವೂ ವಿಫಲವಾಯಿತು. ಕಡೆಗೆ ಪರೋಕ್ಷವಾಗಿ ತಪ್ಪೊಪ್ಪಿಕೊಂಡ ಪೊಲೀಸರು, ಬಂಗಾರದ ಆಭರಣಗಳನ್ನು ವಾಪಸ್ ಕೊಡುವ ಬದಲಿಗೆ ಒಂದಷ್ಟು ಲಕ್ಷಗಳನ್ನು ಕೊಟ್ಟು ಕೈ ತೊಳೆದುಕೊಳ್ಳಲು ಸಂಬಂಧಿಕರ ಮನೆಗೆ ಧಾವಿಸಿ ಬಂದು, ’ನೀವು ಸಹಕರಿಸದಿದ್ದರೆ ಶಂಕಿತ ಪೊಲೀಸ್ ಕುಟುಂಬಗಳ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರನ್ನು ಅವಲಂಬಿಸಿದವರ ಗತಿಯನ್ನು ಊಹಿಸಲಿಕ್ಕಾಗದು,’ ಎಂದೆಲ್ಲಾ ಮನ ಕರಗುವಂತೆ ಬೇಡಿಕೊಂಡರು.

ಅಂದ ಹಾಗೇ, ಈ ನಾಲ್ಕೈದು ಲಕ್ಷ ಹಣವನ್ನು ಪೊಲೀಸರು ತಮ್ಮ ಸ್ವಂತ ಜೇಬಿನಿಂದಾದರೂ ಏಕೆ ಕೊಡುತ್ತಾರೆ? ಹಾಗಾಗಿ, ನಗದು ಮೊತ್ತವನ್ನು ವಾಪಸ್ ಕೊಡಲು ಮುಂದೆ ಬಂದಿರುವುದು ಕೂಡ ಅವರು ಆಭರಣಗಳನ್ನು ಕದ್ದೊಯ್ದಿದ್ದನ್ನು ಒಪ್ಪಿಕೊಂಡಂತೆ ಅಲ್ಲವೇ?

ಏನಾಗಿದೆ ನಮ್ಮ ಸಮಾಜಕ್ಕೆ ಮತ್ತು ಪೊಲೀಸ್ ವ್ಯವಸ್ಥೆಗೆ? ಪೊಲೀಸರು ಮಾನವೀಯತೆಯನ್ನೇ ಕಳೆದುಕೊಂಡಿದ್ದಾರೆಯೇ? ಎಲ್ಲಾ ಪೊಲೀಸರೂ ಹೀಗೆಯೇ ಅಥವ ಇದರಲ್ಲಿ ಸಂಬಂಧಪಟ್ಟ ಠಾಣೆಯ ಎಲ್ಲರೂ ಭಾಗಿ ಎಂದು ಹೇಳಲಾಗುವುದಿಲ್ಲ. ಆದರೆ, ಅಪಘಾತ ಸಂಭವಿಸಿದ ತಕ್ಷಣ ಸಂಬಂಧಿಸಿದವರಿಗೆ ತುರ್ತು ಚಿಕಿತ್ಸೆ ಕೊಡಿಸಿ, ಸಾಂತ್ವನ ಹೇಳಿ, ಮಾನವೀಯತೆ, ಕಳಕಳಿ ವ್ಯಕ್ತಪಡಿಸಬೇಕಿದ್ದವರೇ ಅಮಾನವೀಯವಾಗಿ ಮತ್ತು ದರೋಡೆಕೋರರಂತೆ ವರ್ತಿಸಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗದಿರುವುದಿಲ್ಲ. ಪೊಲೀಸರ ಮೇಲೆ ಸಾಕಷ್ಟು ಒತ್ತಡಗಳಿವೆ, ಜವಾಬ್ದಾರಿಗಳಿವೆ, ಒಂದು ಜಿಲ್ಲೆಯ, ನಗರದ, ರಾಜ್ಯದ ಭದ್ರತೆಯ ಹೊಣೆಗಾರಿಕೆಯೂ ಅವರ ಮೇಲಿದೆ. ಎಲ್ಲವೂ ಸರಿ. ಆದರೆ, ಈ ಎಲ್ಲ ಹೊಣೆಗಾರಿಕೆಗಳ ಮಧ್ಯೆಯೇ ಮಾನವೀಯತೆ, ಕಳಕಳಿ, ಪ್ರಾಮಾಣಿಕತೆ, ಪಾಪಪ್ರಜ್ಞೆಯೂ ಅವರಲ್ಲಿ ಇರಬೇಕಲ್ಲವೇ?

ಮತ್ತೆ ಮತ್ತೆ ಇಲ್ಲಿ ಏಳುವ ಪ್ರಶ್ನೆ ಏನೆಂದರೇ, ಪೊಲೀಸರೇ ಇಷ್ಟು ಅಮಾನವೀಯವಾಗಿ ನಡೆದುಕೊಂಡು ಮತ್ತು ಕಳ್ಳರಂತೆ ಮತ್ತು ಸಮಾಜಘಾತುಕರಂತೆ ಅಪಘಾತಕ್ಕೀಡಾದ ಜನರ ವಸ್ತುಗಳನ್ನೇ ಕದ್ದೊಯ್ದರೆ, ಜನಸಾಮಾನ್ಯರನ್ನು ಇಂತಹ ವಂಚಕರಿಂದ ಮತ್ತು ಬೆಂಕಿಬಿದ್ದ ಮನೆಯಲ್ಲಿ ಗಳಹಿಡಿಯುವ ಪಾಪಿಗಳಿಂದ ಕಾಯುವವರ್‍ಯಾರು?

ಪೊಲೀಸರ ವರ್ತನೆಗೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಅನಗತ್ಯ ಬಲಪ್ರದರ್ಶನದ ಲಾಠಿ ಚಾರ್ಜ್, ರೈತರ ಮನೆ ಜಫ್ತಿ ಮಾಡುವಾಗ ನಡೆದುಕೊಳ್ಳುವ ರೀತಿ, ಕಳ್ಳತನದ ಮತ್ತು ಕೊಲೆಯ ಪ್ರಕರಣಗಳು ನ್ಯಾಯವಾಗಿ ದಾಖಲಾಗದೇ ಇರುವುದು, ಕಳ್ಳರಲ್ಲದವರನ್ನು ಕಳ್ಳರನ್ನಾಗಿಸಿವುದು, ಅಮಾಯಕರನ್ನು ಕೊಲೆಗಾರನೆಂದು ಬಂಧಿಸುವುದು, ಸಾಕ್ಷಿಗಳನ್ನೇ ಆರೋಪಿಗಳನ್ನಾಗಿಸುವುದು, ಇಂತಹ ಉದಾಹರಣೆಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಪೊಲೀಸ್ ವ್ಯವಸ್ಥೆಯಲ್ಲಿ ಪೊಲೀಸ್ ಪೇದೆಗಳಾದಿಯಾಗಿ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಘನತೆಯುಕ್ತ ಜೀವನ ನಡೆಸಲು ಸಾಕಾಗುವಷ್ಟು ಸಂಬಳ ನೀಡುತ್ತಿದ್ದರೂ ಲಂಚಕ್ಕೆ ಕೈಯೊಡ್ಡುವ ಪರಿಪಾಠವೇನೂ ನಿಂತಿಲ್ಲ. ಹಾಗೆಯೇ, ಅಮಾಯಕರನ್ನು ಲಾಕಪ್‌ಗಳಿಗೆ ತಳ್ಳಿ, ಅಪರಾಧಿಗಳನ್ನ ಹಿಡಿದು ತಂದಿದ್ದೇವೆ ಎಂದು ಕರ್ತವ್ಯ ಪಾಲನೆಯ ಪದಕ ಎದೆಗೆ ನೇತು ಹಾಕಿಕೊಂಡಿರುವ ಪ್ರಕರಣಗಳಿಗೂ ನಮ್ಮಲ್ಲಿ ಕೊರತೆ ಇಲ್ಲ.

ಮೇಲಿನ ಘಟನೆಯಲ್ಲಿ ದುರ್ಮರಣಕ್ಕೀಡಾದ ಸಂಬಂಧಿಕರು ತಿಳಿವಳಿಕೆಯುಳ್ಳವರಾಗಿದ್ದರಿಂದ ಮತ್ತು ಅವರಿಗೂ ಒಂದಷ್ಟು ಪ್ರಭಾವಿಗಳು ಪರಿಚಯವಿದ್ದವರಾಗಿದ್ದರಿಂದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರು ಮತ್ತು ಅವರಿಗೆ ಅರೆನ್ಯಾಯವಾದರೂ ದಕ್ಕಿತು. ಆದರೇ, ಅದೇ ಸ್ಥಳದಲ್ಲಿ ಒಬ್ಬ ಸಾಮಾನ್ಯ ನಾಗರಿಕನಿದ್ದಿದ್ದರೆ, ಆತ ಬೆಂಗಳೂರಿನ ಪೊಲೀಸ್ ಕಚೇರಿ ಇರಲಿ, ಸ್ಥಳೀಯ ಪೊಲೀಸ್ ಠಾಣೆಗೆ ಹೋಗಲೇ ಹಿಂದೇಟು ಹಾಕುತ್ತಿದ್ದ ಎನ್ನುವುದೂ ಕೂಡ ಇವತ್ತಿನ ನಿಷ್ಠುರ ಸತ್ಯ.

