Monthly Archives: August 2014

ಕೆಪಿಎಸ್‍ಸಿ 2011 ರ ನೋಟಿಫಿಕೇಷನ್ ವಿಚಾರಕ್ಕೆ ಕಡೆಗೂ ದಿಟ್ಟ ನಿರ್ಧಾರ ತೆಗೆದುಕೊಂಡ ಸರ್ಕಾರ – ಒಂದು ಅವಲೋಕನ

– ರವಿ

ಕೆಪಿಎಸ್‌ಸಿ ವಿಚಾರಕ್ಕೆ ಕಡೆಗೂ ಸರ್ಕಾರ ಒಂದು ನಿರ್ಧಾರ ಕೈಗೊಂಡಿದೆ ಮತ್ತು ಅದು ಬಹಳ ದಿಟ್ಟ ನಿರ್ಧಾರವೂ ಆಗಿದೆ. ಈ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಸುಲಭವಾಗಿರಲಿಲ್ಲ. ಹೊರಗೆ ಮತ್ತು ಒಳಗೆ ವಿಪರೀತ ಒತ್ತಡವಿತ್ತು. ಸಿದ್ಧರಾಮಯ್ಯನವರು ಮತ್ತವರ ಸಂಪುಟದ ಸಹೋದ್ಯೋಗಿಗಳು ಈ ವಿಚಾರದಲ್ಲಿ ಭ್ರಷ್ಟಾಚಾರವಿರೋಧಿ ನಿಲುವು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದರೋ, ಅಥವ ಈ ನಿರ್ಧಾರ ತೆಗೆದುಕೊಳ್ಳದೆ ಬೇರೆ ವಿಧಿ ಇರಲಿಲ್ಲವೋ. ಅಂತೂ ಒಂದು ನಿರ್ಧಾರ ಬಂದಾಗಿದೆ ಮತ್ತು ಅದು ಕೆಪಿಎಸ್‌ಸಿಯಲ್ಲಿ ಕಳೆದ ಎರಡು-ಮೂರು ದಶಕಗಳಿಂದ ನಡೆದುಕೊಂಡು ಬಂದಿದ್ದ ಅವ್ಯಾಹತ ಅಕ್ರಮಗಳಿಗೆ ಸದ್ಯದ ಮಟ್ಟಿಗಾದರೂ ಕಡಿವಾಣ ಹಾಕಿದೆ.

ಇದೆಲ್ಲವೂ ಆರಂಭವಾಗಿದ್ದು ಮಂಗಳಾ ಶ್ರೀಧರ್ ಎನ್ನುವ ಆಗಿನ ಕೆಪಿಎಸ್‌ಸಿ ಸದಸ್ಯೆ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಲ್ಲಿ kpscಒಬ್ಬರಾಗಿದ್ದ ಮತ್ತು ಆ ಗುಂಪಿನಲ್ಲಿ ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಡಾ. ಮೈತ್ರಿ ಎನ್ನುವವರ ಬಳಿ 75 ಲಕ್ಷ ರೂಪಾಯಿಯ ಲಂಚ ಕೇಳಿ, ಅವರು ಅದನ್ನು ಕೊಡದೆ ಇದ್ದದ್ದಕ್ಕೆ ಸಂದರ್ಶನದಲ್ಲಿ ಡಾ. ಮೈತ್ರಿಗೆ ಕೇವಲ 75 ಅಂಕಗಳನ್ನು ಕೊಟ್ಟು, ಎರಡನೆ ಸ್ಥಾನದಲ್ಲಿದ್ದ ಅಭ್ಯರ್ಥಿಗೆ 150 ಅಂಕಗಳನ್ನು ಕೊಟ್ಟ ಸಂದರ್ಭದಿಂದ. ಇದರಿಂದಾಗಿ ಡಾ. ಮೈತ್ರಿಯವರಿಗೆ ಮೊದಲ ದರ್ಜೆಯ ಹುದ್ದೆ ದೊರಕದೆ ಎರಡನೆಯ ದರ್ಜೆ ಹುದ್ದೆ ದೊರಕಿತು. ಅಂದ ಹಾಗೆ, ಲಿಖಿತ ಪರೀಕ್ಷೆಯಲ್ಲಿ ಮೈತ್ರಿ ಮತ್ತು ಅವರ ನಂತರದ ಅಭ್ಯರ್ಥಿಗೆ ಇದ್ದ ಅಂಕಗಳ ವ್ಯತ್ಯಾಸ 72 ಅಂಕಗಳು. ಅಂದರೆ ಡಾ. ಮೈತ್ರಿಯವರಿಗೆ ಸಂದರ್ಶನದಲ್ಲಿ 75 ರ ಬದಲಿಗೆ 79 ಅಂಕಗಳು ಬಂದಿದ್ದರೆ,  ಅಥವ ಅವರಿಗೆ ಎಪ್ಪತ್ತೈದೇ ಬಂದು 150 ಅಂಕ ಪಡೆದ ಎರಡನೇ ಅಭ್ಯರ್ಥಿಗೆ 146 ಅಂಕಗಳು ಬಂದಿದ್ದರೂ ಡಾ.ಮೈತ್ರಿಗೆ ಪ್ರಥಮ ದರ್ಜೆ ಹುದ್ದೆ ಖಾತರಿ ಆಗುತ್ತಿತ್ತು. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಡಾ. ಮೈತ್ರಿ ಎಮ್‌ಬಿಬಿಎಸ್ ಮತ್ತು ಎಮ್‍ಡಿ ಮಾಡಿರುವಂತಹವರು, ಚೆನ್ನಾಗಿ ಮಾತನಾಡಬಲ್ಲಂತಹವರು, ನನಗೆ ನೆನ್ನೆ ಗೊತ್ತಾದ ಪ್ರಕಾರ ಸರ್ಕಾರಿ ಸೇವೆಯಲ್ಲಿ, ಅದರಲ್ಲೂ ತಹಶೀಲ್ದಾರ್/ಎಸಿಯಂತಹ ಒಳ್ಳೆಯ ಹುದ್ದೆಯಲ್ಲಿರುವಂತಹವರ ಮಗಳು. (ಅವರ ತಂದೆಯ ಮೇಲೆ ಮೂರು ಸಲ ಲೋಕಾಯುಕ್ತ ದಾಳಿ ಆಗಿದೆ, ಅವರೊಬ್ಬ ಭ್ರಷ್ಟ ಅಧಿಕಾರಿ ಎಂಬ ಮಾತುಗಳು ನೆನ್ನೆ ಮಾಧ್ಯಮದಲ್ಲಿ ಕೇಳಿಬಂದವು. ಅದನ್ನೂ ಇಲ್ಲಿ ದಾಖಲಿಸುತ್ತಿದ್ದೇನೆ.) ಹಾಗಾಗಿ ಡಾ. ಮೈತ್ರಿಗೆ 75 ಅಂಕಗಳನ್ನು ಕೊಟ್ಟು ಎರಡನೆಯ ಅಭ್ಯರ್ಥಿಗೆ 150 ಅಂಕಗಳನ್ನು, ಅದೂ ಎಲ್ಲಾ ಸಂದರ್ಶಕರೂ ಒಂದೇ ಅಂಕಗಳನ್ನು ಕೊಡುವುದರ ಹಿಂದೆ ಅಕ್ರಮ ಮತ್ತು ಭ್ರಷ್ಟಾಚಾರ ಇಲ್ಲದೇ ಇರಲು ಸಾಧ್ಯವೇ ಇಲ್ಲ.

(ಮತ್ತು ಅಕ್ರಮಗಳು ಸಂದರ್ಶನದ ಹಂತದಲ್ಲಿಯಷ್ಟೇ ಆಗಿಲ್ಲ. ಲಿಖಿತ ಪರೀಕ್ಷೆಗಳಲ್ಲೂ ಆಗಿದೆ. ಬಹುಶಃ ಲಿಖಿತ ಪರಿಕ್ಷೆಯ ಮೌಲ್ಯಮಾಪನ ಸಂದರ್ಬದಲ್ಲಿಯೇ ಯಾರನ್ನು ಆಯ್ಕೆ ಮಾಡಬೇಕು ಮತ್ತು ಅದಾಗಬೇಕಾದರೆ ಯಾರಿಗೆ ಎಷ್ಟು ಅಂಕಗಳನ್ನು ಕೊಡಬೇಕು ಎಂದು ತೀರ್ಮಾನವಾಗಿದೆ. ಇದಕ್ಕೆ ವರ್ತಮಾನ.ಕಾಮ್‌ನಲ್ಲಿ ಲಭ್ಯವಿರುವ ಈ ವರದಿಯನ್ನು ಗಮನಿಸಬಹುದು.)

ಆಗ ಡಾ.ಮೈತ್ರಿ ಇದನ್ನು ಮಾಧ್ಯಮಗಳ ಗಮನಕ್ಕೆ ತಂದರು, ನಂತರ ಸರ್ಕಾರದ ಗಮನಕ್ಕೂ ತಂದರು. ಆಗ ತಾನೆ ಪರಮಭ್ರಷ್ಟ ಬಿಜೆಪಿಯನ್ನು ಆಡಳಿತದಿಂದ ಹೊರಗಟ್ಟಿ ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿತ್ತು. KPSC-CID-Reportಒತ್ತಡ ಹೆಚ್ಚಾಗಿ ಮುಖ್ಯಮಂತ್ರಿಗಳು 2013ರ ಜೂನ್‌ನಲ್ಲಿ ಸಿಐಡಿ ತನಿಖೆಗೆ ಆದೇಶ ಕೊಟ್ಟರು.

ರಾಜಕೀಯ ಮತ್ತು ಹಣದ ಪ್ರಭಾವ ಇರುವ ಬಹುತೇಕ ಹಗರಣಗಳಲ್ಲಿ ಸಿಐಡಿ ತನಿಖೆ ಎನ್ನುವುದು ನಾಮಕಾವಸ್ತೆ ತನಿಖೆ. ಅನೇಕ ವರದಿಗಳು ಕಸದ ಬುಟ್ಟಿ ಸೇರಿವೆ. ಬಹುಶಃ ಸಿಬಿಐ ತನಿಖೆಗಳದೂ ಇದೇ ಗತಿ ಇರಬಹುದು. ನಮ್ಮ ರಾಜ್ಯದಲ್ಲಿಯಂತೂ ಬಹುತೇಕ ಸಿಐಡಿ ತನಿಖೆಗಳಲ್ಲಿ ತನಿಖೆ ಆರಂಭಿಸುವುದಕ್ಕೆ ಮೊದಲು ತಮಗೆ ಬೇಕಾದ ಹಾಗೆ ವರದಿಯನ್ನು ಸಿದ್ದಪಡಿಸಿಕೊಂಡು ನಂತರ ಆ ವರದಿಗೆ ಹೊಂದುವಂತೆ ತನಿಖೆಯ ನಾಟಕ ಆಡಲಾಗುತ್ತದೆ. ಆದರೆ ಅಪರೂಪಕ್ಕೆಂಬಂತೆ ಈ ವಿಷಯದಲ್ಲಿ ಸಿಐಡಿ ಇಲಾಖೆ ಅತ್ಯುತ್ತಮ ಎನ್ನಬಹುದಾದ ಮಧ್ಯಂತರ ವರದಿ ನೀಡುತ್ತದೆ. ಅದರಲ್ಲಿ ಬೆಚ್ಚಿಬೀಳಿಸುವ ಸಂಗತಿಗಳನ್ನು ಸಾಕ್ಷ್ಯಗಳ ಸಮೇತ ಹೊರಹಾಕಲಾಗುತ್ತದೆ. ಆದರೆ, ಆ ವರದಿ ಬಹಿರಂಗವಾಗುವುದಿಲ್ಲ.

ಬಹಿರಂಗವಾಗಬೇಕಿದ್ದ, ಸಾರ್ವಜನಿಕರ ಗಮನಕ್ಕೆ ಬರಬೇಕಾಗಿದ್ದ ವರದಿಯನ್ನು ಸರ್ಕಾರ ಮುಚ್ಚಿಡುತ್ತದೆ. ಅದು ಹೇಗೋ ಆ ವರದಿ ಪ್ರಜಾವಾಣಿ ಪತ್ರಿಕೆಯವರಿಗೆ ಸಿಗುತ್ತದೆ. ಸರ್ಕಾರದಲ್ಲಿದ್ದರೂ ಅಲ್ಲಿಯ ಅನ್ಯಾಯಗಳನ್ನು ಸಹಿಸದ ವಿಸಲ್ ಬ್ಲೋವರ್ಸ್ ಮೊದಲಿನಿಂದಲು ಇದ್ದಾರೆ. ಈ ವಿಷಯದಲ್ಲೂ ಹಾಗೆಯೇ ಆಗುತ್ತದೆ. ಪ್ರಜಾವಾಣಿಯ ಪತ್ರಕರ್ತ ರವೀಂದ್ರ ಭಟ್ಟರು ಇದರ ಬಗ್ಗೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ (?) ಸರಣಿ ಲೇಖನಗಳನ್ನೇ ಬರೆಯುತ್ತಾರೆ. ಆಗ ಇಡೀ ರಾಜ್ಯವೇ ಬೆಚ್ಚಿಬೀಳುತ್ತದೆ.

ಆ ಸಮಯದಲ್ಲಿ ನಾನು ಲೋಕಸತ್ತಾ ಪಕ್ಷದಲ್ಲಿದ್ದೆ. ಆ ಸರಣಿ ಲೇಖನಗಳನ್ನು ಓದಿ ನಾನು ಮತ್ತು ನನ್ನ ಆಗಿನ kpsc-loksatta-pressmeet-26122013ಸಹೋದ್ಯೋಗಿಗಳು ಸಹ ಬೆಚ್ಚಿಬಿದ್ದಿದ್ದೆವು. ಈ ವಿಚಾರವಾಗಿ ಏನಾದರೂ ಮಾಡಬೇಕು ಎಂದು ಚರ್ಚಿಸಿ ಒಂದು ಪತ್ರಿಕಾಗೋಷ್ಟಿ ಕರೆದು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆವು. ಅದಾದ ನಂತರ ಆ ಮಧ್ಯಂತರ ವರದಿ ನಮ್ಮ ಕೈಗೂ ಸಿಕ್ಕಿತು. ಅದರ ಪ್ರಮುಖ ಭಾಗಗಳನ್ನು ಆಯ್ದು, ಅಷ್ಟನ್ನೇ ಬಿಡುಗಡೆ ಮಾಡಿ, ಸರ್ಕಾರ ಸಿಐಡಿ ವರದಿಯನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದಲ್ಲಿ ನಾವೇ ಬಿಡುಗಡೆ ಮಾಡುತ್ತೇವೆ ಎಂದು ಮತ್ತೊಂದು ಪತ್ರಿಕಾಗೋಷ್ಟಿ ಮಾಡಿದೆವು. ಸರ್ಕಾರ ಏನೂ ಮಾಡಲಿಲ್ಲ. ನಾಲ್ಕು ದಿನಗಳ ನಂತರ ಮತ್ತೊಂದು ಪತ್ರಿಕಾಗೋಷ್ಟಿ ಮಾಡಿ ಇಡೀ ವರದಿಯನ್ನೇ ಬಿಡುಗಡೆ ಮಾಡಿ, ಮತ್ತು ಅದನ್ನು ವೆಬ್‌ಸೈಟ್‌ನಲ್ಲೂ ಹಾಕಿ, ಪತ್ರಿಕಾಗೊಷ್ಟಿಯ ನಂತರ ಲೋಕಸತ್ತಾ ಪಕ್ಷದ ಸುಮಾರು ಇಪ್ಪತ್ತು ಕಾರ್ಯಕರ್ತರ ಜೊತೆ ವಿಧಾನಸೌಧದ ಪಕ್ಕದಲ್ಲಿಯೇ ಇರುವ ಕೆಪಿಎಸ್‍‌ಸಿ ಕಟ್ಟಡಕ್ಕೆ ಹೋಗಿ, ಅದರ ಗೇಟ್ ಹಾಕಿ, ಅದಕ್ಕೆ ಮಪ್ಲರ್ ಸುತ್ತಿ, ಅದರ ಮುಂದೆಯೇ ಧರಣಿ ಕುಳಿತೆವು. ಇಂತಹ ಪ್ರತಿಭಟನೆ ಮತ್ತು ಧರಣಿಗಳಿಗೆ ವಿಧಾನಸೌಧದ ಸುತ್ತಮುತ್ತ ಆಸ್ಪದ ಇಲ್ಲ. KPSC-bribe-ratesಕೂಡಲೆ ಪೋಲಿಸರು ಮತ್ತು ಮಾಧ್ಯಮದವರು ಬಂದರು. ಸ್ವಲ್ಪ ಮಾತು-ಕತೆ-ಘೋಷಣೆ-ವಿನಂತಿಯ ನಂತರ ಧರಣಿ ಕೈಬಿಟ್ಟೆವು. ಅಂದು ಮೊದಲ ಬಾರಿಗೆ ಈ ಅಕ್ರಮಗಳಿಂದಾಗಿ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ನಮ್ಮ ಜೊತೆ ಬಂದಿದ್ದರು.

