Monthly Archives: August 2014

ಕವಿಗೆ ಅಹಂಕಾರ ಇರಬೇಕು…


– ರವಿ


ಇತ್ತೀಚಿನ ವರ್ಷಗಳ ಕನ್ನಡ ಸಾಹಿತ್ಯವನ್ನು ಓದುವಾಗ ನನಗೆ ಎದ್ದು ಕಾಣಿಸುವ ದೊಡ್ಡ ಕೊರತೆ ಕವಿ-ಸಾಹಿತಿಗಳಲ್ಲಿ ಎದ್ದು ಕಾಣಿಸದ ಮಹತ್ವಾಕಾಂಕ್ಷೆ ಮತ್ತು ಇಲ್ಲದಿರುವ ಅಹಂಕಾರ. ಸಾಹಿತಿಗೆ ತನ್ನ ಪ್ರತಿಭೆಯ ಬಗ್ಗೆ, ತಾನು ಅದನ್ನು ಸಾಧಿಸಲು ಹಾಕಿದ ಶ್ರಮ, ಅಧ್ಯಯನ, ಜೀವನಾನುಭವ, ಅಪರಿಮಿತ ಆತ್ಮವಿಶ್ವಾಸ, ನಿರಂಕುಶಮತಿತ್ವ, ಇವೆಲ್ಲವುಗಳಿಂದ ಕೂಡಿ ತಾನು ಸಾಧಿಸಿರುವ ಪ್ರತಿಭೆಯ ಬಗ್ಗೆ ಅಹಂಕಾರ ಇರಬೇಕು. ಈ ಅಹಂಕಾರ ಕೀಳರಿಮೆಯಿಂದ ಬರುವ ಅಹಂಕಾರಕ್ಕಿಂತ ಬಹಳ ಭಿನ್ನವಾದದ್ದು. ಇದು ಕಾಣಿಸುವುದು ವ್ಯಕ್ತಿತ್ವದಲ್ಲ, ಸಾಹಿತಿಯ ಬರವಣಿಗೆಯಲ್ಲಿ. ನಮ್ಮಲ್ಲಿರುವ ಬಹುತೇಕ ಸಾಹಿತಿಗಳಲ್ಲಿ ಕಾಣದ ಈ ಅಹಂಕಾರ ಮತ್ತು ಮಹತ್ವಾಕಾಂಕ್ಷೆಯ ಬಗ್ಗೆ ನಾನು ಕೆಲವು ವರ್ಷಗಳಿಂದ ಯುವಮಿತ್ರರಲ್ಲೂ ಮಾತನಾಡುತ್ತ ಬಂದಿದ್ದೇನೆ. ಆಗೆಲ್ಲ ನನಗೆ ನೆನಪಾಗುವ ಒಂದೇ ಉದಾಹರಣೆ, ಕುವೆಂಪು.

ದೀಪ ಮತ್ತು ಗಿರೀಶ್ ಹಂದಲಗೆರೆ ನನ್ನ ಫೇಸ್‌ಬುಕ್ ಸ್ನೇಹಿತರ ಪಟ್ಟಿಯಲ್ಲಿದ್ದಾರೆ. ಆದರೂ ಇತ್ತೀಚಿನವರೆಗೆ ಅವರು ಯಾರು ಎಂದು ತಿಳಿದಿರಲಿಲ್ಲ. ದೀಪರನ್ನು ಮೊದಲು ನೋಡಿದ್ದು ಅವರು ಎರಡು ವಾರಗಳ ಹಿಂದೆ ಟೌನ್‌ಹಾಲ್ ಬಳಿಯ ಪ್ರತಿಭಟನೆಗೆ ಬಂದಾಗ. ವಿ.ಆರ್.ಭಟ್ ಎನ್ನುವವರು ಪ್ರಭಾ ಬೆಳವಂಗಲರಿಗೆ ಫೇಸ್‌ಬುಕ್‌ನಲ್ಲಿ ’ನಿಮ್ಮಂತಹವರಿಗೆ ಅತ್ಯಾಚಾರಿಗಳು ಜುಟ್ಟು ಹಿಡಿದು ಅತ್ಯಾಚಾರ ಮಾಡಬೇಕು’ ಎಂದು ಕಮೆಂಟ್ ಹಾಕಿದ್ದನ್ನು ವಿರೋಧಿಸಿ ಲೇಖಕಿಯರ ಸಂಘ ಮತ್ತಿತರರು ಆಯೋಜಿಸಿದ್ದ ಆ ಪ್ರತಿಭಟನೆಗೆ ತುಂಬುಬಸುರಿ ದೀಪಾರವರೂ ಬಂದು ಬೆಂಬಲಿಸಿದ್ದರು. ಅದೇ ಸಮಯದಲ್ಲಿ ದೀಪಾರವರ ಪತಿ ಗಿರೀಶ್ ಹಂದಲಗೆರೆಯವರ ಕವನ-ಸಂಕಲನ ಬಿಡುಗಡೆಯ ಕಾರ್ಯಕ್ರಮದ ಆಹ್ವಾನ ಫೇಸ್‌ಬುಕ್‌ನಲ್ಲಿ ಬಂದಿತ್ತು. ಅಧ್ಯಕ್ಷತೆ ನಮ್ಮೆಲ್ಲರ ಪ್ರೀತಿಯ ಕಡಿದಾಳು ಶಾಮಣ್ಣನವರದು. ಇದೊಂದೆ ಕಾರಣಕ್ಕೆ ಕುತೂಹಲಿತನಾಗಿ ಹೋಗೋಣ ಎಂದುಕೊಂಡಿದ್ದೆ. ಅದೇ ಸಮಯದಲ್ಲಿ ಹಂದಲಗೆರೆ ದಂಪತಿಯರ ಬಗ್ಗೆ ಕವಿಮಿತ್ರರೊಬ್ಬರಲ್ಲಿ ವಿಚಾರಿಸಿದೆ. ಅವರು ಅದಕ್ಕೆ ’ದೀಪ ಮತ್ತು ಗಿರೀಶ್ ಚಳವಳಿ ಮತ್ತು ಬೀದಿನಾಟಕಗಳಲ್ಲಿ ಸಕ್ರಿಯರಾಗಿದ್ದವರು. ಗಿರೀಶ್ ಪದ್ಯಗಳನ್ನೂ ಬರೆಯುತ್ತಾರೆ’ ಎಂದಿದ್ದರು. ಕಳೆದ ಭಾನುವಾರ (10-08-2014) ಆ ಕಾರ್ಯಕ್ರಮ. ಬೆಳಗ್ಗೆ ಕೋಲಾರದ ಆದಿಮಕ್ಕೆ ಹೋಗುವ ಕಾರ್ಯಕ್ರಮವನ್ನು ಮಧ್ಯಾಹ್ನಕ್ಕೆ ಹಾಕಿಕೊಂಡು, ಶಾಮಣ್ಣನವರನ್ನೂ ಮಾತನಾಡಿಸಿದ ಹಾಗೆ ಆಗುತ್ತದೆ ಎಂದುಕೊಂಡು ಹಂದಲಗೆರೆಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ.

ಪುಸ್ತಕ ಬಿಡುಗಡೆ ಮಾಡಿ ಆರಂಭದಲ್ಲಿ ಮಾತನಾಡಿದವರು ನಾವೆಲ್ಲ ಕವಿಯಾಗಿ ಈಗಲೂ ಇಷ್ಟಪಡುವ, ಆದರೆ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ girish-book-releaseಗೌರವಿಸದ ಸಿದ್ಧಲಿಂಗಯ್ಯ. ಪುಸ್ತಕದ ಬಗ್ಗೆ ಮತ್ತು ಗಿರೀಶರ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ನಂತರ ಮಾತನಾಡಿದವರು ಅಧ್ಯಾಪಕ ಮತ್ತು ಸಾಹಿತಿ ಕೆ.ವೈ.ನಾರಾಯಣಸ್ವಾಮಿ. ಕೆವೈಎನ್‌ರು ’ಕವಿಗೆ ಅಹಂಕಾರ ಇರಬೇಕು, ಆದರೆ ಗಿರೀಶರಲ್ಲಿ ವಿನಯ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಕವಿಯಾಗುತ್ತಾರೆ, ಹೆಚ್ಚು ಅಧ್ಯಯನ ಮತ್ತು ನಿರಂಕುಶಮತಿಯಾಗುವ ಮೂಲಕ ಅದು ಸಾಧ್ಯ’ ಎಂದು ಬಹಳ ಚೆನ್ನಾಗಿ ಸಾಹಿತ್ಯದ ಪಾಠ ಮಾಡಿದರು. ಅವರ ಭಾಷಣದ ಮಧ್ಯೆ ಕೆಲವು ತೆಗೆದುಕೊಳ್ಳಲೇಬೇಕಾಗಿದ್ದ ಫೋನ್‌ಗಳು ಬಂದಿದ್ದರಿಂದ ಇಡಿಯಾಗಿ ಕೇಳಲಾಗಲಿಲ್ಲ. ಆದರೆ ಕೇಳಿದ್ದನ್ನು ಬಹಳ ಮೆಚ್ಚಿಕೊಂಡೆ. ಒಂದು ಒಳ್ಳೆಯ ಸಾಹಿತ್ಯದ ಪಾಠ ಅದು. ಅಲ್ಲಿ ಅನೇಕ ಯುವಸಾಹಿತಿಗಳು ಮತ್ತು ಕವಿಗಳು ಇದ್ದರು. ಬಹಳ ಜನ ಹೊರಗೇ ಇದ್ದರು. ಅವರೆಲ್ಲರೂ ನಾಲ್ಕಾರು ಸಲ ಕೇಳಿಸಿಕೊಳ್ಳಬೇಕಾದ ಪಾಠ ಅದು. ಆದರೆ, ಬಹುತೇಕರು ಕೇಳಿಸಿಕೊಂಡಂತೆ ಕಾಣಲಿಲ್ಲ.

ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ ತಾಲಿಬಾನಿಗಳ ಬಗ್ಗೆ ಗಿರೀಶ್ “ಮನುಕುಲದ ಅಸ್ಮಿತೆ” ಕವನದಲ್ಲಿ ಹೀಗೆ ಹೇಳುತ್ತಾರೆ:

ತಾಲಿಬಾನಿಗಳು ಪ್ರತಿಮೆಗೆ
ಸಿಡಿಮದ್ಧು ಇಟ್ಟಾಗ
ಪುಡಿಪುಡಿಯಾದದ್ದು
ಬುದ್ಧನಲ್ಲ,
ಬೆಳಕು.

ಇದನ್ನು ಸಿದ್ಧಲಿಂಗಯ್ಯನವರು ’ಇದು ಉತ್ತಮ ಕವಿತೆ ಮತ್ತು ಕಾಣ್ಕೆ’ ಎಂದು ವಿವರಿಸಿದಾಗ, ಹೌದೆನ್ನಿಸಿತು. ತಾಲಿಬಾನಿಗಳ ಕೃತ್ಯದ ಬಗ್ಗೆ, ಕಾಂದಹಾರದಲ್ಲಿ ಆರಿದ ಬೆಳಕಿನ ಬಗ್ಗೆ ವಿಷಾದವಾಗುತ್ತಿತ್ತು. ಆದರೆ, ಇದೇ ಕವನವನ್ನು ಕೆವೈಎನ್ ವ್ಯಾಖ್ಯಾನಿಸುತ್ತ, ’ಕವಿ ಎಚ್ಚರಿಕೆಯಿಂದ ಬರೆಯಬೇಕು, ಆರುವ ಬೆಳಕು ಅದೆಂತಹ ಬೆಳಕು? ಪ್ರತಿಮೆ ಒಡೆದ ಮಾತ್ರಕ್ಕೆ ಬುದ್ಧ ಆರಿಹೋಗುವಂತಹ ಬೆಳಕಲ್ಲ. ಹಾಗಾಗಿ ಕವಿಗೆ ಅಹಂಕಾರ ಇರಬೇಕು’ ಎಂದಾಗ ಅದೂ ಸರಿಯೆನ್ನಿಸಿತು.

“ನೀರ ಮೇಗಲ ಸಹಿ” ಎಂಬ ಕಿರುಪದ್ಯಗಳ ಸಂಕಲನದಲ್ಲಿ ಒಂದು ಕಿರುಪದ್ಯ ಹೀಗಿದೆ:

ಪ್ರೀತಿಸಲು ಬಾರದ ನಪುಂಸಕರು
ಹೆಣ್ಣನ್ನು
ಮಾಯೆ ಎಂದು
ಜರಿದುಬಿಟ್ಟರು.

ಇದನ್ನು ಸಹ ಸಿದ್ಧಲಿಂಗಯ್ಯನವರು ಒಳ್ಳೆಯ ಪದ್ಯ ಎಂದು ಉಲ್ಲೇಖಿಸಿದಾಗ ಸರಿ ಎನ್ನಿಸಿತ್ತು. ಆದರೆ, ’”ನಪುಂಸಕ” ಎನ್ನುವ ಪದವನ್ನು girish-negilagereತರುವ ಮೂಲಕ “ಹೆಣ್ಣು” ಇಲ್ಲಿ ಉಪಭೋಗದ ವಸ್ತುವಾಗಿದ್ದಾಳೆ. ಗಿರೀಶ್‌ಗೆ ಅ ರೀತಿಯ ಮನಸ್ಥಿತಿ ಇಲ್ಲದಿರಬಹುದು. ಇಲ್ಲ. ಆದರೆ ಈ ಕವನದಲ್ಲಿ ಆ ನಿಟ್ಟಿನಿಂದ ನೋಡಿದಾಗ ಆಘಾತವಾಗುತ್ತದೆ’ ಎಂದು ಕೆವೈಎನ್ ಹೇಳಿದಾಗ, ಇಬ್ಬರು ಕನ್ನಡದ ಅಧ್ಯಾಪಕರು ಒಂದೇ ಪದ್ಯವನ್ನು ವಿವರಿಸಿ, ಮೆಚ್ಚಿ, ತುಂಡರಿಸಿ, ಮನಸ್ಸುಗಳನ್ನು ಎಚ್ಚರಿಸಿ-ವಿಸ್ತರಿಸುವ ಕೆಲಸ ಮಾಡಿದಾಗ ಆಶ್ಚರ್ಯ ಮತ್ತು ಆಘಾತವಾಗಿದ್ದು ನನ್ನಂತಹ ಸಾಹಿತ್ಯದ ವಿದ್ಯಾರ್ಥಿ ಅಲ್ಲದವರಿಗೆ. ಗಿರೀಶರಿಗೆ ಲಭಿಸಿರುವ ಸಾಧ್ಯತೆಗಳ ಪಟ್ಟಿ ಮಾಡುತ್ತಲೇ ಕೆವೈಎನ್ ಸಾಹಿತ್ಯದ ಸೂಕ್ಷ್ಮತೆಗಳನ್ನು ಪಾಠ ಮಾಡಿದರು. ಅವರಿಗೆ ಈ ಕವಿಯ ಮೇಲೆ ಪ್ರೀತಿ ಇಲ್ಲದಿದ್ದರೆ ಈ ರೀತಿಯ ಮಾತು ಸಾಧ್ಯವೇ ಇಲ್ಲ ಎನ್ನುವಂತಿತ್ತು ಅಂದಿನ ಭಾಷಣ. ಕವಿಗೆ ನೋವಾದರೂ ಕೇಳಿಸಿಕೊಳ್ಳಬೇಕಾದ ಮತ್ತು ಅಧ್ಯಯನ ಮಾಡಬೇಕಾದ ಭಾಷಣ ಅದು. ಆತನ ಗೆಲುವಿಗೆ, ಉತ್ತಮ ಸಾಹಿತ್ಯ ರಚನೆಗೆ.

