Monthly Archives: December 2012

ಇತಿಹಾಸದ ಪುಟಗಳು ಮತ್ತು ಯಾವುದೇ ನಿರ್ದಿಷ್ಟ ಅಜೆಂಡಾಗಳಿಲ್ಲದ ಇಂದಿನ ದಿನಗಳು

– ಬಿ. ಶ್ರೀಪಾದ ಭಟ್

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಇಂಡಿಯಾ ದೇಶದ ಸರ್ಕಾರವು 1990ರಲ್ಲಿ ಮರಣೋತ್ತರವಾಗಿ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಅಂದರೆ ಬಾಬಾಸಾಹೇಬರು ನಿಧನರಾಗಿ 34 ವರ್ಷಗಳ ನಂತರ. ಇದು ಸ್ವಾತಂತ್ರ ನಂತರದಲ್ಲಿ ಸುಮಾರು 52 ವರ್ಷಗಳಷ್ಟು ಕಾಲ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಬರಡುತನವನ್ನು, ಹಗೆತನದ ರಾಜಕಾರಣದ ಕರಾಳ ನೆನಪುಗಳನ್ನು ಬಿಚ್ಚಿಡುತ್ತದೆ.

ಸ್ವಾಂತಂತ್ರ ಹೋರಾಟದ ಸಂದರ್ಭದಲ್ಲಿ ಈ ದೇಶದ ಅಸ್ಪೃಶ್ಯ ಸಮುದಾಯಕ್ಕೆ ಜಾತೀಯತೆಯ ಕಬಂಧಬಾಹುಗಳಿಂದ ಮೊದಲು ಸ್ವಾತಂತ್ರ ಸಿಗಬೇಕು ಎಂದು ಘೋಷಿಸಿದ ಅಂಬೇಡ್ಕರ್ ತಳ ಸಮುದಾಯಗಳ, ಶೋಷಿತ ವರ್ಗಗಳ ಸ್ನೇಹಿತರೂ, ಮಾರ್ಗದರ್ಶಿಗಳೂ, ಪ್ರಶ್ನಾತೀತ ನಾಯಕರೂ ಆಗಿದ್ದರು. ಚಿಂತಕ ಡಿ.ಆರ್.ನಾಗರಾಜ್ ಹೇಳಿದಂತೆ ಮಾರ್ಕ್ಸ್ ಚಿಂತನೆ ಕಾರ್ಮಿಕ ವರ್ಗದ ಜತೆಗೆ ಹೇಗೆ ಬಿಡಿಸಲಾಗದ ಸಂಬಂಧವನ್ನು ಸ್ಥಾಪಿಸಿಕೊಂಡಿದೆಯೋ ಹಾಗೆ ಅಂಬೇಡ್ಕರ್ ಚಿಂತನೆ ಅಸ್ಪೃಶ್ಯರ ಅಥವಾ ದಲಿತರ ಬದುಕಿನ ಜೊತೆಗೆ ಅನಿವಾರ್ಯ ಸಂಬಂಧವನ್ನು ಹೊಂದಿದೆ. ಆದರೆ ಅಂಬೇಡ್ಕರ್ ಅವರನ್ನು ದಲಿತ ಸಮುದಾಯದ ನಾಯಕರೆಂದು ಒಪ್ಪಿಕೊಳ್ಳಲು ಕಾಂಗ್ರೆಸ್‌ನ ಮಡಿವಂತಿಕೆಯ ಕೊಳುಕುತನದ ಮನಸ್ಸಿಗೆ ಸಾಧ್ಯವಾಗಲೇ ಇಲ್ಲ.

1930 ರ ದಶಕದಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳು ಮತ್ತು ಪ್ರತ್ಯೇಕ ಮತದಾನದ ಹಕ್ಕಿಗಾಗಿ ನಿರಂತರವಾಗಿ ಏಕಾಂಗಿಯಾಗಿ ಹೋರಾಡಿದ ಅಂಬೇಡ್ಕರ್ ಅವರ ಮನೋಸ್ಥೈರ್ಯವನ್ನು ಬಾಪೂಜಿಯವರ ಉಪವಾಸ ಸತ್ಯಾಗ್ರಹವನ್ನು ಬಳಸಿಕೊಂಡು ಮಣಿಸಿದ ಕಾಂಗ್ರೆಸ್ ಪಕ್ಷ ಅಂದಿನಿಂದ ಬಾಬಾಸಾಹೇಬರು ಜೀವಂತವಾಗಿರುವವರೆಗೂ ಅವರ ಪ್ರಸ್ತುತತೆಯನ್ನೇ ನಿರ್ಲಕ್ಷಿಸಿದರು. ಕಾಂಗ್ರೆಸ್‌ನ ಎಲೈಟ್ ಗುಂಪಿನ ಒಳಗಿನ ಪ್ರವೇಶಕ್ಕೆ ದಲಿತರಾದ ಅಂಬೇಡ್ಕರ್ ಅವರಿಗೆ ಅವಕಾಶವಿರಲಿಲ್ಲ. ಬದಲಾಗಿ ಈ ಕಾಂಗ್ರೆಸ್ ಎಲೈಟ್ ಗುಂಪು ಅಂಬೇಡ್ಕರ್ ಅವರನ್ನು ಬ್ರಿಟೀಷರ ಏಜೆಂಟರೆಂದು ಮೂದಲಿಸಿದರು. “ಹರಿಜನೋದ್ಧಾರ”ದ ಪರಿಕಲ್ಪನೆಯ ಮೂಲಕ ಸಮಾನತೆಯನ್ನು ಸಾಧಿಸುವ ಗಾಂಧೀಜಿಯವರ ಪ್ರಾಮಾಣಿಕತೆ ಮತ್ತು ಮುಗ್ಧತೆಯಿಂದ ನಂಬಿದ ಚಿಂತನೆಗಳನ್ನು ಆತ್ಮಸಾಕ್ಷಿಯಿಂದ ವಿಮರ್ಶಿಸುವ ಗೋಜಿಗೆ ಹೋಗದೆ ಅದನ್ನೇ ತಮ್ಮ ಅಜೆಂಡವನ್ನಾಗಿ ಮಾಡಿಕೊಂಡ ಕಾಂಗ್ರೆಸ್‌ನ ಎಲೈಟ್ ಗುಂಪು ವ್ಯವಸ್ಥಿತವಾಗಿ ಅಂಬೇಡ್ಕರ್ ಅವರನ್ನು ಭಾರತದ ರಾಜಕಾರಣದಲ್ಲಿ ಅಕ್ಷರಶಃ ಏಕಾಂಗಿಯನ್ನಾಗಿ ಮಾಡಿಬಿಟ್ಟರು.

ತಮ್ಮ ಆತ್ಮಚರಿತ್ರೆಯಲ್ಲಿ ಇದರ ಕುರಿತಾಗಿ ಅತ್ಯಂತ ಮಾರ್ಮಿಕವಾಗಿ ಬರೆಯುವ ನಾಮದೇವ ನಿಮ್ಗಾಡೆಯವರು, “ವಾರ್ಧಾದ ಆಶ್ರಮದಲ್ಲಿ ಬ್ರಾಹ್ಮಣನೊಬ್ಬನ ಕೈಯಲ್ಲಿ ಕಸಗುಡಿಸುವ ಮೂಲಕ ಕೆಳಜಾತಿಯವರಿಗೆ ನೋಡಿ ನಿಮ್ಮ ಕಸ ಗುಡಿಸುವ ಕೆಲಸವೂ ಶ್ರೇಷ್ಠವಾದದ್ದು ಎಂದು ಗಾಂಧಿ ಹೇಳುತ್ತಾರೆ. ಆ ಮೂಲಕ ಪರೋಕ್ಷವಾಗಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ಬಾಬಾ ಸಾಹೇಬರು ಪ್ರತಿಪಾದಿಸುವುದು ಕಸಗುಡಿಸುವವನು ಆ ಕಾಯಕದಿಂದ ಮೇಲಕ್ಕೇರಿ ಶ್ರೇಣೀಕೃತ ವ್ಯವಸ್ಥೆಯ ಮೆಟ್ಟಿಲುಗಳ ಮೇಲಕ್ಕೇರುತ್ತ ಅತ್ಯುತ್ತಮವಾದ ಹುದ್ದೆಯನ್ನು ಅಲಂಕರಿಸಬೇಕೆಂಬುದಾಗಿತ್ತು. ಇದು ಗಾಂಧಿಯವರಿಗೆ ಅರ್ಥವಾಗಲೇ ಇಲ್ಲ,” ಎಂದು ವಿವರಿಸುತ್ತಾರೆ. ಈ ಸರಳ ಚಿಂತನೆಗಳು ಕಾಂಗ್ರೆಸ್‌ನ ಎಲೈಟ್ ಗುಂಪಿಗೆ ಅರ್ಥವಾದರೂ ಅದನ್ನು ಮರೆಮಾಚಿ ಅಂಬೇಡ್ಕರ್ ಅವರಿಗೆ ಪರ್ಯಾಯವಾಗಿ ನಾಯಕನೊಬ್ಬನ ಹುಡುಕಾಟದಲ್ಲಿ ತೊಡಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆಗಲೇ ಬಾಬು ರಾಜೇಂದ್ರ ಪ್ರಸಾದ್ ಅವರ ಮೂಲಕ ಬಿಹಾರದ ತರುಣ ಜಗಜೀವನ ರಾಂ ಅವರನ್ನು ದಲಿತ ನಾಯಕರನ್ನಾಗಿ ರೂಪಿಸುವ ತಂತ್ರ ಹೆಣೆಯುತ್ತಾರೆ ಕಾಂಗ್ರೆಸ್ ನಾಯಕರು.