ಇನ್ನು, ಪೊಲೀಸರೇ ತಮ್ಮ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ತಪ್ಪೊಪ್ಪಿಕೊಂಡು ಹಣ ಹಿಂದಿರುಗಿಸುತ್ತಿರುವುದು ಬಹುಶಃ ಇದೇ ಮೊದಲಿರಬೇಕು.

ತುಮಕೂರಿನ ಗುಬ್ಬಿ-ಗೇಟ್ ಬಳಿ ಸಂಭವಿಸಿದ ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರ ವರ್ತನೆ ಕುರಿತು ರಾಜ್ಯದ ಗೃಹಮಂತ್ರಿಗಳು ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಯೋಚಿಸುವ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಹಾಗೆಯೇ, ಇಂತಹ ದುರಾಚಾರದ ನಡವಳಿಕೆಗಳಲ್ಲಿ ಮತ್ತು ಸಮಾಜದಲ್ಲಿ ಕುಂದುತ್ತಿರುವ ಮಾನವೀಯ ಮೌಲ್ಯಗಳಲ್ಲಿ ತಮ್ಮ ಪಾತ್ರವೇನಿದೆ ಎಂದು ನಾಗರಿಕರೂ ಗಂಭೀರವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿರುವುದೂ ಇಂದಿನ ತುರ್ತಾಗಿದೆ.

ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲವಾದರೆ…


-ಚಿದಂಬರ ಬೈಕಂಪಾಡಿ


 

ಜನ ನಿದ್ದೆಯ ಮಂಪರಿಗೆ ಜಾರುವ ಹೊತ್ತಲ್ಲಿ ಕಾವೇರಿ ತಮಿಳುನಾಡಿನತ್ತ ಧುಮ್ಮಿಕ್ಕಿ ಹರಿಯತೊಡಗಿದಳು. ಅವಳು ಈಗಲೂ ಹರಿಯುತ್ತಿದ್ದಾಳೆ. ಕಾವೇರಿಯನ್ನೇ ನಂಬಿ ಬದುಕುತ್ತಿರುವ ಜನ ಮುಂಜಾನೆ ಬೀದಿಗೆ ಇಳಿದಿದ್ದಾರೆ. ರಸ್ತೆ ತಡೆ, ಧರಣಿ, ಪ್ರತಿಭಟನೆ ಮುಂತಾದ ಪ್ರಲಾಪಗಳು ನಡೆಯುತ್ತಿವೆ. ಅತ್ತ ದೆಹಲಿಯ ಕರ್ನಾಟಕ ಭವನದಲ್ಲಿ ಅದೇ ಹೊತ್ತಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗಿರುವ ಕಾವೇರಿ ನೀರು ಕುಡಿದೇ ಬೆಳೆದವರೊಂದಿಗೆ ಸಭೆ ನಡೆಸುತ್ತಿದ್ದರು. ಇದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಧಿಕಾರದ ಅನಿವಾರ್ಯತೆ. ಕಾವೇರಿ ನೀರು ಹರಿಸಿಕೊಂಡಿರುವುದು ತಮಿಳುನಾಡಿನ ಮುಖ್ಯಮಂತ್ರಿ ಓರ್ವ ಹೆಣ್ಣು ಮಗಳು ಕನ್ನಡತಿ ಜಯಲಲಿತಾ ಅವರ ರಾಜಕೀಯ ಪ್ರಬುದ್ಧತೆ ಮತ್ತು ಇಚ್ಛಾಶಕ್ತಿಯ ಅನಾವರಣ. ಹಾಗಾದರೆ ನಾವು, ನಮ್ಮ ಮುಖ್ಯಮಂತ್ರಿ, ನಮ್ಮ ಮಂತ್ರಿಗಳು, ಸಂಸದರು, ಶಾಸಕರು?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧರಣಿ ನಿರತ ಕಾವೇರಿ ಪ್ರದೇಶದ ಶಾಸಕರ ಒತ್ತಡಕ್ಕೆ ಮಣಿದು ನೀಡಿದ ಹೇಳಿಕೆಯಲ್ಲೇ ತಮಿಳುನಾಡಿಗೆ ಕಾವೇರಿ ಹರಿದು ಹೋಗುವ ಎಳೆಗಳಿದ್ದವು. ತಮಿಳುನಾಡಿಗೆ ಕಾವೇರಿ ಹರಿಸದಿದ್ದರೆ ರೈತರ ಹಿತಕ್ಕೆ ಧಕ್ಕೆಯಾಗುತ್ತದೆ, ಹಿಂದೆಯೂ ಹೀಗೆಯೇ ಆಗಿತ್ತು ಎನ್ನುವ ಅವರ ಮಾತುಗಳನ್ನು ಅರ್ಥಮಾಡಿಕೊಂಡವರಿಗೆ ಜಗದೀಶ್ ಶೆಟ್ಟರ್ ರೈತರ ಹೆಸರಲ್ಲಿ ತಮ್ಮ ಹಿತ ಕಾಪಾಡಿಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು, ಅದು ಹಾಗೆಯೇ ಆಯಿತು. ನಿಜಕ್ಕೂ ಜಗದೀಶ್ ಶೆಟ್ಟರ್ ತಮಿಳುನಾಡಿಗೆ ಕಾವೇರಿ ಹರಿಸಿ ತಪ್ಪು ಮಾಡಿದರು ಎನ್ನುವವರು ಅಧಿಕಾರವಿಲ್ಲದವರು. ಅಧಿಕಾರದಲ್ಲಿದ್ದಾಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೇ ಮುಖ್ಯವಾಗುತ್ತದೆ, ಈ ಮಾತಿಗೆ ಶೆಟ್ಟರ್ ಕೂಡಾ ಹೊರತಲ್ಲ ಎನ್ನುವುದು ಸಾಬೀತಾಗಿದೆ.

ಸುಪ್ರೀಂಕೋರ್ಟ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದಾಗ ಅದನ್ನು ಪಾಲಿಸಬೇಕೇ, ಬೇಡವೇ, ಎನ್ನುವ ಗೊಂದಲ ಮೂಡಿತ್ತು. ಕೋರ್ಟ್ ಆದೇಶ ಪಾಲನೆ ಮಾಡಿದರೆ ಮಾತ್ರ ಮತ್ತೆ ನಮ್ಮ ವಾದ ಮಂಡಿಸಲು ಅವಕಾಶವಾಗುತ್ತದೆ ಎನ್ನುವ ಕಾನೂನು ಪಂಡಿತರ ಸಲಹೆ ಸಮಯೋಚಿತವೇ ಆಗಿತ್ತು. ಆದೇಶವನ್ನು ಪಾಲನೆ ಮಾಡಿ ನಂತರ ತಮ್ಮ ಸಂಕಷ್ಟವನ್ನು ಮತ್ತೊಮ್ಮೆ ಕೋರ್ಟ್ ಮುಂದೆ ಹೇಳಿಕೊಳ್ಳಲು ಅನುವಾಗುತ್ತದೆ, ಇಲ್ಲವಾದರೆ ಮೊದಲು ಆದೇಶ ಪಾಲಿಸಿ, ನಂತರ ನಿಮ್ಮ ವಾದ ಮಂಡಿಸಿ ಎನ್ನುವ ಮಾತನ್ನು ಕೋರ್ಟ್ ಹೇಳುತ್ತದೆ, ಹಿಂದೆಯೂ ಹೇಳಿದೆ. ಕಾನೂನು, ಕೋರ್ಟ್ ತನ್ನ ಪರಿಧಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅದನ್ನು ನಿರ್ವಹಿಸುವುದು ಅದರ ಜವಾಬ್ದಾರಿ. ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಬರಲು ಕಾರಣವಾದ ಅಂಶಗಳು ಕೂಡಾ ಅನೇಕ ಇವೆ, ಅದಕ್ಕೂ ಇತಿಹಾಸವಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿ ಜನಮೆಚ್ಚುವಂಥದ್ದಲ್ಲ, ಇದನ್ನು ಜನ ನಿರೀಕ್ಷೆ ಮಾಡಿರಲಿಲ್ಲ. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ವಪಕ್ಷಗಳ ಸಭೆ ನಡೆಸಿದಾಗಲೂ ಕಾವೇರಿ ನೀರು ಹರಿಸಲು ಯಾರೂ ಸಹಮತ ವ್ಯಕ್ತಪಡಿಸಿರಲಿಲ್ಲ. ನೀರು ಹರಿಸಬಾರದು ಎನ್ನುವುದೇ ಮುಖ್ಯವಾಗಿತ್ತು. ಈ ಕಾರಣದಿಂದಲೇ ವಿಧಾನ ಸಭೆಯ ಕಲಾಪ ಬೆಳಿಗ್ಗೆ ನಡೆಯಲಿಲ್ಲ. ಮಧ್ಯಾಹ್ನದ ನಂತರ ವಿಧಾನ ಸಭೆಯ ಕಲಾಪ ಆರಂಭವಾದಾಗ ಕಾವೇರಿ ಪ್ರದೇಶದ ಶಾಸಕರು ಪ್ರತಿಭಟನೆ ಮಾಡಿದ ನಂತರವೇ ಮುಖ್ಯಮಂತ್ರಿ ಸದನಕ್ಕೆ ಹಾಜರಾಗಿ ಶುಕ್ರವಾರ ಸಂಸದರ ನಿಯೋಗವನ್ನು ಪ್ರಧಾನಿ ಬಳಿಗೆ ಕೊಡೊಯ್ಯುವ ಭರವಸೆ ನೀಡಿದರು. ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರ ತೆಗೆದುಕೊಳ್ಳುವ ವಚನ ನೀಡಿದ್ದರು ವಿಧಾನ ಸಭೆಗೆ. ಹೊರಗೆ ಬಂದು ಕಾವೇರಿಗೆ ಹರಿಯಲು ಹೇಳಿ ದೆಹಲಿ ವಿಮಾನ ಹತ್ತಿದರು. ಯಾಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೀಗೆ ಮಾಡಿದರು?