ಅದರ ಮುಂದಿನ ವಾರ ಲೋಕಸತ್ತಾ ಪಕ್ಷ ಪ್ರತಿಭಟನೆಯನ್ನು ತೀವ್ರವಾಗಿಸಿತು. ಈ ಹಗರಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವನ್ನು ವಿರೋಧಿಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮ ಆಯೋಜಿಸಿದೆವು. ಶಿವಾನಂದ ಸರ್ಕಲ್‌ ಬಳಿ ಹತ್ತೂವರೆಗೆ ಸಭೆ ಸೇರಿ ಮುಖ್ಯಮಂತ್ರಿಯ ಮನೆಗೆ ಜಾಥಾ ಹೊರಡುವುದು ಎಂದು ತೀರ್ಮಾನಿಸಲಾಯಿತು. ಮಾಧ್ಯಮದವರಿಗೆಲ್ಲ ಹನ್ನೊಂದು ಗಂಟೆಗೆ ಎಂದು ತಿಳಿಸಿದ್ದೆವು. ನಾವೊಂದಷ್ಟು ಜನ ಹತ್ತಕ್ಕೆಲ್ಲ ಶಿವಾನಂದ ಸರ್ಕಲ್‌ನ ಪಕ್ಕದ ರಸ್ತೆಯಲ್ಲಿ ಬ್ಯಾನರ್, ಘೋಷಣಾ ಪತ್ರ ಇತ್ಯಾದಿಗಳನ್ನು ಸಿದ್ದಪಡಿಸಿಕೊಳ್ಳುತ್ತಿದ್ದೆವು. ಹತ್ತೂವರೆ ಸುಮಾರಿಗೆ ಹತ್ತಿಪ್ಪತ್ತು ಜನ ಶಿವಾನಂದ ಸರ್ಕಲ್‌ಗೆ ಬಂದರು. ಆಗ ಎಲ್ಲಿದ್ದರೋ ನೂರಾರು ಪೋಲಿಸರು ಬಂದು ಅಲ್ಲಿ ಶಾಂತಿಯುತವಾಗಿ ನಿಂತಿದ್ದ ಎಲ್ಲರನ್ನೂ ಬಲವಂತವಾಗಿ ಪೋಲಿಸ್ ವ್ಯಾನಿಗೆ ತಳ್ಳಿದರು. ನಾನು ನನ್ನ ಮಕ್ಕಳಿಬ್ಬರ ಜೊತೆ ಅಲ್ಲಿದ್ದೆ. ಮಕ್ಕಳೂ ನನ್ನ ಜೊತೆ ಪೋಲಿಸ್ ವ್ಯಾನ್ ಹತ್ತಿದರು. ಸುಮಾರು ಮೂರು ವಾಹನಗಳಲ್ಲಿ 60-70 ಜನರನ್ನು ಬಂಧಿಸಿ ಆಡುಗೋಡಿಯ ಪೋಲಿಸ್ ಶೆಡ್ ಒಂದಕ್ಕೆ ಕರೆದುಕೊಂಡು ಬಂದರು. ಪೋಲಿಸರೇ ಮಧ್ಯಾಹ್ನದ ಚಿತ್ರಾನ್ನ ಕೊಟ್ಟರು. ಅಂದು ಬಂಧನಕ್ಕೊಳಗಾದವರಲ್ಲಿ ಲೋಕಸತ್ತಾ ಪಕ್ಷ ಕಾರ್ಯಕರ್ತರು ಮತ್ತು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಸಮಸಂಖ್ಯೆಯಲ್ಲಿದ್ದರು. ನಮಗೆ ಪಾಠ ಕಲಿಸುವ ತೀರ್ಮಾನ ಮಾಡಿದ್ದ ಪೋಲಿಸರು ಸಂಜೆ ಆರು ಗಂಟೆ ಆದರೂ ಬಿಡಲಿಲ್ಲ. ಆದಷ್ಟು ಬೇಗ ನಮ್ಮನ್ನು ಬಿಡುಗಡೆ ಮಾಡಲಿಲ್ಲವಾದರೆ ನಾವು ಇಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಮತ್ತು ಇಲ್ಲಿಂದ ಕದಲುವುದಿಲ್ಲ ಎಂದು ಕಠಿಣನಿರ್ಧಾರದ ಮಾತುಗಳನ್ನು ಹೇಳಿದಾಗ ಕೂಡಲೆ ಪೋಲಿಸರು ಶಿವಾನಂದ ಸರ್ಕಲ್‌ಗೆ ವಾಪಸು ಕರೆತಂದು ಬಿಟ್ಟರು.

ಆಗಲೂ ಸರ್ಕಾರದ ಯಾವೊಂದು ಅಂಗವೂ ಕದಲಿದ ಲಕ್ಷಣ ಕಾಣಲಿಲ್ಲ.

ನಂತರದ ಹೋರಾಟದ ಮಾರ್ಗವಾಗಿ ಲೋಕಸತ್ತಾ ಪಕ್ಷ ಮೂರು ದಿನಗಳ ಕಾಲದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮ ಆಯೋಜಿಸಿತು. kpsc-hunger-strike-hiremathಆನಂದರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಯ ಬಳಿ ಡಿಸೆಂಬರ್ 28, 2013 ರ ಶನಿವಾರದಂದು ಉಪವಾಸ ಸತ್ಯಾಗ್ರಹ ಆರಂಭವಾಯಿತು. ನನ್ನನ್ನೂ ಒಳಗೊಂಡಂತೆ ಆರೇಳು ಜನ ಉಪವಾಸ ಕುಳಿತೆವು. ರಾಜ್ಯದ ಅನೇಕ ಕಡೆಗಳಿಂದ ಜನ ಬಂದರು. ಎರಡು ರಾತ್ರಿ, ಮೂರು ದಿನಗಳ, ಅಹೋರಾತ್ರಿ ಉಪವಾಸ ಸತ್ಯಾಗ್ರಹ ಅದು. ರಾತ್ರಿ ಹೊತ್ತು ಮರಗಟ್ಟಿಸುವ ಚಳಿಗಾಲ ಅದು. ಸತ್ಯಾಗ್ರಹಿಗಳಲ್ಲಿ ಬಹುತೇಕರಿಗೆ ಅದು ಮೊದಲ ಸತ್ಯಾಗ್ರಹ. ಎರಡನೆ ದಿನದ ಅಂತ್ಯಕ್ಕೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಪೋಲಿಸರು ಹೇಳಿದರು. ಆದರೆ ಅದೊಂದು ದೊಡ್ಡ ಅಧಿಕಪ್ರಸಂಗ ಮತ್ತು ನಿರರ್ಥಕ ಕಲಾಪವಾಯಿತು. ಮೂರನೆಯ ದಿನದ ಅಂತ್ಯಕ್ಕೆ ಎಸ್.ಆರ್.ಹಿರೇಮಠರು ಆಗಮಿಸಿ ಹಲವು ತಾಸುಗಳನ್ನು ನಿರಶನದಾರರೊಂದಿಗೆ ಕಳೆದು, ಉಪವಾಸ ಮಾಡುತ್ತಿದ್ದವರಿಗೆ ಹಣ್ಣಿನ ರಸ ಕುಡಿಸಿ, ಸತ್ಯಾಗ್ರಹ ಅಂತ್ಯಗೊಳಿಸಲು ಹೇಳಿದರು. ಅಂದು ರಾತ್ರಿ ಕೆಲವು ಚಾನಲ್‌ಗಳಲ್ಲಿ ಒಳ್ಳೆಯ ಚರ್ಚೆಗಳಾದವು. ಎಸ್.ಆರ್.ಹಿರೇಮಠರು ಮತ್ತು ಎಚ್.ಎಸ್.ದೊರೆಸ್ವಾಮಿಯವರು ಈ ಹೋರಾಟವನ್ನು ಬೆಂಬಲಿಸಿದರು.

ಲೋಕಸತ್ತಾ ಪಕ್ಷದ ಕಾರಣದಿಂದಾಗಿ ಈ ವಿಚಾರ ರಾಜ್ಯದ ಬಹುತೇಕ ಕಡೆ ಮತ್ತೊಮ್ಮೆ, ಮಗದೊಮ್ಮೆ ಚರ್ಚೆಯಾಯಿತು. KPSC-loksatta-met-governorಒಮ್ಮೆ ಧಾರವಾಡಕ್ಕೂ ಹೋಗಿ ಅಲ್ಲಿ ಜಿಲ್ಲಾಧಿಕಾರಿಯ ಕಛೇರಿ ಮುಂದೆ ಧರಣಿ ಕುಳಿತು, ಹೋರಾಟವನ್ನು ಅಲ್ಲಿಗೂ ವಿಸ್ತರಿಸುವ ಪ್ರಯತ್ನ ಆಯಿತು. ನಿಯೋಗವೊಂದು ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿತು. ಗೋನಾಳ್ ಭೀಮಪ್ಪರ ಮನೆಯ ತನಕ ಬೈಕ್ ರ್ಯಾಲಿ ಮಾಡಿ, ಧರಣಿ ಮಾಡಿ, ಘೋಷಣೆ ಕೂಗಿ ಬಂದೆವು. ಮಾಧ್ಯಮಗಳು ಇವೆಲ್ಲವನ್ನೂ ವರದಿ ಮಾಡುತ್ತ ಬಂದವು.

ಈ ಮಧ್ಯೆ ಸರ್ಕಾರ ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಿತು. ಅವರ ಅಭಿಪ್ರಾಯದ ಆಧಾರದ ಮೇಲೆ ಮರುಮೌಲ್ಯಮಾಪನ ಮತ್ತು ಮರುಸಂದರ್ಶನ ಮಾಡುವಂತೆ ಸರ್ಕಾರ ಕೆಪಿಎಸ್‍ಸಿಗೆ ಪತ್ರ ಬರೆಯಿತು. ಕೆಪಿಎಸ್‍ಸಿಯ ಸದಸ್ಯರು ಆ ಮನವಿಯನ್ನು ಕಸದ ಬುಟ್ಟಿಗೆ ಎಸೆದರು.

ಅದಾದ ಕೆಲವು ವಾರಗಳ ನಂತರ ನಾನು ಆಮ್ ಆದ್ಮಿ ಪಕ್ಷ ಸೇರಿದೆ. ಈ ಮಧ್ಯೆ ಸಂತ್ರಸ್ತ ಅಭ್ಯರ್ಥಿಗಳು ಹೋರಾಟ ಮಾಡುತ್ತಲೇ ಇದ್ದರು. ಮಂತ್ರಿಗಳನ್ನು ಕಾಣುವುದು, ಅಧಿಕಾರಿಗಳನ್ನು ಭೇಟಿ ಮಾಡುವುದು, ಸಭೆಗಳನ್ನು ಏರ್ಪಡಿಸುವುದು, ಇತ್ಯಾದಿ. ವಿಜಯನಗರದಲ್ಲಿ ನಡೆದ ಒಂದು ಸಬೆಯಲ್ಲಿ ಇಡೀ ಆಡಿಟೋರಿಯಮ್ ತುಂಬಿತ್ತು. ದೊರೆಸ್ವಾಮಿ, ಹಿರೇಮಠ್, ರವೀಂದ್ರ ಭಟ್ಟ, ಲೋಕಸತ್ತಾದ ದೀಪಕ್, ನಾನು, ಮತ್ತಿತರರು ಅಲ್ಲಿ ಮಾತನಾಡಿ ಅಕ್ರಮದ ವಿರುದ್ಧ ಗಟ್ಟಿ ಧನಿ ಎತ್ತಿದರು.

ಈ ಮಧ್ಯೆ, ಸಿಐಡಿಯ ಮೇಲೆ ಅಂತಿಮ ವರದಿ ಸಲ್ಲಿಸದಂತೆ ಮತ್ತು ನಿಧಾನಗೊಳಿಸುವಂತೆ ಒತ್ತಡಗಳಿವೆ ಎಂದು ನಮಗೆ ಗೊತ್ತಾಯಿತು. ಆಮ್ ಆದ್ಮಿ ಪಕ್ಷದಿಂದ ಪತ್ರಿಕಾಗೋಷ್ಟಿ ಕರೆದು ನಾವು ಅದನ್ನು ಖಂಡಿಸಿದೆವು. ಕೆಪಿಎಸ್‍‌ಸಿಯಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿದ್ದ ಅಕ್ರಮಗಳ ಬಗ್ಗೆಯೂ ನಾವೊಂದಷ್ಟು ಜನ ಧ್ವನಿಯೆತ್ತುತ್ತಲೇ ಬಂದಿದ್ದೆವು. ಹಲವು ಪತ್ರಿಕಾಗೋಷ್ಟಿಗಳಾದವು. ಆಗಾಗ ಹಳಬರು ಹೊಸಬರು ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದರು. ಆಮ್ ಆದ್ಮಿ ಪಕ್ಷದಿಂದ ಸಾಧ್ಯವಾದಾಗಲೆಲ್ಲ ನಾವೂ ಜೊತೆಯಾಗಿ ಧ್ವನಿಗೂಡಿಸುತ್ತಿದ್ದೆವು. ಲೋಕಸತ್ತಾ ಪಕ್ಷದ ಕಾರ್ಯದರ್ಶಿ ದೀಪಕ್ ನಾಗರಾಜರೂ ದಿಟ್ಟವಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳನ್ನು ಬೆಂಬಲಿಸುತ್ತ, ಅವರ ಹೋರಾಟದಲ್ಲಿ ಎಂದಿಗೂ ಜೊತೆಯಾಗಿಯೇ ಇದ್ದರು. ಅಂತಿಮವಾಗಿ ಸಿಐಡಿ ಸಹ 10500 ಪುಟಗಳ ಚಾರ್ಚ್‌ಶೀಟ್ ಸಹ ಹಾಕಿತು. ಮಂಗಳಾ ಶ್ರೀಧರ್ ವಜಾ ಆದರು. ಕೆಪಿಎಸ್‍‌ಸಿ ತನ್ನೆಲ್ಲ ಅಹಂಕಾರವನ್ನು ಒಟ್ಟುಗೂಡಿಸಿಕೊಂಡು ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆಗ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳು ಇನ್ನಷ್ಟು ಚುರುಕಾದರು. ಆ ಅಭ್ಯರ್ಥಿಗಳೂ ಉಪವಾಸ, ಧರಣಿ ಕೈಗೊಂಡು ಅವರೂ ಸರ್ಕಾರದ ಮೇಲೆ ಒತ್ತಡ ತರಲಾರಂಭಿಸಿದರು. ಸರ್ಕಾರದ ಕೆಲವು ಪ್ರಭಾವಿ ಮಂತ್ರಿಗಳೂ ಅವರ ಪರ ಇದ್ದರು. ಧರಣಿ ಸ್ಥಳಕ್ಕೂ ಬಂದು ಬೆಂಬಲ ಕೊಟ್ಟು ಹೋದರು.  ಪಕ್ಷಾತೀತವಾಗಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ನ ಹತ್ತುಹಲವು ಭ್ರಷ್ಟ ರಾಜಕಾರಣಿಗಳು ಅವರ ಬಳಿ ಹೋಗಿ ಕಳೆದ ಇಪ್ಪತ್ತು ದಿನಗಳಿಂದ ಅವರಿಗೆ ಬೆಂಬಲ ಕೊಡುತ್ತಾ ಬಂದರು.

ಪಟ್ಟಿಯನ್ನು ಒಪ್ಪಿಕೊಳ್ಳಬೇಕೊ, ತಿರಸ್ಕರಿಸಬೇಕೊ ಎನ್ನುವ ವಿಷಯಕ್ಕೆ ಸಚಿವಸಂಪುಟದ ಏಳೆಂಟು ಸಭೆಗಳಲ್ಲಿ ಚರ್ಚೆ ಆಗಿರಬಹುದು. kpsc-scandalಒಂದು ತೀರ್ಮಾನಕ್ಕೆ ಬರಲು ಸರ್ಕಾರಕ್ಕೆ ಆಗಲಿಲ್ಲ. ಈ ಮಧ್ಯೆ ಕೇಸು ಕೋರ್ಟ್ ಮೆಟ್ಟಿಲನ್ನೂ ಹತ್ತಿತು. ಅಂತಿಮವಾಗಿ ನೆನ್ನೆ ಸರ್ಕಾರ ತೀರ್ಮಾನ ಮಾಡಿತು.