ಅಂದು ಕಾಂಗ್ರೆಸ್‌ನ ಸ್ವಾರ್ಥದ ಈ ಕಾರ್ಯದ ಫಲವಾಗಿ ಇಂದು ಇಡೀ ದಲಿತ ಸಮುದಾಯ ಪರಸ್ಪರ ಕಚ್ಚಾಡುತ್ತ ಇಡೀ ದಲಿತ ಸಂಘಟನೆಯೇ ದಿಕ್ಕುತಪ್ಪಿ ಕಕ್ಕಾಬಿಕ್ಕಿಯಾಗಿ ನಿಂತಿರುವುದಕ್ಕೆ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ. ಈ ದುರಂತ ಇಂದು ಯಾವ ಮಟ್ಟಕ್ಕೆ ಬಂದು ತಲುಪಿದೆಯೆಂದರೆ ದಲಿತ ಸಮುದಾಯದ ಬಲ ಮತ್ತು ಎಡ ಗುಂಪುಗಳು ಅಂಬೇಡ್ಕರ್ ಮತ್ತು ಜಗಜೀವನರಾಂ ಬಣಗಳಾಗಿ ಛಿದ್ರಛಿದ್ರವಾಗಿರುವುದು. ಇಡೀ ತಳ ಸಮುದಾಯವನ್ನೇ ಕತ್ತಲ ಕೂಪದಿಂದ ಮೇಲೆಕ್ಕೆತ್ತಿ ಬೆಳಕಿನ ದಾರಿಗೆ ತಂದು ನಿಲ್ಲಿಸಿದ ಬಾಬಾಸಾಹೇಬರು ಇಂಡಿಯಾದ ಸಾಂಸ್ಕೃತಿಕ ವೈಫಲ್ಯ, ರಾಜಕೀಯ ವೈಫಲ್ಯ, ಸಾಮಾಜಿಕ ವೈಫಲ್ಯಗಳ ಫಲವಾಗಿ ಕ್ರಮೇಣವಾಗಿ ಅಸ್ಪೃಶ್ಯರ ಒಂದು ಗುಂಪಿನ ನಾಯಕರಾಗಿ ರೂಪಗೊಂಡ ಮಾದರಿ ಇತಿಹಾಸದ ಅತ್ಯಂತ ಕ್ರೌರ್ಯದ ಅಧ್ಯಾಯಗಳು. ಬಾಬು ಜಗಜೀವನರಾಂ ಅವರನ್ನು ಅಂಬೇಡ್ಕರ್‌ವಾದಿಯಾಗಿಯೇ ಅರ್ಥೈಸಬೇಕಾದಂತಹ ಸಂದರ್ಭದಲ್ಲಿ ಅವರನ್ನು ಬಾಬಾಸಾಹೇಬರ ಪರ್ಯಾಯ ನಾಯಕರನ್ನಾಗಿ ರೂಪಿಸಿ ಬಾಬು ಜಗಜೀವನರಾಂ ಅವರು ರಾಜಕಾರಣದ ಚಕ್ರವ್ಯೂಹದ ದಾಳಗಳಲ್ಲಿ ಹಾದಿ ತಪ್ಪುವಂತೆ ಮಾಡಿದ ಕಾಂಗ್ರೆಸ್‌ನ ನೀಚತನ ಕ್ಷಮಿಸಲು ಸಾಧ್ಯವೇ? ಆದರೆ ಕಾಂಗ್ರೆಸ್‌ನ ಈ ಕುಟಿಲ ತಂತ್ರಗಳು ಫಲಕಾರಿಯಾಗಲಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೂ ದಲಿತರು ಗುಂಪುಗಳಾಗಿ ಒಡೆದದ್ದಕ್ಕೆ ಕಾಂಗ್ರೆಸ್ ಸಂಪೂರ್ಣ ಹೊಣೆ ಹೊರಬೇಕು.

ಅಂಬೇಡ್ಕರ್ ಅವರನ್ನು ಹೀಯಾಳಿಸುವುದಕ್ಕಾಗಿಯೇ, ಅವಮಾನಿಸುವುದಕ್ಕಾಗಿಯೇ ಅಂದಕಾಲತ್ತಿಲ್‌ನ ಪತ್ರಕರ್ತರಾದ ಬಲಪಂಥೀಯ ರಾಜಕಾರಣಿ ಅರುಣ್ ಶೌರಿಯವರು 1997ರಲ್ಲಿ “Worshipping False Gods” ಎನ್ನುವ ಪುಸ್ತಕವನ್ನು ಪ್ರಕಟಿಸುತ್ತಾರೆ. ಬಾಬು ಜಗಜೀವನರಾಂ ಅವರ ಪತ್ನಿಯಾದ ಇಂದ್ರಾಣಿ ದೇವಿಯವರು ತಮ್ಮ ಡೈರಿಯಲ್ಲಿ “ಅಂಬೇಡ್ಕರ್ ಅವರ ಸಮಜಾಯಿಶಿ” ಎನ್ನುವ ಪ್ಯಾರದಲ್ಲಿ ಸ್ವಾತಂತ್ರದ ನಂತರ ರಚಿತಗೊಂಡ ಸರ್ಕಾರದಲ್ಲಿ ತಮಗೆ ಮಂತ್ರಿ ಪದವಿ ದೊರಕಿಸಲು ಗಾಂಧಿಯವರಲ್ಲಿ ಶಿಫಾರಸ್ಸು ಮಾಡಬೇಕೆಂದು ಅಂಬೇಡ್ಕರ್ ಅವರು ತಮ್ಮ ಮನೆಗೆ ಬಂದು ಬಾಬು ಜಗಜೀವನ ರಾಂ ಅವರನ್ನು ಕೇಳಿಕೊಂಡಿದ್ದರು ಎಂದು ಬರೆದಿದ್ದರು. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಅರುಣ್ ಶೌರಿಯವರು ತಮ್ಮ ಪುಸ್ತಕದಲ್ಲಿ ಅಂಬೇಡ್ಕರ್ ಅವರ ತೇಜೋವಧೆ ಮಾಡಿದ್ದನ್ನು ಹುಸಿಯೆಂದು ಸಾಬೀತುಗೊಳಿಸಲು ನಂತರದ ವರ್ಷಗಳಲ್ಲಿ ಅಕಾಡೆಮಿಕ್ ವಲಯದಿಂದ ಯಾವುದೇ ಬುದ್ಧಿಜೀವಿಗಳು ಮುಂದಾಗದಿದ್ದದು ಒಂದು ದುರಂತವೇ ಸರಿ. ಇಂದಿಗೂ ವರ್ಣಾಶ್ರಮದ ಆರಾಧಕರು, ಸನಾತನವಾದಿ ಅಕ್ಷರಸ್ಥರು ತಮ್ಮ ವಾದ ಮಂಡನೆಗೆ ಬಳಸಿಕೊಳ್ಳುವುದು ಅರುಣ್ ಶೌರಿಯವರ ಪುಸ್ತಕವನ್ನು.

ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವಾಗಿಯೇ ಚುನಾವಣೆಯಲ್ಲಿ ದಲಿತರಿಗಾಗಿ ಮೀಸಲಾತಿ ಕ್ಷೇತ್ರಗಳನ್ನು ರಚಿಸಲಾಯಿತು. ನಂತರವಷ್ಟೇ 1937ರಲ್ಲಿ ಪ್ರಥಮ ಬಾರಿಗೆ ಮೂವತ್ತರ ಹರೆಯದ ರಾಜಕಾರಣಿ ಬಾಬು ಜಗಜೀವನ ರಾಂ ಅವರು ಅಂಬೇಡ್ಕರ್ ಅವರ ಪರಿಶ್ರಮದ ಫಲವಾದ ರಚಿತಗೊಂಡ ಮೀಸಲಾತಿ ಕ್ಷೇತ್ರದಲ್ಲಿ ಸ್ಪಧಿಸಿ ಜಯಗಳಿಸಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುತ್ತಾರೆ. ಅದರೆ ಸ್ವತಂತ್ರ ಭಾರತದ ಸಕ್ರಿಯ ರಾಜಕಾರಣದ ಚುನಾವಣಾ ರಾಜಕೀಯದಲ್ಲಿ ಅಸ್ಪೃಶ್ಯ ಸಮುದಾಯದ ಧೀಮಂತ ನಾಯಕರಾಗಿ ಅಂಬೇಡ್ಕರ್ ಅವರು ನಿರಂತರ ಸೋಲನ್ನು ಅನುಭವಿಸಿದರೆ ಕಾಂಗ್ರೆಸ್‌ನ ಹರಿಜನ ಮುಖವಾಗಿ ಬಾಬು ಜಗಜೀವನ ರಾಂ ಅವರು ಸತತ ಗೆಲುವನ್ನು ಸಾಧಿಸುತ್ತಾರೆ. ಇತಿಹಾಸದ ಈ ವ್ಯಂಗ್ಯಕ್ಕೆ ವ್ಯಾಖ್ಯಾನವೇ ಇಲ್ಲ!!