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಕೋರ್ಟ್ ಆದೇಶವನ್ನು ಪಾಲನೆ ಮಾಡಿದೆ, ಕಾನೂನಿಗೆ ತಲೆ ಬಾಗಿದೆ ಎನ್ನುವ ಸಂತೃಪ್ತಿ ಹೆಮ್ಮೆ ಮುಖ್ಯಮಂತ್ರಿಯವರಿಗೆ ಇರಬಹುದು. ಆದರೆ ಕನ್ನಡಿಗರ ಆಶಯಕ್ಕೆ, ಅವರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡರು ಎನ್ನುವ ಕಳಂಕ ಅವರ ಮೈಗೆ ಅಂಟಿಕೊಂಡದ್ದೂ ಸತ್ಯ. ರಾಜಕೀಯದಲ್ಲಿ ಸಜ್ಜನಿಕೆಗೆ ಹೆಸರಾದ ಜಗದೀಶ್ ಶೆಟ್ಟರ್ ಹೀಗೇಕೆ ಮಾಡಿದರು ಎನ್ನುವುದಕ್ಕಿಂತಲೂ ಅವರಿಗೆ ಹಾಗೆ ಮಾಡುವ ಅನಿವಾರ್ಯತೆ ಇತ್ತು ಎನ್ನುವುದೇ ಲೇಸು.

ಒಂದು ವೇಳೆ ಕೋರ್ಟ್ ಆದೇಶದಂತೆ ನೀರು ಹರಿಸದೇ ಇದ್ದಿದ್ದರೆ ಕಾನೂನಿಗೆ ಅಗೌರವ ಸೂಚಿಸಿದಂತಾಗುತ್ತಿತ್ತು. ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಿತ್ತು, ಅಧಿಕಾರ ಕಳೆದುಕೊಳ್ಳುವ ಭೀತಿಯಿತ್ತು. ರಾಜಕೀಯದಲ್ಲಿ ಸಾಕಷ್ಟು ಹಾದಿ ಕ್ರಮಿಸಿರುವ ಜಗದೀಶ್ ಶೆಟ್ಟರ್ ಯೋಚಿಸುವ ವಿಧಾನದಲ್ಲಿ ಸೋತರು ಅನ್ನಿಸುತ್ತದೆ. ಯಾಕೆಂದರೆ ಈಗಲೂ ಅವರ ಸರ್ಕಾರ ಸುಭದ್ರವಾಗಿಲ್ಲ. ಅವರು ಅದೆಷ್ಟು ದಿನ ಇದೇ ಅಧಿಕಾರದಲ್ಲಿರುತ್ತಾರೆ ಎನ್ನುವುದು ನಮಗಿಂತಲೂ ಅವರಿಗೇ ಚೆನ್ನಾಗಿ ಗೊತ್ತು. ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲ ಎನ್ನುವುದಾದರೆ ಜನರಿಗಾಗಿ ಅಧಿಕಾರ ಕಳೆದುಕೊಳ್ಳುವುದು, ನ್ಯಾಯಾಂಗ ನಿಂದನೆಗೆ ಗುರಿಯಾಗುವುದು ಅಪಮಾನವೆಂದು ಯಾಕೆ ಭಾವಿಸಬೇಕು?

ಇಷ್ಟಕ್ಕೂ ಕಾವೇರಿ ನೀರು ಹರಿಸಿದ್ದರಿಂದ ಜಗದೀಶ್ ಶೆಟ್ಟರ್ ಕುರ್ಚಿ ಭದ್ರವಾಗಲಿಲ್ಲ ಅಥವಾ ಅವರಿಗಿರುವ ಅಧಿಕಾರದ ಅವಧಿ ವಿಸ್ತರಣೆಯಾಗಲಿಲ್ಲ. ಕಳಂಕ ರಹಿತವಾಗಿ ರಾಜಕೀಯ ನಡೆಸಿ ಸಂಭಾವಿತ ರಾಜಕಾರಣಿಯೆಂದೇ ಗುರುತಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಿಧಾನ ಮಂಡಲದ ಕಲಾಪ ನಡೆಯುತ್ತಿರುವಾಗಲೇ ಎಡವಿದ್ದು ಮಾತ್ರ ವಿಪರ್ಯಾಸ.

ಕಾವೇರಿ ನೀರು ಹರಿಸಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಅನೇಕ ಕಾರಣಗಳಿವೆ ನಿಜ. ಈ ಕಾರಣಗಳು ಜನರ ವಿಶ್ವಾಸವನ್ನು ಕಟ್ಟಿಕೊಡುವುದಿಲ್ಲ ಅಥವಾ ಹರಿದುಹೋದ ನೀರನ್ನು ಮರಳಿ ಪಡೆಯಲು ನೆರವಾಗುವುದಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಚಾಣಾಕ್ಷ ನಡೆಗಳನ್ನು ಕಡುವಿರೋಧಿಯೂ ಮೆಚ್ಚಿದರೆ ತಪ್ಪಲ್ಲ. ಅವರೂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕಾವೇರಿ ಹರಿಸಿಕೊಂಡಿದ್ದರೂ ಅಲ್ಲಿನ ಜನ ಅವರಿಗೆ ಅವರಿಗೆ ಅಧಿಕಾರವನ್ನು ಗಟ್ಟಿಗೊಳಿಸಬಹುದು. ಆದರೆ ಜಗದೀಶ್ ಶೆಟ್ಟರ್ ಕಾನೂನಿನ ಹೆದರಿ ಜನರ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡಿದರು ಎನ್ನುವ ಅಪವಾದ ಅಳಿಸಿಹೋಗದು.

ಈಗ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ತಡವಾಗಿ ನೀರು ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಶೆಟ್ಟರ್ ಈಗ ಎರಡು ತಪ್ಪು ಮಾಡಿದಂತಾಗಿದೆ. ನೀರು ಬಿಡಬಾರದೆಂದು ಜನರು, ಜನಪ್ರತಿನಿಧಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರೂ ನೀರು ಹರಿಸಿದರು, ಜೊತೆಗೆ ತಮಿಳುನಾಡಿನ ವಾದವನ್ನು ಗಮನಿಸಿದರೆ ತಡವಾಗಿ ನೀರು ಬಿಟ್ಟು ಕೋರ್ಟ್ ಆದೇಶ ಪಾಲನೆಯಲ್ಲಿ ವಿಳಂಬ ಮಾಡಿದರು. ಈ ಎರಡೂ ತಪ್ಪುಗಳ ಹೊರೆ ಹೊರುವ ಬದಲು ಸುಪ್ರೀಂ ಆದೇಶ ಹೊರಬಿದ್ದ ತಕ್ಷಣವೇ ನೀರು ಹರಿಸಿದ್ದರೆ ನ್ಯಾಯಾಂಗ ನಿಂದನೆಯಿಂದ ಪಾರಾಗುತ್ತಿದ್ದರು, ಕೇವಲ ನೀರು ಬಿಟ್ಟ ತಪ್ಪಿಗೆ ಗುರಿಯಾಗುತ್ತಿದ್ದರು.