ಅಂದು ಟಿಎನ್ ಸೀತಾರಾಮ್ ಸಹ ಮಾತನಾಡುತ್ತ, ’ಒಳ್ಳೆಯ ಕಾವ್ಯ ರಚಿಸಲು ಬೇಕಾದ ಸಂದರ್ಭ ಈಗಿಲ್ಲ, ಅದಕ್ಕೆ ಬೇಕಾದ ಪರಿಸರ ಅಲ್ಲ ಇದು’ ಎಂದರು. ತಮ್ಮ ಸೃಜನಶೀಲತೆಯ ಅಭಿವ್ಯಕ್ತಿಯ ಮೇಲೆ ಬಂದ ಒತ್ತಡಗಳು, ಅದರಲ್ಲೂ ಮಾರ್ಕೆಟ್ ಒತ್ತಡಗಳ ಬಗ್ಗೆ ಮಾತನಾಡಿದರು. ಅದೂ ಸಹ ಗಮನಿಸಬೇಕಾದ ಅಂಶವೇ. ಆದರೆ, ಸಾಹಿತಿ ಮಹತ್ವಾಕಾಂಕ್ಷಿಯಾದಾಗ ಇದೆಲ್ಲವೂ ನಗಣ್ಯವಾಗುತ್ತದೆ, ಇಡೀ ಪ್ರಪಂಚವೇ ಇಂದು ಕುದಿಯುತ್ತಿದೆ, ಕರಗುತ್ತಿದೆ. ಸಾಹಿತ್ಯಕ್ಕೆ ಯಾವ ಒಳ್ಳೆಯ ಸಂದರ್ಭದಷ್ಟೇ ಇದೂ ಒಳ್ಳೆಯ ಸಂದರ್ಭವೇ ಎನ್ನುತ್ತೇನೆ ನಾನು.

ಆದರೆ ಒಂದು ಸಮಸ್ಯೆ ಇದೆ. ಇಂದು ಸಾಹಿತ್ಯಕ್ಕೆ ಬರುತ್ತಿರುವ ಬಹುತೇಕರು ಹಿಂದಿನವರಂತೆ ಅಧ್ಯಯನಶೀಲರೂ, ತರಗತಿಗೆ ಮೊದಲಿರುವ ಶ್ರಮಜೀವಿಗಳೂ ಅಲ್ಲ. ಯಾವುದೋ ಒಂದು ಹಂತದಿಂದ ಸಾಹಿತ್ಯಕ್ಕೆ ಹೊರಳಿಕೊಂಡವರು. ಹಾಗಾಗಿಯೆ ಪ್ರತಿಭೆ ಬೇಡುವ ಅಧ್ಯಯನ ಮತ್ತು ಶ್ರಮದ ಕೊರತೆ ಇರುವವರು. ಆದರೆ, ಸಾಹಿತ್ಯಕೃಷಿಯನ್ನು ಜೀವನೋಪಾಯಕ್ಕೆ ಮಾಡುವ ಸಂದರ್ಭದಲ್ಲಿ ಇಲ್ಲ ಇವರು. ಹಾಗಾಗಿಯೆ ಇವರಿಗೆ ಅಹಂಕಾರಿಗಳಾಗುವ, ಸ್ಥಾಪಿತ ಶಕ್ತಿಗಳನ್ನು ಮತ್ತು ನಂಬಿಕೆಗಳನ್ನು ಪ್ರಶ್ನಿಸುವ, ಗತಕಾಲದ ಸತ್ಯವನ್ನು ಅರಗಿಸಿಕೊಂಡು ಸುಳ್ಳನ್ನು ಎತ್ತಿಒಗೆಯುವ, ಇಂದಿನ ಸತ್ಯವನ್ನು ನೇರವಾಗಿ ಹೇಳುವ ಸ್ವಾತಂತ್ರ್ಯ ಹಿಂದಿನವರಿಗಿಂತ ಹೆಚ್ಚಿದೆ. ಬಸವಣ್ಣ ಮತ್ತು ಕುವೆಂಪುರವರಿಗಿಂತ ಬೇರೆ ಆದರ್ಶ ಇವರಿಗೆ ಬೇಕಿಲ್ಲ. ’ಎನಗಿಂತ ಕಿರಿಯರಿಲ್ಲ’ ಎನ್ನುತ್ತಲೆ,

“ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!”

ಎನ್ನುತ್ತಾ ಇಡೀ ಪರಂಪರೆಯನ್ನು ಎತ್ತಿ ಒಗೆದವನು ಬಸವಣ್ಣ. ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆಕೊಟ್ಟು ಅಂತೆಯೇ ಬರೆದದ್ದು ಕುವೆಂಪು. ಕಾವ್ಯವನ್ನು ಸಾಧಿಸಿಕೊಳ್ಳಲು ಕುವೆಂಪು ಯಾವರೀತಿ ತಪಸ್ಸು ಮಾಡಿದರು, ತಮ್ಮ ಇಪ್ಪತ್ತರ ವಯಸ್ಸಿನ ಅಸುಪಾಸಿನಲ್ಲಿ ಎಷ್ಟೆಲ್ಲ ಕವಿತೆಗಳನ್ನು ಬರೆದು-ಹರಿದು-ಬರೆದರು ಎನ್ನುವುದನ್ನು ಅವರ “ನೆನಪಿನ ದೋಣಿ” ಓದಿದರೆ ತಿಳಿಯುತ್ತದೆ.

ಇಂದು ಸಾಹಿತಿ ಅಂತರ್ಜಾಲದ ಮೂಲಕ ನೇರಪ್ರವೇಶ ಪಡೆಯುತ್ತಿದ್ದಾನೆ ಮತ್ತು ಪುಸ್ತಕಗಳನ್ನೂ ಪ್ರಕಟಿಸುತ್ತಿದ್ದಾನೆ. ಕೊರತೆ ಇರುವುದು ಸ್ವವಿಮರ್ಶೆಯಲ್ಲಿ, ತನಗೇ ಸವಾಲು ಹಾಕಿಕೊಳ್ಳುವುದರಲ್ಲಿ.

ನನಗೆ ಕವನ-ಕಾವ್ಯ ಅಷ್ಟು ಅರ್ಥವಾಗುವುದಿಲ್ಲ. ಹಾಡಿದರೆ ಮನದಟ್ಟಾಗುತ್ತದೆ. ಹಾಗಾಗಿ ಗಿರೀಶರ ಕವನಗಳು “ಕಾವ್ಯ ಗುಣ”ದ ಕಾರಣಕ್ಕಾಗಿ ಎಷ್ಟು girish-neeramegalasahiಶ್ರೇಷ್ಟ ಎಂದು ಹೇಳಲಾರೆ. ಆದರೆ ಗಿರೀಶ್ ನಮ್ಮೆಲ್ಲರಂತೆ ಬುದ್ಧ, ಗಾಂಧಿ, ಕುವೆಂಪುರನ್ನು ಮೆಚ್ಚಿಕೊಳ್ಳುವ ಮಾನವತಾವಾದಿ. ಅವರೇ ಹೇಳಿಕೊಂಡಿರುವಂತೆ ಕುವೆಂಪುರವರ “ವಿಶ್ವಮಾನವ ಸಂದೇಶ”ವನ್ನು ಸಾರಲು 1999 ರಲ್ಲಿ ಸೈಕಲ್ ಏರಿ ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು ಕೇಂದ್ರಗಳನ್ನು ಸುತ್ತಿದವರು. 2004 ರಲ್ಲಿ ದೀಪಾ ಮತ್ತು ಗಿರೀಶ ಇದೇ ಕೆಲಸದ ಮೇಲೆ ಶಿವಮೊಗ್ಗದ ಕಡೆ ಹೋದಾಗ ಕಡಿದಾಳು ಶಾಮಣ್ಣನವರು ಇವರಿಗೆ ಜೊತೆಯಾಗಿ ಹಲವು ಬೀದಿನಾಟಕಗಳಲ್ಲಿ ತಮ್ಮ ತಬಲ ಸಾಥ್ ನೀಡಿದ್ದಾರೆ. ಒಳ್ಳೆಯ ಮನಸ್ಸಿದೆ. ತಪಸ್ಸು ಇವರನ್ನು ಮತ್ತವರ ಸಂಗಾತಿಗಳನ್ನು ಎತ್ತರಕ್ಕೆ ಒಯ್ಯಲಿ.

ಕಾರ್ಯಕ್ರಮ ನಡೆದ ದಿನವೇ ಇದನ್ನೆಲ್ಲ ಬರೆಯಬೇಕು ಎಂದುಕೊಂಡೆ. ಆದರೆ, ಕೆಪಿಎಸ್‌ಸಿ ವಿಚಾರವಾಗಿ ಮೂರ್ನಾಲ್ಕು ದಿನಗಳಿಂದ ನನ್ನ ಸಮಯ ನನ್ನ ಹತೋಟಿಯಲ್ಲಿ ಇಲ್ಲದ ಕಾರಣ ಆಗಿರಲಿಲ್ಲ. ನನ್ನ ಯುವಮಿತ್ರರೊಂದಿಗೆ ಇದನ್ನು ಹಂಚಿಕೊಳ್ಳುವ ತುರ್ತಿದೆ ಎಂಬ ಭಾವನೆಯಲ್ಲಿ ಇದನ್ನು ಆತುರದಲ್ಲಿ ಬರೆದಿದ್ದೇನೆ. ಎಂದಿನ ಆಶಾವಾದದಲ್ಲಿ.


ಗಿರೀಶರ ಕವನಗಳಲ್ಲಿಯ ಕೆಲವು ಗಮನಾರ್ಹ ಸಾಲುಗಳು:

ಬೀದಿಬಿದಿ ತಿರುಗಿ
ಮಂಕರಿ ಸಗಣಿ
ಹೊತ್ತುತಂದು
ಬೆವರ ಬೆರಸಿ
ಅವ್ವ ಬರೆಯುತ್ತಾಳೆ ಕವಿತೆ
ಗೋಡೆ ತುಂಬಾ ಚಿತ್ತಾರದಂತೆ

ತನ್ನ ಕವಿತೆಗಳ ತಾನೇ
ಮುರಿದು ಕಟ್ಟುತ್ತಾ
ಕವಿತೆಯಾಗೇ ಬಾಳುತ್ತಾಳೆ!

– “ಅವ್ವ”

***

ಮುರಿದು ಕಟ್ಟಬೇಕು
ಸ್ಥಾವರಗಳೇ ಚಲಿಸುವಂತೆ
ಜಿಗಿಯಬೇಕು ಭೂಮಿ
ಕಾಲದೇಶ
ಹುಟ್ಟುಸಾವು
ಶೂನ್ಯದಾಚೆಯ
ನಂಬಿಕೆಯಾಚೆಗೆ…

– “ಶೂನ್ಯದಾಚೆಗೆ”

***

ಭೂಮಿಯ ಮೇಲಿನ ಕಟ್ಟಕಡೆಯ
ಭಯದ ಮನುಷ್ಯನಿರುವವರೆಗೆ
ದೇವರಿಗೆ ಸಾವಿನ ಭಯವಿಲ್ಲ
ವಿಜ್ಞಾನದ ಸೂಕತದ ಮನೆಯಲ್ಲಿ
ದೇವರು ದಿನವೂ
ಸತ್ತುಹುಟ್ಟುತ್ತಲೇ ಇದ್ಡಾನೆ

– “ದೇವರೆಂಬ ಬೆದರುಬೊಂಬೆ”

***

ಮದ್ದುಗುಂಡುಗಳ ಕಾರ್ಖಾನೆ
ದುಖಾನು ತೆರೆದು ಅಸ್ತ್ರಗಳ ಮಾರಿ
ಅನ್ನು ಉಣ್ಣುವ ದೊಡ್ಡಣ್ಣರಿರುವಾಗ
ಯುದ್ಧಕ್ಕೆ ಕಾರಣಗಳೇ ಬೇಕಿಲ್ಲ
ಅನ್ನ ನೀರು ಇಂಧನ
ಧರ್ಮ ಶಾಂತಿಗಾಗಿಯೂ
ಸಿಡಿಯುತ್ತವೆ ಮದ್ದುಗುಂಡು
ಗಡಿಗಳಲ್ಲಿ ಈಗ
ದಿನವೂ ದೀಪಾವಳಿ

– “ಬ್ರಹ್ಮಾಸ್ತ್ರಗಳ ಸಂತೆ”

***


ಪುಸ್ತಕಗಳು:
– “ನೇಗಿಲ ಗೆರೆ” – ಪದ್ಯಗಳು
– “ನೀರ ಮೇಗಲ ಸಹಿ” – ಕಿರು ಪದ್ಯಗಳು
ಲೇಖಕ: ಗಿರೀಶ್ ಹಂದಲಗೆರೆ
ಬೆಲೆ. ತಲಾ ರೂ.80
ಪ್ರಕಾಶಕರು: ಉಪಾಸನ

ಅತ್ಯಾಚಾರವೂ ಅತಿರಂಜಿತ ಪ್ರಚಾರವೂ….