ಆದರೆ ಕಾಂಗ್ರೆಸ್ ಮಾದರಿಯ ಹುಂಡಾ ರಾಜಕೀಯ ಅತ್ಯಂತ ಸೀಮಿತ ವ್ಯಾಪ್ತಿಯುಳ್ಳದ್ದು ಮತ್ತು ಕಾಂಗ್ರೆಸ್‌ನ ಈ ಒಡೆದು ಆಳುವ ರಾಜಕಾರಣಕ್ಕೆ ಬಲಿಯಾದ ಸಜ್ಜನರಿಗೆ ವರ್ತಮಾನದಲ್ಲಿ ಸ್ಥಾನಮಾನಗಳು ಸಿಗುವುದಾದರೂ ಭವಿಷ್ಯದಲ್ಲಿ ಅವರ ಖ್ಯಾತಿ ಮುಸುಕಾಗುತ್ತಾ ಕಡೆಗೆ ಎಲ್ಲಿಯೂ ಸಲ್ಲದವರಾಗಿ ಬಿಡುತ್ತಾರೆ ಎನ್ನುವುದಕ್ಕೆ ಬಾಬು ಜಗಜೀವನ ರಾಂ ಅವರೇ ಸಾಕ್ಷಿ. ಇಂದು ಅವರ ಮಗಳಾದ ಮೀರಾ ಕುಮಾರ ಹೊರತಾಗಿ ಪ್ರಸ್ತುತ ಸಮಕಾಲೀನ ರಾಜಕಾರಣದಲ್ಲಾಗಲೀ, ಸಾಂಸ್ಕೃತಿಕ ಕ್ಷೇತ್ರದಲ್ಲಾಗಲೀ ಜಗಜೀವನರಾಂ ಅವರ ನೆನಪನ್ನು ಹುಟ್ಟಿಸುವಂತಹ ವಾರಸುದಾರರಾಗಲೀ, ಪಕ್ಷವಾಗಲೀ, ಸಂಘಟನೆಗಳಾಗಲಿ ಇಲ್ಲ!!

ಕಾಂಗ್ರೆಸ್ ರಾಜಕಾರಣದ ಸಂಪ್ರದಾಯವಾದಿ ಪಟ್ಟುಗಳನ್ನು ತಿರಸ್ಕರಿಸಿ ಹಿಂದೂತ್ವದ ಪುರೋಹಿತಶಾಹಿ ಸನಾತನವಾದಿ ಪರಂಪರೆಗೆ ಸೆಡ್ಡು ಹೊಡೆದು ತಳ ಸಮುದಾಯಕ್ಕೆ ಸಂಪೂರ್ಣವಾಗಿ ಪರ್ಯಾಯ ಸಾಂಸ್ಕೃತಿಕ ಮಾದರಿಗಳನ್ನು, ಸಾಮಾಜಿಕ ಹೊಸ ಬಗೆಯ ಆಯಾಮಗಳನ್ನು ಸೃಷ್ಟಿಸಿದ ಅಂಬೇಡ್ಕರ್ ಆ ಕಾರಣಕ್ಕಾಗಿಯೇ ಇಂದಿಗೂ ಅತ್ಯಂತ ಪ್ರಸ್ತುತ ನಾಯಕಾಗುತ್ತಾರೆ, ಆದರೆ ಕಾಂಗ್ರೆಸ್‌ನ ನೆರಳಲ್ಲೇ ಬೆಳೆದ, ಜಾತೀಯತೆಗೆ ಹಿಂದೂ ಧರ್ಮ ಕಾರಣವಲ್ಲ, ಬದಲಾಗಿ ನಾವು ವ್ಯಕ್ತಿಗತವಾಗಿ ಬದಲಾಗಬೇಕು ಎಂದು ಆಶಿಸಿದ ಬಾಬು ಜಗಜೀವನರಾಂ ಎಂದಿಗೂ ಬ್ರಾಹ್ಮಣ್ಯದ ಶಕ್ತಿಗಳನ್ನು ಎದುರು ಹಾಕಿಕೊಳ್ಳಲೇ ಇಲ್ಲ ಎಂದು ರಾಜಕೀಯ ಚಿಂತಕರು ವ್ಯಾಖ್ಯಾನಿಸುತ್ತಾರೆ.್

ಇದು ನಿಜವಿರಲೂಬಹುದೇನೊ. ಏಕೆಂದರೆ ಮೇಲ್ಜಾತಿಗಳು ಹಾಗೂ ಬಲಿಷ್ಠ ಶೂದ್ರ ಜಾತಿಗಳೇ ಪ್ರಧಾನವಾಗಿದ್ದ ಬಿಹಾರನ ಸಾಸಾರಂ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುತ್ತಿದ್ದ ಜಗಜೀವನ ರಾಂ ಮೇಲ್ಜಾತಿಗಳ ಧಾರ್ಮಿಕ ಯಜಮಾನ್ಯವನ್ನು ಎಂದೂ ಪ್ರಶ್ನಿಸುತ್ತಿರಲಿಲ್ಲ. ಕಟ್ಟಾ ಗಾಂಧಿವಾದಿಯಾಗಿದ್ದ ಜಗಜೀವನ ರಾಂ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಆ ಪ್ರತಿಮೆಯನ್ನು ನೀರಿನಿಂದ ತೊಳೆದ ಕಮಲಾಪತಿ ತ್ರಿಪಾಠಿಯವರ ಸಂವಿಧಾನ ವಿರೋಧಿ ಕ್ರಮವನ್ನು ಬಾಬುರವರು ತೀವ್ರವಾಗಿ ಖಂಡಿಸಲೇ ಇಲ್ಲ ಮತ್ತು ಪ್ರಶ್ನಿಸಲೂ ಇಲ್ಲ ಎಂದು ವಿಶ್ಲೇಷಕರು ವ್ಯಾಖ್ಯಾನಿಸುತ್ತಾರೆ. ಆದರೆ ಅಂಬೇಡ್ಕರ್ ಅವರು ನಿರಂತರವಾಗಿ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ, ಪ್ರತಿಭಟನೆಯ ಮೂಲ ಉದ್ದೇಶವೇ ಅಸ್ಪೃಶ್ಯರಿಗೆ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲೇರುವ ಸಾಧನಗಳು ಎಂಬುದನ್ನು ಕಡೆಗಣಿಸಿದದ್ದು ಜಗಜೀವನ ರಾಂ ಅವರ ಸೋಲೆನ್ನಬಹುದೇ? ತಾವು ಕಾಂಗ್ರೆಸ್‌ನ ದಾಳವಾಗಿರುವುದನ್ನು ಮೌನವಾಗಿ ಸಹಿಸಿಕೊಂಡಿದ್ದು ಬಾಬುರವರ ಸೀಮಿತತೆಯನ್ನು ಸೂಚಿಸುತ್ತದೆಯೇ? ನಾನು ಹಿಂದೂ ಅಲ್ಲ ಅಂದು ಘೋಷಿಸಿದ ಅಂಬೇಡ್ಕರ್‌ರನ್ನು, ಅವರ ಚಿಂತನೆಗಳನ್ನು ಕ್ರಮೇಣ ಮೂಲೆಗುಂಪು ಮಾಡಲು ಮೇಲ್ಜಾತಿ ಶಕ್ತಿಗಳು ಜಗಜೀವನ ರಾಂ ಅವರನ್ನು ಹರಿಜನರನ್ನಾಗಿ ಉಪಯೋಗಿಸಿಕೊಂಡರೆಂದು ಇತಿಹಾಸಕಾರರು ವಿಶ್ಲೇಶಿಸುತ್ತಾರೆ. ಆದರೆ ಇದೆಲ್ಲವೂ ಅರ್ಧಸತ್ಯ. ಕಡೆಗೊಮ್ಮೆ ಈ ದೇಶದಲ್ಲಿ ಚಮ್ಮಾರನಿಗೆ ಪ್ರಧಾನ ಮಂತ್ರಿಯಾಗುವ ಅವಕಾಶವೇ ಇಲ್ಲ ಎಂದು ಅಸಹಾಯಕತೆಯಿಂದ, ಗದ್ಗದಿತರಾಗಿ ನುಡಿಯುತ್ತಾರೆ ಜಗಜೀವನ ರಾಂ.

ಕಾಂಗ್ರೆಸ್‌ನ ನೆರಳಿನಲ್ಲಿ ಮತ್ತು ನಂತರ ಎಪ್ಪತ್ತರ ದಶಕದಲ್ಲಿ ಜನತಾ ಪರಿವಾರದ ನೆರಳಿನಲ್ಲಿ ರಾಜಕೀಯವನ್ನು ನಡೆಸಿದರೂ ಬಾಬು ಜಗಜೀವನ ರಾಂ ಅವರು ವಿವಿಧ ಸರ್ಕಾರಗಳಲ್ಲಿ ರೈಲ್ವೇ, ವ್ಯವಸಾಯ, ಸಹಕಾರ ಖಾತೆಗಳ ಮಂತ್ರಿಗಳಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು. ತಾವು ಜವಬ್ದಾರಿ ವಹಿಸಿಕೊಂಡ ಇಲಾಖೆಗಳಲ್ಲಿ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದ ಜಗಜೀವನ ರಾಂ ಅವರು ಅತ್ಯಂತ ಯಶಸ್ವೀ ಮಂತ್ರಿಗಳಾಗಿ ಪ್ರಸಿದ್ಧಿಯಾಗಿದ್ದರು. ಬಾಬು ಅವರನ್ನು ರೈಲ್ವೇ ಖಾತೆಯ ಪಿತಾಮಹರೆಂದು ಕರೆಯುತ್ತಿದ್ದರು. ಫ್ರೊ.ಜೋಗನ್ ಶಂಕರ್ ಹೇಳುವಂತೆ ಭಾರತದಲ್ಲಿ ಕೂಲಿ ಕಾರ್ಮಿಕರ ಸಂಘಟನೆಯ ಬೀಜ ಬಿತ್ತಿದ್ದು ಬಾಬು ಜಗಜೀವನ ರಾಂ. ಪ್ರಧಾನಮಂತ್ರಿಗಳಾಗುವ ಎಲ್ಲಾ ಅರ್ಹತೆಗಳಿದ್ದರೂ ಕಾಂಗ್ರೆಸ್‌ನ ಕುಟಿಲ ರಾಜಕಾರಣದ ಫಲವಾಗಿ ಐವತ್ತರ ದಶಕದಲ್ಲಿ ಅಂಬೇಡ್ಕರ್‌ರಂತೆ ಎಪ್ಪತ್ತರ ದಶಕದ ಕೊನೆ ಕೊನೆಗೆ ಏಕಾಂಗಿ ರಾಜಕಾರಣಿಯಾಗಿ ಸೋತುಹೋದರು.