ನಿರೀಕ್ಷೆಯಂತೆಯೇ ವಿಧಾನ ಮಂಡಲದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ತಮ್ಮ ರಾಜಕೀಯ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ. ಕಲಾಪ ಕಾವೇರಿ ನೀರಿನಲ್ಲಿ ಕೊಚ್ಚಿಹೋಯಿತು, ನೀರೂ ಹರಿದು ಹೋಯಿತು, ಕಳಂಕ ಮಾತ್ರ ಉಳಿಯಿತು.

ದಾರಿ ತಪ್ಪಿದ ಮಕ್ಕಳಾಗುತ್ತಿರುವ ಯುವಕರು

– ಡಾ.ಎಸ್.ಬಿ.ಜೋಗುರ

ಯುವಕರು ಎನ್ನುವ ಪದವೇ ನಿರ್ಮಾಣವನ್ನು ಸೂಚಿಸುವಂಥದು. ಸಾಧಿಸುವಂಥದು. ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ಕ್ರಾಂತಿಗಳ ಸಂದರ್ಭಗಳಲ್ಲಿಯೂ, ಮಹಾಯುದ್ಧಗಳ ಸಂದರ್ಭಗಳಲ್ಲಿಯೂ ಯುವಕರ ಪಾತ್ರ ನಿರ್ಣಾಯಕವಾಗಿತ್ತು. ಸುಭಾಸಚಂದ್ರ ಭೋಸ್, ಅಝಾದ್, ಭಗತಸಿಂಗ ಮುಂತಾದವರ ಹೋರಾಟ ಮುಟ್ಟಿಸಿದ ಬಿಸಿಗೆ ಬ್ರಿಟಿಷರಿಗೆ ನೆಮ್ಮದಿಯಿಂದ ಮಲಗಿ ನಿದ್ದೆ ಮಾಡಲಾಗಲಿಲ್ಲ. ಅಂಥಾ ಯುವಕರೇ ರಾಷ್ಟ್ರ ನಿರ್ಮಾಣದ ಕೈಂಕರ್ಯದಲ್ಲಿ ಸಾಥ್ ನೀಡಿದವರು. ಅವರು ಆಯ್ಕೆ ಮಾಡಿಕೊಂಡ ಮಾರ್ಗ, ನಡಿಗೆ ಭಿನ್ನವಾಗಿದ್ದರೂ ಗುರಿ ಮಾತ್ರ ಒಂದೇ ಆಗಿತ್ತು ಎನ್ನುವದನ್ನು ಮರೆಯುವಂತಿಲ್ಲ. ವಾಂಛಲ್ಯಗಳಿಂದ ಪೂರ್ಣವಾಗಿ ವಿಚಲಿತರಾಗಿ ಅವರು ದೇಶ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದೇಶಕ್ಕಾಗಿ ನೇಣುಗಂಬವನ್ನು ಏರುವ ಸಂದರ್ಭದಲ್ಲಿ ಹೆಮ್ಮೆ ಪಡುವ ತಾಯಂದಿರಿದ್ದರು.

ನಮಗೆ ಸ್ವಾತಂತ್ರ್ಯ ದಕ್ಕಿ ಅದಾಗಲೇ ಆರು ದಶಕಗಳಾದರೂ ನಮಗೆ ಮತ್ತೆ ಆ ತರಹದ ಯುವ ಸಮೂಹವನ್ನು ಕಾಣಲಾಗುತ್ತಿಲ್ಲ. ಸ್ವಾತಂತ್ರ್ಯ ಎನ್ನುವದು ಈಗಿನ ಯುವಕರಿಗೆ ಅನಾಮತ್ತಾಗಿ ದಕ್ಕಿರುವ ಒಂದು ಮೌಲ್ಯವಾಗಿರುವದರಿಂದ ಅದರ ದುರುಪಯೋಗ ಶುರುವಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ಸ್ವೇಚ್ಛೆ ಆರಂಭವಾಗಿದೆ. ಇವರೆಲ್ಲಾ ನಮ್ಮದೇ ದೇಶದ ಯುವಕರೇ..? ಅನ್ನುವ ಹಾಗೆ ಅವರ ಅಪವರ್ತನೆಗಳಿವೆ. ಅವರೊಂಥರಾ ಮಾನಸಿಕವಾಗಿ ವಿಕ್ಷಿಪ್ತರಾದವರ ಹಾಗೆ ತೋರುತ್ತಾರೆ. ಅಷ್ಟಕ್ಕೂ ಅವರಿನ್ನೂ 25 ರ ಗಡಿಯನ್ನು ದಾಟಿರುವದಿಲ್ಲ, ಆಗಲೇ ತಮ್ಮ ಬದುಕಿನಲ್ಲಿ ಎಲ್ಲವೂ ಮುಗಿದು ಹೋದಂತೆ, ಇಲ್ಲವೇ ಮುಗಿಸಲು ಹೊರಟಂತೆ ಬದುಕುತ್ತಿರುವದನ್ನು ನೋಡಿದಾಗ, ತುಂಬಾ ಕಸಿವಿಸಿ ಎನಿಸುತ್ತದೆ. ದೇಶದ ಭವಿಷ್ಯ ರೋಗಗ್ರಸ್ಥವಾಗಿ ರೂಪಗೊಳ್ಳುತ್ತಿದೆಯಲ್ಲ ಎನ್ನುವ ಭಯ ಕಾಡುತ್ತದೆ. ಅವರ ವರ್ತನೆಗಳಲ್ಲಿ ಆವೇಶವೇ ಹೆಚ್ಚಾಗಿ ತುಂಬಿಕೊಂಡಿದೆ. ಯಾರ ಮಾತನ್ನೂ ಅವರು ತಾಳ್ಮೆಯಿಂದ ಕೇಳುವ ಸ್ಥಿತಿಯಲ್ಲಿಲ್ಲ. ಪರಿಣಾಮವಾಗಿ ಅವರು ಆಡಿದ್ದೇ ಆಟ..ನೋಡಿದ್ದೇ ನೋಟ.. ನಡೆದದ್ದೇ ಮಾರ್ಗ ಎನ್ನುವ ದುಡುಕಿನ ತೀರ್ಮಾನಗಳಲ್ಲಿ ಅವರ ಭವಿಷ್ಯ ಮಾತ್ರ ಹಾಳಾಗುವದಲ್ಲ, ದೇಶದ ಭವಿಷ್ಯವೂ ಹಾಳಾಗುತ್ತದೆ. ಯುವಕರು ಸಾರಾಸಗಟಾಗಿ ಹಾಳಾಗುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಹಾಳಾಗುತ್ತಿರುವವರೂ ಹಾದಿಗೆ ಬರುವಂತಾಗಬೇಕು ಎನ್ನುವುದು ನನ್ನ ಆಶಯ.

ಯುವಕರನ್ನು ವಯೋಮಾನವನ್ನು ಇಟ್ಟುಕೊಂಡು ಗುರುತಿಸುವಾಗ 15-24 ರ ವಯೋಮಿತಿಯ ಮಧ್ಯೆ ಬರುವ ಎಲ್ಲರೂ ಯುವಕರೇ. ಆದರೆ ಕೇವಲ ವಯೋಮಾನ ಒಂದನ್ನೇ ಆಧರಿಸಿ ಯುವಕರನ್ನು ಗುರಿತಿಸಲಾಗದು. ಅಣ್ಣಾ ಹಜಾರೆಯಂಥ ಹೋರಾಟಗಾರರನ್ನು ವಯೋಮಿತಿಗೆ ಸಿಲುಕಿಸಿ ನಿರ್ಧರಿಸಲಾಗುವದಿಲ್ಲ. 95 ರ ಆಸುಪಾಸಿನಲ್ಲೂ ನಿಯಮಿತವಾಗಿ ಬರೆಯುವ ಖುಶ್ವಂತ್ ಸಿಂಗ್‌ರನ್ನು ವಯೋಮಿತಿಗೆ ಸಿಲುಕಿಸಿ ಚರ್ಚಿಸಲಾಗುವದಿಲ್ಲ.