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಕಳೆದ ಕೆಲವು ವಾರಗಳಿಂದ ನಾವಿರುವ ಕರ್ನಾಟಕ ಸುರಕ್ಷಿತವೇ ಅಥವಾ ನಾವೆಲ್ಲರೂ ಕೀಚಕರಾಗಿಬಿಟ್ಟಿದ್ದೇವೆಯೇ, ಇಲ್ಲ ಕರ್ನಾಟಕದ ತುಂಬೆಲ್ಲಾ ಅನಾಥ ಸೈರೆಂದ್ರಿಯರೇ ತುಂಬಿದ್ದಾರೆಯೇ ಎಂದು ಆತಂಕಪಡುವಂತಾಗಿದೆ. ಯಾಕೆಂದರೆ ಕರ್ನಾಟಕವನ್ನು ಕುರಿತಂತೆ ಹಿಂದೆಂದೂ ಕಂಡಿರದ ‘ಕರಾಳ ಕರ್ನಾಟಕ’, ‘ಕೀಚಕ ಕರ್ನಾಟಕ’, ‘ಕಾಮುಕ ಕರ್ನಾಟಕ’ ಎಂಬ ಸಾಮೂಹಿಕ ನೆಲೆಯ ನಾಮಫಲಕಗಳು ಈ ಅವಧಿಯಲ್ಲಿ ರಾರಾಜಿಸಿವೆ. ಆಳುವ ಸರ್ಕಾರ ಮತ್ತು ಪೋಲೀಸ್ ವ್ಯವಸ್ಥೆಗಳೇ ಸೇರಿಕೊಂಡು ಕರ್ನಾಟಕವನ್ನು ಕುಲಗೆಡಿಸಿ ಸಂಭ್ರಮಿಸುತ್ತಿವೆ ಎಂಬರ್ಥದ ಚರ್ಚಾಗೋಷ್ಠಿ rape-illustrationಹಾಗೂ ಬೀದಿ ಮಾತುಗಳನ್ನು ನಿರಂತರವಾಗಿ ಉತ್ಪಾದಿಸಲಾಗುತ್ತಿದೆ. ಇಡಿಯ ಪ್ರಚಾರದಲ್ಲಿ ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ಹೆಣ್ಣಿನ ಮೇಲೆ ದಾಳಿ ನಡೆಯುತ್ತಿದೆ ಎಂಬ ವರಸೆ ಇದೆ. ಟಿಆರ್‌ಪಿ ಮೇಲೆ ಕಣ್ಣಿಟ್ಟ ಮಾಧ್ಯಮಗಳಂತೂ ಎಲ್ಲವನ್ನೂ ಅತ್ಯಾಚಾರದ ಪೊಟ್ಟಣದಲ್ಲಿಯೇ ಸುತ್ತಿಟ್ಟು ಮಾರುತ್ತಿವೆ. ಈ ಎಲ್ಲಾ ಅಬ್ಬರದ ಪ್ರಚಾರಗಳು ಮನೆಯಿಂದ ಹೊರಹೋಗಿ ಬರುವ ತಮ್ಮದೇ ಮಕ್ಕಳನ್ನು ಹೆತ್ತವರು ಅನುಮಾನ ಮತ್ತು ಭಯದಿಂದ ಮೂಸಿನೋಡುವ ವಾತಾವರಣ ನಿರ್ಮಿಸಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ ಆ ಒಟ್ಟೂ ಪ್ರಚಾರಗಳು ಕರ್ನಾಟಕವನ್ನು ಹೆಣ್ಣಿನ ಬದುಕಿಗೆ ಅನರ್ಹವಾದ ನೆಲವೆಂದೇ ನಿರ್ಧರಿಸಿಬಿಟ್ಟಿವೆ. ಇನ್ನೊಂದು ಕಡೆಯಿಂದ ಈ ಬೊಬ್ಬೆಯನ್ನೇ ಅಪೇಕ್ಷಿಸಿದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಹೆಣ್ಣಿನ ಮಾನ ಪ್ರಾಣದ ರಕ್ಷಣೆಯ ಹೊಣೆ ತಮ್ಮದೇ ಎಂದು ಆವಾಹನೆಗೊಳಗಾದಂತೆ ಕುಣಿದಿವೆ. ಈ ನಡುವೆ ನಿಧಾನವಾಗಿ ಒಂದೆರಡು ಖೊಟ್ಟಿ ಅತ್ಯಾಚಾರ ಪ್ರಕರಣಗಳೂ ಮೂಡಿಬಂದುವೆನ್ನಿ. ಹೆಣ್ಣ್ಣೂರಿನ ಅತ್ಯಾಚಾರದ ಸುತ್ತ ಇರುವ ಅನುಮಾನವೋ, ಬೆಳಗಾವಿಯ ಯುವಕ-ಯುವತಿಯರ ಕಿಡ್ನ್ಯಾಪ್ ತಮಾಷೆಯೋ, ಬೆಂಗಳೂರಿನ ಜ್ಯೋತಿಷಿಯ ಕಪಾಳಕ್ಕೆ ಬಾರಿಸಿದ ಮಹಿಳೆಯರ ಆಟೋಪವೋ ಸುದ್ದಿಯಾಗಿ ಸತ್ಯದ ಇನ್ನೊಂದು ಮುಖದ ಆಂಶಿಕ ದರ್ಶನವೂ ಆದುದಿದೆ. ಆದರೆ ಅಷೊತ್ತಿಗಾಗಲೇ ಕರ್ನಾಟಕಕ್ಕೆ ಆಗಬಾರದ ಅಪಮಾನವೊಂದು ಆಗಿಹೋಗಿದೆ. ಕನ್ನಡನೆಲಕ್ಕೆ ಸಲ್ಲದ ಅಪನಾಮವೊಂದನ್ನು ಅಂಟಿಸಿಯಾಗಿದೆ.

ಈ ಅಬ್ಬರದ ಪ್ರಚಾರ, ಪ್ರತಿಕ್ರಿಯೆಗಳೆಲ್ಲವನ್ನು ಬದಿಗಿರಿಸಿಕೊಂಡು ನೋಡಿದಾಗಲೂ ಲೈಂಗಿಕ ಆಕ್ರಮಣ ಮಾದರಿಯ ಘಟನಾವಳಿಗಳ ಸರಣಿಯು ಯಾವ ನಾಗರಿಕಸಮಾಜಕ್ಕೂ ಗೌರವ ತರುವಂಥದ್ದಲ್ಲ. ಅದನ್ನು ಖಂಡಿಸಿ ದಂಡಿಸುವ ಜೊತೆಗೆ ಸಂಭವಿಸದಂತೆ ತಡೆಯುವುದು, ಗೌರವದ ಬಾಳು ಬಾಳಲು ಬಯಸುವ ಎಲ್ಲರ ಕರ್ತವ್ಯ. ಅಂತಹ ಘಟನೆಗಳನ್ನು ತಹಬಂದಿಗೆ ತರುವಲ್ಲಿ ಒಂದು ಸಮೂಹವಾಗಿ ಒಟ್ಟಿಗೆ ಸೇರಿಕೊಳ್ಳಬೇಕಾದ ಜವಾಬ್ದಾರಿಯೂ ನಮಗಿದೆ. ಅತ್ಯಾಚಾರವೆಂಬ ಅನಾಗರಿಕವರ್ತನೆ ಹೊಸತಾಗಿ ನಡೆಯುತ್ತಿಲ್ಲ ಎಂಬ ಸಮರ್ಥನೆಯೂ ಇಲ್ಲಿ ಸಲ್ಲದು. ಅನಾದಿಯಿಂದ ನಡೆದು ಬಂದಿರುವ ಅಮಾನವೀಯತೆಯ ಕುರಿತ ಎಚ್ಚರಕ್ಕಾಗಿಯೇ ಈ ಎಲ್ಲಾ ಪ್ರಚಾರಗಳು ನಡೆಯುವುದಾದಲ್ಲಿ ಅದು ಸ್ವಾಗತಾರ್ಹವೇ. ಆದರೆ ಆ ವಿರೋಧವು ಯಾರನ್ನೋ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ, ಇನ್ನಾರನ್ನೋ ಅದರ ಫಲಾನುಭವಿಯಾಗಿಸುವ ವಾಸನೆಯಿಂದ ಕೂಡಿರಬಾರದು. ‘ಹೆಣ ಇಟ್ಟುಕೊಂಡು ಹೆಗ್ಗೆ ಹುಡುಕಿದ ಹಾಗೆ ಆಗಬಾರದು’ (ಹೆಗ್ಗೆ=ಚನ್ನೆಮಾಣಿ ಆಟದಲ್ಲಿ ಬಳಕೆಯಾಗುವ ಲಾಭದ ಪರಿಭಾಷೆ). ಇದು ಆಟದ ಹೊತ್ತೂ ಅಲ್ಲ. ಆಟದ ವಿಚಾರವೂ ಅಲ್ಲ. ಇಲ್ಲಿ ಪಕ್ಷವೈರ, ಅಧಿಕಾರದ ಕುರಿತಾದ ಅಸಹನೆ ಖಂಡಿತಾ ಸಲ್ಲದು. ಮಧ್ಯರಾತ್ರಿ ಹನ್ನೆರಡರ ಅವಧಿಗೂ tv-mediaಹೆಣ್ಣೊಬ್ಬಳು ನಿರ್ಭೀತಳಾಗಿ ಸಾಗಬಹುದಾದ ಭಾರತ ನಮ್ಮದಾಗಬೇಕೆಂಬುದು ಬಾಪೂ ಕಂಡ ಕನಸು. ನಾವು ಕಾಡಿಬೇಡಿ ಪಡೆದ ಸ್ವಾತಂತ್ರ್ಯದೊಳಗೆ ಆ ಆಶಯವೂ ಇದೆ. ಅದು ಕಾಣೆಯಾಗುತ್ತಿದ್ದರೆ ನಮ್ಮ ಸ್ವಾತಂತ್ರ್ಯದ ಭಾಗವೊಂದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದೇ ಅರ್ಥ. ಇಂತಹದ್ದೊಂದು ಎಚ್ಚರವನ್ನು ಜತನದಿಂದ ಕಾಪಾಡುವುದು ತಿಳುವಳಿಕೆಯನ್ನು ಹಂಚುವ ಹಾಗೂ ತಿಳುವಳಿಕೆಯ ರಕ್ಷಕರೆನಿಸಿದ ಎಲ್ಲ ವ್ಯಕ್ತಿ ಮತ್ತು ಕೇಂದ್ರಗಳ ಕರ್ತವ್ಯ. ಆದರೆ ಈ ಜವಾಬ್ದಾರಿಯನ್ನು ಮೂಡಿಸಬೇಕಾದ ಮಾಧ್ಯಮಗಳು ಹೇಗೆ ವರ್ತಿಸಿದುವು? ಸಮೂಹದ ನಾಗರಿಕ ಸ್ವಾಸ್ಥ್ಯವನ್ನು ತಮ್ಮದೇ ನೈತಿಕ ಮಾದರಿಯ ಮೂಲಕ ಎತ್ತರಿಸಬೇಕಾದ ಹೊಣೆಗಾರಿಕೆ ಇರುವವವರು ತಾವು ಈಗಾಗಲೇ ನಡೆದು ತೋರಿದ ದಾರಿಯನ್ನು ಮರೆತು ಮಾತನಾಡಿದ ಬಗೆ ಹೇಗಿತ್ತು? ಅದನ್ನು ನೆನೆದರೆ ನೋವೆನಿಸುತ್ತದೆ. ಅರಿವು ಮೂಡಿಸುವಂತೆ ವರ್ತಿಸುವುದಾಗಿ ಹೇಳಿಕೊಂಡ ಮಾಧ್ಯಮಗಳಾಗಲೀ, ಕಾವಲುಗಾರನಂತೆ ಕಾವಲು ಕಾಯಬೇಕಾದ ರಾಜಕಾರಣವಾಗಲೀ ತಮ್ಮ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಂಡಂತೆ ಕಾಣಿಸಲೇ ಇಲ್ಲ. ಒಂದೇ ಸೊಲ್ಲಿಗೆ ಕರ್ನಾಟಕವನ್ನು ಕೀಚಕರ ಆಡುಂಬೊಲ ಎಂಬಂತೆ ಹೆಸರಿಸಿಬಿಡುವ ಧಾವಂತ ತೋರಿದ ಮಾಧ್ಯಮಗಳಿಗೆ, ಈ ನಾಡು ತನ್ನ ಸೀಮಿತ ವ್ಯಾಪ್ತಿಯಲ್ಲಿಯೇ ಪುರುಷ ದೌರ್ಜನ್ಯಕ್ಕೆ ದಿಟ್ಟ ಉತ್ತರವನ್ನು ಕೊಟ್ಟ ಹೆಮ್ಮಕ್ಕಳ ಸ್ಮೃತಿಯಿಂದಲೂ ಕೂಡಿದೆ ಎಂದೆನಿಸಲಿಲ್ಲ. ಸೀರೆಯ ಮಡಿಕೆ ಕಳೆದುದಕ್ಕೆ ಗಂಡನನ್ನು ತರಾಟೆಗೆ ತೆಗೆದುಕೊಳ್ಳಬಲ್ಲ ಕರಾವಳಿಯ ಸಿರಿ; ಅನುಮಾನಕ್ಕೆ ಬಲಿಯಾಗಿ ಶೀಲಕಾಯ್ದುಕೊಳ್ಳುವ ಭಾಷೆಗೆ ಆಗ್ರಹಿಸಿದ ಗಂಡನನ್ನೇ ಮೀರಬಲ್ಲ ಮಲೆಮಹದೇಶ್ವರದ ಸಂಕವ್ವ; ‘ಸಾವಕೆಡುವ ಗಂಡರನ್ನು ಒಲೆಯೊಳಗಿಕ್ಕುವಂತೆ’ ಆರ್ಭಟಿಸಿದ ಮಹಾದೇವಿಯಕ್ಕನಂಥವರ ಸ್ಮೃತಿಯನ್ನು ಬಚ್ಚಿಟ್ಟುಕೊಂಡ ನಾಡು ಎಂಬ ಅರಿವನ್ನು ಮೆಲುಕು ಹಾಕುವ ಕೆಸವೂ ಆಗಲಿಲ್ಲ.