ಲಂಚ ಕೊಡದೆ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ನೌಕರಿಗೆ ಸೇರಿಕೊಂಡ ಜನರೇ ಕೋಟಿಶತಕೋಟಿ ಭ್ರಷ್ಟಾಚಾರ ಮಾಡುವಾಗ, ಇನ್ನು ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಲಂಚ ಕೊಟ್ಟು ಕೆಲಸಕ್ಕೆ ಸೇರಿಕೊಳ್ಳುವವರು ಭ್ರಷ್ಟಾಚಾರ ಎಸಗದೆ ಪ್ರಾಮಾಣಿಕರಾಗಿರುತ್ತಾರೆ ಎಂದುಕೊಳ್ಳುವುದು ದಡ್ಡತನ. ಈ ಚಾರಿತ್ರಿಕ ನಿರ್ಧಾರದ ಮೂಲಕ ಸರ್ಕಾರ ಒಂದು precedent ಹಾಕಿಕೊಟ್ಟಿದೆ. ಇದೇ ರೀತಿಯಲ್ಲಿ ಎಲ್ಲಾ ಹಗರಣಗಳಲ್ಲೂ ಭ್ರಷ್ಟಾಚಾರ ವಿರೋಧಿ ನಿಲುವನ್ನು ಈ ಸರ್ಕಾರ ತೆಗೆದುಕೊಂಡು ಈ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲಿ ಎಂದು ಆಶಿಸುತ್ತೇನೆ, ಮತ್ತು ನೆನ್ನೆಯ ತೀರ್ಮಾನಕ್ಕೆ ಸರ್ಕಾರವನ್ನು ಅಭಿನಂದಿಸುತ್ತೇನೆ. ಹಾಗೆಯೇ, ಇಂತಹ ಬಹುದೊಡ್ದ ಹಗರಣವನ್ನು ಬಯಲಿಗೆಳೆಯಲು ಮತ್ತು ಕ್ರಮ ಕೈಗೊಳ್ಳಲು ಪ್ರಮುಖ ಕಾರಣರಾದ ಡಾ.ಮೈತ್ರಿ, ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ, ಅತ್ಯುತ್ತಮವಾದ ಪ್ರಾಮಾಣಿಕ ವರದಿ ಕೊಟ್ಟ ಸಿಐಡಿ ಇಲಾಖೆ, ಅದನ್ನು ಜನರ ಮುಂದೆ ಅನಾವರಣ ಮಾಡಿದ ಪ್ರಜಾವಾಣಿ ಮತ್ತು ರವೀಂದ್ರ ಭಟ್ಟ, ಹೋರಾಟ ಮಾಡಿದ ಅಭ್ಯರ್ಥಿಗಳು, ಬಿ.ಕೆ.ಚಂದ್ರಶೇಖರ್, ಲೋಕಸತ್ತಾ ಪಕ್ಷ, ಆಮ್ ಆದ್ಮಿ ಪಕ್ಷ, ಹಾಗೂ ಅಂತಿಮವಾಗಿ ಅನ್ಯಾಯದ ವಿರುದ್ಧ ನಿಲ್ಲಲು ಧೈರ್ಯ ಮಾಡಿದ ಸಿದ್ಧರಾಮಯ್ಯ ಮತ್ತವರ ಸಚಿವಸಂಪುಟಕ್ಕೆ ಅಭಿನಂದನೆಗಳು ಸಲ್ಲುತ್ತವೆ.

 

ನೋವು, ನರಳಾಟವಿಲ್ಲದ ಸಾವು ಕಾನೂನುಬದ್ಧಗೊಳ್ಳಬೇಕು

– ಆನಂದ ಪ್ರಸಾದ್

ಪ್ರತಿಯೊಬ್ಬ ಮಾನವನೂ ನೋವು, ನರಳಾಟವಿಲ್ಲದ ಸಾವು ಬರಲಿ ಎಂದು ಬಯಸುತ್ತಾನೆ. ಆದರೆ ವೃದ್ಧಾಪ್ಯದಲ್ಲಿ ಬಹುತೇಕ ಸಂದರ್ಭಗಳಲ್ಲಿ ನೋವು, ನರಳಾಟಗಳಿಂದ ಬಳಲಿ ಬಳಲಿ ಸಾಯುವಂಥ ವ್ಯವಸ್ಥೆ ನಮ್ಮ ಸಮಾಜದಲ್ಲಿರುವುದು ವಿಷಾದನೀಯ. ಪ್ರಜ್ಞಾಹೀನ ಸ್ಥಿತಿಗೆ ಹೋಗುವುದು (ಕೋಮಾ),ಹೃದಯ ಸ್ತಂಭನ, ಮೆದುಳಿನಲ್ಲಿ ತೀವ್ರ ರಕ್ತಸ್ರಾವಗಳಂಥ ಸಂದರ್ಭಗಳನ್ನು ಹೊರತುಪಡಿಸಿ ನರಳಾಟವಿಲ್ಲದ ಸಾವು ಬರುವುದಿಲ್ಲ. ಕೆಲವರಂತೂ ವೃದ್ಧಾಪ್ಯದಲ್ಲಿ ತಿಂಗಳುಗಟ್ಟಲೆ, ವರ್ಷಗಟ್ಟಲೆ ತಮ್ಮ ಮಲ, ಮೂತ್ರಗಳಲ್ಲಿ ಹೊರಳಾಡುತ್ತಾ, TIME-righttodieಹಾಸಿಗೆ ಹುಣ್ಣುಗಳಿಂದ ನರಳಾಡುತ್ತಾ ಬದುಕುವ ಜೀವಂತ ನರಕದ ಸ್ಥಿತಿಯಲ್ಲಿರುತ್ತಾರೆ. ಇಂಥವರು ವಿಷ ಕೊಟ್ಟೋ ಅಥವಾ ಇನ್ನಿತರ ವಿಧಾನಗಳ ಮೂಲಕ ತಮ್ಮನ್ನು ಕೊಲ್ಲಿ ಎಂದು ತಮ್ಮ ಮಕ್ಕಳಲ್ಲಿ ಹೇಳುತ್ತಿರುತ್ತಾರೆ. ಆದರೆ ಆ ರೀತಿ ಜೀವ ಕೊನೆಗೊಳಿಸುವುದು ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸಮ್ಮತವಲ್ಲದ್ದರಿಂದ ಅವರು ಕೂಡ ತಮ್ಮ ಹೆತ್ತವರ ನರಳಾಟವನ್ನು ನೋಡುತ್ತಾ ಅಸಹಾಯಕರಾಗಬೇಕಾಗುತ್ತದೆ. ಇಂಥ ಪರಿಸ್ಥಿತಿಯನ್ನು ಕೊನೆಗಾಣಿಸಿ ನೋವಿಲ್ಲದ ಸಾವನ್ನು ಪಡೆಯುವುದನ್ನು ಕಾನೂನುಬದ್ಧಗೊಳಿಸಿ ಯಾರು ನೋವು, ನರಳಾಟಗಳ ಜೀವಂತ ನರಕದಿಂದ ಮುಕ್ತಿ ಪಡೆಯಲು ಬಯಸುತ್ತಾರೋ ಅಂಥವರ ನೋವಿಗೆ ಸ್ಪಂದಿಸುವ ಸಾಮಾಜಿಕ ಹಾಗೂ ಕಾನೂನುಬದ್ಧ ಪರಿಸ್ಥಿತಿ ರೂಪುಗೊಳಿಸುವ ಅಗತ್ಯವಿದೆ.

ದಯಾಮರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಅಭಿಪ್ರಾಯ ಕೇಳಿರುವುದರಿಂದ ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೂ ಒಂದು ವೈಜ್ಞಾನಿಕ ಹಾಗೂ ಮಾನವೀಯ ತೀರ್ಮಾನಕ್ಕೆ ನಮ್ಮ ಸಮಾಜವು ಇನ್ನೂ ಬರಲಾಗಿಲ್ಲ. ಇದು ನಮ್ಮ ಸಮಾಜದಲ್ಲಿರುವ ಜಡತ್ವವನ್ನು ತೋರಿಸುತ್ತದೆ. ಕೆಲವರು ದಯಮರಣದ ಅವಕಾಶ ಕೊಟ್ಟರೆ ಹೆತ್ತವರ ಅಥವಾ ಬಂಧುಗಳ ಆಸ್ತಿಪಾಸ್ತಿ ಲಪಟಾಯಿಸಲು ಅದರ ದುರುಪಯೋಗ ಆಗಬಹುದು ಅಥವಾ ತಮ್ಮ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ದಾರಿಯಾಗಬಹುದು ಎಂದೂ, ಮಕ್ಕಳ ಮಲ, ಮೂತ್ರ ತೆಗೆದು ಶುಚಿಗೊಳಿಸಿ ಯಾವ ರೀತಿ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ಹೆತ್ತವರನ್ನೂ ನೋಡಿಕೊಳ್ಳಬೇಕೆಂದು, ಅವರು ನರಳಿ ನರಳಿ ಸಾಯುವುದೇ ಸರಿ ಎಂಬ ವಾದವನ್ನು ಪ್ರತಿಪಾದಿಸುತ್ತಾರೆ. mercy_killing-bangaloreಆದರೆ ಮಕ್ಕಳನ್ನು ಅವರ ಎಳೆಯ ವಯಸ್ಸಿನಲ್ಲಿ ನೋಡಿಕೊಳ್ಳುವುದಕ್ಕೂ, ಸಾವಿನಂಚಿಗೆ ಬಂದು ಗುಣವಾಗದ ರೋಗಗಳಿಂದ ಅಥವಾ ಸಹಜ ವೃದ್ಧಾಪ್ಯದ ಶಕ್ತಿಹೀನತೆಯಿಂದ ಮಲಗಿದಲ್ಲಿಯೇ ಮಲಗಿ ಅಲ್ಲಿಯೇ ಮಲಮೂತ್ರ ಮಾಡುವ ಹಿರಿಯರ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಎಳೆಯ ವಯಸ್ಸಿನ ಮಕ್ಕಳನ್ನು ಎತ್ತಿ ಅವರನ್ನು ಮಲಮೂತ್ರವನ್ನು ಶುಚಿಗೊಳಿಸುವುದು ಕಷ್ಟದ ಕೆಲಸವಲ್ಲ ಆದರೆ ವೃದ್ಧರನ್ನು ಆ ರೀತಿ ಎತ್ತಿ ಶುಚಿಗೊಳಿಸಲಾಗುವುದಿಲ್ಲ. ಅವರು ಮಲಗಿದ ಅಡಿಗೆ ಹಾಕಿದ ಬಟ್ಟೆಯನ್ನು ಆಗಾಗ ಬದಲಿಸುವುದಾಗಲೀ ಅಥವಾ ಅವರನ್ನು ಮಕ್ಕಳನ್ನು ಎತ್ತಿ ತೊಳೆದು ಶುಚಿಗೊಳಿಸುವಂತೆ ಎತ್ತಿ ಶುಚಿಗೊಳಿಸುವುದಾಗಲೀ, ಸ್ನಾನ ಮಾಡಿಸುವುದಾಗಲೀ ಸಾಧ್ಯವಾಗುವುದಿಲ್ಲ. ಹೀಗಾಗಿ ಮಲಗಿದಲ್ಲಿಯೇ ಮಲ, ಮೂತ್ರಾದಿಗಳನ್ನು ಮಾಡುವ ವೃದ್ಧರನ್ನು ಸಮರ್ಪಕವಾಗಿ ಶುಚಿಗೊಳಿಸಲಾಗದೆ ಅವರು ಅದೇ ಮಲ, ಮೂತ್ರಗಳಲ್ಲಿ ಹೊರಳಾಡುತ್ತಾ ಜೀವಂತ ನರಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ವೃದ್ಧಾಪ್ಯದಲ್ಲಿ ಉಂಟಾಗುವ ಎಲುಬಿನ ಸಂಧಿ ನೋವು ಮೊದಲಾದ ಕಾಯಿಲೆ ಇದ್ದವರನ್ನಂತೂ ಆಚೀಚೆ ಎತ್ತಿ ಮಲಗಿಸುವುದಾಗಲೀ, ಅವರ ಬಟ್ಟೆ ಬದಲಿಸುದಾಗಲೀ ಸಾಧ್ಯವಾಗುವುದಿಲ್ಲ, ಏಕೆಂದರೆ ಅವರನ್ನು ಎತ್ತಿದರೆ ಎಲುಬಿನ ಕೀಲುಗಳ ಅಸಾಧ್ಯ ನೋವು ಉಂಟಾಗಿ ಬೊಬ್ಬೆ ಹಾಕುತ್ತಾರೆ. ಎಳೆಯ ಮಕ್ಕಳಾದರೆ ಇಂಥ ನರಳಾಟವೇನೂ Euthanasia-Mercy-Killings-oಇರುವುದಿಲ್ಲ ಮತ್ತು ಅವರು ಭವಿಷ್ಯದಲ್ಲಿ ಬೆಳೆದು ದೊಡ್ದವರಾಗುವವರು. ಹೀಗಾಗಿ ಅವರ ಚಾಕರಿ ಮಾಡುವುದು ಯಾರಿಗೂ ಬೇಸರವೆನಿಸುವುದಿಲ್ಲ. ವೃದ್ಧರಲ್ಲಿಯಾದರೆ ಇಂಥ ಪರಿಸ್ಥಿತಿ ಇರುವುದಿಲ್ಲ. ಅವರು ದೈಹಿಕವಾಗಿ ಇನ್ನಷ್ಟು ದುರ್ಬಲಾರಾಗುತ್ತಾ ಹೋಗುವವರು, ತಮ್ಮ ಅಸಹಾಯಕ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲದವರು. ಹೀಗಾಗಿ ಅವರನ್ನು ನೋಡಿಕೊಳ್ಳುವ ಮಕ್ಕಳಿಗೂ ಕೂಡ ಇಂಥ ಪರಿಸ್ಥಿತಿ ಉಂಟಾದರೆ ಹೊರೆಯಾಗುವುದು ಸಹಜ. ಹೀಗಾಗಿ ಮಾನವ ಸಹಜವಾಗಿಯೇ ಇಂಥ ಸಂದರ್ಭಗಳಲ್ಲಿ ಮಕ್ಕಳು ಕೂಡ ಗೊಣಗುತ್ತಾ ಅನಿವಾರ್ಯತೆಯಿಂದ ಅವರ ಸೇವೆ ಮಾಡುತ್ತಾರೆಯೇ ವಿನಃ ಮನಃಪೂರ್ವಕವಾಗಿ ಮಾಡುವವರು ವಿರಳಾತಿವಿರಳವೆಂದೇ ಹೇಳಬಹುದು.

ಮಾನವನು ವೃದ್ಧಾಪ್ಯದಿಂದ ದೈಹಿಕವಾಗಿ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿದ್ದು ತನ್ನ ಮಲ, ಮೂತ್ರಾದಿ ವಿಸರ್ಜನೆಗೆ ಹೋಗಲು ಅಶಕ್ತನಾದ ಸಂದರ್ಭದಲ್ಲಿ ಆತನು ಬಯಸಿದಲ್ಲಿ ನೋವಿಲ್ಲದ ಸಾವನ್ನು ಬರಿಸುವ ವೈಜ್ಞಾನಿಕ ವ್ಯವಸ್ಥೆಯೊಂದನ್ನು deathರೂಪಿಸುವುದು ಹೆಚ್ಚು ಮಾನವೀಯವಾದುದು. ಪ್ರಜ್ಞೆ ತಪ್ಪಿಸುವ ಔಷಧಿಯನ್ನು ಮೊದಲು ನೀಡಿ ಪ್ರಜ್ಞೆ ತಪ್ಪಿದ ನಂತರ ಶೀಘ್ರ ಸಾವು ಸಂಭವಿಸುವ ಸಯನೈಡ್ನಂಥ ವಿಷದ ಇಂಜೆಕ್ಷನ್ ನೀಡುವುದರಿಂದ ಇಂಥ ವ್ಯವಸ್ಥೆಯೊಂದನ್ನು ಕಾನೂನುಬದ್ಧವಾಗಿ ರೂಪಿಸುವುದು ಸಾಧ್ಯವಾಗಬೇಕು. ಇದರಿಂದ ಮನುಷ್ಯನು ವೃದ್ಧಾಪ್ಯದಲ್ಲಿ ನರಳಿ ನರಳಿ, ಮಲಮೂತ್ರಾದಿಗಳಲ್ಲಿ ಹೊರಳಾಡುತ್ತಾ, ಮಲಗಿದಲ್ಲಿಯೇ ಮಲಗಿ ಹಾಸಿಗೆ ಹುಣ್ಣು, ಹುಳುಗಳಾಗಿ ನರಕ ಯಾತನೆ ಪಡುವುದನ್ನು ತಪ್ಪಿಸುವುದು ಸಾಧ್ಯ. ಇದರಿಂದ ಸಾವಿನ ಯಾತನೆ, ಭೀತಿ ಇಲ್ಲದೆ ಅಸಹನೀಯ ಜೀವನವನ್ನು ಕೊನೆಗಾಣಿಸುವುದು ವೈಜ್ಞಾನಿಕವಾಗಿ ಸಾಧ್ಯವಾಗುತ್ತದೆ ಮತ್ತು ನರಳಿ ನರಳಿ ಸಾಯುವುದಕ್ಕಿಂತ ಹೆಚ್ಚು ಉತ್ತಮವಾದದ್ದು. ಮನುಷ್ಯನು ಹೇಗಿದ್ದರೂ ಒಂದು ದಿನ ಸಾಯಲೇಬೇಕಾಗಿರುವುದು ಪ್ರಕೃತಿ ನಿಯಮ. ಹೀಗಾಗಿ ವೃದ್ಧಾಪ್ಯದಲ್ಲಿ ನರಳಿ ನರಳಿ ಕೆಲವು ದಿನಗಳೋ, ತಿಂಗಳುಗಳೋ ಅಥವಾ ವರ್ಷಗಳೋ ಹೆಚ್ಚು ಬದುಕಿ ಸಾಧಿಸುವುದೇನೂ ಇಲ್ಲದಿರುವುದರಿಂದ ತನ್ನ ಜೀವನದ ಕೊನೆಯನ್ನು ನೋವುರಹಿತವಾಗಿ ಪಡೆಯುವುದು ಮೂಲಭೂತ ಹಕ್ಕಾಗಬೇಕು. ಅಂಥ ಮಾನವೀಯ ಕಾಳಜಿ ನಮ್ಮ ಸಮಾಜ ಹಾಗೂ ಕಾನೂನುಗಳಲ್ಲಿ ಬೆಳೆಸಬೇಕಾದ ಅಗತ್ಯ ಇದೆ.