ದಿನಪತ್ರಿಕೆಗಳನ್ನು ಓದುವಾಗ ನಡೆಯುತ್ತಿರುವ ಅಪರಾಧಿ ಕೃತ್ಯಗಳನ್ನು ಗಮನಿಸಿದಾಗ ಯುವಕರೇ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪರಾಧಗಳಲ್ಲಿ ತೊಡಗಿದವರಿದ್ದಾರೆ. ಪೋಲಿಸರು ಬಂಧಿಸಿರುವ ಸಂದರ್ಭದಲ್ಲಿ ರಾಜಾರೋಷವಾಗಿ ಅವರು ಕ್ಯಾಮೆರಾ ಎದುರಿಸುವದನ್ನು ನೋಡಿದಾಗ ಅತ್ಯಂತ ಬೇಸರವೆನಿಸುತ್ತದೆ. ಅವರು ಮಾಡಿದ ಪ್ರಮಾದಗಳ ಬಗ್ಗೆ ಅವರಲ್ಲಿ ಕಿಂಚಿತ್ತೂ ಬೇಸರವಿಲ್ಲದಿರುವದನ್ನು ಕಂಡಾಗ ನಮ್ಮ ಸಮಾಜ ಸಾಗುತ್ತಿರುವ ರೀತಿಯನ್ನು ನೆನೆದು ನಾನಂತೂ ಕಂಗಾಲಾಗುತ್ತೇನೆ. ಈಚೆಗೆ ಧಾರವಾಡದ ಬಜಾರಲ್ಲಿ ಒಬ್ಬ ಯುವಕ ಬರ್ರನೇ ಬೈಕ್ ಮೇಲೆ ಬಂದ. ಸವಕಾಶ ಹೋಗು ಮಾರಾಯಾ ಯಾವನಾದರೂ ಬಂದು ಹೊಡದಾನು..? ಅಂದಾಗ ಆತ ತಕ್ಷಣವೇ ಹೊಡಕೊಂಡು ಹೋಗಲಿ ಎಂದು ಮತ್ತೆ ಅದೇ ವೇಗದಲ್ಲಿ ನಡೆದ. ಇಂಥವರ ಮುಕುಳಿಗೆ ಬೈಕ್ ಅಂಟಿಸಿರುವವರ ಬಗ್ಗೆಯೇ ನನಗೆ ಮರುಕವೆನಿಸಿತು. ಯಾವುದೋ ಇಂಗ್ಲಿಷ ಸಿನೇಮಾದ ಶೂಟಿಂಗ್‌ಲ್ಲಿ ಭಾಗವಹಿಸಿರುವ ಫ಼ೈಟರ್ ತರಹ ಬೈಕ್ ಓಡಿಸುವ ಹರಕತ್ತಾದರೂ ಏನಿದೆ..? ಎಂದು ಆತನ ಪಾಲಕರೂ ಕೇಳುವದಿಲ್ಲ. ಮಕ್ಕಳು..ವಯಸ್ಸು..ರಿಯಾಯತಿ.

ಮೊನ್ನೆ ಬೆಳಿಗ್ಗೆ ಹಿಂದುಸ್ಥಾನ ಟೈಮ್ಸ್ ಇ-ಪತ್ರಿಕೆ ಓದುವಾಗ ರಾಜಧಾನಿ ದೆಹಲಿಯಲ್ಲಿ ನಡೆದ ಎರಡು ಅಪವರ್ತನೆಗಳು ನನ್ನನ್ನು ಹಿಡಿದು ಸ್ವಲ್ಪ ಸಮಯ ಅಲ್ಲಾಡಿಸಿದವು. ಒಂದು ಅತ್ಯಾಚಾರಕ್ಕೆ ಸಂಬಂಧಿಸಿದ ಘಟನೆ, ಮತ್ತೊಂದು ಕೊಲೆಗೆ ಸಂಬಂಧಿಸಿದ್ದು. ಎಷ್ಟು ಯತಾರ್ಥವಾಗಿ ಈ ಬಗೆಯ ಕುಕೃತ್ಯಗಳು ಜರುಗುತ್ತಿವೆಯಲ್ಲ..! ಎನ್ನುವುದೊಂದು ಅಚ್ಚರಿಯಾದರೆ, ಇನ್ನೊಂದು ಬದಿಗೆ ಇವರೆಲ್ಲಾ ಬಹುತೇಕವಾಗಿ ಯುವಕರು. ತಮ್ಮ ಭವಿಷ್ಯವನ್ನು ಯಾವ ರೀತಿ ಹಾಳು ಮಾಡಿಕೊಂಡರಲ್ಲ..? ಎನ್ನುವ ಬೇಸರವೂ ಇತ್ತು. ನನಗಿರೋ ಬೇಸರ ಪೋಲಿಸರ ಅಕ್ಕ-ಪಕ್ಕದಲ್ಲಿ ನಿಂತು ಪೋಜು ನೀಡಿದ ಅವರ ಮುಖದಲ್ಲಿರಲಿಲ್ಲ ಎನ್ನುವದು ನನ್ನಲ್ಲಿ ಇನ್ನೊಂದು ರೀತಿಯ ಭಯಕ್ಕೆ ಕಾರಣವಾಗಿತ್ತು. ಮೊದಲನೆಯ ಅಪರಾಧ ಅತ್ಯಂತ ಹೇಯವಾದದ್ದು. ಆ ಬಾಲಕಿಗೆ ಕೇವಲ ಎರಡೇ ವರ್ಷ, ಅವಳಿನ್ನೂ ಮಗು. ಪಕ್ಕದ ಮನೆಯಲ್ಲಿ ಬಾಡಿಗೆಯಿರುವ ದುರುಳ ವಿಜಯೇಂದ್ರ ಎನ್ನುವವ ಆ ಮಗುವನ್ನು ಆಡಿಸಲೆಂಬಂತೆ ಕರೆದೊಯ್ದು ಆ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ. ಅವನಿಗೆ 27 ರ ವಯಸ್ಸು. ಇಲ್ಲಿ ಮಗುವಿನ ಬಗೆಗೆ ಸಿಂಪಥಿ ಇವನ ಬಗೆಗಿನ ಆಕ್ರೋಶ ಅವೆರಡೂ ನಂತರ. ಅದಕ್ಕಿಂತಲೂ ಮುಖ್ಯವಾಗಿ ಅವನ ಮನ:ಸ್ಥಿತಿಯ ಬಗ್ಗೆಯೂ ಯೋಚಿಸಬೇಕು. ಅವನು ಪಕ್ಕಾ ವಿಕ್ಷಿಪ್ತನೇ.. ಇಂಥವರು ನಮ್ಮ ಸುತ್ತ ಮುತ್ತಲೂ ಬೇಕಾದಷ್ಟು ಜನರಿದ್ದಾರೆ. ಇವರೆಲ್ಲರೂ ಇದೇ ಬಗೆಯ ಕೃತ್ಯವನ್ನು ಮಾಡಬೇಕೆಂದೇನಿಲ್ಲ. ಅವರಿಗೆ ಸಾಧ್ಯವಾಗಬಹುದಾದ ಕುಕೃತ್ಯಗಳನ್ನು ಮಾಡಬಹುದು. ಇವರಿಗೆ ಸಮಾಜ, ಹಿರಿಯರು, ಮೌಲ್ಯ ಇವಾವುಗಳ ಬಗ್ಗೆಯೂ ಹೆದರಿಕೆಯಿಲ್ಲ. ಅದೇ ಅವರ ಕುಭಂಡತನಕ್ಕೆ ಕಾರಣ.

ಇನ್ನೊಂದು ಘಟನೆ ಕೊಲೆಗೆ ಸಂಬಂಧಿಸಿದ್ದು. ಇದರಲ್ಲಿ ಇಬ್ಬರು ಭಾಗಿಗಳು. ಕೊಲೆ ಮಾಡಿದ್ದು ಬೇರೆ ಯಾರನ್ನೋ ಅಲ್ಲ. ತನ್ನದೇ ಜೊತೆಗಿರುವ ಸ್ನೇಹಿತನನ್ನು. ಅಷ್ಟಕ್ಕೂ ಈ ಮೂವರೂ ಸೈತಾನ ಬುದ್ದಿಯವರೇ.. ತಮ್ಮ ಊರಿನ ಮಹಿಳೆಯೊಂದಿಗೆ ಮೊಬೈಲ್‌ಲ್ಲಿ ಸೆಕ್ಸ್ ಚಾಟ್ ಮಾಡೊ ಕಿರಾತಕರು. ಆ ಮಹಿಳೆಯ ನಂಬರ್ ಗೊತ್ತಿದ್ದದ್ದು ಮೊದಲಿಬ್ಬರಿಗೆ. ಅವರು ಪ್ರತಿದಿನ ಹಾಗೆ ಚಾಟ್ ಮಾಡುವದನ್ನು ಕಂಡು ಇನ್ನೊಬ್ಬ ಕಿರಾತಕ ರೂಮ್‌ಮೇಟ್ ಆ ಮಹಿಳೆಯ ನಂಬರನ್ನು ಕದ್ದು ತಾನು ಮಾತಾಡತೊಡಗಿದ. ಅಷ್ಟೆ ಆಗಿದ್ದರೆ ಕೊಲೆಯ ಹಂತಕ್ಕೆ ಹೋಗುತ್ತಿರಲಿಲ್ಲವೇನೋ.. ಆದರೆ ನಂಬರ್ ಕದ್ದ ಕಿರಾತಕ ಈ ಮೊದಲು ಆ ಮಹಿಳೆಯ ಬಳಿ ಮಾತಾಡುತ್ತಿದ್ದವನ ಬಗ್ಗೆ ಸುಳ್ಳು ಮಾಹಿತಿ ನೀಡಿದ ಅವನಿಗೆ ಮದುವೆಯಾಗಿ ಎರಡು ಮಕ್ಕಳಿವೆ ಎಂದಿದ್ದ. ಈ ಮೂವರೂ 20 ರ ಆಸುಪಾಸಿನವರು, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುವವರು. ತನ್ನ ಬಗ್ಗೆ ಹೀಗೆ ಸುಳ್ಳು ಹೇಳಿದವನನ್ನು ಕರೆದೊಯ್ದು ಕುಡಿಸಿದ ಮೊದಲ ಇಬ್ಬರು ಅವನನ್ನು ಕೊಲೆ ಮಾಡಿ ರಾಮಲೀಲಾ ಮೈದಾನದಲ್ಲಿ ಅವನ ಶವವನ್ನು ಹೂತು ನಂತರ ಬಯಲಾಗಿ ಈಗ ಪೋಲಿಸರ ಕೈಗೆ ಸಿಕ್ಕುಬಿದ್ದಿದ್ದಾರೆ. ಈ ಎರಡೂ ಘಟನೆಗಳಲ್ಲಿಯೂ ಲೈಂಗಿಕ ಕಾಮನೆ ಮುಖ್ಯವಾದ ಕಾರಣವಾಗಿದೆ. ಅದೂ ವಿಕೃತ ರೂಪದ ಕಾಮನೆ ಎನ್ನುವುದು ಸ್ಪಷ್ಟ.