ಯಾಕೆಂದರೆ ಇದು ಅಬಲೆಯರ ನಾಡಲ್ಲ. ತಾಯ್ತನದ ದಟ್ಟ ಚಹರೆಯೊಂದಿಗೆ ಹೆಣ್ತನಕ್ಕೆ ಹೊರೆಯಾಗುವ ಅನೇಕ ಅನಿಷ್ಟಗಳಿಂದ ತನ್ನನ್ನು ಮುಕ್ತವಾಗಿಸಿಕೊಂಡ ನಾಡು. ಕನ್ಯಾಮಾತೆಯರನ್ನೂ ಗೌರವಿಸುವ ಆಚರಣೆಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡ ನಾಡು. woman-unchainedವಿಧವಾ ವಿವಾಹವನ್ನು ಯಾವುದೇ ಸಂಕೋಚವಿಲ್ಲದೆ ಸೀರುಡಿಕೆ, ಕೂಡಾವಳಿಯೆಂಬ ಸರಳ ನೆಲೆಯಲ್ಲಿ ಆಚರಿಸಿಕೊಂಡ ಇತಿಹಾಸವೂ ಇದಕ್ಕಿದೆ. ಇಂತಹ ಚರಿತ್ರೆಯುಳ್ಳ ನಾಡಿನ ಸಾಂಸ್ಕೃತಿಕವಿನ್ಯಾಸವು ಉಜ್ವಲವಾಗಿ ಹಾಗೆಯೇ ಉಳಿದಿದೆಯೆಂದಲ್ಲ. ಪರಂಪರೆಯ ಈ ವಿನ್ಯಾಸವನ್ನು ನಿಸ್ತೇಜಗೊಳಿಸುತ್ತಿರುವ ಶಕ್ತಿಗಳು ಸಾಂಸ್ಕೃತಿಕ ವಸಾಹತೀಕರಣ ಹಾಗೂ ಆಧುನಿಕತೆಯ ರೂಪದಲ್ಲಿ ಕ್ರಿಯಾಶೀಲವಾಗಿಯೇ ಇವೆ. ಹಾಗಿದ್ದೂ ಕರ್ನಾಟಕದ ಸಂಸ್ಕೃತಿ ಕೀಚಕಸಂಸ್ಕೃತಿ ಆಗಿಲ್ಲ. ಸೀರೆ ಎಳೆದು ಸಂಭ್ರಮಿಸುವುದು ಕನ್ನಡನೆಲೆದ ಯಾವ iಹಾಕಾವ್ಯದ ವಸ್ತುವೂ ಅಲ್ಲ. ಸೀಮಂತಕ್ಕೆ ತಂದ ಸೀರೆಯನ್ನು ಸೂಳೆಗೆ ಉಡಿಸಿ ಮಡಿಕೆ ಕಳೆದನೆಂಬ ಕಾರಣಕ್ಕೆ, ಗಂಡನನ್ನೇ ಆತನ ನೈತಿಕ ದೋಷಕ್ಕಾಗಿ ದಿಕ್ಕರಿಸಬಲ್ಲ ಹೆಣ್ತನದಚರಿತೆ ಈ ನೆಲದ ಮಹಾಕಾವ್ಯ. ನಾಡಿನುದ್ದಕ್ಕೂ ಇರುವ ಶಾಸನಗಳು, ವೀರಗಲ್ಲುಗಳು ಹೆಣ್ಣಿನ ಮಾನಕ್ಕಾಗಿ ಬಲಿಯಾದವರ ಕಥನಗಳನ್ನು ಹೇಳುತ್ತಿವೆ. ಹೆಣ್ಣನ್ನು ಹೊತ್ತೊಯ್ದ ಕಥೆಯನ್ನೋ, ಹೆಣ್ಣಿನ ಸೀರೆಯೆಳೆದ ಕಥೆಯನ್ನೋ ನೆಲದ ಕಥನವಾಗಿ ಹೊಂದಿರದ ನೆಲವೊಂದನ್ನು ಕೀಚಕರ ನಾಡಾಗಿ ಹೇಗೆ ಕರೆಯಲಾದೀತು?

ಈ ಹಿನ್ನೆಲೆಯೊಂದಿಗೆ ನಾಡೊಂದರ ಅಪನಾಮಕ್ಕೆ ಆಕ್ಷೇಪವೆತ್ತುವ ನಡುವೆ ಅತ್ಯಾಚಾರದಂತಹ ಹೆಣ್ತನದ ಮೇಲಿನ ಆಕ್ರಮಣವನ್ನು ನಿರ್ಲಕ್ಷಿಸಲಾಗದು. ಹಾಗೆಯೇ ಇಂತಹ ಸಾಮಾಜಿಕ ಪಿಡುಗೊಂದು ಘಟನೆ ಘಟಿಸಿದಲ್ಲದೆ ಪೋಲೀಸ್ ವ್ಯವಸ್ಥೆಯಂತಹ ತನಿಖಾಸಂಸ್ಥೆಯ ಸುಪರ್ದಿಗೆ ಬರಲಾರದೆಂಬುದೂ ನಮಗೆ ಅರ್ಥವಾಗಬೇಕು. ಎಷ್ಟೋವೇಳೆ ಘಟನೆಯ ನಂತರವೂ ಈ ಸಂಸ್ಥೆಯ ವ್ಯಾಪ್ತಿಗೆ ಬಾರದೆಯೂ ಉಳಿಯಬಹುದು. ಘಟನೋತ್ತರವಾಗಿ ಶಾಸನಾತ್ಮಕ ರಕ್ಷಣೆ ಪಡೆಯುವ ಬಲಿಪಶುಗಳ ಬದುಕು ಮೂರಾಬಟ್ಟೆಯಾಗಬಹುದಾದ ಅಪಾಯದ ಸಾಧ್ಯತೆ ಇದೆ. ಹಾಗಾಗಿ ಇದರ ನಿಯಂತ್ರಣಕ್ಕಿರುವ ಕ್ರಿಯಾಗತಿಗಳೇ ಹೆಚ್ಚು ಮುಖ್ಯವಾಗುತ್ತವೆ. ಅದರಲ್ಲಿ ಘಟನೆಗಳೇ ಘಟಿಸದಂತೆ ತಡೆಯುವ ಸಮುದಾಯ ಮನಸ್ಥಿತಿಯನ್ನು ರೂಪಿಸಲು ಯತ್ನಿಸುವುದು ಮೊದಲಿನದು. ಮಾಧ್ಯಮ ಮತ್ತು ರಾಜಕಾರಣವೂ ಸೇರಿದಂತೆ ಸಮುದಾಯದ ಹೊಣೆಯಿದು. ಒಂದೆರಡು ದಿನಗಳಲ್ಲಿ ಸಾಧ್ಯವಾಗಿಬಿಡುವ ಸಾಧನೆ ಇದಲ್ಲ. ಯಾವುದೇ ಸರ್ಕಾರವಷ್ಟೇ ಸಾಧಿಸಿ ಬಿಡಬಹುದಾದ ಯಶಸ್ಸೂ ಅಲ್ಲ. ಇಲ್ಲಿ ಸಮೂಹದ ಭಾಗವಹಿಸುವಿಕೆ ಮತ್ತದರ ಸಾಮಾಜಿಕ ಪ್ರಾಮಾಣಿಕತೆ ಮುಖ್ಯ. ಹೀಗಾಗಬೇಕಾದರೆ ಇದನ್ನು ರಾಜಕೀಯ ಸಮಸ್ಯೆಗಿಂತ ಸಾಮಾಜಿಕ ಸಮಸ್ಯೆಯಾಗಿ, ಯಾರ ಮನೆಗಾದರೂ ಹತ್ತಿಕೊಳ್ಳಬಲ್ಲ ಬೆಂಕಿಯಾಗಿಯೇ ಪರಿಭಾವಿಸಬೇಕಿದೆ. ಹೊರಗೆನಿಂತು ಕಲ್ಲುಹೊಡೆಯುವುದು ಸರ್ವಥಾ ಉಚಿತವಲ್ಲ. ಸಮಸ್ಯೆಯನ್ನು ನಿಭಾಯಿಸಬೇಕಾದ ಪೋಲಿಸ್ ವ್ಯವಸ್ಥೆಯ ಮನೋಸ್ಥೈರ್‍ಯ ಕೆಡಿಸುವ ಕೆಲಸವಂತೂ ಆಗಲೇಬಾರದು. ಅದು ಅಪಾಯಕಾರಿ ಪರಿಣಾಮವನ್ನು ಉಂಟುಮಾಡಬಲ್ಲುದು. ಕಾನೂನನ್ನು ಕೈಗೆತ್ತಿಕೊಳ್ಳುವ ಬೇಜವಾಬ್ದಾರಿ ಹೇಳಿಕೆಗಳಂತೂ ಅನಾಹುತಕಾರಿ.

ಇನ್ನು ಎರಡನೆಯದಾಗಿ ಸಮುದಾಯಸ್ಮೃತಿಯ ಸಾಂಸ್ಕೃತಿಕ ಎಳೆಗಳ ಮೂಲಕ ಹೆಣ್ಣುಮಕ್ಕಳಲ್ಲಿ ಮನೋಸ್ಥೈರ್‍ಯ ತುಂಬಿ Kalighat_Painting_Calcutta_19th_Century_-_Woman_Striking_Man_With_Broomಸಮಾಜದ ತಪ್ಪುಗ್ರಹಿಕೆಗಳನ್ನು ತಿದ್ದುವ ಕೆಲಸವೂ ಆಗಬೇಕಿದೆ. ಯಾಕೆಂದರೆ ಪ್ರತೀ ಜೀವಿಗೂ ಗೌರವದಿಂದ ಬದುಕುವ ಹಕ್ಕಿದೆ. ನಾಡಿನ ಸಾಂಸ್ಕೃತಿಕಪರಂಪರೆಯ ಜೀವಪರ ಎಳೆಗಳನ್ನು ಮುಂಚೂಣಿಗೆ ತಂದು, ಸಮೂಹದ ದನಿಗಳನ್ನು ಬಲವರ್ಧನೆಗೊಳಿಸುವ ಮೂಲಕ ಇದು ಸಾಧ್ಯವಿದೆ. ಅಕಸ್ಮಾತ್ತಾಗಿ ಸಂಭವಿಸಿದ ಕ್ಷುಲ್ಲಕ ಘಟನೆ ಹೆಣ್ಣೊಬ್ಬಳ ಬದುಕನ್ನೇ ಆಪೋಶನ ತೆಗೆದುಕೊಳ್ಳುವ ಅನಾಹುತವೆಂದು ನಿರ್ಧರಿಸಿಬಿಡುವ ಸಾಮಾಜಿಕ ಆವರಣವನ್ನು ಇದು ಪರಿವರ್ತನೆಗೆ ಒಗ್ಗಿಸಬಲ್ಲದು. ಆಘಾತಕ್ಕೆ ಪ್ರತಿಯಾಗಿ ಹೆಣ್ಣುಮಕ್ಕಳಲ್ಲಿ ಸ್ವಾವಲಂಬಿ ಮನಸ್ಥಿತಿಯನ್ನು ತುಂಬಬಲ್ಲದು. ಮದುವೆಯಾಗದೆ ಲೈಂಗಿಕಸಂಪರ್ಕಕ್ಕೆ ಒಳಪಡುವ, ಗರ್ಭಧರಿಸುವ ಹೆಣ್ಣನ್ನು ಒಂದು ಹೊರೆಯಾಗಿ, ತ್ಯಾಜ್ಯವಾಗಿ ಪರಿಭಾವಿಸುವ ಸಾಮಾಜಿಕ ಮನಸ್ಥಿತಿಯನ್ನು ತಿದ್ದಬಲ್ಲದು. ಇದಕ್ಕೆ ಪೂರಕವಾದ ಹೆಣ್ಣಿನ ಗೌರವದ ಬದುಕಿಗೆ ಸಂಬಂಧಿಸಿದ ಎಷ್ಟೋ ಆಚರಣೆಗಳು ಈ ನೆಲದ ಚರಿತ್ರೆಯಲ್ಲಿವೆ. ಅನೇಕ ಬುಡಕಟ್ಟು ಸಮುದಾಯದ ಆಚರಣೆಯಲ್ಲಿರುವ ‘ಕನ್ಯಾಮಾತೆ’ಯ ಕಲ್ಪನೆ ಇವುಗಳಲ್ಲೊಂದು. ಈ ಆಚರಣೆಯಲ್ಲಿ ಮದುವೆಯಾಗದೇ ಗರ್ಭಧರಿಸುವ ಹೆಣ್ಣು ದೂಷಿತೆಯಾಗದೆ ‘ಕನ್ಯಾಮಾತೆ’ ಎಂಬ ಪವಿತ್ರ ಸ್ಥಾನದಲ್ಲಿ ಗೌರವಿಸಲ್ಪಡುತ್ತಾಳೆ. (ಹಾಗೆ ನೋಡಿದರೆ ಕುಂತಿಯೂ ಒಬ್ಬ ಕನ್ಯಾಮಾತೆಯೇ ಅಲ್ಲವೇ?). ಇನ್ನು ವಿಧವೆ ಎನ್ನುವ ಸಂಸ್ಥೆಯನ್ನೇ ನಿರಾಕರಿಸಿದಂತಿರುವ ಮಾತೃಪ್ರಧಾನ ಪರಂಪರೆಯ ‘ಸೀರುಡಿಕೆ’ ಆಚರಣೆ, ಹೆಣ್ಣಿನ ಗೌರವದ ಬದುಕಿಗೆ ಒದಗಿದ ಇನ್ನೊಂದು ವಿಸ್ತರಣೆ. ಗಂಡನನ್ನು ಕಳೆದುಕೊಂಡ ಹೆಣ್ಣೊಬ್ಬಳಿಗೆ ತನ್ನ ಯೌವನಕ್ಕೆ ತಕ್ಕುದಾದ ಇನ್ನೊಂದು ಸಂಬಂಧವನ್ನು ಸಹಜವಾಗಿ ಹೊಂದಲು ಇದು ಅವಕಾಶ ಮಾಡಿಕೊಡುತ್ತದೆ. ಇಲ್ಲೆಲ್ಲಾ ಲೈಂಗಿಕತೆಯ ಕುರಿತ ಅತಿಸೂಕ್ಷ್ಮ ವಿಶ್ಲೇಷಣೆ ಇಲ್ಲ. ಮದುವೆ ಎನ್ನುವ ಸಂಸ್ಥೆಯ ಅತಿವೈಭವೀಕರಣವೂ ಇಲ್ಲ. ಇಂತಹ ಆಚರಣೆಗಳು ಈ ನೆಲದ ಸಂಸ್ಕೃತಿಯ ಭಾಗ. ಇವು ಹೆಣ್ಣನ್ನು ತ್ಯಾಜ್ಯವೆಂದು ಪರಿಗಣಿಸುವುದಿಲ್ಲ. ಇಲ್ಲಿ ಅವಳೊಂದು ಅನುಭೋಗದ ವಸ್ತುವಷ್ಠೇ ಅಲ್ಲ. ತಾಯಿಯಾಗಿಯೂ ಗೌರವಾರ್ಹಳು. ಇಂತಹ ಸಮುದಾಯಸ್ಮೃತಿಯ ಅರಿವಿನ ಮೂಲಕವೂ ಹೆಣ್ಣಿನ ಕುರಿತಾದ ಸಾಮಾಜಿಕ ಮನಸ್ಥಿತಿಯನ್ನು ಗುಣಾತ್ಮಕವಾಗಿ ಬದಲಿಸಲು ಸಾಧ್ಯವಿದೆ. ಇದು ನಿಜಕ್ಕೂ ಆಗಬೇಕಾದ ಕೆಲಸ.