ಮಾನವನ ನೋವುರಹಿತ ಸಾವು ಸಾಧ್ಯವಾಗಿಸುವುದನ್ನು ತಡೆಯುವ ಕೆಲವು ಸಾಮಾಜಿಕ ನಂಬಿಕೆಗಳು mercy-killing-hospitalನಮ್ಮಲ್ಲಿ ಕೆಲಸಮಾಡುತ್ತಿವೆ. ಅವುಗಳಲ್ಲಿ ಪ್ರಧಾನವಾದುದು ಪುನರ್ಜನ್ಮ ಹಾಗೂ ಮುಕ್ತಿ ಎಂಬ ನಂಬಿಕೆಗಳಾಗಿವೆ. ಮಾನವನು ವೃದ್ಧಾಪ್ಯದಲ್ಲಿ ನರಳಿ ನರಳಿ ಸಾಯುವುದು ಅನಿವಾರ್ಯ, ಮಾನವನು ವೃದ್ಧಾಪ್ಯದಲ್ಲಿ ನರಳಿ ನರಳಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಆ ವ್ಯಕ್ತಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪವೇ ಕಾರಣ ಎಂಬ ನಂಬಿಕೆ ಸಮಾಜದಲ್ಲಿ ಇದೆ. ಹೀಗಾಗಿ ನೋವುರಹಿತ ಸಾವನ್ನು ಪಡೆದರೆ ಅದರಿಂದ ಆ ವ್ಯಕ್ತಿಗೆ ಮುಕ್ತಿ ಸಿಗುವುದಿಲ್ಲ ಏಕೆಂದರೆ ಆ ವ್ಯಕ್ತಿಯ ಸಂಚಿತ ಪಾಪಕರ್ಮಗಳ ಹೊರೆ ಹಾಗೇ ಇರುತ್ತದೆ ಎಂಬ ನಂಬಿಕೆಗಳು ದಯಾಮರಣದ ವಿರುದ್ಧವಾಗಿ ಕೆಲಸ ಮಾಡುತ್ತವೆ. ಬಹುಶಃ ಇಂಥ ತಲೆಬುಡವಿಲ್ಲದ ನಂಬಿಕೆಗಳು ನೋವುರಹಿತ ಸಾವಿನ ಮಾನವೀಯ ವಿಧಾನ ನಮ್ಮ ಸಮಾಜದಲ್ಲಿ ಬೆಳೆಯದಂತೆ ತಡೆಯುತ್ತಿವೆ. ಹೀಗಾಗಿ ಈ ಬಗ್ಗೆ ವೈಜ್ಞಾನಿಕ ತಿಳುವಳಿಕೆ ರೂಪಿಸಬೇಕಾದ ಅಗತ್ಯವಿದೆ.

ಯಾವುದೇ ಕಾನೂನು ರೂಪಿಸಿದರೂ ಅದು ದುರುಪಯೋಗ ಆಗುವ ಪರಿಸ್ಥಿತಿ ಇರುತ್ತದೆ. ಹಾಗೆಂದು ಕಾನೂನನ್ನೇ ರೂಪಿಸದೆ ಇರುವುದು ಸಮಂಜಸವಲ್ಲ. ಹೀಗಾಗಿ ದಯಮರಣದ ಬಗ್ಗೆ ಮಾನವೀಯವಾದ, ಸಾಧ್ಯವಾದಷ್ಟು ದುರುಪಯೋಗ ತಡೆಗಟ್ಟುವ ವಿಧಾನಗಳನ್ನು ರೂಪಿಸಿ ಕಾನೂನುಬದ್ಧ ದಯಾಮರಣ ಇಚ್ಛಿಸಿದವರಿಗೆ ಅವರ ಪರಿಸ್ಥಿತಿಯನ್ನು ನೋಡಿಕೊಂಡು ಅದನ್ನು ನೀಡುವ ಒಂದು ಮಾನವೀಯ ವ್ಯವಸ್ಥೆಯ ಅಗತ್ಯ ಇದೆ. ವೃದ್ಧಾಪ್ಯದಲ್ಲಿ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿ ತಲುಪಿದಲ್ಲಿ ತನ್ನನ್ನು ದಯಾಮರಣಕ್ಕೆ ಒಳಪಡಿಸುವ ಕುರಿತು ಮೊದಲೇ ವಿಲ್ ಬರೆದಿಡುವ ಅವಕಾಶ mercy-killing_legalಕಾನೂನಿನಲ್ಲಿ ನೀಡಬೇಕು. ನರಳಾಟ, ಯಾತನೆಯ ಅನುಭವ ಇಲ್ಲದೆ ವೃದ್ಧಾಪ್ಯದಲ್ಲಿ ಘನತೆಯಿಂದ ಸಾಯುವುದು ಮಾನವನ ಮೂಲಭೂತ ಹಕ್ಕಾಗಬೇಕಾಗಿದೆ ಹಾಗೂ ಯಾರು ನೋವು, ನರಳಾಟ ಇಲ್ಲದ ಸಾವನ್ನು ಬಯಸುತ್ತಾರೋ ಅವರಿಗೆ ಅದನ್ನು ವೈಜ್ಞಾನಿಕ ರೀತಿಯಲ್ಲಿ ನೀಡುವ ವ್ಯವಸ್ಥೆ ಸಮಾಜದಲ್ಲಿ ಬೆಳೆಯಬೇಕಾಗಿದೆ.

‘ದೇವರು ಸತ್ತಿದ್ದಾನೆ’ ಎಂದವನ ಧರ್ಮ ಮತ್ತು ರಾಜಕಾರಣ


– ಡಾ.ಎಸ್.ಬಿ. ಜೋಗುರ


ಜಗತ್ತಿನಲ್ಲಿ ಅತಿ ಹೆಚ್ಚು ಮತ್ತೆ ಮತ್ತೆ ಓದಿಸಿಕೊಂಡ ತತ್ವಜ್ಞಾನಿಗಳ ಸಾಲಲ್ಲಿ ಜರ್ಮನ್ ದೇಶದ ಫ಼್ರೆಡರಿಕ್ ನೀಷೇಯೂ ಒಬ್ಬ [1844-1900]. ‘ದೇವರು ಸತ್ತಿದ್ದಾನೆ’ ಎಂದು ಕೈಯಲ್ಲಿ ಮೇಣದಬತ್ತಿ ಹಿಡಿದು ಜರ್ಮನಿಯ ಗಲ್ಲಿ ಗಲ್ಲಿ ಸುತ್ತಿದ ನೀಷೇ ನನ್ನು ಅವನ ಆ ಹೇಳಿಕೆಯ ಮೂಲಕವೇ ಗ್ರಹಿಸಬೇಕಿಲ್ಲ. ಆ ಮೂಲಕವೇ ಅವನನ್ನು ಒಬ್ಬ ನಾಸ್ತಿಕನೆಂದು ಖಡಾಖಂಡಿತವಾಗಿ ಪರಿಗಣಿಸಬೇಕಿಲ್ಲ. ನೀಷೆ ಆಧ್ಯಾತ್ಮಿಕ ಜಗತ್ತಿನ ಬಗೆಗೂ ಅಪಾರವಾದ ಗೌರವವುಳ್ಳ ವ್ಯಕ್ತಿಯಾಗಿದ್ದ. ದೇವರು, ಧರ್ಮ ಸತ್ಯವೋ.. ಸುಳ್ಳೋ ಅದು ಬೇರೆ ಮಾತು, ಆದರೆ ಜೀವನ ಬೆಳಗಿಸಬಹುದಾದ ಸತ್ವ ಅಲ್ಲಿದೆ ಎಂದಿರುವ ನೀಷೇ ಅದು ಹೇಗೆ ನಾಸ್ತಿಕವಾದಿಯಾಗಿರಬಲ್ಲ nietzsche-godisdeadಎನ್ನುವದೇ ಬಹು ದೊಡ್ಡ ಜಿಜ್ಞಾಸೆ. ಧಾರ್ಮಿಕ ವಿಷಯದಂತೆಯೇ ರಾಜಕೀಯ ವಿಷಯವಾಗಿಯೂ ಆತ ಯಾವುದೇ ಒಂದು ಪಕ್ಷವನ್ನು ಒಮ್ಮತದಿಂದ ಒಪ್ಪಿಕೊಂಡು ಬೆಂಬಲಿಸಿದವನಲ್ಲ. ಹಳೆಯ ಯುಗದ ದೇವರ ಬಗೆಗಿನ ಕಠೋರ ಹೇಳಿಕೆಗಿಂತಲೂ ಆತ ಹಳೆಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಮಾತನಾಡಿದ್ದು ತೀರಾ ಮೃದು ಧೋರಣೆಯದಾಗಿರಲಿಲ್ಲ. ಬದಲಾವಣೆ ಬಯಸದ ಹಳೆಯ ಕಾಲದ ಪ್ರಜಾಪ್ರಭುತ್ವದ ಬಗ್ಗೆ ತಾತ್ಸಾರವಿರುವಂತೆ ಪ್ರತಿಕ್ರಿಯಿಸಿದ ನೀಷೇ ವ್ಯಕ್ತಿಯೊಬ್ಬ ಬಲಾಡ್ಯನಾಗಿ ಕೊಬ್ಬುವಂತೆ ಮಾಡುವಲ್ಲಿ ಈ ಬಗೆಯ ಪ್ರಜಾಪ್ರಭುತ್ವ ಕಾರಣವಾಗುತ್ತದೆ ಎನ್ನುತ್ತಿದ್ದ. ಹೇಳಿ ಕೇಳಿ ನೀಷೇ ಒಬ್ಬ ಬಹುದೊಡ್ಡ ತತ್ವಜ್ಞಾನಿ ಹೀಗಾಗಿ ಅವನ ಮಾತಿನಲ್ಲಿ ಪ್ರತಿಮೆ, ಸಂಕೇತ ಮತ್ತು ತಾತ್ವಿಕತೆಗಳು ಅಪಾರವಾಗಿದ್ದ ಕಾರಣ ಆತ ದೇವರು ಸತ್ತಿದ್ದಾನೆ ಎನ್ನುವದನ್ನು ವಾಚ್ಯವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯುರೋಪಿನಲ್ಲಿ ಹಳೆಯ ಜಿಡ್ಡುಗಟ್ಟಿದ ಯುಗವೊಂದು ಮುಕ್ತಾಯದ ಹಂತದಲ್ಲಿದೆ, ಹೊಸ ಯುಗದ ಆಶಾದಾಯಕ ಆರಂಭವಿದೆ. ಹಳೆಯ ಯುಗದ ದೇವರು ಸತ್ತು ಹೊಸ ಯುಗದಲ್ಲಿ ದೇವರ ಸ್ಥಾನದಲ್ಲಿ ಧರಮನಿರಪೇಕ್ಷ ತತ್ವ ಪ್ರತಿಷ್ಠಾಪನೆಯಾಗುವ ಜೊತೆಗೆ ಅದೇ ಹೊಸ ಯುಗವನ್ನು ಮುನ್ನಡೆಸುವ ಚಾಲಕ ಶಕ್ತಿಯಾಗಲಿದೆ ಎನ್ನುವುದು ನೀಷೇ ಅಭಿಪ್ರಾಯ. ದೇವರು ಸತ್ತಿದ್ದಾನೆ ಎನ್ನುವದು ಹಳೆಯ ಗೊಡ್ಡು ಧಾರ್ಮಿಕ ಯುಗದ ರೋಗಗ್ರಸ್ಥ ಸ್ಥಿತಿಯ ಸಂಕೇತವೂ ಹೌದು.

ನೀಷೇಯ ಧಾರ್ಮಿಕ ಮನಸು ದೇವರ ಪ್ರತಿಷ್ಠಾಪನೆಗಿಂತಲೂ ಮುಖ್ಯವಾಗಿ ಮಾನವೀತೆಯ ಅಸ್ಥಿತ್ವದ ಬಗೆಗಿನ ಹಂಬಲದ ಕುರಿತಾಗಿತ್ತು. nietzsche-god-is-a-clumsy-ideaನೀಷೇ ಖಂಡಿತ ಓರ್ವ ಧಾರ್ಮಿಕ ಜೀವಿಯಾಗಿದ್ದ ಎನ್ನುವದನ್ನು ಜರ್ಮನಿಯ ತತ್ವಜ್ಞಾನಿ ಮಾರ್ಟಿನ್ ಹೆಡೆಗ್ಗೆರ್ [1886-1975] ಹೀಗೆ ಹೇಳುತ್ತಾರೆ: ‘ದೇವರನ್ನು ವಿಶಿಷ್ಟವಾಗಿ ಗ್ರಹಿಸಿದ ಕೊನೆಯ ಜರ್ಮನ್ ತತ್ವಜ್ಞಾನಿ’. ಬ್ರಿಟಿಷ ಪ್ರಬಂಧಕಾರ ಎರಿಕ್ ಹೆಲ್ಲರ್ [1911-1990] ‘ನೀಷೆಯ ಆತ್ಮ, ಮನಸು ಉದಾರವಾದ ಧಾರ್ಮಿಕ ಸ್ವರೂಪವನ್ನು ಹೊಂದಿತ್ತು’ ಎಂದಿರುವರು. ಇದು ಬೇರೆ ಚಿಂತಕರು ನೀಷೇ ಮತ್ತು ಆತನ ಧಾರ್ಮಿಕ ಮನೋಭಾವನೆ ಕುರಿತು ಆಡಿದ ಮಾತಾಯಿತು. ಖುದ್ದಾಗಿ ನೀಷೇ ತನ್ನ ಧಾರ್ಮಿಕ ಆಸಕ್ತಿಯ ಬಗ್ಗೆ ಮಾತನಾಡುತ್ತಾ ತಾನು ಗ್ರೀಕ್ ದೇವತೆ ಡಯೋನಿಸಸ್ ನ ಭಕ್ತನಾಗಿದ್ದೆ ಎಂದಿರುವನು. ಅವನು ದೇವರ ಅಸ್ಥಿತ್ವವನ್ನು ಕುರಿತು ಪ್ರತಿಮೆ ಮತ್ತು ಸಾಂಕೇತಿಕವಾಗಿ ಮಾತನಾಡಿದ್ದರೂ ಮುಕ್ತಿಗಾಗಿ ಹೊಸ ಬಗೆಯ ದೇವಶಾಸ್ತ್ರದ ಅಳವಡಿಕೆಯ ಅಗತ್ಯವನ್ನು ಕುರಿತು ಮಾತನಾಡಿರುವನು. ಧಾರ್ಮಿಕವಾಗಿ ಜಡತ್ವದ ಮನ:ಸ್ಥಿತಿಯನ್ನು ನೀಷೇ ಪುರಸ್ಕರಿಸಲಿಲ್ಲ ಬದಲಾಗಿ ಅತ್ಯಂತ ಮುಕ್ತವಾದ ಮಾರ್ಗವಾಗಿ ಅದು ತೆರೆದುಕೊಳ್ಳುವಂತಿರಬೇಕು ಆ ಮೂಲಕ ಮಾನವೀಯತೆಯ ಬಗೆಗಿನ ಕಾಳಜಿ ದಟ್ಟವಾಗಬೇಕು ಎನ್ನುವುದು ನೀಷೇಯ ತುಡಿತವಾಗಿತ್ತು. ದೇವರು ಸತ್ತಿದ್ದಾನೆ ಎನ್ನುವುದು ಒಂದು ಕಾಲಘಟ್ಟದ ಧಾರ್ಮಿಕ ಜಡತ್ವದ ಪ್ರತೀಕ. ಹಳೆಯ ದೇವರ ಸಾವು ಹೊಸ ಬಗೆಯ ಆಲೋಚನೆ ಮತ್ತು ಮುಕ್ತತೆಗೆ ಅವಕಾಶ ಮಾಡಿಕೊಡುವುದು. ಜರ್ಮನಿಯ ಬಾನ್ ವಿಶ್ವವಿದ್ಯಾನಿಲಯದಲ್ಲಿ ಆಳವಾಗಿ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದ ಆತ ದೇವರಿಂದ ವಿಚಲಿತವಾಗುವ ಇಲ್ಲವೇ ಬಿಡುಗಡೆ ಹೊಂದುವ ಮೂಲಕ ಮಾನವೀಯತೆಯನ್ನು ಬಲಗೊಳಿಸುವ ಬಗ್ಗೆ ಆಲೋಚಿಸಿದ. ಜೊತೆಗೆ ದೇವರು ಇಲ್ಲವೇ ಧರ್ಮ ಎನ್ನುವ ಪದವನ್ನು ಆತ ಪ್ರಗತಿಪರ ದಿಕ್ಕಿನೆಡೆಗಿನ ನಡಿಗೆ ಎನ್ನುವ ಅರ್ಥದಲ್ಲಿ ಆತ ಬಳಸಿರುವದಿದೆ.