ನಮ್ಮ ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನವಿಲ್ಲ. ಅವರು ಇಂದು ತೀರಾ ಯಾಂತ್ರಿಕವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲಿರುವ ಗುರು-ಶಿಷ್ಯ ಸಂಬಂಧಗಳೂ ಈಗ ನೆಟ್ಟಗಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರ ಕಣ್ಣೆದುರಲ್ಲಿ ಒಳ್ಳೆಯ ಮಾದರಿಗಳಿಲ್ಲ. ಇರುವುದೆಲ್ಲಾ ಬರೀ ಬಾಲಿವುಡ್, ಹಾಲಿವುಡ್ ಸಿನೇಮಾಗಳು, ವಿಪರೀತ ಬಯಕೆಗಳು, ಅವುಗಳನ್ನು ಹೇಗಾದರೂ ಸರಿ ಪೂರೈಸಿಕೊಳ್ಳಬೇಕು ಎನ್ನುವ ಧಾವಂತಗಳು. ಪರಿಣಾಮವೇ ಈ ಬಗೆಯ ಅಪವರ್ತನೆಗಳು. ಇದು ಹೀಗೆಯೇ ಮುಂದುವರೆದರೆ ಯುವಕರು ಮತ್ತು ರಾಷ್ಟ್ರನಿರ್ಮಾಣ ಎಂದು ಮಾತನಾಡುವ ಬದಲಾಗಿ ನಿರ್ನಾಮ ಎಂದು ಮಾತನಾಡಬೇಕಾಗುತ್ತದೆ. ಸಮಾಜ, ಶಾಲೆ, ನೆರೆಹೊರೆ, ಪಾಲಕರು, ಮಾಧ್ಯಮಗಳು ಎಲ್ಲರ ಸಾಮೂಹಿಕ ಹೊಣೆಗಾರಿಕೆಯಿಂದ ಮಾತ್ರ ಈ ಬಗೆಯ ಯುವಕರಲ್ಲಿಯ ಹೊಣಗೇಡಿತನವನ್ನು ಕಡಿಮೆ ಮಾಡಬಹುದು.

ಪ್ರಜಾ ಸಮರ – 12 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಮಾವೋವಾದಿ ನಕ್ಸಲರ ಸಂಘಟನೆಯಲ್ಲ, ಇದೇ ನಕ್ಸಲ್ ವಿಚಾರಧಾರೆ ಕುಡಿಯೊಡೆದ ನೆಲವಾದ ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು ದೇಶಭಕ್ತ. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒರಿಸ್ಸಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ 1920 ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ ಅವರಿಂದ ಅಮಾನುಷವಾಗಿ ಹತ್ಯೆಯಾದ ಹುತಾತ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮರಾಜು.

ಭಾರತದ ಆದಿವಾಸಿಗಳು ತಮ್ಮ ಸಂಸ್ಕೃತಿ ಮತ್ತು ಬದುಕಿಗೆ ಧಕ್ಕೆ ಬಂದಾಗ ಬ್ರಿಟಿಷರು ಮಾತ್ರವಲ್ಲ, ಮರಾಠ ಸಾಮಂತರು, ನಿಜಾಮರು, ಮೊಗಲರು, ಹೀಗೆ ಎಲ್ಲರ ವಿರುದ್ದ ಯುದ್ದ ಸಾರಿದ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ. ಮಧ್ಯಪ್ರದೇಶದ ಗೊಂಡ ಆದಿವಾಸಿಗಳಿಗೆ ಅವರದೇ ಜನಾಂಗದ ಒಬ್ಬ ಸಾಮಂತನಿದ್ದ ಎಂಬುದಕ್ಕೆ ಮಹಾರಾಷ್ಟ್ರದ ಗೊಂಡಿಯ ಮತ್ತು ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಯ ನಡುವೆ ಅರಣ್ಯದ ಮಧ್ಯೆ ಇರುವ ಲಾಂಜಿ ಎಂಬ ಹಳ್ಳಿಯಲ್ಲಿ ಸಾಮಂತ ನಿರ್ಮಿಸಿದ್ದ ಮಣ್ಣಿನ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಅಲ್ಲದೆ ಈ ಕೋಟೆಯ ಸಮೀಪವಿರುವ ಶಿವನ ದೇವಸ್ಥಾನಕ್ಕೆ ಸಾವಿರಾರು ಆದಿವಾಸಿಗಳು ಈಗಲೂ ಭೇಟಿ ನೀಡುತಿದ್ದಾರೆ. ಈಗ ಬಿಹಾರದ ರಾಂಚಿ ಜಿಲ್ಲೆಗೆ ಸೇರಿರುವ ಅರಣ್ಯದಲ್ಲಿ 1900 ರಲ್ಲಿ ಮುಂಡಾ ಎಂಬ ಆದಿವಾಸಿ ಜನಾಂಗದ ಬಿರ್‍ಸಾ ಮುಂಡಾ ಎಂಬ ನಾಯಕ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಕೂಡ ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಆದಿವಾಸಿ ಜನಾಂಗಕ್ಕೆ ಸೇರದ ಅಂಧ್ರದ ಈ ಮೇಲ್ಜಾತಿಗೆ ಸೇರಿದ ಯುವಕ ನಡೆಸಿದ ಹೋರಾಟ ಮಾತ್ರ ಅವಿಸ್ಮರಣೀಯವಾದುದು.

ಬ್ರಿಟಿಷರ ಫಿರಂಗಿ, ಬಂದೂಕಗಳ ನಡುವೆ ಬಿಲ್ಲು ಬಾಣಗಳನ್ನು ಹಿಡಿದು ಚೆಂಚು ಎಂಬ ಬುಡಕಟ್ಟು ಜನಾಂಗವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುತಿದ್ದ ಅಲ್ಲೂರಿ ಸೀತಾರಾಮರಾಜುವನ್ನು ಅಂತಿಮವಾಗಿ ಸೆರೆ ಹಿಡಿದ ಬ್ರಿಟೀಷರು ದರೋಡೆಕೋರ ಎಂಬ ಪಟ್ಟ ಕಟ್ಟಿದಾಗ, ಕೆಚ್ಚೆದೆಯಿಂದ ಕೆರಳಿ ನಿಂತ ಸಾಹಸಿ ಈತ, ಈ ದೇಶವನ್ನು ಕೊಳ್ಳೆ ಹೊಡೆಯಲು ಬಂದ ನೀವು ನಿಜವಾದ ದರೋಡೆಕೋರರು, ನಾನಲ್ಲ ಎಂದು ಮುಖಕ್ಕೆ ಬಾರಿಸಿದ ಹಾಗೆ ಹೇಳಿದ ಅಪ್ರತಿಮ ಧೈರ್ಯಶಾಲಿ.