ಇವೆಲ್ಲವನ್ನೂ ಮರೆತುಬಿಟ್ಟು ಕರ್ನಾಟಕವನ್ನು ಸಾರ್ವಜನಿಕವಾಗಿ ಅಪಮಾನಿಸುವ ಹಾಗೆ ಕೂಗುಹಾಕಿದ ಮಾಧ್ಯಮಗಳ ವಿಚಾರಕ್ಕೆ ಬಂದರೆ ಸಹಜವಾಗಿಯೆ ಆತಂಕವೆನಿಸುತ್ತದೆ. ಯಾಕೆಂದರೆ ಇವು ಸುದ್ದಿಮಾಡುವಾಗ ವ್ಯಕ್ತಿಯ ಖಾಸಗಿತನದ ಗೌರವವನ್ನು ಕಾಪಾಡುವಲ್ಲಿ ವಹಿಸಬೇಕಾದ ಎಚ್ಚರವನ್ನು ಮರೆತೇ ಬಿಟ್ಟಿವೆ. ಅತ್ಯಾಚಾರ ಆಕ್ರಮಣದ ಬಲಿಪಶುಗಳೆನಿಸಿದವರ ಮುಖಭಾಗವನ್ನಷ್ಟೇ ಒಂದಿಷ್ಟು ಮಸುಕುಮಾಡಿ, ಉಟ್ಟ ಸೀರೆ, ಬಟ್ಟೆ, ಬದುಕುವ ಆವರಣವೆಲ್ಲವನ್ನು ಎಗ್ಗಿಲ್ಲದೆ ತೋರುವ ಹೊಣೆಗೇಡಿತನದಲ್ಲಿ ವಿಜೃಂಭಿಸಿವೆ. ಕ್ಯಾಮರಾ ಇರುವುದೇ ಎಲ್ಲವನ್ನೂ ತೋರಿಬಿಡಲು ಎಂದು tv-mediaನಿರ್ಧರಿಸಿ, ಸುದ್ದಿಯನ್ನು ರೋಚಕಗೊಳಿಸುವ ಬರದಲ್ಲಿ ಇವು ಸಾಮಾಜಿಕಸಮಸ್ಯೆ ಹಾಗೂ ಕಾನೂನು ವ್ಯವಸ್ಥೆಯ ಆತಂಕಗಳನ್ನು ಹುಟ್ಟುಹಾಕುತ್ತಿವೆ. ಇದರ ಹಿಂದೆ ಸಮುದಾಯಗಳನ್ನು ಎತ್ತಿಕಟ್ಟುವ ರಾಜಕೀಯಸೂಕ್ಷ್ಮವೇ ಇದ್ದುದು ಹೌದಾದಲ್ಲಿ, ಇದು ಹೊಣೆಗೇಡಿತನವಲ್ಲ. ಉದ್ದೇಶಿತ. ಆದರೆ ಆಪಾಯಕಾರಿ. ಮಾಧ್ಯಮಗಳಲ್ಲಿ ಈ ಕುರಿತ ಆತ್ಮಾವಲೋಕನ ನಡೆದಂತಿಲ್ಲ. ಇನ್ನು ಈ ಮಾಧ್ಯಮಗಳ ದೈನಿಕವರ್ತನೆ ಹೇಗಿದೆ? ವಿಜ್ಞಾನದ ಉತ್ಪನ್ನಗಳಾದ ವಿಜ್ಞಾನವು ಅಗತ್ಯವಾಗಿ ಅಪೇಕ್ಷಿಸುವ ವೈಚಾರಿಕ ಮನೋಧರ್ಮಕ್ಕೆ ಇವು ಅರ್ಹವಾಗಿವೆಯೇ? ಪ್ರಜಾಪ್ರಭುತ್ವದ ಇರುವಿಕೆಯ ಕುರುಹುಗಳಲ್ಲೊಂದಾಗಿ ಪ್ರಜಾಪ್ರಭುತ್ವಕ್ಕೆ ಬೇಕಾದ ಪಾರದರ್ಶಕತೆ, ನಿಷ್ಪಕ್ಷಪಾತ ನಡವಳಿಕೆಯನ್ನು ಅವು ರೂಢಿಸಿಕೊಂಡಿವೆಯೇ? ಈ ಪ್ರಶ್ನೆಗಳೂ ಇಲ್ಲಿ ಮುಖ್ಯವಾಗುತ್ತವೆ. ಯಾಕೆಂದರೆ ದಿನಬೆಳಗಾದರೆ ಜನರ ಮೆದುಳಿಗೆ ವೈಚಾರಿಕತೆಯ ಬದಲು ಮೌಢ್ಯ, ಕ್ರೌರ್‍ಯ, ಅಜ್ಞಾನದ ಕಸದರಾಶಿಯನ್ನು ತುಂಬಿಸುತ್ತಿರುವ ಮಾಧ್ಯಮಗಳಿವು. ವಿಜ್ಞಾನದ ಸಾಧನಗಳಾಗಿಯೂ ಮೌಢ್ಯ, ಹಿಂಸೆ ಮತ್ತು ಕಾಮವನ್ನು ಹಸಿಹಸಿಯಾದ ರೋಚಕ ಕಥನಗಳಾಗಿಸಿ ಬೀದಿಯಲ್ಲಿ ಬಿಕರಿಗಿಟ್ಟವುಗಳಿವು. ಈ ಅರ್ಥದಲ್ಲಿ ಸಾಮಾಜಿಕ ಸ್ವಾಸ್ಥ್ಯದ ಕುರಿತು ಮಾತನಾಡುವ ನೈತಿಕತೆ ಹಕ್ಕನ್ನೇ ಅವು ಎಂದೋ ಕಳೆದುಕೊಂಡಿವೆ. ತಾವು ತಂದು ತುಂಬುತ್ತಿರುವ ಕಸದ ಕುರಿತಾದ ಎಚ್ಚರ ಹಾಗೂ ಕರ್ನಾಟಕದ ಸಾಂಸ್ಕೃತಿಕ ಬೇರುಗಳ ಪರಿಚಯ ಎರಡೂ ಇಲ್ಲದೆ, ಅವು ಕರ್ನಾಟಕ ಕೆಟ್ಟೇ ಹೋಗಿದೆ ಎಂದು ಕೂಗುತ್ತಿವೆ. ಕರ್ನಾಟಕ ಕೆಟ್ಟಿದ್ದರೆ ಅದು ನಮ್ಮೆಲ್ಲರಿಂದ ಕೆಟ್ಟಿದೆ. ಅದನ್ನು ಸರಿಮಾಡುವ ಹೊಣೆ ಎಲ್ಲರ ಮೇಲೆಯೂ ಇದೆ. ಈ ಆತ್ಮಾವಲೋಕನ ಮಾಧ್ಯಮ ಮತ್ತು ಸಮೂಹಗಳೆರಡರಲ್ಲೂ ಉಂಟಾಗಬೇಕಾದುದು ನಾಡಿನ ನಾಳೆಗಾಗಿ ಅಗತ್ಯವಿದೆ.

ಕೊನೆಯದಾಗಿ ಈ ಮಾಧ್ಯಮಗಳು ಎಬ್ಬಿಸುತ್ತಿರುವ ಧೂಳಿನ ಆಳದಲ್ಲಿ ಅಡಗಿರುವ ಮಾರುಕಟ್ಟೆಯ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಮರೆಯುವಂತಿಲ್ಲ. ಯಾಕೆಂದರೆ ಮಾಧ್ಯಮಗಳು ಅತ್ಯಾಚಾರದ ಸುದ್ದಿಗಳನ್ನು ಬಿತ್ತರಿಸಿದಷ್ಟೇ ವೇಗದಲ್ಲಿ ಸಿ.ಸಿ.ಕ್ಯಾಮರಾಗಳ woman-insightಅಳವಡಿಕೆಯ ಪರವಾದ ಜನಾಭಿಪ್ರಾಯವನ್ನೂ ರೂಪಿಸುತ್ತಿವೆ. ಆತ್ಮರಕ್ಷಣೆಯ ತರಬೇತಿ ಕೋರ್ಸ್‌ಗಳನ್ನು ಗರಿಗೆದರಿಸುತ್ತಿವೆ. ಇದಕ್ಕೂ ಹೆಚ್ಚಾಗಿ ಮಹಿಳೆ ಮನೆಯಿಂದ ಹೊರಗಿರುವುದು ಅಸುರಕ್ಷಿತವೆಂಬ ಸಂಪ್ರದಾಯವಾದಿಗಳ ಕೊನೆಯಾಸೆ ಈಡೇರಿಸುವ ಕೆಲಸವನ್ನೂ ಮಾಡುತ್ತಿವೆ. ಇವೆಲ್ಲದರ ಬೆಳಕಿನಲ್ಲಿ ರಾಜಕಾರಣದಲ್ಲಿ ಇರುವವರು ಅಧಿಕಾರದಲ್ಲಿ ಇಲ್ಲದಿರುವುದು ಆಪಾದನೆ ಮಾಡಲು ರಹದಾರಿಯೆಂದು ಭಾವಿಸಿಕೊಳ್ಳಬಾರದು. ಅಧಿಕಾರದಲ್ಲಿ ಇರುವವರು ಸಮರ್ಥಿಸಿಕೊಳ್ಳುವುದನ್ನಷ್ಟೇ ಮಾಡಬಾರದು. ಬದಲಿಗೆ ಇಬ್ಬರೂ ಕೂಡಿ ಶತಮಾನದಾಚೆಯ ದೂರದೃಷ್ಟಿಯ ರಾಜಕಾರಣದಲ್ಲಿ ತೊಡಗಿಕೊಳ್ಳಬೇಕಿದೆ. ಏಕೆಂದರೆ ಆರ್ಭಟಿಸುವುದಷ್ಟೇ ಸಾಮಾಜಿಕ ಕಾಳಜಿಯ ಸಂಕೇತವಲ್ಲ. ರಾಜಕಾರಣ ಮಾಡುವವರಿಗೆ ಅಧಿಕಾರದೊಳಗೆ ಇರುವಾಗ ಮತ್ತು ಹೊರಗಿರುವಾಗ ತಾವು ಸಾರ್ವಜನಿಕವಾಗಿ ನಡೆದುಕೊಂಡ ತಮ್ಮದೇ ಮಾದರಿಗಳನ್ನು ತುಲನಾತ್ಮಕವಾಗಿ ವಿವರಿಸಿಕೊಳ್ಳುವ ನೈತಿಕತೆ ಇರಬೇಕು. ಹೀಗೆ ಕರ್ನಾಟಕ ಸಂಸ್ಕೃತಿಯ ಅರಿವು ಹಾಗೂ ತಮ್ಮದೇ ನಡವಳಿಕೆಗಳ ಕುರಿತಾದ ಆತ್ಮಾವಲೋಕನದ ಮೂಲಕ ವಿಷವನ್ನೇ ಔಷಧಿ ಎಂದು ನಂಬಿಸಬಲ್ಲ ಮಾರುಕಟ್ಟೆ ಮತ್ತು ರೂಢಿವಾದದ ಹತಾರಗಳ ಕುರಿತ ಸಾತ್ವಿಕ ಆಕ್ರೋಶವೊಂದು ನಮ್ಮಲ್ಲಿ ಸಾಧ್ಯವಾಗಬೇಕು. ಮಹಿಳಾಸುರಕ್ಷತೆಯ ನೆಪದಲ್ಲಿ ಮಹಿಳೆಯನ್ನು ನೇಪಥ್ಯಕ್ಕೆ ತಳ್ಳಲು ಹವಣಿಸುತ್ತಿರುವ ಮೂಲಭೂತವಾದಿಶಕ್ತಿಗಳ ಸಂಚುಗಳನ್ನು ಬೆತ್ತಲಾಗಿಸಬೇಕು. ಹಾಗಾದಲ್ಲಿ ಮಾತ್ರ ಒಟ್ಟು ಸಂಗತಿಗಳು ಸುದ್ದಿಯ ಸಂಭ್ರಮಕ್ಕಿಂತ ಬದ್ಧತೆಯ ಬದಲಾವಣೆಗೆ ಭೂಮಿಕೆಯಾಗಬಲ್ಲವು.

ಕೆ.ಪಿ.ಎಸ್.ಸಿ ನೇಮಕಾತಿ ರದ್ದು: ಹಿಂದುಳಿದವರಿಗೆ ಅನ್ಯಾಯ?

– ಹೊರಳಳ್ಳಿ ಸುಂದರೇಶ್

ಕರ್ನಾಟಕದ ಕೆಲವು ಪ್ರಜ್ಞಾವಂತ, ಪ್ರಗತಿಪರ ಚಿಂತಕರು ಕೆ.ಪಿ.ಎಸ್.ಸಿ ನೇಮಕಾತಿ ಪಟ್ಟಿಯನ್ನು ರದ್ದು gonal-bhimappaಮಾಡಿದ ಸರಕಾರದ ತೀರ್ಮಾನವನ್ನು ಅಹಿಂದ ವರ್ಗಗಳಿಗೆ ಆದ ಅನ್ಯಾಯ ಎಂದು ವಾದಿಸುತ್ತಿದ್ದಾರೆ. ಆ ಮೂಲಕ ಸಾಮಾಜಿಕ ತಾಲಗಳಲ್ಲಿ, ಆಪ್ತ ವಲಯಗಳಲ್ಲಿ ತಮ್ಮ ಅಭಿಪ್ರಾಯಕ್ಕೆ ಸಹಮತ ವ್ಯಕ್ತ ಉಂಟಾಗುವಂತೆ ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಇದುವರೆಗೆ ನೆಡೆದಿರುವ ಎಲ್ಲಾ ನೇಮಕಾತಿಗಳ ಪೈಕಿ ಅತಿಹೆಚ್ಚು ಹಿಂದುಳಿದವರು, ದಲಿತರು ಆಯ್ಕೆಯಾಗಿದ್ದು ಇದೇ ಮೊದಲು ಎಂಬ ವಾದವನ್ನೂ ಮುಂದಿಡುತ್ತಿದ್ದಾರೆ. ಅದರರ್ಥ ಈ ಮೊದಲಿನ ನೇಮಕಾತಿ ಪ್ರಕ್ರಿಯೆಯಲ್ಲಾದರೂ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಿದೆ ಎಂಬುದನ್ನು ಒಪ್ಪಿಕೊಂಡಾಯ್ತಲ್ಲ. ಹಾಗಾದರೆ ಇವರೇಕೆ ಇದುವರೆಗೂ 1998, 1999 ಮತ್ತು 2004 ರ ನೇಮಕಾತಿಗಳನ್ನು ರದ್ದು ಮಾಡಬೇಕೆಂದು ದನಿ ಎತ್ತುತ್ತಿಲ್ಲ. ಆ ನೇಮಕಾತಿಗಳಲ್ಲಿ ಅಂಕಗಳ ಮರುಹೊಂದಾಣಿಕೆ, ಸಂದರ್ಶನದ ಅಂಕಗಳನ್ನು ನೀಡುವಾಗಿನ ಅವ್ಯವಹಾರ ಎಲ್ಲವೂ ಬಹಿರಂಗವಾಗಿದ್ದು, ನ್ಯಾಯಾಲಯವೂ ಈ ಬಗ್ಗೆ ಆಕ್ಷೇಪ ಎತ್ತಿದೆ. ಆದರೂ ಏಕೆ ಆ ಪಟ್ಟಿಗಳನ್ನು ಸರಕಾರ ತಿರಸ್ಕರಿಸಬೇಕೆಂದು ಕೇಳುತ್ತಿಲ? ಆಗ ನೇಮಕಗೊಂಡವರು ಇಂದು ಸರಕಾರದ ಆಯಕಟ್ಟಿನ ಜಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾದರೆ, ಈ ಕೆಲ ಪ್ರಗತಿಪರರು (ಎಲ್ಲರೂ ಅಲ್ಲ) ಏಕೆ ದನಿ ಎತ್ತುತ್ತಿಲ್ಲ? ಅವರ ನಿಷ್ಠೆ ಯಾರಿಗೆ?