ನೀಷೇಯ ಹೊಸ ದೇವರು ಮತ್ತು ಧರ್ಮದ ಬಗೆಗಿನ ಆಲೋಚನೆಯ ಪರಿಣಾಮವಾಗಿಯೇ ಸಮತಾವಾದ, ರಾಷ್ಟ್ರೀಯವಾದದಂತಹ friedrich-nietzsche-the-individualವಾದಗಳು ಹುಟ್ಟಲು ಕಾರಣವಾಯಿತು. ಕರ್ಮಠ ದೈವತ್ವದ ಜಾಗೆಯಲ್ಲಿ ಮಾನವೀಯತೆಯನ್ನು ಕುಳ್ಳರಿಸುವ ಮೂಲಕ ಅಲ್ಲಿಯ ಜಡತ್ವವನ್ನು ಸಡಿಲಿಸಬಹುದು ಎನ್ನುವುದು ನೀಷೇ ವಾದ. ಅವನ ಪ್ರಕಾರ ಆರೋಗ್ಯ ಎನ್ನುವುದು ನೋವಿನಿಂದ ಮುಕ್ತವಾಗುವ ಸ್ಥಿತಿಯಾಗಿರದೇ ನೋವೇ ಆರೋಗ್ಯದ ಅತ್ಯವಶ್ಯಕ ಸಂಗತಿಯಾಗಿರುವ ಸ್ಥಿತಿಯಾಗಿದೆ ಎನ್ನುತ್ತಾನೆ. ದೇವರು ಮತ್ತು ಧರ್ಮಗಳು ನಿರ್ಬಂಧಗಳಲ್ಲ, ಮುಕ್ತವಾದ ಸಂಗತಿಗಳು ಎನ್ನುವುದು ಅವನ ಅಭಿಪ್ರಾಯ. ಆತ ಧಾರ್ಮಿಕ ಜಡತ್ವವನ್ನು ಕುರಿತು ಮಾತನಾಡುತ್ತಾ ಈ ಬಗೆಯ ಧರ್ಮಗಳು ರೋಗಗಳನ್ನು ನಿವಾರಿಸುವದಿಲ್ಲ ಹೆಚ್ಚೆಂದರೆ ಅನೆಸ್ಥೀಸಿಯಾ ನೀಡಬಲ್ಲವು ಎನ್ನುತ್ತಾನೆ. ನೀಷೇ ಮತ್ತೆ ಮತ್ತೆ ಧರ್ಮದ ಬಗ್ಗೆ, ದೇವರ ಬಗ್ಗೆ ಮಾತನಾಡುವಾಗಲೆಲ್ಲಾ ಮಾನವೀಯತೆಯನ್ನು ಕುರಿತು ಚರ್ಚಿಸುತ್ತಾನೆ. ಫ಼್ರಾನ್ಸ್ ದೇಶದ ಚಿಂತಕ ಅಗಷ್ಟ ಕೊಂಟ್ [1798-1857] ನೀಷೇ ಹಾಗೆಯೇ ದೇವರಿಲ್ಲದ ಧರ್ಮವನ್ನು ಸ್ಥಾಪಿಸಬಯಸಿದ್ದ. ಅವನು ಆ ಧರ್ಮವನ್ನು ‘ಮಾನವತಾವಾದಿ ಧರ್ಮ’ ಎಂದೇ ಕರೆದಿರುವನು. ದೇವರ ಜಾಗೆಯಲ್ಲಿ ಮಾನವೀಯತೆಯನ್ನು ಕುಳ್ಳರಿಸುವುದು ಅವನ ಹಂಬಲವಾಗಿತ್ತು. ಆ ಕಾಲಘಟ್ಟದ ಎಲ್ಲ ಧರ್ಮಗಳು ಮಾನವ ಕಲ್ಯಾಣ ಸಾಧನೆಯಲ್ಲಿ ಸೋತಿವೆ. ಈ ಹೊಸ ಧರ್ಮ ಮಾನವ ಜನಾಂಗದ ಏಳ್ಗೆಗಾಗಿ ದುಡಿಯುತ್ತದೆ ಎನ್ನುವ ಕೋಂಟನ ಮಾತುಗಳು ನೀಷೇಯ ದೇವರು ಸತ್ತಿದ್ದಾನೆ ಎನ್ನುವ ಮಾತಿಗಿಂತ ತೀರಾ ಭಿನ್ನವಾಗಿಲ್ಲ. ಆಗಿನ ಸಂದರ್ಭದಲ್ಲಿ ದೇವರು ಜನರನ್ನು ಭಯದಲ್ಲಿ ಇಡುವ ಬೆದರು ಬೊಂಬೆಗಳು ಎಂದು ಕೋಂಟ್ ಕರೆದಿರುವದಿದೆ. ಅಂತಿಮವಾಗಿ ನೀಷೇ ಕೂಡಾ ದೇವರು ಸೋತಿದ್ದಾನೆ ಎನ್ನುವದನ್ನೇ ಹಾಗೆ ಕಠೋರವಾಗಿ ಹೇಳುವ ಮೂಲಕ ಆಗಿನ ಸಂದರ್ಭದ ವ್ಯವಸ್ಥೆಯನ್ನು ತಿವಿಯುವಂಥಾ ಕೆಲಸ ಮಾಡಿರುವದಿದೆ. ನೀಷೇ ಧರ್ಮ ಚಲನಶೀಲತೆಯ ಗುಣ ಹೊಂದಿರಬೇಕು, ನಿಂತಲ್ಲೇ ನಿಲ್ಲುವ ಜಡತ್ವದ ಮನ:ಸ್ಥಿಯ ಧರ್ಮ ಆರೋಗ್ಯಕರವಲ್ಲ. ರಾಜಕೀಯ ವಿಷಯವಾಗಿಯೂ ನೀಷೇ ವಿಭಿನ್ನವಾದ ನಿಲುವನ್ನು ಹೊಂದಿರುವದಿತ್ತು ಎಲ್ಲ ಕಾಲಕ್ಕೂ ಆದರ್ಶವೆನ್ನುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಆತ ಟೀಕಿಸಿರುವದಿದೆ.

ನೀಷೇಗೆ ಅಥೆನ್ಸ್ ನಗರದ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಅಪಾರವಾದ ಗೌರವವಿತ್ತು. ಆದರೆ ಅಥೆನ್ಸ್ ನಗರದಲ್ಲಿದ್ದ FriedrichNietzsche-abyssಪ್ರಜಾಪ್ರಭುತ್ವದ ರಾಜಕೀಯ ಸ್ಥಿತಿಗತಿಯ ಬಗ್ಗೆ ಅದೇ ರೀತಿಯ ಆದರದ ಮನೋಭಾವಗಳಿರಲಿಲ್ಲ. ಆಗಿನ ಸಂದರ್ಭದಲ್ಲಿ ಅಲ್ಲಿಯ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕಿದ್ದ ಪ್ರಜಾಪ್ರಭುತ್ವ, ತೊಡಕಾಗಿ ಪರಿಣಮಿಸಿದ ಬಗ್ಗೆ ಆತ ಚರ್ಚಿಸಿದ್ದಾನೆ. ನೀಷೆ ಬರೆಯುತ್ತಿದ್ದ ಕಾಲದಲ್ಲಿ ಡೆಮಾಕ್ರಸಿ ಎನ್ನುವುದು ಒಂದು ಹೊಸ ಬಗೆಯ ಅರ್ಥದೊಂದಿಗೆ ಪ್ರಚಲಿತದಲ್ಲಿತ್ತು. ಆ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಬಲವಾಗಿ ವಿರೋಧಿಸುವ ಸಾಂಸ್ಕೃತಿಕ ಪರಿಸರವಿತ್ತು. ಪರಿಣಾಮವಾಗಿ ಯುರೋಪಿನ ರಾಜಪ್ರಭುತ್ವವನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಹೋರಾಟಗಳೂ ನಡೆದವು. ಡೆಮಾಕ್ರಸಿ ವ್ಯವಸ್ಥೆಯನ್ನು ಬೆಂಬಲಿಸುವವರನ್ನು ಶಿಕ್ಷಿಸುವ ಕ್ರಮಗಳೂ ಇದ್ದವು. ನೀಷೇ ಸ್ನೇಹಿತ ವ್ಯಾಗನರ್ ಮತ್ತು ಮೆಸೆನ್ ಬರ್ಗ್ ಎನ್ನುವವರು ಪ್ರಜಾಪ್ರಭುತ್ವವನ್ನು ಬೆಂಬಲಿಸಿದ ಕಾರಣಕ್ಕೆ ಬಂಧನ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಯಿತು.

ನೀಷೇ ಕೇವಲ ಪ್ರಜಾಪ್ರಭುತ್ವ ಮಾತ್ರವಲ್ಲ ಮಹಿಳಾವಾದ, ಸಮಾಜವಾದಗಳ ಬಗ್ಗೆಯೂ ನಿಷೇಧಾತ್ಮಕ ನಿಲುವನ್ನೇ ಹೊಂದಿರುವದಿತ್ತು. friedrich-nietzscheಈ ಬಗೆಯ ವಾದಗಳು ಹಳೆಯ ಕ್ರಿಶ್ಚಿಯನ್ ಧರ್ಮದ ಮುಂದುವರೆದ ಭಾಗಗಳು ಎನ್ನುತ್ತಾನೆ. ಸಮಾನತೆ ಎಂಬ ನೈತಿಕತೆ ಬಲಿಷ್ಟರನ್ನು ದುರ್ಬಲಗೊಳಿಸಿ, ವೈಫ಼ಲ್ಯಗಳನ್ನು ಸಂರಕ್ಷಿಸುತ್ತದೆ ಎನ್ನುತ್ತಾನೆ. ಈ ಬಗೆಯ ರಾಜಕೀಯ ಪರಿಸರ ಇರುವಲ್ಲಿ ಸಾಂಸ್ಕೃತಿಕ ಉತ್ಥಾನ ಕಷ್ಟ ಸಾಧ್ಯ. ನೀಷೇಗೆ ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಅಪಾರವಾದ ನಂಬುಗೆಯಿತ್ತಾದರೂ ಪ್ರಜಾಪ್ರಭುತ್ವ ಎಂಬ ಸಾಗರದಲ್ಲಿ ಅದು ಸರಿಯಾಗಿ ವಿಕಸಿತವಾಗಲಾರದು ಆಧುನಿಕತೆಯ ಮೂಲಕ ಸ್ಥಾಪಿತವಾಗುವ ಪ್ರಜಾಪ್ರಭುತ್ವ ಮಾತ್ರ ಸಂಸ್ಕೃತಿ ಮತ್ತು ರಾಜಕಾರಣವನ್ನು ಮುಖಾಮುಖಿಯಾಗಿಸಬಲ್ಲದು ಆ ಮೂಲಕ ಸಾಂಸ್ಕೃತಿಕ ಶ್ರೇಷ್ಟತೆಯನ್ನು ಎತ್ತಿ ಹಿಡಿಯಬಲ್ಲದು. ಹೇಗೆ ನೀಷೇಗೆ ಹಳೆಯ ದೇವರ ಬಗೆಗೆ ನಂಬುಗೆಯಿಲ್ಲವೋ ಹಾಗೆಯೇ ಹಳೆಯ ಪ್ರಜಾಪ್ರಭುತ್ವದ ಬಗೆಗೂ ನಂಬುಗೆಯಿಲ್ಲ. ಅದರ ಬದಲಾಗಿ ಹೊಸ ಬಗೆಯ ಆಧುನಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡ ಪ್ರಜಾಪ್ರಭುತ್ವ ಮಾತ್ರ ಸಂಸ್ಕೃತಿ, ಧರ್ಮ, ಕಲೆ, ಸೃಜನಶೀಲತೆಯನ್ನು ರಕ್ಷಿಸಬಲ್ಲದು ಎನ್ನುವದು ಅವನ ಅಭಿಮತ. ಭವಿಷ್ಯದ ಪ್ರಜಾಪ್ರಭುತ್ವ ವ್ಯವಸ್ಥೆ “keeps open all the paths to the accumulation of moderate wealth through work” ಎನ್ನುತ್ತ ಅದರ ಬಗ್ಗೆ ಆಶಾವಾದಿಯಾಗಿದ್ದ.

ಮರುಸೃಷ್ಟಿಸಬಲ್ಲ ಚೈತನ್ಯಗಳು ಗಂಡಾಂತರದಲ್ಲಿ


– ರೂಪ ಹಾಸನ


“ಸಂಪನ್ಮೂಲದ ಅತಿಯಾದ ಬಳಕೆ, ಕಾಳ್ಗಿಚ್ಚು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಾದ ಭಾರತದ ಹಿಮಾಲಯ ಶ್ರೇಣಿ, ಪಶ್ಚಿಮಘಟ್ಟ ಶ್ರೇಣಿ, ಈಶಾನ್ಯ ಪ್ರದೇಶಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಸ್ಯ ಮತ್ತು ಜೀವ ಪ್ರಭೇದಗಳು ತೀವ್ರ ಅಪಾಯಕ್ಕೆ ಸಿಲುಕಿವೆ”…

…ಎಂದು ಮೊನ್ನೆ ಬಿಡುಗಡೆಯಾದ ನಮ್ಮ ಪರಿಸರ ಸಚಿವಾಲಯದ ವರದಿ ಎಚ್ಚರಿಕೆ ನೀಡಿದೆ. 45000 ಸಸ್ಯ ಪ್ರಭೇದಗಳು ಮತ್ತು 91000 ಜೀವಪ್ರಬೇಧಗಳ ತವರಾದ ಭಾರತದಲ್ಲಿ ಮುಂದಿನ ಒಂದೆರಡು ದಶಕಗಳಲ್ಲಿ ಅಪರೂಪದ ಹಲವು ಜೀವವೈವಿಧ್ಯಗಳು ಶಾಶ್ವತವಾಗಿ ನಾಶವಾಗಬಹುದೆಂದು ವರದಿ ಆತಂಕಿಸಿದೆ. ಹೀಗೇ ಮುಂದುವರೆದರೆ……. ಹತ್ತಿರದಲ್ಲೇ……. sabah-malaysia-pygmy-elephantsನಾಶವಾಗುವ ಸರದಿ ಮನುಷ್ಯನಿಗೂ ಬರಬಹುದೇನೋ? ಇದಕ್ಕೆಲ್ಲಾ ಕಾರಣರಾರು? ಯಾರೋ ಕಾಣದ ಲೋಕದವರಲ್ಲ……ನಾವೇ! ‘ಬೇಕು’ ರಾಕ್ಷಸರು!

ಯಾಕೋ ಮೊನ್ನೆಯಿಂದ ಮೈದಾಸನ ಕಥೆ ಮತ್ತೆ ಮತ್ತೆ ನೆನಪಾಗುತ್ತಿದೆ. ಅದು ನಿಮಗೂ ಗೊತ್ತಿರುವಂಥದ್ದೇ…. ಮತ್ತೊಮ್ಮೆ ನೆನಪಿಸುತ್ತಿದ್ದೇನಷ್ಟೇ. ಒಂದೂರಿನಲ್ಲಿ ಮೈದಾಸ ಎಂಬೊಬ್ಬ ರಾಜ ಇದ್ದನಂತೆ. ಅವನಿಗೆ ಚಿನ್ನದ ಬಗ್ಗೆ ಅತೀ ಆಸೆ. ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ಆ ರಾಜ್ಯದ ಖಜಾನೆಗಳಿಂದ ಚಿನ್ನ, ವಜ್ರ, ವೈಢೂರ್ಯಗಳನ್ನು ಕೊಳ್ಳೆ ಹೊಡೆದು ತಂದು ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದ. ಹೀಗೆ ಯುದ್ಧ ಮಾಡಿ, ಕಷ್ಟಪಟ್ಟು ಚಿನ್ನ ಲೂಟಿ ಮಾಡುವ ಕಾಯಕದಿಂದ ಬೇಸತ್ತ ಮೈದಾಸ, ಕಠಿಣ ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡ. ದೇವರು ಪ್ರತ್ಯಕ್ಷನಾಗಿ ‘ನಿನಗೇನು ಬೇಕು ಕೇಳು’ ಎಂದಾಗ, ‘ನಾನು ಮುಟ್ಟಿದ್ದೆಲ್ಲಾ ಚಿನ್ನವಾಗುವಂತೆ ವರನೀಡು’ ಎಂದು ಕೇಳಿಕೊಂಡ. ದೇವರು ‘ತಥಾಸ್ತು’ ಎಂದ. ಮೈದಾಸ ಖುಷಿಯಿಂದ ಅರಮನೆಯ ಕಂಬ ಕಂಬಗಳನ್ನು ಮುಟ್ಟಿದ, ಅವೆಲ್ಲ ಚಿನ್ನವಾಗೋಯ್ತು, ಸುತ್ತಲಿನ ಗಿಡ, ಮರಗಳನ್ನ ಮುಟ್ಟಿದ ಅವೂ ಚಿನ್ನವಾಯ್ತು. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಊಟಕ್ಕೆ ಕುಳಿತು ಭಕ್ಷ್ಯಭೋಜ್ಯಗಳಿಗೆ ಕೈ ಹಾಕಿದ ಅದೂ ಚಿನ್ನವಾಯ್ತು. ಆಗವನಿಗೆ ಸ್ವಲ್ಪ ಗಾಬರಿ ಆಯ್ತು. ಅಲ್ಲಿಂದ ಎದ್ದು ಬರುತ್ತಿರುವಾಗ ಪ್ರೀತಿಯ ಮೊಮ್ಮಗ ಇವನ ಹತ್ತಿರ ಓಡಿ ಬಂದ. ಮೈದಾಸ ಅಕ್ಕರೆಯಿಂದ ಅವನನ್ನ ಎತ್ತಿಕೊಂಡ. ತಕ್ಷಣ ಅವನೂ ಚಿನ್ನವಾಗಿಬಿಟ್ಟ! ಮೈದಾಸನಿಗೆ ಈಗ ತಾನು ಮಾಡಿದ ಘೋರ ತಪ್ಪಿನ ಅರಿವಾಯ್ತು. ಅಷ್ಟರಲ್ಲಾಗಲೇ ಕಾಲ ಮೀರಿ ಹೋಗಿತ್ತು! destroying-natureಈ ಕಥೆ ಪ್ರಕೃತಿಯನ್ನು ಲೂಟಿ ಹೊಡೆದು ಅಭಿವೃದ್ಧಿಯ ಹೆಸರಿನಲ್ಲಿ ಮುಟ್ಟಿದ್ದೆಲ್ಲವನ್ನೂ ಕಾಂಕ್ರೀಟ್ ಮಾಡಲು ಬೆನ್ನು ಬಿದ್ದಿರುವ ನಮ್ಮ ದುರಾಸೆಗೆ ಹೆಚ್ಚು ಸಾಮ್ಯ ಹೊಂದುವಂತಿದೆ.