ಇಂದು ಒಳ ಮೀಸಲಾತಿಯ ಪರ ಮತ್ತು ವಿರೋಧವಾಗಿ ನಡೆಯುತ್ತಿರುವ ಹೋರಾಟಗಳಿಗೆ ಮೇಲಿನ ಇತಿಹಾಸದ ಘಟನೆಗಳು ಸಾಕ್ಷೀಪ್ರಜ್ಞೆಯಾಗಿ ನಿಲ್ಲಬೇಕು. ಏಕೆಂದರೆ ಒಳ ಮೀಸಲಾತಿಯು ಇಂದು ಅನಿವಾರ್ಯ. ಇದು ವಿಕೇಂದ್ರಿಕರಣದ ಮುಂದುವರೆದ ಪ್ರಕ್ರಿಯೆ. ಸದಾಶಿವ ಆಯೋಗವು ಈ ಒಳ ಮೀಸಲಾತಿಯನ್ನು ಬೆಂಬಲಿಸಿದೆ ಎನ್ನುವ ಪತ್ರಿಕೆಗಳ ವರದಿಯನ್ನಾಧರಿಸಿ ಸದಾಶಿವ ಆಯೋಗದ ಜಾರಿಗಾಗಿ ಒತ್ತಾಯಿಸಿ ಒಂದು ಗುಂಪಿನ ಅನೇಕ ದಲಿತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದರೆ ಯಾರೊಬ್ಬರೂ ಸದಾಶಿವ ಆಯೋಗವನ್ನು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚಿಸಿ ವಿಧಾನಸಭೆಯಲ್ಲಿ ಮಂಡಿಸಬೇಕೆಂದು ಒತ್ತಾಯಿಸುತ್ತಿಲ್ಲ. ಇದೇ ಸದಾಶಿವ ಆಯೋಗವನ್ನು ವಿರೋಧಿಸಿ ಲಂಬಾಣಿಗಳು ಮತ್ತು ಬೋವಿ ಜನಾಂಗದವರು ವಿರೋಧಿಸುತ್ತಿದ್ದಾರೆ. ಇವರಿಗೆ ದಲಿತ ಸಮುದಾಯದ ಬಲಗೈ ಗುಂಪು ಬೆಂಬಲಿಸುತ್ತಿದ್ದಾರೆಂದು ಮಾತಿದೆ. ಹಿಂದೊಮ್ಮೆ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಸೋಲಿಸುವುದಕ್ಕಾಗಿ ಹೆಣೆದ ವಿವಿಧ ಕುತಂತ್ರಗಳನ್ನೇ ಇಂದಿನ ಎಲ್ಲಾ ರಾಜಕೀಯ ಪಕ್ಷಗಳ ಸಿದ್ಧಾಂತಗಳೂ ಅನುಸರಿಸುತ್ತಿವೆ.

ಯಾವುದೇ ನಿರ್ದಿಷ್ಟ ಅಜೆಂಡಾಗಳಿಲ್ಲದೆ, ಖಚಿತ ಕಾರ್ಯಸೂಚಿಗಳಿಲ್ಲದೆ ಕೇವಲ ಪ್ರತಿಕ್ರಿಯಾತ್ಮಕವಾಗಿ ಹೋರಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರಗತಿಪರ ಗುಂಪುಗಳನ್ನು, ದಲಿತ ಸಂಘಟನೆಗಳನ್ನು ದಾರಿ ತಪ್ಪಿಸಲು ಮತ್ತು ತಮ್ಮೊಳಗೆ ಕಚ್ಚಾಡಿಕೊಳ್ಳುವಂತೆ ಅನುವಾಗಲು ಸದಾಶಿವ ಆಯೋಗವನ್ನು ದಾಳವಾಗಿ ಸರ್ಕಾರವು ಬಳಸಿಕೊಂಡಿರಬಹುದೇ?

ಕಡೆಯದಾಗಿ, ಸವರ್ಣೀಯ ಬಲಿಷ್ಠ ಜಾತಿಗಳು ಒಗ್ಗಟ್ಟಾಗಿ ಸಂಘಟಿತರಾಗುತ್ತಿದ್ದರೆ ಪರಿಶಿಷ್ಟ ಪಂಗಡದವರು ತಮ್ಮೊಳಗಿನ ಅಸಮಾನತೆಯಿಂದಾಗಿ, ಅಪನಂಬಿಕೆಯಿಂದಾಗಿ ಬೇರ್ಪಡುತ್ತಿರುವುದು ಬಲು ದೊಡ್ಡ ದುರಂತ. ಈ ವಿಘಟನೆಗಳಿಗೆ ಅಂಬೇಡ್ಕರ್ ಮತ್ತು ಜಗಜೀವನ ರಾಂ ಅವರನ್ನು ಕಾರಣವಾಗಿಟ್ಟುಕೊಂಡು ಇತಿಹಾಸದ ಆಧ್ಯಾಯಗಳು ತಪ್ಪು ಕಾರಣಗಳಿಗಾಗಿ ಬಳಕೆಯಾಗುತ್ತಿರುವುದು ಪ್ರಜಾಪ್ರಭುತ್ವದ, ಪ್ರಗತಿಪರ ಚಳುವಳಿಗಳ ಬಲು ದೊಡ್ಡ ಸೋಲೇ ಸರಿ.

ರಾಜ್ಯ ಸರ್ಕಾರಕ್ಕೆ ಮಾರ್ಕಂಡೇಯ ಖಟ್ಜು ಮಂಗಳಾರತಿ


– ಡಾ.ಎನ್.ಜಗದೀಶ್ ಕೊಪ್ಪ


 

ಸರ್ಕಾರಿ ಸವಲತ್ತುಗಳಾದ ಸಾರಿಗೆ ಭತ್ಯೆ ಮತ್ತು ಮನೆ ಭತ್ಯೆ, ಹಾಗೂ ಗೂಟದ ಕಾರಿನಲ್ಲಿ ತಿರುಗುವುದು ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಭಾವಿಸಿರುವ ರಾಜ್ಯ ಬಿ.ಜೆ.ಪಿ. ಸರ್ಕಾರದ ಜನಪ್ರತಿನಿಧಿಗಳು ಮತ್ತು ಸಚಿವರು ಎಂಬ ಆರೋಪ ಹೊತ್ತಿರುವ ಮಹನೀಯರಿಗೆ ಭಾರತೀಯ ಪತ್ರಿಕಾ ಮಂಡಲಿ ಅಧ್ಯಕ್ಷರೂ ಹಾಗೂ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ಮಾರ್ಕಂಡೇಯ ಖಟ್ಜು ಮಂಗಳೂರಿನಲ್ಲಿ ಮಂಗಳಾರತಿ ಎತ್ತುವುದರ ಮೂಲಕ ಮುಖದ ನೀರು ಇಳಿಸಿದ್ದಾರೆ.

ಪತ್ರಕರ್ತ ನವೀನ್ ಸೂರಿಂಜೆಯ ಅಕ್ರಮ ಬಂಧನ ಮತ್ತು ನ್ಯಾಯಲಯಕ್ಕೆ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಕೆಂಡಾಮಂಡಲರಾಗಿರುವ ಖಟ್ಜು ಸೋಮವಾರ ಮಂಗಳೂರಿನಲ್ಲಿ ಕರ್ನಾಟಕದಲ್ಲಿ ಈ ರೀತಿ ಪತ್ರಿಕಾ ಸ್ವಾತಂತ್ರ್ಯ ಹರಣವಾದರೆ, ಸಂವಿಧಾನದ ವಿಧಿ 356ನೇ ಪ್ರಕಾರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂತಹ ಎಚ್ಚರಿಕೆಯನ್ನು ಪಡೆದ ಮೊದಲ ರಾಜ್ಯ ಎಂಬ ಕುಖ್ಯಾತಿ ಈಗ ಕರ್ನಾಟಕಕ್ಕೆ ಲಭ್ಯವಾಗಿದೆ.