ಭ್ರಷ್ಟಾಚಾರದಿಂದ ಕೂಡಿದ ನೇಮಕಾತಿ ಪ್ರಕ್ರಿಯೆಗಳು ಯಾವುದೇ ಇರಲಿ, ಅಲ್ಲಿ ಅನ್ಯಾಯವಾಗುವುದು ದೀನ ದಲಿತರಿಗೆ ಎಂಬುದು ಸಾಮಾನ್ಯ ತಿಳವಳಿಕೆ. ಇಲ್ಲಿಯೂ ಹಾಗೇ ಆಗಿರುವುದು. ದೇವೇಗೌಡ, ಕುಮಾರಸ್ವಾಮಿ ಮತ್ತಿತರ ಮುಂದುವರಿದ ಜನಾಂಗದ ಮುಖಂಡರು ಪ್ರತಿಭಟನೆ ಬೆಂಬಲ ವ್ಯಕ್ತಪಡಿಸುತ್ತಿರುವುದರ ಹಿನ್ನೆಲೆ ಬೇರೆ ಇರಲು ಸಾಧ್ಯವೇ? ಈ ಮುಖಂಡರು ಎಂದಾದರೂ, KPSC-bribe-ratesದಲಿತರ ಜೀತ ಪ್ರಕರಣಗಳಿಗೆ, ದಲಿತರ ಮೇಲೆ ನಡೆಯುವ ದಬ್ಬಾಳಿಕೆ ವಿಚಾರವಾಗಿ ಬೀದಿಗೆ ಬಂದು ಕಣ್ಣೀರು ಹಾಕಿದ ಉದಾಹರಣೆಗಳಿವೆಯೇ?

ಎಲ್ಲರಿಗೂ ಗೊತ್ತಿರುವ ಸಂಗತಿ ಈ ಹಿಂದಿನ ಕೆ.ಪಿ.ಎಸ್.ಸಿ ಅಧ್ಯಕ್ಷ ಗೋನಾಳ ಭೀಮಪ್ಪನವರನ್ನು ನೇಮಕ ಮಾಡಿದ್ದು ಕುಮಾರಸ್ವಾಮಿ ಸರಕಾರ. ಅಂದು ಎಚ್.ಡಿ.ರೇವಣ್ಣರು ಹೊಂದಿದ್ದ ಇಂಧನ ಇಲಾಖೆಯಲ್ಲಿ ಮುಖ್ಯ ಹುದ್ದೆಯಲ್ಲಿದ್ದ ಗೋನಾಳ ಭೀಮಪ್ಪ ಅಧ್ಯಕ್ಷರಾಗಿ ನೇಮಕ ಆದರು. ಆ ನಂತರ ಆಯೋಗ ನಡೆಸಿದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾರಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ ಎನ್ನುವುದು ಗೊತ್ತಾಗುತ್ತದೆ. ಮಂಡ್ಯ, ಮೈಸೂರು, ಹಾಸನ ಭಾಗಗಳ ನೂರಾರು ಯುವಕರು ಪ್ರಮುಖ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗಿದ್ದು ಇದೇ ಕಾರಣಕ್ಕೆ ಎಂಬುದು ಇತ್ತೀಚೆಗೆ ಪದವಿ ಪಡೆದು ಕೆ.ಪಿ.ಎಸ್.ಸಿ ನಡೆಸುವ ಒಂದಲ್ಲ ಒಂದು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಲಕ್ಷಾಂತರ ಯುವಕರಿಗೆ ಈ ಸತ್ಯ ಗೊತ್ತು. ಆದರೂ, ಕೆಲ ಬುದ್ಧಿಜೀವಿಗಳು ಹೀಗೆ ಸುಳ್ಳು ಹೇಳಿ ಯಾರ ಕಣ್ಣಿಗೆ ಮಣ್ಣು ಎರಚಲು ಯತ್ನಿಸುತ್ತಿದ್ದಾರೆ?

ಇನ್ನು ಕೆಲವರು ಪ್ರಾಮಾಣಿಕವಾಗಿ ಆಯ್ಕೆಗೊಂಡು, ಈ ಪಟ್ಟಿ ತಿರಸ್ಕೃತಗೊಂಡ ಕಾರಣ ತೀವ್ರ ದು:ಖದಲ್ಲಿದ್ದಾರೆ. ಅವರಿಗೆ ಅನ್ಯಾಯವಾಗಿರುವುದು ನಿಜ. ಆದರೆ, ಅಂತಹವರ ಸಂಖ್ಯೆ ತುಂಬಾ ಕಡಿಮೆ. ಪಟ್ಟಿಯಲ್ಲಿದ್ದ ಎಲ್ಲರೂ ಪ್ರಾಮಾಣಿಕವಾಗಿ ಆಯ್ಕೆಗೊಂಡಿದ್ದೇ ಆಗಿದ್ದರೆ, ಸಿಐಡಿ ವರದಿ ಬೇರೆಯೇ ಆಗಿರಬೇಕಿತ್ತು. KPSC-loksatta-met-governorಪ್ರತಿಭಟನೆ ಹಾಗೂ ಟಿವಿ ಸಂದರ್ಶನಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡು ವಾದ ಮಂಡಿಸುತ್ತಿರುವ ಅನೇಕ ಅಭ್ಯರ್ಥಿಗಳ ಹಿನ್ನೆಲೆ ಕೆಲವು ವೀಕ್ಷಕರಿಗಾದರೂ ಗೊತ್ತು. ಅವರಲ್ಲಿ ಕೆಲವರು ತಮ್ಮ ಹುದ್ದೆಗಾಗಿ ಸೈಟು ಮಾರಿಕೊಂಡವರಿದ್ದಾರೆ. ಅವರಲ್ಲಿ ಅನೇಕರು ಸಾಕಷ್ಟು ಆಸ್ತಿ ಹೊಂದಿದವರಾಗಿದ್ದರೂ, ಟಿವಿ ಸ್ಟುಡಿಯೋಗಳಲ್ಲಿ ಕೂತು ಕೂಲಿಕಾರನ ಮಗ, ಜೀತಮಾಡುವವರ ಮಗ ಎಂದು ಸುಳ್ಳೇ ಹೇಳುತ್ತಿದ್ದಾರೆ. ಮನೆಯಲ್ಲಿ ನಡೆದ ದು:ಖದ ಘಟನೆಗಳನ್ನು ಎಳೆತಂದು ಕಣ್ಣೀರು ಹಾಕುತ್ತಿದ್ದಾರೆ. ಅದಾವುದಕ್ಕೂ ನೇಮಕಾತಿಗೂ ಸಂಬಂಧವಿಲ್ಲ. ಹೀಗೆ ಸಾರ್ವಜನಿಕವಾಗಿ ವರ್ತಿಸುವ ಮಂದಿ ಮುಂದೊಂದು ದಿನ ನ್ಯಾಯಾಲಯದ ತೀರ್ಪಿನ ಸಲುವಾಗಿಯೋ, ಅಥವಾ ಇನ್ನಾವುದೋ ಕಾರಣಕ್ಕೆ ಇವರುಗಳು ತಮ್ಮ ಹುದ್ದೆಯನ್ನು ಪಡೆದರೆ ವೃತ್ತಿ ಹೇಗೆ ನಿಭಾಯಿಸುತ್ತಾರೆ ಎಂದು ಆತಂಕವಾಗುತ್ತದೆ.

3ನೇ ವಾರ್ಷಿಕದಂದು ವರ್ತಮಾನ.ಕಾಮ್‌ನ ಪ್ರಸ್ತುತತೆ ..

ಸ್ನೇಹಿತರೇ,

ವರ್ತಮಾನ.ಕಾಮ್ ಕಾರ್ಯಾರಂಭಿಸಿ ಮೂರು ವರ್ಷಗಳು ತುಂಬಿದವು. (ಮೊದಲನೆಯ ಮತ್ತು ಎರಡನೆಯ ವಾರ್ಷಿಕದಂದು ಬರೆದಿದ್ದ ಟಿಪ್ಪಣಿಗಳು ಇಲ್ಲಿ ಮತ್ತು ಇಲ್ಲಿ ಇವೆ. ಗಮನಿಸಿ.)

ಮೂರನೆಯ ವರ್ಷದಲ್ಲಿ ವರ್ತಮಾನ.ಕಾಮ್ ಎಲ್ಲಾ ತರಹದ ಏರಿಳಿತಗಳನ್ನು ಕಂಡಿತು. 2013  ರ ಅಕ್ಟೋಬರ್, ನವೆಂಬರ್ ಮತ್ತು vartamaana-32014ರ ಮಾರ್ಚ್‌ ತಿಂಗಳುಗಳು ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ಓದನ್ನು ಪಡೆದುಕೊಂಡ ತಿಂಗಳುಗಳಾದರೆ 2014 ರ ಜೂನ್ ತಿಂಗಳು ಕಳೆದ ಎರಡು ವರ್ಷಗಳಲ್ಲಿಯೇ ಕಡಿಮೆ ಓದು ಪಡೆದುಕೊಂಡ ತಿಂಗಳು. ಈ ನಿಟ್ಟಿನಲ್ಲಿ ಇದು ವರ್ತಮಾನ.ಕಾಮ್‌ನ ಯಶಸ್ವಿ ವರ್ಷವೂ ಹೌದು. ಹಾಗೆಯೇ, ಇದರ ಪ್ರಸ್ತುತತೆ ಮತ್ತು ಮುಂದುವರೆಸುವುದರ ಬಗ್ಗೆ ಯೋಚನೆ ಮಾಡಬೇಕಾದ ದಿನಗಳೂ ಹೌದು.

ಈ ಮೊದಲೆ ನಾನು ಅಲ್ಲಲ್ಲಿ ಪ್ರಸ್ತಾಪಿಸಿದಂತೆ, ವರ್ತಮಾನ.ಕಾಮ್‌ಗೆ ಬರೆಯುವವರೆಲ್ಲರೂ ಇಲ್ಲಿಗೆ ಬರೆಯಬೇಕು ಎಂಬ ಆಸಕ್ತಿಯಿಂದ ಬರೆಯುವವರು ಮತ್ತು ಯಾರಿಗೂ ಗೌರವಧನವಾಗಲಿ ಇನ್ನೊಂದಾಗಲಿ ಇಲ್ಲ. ಇದರ ಇಲ್ಲಿಯ ತನಕ ಯಶಸ್ಸು ಮತ್ತು ಪ್ರಸ್ತುತತೆಯಲ್ಲಿ ನಮಗೆ ಒಂದೇ ಒಂದು ಲೇಖನ ಬರೆದವರಿಂದ ಹಿಡಿದು ನಿಯಮಿತವಾಗಿ ಬರೆಯುತ್ತ ಬಂದವರೆಲ್ಲರದು. ಹಾಗೆಯೇ, ಆರಂಭದ ದಿನಗಳಲ್ಲಿ ಕೆಲವೊಬ್ಬರಿಗೆ ದಯವಿಟ್ಟು ಬರೆಯಿರಿ ಎಂದು ಕೇಳಿಕೊಂಡಿದ್ದನ್ನು ಬಿಟ್ಟರೆ ಬರೆಯಿರಿ ಎಂದು ಅತಿಯಾದ ಒತ್ತಾಯವನ್ನು ನಮ್ಮ ಬಳಗದ ಯಾರೊಬ್ಬರೂ ಯಾರಿಗೂ ಮಾಡಿಲ್ಲ. ಆದರೆ ಕೆಲವೊಮ್ಮೆ ಕೆಲವು ಗಂಭೀರ ಸಮಕಾಲೀನ ವಿಷಯದ ಬಗ್ಗೆ ಇಂತಹವರು ಬರೆಯಬಹುದು ಎನ್ನಿಸಿದಾಗ ಅಂತಹವರಿಗೆ ಕೋರಿದ್ದೇವೆ, ಅದೂ ಅಪರೂಪಕ್ಕೆ. ಈ ರೀತಿಯಾಗಿ ಇದು ತನಗೆ ತಾನೆ ಉಳಿಯುತ್ತ, ಕುಗ್ಗುತ್ತ, ಬೆಳೆಯುತ್ತ, ಒಂದು ರೀತಿಯಲ್ಲಿ ಸ್ವಾವಲಂಬಿಯಾಗಿ ಬರುತ್ತಿದೆ.

ಹಾಗೆಯೇ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಅನೇಕ ಲೇಖನಗಳು ರಾಜ್ಯದ ಅನೇಕ ಇತರೆ ವೇದಿಕೆಗಳಲ್ಲಿ ಪ್ರಕಟವಾಗುತ್ತಿರುವುದೂ ಸಹ ಮುಂದುವರೆದಿದೆ. ಅಂತಹ ಸಂದರ್ಭಗಳಲ್ಲಿ ಲೇಖಕರನ್ನು ಮತ್ತು ವರ್ತಮಾನ.ಕಾಮ್ ಅನ್ನು ಹೆಸರಿಸುವ ಎಲ್ಲರೂ ನಮ್ಮ ಪ್ರಶಂಸೆಗೆ ಅರ್ಹರು.