1887 ರ ಜುಲೈ 4 ರಂದು ವಿಶಾಖಪಟ್ಟಣ ಜಿಲ್ಲೆಯ ಪಂಡುರಂಗಿ ಎಂಬ ಗ್ರಾಮದದಲ್ಲಿ ಜನಿಸಿದ ರಾಜುವಿನ ತಂದೆ ಆಗಿನ ಬ್ರಿಟಿಷ್ ಆಳ್ವಿಕೆಯ ಸರ್ಕಾರದಲ್ಲಿ ರಾಜಮಂಡ್ರಿ ಸರೆಮನೆಯಲ್ಲಿ ಪೋಟೊಗ್ರಾಪರ್ ಆಗಿ ಕೆಲಸಮಾಡುತಿದ್ದರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಸೀತಾರಾಮರಾಜು ನಂತರ ತಂದೆಯ ಊರಾದ ಭೀಮಾವರಂ ಸಮೀಪದ ಮೊಗಳ್ಳು ಗ್ರಾಮದಲ್ಲಿ ಚಿಕ್ಕಪ್ಪನಾದ ರಾಮಚಂದ್ರ ರಾಜು ಎಂಬುವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಚಿಕ್ಕಪ್ಪ ಪಶ್ಚಿಮ ಗೋದಾವರಿ ಜಲ್ಲೆಯ ನರಸಾಪುರದಲ್ಲಿ ತಹಶಿಲ್ದಾರ್ ಆಗಿ ಕೆಲಸ ನಿರ್ವಹಿಸುತಿದ್ದರಿಂದ ಸೀತಾರಾಮು ರಾಜುವಿಗೆ ಅರ್ಥಿಕವಾಗಿ ನೆರವಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ತಾಯಿಯ ತವರೂರಾದ ವಿಶಾಖಪಟ್ಟಣಕ್ಕೆ ಬಂದ ಈತ ಅಲ್ಲಿ ಎ.ವಿ.ಎನ್. ಕಾಲೇಜಿಗೆ ದಾಖಲಾದನು. ೧೯೧೨-೧೩ರ ವೇಳೆಗೆ ಮೆಟ್ರಿಕ್ ಓದುತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಜು, ಭಾರತದ ಸ್ವಾತಂತ್ರಕ್ಕಾಗಿ ಹೋರಾಡಲು ಪಣ ತೊಟ್ಟಿದ್ದನು.

ಇದೇ ವೇಳೆಗೆ ಬ್ರಿಟಿಷರು ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧ ಜಾರಿಗೆ ತಂದ 1882ರ ಅರಣ್ಯ ಕಾಯ್ದೆಯ ಕಾನೂನು ಆತನ ಹೋರಾಟಕ್ಕೆ ವೇದಿಕೆಯಾಯಿತು. ಬ್ರಿಟಿಷರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಶಿಕ್ಷಣ ತೊರೆದು ಆದಿವಾಸಿಗಳನ್ನು ಸಂಘಟಿಸುವುದರ ಮೂಲಕ ಅವರ ಪರ ಹೋರಾಟಕ್ಕೆ ಇಳಿದನು. ಅರಣ್ಯ ಕಾಯ್ದೆ ಪ್ರಕಾರ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಆದಿವಾಸಿಗಳು ತಮ್ಮ ಪೋಡುಗಳನ್ನು( ಹಳ್ಳಿ) ಬಿಟ್ಟು ಬೇರೊಂದೆಡೆ ವಲಸೆ ಹೋಗಬಾರದು. ಇದು ಆದಿವಾಸಿಗಳ ಸಹಜ ಬದುಕಿನ ಮೇಲೆ ನಿಯಂತ್ರಣ ಹೇರುವ ಕಾನೂನಾಗಿತ್ತು. ಕೃಷಿ ಚಟುವಟಿಕೆ ಮತ್ತು ಪ್ರಾಣಿಗಳ ಬೇಟೆ, ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಬದುಕುತಿದ್ದ ಈ ಜನರು ಬೇಸಾಯಕ್ಕಾಗಿ ಬೇರೆಡೆ ಹೋಗುವುದು ಅನಿವಾರ್ಯವಾಗಿತ್ತು. ಏಕೆಂದರೆ, ಅವರು ಒಂದು ಪ್ರದೇಶದಲ್ಲಿ ಒಮ್ಮೆ ಬೆಳೆ ತೆಗೆದ ನಂತರ ನಂತರ ಭೂಮಿಯನ್ನು ಹಲವಾರು ವರ್ಷಗಳ ಕಾಲ ಹಾಗೆಯೇ ಬಿಡುವುದು ವಾಡಿಕೆಯಾಗಿತ್ತು. ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಮತ್ತು ನಿಸರ್ಗಕ್ಕೆ ಎರವಾಗದ ರೀತಿ ಇದ್ದ ಅವರ ದೇಶಿ ಜ್ಞಾನ ಆದಿವಾಸಿಗಳ ಬದುಕಿನೊಳಗೆ ಪರಂಪರಾನುಗತವಾಗಿ ಬೆಳೆದು ಬಂದಿತ್ತು. ಅಕ್ಷರ ಲೋಕದಿಂದ ವಂಚಿತರಾಗಿ, ನಾಗರೀಕತೆಯಿಂದ ದೂರವಾಗಿದ್ದ ಚಂಚು ಬುಡಕಟ್ಟು ಜನರ ಪರವಾಗಿ ಅಲ್ಲೂರಿ ಸೀತಾರಾಮರಾಜು ನಡೆಸಿದ ಹೋರಾಟ “ರಂಪ ದಂಗೆ” ಎಂದು ಆಂಧ್ರದ ಇತಿಹಾಸದಲ್ಲಿ ದಾಖಲಾಗಿದೆ.

ಬ್ರಿಟಿಷರ ಅಮಾನವೀಯವಾದ ಈ ಅರಣ್ಯ ಕಾನೂನಿನ ವಿರುದ್ಧ ಸಮರ ಸಾರುವ ಮುನ್ನ ಆದಿವಾಸಿಗಳನ್ನು ಸಂಘಟಿಸಿದ ರಾಮರಾಜು ಹೋರಾಟಕ್ಕೆ ಮುನ್ನ ಆದಿವಾಸಿಗಳಲ್ಲಿ ಮನೆ ಮಾಡಿಕೊಂಡಿದ್ದ ಹಲವು ಅನಿಷ್ಟ ಆಚರಣೆಗಳನ್ನು (ಭಾನಾಮತಿ, ನರಬಲಿಯಂತಹ ಪದ್ಧತಿಗಳು) ಹೋಗಲಾಡಿಸಿದ್ದ. ಆದಿವಾಸಿಗಳ ಸೇನೆಯೊಂದನ್ನು ಕಟ್ಟಿಕೊಂಡು ಬ್ರಿಟಿಷರ ಕಚೇರಿಗಳ ಮೇಲೆ ದಾಳಿನಡೆಸಿದ. ಅಲ್ಲೂರಿ ಸೀತಾರಾಮರಾಜು ರೂಪಿಸಿದ್ದ ಯೋಜನೆಗಳು ಆತನಿಗೆ ಯಶಸ್ಸು ತಂದುಕೊಟ್ಟವು. ಈತನ ಮಾರ್ಗದರ್ಶನದಲ್ಲಿ ತಯಾರಾದ ಆದಿವಾಸಿಗಳ ತಂಡ ಬ್ರಿಟಿಷರ ಕಚೇರಿ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಬಂದೂಕ ಮತ್ತು ಮದ್ದು ಗುಂಡುಗಳನ್ನು ದೋಚಿತು. ಇದಲ್ಲದೆ, ಇವರ ಮೇಲೆ ಕ್ರಮಕೈಗೊಳ್ಳಲು ಅರಣ್ಯಕ್ಕೆ ಬಂದ ಬಂದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿತು.

ಈ ಬೆಳವಣಿಗೆಯಿಂದ ವಿಚಲಿತವಾದ ಬ್ರಿಟಿಷ್ ಸರ್ಕಾರ 1922 ರಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಹೋರಾಡಿ ಅನುಭವ ಇದ್ದ ಅಸ್ಸಾಂ ರೈಫಲ್ ಸೇನೆಯನ್ನು ಆಂಧ್ರಕ್ಕೆ ಕರೆಸಿಕೊಂಡಿತು. ಸೇನೆಯು ಬಸ್ತರ್ ಪ್ರದೇಶದ ಗಡಿಭಾಗದ ಅರಣ್ಯಕ್ಕೆ ಆಗಮಿಸಿದಾಗ, ಅರಣ್ಯದಲ್ಲಿ ಭೂಗತನಾಗಿದ್ದುಕೊಂಡು ಹೋರಾಟ ನಡೆಸುತಿದ್ದ ಸೀತಾರಾಮ ರಾಜುವನ್ನು 1924 ರಲ್ಲಿ ಆಂದ್ರದ ಪೊಲೀಸ್ ಅಧಿಕಾರಿ ಜ್ಞಾನೇಶ್ವರ ರಾವ್ ಎಂಬಾತ ಸೆರೆ ಹಿಡಿದನು. ಅಲ್ಲೂರಿ ಸೀತಾರಾಮರಾಜುವನ್ನು ಮರಕ್ಕೆ ಕಟ್ಟಿ ಹಾಕಿದ ಬ್ರಿಟಿಷ್ ಅಧಿಕಾರಿಗಳು ಸಾವಿರಾರು ಆದಿವಾಸಿಗಳ ಎದುರಿನಲ್ಲಿ ಆತನ ಎದೆಗೆ ಗುಂಡಿಟ್ಟು ಕೊಂದು ಹಾಕಿದರು. ಸೀತಾಮರಾಜುನನ್ನು ಹಿಡಿದು ಕೊಟ್ಟ ಪೊಲೀಸ್ ಅಧಿಕಾರಿಗೆ ಬ್ರಿಟಿಷ್ ಸರ್ಕಾರ “ರಾವ್ ಬಹದ್ದೂರ್” ಎಂಬ ಬಿರುದು ನೀಡಿ ಗೌರವಿಸಿತು.