ತನ್ನ ಆತ್ಮಹತ್ಯೆಯ ಹಾದಿಯಲ್ಲಿ ಬಹುತೇಕ ಗುರಿ ತಲುಪಿರುವ ಬಿ.ಜೆ.ಪಿ. ಸರ್ಕಾರಕ್ಕೆ ಇಂತಹ ರಾಷ್ಟ್ರೀಯ ಮಟ್ಟದ ಅಪಮಾನಗಳು ಮರ್ಮಕ್ಕೆ ತಾಕುವ ಸಂಭವ ತೀರಾ ಕಡಿಮೆ. ಭಂಡತನವನ್ನು ಮೈಗೂಡಿಸಿಕೊಂಡಿರುವ ಇವರು, ಆಡಳಿತ ಯಂತ್ರವನ್ನು ಖದೀಮ ಅಧಿಕಾರಿಗಳು ಮತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ. ಉರಿಯುವ ಮನೆಯಲ್ಲಿ ಸಿಕ್ಕಿದ್ದನ್ನು ದೋಚಿದರು ಎಂಬಂತೆ ಸರ್ಕಾರಿ ಭೂಮಿಯ ಮೇಲೆ ಕಣ್ಣು ನೆಟ್ಟು ಹಾಡು ಹಗಲೇ ಯಾವುದೇ ನಾಚಿಕೆ, ಆತ್ಮಸಾಕ್ಷಿ ಇಲ್ಲದವರಂತೆ ದೋಚುತ್ತಿರುವಾಗ ಕರ್ನಾಟಕದ ಜನತೆಯ ಸ್ಥಿತಿ ’ಹರ ಕೊಲ್ಲಲ್ ಪರ ಕಾಯ್ವನೆ?’ ಎಂಬಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಇತ್ತೀಚೆಗಿನ ವರ್ತನೆಯನ್ನು ಗಮನಿಸಿದರೆ, ಇವರು ಪೊಲೀಸರ ಕೆಲಸವಿರಲಿ, ಯಾವುದೇ ಶ್ರೀಮಂತರ ಮನೆಯ ಬಾಗಿಲು ಕಾಯುವ ಸೆಕ್ಯೂರಿಟಿ ಹುದ್ದೆಗೂ ನಾಲಾಯಕ್ ಆಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.

ವರ್ಷದ ಹಿಂದೆ ಮನೆಯಲ್ಲಿ ಚಹಾಪುಡಿ ಮತ್ತು ಭಗತ್ ಸಿಂಗನ ಸಾಹಿತ್ಯ ಸಿಕ್ಕಿತು ಎಂಬ ಕಾರಣಕ್ಕಾಗಿ ವಿಠಲ ಮಲೆಕುಡಿಯ ಎಂಬ ಪತ್ರಿಕೋದ್ಯಮದ ಹುಡುಗನನ್ನು ಬಂಧಿಸಿ, ಜೈಲಿಗೆ ತಳ್ಳಿ ಆತನ ಭವಿಷ್ಯವನ್ನು ಹಾಳುಗೆಡವಿದ ಇದೇ ಪೊಲೀಸರು ಈಗ ಯುವ ಪತ್ರಕರ್ತ ನವೀನ್ ಬದುಕಿಗೆ ಮುಳ್ಳಾಗಿದ್ದಾರೆ. ಇವರ ಕುಕೃತ್ಯದ ಬಗ್ಗೆ ಹಿಂದೂ ಪತ್ರಿಕೆಯಲ್ಲಿ ಕಳೆದ ಶನಿವಾರ ಬೆಂಗಳೂರಿನ ಸ್ಥಾನಿಕ ಸಂಪಾದಕಿ ಪಾರ್ವತಿ ಮೆನನ್ ಲೇಖನವೊಂದನ್ನು ಬರೆದರು. ಈ ಲೇಖನ ಹಿಂದೂ ಪತ್ರಿಕೆಯ ರಾಷ್ಟ್ರದ ಎಲ್ಲಾ ಅವೃತ್ತಿಗಳಲ್ಲಿ ಪ್ರಕಟವಾಗಿ ಕರ್ನಾಟಕದ ಪೊಲೀಸರ ಸಣ್ಣತನವನ್ನು ಅನಾವರಣಗೊಳಿಸಿದೆ.

ಮಂಗಳೂರಿನಲ್ಲಿ ಹೋಂಸ್ಟೇ ದಾಳಿ ನಡೆದ ನಂತರ ಮಾಧ್ಯಮಗಳಿಗೆ ದೃಶ್ಯ ಮತ್ತು ವಿವರಗಳನ್ನು ಹಂಚಿಕೊಂಡ ನವೀನ್ ಮಂಗಳೂರಿನಲ್ಲಿ ಇದ್ದರೂ ಕೂಡ ಕಾಣೆಯಾಗಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ನಿಜಕ್ಕೂ ಮಂಗಳೂರಿನಲ್ಲಿ ನವೀನ್ ಕಾಣೆಯಾಗಿದ್ದರೆ, ಈ ಪ್ರಶ್ನೆಗಳಿಗೆ ಪೊಲೀಸರು ಉತ್ತರಿಸಬೇಕಿದೆ:

  • ಒಂದು: ನೀವು ವಿಚಾರಣೆಗೆ ಕರೆದಾಗ ನವೀನ್ ಬಂದು ವಿವರಣೆ ಒದಗಿಸಲಿಲ್ಲವೆ?
  • ಎರಡು: ಹೋಂಸ್ಟೇ ಘಟನೆ ನಡೆದ ನಂತರ ನವೀನ್ ಸೂರಿಂಜೆ ಕೆಲಸ ಮಾಡುತ್ತಿರುವ ಕಸ್ತೂರಿ ಛಾನಲ್ ಗೆ ಸುದ್ಧಿಗಳನ್ನು ಕಳಿಸುತ್ತಾ, ಕೆಲಸ ಮಾಡಲಿಲ್ಲವೆ? ಮಾಡಿಲ್ಲವಾದರೆ, ಆತ ಈ-ಮೈಲ್ ಮೂಲಕ ವಾಹಿನಿಗೆ ಮಂಗಳೂರಿನ ಸುದ್ಧಿ ಕಳಿಸಿದ ಬಗ್ಗೆ ಮಾಹಿತಿ ನೀಡಿದರೆ, ನೀವು ನೇಣು ಹಾಕಿಕೊಳ್ಳಲು, ಇಲ್ಲವೇ ಖಾಕಿ ಬಟ್ಟೆ ಕಳಚಿಟ್ಟು ಮಂಗಳೂರಿನ ಬೀದಿಯಲ್ಲಿ ಕಸ ಗುಡಿಸಲು ಸಿದ್ದರಿದ್ದೀರಾ?
  • ಮೂರು: ಕಳೆದ ನವಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಬೇಟಿ ನೀಡಿದಾಗ ನವೀನ್ ಸೂರಿಂಜೆಗೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲು ಪಾಸ್ ನೀಡಿದವರು ಯಾರು? ಆ ಸಮಯದಲ್ಲಿ ಪೊಲೀಸರು ಏನಾದರೂ ಹೆಂಡ ಕುಡಿದು ಪಾಸ್ ವಿತರಣೆ ಮಾಡಿದ್ದಾರೆಯೆ?

ಈ ಬಗ್ಗೆ ಕರ್ನಾಟಕದ ಜನತೆಗೆ ಪೊಲೀಸರು ಮತ್ತು ಗೃಹ ಇಲಾಖೆಯ ಹೊಣೆ ಹೊತ್ತಿರುವ ಆರ್. ಅಶೋಕ್ ಕೂಡಲೇ ಉತ್ತರಿಸಬೇಕಿದೆ.

ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಪೊಲೀಸರಿಂದ ಹರಣವಾಗುತ್ತಿರುವ ಸಂದರ್ಭದಲ್ಲಿ ದ್ವನಿ ಎತ್ತಬೇಕಾದ ನಮ್ಮ ಮಾಧ್ಯಮಗಳು ಪ್ರಳಯ ಎಂಬ ಪುಕಾರಿನ ಬಗ್ಗೆ ಪುಂಗಿ ಊದುತ್ತಾ ಕುಳಿತಿವೆ. ಪತ್ರಕರ್ತರಂತೂ ತಮಗೆ ಸಂಬಂಧಿಸದ ವಿಷಯವಲ್ಲವೇನೋ ಎಂಬಂತೆ ಪ್ರತಿಯೊಬ್ಬನೂ ತನ್ನ ಕಂಫರ್ಟ್‌-ಜೋನ್ (ಸುರಕ್ಷಿತ ವಲಯ) ನಲ್ಲಿ ಆರಾಮವಾಗಿದ್ದಾನೆ. ಪ್ರಜಾವಾಣಿಯ ಮಿತ್ರ ದಿನೇಶ್ ಅಮ್ಮಿನ್ ಮಟ್ಟು ಹಾಗೂ ಒಂದಿಬ್ಬರೂ ಹೊರತು ಪಡಿಸಿದರೆ, ಉಳಿದವರು ತಮ್ಮ ಪಂಚೇಂದ್ರಿಯವನ್ನು ಕಳೆದುಕೊಂಡವರಂತೆ ವರ್ತಿಸುತಿದ್ದಾರೆ. ಇನ್ನೂ ಪತ್ರಕರ್ತರ ಸವಲತ್ತುಗಳಿಗಾಗಿ ಸಂಘಗಳು, ವೇದಿಕೆಗಳು, ಪರಿಷತ್ತುಗಳು, ಕೂಟಗಳು, ಕ್ಲಬ್‌ಗಳು ಹೀಗೆ ರಾಜ್ಯಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡು ವಿಜೃಂಭಿಸುತ್ತಿವೆ. ಪಾಪ ಇವುಗಳ ಪದಾಧಿಕಾರಿಗಳು ರಾಜಕಾರಣಿಗಳ ಕಾಲು ಒತ್ತುತ್ತಾ ಅವರ ಪಾದದಡಿ ವಿಶ್ರಮಿಸಿರಬೇಕು.