ವಿಜ್ಞಾನ-ತಂತ್ರಜ್ಞಾನದ ಹೆಸರಿನಲ್ಲಿ ಇವತ್ತು ಮಾನವ ಅನೇಕ ಪ್ರಗತಿ ಸಾಧಿಸಿದ್ದಾನೆ. ತನ್ನ ಪ್ರಚಂಡ ಬುದ್ಧಿಶಕ್ತಿಯಿಂದ ವಿನಾಶಕಾರಿ ಅಣ್ವಸ್ತ್ರಗಳನ್ನು, ರಾಕೆಟ್‌ಗಳನ್ನು, ಸಬ್‌ಮೆರಿನ್, ರೊಬಾಟ್, ಕಂಪ್ಯೂಟರ್ ಏನೆಲ್ಲಾ ಸೌಲಭ್ಯಗಳನ್ನು ಕಂಡು ಹಿಡಿದಿದ್ದಾನೆ. ನೆಲವನ್ನು ಬಗೆದು, ಬೇಕಾದ ಬೇಡದ ಎಷ್ಟೆಲ್ಲಾ, ಏನೆಲ್ಲಾ ಖನಿಜ ತನ್ನದಾಗಿಸಿಕೊಂಡಿದ್ದಾನೆ. ರಸಗೊಬ್ಬರ, ಕೀಟನಾಶಕವನ್ನು ಅಪಾರ ಪ್ರಮಾಣದಲ್ಲಿ ಬಳಸಿ ಮಿತಿಮೀರಿದ ಕೃಷಿ ಉತ್ಪನ್ನಗಳನ್ನು ಬೆಳೆಯುವ ಭರದಲ್ಲಿ ಭೂಮಿಯನ್ನು ಬರಡಾಗಿಸುತ್ತಿದ್ದಾನೆ. ಅವನ ಅಪಾರ ಸುಖಕ್ಕಾಗಿ ಬೃಹದಾಕಾರದ ಕಟ್ಟಡಗಳು, ಜಲಾಶಯಗಳು, ರಸ್ತೆ-ರೈಲು ಮಾರ್ಗಗಳು ನಿರ್ಮಾಣವಾಗುತ್ತಿವೆ. ನದಿ ಮೂಲ, ಬೆಟ್ಟ, ಗುಡ್ಡ, ಪರ್ವತ, ಕಾಡುಗಳನ್ನು ನಾಶ ಮಾಡಿ ನಗರಗಳು ಬೆಳೆಯುತ್ತಿವೆ. ಅರಣ್ಯದೊಳಗೆ ನಡೆಯುತ್ತಿರುವ ಅನೇಕ ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯಜೀವಿಗಳ ಸಹಜ ಬದುಕಿಗೆ ಧಕ್ಕೆಯಾಗಿ ಅವು ನಾಡಿನೊಳಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಮಾನವ ನಿರ್ಮಿತ ಹೊಲ ಗದ್ದೆ ತೋಟ ಬೆಳೆದು ನಿಂತ ಫಸಲನ್ನು ನಿಮಿಷಾರ್ಧದಲ್ಲಿ ಧ್ವಂಸ ಮಾಡುತ್ತಿವೆ. ತಮ್ಮ ವಾಸಸ್ಥಾನವನ್ನು ಮನುಷ್ಯ ಆಕ್ರಮಿಸಿಕೊಂಡರೆ ಅವುಗಳಾದರೂ ಏನು ಮಾಡಬೇಕು? ಎಲ್ಲಿ ಹೋಗಬೇಕು? ಅದರ ದಾಳಿಗೆ ಸಿಕ್ಕು ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಮಾನವನೂ ಕಾಡು ಪ್ರಾಣಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದು, ಅಥವಾ ಪುನರ್ವಸತಿಯ ಹೆಸರಿನಲ್ಲಿ ಅವುಗಳನ್ನು ಅನೈಸರ್ಗಿಕವಾಗಿ ಬಂಧಿಸಿಡುವ ದುಷ್ಟ ಕೆಲಸಗಳಲ್ಲಿ ತೊಡಗಿಕೊಂಡಿದ್ದಾನೆ.

ಅದಿರು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ದಂಧೆಯ ಹೆಸರಿನಲ್ಲಿ, ಜಲ ಯೋಜನೆ, ವಿದ್ಯುತ್ ಯೋಜನೆ, ಅಣೆಕಟ್ಟೆಗಳು, palm-oil-plantationಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಪ್ರಾಕೃತಿಕ ಸಂಪತ್ತೆಲ್ಲಾ ಎಡೆಬಿಡದೇ ಲೂಟಿಗೊಳ್ಳುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಈ ಪರಿಯ ಅತಿಯಾದ ಬಳಕೆ ಜೀವ ವೈವಿಧ್ಯ ಸರಪಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಕೃಷಿಭೂಮಿಯನ್ನು ವೇಗದಿಂದ ನಾಶ ಮಾಡಿ ಬೃಹತ್ ಕಾಂಕ್ರೀಟ್ ಕಾಡುಗಳನ್ನು ಕಟ್ಟಲಾಗುತ್ತಿದೆ. ತನ್ನ ಐಷರಾಮಿ ಬದುಕಿನ ಕನಸಿನಲ್ಲಿ ಎಲ್ಲವನ್ನೂ ಪಣಕ್ಕಿಟ್ಟು ತನ್ನ ಬೇಕುಗಳನ್ನು ಪೂರೈಸಲು ಮಾನವ ಹವಣಿಸುತ್ತಿದ್ದಾನೆ. ಈ ದುರಾಸೆಯಲ್ಲಿ ಮುಂದಿನ ಜನಾಂಗಕ್ಕೆ ಬದುಕಲು ಪ್ರಾಕೃತಿಕ ಸೌಲಭ್ಯಗಳನ್ನು ಉಳಿಸಿಡಬೇಕೆಂಬ ವಿವೇಚನೆಯನ್ನೇ ಅವನು ಕಳೆದುಕೊಂಡಿದ್ದಾನೆ. ತನ್ನೊಂದಿಗಿರುವ ಇತರ ಪ್ರಾಣಿ, ಪಕ್ಷಿ, ಕೀಟಗಳಿಗೂ ತನ್ನಂತೆಯೇ ಬದುಕಿ ಬಾಳುವ ಹಕ್ಕಿದೆ ಎಂಬುದನ್ನು ಮರೆತು ಅವುಗಳಿಗೆ ಬದುಕಲು ಅವಕಾಶ ಕೊಡದಂತೆ ನಾಶ ಮಾಡಿ ತಾನೇ ಸರ್ವಾಧಿಕಾರಿಯೆಂದು ಬೀಗುತ್ತಿದ್ದಾನೆ. ಪ್ರಕೃತಿ ಕೇಂದ್ರಿತವಾಗಿದ್ದ, ಎಂದರೆ ಮನುಷ್ಯನನ್ನೂ ಒಳಗೊಂಡು ಸಕಲ ಚರಾಚರಗಳ ಬದುಕನ್ನೂ ಗಣಿಸಿ ನಡೆಸುತ್ತಿದ್ದ ಸಹಜ ಸುಸ್ಥಿರ ಅಭಿವೃದ್ಧಿಯನ್ನು ಮರೆತು, ಮನುಷ್ಯ…… ಕೇವಲ ತನ್ನ ಸುಖವನ್ನಷ್ಟೇ ಕೇಂದ್ರವಾಗಿರಿಸಿಕೊಂಡು ತನ್ನ ಸ್ವಾರ್ಥ, ಸ್ವಹಿತಕ್ಕಾಗಿ ಪ್ರಕೃತಿಯನ್ನು ಕೊಳ್ಳೆಹೊಡೆದು ಮೆರೆಯುತ್ತಿದ್ದಾನೆ. ಪರಿಸರದ ಮೇಲಿನ ಇಂತಹ ನಿರಂತರ ಅತ್ಯಾಚಾರದಿಂದ ಪ್ರಕೃತಿಯ ಸಮತೋಲನ ತಪ್ಪಿ ಬರ, ಪ್ರವಾಹ, ಭೂಕಂಪ, ಹವಾಮಾನ ವೈಪರೀತ್ಯ, ಭೂಮಿಬಿಸಿಯಂತಾ ವಿಕೋಪಗಳು ಎಚ್ಚರಿಕೆಯ ಗಂಟೆಯಾಗಿ ಮನುಷ್ಯ ಸಂಕುಲವನ್ನು ಬಡಿಯುತ್ತಲೇ ಇವೆ. ಏನೆಲ್ಲಾ ಶುಷ್ಕವಸ್ತುಗಳನ್ನು ಸೃಷ್ಟಿಸಲು ಸಾಧ್ಯವಿದ್ದರೂ, Industrial_Mangaloreಜೀವ ಚೈತನ್ಯಗಳಾದ ಒಂದು ಹಿಡಿ ಮಣ್ಣು ಮತ್ತು ಒಂದು ಬೊಗಸೆ ನೀರನ್ನು ಸೃಷ್ಟಿಸಲಾಗದ ಮನುಷ್ಯನಿಗೆ ಮರುಸೃಷ್ಟಿಸುವ ಚೈತನ್ಯವಿರುವ ಪ್ರಕೃತಿಯನ್ನು ನಾಶಮಾಡಲು ಯಾವ ಹಕ್ಕಿದೆ?

ನಮ್ಮಿಂದ ನಮ್ಮೊಳಗೇ ಹುಟ್ಟಿ ಬೆಳೆದ ಈ ‘ಬೇಕು’ ರಾಕ್ಷಸನನ್ನು ಹದ್ದುಬಸ್ತಿನಲ್ಲಿಡಲು ನಮ್ಮಿಂದಲೇ ಸಾಧ್ಯವಾಗುತ್ತಿಲ್ಲವಲ್ಲ! ಈ ಬಗ್ಗೆ ಪೂರ್ತಿ ಕಾಲ ಮೀರಿ ಹೋಗುವ ಮೊದಲು ಈಗಲಾದರೂ ನಾವು ಯೋಚಿಸಬೇಕಲ್ಲವೇ? ಪ್ರಕೃತಿ ನಾಶದ ನಮ್ಮ ಅಭಿವೃದ್ಧಿ ಪರಿಕಲ್ಪನೆಯನ್ನು ಬದಲಾಯಿಸಿ ಪ್ರಕೃತಿಯಿಂದಲೇ ಪ್ರಕೃತಿಯನ್ನು ಪುನರ್ ಸೃಷ್ಟಿಸಬಲ್ಲ ಅಭಿವೃದ್ಧಿಯೆಡೆಗೆ ಈಗಲಾದರೂ ನಾವು ಹೆಜ್ಜೆ ಹಾಕಬೇಕಲ್ಲವೇ? ಪ್ರಕೃತಿಯಲ್ಲಿರುವ ಯಾವುದೇ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಕಾಡು, ಎಲ್ಲವೂ ತನ್ನನ್ನು ಮರು ಸೃಸ್ಟಿಸಿಕೊಳ್ಳಬಲ್ಲ ಜೀವಂತಿಕೆ ಹಾಗೂ ಚೈತನ್ಯ ಉಳ್ಳಂತಹವು. ಅವುಗಳನ್ನೇ ನಾಶ ಮಾಡಿದರೆ ಮುಂದೆ ಪ್ರಕೃತಿಯಲ್ಲೇನುಳಿದೀತು? ಹಸಿರು ನಾಶದ ಇಂತಹುದೇ ಅಭಿವೃದ್ಧಿಯ ಬೆನ್ನು ಹತ್ತಿ ನಾವು ಓಡುತ್ತಿದ್ದರೆ ನಾಳೆ ನಮಗೆ ಅನ್ನ ಬೆಳೆದು ತಿನ್ನಲು ಭೂಮಿಯೇ ಇಲ್ಲದಂತಾಗಿ ಬರೀ ಮನುಷ್ಯ ನಿರ್ಮಿತ ಈ ಕಾಂಕ್ರೀಟ್ ಅನ್ನವನ್ನೇ ತಿನ್ನಬೇಕಾದೀತೇನೋ? ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮೈದಾಸನ ದುರಾಸೆಯೇ ಅವನಿಗೆ ಶಾಪವಾದಂತೆ ನಮಗೂ ನಮ್ಮ ಅತಿ ಆಸೆಯೇ ಶಾಪವಾಗಬಹುದು. ಮೈದಾಸನಂತೆಯೇ ನಮಗೂ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವೇ ಉಳಿಯದಂತಾದೀತು! ಮನುಷ್ಯ ಸಂತತಿ ಇತರ ಜೀವವೈವಿಧ್ಯಗಳೊಂದಿಗೇ ಈ ಭೂಮಿಯ ಮೇಲೆ ಕೆಲಕಾಲವಾದರೂ ನೆಮ್ಮದಿಯಿಂದ ಬದುಕುಳಿಯಲು, ‘ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟಿದೆಯೇ ಹೊರತು ದುರಾಸೆಯನ್ನು ಪೂರೈಸುವಷ್ಟಲ್ಲ’ ಎಂದ ಮಹಾತ್ಮಾಗಾಂಧೀಜಿಯವರ ಮಾತು ಎಂದೆಂದಿಗೂ ನಮ್ಮನ್ನು ಎಚ್ಚರಿಸುತ್ತಲೇ ಇರಬೇಕಾಗಿದೆ.

ವರ್ತಮಾನದ ಕಥೆಗಳು: ಪುಸ್ತಕ ಸಮೀಕ್ಷೆ

[ವರ್ತಮಾನ.ಕಾಮ್ ನಡೆಸಿದ “ಗಾಂಧಿ ಜಯಂತಿ ಕಥಾಸ್ಪರ್ಧೆ – 2013″ಕ್ಕೆ ಬಂದ ಹಲವು ಕತೆಗಳನ್ನು ಸೇರಿಸಿ “ವರ್ತಮಾನದ ಕಥೆಗಳು” ಸಂಕಲನವಾಗಿ ಪ್ರಕಟಿಸಿರುವುದು ತಮಗೆಲ್ಲ ತಿಳಿದಿದೆ. ಇದು ಅದೇ ಪುಸ್ತಕದ ಬಗೆಗಿನ ವಿಮರ್ಶೆ-ಸಮೀಕ್ಷೆ. ರವಿ]