ಆದಿವಾಸಿಗಳ ಮತ್ತು ಉತ್ತರ ತೆಲಂಗಾಣದ ಜನರ ಬಾಯಲ್ಲಿ “ಮಾನ್ಯಂ ವೀರುಡು” (ಅರಣ್ಯದ ನಾಯಕ) ಎಂದು ಕರೆಸಿಕೊಳ್ಳು ಈ ಹುತಾತ್ಮನ ಬಗ್ಗೆ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಆಂಧ್ರ ಸರ್ಕಾರ ಒರಿಸ್ಸಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ಗಡ್), ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಅಲ್ಲೂರಿ ಸೀತಾರಾಮರಾಜು ಅರಣ್ಯ ವಲಯ ಎಂದು ಘೋಷಿಸಿ ಗೌರವಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆ (ಬೀಚ್ ರೋಡ್) ಸೀತಾರಾಮರಾಜುವಿನ ಹೆಸರಿಟ್ಟು, ಪ್ರತಿಮೆಯನ್ನು ಸಹ ನಿಲ್ಲಿಸಲಾಗಿದೆ. ಭಾರತ ಸಕಾರ 1997 ರಲ್ಲಿ ಈತನ ಜನ್ಮಶತಾಬ್ಧಿಯ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು. ಈಗಿನ ತೆಲಗು ಚಿತ್ರರಂಗದ ಸೂಪರ್‍ಸ್ಟಾರ್‌ಗಳಲ್ಲಿ ಒಬ್ಬನಾಗಿರುವ ಯುವ ನಟ ಮಹೇಶ್ ಬಾಬುವಿನ ತಂದೆ, ಹಿರಿಯ ನಟ ಕೃಷ್ಣ 1980 ರಲ್ಲಿ ತಮ್ಮ ನೂರನೇ ಚಿತ್ರವಾಗಿ ಅಲ್ಲೂರಿ ಸೀತಾರಾಮರಾಜು ಚಿತ್ರವನ್ನು ನಿರ್ಮಿಸಿದ್ದರು. ಸ್ವತಃ ತಾವೇ ಸೀತರಾಮುವಿನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಇವತ್ತಿಗೂ ತೆಲುಗು ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

ಇಂತಹ ಸುಧೀರ್ಘ ಇತಿಹಾಸವಿರುವ ಬಸ್ತಾರ್ ಅರಣ್ಯ ವಲಯಕ್ಕೆ 1980ರ ದಶಕದಲ್ಲಿ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್‌ನ ಕಾರ್ಯಕರ್ತರು ಪ್ರವೇಶ ಮಾಡುವ ಮುನ್ನವೇ 70ರ ದಶಕದಲ್ಲಿ ಇಲ್ಲಿನ ಆದಿವಾಸಿ ಜೊತೆ ಪಶ್ಚಿಮ ಬಂಗಾಳದ ನಕ್ಸಲ್ ಕಾರ್ಯಕರ್ತರು ಸಹ ಸಂಪರ್ಕ ಸಾಧಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಚಳುವಳಿಯ ಕಿಚ್ಚು ಹತ್ತಿಸಿದ ಚಾರು ಮುಜಮದಾರ್ ಮಾರ್ಗದರ್ಶನದಲ್ಲಿ ಜೋಗು ರಾಯ್ ಎಂಬ ಸಿ.ಪಿ.ಐ.(ಎಂ.ಎಲ್.) ನಾಯಕ ಈ ಪ್ರದೇಶಕ್ಕೆ ಭೇಟಿ ನೀಡಿ “ಕ್ರಾಂತಿಕಾರಿ ಕಿಸಾನ್ ಮಜ್ದೂರ್ ಪಾರ್ಟಿ” ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದ. ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ, ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಹೋಗಿದ್ದ ಆದಿವಾಸಿಗಳು ತಮ್ಮ ರಕ್ಷಣೆಗೆ ಬಂದ ನಕ್ಸಲ್ ಕಾರ್ಯಕರ್ತರನ್ನು ಸ್ವಾಗತಿಸಿದ್ದರು. ಪ್ರಥಮ ಬಾರಿಗೆ ಜಗದಾಲ್ ಪುರ್ (ಈಗ ಛತ್ತೀಸ್‌ಘಡದ ಒಂದು ಜಿಲ್ಲಾ ಕೇಂದ್ರ) ಪಟ್ಟಣದಲ್ಲಿ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದವು.

ಈ ಘಟನೆ ಹೊರತು ಪಡಿಸಿದರೆ, 1980 ರಲ್ಲಿ ಪೆದ್ದಿ ಶಂಕರ್ ಮಹರಾಷ್ಟ್ರದ ಗಡ್‌ಚಿರೋಲಿ ಅರಣ್ಯ ಪ್ರದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವೇಣು ಎಂಬ ಇನ್ನೊಬ್ಬ ಯುವಕ ಬಸ್ತಾರ್ ಅರಣ್ಯ ವಲಯ ಪ್ರವೇಶಿಸಿ ಆದಿವಾಸಿಗಳ ಜೊತೆ ಕಳಚಿ ಹೋಗಿದ್ದ ನಕ್ಸಲ್ ಸಂಬಂಧದ ಕೊಂಡಿಯನ್ನು ಮತ್ತೇ ಬೆಸೆದ. (ಈಗಿನ ಬಸ್ತಾರ್ ಅರಣ್ಯದ ನಕ್ಸಲರ ಹಿರಿಯ ನಾಯಕನಾಗಿ ವೇಣು ಕಾರ್ಯ ನಿರ್ವಹಿಸುತಿದ್ದಾನೆ.)

ಬಸ್ತಾರ್ ಅರಣ್ಯಕ್ಕೆ ದಕ್ಷಿಣದಿಂದ ಅಂಧ್ರದ ನಕ್ಸಲ್ ಸಂಘಟನೆ ಮತ್ತು ಪೂರ್ವದಿಂದ ಪಶ್ಚಿಮ ಬಂಗಾಳದ ನಕ್ಸಲರು ಪ್ರವೇಶಿಸುವ ಮುನ್ನ ಅನಕ್ಷರಸ್ತ ಆದಿವಾಸಿಗಳಿಗೆ ದಿಕ್ಕು, ದೆಸೆ, ಆಧಾರವಾಗಿ ಹಲವಾರು ಉದಾತ್ತ ಮನೋಭಾವದ ವ್ಯಕ್ತಿಗಳು ಕೆಲಸ ಮಾಡುತಿದ್ದರು. ಇವರುಗಳಲ್ಲಿ ಅಸ್ಪತ್ರೆ ಸ್ತಾಪಿಸಿದ ಬಾಬಾ ಅಮ್ಟೆ, ಶಿಕ್ಷಣಕ್ಕಾಗಿ ಹಳ್ಳಿಗಳಲ್ಲಿ ಶಾಲೆ ತೆರೆದ ಕೊಲ್ಕತ್ತ ನಗರದ ರಾಮಕೃಷ್ಣ ಮಿಷನ್ ಸಂಸ್ಥೆಯ ಪದಾಧಿಕಾರಿಗಳು, ಆರೋಗ್ಯ ಶಿಬಿರ ಏರ್ಪಡಿಸಿ, ಚಿಕಿತ್ಸೆ ನೀಡುತಿದ್ದ, ವೃತ್ತಿಯಲ್ಲಿ ವೈದ್ಯೆಯಾಗಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಪುತ್ರಿ ಹಾಗೂ ಆಕೆಯ ಪತಿ ಮತ್ತು ಹಿಮಾಂಶುಕುಮಾರ್ ಮೊದಲಾದವರು ಮುಖ್ಯರಾಗಿದ್ದಾರೆ.

(ಮುಂದುವರೆಯುವುದು)