ಕಳೆದ ವಾರ ಈ ಕುರಿತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೆಳೆಯರಾದ ಗಂಗಾಧರ್ ಮೊದಲಿಯಾರ್ ಜೊತೆ ದೂರವಾಣಿಯಲ್ಲಿ ಚರ್ಚಿಸಿದೆ. ಪಾಪ ಅವರೂ ಮರೆತಿರಬೇಕು. ಈ ಕಾರಣಕ್ಕಾಗಿಯೇ, ಪತ್ರಕರ್ತರ ಸಂಘವನ್ನು “ಕಾರ್ಯ ಮರೆತ ಪತ್ರಕರ್ತರ ಸಂಘ”ವೆಂದು ಲೇವಡಿ ಮಾಡಲಾಗುತ್ತಿದೆ. ಇಲ್ಲಿ ಕಾರ್ಯ ಮರೆತರೆ ಅಂತಹ ದೊಡ್ಡ ಅನಾಹುತವಿಲ್ಲ, ಪತ್ರಕರ್ತರ ಹಕ್ಕನ್ನೇ ಮರೆತರೆ ಹೇಗೆ? ಇದು ಪ್ರತಿಯೊಬ್ಬ ಪತ್ರಕರ್ತ ತನ್ನ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ. (ಯಾವುದೇ ಪತ್ರಕರ್ತ ತನ್ನ ಸುದ್ದಿಯ ಮೂಲವನ್ನು ಪೊಲೀಸರಿಗೆ ಅಥವಾ ಸರ್ಕಾರಕ್ಕೆ ನೀಡಲೇಬೇಕೆಂಬ ನಿರ್ಬಂಧ ಇಲ್ಲ.)

ಮಿತ್ರರೇ, ಪೊಲೀಸರ ಈ ವಂಚನೆ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ದೊಡ್ಡದೊಂದು ಆಂದೋಲನ ತುರ್ತಾಗಿ ಕರ್ನಾಟಕದಲ್ಲಿ ನಡೆಯಬೇಕಿದೆ. ಇದಕ್ಕೆ ಮುಂದೆ ಬರುವ ಮಹನೀಯರ ಜೊತೆ ನಾನೂ ಸಹ ಕೈ ಜೋಡಿಸಲು ಸಿದ್ದನಿದ್ದೇನೆ. ಬೆಳಗಾವಿಯ ವಿಶೇಷ ಅಧಿವೇಶನ ಮುಗಿದ ಕೂಡಲೇ ಒಂದು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಿ ನಮ್ಮ ತಾತ್ವಿಕ ಸಿಟ್ಟನ್ನು ಸರ್ಕಾರಕ್ಕೆ ಮುಟ್ಟಿಸಬೇಕಿದೆ. ಆವಾಗ ಮಾತ್ರ ನವೀನ್ ಸೂರಿಂಜೆಯಂತಹವರಿಗೆ ನ್ಯಾಯ ಸಿಗಲು ಸಾಧ್ಯ.

Justice Katju’s statement in Mangalore on Naveen Soorinje’s case

Justice Markandey Katju

I have been approached by many journalists in Mangalore about my views regarding criminal proceedings against Naveen Soorinje.

It will not be proper for me to make any comment about the particular case of Naveen Soorinje because I am informed that charge-sheet has been filed in a court and that the judicial proceedings are pending before judicial magistrate, and I am told that a petition under Section 482 Cr.P.C is pending before the High Court praying for quashing of the criminal proceedings. As such, since the matter is sub-judice both before the trial court and the High Court it will not be proper for me to comment about the particular case of Mr. Naveen Soorinje.

However, I am informed that in Mangalore journalists are often harassed by the police and also by the hooligans. I therefore make it clear that the Press Council will not tolerate violation of press freedom either by assaults on journalists or giving threats or in any other manner. Freedom of the press is a fundamental right under Article 19 (1) (a) of the Constitution and it is the duty of the State to uphold this right.

I therefore warn the authorities, which includes both political, administrative and police authorities that if they violate this press freedom by assaults or threats to journalists or in any other manner the Press Council will take strong action in this connection. In particular, the State Government of Karnataka through its Chief Minister is given a strong warning to uphold press freedom and to suppress the activities of hooligans or police personnel who violate fundamental rights of citizens, including the journalists.

The State Government is warned that if it does not protect journalists and uphold press freedom it will be deemed that the State Government is unable to run the Government in accordance with the Constitution, and then the legal consequences in Article 355 and 356 of the Constitution may follow. Article 356 (is invoked) when the President of India finds on the report of the Governor or otherwise that the State Government is unable to function in accordance with the Constitution. I am also part of “otherwise” and anybody can make a recommendation. Of course it is up to the President to accept it or not. Under Article 355 Central Government can issue a warning to the State Government asking it to run the Government in accordance with the Constitution failing which recourse may be had to Article 356.

ಭೂಪಾಲ್ ದುರಂತದ ವಾಸ್ತವ ಮತ್ತು ವರ್ತಮಾನ

-ಅರುಣ್ ಜೋಳದಕೂಡ್ಲಿಗಿ

ಇಂದು ಭೂಪಾಲ್ ದುರಂತದ ದಿನ. ಈ ದುರಂತದ ಕಾರಣಕರ್ತರಿಗೆ 2010 ರಲ್ಲಿ ಬಂದ ನ್ಯಾಯಾಲಯದ ತೀರ್ಪು ಮತ್ತು ಅದರ ಹಿಂದಣ ಹುನ್ನಾರವನ್ನು ನಾವಿಂದು ನೆನೆಯಬೇಕಿದೆ. ಇದು ಅಮೇರಿಕಾ ಜಗತ್ತನ್ನು ತನ್ನ ತಾಳಕ್ಕೆ ತಕ್ಕಂತೆ ಆಡಿಸುವ ಆಟದ ಮುಖವಾಗಿಯೂ ಕಾಣುತ್ತದೆ.

ಜಗತ್ತು ಕಂಡ ಭೀಕರ ಭೂಪಾಲ್ ಕೈಗಾರಿಕಾ ದುರಂತ ಸಂಭವಿಸಿ ಇಲ್ಲಿಗೆ 28 ವರ್ಷಗಳು ಸಂಭವಿಸಿದವು. 1984 ಡಿಸೆಂಬರ್ 2-3 ರಲ್ಲಿ ನಡೆದ ಭೂಪಾಲ್ ಅನಿಲ ದುರಂತ ಅಂದು ಜಗತ್ತನ್ನೇ ತಲ್ಲಣಗೊಳಿಸಿತ್ತು. 25 ಸಾವಿರಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿದ್ದವು. ಅದು ಎಲ್ಲರ ಉಸಿರು ಕಟ್ಟಿಸಿತ್ತು. ಈಗಲೂ ಈ ದುರಂತವನ್ನು ನೆನಪಿಸಿಕೊಂಡರೆ ಮಾನವೀಯತೆ ಇರುವ ಯಾರಿಗಾದರೂ ಉಸಿರು ಕಟ್ಟುತ್ತದೆ. ಇದರ ಪರಿಣಾಮವನ್ನು ಈಗ ಹುಟ್ಟುವ ಮಕ್ಕಳೂ ಸಹ ಅನುಭವಿಸುತ್ತಿದ್ದಾರೆ.

ಈ ದುರಂತಕ್ಕೆ ಸಂಬಂದಿಸಿದ ತೀರ್ಪು 26 ವರ್ಷಗಳ ನಂತರ ಒಂದು ವರ್ಷದ ಹಿಂದಷ್ಟೆ ಹೊರ ಬಿದ್ದಿತು. ಈ ತೀರ್ಪು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಭಾರತ ಘಟಕದ ಮಾಜಿ ಅಧ್ಯಕ್ಷ ಕೇಶುಭ್ ಮಹಿಂದ್ರಾ ಅವರನ್ನು ಸೇರಿ ಎಂಟು ಮಂದಿ ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ವೀರಪ್ಪ ಮೊಯಿಲಿ ಮೊದಲಾದ ಕಾನೂನು ತಜ್ಞರು ಈ ತೀರ್ಪನ್ನು ನ್ಯಾಯದ ಸಮಾಧಿ ಎಂದು ಟೀಕಿಸಿದ್ದರು. ಸಂತ್ರಸ್ಥರ ಕುಟುಂಬದವರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ರೋಶಭರಿತರಾಗಿ ನ್ಯಾಯಾಲಯಗಳ ಮುಂದೆ ಪ್ರತಿಭಟನೆ ನಡೆಸಿದರು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೂ ಮೊರೆ ಹೋಗಿದ್ದಾರೆ. ಭೂಪಾಲ ಅನಿಲ ದುರಂತದ ಸಂತ್ರಸ್ತರು ನ್ಯಾಯಕ್ಕಾಗಿ ಈಗಲೂ ಕಾಯುತ್ತಿದ್ದಾರೆ. 2011 ಜೂನ್‌ನಲ್ಲಿ ಬಂದ ತೀರ್ಪಿನ ಹಿಂದೆ ಅದೆಷ್ಟೋ ಅಮೆರಿಕ ಪ್ರಾಯೋಜಿತ ಎನ್.ಜಿ.ಒ. ವರದಿಗಳ ಪರೋಕ್ಷ ಬೆಂಬಲವಿದೆ. ಅಂತಹ ಒಂದು ವರದಿಯು ಮಂಡನೆಯಾದ ಅನುಭವದ ಕೆಲವು ಟಿಪ್ಪಣಿಗಳಿವು.