– ಡಾ. ಜಯಪ್ರಕಾಶ್ ಶೆಟ್ಟಿ ಹೆಚ್

ಆಧುನಿಕ ಕನ್ನಡ ಸಂದರ್ಭದ ಅಭಿವ್ಯಕ್ತಿ ಪ್ರಕಾರಗಳಲ್ಲಿ ಅತ್ಯಂತ ಪರಿಣಾಮಕಾರಿ ಮಾಧ್ಯಮಗಳಲ್ಲಿ ಸಣ್ಣಕಥೆಯೂ ಒಂದು. ಈ ಮಾದರಿಯ ಕಥೆಗಳನ್ನು ಕನ್ನಡದಲ್ಲಿ ಯಾರು ಮೊದಲು ಬರೆದರು, ಕನ್ನಡದಲ್ಲಿ ಈ ಪ್ರಕಾರದಲ್ಲಿ ಸಶಕ್ತವಾಗಿ ಬರೆದವರು ಮತ್ತು ಬರೆಯುತ್ತಿರುವವರು ಯಾರು ಎನ್ನುವ ಖ್ಯಾತನಾಮರ ಚರ್ಚೆಗಳನ್ನು ಕನ್ನಡ ವಿಮರ್ಶಾಜಗತ್ತು ಸಾಕಷ್ಟು ಬಾರಿ ಚರ್ಚಿಸಿದೆ ಮತ್ತು ತನ್ನದೇ ಆದ ತೀರ್ಮಾನಗಳನ್ನೂ ದಾಖಲಿಸಿದೆ. ಆದರೆ ಈ ಸಿದ್ಧಪ್ರಸಿದ್ಧರು ಹಾಕಿಕೊಟ್ಟ ಸಣ್ಣಕಥೆ ಪ್ರಕಾರದ ಚೌಕಟ್ಟಿನ ಗಂಭೀರ ಅಭ್ಯಾಸದ ಅಗತ್ಯವಿಲ್ಲದೆಯೂ, ಕಥೆಹೇಳುವ ತುಡಿತದಿಂದಾಗಿ ಕvartamaanada-kathegalu-2013-coverನ್ನಡದಲ್ಲಿ ಮತ್ತೆ ಮತ್ತೆ ಕಥೆಗಳು ಹುಟ್ಟುತ್ತಲೇ ಇವೆ. ಹೀಗೆ ಹುಟ್ಟುತ್ತಿರುವ ಬಹುಮಟ್ಟಿನ ಕಥೆಗಳು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳದ ಹೊರವರ್ತುಲದಿಂದಲೂ ಬರುತ್ತಿವೆ. ಕಥೆ ಹೇಳುವ ತುರ್ತಿನಲ್ಲಿ ಹುಟ್ಟುತ್ತಿರುವ ಈ ಕಥೆಗಳು ಅನೇಕ ವೇಳೆ ಕಲೆಗಾರಿಕೆಗಿಂತ ಎಲ್ಲವನ್ನೂ ಹೇಳಿಬಿಡುವ ಹಪಾಹಪಿಯಲ್ಲಿ ವಾಚ್ಯವಾಗುವುದನ್ನು ತಪ್ಪಿಸಿಕೊಳ್ಳಲಾರದ ಸಂಕಟವನ್ನು ಅನುಭವಿಸುವುದಿದೆ. ಆದರೆ ಈ ಕಥೆಗಳನ್ನು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಅವುಗಳಲ್ಲಿ ತಮ್ಮ ಕಾಲದ ಆಗುಹೋಗುಗಳ ಬಗೆಗೆ ತಮ್ಮದೇ ಆದ ತಾತ್ವಿಕ ಹಾಗೂ ವೈಚಾರಿಕ ಖಚಿತತೆಯನ್ನೂ ತೋರಬಲ್ಲ ಗುಣಗಳಿವೆ. ಗಾಂಧಿ ಕಥಾಸ್ಪರ್ಧೆಯ ನೆವದಲ್ಲಿ ಟಿ.ರಾಮಲಿಂಗಪ್ಪ ಬೇಗೂರು ಹಾಗೂ ರವಿ ಕೃಷ್ಣಾರೆಡ್ಡಿ ಸಂಪಾದಿಸಿ, ಕಣ್ವ ಪ್ರಕಾಶವು ಬಿಡುಗಡೆ ಮಾಡಿದ ವರ್ತಮಾನದ ಕಥೆಗಳು ಸಂಕಲನದಲ್ಲಿನ ಕಥೆಗಳು ಈ ಎಲ್ಲಾ ಮಾತುಗಳಿಗೆ ಸಾಕ್ಷಿಯಂತಿವೆ.

ಈ ಸಂಕಲನದಲ್ಲಿನ ಎಲ್ಲಾ ಕಥೆಗಳು ಸ್ಪರ್ಧೆಯ ನಿಮಿತ್ತವಾಗಿ ಬರೆದ ಕಥೆಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಮನಸ್ಥಿತಿಯ ಕಥೆಗಾರರ ಕಥೆಗಳೂ ಹೌದು. ಹಾಗೆಂದ ಮಾತ್ರಕ್ಕೆ ಅವೆಲ್ಲವೂ ಯಾಂತ್ರಿಕವಾದ ಸ್ಪರ್ಧಾಪೇಕ್ಷೆಯಿಂದಷ್ಟೇ ಹುಟ್ಟಿದವುಗಳೆಂದೇನೂ ಅಲ್ಲ. ಈ ಕಥಾಸಂಕಲವನ್ನು ಅಚ್ಚುಕಟಾಗಿ ಸಂಪಾದಿಸಿ ಅರ್ಥಪೂರ್ಣವಾದ ಮುನ್ನುಡಿಯೊಂದನ್ನು ಬರೆಯುವ ಮೂಲಕ ರಾಮಲಿಂಗಪ್ಪ ಬೇಗೂರು ಅವರು ಈ ಕಥೆಗಳನ್ನು ಓದುವ ಓದುಗರಿಗೆ ಕಥೆಗಳ ಮಿತಿ ಮತ್ತು ಸಾಧ್ಯತೆಯನ್ನು ಕುರಿತ ಕೀಲಿಕೈಯೊಂದನ್ನೂ ಒದಗಿಸಿದ್ದಾರೆ. ಈ ನಡುವೆಯೂ ಈ ಸಂಕಲದ ಮೊದಲ ಓದಿಗೆ ದಕ್ಕಿದ ಕೆಲವು ಸಂಗತಿಗಳನ್ನು ಆಧರಿಸಿ ಒಟ್ಟು ಕಥೆಗಳನ್ನು ಕುರಿತು ಕೆಲವು ಮಾತುಗಳನ್ನು ಪ್ರಸ್ತಾಪಿಸಬಹುದೆಂದುಕೊಳ್ಳುತ್ತೇನೆ.

ರಾಮಲಿಂಗಪ್ಪ ಅವರು ಸರಿಯಾಗಿಯೇ ಗುರುತಿಸಿದಂತೆ ಈ ಸಂಕಲನದ ಕಥೆಗಾರರು ಮುಖ್ಯವಾಹಿನಿಯಲ್ಲಿ ಉದ್ಧರಣ ಚಿಹ್ನೆಯೊಳಗಿಟ್ಟು ಗುರುತಿಸಲ್ಪಟ್ಟ ಕಥೆಗಾರರಲ್ಲ. ಪ್ರಭಾವಳಿಯ ರಕ್ಷಣಾಕವಚದಲ್ಲಿ ಸುಭದ್ರವಾಗಿರುವ ಕಥೆಗಾರರೂ ಅಲ್ಲ. ಆ ಪ್ರಭಾವಳಿ ಇಲ್ಲದಿರುವಿಕೆಯು ಈ ಕಥೆಗಳ ಬಗೆಗೆ ಓದುಗರಿಗೆ ಮುಜುಗರವಿಲ್ಲದೆ ಮಾತನಾಡುವ ಒಂದು ಸ್ವಾತಂತ್ರ್ಯವನ್ನೂ ಒದಗಿಸುವುದರಿಂದ ಕಥೆಗಳ ಕುರಿತಂತೆ ವಸ್ತುನಿಷ್ಠವಾದ ಪ್ರತಿಕ್ರಿಯೆಯನ್ನು ಖಂಡಿತಾ ನಿರೀಕ್ಷಿಸಬಹುದಾಗಿದೆ. ಇದರ ಜೊತೆಗೆ ಅವರೇ ಗುರುತಿಸುವಂತೆ ಇಲ್ಲಿ ಬಹುಮಟ್ಟಿನ ಕಥೆಗಳು ವಿಷಯದ ವ್ಯತ್ಯಾಸವನ್ನು ಹೊರತುಪಡಿಸಿ ಭಾಷೆಯ ನೆಲೆಯಲ್ಲಿ ಒಬ್ಬನೇ ಕಥೆಗಾರನ ಸಂಕಲನದಂತೆ ಭಾಸವಾದರೂ ಆಶ್ಚರ್‍ಯವಿಲ್ಲ. ಆ ಮಟ್ಟಿಗೆ ಅವು ಉತ್ತರಕರ್ನಾಟಕದ ಭಾಷಾಬನಿಯನ್ನು ಹೊತ್ತುಕೊಂಡೇ ಬಂದಿವೆ. ಅದರ ಜೊತೆಗೆ ಈ ಕಥೆಗಳಲ್ಲಿ ನಗರ-ಗ್ರಾಮ, ಮಧ್ಯಮವರ್ಗ-ತಳವರ್ಗ, ಮೇಲ್ಜಾತಿ-ಕೆಳಜಾತಿ ಇಂತಹ ಅವಳಿ ವೈರುಧ್ಯಗಳ ಸರಳ ಮುಖಾಮುಖಿಯಿದ್ದರೂ ಅಲ್ಲೊಂದು ಸಮಾಜಮುಖೀ ಧೋರಣೆಯಿದೆ. ಈ ಸಮಾಜಮುಖೀ ಗುಣದಿಂದಾಗಿಯೇ ಅನೇಕ ಬಾರಿ ಇಲ್ಲಿನ ಕಥೆಗಳು ವೈಚಾರಿಕ ಬಾರದಲ್ಲಿ ವಾಚ್ಯವಾಗುತ್ತವೆ. ಇನ್ನು ವಸ್ತುವಿನ ನೆಲೆಯಲ್ಲಿ ಇಲ್ಲಿನ ಬಹುಪಾಲು ಕಥೆಗಳು ಮನುಷ್ಯನ ಮೂಲಭಾವವಾದ ಲೈಂಗಿಕತೆಯನ್ನು ಒಂದಿಲ್ಲೊಂದು ನೆಲೆಯಲ್ಲಿ ಸ್ಪರ್ಶಿಸುತ್ತವೆ. ಅದರ ಜೊತೆಗೆ ಸಾಮಾಜಿಕ ಅನಿಷ್ಟಗಳಾದ ಜಾತಿ, ಊಳಿಗಮಾನ್ಯತೆ, ಲಿಂಗತಾರತಮ್ಯ ಹಾಗೂ ಸಾಂಸ್ಥಿಕವಂಚನೆಗಳನ್ನು ಬೇರೆ ಬೇರೆ ನೆಲೆಯಲ್ಲಿ ಒಳಕೊಂಡು ಬರುವ ಈ ಎಲ್ಲಾ ಕಥೆಗಳು ಒಂದಿಲ್ಲೊಂದು ಬಗೆಯಲ್ಲಿ ವ್ಯವಸ್ಥೆಯ ಲೋಪದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ. ಹಾಗಾಗಿ ಇಲ್ಲೊಂದು ಅಸಹನೆ ಮತ್ತು ಸುಧಾರಣೆಯ ತುಡಿತವಿದೆ. ಈ ತುಡಿತವನ್ನು ಇಲ್ಲಿನ ಬಹುಪಾಲು ಕಥೆಗಳು ಘಟನಾಪ್ರಧಾನವಾದ ನೆಲೆಯಲ್ಲಿಯೇ ನಿರೂಪಿಸುತ್ತವೆ.

ಒಟ್ಟೂ ಕಥೆಗಳನ್ನು ಗಮನಿಸುವಲ್ಲಿ ಸಿನೀಮಿಯಾ ಮಾದರಿಯ ಬೆಳವಣಿಗೆ ಮತ್ತು ಅಂತ್ಯವಿರುವ ಕಥೆಗಳೇ ಹೆಚ್ಚಿವೆ. vartamaanada-kathegaluಕೆಲವು ಕಥೆಗಳಂತೂ ಮೊದಲೇ ನಿರ್ಧರಿಸಿಕೊಂಡ ಟೈಟಲ್‌ಗೆ ಜೋತುಬಿದ್ದಂತೆಯೂ ಕಾಣುತ್ತವೆ. ಹೀಗೆ ಶೀರ್ಷಿಕೆಯನ್ನು ನಿರ್ಧರಿಸಿಕೊಂಡು ಒಡಲು ತುಂಬಲುಹೋಗುವಲ್ಲಿ ಎದುರಾಗುವ ಸಂಕಟದಲ್ಲಿ ಇಲ್ಲಿಯ ಅನೇಕ ಕಥೆಗಳು ತೊಳಲುತ್ತವೆ. ಹೀಗಾಗಿ ಇಲ್ಲಿನ ಅನೇಕ ಕಥೆಗಳು ತಮ್ಮ ಸೊಗಸಾದ ಭಾಷೆ ಮತ್ತು ಕಥೆಹೇಳುವ ಗುಣಗಳ ನಡುವೆಯೂ ತಾವಾಗಿಯೇ ಬೆಳೆದ ಕಥೆ ಎನಿಸುವುದಿಲ್ಲ. ಸಿದ್ಧಚೌಕಟ್ಟಿನ ಕಥೆಯಾಗಿ ಗೆರೆಹಾಕಿಕೊಂಡಲ್ಲಿಯವರೆಗೆ ವಿಸ್ತರಿಸಿ ಕೊನೆಗೊಂಡಂತೆಯೇ ಭಾಸವಾಗುತ್ತವೆ. ಈ ನಡುವೆಯೂ ಈ ಸಂಕಲನದಲ್ಲಿ ನೆನಪಿನಲ್ಲುಳಿಯುವ ಕೆಲವು ಕಥೆಗಳಿವೆ. ಅದಕ್ಕೆ ಅವುಗಳ ಕಥನಗಾರಿಕೆಯ ಜೊತೆಗೆ ಸಾಮಾಜಿಕ ಕಾಳಜಿಯ ಕಾರಣವೂ ಇದೆ. ವ್ಯಕ್ತಿಕೇಂದ್ರಿತ ಹಾಗೂ ಸಮಾಜಿಮುಖೀ ಎರಡೂ ನೆಲೆಯ ಕಥೆಗಳನ್ನು ಹೊಂದಿರುವ ಈ ಸಂಕಲನದ ಬಹುಪಾಲು ಕಥೆಗಳಿಗೆ ವ್ಯಕ್ತಿತ್ವದ ಅಂತರಂಗವನ್ನು ಶೋಧಿಸಿಕೊಳ್ಳುವ ತೀವ್ರತೆಗಿಂತ ಲೋಕವನ್ನು ನೋಡಿ ಮಾತನಾಡುವ ಆಸಕ್ತಿಯೇ ಹೆಚ್ಚಿದೆ. ಹೀಗಾಗಿ ಇಲ್ಲಿ ಬಹಿರ್ಮುಖತೆಯ ಗುಣ ಹೆಚಿದೆ. ತಾವೇ ಆರೋಪಿಸಿಕೊಂಡ ವೈಚಾರಿಕ ಆಕೃತಿಯ ಅತಿಭಾರಕ್ಕೆ ಸಿಕ್ಕಿ ಅವು ಕಲಾತ್ಮಕತೆಯನ್ನು ಮರೆತು ಬಿಡುವುದೂ ಇದೆ.