ನಿಮಗೆ ಗೊತ್ತಿರುವ ಹಾಗೆ, ನಮಗೆ ಬರುವ ಒಂದು ಲೇಖನವನ್ನು ಯೂನಿಕೋಡ್‌ಗೆ ಪರಿವರ್ತಿಸಿ, ಇರಬಹುದಾದ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ತಿದ್ದಿ, ನಂತರ ಅದನ್ನು ವೆಬ್‌ಸೈಟಿನಲ್ಲಿ ಸರಿಯಾಗಿ ಪೇಜ್ ಕೂರಿಸಿ, ಸೂಕ್ತ ಚಿತ್ರಗಳನ್ನು ಹಾಕಿ, ಅಂತಿಮವಾಗಿ ಪ್ರಕಟಿಸಲು ಕನಿಷ್ಟ ಒಂದು ಗಂಟೆಯಾದರೂ ಬೇಕು. ಈ ಕೆಲಸವನ್ನು ನಮ್ಮ ಬಳಗದಲ್ಲಿ ನಾನೂ ಸೇರಿದಂತೆ ಮೂವರು ಮಾಡುತ್ತೇವೆ, ಮತ್ತು ಬಹುತೇಕ ಸಂದರ್ಭಗಳಲ್ಲಿ ಆ ಕೆಲಸ ನಾನೇ ಮಾಡುತ್ತಿದ್ದೆ. ನಾನು ಊರಿನಲ್ಲಿಲ್ಲದಾಗ, ಅಥವ ಬೇರೆ ಕೆಲಸದಲ್ಲಿ ವ್ಯಸ್ತನಾಗಿ ಒಂದೆರಡು ದಿನ ಇತ್ತ ಗಮನ ಕೊಡಲು ಆಗುವುದಿಲ್ಲ ಎಂತಾದಾಗ, ನಮ್ಮ ಬಳಗದ ಸ್ನೇಹಿತರು ಅದನ್ನು ಮಾಡುತ್ತಾರೆ. ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ನಿಂತ ಕಾರಣದಿಂದಾಗಿ ಈ ವರ್ಷದ ಮಾರ್ಚ್ ತಿಂಗಳಿನಿಂದ ಈಚೆಗೆ ಬಳಗದ ಮಿತ್ರರೇ ಹೆಚ್ಚಿಗೆ ಮಾಡಿದ್ದಾರೆ. ಅವರೂ ಸಹ ಉದ್ಯೋಗಗಳಲ್ಲಿರುವುದರಿಂದ, ಮತ್ತು ಅವರು ನೌಕರಿ ಮುಗಿಸಿಕೊಂಡು ಮನೆಗೆ ಬಂದನಂತರವೇ ಅದನ್ನು ಮಾಡಬೇಕಾಗಿರುವುದರಿಂದ ಒಮ್ಮೊಮ್ಮೆ ನಮಗೆ ಬಂದ ಲೇಖನಗಳು ಎರಡು-ಮೂರು ದಿನವಾದರೂ ಪ್ರಕಟವಾಗಿರುವುದಿಲ್ಲ. ಇತ್ತೀಚೆಗೆ ಮತ್ತೆ ನನ್ನ ಜೀವನ ಸ್ವಲ್ಪ ನಿಯಮಿತತೆಗೆ ಹೊರಳಿರುವುದರಿಂದ ವರ್ತಮಾನ.ಕಾಮ್ ಸಹ ನಿಯಮಿತವಾಗುತ್ತಿದೆ. ಮುಂದಕ್ಕೆ ನೋಡೋಣ, ಏನಾಗುತ್ತದೊ!

ಅಂದ ಹಾಗೆ, ತನ್ನ ಮೂರನೆ ವರ್ಷದಲ್ಲಿ ವರ್ತಮಾನ.ಕಾಮ್ ರಾಜ್ಯದ ಹಲವು ಕಡೆಗಳಲ್ಲಿ ಸ್ಥಳಿಯ ಸಂಘಸಂಸ್ಥೆ ಮತ್ತು ಸಮಾನಸಾಕ್ತರ ಸಹಕಾರದೊಂದಿಗೆ “ದಲಿತರು ಮತ್ತು ಉದ್ಯಮಶೀಲತೆ” ಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಮತ್ತು ಶಿಬಿರಗಳನ್ನು ನಡೆಸಿಕೊಟ್ಟಿತು. ನಮ್ಮ ಬಳಗದ ಬಿ. ಶ್ರೀಪಾದ ಭಟ್ಟರು ಇದರ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಂಡು ಅದನ್ನು ಬಹಳ ಮುತುವರ್ಜಿಯಿಂದ ನಿರ್ವಹಿಸಿದರು.

dalit-entrepreneurship-4ಹಾಸನ, ತುಮಕೂರು ಮತ್ತು ಮೈಸೂರಿನಲ್ಲಿ ಈ ಕಾರ್ಯಕ್ರಮಗಳಾದವು. ಚಿತ್ರದುರ್ಗ ಅಥವ ಬಳ್ಳಾರಿಯಲ್ಲಿ ನಡೆಸಬೇಕು ಎಂದುಕೊಂಡ ಕಾರ್ಯಕ್ರಮ ನಾನಾ ಕಾರಣಗಳಿಗಾಗಿ ಇನ್ನೂ ಆಗಿಲ್ಲ. ಇನ್ನು ಮುಂದಕ್ಕೆ ನಡೆಸುತ್ತೇವೋ ಇಲ್ಲವೋ ಗೊತ್ತಿಲ್ಲ, ಆದರೆ ನಮಗೆಲ್ಲ ತುಂಬ ತೃಪ್ತಿ ಕೊಟ್ಟ ಕೆಲಸ ಅದು. ಇದರ ಬಹುತೇಕ ಖರ್ಚುಗಳನ್ನೆಲ್ಲ ಶ್ರೀಪಾದ ಭಟ್ಟರು ವಹಿಸಿಕೊಂಡಿದ್ದರು. ಮೈಸೂರಿನ ಕಾರ್ಯಕ್ರಮಕ್ಕೆ ನಾವಂದುಕೊಂಡದ್ದಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಯಿತು ಮತ್ತು ನಾವೂ ಸಹ ಒಂದಷ್ಟು ಪಾಠ ಕಲಿತೆವು. ಹಿರಿಯ ಮಿತ್ರರಾದ ಜಿ.ವಿ.ಸುಂದರ್‌ರವರು ಆ ಕಾರ್ಯಕ್ರಮದ ಬಹುತೇಕ ಖರ್ಚನ್ನು ವಹಿಸಿಕೊಂಡು ಬಹಳ ಬೆಂಬಲ ಕೊಟ್ಟರು. ಸ್ಥಳೀಯರ ಸಹಕಾರ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ ಮತ್ತು ನಾವಂದುಕೊಂಡಂತೆ ಎಲ್ಲರೂ ಅಕಡೆಮಿಕ್ ಆಗಿಯೋ ಅಥವ ನಿಸ್ವಾರ್ಥವಾಗಿಯೋ ಚಿಂತಿಸಿ ನಡೆದುಕೊಳ್ಳುತ್ತಾರೆ ಎಂದು ಖಾತರಿ ಇಲ್ಲ. ಅಂದ ಹಾಗೆ, ಕವಿ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯರಾಗಿರುವ ಎಲ್. ಹನುಮಂತಯ್ಯನವರು ಎರಡು ಕಡೆಯ ಕಾರ್ಯಕ್ರಮಗಳಿಗೆ ಬಂದು ನಮಗೆ ಒಳ್ಳೆಯ ಬೆಂಬಲ, ಸಹಕಾರ, ಮತ್ತು ಪ್ರೋತ್ಸಾಹ ಕೊಟ್ಟರು. ಅವರಿಗೆ ಮತ್ತು ಸಿ.ಜಿ.ಶ್ರೀನಿವಾಸನ್‌ರವರಿಗೂ ನಾವು ಕೃತಜ್ಞರು.

2012 ರ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದಿದ್ದ ಒಂದಷ್ಟು ಕತೆಗಳನ್ನು ಪುಸ್ತಕವಾಗಿ ತರೋಣ ಎಂದು ಶ್ರೀಪಾದ ಭಟ್ಟರು ಹೇಳುತ್ತಲೇ ಇದ್ದರು. katha sprade 2014ಆದರೆ ನನಗೆ ಹುಮ್ಮಸ್ಸಿರದ ಕಾರಣ ಅದು ಆಗಲಿಲ್ಲ. ಆದರೆ ನಮಗೆಲ್ಲ ಸಂತೋಷವಾಗುವಂತೆ 2013 ರ ಕಥಾಸ್ಪರ್ಧೆಯ ಸುಮಾರು ಇಪ್ಪತ್ತು ಕತೆಗಳು “ವರ್ತಮಾನದ ಕಥೆಗಳು” ಕಥಾಸಂಕಲನ ಪುಸ್ತಕವಾಗಿ ಹೊರಬಂದಿದೆ. ಇದಕ್ಕೆ ಕಾರಣರಾಗಿದು ರಾಮಲಿಂಗಪ್ಪ ಟಿ. ಬೇಗೂರರು. ಅವರಿಗೆ ಮತ್ತು ಪ್ರಕಾಶಕರಾದ “ಕಣ್ವ ಪ್ರಕಾಶನ”ದವರಿಗೆ ವರ್ತಮಾನ.ಕಾಮ್ ಬಳಗದ ಪರವಾಗಿ ಧನ್ಯವಾದಗಳು. ಈ ವರ್ಷ ಬರುವ ಕಥೆಗಳೂ ಪುಸ್ತಕವಾಗಿ ಬರುತ್ತದೆ ಎನ್ನುವ ನಂಬಿಕೆ ಈಗ ನಮ್ಮೆಲ್ಲರದು. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು.

ಇನ್ನು, ಖರ್ಚಿನ ವಿಷಯ. ಸುಮಾರು ಆರೇಳು ಸಾವಿರ ರೂಪಾಯಿ ವರ್ತಮಾನ.ಕಾಮ್‌ನ ಡೊಮೈನ್ ಮತ್ತು ಹೋಸ್ಟಿಂಗ್‌ಗೆ ಖರ್ಚಾಗಿರಬಹುದು. ನನ್ನ ಇತರ ಹಲವು ವೆಬ್‍‌ಸೈಟುಗಳನ್ನು ಒಂದೇ ಹೋಸ್ಟಿಂಗ್‍ ಖಾತೆಗೆ ಸೇರಿಸಿದರೆ ನನಗೆ ತಿಂಗಳಿಗೆ ಕನಿಷ್ಟ ಎಂದರೂ ಸಾವಿರ ರೂಪಾಯಿ ಉಳಿಯುತ್ತದೆ. ಆದರೆ ಹಾಗೆ ಪೋರ್ಟ್ ಮಾಡಬೇಕಾದ ಸಂದರ್ಭದಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳ ಭಯ ಮತ್ತು ನನ್ನ ಸೋಮಾರಿತನದಿಂದಾಗಿ ಅದಿನ್ನೂ ಆಗಿಲ್ಲ. ಇದು ಬಿಟ್ಟರೆ, “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮಗಳಿಗೆ ಆಗಿರಬಹುದಾದ ವೆಚ್ಚಗಳು. ಆಗಲೆ ಹೇಳಿದಂತೆ ಅದರಲ್ಲಿ ಬಹುಪಾಲನ್ನು ಶ್ರೀಪಾದ ಭಟ್ಟರು ಮತ್ತು ಸುಂದರ್‌ರವರು ಭರಿಸಿದ್ದಾರೆ. ಮಿಕ್ಕಂತೆ ಏನು ಖರ್ಚಾಗಿದೆ ಎಂದು ನೆನಪಿಗೆ ಬರುತ್ತಿಲ್ಲ.

ಈಗ ಮುಖ್ಯ ವಿಷಯ: ವರ್ತಮಾನ.ಕಾಮ್ ಮುಂದುವರೆಯಬೇಕೇ, ಹೌದಾದಲ್ಲಿ ಹೇಗೆ? ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ನನ್ನ ರಾಜಕೀಯ ಚಟುವಟಿಕೆಗಳ ಕಾರಣವಾಗಿ ನಾನು ಇದಕ್ಕೆ ಕೊಡಬೇಕಾದಷ್ಟು ಸಮಯ ಕೊಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಬಳಗದ ಮಿತ್ರರು ಒಮ್ಮೆ ಸೇರಿ ಮಾತನಾಡೋಣ ಎಂದು ಕಳೆದ ಒಂದೆರಡು ತಿಂಗಳಿನಿಂದ ಸೂಕ್ತ ದಿನಕ್ಕೆ ಕಾಯುತ್ತಿದ್ದೇವೆ, ಅದು ಇನ್ನೂ ಆಗಿಲ್ಲ. ಅಂದ ಹಾಗೆ, ವರ್ತಮಾನ.ಕಾಮ್‌ನ ಯೋಚನೆ ಮತ್ತು ಯೋಜನೆ ನನಗೆ ಹೊಳೆದದ್ದೇ “ನಾವು ನಮ್ಮಲ್ಲಿ” ಬಳಗ 2011ರಲ್ಲಿ ಚಿತ್ರದುರ್ಗದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ನಾನು ಮಾತನಾಡಬೇಕಾಗಿ ಬಂದ ಸಂದರ್ಭದಲ್ಲಿ. ಈ ವರ್ಷದ “ನಾವು ನಮ್ಮಲ್ಲಿ” ಕಾರ್ಯಕ್ರಮ ಇದೇ ತಿಂಗಳ 30 ಮತ್ತು 31 ರಂದು ಕೊಟ್ಟೂರಿನಲ್ಲಿ ಇದೆ ಎಂಬ ಮಾಹಿತಿ ಇದೆ. ಬಹುಶಃ ನಾವು ಅಲ್ಲಿಯೇ ಸೇರಿ ತಿರ್ಮಾನಿಸಬೇಕಿದೆ ಎನ್ನಿಸುತ್ತದೆ.

ಅಂದ ಹಾಗೆ, ನಿಮಗೇನನ್ನಿಸುತ್ತದೆ? ನಮ್ಮ ಓದುಗರಲ್ಲಿ ಮತ್ತು ಬೆಂಬಲಿಗರಲ್ಲಿ ಬಹುಪಾಲು ಜನ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ಶಾಂತ ಮತ್ತು ನಿಧಾನ ಸ್ವಭಾವದವರು ಎಂದು ಗೊತ್ತು! ಅದರೂ ಆಗಾಗ ಒಮ್ಮೊಮ್ಮೆ ಕೆಲವು ಅಭಿಪ್ರಾಯಗಳನ್ನೊ, ಅನಿಸಿಕೆಗಳನ್ನೊ, ಯೋಜನೆಗಳನ್ನೊ, ಹಂಚಿಕೊಂಡರೆ ಮುಂದಕ್ಕೆ ಹೇಗಿರಬೇಕು ಎಂದು ತೀರ್ಮಾನಿಸಲು ನಮಗೂ ಒಂದಷ್ಟು ಸಹಾಯ ಮಾಡಬಹುದು.