2004 ರಲ್ಲಿ ಭೂಪಾಲ್ ಅನಿಲ ದುರಂತ ನಡೆದು 20 ವರ್ಷಗಳಾಗಿದ್ದವು. ಇದರ ನೆನಪಿಗಾಗಿ ಒಂದು ಎನ್.ಜಿ.ಒ. ಸತತ ಹತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿ ಸಿದ್ದಪಡಿಸಿದ ಒಂದು ವರದಿಯನ್ನು 2005 ರಲ್ಲಿ ಬಿಡುಗಡೆ ಮಾಡಿತು. ಆ ಕಾರ್ಯಕ್ರಮಕ್ಕೆ ಕರ್ನಾಟಕದ ಎನ್.ಜಿ.ಒ.ಗಳ ಕೆಲವು ಸದಸ್ಯರು, ಕೆಲವು ಆಸಕ್ತರು ಭೂಪಾಲ್ ಗೆ ತೆರಳಿದ್ದರು. ನಾನಾಗ ಹಂಪಿ ವಿವಿಯಲ್ಲಿ ಎಂ.ಎ. ಓದುತ್ತಿದ್ದೆ. ಇದರಲ್ಲಿ ಮರಿಯಮ್ಮನಹಳ್ಳಿಯ ಕನ್ನಡ ಉಪನ್ಯಾಸಕ ಸೋಮೇಶ್, ಗೆಳೆಯ ಚಂದ್ರಪ್ಪ ಸೊಬಟಿ ಮತ್ತು ನನ್ನನ್ನು ಒಳಗೊಂಡಂತೆ ಮೂರು ಜನ ಭೂಪಾಲ್‌ಗೆ ತೆರಳಿದ್ದೆವು. ಹೈದರಾಬಾದ್ ಕರ್ನಾಟಕದ ಮಹಿಳೆಯರ ಅಭಿವೃದ್ದಿಗಾಗಿ ಕೆಲಸಮಾಡುತ್ತೇವೆ ಎಂದು ಹೇಳಿಕೊಳ್ಳುವ ಸಖಿ ಎನ್ನುವ ಎನ್.ಜಿ.ಒ.ದ ಸಂಯೋಜಕಿಯಾದ ಡಾ. ಭಾಗ್ಯಲಕ್ಷ್ಮಿಯವರು ನಮ್ಮನ್ನು ಕಳುಹಿಸಿಕೊಟ್ಟಿದ್ದರು. ನಾವು ಆ ಎನ್.ಜಿ.ಒ.ದಲ್ಲಿ ಕೆಲಸ ಮಾಡದಿದ್ದರೂ ಆಸಕ್ತರಾಗಿ ಭಾಗವಹಿಸಲು ಹೋಗಿದ್ದೆವು. ಅದಕ್ಕಿಂತ ಮುಖ್ಯವಾಗಿ ಉಚಿತವಾಗಿ  ಭೂಪಾಲ್‌ಗೆ ಹೋಗುವ ಅವಕಾಶವೊಂದು ಸಿಕ್ಕ ಸಂಭ್ರಮದಲ್ಲಿ ಹೋಗಿದ್ದೆವು ಎನ್ನುವುದೇ ಸರಿ.

ಇದೊಂದು ಅಂತರಾಷ್ಟ್ರೀಯ ಸೆಮಿನಾರ್. ಬೇರೆ ಬೇರೆ ದೇಶದಿಂದ ಅನೇಕ ಪರಿಸರ ತಜ್ಞರು, ವಕೀಲರು, ಡಾಕ್ಟರುಗಳು, ಕೆಲವು ಸ್ಥಳೀಯ ನಾಯಕರು, ಭಾರತದ ಬೇರೆ ಬೇರೆ ರಾಜ್ಯಗಳಿಂದ ಎನ್.ಜಿ.ಒ.ಗಳ ಪ್ರತಿನಿಧಿಗಳು ಭೂಪಾಲ್‌ಗೆ ಬಂದಿದ್ದರು. ಈ ಸೆಮಿನಾರ್‌ಗೆ ಧನ ಸಹಾಯ ಮಾಡಿದ್ದು ಅಮೆರಿಕಾ ದೇಶ. ಇಲ್ಲಿ ಭಾಗವಹಿಸಿದ ಹಲವು ತಜ್ಞರಲ್ಲಿ ಅಮೆರಿಕಾದವರೂ ಇದ್ದರು. ಯಾವ ದೇಶವು ಅನಿಲ ದುರಂತಕ್ಕೆ ಕಾರಣವಾಗಿತ್ತೋ ಅದೇ ದೇಶ ಈ ದುರಂತದ ಬಗ್ಗೆ ಅಧ್ಯಯನ ಮಾಡಲು ಅಪಾರ ಹಣ ವ್ಯಯ ಮಾಡಿತ್ತು. ಇದರ ಮರ್ಮ ಏನೆಂದು ನನಗಾಗ ಅರ್ಥವಾಗಿರಲಿಲ್ಲ.

ಈ ಸೆಮಿನಾರಿನಲ್ಲಿ ಅಳಿದುಳಿದ ಸಂತ್ರಸ್ಥರು, ದುರಂತದಲ್ಲಿ ಸಾವಿಗೀಡಾದವರ ಕುಟುಂಬದವರು ಮತ್ತು ಮುನ್ಸಿಪಾಲ್ ಕಾರ್ಪೋರೇಷನ್‌ನಲ್ಲಿ ವಾಸಿತ ಜನರು ಭಾಗವಸಿದ್ದರು. ಈ ಸೆಮಿನಾರ್ ಹಾಲ್‌ನ ಎದುರು ಐವತ್ತಕ್ಕೂ ಹೆಚ್ಚಿನ ಗಾಲಿ ಕುರ್ಚಿಗಳ ಸೈಕಲ್ ನಿಂತಿದ್ದವು. ಇವು ಭೂಪಾಲ್ ದುರಂತದ ಮೂಕ ಸಾಕ್ಷಿಗಳೇನೋ ಎನ್ನುವಂತಿತ್ತು. ಕಾರಣ ಅನಿಲ ದುರಂತದ ಪರಿಣಾಮವಾಗಿ ಅಂಗವಿಕಲರಾದವರ ತಳ್ಳು ಗಾಡಿಗಳವು. ಅಂತೆಯೇ ಅನೇಕ ಕುರುಡರೂ, ದೀರ್ಘಕಾಲೀನ ರೋಗ ಪೀಡಿತರಾದ ಜನರೂ ಆ ಸೆಮಿನಾರಿನಲ್ಲಿ ಕೂತು, ಇಂಗ್ಲೀಷಿನಲ್ಲಿ ಮಂಡನೆಯಾಗುತ್ತಿದ್ದ ಸಂಶೋಧನ ವರದಿಯನ್ನು ಅರ್ಥವಾಗದಿದ್ದರೂ ಸುಮ್ಮನೆ ಕೇಳುತ್ತಿದ್ದರು.

ಇದೊಂದು ವ್ಯವಸ್ಥೆಯ ವೈರುಧ್ಯದಂತೆ ಕಾಣುತ್ತಿತ್ತು. ನಂತರ ಈ ಭಾಷಣದ ಅನುವಾದವನ್ನು ರೇಡಿಯೋ ಅಲೆಗಳ ಮೂಲಕ ಪ್ರಸಾರ ಮಾಡಲಾಯಿತು. ಅದನ್ನು ಕೇಳಲು ಎಲ್ಲರಿಗೂ ಒಂದೊಂದು ಪುಟ್ಟ ರೇಡಿಯೋಗಳನ್ನು ಇಯರ್ ಫೋನ್‌ಗಳನ್ನು ವಿತರಿಸಲಾಯಿತು. ಮಂಡನೆಯಾಗುತ್ತಿರುವ ವಿಷಯಕ್ಕೂ ಆ ಅನುವಾದಕ್ಕೂ ಸಂಬಂಧವೇ ಇಲ್ಲ ಎನ್ನುವಂತಹ ಕೆಟ್ಟ ಅನುವಾದವನ್ನು ಜನರು ಕೇಳುತ್ತಾ ಕೂತರು. ಕೂತವರ ಗಮನವೆಲ್ಲಾ ಸೆಮಿನಾರಿನಲ್ಲಿ ಹಂಚಲಾಗುತ್ತಿದ್ದ ತಿಂಡಿ, ಟಿ, ಊಟದ ಕಡೆಗೇ ಇತ್ತು. ಕಾರಣ ದೈನಂದಿನ ಕಷ್ಟಗಳನ್ನು ಮರೆತು ಒಂದೆರಡು ದಿನ ಹೊಟ್ಟೆತುಂಬಾ ಒಳ್ಳೆಯ ಊಟ ಮಾಡಬಹುದು, ಒಂದಿಷ್ಟು ಹಣ ಸಿಗುತ್ತದೆಯೆಂಬ ಅನಿವಾರ್ಯತೆಯಿಂದ ಜನರು ಅಲ್ಲಿಗೆ ಬಂದಿದ್ದರು. ಆದರೆ ಆ ಎನ್.ಜಿ.ಒ. ಈ ವರದಿಯನ್ನು ಸಿದ್ದಪಡಿಸಲು ಅನಿಲ ದುರಂತದ ಸಂತ್ರಸ್ಥರೇ ಸಹಕಾರ ನೀಡಿದ್ದಾರೆಂದೂ, ಈ ವರದಿಯ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿದೆಯೆಂದೂ ಹೇಳುವಲ್ಲಿ ಹೆಮ್ಮೆ ಪಡುತ್ತಿತ್ತು.