ಈ ಸಂಕಲನದ ಮಹತ್ವದ ಕಥೆಗಳ್ಲೊಂದಾದ “ಮಹಾತ್ಮ”, ಗಾಂಧಿಯನ್ನು ಆವಾಹಿಸಿಕೊಳ್ಳುವ ಮಾದರಿಯ ಕಥೆ. ಸ್ವತಂತ್ರ ಭಾರತದ ಉದ್ದಕ್ಕೂ ದೇಶದ ಮನಸ್ಸುಗಳನ್ನು ಬೆಚ್ಚಗೆ ಕಾಡುವ ಗಾಂಧಿಯನ್ನು ಈ ಕಥೆಯೂ ತನ್ನೆದುರಿಗೆ ತಂದುಕೊಂಡು ಮುಖಾಮುಖಿ ಉಜ್ಜಿ ನೋಡಿಕೊಳ್ಳತ್ತದೆ. ಬೊಳುವಾರರ “ಪಾಪು ಗಾಂಧಿಯಾದ ಕಥೆ”ಯನ್ನು ಕಿಂಚಿತ್ ಹೋಲುವಂತೆ ಕಂಡರೂ ಇಲ್ಲಿ ಗಾಂಧಿಯನ್ನು ಆವಾಹಿಸಿಕೊಳ್ಳುವ ಮನಸ್ಸಿಗೆ ಬೇರೆಯದೇ ಆದ ಒಂದು ಹಿನ್ನೆಲೆ ಇರುವಂತಿದೆ. ಅದು ಗಾಂಧಿಯ ಕುರಿತಾದ ಪೂರ್ವಗ್ರಹಗಳಿಂದ ಕೂಡಿದ ಮನಸ್ಸು. ವರ್ತಮಾನದ ರಾಜಕೀಯ ಆವರಣದಲ್ಲಿರುವ vartamaanada-kathegalu-authours1ಗಾಂಧಿ ಕುರಿತ ನಕಾರಾತ್ಮಕ ರಾಜಕೀಯ ಸಂಕಥನವನ್ನೇ ಉಸಿರಾಡಿಕೊಂಡ ಮನಸ್ಸು. ಹಾಗಾಗಿ ಸ್ಪಷ್ಟವಾಗಿ ಅದು ಸಾಂಪ್ರದಾಯಿಕ ಶಕ್ತಿಗಳು ನಿರೂಪಿಸುವ ಗಾಂಧಿಯ ಚಿತ್ರಣವನ್ನು ತುಂಬಿಕೊಂಡ ಮನಸಾಗಿಯೇ ತನ್ನನ್ನು ತೆರೆದುಕೊಳ್ಳುತ್ತದೆ. ಇಂತಹ ಮನಸೊಂದು ತಾನು ತುಂಬಿಕೊಂಡ ಗಾಂಧಿಯ ಅಚ್ಚನ್ನು ಕನಸಿನ ಗಾಂಧಿಯ ಜೊತೆಗೆ ಮುಖಾಮುಖಿ ಮಾಡಿ ಪರಿಶೀಲಿಸಿಕೊಳ್ಳುವಲ್ಲಿ ಕಥೆಯ ಬೆಳವಣಿಗೆ ಇದೆ. ಈ ಕಥೆಯಲ್ಲಿ ಕೇವಲ ಗಾಂಧಿಯಷ್ಟೇ ಪರಿಶೀಲನೆಗೊಳಗಾಗುವುದಲ್ಲ. ನೆಹರೂ, ಜಿನ್ನಾ, ಘೋಡ್ಸೆ ಹೀಗೆ ಚರಿತ್ರೆಯ ಅನೇಕರು ವರ್ತಮಾನಕ್ಕೆ ಬಂದು ತಮ್ಮ ಮುಖತೋರಿಸಿ ಹೋಗುತ್ತಾರೆ. ಗಾಂಧಿಯೂ ಎಲ್ಲ ಪ್ರಶ್ನೆಗಳಿಗೂ ತರ್ಕಬದ್ಧವಾಗಿ ಉತ್ತರಿಸುವಂತೆ ಕಟ್ಟಲ್ಪಡುತ್ತಾರೆ. ಈ ಮೂಲಕ ಚರಿತ್ರೆಯ ಹೂರಣದ ಸರಿತಪ್ಪುಗಳ ವಿವೇಚನೆಗೆ ನಿಂತು ಬಿಡುವ ನಿರೂಪಕ ಮನಸ್ಸು, ಘೋಡ್ಸೆ ಕುರಿತಂತೆ ಹೊಂದಿರುವ ಸಂಕಥನದಿಂದ ಕೊನೆಗೂ ಬಿಡುಗಡೆಗೊಂಡಂತೆ ಅನ್ನಿಸುವುದೇ ಇಲ್ಲ. ಇದು ನಿರೂಪಕನ ಸಮಸ್ಯೆ ಅಷ್ಟೇ ಅಲ್ಲ. ಸ್ವತಂತ್ರ ಭಾರತದ, ವರ್ತಮಾನ ಭಾರತದ ವಾಸ್ತವವೂ ಹೌದು. ಗಾಂಧಿಗೆ ಬಿಡುಗಡೆ ಸಿಕ್ಕಿದೆಯೋ ಇಲ್ಲವೋ? ಆದರೆ ಕನಸಿನಲ್ಲಿ ಗಾಂಧಿಯನ್ನು ಎದುರಾಗುವ ಮನಸ್ಸು ವಾಸ್ತವದಲ್ಲಿ ತಾನು ಈಗಾಗಲೇ ತುಂಬಿಕೊಂಡ ದೇಶಭಕ್ತ ಘೋಡ್ಸೆಯಿಂದ ಬಿಡುಗಡೆ ಕಾಣದೇ ಉಳಿಯುತ್ತದೆ. ಇದಕ್ಕೂ, ಗಾಂಧಿಯ ಭಾವಚಿತ್ರವು ಮಾರ್ಜಾಲದ ಆಕ್ರಮಣದಲ್ಲಿ ಒಡೆದು ಹೋಗುವದಕ್ಕೂ ಅರ್ಥಪೂರ್ಣ ಸಾಂಗತ್ಯವೊಂದು ಏರ್ಪಡುವಲ್ಲಿಯೇ ಕತೆಯ ಯಶಸ್ಸಿದೆ. ಗಾಂಧಿಯ ನಡುವೆ ಘೋಡ್ಸೆಯನ್ನಿಟ್ಟುಕೊಂಡು ಈ ದೇಶ ಮತ್ತು ಗಾಂಧಿ ಎರಡರ ಕುರಿತಾದ ಅಖಂಡ ಸಂಕಥನವೊಂದು ಅಸಾಧ್ಯವೆಂಬುದನ್ನೇ ಪರೋಕ್ಷವಾಗಿ ಕತೆ ಮನವರಿಕೆ ಮಾಡುವಂತಿದೆ. ಈ ಧ್ವನಿಯನ್ನೂ ಹೊರಡಿಸುವ ಮೂಲಕ ಆರ್‌ಎಸ್‌ಎಸ್ ಪ್ರಣೀತ ಮನಸ್ಸಿನ ಪರ ನಿರೂಪಕನನ್ನು ಬಿಡುಗಡೆಗೊಳಿಸದೆಯೂ ಅನೇಕ ಆಯಾಮದಲ್ಲಿ ಒಂದು ಗುಣಾತ್ಮಕ ಕಥೆಯೆನಿಸುತ್ತದೆ.

“ರಾಮಭಟ್ಟನ ಮದುವೆ ಪ್ರಸಂಗ” ತಾನು ಆಯ್ದುಕೊಳ್ಳುವ ವಸ್ತುವಿನ ನೆಲೆಯಿಂದ ಮುಖ್ಯವೆನಿಸಬಹುದಾದ ಕಥೆ. ಹೆಣ್ಣು ಸಿಕ್ಕದೆ ಇನ್ನೆಲ್ಲಿಂದಲೋ ಹೆಣ್ಣು ತರುವ ಔದಾರ್‍ಯವೂ ತನ್ನ ಮೂಲಛಾಯೆಯನ್ನು ಬಚ್ಚಿಟ್ಟುಕೊಳ್ಳಲಾರದೆ ಬೆತ್ತಲಾಗುವುದನ್ನು ಕಥೆ ಸೊಗಸಾಗಿಯೇ ಚಿತ್ರಿಸುತ್ತದೆ. ವೈದಿಕ ಸಮುದಾಯದೊಳಗಿನ ಜಳ್ಳ್ಳುತನವನ್ನು ನವುರಾದ ಹಾಸ್ಯದಲ್ಲಿಯೇ ಹೇಳಿಕೊಂಡು ಹೋಗುವ ಇಲ್ಲಿನ ಕಥನಗಾರಿಕೆಗೆ ಜೀವಂತಿಕೆಯಿದೆ. ರಾಮಭಟ್ಟನ ವಂಚನೆಯನ್ನು ಅರ್ಥಮಾಡಿಕೊಂಡ ಮೇಲೆ ಅದನ್ನು ಅಷ್ಟೇ ಸಮರ್ಥವಾಗಿ ಮೌನದಲ್ಲಿಯೇ ಮೊನಚಾಗಿ ಇದಿರಿಸುವ ಸರೋಜ ಮತ್ತು ಶಾಂತಿ ಕಥೆಯಲ್ಲಿ ಅಮುಖ್ಯರೆನಿಸಿಯೂ ಮುಖ್ಯವೆನಿಸಿಕೊಳ್ಳುತ್ತಾರೆ. ಮಿಕ್ಕ ಕಥೆಗಳಾದ “ಮುಗಿಲ ಮಾಯೆಯ ಕರುಣೆ” ಗ್ರಾಮ ಬದುಕನ್ನು ಆಚ್ಛಾದಿಸಿಕೊಂಡ ಜಾತಿ ವ್ಯವಸ್ಥೆಯ ಇನ್ನೊಂದು ಮುಖವನ್ನು ಹೇಳುತ್ತದೆ. ರಾಜಕಾರಣದಿಂದ ಒಡೆದು ಹೋದ ಹಳ್ಳಿಗಳು ಎಲ್ಲದರಲ್ಲೂ ಒಡೆದುಕೊಂಡು, ಜೀವಬಲಿಗಾಗಿ ಹಪಾಹಪಿಸುವುದನ್ನು ಕಥೆ ತನ್ನ ಮಿತಿಯೊಳಗೆ ಸೊಗಸಾಗಿ ಮುಟ್ಟಿಸುತ್ತದೆ. “ಗಲೀಜು” ಕಥೆ ಗ್ರಾಮಬದುಕಿನ ಗಲೀಜಿಗಿಂತ ಹೆಚ್ಚಾಗಿ ಲೈಂಗಿಕತೆಯ ನೆಲೆಯ ಮಾನುಷ ವಿಕೃತಿಯನ್ನೇ ಅತಿ ವಿಜೃಂಭಿಸಿ ಹೇಳುವ ಕಥೆ. ಹೀಗಾಗಿ ವಾಸ್ತವಕ್ಕಿಂತ ಕಿಂಚಿತ್ ದೂರವೇ ಎನಿಸಬಲ್ಲ ಕಥೆಯೂ ಹೌದು. ಮುಜುಗರವಿಲ್ಲದ ಅದರ ಭಾಷೆ ಗಲೀಜನ್ನು ಸಮರ್ಥವಾಗಿ ತೋರುತ್ತದೆಯಾದರೂ ಇಡಿಯ ಆವರಣ ಅತಿರಂಜಿತವೆನಿಸುತ್ತದೆ. “ಮಠದ ಹೋರಿ” ಕಥೆ ಗೋಸಂಕಥನದ ಬೇರೆ ಬೇರೆ ಮುಖಗಳನ್ನು ಪರಿಚಯಿಸುವ ಏಕೋದ್ದೇಶದಲ್ಲಿ ತನ್ನ ವೈಚಾರಿಕ ಹೊರೆಯಿಂದ ಬಿಡುಗಡೆ ಪಡೆಯುವುದೇ ಇಲ್ಲ. “ಪುಷ್ಪ” ಕಥೆಯೂ ಇದೇ ತೆರನಾದುದು. ಆದರೆ “ಹುಲಿ ಸಾಕಣೆ” ಮತ್ತು vartamaanada-kathegalu-authours2“ಗುಲಾಬಿ ಚೀಟಿ” ಕಥೆಗಳು ಆಧುನಿಕ ಸಂದರ್ಭದ ಅವತರಣಿಕೆಗಳಾದ ಎನ್‌ಜಿಓ ಹಾಗೂ ಎಮ್‌ಎನ್‌ಸಿಗಳ ಸೋಗಲಾಡಿತನ ಮತ್ತು ವಂಚನೆಯನ್ನು ಪರಿಚಯಿಸುತ್ತವೆ. ಇದನ್ನೂ ಮೀರಿ “ಗುಲಾಬಿ ಚೀಟಿ” ಕಥೆ, ಬದುಕು ಮತ್ತು ಕೃಷಿಗಳೆರಡರಲ್ಲೂ ವಿದೇಶದ ಆಕರ್ಷಣೆ ಮತ್ತು ಅಸಲಿ ಅನುಭವಗಳನ್ನು ತಾಳೆಹಾಕಿಕೊಳ್ಳುವಂತೆ ಒತ್ತಾಯಿಸುತ್ತದೆ. ಹೀಗೆ ವಿದೇಶಿ ಒಲವಿನ ನಕಾರಾತ್ಮಕ ಫಲಿತವನ್ನು ಚಿತ್ರಿಸುವ ಕಥೆ ಗಾಂಧಿ ಚಿಂತನೆಯಾದ ದೇಶೀಯತೆಯ ಪರನಿಲ್ಲುತ್ತದೆ. “ಹಳೇಟ್ರಂಕು” ಗ್ರಾಮ ಬದುಕಿನ ಅಮೂಲ್ಯ ಮುಗ್ದತೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ನಗರೀಕರಣದ ವಾಣಿಜ್ಯೀಕೃತ ಅವಸ್ಥೆಯ ಕರಾಳತೆಯನ್ನೂ, “ಬೆಂದಕಾಳೂರು” ನಗರಗಳು ರೂಪಿಸುತ್ತಿರುವ ಮಾನವೀಯ ಸಂಬಂಧದ ಸಂದುಗಡಿದ ಸ್ಥಿತಿಯನ್ನೂ ಹೇಳುವ ಮೂಲಕ ನಗರ ವಿಮುಖತೆಯ ಪರನಿಲ್ಲುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ “ಹೊತ್ತಿಗೊದಗಿದ ಮಾತು” ಕಥೆ ನಗರವನ್ನು ಬದುಕು ಕಟ್ಟಿಕೊಳ್ಳುವ ನೆಲೆಯಾಗಿಯೇ ಗುರುತಿಸುತ್ತದೆಯಾದರೂ, ಪುಟ್ಟ ಮಗುವಿನ ಒಂದು ಮಾತೇ ಬದುಕನ್ನು ಬದಲಾಯಿಸಿತು ಎಂಬುದನ್ನು ಹೇಳುವ ಕಾತರಕ್ಕೆ ಕುದಿದಂತೆ ಅಲ್ಲಿಗೇ ನಿಂತುಬಿಡುತ್ತದೆ. “ನಡುವೆ ಸುಳಿವಾತ್ಮ” ಹಾಗೂ “ಉಮಿಯೊಳಗಿನ ಬೆಂಕಿ” ಎರಡೂ ಆಸ್ತಿ ಅಂತಸ್ತಿಗೆ ಹಾತೊರೆಯುವ ಬದುಕುಗಳು ಕಡೆಗಣಿಸುವ ಮನುಷ್ಯ ಸಂಬಂಧದ ಮೇಲೆ ಬೆಳಕು ಚಲ್ಲುತ್ತವೆ. “ಅಂಬುಳೆ ಒಂದು ಕಥಾಂತರ” ತಲೆಮಾರುಗಳ ಅಂತರವನ್ನೂ, ಅವಿಭಕ್ತ ಕುಟುಂಬಗಳ ಯಜಮಾನಿಕೆಗಳು ಉಂಟುಮಾಡುವ ಪ್ರಮಾದಗಳನ್ನೂ ಹೇಳುವ ಮೂಲಕ ಕುಟುಂಬ ಪದ್ಧತಿಯ ಬಿರುಕುಗಳನ್ನು ಶೋಧಿಸುತ್ತದೆ.

ಈ ಸಂಕಲನದ ಕಥೆಗಳು ಹೊಸ ಕಥೆಗಾರರಿಂದ ಬರೆಯಲ್ಪಟ್ಟವಾಗಿದ್ದರೂ ಅವುಗಳಲ್ಲಿ ಕನ್ನಡದ ಮಹತ್ವದ ಕಥೆಗಾರರ ನೆರಳುಗಳು ಕಾಣಿಸಿದರೆ ಅಚ್ಚರಿಯಿಲ್ಲ. ಈ ನೆಲೆಯಲ್ಲಿ ‘ಹುಡುಕಾಟ’, ‘ಡಿಪ್ರೆಶನ್’ ಹಾಗೂ ‘ರಾಮಭಟ್ಟನ ಮದುವೆ ಪ್ರಸಂಗ’ಗಳೂ ವಿಭಿನ್ನ ಎಂದೆನಿಸುತ್ತವೆ. ‘ಹುಡುಕಾಟ ಕಥೆ’ ನವ್ಯದ ಕತೆಗಳನ್ನು ನೆನಪಿಸಿಬಿಡುವಂತಿದೆ. ಕಳೆದು ಹೋದ ತನ್ನಣ್ಣನನ್ನು ಜೀವಮಾನಪೂರ್ತಿ ಹುಡುಕುವ ವಾಸುದೇವ ಮಾಸ್ತರರ ಪತ್ತೇದಾರಿಕೆಯ ಮನಸ್ಸು ತನ್ನ ಗತ ಹಾಗೂ ವರ್ತಮಾನಗಳನ್ನು ಶೋಧನೆಗೊಡ್ಡುವ ಸ್ವರೂಪದಲ್ಲಿ ಈ ನವ್ಯತೆಯ ಗುಣವಿದೆ. ಡಿಪ್ರೆಶನ್ ಕಥೆ ವೈದೇಹಿ ಅವರ ಸೌಗಂಧಿಯ ಸ್ವಗತಕ್ಕೆ ಹತ್ತಿರವಾದಂತಿದೆ. ಲೈಂಗಿಕತೆಯನ್ನು ಹೆಣ್ಣ ಕಣ್ಣೋಟದಲ್ಲಿ ಕಾಣಲು ಯತ್ನಿಸುವ ಈ ಕಥೆ ಮನೋವ್ಯಾಪಾರದ ಶೋಧಕ್ಕಿಳಿಯುತ್ತದೆ. ರಾಮಭಟ್ಟನ ಮದುವೆ ಪ್ರಸಂಗವು ಆಂಶಿಕವಾಗಿ ಮಾಸ್ತಿಕಥೆಗಳನ್ನು ಹೋಲುವಂತೆಯೂ ಇದೆಯೆನಿಸುತ್ತದೆ. ಹೀಗೆ ಇಲ್ಲಿನ ಕಥೆಗಳು ಹಾಗೂ ಕಥೆಗಾರರನ್ನು ಹಿಂದಿನವರ ನೆರಳಾಗಿಯೇ ಗುರುತಿಸಬೇಕೆಂದೇನೂ ಇಲ್ಲ. ಬಹುಮಟ್ಟಿಗೆ ಇಲ್ಲಿನ ಬಹುಪಾಲು ಕಥೆಗಾರರು ಹೊಸಬರು ಮತ್ತು ಸಾಹಿತ್ಯದ ಶಿಸ್ತುಬದ್ಧ ಅಭ್ಯಾಸ ಮಾಡದೆಯೂ ಕನ್ನಡಕ್ಕೆ ಅಗತ್ಯವಿರುವ ಬೇರೆ ಬೇರೆ ಕ್ಷೇತ್ರಗಳ ಸಂವೇದನೆಗಳನ್ನು ತುಂಬುತ್ತಿರುವವರು. ಈ ಹಿನ್ನೆಲೆಯಲ್ಲಿ ಈ ಕಥೆಗಳ ಮಿತಿಗಳ ಕುರಿತಾದ ಮಾತುಗಳಾಗಲೀ, ಹೋಲಿಕೆಗಳ ಕುರಿತಾದ ಮಾತುಗಳಾಗಲೀ ಕಥೆಗಾರರಿಗೆ ತಮ್ಮ ಮುಂದಿನ ಕಥೆಗಳನ್ನು ರೂಪಿಸಿಕೊಳ್ಳಲು ಪೂರಕವಾದ ಸಲಹೆಗಳೆಂದೇ ಭಾವಿಸಬಹುದು.