ಹಾಗೆ ಮಾಡುತ್ತೀರಿ ಎನ್ನುವ ನಿರೀಕ್ಷೆಯಲ್ಲಿ,

ನಮಸ್ಕಾರ ಮತ್ತು ಧನ್ಯವಾದಗಳು,
ರವಿ


ತೆರೆದ ಕೊಳವೆ ಬಾವಿ ಮಕ್ಕಳ ಪಾಲಿಗೆ ಸಾವಿನ ಗುಂಡಿ


– ಡಾ.ಎಸ್.ಬಿ. ಜೋಗುರ


ನಮ್ಮ ಜನರೇ ಹಾಗೆ. ಅಹಿತಕರವಾದದ್ದು ನಮ್ಮ ಮನೆಯಲ್ಲಿ ಘಟಿಸಿದಾಗ ಮಾತ್ರ ನಾವು ಬಿಕ್ಕಲು ಶುರು ಮಾಡುತ್ತೇವೆ. ’ಹಾಗೆ ಆಗುತ್ತದೆ ಎಂದು ತಮಗೆ ಅನಿಸಿರಲೇ ಇಲ್ಲ.ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು’ ಎಂದು ಹೇಳುವವರಿಗೆ ಅದು ಹಾಗೆಯೇ ಯಾವುದೇ ಒಂದು ವಿಘಟನೆ ಜರುಗುವ ಮೊದಲು ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಅದು ಘಟಿಸಿದ ಮೇಲೆಯೇ ಅದರ ಪರಿಣಾಮದ ಭೀಕರತೆಯ ಅರಿವಾಗುವದು. ಕೊಳವೆ ಬಾವಿಗಳ ದುರಂತಗಳನ್ನೇ ತೆಗೆದುಕೊಳ್ಳಿ. ತೀರಾ ಇತ್ತೀಚೆಗೆ ಇಂಡಿ ತಾಲೂಕಿನ ನಾಗಠಾಣ ಗ್ರಾಮದ ಅಕ್ಷತಾ ಕೊಳವೆ ಬಾವಿಗೆ ಬಿದ್ದು ಮಣ್ಣುಪಾಲಾದ ಘಟನೆ ಇಷ್ಟು ಬೇಗ ನಮ್ಮ ಜನತೆ ಮರೆಯಬಾರದಿತ್ತು. bagalkot-timmanna-open-borewellನೆನಪಿಡಲು ಅದೇನು ಅತ್ಯಂತ ಖುಷಿ ಕೊಡುವ ಸಂಗತಿಯೇ..? ಎಂದು ನೀವು ಕೇಳಬಹುದು. ಇರಲಿಕ್ಕಿಲ್ಲ, ಆದರೆ ಹೀಗೆ ಮತ್ತೊಂದು ಅಂಥದೇ ಘಟನೆ ನಡೆಯುವದನ್ನು ತಪ್ಪಿಸುವಲ್ಲಿ ಅದನ್ನು ನೆನಪಿಡುವ ಅಗತ್ಯವಿದೆ. ಬಹುಷ: ಮೊನ್ನೆ ಬಾಗಲಕೋಟ ಜಿಲ್ಲೆಯ ಸೂಳಿಕೆರಿಯಲ್ಲಿ ತಿಮ್ಮಣ್ಣ ಎಂಬ ಪುಟ್ಟ ಬಾಲಕ ಕೊಳವೆ ಬಾವಿಗೆ ಸಿಲುಕಿ ನೀವೆಲ್ಲಾ ಬಲ್ಲಿರಿ. ಆತನ ತಂದೆ-ತಾಯಿಗಳು ಖಂಡಿತ ನಾಗಠಾಣದಲ್ಲಿ ಅಕ್ಷತಾ ಕೊಳವೆ ಬಾವಿಗೆ ಬಿದ್ದದ್ದನ್ನು ಟಿ.ವಿ.ಯಲ್ಲಿ ನೋಡಿರಲಿಕ್ಕೆ ಸಾಕು ಅಥವಾ ಯಾರಾದರೂ ಆ ಸಂದರ್ಭದಲ್ಲಿ ಆ ಕುರಿತು ಮಾತನಾಡುವದನ್ನು ಕೇಳಿರಲಿಕ್ಕೂ ಸಾಕು. ಆಗಲಾದರೂ ಇವರಿಗೆ ತಮ್ಮ ಮನೆಯಲ್ಲಿ ಸಣ್ಣ ಸಣ್ಣ ಮಕ್ಕಳಿವೆ, ಹಾಗೆಯೇ ತೆರೆದ ಕೊಳವೆ ಬಾವಿಯೂ ಇದೆ ಎನ್ನುವದು ನೆನೆಪಾಗಿರಬೇಕು.ಆ ಸಂದರ್ಭದಲ್ಲಿ ಅವರು ಆ ತೆರೆದ ಕೊಳವೆ ಬಾವಿಯ ಗುಂಡಿಯನ್ನು ಮುಚ್ಚಿದರೆ ಆ ಸಮಸ್ಯೆಯೇ ಇರುತ್ತಿರಲಿಲ್ಲ. ಎಲ್ಲವೂ ಹೀಗೆಯೇ.. ಕೆಟ್ಟ ಮೇಲೆ ಬುದ್ಧಿ ಬಂದಂತೆ.

ಆಗಲೇ ಸರಕಾರ ಅನೇಕ ಬಾರಿ ಮತ್ತೆ ಮತ್ತೆ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿತ್ತು. ಹಾಗಿರುವಾಗಲೂ ಅಲ್ಲಲ್ಲಿ ಈ ಬಗೆಯ ಕೊಳವೆ ಬಾವಿ ಎಂಬ ಸಾವಿನ ಗುಂಡಿಗಳು ತೆರೆದೇ ಇವೆ. ಮಾಧ್ಯಮಗಳಂತೂ ಅಪಾರ ಪ್ರಮಾಣದಲ್ಲಿ ಆ ಬಗ್ಗೆ ಮತ್ತೆ ಮತ್ತೆ ವರದಿ ಮಾಡಿದ ಮೇಲೆಯೂ ಮತ್ತೆ ಇಂಥಾ ಗುಂಡಿಗಳು ಉಳಿದಿರುವದೇ ಬಹುದೊಡ್ಡ ವಿಪರ್ಯಾಸ. ನಾಗಠಾಣದಲ್ಲಿ ನಡೆದ ಘಟನೆಯ ಸಂದರ್ಭದಲ್ಲಿಯೇ ಪಕ್ಕದ ಗದ್ದೆಯಲ್ಲಿ ಬಾಯಿ ತೆರೆದುಕೊಂಡು ನಿಂತ ಕೊಳವೆ ಬಾವಿಯನ್ನು ಟಿ.ವಿ.ಯಲ್ಲಿ ತೋರಿಸಲಾಗುತ್ತಿತ್ತು. ಕೊಳವೆ ಬಾವಿಗಳು ಬತ್ತಿ ಹೋದ ಮೇಲೆ ಅನೇಕರಿಗೆ ಈ ತೆರೆದ ಕೊಳವೆಬಾವಿಗಳು ತಮ್ಮ ಗದ್ದೆಯಲ್ಲಿಯೂ ಇವೆ ಎನ್ನುವುದೂ ಮರೆತಂತಿರುತ್ತದೆ. ಜನರ ಸ್ಮರಣೆಗೆ ಆಯುಷ್ಯ ತೀರಾ ಕಡಿಮೆ. ಹೀಗಾಗಿ ಈ ಬಗೆಯ ಘಟನೆಗಳು ಮತ್ತೆ ಮತ್ತೆ ಮರುಕಳಿಸಿ ಅಪಾರವಾಗಿ ಹಳಹಳಿಸುವಂತೆ ಮಾಡುತ್ತವೆ. ನಮ್ಮ ಉದಾಸೀನತೆಯಿಂದ ಕೊನೆಗೂ ನಮ್ಮಲ್ಲಿ ಉಳಿದದ್ದು ಹಳಹಳಿಕೆ.. ಬೇಸರ.. ಅಸಹಾಯಕತೆ.

ಸಾಮಾನ್ಯವಾಗಿ ಕೊಳವೆ ಬಾವಿಗಳನ್ನು ಎಲ್ಲೆಲ್ಲಿ ಕೊರೆಯಿಸಲಾಗಿದೆ open-borewell-victim-timmanna-motherಎನ್ನುವ ಬಗ್ಗೆ ಸಂಬಂಧಿಸಿದ ಇಲಾಖೆಯವರಿಗೂ ಮಾಹಿತಿ ಇದ್ದೇ ಇರುತ್ತದೆ. ಆ ಬಗ್ಗೆ ದಾಖಲಾತಿಯೂ ಇರುತ್ತದೆ. ಅವುಗಳಲ್ಲಿ ಬತ್ತಿಹೋದ ಇಲ್ಲವೇ ವಿಫಲವಾದ ಕೊಳವೆ ಬಾವಿಗಳೆಷ್ಟು ಎನ್ನುವ ಬಗ್ಗೆಯೂ ಮಾಹಿತಿ ಇರುತ್ತದೆ. ಅತ್ಯಂತ ವಸ್ತುನಿಷ್ಟವಾಗಿ ಅವುಗಳನ್ನು ಸಮೀಕ್ಷಿಸಿ ಮುಚ್ಚಿಸುವ ಕ್ರಿಯೆ ತುರ್ತಾಗಿ ನಡೆಯಬೇಕು. ಎಲ್ಲವನ್ನೂ ಸರ್ಕಾರವೆ ಮಾಡಲಿ.. ಮಾಡಬೇಕು ಎನ್ನುವ ಮನ:ಸ್ಥಿತಿಯೇ ಸರಿಯಲ್ಲ. ಯಾವುದೇ ಸಾರ್ವಜನಿಕರ ಗಮನಕ್ಕೆ ಬರುವ ಇಂಥಾ ತೆರೆದ ಕೊಳವೆ ಬಾವಿಗಳನ್ನು ಮುಚ್ಚುವ ಕೆಲಸ ಆಗಬೇಕು. ಇದೂ ಕೂಡಾ ಒಂದು ಮಹತ್ತರವಾದ ಸಾಮಾಜಿಕ ಹೊಣೆಗಾರಿಕೆ ಎನ್ನುವ ಹಾಗೆ ಜರುಗಬೇಕು. ಇನ್ನು ಈ ಬಗೆಯ ಕೊಳವೆ ಬಾವಿಗಳಲ್ಲಿ ಬಹುತೇಕವಾಗಿ ಸಣ್ಣ ಮಕ್ಕಳು. ತೀರಾ ಯತಾರ್ಥವಾಗಿ ಆಡುತ್ತ ಆಡುತ್ತಲೇ ಬೀಳುವದಿದೆ. ಇದು ತೀರಾ ಆಕಸ್ಮಿಕವಾದ ಘಟನೆ ಎನಿಸಿದರೂ ಇದರ ಹಿಂದೆ ನಮ್ಮ ನಿರ್ಲಕ್ಷವೂ ಇದೆ ಎನ್ನುವದನ್ನು ಮರೆಯಲಾಗದು. ತಮ್ಮ ತಮ್ಮ ಗದ್ದೆಗಳಲ್ಲಿಯೂ ಇಂಥಾ ಒಂದು ಪಾಪಕೂಪ ಇದೆ ಎನ್ನುವ ಪ್ರಜ್ಞೆಯೂ ಇರುವದಿಲ್ಲವೇ..? ಇದ್ದರೂ ಅದು ಈ ಮಟ್ಟಿಗೆ ಬಾಧಕ ಎನ್ನುವುದು ಮಾತ್ರ ತಮ್ಮದೇ ಸಂತಾನ ಅಲ್ಲಿ ಬೀಳುವವರೆಗೂ ಇವನಿಗೆ ಅನಿಸಿರಲಿಲ್ಲ bagalkot_boy_in_borewell_rescueಎನ್ನುವುದೇ ದೊಡ್ಡ ವಿಪರ್ಯಾಸ.

ನಮ್ಮ ನಮ್ಮ ನಿಯಂತ್ರಣದಲ್ಲಿರುವ ಈ ಬಗೆಯ ಅವಘಡಗಳ ಕಾರಣಗಳನ್ನು ನಾವೇ ಸರಿದೂಗಿಸಬಹುದು. ನಮಗ್ಯಾಕೆ.. ಅದರ ಉಸಾಬರಿ ಎನ್ನುವ ಗುಣ ನಮ್ಮ ಬುಡಕ್ಕೂ ಕೊಳ್ಳಿ ಇಡಬಹುದು. ಹಾಗಾಗುವ ಮುನ್ನವೆ ನಾವು ಎಚ್ಚರಗೊಳ್ಳುವುದು ಅನೇಕ ರೀತಿಯಲ್ಲಿ ಉತ್ತಮ. ಅತ್ಯಂತ ಸುಶಿಕ್ಷಿತರು ವಾಸಿಸುವ ಪ್ರದೇಶವದು. ಮಳೆಗಾಲದ ಸಂದರ್ಭ. ಅಲ್ಲೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬ. ಅಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಧಗಧಗನೇ ಹೊತ್ತಿ ಉರಿಯತೊಡಗಿತು. ನಮ್ಮ ಸೋಕಾಲ್ಡ್ ಎಜ್ಯುಕೆಟೆಡ್ ಯಾರೂ ಪೋನ್ ಮಾಡಿ ಅಲ್ಲಿ ಬೆಂಕಿ ತಗುಲಿದ ಬಗ್ಗೆ ಹೇಳಲು ತಯಾರಿಲ್ಲ. ಪರಿಣಾಮವಾಗಿ ಆ ಟ್ರಾನ್ಸ್‌ಫಾರ್ಮರ್ ಸುಟ್ಟೇ ಹೋಯಿತು. ಅದು ತಮ್ಮದು ಎನ್ನುವ ನಾಗರಿಕ ಪ್ರಜ್ಞೆಯೇ ಅಲ್ಲಿರಲಿಲ್ಲ. ನಮ್ಮ ಮನೆಯಲ್ಲಿ ಹಾಗೆ ಯಾವುದೇ ಒಂದಕ್ಕೆ ಬೆಂಕಿ ತಗುಲಿದ್ದರೆ..? ಹಾಗೆ ಉದಾಸೀನತೆ ಮಾಡುತ್ತೇವೆಯೇ..? ಸಾಧ್ಯವಿಲ್ಲ. ಯಾವುದೇ ಒಂದು ಅಹಿತಕರ ಘಟನೆ ಖಾಸಗಿಯಾಗಿರಲಿ, ಸಾರ್ವಜನಿಕವಾಗಿರಲಿ, ಅದನ್ನು ತಡೆಯುವಲ್ಲಿ ನಮ್ಮಿಂದಾಗುವ ಯತ್ನವನ್ನು ಮಾಡುವದರಲ್ಲಿ ಯಾವ ತಪ್ಪೂ ಕಾಣುವದಿಲ್ಲ.