ಇಲ್ಲಿ ಮಂಡನೆಯಾದ ವರದಿಯು ಒಳಗೊಂಡ ವಿಷಯದ ಸಂಕ್ಷಿಪ್ತ ವಿವರ ಹೀಗಿದ್ದವು: ಇಡೀ ವರದಿಯು ಭೊಪಾಲ್ ಅನಿಲ ದುರಂತದ ನಂತರದ ಬೆಳವಣಿಗೆಯನ್ನು ಗಮನಹರಿಸಿತ್ತು. ಅಮೆರಿಕಾವು ಪರಿಹಾರವನ್ನು ನೀಡಿದ್ದು, ಭೂಪಾಲ್‌ನಲ್ಲಿ ಆ ಪರಿಹಾರ ನಿಧಿಯ ದುರ್ಬಳಕೆಯಾದದ್ದನ್ನು ಅಂಕಿ ಅಂಶಗಳ ಸಮೇತ ವಿವರಿಸಲಾಯಿತು. ಇಲ್ಲಿನ ಆರೋಗ್ಯ ಇಲಾಖೆಯ ಬೇಜವಬ್ದಾರಿ ನಡವಳಿಕೆಯಿಂದಾಗಿ ಜನರು ಈಗಲೂ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತಿತ್ತು. ಈ ಅಪರಾಧವನ್ನು ಮಾಡಿದವರನ್ನು ಗುರುತಿಸಿ ಶಿಕ್ಷಿಸುವಂತೆಯೂ ಸೂಚಿಸಲಾಗಿತ್ತು. ಇದು ಮಧ್ಯಪ್ರದೇಶ ಸರಕಾರದ ವೈಫಲ್ಯವನ್ನು ಬಿಂಬಿಸುವಂತಿತ್ತು. ಆ ಕಾರಣವನ್ನು ಮುಂದು ಮಾಡಿ ಇಡೀ ದುರಂತಕ್ಕೆ ಕಾರಣವಾದ ಅಮೆರಿಕಾವನ್ನು ತಪ್ಪಿತಸ್ಥ ಭಾವನೆಯಿಂದ ದೂರ ಮಾಡುವ ಸೂಕ್ಷ್ಮಗಳು ಇದ್ದವು. ಇದೊಂದು ಆಕಸ್ಮಿಕವಾಗಿ ಘಟಿಸಿದ ಘಟನೆಯೆಂತಲೂ ಇದಕ್ಕಾಗಿ ಅಮೆರಿಕಾ ದೇಶವು ಸಾಕಷ್ಟು ಅನುಕಂಪವನ್ನು ವ್ಯಕ್ತಪಡಿಸಿದೆಯೆಂತಲೂ, ಅದಕ್ಕೆ ಪೂರಕವಾಗಿ ಸಾಕಷ್ಟು ಪರಿಹಾರವನ್ನು ನೀಡಿದೆಯೆಂತಲೂ ಈ ವರದಿಯಲ್ಲಿ ಬಿಂಬಿತವಾಗಿದ್ದವು. ಒಟ್ಟು ಭೂಪಾಲ್ ಅನಿಲ ದುಂರಂತದಲ್ಲಿ ಭಾರತದ್ದೇ ತಪ್ಪಿದೆ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ಸಾಬೀತು ಪಡಿಸುವಂತಿತ್ತು. ಈ ತಿಳುವಳಿಕೆಯನ್ನು ಜನರಲ್ಲಿ ಬಿತ್ತಲು ಈ ಎನ್.ಜಿ.ಒ. ಹತ್ತು ವರ್ಷಗಳ ಕಾಲ ಈ ಭಾಗದಲ್ಲಿ ಕೆಲಸ ಮಾಡಿತ್ತು. ಅದು ಅಲ್ಲಿನ ಕೆಲ ಜನರಲ್ಲಿ ಬಲವಾಗಿ ಬೇರೂರಿಸುವಲ್ಲಿ ಸಫಲವೂ ಆಗಿತ್ತು. ಬಹುಶಃ ಅಂತಹ ವರದಿಗಳ ಬೆಂಬಲದಿಂದಾಗಿಯೇ ಭೂಪಾಲ್ ದುರಂತಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರಲಿಕ್ಕೆ ಸಾದ್ಯವಿದೆ.

ಅನಿಲ ದುರಂತಕ್ಕೆ ಬಲಿಯಾದವರ ಪರವಾಗಿ ಸತ್ಯು ಎಂಬುವವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಅವರು ವೃತ್ತಿಯಲ್ಲಿ ಎಂಜಿನಿಯರ್ ಆದರೂ ಸಮಾಜ ಸೇವೆಗೆ ತಮ್ಮನ್ನು ಒಪ್ಪಿಸಿಕೊಂಡವರಾಗಿದ್ದರು. ಅವರು ಈ ವರದಿಯನ್ನು ತಾತ್ವಿಕವಾಗಿ ವಿರೋಧಿಸಿದರು. ಈ ವರದಿಯು ಅನಿಲ ದುರಂತದ ಸಮಸ್ಯೆಯ ಗಂಭೀರತೆಯನ್ನು ಲಘುವಾಗಿಸುತ್ತದೆ, ಇದು ಮುಂದೆ ನ್ಯಾಯಾಲಯದ ತೀರ್ಪಿನ ವೇಳೆಯಲ್ಲಿ ಈ ವರದಿಯನ್ನು ಸಾಕ್ಷ್ಯ ಎಂದು ಪರಿಗಣಿಸಿದರೆ ಇದಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ನುಡಿದಿದ್ದರು. ಆದರೆ ಇಡೀ ಸೆಮಿನಾರಿನಲ್ಲಿ ಅವರ ಅಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಯಿತು. ಸೆಮಿನಾರಿಗಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಖರ್ಚಾಗಿರಬಹುದು. ಏಕೆಂದರೆ ಸೆಮಿನಾರಿಗೆ ಬಂದವರಿಗೆ ರಾಜಾತಿಥ್ಯವನ್ನು ನೀಡಲಾಗಿತ್ತು. ಸೆಮಿನಾರ್ ಮುಗಿದ ನಂತರ ಅನಿಲ ದುರಂತವಾದ ಮುನ್ಸಿಪಾಲ್ ಕಾರ್ಪೋರೇಷನ್‌ನ ವಾರ್ಡಗಳ ಭಾಗಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಅದು ಅತ್ಯಂತ ದಾರಿದ್ರ್ಯ ಬಡತನ ತಾಂಡವಾಡುತ್ತಿದ್ದ ಒಂದು ಸ್ಲಮ್‌ನಂತಿತ್ತು. ದೈಹಿಕ ಅಂಗವೈಕಲ್ಯದ ಲಕ್ಷಣಗಳು ಕಾಣುವ ಜನರೇ ಬಹುವಾಗಿ ಕಾಣಿಸಿಕೊಂಡರು.

ಅಲ್ಲಿನ ಮಕ್ಕಳೆಲ್ಲಾ ತಮ್ಮನ್ನು ನೋಡಲು ಬಂದವರ ಹತ್ತಿರ ಹಸಿದ ಮುಖಹೊತ್ತು ಬಂದರು. ಸೆಮಿನಾರ್ ಆಯೋಜಕರು ಅವರಿಗೆ ಬಿಸ್ಕತ್ತು ಮುಂತಾದ ತಿಂಡಿ ಪದಾರ್ಥಗಳನ್ನು ನೀಡಿದರು. ನಮಗೆ ಆ ಏರಿಯಾದಲ್ಲಿ ಸುತ್ತಾಡಿ ಜನರನ್ನು ಮಾತನಾಡಿಸಬೇಕೆಂಬ ಆಸೆ ಇದ್ದರೂ ಸೆಮಿನಾರ್ ಆಯೋಜಕರು ಅದಕ್ಕೆ ಅವಕಾಶ ಕೊಡಲಿಲ್ಲ. ಪ್ರವೇಶ ನಿಷಿದ್ಧವಾದ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯ ಕಾಂಪೊಂಡಿನೊಳಗೆ ಯಥೇಚ್ಚ ಕುರುಚಲು ಗಿಡಗಳು ಬೆಳೆದು ಸ್ಮಶಾನದಂತೆ ಗೋಚರಿಸುತ್ತಿತ್ತು. ಅನಿಲ ದುರಂತದ ನೆನಪನ್ನು ತರುವ ಸ್ಮಾರಕವೊಂದರ ಕಲಾಕೃತಿ ಮುಗಿಲ ಕಡೆ ಮುಖ ಮಾಡಿ ರೋಧಿಸುತ್ತಿತ್ತು. ಅತ್ಯಂತ ಯಶಸ್ವಿಯಾಗಿ ಸೆಮಿನಾರ್ ನಡೆದುದಕ್ಕೆ ರಾತ್ರಿ ಎನ್.ಜಿ.ಒ. ಸಂಯೋಜಕರುಗಳು ಪಾರ್ಟಿಯನ್ನು ಆಯೋಜಿಸಿದ್ದರು. ಕೆಲವರು ಕುಡಿದ ಮತ್ತಿನಲ್ಲಿ ಅನಿಲ ದುರಂತದಿಂದ ಮಡಿದವರನ್ನು ನೆನೆದು ಅಳುತ್ತಿರುವ ದೃಶ್ಯಗಳು ಮಸುಕು ಮಸುಕಾಗಿ ಕಾಣುತ್ತಿದ್ದವು. ಈಗ ಮಂಡನೆಯಾದ ನ್ಯಾಯಾಲಯದ ತೀರ್ಪಿನ ಹಿಂದೆ ಈ ವರದಿಯ ಪರೋಕ್ಷ ಪ್ರಭಾವ ಇರುವ ಸಾಧ್ಯತೆ ಇದೆ. ಆಗ ಸಂಸ್ಥೆಯ ಸಂಯೋಜಕರುಗಳು ಬಹುಶಃ ಈ ತೀರ್ಪನ್ನು ವಿಜಯದ ಸಂಕೇತವನ್ನಾಗಿ ಆಚರಿಸಿರಬಹುದೇನೋ?

ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಕೆಲವು ಎನ್.ಜಿ.ಒ. ಅಧ್ಯಯನಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.